ಎಸ್.ಪಿ.ಬಿ ಕಂಠಸಿರಿಯಲ್ಲಿ ಮೂಡಿಬಂದಿದ್ದ “ಆಟೋ” ಚಿತ್ರದ ಅದ್ಭುತ ಗೀತೆಯ ಮರುಚಿತ್ರಣ ರಾಜ್ಯೋತ್ಸವದಂದು ಬಿಡುಗಡೆಯಾಗಲಿದೆ
ಕನ್ನಡ ಹಾಗೂ ಗೋವಿನ ಬಗ್ಗೆ ಅಪಾರ ಅಭಿಮಾನವಿರುವ ಮಾರುತಿ ಮೆಡಿಕಲ್ಸ್ ನ ಮಹೇಂದ್ರ ಮಣೋತ್ 2009ರಲ್ಲಿ “ಆಟೋ” ಚಿತ್ರವನ್ನು ನಿರ್ಮಾಣ ಮಾಡಿದ್ದರು. ಆ ಚಿತ್ರದಲ್ಲಿ ಗಾನಗಾರೂಡಿಗ ಎಸ್ ಪಿ ಬಾಲಸುಬ್ರಹ್ಮಣ್ಯಂ “ಶತಶತಮಾನಗಳೇ ಉರುಳಲಿ” ಎಂಬ ಹಾಡನ್ನು ಹಾಡಿದ್ದರು. ಈಗ ಅದೇ ಚಿತ್ರದ ಹಾಡನ್ನು ಮಹೇಂದ್ರ ಮಣೋತ್ ಮರು ನಿರ್ಮಾಣ ಮಾಡಿದ್ದಾರೆ ರಾಜ್ಯೋತ್ಸವದ ಸಲುವಾಗಿ ಬಿ.ಪಿ.ಹರಿಹರನ್ ಈ ಹಾಡನ್ನು ನಿರ್ದೇಶನ ಮಾಡಿ, ಬಿಡುಗಡೆ ಮಾಡಲಾಗುತ್ತಿದೆ.
ಮಲ್ಲಿಕಾರ್ಜುನ ಮುತ್ತಲಗೇರಿ ಈ ಹಾಡನ್ನು ಬರೆದಿದ್ದು, ವಿಜಯ್ ಕೃಷ್ಣ ಸಂಗೀತ ನೀಡಿದ್ದಾರೆ. ನಾಗೇಂದ್ರ ರಂಗರಿ ಛಾಯಾಗ್ರಹಣ ಮಾಡಿದ್ದಾರೆ.ಕನ್ನಡ ರಾಜ್ಯೋತ್ಸವದ ಸಲುವಾಗಿ ಹಾಡನ್ನು ನಮ್ಮ ನಿರ್ದೇಶಕರಾದ ಬಿ.ಪಿ.ಹರಿಹರನ್ ನಿರ್ದೇಶಿಸಿದ್ದಾರೆ. ಬೆಂಗಳೂರು, ಮೈಸೂರಿನ ಸುಂದರತಾಣಗಳಲ್ಲಿ ಈ ಹಾಡಿನ ಚಿತ್ರೀಕರಣ ನಡೆಸಿದ್ದೇವೆ. ಈ ಹಾಡನ್ನು ಹಾಡಿರುವ ಎಸ್ ಪಿ ಬಿ ಅವರಿಗೆ ಈ ಹಾಡನ್ನು ಅರ್ಪಣೆ ಮಾಡಿದ್ದೇವೆ. ಮುಂದೆ ನಾಡು, ನುಡಿಗೆ ಸಂಬಂಧಿಸಿದ ಅನೇಕ ಹಾಡುಗಳನ್ನು ಬಿಡುಗಡೆ ಮಾಡುತ್ತೇವೆ ಎಂಬುದು ನಿರ್ಮಾಪಕ ಹಾಗೂ ನಟ ಮಹೇಂದ್ರ ಮಣೋತ್ ಅವರ ಮಾತು.
ಕಂಚಿನಕಂಠದ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಹಾಡಿರುವ ಹಾಡಿಗೆ ನಿರ್ದೇಶನ ಮಾಡಿರುವುದು ನನ್ನ ಸೌಭಾಗ್ಯ. ಇದಕ್ಕೆ ಅವಕಾಶ ನೀಡಿದ ಮಹೇಂದ್ರ ಮಣೋತ್ ಅವರಿಗೆ ಚಿರ ಋಣಿ. ಸಾಲುಮರದ ತಿಮ್ಮಕ್ಕ, ಸಾಹಿತಿ ದೊಡ್ಡರಂಗೇಗೌಡ ಮುಂತಾದ ಗಣ್ಯರು ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಈ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಿದೆ ಎಂದರು ನಿರ್ದೇಶಕ ಬಿ.ಪಿ.ಹರಿಹರನ್.