Categories
ಸಿನಿ ಸುದ್ದಿ

ಆಗಸ್ಟ್‌ ವೇಳೆಗೆ ಪ್ರೇಕ್ಷಕರ ಮಂದೆ ರಂಗನ ದರ್ಶನ: ನಗಿಸೋಕೆ ರೆಡಿಯಾದ ರಂಗಣ್ಣ!

ಕನ್ನಡದಲ್ಲಿ ಹಾಸ್ಯ ಸಿನಿಮಾಗಳಿಗೇನೂ ಕೊರತೆ ಇಲ್ಲ. ಇಲ್ಲಿ ಸಾಕಷ್ಟು ಕಾಮಿಡಿ ಜಾನರ್‌ ಚಿತ್ರಗಳು ಬಂದಿವೆ. ಈಗಲೂ ಬರುತ್ತಲೇ ಇವೆ. ಆ ಸಾಲಿಗೆ ಈಗ “ಶ್ರೀರಂಗ” ಸಿನಿಮಾ ಕೂಡ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.

ಹೌದು, ಈ ಚಿತ್ರ ಈಗ ಚಿತ್ರೀಕರಣ ಪೂರೈಸಿ, ಹಿನ್ನೆಲೆ ಸಂಗೀತ ಕೆಲಸದಲ್ಲಿ ನಿರತವಾಗಿದೆ. ಬಹುತೇಕ ಬೆಂಗಳೂರು ಸುತ್ತಮುತ್ತ ಸುಮಾರು 21ದಿನಗಳ ಕಾಲ ಚಿತ್ರೀಕರಣ ನಡೆದಿದೆ.‌ ಕೊರೊನಾ ಹಾವಳಿ ಕಡಿಮೆಯಾದ ಬಳಿಕ, ಆಗಸ್ಟ್ ವೇಳೆಗೆ ಚಿತ್ರಮಂದಿರಗಳಲ್ಲಿ “ಶ್ರೀರಂಗ” ನ ದರ್ಶನವಾಗಲಿದೆ.

ರತು ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಸುಮಾ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರವನ್ನು ವೆಂಕಟ್ ಭಾರದ್ವಾಜ್ ನಿರ್ದೇಶನ ಮಾಡಿದ್ದಾರೆ. ಇದೊಂದು ಹಾಸ್ಯಭರಿತ ಸಿನಿಮಾ. ಇಲ್ಲಿ ಮೂರು ಹಾಡುಗಳಿದ್ದು, ಸಮೀರ್ ಕುಲಕರ್ಣಿ ಅವರು ಸಂಗೀತ ನೀಡುತ್ತಿದ್ದಾರೆ. ಮಿಥುನ್ ಛಾಯಾಗ್ರಹಣವಿದೆ. ಚಂದನ್ ಅವರ ಸಂಕಲನವಿರುವ ಈ ಚಿತ್ರದ ಇಂಟ್ರೋಡೆಕ್ಷನ್ ಹಾಡನ್ನು ವಿರಾಜ್ ಕನ್ನಡಿಗ ಅವರೆ ಬರೆದು, ಹಾಡಿದ್ದಾರೆ.

ಗುರುರಾಜ ಹೊಸಕೋಟೆ, ಯಮುನಾ ಶ್ರೀನಿಧಿ, ಶಿನವ, ರಚನಾ ರೈ, ಮಾಸ್ಟರ್ ಚಿರಾಯು ಚಕ್ರವರ್ತಿ, ರೂಪ ರಾಯಪ್ಪ, ವಂದನಾ ಶೆಟ್ಟಿ, ಸಾಗರ್ ಜಯರಾಂ, ಸೂಪರ್ ದೇವು, ರಾಮಕೃಷ್ಣ, ಜ್ಯೋತಿ ಮೂರುರು, ವೆಂಕಟ್ ಭಾರದ್ವಾಜ್ ಇತರರು ಚಿತ್ರದಲ್ಲಿ ನಟಿಸಿದ್ದಾರೆ. ಶಂಕರ್ ರಾಮನ್ ಚಿತ್ರಕ್ಕೆ ಮಾತುಗಳನ್ನು ಪೋಣಿಸಿದ್ದಾರೆ.

Categories
ಸಿನಿ ಸುದ್ದಿ

ಅನಾಹುತದ ಈ ಸೂಚನೆ ಅವತ್ತೇ ಗೊತ್ತಾಗಿರಲಿಲ್ವಾ ಕೃಷ್ಣ ಪರಮಾತ್ಮ ? ಏ.22 ರಿಂದ ಕೃಷ್ಣ ಟಾಕೀಸ್‌ ಶೋ ಸ್ಥಗಿತ, ರಿವೈಂಡ್‌ ಕಥೆ ಇದಕ್ಕಿಂತ ಭಿನ್ನವಾಗಿಲ್ಲ….

ಭಯ, ಭಯ, ಅಂತ ಈಗ ಜನಕ್ಕೆ ಜೀವ ಭಯವೇ ಆವರಿಸಿಕೊಂಡಿದೆ. ಈ ಟೈಮ್‌ನಲ್ಲಿ ಯಾರಾದ್ರೂ ಟಾಕೀಸ್‌ಗೆ ಬಂದು ಸಿನಿಮಾ ನೋಡೋದು ನಿಜವೇ ? ಗೊತ್ತಿಲ್ಲ, ಇಡೀ ಚಿತ್ರರಂಗಕ್ಕೆ ಇಂತಹದೊಂದು ಪ್ರಶ್ನೆ ಕಾಡ್ತಿರೋ ಹೊತ್ತಲ್ಲಿಯೇ ಕಳೆದ ಶುಕ್ರವಾರ “ಕೃಷ್ಣ ಟಾಕೀಸ್‌ʼ ಹಾಗೂ “ರಿವೈಂಡ್‌ʼ ಹೆಸರಿನ ಎರಡು ಸಿನಿಮಾ ರಿಲೀಸ್‌ಆಗಿದ್ದವು.ಈ ಸಿನ್ಮಾ ಟೀಮ್‌ನವರಿಗೆ ಅದೆಂತಹ ಕಾನ್ಪಿಡೆನ್ಸ್‌ಇತ್ತೇನೋ ಗೊತ್ತಿಲ್ಲ, ಆದ್ರೂ ಅವತ್ತು ಈ ಸಿನ್ಮಾ ರಿಲೀಸ್‌ಮಾಡಿದ್ದರು. ಹಾಗಂತ ಅವರ ನಿರೀಕ್ಷೆ ನಿಜವಾಯ್ತಾ ? ಇಲ್ಲ, ಈ ಸಿನ್ಮಾಗಳೆರೆಡು ರಿಲೀಸ್‌ ಆ ದಿನ ಟಾಕೀಸ್‌ಒಳಗಡೆ ಇವತ್ತು ಕಂಡಿದ್ದೇ ಬೇರೆ. ಚಿತ್ರ ತೆರೆ ಕಂಡ ಮುಖ್ಯ ಚಿತ್ರಮಂದಿರಗಳಲ್ಲೇ ಹತ್ತಿಪ್ಪತ್ತು ಜನ ಇರಲಿಲ್ಲ. ಪಾಪ, ಬಂಡವಾಳ ಹಾಕಿ ಸಿನಿಮಾ ಮಾಡಿದ ನಿರ್ಮಾಪಕರ ಕಥೆ ಏನು?

ಕೊರೋನಾ ಅಂತ ಚಿತ್ರೋದ್ಯಮ ಕಂಗಾಲಾಗಿ ಕುಳಿತಿರುವಾಗ ಸಿನಿಮಾ ಮಾಡಿದ ನಿರ್ಮಾಪಕರ ಪರಿಸ್ಥಿತಿ ಇತರರಗಿಂತ ಭಿನ್ನವಾಗಿಲ್ಲ. ಕೋಟಿ ಕೋಟಿ ಹಣ ಸುರಿದು ಸಿನಿಮಾ ನಿರ್ಮಾಣ ಮಾಡುವ ನಿರ್ಮಾಪಕರು ಕೂಡ ತತ್ತರಿಸಿ ಹೋಗುವ ಹಾಗೆ ಮಾಡಿದ ಕೋರೋನಾ ಎನ್ನುವ ಮಾಹಾಮಾರಿ. ಕೋಟಿ ನಿರ್ಮಾಪಕರ ಸ್ಥಿತಿಯೇ ಹೀಗಿರಬೇಕಾದ್ರೆ, ಸಣ್ಣ ಪುಟ್ಟವರು ಕಥೆ ಏಂತೂ ? ಆ ಕಥೆ ಇನ್ನು ಘೋರ. ಪರಿಸ್ಥಿತಿ ಹೀಗಿರುವಾಗ ಕಷ್ಟಪಟ್ಟು , ಬಂಡವಾಳ ಹಾಕಿ ಸಿನಿಮಾ ನಿರ್ಮಾಣ ಮಾಡಿದ ನಿರ್ಮಾಪಕರಿಗೆ ತಮ್ಮ ಚಿತ್ರ ರಿಲೀಸ್‌ಆದಾಗ ಚಿತ್ರ ಮಂದಿರದಲ್ಲಿ ಪ್ರೇಕ್ಷಕರೇ ಕಾಣದಿದ್ದರೆ ಏನಾಗಬೇಡ ? ಅವತ್ತು ಚಿತ್ರ ತಂಡದ ಮುಖದಲ್ಲಿ ಕಂಡಿದ್ದು ಕಣ್ಣೀರು. ಅದರ ಪರಿಸ್ಥಿತಿ ಇವತ್ತು ಆಗಿದ್ದೇನು? ಈ ಪೈಕಿ ಇವತ್ತು ʼ ಕೃಷ್ಣ ಟಾಕೀಸ್‌ʼ ಚಿತ್ರದ ಪ್ರದರ್ಶನವನ್ನು ಚಿತ್ರ ತಂಡ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ನಿರ್ಧರಿಸಿದೆ.

“‌ ಸರ್ಕಾರ ಏನು ನಿರ್ಧಾರ ತೆಗೆದುಕೊಳ್ಳುವುದು ಗೊತಿಲ್ಲ. ಆದರೆ ಚಿತ್ರದ ನಿರ್ಮಾಪಕ ಗೋವಿಂದರಾಜು ಹಾಗೂ ಚಿತ್ರತಂಡದವರು ಎಲ್ಲಕ್ಕಿಂತ ಆರೋಗ್ಯವೇ ಮುಖ್ಯ ಎಂಬ ಉದ್ದೇಶದಿಂದ ಏಪ್ರಿಲ್ 22 ರವರೆಗೂ ಮಾತ್ರ ಚಿತ್ರವನ್ನು ಪ್ರದರ್ಶಿಸಿ, ನಂತರ ಸ್ಥಗಿತಗೊಳಿಸಲು ತೀರ್ಮಾನಿಸಿದ್ದಾರೆ. ಹಾಗೊಂದು ವೇಳೆ ಸರ್ಕಾರ ನಾಳೆಯಿಂದಲೇ ಚಿತ್ರಮಂದಿರ ಮುಚ್ಚಬೇಕು ಅಂದರೆ ಅದಕ್ಕೂ ನಾವು ಬದ್ಧ ಎನ್ನುತ್ತಾರೆ ನಿರ್ದೇಶಕ ವಿಜಯಾನಂದ್. ಮತ್ತೊಂದಡೆ ಚಿತ್ರದ ಮರು ಬಿಡುಗಡೆಗೂ ಚಿತ್ರ ತಂಡ ಪ್ಲಾನ್‌ ಹಾಕಿಕೊಂಡಿದೆ. ಕೊರೋನಾ ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ನಂತರ ರೀ ರಿಲೀಸ್‌ ಮಾಡುವುದಾಗಿ ತಿಳಿಸಿದೆ.

ಹೌದು, ನಿರ್ಮಾಣ ಮಾಡಿದ ಸಿನಿಮಾವನ್ನು ರಿಲೀಸ್‌ಮಾಡದೆ ಇರೋದಕ್ಕೆ ಅದೇನು ಪಾತ್ರೆ-ಸಾಮಾನು ಅಲ್ಲ. ಅಪ್ಕೋರ್ಸ್‌, ತಯಾರಾದ ಸಿನಿಮಾ ಚಿತ್ರಮಂದಿರಕ್ಕೆ ಬರಲೇ ಬೇಕು. ಪ್ರೇಕ್ಷಕರಿಂದ ಅದಕ್ಕೆ ಒಳ್ಳೆಯ ರೆಸ್ಪಾನ್ಸ್‌ಕೂಡ ಸಿಗಬೇಕು. ಆದ್ರೆ ಇವರೆಡು ಸಿನಿಮಾ ಇವತ್ತು ರಿಲೀಸ್‌ ಆದ ಸಂದರ್ಭ ಸರಿಯಿತ್ತಾ ? ಟೀಮ್‌ನವರಿಗೆ ಅದೇನೋ ಕಾನ್ಪಿಡೆನ್ಸ್‌ ಇತ್ತೇನೋ. ಕೊರೋನಾ ಅಂತ ಏನೇ ಭಯ ಹುಟ್ಟಿಸಿದ್ರೂ ಪ್ರೇಕ್ಷಕರಿಗೆ ಸಿನ್ಮಾ ಬೇಕು. ಅವರು ಬಂದೇ ಬರ್ತಾರೆ ಅಂತ ಭಂಡ ಧೈರ್ಯವೂ ಇತ್ತೇನೋ. ಆದ್ರೆ ಪರಿಸ್ಥಿತಿ ಹಾಗಿರಲಿಲ್ಲ ಅನ್ನೋದು ಅಷ್ಟೇ ಸತ್ಯ.

Categories
ಸಿನಿ ಸುದ್ದಿ

ನನಗೆ ಕೊರೋನಾ ಪಾಸಿಟಿವ್‌ ಬಂದಿದೆ,ಮುಂದೆ ನಂಗೇನಾದ್ರೂ ಆಗಿದ್ದಾದ್ದಲ್ಲಿ,ಅದಕ್ಕೆ ನೇರ ಕಾರಣವೇ ರಾಜ್ಯ ಸರ್ಕಾರ : ನಿರ್ದೇಶಕ ಗುರು ಪ್ರಸಾದ್‌ ಆಕ್ರೋಶ

ʼಮಠʼ ಚಿತ್ರದ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್‌ ಅವರಿಗೆ ಕೊರೋನಾ ಪಾಸಿಟಿವ್‌ ಬಂದಿದೆ. ತಮಗೆ ಕೊರೋನಾ ಪಾಸಿಟಿವ್ ಧೃಡಪಟ್ಟಿರುವ ಕುರಿತು ಮಾತನಾಡಿರುವ ವಿಡಿಯೋವೊಂದನ್ನು ಗುರುಪ್ರಸಾದ್‌ ಸೋಷಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.” ನನಗೆ ಕರೋನಾ ಪಾಸಿಟಿವ್‌ ಬಂದಿದೆ. ಬಂದಿದೆ ಅನ್ನೊದಕ್ಕಿಂತ ರಾಜ್ಯ ಸರ್ಕಾರ ಮನೆ ಮನೆಗೆ ಕೊರೋನಾ ತಂದು ಮುಟ್ಟಿಸಿದೆ. ಇದಕ್ಕೆ ಮುಖ್ಯ ಕಾರಣ ಸಿಎಂ ಯಡಿಯೂರಪ್ಪ, ಅವರ ಪುತ್ರ ವಿಜಯೇಂದ್ರ ಹಾಗೂ ಆರೋಗ್ಯ ಸಚಿವ ಡಾ.ಸುಧಾಕರ್.‌ ಇದು ಇವರೆಲ್ಲರ ಕೊಡುಗೆ. ಮುಂದೆ ನಾನು ಏನಾಗುತ್ತೇನೋ ಗೊತ್ತಿಲ್ಲ. ಹಾಗೇನಾದ್ರು ನಂಗೆ ಆದ್ರೆ ಅದಕ್ಕೆ ರಾಜ್ಯ ಸರ್ಕಾರವೇ ಕಾರಣ ಅಂತ ತರಾಟೆಗೆ ತೆಗೆದುಕೊಂಡಿದ್ದಾರೆ. ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರ ಹಾಕಿರುವ ಗುರು ಪ್ರಸಾದ್‌, ತೀವ್ರ ನೋವು ತೊಡಿಕೊಂಡಿದ್ದಾರೆ. ಅದರ ಸಂಪೂರ್ಣ ವಿಡಿಯೋ ಇಲ್ಲಿದೆ. ( ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ )

https://www.facebook.com/watch/?v=1206848433063292

Categories
ಸಿನಿ ಸುದ್ದಿ

ಹೊಸ ರೂಪದಲ್ಲಿ ಸಿರಿ ಕನ್ನಡ ಮೊದಲ ಸಲ 65 ಸಂಚೆಕೆಯ ಧಾರಾವಾಹಿಗಳ ಪ್ರಸಾರ

ಕನ್ನಡದಲ್ಲಿ ’ಸಿರಿ ಕನ್ನಡ ವಾಹಿನಿ’ಯು ಸದ್ಯ ಕನ್ನಡಿಗರ ಕಣ್ಮಣಿ. ಯಾವುದೇ ಸಂಚಿಕೆಗಳಿರಲಿ, ಗರಿಷ್ಟ 65ಕ್ಕೆ ನಿಲ್ಲಿಸಬೇಕೆಂದು ನಿರ್ಣಯ ತೆಗೆದುಕೊಂಡಂತೆ, ಸಪಲರವಾಗಿದೆ ವಾಹಿನಿ. ಪ್ರತಿಫಲವಾಗಿ ಶಾರ್ಟ್ ಅಂಡ್ ಸ್ವೀಟ್ ಎನ್ನುವಂತೆ ರಿಯಾಲಿಟಿ ಶೋ, ಅಧ್ಯಾತ್ಮಿಕ ಹೂರತುಪಡಿಸಿ, ಒಂದಷ್ಟು ವಿನೂತನ ಧಾರವಾಹಿ, ಹೀಗೆ ಎಲ್ಲರೂ ಇಷ್ಟಪಡುವಂತಹ ಎಂಟು ಕಾರ್ಯಕ್ರಮಗಳನ್ನು ಸಿದ್ದಪಡಿಸಿದೆ. ಮೊದಲನೆಯದಾಗಿ ಮಠ ಮಾನ್ಯಗಳ ದರ್ಶನ ನೀಡುವ ’ಧರ್ಮ ದರ್ಶನ’ ಕಾರ್ಯಕ್ರಮ ಬೆಳಗ್ಗೆ 7.30ಕ್ಕೆ ಪ್ರಸಾರವಾಗಲಿದೆ. 12.30ಕ್ಕೆ ’ಸಿರಿ ಭೋಜನ’ ನಟಿ ಸನಾತನಿ ನಡೆಸಿಕೊಡುವ ಕಾರ್ಯಕ್ರಮದಲ್ಲಿ ಹೆಸರು ಮಾಡಿರುವ ಶೆಫ್‌ಗಳು ಭಾಗವಹಿಸಲಿದ್ದು, ಉತ್ತಮ ಆರೋಗ್ಯ ನಿರ್ವಹಣೆಗಾಗಿ ಆಯುರ್ವೇದ ಅಡುಗೆಯ ಅಂಶಗಳನ್ನು ತಿಳಿಸಿಕೊಡಲಿದ್ದಾರೆ.

ಮೂರನೆಯದು ನಟಿ,ನಿರೂಪಕಿ ರಜನಿ ನಡೆಸಿಕೊಡುವ ’ನಾರಿಗೊಂದು ಸೀರೆ’ ಮಧ್ಯಾಹ್ನ 1.30ಕ್ಕೆ ಹೊಸ ರೂಪದಲ್ಲಿ ಬರಲಿದೆ. ಉತ್ತರ ಕರ್ನಾಟಕದ ಸೊಗಡು ಇರುವ ’ಧಾರವಾಡದಾಗೊಂದು ಲವ್ ಸ್ಟೋರಿ’ ಧಾರಾವಾಹಿಯನ್ನು ಪೃಥ್ವಿರಾಜ ಕುಲಕರ್ಣಿ ನಿರ್ದೇಶನ ಮಾಡುತ್ತಿದ್ದಾರೆ. ಅಲ್ಲಿನ ಸ್ಥಳೀಯ ಕಲಾವಿದರುಗಳಿಗೆ ಅವಕಾಶ ಮಾಡಿಕೊಟ್ಟಿರುವುದು ವಿಶೇಷ. ಇದು ರಾತ್ರಿ 7 ಗಂಟೆಗೆ ಪ್ರಸಾರವಾಗಲಿದೆ.
ಇನ್ನು, ನಟ,ನಿರ್ಮಾಪಕ, ನಿರ್ದೇಶಕ ಮತ್ತು ’ನನ್ ಮಗಂದ್’ ಖ್ಯಾತಿಯ ಹುಚ್ಚ ವೆಂಕಟ್ ನಿರೂಪಕರಾಗಿರುವ ’ಲೈಫು ಓಕೆ’ ರಿಯಾಲಿಟಿ ಶೋ ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ. ಕಿರುತೆರೆ ಕಲಾವಿದ ಮುರಳಿ ಇದನ್ನು ನಡೆಸಿಕೊಡಲಿದ್ದಾರೆ. ’ಕಲ್ಪನ’ ಎಂಬ ಹಾರರ್ ಮತ್ತು ಪ್ರೀತಿ ಕಥೆ ಹೊಂದಿರುವ ಧಾರವಾಹಿಯನ್ನು ಸುಶೀಲ್‌ಮೊಕಾಶಿ ನಿರ್ದೇಶಿಸುತ್ತಿದ್ದಾರೆ. ಇದು ರಾತ್ರಿ 8.30ಕ್ಕೆ ಪ್ರಸಾರವಾಗಲಿದೆ. ಹಿರಿಯ ನಟಿ ಅಪರ್ಣ ನಿರೂಪಣೆಯಲ್ಲಿ ’ಸಿಂಪಲ್ಲಾಗ್ ಒಂದ್ ಸಿನಿಮಾ ಕಥೆ’ ರಾತ್ರಿ 9ಕ್ಕೆ ಮೂಡಿಬರಲಿದೆ. ಇವುಗಳ ಜೊತೆ ವಿಸ್ಮಯ, ವಿಚಿತ್ರ ಮತ್ತು ವಿಶೇಷ ಸಂಗತಿಗಳ ಕುರಿತಂತೆ ’ನಿಗೂಢ ರಹಸ್ಯ’ ಕಾರ್ಯಕ್ರಮವನ್ನು ಆರ್‌ಜೆ ನಿಖಿಲ್‌ಸ್ವಾಮಿ ಸಾರಥ್ಯದಲ್ಲಿ ರಾತ್ರಿ 9.30 ಕ್ಕೆ ಮೂಡಿಬರಲಿದೆ. ಸೋಮವಾರದಿಂದ ಶುಕ್ರವಾರವರೆಗೆ ಏಪ್ರಿಲ್ 19ರಿಂದ ಪ್ರಸಾರವಾಗಲಿವೆ ’ಸಿರಿ ಕನ್ನಡ’ ವಾಹಿನಿ ಈಗ ಪರಿಪೂರ್ಣ ವಾಹಿನಿಯಾಗಿ ಹೊರಹೊಮ್ಮಲಿದ್ದು ಉತ್ತಮ ಕಾರ್ಯಕ್ರಮ ರೂಪಿಸಿ ಮನರಂಜನೆ ನೀಡುವುದಾಗಿ ವಾಹಿನಿ ಮುಖ್ಯಸ್ಥ ಸಂಜಯ್‌ ಹೇಳಿದ್ದಾರೆ.

Categories
ಸಿನಿ ಸುದ್ದಿ

ರಶ್ಮಿಕಾಗೆ ಒಲಿದ ಮತ್ತೊಂದು ಅದೃಷ್ಟ! ಮೆಕ್‌ಡೊನಾಲ್ಡ್‌ಗೆ ಕೊಡಗು ಬೆಡಗಿ ರಾಯಭಾರಿ

ರಶ್ಮಿಕಾ ಮಂದಣ್ಣ ಅದೃಷ್ಟವಂತೆ…!
ಹೌದು, ಈ ಮಾತು ಅಕ್ಷರಶಃ ನಿಜ. ಮೊದಲ ಸಿನಿಮಾದಲ್ಲೇ ಗೆಲುವು ಕಂಡ ಬೆಡಗಿ. ಅಷ್ಟೇ ಅಲ್ಲ, ತನ್ನ ಅಂದದ ಮೊಗದಿಂದಲೇ ಎಲ್ಲರನ್ನೂ ಮೋಡಿ ಮಾಡಿದವೃು. ನೋಡ ನೋಡುತ್ತಿದ್ದಂತೆಯೇ ಕನ್ನಡ ಮಾತ್ರವಲ್ಲ, ಟಾಲಿವುಡ್‌, ಕಾಲಿವುಡ್‌, ಬಾಲಿವುಡ್‌ಗೂ ಕಾಲಿಟ್ಟ ಚೆಲುವೆ ಈಕೆ. ನ್ಯಾಷನಲ್‌ ಕ್ರಶ್‌ ಎನಿಸಿಕೊಂಡಿರುವ ರಶ್ಮಿಕಾ, ಒಂದು ಸುತ್ತು ಎಲ್ಲಾ ಸ್ಟಾರ್‌ಗಳ ಜೊತೆ ಡಿಂಗುಡಾಂಗು ಅಂತ ಕುಣಿದು ಕುಪ್ಪಳಿಸಿದ್ದಾರೆ. ಇತ್ತೀಚೆಗಷ್ಟೇ ಬಾಲಿವುಡ್‌ಗೆ ಹಾರಿದ್ದ ರಶ್ಮಿಕಾಗೆ ಈಗ ಮತ್ತೊಂದು ಭರ್ಜರಿ ಅವಕಾಶವೊಂದು ಸಿಕ್ಕಿದೆ. ಹಾಗಂತ, ಅದು ಹೊಸ ಬಾಲಿವುಡ್‌ ಸಿನಿಮಾನಾ ಅಂತಂದುಕೊಳ್ಳುವಂತಿಲ್ಲ. ಅವರೀಗ ಜನಪ್ರಿಯ ಕಂಪೆನಿಯೊಂದಕ್ಕೆ ರಾಯಭಾರಿಯಾಗಿದ್ದಾರೆ ಎಂಬುದು ಈ ಹೊತ್ತಿನ ಸುದ್ದಿ.


ಈಗಾಗಲೇ ಅನೇಕ ಸ್ಟಾರ್‌ ನಟಿಯರು ಹಲವು ಬ್ರ್ಯಾಂಡ್‌ಗಳಿಗೆ ರಾಯಭಾರಿಯಾಗಿರುವುದು ಗೊತ್ತೇ ಇದೆ. ರಶ್ಮಿಕಾ ಕೂಡ ಈಗ ದೊಡ್ಡ ಕಂಪೆನಿಗೆ ರಾಯಭಾರಿಯಾಗಿದ್ದಾರೆ. ಫಾಸ್ಟ್‌ ಫುಡ್‌ ತಯಾರಿಕಾ ಕಂಪೆನಿಯೊಂದು ರಶ್ಮಿಕಾ ಮಂದಣ್ಣ ಅವರನ್ನು ಸೌತ್‌ ಇಂಡಿಯಾ ರಾಯಭಾರಿಯನ್ನಾಗಿ ನೇಮಕ ಮಾಡಿದೆ.

ಅಂದಹಾಗೆ, ಅದು ಮೆಕ್‌ಡೊನಾಲ್ಡ್‌ ಬ್ರ್ಯಾಂಡ್.‌ ಸದ್ಯಕ್ಕೆ ರಶ್ಮಿಕಾ ಮೆಕ್‌ಡೊನಾಲ್ಡ್‌ ಬ್ರ್ಯಾಂಡ್‌ನ ಸೌತ್‌ ಇಂಡಿಯಾ ರಾಯಭಾರಿ. ಅದೇನೆ ಇರಲಿ, ಒಂದರ ಮೇಲೊಂದು ಅದೃಷ್ಟ ರಶ್ಮಿಕಾ ಅವರನ್ನು ಹುಡುಕಿ ಬರುತ್ತಿದೆ. ಮುಂದಿನ ದಿನಗಳಲ್ಲಿ ರಶ್ಮಿಕಾಗೆ ಇನ್ನಷ್ಟು ಬ್ರ್ಯಾಂಡ್‌ ಸಿಕ್ಕರೆ ಅಚ್ಚರಿಯೇನಿಲ್ಲ.

Categories
ಸಿನಿ ಸುದ್ದಿ

ತೂಗುದೀಪ ಎಂಬ ಸದಾ ಬೆಳಗುವ ದೀಪ….

ಬಾಕ್ಸ್‌ ಆಫೀಸ್‌ ಸುಲ್ತಾನ್‌ ದರ್ಶನ್‌ ಸಾಧನೆ ನೋಡುವುದಕ್ಕೆ ಅವರ ತಂದೆ ಇರಬೇಕಿತ್ತು. ನಟರಾಗಿ ನೆಲೆ ಕಂಡುಕೊಳ್ಳುವುದಕ್ಕೆ ಕಡುಕಷ್ಟ ಪಟ್ಟಿದ್ದ ತೂಗುದೀಪ ಶ್ರೀನಿವಾಸ್‌, ಇವತ್ತು ಮಕ್ಕಳ ಈ ದರ್ಬಾರ್‌ ಅನ್ನು ಕಣ್ಣಾರೆ ನೋಡಿದ್ದರೆ ಅದೆಷ್ಟು ಖುಷಿ ಪಡುತ್ತಿದ್ದರೋ ಏನೋ….! ದರ್ಶನ್‌ ಅಭಿಮಾನಿಗಳು ಮಾತ್ರವಲ್ಲ, ಕನ್ನಡದ ಅದೆಷ್ಟೋ ಮಂದಿ ಸಿನಿಮಾ ಪ್ರೇಕ್ಷಕರು ಅನೇಕ ಸಲ ಹೀಗೆ ಅಂದುಕೊಂಡಿದ್ದು ಸುಳ್ಳಲ್ಲ. ಸಿನಿಮಾದಿಂದ ಸಿನಿಮಾಕ್ಕೆ ದರ್ಶನ್‌ ತಮ್ಮ ಸ್ಟಾರ್‌ ಇಮೇಜ್‌ ಅನ್ನು ಹೆಚ್ಚಿಸಿಕೊಳ್ಳುತ್ತಾ ಎತ್ತರೆತ್ತರಕ್ಕೆ ಜಿಗಿದಾಗೆಲ್ಲ ಜನರೇ ಹಾಗೆಂದುಕೊಂಡಿದ್ದು ಹೌದು.

ಅವರೆಲ್ಲ ಹಾಗಂದುಕೊಳ್ಳುವುದಕ್ಕೂ ಕಾರಣ ಇದೆ. ದರ್ಶನ್‌ ಸ್ಟಾರ್‌ ಆಗಿ ಸಂಭ್ರಮಿಸಿದಾಗೆಲ್ಲ ಪ್ರೇಕ್ಷಕರ ಮುಂದೆ ದರ್ಶನ್ ತಂದೆ ತೂಗುದೀಪ ಶ್ರೀನಿವಾಸ್ ಅವರ ಬಣ್ಣದ ಬದುಕಿನ ದಾರಿಗಳು ಕಾಣಿಸಿಕೊಳ್ಳುತ್ತವೆ. ದರ್ಶನ್‌ ಜನಪ್ರಿಯತೆ ಕಂಡಾಗ ಅವರ ಅಭಿಮಾನಿಗಳಿಗೆ ತೂಗುದೀಪ ಶ್ರೀನಿವಾಸ್ ವಿಲನ್‌ ಆಗಿ ಅಬ್ಬರಿಸಿದ ದೃಶ್ಯಗಳು ಕಣ್ಮುಂದೆ ಬಂದು ನಿಲುತ್ತವೆ. ಸಿನಿಮಾದಲ್ಲಿ ಅವಕಾಶ ಇಲ್ಲ ಅಂತ ಅವರು ಮತ್ತೆ ನಾಟಕಗಳಲ್ಲಿ ಬ್ಯುಸಿಯಾದ ದಿನಗಳು ನೆನಪಾಗುತ್ತವೆ. ಅಂತಹ ನಟನೊಬ್ಬನ ಮಗ ಕನ್ನಡದ ದೊಡ್ಡ ಸ್ಟಾರ್‌ ಆಗಿ ಮೆರೆಯುತ್ತಿರುವಾಗ ಅದರ ವೈಭೋಗ ನೋಡುವುದಕ್ಕೆ ಅವರು ಇರಬೇಕಿತ್ತು ಅನ್ನೋದು ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಸಹಜವಾಗಿಯೇ ಕಾಡುವ ಸಂಗತಿ.‌

ಅಂದ ಹಾಗೆ, ಈಗ ಇಲ್ಲಿ ತೂಗುದೀಪ ಶ್ರೀನಿವಾಸ್‌ ಅವರ ಕುರಿತು ಯಾಕೆ ಮಾತು ಅಂತ ನಿಮಗೂ ಅನಿಸಿರಬಹುದು. ಅದಕ್ಕೆ ಕಾರಣವೂ ಇದೆ. ನಟ ದಿವಂಗತ ತೂಗುದೀಪ ಶ್ರೀನಿವಾಸ್‌ ಅವರಿಗೆ ಇಂದು ಹುಟ್ಟು ಹಬ್ಬ. ಅವರು ಬದುಕಿದ್ದರೆ ದರ್ಶನ್‌ ಅವರ ಕುಟುಂಬ ಹಾಗೂ ಅವರ ಫ್ಯಾನ್ಸ್‌ ಅದೆಷ್ಟು ಅದ್ದೂರಿಯಾಗಿ ಹುಟ್ಟು ಹಬ್ಬ ಆಚರಿಸುತ್ತಿತ್ತೋ ಏನೋ. ಹಾಗಂತ ದರ್ಶನ್‌ ಫ್ಯಾನ್ಸ್‌ ಅವರೇನು ಸುಮ್ಮನೆ ಕುಳಿತಿಲ್ಲ.” ತೂಗುದೀಪ ಡೈನೆಸ್ಟಿʼ ಹೆಸರಿನ ಒಂದು ತಂಡ ತೂಗುದೀಪ ಶ್ರೀನಿವಾಸ್‌ ಅವರನ್ನು ವಿಭಿನ್ನವಾಗಿಯೇ ಸ್ಮರಿಸಿಕೊಂಡಿದೆ. ತೂಗುದೀಪ ಶ್ರೀನಿವಾಸ್‌ ಅವರ ಹುಟ್ಟು ಹಬ್ಬಕ್ಕೆ ಒಂದು ಸ್ಪೆಷಲ್‌ ಲಿರಿಕಲ್‌ ವಿಡಿಯೋ ಸಾಂಗ್‌ ಲಾಂಚ್‌ ಮಾಡಿದೆ. ಪ್ರಮೋದ್‌ ಜೋಯಿಸ್‌ ಸಾಹಿತ್ಯಕ್ಕೆ ಚೇತನ್‌ ಕೃಷ್ಣ ಸಂಗೀತ ನೀಡಿದ್ದಾರೆ. ‌ದರ್ಶನ್‌ ನಾರಾಯಣ್‌ ಹಾಡಿದ್ದಾರೆ.ʼ ” ಜಯ ಜಯ ತೂಗುದೀಪ ….” ಹೆಸರಿನ ಈ ಸಾಂಗ್‌ನಲ್ಲಿ ನಟ ತೂಗುದೀಪ ಶ್ರೀನಿವಾಸ್‌ ಅವರ ಕಲಾ ಸಾಧನೆಯನ್ನು ಬಗೆ ಬಗೆಯಲ್ಲಿ ಬಣ್ಣಿಸಲಾಗಿದೆ.

ಹೌದು, ಕನ್ನಡ ಚಿತ್ರರಂಗ ಕಂಡ ಮಹಾನ್‌ ಖಳನಟರ ಪೈಕಿ ತೂಗುದೀಪ ಶ್ರೀನಿವಾಸ್‌ ಕೂಡ ಒಬ್ಬರು. ಹಾಗಂತ ಅವರು ಬರೀ ಖಳನಟರಲ್ಲ. ಸಹ ನಟ ಹಾಗೆಯೇ ಪೋಷಕ ನಟರೂ ಹೌದು. ಆ ಮೂಲಕ ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸಿದ ಮಹಾನ್‌ ಪ್ರತಿಭೆ. ನಟ ತೂಗುದೀಪ ಶ್ರೀನಿವಾಸ್‌ ಅಂದಾಕ್ಷಣ ಕಟ್ಟು ಮಸ್ತು ದೇಹ, ಅಗಲ ಮುಖ, ಕತ್ತಿನ ಅಂಚಿನ ನೋಟ, ಹುರಿಗೊಳಿಸಿದ ಮೀಸೆ, ಖಡಕ್‌ ಲುಕ್‌ ಆಕೃತಿ ನಿಮ್ಮ ಕಣ್ಮುಂದೆ ಬಂದು ನಿಲ್ಲೋದು ಸಹಜ. ಆ ಆಕೃತಿ ನೋಡಿಯೇ ಸಿನಿಮಾ ಮಂದಿ, ವಿಲನ್‌ಗೆ ನೀವು ಫಿಕ್ಸ್‌ ಅಂತಲೇ ಅವರಿಗೆ ಹೇಳುತ್ತಿದ್ರಂತೆ. ಆರಂಭದಿಂದಲೂ ವಿಲನ್‌ ಆಗಿ ಬ್ರಾಂಡ್‌ ಆದ ಅಪರೂಪದ ನಟ ತೂಗುದೀಪ ಶ್ರೀನಿವಾಸ್. ಅವರ ಬಣ್ಣದ ಬದುಕಿನ ಇಂಟೆರೆಸ್ಟಿಂಗ್‌ ಸಂಗತಿಗಳಲ್ಲಿ ಮೊದಲು ತುಂಬಾನೆ ಕ್ಯೂರಿಯಾಸಿಟಿ ಮೂಡಿಸಿದ್ದು ಶ್ರೀನಿವಾಸ್‌ ಎನ್ನುವ ಹೆಸರಿಗೆ ತೂಗುದೀಪ ಎನ್ನುವ ಸಿನಿಮಾ ಶೀರ್ಷಿಕೆಯೂ ಸೇರಿಕೊಂಡಿದ್ದು.

ಆ ಕಥೆ ಬಹುತೇಕ ಎಲ್ಲರಿಗೂ ಗೊತ್ತೇ ಇದೆ. ನಟ ತೂಗುದೀಪ ಶ್ರೀನಿವಾಸ್‌ ಮೊಟ್ಟ ಮೊದಲು ಸಿನಿಮಾಕ್ಕೆ ಬಣ್ಣ ಹಚ್ಚಿದ್ದು ಕೆ.ಎಸ್.ಎಲ್‌ ಸ್ವಾಮಿ ನಿರ್ದೇಶನದ ” ತೂಗುದೀಪʼ ಚಿತ್ರದಲ್ಲಿ. ಈ ಚಿತ್ರಕ್ಕೆ ಬರುವಾಗ ಅವರ ಹೆಸರು ಶ್ರೀನಿವಾಸ್‌ ಅಂತಲೇ ಇತ್ತಂತೆ. ಆದ್ರೆ ಆ ಹೊತ್ತಿಗೆ ಆ ಚಿತ್ರದಲ್ಲಿ ಇನ್ನೊಬ್ಬರು ಶ್ರೀನಿವಾಸ್‌ ಅಂತ ಇದ್ದರು. ಅವ್ರು ಬೇರಾರು ಅಲ್ಲ, ಗಾಯಕ ಪಿ.ಬಿ. ಶ್ರೀನಿವಾಸ್.‌ ಕರೆಯೋದಿಕ್ಕೆ ಇದು ಸ್ವಲ್ಪ ಕನ್‌ಪ್ಯೂಸ್‌ ಮೂಡಿಸುತ್ತೆ ಅಂತ ನಿರ್ದೇಶಕ ಕೆ.ಎಸ್.ಎಲ್‌ ಸ್ವಾಮಿ ಅವರು, ನಟ ಶ್ರೀನಿವಾಸ್‌ ಅವರಿಗೆ ಸಿನಿಮಾದ ಶೀರ್ಷಿಕೆಯನ್ನೇ ಮುಂದಿಟ್ಟು “ತೂಗುದೀಪ ಶ್ರೀನಿವಾಸ್‌ʼ ಅಂತ ಹೆಸರಿಟ್ಟರಂತೆ. ಅಲ್ಲಿಂದ ತೂಗುದೀಪ ಶ್ರೀನಿವಾಸ್‌ ಎನ್ನುವ ಹೆಸರು ಮನೆ ಮತಾಯಿತು ಅನ್ನೋದು ಹಳೇ ಮಾತು.

“ತೂಗುದೀಪʼ ಚಿತ್ರದೊಂದಿಗೆ ಬೆಳ್ಳಿತೆರೆಗೆ ಎಂಟ್ರಿಯಾದ ನಟ ತೂಗುದೀಪ ಶ್ರೀನಿವಾಸ್‌ ಅಭಿನಯಿಸಿದ ಚಿತ್ರಗಳ ಸಂಖ್ಯೆ ಬಹಳಷ್ಟು. ಮೇಯರ್‌ ಮುತ್ತಣ್ಣ , ಬಂಗಾರದ ಮನುಷ್ಯ, ಗಂಧದ ಗುಡಿ, ಕಳ್ಳ-ಕುಳ್ಳ, ಸಾಹಸ ಸಿಂಹ ಸೇರಿದಂತೆ ಲೆಕ್ಕ ಹಾಕುತ್ತಾ ಹೋದರೆ ಅದೊಂದು ದೊಡ್ಡ ಪಟ್ಟಿಯೇ ಆದೀತು. ಆ ಕಾಲಕ್ಕೆ ತೂಗುದೀಪ ಶ್ರೀನಿವಾಸ್‌ ಬಹುಬೇಡಿಕೆಯ ಖಳ ನಟ. ಆ ಕಾಲದಲ್ಲಿ ಕನ್ನಡ ಬೆಳ್ಳಿತೆರೆಗೆ ಖಡಕ್‌ ವಿಲನ್‌ ಗಳ ಕೊರತೆಯೇ ಇರಲಿಲ್ಲ. ಅಲ್ಲೊಂದು ದೊಡ್ಡ ಖಳ ನಟರ ದಂಡೇ ಇತ್ತು. ‌ಈ ವಿಲನ್‌ಗಳ ಗ್ಯಾಂಗ್‌ಗೆ ತೂಗುದೀಪ ಶ್ರೀನಿವಾಸ್‌ ಅವರೇ ಡಾನ್‌ . ಆಗ ಇವರೆಲ್ಲ ಬಹುಬೇಡಿಕೆಯ ಖಳ ನಟರಾಗಿದ್ದರೂ, ಹೀರೋ ಆಗಿಯೋ, ಪೋಷಕ ಪಾತ್ರಗಳಲ್ಲೋ ಮಿಂಚಬೇಕೆನ್ನುವ ಆಸೆ ಇತ್ತೇನೋ. ಯಾಕಂದ್ರೆ ಆ ಹೊತ್ತಿಗೆ ಹೀರೋ ಜತೆಗೆ ಪೋಷಕ ಪಾತ್ರಗಳಿದ್ದ ಬೆಲೆ ವಿಲನ್‌ ಗಳಿಗೆ ಇರಲಿಲ್ಲ. ಆ ಹೊತ್ತಲ್ಲಿ ಟೈಗರ್‌ ಪ್ರಭಾಕರ್‌ ಹೊರತು ಪಡಿಸಿ, ಬಹಳಷ್ಟು ಖಳನಟರು ವಿಲನ್‌ ಎನ್ನುವುದಕ್ಕೆ ಬ್ರಾಂಡ್‌ ಆಗಿ, ಸ್ಟಾರ್‌ ಆಗುವ ಅವಕಾಶಗಳಿಂದ ವಂಚಿತರಾಗಿದ್ದು ಹೌದು.

ಹಾಗಂತ ಅವರ ಕನಸಗಳೇನು ಕಮರಿ ಹೋಗಿಲ್ಲ. ಇವತ್ತು ಕನ್ನಡ ಚಿತ್ರರಂಗದಲ್ಲಿ ಒಂದು ಕಾಲದ ಖಳನಟರ ಮಕ್ಕಳದ್ದೇ ದರ್ಬಾರ್‌. ಅದಕ್ಕೆ ಸಾಕ್ಷಿ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌, ದಿನಕರ್‌ ತೂಗುದೀಪ ಸಾಕ್ಷಿ. ಪ್ರತಿಯೊಬ್ಬ ತಂದೆಗೂ ಒಂದು ಕನಸಿರುತ್ತೆ. ತಮ್ಮ ಮಕ್ಕಳು ತಮಗಿಂತ ಎತ್ತರಕ್ಕೆ ಬೆಳೆಯಬೇಕು, ಸುಖವಾಗಿ ಬಾಳಬೇಕು, ಒಳ್ಳೆಯ ಹೆಸರು ಮತ್ತು ಕೀರ್ತಿ ಸಂಪಾದಿಸಿಕೊಳ್ಬೇಕು ಅಂತ. ವಿಲನ್‌ ಆಗಿ ಯಶಸ್ಸು ಕಂಡರೂ ಕಲಾವಿದರಾಗಿ ಕಡು ಕಷ್ಟ ಕಂಡಿದ್ದ ತೂಗುದೀಪ ಶ್ರೀನಿವಾಸ್‌ ಅವರಿಗೂ ಇಂತಹದೊಂದು ಆಷೆ ಇತ್ತಂತೆ. ತಮ್ಮ ಮಕ್ಕಳು ದೊಡ್ಡ ಸ್ಟಾರ್‌ ಆಗ್ಬೇಕು ಅನ್ನೋದು. ಅಂತೆಯೇ ಇವತ್ತು ದರ್ಶನ್‌ ಕನ್ನಡದ ಬಹುದೊಡ್ಡ ಸ್ಟಾರ್.‌ ದಿನಕರ್‌ ಕೂಡ ಕಮ್ಮಿ ಇಲ್ಲ, ನಿರ್ಮಾಪಕರಾಗಿ, ನಿರ್ದೇಶಕರಾಗಿಯೂ ತಮ್ಮದೇ ಛಾಪು ಮೂಡಿಸಿದ್ದಾರೆ. ಮಕ್ಕಳ ಈ ಸಾಧನೆ ಕಣ್ತುಂಬಿಕೊಳ್ಳುವುದಿಕ್ಕೆ ನಟ ತೂಗುದೀಪ ಶ್ರೀನಿವಾಸ್‌ ಇಲ್ಲ ಅಂತಂದ್ರು, ಅವರ ಹೆಸರನ್ನು ದರ್ಶನ್‌ ಹಾಗೂ ದಿನಕರ್‌ ಇಬ್ಬರು ಅಜರಾಮಾರವಾಗಿಸುತ್ತಿದ್ದಾರೆನ್ನುವುದಕ್ಕೆ ಸಾಕ್ಷಿ “ತೂಗುದೀಪ” ವೇ ಸಾಕು. ಈ ದೀಪ ಇನ್ನಷ್ಟು ಬೆಳಗಲಿ. ಪ್ರಜ್ವಲಿಸಲಿ.

Categories
ಸಿನಿ ಸುದ್ದಿ

ಹಿರಿಯ ನಟ ದ್ವಾರಕೀಶ್‌ ಪತ್ನಿ ಅಂಬುಜಾ ನಿಧನ: ಶನಿವಾರ ಅಂತ್ಯಕ್ರಿಯೆ

ಹಿರಿಯ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್‌ ಅವರ ಪತ್ನಿ ಅಂಬುಜಾ ದ್ವಾರಕೀಶ್‌ ಅವರು ಶುಕ್ರವಾರ ನಿಧನರಾಗಿದ್ದಾರೆ. 80 ವರ್ಷ ವಯಸ್ಸಿನವರಾಗಿದ್ದ ಅಂಬುಜಾ ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದು, ಎಚ್‌ಎಸ್‌ಆರ್‌ ಲೇಔಟ್‌ನಲ್ಲಿರುವ ಮನೆಯಲ್ಲೇ ಮೃತಪಟ್ಟಿದ್ದಾರೆ.

ಮೃತರು ಪತಿ ದ್ವಾರಕೀಶ್‌ ಸೇರಿದಂತೆ ಐವರು ಗಂಡು ಮಕ್ಕಳನ್ನು ಅಗಲಿದ್ದಾರೆ. ದ್ವಾರಕೀಶ್‌ ಅವರ ಸಾಧನೆಯ ಹಿಂದೆ ಅಂಬುಜಾ ಅವರ ಕೊಡುಗೆ ಅಪಾರವಾಗಿತ್ತು. ಕಪ್ಪು-ಬಿಳುಪು ಕಾಲದಿಂದಲೂ ದ್ವಾರಕೀಶ್‌ ಸಿನಿಮಾ ಮಾಡಿದವರು. ಆಗಿನಿಂದಲೂ ದ್ವಾರಕೀಶ್‌ ಅವರ ಬೆನ್ನಿಗೆ ನಿಂತು, ಸೋಲು-ಗೆಲುವು ಎರಡರಲ್ಲೂ ಅಂಬುಜಾ ಅವರು ಜೊತೆಗಿದ್ದರು. ದ್ವಾರಕೀಶ್‌ ಅವರ ಏಳು-ಬೀಳಿನಲ್ಲಿ ಜೊತೆಯಾಗಿಯೇ ಇದ್ದ ಅವರು, ಸದಾ ನಗುಮೊಗದಲ್ಲೇ ದ್ವಾರಕೀಶ್‌ ಅವರಿಗೆ ಧೈರ್ಯ ತುಂಬುತ್ತಿದ್ದರು.‌

ಮೃತರ ಅಂತ್ಯಕ್ರಿಯೆ, ಶನಿವಾರ ಚಾಮರಾಜಪೇಟೆಯಲ್ಲಿರುವ ಚಿತಾಗಾರದಲ್ಲಿ ನೆರವೇರಲಿದೆ ಎಂದು ಅವರ ಹಿರಿಯ ಪುತ್ರ ಯೋಗೇಶ್‌ ದ್ವಾರಕೀಶ್‌ ತಿಳಿಸಿದ್ದಾರೆ.
ಸಂತಾಪ: ಮೃತರ ಆತ್ಮಕ್ಕೆ ಶಾಂತಿ ಕೋರಿ ವಾಣಿಜ್ಯ ಮಂಡಳಿ ಪದಾಧಿಕಾರಿಗಳು, ಚಿತ್ರರಂಗದ ಗಣ್ಯರು, ನಿರ್ದೇಶಕ, ನಿರ್ಮಾಪಕರು, ನಿರ್ದೇಶಕ ಸಂಘ, ನಿರ್ಮಾಪಕರ ಸಂಘ ಹಾಗೂ ಕಲಾವಿದರ ಸಂಘ ಸಂತಾಪ ಸೂಚಿಸಿದೆ.

Categories
ಸಿನಿ ಸುದ್ದಿ

ಬೆಳದಿಂಗಳ ಬಾಲೆ ಸುಮನ್‌ ನಗರ್ಕರ್‌ ಈಗ ಮೃತ್ಯುಂಜಯದಲ್ಲಿ ಮನೋ ವೈದ್ಯೆ !

ಚಂದನವನದ ಬೆಳದಿಂಗಳ ಬಾಲೆ ಸುಮನ್‌ ನಗರ್ಕರ್‌ ಅವರ ಹೊಸ ಅವಾತರ ಇದು. ಅವರೀಗ ಮನೋರೋಗ ವೈದ್ಯರು. ಹಾಗಂತ ನಟನೆ, ನಿರ್ಮಾಣ ಅಂತ ಸಿನಿಮಾ ಬದುಕು ಬಿಟ್ಟು ಮೆಂಟಲ್‌ ಡಾಕ್ಟರ್‌ ಆಗಿಬಿಟ್ರಾ ಅಂತ ಅಂದುಕೊಳ್ಳಬೇಕಿಲ್ಲ. ನಟಿಯಾಗಿ ಅವರಿಗೀಗ ಸಿಕ್ಕ ಮತ್ತೊಂದು ವಿಭಿನ್ನ ಪಾತ್ರ ಇದು. ಅಂದ ಹಾಗೆ ಈ ಪಾತ್ರಕ್ಕೆ ಅವರು ಬಣ್ಣ ಹಚ್ಚಿರೋದು “ಮೃತ್ಯುಂಜಯʼ ಹೆಸರಿನ ಚಿತ್ರದಲ್ಲಿ.

 ಕನ್ನಡ ಸಿನಿಮಾ ಮೃತ್ಯುಂಜಯ ಅಂದಾಕ್ಷಣ ಶಿವರಾಜ್‌ ಕುಮಾರ್‌ ಸಿನಿಮಾ ನೆನಪಾಗೋದು ಸಹಜ. ಯಾಕಂದ್ರೆ ತುಂಬಾ ಹಿಂದೆಯೇ ಶಿವರಾಜ್‌ ಕೂಮಾರ್ ʼಮೃತ್ಯುಂಜಯʼ ನಾಗಿ ಕಾಣಸಿಕೊಂಡಿದ್ರು.  ಹಾಗಂತ ನಾವಿಲ್ಲಿ ಹೇಳ್ತಿರೋದು ಈ ಸಿನಿಮಾ ಕಥೆ ಅಲ್ಲ. ಹೊಸಬರ ತಂಡವೊಂದು ಈಗ ಅದೇ ಹೆಸರಲ್ಲಿ ಒಂದು ಸಿನಿಮಾ ಮಾಡಿ ತೆರೆಗೆ ತರಲು ಹೊರಟಿದೆ. ಆ ಸಿನಿಮಾದಲ್ಲಿ ಸುಮನ್‌ ನಗರ್ಕರ್‌ ಮನರೋಗ ವೈದ್ಯೆ ಆಗಿ ಕಾಣಸಿಕೊಂಡಿದ್ದಾರಂತೆ. ಸಜ್ಜನ್‌ ನಿರ್ದೇಶನದ ಈ ಚಿತ್ರದ ಟ್ರೇಲರ್‌ ಲಾಂಚ್‌ ಕಾರ್ಯಕ್ರಮ ಇತ್ತೀಚೆಗಷ್ಟೇ ನಡೀತು. ಆ ಮೂಲಕ ಚಿತ್ರದ ತಂಡ ಮಾಧ್ಯಮದ ಮುಂದೆ ಬಂದಾಗ ನಟಿ ಸುಮನ್‌ ನಗರ್ಕರ್‌ ತಾವು ಮನೋ ವೈದ್ಯೆಯಾಗಿದ್ದ ಕಥೆ ಬಿಚ್ಚಿಟ್ಟರು.

“ ಮೃತ್ಯುಂಜಯ ಅಂದಾಕ್ಷಣ  ಶಿವಣ್ಣ ಅಭಿನಯದ ಶಿನಿಮಾ ನೆನಪಾಗುತ್ತೆ. ಆದ್ರೆ ಆ ಸಿನಿಮಾವೇ ಬೇರೆ, ಈ ಸಿನಿಮಾವೇ ಬೇರೆ, ಇದೊಂದು ಹಾರರ್‌, ಥ್ರಿಲ್ಲರ್‌ ಕಥಾ ಹಂದರದ ಸಿನಿಮಾ. ತಂಡದಲ್ಲಿರುವವರು  ಹೊಸಬರಾದ್ರೂ ಒಳ್ಳೆಯ ರೀತಿಯಲ್ಲೇ ಸಿನಿಮಾ ಮಾಡಿದ್ದಾರೆ. ಲಾಕ್‌ ಡೌನ್‌ ಸಮಯದಲ್ಲಿ ನಂಗೆ ಈ ಸಿನಿಮಾ ಅವಕಾಶ ಬಂತು. ಆಗೆಲ್ಲ ಹೊರಗಡೆ ಹೋಗುವುದಕ್ಕೂ ಭಯ ಇತ್ತು. ಆದ್ರೆ ಟೀಮ್‌ನವ್ರು ತುಂಬಾ ಮುನ್ನೆಚ್ಚರಿಕೆ ವಹಿಸಿ, ಚಿತ್ರೀಕರಣ ಮುಗಿಸಿದ್ರು. ಸ್ಪೆಷಲ್‌ ಅಂದ್ರೆ ೧೯೨ ಗಂಟೆಗಳಲ್ಲಿ ಈ ಚಿತ್ರದ ಚಿತ್ರೀಕರಣ ಮುಗೀತುʼ ಅಂತ  ನಟಿ ಸುಮನ್‌ ನಗರ್ಕರ್‌ ಚಿತ್ರದಲ್ಲಿನ ತಮ್ಮ ಪಾತ್ರ ಹಾಗೂ ಚಿತ್ರೀಕರಣದ ಅನುಭವ ಹೇಳಿಕೊಂಡರು.

ಒಂದಷ್ಟು ವರ್ಷಗಳ ಗ್ಯಾಪ್‌ ಬಳಿಕ ನಾಗತಿಹಳ್ಳಿ ಚಂದ್ರಶೇಖರ್‌ ನಿರ್ದೇಶನ ʼಇಷ್ಟಕಾಮ್ಯʼ ಚಿತ್ರದೊಂದಿಗೆ ನಟಿ ಸುಮನ್‌ ನಗರ್ಕರ್‌ ಮತ್ತೆ ಚಂದನವನದಲ್ಲಿ ಸೆಕೆಂಡ್‌ ಇನ್ನಿಂಗ್ಸ್‌ ಆರಂಭಿಸಿದ ನಂತರ ನಿರೀಕ್ಷೆಯಂತೆ ಅವರು ನಟಿಯಾಗಿ ಬ್ಯುಸಿ ಆಗಿದ್ದಾರೆ. ಮೃತ್ಯುಂಜಯ ಸೇರಿದಂತೆ ನಾಲ್ಕೈದು ಚಿತ್ರಗಳಲ್ಲಿ ಅಭಿನಯಿಸಿದ್ದಾರಂತೆ. ಅವೆಲ್ಲ ಈಗ ರಿಲೀಸ್‌ ಗೆ ರೆಡಿ ಆಗಿವೆ. ಹಾಗೆಯೇ ಅವರು ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದಾರೆ. ಬಬ್ರು ನಂತರ ಬ್ರಾಹ್ಮೀ ಹೆಸರಿನ ಚಿತ್ರವೊಂದನ್ನು ನಿರ್ಮಿಸಿ, ಅದರ ರಿಲೀಸ್‌ ಗೂ ಸಿದ್ಧತೆ ನಡೆಸಿದ್ದಾರೆ. ಆದರೆ ಕೊರೋನಾ ಪರಿಸ್ಥಿತಿ ಅವರಲ್ಲೂ ಆತಂಕ ಸೃಷ್ಟಿಸಿದೆ.

“ ಎಲ್ಲವೂ ಸರಿಹೋಯ್ತು ಅನ್ನುವಷ್ಟರಲ್ಲಿಯೇ ಈಗ ಕೊರೋನಾ ಮತ್ತೆ ಹೆಚ್ಚಾಗಿದೆ. ಜನರ ಜೀವನದ ಜತೆಗೆ ಚಿತ್ರೋದ್ಯಮದ ಪರಿಸ್ಥಿತಿಯೂ ಹದಗೆಡುತ್ತಿದೆ. ಸಿನಿಮಾ ನಿರ್ಮಾಣ ಮಾಡಿ, ರಿಲೀಸ್‌ ಗೆ ಕಾಯುತ್ತಿದ್ದೇವೆ. ಅದರ ಮೇಲೆ ಸಾಕಷ್ಟು ಬಂಡವಾಳವೂ ಹಾಕಿದ್ದೇವೆ. ಆದರೆ ಅದರ ರಿಲೀಸ್‌ ಗೆ ಒಳ್ಳೆಯ ಸಮಯವೇ ಸಿಗುತ್ತಿಲ್ಲ. ಪರಿಸ್ಥಿತಿ ಹೀಗೆಯೇ ಆದರೆ, ಸಿನಿಮಾಗಳ ಗತಿಯೇನೋ ಅನ್ನೋದು ಆತಂಕ ನಿರ್ಮಾಣವಾಗಿದೆʼ ಎನ್ನುತ್ತಾರವರು. ಸದ್ಯಕ್ಕೆ ನಟನೆಯಲ್ಲಿ ಬ್ಯುಸಿ ಆಗಿರುವ ಅವರು, ಹೊಸ ಅವಕಾಶಗಳತ್ತ ಮುಖ ಮಾಡಿದ್ದು,  ಒಳ್ಳೆಯ ಪಾತ್ರಗಳು ಸಿಕ್ಕರೆ ಹೊಸಬರ ಸಿನಿಮಾಗಳಲ್ಲೂ ನಾನು ಅಭಿನಯಿಸಲು ರೆಡಿ ಎನ್ನುತ್ತಾರೆ ನಟಿ ಸುಮನ್‌ ನಗರ್ಕರ್.

Categories
ಸಿನಿ ಸುದ್ದಿ

ವೈದ್ಯರ ಸಲಹೆ ಮೇರೆಗೆ ವಿಶ್ರಾಂತಿಯಲ್ಲಿದ್ದೇನೆ, ಈ ವಾರ ಬಿಗ್‌ ಬಾಸ್‌ ಮಿಸ್‌ ಮಾಡಿಕೊಳ್ಳುತ್ತಿದ್ದೇನೆ – ಕಿಚ್ಚ ಸುದೀಪ್ ‌

ನಟ, ನಿರ್ದೇಶಕ ಕಿಚ್ಚ ಸುದೀಪ್‌, ತಮ್ಮ ಆರೋಗ್ಯದ ಕುರಿತು ಸ್ಪಷ್ಟನೆ ನೀಡಿದ್ದಾರೆ. ಸುದೀಪ್‌ ಅವರ ಅರೋಗ್ಯದಲ್ಲಿ ವ್ಯತ್ಯಾಸ ಆಗಿದೆ ಎಂಬುದಾಗಿ ಹರಡಿರುವ ಸುದ್ದಿಗಳಿಗೆ ಅವರು ಸ್ಪಷ್ಟನೆ ಕೊಟ್ಟಿದ್ದಾರೆ. ತಮ್ಮ ಆರೋಗ್ಯದ ಕುರಿತು ಸ್ವತಃ ಸುದೀಪ್ ಅವರೇ ಆರೋಗ್ಯ ಕುರಿತು ಟ್ವಿಟ್ಟರ್ ಮೂಲಕ ಮಾಹಿತಿ ನೀಡಿದ್ದಾರೆ. ಹಾಗೆಯೇ ಈ ವಾರ ಬಿಗ್‌ ಬಾಸ್‌ ಮಿಸ್‌ ಮಾಡಿಕೊಳ್ಳುತ್ತಿರುವುದಾಗಿಯೂ ಹೇಳಿಕೊಂಡಿದ್ದಾರೆ.ಸದ್ಯಕ್ಕೆ ತಮಗೆ ಏನಾಗಿದೆ ಎನ್ನುವುದರ ಕುರಿತು ನಿಖರವಾಗಿ ಏನನ್ನು ತಿಳಿಸಿಲ್ಲ. ಹಾಗೆಯೇ ಆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬದಲಿಗೆ ಒಂದಷ್ಟು ಅನಾರೋಗ್ಯದಲ್ಲಿದ್ದೇನೆ. ವೈದ್ಯರ ಸಲಹೆಯಂತೆ ವಿಶ್ರಾಂತಿ ಪಡೆಯುತ್ತಿದ್ದೇನೆ ಎಂದಿದ್ದಾರೆ.

”ಅನಾರೋಗ್ಯದಿಂದ ಬಳಲುತ್ತಿದ್ದರು ವಾರಾಂತ್ಯದೊಳಗೆ ಚೇತರಿಸಿಕೊಳ್ಳುವ ನಂಬಿಕೆ ಇದೆ. ಆದರೆ, ವೈದ್ಯರ ಸಲಹೆಯ ಮೇರೆಗೆ ನಾನು ಸ್ವಲ್ಪ ಹೆಚ್ಚು ವಿಶ್ರಾಂತಿ ಪಡೆಯಬೇಕಿದೆ” ಎಂದು ಟ್ವೀಟ್ ಮಾಡಿದ್ದಾರೆ. ಸದ್ಯಕ್ಕೆ ನಟ ಕಿಚ್ಚ ಸುದೀಪ್‌ ಕಲರ್ಸ್‌ ಕನ್ನಡದ ಬಿಗ್‌ ಬಾಸ್‌ ನಿರೂಪಣೆಯಲ್ಲಿ ಬ್ಯುಸಿ ಇದ್ದಾರೆ. ಹಾಗೆಯೇ ಈಗಷ್ಟೇ ಅವರು ವಿಕ್ರಾಂತ್‌ ರೋಣ ಹಾಗೂ ಕೋಟಿಗೊಬ್ಬ 3 ಚಿತ್ರದ ಚಿತ್ರೀಕರಣ ಮುಗಿಸಿದ್ದಾರೆ. ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಇವೆರೆಡು ಚಿತ್ರಗಳು ಕಿಚ್ಚ ಸುದೀಪ್‌ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿವೆ. ವಿಕ್ರಾಂತ ರೋಣ ಚಿತ್ರ ತಂಡ ಅದರ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಿದೆ. ಆಗಸ್ಟ್‌19 ಕ್ಕೆ ವಿಕ್ರಾಂತ್‌ ರೋಣ ತೆರೆಗೆ ಬರುತ್ತಿದೆ. ಮತ್ತೊಂದೆಡೆ ಕೋಟಿಗೊಬ್ಬ 3 ಚಿತ್ರದ ತಂಡ ಯುಗಾದಿ ಹಬ್ಬಕ್ಕೆ ಸ್ಪಷಲ್‌ ಪೋಸ್ಟರ್‌ ಲಾಂಚ್‌ ಮಾಡಿದೆ. ಉಳಿದಂತೆ ಈಗ ಬಿಗ್‌ ಬಾಸ್‌ ನಿರೂಪಣೆಗೆ ಸುದೀಪ್‌ ಅನಾರೋಗ್ಯದ ನಡುವೆಯೂ ಹಾಜರಾಗುತ್ತಾರಾ ಅನ್ನೋದು ಕುತೂಹಲ ಹುಟ್ಟಿಸಿದೆ. ಸದ್ಯಕ್ಕೆ ಈ ವಾರ ಅವರ ಜಾಗಕ್ಕೆ ಬೇರೊಬ್ಬರು ಬರುವ ಸಾಧ್ಯತೆಗಳಿವೆ ಎನ್ನುವ ಮಾತುಗಳು ಕೇಳಿಬಂದಿವೆ.ಈ ಮಧ್ಯೆ ಕಿಚ್ಚ ಸುದೀಪ್‌ ಅಭಿಮಾನಿಗಳು ತಮ್ಮ ನೆಚ್ಚಿನ ನಟ ಬೇಗ ಗುಣಮುಖರಾಗಲಿ ಅಂತ ಸೋಷಲ್‌ ಮೀಡಿಯಾದಲ್ಲಿ ಶುಭ ಹಾರೈಸಿದ್ದಾರೆ.

Categories
ಸಿನಿ ಸುದ್ದಿ

ಆಗಸ್ಟ್‌ 19ರಂದು ವಿಕ್ರಾಂತ್‌ ರೋಣ ರಿಲೀಸ್‌: ಬಿಡುಗಡೆ ದಿನಾಂಕ ಘೋಷಿಸಿದ ಕಿಚ್ಚ ಸುದೀಪ್

ಕನ್ನಡದ ಬಹುನಿರೀಕ್ಷಿತ ಸುದೀಪ್‌ ಅಭಿನಯದ “ವಿಕ್ರಾಂತ್‌ ರೋಣ” ಸಿನಿಮಾ ಆರಂಭದಿಂದಲೂ ಒಂದಲ್ಲ ಒಂದು ಕುತೂಹಲ ಮೂಡಿಸುತ್ತಲೇ ಇತ್ತು. ಶೀರ್ಷಿಕೆಯಿಂದ ಹಿಡಿದು, ಪೋಸ್ಟರ್‌ವರೆಗೂ ಸಿನಿಮಾ ಜೋರು ಸದ್ದು ಮಾಡಿತ್ತು. ಯಾವಾಗ ಚಿತ್ರಮಂದಿರಕ್ಕೆ ಲಗ್ಗೆ ಇಡುತ್ತೋ ಎಂದು ಕಾದು ಕುಳಿತಿದ್ದವರಿಗೆ ಈಗ ಸ್ವತಃ ಸುದೀಪ್‌ ಅವರೇ ಉತ್ತರ ಕೊಟ್ಟಿದ್ದಾರೆ. ಹೌದು, “ವಿಕ್ರಾಂತ್‌ ರೋಣ” ಸಿನಿಮಾ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ ಸುದೀಪ್.‌ ತಮ್ಮ ಟ್ವಿಟ್ಟರ್‌ನಲ್ಲಿ ಈ ವಿಷಯ ಹಂಚಿಕೊಂಡಿರುವ ಅವರು, “ವಿಕ್ರಾಂತ್ ರೋಣ” ಸಿನಿಮಾದ ಚಿತ್ರೀಕರಣ ಸಿದ್ದತೆ ಮತ್ತು ಪ್ರಕ್ರಿಯೆಯ ಆನಂದವನ್ನು ಅನುಭವಿಸಿದ ನಂತರ ಈಗ ರೋಮಾಂಚನಕಾರಿ ಸುದ್ದಿಯೊಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಸಮಯ! “ವಿಕ್ರಾಂತ ರೋಣ” ಸಿನಿಮಾ ಆಗಸ್ಟ್ 19 ರಂದು ಭಾರತದಾದ್ಯಂತ ಬಿಡುಗಡೆಯಾಗಲಿದೆ” ಎಂದು ತಿಳಿಸಲು ನಮ್ಮ “ವಿಕ್ರಾಂತ್ ರೋಣ” ತಂಡವು ಹರ್ಷಿಸುತ್ತದೆ” ಎಂದು ಬರೆದುಕೊಂಡಿದ್ದಾರೆ.

ಚಿತ್ರಕ್ಕೆ ಮೊದಲು “ಪ್ಯಾಂಟಮ್”‌ ಎಂಬ ಶೀರ್ಷಿಕೆ ಇತ್ತು. ಅದನ್ನು ಬದಲಿಸಿ, “ವಿಕ್ರಾಂತ್‌ ರೋಣ” ಎಂದು ನಾಮಕರಣ ಮಾಡಲಾಯಿತು. ದುಬೈನ ಅತೀ ಎತ್ತರದ ಬುರ್ಜಾ ಖಲೀಫ ಮೇಲೆ ಚಿತ್ರದ ಶೀರ್ಷಿಕೆ ಅನಾವರಣಗೊಳಿಸಲಾಯಿತು. ಟೈಟಲ್‌ ಎಷ್ಟು ಫೋರ್ಸ್‌ ಆಗಿದೆಯೋ, ಕಥೆ ಮತ್ತು ಪಾತ್ರ ಕೂಡ ಅಷ್ಟೇ ಫೋರ್ಸ್‌ ಆಗಿದೆ ಎಂಬ ನಂಬಿಕೆ ಸುದೀಪ್‌ ಅವರಿಗಿದೆ.

ಇನ್ನು, ಈ ಚಿತ್ರವನ್ನು ಅನೂಪ್‌ ಭಂಡಾರಿ ನಿರ್ದೇಶನ ಮಾಡಿದ್ದಾರೆ. ಜಾಕ್‌ ಮಂಜು ಅವರ ನಿರ್ಮಾಣ ಈ ಚಿತ್ರಕ್ಕಿದೆ. ಅಜನೀಶ್‌ ಲೋಕನಾಥ್‌ ಸಂಗೀತ ನೀಡಿದ್ದಾರೆ.

ಸದ್ಯಕ್ಕೆ “ವಿಕ್ರಾಂತ್‌ ರೋಣ” ಚಿತ್ರದ ಬಿಡುಗಡೆ ಎದುರು ನೋಡುತ್ತಿದ್ದ ಸುದೀಪ್‌ ಫ್ಯಾನ್ಸ್‌ಗೆ ಈಗ ಆಗಸ್ಟ್‌ ೧೯ ಡೇಟ್‌ ಕಣ್ಣೆದುರಲ್ಲೇ ಬಂದಂತಾಗಿರುವುದು ಸತ್ಯ. ಅಂದಹಾಗೆ, ಆಗಸ್ಟ್.‌ ೧೯ ಗುರುವಾರ. ಅಂದೇ ಚಿತ್ರವನ್ನು ದೇಶಾದ್ಯಂತ ರಿಲೀಸ್‌ ಮಾಡಲು ಚಿತ್ರತಂಡ ನಿರ್ಧರಿಸಿದೆ.

error: Content is protected !!