Categories
ಸಿನಿ ಸುದ್ದಿ

ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ !



ಶುಕ್ರವಾರ ಶುಭ ಅಂತಾರೆ, ಆದ್ರೆ ಕನ್ನಡ ಚಿತ್ರರಂಗದ ಪಾಲಿಗೆ ಇದೇ ಶುಕ್ರವಾರ ಕರಾಳ ದಿನವಾಗಿ ಪರಿಣಮಿಸಿದೆ. ಬಹುಶ: ಕನ್ನಡ ಚಿತ್ರರಂಗ ಹಿಂದೂ-ಮುಂದೂ ಎಂದೆಂದಿಗೂ ಇಂತಹ ಘನಘೋರ ಆಘಾತವನ್ನು ಅನುಭವಿಸಲು ಸಾಧ್ಯವೇ ಇಲ್ಲ ಎನ್ನುವಂತಹ ದೊಡ್ಡ ಆಘಾತವೇ ನಡೆದು ಹೋಗಿದೆ. ದೊಡ್ಮನೆಯ ಮಹಾನ್‌ ಪ್ರತಿಭೆ, ಕನ್ನಡಿಗರ ಪ್ರೀತಿಯ ಅಪ್ಪು, ಅಭಿಮಾನಿಗಳ ನೆಚ್ಚಿನ ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ಇನ್ನಿಲ್ಲ ಎನ್ನುವ ಅರಗಿಸಿಕೊಳ್ಳಲಾಗದ ಸುದ್ದಿಯನ್ನು ಅದೇಗೆ ನಂಬಬೇಕೋ ಗೊತ್ತಾಗುತ್ತಿಲ್ಲ…

ಆದರೂ ಸತ್ಯ. ತೀವ್ರ ಹೃದಯಘಾತದಲ್ಲಿ ಪುನೀತ್‌ ರಾಜ್‌ ಕುಮಾರ್‌ ಶುಕ್ರವಾರ ಬೆಳಗ್ಗೆ ವಿಧಿವಶರಾದರು. ಇಂತಹದೊಂದು ಕೆಟ್ಟ ದಿನವನ್ನು ಯಾರು ಕೂಡ, ಯಾವುದೇ ಕ್ಷಣವೂ ಕನಸಲ್ಲೂ ಕಂಡಿರಲು ಸಾಧ್ಯವೇ ಇಲ್ಲ. ಆದರೆ ವಿಧಿಯಾಟದ ಮುಂದೆ ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಸೋತು ಹೋಗಿದ್ದಾರೆ. ಇನ್ನು ಬಾಳಿ ಬದುಕಬೇಕಾದ ಅತೀ ಚಿಕ್ಕ ವಯಸ್ಸಿನಲ್ಲಿಯೇ ಅವರಿಲ್ಲ ಎನ್ನುವುದು ಕನ್ನಡಿಗರ ದೌರ್ಬಾಗ್ಯವೋ, ದುರಾದೃಷ್ಟವೋ ಗೊತ್ತಿಲ್ಲ. ಅವರಿಲ್ಲದ ಈ ಕ್ಷಣಕ್ಕೆ ಕನ್ನಡ ನಾಡು, ಕನ್ನಡ ಚಿತ್ರರಂಗ ಎರಡು ಕೂಡ ಬಡವಾಗಿದೆ. ಅದು ಇಡೀ ಕರುನಾಡೇ ಕಣ್ಣೀರಿನಲ್ಲಿ ಮುಳುಗುವಂತೆ ಮಾಡಿದೆ.


ಅವರಿಲ್ಲ ಎಂಬ ತಡೆಯಲಾಗದ ನೋವಿನ ಸಂಕಟಕ್ಕೆ ಅವರಿದ್ದಾರೆಯೇ ಅಂತ ನಾವೆಲ್ಲ ಸಮಾಧಾನಿಸಿಕೊಂಡರೂ, ವಾಸ್ತವದಲ್ಲಿ ಅವರಿಲ್ಲ. ನಿಮ್ಮೆಲ್ಲರ ಪ್ರೀತಿಯ ಅಪ್ಪು ಇನ್ನು ನೆನಪು ಮಾತ್ರ. ದೈಹಿಕವಾಗಿ ಅವರಿಲ್ಲ ಎನ್ನುವ ಸತ್ಯವನ್ನು ಸಂಕಟದ ನಡುವೆಯೂ ಒಪ್ಪಿಕೊಳ್ಳುತ್ತಲೇ ಪುನೀತ್‌ ಅವರು ನಡೆದು ಬಂದ ಹಾದಿ, ಅವರ ವ್ಯಕ್ತಿತ್ವ, ನಟನಾಗಿ ಮಿಂಚಿದ ಪರಿ, ಸಮಾಜಕ್ಕಾಗಿ ಮಿಡಿದ ರೀತಿ..ಹೀಗೆ ಎಲ್ಲವನ್ನು ಇಲ್ಲಿ ಅಕ್ಷರಗಳೊಂದಿಗೆ ಕಟ್ಟಿಕೊಡಲು ಹೊರಟರೆ ಅದೊಂದು ಬೃಹತ್‌ ಗ್ರಂಥವೇ ಆದೀತು. ಯಾಕಂದ್ರೆ ಪುನೀತ್‌ ಅಂದ್ರೆ ಬರೀ ಪುನೀತ್‌ ಅಲ್ಲ, ತಂದೆಯಂತೆಯೇ ಮಗ. ಕನ್ನಡ ಚಿತ್ರರಂಗದ ಮೇರು ನಟ ಡಾ. ರಾಜ್‌ಕುಮಾರ್‌ ಅವರೊಗಿನ ಆಗಾದ ಪ್ರತಿಭೆಯನ್ನು ಬಹುತೇಕ ತಮ್ಮೊಳಗೆ ಅವಗಾನಿಸಿಕೊಂಡ ಅಪರೂಪದ ನಟ ಪುನೀತ್‌ ರಾಜ್ ಕುಮಾರ್.‌

ಈ ಮಾತು ಈ ಕ್ಷಣ ಉತ್ಪ್ರೇಕ್ಷೆ ಎನಿಸಿದರೂ ಸತ್ಯವೂ ಹೌದು. ರಾಜಕುಮಾರ್‌ ಅವರೊಂದಿಗೆ ಪುನೀತ್‌ ಬಾಲ್ಯದಲ್ಲಿ ಅಭಿನಯಿಸಿದ ʼಬೆಟ್ಟದ ಹೂವುʼ, ʼಯಾರಿವನುʼ, ʼಭಕ್ತ ಪ್ರಹ್ಲಾದʼ ಸೇರಿದಂತೆ ಹಲವು ಚಿತ್ರಗಳಲ್ಲಿ ಚಿತ್ರಗಳಲ್ಲಿ ಅಪ್ಪ-ಮಗ ಪೈಪೋಟಿಗೆ ಬಿದ್ದಂತೆ ಅಭಿನಯಿಸಿದ್ದೇ ಇದಕ್ಕೆ ಸಾಕ್ಷಿ. ದೊಡ್ಮನೆಯ ಕುಟುಂಬದಲ್ಲಿ ವರನಟ ರಾಜ್‌ಕುಮಾರ್‌ ನಟನೆಯ ಪ್ರಭಾವಳಿ ಕಂಡಿದ್ದೇ ಪುನೀತ್‌ ಅವರ ನಟನೆಯಲ್ಲಿಯೇ ಹೆಚ್ಚು. ಬಾಲ್ಯದಿಂದಲೇ ಪುನೀತ್‌ ನಟನೆಗೆ ಇಳಿದಿದ್ದು ಇದಕ್ಕೆ ಕಾರಣವೋ, ರಾಜಕುಮಾರ್‌ ಅವರ ರೂಪ ಪುನೀತ್‌ ಅವರ ಒಳಗಡೆಯೇ ಇತ್ತೋ ಗೊತ್ತಿಲ್ಲ, ನಟನೆಯ ಎಲ್ಲಾ ಪ್ರಕಾರಗಳಲ್ಲೂ ಸೈ ಎನಿಸಿಕೊಂಡ ಅಪರೂಪದ ಪ್ರತಿಭೆ ನಿಮ್ಮೆಲ್ಲರ ಪ್ರೀತಿಯ ಅಪ್ಪು.

ಅಣ್ಣಾವ್ರ ಕುಟುಂಬದಲ್ಲಿ ಶಿವರಾಜ್‌ ಕುಮಾರ್‌, ರಾಘವೇಂದ್ರ ರಾಜ್‌ ಕುಮಾರ್‌ ಬಣ್ಣ ಹಚ್ಚುವ ಮೊದಲೇ ನಟನಾಗಿ ಬೆಳ್ಳಿ ತೆರೆಯಲ್ಲಿ ಕಂಡವರು ಪುನೀತ್‌ ರಾಜ್‌ ಕುಮಾರ್.‌ ಬೆಟ್ಟದ ಹೂವು, ಯಾರಿವನು, ಸೇರಿದಂತೆ ಅವರ ಬಾಲ್ಯದಲ್ಲಿನ ಅಭಿನಯಸಿದ ಚಿತ್ರಗಳಲ್ಲಿ ಅಪ್ಪು ಅವರ ಅಭಿನಯ ಕಂಡರೆ ಮುಗ್ದ ಮಕ್ಕಳು ಕೂಡ ಎದ್ದು ನಟಿಸುವಂತೆಯೇ ಮಾಡುತ್ತದೆ. ಅದೇ ಕಾರಣಕ್ಕೆ ಅವರಿಗೆ ಬೆಟ್ಟದ ಹೂವು ಚಿತ್ರದ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿ ಬಂತು. ನಟನೆ ಎಂಬುದು ಅವರಿಗೆ ಅಲ್ಲಿಂದಲೇ ವರವಾಗಿ ಬಂತು. ಮುಂದೆ ದೊಡ್ಡ ಸ್ಟಾರ್‌ ಆಗಿ ಕರುನಾಡಿನ ಪ್ರೀತಿಯ ಅಪ್ಪು ಆಗಿ ಮೆರೆಯುವಂತೆ ಮಾಡಿತು.

ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆದ ಚಿತ್ರಗಳು ಒಂದೇ ಎರಡೇ ಅಭಿನಯಸಿದ ಚಿತ್ರಗಳೆಲ್ಲವೂ ಸೂಪರ್‌ ಹಿಟ್‌ ಅಂದ್ರೆ, ನಿರ್ಮಾಪಕರ ಪಾಲಿಗೆ ಅಪ್ಪು ರಿಸರ್ವ್‌ ಬ್ಯಾಂಕ್ನಂತೆಯೇ ಆಗಿದ್ದರು. ನಟನೆ, ನೃತ್ಯ, ಪೈಟ್ಸ್‌ ಹೀಗೆ ಎಲ್ಲದ್ದಕ್ಕೂ ಸೈ ಎನ್ನುವ ಅವರ ಕಲಾ ಪ್ರೌಡಿಮೆಗೆ ಪುಟಾಣಿಗಳು ಕೂಡ ಮನಸೋತಿದ್ದರು. ಕನ್ನಡ ಚಿತ್ರರಂಗದ ಪಾಲಿಗೆ ಅಂತಹ ಅಪರೂಪದ ನಟ ಪುನೀತ್‌ ರಾಜ್‌ ಕುಮಾರ್.‌ ನಾಯಕ ನಟನಾಗಿ ಸಿನಿಮಾ ರಂಗ ಪವೇಶಿದ ಆರಂಭದ ದಿನಗಳಲ್ಲಿ ಒಂದಷ್ಟು ವಿವಾದಗಳಲ್ಲಿ ಸುದ್ದಿಯಾಗಿದ್ದರೂ, ಒಟ್ಟಾರೆ ಅವರೊಬ್ಬ ಅನವಶ್ಯಕ ವಿವಾದಕ್ಕೆ ಸಿಲುಕದ ನಿರ್ವೀವಾದದ ವ್ಯಕ್ತಿ. ಅಗೇನೋ ಆಯಿತು, ಆದರೆ ಅಲ್ಲಿಂದ ವಾಪಾಸ್‌ ಬಂದು ಅವರು ಸ್ಟಾರ್‌ ಆಗಿ ಮೆರೆದಿದ್ದು ಒಂದು ಪವಾಡವೇ ಹೌದು.

ಕನ್ನಡ ಚಿತ್ರರಂಗದ ಪಾಲಿಗೆ ದೊಡ್ಮನೆ ಅನ್ನೋದು ಹೆಸರಷ್ಟೇ, ಅದರಾಚೆ ದೊಡ್ಮನೆ ಅಂತ ಎಂದಿಗೂ ಡೊಡ್ಡಸ್ತಿಕೆ ತೋರಿಸಿದ್ದೇ ಇಲ್ಲ. ಕುಟುಂಬದಂತೆಯೇ ಪುನೀತ್‌ ರಾಜ್‌ ಕುಮಾರ್‌ ಕೂಡ ಹಾಗೆಯೇ. ರಾಜಕುಮಾರ್‌ ಅವರ ಮಗ, ದೊಡ್ಡ ಸ್ಟಾರ್‌ ಎನ್ನುವ ಹಿನ್ನೆಲೆ ಇದ್ದರೂ ಎಂದಿಗೂ ಸಾರ್ವಜನಿಕ ಕ್ಷೇತ್ರದಲ್ಲಿ ಆ ನೇಮ್‌ ಹಾಕಿಕೊಂಡಿರಲಿಲ್ಲ. ಅಣ್ಣಾವ್ರ ಹಾಗೆಯೇ ವಿನಯದಲ್ಲಿಯೇ ಎಲ್ಲರ ಮನ ಗೆದಿದ್ದರು. ಹಾಗೆಯೇ ಯಾವುದೇ ಪ್ರಬಾವಳಿಯಲ್ಲೂ ಬದುಕಿರಲಿಲ್ಲ. ಎಲ್ಲವೂ ಇದ್ದರು ಇಲ್ಲದಂತೆಯೇ ಸರಳತೆಯ ಮೂಲಕ ಬದುಕಿದ್ದರು. ಹಾಗೆಯೇ ದೊಡ್ಡ ಮಾನವೀಯ ಗುಣ ಹೊಂದಿದ್ದ ವ್ಯಕ್ತಿತ್ವ ಅವರದು.

ಯಾರೇ ಕಷ್ಟ ಅಂತ ಮನೆ ಬಾಗಿಲಿಗೆ ಹೋದರೆ, ಇನ್ನಾವುದೋ ಕಡೆ ನೆರೆ ಹಾವಳಿ ಅಥವಾ ಇನ್ನಾವುದೋ ಪ್ರಕೃತಿ ವಿಕೋಪಗಳು ಆದವು ಅಂದಾಗ, ಕೊಡುಗೈ ದಾನಿಯಂತೆ ತಮ ಕೈಲಾದ ಸೇವೆ ಮಾಡಿ, ಅದು ಗೊತ್ತಾಗದಂತೆಯೇ ಇದ್ದವರು. ಅಣ್ಣಾವ್ರಂತೆಯೇ ಆರೋಗ್ಯದ ಕಡೆ ಅತೀ ಹೆಚ್ಚು ಗಮನ ಹರಿಸಿದ್ದರು. ಸದಾ ಜಿಮ್‌ ನಲ್ಲಿ ದೇಹ ದಂಡಿಸುವುದರ ಮೂಲಕ ಆರೋಗ್ಯ ಕಾಪಾಡಿಕೊಳ್ಳಲು ಪ್ರಯತ್ನಿಸಿದ್ದರು. ಅದೇನಾಯಿತೋ ಗೊತ್ತಿಲ್ಲ, ಹೃದಯಾಘಾತ ಎನ್ನುವುದು ಅವರನ್ನು ತಿರುಗಿ ಬಾರದ ಲೋಕಕ್ಕೆ ಕರೆದುಕೊಂಡು ಹೋಗಿದೆ. ಈ ನೋವನ್ನು ಈ ಕರುನಾಡು ಅದೇಗೆ ಸಹಿಸಿಕೊಳ್ಳುತ್ತದೆಯೋ ಗೊತ್ತಿಲ್ಲ. ಆದರೂ ನೋವು ತಡೆದುಕೊಳ್ಳಲೇ ಬೇಕು.

Categories
ಸಿನಿ ಸುದ್ದಿ

ಗಣೇಶ್ ಜೊತೆ ಧ್ರುವ-ಪ್ರೇಮ್ ಸಾಥ್! ಅಭಿಮಾನಿ ನಡುವೆಯೇ ಸಖತ್ ಟೈಟಲ್ ಟ್ರ್ಯಾಕ್ ಲಾಂಚ್ ! ಅ.30ಕ್ಕೆ ಪ್ರಸನ್ನ ಥಿಯೇಟರ್ ಸಾಕ್ಷಿ…

ಸ್ಯಾಂಡಲ್ ವುಡ್ ಅಂಗಳದಲ್ಲೀಗ ಸಖತ್ ಸೌಂಡ್ ಮಾಡ್ತಿರೋದು ಸಖತ್ ಸಿನಿಮಾದ ಟೀಸರ್ ಝಲಕ್.. ಸಿಂಪಲ್ ಸುನಿ..ಗೋಲ್ಟನ್ ಸ್ಟಾರ್ ಗಣಿಯ ಜುಗಲ್ ಬಂಧಿಯ ಸಖತ್ ಟೀಸರ್ ಈ ವರ್ಷದ ಬೆಸ್ಟ್ ಎಂಟರ್ ಟ್ರೈನರ್ ಟೀಸರ್ ಅನ್ನೋ ಬ್ರ್ಯಾಂಡ್ ತನ್ನದಾಗಿಸಿಕೊಂಡಿದೆ. ಸಿಂಪಲ್ ಸುನಿ ಡೈರೆಕ್ಷನ್.. ಡೈಲಾಗ್ಸ್ ಗೆ ಪ್ರೇಕ್ಷಕ ಫಿದಾ ಆಗಿದ್ದಾನೆ. ಮಳೆ ಹುಡ್ಗನ ಆಕ್ಟಿಂಗ್ ಗೆ ಹುಬ್ಬೇರಿಸಿದ್ದಾನೆ. ಟೀಸರ್ ಝಲಕ್ ಹೀಗಿರುವಾಗ ಸಾಂಗ್ ಹೇಗಿರುತ್ತೋ.. ಅದ್ರಲ್ಲೂ ಟೈಟಲ್ ಟ್ರ್ಯಾಂಕ್ ಹೇಗೆ ಮೂಡಿ ಬರುತ್ತೋ? ಅನ್ನೋ ಕುತೂಹಲಕ್ಕೆ ಇದೇ ತಿಂಗಳ 31ರಂದು ಫುಲ್ ಸ್ಟಾಪ್ ಬೀಳಲಿದೆ.

ಹೌದು..ಸಖತ್ ಟೀಸರ್ ಸಖತಾಗಿಯೇ ಸೌಂಡ್ ಮಾಡ್ತಿರುವ ಬೆನ್ನಲ್ಲೇ ಸಖತ್ ಬಳಗ ಸಖತ್ ಆಗಿರೋ ಐಡಿಯಾವೊಂದನ್ನು ಮಾಡಿದೆ. ಇದೇ ಅ.30ರಂದು ಟೈಟಲ್ ಟ್ರ್ಯಾಕ್ ಬಿಡುಗಡೆ ಮಾಡಲು ಸನ್ನದ್ಧವಾಗಿದೆ. ಈ ಟೈಟಲ್ ಟ್ರ್ಯಾಕ್ ನ್ನ ರಿಲೀಸ್ ಮಾಡ್ತಿರೋದು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ಶೋ ಮ್ಯಾನ್ ಪ್ರೇಮ್.

ಸಖತ್ ಸಿನಿಮಾಗೆ ಪ್ರೇಮ್ ಹಾಗೂ ಧ್ರುವ ಸಾಥ್ ನೀಡಲಿದ್ದಾರೆ. ಇದೇ 30ರಂದು ಅಭಿಮಾನಿಗಳ ಮಧ್ಯೆ ಥಿಯೇಟರ್ ಅಂಗಳದಲ್ಲಿ ಸಖತ್ ಸಿನಿಮಾದ ಸೆಕೆಂಡ್ ಸಾಂಗ್ ರಿಲೀಸ್ ಆಗಲಿದೆ. ಕೆವಿಎನ್ ಪ್ರೊಡಕ್ಷನ್ ನಡಿ ತಯಾರಾಗಿರುವ ಸಖತ್ ಸಿನಿಮಾದ ಟೈಟಲ್ ಟ್ರ್ಯಾಕ್ ಅನ್ನು ಅದ್ಧೂರಿಯಾಗಿ ಲಾಂಚ್ ಮಾಡಲು ನಿರ್ಮಾಪಕ ಸುಪ್ರಿತ್ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಧ್ರುವ ಸರ್ಜಾ ಹಾಗೂ ಪ್ರೇಮ್ ಅಮೃತ ಹಸ್ತದಿಂದ ಸಖತ್ ಸಿನಿಮಾದ ಟೈಟಲ್ ಟ್ರ್ಯಾಂಕ್ ಅನಾವರಣವಾಗಲಿದೆ.

ಸಖತ್ ಸಿನಿಮಾದ ಟೀಸರ್ ಜೊತೆಗೆ ಪ್ರೇಮಕ್ಕೆ ಕಣ್ಣಿಲ್ಲ ಹಾಡಿಗೆ ಪ್ರೇಕ್ಷಕ ತಲೆದೂಗಿದ್ದು, ಇದೀಗ ಟೈಟಲ್ ಟ್ರ್ಯಾಕ್ ಅನ್ನು ಬಿಗಿದಪ್ಪಿಕೊಳ್ಳಲು ರೆಡಿಯಾಗ್ತಿದ್ದಾನೆ. ಗೋಲ್ಟನ್ ಸ್ಟಾರ್ ಗಣೇಶ್ ಕಾಮಿಡಿ ಹೂರಣವನ್ನು ಸವಿಯೋದಿಕ್ಕೆ ಸಜ್ಜಾಗ್ತಿದ್ದಾನೆ.

ಗಣಿ ಜೊತೆಯಾಗಿ ನಿಶ್ವಿಕಾ-ಸುರಭಿಯ ಗ್ಲಾಮರ್ ರಂಗು..ಜೂಡಾ ಸ್ಯಾಂಡಿ ಮ್ಯೂಸಿಕ್ ಗುಂಗು ಸಖತ್ ಸಿನಿಮಾದಲ್ಲಿರಲಿದೆ. ಕಾಮಿಡಿ-ಕ್ರೈಮ್ ಥಿಲ್ಲರ್ ಕಥಾಹಂದರ ಹೊಂದಿರುವ ಸಖತ್ ಸಿನಿಮಾ ಬರುವ ನವೆಂಬರ್ 12ಕ್ಕೆ ಅದ್ಧೂರಿಯಾಗಿ ಬೆಳ್ಳಿಪರದೆಯಲ್ಲಿ ಬೆಳಗಲಿದೆ.

Categories
ಸಿನಿ ಸುದ್ದಿ

ನನ್ನ ಸಾವಿಗೆ ಬಹದ್ದೂರ್ ಚೇತನ್ ಕಾರಣ!? ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ ಅಪ್ಪು ಫ್ಯಾನ್ ‌ಡೆತ್ ನೋಟ್ !‌

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿ ಎಂದು ಹೇಳಿಕೊಂಡಿರುವ ರಾಜು ಹೆಸರಿನ ವ್ಯಕ್ತಿಯೊಬ್ಬ,
ನನ್ನ ಸಾವಿಗೆ ಬಹದ್ದೂರ್ – ಭರ್ಜರಿ ಖ್ಯಾತಿಯ ಚೇತನ್ ಕುಮಾರ್ ಹೊರೆತು ಬೇರಾರು ಅಲ್ಲ ಎಂದು ಡೆತ್ ನೋಟ್ ಬರೆದಿಟ್ಟು ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾನೆ.‌ ಸದ್ಯ, ಸಾಮಾಜಿಕ ಜಾಲತಾಣದಲ್ಲಿ ಸೂಸೈಡ್ ಪತ್ರ ಸಖತ್ ಸೆನ್ಸೇಷನ್ ಕ್ರಿಯೇಟ್ ಮಾಡಿದೆ.
ಅಷ್ಟಕ್ಕೂ, ರಾಜು ಹೆಸರಿನ ವ್ಯಕ್ತಿ‌ ಅಪ್ಪು‌ಅವರ ಅಪ್ಪಟ ‌ಅಭಿಮಾನಿಯಾ ?‌ ಈತ ಸಾವನ್ನಪ್ಪಿದ್ದು ನಿಜವಾ ? ಈ ವ್ಯಕ್ತಿ ಉಸಿರು ಚೆಲ್ಲೋದಕ್ಕೆ ಚೇತನ್ ಹೇಗೆ ಕಾರಣ ಆಗ್ತಾರೆ ? ಹೀಗೆ ಹಲವು ಪ್ರಶ್ನೆಗಳು ಮೂಡುತ್ತವೆ.
ಈ ಎಲ್ಲಾ ಪ್ರಶ್ನೆಗೆ ಸದ್ಯಕ್ಕೆ ಉತ್ತರವಿಲ್ಲ …

ಜೇಮ್ಸ್ ಪವರ್ ಸ್ಟಾರ್ ಪುನೀತ್ ನಟನೆಯ ಬಹುನಿರೀಕ್ಷೆಯ ಚಿತ್ರ. ಇದೇ ಮೊದಲ ಭಾರಿಗೆ ಅಪ್ಪು ಹಾಗೂ ಚೇತನ್ ಒಂದಾಗಿದ್ದಾರೆ. ಬಹದ್ದೂರ್, ಭರ್ಜರಿ, ಭರಾಟೆಯಂತಹ ಸೂಪರ್ ಡೂಪರ್ ಚಿತ್ರಗಳನ್ನು ಕೊಟ್ಟಂತಹ ನಿರ್ದೇಶಕ ಚೇತನ್ ಕುಮಾರ್, ಜೇಮ್ಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿ ದೊಡ್ಮನೆ ಬಳಗ ಮಾತ್ರವಲ್ಲ ಇಡೀ‌ ಸಿನಿಮಾ ‌ಸಮೂಹವೇ ಕಾಯುವಂತೆ ಮಾಡಿದ್ದಾರೆ. ಹೀಗಿರುವಾಗ
ಪುನೀತ್ ಅಭಿಮಾನಿ ನಾನು ಎಂದು ಹೇಳಿಕೊಂಡಿರುವ ರಾಜು,
ಜೇಮ್ಸ್ ಟೀಸರ್ ಬಿಡುಗಡೆಯಾಗದಿರುವುದೇ ನಾನು ಸಾಯೋದಕ್ಕೆ ಕಾರಣ ಎಂದಿದ್ದಾರೆ. ಜೊತೆಗೆ ಬಹದ್ದೂರ್ ಚೇತನ್ ಅವರೇ ನಾನು ಉಸಿರು ಚೆಲ್ಲೋದಕ್ಕೆ ಕಾರಣ ಎಂದು ಸೂಸೈಡ್ ಪತ್ರದಲ್ಲಿ ನಮೂದಿಸಿದ್ದಾರೆ.

ಈ ಪತ್ರದ ಮೂಲಕ ಎಲ್ಲರಿಗೂ ತಿಳಿಸುವುದೇನೆಂದರೆ ಕಳೆದ ಎರಡು ವರ್ಷಗಳಿಂದ ಜೇಮ್ಸ್ ಚಿತ್ರದ ಟೀಸರ್‌ಗಾಗಿ ಕಾಯುತ್ತಿದ್ದೇನೆ. ಕಾದು ಕಾದು ತಲೆಯಲ್ಲಿ ಕೂದಲು ಬೆಳ್ಳಗಾಯಿತೆ ಹೊರೆತು ಟೀಸರ್ ಮಾತ್ರ ಬರಲಿಲ್ಲ. ಬಹುಷಃ ನಿರ್ದೇಶಕ ಚೇತನ್ ಕುಮಾರ್ ಅವರು ನಮ್ಮ ತಾಳ್ಮೆಯನ್ನು ಪರೀಕ್ಷೆ ಮಾಡುತ್ತಿದ್ದಾರೆ ಅನಿಸುತ್ತೆ.

ತುಂಬಾ ಕಷ್ಟಪಟ್ಟು ಚೇತನ್ ಕುಮಾರ್ ಅವರ ಮೊಬೈಲ್ ನಂಬರ್ ಪಡೆದು ಟೀಸರ್ ಯಾವಾಗ ಎಂದು ಕೇಳಿದರೆ ವಿಲ್' ಎಂಬ ಉತ್ತರ ಬಿಟ್ಟು ಬೇರೆ ಏನು ಬರಲಿಲ್ಲ. ಇದರಿಂದ ನನಗೆ ಜೀವನವೇ ಬೇಸರವಾಗಿ ಆತ್ಮಹತ್ಯೆ’ ಮಾಡಿಕೊಳ್ಳಲು ನಿರ್ಧರಿಸಿದ್ದೇನೆ. ಮುಖ್ಯ ವಿಚಾರ ಏನೆಂದರೆ ನನ್ನ ಸಾವಿಗೆ ಕಾರಣ ಚೇತನ್‌ಕುಮಾರ್ ಹೊರೆತು ಬೇರೆ ಯಾರು ಅಲ್ಲ. ಪತ್ರದ ಹಿಂದೆ ಅವರ ನಂಬರ್ ಬರೆದಿದ್ದೇನೆ. ನನಗೆ ಆದ ಅನ್ಯಾಯ ಬೇರೆ ಯಾರಿಗೂ ಆಗದಿರಲಿ ಎನ್ನುವುದೇ ನನ್ನ ಆಸೆ. ಮುಂದಿನ ಜನ್ಮದಲ್ಲಾದರೂ ಜೇಮ್ಸ್ ಟೀಸರ್ ನೋಡುತ್ತೇನೆ ಎಂಬ ನಂಬಿಕೆ ನನಗಿದೆ.


ಐ ಲವ್ ಯೂ ಅಪ್ಪು ಇಂತಿ ನಿಮ್ಮ ರಾಜು

ಈ ರೀತಿಯಾಗಿ ಬರೆದಿರುವ ಲೆಟರ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಅಷ್ಟಕ್ಕೂ, ರಾಜು ಹೆಸರಿನ ವ್ಯಕ್ತಿ‌ ಅಪ್ಪು‌ಅವರ ಅಪ್ಪಟ ‌ಅಭಿಮಾನಿಯಾ ?‌ ಈತ ಸಾವನ್ನಪ್ಪಿದ್ದು ನಿಜವಾ ? ಈ ವ್ಯಕ್ತಿ ಉಸಿರು ಚೆಲ್ಲೋದಕ್ಕೆ ಚೇತನ್ ಹೇಗೆ ಕಾರಣ ಆಗ್ತಾರೆ ? ಜೇಮ್ಸ್ ಟೀಸರ್ ರಿಲೀಸ್ ಮಾಡಲಿಲ್ಲ ಎನ್ನುವ ಒಂದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವುದು ಎಷ್ಟು ಸರೀ?

ಕೊರೊನಾ ಲಾಕ್ ಡೌನ್ ಕಾರಣದಿಂದ ಸಂಕಷ್ಟದಲ್ಲಿದ್ದು ಈಗಷ್ಟೇ ಚೇತರಿಸಿಕೊಳ್ತಿರುವ ಚಿತ್ರತಂಡಗಳಿಗೆ ಈ ರೀತಿಯಾಗಿ ಎಮೋಷನಲ್ ಬ್ಲಾಕ್ ಮೇಲ್ ಮಾಡುವುದು ತಪ್ಪಲ್ಲವೇ ? ಅಷ್ಟಕ್ಕೂ, ಅಂದಾಭಿಮಾನ ಮೆರೆಯವುದೇಕೆ ? ಸ್ಟಾರ್ ಗಳನ್ನು ಸಂಕಷ್ಟಕ್ಕೆ ದೂಡುವುದೇಕೆ? ಒಂದ್ವೇಳೆ ರಾಜು ಹೆಸರಿನ ವ್ಯಕ್ತಿ ಸಾವಿಗೀಡಾಗಿದ್ದರೆ ಮುಂದಿನ ದಿನಗಳಲ್ಲಿ ಇಂತಹ ಕೆಲಸ ಮುಂದೆ ಯಾವ ಅಭಿಮಾನಿಯೂ ಮಾಡದಿರಲಿ ಎನ್ನುವುದೇ ಸ್ಟಾರ್ಸ್ ಆಶಯ

ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಸಾಧು ನಿರ್ದೇಶನದಲ್ಲಿ ಮಹಾಯೋಗಿ ಸಿದ್ಧರೂಢ! ಇದು ಶ್ರೀಗಳಜೀವನ ಚರಿತ್ರೆ; ಪವರ್‌ ಟ್ರೇಲರ್‌ ರಿಲೀಸ್

‌ “ಮಹಾಯೋಗಿ ಸಿದ್ದರೂಢ” ಹೆಸರಿನ ಈ ಚಿತ್ರವನ್ನು ಸಂಗೀತ ನಿರ್ದೇಶಕ, ನಟ ಸಾಧುಕೋಕಿಲ ನಿರ್ದೇಶಿಸಿದ್ದು, ಇತ್ತೀಚೆಗೆ ಚಿತ್ರದ ಟ್ರೇಲರ್ ಅನ್ನು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಬಿಡುಗಡೆ ಮಾಡಿ, ಶುಭ ಕೋರಿದರು. ಬಾಗಲಕೋಟೆಯ ಮುಧೋಳದ ಮಂಟೂರಿನ ಶ್ರೀ ಸದಾನಂದ ಮಹಾಸ್ವಾಮಿಗಳು ಈ ಚಿತ್ರ ನಿರ್ಮಾಣ ಮಾಡಿರುವುದು ವಿಶೇಷ.

“ನಮ್ಮ ಮನೆಗೂ, ಸಿದ್ದರೂಢ ಮಠಕ್ಕೂ ಅವಿನಾಭಾವ ಸಂಬಂಧವಿದೆ. ಅಪ್ಪಾಜಿ ಅವರಾಗಲಿ, ನಮ್ಮ ಕುಟುಂಬದ ಯಾರೇ ಆಗಲಿ, ಹುಬ್ಬಳ್ಳಿಗೆ ಹೋದಾಗ ಸಿದ್ದರೂಢರ ಮಠಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬರುತ್ತೇವೆ. ನಮ್ಮ ಅಜ್ಜಿ ಅವರು ಕೆಲವು ದಿನಗಳ ಕಾಲ ಈ ಮಠದಲ್ಲೇ ಇದ್ದರು ಎಂದು ಅಪ್ಪಾಜಿ ಹೇಳುತ್ತಿದ್ದರು. ಈ ಚಿತ್ರದ ಟ್ರೇಲರ್ ಬಿಡುಗಡೆಗೆ ಬರಬೇಕೆಂದು ಸಾಧುಕೋಕಿಲ ಅವರು ಕರೆದಾಗ ಸಂತೋಷವಾಯಿತು. ಟ್ರೇಲರ್ ತುಂಬಾ ಚೆನ್ನಾಗಿದೆ. ಸಿನಿಮಾ ನೋಡಲು ನಾನು ಕಾತುರನಾಗಿದ್ದೇನೆ ಎಂಬುದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮಾತು.

ಶರಣ ಶ್ರೇಷ್ಠರಾದ ಸಿದ್ದರೂಢರ ಜೀವನಾಧಾರಿತ ಚಿತ್ರ ನಿರ್ದೇಶನ ಮಾಡಿದ್ದು ನನ್ನ ಪುಣ್ಯ. ಮಂಟೂರಿನ ಗುರುಗಳು ನನ್ನನ್ನ ಕರೆದು ಈ ರೀತಿಯ ಚಿತ್ರ ಮಾಡಿಕೊಬೇಕೆಂದು ಹೇಳಿದರು. ಈ ಸಲುವಾಗಿ ನನ್ನನ್ನು ದೆಹಲಿಗೆ ಕಳುಹಿಸಿ ಅಲ್ಲಿ ಸ್ವಾಮಿನಾರಾಯಣ ಆಶ್ರಮದಲ್ಲಿ ಗುರುಗಳ ಕುರಿತು ಚಿತ್ರ ಮಾಡಿದ್ದಾರೆ. ನೋಡಿ ಬನ್ನಿ ಎಂದರು. ನೋಡಿ ಬಂದೆ. ಎಲ್ಲರಿಗೂ ಸಾಧುಕೋಕಿಲ, ಇಂತಹ ಚಿತ್ರ ಮಾಡಿದ್ದಾರಾ? ಎಂಬ ಆಶ್ಚರ್ಯ. ನನಗೂ ಮೊದಲು ಹಾಗೆ ಅನಿಸಿತು.
ಹೆಚ್ಚಿನ ಜನ ಹುಬ್ಬಳ್ಳಿಯ ಸಿದ್ದರೂಢ ಮಠ ನೋಡಿರುತ್ತೀರಾ‌. ಆದರೆ ಮಂಟೂರಿನ ಸಿದ್ದರೂಢ ಮಠಕ್ಕೆ ಹೋಗಿ ಬನ್ನಿ. ಒಂದು ರೀತಿ ಸ್ವಾಮಿ ನಾರಾಯಣ ಮಂದಿರ ಇದ್ದ ಹಾಗೆ ಇದೆ. ನಮ್ಮ ಚಿತ್ರದಲ್ಲಿ ಸಿದ್ದರೂಢರ ಎಂಟು ವರ್ಷದಿಂದ ನಲವತ್ತೆಂಟು ವರ್ಷಗಳ ನಡುವೆ ನಡೆಯುವ ಮಹಿಮೆಗಳನ್ನು ತೋರಿಸಲಾಗಿದೆ.

ಮಂಟೂರು, ಹೈದರಾಬಾದ್, ಕಾಶ್ಮೀರ, ಸಕಲೇಶಪುರ ಹಾಗೂ ಕರ್ನಾಟಕದ ಸುಂದರವಾದ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಚಿತ್ರೀಕರಣ ನಡೆಯುವಾಗ ನನಗೂ ಕೆಲವು ವಿಶೇಷ ಅನುಭವಗಳಾದವು. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಈ ಚಿತ್ರ ನಿರ್ದೇಶನಕ್ಕೆ ನನಗೆ ನನ್ನ ಪುತ್ರ ಸುರಾಗ್ ಮಾಡಿದ ಸಹಾಯ ಮರೆಯುವಂತಿಲ್ಲ. ಇದೇ ನವೆಂಬರ್ 9ರಂದು ಮಂಟೂರಿನ ಚಿತ್ರಮಂದಿರದಲ್ಲಿ 55 ನಿಮಿಷಗಳ ಅವಧಿಯ ಈ ಚಿತ್ರ ಬಿಡುಗಡೆಯಾಗುತ್ತಿದೆ. ಅದೊಂದೆ ಕಡೆ ಮಾತ್ರ ಈ ಚಿತ್ರ ನಿರಂತರವಾಗಿ ಪ್ರದರ್ಶನವಾಗುತ್ತಿರುತ್ತದೆ ಎಂದರು ಸಾಧುಕೋಕಿಲ.

ಮಹಾಶರಣರಾದ ಸಿದ್ದರೂಢರ ಮಹಿಮೆ ಅಪಾರ. ಸುಮಾರು ಏಳುವರೆ ಸಾವಿರಕ್ಕೂ ಅಧಿಕ ಮಾರ್ಗವನ್ನು ಕಾಲ್ನಡಿಗೆಯಲ್ಲಿ ಕ್ರಮಿಸಿದವರು ಅವರು. ಅಂತಹ ಮಹಿಮಾ ಪುರುಷರ ಬಗ್ಗೆ ನಮಗೆ ಚಿತ್ರವೊಂದನ್ನು ನಿರ್ಮಿಸುವ ಬಯಕೆಯಾಗಿ ಸಾಧುಕೋಕಿಲ ಅವರನ್ನು ಸಂಪರ್ಕಿಸಿದ್ದೆವು. ಅವರು ಉತ್ತಮವಾಗಿ ತೆಗೆದುಕೊಟ್ಟಿದ್ದಾರೆ. ನಮ್ಮ ಮಂಟೂರ್ ಪಾರ್ಕ್ ನಲ್ಲಿ ತ್ರಿಡಿ ಚಿತ್ರಮಂದಿರ, 7D ಚಿತ್ರಮಂದಿರ, ಸಿದ್ದರೂಢ ಥಿಯೇಟರ್, ಭೂತದಮನೆ, ಜುರಾಸಿಕ್‌ ಪಾರ್ಕ್‌, ಜಂಗಲ್ ಪಾರ್ಕ್, ವೈಷ್ಣೋದೇವಿ ಗುಹೆ, ವಿಜ್ಞಾನ ಲೋಕ, ಜಂಗಲ್ ಪಾರ್ಕ್, ಹೋಟೆಲ್ ಭೂಕಂಪ, ಗಾಜಿನ ಮನೆ ಹೀಗೆ ಹತ್ತು ಹಲವು ವಿಶೇಷಗಳಿವೆ.

ಸ್ವಾಮಿನಾರಾಯಣ ಆಶ್ರಮವನ್ನೇ ಹೋಲುವ ಹಾಗೆ ಪುಟ್ಟ ಊರಿನಲ್ಲಿ ಇದನೆಲ್ಲಾ ನಿರ್ಮಾಣ ಮಾಡಿದ್ದೇವೆ. ಎಲ್ಲರೂ ಈ ಸ್ಥಳಕ್ಕೆ ಭೇಟಿ ನೀಡಬೇಕು. ನಮ್ಮ ಊರಿನ ಚಿತ್ರಮಂದಿರದಲ್ಲಿ ಮಾತ್ರ ಈ ಚಿತ್ರ ಪ್ರದರ್ಶನವಾಗಲಿದೆ ಎಂದ ಸದಾನಂದ ಸ್ವಾಮಿಗಳು, ಡಾ||ರಾಜಕುಮಾರ್ ಅವರಿಗೆ ಮಠದೊಂದಿಗಿದ್ದ ಸಂಬಂಧವನ್ನು ನೆನಪಿಸಿಕೊಂಡರು. ಸಾಧುಕೋಕಿಲ ಪುತ್ರ ಸುರಾಗ್ ಚಿತ್ರ ಸಾಗಿ ಬಂದ ವಿಷಯವನ್ನು ವಿಸ್ತಾರವಾಗಿ ವಿವರಿಸಿದರು. ಕಲಾವಿದರಾದ ತೀರ್ಥೇಶ್ ಹಾಗೂ ಅರವಿಂದ್ ಕುಪ್ಲಿಕರ್ ಇದ್ದರು. ಜೈ ಆನಂದ್ ಛಾಯಾಗ್ರಹಣ, ಆನಂದ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ಕಿರುತೆರೆ ಕ್ರಿಕೆಟ್! ಡಿಸೆಂಬರ್ ಎರಡನೇ ವಾರದಿಂದ ಕಿರುತೆರೆ ಕಲಾವಿದರ ಕ್ರಿಕೆಟ್ ಪಂದ್ಯಾವಳಿ‌ ಶುರು ಗುರು!!

ವಾಸವಿ ವೆಂಚರ್ಸ್ ಸಂಸ್ಥೆ ಸಹಯೋಗದಲ್ಲಿ ಡಿಸೆಂಬರ್ ಎರಡನೇ ವಾರದಿಂದ ‘ಟೆಲಿವಿಷನ್ ಕ್ರಿಕೆಟ್ ಲೀಗ್’ ನಡೆಯಲಿದ್ದು, ಇದರಲ್ಲಿ ಕಿರುತೆರೆ ಕಲಾವಿದರು ಭಾಗವಹಿಸಲಿದ್ದಾರೆ. ಟಿಸಿಎಲ್ ನಲ್ಲಿ ತಂಡಗಳು ಈಗಾಗಲೇ ಅಭ್ಯಾಸದಲ್ಲಿ ತೊಡಗಿವೆ. ಈ ಪಂದ್ಯಾವಳಿಯಲ್ಲಿ ಕ್ರೇಜಿ ಕಿಲ್ಲರ್ಸ್, ಗ್ಯಾಂಗ್ ಗರುಡಾಸ್, ಗ್ರೌಂಡ್ ಹಂಟರ್ಸ್, ಜಟಾಯು ಜೈಂಟ್ಸ್, ಕಿಂಗ್ ಕೇಸರಿಸ್, ಸರ್ಪ ಸ್ಟ್ರೈಕರ್ ಎಂಬ 6 ತಂಡಗಳಿರಲಿದ್ದು, ಕಿರುತರೆ ನಟ-ನಟಿಯರು ಭಾಗವಹಿಸಲಿದ್ದಾರೆ.

ದೀಪಕ್ ಹಾಗೂ ಮಂಜೇಶ್ ಸಾರಥ್ಯದಲ್ಲಿ ನಡೆಯುತ್ತಿರುವ ಕಿರುತೆರೆ ಕಲಾವಿದರ ಕ್ರಿಕೆಟ್ ಪಂದ್ಯಾವಳಿ ಬರೋಬ್ಬರಿ‌ 102 ಸೆಲೆಬ್ರಿಟಿಗಳು ಭಾಗಿಯಾಗಲಿದ್ದಾರೆ. ಈಗಾಗಲೇ ಎರಡು ಸೀಸನ್ಸ್ ಯಶಸ್ವಿಯಾಗಿ ಪೂರೈಸಿರುವ ಟಿಸಿಎಲ್, ಮೂರನೇ ಸೀಸನ್ ಪಂದ್ಯಾವಳಿಗೆ ಸಜ್ಜಾಗಿದೆ.

ಈ ಬಗ್ಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಸ್ಟರ್ ಆನಂದ್, ಬಿಗ್ ಬಾಸ್ ಮಂಜು ಪಾವಗಡ, ಸಂಸ್ಥಾಪಕ ದೀಪಕ್, ಸಹ ಸಂಸ್ಥಾಪಕರಾದ ಮಂಜೇಶ್ ಮತ್ತು ವೈ ವಿ ಕಾರ್ತಿಕ್ ಸೇರಿದಂತೆ ಹಲವು‌ ಕಿರುತೆರೆ ಕಲಾವಿದರು ಭಾಗಿಯಾಗಿದ್ದರು.

ಕಿರುತೆರೆ ಕಲಾವಿದರೆಲ್ಲರೂ ಸೇರುವುದೇ ಒಂದು ಹಬ್ಬ. ಇಂತಹ ಹಬ್ಬಕ್ಕೆ ಟೆಲಿವಿಷನ್ ಕ್ರಿಕೆಟ್ ಲೀಗ್ ಸಜ್ಜಾಗಿದೆ. ಬರೋ ಡಿಸೆಂಬರ್ ಎರಡನೇ ವಾರದಿಂದ ಕಿರುತೆರೆ ಕಲಾವಿದರ ಕ್ರಿಕೆಟ್ ಹಂಗಾಮ ಶುರುವಾಗಲಿದೆ.

Categories
ಸಿನಿ ಸುದ್ದಿ

‘ಐ ಹೇಟ್ ಲವ್’ ಅಂತಿದ್ದಾರೆ ಧನ್ವೀರ್- 29ಕ್ಕೆ ಬೈ ಟು ಲವ್ ಸಾಂಗ್ ರಿಲೀಸ್

ಬಜಾರ್ ಹೀರೋ ಧನ್ವೀರ್.. ಭರಾಟೆ ಕ್ಯೂಟಿ ಶ್ರೀಲೀಲಾ ನಟನೆಯ ಬೈ ಟು ಲವ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಹರಿ ಸಂತೋಷ ನಿರ್ದೇಶನದ ಈ ಸಿನಿಮಾ ಸೆಟ್ಟೇರಿದ ದಿನದಂದಲೂ ಸಖತ್ ಕ್ಯೂರಿಯಾಸಿಟಿ ಹುಟ್ಟಿಸುತ್ತಿದೆ. ಪೋಸ್ಟರ್..ಟೀಸರ್ ಹೀಗೆ ಪ್ರತಿ ಹಂತದಲ್ಲೂ ನಿರೀಕ್ಷೆಯ ಚಿಟ್ಟೆಯಾಗಿರುವ ಬೈ ಟು ಲವ್ ಸಿನಿಮಾ ಅಂಗಳದಿಂದ ಇದೇ 29ರಂದು ಐ ಹೇಟ್ ಲವ್ ಅನ್ನೋ ಹಾಡೊಂದು ರಿಲೀಸ್ ಆಗುತ್ತಿದೆ. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಬೈ ಟು ಲವ್ ಸಿನಿಮಾಕ್ಕೆ ಸಾಥ್ ಕೊಟ್ಟಿದ್ದಾರೆ. ಅ. 29ರಂದು ಐ ಹೇಟ್ ಲವ್ ಹಾಡು ರಿಲೀಸ್ ಆಗಲಿದೆ. ಪ್ರತಿಯೊಬ್ಬರು ಸಪೋರ್ಟ್ ಮಾಡಿ ಎಂದಿದ್ದಾರೆ. ಅಂಜನೀಶ್ ಲೋಕನಾಥ್ ಮ್ಯೂಸಿಕ್ ಇರುವ ಐ ಹೇಟ್ ಲವ್ ಸಾಂಗ್ ನಲ್ಲಿ ಶ್ರೀಲೀಲಾ ಹಾಗೂ ಧನ್ವೀರ್ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ.

ಅಂದಹಾಗೇ ಬೈ ಟು ಲವ್ ಲವ್ ಸ್ಟೋರಿ ಜೊತೆಗೆ ಫ್ಯಾಮಿಲಿ ಕಥಾಹಂದರ ಹೊಂದಿರುವ ಸಿನಿಮಾ. ಹರಿ ಸಂತೋಷ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಈ ಚಿತ್ರಕ್ಕೆ ಕೆವಿಎನ್‌ ಪ್ರೊಡಕ್ಷನ್ಸ್ ಬಂಡವಾಳ ಹೂಡಿದ್ದು, ಮಹೇಂದ್ರ ಸಿಂಹ ಛಾಯಾಗ್ರಹಣ, ಅಜನೀಶ್‌ ಲೋಕನಾಥ್‌ ಸಂಗೀತ ಹಾಗೂ ಯೋಗಾನಂದ್‌ ಸಂಭಾಷಣೆ ಈ ಚಿತ್ರಕ್ಕಿದೆ.

ಸಿನಿಮಾದ ಪೋಸ್ಟರ್ ಸಾಕಷ್ಟು ಕ್ಯೂರಿಯಾಸಿಟಿ ಹುಟ್ಟಿಸಿತ್ತು. ಇತ್ತೀಚೆಗಷ್ಟೇ ಧನ್ವೀರ್ ಹುಟ್ಟುಹಬ್ಬಕ್ಕೆ ರಿಲೀಸ್ ಆಗಿದ್ದ ಟೀಸರ್ ಕೂಡ ಸಖತ್ ಸದ್ದು ಮಾಡಿತ್ತು. ಸದ್ಯ ಶೂಟಿಂಗ್ ಮುಗಿಸಿ ರಿಲೀಸ್ ಗೆ ಸನ್ನದ್ಧರಾಗಿರುವ ಬೈ ಟು ಲವ್ ಬಳಗದಿಂದ ಹೊಸ ಹಾಡು ಇದೇ 29ಕ್ಕೆ ರಿಲೀಸ್ ಆಗಲಿದೆ.

Categories
ಸಿನಿ ಸುದ್ದಿ

ವೇಲ್ಸ್ ಇನ್ನೋವೇಟಿವ್ ಫಿಲಂಸಿಟಿಯಾಗಿ ಬದಲಾದ ಇನ್ನೋವೇಟಿವ್ ಫಿಲಂ ಸಿಟಿ; ಫೆಬ್ರವರಿ ಹೊತ್ತಿಗೆ ಹೊಸರೂಪ

ಬಿಡದಿ ಬಳಿಯ ಇನ್ನೋವೇಟಿವ್ ಫಿಲಂ ಸಿಟಿಯನ್ನು ಚೆನ್ನೈನ ನಿರ್ಮಾಪಕ ನಟ ಹಾಗೂ ಉದ್ಯಮಿ ವೇಲ್ಸ್ ಗ್ರೂಪ್ ನ ಮುಖ್ಯಸ್ಥ ಡಾ||ಐಸಿರಿ ಕೆ. ಗಣೇಶ್ ಖರೀದಿಸಿದ್ದಾರೆ‌. ಇನ್ನು ಮುಂದೆ ವೇಲ್ಸ್‌ ಇನ್ನೋವೇಟಿವ್ ಫಿಲಂ ಸಿಟಿ ಎಂದು ಕರೆಸಿಕೊಳ್ಳಲಿದೆ. ಈ ವಿಷಯವನ್ನು ವೇಲ್ಸ್ ಇನ್ನೋವೇಟಿವ್ ಫಿಲಂ ಸಿಟಿಯ ಮ್ಯಾನೇಜರ್ ಬಶೀರ್ ಅಹ್ಮದ್ ತಿಳಿಸಿದ್ದಾರೆ‌.
ಕರ್ನಾಟಕದ ಮೇಲೆ ಅಪಾರ ಪ್ರೀತಿ ಹೊಂದಿರುವ ಗಣೇಶ್‌, ಈ ಜಾಗವನ್ನು ಖರೀದಿಸಿದ್ದಾರೆ. ಜೊತೆಗೆ ಅನೇಕ ಗ್ಲೋಬಲ್ ಶಾಲೆಗಳನ್ನು ತೆಗೆದುಕೊಂಡು, ವೇಲ್ಸ್ ರವೀಂದ್ರ ಭಾರತಿ ಶಾಲೆ ಎಂದು ನಾಮಕರಣ ಮಾಡಿದ್ದಾರೆ. ಬಡ ಮಕ್ಕಳಿಗೆ ಉಚಿತ ಶಿಕ್ಷಣವನ್ನೂ ನೀಡುತ್ತಿದ್ದಾರೆ.

ಈ ಕುರಿತು ಮೈ ಮೂವೀ ಬಜಾರ್ ಹಾಗೂ ಶ್ರೇಯಸ್ಸ್ ಮೀಡಿಯಾ ಮುಖ್ಯಸ್ಥ ನವರಸನ್ ಹೇಳುವುದಿಷ್ಟು; “ನಾನು ಚೆನ್ನೈ ಗೆ ಹೋದಾಗಲೆಲ್ಲಾ ಗಣೇಶ್ ಸರ್ ಅವರನ್ನು ಭೇಟಿ ಮಾಡುತ್ತಿದ್ದೆ. ಅವರು ತಮಿಳಿನಲ್ಲಿ ಸುಮಾರು 20ಕ್ಕು ಹೆಚ್ಚು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ ಕೂಡ. ಈಗ ಇನ್ನೋವೇಟಿವ್ ಫಿಲಂ ಸಿಟಿಗೆ ನೂತನ ಕಾಯಕಲ್ಪ ನೀಡಲು ಸಜ್ಜಾಗಿದ್ದಾರೆ.
ಸದ್ಯ ಇನ್ನೋವೇಟಿವ್ ಫಿಲಂ ಸಿಟಿಗೆ ಸಾರ್ವಜನಿಕ ಪ್ರವೇಶ ನಿಷೇಧಿಸಲಾಗಿದೆ. ಫೆಬ್ರವರಿ ಅಂತ್ಯದ ವೇಳೆಗೆ ನೀವು ಈ ಫಿಲಂ ಸಿಟಿಯನ್ನು ಹೊಸರೂಪದಲ್ಲಿ ನೋಡಬಹುದು. ಸದ್ಯದಲ್ಲೇ ಇದರ ಕಾರ್ಯ ಆರಂಭವಾಗಲಿದೆ.

ರೈಲ್ವೇ ನಿಲ್ದಾಣ ಸೇರಿದಂತೆ ಹಲವು ಬಗ್ಗೆಯ ಸೆಟ್ ಗಳನ್ನು ನಿರ್ನಿಸಲಾಗುತ್ತಿದೆ. ಇನ್ನು ಮುಂದೆ ಕನ್ನಡ ಸಿನಿಮಾ ಚಿತ್ರೀಕರಣಕ್ಕೆ ಬೇರೆ ಊರಿಗೆ ಹೋಗದೆ, ಅಲ್ಲಿ ಸಿಗುವ ಎಲ್ಲಾ ಸೌಲಭ್ಯಗಳನ್ನು ಈ ಫಿಲಂ ಸಿಟಿಯಲ್ಲಿ ನೀಡುವ ಉದ್ದೇಶವಿದೆ. ಚಿತ್ರದ ಮುಹೂರ್ತ ಸಮಾರಂಭದ ದಿನ ನಿರ್ಮಾಪಕರಿಂದ ಯಾವುದೇ ಹಣ ಪಡೆಯದೆ ಉಚಿತವಾಗಿ ನೀಡಬೇಕೆಂದು ತೀರ್ಮಾನವಾಗಿದೆ. ನಮ್ಮ ಸಂಸ್ಥೆ ವೇಲ್ಸ್ ಮ ಫಿಲಂ ಸಿಟಿಯೊಂದಿಗೆ ವರ್ಕಿಂಗ್ ಪಾರ್ಟ್ನರ್ ಆಗಿ ಕಾರ್ಯ ನಿರ್ವಹಿಸಲಿದೆ. ನಮ್ನ ಮೈ ಮೂವೀ ಬಜಾರ್ ಆಪ್ ಸಿದ್ದವಾಗುತ್ತಿದ್ದು, ಇದು ಸಹ ಚಿತ್ರರಂಗದ ಎಲ್ಲಾ ನಿರ್ಮಾಪಕರಿಗೆ ಅನುಕೂಲವಾಗಿರಲಿದೆ. ಈ ಎಲ್ಲಾ ಕಾರ್ಯಗಳಿಗೂ ನಿಮ್ಮ ಬೆಂಬಲವಿರಲಿ ಎಂಬುದು ನವರಸನ್ ಮಾತು.

Categories
ಸಿನಿ ಸುದ್ದಿ

ಭಜರಂಗಿಯ ಅಪ್ಪುಗೆ! ಅಕ್ಟೋಬರ್‌ 29ಕ್ಕೆ ಶಿವಣ್ಣ ಎಂಟ್ರಿ!!

ಕನ್ನಡದ ಬಹುನಿರೀಕ್ಷೆಯ ಚಿತ್ರ “ಭಜರಂಗಿ 2” ಅಕ್ಟೋಬರ್‌ 29ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಈಗಾಗಲೇ ಸಿನಿಮಾ ಸಾಕಷ್ಟು ಕ್ರೇಜ್‌ ಹೆಚ್ಚಿಸಿದೆ. ಬಿಡುಗಡೆಗೂ ಮುನ್ನ ಚಿತ್ರತಂಡ, ಪ್ರೀರಿಲೀಸ್‌ ಈವೆಂಟ್‌ ಆಯೋಜಿಸಿತ್ತು. ಅಂದು ಕನ್ನಡದ ಸ್ಟಾರ್‌ ನಟರು ಆ ಕಲರ್‌ಫುಲ್‌ ವೇದಿಕೆ ಮೇಲಿದ್ದರು. ತಾಜ್‌ವೆಸ್ಟೆಂಡ್‌ ಸಭಾಂಗಣ ಕೂಡ ಹೌಸ್‌ಫುಲ್‌ ಆಗಿತ್ತು. ಶ್ರೇಯಸ್‌ ಮೀಡಿಯಾ ಆಯೋಜಿಸಿದ್ದ ಈವೆಂಟ್‌ನಲ್ಲಿ “ಭಜರಂಗಿ”ಯದ್ದೇ ಭರ್ಜರಿ ಭರಾಟೆ!.

ಹೌದು, ಶಿವರಾಜಕುಮಾರ್‌ ಅಭಿನಯದ “ಭಜರಂಗಿ 2” ಚಿತ್ರ ಬಿಡುಗಡೆಯಾಗುತ್ತಿರುವ ಸುದ್ದಿಯೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಈಗಾಗಲೇ ಚಿತ್ರದ ಪೋಸ್ಟರ್‌, ಟೀಸರ್‌, ಟ್ರೇಲರ್‌ ಮತ್ತು ಹಾಡುಗಳು ಜನಮನ ಗೆದ್ದಿವೆ. ಎಲ್ಲೆಡೆಯಿಂದಲೂ ಸಾಕಷ್ಟು ಮೆಚ್ಚುಗೆ ಬಂದಿವೆ. ಅಂದು ನಟ ಯಶ್‌, ಪುನೀತ್‌ ರಾಜಕುಮಾರ್‌ ಮುಖ್ಯ ಆಕರ್ಷಣೆಯಾಗಿದ್ದರು. ಅಂತೆಯೇ “ಭಜರಂಗಿ 2” ಸಿನಿಮಾ ಕುರಿತು ಸಾಕಷ್ಟು ಮಾತಾಡಿದರು.

“ನಾನು ಕೂಡ ಶಿವರಾಜಕುಮಾರ್‌ ಅವರ ಅಪ್ಪಟ ಅಭಿಮಾನಿ. ಇಡೀ ಕನ್ನಡ ಚಿತ್ರರಂಗ ಈಗ ಗರಿಗೆದರಿದೆ. ನಾವೆಲ್ಲರೂ ಒಂದೇ ಕುಟುಂಬದವರು. ಎಲ್ಲಾ ಸಿನಿಮಾಗಳು ಈಗಷ್ಟೇ ರಿಲೀಸ್‌ ಆಗುತ್ತಿವೆ. ಈ ಸಿನಿಮಾ ಬಿಡುಗಡೆಗೆ ನಾನು ಕೂಡ ಕಾಯುತ್ತಿದ್ದೇನೆ. ಶಿವರಾಜಕುಮಾರ್‌ ಅವರಲ್ಲಿ ಒಳ್ಳೆಯ ಮನಸ್ಸಿದೆ. ಚಿತ್ರರಂಗ ಅವರ ಜೊತೆಗಿದೆ. ಅವರು ಹಾಕಿಕೊಟ್ಟಂತೆ ನಾವೆಲ್ಲ ನಡೆಯುತ್ತಿದ್ದೇವೆ” ಅಂದರು ಯಶ್.‌
ನಾನು ಶಿವಣ್ಣ ಫ್ಯಾನ್ಸ್‌ ಅನ್ನುತ್ತಲೇ ಮಾತಿಗಿಳಿದ ಪುನೀತ್‌ ರಾಜಕುಮಾರ್‌, ನನಗೆ ಅವರ “ಮನ ಮೆಚ್ಚಿದ ಹುಡುಗಿ” , “ಜನುಮದ ಜೋಡಿ” ಮತ್ತು “ಕುರುಬನ ರಾಣಿ” ಪಾತ್ರಗಳು ಇಷ್ಟ. ಅವರು ಹಳ್ಳಿ ಲುಕ್‌ನಲ್ಲಿ ತುಂಬಾ ಚೆನ್ನಾಗಿ ಕಾಣುತ್ತಾರೆ.

ಇನ್ನು ಭಜರಂಗಿ 2 ಸಿನಿಮಾ ಯಶಸ್ಸು ಕಾಣಲಿ. ನಿರ್ದೇಶಕ ಎ.ಹರ್ಷ ಅವರು ಸಾಕಷ್ಟು ಒಳ್ಳೆಯ ಸಿನಿಮಾ ಮಾಡಿದ್ದಾರೆ. ಈ ಸಿನಿಮಾ ಕೂಡ ಎಲ್ಲರಿಗೂ ಇಷ್ಟವಾಗುವಂತೆಯೇ ಮಾಡಿದ್ದಾರೆ. ಪ್ರತಿ ಹಂತದಲ್ಲೂ ಚಿತ್ರತಂಡ ಶ್ರಮವಹಿಸಿ ಕೆಲಸ ಮಾಡಿದೆ. ಎಲ್ಲರಿಗೂ ಈ ಚಿತ್ರ ಗೆಲುವು ತಂದುಕೊಡಲಿ ಎಂದರು ಪುನೀತ್.‌
ಹರ್ಷ ಕೂಡ ಶಿವರಾಜ್‌ ಕುಮಾರ್‌ ಅವರ ಸರಳತೆ ಮತ್ತು ಸಹಕಾರ ಕುರಿತು ಮಾತನಾಡಿದರು. ನಿರ್ಮಾಪಕರು ತೋರಿದ ಪ್ರೀತಿಗೆ ಭಾವುಕರಾದರು. ಅದೇ ವೇಳೆ ವೇದಿಕೆ ಏರಿದ ನಿರ್ಮಾಪಕ ಜಯಣ್ಣ ಕೂಡ ಕೆಲಹೊತ್ತು ಭಾವುಕತೆಗೆ ಜಾರಿದರು.

ಒಂದೊಳ್ಳೆಯ ಸಿನಿಮಾ ಮಾಡಿದ್ದೇವೆ. ಅದಕ್ಕೆ ಶಿವಣ್ಣ ಕೊಟ್ಟ ಸಹಕಾರ ದೊಡ್ಡದು. ನಮಗೆ ಸಿನಿಮಾ ಬಿಟ್ಟು ಬೇರೇನೂ ಗೊತ್ತಿಲ್ಲ. ಈ ಚಿತ್ರಕ್ಕೆ ನಾನು ಎಲ್ಲವನ್ನೂ ನೀಡಿದ್ದೇನೆ. ಒಳ್ಳೆಯ ಚಿತ್ರವನ್ನು ಜನ ಕೈಬಿಡೋದಿಲ್ಲ ಎಂಬ ನಂಬಿಕೆ ನನಗಿದೆ” ಎಂದರು ಜಯಣ್ಣ.
ನಿರ್ದೇಶಕರಾದ ಸಂತೋಷ್‌ ಆನಂದರಾಮ್‌, ವೃಷಭ್‌ ಶೆಟ್ಟಿ, ದಿನಕರ್‌ ತೂಗುದೀಪ, ಶೃತಿ, ಭಾವನಾ, ಪ್ರಸನ್ನ, ಚೆಲುವರಾಜ್‌, ಗಿರೀಶ್‌ ಸೇರಿದಂತೆ ಹಲವರು ಮಾತನಾಡಿದರು.

ಇದೇ ವೇಳೆ “ಭಜರಂಗಿ 2” ಚಿತ್ರದ ಹಾಡುಗಳಿಗೆ ಕಲಾವಿದರು ಹೆಜ್ಜೆ ಹಾಕಿ ರಂಜಿಸಿದರು. ಕೊನೆಯಲ್ಲಿ ಶಿವರಾಜ್‌ ಕುಮಾರ್‌, ಯಶ್‌ ಹಾಗು ಪುನೀತ್‌ ಕೂಡ ಸಾಂಗ್‌ಗೆ ಸ್ಟೆಪ್‌ ಹಾಕಿದರು.

Categories
ಸಿನಿ ಸುದ್ದಿ

ಒಡೆಯರ್‌ ಮೂವೀಸ್‌ನ ಡೊಳ್ಳು ಸದ್ದು ಜೋರು! ಪವನ್‌ ಒಡೆಯರ್‌ ದಂಪತಿ ನಿರ್ಮಾಣದ ಫಸ್ಟ್‌ ಸಿನ್ಮಾ ಇದು!

ನಿರ್ದೇಶಕ ಪವನ್‌ ಒಡೆಯರ್‌ ಹಾಗು ಅವರ ಪತ್ನಿ ಅಪೇಕ್ಷಾ ಪುರೋಹಿತ್‌ ಅವರ ಒಡೆಯರ್‌ ಮೂವೀಸ್ ಸಂಸ್ಥೆಯಿಂದ ನಿರ್ಮಾಣ ಆಗಿರುವ ಮೊದಲ ಸಿನಿಮಾ “ಡೊಳ್ಳು” ಚಿತ್ರಕ್ಕೆ ಎಲ್ಲೆಡೆಯಿಂದ ಪ್ರಶಂಸೆ ಸಿಕ್ಕಿದೆ. ಸಾಗರ್‌ ಪುರಾಣಿಕ್‌ ಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ೨೦೨೦ರಲ್ಲಿ ಸಿಬಿಎಫ್‌ಸಿಯಿಂದ ಯು ಸರ್ಟಿಫಿಕೆಟ್‌ ಪಡೆದು ಅಂತಾರಾಷ್ಟ್ರ ಮಟ್ಟದಲ್ಲಿ ಸುದ್ದಿ ಮಾಡಿದೆ.

ಈಗಾಗಲೇ ಅಮೇರಿಕಾದ ಕಲೈಡೊಸ್ಕೋಪ್ ಇಂಡಿಯನ್ ಫಿಲಂ ಫೆಸ್ಟಿವಲ್ ಬಾಸ್ಟನ್ ನಲ್ಲಿ ಮೊದಲ ಪ್ರದರ್ಶನ ಕಂಡು, ಎಲ್ಲಾ ಪ್ರೇಕ್ಷಕರ ಗಮನ ಸೆಳೆಯುವುದರೊಂದಿಗೆ ಎಲ್ಲರ ಪ್ರಶಂಸೆಯನ್ನು ಪಡೆದಿದೆ. ಇನ್ನೂ ಹಲವು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಾಣಲಿದೆ. ಢಾಕಾ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ ಹಾಗೂ ಡಾಲಸ್ ಸೌತ್ ಏಶಿಯನ್ ಫಿಲಂ ಫೆಸ್ಟಿವಲ್ ಗಳಲ್ಲಿ ಈಗಾಗಲೇ ಆಯ್ಕೆಯಾಗಿದೆ.

ಇನ್ನೋವೇಟಿವ್ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ ಎಂಬ ಒಂದು ಪ್ರತಿಷ್ಠಿತ ಚಲನಚಿತ್ರೋತ್ಸವದಲ್ಲಿ, ಸರಸ್ವತಿ ಪಿಂಪ್ಳೆ ಫೌಂಡೇಶನ್ ವತಿಯಿಂದ ದಾದಾಸಾಹೇಬ್ ಫಾಲ್ಕೆ ಬೆಸ್ಟ್ ಕನ್ನಡ ಫಿಲ್ಮ್ ಎಂಬ ಪ್ರಶಸ್ತಿ ಡೊಳ್ಳು ಚಿತ್ರಕ್ಕೆ ಲಭಿಸಿದೆ. ದಾದಾಸಾಹೇಬ್ ಫಾಲ್ಕೆ ಎಂ.ಎಸ್.ಕೆ ಟ್ರಸ್ಟ್ ವತಿಯಿಂದ 1 ಲಕ್ಷ ನಗದು ಬಹುಮಾನ ಕೂಡ ಸಿಕ್ಕಿದೆ. ಈ ಕುರಿತಂತೆ ಪವನ್‌ ಒಡೆಯರ್‌ ದಂಪತಿ ಖುಷಿ ಹಂಚಿಕೊಂಡಿದ್ದಾರೆ.

ಚಿತ್ರದಲ್ಲಿ ಕಾರ್ತಿಕ್ ಮಹೇಶ್, ನಿಧಿ ಹೆಗಡೆ, ಚಂದ್ರ ಮಯೂರ, ಬಾಬು ಹಿರಣ್ಣಯ್ಯ, ಶರಣ್ಯ ಸುರೇಶ್, ಡಾ. ಪ್ರಭುದೇವ, ವರುಣ್ ಶ್ರೀನಿವಾಸ್, ಚಂದ್ರಮನು ಇತರರು ನಟಿಸಿದ್ದಾರೆ.
ಅಭಿಲಾಷ್ ಕಳತ್ತಿ ಕ್ಯಾಮೆರಾವಿದೆ. ಎಂ. ಅನಂತ್ ಕಾಮತ್ ಸಂಗೀತವಿದೆ. ಬಿ ಎಸ್ ಕೆಂಪರಾಜು ಸಂಕಲನ ಮಾಡಿದರೆ, ಶ್ರೀನಿಧಿ ಡಿ ಎಸ್ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ದೇವಿ ಪ್ರಕಾಶ್ ಕಲಾನಿರ್ದೇಶನವಿದೆ. ನಿತಿನ್ ಲೂಕೋಸ್ ಶಬ್ದ ವಿನ್ಯಾಸ ಮಾಡಿದ್ದಾರೆ.

Categories
ಸಿನಿ ಸುದ್ದಿ

ರಾಜ್ಯೋತ್ಸವದಂದು “ಕನ್ನಡಿಗ ನೀನಾಗು ಬಾ” ಆಲ್ಬಂ ಸಾಂಗ್ ಬಿಡುಗಡೆ

ಎಸ್.ಪಿ.ಬಿ ಕಂಠಸಿರಿಯಲ್ಲಿ ಮೂಡಿಬಂದಿದ್ದ “ಆಟೋ” ಚಿತ್ರದ ಅದ್ಭುತ ಗೀತೆಯ ಮರುಚಿತ್ರಣ ರಾಜ್ಯೋತ್ಸವದಂದು ಬಿಡುಗಡೆಯಾಗಲಿದೆ

ಕನ್ನಡ ಹಾಗೂ ಗೋವಿನ ಬಗ್ಗೆ ಅಪಾರ ಅಭಿಮಾನವಿರುವ ಮಾರುತಿ ಮೆಡಿಕಲ್ಸ್‌ ನ ಮಹೇಂದ್ರ ಮಣೋತ್ 2009ರಲ್ಲಿ “ಆಟೋ” ಚಿತ್ರವನ್ನು ನಿರ್ಮಾಣ ಮಾಡಿದ್ದರು. ಆ ಚಿತ್ರದಲ್ಲಿ ಗಾನಗಾರೂಡಿಗ ಎಸ್ ಪಿ ಬಾಲಸುಬ್ರಹ್ಮಣ್ಯಂ “ಶತಶತಮಾನಗಳೇ ಉರುಳಲಿ” ಎಂಬ ಹಾಡನ್ನು ಹಾಡಿದ್ದರು. ಈಗ ಅದೇ ಚಿತ್ರದ ಹಾಡನ್ನು ಮಹೇಂದ್ರ ಮಣೋತ್ ಮರು ನಿರ್ಮಾಣ ಮಾಡಿದ್ದಾರೆ ರಾಜ್ಯೋತ್ಸವದ ಸಲುವಾಗಿ ಬಿ.ಪಿ.ಹರಿಹರನ್ ಈ ಹಾಡನ್ನು ನಿರ್ದೇಶನ ಮಾಡಿ, ಬಿಡುಗಡೆ ಮಾಡಲಾಗುತ್ತಿದೆ.

ಮಲ್ಲಿಕಾರ್ಜುನ ಮುತ್ತಲಗೇರಿ ಈ ಹಾಡನ್ನು ಬರೆದಿದ್ದು, ವಿಜಯ್ ಕೃಷ್ಣ ಸಂಗೀತ ನೀಡಿದ್ದಾರೆ. ನಾಗೇಂದ್ರ ರಂಗರಿ ಛಾಯಾಗ್ರಹಣ ಮಾಡಿದ್ದಾರೆ.ಕನ್ನಡ ರಾಜ್ಯೋತ್ಸವದ ಸಲುವಾಗಿ ಹಾಡನ್ನು ನಮ್ಮ ನಿರ್ದೇಶಕರಾದ ಬಿ.ಪಿ.ಹರಿಹರನ್ ನಿರ್ದೇಶಿಸಿದ್ದಾರೆ. ಬೆಂಗಳೂರು, ಮೈಸೂರಿನ ಸುಂದರತಾಣಗಳಲ್ಲಿ ಈ ಹಾಡಿನ ಚಿತ್ರೀಕರಣ ನಡೆಸಿದ್ದೇವೆ. ಈ ಹಾಡನ್ನು ಹಾಡಿರುವ ಎಸ್ ಪಿ ಬಿ ಅವರಿಗೆ ಈ ಹಾಡನ್ನು ಅರ್ಪಣೆ ಮಾಡಿದ್ದೇವೆ. ಮುಂದೆ ನಾಡು, ನುಡಿಗೆ ಸಂಬಂಧಿಸಿದ ಅನೇಕ ಹಾಡುಗಳನ್ನು ಬಿಡುಗಡೆ ‌ಮಾಡುತ್ತೇವೆ ಎಂಬುದು ನಿರ್ಮಾಪಕ ಹಾಗೂ ನಟ ಮಹೇಂದ್ರ ಮಣೋತ್ ಅವರ ಮಾತು.

ಕಂಚಿನಕಂಠದ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಹಾಡಿರುವ ಹಾಡಿಗೆ ನಿರ್ದೇಶನ ಮಾಡಿರುವುದು ನನ್ನ ಸೌಭಾಗ್ಯ. ಇದಕ್ಕೆ ಅವಕಾಶ ನೀಡಿದ ಮಹೇಂದ್ರ ಮಣೋತ್ ಅವರಿಗೆ ಚಿರ ಋಣಿ. ಸಾಲುಮರದ ತಿಮ್ಮಕ್ಕ, ಸಾಹಿತಿ ದೊಡ್ಡರಂಗೇಗೌಡ‌‌ ಮುಂತಾದ ಗಣ್ಯರು ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಈ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಿದೆ ಎಂದರು ನಿರ್ದೇಶಕ ಬಿ.ಪಿ.ಹರಿಹರನ್.

error: Content is protected !!