Categories
ಸಿನಿ ಸುದ್ದಿ

ಹೊಸಬರ ಸುಕನ್ಯ ದ್ವೀಪ; ಫಸ್ಟ್‌ ಶೆಡ್ಯೂಲ್‌ ಮುಗಿಸಿದ ಚಿತ್ರತಂಡ

ಸುಕನ್ಯ ದ್ವೀಪ ಎನ್ನುವ ಟೈಟಲ್ ಕೇಳಿದೊಡನೆ ಇದೊಂದು ಸಸ್ಪೆನ್ಸ್ ಚಿತ್ರ ಇರಬದುದೇನೋ ಎಂಬ ಪ್ರಶ್ನೆ ಎದುರಾಗುತ್ತೆ. ಆದರೆ, ಇದು ಸಸ್ಪೆನ್ಸ್‌ ಸಿನಿಮಾವಂತೂ ಅಲ್ಲ. ಇದೊಂದು ಪಕ್ಕಾ ಫ್ಯಾಮಿಲಿ ಮತ್ತು ಲವ್‌ ಜಾನರ್‌ ಕಥೆ ಹೊಂದಿರುವ ಸಿನಿಮಾ. ಇದರೊಂದಿಗೆ ಹಾಸ್ಯದ ಲೇಪನವೂ ಇಲ್ಲಿದೆ. ಅಂದಹಾಗೆ, ಈ ಚಿತ್ರವನ್ನು ಎಂ.ಡಿ. ಅಫ್ಜಲ್ ನಿರ್ದೇಶನ ಮಾಡಿದ್ದಾರೆ. ಈಗಾಗಲೇ “ಮೊಬೈಲ್ ರಾಜʼ ಸಿನಿಮಾ ನಿರ್ದೇಶಿಸಿರುವ ಅಫ್ಜಲ್‌, ಆ ಚಿತ್ರದ ಬಿಡುಗಡೆ ಎದುರು ನೋಡುತ್ತಿದ್ದಾರೆ. ಅದರ ಬೆನ್ನಲ್ಲೇ, ಇದೀಗ “ಸುಕನ್ಯ ದ್ವೀಪ” ಸಿನಿಮಾದ ಮೊದಲ ಹಂತದ ಚಿತ್ರೀಕರಣ ಮುಗಿಸಿದ್ದಾರೆ.


ನಿರ್ದೇಶಕ ಅಫ್ಜಲ್ ಅವರು, ಇದುವರೆಗೆ 18 ಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ನಿರ್ದೇಶನದ ‌ಎರಡನೇ ಸಿನಿಮಾ ಇದಾಗಿದ್ದು, ರಾಜ್‌ಪ್ರಭು ಅವರ ಮೂಲಕ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಮೂವರು ಅಕ್ಕ-ತಂಗಿಯರ ಸುತ್ತ ನಡೆಯುವ ಕಥಾಹಂದರ ಇಲ್ಲಿದೆ. ಇಲ್ಲಿ ವಿಶೇಷ ಪಾತ್ರದಲ್ಲಿ ರಾಜ್‌ಪ್ರಭು ಕಾಣಿಸಿಕೊಂಡಿದ್ದಾರೆ. ಫ್ಯಾಮಿಲಿ ಸಬ್ಜೆಕ್ಟ್ ನಲ್ಲಿ ಲವ್‌ಸ್ಟೋರಿ ಕೂಡ ಇದೆ. ಕಾಮಿಡಿಗೆ ಹೆಚ್ಚು ಒತ್ತು ನೀಡಿರುವುದು ಇನ್ನೊಂದು ವಿಶೇಷ. ಈಗಾಗಲೇ ಬೆಂಗಳೂರು ಸುತ್ತಮುತ್ತ ಒಂದು ಹಂತದ ಶೂಟಿಂಗ್ ಮುಗಿಸಿದ್ದು, ಮುಂದಿನ ಹಂತದಲ್ಲಿ ಹಾಸನ, ಕಳಸ, ಬೇಲೂರು ಹೀಗೆ ಪ್ರಮುಖ ಸ್ಥಳಗಳಲ್ಲಿ ಚಿತ್ರೀಕರಿಸುವ ಯೋಜನೆ ಚಿತ್ರತಂಡದ್ದು. “ಸುಕನ್ಯ” ಎಂದರೆ ಹೆಣ್ಣು, ದ್ವೀಪ ಎಂದರೆ ಅವರಿರುವ ಮನೆಗೆ ಹೋಲಿಸಲಾಗಿದೆ. ಆ ಮೂವರು ಹೆಣ್ಣು ಮಕ್ಕಳು ಪ್ರೇಮದ ಬಲೆಗೆ ಬಿದ್ದಾಗ ಫ್ಯಾಮಿಲಿಯಿಂದ ಅಡ್ಡಿಯಾಗುತ್ತದೆ, ನಂತರ ಚಿತ್ರದಲ್ಲೊಂದು ಮೇಜರ್ ಟ್ವಿಸ್ಟ್ ಇದೆ. ಹಾಗಂತ, ಕೊಲೆ, ಸಸ್ಪೆನ್ಸ್ ಅಂಥದ್ದೇನೂ ಇಲ್ಲ. ಸ್ನೇಹಿತ ಅಲ್ವಿನ್ ಸೊಗಸಾದ ಡೈಲಾಗ್‌ಗಳನ್ನು ಬರೆದುಕೊಟ್ಟಿದ್ದಾರೆ ಎಂದು ಮಾಹಿತಿ ಕೊಡುತ್ತಾರೆ ನಿರ್ದೇಶಕ ಅಫ್ಜಲ್.

ಕಾರ್ಯಕಾರಿ ನಿರ್ಮಾಪಕ ರಾಜ್ ಪ್ರಭು ಅವರು, ತಮಿಳಿನ ಹಾಸ್ಯನಟ ದಿ. ವಿವೇಕ್ ಅವರಿಂದ ಸ್ಫೂರ್ತಿ ಪಡೆದು ಈ ಈ ಕಥೆ ಮಾಡಿಕೊಳ್ಳಲಾಗಿದೆ. ಚಿತ್ರದಲ್ಲಿ ನನ್ನ ಪಾತ್ರ ಸೆಕೆಂಡ್ ಹಾಫ್ ನಲ್ಲಿ ಬರುತ್ತೆ, ಅದರಲ್ಲಿ ಒಂದಷ್ಟು ಕುತೂಹಲವೂ ಇದೆ ಅನ್ನುತ್ತಾರೆ ಅವರು. ಸಂಗೀತ ನಿರ್ದೇಶಕ ಕೌಶಿಕ್ ಹರ್ಷ ಅವರಿಗೆ ರಾಜ್‌ಪ್ರಭು ಕಥೆ ಹೇಳಿದಾಗ ಇಷ್ಟವಾಯ್ತು, ಚಿತ್ರದ ೫ ಹಾಡುಗಳಿಗೆ ಸಂಗೀತ ನೀಡಲಾಗಿದೆ ಎಂಬ ಮಾಹಿತಿ ಕೊಡುತ್ತಾರೆ.
ನಿರ್ಮಾಪಕ ವೀರಬಾಹು, ರಾಜಪ್ರಭು ಒಂದೊಳ್ಳೆ ಕಥೆ ರೆಡಿ ಇದೆ. ಸಿನಿಮಾ ಮಾಡೋಣ ಅಂದರು. ಒನ್ ಲೈನ್ ಕಥೆ ಕೇಳಿಯೇ ನಾನು ನಿರ್ಮಾಣಕ್ಕೆ ಒಪ್ಪಿದೆ. ಮಚ್ಚು, ಲಾಂಗು ಇಲ್ಲದ ನೀಟ್ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ ಇದು ಎಂದರು.

ಚಿತ್ರದ ನಾಯಕರಲ್ಲೊಬ್ಬರಾದ ಸಚಿನ್ ಪುರೋಹಿತ್, “ಸ್ಟೂಡೆಂಟ್ʼ, “ಚರಂತಿ”, “ಗಡಿಯಾರ” ನಂತರ ಇದು ನನ್ನ ನಾಲ್ಕನೇ ಚಿತ್ರ, “ತಮಸ್‌”ನಲ್ಲಿ ನಾನು ರಾಜ್‌ಪ್ರಭು ಒಟ್ಟಿಗೇ ಕೆಲಸ ಮಾಡಿದ್ದೆವು. ನನ್ನದು ಲವರ್ ಬಾಯ್ ಥರದ ಪಾತ್ರ ಅಂದರು. ಮತ್ತೊಬ್ಬ ನಟ ರವಿ ಅನುಭವ ಹಂಚಿಕೊಂಡರು. ಛಾಯಾಗ್ರಾಹಕ ವಿಘ್ನೇಶ್ ನಾಗೇಂದ್ರ, ನಾಯಕಿಯರಾದ ಶ್ರೇಯಾ ವಸಂತ್, ಅಕ್ಷಿತ ನಾಗರಾಜ್, ಚುಂಬಿತ ಮಾತನಾಡಿದರು. ಇಲ್ಲಿ ಎಂ.ಡಿ. ಕೌಶಿಕ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Categories
ಸಿನಿ ಸುದ್ದಿ

ರಾಯರ ಮಗನ ರಾಘವೇಂದ್ರ ಸ್ಟೋರ್ಸ್ : ಹೊಂಬಾಳೆ ಫಿಲಂಸ್‌ ನಲ್ಲಿ‌ ನಟನೆಯ ಅಖಾಡಕ್ಕಿಳಿದ ನವರಸನಾಯಕ ಜಗ್ಗೇಶ್ !

ಹೊಂಬಾಳೆ ಫಿಲಂಸ್‌ ಅಚ್ಚರಿ ಹುಟ್ಟಿಸುತ್ತಿದೆ. ಕೊರೋನಾ ಅಂತ ಉದ್ಯಮವೇ ಸೈಲೆಂಟ್‌ ಆಗಿರುವಾಗ ಹೊಂಬಾಳೆ ಫಿಲಂಸ್‌ ಮಾತ್ರ ಬ್ಯಾಕ್‌ ಟು ಬ್ಯಾಕ್‌ ಸಿನಿಮಾ ಅನೌನ್ಸ್‌ ಮಾಡುತ್ತಿದೆ. ಲಾಕ ಡೌನ್‌ ನಂತರದ ದಿನಗಳಲೇ ಪ್ರಭಾಸ್‌ ಆಯ್ತು, ಅಲ್ಲಿಂದ ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ಆಯ್ತು, ಜತೆಗೆ ರಿಷಬ್‌ ಶೆಟ್ಟಿ , ರಕ್ಷಿತ್‌ ಶೆಟ್ಟಿ ಅವರಿಗೂ ಸಿನಿಮಾ ಅನೌನ್ಸ್‌ ಮಾಡಿ ಆಯ್ತು. ಈಗ ಕನ್ನಡದ ಹಿರಿಯ ನಟ ನವರಸ ನಾಯಕ ಜಗ್ಗೇಶ್‌ ಕಾಂಬಿನೇಷನ್‌ ಮೂಲಕ ಮತ್ತೊಂದು ಸಿನಿಮಾ ಅನೌನ್ಸ್‌ ಮಾಡಿ ಕುತೂಹಲ ಮೂಡಿಸಿದೆ ʼಕೆಜಿಎಫ್‌ʼ ಖ್ಯಾತಿಯ ಹೊಂಬಾಳೆ ಫಿಲಂಸ್.‌

ಸಿನಿಮಾ ಪ್ರೇಮಿಗಳ ಕುತೂಹಲಕ್ಕೆ ತೆರೆ ಬಿದ್ದಿದೆ. ಕನ್ನಡದ ಪ್ರತಿಷ್ಟಿತ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್‌ ನ 12 ನೇ ಸಿನಿಮಾದ ಟೈಟಲ್‌ ಏನು, ಅದರ ನಾಯಕ ಯಾರು ಎನ್ನುವ ಕ್ಯೂರಿಯಾಸಿಟಿಗೆ ಇಂದು ಉತ್ತರ ಸಿಕ್ಕಿದೆ. ಈ ಮೊದಲೇ ಹೇಳಿದಂತೆ ಹೊಂಬಾಳೆ ಫಿಲಂಸ್‌ ತನ್ನ 12ನೇ ಸಿನಿಮಾದ ಟೈಟಲ್‌ ಜತೆಗೆ ಫಸ್ಟ್‌ ಲುಕ್‌ ಪೋಸ್ಟರ್‌ ಲಾಂಚ್‌ ಮೂಲಕ ಅದರ ನಾಯಕ ಯಾರು ಎನ್ನುವುದನ್ನು ರಿವೀಲ್‌ ಮಾಡಿದೆ. ಒಂದ್ರೀತಿ ಇದು ಅಚ್ಚರಿಯನ್ನೇ ಹೊತ್ತು ಬಂದಿರುವುದು ವಿಶೇಷ.

ಅಂದ ಹಾಗೆ, ಹೊಂಬಾಳೆ ಫಿಲಂಸ್‌ ನಿರ್ಮಾಣದ 12 ನೇ ಚಿತ್ರದ ಹೆಸರು ರಾಘವೇಂದ್ರ ಸ್ಟೋರ್ಸ್‌ʼ ಇದರ ನಾಯಕ ನಟ ಜಗ್ಗೇಶ್.‌ ನಿರ್ದೇಶಕ ಸಂತೋಷ್‌ ಆನಂದ್‌ ರಾಮ್.‌ ಕನ್ನಡದ ಹಿರಿಯ ನಟ ನವರಸ ನಾಯಕ ಜಗ್ಗೇಶ್‌ ಇದೇ ಮೊದಲು ಹೊಂಬಾಳೆ ಫಿಲಂಸ್‌ ಬ್ಯಾನರ್‌ ಮೂಲಕ ನಟನೆಯ ಅಖಾಡಕ್ಕೆ ಇಳಿದಿದ್ದಾರೆ. ಅವರಿಗೆ ಇಲ್ಲಿ ನಿರ್ದೇಶಕ ಸಂತೋಷ್‌ ಆನಂದ್‌ ರಾಮ್‌ ಜತೆಯಾಗಿದ್ದಾರೆ. ಇದೇ ಮೊದಲು ಇವರಿಬ್ಬರ ಜುಗಲ್‌ ಬಂಧಿ ರಾಘವೇಂದ್ರ ಸ್ಟೋರ್ಸ್‌ ನಲ್ಲಿ ಆಗಿದೆ.

ಹೊಂಬಾಳೆ ಫಿಲಂಸ್‌ ಇದೆಲ್ಲ ವಿವರವನ್ನು ಬುಧವಾರ ಅಧಿಕೃತವಾಗಿ ಪ್ರಕಟಿಸಿದೆ. ಟೈಟಲ್‌ ಮೂಲಕವೇ ಕುತೂಹಲ ಹುಟ್ಟಿಸುವ ಈ ಸಿನಿಮಾ ಇದು. ರಾಘವೇಂದ್ರ ಅಂದಾಕ್ಷಣ ಅದು ಜಗ್ಗೇಶ್‌ ಅವರಿಗೆ ಕನೆಕ್ಟ್.‌ ಅದೇ ಕಾರಣಕ್ಕೆ ನಟ ಜಗ್ಗೇಶ್‌ ಅವರ ಪಾಲಿಗೆ ಇದು ಸಾಕಷ್ಟು ವಿಶೇಷತೆ ಹೊಂದಿದ ಸಿನಿಮಾ. ಯಾಕಂದ್ರೆ, ನಟ ಜಗ್ಗೇಶ್‌ ಅವರು ಗುರು ರಾಘವೇಂದ್ರ ಪರಮ ಭಕ್ತರು. ರಾಯರ ಮಗ ಅಂತಲೇ ನಂಬಿಕೆ. ಕಾಕತಾಳೀಯ ಎನ್ನುವ ಹಾಗೆ ಈಗವರು ರಾಯರ ಹೆಸರಿನ ಚಿತ್ರಕ್ಕೆ ನಾಯಕರಾಗಿದ್ದಾರೆ. ಅದರ ನಂಟಿನ ಬಗ್ಗೆಯೇ ಅವರು ಮೊದಲ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ʼ ರಾಯರ ಮಗನಿಗೆ ರಾಘವೇಂದ್ರ ಸ್ಟೋರ್ಸ್ ʼ ಚಿತ್ರ ಬದುಕಿನ ಪರಿಪೂರ್ಣ ಅವರ್ಥ. ನಗಿಸುತ್ತ ಬಿಡಿಸಿ ಹೇಳುವ ಅದ್ಭುತ ಕೃತಿ.‌ ಹೊಂಬಾಳೆ ಸಿನಿಮಾದ್‌ ಜತೆಗೆ ಇದು ನನ್ನ ಮೊದಲ ಸಿನಿಮಾವಾಗಿದ್ದು, ಈ ಹೊಸ ಪ್ರಯತ್ನವನ್ನು ಪ್ರೇಕ್ಷಕರು ಮೆಚ್ಚಿ ಆಶೀರ್ವದಿಸುತ್ತಾರೆ ಎಂಬ ನಂಬಿಕೆ ಇದೆʼ ಎನ್ನುವುದರ ಮೂಲಕ ʼರಾಘವೇಂದ್ರ ಸ್ಟೋರ್ಸ್‌ʼ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ ನಟ ಜಗ್ಗೇಶ್. ಇನ್ನು ರಾಘವೇಂದ್ರ ಸ್ಟೋರ್ಸ್‌ ಬಗ್ಗೆ ಹೊಂಬಾಳೆ ಫಿಲಂಸ್‌ ಎರಡು ದಿನಗಳ ಮುಂಚೆಯೇ ಕೊಟ್ಟ ಹಿಂಟ್ಸ್‌ ಏನು ಅಂತ ನಿಮಗೆಲ್ಲ ಗೊತ್ತೇ ಇದೆ. ಬಾಳೆ ಏಲೆ, ಅದರ ಮೇಲೆ ಒಂದಷ್ಟು ಅಕ್ಷರ. ಪ್ರತಿಯೊಬ್ಬರಲ್ಲೂ ಹಸಿವಿದೆ, ಪ್ರತಿ ಅಗಳಿನಲ್ಲೂ ತಿನ್ನುವವರ ಹೆಸರಿದೆ. ಅನ್ನದಾತೋ ಸುಖೀಭವ ಎಂಬುದಾಗಿ ಬರೆದು, ಚಿತ್ರದ ಟೈಟಲ್‌ ಅನೌನ್ಸ್‌ ಜತೆಗೆ ಅದರ ನಾಯಕ ಯಾರು ಎನ್ನುವುದರ ಬಗ್ಗೆ ದೊಡ್ಡ ಕ್ಯೂರಿಯಾಸಿಟಿ ಹುಟ್ಟಿಸಿತ್ತು ಹೊಂಬಾಳೆ ಫಿಲಂಸ್.‌

ಆ ಕುತೂಹಲಕ್ಕೆ ಈಗ ತೆರೆ ಎಳೆದಿದೆ. ಮೊದಲೇ ಹೇಳಿದಂತೆ ಬುಧವಾರ ಟೈಟಲ್‌ ಜತೆಗೆ ಅದರ ಫಸ್ಟ್‌ ಲುಕ್‌ ಪೋಸ್ಟರ್‌ ಕೂಡ ರಿವೀಲ್‌ ಆಗಿದೆ. ಕಳೆದೆರೆಡು ದಿನಗಳಿಂದ ಏನೇನೋ ಕಲ್ಪಿಸಿಕೊಂಡವರಿಗೆ ಇವತ್ತು ನಿಜಕ್ಕೂ ಶಾಕ್.‌ ಯಾಕಂದ್ರೆ ʼರಾಜಕುಮಾರʼ ಖ್ಯಾತಿಯ ನಿರ್ದೇಶಕ ಸಂತೋಷ್‌ ಆನಂದ್‌ ರಾಮ್‌ ಅವರಿಗೆ ಇಲ್ಲಿ ಜೋಡಿಯಾಗಿದ್ದು ಕನ್ನಡದ ಹಿರಿಯ ನಟ, ನವರಸನಾಯಕ ಜಗ್ಗೇಶ್.‌ ಇನ್ನು ಟೃಟಲ್‌ ಅನೌನ್ಸ್‌ ಗೆ ಬಾಳೆ ಎಲೆ ಹಾಸಿ, ಒಂದಷ್ಟು ಕುತೂಹಲದ ಕೊಟೇಷನ್‌ ಹಾಕಿದ್ದ ಹೊಂಬಾಳೆ ಫಿಲಂಸ್‌ ನ 12 ನೇ ಚಿತ್ರದ ಕಥೆ ಬಗೆಗಿನ ಕುತೂಹಲಕ್ಕೂ ಒಂದಷ್ಟು ಮಾಹಿತಿ ಇಲ್ಲಿ ರಿವೀಲ್‌ ಆಗಿದೆ. ಅದಕ್ಕಿಂತ ಮೊದಲು ಹೊಂಬಾಳೆ ಫಿಲಂಸ್‌ ನಲ್ಲಿ ನಟ ಜಗ್ಗೇಶ್‌ ಇದೇ ಮೊದಲು ನಟನೆಯ ಅಖಾಡಕ್ಕೆ ಇಳಿದಿರುವುದು ಇಲ್ಲಿ ವಿಶೇಷ. ಆ ಬಗ್ಗೆ ನಿರ್ಮಾಪಕ ವಿಜಯ್‌ ಕಿರಗಂದೂರು ಕೂಡ ಹರ್ಷ ವ್ಯಕ್ತಪಡಿಸುತ್ತಾರೆ.

ʼ ಹಿರಿಯ ನಟರಾದ ಜಗ್ಗೇಶ್‌ ಅವರು ಇದೇ ಮೊದಲು ನಮ್ಮ ಬ್ಯಾನರ್‌ ನಲ್ಲಿ ನಟಿಸುತ್ತಿರುವುದು ನಮ್ಮನ್ನು ಪುಳಕಿತರನ್ನಾಗಿ ಮಾಡಿದೆ. ಇದು ನಮಗೆ ಹೆಮ್ಮೆಯ ವಿಷಯವೂ ಹೌದು.ಕನ್ನಡ ಚಲನಚಿತ್ರರಂಗ ಕೀರ್ತಿಯಲ್ಲಿ ಜಗ್ಗೇಶ್‌ ಅವರ ಪಾತ್ರಾಪಾರವಾದದ್ದು.ಕನ್ನಡ ಚಿತ್ರರಂಗಕ್ಕೆ ಅವರ ಕೊಡುಗೆ ಅವೀಸ್ಮರಣಿಯ. ಅವರು ಚಿತ್ರರಂಗದ ಬಹುದೊಡ್ಡ ಆಸ್ತಿ. ಹೀಗಾಗಿ ಹೊಂಬಾಳೆ ಟೀಮ್‌ ಗೆ ನವರಸನಾಯಕ ಜಗ್ಗೇಶ್‌ ಅವರ ಸೇರ್ಪಡೆ ನಮ್ಮ ಸೌಭಾಗ್ಯʼ ಎನ್ನುವ ಮಾತುಗಳೊಂದಿಗೆ ತಮ್ಮ ಸಂಸ್ಥೆಯ ಸಿನಿಮಾಕ್ಕೆ ಅದ್ಧೂರಿ ಸ್ವಾಗತ ನೀಡಿದ್ದಾರೆ ನಿರ್ಮಾಪಕ ವಿಜಯ್‌ ಕಿರಗಂದೂರು. ಹಾಗೆಯೇ ರಾಜಕುಮಾರ, ಯುವರತ್ನ ಚಿತ್ರದ ನಂತರ ಮತ್ತೆ ಈಗ ಮೂರನೇ ಸಿನಿಮಾದೊಂದಿಗೆ ಹೊಂಬಾಳೆ ಫಿಲಂಸ್‌ ಮೂಲಕ ಹ್ಯಾಟ್ರಿಕ್‌ ಬಾರಿಸುತ್ತಿರುವ ನಿರ್ದೇಶಕ ಸಂತೋಷ್‌ ಆನಂದ್‌ ರಾಮ್‌ ಅವರ ಬಗ್ಗೆಯೂ ಅಪಾರ ಮೆಚ್ಚುಗೆ ವ್ಯಕ್ತಪಡಿಸಿರುವ ನಿರ್ಮಾಪಕ ವಿಜಯ್‌ ಕಿರಗಂದೂರು, ಹೊಸ ಚಲನಚಿತ್ರವನ್ನು ಚಿತ್ರ ರಸಿಕರ ನಿರೀಕ್ಷೆಗೆ ತಕ್ಕಂತೆ ರೂಪಿಸಲಿದ್ದಾರೆಂಬ ಆತ್ಮವಿಶ್ವಾಸ, ನಂಬಿಕೆ ನನಗಿದೆ ಎಂದಿದ್ದಾರೆ.

  • ಎಂಟರ್‌ ಟೈನ್‌ ಮೆಂಟ್‌ ಬ್ಯೂರೋ ಸಿನಿಲಹರಿ
Categories
ಸಿನಿ ಸುದ್ದಿ

ಛೇ, ಅವರು ಇರಲೇಬೇಕಿತ್ತು….ಅಂತ ನಿಮಗೂ ಅನಿಸುತ್ತೆ : ಸೆ.24ಕ್ಕೆ ಬೆಳ್ಳಿತೆರೆ ಮೇಲೆ ಪುಕ್ಸಟ್ಟೆ ಲೈಪು ಪುರ್ ಸೊತ್ತೇ ಇಲ್ಲ !

ನಟ ಸಂಚಾರಿ ವಿಜಯ್‌ ಈಗಿಲ್ಲ ಅನ್ನೋದನ್ನು ಈಗಲೂ ಅರಗಿಸಿಕೊಳ್ಳಲಾಗದ ಸಂಗತಿ. ಆದರೂ ಅದು ವಾಸ್ತವ. ಅವರು ಕಡೆಯದಾಗಿ ಅಭಿನಯಿಸಿದ ಸಿನಿಮಾಗಳು ಈಗ ಬೆಳ್ಳಿತೆರೆ ಮೇಲೆ ಚಿಮ್ಮಲು ಕಾದಿವೆ. ಆ ಪೈಕಿ ಸೆ.24 ಕ್ಕೆ ಪುಕ್ಸಟ್ಟೆ ಲೈಪು ಪುರ್‌ ಸೊತ್ತೇ ಇಲ್ಲ ಸಿನಿಮಾ ರಿಲೀಸ್‌ ಆಗುತ್ತಿದೆ. ಈ ಸಿನಿಮಾ ಅನೇಕ ಕಾರಣಕ್ಕೆ ತುಂಬಾ ಸ್ಪೆಷಲ್.‌ ಅದರಲ್ಲಿ ವಿಜಯ್‌ ಅವರ ಪಾತ್ರ, ನಟನೆಯೂ ಕೂಡ ಕಾರಣ.

ಛೇ, ಅವರು ಇರಲೇಬೇಕಿತ್ತು…ಹೌದು, ಆ ಚಿತ್ರದ ಟ್ರೇಲರ್‌ನಲ್ಲಿ ಕಾಣುವ ಅವರ ನಟನೆಯನ್ನು ನೋಡಿದಾಗ ನಮ್ಮೊಳಗೆ ಅಂತಹದೊಂದು ವೇದನೆ ಗಾಢವಾಗಿ ಕಾಡುತ್ತದೆ. ಕೇವಲ ಎರಡೇ ನಿಮಿಷದ ಆ ಟ್ರೇಲರ್‌ ನಲ್ಲಿನ ಅವರ ಅಭಿನಯ ನೋಡ ನೋಡುತ್ತಲೇ ಛೇ, ಅವರು ನಮ್ಮೊಂದಿಗೆ ಇರಲೇಬೇಕಿತ್ತು ಅಂತ ಮನಸ್ಸು ಪರಿತಪಿಸತೊಡಗುತ್ತದೆ. ಒಂದ್ರೀತಿಯ ಬೇಸರ ನಮ್ಮನ್ನೇ ಆವರಿಸಿಕೊಳ್ಳುತ್ತದೆ. ಟ್ರೇಲರ್‌ ಮುಗಿಯುತಾ ಬಂದಾಗ ಒಂದು ಡೈಲಾಗ್‌ ಕೇಳುತ್ತದೆ. ʼಎಲ್ಲಾದರೂ ಕಾಣದಂತೆ ಆರು ತಿಂಗಳು ಹೊರಟು ಹೋಗು, ಯಾರ ಕಣ್ಣಿಗೂ ಕಾಣಬೇಡʼ ಅಂತ ಪೊಲೀಸ್‌ ಪಾತ್ರದಾರಿ ಅಚ್ಯುತ್‌ ಕುಮಾರ್‌ ಹೇಳುತ್ತಾರೆ. ಹಾಗೆಯೇ ನಟ ಸಂಚಾರಿ ವಿಜಯ್‌ ಹೊರಟು ಹೋಗಿದ್ದಾರೆಯೇ ಎನ್ನುವ ಕೊಂಚ ಸಮಾಧಾನದ ಮಾತು ಅಲ್ಲಿ ಕೇಳಿದರೂ ವಾಸ್ತವದಲ್ಲಿ ಅವರಿಲ್ಲ ಎನ್ನುವ ಗಾಢ ಬೇಸರದಲ್ಲಿಯೇ ಟ್ರೇಲರ್‌ ನಲ್ಲಿನ ಅವರ ಅಭಿನಯ ನಮ್ಮೆನ್ನೆಲ್ಲ ಮಂತ್ರ ಮುಗ್ದಗೊಳಿಸುತ್ತದೆ. ಅಂದ ಹಾಗೆ ಆ ಟ್ರೇಲರ್‌ ʼಪುಕ್ಸಟ್ಟೆ ಲೈಪು ಪುರ್‌ ಸೊತ್ತೇ ಇಲ್ಲʼ ಚಿತ್ರದ್ದು.

ನಟ ಸಂಚಾರಿ ವಿಜಯ್‌ ಈಗಿಲ್ಲ. ಆದರೆ ಅವರ ಅಭಿನಯದ ಕೊನೆಯ ಸಿನಿಮಾಗಳು ಈಗ ಬೆಳ್ಳಿತೆರೆಯ ಮೇಲೆ ಅಬ್ಬರಿಸಲು ಕಾದಿವೆ. ಆ ಪೈಕಿ ʼಪುಕ್ಸಟ್ಟೆ ಲೈಪು ಪುರ್‌ ಸೊತ್ತೇ ಇಲ್ಲʼ ಸಿನಿಮಾ ಕೂಡ ಒಂದು. ಆರಂಭದಿಂದಲೂ ಟೈಟಲ್‌ ಮೂಲಕವೇ ಕುತೂಹಲ ಮೂಡಿಸಿದ ಸಿನಿಮಾ ಇದು. ಜತೆಗೆ ಟೀಸರ್‌ ಹಾಗೂ ಟ್ರೇಲರ್‌ ಮೂಲಕವೂ ಮತ್ತಷ್ಟು ಸದ್ದು ಮಾಡಿ, ಈಗ ಪ್ರೇಕ್ಷಕರ ಮುಂದೆ ಬರುತ್ತಿದೆ. ಸೆ.24 ಕ್ಕೆ ಈ ಚಿತ್ರ ಗ್ರಾಂಡ್ ರಿಲೀಸ್‌‌ ಗೆ ರೆಡಿ ಆಗಿದೆ. ಶೇಕಡಾ 50 ರಷ್ಟು ಸೀಟು ಭರ್ತಿಯ ಅವಕಾಶದ ನಡುವೆಯೇ ಈ ಚಿತ್ರ ಇದೇ ವಾರ ಚಿತ್ರಮಂದಿರಗಳಿಗೆ ದಾಂಗುಡಿ ಇಡುತ್ತಿದೆ. ಕೊರೋನಾ ಆರಂಭಕ್ಕೂ ಮುನ್ನ ಇದ್ದ ಸಿನಿಮಾ ವಾತಾವರಣ ಈಗಿಲ್ಲ ಎನ್ನುವುದು ಸತ್ಯವೇ ಆಗಿದ್ದರೂ, ಸಂಕಷ್ಟದ ಪರಿಸ್ಥಿತಿ ಈಗ ತಿಳಿಯಾಗುತ್ತಿದೆ. ಈ ವಾರದಲ್ಲಿಯೇ ಚಿತ್ರಮಂದಿರಗಳಲ್ಲಿ ಶೇ. 100 ರಷ್ಟು ಸೀಟು ಭರ್ತಿಗೂ ಅವಕಾಶ ಸಿಗುವ ಸಾಧ್ಯತೆಗಳಿವೆ.

ಚಿತ್ರರಂಗದ ಪಾಲಿಗೆ ಇದು ದೊಡ್ಡ ಆಶಾಭಾವನೆ ಹುಟ್ಟು ಹಾಕಿದೆ. ಆ ದಿನಗಳು ಮತ್ತೆ ಬಂದೇ ಬರಬಹುದು ಎನ್ನುವ ದೊಡ್ಡ ಭರವಸೆ ಮೂಲಕ ರಿಲೀಸ್‌ ಗೆ ರೆಡಿ ಇರುವ ಸಿನಿಮಾಗಳು, ಚಿತ್ರಮಂದಿರಗಳಿಗೆ ನುಗ್ಗಲು ತಯಾರಿ ನಡೆಸಿವೆ. ಈ ಪೈಕಿ ಈಗ ಬೆಳ್ಳಿತೆರೆಯಲ್ಲಿ ಅಬ್ಬರಿಸಲು ತುದಿಗಾಲ ಮೇಲೆ ನಿಂತಿರೋ ಸಿನಿಮಾ ʼಪುಕ್ಸಟ್ಟೆ ಲೈಪು ಪರುಸೊತ್ತೇ ಇಲ್ಲʼ. ನಟ ಸಂಚಾರಿ ವಿಜಯ್‌ ಅಭಿನಯದ ಕಾರಣಕ್ಕೆ ದೊಡ್ಡ ಕುತೂಹಲ ಹುಟ್ಟು ಹಾಕಿರೋ ಸಿನಿಮಾ ಇದು. ಅವರೊಂದಿಗೆ ಇಲ್ಲಿ ಅಚ್ಯುತ್ ಕುಮಾರ್‌, ರಂಗಾಯಣ ರಘು, ಜಯಶ್ರೀ ಸೇರಿದಂತೆ ರಂಗಭೂಮಿಯ ದೊಡ್ಡ ಕಲಾವಿದರ ಸಮಾಗಮವೇ ಇಲ್ಲಿದೆ. ಸರ್ವಸ್ವ ಪ್ರೊಡಕ್ಷನ್‌ ಮೂಲಕ ನಿರ್ಮಾಣವಾಗಿರೋ ಈ ಸಿನಿಮಾಕ್ಕೆ ಅರವಿಂದ್‌ ಕುಪ್ಲೀಕರ್‌ ನಿರ್ದೇಶಕ. ರಂಗಭೂಮಿಯ ದೊಡ್ಡ ಅನುಭವ ಅವರಿಗಿದೆ. ಟ್ರೇಲರ್‌ ನೋಡಿದಾಗ ಈ ಸಿನಿಮಾದ ತಿರುಳು ಕೊಂಚ ನಿಮಗೂ ಅರ್ಥವಾಗಿರಬಹುದು. ʼಬೇಲಿಯೇ ಎದ್ದು ಹೊಲ ಮೇಯ್ದದಂತೆ ʼಎನ್ನುವ ಗಾದೆ ಮಾತಿನಂತೆ ಇಲ್ಲಿ ಪೊಲೀಸರೇ ಕಳ್ಳರ ಜತೆ ಸೇರಿ ಕಳ್ಳತನ ಮಾಡಿದ್ರೆ ಹೇಗಿರುತ್ತೆ ಎನ್ನುವ ಸಣ್ಣ ಎಳೆಯೊಂದನ್ನು ಇಟ್ಟುಕೊಂಡು ನಿರ್ಮಾಣ ಮಾಡಿರುವ ಸಿನಿಮಾ ಇದು.

ಅಚ್ಯುತ್‌ ಕುಮಾರ್‌ ಪೊಲೀಸ್‌ ಪಾತ್ರದಲ್ಲಿ, ರಂಗಾಯಣ ಮಾಲೀಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಪಾತ್ರಗಳೇ ಇಲ್ಲಿ ವಿಭಿನ್ನ, ವಿಶಿಷ್ಟವಾಗಿವೆ. ಚಿತ್ರದ ಪ್ರಮುಖ ಪಾತ್ರದಾರಿ ವಿಜಯ್‌ ಅವರದ್ದು ಈಲ್ಲಿ ಬೀಗ ರಿಪೇರಿ ಮಾಡುವ ಒಬ್ಬ ಯುವಕ. ಆತನ ಹೆಸರು ಶಹಜಹಾನ್.‌ ಆತ ಬೀಗ ರಿಪೇರಿಯಿಂದ ಬರುವ ಸಂಪಾದನೆಯಿಂದ ಜೀವನ ನಡೆಸಲು ಕಷ್ಟ ಆದಾಗ, ಕಳ್ಳತನಕ್ಕೆ ಕೈ ಹಾಕುತ್ತಾರೆ. ಅಲ್ಲಿಂದ ಏನೆಲ್ಲ ಘಟನೆಗಳು ಘಟಿಸುತ್ತವೆ ಎನ್ನುವ ಕಥಾನಕವೇ ಈ ಚಿತ್ರದ್ದು. ವಿಜಯ್‌ ಅವರಿಗೆ ಇಲ್ಲಿ ಜೋಡಿಯಾಗಿ ಮಾತಂಗಿ ಪ್ರಸನ್ನ ನಟಿಸಿದ್ದಾರೆ. ಅವರೆಲ್ಲ ಟ್ರೇಲರ್‌ ನಲ್ಲಿ ಕಾಣಿಸಿಕೊಂಡು ಭಾರೀ ಕುತೂಹಲ ಮೂಡಿಸಿರುವುದು ವಿಶೇಷ.

ಅಷ್ಟು ಮಾತ್ರವಲ್ಲ,ರಿಲೀಸ್‌ ಹಿನ್ನೆಲೆಯಲ್ಲೀಗ ಚಿತ್ರ ತಂಡ ಪ್ರಚಾರಕ್ಕಾಗಿ ಮೊನ್ನೆಯಷ್ಟೇ ವಿಶೇಷವಾದ ಆನಿಮೇಟೆಡ್‌ ವಿಡಿಯೊವೊಂದನ್ನು ಲಾಂಚ್‌ ಮಾಡಿದೆ. ಆ ವಿಡಿಯೋ ಮೂಲಕ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಆಹ್ವಾನಿಸುವ ವಿಶಿಷ್ಟ ಪ್ರಯೋಗವನ್ನು ಚಿತ್ರ ತಂಡ ಮಾಡಿದೆ. ಇದು ತುಂಬಾನೆ ಡಿಫೆರೆಂಟ್‌ ಆಗಿದೆ.ಆನಿಮೇಟೆಡ್‌ ವಿಡಿಯೋದಲ್ಲಿ ದಿವಂಗತ ನಟರಾದ ರಾಜ್‌ ಕುಮಾರ್‌, ಶಂಕರ್‌ ನಾಗ್‌, ವಿಷ್ಣುವರ್ದನ್‌, ಅಂಬರೀಷ್‌ ಸೇರಿ ಹಲವು ಕಲಾವಿದರ ಜೊತೆಗೆ ನನ ದಿವಂಗತ ಸಂಚಾರಿ ವಿಜಯ್‌ ಅವರು ಮಾತುಕತೆ ನಡೆಸುತ್ತಾ ತಮ್ಮ ಹೊಸ ಚಿತ್ರದ ಬಗ್ಗೆ ವಿವರಿಸುವ ದೃಶ್ಯವದು.

ಈ ವಿಡಿಯೋ ಮೂಲಕ ವಿಜಯ್‌ ಅವರನ್ನು ಹಲವರು ನೆನಪಿಸಿಕೊಂಡಿದ್ದಾರೆ. ಅದು ಕೂಡ ಚಿತ್ರದ ಬಗ್ಗೆ ದೊಡ್ಡ ಕ್ಯೂರಿಯಾಸಿಟಿ ಹುಟ್ಟುವಂತೆ ಮಾಡಿದೆ. ಚಿತ್ರ ತಂಡ ಹೇಳುವ ಪ್ರಕಾರ 100 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಸಿನಿಮಾ ರಿಲೀಸ್‌ ಆಗುತ್ತಿದೆ. ನಟ ವಿಜಯ್‌ ಅಭಿಮಾನಿಗಳು ಕೂಡ ದೊಡ್ಡ ಕಾತರದಲ್ಲಿದ್ದಾರೆ. ಕಥೆ ಜತೆಗೆ ಕಲಾವಿದರ ಅಭಿನಯವೂ ಕೂಡ ಇಲ್ಲಿ ಸಾಕಷ್ಟು ಕುತೂಹಲ ಹುಟ್ಟು ಹಾಕಿವೆ. ಆ ಕಾರಣಕ್ಕೆ ಸಿನಿಮಾಕ್ಕೆ ದೊಡ್ಡ ರೆಸ್ಪಾನ್ಸ್‌ ಸಿಗುವ ನಿರೀಕ್ಷೆ ಕೂಡ ಚಿತ್ರ ತಂಡಕ್ಕಿದೆ. ಚಿತ್ರ ತಂಡ ಅಂದುಕೊಂಡಂತೆ ಸಿನಿಮಾ ಕನ್ನಡ ಸಿನಿಮಾ ರಸಿಕರ ಆಶೀರ್ವಾದವೂ ಸಿಗಲಿ.

  • ಎಂಟರ್‌ ಟೈನ್‌ಮೆಂಟ್‌ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಅಪಾರ್ಟ್‌ಮೆಂಟ್ಸ್‌ನಲ್ಲಿ ರೋಚʼಕಥೆʼ! ಸಸ್ಪೆನ್ಸ್-‌ಥ್ರಿಲ್ಲರ್‌ ಬಿಡುಗಡೆಗೆ ʼಅಮೃತʼ ಘಳಿಗೆ! ಬೆಂಗಳೂರಿಗರ ಕಥೆ-ವ್ಯಥೆಯ ಚಿತ್ರಣವಿದು…

ಗುರುರಾಜ ಕುಲಕರ್ಣಿ ನಿರ್ಮಾಣದಲ್ಲಿ ಆಸಕ್ತಿ ಹೊಂದಿ ಸದಭಿರುಚಿಯ ಸಿನಿಮಾ ಕೊಡಬೇಕು ಅನ್ನುವ ಉತ್ಸಾಹದಲ್ಲಿದ್ದವರು. ಈಗಾಗಲೇ “ಆಕ್ಸಿಡೆಂಟ್”‌ ಮತ್ತು “ಲಾಸ್ಟ್‌ ಬಸ್‌” ಸಸ್ಪೆನ್ಸ್‌ , ಥ್ರಿಲ್ಲರ್‌ ಕಥಾ ಹಂದರ ಚಿತ್ರಗಳಿಗೆ ನಿರ್ಮಾಣದಲ್ಲೂ ಸಾಥ್‌ ಕೊಟ್ಟವರು. ಈಗ ಗುರುರಾಜ ಕುಲಕರ್ಣಿ ಅವರು ಮೊದಲ ಬಾರಿಗೆ ನಿರ್ದೇಶನದ ಪಟ್ಟ ಅಲಂಕರಿಸಿದ್ದಾರೆ. ಅದರೊಂದಿಗೆ ಜಿ 9 ಕಮ್ಯುನಿಕೇಷನ್ಸ್‌ ಮೀಡಿಯಾ ಅಂಡ್‌ ಎಂಟರ್‌ಟೈನ್‌ಮೆಂಟ್ಸ್‌ ಬ್ಯಾನರ್‌ನಡಿ ನಿರ್ಮಾಣದ ಜವಾಬ್ದಾರಿಯೂ ಅವರದೇ ಅನ್ನೋದು ವಿಶೇಷ.

ಸಿನಿಮಾದ ಸೆಳೆತವೇ ಹಾಗೆ. ಇಲ್ಲಿ ಯಾರು ಯಾವಾಗ ಏನ್‌ ಬೇಕಾದರೂ ಆಗಬಹುದು. ಅಂಥದ್ದೊಂದು ಮ್ಯಾಜಿಕ್‌ ಈ ಬಣ್ಣದ ಲೋಕದಲ್ಲಿದೆ. ಹೌದು, ಇಲ್ಲಿ ನಿರ್ದೇಶಕರಾದವರು ಹೀರೋ ಆಗಿದ್ದಾರೆ. ಹೀರೋ ಆಗಿದ್ದವರು ನಿರ್ದೇಶಕರಾಗಿದ್ದಾರೆ. ನಿರ್ಮಾಪಕರು ಹೀರೋ ಆಗಿರುವ ಉದಾಹರಣೆ ಬೇಕಾದಷ್ಟಿದೆ. ಆದರೆ, ನಿರ್ಮಾಪಕರು ನಿರ್ದೇಶಕರಾದ ಉದಾಹರಣೆ ಬೆರಳೆಣಿಕೆಯಷ್ಟು ಮಾತ್ರ. ಆ ಸಾಲಿಗೆ ಗುರುರಾಜ ಕುಲಕರ್ಣಿ ಕೂಡ ಸೇರಿದ್ದಾರೆ. ಹೌದು, ಗುರುರಾಜ ಕುಲಕರ್ಣಿ ನಿರ್ಮಾಣದಲ್ಲಿ ಆಸಕ್ತಿ ಹೊಂದಿ ಸದಭಿರುಚಿಯ ಸಿನಿಮಾ ಕೊಡಬೇಕು ಅನ್ನುವ ಉತ್ಸಾಹದಲ್ಲಿದ್ದವರು. ಈಗಾಗಲೇ “ಆಕ್ಸಿಡೆಂಟ್”‌ ಮತ್ತು “ಲಾಸ್ಟ್‌ ಬಸ್‌” ಸಸ್ಪೆನ್ಸ್‌ , ಥ್ರಿಲ್ಲರ್‌ ಕಥಾ ಹಂದರ ಚಿತ್ರಗಳಿಗೆ ನಿರ್ಮಾಣದಲ್ಲೂ ಸಾಥ್‌ ಕೊಟ್ಟವರು. ಈಗ ಗುರುರಾಜ ಕುಲಕರ್ಣಿ ಅವರು ಮೊದಲ ಬಾರಿಗೆ ನಿರ್ದೇಶನದ ಪಟ್ಟ ಅಲಂಕರಿಸಿದ್ದಾರೆ. ಅದರೊಂದಿಗೆ ಜಿ೯ ಕಮ್ಯುನಿಕೇಷನ್ಸ್‌ ಮೀಡಿಯಾ ಅಂಡ್‌ ಎಂಟರ್‌ಟೈನ್‌ಮೆಂಟ್ಸ್‌ ಬ್ಯಾನರ್‌ನಡಿ ನಿರ್ಮಾಣದ ಜವಾಬ್ದಾರಿಯೂ ಅವರದೇ ಅನ್ನೋದು ವಿಶೇಷ. ಅಂದಹಾಗೆ, ಅವರ ರಚನೆಯ ಚೊಚ್ಚಲ ನಿರ್ದೇಶನದ ಸಿನಿಮಾ “ಅಮೃತ್‌ ಅಪಾರ್ಟ್‌ಮೆಂಟ್ಸ್‌”.

ಈ ಶೀರ್ಷಿಕೆ ಕೇಳಿದವರಿಗೆ ಎಲ್ಲೋ ಒಂದು ಕಡೆ ಕುತೂಹಲ ಮೂಡಿಸುವುದು ನಿಜ. ಹೌದು, ಈಗಾಗಲೇ ಚಿತ್ರದ ಟೀಸರ್‌ ಬಿಡುಗಡೆಯಾಗಿದ್ದು, ಸಾಕಷ್ಟು ಕುತೂಹಲ ಕೆರಳಿಸಿದ್ದಲ್ಲದೆ, ಮೆಚ್ಚುಗೆಯನ್ನೂ ಪಡೆದುಕೊಂಡಿದೆ. ಇತ್ತೀಚೆಗೆ ಆಪ್ತರಿಗೊಂದು ಪ್ರದರ್ಶನ ಏರ್ಪಡಿಸಿದ್ದ ನಿರ್ದೇಶಕ ಗುರುರಾಜ ಕುಲಕರ್ಣಿ ಅವರ ಕೆಲಸವನ್ನು ಚಿತ್ರರಂಗದ ಹಲವು ತಾಂತ್ರಿಕ ವರ್ಗದವರು ಮೆಚ್ಚಿಕೊಂಡಿದ್ದಾರೆ. ಸಹಜವಾಗಿಯೇ ಚಿತ್ರತಂಡಕ್ಕೆ ಆ ಮೆಚ್ಚುಗೆ ಮತ್ತಷ್ಟು ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಇದಕ್ಕೂ ಮೊದಲು “ಅಮೃತ‌ ಅಪಾರ್ಟ್‌ಮೆಂಟ್ಸ್‌ʼ ಚಿತ್ರದ ಫಸ್ಟ್‌ ಲುಕ್‌ ಹಾಗೂ ಟೀಸರ್‌ ಹೊರ ಬಂದಿದ್ದು, ಚಿತ್ರದ ಬಗ್ಗೆ ತೀವ್ರ ರೋಚಕತೆ ಮೂಡಿಸುವ ಟೀಸರ್‌ ಸೋಷಲ್‌ ಮೀಡಿಯಾದಲ್ಲಿ ಸಖತ್‌ ಸದ್ದು ಮಾಡಿದ್ದು ಎಲ್ಲರಿಗೂ ಗೊತ್ತಿದೆ. ಈಗ ಸಿನಿಮಾ ಅಕ್ಟೋಬರ್‌ನಲ್ಲಿ ಪ್ರೇಕ್ಷಕರ ಮುಂದೆ ಬರಲು ತಯಾರಾಗುತ್ತಿದೆ. ಸದ್ಯ ನಿರ್ದೇಶಕರು ಬಿಡುಗಡೆಗೆ ಸಜ್ಜಗೊಳ್ಳುತ್ತಿದ್ದು, ಇಷ್ಟರಲ್ಲೇ ಬಿಡುಗಡೆಯ ದಿನವನ್ನು ಘೋಷಣೆ ಮಾಡಲಿದ್ದಾರೆ.

ಇನ್ನು, “ಅಮೃತ‌ ಅಪಾರ್ಟ್‌ ಮೆಂಟ್ಸ್‌ʼ ಚಿತ್ರವನ್ನು ಕನ್ನಡದ ಪ್ರೇಕ್ಷಕರ ಮುಂದೆ ತರಲು ರೆಡಿಯಾಗಿರುವ ನಿರ್ದೇಶಕ ಗುರುರಾಜ ಕುಲಕರ್ಷಣಿ, ಒಂದೊಳ್ಳೆಯ ಸಂದೇಶ ಕೊಡುವ ಹುಮ್ಮಸ್ಸಿನಲ್ಲಿದ್ದಾರೆ. ಅಂದಹಾಗೆ, ಇದೊಂದು ಕಾಮಿಡಿ, ಸಸ್ಪೆನ್ಸ್, ಥ್ರಿಲ್ಲರ್ ಅಂಶಗಳನ್ನೊಳಗೊಂಡ ಚಿತ್ರ. ಬಾಲಾಜಿ ಮನೋಹರ್‌ ಈ ಚಿತ್ರದಲ್ಲಿ ಪ್ರಮುಖ ಪಾತ್ರಧಾರಿ. ತಾರಕ್ ಪೊನ್ನಪ್ಪ ನಾಯಕರಾಗಿದ್ದಾರೆ.

ಊರ್ವಶಿ ಗೋರ್ವಧನ್‌ ಅವರಿಗೆ ನಾಯಕಿಯಾಗಿದ್ದಾರೆ. ಉಳಿದಂತೆ ನಟಿ ಮಾನಸ ಜೋಷಿ ಇಲ್ಲೊಂದು ವಿಶೇಷ ಪೊಲೀಸ್‌ ಅಧಿಕಾರಿ [ಪಾತ್ರ ಮಾಡಿದ್ದಾರೆ. ಸೀತಾ ಕೋಟೆ ಲಾಯರ್‌ ಆಗಿದ್ದಾರೆ. ಸಂಪತ್‌ ಕುಮಾರ್‌, ಮಾಲತೇಶ್, ಸಿತಾರಾ, ಜಗದೀಶ್ ಜಾಲಾ, ಅರುಣ ಮೂರ್ತಿ, ರಾಜು ನೀನಾಸಂ, ಶಂಕರ್ ಶೆಟ್ಟಿ ರಂಗಸ್ವಾಮಿ ಇತರರು ನಟಿಸಿದ್ದಾರೆ.

ಚಿತ್ರದ ಬಗ್ಗೆ ನಿರ್ದೇಶಕರು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ.”ಇದು ಬೆಂಗಳೂರಿನ ಕಥೆ. ಐಟಿಬಿಟಿ ಅನ್ನೋ ಈ ಜಮಾನಾದ ಕಥೆ. ಬೆಂಗಳೂರಿಗರು ಸದ್ಯ ಏನಾಗುತ್ತಿದ್ದಾರೆ ಎಂಬುದನ್ನು ಈ ಸಿನಿಮಾ ಮೂಲಕ ಸಸ್ಪೆನ್ಸ್ ಶೈಲಿಯಲ್ಲಿ ತೋರಿಸಲು ಹೊರಟಿದ್ದಾರೆ. ಒಡೆದು ಹೋದ ಮನಸ್ಸುಗಳನ್ನು ಒಂದು ಮಾಡುವ ಕೆಲಸ ಈ ಸಿನಿಮಾದಲ್ಲಿ ಆಗಿದೆ ಅನ್ನೋದು ನಿರ್ದೇಶಕರ ಮಾತು.


ಮಲಯಾಳಂ ಚಿತ್ರರಂಗದಲ್ಲಿ ಕೆಲಸ ಮಾಡಿರುವ ಅರ್ಜುನ್ ಅಜಿತ್ ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದಾರೆ. ಕನ್ನಡದ ನೂರಾರು ಸಿನಿಮಾಗಳಿಗೆ ಕತ್ತರಿ ಹಾಕಿರುವ ಕೆಂಪರಾಜ್ ಅರಸ್ ಅವರ ಸಂಕಲನ ಇಲ್ಲಿದೆ. ಎಸ್.ಡಿ ಅರವಿಂದ್ 3 ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಕೆ.ಕಲ್ಯಾಣ್, ಡಾ. ಬಿ.ಆರ್ ಪೊಲೀಸ್ ಪಾಟೀಲ್ , ವಿ.ಮನೋಹರ್‌ ಅವರ ಸಾಹಿತ್ಯವಿದೆ.

ಚಿತ್ರಕ್ಕೆ ಮಹೇಶ್‌ ಎಸ್‌.ಪಿ.ಸಹ ನಿರ್ದೇಶಕರಾದರೆ, ಸುನೀಲ್‌ ವೈ.ಕೆ ನಿರ್ದೇಶನದ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ಹರೀಶ ಮೂರ್ತಿ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಚಿತ್ರಕ್ಕೆ ಸುನೀಲ್‌ ಆರ್.‌ ಡಿ ಮತ್ತು ನರಸಿಂಹ ಕುಲಕರ್ಣಿ ಅವರು ಸಹ ನಿರ್ಮಾಪಕರಾಗಿದ್ದಾರೆ.
ತೇಜಸ್ ಹರಿದಾಸ್, ವಾಣಿ ಹರಿಕೃಷ್ಣ, ಅರವಿಂದ್ ಹಾಡುಗಳಿಗೆ ಧ್ವನಿ ನೀಡಿದ್ದಾರೆ.

Categories
ಸಿನಿ ಸುದ್ದಿ

ಎರಡ್ಮೂರು ದಿನಗಳಲ್ಲಿ ಚಿತ್ರ ರಂಗಕ್ಕೆ ಗುಡ್‌ ನ್ಯೂಸ್‌! ಚಿತ್ರಮಂದಿರಗಳಲ್ಲಿ‌ನೂರರಷ್ಟು ಸೀಟು ಭರ್ತಿಗೆ ಮನವಿ

ಸಿನಿಮಾ‌ರಂಗ ಹೊಸ ಮನ್ವಂತರಕ್ಕೆ ತೆರೆದುಕೊಳ್ಳಲು ರೆಡಿಯಾಗುತ್ತಿದೆ.ಇಷ್ಟರಲ್ಲಿಯೇ ಚಿತ್ರಮಂದಿರಗಳಲ್ಲಿನ ನೂರರಷ್ಟು ಸೀಟು ಭರ್ತಿಗೆ ಸರ್ಕಾರ ಅವಕಾಶ‌ನೀಡುವ ಸಾದ್ಯತೆ ಇದೆ. ಹಾಗೊಂದು ಸುಳಿವು ಮಂಗಳವಾರ ಸರ್ಕಾರದಿಂದ ಸಿಕ್ಕಿದೆ. ಮಂಗಳವಾರ ಸಿನಿಮಾ ರಂಗವನ್ನು ಪ್ರತಿನಿಧಿಸಿ ನಿರ್ಮಾಪಕರಾದ ಸೂರಪ್ಪ ಬಾಬು, ಕೆ.ಪಿ.ಶ್ರೀಕಾಂತ್ ಹಾಗೂ ಜಯಣ್ಣ ಸೇರಿದಂತೆ ಒಂದು ನಿಯೋಗವು ಆರೋಗ್ಯ ಸಚಿವ ಸುಧಾಕರ್ ಅವರನ್ನು ಭೇಟಿ ಮಾಡಿತ್ತು‌ . ಈ ಸಂದರ್ಭದಲ್ಲಿ ಚಿತ್ರರಂಗದ ಸದ್ಯದ ಸ್ಥಿತಿಗತಿ ಹಾಗೂ ಸದ್ಯಕ್ಕೆ ಇರುವ ವಾತಾವರಣ ವನ್ನು ವಿವರಿಸಿ, ಶೇಕಡಾ ನೂರರಷ್ಟು ಸೀಟು ಭರ್ತಿಗೆ ಅವಕಾಶ ನೀಡುವಂತೆ ಮನವಿ‌ಮಾಡಿತು.ನಿರ್ಮಾಪಕರ ಜತೆಗಿನ ಮಾತುಕತೆ ನಂತರ ಸಚಿವ ಸುಧಾಕರ್ ಸುದ್ದಿಗಾರರೊಂದಿಗೆ ಮಾತನಾಡಿ, ಕೊರೋನಾ ಕಾರಣಕ್ಕೆ ಸಿನಿಮಾ ರಂಗ ಆನುಭವಿಸಿದ ಕಷ್ಟದ ಅರಿವು ನಮಗೂ ಇದೆ. ಎರಡು ಮೂರು ದಿನಗಳಲ್ಲಿ ತಾಂತ್ರಿಕ ತಜ್ಞರ ಜೊತೆ ಮಾತನಾಡುತ್ತೇವೆ. ಬಹುತೇಕ ತಾಂತ್ರಿಕ ಸಮಿತಿ ಕೂಡ ಚಿತ್ರಮಂದಿರಗಳಲ್ಲಿ ಶೇಕಡಾ ನೂರರಷ್ಟು ಸೀಟು ಭರ್ತಿಗೆ ಇಷ್ಟರಲ್ಲಿಯೇ ಅವಕಾಶ ನೀಡುವ ಆಶಾಭಾವನೆ ನಮಗೂ ಇದೆ ಎಂದರು.


ಚಿತ್ರಮಂದಿರಗಳಲ್ಲಿ ಈಗಾಗಲೇ ಶೇ.೫೦ರಷ್ಟು ಮಾತ್ರ ಸೀಟು ಭರ್ತಿಗೆ ಅವಕಾಶ ನೀಡಲಾಗಿದೆ. ಈಗಷ್ಟೇ ನಿರ್ಮಾಪಕರು ನನ್ನನ್ನ ಭೇಟಿ ಮಾಡಿದ್ದರು. ಅವರು ಚಿತ್ರಮಂದಿರಗಳಲ್ಲಿ ಶೇಕಡಾ ನೂರರಷ್ಟು ಸೀಟು ಭರ್ತಿಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಕೊರೊನಾ ಕಾರಣಕ್ಕೆ ಸಿನಿಮಾ ರಂಗಕ್ಕಾದ ನಷ್ಟದ ಬಗ್ಗೆ ಅವರು ಹೇಳಿದ್ದಾರೆ. ಸಿನಿಮಾ ರಂಗದವರು ಸಾಕಷ್ಟು ನಷ್ಟ ಅನುಭವಿಸುತ್ತಿರುವುದರ ಬಗ್ಗೆ ನಮಗೂ ಅರಿವಿದೆ. ಇದನ್ನು ಮುಖ್ಯಮಂತ್ರಿಗಳ ಜತೆಗೂ ಮಾತನಾಡುತ್ತೇನೆ. ಆದಷ್ಟು ಬೇಗ ಒಳ್ಳೆಯ ದಿನಗಳು ಬರಲಿವೆ ಎಂದು ಹೇಳಿದರು.


ಕೊರೋನಾ ಈಗಲೂ ಪೂರ್ಣ ಪ್ರಮಾಣದಲ್ಲಿ ಹೋಗಿಲ್ಲ. ಈಗಲೂ ಒಂದಷ್ಟು ಪಾಸಿಟಿವ್‌ ಕೇಸುಗಳು ಬರುತ್ತಿವೆ. ಈಗ ನಾವು ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕಾದರೂ ತಜ್ಞರ ಸಲಹೆಯೇ ಅಂತಿಮ. ಈ ನಿಟ್ಟಿನಲ್ಲಿಯೇ ಈಗಾಗಲೇ ತಾಂತ್ರಿಕ ಪರಿಣಿತರ ಜೊತೆ ದೂರವಾಣಿ ಮೂಲಕ ಮಾತನಾಡಿದ್ದೇವೆ. ಮುಂದಿನ ಎರಡು ಮೂರು ದಿನಗಳಲ್ಲಿ ತಾಂತ್ರಿಕ ತಜ್ಞರ ಜೊತೆ ಮತ್ತೆ ಮಾತನಾಡುತ್ತೇವೆ. ಆ ಸಮಿತಿ ಯಾವ ಅಭಿಪ್ರಾಯ ನೀಡಬಹುದು ಎನ್ನುವ ಬಗ್ಗೆ ನಮಗೂ ಕುತೂಹಲ ಇದೆ. ಸದ್ಯಕ್ಕೆ ಕೊರೋನಾ ಪಾಸಿಟಿವ್‌ ಸಂಖ್ಯೆ ಕಮ್ಮಿ ಆಗುತ್ತಿರುವುದರಿಂದ ಸಿನಿಮಾ ಮಂದಿರಗಳಿಗೆ ಶೇ.100 ರಷ್ಟು ಅವಕಾಶ ಸಿಗಬಹುದು ಎಂಬ ಆಶಾಭಾವನೆ ಇದೆ ಎಂದರು.


ಪೂರ್ಣಪ್ರಮಾಣದ ಸೀಟು ಭರ್ತಿಗೆ ಅವಕಾಶ ನೀಡುವುದಕ್ಕೂ ಮೊದಲು ಚರ್ಚೆ ನಡೆಸಬೇಕಿದೆ. ಬಳಿಕ ಸೋಂಕಿತರ ಸಂಖ್ಯೆ ನೋಡಿಕೊಂಡು ತೀರ್ಮಾನ ಮಾಡಲಿದ್ದೇವೆ. ಸೋಂಕು ಮತ್ತೆ ಹೆಚ್ಚಳವಾಗದಂತೆ ಕ್ರಮ ವಹಿಸಬೇಕಾಗುತ್ತದೆ. ಸಿಎಂ, ನಾನು ಹಾಗೂ ಎಲ್ಲರೂ ಚರ್ಚೆ ಮಾಡಿ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.

Categories
ಸಿನಿ ಸುದ್ದಿ

ಚಿತ್ರೀಕರಣ ಮುಗಿಸಿಕೊಂಡ ರಗಡ್ ಕಥೆಯ ‘ಬಯಲುಸೀಮೆ’!

ಉತ್ತರ ಕರ್ನಾಟಕ ಶೈಲಿಯ ರಗಡ್ ಕಥೆಗಳ ಬಗ್ಗೆ ಕನ್ನಡದ ಪ್ರೇಕ್ಷಕರಲ್ಲಿ ಯಾವತ್ತಿಗೂ ಒಂದು ರೀತಿಯ ಕುತೂಹಲ ಮತ್ತು ವಿಶೇಷವಾದ ಪ್ರೀತಿ ಇದ್ದೇ ಇರುತ್ತದೆ. ಅದೇ ಹಿನ್ನೆಲೆಯಲ್ಲೀಗ ಅದೇ ಸೊಗಡಿನ ಪಕ್ಕಾ ರಗಡ್ ಕಥಾನಕ ಹೊಂದಿರೋ ಚಿತ್ರವೊಂದು ಚಿತ್ರೀಕರಣ ಮುಗಿಸಿಕೊಂಡು ರಿಲೀಸ್‌ ಗೆ ರೆಡಿಯಾಗುತ್ತಿದೆ. ಆ ಸಿನಿಮಾವೇ ʼಬಯಲು ಸೀಮೆʼ

ಪೊಲಿಟಿಕಲ್ ಕ್ರೈಂ ಥ್ರಿಲ್ಲರ್ ಜಾನರ್‌ ಕಥಾ ಹಂದರದ ಸಿನಿಮಾ ಇದು. ಪಕ್ಕಾ ಉತ್ತರ ಕರ್ನಾಟಕ ಶೈಲಿಯಲ್ಲಿ ತಯಾರಾಗಿದೆ. ನಾನಾ ಮಜಲುಗಳ, ಮೈನವಿರೇಳಿಸೋ ತಿರುವುಗಳ ಮೂಲಕ ಪ್ರೇಕ್ಷಕರನ್ನು ಬೇರೆಯದ್ದೇ ಜಗತ್ತಿಗೆ ಕೊಂಡೊಯ್ಯುವಂತಹ ಕಥೆಯ ಈ ಚಿತ್ರ ಪ್ರೇಕ್ಷಕರನ್ನು ಪಕ್ಕಾ ರಂಜಿಸುವುದು ಗ್ಯಾರಂಟಿ ಎನ್ನುತ್ತಿದೆ ಚಿತ್ರ ತಂಡ.

ಲಕ್ಷ್ಮಣ್ ಸಾ ಶಿಂಗ್ರಿ ನಿರ್ಮಾಣದಲ್ಲಿ ಮೂಡಿ ಬಂದಿರುವ ಬಯಲುಸೀಮೆಯನ್ನು ವರುಣ್ ಕಟ್ಟೀಮನಿ ನಿರ್ದೇಶನ ಮಾಡಿದ್ದಾರೆ. ಎಂಭತ್ತರ ದಶಕ ಮತ್ತು ಈವತ್ತಿನ ಕಾಲಮಾನದೊಂದಿಗೆ ಜುಗಲ್ ಬಂಧಿ ಹೊಂದಿರೋ ಈ ಕಥೆ, ಆ ಎರಡು ಕಾಲಘಟ್ಟಗಳನ್ನೂ ಉತ್ತರ ಕರ್ನಾಟಕದ ಜವಾರಿ ಶೈಲಿಯಲ್ಲಿ ಕಟ್ಟಿಕೊಟ್ಟಿದೆಯಂತೆ.

ಸಾಹೂರಾವ್ ಶಿಂಧೆ ಎಂಬ ಶ್ರೀಮಂತ ವ್ಯಕ್ತಿಯ ಸುತ್ತ ಬಯಲು ಸೀಮೆಯ ಕಥೆ ಚಲಿಸುತ್ತೆ. ಆತನ ಸುತ್ತ ಹಬ್ಬಿಕೊಳ್ಳುವ ಅಕ್ರಮ ಸಂಬಂಧ, ಅದರ ಹಿನ್ನೆಲೆಯಲ್ಲೊಂದು ಲವ್ ಸ್ಟೋರಿ ಹಾಗೂ ಅದರ ಗರ್ಭದಲ್ಲಿಯೇ ಹುಟ್ಟಿಕೊಳ್ಳುವ ದ್ವೇಷ… ಕ್ಷಣ ಕ್ಷಣವೂ ಪ್ರೇಕ್ಷಕರನ್ನು ತುದಿ ಸೀಟಿಗೆ ತಂದು ಕೂರಿಸುವಂತಹ ಗಟ್ಟಿ ಕಥೆಯೊಂದಿಗೆ ಚಿತ್ರತಂಡ ಪ್ರೇಕ್ಷಕರನ್ನು ಮುಖಾಮುಖಿಯಾಗುವ ಉತ್ಸಾಹದಲ್ಲಿದೆ.

ಈ ಸಿನಿಮಾದಲ್ಲಿ ಭಯ ಹುಟ್ಟಿಸೋ ಪಾತ್ರಗಳಿವೆ. ಅದಕ್ಕೆ ಅತಿರಥ ಮಹಾರಥ ಕಲಾವಿದರುಗಳು ಜೀವ ತುಂಬಿದ್ದಾರೆ. ಬೃಹತ್ ತಾರಾಗಣ ಹೊಂದಿರುವ ಬಯಲು ಸೀಮಿಯಲ್ಲಿ ಬಿಸಿಲ ನಾಡ ಪ್ರತಿಭೆಗಳೂ ಮಿಂಚಲು ಅಣಿಯಾಗಿದ್ದಾರೆ. ಟಿ.ಎಸ್ ನಾಗಾಭರಣ, ರವಿಶಂಕರ್, ಸಂಯುಕ್ತ ಹೊರನಾಡು, ಯಶ್ ಶೆಟ್ಟಿ, ಭವಾನಿ ಪ್ರಕಾಶ್, ಅರ್ಚನಾ ಕೊಟ್ಟಿಗೆ, ವರುಣ್ ಕಟ್ಟೀಮನಿ, ಲಕ್ಷ್ಮೀ ನಾಡಗೌಡರ್, ಸಂತೋಷ್ ಉಪ್ಪಿನ್, ನಾಗರಾಜ ಭಟ್, ಮಹೇಶ್ ದೊಡ್ಡಕೈನವರ್, ಪ್ರದೀಪ್ ರಾಜ್ ಮುಂತಾದವರ ತಾರಾಗಣ ಈ ಸಿನಿಮಾದಲ್ಲಿದೆ.

ಸುಜಯ್ ಕುಮಾರ್ ಬಾವಿಕಟ್ಟಿ ಛಾಯಾಗ್ರಹಣ, ಮಾನಸಾ ಹೊಳ್ಳ ಸಂಗೀತ ನಿರ್ದೇಶನ, ಕಿರಣ್ ಕುಮಾರ್ ಸಂಕಲನ ಮತ್ತು ರಾಮು ಅವರ ನೃತ್ಯ ಸಂಯೋಜನೆಯಿಂದ ಬಯಲುಸೀಮೆ ಸಿಂಗರಿಸಿಕೊಂಡಿದೆ.

  • ಎಂಟರ್‌ ಟೈನ್‌ ಮೆಂಟ್‌ ಬ್ಯುರೋ ಸಿನಿಲಹರಿ
Categories
ಸಿನಿ ಸುದ್ದಿ

ಚಡ್ಡಿ ದೋಸ್ತ್ ಚಿತ್ರ ನೋಡಿದವರಿಗೆ ಚಿನ್ನದ ನಾಣ್ಯ ಉಚಿತ! ಯಾರಿಗುಂಟು ಇಂಥಾ ಅದೃಷ್ಟ!!

ಕನ್ನಡದ ಸಿನಿಪ್ರೇಮಿಗಳಿಗೆ ಗೋಲ್ಡನ್ ಆಪರ್ಚುನಿಟಿ. “ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ” ಚಿತ್ರದ ನಿರ್ಮಾಪಕರಾದ ರೆಡ್ ಅಂಡ್ ವೈಟ್ ಸೆವೆನ್ ರಾಜ್ ರವರು, ಮಾಗಡಿ ರಸ್ತೆಯ ವೀರೇಶ್ ಚಿತ್ರ ಮಂದಿರದಲ್ಲಿ ಚಡ್ಡಿದೋಸ್ತ್ ಚಿತ್ರ ವೀಕ್ಷಿಸಿದವರಿಗೆ ಉಚಿತವಾಗಿ ಬಂಗಾರದ ನಾಣ್ಯ ವನ್ನು ಕೊಡುವುದಾಗಿ ಘೋಷಿಸಿದ್ದಾರೆ.

ಹೌದು, ಈ ಕೊಡುಗೆ ಪ್ರತಿ ಪ್ರದರ್ಶನಕ್ಕೂ ಅನ್ವಯಿಸಲಿದೆ. ಒಂದು ಪ್ರದರ್ಶನದಲ್ಲಿ ಎಷ್ಟು ಜನ ಸಿನಿಮಾ ನೋಡುತ್ತಾರೋ ಅವರಲ್ಲಿ ಒಬ್ಬರನ್ನು ಲಕ್ಕಿ ಡಿಪ್ ಮೂಲಕ ಆರಿಸಿ ಅವರಿಗೆ ಅರ್ಧ ಗ್ರಾಂ ಚಿನ್ನದ ನಾಣ್ಯವನ್ನು ಬಹುಮಾನವಾಗಿ ಕೊಡಲಿದ್ದಾರೆ.

ಸ್ವತಃ ನಿರ್ಮಾಪಕ ಸೆವೆನ್ ರಾಜ್ ಅವರು ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಆಸ್ಕರ್ ಕೃಷ್ಣ ನಿರ್ದೇಶಿಸಿ, ಅವರೊಂದಿಗೆ ಲೋಕೇಂದ್ರ ಸೂರ್ಯ ನಾಯಕ ನಟರಾಗಿ ಅಭಿನಯಿಸಿರುವ “ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ” ಚಿತ್ರವು ಎಲ್ಲಾ ಕಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಯಶಸ್ಸಿನ ಖುಷಿಯಲ್ಲಿ ನಿರ್ಮಾಪಕ ಸೆವೆನ್ ರಾಜ್ ರವರು ಈ ಕೊಡುಗೆ ನೀಡಲು ಮುಂದಾಗಿದ್ದಾರೆ.

ಈ ಕೊಡುಗೆಯು 21-09-2021 ರಿಂದ ವೀರೇಶ್ ಚಿತ್ರಮಂದಿರದಲ್ಲಿ “ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ” ಚಿತ್ರ ವೀಕ್ಷಿಸುವ ಪ್ರೇಕ್ಷಕರಿಗೆ ಮಾತ್ರ ಅನ್ವಯಿಸಲಿದೆ.

ಇನ್ನೇಕೆ ತಡ, ನಾಳೆಯಿಂದ ‘ಚಡ್ಡಿ ದೋಸ್ತ್’ ಸಿನಿಮಾ ನೋಡಿ, ಬಂಗಾರದ ನಾಣ್ಯ ಗೆಲ್ಲಿ.

Categories
ಸಿನಿ ಸುದ್ದಿ

ಹೊಂಬಾಳೆ ಫಿಲ್ಮ್ಸ್ ಹಬ್ಬದೂಟ; ಸೆಪ್ಟೆಂಬರ್ 22ಕ್ಕೆ ಸಿನಿ ಪ್ರೇಮಿಗಳಿಗೆ ಬಾಳೆದೆಲೆ ಬಾಡೂಟ !

ಗಂಧದಗುಡಿಯಲ್ಲಿ ಹೊಡೆದ ಹೊಂಬಾಳೆ ಗೊನೆಗೆ ಇವತ್ತು ಪಕ್ಕದ ರಾಜ್ಯದಲ್ಲಿ ಮಾತ್ರವಲ್ಲ ಹೊರದೇಶದಲ್ಲೂ ಬೇಡಿಕೆ‌ ಇದೆ. ಅದಕ್ಕೆ ಕಾರಣ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ನಿರ್ಮಾಣಗೊಳ್ಳುವ ಚಿತ್ರಗಳು‌ ಸಿನಿಮಾ ಪ್ರೇಕ್ಷಕರಿಗೆ ಬಾಳೆದೆಲೆಯಲ್ಲಿ ಹಬ್ಬದೂಟ ಸವಿದಂತಿರುತ್ತದೆ. ಅಟ್ ದಿ‌ ಸೇಮ್ ಟೈಮ್ ಬಾಳೆದೆಲೆಯಲ್ಲಿಯೇ ಬಿರಿಯಾನಿ ಬಡಿದ್ಹಂಗೆ ಇರುತ್ತೆ. ಸದ್ಯ ಹಾಟ್ ಅಂಡ್ ಸ್ಮೈಸಿ ಸಮಾಚಾರ್ ಅಂದರೆ ಹೊಂಬಾಳೆ ಮುಖ್ಯಸ್ಥರು ಸೆಪ್ಟೆಂಬರ್ 22 ರಂದು ಹಬ್ಬದೂಟ ಬಡಿಸೋದಕ್ಕೆ ರೆಡಿಯಾಗಿರುವುದು.

ಹೌದು, ಪ್ರತಿಯೊಬ್ಬರಲ್ಲೂ ಹಸಿವಿದೆ, ಪ್ರತಿ ಅಗಳಿನಲ್ಲೂ ತಿನ್ನುವವರ ಹೆಸರಿದೆ.
‘ಅನ್ನದಾತೋ ಸುಖೀಭವ’ ಹೀಗಂತ ಬಾಳೆದೆಲೆಯಲ್ಲಿಯೇ ಬರೆದು ತಮ್ಮ ಹೊಂಬಾಳೆಯ 12ನೇ ಚಿತ್ರದ ಟೈಟಲ್ ಹಾಗೂ ಫಸ್ಟ್ ಲುಕ್ ನ ಇದೇ ಸೆಪ್ಟೆಂಬರ್ 22 ರಂದು ರಿವೀಲ್ ಮಾಡುವುದಾಗಿ ಹೊಂಬಾಳೆ ಮುಖ್ಯಸ್ಥರು ಸೋಷಿಯಲ್ ಮೀಡಿಯಾ ದಲ್ಲಿ ಅನೌನ್ಸ್ ಮಾಡಿದ್ದಾರೆ.

ಹೊಂಬಾಳೆಯ 12ನೇ ಚಿತ್ರದ ಹೀರೋ ಯಾರು? ನಿರ್ದೇಶಕರು ಯಾರು? ಈ ಕೂತೂಹಲದ ಪ್ರಶ್ನೆಗೆ ಉತ್ತರ ಬಾಳೆದೆಲೆಯ ಪೋಸ್ಟರ್ ಉತ್ತರ ಕೊಟ್ಟಿಲ್ಲ. ಆದರೆ, ಕಳೆದೆರಡು ದಿನಗಳ ಹಿಂದೆ ರಾಜಕುಮಾರ ಸಾರಥಿ ಸಂತೋಷ್ ಆನಂದ್ ರಾಮ್ ‌ಅವರು, ಪವರ್ ಸ್ಟಾರ್ ಗೆ ಮತ್ತೆ ಆಕ್ಷನ್ ಕಟ್ ಹೇಳ್ತಿರುವುದಾಗಿ ತಿಳಿಸಿದ್ದರು. ಹ್ಯಾಟ್ರಿಕ್ ಬಾರಿಸೋ ಜುಗಲ್ ಬಂಧಿಗೆ ಹೊಂಬಾಳೆ ಸಂಸ್ಥೆ ದುಡ್ಡುಹಾಕುವ ಸುದ್ದಿ ಈ ಹಿಂದೆಯೇ ಹೊರಬಿದ್ದಿತ್ತು. ಹೀಗಾಗಿ, ಹೊಂಬಾಳೆ ಬ್ಯಾನರ್ ನ 12ನೇ ಚಿತ್ರ ಪುನೀತ್-ಸಂತೋಷ್ ಆನಂದ್ ರಾಮ್ ಕಾಂಬೋದ ಮೂರನೇ ಚಿತ್ರ ಆಗಿರ್ಬೋದು ಅಂತ ಪ್ರಿಡಿಕ್ಟ್ ಮಾಡ್ಬೋದು.

ಸದ್ಯಕ್ಕೆ ಹೊಂಬಾಳೆ‌ ಫಿಲ್ಮ್ಸ್ ಸಿನಿಮಾ ತೋಟದಲ್ಲಿ ಆರು ಚಿತ್ರಗಳು ಅರಳುವ ಹಂತದಲ್ಲಿವೆ. ಕೆಜಿಎಫ್ ಚಾಪ್ಟರ್ 2, ಸಲಾರ್, ಭಗೀರ, ದ್ವಿತ್ವ, ರಿಚರ್ಡ್ ಆಂಟನಿ, ಕಾಂತಾರ, ಹೀಗೆ ಬ್ಯಾಕ್ ಟು‌ ಬ್ಯಾಕ್ ಚಿತ್ರಗಳು ಅದ್ದೂರಿಯಾಗಿ ನಿರ್ಮಾಣಗೊಳ್ತಿವೆ.

ಕೆಜಿಎಫ್ ಚಾಪ್ಟರ್ ೨ ಹಾಗೂ ಸಲಾರ್ ಗಾಗಿ ಇಡೀ ಇಂಡಿಯನ್ ಸಿನಿಮಾ ಇಂಡಸ್ಟ್ರಿಎದುರುನೋಡ್ತಿದೆ. ಈ ಮಧ್ಯೆಯೇ ಒಂದಾದ ಮೇಲೊಂದರಂತೆ ಹೊಂಬಾಳೆ ಸಂಸ್ಥೆ ಸಿನಿಮಾ ಅನೌನ್ಸ್ ಮಾಡ್ತಿದೆ. ಸೆ.22 ರಂದು 12 ನೇ ಚಿತ್ರದ ಶೀರ್ಷಿಕೆ ಹಾಗೂ ಫಸ್ಟ್ ಲುಕ್ ಹೊರಬರಲಿದೆ. ಹೇಗಿರಲಿದೆ ಟೈಟಲ್ ಕಮ್ ಫಸ್ಟ್ ಲುಕ್ ಜಸ್ಟ್ ವೇಯ್ಟ್ ಅಂಡ್ ವಾಚ್.

ವಿಶಾಲಾಕ್ಷಿ, ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಮೈಸೂರಲ್ಲೊಂದು ಮ್ಯೂಸಿಕಲ್‌ ಲವ್‌ಸ್ಟೋರಿ! ಅನಿವಾಸಿ ಕನ್ನಡಿಗನೊಬ್ಬನ ಲವ್‌ ಹಿಸ್ಟರಿ


ಮೈಸೂರು ಅಂದಾಕ್ಷಣ ನೆನಪಾಗೋದೇ ಅರಮನೆ, ದಸರಾ ವೈಭವ. ಈಗ ಮೈಸೂರು ಹೆಸರಿನ ಸಿನಿಮಾವೊಂದು ಸದ್ದಿಲ್ಲದೆಯೇ ಚಿತ್ರೀಕರಣಗೊಂಡಿದೆ. ಹೌದು, ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರು ಹೆಸರಿನ ಸಿನಿಮಾ ರೆಡಿಯಾಗಿದ್ದು, ಇನ್ನೇನು ಪ್ರೇಕ್ಷಕರ ಮುಂದೆ ಬರೋಕೆ ಸಜ್ಜಾಗುತ್ತಿದೆ. ಇದು ರಾಜ್ಯದಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗನೊಬ್ಬನ ಲವ್‌ಸ್ಟೋರಿ ಹೊಂದಿದೆ.

ಸದ್ಯ ಚಿತ್ರೀಕರಣಗೊಂಡಿರುವ ಈ ಚಿತ್ರ ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಉಡುಪಿ, ಭುವನೇಶ್ವರ್ ಇತರೆ ಸ್ಥಳಗಳಲ್ಲಿ ಸುಮಾರು ನಲವತ್ತು ದಿನಗಳ ಕಾಲ ಚಿತ್ರೀಕರಣ ನಡೆದಿದೆ. ಕಿರುತೆರೆಯಲ್ಲಿ ಕೆಲಸ ಮಾಡಿ ಅನುಭವ ಇರುವ ವಾಸುದೇವ ರೆಡ್ಡಿ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಎಸ್. ಆರ್. ಕಂಬೈನ್ಸ್ ಬ್ಯಾನರ್‌ನಲ್ಲಿ ವಾಸುದೇವ ರೆಡ್ಡಿ ಚಿತ್ರವನ್ನು ನಿರ್ಮಿಸಿದ್ದಾರೆ. ಜಗದೀಶ್ (ಜೆ.ಕೆ), ಕೆ.ಆರ್.ಅಪ್ಪಾಜಿ (ಕೊಡವತ್ತಿ) ಈ ಚಿತ್ರದ ಸಹ‌ ನಿರ್ಮಾಪಕರಾಗಿದ್ದಾರೆ.


ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ವರ್ಷಗಳಿಂದ ಕಲಾವಿದನಾಗಿ ಗುರುತಿಸಿಕೊಂಡಿರುವ ಜ್ಯೂನಿಯರ್ ನರಸಿಂಹರಾಜು ಅವರ ಸಾರಥ್ಯದಲ್ಲಿ ಈ ಚಿತ್ರ ತಯಾರಾಗುತ್ತಿದೆ ಎಂಬುದು ವಿಶೇಷ.
ಸಂವಿತ್ ಈ ಚಿತ್ರದ ನಾಯಕರಾಗಿದ್ದಾರೆ. ಅವರು ತೆಲುಗು, ಬಂಗಾಳಿ, ಭೋಜಪುರಿ ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿರುವ ಇವರಿಗೆ ಕನ್ನಡದ ಮೊದಲ ಚಿತ್ರವಿದು. ಇನ್ನು, ಪೂಜಾ ಈ ಚಿತ್ರದ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಜೂ.ನರಸಿಂಹರಾಜು, ಸತ್ಯಜಿತ್‌, ಕುರಿ ಪ್ರತಾಪ್, ಭಾಸ್ಕರ್ ಶೆಟ್ಟಿ, ಅಶೋಕ್ ಹೆಗ್ಡೆ, ಜೈ ಶ್ರೀ, ರವಿಕುಮಾರ್‌ ಇತರರು ಈ ಚಿತ್ರದಲ್ಲಿದ್ದಾರೆ. ರಘು ಶಾಸ್ತ್ರಿ, ರವಿಶಂಕರ್ ನಾಗ್, ಅನಿತಕೃಷ್ಣ ಬರೆದಿರುವ ಹಾಡುಗಳಿಗೆ ರಮಣಿ ಸುಂದರೇಶನ್, ಅನಿತಕೃಷ್ಣ, ವಿಜಯ್ ರಾಜ್ ಸಂಗೀತ ನೀಡಿದ್ದಾರೆ.
ಕೃಷ್ಣ ಮಳವಳ್ಳಿ ಸಂಭಾಷಣೆ ಬರೆದಿದ್ದಾರೆ. ಭಾಸ್ಕರ್ ವಿ ರೆಡ್ಡಿ ಛಾಯಾಗ್ರಹಣವಿದೆ. ಸಿದ್ದು ಭಗತ್ ಸಂಕಲನ ಮಾಡಿದರೆ, ಸ್ಟಾರ್ ನಾಗಿ, ಮೈಸೂರು ರಾಜು, ಸುಧಾಕರ್ ವಸಂತ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಶ್ರೀಕಾಂತ್ ಸಾಹಸವಿದೆ.

Categories
ಸಿನಿ ಸುದ್ದಿ

‘ಮಚ್ಚಾ ನಾನ್ ಇದಿನೋ’ ಎಂದಿದ್ದರು ಚಿರು; ಸೈಮಾ ಅಂಗಳದಲ್ಲಿ ಸಾಬೀತು- ಗೆಳೆಯ ಪನ್ನಗನಿಗೆ ಬೆಸ್ಟ್ ಡೈರೆಕ್ಟರ್ ಅವಾರ್ಡ್!

ಡೋಂಟ್ ವರೀ ಮಚ್ಚಾ ನಾನ್ ನಿನ್ನ ಜೊತೆ ಇರುತ್ತೀನಿ ಹೀಗಂತ ಗೆಳೆಯ ಪನ್ನಗನಿಗೆ ಚಿರು ಸದಾ ಹೇಳ್ತಿದ್ದಂತಹ ಮಾತು. ಇದ್ದಷ್ಟು ದಿನ ಕೊಟ್ಟ ಮಾತಿಗೆ ಬದ್ದರಾಗಿದ್ದರು, ದೋಸ್ತಿಯ ಬೆನ್ನಿಗೆ ನಿಂತಿದ್ದರು. ಜೀವದ ಗೆಳೆಯ ಪನ್ನಗನ ಪ್ರತಿ ಹೆಜ್ಜೆಯಲ್ಲೂ ಹೆಜ್ಜೆಹಾಕಿದರು. ಇದೀಗ ದೈಹಿಕವಾಗಿ ಇಲ್ಲದ ಕ್ಷಣಗಳಲ್ಲೂ ಸ್ನೇಹಿತ ಪನ್ನಗನ ಯಶಸ್ಸಿಗೆ ಪರೋಕ್ಷವಾಗಿ ಕಾರಣರಾಗಿದ್ದಾರೆ ಯುವಸಾಮ್ರಾಟ್ ಚಿರಂಜೀವಿಯವರು. ಅದ್ಹೇಗೆ? ಎಂಥ? ಎಂಬುದರ ಕಥನ ಚಿಕ್ಕದಾಗಿ ನಿಮ್ಮ ಮುಂದೆ.

ಸ್ಯಾಂಡಲ್‌ವುಡ್‌ನ ಯುವಸಾಮ್ರಾಟ್ ಚಿರಂಜೀವಿ ಹಾಗೂ ಪನ್ನಗಭರಣ ಇಬ್ಬರು ಬೆಸ್ಟ್ ಫ್ರೆಂಡ್ಸ್. ಬರೀ ಬೆಸ್ಟ್ ಫ್ರೆಂಡ್ಸ್ ಅಲ್ಲ ಇಬ್ಬರು ಪ್ರಾಣಸ್ನೇಹಿತರು, ಜೀವದ ಗೆಳೆಯರು, ಕುಚುಕುಗಳು, ಚಡ್ಡಿದೋಸ್ತ್ ಗಳು ಎಲ್ಲಕ್ಕಿಂತ ಮಿಗಿಲಾಗಿ ಒಡಹುಟ್ಟಿದ ಅಣ್ಣತಮ್ಮಂದ್ರಿಗೆ ಸೆಡ್ಡು ಹೊಡೆದಂತೆ ಬಾಳಿ ತೋರಿಸಿದವರು. ರಕ್ತ ಹಂಚಿಕೊಂಡು ಹುಟ್ಟಿದವರಿಗಿಂತ ಮಿಗಿಲಾಗಿದ್ದ ಇವರಿಬ್ಬರನ್ನು ನೋಡಿ ಗೆಳೆತನ ಅಂದ್ರೆ ಹಿಂಗಿರಬೇಕು, ದೋಸ್ತಿ ಅಂದ್ರೆ ಹಿಂಗಿರಬೇಕು ಅಂತ ಮೆಚ್ಚುಗೆ ಪಡುತ್ತಿದ್ದರು. ಚಿರು ಹಾಗೂ ಪನ್ನಗ ಒಂದೇ ತಟ್ಟೆಯಲ್ಲಿ ತಿನ್ನುತ್ತಿದ್ದರು, ಕಷ್ಟ-ಸುಖ-ನೋವು-ನಲಿವಲ್ಲಿ ಜತೆಯಾಗಿದ್ದರು. ಸೋಲು-ಗೆಲುವು ಎಲ್ಲವನ್ನೂ ಕಂಡುಂಡು ಆಕಾಶದೆತ್ತರಕ್ಕೆ ಬೆಳೆದುನಿಲ್ಲೋಕೆ ಸಕಲ ತಯ್ಯಾರಿ ಮಾಡಿಕೊಂಡಿದ್ದರು. ವಾಯಪುತ್ರ ಚಿರು ಹಾಗೂ ಪ್ರಜ್ವಲ್ ಕಾಂಬಿನೇಷನ್‌ನಲ್ಲಿ ಮಹಾಸಿನಿಮಾ ಮಾಡೋದಕ್ಕೆ ನಿರ್ದೇಶಕ ಪನ್ನಗ ಪ್ಲ್ಯಾನ್ ಕೂಡ ಮಾಡಿದ್ದರು. ಹೀಗಿರುವಾಗಲೇ ಹೇಳದೇ ಕೇಳದೇ ಚಿರು ಉಸಿರು ಚೆಲ್ಲಿದರು. ಮುಂದೆಂದೂ ತಿರುಗಿ ಬಾರದ ಲೋಕಕ್ಕೆ ಹೊರಟೆಹೋದರು.

ರಾಜಮಾರ್ತಾಂಡ ಚಿರು ದೈಹಿಕವಾಗಿ ಕಣ್ಮರೆಯಾಗಿರಬಹುದು, ಆದರೆ ಎಲ್ಲರ ಕಣ್ಣಲ್ಲೂ, ಮನಸ್ಸಲ್ಲೂ, ಹೃದಯದಲ್ಲೂ ಶಿವಾರ್ಜುನನಾಗಿ ಅಚ್ಚಳಿಯದೇ ಉಳಿದಿದ್ದಾರೆ. ಚಿರು ಕುಟುಂಬಸ್ತರು ಮಾತ್ರವಲ್ಲ ಕರುನಾಡ ಮಂದಿ ಚಿರು ಬಿಟ್ಟೋದ ನೆನಪುಗಳನ್ನು ಆಗಾಗ ಮೆಲುಕು ಹಾಕ್ತಾರೆ. ಈ ರೀತಿಯಾಗಿ ಎಲ್ಲರೂ ನೆನಪಿಸಿಕೊಳ್ಳುವಂತೆ ಬಾಳಿಬದುಕಿದ ವಾಯುಪುತ್ರ ಚಿರಂಜೀವಿ ಸರ್ಜಾ, ತನ್ನ ಜೀವದ ಗೆಳೆಯನ ಯಶಸ್ಸಿಗೆ ಪರೋಕ್ಷವಾಗಿ ಕಾರಣರಾಗಿದ್ದಾರೆ. ದೈಹಿಕವಾಗಿ ಇಲ್ಲದ ಹೊತ್ತಲ್ಲೂ ಸ್ನೇಹಿತ ಪನ್ನಗಭರಣರ ಯಶಸ್ಸಿಗೆ ಬೆಂಗಾವಲಾಗಿ ನಿಂತಿದ್ದಾರೆ. ಬದುಕಿದ್ದಾಗ ಸದಾ ಹೇಳುತ್ತಿದ್ದ ಡೋಂಟ್ ವರೀ ಮಚ್ಚಾ ನಾನ್ ನಿನ್ನ ಜೊತೆ ಇರುತ್ತೀನಿ'ಎನ್ನುವ ಮಾತಿಗೆ ಯುವಸಾಮ್ರಾಟ್ ಬದ್ದರಾಗಿದ್ದಾರೆ. ಸೈಮಾ ಅಂಗಳದಲ್ಲಿ ಪ್ರಶಸ್ತಿ ಸ್ವೀಕರಿಸಿದ ಪನ್ನಗಭರಣ ಚಿರು ನನಗೆ ಲಕ್ಕಿಚಾರ್ಮ್’ ಅಂತ ಹೇಳಿಕೊಂಡಿದ್ದಾರೆ.

2021ರ ಅದ್ಧೂರಿ ಸೈಮಾಗೆ ತೆರೆಬಿದ್ದಿದೆ. ಕನ್ನಡದ ನಿರ್ದೇಶಕ ಪನ್ನಗಭರಣರ ‘ಫ್ರೆಂಚ್ ಬಿರಿಯಾನಿ’ ಚಿತ್ರದ ನಿರ್ದೇಶನಕ್ಕೆ 2020ರ ಸೈಮಾ ಬೆಸ್ಟ್ ಡೈರೆಕ್ಟರ್ ಅವಾರ್ಡ್ ಸಿಕ್ಕಿದೆ. ಅತ್ಯುತ್ತಮ ನಿರ್ದೇಶಕನ ಪ್ರಶಸ್ತಿ ಮುಡಿಗೇರಿಸಿಕೊಂಡ ಪನ್ನಗಭರಣ ಇಡೀ ಚಿತ್ರತಂಡಕ್ಕೆ ಅವಾರ್ಡ್‌ ಅನ್ನು ಡೆಡಿಕೇಟ್ ಮಾಡಿದರು. ನನ್ನ ಕನಸು ನನಸಾಯ್ತು ಅಂತ ಸಂತೋಷಪಟ್ಟು ಸಂಭ್ರಮಿಸಿದ ಪನ್ನಗಭರಣ ಜೀವದ ಗೆಳೆಯ ಹೊತ್ತುತಂದ ಅದೃಷ್ಟಕ್ಕೆ ಅಚ್ಚರಿಗೊಂಡರು ಜೊತೆಗೆ ಆಕಾಶಕ್ಕೆ ಕೈಮುಗಿದರು.

ಹೌದು, ಸೈಮಾ ಅಂಗಳಕ್ಕೆ ಹೋಗುವಾಗ ಪನ್ನಗ ಚಿರುನಾ ಜೊತೆಗೆ ಕರ್ಕೊಂಡು ಹೋಗಿದ್ದರು. ಅದ್ಹೇಗೆ ಅಂದರೆ ಪನ್ನಗ ತೊಟ್ಟಿದ್ದ ಬ್ಲೇಜರ್ ಕಾಲರ್ ನಲ್ಲಿ ಚಿರು ಕಂಗೊಳಿಸುತ್ತಿದ್ದರು. ಪನ್ನಗರ ಪತ್ನಿ ನಿಖಿತಾ ಪ್ರಿಯಾಭರಣಗೆ ಚಿರು ಹಾಗೂ ಪನ್ನಗರ ನಡುವಿದ್ದ ಪ್ರೀತಿ ಬಾಂದವ್ಯದ ಬಗ್ಗೆ ಚೆನ್ನಾಗಿಯೇ ಗೊತ್ತು ಹಾಗೇ ಹತ್ತಿರದಿಂದ ನೋಡಿದ್ದಾರೆ. ಹೀಗಾಗಿಯೇ, ಬ್ಲೇಜರ್ ನ ಕಾಲರ್ ನಲ್ಲಿ ಯುವಸಾಮ್ರಾಟ್ ಫೋಟೋ ಪ್ರಿಂಟ್ ಹಾಕಿಸಿದರು. ಇದನ್ನೆಲ್ಲಾ ನೋಡಿ ಸ್ವತಃ ಪನ್ನಗ ಕೂಡ ಅಚ್ಚರಿಗೊಂಡರು. ಸೈಮಾ ಅಂಗಳದಲ್ಲಿ ದೋಸ್ತಿ ಜೊತೆ ಧಗಧಗಿಸಿದರು. ಅಲ್ಲಿಂದ ವಾಪಾಸ್ ಬರುವಾಗ ಬೆಸ್ಟ್ ಡೈರೆಕ್ಟರ್ ಅವಾರ್ಡ್ ಪಡೆದುಕೊಂಡು, ಕಾಲರ್ ಪಟ್ಟಿ ಎಗರಿಸುತ್ತಲೇ ಹೊರಬಂದರು ಪನ್ನಗ.

ಇದನ್ನೆಲ್ಲಾ ನೋಡಿದಾಗ ಪನ್ನಗ ಯಶಸ್ಸಿಗೆ ಚಿರು ಪರೋಕ್ಷವಾಗಿ ಬೆನ್ನೆಲುಬಾಗಿ ನಿಂತಿದ್ದಾರೆ ಅನ್ಸುತ್ತೆ. ಸ್ವರ್ಗದಿಂದಲೇ ಗೆಳೆಯನ ಈ ಸೈಮಾ ಸಕ್ಸಸ್ ಗೆ ಆಶೀರ್ವಾದ ಮಾಡಿದ್ದಾರೆ ಎನಿಸುತ್ತೆ. ಎನಿವೇ, ನಿರ್ದೇಶಕ ಪನ್ನಗ ಚಿರುನಾ ಲಕ್ಕಿ ಚಾರ್ಮ್ ಎಂದು‌ ನಂಬಿದ್ದಾರೆ. ಅವರ ನಂಬಿಕೆಗೆ ಸೈಮಾ ಕೊಟ್ಟಿರುವ ಬೆಸ್ಟ್ ಡೈರೆಕ್ಟರ್ ಅವಾರ್ಡ್ ಸಾಕ್ಷಿ . ಒಟ್ಟಿನಲ್ಲಿ ನಂಬಿಕೆಯೇ ದೇವರು, ಆ ದೇವರು ನಾವು ನಂಬಿದವರು ಅಲ್ಲವೇ.

ವಿಶಾಲಾಕ್ಷಿ , ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

error: Content is protected !!