Categories
ಸಿನಿ ಸುದ್ದಿ

ಇನ್ಸ್‌ಪೆಕ್ಟರ್ ವಿಕ್ರಂ ಫೆಬ್ರವರಿ 5ಕ್ಕೆ ರಿಲೀಸ್‌ – ಪ್ರಜ್ವಲ್‌ ಅಭಿನಯದ ಮಾಸ್‌ ಚಿತ್ರವಿದು

 ಅಂದು ಶಿವಣ್ಣ ಇಂದು ಪ್ರಜ್ವಲ್

ಕನ್ನಡ ಚಿತ್ರರಂಗ ಇದೀಗ ಶೈನ್‌ ಆಗುತ್ತಿದೆ. ಹೌದು, ಈಗ ಕನ್ನಡ ಸಿನಿಮಾಗಳ ಬಿಡುಗಡೆಯ ಪರ್ವ. ಕೊರೊನಾ ಬಳಿಕ ಮೆಲ್ಲನೆ ಚೇತರಿಸಿಕೊಂಡಿರುವ ಚಿತ್ರರಂಗ, ಈಗ ಸಿನಿಮಾ ಬಿಡುಗಡೆ ಬಗ್ಗೆ ಹೆಚ್ಚು ಒಲವು ತೋರಿಸಿದೆ. ಆ ನಿಟ್ಟಿನಲ್ಲಿ ಈಗಾಗಲೇ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಸ್ಟಾರ್‌ ಚಿತ್ರಗಳು ಸಹ ಬಿಡುಗಡೆ ದಿನವನ್ನು ಘೋಷಿಸಿವೆ. ಈಗ ಪ್ರಜ್ವಲ್ ದೇವರಾಜ್‌ ಅಭಿನಯದ “ಇನ್ಸ್‌ಪೆಕ್ಟರ್‌ ವಿಕ್ರಂ”‌ ಚಿತ್ರ ಕೂಡ ತನ್ನ ಬಿಡುಗಡೆಯ ದಿನಾಂಕವನ್ನು ಘೋಷಿಸಿದೆ. ಹೌದು, ಫೆಬ್ರವರಿ 5ರಂದು ರಾಜ್ಯಾದ್ಯಂತ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.


“ಇನ್ಸ್‌ಪೆಕ್ಟರ್‌ ವಿಕ್ರಂ” ಅಂದಾಕ್ಷಣ, ಶಿವರಾಜಕುಮಾರ್‌ ಅವರ ನೆನಪಾಗುತ್ತದೆ. ಯಾಕೆಂದರೆ, ಶಿವಣ್ಣ ಅಭಿನಯದ ಸಿನಿಮಾ ಇದು. ಆ ದಿನಗಳಲ್ಲೇ ಸೂಪರ್‌ ಹಿಟ್‌ ಸಿನಿಮಾ ಇದು. ಈಗ ಮತ್ತದೇ ಶೀರ್ಷಿಕೆಯಡಿ ಸಿನಿಮಾ ಚಿತ್ರೀಕರಣಗೊಂಡು, ಬಿಡುಗಡೆಯಾಗುತ್ತಿದೆ. ಇಲ್ಲಿ ಪ್ರಜ್ವಲ್‌ ದೇವರಾಜ್‌ ಅವರು ಇನ್ಸ್‌ಪೆಕ್ಟರ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದೇ ವಿಶೇಷ. ಶ್ರೀನರಸಿಂಹ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಹಿಂದೆ ರಮೇಶ್‌ ಅರವಿಂದ್‌ ಅವರ “ಪುಷ್ಪಕ ವಿಮಾನ” ಚಿತ್ರ ನಿರ್ಮಿಸಿದ್ದ ವಿಖ್ಯಾತ್‌ ಎ.ಆರ್.‌ ಅವರು ಈ ಚಿತ್ರವನ್ನು ಅದ್ಧುರಿಯಾಗಿಯೇ ನಿರ್ಮಾಣ ಮಾಡಿದ್ದಾರೆ.

ಚಿತ್ರಕ್ಕೆ ನವೀನ್‌ಕುಮಾರ್‌ ಕ್ಯಾಮೆರಾ ಹಿಡಿದರೆ, ಅನೂಪ್‌ ಸೀಳಿನ್‌ ಅವರ ಸಂಗೀತ ನಿರ್ದೇಶನವಿದೆ. ಗುರು ಕಶ್ಯಪ್‌ ಅವರು ಚಿತ್ರಕ್ಕೆ ಮಾತುಗಳನ್ನು ಪೋಣಿಸಿದ್ದಾರೆ. ಹರೀಶ್‌ ಕೊಮ್ಮೆ ಅವರ ಸಂಕಲನ ಚಿತ್ರಕ್ಕಿದೆ. ಥ್ರಿಲ್ಲರ್‌ ಮಂಜು ಮತ್ತು ವಿನೋದ್‌ ಅವರು ಭರ್ಜರಿ ಸ್ಟಂಟ್ಸ್‌ ಮಾಡಿಸಿದ್ದಾರೆ. “ಇನ್ಸ್‌ಪೆಕ್ಟರ್‌ ವಿಕ್ರಂ” ಅಂದರೆ, ಖಡಕ್‌ ಪೊಲೀಸ್‌ ಅಧಿಕಾರಿಯ ನೆನಪಾಗುತ್ತೆ. ಇಲ್ಲಿ ಪ್ರಜ್ವಲ್‌ ರಗಡ್‌ ಲುಕ್‌ನಲ್ಲೂ ಇದ್ದಾರೆ. ಪಕ್ಕಾ ಪೊಲೀಸ್‌ ಅಧಿಕಾರಿಯಾಗಿ, ಎದುರಾಳಿಗಳನ್ನು ಹಿಗ್ಗಾಮುಗ್ಗ ಚಚ್ಚುವಲ್ಲೂ ನಟಿಸಿದ್ದಾರೆ. ಇನ್ನು, ಇದೊಂದು ಮಾಸ್‌ ಸಿನಿಮಾ ಅಂತ ಪ್ರತ್ಯಕೇವಾಗಿ ಹೇಳಬೇಕಿಲ್ಲ.

ಸದ್ಯಕ್ಕೆ ಚಿತ್ರ ಬಿಡುಗಡೆಯ ದಿನವನ್ನು ಅನೌನ್ಸ್‌ ಮಾಡಿದೆ. ಪ್ರಜ್ವಲ್‌ ಅಭಿನಯದ ಈ ಚಿತ್ರ ಈ ವರ್ಷದಲ್ಲಿ ಬಿಡುಗಡೆಯಾಗುತ್ತಿರುವ ಮೊದಲ ಚಿತ್ರ. ಪ್ರಜ್ವಲ್‌ ಅವರ ಅಭಿನಯದ ಸಾಲು ಸಾಲು ಸಿನಿಮಾಗಳು ರೆಡಿಯಾಗಿವೆ. “ಅಬ್ಬರ” ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. “ಅರ್ಜುನ್‌ ಗೌಡ” ಸಿನಿಮಾ ಕೂಡ ತೆರೆಗೆ ಬರಲು ಅಣಿಯಾಗುತ್ತಿದೆ. “ಅಬ್ಬರ” ಚಿತ್ರಕ್ಕೆ ರಾಮ್‌ನಾರಾಯಣ್‌ ನಿರ್ದೇಶನ ಮಾಡಿದರೆ, “ಅರ್ಜುನ್‌ ಗೌಡ” ಚಿತ್ರವನ್ನು ಲಕ್ಕಿ ಶಂಕರ್‌ ನಿರ್ದೇಶಿಸಿದ್ದಾರೆ. ಇನ್ನು, ಖದರ್‌ ಕುಮಾರ್‌ ನಿರ್ದೇಶನದ “ವೀರಂ” ಸಿನಿಮಾ ಚಿತ್ರೀಕರಣದಲ್ಲಿದೆ.

 

Categories
ಸಿನಿ ಸುದ್ದಿ

ಕಲ್ಲಳ್ಳಿ ಹುಡುಗರ ಭಜನೆ ಪ್ರಸಂಗ! ಭಜನಾ ಮಂಡಳಿ ಹಿನ್ನೆಲೆಯಲ್ಲೊಂದು ಸಿನಿಮಾ

ಹೊಸಬರ ಭಜನೆ ಹಾಡಲ್ಲೊಂದು ಪ್ರಣಯ ಗೀತೆ

ತೇಜಸ್‌, ನಿರೂಷಾ ಶೆಟ್ಟಿ

ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ “ಭಜನಾ” ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಅದು ಸಂಭ್ರಮಕ್ಕೂ ಉಂಟು ದುಃಖಕ್ಕೂ ಉಂಟು. ಯಾವುದೇ ಕಾರ್ಯಕ್ರಮ, ಹಬ್ಬ, ಜಾತ್ರೆಗಳಿದ್ದರೆ, ಅಲ್ಲಿ ಈ ಭಜನಾ ಮಂಡಳಿ ಸದಸ್ಯರು ಒಂದೊಳ್ಳೆಯ ಕಾರ್ಯಕ್ರಮ ನೀಡುವುದು ಸಹಜ. ಈಗಲೂ ಗ್ರಾಮೀಣ ಭಾಗದಲ್ಲಿ ಅದೊಂದು ಪ್ರಮುಖವಾದ ಕಲಾ ಕಾರ್ಯಕ್ರಮವೆಂದೇ ಹೈಲೈಟ್‌ ಆಗಿದೆ. ಇಷ್ಟಕ್ಕೂ ಇಲ್ಲೇಕೆ “ಭಜನಾ” ಕುರಿತು ಹೇಳಲಾಗುತ್ತಿದೆ ಎಂಬ ಪ್ರಶ್ನೆ ಎದುರಾಗಬಹುದು.

ವಿಷಯವಿಷ್ಟೇ, “ಭಜನಾ” ವಿಷಯ ಇಟ್ಟುಕೊಂಡೇ ಇಲ್ಲೊಂದು ಹೊಸಬರ ತಂಡ ಹೀಗೊಂದು ಸಿನಿಮಾ ಮಾಡಿ ಮುಗಿಸಿದೆ. ಆ ಹೊಸ ಸಿನಿಮಾಗೆ “ಕಲ್ಲಳ್ಳಿ ಭಜನಾ ಮಂಡಳಿ” ಎಂದು ನಾಮಕರಣ ಮಾಡಲಾಗಿದೆ. ಶೀರ್ಷಿಕೆ ನೋಡಿದರೆ, ಇದೊಂದು ಭಜನಾ ವಿಷಯಕ್ಕೆ ಸಂಬಂಧಿಸಿದ ಚಿತ್ರ ಇರಬೇಕು ಅಂದುಕೊಂಡರೆ ಆ ಊಹೆ ಖಂಡಿತವಾಗಿಯೂ ತಪ್ಪು. ಹೌದು, ಇಲ್ಲಿ ಭಜನಾ ಅಂಶಗಳಿವೆಯಾದರೂ, ಇಲ್ಲೊಂದು ಹಾಸ್ಯದ ಹೊನಲಿದೆ. ಜೊತೆಗೊಂದು ಗೆಳೆಯರ ಬಳಗದ ಬಾಂಧವ್ಯವಿದೆ. ಇವೆಲ್ಲದರ ಜೊತೆಯಲ್ಲೊಂದು ಪ್ರೀತಿಯ ಪಯಣವೂ ಇದೆ. ಈ ಸಿನಿಮಾ ಈಗಾಗಲೇ ಯಶಸ್ವಿಯಾಗಿ ಚಿತ್ರೀಕರಣ ಮುಗಿಸಿದ್ದು, ಇನ್ನೇನು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.

ಈ ಚಿತ್ರದ ಮೂಲಕ ಯತೀಶ್‌ ನೆಲ್ಕುದ್ರಿ ಅವರು ನಿರ್ದೇಶಕನ ಪಟ್ಟ ಅಲಂಕರಿಸುತ್ತಿದ್ದಾರೆ. ರಾಘವೇಂದ್ರ ಕ್ರಿಯೇಟರ್ಸ್‌ ಅಂಡ್‌ ಮೂವೀಸ್‌ ಬ್ಯಾನರ್‌ನಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದ್ದು, ಪ್ರಕಾಶ್‌ ವಾರದ್‌, ಪ್ರದೀಪ್‌ ಬಳ್ಳೆಕೆರೆ, ತೇಜಸ್‌, ಯತೀಶ್‌ ನೆಲ್ಕುದ್ರಿ ಅವರು ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.

ಸಾಮಾನ್ಯವಾಗಿ “ಕಲ್ಲಳ್ಳಿ ಭಜನಾ ಮಂಡಳಿ” ಅಂದಾಕ್ಷಣ, ಒಂದೂರಿನ ಭಜನಾ ಮಂಡಳಿ ಇರಬಹುದು ಎಂಬ ಮಾತು ಕೇಳಿಬರುತ್ತೆ. ಇಂಥದ್ದೊಂದು ಶೀರ್ಷಿಕೆ ಇಡಲು ಕಾರಣ, ಕಲ್ಲಳ್ಳಿ ಎಂಬ ಗ್ರಾಮದಲ್ಲಿ ಭಜನಾ ಮಂಡಳಿ ಸ್ಥಾಪನೆಯ ಉದ್ದೇಶದಿಂದ ಶುರುವಾಗುವ ಕಥೆ ಆಗಿರುವುದರಿಂದ ಚಿತ್ರಕ್ಕೆ “ಕಲ್ಲಳ್ಳಿ ಭಜನಾ ಮಂಡಳಿ” ಎಂದು ಹೆಸರಿಡಲಾಗಿದೆ.

ಹೆಸರೇ ಹೇಳುವಂತೆ, ಇದೊಂದು ಹಳ್ಳಿಯ ಹಿನ್ನೆಲೆಯಲ್ಲಿ ಸಾಗುವ ಚಿತ್ರ. ಒಂದು ಹಾಸ್ಯಮಯ ಕಥೆ ಇಲ್ಲಿದೆ.  ತಮ್ಮ ಚೊಚ್ಚಲ ನಿರ್ದೇಶನದ ಸಿನಿಮಾ ಕುರಿತು ಮಾತನಾಡುವ ನಿರ್ದೇಶಕ ಯತೀಶ್‌ ನೆಲ್ಕುದ್ರಿ, “ನಾನು ಹಲವು ಸಿನಿಮಾಗಳಲ್ಲಿ ಕೆಲಸ ಮಾಡಿದ್ದೇನೆ. ಅನುಭವಿ ನಿರ್ದೇಶಕರ ಬಳಿ ಒಂದಷ್ಟು ಕಲಿತಿದ್ದೇನೆ. ಆ ಅನುಭವದಿಂದ ಈ ಚಿತ್ರವನ್ನು ಕೈಗೆತ್ತಿಕೊಂಡಿದ್ದೇನೆ. ಈ ಚಿತ್ರ ನೋಡುಗರಿಗೆ ತಮ್ಮ ಅಕ್ಕ-ಪಕ್ಕದಲ್ಲಿ ನಡೆಯುವ ಕಥೆಯೇನೋ ಎಂಬಂತೆ ಭಾಸವಾಗುತ್ತದೆ. ಆದಷ್ಟು ನೈಜತೆಗೆ ಹತ್ತಿರವಾಗಿರಲಿದೆ.

ಹಳ್ಳಿಯ ಸೊಗಡಿನ ಜೊತೆಗೆ ಮುಗ್ಧತೆ ತುಂಬಿರುವ ಪ್ರೀತಿಯ ಹಾದಿಯಲ್ಲಿ ಚಿತ್ರದ ಕಥೆ ಸಾಗುತ್ತದೆ, ಕಲ್ಲಳ್ಳಿ ಎಂಬ ಹಳ್ಳಿಯಲ್ಲಿ ಭಜನಾ ಮಂಡಳಿಯ ಸ್ಥಾಪನೆಯ ಉದ್ಧೇಶದಿಂದ ಶುರುವಾಗುವ ಕಥೆಯಲ್ಲಿ ಅನೇಕ ಹಾಸ್ಯಮಯ ಪ್ರಸಂಗಗಳಿವೆ. ಇಲ್ಲಿ ಪ್ರೀತಿ, ಗೆಳೆತನ ಇತ್ಯಾದಿ ವಿಷಯಗಳೂ ತುಂಬಿವೆ. ಚಿತ್ರಕ್ಕೆ ಹರೀಶ್ ಕಿಲಗೆರೆ ಕಥೆ ಬರೆದಿದ್ದಾರೆ. ಅವರೊಂದಿಗೆ ನಾನು ಚಿತ್ರಕಥೆಯಲ್ಲಿ ಕೈ ಜೋಡಿಸಿದ್ದೇನೆ” ಎಂದು ವಿವರ ಕೊಡುತ್ತಾರೆ ಯತೀಶ್‌ ನೆಲ್ಕುದ್ರಿ.

ಯತೀಶ್‌ ನೆಲ್ಕುದ್ರಿ, ನಿರ್ದೇಶಕ

ಇನ್ನು, ಈ ಚಿತ್ರದಲ್ಲಿ ತೇಜಸ್ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಅವರಿಗೆ ನಿರೂಷ ಶೆಟ್ಟಿ ನಾಯಕಿಯಾಗಿದ್ದಾರೆ. ಚಿತ್ರದಲ್ಲಿ ನಿಶಾಂತ್ ಗುಡಿಹಳ್ಳಿ, ಪ್ರದೀಪ್ ಬಳ್ಳೆಕೆರೆ, ಪ್ರಕಾಶ್ ವಾರದ್, “ಕಾಮಿಡಿ ಕಿಲಾಡಿ” ಖ್ಯಾತಿಯ ರವಿ, ಎಸ್ ಮತ್ತು ಮಣಿಕಂಠ ಜೊತೆಗಿದ್ದಾರೆ. “ಭಜನಾ ಮಂಡಳಿಯ” ಮಾಸ್ತರ್ ಆಗಿ ಮನದೀಪ್ ರಾಯ್ ನಟಿಸಿದ್ದಾರೆ. ವೇಣುಗೋಪಾಲ್ ಮತ್ತು ಪ್ರಣಯಮೂರ್ತಿ ಅವರು ಪ್ರಮುಖ ಅಕರ್ಷಣೆ. ಕಿರುತೆರೆಯ “ನಂದಿನಿ” ಧಾರಾವಾಹಿಯ ಭರತ್ ಎಂ.ಜೆ. ಮತ್ತಿತರು ಕಾಣಿಸಿಕೊಂಡಿದ್ದಾರೆ.

ಮಲ್ಲೇಶ್ ವಂದಿಲ್ಲರ್ ಮಾತುಗಳನ್ನು ಪೋಣಿಸಿದ್ದಾರೆ. ವಿನೋದ್‌ ಕುಮಾರ್‌ ಅವರು ಚಿತ್ರದ ಗೀತೆಗಳನ್ನು ಬರೆದಿದ್ದಾರೆ. ಸಂದೀಪ್‌ ಸಂಗೀತ ನೀಡಿದ್ದಾರೆ, “ಕಲ್ಲಳ್ಳಿ ಭಜನಾ ಮಂಡಳಿ” ಎಂಬ ಚಿತ್ರಕ್ಕೆ ಭಜನೆಯ ಹಾಡು ಇಲ್ಲದಿದ್ದರೆ ಹೇಗೆ? ಮೂರು ದಶಕಗಳ ಕಾಲ ಭಜನೆ ಹಾಡುಗಳಲ್ಲಿ ಅನುಭವ ಇರುವ ಬೆಳಗಾವಿಯ ಪರುಶುರಾಮ್ ದೇವಗಾವ್ ಮತ್ತು ತಂಡ ಚಿತ್ರದ ಹಾಡಿಗೆ ಧ್ವನಿಯಾಗಿದೆ.

ಇನ್ನು, ನವೀನ್ ಸಜ್ಜು ಕೂಡ ಒಂದು ಹಾಡನ್ನು ಹಾಡಿದ್ದಾರೆ. ಚಿತ್ರಕ್ಕೆ ರಾಮಲಿಂಗಮ್ ಕ್ಯಾಮೆರಾ ಹಿಡಿದಿದ್ದಾರೆ. ಸದ್ಯಕ್ಕೆ ಚಿತ್ರೀಕರಣ ಪೂರ್ಣಗೊಂಡಿದ್ದು, ಸಂಕಲನ ಕಾರ್ಯದಲ್ಲಿ ನಿರತವಾಗಿದೆ. ಎಲ್ಲಾ ಕೆಲಸ ಮುಗಿಸಿಕೊಂಡು ಪ್ರೇಕ್ಷಕರ ಮುಂದೆ ಬರಲು ತಯಾರಾಗುತ್ತಿದೆ.

ನಿಶಾಂತ್‌ ಗುಡಿಹಳ್ಳಿ

 

Categories
ಸಿನಿ ಸುದ್ದಿ

ರೈತರು ಹೇಡಿಗಳು ಅಂತ ಹೇಳ್ಬೇಡಿ, ಹಾಗೆ ಹೇಳಿದ್ರೆ ಚೆನ್ನಾಗಿರಲ್ಲ- ಸಚಿವ ಬಿ.ಸಿ. ಪಾಟೀಲ್‌ ಗೆ ನಟ ಹುಚ್ಚ ವೆಂಕಟ್‌ ಎಚ್ಚರಿಕೆ

ನಟ ಹುಚ್ಚ ವೆಂಕಟ್‌ ಅವರಿಗಿರುವ ರೈತ ಪರ ಕಾಳಜಿ ಕನ್ನಡದ ಇತರೆ ಸ್ಟಾರ್‌ಗಳಿಗೆ ಯಾಕಿಲ್ಲ ?

ರೈತರ ಬಗ್ಗೆ ನೀವ್ಯಾಕೆ ಹೀಗೆ ಮಾತಾನಾಡ್ತೀರಿ- ಕೃಷಿ ಸಚಿವ ಬಿ.ಸಿ. ಪಾಟೀಲ್‌ ವಿರುದ್ಧ  ಫೈರಿಂಗ್‌ ಸ್ಟಾರ್‌ ಕೆಂಡಾಮಂಡಲ

ಕೃಷಿ ಸಚಿವರೂ ಆದ ನಟ ಬಿ.ಸಿ. ಪಾಟೀಲ್‌ ಅವರಿಗೆ ನಟ ಹುಚ್ಚ ವೆಂಕಟ್‌ ಕೊಟ್ಟ ಫೈರಿಂಗ್‌ ಎಚ್ಚರಿಕೆ ಇದು. ಇದಕ್ಕೆ ಕಾರಣ ರೈತರ ಬಗ್ಗೆ ಬಿ.ಸಿ. ಪಾಟೀಲ್‌ ನೀಡಿದ ಹೇಳಿಕೆ. ಅದೇನು, ಯಾಕೆ ಎನ್ನುವುದಕ್ಕಿಂತ ಮುಂಚೆ ಇವತ್ತಿನ ರೈತಾಪಿ ಬದುಕಿನ ಕತೆ ಕೇಳಿ.

ದೇಶದಲ್ಲಿ ರೈತರು ದಂಗೆ ಎದ್ದಿದ್ದಾರೆ. ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ಸಿಗುತ್ತಿಲ್ಲ ಅಂತಲೋ, ಸರ್ಕಾರ ಜಾರಿಗೆ ತಂದ ಕೃಷಿ ಮಸೂದೆ ರೈತ ವಿರೋಧಿ ಆಗಿದೆ ಅಂತಲೋ ರೈತರು ಬೀದಿಗಿಳಿದ್ದಾರೆ. ಈ ಹೋರಾಟ ರಾಜ್ಯದಲ್ಲೂ ನಡೆದಿದೆ ಎನ್ನುವುದು ನಿಮಗೂ ಗೊತ್ತಿರುವ ವಿಚಾರ. ಈ ಸಂಕಷ್ಟದ ಪರಿಸ್ಥಿತಿಯ ನಡುವೆಯೇ ರಾಜ್ಯದಲ್ಲಿ ರೈತರು ಬೆಳೆ ಸಾಲದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿ ಅಗಿದೆ. ಇದು ರಾಜ್ಯದ ರೈತರ ಪಾಲಿಗೆ ಅತ್ಯಂತ ಅಘಾತಕಾರಿ ಬೆಳವಣಿಗೆ.  ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಕೃಷಿ ಸಚಿವ ಬಿ.ಸಿ.ಪಾಟೀಲ್‌, ಆತ್ಮಹತ್ಯೆಗೆ ಯತ್ನಿಸುವ ರೈತರು ಹೇಡಿಗಳು, ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರಾಗಲಿ, ಹೋರಾಟ ಮಾಡುತ್ತಿರುವವರಾಗಲಿ ರೈತರಲ್ಲ ಎಂಬುದಾಗಿ ಹೇಳಿದ್ದಾರೆ.

ರೈತರ ಬಗ್ಗೆ ನೀವ್ಯಾಕೆ ಹೀಗೆ ಮಾತಾನಾಡ್ತಿರಿ- ಕೃಷಿ ಸಚಿವ ಬಿ.ಸಿ. ಪಾಟೀಲ್‌ ವಿರುದ್ಧ  ಫೈರಿಂಗ್‌ ಸ್ಟಾರ್‌ ಕೆಂಡಾಮಂಡಲ

ಇದು ಸಾಕಷ್ಟು ವಿವಾರ ಎಬ್ಬಿಸಿದೆ. ರಾಜ್ಯದ ರೈತ ಸಂಘಟನೆಗಳು ಬಿ.ಸಿ. ಪಾಟೀಲ್‌ ಹೇಳಿಕೆಯನ್ನು ಖಂಡಿಸಿವೆ. ಇಷ್ಟಾಗಿಯೂ ಕನ್ನಡದ ಯಾವುದೇ ನಟ-ನಟಿಯರು ರಾಜ್ಯದ ರೈತರ ಪರವಾಗಿ ಮಾತನಾಡಿಲ್ಲ. ತಾವಾಯಿತು, ತಮ್ಮ ಪಾಡಾಯಿತು ಎನ್ನುವ ಹಾಗೆಯೇ ಇದ್ದಾರೆ. ಈ ನಡುವೆ ಫೈರಿಂಗ್‌ ಸ್ಟಾರ್‌ ಹುಚ್ಚ ವೆಂಕಟ್‌, ಮೊದಲು ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯದ ರೈತರ ಬಗ್ಗೆ ಕೃಷಿ ಸಚಿವರು ಇಷ್ಟು ಹಗುರವಾಗಿ ಮಾತನಾಡಬಾರದು, ಮಾತನಾಡಿದರೆ ಚೆನ್ನಾಗಿರಲ್ಲ ಎಂಬುದಾಗಿ ಎಚ್ಚರಿಸಿದ್ದಾರೆ. ತಮ್ಮ ಫೇಸ್‌ ಬುಕ್‌ ಅಕೌಂಟ್‌ ನಲ್ಲಿ ಹಾಕಿರುವ ವಿಡಿಯೋದಲ್ಲಿ ಹುಚ್ಚ ವೆಂಕಟ್‌ ಹೇಳಿದಿಷ್ಟು..

https://m.facebook.com/story.php?story_fbid=476912306638092&id=100029579808767

” ಇದು ಕೃಷಿ ಸಚಿವ ಬಿ.ಸಿ. ಪಾಟೀಲ್‌ ಅವರಿಗೆ. ಯಾಕೆ ಅವರು ರೈತರ ಬಗ್ಗೆ ಇಷ್ಟು ಹಗುರವಾಗಿ ಮಾತನಾಡುತ್ತಾರೋ ನಂಗೆ ಅರ್ಥವಾಗುತ್ತಿಲ್ಲ. ರೈತರು ಹೇಡಿಗಳು ಅಂತ ಹೇಳಿದ್ದಾರೆ. ಅವರಿಗೆ ರಾಜ್ಯದ ಕಷ್ಟ ಗೊತ್ತಿಲ್ಲ. ಮಳೆ ಜಾಸ್ತಿ ಬಂದ್ರೂ ಬೆಳೆ ನಷ್ಟ, ಮಳೆ ಕಮ್ಮಿಯಾದ್ರೂ ಬೆಳೆ ನಷ್ಟ. ಇಂತಹ ಪರಿಸ್ಥಿತಿಯಲ್ಲಿ ಬೆಳೆ ಬೆಳೆಯುವ ರೈತರಿಗೆ ನಾವು ಸದಾ ಬೆಂಬಲವಾಗಿರಬೇಕು. ಲಾಕ್‌ ಡೌನ್‌ ಕಾಲದಲ್ಲಿ ಅವರು ತುಂಬಾ ಸಂಕಷ್ಟ ಅನುಭವಿಸಿದ್ದಾರೆ. ಅವರು ನಮಗಾಗಿ ಕಷ್ಟ ಪಟ್ಟು ಬೆಳೆ ಯುತ್ತಾರೆ. ಅಂತಹ ಜನರಿಗೆ ನೆರವು ನೀಡಬೇಕಾದ ಸರ್ಕಾರದ ಪ್ರತಿನಿಧಿಯಾಗಿ ತಾವು, ರೈತರ ಬಗ್ಗೆ ಸರಿಯಾಗಿ ಮಾತನಾಡಬೇಕು, ಹಾಗೆ ಮಾತನಾಡದಿದ್ದರೆ ಚೆನ್ನಾಗಿರಲ್ಲ ʼ ಎಂದಿದ್ದಾರೆ ಹುಚ್ಚ ವೆಂಕಟ್.

Categories
ಸಿನಿ ಸುದ್ದಿ

ಜನರಿಗೆ ʼಲಡ್ಡುʼ ತಿನ್ನಿಸಲು ಬಂದ ಹೊಸಬರು, ಇದು ಟ್ರೇಲರ್‌ ಮೂಲಕ ತೀವ್ರ ಕುತೂಹಲ ಮೂಡಿಸಿದ ಚಿತ್ರ

ಇದೇ ವಾರ ತೆರೆ ಮೇಲೆ ರಮಾನಂದ್‍ ನಿರ್ದೇಶನದ ಸಿನಿಮಾ

ʼಲಡ್ಡುʼ ಸವಿಯಲು ರೆಡಿಯಾಗಿದೆ. ಇದೇ ವಾರ (ಜ.22) ತೆರೆ ಮೇಲೆ ʼಲಡ್ಡುʼ ಜನರ ಮುಂದೆ ಬರುತ್ತಿದೆ. ಇದು ಹೊಸಬರ ಚಿತ್ರ. ಉದ್ಯಮಿ ವಿ. ಮೇಘನಾ ಇದೇ ಮೊದಲು ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ರಮಾನಂದ್‌ ನಿರ್ದೇಶಕ. ಹಲವು ವರ್ಷಗಳಿಂದ ನಿರ್ದೇಶಕರಾದ ಕೆ. ರಾಮ್‌ನಾರಾಯಣ್‌, ಮದನ್‌ ಹಾಗೂ ಕಿಶನ್‌ಬಳಿ ಕೆಲಸ ಮಾಡಿದ್ದ ಅನುಭವ ರಮಾನಂದ್‌ಅವರಿಗಿದೆ. ಅದೇ ಅನುಭವದಲ್ಲೀಗ ಸ್ವತಂತ್ರವಾಗಿ ನಿರ್ದೇಶಿಸಿ, ತೆರೆಗೆ ತರುತ್ತಿದ್ದಾರೆ.

ಇದೊಂದು ರೊಮ್ಯಾಂಟಿಕ್ ಕಾಮಿಡಿ ಹಾಗೂ ಸಸ್ಪೆನ್ಸ್ ಕಥಾಹಂದರ ಹೊಂದಿರುವ ಈ ಚಿತ್ರ. ಐವರು ಯುವಕರು ಹಾಗೂ ಒಬ್ಬ ಯುವತಿಯ ಸುತ್ತ ನಡೆಯುವ ಕತೆ. ಇಂತಹ ಕತೆಯ ಚಿತ್ರವು ʼಲಡ್ಡುʼ ಅಂತ ಟೈಟಲ್‌ಹೊತ್ತಿದ್ದು ಯಾಕೆ ಅನ್ನೋದು ಸಸ್ಪೆನ್ಸ್.‌ ಇದು ಬಹುತೇಕ ಹೊಸಬರ ಪಯತ್ನದ ಫಲ. ಸದ್ಯಕ್ಕೆ ಈ ಚಿತ್ರದ ಟ್ರೇಲರ್‌ ಈಗಾಗಲೇ ಸಾಕಷ್ಟು ಸದ್ದು ಮಾಡಿದೆ. ಸೋಷಲ್‌ಮೀಡಿಯಾದಲ್ಲಿ ಎರಡು ಲಕ್ಷಕ್ಕೂ ತಲುಪಿದೆ. ಚಿತ್ರ ತಂಡಕ್ಕೆ ಇದು ಖುಷಿ ಕೊಟ್ಟಿದೆ. ಹರ್ಷಿತ್, ನವೀನ್, ಸಮೀರ್ ನಗರದ್, ಮಧು ಮತ್ತು ವಿಶಾಲ್ ಈ ಚಿತ್ರದ ನಾಯಕರು. ಹಾಗೆಯೇ ಬಿಂದುಶ್ರೀ ಈ ಚಿತ್ರದ ನಾಯಕಿ.

ಉಳಿದಂತೆ ʼಪಾರುʼ ಖ್ಯಾತಿಯ ಪವಿತ್ರಾ ಬಿ. ನಾಯಕ್‌, ಮಂಜುಳಾ ರೆಡ್ಡಿ , ರಾಕ್‌ಲೈನ್‌ಸುಧಾಕರ್‌ ಚಿತ್ರದ ಪೋಷಕ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಬೆಂಗಳೂರು, ಶನಿವಾರಸಂತೆ, ಭಟ್ಕಳ ಸುತ್ತಮುತ್ತ ಸುಮಾರು 45 ದಿನಗಳ ಕಾಲ ಚಿತ್ರೀಕರಣ ನಡೆದಿದೆ. ಚಿತ್ರದಲ್ಲಿ ೩ ಹಾಡುಗಳಿದ್ದು, ನಂದು ತಿಪ್ಪು ಸಂಗೀತ ಸಂಯೋಜನೆ ಮಾಡಿದ್ದಾರೆ. ಪುರುಷೋತ್ತಮ್‌ಛಾಯಾಗ್ರಹಣ ಮಾಡಿದ್ದಾರೆ. ನಿಖಿಲ್‌ಸಂಭಾಷಣೆ ಬರೆದಿದ್ದಾರೆ. ಚಿತ್ರಕತೆಗೆ ರುದ್ರೇಶ್‌ಸಾಥ್‌ನೀಡಿದ್ದಾರೆ. ವೆಂಕಿ ಸಂಕಲನ ಮಾಡಿದ್ದಾರೆ. ಚಿತ್ರವನ್ನು ಇದೇ ವಾರ ತೆರೆಗೆ ಬರುತ್ತಿರುವ ಚಿತ್ರಕ್ಕೆ ಜನ ರೆಸ್ಪಾನ್ಸ್ ಹೇಗಿರುತ್ತೆ ಅನ್ನೋದು ಕುತೂಹಲದ ಸಂಗತಿ.

Categories
ಸಿನಿ ಸುದ್ದಿ

ಹೊಸಬರ ಹೊಸ ವೇಷ – ವಿನೋದ್‌ ಪ್ರಭಾಕರ್‌ ಶುಭಹಾರೈಕೆ

ಒಂದೇ ಹಂತದಲ್ಲಿ ಶೂಟಿಂಗ್‌ ಮುಗಿಸೋ ಯೋಚನೆ

ದಿನ ಕಳೆದಂತೆ ಹೊಸ ಚಿತ್ರಗಳು ಸೆಟ್ಟೇರುತ್ತಲೇ ಇವೆ. ಆ ಸಾಲಿಗೆ ಈಗ ಹೊಸಬರು ಸೇರಿ ಮಾಡುತ್ತಿರುವ “ವೇಷ” ಕೂಡ ಸೇರಿದೆ. ಹಂಸಿನಿ ಕ್ರಿಯೇಷನ್ಸ್‌ ಬ್ಯಾನರ್‌ನಲ್ಲಿ ತಯಾರಾಗುತ್ತಿರುವ “ವೇಷ”ಕ್ಕೆ ಮಹಾಕಾಳಿ ದೇವಾಲಯದಲ್ಲಿ ಮುಹೂರ್ತ ನಡೆದಿದೆ. ಮುಹೂರ್ತಕ್ಕೆ ಆಗಮಿಸಿದ ನಟ ವಿನೋದ್‌ ಪ್ರಭಾಕರ್‌ ಅವರು ಹೊಸಬರ ತಂಡಕ್ಕೆ ಶುಭಹಾರೈಸಿದ್ದಾರೆ. ಜನವರಿ 27ರಿಂದ ಒಂದೇ ಹಂತದಲ್ಲಿ ಚಿತ್ರೀಕರಣ ಮಾಡುವ ಯೋಚನೆ ಚಿತ್ರತಂಡಕ್ಕಿದೆ. ಬಹುತೇಕ ಹೊಸಬರೇ ಸೇರಿ ಈ ಚಿತ್ರ ಮಾಡುತ್ತಿದ್ದು, ಈಗಾಗಲೇ “ಉಡುಂಬಾ”, “ಗೂಳಿಹಟ್ಟಿ” ಚಿತ್ರ ಸೇರಿದಂತೆ ಹಲವು ಚಿತ್ರಗಳಲ್ಲಿ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ ಅನುಭವ ಇರುವ ಪವನ್ ಕೃಷ್ಣ “ವೇಷ” ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಇನ್ನು, ರಘು ಈ ಚಿತ್ರದ ಹೀರೋ. ಇದರೊಂದಿಗೆ ನಿರ್ಮಾಪಕರಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ನಿರ್ದೇಶನದ ಚಿತ್ರದ ಬಗ್ಗೆ ಮಾತನಾಡುವ ಪವನ್‌ಕೃಷ್ಣ, ” ಇದೊಂದು ಮಾಸ್, ಕಾಮಿಡಿ, ಸೆಂಟಿಮೆಂಟ್ ಮತ್ತು ಸಸ್ಪೆನ್ಸ್ ಹೀಗೆ ಈ ನಾಲ್ಕು ಅಂಶಗಳು “ವೇಷ” ಚಿತ್ರದ ಹೈಲೈಟ್‌. ಜೀವನದಲ್ಲಿ ಪ್ರತಿಯೊಬ್ಬರು ಒಂದೊಂದು “ವೇಷ” ಹಾಕಿರುತ್ತಾರೆ. ಇಲ್ಲಿ ಎಲ್ಲರಿಗೂ ಒಂದೊಂದು ವೇಷವಿದೆ. ಅದನ್ನು ಹಾಕಿದ ಉದ್ದೇಶ ಏನು ಎಂಬುದನ್ನು ಸಿನಿಮಾದಲ್ಲಿಯೇ ನೋಡಿ ಎನ್ನುವ ಅವರು, ಜನವರಿ 27ರಿಂದ ಚಿತ್ರೀಕರಣಕ್ಕೆ ಚಾಲನೆ ಸಿಗಲಿದ್ದು, ಉಡುಪಿ, ಚಿಕ್ಕಮಗಳೂರು, ಕುಂದಾಪುರ ಸೇರಿದಂತೆ ಹಲವೆಡೆ ಚಿತ್ರೀಕರಣ ನಡೆಯಲಿದೆ. ಒಟ್ಟಾರೆ 40 ದಿನಗಳ ಒಂದೇ ಹಂತದ ಚಿತ್ರೀಕರಣ ನಡೆಸಿ, ಪೂರ್ಣಗೊಳಿಸುವ ಉದ್ದೇಶವಿದೆ ಎನ್ನುತ್ತಾರೆ ನಿರ್ದೇಶಕರು.

ಕಿರುತೆರೆಯ ನಟಿ ವಾಣಿಶ್ರೀ ಚಿತ್ರದಲ್ಲಿ ತಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ, “ಯುವ ತಂಡದ ಜತೆಗೆ ಕೆಲಸ ಮಾಡುತ್ತಿರುವುದಕ್ಕೆ ಖುಷಿ ಇದೆ. ಹೊಸಬರ ಸಿನಿಮಾಗಳು ಹೆಚ್ಚೆಚ್ಚು ಬರಬೇಕು. ಅವರಿಂದಲೇ ನಮಗೂ ಕೆಲಸ ಸಿಗುತ್ತದೆ” ಎನ್ನುತ್ತಾರೆ ವಾಣಿಶ್ರೀ. ಚಿತ್ರದಲ್ಲಿ ನಾಯಕನಾಗಿ ನಟಿಸುವುದರ ಜೊತೆಗೆ ನಿರ್ಮಾಪಕನಾಗಿಯೂ ರಘು ಕಾಣಿಸಿಕೊಳ್ಳುತ್ತಿದ್ದಾರೆ. ಮೂಲತಃ ರಘು ರಂಗಭೂಮಿ ಹಿನ್ನಲೆಯಿಂದ ಬಂದವರು. ಹಲವು ನಾಟಕ ಬರೆದು ಅಭಿನಯಿಸಿದ್ದಾರೆ. ಕೆಲ ವರ್ಷಗಳಿಂದ ರಂಗಭೂಮಿಯಿಂದಲೂ ದೂರ ಉಳಿದಿದ್ದ ಅವರೀಗ “ವೇಷ” ಸಿನಿಮಾ ಮೂಲಕ ಎಂಟ್ರಿಯಾಗುತ್ತಿದ್ದಾರೆ. ಹೊಸ ಬಗೆಯ ಕಥೆಯೊಂದಿಗೆ ಆಗಮಿಸುತ್ತಿರುವ ಅವರಿಗೆ ಚಿತ್ರದ ಮೇಲೆ ನಂಬಿಕೆ ಇದೆಯಂತೆ.


ಮಂಜು ಪಾವಗಡ ಚಿತ್ರದಲ್ಲಿ ಶಿಕ್ಷಕನ ಪಾತ್ರ ಮಾಡಿದರೆ, ಜಯ್ ಶೆಟ್ಟಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಸೌಖ್ಯ ಗೌಡ ಮತ್ತು ನಿಧಿ ಮಾರೋಲಿ ನಾಯಕಿಯರು. ಅವರಿಲ್ಲಿ ಸಾಂಪ್ರದಾಯಿಕ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನೇಹಾ ಗೌಡ ಇಲ್ಲಿ ತಂಗಿ ಪಾತ್ರ ಮಾಡುತ್ತಿದ್ದಾರೆ. ಚಿತ್ರದ 3 ಹಾಡುಗಳಿಗೆ ಮನೀಷ್ ಮೋಯ್ಲಿ ಸಾಹಿತ್ಯ ಬರೆದಿದ್ದಾರೆ. ಉತ್ತಮ್ ಸಾರಂಗ್ ಸಂಗೀತವಿದೆ. ಕಿರಿಕ್ ಹುಡುಗ ಕೀರ್ತನ್ ಶೆಟ್ಟಿ ಕ್ರಿಯೇಟಿವ್ ಹೆಡ್ ಆಗಿದ್ದಾರೆ. ಸುರೇಂದ್ರ ಪಣಿಯೂರ್ ಛಾಯಾಗ್ರಹಣ ಮಾಡಿದರೆ, ಸನತ್ ಉಪ್ಪುಂದ ಸಂಕಲನವಿದೆ. ಪವನ್‌ ಕುಮಾರ್‌ ಸಂಭಾಷಣೆ ಬರೆದಿದ್ದಾರೆ. ಜಾಗ್ವಾರ್ ಸಣ್ಣಪ್ಪ ಸಾಹಸವಿದೆ. ಪಿ. ರಾಮ್ ನೃತ್ಯ ನಿರ್ದೇಶನ ಮಾಡಿದ್ದಾರೆ.

Categories
ಸಿನಿ ಸುದ್ದಿ

ಪೆಂಟಗನ್‌ ಸಿನಿಮಾದೊಳಗೆ ಕಾಗೆ , ಬಾ ಅಂತ ಕರೆದರು ಗುರುದೇಶ ಪಾಂಡೆ !

ಸೋಷಲ್‌ ಮೀಡಿಯಾದಲ್ಲಿ ವೈರಲ್‌ ಆಯ್ತು ಯೂನಿಕ್‌ ಕಾನ್ಸೆಫ್ಟ್‌ ನ ಮೋಷನ್‌ ಪೋಸ್ಟರ್

ಕನ್ನಡದಲ್ಲೂ ಕ್ರಿಯೇಟರ್ಸ್‌ ಇದ್ದಾರೆ ಅಂತ ತೋರಿಸುವುದೇ ಪೆಂಟಗನ್‌ʼ ಅಂದ್ರು ಗುರು

ಆಂಥಾಲಜಿ ಕಥಾ ಹಂದರದ ಸಿನಿಮಾಗಳ ಪೈಕಿ ಕನ್ನಡದಲ್ಲೀಗ ಸದ್ಯಕ್ಕೆ ಸದ್ದು ಮಾಡುತ್ತಿರುವ ಸಿನಿಮಾ ʼಪೆಂಟಗನ್ʼ.‌ ಐದು ಕತೆ, ಐವರು ನಿರ್ದೇಶನದ ಮೂಲಕ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ಬಂಡವಾಳ ಹಾಕಿದವರು ನಿರ್ದೇಶಕ ಗುರುದೇಶಪಾಂಡೆ. ಈಗ ಈ ಚಿತ್ರ ಮೋಷನ್‌ ಪೋಸ್ಟರ್‌ ಮೂಲಕ ಸಿಕ್ಕಾಪಟ್ಟೆ ಸುದ್ದಿ ಮಾಡುತ್ತಿದೆ. ಜೈಂಕಾರ್‌ ಮ್ಯೂಜಿಕ್‌ ಆಡಿಯೋ ಸಂಸ್ಥೆಯ ಆಧಿಕೃತ ಯುಟ್ಯೂಬ್‌ ಚಾನೆಲ್‌ ಮೂಲಕ ಹೊರ ಬಂದಿರುವ ಈ ಮೋಷನ್‌ ಪೋಸ್ಟರ್‌ ಸೋಷಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ವೀಕ್ಷಕರಿಂದ ಅದ್ಭುತವಾದ ರೆಸ್ಪಾನ್ಸ್‌ ಸಿಕ್ಕಿದೆ. ಅಪಾರ ಮೆಚ್ಚುಗೆ ಕೂಡ ಸಿಕ್ಕಿದೆ. ಅದೆಲ್ಲದಕ್ಕೂ ಕಾರಣವಾಗಿದ್ದು ಯೂನಿಕ್‌ ಕಾನ್ಸೆಫ್ಟ್‌ನ ಮೋಷನ್‌ ಪೋಸ್ಟರ್‌.

ಐದು ಕತೆಗಳು, ಹಾಗೆಯೇ ಐದು ಮಂದಿ ನಿರ್ದೇಶಕರ ಸಿನಿಮಾ ಅಂದಾಗ ಮೊದಲು ಕುತೂಹಲ ಇರೋದು ಸಿನಿಮಾದ ಬಗ್ಗೆ ಅಲ್ಲ, ಬದಲಿಗೆ ಅದರ ಪೋಸ್ಟರ್‌, ಆ ನಂತರ ಟೀಸರ್‌, ತದನಂತರ ಟ್ರೇಲರ್. ನಾಳೆ “ಪೆಂಟಗನ್‌ʼ ಚಿತ್ರದ ಮೋಷನ್‌ ಪೋಸ್ಟರ್‌ ಲಾಂಚ್‌ ಅಗುತ್ತೆ ಅಂದಾಗಿನಿಂದಲೂ ಚಿತ್ರ ಪ್ರೇಕ್ಷಕರಲ್ಲಿ ಇದ್ದ ಕುತೂಹಲವೂ ಅದೇ ಆಗಿತ್ತು. ಅಂತಹ ಕುತೂಹಲಕ್ಕೆ ತೆರೆ ಬಿದ್ದಿದ್ದು ಅದರ ಮೋಷನ್‌ ಪೋಸ್ಟರ್‌ ಹೊರ ಬಂದಾಗಲೇ.

ಇದು ಎಲ್ಲಾ ಆಂಥಾಲಜಿ ಸಿನಿಮಾಗಳ ಬಗೆಗೂ ಹುಟ್ಟಬಹುದಾದ ಸಹಜ ಕುತೂಹಲವೂ ಕೂಡ. ಯಾಕಂದ್ರೆ, ಬೇರೆ ಬೇರೆಯಾದ ಐದು ಕತೆಗಳನ್ನು ಒಂದೆಡೆ ಜೋಡಿಸಿಕೊಂಡು ಆ ಮೂಲಕ ಸಿನಿಮಾ ಮಾಡುತ್ತೇವೆ, ಅದನ್ನು ಜನರಿಗೆ ತೋರಿಸಿ ರಂಜಿಸುತ್ತೇವೆ ಅನ್ನೋದು ಅಷ್ಟು ಸುಲಭದ ಕೆಲಸ ಅಲ್ಲ. ಅದೊಂದು ಸವಾಲಿನ ಕೆಲಸ. ಆದರೂ ಈಗ “ಪೆಂಟಗನ್‌ʼ ಚಿತ್ರ ತನ್ನ ಪೋಸ್ಟರ್ಸ್‌ ಹಾಗೂ ಮೋಷನ್‌ ಪೋಸ್ಟರ್‌ ಮೂಲಕ ಒಂದಷ್ಟು ಯೂನಿಕ್‌ ಕಾನ್ಸೆಫ್ಟ್‌ ತೋರಿಸಿ ಕುತೂಹಲ ಮೂಡಿಸಿದ್ದು ಗಮನಾರ್ಹ.

ಅ ೧ ನಿಮಿಷ ೨ ಸೆಕೆಂಡುಗಳಷ್ಟು ಅವದಿಯ ಅದರ ಮೋಷನ್‌ ಪೋಸ್ಟರ್‌ ನಲ್ಲಿ ಯೂನಿಕ್‌ ಆದ ನೋಟವಿದೆ. ಬಹುತೇಕ ಗ್ರಾಫಿಕ್ಸ್‌ ಬಳಸಿಯೇ ಈ ಮೋಷನ್‌ ಪೋಸ್ಟರ್‌ ಕ್ರಿಯೇಟ್‌ ಮಾಡಲಾಗಿದೆ. ಅಲ್ಲಿಯೇ ಕಾಗೆಯೇ ಹೈಲೈಟ್ಸ್‌. ಕಾಗೆಯನ್ನು ಅಪಶಕುನ ಅಂತೆಲ್ಲ ತಿಳಿಯುವವರಿಗೆ ಈ ಕಾಗೆ ಅಂತಹದಲ್ಲ ಅಂತಾರೆ ನಿರ್ದೇಶಕ ಕಮ್‌ ನಿರ್ಮಾಪಕ ಗುರುದೇಶ ಪಾಂಡೆ. ಇನ್ನು ಈ ಚಿತ್ರದ ಮೋಷನ್‌ ಪೋಸ್ಟರ್‌ ಲಾಂಚ್‌ ಆಗುವ ಮುನ್ನವೇ ಅದರ ಐದು ಕತೆಗಳ ಬೇರೆ ಬೇರೆಯ ವಿಭಿನ್ನ ಪೋಸ್ಟರ್‌ ಆಗಲೇ ಸೋಷಲ್‌ ಮೀಡಿಯಾದಲ್ಲಿ ಹರಿದಾಡಿದ್ದವು. ಚಿತ್ರತಂಡವೇ ಆ ಪೋಸ್ಟರ್‌ ಲಾಂಚ್‌ ಮಾಡಿತ್ತು. ಅವೆಲ್ಲವೂ ಅಲ್ಲಿನ ಕತೆಗಳಿಗೆ ಪೂರಕವಾಗಿ ಬಂದಿದ್ದವು. ಒಬ್ಬೊಬ್ಬರದು ಒಂದೊಂದು ಥರ.

ಒಬ್ಬರದು ಸ್ವೀಟೆಸ್ಟ್‌ ಆಗಿದ್ದರೆ, ಮತ್ತೊಬ್ಬರದು ಹಾಟೆಸ್ಟ್‌, ಮಗದೊಬ್ಬರದು ಸ್ವೀಟು ಮತ್ತು ಹಾಟ್‌ ಗೆ ವಿರುದ್ಧವಾದ ಗನ್‌ ಪಾಯಿಂಟ್‌. ಅದರಾಚೆ ಮೋಷನ್‌ ಪೋಸ್ಟರ್‌ ಮಾತ್ರ ಅವೆಲ್ಲವುದರ ಮಿಕ್ಸರ್.‌ ತುಂಬಾ ಡಿಫೆರೆಂಟ್‌ ಆಗಿಯೇ ಮೂಡಿ ಬಂದಿದೆ. ಐದು ಜನ ನಿರ್ದೇಶಕರ ಕತೆಗಳು ಹೈಲೈಟ್ಸ್‌ ಆಗುವ ಹಾಗೆ ಮೋಷನ್‌ ಪೋಸ್ಟರ್‌ ಕ್ರಿಯೇಟ್‌ ಮಾಡಿರುವುದು ವಿಶೇಷವಾಗಿದೆ. ಅಷ್ಟು ಕತೆಗಳಿಗೆ ಕೊಂಡಿಯಾಗಿ ಕಾಗೆಯನ್ನು ತೋರಿಸಲಾಗಿದೆ. ಅಲ್ಲಿನ ಕತೆಗಳಿಗೆ ಕಾಗೆಗೂ ಅದೆಂತಹದೋ ನಂಟು ಗೊತ್ತಿಲ್ಲ. ಅದಕ್ಕೆ ಚಿತ್ರ ನೋಡಿ ಅಂತಾರೆ ನಿರ್ದೇಶಕರು. ರಿಯಲ್‌ ಸ್ಟಾರ್‌ ಉಪೇಂದ್ರ ಈ ಪೊಸ್ಟರ್‌ ಲಾಂಚ್‌ ಮಾಡಿ ಶುಭ ಹಾರೈಸಿದ್ದಾರೆ.

ಇನ್ನು ಜೀ ಸಿನಿಮಾಸ್‌ ಪ್ರೊಡಕ್ಷನ್‌ ಅಡಿಯಲ್ಲಿ ಗುರು ದೇಶಪಾಂಡೆ ಈ ಚಿತ್ರದ ನಿರ್ಮಾಣಕ್ಕೆ ಬಂಡವಾಳ ಹಾಕಿದ್ದಲ್ಲದೆ, ಅದರಲ್ಲಿನ ಐದು ಕತೆಗಳಲ್ಲಿ ಒಂದು ಕತೆಗೆ ಆಕ್ಷನ್‌ ಕಟ್‌ ಹೇಳಿದ್ದಾರೆ.ಉಳಿದಂತೆ ಚಂದ್ರ ಮೋಹನ್‌, ಕಿರಣ್‌ ಕುಮಾರ್‌, ರಘು ಶಿವಮೊಗ್ಗ ಹಾಗೂ ಆಕಾಶ್‌ ಶ್ರೀವಾತ್ಸ ನಾಲ್ಕು ಕತೆಗಳಿಗೆ ನಿರ್ದೇಶನ ಮಾಡಿದ್ದಾರೆ. ಐದು ಕತೆಗಳ ಪೈಕಿ ಈಗಾಗಲೇ ಮೂರು ಕತೆಗಳಿಗೆ ಚಿತ್ರೀಕರಣ ಮುಗಿದಿದೆ. ಬೆಂಗಳೂರು ಹಾಗೂ ಹೊರವಲಯದ ವಿವಿಧ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆದಿದೆಯಂತೆ. ಉಳಿದ ಎರಡು ಕತೆಗಳಿಗೆ ಇನ್ನು ಚಿತ್ರೀಕರಣ ಬಾಕಿ ಇದೆ. ಇನ್ನು ಐದು ಕತೆಗಳಲ್ಲಿ ಒಂದು ಕತೆಗೆ ಅದ್ವೈಂತ ಗುರುಮೂರ್ತಿ ಛಾಯಾಗ್ರಹಣ ಮಾಡಿದ್ದರೆ, ಉಳಿದ ನಾಲ್ಕು ಕತೆಗಳಿಗೆ ಕಿರಣ್‌ ಹಂಪಾಪುರ ಕ್ಯಾಮೆರಾ ಹಿಡಿಯುತ್ತಿದ್ದಾರೆ. ಕಲಾವಿದರು ಸೇರಿದಂತೆ ಉಳಿದ ವಿವರಗಳನ್ನು ಚಿತ್ರದ ಇಷ್ಟರಲ್ಲಿಯೇ ನೀಡಲಿದೆಯಂತೆ.

 

Categories
ಸಿನಿ ಸುದ್ದಿ

ಪೊಗರು ರಿಲೀಸ್‌ ಬಗ್ಗೆ ಕೊನೆಗೂ ರಶ್ಮಿಕಾ ಮಾತಾಡಿಬಿಟ್ಟರು!

ರಿಲೀಸ್‌ ಕುರಿತು ಬಾಯಿಬಿಡದ ರಶ್ಮಿಕಾಗೆ ಮಾತಿನ ಬಿಸಿ ತಟ್ಟಿತ್ತು

ಟ್ವೀಟ್‌ ಮೂಲಕ ಜೈ ಅಂದ ಮಂದಣ್ಣ

ಧ್ರುವಸರ್ಜಾ ಅಭಿನಯದ “ಪೊಗರು” ಸಿನಿಮಾ ಫೆಬ್ರವರಿ ೧೯ರಂದು ಬಿಡುಗಡೆಯಾಗಲಿದೆ. ಈ ಕುರಿತಂತೆ, ಸ್ವತಃ ಧ್ರುವ ಸರ್ಜಾ ಅವರೇ ವಿಡಿಯೋ ಮಾಡುವ ಮೂಲಕ ದಿನಾಂಕವನ್ನು ಘೋಷಣೆ ಮಾಡಿದ್ದರು. ಲಾಕ್‌ಡೌನ್‌ ಬಳಿಕ ಬಿಡುಗಡೆಯಾಗುತ್ತಿರುವ ಬಿಗ್‌ ಬಜೆಟ್‌ ಸಿನಿಮಾ ಇದಾಗಿದ್ದು, ಧ್ರುವ ಸರ್ಜಾ ಅವರ ಅಭಿಮಾನಿಗಳಿಗಂತೂ ಸಖತ್‌ ಖುಷಿಯಾಗಿದೆ. ಇನ್ನು, ಈ ಚಿತ್ರ ಬಿಡುಗಡೆಯ ದಿನಾಂಕವನ್ನು ಘೋಷಣೆ ಮಾಡುತ್ತಿದ್ದಂತೆಯೇ, ಚಿತ್ರತಂಡ ಕೂಡ ಬಿಡುಗಡೆಯ ತಯಾರಿಯನ್ನು ಜೋರಾಗಿಯೇ ನಡೆಸಿದೆ.

ಆದರೆ, ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ ಮಾತ್ರ, “ಪೊಗರು” ಚಿತ್ರದ ರಿಲೀಸ್‌ ಡೇಟ್‌ ಅನೌನ್ಸ್‌ ಆಗಿದ್ದರೂ, ಕೂಡ ಅವರು ಎಲ್ಲೂ ಸಹ ಚಿತ್ರದ ಬಗ್ಗೆ ಒಂದೇ ಒಂದು ಪೋಸ್ಟ್‌ ಮಾಡಿಲ್ಲ. ಆ ಕುರಿತಂತೆ ಹೇಳಿಕೊಂಡಿರಲಿಲ್ಲ. ಕನ್ನಡ ಚಿತ್ರರಂಗದಿಂದಲೇ ಎಂಟ್ರಿಯಾಗಿ, ಈಗ ಬೇರೆ ಬೇರೆ ಭಾಷೆಯ ಚಿತ್ರಗಳಲ್ಲಿ ನಟಿಸುತ್ತಿರುವ ರಶ್ಮಿಕಾ ಮಂದಣ್ಣ, ಅವರು ತಮ್ಮ ಚಿತ್ರದ ಕುರಿತು ಮಾತನಾಡಿಲ್ಲ ಎಂಬ ಆಕ್ರೋಶಕ್ಕೆ ಕಾರಣರಾಗಿದ್ದರು.

ಹಲವು ಜನರು ಟ್ವೀಟ್‌ ಮಾಡುವ ಮೂಲಕ ಕಾಲೆಳೆದಿದ್ದರು. ಆಮೇಲೆ ಎಚ್ಚೆತ್ತುಕೊಂಡಿರುವ ರಶ್ಮಿಕಾ ಮಂದಣ್ಣ, ಇದೀಗ, ಧ್ರುವಸರ್ಜಾ ಅವರು ಹಂಚಿಕೊಂಡಿರುವ ಪೋಸ್ಟ್‌ವೊಂದನ್ನು ತಮ್ಮ ಟ್ವೀಟ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಪೊಗರು ರಿಲೀಸ್‌ಗೆ ಕೇವಲ ೩೦ ದಿನಗಳು ಎಂದು ಹಾಕಿಕೊಂಡಿದ್ದಾರೆ. ಸದ್ಯಕ್ಕೆ ರಶ್ಮಿಕಾ ಮಂದಣ್ಣ, ಟ್ವೀಟ್‌ ಮಾಡಿದ ಮೇಲೆ, ಅವರ ವಿರುದ್ಧದ ಮಾತುಗಳು ಕಡಿಮೆಯಾಗುತ್ತಿವೆ.
ಅಂದಹಾಗೆ, ನಂದಕಿಶೋರ್‌ ನಿರ್ದೇಶನದ ಈ ಚಿತ್ರ ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಈಗಾಗಲೇ “ಕರಾಬು” ಹಾಡು ಎಲ್ಲೆಲ್ಲೂ ಸದ್ದು ಮಾಡಿದೆ. ಅಷ್ಟೇ ಅಲ್ಲ, ಸ್ಯಾಂಡಲ್‌ವುಡ್‌ನ ಬಹು ನಿರೀಕ್ಷೆಯ ಸಿನಿಮಾಗಳಲ್ಲಿ “ಪೊಗರು” ಸಿನಿಮಾ ಕೂಡ ಒಂದು. ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ “ಪೊಗರು” ಕೊನೆಗೂ ಚಿತ್ರಮಂದಿರಕ್ಕೆ ಬರುತ್ತಿದೆ. ಅಭಿಮಾನಿಗಳು ಇದೀಗ ಚಿತ್ರ ನೋಡಲು ತುದಿಗಾಲ ಮೇಲೆ ನಿಂತಿದ್ದಾರೆ.

Categories
ಸಿನಿ ಸುದ್ದಿ

ಸಿನಿಮಾ ಪ್ರೀತಿಸೋ ಹುಡುಗರಿಗೆ ಸೈಕೋ ಕಾಟ !

ಅಂಜು ಎಂಬ ಹೊಸಬರ ಸಸ್ಪೆನ್ಸ್‌ ಥ್ರಿಲ್ಲರ್‌

ಎರಡನೇ ಹಂತಕ್ಕೆ ಚಿತ್ರತಂಡ ಸಜ್ಜು

ಕನ್ನಡದಲ್ಲಿ ಈಗಂತೂ ಹೊಸಬರ ಅನೇಕ ಸಿನಿಮಾಗಳು ಸೆಟ್ಟೇರುತ್ತಿವೆ. ಆ ಸಾಲಿಗೆ “ರಸಗುಲ್ಲ ಅಂಜು” ಎಂಬ ಸಿನಿಮಾ ಕೂಡ ಸೇರಿದೆ. ಈ ಚಿತ್ರಕ್ಕೆ ರಾಜೀವ್‌ ಕೃಷ್ಣ ನಿರ್ದೇಶಕರು. ಕಥೆ, ಚಿತ್ರಕಥೆ ಕೂಡ ಇವರದೇ. ಈಗಾಗಲೇ ನಿರ್ದೇಶಕರು ಸದ್ದಿಲ್ಲದೆಯೇ ಮೊದಲ ಹಂತವನ್ನು ಮುಗಿಸಿದ್ದಾರೆ. ಸದ್ಯಕ್ಕೆ ಏಳು ದಿನಗಳ ಚಿತ್ರೀಕರಣ ಬಾಕಿ ಉಳಿದಿದ್ದು, ತೆಲುಗಿನ ನಟ ಬಾನುಚಂದರ್‌ ಹಾಗೂ ಅಭಿಜಿತ್‌ ಅವರ ಡೇಟ್‌ ನೋಡಿಕೊಂಡು ಚಿತ್ರೀಕರಿಸಿದರೆ ಚಿತ್ರೀಕರಣ ಮುಕ್ತಾಯ. ಇದು ಟೆನ್ ಟ್ರೀಸ್ ಫಿಲಂ ಪ್ರೊಡಕ್ಷನ್ ಹೌಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿದೆ. ಇತ್ತೀಚೆಗಷ್ಟೇ ಚಿಂತಾಮಣಿಯಲ್ಲಿರುವ ಶ್ರೀಪ್ರಸನ್ನ ಆಂಜನೇಯ ದೇವಾಲಯದಲ್ಲಿ ಮುಹೂರ್ತ ನೆರವೇರಿತ್ತು.

ಅಷ್ಟೇ ವೇಗದಲ್ಲಿ ನಿರ್ದೇಶಕರು ಮೊದಲ ಹಂತವನ್ನು ಮುಗಿಸಿದ್ದಾರೆ. ಚಿತ್ರಕ್ಕೆ “ಖೇಲ್” ಚಿತ್ರದ ನಿರ್ಮಾಪಕ ಮಾರ್ಕೆಟ್ ಸತೀಶ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರೆ, “ಲೆಕ್ಕಾಚಾರ” ಚಿತ್ರದ ನಿರ್ಮಾಪಕ ಆರ್.ಚಂದ್ರು ಕ್ಯಾಮೆರಾ ಸ್ವಿಚ್ ಆನ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭಕೋರಿದ್ದಾರೆ. ಈ ಚಿತ್ರದ ಕುರಿತು ಹೇಳುವ ನಿರ್ದೇಶಕ, ರಾಜೀವ್‌ ಕೃಷ್ಣ, “ಇದೊಂದು ಗೆಳೆಯ, ಗೆಳತಿಯರ ನಡುವಿನ ಚಿತ್ರ. ಬೆಂಗಳೂರಿನಿಂದ ಹೈದರಾಬಾದ್‌ಗೆ ಸಿನಿಮಾ ಆಡಿಷನ್‌ಗಾಗಿ ಪ್ರಯಾಣ ಬೆಳೆಸುವ ಮೂವರು ನಾಯಕ, ನಾಯಕಿಯರ ನಡುವೆ ಐದು ಮಂದಿ ಸೈಕೋಗಳು ಎಂಟ್ರಿಯಾಗುತ್ತಾರೆ. ಅವರಿಂದ ಆಗುವವಂತಹ ಅನಾಹುತಗಳೇನು, ಅವರು ಆ ಸೈಕೋಗಳಿಂದ ಪಾರಾಗಲು ಹೇಗೆಲ್ಲಾ ಕಷ್ಟಪಡುತ್ತಾರೆ ಎಂಬ ಕಥಾಹಂದರ ಇಲ್ಲಿದೆ.

ಇದೊಂದು ಸಸ್ಪೆನ್ಸ್‌ ಥ್ರಿಲ್ಲರ್‌ ಚಿತ್ರವಾಗಿದ್ದು, ಹಿರಿಯ ನಟ ಅಭಿಜಿತ್ ವಿಶೇಷವಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಬಿಗ್‌ಬಾಸ್ ಬೆಡಗಿ ಸೋನು ಪಾಟೀಲ್, ರಮ್ಯ, ಯಶಸ್ಸಿನಿ ನಟಿಸುತ್ತಿದ್ದಾರೆ.  ನಾಯಕರಾಗಿ ರಾಜ್‌ಪ್ರತೀಕ್, ಉಲಿಬೆಲೆ ರಾಜೇಶ್ ರೆಡ್ಡಿ, ಹಾಗೂ ಸಿದ್ಧಾರ್ಥ ಇದ್ದಾರೆ. ಖಳನಾಯಕರಾಗಿ ಮುಂಬೈನ ರಾಜೇಶ್ ಮುಂಡ್ಕೂರ್, ಆನಂದ್ ರಂಗ್ರೇಜ್‌ ನಟಿಸುತ್ತಿದ್ದಾರೆ. ಇವರೊಂದಿಗೆ ಚಿತ್ರದಲ್ಲಿ ನರಸಾಪುರ ಸಂದೀಪ್, ಭಕ್ತರಹಳ್ಳಿ ರವಿ, ರೇಣುಕಾ ಜೀವನ್, ಶಿವು, ಅಬ್ದುಲ್ ರೆಹಮಾನ್ ಇದ್ದಾರೆ. ಚಿತ್ರಕ್ಕೆ ವಿನುಮನಸು ಸಂಗೀತವಿದೆ. ರಮೇಶ್ ಕೊಯಿರಾ ಛಾಯಾಗ್ರಹಣವಿದೆ.

ಮಲ್ಲಿ ಸಂಕಲನ ಮಾಡಿದರೆ, ಸುರೇಶ್ ಕಂಬಳಿ ಸಾಹಿತ್ಯವಿದೆ. ಶಿವು ಸಾಹಸ ಮಾಡಿದ್ದಾರೆ. ಭಕ್ತರಹಳ್ಳಿ ರವಿ ನಿರ್ಮಾಣ ನಿರ್ವಹಣೆ ಇದೆ. ಡಾ.ಪ್ರಭು ಗಂಜಿಹಾಳ ಮತ್ತು ಡಾ.ವೀರೇಶ್ ಹಂಡಗಿ ಕಲಾನಿರ್ದೇನವಿದೆ. ಈಗಾಗಲೇ ಚಿಕ್ಕಬಳ್ಳಾಪುರ ಚಿಂತಾಮಣಿ ನಂದಿಗಿರಿ ಸೇರಿದಂತೆ ಹಲವು ಕಡೆ ಚಿತ್ರೀಕರಣ ಮಗಿಸಿರುವ ಚಿತ್ರತಂಡ ಎರಡನೇ ಹಂತದ ಚಿತ್ರೀಕರಣಕ್ಕಾಗಿ ಸವದತ್ತಿ ಮತ್ತು ಗಜೇಂದ್ರಗಡ ಕಡೆ ಪ್ರಯಾಣ ಬೆಳೆಸಲಿದೆ.

Categories
ಗಾಳಿ ಮಾತು ಸಿನಿ ಸುದ್ದಿ

ಟಕಿಲಾ ನಶೆ ಯಲ್ಲಿ ನಿಖಿತಾ ಸ್ವಾಮಿ !

ನಾಗಚಂದ್ರ ನಿರ್ಮಾಣ ಹಾಗೂ ಪ್ರವೀಣ್‌ ನಾಯಕ್‌ ನಿರ್ದೇಶನದ ಚಿತ್ರದಲ್ಲಿ ಧರ್ಮ ಕೀರ್ತಿರಾಜ್‌ ಹೀರೋ, ನಿಖಿತಾ ಸ್ವಾಮಿ ಹೀರೋಯಿನ್

ನಿರ್ದೇಶಕ ಮರಡಿಹಳ್ಳಿ ನಾಗಚಂದ್ರ ಈಗ ಚಿತ್ರ ನಿರ್ಮಾಣದ ಸಾಹಸಕ್ಕೆ ಮುಂದಾಗಿದ್ದಾರೆ. ʼವಿದ್ಯಾರ್ಥಿʼ ಹಾಗೂ “ ಮುನಿಯʼ ಹಾಗೂ “ ಜನಧನ್‌ʼ  ಚಿತ್ರಗಳ ನಿರ್ದೇಶನದ ನಂತರವೀಗ ಅವರೇ ಒಂದು ಚಿತ್ರದ  ನಿರ್ಮಾಣಕ್ಕೆ ಮುಂದಾ ಗಿದ್ದಾರೆ. ಈ ಚಿತ್ರಕ್ಕೆ ಕೆ. ಪ್ರವೀಣ್‌ ನಾಯಕ್‌  ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ.  ಅಂದ ಹಾಗೆ ಈ ಜೋಡಿಯ ಚಿತ್ರವೇ “ಟಕಿಲಾʼ.

ಚಿತ್ರದ ಶೀರ್ಷಿಕೆಯೇ  ಇಲ್ಲಿ ವಿಶೇಷ. ಯಾಕಂದ್ರೆ ಟಿಕಿಲಾ ಅಂದ್ರೆ ಒಂದ್ರೀತಿಯ ನಶೆ.ಅದನ್ನಿಲ್ಲಿ ಅವರು ಮನರಂಜನೆಯ ಮೂಲಕ ಪ್ರೇಕ್ಷಕರಿಗೆ ನೀಡಲು ಹೊರಟಿದ್ದಾರಂತೆ.  ಈ ತಿಂಗಳ ಅಂತ್ಯದ ಹೊತ್ತಿಗೆ ಸಿನಿಮಾ ಶುರುವಾಗುತ್ತಿದೆ.ಈಗಾಗಲೇ ಈ ಜೋಡಿ ಚಿತ್ರದ ಪ್ರೀ ಪ್ರೊಡಕ್ಷನ್‌ ಕೆಲಸ ಮುಗಿಸಿಕೊಂಡಿದೆ. ಹಾಗೆಯೇ ನಾಯಕ-ನಾಯಕಿಯನ್ನು ಫೈನಲ್‌ ಮಾಡಿಕೊಂಡಿದೆ. ಯುವ ನಟ ಧರ್ಮ ಕೀರ್ತಿರಾಜ್‌ ಹಾಗೂ ನಿಖಿತಾ ಸ್ವಾಮಿ ಇಲ್ಲಿ ಜೋಡಿಯಾಗಿದ್ದಾರೆ.

ಇದೊಂದು ಲವ್‌, ಸೆಂಟಿಮೆಂಟ್‌ ಹಾಗೂ ಥ್ರಿಲ್ಲರ್ ಕಥಾ ಹಂದರದ ಚಿತ್ರ. ಅದಕ್ಕೆ ತಕ್ಕಂತೆ ಯಂಗ್‌ ಪೇರ್‌ ಬೇಕಿತ್ತು. ಆದಕ್ಕೆ ಪೂರಕವಾಗಿ ನಾವು ಧರ್ಮ ಕೀರ್ತಿರಾಜ್‌ ಹಾಗೂ ನಿಖಿತಾ ಸ್ವಾಮಿ  ಅವರನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಕಥೆಗೆ ಈ ಜೋಡಿ  ಆಫ್ಟ್‌ ಆಗಿದೆ ಎನ್ನುತ್ತಾರೆ ನಿರ್ಮಾಪಕ ನಾಗಚಂದ್ರ ಮರಡಿಹಳ್ಳಿ.

ಇನ್ನು ಒಬ್ಬ ನಿರ್ದೇಶಕ ನಿರ್ಮಾಣ ಮಾಡುತ್ತಿರುವ ಚಿತ್ರಕ್ಕೆ ತಾನು ನಿರ್ದೇಶಕರಾಗಿರುವ ಕೆ. ಪ್ರವೀಣ್‌ ನಾಯಕ್‌ ಅವರಿಗೆ ಇದು ನಾಲ್ಕನೇ ಚಿತ್ರ. ಈಗಾಗಲೇ ಅವರು ʼಜಡ್‌ʼ, ʼಹೂಂ ಅಂತೀಯಾ, ಉಹೂಂ ಅಂತೀಯಾʼ ಹಾಗೂ ʼಮೀಸೆ ಚಿಗುರಿದಾಗʼ ಚಿತ್ರಗಳನ್ನು ನಿರ್ದೇಶಿಸಿದ್ದರು. ಅದೇ ಅನುಭವದಲ್ಲೀಗ ಟಕಿಲಾ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಚಿತ್ರಕ್ಕೆ ಅವರೇ ಕತೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ಹಾಗೆಯೇ ಚಿತ್ರ ತಂಡ ಅನುಭವಿ ತಂತ್ರಜ್ಣರನ್ನೇ ಆಯ್ಕೆ ಮಾಡಿಕೊಂಡಿದೆ.ಪಿ.ಕೆ.ಎಚ್.‌ ದಾಸ್‌ ಛಾಯಾಗ್ರಹಣ ಮಾಡುತ್ತಿದ್ದಾರೆ.ಟಾಪ್‌ ಸ್ಟಾರ್‌ ರೇಣು ಸಂಗೀತ ನಿರ್ದೇಶನವಿದೆ. ಗಿರೀಶ್‌ ಸಂಕಲನ ಮಾಡುತ್ತಿದ್ದಾರೆ. ಪ್ರಶಾಂತ್‌ ಕಲೆಯ ಹೊಣೆ ಹೊತ್ತುಕೊಂಡಿದ್ಧಾರೆ. ತಾರಾಗಣದಲ್ಲಿ ಧರ್ಮ ಕೀರ್ತಿರಾಜ್‌ ಹಾಗೂ ನಿಖಿತಾ ಸ್ವಾಮಿ ಅವರೊಂದಿಗೆ  ಸುಮನ್‌, ಜಯರಾಜ್‌, ಸುಷ್ಮಿತಾ, ಪ್ರವೀಣ್‌ ನಾಯಕ್‌ ಇದ್ದಾರೆ.  ಹಾಗೆಯೇ ಬೆಂಗಳೂರು, ನೆಲಮಂಗಲ, ದೇವರಾಯನ ದುರ್ಗ ಹಾಗೂ ಸಕಲೇಶಪುರ ಸುತ್ತಮುತ್ತ ಚಿತ್ರೀಕರಣಕ್ಕೆ ಚಿತ್ರ ತಂಡ ಪ್ಲಾನ್‌ ಹಾಕಿಕೊಂಡಿದೆ. ಸದ್ಯಕ್ಕೆ ನಿರ್ಮಾಪಕ ನಾಗಚಂದ್ರ ಹಾಗೂ ನಿರ್ದೇಶಕ ಪ್ರವೀಣ್‌ ನಾಯಕ್‌ ಇದಿಷ್ಟು ಮಾಹಿತಿ ರಿವೀಲ್‌ ಮಾಡಿದೆ.

Categories
ಸಿನಿ ಸುದ್ದಿ

ಆ ಕಾಡು ನೋಡ ಹೋದವರು ವಾಪಾಸ್‌ ಬಂದಿಲ್ವಂತೆ !!

ತೆರೆ ಮೇಲೆ ಹಾರರ್‌ ಕಥಾ ಹಂದರದ ಕತ್ಲೆ ಕಾಡು

ಸ್ಟಾರ್‌ ಸಿನ್ಮಾ ಬರ್ಲಿ ಅಂತ ಕೆಲವರು ಕಾಯುತ್ತಿದ್ದಾರೆ. ಅದರ ನಡುವೆಯೇ ಹೊಸಬರು ಒಂದ್‌ ಕೈ ನೋಡಿ ಬಿಡೋಣ ಅಂತ ಈ ವಾರ ಚಿತ್ರ ಮಂದಿರಕ್ಕೆ ಬರಲು ರೆಡಿ ಆಗಿದ್ದಾರೆ. ಅಧಿಕೃತ ಮಾಹಿತಿ ಪ್ರಕಾರ ಈ ವಾರ ಎರಡು ಕನ್ನಡ ಸಿನಿಮಾ ರಿಲೀಸ್‌ ಆಗುತ್ತಿದೆ. ಈ ಪೈಕಿ ʼಕತ್ಲೆ ಕಾಡುʼ ಕೂಡ ಒಂದು. ಸದ್ಯಕ್ಕೆ ಎಷ್ಟು ಚಿತ್ರಮಂದಿರಗಳಲ್ಲಿ ಇದು ತೆರೆ ಕಾಣುತ್ತಿದೆ ಎನ್ನುವ ಮಾಹಿತಿ ಇಲ್ಲ. ಆದರೂ ರಿಲೀಸ್‌ ಎನ್ನುವ ಸುದ್ದಿ ಹೊರ ಬಿದ್ದಿದೆ. ಉಳಿದಂತೆ ಈ ಚಿತ್ರದ ಕತೆಯೇ ವಿಶೇಷವಾದದ್ದು

 

ಚಿತ್ರದ ಶೀರ್ಷಿಕೆಯೇ ಹೇಳುವ ಹಾಗೆ ಇದು ಕಾಡು ಮತ್ತು ಅಲ್ಲಿನ ಕತ್ತಲಿಗೆ ಸಂಬಂಧಿಸಿದ ಚಿತ್ರ. ಅಂದ್ರೆ, ಹಾರರ್‌ ಹಾಗೂ ಥ್ರಿಲ್ಲರ್‌ ಕಥಾ ಹಂದರದ ಚಿತ್ರ. ಸಾಗರ್‌ ಕಿಂಗ್‌ ಪ್ರೊಡಕ್ಷನ್‌ ಮೂಲಕ ಮುಹಮ್ಮೊದ್‌ ನಿಯಾಜುದ್ದೀನ್‌ ಈ ಚಿತ್ರ ನಿರ್ಮಿಸಿದ್ದಾರೆ. ಜತೆಗೆ ಈ ಚಿತ್ರದಲ್ಲಿನ ಒಂದು ಪಾತ್ರಕ್ಕೂ ಅವರು ಬಣ್ಣ ಹಚ್ಚಿದ್ದಾರೆ. ರಾಜು ದೇವಸಂದ್ರ ಇದರ ನಿರ್ದೇಶಕ. ಈ ಹಿಂದೆ ಇವರು” ಗೋಸಿಗ್ಯಾಂಗ್‌ʼ ಅಂತ ಒಂದು ಸಿನಿಮಾ ಮಾಡಿದ್ರು. ಆನಂತರವೀಗ ಕತ್ಲೆ ಕಾಡು ಹೆಸರಿನ ಚಿತ್ರ ಮಾಡಿದ್ದಾರೆ. ಅವರ ಪ್ರಕಾರ ಇದೊಂದು ವಿಶೇಷವಾದ ಕಥಾ ಹಂದರದ ಚಿತ್ರ.

ಆಕರ್ಷಣೀಯವಾದ  ಒಂದು ದಟ್ಟ ಕಾಡು. ಅದು ತನ್ನ ಸೌಂದರ್ಯದ ಮೂಲಕವೇ ಜನರನ್ನು ಸೆಳೆಯುತ್ತದೆ. ಆದರೆ ಅಲ್ಲಿಗೆ ಹೋದವರಾರು ವಾಪಾಸ್‌ ಬಂದ ದಾಖಲೆ ಇಲ್ಲ. ಈ ವಿಷಯ ಗೊತ್ತಾಗಿಯೂ, ನಾಲ್ಕಾರು ಮಂದಿ ಯುವಕ-ಯುವತಿಯರ ಒಂದು ತಂಡ ಆ ಕಾಡಿನತ್ತ ಪ್ರಯಾಣ ಬೆಳೆಸುತ್ತದೆ. ಅವರು ಅಲ್ಲಿಗೆ ಹೋದಾಗ ಏನೆಲ್ಲ ಘಟನೆಗಳು ನಡೆಯುತ್ತದೆ, ಆ ಘಟನೆಗಳ ಹಿಂದಿನ ಸತ್ಯವೇನು ಅನ್ನೋದೇ ಈ ಚಿತ್ರದ ಕತೆಯಂತೆ.

ಚಿತ್ರದಲ್ಲಿ ಶಿವಾಜಿ ನಗರ ಲಾಲು ನಾಯಕರಾಗಿ ಅಭಿನಯಿಸುತ್ತಿದ್ದಾರೆ. ಸಂಜೀವ್‌, ಕಿರಣ್‌ ನಿಯಾಜುದ್ದೀನ್‌, ಸಿಂಧು ರಾವ್‌, ಸಂಹಿತಾ ಶಾ, ಸಿಂಚನಾ, ಶಿವ ಮಂಜು, ಭೈರೇಶ್‌, ಗೋವಿಂದ ರೆಡ್ಡಿ, ಶಿವು, ಅಮಾನ್‌ ಮತ್ತಿತರರು ಚಿತ್ರದಲ್ಲಿದ್ದಾರೆ. ರಮೇಶ್‌ ಕೊಯಿರ ಛಾಯಾಗ್ರಹಣ, ಆರವ್‌ ರಿಶಿಕ್‌ ಸಂಗೀತ, ನಿರ್ದೇಶಕ ರಾಜು ದೇವಸಂದ್ರ ಹಾಗೂ ಪತ್ರಕರ್ತ ಶಶಿಕರ ಪಾತೂರು ಸಾಹಿತ್ಯ ಈ ಚಿತ್ರಕ್ಕಿದೆ. ಬೆಂಗೂರು, ಸಂಗಮ, ಮೇಕೆದಾಟು ಮುಂತಾದೆಡೆಗಳಲ್ಲಿ ಚಿತ್ರೀಕರಣ ನಡೆದಿದೆ. ಚಿತ್ರ ಹೇಗಿದೆ ಅನ್ನೋದು ಚಿತ್ರ ನೋಡಿದಾಗ ಗೊತ್ತಾಗಲಿದೆ.

error: Content is protected !!