Categories
ಸಿನಿ ಸುದ್ದಿ

ಅಂಡಾಳಮ್ಮ ಎಂಬ ನೂತನ ಕಥೆ ! ಶ್ರೀನಿ- ನೂತನ್‌ ಉಮೇಶ್ ಜೋಡಿಯ ಹನಿ ಹನಿ ಹಾರರ್‌ ಕಹಾನಿ!!


ಕನ್ನಡ ಸಿನಿಮಾರಂಗ ಈಗ ಮೆಲ್ಲನೆ ಗರಿಗೆದರುತ್ತಿದೆ. ಕನ್ನಡದಲ್ಲೀಗ ಹೊಸ ಸಿನಿಮಾಗಳ ಕಲರವ ಆಗುತ್ತಿರುವುದು ಹೊಸ ಬೆಳವಣಿಗೆಯೇ ಸರಿ. ಕೊರೊನಾ ಸಮಸ್ಯೆಗೆ ನಲುಗಿದ್ದ ಚಿತ್ರರಂಗ ಈಗ ಚೇತರಿಸಿಕೊಳ್ಳುತ್ತಿದೆ. ಹೊಸಬರು ಆಸೆಯ ಕಂಗಳಲ್ಲೇ ತಮ್ಮ ನೂತನ ಸಿನಿಮಾಗಳಿಗೆ ಚಾಲನೆ ಕೊಡುತ್ತಿದ್ದಾರೆ. ಅರ್ಧಕ್ಕೆ ನಿಂತಿದ್ದ ಚಿತ್ರಗಳು ಕೂಡ ಇದೀಗ ಶುರುವಾಗುತ್ತಿವೆ. ಒಂದಷ್ಟು ಸಿನಿಮಾಗಳು ಬಿಡುಗಡೆಗೂ ತಯಾರಾಗುತ್ತಿವೆ. ಈಗ ಆದರ ಬೆನ್ನಲ್ಲೇ ಹೊಸ ಚಿತ್ರಗಳು ಸೆಟ್ಟೇರುತ್ತಿವೆ. ಆಷಾಢ ಶುರುವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅದೆಷ್ಟೋ ಸಿನಿಮಾಗಳು ಸೆಟ್ಟೇರಿವೆ. ಪೂಜೆ ಮುಗಿಸಿಕೊಂಡಿವೆ. ಅಂತೆಯೇ ನಿರ್ದೇಶಕ ನೂತನ್‌ ಉಮೇಶ್‌ ಅವರೂ ಸಹ ಹೊಸದೊಂದು ಸಿನಿಮಾ ಅನೌನ್ಸ್‌ ಮಾಡಿದ್ದಾರೆ.


ಹೌದು, ಈಗಾಗಲೇ ನೂತನ್‌ ಉಮೇಶ್‌ ಅವರು ಸದ್ದಿಲ್ಲದೆಯೇ, ಒಂದು ಸಿನಮಾ ಮಾಡಿದ್ದಾಗಿದೆ. ಕನ್ನಡ, ತೆಲುಗು, ತಮಿಳು ಹಾಗು ಮಲಯಾಳಂ ಭಾಷೆಯಲ್ಲಿ ತಯಾರಾಗಿರುವ ಸಿನಿಮಾ ಲಾಕ್‌ಡೌನ್‌ ಕಥಾಹಂದರ ಹೊಂದಿದೆ. ಅದೊಂದು ವಿಶೇಷ ಕಥೆ ಎನ್ನುವ ನಿರ್ದೇಶಕ ನೂತನ್‌ ಉಮೇಶ್‌, ನಾಲ್ಕು ಭಾಷೆಯಲ್ಲಿ ಬೇರೆ ಬೇರೆ ಹೀರೋಗಳಿದ್ದಾರೆ. ಹಾಗಂತ, ಆಯಾ ಭಾಷೆಯಲ್ಲೇ ನಟರಿದ್ದರೂ, ಎಲ್ಲಾ ನಟರಿಗೂ ಕಥೆಯೊಳಗಿನ ಲಿಂಕ್‌ ಇರಲಿದೆ ಎನ್ನುವ ಅವರು ಆ ಚಿತ್ರದ ಬಿಡುಗಡೆ ತಯಾರಿ ಮಾಡಿಕೊಳ್ಳುತ್ತಿರುವುದಾಗಿ ಹೇಳುತ್ತಾರೆ. ಈಗ ಹೊಸ ಸುದ್ದಿ ಅಂದರೆ, ಅವರು ತಮ್ಮ ಹೊಸ ಪ್ರಾಜೆಕ್ಟ್‌ಗೂ ಚಾಲನೆ ಕೊಟ್ಟಿದ್ದಾರೆ. ನೂತನ್‌ ಉಮೇಶ್‌ ಅವರ ಡ್ರೀಮ್‌ ಪ್ರಾಜೆಕ್ಟ್‌ ಅದು ಅನ್ನೋದು ವಿಶೇಷತೆಗಳಲ್ಲೊಂದು.


ಹೌದು, ನೂತನ್‌ ಉಮೇಶ್‌ ಅವರು, ಬಹಳ ದಿನಗಳಿಂದಲೂ ಒಂದೊಳ್ಳೆಯ ಕಥೆ ಮಾಡಿಕೊಂಡು, ಸಿನಿಮಾ ಮಾಡುವ ಉತ್ಸಾಹದಲ್ಲಿದ್ದರು. ಇನ್ನೇನು ಶುರು ಮಾಡಬೇಕು ಅನ್ನುವ ಹೊತ್ತಿಗೆ ಕೊರೊನಾ ಇತ್ಯಾದಿ ಸಮಸ್ಯೆಗಳು ಎದುರಾಗಿಬಿಟ್ಟಿದ್ದವು. ಈಗ ಅವರು ಒಂದೊಳ್ಳೆಯ ಹಾರರ್‌ ಕಥೆ ಹಿಡಿದು ಹೊರಟಿದ್ದಾರೆ. ಆ ಚಿತ್ರಕ್ಕೆ “A tale of ಅಂಡಾಳಮ್ಮ” ಎಂದು ನಾಮಕರಣ ಮಾಡಿದ್ದಾರೆ. ಹೌದು, ” ಹನಿ ಹನಿ ಹಾರರ್‌ ಕಹಾನಿ” ಎಂಬ ಅಡಿಬರಹವಿರುವ ಈ ಚಿತ್ರದ ಟೈಟಲ್‌ ಮಾತ್ರ ಅನೌನ್ಸ್‌ ಮಾಡಿರುವ ನೂತನ್‌ ಉಮೇಶ್‌, ಚಿತ್ರಕ್ಕೆ ಶ್ರೀನಿ ಅವರನ್ನು ಹೀರೋ ಮಾಡಿದ್ದಾರೆ. ಶ್ರೀನಿ ಈ ಹಿಂದೆ “ಟೋಪಿವಾಲ” ನಿರ್ದೇಶಿಸಿದ್ದರು. “ಶ್ರೀನಿವಾಸ ಕಲ್ಯಾಣ” ಮತ್ತು ಬೀರ್‌ಬಲ್‌ʼ ಸಿನಿಮಾದಲ್ಲಿ ನಟಿಸುವುದರ ಜೊತೆಗೂ ನಿರ್ದೇಶನ ಮಾಡಿದ್ದರು.

ಈಗ “A tale of ಅಂಡಾಳಮ್ಮ” ಸಿನಮಾದಲ್ಲಿ ನಟಿಸುತ್ತಿದ್ದಾರೆ. ಈ ಶೀರ್ಷಿಕೆಯೇ ಒಂದೊಳ್ಳೆಯ ಮಜಾ ಎನಿಸುತ್ತದೆ. ಕಥೆ ಕೂಡ ಅಷ್ಟೇ ಮಜವಾಗಿದೆ ಎನ್ನುವ ನಿರ್ದೇಶಕರು, ಅಂಡಾಳಮ್ಮ ಅಂದರೇನು? ಎಂಬ ಪ್ರಶ್ನೆಗೆ ಸಿನಿಮಾ ನೋಡಬೇಕು ಎಂದಷ್ಟೇ ಹೇಳುತ್ತಾರೆ. ಅದೇನೆ ಇರಲಿ, ಕನ್ನಡದಲ್ಲಿ ಈಗಂತೂ ಹೊಸಬಗೆಯ ಕಥೆಗಳು ಹುಟ್ಟಿಕೊಳ್ಳುತ್ತಿವೆ.

ಆ ಮೂಲಕ ಹೊಸ ಸಂಚಲನವನ್ನೂ ಸೃಷ್ಟಿಸುತ್ತಿವೆ. ಶ್ರೀನಿ ಹಾಗು ನೂತನ್‌ ಉಮೇಶ್‌ ಅವರ ಈ “A tale of ಅಂಡಾಳಮ್ಮ” ಸಿನಿಮಾ ಕೂಡ ಸಕ್ಸಸ್‌ ಆಗಲಿ. ಅಂದಹಾಗೆ, ಈ ಚಿತ್ರ ಮೋಹಕ್‌ ಸಿನಿಮಾಸ್‌ ಪ್ರೆಸೆಂಟ್ಸ್‌ ಮೂಲಕ ಶುರುವಾಗುತ್ತಿದೆ. ಸದ್ಯಕ್ಕೆ ಶ್ರೀನಿ ಹೀರೋ. ಅವರಿಗೆ ನಾಯಕಿ ಯಾರು, ಯಾರೆಲ್ಲಾ ತಾಂತ್ರಿಕ ವರ್ಗದವರು ಇರುತ್ತಾರೆ, ಕಲಾವಿದರು ಯಾರು ಎಂಬಿತ್ಯಾದಿ ಪ್ರಶ್ನೆಗಳಿಗೆ ಇಷ್ಟರಲ್ಲೇ ಉತ್ತರ ಸಿಗಲಿದೆ.

Categories
ಸಿನಿ ಸುದ್ದಿ

ತನುಷ್ ಈಗ ನಟ್ವರ್ ಲಾಲ್ ! ಬಿಡುಗಡೆಗೆ ರೆಡಿಯಾಗಿರೋ ಚಿತ್ರದ ಫಸ್ಟ್ ಲುಕ್ ಗೆ ಭರಪೂರ ಮೆಚ್ಚುಗೆ

ಕನ್ನಡ ಚಿತ್ರರಂಗದಲ್ಲಿ ಗಟ್ಟಿ ನೆಲೆ ಕಾಣಬೇಕು ಅಂತ ನೂರಾರು ಪ್ರತಿಭೆಗಳು ತಮ್ಮ ಶ್ರಮದಿಂದಲೇ ಗುರುತಿಸಿಕೊಳ್ಳೋ ಪ್ರಯತ್ನ ಮಾಡುತ್ತಲೇ ಇದ್ದಾರೆ. ಕೆಲವರು ನೆಲೆ ಕಂಡರೆ ಇನ್ನು ಕೆಲವರು ಆ ಪ್ರಯತ್ನದಲ್ಲಿದ್ದಾರೆ
ಈಗ ಯುವ ನಟ ತನುಷ್ ಶಿವಣ್ಣ ಕೂಡ ಗಾಂಧಿನಗರದಲ್ಲಿ ತಕ್ಕಮಟ್ಟಿಗಿನ ಸದ್ದು ಮಾಡುತ್ತಿದ್ದಾರೆ.
ಹೌದು, ಈ ಹಿಂದೆ “ಮಡಮಕ್ಕಿ” ಎಂಬ ಜನ ಮೆಚ್ಚುಗೆಯ ಸಿನಿಮಾ ಮಾಡಿ ಆ ಮೂಲಕ ಸೈ ಎನಿಸಿಕೊಂಡು ಭವ್ಯ ಭರವಸೆ ಮೂಡಿಸಿದ್ದ ತನುಷ್ ಈಗ ಮತ್ತೊಂದು ಭರವಸೆಯ ಸಿನಿಮಾ ಕಟ್ಟಿಕೊಟ್ಟಿದ್ದಾರೆ.


ತನುಷ್ ಶಿವಣ್ಣ ಈಗ “ನಟ್ವರ್ ಲಾಲ್” ಆಗಿದ್ದಾರೆ. ಚಿತ್ರ ಇನ್ನೇನು ಬಿಡುಗಡೆಗೂ ಸಜ್ಜಾಗಿದೆ. ಇತ್ತೀಚೆಗೆ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ
ಚಿತ್ರದ ಫಸ್ಟ್ ಲುಕ್ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಮೊದಲ ಲುಕ ನಲ್ಲೇ ಭಾರೀ ಸದ್ದು ಮಾಡುತ್ತಿದೆ ಅನ್ನೋದು‌ ವಿಶೇಷ.

ವಿ.ಲವ ನಿರ್ದೇಶಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಸದ್ಯ ಡಬ್ಬಿಂಗ್ ನಡೆಯುತ್ತಿದೆ.
ಕರ್ನಾಟಕದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆದಿದೆ. ಬಹುತೇಕ ಚಿತ್ರೀಕರಣ ವಿವಿಧ ಸೆಟ್ ಗಳಲ್ಲಿ ನಡೆದಿರುವುದು ಈ ಚಿತ್ರದ ವಿಶೇಷ.
ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದ ಹೀರೋ ತನುಷ್ ಅವರಿಗೆ ಸೋನಾಲ್ ಮಾಂಟೆರೊ ನಾಯಕಿ.


ರಾಜೇಶ್ ನಟರಂಗ, ಸುಜಯ್ ಶಾಸ್ತ್ರಿ, ವಿಜಯ್ ಚೆಂಡೂರ್, ಕೆ.ಎಸ್.ಶ್ರೀಧರ್, ಯಶ್ ಶೆಟ್ಟಿ, ಗಿರಿ ಗೌಡ, ನಾಗಭೂಷಣ್, ಕಾಕ್ರೋಜ್ ಸುಧೀ, ಕಾಮಿಡಿ ಕಿಲಾಡಿಗಳು ನಯನ, ರಾಜೇಂದ್ರ ಕಾರಂತ್, ರಘು ರಮಣಕೊಪ್ಪ, ಸುಂದರರಾಜ್, ಕಾಂತರಾಜ್ ಕಡ್ಡಿಪಡಿ, ಬಲ ರಾಜವಾಡಿ, ಹರಿಣಿ, ಪದ್ಮಾ ವಾಸಂತಿ, ನಾಗರಾಜ್ ಅರಸು, ಭೀಷ್ಮ ರಾಮಯ್ಯ, ಪ್ರಶಾಂತ್ ಸಿದ್ದಿ ಇತರರು ಇಲ್ಲಿದ್ದಾರೆ.


ಧರ್ಮ ವಿಶ್ ಸಂಗೀತವಿದೆ, ವಿಲಿಯಂ ಡೇವಿಡ್ ಛಾಯಾಗ್ರಹಣ ಮಾಡಿದರೆ, ಕೆ.ಎಂ.ಪ್ರಕಾಶ್ ಸಂಕಲನವಿದೆ. ಪ್ರಶಾಂತ್ ಗೌಡ ಕಲಾ ನಿರ್ದೇಶನ, ಡಿಫರೆಂಟ್ ಡ್ಯಾನಿ, ಥ್ರಿಲ್ಲರ್ ಮಂಜು, ರಾ ಪುಷ್ಪರಾಜು ಸಾಹಸ ನಿರ್ದೇಶನ ಹಾಗೂ ಧನಂಜಯ್ ಅವರ ನೃತ್ಯ ನಿರ್ದೇಶನವಿದೆ.

Categories
ಸಿನಿ ಸುದ್ದಿ

ಇನ್ನೂ ವ್ಯಾಕ್ಸಿನ್ ಹಾಕಿಸಿಕೊಂಡಿಲ್ಲ ಮೋಹಕ ತಾರೆ ರಮ್ಯಾ !? ಹೀಗಂತ ಅವರೇ ಹೇಳ್ಕೊಂಡವ್ರೆ!

ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಮೇಡಂ ಇನ್ನೂ ವ್ಯಾಕ್ಸಿನ್ ಹಾಕಿಸಿಕೊಂಡಿಲ್ಲ ಇದು ಈ ಕ್ಷಣದ ಬಿಗ್ ಬ್ರೇಕಿಂಗ್ ಸ್ಟೋರಿ.

ರೂಪಾಂತರಿ ಕೊರೊನಾ ಅಟ್ಟಹಾಸ ಇನ್ನೂ ಕಮ್ಮಿಯಾಗಿಲ್ಲ ದಯವಿಟ್ಟು ಎಲ್ಲರೂ ವ್ಯಾಕ್ಸಿನೇಷನ್ ಹಾಕಿಸಿಕೊಳ್ಳಿ ಅಂತ ಸರ್ಕಾರ ಸಾರಿ ಸಾರಿ ಹೇಳ್ತಿದೆ. ಸರ್ಕಾರ ಇಷ್ಟು ಹೇಳಿದರೂ, ಕೊರೊನಾ ಬಗ್ಗೆ ಅರಿವು ಮೂಡಿಸಿದ್ರೂ ಕೂಡ ಸೆಲೆಬ್ರಿಟಿ ಹುದ್ದೆಯಲ್ಲಿರುವ, ಸಾಮಾಜಿಕ ಜವಾಬ್ದಾರಿಯನ್ನ ನಿಭಾಯಿಸಬೇಕಾಗಿರುವ
ರಮ್ಯಾ ಮೇಡಂ ವ್ಯಾಕ್ಸಿನೇಷನ್‌ ಹಾಕಿಸಿಕೊಳ್ಳೋಕೆ ತಡ ಮಾಡ್ತಿದ್ದಾರೆ.

ಮಾಜಿ ನಟಿ, ಕಾಂಗ್ರೇಸ್ ಪಕ್ಷದ ಸಾಮಾಜಿಕ ಜಾಲತಾಣದ ಮುಖ್ಯಸ್ಥೆಯಾಗಿದ್ದಂತ ರಮ್ಯಾ ಅವರು ಕೊರೊನಾ ವ್ಯಾಕ್ಸಿನ್ ಹಾಕಿಸಿಕೊಳ್ಳೋದಕ್ಕೆ ತಡ ಮಾಡ್ತಿರೋದಕ್ಕೆ ಕಾರಣ ಕೊರೊನಾ ವ್ಯಾಕ್ಸಿನ್ ಬಗ್ಗೆ ಅವರಿಗಿರುವ ಕನ್ಫ್ಯೂಶನ್

https://www.instagram.com/tv/CRHJ6J_lqDv/?utm_medium=copy_link

ಹೌದು, ಕೊವ್ಯಾಕ್ಸಿನ್ ತಗೊಳ್ಳೋದಾ, ಕೊವಿಶೀಲ್ಡ್ ಹಾಕಿಸಿಕೊಳ್ಳೋದಾ ಅಂತ ನಮ್ಮ ಜನ ಕನ್ಫ್ಯೂಶನ್ ಕ್ರಿಯೇಟ್ ಮಾಡಿಕೊಳ್ತಾರೆ. ಅದರಂತೇ ಚಂದನವನದ ಮಾಜಿ ಪದ್ಮಾವತಿಗೂ ಯಾವ್ ವ್ಯಾಕ್ಸಿನ್ ತಗೋಬೇಕು ಅಂತ ಕನ್ಫ್ಯೂಶನ್ ಆಗ್ತಿದೆಯಂತೆ.

ಈ ಬಗ್ಗೆ ಕಾಮಿಡಿಯನ್ ಸೋನು ವೇಣುಗೋಪಾಲ್ ಜೊತೆ ಇನ್ಸ್ ಟಾಗ್ರಾಮ್ ಲೈವ್ ನಲ್ಲಿ ಮಾತನಾಡಿರುವ ಗೌರಮ್ಮ, ವ್ಯಾಕ್ಸಿನ್ ಹಾಕಿಸಿಕೊಳ್ಳಲೆಬೇಕು ಆದರೆ ಮೊಡರ್ನಾ ವ್ಯಾಕ್ಸಿನ್ ಬಂದರೆ 100 ಪರ್ಸೆಂಟ್ ಹಾಕಿಸಿಕೊಳ್ತೀನಿ ಎಂದಿದ್ದಾರೆ. ‌ಮೊಡರ್ನಾ ವ್ಯಾಕ್ಸಿನ್ ಗೆ ಪರ್ಮಿಷನ್‌ ಸಿಕ್ಕಿದೆ ಅದು ಬರೋವರೆಗೂ ವೇಯ್ಟ್ ಮಾಡಿ ಆಮೇಲೆ ತೆಗೆದುಕೊಳ್ಳೋದಕ್ಕೆ ರಮ್ಯಾ ನಿರ್ಧರಿಸಿದ್ದಾರೆ.

ಅಷ್ಟಕ್ಕೂ ಸದ್ಯಕ್ಕೆ ರಮ್ಯಾ ಮೇಡಂ ಅದೆಲ್ಲಿ ನೆಲೆಸಿದ್ದಾರೋ ಗೊತ್ತಿಲ್ಲ. ಮೊಡೊರ್ನಾ ಬಗ್ಗೆ ಮಾತನಾಡ್ತಿದ್ದಾರೆ ಅಂದರೆ ಮಂಡ್ಯ ಮೇಡಂ ಡೆಲ್ಲಿನಲ್ಲಿರೋದು ಡೌಟು ಮತ್ತೆಲ್ಲಿದ್ದಾರೆ ಅನ್ನೋ ಕೂತೂಹಲದ ಪ್ರಶ್ನೆಗೆ ಸದ್ಯಕ್ಕೆ ಉತ್ತರವಿಲ್ಲ. ಯಾಕಂದ್ರೆ ನಿನ್ನೆ ರಾತ್ರಿ ಲೈವ್ ಬಂದಾಗ ರಮ್ಯಕ್ಕನಿಗೆ ಎಲ್ಲಿದ್ದೀರಾ ಈಗ ಅಂತ ಫ್ಯಾನ್ಸ್ ಪ್ರಶ್ನೆ ಕೇಳಿದರೆ ಮನೆಯಲ್ಲಿದ್ದೀನಿ ಅಂತ ಹೇಳಿದರೆ ಹೊರೆತು,

ಯಾವ್ ಮನೆ? ಎಲ್ಲಿ ತಂಗಿದ್ದಾರೆ ಅನ್ನೋದನ್ನ ಕೊನೆಗೂ ಬಾಯ್ಬಿಟ್ಟು ಹೇಳಲಿಲ್ಲ. ಹೀಗಾಗಿ, ದಿಲ್ಲಿ ಮೇಡಂ ರಮ್ಯಾ ಅವರು ಎಲ್ಲಿದ್ದಾರೆ ಅನ್ನೋದು ಎಲ್ಲರ ಕೂತೂಹಲದ ಪ್ರಶ್ನೆ.

Categories
ಸಿನಿ ಸುದ್ದಿ

ಲಹರಿ ಮ್ಯೂಜಿಕ್‌ ಗೆ ವಜ್ರ ಕಿರೀಟ…! ಹಲವು ದಾಖಲೆಗಳ ಸೃಷ್ಟಿಸಿದ ಲಹರಿ ಮ್ಯೂಜಿಕ್ ಯುಟ್ಯೂಬ್‌ ಚಾನೆಲ್ ; ಕನ್ನಡಿಗರಿಗೆ ಪ್ರಶಸ್ತಿ ಅರ್ಪಣೆ ಮಾಡಿದ ಲಹರಿ ವೇಲು

ಲಹರಿ, ಇದು ಕನ್ನಡಿಗರ ಮನೆ ಮಾತಾದ ಹೆಸರು. ಲಹರಿ ಅಂದಾಕ್ಷಣ ನೆನಪಾಗುವುದೆ ʼಲಹರಿ ಆಡಿಯೋ ಸಂಸ್ಥೆʼ ಯಾಕಂದ್ರೆ, ಸಿನಿಮಾ, ಭಾವಗೀತೆ ಹಾಗೂ ಭಕ್ತಿ ಗೀತೆಗಳ ಆಡಿಯೋ ಸಂಗೀತ ಕ್ಷೇತ್ರದಲ್ಲಿ ಲಹರಿ ಮ್ಯೂಜಿಕ್‌ ಗೆ ಮಹತ್ತರ ಮೈಲುಗಲ್ಲು ಸ್ಥಾಪಿಸಿದ ಹೆಗ್ಗಳಿಕೆ ಇದೆ. ಅಷ್ಟು ಮಾತ್ರವೇ ಅಲ್ಲ, ದಕ್ಷಿಣ ಭಾರತೀಯ ಸಂಗೀತ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು ಲಹರಿ ಆಡಿಯೋ ಸಂಸ್ಥೆಯದ್ದು. ಅದರ ಸಾಧನೆಯ ಕಿರೀಟಕ್ಕೆ ಈಗಾಗಲೇ ಸಾಕಷ್ಟು ಪ್ರತಿಷ್ಟಿತ ಪ್ರಶಸ್ತಿಗಳು ಸಂದಿವೆ. ಆ ಸಾಲಿನಲ್ಲಿ ಈಗ ಅತೀ ಶ್ರೇಷ್ಟ ಎನ್ನಬಹುದಾದ ಗೌರವದ ಗರಿ ಮೂಡಿದೆ.


ಹೌದು, ಲಹರಿ ಮ್ಯೂಜಿಕ್‌ ಯುಟ್ಯೂಬ್‌ ಚಾನೆಲ್‌ಗೆ ಈಗ 1.18 ಕೋಟಿ ಯಷ್ಟು ಜನ ಚಂದದಾರಾಗಿದ್ದಾರೆ. ಇದು ಭಾರತೀಯ ಸಂಗೀತ ಕ್ಷೇತ್ರದ ಡಿಜಿಟಲ್‌ ಯುಗಕ್ಕೆ ಹೊಚ್ಚ ಹೊಸ ದಾಖಲೆಯೇ ಹೌದು. ಈ ಹಿನ್ನೆಲೆಯಲ್ಲಿ ಅಮೆರಿಕದ ನ್ಯೂಯಾರ್ಕ್‌ ನಲ್ಲಿರುವ ಯುಟ್ಯೂಬ್‌ ಸಂಸ್ಥೆಯಿಂದ ಲಹರಿ ಮ್ಯೂಜಿಕ್‌ ಗೆ ಪ್ರತಿಷ್ಟಿತ ʼಡೈಮಂಡ್‌ ಕ್ರಿಯೇಟರ್‌ ಅವಾರ್ಡ್‌ ಸಿಕ್ಕಿದೆ. ಸಹಜವಾಗಿಯೇ ಲಹರಿ ಸಂಸ್ಥೆಯ ಮಾಲೀಕರಾದ ಮನೋಹರ್‌ ನಾಯ್ಡು ಹಾಗೂ ಲಹರಿ ವೇಲು ಅವರ ಮುಖದಲ್ಲಿ ಸಂತಸದ ನಗೆ ಮೂಡಿಸಿದೆ.

ʼ ಇದು ನಮಗೆ ಸಿಕ್ಕ ಗೌರವವಲ್ಲ, ಸಮಸ್ತ ಕನ್ನಡಿಗರ ಸಹಕಾರದ ಫಲ. ಒಂದು ಸಣ್ಣ ಸಂಸ್ಥೆಯನ್ನು ಆರು ಕೋಟಿ ಕನ್ನಡಿಗರು ಪ್ರೋತಾಹಿಸಿ, ಬೆಳೆಸುತ್ತಾ ಬಂದಿದ್ದರ ಫಲದಿಂದಾಗಿಯೇ ಲಹರಿ ಸಂಸ್ಥೆ ಇವತ್ತು ದೊಡ್ಡ ಮಟ್ಟಕ್ಕೆ ಬೆಳೆದಿದೆ. ಹಾಗಾಗಿ ಇದು ಸಮಸ್ತ ಕನ್ನಡಿಗರಿಗೆ ಸಲಬೇಕಾದ ಗೌರವ. ಅವರಿಗೆ ಇದು ಅರ್ಪಣೆʼ ಎನ್ನುತ್ತಾರೆ ಲಹರಿ ಸಂಸ್ಥೆಯ ಮುಖ್ಯಸ್ಥರಾದ ಲಹರಿ ವೇಲು.
ಲಹರಿ ಮ್ಯೂಜಿಕ್‌ಗೆ ಈಗಾಗಲೇ ಯುಟ್ಯೂಬ್‌ ಸಂಸ್ಥೆಯಿಂದ ಎರಡು ಅವಾರ್ಡ್‌ ಸಿಕ್ಕಿವೆ. ಯುಟ್ಯೂಬ್‌ ಚಾನೆಲ್‌ಗೆ ಚಂದದಾರರ ಬಳಗವೂ ದಾಖಲೆಯಲ್ಲಿ ಜತೆಯಾದಂತೆಯೇ ಯುಟ್ಯೂಬ್‌ ಸಂಸ್ಥೆಯ ಕಡೆಯಿಂದ ಸಿಲ್ವರ್‌ ಹಾಗೂ ಗೋಲ್ಡನ್‌ ಅವಾರ್ಡ್‌ ಬಂದಿರುವುದು ಅದರ ಸಾಧನೆಯ ಸಿಕ್ಕ ಗರಿಮೆ. ಒಂದು ಲಕ್ಷ, 50 ಲಕ್ಷ ಹಾಗೂ 1 ಕೋಟಿಯಷ್ಟು ಜನರು ಕ್ರಮವಾಗಿ ಲಹರಿ ಮ್ಯೂಜಿಕ್‌ಗೆ ಚಂದದಾರರು ಆದಂತೆಲ್ಲ, ಯುಟ್ಯೂಬ್‌ ಸಂಸ್ಥೆ ದಾಖಲೆಯ ಗೌರವಗಳನ್ನು ನೀಡುತ್ತಾ ಬಂದಿದೆ.

ಈಗ ಲಹರಿ ಮ್ಯೂಜಿಕ್‌ ಯುಟ್ಯೂಬ್‌ ಸಾಧನೆಯಲ್ಲಿ ಡೈಮೆಂಡ್‌ ಅವಾರ್ಡ್‌ ಪ್ರಾಪ್ತಿ ಆಗಿದೆ. ಆ ಮೂಲಕ ದಕ್ಷಿಣ ಭಾರತದ ಸಂಗೀತ ಕ್ಷೇತ್ರದಲ್ಲಿಯೇ ಲಹರಿ ಮ್ಯೂಜಿಕ್‌ ಅಗ್ರಗಣ್ಯ ಸ್ಥಾನಕ್ಕೇರಿದೆ.
ʼನನಗೆ ಗೊತ್ತಿರುವ ಹಾಗೆ ಇದು ದಕ್ಷಿಣ ಭಾರತೀಯ ಸಂಗೀತ ಕ್ಷೇತ್ರದಲ್ಲಿಯೇ ಮೊದಲು. ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಯಾವುದೇ ಭಾಷೆಯಲ್ಲೂ ಇಷ್ಟು ಚಂದದಾರರ ಬಳಗವನ್ನು ಸಂಪಾದಿಸಿಕೊಂಡ ಮ್ಯೂಜಿಕ್‌ ಯುಟ್ಯೂಬ್‌ ಚಾನೆಲ್‌ ಇಲ್ಲ. ಅಂತಹ ಹೊಸ ದಾಖಲೆ ಲಹರಿ ಮ್ಯೂಜಿಕ್‌ ಗೆ ಸಿಕ್ಕಿದೆ ಎನ್ನುವುದೇ ನಮ್ಮ ಸಂಸ್ಥೆಯ ಹೆಮ್ಮೆ. ಅದಕ್ಕೆ ಕಾರಣಕರ್ತರು ನಾವು ಎನ್ನುವುದಕ್ಕಿಂತ ಸಮಸ್ತ ಕನ್ನಡಿಗರು. ಸಿನಮಾ ನಿರ್ಮಾಪಕರು, ನಿರ್ದೇಶಕರು, ಕಲಾವಿದರು. ಕಾರ್ಮಿಕರು, ವಿಶೇಷವಾಗಿ ಸಂಗೀತ ನಿರ್ದೇಶಕರು, ಗಾಯಕರು, ಸಾಹಿತಿಗಳು , ಜತೆಗೆ ಮಾಧ್ಯಮದ ಮಿತ್ರರು ಕಾರಣರು. ಅವರು ನೀಡಿದ ಅಭೂತ ಪೂರ್ವ ಬೆಂಬಲದಿಂದಲೇ ಇದೆಲ್ಲ ಸಾಧ್ಯವಾಗಿದೆʼ ಎನ್ನುತ್ತಾರೆ ಲಹರಿ ವೇಲು.


ಲಹರಿ ಯುಟ್ಯೂಬ್‌ ಚಾನೆಲ್‌ ಶುರುವಾಗಿ ಇಲ್ಲಿಗೆ ೧೦ ವರ್ಷ. ಇಷ್ಟು ಕಡಿಮೆ ಅವದಿಯಲ್ಲಿ ಅದು ೧.೧೮ ಕೋಟಿ ಚಂದದಾರರ ಬಳಗ ಹೊಂದಿದೆ. ಕನ್ನಡಕ್ಕೆ ಮಾತ್ರ ಸೀಮಿತವಾಗದೆ ತೆಲುಗು, ತಮಿಳು ಹಾಗೂ ಮಲಯಾಳಂಗೂ ವಿಸ್ತರಣೆ ಗೊಂಡಿದೆ. ಪ್ರತಿ ಭಾಷೆಯಲ್ಲೂ ಒಂದೊಂದು ತಂಡ ಹೊಂದಿದೆ. ಪ್ರತಿ ತಂಡದಲ್ಲೂ ೨೦ ರಿಂದ ೨೫ ಮಂದಿ ಕೆಲಸ ಗಾರರಿದ್ದಾರೆ. ಇದು ಲಹರಿ ಮ್ಯೂಜಿಕ್‌ ನ ಶಕ್ತಿ. ಇನ್ನು ಲಹರಿ ಆಡಿಯೋ ಸಂಸ್ಥೆ ಆಲದ ಮರದಂತೆ ಬೆಳೆದು ನಿಂತಿದೆ. ಕನ್ನಡದ ಹಿರಿಮೆ-ಗರಿಮೆ ಹೆಚ್ಚಾಗುವಂತೆ ಅದು ಕನ್ನಡದ ಚಿತ್ರಗೀತೆ ಮತ್ತು ಭಾವಗೀತೆಗಳನ್ನು ಜಗತ್ತಿನಾದ್ಯಂತ ಸಂಗೀತ ಪ್ರಿಯರಿಗೆ ಉಣಬಡಿಸುತ್ತಿದೆ. .ಆ ಮೂಲಕ ಲಹರಿ ಆಡಿಯೋ ಸಂಸ್ಥೆಯ ಮಾಲೀಕರಾದ ಮನೋಹರ್‌ ನಾಯ್ಡು ಹಾಗೂ ಲಹರಿ ವೇಲು ಇಬ್ಬರು ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರವಾಗಿದ್ದು ಲಹರಿ ಸಂಸ್ಥೆಯ ಸಾಧನೆಗೆ ಸಂದ ಬಹುದೊಡ್ಡ ಗೌರವ. ಹಾಗೆಯೇ ಕನ್ನಡದ ಹೆಮ್ಮೆಯೂ ಹೌದು.

Categories
ಸಿನಿ ಸುದ್ದಿ

ನಮ್ಮ ತಂದೆಯ ಸಾವನ್ನು ರಾಜಕೀಯ ಮಾಡಬೇಡಿ-ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಅಂಬರೀಶ್ ಪುತ್ರ ಅಭಿಷೇಕ್ ಆಕ್ರೋಶ

ಮಂಡ್ಯ ದಲ್ಲಿನ ವಾಕ್ಸಮರದಲ್ಲೀಗ ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಜೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ ಅಂಬರೀಶ್ ಕೂಡ ಧ್ವನಿ ಮೊಳಗಿಸಿದ್ದಾರೆ.’ರಾಜಕೀಯವಾಗಿ ಏನು ಬೇಕಾದರೂ ವಿರೋಧ ಮಾಡಿ, ಆದರೆ ವೈಯಕ್ತಿಕ ವಿಚಾರಗಳಿಗೆ ಬರಬೇಡಿ. ನಮ್ಮ ತಂದೆಯ ಸಾವನ್ನು ರಾಜಕೀಯ ಮಾಡಬೇಡಿ,ಮನಸ್ಸಿಗೆ ತುಂಬಾ ನೋವಾಗುತ್ತದೆ ‘ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರ ಸ್ವಾಮಿ ಅವರ ವಿರುದ್ಧ ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಕಿಡಿಕಾರಿದ್ದಾರೆ.

ಅಂದಿನ ಸಿಎಂ ಆಗಿದ್ದಾಗ ನೀವು ಏನ್ ಹೇಳಿದ್ರಿ ಅಂತ ಒಮ್ಮೆ ನೆನಪಿಸಿಕೊಳ್ಳಿ. ನಿಮ್ಮ ಬಳಿಯೇ ದಾಖಲೆ ಇದೆ. ಟೈಮ್ ವ್ಯರ್ಥ ಮಾಡುವುದು ಬೇಡ. ಮನೆಯಲ್ಲಿ ಯಾರನ್ನಾದ್ರೂ ಕಳೆದುಕೊಂಡಾಗ ಮಾತಾಡುವ ಪರಿಸ್ಥಿತಿಯಲ್ಲಿ ಇರುತ್ತಾರಾ ?ಅವತ್ತು ನಮ್ಮಮ್ಮ ಗಂಡನ ಕಳೆದುಕೊಂಡು ನೋವಲ್ಲಿದ್ದರು. ಅಂದು ಅಮ್ಮ ಏನೂ ಮಾತನಾಡಿಲ್ಲ. ಆದ್ರೆ ನೀವು ಸಾವನ್ನು ರಾಜಕೀಯ ಮಾಡಬೇಡಿ. ನೋವಾಗುತ್ತದೆ ಎಂದು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಎಚ್ ಡಿಕೆ ವಿರುದ್ಧ ತೀವ್ರ ಆಕ್ರೋಶ ಹೊರ ಹಾಕಿದರು.
ಅಕ್ರಮ ಗಣಿಗಾರಿಕೆ ಧ್ವನಿ ಎತ್ತಿದ್ದು ನಟೋರಿಯಸ್ಸಾ? ಅಕ್ರಮದ ಬಗ್ಗೆ ಮಾತಾಡೋದು ನಟೋರಿಯಸ್ ಎನ್ನುವುದಾದರೆ, ಹೌದು ನಾವು ನಟೋರಿಸ್ ಅಂತಲೇ ಹೇಳಬೇಕಾಗುತ್ತದೆ. ಯಾರು ನಿಮ್ಮನ್ನು ವಿರೋಧಿಸುತ್ತಿಲ್ಲ ಅಂದ್ರೆ ನೀವು ಏನೂ ಮಾಡಿಲ್ಲ ಅಂತಲೇ ಅರ್ಥ. ವಿಲನ್ ಇಲ್ಲದೆ ಹೀರೋ ಸಾಧ್ಯವೇ ?ನಮ್ಮಮ್ಮ ಏನಾದರೂ ಮಾಡ್ತೀನಿ ಅಂತ ಮನಸ್ಸು ಮಾಡಿದರೆ ಕೊನೆಯವರೆಗೂ ಬಿಡುವುದಿಲ್ಲ. ಚುನಾವಣೆಗೆ ನಿಂತರು. ಚುನಾವಣೆಯನ್ನು ಮಾಡಿದರು. ಛಲದಿಂದ ಕೆಲಸ ಮಾಡಿದರು. ಗೆದ್ದರು. ಜನ ಅವರಿಗೆ ಆಶೀರ್ವಾದ ಮಾಡಿದರು. ಅದು ನಿಮಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಸಂಸದರು ಒಳ್ಳೆಯ ಕೆಲಸ ಮಾಡ್ತಿದ್ದಾರೆ ಅಂತ ಜನ ಹೇಳುತ್ತಿದ್ದಾರೆ. ಆದರೆ ಇವರಿಗೆ ಜನರ ಕೆಲಸ ಬೇಕಿಲ್ಲ, ಅವರ ರಾಜಕೀಯ ನಡೀಬೇಕು ಅದಕ್ಕಾಗಿಯೇವ ಹೀಗೆಲ್ಲ ಮಾಡುತ್ತಿದ್ದಾರೆಂದು ಗುಡುಗಿದರು.

Categories
ಸಿನಿ ಸುದ್ದಿ

ಅಂಬರೀಶ್ ಸಾವಿನಲ್ಲೂ ರಾಜಕೀಯ ಮಾಡಿದವರು ನೀವು- ಮಾಜಿ ಸಿಎಂ ಎಚ್ಡಿಕೆ ವಿರುದ್ಧ ರಾಕ್ ಲೈನ್ ವೆಂಕಟೇಶ್ ಗುಡುಗು

ಮಂಡ್ಯ ರಾಜಕಾರಣ ಕುದಿಯುವ ಎಣ್ಣೆಯಲ್ಲಿ ಬೇಯುತ್ತಿದೆ. ಕೆಆರ್ ಎಸ್ ಅಣೆಕಟ್ಟೆ, ಮೈ ಶುಗರ್ಸ್ ಕಾರ್ಖಾನೆಯ ಜತೆಗೆ ಗಣಿಗಾರಿಕೆ ಕುರಿತ ವಿವಾದದಲ್ಲಿ ಸಂಸದೆ ಸುಮಲತಾ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರ ಸ್ವಾಮಿ ಅವರ ನಡುವೆ ಆರೋಪ- ಪ್ರತ್ಯಾರೋಪದ ದೊಡ್ಡ ಯುದ್ಧವೇ ಶುರುವಾಗಿದೆ. ರಾಜಕೀಯದ ಸಮರದ ನಡುವೆ ವೈಯಕ್ತಿಕ ಕಿತ್ತಾಟಗಳು ನಡೆಯುತ್ತಿವೆ. ಸುಮಲತಾ ಪರವಾಗಿ ಈಗ ಸಿನಿಮಾ ಮಂದಿಯೂ ಕೂಡ ಈಗ ಧ್ವನಿ ಎತ್ತಿದ್ದಾರೆ. ಸುಮಲತಾ ವಿರುದ್ಧ ಮಾಜಿ ಸಿಎಂ ಎಚ್.ಡಿ. ಕುಮಾರ ಸ್ವಾಮಿ ನೀಡುತ್ತಿರುವ ಹೇಳಿಕೆಗಳನ್ನು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಹಿರಿಯ ನಟ ದೊಡ್ಡಣ್ಣ ತೀವ್ರವಾಗಿ ಖಂಡಿಸಿದ್ದು, ಸಂಸದೆ ಸುಮಲತಾ ಅವರಿಗೆ ತಾವು ಮಾತ್ರವಲ್ಲ, ಅಂಬರೀಶ್ ಅಭಿಮಾನಿಗಳು ಕೂಡ ಇದ್ದಾರೆ. ಅಷ್ಟು ಸುಲಭವಾಗಿ ಅಂಬರೀಶ್ ಕುಟುಂಬಕ್ಕೆ ಅವಮಾನ ಆಗಲು ಬಿಡೋದಿಲ್ಲ ಎಂದು ಗುಡುಗಿದ್ದಾರೆ.

‘ಸಿಕ್ಕಿರೋ ಗೌರವವನ್ನು ಹಾಳು ಮಾಡಿಕೊಳ್ಳಬೇಡಿ, ಅಂಬರೀಶ್ ಅವರು ಏನ್ ಅನ್ನೋದನ್ನು ನಾವು ಒತ್ತಿ ಹೇಳಬೇಕಿಲ್ಲ. ಆ ತರಹದ ಮನುಷ್ಯ ಯಾವನೂ ಹುಟ್ಟಿಲ್ಲ. ಅಂಬರೀಶ್ ಇದ್ದಾಗ ಜಿರೋ… ಜಿರೋ ಪಾಯಿಂಟ್ ವ್ಯಾಲೂಮ್ ಇಟ್ಕೊಂಡ್ ಮಾತನಾಡ್ತಾ ಇದ್ರಲ್ವಾ ? ಸತ್ತಾಗ ಒಬ್ಬ ವ್ಯಕ್ತಿ ಬಗ್ಗೆ ಯಾಕೆ ಮಾತನಾಡಿಸ್ತಿದ್ದೀರಿ, ಇದೆಲ್ಲ ಜನಗಳಿಗೆ ಗೊತ್ತಾಗಲ್ವಾ, ಇನ್ನು ಮೇಲಾದರೂ ಇದನ್ನು ಸರಿಪಡಿಸಿಕೊಳ್ಳಿ. ಅಂಬರೀಶ್ ಅವರ ಸ್ಮಾರಕ ನಿರ್ಮಾಣದಲ್ಲಿ ನನ್ನ ದುಡಿಮೆಯ ಪಾಲಿದೆ ಅಂತ ಹೇಳಿದ್ದಾರಂತೆ. ಸ್ಮಾರಕ ನಿರ್ಮಾಣದ ವಿಚಾರದಲ್ಲಿ ಏನೆಲ್ಲ ಆಯ್ತು ಅಂತ ನಮ್ಗೇನು ಗೊತ್ತಿಲ್ವಾ, ಅವರು(ಎಚ್.ಡಿ.ಕೆ) ಸಿಎಂ ಆಗಿದ್ದಾಗ ಸ್ಮಾರಕ ನಿರ್ಮಾಣದ ಕೆಲಸಕ್ಕೆ ಸಂಬಂಧಿಸಿದಂತೆ ದೊಡ್ಡಣ್ಣ ಫೈಲ್ ಹಿಡ್ಕೊಂಡ್ ವಿಧಾನ ಸೌಧಕ್ಕೆ ಹೋದಾಗ ಏನಾಯ್ತು ಅಂತ ಸತ್ಯ ಈಗ ಹೇಳಬೇಕಿದೆ. ಏರಡೂವರೆ ತಾಸು ಕಾಯಿಸಿದ್ರಿ. ಅಷ್ಟಾಗಿಯೂ ಫೈಲ್ ಕೊಡೋದಿಕ್ಕೆ ಅಂತ ದೊಡ್ಡಣ್ಣ ಹೋದಾಗ, ಫೈಲ್ ಬಿಸಾಕಿ ದುರಂಹಕಾರ ತೋರಿಸಿದ್ರಿ. ಇದೆಲ್ಲ ಗೊತ್ತಿಲ್ವಾ? ರಾಜ್ಯದ ಜನಕ್ಕೆ ಹೇಳಬೇಕಾಗುತ್ತದೆ ಎಂದು ರಾಕ್ ಲೈನ್ ವೆಂಕಟೇಶ್ ಮಾಜಿ ಸಿಎಂ ಎಚ್ ಡಿಕೆ ವಿರುದ್ಧ ಪರೋಕ್ಷವಾಗಿ ಗುಡುಗಿದರು.

ಅಂಬರೀಶ್ ಎನ್ ಮಾಡಿದ್ರು ಅಂತ ಸ್ಮಾರಕ ಮಾಡ್ಬೇಕು ಅಂತ ಕೇಳಿದ್ರಂತೆ. ಅಂಬರೀಶ್ ಏನು ಅಂತ ನಿಮ್ಗೆ ಗೋತ್ತಿಲ್ವಾ ? ಅಂಬರೀಶ್ ಅವರಿಂದ ನಿಮಗೆ ಏನ್ ಆಯ್ತು ಅಂತ ಎಲ್ಲರಿಗೂ ಗೊತ್ತಿದೆ. ಅಂಬರೀಶ್ ಸಾವಿನಲ್ಲೂ ರಾಜಕಾರಣ ಮಾಡಿದವರು ನೀವು. ನಿವೇನು ಅಂತ ನಮ್ಗೆನೂ ಗೊತ್ತಿಲ್ಬಾ ? ಆ ಮನೆಗೆ ಇದ್ದಂತಹ ಸ್ನೇಹಕ್ಕಾದರೂ ನನ್ನನ್ನು ಕರೆದು ಮಾತನಾಡಬಹುದೀತ್ತು. ವೆಂಕಟೇಶ್ , ಮಗ ಚುನಾವಣೆಗೆ ನಿಲ್ತಿದ್ದಾರೆ. ಸುಮಲತಾ ಅವರಿಗೆ ಒಂದು ಮಾತು ಹೇಳಿ ಅಂದಿದ್ರೆ, ನಾನೇ ಮುಂದೆ ನಿಂತು ಅವರನ್ನು ಚುನಾವಣೆಯಿಂದ ಆಚೆ ಇರಿಸುತ್ತಿದ್ದೆ. ಆದ್ರೆ ನೀವು ಮಾಡಿದ್ದೇ ಬೇರೆ. ಅದರ ಪರಿಣಾಮ ಏನಾಯ್ತು, ಮಂಡ್ಯ ಜನರ ಒತ್ತಡಕ್ಕೆ ಅವರು ಚುನಾವಣೆಗೆ ನಿಂತ್ರು. ಕೊನೆಗೆ ಸೋಲು ನಿಮ್ಮದೇ ಆಯ್ತು. ಅದರಿಂದಾದ್ರು ಪಾಠ ಕಲಿಬೇಕಿದೆ ಎಂದು ಎಚ್ಚರಿಕೆ ನೀಡಿದರು.

ಹಿರಿಯ ನಟ ದೊಡ್ಡಣ್ಣ ಕೂಡ ಸುಮಲತಾ ಅವರಿಗೆ ಬೆಂಬಲ ನೀಡಿದ್ದಾರೆ. ಸುಮಲತಾ ಒಬ್ಬಂಟಿ ಅಲ್ಲ, ನಾವು ಇದ್ದೇವೆ ಎಂದು ಗುಡುಗಿದ್ದಾರೆ. ‘ ಸಿನಿಮಾ ಮಂದಿ ಅಂದ್ರೆ ನಿಮಗ್ಯಾಕೋ ಅಷ್ಟು ಅಲಕ್ಷ್ಯ? ನೀವು ಕೂಡ ಸಿನಿಮಾ ದಿಂದಲೇ ಬಂದವರು. ಮೊದಲು ವಿತರಕರಾಗಿ, ನಿರ್ಮಾಪಕರಾಗಿ ಇಲ್ಲಿ ಇದ್ದವರು. ಹಾಗಂತ ನಾನು ಭಾವಿಸಿಕೊಂಡಿದ್ದೇನೆ. ಇದು ತಪ್ಪೋ ಸರಿಯೋ ಗೊತ್ತಿಲ್ಲ. ಆದರೆ ನೀವು ಸಿನಿಮಾ ಮಂದಿಯನ್ನು ಇಷ್ಟೇಕೆ ಕಡೆಗಣಿಸುತ್ತಿದ್ದೀರಿ? ಸ್ಮಾರಕ ನಿರ್ಮಾಣದ ವಿಚಾರದಲ್ಲಿ ನಾನು ಅವತ್ತು ವಿಧಾನ ಸೌಧಕ್ಕೆ ಹೋದಾಗ, ನಾನು ಎರಡೂವರೆ ತಾಸು ಕಾದಿದ್ದೇನೆ. ಕೊನೆಗೂ ಭೇಟಿ ಮಾಡಿದಾಗ ಅದ್ಯಕೋ ನನ್ನನ್ನು ಅಸಡ್ಡೆಯಿಂದ ನೋಡಿ, ಕಳುಹಿಸಿದ್ರಿ. ಇದೆಲ್ಲವನ್ನು ಈಗ ರಾಜ್ಯದ ಜನತೆಗೆ ಹೇಳಬೇಕಾಗುತ್ತದೆ. ಸ್ಮಾರಕ ನಿರ್ಮಾಣ ನೀವು ಮಾಡಿದ್ದಲ್ಲ, ಈಗೇನಿದೆ ರಾಜಾಹುಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಅವರೇ ಸ್ಮಾರಕ ನಿರ್ಮಾಣ ಮಾಡಿದ್ದು ಎಂದು ನಟ ದೊಡ್ಡಣ್ಣ , ಎಚ್ ಡಿಕೆ ವಿರುದ್ಧ ಹರಿಹಾಯ್ದರು.
……………………….

Categories
ಸಿನಿ ಸುದ್ದಿ

ವಿನೋದ್ ಪ್ರಭಾಕರ್ ತಟ್ಟೆಯಲ್ಲಿರುವ ಅನ್ನ ಕಿತ್ತುಕೊಳ್ಳೋ ಪ್ರಯತ್ನ? 1 ಕೋಟಿ ಸಂಭಾವನೆ- ನೆತ್ತಿಗೇರಿದೆ ರಾಬರ್ಟ್ ಯಶಸ್ಸು- ಹಿಂಗೆ ಕುಟುಕಿದವರಿಗೆ ಟೈಸನ್‌ ಕೊಟ್ರು ಉತ್ತರ

ತಮ್ಮ ತಟ್ಟೆಯಲ್ಲಿ ಹೈದ್ರಬಾದ್ ಬಿರಿಯಾನಿ ಇದ್ದರೂ, ಪಕ್ಕದ ತಟ್ಟೆಯಲ್ಲಿರುವ ನಾಟಿಕೋಳಿ ಸಾರು ರಾಗಿಮುದ್ದೆ ಮೇಲೆ ಕಣ್ಣು ಹಾಕ್ತಾರೆ. ಎಲ್ಲರೂ ಹಂಚಿಕೊಂಡು ತಿನ್ನೋಕೆ ಅವಕಾಶ ಇರುತ್ತೆ. ಆದರೆ, ಕಿತ್ತುಕೊಂಡು ತಿನ್ನೋರಿಗೆ ಹಂಚಿಕೊಂಡು ತಿನ್ನೋ ಗುಣ ಎಲ್ಲಿಂದ ಬರಬೇಕು. ಇದನ್ನಿಲ್ಲಿ ಹೇಳುವುದಕ್ಕೂ ಒಂದು ಕಾರಣವಿದೆ.
ಬೆವರು ಸುರಿಸಿ ದುಡಿದು ತಿನ್ನುವವರು ಎಷ್ಟು ಮಂದಿ ಇದ್ದಾರೋ‌ಅಷ್ಟೇ ಮಂದಿ ಬೇರೆಯವರ ಹೊಟ್ಟೆ ಮೇಲೆ ಹೊಡೆದು, ಬೇರೆಯವರ ತಟ್ಟೆಯ ಅನ್ನ ಕಿತ್ಕೊಂಡು ಬದುಕುವವರು ಇದ್ದಾರೆ. ಬೆಳೆಯುತ್ತಿದ್ದಾರೆ ಅಂದರೆ, ತುಳಿಯೋಕೆ‌ ನೋಡ್ತಾರೆ, ಹೆಸರು ಮಾಡ್ತಿದ್ದಾರೆ ಅಂದರೆ ತೇಜೋವಧೆ ಮಾಡುವ ಕಾರ್ಯಕ್ಕೆ ಚಾಲನೆ ಕೊಡ್ತಾರೆ. ಟೈಗರ್ ಪ್ರಭಾಕರ್ ಪುತ್ರ ವಿನೋದ್ ಪ್ರಭಾಕರ್ ಇಂತಹದ್ದೊಂದು ಸನ್ನಿವೇಶವನ್ನ‌ ಎದುರಿಸಿದ್ದಾರಂತೆ.‌


ಹೌದು, ವಿನೋದ್ ಪ್ರಭಾಕರ್ ತಮ್ಮ ಸ್ವಂತ ಪರಿಶ್ರಮದಿಂದ ಯಶಸ್ಸಿನ ಒಂದೊಂದೇ ಮೆಟ್ಟಿಲೇರಿದ್ದಾರೆ. ಅವಮಾನ, ಅಪಮಾನ, ನಿಂದನೆ ಎಲ್ಲವನ್ನೂ ಸಹಿಸಿಕೊಂಡು, ಅದೆಲ್ಲವನ್ನೂ ದಾಟಿಕೊಂಡು ಬಂದಿದ್ದಾರೆ. ಸ್ವಂತ ಬ್ರ್ಯಾಂಡ್ ಕಟ್ಟುವ ಹಾದಿಯಲ್ಲಿ ಎದುರಾಗುವ ಸವಾಲುಗಳಿಗೆ ಸೆಡ್ಡು ಹೊಡೆದು ಬೆವರು ಪ್ಲಸ್ ಬ್ಲಡ್ ಒಟ್ಟೊಟ್ಟಿಗೆ
ಸುರಿಸಿ ಗಂಧದಗುಡಿಯಲ್ಲಿ ತಮ್ಮ “ರಗಡ್” ಅವತಾರ ತೋರಿಸಿ ಎದ್ದು ನಿಂತಿದ್ದಾರೆ.

ಇವತ್ತಿಗೆ ಟೈಸನ್ ಬಹು ಬೇಡಿಕೆಯ ಯಶಸ್ವಿ ನಟರೂ ಆಗಿದ್ದಾರೆ. ವಿನೋದ್ ಪ್ರಭಾಕರ್ ಅವರ ಈ ಸಕ್ಸಸ್ ನ ಅದ್ಯಾರ ಕಣ್ಣಲ್ಲಿ ನೋಡೋದಕ್ಕೆ ಆಗ್ತಿಲ್ಲವೋ ಗೊತ್ತಿಲ್ಲ. ಟೈಗರ್ ಪುತ್ರನ ಹೊಟ್ಟೆ ಮೇಲೆ ಹೊಡೆಯುವ, ಟೈಸನ್ ತಟ್ಟೆಯಲ್ಲಿರುವ ಅನ್ನ ಕಿತ್ತು ಕೊಳ್ಳುವ ಪ್ರಯತ್ನಗಳಾಗಿವೆಯಂತೆ.


“ರಾಬರ್ಟ್” ನಂತರ ವಿನೋದ್ ಸಂಭಾವನೆ ಹೆಚ್ವಿಸಿಕೊಂಡಿದ್ದಾರೆ, ಒಂದು ಸಿನಿಮಾಗೆ ಒಂದು ಕೋಟಿ ‌ಡಿಮ್ಯಾಂಡ್ ಮಾಡ್ತಾರೆ ಎನ್ನುವ ಸುದ್ದಿ ಹಬ್ಬಿಸುವ ಮೂಲಕ ವಿನೋದ್ ಹೊಟ್ಟೆ ಮೇಲೆ ಹೊಡೆಯುವ, ವಿನೋದ್ ತಟ್ಟೆಯಲ್ಲಿರುವ ಅನ್ನ ಕಿತ್ತುಕೊಳ್ಳುವ‌ಕೆಲಸ ಮಾಡಿದ್ದಾರಂತೆ. ಈ ಬಗ್ಗೆ ತಮ್ಮ “ವರದ” ಚಿತ್ರದ‌ ಪ್ರಮೋಷನ್ ಪೋಸ್ಟರ್ ರಿಲೀಸ್ ಸಂದರ್ಭದಲ್ಲಿ ಮಾತನಾಡಿದ ವಿನೋದ್ ಪ್ರಭಾಕರ್, “ಯಾವತ್ತೂ ಯಾರ ಹತ್ತಿರ ರೆಮ್ಯೂನರೇಷನ್ ಡಿಮ್ಯಾಂಡ್ ಮಾಡಿಲ್ಲ. ನನ್ನ ಸ್ಟೇಟಸ್ ಏನು, ನನ್ನ ಸಿನಿಮಾಗೆ ಮಾರ್ಕೆಟ್ ನಲ್ಲಿ ಎಷ್ಟು ವ್ಯಾಲ್ಯೂ ಇದೆ ಅನ್ನೋದು ನನಗೆ ಚೆನ್ನಾಗಿ ಗೊತ್ತಿದೆ.

ನನ್ನಿಂದ ಅನ್ನದಾತನಿಗೆ ನಷ್ಟ ಆಗೋದಕ್ಕೆ ನಾನು ಬಿಡೋದಿಲ್ಲ. ಅಗತ್ಯಕ್ಕಿಂತ ಹೆಚ್ಚಾಗಿ ‌ಬಂಡವಾಳ‌ ಹಾಕಿಸೋದು ಇಲ್ಲ. ಹೀಗಿರುವಾಗ ಸುಖಾ ಸುಮ್ಮನೇ ಸಂಭಾವನೆ ಕೋಟಿ ಹೆಚ್ಚಿಸಿಕೊಂಡಿದ್ದಾರೆ ಅಂತ ಸುಳ್ಳು ಸುದ್ದಿ ಹಬ್ಬಿಸಿ ಬರುವ ಅವಕಾಶಗಳ ಕೈ ತಪ್ಪಿಸಬೇಡಿ, ನನ್ನ ಹೊಟ್ಟೆಯ ಮೇಲೆ ಹೊಡೆದು, ನನ್ನ ತಟ್ಟೆಯಲ್ಲಿರುವ ಕಿತ್ಕೊಬೇಡಿ ಅಂತ ವಿನೋದ್ ಕೇಳಿಕೊಂಡಿದ್ದಾರೆ. ಇಲ್ಲಿವರೆಗಿನ ಯಾವ ಸಕ್ಸಸ್ ಕೂಡ ನನ್ನ ನೆತ್ತಿಗೇರಿಲ್ಲ, ಏರೋದು ಇಲ್ಲ.‌ ಕಾಲನ್ನ ಭೂಮಿ ಮೇಲೆ ಬಿಟ್ಟು ಆಕಾಶದ ಮೇಲೆ ಇಡಲ್ಲ ಅಂತಾರೇ ಟೈಗರ್ ಸನ್.

Categories
ಸಿನಿ ಸುದ್ದಿ

ಟೇಶಿ ವೆಂಕಟೇಶ್‌ ವಿರುದ್ಧ ಮಾನನಷ್ಠ ಮೊಕದ್ದಮೆ ಹಾಕಿದ ರೂಪ ಅಯ್ಯರ್‌ ; ವೈಯಕ್ತಿಕ ನಿಂದನೆ ಮಾಡಿದ್ದಕ್ಕೆ ಒಂದು ಕೋಟಿ ಮಾನನಷ್ಠ ಮೊಕದ್ದಮೆ

ನಿರ್ದೇಶಕರ ಸಂಘ ಬೀದಿಗೆ ಬಂದಿದ್ದು ಗೊತ್ತೇ ಇದೆ. ನಿರ್ದೇಶಕರ ಸಂಘದ ಅಧ್ಯಕ್ಷ ಟೇಶಿ ವೆಂಕಟೇಶ್ ವಿರುದ್ಧ ಹಲವರು ಕಿಡಿಕಾರಿದ್ದು ಗೊತ್ತು. ಈಗ ಟೇಶಿ ಟೇಶಿ ವೆಂಕಟೇಶ್ ವಿರುದ್ಧ ನಿರ್ದೇಶಕಿ ಕಮ್‌ ನಿರ್ಮಾಪಕಿ ರೂಪ ಅಯ್ಯರ್‌ ಅವರು ಗುಡುಗಿದ್ದಾರೆ. ಅಷ್ಟೇ ಅಲ್ಲ, ಅವರು ಮಾನನಷ್ಠ ಮೊಕದ್ದಮೆ ಹಾಕುವುದಾಗಿ ಹೇಳಿದ್ದಾರೆ. ಹೌದು, ರೂಪ ಅಯ್ಯರ್‌ ಅವರು ಟೇಶಿ ವೆಂಕಟೇಶ್ ವಿರುದ್ಧ 1 ಕೋಟಿ‌ ಮಾನನಷ್ಠ ಮೊಕದ್ದಮೆ ಕೇಸ್ ಹಾಕಿದ್ದಾರೆ.

ವೈಯಕ್ತಿಕ ವಿಚಾರವನ್ನು ಕೆದಕಿದ್ದ ಹಿನ್ನೆಲೆಯಲ್ಲಿ ರೂಪ ಅಯ್ಯರ್‌ ಅವರು ಇದೀಗ ಟೇಶಿ‌ ವೆಂಕಟೇಶ್ ಅವರ ಮೇಲೆ ದೂರಿದ್ದು, ಕೇಸ್‌ ಹಾಕಿದ್ದಾರೆ.

“ರೂಪ ಅಯ್ಯರ್ ಅಕೌಂಟ್ ನಲ್ಲಿ‌ ಎಷ್ಟು ದುಡ್ಡು ಇದೆ, ಯಾವ್ ರೀತಿ‌ ಸಂಪಾದನೆ ಮಾಡ್ತಾರೆ ಅಂತ ಗೊತ್ತಿದೆ” ಅಂತ ಈ‌ ಹಿಂದೆ ಟೇಶಿ ವೆಂಕಟೇಶ್ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೊಂಡಿದ್ದಉರ. ಹೀಗೆ ವೈಯಕ್ತಿಕವಾಗಿ ಪ್ರಶ್ನೆ ಮಾಡಿದ್ದಕ್ಕೆ ರೂಪ ಅಯ್ಯರ್ ಕಾನೂನಿನ ಮೊರೆ ಹೋಗಿರುವ ರೂಪ ಅಯ್ಯರ್‌,

ಕೋರ್ಟ್ ನಲ್ಲಿ ಈ ಕೇಸ್ ಗೆದ್ದೇ ಗೆಲ್ತೀನಿ ಎಂದಿದ್ದಾರೆ. ಅಷ್ಟೇ ಅಲ್ಲ, ಈ ಕೇಸ್‌ನಿಂದ ಬರುವ 1 ಕೋಟಿ ರೂಪಾಯಿ ಮಾನನಷ್ಠ ಹಣವನ್ನು ನಿರ್ದೇಶಕರ ಸಂಘದ ಅಭಿವೃದ್ಧಿಗೆ ಕೊಡ್ತೀನಿ ಅಂತ ಹೇಳಿದ್ದಾರೆ.

Categories
ಸಿನಿ ಸುದ್ದಿ

ನಟ ದುನಿಯಾ ವಿಜಯ್ ತಾಯಿ ನಾರಾಯಣಮ್ಮ ನಿಧನ

ನಟ ದುನಿಯಾ ವಿಜಯ್‌ ಅವರ ತಾಯಿ ನಾರಾಯಣಮ್ಮ ನಿಧನರಾದರು. ಅನಾರೋಗ್ಯದಲ್ಲಿ ಅವರಿಗೆ ಕಳೆದ ೨೦ ದಿನಗಳಿಂದಲೂ ಮನೆಯಲ್ಲೇ ಚಿಕಿತ್ಸೆ ಕೊಡಿಸುತ್ತಿದ್ದರು ನಟ ದುನಿಯಾ ವಿಜಯ್.‌ ಬ್ರೈನ್‌ ಸ್ಟ್ರೋಕ್‌ ಆದ ಕಾರಣ ನಾರಾಯಣಮ್ಮ ತೀವ್ರ ಅನಾರೋಗ್ಯಕ್ಕೆ ಒಳಾಗಿದ್ದರು. ದಿನ ನಿತ್ಯವೂ ಅವರಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಗುರುವಾರ ಚಿಕಿತ್ಸೆ ಫಲಿಸದೆ ನಾರಾಯಣಮ್ಮ ನಿಧನರಾಗಿದ್ದು, ಈ ವಿಚಾರವನ್ನು ನಟ ದುನಿಯಾ ವಿಜಯ್‌ ಅವರೇ ಖಚಿತ ಪಡಿಸಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಕೊವಿಡ್ ನಿಂದ ಚೇತರಿಸಿಕೊಂಡಿದ್ದ ದುನಿಯಾ ವಿಜಯ್ ತಾಯಿ ನಾರಾಯಣಮ್ಮ, ಇನ್ನೇನು ಸಮಸ್ಯೆ ಬಗೆಹರಿಯಿತು ಎನ್ನುತ್ತಿರುವಾಗಲೇ ನಿಧನರಾಗಿದ್ದು, ನಟ ವಿಜಯ್‌ ಅವರನ್ನು ತೀವ್ರ ದುಃಖಕ್ಕೆ ತಳ್ಳಿದೆ. ಆಸ್ಪತ್ರೆಗೆ ಹೋಗದೆ ಮನೆಯಲ್ಲೇ ಚಿಕಿತ್ಸೆ ಕೊಡಿಸುತ್ತಿದ್ದಕ್ಕೂ ಕಾರಣ ಇದೆ ಅಂತ ದುನಿಯಾ ವಿಜಯ್‌ ಹೇಳಿದ್ದರು. ʼ ಅಮ್ಮನಿಗೆ ಆಸ್ಪತ್ರೆಗೆ ಹೋಗಲು ಇಷ್ಟವಿರಲಿಲ್ಲ.

ಹೀಗಾಗಿ ಮನೆಯಲ್ಲೇ ಚಿಕಿತ್ಸೆಗೆ ವ್ಯವಸ್ಥೆ ಮಾಡಿಸುತ್ತಿದ್ದೇನೆʼ ಅಂತ ಹೇಳಿಕೊಂಡಿದ್ದರು. ಆದರೆ ಗುರುವಾರ ಅವರು ನಿಧನರಾಗಿದ್ದಾರೆಂದು ಮಾಹಿತಿ ನೀಡಿದ್ದಾರೆ. ದುನಿಯಾ ವಿಜಯ್ ಅವರ ತಾಯಿ ಅಂತ್ಯಕ್ರಿಯೆ ನಾಳೆ ಮಧ್ಯಾಹ್ನ ನಡೆಯಲಿದೆ. ಆನೇಕಲ್ ನ ಕುಂಬಾರ ಹಳ್ಳಿಯಲ್ಲಿ ಅಂತಿಮ ವಿಧಿವಿಧಾನ ಮಾಡಲು ನಿರ್ಧಾರ ಮಾಡಿದ್ದಾಗಿ ಅವರು ತಿಳಿಸಿದ್ದಾರೆ

Categories
ಸಿನಿ ಸುದ್ದಿ

ಕನ್ನಡದ ಇಬ್ಬರು ನಟರ ಹುಟ್ಟು ಹಬ್ಬ; ಬರ್ತ್‌ ಡೇ ಗುಂಗಲ್ಲಿ ಶ್ರೀನಗರ ಕಿಟ್ಟಿ, ಧರ್ಮ ಕೀರ್ತಿರಾಜ್‌

ಕೊರೊನಾ- ಗ್ರಾಂಡ್‌ ಸೆಲೆಬ್ರೆಷನ್ಸ್‌ ಗೆ ಬ್ರೇಕ್‌
ಸಿಂಪಲ್‌ ಬರ್ತ್‌ ಡೇ ಆಚರಿಸಿಕೊಂಡ ನಟರು
ಬುದ್ಧಿವಂತ 2 ನಲ್ಲಿಬಣ್ಣ ಹಚ್ಚಿ
ಉಪೇಂದ್ರ ಎದುರು ನಿಂತ್ರ ಶ್ರೀನಗರ ಕಿಟ್ಟಿ
ನವಗ್ರಹ ಮೂಲಕ ಬಂದ ಧರ್ಮ
ಟಕಿಲಾ ಗುಂಗಲ್ಲಿ ರಂಜಿಸಲು ರೆಡಿ


ಇಂದು ಕನ್ನಡದ ಇಬ್ಬರು ನಟರ ಹುಟ್ಟು ಹಬ್ಬ. ಭರವಸೆಯ ಯುವ ನಟರಾದ ಧರ್ಮ ಕೀರ್ತಿರಾಜ್‌ ಜುಲೈ 7 ಹಾಗೂ ಶ್ರೀನಗರ ಕಿಟ್ಟಿ ಜುಲೈ 8 ಹುಟ್ಟು ಹಬ್ಬ. ಆದರೆ ಕೊರೋನಾ ಕಾರಣಕ್ಕೆ ಈ ಇಬ್ಬರು ನಟರ ಗ್ರಾಂಡ್‌ ಸೆಲೆಬ್ರೆಷನ್‌ ನಿಂದ ದೂರವೇ ಉಳಿದಿದ್ದಾರೆ. ಕಳೆದ ವರ್ಷದಂತೆಯೇ ಈ ವರ್ಷ ಕೂಡ ಸಿಂಪಲ್‌ ಸೆಲೆಬ್ರೆಷನ್‌ಗೆ ಆದ್ಯತೆ ಕೊಟ್ಟಿರುವುದು ವಿಶೇಷ.


ಸ್ಯಾಂಡಲ್‌ವುಡ್‌ ನಲ್ಲಿ ದುನಿಯಾ ಸೂರಿ ನಿರ್ದೇಶನದ ʼಇಂತಿ ನಿನ್ನ ಪ್ರೀತಿಯʼ ಹಾಗೂ ನಾಗಶೇಖರ್‌ ನಿರ್ದೇಶನದʼ ಸಂಜು ವೆಡ್ಸ್‌ ಗೀತಾʼ ಚಿತ್ರಗಳ ಮೂಲಕ ಮನೆ ಮಾತಾದ ನಟ ಶ್ರೀನಗರ ಕಿಟ್ಟಿ. ಸದ್ಯಕ್ಕೀಗ ಅವರು ಉಪೇಂದ್ರ ಅಭಿನಯದ ʼಬುದ್ದಿವಂತ ೨ʼ ಚಿತ್ರದಲ್ಲಿ ವಿಶೇಷ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಅದರಲ್ಲಿ ಕಿಟ್ಟಿ ಅವರದ್ದು ವಿಶೇಷವಾದ ಲುಕ್.‌ ಅದೇ ಕಾರಣಕ್ಕೆ ಸಾಕಷ್ಟು ಕುತೂಹಲ ಹುಟ್ಟಿಸಿದೆ ಈ ಚಿತ್ರದಲ್ಲಿನ ಕಿಟ್ಟಿ ಅವರ ಪಾತ್ರ.

ಕಿಟ್ಟಿ ಅವರ ಹುಟ್ಟುಹಬ್ಬಕ್ಕೆ ಬುದ್ದಿವಂತ 2 ಚಿತ್ರ ತಂಡ ಸ್ಪೆಷಲ್‌ ಗಿಫ್ಟ್‌ ಕೊಟ್ಟಿದೆ. ಬುದ್ಧಿವಂತ ೨ ಚಿತ್ರದಲ್ಲಿನ ಕಿಟ್ಟಿ ಅವರ ಪಾತ್ರದ ಒಂದು ಲುಕ್‌ ರಿವೀಲ್‌ ಮಾಡುವುದರ ಜತೆಗೆ ಹುಟ್ಟು ಹಬ್ಬಕ್ಕೆ ವಿಶ್‌ ಮಾಡಿದೆ. ಹಾಗೆಯೇ ಸೋಷಲ್‌ ಮೀಡಿಯಾದಲ್ಲಿ ಅಭಿಮಾನಿಗಳಿಂದ ನಟ ಕಿಟ್ಟಿ ಅವರಿಗೆ ಹುಟ್ಟು ಹಬ್ಬದ ಶುಭಾಶದ ಮಹಾಪೂರವೇ ಹರಿದು ಬಂದಿದೆ.


ಇನ್ನು ದರ್ಶನ್‌ ಅಭಿನಯದ ʼನವಗ್ರಹ ʼಚಿತ್ರದೊಂದಿಗೆ ಬೆಳ್ಳಿತೆರೆಗೆ ಎಂಟ್ರಿಯಾದವರು ನಟ ಧರ್ಮ್‌ ಕೀರ್ತಿರಾಜ್. ಹೆಸರಾಂತ ಖಳನಟ ಕಿರ್ತೀರಾಜ್‌ ಪುತ್ರ. ಆ ಹಿನ್ನೆಲೆಯಲ್ಲಿಯೇ ಚಿತ್ರರಂಗಕ್ಕೆ ಎಂಟ್ರಿಯಾದರೂ, ತಮ್ಮದೇ ಛಾಪು ಮೂಡಿಸಲು ಸಾಕಷ್ಟು ಶ್ರಮ ಪಡುತ್ತಿದ್ದಾರೆ. ʼನವಗ್ರಹʼ ಚಿತ್ರದ ನಂತರ ಸಾಕಷ್ಟು ಸಿನಿಮಾಗಳಲ್ಲಿ ನಾಯಕರಾಗಿ ಅಭಿನಯಿಸಿ, ಭರವಸೆಯ ನಟ ಎಂದು ಗುರುತಿಸಿಕೊಂಡವರು. ಸದ್ಯಕ್ಕೀಗ ʼಟಕೀಲಾʼ ಚಿತ್ರದಲ್ಲಿ ನಾಯಕರಾಗಿ ಅಭಿನಯಸಿದ್ದಾರೆ. ಚಿತ್ರ ತಂಡ ಅವರ ಹುಟ್ಟು ಹಬ್ಬಕ್ಕೆ ವಿಶೇಷವಾಗಿ ವಿಶ್‌ ಮಾಡಿದೆ. ಅಭಿಮಾನಿಗಳು ಕೂಡ ಸೋಷಲ್‌ ಮೀಡಿಯಾದಲ್ಲಿ ನಟ ಧರ್ಮಕೀರ್ತಿರಾಜ್‌ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ.

error: Content is protected !!