Categories
ಸಿನಿ ಸುದ್ದಿ

ವೀಲ್ ಚೇರ್ ರೋಮಿಯೋನ ಸ್ಪೆಷಲ್‌ ಲವ್‌ ಸ್ಟೋರಿ -ಇದು ವಿಕಲಚೇತನ, ವೇಶ್ಯೆ ನಡುವಿನ ಪ್ರೀತಿ ಗೀತಿ ಇತ್ಯಾದಿ…!

ರೋಡ್‌ ರೋಮಿಯೋ‌ ಬಗ್ಗೆ ಸಹಜವಾಗಿ ಎಲ್ಲರಿಗೂ ಗೊತ್ತೇ ಇರುತ್ತೆ. ಆದರೆ, ವೀಲ್‌ ಚೇರ್‌ ರೋಮಿಯೋ ಬಗ್ಗೆ ಬಹಳಷ್ಟು ಮಂದಿಗೆ ಗೊತ್ತಿರಲಿಕ್ಕಿಲ್ಲ. ಇಲ್ಲೊಬ್ಬ ವೀಲ್‌ ಚೇರ್‌ ರೋಮಿಯೋ ಬಗ್ಗೆ ಹೇಳಲೇಬೇಕು. ಇದು ಸಿನಿಮಾ ವಿಷಯ. ವಿಕಲಚೇತನನೊಬ್ಬನ ಲವ್‌ ಸ್ಟೋರಿ ಇಲ್ಲಿದೆ. ಹೌದು, ಇದೊಂದು ವೀಲ್‌ ಚೇರ್‌ ರೋಮಿಯೋ ಸಿನಿಮಾ.

ಕಾಲಿಲ್ಲದ ವ್ಯಕ್ತಿಯೊಬ್ಬ ವೀಲ್‌ ಚೇರ್‌ ಮೇಲೆ ಕುಳಿತು ತನ್ನ ಪ್ರೀತಿಗಾಗಿ ಪರಿತಪಿಸೋ ಕಥೆ ಇಲ್ಲಿದೆ. ಈ ಚಿತ್ರ ಈಗ ರಿಲೀಸ್‌ಗೂ ಸಜ್ಜಾಗಿದೆ. ಅದಕ್ಕೂ ಮುನ್ನ, ಚಿತ್ರದ ಟ್ರೇಲರ್‌ ರಿಲೀಸ್‌ ಆಗಿದೆ. ಎಲ್ಲೆಡೆಯಿಂದಲೂ ಮೆಚ್ಚುಗೆ ಪಡೆಯುತ್ತಿದೆ. ಅಗಸ್ತ್ಯ ಕ್ರಿಯೇಷನ್ ಬ್ಯಾನರ್‌ನಲ್ಲಿ ವೆಂಕಟಾಚಲ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದ ಟ್ರೇಲರ್‌ನಲ್ಲಿ ಮನುಷ್ಯನ ಚಿಂತನಾ ಲಹರಿಗಳನ್ನು ಒಂದೊಂದಾಗಿ ಬಿಚ್ಚಿಡುವ ಪ್ರಯತ್ನ ಮಾಡಲಾಗಿದೆ.
ಜಿ.ನಟರಾಜ್‌ ಈ ಸಿನಿಮಾದ ನಿರ್ದೇಶಕರು. ಕಥೆ ಕೂಡ ಇವರದೇ. ಇನ್ನು, ಇಲ್ಲಿ ನಾಯಕಿಯಾಗಿ ಮಯೂರಿ ಕಾಣಿಸಿಕೊಂಡಿದ್ದಾರೆ. ಅವರದು ಇಲ್ಲಿ ಸ್ಪೆಷಲ್‌ ಪಾತ್ರ. ಅದು ಕಣ್ಣು ಕಾಣದ ವೇಶ್ಯೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಮ್ ಚೇತನ್ ಹೀರೋ ಆಗಿ ನಟಿಸಿದ್ದಾರೆ.

ಅವರಿಲ್ಲಿ ವೇಶ್ಯೆಯನ್ನು ಪ್ರೀತಿಸುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ವೀಲ್‌ಚೇರ್‌ನಲ್ಲಿ ಕುಳಿತು ಪ್ರೀತಿಗಾಗಿ ಪರಿತಪಿಸುವ ವ್ಯಕ್ತಿಯಾಗಿ ನಟಿಸಿದ್ದಾರೆ. ಇದೊಂದು ವಿಭಿನ್ನ ಕಥಾಹಂದರ ಹೊಂದಿರುವ ಕಥೆ. ಇಲ್ಲೂ ಒಂದಿಷ್ಟು ಫೈಟಿಂಗ್ ದೃಶ್ಯಗಳಿವೆ. ಹೀರೋ ತಾನು ಪ್ರೀತಿಸುವ ವೇಶ್ಯೆಯನ್ನು ಆರಾಧಿಸುತ್ತಾನೆ. ಇದನ್ನು ತಿಳಿದ ತಂದೆ ತನ್ನ ಮಗನ ಮನಸ್ಸನ್ನು ಪರಿವರ್ತಿಸಲು ಪ್ರಯತ್ನ ಮಾಡುತ್ತಾನೆ. ಮುಂದೇನಾಗುತ್ತೆ ಅನ್ನೋದು ಚಿತ್ರದ ಕಥೆ. ಹಾಗಂತ ಇಲ್ಲಿ ಯಾವುದೇ ಧ್ವಂದಾರ್ಥವಿಲ್ಲ. ಶೀಲವಂತರ ಶೀಲದ ಕುರಿತು ಸಿನಿಮಾ ಮೂಡಿ ಬಂದಿದೆ. ಆದರಿಲ್ಲಿ ಅಂಧ ವೇಶ್ಯೆ ಕುರಿತ ಸಿನಿಮಾ. ಹಾಗಂತ ಎಲ್ಲೂ ಅಶ್ಲೀಲತೆ ಇಲ್ಲಿಲ್ಲ. ಕುಟುಂಬ ಸಮೇತ ನೋಡಬಹುದಾದ ಚಿತ್ರ ಎಂಬುದು ಚಿತ್ರತಂಡದ ಮಾತು.

ಹಿರಿಯ ನಟ ಸುಚೇಂದ್ರ ಪ್ರಸಾದ್ ಕೂಡ ಸಿನಮಾ ಬಗ್ಗೆ ಸಾಕಷ್ಟು ನಂಬಿಕೆ ಇಟ್ಟಿದ್ದಾರೆ. ಒಳ್ಳೆಯ ಕಥಾಹಂದರ ಇರುವಂತಹ ಚಿತ್ರವಿದು ಎಂಬುದು ಅವರ ಮಾತು. ರಂಗಾಯಣ ರಘು ಇಲ್ಲೊಂದು ವಿಶೇಷ ಪಾತ್ರ ಮಾಡಿದ್ದಾರೆ.ಬಿ‌ಜೆ ಭರತ್ ಸಂಗೀತವಿದೆ. ಗಿರೀಶ್ ಶಿವಣ್ಣ ಸೇರಿದಂತೆ ಹಲವು ಕಲಾವಿದರು ಇಲ್ಲಲಿದ್ದಾರೆ.

Categories
ಸಿನಿ ಸುದ್ದಿ

ನಾವು ಆರ್‌ಸಿಬಿ ಫ್ಯಾನ್ಸು, ರಾಯಲ್‌ ಚಾಲೆಂಜರ್ಸ್‌ ಈಸ್‌ ಬೆಸ್ಟು : ಆರ್‌ಸಿಬಿ ಫ್ಯಾನ್ಸ್‌ ಗೆ ಸ್ಪೆಷಲ್‌ ಸಾಂಗ್‌ ಗಿಫ್ಟ್ ಕೊಟ್ಟ ಬೇಬಿ ಡಾಲ್‌ ಆದ್ಯಾ !

ಐಪಿಎಲ್‌ಫೀವರ್‌ ಶುರುವಾಗಿದೆ. ಇಂದು ಮುಂಬೈ ಇಂಡಿಯನ್ಸ್‌ ವರ್ಸಸ್‌ ಆರ್‌ಸಿಬಿ ಅಖಾಡಕ್ಕಿಳಿಯುವ ಮೂಲಕ ಐಪಿಎಲ್‌ಗೆ ಗ್ರಾಂಡ್‌ ಚಾಲನೆ ಸಿಗುತ್ತಿದೆ. ಕೊರೋನಾ ಆತಂಕದ ನಡುವೆಯೂ ಕ್ರಿಕೆಟ್ಸ್‌ ಫ್ಯಾನ್ಸ್‌ ಐಪಿಎಲ್‌ ನೋಡಲು ತುದಿಗಾಲ ಮೇಲೆ ನಿಂತಿದ್ದಾರೆ. ಬೆಂಗಳೂರಿಗರಾದ ನಮಗೆ ಆರ್‌ಸಿಬಿ ಫೆವರೇಟ್.‌ ಗೆಲ್ಲಲ್ಲಿ-ಸೋಲಲಿ ಆರ್‌ಸಿಬಿ ನಮ್ದು ಎನ್ನುವ ಹೆಮ್ಮೆ ನಮಗೆ. ಅದೊಂದು ಕ್ರೇಜ್‌ ಗಾಗಿಯೇ ಕರ್ನಾಟಕದ ಜನರಿಗೆ ಆರ್‌ ಸಿಬಿ ಅಂದ್ರೆ ಪ್ರಾಣ. ಈಗಲೂ ಅದೇ ಆಭಿಮಾನ ಆರ್‌ಸಿಬಿ ಮೇಲಿದೆ ಅನ್ನೋದು ಸುಳ್ಳಲ್ಲ. ತಣ್ಣಗೆ ಹೆಚ್ಚುತ್ತಿರುವ ಐಪಿಎಲ್‌ ಕ್ರೇಜ್‌ ನಡುವೆಯೇ ಆರ್‌ಸಿಬಿ ಗೆ ಈಗ ಫ್ಯಾನ್ಸ್‌ ತಮ್ಮದೇ ರೀತಿಯಲ್ಲಿ ಶುಭ ಹಾರೈಸುತ್ತಿದ್ದಾರೆ. ವಿರಾಟ್‌ ಕೊಹ್ಲಿ ನೇತೃತ್ವದ ಟೀಮ್‌ ಅನ್ನು ಹುರಿದುಂಬಿಸಲು ತಮ್ಮದೇ ರೀತಿಯ ಕೊಡುಗೆ ನೀಡುತ್ತಿದ್ದಾರೆ. “ಝೀʼ ಕನ್ನಡದ ಸರಿಗಮಪ ಲಿಟ್ಲ್‌ ಚಾಂಪಿಯನ್‌ ರಿಯಾಲಿಟಿ ಶೋ ಖ್ಯಾತಿಯ ಗಾಯಕಿ ಬೇಬಿ ಡಾಲ್‌ ಆದ್ಯಾ ಈಗ ಆರ್‌ಸಿಬಿ ಫ್ಯಾನ್ಸ್‌ ಗೆ ಅಂತಲೇ ಒಂದು ಸ್ಪೆಷಲ್‌ ಸಾಂಗ್ಸ್‌ ಹಾಡಿದ್ದಾರೆ.

ನಾವು ಆರ್‌ ಸಿಬಿ ಫ್ಯಾನ್ಸು, ಗೆಲ್ಲಲ್ಲಿ ಸೋಲಲಿ ನಮ್‌ ಸಫೊರ್ಟ್‌ ನಿಮ್ಗೇನೆ…ಎನ್ನುವ ಸಾಲುಗಳ ಮೂಲಕ ಶುರುವಾಗುವ ಈ ಹಾಡು ಆರ್‌ ಸಿಬಿ ಫ್ಯಾನ್ಸ್‌ಗೆ ಆಂಥಮ್‌ ಆಗುವ ಹಾಗಿದೆ. ಆರ್‌ ಸಿಬಿ ಮೇಲಿನ ಅಭಿಮಾನಕ್ಕೆ ಬೇಬಿ ಡಾಲ್‌ ಆದ್ಯಾ ಹಾಗೂ ಅವರ ತಾಯಿ ಅಶ್ವಿನಿ ಅವರೇ ಸಾಹಿತ್ಯ ಬರೆದಿದ್ದಾರೆ. ಹಾಗೆಯೇ ಸಂಗೀತ ಸಂಯೋಜನೆ ಜತೆಗೆ ಅದಕ್ಕೆ ಧ್ವನಿ ನೀಡಿದವರು ಬೇಬಿ ಡಾಲ್‌ ಆದ್ಯಾ. ಹಾಡಿನ ಸಾಲುಗಳೇ ಸೊಗಸಾಗಿವೆ. ಆರ್‌ ಸಿಬಿ ಟೀಮ್‌ ಅನ್ನು ಬಗೆ ಬಗೆಯಲ್ಲಿ ವರ್ಣಿಸುವುದರ ಜತೆಗೆ ಅದು ನಮ್ಮದು ಎನ್ನುವ ಹೆಮ್ಮೆಯನ್ನು ಮೂಡಿಸುವಂತಿದೆ ಈ ಹಾಡಿನ ಸಾಲುಗಳು. ಹಾಗೆಯೇ ತಂಡಕ್ಕೂ ಕೂಡ ದೊಡ್ಡ ಜೋಷ್‌ ಸಿಗುವುದರಲ್ಲೂ ಅನುಮಾನ ಇಲ್ಲ. ಸದ್ಯಕ್ಕೆ ಈ ಹಾಡು ಐಪಿಎಲ್‌ ಆರಂಭದ ದಿನವಾದ ಇಂದು ( ಶುಕ್ರವಾರ) ಬೇಲಿ ಡಾಲ್‌ ಆದ್ಯಾ ಅವರ ಅಧಿಕೃತ ಯುಟ್ಯೂಬ್‌ ಚಾನೆಲ್‌ ನಲ್ಲಿ ಲಾಂಚ್‌ ಆಗಿದೆ. ಲಾಂಚ್‌ ಆದ ಕೆಲವೇ ಕ್ಷಣಗಳಲ್ಲಿ ಅದಕ್ಕೆ ಸೋಷಲ್‌ ಮೀಡಿಯಾದಲ್ಲಿ ಒಳ್ಳೆಯ ರೆಸ್ಪಾನ್ಸ್‌ ಕೂಡ ಸಿಕ್ಕಿದೆ.

” ಆದ್ಯಾ ಹಾಗೂ ನಾನು ಕ್ರಿಕೆಟ್‌ ಅಭಿಮಾನಿಗಳು. ಕ್ರಿಕೆಟ್‌ ಅಂದ್ರೆ ಕ್ರೇಜ್.‌ ಅದರಲ್ಲೂ ಆರ್‌ ಸಿಬಿ ಅಂದ್ರೆ ನಮ್ಮ ಫೆವರೇಟ್.‌ ಅದು ಗೆಲ್ಲಲ್ಲಿ- ಸೋಲಲಿ ಅದರ ಮೇಲಿನ ಅಭಿಮಾನ ನಮಗೆ ಕಿಂಚಿತ್ತು ಕಮ್ಮಿ ಆಗೋದಿಲ್ಲ. ಅದಕ್ಕೆ ಕಾರಣ ಅದು ನಮ್ದು ಅನ್ನೋದು ಆಭಿಮಾನ. ಅದೇ ಕಾರಣಕ್ಕೆ ಈ ಬಾರಿ ಏನಾದ್ರೂ ಮಾಡ್ಬೇಕು ಅಂತ ಯೋಚಿಸುತ್ತಿದ್ದೇವು. ಆಗ ಹೊಳೆದಿದ್ದು ಈ ಹಾಡಿನ ಕಾನ್ಸೆಪ್ಟ್.‌ ನಾವಿಬ್ರು ಸೇರಿಕೊಂಡೆ ಸಾಹಿತ್ಯ ಜೋಡಿಸಿಕೊಂಡ್ವಿ. ಚೆನ್ನಾಗಿದೆ ಅಂತೆನಿಸಿತು. ಆಮೇಲೆ ಅದಕ್ಕೆ ಸಂಗೀತ ಸಂಯೋಜನೆ ಮಾಡುವ ಕೆಲಸಕ್ಕೆ ಆದ್ಯಾ ಮುಂದಾದಳು. ಹಾಗೆಯೇ ಆಕೆಯೇ ಹಾಡಿದಳು. ಎಲ್ಲವೂ ನಮ್ಮ ಮನೆಯಲ್ಲಿ ನಡೆದವು. ನಮ್‌ ಆಪಾರ್ಟ್‌ ಮೆಂಟ್‌ನವ್ರಿಗೆ ಹಿಡಿಸಿತು. ಇದು ಎಲ್ಲರಿಗೂ ಗೊತ್ತಾಗಲಿ ಅಂತ ಆದ್ಯಾ ಯುಟ್ಯೂಬ್‌ ಚಾನಲ್‌ ನಲ್ಲಿ ಲಾಂಚ್‌ ಮಾಡಿದ್ದೇವೆ ಎನ್ನುತ್ತಾರೆ ಬೇಬಿ ಡಾಲ್‌ ಆದ್ಯಾ ಅವರ ತಾಯಿ ಅಶ್ವಿನಿ. ಇದೇ ರೀತಿ ಕ್ರಿಕೆಟ್‌ ಫ್ಯಾನ್ಸ್‌ ನಡುವೆ ಆರ್‌ ಸಿಬಿ ಕ್ರೇಜ್‌ ಜೋರಾಗುತ್ತಿದೆ. ಟೀ ಶರ್ಟ್‌ ಗಳ ಮೇಲೆ ಆರ್‌ ಸಿಬಿ ರಾರಾಜಿಸುತ್ತಿದೆ. ಅದೊಂದು ಟ್ರೆಂಡ್‌ ಆಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.

Categories
ಸಿನಿ ಸುದ್ದಿ

ಹರ ಹರ ಮಹಾದೇವ!! ಸ್ಟಾರ್‌ಗಳದ್ದು ಹೆಂಗೋ ಬಿಡಿ, ಹೊಸಬರ ಸಿನಿಮಾಗೆ ಮುಂದೆ ದೇವರೇ ದಿಕ್ಕು…!?

ಚಿತ್ರೋದ್ಯಮದ ಪರಿಸ್ಥಿತಿ ಈಗ ಅಷ್ಟು ಸುಲಭವಿಲ್ಲ. ಮುಂದೇನೋ ಆಗುತ್ತೆ, ಎಲ್ಲವೂ ಸರಿ ಹೋಗುತ್ತೆ, ಮತ್ತೆ ಹಳೇ ದಿನಗಳು ಬಂದೇ ಬರುತ್ತವೆ ಅಂತೆಲ್ಲ ನಂಬ್ಕೊಂಡು ರಿಲೀಸ್‌ಗೆ ರೆಡಿ ಇರುವ ಹೊಸಬರ ಸಿನಿಮಾಗಳ ಪರಿಸ್ಥಿತಿ ಮುಂದೆಯೂ ಶೋಚನೀಯ. ಅದಂತೂ ಗ್ಯಾರಂಟಿ. ಹಾಗಂತ ಭವಿಷ್ಯ ಹೇಳಬೇಕಿಲ್ಲ. ಜ್ಯೋತಿಷಿಗಳ ಬಳಿಗೂ ಹೋಗಬೇಕಿಲ್ಲ. ಮುಂದಿರುವ ಸಂಕಷ್ಟಗಳೇ ಇದಕ್ಕೆ ಸಾಕ್ಷಿ.

2020 ಎಂಬ ಕರಾಳ ವರ್ಷದ ಅಧ್ಯಾಯ ಮುಗಿದು, 2021 ಆದ್ರೂ ಸರಿಹೋಗುತ್ತೆ ಅನ್ನೋ ನಿರೀಕ್ಷೆಯಲ್ಲಿತ್ತು ಚಿತ್ರರಂಗ. ಈಗ ಅದು ಕೂಡ ಹುಸಿಯಾಗುತ್ತಿದೆ. ಈಗಲೇ ಮೂರು ತಿಂಗಳು ಕಳೆದೇ ಹೋಗಿದೆ. ಈಗಲೂ ಕೊರೊನಾ ಅಬ್ಬರ ನಿಂತಿಲ್ಲ. ದಿನೇ ದಿನೆ ಈ ಮಹಾಮಾರಿಯ ಅಟ್ಟಹಾಸ ಹೆಚ್ಚುತ್ತಿದೆ . ಮತ್ತೆ ಲಾಕ್‌ ಡೌನ್‌ ಆಗಬಹುದೆನ್ನುವ ಆತಂಕದ ನಡುವೆ ಚಿತ್ರಮಂದಿರಗಳಲ್ಲಿನ ಹಂಡ್ರೆಡ್‌ ಪರ್ಸೆಂಟ್‌ ಆಕ್ಯುಪೆನ್ಸಿ ಈಗ ಶೇ.50 ಕ್ಕೆ ಬಂದಿದೆ. “ಯುವರತ್ನ” ಚಿತ್ರತಂಡದ ಹೋರಾಟದೊಂದಿಗೆ ಸಿಕ್ಕಿದ್ದ ನಿಟ್ಟುಸಿರು ಕೂಡ ಮುಗಿದು ಹೋಗಿದೆ. ಬೇರೆ ದಾರಿ ಇಲ್ಲ. “ಯುವರತ್ನ” ಅಮಜಾನ್‌ ಪ್ರೈಮ್‌ ಗೂ ಬಂದಾಗಿದೆ. \

ಅದರಾಚೆ ಮುಂದೆ ಬರಬೇಕಾಗಿದ್ದ ಹೊಸಬರ ಸಿನಿಮಾಗಳ ಪಾಡೇನು? ದಾರಿಯಂತೂ ಇಲ್ಲ. ಎಲ್ಲವೂ ಹರ ಹರ ಮಹಾದೇವ!
ಈ ಜಗತ್ತೇ ಈಗ ಒಂಥರ ಜಡ್ಡುಗಟ್ಟಿದೆ. ಇನ್ನಾರೋ ನಮ್ಮ ಪರವಾಗಿ ಮಾತನಾಡಲಿ ಅಂತ ಕಾಯುತ್ತಿರುತ್ತದೆ. ಚಿತ್ರರಂಗದವರು ಕೂಡ ಅದರಿಂದ ಹೊರತಾಗುಳಿದಿಲ್ಲ. ಇಲ್ಲಿ ಬಲಾಢ್ಯರು ಮಾತನಾಡುತ್ತಾರೆ. ಪ್ರಭಾವಿಗಳು ಹೇಗೋ ಲಾಭಿ ಮಾಡುತ್ತಾರೆ. ತಾವು ಬದುಕುವ ದಾರಿಗಳನ್ನು ತಾವು ಕಂಡುಕೊಳ್ಳುತ್ತಾರೆ. ಆದರೆ ಹೊಸಬರು, ಅಸಹಾಯಕರು ತಾವಾಯಿತು ತಮ್ಮ ಪಾಡಾಯಿತು ಅಂತ ಕುಳಿತು ಈಗ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆನ್ನುವುದು ಸುಳ್ಳಲ್ಲ.


ಒಂದು ಅಂದಾಜಿನ ಪ್ರಕಾರ ಈ ವರ್ಷಕ್ಕೆ ರಿಲೀಸ್‌ಗೆ ಅಂತ ಸರಿ ಸುಮಾರು 400ಕ್ಕೂ ಹೆಚ್ಚು ಚಿತ್ರಗಳು ಕಾದಿವೆ. ಈ ಪೈಕಿ 300ಕ್ಕೂ ಹೆಚ್ಚು ಚಿತ್ರಗಳು ಸೆನ್ಸಾರ್‌ ಮುಗಿಸಿವೆ. ಇದರಲ್ಲಿ ಹೆಚ್ಚು ಕಡಿಮೆ ಅರ್ಧದಷ್ಟು ಸ್ಟಾರ್‌ ಚಿತ್ರಗಳು, ಒಂದಷ್ಟು ಗುರುತಿಸಿಕೊಂಡ ನಟರ ಸಿನಿಮಾಗಳೇ. ಇಲ್ಲವೇ ಚಿತ್ರರಂಗ ಗೊತ್ತಿದ್ದವರ ಸಿನಿಮಾಗಳೇ ಅಂತಿಟ್ಟುಕೊಳ್ಳಿ, ಉಳಿದವರೆಲ್ಲ ಹೊಸಬರು. ಅವರಿಗೆ ಇಲ್ಲೇನು ಮಾಡಬೇಕು, ಹೇಗೆ ಬಿಡುಗಡೆ ಮಾಡಬೇಕು, ಹಾಕಿದ ಬಂಡವಾಳ ವಾಪಾಸ್‌ ಪಡೆದುಕೊಳ್ಳುವುದಕ್ಕೆ ಯಾರನ್ನು ಹಿಡಿಯಬೇಕು ಅಂತೆಲ್ಲ ಗೊತ್ತೇ ಇಲ್ಲ. ಅವರಿಗೆ ಈಗ ಕೊರೋನಾ ಅನ್ನೋದು ದೊಡ್ಡ ಅಘಾತವಂತೂ ಹೌದು.

ಒಂದು ಸಿನಿಮಾ ರಿಲೀಸ್‌ಗೆ ರೆಡಿಯಾದರೆ ಅದು ಏನಿಲ್ಲ ಅಂದರೂ ಐದಾರು ತಿಂಗಳಲ್ಲಿ ಚಿತ್ರ ಮಂದಿರಕ್ಕೆ ಬಂದು ಬಿಡಬೇಕು. ಯಾಕಂದ್ರೆ ರೆಡಿ ಮಾಡಿಟ್ಟುಕೊಂಡು, ಬೇಕಾದಾಗ ಮಾರಿಕೊಳ್ಳುವುದಕ್ಕೆ ಅದೇನು ಮಣ್ಣಿನ ಮಡಿಕೆ ಅಲ್ಲ. ಒಂದು ಸಿನಿಮಾದ ಕಥಾವಸ್ತು ಕಾಲ, ಸಂದರ್ಭ, ಸನ್ನಿವೇಶಗಳನ್ನು ಅವಲಂಬಿಸಿರುತ್ತೆ ಅನ್ನೋದು ಎಷ್ಟು ಸತ್ಯವೋ ಹಾಗೆಯೇ, ಮುಂದೆ ಬರುವ ಸಿನಿಮಾಗಳ ಅಂಕೆ ಸಂಖ್ಯೆಗಳ ಮೇಲೂ ಅದರ ಭವಿಷ್ಯ ನಿಂತಿರುತ್ತದೆ. ಅದೇ ಕಾರಣಕ್ಕೆ ತುರ್ತಾಗಿ ಬರಬೇಕಾದ ಸಂದರ್ಭಕ್ಕೂ ಸಿನಿಮಾಗಳ ಮೇಲೆ ಕೊರೋನಾ ಎಂಬ ಮಹಾಮಾರಿ ಅಡ್ಡಾಗಿ ನಿಂತಿದೆ.

ಸದ್ಯಕ್ಕೆ ಸಭೆ, ಸಮಾರಂಭ ಬೇಡ. ಚಿತ್ರಮಂದಿರಗಳಲ್ಲಿ ಹಂಡ್ರೆಡ್‌ ಪರ್ಸೆಂಟ್‌ ಸೀಟು ಭರ್ತಿ ಬೇಡ ಅಂತೆನ್ನುವ ಸರ್ಕಾರಗಳಿಗೆ, ಲಕ್ಷಾಂತರ ಜನ ಸೇರಿಸಿ ಚುನಾವಣಾ ಪ್ರಚಾರ ಭಾಷಣ ಮಾಡುವ ಅಗತ್ಯ ಮಾತ್ರ ಬೇಕಿದೆ. ಇದನ್ನು ಜೋರಾಗಿ ಅಥವಾ ಗಟ್ಟಿಯಾಗಿ ಕೇಳುವ ಧೈರ್ಯವೇ ಯಾವ ರಂಗಕ್ಕೂ ಇಲ್ಲ. ಚಿತ್ರರಂಗಕ್ಕೆ ಮಾತ್ರವಲ್ಲ ಜನರಿಗೂ ಅದು ಬೇಡವಾಗಿದೆ. ಜನ ಇವತ್ತು ಕೇವಲ ವೀಕ್ಷಕರಾಗಿದ್ದಾರೆ. ಯಾರೋ ಮಾಡುವ ಪ್ರತಿಭಟನೆ, ಇಲ್ಲವೇ ಯಾರೋ ಮಾಡುವ ಸಿಡಿ ನೋಡಿಕೊಂಡು ವಿಕೃತ ಖುಷಿ ಪಡುವುದರಲ್ಲಿಯೇ ಬ್ಯುಸಿಯಾಗಿದ್ದಾರೆ. ಅದರಾಚೆ ವ್ಯವಸ್ಥೆ ಬಿಗಿ ಸರಳುಗಳು ತಮ್ಮನ್ನೇ ಹೇಗೆ ಬಂಧನಕ್ಕೆ ತಳ್ಳುತ್ತವೆ ಅನ್ನೋದನ್ನೇ ಮರೆತು ಬಿಟ್ಟಿದ್ದಾರೆ. ಇದರಿಂದ ಹೊರ ಬರುವುದಕ್ಕೆ ಕೊರೊನಾ ಹೋಗಬೇಕಾ? ಉದ್ಯಮ ಒಂದಾಗಿ ಈ ಪರಿಸ್ಥಿತಿಯನ್ನು ನಿಭಾಯಿಸಬೇಕಾ? ಉತ್ತರ ಕಂಡುಕೊಳ್ಳಬೇಕಿದೆ.

Categories
ಸಿನಿ ಸುದ್ದಿ

ಯುವರತ್ನ ಈಗ ನಿಮ್ಮ ಕೈಯಲ್ಲಿ! ಅಮೇಜಾನ್‌ ಪ್ರೈಮ್‌ ವಿಡಿಯೋದಲ್ಲಿ ಬಂದೇ ಬಿಡ್ತು ಪವರ್‌ಸ್ಟಾರ್‌ ಚಿತ್ರ…

ಪುನೀತ್‌ ಅಭಿನಯದ “ಯುವರತ್ನ” ಚಿತ್ರ ಇದೀಗ ಅಮೇಜಾನ್‌ ಪ್ರೈಮ್‌ ವಿಡಿಯೋದಲ್ಲಿ ನೋಡಬಹುದು! ಅರೇ, ಇದೇನಾಪ್ಪ ರಿಲೀಸ್‌ ಆಗಿ ವಾರವೂ ಕಳೆದಿಲ್ಲ, ಅದಾಗಲೇ ಅಮೇಜಾನ್‌ ಪ್ರೈಮ್‌ ವಿಡಿಯೋದಲ್ಲಿ “ಯುವರತ್ನ” ಚಿತ್ರ ಬಂತಾ ಎಂಬ ಪ್ರಶ್ನೆ ಎದುರಾದರೆ ಅಚ್ಚರಿ ಇಲ್ಲ. ಹೌದು, ಇದನ್ನು ಸ್ವತಃ ಹೊಂಬಾಳೆ ಫಿಲಂಸ್‌ ಘೋಷಿಸಿದೆ.

ಅಷ್ಟೇ ಅಲ್ಲ, ಅದಕ್ಕೊಂದು ಸ್ಪಷ್ಟನೆಯನ್ನೂ ನೀಡಿದೆ. “ಪ್ರಸ್ತುತ ವಿದ್ಯಮಾನಗಳನ್ನು ಗಮನದಲ್ಲಿಟ್ಟುಕೊಂಡು “ಯುವರತ್ನ” ಚಿತ್ರವನ್ನು ಚಿತ್ರಮಂದಿರಗಳಲ್ಲಿ ಹಾಗೂ ಅಮೇಜಾನ್‌ ಪ್ರೈಮ್‌ ವಿಡಿಯೋದಲ್ಲಿ ಲಭ್ಯವಿರುವಂತೆ ಮಾಡಲಾಗಿದೆ. ಚಿತ್ರಮಂದಿರ ಮೇಲಿರುವ ನಿರ್ಬಂಧನೆಗಳು, “ಯುವರತ್ನ” ಚಿತ್ರದ ಪೈರಸಿ ದಾಳಿ ಹಾಗೂ ಪ್ರೇಕ್ಷಕಕರ ಒತ್ತಾಯದ ಮೇರೆಗೆ ಅಮೇಜಾನ್ ಪ್ರೈಮ್‌ ವಿಡಿಯೋದಲ್ಲಿ “ಯುವರತ್ನ” ಚಿತ್ರವನ್ನು ಹಾಕಲಾಗಿದೆ. ನೀವು ತೋರಿದ ಅಭಿಮಾನ, ಬೆಂಬಲಕ್ಕೆ ನಾವು ಚಿರಋಣಿ. “ಯುವರತ್ನ” ಹೆಚ್ಚಿನ ಜನರಿಗೆ ದೇಶಾದ್ಯಂತ ಹಾಗೂ ವಿಶ್ವಾದ್ಯಂತ ತಲುಪಲಿ ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿದ್ದೇವೆʼ ಎಂದು ನಿರ್ಮಾಪಕ ವಿಜಯ್‌ ಕಿರಗಂದೂರು ಹೇಳಿದ್ದಾರೆ.


ಅದೇನೆ ಇರಲಿ, ಅಮೇಜಾನ್‌ ಪ್ರೈಮ್‌ ವಿಡಿಯೋದಲ್ಲಿ ಒಂದೇ ವಾರಕ್ಕೆ ಸಿನಿಮಾ ಬಂದರೆ, ಚಿತ್ರಮಂದಿರಗಳ ಪಾಡೇನು? ಅಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರ ಸ್ಥಿತಿ ಹೇಗಾಗಬೇಡ? ಅಷ್ಟಕ್ಕೂ “ಯುವರತ್ನ” ಚಿತ್ರ ಚಿತ್ರಮಂದಿರಗಳಲ್ಲಿ ಉಳಿಯುವಂತಹ ಚಿತ್ರವೇ ಆಗಿದ್ದರೂ, ಈಗಲೇ ಯಾಕೆ ನಿರ್ಮಾಣ ಸಂಸ್ಥೆ ಅಮೇಜಾನ್‌ ಪ್ರೈಮ್‌ ವಿಡಿಯೋಗೆ ಸಿನಿಮಾ ಕೊಟ್ಟಿದೆ ಎಂಬಿತ್ಯಾದಿ ಪ್ರಶ್ನೆಗಳು ಅಭಿಮಾನಿಗಳು ಮತ್ತು ಪ್ರೇಕ್ಷಕರಲ್ಲಿ ಗಿರಕಿ ಹೊಡೆಯುತ್ತಲೇ ಇದೆ. ಅದೇನೆ ಇದ್ದರೂ, ಸರ್ಕಾರದ ಶೇ.50ರಷ್ಟು ಆಸನ ಭರ್ತಿ ಅವಕಾಶದ ನಿರ್ಧಾರ ನಿಜಕ್ಕೂ ಸಿನಿಮಾ ಮಂದಿಯನ್ನು ಅತಂತ್ರ ಸ್ಥಿತಿಗೆ ತಳ್ಳಿರುವುದಂತೂ ನಿಜ. ಇಂತಹ ಪರಿಸ್ಥಿತಿಯಲ್ಲಿ ಯಾವ ಸ್ಟಾರ್‌ ಸಿನಿಮಾಗಳಿದ್ದರೂ, ಅದು ಸಮಸ್ಯೆ ಅಲ್ಲದೆ ಮತ್ತೇನು? ಈ ಪರಿಸ್ಥಿತಿ ಮುಂದೆಯೂ ಹೀಗೆ ಮುಂದುವರೆದರೆ, ಚಿತ್ರರಂಗದ ಗತಿ ಏನಾದೀತು? ಇವೆಲ್ಲವನ್ನೂ ನೆನಪಿಸಿಕೊಳ್ಳುವ ನಿರ್ಮಾಪಕರಂತೂ ಅಕ್ಷರಶಃ ಭಯದಲ್ಲಿದ್ದಾರೆ. ರಿಲೀಸ್‌ಗೆ ರೆಡಿಯಾಗಿದ್ದ ಚಿತ್ರಗಳೂ ಮುಂದಕ್ಕೆ ಹೋಗುತ್ತಿವೆ. ಇಂತಹ ವಾತಾವರಣದಲ್ಲಿ ಸಿನಿಮಾರಂಗ ಚೇತರಿಸಿಕೊಳ್ಳುತ್ತಿದ್ದರೂ, ಈಗ ಪುನಃ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಚಿತ್ರಮಂದಿರಕ್ಕೆ ಶೇ.50ರಷ್ಟು ಭರ್ತಿ ಅವಕಾಶ ಕೊಟ್ಟ ನಿರ್ಧಾರದಿಂದ ಇನ್ನಷ್ಟು ಗೊಂದಲಕ್ಕೀಡಾಗಿರುವುದಂತೂ ಸತ್ಯ. ಮುಂದಿನ ದಿನಗಳಲ್ಲಿ ಕೊರೊನಾ ವಿರುದ್ಧ ಜಾಗೃತಗೊಂಡು, ಅಂತರ ಕಾಪಾಡಿಕೊಂಡು ಅದನ್ನು ತಡೆಗಟ್ಟದೇ ಹೋದರೆ, ಈಗಿರುವ ಸ್ಥಿತಿಗಿಂತಲೂ ಘೋರವಾದ ಸ್ಥಿತಿ ಎದುರಿಸಬೇಕಾದೀತು. ಒಂದು ವೇಳೆ ಕೊರೊನಾ ಅಲೆ ಜೋರಾಗಿಬಿಟ್ಟರಂತೂ, ಲಾಕ್‌ಡೌನ್‌ ಘೋಷಣೆ ಅನಿವಾರ್ಯವಾದೀತು. ಅಂತಹದ್ದಕ್ಕೆ ಅವಕಾಶ ಮಾಡಿಕೊಡದಿರುವುದೇ ಒಳಿತು. ಈ ಸಮಸ್ಯೆ ಆದಷ್ಟು ಬೇಗ ಮುಗಿದು, “ಆ ದಿನಗಳು” ಬೇಗ ಬರುವಂತಾಗಲಿ ಅನ್ನೋದೇ “ಸಿನಿಲಹರಿ” ಆಶಯ.

Categories
ಸಿನಿ ಸುದ್ದಿ

ಕಸ್ತೂರಬಾ ಗಾಂಧಿ ಆಗಿ ಹರಿಪ್ರಿಯಾ : ಬರಗೂರು ಕಾಂಬಿನೇಷನ್ ಜತೆಗೆ ಮತ್ತೊಂದು ಸಿನಿಮಾ

ನಟಿ ಹರಿಪ್ರಿಯಾ ಸದ್ಯಕ್ಕೆ ಕನ್ನಡದ ಮೋಸ್ಟ್ ಲಕ್ಕಿಯೆಸ್ಟ್ ಆಕ್ಟ್ರೀಸ್. ಯಾಕಂದ್ರೆ, ಲಾಕ್ ಡೌನ್ ನಂತರದ ಸಂಕಷ್ಟದ ನಡುವೆಯೂ ಸಾಲು ಸಾಲು ಸಿನಿಮಾಗಳಿಗೂ ಅವರೀಗ ನಾಯಕಿ ಆಗುತ್ತಿದ್ದಾರೆ. ಮೊನ್ನೆಯಷ್ಟೇ ಉಪೇಂದ್ರ ಅಭಿನಯದ ಹೊಸ ಚಿತ್ರಕ್ಕೆ ನಾಯಕಿ ಆಗಿ ಆಯ್ಕೆ ಆಗಿದ್ದರು. ಅದರ ಬೆನ್ನಲೇ ಈಗ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಪತ್ನಿ ಕಸ್ತೂರಬಾ ಅವರ ಬಯೋಫಿಕ್ ಕುರಿತು “ತಾಯಿ ಕಸ್ತೂರಬಾ ಗಾಂಧಿ’ ಗೆ ನಾಯಕಿ ಆಗಿದ್ದಾರೆ. ಇದು ನಾಡಿನ ಹೆಸರಾಂತ ಸಾಹಿತಿ ಬರಗೂರು ರಾಮಚಂದ್ರಪ್ಪ ನಿರ್ದೇಶನದ ಚಿತ್ರ.

ಈ ಚಿತ್ರದಲ್ಲಿ ಹರಿಪ್ರಿಯಾ ಅವರು ಕಸ್ತೂರಬಾ ಅವರ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ನಿರ್ದೇಶಕ ಬರಗೂರು ರಾಮಚಂದ್ರಪ್ಪ ಅವರ ಕಾಂಬಿನೇಷನ್ ನಲ್ಲಿ ಹರಿಪ್ರಿಯಾ ಅವರಿಗೆ ಇದು ಎರಡನೇ ಚಿತ್ರ. ‘ಅಮೃತ ಮತಿ’ ಚಿತ್ರದ ನಂತರ ತಾಯಿ ಕಸ್ತೂರಬಾ ಗಾಂಧಿ ಚಿತ್ರಕ್ಕೆ ಆಯ್ಕೆ ಆಗಿದ್ದಾರೆ. ಚಿತ್ರದಲ್ಲಿ ಹರಿಪ್ರಿಯಾ ಅವರ ಪಾತ್ರಕ್ಕೆ ಮೂರು ಶೇಡ್ಸ್ ಇದೆಯಂತೆ. ಬಾಲ್ಯ, ಯಂಗ್ ಹಾಗೂ ಆನಂತರದ್ದು.

” ನಿಜಕ್ಕೂ ನಾನು ಮೋಸ್ಟ್ ಲಕ್ಕೆ ಅಂತಲೇ ಹೇಳಬಹುದು. ಒಬ್ಬ ನಟಿಯಾಗಿ ನಾನು ಎಂತಹ ಪಾತ್ರಗಳಲ್ಲಿ ಅಭಿನಯಿಸಬೇಕೆಂದು ಬಯಸಿದ್ದೇನೋ ಆ ತರಹದ ಪಾತ್ರಗಳು ನನ್ನನ್ನೇ ಹುಡುಕಿಕೊಂಡು ಬರುತ್ತಿವೆ. ಅದರಲ್ಲಿ ಇದು ಕೂಡ ಒಂದು. ಹಾಗೆ ನೋಡಿದರೆ ಈ ಚಿತ್ರ, ಇಂತಹ ಪಾತ್ರ ಸಿಗುತ್ತೆ ಅಂತ ನಾನು ಕನಸು ಕೂಡ ಕಂಡಿರಲಿಲ್ಲ. ಯಾಕಂದ್ರೆ ಕಸ್ತೂರಬಾ ಅಂದ್ರೆ ಇಡೀ ದೇಶಕ್ಕೆ ಗೊತ್ತು. ದೇಶಕ್ಕೆ ಮಾತ್ರವಲ್ಲ ಜಗತ್ತಿಗೆ ಗೊತ್ತು. ಅಂತಹದೊಂದು ಪಾತ್ರ ನನಗೆ ಸಿಗುತ್ತೆ ಅಂದ್ರೆ ಅದು ಅದೃಷ್ಟವೇ ಹೌದು’ ಎನ್ನುತ್ತಾರೆ ಹರಿಪ್ರಿಯಾ. ಇನ್ನೊಂದು ವಿಶೇಷ ಅಂದ್ರೆ ಈ ಚಿತ್ರ ಅಷ್ಟು ಚಿತ್ರೀಕರಣ ರಿಯಲ್ ಲೋಕೆಷನ್ಸ್ ಗಳಲ್ಲಿಯೇ ನಡೆಯಲಿದೆಯಂತೆ.

Categories
ಸಿನಿ ಸುದ್ದಿ

ಯುವರತ್ನ ವೀಕ್ಷಿಸಿದ ನಾಲ್ವರು ಶ್ರೀಗಳು; ಫೋನ್‌ನಲ್ಲಿ ಧನ್ಯವಾದ ತಿಳಿಸಿದ ಪುನೀತ್

‌ಪುನೀತ್‌ ರಾಜಕುಮಾರ್‌ ಅಭಿನಯದ “ಯುವರತ್ನ” ಚಿತ್ರ ನೋಡಿದವರೆಲ್ಲರೂ, ಒಂದೊಳ್ಳೆಯ ಸಂದೇಶವಿರುವ ಸಿನಿಮಾ ಎಂದಿದ್ದರು. ಸಾಕಷ್ಟು ಗಣ್ಯರು ಸಿನಿಮಾ ಕುರಿತು ಮಾತನಾಡಿದ್ದರು. ಈಗ ಸ್ವಾಮೀಜಿಗಳು ಕೂಡ “ಯುವರತ್ನ” ಸಿನಿಮಾ ನೋಡುವ ಮೂಲಕ ಇದೊಂದು ಸಂದೇಶ ಸಾರುವ ಸಿನಿಮಾ ಎಂದು ಹೇಳಿದ್ದಾರೆ. ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ, ಕಾಗಿನೆಲೆಯ ಕನಕ ಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಸ್ವಾಮಿ, ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಹಾಗೂ ದಾವಣಗೆರೆ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಅವರು ಚಿತ್ರವನ್ನು ವೀಕ್ಷಿಸಿದ್ದಾರೆ.

“ಯುವರತ್ನ” ಸಿನಿಮಾವನ್ನು ನೋಡಲೇಬೇಕು ಎಂದು ಡಿವೈಎಸ್ಪಿ ನರಸಿಂಹ ತಾಮ್ರದ್ವಜ ಅವರ ಮನವಿ ಮೇರೆಗೆ ಶ್ರೀಗಳು ಸಿನಿಮಾ ನೋಡಿದ್ದಾರೆ.
“ಯುವರತ್ನ” ವೀಕ್ಷಿಸಿದ ಬಳಿಕ ವಚನಾನಂದ ಸ್ವಾಮೀಜಿ ಮಾತನಾಡಿ, “ರಾಜಕುಮಾರ” ಚಲನ ಚಿತ್ರ ನೋಡಿದ್ದ ನಮಗೆ, ಈ “ಯುವರತ್ನ”ದಲ್ಲೂ ಏನೋ ಹೊಸತು ಇರಲಿದೆ ಎನ್ನುವ ಆಸೆ ಗರಿಗೆದರಿತ್ತು. ಚಿತ್ರದ ಕಥಾಹಂದರ ನಮ್ಮನ್ನು ಸಿನಿಮಾದಲ್ಲಿ ಮುಳುಗುವಂತೆ ಮಾಡುವಲ್ಲಿ ಯಶಸ್ವಿಯಾಯಿತು. ಸಮಾಜದ ಮುಂಚೂಣಿಯ ಸ್ಥಾನದಲ್ಲಿರುವವರು ನೋಡಲೇಬೇಕಾದ ಸಿನಿಮಾ ಇದು. ಸರಕಾರಿ ಶಿಕ್ಷಣ ಕೇಂದ್ರಗಳು ಯಾಕಾಗಿ ಮುಚ್ಚುತ್ತಿವೆ. ಅದರ ಮೇಲೆ ಖಾಸಗಿ ಶಿಕ್ಷಣ ಸಂಸ್ಥೆಗಳು ಯಾವ ರೀತಿಯಲ್ಲಿ ಪ್ರಭಾವ ಬೀರುತ್ತವೆ.

ಯುವಕರು ದಾರಿ ತಪ್ಪುವ ಬಗೆ ಹೇಗೆ. ಹಾಗೂ ಮಕ್ಕಳ ಜೀವನದಲ್ಲಿ ಶಿಕ್ಷಕನ ಪಾತ್ರ ಏನು. ಈ ರೀತಿ ಹತ್ತು ಹಲವು ವಿಷಯಗಳನ್ನು ತಿಳಿಸುವ ಕಥಾ ಹಂದರ ಈ ಚಿತ್ರದಲ್ಲಿದೆ. ಸಮಾಜದ ಎಲ್ಲಾ ವರ್ಗದವರೂ ಕುಟುಂಬ ಸಮೇತರಾಗಿ ನೋಡಲೇ ಬೇಕಾದ ಚಲನಚಿತ್ರವಿದು. ನಮ್ಮ ಈಗಿನ ಬದುಕಿನ ಹಾಗೂ ಸಮಾಜದ ಪ್ರತಿಬಿಂಬ ಈ ಚಲನಚಿತ್ರದಲ್ಲಿದೆ.

ಇನ್ನು, ಜೀವನದಲ್ಲಿ ಮೊದಲ ಬಾರಿಗೆ ಮೂವರು ಪ್ರಮುಖ ಸ್ವಾಮೀಜಿಗಳೊಂದಿಗೆ ಚಿತ್ರ ನೋಡುವ ಭಾಗ್ಯ ನಮ್ಮದಾಗಿತ್ತು. ಅದಲ್ಲದೆ ಸ್ವತಃ ಪುನೀತ್‌ ರಾಜ್‌ಕುಮಾರ್‌ ಅವರು ನಮ್ಮೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಚಲನಚಿತ್ರ ವೀಕ್ಷಿಸಿದ್ದಕ್ಕೆ ಧನ್ಯವಾದ ಹೇಳಿದ್ದು ಕೂಡ ವಿಶೇಷವಾಗಿತ್ತುʼ ಎಂದಿರುವ ಅವರು, ಪ್ರತಿಯೊಬ್ಬರೂ ನೊಡಲೇಬೇಕಾದ ಸಿನಿಮಾ ಇದಾಗಿದ್ದು, ಮಾಸ್ಕ್‌ ಧರಿಸಿ, ಸರ್ಕಾರದ ನಿಯಮ ಪಾಲಿಸಿ ಚಿತ್ರ ವೀಕ್ಷಿಸಬೇಕು ಎಂದು ವಚನಾನಂದ ಸ್ವಾಮಿ ಹೇಳಿದ್ದಾರೆ.

Categories
ಸಿನಿ ಸುದ್ದಿ

ಬಿಗ್‌ ಬಾಸ್‌ ಖ್ಯಾತಿಯ ನಟಿ ಚೈತ್ರಾ ಕೋಟೂರು ಆತ್ಮಹತ್ಯೆಗೆ ಯತ್ನ

ಬಿಗ್‌ ಬಾಸ್‌ ಖ್ಯಾತಿಯ ನಟಿ ಚೈತ್ರಾ ಕೋಟೂರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೋಲಾರ ನಗರದ ಕುರುಬರ ಪೇಟೆಯಲ್ಲಿರುವ ತಮ್ಮ ಮನೆಯಲ್ಲಿ ಗುರುವಾರ ಬೆಳಗ್ಗೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯಕ್ಕೆ ಕೋಲಾರದ ಖಾಸಗಿ ಆಸ್ಪತ್ರೆಯಲ್ಲಿ ಅವರನ್ನು ಚಿಕಿತ್ಸೆಗಾಗಿ ಸೇರಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆಂದು ಹೇಳಲಾಗಿದೆ.

ಚೈತ್ರಾ ಕೋಟೂರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಕ್ಕೆ ನಿರ್ಧಿಷ್ಟವಾದ ಕಾರಣ ಇದುವರೆಗೂ ಗೊತ್ತಾಗಿಲ್ಲವಾದರೂ, ಇತ್ತೀಚೆಗೆ ಅವರು ಮದುವೆ ಆಗಿ ಆನಂತರ ಆದ ಬೆಳವಣಿಗೆಗಳೇ ಕಾರಣ ಎನ್ನಲಾಗಿದೆ.

Categories
ಸಿನಿ ಸುದ್ದಿ

ಅನಾರೋಗ್ಯ ಮಗುವಿಗೆ ನೆರವಾದ ಶಿವಸೈನ್ಯ! ಫ್ಯಾನ್ಸ್‌ ಮಾಡಿದ ಕೆಲಸಕ್ಕೆ ಶಿವಣ್ಣ ಹೆಮ್ಮೆ

ಶಿವರಾಜಕುಮಾರ್‌ ಹೇಗೋ ಅವರ ಅಭಿಮಾನಿಗಳು ಕೂಡ ಹಾಗೆಯೇ. ಹೌದು, ಶಿವರಾಜಕುಮಾರ್‌ ಈಗಾಗಲೇ ಹಲವಾರು ಸಾಮಾಜಿಕ ಕೆಲಸ ಮಾಡಿದ್ದಾರೆ. ಅದೆಷ್ಟೋ ನೊಂದ ಜೀವಗಳಿಗೂ ಸಹಾಯಕ್ಕೆ ನಿಂತಿದ್ದಾರೆ. ಅವರಂತೆಯೇ, ಅವರ ಅಭಿಮಾನಿಗಳೂ ಸಹ ಹಲವು ಸಾಮಾಜಿಕ ಕಾರ್ಯ ಮಾಡುತ್ತಲೇ ಇದ್ದಾರೆ. ಈಗ ಶಿವರಾಜಕುಮಾರ್‌ ಅವರ ಶಿವಸೈನ್ಯ ಮತ್ತು ಶಿವು ಅಡ್ಡ ಬನಶಂಕರಿ ಫ್ಯಾನ್ಸ್‌ ಸೇರಿ ಖಾಯಿಲೆಯಿಂದ ಬಳಲುತ್ತಿದ್ದ ಮಗುವೊಂದರ ಪೋಷಕರಿಗೆ ಧನಸಹಾಯ ಮಾಡಿದ್ದಾರೆ.


ಇಷ್ಟಕ್ಕೂ ಆ ಅಭಿಮಾನಿಗಳು ಸಹಾಯ ಮಾಡಿದ್ದು, ಇತ್ತೀಚೆಗೆ ಶಿವಣ್ಣ ಪ್ರೀಮಿಯರ್‌ ಕ್ರಿಕೆಟ್‌ ಲೀಗ್‌ನಿಂದ ಸಂಗ್ರಹಿಸಿದ ಹಣ ಎಂಬುದು ವಿಶೇಷ. ಶಿವರಾಜಕುಮಾರ್‌ ಅಭಿಮಾನಿಗಳು, ಇತ್ತೀಚೆಗೆ ಶಿವರಾಜಕುಮಾರ್‌ ಅವರ ಮನೆಗೆ ತೆರಳಿ, ಶಿವರಾಜಕುಮಾರ್‌ ಅವರಿಂದಲೇ ಆ ಮಗುವಿನ ತಾಯಿಗೆ ಧನ ಸಹಾಯ ಮಾಡಿದೆ.

ಶಿವಣ್ಣ ಪ್ರೀಮಿಯರ್ ಕ್ರಿಕೆಟ್ ಲೀಗ್ (SPL) ನಿಂದ ಸಂಗ್ರಹಿಸಿದ ಹಣವನ್ನು ಖಾಯಿಲೆಯಿಂದ ಬಳಲುತ್ತಿರುವ ಮಗುವಿನ ಚಿಕಿತ್ಸೆಗೆ ನೀಡಿದ್ದು, ಖುಷಿ ಇದೆ ಎಂದು ಶಿವಸೈನ್ಯ ಮತ್ತು ಶಿವು ಅಡ್ಡ ಬನಶಂಕರಿ ಅಭಿಮಾನಿಗಳು ಹೇಳಿಕೊಂಡಿದ್ದಾರೆ. ಶಿವರಾಜಕುಮಾರ್‌ ಅವರೂ ಸಹ ಅಭಿಮಾನಿಗಳ ಈ ಕೆಲಸವನ್ನು ಮೆಚ್ಚಿದ್ದಾರೆ.

Categories
ಸಿನಿ ಸುದ್ದಿ

ಸಿಗದ ಮೋಕ್ಷ! ಕೊರೊನಾ ಹಾವಳಿ; ಹೊಸಬರ ಸಸ್ಪೆನ್ಸ್ ಥ್ರಿಲ್ಲರ್ ಬಿಡುಗಡೆ ಸದ್ಯಕ್ಕಿಲ್ಲ…

ಕನ್ನಡದಲ್ಲಿ ಹೊಸಬರೇ ಸೇರಿ ಮಾಡಿದ “ಮೋಕ್ಷ” ಚಿತ್ರ ಈಗಾಗಲೇ ಬಿಡುಗಡೆಯ ದಿನವನ್ನು ಘೋಷಿಸಿತ್ತು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಏಪ್ರಿಲ್‌ ೧೬ರಂದು ರಾಜ್ಯಾದ್ಯಂತ ಬಿಡುಗಡೆ ಕಾಣಬೇಕಿತ್ತು. ಆದರೆ, ಕೊರೊನಾ ಭಯ ಹೆಚ್ಚಾಗಿದ್ದರಿಂದ ಚಿತ್ರತಂಡ, “ಮೋಕ್ಷ” ಚಿತ್ರದ ಬಿಡುಗಡೆಯನ್ನು ಸ್ವಲ್ಪ ದಿನಗಳ ಕಾಲ ಮುಂದಕ್ಕೆ ಹಾಕಿದೆ.

ಹೌದು, ಈಗಾಗಲೇ ಟ್ರೇಲರ್ ಮೂಲಕ ಜೋರು ಸದ್ದು ಮಾಡಿರುವ ಸಸ್ಪೆನ್ಸ್ ಥ್ರಿಲ್ಲರ್ “ಮೋಕ್ಷ” ಚಿತ್ರ ಏಪ್ರಿಲ್ 16 ರಂದು ಬಿಡುಗಡೆ ಮಾಡಲು ನಿರ್ದೇಶಕ ಸಮರ್ಥ್‌ ನಾಯಕ್‌ ಅವರು ತಯಾರಾಗಿದ್ದರು. ರಾಜ್ಯದಲ್ಲಿ ಪುನಃ ಕೊರೊನಾ ಮಹಾಮಾರಿ ತನ್ನ ಅಟ್ಟಹಾಸ ತೋರಿಸುತ್ತಿರುವುದರಿಂದ ಚಿತ್ರವನ್ನು ಸ್ವಲ್ಪ ದಿನಗಳ ಕಾಲ ಕಾದು ಆ ನಂತರ ಬಿಡುಗಡೆ ಮಾಡಲು ಯೋಚಿಸಿದ್ದಾಗಿ ಹೇಳಿದ್ದಾರೆ ನಿರ್ಮಾಪಕ ಕಮ್ ನಿರ್ದೇಶಕ ಸಮರ್ಥ್ ನಾಯಕ್.‌ ಚಿತ್ರದ ಹಾಡುಗಳಿಗೆ ಕಿಶನ್ ಮೋಹನ್ ಹಾಗೂ ಸಚಿನ್ ಬಾಲು ಸಂಗೀತ ನೀಡಿದ್ದಾರೆ.

ಹಿನ್ನೆಲೆ ಸಂಗೀತ ಕಿಶನ್ ಮೋಹನ್‌ ಮಾಡಿದ್ದಾರೆ. ಗುರುಪ್ರಶಾಂತ್ ರೈ, ಜೋಮ್ ಜೋಸಫ್, ಕಿರಣ್ ಹಂಪಾಪುರ ಛಾಯಾಗ್ರಹಣ ಮಾಡಿದರೆ, ವರುಣ್ ಕುಮಾರ್ ಅವರ ಸಂಕಲನವಿದೆ. ಚಿತ್ರದಲ್ಲಿ ಮೋಹನ್ ಧನರಾಜ್ ಮತ್ತು ಆರಾಧ್ಯ ಲಕ್ಷ್ಮಣ್ ಪ್ರಮುಖ ಆಕರ್ಷಣೆಯಾಗಿದ್ದಾರೆ. ಉಳಿದಂತೆ ತಾರಕ್ ಪೊನ್ನಪ್ಪ, ಭೂಮಿ ಅಜ್ಞಾನಿ, ಪ್ರಶಾಂತ್ ನಟನ ಇತರರು ಇದ್ದಾರೆ.

Categories
ಸಿನಿ ಸುದ್ದಿ

ಮೃತ್ಯುವನ್ನು ಗೆಲ್ಲಲ್ಲು ಹೊರಟವನೇ ಮೃತ್ಯುಂಜಯ- ʼಮಂತ್ರಂʼ ನಂತರ ಮತ್ತೊಂದು ಚಿತ್ರದೊಂದಿಗೆ ಸೌಂಡ್‌ ಮಾಡಿದ ಸಂಗಮೇಶ್‌ ಸಜ್ಜನ್‌ !

ಯುವ ನಿರ್ದೇಶಕ ಸಂಗಮೇಶ್‌ ಸಜ್ಜನ್‌ ಈಗ ಮತ್ತೊಂದು ಚಿತ್ರದ ಮೂಲಕ ಸುದ್ದಿಯಲ್ಲಿದ್ದಾರೆ. ಈ ಹಿಂದೆ ಇವರು ಮಂತ್ರಂ ಹೆಸರಿನ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳಿದ್ದರು. ಹಾರರ್‌ ಜಾನರ್‌ ಕಥಾ ಹಂದರ ಈ ಚಿತ್ರ ಸಾಕಷ್ಟು ಸೌಂಡ್‌ ಮಾಡಿತ್ತು. ಆ ನಂತರವೀಗ ಮತ್ತೊಂದು ಹಾರರ್‌ ಕಥಾ ಹಂದರದ ಕಥೆಯುಳ್ಳ “ಮೃತ್ಯುಂಜಯ್ಯʼ ಹೆಸರಿನ ಚಿತ್ರವನ್ನು ನಿರ್ದೇಶಿಸಿ, ತೆರೆಗೆ ತರಲು ರೆಡಿ ಆಗಿದ್ದಾರೆ. ಚಿತ್ರದ ಶೀರ್ಷಿಕೆಯೇ ಹೇಳುವ ಹಾಗೆ ಇದು ಮೃತ್ಯುವನ್ನು ಗೆಲ್ಲುವವನ ಕಥೆ. ಅವನೇ ಮೃತ್ಯುಂಜಯ್ಯ. ಸಸ್ಪೆನ್ಸ್‌, ಥ್ರಿಲ್ಲರ್‌ ಅಂಶಗಳ ಜತೆಗೆ ಹಾರರ್‌ ಈ ಚಿತ್ರದ ಹೈಲೈಟ್ಸ್.‌ ಚಿತ್ರದ ಕಥಾ ನಾಯಕ ಕಷ್ಟದ ಸಂದರ್ಭವೊಂದನ್ನು ಎದುರಿಸಲಾಗದೆ, ಆತ್ಮಹತ್ಯೆಗೆ ಯತ್ನಿಸುತ್ತಾನೆ. ಆದರೆ ಒಂದು ಹಂತದಲ್ಲಿ ಅದು ತಪ್ಪು ಅಂತ ಅರಿವಾಗುತ್ತದೆ. ಅದು ಹೇಗೆ ಅನ್ನೋದನ್ನು ಈ ಚಿತ್ರದಲ್ಲಿ ತೋರಿಸಲು ಹೊರಟಿದ್ದಾರಂತೆ ನಿರ್ದೇಶಕ ಸಂಗಮೇಶ್‌ ಸಜ್ಜನ್.

ಚಿತ್ರೀಕರಣ ಮುಗಿದಿದೆ. ಒಂದ್ರೀತಿ ದಾಖಲೆ ಎನ್ನುವ ಹಾಗೆ ಚಿತ್ರ ತಂಡ 192 ಗಂಟೆಗಳಲ್ಲಿ ಈ ಚಿತ್ರದ ಚಿತ್ರೀಕರಣ ಮುಗಿಸಿದೆ. ಲಾಕ್‌ ಡೌನ್‌ ದಿನಗಳಲ್ಲಿಯೇ ಚಿತ್ರ ತಂಡ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಚಿತ್ರೀಕರಣ ಮುಗಿಸಿದೆಯಂತೆ. ವಿಶೇಷ ಅಂದ್ರೆ ಚಿತ್ರದ ಕ್ಲೈಮ್ಯಾಕ್ಸ್‌ ಚಿತ್ರೀಕರಣಕ್ಕೆ 800 ಜನರನ್ನು ಬಳಸಿಕೊಳ್ಳಲಾಗಿತ್ತಂತೆ. ಆಗಲೂ ಸೂಕ್ತ ಕೊರೋನಾ ಮುನ್ನೆಚ್ಚರಿಕೆ ಕೈಗೊಂಡಿದ್ದಾಗಿ ನಿರ್ದೇಶಕ ಸಂಗಮೇಶ್‌ ಸಜ್ಜನ್‌ ಹೇಳುತ್ತಾರೆ.

ಚಿತ್ರೀಕರಣದ ಜತೆಗೆ ಚಿತ್ರ ತಂಡ ಪೋಸ್ಟ್‌ ಪ್ರೊಡಕ್ಷನ್‌ ಕೆಲಸ ಕೂಡ ಮುಗಿಸಿದೆ. ರಿಲೀಸ್‌ಗೆ ಸಿದ್ಧತೆ ನಡೆಸಿದೆ. ಇದೀಗ ಟ್ರೇಲರ್‌ ಲಾಂಚ್‌ ಮೂಲಕ ಚಿತ್ರ ತಂಡ ಮಾಧ್ಯಮದ ಮುಂದೆ ಬಂದಿತ್ತು. ಅಲ್ಲಿ ಚಿತ್ರ ತಂಡ ಚಿತ್ರದ ವಿಶೇಷತೆ ಕುರಿತು ಮಾತನಾಡಿತು.
ಚಿತ್ರಕ್ಕೆ ಹೊಸ ಪ್ರತಿಭೆ ಹಿತೇಶ್‌ ನಾಯಕ ನಟ. ಶ್ರೇಯಾ ಶೆಟ್ಟಿ ನಾಯಕಿ. ಅವರೊಂದಿಗೆ ಸುಮನ್‌ ನಗರ್‌ ಕರ್‌, ಆಟೋ ರಾಜ, ದುರ್ಗಾ ಪ್ರಸಾದ್‌, ಚೇತನ್‌ ದುರ್ಗ, ಶಿವು ಮಜಾ ಭಾರತ, ಚೈತ್ರಾ, ಪವಿತ್ರಾ, ಬಾಬಣ್ಣ ಮತ್ತಿತರರು ಇದ್ದಾರೆ. ಬೆಳದಿಂಗಳ ಬಾಲೆ ಅಂತಲೇ ಜನಪ್ರಿಯತೆ ಪಡೆದಿರುವ ನಟಿ ಸುಮನ್‌ ನಗರ್ಕರ್‌ ಇಲ್ಲಿ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ.‌ ಇದೇ ಮೊದಲು ಅವರು ಸೈಕ್ಯಾಟ್ರಿಸ್ಟ್ ‌ ಆಗಿ ಕಾಣಿಸಿಕೊಂಡಿದ್ದಾರಂತೆ. ಚಿತ್ರತಂಡ ಮಾತಿಗಿಳಿದಾಗ ಮೊದಲು ಮಾತು ಶುರು ಮಾಡಿದ್ದೇ ನಟಿ ಸುಮನ್‌ ನಗರ್ಕರ್‌ ಅವರು. ” ಲಾಕ್‌ ಡೌನ್‌ ದಿನಗಳಲ್ಲಿ ಮೊಟ್ಟ ಮೊದಲ ಬಾರಿಗೆ ಸಿಕ್ಕ ಅವಕಾಶ ಇದು. ನಾನಿಲ್ಲಿ ಒಬ್ಬ ಸೈಕ್ಯಾಟ್ರಿಸ್ಟ್‌ .‌ ತುಂಬಾ ಪ್ರಾಮುಖ್ಯತೆ ಇರುವಂತಹ ಪಾತ್ರ. ಇಡೀ ತುಂಬಾ ಸಪೋರ್ಟ್‌ ಮಾಡಿದೆʼ ಎಂದರು.

ನಿರ್ದೇಶಕ ಸಜ್ಜನ್‌ ಮಾತನಾಡಿ, ಚಿತ್ರದ ಹಾರರ್‌ ಎಳೆಗಳ ಬಗ್ಗೆ ವಿವರಿಸಿದರು. ಹಾರರ್‌ ಎಲಿಮೆಂಟ್‌ ಹ್ಯಾಂಡಲ್‌ ಮಾಡೋದಂದ್ರೆ ತಮಗೆ ತುಂಬಾನೆ ಇಷ್ಟ ಅಂತಲೂ ಹೇಳಿಕೊಂಡರು. ಚಿತ್ರಕ್ಕೆ ಅವರೇ ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ. ನಾಯಕ ಹಿತೇಶ್‌, ನಾಯಕಿ ಶ್ರೇಯಾ ಶೆಟ್ಟಿ, ಛಾಯಾಗ್ರಾಹಕ ವಡ್ಡೆ ದೇವೇಂದ್ರ ರೆಡ್ಡಿ, ಸಂಗೀತ ನಿರ್ದೇಶಕ ಆನಂದ್‌ ರಾಜ್‌ ಜತೆಗೆ ನಿರ್ಮಾಪಕ ಶೈಲಜಾ ಪ್ರಕಾಶ್‌ ಹಾಜರಿದ್ದರು.ನಟ ಯಶಸ್ಸು ಸೂರ್ಯ ಅಥಿತಿಯಾಗಿ ಬಂದಿದ್ದರು. ಹೊಸಬರ ಚಿತ್ರ ತಂಡಕ್ಕೆ ಶುಭ ಹಾರೈಸಿದರು. ಸದ್ಯಕ್ಕೆ ಕ್ಯೂಯಾರಿಟಿ ಹುಟ್ಟಿಸುವ ಟ್ರೇಲರ್‌ ಲಾಂಚ್‌ ಮಾಡಿರುವ ಚಿತ್ರ ತಂಡ ಇಷ್ಟರಲ್ಲಿಯೇ ಚಿತ್ರವನ್ನು ತೆರೆಗೆ ತರುವ ಉತ್ಸಾಹದಲ್ಲಿದೆ.

error: Content is protected !!