Categories
ಸಿನಿ ಸುದ್ದಿ

ವಿಹಾನ ಗಾಯನ – ಎಂಜಿನಿಯರ್‌ ಹುಡುಗನ ಗಾನ ಬಜಾನ

ಮಂಡ್ಯ ಹುಡುಗನ ಮನಸ್ಸೆಲ್ಲಾ ಹಾಡು-ಪಾಡು

ಈ ಸಿನಿಮಾ ಸೆಳೆತವೇ ಹಾಗೆ. ಒಮ್ಮೆ ಇತ್ತ ಒಲವು ಮೂಡಿದರೆ ಮುಗೀತು. ಇಲ್ಲೇ ಗಟ್ಟಿನೆಲೆ ಕಾಣಬೇಕೆಂಬ ಹಂಬಲ ಸಹಜ. ಚಿತ್ರರಂಗಕ್ಕೆ ಈಗಾಗಲೇ ಎಲ್ಲಾ ಕ್ಷೇತ್ರದಿಂದಲೂ ಎಂಟ್ರಿಯಾಗಿದ್ದಾರೆ. ಡಾಕ್ಟರ್‌, ಪೊಲೀಸ್‌, ಎಂಜಿನಿಯರ್‌ ಹೀಗೆ ಹಲವು ಕ್ಷೇತ್ರಗಳಿಂದ ಬಂದವರಿದ್ದಾರೆ. ಆ ಪೈಕಿ ಕೆಲವರು ಸಾಧಿಸಿದ್ದಾರೆ. ಇನ್ನೂ ಕೆಲವರು ಸಾಧನೆಯ ಹಾದಿಯಲ್ಲಿದ್ದಾರೆ. ಅದೇ ಸಾಧಿಸಬೇಕೆಂಬ ಛಲದಲ್ಲಿ ಇಲ್ಲೊಬ್ಬ ಯುವ ಗಾಯಕ ಚಿತ್ರರಂಗವನ್ನು ಸ್ಪರ್ಶಿಸಿದ್ದಾನೆ. ಹೆಸರು ವಿಹಾನ್‌ ಆರ್ಯ. ಹಾಗಂತ ಈ ವಿಹಾನ್‌ ಆರ್ಯ ಹೀರೋ ಆಗಬೇಕು, ನಿರ್ದೇಶಕ ಆಗಬೇಕು ಅಂತ ಬಂದಿಲ್ಲ. ತಾನೊಬ್ಬ ಒಳ್ಳೆಯ ಗಾಯಕನಾಗಿ ಗುರುತಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಗಾಂಧಿನಗರಕ್ಕೆ ಎಂಟ್ರಿಕೊಟ್ಟಿದ್ದಾರೆ.

 ನಾನು ನೀನು ಇನ್ನು ಬೇರೆ ಏನು, ನಿನ ಎದೆಯ ಗೂಡಲ್ಲಿ ನನ ಜೀವಾ ಇದೆ.. ನೂರು ನೂರು ನನ ಆಸೆ ನೂರು, ನನ ಜೀವನ ಮುಂದಕೆ ಹೋಗದು ನೀನಿರದೆ,
ಮನಸ್ಸೆಲ್ಲಾ ನೀನೇ… ಮನಸ್ಸೆಲ್ಲಾ ನೀನೆ…” ಎಂಬ ಹಾಡಿಗೆ ಸಿಕ್ಕಾಪಟ್ಟೆ ಮೆಚ್ಚುಗೆಯೂ ಸಿಕ್ಕಿದೆ. ಲಕ್ಷಗಟ್ಟಲೆ ವೀಕ್ಷಣೆಯೂ ಪಡೆದಿದೆ

 

 

ಅಂದಹಾಗೆ, ವಿಹಾನ್‌ ಆರ್ಯ ಮೂಲತಃ ಎಂಜಿನಿಯರ್‌ ಅನ್ನೋದು ವಿಶೇಷ. ಅರೇ, ಎಂಜಿನಿಯರ್‌ ಗಾಯಕರಾಗಿದ್ದಾರಾ? ಈ ಪ್ರಶ್ನೆ ಎದುರಾಗೋದು ಸಹಜವೇ. ಆದರೆ, ವಿಹಾನ್‌ ಆರ್ಯ ಈಗಾಗಲೇ ಸಾಕಷ್ಟು ಹಾಡುಗಳನ್ನು ಹಾಡುವ ಮೂಲಕ ಗುರುತಿಸಿಕೊಳ್ಳುತ್ತಿದ್ದಾರೆ ಅನ್ನೋದ್ದನ್ನೂ ಗಮನಿಸಬೇಕು. ತಮ್ಮ ಈ ಗಾಯನದ ಪಯಣ ಕುರಿತು ವಿಹಾನ್‌ ಆರ್ಯ, “ಸಿನಿ ಲಹರಿ” ಜೊತೆ ಮಾತನಾಡಿದ್ದಿಷ್ಟು.  “ನಾನು ಮಂಡ್ಯ ಜಿಲ್ಲೆಯ ಮಳವಳ್ಳಿ ಸಮೀಪವಿರುವ ಹಾಡ್ಲಿ ಎಂಬ ಊರಿನವನು. ನಾನೊಬ್ಬ ಮೆಕಾನಿಕಲ್‌ ಎಂಜಿನಿಯರ್.‌ ಬಿಇ ಓದು ಮುಗಿಸಿದ ಕೂಡಲೇ ನನಗೆ ಕೆಲಸಕ್ಕೆ ಹೋಗುವ ಆಸಕ್ತಿ ಇರಲಿಲ್ಲ. ಆದರೆ, ಹಾಡಬೇಕೆಂಬ ಆಸಕ್ತಿ ಹೆಚ್ಚಾಗಿತ್ತು. ಗಾಯನದ ಮೇಲೆ ಎಲ್ಲಿಲ್ಲದ ಪ್ರೀತಿ ಇತ್ತು. ಆ ಕಾರಣಕ್ಕೆ ನಾನು ನನ್ನ ಎಜುಕೇಷನ್‌ ಪೂರೈಸಿ, ಹಂಸಲೇಖರ ಬಳಿ ದೇಸಿ ಶಾಲೆಯಲ್ಲಿ ಸಂಗೀತ ಕಲಿತೆ. ಅವರ ಶಿಷ್ಯ ಎನಿಸಿಕೊಂಡೆ. ಈಗ ಶಿವಾನಂದ್‌ ಸಾಲಿಮಠ್‌ ಅವರ ಬಳಿ ಹಿಂದೂಸ್ತಾನಿ ಸಂಗೀತ ಕಲಿಯುತ್ತಿದ್ದೇನೆ.

ಕಾಲೇಜು ದಿನಗಳಲ್ಲೇ ನನಗೆ ಹಾಡುವ ಹುಚ್ಚಿತ್ತು. ಆಗ ಅಭ್ಯಾಸ ಮಾಡುತ್ತಿದ್ದೆ. ಹಾಗೆ ಹಾಡುತ್ತಲೇ ವಾಯ್ಸ್‌ ಆಫ್‌ ಬೆಂಗಳೂರು ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಗಮನಸೆಳೆದೆ. ಅಲ್ಲಿಂದ ಹಾಡುವ ಅವಕಾಶ ಸಿಕ್ತು. ನಾನು “ವಂದನಾʼ ಚಿತ್ರಕ್ಕೆ ಹಾಡುವ ಮೂಲಕ ಗಾಯಕನಾದೆ. ಇಂಡಸ್ಟ್ರಿಗೆ ಬಂದು ಆರು ವರ್ಷಗಳಾಗಿವೆ. ಈವರೆಗೆ ಸುಮಾರು ೩೫ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದೇನೆ. ಸುಮಾರು ೩೦೦ ಚಿತ್ರಗಳಿಗೆ ಕೋರಸ್‌ ಆಗಿಯೂ ಹಾಡಿದ್ದೇನೆ. ನಾಯಕಿ, ಸರ್ವ ಮಂಗಳ ಮಾಂಗಲ್ಯ, ಮನಸ್ಸೆಲ್ಲಾ ನೀನೇ ಧಾರಾವಾಹಿಗಳಿಗೂ ಹಾಡಿದ್ದೇನೆ. ಸದ್ಯ “ಮನಸ್ಸೆಲ್ಲಾ ನೀನೇ” ಧಾರಾವಾಹಿಯ ಶೀರ್ಷಿಕೆ ಗೀತೆ ” ನಾನು ನೀನು ಇನ್ನು ಬೇರೆ ಏನು, ನಿನ ಎದೆಯ ಗೂಡಲ್ಲಿ ನನ ಜೀವಾ ಇದೆ.. ನೂರು ನೂರು ನನ ಆಸೆ ನೂರು, ನನ ಜೀವನ ಮುಂದಕೆ ಹೋಗದು ನೀನಿರದೆ,
ಮನಸ್ಸೆಲ್ಲಾ ನೀನೇ… ಮನಸ್ಸೆಲ್ಲಾ ನೀನೆ…” ಎಂಬ ಹಾಡಿಗೆ ಸಿಕ್ಕಾಪಟ್ಟೆ ಮೆಚ್ಚುಗೆಯೂ ಸಿಕ್ಕಿದೆ. ಲಕ್ಷಗಟ್ಟಲೆ ವೀಕ್ಷಣೆಯೂ ಪಡೆದಿದೆ” ಎಂಬುದು ಅವರ ಮಾತು.


ಇನ್ನು ಕನ್ನಡ ಚಿತ್ರರಂಗದ ಬಹುತೇಕ ಸಂಗೀತ ನಿರ್ದೇಶಕರ ಜೊತೆ ಕೆಲಸ ಮಾಡಿದ್ದೇನೆ. “ಕೃಷ್ಣ ಟಾಕೀಸ್‌”, “ಪ್ರೇಮಂ ಪೂಜ್ಯಂ”, “ಡಿಯರ್‌ ಸತ್ಯ” ಸಿನಿಮಾಗಳಿಗೆ ಹಾಡಿದ್ದುಂಟು. ನಾನು ಹಾಡಿರುವ ಸುಮಾರು ೨೦ಕ್ಕೂ ಹೆಚ್ಚು ಚಿತ್ರಗಳು ರಿಲೀಸ್‌ ಆಗಬೇಕಿದೆ. ಗಾಯನ ಕ್ಷೇತ್ರದಲ್ಲಿ ಸ್ಪರ್ಧೆ ಇದೆ. ನಾನು ಮೆಲೋಡಿ ಹೆಚ್ಚು ಹಾಡಿದ್ದೇನೆ. ನನ್ನ ವಾಯ್ಸ್‌ಗೆ ಮೆಲೋಡಿ ಹಾಡುಗಳು ಬರುತ್ತಿವೆ. ಮೊದ ಮೊದಲು ಮನೆಯಲ್ಲಿ ಅಷ್ಟೊಂದು ಉತ್ಸಾಹ ಇರಲಿಲ್ಲ. ಈಗ ಗುರುತಿಸಿಕೊಳ್ಳುತ್ತಿರುವುದರಿಂದ ಎಲ್ಲವೂ ಸುಗಮವಾಗುತ್ತಿದೆ. ನನಗೆ‌ ಸಂಗೀತ ನಿರ್ದೇಶಕ ವಿ. ಸಂಭ್ರಮ್‌ ಶ್ರೀಧರ್ ಅವರು ಗುರುವಿದ್ದಂತೆ. ಅವರ ಮಾರ್ಗದರ್ಶನದಲ್ಲೇ ಈಗ ಕೆಲಸ ಮಾಡುತ್ತಿದ್ದೇನೆ. ನನಗೆ ಸಿನಿಮಾದಲ್ಲೇ ಗುರುತಿಸಿಕೊಳ್ಳುವ ಆಸೆ ಇದೆ. ಮುಂದಿನ ದಿನಗಳಲ್ಲಿ ದೊಡ್ಡ ಸ್ಟಾರ್‌ಗಳಿಗೆ ಹಾಡಬೇಕು ಎಂಬುದು ನನ್ನ ಮಹಾದಾಸೆ” ಎನ್ನುತ್ತಾರೆ ವಿಹಾನ್‌ ಆರ್ಯ.

Categories
ಸಿನಿ ಸುದ್ದಿ

ತೆಲುಗಿಗೂ ಕಾಲಿಟ್ಟ ಶ್ರೀಮುರಳಿ – ಮದಗಜನ ಟಾಲಿವುಡ್ ಹೆಜ್ಜೆಗೆ ಭರ್ಜರಿ ಮೆಚ್ಚುಗೆ

ತೆಲುಗು ಟೈಟಲ್ ಪೋಸ್ಟರ್ ಗೆ ಫ್ಯಾನ್ಸ್ ಫಿದಾ

 

ಶ್ರೀಮುರಳಿ ಅಭಿನಯದ “ಮದಗಜ” ಭಾರೀ ಸದ್ದು ಮಾಡಿರೋದು ಗೊತ್ತೇ ಇದೆ. ಕನ್ನಡ ಚಿತ್ರರಂಗದ ಮಟ್ಟಿಗೆ ಫಸ್ಟ್ ಲುಕ್ ಟೀಸರ್ ದಾಖಲೆ ಬರೆದಿದೆ.
ಇದೇ ಖುಷಿಯಲ್ಲಿರುವ “ಮದಗಜ” ಚಿತ್ರತಂಡ ಈಗ ಇನ್ನೊಂದು ದೊಡ್ಡ ಹೆಜ್ಜೆ ಇಟ್ಟಿದೆ. ಕನ್ನಡದ ಜೊತೆಗೆ ತೆಲುಗು ಚಿತ್ರರಂಗಕ್ಕೂ “ಮದಗಜ” ಪಾದಾರ್ಪಣೆ ಮಾಡುತ್ತಿದೆ ಎಂಬುದು ಈ ಕ್ಷಣದ ಸುದ್ದಿ.

ಹೌದು, ಕನ್ನಡ “ಮದಗಜ” ಸಿನಿಮಾದ ಫಸ್ಟ್ ಲುಕ್ ಟೀಸರ್ ಮಾಡಿದ ಜೋರು ಸದ್ದಿಗೆ ಪರಭಾ಼ಷಿಗರೂ ತಿರುಗಿ ನೋಡಿದ್ದು ಸುಳ್ಳಲ್ಲ. ಈಗ ತೆಲುಗಿಗೂ “ಮದಗಜ” ಎಂಟ್ರಿಯಾಗಿದೆ ಅನ್ನೋದೇ ಸಂಭ್ರಮದ ಮಾತು.
ಕ್ರಿಸ್ಮಸ್ ಹಬ್ಬಕ್ಕೆ ತೆಲುಗು ಭಾಷೆಗೂ ಕಾಲಿಡುತ್ತಿರುವುದನ್ನು ಚಿತ್ರತಂಡ ಅನೌನ್ಸ್ ಮಾಡಿದೆ. ತೆಲುಗಿನಲ್ಲಿ “ರೋರಿಂಗ್ ಮದಗಜ” ಎಂದು ನಾಮಕರಣ ಮಾಡಲಾಗಿದೆ. ಕ್ರಿಸ್ಮಸ್ ಹಬ್ಬಕ್ಕೆ ಗಿಫ್ಟ್ ಎಂಬಂತೆ ತೆಲುಗು ಟೈಟಲ್ ಪೋಸ್ಟರ್ ಹೊರ ತಂದಿರುವ ಚಿತ್ರತಂಡ, ಫ್ಯಾನ್ಸ್ ಗೊಂದು ಸರ್ಪ್ರೈಸ್ ನೀಡಿದೆ.

ಮಹೇಶ್ ಕುಮಾರ್, ನಿರ್ದೇಶಕ

ತೆಲುಗಿನಲ್ಲಿ ತಯಾರಾಗುತ್ತಿರುವ ಚಿತ್ರದ ಟೀಸರ್ ಹೊಸ ವರ್ಷ ಜನವರಿ 1ರಂದು ಬಿಡುಗಡೆಯಾಗಲಿದೆ. ಅಂದು 10.10ಕ್ಕೆ ಆನಂದ್ ಯುಟ್ಯೂಬ್ ಚಾನೆಲ್ ಮೂಲಕ ಟೀಸರ್ ಬಿಡುಗಡೆಯಾಗಲಿದ್ದು, ಶ್ರೀಮುರಳಿ ಅವರೇ ಆ ತೆಲುಗು ಟೀಸರ್ ಗೆ ವಾಯ್ಸ್ ನೀಡಿರುವುದು ಮತ್ತೊಂದು ವಿಶೇಷ.
“ಮದಗಜ” ಚಿತ್ರದ ಇನ್ನೂ ಒಂದು ವಿಶೇಷ ಕಾದಿದ್ದು, ಅದು ಜನವರಿ ಸಂಕ್ರಾಂತಿ ಹಬ್ಬದಂದು ರಿವೀಲ್ ಆಗಲಿದೆ. ಅಲ್ಲಿಗೆ ಇದೇ ಮೊದಲ ಸಲ ಶ್ರೀಮುರಳಿ ಅಭಿನಯದ ಚಿತ್ರವೊಂದು ಬೇರೆ ಭಾಷೆಯಲ್ಲೂ ತಯಾರಾಗಿ ಬಿಡುಗಡೆಯಾಗುತ್ತಿದೆ.

ಉಮಾಪತಿ, ನಿರ್ಮಾಪಕ

ಸದ್ಯಕ್ಕೆ ತೆಲುಗಿನಲ್ಲಿ ಹೊರ ಬಂದಿರುವ ಈ ಟೈಟಲ್ ಪೋಸ್ಟರ್ ಗೆ ಭರಪೂರ ಮೆಚ್ಚುಗೆ ಸಿಕ್ಕಿದೆ.
ಈಗಾಗಲೇ “ಮದಗಜ” ಮೇಲೆ ಸಾಕಷ್ಟು ನಿರೀಕ್ಷೆಯೂ ಹೆಚ್ಚಿದ್ದು, ಜೊತೆಗೆ ಭರವಸೆ ಕೂಡ.
ಚಿತ್ರದ ಮೊದಲ ಟೀಸರ್ ಗೆ ಜನರು ಕೊಟ್ಟ ದೊಡ್ಡ ಯಶಸ್ಸಿನ ಉತ್ಸಾಹದಲ್ಲೇ ಚಿತ್ರತಂಡ ಈ ಮಹತ್ವದ ಮತ್ತೊಂದು ಹೆಜ್ಜೆಯನ್ನು ಇಟ್ಟಿದೆ.
ಇಷ್ಟೇ ಅಲ್ಲ, “ಮದಗಜ” ಮುಂದಿನ ದಿನಗಳಲ್ಲಿ ಇನ್ನಷ್ಟು ಸರ್ಪ್ರೈಸ್ ಕೊಡಲು ಒಂದಷ್ಟು ತಯಾರಿ ಮಾಡಿಕೊಳ್ಳುತ್ತಿದೆ.
ಈಗ ಎಚ್. ಎಂ.ಟಿ ಯಲ್ಲಿ ಚಿತ್ರೀಕರಣಕ್ಕೆ ತಂಡ ತಯಾರಿ ನಡೆಸಿದ್ದು, ಡಿಸೆಂಬರ್‌ 28ರಿಂದ ಶೂಟಿಂಗ್ ನಡೆಸಲಿದೆ. ಹಾಗೆ ನೋಡಿದರೆ ಕಳೆದ ಡಿಸೆಂಬರ್ 21ರಿಂದಲೇ ಚಿತ್ರೀಕರಣ ನಡೆಯಬೇಕಿತ್ತು. ಆ ದೃಶ್ಯದ ಚಿತ್ರಣಕ್ಕೆ ಬೇಕಾದ ಲೆನ್ಸ್ ಸಿಗಲಿಲ್ಲ ಎಂಬ ಕಾರಣಕ್ಕೆ ನಿರ್ದೇಶಕರು ಕಾಂಫ್ರಮೈಸ್ ಆಗದೆ ಶೂಟಿಂಗ್ ಮುಂದಕ್ಕೆ ಹಾಕಿದ್ದಾರೆ. ಆ ಲೆನ್ಸ್ ಇಂಡಿಯಾದಲ್ಲಿ ಇರದ ಕಾರಣ, ಶೂಟಿಂಗ್ ಮುಂದೆ ಹೋಗಿತ್ತು. ಡಿಸೆಂಬರ್ 28ರಿಂದ ಯಥಾ ಪ್ರಕಾರ ಶೂಟಿಂಗ್ ನಡೆಯಲಿದೆ ಎಂಬುದು ಚಿತ್ರತಂಡದ ಮಾತು.
ಸದ್ಯ ಶ್ರೀಮುರಳಿ ಈಗ ಫುಲ್ ಬಿಝಿ. “ಮದಗಜ” ಬೆನ್ನಲ್ಲೆ ಅವರು “ಬಘೀರ” ಚಿತ್ರ ಮಾಡುವ ಘೋಷಣೆ ಮಾಡಿದ್ದಾರೆ. ಅದೂ ಕೂಡ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ತಯಾರಾಗುತ್ತಿರುವ ಚಿತ್ರ.
ಡಾ.ಸೂರಿ ಆ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
“ಮದಗಜ” ಚಿತ್ರಕ್ಕೆ ಆಶಿಕಾ ನಾಯಕಿ. ಮಹೇಶ್ ಕುಮಾರ್ ನಿರ್ದೇಶನವಿದೆ. ಉಮಾಪತಿ ನಿರ್ಮಾಣವಿದೆ.

Categories
ಸಿನಿ ಸುದ್ದಿ

ಯಶ್ ನಟನೆಯ ರಾಕಿ ಚಿತ್ರಕ್ಕೆ 12ರ ಸಂಭ್ರಮ- ಪೂರ್ಣ ಪ್ರಮಾಣದ ಹೀರೋ ಆಗಿದ್ದ ಸಿನಿಮಾ

ನಾಗೇಂದ್ರ ಅರಸ್ ನಿರ್ದೇಶನದ ಎರಡನೇ‌ ಚಿತ್ರ

ಕನ್ನಡ ಚಿತ್ರರಂಗದಲ್ಲೀಗ ಸ್ಟಾರ್ ನಟರ ಸಾಲಲ್ಲಿ ಎದ್ದು ಕಾಣುವ ನಟ ಯಶ್, ಪೂರ್ಣ ಪ್ರಮಾಣದ ಹೀರೋ ಆಗಿ ನಟಿಸಿದ ಮೊದಲ ಚಿತ್ರ “ರಾಕಿ” ಚಿತ್ರಕ್ಕೆ ಈಗ ಹನ್ನೆರೆಡು ವರ್ಷದ ಸಂಭ್ರಮ.


ಯಶ್ ಅಭಿನಯದ “ರಾಕಿ” ಚಿತ್ರ ಅವರನ್ನು ಕನ್ನಡಕ್ಕೆ ಒಬ್ಬ ಪಕ್ಕಾ ನಟ ಮತ್ತು ಡ್ಯಾನ್ಸರ್ ಅನ್ನುವುದನ್ನು ಸಾಬೀತುಪಡಿಸಿತು. ಡಿಸೆಂಬರ್ 25, 2008ರಲ್ಲಿ “ರಾಕಿ” ಬಿಡುಗಡೆಯಾಗಿತ್ತು. ಇಂದಿಗೆ “ರಾಕಿ” ರಿಲೀಸ್ ಆಗಿ 12 ವರ್ಷಗಳು ಸಂದಿವೆ. ಯಶ್ ಈ ಒಂದು ದಶಕದಲ್ಲಿ ಇಡೀ ಭಾರತೀಯ ಚಿತ್ರರಂಗವೇ ಗುರುತಿಸುವಂತಹ ಚಿತ್ರ ಕೊಡುವ ಮೂಲಕ ಕನ್ನಡ ಸಿನಿಮಾ ರಂಗದಲ್ಲಿ ಗಟ್ಟಿ ನೆಲೆ ಕಂಡಿದ್ದಾರೆ.


ಯಶ್ ಅವರನ್ನು ಪೂರ್ಣ ಪ್ರಮಾಣದ ನಾಯಕರನ್ನಾಗಿಸಿದ ಹೆಮ್ಮೆ ನಿರ್ದೇಶಕ ನಾಗೇಂದ್ರ ಅರಸ್ ಅವರದು. “ರಾಕಿ” ನಾಗೇಂದ್ರ ಅರಸ್ ನಿರ್ದೇಶನದ ಎರಡನೇ ಸಿನಿಮಾ.

ನಾಗೇಂದ್ರ ಅರಸ್

ಕೆಲವು ಸಿನಿಮಾಗಳು ಹೀಗೆ ಸುದ್ದಿಯಾಗುತ್ತವೆ ಅನ್ನುವುದಕ್ಕೆ ಇಂತಹ ಚಿತ್ರಗಳ ಮೂಲಕ ಬೆಳ್ಳಿತೆರೆಯಲ್ಲಿ ಹೆಸರು ಮಾಡಿದ ಹೀರೋಗಳು. ಯಶ್ ಯಶಸ್ವಿ ಚಿತ್ರಗಳ ಮೂಲಕ ನೆಲೆ ನಿಂತಿದ್ದಾರೆ. ಆ ಕಾರಣಕ್ಕೆ ಅವರ ಪೂರ್ಣ ಪ್ರಮಾಣದ ನಾಯಕರಾಗಿ ಅಭಿನಯಿಸಿದ “ರಾಕಿ” ಹನ್ನೆರಡು ವರ್ಷಗಳಾದರೂ ಸುದ್ದಿಯಾಗುತ್ತಿದೆ.

Categories
ಸಿನಿ ಸುದ್ದಿ

ಜಟಕಾ ‌ಕುದುರೆ ಹತ್ತಿ ಪ್ಯಾಟೆಗೋಗುಮ ಅಂತ ಗೀತೆ ಬರೆದ ಶ್ರೀರಂಗ ಈಗ ಹೇಗಿದ್ದಾರೆ ಗೋತ್ತಾ?

ಸಂಚಾರಿ ವಿಜಯ್ ರಾಷ್ಟ್ರ ಪ್ರಶಸ್ತಿ ವಿಜೇತ ನಟ. ರಂಗಭೂಮಿ ,ಸಿನಿಮಾ ನಟನೆಯ ಜತೆಗೆ ಅವರು ಸಾಮಾಜಿಕ ಕಾಳಜಿಗೆ ಮಿಡಿಯುವ ಒರ್ವ ಹೃದಯವಂತ ಕಲಾವಿದ. ಅವರು ಇತ್ತೀಚೆಗೆ ಕೆ.ಆರ್.ಪುರಂ ನಲ್ಲಿನ‌ ಕನ್ನಡ ರಾಜ್ಯೋತ್ಸವಕ್ಕೆ ಅತಿಥಿಯಾಗಿ ಹೋದಾಗ ಅಲ್ಲಿ ಕಂಡ ಶ್ರೀರಂಗ ಅವರ ಬಗ್ಗೆ ಬರೆದ ಬರಹ ಇಲ್ಲಿದೆ. ಅವರ ಅನುಮತಿ ಪಡೆದುಕೊಂಡೆ‌ ‘ ಸಿನಿ‌ಲಹರಿ ‘ ಈ ಬರಹ ಪ್ರಕಟಿಸಿದೆ.

ಶ್ರೀರಂಗ ಅವರನ್ನು ನಟ ವಿಜಯ್ ಕಂಡ ಕ್ಷಣ…

‘ಜಟಕಾ ಕುದುರೆ ಹತ್ತಿ ಪ್ಯಾಟೆಗೋಗುಮ’, ‘ರಂಭೆ ನೀ ವಯ್ಯಾರದ ಗೊಂಬೆ’, ‘ಬಾರೆ ಬಾರೆ ಕಲ್ಯಾಣ ಮಂಟಪಕ್ಕೆ ಬಾ’, ‘ಸುಮ್ ಸುಮ್ನೆ ಓಳು ಬಿಡೋ ಸುಂದರಿ’….. ಹಾಡುಗಳನ್ನ ಹಾಗು ‘ಜನುಮದ ಜೋಡಿ’, ‘ರಕ್ತ ಕಣ್ಣೀರು’, ‘ಆಕಾಶ್’, ‘ವೀರ ಕನ್ನಡಿಗ’, ‘ಅಪ್ಪಾಜಿ’, ‘ಇನ್ಸ್ಪೆಕ್ಟರ್ ವಿಕ್ರಮ್’, ‘ಗಂಡುಗಲಿ ಕುಮಾರ ರಾಮ’, ‘ಆಸೆಗೊಬ್ಬ ಮೀಸೆಗೊಬ್ಬ’ ಮುಂತಾದ ಚಿತ್ರದ ಹಾಡುಗಳನ್ನು ಪ್ರತಿಯೊಬ್ಬ ಕನ್ನಡಿಗರೂ ಒಂದಲ್ಲ ಒಂದು ಸಾರಿ ಗುನುಗೇ ಗುನುಗಿರುತ್ತೇವೆ.
ಇವರು ಬರೆದು ನಿರ್ದೇಶಿಸಿದ ಹಲವಾರು ನಾಟಕಗಳನ್ನೂ ನೋಡಿರುತ್ತೇವೆ.

ಜೊತೆಗೆ ‘ಅಂಜದ ಗಂಡು’, ‘ಕಿಂದರಿ ಜೋಗಿ’, ‘ಮುತ್ತೈದೆ ಭಾಗ್ಯ’, ‘ಅದೃಷ್ಟ ರೇಖೆ’, ‘ಪುಕ್ಸಟ್ಟೆ ಗಂಡ ಹೊಟ್ಟೆ ತುಂಬಾ ಉಂಡ’, ‘ಶುಕ್ರ ದೆಶೆ’, ‘ಭೂಲೋಕದಲ್ಲಿ ಯಮರಾಜ’ ಹೀಗೆ ಹಲವಾರು ಚಿತ್ರಗಳಿಗೆ ಸಂಭಾಷಣೆ ಬರೆದಿದ್ದನ್ನೂ ಗಮನಿಸಿರುತ್ತೇವೆ ಆದರೆ ಅವರು ಯಾರಿರಬಹುದು ಅನ್ನುವುದು ಕೆಲವೊಮ್ಮೆ ನಮ್ಮ ಗಮನಕ್ಕೆ ಬಂದಿರುವುದೇ ಇಲ್ಲ ಅದಕ್ಕೆ ಕಾರಣವೂ ಇರುವುದಿಲ್ಲ.

ಅವರು ಮತ್ಯಾರು ಅಲ್ಲ ಕನ್ನಡದ ಹಿರಿಯ ಸಾಹಿತಿಗಳು, ಸಂಭಾಷಣೆಗಾರರು, ನಿರ್ದೇಶಕರೂ ಆದ “ಶ್ರೀ ರಂಗ”ರವರು. ಇವರನ್ನು ‘ಭಂಗಿ ರಂಗ’ ಎಂದು ಸಹಾ ಕರೆಯುತ್ತಿದ್ದರೆಂದು ಅವರ ಬಾಯಿಂದಲೇ ಕೇಳಿ ತಿಳಿದೆವು.

ಈಗ್ಗೆ ಒಂದು ವಾರದ ಹಿಂದೆ ಕೆ.ಅರ್.ಪುರದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭಕ್ಕೆ ನಾನು ಕೂಡ ಅತಿಥಿಯಾಗಿ ಹೋಗಿದ್ದಾಗ ಆಕಸ್ಮಿಕವಾಗಿ ಇವರನ್ನು ಭೇಟಿಯಾಗುವ ಅವಕಾಶ ಸಿಕ್ಕಿತ್ತು. ವೇದಿಕೆಯ ಮುಂಭಾಗದಲ್ಲಿ ಮಗುವಿನಂತೆ ಕುಳಿತು ಅಲ್ಲಿ ನಡೆಯುತ್ತಿದ್ದ ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದ ಮುಗ್ಧ ನಗುವೊಂದು ನನ್ನನ್ನು ಸೆಳೆಯುತ್ತಿತ್ತು. ವೇದಿಕೆಯ ಮೇಲೆ ಕುಳಿತೇ ಅವರನ್ನು ಮೊಬೈಲಲ್ಲಿ ಸೆರೆ ಹಿಡಿಯುವ ಪ್ರಯತ್ನ ಮಾಡುತ್ತಿದ್ದೆ. ಪಕ್ಕದಲ್ಲಿ ಕುಳಿತಿದ್ದವರು ಅದನ್ನು ಗಮನಿಸಿ ಕಿವಿಯಲ್ಲಿ ನಿಧಾನವಾಗಿ ‘ಇವರಿಗೆ ಏನಾದರೂ ಸಹಾಯ ಮಾಡಬಹುದಾ? ಕನ್ನಡ ಚಿತ್ರರಂಗಕ್ಕೆ ಇವರ ಕೊಡುಗೆ ಅಪಾರ’ ಎಂದರು. ಅವರಾಡಿದ ಮಾತು ಯಾಕೋ ಮನಸಿನೊಳಗೆ ಕೊರೆಯಲು ಶುರುಮಾಡಿತು. ಸರಿ ಕಾರ್ಯಕ್ರಮ ಮುಗಿದಮೇಲೆ ಖುದ್ದಾಗಿ ಇವರನ್ನು ಭೇಟಿಯಾಗಿ ಮಾತನಾಡಿಸಲೇಬೇಕು ಎಂದು ಮನಸ್ಸಿನಲ್ಲೇ ನಿರ್ಧಾರ ಮಾಡಿ ಅವರನ್ನೇ ದಿಟ್ಟಿಸುತ್ತಾ ಕುಳಿತಿದ್ದೆ. ಪಾಪ ಇಳಿ ವಯಸ್ಸು ಬಹಳ ಹೊತ್ತು ಕುಳಿತುಕೊಳ್ಳಲು ಕಷ್ಟವಾಗಿಯೋ ಏನೋ ಶ್ರೀರಂಗರು ಅಲ್ಲಿಂದ ಮನೆಗೆ ಹೊರಟುಬಿಟ್ಟರು. ಕಾರ್ಯಕ್ರಮ ಮುಗಿಯಿತು ಅಲ್ಲಿದ್ದವರೊಬ್ಬರನ್ನು ಕೇಳಿದೆ ‘ ಶ್ರೀರಂಗರನ್ನು ಖುದ್ದು ಭೇಟಿಯಾಗಬಹುದೇ?’ ಅದಕ್ಕವರು ಹಿಂದೂ ಮುಂದೂ ನೋಡದೆ ಅವರದೇ ಕಾರಿನಲ್ಲಿ ಕೂರಿಸಿಕೊಂಡು ಮನೆಯ ಹತ್ತಿರ ಕರೆದುಕೊಂಡು ಹೋದರು.

ಕಾರು ಮನೆಯ ಗೇಟಿನ ಹತ್ತಿರ ಬಂದು ನಿಲ್ಲುತ್ತಿದ್ದಂತೆ ಪುಟ್ಟ ಮಗುವಿನ ಹಾಗೆ ಓಡೋಡಿ ಬಂದ ಶ್ರೀಗಳು ‘ಯಾರು?’ ಎಂದು ಕೇಳಬೇಕೆನ್ನುವ ಸಮಯಕ್ಕೆ ನನ್ನ ಜೊತೆಯಲ್ಲಿದ್ದವರನ್ನು ನೋಡಿ ಗುರುತು ಹಿಡಿದು ‘ಹೋ!!!!ನೀವಾ ಬನ್ನಿ ಬನ್ನಿ’ ಎಂದು ಗೇಟಿನ ಬಾಗಿಲು ತೆಗೆದು ಒಳ ಕರೆದರು.
ನಾನು ಗೇಟಿನ ಒಳಗೆ ನಡೆದವನೇ ಶೂ ಬಿಚ್ಚತೊಡಗಿದೆ ನನ್ನ ಜೊತೆಯಲ್ಲಿದ್ದವರು ತಡೆದು ‘ಮನೆ ಇದಲ್ಲ ಮೊದಲನೇ ಮಹಡಿ ಅಂದ್ರು’.
ವೇದಿಕೆಯ ಮೇಲೆ ನನ್ನ ಪಕ್ಕ ಕುಳಿತಿದ್ದವರು ಹೇಳಿದ ಮಾತು ಕಣ್ಣ ಮುಂದೆ ಹಾದು ಹೋಯಿತು. ಶ್ರೀ ರಂಗರ ಮುಖ ನೋಡಿ ಏನೋ ಸಂಕಟವಾಗೋಕೆ ಶುರುವಾಯ್ತು 86 ವರ್ಷದ ಹಿರಿಯ ಜೀವ ಹೀಗೆ ಸಣ್ಣ ಪುಟ್ಟ ಕೆಲಸಕ್ಕೂ ಹತ್ತಾರು ಬಾರಿ ಮೆಟ್ಟಿಲು ಹತ್ತಿ ಇಳಿಯುವುದೆಂದರೆ ತಮಾಷೆಯ ಮಾತಲ್ಲ ಅಂಥದ್ದರಲ್ಲಿ ಅಷ್ಟು ಚುರುಕಾಗಿ ಪಟ ಪಟ ಅಂತ ಮೆಟ್ಟಿಲು ಹತ್ತಿ ನಮ್ಮನ್ನು ಕರೆದೊಯ್ದು ಬಾಗಿಲು ತೆರೆದು ಮನೆಯೊಳಗೆ ಹೆಜ್ಜೆ ಇಡುತ್ತಲೇ ‘ತುಂಬಾ ಪುಟ್ಟ ಮನೆ ಏನು ಅಂದುಕೊಳ್ಳಬೇಡಿ’ ಅಂತ ಸೌಜನ್ಯದಿಂದ ನುಡಿದರು. ಮರು ಮಾತಾಡಿದರೆ ಅತಿಯಾಗಬಹುದೇನೋ ಅಂದುಕೊಂಡು ಸುಮ್ಮನೆ ಅವರ ಪಕ್ಕದಲ್ಲಿ ಕುಳಿತು ಎಲ್ಲವನ್ನೂ ಗಮನಿಸುತ್ತಿದ್ದೆ. ಪುಟ್ಟ ಗೂಡಿನ ಬಾಡಿಗೆ ಮನೆ ಅಂತ ತಿಳಿದುಕೊಳ್ಳಲು ಹೆಚ್ಚು ಸಮಯವೂ ಬೇಕಾಗಲಿಲ್ಲ. ಹೀಗೆ ಮಾತು ಸಾಗುತ್ತ ಸಾಹಿತ್ಯ,ಬರವಣಿಗೆ,ಸಿನೆಮಾ ಬಗ್ಗೆ ಅವರ ಮಾತುಗಳಲ್ಲೇ ಕೇಳುತ್ತಾ ಕುಳಿತಿದ್ದೆವು.

‘ಸುಮಾರು ಹದಿನೈದು ಇಪ್ಪತ್ತು ವರ್ಷಗಳಾಯ್ತು ಗಾಂಧಿನಗರದ ಕಡೆ ಮುಖಮಾಡಿ ಈಗ ಎಲ್ಲಾ ಬದಲಾಗಿರಬೇಕು,ನಾನು ಒಂದಷ್ಟು ವರ್ಷಗಳ ಕಾಲ ಚಿತ್ರರಂಗಕ್ಕೆ ದುಡಿದೆ ಈಗ ವಯೋ ಸಹಜ ಸಣ್ಣ ಪುಟ್ಟ ಕಾಯಿಲೆಗಳು ಕೆಲಸ ಮಾಡೋದು ಕಷ್ಟ. ಈಗಲೂ ಬರೆಯಬೇಕೆಂಬ ಆಸೆ ಬೆಟ್ಟದಷ್ಟಿದೆ ಆದರೆ ಏನು ಮಾಡೋದು ಕಾಲ ಬದಲಾಗಿದೆ ಈಗಿನವರ ಸಿನಿಮಾ ಅಭಿರುಚಿಯೇ ಬೇರೆ’ ಎಂದು ಹೇಳುತ್ತಾ ತಮ್ಮ ಮತ್ತು ಗಾಂಧಿನಗರದ ನಂಟಿನ ಬಗ್ಗೆ ಮಾತು ಸಾಗುತ್ತಿತ್ತು. ಅದೇ ಸಮಯಕ್ಕೆ ಶ್ರೀರಂಗರ ಧರ್ಮಪತ್ನಿಯವರೂ ಸಹ ನಾವು ಕುಳಿತಿದ್ದ ಜಾಗಕ್ಕೆ ಗೋಡೆಗೆ ಆತುಕೊಂಡಿದ್ದ ಒಬ್ಬರೇ ಓಡಾಡಬಹುದಾದ ಚಿಕ್ಕ ಅಡುಗೆ ಮನೆಯಿಂದ ಹೊರಬಂದು ನಮ್ಮನ್ನು ನೋಡಿ ಸಣ್ಣ ನಗೆಬೀರಿ ಅವರೂ ಮಾತಿಗಿಳಿದು ‘ಇಲ್ಲಿರುವುದು ನಾವಿಬ್ಬರೇ ಸದ್ಯಕ್ಕೆ ನಮ್ಮನ್ನು ನೋಡಿಕೊಳ್ಳುವವರು ಯಾರು ಇಲ್ಲ, ಮಗಳು ಅಲ್ಲಿ ಇಲ್ಲಿ ಆರ್ಕೆಷ್ಟ್ರಾದಲ್ಲಿ ಹಾಡಿ ಜೀವನ ನಡೆಸುತ್ತಿದ್ದಾಳೆ ಅವಳದು ಒಂಥರಾ ಕಷ್ಟ. ಅದರೊಳಗೆ ನಮ್ಮನ್ನು ನೋಡಿಕೊಳ್ಳುವುದಂತೂ ಕಷ್ಟ ಸಾಧ್ಯ ಹಾಗೂ ಹೀಗೂ ಕೊರೊನ ಸಂಕಷ್ಟದಲ್ಲೂ ಬದುಕಿ ಜೀವನ ನಡೆಸುತ್ತಾ ಇದ್ದೀವಿ’. ಅಂದರು.

ಹೀಗೆ ಮಾತು ಮುಂದುವರಿಸಿ ನಮ್ಮ ಜೊತೆಯಲ್ಲಿದ್ದವರಒಬ್ಬರನ್ನು ಕುರಿತು ‘ಇವರು ಇದೆ ಬಡಾವಣೆಯವರು ನಮ್ಮ ಕಷ್ಟಕ್ಕೆ ಮರುಗಿ ಆಗಾಗ ಬಂದು ತಮ್ಮ ಕೈಲಾದ ಸಹಾಯ ಮಾಡುತ್ತಿರುತ್ತಾರೆ. ಇಲ್ಲಿಯವರೆಗೂ ನಮ್ಮನ್ನು ಅವರ ತಂದೆ ತಾಯಿಯಂತೆ ನೋಡಿಕೊಳ್ಳುತ್ತಿದ್ದಾರೆ. ಸದ್ಯಕ್ಕೆ ಅವರೇ ನಮಗೆ ಮಕ್ಕಳು. ನಮಗೂ ತುಂಬಾ ವಯಸ್ಸಾಗಿದೆ ಹೊರಗೆ ಹೋಗಿ ದುಡಿಯುವ ಶಕ್ತಿಯಂತೂ ಇಲ್ಲ ಕೊನೆಯವರೆಗೂ ನಾವು ಇವರುಗಳಿಗೆ ಎಷ್ಟು ಕೃತಘ್ನತೆ ಹೇಳಿದರೂ ಸಾಲದು ‘ಎಂದು ತಮ್ಮ ಅಸಹಾಯಕತೆಯನ್ನು ತೋಡಿಕೊಳ್ಳುವಾಗ ದುಃಖ ಒತ್ತರಿಸಿ ಬಂದು ಸೆರಗಿನಿಂದ ನಮಗೆ ಗೊತ್ತಾಗದಂತೆ ಕಣ್ಣೇರು ಒರೆಸಿಕೊಳ್ಳುವ ಪ್ರಯತ್ನ ಮಾಡಿದರು. ನಮ್ಮ ಕಣ್ಣುಗಳೂ ಸಹ ಒದ್ದೆಯಾಗಿದ್ದವು ನಾವೂ ನೋಡಿಯೂ ನೋಡದವರಂತೆ ಭಾರವಾದ ಮನಸ್ಸಿನಿಂದ ಎಲ್ಲವನ್ನೂ ಕೇಳಿಸಿಕೊಳ್ಳುತ್ತಿದ್ದೆವು. ಹೀಗೆ ಮಾತಿನ ನಡುವೆ ಒಂದು ಧೀರ್ಘ ಮೌನ ಆ ನಂತರ ಮಾತು ಬದಲಿಸಲು ನಾನು ಶ್ರೀರಂಗರನ್ನು ‘ಒಂದು ಸೆಲ್ಫಿ ತೆಗೆದುಕೊಳ್ಳಲೇ?’ಎಂದು ಕೇಳಿದೆ. ಅದಕ್ಕವರು ಒಂದೇ ಮಾತಿನಲ್ಲಿ ‘ಬೇಡ’ ಅಂದುಬಿಡಬೇಕೆ. ನನಗೋ ಅವಮಾನವಾದಂತಾಗಿ ಮರುಮಾತಾಡದೆ ‘ಹೊರಡೋಣವೇ?’ ಎಂದು ಎದ್ದು ನಿಂತೆವು.

ಕೊನೆಗೆ ನಮ್ಮನ್ನು ಬೀಳ್ಕೊಡಲು ಬಾಗಿಲ ಬಳಿ ಬಂದ ಹಿರಿಯ ಜೀವಗಳು ನಿಮಗೆ ತಿನ್ನಲು ಕುಡಿಯಲು ಏನು ಮಾಡಿಕೊಡಲಿಲ್ಲವಲ್ಲ’ ಅಂದ್ರು.
ಹೃದಯ ತುಂಬಿ ಬಂತು ಮನೆ ಖಾಲಿಯಿದ್ದರೂ ಮನಸ್ಸು ಎಷ್ಟೊಂದು ತುಂಬಿದೆಯಲ್ಲಾ ಅನ್ನಿಸಿತು. ಈ ವಯಸ್ಸಿನಲ್ಲಿ ಇದೆಂತಹ ಶಿಕ್ಷೆ. ಒಂದು ಕಡೆ ವಯಸ್ಸು ಮಾಗಿ ದುಡಿಯಲಾರದೆ ಮತ್ತೊಬ್ಬರ ಮೇಲೆ ಅವಲಂಬಿತವಾಗಿ ಬದುಕಲಾರದ ಬದುಕು, ಮತ್ತೊಂದು ಕಡೆ ಮಗಳು ಇದ್ದು ಇರುವ ಎರೆಡು ಜೀವಗಳನ್ನು ನೋಡಿಕೊಳ್ಳಲೂ ಆಗದ ಅಸಹಾಯಕ ಸ್ಥಿತಿ. ದೇವರೇ ಮತ್ಯಾರಿಗೂ ಇಂತ ಕಷ್ಟ ಬಾರದಿರಲಿ ಎಂದು ಆ ಕ್ಷಣಕ್ಕೆ ಪ್ರಾರ್ಥಿಸುವುದು ಬಿಟ್ಟು ಬೇರೇನೂ ಮಾಡುವ ಸ್ಥಿತಿಯಲ್ಲಿರಲಿಲ್ಲ.

ಭಾರವಾದ ಮನಸ್ಸಲ್ಲಿ ಹೊರಬಂದವನೇ ಕುತೂಹಲಕ್ಕೆ ಕೇಳಿದೆ ‘ಯಾಕೆ ಸೆಲ್ಫಿ ಕೇಳಿದರೆ ಒಂದೇ ಮಾತಲ್ಲಿ ಬೇಡ ಅಂದರಲ್ಲ’.
ಅದಕ್ಕವರ ಉತ್ತರ ‘ಶ್ರೀ ರಂಗರು ತುಂಬಾ ಸ್ವಾಭಿಮಾನಿ ಇವತ್ತಿನ ಈ ಕ್ಷಣದವರೆಗೂ ಯಾರಲ್ಲೂ ಕೈಚಾಚಿ ಒಂದು ಸಣ್ಣ ಸಹಾಯವನ್ನೂ ಬೇಡಿದವರಲ್ಲ ನಾವೇ ಅವರಿಗೆ ಒತ್ತಾಯ ಮಾಡಿ ನಾವು ನಿಮ್ಮ ಮಕ್ಕಳಂತೆ ಅಲ್ಲವೇ ಎಂದು ತಿಳಿ ಹೇಳಿ ಸಣ್ಣ ಪುಟ್ಟ ಸಹಾಯ ಮಾಡುತ್ತಿರುತ್ತೇವೆ. ಹೀಗೆ ಯಾರೋ ಹೊರಗಿನಿಂದ ಬಂದು ಸಹಾಯ ಮಾಡುವ ನೆಪದಲ್ಲಿ ಫೋಟೋ ತೆಗೆದುಕೊಂಡು ನಮ್ಮ ಈಗಿನ ಸ್ಥಿತಿಯನ್ನು ಜನಕ್ಕೆ ತೋರಿಸಿ ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ತಂದುಬಿಡುತ್ತಾರೋ ಅನ್ನುವ ಭಯ ಅವರಿಗೆ’ ಅಂದರು. ಆ ಕ್ಷಣದಲ್ಲಿ ನನ್ನ ನೆನಪಿಗೆ ಬಂದಿದ್ದು ‘ಕಸ್ತೂರಿ ನಿವಾಸದ’ ಕೊನೆಯ ದೃಶ್ಯ.

ಇಷ್ಟು ಬರೆದು ಶ್ರೀರಂಗ‌ಅವರಿಗೆ ಆತ್ಮೀಯರು ನೆರವಾಗುವಂತೆ ಮನವಿ‌ಮಾಡಿದ್ದಾರೆ. ಹಾಗೆಯೇ ಬ್ಯಾ‌ಂಕ್ ವಿವರ ಕೂಡ ಕೊಟ್ಟಿದ್ದಾರೆ.ಅದರ ವಿವರ ಇಂತಿದೆ.

Name- sree ranga
state bank of india
Chandar layout branch
Ifsc SBIN 0004051

A/c no 64145797446

ಸಪರ್ಕಕ್ಕೆ, ಗಿರೀಶ್ – 98866-40906.

Categories
ಸಿನಿ ಸುದ್ದಿ

ಮುಖ ಮುಚ್ಚಿಕೊಂಡು ಬೀದಿ ಬೀದಿ ತಿರುಗಿದ ಬುಲ್‌ ಬುಲ್‌ ಬೆಡಗಿ‌!

 

ವೀರಂ ಚಿತ್ರಕ್ಕಾಗಿ ತಂಡದ ಜೊತೆ ಬೀದಿಗಿಳಿದರು ಡಿಂಪಲ್‌ ರಚಿತಾ

 

ಕನ್ನಡದ ನಟಿ ರಚಿತಾರಾಮ್‌ ಮುಖಕ್ಕೆ ಕೆಂಪು ವಸ್ತ್ರ ಕಟ್ಟಿಕೊಂಡು ಬೀದಿ ಬೀದಿ ಸುತ್ತುತ್ತಿದ್ದಾರೆ! ಅರೇ, ಹೀಗಂದಾಕ್ಷಣ ಇನ್ನೇನೋ ಕಲ್ಪನೆ ಮಾಡಿಕೊಳ್ಳಬೇಡಿ.

ರಚಿತಾರಾಮ್‌ ಬೀದಿ ಸುತ್ತಿರೋದು ನಿಜ. ಹಾಗಂತ ಇನ್ನೇನೋ ಕಾರಣಕ್ಕೆ ಅವರು ಬೀದಿ ಸುತ್ತಿಲ್ಲ. ಅವರು “ವೀರಂ” ಚಿತ್ರಕಕಾಗಿ ಕಾಸ್ಟ್ಯೂಮ್‌ ಖರೀದಿಸಲು  ಗುರುವಾರ ಕಮರ್ಷಿಯಲ್‌ ಸ್ಟ್ರೀಟ್‌ ಕಡೆ ಓಡಾಡಿದ್ದಾರೆ. ಈ ಬಗ್ಗೆ ವಿಡಿಯೋವೊಂದರಲ್ಲಿ ಮಾತನಾಡಿರುವ ರಚಿತಾರಾಮ್‌, “ನಾವು ಕಮರ್ಷಿಯಲ್‌ ಸ್ಟ್ರೀಟ್‌ಗೆ ಬಂದಿದ್ದೇವೆ. ಇದೊಂದು ಹೊಸ ಅನುಭವ. ಯಾರೂ ಕೂಡ ಕಂಡು ಹಿಡಿಯಲು ಆಗುತ್ತಿಲ್ಲ. ಎಲ್ಲರೂ ಮಾಸ್ಕ್‌ ಹಾಕಿಕೊಂಡಿದ್ದೇವೆ. ಇಡೀ ತಂಡ ನಮ್ಮೊಂದಿಗೆ ಇದೆ. ಖದರ್‌ ಕುಮಾರ್‌ ನಿರ್ದೇಶಕರು ನಮ್ಮ ಜೊತೆ ಇದ್ದಾರೆ.

ಕಮರ್ಷಿಯಲ್‌ ಸ್ಟ್ರೀಟ್‌ನಲ್ಲಿ ಓಡಾಟ ನಡೆಸಿದ ರಚಿತಾರಾಮ್‌, ತಮಗೆ ಇಷ್ಟವಾದ, ಕಾಸ್ಟ್ಯೂಮ್‌ ಖರೀದಿಸಿದ್ದಾರೆ.  ಅವರು ಸುತ್ತಿದ ವಿಡಿಯೋ ಸದ್ಯಕ್ಕೆ ಹರಿದಾಡುತ್ತಿದೆ.

 

 

Categories
ಸಿನಿ ಸುದ್ದಿ

ಚಿತ್ರಮಂದಿರ ಅನ್ನೋದು  ದೇವಾಲಯ ಅಂದ್ರು ಅಭಿನಯ ಚಕ್ರವರ್ತಿ

 ಐರಾವನ್ ಚಿತ್ರದ ಟೀಸರ್ ಲಾಂಚ್ ಮಾಡಿದ ಕಿಚ್ಚ ಸುದೀಪ್

ಸಿನಿಮಾ ಮೊದಲು ಚಿತ್ರಮಂದಿರಕ್ಕೆ ಬರಬೇಕು, ಎಲ್ಲೋ ಕಳೆದು ಹೋಗಬೇಡಿ. ಶ್ರಮಕ್ಕೆ ಬೆಲೆ ಸಿಗಬೇಕೆಂದರೆ, ಸಿನಮಾ ಚಿತ್ರಮಂದಿರ ಅನ್ನೋ ದೇವಸ್ಥಾನ ಪ್ರವೇಶಿಸಲೇಬೇಕು….

-ಇದು ನಟ ಕಿಚ್ಚ ಸುದೀಪ್‌ ಅವರ ಮಾತು, ಸಿನಿಮಾ ಮಂದಿಗೆ ಮಾಡಿದ ಮನವಿ. ಜೆಕೆ ಅಲಿಯಾಸ್‌ ಕಾರ್ತಿಕ್‌ ಜಯರಾಂ ಅಭಿನಯ ಹಾಗೂ ನಿರಂತರ ಪ್ರೊಡಕ್ಷನ್‌ ಬ್ಯಾನರ್‌ ನಲ್ಲಿ ನಿರ್ಮಾಣವಾದ ʼ ಐರಾವನ್‌ʼ ಚಿತ್ರದ ಟೀಸರ್‌ ಲಾಂಚ್‌ ಸಂದರ್ಭದಲ್ಲಿ ಮಾತನಾಡಿದ ಸುದೀಪ್‌,  ಸಿನಿಮಾ ಅಂದ್ರೇನೆ ಹಾಗೆ. ಸಿನಿಮಾ ಅನ್ನೋದು ಮೊದಲು ಚಿತ್ರಮಂದಿರಕ್ಕೆ ಬರಬೇಕು, ಎಲ್ಲೋ ಕಳೆದು ಹೋಗಬೇಡಿ, ಶ್ರಮಕ್ಕೆ ಬೆಲೆ ಸಿಗಬೇಕು, ಒಂದು ಕಾಲದಲ್ಲಿ ಚಿತ್ರಮಂದಿರಕ್ಕೆ ಸಿನಿಮಾ ಬಂದರೆ ಸಾಕುಎನ್ನುತ್ತಿದ್ದೆವು. ಇದೀಗ ಚಿತ್ರಮಂದಿರ ಸಿಕ್ಕರೆ ಸಾಕಪ್ಪ ಎಂಬಂತಾಗಿದೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.

ಟೀಸರ್ ರಿಲೀಸ್ ಕಾರ್ಯಕ್ರಮದಲ್ಲಿ ಮೊದಲಿಗೆ ಮಾತನಾಡಿದ ನಟ ಜೆಕೆ ಸಿನಿಮಾರಂಗದ ಆರಂಭದ ದಿನಗಳನ್ನು ನೆನಪಿಸಿಕೊಂಡರು. ‘. ಕಷ್ಟ ಇರಲಿ, ಸುಖ ಇರಲಿ ಸುದೀಪ್  ಅವರು ಮೊದಲಿನಿಂದಲೂ ಸುದೀಪ್‌ ಜತೆಗಿದ್ದಾರೆ. ಇನ್ನು ಈ ಸಿನಿಮಾ ಬಗ್ಗೆ ಹೇಳುವುದಾದರೆ, ಕೋವಿಡ್ ಸಮಯದಲ್ಲಿ ಸಿನಿಮಾ ಮಾಡಲು ಯೋಚನೆ ಮಾಡಬೇಕು. ನಿರಂತರ್ ಅವರು ಅಷ್ಟೇ ಬೇಗ ಈ ಸಿನಿಮಾ ವನ್ನು ಮುಗಿಸಿದ್ದಾರೆ ಎಂದರು.

ಅದೇ ರೀತಿ ಚಿತ್ರದಲ್ಲಿ ನಾಯಕಿಯಾಗಿ ಅದ್ವಿತಿ ಶೆಟ್ಟಿ ಜೆಕೆಗೆ ಜೋಡಿಯಾಗಿದ್ದಾರೆ. ವಿವೇಕ್‌ ಹಾಗೂ  ಅಭಯ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಇಬ್ಬರೂ ತಮ್ಮ ಅನುಭವ ವನ್ನು ಹಂಚಿಕೊಂಡರು. ಅದೇ ರೀತಿ ನಿರ್ದೇಶಕ ರಾಮ್ಸ್ ರಂಗ ಸಿನಿಮಾದ ಎಳೆ ಬಿಚ್ಚಿಟ್ಟರು. ಇದು ನನ್ನ ಮೊದಲ ಸಿನಿಮಾ. ಈ ಹಿಂದೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದೆ. ಇದೀಗ ಪೂರ್ಣ ಪ್ರಮಾಣದ ಸಿನಿಮಾ ಮಾಡಿದ್ದೇನೆ. ಐರಾವನ್ ಎಂದರೆ, ಅರ್ಜುನನ ಮೂರನೇ ಮಗ ಐರಾವನ್. ಅದು ರಾಕ್ಷಸ ರೂಪ. ಆ ರೂಪವನ್ನು ಈಗಿನ ಕಾಲಘಟ್ಟಕ್ಕೆ ತಕ್ಕಂತೆ ಬದಲಿಸಿಕೊಂಡಿದ್ದೇವೆ. ಆ ಕುತೂಹಲವನ್ನು ಸಿನಿಮಾದಲ್ಲಿಯೇ ನೋಡಬೇಕೆಂದರು.

ನಿರ್ಮಾಪಕ ನಿರಂತರ, ಹುಚ್ಚ ಸಿನಿಮಾದಿಂದ ಸುದೀಪ್ ಅವರನ್ನು ನೋಡಿಕೊಂಡು ಬಂದಿದ್ದೇವೆ. ಜೆಕೆ ಅವರ ಮೂಲಕ ಅವರನ್ನು ಭೇಟಿ ಮಾಡಿಬಂದೆವು. ಈ ಕಾರ್ಯಕ್ರಮಕ್ಕೆ ಬಂದು ಟೀಸರ್ ಲಾಂಚ್ ಮಾಡಿದ್ದಕ್ಕೆ ಅವರಿಗೆ ಧನ್ಯವಾದ. ಇಡೀ ತಂಡದಲ್ಲಿ ಎಲ್ಲರೂ ಯುವಕರೇ. ಯುವಕರನ್ನು ಗುರುತಿಸಬೇಕೆಂಬ ಉದ್ದೇಶದಿಂದ ಸಿನಿಮಾರಂಗಕ್ಕೆ ಬಂದಿದ್ದೇನೆ ಎಂದರು.

ಅದೇ ರೀತಿ ನಿರ್ದೇಶಕರಾದ ಹರಿ ಸಂತೋಷ್, ಭರ್ಜರಿ ಚೇತನ್, ರಜತ್ ರವಿ ಶಂಕರ್, ನಟ ರಾಜವರ್ಧನ್, ವಿಕ್ಕಿ ವರುಣ್, ರಾಕ್​ಲೈನ್ ವಂಕಟೇಶ್ ಪುತ್ರ ಯತೀಶ್ ವೆಂಕಟೇಶ್ ಸೇರಿ ಹಲವರು ಆಗಮಿಸಿ ತಂಡಕ್ಕೆ ಶುಭ ಹಾರೈಸಿದರು.   ಇನ್ನು ತಾಂತ್ರಿಕ ವರ್ಗದಲ್ಲಿ ಎಸ್ ಪ್ರದೀಪ್ ವರ್ಮಾ ಅವರ ಸಂಗೀತ, ದೇವೇಂದ್ರ ಛಾಯಾಗ್ರಹಣ, ಕೆ.ಎಂ ಪ್ರಕಾಶ್ ಸಂಕಲನ, ಹರಿ ಸಂತೋಶ್ ಸಾಹಿತ್ಯ, ಕಾಂತರಾಜು ಕಡ್ಡಿಪುಡಿ ಸಂಭಾಷಣೆ ಬರೆದಿದ್ದಾರೆ. ಸಾಯಿ ಚರಣ್ ಮತ್ತು ಆರ್ ಲೋಹಿತ್ ನಾಯ್ಕ್​ ಸಹ ನಿರ್ದೇಶನ ಮಾಡಿದ್ದಾರೆ. ಕುಂಗ್ ಫು ಚಂದ್ರು ಸಾಹಸ ನಿರ್ದೇಶನವಿದೆ.

Categories
ಸಿನಿ ಸುದ್ದಿ

ಕನ್ನಡ ಹುಡುಗನ ಹಿಂದಿ ವೆಬ್‌ಸೀರೀಸ್‌ – ಮೇರಿ ಪಡೋಸಾನ್‌ಗೆ ಭರಪೂರ ಮೆಚ್ಚುಗೆ

ಒಂದೇ ದಿನ ಎಪಿಸೋಡ್‌ಗೆ ದಾಖಲೆ ವೀಕ್ಷಣೆ

 

ಭಾರತೀಯ ಚಿತ್ರರಂಗದಲ್ಲಿ ಕನ್ನಡ ಚಿತ್ರರಂಗದ ಬಗ್ಗೆ ಒಂದಷ್ಟು ನಿರೀಕ್ಷೆ ಹೆಚ್ಚಿರುವುದು ಗೊತ್ತೇ ಇದೆ. ಬಾಲಿವುಡ್‌, ಟಾಲಿವುಡ್‌, ಕಾಲಿವುಡ್‌ ಮಾಲಿವುಡ್‌ ಕೂಡ ಈಗ ಕನ್ನಡ ಚಿತ್ರರಂಗದ ಕಡೆ ತಿರುಗಿ ನೋಡುವಂತಾಗಿದೆ. ಈಗಾಗಲೇ ಕನ್ನಡ ಸಿನಿಮಾಗಳು ಜೋರು ಸದ್ದು ಮಾಡಿರುವುದೇ ಪರಭಾಷಿಗರೂ ಕನ್ನಡದತ್ತ ತಿರುಗುತಿರುವುದು ಕಾರಣ. ಕನ್ನಡದ ಅನೇಕ ನಿರ್ದೇಶಕರು, ನಟ,ನಟಿಯರು ಪರಭಾಷೆಯಲ್ಲಿ ಸದ್ದು ಮಾಡುತ್ತಿದ್ದಾರೆ. ಆ ಸಾಲಿಗೆ ಕನ್ನಡದ ಯುವ ನಿರ್ದೇಶಕರೊಬ್ಬರು ಬಾಲಿವುಡ್‌ನಲ್ಲಿ ಎಂಟ್ರಿಕೊಟ್ಟು, ಸೈ ಎನಿಸಿಕೊಂಡಿದ್ದಾರೆ.


ಹೌದು, ಧಾರಾವಾಡ ಮೂಲದ ಮಂಜು ನಂದನ್‌ ಈಗ ಬಾಲಿವುಡ್‌ನಲ್ಲಿ ವೆಬ್‌ಸೀರೀಸ್‌ ಮಾಡಿದ್ದಾರೆ. ಆ ಹೊಸ ವೆಬ್‌ಸೀರೀಸ್‌ಗೆ “ಮೇರಿ ಪಡೋಸಾನ್”‌ ಎಂದು ನಾಮಕರಣ ಮಾಡಲಾಗಿದೆ. ಸದ್ಯಕ್ಕೆ ಈ ವೆಬ್‌ ಸೀರೀಸ್‌ ಅವರ ಯೂಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಿದ್ದು, ಹತ್ತು ಎಪಿಸೋಡ್‌ಗಳ ಪೈಕಿ ಒಂದು ಎಪಿಸೋಡ್‌ ಬಿಡುಗಡೆ ಮಾಡಲಾಗಿದೆ. ಈಗಾಗಲೇ ಸಾಕಷ್ಟು ಮೆಚ್ಚುಗೆಯನ್ನೂ ಪಡೆದುಕೊಂಡಿದೆ. ತಮ್ಮ ನಿರ್ದೇಶನದ ಹಿಂದಿ ವೆಬ್‌ಸೀರೀಸ್‌ ಕುರಿತು “ಸಿನಿಲಹರಿ” ಜೊತೆ ಮಾತನಾಡಿದ ಮಂಜುನಂದನ್, “ಇದೊಂದು ಲವ್‌ ಕಾಮಿಡಿ ಜಾನರ್.‌ ಈಗಿನ ವೆಬ್‌ಸೀರೀಸ್‌ಗೆ ತಕ್ಕಂತಹ ಕಥೆಯನ್ನಿಟ್ಟುಕೊಂಡು ಮಾಡಲಾಗಿದೆ. ಈ ವೆಬ್‌ಸೀರೀಸ್‌ನಲ್ಲಿ ಬಾಲಿವುಡ್‌ ಕಲಾವಿದರು ಕಾಣಿಸಿಕೊಂಡಿದ್ದಾರೆ. ಮುಸ್ಕಾನ್‌ ಶರ್ಮ, ವಿಹಾನ್‌ ಗೋಯೆಲ್‌, ಸ್ವಾತಿ ಶರ್ಮ, ಜಸ್ವೀಲ್‌ ಅರೋರ ಇತರರು ನಟಿಸಿದ್ದಾರೆ.

ಈಗಾಗಲೇ ಬಿಡುಗಡೆಯಾಗಿರುವ ಈ ವೆಬ್‌ಸೀರೀಸ್‌ ಕೇವಲ ಒಂದು ಎಪಿಸೋಡ್‌ ಒಂದೇ ದಿನದಲ್ಲಿ ಎರಡು ಲಕ್ಷ ವೀಕ್ಷಣೆ ಪಡೆದುಕೊಂಡಿದೆ. ಇನ್ನು, ವಿಹಾನ್‌ ಗೋಯೆಲ್‌ ಕಥೆಯ ಜೊತೆಗೆ ಸಂಕಲನವನ್ನೂ ಮಾಡಿದ್ದಾರೆ. ನಾನು ನಿರ್ದೇಶನದ ಜೊತೆಗೆ ಪ್ರೊಡಕ್ಷನ್‌ನಲ್ಲೂ ಕಾಣಿಸಿಕೊಂಡಿದ್ದಾರೆ. ಶಿವು ನವಲಿಮಠ್‌ ಮತ್ತು ಪೌಲ್‌ ಕ್ಯಾಮೆರಾ ಹಿಡಿದಿದ್ದಾರೆ.


ಈ ವೆಬ್‌ಸೀರೀಸ್‌ ನಿರ್ದೇಶಕ ಮಂಜುನಂದನ್‌ ಬಗ್ಗೆ ಹೇಳುವುದಾದರೆ, ಈ ಮೊದಲು ಹಿಂದಿಯಲ್ಲಿ ಆಲ್ಬಂ ಸಾಂಗ್‌ ಮಾಡಿದ್ದರು. ನಂತರದ ದಿನಗಳಲ್ಲಿ, ಅಲ್ಲೇ ಒಂದಷ್ಟು ಮಂದಿಯ ಪರಿಚಯವಾಗಿ, ಬಾಲಿವುಡ್‌ ಜನರ ಸಂಪರ್ಕ ಬೆಳೆಸಿಕೊಂಡು ಈ ವೆಬ್‌ಸೀರೀಸ್‌ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನೊಂದು ವಿಶೇಷವೆಂದರೆ, ಈ ವೆಬ್‌ಸೀರೀಸ್‌ ಅನ್ನು, ಕನ್ನಡದಲ್ಲೂ ಮಾಡುವ ಯೋಚನೆ ನಿರ್ದೇಶಕರಿಗಿದೆ. ಅಂದಹಾಗೆ, ಈ “ಮೇರಿ ಪಡೋಸಾನ್” ವೆಬ್‌ಸೀರೀಸ್‌ ಮಹಾರಾಷ್ಟ್ರದ ಅಂಬೋಲಿಯ ರೆಸಾರ್ಟ್‌ವೊಂದರಲ್ಲಿ ಹದಿನೈದು ದಿನಗಳ ಕಾಲ ಚಿತ್ರೀಕರಿಸಲಾಗಿದೆ. ಇನ್ನೊಂದು ವಿಶೇಷವೆಂದರೆ, ಕಲಾವಿದರನ್ನು ಹೊರತುಪಡಿಸಿ ಈ ವೆಬ್‌ಸೀರೀಸ್‌ನಲ್ಲಿ ಬಹುತೇಕ ಕನ್ನಡಿಗರೇ ಸೇರಿ ಕೆಲಸ ಮಾಡಿರುವುದು ವಿಶೇಷ.

Categories
ಸಿನಿ ಸುದ್ದಿ

ಸಂತೋಷ್ ನಿರ್ದೇಶನದ ‘ಕ್ಯಾಂಪಸ್ ಕ್ರಾಂತಿ’ಗೆ ಪವರ್ ಸ್ಟಾರ್ ಬೆಂಬಲ

ಗಡಿಭಾಗದ ಕ್ರೈಮ್‌ ಥ್ರಿಲ್ಲರ್‌ ಕತೆಯಲ್ಲಿದೆ ಕನ್ನಡದೊಂದಿಗಿನ ಸೆಂಟಿಮೆಂಟ್ 

ಯುವ ನಿರ್ದೇಶಕ ಸಂತೋಷ್‌ ಕುಮಾರ್‌ ನಿರ್ದೇಶನದ “ಕ್ಯಾಂಪಸ್ ಕ್ರಾಂತಿ’ ಚಿತ್ರವೀಗ ಚಿತ್ರೀಕರಣ ಮುಗಿಸಿ, ಪೋಸ್ಟ್‌ ಪ್ರೊಡಕ್ಷನ್‌ ಹಂತಕ್ಕೆ ಕಾಲಿಟ್ಟಿದೆ. ಈ ಹಂತದಲ್ಲಿ ಚಿತ್ರತಂಡ ಟೈಟಲ್‌ ಲಾಂಚ್‌ ಮೂಲಕ ಸದ್ದು ಮಾಡಿದೆ. ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಟೈಟಲ್‌ ಲಾಂಚ್‌ ಮಾಡುವ ಮೂಲಕ ಚಿತ್ರ ತಂಡಕ್ಕೆ ಶುಭ ಕೋರಿದ್ದಾರೆ.

ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ರವಿಶಂಕರ್‌ ಗುರೂಜಿ ಅವರ ಆರ್ಟ್‌ಆಫ್‌ ಲಿವಿಂಗ್‌ ಆಶ್ರಮದಲ್ಲಿ ಇತ್ತೀಚೆಗೆ ಪುನೀತ್‌ ರಾಜ್‌ಕುಮಾರ್‌ ಅವರು ‘ಯುವರತ್ನ’ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲೇ ಚಿತ್ರತಂಡ ಅಲ್ಲಿಗೆ ಭೇಟಿ ನೀಡಿತ್ತು. ಆ ಸಂದರ್ಭದಲ್ಲಿ ʼಕ್ಯಾಂಪಸ್‌ ಕ್ರಾಂತಿʼ ಚಿತ್ರದ ಟೈಟಲ್‌ ಪೋಸ್ಟರ್‌ ಲಾಂಚ್‌ ಮಾಡುವ ಮೂಲಕ ಶುಭ ಕೋರಿದರು.

ನಿರ್ದೇಶಕ ಸಂತೋಷ್ ಕುಮಾರ್

“ಬಿಂದಾಸ್‌ ಗೂಗ್ಲಿʼ ಹಾಗೂ ʼಸ್ಟೂಡೆಂಟ್ಸ್‌ʼ ಚಿತ್ರಗಳ ನಂತರವೀಗ ಸಂತೋಷ್‌ ಕುಮಾರ್‌ ಆಕ್ಷನ್‌ ಕಟ್‌ ಹೇಳಿದ ಮೂರನೇ ಚಿತ್ರ  “ಕ್ಯಾಂಪಸ್‌ ಕ್ರಾಂತಿʼ. ಚಿತ್ರದ ನಿರ್ದೇಶನ ಜತೆಗೆ ಸಂತೋಷ್ ಹಿಂದಿಯಲ್ಲೂ ಒಂದು ಆಲ್ಬಂ ಸಾಂಗ್ ವೊಂದನ್ನು ನಿರ್ದೇಶಿಸಿ, ಹೊರ ತಂದಿದ್ದಾರೆ. ಅದರ ಜತೆಗೀಗ ಲಾಕ್ ಡೌನ್ ಸಮಯದಲ್ಲಿ ಕತೆ, ಚಿತ್ರಕತೆ ಬರೆದು ‘ಕ್ಯಾಂಪಸ್ ಕ್ರಾಂತಿ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

ಚಿತ್ರದ ಶೀರ್ಷಿಕೆಯೇ ಹೇಳುವ ಹಾಗೆ ಇದು ಕಾಲೇಜು ಸುತ್ತು ನಡೆಯುವ ಕತೆ. ಹಾಗಂತ ಕನ್ನಡ ಚಿತ್ರರಂಗಕ್ಕೆ ಇಂತಹ ಕತೆಗಳೇನು ಹೊಸದಲ್ಲ. ಕಾಲೇಜು ಲವ್ ಸ್ಟೋರಿ ಕತೆಗಳು ಬೆಳ್ಳಿತೆರೆಯಲ್ಲಿ ಬೇಕಾದಷ್ಟು ಬಂದಿವೆ. ಹಾಗೆ ನೋಡಿದರೆ, ಪ್ರತಿ ಸಿನಿಮಾದಲ್ಲೂ ಇಂತಹ ಕಾಲೇಜು ಕತೆ ಇರುವುದು ಸರ್ವೇ ಸಾಮಾನ್ಯ. ಆದರೆ “ಕ್ಯಾಂಪಸ್ ಕ್ರಾಂತಿ’ ವಿಭಿನ್ನ ಕತೆಯ ಚಿತ್ರ. ಆ ಕತೆ ಹೇಗೆ ವಿಭಿನ್ನ ಅಂತ ಹೇಳ್ತಾರೆ ಕೇಳಿ ನಿರ್ದೇಶಕ ಸಂತೋಷ್ ಕುಮಾರ್.

ಇದು ನಾನು ಲಾಕ್ ಡೌನ್ ಸಮಯದಲ್ಲಿ ಬರೆದ ಕತೆ. ಕರ್ನಾಟಕ ಹಾಗು ಮಹಾರಾಷ್ಟ್ರ ಗಡಿ ಭಾಗದ ಕಾಲೇಜ್ ಒಂದರಲ್ಲಿ ನಡೆದಿದ್ದು. ನಿಜವಾಗಿಯೂ ನಡೆದಿದ್ದು. ಆ ಕಾಲೇಜ್ ನಲ್ಲಿ ತುಂಬಾ ವರ್ಷಗಳಿಂದ ಕನ್ನಡ ರಾಜ್ಯೋತ್ಸವ ನಡೆಯುವುದಿಲ್ಲ. ಅದಕ್ಕೆ ಕಾರಣ ಯಾಕೆ ಎನ್ನುವುದು ಸಸ್ಪೆನ್ಸ್. ಆದರೆ ಅಲ್ಲಿ ಒಂದಷ್ಟು ಕೊಲೆಗಳು ನಡೆಯುತ್ತವೆ. ಆ ಕೊಲೆಗಳಿಗೂ, ರಾಜ್ಯೋತ್ಸವ ನಡೆಯದಿರುವುದಕ್ಕೂ ಸಂಬಂಧ ಇದೀಯಾ? ಇದ್ದರೆ ಅದಕ್ಕೆ ಕಾರಣ ಏನು? ಅದರ ಸುತ್ತ ನಡೆಯುವ ಕತೆ ಇದು. ಇದು ಸಸ್ಪೆನ್ಸ್ ಥ್ರಿಲ್ಲರ್ ಕತೆ. ಅದರ ಜತೆಗೆ ಒಂದು ಕ್ಯೂಟ್ ಪ್ರೇಮ ಕತೆಯೂ ಇದೆ’

– ಸಂತೋಷ್ ಕುಮಾರ್, ನಿರ್ದೇಶಕ

ಬಹುತೇಕ ಹೊಸಬರೇ ಚಿತ್ರದ ಕಲಾವಿದರು. ಒಂದೆರೆಡು ಚಿತ್ರಗಳಲ್ಲಿ ಅಭಿನಯಿಸಿದ ಅನುಭವ ಇರುವ ಆರ್ಯ ಹಾಗೂ ಅಲಂಕಾರ್‌ ಈ ಚಿತ್ರಕ್ಕೆ ಹೀರೋ ಆಗಿದ್ದಾರೆ. ಹಾಗೆಯೇ ಈಶಾನಾ ಹಾಗೂ ಆರತಿ ಪಡುಬಿದ್ರಿ ನಾಯಕಿಯರು. ಅವರೊಂದಿಗೆ ವಾಣಿಶ್ರೀ, ಹನುಮಂತೇ ಗೌಡ್ರು ಸೇರಿದಂತೆ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ. ಕೊರೋನಾ ಆತಂಕದ ಮಧ್ಯೆಯೇ ಚಿತ್ರ ತಂಡ ಸೂಕ್ತ ರಕ್ಷಣೆಯೊಂದಿಗೆ ೪೫ ದಿನಗಳ ಕಾಲದ ಚಿತ್ರೀಕರಣ ಮುಗಿಸಿಕೊಂಡು ಬಂದಿದೆ. ಹಾಗೆಯೇ ರೀ ರೆಕಾರ್ಡಿಂಗ್‌ ಜತೆಗೆ ಪೋಸ್ಟ್‌ ಪ್ರೊಡಕ್ಷನ್‌ ಕೆಲಸವೂ ಮುಗಿಸಿಕೊಂಡು ಈಗ ಆಡಿಯೋ ರಿಲೀಸ್‌ ಗೆ ಪ್ಲಾನ್‌ ಮಾಡಿಕೊಂಡಿದೆ.

 

ಹೊಸ ವರ್ಷ ಜನವರಿ ತಿಂಗಳಲ್ಲಿ ಆಡಿಯೋ ಲಾಂಚ್‌ ಮಾಡಲು ತಯಾರಿ ನಡೆಸಿದೆ. ಹಾಗೆಯೇ ಚಿತ್ರದ ರಿಲೀಸ್‌ ಗೂ ಸಿದ್ದತೆ ನಡೆದಿದೆ. ಎಲ್ಲವೂ ಅಂದುಕೊಂಡಂತಾದರೆ ಫೆಬ್ರವರಿ ಅಥವಾ ಮಾರ್ಚ್‌ ತಿಂಗಳಲ್ಲಿ ಚಿತ್ರ ರಿಲೀಸ್‌ ಗ್ಯಾರಂಟಿ ಎನ್ನುತ್ತಾರೆ ನಿರ್ದೇಶಕ ಸಂತೋಷ್ ಕುಮಾರ್.‌ ಚಿತ್ರಕ್ಕೆ ವಿ. ಮನೋಹರ್‌ ಸಂಗೀತ ನೀಡಿದ್ದಾರೆ. ಪಿಕೆಎಚ್‌ ದಾಸ್‌ ಛಾಯಾಗ್ರಣವಿದೆ. ಪ್ಯಾಷನ್‌ ಮೂವೀ ಮೇಕರ್ಸ್‌ ಮೂಲಕ ಸಂತೋಷ್‌ ಅವರೇ ಚಿತ್ರದ ನಿರ್ಮಾಣಕ್ಕೆ ಬಂಡವಾಳ ಹಾಕಿದ್ದಾರೆ. ನಿರ್ದೇಶಕರಾಗಿ ಅವರಿಗಿದು ಮೂರನೇ ಚಿತ್ರ. ಹಾಗೆಯೇ ನಿರ್ಮಾಪಕರಾಗಿ ಎರಡನೇ ಚಿತ್ರ. ಈ ಸಲ ಸಕ್ಸಸ್‌ ಪಡೆಯಲೇ ಬೇಕು ಎನ್ನುವ ಉತ್ಸಾಹದಲ್ಲಿದ್ದಾರೆ ಸಂತೋಷ್.‌ ಆಲ್‌ ದಿ ಬೆಸ್ಟ್‌ ಸಂತೋಷ್.

Categories
ಸಿನಿ ಸುದ್ದಿ

ಥಿಯೇಟರ್‌ಗೆ ಶೇ.100 ಅವಕಾಶ ಕೊಡಿ – ಸರ್ಕಾರಕ್ಕೆ ನೆನಪಿರಲಿ ಪ್ರೇಮ್‌ ಮನವಿ

ಹೋಟೆಲ್‌, ಪಬ್‌, ರೆಸ್ಟೋರೆಂಟ್‌ಗೆ ಇಲ್ಲದ ನಿಯಮ ಚಿತ್ರರಂಗಕ್ಕೆ ಯಾಕೆ?

ಕೊರೊನಾ ಎಲ್ಲರನ್ನೂ ಬೆಚ್ಚಿಬೀಳಿಸಿದ್ದಷ್ಟೇ ಅಲ್ಲ, ಬದುಕನ್ನೇ ಕಸಿದುಕೊಂಡಿದೆ. ಅನೇಕ ಕ್ಷೇತ್ರಗಳು ನೆಲಕಚ್ಚಿದ್ದು ಉಂಟು. ಸರ್ಕಾರ ಕೆಲವು ಉದ್ಯಮ ನಡೆಸಲು ಅವಕಾಶ ಕೊಟ್ಟರೆ, ಇನ್ನೂ ಕೆಲವು ಉದ್ಯಮಗಳಿಗೆ ನಿಯಮ ಸೂಚನೆ ನೀಡಿ ಅವಕಾಶ ಕೊಟ್ಟಿದೆ. ಅದರಲ್ಲಿ ಚಿತ್ರರಂಗವೂ ಒಂದು. ಎಲ್ಲಾ ಉದ್ಯಮಕ್ಕೂ ಸರ್ಕಾರ ದುಡಿಮೆಗೆ ಅವಕಾಶ ಕಲ್ಪಿಸಿದೆ. ಆದರೆ, ಚಿತ್ರರಂಗಕ್ಕೆ ಮಾತ್ರ ಶೇ.೫೦ರಷ್ಟು ಅವಕಾಶ ಕಲ್ಪಿಸಿದೆ. ಸ್ಟಾರ್‌ ಸಿನಿಮಾಗಳನ್ನು ಹೊರತುಪಡಿಸಿದರೆ ಚಿತ್ರಮಂದಿರಗಳು ಶೇ.೬೦, ೫೦ ಮಾತ್ರ ಭರ್ತಿ ಆಗುತ್ತವೆ. ಈಗ ಶೇ.೫೦ಕ್ಕೆ ಮಾತ್ರ ಅನುಮತಿ ಕೊಡಲಾಗಿದೆ.

ಸ್ಟಾರ್‌ ಸಿನಿಮಾ ರಿಲೀಸ್‌ ಆದರೂ, ಶೇ.೫೦ರಷ್ಟು ಮಾತ್ರ ಅವಕಾಶ. ಹೀಗಾಗಿ ದೊಡ್ಡ ಬಜೆಟ್‌ನ ಸಿನಿಮಾಗಳು ಬಿಡುಗಡೆ ಮಾಡಲು ಹಿಂಜರಿಯುತ್ತಿವೆ. ಕೋಟಿಗಟ್ಟಲೆ ಬಂಡವಾಳ ಹೂಡಿ, ಈಗ ರಿಲೀಸ್‌ ಮಾಡಿಬಿಟ್ಟರೆ, ಶೇ.೫೦ರಷ್ಟು ಜನ ಬರಲು ಅವಕಾಶವಿದೆ. ಇನ್ನರ್ಧ ನಿರ್ಮಾಪಕರಿಗೂ ನಷ್ಟ. ಥಿಯೇಟರ್‌ ಮಾಲೀಕರಿಗೂ ಸಮಸ್ಯೆ. ಹೀಗಾಗಿ, ಶೇ.೧೦೦ ರಷ್ಟು ಅನುಮತಿ ಕೊಟ್ಟಾಗಲಷ್ಟೇ ಸ್ಟಾರ್‌ ಸಿನಿಮಾಗಳು ರಿಲೀಸ್‌ ಆಗುತ್ತವೆ. ಉಳಿದಂತೆ ಸಣ್ಣ ಬಜೆಟ್‌ನ ಸಿನಿಮಾಗಳು, ಹೊಸಬರ ಚಿತ್ರಗಳು ಕೂಡ ಥಿಯೇಟರ್‌ ಕಡೆ ಮುಖ ಮಾಡುತ್ತವೆ.

ಈ ನಿಟ್ಟಿನಲ್ಲಿ ನಟ ನೆನಪಿರಲಿ ಪ್ರೇಮ್‌ ಕೂಡ ಸರ್ಕಾರಕ್ಕೆ ಒಂದಷ್ಟು ಮನವಿ ಮಾಡಿದ್ದಾರೆ. “ಸರ್ಕಾರ ಶೇ.೫೦ರಷ್ಟು ಮಾತ್ರ ಚಿತ್ರಮಂದಿರಕ್ಕೆ ಅನುಮತಿ ನೀಡಿದೆ. ಹೀಗಾಗಿ ಮನರಂಜನೆ ಕ್ಷೇತ್ರ ಮಂಕಾಗಿದೆ. ಬೇರೆ ಉದ್ಯಮಗಳಿಗೆ ಪೂರ್ಣ ಅನುಮತಿ ನೀಡಲಾಗಿದೆ. ಆದರೆ, ಚಿತ್ರರಂಗಕ್ಕೆ ಆ ಅವಕಾಶವಿಲ್ಲ. ಬಾರ್‌, ಪಬ್‌, ರೆಸ್ಟೋರೆಂಟ್‌, ಹೋಟೆಲ್‌ಗಳಿಗೆ ಇಲ್ಲಿದ ನಿಯಮ ಚಿತ್ರರಂಗಕ್ಕೆ ಯಾಕೆ? ಈ ಫಿಫ್ಟಿ ಎಂಬ ಕಾನ್ಸೆಪ್ಟ್‌ನಿಂದ ಚಿತ್ರರಂಗ ಇನ್ನೂ ಚೇತರಿಸಿಕೊಳ್ಳಲು ಆಗಿಲ್ಲ. ಸರ್ಕಾರ ಶೇ.೧೦೦ರಷ್ಟು ಅನುಮತಿ ಕೊಟ್ಟರೆ, ಚಿತ್ರರಂಗ ಖಂಡಿತವಾಗಲೂ ಮೊದಲಿನಿಂತೆ ಎದ್ದು ನಿಲ್ಲುತ್ತದೆ. ಹಾಗಾಗಿ, ಇತ್ತ ಗಮನಿಸುವ ಮೂಲಕ ಚಿತ್ರೋದ್ಯಮದ ಕಡೆಯೂ ಒಲವು ತೋರಬೇಕು ಎಂದು ನೆನಪಿರಲಿ ಪ್ರೇಮ್‌ ಮನವಿ ಮಾಡಿದ್ದಾರೆ.


ಪ್ರೇಮ್‌ ಅಭಿನಯದ “ಪ್ರೇಮಂ ಪೂಜ್ಯಂ” ಚಿತ್ರ ಇಷ್ಟರಲ್ಲೇ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿದೆ. ಪ್ರೇಮ್‌ ಅವರಿಗೂ ಈ ಚಿತ್ರ ಸಾಕಷ್ಟು ನಿರೀಕ್ಷೆ ಹೆಚ್ಚಿಸಿದೆ. ಅವರೇ ಹೇಳುವಂತೆ, ಅದೊಂದು ಹೊಸ “ಗೀತಾಂಜಲಿ” ಅನ್ನುತ್ತಾರೆ. “ಪ್ರೇಮಂ ಪೂಜ್ಯಂ” ಕಾಯಾ ವಾಚಾ ಮನಸ ಮಾಡಿರುವ ಚಿತ್ರ. ಸದ್ಯಕ್ಕೆ ಚೆನೈನಲ್ಲಿ ಎಸ್‌ಎಫ್‌ಎಕ್ಸ್‌ ಕೆಲಸ ನಡೆಯುತ್ತಿದೆ. ಚಿತ್ರದ ಮೇಲೆ ಸಾಕಷ್ಟು ನಂಬಿಕೆ ಇರುವುದಾಗಿ ಹೇಳುವ ಪ್ರೇಮ್‌ ಒಂದಷ್ಟು ಕಥೆಗಳನ್ನು ಕೇಳುತ್ತಿದ್ದಾರೆ. ಕೊರೊನಾ ಹಾವಳಿ ಪೂರ್ಣ ಪ್ರಮಾಣದಲ್ಲಿ ಕಡಿಮೆಯಾದ ಬಳಿಕ ಹೊಸ ಘೋಷಣೆ ಮಾಡುವ ಉತ್ಸಾಹದಲ್ಲೂ ಇದ್ದಾರೆ.

Categories
ಸಿನಿ ಸುದ್ದಿ

ಕಾಸರವಳ್ಳಿ ಚಿತ್ರಕ್ಕೆ ರೋಮ್‌ ಅಂತಾರಾಷ್ಟ್ರೀಯ ಚಿತ್ರೋತ್ಸವ ಪ್ರಶಸ್ತಿ

ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ ಸಿನಿಮಾಗೆ ಸಿಕ್ಕ ಗೌರವ

 

ಗಿರೀಶ್‌ ಕಾಸರವಳ್ಳಿ ನಿರ್ದೇಶನದ “ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ” ಚಿತ್ರಕ್ಕೆ ಪ್ರತಿಷ್ಠಿತ ರೋಂ ಅಂತಾರಾಷ್ಟ್ರೀಯ ಚಿತ್ರೋತ್ಸವದ ಸ್ಫರ್ಧಾತ್ಮಕ ವಿಭಾಗದಲ್ಲಿ ತೀರ್ಪುಗಾರರ ವಿಶೇಷ ಪ್ರಶಸ್ತಿ ಲಭಿಸಿದೆ. ರೋಂನಲ್ಲಿ ನಡೆದ ಏಷ್ಯಾಟಿಕಾ ಚಿತ್ರೋತ್ಸವದಲ್ಲಿ ಡಿಸೆಂಬರ್‌ ೨೧ರಂದು ಈ ಸಿನಿಮಾ ಪ್ರದರ್ಶನಗೊಂಡು ಮೆಚ್ಚುಗೆಗೆ ಪಾತ್ರವಾಗಿದೆ.

ಗಿರೀಶ್‌ ಕಾಸರವಳ್ಳಿ

“ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ” ಚಿತ್ರ ಖ್ಯಾತ ಸಾಹಿತಿ, ಗೀತ ರಚನೆಕಾರ ಜಯಂತ್‌ ಕಾಯ್ಕಿಣಿ ಅವರ “ಹಾಲಿನ ಮೀಸೆ” ಕಥೆ ಆಧರಿಸಿದೆ. ಆ ಕಥೆಯಲ್ಲಿ ಬರುವ ಪಾತ್ರವೊಂದನ್ನುಬೆಳೆಸಿ, ಸಮಕಾಲೀನ ಸಾಮಾಜಿಕ ಜ್ವಲಂತ ದ್ವಂದ್ವವನ್ನು ಚಿತ್ರದಲ್ಲಿ ಅಳವಡಿಸಿಕೊಳ್ಳಲಾಗಿದೆ. ದಾಸ ಶ್ರೇಷ್ಠ ಪುರಂದರ ದಾಸರ ಹಾಡೊಂದರ ಶೀರ್ಷಿಕೆ “ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ” ಈ ದ್ವಂದ್ವವನ್ನು ಅತ್ಯಂತ ಮಾರ್ಮಿಕವಾಗಿ ಸೂಚಿಸುತ್ತದೆ. ಸುಖವನ್ನು ಅರಸುತ್ತಾ ಹೋಗುವ ಈ ಕಾಲದ ನಮ್ಮ ಪಯಣ ಮನಶಾಂತಿಗೆ ಎರವಾಗುತ್ತಿದೆಯೇ ಅನ್ನುವ ಈ ದಾಸರ ಪದದಲ್ಲಿ ವ್ಯಕ್ತವಾಗುವ ಆತಂಕವೂ ಚಿತ್ರದ ಸತ್ವವಾಗಿದೆ.

ಎರಡು ಕಾಲಘಟ್ಟದಲ್ಲಿ ನಡೆಯುವ ಕಥೆ ಇದಾಗಿದ್ದು, ೬೦ರ ದಶಕದ ಕನಸು ಮತ್ತು ಈ ಕಾಲದ ತಳಮಳ ಇವೆರೆಡೂ ಕಥಾನಾಯಕನ ಮನೋಗತಿಯನ್ನು ರೂಪಿಸುತ್ತಿರುವ ನೆಲೆಗಳು. ಕಾಲಘಟ್ಟ ಭಿನ್ನವಾದಂತೆ ಪರಿಸರವೂ ಬದಲಾಗುತ್ತದೆ ಅನ್ನೋದೇ ಕಥೆ.  “ದ್ವೀಪ” ಚಿತ್ರಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದ ಹೆಚ್.ಎಂ.ರಾಮಚಂದ್ರ ಹಾಲ್ಕೆರೆ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಎಸ್.ಆರ್.ರಾಮಕೃಷ್ಣ ಅವರ ಸಂಗೀತವಿದೆ. ಎಸ್.ಗುಣ ಶೇಖರನ್‌ ಸಂಕಲನವಿದೆ. ಅಪೂರ್ವ ಕಾಸರವಳ್ಳಿ ಜಂಟಿ ನಿರ್ದೇಶನವಿದೆ. ಅನನ್ಯ ಕಾಸರವಳ್ಳಿ ಅವರ ವಸ್ತ್ರ ವಿನ್ಯಾಸವಿದ್ದು, ಸಾವಂತ್‌, ಕಿರಣ್‌ ಕುಮಾರ್‌ ಹಾಗೂ ಯಶವಂತ ಯಾದವ್‌ ಅವರ ಸಹನಿರ್ದೇನವಿದೆ. ಬಾಸುಮ ಕೊಡಗು ಅವರ ಕಲಾನಿರ್ದೇಶನ ರಮೇಶ್‌ ಬಾಬು ಅವರ ಪ್ರಸಾಧನ ಇದೆ. ಮೋಹನ್‌ ಕಾಮಾಕ್ಷಿ ಅವರ ತಾಂತ್ರಿಕ ನೆರವು ಚಿತ್ರಕ್ಕಿದೆ.

ಶಿವಕುಮಾರ್‌, ನಿರ್ಮಾಪಕ

 

ಚಿತ್ರದಲ್ಲಿ ದ್ರುಶಾ ಕೊಡಗು, ಆರಾಧ್ಯ, ಪ್ರವರ್ಥ ರಾಜು ಮತ್ತ ನಲ್ಮೆ. ಉಳಿದ ಮುಖ್ಯ ಪಾತ್ರಗಳಲ್ಲಿ ಪವಿತ್ರ, ಮಾಲತೇಶ್‌, ಕೆ.ಜಿ.ಕೃಷ್ಣಮೂರ್ತಿ, ಚೆಸ್ವಾ, ರಶ್ಮಿ, ಬಿ.ಎಂ.ವೆಂಕಟೇಶ್‌, ಪುಷ್ಪಾ ರಾಘವೇಂದ್ರ, ಸುಜಾತ ಶೆಟ್ಟಿ ಇತರರು ಇದ್ದಾರೆ.
೨೦೧೦ ರಲ್ಲಿ “ಕೂರ್ಮಾವತಾರ” ಚಿತ್ರದ ಬಳಿಕ ಸಾಕ್ಷ್ಯಚಿತ್ರ ನಿರ್ಮಾಣದತ್ತ ಮುಖಮಾಡಿದ್ದ ಗಿರೀಶ್‌ ಕಾಸರವಳ್ಳಿ ಅವರು ಹತ್ತು ವರ್ಷಗಳ ಬಳಿಕ ಒಂದೊಳ್ಳೆಯ ಸಿನಿಮಾ ಮಾಡಿದ್ದು, ಇದು ಅವರ ೧೫ನೇ ಚಿತ್ರ. ಇನ್ನು, ಹಲವಾರು ಯಶಸ್ವಿ ಧಾರಾವಾಹಿ ನಿರ್ಮಿಸಿರುವ ನಿರ್ಮಾಪಕ ಎಸ್.ವಿ.ಶಿವಕುಮಾರ್‌ ಅವರ ಮೂರನೇ ಸಿನಿಮಾ ಇದು. ಸಿನಿಮಾ ರೆಡಿಯಾಗಿದ್ದು, ಕೊರೊನಾ ಸಮಸ್ಯೆ ಬಗೆಹರಿದ ಬಳಿಕ ಚಿತ್ರಮಂದಿರದಲ್ಲಿ ತೆರೆಗೆ ಬರಲಿದೆ.

 

error: Content is protected !!