Categories
ಸಿನಿ ಸುದ್ದಿ

ಸಿನಿಮಾ ಮಂದಿ ಈಗ ನಕ್ಕರೂ, ಭವಿಷ್ಯ ಕರಾಳವೇ….!!

ಸಿನಿಮಾ ಮಂದಿ ಮುಖದಲ್ಲಿ ಕೊನೆಗೂ ನಗುವಿನ ಗೆರೆ ಮೂಡಿವೆ. ಸತತ ಮೂರು ತಿಂಗಳ ನಂತರ ಸರ್ಕಾರವು ಮಲ್ಟಿಪ್ಲೆಕ್ಸ್‌ ಸೇರಿದಂತೆ ಚಿತ್ರಮಂ ದಿರಗಳ ಬಾಗಿಲು ತೆರೆಯಲು ಪರ್ಮಿಷನ್‌ ಕೊಟ್ಟಿದೆ. ಅಲ್ಲೂ ಒಂದು ಕಂಡಿಷನ್‌ ಇದೆ. ಶೇಕಡಾ 50 ರಷ್ಟು ಸೀಟು ಭರ್ತಿ ಮೂಲಕ ಚಿತ್ರಮಂ ದಿರಗಳಲ್ಲಿ ಚಿತ್ರಪ್ರದರ್ಶನ ನಡೆಸಬೇಕು ಅನ್ನೋದು ಸರ್ಕಾರದ ಕಂಡಿ ಷನ್.‌ಅದಕ್ಕೆ ಕಾರಣವೂ ಇದೆ. ಮಹಾಮಾರಿ ಕೊರೋನಾ ಇನ್ನು ಹೋಗಿಲ್ಲ. ಈಗಲೂ ದಿನವೂ ರಾಜ್ಯದಲ್ಲಿ ಒಂದಷ್ಟು ಕೊರೋನಾ ಪಾಸಿಟಿವ್‌ ಪ್ರಕರಣ ದಾಖಲಾಗುತ್ತಲೇ ಇವೆ. ಹಾಗೆಯೇ ಹೊರ ರಾಜ್ಯ ಗಳ ಲ್ಲೀಗ ಕೊರೋನಾ ಭೀತಿ ಮತ್ತಷ್ಟು ಹೆಚ್ಚಾಗಿದೆ ಎನ್ನುವ ಆತಂಕದ ವಿಷಯ ಕೇಳಿಬರುತ್ತಿದೆ. ಅಲ್ಲದೇ ಯುರೋಪ್‌ ಕಂಟ್ರಿಗಳಲ್ಲಿ ಕೊರೋನಾ ಮತ್ತೆ ಹೆಚ್ಚಾಗುತ್ತಿರುವ ಸುದ್ದಿಗಳು ಬರುತ್ತಿವೆ. ಈ ಕಾರಣಕ್ಕೆ ಸರ್ಕಾರ, ಒಂದಷ್ಟು ಕಂಡಿಷನ್‌ ನಡುವೆಯೇ ಚಿತ್ರಮಂದಿರಗಳ ಆರಂಭಕ್ಕೆ ಅವಕಾಶ ನೀಡಿದೆ. ಸಹಜವಾಗಿಯೇ ಇದು ಸಿನಿಮಾ ಮಂದಿ ಮುಖದಲ್ಲಿ ಒಂದಷ್ಟು ಸಂತಸ ತಂದಿದೆ.

ಹಾಗಂತ ಚಿತ್ರೋದ್ಯಮ ಎದ್ದುಕುಳಿತುಕೊಂಡಿತು ಅಂತಲ್ಲ. ಭವಿಷ್ಯ ಕರಾಳವೇ ಆಗಿದೆ. ಸದ್ಯಕ್ಕೆ ಶೇಕಡಾ 50 ರಷ್ಟು ಸೀಟು ಭರ್ತಿಯೊಂದಿಗೆ ಚಿತ್ರಮಂದಿರಗಳ ಆರಂಭಕ್ಕೆ ಅವಕಾಶ ಸಿಕ್ಕರೂ, ಚಿತ್ರರಂಗದ ಬೇಡಿಕೆ ಈಗ ಶೇಕಡಾ ನೂರರಷ್ಟು ಸೀಟು ಭರ್ತಿಗೆ ಅವಕಾಶ ಕೊಡಿ ಎನ್ನುವು ದಾಗಿದೆ. ಈ ಸಂಬಂಧ ಇಂದು ( ಜುಲೈ 19 ) ಕರ್ನಾಟಕ ವಾಣಿಜ್ಯ ಮಂಡಳಿ ನೇತೃತ್ವದಲ್ಲಿ ಸಿನಿಮಾ ಮಂದಿಯೂ, ಮುಖ್ಯಮಂ ತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಿದೆ ಎನ್ನುವ ಮಾತುಗಳೂ ಕೇಳಿಬಂದಿವೆ.

ಉದ್ಯಮವೂ ಸರ್ಕಾರವನ್ನು ಈ ರೀತಿ ಕೇಳುವುದಕ್ಕೂ ಕಾರಣವಿದೆ. ಚಿತ್ರಮಂದಿರಗಳಲ್ಲಿ ಈಗ ಶೇಕಡಾ 50 ರಷ್ಟು ಸೀಟು ಭರ್ತಿ ಮೂಲಕ ಚಿತ್ರ ಪ್ರದರ್ಶಿಸುವುದು ಅದು ಅಷ್ಟು ಸುಲಭ ಇಲ್ಲ. ಮಲ್ಟಿಪ್ಲೆಕ್ಸಗಳಿಗೆ ಅನುಕೂಲ ಆದೀತೇ ಹೊರತು ಸಿಂಗಲ್‌ ಸ್ಕ್ರೀನ್‌ ಚಿತ್ರಮಂದಿರಗಳಿಗೆ ಶೇಕಡ ೫೦ ರಷ್ಟು ಸೀಟು ಭರ್ತಿಯ ಅವಕಾಶ ಮತ್ತಷ್ಟು ನಷ್ಟವೇ ಹೌದು. ಯಾಕಂದ್ರೆ, ಅವತ್ತಿನ ಖರ್ಚು ವೆಚ್ಚಗಳಿಗೂ ಪ್ರದರ್ಶನದ ಹಣ ಬರೋದಿಲ್ಲ. ಮೇಲಾಗಿ ಅಷ್ಟಾದ್ರೂ ಜನ ಬರುತ್ತಾರೆನ್ನುವ ನಂಬಿಕೆ ಯೂ ಇಲ್ಲ. ಜತೆಗೆ ಶೇಕಡಾ 50 ರಷ್ಟು ಸೀಟು ಭರ್ತಿ ಅಂದಾಕ್ಷಣ ಯಾವುದೇ ಸ್ಟಾರ್‌ ಸಿನಿಮಾಗಳು ಚಿತ್ರಮಂದಿರಕ್ಕೆ ಬರೋದಿಲ್ಲ.

ಒಂದು ವೇಳೆ ನೂರರಷ್ಟು ಸೀಟು ಭರ್ತಿಗೆ ಅವಕಾಶ ಸಿಕ್ಕರೆ ಸ್ಟಾರ್‌ ಸಿನಿಮಾಗಳು ರಿಲೀಸ್‌ ಆಗಬಹುದು. ಸಹಜವಾಗಿಯೇ ಅವರ ಸಿನಿಮಾ ನೋಡುವುದಕ್ಕಾದರೂ ಚಿತ್ರಮಂದಿರಕ್ಕೂ ಜನ ಬರುತ್ತಾರೆನ್ನುವ ನಂಬಿಕೆಯ ಮೂಲಕವೇ ಸೋಮವಾರ ಚಿತ್ರೋದ್ಯಮದ ಮಂದಿ ಸರ್ಕಾರಕ್ಕೆ ಮನವಿ ಮಾಡಲಿದ್ದಾರೆಂದು ಗೊತ್ತಾಗಿದೆ. ಇರಲಿ, ಸಿನಿಮಾ ಮಂದಿ ಭಾವಿಸಿಕೊಂಡಂತೆ ಇವತ್ತೇ ಚಿತ್ರಮಂದಿರಗಳಲ್ಲಿ ನೂರರಷ್ಟು ಸೀಟು ಭರ್ತಿಗೆ ಅವಕಾಶ ಸಿಕ್ಕರೂ, ಚಿತ್ರಮಂದಿರಗಳಿಗೆ ಸಡನ್‌ ಆಗಿ ಸ್ಟಾರ್‌ ಸಿನಿಮಾ ಬರುತ್ತವೆ ಎನ್ನುವ ಖಾತರಿ ಇಲ್ಲ. ಯಾಕಂದ್ರೆ ಜನಕ್ಕೆ ಈಗಲೂ ಕೊರೋನಾ ಸೋಂಕಿನ ಭೀತಿ ಇರೋದ್ರಿಂದ ಸ್ಟಾರ್‌ ಸಿನಿಮಾ ರಿಲೀಸ್‌ ಆದರೂ, ಜನ ಚಿತ್ರ ಮಂದಿರದತ್ತ ಮುಖ ಮಾಡುವುದು ಕಷ್ಟವೇ ಇದೆ ಎನುತ್ತಾರೆ ಸಿನಿಮಾ ನಿರ್ಮಾಪಕರೊಬ್ಬರು.

ಪರಿಸ್ಥಿತಿ ಭೀಕರವಾಗಿದೆ. ತಕ್ಷಣಕ್ಕೆ ನೂರರಷ್ಟು ಸೀಟು ಭರ್ತಿಗೂ ಅವಕಾಶ ಸಿಕ್ಕರೂ, ಉದ್ಯಮ ಚೇತರಿಕೆ ಕಾಣೋದಿಕ್ಕೆ ಇನ್ನು ವರ್ಷವೇ ಬೇಕಿದೆ. ಹೀಗಾಗಿ ಉದ್ಯಮಕ್ಕೆ ಎದುರಾಗಬಹುದಾದ ಸಂಕಷ್ಟಗಳನ್ನು ದೂರ ಮಾಡಬಹುದಾದ ಪರ್ಯಾಯ ದಾರಿಗಳತ್ತ ಉದ್ಯಮ ಗಮನ ಹರಿಸಬೇಕಿದೆ. ಕಮರ್ಷಿಯಲ್‌ ಸಿನಿಮಾಗಳ ಜತೆಗೆ ಕಂಟೆಂಟ್‌ ಆಧರಿತ ಸಿನಿಮಾಗಳನ್ನು ನಿರ್ಮಿಸಿ, ಡಿಜಿಟಲ್‌ ಫ್ಲಾಟ್‌ಪಾರ್ಮ್‌ ನಲ್ಲೂ ರಿಲೀಸ್‌ ಮಾಡಬಹುದು, ಹಾಗೆಯೇ ಚಿತ್ರಮಂದಿರಕ್ಕೂ ಬರಬಹುದು. ಹಾಗೆಯೇ ಸ್ಟಾರ್‌ ಗಳು ಕೂಡ ವರ್ಷಕ್ಕೆ ಒಂದೋ ಅಥವಾ ಎರಡು ಸಿನಿಮಾ ಎನ್ನುವ ಬೌಂಡರಿಯ ಕಂಫರ್ಟ್‌ ಜೋನ್‌ ದಾಟಿ, ಕಮರ್ಷಿಯಲ್‌ ಸಿನಿಮಾಗಳ ಜತೆಗೆ ಕಂಟೆಂಟ್‌ ಆಧರಿತ ಕಡಿಮೆ ಬಜೆಟ್ ನ ಸಿನಿಮಾಗಳಿಗೂ ಕಾಲ್‌ ಶೀಟ್‌ ಕೊಡಲಿ. ಆಗ ಕೊರೋನಾದಂತಹ ಸಂಕಷ್ಟಗಳ ಕಾಲದಲ್ಲೂ ಉದ್ಯಮ ಬದುಕುಳಿಯಲು ಸಾಧ್ಯ.

Categories
ಸಿನಿ ಸುದ್ದಿ

ಸಂಚಾರಿ ವಿಜಯ್ ಕುರಿತ ಅನಂತವಾಗಿರು ಪುಸ್ತಕ ಬಿಡುಗಡೆ



ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅವರ ಜೀವನ ಕಥನ ‘ಅನಂತವಾಗಿರು’ ಪುಸ್ತಕ ಬಿಡುಗಡೆ ಮಾಡಲಾಯಿತು. ಈ ವೇಳೆ ಅವರ ಅನೇಕ ಗೆಳೆಯರು, ರಂಗಕಲಾವಿದರು, ನಿರ್ದೇಶಕರು ವಿಜಯ್ ಅವರ ಜೊತೆಗಿನ ಒಡನಾಟವನ್ನು ಸ್ಮರಿಸಿದರು.

ನಿರ್ದೇಶಕ ಎಂ.ಎಸ್.ರಮೇಶ್ ಮಾತನಾಡಿ, ಕನ್ನಡ ಸಿನಿಮಾ ರಂಗಕ್ಕೆ ಆಸ್ತಿಯಾಗಿದ್ದರು. ಇಂತಹ ಪ್ರತಿಭಾವಂತ ಕಲಾವಿದನನ್ನು ಕಳೆದುಕೊಂಡ ನಂತರ ಅವರ ಪರ್ಯಾಯ ನಟನನ್ನು ಹುಡುಕುವ ಕಷ್ಟ ನಮಗೆಲ್ಲ ಎದುರಾಗಲಿದೆ ಎಂದರು.

ಡಾ. ಶರಣು ಹುಲ್ಲೂರು ಸಂಪಾದಿಸಿರುವ ಸಂಚಾರಿ ವಿಜಯ್ ಬದುಕಿನ ಕುರಿತಾದ ಅನಂತವಾಗಿರು ಪುಸ್ತಕವನ್ನು ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ಸಣ್ಣ ವಯಸ್ಸಿನಲ್ಲೇ ಅಪಾರ ಸಾಧನೆ ಮಾಡಿದವರು ವಿಜಯ್, ಹಾಗಾಗಿ ಅವರು ಪುಸ್ತಕದ ಶೀರ್ಷಿಕೆಯಂತೆ ಅನಂತವಾಗಿಯೇ ಇರುತ್ತಾರೆ ಎಂದರು. ಅತೀ ಕಡಿಮೆ ಅವಧಿ ಇಂಥದ್ದೊಂದು ಪುಸ್ತಕ ಸಾಧ್ಯವಾಗಿದ್ದಕ್ಕೆ ಪುಸ್ತಕದ ಸಂಪಾದಕ ಶರಣು ಹುಲ್ಲೂರು ಅವರಿಗೆ ಕೃತಜ್ಞತೆ ಸಲ್ಲಿಸಿದರು.


ಸಂಚಾರಿ ಥಿಯೇಟರ್ ಆಯೋಜನೆ ಮಾಡಲಾಗಿದ್ದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಲೇಖಕ ವಸುಧೇಂದ್ರ, ನಿರ್ದೇಶಕರಾದ ಬಿ.ಸುರೇಶ್, ಮಂಸೋರೆ, ರಂಗ ನಿರ್ದೇಶಕಿ ಎನ್‍. ಮಂಗಳಾ, ಸಂಚಾರಿ ವಿಜಯ್ ಅವರ ಸಹೋದರರಾರ ವಿರೂಪಾಕ್ಷ ಮತ್ತು ಸಿದ್ದೇಶ್ ಮತ್ತು ಸಂಚಾರಿ ವಿಜಯ್ ಅವರ ಸ್ನೇಹಿತರು ಹಾಗೂ ರಂಗ ಕರ್ಮಿಗಳು ಹಾಜರಿದ್ದರು.

ಸಂಚಾರಿ ಥಿಯೇಟರ್ ಸದಸ್ಯರು ಸಂಚಾರಿ ವಿಜಯ್ ಅವರ ನಾಟಕಗಳ ರಂಗಗೀತೆಗಳನ್ನು ಹಾಡಿದರೆ, ವಿಜಯ್ ಅವರ ಜೀವನದ ಸಂಕ್ಷಿಪ್ತ ರೂಪ ನಾಟಕ ಮತ್ತು ವಿಡಿಯೋ ದೃಶ್ಯ ಪ್ರದರ್ಶನವಾಯಿತು.


 
ಪುಸ್ತಕದ ಕುರಿತು
ಇದೊಂದು ರೀತಿಯಲ್ಲಿ ಜೀವನ ಚರಿತ್ರೆ ಮಾದರಿಯಲ್ಲೇ ರೂಪುಗೊಂಡಿರುವ ಪುಸ್ತಕ. ಬಾಲ್ಯವನ್ನು ವಿಜಯ್ ಅವರ ಇಬ್ಬರು ಸಹೋದರರು ಕಟ್ಟಿಕೊಟ್ಟರೆ, ಸ್ಕೂಲ್, ಕಾಲೇಜು ದಿನಗಳ ನೆನಪುಗಳನ್ನು ಗೆಳೆಯರು ಹೇಳಿಕೊಂಡಿದ್ದಾರೆ. ಕಷ್ಟದ ದಿನಗಳನ್ನು ಮತ್ತು ತಾನು ನಡೆದು ಬಂದ ಹಾದಿಯನ್ನು ಸ್ವತಃ ವಿಜಯ್ ಅವರೇ ಹಲವು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದನ್ನು ದಾಖಲಿಸಲಾಗಿದೆ.
ಬೆಂಗಳೂರಿಗೆ ಬಂದಾಗಿನ ಕೆಲವು ದಿನಗಳ ನೆನಪುಗಳನ್ನು ವಿಜಯ್‍ ಹೇಳಿಕೊಂಡಿದ್ದಾರೆ. ಅದು ದಾಖಲಾಗಿದೆ. ಅಲ್ಲಿಂದ ರಂಗಭೂಮಿಗೆ ಬಂದ ಮೊದಲ ದಿನಗಳನ್ನು ಖ್ಯಾತ ಯುವ ರಂಗ ನಿರ್ದೇಶಕ ಕೆ.ಶ್ರೀನಿವಾಸ್‍ ದಾಖಲಿಸಿದ್ದಾರೆ. ಇವರ ನಿರ್ದೇಶನದ ಮೊದಲ ನಾಟಕದ ಮೂಲಕ ವಿಜಿ ಬಂದವರು. ಆನಂತರ ಹಲವು ನಾಟಕ ತಂಗಳಲ್ಲಿ ಕೆಲಸ ಮಾಡಿದ್ದು ದಾಖಲಾಗಿದೆ. ಸಂಚಾರಿಗೆ ಬಂದ ನಂತರದ ರಂಗ ಒಡನಾಟವನ್ನು ಮಂಗಳಾ ಅವರು ಬರೆದಿದ್ದಾರೆ.
ವಿಜಿ ನಟನೆಯ ಮೊದಲ ಸಿನಿಮಾ ‘ರಂಗಪ್ಪ ಹೋಗ್ಬಿಟ್ನ’. ಈ ಸಿನಿಮಾದ ನಿರ್ದೇಶಕ ಎಂ.ಎಲ್ ಪ್ರಸನ್ನ ಆ ಕುರಿತಾಗಿ ಬರೆದಿದ್ದಾರೆ. ವಿಜಯ್ ಅವರ ಸಿನಿಮಾ ಜರ್ನಿಯಲ್ಲಿಯ ಉತ್ತಮ ಸಿನಿಮಾಗಳಾದ ‘ಹರಿವು’ ಕುರಿತು ಮಂಸೋರೆ, ನಾತಿಚರಾಮಿ ಕುರಿತು ಸಂಧ್ಯಾರಾಣಿ, ‘ಮೇಲೊಬ್ಬ ಮಾಯಾವಿ’ ಕುರಿತು ನಿರ್ದೇಶಕ ನವೀನ್, ‘ಕೃಷ್ಣ ತುಳಸಿ’ ಚಿತ್ರದ ಬಗ್ಗೆ ನಿರ್ದೇಶಕರು,’ತಲೆದಂಡ’ ಚಿತ್ರದ ಕುರಿತು ನಿರ್ದೇಶಕರು, ‘ದಾಸ್ವಾಳ’ ಸಿನಿಮಾದ ಬಗ್ಗೆ ನಿರ್ದೇಶಕ ಎಂ.ಎಸ್ ರಮೇಶ್, ‘ನಾನು ಅವನಲ್ಲ ಅವಳು’ ಚಿತ್ರದ ಬಗ್ಗೆ ಲಿಂಗದೇವರು, ‘ಪುಗ್ಸಟ್ಟೆ ಲೈಫ್‍’  ಬಗ್ಗೆ ಅರವಿಂದ್ ಕುಪ್ಳಿಕರ್ ಬರೆದಿದ್ದಾರೆ.

ಗೆಳೆಯನ ಒಡನಾಟದ ಕುರಿತು ನಟ ನೀನಾಸಂ ಸತೀಶ್, ಗೆಳೆಯರಾದ ವೀರು ಮಲ್ಲಣ್ಣನವರ, ಪತ್ರಕರ್ತರಾದ ಪದ್ಮಾ ಶಿವಮೊಗ್ಗ ಮತ್ತು ದೇಶಾದ್ರಿ ಹೊಸ್ಮನೆ ಅವರು ವಿಜಿಯ ಸಾಮಾಜಿಕ ಕಾರ್ಯದ ಬಗ್ಗೆ ಬರೆದರೆ, ಮಾಧ್ಯಮಗಳ ಜತೆಗಿನ ಸಂಬಂಧವನ್ನು ಪತ್ರಕರ್ತರಾದ ಹರೀಶ್ ಸೀನಪ್ಪ, ವಿಜಯ್ ಭರಮಸಾಗರ ದಾಖಲಿಸಿದ್ದಾರೆ. ಶ್ರೀದೇವಿ ಮಹಾತ್ಮ ಮತ್ತು ವಿಜಯ್ ಕುರಿತಾಗಿ ವಸುಧೇಂದ್ರ ಅವರು ಬರೆದಿದ್ದರೆ, ಉಸಿರು ತಂಡದೊಂದಿಗಿನ ಸಮಾಜಮುಖಿ ಕಾರ್ಯದ ಬಗ್ಗೆ ಕವಿರಾಜ್, ‘ಹರಿವು’ ಚಿತ್ರದ ಮತ್ತೊಂದು ಅಧ್ಯಾಯವನ್ನು ಆಶಾ ಬೆನಕೊಪ್ಪ ಬರೆದಿದಿದ್ದಾರೆ.


ರಾಷ್ಟ್ರ ಪ್ರಶಸ್ತಿ ಮತ್ತು ವಿಜಿಯ್ ಕುರಿತು ಪುಟ್ಟಸ್ವಾಮಿ ಅವರು, ಟ್ರಾನ್ಸಜಂಡರ್ ಜತೆಗಿನ ಒಡನಾಟವನ್ನು ಅಕ್ಕೈ ಪದ್ಮಶಾಲಿ, ಸ್ನೇಹಜೀವಿಯ ಕುರಿತಾದ ಶಿವು ಮಾಕಳ್ಳಿ ಹೀಗೆ ಅನೇಕ ಹಿರಿಯ ಬರಹಗಾರರ ಲೇಖನಗಳನ್ನು ಒಳಗೊಂಡಿರುವ ಕೃತಿ ಇದಾಗಿದೆ. ರಾಜ್ಯ ಪ್ರಶಸ್ತಿ ವಿಜೇತ ಲೇಖಕ, ಪತ್ರಕರ್ತ ಡಾ. ಶರಣು ಹುಲ್ಲೂರು ಸಂಪಾದಕತ್ವದಲ್ಲಿ ಈ ಪುಸ್ತಕ ಬಂದಿದೆ. ಬೆಂಗಳೂರಿನ ಕಾಯಕ ಪ್ರಕಾಶನದ ಮೂರನೇ ಕೃತಿ ಇದಾಗಿದೆ.

Categories
ಸಿನಿ ಸುದ್ದಿ

ದೊಡ್ಮನೆ ಯಾವತ್ತಿದ್ರೂ ದೊಡ್ಮನೆನೆ ದರ್ಶನ್ ದೊಡ್ಡತನ ಮೆರೆದರಲ್ಲ; ತಂದಿಕ್ಕಿ ತಮಾಷೆ ನೋಡಲು ಬಯಸಿದವರು ಆಕಾಶ ನೋಡಿದರಲ್ಲ !?

ಅಪ್ಪಾಜಿ ತೂಗುದೀಪ್ ಶ್ರೀನಿವಾಸ್ ಅವರು
ಸಿನಿಮಾ ಇಂಡಸ್ಟ್ರಿಗೆ ಬಂದಿರೋದು ರಾಜ್ ಕುಮಾರ್ ಅವರ ಬ್ಯಾನರ್ ನಿಂದ. ನಾನು ಕೂಡ ಇಂಡಸ್ಟ್ರಿಗೆ ಎಂಟ್ರಿಕೊಟ್ಟಿದ್ದು ಇದೇ ರಾಜ್ ಕುಮಾರ್ ಅವರ ಬ್ಯಾನರ್ ನಿಂದ.
ಜನುಮದ ಜೋಡಿ ಚಿತ್ರಕ್ಕೆ ಲೈಟ್ ಬಾಯ್ ಆಗಿ ಕೆಲಸ ಮಾಡಿದ್ದೇನೆ. 175 ರೂಪಾಯಿ ಬಾಟದಿಂದ ಅವರ ಬ್ಯಾನರ್ ನಲ್ಲಿ ದುಡಿದಿದ್ದೇನೆ. ನನಗೆ ಅದರ ಬಗ್ಗೆ ಗೌರವ ಇದೆ.

ದೊಡ್ಮನೆ‌ ಆಸ್ತಿ ಬಗ್ಗೆ ಉಮಾಪತಿಯವರು ಅದ್ಯಾಕೆ ರಾಂಗ್ ಸ್ಟೇಟ್ಮೆಂಟ್ ಕೊಟ್ಟಿದ್ದಾರೋ ಗೊತ್ತಿಲ್ಲ‌. ಕಾಣದ ಕೈಗಳು ದೊಡ್ಮನೆಯ ವಿರುದ್ದ ದರ್ಶನ್ ರನ್ನ ಎತ್ತಿಕಟ್ಟುವ ಪ್ರಯತ್ನ ಮಾಡುತ್ತಿದ್ದಾರೋ ಏನೋ‌ ಅದಕ್ಕೂ‌ ಉತ್ತರ ಸಿಗುತ್ತಿಲ್ಲ. ತೆರೆಮರೆಯಲ್ಲಿ ಸಂಚು ನಡೆಯುತ್ತಿದೆಯೋ ಏನೋ ಆ ಭಗವಂತನಿಗೆ ಗೊತ್ತು ಆದರೆ ದಚ್ಚು ಮಾತ್ರ ಉಂಡ ಮನೆಗೆ ಕೇಡು ಬಯಸಲ್ಲ ಅನ್ನೋದನ್ನ ಮತ್ತೊಮ್ಮೆ‌ ಸಾಬೀತುಪಡಿಸಿದ್ದಾರೆ. ದೊಡ್ಮನೆ ಆಸ್ತಿ ಬಗ್ಗೆ ಎದ್ದಿದ್ದ ಗೊಂದಲಕ್ಕೆ ತೆರೆ ಎಳೆದಿದ್ದಾರೆ.

ಶಿವರಾಜ್ ಕುಮಾರ್- ಪುನೀತ್ ರಾಜ್ ಕುಮಾರ್- ರಾಘವೇಂದ್ರ ರಾಜ್ ಕುಮಾರ್ ಹುಟ್ಟುತ್ತಲೆ ಚಿನ್ನದ ಸ್ಪೂನ್ ಬಾಯಲ್ಲಿಟ್ಟುಕೊಂಡು ಹುಟ್ಟಿದವರು ಅವರ ಆಸ್ತಿನಾ ನಾವು ಕೊಂಡುಕೊಳ್ಳೋಕೆ ಆಗುತ್ತಾ, ಅನ್ನ ತಿಂದ ಮನೆಗೆ ಕೇಡು ಬಯಸುವವರಲ್ಲ ನಾವು ಅಂತ ಮಾತನಾಡಿರುವ ದಚ್ಚು ದೊಡ್ಮನೆಯೊಂದಿಗಿನ ಅವಿನಾಭಾವ ಸಂಬಂಧ ಬಿಚ್ಚಿಟ್ಟಿದ್ದಾರೆ.

ನಮ್ಮ ಅಪ್ಪಾಜಿ ತೂಗುದೀಪ್ ಶ್ರೀನಿವಾಸ್ ಅವರು
ಸಿನಿಮಾ ಇಂಡಸ್ಟ್ರಿಗೆ ಬಂದಿರೋದು ರಾಜ್ ಕುಮಾರ್ ಅವರ ಬ್ಯಾನರ್ ನಿಂದ. ನಾನು ಕೂಡ ಇಂಡಸ್ಟ್ರಿಗೆ ಎಂಟ್ರಿಕೊಟ್ಟಿದ್ದು ಇದೇ ರಾಜ್ ಕುಮಾರ್ ಅವರ ಬ್ಯಾನರ್ ನಿಂದ. ಪೂರ್ಣಿಮಾ ಎಂಟರ್ಪ್ರೈಸಸ್ ನ
ಜನುಮದ ಜೋಡಿ ಚಿತ್ರಕ್ಕೆ ಲೈಟ್ ಬಾಯ್ ಆಗಿ ಕೆಲಸ ಮಾಡಿದ್ದೇನೆ. 175 ರೂಪಾಯಿ ಬಾಟದಿಂದ ಅವರ ಬ್ಯಾನರ್ ನಲ್ಲಿ ದುಡಿದಿದ್ದೇನೆ. ನನಗೆ ಅದರ ಬಗ್ಗೆ ಗೌರವ ಇದೆ. ಇವತ್ತು ಇಷ್ಟುದ್ದ ದಪ್ಪ ಬೆಳೆದು‌ ನಿಂತಿದ್ದೇವೆ ಅಂದರೆ ಅದಕ್ಕೆ ಕಾರಣ ಅಣ್ಣಾವ್ರ ಬ್ಯಾನರ್ ಹಾಗೂ ಅವರ ಸಂಸ್ಥೆಯಿಂದ ತಿಂದ ಅನ್ನ. ಹೀಗಾಗಿ ಅನ್ನ ಹಾಕಿದ ಸಂಸ್ಥೆಯನ್ನ ಮರೆಯೋದಿಲ್ಲ

ಇನ್ನೂ ನೂರು ವರ್ಷ ಹೋದರೂ ದೊಡ್ಮನೆ ದೊಡ್ಮನೆನೇ. ನಾವು ಅದರ ಕೆಳಗಡೆ ಇರುವ ಹುಲ್ಲು ಅಲ್ಲ ಅದರ ಕೆಳಗಡೆ ಇರುವ ಬೇರು ಅಂದ್ಕೊಳ್ಳಿ. ಹೀಗಂತ ದಚ್ಚು ದೊಡ್ಮನೆಯನ್ನ ಕೊಂಡಾಡಿದ್ದಾರೆ. ಅಣ್ಣಾವ್ರ ಮೇಲಿರುವ ಅವರ ಕುಟುಂಬದ ಮೇಲಿರುವ ಗೌರವ ಹಾಗೂ ಪ್ರೀತಿಯನ್ನ ವ್ಯಕ್ತಪಡಿಸಿದ್ದಾರೆ.

ವಾಸ್ತವ ಹೀಗಿರುವಾಗ ದೊಡ್ಮನೆಯ ಆಸ್ತಿಗೆ ಕಣ್ಣಾಕಿದ್ದಾರೆ ಎನ್ನುವ ಗುಮಾನಿ ಸುದ್ದಿ ಹಬ್ಬಿಸೋದು ಎಷ್ಟು ಸರೀ? ದೊಡ್ಮನೆ ಆಸ್ತಿ ಕೇಳಿದರೂ ನಾನು ಕೊಡಲ್ಲ ಅಂದೆ ಹೀಗಂತ ರಾಬರ್ಟ್ ಪ್ರೊಡ್ಯೂಸರ್ ಉಮಾಪತಿಯವರು ಹೇಳಿಕೆ ನೀಡುವುದು ಎಷ್ಟು ಸರಿ ನೀವೇ ಯೋಚನೆ ಮಾಡಿ.

Categories
ಸಿನಿ ಸುದ್ದಿ

ಪ್ರೇಮ್ ಏನ್ ದೊಡ್ಡ ಪುಡಂಗಾ- ಎರಡು‌‌ ಕೊಂಬೈತಾ; ದಾಸನ ರೋಷಾವೇಶದ ಮಾತಿಗೆ ಪ್ರೇಮ್ ಉತ್ತರ !

‘ಅದೇನೋ ಗೊತ್ತಿಲ್ಲ.‌ನಟ‌ ದರ್ಶನ್ ಮೇಲೆ ಒಬ್ಬೊಬ್ಬರೇ ಮಾತಾಡೋಕೆ ಶುರು ಮಾಡಿದ್ದಾರೆ. ಅರುಣ ಕುಮಾರಿ ಅವರ 25ಕೋಟಿ ವಂಚನೆ ಪ್ರಕರಣ ಎಲ್ಲೆಲ್ಲಿಗೋ ಹೋಗಿ ಇದೀಗ ಇಂಡಸ್ಟ್ರಿ ಮಂದಿ ಕೂಡ ಮಾತಾಡುವಂತಾಗಿದೆ. ಆದರೆ, ದರ್ಶನ್ ಮಾತ್ರ ಯಾವುದಕ್ಕೂ ತಲೆ‌ಕೆಡಿಸಿಕೊಳ್ಳದೆ, ಇರೋ ವಿಷ್ಯನ ನೇರವಾಗಿ ಹೇಳ್ತಾನೆ ಇದಾರೆ. ಅದೆಲ್ಲಾ ಪಕ್ಕಕ್ಕಿಡಿ. ಈಗ ನಿರ್ದೇಶಕ ಪ್ರೇಮ್ ಕೂಡ ದರ್ಶನ್ ಬಗ್ಗೆ ಮಾತಾಡಿದ್ದಾರೆ. ಅದಕ್ಕೆ ಕಾರಣ, ‘ಪ್ರೇಮ್ ಏನ್ ದೊಡ್ಡ ಪುಡಂಗಾ- ಎರಡು‌‌ ಕೊಂಬೈತಾ’ ಅಂತ ದಚ್ಚು ಹೇಳಿದ್ದಾರೆ. ಅದಕ್ಕೆ ಪ್ರೇಮ್ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಉತ್ತರ ಕೊಟ್ಟಿದ್ದಾರೆ. ಅದು ಏನು ಅಂತ ಅವರ ಮಾತಲ್ಲೇ ಕೇಳಿ.

ಓವರ್ ಟು ಪ್ರೇಮ್…

‘ದರ್ಶನ್ ಅವ್ರೆ, ನಾನು ಕರಿಯ ಸಿನಿಮಾ ಮಾಡ್ಬೇಕಾದ್ರೆ ಯಾವ್ ಪುಡಂಗುನೂ ಅಲ್ಲಾ ನಂಗ್ ಕೊಂಬು ಇರ್ಲಿಲ್ಲ.. ನಾನೊಬ್ಬ ಸಾಮಾನ್ಯ ನಿರ್ದೇಶಕ. ರಾಜಕುಮಾರ್ ರವರು, ಅಂಬರೀಷ್ ರವರು, ವಿಷ್ಣುವರ್ಧನ್ ರವರು ಹಾಗೂ ರಜನಿಕಾಂತ್ ರವರು ಒಬ್ಬ ಒಳ್ಳೆ ನಿರ್ದೇಶಕ ಅಂದು ಬೆನ್ನು ತಟ್ಟಿದ್ರು. ಇಡೀ ಕರ್ನಾಟಕ ಜನತೆ ಹರಸಿ ಹಾರೈಸಿ ಹ್ಯಾಟ್ರಿಕ್ ನಿರ್ದೇಶಕ ಅಂತ ಬಿರುದು ಕೊಟ್ಟಾಗ್ಲು ನನಗ್ ಕೊಂಬು ಬರ್ಲಿಲ್ಲ.. ನಾನು ನಂದೇ ಆದ್ ಸ್ಟೈಲ್ ನಲ್ಲಿ ಸಿನಿಮಾ ಮಾಡ್ಕೊಂಡು ಬಂದೋವ್ನು.. ಸುಮಾರು ನಿರ್ಮಾಪಕರುಗಳು ಹಾಗೂ ನಿಮ್ಮ ಅಭಿಮಾನಿಗಳು ಹಾಗೂ ನನ್ನ ಅಭಿಮಾನಿಗಳು ಪ್ರತಿ ಸಾರಿ ದರ್ಶನ್ ಹಾಗೂ ನಿಮ್ಮ ಕಾಂಬಿನೇಶನ್ ನಲ್ಲಿ ಯಾವಾಗ ಚಿತ್ರ ಮಾಡ್ತಿರಂತ ಕೇಳ್ತಾನೆಯಿದ್ರು. ಇದ್ರ ಬಗ್ಗೆ ನಿಮಗೂ ಗೊತ್ತು ನನಗು ಗೊತ್ತು.

ಇಬ್ಬರು ಸೇರಿ ಸಿನಿಮಾ ಮಾಡೋದ್ರ ಬಗ್ಗೆ ಚೆರ್ಚೆ ಮಾಡಿದ್ವಿ. ನಾನು ನಮ್ ಬ್ಯಾನರ್ ನಲ್ ಸಿನಿಮಾ ಮಾಡಿ ಇಲ್ಲಾ ನಿಮ್ ಬ್ಯಾನರ್ ನಲ್ ಸಿನಿಮಾ ಮಾಡೋಣ ಅಂತ ಮತ್ತೆ ಚರ್ಚೆ ಮಾಡಿದ್ವಿ. ಆದರೆ ನನಗೆ ಉಮಾಪತಿಯವರು, ನೀವು ಹಾಗೂ ದರ್ಶನ್ ಸೇರಿ ನಂಗ್ ಸಿನಿಮಾ ಮಾಡ್ಕೊಡಿ ಅಂತ ಅಂದ್ರು. ಅದಿಕ್ಕೆ ನಾನು ಉಮಾಪತಿ ಅವ್ರನ್ನ ನಿಮಗೆ ಪರಿಚಯ ಮಾಡಿ.. ಮೂರು ಜನ ಸೇರಿ ಸಿನಿಮಾ ಮಾಡೋಣ ಅಂತ ಡಿಸೈಡ್ ಮಾಡಿದ್ವಿ.. ಆದ್ರೆ ನನ್ ದಿ ವಿಲ್ಲನ್ ಸಿನಿಮಾ ಲೇಟ್ ಆದ ಕಾರಣ ನಾನೇ ಉಮಾಪತಿಯವರಿಗೆ ದರ್ಶನ್ ಅವ್ರ ಡೇಟ್ ಇದ್ದ ಕಾರಣ ಬೇರೆ ನಿರ್ದೇಶಕರನ್ನ ಹಿಡಿದು ಸಿನಿಮಾ ಮಾಡಿ ಅಂತ ಹೇಳಿದ್ದೆ.

ನನ್ನ ಸಂಭಾವನೆಯನ್ನ ಉಮಾಪತಿಯವರಿಗೆ ವಾಪಾಸ್ ನೀಡಿ ರಾಬರ್ಟ್ ಸಿನಿಮಾ ಗೆ ಹಾರೈಸಿದವನು ನಾನು.. ಅದೇ ರೀತಿ ರಾಬರ್ಟ್ ಚಿತ್ರ ಹಿಟ್ ಆಯ್ತು, ಎಲ್ಲರ ಹಾಗೇ ನಾನು ಖುಷಿ ಪಟ್ಟೆ.. ಇದ್ರ ಮದ್ಯೆ ನನ್ ಹೆಸ್ರು ಯಾಕೆ.. ದರ್ಶನ್ ಅವ್ರೆ ನಿರ್ದೇಶಕ್ರು ಯಾವ್ ಪುಡಂಗಿಗಳು ಅಲ್ಲಾ, ಅವ್ರಿಗೆ ಕೊಂಬು ಇರಲ್ಲ..

ತೆರೆಮೇಲೆ ಒಬ್ಬ ನಟನನ್ನ ಹುಟ್ಟಾಕಿ ಅವ್ನಿಗ್ ಕೊಂಬು ಬರ್ಬೇಕಾದ್ರೆ ನಿರ್ದೇಶಕನ ಶ್ರಮ ಎಷ್ಟಿರುತ್ತೆಂತ ಪ್ರತಿಯೊಬ್ಬ ಕಲಾವಿದರಿಗೂ ಗೊತ್ತು ಅದು ನಿಮ್ಗೂ ಗೊತ್ತು.. ದಯವಿಟ್ಟು ಇನ್ನೊಬ್ರ ಬಗ್ಗೆ ಮಾತಾಡ್ಬೇಕಾದ್ರೆ ಯೋಚಿಸಿ ಮಾತಾಡಿ ದರ್ಶನ್ ಅವರೇ… Thank you for your kind words. ದೇವ್ರು ನಿಮಗೆ ಒಳ್ಳೇದ್ ಮಾಡ್ಲಿ.

ಹೀಗಂತ ಪ್ರೇಮ್ ಬರೆದುಕೊಂಡು ದರ್ಶನ್ ಅವರಿಗೆ ನೇರ ಉತ್ತರ ಕೊಟ್ಟಿದ್ದಾರೆ. ಅವರ ಈ ಮಾತುಗಳಿಗೆ ಸಾಕಷ್ಟು ಪರ ವಿರೋಧ ಮಾತುಗಳು ಕೇಳಿಬರುತ್ತಿವೆ. ಒದು ಮುಂದೆ ಎಲ್ಲಿಗೆ ಹೋಗಿ ನಿಲ್ಲುತ್ತೋ ಕಾದು ನೋಡಬೇಕು.

Categories
ಸಿನಿ ಸುದ್ದಿ

ರಾಬರ್ಟ್ ಪ್ರೊಡ್ಯೂಸರ್ ಮಾತು ಕೇಳಿ ಬಿರಿಯಾನಿ ಸವಿದವರು ಈ‌ ಸುದ್ದಿನಾ ನೋಡ್ಲೆಬೇಕು !?

  • ವಿಶಾಲಾಕ್ಷಿ

ದೊಡ್ಮನೆ ಆಸ್ತಿಯ ಬಗ್ಗೆ ನಿರ್ಮಾಪಕ ಉಮಾಪತಿಯವರು ಮಾಹಿತಿ ಹೊರ ಹಾಕಿದ್ದೇ ತಡ ಕೆಲವರಿಗೆ ಸುಕ್ಕಾ ಹೊಡೆದಷ್ಟು, ಹೈದ್ರಬಾದ್ ಬಿರಿಯಾನಿ ತಿಂದಷ್ಟು ಖುಷಿಯಾಯ್ತು.
ನೋಡ ನೋಡ ಎನ್ನುತ್ತಲೇ
ಕೆಲವರು ಒಳಗೊಳಗೆ ಖುಷಿಪಟ್ಟರು. ಹತ್ತಿಕೊಂಡ್ತು ನೋಡು ಬೆಂಕಿ ಎನ್ನುತ್ತಾ ಸಿಗರೇಟ್ ಹಚ್ಚಿಕೊಂಡು ಲಂಗ್ಸ್ ನ‌ ಬೆಚ್ಚಗೆ ಮಾಡಿಕೊಳ್ಳೋದ್ರಲ್ಲಿ ಕೆಲವರು ಬ್ಯುಸಿಯಾದರು. ಎನಿ ಅಪ್ ಡೇಟ್ ಅಂತ ಮಾಧ್ಯಮ ಮಿತ್ರರಿಗೆ‌ ಕೆಲವರು‌ ಕಾಲ್ ಮಾಡಿದರು. ಇನ್ನೂ ಕೆಲವರು ಪ್ರತಿ ಚಾನೆಲ್ ನ ಚೇಂಜ್ ಮಾಡಿಕೊಂಡು ಡೀಟೈಲ್ಸ್ ಪಡೆದುಕೊಂಡರು. ಆದರೆ, ಅವರಿಗೆ ಯಾರೂ ಗೊತ್ತಿರಲಿಲ್ಲ ಹೀರೋ ದರ್ಶನ್ ಸಂಜೆ ಪ್ರೆಸ್ಮೀಟ್ ಮಾಡ್ತಾರೆ, ಅಸಲಿ ಸತ್ಯದ ಬಾಂಬ್ ಸ್ಪೋಟಿಸ್ತಾರೆ ಅಂತ.

ನಾನು ದೊಡ್ಮನೆ ಪ್ರಾಪರ್ಟಿ ಕೊಡ್ತೀರಾ ಅಂತ ಕೇಳಿಲ್ಲ ಕೊಡುವ ಐಡಿಯಾ ಇದೆಯಾ ಅಂತ ಕೇಳಿದ್ದೀನಿ. ಅಷ್ಟಕ್ಕೂ ದೊಡ್ಮನೆ ಪ್ರಾಪರ್ಟಿ ಬಗ್ಗೆ ನನಗೆ ಗೊತ್ತಿರಲಿಲ್ಲ. ನಿರ್ಮಾಪಕ ಉಮಾಪತಿಯವರೇ ನನ್ನ ಬಳಿ ಬಂದು ಕನ್ನಿಂಗ್ ಹ್ಯಾಮ್ ರೋಡ್ ನಲ್ಲಿ‌ರುವ
ಪುನೀತ್ ರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಅವರಿಗೆ ಸೇರಿದಂತಹ ಪ್ರಾಪರ್ಟಿಯನ್ನ ಖರೀದಿ ಮಾಡಿದ್ದೇನೆ ಸರ್ ಅಂತ ಹೇಳಿದರು. ಒಳ್ಳೆಯದಾಗಲಿ ಅಂದೆ ವಿಷ್ ಮಾಡಿದ್ದೆ

ಕೇಸ್ ಕೋರ್ಟ್ ನಲ್ಲಿದೆ ಸತ್ಯ ಹೊರ ಬರಲಿ ಅಂತ ದಚ್ಚು ಸುಮ್ನೆ ಇದ್ದರೆ ಬಜಾರ್ ನಲ್ಲಿ ಮ್ಯಾಟರ್ ಬೇರೆನೇ ಓಡುತ್ತಿತ್ತು. ದೊಡ್ಮನೆಯ ಆಸ್ತಿಗೆ ದಚ್ಚು ಕಣ್ಣುಹಾಕಿದ್ದಾರೆ ಅದನ್ನು ಕೊನೆಗೆ ದಕ್ಕಿಸಿಕೊಳ್ಳೋದಕ್ಕೆ ಆಗಲಿಲ್ಲ ಹಾಗೂ ನಿರ್ಮಾಪಕ ಉಮಾಪತಿಯವರು ಕೊಡಲಿಲ್ಲ ಎನ್ನುವ ಕಾರಣಕ್ಕೆ ಉಮಾಪತಿಯವರ ಮೇಲೆ ದರ್ಶನ್ ಜಿದ್ದು ಸಾಧಿಸ್ತಿದ್ದಾರೆ ಹಾಗೇ ಹೀಗೆ ಕಾಗೇ ಗೂಬೆ ಅಂತೆಲ್ಲಾ ಮಾತನಾಡೋದಕ್ಕೆ ಶುರುಮಾಡಿದರು. ಇದನ್ನೆಲ್ಲಾ ನೋಡಿಕೊಂಡು ಸುಮ್ಮನೇ ಇರೋದು ಸರಿಯಲ್ಲ ಇದಕ್ಕೊಂದು ಕ್ಯಾರಿಟಿ‌ ಕೊಡೋಣ ಅಂತ ಮೈಸೂರಿನ‌ ಫಾರ್ಮ್ ಹೌಸ್ ನಲ್ಲಿ ದರ್ಶನ್ ಸುದ್ದಿಗೋಷ್ಟಿ ನಡೆಸಿದರು.


ದರ್ಶನ್ ಏನ್ ಹೇಳಿದರು ಅನ್ನೋದಕ್ಕೂ ಮೊದಲು ಉಮಾಪತಿ ಏನ್ ಹೇಳಿದರು ನೋಡಿ

ಪ್ರಾಪರ್ಟಿ ವಿಚಾರವಾಗಿ ದರ್ಶನ್ ಸಾರ್ ಹಾಗೂ ನನ್ನ ನಡುವೆ ಭಿನ್ನಾಭಿಪ್ರಾಯ ಬಂದಿಲ್ಲ ಆದರೆ ದೊಡ್ಮನೆ ಆಸ್ತಿಯನ್ನ ದರ್ಶನ್ ಕೇಳಿದ್ದರು. ದೊಡ್ಮನೆ ಆಸ್ತಿಯನ್ನ ಮಾರಾಟ ಮಾಡುವುದು ನನಗೆ ಶೋಭೆ ತರುವಂತಹದ್ದು ಅಲ್ಲವೆಂದು ನಿರ್ಧರಿಸಿ ಡಿಬಾಸ್ ಗೆ ಕೊಡೋಕೆ ಆಗಲ್ಲ ಅಂತ ನೇರವಾಗಿ ಹೇಳಿದ್ದೆ ದೊಡ್ಮನೆ ಆಸ್ತಿ ಬದಲಾಗಿ ಬೇರೊಂದು ಪ್ರಾಪರ್ಟಿ‌ ಕೊಡ್ತೀನಿ ಅಂತಲೂ ಹೇಳಿದ್ದೇನೆ ಅಂತ ಮಾಧ್ಯಮದ ಮುಂದೆ ನಿರ್ಮಾಪಕ ಉಮಾಪತಿ ಹೇಳಿಕೊಂಡಿದ್ದರು‌.

ಇದಕ್ಕೆ ದರ್ಶನ್ ಪ್ರತಿಕ್ರಿಯೆ ನೀಡಿದ್ದು ನಾನು ದೊಡ್ಮನೆ ಪ್ರಾಪರ್ಟಿ ಕೊಡ್ತೀರಾ ಅಂತ ಕೇಳಿಲ್ಲ ಕೊಡುವ ಐಡಿಯಾ ಇದೆಯಾ ಅಂತ ಕೇಳಿದ್ದೀನಿ. ಅಷ್ಟಕ್ಕೂ ದೊಡ್ಮನೆ ಪ್ರಾಪರ್ಟಿ ಬಗ್ಗೆ ನನಗೆ ಗೊತ್ತಿರಲಿಲ್ಲ. ನಿರ್ಮಾಪಕ ಉಮಾಪತಿಯವರೇ ನನ್ನ ಬಳಿ ಬಂದು ಕನ್ನಿಂಗ್ ಹ್ಯಾಮ್ ರೋಡ್ ನಲ್ಲಿ‌ರುವ
ಪುನೀತ್ ರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಅವರಿಗೆ ಸೇರಿದಂತಹ ಪ್ರಾಪರ್ಟಿಯನ್ನ ಖರೀದಿ ಮಾಡಿದ್ದೇನೆ ಸರ್ ಅಂತ ಹೇಳಿದರು. ಒಳ್ಳೆಯದಾಗಲಿ ಅಂದೆ ವಿಷ್ ಮಾಡಿದ್ದೆ.

ಇದೇ ವೇಳೆ ನಿಮಗೇನಾದರೂ ಆ ಪ್ರಾಪರ್ಟಿನಾ ಮಾರುವ ಐಡಿಯಾ ಇದೆ ಅಂತ ಕೇಳಿದ್ದೆ ಅದಕ್ಕೆ ನಿಮಗೇನಾದರೂ ಬೇಕಾದರೆ ತಗೊಳಿ ಅಂದರು ಅದಕ್ಕೆ ನಾನು ನಿಮ್ಮ ಹತ್ತಿರ ನನ್ನ ಹಣ ಇದೆಯಲ್ಲ‌ ಅದರಲ್ಲಿ ಪ್ರಾಪರ್ಟಿದು ಕಟ್ ಮಾಡಿಕೊಂಡು ಬಾಕಿ ಹಣ ಕೊಡಿ ಅಂದೆ ಆಯ್ತು ಅಂತ ಒಪ್ಪಿಕೊಂಡರು. ಅಲ್ಲಿಂದ ಇಲ್ಲಿವರೆಗೆ ಆ ಪ್ರಾಪರ್ಟಿಯ ಬಾಡಿಗೆ ಹಣವನ್ನ ನನ್ನ ಕೈಗೆ ತಂದು ಕೊಡ್ತಿದ್ದಾರೆ. ಇದಕ್ಕೆ ಏನ್ ಹೇಳಬೇಕು ಸ್ವಾಮಿ ಅಷ್ಟಕ್ಕೂ ಉಮಾಪತಿಯವರು ಯಾಕೇ ಹೀಗೆ ಹೇಳಿಕೆ‌ ಕೊಡ್ತಿದ್ದಾರೋ ಗೊತ್ತಿಲ್ಲ ನೀವು ಹೋಗಿ ಮತ್ತೆ ಅವರನ್ನೇ ಕೇಳಿಕೊಳ್ಳಿ ಎಂದಿದ್ದಾರೆ. ಅಷ್ಟಕ್ಕೂ, ದಾಸ ನನ್ನ ಬ್ರದರ್ ಎನ್ನುವ ನಿರ್ಮಾಪಕ ಉಮಾಪತಿಯವರು ಅದ್ಯಾಕೇ ಈ ರೀತಿ ಹೇಳಿಕೆಗಳನ್ನು‌ ಕೊಡುತ್ತಿದ್ದಾರೋ ಆ ತಾಯಿ ಬನಶಂಕರಿ ದೇವಿಗೆ ಗೊತ್ತು.

Categories
ಸಿನಿ ಸುದ್ದಿ

ದರ್ಶನ್ ಮೇಲೆ ಇದೆಂತಾ ಅಪವಾದ- ಒಡೆಯನಿಗೆ ಕೊಟ್ಟು ಅಭ್ಯಾಸ, ಕಿತ್ಕೊಂಡಲ್ಲ – ಕಣ್ಣಿಡೋದು ಬೇರೆ , ಕೇಳಿ ಪಡೆಯೋದು ಬೇರೆ !

ನಾವು ಯಾರ ಪರನೂ ಅಲ್ಲ ಯಾರ ವಿರೋಧವೂ ಅಲ್ಲ’ ಯಾಕೀ ಮಾತು ಹೇಳ್ತಿದ್ದೀವಿ ಅನ್ನೋದು ಕಂಪ್ಲೀಟ್ ಸ್ಟೋರಿನಾ ಓದಿದ್ಮೇಲೆ ನಿಮಗೆ ಗೊತ್ತಾಗುತ್ತೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೇಲೆ ಒಂದಾದ್ಮೇಲೊಂದು ಆರೋಪಗಳು ಕೇಳಿ ಬರುತ್ತಲೇ ಇವೆ. ಅಸಲಿಯತ್ತು ಬಯಲಾಗುವ ಮುನ್ನವೇ ಬಣ್ಣಕಟ್ಟಿ ಪುಂಕಾನುಪುಂಕವಾಗಿ ಪುಂಗುವ ಕಾರ್ಯಕ್ಕೆ ಚಾಲನೆ ಕೊಟ್ಟಿದ್ದಾರೆ. ಯಾವುದೋ ವಿಷ್ಯವನ್ನು ತೆಗೆದುಕೊಂಡು ಇನ್ಯಾವುದಕ್ಕೋ ಲಿಂಕ್ ಮಾಡಿ ಸ್ಯಾಂಡಲ್‌ವುಡ್ ಚಕ್ರವರ್ತಿಯನ್ನು ತೇಜೋವಧೆ ಮಾಡುವಂತಹ ಕೆಲಸ ನಡೆಯುತ್ತಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

ಪ್ರಿನ್ಸ್ ಹೋಟೆಲ್‌ನ ಸಪ್ಲೈಯರ್ ಮೇಲೆ ಸಾರಥಿ ಹಾಗೂ ಅವರ ಸ್ನೇಹಿತರು ಹಲ್ಲೆ ನಡೆಸಿದ್ದಾರೆನ್ನುವ ಆರೋಪದಲ್ಲಿ ಹುರುಳಿದಿಯೋ ಇಲ್ಲವೋ ಗೊತ್ತಿಲ್ಲ. ಸದ್ಯಕ್ಕೆ ಪ್ರಕರಣ ತನಿಖಾ ಹಂತದಲ್ಲಿದೆ. ಅಷ್ಟಕ್ಕೂ, `ಸತ್ಯಾನಾ ದಫನ್ ಮಾಡುವ ಖಫನ್ನಾ’ ಯಾರೂ ಇನ್ನೂ ಕಂಡುಹಿಡಿದಿಲ್ಲ ಹೀಗಾಗಿ ಸತ್ಯದ ಕೊರಳಿಗೆ ಕುಣಿಕೆ ಬಿಗಿದರೂ ಅದೂ ನುಸುಳಾಡಿಕೊಂಡು ಹೊರಬರಲೆಬೇಕು ಹೊರಬರುತ್ತೆ ಬಿಡಿ. ಆದರೆ ದಾಸನ ಮೇಲೆ ಇಲ್ಲಸಲ್ಲದ ಆರೋಪ ಹೊರಿಸುತ್ತಾ, ಅಖಾಡದಲ್ಲಿ ಗೊಂದಲ ಸೃಷ್ಟಿಸುತ್ತಾ, ವಿವಾದ ಎಬ್ಬಿಸುವ ಘಟನೆಗಳನ್ನ ಡಿಬಾಸ್ ಭಕ್ತರ ಕೈಯಲ್ಲಿ ನೋಡೋದಕ್ಕೆ ಆಗ್ತಿಲ್ಲ ಹೀಗಾಗಿ ಭಕ್ತಬಳಗ ಕೆಂಡಾಮಂಡಲಗೊಂಡಿದೆ.

ಶನಿವಾರ ಬೆಳಗ್ಗೆಯಿಂದ ದೊಡ್ಮನೆ ಆಸ್ತಿ ಮೇಲೆ ದರ್ಶನ್ ಕಣ್ಣಿಟ್ಟಿದ್ದರಂತೆ ಎಂಬುದೇ ದೊಡ್ಡ ಚರ್ಚೆ. ಒಡಹುಟ್ಟಿದವರಿಗಿಂತ ಒಂದು ಕೈ ಮೇಲಾಗಿದ್ದ ಸಾರಥಿ ಹಾಗೂ ಉಮಾಪತಿ ನಡುವೆ ಮನಸ್ಥಾಪ ಮೂಡೋದಕ್ಕೆ, ಬಿರುಕು ಕಾಣಿಸಿಕೊಳ್ಳೋದಕ್ಕೆ, ಇಬ್ಬರು ಸ್ಟೇಷನ್ ಮೆಟ್ಟಿಲೇರೋದಕ್ಕೆ, ೨೫ ಕೋಟಿ ವಂಚನೆ ಪ್ರಕರಣ ಬೆಳಕಿಗೆ ಬರುವುದಕ್ಕೆ, ದೋಖಾ ಪ್ರಕರಣದಲ್ಲಿ ಒಂದು ವೇಳೆ ಉಮಾಪತಿಯವರ ಕೈವಾಡ ಇದೆ ಅಂತಾದರೆ ನಾನು ಅವರನ್ನೂ ಬಿಡೋದಿಲ್ಲ ಅಂತ ದಾಸ ಹೇಳಿದ್ದಕ್ಕೆ, ಸ್ನೇಹಿತರ ಜೊತೆ ಕುಳಿತು ಮೈಸೂರಿನಲ್ಲಿ ಪ್ರೆಸ್ಮೀಟ್ ಮಾಡಿದ್ದಕ್ಕೆ, ಇತ್ತ ಉಮಾಪತಿ ನಾನು ಬಾಯ್ಬಿಟ್ಟು ಆ ಮೂರು ವಿಷ್ಯ ಹೇಳಿದರೆ ಮಂಡ್ಯಗಿಂತ ಜಾಸ್ತಿ ವೈಬ್ರೇಷನ್ ಆಗುತ್ತೆ ಅಂತ ಹೇಳಿದ್ದಕ್ಕೆ, ಹೀಗೆ ಎಲ್ಲದಕ್ಕೂ ದೊಡ್ಮನೆ ಆಸ್ತಿ ಕೈತಪ್ಪಿರುವುದೇ ಎನ್ನುವುದು ಚರ್ಚೆಯಲ್ಲಿರುವ ವಿಷ್ಯ. ಆದರೆ, ಸತ್ಯಾಸತ್ಯತೆಯನ್ನು ಪರಾಮರ್ಶಿಸುವ ಮೊದಲೇ ಅಂತಿಮ ತೀರ್ಮಾನಕ್ಕೆ ಬರುವುದು ಅಕ್ಷಮ್ಯ ಅಪರಾದ ಅಲ್ಲದೇ ಮತ್ತೇನು ಅಲ್ಲ ಬಿಡಿ.

ದಾಸನಿಗೆ ೨೫ ಕೋಟಿ ದೋಖಾ ಪ್ರಕರಣ ಬೆಳಕಿಗೆ ಬಂದಾಗ, ದರ್ಶನ್‌ಗೆ ಅರುಣಕುಮಾರಿಯವರನ್ನು ಪರಿಚಯ ಮಾಡಿದ್ದು ನಿರ್ಮಾಪಕ ಉಮಾಪತಿಯವರು ಎನ್ನುವ ಸುದ್ದಿ ಹೊರಬಿದ್ದಾಗ ನೇರವಾಗಿ ಉಮಾಪತಿಯವರ ಕಡೆ ಎಲ್ಲರೂ ಬೊಟ್ಟುಮಾಡಿ ತೋರಿಸಿದ್ರು. ಚಕ್ರವರ್ತಿಯ ಆಸ್ತಿ ಹೊಡೆಯೋಕೆ ಅಥವಾ ದಚ್ಚುನಾ ಮೈಸೂರು ಸ್ನೇಹಿತರಿಂದ ದೂರ ಇಡೋದಕ್ಕೆ ನಿರ್ಮಾಪಕ ಉಮಾಪತಿಯವರು ಈ ರೀತಿ ಪ್ಲ್ಯಾನ್ ಮಾಡಿರ‍್ಬೋದು ಅಂತ ಎಲ್ಲರೂ ಮಾತನಾಡಿಕೊಂಡರು. ಇದೀಗ, ಉಮಾಪತಿಯವರು ಬಿಚ್ಚಿಟ್ಟ ದೊಡ್ಮನೆ ಆಸ್ತಿ ವಿಷ್ಯ ಕೇಳಿದ್ಮೇಲೆ ಬಹುತೇಕರು ಮಾತನಾಡ್ತಿರುವುದು ಹಾಗೂ ಬಜಾರ್‌ನಲ್ಲಿ ಚರ್ಚೆಯಾಗ್ತಿರೋದು ದೊಡ್ಮನೆ ಆಸ್ತಿ ತನ್ನ ಕೈ ಸೇರಲಿಲ್ಲ ಎನ್ನುವ ಕಾರಣಕ್ಕೆ ದಾಸದರ್ಶನ್ ರಾಬರ್ಟ್ ಪ್ರೊಡ್ಯೂಸರ್ ಮೇಲೆ ಹಗೆತನ ಸಾಧಿಸೋದಕ್ಕೆ ಹೊರಟರಾ? ತಮ್ಮನಂತಿದ್ದ ಉಮಾಪತಿ ವಿರುದ್ದ ದುಷ್ಮನಿಗೆ ನಿಂತ್ರಾ? ಹೀಗೆ ಏನೇನೋ ಚರ್ಚೆಗಳು ಆಗ್ತಿವೆ.

ಅಂದ್ಹಾಗೇ, ರಾಬರ್ಟ್ ಪ್ರೊಡ್ಯೂಸರ್ ಉಮಾಪತಿಯವರು ದೊಡ್ಮನೆ ಆಸ್ತಿ ವಿಷಯವನ್ನು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಹಾಗೂ ರಾಘವೇಂದ್ರ ರಾಜ್‌ಕುಮಾರ್ ಅವರ ಹೆಸರಲ್ಲಿದ್ದ ಪ್ರಾಪರ್ಟಿಯನ್ನ ನಾನು ಕೊಂಡುಕೊಂಡಿದ್ದೆ. ಈ ವಿಚಾರ ತಿಳಿದ ದರ್ಶನ್ ಅವರು ಆ ಪ್ರಾಪರ್ಟಿಯನ್ನು ತನಗೆ ಕೊಡಿ ಅಂತ ಕೇಳಿದರು. ಆದರೆ, ದೊಡ್ಮನೆ ಆಸ್ತಿಯನ್ನು ಬಿಟ್ಟುಕೊಡುವುದಕ್ಕೆ ನನಗೆ ಮನಸ್ಸು ಒಪ್ಪಲಿಲ್ಲ. ಅಷ್ಟಕ್ಕೂ ಒಬ್ಬ ಸ್ಟಾರ್ ನಟರಿಂದ ಪ್ರಾಪರ್ಟಿಯನ್ನು ಖರೀದಿ ಮಾಡಿ ಮಗದೊಬ್ಬ ಸ್ಟಾರ್ ನಟರಿಗೆ ಮಾರಿಕೊಳ್ಳುವುದು ಶೋಭೆ ತರುವಂತಹ ಕೆಲಸ ಅಲ್ಲ. ಹೀಗಾಗಿ ನಾನು ಕೊಡುವುದಕ್ಕೆ ಆಗಲ್ಲ ಬಾಸ್ ಎಂದೇ ಇದಕ್ಕೆ ಅವರು ಹೋಗಲಿ ಬಿಡಿ ನಿರ್ಮಾಪಕರೇ ಅಂತ ಸುಮ್ಮನಾದರು. ಇದಾದ್ಮೇಲೆ ಮತ್ತೆ ಯಾವತ್ತೂ ಕೂಡ ಆಸ್ತಿ ಬಗ್ಗೆ ಡಿಬಾಸ್ ನನ್ನ ಹತ್ತಿರ ಚರ್ಚೆ ಮಾಡಿಲ್ಲ, ನಾನೇ ಅವರಿಗೆ ದೊಡ್ಮನೆ ಪ್ರಾಪರ್ಟಿಯ ಬದಲಿಗೆ ಮಗದೊಂದು ಪ್ರಾಪರ್ಟಿಯನ್ನು ಕೊಡುತ್ತೇನೆ ಅಂತ ಹೇಳಿದ್ದೇನೆ. ಹೀಗಂತ ಖುದ್ದು ಉಮಾಪತಿಯವರು ಹೇಳಿದ್ಮೇಲೂ ಕೂಡ ದೊಡ್ಮನೆಯ ಆಸ್ತಿ ತನಗೆ ದಕ್ಕಲಿಲ್ಲ ಎನ್ನುವ ಕಾರಣಕ್ಕೆ ಉಮಾಪತಿಯವರ ವಿರುದ್ದ ಜಿದ್ದು ಸಾಧಿಸುತ್ತಿದ್ದಾರೆ ಅಂತೆಲ್ಲಾ ಕೆಲವರು ಸುದ್ದಿಮಾಡುತ್ತಿದ್ದಾರೆ.

ಅಷ್ಟಕ್ಕೂ, ದಾಸದರ್ಶನ್ ಸಣ್ಣಮನಸ್ಸಿನ ವ್ಯಕ್ತಿಯೂ ಅಲ್ಲ ಅಂತಹ ವ್ಯಕ್ತಿತ್ವವೂ ಅವರದ್ದಲ್ಲ. ಆಸ್ತಿ ಬೇಕು ಅಂದರೆ ಭೂಮಿ ಮೇಲೆ ಅಲ್ಲ ಆಕಾಶದಲ್ಲೂ ಖರೀದಿ ಮಾಡುವ ತಾಕತ್ತೂ ಜಗ್ಗುದಾದನಿಗಿದೆ. ಬೆಲೆಕಟ್ಟಲಾಗದ ಕೋಟ್ಯಾಂತರ ಅಭಿಮಾನಿಗಳ ಹೃದಯದಲ್ಲಿ ಜಾಗ ಸಂಪಾದನೆ ಮಾಡಿರುವ ದಾಸ ಮಗದೊಬ್ಬ ಸ್ಟಾರ್ ನಟರ ಆಸ್ತಿಯ ಮೇಲೆ ಕಣ್ಣಾಕೋದು ಇರಲಿ ಬೇರೆ ಸ್ಟಾರ್‌ನಟರ ಫ್ಯಾನ್ಸ್ ಗಳನ್ನೂ ತನ್ನತ್ತ ಸೆಳಿಬೇಕು ಎನ್ನುವ ಕುತಂತ್ರವನ್ನ ಮಾಡೋದಿಲ್ಲ. ಹೀಗಿರುವಾಗ, ದೊಡ್ಮನೆ ಆಸ್ತಿ ತನಗೆ ದಕ್ಕಲಿಲ್ಲ ಎನ್ನುವ ಕಾರಣಕ್ಕೆ ಉಮಾಪತಿಯವರ ವಿರುದ್ದ ಜಿದ್ದು ಸಾಧಿಸ್ತಾರೆ, ಅವರ ವಿರುದ್ದ ಸಂಚು ರೂಪಿಸ್ತಾರೆ, ಅವರ ವಿರುದ್ದ ಇಲ್ಲಸಲ್ಲದ ಆರೋಪ ಮಾಡ್ತಾರೆ ಅಂತೆಲ್ಲಾ ಮಾತನಾಡಿಕೊಳ್ಳುವುದು ತಪ್ಪು.

ಒಂದ್ವೇಳೆ ದಾಸ ದೊಡ್ಮನೆಯ ಆಸ್ತಿ ಮೇಲೆ ಆಸೆಪಟ್ಟಿದ್ದು ನಿಜಾನೇ ಅಂತಾನೇ ತಿಳಿದುಕೊಳ್ಳೋಣ ಅದರಲ್ಲಿ ಏನ್ ತಪ್ಪು. ಅಷ್ಟಕ್ಕೂ, ಆಸ್ತಿ ಮೇಲೆ ಕಣ್ಣಿಡುವುದಕ್ಕೂ, ಆಸೆಪಟ್ಟು ಕೇಳಿ ಪಡೆಯುವುದಕ್ಕೂಅಜಗಜಾಂತರ ವ್ಯತ್ಯಾಸವಿದೆ. ಹೀಗಿರುವಾಗ ದರ್ಶನ್ ಆಸೆಪಟ್ಟು ನಿರ್ಮಾಪಕ ಉಮಾಪತಿಯವರ ಬಳಿ ಕೇಳಿದ್ದರಲ್ಲಿ ತಪ್ಪೇನಿದೆ. ಅಷ್ಟಕ್ಕೂ, ಅವರೇನು ಲಪಟಾಯಿಸೋಕೆ ನೋಡಿಲ್ಲವಲ್ಲ ದುಡ್ಡು ಕೊಟ್ಟು ಖರೀದಿ ಮಾಡೋದಕ್ಕೆ ಕೇಳಿದ್ದಾರೆ ಅವರು ಕೊಡಲ್ಲ ಅಂದಿದ್ದಾರೆ ಅಲ್ಲಿಗೆ ಮುಗೀತು. ಅದನ್ನು ಬಿಟ್ಟು ದೊಡ್ಮನೆಯವರನ್ನು ಹಾಗೂ ತೂಗುದೀಪ್ ಕುಟುಂಬವನ್ನು ಎತ್ತಿಕಟ್ಟುವ ಒಳಸಂಚು ರೂಪಿಸೋದ್ಯಾಕೆ.ಹೊಗೆಯಾಡದಿದ್ದರೂ ಕೂಡ ಕಡ್ಡಿಗೀರಿ ಚಳಿಕಾಯಿಸಿಕೊಳ್ಳುವ ಪ್ರಯತ್ನ ಮಾಡ್ತಿರೋದ್ಯಾಕೆ ಒಂದು ಗೊತ್ತಾಗ್ತಿಲ್ಲ.

ಎನಿವೇ, ಬೆಂಕಿಹಚ್ಚಿ ಮಜಾ ಉಡಾಯಿಸೋರ್ ಆಟ ಹೆಚ್ಚು ದಿನ ನಡೆಯಲ್ಲ ಒಂದಲ್ಲ ಒಂದು ದಿನ ತಾವೇ ಹೆಚ್ಚಿದ ಬೆಂಕಿಯ ಬಾಣಲೆಗೆ ಹಚ್ಚಿದವರೇ ಬೀಳಬೇಕು ಅಲ್ಲಿವರೆಗೂ ಕಾಯದೇ ಬೇರೆ ದಾರಿಯಿಲ್ಲ. ಆದರೆ ಒಂದಂತೂ ಸತ್ಯ ನೂರಾರು ಕೋಟಿಗೆ ಒಡೆಯನಾಗಿರುವ, ವರ್ಷಕ್ಕೆ ೩ ಕೋಟಿಯಂತೆ ಬಡಬಗ್ಗರಿಗೆ ದಾನ ಮಾಡುವ ಯಜಮಾನ ದೊಡ್ಮನೆ ಆಸ್ತಿ ಲಪಟಾಯಿಸಿಕೊಳ್ಳಬೇಕು ಎನ್ನುವ ಹಪಾಹಪಿ ಇರೋದಿಲ್ಲ ಬದಲಾಗಿ ಒಬ್ಬ ಅಭಿಮಾನಿಯಾಗಿ ಅಣ್ಣಾವ್ರ ಮೇಲಿನ ಅಭಿಮಾನ ಹಾಗೂ ದೊಡ್ಮನೆಯ ಸ್ಟಾರ್‌ಗಳ ಮೇಲಿರುವ ಪ್ರೀತಿಗೆ ಕಾಣಿಕೆಯಾಗಿ ಆ ಆಸ್ತಿಯನ್ನು ಖರೀದಿಸಿ ಜೋಪಾನ ಮಾಡ್ಬೇಕು ಎನ್ನುವ ಬಯಕೆ ಇದ್ದಿರಬಹುದು. ಅದನ್ನ ಅಪಾರ್ಥಮಾಡಿಕೊಂಡು ಇಲ್ಲಸಲ್ಲದ ಬಣ್ಣಕಟ್ಟಿ ಸಾರಥಿಯ ತೇಜೋವಧೆ ಮಾಡುವ ಕಾಯಕ ಒಳ್ಳೆಯದಲ್ಲ ಬಿಡಿ

Categories
ಸಿನಿ ಸುದ್ದಿ

ಕನ್ನಡದಲ್ಲಿ ವಾಯ್ಸ್‌ ಡಬ್‌ ಮಾಡ್ತಾ‌ರಂತೆ ಶ್ರೀಲಂಕಾ ಚೆಲುವೆ! ಜಾಕ್ವೆಲಿನ್‌ ಡ್ಯಾನ್ಸ್‌ ನೋಡಿ ಸುದೀಪ್‌ಗೂ ಸ್ಟೆಪ್‌ ಹಾಕುವ ಮನಸ್ಸಾಯ್ತಂತೆ

ಇತ್ತೀಚೆಗೆ ಸುದೀಪ್‌ ನಟನೆಯ “ವಿಕ್ರಾಂತ್ ರೋಣ” ಚಿತ್ರದ ಸಾಂಗ್‌ ಶೂಟಿಂಗ್‌ಗೆ ಎಂಟ್ರಿಯಾಗಿದ್ದ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್, ಇದೀಗ ಚಿತ್ರೀಕರಣ ಮುಗಿಸಿ ಹೊರಟಿದ್ದಾರೆ. ಇದರ ಜೊತೆಯಲ್ಲೇ ನಿರ್ದೇಶಕ ಅನೂಪ್‌ ಭಂಡಾರಿ ಅವರು, ಜಾಕ್ವೆಲಿನ್‌ ಫರ್ನಾಂಡೀಸ್‌ ಕುರಿತು ಇನ್ನೊಂದು ಸುದ್ದಿ ಹೊರಹಾಕಿದ್ದಾರೆ.

ಹೌದು, ಜಾಕ್ವೆಲಿನ್‌ ಫರ್ನಾಂಡೀಸ್‌ ಅವರು, ಕೇವಲ ಡ್ಯಾನ್ಸ್‌ ಮಾತ್ರವಲ್ಲ, ಆಕ್ಟಿಂಗ್‌ ಕೂಡ ಮಾಡಿದ್ದಾರೆ. ಜಾಕ್ವೆಲಿನ್ ಈ ಚಿತ್ರದಲ್ಲಿ ಹಾಡಲ್ಲಿ ಡ್ಯಾನ್ಸ್‌ ಮಾತ್ರವಲ್ಲ, ನಟನೆ ಕೂಡ ಮಾಡಿದ್ದಾರೆ ಎಂಬ ಸುದ್ದಿ ಹೊರಹಾಕಿದ್ದಾರೆ. ಜಾಕ್ವೆಲಿನ್ ಸುದೀಪ್ ಸಿನಿಮಾದಲ್ಲಿ ಪಾತ್ರವೊಂದರಲ್ಲಿ ಬಣ್ಣ ಹಚ್ಚಿದ್ದು, ಡ್ಯಾನ್ಸ್ ಮಾಡುವುದರ ಜೊತೆಗೆ ಕೆಲವು ಸೀನ್‌ಗಳಲ್ಲಿ ನಟಿಸಿದ್ದಾರಂತೆ.


ಇನ್ನು, ಈ ಚಿತ್ರದ ಮತ್ತೊಂದು ಸುದ್ದಿ ಅಂದೆ, ಇದು ಪ್ಯಾನ್ ಇಂಡಿಯಾ ಸಿನಿಮಾ. ಜಾಕ್ವೆಲಿನ್ ಫರ್ನಾಂಡೀಸ್ ಅವರು ಕನ್ನಡದಲ್ಲೇ ಡಬ್ಬಿಂಗ್ ಮಾಡಲಿದ್ದಾರೆ ಎಂಬ ಸುದ್ದಿಯೂ ಇದೆ. ಅವರು ಕನ್ನಡ ಕಲಿತು ವಾಯ್ಸ್ ಡಬ್ ಮಾಡಲು ನಿರ್ಧರಿಸಿದ್ದಾರೆ. ಇದು ನಿಜಕ್ಕೂ ಸ್ವಾಗತರ್ಹ ಮತ್ತು ಖುಷಿಯ ವಿಚಾರ. ಈ ಕುರಿತಂತೆ ನಿರ್ದೇಶಕ ಅನೂಪ್‌ ಭಂಡಾರಿ ಅವರು, “ನಿಮ್ಮೊಂದಿಗೆ ಕೆಲಸ ಮಾಡಿದ್ದು ನಿಜಕ್ಕೂ ಖುಷಿ ತಂದಿದೆ.

ಶೀಘ್ರದಲ್ಲಿ ನಿಮ್ಮ ಪಾತ್ರದ ಹೆಸರು ಮತ್ತು ಫಸ್ಟ್ ಲುಕ್ ಬಿಡುಗಡೆ ಮಾಡುತ್ತೇವೆ. ಡಬ್ಬಿಂಗ್ ವೇಳೆ ಮತ್ತೊಮ್ಮೆ ಸಿಗೋಣ” ಎಂದು ಟ್ವೀಟ್‌ ಮಾಡಿದ್ದಾರೆ. ಅತ್ತ, ಜಾಕ್ವೆಲಿನ್‌ಗೆ ಸುದೀಪ್‌ ಕೂಡ ಥ್ಯಾಂಕ್ಸ್ ಹೇಳಿದ್ದಾರೆ. ಅವರೂ ಟ್ವೀಟ್ ಮಾಡಿದ್ದು, ”ನಮ್ಮ ಸಿನಿಮಾದ ಹಾಡಿಗೆ ಜೋಶ್ ತುಂಬಿದ್ದಕ್ಕೆ ಧನ್ಯವಾದ ಜಾಕ್ವೆಲಿನ್ ಫರ್ನಾಂಡೀಸ್. ನಿಮ್ಮ ನೃತ್ಯ ನನ್ನನ್ನೂ ಒಂದೆರಡು ಸ್ಟೆಪ್ ಹಾಕುವಂತೆ ಪ್ರೇರೇಪಿಸಿತು. ನಿಮಗೆ ಶುಭವಾಗಲಿ” ಎಂದಿದ್ದಾರೆ.

Categories
ಸಿನಿ ಸುದ್ದಿ

ಇಲ್ಲಿ ಯಾರು ಹೀರೋ ಮಾಡಲ್ಲ ನಮಗೆ ನಾವೇ ಹೀರೋ ಆಗ್ಬೇಕ್ ! ಹೀರೋ ಆಗೋಕೆ ನವೀನ ಸಜ್ಜು!!

ಇಲ್ಲಿ ಯಾರು ಹೀರೋ ಮಾಡಲ್ಲ ನಮಗೆ ನಾವೇ ಹೀರೋ ಆಗ್ಬೇಕ್… ಇದು ರಾಕಿಂಗ್ ಸ್ಟಾರ್ ಯಶ್ ಅವರ ಎವರ್‌ಗ್ರೀನ್ ಡೈಲಾಗ್. ಡೈಲಾಗ್ ಹೊಡೆದಂತೆ ಗಂಧದ ಗುಡಿಯಲ್ಲಿ ನಾಯಕನ ಪಟ್ಟಕ್ಕೇರಿದರು. ತಮ್ಮ ವಿಶಿಷ್ಟ ಹಾಗೂ ವಿಭಿನ್ನ ಮ್ಯಾನರಿಸಂನಿಂದ ಸೂಪರ್‌ಸ್ಟಾರ್ ಎನಿಸಿಕೊಂಡರು “ಕೆಜಿಎಫ್” ಮೂಲಕ ನ್ಯಾಷನಲ್ ಸ್ಟಾರ್ ಆದರು. ಇದೀಗ “ಕೆಜಿಎಫ್ ಚಾಪ್ಟರ್-2ʼ ಮೂಲಕ ಇಂಟರ್‌ನ್ಯಾಷನಲ್ ಸ್ಟಾರ್ ಆಗೋದಕ್ಕೆ ಹೊರಟಿದ್ದಾರೆ. ಅಷ್ಟಕ್ಕೂ, ಅಣ್ತಮ್ಮನ ಎವರ್‌ಗ್ರೀನ್ ಡೈಲಾಗ್‌ನ ನೆನಪು ಮಾಡಿಕೊಳ್ಳೋದಕ್ಕೆ ಕಾರಣ ಗಾಯಕ ನವೀನ್ ಸಜ್ಜು .

ಸ್ವರಮಾಧುರ್ಯದಿಂದಲೇ ಬ್ರ್ಯಾಂಡ್ ಆದವರು ನವೀನ್ ಸಜ್ಜು!

ನವೀನ್ ಸಜ್ಜು ಸ್ಯಾಂಡಲ್‌ವುಡ್‌ನ ಸಿಂಗರ್ ಕಮ್ ಮ್ಯೂಸಿಕ್ ಕಂಪೋಸರ್. ತಮ್ಮ ವಿಶಿಷ್ಟ ಹಾಗೂ ವಿಭಿನ್ನ ಕಂಠಸಿರಿಯಿಂದಲೇ ಸ್ವಂತ ಬ್ರ್ಯಾಂಡ್ ಆಗಿರೋ ನವೀನ್ ಸಜ್ಜು, ಈಗ ನಮಗೆ ನಾವೇ ಹೀರೋ ಆಗ್ಬೇಕ್ ಅಂತಿದ್ದಾರೆ. ನವೀನ್ ಹೀರೋ ಆಗ್ತಿದ್ದಾರೆ ಅನ್ನೋ ಸುದ್ದಿ ಇವತ್ತು ನಿನ್ನೆಯದಲ್ಲ. “ಬಿಗ್‌ಬಾಸ್” ರನ್ನರ್ ಅಪ್ ಪಟ್ಟಕ್ಕೇರಿದಾಗಿನಿಂದಲೂ ಮುಖಕ್ಕೆ ಬಣ್ಣ ಹಚ್ಚುತ್ತಾರೆ, ಹೀರೋ ಆಗಿ ಗಾಂಧಿನಗರದಲ್ಲಿ ಕಟೌಟ್ ಹಾಕಿಸಿಕೊಳ್ತಾರೆ ಅನ್ನೋ ಸುದ್ದಿ ಇತ್ತು. ಆದ್ರೆ, ಎಲ್ಲಾ ಅಂದುಕೊಂಡಂತೆ ಆಗಲಿಲ್ಲ ಹೀಗಾಗಿ ಸಿಂಗಿಂಗ್ ಕರಿಯರ್‌ನ ಕಂಟಿನ್ಯೂ ಮಾಡಿದರು. ಈ ನಡುವೆ “ದುನಿಯಾ” ವಿಜಯ್ ತಮ್ಮ ಕನಕ' ಚಿತ್ರದಲ್ಲಿ ನವೀನ್‌ರನ್ನ ಸಂಗೀತ ನಿರ್ದೇಶಕನ ಪಟ್ಟಕ್ಕೇರಿಸಿದರು.

ಮ್ಯೂಸಿಕ್ ಕಂಪೋಸರ್ ಆಗಿ ನವೀನ್ ಸೈ ಎನಿಸಿಕೊಂಡರು. "ಎಣ್ಣೆ ನಮ್ದು ಊಟ ನಿಮ್ದು" ಹಾಡಿನ ಮೂಲಕ ಮ್ಯೂಸಿಕ್ ಲೋಕದಲ್ಲಿ ಬ್ರ್ಯಾಂಡ್ ಆದರು. ಕನಕ’ ನಂತರ “ದುನಿಯಾ” ವಿಜಯ್ ನಿರ್ದೇಶನದ ಸಲಗ' ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.ಸಂಜನ ಐ ಲವ್ ಯೂ ಸಂಜನ’ ಹಾಡಿಗೆ ಕ್ಯಾಚಿ ಟ್ಯೂನ್ ಹಾಕಿ ಕುಣಿಸಿದ್ದಾರೆ. ಈಗಾಗಲೇ ಆ ಸಾಂಗ್ ಬಜಾರ್‌ನಲ್ಲಿ ಸಖತ್ ಸೌಂಡ್ ಮಾಡ್ತಿದೆ. ವಿಜಯ್ ಹಾಗೂ ಸಂಜನಾ ಆನಂದ್ ಕಾಂಬಿನೇಷನ್ ಸಾಂಗ್ ಕಿಕ್ಕೇರಿಸ್ತಿದೆ. ಬಹದ್ದೂರ್ ಚೇತನ್ ಸಾಹಿತ್ಯವಿರುವ ಈ ಹಾಡು ಲವ್‌ಬರ್ಡ್ಸ್ ಹಾರ್ಟ್ನ ಮೆಲ್ಟ್ ಮಾಡ್ತಿದೆ.

ನವೀನ್ ಸಜ್ಜು ಈ ಹಾಡು ನಿಮ್ಮೆಲ್ಲರ ಹೃದಯ ತಟ್ಟುತ್ತೆ !

ಹೀಗೆ ಸಿಂಗರ್ ಆಗಿ ಮ್ಯೂಸಿಕ್ ಕಂಪೋಸರ್ ಆಗಿ ಹಲ್‌ಚಲ್ ಎಬ್ಬಿಸುತ್ತಿರುವ ನವೀನ್ ಸಜ್ಜು ಎಮೋಷನಲ್ ಹಾಡಿಗೆ ಧ್ವನಿಯಾಗಿ ಎಲ್ಲರ ಹಾರ್ಟ್ನ ಟಚ್ ಮಾಡಿದ್ದಾರೆ. “ಸೌದೆಯ ಮರೆಯಲ್ಲಿ ಸುಟ್ಟು ಕರುಕಾಗೋ ಜೀವಕ್ಕೆ.. ಬಯಕೆಗಳೆಷ್ಟೋ ಜೀವ ಕಂಡುಂಡ ಆಸೆಗಳೆಷ್ಟೋ…” ಲಿಂಗದೇವರ ಹಳೆಮನೆಯವರ ಸಾಹಿತ್ಯ ಜನಾರ್ಧನ್ ಜನ್ನಿಯವರ ಸಂಗೀತವಿರುವ ಈ ಹಾಡನ್ನು ನಾಟಕದಲ್ಲಿ ಬಳಕೆ ಮಾಡಿಕೊಳ್ಳಲಾಗಿದೆ. ಇದೀಗ ಈ ಹಾಡನ್ನ ತಮ್ಮದೇ ಶೈಲಿಯಲ್ಲಿ ನವೀನ್ ಹಾಡಿದ್ದಾರೆ.

ಮೆರವಣಿಗೆ ಹೊರಡುವ ಮೊದಲೇ ಮೂರ‍್ಮೂರು ಸಿನಿಮಾ !

ಇಷ್ಟೆಲ್ಲಾ ಹೇಳಿದ್ಮೇಲೆ `ಇಲ್ಲಿ ಯಾರು ಹೀರೋ ಮಾಡಲ್ಲ ನಮಗೆ ನಾವೇ ಹೀರೋ ಆಗ್ಬೇಕ್’ ಹೀಗಂತಿರೋ ನವೀನ್ ಸಜ್ಜು ಅವರ ನಯಾ ಕಥೆಯನ್ನ ನಿಮಗೆ ಹೇಳಲೆಬೇಕು. ಯಸ್, ಸಿಂಗರ್ ಕಮ್ ಮ್ಯೂಸಿಕ್ ಕಂಪೋಸರ್ ನವೀನ್ ಹೀರೋ ಆಗ್ತಿದ್ದಾರೆ. ನಾಯಕನಾಗಿ ಬೆಳ್ಳಿತೆರೆ ಮೇಲೆ ದಿಬ್ಬಣ ಹೊರಡುವುದಕ್ಕೆ ಮೊದಲೇ ನವೀನ್‌ಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಅರಸಿಕೊಂಡು ಬರುತ್ತಿವೆಯಂತೆ. ಮ್ಯಾನ್ಶನ್ ಹೌಸ್ ನವೀನ್ ಸಜ್ಜು ನಾಯಕರಾಗುತ್ತಿರುವ ಮೊದಲ ಚಿತ್ರ. ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರದ ನಿರ್ದೇಶಕ ಕುಮಾರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ.

ಆದಿಚುಂಚನಗಿರಿಯಲ್ಲಿ ಮುಹೂರ್ತ ನೆರವೇರಿದೆ. ಪ್ರಕೃತಿ ಪ್ರೇಮಿಯಾಗಿ ನವೀನ್ ಇಲ್ಲಿ ಕಾಣಿಸಿಕೊಳ್ತಾರೆ. ಚಿತ್ರದ ತಾರಾಬಳಗ ನಾಯಕಿ ಆಯ್ಕೆ ಇನ್ನಷ್ಟೇ ಹೊರ ಬೀಳಬೇಕಿದೆ.
“ಮ್ಯಾನ್ಶನ್ ಹೌಸ್” ಜೊತೆ ಇನ್ನೂ ಎರಡು ಚಿತ್ರಗಳು ನವೀನ್ ಕೈಯಲ್ಲಿವೆ. ನಟನೆ ಜೊತೆಗೆ ಸಂಗೀತ ನಿರ್ದೇಶನ ಹಾಗೂ ಗಾಯಕರಾಗಿಯೂ ನವೀನ್ ಕೆಲಸ ಮಾಡೋದಕ್ಕೆ ಸಿದ್ದರಾಗಿದ್ದಾರೆ. ಇಲ್ಲಿವರೆಗೂ ೨೦೦ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಕನಕ ಹಾಗೂ ಸಲಗ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಈಗ ನಾಯಕರಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡ್ತಿದ್ದಾರೆ. ಬೆಳ್ಳಿಪರದೆ ಮೇಲೆ ಸ್ವಂತ ಬ್ರ್ಯಾಂಡ್ ನವೀನ್ ಸಜ್ಜು ಅಬ್ಬರ ಆರ್ಭಟ ಹೇಗಿರುತ್ತೆ ? ವೇಯ್ಟ್ ಅಂಡ್ ಸೀ

Categories
ಸಿನಿ ಸುದ್ದಿ

ಸಂಚಾರಿ ವಿಜಯ್ ಹುಟ್ಟುಹಬ್ಬಕ್ಕೆ ‘ಲಂಕೆ’ ಪೋಸ್ಟರ್ ಬಿಡುಗಡೆ

ಜುಲೈ 17 ನಟ ಸಂಚಾರಿ ವಿಜಯ್ ಅವರ ಹುಟ್ಟುಹಬ್ಬ. ಲೂಸ್ ಮಾದ ಯೋಗೇಶ್ ನಾಯಕನಾಗಿ ನಟಿಸಿರುವ “ಲಂಕೆ” ಚಿತ್ರದ ಪ್ರಮುಖಪಾತ್ರದಲ್ಲಿ ಸಂಚಾರಿ ವಿಜಯ್ ನಟಿಸಿದ್ದಾರೆ. ವಿಜಯ್ ಅವರ ಹುಟ್ಟುಹಬ್ಬದ ನೆನಪಿಗಾಗಿ ಚಿತ್ರತಂಡ ಪೋಸ್ಟರ್ ಬಿಡುಗಡೆ ಮಾಡಿದೆ. ಇತ್ತೀಚೆಗೆ ಬಿಡುಗಡೆಯಾಗಿದ್ದ “ಲಂಕೆ” ಚಿತ್ರದ ಮೋಷನ್ ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.ಸರ್ಕಾರ ಚಿತ್ರಮಂದಿರಗಳ ಆರಂಭಕ್ಕೆ ಅನುಮತಿ ನೀಡಿದರೆ, ಸೆಪ್ಟೆಂಬರ್ ನಲ್ಲಿ “ಲಂಕೆ” ಚಿತ್ರ ತೆರೆಗೆ ಬರಲಿದೆ.

ಸಾಹಸ ಪ್ರಧಾನ ಈ ಚಿತ್ರವನ್ನು ರಾಮ್ ಪ್ರಸಾದ್ ಎಂ.ಡಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ರಾಮ್ ಪ್ರಾಸಾದ್ ಹಾಗೂ ಗುರುರಾಜ ದೇಸಾಯಿ ಸಂಭಾಷಣೆ ಬರೆದಿದ್ದಾರೆ.

ದಿ ಗ್ರೇಟ್ ಎಂಟರ್ ಟೈನರ್ ಲಾಂಛನದಲ್ಲಿ ಪಟೇಲ್ ಶ್ರೀನಿವಾಸ್(ನಾಗವಾರ) ಹಾಗೂ ಸುರೇಖ ರಾಮಪ್ರಸಾದ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ.ಕಾರ್ತಿಕ್ ಶರ್ಮಾ ಸಂಗೀತ ನೀಡಿರುವ ಈ ಚಿತ್ರದಲ್ಲಿ ನಾಲ್ಕು ಹಾಡುಗಳು ಹಾಗೂ ಎರಡು ಬಿಟ್ಸ್ ಗಳಿವೆ.

ರಮೇಶ್ ಬಾಬು ಛಾಯಾಗ್ರಹಣ, ಶಿವರಾಜ್ ಮೇಹು ಸಂಕಲನ, ರವಿವರ್ಮ, ಪಳನಿರಾಜ್, ಅಶೋಕ್ ಸಾಹಸ ನಿರ್ದೇಶನ ಹಾಗೂ ಧನಂಜಯ್, ಮೋಹನ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಲೂಸ್ ಮಾದ ಯೋಗೇಶ್ ಚಿತ್ರದ ನಾಯಕನಾಗಿ ಅಭಿನಯಿಸಿದ್ದು, ಇತ್ತೀಚೆಗೆ ನಿಧನರಾದ ಸಂಚಾರಿ ವಿಜಯ್ ಸಹ ಈ‌ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.ಕೃಷಿ ತಾಪಂಡ, ಕಾವ್ಯ ಶೆಟ್ಟಿ, ಶರತ್ ಲೋಹಿತಾಶ್ವ, ಶೋಭ್ ರಾಜ್, ಡ್ಯಾನಿ ಕುಟ್ಟಪ್ಪ, ಸುಚೇಂದ್ರ ಪ್ರಸಾದ್, ವಾಣಿಶ್ರೀ, ಗಾಯಿತ್ರಿ ಜಯರಾಂ, ಎಸ್ಟರ್ ನರೋನ, ಪ್ರಶಾಂತ್ ಸಿದ್ದಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Categories
ಸಿನಿ ಸುದ್ದಿ

`ಲಗಾಮ್’ ಹಾಕಲು ಉಪ್ಪಿ ಹಿಂದೆ ಹೊರಟ ಹರಿಪ್ರಿಯಾ !

ಸ್ಯಾಂಡಲ್‌ವುಡ್ ಅಂಗಳದಲ್ಲಿ ಲಗಾಮ್' ಟೈಟಲ್‌ನಿಂದಲೇ ಸಖತ್ ಸೌಂಡ್ ಮಾಡ್ತಿರುವ ಹಾಗೂ ಚರ್ಚೆಗೆ ಗ್ರಾಸವಾಗಿರುವ ಚಿತ್ರ. ರಿಯಲ್‌ಸ್ಟಾರ್ ಉಪೇಂದ್ರ ಬಣ್ಣಹಚ್ಚುತ್ತಿರುವ ಕಾರಣಕ್ಕೆ ಮತ್ತಷ್ಟು ಕ್ಯೂರಿಯಾಸಿಟಿ ಹಾಗೂ ನಿರೀಕ್ಷೆ ಹೆಚ್ಚಿದೆ. ಪ್ರಜಾಕೀಯವನ್ನು ಅಸ್ತಿತ್ವಕ್ಕೆ ತರಲು ಹೊರಟಿರುವ ಬುದ್ದಿವಂತ ಉಪ್ಪಿಯವರು ಯಾವುದಕ್ಕೆ ಲಗಾಮ್ ಹಾಕಲು ಹೊರಟರಪ್ಪ ಎನ್ನುವ ಪ್ರಶ್ನೆ ಉದ್ಭವವಾಗಿದೆ. ರಾಜಕೀಯ ವಿಡಂಭನೆ ಹಾಗೂ ಹಣ ವರ್ಗಾವಣೆ ಕುರಿತಾದ ಚಿತ್ರ ಎನ್ನುವ ಸುದ್ದಿ ಹರಿದಾಡುತ್ತಿದ್ದರೂ ಕೂಡ `ಲಗಾಮ್’ ತಿರುಳನ್ನ ಚಿತ್ರತಂಡ ಗೌಪ್ಯವಾಗಿಡುವ ಪ್ರಯತ್ನ ಪಡುತ್ತಿದೆ. ಇಡೀ ದೇಶವನ್ನೇ ಕಾಡುತ್ತಿರುವ ಸಮಸ್ಯೆಯ ಸುತ್ತ `ಲಗಾಮ್’ ಚಿತ್ರಕಥೆ ಎಣೆಯಲಾಗಿದೆ ಅನ್ನೋ ಸೀಕ್ರೇಟ್ ಚಿತ್ರತಂಡ ಬಿಟ್ಟುಕೊಟ್ಟಿದೆ.

ಪೊರ್ಕಿ-ರಾಮ್-ಪವರ್-ಬೃಂದಾವನ-ಹುಡುಗರು ಸೇರಿದಂತೆ ಹಲವು ಸೂಪರ್‌ಹಿಟ್ ಸಿನಿಮಾಗಳ ಸಾರಥಿ ಕೆ ಮಾದೇಶ್ ಲಗಾಮ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಯೂನಿವರ್ಸಲ್ ಸಬ್ಜೆಕ್ಟ್ ವುಳ್ಳ ಕಥೆ ಇದಾಗಿರೋದ್ರಿಂದ ಬಹುಭಾಷೆಯಲ್ಲಿ ತೆರೆಗೆ ತರ‍್ಬೇಕು ಎನ್ನುವ ಪ್ಲ್ಯಾನ್ ಹಾಕಿಕೊಂಡಿದ್ದಾರೆ. ಕಳೆದ ಹತ್ತು ದಿನಗಳಿಂದ ಚಿತ್ರೀಕರಣ ಭರದಿಂದ ಸಾಗ್ತಿದ್ದು, ಸದ್ಯ ಬೆಂಗಳೂರಿನ ಹೆಬ್ಬಾಳದ ಬಳಿ ಇರುವ ವೈಟ್‌ಹೌಸ್‌ನಲ್ಲಿ ಆಕ್ಷನ್ ಸೀಕ್ವೆನ್ಸ್ ಚಿತ್ರೀಕರಣ ನಡೆಯುತ್ತಿದೆ. ಫೇಮಸ್ಸ್ ಫೈಟ್ ಮಾಸ್ಟರ್ ರವಿವರ್ಮಾ ರಿಯಲ್‌ಸ್ಟಾರ್‌ಗೆ ಆಕ್ಷನ್ ಕೊರಿಯಾಗ್ರಫಿ ಮಾಡ್ತಿದ್ದಾರೆ. ಚಿತ್ರದಲ್ಲಿ ಒಟ್ಟು ನಾಲ್ಕು ಆಕ್ಷನ್ ಬ್ಲಾಕ್ ಸೀಕ್ವೆನ್ಸ್ ಗಳಿದ್ದು ರವಿವರ್ಮಾ ಕಂಪೋಸ್ ಮಾಡಲಿದ್ದಾರೆ. ಭರ್ತಿ 35 ದಿನಲಗಾಮ್’ ಚಿತ್ರಕ್ಕೆ ಕಾಲ್‌ಶೀಟ್ ಕೊಟ್ಟಿದ್ದಾರೆ.

ಲಗಾಮ್’ ಹಾಕಲಿಕ್ಕೆ ಹೊರಟಿರುವ ರಿಯಲ್‌ಸ್ಟಾರ್ ಉಪ್ಪಿಗೆ ಹರಿಪ್ರಿಯಾ ಸಾಥ್ ನೀಡಲಿದ್ದಾರೆ. ಮೊದಲ ಭಾರಿಗೆ ಸೂಪರ್‌ಸ್ಟಾರ್ ಉಪ್ಪಿಗೆ ಜೋಡಿಯಾಗ್ತಿರುವ ಹರಿಪ್ರಿಯಾ ಸಖತ್ ಎಕ್ಸೈಟ್ ಆಗಿದ್ದಾರೆ. ಲಗಾಮ್ ಚಿತ್ರದಲ್ಲಿ ನಂದು ಇನ್ವೆಸ್ಟಿಗೇಷನ್ ಜರ್ನಲಿಸ್ಟ್ ಪಾತ್ರ. ನನ್ನ ಸಿನಿಕರಿಯರ್‌ನಲ್ಲಿ ಫಸ್ಟ್ ಟೈಮ್ ಜರ್ನಲಿಸ್ಟ್ ಆಗಿ ಕಾಣಿಸಿಕೊಳ್ತಿದ್ದು ಈ ಪಾತ್ರ ಹೊಸ ಅನುಭವ ನೀಡ್ತಿದೆ ಅಂತಾರೇ. ರಂಗಾಯಣ ರಘು, ಸಾಧುಕೋಕಿಲ, ಅವಿನಾಶ್, ಜಾನಿ ಕುಟ್ಟಪ್ಪ, ಶೋಭರಾಜ್ ಸೇರಿದಂತೆ ಅದ್ದೂರಿ ತಾರಾಬಳಗವೇ ಈ ಚಿತ್ರದಲ್ಲಿದೆ.

ಮೈಸೂರು- ಬೆಂಗಳೂರು ಸುತ್ತಮುತ್ತ ಚಿತ್ರೀಕರಣಕ್ಕೆ ಪ್ಲ್ಯಾನ್ ಮಾಡಿರುವ ಚಿತ್ರತಂಡ ಸಾಂಗ್ ಶೂಟಿಂಗ್‌ಗಾಗಿ ವಿದೇಶಕ್ಕೆ ಹಾರುವ ಪ್ಲ್ಯಾನ್ ಹಾಕಿಕೊಂಡಿದೆ. ಸಾಧುಕೋಕಿಲ ಹಾಗೂ ಅವರ ಪುತ್ರ ಸುರಾಗ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ರಾಜೇಶ್ ಅರಸ್ ಕ್ಯಾಮೆರಾ ಕೈಚಳಕದಲ್ಲಿ `ಲಗಾಮ್’ ಚಿತ್ರೀಕರಣಗೊಳ್ಳುತ್ತಿದೆ. ಎಂ ಆರ್ ಗೌಡ ನಿರ್ಮಾಣದಲ್ಲಿ ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣಗೊಳ್ಳುತ್ತಿದೆ.ಹೈ ಬಜೆಟ್‌ನಲ್ಲಿ ಅದ್ದೂರಿಯಾಗಿ ನಿರ್ಮಾಣಗೊಳ್ತಿರುವ ಈ ಚಿತ್ರ ಕನ್ನಡದ ಲಗಾನ್ ಆಗಲಿದೆಯಂತೆ. ಎಲ್ಲಾ ಅಂದುಕೊಂಡಂತೆ ತಯ್ಯಾರಾದರೆ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ರಿಲೀಸ್ ಮಾಡ್ಬೇಕು ಅನ್ನೋದು ಚಿತ್ರತಂಡದ ಅಭಿಪ್ರಾಯ.

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

error: Content is protected !!