Categories
ಸಿನಿ ಸುದ್ದಿ

ಪ್ರೀಮಿಯರ್‌ ಶೋಗೆ ಸೆಲಿಬ್ರಿಟಿಗಳ ಕಲರವ

ಸ್ಯಾಂಡಲ್‌ವುಡ್‌ ಮೆಚ್ಚಿಕೊಂಡ ಆಕ್ಟ್-‌1978

ನಿರ್ದೇಶಕ ಮಂಸೋರೆ ಅವರ  “ಆಕ್ಟ್‌ -1978”  ಚಿತ್ರದ ಪೂರ್ವಭಾವಿ ಪ್ರದರ್ಶನಕ್ಕೆ ಕನ್ನಡ ಚಿತ್ರರಂಗದ ನಟ,ನಟಿಯರು, ನಿರ್ದೇಶಕ, ನಿರ್ಮಾಪಕರು ಆಗಮಿಸಿ, ಚಿತ್ರ ನೋಡಿದ ಖುಷಿಯಲ್ಲಿ ತೇಲಿದರು. ಅಷ್ಟೇ ಅಲ್ಲ,  “ಆಕ್ಟ್‌ – 1978” ಚಿತ್ರದ ಬಗ್ಗೆ ಪ್ರತಿಯೊಬ್ಬರೂ ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಬರೆದುಕೊಳ್ಳುವ ಮೂಲಕ ಚಿತ್ರವನ್ನು ನೋಡಿ ಎಂಬ ಮನವಿಯನ್ನೂ ಮಾಡಿಕೊಂಡಿದ್ದಾರೆ. ಪ್ರೀಮಿಯರ್‌ ಶೋಗೆ ಬಂದ ಕೆಲ ನಟ,ನಟಿಯರ ಫೋಟೋ ಗ್ಯಾಲರಿ ಇಲ್ಲಿದೆ…

Categories
ಸಿನಿ ಸುದ್ದಿ

ಅಭಿಮಾನಿ ದೇವರಿಗೆ ಭರಪೂರ ಸ್ವಾಗತ

ಆಕ್ಟ್-‌1978 ನೋಡಲು ಬಂದ ಸಿನಿ ಪ್ರೇಮಿಗೆ ಗುಲಾಬಿ ಹೂವಿನ ಗೌರವ

 

ಅಂತೂ ಇಂತೂ “ಆಕ್ಟ್‌ -1978”  ಚಿತ್ರ ನೋಡುಗರಲ್ಲಿ ಖುಷಿ ಹೆಚ್ಚಿಸಿದೆ. ಅಷ್ಟೇ ಅಲ್ಲ, ಶುಭ ಶುಕ್ರವಾರ ರಾಜ್ಯಾದ್ಯಂತ ಒಳ್ಳೆಯ ಓಪನಿಂಗ್‌ ಕೂಡ ಪಡೆದುಕೊಂಡಿದೆ. ಎಲ್ಲೆಡೆ “ಆಕ್ಟ್‌ – 1978” ಚಿತ್ರದ್ದೇ ಮಾತು. ನಿರ್ದೇಶಕ ಮಂಸೋರೆ ಅವರ ಹೊಸ ಆಲೋಚನೆಯ ಕಥೆಯನ್ನು ಜನರು ಮೆಚ್ಚಿಕೊಂಡಿದ್ದಾರೆ.

ಚಿತ್ರಮಂದಿರಕ್ಕೆ ಜನರು ಬರುತ್ತಾರೋ, ಇಲ್ಲವೋ ಎಂಬ ಆತಂಕ ಎಲ್ಲರಲ್ಲೂ ಮನೆಮಾಡಿತ್ತು. ಒಂದು ಸಿನಿಮಾದ ಕಥೆ ಚೆನ್ನಾಗಿದ್ದರೆ, ಅದರ ನಿರೂಪಣೆ ಸೊಗಸಾಗಿದ್ದರೆ, ಹೇಳುವ ಶೈಲಿ ಅದ್ಭುತವಾಗಿದ್ದರೆ, ತೋರಿಸುವ ರೀತಿ ಸರಿಯಾಗಿದ್ದರೆ, ಜನರು ಖಂಡಿತವಾಗಿಯೂ ಯಾವತ್ತೂ ಕನ್ನಡ ಸಿನಿಮಾವನ್ನು ಕೈ ಬಿಟ್ಟಿಲ್ಲ. ಈಗ “ಆಕ್ಟ್‌ 1978” ಚಿತ್ರವನ್ನೂ ಪ್ರೇಕ್ಷಕ ಮನಸಾರೆ ಒಪ್ಪಿಕೊಂಡಿದ್ದಾನೆ.

 

ಚಿತ್ರಮಂದಿರಗಳಿಂದ ಹೊರಬರುವ ಪ್ರೇಕ್ಷಕನಲ್ಲಿ ಅದೇನೋ ಪುಳಕ. ಏನೋ ಸಾಧಿಸಿದ ಖುಷಿ. ತಾನು ಅನುಭವಿಸಿದ ನೋವನ್ನುತೆರೆಯ ಮೇಲೆ ಕಂಡಷ್ಟೇ ಆನಂದಭಾಷ್ಪ. ಅದೆಲ್ಲವನ್ನೂ ಅಷ್ಟೇ ಸೊಗಸಾಗಿ, ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿರುವ ನಿರ್ದೇಶಕ ಮಂಸೋರೆ ಅವರ ಕೆಲಸವನ್ನು ನೋಡಿದ ಪ್ರತಿಯೊಬ್ಬ ಪ್ರೇಕ್ಷಕನೂ ಮೆಚ್ಚುತ್ತಿದ್ದಾನೆ. ಚಿತ್ರತಂಡ ಕೂಡ ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕನನ್ನು ಅಷ್ಟೇ ಪ್ರೀತಿಯಿಂದ ಬರಮಾಡಿಕೊಳ್ಳುತ್ತಿದೆ. ಭವ್ಯ ಸ್ವಾಗತದೊಂದಿಗೆ ಬರಮಾಡಿಕೊಳ್ಳುವ ಮೂಲಕ, ಅಭಿಮಾನಿಗಳೇ ನಮ್ಮ ದೇವರು ಅಂತ ಬಂದ ಪ್ರತಿಯೊಬ್ಬ ಸಿನಿಪ್ರೇಮಿಗೂ ಗುಲಾಬಿ ಹೂವು ಕೊಡುವ ಮೂಲಕ ಕೈಮುಗಿದು ಚಿತ್ರಮಂದಿರಕ್ಕೆ ಬರಮಾಡಿಕೊಳ್ಳುತ್ತಿದೆ.

 

ಬೆಂಗಳೂರಿನ ಶ್ರೀನಿವಾಸ ಚಿತ್ರಮಂದಿರದಲ್ಲೂ ಕೂಡ “ಆಕ್ಟ್‌ 1978”  ಸಿನಿಮಾ ನೋಡಲು ಬಂದ ಪ್ರತಿ ಪ್ರೇಕ್ಷಕನಿಗೂ ಚಿತ್ರತಂಡದ ಸದಸ್ಯರು ಬಾಗಿಲು ಬಳಿ ನಿಂತು, ಅಭಿಮಾನಿಗಳೇ ನಮ್ಮ ದೇವರು ಎಂದು ಕೈಮುಗಿದು ಬರಮಾಡಿಕೊಳ್ಳುವ ರೀತಿಗೆ ಪ್ರೇಕ್ಷಕ ಕೂಡ ಫಿದಾ ಆಗಿದ್ದಾನೆ.

ಇನ್ನು, ಚಿತ್ರಮಂದಿರ ಒಳಹೊಕ್ಕ ಪ್ರೇಕ್ಷಕ ಸಿನಿಮಾ ನೋಡಿದ ಮೇಲೆ, ಕಣ್ಣಾಲಿಗಳನ್ನು ಒದ್ದೆ ಮಾಡಿಕೊಂಡು ಬಂದು ಭಾರದ ನಿಟ್ಟುಸಿರು ಬಿಟ್ಟು, ಸಿನಿಮಾಗೆ ಜಯವಾಗಲಿ ಎನ್ನುತ್ತಿದ್ದಾನೆ. ಅಂತೂ ಒಂದೊಳ್ಳೆಯ ಕಥೆ ಹೆಣೆದು, ವಾಸ್ತವ ಅಂಶಗಳನ್ನು ಜನರ ಮುಂದಿಟ್ಟ ಮಂಸೋರೆ ಅಂಡ್‌ ತಂಡಕ್ಕೆ ಭರಪೂರ ಮೆಚ್ಚುಗೆಯ ಸುರಿಮಳೆಯಾಗುತ್ತಿದೆ.

 

 

Categories
ಸಿನಿ ಸುದ್ದಿ

ಶಿವಪ್ಪನಿಗೆ ಅಂಜಲಿ ಸಿಕ್ಕಾಯ್ತು!

ಶಿವರಾಜಕುಮಾರ್‌ಗೆ ತಮಿಳು ಬೆಡಗಿ ಜೋಡಿ

ಶಿವರಾಜಕುಮಾರ್‌ ಅಭಿನಯದ “ಶಿವಪ್ಪ” ಸಿನಿಮಾಗೆ ಇತ್ತೀಚೆಗಷ್ಟೇ ಮುಹೂರ್ತ ನೆರವೇರಿದ್ದು ಗೊತ್ತೇ ಇದೆ. ಆ ಚಿತ್ರದಲ್ಲಿ “ಡಾಲಿ” ಧನಂಜಯ್‌ ಕೂಡ ಅಭಿನಯಿಸುತ್ತಿದ್ದಾರೆ. ಜೊತೆಯಲ್ಲಿ ಪೃಥ್ವಿ ಅಂಬರ್‌ ಕೂಡ ಇದ್ದಾರೆ ಎಂಬ ಸುದ್ದಿ ಕೂಡ ಗೊತ್ತಿದೆ. ಈಗ “ಶಿವಪ್ಪ” ಚಿತ್ರದ ಹೊಸ ಸುದ್ದಿಯೆಂದರೆ, “ಶಿವಪ್ಪ”ನಿಗೆ ನಾಯಕಿ ಸಿಕ್ಕಾಗಿದೆ. ಹೌದು, “ಶಿವಪ್ಪ” ಅದೊಂದು ಪವರ್‌ಫುಲ್‌ ಶೀರ್ಷಿಕೆ. ಅಂತಹ ಚಿತ್ರಕ್ಕೆ ನಾಯಕಿ ಕೂಡ ಹಾಗಯೇ ಇರಬೇಕಲ್ಲವೇ? ಶಿವರಾಜಕುಮಾರ್‌ ಅವರಿಗೆ ಜೋಡಿಯ ಹುಡುಕಾಟ ನಡೆದಿತ್ತಾದರೂ, ಯಾರೂ ಅನ್ನೋದು ಪಕ್ಕಾ ಆಗಿರಲಿಲ್ಲ. ಈಗ “ಶಿವಪ್ಪ”ನಿಗೆ ನಾಯಕಿಯ ಆಯ್ಕೆಯಾಗಿದೆ. ಹೌದು, ತಮಿಳು ಚಿತ್ರರಂಗದ ವಿಜಯ್ ಮಿಲ್ಟನ್ ನಿರ್ದೇಶನದ “ಶಿವಪ್ಪ” ಚಿತ್ರಕ್ಕೆ ಅಂಜಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಅಂಜಲಿ ಅವರಿಗೆ ಕನ್ನಡ ಚಿತ್ರರಂಗ ಹೊಸದೇನಲ್ಲ. ಈ ಹಿಂದೆ ಪುನೀತ್‌ ರಾಜಕುಮಾರ್‌ ಅಭಿನಯದ “ರಣ ವಿಕ್ರಮ” ಚಿತ್ರದಲ್ಲಿ ಅಂಜಲಿ ನಟಿಸಿದ್ದರು. ಏಳು ವರ್ಷಗಳ ಬಳಿಕ ಈಗ ಅಂಜಲಿ ಕನ್ನಡಕ್ಕೆ ಕಾಲಿಟ್ಟಿದ್ದಾರೆ. ಅಂಜಲಿ ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಾಗೆ ನೋಡಿದರೆ, ಅಂಜಲಿ ಅವರು, “ಹೊಂಗನಸುʼ ಎಂಬ ಸಿನಿಮಾದಲ್ಲೂ ನಟಿಸಿದ್ದು, ಈಗ “ಶಿವಪಪ್”‌ ಅಂಜಲಿ ಅಭಿನಯದ ಮೂರನೇ ಸಿನಿಮಾ ಆಗಿದೆ.
ಅದೇನೆ ಇರಲಿ, ತಮಿಳು ನಿರ್ದೇಶಕ ವಿಜಯ್‌ ಮಿಲ್ಟನ್‌ ಅವರೀಗ “ಶಿವಪ್ಪ”ನ ಜಪ ಮಾಡುತ್ತಿದ್ದಾರೆ. ಮೂಲಗಳ ಪ್ರಕಾರ, ತಮಿಳಿನಲ್ಲಿ ವಿಜಯ್‌ ಮಿಲ್ಟನ್‌ ಅವರೇ ನಿರ್ದೇಶಿಸಿದ್ದ “ಕಗುಡುʼ ಚಿತ್ರದ ಅವರಣಿಕೆ ಇದಾಗಿರಬಹುದಾ ಎಂಬ ಪ್ರಶ್ನೆ ಇದೆಯಾದರೂ, ಎಲ್ಲೂ ಈ ಕುರಿತು ಮಾಹಿತಿ ಇಲ್ಲ. ಸದ್ಯಕ್ಕೆ ಚಿತ್ರೀಕರಣ ಜೋರಾಗಿದೆ.

Categories
ಸಿನಿ ಸುದ್ದಿ

ಮಹಿರ ನಿರ್ದೇಶಕನ ಹೊಸ ಹೆಜ್ಜೆ-ವೈಟ್‌ ಪ್ಯಾಚಸ್‌ ಜನರ ಪರ ನಿಂತ ಮಹೇಶ್‌ಗೌಡ

ಭಾರತದಲ್ಲೇ ಫಸ್ಟ್‌ ಟೈಮ್‌ ಕನ್ನಡ ನಿರ್ದೇಶಕನ ಧೈರ್ಯವಿದು!

ಸಿನಿಮಾ ಸೆಲಿಬ್ರಿಟಿಗಳೆಂದರೆ ಸಾಕು, ಅವರು ಏನೇ ಹೇಳಿದರೂ ಜನರಿಗೆ ಅದೊಂದು ವೇದವಾಕ್ಯ. ಹಾಗಂತ, ಇಲ್ಲಿ ಸೆಲಿಬ್ರಿಟಿಗಳ ಕುರಿತು ಬೇರೇ ಏನನ್ನೋ ಹೇಳಲಾಗುತ್ತಿದೆ ಎಂಬರ್ಥವಲ್ಲ. ಹಲವು ಬ್ರಾಂಡ್‌ಗಳ ಹಿಂದೆ ಹೋಗಿ ಜಾಹಿರಾತು ನೀಡುವ ಸೆಲಿಬ್ರಿಟಿಗಳೂ ಇದ್ದಾರೆ. ಹಾಗೆಯೇ, ಒಂದಷ್ಟು ಸಾರ್ವಜನಿಕವಾಗಿಯೂ ಒಳ್ಳೆಯ ವಿಷಯಗಳ ಮೂಲಕ ಜಾಗೃತಿ ಮೂಡಿಸುವ ಸೆಲಿಬ್ರಿಟಿಗಳೂ ಇದ್ದಾರೆ. ಆದರೆ, ಅದೆಷ್ಟೋ ಸೆಲಿಬ್ರಿಟಿಗಳಲ್ಲಿ ವಿಟಿಲಿಗೋ (ವೈಟ್‌ ಪ್ಯಾಚಸ್‌, ತೊನ್ನು, ಬಿಳಿ ಮಚ್ಚೆ) ಸಮಸ್ಯೆ ಇದ್ದರೂ ಮುಜುಗರ ಆಗುತ್ತೆ ಎಂಬ ಕಾರಣಕ್ಕೆ ಅವರೆಲ್ಲೂ ಅದನ್ನು ತೋರ್ಪಡಿಸಿಕೊಳ್ಳಲ್ಲ. ಅಂತಹ ಧೈರ್ಯಕ್ಕೂ ಮುಂದಾಗಲ್ಲ. ಸೆಲಿಬ್ರಿಟಿಗಳು ಮಾತ್ರವಲ್ಲ, ಅದೆಷ್ಟೋ ಜನರು ಈ ವಿಟಿಲಿಗೋ ಅಂದರೆ, ಬಿಳಿ ಮಚ್ಚೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅದರಿಂದ ಹಲವರು ರೋಸಿ ಹೋಗಿದ್ದೂ ಇದೆ. ಅಂತಹವರಿಗೆ ಒಂದಷ್ಟು ಧೈರ್ಯ ಹೇಳಲು, ಯಾವುದೇ ಕಾರಣಕ್ಕೂ ಡಿಪ್ರೆಷನ್‌ಗೆ ಹೋಗದಿರಲು ಒಂದಷ್ಟು ಜಾಗೃತಿ ಮೂಡಿಸುವುದಕ್ಕಾಗಿಯೇ ಕನ್ನಡ ಚಿತ್ರ ನಿರ್ದೇಶಕರೊಬ್ಬರು ಮಂದಾಗಿದ್ದಾರೆ.

ಮಹೇಶ್‌ ಗೌಡ, ನಿರ್ದೇಶಕ

ಹೌದು, “ಮಹಿರ” ಸಿನಿಮಾ ಮೂಲಕ ಸುದ್ದಿಯಾದ ನಿರ್ದೇಶಕ ಮಹೇಶ್‌ಗೌಡ ಅವರೀಗ ವಿಟಿಲಿಗೋ ಸಮಸ್ಯೆಯಲ್ಲಿ ಸಿಲುಕಿದವರ ಪರ ನಿಲ್ಲುವ ಮನಸ್ಸು ಮಾಡಿದ್ದಾರೆ. ಇಷ್ಟಕ್ಕೂ ಮಹೇಶ್‌ಗೌಡ ಯಾಕೆ, ವೈಟ್‌ ಪ್ಯಾಚಸ್‌ ಇರೋ ಜನರ ಜೊತೆ ಇರಬೇಕು ಅಂದುಕೊಂಡಿದ್ದಾರೆಂದರೆ, ಅವರೂ ಕೂಡ ಈ ಸಮಸ್ಯೆ ಎದುರಿಸುತ್ತಿದ್ದಾರೆ. ಹೌದು, ಸ್ವತಃ ನಿರ್ದೇಶಕ ಮಹೇಶ್‌ಗೌಡ ಅವರೇ ತಮಗೂ ವಿಟಿಲಿಗೋ ಸಮಸ್ಯೆ ಇದೆ ಎಂದು ಯಾವುದೇ ಮುಜುಗರವಿಲ್ಲದೆ ಹೇಳಿಕೊಂಡಿದ್ದಾರೆ. ಇಷ್ಟಕ್ಕೂ ಅವರೀಗ ಈ ಕುರಿತಂತೆ ಜಾಗೃತಿ ಮೂಡಿಸುವ ಯೋಚನೆ ಬಂದಿದ್ದು ಕೊರೊನಾದ ಲಾಕ್‌ಡೌನ್‌ ಸಮಯದಲ್ಲಿ. ಆ ಕುರಿತಂತೆ ನಿರ್ದೇಶಕ ಮಹೇಶ್‌ಗೌಡ ಅವರು “ಸಿನಿ ಲಹರಿ” ಜೊತೆ ಒಂದಷ್ಟು ಮಾತಾಡಿದ್ದಾರೆ.

ಇದೊಂದು ಗಂಭೀರ ಹೆಜ್ಜೆ
“ನಾನು ಕನ್ನಡ ಚಿತ್ರರಂಗದಲ್ಲಿದ್ದೇನೆ. “ಮಹಿರ” ಸಿನಿಮಾ ಮೂಲಕ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದೇನೆ. ನಾನೀಗ ವಿಟಿಲಿಗೋ ಕುರಿತು ತುಂಬಾ ಗಂಭೀರವಾಗಿಯೇ ಹೆಜ್ಜೆ ಇಡುತ್ತಿದ್ದೇನೆ. ಎಲ್ಲೋ ಒಂದು ಕಡೆ ಚಿಕ್ಕದ್ದಾಗಿ ವೈಟ್‌ ಪ್ಯಾಚಸ್ ಕಾಣಿಸಿಕೊಂಡಾಗ, ಅದೊಂದು ರೀತಿ ಕಾಡುತ್ತದಲ್ಲದೆ, ಅದನ್ನು ನಾವು ಹೆಚ್ಚು ತಲೆಕೆಡಿಸಿಕೊಳ್ಳದೆ ಬಿಟ್ಟು ಬಿಡ್ತೀವಿ. ಕೆಲವೊಮ್ಮೆ ಬೇಜಾರ್‌ ಆಗುತ್ತೆ. ಕೆಲವರಿಗೆ ಕಣ್ಣು, ಕಿವಿ ಮೂಗು, ಮುಖ ಹೀಗೆ ಹಲವು ಕಡೆ ಕಾಣಿಸಿಕೊಳ್ಳತ್ತೆ. ಹಾಗಂತ ಇದು ಖಂಡಿತವಾಗಿಯೂ ಖಾಯಿಲೆ ಅಲ್ಲ. ಅದೂ ಒಂದು ರೀತಿಯ ಟೈಪ್‌ ಆಫ್‌ ಸ್ಕಿನ್ ಅಷ್ಟೇ. ಅದು‌ ಒಬ್ಬರಿಂದ ಒಬ್ಬರಿಗೆ ಹರಡುವುದಿಲ್ಲ. ವೈಟ್‌ ಪ್ಯಾಚಸ್‌ ಇದ್ದರೆ, ಸ್ಕಿನ್‌ ಕ್ಯಾನ್ಸರ್‌ ಕೂಡ ಬರಲ್ಲ. ಇಷ್ಟಕ್ಕೂ ನಾನು ವೈಟ್‌ ಪ್ಯಾಚಸ್‌ ಬಗ್ಗೆ ಮಾತಾಡುತ್ತಿರುವುದಕ್ಕೆ ಕಾರಣವೂ ಇದೆ.

ಸರ್ಕಾರದಿಂದಾಗಲಿ, ಎನ್‌ಜಿಓಗಳಿಂದಾಗಲಿ, ಬ್ರಾಂಡ್‌ ಕಂಪೆನಿಗಳ ಜಾಹಿರಾತಾಗಲಿ ಈ ಕುರಿತಂತೆ ಪ್ರಚಾರವಿಲ್ಲ. ಜಾಗೃತಿಯೂ ಮೂಡಿಸಿಲ್ಲ. ಇದಕ್ಕೆ ಚಿಕಿತ್ಸೆ ಹೆಚ್ಚು ಕೊಡಿಸಬೇಕು. ಮೆಡಿಸನ್‌ ಇದ್ದರೂ ವಾಸಿ ಆಗೋದು ಕಷ್ಟ. ಮಕ್ಕಳಿಗೆ ಮಾತ್ರ ಕೆಲವೊಮ್ಮೆ ಕ್ಯೂರ್‌ ಆಗುವ ಅವಕಾಶ ಇರುತ್ತೆ. ಮನುಷ್ಯ ಹೆಚ್ಚು ಒತ್ತಡದಲ್ಲಿದ್ದಾಗ, ಡಿಪ್ರೆಷನ್‌ಗೆ ಹೋದಾಗ, ಲವ್‌ ಫೇಲ್ಯೂರ್‌ ಆಗಿ ಯೋಚನೆಯಲ್ಲಿದ್ದಾಗ, ಮದುವೆ, ಮನೆ ಮಕ್ಕಳು ಹೀಗೆ ನಾನಾ ರೀತಿಯಲ್ಲಿ ತನ್ನದೇ ಆದ ಗಂಭೀರ ಯೋಚನೆಗೆ ಸಿಲುಕಿಕೊಂಡಾಗ ವೈಟ್‌ ಪ್ಯಾಚಸ್‌ ಹೆಚ್ಚಾಗುತ್ತೆ. ಇದು ಬಹಳಷ್ಟು ಜನರಿಗೆ ಗೊತ್ತಿರೋದಿಲ್ಲ. ಆದೇ ಡಿಪ್ರೆಶನ್‌ಗೆ ಹೋದವರನ್ನು ಹುಡುಕಿ ಕೆಲವರು ಬನ್ನಿ ಕೌನ್ಸಿಲ್‌ ಮಾಡೋಣ ಅಂತಾರೆ. ಆದರೆ, ವೈಟ್‌ ಪ್ಯಾಚಸ್‌ ಕುರಿತಂತೆ ಕೌನ್ಸಿಲ್‌ ಮಾಡೋರ್ಯಾರು?

ನನಗೂ ಈ ಸಮಸ್ಯೆ ಇದೆ
ಎಲ್ಲದರ ಬಗ್ಗೆಯೂ ಜಾಗೃತಿ ಇದೆ. ಆದರೆ, ಇದರ ಬಗ್ಗೆ ಇಲ್ಲ ಎನ್ನುವ ಮಹೇಶ್‌ಗೌಡ, ನಾನೊಬ್ಬ ನಿರ್ದೇಶಕ. ನನಗೂ ಈ ಸಮಸ್ಯೆ ಇದೆ. ಆ ಕಷ್ಟ, ನೋವು, ಮುಜುಗರ ನಾನೂ ಅನುಭವಿಸಿದ್ದೇನೆ. ಮನರಂಜನೆ ಕ್ಷೇತ್ರದಲ್ಲಿರೋ ಯಾರೂ ತನಗೆ ವೈಟ್‌ ಪ್ಯಾಚಸ್‌ ಇದೆ ಅಂತ ಹೇಳಿಕೊಂಡಿಲ್ಲ. ಅಥವಾ ವೈಟ್‌ ಪ್ಯಾಚಸ್‌ ಇರುವವರ ಪರ ನಿಂತಿಲ್ಲ. ನಾನೀಗ ಆ ಕೆಲಸಕ್ಕೆ ಮುಂದಾಗಿದ್ದೇನೆ. ಇಡೀ ದೇಶದಲ್ಲೇ ಮನರಂಜನೆ ಫೀಲ್ಡ್‌ನಲ್ಲಿರೋ ಯಾರೊಬ್ಬರು ಮುಂದಾಗಿಲ್ಲ. ನಾನು ಮುಂದಾಗುತ್ತಿದ್ದೇನೆ ಎಂಬ ಖುಷಿ ಇದೆ. ಇದರಲ್ಲಿ ಯಾವುದೇ ಮುಜುಗರ ಇಲ್ಲ. ಕೊರೊನಾ ಸಮಯದಲ್ಲಿ ನಾನು ಈ ನಿರ್ಧಾರ ಮಾಡಿದೆ.

 

ಡಿಪ್ರೆಷನ್‌ ಬದಿಗೊತ್ತಿ, ವಾವ್‌ ಅಂತ ಮಾಡಬೇಕು ಅಂದುಕೊಂಡೆ. ಮೊದಲು ಬಾಡಿ ಪಾಸಿಟಿವ್‌ ಮಾಡಿಕೊಂಡೆ. ಫಿಟ್ನೆಸ್‌ ಮೂಲಕ ನಾನು ಈ ವೈಟ್‌ ಪ್ಯಾಚಸ್‌ ಕುರಿತು ಜಾಗೃತಿ ಮೂಡಿಸಬೇಕು ಅಂದುಕೊಂಡೆ, ನನಗೆ ೧೧ ವರ್ಷ ಇದ್ದಾಗಲೇ ವೈಟ್‌ ಪ್ಯಾಚಸ್‌ ಕಾಣಿಸಿಕೊಂಡಿತ್ತು. ನಾನು ಎಲ್ಲೇ ಹೋದರೂ, ಹಾಫ್ಯ ಹ್ಯಾಂಡ್‌ ಷರ್ಟ್‌, ಟೀ ಷರ್ಟ್‌ ಹಾಕಿಲ್ಲ. ನಾನೊಬ್ಬ‌ ಲಂಡನ್‌ ರಿಟರ್ನ್‌. ಇಲ್ಲಿಗೆ ಬಂದಾಗಲೂ ಸಮಾಜ ಏನಂದುಕೊಳ್ಳುತ್ತೋ, ಜನರು ಏನು ತಿಳಿದುಕೊಳ್ಳುತ್ತಾರೋ ಎಂಬ ಬೇಸರ, ಸಣ್ಣ ಅಳಕು ಇತ್ತು. ಆದರೆ, ಈಗ ಅದೆಲ್ಲ ಬಿಟ್ಟು ಬಂದಿದ್ದೇನೆ. ಕೆಲಸ ಕ್ಷೇತ್ರದಲ್ಲಿರೋರು ಇದ್ದಾರೆ. ಯಾರೂ ಈ ಬಗ್ಗೆ ಯೋಚಿಸಿಲ್ಲ. ಸಿನಿಮಾ ಇಂಡಸ್ಟ್ರಿಯಲ್ಲೂ ನನ್ನಂತೆಯೇ ಇತರರು ಇರಬಹುದು. ಅವರಿಗೆ ಮುಜುಗರ ಆಗಬಹುದೇನೋ, ಆದರೆ, ನನಗೆ ಯಾವ ಬೇಸರವಿಲ್ಲ. ಈ ಬಗ್ಗೆ ನಾನು ಒಂದಷ್ಟು ಜಾಗೃತಿ ಮೂಡಿಸುವ ಪ್ರಯತ್ನಕ್ಕೆ ಹೊರಟಿದ್ದೇನೆ.

 

ಭಾರತದಲ್ಲೇ ಮೊದಲಿಗ
ಇಂಡಿಯಾದಲ್ಲೇ ಮೊದಲ ಸಲ ಸಿನಿಮಾ ಇಂಡಸ್ಟ್ರಿಯಿಂದ ವಿಟಿಲಿಗೋ ಇರುವ ವ್ಯಕ್ತಿಯಾಗಿ ನಾನು ಮುಂದೆ ಬಂದಿದ್ದೇನೆ. ಇಲ್ಲಿ ಫಿಲಾಸಫಿ ಹೇಳೋಕೆ ಹೊರಟಿಲ್ಲ. ಈ ಮೂಲಕ ನಾನು ಎಜುಕೇಷನ್‌ ಕೊಡಲ್ಲ. ಸರ್ಕಾರದಿಂದಲೋ ಅಥವಾ ಎನ್‌ಜಿಓದಿಂದಲೋ ಫಂಡ್‌ ರೈಸ್‌ ಮಾಡಿಸಿಕೊಳ್ಳುವ ಯೋಚನೆಯೂ ಇಲ್ಲ. ನನ್ನ ಶ್ರಮದ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನಕ್ಕೆ ಕೈ ಹಾಕಿದ್ದೇನೆ. ಹಳ್ಳಿಗಳಲ್ಲಿ, ಶಾಲೆ, ಕಾಲೇಜ್‌, ಕಾರ್ಪೋರೆಟ್‌ ಕಂಪೆನಿ ಹೀಗೆ ಇತರೆಡೆ ಮಾತಾಡುವ ಮೂಲಕ ಜಾಗೃತಿ ಆಗಬೇಕು ಎಂದು ಬಯಸಿದ್ದೇನೆ. ಅವರಲ್ಲಿ ಸ್ಫೂರ್ತಿ ತುಂಬುವ ಕೆಲಸ ಮಾಡಬೇಕಿದೆ. ನನಗೆ ಕೈ, ಕಾಲಲ್ಲೂ ವೈಟ್‌ ಪ್ಯಾಚಸ್‌ ಇದೆ. ಕಳೆದ ಒಂದಷ್ಟು ತಿಂಗಳ ಕಾಲ ನಾನು ಸ್ವೀಟ್‌ ತಿಂದಿಲ್ಲ, ಸಾಲ್ಟ್‌, ಎಣ್ಣೆ ಪದಾರ್ಥ ಮುಟ್ಟಿಲ್ಲ. ಇದರಿಂದ ಪರದಾಡಿದ್ದೂ ಇದೆ.

ಜಾಗೃತಿ ಮೂಡಿಸುವ ಕೆಲಸಕ್ಕೆ ಯಾರಾದರೂ ಕೈ ಚಾಚಿದರೆ, ಸ್ಟಾರ್‌ ನಟರೂ ಜೊತೆಗೂಡಿದರೆ ಇನ್ನಷ್ಟು ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಲು ಸಾಧ್ಯವಿದೆ. ಮುಂದಿನ ದಿನಗಳಲ್ಲಿ ಯಾವುದಾದರೂ ಕಂಪೆನಿಗಳು ಜಾಹಿರಾತಿಗೆ ಆಹ್ವಾನಿಸಿದರೆ, ಅದರಿಂದ ಬಂದ ಹಣದಲ್ಲಿ ಒಂದಷ್ಟು ಬಡ ಮಕ್ಕಳನ್ನು ಗುರುತಿಸಿ, ಅವರಿಗೆ ಚಿಕಿತ್ಸೆ ಕೊಡಿಸುವ ಉದ್ದೇಶವಿದೆ” ಎನ್ನುತ್ತಾರೆ ಮಹೇಶ್‌ ಗೌಡ. ಅದೇನೆ ಇರಲಿ, ಇಂಥದ್ದೊಂದು ಕೆಲಸಕ್ಕೆ ಮುಂದಾಗಿರುವ ನಿರ್ದೇಶಕ ಮಹೇಶ್‌ಗೌಡ ಅವರಿಗೆ “ಸಿನಿ ಲಹರಿ” ಹಾರೈಸಲಿದೆ.

Categories
ಆಡಿಯೋ ಕಾರ್ನರ್ ಸಿನಿ ಸುದ್ದಿ

ಆತ್ಮಸ್ಥೈರ್ಯ ತುಂಬುವ ಆತ್ಮ ನಿರ್ಭರತ ಭಾರತ ಹಾಡು

ವಿಡಿಯೋ ಸಾಂಗ್‌ ರಿಲೀಸ್

ಇಡೀ ಪ್ರಪಂಚದಲ್ಲಿ ಕೊರೊನಾ ತಂದಿಟ್ಟ ಅವಾಂತರ ಅಷ್ಟಿಷ್ಟಲ್ಲ. ಸಿನಿಮಾರಂಗ ಕೂಡ ಇದಕ್ಕೆ ಹೊರತಲ್ಲ. ದೊಡ್ಡ ಹೊಡೆತ ತಿಂದಿರುವ ಸಿನಿಮಾರಂಗ ಈಗಷ್ಟೇ ಚೇತರಿಸಿಕೊಳ್ಳುತ್ತಿದೆ. ಒಂದಷ್ಟು ಸಿನಿಮಾಗಳು ಬಿಡುಗಡೆ ಕಂಡರೆ, ಹೊಸ ಚಿತ್ರಗಳು ಸೆಟ್ಟೇರುತ್ತಿವೆ. ಇದರ ನಡುವೆಯೇ ಸಾಕಷ್ಟು ಚಿತ್ರಗಳು ಪ್ರಚಾರಕ್ಕೂ ಇಳಿದಿವೆ. ತಮ್ಮ ಚಿತ್ರದ ಟ್ರೇಲರ್‌, ಟೀಸರ್‌, ಫಸ್ಟ್‌ ಲುಕ್‌ ಹೀಗೆ ಬಿಡುಗಡೆ ಮಾಡುವ ಮೂಲಕ ಪ್ರಚಾರಕ್ಕೆ ಮುಂದಾಗಿವೆ. ಇನ್ನು, ಕೊರೊನಾ ಸಮಸ್ಯೆ ಕುರಿತಂತೆಯೂ ಒಂದಷ್ಟು ಕಿರುಚಿತ್ರಗಳು, ಆಲ್ಬಂ ಸಾಂಗ್‌ಗಳೂ ಹೊರಬಂದಿವೆ. ಆ ಸಾಲಿಗೆ ಈಗ “ಆತ್ಮ ನಿರ್ಭರತ ಭಾರತ” ವಿಶ್ವಕ್ಕೆ ಗುರುವಾಗಲಿ.. ಎಂಬ ವಿಡಿಯೋ ಆಲ್ಬಂ ಸಾಂಗ್‌ ನಿರ್ಮಾಣಗೊಂಡಿದೆ.

ಕಳೆದ ಒಂಬತ್ತು ತಿಂಗಳಿನಿಂದಲೂ ಕೊರೊನಾ ಹಾವಳಿ ಅಷ್ಟಿಷ್ಟಲ್ಲ. ಇದರಿಂದಾಗಿ ಪ್ರತಿಯೊಬ್ಬರ ಆರ್ಥಿಕ ಸ್ಥಿತಿಯಂತೂ ಹೇಳತೀರದು. ಪ್ರತಿಯೊಂದು ಕುಟುಂಬದ ಮೇಲೂ ಸಾಕಷ್ಟು ಗಂಭೀರ ಪರಿಣಾಮ ಬೀರಿ, ಸಾರ್ವಜನಿಕರ ಜನಜೀವನ ಬದುಕಿನ ಶೈಲಿಯೇ ಬದಲಾಗಿದ್ದು ಎಲ್ಲರಿಗೂ ಗೊತ್ತಿದೆ. ಇಂತಹ ಸ್ಥಿತಿಯಲ್ಲಿ ಕೊರೊನಾ ವಿರುದ್ಧ ಹೋರಾಟ ಮಾಡಲು, ಆತ್ಮಸ್ಥೈರ್ಯ ತುಂಬುವ ಸಲುವಾಗಿ “ಆತ್ಮ ನಿರ್ಭರತ ಭಾರತ” ಎಂಬ ವಿಡಿಯೋ ಸಾಂಗ್ ನಿರ್ಮಿಸಲಾಗಿದೆ.

ಮಹೇಂದ್ರ ಮುನೋತ್‌

ಈ ವಿಡಿಯೊ ಆಲ್ಬಂ ಸಾಂಗ್‌ನಲ್ಲಿ ನಮ್ಮ ಪರಂಪರೆ, ನಮ್ಮ ಶಕ್ತಿ, ನಮ್ಮ ಸಾಧನೆ ಏನು ಎಂಬ ಅಂಶಗಳೊಂದಿಗೆ ಧೈರ್ಯ ತುಂಬುವುದರ ಜೊತೆಯಲ್ಲಿ ಎಷ್ಟೋ ಕಷ್ಟಗಳನ್ನು ಎದುರಿಸಿರುವ ನಾವು ಕೊರೋನ ವಿರುದ್ಧ ಹೋರಡಲಾರೆವಾ? ಎಂದು ಎಲ್ಲರಿಗೂ ಧೈರ್ಯ ತುಂಬುವ ಗೀತೆಯಾಗಿ ಈ ಹಾಡನ್ನು ಹೊರತರಲಾಗಿದೆ. ಅಂದಹಾಗೆ, ಮಾರುತಿ ಮೆಡಿಕಲ್ಸ್‌ ಮಹೇಂದ್ರ ಮುನೋತ್‌ ಅವರು ಆನಂದ್ ಸಿನಿಮಾಸ್ ಮೂಲಕ‌‌ ಈ ವಿಡಿಯೋ ಸಾಂಗ್ ನಿರ್ಮಿಸಿದ್ದಾರೆ. ಈ ಹಿಂದೆ “ನಮಗಾಗಿ ಜೀವ ಕೊಟ್ಟವರು” ಎಂಬ ವಿಡಿಯೋ ಸಾಂಗ್ ಕೂಡ ಬಿಡುಗಡೆ ಮಾಡಿದ್ದರು. ಈಗ “ಆತ್ಮ ನಿರ್ಭರತ ಭಾರತ” ಮಾಡಿದ್ದಾರೆ. ಎಂ.ಗಜೇಂದ್ರ ನಿರ್ದೇಶನ ಮಾಡಿದ್ದಾರೆ. ಇನ್ನು, ಈ ಹಾಡಿಗೆ ಮೂರುರಾಯರಗಂಡ ಅವರ ಸಾಹಿತ್ಯವಿದೆ. ವಿಜಯ್‌ ಕೃಷ್ಣ ಅವರ ಸಂಗೀತವಿದೆ. ರಾಜ್ಯ ಪ್ರಶಸ್ತಿ ವಿಜೇತ ಗಾಯಕ ತೇಜಸ್ವಿ ಹರಿದಾಸ್ ಧ್ವನಿಯಲ್ಲಿ ಹಾಡು ಮೂಡಿಬಂದಿದೆ. ಲಕ್ಷ್ಮೀಕಾಂತ್ ಮತ್ತು ವೀರೇಶ್ ಅವರ ಛಾಯಾಗ್ರಹಣ‌ವಿದೆ. ಜವಳಿ ಅವರ ಸಂಕಲನವಿದೆ.

Categories
ರಿ ವಿವ್ಯೂ ಸಿನಿ ಸುದ್ದಿ

ಅಸಹಾಯಕಿ ಗೀತಾಳ ಡಿಮ್ಯಾಂಡ್‌ಗೆ ಫಿದಾ

ಇದು ಮಂಸೋರೆಯ ಮನಸಾರೆ ಒಪ್ಪುವ, ಅಪ್ಪುವ ಸಿನಿಮಾ

ಯಜ್ಞ ಶೆಟ್ಟಿ

ಚಿತ್ರ ವಿಮರ್ಶೆ

ಚಿತ್ರ : ಆಕ್ಟ್ 1978
ನಿರ್ಮಾಣ : ಆರ್. ದೇವರಾಜ್
ನಿರ್ದೇಶನ : ಮಂಸೋರೆ
ತಾರಾಗಣ : ಯಜ್ಞ ಶೆಟ್ಟಿ, ಪ್ರಮೋದ್ ಶೆಟ್ಟಿ, ಬಿ.ಸರೇಶ್, ಸಂಚಾರಿ ವಿಜಯ್, ಶೃತಿ, ದತ್ತಣ್ಣ, ಅಚ್ಯುತ ಕುಮಾರ್,
ಅವಿನಾಶ್, ಸುಧಾ ಬೆಳವಾಡಿ, ಶೋಭ್ ರಾಜ್, ಶರಣ್ಯ, ನಂದಗೋಪಾಲ್, ರಾಘು ಶಿವಮೊಗ್ಗ ಇತರರು.

“ಅದ್ಧೂರಿ ಮದುವೆ ಮಾಡೋರು, ಲಕ್ಷಾಂತರ ರುಪಾಯಿ ಬ್ಯಾಂಕ್‌ ಸಾಲ ಕಟ್ಟೋರು, ಕೋಟಿ ಬೆಲೆ ಬಾಳುವ ಮನೆ ಕಟ್ಟೋರು ನಿಮಗೇ ಕಷ್ಟ ಬಂದಾಗ ಮನೆ, ‌ಮಕ್ಕಳು ನೆನಪಾಗುತ್ತಾರೆ. ಆದರೆ, ಸಹಾಯ ಕೇಳಿ ನಿಮ್ಮ ಬಳಿ ಬರುವ ಜನರ ಕಷ್ಟ ಅರ್ಥವಾಗಲ್ಲ. ನಿಮಗೆ ಲಂಚ ಕೋಡೋಕೆ ನಾವು ಸಾಲ ಮಾಡಬೇಕು. ಚಿನ್ನದ ಓಲೆ, ಸರ ಅಡವಿಟ್ಟು ನಿಮ್ಮ ಕಮಿಟ್‌ಮೆಂಟ್‌ಗಳಿಗೆ ನಮ್‌ ಹಣ ಬೇಕು. ದುಡಿದ್‌ ತಿನ್ನೋರ ಜೊತೆ ಬಡಿದ್‌ ತಿಂತಿದ್ದೀರಲ್ಲ…”
– ಹೀಗೆ ನೋವು ತುಂಬಿದ ಮಾತುಗಳಲ್ಲಿ ಆ ಅಸಹಾಯಕ ತುಂಬು ಗರ್ಭಿಣಿ ಹೇಳುತ್ತಾ ಹೋದರೆ, ಅವಳ ಮುಂದೆ ತಪ್ಪು ಮಾಡಿ ಕೂತವರ ಮುಖ ಜೋತುಬಿದ್ದಿರುತ್ತೆ. ಅಂದಹಾಗೆ, ಇದು ಕೊರೊನಾ ಹಾವಳಿ ನಡುವೆಯೂ ಚಿತ್ರಮಂದಿರಕ್ಕೆ ಧೈರ್ಯವಾಗಿಯೇ ಲಗ್ಗೆ ಇಟ್ಟ “ಆಕ್ಟ್‌ 1978” ಚಿತ್ರದೊಳಗಿನ ಸೂಕ್ಷ್ಮತೆಯ ವಿಷಯ. ಈ ವಾರ ತೆರೆಗೆ ಅಪ್ಪಳಿಸಿರುವ “ಆಕ್ಟ್‌ 1978” ನೋಡುಗರಲ್ಲಿ ಒಂದಷ್ಟು ಕಿಚ್ಚೆಬ್ಬಿಸುವುದಷ್ಟೇ ಅಲ್ಲ, ಅತೀ ಅಸಹಾಯಕ ಜನರ ಗೋಳು, ನೋವು, ಕಷ್ಟ-ನಷ್ಟಗಳಿಗೆ ಮಿಡಿಯುವ ತುಡಿತ ಹೆಚ್ಚಾಗದೇ ಇರದು.

ಬಿ.ಸುರೇಶ, ನಟ

ಹೌದು, ಸೂಕ್ಷ್ಮ ಸಂವೇದನೆಯ ನಿರ್ದೇಶಕ ಮಂಸೋರೆ ಅವರ ಮೇಲಿಟ್ಟ ನಂಬಿಕೆ ಸುಳ್ಳಾಗಿಲ್ಲ. ಭರವಸೆಯೂ ಹುಸಿಯಾಗಿಲ್ಲ. ನಿರೀಕ್ಷೆ ಉಳಿಸಿಕೊಂಡಿದ್ದಾರೆ ಅನ್ನುವುದಕ್ಕೆ “ಆಕ್ಟ್‌ 1978” ಕೊಡುವ ಭಾವುಕತೆಯ ಹೂರಣವೇ ಸಾಕ್ಷಿ. ಅವರು ಈ ಬಾರಿ ಜನರ ಮುಂದಿಟ್ಟಿರುವ ವಿಷಯ ಹೊಸದಲ್ಲದಿದ್ದರೂ, ಹೇಳುವ ಮತ್ತು ಅದನ್ನು ಅಷ್ಟೇ ಜಾಣತನದಿಂದ ಕಟ್ಟಿಕೊಡಲು ಮಾಡಿರುವ ಪ್ರಾಮಾಣಿಕ ಪ್ರಯತ್ನ ಮೆಚ್ಚಲೇಬೇಕು. ವಾಸ್ತವ ಅಂಶಗಳು ಜನರಿಗೆ ಗೊತ್ತಿದ್ದರೂ, ಅದನ್ನು ಹೇಗೆಲ್ಲಾ ತೋರಿಸಿ, ಜನರನ್ನು ಹತ್ತಿರ ಬರಮಾಡಿಕೊಳ್ಳಬೇಕು ಎಂಬ ಕಲೆ ಮಂಸೋರೆ ಅವರಿಗೆ ಗೊತ್ತಿದೆ. ಆ ಕಾರಣದಿಂದಲೇ ಅವರ ಈ “ಆಕ್ಟ್‌ 1978” ವಿಶೇಷತೆ ಎನಿಸುತ್ತೆ.

 

ನಿರ್ದೆಶಕ ಮಂಸೋರೆ ಕಟ್ಟಿಕೊಟ್ಟಿರುವ ಕಥೆಯಲ್ಲಿ ಗಟ್ಟಿತನವಷ್ಟೇ ಅಲ್ಲ, ಅಲ್ಲೊಂದು‌ ಸೂಕ್ಮತೆಯೂ ಇದೆ. ಅವರು ಪೋಣಿಸಿರುವ ಪಾತ್ರಗಳಿರಲಿ, ಮಾತುಗಳಿರಲಿ, ಸನ್ನಿವೇಶಗಳಿರಲಿ ಎಲ್ಲವೂ ಸಂದರ್ಭಕ್ಕನುಗುಣವಾಗಿಯೇ ಜನರನ್ನು ಹತ್ತಿರವಾಗಿಸಿಕೊಳ್ಳುತ್ತಲೇ, ನೋಡುವ ಕುತೂಹಲ ಹೆಚ್ಚಿಸುತ್ತ ಹೋಗುತ್ತದೆ. ಸರ್ಕಾರಿ ಕಚೇರಿಯಲ್ಲಿ ನಡೆಯುವ ಒಂದೇ ಒಂದು ಪರಿಹಾರದ ಹಣದ ವಿಷಯ ಇಟ್ಟುಕೊಂಡು ಹೆಣೆದಿರುವ ಕಥೆಯಲ್ಲಿ ಭಾವನಾತ್ಮಕ ಸಂಬಂಧಗಳ ಸುಳಿ ಇದೆ. ಅಲ್ಲೊಂದಷ್ಟು ನೋವಿನ ಛಾಯೆ ಇದ್ದರೂ, ಹೋರಾಟದ ಕಿಚ್ಚು ಎದ್ದು ಕಾಣುತ್ತದೆ. ಸಮಾಜದೊಳಗಿರುವ ಕೆಟ್ಟ ವ್ಯವಸ್ಥೆಯ ಅನಾವರಣಗೊಳ್ಳುತ್ತದೆ. ಆ ವ್ಯವಸ್ಥೆ ಸುತ್ತ ತಿರುಬೋಕಿಗಳಂತೆ ತಿರುಗುವ ಪಾತ್ರಗಳ ಕಪಟ, ಲಂಚಗುಳಿತನ, ಅಲಸ್ಯೆ ಮನೋಭಾವ, ನಿರ್ಲಕ್ಷ್ಯತನ, ಬೇಕಾಬಿಟ್ಟಿ ಮಾತಿನ ವರ್ತನೆ, ದುರಾಸೆ, ದುರಾಲೋಚನೆ ಹೀಗೆ ನಾನಾ ರೀತಿಯ ಕೆಟ್ಟ ಯೋಚನೆಯ ಮನಸ್ಸುಗಳ ಸುತ್ತಾಟ ಗಿರಕಿಹೊಡೆಯುತ್ತದೆ.

ಇದಿಷ್ಟೂ ಈ ಸಮಾಜದೊಳಗಿರುವ ವ್ಯವಸ್ಥೆ. ಅದನ್ನು ಅಷ್ಟೇ ಪರಿಣಾಮಕಾರಿಯಾಗಿ ತೋರಿಸುವ ಪ್ರಯತ್ನದಲ್ಲಿ ನಿರ್ದೇಶಕರು ಗೆದ್ದಿದ್ದಾರೆ ಎಂಬುದರಲ್ಲಿ ಅನುಮಾನವಿಲ್ಲ.
ಒಂದು ಅಚ್ಚುಕಟ್ಟಾದ ಕಥೆಗೆ, ರೋಚಕ ಎನಿಸುವ ಚಿತ್ರಕಥೆಯೇ ಇಲ್ಲಿ ಜೀವಾಳ. ಇನ್ನುಳಿದಂತೆ ಚಿತ್ರದ ಪ್ರತಿ ಮೂಲೆ ಮೂಲೆಗೂ ಹೆಗಲು ಕೊಟ್ಟಿರೋದು ಕಾಣಸಿಗುವ ಪಾತ್ರಗಳು. ಇಲ್ಲಿ ಯಾರು ಹೆಚ್ಚಲ್ಲ, ಯಾರೂ ಕಮ್ಮಿ ಅಲ್ಲ. ಅಷ್ಟರಮಟ್ಟಿಗೆ ಅಷ್ಟೂ ಪಾತ್ರಗಳಿಗೆ ನ್ಯಾಯ ಸಲ್ಲಿಸುವ ಪ್ರಯತ್ನವನ್ನೂ ಇಲ್ಲಿ ಮಾಡಿರುವುದು “ಆಕ್ಟ್‌ʼನ ವಿಶೇಷತೆ ಎನ್ನಬಹುದು.

ಸಂಚಾರಿ ವಿಜಯ್‌, ನಟ

ಗೀತಾಳ ಅಸಹಾಯಕ ಬದುಕು…
ಇಡೀ ಚಿತ್ರದ ಕೇಂದ್ರಬಿಂದು ಗೀತಾ ( ಯಜ್ಞ ಶೆಟ್ಟಿ) ತನ್ನ ಕುಟುಂಬ ಕಳೆದುಕೊಂಡ ಆಕೆ, ತನ್ನ ಒಡಲಲ್ಲಿರುವ ಕಂದಮ್ಮನಿಗಾಗಿ ಬದುಕು ಸವೆಸಬೇಕು ಎಂಬ ಒಂದೇ ಒಂದು ಹಠದಿಂದಾಗಿ, ಬದುಕನ್ನು ಪ್ರೀತಿಸುತ್ತಲೇ ವ್ಯವಸ್ಥೆಯೊಳಗೆ ನೋವುಂಡುಕೊಂಡೇ ಬದುಕು ದೂಡುತ್ತಾಳೆ. ಒಬ್ಬ ಸಾಧಾರಣ ರೈತನ ಮಗಳು ಗೀತಾ. ಬೆಳೆದ ಬೆಳೆಗೆ ಬೆಲೆ ಸಿಗದೆ, ಕಷ್ಟ ಅನುಭವಿಸುವ ಗೀತಾಳ ತಂದೆ, ತಾನು ತೆಂಗಿನ ಮರದಿಂದ ಬಿದ್ದು ಸತ್ತರೆ, ಸರ್ಕಾರದಿಂದ ಒಂದಷ್ಟು ಪರಿಹಾರವಾದರೂ ಸಿಗುತ್ತೆ. ಅದು ನನ್ನ ಕುಟುಂಬಕ್ಕಾದರೂ ಆಸರೆಯಾಗುತ್ತೆ ಅಂತ, ತೆಂಗಿನ ಮರದಿಂದ ಕೆಳಗೆ ಬಿದ್ದು ತನ್ನ ಜೀವವನ್ನೇ ಬಲಿಕೊಡುತ್ತಾನೆ. ಅತ್ತ ಗೀತಾಳ ಗಂಡ ಬೈಕ್‌ನಲ್ಲಿ ಬರುವಾಗ, ರಸ್ತೆಯ ಮೇಲಿದ್ದ ದೊಡ್ಡ ಹಂಪ್‌ ಕಾಣದೆ ಮುಗ್ಗರಿಸಿ ಬಿದ್ದು ಪ್ರಾಣ ಕಳಕೊಳ್ಳುವ ಸ್ಥಿತಿಗೆ ಬರುತ್ತಾನೆ. ದಿಕ್ಕೇ ತೋಚದ ಗೀತಾ, ರೈತ ಅಭಿವೃದ್ಧಿ ಇಲಾಖೆಗೆ ತನ್ನ ತಂದೆ ಸಾವಿನ ಪರಿಹಾರ ಕೇಳಿ ಅರ್ಜಿ ಹಾಕುತ್ತಾಳೆ. ಆ ಇಲಾಖೆಯೊಳಗಿರುವ ಅಷ್ಟೂ ಅಧಿಕಾರಿಗಳು, ನೌಕರರು ಭ್ರಷ್ಟರೇ. ಹೀಗಾದರೆ, ಇನ್ನೆಲ್ಲಿಯ ಪರಿಹಾರ? ಬಿಡಿಗಾಸಿಗಾಗಿ ಅಲೆದಲೆದು ವರ್ಷಗಳನ್ನೇ ಸವೆಸುವ ಗೀತಾ ಅತ್ತ ಗರ್ಭಿಣಿ. ನ್ಯಾಯಕ್ಕೆ ಬೆಲೆ ಸಿಗಲ್ಲ ಎಂಬುದನ್ನುಅರಿತ ಗೀತಾ, ತನ್ನ ದೇಹಕ್ಕೆ ಬಾಂಬ್‌ ಕಟ್ಟಿಕೊಂಡು, ತಂದೆಯಂತೆ ಇರುವ ವ್ಯಕ್ತಿಯ ಜೊತೆ ಆ ಇಲಾಖೆಯೊಳಗೆ ಕಾಲಿಡುತ್ತಾಳೆ. ಆಮೇಲೆ ಅಲ್ಲಿ ನಡೆಯೋದೆ ರೋಚಕ ಸನ್ನಿವೇಶ. ಅದನ್ನು ಕೇಳುವುದಕ್ಕಿಂತ ನೋಡುವುದರಲ್ಲೇ ಮಜಾ ಇದೆ.

ಮಂಸೋರೆ, ನಿರ್ದೇಶಕ

ಭಾವನೆಗಳನ್ನು ಕೆದಕುವಂತಹ ವಿಷಯ ಇಟ್ಟುಕೊಂಡು ನೋಡುಗರಲ್ಲಿ ಅಷ್ಟೇ ಕುತೂಹಲ ಕೆರಳಿಸುತ್ತ ಹೋಗುವ ಮಂಸೋರೆ, ಸಮಾಜದ ವಸ್ತುಸ್ಥತಿಯನ್ನು ಬಯಲಿಗೆಳೆಯುವ ಸಾಹಸ ಮಾಡಿ ಸೈ ಎನಿಸಿಕೊಂಡಿದ್ದಾರೆ. ಇಲ್ಲಿ ಅವ್ಯವಹಾರ, ಭ್ರಷ್ಟತೆಯಲ್ಲಿ ಮುಳುಗಿರುವ ಅಧಿಕಾರಿಗಳಿಗೆ ತಕ್ಕ ಪಾಠ ಕಲಿಸಬೇಕೆಂದೇ ಗೀತಾ, ಇಲಾಖೆಯ ಅಷ್ಟೂ ಅಧಿಕಾರಿ, ನೌಕರರನ್ನು ಲಾಕ್‌ ಮಾಡಿಕೊಂಡು, ತನ್ನ ಫೇಸ್‌ಬುಕ್‌ ಖಾತೆ ಮೂಲಕ ಲೈವ್‌ ಮಾಡುತ್ತಾಳೆ. ಕ್ಷಣಾರ್ಧದಲ್ಲೇ ಸುದ್ದಿ ರಾಜ್ಯ, ರಾಷ್ಟ್ರಮಟ್ಟದವರೆಗೂ ಹೋಗುತ್ತೆ. ಇಡೀ ರಾಜಕೀಯ ವ್ಯವಸ್ಥೆಯಲ್ಲೆ ನಡುಕ ಶುರುವಾಗುತ್ತೆ. ಒಂದಷ್ಟು ಓದಿಕೊಂಡಿರುವ ಗೀತಾ, ಆ ಕಚೇರಿಯೊಳಗಿದ್ದುಕೊಂಡೇ ಕೆಲವು ಡಿಮ್ಯಾಂಡ್‌ ಇಡುತ್ತಾಳೆ. ತನ್ನ ಡಿಮ್ಯಾಂಡ್‌ ಈಡೇರದಿದ್ದರೆ, ಬ್ಲಾಸ್ಟ್‌ ಮಾಡುವ ಬೆದರಿಕೆಯನ್ನೂ ಹಾಕುತ್ತಾಳೆ. ಸರ್ಕಾರಿ ಕಚೇರಿಯೊಳಗೆ ನಡೆಯುವ ಆ ಅದ್ಭುತ ಡ್ರಾಮ ಅತ್ಯಂತ ಅರ್ಥಪೂರ್ಣ ಎನಿಸದೇ ಇರದು.

ಅವಿನಾಶ್‌, ನಟ

ಒಳಗೆ ಲಾಕ್‌ ಆಗಿರುವ ಸರ್ಕಾರಿ ನೌಕರರನ್ನು ಕ್ಷೇಮವಾಗಿ ಹೊರತರುವ ತಯಾರಿ ಸರ್ಕಾರ ಮಾಡುತ್ತಿದ್ದರೆ, ಅತ್ತ, ಸರ್ಕಾರಿ ಬಿಲ್ಡಿಂಗ್‌ ಹೈಜಾಕ್‌ ಆಗಿರುವುದರಿಂದ ನಮ್ಮ ಫೈಲ್‌ಗಳ ಕಥೆ ಏನ್ರೀ ಎಂಬ ಲೆಕ್ಕಾಚಾರ ಹೊರಗಿರುವ ಭ್ರಷ್ಟರದ್ದು. ಆ ಕಚೇರಿಯೊಳಗೆ ಕಸಗೂಡಿಸೋನಿಂದ ಹಿಡಿದು, ಕ್ಲರ್ಕ್‌, ಮ್ಯಾನೇಜರ್‌ , ಡಯಾಬಿಟೀಸ್‌ ಪೇಶೆಂಟ್‌, ಗಿಡಮೂಲಿಕೆ ಮಾರಲು ಬಂದವ ಹೀಗೆ ಇತರೆ ನೌಕರರೂ ಲಾಕ್.‌ ಹೊರಗಡೆ ಗೀತಾಳ ಬಗ್ಗೆ ಅಪಪ್ರಚಾರ. ಆಕೆ ಟೆರರಿಸ್ಟ್‌, ನಕ್ಸಲ್‌ ಗುಂಪಿನವಳು, ಒಂದು ಸಂಘಟನೆಯಲ್ಲಿದ್ದಾಳೆ ಅಂತೆ-ಕಂತೆಗಳ ಸುದ್ದಿಯ ಹರಿದಾಟ. ಹೊರಗೆ ಪೊಲೀಸ್‌ ಅಧಿಕಾರಿಗಳಿಂದ ಆಕೆಯನ್ನು ಮಟ್ಟ ಹಾಕುವ ಯೋಚನೆ. ಆಕೆ ತನ್ನ ಉದ್ದೇಶ ಈಡೇರುವವರೆಗೂ ಯಾರನ್ನೂ ಹೊರ ಕಳಿಸಲ್ಲ ಎಂದು ಪಟ್ಟು ಹಿಡಿಯುತ್ತಾಳೆ. ಸರ್ಕಾರಕ್ಕೆ ಒಂದು ಡಿಮ್ಯಾಂಡ್‌ ಇಡುತ್ತಾಳೆ. ಅಷ್ಟಕ್ಕೂ ಅವಳ ಉದ್ದೇಶ ಏನು, ಆಕೆಯ ಡಿಮ್ಯಾಂಡ್‌ ಈಡೇರುತ್ತಾ, ಅಧಿಕಾರಿಗಳ ಕೊಡುವ ಗ್ಯಾರಂಟಿ ಮೇಲೆ ನಂಬಿಕೆ ಇಡುತ್ತಾಳಾ? ಇದೆಲ್ಲದ್ದಕ್ಕೂ ಉತ್ತರ ಬೇಕಿದ್ದರೆ, “ಆಕ್ಟ್‌ 1978” ನೋಡಲೇಬೇಕು.


ಮಂಸೋರೆ ಇಲ್ಲಿ, ಭ್ರಷ್ಟ ಅಧಿಕಾರಿಗಳು, ಸಮಾಜದ ವ್ಯವಸ್ಥೆಯನ್ನಷೇ ಅಲ್ಲ, ಸುಳ್ಳು ಸುದ್ದಿ ಹರಡುವ ವಾಹಿನಿಗಳ ಪೇಚಾಟವನ್ನೂ ತೋರಿಸಿದ್ದಾರೆ. ಇದರೊಂದಿಗೆ ಗರ್ಭಿಣಿಯ ಸಂಕಟ, ಅಳು, ಅಸಹಾಯಕತೆಯನ್ನು ಸೂಕ್ಷ್ಮವಾಗಿಯೇ ಹೇಳುತ್ತಾ ಹೋಗಿದ್ದಾರೆ. ಇವೆಲ್ಲದರ ಜೊತೆ ಜೊತೆಗೆ “ಇದು ನನ್ನ ಹಕ್ಕು, ಇದು ನನ್ನ ಸ್ವತ್ತು” ಎಂಬುದನ್ನೂ ಸಾರುತ್ತಾ ಹೋಗಿದ್ದಾರೆ. ಹಾಗಾಗಿ ಇದೊಂದು ಮಂಸೋರೆಯ “ಮನಸಾರೆ” ಸಿನಿಮಾ ಎನ್ನಲಡ್ಡಿಯಿಲ್ಲ. ಇಂತಹ ಕಥೆಗಳಿಗೆ ಕಮರ್ಷಿಯಲ್‌ ಲೇಪದ ಬಗ್ಗೆ ಮಾತಾಡಬಾರದು. ಆದರೆ, ಇಲ್ಲಿ ಭರಪೂರ ಖರ್ಚು ಮಾಡಿರುವುದೂ ಗೊತ್ತಾಗುತ್ತೆ. ಚಿತ್ರಕ್ಕೆ ರಾಹುಲ್ ಶಿವಕುಮಾರ್ ಸಂಗೀತ ನೀಡಿದ್ದು, ಚಿತ್ರವನ್ನು ಇನ್ನೊಂದು ಹಂತಕ್ಕೆ ತಲುಪಲು ಶ್ರಮಿಸಿರುವುದು ಗೊತ್ತಾಗುತ್ತದೆ. ಚಿತ್ರದಲ್ಲಿರುವ ಒಂದೇ ಒಂದು ಹಾಡಿಗೆ ಜಯಂತ್‌ ಕಾಯ್ಕಿಣಿ ಅವರ ಬರಹದ ಸ್ಪರ್ಶವಿದೆ. ಅವರ ” ತೇಲಾಡೋ ಮುಗಿಲೆ‌ ನೀನೆಂದು ಬರುವೆ ಭೂಮಿಯ‌ ಮುದ್ದಿಸಲು..” ಎಂಬ ಆರಂಭದ ಗೀತೆ ಕಥೆಯ ಚಿತ್ರಣಕ್ಕೆ ಪೂರಕವಾಗಿದೆ. ಸತ್ಯ ಹೆಗಡೆ ಅವರ ಛಾಯಾಗ್ರಹಣ ಇಡೀ ಚಿತ್ರದ ವೇಗವನ್ನು ಹೆಚ್ಚಿಸಿದೆ. ನಾಗೇಂದ್ರ ಕೆ.ಉಜ್ಜನಿ ಅವರ ಕತ್ತರಿ ಪ್ರಯೋಗದಲ್ಲೂ ಹೊಸತನವಿದೆ.

ಶ್ರುತಿ, ನಟಿ

ಇನ್ನು ಚಿತ್ರದ ಪ್ರತಿಯೊಂದು ಮಾತುಗಳಲ್ಲೂ ತೂಕವಿದೆ. ಆ‌ ತೂಕದ ಮಾತುಗಳಿಗೆ ನಿರ್ದೇಶಕ ಮಂಸೋರೆ, ವೀರೇಶ್ ಮಲ್ಲಣ್ಣ ಹಾಗೂ ದಯಾನಂದ್ ಟಿ. ಕೆ . ಅವರು ಕಾರಣವಾಗುತ್ತಾರೆ. ಯಜ್ಞ ಶೆಟ್ಟಿ ನಟನೆ ಮೂಲಕ ನೋಡುಗರನ್ನು ತನ್ನತ್ತ ಸೆಳೆದುಕೊಳ್ಳುತ್ತಾರೆ. ಬಿ.ಸುರೇಶ ಅವರಿಗೆ ಇಲ್ಲಿ ಒಂದೇ ಒಂದು ಡೈಲಾಗ್‌ ಇಲ್ಲ. ಆದರೂ, ಬರೀ ಮೌನದಲ್ಲೇ ಎಲ್ಲರನ್ನೂ ಆಕರ್ಷಿಸುತ್ತಾರೆ. ಉಳಿದಂತೆ ಪ್ರಮೋದ್ ಶೆಟ್ಟಿ, ಸಂಚಾರಿ ವಿಜಯ್, ಶೃತಿ, ದತ್ತಣ್ಣ, ಅಚ್ಯುತ ಕುಮಾರ್, ಅವಿನಾಶ್, ಸುಧಾ ಬೆಳವಾಡಿ, ಶೋಭ ರಾಜ್, ಶರಣ್ಯ, ನಂದಗೋಪಾಲ್, ರಾಘು ಶಿವಮೊಗ್ಗ, ಕಿರಣ್ ನಾಯಕ್ ಹೀಗೆ ಇಲ್ಲಿ ಬರುವ ಪ್ರತಿಯೊಂದು ಪಾತ್ರಧಾರಿಗಳು ಚಿತ್ರವನ್ನು ‌ಮತ್ತೊಂದು ಹಂತಕ್ಕೆ‌ ತೆಗೆದುಕೊಂಡು ಹೋಗುವಲ್ಲಿ ಯಶಸ್ವಿಯಾಗಿದ್ದಾರೆ.

ದತ್ತಣ್ಣ, ನಟ

ಕೊನೇ ಮಾತರು- ಇದು ಮಂಸೋರೆ ಅವರ ಮನಸಾರೆ ಒಪ್ಪುವ ಅಪ್ಪುವ ಚಿತ್ರವಂತೂ ಹೌದು. ಕನ್ನಡ ಸಿನಿಮಾ ಇತರೆ ಭಾಷೆಯ ಸಿನಿಮಾಗಳಿಗೆ ಹೋಲಿಸಿದರೆ ಯಾಕೆ ಒಂದು ಹೆಜ್ಜೆ ಮುಂದೆ ಅಂದರೆ, ಅದು ಮನಸ್ಸುಗಳಿಗೆ ನಾಟುವ, ಹತ್ತಿರ ಎನಿಸುವ ಭಾವುಕತೆ ಹೆಚ್ಚಿಸುವ ಇಂತಹ ಕಥೆಗಳಿಂದ.

– ವಿಜಯ್‌ ಭರಮಸಾಗರ

Categories
ಸಿನಿ ಸುದ್ದಿ

ಶಿವಣ್ಣ ಈಗ ಶಿವಪ್ಪ!

ಸೆಂಚುರಿ ಸ್ಟಾರ್‌ನ ೧೨೩ನೇ ಚಿತ್ರವಿದು

ಮಾಸ್‌ ಶಿವಪ್ಪನ ಖದರ್‌ ಶುರು…

ಈ ಹಿಂದೆ ಶಿವರಾಜಕುಮಾರ್‌ ಹಾಗೂ ಡಾಲಿ ಇಬ್ಬರೂ ಹೊಸದೊಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಎಲ್ಲರಿಗೂ ಗೊತ್ತೇ ಇದೆ. “ಟಗರು” ಮೂಲಕ ಜೋರು ಸುದ್ದಿಯಾಗಿದ್ದ “ಡಾಲಿ” ಧನಂಜಯ್‌ ಅವರು ಶಿವರಾಜಕುಮಾರ್‌ ಅವರೊಂದಿಗೆ ನಟಿಸುವ ಸಿನಿಮಾಗೆ ಆಗ ಶೀರ್ಷಿಕೆ ಪಕ್ಕಾ ಆಗಿರಲಿಲ್ಲ. ಇದೀಗ ಶಿವರಾಜಕುಮಾರ್‌ ಅಭಿನಯದ ಹೊಸ ಚಿತ್ರಕ್ಕೆ “ಶಿವಪ್ಪ” ಎಂಬ ಹೆಸರನ್ನಿಡಲಾಗಿದೆ. ಅಂದಹಾಗೆ, “ಶಿವಪ್ಪ” ಶಿವರಾಜಕುಮಾರ್‌ ಅಭಿನಯದ ೧೨೩ನೇ ಸಿನಿಮಾ ಎಂಬದು ವಿಶೇಷ. “ಶಿವಪ್ಪ” ಹೆಸರಲ್ಲೇ ಮಾಸ್‌ ಫೀಲ್‌ ಇದೆ. ಶಿವರಾಜಕುಮಾರ್‌ ಸಿನಿಮಾಗೆ “ಶಿವಪ್ಪʼ ಹೆಸರು ಒಂದು ರೀತಿ ಪಾಸಿಟಿವ್‌ ಆಗಿದ್ದು, ಇಡೀ ಸಿನಿಮಾದಲ್ಲಿ ಶಿವಣ್ಣ ಹೈಲೈಟ್‌ ಎನ್ನಲಾಗಿದೆ.

ಇನ್ನು, ಈ ಚಿತ್ರದಲ್ಲಿ ಶಿವರಾಜಕುಮಾರ್‌ ಹಾಗೂ ಡಾಲಿ ಧನಂಜಯ್‌ ಅವರೊಂದಿಗೆ ಯುವ ನಟ ಪೃಥ್ವಿ ಅಂಬರ್‌ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಚಿತ್ರದ ತಾರಾಬಳಗದ ಆಯ್ಕೆ ನಡೆದಿದ್ದು, ನವೆಂಬರ್‌ ೨೩ರಿಂದಲೇ ಚಿತ್ರದ ಚಿತ್ರೀಕರಣ ಶುರುವಾಗಲಿದೆ. ಆರಂಭದ ಎರಡು ದಿನಗಳ ಕಾಲ ಶಿವರಾಜ್ ಕುಮಾರ್, ಪೃಥ್ವಿ ಅಂಬರ್ ಕಾಂಬಿನೇಷನ್‌ನಲ್ಲಿ ಚಿತ್ರೀಕರಣ ನಡೆಯಲಿದೆ. ನವೆಂಬರ್‌ ೨೫ರ ಬಳಿಕ ಡಾಲಿ ಧನಂಜಯ್ ಚಿತ್ರತಂಡ ಸೇರಿಕೊಳ್ಳಲಿದ್ದಾರೆ ಎಂಬುದು ಚಿತ್ರ ನಿರ್ದೇಶಕರ ಹೇಳಿಕೆ.


“ಶಿವಪ್ಪ” ಇದೊಂದು ಪಕ್ಕಾ ಮಾಸ್‌ ಫೀಲ್‌ ಇರುವ ಸಿನಿಮಾ. “ಶಿವಪ್ಪ” ಚಿತ್ರದಲ್ಲಿ ಶಿವರಾಜಕುಮಾರ್‌ ಅವರು ಮೂರು ವಿಭಿನ್ನ ಗೆಟಪ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆಂಬುದು ವಿಶೇಷ. ಸದ್ಯ ಉಳಿದ ಪಾತ್ರಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಚಿತ್ರದ ನಾಯಕಿ ಯಾರು ಅನ್ನುವುದಕ್ಕಿನ್ನೂ ಸಮಯವಿದೆ ಎನ್ನುವ ಚಿತ್ರತಂಡ, ಸದ್ಯ ನಟರ ಭಾಗದ ಚಿತ್ರೀಕರಣದತ್ತ ಗಮನಹರಿಸಿದ್ದಾರೆ.


ಈಗಾಗಲೇ ತಮಿಳಿನಲ್ಲಿ ನಾಲ್ಕು ಚಿತ್ರಗಳನ್ನು ನಿರ್ದೇಶಿಸಿ, ಛಾಯಾಗ್ರಾಹಕರಾಗಿ ಸಾಕಷ್ಟು ಹೆಸರು ಮಾಡಿರುವ ವಿಜಯ್ ಮಿಲ್ಟನ್, ಕನ್ನಡದಲ್ಲಿ ಈಗಾಗಲೇ ಬಂದಿರುವ “ಅಟ್ಟಹಾಸ” ಹಾಗೂ ಬಿಡುಗಡೆಯಾಗಬೇಕಿರುವ ಧ್ರುವ ಸರ್ಜಾ ಅಭಿನಯದ “ಪೊಗರು” ಚಿತ್ರಕ್ಕೂ ಇವರೇ ಛಾಯಾಗ್ರಾಹಕರು. ಇನ್ನು, “ಶಿವಪ್ಪ” ವಿಜಯ್‌ ಮಿಲ್ಟನ್‌ ಅವರ ಕನ್ನಡದ ಮೊದಲ ನಿರ್ದೇಶನದ ಚಿತ್ರ ಎಂಬುದು ವಿಶೇಷ. ಸದ್ಯ ಶಿವರಾಜಕುಮಾರ್‌ ಸಾಕಷ್ಟು ಸಿನಿಮಾಗಳಲ್ಲಿ ಬಿಝಿಯಾಗಿದ್ದಾರೆ. ಯೋಗರಾಜ್ ಭಟ್ ನಿರ್ದೇಶನದ ಚಿತ್ರದಲ್ಲೂ ಶಿವಣ್ಣ ನಟಿಸುತ್ತಿದ್ದು, ಆ ಚಿತ್ರದಲ್ಲಿ ಪ್ರಭುದೇವ ಅವರೊಂದಿಗೆ ಶಿವಣ್ಣ ನಟಿಸುತ್ತಿದ್ದಾರೆ. “ಭಜರಂಗಿ 2” ಚಿತ್ರ ರೆಡಿಯಾಗಿದೆ.

ಇದರೊಂದಿಗೆ ತೆಲುಗಿನ ನಿರ್ದೇಶಕರೊಬ್ಬ ಸಿನಿಮಾದಲ್ಲೂ ನಟಿಸಲು ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ. ಅದೇನೆ ಇರಲಿ, ಈಗ “ಶಿವಪ್ಪ” ಒಂದು ಕತೂಹಲವನ್ನಂತೂ ಕೆರಳಿಸಿದೆ. ಆ ಕುತೂಹಲಕ್ಕೆ ಕಾರಣ, ಶಿವರಾಜಕುಮಾರ್‌ ಹೈಲೈಟ್‌ ಆಗಿರೋದು, ಡಾಲಿ ಧನಂಜಯ್‌ ಜೊತೆಗಿರೋದು. ವಿಜಯ್ ಮಿಲ್ಟನ್‌ ‌ನಿರ್ದೇಶನ ಮಾಡುತ್ತಿರೋದು. ಎಲ್ಲದ್ದಕ್ಕೂ ಹೆಚ್ಚಾಗಿ, ಕೃಷ್ಣ ಸಾರ್ಥಕ್‌ ನಿರ್ಮಾಣ ಮಾಡುತ್ತಿರೋದು. ಸದ್ಯಕ್ಕೆ ಚಿತ್ರ ಒಂದು ಹೆಸರಿನ ಮೂಲಕವೇ ಸದ್ದು ಮಾಡಿದೆ. ಮುಂದಿನ ದಿನಗಳಲ್ಲಿ ಚಿತ್ರದ ಒಂದೊಂದೇ ಮಾಹಿತಿ ಹೊರಬೀಳಲಿದೆ.

Categories
ಸಿನಿ ಸುದ್ದಿ

ಹಿರಿಯ ಸ್ಥಿರಚಿತ್ರ ಛಾಯಾಗ್ರಾಹಕ ಮಲ್ಲಾರಾಧ್ಯ ಇನ್ನಿಲ್ಲ

ಕನ್ನಡ ಚಿತ್ರರಂಗ ಸಂತಾಪ

ಕನ್ನಡ ಚಿತ್ರರಂಗದ ಹಿರಿಯ ಸಿನಿಮಾ ಸ್ಥಿರಚಿತ್ರ ಛಾಯಾಗ್ರಾಹಕ ಮಲ್ಲಾರಾಧ್ಯ (73 ವರ್ಷ) ನಿಧನರಾಗಿದ್ದಾರೆ. ಅವರು ಕೋವಿಡ್ ಸೋಂಕಿನಿಂದಾಗಿ ಕಳೆದ ನಾಲ್ಕು ವಾರಗಳ ಹಿಂದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ನವೆಂಬರ್‌ ೧೯ರಂದು ಮೃತಪಟ್ಟಿದ್ದಾರೆ. ಮಲ್ಲಾರಾಧ್ಯ ಅವರು ಚಿತ್ರರಂಗದಲ್ಲಿ ಕಳೆದ ಐದು ದಶಕಗಳ ನಂಟು ಹೊಂದಿದ್ದರು. ಆರಂಭದ ದಿನಗಳಲ್ಲಿ ಮೈಸೂರಿನ ಪ್ರೀಮಿಯರ್ ಸ್ಟುಡಿಯೋ ಮತ್ತು ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ಸೌಂಡ್‌ ಇಂಜಿನಿಯರ್ ಆಗಿ ಅವರು ತಮ್ಮ ಕಾರ್ಯನಿರ್ವಹಿಸಿದ್ದರು. ನಟ ಬಾಲಕೃಷ್ಣ ಅವರ ನಿಕಟವರ್ತಿಯಾಗಿದ್ದು, ನಂತರ ಸ್ಥಿರಚಿತ್ರ ಛಾಯಾಗ್ರಾಹಕರಾಗಿ ತಮ್ಮ ನೆಲೆಯನ್ನು ಕಂಡುಕೊಂಡಿದ್ದರು. ಸುಮಾರು ಇನ್ನೂರಕ್ಕೂ ಹೆಚ್ಚು ಸಿನಿಮಾಗಳಿಗೆ ಸ್ಥಿರಚಿತ್ರ ಛಾಯಾಗ್ರಾಹಕರಾಗಿ ಅವರು ಕೆಲಸ ಮಾಡಿದ್ದಾರೆ ಎಂಬುದು ವಿಶೇಷ. ಪ್ರಸ್ತುತ ಮಲ್ಲಾರಾಧ್ಯ ಅವರು ಸ್ಥಿರಚಿತ್ರ ಛಾಯಾಗ್ರಾಹಕ ಸಂಘದ ಅಧ್ಯಕ್ಷರಾಗಿದ್ದರು. ಹಿರಿಯ ಸಿನಿಮಾ ತಂತ್ರಜ್ಞ ಮಲ್ಲಾರಾಧ್ಯ ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು, ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘ, ನಿರ್ದೇಶಕರ ಸಂಘ, ಕಲಾವಿದರು ಹಾಗು ಇತರೆ ತಾಂತ್ರಿಕ ವರ್ಗದವರು ಸಂತಾಪ ಸೂಚಿಸಿದ್ದಾರೆ.

Categories
ಸಿನಿ ಸುದ್ದಿ

ಆಕ್ಟ್ 1978 ಅನ್ನೋದು ಅನುಭವದ ಕತೆ – ಮಂಸೋರೆ

ಐಟಂ ಸಾಂಗ್ ಇಲ್ಲ‌ ಅನ್ನೋದನ್ನ ಬಿಟ್ಟರೆ ಇದು ಪಕ್ಕಾ ಕಮರ್ಷಿಯಲ್ ಆ್ಯಂಡ್ ಮಾಸ್ ಸಿನಿಮಾ ಅಂದ್ರು ಅವಾರ್ಡ್ಸ್ ವಿನ್ನರ್ ಡೈರೆಕ್ಟರ್

ಕನ್ನಡದಲ್ಲಿ ಪ್ರಯೋಗಾತ್ಮಕ ಚಿತ್ರಗಳ ಮೂಲಕ ಗಮನ‌ಸೆಳೆದ ನಿರ್ದೇಶಕರ ಪೈಕಿ ಮಂಸೋರೆ ಕೂಡ ಒಬ್ಬರು. ಹರಿವು, ನಾತಿ ಚೆರಾಮಿ’ ಚಿತ್ರಗಳ ನಂತರ ಈಗ ವಿಭಿನ್ನ ಶೀರ್ಷಿಕೆ ಹಾಗೂ ವಿಶಿಷ್ಟ ಕಥಾ ಹಂದರದ ‘ಆಕ್ಟ್ 1978 ‘ ಚಿತ್ರದೊಂದಿಗೆ ಸುದ್ದಿಯಲ್ಲಿದ್ದಾರೆ. ಹಲವು ಕಾರಣಕ್ಕೆ ಈ ಚಿತ್ರ ಕುತೂಹಲ‌ ಮೂಡಿಸಿದೆ. ವಿಶೇಷವಾಗಿ ಈ ಚಿತ್ರ ಲಾಕ್ ಡೌನ್ ನಂತರ ತೆರೆ ಕಾಣುತ್ತಿರುವ ಮೊದಲ‌ಚಿತ್ರ ಎನ್ನುವುದು ದೊಡ್ಡ ಕ್ಯೂರಿಯಾಸಿಟಿ ಮೂಡಿಸಿದೆ. ನವೆಂಬರ್ 20 ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿರುವ ಈ ಚಿತ್ರದ ವಿಶೇಷತೆ ಕುರಿತು ಅವರೊಂದಿಗೆ ‘ಸಿನಿ ಲಹರಿ’ ನಡೆಸಿದ ವಿಶೇಷ ಸಂದರ್ಶನ ಇಲ್ಲಿದೆ.

– ಲಾಕ್ ಡೌನ್ ನಂತರ ತೆರೆ ಕಾಣುತ್ತಿರುವ ಮೊದಲ ಸಿನಿಮಾ ನಿಮ್ದು. ಇದೊಂಥರ ಸಾಹಸ. ಹಾಗೆಯೇ ಸವಾಲು. ಇದು ಯಾಕೆ, ಹೇಗೆ, ಅಷ್ಟು ಕಾನ್ಪಿಡೆನ್ಸ್ ಏನು ?

ಕಾನ್ಫಿಡೆನ್ಸ್ ಅಂದ್ರೆ ಸಿನಿಮಾ‌. ಅದರಾಚೆ ಸಾಹಸ, ಸವಾಲು ಎನ್ನುವುದಕ್ಕಿಂತ, ಇದೇ ನಮಗೆ ಸರಿಯಾದ ಸಮಯ. ಸೋಲೋ, ಗೆಲ್ಲವೋ ಇಂತಹ ಟೈಮ್ ಮತ್ತೆ ಸಿಗಲ್ಲ ಎನ್ನುವುದು ನನ್ನ ಭಾವನೆ. ಯಾಕಂದ್ರೆ ಹತ್ತಾರು ಸಿನಿಮಾಗಳ ನಡುವೆ ಬಂದು ಕಳೆದು ಹೋಗುವುದಕ್ಕಿಂತ ವಿಶಾಲವಾದ ಈ ಸಂದರ್ಭದಲ್ಲಿ ಬಂದು ಜನರನ್ನು ತಲುಪಲು ಪ್ರಮಾಣಿಕವಾಗಿ ಪ್ರಯತ್ನ ಮಾಡೋಣ ಎನ್ನುವುದು ನಮ್ಮ ಲೆಕ್ಕಚಾರ. ಗೊತ್ತಿಲ್ಲ, ಇದು ಎಷ್ಟರ ಮಟ್ಟಿಗೆ ಸಕ್ಸಸ್ ಆಗುತ್ತೋ ಅಂತ‌. ಆದ್ರೆ ಇಲ್ಲಿ ತನಕ ಸಿಕ್ಕಿರುವ ರೆಸ್ಪಾನ್ಸ್ ನೋಡಿದ್ರೆ, ಪಾಸಿಟಿವ್ ವೈಬ್ರೇಷನ್ ಅಂತೂ ಇದ್ದೇ ಇದೆ.

ಆಕ್ಟ್ 1978 ಹೆಸರಲ್ಲಿ ಏನನ್ನು ಹೇಳಲು ಹೊರಟ್ಟಿದ್ದೀರಿ, ಇದು ಯಾರ ಮತ್ತು ಯಾವ ಕಾನೂನಿನ ಪರವಾದ ಸಿನಿಮಾ?

ಹೆಸರೇ ಹೇಳುವಂತೆ ಇದೊಂದು ಕಾನೂನಿನ ಸುತ್ತಲ ಕತೆ ಎನ್ನುವುದು ಸತ್ಯ, ಆದರೆ ಅದೇ ಚಿತ್ರದ ಪ್ರಧಾನ‌ಕತೆ ಅಲ್ಲ. ಒಂದು ಕಾನೂನಿನ ಸುತ್ತ ಬೇರೆಯದೇ ಆದ ಅನೇಕ ಸಂಗತಿಗಳಿವೆ. ಅವೆಲ್ಲವೂ ಹೊಸತಾದ ಅಂಶಗಳು. ಒಂದಂತೂ ಸತ್ಯ, ಇವೆಲ್ಲ ಜನರ ಮನಸ್ಸಿಗೆ ಹತ್ತಿರವಾದ ವಿಷಯ. ಒಂದಲ್ಲೊಂದು ರೀತಿಯಲ್ಲಿ ಸಾಮಾನ್ಯ ಜನರು ಅಧಿಕಾರಿ‌ಶಾಹಿ ವ್ಯವಸ್ಥೆಯಲ್ಲಿ ನಲುಗಿರುತ್ತಾರೆ. ಅವರಿಗೆ ಇದು ಬಹುಬೇಗ ಕನೆಕ್ಟ್ ಆಗುತ್ತದೆ ಎನ್ನುವ ನಂಬಿಕೆ ನಮ್ಮದು.

ಈ ಕತೆಗೆ ಸ್ಪೂರ್ತಿ ಏನು? ಇದನ್ನೇ ಸಿನಿಮಾ ಮಾಡ್ಬೇಕು ಅಂತೆನಿಸಿದ್ದು ಯಾಕೆ?

ಒಂದೇ ಮಾತಿನಲ್ಲಿ ಹೇಳುವುದಾದರೆ ಅಧಿಕಾರಿ ಶಾಹಿಯೇ ಈ ಕತೆಗೆ ಸ್ಪೂರ್ತಿ. ಈ ದೇಶದಲ್ಲಿ ಯಾರೆಲ್ಲ, ಹೇಗೆಲ್ಲ ಬದಲಾದರೂ ಅಧಿಕಾರಿ ಶಾಹಿ ಮಾತ್ರ ಬದಲಾಗದು. ಅವರೆಲ್ಲ ಜನರಿಗೆ ತಾವು ಸೇವಕರು ಎನ್ನುವುದಕ್ಕಿಂತ ಜನರೇ ತಮಗೆ ಸೇವಕರೆಂ ದುಕೊಂಡಿದ್ದಾರೆ. ಹೀಗಾಗಿ ಸಾಮಾನ್ಯ ಜನರು ಒಂದಲ್ಲೊಂದು ರೀತಿಯಲ್ಲಿ ಹಲವಾರು ವರ್ಷಗಳಿಂದ ಅಧಿಕಾರಿ ಶಾಹಿ ದೌರ್ಜನ್ಯದಡಿ ನಲುಗಿದವರೆ‌ . ಇಂತಹದೇ ಒಂದು ಅನುಭವ ನನಗೂ ಆಯಿತು. ತಂದೆಯವರ ಪೆನ್ಸೆಷನ್ ಗೆ ಅಂತ ಓಡಾಡುವಾಗ ಸಾಕಷ್ಟು ನೋವಿನ ಅನುಭವ ಆಯ್ತು‌. ನನ್ನಂತಹ ವಿದ್ಯಾವಂತ ಯುವಕನ ಸ್ಥಿತಿಯೇ ಹೇಗಾದರೆ, ಏನು ಅರಿಯದ ಸಾಮಾನ್ಯರ ಜನರ ಗತಿಯೇನು ಅಂತ ಯೋಚಿಸುತ್ತಿದ್ದೆ. ಆಗ ಹುಟ್ಟಿದ ಕತೆ ಇದು‌.

ಅನುಭವದ ಕತೆಗಳು ಕೆಲವೊಮ್ಮೆ ಡಾಕ್ಯುಮೆಂಟರಿ ರೂಪದಲ್ಲೇ ತೆರೆಗ ಬಂದು ಬಿಡುವ ಸಾಧ್ಯತೆಗಳೇ ಹೆಚ್ಚು. ಅದನ್ನು ಇದು ಮೀರಿ ರಂಜಿಸುವುದು ಹೇಗೆ?

ಹಾಗೆ ಆಗೋದಿಕ್ಕೆ ಇದನ್ನ ಬಿಟ್ಟಿಲ್ಲ. ಇದರ ಚಿತ್ರಕತೆ ಶೈಲಿಯೇ ವಿಭಿನ್ನ. ಅನೇಕ ಸಿನಿಮ್ಯಾಟಿಕ್ ರೂಪಗಳನ್ನು ಇಲ್ಲಿ ಅಳವಡಿಸಿಕೊಂಡಿದ್ದೇವೆ. ಥ್ರಿಲ್ಲರ್ ಶೈಲಿಯಾಗಿರ ಬಹುದು,ಪಾತ್ರಗಳನ್ನು ತಂದ ಬಗೆಯಾಗಲಿ, ಸಂಭಾಷಣೆಯಾಗಲಿ, ಎಲ್ಲವನ್ನು ಒಂದು ಪಕ್ಕಾ ಕಮರ್ಷಿಯಲ್ ಸಿನಿಮಾದ ರೂಪದಲ್ಲೇ ತೆರೆಗೆ ತಂದಿದ್ದೇವೆ. ಅದೊಂದೇ ಕಾರಣಕ್ಕೆ ಇದೊಂದು ಪಕ್ಕಾ ಮಾಸ್ ಸಿನಿಮಾವೂ ಹೌದು. ಹಾಗೆಯೇ ಇದೊಂದು  ಹೊಸ್ಟೇಜ್ ಥ್ರಿಲರ್ ಕತೆ.

ಪೋಸ್ಟರ್ ಮೂಲಕ ಕುತೂಹಲ‌ಮೂಡಿದ್ದು ಇದೊಂದು ಮಹಿಳಾ ಪ್ರಧಾನ ಸಿನಿಮಾವೇ ಎನ್ನುವ ಬಗ್ಗೆ, ಇದು ಹೇಗೆ?

ಇಲ್ಲ, ಇದು ಮಹಿಳಾ ಪ್ರಧಾನ ಸಿನಿಮಾ ಅಲ್ಲ. ಬದಲಿಗೆ ಮಹಿಳಾ ಕೇಂದ್ರಿತ ಸಿನಿಮಾ. ಸಾಮಾನ್ಯವಾಗಿ ಮಾಲಾಶ್ರೀ‌ಸಿನಿಮಾಗಳು, ತೆಲುಗಿನಲ್ಲಿ‌ವಿಜಯ ಶಾಂತಿ ಅಭಿನಯದ ಸಿನಿಮಾಗಳು ಹೇಗೆ ಹೆಣ್ಣಿನ ರೂಪದ ಗಂಡು ಸಿನಿಮಾಗಳಾಗಿ ಗಮನ ಸೆಳೆಯುತ್ತವೆಯೋ, ಹಾಗೆಯೇ ಇದು ಕೂಡ ಮಹಿಳಾ ಕೇಂದ್ರಿತ ಸಿನಿಮಾ‌.‌ನಟಿ ಯಜ್ಞಾ ಶೆಟ್ಟಿ ಇದರ ಕೇಂದ್ರ ಬಿಂದು‌. ಬಹುತೇಕ ಕತೆಗಳು ಹೀರೋ ಮೂಲಕ ತೆರೆದುಕೊಳ್ಳುವುದು ನಿಮಗೂ ಗೊತ್ತು. ನಾವ್ಯಾಕೆ ಒಬ್ಬ ಮಹಿಳೆಯ ಮೂಲಕ ಹೇಳಬಾರದು ಅಂತ ಯೋಚಿಸಿ, ಹಾಗೆ ಮಾಡಿದೆವು. ಅದರಲ್ಲೂ ಇನ್ನೊಂಚೂರು ವಿಶೇಷ ಇರಲಿ, ಅಂತ ಒಬ್ಬ ತುಂಬು ಗರ್ಭಿಣಿ ರೂಪ ತೊಡಿಸಿದ್ದೇವು. ಅದೇ ರೀತಿ ಸಿನಿಮಾ ಕೂಡ ತುಂಬು ಗರ್ಭಿಣಿ ಯ ಹಾಗೆ ಎಲ್ಲಾ ವಿಶೇಷತೆ ತುಂಬಿಕೊಂಡು ಆಕರ್ಷಣೆ ಮೂಡಿಸುತ್ತದೆ‌.

ಪಾತ್ರಗಳ ವಿಚಾರದಲ್ಲಿ ಇದೊಂದು ದೊಡ್ಡ ತಾರಾಗಣ ಇರುವ ಸಿನಿಮಾ.‌ಅಷ್ಟೂ ಪಾತ್ರಗಳ ಪ್ರಾಧಾನ್ಯತೆ ಹೇಗೆ?

ನನ್ನ ಹಿಂದಿನ ಸಿನಿಮಾ ನೋಡಿದವರಿಗೆ ಪಾತ್ರಗಳ ಸೃಷ್ಟಿಯ ವಿಚಾರದಲ್ಲಿ ನಾನು ತೆಗೆದುಕೊಳ್ಳುವ ಎಚ್ಚರ ಗೊತ್ತೇ ಇರುತ್ತೆ. ಚಿಕ್ಕದೊಂದು ಪಾತ್ರವೂ ಇಲ್ಲಿ ಅನವಶ್ಯಕ ಎನಿಸುವುದಿಲ್ಲ. ಪ್ರತಿ ಪಾತ್ರಕ್ಕೂ‌ ಅದರದ್ದೇಯಾದ ಪ್ರಾಮುಖ್ಯತೆ ಇರುತ್ತದೆ. ಆ ಕಾರಣಕ್ಕೂ ಇದೊಂದು ವಿಶೇಷವಾದ ಸಿನಿಮಾ. ಚಿತ್ರದ ನಾಯಕಿ ಯಜ್ಞಾ‌ಶೆಟ್ಟಿ ಅವರ ಪಾತ್ರಕ್ಕಿರುವ ಪ್ರಾಮುಖ್ಯತೆ ಸುರೇಶ್ ಸರ್, ವಿಜಯ್ ಸರ್, ಮೊದಲ್ಗೊಂಡು ಉಳಿದವರ ಪಾತ್ರಕ್ಕೂ ಇದೆ‌ . ಅದು ಈ ಸಿನಿಮಾ‌ದ ಸ್ಪೆಷಲ್. ಹಾಗೆಯೇ ಹಾಸ್ಟೆಜ್ ಥ್ರಿಲ್ಲರ್ ಇದರ ಇನ್ನೊಂದು ವಿಶೇಷ. ನಿಷ್ಕರ್ಷ ಸಿನಿಮಾದ ಶೈಲಿಯಲ್ಲಿ ಇದರ ಕಥಾ ಹಂದರವೂ ಇದೆ.ಆದರೆ ಇದು ವಿಭಿನ್ನ.‌ಅದು ಹೇಗೆ ಅನ್ನೋದಿಕ್ಕೆ ಸಿನಿಮಾ ನೋಡಬೇಕು.

ಇದೊಂದು ಪಕ್ಕಾ ಮಾಸ್ ಅಥವಾ ಕಮರ್ಷಿಯಲ್ ಸಿನಿಮಾ ಹೇಗೆ?

ಮೊದಲಿಗೆ ಅದಕ್ಕೆ ಪೂರಕವಾಗುವುದು ಕತೆ. ಇದೊಂದು ಥ್ರಿಲ್ಲರ್ ಸಿನಿಮಾ. ತುಂಬಾ ಅಪರೂಪಕ್ಕೆ ಇಂತಹ ಕತೆ ಕಾಣಲು ಸಾಧ್ಯ. ಜತೆಗೆ ಚಿತ್ರಕತೆ. ನನ್ನ ಹಿಂದಿನ ಸಿನಿಮಾಗಳಿಗಿಂತ ತುಂಬಾ ವಿಭಿನ್ನವಾದ ಶೈಲಿಯಲ್ಲಿ ಇದೆ ಇದರ ಚಿತ್ರಕತೆ. ವಾಸ್ತದ ಜತೆಗೆ ಸಿನಿಮ್ಯಾಟಿಕ್ ತುಂಬಾ ಇದೆ. ಐಟಂ ಸಾಂಗ್ ಇಲ್ಲ ಎನ್ನುವುದನ್ನು ಬಿಟ್ಟರೆ, ಅನೇಕ ಮಾಸ್ ಎಲಿಮೆಂಟ್ಸ್ ಚಿತ್ರದಲ್ಲಿವೆ.

Categories
ಸಿನಿ ಸುದ್ದಿ

ಅಂಬೇಡ್ಕರ್ ಎನ್ನುವ ಹೆಸರು ಟಿವಿ ಚಾನೆಲ್ ಗಳಿಗೆ ಬರೀ ಟಿಆರ್ ಪಿ ಸರುಕಾ?

ಒಂದು ಕಾಲದಲ್ಲಿ ಅಂಬೇಡ್ಕರ್ ಅವರನ್ನು ವಿರೋಧಿಸಿದ ಮನಸ್ಸು ಗಳೇ ಇವತ್ತು ಅವರನ್ನು ಕೊಂಡಾಡುತ್ತಿವೆ‌ . ಮತ್ತೊಂದಿಷ್ಟು ಮನಸ್ಸು ಗಳು ಅವರ ಹೆಸರನ್ನು ಟಿಆರ್ ಪಿ ಸರಕನ್ನಾಗಿ ಮಾಡಿಕೊಂಡಿವೆ. ಅವರ ಉದ್ದೇಶ ನಿಜಕ್ಕೂ ಅದಲ್ಲ ಎನ್ನುವುದಾದರೆ, ಅಂಬೇಡ್ಕರ್ ಹೆಸರಲ್ಲಿ ದಲಿತ ಸಮಯದಾಯಕ್ಕೆ ಮಹತ್ತರವಾದ ಒಂದು ಕೊಡುಗೆ ಯಾಕೆ ನೀಡಬಾರದು? ಕೊರೋನಾ‌ ನೆರವಿಗೆ 5 ಕೋಟಿ ನೀಡುವ ‘ಜೀ ‘ ಕನ್ನಡ, ರಾಜ್ಯದ ದಲಿತ ಸಮಯದಾಯಕ್ಕೆ ನೆರವು ಯಾಕೆ ನೀಡಿ, ಹೊಸ ದಾಖಲೆ ಯಾಕೆ ಮಾಡಬಾರದು?


ಕನ್ನಡ‌‌ ಕಿರುತೆರೆ ಮಟ್ಟಿಗೆ ಇತ್ತೀಚೆಗೆ ಹಲವು ಕೌತುಕಗಳು ಘಟಿಸಿವೆ. ವಿಶೇಷವಾಗಿ ‘ಜೀ ಕನ್ನಡ ‘ ವಾಹಿನಿಯ ‘ ಮಹಾನಾಯಕ’ ಧಾರಾವಾಹಿ ಮನೆ ಮಾತಾಗಿದ್ದು ಕನ್ನಡ ಕಿರುತೆರೆಯ ಮಟ್ಟಿಗೆ ಸಂಚಲನದ ಸುದ್ದಿ. ಇದರೊಂದಿಗೆ ‘ಜೀ ‘ಕನ್ನಡ ಹೊಸ ವೀಕ್ಷಕ ವರ್ಗವನ್ನೇ ತನ್ನ ಬುಟ್ಟಿಗೆ ಹಾಕಿಕೊಂಡಿದೆ.‌ ಒಂದೇ ಒಂದು ಘಟನೆಯ ಮೂಲಕ ರಾಜ್ಯದ ದಲಿತ ಸಮುದಾಯ ‘ಮಹಾನಾಯಕ ‘ಧಾರಾವಾಹಿ ತನ್ನದೇ ಕಾರ್ಯಕ್ರಮ‌ ಅನ್ನುಷ್ಟರ ಮಟ್ಟಿಗೆ ಅಪ್ಪಿ, ಒಪ್ಪಿ ,ಸ್ವೀಕರಿಸಿ ಮನೆ ಮಾತಾಗಿಸಿದೆ. ಇದಕ್ಕೆ ಪ್ರತಿಯಾಗಿ’ ಜೀ‌ ‘ ಕನ್ನಡ ಆ‌ ಸಮುದಾಯಕ್ಕೆ ಕೊಟ್ಟಿದ್ದೇನು ಎನ್ನುವ ಪ್ರಶ್ನೆ‌ ಸಹಜವಾಗಿಯೇ ಈಗ ಹುಟ್ಟಿಕೊಂಡಿದೆ.

ಇದು ಯಾಕೆ, ಹೇಗೆ ಎನ್ನುವ ಮುಂಚೆ’ ಜೀ ಕನ್ನಡದ ಹಿನ್ನೆಲೆ ಏನು ಅನ್ನೋದು ಒಂದಷ್ಟು ದಲಿತ ಸಮುದಾ ಯದ ಜನರಿಗೆ ತಿಳಿಯುವುದು ಒಳ್ಳೆಯದು. ‘ಜೀ’ ಕನ್ನಡ ಸದ್ಯಕ್ಕೆ ಕನ್ನಡ ಕಿರುತೆರೆಯ ಒಂಬರ್ ಒನ್ ಚಾನೆಲ್. ಅದರಲ್ಲೂ ಇತ್ತೀಚಿನ ಕೆಲ ವರ್ಷಗಳ ಈಚೆಗೆ ಕನ್ನಡ ಕಿರುತೆರೆ ವೀಕ್ಷಕರ ಮುಂದೆ ಅದು ತಂದ ಕೆಲವು ರಿಯಾಲಿಟಿ ಶೋ‌ ಗಳು ಭಾರೀ ಜನ ಮೆಚ್ಚುಗೆ ಮೂಲಕ ಲಾಭದಾಯಕ ಕಾರ್ಯಕ್ರಮ‌ ಆಗಿವೆ.

ಈಚೆಗೆ ಅದರ ಧಾರಾವಾಹಿಗಳೂ ಅಷ್ಟೇ ಜನಪ್ರಿಯತೆ ಪಡೆದಿರುವುದು ಕೂಡ ಗೊತ್ತಿರುವ ವಿಚಾರ. ಅದರ ನಡುವೆಯೇ ಮಹಾನಾಯಕ ಧಾರಾವಾಹಿಯೂ ಕೂಡ ಅದರ ಯಶಸ್ವಿ ಧಾರಾವಾಹಿಗಳಲ್ಲಿ ಒಂದಾಗಿದ್ದು, ವಿಶೇಷ. ಅದಕ್ಕೆ ಕಾರಣ ಮಹಾ ನಾಯಕ ಅಂಬೇಡ್ಕರ್ ಅವರ ಮೇಲೆ ದಲಿತ ಸಮುದಾಯಕ್ಕಿದ್ದ ಅಭಿಮಾನ.

ಕನ್ನಡದ ಮಹಾನಾಯಕ ಧಾರಾವಾಹಿಯ ಮೂಲ ಹಿಂದಿ.‌ ಅಂಬೇಡ್ಕರ್ ಮೇಲಿನ ಅಭಿಮಾನಕ್ಕೆ ಉಜ್ವಲ್ ಸುಶೀಲ್ ಕುಮಾರ್ ಶಿಂಧೆ ಹಾಗೂ ಸ್ಮೃತಿ ಸುಶೀಲ್ ಕುಮಾರ್ ಶಿಂಧೆ ನೇತ್ವತ್ವದ ಸೊಬೋ ಫಿಲ್ಮ್ಸ್ ನಿರ್ಮಾಣ ಸಂಸ್ಥೆ ಮಹಾ ನಾಯಕ ಧಾರಾವಾಹಿ ಯನ್ನು ಹಿಂದಿಯ ‘ಜೀ’ ಟಿವಿಗೆ ನಿರ್ಮಾಣ ಮಾಡಿತ್ತು.

ಮಹಾರಾಷ್ಟ್ರವು ಮೊದಲೇ ಅಂಬೇಡ್ಕರ್ ಹುಟ್ಟಿದ ನೆಲ. ಇನ್ನು ಅಂಬೇಡ್ಕರ್ ಅವರ ಬದುಕು ಕಿರುತೆರೆ ಯಲ್ಲಿ ಬರುತ್ತದೆ ಅಂದರೆ, ನೋಡದೆ ಇರುತ್ತಾ? ನಿರೀಕ್ಷೆ ಯಂತೆ ಕಿರುತೆರೆಯಲ್ಲಿ ದೊಡ್ಡ ಬೆಂಬಲ ಸಿಕ್ಕಿತು. ಒಂದೆಡೆ ನಿರ್ಮಾಣ ಸಂಸ್ಥೆ , ಮತ್ತೊಂದೆಡೆ ಜೀ ಟಿವಿ ಇಬ್ಬರು ಅದ್ಬುತ ಲಾಭ ಪಡೆದರು.‌ಅದರ ರುಚಿ ಕಂಡ ‘ಜೀ ‘ಕನ್ನಡ ಕೂಡ ಮಹಾ ನಾಯಕ‌ ಧಾರಾವಾಹಿಯನ್ನು ಕನ್ನಡಕ್ಕೆ ತಂತು. ಅದಕ್ಕೆ ನೆಪವಾಗಿದ್ದು ಲಾಕ್ ಡೌನ್ .

ಕನ್ನಡಕ್ಕೆ ಬಂದ ಹಲವು ಧಾರಾವಾಹಿಗಳಿಗೆ ಲಾಕ್ ಡೌನ್ ಒಂದು ನೆಪವಾಯಿತು. ಮಹಾ‌ನಾಯಕ ಧಾರಾವಾಹಿ ಕನ್ನಡಕ್ಕೆ ಬಂದಿದ್ದು ಕೂಡ ಹಾಗೆಯೇ. ಅಂಬೇಡ್ಕರ್ ಅವರ ಮೇಲಿನ ದೊಡ್ಡ ಅಭಿಮಾನಕ್ಕಾಗಲಿ, ರಾಜ್ಯದ ದಲಿತ ಸಮುದಾಯಕ್ಕೆ ಅಂಬೇಡ್ಕರ್ ಅವರನ್ನ ಪರಿಚಯಿಸಬೇಕೆನ್ನುವ ಮಹತ್ವಾಕಾಂಕ್ಷೆಯಿಂದಾಗಲಿ ಅಲ್ಲ. ಅದೊಂದು ಟಿಆರ್ ಪಿ ಧಾರಾವಾಹಿ. ಅದು ಕನ್ನಡದಲ್ಲೂ ಟಿಆರ್ ಪಿ ತರಬಲ್ಲದು ಎನ್ನುವ ಒಂದೇ ಉದ್ದೇಶದೊಂದಿಗೆ ಶುರುವಾದ ‘ಮಹಾನಾಯಕ’ ಧಾರಾವಾಹಿ ರಾತ್ರೋರಾತ್ರಿ ಮನೆ ಮಾತಾಗಿದ್ದು ಆ ಒಂದು ಘಟನೆಯ ಮೂಲಕ.

ಅದೆಷ್ಟರ ಮಟ್ಟಿಗೆ ಸತ್ಯವೋ ಗೊತ್ತಿಲ್ಲ, ಅವತ್ತು ಜೀ ಕನ್ನಡದ ಬಿಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ತಮ್ಮ ಪೇಸ್ ಬುಕ್ ಖಾತೆಯಲ್ಲಿ ‘ಮಹಾನಾಯಕ’ ಧಾರಾವಾಹಿ‌‌ ನಿಲ್ಲಿಸುವಂತೆ ಬೆದರಿಕೆ ಕರೆ ಬರುತ್ತಿವೆ ಅಂದಿದ್ದು ಸೋಷಲ್ ಮೀಡಿಯಾದಲ್ಲಿ ವೈರಲ್ ಆಯ್ತು. ಆ ಹೇಳಿಕೆ ದಲಿತ ಸಂಘಟನೆಗಳ ನಿದ್ದೆ ಗೆಡಿಸಿತು. ರಾಜ್ಯದ ದಲಿತ ಸಂಘಟನೆಗಳು ಎದ್ದು ಕುಳಿತವು. ಧಾರಾವಾಹಿಗೆ ಬೆಂಬಲಕ್ಕೆ ನಿಂತವು. ರಾಜ್ಯದ‌ ಮೂಲೆ ಮೂಲೆಗೂ ಧಾರಾವಾಹಿ ಪರವಾದ ಅಲೆ ಎದ್ದಿತು.

ಧಾರಾವಾಹಿ ಬೆಂಬಲಿಸಿ, ಬ್ಯಾನರ್, ಪೋಸ್ಟರ್ ಎದ್ದು ನಿಂತವು.‌ಮಹಾನಾಯಕ ಧಾರಾವಾಹಿ ತಮ್ಮದೇ ಕಾರ್ಯಕ್ರಮವೆಂದೇ ಸ್ವೀ’ಕರಿಸಿದರು.’ ಜೀ’ ಕನ್ನಡಕ್ಕೆ‌ ದಲಿ‌ತ ಸಮುದಾಯದ ಹೊಸ ವರ್ಗವೇ ಸಿಕ್ಕಿತು‌. ಎಂದೂ ಧಾರಾವಾಹಿ ನೋಡದ ಒಂದು ಸಮುದಾಯ’ ಜೀ’ ಕನ್ನಡ ದ ಪಾಲಾಯಿತು‌. ಜೀ ಕನ್ನಡದ ಬಿಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಸನ್ಮಾನ ಕಾರ್ಯಕ್ರಮಗಳು‌ ನಡೆದವು.

” ಅಂಬೇಡ್ಕರ್ ಅವರ ಬದುಕಿನ ಕುರಿತ ‘ಮಹಾನಾಯಕ’ ಧಾರಾವಾಹಿಯ ಮೂಲಕ ದಲಿತ ಸಮುದಾಯದ ಹೊಸ ವರ್ಗವನ್ನು ತನ್ನ ತೆಕ್ಕೆಗೆ ಹಾಕಿಕೊಂಡು ಭಾರೀ ಲಾಭ ಮಾಡಿಕೊಂಡ ‘ಜೀ ಕನ್ನಡ’ ವಾಹಿನಿ, ಆ ಸಮುದಾಯದ ಪರ ನಿಜಕ್ಕೂ ಏನನ್ನಾದರೂ ಮಾಡಬೇಕಿತ್ತು ಅನ್ನೋದು ದಲಿತ ಮುಖಂಡರ ಮಾತು.” 

ಇದು ಧಾರಾವಾಹಿ ಮನೆ ಮಾತಾಗುವಂತೆ ಮಾಡಿತು.
ನಗರ, ಪಟ್ಟಣ, ಊರು ಹೀಗೆ ರಾಜ್ಯದ ಯಾವುದೇ ಮೂಲೆಗೂ ಹೋದರೂ ಇವತ್ತು ಮಹಾನಾಯಕ ಧಾರಾವಾಹಿ ಪರವಾಗಿ ದಲಿತ‌ ಸಂಘಟನೆಗಳು ಹಾಕಿರುವ ಬೃಹತ್ ಪ್ರಮಾಣದ ಬ್ಯಾನರ್ ಹಾಗೂ ಪೋಸ್ಟರ್ ಗಳು ನಿಮಗೆ ಕಾಣುತ್ತವೆ. ಎಲ್ಲಿಯಾ ಜೀ ಕನ್ನಡ, ಇನ್ನೆಲ್ಲಿಯಾ ದಲಿತ ಸಮುದಾಯ? ಟಿಆರ್ ಪಿ ದೃಷ್ಟಿಯಿಂದಲೂ ಜೀ ಕನ್ನಡ ದೊಡ್ಡ ಲಾಭ ಪಡೆಯಿತು.‌

ಇದೆಲ್ಲ ವೂ ಸಾಧ್ಯವಾಗಿದ್ದು ಅಂಬೇಡ್ಕರ್ ಹೆಸರು. ಅವರ ಮೇಲೆ ದಲಿತ ಸಮುದಾಯಕ್ಕಿರುವ ಅಭಿಮಾನ. ಹಾಗಾದರೆ ಅಂಬೇಡ್ಕರ್ ತಮ್ಮವರೇ ಎಂದು ಧಾರಾವಾಹಿ ಸ್ವೀಕರಿಸಿದ ದಲಿತ ಸಮುದಾಯಕ್ಕೆ ‘ಜೀ ‘ಕನ್ನಡ ಕೊಟ್ಟಿದ್ದೇನು ಅನ್ನೋದು ಸದ್ಯದ ಪ್ರಶ್ನೆ. ಮುಂದಾದರೂ ಇದಕ್ಕೆ ಉತ್ತರ ಸಿಗಬಹುದೇ

error: Content is protected !!