Categories
ಸಿನಿ ಸುದ್ದಿ

ಕ್ರಿಯೇಟಿವ್ ಟೈಮ್ಸ್ ಸ್ಟುಡಿಯೋ ಉದ್ಘಾಟನೆ: ಸಿನಿ ಮಂದಿ ಕನಸಿಗೆ ವಾಸು ಹೊಸ ಪರಿಕಲ್ಪನೆ

ಕನ್ನಡ ಕಿರುತೆರೆ, ಹಿರಿತೆರೆಯಲ್ಲಿ ೩೦ ವರ್ಷಗಳ ಕಾಲ ಬರಹಗಾರ, ಧಾರಾವಾಹಿ ನಿರ್ದೇಶಕನಾಗಿ ಸೇವೆ ಸಲ್ಲಿಸಿರುವ ಬುಕ್ಕಾಪಟ್ಟಣ ವಾಸು ಈಗಾಗಲೇ ಸೆಂಚುರಿ ಫಿಲಂ ಇನ್ಸ್ಟಿಟ್ಯೂಟ್ ಎಂಬ ಚಲನಚಿತ್ರ ತರಬೇತಿ ಸಂಸ್ಥೆಯನ್ನು ಸ್ಥಾಪಿಸಿದ್ದು, ಆ ಮೂಲಕ ಹಲವಾರು ಪ್ರತಿಭೆಗಳನ್ನು ಹುಟ್ಟುಹಾಕಿದ್ದಾರೆ. ಅದರ ಮುಂದುವರಿದ ಭಾಗವಾಗಿ ಈಗ ಮತ್ತೊಂದು ಸಾಹಸಕ್ಕೆ ಮುಂದಾಗಿದ್ದಾರೆ. ಗೆಳೆಯ ಶ್ರೀಸಾಯಿಕೃಷ್ಣ ಅವರ ಜೊತೆ ಸೇರಿ ಅತ್ಯಾಧುನಿಕ ತಂತ್ರಜ್ಞಾನದ ಸ್ಪರ್ಷದೊಂದಿಗೆ ನಾಗರಭಾವಿಯ ಬಿಡಿಎ ಕಾಂಪ್ಲೆಕ್ಸ್ ಬಳಿ ಕ್ರಿಯೇಟಿವ್ ಟೈಮ್ಸ್ ಇಂಡಿಯಾ ಪ್ರೈ. ಲಿಮಿಟೆಡ್ ಎಂಬ ಹೊಸ ಸ್ಟುಡಿಯೊವೊಂದನ್ನು ಆರಂಭಿಸಿದ್ದಾರೆ. ಇದರ ಉದ್ಘಾಟನಾ ಕಾರ್ಯಕ್ರಮ ಬುಧವಾರ ಬೆಳಿಗ್ಗೆ ನೆರವೇರಿತು.

ಹಿರಿಯ ಸಾಹಿತಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ದೊಡ್ಡರಂಗೇಗೌಡರು, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್, ಚೇಂಬರ್ ಉಪಾಧ್ಯಕ್ಷ ಉಮೇಶ್ ಬಣಕಾರ್, ನಿರ್ದೇಶಕ ಓಂ ಸಾಯಿಪ್ರಕಾಶ್, ಸಂಗೀತ ನಿರ್ದೇಶಕ ವಿ.ಮನೋಹರ್, ಬಾಮ ಹರೀಶ್, ಬಾಮ ಗಿರೀಶ್ ಹಾಗೂ ನಟಿ ಭವ್ಯಶ್ರೀ ರೈ ಇಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಶುಭ ಕೋರಿದರು.
ತಮ್ಮ ಹೊಸ ಸ್ಟುಡಿಯೋದ ವಿಶೇಷತೆಗಳ ಕುರಿತಂತೆ ಮಾತನಾಡಿದ ಶ್ರೀಸಾಯಿಕೃಷ್ಣ ಅತ್ಯಾಧುನಿಕ ತಂತ್ರಜ್ಞಾನದ ಸೌಲಭ್ಯಗಳನ್ನೊಳಗೊಂಡ ಸ್ಟುಡಿಯೋ ಇದಾಗಿದೆ. ಈ ಹೆಸರಿಗೆ ತಕ್ಕಂತೆ ಪ್ರತಿ ಹಂತದಲ್ಲೂ ಕ್ರಿಯೇಟಿವಿಟಿ ತರಬೇಕಾಗಿತ್ತು. ವಾಸು ಅವರಲ್ಲಿರುವ ಕ್ರಿಯೇಟಿವಿಟಿ, ನಮ್ಮ ಯೋಚನೆ ಸೇರಿಸಿ ಈ ಸ್ಟುಡಿಯೋ ಬೆಳೆಸುವ ಪ್ರಯತ್ನ ಮಾಡಿದ್ದೇವೆ. ಒಂದೇ ಫ್ಲೋರ್‌ನಡಿ ಎಲ್ಲಾ ರೀತಿಯ ಸೌಲಭ್ಯಗಳನ್ನು ನಮ್ಮ ಸ್ಟುಡಿಯೋದಲ್ಲಿ ಒದಗಿಸಲಾಗುತ್ತದೆ, ಹೊಸ ಪ್ರತಿಭೆಗಳಿಗೆ ಸಪೋರ್ಟಿವ್ ಆಗಿ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.


ನಂತರ ಬುಕ್ಕಾಪಟ್ಟಣ ವಾಸು ಮಾತನಾಡಿ ಮೊದಲು ಜಾಹೀರಾತಿಗೆಂದೇ ಈ ಸಂಸ್ಥೆ ನಿರ್ಮಿಸಿದ್ದು, ಇದೇ ಬ್ಯಾನರ್‌ನಿಂದ ಈಗ ಹೊಸ ಚಿತ್ರಗಳನ್ನು ಶುರು ಮಾಡುತ್ತಿದ್ದೇವೆ, ಮಾರ್ಕೆಟಿಂಗ್ ಮಾಡಿಕೊಡುತ್ತೇನೆಂದು ಬಂದ ಶ್ರೀಸಾಯಿಕೃಷ್ಣ, ನವೀನ ತಂತ್ರಜ್ಞಾನಗಳನ್ನೊಳಗೊಂಡ ಸ್ಟುಡಿಯೋ ಏಕೆ ಮಾಡಬಾರದು ಎಂದರು. ಆಗ ಗ್ರೀನ್‌ಮೇಟ್ ಸ್ಟುಡಿಯೋ, ಎಡಿಟಿಂಗ್ ಸ್ಟುಡಿಯೋ ರೆಡಿಯಾಯಿತು. ಸೌಂಡ್ ಎಂಜಿನಿಯರ್ ಪಳನಿ ಜೊತೆ ಸೇರಿದ ನಂತರ ರೆಕಾರ್ಡಿಂಗ್ ಸ್ಟುಡಿಯೋ ಕೂಡ ಆಯಿತು. ಸಿನಿಮಾ ಸ್ಕ್ರಿಪ್ಟ್ ಹಿಡಿದುಕೊಂಡು ಇಲ್ಲಿಗೆ ಬಂದರೆ ಬಂದರೆ ಮೊದಲಪ್ರತಿ ತೆಗೆದುಕೊಂಡು ಹೋಗಬಹುದು. ಪ್ರೇಮ್, ಶೇಖರ್, ಪಳನಿ, ರೇಣು ಸ್ಟುಡಿಯೋ ಹೀಗೆ ಬಹಳಷ್ಟು ಸ್ನೇಹಿತರು ಜೊತೆ ಸೇರಿದರು ಎಂದು ಹೇಳಿದರು.


ನಿರ್ದೇಶಕ ಸಾಯಿಪ್ರಕಾಶ್ ಮಾತನಾಡಿ ವಾಸು ೨೮ ವರ್ಷದ ಹಿಂದೆ ನನ್ನಜೊತೆ ಕೆಲಸ ಮಾಡಿದ್ದರು. ಪಕ್ಕದ ಆಂಧ್ರದಲ್ಲಿ ಆದಂಥ ಬೆಳವಣಿಗೆ ಇಲ್ಲಿ ಕಾಣುತ್ತಿಲ್ಲ, ಅಲ್ಲಿ ಪ್ರತಿಯೊಬ್ಬ ಸ್ಟಾರ್‌ಗಳು ಸ್ಟುಡಿಯೋ ಮಾಡಿ ಇಂಡಸ್ಟಿಗೆ ಕೊಡುಗೆ ಕೊಟ್ಟಿದ್ದಾರೆ. ಕನ್ನಡ ಫಿಲಂ ಇಂಡಸ್ಟ್ರಿ ಈಗ ತುಂಬಾ ಬೆಳೆದಿದೆ, ಅದಕ್ಕೆ ವಾಸು ಅವರೂ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು. ನಂತರ ಪ್ರೊ. ದೊಡ್ಡರಂಗೇಗೌಡರು ಮಾತನಾಡಿ ನನ್ನ ವಾಸು ಸಂಬಂಧ ತುಂಬಾ ಹಳೆಯದು, ಕುಂಕುಮ ಭಾಗ್ಯ ಎನ್ನುವ ಮೆಗಾಸೀರಿಯಲ್‌ಗೆ ನನ್ನಿಂದ 11 ಹಾಡುಗಳನ್ನು ಬರೆಸಿದ್ದರು. ಇದು ಸೆಂಚುರಿ ಫಿಲಂ ಇನ್ ಸ್ಟಿಟ್ಯೂಟ್‌ನ ಇನ್ನೊಂದು ಶಾಖೆ ಎನ್ನಬಹುದು.

ಅತ್ಯಾಧುನಿಕ ಸ್ಟುಡಿಯೋವನ್ನು ಇಂಥಾ ವಿಷಮ ಸಂದರ್ಭದಲ್ಲಿ ಮಾಡಿದ್ದಾರೆ. ಷಾರ್ಟ್ ಫಿಲಂ, ಡಾಕ್ಯುಮೆಂಟರಿಗಳನ್ನು ಸಹ ಇಲ್ಲಿ ಮಾಡಬಹುದಾಗಿದೆ ಎಂದರು, ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್ ಮಾತನಾಡಿ ಒಂದೇ ಸೂರಿನಡಿ ಎಲ್ಲಾ ಸೌಲಭ್ಯ ಸಿಗುವಂಥ ಸ್ಟುಡಿಯೋ ಮೂಲಕ ಹೊಸ ಸಾಹಸವನ್ನು ವಾಸು ಮಾಡಿದ್ದಾರೆ ಎಂದರು, ವಿ.ಮನೋಹರ್ ಮಾತನಾಡುತ್ತ ಹೊಸ ಸ್ಟುಡಿಯೋಗೆ ಶುಭ ಹಾರೈಸಿದರು,

Categories
ಸಿನಿ ಸುದ್ದಿ

ವಿವಾದದಲ್ಲಿ ಶ್ರೀಲೀಲಾ : ಕೆರೆದು ಹುಣ್ಣು ಮಾಡಕೊಳ್ಳುವುದೆಂದರೆ ಹೀಗೆ ! ಕಿಸ್ ಚೆಲುವೆಗೆ ಇದೆಲ್ಲ ಬೇಕಿತ್ತಾ?


‘ಕಿಸ್ ‘ ಚೆಲುವೆಗೆ ಇದೆಲ್ಲ ಬೇಕಿತ್ತಾ? ಕನ್ನಡ ದ ಸಿನಿಮಾ ಪ್ರೇಕ್ಷಕರು ಹೀಗೆಂದುಕೊಳ್ಳುತ್ತಿದ್ದಾರೆ‌ . ಅದಕ್ಕೆ ಅವರ ವೈಯಕ್ತಿಕ ವಿಚಾರ. ಅದನ್ನು ಬಯಲು ಮಾಡಿಕೊಡಿದ್ದು ಅವರೇ.‌ ಇಷ್ಟಕ್ಕೂ ಅದೆನೆಂದರೆ ನಟಿ ಶ್ರೀಲೀಲಾ ಅಪ್ಪ ಯಾರು ಅಂತ. ಕನ್ನಡದ ಮಟ್ಟಿಗೆ ಶ್ರೀಲೀಲಾ ಸಿನಿಮಾರಂಗಕ್ಕೆ ಬಂದು ಮೂರ್ನಾಲ್ಕು ವರ್ಷಗಳೇ ಅದವು. ಅಲ್ಲಿಂದ ಇಲ್ಲಿ ತನಕ ನಟಿ ಶ್ರೀ ಲೀಲಾ ತಂದೆ ಯಾರು ಅಂತನೆ ಗೊತ್ತಿರಲಿಲ್ಲ. ಆ ಬಗ್ಗೆ ಇಲ್ಲಿನ ಮಾಧ್ಯಮವೂ ಕೂಡ ಅವರಿಗೆ ಪ್ರಶ್ನೆ ಮಾಡಿರಲಿಲ್ಲ. ಅದರೆ ಈಗ ನಟಿ ಶ್ರೀಲೀಲಾ ಟಾಲಿವುಡ್ ಗೆ ಕಾಲಿಟ್ಟಿದ್ದಾರೆ. “ಪೆಳ್ಳಿ ಸಂದಡಿ” ಹೆಸರಿನ ಚಿತ್ರದ ಮೂಲಕ ಹೈದ್ರಾಬಾದ್ ವಾಸಿ ಆಗಿದ್ದಾರೆ.

ಅನೇಕ ಕಾರಣಕ್ಕೆ ಅ‌ಸಿನಿಮಾ‌ ಸಖತ್ ಸದ್ದು ಮಾಡುತ್ತಿದೆ. ಶ್ರೀಲೀಲಾ ಅವರ ಹಾಟ್ ಲುಕ್ ಅಂತೂ ಟಾಲಿವುಡ್ ಬೆಚ್ಚಿ ಬೀಳುವಂತೆ ಮಾಡಿದೆ. ಇದೇ ಹಿನ್ನೆಲೆಯಲ್ಲಿ ಮಾಧ್ಯಮದಲ್ಲಿ ಸಖತ್ ಸುದ್ದಿಯಾಗುತ್ತಿರುವ ಒಂದು ವಾಹಿನಿ ಸಂದರ್ಶನ ದಲ್ಲಿ ಮಾತನಾಡುತ್ತಾ ತಮ್ಮ‌ತಂದೆ ಕುರಿತು ಹೇಳಿಕೊಂಡಿದ್ದರು. ಅವರು ಕೂಡ ಅಂಧ್ರದವರೆ ಅಂತ ಹೆಮ್ಮೆ ಯಿಂದ ಹೇಳಿಕೊಂಡಿದ್ದರು. ಒಳ್ಳೆಯ ಪಾತ್ರಗಳನ್ನು ಮಾಡುತ್ತಾ ಗುರುತಿಸಿಕೊಳ್ಳುತ್ತಿರುವ ನಟಿ ಶ್ರೀಲೀಲಾ ಖ್ಯಾತ ಉದ್ಯಮಿ ಸುರಪನೇನಿ ಸುಭಾಕರ ರಾವ್ ಅವರ ಮಗಳು ತಾನು ಎಂದು ಹೇಳಿಕೊಂಡಿದ್ದರು. ಅದೀಗ ವಿವಾದ ಎಬ್ಬಿಸಿದೆ.

ನಟಿ ಶ್ರೀಲೀಲಾ ಅವರ ಈ ಹೇಳಿಕೆ ಟಾಲಿವುಡ್ ನಲ್ಲಿ ಸಂಚಲನ‌‌ ಮೂಡಿಸಿತ್ತು. ಅದೆಷ್ಟು ಜನ ಮೂಗಿನ ಮೇಲೆ‌ಬೆರಳಿಟ್ಟುಕೊಂಡಿದ್ದರು. ಇದಾದ ಬೆನ್ನಲೇ ಉದ್ಯಮಿ ಸುಭಾಕರ್ ಅವರು ನೀಡಿರುವ ಸ್ಪಷ್ಟನೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಶ್ರೀಲೀಲಾ‌ ಹೇಳಿಕೆಗೆ ತೆಲುಗು ವಾಹಿನಿಯೊಂದರ ಜೊತೆ ಮಾತನಾಡುತ್ತಾ ಸ್ಪಷ್ಟನೆ ನೀಡಿದ ಸುಭಾಕರ ರಾವ್‌, ಶ್ರೀಲೀಲಾ ನನ್ನ ಮಗಳು ಅಲ್ಲ, ನನ್ನ ಪತ್ನಿಯ ಜೊತೆ ಡಿವೋರ್ಸ್ ಆದ ಬಳಿಕ ಶ್ರೀಲೀಲಾ ಜನಿಸಿದ್ದಾಳೆ. ನಾನು ನನ್ನ ಪತ್ನಿ 20 ವರ್ಷದಿಂದ ಬೇರೆಯಾಗಿದ್ದೇವೆ. ಡಿವೋರ್ಸ್ ಕೇಸ್ ಇನ್ನೂ ಕೋರ್ಟ್‍ನಲ್ಲಿ ಬಾಕಿ ಇದೆ. ನಾನು ಅವಳ ತಂದೆಯಲ್ಲ. ಶ್ರೀಲೀಲಾ ಮಾಧ್ಯಮಗಳ ಸಂದರ್ಶನದಲ್ಲಿ ನನ್ನ ಹೆಸರು ಬಳಸುತ್ತಿದ್ದಾರೆ. ನನ್ನ ಆಸ್ತಿಯಲ್ಲಿ ಪಾಲು ಕೇಳಲೆಂದು ನನ್ನ ಹೆಸರು ಬಳಕೆ ಮಾಡುತ್ತಿದ್ದಾರೆ. ಈ ವಿಚಾರದಲ್ಲಿ ನಾನು ಕಾನೂನು ಹೋರಾಟ ಮಾಡುವುದಾಗಿ ಹೇಳಿದ್ದಾರೆ‌ ಉದ್ಯಮಿ ಸುಭಾಕರ್.

ಶ್ರೀಲೀಲಾ ಯು.ಎಸ್‍.ನಲ್ಲಿ ಜನಿಸಿದರು, ನಂತರ ತಾಯಿ ಜೊತೆಗೆ ಬೆಂಗಳೂರಿನಲ್ಲಿ ನೆಲೆಸಿದರು. ಈಕೆಯ ತಾಯಿ ಡಾ.ಸ್ವರ್ಣಲತಾ ವೃತ್ತಿಯಲ್ಲಿ ವೈದ್ಯರಾಗಿದ್ದಾರೆ. ಶ್ರೀಲೀಲಾ ಮಾಡೆಲಿಂಗ್ ಮತ್ತು ರಾಂಪ್ ವಾಕ್‍ನಲ್ಲಿ ತೊಡಗಿಸಿಕೊಂಡಿದ್ದರು. 2019 ರಲ್ಲಿ ಎಪಿ ಅರ್ಜುನ್ ಅವರ ರೋಮ್ಯಾಂಟಿಕ್ ಎಂಟರ್‌ಟೇನರ್ ಸಿನಿಮಾವಾಗಿರುವ ಕಿಸ್ ಸಿನಿಮಾ ಮೂಲಕವಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ ಭರಾಟೆ ಸಿನಿಮಾದಲ್ಲಿ ನಟಿಸಿ ಮನೆ ಮಾತಾಗಿದ್ದಾರೆ.

ಕಿಸ್, ಭರಾಟೆ ಕನ್ನಡ ಸಿನಿಮಾಗಳ ಮೂಲಕ ಸ್ಯಾಂಡಲ್‍ವುಡ್‍ನಲ್ಲಿ ತಮ್ಮದೇ ಛಾಪು ಮೂಡಿಸಿದ್ದ ನಟಿ ಶ್ರೀಲೀಲಾ ಅವರು ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಅವರು ಅಭಿನಯಿಸಿರುವ ತೆಲುಗು ಸಿನಿಮಾ ಪೆಳ್ಳಿ ಸಂದಡಿ ಸಿನಿಮಾ ಬಿಡುಗಡೆಯಾಗಿ ಚಿತ್ರಮಂದಿರಗಳಲ್ಲಿ ಒಳ್ಳೆಯ ಪ್ರದರ್ಶನವನ್ನು ಕಾಣುತ್ತಿದೆ. ಶ್ರೀಲೀಲಾ ಅ, ನಟನೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಆದರೆ ಇದೀಗ ಹೊಸದೊಂದು ಸುಳಿಗೆ ಸಿಲುಕಿಕೊಂಡು ಸುದ್ದಿಯಾಗಿದ್ದಾರೆ.

Categories
ಸಿನಿ ಸುದ್ದಿ

ಸಿನಿಮಾರಂಗದ ಸಮಸ್ಯೆ ಬಗೆಹರಿಸಲು ಸರ್ಕಾರ ಬದ್ಧ; ಗೃಹಮಂತ್ರಿ ಅರಗ ಜ್ಞಾನೇಂದ್ರ

ಕನ್ನಡ ಚಿತ್ರರಂಗದಲ್ಲಿ ಅನೇಕ ಸಮಸ್ಯೆಗಳಿವೆ. ಆ ಬಗ್ಗೆ ಹಲವು ವರ್ಷಗಳಿಂದಲೂ ಚಿತ್ರೋದ್ಯಮದ ಗಣ್ಯರು ಸರ್ಕಾರದ ಗಮನಕ್ಕೆ ತರುತ್ತಲೇ ಇದ್ದಾರೆ. ಆದರೆ, ಭರವಸೆಗಳು ಸಿಗುತ್ತಿವೆ ಹೊರತು, ಅದಕ್ಕೆ ಪರಿಹಾರ ಸಿಕ್ಕಿಲ್ಲ. ಮಂಗಳವಾರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಭೇಟಿ ನೀಡಿದ್ದ ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಚಿತ್ರರಂಗದವರ ಜೊತೆ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದಾರೆ. ಅಷ್ಟೇ ಅಲ್ಲ, ನಿರ್ಮಾಪಕರಿಗೆ ಧೈರ್ಯ ತಂಬಿದ್ದಾರೆ. ಅಷ್ಟಕ್ಕೂ ಆರಗ ಜ್ಞಾನೇಂದ್ರ ಅವರು ಹೇಳಿದ್ದೇನು ಗೊತ್ತಾ?


ಕನ್ನಡ ಸಿನಿಮಾ ನಿರ್ಮಾಪಕರ ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ. ನಿರ್ಮಾಪಕರ ಸಮಸ್ಯೆಗಳ ಕುರಿತಂತೆ ಸಿಎಂ ಜೊತೆ ಚರ್ಚೆ ನಡೆಸುತ್ತೇನೆ. ನಾನೂ ಸಹ ಚಿತ್ರರಂಗದೊಂದಿಗೆ ನಿಕಟ ಸಂಪರ್ಕದಲ್ಲಿರುತ್ತೇನೆ. ಕನ್ನಡ ಚಿತ್ರರಂಗ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಇನ್ನೂ ಎತ್ತರಕ್ಕೆ ಬೆಳೆಯಬೇಕು ಸರ್ಕಾರ ಅದಕ್ಕೆ ಬೇಕಾದ ನೆರವು ನೀಡಲಿದೆ. ನಾನು ಹೆಚ್ಚಾಗಿ ಚಿತ್ರಗಳನ್ನು ನೋಡಿಲ್ಲ. ಆದರೆ, ರಾಜ್‌ಕುಮಾರ್ ಅಭಿಮಾನಿ. ಕನ್ನಡ ಚಿತ್ರರಂಗ ಅತ್ಯುತ್ತಮ ಪ್ರತಿಭೆಗಳನ್ನು ನೀಡಿದೆ. ಚಿತ್ರರಂಗದ ಕೊಡುಗೆ ಮರೆಯುವಂತಿಲ್ಲ. ಈಗಾಗಲೇ ಸರ್ಕಾರ ಕೆಲವು ಕ್ರಮಗಳನ್ನು ಕೈಗೊಂಡಿದೆ. ಕೋವಿಡ್‌ನಿಂದ ಆಗಿರುವ ನಷ್ಟ ಸರಿತೂಗಿಸುವ ಬಗ್ಗೆ ಚರ್ಚಿಸಲಾಗುವುದು. ಈಗಾಗಲೇ ಚಿತ್ರಮಂದಿರಗಳ ಕೆಲವು ತೆರಿಗೆಗಳನ್ನು ಮನ್ನಾ ಮಾಡುವ ಕಾರ್ಯ ನಡೆದಿದೆ. ಕಲಾವಿದರಿಗೆ ನೆರವನ್ನೂ ನೀಡಲಾಗಿದೆ ಎಂದರು.


ಪೈರಸಿ ಕುರಿತು ಮಾತಿಗಿಳಿದ ಅವರು, “ಆನ್‌ಲೈನ್ ಗೇಮಿಂಗ್ ನಿಷೇಧ ಕಾಯ್ದೆಯನ್ನು ನಮ್ಮ ಸರ್ಕಾರ ಕೆಲ ದಿನಗಳ ಹಿಂದಷ್ಟೆ ತಂದಿದೆ. ಭಾರಿ ಒತ್ತಡ ಇದ್ದರೂ ನಾವು ಕಾಯ್ದೆ ತಂದಿದ್ದೇವೆ. ಹಾಗೆಯೇ ಪೈರಸಿ ವಿರುದ್ಧ ಕಾಯ್ದೆ ತರಬೇಕಾದ ಪರಿಸ್ಥಿತಿ ಬಂದರೆ ಖಂಡಿತ ನಾವು ಹಿಂಜರಿಯುವುದಿಲ್ಲ ಎಂಬ ಭರವಸೆ ನೀಡಿದ ಅವರು, ನಮ್ಮ ಸೈಬರ್ ಸೆಲ್ ಬಹಳ ಶಕ್ತವಾಗಿದೆ. ತರಬೇತಿ ಪಡೆದವರನ್ನೇ ನೇಮಕ ಮಾಡಿಕೊಂಡಿದ್ದೇವೆ.

ಗುಜರಾತ್ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡು ನಮ್ಮ ಕೆಲವು ಅಧಿಕಾರಿಗಳನ್ನು ತರಬೇತಿಗೆಂದೇ ಅಲ್ಲಿಗೆ ಕಳಿಸಿದ್ದೇವೆ. ಆಧುನಿಕ ತಂತ್ರಜ್ಞಾನ ಹೊಂದಿದ ಘಟಕವನ್ನು ಹೊಂದಿದ್ದೇವೆ. ತಂತ್ರಜ್ಞಾನದ ವಿಷಯದಲ್ಲಿ ಇನ್ಫೋಸಿಸ್ ದೊಡ್ಡ ಸಹಾಯ ಮಾಡಿದೆ ಎಂದರು.
ನಾನು ರೈತರ ಮಗ. ಸಿನಿಮಾರಂಗ ಹೊಸದು.

ಚಿತ್ರಮಂದಿರ ಹಾಗೂ ಮಲ್ಟಿಫ್ಲೆಕ್ಸ್‌ಗಳ ಸಮಸ್ಯೆ ಬಗೆಹರಿಸುವ ಬಗ್ಗೆ ಮುಂದಿನ ದಿನಗಳಲ್ಲಿ ಗಮನ ಹರಿಸುತ್ತೇನೆ. ಅಧಿಕಾರಿಗಳಿಂದ ಮಾಹಿತಿ ಪಡೆದು ನಮ್ಮಿಂದ ಆಗಬೇಕಾದ ಸಹಾಯಗಳ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚೆ ನಡೆಸೋಣ ಎಂದಿದ್ದಾರೆ. ಈ ವೇಳೆ ಫಿಲ್ಮ್‌ ಚೇಂಬರ್‌ ಅಧ್ಯಕ್ಷ ಜೈ ರಾಜ್‌, ಸಾ.ರಾ.ಗೋವಿಂದು, ಚಿನ್ನೇಗೌಡ, ಎನ್.ಎಂ.ಸುರೇಶ್‌, ಉಮೇಶ್‌ ಬಣಕಾರ್‌, ಕೆ.ಮಂಜು, ಪ್ರವೀಣ್‌ ಕುಮಾರ್‌, ಗಣೇಶ್‌, ನರಸಿಂಹಲು ಸೇರಿದಂತೆ ಇತರು ಇದ್ದರು.

Categories
ಸಿನಿ ಸುದ್ದಿ

ಏನಾಯ್ತೋ ಕಾಣೆ ಹಾಡಿಗೆ ಶಶಿಕುಮಾರ್‌ ಪುತ್ರ ಸ್ಟೆಪ್ಪು! ಶೂಟಿಂಗ್‌ ಮುಗಿಯುವ ಹಂತದಲ್ಲಿ ಓ ಮೈ ಲವ್‌ ಚಿತ್ರ

ಶಶಿಕುಮಾರ್‌ ಅವರ ಪುತ್ರ ಅಕ್ಷಿತ್‌ ಶಶಿಕುಮಾರ್‌ ಅಭಿನಯದ “ಓ ಮೈ ಲವ್”‌ ಈಗ ಶೇ.೯೦ರಷ್ಟು ಚಿತ್ರೀಕರಣ ಪೂರ್ಣಗೊಳಿಸಿದೆ. ಇತ್ತೀಚೆಗೆ “ಏನಾಯ್ತೋ ಕಾಣೆ, ತಂಗಾಳಿ ಸುರಿದಂತೆ ತಂಪಾದೆ ನಾನುʼ ಎಂಬ ಹಾಡನ್ನು ಚಿತ್ರೀಕರಿಸಲಾಗಿದೆ. ಗೀತ ಸಾಹಿತಿ ನಾಗೇಂದ್ರ ಪ್ರಸಾದ್‌ ಅವರು ಬರೆದ ಈ ಗೀತೆಯನ್ನು ಮುರಳಿ ನೃತ್ಯ ನಿರ್ದೇಶನ ಮಾಡಿದ್ದಾರೆ. ಹೀರೋ ಅಕ್ಷಿತ್‌ ಶಶಿಕುಮಾರ್‌ ಜೊತೆ ಕೀರ್ತಿ ಕಲ್ಕರೆ, ದೀಪಿಕಾ ಆರಾಧ್ಯ, ಅಕ್ಷತಾ, ಶೌರ್ಯ, ಸುವೇದ್‌ ಈ ಹಾಡಲ್ಲಿ ಕಾಣಿಸಿಕೊಂಡಿದ್ದಾರೆ. ಯಲಹಂಕದ ನಿಟ್ಟೆ ಮೀನಾಕ್ಷಿ ಕಾಲೇಜಿನಲ್ಲಿ ಶೂಟಿಂಗ್‌ ಮಾಡಲಾಗಿದೆ. ಸದ್ಯ ಮೂರು ಹಾಡುಗಳ ಚಿತ್ರೀಕರಣ ಮಾತ್ರ ಚಿತ್ರತಂಡ ಬಾಕಿ ಉಳಿಸಿಕೊಂಡಿದೆ.


ಜಿಸಿಬಿ. ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಜಿ. ರಾಮಾಂಜಿನಿ ಕಥೆ ಬರೆದು ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಈಗಾಗಲೇ ಬಹುತೇಕ ಶೂಟಿಂಗ್ ಮುಗಿಸಿರುವ ಈ ಚಿತ್ರಕ್ಕೆ “ಸ್ಮೈಲ್” ಶ್ರೀನು ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿದ್ದಾರೆ. ಇದೊಂದು ಲವ್‍ಸ್ಟೋರಿ ಆಗಿದ್ದರೂ ಕಾಮಿಡಿ, ಸೆಂಟಿಮೆಂಟ್ ಜೊತೆಗೆ ಭರ್ಜರಿ ಆಕ್ಷನ್‍ಗೂ ಅಷ್ಟೇ ಪ್ರಾಮುಖ್ಯತೆ ನೀಡಲಾಗಿದೆ. ಚಿತ್ರದಲ್ಲಿ ಹಿರಿಯ ನಿರ್ದೇಶಕ ಎಸ್.ನಾರಾಯಣ್ ಹಾಗೂ ತೆಲುಗು ಖಳನಟ ದೇವ್‍ಗಿಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವುದಲ್ಲದೆ ಜಿ.ರಾಮಾಂಜಿನಿ ಅವರಂಥ ಸದಭಿರುಚಿಯ ನಿರ್ಮಾಪಕರು ಹಾಗೂ ಪಾತ್ರಕ್ಕೆ ನ್ಯಾಯ ಒದಗಿಸುವಂಥ ಕಲಾವಿದರು ಸಿಕ್ಕಿರುವುದು ನನ್ನ ಅದೃಷ್ಟ ಎನ್ನುತ್ತಾರೆ ನಿರ್ದೇಶಕ ಸ್ಮೈಲ್ ಶ್ರೀನು.

ಚಿತ್ರದ ಕಥೆ ಹಾಗೂ ನಿರೂಪಣೆಗೆ ಒತ್ತು ಕೊಡುವುದರೊಂದಿಗೆ ಹೊಸ ಪ್ರತಿಭೆಗಳನ್ನು ಆಯ್ಕೆ ಮಾಡಿಕೊಂಡು ಸಿನಿಮಾ ಮಾಡುತ್ತಿರುವ ಸ್ಮೈಲ್ ಶ್ರೀನು, ಈ ಸಲವೂ ಹೊಸಬರ ಜೊತೆ ಅನುಭವಿ ಕಲಾವಿದರೊಂದಿಗೆ ಕೆಲಸ ಮಾಡಿದ್ದಾರೆ.
ಚಿತ್ರಕ್ಕೆ ಚರಣ್ ಅರ್ಜುನ್ ಸಂಗೀತವಿದೆ. ಹಾಲೇಶ್ ಎಸ್. ಛಾಯಾಗ್ರಹಣ ಮಾಡಿದರೆ, ರಿಯಲ್ ಸತೀಶ್ ಸಾಹಸ, ನಾಗೇಂದ್ರ ಪ್ರಸಾದ್ ಸಾಹಿತ್ಯ, ಮುರಳಿ ಅವರ ನೃತ್ಯ ನಿರ್ದೇಶನವಿದೆ. ಡಿ.ಮಲ್ಲಿ ಸಂಕಲನ, ಜನಾರ್ದನ್ ಅವರ ಕಲಾ ನಿರ್ದೇಶನವಿದೆ.

ಹಿರಿಯ ನಿರ್ದೇಶಕ ಎಸ್.ನಾರಾಯಣ್, ಅಕ್ಷಿತ್ ಶಶಿಕುಮಾರ್, ಕೀರ್ತಿ ಕಲ್ಕೆರೆ, ದೀಪಿಕಾ ಆರಾಧ್ಯ, ಪೃಥ್ವಿರಾಜ್, ಸಾಧುಕೋಕಿಲ, ಪವಿತ್ರಾ ಲೋಕೇಶ್, ಸಂಗೀತಾ, ಆನಂದ್, ಭಾಗ್ಯಶ್ರೀ, ಶಿಲ್ಪಾ, ರವಿ ರಾಮ್‍ಕುಮಾರ್ ಸೇರಿದಂತೆ ಇತರರು ಚಿತ್ರದಲ್ಲಿದ್ದಾರೆ.

Categories
ಸಿನಿ ಸುದ್ದಿ

ಶಿವಣ್ಣನ ಎದುರು ಭಯಾನಕ ವಿಲನ್!‌ ʼಆರಕ ದಿ ಡೆಮಾನ್‌ʼ ಪಾತ್ರ ರಿವೀಲ್‌ ಭಜರಂಗಿಯಲ್ಲಿ ಬೆಚ್ಚಿ ಬೀಳಿಸೋ ಚೆಲುವರಾಜ್!!

ಭಜರಂಗಿಯ ಅಖಾಡದಲ್ಲಿ ಎಂತೆಂತಹ ನಟರಾಕ್ಷಸರಿದ್ದಾರೆ ಎಂಬುದು ನಿಮಗೀಗಾಗಲೇ ಗೊತ್ತಿದೆ. ಸೆಂಚುರಿಸ್ಟಾರ್ ಶಿವಣ್ಣ ಸೇರಿದಂತೆ ಪ್ರತಿಯೊಬ್ಬ ಕಲಾವಿದರು ಕೂಡ ನಟನೆಯಲ್ಲಿ ಭೀಕರ ಹಾಗೂ ರಣಭಯಂಕರ ಎನ್ನುವುದು ಪೋಸ್ಟರ್‌ನಿಂದಲೇ ಗೊತ್ತಾಗ್ತಿದೆ. ಒಬ್ಬೊಬ್ಬರ ಲುಕ್-ಗೆಟಪ್ ನೋಡುಗರನ್ನು ದಿಗ್‌ದಿಗ್ಭ್ರಾಂತರನ್ನಾಗಿ ಮಾಡ್ತಿದೆ. ಲೋಕಿ ಹಾಗೂ ಚಿಣಿಮಿಣಿಕಿ ಕ್ಯಾರೆಕ್ಟರ್ ದಂಗುಬಡಿಸಿರುವ ಬೆನ್ನಲ್ಲೇ ಬಿಡುಗಡೆಗೊಂಡಿರುವ `ಆರಕ ದಿ ಡೆಮಾನ್’ ಪಾತ್ರ ಸಿನಿಪ್ರೇಮಿಗಳನ್ನು ಬೆಚ್ಚಿಬೀಳಿಸಿ ಮೈ ಬೆವರಿಳಿಸ್ತಿದೆ

ಸಿನಿದುನಿಯಾದಲ್ಲಿ ಭಜರಂಗಿ'ಯ ಹವಾ ಜೋರಾಗಿದೆ. ದೊಡ್ಮನೆ ಭಕ್ತರು ಮಾತ್ರವಲ್ಲ ಸಕಲ ಸಿನಿಮಾ ಪ್ರೇಮಿಗಳ ಬಳಗ ಬೆಳ್ಳಿತೆರೆಗೆ ಭಜರಂಗಿಯನ್ನು ಸ್ವಾಗತ ಮಾಡಿಕೊಳ್ಳಲಿಕ್ಕೆ ಒಂಟಿಕಾಲಿನಲ್ಲಿ ನಿಂತು ಕಾಯ್ತಿದ್ದಾರೆ. ಭಜರಂಗಿಯ ಅವತಾರವೆತ್ತಿ ಧಗಧಗಿಸೋ ಕರುನಾಡ ಚಕ್ರವರ್ತಿಯನ್ನು ತಲೆಮೇಲೆ ಹೊತ್ತು ಮೆರೆಸೋದಕ್ಕೆ ಉತ್ಸುಕರಾಗಿದ್ದಾರೆ. ಬಿಗ್‌ಸ್ಕ್ರೀನ್ ಮೇಲೆ ಭಜರಂಗಿಯ ಅಬ್ಬರ -ಆರ್ಭಟ ಹೇಗಿರಬಹುದು ಅಂತ ಲೆಕ್ಕಚ್ಚಾರ ಹಾಕ್ತಿದ್ದಾರೆ. ಇಂತಹ ಹೊತ್ತಲ್ಲಿಆರಕ ದಿ ಡೆಮಾನ್’ ಕ್ಯಾರೆಕ್ಟರ್ ರಿವೀಲ್ ಆಗಿದೆ. ಭಜರಂಗಿ-2 ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ.

ಆರಕ ದಿ ಡೆಮಾನ್' ಭಜರಂಗಿ-2 ಚಿತ್ರದ ಮತ್ತೊಂದು ಪವರ್‌ಫುಲ್ ಕ್ಯಾರೆಕ್ಟರ್. ಪಾತ್ರದ ಹೆಸರೇ ಹೇಳುವಂತೆ ಇದೊಂದು ಭೀಕರ ಹಾಗೂ ರಣಭಯಂಕರ ಪಾತ್ರ. ಚೆಲುವರಾಜ್ ಎನ್ನುವ ಪ್ರತಿಭೆ ಈ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಚಿತ್ರಬಿಡುಗಡೆಗೆ ಕೌಂಟ್‌ಡೌನ್ ಶುರುವಾಗಿರುವ ಹೊತ್ತಲ್ಲಿ ಭಜರಂಗಿ ಸಾರಥಿ‌ ʼಆರಕ ದಿ ಡೆಮಾನ್’ ಕ್ಯಾರೆಕ್ಟರ್‌ನ ರಿವೀಲ್ ಮಾಡಿದ್ದಾರೆ. ಹಣೆ-ಎದೆ ಹಾಗೂ ಕಟ್ಟುಮಸ್ತಾದ ತೋಳಿನ ಮೇಲಿರುವ ಟ್ಯಾಟೂ, ಡಿಫರೆಂಟ್ ಹೇರ್‌ಸ್ಟೈಲ್, ಚುಚ್ಚೆ ಬಿಡ್ತೀನಿ ಅಂತ ಎಗರೆಗರಿ ಹೊಡೆಯೋ ಓಟ ಹಾಗೂ ಎದೆಭಾಗ ಸೀಳುವಂತಹ ನೋಟ ಭಯಾನಕವಾಗಿದೆ. ಗಟ್ಟಿಗುಂಡಿಗೆಯನ್ನು ಅಲುಗಾಡಿಸೋ ತಾಕತ್ತಿರೋ ಚೆಲುವ `ಭಜರಂಗಿ-2′ ಬಿಡುಗಡೆಯಾದ್ಮೇಲೆ ನಟರಾಕ್ಷಸ ಪಟ್ಟಕ್ಕೇರಿದ್ರೂ ಏರಬಹುದು.

ಯಾರೂ ಈ ಚೆಲುವ ರಾಜ್? ಈ ಕಲಾವಿದನ ಹಿನ್ನಲೆ ಏನು? ಈ ಹಿಂದೆ ಯಾವುದಾದರೂ ಸಿನಿಮಾ ಮಾಡಿದ್ರಾ? ಬೆಳ್ಳಿತೆರೆ ಮೇಲೆ ಧಗಧಗಿಸಿದ್ದರಾ? ಪ್ರೇಕ್ಷಕರಿಂದ ಸಿಳ್ಳೆ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರಾ? ಈ ಕೂತೂಹಲದ ಪ್ರಶ್ನೆಗೆ ನಮ್ಮಲ್ಲಿ ಉತ್ತರವಿಲ್ಲ. ಚೆಲುವರಾಜ್ ನಮ್ಮ ಸಂಪರ್ಕಕ್ಕೆ ಸಿಕ್ಕಿಲ್ಲ. ಈಗಷ್ಟೇ ಭಜರಂಗಿ ಟೀಮ್ `ಆರಕ ದಿ ಡೆಮಾನ್’ ಪಾತ್ರದ ಫಸ್ಟ್‌ ಲುಕ್ ಬಿಡುಗಡೆ ಮಾಡಿದೆ. ಈ ಮೂಲಕ ಚೆಲುವರಾಜ್ ಸೋಷಿಯಲ್ ಮೀಡಿಯಾದಲ್ಲಿ ಮೆರವಣಿಗೆ ಹೊರಟಿದ್ದಾರೆ. ಸಿನಿಪ್ರೇಕ್ಷಕರ ಕಣ್ಣಿಗೆ ಬಿದ್ದು ಕೂತೂಹಲ ಕೆರಳಿಸಿದ್ದಾರೆ. ಯಾರೀ ಈ ಪಾತ್ರಧಾರಿ? ನಿರ್ದೇಶಕ ಹರ್ಷ ಅವರು ಈ ಕಲಾವಿದನನ್ನು ಅದೆಲ್ಲಿಂದ ಹುಡುಕಿ ತಂದರು? ಅದ್ಹೇಗೆ ಭಜರಂಗಿ-2 ಪಾತ್ರಕ್ಕೆ ಆಯ್ಕೆಯಾದರು? ರಣರಾಕ್ಷಸ ಪಾತ್ರಕ್ಕೆ ಚೆಲುವರಾಜ್ ಏನೆಲ್ಲಾ ಕಸರತ್ತು ನಡೆಸಿದರು? ಹೇಗೆಲ್ಲಾ ತಯ್ಯಾರಿ ಮಾಡಿಕೊಂಡಿದ್ರು? ಹೀಗೆ ಪ್ರಶ್ನೆ ಮೇಲೊಂದು ಪ್ರಶ್ನೆ ಉದ್ಭವವಾಗುತ್ತಿದೆ. ಇದಕ್ಕೆಲ್ಲಾ ಉತ್ತರ ರಿಲೀಸ್‌ಗೂ ಮೊದಲೇ ನಡೆಯೋ ಪ್ರಿರಿಲೀಸ್ ಇವೆಂಟ್‌ನಲ್ಲಿ ಸಿಗಲಿದೆ. ಅನಂತರ ನಿಮ್ಮ ಮುಂದೆ ಬಿಚ್ಚಿಡಲಿದ್ದೇವೆ.

ಅಂದ್ಹಾಗೇ, ಭಜರಂಗಿ-2 ಚಿತ್ರದಲ್ಲಿ ಬರುವ ಒಂದೊಂದು ಕ್ಯಾರೆಕ್ಟರ್ ಕೂಡ ಪವರ್‌ಫುಲ್ಲೇ. ಕರುನಾಡ ಚಕ್ರವರ್ತಿ ಶಿವಣ್ಣನ ಜೊತೆಯಾಗಿ ನಿಲ್ಲುವ ಪ್ರತಿ ಪಾತ್ರಧಾರಿಯ ಕ್ಯಾರೆಕ್ಟರ್‌ಗೆ ಅದರದ್ದೇ ಆದ ತೂಕವಿದೆಯಂತೆ. ಈ ಬಗ್ಗೆ ಹಿಂದೊಮ್ಮೆ ಸಿನಿಲಹರಿ ಜೊತೆ ಮಾತನಾಡುತ್ತಾ ನಿರ್ದೇಶಕ ಹರ್ಷ ಅವರು ಒಂದಿಷ್ಟು ಇಂಟ್ರೆಸ್ಟಿಂಗ್ ಸಂಗತಿಗಳನ್ನು ಹಂಚಿಕೊಂಡಿದ್ದರು. ಕಥೆ ಬರೆಯೋಕೆ ಕುಳಿತಾಗಲೇ ಪ್ರತಿ ಪಾತ್ರವನ್ನು ಡಿಸೈನ್ ಮಾಡಿದ್ದೆ. ಈ ಪಾತ್ರ ಹೀಗೆ ಇರಬೇಕು, ಈ ಪಾತ್ರ ತೆರೆಮೇಲೆ ಹೀಗೆ ಕಾಣಬೇಕು ಅಂತ ಸ್ಕೆಚ್ ಮಾಡಿಕೊಂಡಿದ್ದೆ ಅದರಂತೆಯೇ ಔಟ್‌ಫುಟ್ ಬಂದಿದೆ. ತನ್ನ ಕಲ್ಪನೆಯ ಕ್ಯಾರೆಕ್ಟರ್‌ಗೆ ಜೀವತುಂಬಲಿಕ್ಕೆ ಪಾತ್ರಧಾರಿಗಳು ಬೆವರು ಬಸಿದಿದ್ದಾರೆ. ಕಲಾನಿರ್ದೇಶಕ ರವಿ ಹಾಗೂ ಅವರ ತಂಡ, ಮೇಕಪ್ ಮ್ಯಾನ್ ಪ್ರಕಾಶ್, ಕಾಸ್ಟ್ಯೂಮ್ ಡಿಸೈನರ್‌ಗಳಾದ ಯೋಗಿ ಅಂಡ್ ಗಣೇಶ್ ಶ್ರಮವಹಿಸಿ ದುಡಿದಿದ್ದಾರೆ. ಒಬ್ಬೊಬ್ಬ ಕಲಾವಿದರಿಗೆ ಮೇಕಪ್ ಹಚ್ಚಲಿಕ್ಕೆ ಮೂರು ಮೂರು ಗಂಟೆ ಸಮಯ ಹಿಡಿದರೂ ನಿರಾಯಾಸವಾಗಿ ಕೆಲಸ ಮಾಡಿದ್ದಾರೆ. ಇವತ್ತು, ಇಡೀ ಸಿನಿಮಾ ಪ್ರೇಕ್ಷಕ ಕುಲ `ಭಜರಂಗಿ-2′ ಪಾತ್ರಧಾರಿಗಳ ಮೊದಲ ಲುಕ್-ಗೆಟಪ್‌ನ ನೋಡಿ ಆಶ್ಚರ್ಯಚಕಿತರಾಗಿದ್ದಾರೆ ಅಂದರೆ ಅದಕ್ಕೆ ಇವರೆಲ್ಲರೂ ಕೂಡ ಕಾರಣಿಭೂತರಾಗುತ್ತಾರೆ.

ಒಟ್ನಲ್ಲಿ ಭಜರಂಗಿ'ಯ ಹೊಸ ಹೊಸ ಪಾತ್ರಗಳನ್ನು ಸೃಷ್ಟಿ ಮಾಡಿದ್ದಾರೆ. ನಿರ್ದೇಶಕ ಕಲ್ಪನೆಯ ಕನಸಿನ ಕೂಸಿಗೆ ಪಾತ್ರಧಾರಿಗಳು ಜೀವತುಂಬಿದ್ದಾರೆ. ಹೀಗೆ ಜೀವ ಪಡೆದುಕೊಂಡಿರುವ ಪಾತ್ರ, ಬೆಳ್ಳಿತೆರೆಯ ಮಡಿಲು ಸೇರಿ ಪ್ರೇಕ್ಷಕರಿಂದ ಲಾಲಿ ಆಡಿಸಿಕೊಳ್ಳುವುದಕ್ಕೆ ಮುಹೂರ್ತ ಫಿಕ್ಸಾಗಿದೆ. ಇದೇ ಅಕ್ಟೋಬರ್ 29 ರಂದು ಭಜರಂಗಿ-2′ ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ ಅಂದರೆ ಅಕ್ಟೋಬರ್ 20ರಂದು ಟ್ರೈಲರ್ ಹೊರಬೀಳಲಿದೆ. ಈಗಾಗಲೇ ಟೀಸರ್‌ನಲ್ಲಿ ಭಜರಂಗಿ ಶಿವಣ್ಣನ ಜೊತೆಗೆ ಖಳನಾಯಕ ಲೋಕಿ ವಿಜೃಂಭಿಸಿದ್ದಾರೆ. ಹಿರಿಯ ನಟಿ ಶ್ರುತಿ ಕೈಯಲ್ಲಿ ಸಿಗಾರ್ ಹಿಡಿದು ನಶೆಯೇರಿಸಿದ್ದಾರೆ.

ಚಿಣಿಮಿಣಿಕಿ ಪಾತ್ರದಲ್ಲಿ ಜಾಕಿ ಭಾವನ ಬೆರಗುಗೊಳಿಸಿದ್ದಾರೆ. ಪ್ರಸನ್ನ ಕಣ್ಣೋಟದಲ್ಲೇ ಕೊಂದರೆ, ಚೆಲುವರಾಜ್ ಚಿತ್ರಪ್ರೇಮಿಗಳನ್ನು ಕುಂತಲ್ಲೇ ಬೆವರುವಂತೆ ಮಾಡಿದ್ದಾರೆ. ಕಾಮಿಡಿ ಖಿಲಾಡಿ ಶಿವರಾಜ್ ಕೆ. ಆರ್ ಪೇಟೆ ಕಮಾಲ್ ಮಾಡೋದಕ್ಕೆ ಸಜ್ಜಾಗಿದ್ದಾರೆ. ಅದ್ದೂರಿ ತಾರಾಬಳಗಕ್ಕೆ ಕೋಟಿ ಕೋಟಿ ಸುರಿದು `ಭಜರಂಗಿ-2′ ನಿರ್ಮಿಸಿರುವ ಅನ್ನದಾತರಾದ ಜಯ್ಯಣ್ಣ ಹಾಗೂ ಭೋಗೇಂದ್ರ ಅವರು ಹೊರರಾಜ್ಯದ ಮಂದಿ ಬೆಚ್ಚುವಂತೆ ಸಿನಿಮಾ ಬಿಡುಗಡೆ ಮಾಡೋದಕ್ಕೆ ಮುಂದಾಗಿದ್ದಾರೆ. ಅವರ ಇಚ್ಛೆಯಂತೆ ಎಲ್ಲವೂ ಸಾಗಲಿ ಬೆಳ್ಳಿಪರದೆಯ ಮೇಲೆ ಭಜರಂಗಿ ಧಗಧಗಿಸಲಿ, ಪ್ರೇಕ್ಷಕರ ಮನಸ್ಸು ಗೆದ್ದು ಬಾಕ್ಸ್ಆಫೀಸ್ ಧೂಳೆಬ್ಬಿಸಲಿ ಅಲ್ಲವೇ.

ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಸೆನ್ಸಾರ್ ಸಮಸ್ಯೆ- ಅನಿಮಲ್ ಬೋರ್ಡ್ ಕಿರಿಕಿರಿ‌ ತಪ್ಪಿಸಲು ಸಚಿವರಿಗೆ ಮನವಿ; ಗಂಧದಗುಡಿಗೆ ಸೆಂಟ್ರಲ್ ಮಿನಿಸ್ಟರ್ ಕೊಟ್ಟರು ಭರವಸೆ !

ಅನಿಮಲ್ ಬೋರ್ಡ್ ಪರ್ಮಿಷನ್ ತೆಗೆದುಕೊಳ್ಳುವುದಕ್ಕೆ ಹರಿಯಾಣಕ್ಕೆ ಹೋಗಬೇಕು, ಪ್ರತಿ ಚಿತ್ರತಂಡ ಅಲ್ಲಿಗೆ ಹೋಗಿಯೇ ಅನುಮತಿ ಪಡೆಯುವುದಕ್ಕೆ ಕೊಂಚ ಕಷ್ಟವಾಗ್ತಿದೆ. ಹೀಗಾಗಿ ಬೆಂಗಳೂರಿನಲ್ಲಿ ಆಫೀಸ್ ಮಾಡಿಕೊಟ್ಟು ವ್ಯವಸ್ಥೆ ಮಾಡಿಕೊಡಿ‌ ಎಂದು ಮನವಿ ಮಾಡಲಾಗಿದೆ

ಚಂದನವನ ಚಿಕ್ಕದ್ದು, ಸ್ಯಾಂಡಲ್ ವುಡ್ ಸಿನಿಮಾಗಳಿಗೆ ಮಾರುಕಟ್ಟೆ ಇಲ್ಲ, ಹೊರ ರಾಜ್ಯದ ಅಂಗಳದಲ್ಲಿ ಕಮಾಯಿ ಮಾಡಿಲ್ಲ, ಹೀಗೆ ಮಾತನಾಡುತ್ತಿದ್ದವರು ಎಲ್ಲಾ ಗಂಧದಗುಡಿಯನ್ನು ಬೆರಗುಗಣ್ಣಿನಿಂದ ನೋಡ್ತಿದ್ದಾರೆ.‌ ಇಡೀ ಇಂಡ್ಯಾ ಇವತ್ತು ಕನ್ನಡ ಚಿತ್ರರಂಗದತ್ತ ಕಣ್ಣುಹಾಯಿಸಿದೆ ಮತ್ತು ಕೊಂಡಾಡುತ್ತಿದೆ. ಇಷ್ಟರ ಮಟ್ಟಿಗೆ ಹವಾ ಕ್ರಿಯೇಟ್ ಮಾಡಿರುವ ಸ್ಯಾಂಡಲ್ ವುಡ್ ಸಿನಿಮಾಗಳು, ಸೆನ್ಸಾರ್ ಮಂಡಳಿ ಹಾಗೂ ಅನಿಮಲ್ ಬೋರ್ಡ್ ಅಂಗಳಕ್ಕೆ ಹೋದಾಗ ಕೆಲವೊಂದು ಸಮಸ್ಯೆಗಳನ್ನು ಎದುರಿಸ್ತಿವೆ. ಹೀಗಾಗಿ, ಆ ಎಲ್ಲಾ ಸಮಸ್ಯೆಗಳನ್ನು
ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ ಸಚಿವರ ಗಮನಕ್ಕೆ ತರುವ ಕೆಲಸವನ್ನು ಫಿಲ್ಮ್ ಚೇಂಬರ್ ಮಾಡಿಮುಗಿಸಿದೆ.

ಹೌದು,ಕನ್ನಡ ಚಿತ್ರರಂಗದ ಪಾಲಿಗೆ ಮಾತೃ ಸಂಸ್ಥೆಯಾಗಿರುವ ಕರ್ನಾಟಕ‌ ಚಲನಚಿತ್ರ ವಾಣಿಜ್ಯ ಮಂಡಳಿ ಇವತ್ತು
ಸುದ್ದಿಗೋಷ್ಠಿಯನ್ನು ಕರೆದಿತ್ತು. ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ ಸಚಿವರಾದ ಡಾ. ಎಲ್. ಮುರುಗನ್ ಗೆ ಆಹ್ವಾನ ನೀಡಲಾಗಿತ್ತು. ಇದೇ ಮೊದಲ ಭಾರಿಗೆ ವಾಣಿಜ್ಯ ಮಂಡಳಿಗೆ ಆಗಮಿಸಿ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.‌ ಕನ್ನಡ ಚಿತ್ರರಂಗದ ಲೀಡರ್ ಹ್ಯಾಟ್ರಿಕ್ ಹೀರೋ ಶಿವಣ್ಣ ಸಮ್ಮುಖದಲ್ಲಿ ಸಭೆ ನಡೀತು‌.ಈ ವೇಳೆ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡಿದ್ದ ವಾಣಿಜ್ಯ ಮಂಡಳಿಯ ಸಭಾಸದಸ್ಯರು ಸೆಂಟ್ರಲ್ ಮಿನಿಸ್ಟರ್ ಡಾ. ಎಲ್. ಮುರುಗನ್‌ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಅಂದ್ಹಾಗೇ, ಮನವಿ ಪತ್ರದಲ್ಲಿ ಹಿಂದಿಗೆ ಡಬ್ ಆಗುವ ಕನ್ನಡ ಸಿನಿಮಾಗಳ ಸೆನ್ಸಾರ್ ಬೆಂಗಳೂರಿನಲ್ಲೇ ಆಗುವಂತೆ ವ್ಯವಸ್ಥೆ ಮಾಡಿಕೊಡಿ. ಯಾಕಂದ್ರೆ, ಕನ್ನಡ ಚಿತ್ರರಂಗದಲ್ಲಿ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಬಹಳಷ್ಟು ಚಿತ್ರಗಳು ತಯ್ಯಾರಾಗುತ್ತಿವೆ. ಸೆನ್ಸಾರ್ ಗೆ ಮುಂಬೈಗೆ ಹೋಗಬೇಕಾದ ಪರಿಸ್ಥಿತಿ‌ ಇದೆ, ಅಲ್ಲಿ ಸೆನ್ಸಾರ್ ಆಗುವುದು ತಡವಾಗ್ತಿದೆ. ಇದರಿಂದ ಕನ್ನಡ ಚಿತ್ರರಂಗದಲ್ಲಿ ತಯ್ಯಾರಾಗುವ ಚಿತ್ರಗಳಿಗೆ ಪೆಟ್ಟು ಬೀಳ್ತಿರುವುದಾಗಿ ನಮೂದಿಸಿದ್ದಾರೆ. ಅದರಂತೇ, ಅನಿಮಲ್ ಬೋರ್ಡ್ ಪರ್ಮಿಷನ್ ತೆಗೆದುಕೊಳ್ಳುವುದಕ್ಕೆ ಹರಿಯಾಣಕ್ಕೆ ಹೋಗಬೇಕು, ಪ್ರತಿ ಚಿತ್ರತಂಡ ಅಲ್ಲಿಗೆ ಹೋಗಿಯೇ ಅನುಮತಿ ಪಡೆಯುವುದಕ್ಕೆ ಕೊಂಚ ಕಷ್ಟವಾಗ್ತಿದೆ. ಹೀಗಾಗಿ ಬೆಂಗಳೂರಿನಲ್ಲಿ ಆಫೀಸ್ ಮಾಡಿಕೊಟ್ಟು ವ್ಯವಸ್ಥೆ ಮಾಡಿಕೊಡಿ‌ ಎಂದು ಮನವಿ ಪತ್ರದಲ್ಲಿ ನಮೂದಿಸಿದ್ದಾರೆ. ದೂರದರ್ಶನದಲ್ಲಿ ಅವಾರ್ಡ್ ಮೂವೀಗಳು ಮಾತ್ರ ಟೆಲಿಕಾಸ್ಟ್ ಆಗುತ್ತಿವೆ, ಮುಂದಿನ ದಿನಗಳಲ್ಲಿ ಕಮರ್ಷಿಯಲ್ ಚಿತ್ರಗಳು ಕೂಡ ಪ್ರಸಾರವಾಗುವುದಕ್ಕೆ ಅವಕಾಶ ಮಾಡಿಕೊಟ್ಟರೆ ನಿರ್ಮಾಪಕರು ಉಳಿಯುತ್ತಾರೆ ಎಂದು ಮನವಿ ಮಾಡಿಕೊಂಡಿದ್ದಾರೆ.

ಇದೇ ಮೊದಲ ಬಾರಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಭೇಟಿಕೊಟ್ಟು,
ಕನ್ನಡ ಚಿತ್ರರಂಗದ ಸಮಸ್ಯೆಗಳನ್ನು ಆಲಿಸಿದ
ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ ಸಚಿವರಾದ ಡಾ. ಎಲ್. ಮುರುಗನ್‌ ಅವರು ಕನ್ನಡ ಸಿನಿಮಾರಂಗದಲ್ಲಿನ ಸಮಸ್ಯೆಗೆ ಆದಷ್ಟು ಬೇಗ ಪರಿಹಾರ ಒದಗಿಸುವುದಾಗಿ ಭರವಸೆ ಕೊಟ್ಟಿದ್ದಾರೆ. ಮುರುಗ ಅಂದ್ರೇನೇ ಕೈಬಿಡಲ್ಲ ಎನ್ನುವ ಮಾತಿದೆ ಹೀಗಾಗಿ ಮುರುಗನ್ ಸಾಹೇಬ್ರು ಕನ್ನಡ ಚಿತ್ರರಂಗವನ್ನು ಕೈಬಿಡಲ್ಲ ಎಂದು ನಂಬಿರುವುದಾಗಿ ಶಿವಣ್ಣ ಸುದ್ದಿಗೋಷ್ಠಿಯಲ್ಲೇ ಹೇಳಿದರು.

ಜಿಎಸ್ ಟಿ ಸಮಸ್ಯೆ ಬಗೆಹರಿಸುವಂತೆ ಕೇಳಿಕೊಂಡರು.ಸೆಂಟ್ರಲ್ ಮಿನಿಸ್ಟರ್ ದಕ್ಷಿಣ ಭಾರತದವರೇ ಆಗಿರೋದ್ರಿಂದ ನಮ್ಮ ಕಷ್ಟ ಅವರಿಗೆ ಅರ್ಥವಾಗಿರುತ್ತೆ, ಆದಷ್ಟು ಬೇಗ ಸಮಸ್ಯೆಗೆ ಪರಿಹಾರ ಕಲ್ಪಿಸಿಕೊಡ್ತಾರೆನ್ನುವ ನಂಬಿಕೆ ಇದೆಯೆಂದು ಸೆಂಚುರಿ ಸ್ಟಾರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ಬಿಜೆಪಿ ಗವರ್ನಮೆಂಟ್ ಎಲ್ಲಾ ಇಂಡಸ್ಟ್ರಿಗೂ ಫ್ರೆಂಡ್ಲಿ ಆಗಿದೆ. ಆದಷ್ಟು ಬೇಗ ಸಮಸ್ಯೆಗೆ ಬಗೆಹರಿಸಿ ಕೊಡುವುದಾಗಿ ಸೆಂಟ್ರಲ್ ಮಿನಿಸ್ಟರ್ ಮುರುಗನ್ ಮಾತುಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಯಾವ ರೀತಿ ಸಹಾಯ ಆಗುತ್ತೆ, ಯಾವುದು ಅಸ್ತಿತ್ವಕ್ಕೆ ಬರುತ್ತೆ ಕಾದುನೋಡಬೇಕಿದೆ.

ವಿಶಾಲಾಕ್ಷಿ, ಎಂಟರ್ ಟೈನ್ಮೆಂಟ್ ಬ್ಯೂರೋ‌ ಸಿನಿಲಹರಿ

Categories
ಸಿನಿ ಸುದ್ದಿ

ಸಲಗ ಓಟಿಟಿಯಲ್ಲಿ ಬರಲ್ಲ; ಥಿಯೇಟರ್‌ನಲ್ಲೇ ನೋಡಿ! ಸುಳ್ಳು ಸುದ್ದಿ ಬಗ್ಗೆ ಕೇರ್‌ ಮಾಡಲ್ಲ ಅಂದ್ರು ದುನಿಯಾ ವಿಜಯ್

ಸದ್ಯ ಸಲಗ ಜೋರು ಸದ್ದು ಮಾಡುತ್ತಿದೆ. ಅದರ ಬಗೆಗಿನ ಸುದ್ದಿಯೂ ಸಹ ಸಾಕಷ್ಟು ಕಡೆ ಚರ್ಚೆಯಾಗುತ್ತಿದೆ. ಸಲಗ ಎಲ್ಲೆಡೆ ಒಳ್ಳೆಯ ಮೆಚ್ಚುಗೆ ಪಡೆದಿರುವುದು ಎಲ್ಲರಿಗೂ ಗೊತ್ತಿದೆ. ಅಷ್ಟೇ ಅಲ್ಲ, ಹೌಸ್‌ಫುಲ್‌ ಪ್ರದರ್ಶನ ಕಾಣುತ್ತಿದೆ. ಇದರ ಮಧ್ಯೆಯೇ ಒಂದು ಸುದ್ದಿ ಜೋರಾಗಿ ಓಡುತ್ತಿದ್ದು, ಬಹಳಷ್ಟು ಮಂದಿ ಕನ್‌ಫ್ಯೂಷನ್‌ ಮಾಡಿಕೊಂಡಿದ್ದಾರೆ. ಹಾಗಾದರೆ, ಆ ಸುದ್ದಿ ಏನು ಗೊತ್ತಾ? ಸಲಗ ಸಿನಿಮಾ ಒಟಿಟಿಯಲ್ಲಿ ಬರಲಿದೆ ಎಂಬ ಸುದ್ದಿಯೇ ಆ ಗೊಂದಲಗಳಿಗೆ ಕಾರಣ.

ಈ ವಿಷಯಕ್ಕೆ ಸಂಬಂಧಿಸಿದಂತೆ, ಸ್ವತಃ ದುನಿಯಾ ವಿಜಯ್ ಅವರೇ ಯಾವುದೇ ಕಾರಣಕ್ಕೂ ಸಿನಿಮಾ ಒಟಿಟಿಗೆ ಬರಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಲಗ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಇದನ್ನ ಸಹಿಸಿಕೊಳ್ಳಲಾಗದ ಕೆಲ ಕಿಡಿಗೇಡಿಗಳು ಸಿನಿಮಾ ಬಗ್ಗೆ ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡುತ್ತಿದ್ದಾರೆ. ಈ ಬಗ್ಗೆ ದುನಿಯಾ ವಿಜಯ್ ಪ್ರತಿಕ್ರಿಯೆ ಹೀಗಿದೆ. “ಕಳೆದ ವಾರ ಚಿತ್ರ ಪ್ರೇಕ್ಷಕರ ಮುಂದೆ ಬಂದಿದೆ. ಒಳ್ಳೆಯ ಕಲೆಕ್ಷನ್‌ ಕೂಡ ಆಗುತ್ತಿದೆ. ಇಷ್ಟಿದ್ದರೂ, ಸಿನಿಮಾ ಓಟಿಟಿಯಲ್ಲಿ ಬರಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಯಾವುದೇ ಸಲಗ ಓಟಿಟಿಯಲ್ಲಿ ಬರುವುದಿಲ್ಲ. ಚಿತ್ರಮಂದಿರದಲ್ಲೇ ಸಿನಿಮಾ ಇರಲಿದೆ. ಅಲ್ಲೇ ಸಿನಿಮಾ ನೋಡಿ ಎಂದಿದ್ದಾರೆ ವಿಜಯ್.


“ನಾವು ಸಿನಿಮಾ ಮಾಡಿದ್ದು ಥಿಯೇಟರ್‌ನಲ್ಲಿ ರಿಲೀಸ್ ಮಾಡಲು. ಓಟಿಟಿಯಲ್ಲಿ ರಿಲೀಸ್ ಮಾಡೋದಾಗಿದ್ರೆ, ಇಷ್ಟು ದಿನ ಕಾಯುತ್ತಿರಲಿಲ್ಲ. ಓಟಿಟಿಯಲ್ಲಿ ಸಿನಿಮಾ ಬಿಡುಗಡೆಗೆ ಕೇಳಿದಾಗಲೂ ನಾವು ಕೊಡಲ್ಲ ಎಂದಿದ್ದೆವು. ಸಲಗ ಚಿತ್ರ ಥಿಯೇಟರ್‌ನಲ್ಲೆ ಪ್ರದರ್ಶನ ಕಾಣುತ್ತೆ. ಯಾರು ಕೂಡ ಈ ಸುದ್ದಿಗೆ ಕಿವಿ ಕೊಡಬೇಡಿ. ಹೀಗೆ ಸುಳ್ಳು ಸುದ್ದಿಯನ್ನು ಹರಡುವ ಹುಳಗಳು ಇದ್ದೇ ಇರುತ್ತವೆʼ ಎಂದಿರುವ ವಿಜಯ್‌, ನಾನು ಸಲಗ ಚಿತ್ರ ನಿರ್ದೇಶನ ಮಾಡಲು ತೀರ್ಮಾನಿಸಿದಾಗಲೇ ಒಂದು ಕನಸು ಕಂಡಿದ್ದೆ. ಸಲಗ ಚಿತ್ರಮಂದಿರದಲ್ಲೇ ರಿಲೀಸ್ ಆಗಬೇಕು ಅಂತ. ಆ ಆಸೆ ಈಡೇರಿದೆ. ಇಂತಹ ಸುಳ್ಳು ಸುದ್ದಿ ಬಗ್ಗೆ ನಾವು ಕೇರ್ ಮಾಡಲ್ಲ, ಪ್ರೇಕ್ಷಕರು ನಮ್ಮೊಂದಿಗೆ ಇದ್ದಾಗ ತಲೆ ಕೆಡಿಸಿಕೊಳ್ಳಲ್ಲ ಎಂದಿದ್ದಾರೆ ಅವರು.

Categories
ಸಿನಿ ಸುದ್ದಿ

ಹೊಸ ಇತಿಹಾಸ ಬರೆದ ಲಹರಿ ಮ್ಯೂಸಿಕ್‌ ಸಂಸ್ಥೆ; ಇಂತಹ ಹಿಸ್ಟ್ರಿ ಯಾರೂ ಕೆತ್ತಿಲ್ಲ ಕಣ್ರೀ- ಭಾರತದಲ್ಲಿ ಇದೇ ಮೊದಲು!!

ಇತಿಹಾಸ ಬರೆಯೋದು ಅಂದರೆ ಹಿಂದ್ಯಾರೋ ಮಹಾ ಪುರುಷರು ಬರೆದಿರುವ ಇತಿಹಾಸವನ್ನು ಬ್ರೇಕ್ ಮಾಡಿ ಬೀಗೋದಲ್ಲ. ಹಿಂದೆಂದೂ ಬೇರ‍್ಯಾರು ಕೆತ್ತಿರದ ಇತಿಹಾಸಕ್ಕೆ ಸಾಕ್ಷಿಯಾಗೋದು ನಯಾ ಇತಿಹಾಸ. ಇಂತಹದ್ದೊಂದು ಹಿಸ್ಟ್ರಿಯ ಸೃಷ್ಟಿಗೆ ಕನ್ನಡದ ಹೆಮ್ಮೆಯ ಲಹರಿ ಮ್ಯೂಸಿಕ್ ಸಂಸ್ಥೆ ಕಾರಣವಾಗಿದೆ. ಇಡೀ ಭಾರತದಲ್ಲಿ ಇಲ್ಲಿವರೆಗೂ ಯಾರೂ ಕೆತ್ತದ ಹಿಸ್ಟ್ರಿಯನ್ನು ಕೆತ್ತಿ‌, ಕನ್ನಡಿಗರು ಎದೆಯುಬ್ಬಿಸುವಂತೆ ಮಾಡಿದೆ. ಹಾಗಾದ್ರೆ ಮತ್ಯಾಕ್ ತಡ `ಲಹರಿ’ ಕಂಪೆನಿಯ ನಯಾ ಇತಿಹಾಸ ನಿಮ್ಮ ಮುಂದೆ ನೋಡಿ

ಕಳೆದ ನಾಲ್ಕುವರೆ ದಶಕಗಳ ಸಂಗೀತ ಸೇವೆಯಲ್ಲಿರುವ ಈ ಲಹರಿ ಸಂಸ್ಥೆ, ಕರುನಾಡಿನ ಆರೂವರೆ ಕೋಟಿ ಕನ್ನಡಿಗರ ನಾಡಿಮಿಡಿತ. ಕನ್ನಡ ನಾಡು-ನುಡಿ-ನೆಲ-ಜಲ ಹೇಗೆ ಕನ್ನಡಿಗರ ಪ್ರಾಣವೋ, ಹಾಗೆಯೇ ಲಹರಿ' ಮ್ಯೂಸಿಕ್ ಸಂಸ್ಥೆ ಕನ್ನಡಿಗರ ಉಸಿರು ಜೊತೆಗೆ ಹೃದಯಕ್ಕೆ ಹತ್ತಿರವಾಗಿರುವ, ಭಾವನೆಗಳೊಟ್ಟಿಗೆ ಬೆಸೆದುಕೊಂಡಿರುವ ಆಡಿಯೋ ಸಂಸ್ಥೆ. ಅಂದ್ಹಾಗೇ, ಈ ಸಂಸ್ಥೆ ಇವತ್ತು ಇಡೀ ಜಗತ್ತು ಹಿಂತಿರುಗಿ ನೋಡುವಂತೆ ಬೆಳೆದಿದೆ. ಇಂತಹ ಅತ್ಯದ್ಬುತ- ಅಮೋಘ-ಅವಿಸ್ಮರಣೀಯ ಸಾಧನೆಗೆ ಕರುನಾಡಿನ ಆರೂವರೆ ಕೋಟಿಯ ಜನತೆಯ ಪ್ರೀತಿ-ಪ್ರೋತ್ಸಾಹ-ಆಶೀರ್ವಾದ ಮತ್ತು ಹಾರೈಕೆಯೇ ಕಾರಣ ಅಂತ ಹೆಮ್ಮೆಯಿಂದ ಹೇಳಿಕೊಳ್ತಾರೆಲಹರಿ’ ಸಂಸ್ಥೆಯ ಸಂಸ್ಥಾಪಕರಾದ ಲಹರಿ ವೇಲು ಮತ್ತು ಅವರ ಸಹೋದರ ಮನೋಹರ ನಾಯ್ಡು.

ಲಹರಿ' ದಕ್ಷಿಣ ಭಾರತೀಯ ಸಂಗೀತ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು ಮಾಡಿರುವಂತಹ ಸಂಗೀತ ಸಂಸ್ಥೆ. ಸಿನಿಮಾ ಸಂಗೀತ ಮಾತ್ರವಲ್ಲದೇ ಭಾವಗೀತೆ-ಜಾನಪದಗೀತೆಗಳ ಆಡಿಯೋದ ಮೂಲಕ ಮ್ಯೂಸಿಕ್ ಲೋಕದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿ ಮಾಡಿದೆ.ಲಹರಿ’ ಮ್ಯೂಸಿಕ್ ಕನ್ನಡಿಗರನ್ನು ಮಾತ್ರವಲ್ಲ ಜಗತ್ತಿನಾದ್ಯಂತ ಕೋಟಿ ಕೋಟಿ ಮಂದಿಯ ಹೃದಯ ತಲುಪಿರುವುದು ಒಂದು ರೀತಿಯ ಮೈಲುಗಲ್ಲೇ ಸರೀ. ಇತ್ತೀಚೆಗಷ್ಟೇ, ಲಹರಿ ಮುಡಿಗೆ ಯೂಟ್ಯೂಬ್ ಲೋಕ ವಜ್ರದ ಕಿರೀಟವನ್ನೇ ತೊಡಿಸಿ ಸಂಭ್ರಮಿಸಿತ್ತು. ಒಂದು ಕೋಟಿ 18 ಲಕ್ಷ ಚಂದದಾರರನ್ನು ಸಂಪಾದಿಸುವ ಮೂಲಕ ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನೆಲ್' ಹೊಸ ದಾಖಲೆಯನ್ನು ಬರೆದಿತ್ತು. ಇದೀಗ ಮಗದೊಂದು ಮೈಲ್‌ಸ್ಟೋನ್‌ಗೆ ಲಹರಿ ಯೂಟ್ಯೂಬ್ ಲೋಕ’ ಕಾರಣವಾಗಿದೆ.

ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನೆಲ್' ಜೊತೆಗೆ ಲಹರಿ ಭಾವಗೀತೆಗಳು ಅಂಡ್ ಫೋಕ್’ ಯೂಟ್ಯೂಬ್ ಚಾನೆಲ್ ಕೂಡ ನಡೆಸುತ್ತಿದ್ದಾರೆ. ಚಿತ್ರಗೀತೆಗಳಿಗೆ ಸೀಮಿತವಾಗದೇ ಕನ್ನಡದ ಭಾವಗೀತೆಗಳು ಹಾಗೂ ಜಾನಪದ ಗೀತೆಗಳನ್ನು ಜನಮನಕ್ಕೆ ತಲುಪಿಸಿ ಕನ್ನಡದ ಕಲೆ ಮತ್ತು ಸಂಗೀತವನ್ನು ಉಳಿಸಿಕೊಂಡು ಹಾಗೂ ಬೆಳೆಸಿಕೊಂಡು ಹೋಗುವಂತಹ ಕೆಲಸವನ್ನು ಲಹರಿ' ಆಡಿಯೋ ಕಂಪೆನಿ ಮಾಡ್ತಿದೆ.

ಕನ್ನಡದ ಹಿರಿಮೆ ಹಾಗೂ ಗರಿಮೆಯನ್ನು ಹೆಚ್ಚಾಗುವಂತೆ ಮಾಡ್ತಿರುವ ಲಹರಿ ಸಂಸ್ಥೆಯ ಈ ಕಾರ್ಯಕ್ಕೆ ದೇಶಿ ಹಾಗೂ ವಿದೇಶಿ ಕನ್ನಡಿಗರು ಕೂಡ ಸಪೋರ್ಟ್ ಮಾಡ್ತಿದ್ದಾರೆ.ಲಹರಿ ಭಾವಗೀತೆಗಳು ಅಂಡ್ ಫೋಕ್’ ಯೂಟ್ಯೂಬ್ ಚಾನೆಲ್‌ಗೆ ವಿಸಿಟ್ ಮಾಡಿ ಹಾಡುಗಳನ್ನು ಕೇಳೋದಲ್ಲದೇ ಸಬ್‌ಸ್ಕ್ರೈಬ್ ಕೂಡ ಮಾಡ್ತಿದ್ದಾರೆ. ಹೀಗಾಗಿಯೇ, ಚಂದದಾರರ ಸಂಖ್ಯೆ ಹೆಚ್ಚಾಗ್ತಿದೆ, ಇಲ್ಲಿಗೆ ೧೦ ಲಕ್ಷ ಜನ ಸಬ್‌ಸ್ಕ್ರೈಬ್ ಮಾಡಿದ್ದಾರೆ. ಯೂಟ್ಯೂಬ್ ಕಡೆಯಿಂದ ಚಿನ್ನದ ಹಾರ ಬರುವಂತೆ ಮಾಡಿದ್ದಾರೆ.

ಎಲ್ಲರಿಗೂ ನಾವು ಚಿರಋಣಿ
ಹೌದು, ಲಹರಿ ಭಾವಗೀತೆಗಳು ಅಂಡ್ ಫೋಕ್' ಯೂಟ್ಯೂಬ್ ಚಾನೆಲ್‌ಗೆ 10 ಲಕ್ಷ ಜನ ಸಬ್‌ಸ್ಕ್ರೈಬರ್ಸ್ ಆಗಿರುವ ಹಿನ್ನಲೆಯಲ್ಲಿ ಯೂಟ್ಯೂಬ್ ಕಡೆಯಿಂದ ಚಿನ್ನದ ಕಿರೀಟ ಸಿಗುತ್ತಿದೆ. ಕನ್ನಡ ರಾಜ್ಯೋತ್ಸವದಂದು ಚಿನ್ನದ ಅವಾರ್ಡ್‌ ಕೊಡಲಿಕ್ಕೆ ಯೂಟ್ಯೂಬ್ ಲೋಕ ಕೂಡ ಸಕಲ ತಯ್ಯಾರಿ ಮಾಡಿಕೊಂಡಿದೆ. ಈ ಖುಷಿಯ ಸಂಗತಿಯ ಬಗ್ಗೆಸಿನಿಲಹರಿ’ ಜೊತೆ ಮಾಹಿತಿ ಹಂಚಿಕೊಂಡ ಲಹರಿ' ಸಂಸ್ಥೆಯ ಮಾಲೀಕರಾದ ವೇಲು ಅವರು, ಯೂಟ್ಯೂಬ್ ಕಡೆಯಿಂದ ಚಿನ್ನದ ಅವಾರ್ಡ್ ಸಿಕ್ತಿರುವುದು ಕನ್ನಡಿಗರಿಂದ, ಹೀಗಾಗಿ ನಾವು ಅದನ್ನುಕರ್ನಾಟಕದ ಹೆಮ್ಮೆಯ ಪ್ರಶಸ್ತಿ’ ಅಂತ ಕರೆಯಲಿಕ್ಕೆ ಇಷ್ಟಪಡುತ್ತೇವೆ ಎಂದರು.

45 ವರ್ಷಗಳ ಪರಿಶ್ರಮಕ್ಕೆ ಕೊನೆಗೂ ಸಾರ್ಥಕತೆ ಸಿಗ್ತು. ಈ ಸಂದರ್ಭದಲ್ಲಿ, ಕುವೆಂಪು, ದ.ರಾ ಬೇಂದ್ರೆ, ನಿಸಾರ್ ಅಹಮ್ಮದ್, ದಿವಂಗತ ಕಾಳಿಂಗರಾಯರು, ದಿವಂಗತ ಅನಂತ್‌ಸ್ವಾಮಿಯವರು, ದಿವಂಗತ ಸಿ ಅಶ್ವತ್ಥ್, ರತ್ನಮಾಲ ಪ್ರಕಾಶ್, ಬಿ.ಕೆ ಸುಮಿತ್ರ, ಬಿ, ಆರ್ ಛಾಯ, ಎಂ.ಡಿ ಪಲ್ಲವಿ, ಅರ್ಚನ ಉಡುಪ, ನರಸಿಂಹ ನಾಯಕ್, ಯಶ್ವಂತ್ ಹಳಿಬಂಡಿ, ಅಬ್ಬಗೆರೆ ತಿಮ್ಮರಾಜು , ಪಿಚ್ಚಳ್ಳಿ ಶ್ರೀನಿವಾಸ್, ಮಂಜುಳ ಗುರುರಾಜ್, ಬಿಕೆ ಸುಮಿತ್ರ, ಗುರುರಾಜ್ ಹೊಸಕೋಟೆ, ಬಿ.ವಿ ಶ್ರೀನಿವಾಸ್ ಸೇರಿದಂತೆ ಕನ್ನಡಕ್ಕಾಗಿ ಶ್ರಮಿಸಿದ ಎಲ್ಲಾ ಕವಿಗಳು-ಕಾದಂಬರಿಕಾರರು-ಸಾಹಿತಿಗಳು-ಸಂಗೀತ ನಿರ್ದೇಶಕರು-ಗಾಯಕ-ಗಾಯಕಿಯರು ಎಲ್ಲರನ್ನೂ ನೆನೆಯುತ್ತೇವೆ, ಚಿರಋಣಿಯಾಗಿರುತ್ತೇವೆ ಎಂದರು.

ಇದು ಭಾರತದಲ್ಲೇ ದಾಖಲೆ!
ಅಚ್ಚರಿ ಅಂದರೆ, ಕನ್ನಡದ ಭಾವಗೀತೆ ಮತ್ತು ಜಾನಪದ ಗೀತೆಗಳ ಇತಿಹಾಸದಲ್ಲಿ ಯೂಟ್ಯೂಬ್‌ಗೆ 10 ಲಕ್ಷ ಸಬ್‌ಸ್ಕ್ರೈಬ್ ಆಗಿರುವುದು ಇಡೀ ಭಾರತದ ದೇಶದಲ್ಲೇ ಇದೇ ಮೊದಲು. ಪ್ರಾದೇಶಿಕ ಭಾಷೆಯಲ್ಲಿ ಈ ತರಹದ ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ಯಾವ ಯೂಟ್ಯೂಬ್‌ಗೂ ಕೂಡ ೧೦ ಲಕ್ಷ ಮಂದಿ ಚಂದದಾರರಿಲ್ಲ. ಆದರೆ, ನಮ್ಮ ಕನ್ನಡ ಭಾಷೆಯ ಜಾನಪದ ಹಾಗೂ ಭಾವಗೀತೆಯನ್ನು ಪ್ರಸಾರ ಮಾಡುವ ಲಹರಿ' ಯೂಟ್ಯೂಬ್‌ಗೆ 10 ಲಕ್ಷ ಮಂದಿ ಸಬ್‌ಸ್ಕ್ರೈಬ್ ಆಗಿದ್ದಾರೆ. ಅಂದ್ಹಾಗೇ ಇದು ರಾತ್ರಿ ಕಳೆದು ಬೆಳಗಾಗುವುದರೊಳಗೆ ಆದಂತಹ ಸಾಧನೆ ಅಲ್ಲ. ಯೂಟ್ಯೂಬ್ ಲೋಕಕ್ಕಾಗಿಲಹರಿ’ ತಂಡ ಬರೋಬ್ಬರಿ ಹತ್ತು ವರ್ಷಗಳ ಕಾಲ ಬೆವರು ಸುರಿಸಿ ದುಡಿದಿದೆ.

ನಿದ್ದೆಗೆ ಚಟ್ಟಕಟ್ಟಿ ಕೆಲಸ ಮಾಡಿದ್ದರಿಂದಲೇ ಇಂತಹ ಪ್ರತಿಫಲ ಸಿಕ್ಕಿದೆ. ಆರುವರೆ ಕೋಟಿ ಕನ್ನಡಿಗರು ಲಹರಿ' ಆಡಿಯೋ ಕಂಪೆನಿಯನ್ನು ಎತ್ತಿಹಿಡಿದಿದ್ದಾರೆ. ಭಾವಗೀತೆ ಮತ್ತು ಜಾನಪದ ಗೀತೆಗಳನ್ನು ಇಲ್ಲಿಯವರೆಗೆ 36 ಕೋಟಿ ಜನ ಕೇಳಿದ್ದಾರೆ. ಇಷ್ಟು ದೊಡ್ಡ ಮಟ್ಟದ ವೀವರ್‌ಶಿಪ್ ಪ್ರೀತಿ ಮತ್ತು ಪ್ರೋತ್ಸಾಹದಿಂದ ಹೊಸ ಹುರುಪು ಸಿಕ್ಕಿದೆ. ಮತ್ತಷ್ಟು ಸಾಧನೆಗೆ ದಾರಿಯಾಗಿದೆ ಎಂದರು ಲಹರಿ ಮಾಲೀಕರಾದ ವೇಲು ಅವರು. ಎನಿವೇ, ಈ ಜಗತ್ತಿನಲ್ಲಿ ಹಿಸ್ಟ್ರಿನಾ ಫಾಲೋ ಮಾಡೋರು ಇದ್ದಾರೆ, ಹಿಸ್ಟ್ರಿನಾ ಬ್ರೇಕ್ ಮಾಡೋರು ಇದ್ದಾರೆ, ಹಿಸ್ಟ್ರಿನಾ ಸೃಷ್ಟಿ ಮಾಡೋರು ಇದ್ದಾರೆ. ಇವರುಗಳ ಪೈಕಿಲಹರಿ’ ಆಡಿಯೋ ಕಂಪೆನಿಯವರು ಹೊಸ ಹೊಸ ಹಿಸ್ಟ್ರಿಯ ಸೃಷ್ಟಿಕರ್ತರು. ಅವರುಗಳ ಸಾಧನೆ ಹಿಂಗೆ ಮುಂದುವರೆಯಲಿ ಅನ್ನೋದು “ಸಿನಿಲಹರಿ” ಅಶಯ.

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ದುಬೈನಲ್ಲೂ ಸುಧೀರ್‌ ಅತ್ತಾವರ್‌ ಸಕ್ಸಸ್! ಅಂತಾರಾಷ್ಟ್ರೀಯ ಮಟ್ಟದಲ್ಲೂ ವಿಸ್ತರಿಸಿದ ‌ಸಕ್ಸಸ್‌ ಫಿಲ್ಮ್ಸ್‌ ಕಾರ್ಯವ್ಯಾಪ್ತಿ…

ದುಬೈನ ಡೇರಾ ಪ್ರಾಂತ್ಯದಲ್ಲಿ ‌ನಿರ್ದೇಶಕ ಸುಧೀರ್‌ ಅತ್ತಾವರ್ ಅವರ ಕನಸಿನ ಸಕ್ಸಸ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಸಂಸ್ಥೆ ಶುರುವಾಗಿದೆ. ಇತ್ತೀಚೆಗೆ ದುಬೈ ನ ಖ್ಯಾತ ರೇಡಿಯೋ ವೈಬ್ FM 105.4ನ ಚಾನೆಲ್ ಹೆಡ್ ಸೈಯದ್ ಹರ್ಷದ್, ಅಂತಾರಾಷ್ಟ್ರೀಯ ಉರ್ದು ಪ್ರೆಸ್ ಕ್ಲಬ್ ನ ಕಾರ್ಯದರ್ಶಿ ತಾರೀಕ್ ಫೈಜೀ ಮತ್ತು ಸಿನಿಮಾ ನಟ ಹುಸೇನ್ ದುಬೈನ ಖ್ಯಾತ ರಂಗ ಕರ್ಮಿ ಡಾ. ಫರ್ಹದ್ ಚೌಧರಿ ಅವರು ಆಗಮಿಸಿ “ಸಕ್ಸಸ್‌ ಫಿಲ್ಮ್ಸ್”‌ ಸಂಸ್ಥೆಯ ನೂತನ ಕಚೇರಿಗೆ ಶುಭಕೋರಿದ್ದಾರೆ

ಸುಧೀರ್‌ ಅತ್ತಾವರ್… ಈ ಹೆಸರು ಕೇಳಿದಾಕ್ಷಣ ಥಟ್ಟನೆ ನೆನಪಾಗೋದೇ “ಮರಳಿ ಮರೆಯಾಗಿ…” ಎಂಬ ಅದ್ಭುತ ಗೀತೆ. ಹೌದು, ಇಂತಹ ಅದೆಷ್ಟೋ ಜನಪ್ರಿಯ ಹಾಡುಗಳನ್ನು ಗೀಚಿದ ಸುಧೀರ್‌ ಅತ್ತಾವರ್‌, ಬರೀ ಗೀತ ಸಾಹಿತಿಯಲ್ಲ, ಅವರೊಬ್ಬ ಸೂಕ್ಷ್ಮ ಸಂವೇದನೆಯ ನಿರ್ದೇಶಕ. ನೈಜತೆಗೆ ಹೆಚ್ಚು ಒತ್ತು ಕೊಡುವ ಸುಧೀರ್‌, ಕನ್ನಡ ಮಾತ್ರವಲ್ಲ, ಮರಾಠಿ ಮತ್ತು ಬಾಲಿವುಡ್‌ ಸಿನಿಮಾಗಳಿಗೂ ಆಕ್ಷನ್‌-ಕಟ್‌ ಹೇಳಿದ್ದಾರೆ. ಕನ್ನಡದ ಅಪ್ಪಟ ಪ್ರತಿಭೆ ಸುಧೀರ್‌ ಅತ್ತಾವರ್‌, ಬಾಲಿವುಡ್‌ ಅಂಗಳದಲ್ಲಷ್ಟೇ ಅಲ್ಲ, ಈಗ ಸಾಗರದಾಚೆಗೂ ತನ್ನ ಪ್ರತಿಭೆಯನ್ನು ವಿಸ್ತರಿಸಿಕೊಂಡಿದ್ದಾರೆ. ಸ್ಯಾಂಡಲ್‌ವುಡ್‌ನಿಂದ ಬಾಲಿವುಡ್‌ನತ್ತ ಪಯಣ ಬೆಳೆಸಿದ ಸುಧೀರ್‌ ಅತ್ತಾವರ್‌, ಅಲ್ಲೇ ಗಟ್ಟಿ ನೆಲೆ ಕಾಣಬೇಕು ಎಂಬ ಉದ್ದೇಶದಿಂದ ಮರಾಠಿ ಸಿನಿಮಾಗಳ ಜೊತೆ ಹಿಂದಿ ಸಿನಿಮಾಗಳ ಮೇಲೂ ಒಲವು ತೋರಿಸಿ ಅಲ್ಲಿ ನಿರ್ದೇಶನಕ್ಕಿಳಿದರು. ಜೊತೆ ಜೊತೆಯಲ್ಲಿ ಅವರು ಮುಂಬೈನಲ್ಲಿ ಸಕ್ಸಸ್‌ ಫಿಲ್ಮ್ಸ್‌ ಸಂಸ್ಥೆಯನ್ನೂ ಸ್ಥಾಪಿಸಿದರು. ಇಂಡಿಯಾಕ್ಕೆ ಸೀಮಿತವಾಗಿದ್ದ ಅವರ ಸಕ್ಸಸ್‌ ಫಿಲ್ಮ್ಸ್‌ ಇದೀಗ ತನ್ನ ಕಾರ್ಯ ವ್ಯಾಪ್ತಿಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೂ ವಿಸ್ತರಿಸಿಕೊಂಡಿದೆ ಎನ್ನುವುದೇ ಹೆಮ್ಮೆಯ ವಿಷಯ.

ಸಹಜವಾಗಿಯೇ ಇದು ನಿರ್ದೇಶಕ ಸುಧೀರ್‌ ಅತ್ತಾವರ್‌ ಅವರಿಗಷ್ಟೇ ಅಲ್ಲ, ಅವರ ಬಳಗ ಮತ್ತು ಗೆಳೆಯರಿಗೂ ಸಂಭ್ರಮದ ವಿಷಯವೇ ಸರಿ. ಸುಧೀರ್‌ ಅತ್ತಾವರ್‌ ಅವರ ಸಕ್ಸಸ್ ಕನಸು ಈಗ ದುಬೈನಲ್ಲೂ ನನಸಾಗಿದೆ ಅನ್ನೋದೇ ಹೆಮ್ಮೆ. ಯುಎಇಯ ದುಬೈನಲ್ಲಿ ಅವರು ತಮ್ಮ ಪ್ರೀತಿಯ ಸಕ್ಸಸ್‌ ಫಿಲ್ಮ್ಸ್‌ ಇಂಟರ್ನ್ಯಾಷನಲ್‌ ಸಂಸ್ಥೆಯನ್ನು ಪ್ರಾರಂಭಿಸಿದ್ದಾರೆ. ಇತ್ತೀಚೆಗೆ ದುಬೈನ ಡೇರಾ ಪ್ರಾಂತ್ಯದಲ್ಲಿ ಅವರು ಈ ತಮ್ಮ ಸಕ್ಸಸ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ದುಬೈ ನ ಖ್ಯಾತ ರೇಡಿಯೋ ವೈಬ್ FM 105.4ನ ಚಾನೆಲ್ ಹೆಡ್ ಸೈಯದ್ ಹರ್ಷದ್, ಅಂತಾರಾಷ್ಟ್ರೀಯ ಉರ್ದು ಪ್ರೆಸ್ ಕ್ಲಬ್ ನ ಕಾರ್ಯದರ್ಶಿ ತಾರೀಕ್ ಫೈಜೀ ಮತ್ತು ಸಿನಿಮಾ ನಟ ಹುಸೇನ್ ದುಬೈನ ಖ್ಯಾತ ರಂಗ ಕರ್ಮಿ ಡಾ. ಫರ್ಹದ್ ಚೌಧರಿ ಅವರು ಸುಧೀರ್‌ ಅತ್ತಾವರ್‌ ಅವರ ಪ್ರೀತಿಯ ಆಹ್ವಾನದ ಮೇರೆಗೆ, “ಸಕ್ಸಸ್‌ ಫಿಲ್ಮ್ಸ್”‌ ಸಂಸ್ಥೆಯ ನೂತನ ಕಚೇರಿಗೆ ಆಗಮಿಸಿ, ಶುಭಕೋರಿದ್ದಾರೆ. ಈ ವೇಳೆ ಕನ್ನಡಿಗ ಸುಧೀರ್ ಅತ್ತಾವರ್ ಅವರೆಲ್ಲರನ್ನೂ ಅಷ್ಟೇ ಪ್ರೀತಿಯಿಂದ ಸ್ವಾಗತಿಸಿ, ತಮ್ಮ ಸಂಸ್ಥೆಯ ಕೆಲಸ ಕಾರ್ಯಗಳ ಕುರಿತು ತಿಳಿಸಿಕೊಟ್ಟರು.

ದುಬೈನಲ್ಲಿ ಮಹತ್ವಾಕಾಂಕ್ಷೆ ಯೋಜನೆ!
ಇದೇ ಮೊದಲ ಬಾರಿಗೆ ಕನ್ನಡಿಗರೊಬ್ಬರೂ ಅದರಲ್ಲೂ ಸದಾ ಸಿನಿಮಾವನ್ನೇ ಧ್ಯಾನಿಸುವ ಸೂಕ್ಷ್ಮ ಸಂವೇದನೆಯ ನಿರ್ದೇಶಕರೊಬ್ಬರು ದುಬೈನಲ್ಲಿ ಸಿನಿಮಾ ಸ್ಟುಡಿಯೋ ಮತ್ತು ಪ್ರೊಡಕ್ಷನ್ ಹೌಸ್ ಆರಂಭಿಸಿರುವುದು ಹೆಮ್ಮೆಯ ವಿಷಯ. ಇನ್ನು, ಇದೇ ಸಂದರ್ಭದಲ್ಲಿ www.success films international.com ಎಂಬ ವೆಬ್‌ಸೈಟನ್ನೂ ಸಹ ದುಬೈನ ಖ್ಯಾತ ರಂಗಕರ್ಮಿ ಡಾ. ಫರ್ಹದ್ ಚೌಧರಿ ಅವರು ಸಕ್ಸಸ್ ಫಿಲ್ಮ್ಸ್‌ನ ವಿದ್ಯಾಧರ್ ಶೆಟ್ಟಿ ಅವರೊಂದಿಗೆ ಲೋಕಾರ್ಪಣೆ ಮಾಡಿದರು. ಇನ್ನು, ಸಕ್ಸಸ್ ಫಿಲ್ಮ್ಸ್‌ನ ದುಬೈ ಪಾಲುದಾರರಾದ ದೆಹಲಿ‌ ಮೂಲದ ಮಿನ್ಹಾಜ್ ಖಾನ್ ಅವರು ಈ ವೇಳೆ ಧನ್ಯವಾದ ಅರ್ಪಿಸಿದ್ದಾರೆ. ಇದೇ ಸಂದರ್ಭದಲ್ಲಿ ಸುಧೀರ್‌ ಅತ್ತಾವರ್‌ ಅವರು, ಶೀಘ್ರದಲ್ಲೇ ದುಬೈನಲ್ಲಿ ಮಹತ್ವಾಕಾಂಕ್ಷೆಯ ಯೋಜನೆಯನ್ನು ಅರಬ್ ಪಾಲುದಾರಿಕೆಯಲ್ಲಿ ಆರಂಭಿಸುವ ಬಗ್ಗೆ ಹೇಳಿಕೊಂಡಿದ್ದಾರೆ.

ಪ್ರತಿಭೆಗೆ ಸಂದ ಪ್ರಶಸ್ತಿ

ನಿರ್ದೇಶಕ ಸುಧೀರ್‌ ಅತ್ತಾವರ್‌ ಅವರು ಎಂದಿಗೂ ಪ್ರಶಸ್ತಿ, ಸನ್ಮಾನ ಬಯಸಿದವರಲ್ಲ. ಆದರೆ, ಅವರ ಸಿನಿಮಾಗಳು, ಸಾಧನೆ ಅವರಿಗೆ ಪ್ರಶಸ್ತಿ ಹುಡುಕಿ ಬಂದಿದೆ. ಸನ್ಮಾಗಳೂ ಲೆಕ್ಕವಿಲ್ಲದಷ್ಟು ನಡೆದಿವೆ. ಮೊದಲೇ ಹೇಳಿದಂತೆ ಅವರು ಸೂಕ್ಷ್ಮ ಸಂವೇದನೆಯ ನಿರ್ದೇಶಕ. ಅವರು ಇತ್ತೀಚೆಗೆ ನಿರ್ದೇಶಿಸಿದ್ದ “ಮಡಿʼ ಚಿತ್ರಕ್ಕೆ ರಿಫ್ಟ್‌ ಚಿತ್ರೋತ್ಸವದಲ್ಲಿ ಎರಡು ಪ್ರಶಸ್ತಿಗಳು ಲಭಿಸಿವೆ. ಅತ್ಯುತ್ತಮ ಗ್ಲೋಬಲ್‌ ಸೋಶಿಯಲ್‌ ಅವೇರ್‌ನೆಸ್‌ ಚಿತ್ರ ಪ್ರಶಸ್ತಿ ಜೊತೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯೂ ಸಿಕ್ಕಿದೆ. ಏಳನೇ ರಾಜಸ್ಥಾನ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ (ರಿಫ್ಟ್) ಅಂತಾರಾಷ್ಟ್ರೀಯ ಸ್ಪರ್ಧಾ ವಿಭಾಗದಲ್ಲಿ “ಮಡಿ” ಅತ್ಯುತ್ತಮ ಗ್ಲೋಬಲ್‌ ಸೋಶಿಯಲ್‌ ಅವೇರ್‌ನೆಸ್‌ ಚಿತ್ರ ಪ್ರಶಸ್ತಿ ಪಡೆದುಕೊಂಡಿದೆ. ಅದರ ಜೊತೆಯಲ್ಲಿ ನಿರ್ದೇಶಕ ಸುಧೀರ್‌ ಅತ್ತಾವರ್‌ ಅವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯೂ ಸಂದಿರುವುದು ಅವರ ಕಥೆಯೊಳಗಿನ ಗಟ್ಟಿತನಕ್ಕೆ ಕಾರಣ.


“ಹಸಿವು ಮತ್ತು ದಾರಿದ್ರ್ಯ ಚಿತ್ರದ ಹೈಲೈಟ್. ಆಗಿತ್ತು. ಜಾತಿ ಕೂಡ ಮನುಕುಲದ ದುರಂತ ಎಂಬಂತಹ ಸೂಕ್ಷ್ಮ ವಿಷಯಗಳ ಅರ್ಥಪೂರ್ಣ ಕಥಾನಕವನ್ನು ಚಿತ್ರ ಹೊಂದಿತ್ತು. ಸೂಕ್ಷ್ಮ ಸಂವೇದನೆಗಳನ್ನು ಅಷ್ಟೇ ಮನಕಲಕುವ ರೀತಿ ಹಿಡಿದಿಟ್ಟು, ನೋಡುಗರ ಮನಸ್ಸನ್ನು ಕ್ಷಣಕಾಲ ಭಾವುಕತೆಗೂ ದೂಡುವಂತಹ ಚಿತ್ರ ಕಟ್ಟಿಕೊಟ್ಟಿದ್ದರು. “ಮಡಿ” ಈಗಾಗಲೇ ಬಾಲಿವುಡ್ ಅಂಗಳದಲ್ಲಿ ಸದ್ದು ಮಾಡಿದ್ದು ಎಲ್ಲರಿಗೂ ಗೊತ್ತಿದೆ. ಅಷ್ಟೇ ಅಲ್ಲ, ಬಾಲಿವುಡ್‌ ಜಗತ್ತಿನ ಅನೇಕ ಗಣ್ಯರು “ಮಡಿ” ಕುರಿತು ಮಾತಾಡಿದ್ದರು. ಈ ಚಿತ್ರಕ್ಕೆ “ಮಲಿನ ಮನಸ್ಸುಗಳ ಕ್ರೌರ್ಯ” ಎಂಬ ಅರ್ಥವೆನಿಸುವ ಅಡಿಬರಹವೂ ಇದೆ.

ಕರಾವಳಿಯ ಜನಪದ ಕಲೆ ಆಟಿ ಕಳಂಜದ ಹಿನ್ನೆಲೆಯಲ್ಲಿ ಸಾಗುವ ಚಿತ್ರದಲ್ಲಿ ಪ್ರತಿ ಪಾತ್ರಗಳಲ್ಲೂ ವಿಶೇಷತೆ ಇದೆ. ಈ ಚಿತ್ರದಲ್ಲಿ ಎಂ.ಡಿ. ಪಲ್ಲವಿ, ರಂಗಭೂಮಿ ಕಲಾವಿದ ರಾಮಚಂದ್ರ ದೇವಾಡಿಗ, ಮಾಸ್ಟರ್ ಸಂತೋಷ್, ವೆಂಕಟ್ ರಾವ್, ವಿದ್ಯಾಧರ್ ಶೆಟ್ಟಿ, ರವೀಂದ್ರ ಶೆಟ್ಟಿ ಮೊದಲಾದವರು ಅಭಿನಯಿಸಿದ್ದಾರೆ. ಚಿತ್ರಕ್ಕೆ ಬಿ.ಎಸ್. ಶಾಸ್ತ್ರಿ ಕ್ಯಾಮೆರಾ ಹಿಡಿದರೆ, ವಿದ್ಯಾಧರ್ ಶೆಟ್ಟಿ ಸಂಕಲನ ಮಾಡಿದ್ದಾರೆ. ಆಕಾಶ್ ಪತುಲೆ ಸಂಗೀತವಿದೆ. ಸುಧೀರ್‌ ಅತ್ತಾವರ್‌ ಅವರೇ “ಮಡಿ” ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಜೊತೆ ಕಲಾ ನಿರ್ದೇಶನ, ವಸ್ತ್ರ ವಿನ್ಯಾಸವನ್ನೂ ಮಾಡಿದ್ದಾರೆ.

ಬಾನುಲಿ ಸರಣಿ
ಸುಧೀರ್ ಅತ್ತಾವರ್ ಪರಿಕಲ್ಪನೆಯಲ್ಲಿ ಹೋರಾಟಗಾರರ ಪರಿಚಯಿಸೋ “ಹಮಾರೇ ಸ್ವತಂತ್ರ್ಯ ತಾ ಸೇನಾನಿʼ ಬಾನುಲಿ ಸರಣಿ ಕೂಡ ಬಂದಿದೆ. ಅದಕ್ಕೆ ಈಗಾಗಲೇ ಸಾಕಷ್ಟು ಮೆಚ್ಚುಗೆಯೂ ಸಿಕ್ಕಿದೆ. ದೇಶದ ಮಹಾನ್ ಸ್ವಾತಂತ್ರ್ಯ ಹೋರಾಟಗಾರರನ್ನು ಪರಿಚಯಿಸುವಂತಹ ಕೆಲಸ ಮಾಡಿದ ಸುಧೀರ್‌ ಬಗ್ಗೆ ಒಳ್ಳೇಯ ಮಾತುಗಳು ಕೇಳಿಬಂದಿದ್ದವು. ಮುಂಬೈನಲ್ಲಿರೋ ತಮ್ಮ ಸಕ್ಸಸ್ ಫಿಲ್ಮ್ಸ್ ಮೂಲಕ ಈ ಬಾನುಲಿ ಸರಣಿಯನ್ನು ನಿರ್ಮಾಣ ಮಾಡಿದ್ದರು.

ಡಿ.ಕೆ. ಫ್ಲ್ಯಾಗ್ ಫೌಂಡೇಷನ್ ನ ಡಾ. ರಾಕೇಶ್ ಬಕ್ಷಿ ಈ ಸರಣಿಯನ್ನು ನಡೆಸಿಕೊಟ್ಟಿದ್ದರು. ಖ್ಯಾತ ಹಿನ್ನೆಲೆ ಗಾಯಕರಾದ ಶಾನ್, ಶರೋನ್ ಪ್ರಭಾಕರ್, ಆರತಿ ಮುಖರ್ಜಿ, ಡಾ.ಸಂದೇಶ್ ಮಾಯೆಕರ್, ಹಾಕಿ ಪ್ಲೇಯರ್ ಧನರಾಜ್ ಪಿಳೈ, ಹಜ್ ಹೌಸ್ ಅಧ್ಯಕ್ಷ ಮಕ್ಸೂದ್ ಅಹ್ಮದ್ ಖಾನ್, ಬೀನಾ ಸಂತೋಷ್ ಸೇರಿದಂತೆ ಇತರರು ಭಾಗವಹಿಸಿದ್ದು ವಿಶೇಷ.

Categories
ಸಿನಿ ಸುದ್ದಿ

ಚಿರು ಹುಟ್ಟುಹಬ್ಬಕ್ಕೆ ಸೆಟ್ಟೇರಲಿದೆ ಮೇಘನಾ ಹೊಸ ಸಿನಿಮಾ; ಗೆಳೆಯರ ಬಳಗದ ಹೊಸ ಸಾಹಸ !

ಯುವಸಾಮ್ರಾಟ ಚಿರಂಜೀವಿ ಸರ್ಜಾ ಜನ್ಮಜಯಂತಿಗೆ ಪತ್ನಿ ಮೇಘನರಾಜ್ ನಟನೆಯ ಹೊಸ ಸಿನಿಮಾ ಸೆಟ್ಟೇರ್ತಿದೆ. ಚಿರು‌ ಸ್ನೇಹಿತರು ಹಾಗೂ ಹೊಸಬರ ತಂಡ ಸೇರಿಕೊಂಡು ಒಂದು ಸಾಹಸಕ್ಕೆ ಕೈಹಾಕಿದ್ದಾರೆ. ವಾಯುಪುತ್ರನ ಆಶೀರ್ವಾದದೊಂದಿಗೆ ಶುರುವಾಗುತ್ತಿರುವ ಮೇಘನಾ ಮೂವೀಯ ಡೀಟೈಲ್ಸ್ ಇಲ್ಲಿದೆ.

ಅಕ್ಟೋಬರ್ 17 ಸ್ಯಾಂಡಲ್ ವುಡ್ ನ ಯುವಸಾಮ್ರಾಟ ಚಿರಂಜೀವಿ ಸರ್ಜಾರ ಜನುಮದಿನ.‌ ವಿಧಿಯ ಆಟಕ್ಕೆ ಬಲಿಯಾಗದಿದ್ದರೆ ಅ. 17 ರಂದು 37ನೇ ವಸಂತಕ್ಕೆ ಕಾಲಿಡುತ್ತಿದ್ದರು.ವಾಯುಪುತ್ರನ ಹುಟ್ಟುಹಬ್ಬ ಅದ್ದೂರಿಯಾಗಿ ನಡೀತಿತ್ತು. ಅಭಿಮಾನಿ ದೇವರುಗಳು ಚಿರು ಹುಟ್ಟುಹಬ್ಬವನ್ನು ಗ್ರ್ಯಾಂಡ್ ಆಗಿ ಸೆಲಬ್ರೇಟ್ ಮಾಡ್ತಿದ್ದರು.ರಾಯನ್ ರಾಜ್ ಸರ್ಜಾನಿಂದ ಯುವಸಾಮ್ರಾಟನ ಬರ್ತ್ ಡೇಗೆ ಹೊಸ ಕಳೆಬರುತ್ತಿತ್ತು. ಆದರೆ, ಹಿಂಗಾಗಲಿಕ್ಕೆ ಸಾಧ್ಯವಿಲ್ಲ ಯಾಕಂದ್ರೆ ದೈಹಿಕವಾಗಿ ಚಿರು ನಮ್ಮೊಟ್ಟಿಗೆ ಇಲ್ಲ.

ಚಿರಂಜೀವಿಯ ಅಕಾಲಿಕ ನಿಧನ ಈ ಕ್ಷಣಕ್ಕೂ ಕರುಳು ಹಿಂಡುವ ಕಥನ. ಅವರುಗಳ ಕುಟುಂಬ ಮಾತ್ರವಲ್ಲ ಕನ್ನಡಿಗರೆಲ್ಲರೂ ಕೂಡ ಚಿರು ನೆನೆದು ಕಣ್ಣೀರಾಗುತ್ತಾರೆ. ಹೀಗೆ, ಮರುಗುವ ಹೃದಯಗಳು ನಿಟ್ಟುಸಿರು ಬಿಟ್ಟಿದ್ದು ರಾಯನ್ ರಾಜ್ ಸರ್ಜಾ ಭೂಮಿಗೆ ಬಂದ್ಮೇಲೆ. ಚಿರು ತದ್ರೂಪವನ್ನೆತ್ತಿ ಬಂದಿರುವ ರಾಯನ್, ಸುಂದರ್ ರಾಜ್ ಹಾಗೂ ಸರ್ಜಾ ಕುಟುಂಬಕ್ಕೆ‌ ಬೆಳಕಾಗಿದ್ದಾನೆ. ಎರಡು ಕುಟುಂಬವನ್ನು ದುಃಖ- ಸಂಕಟ-ನೋವಿನಿಂದ ಹೊರತಂದಿದ್ದಾನೆ. ಅಮ್ಮ ಮೇಘನಾ ಮತ್ತೆ ಬಣ್ಣ ಹಚ್ಚುವುದಕ್ಕೆ ಹುರುಪು ತುಂಬಿದ್ದಾನೆ.

ಹೌದು, ನಟಿ ಮೇಘನಾ ಮತ್ತೆ ಬಣ್ಣದ ಲೋಕಕ್ಕೆ ಮರಳುತ್ತಿದ್ದಾರೆ. ಚಿರು ಕಳೆದುಕೊಂಡ ಹೊತ್ತಲ್ಲಿ ಗರ್ಭಿಣಿಯಾಗಿದ್ದ ಮೇಘನಾ, ಅನಂತರ ಮಗನ ಆರೈಕೆಯಲ್ಲಿ ತೊಡಗಿಸಿಕೊಂಡಿದ್ದರು. ಈಗ ಪುತ್ರ ರಾಯನ್ ಒಂದು ವರ್ಷ ಬೆಳೆದು ದೊಡ್ಡವನಾಗಿದ್ದಾನೆ. ಹೀಗಾಗಿ, ಮೇಘನಾ ಮತ್ತೆ ಮುಖಕ್ಕೆ ಬಣ್ಣ ಹಚ್ಚಲು ಸಜ್ಜಾಗಿದ್ದಾರೆ. ಪತಿ ಚಿರಂಜೀವಿ ಸರ್ಜಾರ ಹುಟ್ಟುಹಬ್ಬದಂದೇ ಕ್ಯಾಮರಾ ಎದುರಿಸಲಿದ್ದಾರೆ.

ವಾಯುಪುತ್ರನ ಸ್ನೇಹಿತರು ನಟಿ ಮೇಘನಾ ಕಮ್ ಬ್ಯಾಕ್ ಗೆ ರೆಡ್ ಕಾರ್ಪೆಟ್ ಹಾಕಿದ್ದಾರೆ. ಚಿರು ಪಾಲಿನ ಜೀವದ ಗೆಳೆಯ ಪನ್ನಗಾಭರಣ ಮೇಘನಾ ನಟನೆಯ ಹೊಸ ಚಿತ್ರಕ್ಕೆ ಬಂಡವಾಳ‌ ಹೂಡುತ್ತಿದ್ದಾರೆ.ಯುವಪ್ರತಿಭೆ ವಿಶಾಲ್ ಆಕ್ಷನ್ ಕಟ್ ಹೇಳ್ತಿದ್ದಾರೆ, ವಾಸುಕಿ ವೈಭವ್ ಸಂಗೀತ ನೀಡುತ್ತಿದ್ದಾರೆ.ಪಿ.ಬಿ.ಸ್ಟುಡಿಯೋಸ್ ಲಾಂಛನದಲ್ಲಿ ನೂತನ ಚಿತ್ರ ನಿರ್ಮಾಣವಾಗುತ್ತಿದೆ.

ಅಂದ್ಹಾಗೇ, ಚಿರುಗೆ ಆಕ್ಷನ್ ಕಟ್ ಹೇಳಬೇಕು, ಯುವಸಾಮ್ರಾಟ್ ಹಾಗೂ ಜಂಟಲ್ ಮ್ಯಾನ್ ಪ್ರಜ್ವಲ್ ಕಾಂಬಿನೇಷನ್‌ ನಲ್ಲಿ ಸಿನಿಮಾ ಮಾಡಬೇಕು ಎನ್ನುವುದು ಪನ್ನಗ ಕನಸಾಗಿತ್ತು. ಆದರೆ, ಆ ಮಹಾದಾಸೆ ಈಡೇರುವ ಮುನ್ನವೇ ಚಿರು ಉಸಿರು ಚೆಲ್ಲಿದರು. ಇದೀಗ, ಗೆಳೆಯ ಚಿರು ವೈಫ್ ಕಮ್ ಆಪ್ತ ಸ್ನೇಹಿತೆಯಾಗಿರುವ ಮೇಘನಾರಿಗೆ‌ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ‌ ಮೇಘನಾರಾಜ್ ಪ್ರಮುಖಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಾಳೆ ಸಿನಿಮಾ ಸೆಟ್ಟೇರಲಿದ್ದು,ನಿರ್ದೇಶಕ ಟಿ.ಎಸ್.ನಾಗಾಭರಣ, ನಟ ಸುಂದರ್ ರಾಜ್ ಹಾಗೂ ಕಲಾ ನಿರ್ದೇಶಕ ಶಿವಕುಮಾರ್ ಸೇರಿದಂತೆ ಚಿರು ಆಪ್ತಬಳಗ ಮುಹೂರ್ತದಲ್ಲಿ ಪಾಲ್ಗೊಳ್ಳಲಿದೆ

ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

error: Content is protected !!