Categories
ಸಿನಿ ಸುದ್ದಿ

ಐರಾವನ್‌ ಟೀಸರ್‌ ಗೆ ಅದ್ಭುತ ರೆಸ್ಪಾನ್ಸ್, ಜೆಕೆ ಅವರಿಗೆ ಸಿಗುತ್ತಾ ದೊಡ್ಡದೊಂದು ಬ್ರೇಕ್‌ ?

ಅರ್ಜುನನ ಪುತ್ರನ ಅವತಾರ ಹೊತ್ತ ಕಾರ್ತಿಕ್‌ ಜಯರಾಂ, ಐದು ಭಾಷೆಗಳಲ್ಲಿ ಐರಾವನ್

ಜೆಕೆ ಅಲಿಯಾಸ್‌ ಕಾರ್ತಿಕ್‌ ಜಯರಾಂ ಈಗಾದ್ರೂ ಇನ್ನೊಂದು ಲೆವೆಲ್‌ಗೆ ಹೋಗ್ತಾರಾ? ಗೊತ್ತಿಲ್ಲ, ಅದರೆ ಅವರ ಫ್ಯಾನ್ಸ್‌ ಜತೆಗೆ ಕನ್ನಡದ ಸಿನಿಮಾ ಪ್ರೇಕ್ಷಕರಿಗೆ ಹಾಗೊಂದು ಕುತೂಹಲ ಈಗ ಶುರುವಾಗಿದೆ. ಅದಕ್ಕೆ ಕಾರಣ ʼಐರಾವನ್‌ʼ ಚಿತ್ರ. ಒಂದಷ್ಟು ಗ್ಯಾಪ್‌ ನಂತರ ನಟ ಕಾರ್ತಿಕ್‌ ಜಯರಾಂ ಸಾಕಷ್ಟು ತಾಳ್ಮೆ ಮತ್ತು ಸಿದ್ದತೆಯೊಂದಿಗೆ ಮಾಡಿದ ಚಿತ್ರ ಇದು. ಚಿತ್ರದ ಶೀರ್ಷಿಕೆಯೇ ಇಲ್ಲಿ ವಿಭಿನ್ನ ಮತ್ತು ವಿಶೇಷ. ಐರಾವನ್‌ ಅಂದ್ರೇನು? ಇದು ಕನ್ನಡದ ಸಿನಿ ಪ್ರೇಕ್ಷಕರಿಗೆ ಇರುವ ಪ್ರಶ್ನೆ.

ಚಿತ್ರ ತಂಡ ಹೇಳುವ ಪ್ರಕಾರ ʼಐರಾವನ್‌ʼ ಅಂದ್ರೆ ಅರ್ಜುನನ ಪುತ್ರನ ಹೆಸರಂತೆ. ಅದನ್ನೇ ಚಿತ್ರ ತಂಡ ಯಾಕೆ ಟೈಟಲ್‌ ಆಗಿಸಿಕೊಂಡಿದೆ ಎನ್ನುವ ಕುತೂಹಲದ ಪ್ರಶ್ನೆಗೆ ಅದು ಕತೆಯೊಳಗಿನ ಸಸ್ಪೆನ್ಸ್‌ ಎನ್ನುತ್ತಿದೆ ಚಿತ್ರ ತಂಡ. ಅದರೆ ಅದನ್ನೇ ಯಾಕೆ ಟೈಟಲ್‌ ಆಗಿಸಿಕೊಂಡಿದ್ದು ಎನ್ನುವುದಕ್ಕೆ ಬಹುಭಾಷೆಗಳಲ್ಲಿ ಸಿನಿಮಾ ನಿರ್ಮಾಣ ಮಾಡಿರುವುದು ಕಾರಣವಂತೆ.

ಹೌದು, ಈ ಚಿತ್ರ ಕನ್ನಡ, ತಮಿಳು, ತೆಲುಗು ಸೇರಿದಂತೆ ಐದು ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಅಷ್ಟು ಭಾಷೆಗಳಿಗೂ ಕನೆಕ್ಟ್‌ ಆಗಲಿ ಅಂತಲೇ ಚಿತ್ರತಂಡ ಸಾಕಷ್ಟು ರಿಸರ್ಚ್‌ ಮಾಡಿ, ಆಲೋಚಿಸಿ, ಐರಾವನ್‌ ಎನ್ನುವ ಪದವನ್ನೆ, ಟೈಟಲ್‌ ಅಗಿಸಿಕೊಂಡಿದೆಯಂತೆ. ಅದೆನೇ ಇರಲಿ, ʼಐರಾವನ್‌ʼಮೂಲಕ ಈಗ ಜೆಕೆ ಬಹುಭಾಷೆಗಳಲ್ಲೂ ಹೀರೋ ಆಗಿ ಎಂಟ್ರಿಯಾಗುತ್ತಿರುವುದು ವಿಶೇಷ.

ಹಾಗಂತ ಜೆಕೆಗೆ ಬಹುಭಾಷೆಗಳ ಬಣ್ಣದ ಜಗತ್ತು ಹೊಸದಲ್ಲ. ಹಾಗೆ ನೋಡಿದರೆ, ನಟ ಕಾರ್ತಿಕ್‌ ಜಯರಾಂ ಅವರಿಗೆ ಕನ್ನಡಕ್ಕಿಂತ ಹೆಚ್ಚು ಜನಪ್ರಿಯತೆ ಸಿಕ್ಕಿದ್ದೇ ಹಿಂದಿ ಕಿರುತೆರೆಯ ಮೂಲಕ. ” ಸೀ ಯಾ ಕೆ ರಾಮ್‌ʼ ಧಾರಾವಾಹಿ ದೊಡ್ಡ ಗೆಲುವು ಕಂಡ ನಂತರ ಜೆಕೆ, ಹಿಂದಿ ಕಿರುತೆರೆಯಲ್ಲಿ ಮನೆ ಮಾತಾದರು. ಆಗಲೇ ಕನ್ನಡದ ಸಿನಮಾ ಮಂದಿ ಜೆಕೆ ಅವರತ್ತ ತಿರುಗಿ ನೋಡಿದರು. ಹಾಗಂತ ಕನ್ನಡದ ಸಿನಿಮಾ ನಿರ್ಮಾಪಕರು ಅವರಿಗೆ ರೆಡ್‌ ಕಾರ್ಪೆಟ್‌ ಹಾಕಿ ಕರೆದರು ಅಂತಲ್ಲ. ಒಂದಷ್ಟು ಆವಕಾಶ ಬರುವಂತೆ ಅಯಿತು. ಅದರೂ ಸಕ್ಸಸ್‌ ಸಿನಿಮಾದಲ್ಲಿ ದೊಡ್ಡ ಸಕ್ಸಸ್‌ ಕಾಣದೆ ಒಂಥರ ನೋವಿನ ಭಾವದಲ್ಲಿದ್ದ ಜೆಕೆ ಈಗ ಗಾಯಗೊಂಡ ಹುಲಿಯಂತೆ ಘರ್ಜಿಸಲು ರೆಡಿ ಅಗಿದ್ದಾರೆ. ಸೋಮವಾರವಷ್ಟೇ ಲಾಂಚ್‌ ಅಗಿರುವ ಟೀಸರ್‌ ನೋಡಿದರೆ ಜೆಕೆ, ಕಿರುತೆರೆಯ ಹಾಗೆಯೇ ಸಿನಿಮಾದಲ್ಲೂ ದೊಡ್ಡ ಹವಾ ಸೃಷ್ಟಿಸುವುದು ಗ್ಯಾರಂಟಿ ಎನಿಸಿದೆ.


ಐರಾವನ್‌ ಟೀಸರ್‌ ಮೇಕಿಂಗ್‌ ನಲ್ಲಿ ಗ್ರಾಂಡ್‌ ಆಗಿದೆ. ಹಾಗೆಯೇ ಲುಕ್‌ನಲ್ಲಿ ಜಬರ್‌ದಸ್ತ್‌ ಆಗಿದೆ. ಜೆಕೆ ಡಿಫೆರೆಂಟ್‌ ಗೆಟಪ್‌ನಲ್ಲಿ ಅಬ್ಬರಿಸಿದ್ದಾರೆ. ಟೀಸರ್‌ ನಲ್ಲಿನ ಅವರ ಎಂಟ್ರಿಯೇ ಜೋರಾಗಿದೆ. ಕತೆ ಸಸ್ಪೆನ್ಸ್‌, ಥ್ರಿಲ್ಲರ್‌
ಎನ್ನುವುದನ್ನು ಟೀಸರ್‌ ಹೇಳುತ್ತದೆ. ಜೆಕೆ ರಗಡ್‌ ಲುಕ್‌ ನೋಡಿದರೆ, ಐರಾವನ್‌ ಜೆಕೆಗೆ ಬ್ರೇಕ್‌ ನೀಡುವುದು ಗ್ಯಾರಂಟಿ ಎನಿಸುತ್ತದೆ. ಸಿನಿಮಾ ಜತೆಗೆ ಟೀಸರ್‌ ಕುರಿತು ಮಾತನಾಡುವ ನಟ ಜೆಕೆ, ತಮ್ಮ ನೆಚ್ಚಿನ ನಟ ಸುದೀಪ್‌ ಅವರು ಟೀಸರ್‌ ಲಾಂಚ್‌ ಮಾಡಿದಕ್ಕೆ ಧನ್ಯವಾದ ಹೇಳಿದರು. ಹಾಗೆಯೇ ಚಿತ್ರದ ಬಗ್ಗೆ ಅತೀವ ವಿಶ್ವಾಸ ವ್ಯಕ್ತಪಡಿಸಿದರು.

” ಇದೊಂದು ಕಠಿಣ ಪ್ರಯತ್ನದ ಫಲ. ಸಾಕಷ್ಟು ಶ್ರಮ ವಹಿಸಿ ಈ ಸಿನಿಮಾ ಮಾಡಿದ್ದೇವೆ. ನಿರ್ಮಾಪಕರು, ನಿರ್ದೇಶಕರು ಸೇರಿದಂತೆ ಇಡೀ ಟೀಮ್‌ ವರ್ಕ್‌ ಅತ್ಯಾದ್ಭುತವಾಗಿದೆ. ಅವರೆಲ್ಲರ ಶ್ರಮದಿಂದಲೇ ಸಿನಿಮಾ ರಿಚ್‌ ಅಗಿ ಬಂದಿದೆʼ ಎನ್ನುವ ಮೂಲಕ ಕುತೂಹಲ ಮೂಡಿಸಿದರು.

ನಿರಂತರ ಪ್ರೋಡಕ್ಷನ್‌ ಮೂಲಕ ನಿರ್ಮಾಣವಾದ ಸಿನಿಮಾ ಇದು. ಯುವ ನಿರ್ದೇಶಕ ರಾಮ್‌ ರಂಗ, ಕತೆ, ಚಿತ್ರಕತೆ ಬರೆದು ಆಕ್ಷನ್‌ ಕಟ್‌ ಹೇಳಿದ್ದಾರೆ. ಎಸ್.‌ ಪ್ರದೀಪ್‌ ವರ್ಮ ಸಂಗೀತ ನಿರ್ದೇಶನ ಇದೆ. ದೇವೇಂದ್ರ ಛಾಯಾಗ್ರಹಣ, ಕೆ.ಎಂ. ಪ್ರಕಾಶ್‌ ಸಂಕಲನ, ಕುಂಗ್ಪು ಚಂದ್ರು ಸಾಹಸವಿದೆ. ಚಿತ್ರಕ್ಕೆ 45ದಿನಗಳ ಚಿತ್ರೀಕರಣ ನಡೆದಿದೆ. ಇದೀಗ ಚಿತ್ರಕ್ಕೆ ಕಿಚ್ಚ ಸುದೀಪ್‌ ಸಾಥ್‌ ನೀಡಿರುವುದು ಚಿತ್ರ ತಂಡಕ್ಕೆ ದೊಡ್ಡ ಬೆಂಬಲವಾಗಿದೆ.

Categories
ಸಿನಿ ಸುದ್ದಿ

ಮತ್ತೆ ಕೃಷ್ಣನ್‌ ಜಪ..! ಅಜೇಯ್‌ರಾವ್‌ಗೆ ಸ್ಟೋರಿ ಬರೆದ ಶಶಾಂಕ್‌

ಗುರುದೇಶಪಾಂಡೆ ನಿರ್ಮಾಣದಲ್ಲಿ ಶಂಕರ್‌ ನಿರ್ದೇಶನ

ಅಜೇಯ್‌ರಾವ್

ನಟ ಅಜೇಯ್‌ರಾವ್ ಅಂದಾಕ್ಷಣ, ನೆನಪಾಗೋದೇ “ಕೃಷ್ಣ”. ಹೌದು, “ಕೃಷ್ಣನ್‌ ಲವ್‌ ಸ್ಟೋರಿ” ದೊಡ್ಡ ಹಿಟ್‌ ಕೊಟ್ಟ ಚಿತ್ರ. ಶಶಾಂಕ್‌ ಹಾಗೂ ಅಜೇಯ್‌ರಾವ್‌ ಕಾಂಬಿನೇಷನ್‌ನಲ್ಲಿ “ಕೃಷ್ಣನ್‌ ಲವ್‌ ಸ್ಟೋರಿ”, “ಕೃಷ್ಣ ಲೀಲಾ” ಚಿತ್ರಗಳು ಬಂದಿವೆ. ಈ ಮೂರು ಸಿನಿಮಾಗಳು ಯಶಸ್ವಿಯಾಗಿವೆ. ಇದೇ ಸೀರಿಸ್‌ನಲ್ಲೇ ಚಿತ್ರ ಬಂದಿದ್ದೂ ಉಂಟು. ಈಗ ಮತ್ತೊಮ್ಮೆ “ಕೃಷ್ಣನ್”‌ ಜೋಡಿ ಒಂದಾಗುತ್ತಿದೆ ಎಂಬುದೇ ಈ ಹೊತ್ತಿನ ವಿಶೇಷ.

ಶಶಾಂಕ್‌

ಹೌದು, ಈಗ ನಿರ್ದೇಶಕ ಶಶಾಂಕ್‌ ಅವರು ನಟ ಅಜೇಯ್‌ರಾವ್‌ ಅವರಿಗಾಗಿಯೇ ಹೊಸ ಕಥೆಯೊಂದನ್ನು ರೆಡಿ ಮಾಡಿದ್ದಾರೆ. ಈ ಚಿತ್ರದಲ್ಲಿ ಅಜೇಯ್‌ ರಾವ್‌ ಮತ್ತೆ ಕೃಷ್ಣನಾಗಿ ಕಾಣಿಸಿಕೊಳ್ಳಲಿದ್ದಾರೆಯೇ? ಹೀಗೊಂದು ಪ್ರಶ್ನೆ ಮತ್ತು ಕುತೂಹಲವಿದೆ. ಆ ಚಿತ್ರಕ್ಕೆ ಇನ್ನೂ ನಾಮಕರಣ ಮಾಡಿಲ್ಲ. ಇದೂ ಕೂಡ “ಕೃಷ್ಣ”ನ್‌ ಸರಣಿ ಇರಬಹುದೇನೋ ಎಂಬ ಸಣ್ಣ ನಿರೀಕ್ಷೆಯೂ ಇದೆ. ಅದೇನೆ ಇದ್ದರೂ ಚಿತ್ರದ ಶೀರ್ಷಿಕೆ ಅನಾವರಣಗೊಂಡಾಗ ಮಾತ್ರವಷ್ಟೇ, ಎಲ್ಲವೂ ಹೊರಬೀಳಲಿದೆ.

ಗುರುದೇಶಪಾಂಡೆ

ಜ.೨೪ರಂದು ಚಿತ್ರಕ್ಕೆ ಮುಹೂರ್ತ ನೆರವೇರಲಿದೆ. ಶಶಾಂಕ್‌ ಹಾಗೂ ಅಜೇಯ್‌ರಾವ್‌ ಜೋಡಿಯ ಮೋಡಿ ಒಂದಷ್ಟು ನಿರೀಕ್ಷೆ ಹೆಚ್ಚಿಸಿದೆ. ಈ ಚಿತ್ರಕ್ಕೆ ಜನಪ್ರಿಯ ನಾಯಕಿಯೊಬ್ಬರು ಬರುತ್ತಿದ್ದು, ಚಿತ್ರತಂಡ ಆ ನಾಯಕಿಯ ಹೆಸರನ್ನು ಗೌಪ್ಯವಾಗಿಸಿದೆ. ಮುಹೂರ್ತ ದಿನ ಆ ನಟಿ ಯಾರೆಂಬುದನ್ನು ಚಿತ್ರತಂಡ ಬಹಿರಂಗಪಡಿಸಲಿದೆ. ಈ ಚಿತ್ರಕ್ಕೆ ಶಂಕರ್‌ ನಿರ್ದೇಶನ ಮಾಡುತ್ತಿದ್ದಾರೆ. ಇದು ಅವರ ಮೊದಲ ಚಿತ್ರ. ಇನ್ನು, ಶಂಕರ್‌, “ಜಂಟಲ್‌ ಮೆನ್‌”, “ಪಡ್ಡೆಹುಲಿ” “ರುದ್ರ ತಾಂಡವ” ಸೇರಿದಂತೆ ಗುರುದೇಶಪಾಂಡೆ ಅವರ ಹಲವು ಚಿತ್ರಗಳಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

ಶಂಕರ್‌

ಇನ್ನು, ಜಿ ಸಿನಿಮಾಸ್‌ ಬ್ಯಾನರ್‌ನಲ್ಲಿ ಚಿತ್ರ ತಯಾರಾಗುತ್ತಿದ್ದು, ಗುರು ದೇಶಪಾಂಡೆ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈಗಾಗಲೇ ಈ ಬ್ಯಾನರ್‌ನಲ್ಲಿ “ಜಂಟಲ್‌ಮನ್‌” ಸಿನಿಮಾ ಕೊಟ್ಟಿರುವ ನಿರ್ಮಾಪಕರು, “ಪೆಂಟಗಾನ್‌” ಸಿನಿಮಾವನ್ನೂ ನಿರ್ಮಿಸುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರು, ನಿರ್ಮಾಪಕರು ಈ ಹಿಂದೆ ಅಜೇಯ್‌ರಾವ್‌ ಜೊತೆ “ರೈನ್‌ಬೋ” ಸಿನಿಮಾ ಮಾಡಬೇಕಿತ್ತು. ಆ ಚಿತ್ರವನ್ನು ಮುಂದಕ್ಕೆ ಹಾಕಿ, ಈ ಸಿನಿಮಾವನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ.
ಹೊಸ ಸಿನಿಮಾದ ಕಥೆಯೇ ಒಂದು ರೀತಿ ವಿಭಿನ್ನವಾಗಿದೆ. ಈಗಿನ ಟ್ರೆಂಡ್‌ಗೆ ತಕ್ಕ ಕಥೆ ಮಾಡಲಾಗಿದೆ. ಆ ಕಾರಣಕ್ಕೆ ಗುರುದೇಶಪಾಂಡೆ ತಮ್ಮ “ರೈನ್‌ಬೋ” ಚಿತ್ರವನ್ನು ಮುಂದಕ್ಕೆ ಹಾಕಿ ಹೊಸ ಚಿತ್ರಕ್ಕೆ ಕೈ ಹಾಕಿದ್ದಾಗಿ ಹೇಳುತ್ತಾರೆ ಅವರು. ಈ ಸಿನಿಮಾದ ಮತ್ತೊಂದು ವಿಶೇಷ ಅಂದರೆ, ಶಶಾಂಕ್‌ ಅವರ ಕಥೆ. ಜೊತೆಗೆ ಆಜೇಯ್‌ರಾವ್‌ ಎಂಬ ಸಕ್ಸಸ್‌ ನಟ. ಇನ್ನು, ಶಂಕರ್‌ ಈ ಚಿತ್ರದ ಮೂಲಕ ನಿರ್ದೇಶಕರಾಗಿಯೂ ಗುರುತಿಸಿಕೊಳ್ಳುತ್ತಿದ್ದಾರೆ.

Categories
ಸಿನಿ ಸುದ್ದಿ

ಆ ಉಪಕರಣಗಳನ್ನ ಇನ್ನೆಲ್ಲಿ ಬಿಸಾಡುತ್ತಾರೋ?- ನಿರ್ದೇಶಕರ ಸಂಘಕ್ಕಾದ ಘಟನೆಗೆ ಸಾಧು ಬೇಸರ

 

ಸಂಘವನ್ನು ಕೆಳಮಟ್ಟಕ್ಕೆ ತಂದಿದ್ದು ನೋವಾಗಿದೆ

ಕನ್ನಡದ ಹೆಸರಾಂತ ನಿರ್ದೇಶಕ ಪುಟ್ಟಣ ಕಣಗಾಲ್ ಹುಟ್ಟು ಹಾಕಿದ ‘ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ’ದ ಘನತೆ, ಗೌರವ ಬೀದಿಗೆ ಬಿದ್ದ ಸುದ್ದಿಯನ್ನು ಮೊದಲು ಬ್ರೇಕ್‌ ಮಾಡಿದ್ದು “ಸಿನಿ ಲಹರಿ” ಸುದ್ದಿ ಹರಡುತ್ತಿದ್ದಂತೆಯೇ ಅನೇಕ ನಿರ್ದೇಶಕರು, ಸಹಾಯಕ ನಿರ್ದೇಶಕರು ಹಾಗೂ ಚಿತ್ರರಂಗದ ಹಲವು ಗಣ್ಯರು ಬೇಸರ ಹೊರಹಾಕಿದ್ದುಂಟು. ನಟ ಕಮ್‌ ನಿರ್ದೇಶಕ ಸಾಧುಕೋಕಿಲ ಅವರೂ ಸಹ ನಿರ್ದೇಶಕರ ಸಂಘಕ್ಕೆ ಬಂದ ಪರಿಸ್ಥಿತಿ ಕುರಿತು ತೀವ್ರ ಬೇಸರ ಹೊರಹಾಕಿದ್ದಾರೆ. ಹೌದು, ಅವರು ನಿರ್ದೇಶಕ ನಾಗೇಂದ್ರ ಅರಸ್‌ ಅವರಿಗೆ ಕಳುಹಿಸಿರುವ ಆಡಿಯೋವೊಂದು ಜೋರಾಗಿಯೇ ಹರಿದಾಡುತ್ತಿದೆ. ಆ ಆಡಿಯೋದಲ್ಲಿ ಸಾಧುಕೋಕಿಲ ಒಂದಷ್ಟು ಬೇಸರ ವ್ಯಕ್ತಪಡಿಸಿರುವುದು ಗೊತ್ತಾಗಿದೆ. ಆ ಆಡಿಯೋದಲ್ಲಿ ಸಾಧುಕೋಕಿಲ ಮಾತನಾಡಿರುವ ಸಂಕ್ಷಿಪ್ತ ವಿವರ ಇಲ್ಲಿದೆ.


“ನಾಗೇಂದ್ರ ಅರಸ್‌, ಚಿತ್ರರಂಗದ ಮಾನ ಮರ್ಯಾದೆ ಅಷ್ಟೇ ಅಲ್ಲ, ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಕಚೇರಿಯೊಳಗಿದ್ದ ಎಲ್ಲಾ ಪೀಠೋಪಕರಣಗಳನ್ನು ರೋಡ್‌ಗೆ ಹಾಕಲಾಗಿದೆ. ಇದಕ್ಕಿಂತ ದೊಡ್ಡ ಅವಮಾನವಿಲಲ್.‌ ದೊಡ್ಡ ದೊಡ್ಡ ನಿರ್ದೇಶಕರು ಕಟ್ಟಿದ, ಪಾಲಿಸಿದ ಸಂಘ ಇಂದು ಬೀದಿಗೆ ಬಂದಿದೆಯೆಂದರೆ ಹೇಗೆ? ಯಾರೋ ಬಾಡಿಗೆ ಕಟ್ಟದಿದ್ದರಿಂದ ಆ ಬಾಡಿಗೆ ಮನೆ ಓನರ್‌ ನಿರ್ದೇಶಕರ ಸಂಘದ ಉಪಕರಣಗಳನ್ನೆಲ್ಲಾ ರೋಡ್‌ಗೆ ಬೀಸಾಕುತ್ತಾರೆ ಅಂದರೆ ಏನರ್ಥ. ಅಲ್ಲಿ ನಾಲ್ಕೈದು ಜನ ಹುಡುಗರು ನಿಂತು ಬಾಯಿ ಬಡ್ಕೋತ್ತಾ ಇದಾರೆ. ವಿ.ನಾಗೇಂದ್ರ ಪ್ರಸಾದ್‌ ಮುಂಬೈನಲ್ಲಿದ್ದಾರಂತೆ. ಟೇಶಿ ವೆಂಕಟೇಶ್‌ ಏನ್‌ ಮಾಡ್ತಾ ಇದ್ದಾರೋ ಗೊತ್ತಿಲ್ಲ. ಇನ್ನು, ಆ ಸಾಮಾನುಗಳನ್ನು ಎಲ್ಲಿ ಬಿಸಾಕುತ್ತಾರೋ, ನಿರ್ದೇಶಕರ ಸಂಘವನ್ನು ಈ ಕೆಳಮಟ್ಟಕ್ಕೆ ತಂದು ಬಿಸಾಡಿದ್ರಲ್ಲ ಛೇ…” ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಸಾಧು.


2018 ರಲ್ಲಷ್ಟೇ ವಿಜಯನಗರದಿಂದ ನಾಗರಬಾವಿಗೆ ಸ್ಥಳಾಂತರವಾಗಿದ್ದ ಸಂಘದ ಕಚೇರಿಯ ಕಟ್ಟಡದ ಬಾಡಿಗೆ ಕಟ್ಟದ ಪರಿಣಾಮ, ಕಟ್ಟಡದ ಮಾಲೀಕ ಸಂಘದ ವಿರುದ್ಧ ಪೊಲೀಸ್ ಠಾಣೆಯ ಮೇಟ್ಟೆಲೇರಿದ್ದಲ್ಲದೆ, ಕಚೇರಿಯಲ್ಲಿನ‌ ಪೀಠೋಪಕರಣ ಹೊರ ಹಾಕಿ, ಸಂಘದ ಪದಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಹಜವಾಗಿಯೇ ಈ ಘಟನೆ ಸಂಘದ ಹಲವು ಪದಾಧಿಕಾರಿಗಳಲ್ಲಿ ತೀವ್ರ ಬೇಸರ ತರಿಸಿದೆ. ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘವು ಇದುವರೆಗೂ ಕಾಪಾಡಿಕೊಂಡು‌ ಬಂದಿದ್ದ ಘನತೆ, ಗೌರವ ವಿನಾಕಾರಣ ಬೀದಿಗೆ ಬಂದಿರುವುದು ತೀವ್ರ ನೋವುಂಟು ಮಾಡಿದೆ ಅಂತ ಸಂಘದ ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ. ಮೂಲಗಳ ಪ್ರಕಾರ ಸಂಘದ ಕಚೇರಿ ಬಾಡಿಗೆ, ವಾಟರ್ ಬಿಲ್, ಕರೆಂಟ್ ಬಿಲ್ ಬ್ಯಾಲೆನ್ಸ್ ಕಳೆದ‌ ಡಿಸೆಂಬರ್ ತಿಂಗಳಿನಿಂದಲೇ ಇದೆ ಎನ್ನಲಾಗಿದೆ. ಕೊರೋನಾ ಸಮಸ್ಯೆ ನಿರ್ದೇಶಕರು ಸೇರಿದಂತೆ ಇಡೀ‌ ಚಿತ್ರೋದ್ಯಮವನ್ನು ತೀವ್ರವಾಗಿ ಕಾಡಿದ್ದು ಸುಳ್ಳಲ್ಲ. ಕೆಲಸ ಇಲ್ಲದೆ ಮನೆ ಹಿಡಿದ ನಿರ್ದೇಶಕರ ಸಂಘದ ಪಧಾಧಿಕಾರಿಗಳ ನೆರವಿಗೆ ಸಂಘ‌ ನಿಂತುಕೊಂಡಿತು. ಈ ಬೆಳವಣಿಗೆ ಸಂಘದ ಆರ್ಥಿಕ‌ ಮುಗ್ಗಟ್ಟುಗೆ ಕಾರಣ ಎನ್ನಲಾಗಿದೆ.

 

Categories
ಸಿನಿ ಸುದ್ದಿ

ಕಿಚ್ಚ ಸುದೀಪ್‌ ಅವರಿಗೆ ಯಾಕೋ ವಯಸ್ಸಾಗಿರೋ ಫೀಲಿಂಗ್‌ ಅಂತೆ..!!

ಐರಾವನ್‌ ಟೀಸರ್‌ ಲಾಂಚ್‌ ನಲ್ಲಿ ಕಿಚ್ಚ  ಸುದೀಪ್‌ ಹಾಗೇಕೆ  ಹೇಳಿದರು?

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅವರಿಗೀಗ ವಯಸ್ಸೆಷ್ಟು ? ಸದ್ಯಕ್ಕೆ ಅವರ ಅಭಿಮಾನಿಗಳು ಕೂಡ ತಮ್ಮ ನೆಚ್ಚಿನ ನಟನ ವಯಸ್ಸಿನ ಬಗ್ಗೆ ಈ ತನಕ ಯೋಚಿಸಿದ್ದಾರೋ ಇಲ್ಲವೋ ಗೊತ್ತಿಲ್ಲ. ಯಾಕಂದ್ರೆ ಅವರ ಪಾಲಿಗೆ ನಟ ಕಿಚ್ಚ ಸುದೀಪ್‌ ಈಗಲೂ ಎವರ್‌ಗ್ರೀನ್‌ ಹೀರೋ. ಒಬ್ಬ ನಟನಾಗಿ ತೆರೆ ಮೇಲೆ ಈಗಲೂ ಲವರ್‌ ಬಾಯ್‌, ಅಷ್ಟೇ ಅಲ್ಲ, ಪ್ಲೇ ಬಾಯ್‌ ಕೂಡ ಹೌದು.‌ ಅದರಾಚೆ ಉಳಿದವರಿಗೂ ಕೂಡ ಸುದೀಪ್‌ ಅವರಿಗೆ ವಯಸ್ಸಾದ ಹಾಗೆ ಅನಿಸಿಲ್ಲ. ಆದರೆ ನಟ ಸುದೀಪ್‌ ಅವರೇ ಈಗ ತಮಗ್ಯಾಕೋ ವಯಸ್ಸಾದ ಫೀಲಿಂಗ್‌ ಶುರುವಾಗಿದೆ ಅಂತ ಹೇಳಿಕೊಂಡಿದ್ದಾರೆ. ಹಾಗಂತ ಸುದೀಪ್‌ ಹೇಳಿದ್ದು ಎಲ್ಲೋ ನಾಲ್ಕು ಜನರ ನಡುವೆ ಅಲ್ಲ. ಬದಲಿಗೆ ಅಧಿಕೃತವಾಗಿಯೇ ಆ ರೀತಿ ಹೇಳಿ ಕುತೂಹಲ ಮೂಡಿಸಿದರು. ಅಂದ ಹಾಗೆ ಇದು ಅಗಿದ್ದು, ʼಐರಾವನ್‌ʼ ಹೆಸರಿನ ಕನ್ನಡ ಚಿತ್ರದ ಟೀಸರ್‌ ಲಾಂಚ್‌ ಸಂದರ್ಭ !


ಜಕೆ ಅಲಿಯಾಸ್‌ ಕಾರ್ತಿಕ್‌ ಜಯರಾಂ ಅಭಿನಯದ ಚಿತ್ರ ʼಐರಾವನ್ʼ. ಇದು ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ ಬರುತ್ತಿದೆ. ಚಿತ್ರೀಕರಣ, ಪೋಸ್ಟ್‌ ಪ್ರೊಡಕ್ಷನ್‌ ಕೆಲಸವೂ ಮುಗಿಸಿ ಈ ಚಿತ್ರ ರಿಲೀಸ್‌ ಗೆ ರೆಡಿ ಆಗಿದೆ. ಆ ನಿಟ್ಟಿನಲ್ಲೇ ಈ ಬ್ಯುಸಿ ಆಗಿರುವ ಚಿತ್ರ ತಂಡ ಸೋಮವಾರ ಸಂಜೆ ಬೆಂಗಳೂರಿನ ಕಾರ್ಲಟನ್‌ ಸ್ಟಾರ್‌ಹೋಟೆಲ್‌ನಲ್ಲಿ ಟೀಸರ್‌ ಕಾರ್ಯಕ್ರಮ ನಡೆಯಿತು. ಚಿತ್ರ ತಂಡ ಅದ್ದೂರಿಯಾಗಿಯೇ ಈ ಕಾರ್ಯಕ್ರಮ ಆಯೋಜಿಸಿತ್ತು. ಅಲ್ಲಿಗೆ ನಟ ಕಿಚ್ಚ ಸುದೀಪ್‌ ಮುಖ್ಯ ಅತಿಥಿಯಾಗಿ ಬಂದಿದ್ದರು. ಅದಕ್ಕೆ ಕಾರಣ ನಟ ಜೆಕೆ. ಸುದೀಪ್‌ ಬಳಗದಲ್ಲಿ ಮೊದಲಿನಿಂದಲೂ ಗುರತಿಸಿಕೊಂಡವರ ಪೈಕಿ ಜೆಕೆ ಕೂಡ ಒಬ್ಬರು. ಸುದೀಪ್‌ ಅವರ ಕ್ರಿಕೆಟ್‌ ಬಳಗದಲ್ಲೂ ಜೆಕೆ ಇದ್ದಾರೆ. ಅದೇ ನಂಟಿನ ಮೂಲಕ ಸುದೀಪ್‌ ಈಗ ಜೆಕೆ ಸಿನಿಮಾ ಜರ್ನಿಗೂ ಸಾಥ್‌ ನೀಡುತ್ತಿದ್ದಾರೆ. ಅದೇ ಕಾರಣಕ್ಕೆ ಸೋಮವಾರ ʼಐರಾವನ್‌ʼ ಚಿತ್ರದ ಟೀಸರ್‌ ಲಾಂಚ್‌ ಗೆ ನಟ ಕಿಚ್ಚ ಸುದೀಪ್‌ ಮುಖ್ಯ ಅತಿಥಿಯಾಗಿದ್ದರು.


ಚಿತ್ರ ತಂಡದೊಂದಿಗೆ ಸೇರಿ ಟೀಸರ್‌ ಲಾಂಚ್‌ ಮಾಡಿ ಮಾತನಾಡಿದ ಕಿಚ್ಚ ಸುದೀಪ್‌, ತಮಾಷೆಯಲ್ಲೇ ಕೆಲವು ಅನಿಸಿಕೆ ಹಂಚಿಕೊಂಡರು. ತುಂಬಾ ವರ್ಷಗಳ ಹಿಂದಕ್ಕೆ ಹೋಗಿಯೇ ಮಾತನಾಡುತ್ತೇನೆ. ಹೊಸದಾಗಿ ನಾನು ಚಿತ್ರರಂಗಕ್ಕೆ ಬಂದಾಗ ಕೆಲವರು ನನ್ನನ್ನು ಸನ್ಮಾನಿಸಿ, ಹಾರೈಸಿದ್ದಾಗ ಏನೋ ರೋಮಾಂಚನ ಅಗುತ್ತಿತ್ತು. ಆದರೆ, ಇವತ್ತು ನಾನು ವೇದಿಕೆಯಲ್ಲಿದ್ದು ಜೆಕೆ ಅವರನ್ನು ಸನ್ಮಾನಿಸುವಾಗ ಯಾಕೋ ನಂಗೇ ವಯಸ್ಸಾಯ್ತೇನೋ ಅಂತ ಫೀಲ್‌ ಅಗ್ತಿದೆ ಅಂತ ಹೇಳಿ ಹಾಸ್ಯ ಚಟಾಕಿ ಹಾರಿಸಿದರು. ಉಳಿದಂತೆ ಜೆಕೆ ಅವರ ನಟನೆಯ ಸಾಮರ್ಥ್ಯ ಹಾಗು ಬದ್ದತೆಯನ್ನು ಮೆಚ್ಚಿಕೊಂಡು ಮಾತನಾಡಿದರು.

 

Categories
ಸಿನಿ ಸುದ್ದಿ

ಕ್ರಿಸ್ಮಸ್‌ಗೆ ಅವನು ಇವಳು! ನಡೆದ ಘಟನೆ ಮರೆತು ಮುಂದೆ ಸಾಗು ಅಂತಾರೆ ಹೊಸಬರು

ಅವನಲ್ಲಿ ಇವಳಿಲ್ಲಿ ಚಿತ್ರದಲ್ಲೊಂದು ವಿಶೇಷ ಸಂದೇಶ

ಜಾಹ್ನವಿ, ನಾಯಕಿ

ಕೊರೊನಾ ಹಾವಳಿ ನಡುವೆಯೂ ಚಿತ್ರರಂಗ ಮೆಲ್ಲನೆ ಚೇತರಿಸಿಕೊಳ್ಳುತ್ತಿದೆ. ಹೊಸಬರ ಜೊತೆ ಹಳಬರೂ ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ. ಆ ನಿಟ್ಟಿನಲ್ಲಿ ಹೊಸಬರ “ಅವನಲ್ಲಿ ಇವಳಿಲ್ಲಿ” ಚಿತ್ರ ಕೂಡ ತೆರೆಗೆ ಬರಲು ಸಜ್ಜಾಗಿದೆ. ಡಿಸೆಂಬರ್‌ ೨೫ರ ಕ್ರಿಸ್ಮಸ್‌ಗೆ ಚಿತ್ರ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಮೂಲಕ ಸಂದೇಶ್‌ ಕೃಷ್ಣಮೂರ್ತಿ ನಿರ್ದೇಶಕರಾಗುತ್ತಿದ್ದಾರೆ. ಮೂಲತಃ ತೀರ್ಥಹಳ್ಳಿಯವರಾದ ಸಂದೇಶ್‌ ಕೃಷ್ಣಮೂರ್ತಿ ಅವರಿಗೆ ಇದು ಮೊದಲ ಸಿನಿಮಾ ಆಗಿದ್ದರೂ, ಸಾಕಷ್ಟು ಅನುಭವ ಇದೆ.

ದುನಿಯಾ ರಶ್ಮಿ, ನಾಯಕಿ

ಕಳೆದ ಹದಿನೈದು ವರ್ಷಗಳಿಂದಲೂ ಇಂಡಸ್ಟ್ರಿಯಲ್ಲಿರುವ ಸಂದೇಶ್‌ ಕೃಷ್ಣಮೂರ್ತಿ, ಕಿರುತೆರೆಯಲ್ಲಿ ಹಲವು ಧಾರಾವಾಹಿಗಳಿಗೆ ಸಂಕಲನಕಾರರಾಗಿ ಕೆಲಸ ಮಾಡಿದ್ದಾರೆ. ಆರಂಭದಲ್ಲಿ “ಪ್ರೀತಿ ಇಲ್ಲದ ಮೇಲೆ” ಧಾರಾವಾಹಿಗೆ ಸಂಕಲನಕಾರರಾಗಿ ಕೆಲಸ ಶುರುಮಾಡಿದ ಸಂದೇಶ್‌, ನಂತರದ ದಿನಗಳಲ್ಲಿ ಸಾಕಷ್ಟು ಬಿಗ್‌ ಸೀರಿಯಲ್‌ಗಳಿಗೂ ಕೆಲಸ ಮಾಡಿದ್ದುಂಟು. ಅಲ್ಲಿ ಕೆಲಸ ಮಾಡುತ್ತಲೇ ಅವರು ಸಿನಿಮಾ ಮಾಡುವ ಕನಸು ಕಂಡವರು. ಅದು ಅವರ ದಶಕದ ಕನಸು ಕೂಡ. ಆ ಕನಸು ಈಗ “ಅನವಲ್ಲಿ ಇವಳಿಲ್ಲಿ “ಸಿನಿಮಾ ಮೂಲಕ ಈಡೇರಿದೆ. ಅಂದುಕೊಂಡಂತೆ ಅವರು ಸಿನಿಮಾ ಮಾಡಿ, ಇದೀಗ ಡಿಸೆಂಬರ್‌ ೨೫ರಂದು ಬಿಡುಗಡೆಯಾಗುವ ಮಟ್ಟಕ್ಕೆ ಬಂದಿದೆ ಎಂಬುದು ವಿಶೇಷ.

ಪ್ರಭು ಮುಂಡ್ಕರ್, ಹೀರೋ

ನಿರ್ದೇಶನದ ಜೊತೆಗೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು, ಸಂಕಲನವನ್ನೂ ಮಾಡಿದ್ದಾರೆ. ಚಿತ್ರಕ್ಕೆ ಪ್ರಭು ಮುಂಡ್ಕರ್‌ ಅವರು ನಾಯಕರಾದರೆ, ಅವರಿಗೆ ಇಬ್ಬರು ನಾಯಕಿಯರು. ಜಾಹ್ನವಿ ಜ್ಯೋತಿ ಹಾಗೂ “ದುನಿಯಾ” ರಶ್ಮಿ ನಾಯಕಿಯರಾಗಿದ್ದಾರೆ. ತಮ್ಮ ಚೊಚ್ಚಲ ಸಿನಿಮಾ ಕುರಿತು “ಸಿನಿ ಲಹರಿ” ಜೊತೆ ಮಾತನಾಡಿದ ನಿರ್ದೇಶಕ ಸಂದೇಶ್‌, “ಇದೊಂದು ಲವ್‌ ಅಂಡ್‌ ಆಕ್ಷನ್‌ ಕುರಿತಾದ ಸಿನಿಮಾ. ಎಲ್ಲರ ಲೈಫಲ್ಲೂ ನೋವು ಅನ್ನೋದು ಕಾಮನ್.‌ ‌

ಸಂದೇಶ್‌ ಕೃಷ್ಣಮೂರ್ತಿ, ನಿರ್ದೇಶಕ

ಒಂದು ಆಘಾತ ಆದಾಗ, ಸಹಜವಾಗಿಯೇ ನೋವು ಆಗುತ್ತೆ, ಆದರೆ, ಅದನ್ನೇ ಇಟ್ಟುಕೊಂಡು ಯೋಚಿಸುತ್ತಾ ಕೂತರೆ, ಜೊತೆಗಿದ್ದವರ ಲೈಫು ಹಾಳಾಗುತ್ತೆ. ಆದ ಘಟನೆ ಆಗಿಹೋಗಿದೆ. ಅದನ್ನು ಮರೆತು ಮುಂದೆ ನಡೆಯಬೇಕು, ಜೊತೆಗೆ ಇದ್ದವರೊಂದಿಗೆ ಚೆನ್ನಾಗಿ ಬದುಕಬೇಕು ಎಂಬ ಸಂದೇಶದೊಂದಿಗೆ ಸಿನಿಮಾ ಮಾಡಲಾಗಿದೆ” ಎಂದು ವಿವರ ಕೊಡುತ್ತಾರೆ ಸಂದೇಶ್.‌

ಲಕ್ಷ್ಮಿನಾರಾಯಣ್‌ ರಾಜ್‌ ಅರಸ್

ಕೆ.ಕಲ್ಯಾಣ್‌ ಮತ್ತು ಗೌಸ್‌ಪೀರ್‌ ಸಾಹಿತ್ಯವಿದೆ. ಆನಂದ್‌ ಆಡಿಯೋ ಮೂಲಕ ಹಾಡುಗಳನ್ನು ಬಿಡುಗಡೆ ಮಾಡಲಾಗಿದೆ. ಬೆಂಗಳೂರು, ಶ್ರೀರಂಗಪಟ್ಟಣ, ಪಾಂಡವಪುರ, ಮೈಸೂರು, ಸಕಲೇಶಪುರ ಸೇರಿದಂತೆ ಒಟ್ಟು ೪೦ ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಇನ್ನು, ಈ ಚಿತ್ರವನ್ನು ಲಕ್ಷ್ಮೀನಾರಾಯಣ ರಾಜ್‌ ಅರಸ್ ಅವರು ನಿರ್ಮಾಣ ಮಾಡಿದ್ದಾರೆ. ರವಿಕಿಶೋರ್‌ ಛಾಯಾಗ್ರಹಣವಿದೆ. ರೋಣದ ಬಕ್ಕೇಶ್‌ ಮತ್ತು ಕಾರ್ತಿಕ್‌ ಅವರ ಸಂಗೀತವಿದೆ. ನಾಲ್ಕು ಹಾಡುಳಿದ್ದು, ಎರಡು ಮೆಲೋಡಿ, ಒಂದು ಪ್ಯಾಥೋ, ಒಂದು ಹ್ಯಾಪಿ ಸಾಂಗ್‌ ಚಿತ್ರದಲ್ಲಿದೆ. ಡಿ.೨೫ರಂದು ಪ್ರಮುಖ ಚಿತ್ರಮಂದಿರದಲ್ಲಿ ತ್ರಿವೇಣಿಯಲ್ಲಿ ಬಿಡುಗಡೆಯಾಗಲಿದೆ. ಇದರೊಂದಿಗೆ ಮಲ್ಟಿಪ್ಲೆಕ್ಸ್‌ ಮತ್ತು ಪಿವಿಆರ್‌ ಸೇರಿದಂತೆ ಒಟ್ಟು ೮೦ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.

Categories
ಸಿನಿ ಸುದ್ದಿ

ಬೀದಿಗೆ ಬಿತ್ತು ಚಲನಚಿತ್ರ ನಿರ್ದೇಶಕರ ಸಂಘದ ಘನತೆ, ಗೌರವ!

ಆರ್ಥಿಕ ಮುಗ್ಗಟ್ಟಿಗೆ  ಸಿಲುಕಿದ ನಿರ್ದೇಶಕರ ಸಂಘ

– ಕಚೇರಿ ಬಾಡಿಗೆ ಕಟ್ಟದೆ ಕಳೆಯಿತು ಒಂದು ವರ್ಷ

– ಪೊಲೀಸ್ ಮೆಟ್ಟಿಲೇರಿದ ಕಟ್ಟಡ ಮಾಲೀಕ

– ಅಂತಿಮವಾಗಿ ಹೊರ ಬಿದ್ದವು ಕಚೇರಿ ಪೀಠೋಪಕರಣ

(ಇದು ಸಿನಿ‌ಲಹರಿ  ಬ್ರೇಕಿಂಗ್)

ಕನ್ನಡದ ಹೆಸರಾಂತ ನಿರ್ದೇಶಕ ಪುಟ್ಟಣ ಕಣಗಾಲ್ ಹುಟ್ಟು ಹಾಕಿದ ‘  ಕರ್ನಾಟಕ ಚಲನ ಚಿತ್ರ ನಿರ್ದೇಶಕರ ಸಂಘ’ದ ಘನತೆ, ಗೌರವ  ಇಂದು ಬೀದಿಗೆ ಬಿದ್ದಿದೆ‌. 2018 ರಲ್ಲಷ್ಟೇ ವಿಜಯನಗರದಿಂದ ನಾಗರಭಾವಿಗೆ ಸ್ಥಳಾಂತರ ಗೊಂಡ ಸಂಘದ  ಕಚೇರಿ ಕಟ್ಟಡದ ಬಾಡಿಗೆ ಕಟ್ಟದ ಪರಿಣಾಮ, ಕಟ್ಟಡದ ಮಾಲೀಕ  ಸಂಘದ ವಿರುದ್ಧ ಪೊಲೀಸ್ ಠಾಣೆಯ ಮೇಟ್ಟೆಲೇರಿದ್ದಾನಂತೆ‌. ಹಾಗೆಯೇ ಎರಡು ದಿನಗಳ ಹಿಂದಷ್ಟೇ ಕಚೇರಿಯಲ್ಲಿನ‌ ಪೀಠೋಪಕರಣ ಹೊರ ಹಾಕಿ, ಸಂಘದ ಪದಾಧಿ ಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆನ್ನ ಲಾಗಿದೆಯಂತೆ.

ಸಂಘದ ಹಲವು ಪದಾಧಿಕಾರಿಗಳಲ್ಲಿ ಇದು ತೀವ್ರ ಬೇಸರ ಹುಟ್ಟಿಸಿದೆ‌. ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘವು ಇದುವರೆಗೂ ಕಾಪಾಡಿಕೊಂಡು‌ ಬಂದಿದ್ದ ಘನತೆ, ಗೌರವ ವಿನಾಕಾರಣ ಬೀದಿಗೆ ಬಂದಿರುವುದು ತೀವ್ರ ನೋವುಂಟು ಮಾಡಿದೆ ಅಂತ ಸಂಘದ ಕೆಲವರು ಬೇಸರ ವ್ಯಕ್ತಪಡಿ ಸಿದ್ದಾರಂತೆ. ಸದ್ಯಕ್ಕೀಗ ಎಲ್ಲವೂ‌ ತೆರೆಮರೆಯಲ್ಲೆ  ನಡೆದಿದೆ.‌ ಕೊರೋನಾ ಕಾರಣ ಸಂಘವು ಆರ್ಥಿಕ‌ ಮುಗ್ಗಟ್ಟಿಗೆ ಸಿಲುಕಿದ್ದೇ ಇಷ್ಟಕ್ಕೆಲ್ಲ ಕಾರಣ ಅಂತಲೂ ಸಂಘದ ಕೆಲವು ಮೂಲಗಳು ತಿಳಿಸಿವೆ.

ಆದರೆ ಕೊರೋನಾ ಅಂತ‌ ಲಾಕ್ ಡೌನ್ ಶುರುವಾಗಿದ್ದು ಮಾರ್ಚ್ ತಿಂಗಳಿನಿಂದ.‌  ಚಿತ್ರೋದ್ಯಮ ಕೂಡ ಬಂದ್ ಆಗಿರುವುದು ಕೂಡ ಅಲ್ಲಿ‌ಂದಲೇ . ಆದರೆ  ಸಂಘದ ಕಚೇರಿ ಬಾಡಿಗೆ, ವಾಟರ್ ಬಿಲ್, ಕರೆಂಟ್ ಬಿಲ್ ಬ್ಯಾಲೆನ್ಸ್ ಇರುವುದು ಕಳೆದ‌ ಡಿಸೆಂಬರ್ ತಿಂಗಳಿನಿಂದಲೇ ಅಂತೆ. ಹಾಗಾದ್ರೆ ಆಗ ಕೊರೋನಾ ಇತ್ತಾ ಎನ್ನುವ ಪ್ರಶ್ನೆಯಿಂದಲೇ ಕಟ್ಟಡದ ಮಾಲೀಕ , ಸಂಘದ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾರಂತೆ ಎನ್ನುತ್ತಿವೆ ‌ಮೂಲಗಳು.ಸಂಘದ ಹಾಲಿ ಅಧ್ಯಕ್ಷರ ವಿರುದ್ಧವೇ ಕಟ್ಟಡದ ಮಾಲೀಕ ದೂರು ಸಲ್ಲಿಸಿರುವ ಸಂಗತಿ ಕೂಡ ರಿವೀಲ್ ಆಗಿದೆ.

ಕಚೇರಿ ಉದ್ಘಾಟನೆ ವೇಳೆ ನಟ ಕಿಚ್ಚ ಸುದೀಪ್

2018ರಲ್ಲಿ ಮಹತ್ತರ ಉದ್ದೇಶಗಳನ್ನು ಹೊತ್ತು ಕೊಂಡು  ವಿಶಾಲವಾದ ಬಾಡಿಗೆ ಕಟ್ಟಡಕ್ಕೆ ನಿರ್ದೇಶಕರ ಸಂಘ ಸ್ಥಳಾ‌ಂತರಗೊಂಡಿತ್ತು. ಅವತ್ತು ನಟ ಕಿಚ್ಚ ಸುದೀಪ್ ಮುಖ್ಯ ಅತಿಥಿಯಾಗಿ ಬಂದು, ಸಂಘದ ಕಚೇರಿ ಉದ್ಧಾಟಿಸಿದ್ದರು. ಆದಾದ ನಂತರ ನಿರ್ದೇಶಕರ ಸಂಘಕ್ಕೆ ಪದಾಧಿಕಾರಗಳ ಆಯ್ಕೆ ನಡೆಯಿತು. ‌ನಿರ್ದೇಶಕರ ಸಂಘಕ್ಕೆ  ನಿರ್ಮಾಪಕ ಕಮ್ ನಿರ್ದೇಶಕ ‌ಟೇಶಿ ವೆಂಕಟೇಶ್ ಅಧ್ಯಕ್ಷರಾದರು‌. ಅವರು ಇನ್ನೇನು ಸಂಘವನ್ನು ಒಂದು ಹಂತಕ್ಕೆ ತೆಗೆದುಕೊಂಡು ಹೋಗೋಣ ಎನ್ನುವ ಹೊತ್ತಿಗೆ ಕೊರೋನಾ ಶುರುವಾಯ್ತು. ಹಂತ ಹಂತವಾಗಿ ಮೇಲೆಳುತ್ತಿದ್ದ  ನಿರ್ದೇಶಕರ ಸಂಘ‌ ನೆಲ ಹಿಡಿಯಿತು‌.

ಮುಂದೆ ಕೊರೋನಾ,  ನಿರ್ದೇಶಕರು ಸೇರಿ‌ ಚಿತ್ರೋದ್ಯಮವನ್ನು ತೀವ್ರವಾಗಿ ಭಾದಿಸಿತು. ಕೆಲಸ ಇಲ್ಲದೆ ಮನೆ ಹಿಡಿದ ನಿರ್ದೇಶಕರ ಸಂಘದ ಪಧಾಧಿಕಾರಿಗಳ ನೆರವಿಗೆ ಸಂಘ‌ ಬಂತು‌. ಹಾಗೆ ಮಾಡಿದ್ದೇ ಸಂಘ ಆರ್ಥಿಕ‌ ಮುಗ್ಗಟ್ಟು ಅನುಭವಿಸಲು ಕಾರಣವಂತಂತೆ.ಆದರೆ ಕಟ್ಟಡದ ಮಾಲೀಕ ಕೇಳಬೇಕಲ್ಲ? ಬಾಡಿಗೆ ನೀಡಿಲ್ಲ ಅಂತ ಆತ ದೂರು ನೀಡಿದ್ದಾನೆ. ಪೀಠೋಪಕರಣ ಹೊರ ಹಾಕಿದ್ದಾನೆ. ಇದರಿಂದ ಸಂಘದ ಗೌರವ ಬೀದಿಗೆ ಬಿದ್ದಿದೆ ಎನ್ನುವುದು ಹೆಸರು ಹೇಳಲಿಚ್ಚಿಸದ ನಿರ್ದೇಶಕರೊಬ್ಬರ ಅಳಲು.
ಕನ್ನಡ ಚಿತ್ರರಂಗಕ್ಕೆ ದೊಡ್ಡ ಇತಿಹಾಸ ಇದೆ.ಹಾಗೆಯೇ ಅಲ್ಲಿರುವ ವಿವಿಧ ವಿಭಾಗಗಳ ಸಂಘಟನೆಗಳಿಗೂ ಅಷ್ಟೇ ಇತಿಹಾಸ, ಗೌರವ ಇದೆ. ಕರ್ನಾಟಕ ನಿರ್ಮಾಪಕರ ಸಂಘವು ತನ್ನ ಸ್ವಂತ ಕಟ್ಟಡದ ನಿರ್ಮಾಣಕ್ಕೆ ಇತ್ತೀಚೆಗಷ್ಟೇ ಶಂಕುಸ್ಥಾಪನೆ ನೆರವೇರಿಸಿದ್ದು ನಿಮಗೂ ಗೊತ್ತು. ಕಲಾವಿದರ ಸಂಘವು ಚಾಮರಾಜಪೇಟೆಯಲ್ಲಿ ಬೃಹತ್ ಭವನ ನಿರ್ಮಾಣ ಮಾಡಿದ್ದೂ ಕೂಡ ತಿಳಿದಿದ್ದೆ. ಇದೆಲ್ಲ ಸಿನಿಮಾಮಂದಿಯ ಸಾಹಸ.‌‌ ಹಾಗೆಯೇ ನಿರ್ದೇಶ ಕರ ಸಂಘವು ತನ್ನ ಸ್ವಂತ ಕಟ್ಟಡ ಹೊಂದಬೇಕು ಅಂತ ಕನ್ನಡ ಚಿತ್ರ ರಂಗ ಬಯಸುವಾಗ , ಬಾಡಿಗೆ ವಿಚಾರದಲ್ಲಿ ಕರ್ನಾಟಕ ಚಲನ ಚಿತ್ರ ನಿರ್ದೇಶಕರ ಸಂಘದ ಗೌರವ ಬೀದಿ ಪಾಲಾಗಿರುವುದು ನಿಜಕ್ಕೂ ಅವಮಾನವೇ‌ ಎನ್ನುವ ಮಾತು  ಸಿನಿಮಾ ಮಂದಿಯಿಂದ ಹೊರ ಬಿದ್ದಿದೆ.

ಆದಷ್ಟು‌ಬೇಗ ನಿರ್ದೇಶಕರ ಸಂಘವು ಈ ಮುಗ್ಗಟ್ಟಿನಿಂದ ಹೊರ ಬಂದು, ತನ್ನದೇ ಒಂದು‌ಕಟ್ಟಡ ಹೊಂದಲಿ ಎನ್ನುವುದು ಸಿನಿ‌‌ಲಹರಿ ಹಾರೈಕೆ.‌ಅದೇ ಕಾಳಜಿಯಿಂದ ಈ‌ ಬರಹ ಮಾತ್ರ

Categories
ಸಿನಿ ಸುದ್ದಿ

ಲವ್ ಮೂಡಲ್ಲಿ ಶಶಿಕುಮಾರ್  ಪುತ್ರ! ಓ ಮೈ ಲವ್ ಅಂತಾರೆ ಅಕ್ಷಿತ್

ಸ್ಮೈಲ್ ಶ್ರೀನುಗೆ ಹೊಸ ಪ್ರೇಮ ಭಾಷ್ಯ ಬರೆಯೋ ಉತ್ಸಾಹ…

ಹಿರಿಯ ನಟ ಶಶಿಕುಮಾರ್ ಪುತ್ರ ಅಕ್ಷಿತ್‍ ಇತ್ತೀಚೆಗಷ್ಟೇ ಹೊಸ ಸಿನಿಮಾ ಅನೌನ್ಸ್ ಮಾಡಿದ್ದು ಗೊತ್ತೇ ಇದೆ. ಅದರ ಬೆನ್ನಲ್ಲೇ ಮತ್ತೊಂದು ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಆ ಚಿತ್ರಕ್ಕೆ ‘ಓ ಮೈ ಲವ್’ ಎಂಬ ಹೆಸರಿಡಲಾಗಿದೆ.

ಸ್ಮೈಲ್ ಶ್ರೀನು, ನಿರ್ದೇಶಕ

ಈ ಚಿತ್ರಕ್ಕೆ  ಸ್ಮೈಲ್ ಶ್ರೀನು ನಿರ್ದೇಶಕರು. ಈ ಹಿಂದೆ ” ತೂಫಾನ್”, “ಬಳ್ಳಾರಿ ದರ್ಬಾರ್” ಹಾಗೂ “18 ಟು 25” ಎಂಬ ಚಿತ್ರಗಳನ್ನು ನಿರ್ದೇಶಿಸಿದ್ದರು. ಈಗ ಮತ್ತೊಂದು ವಿಭಿನ್ನ ಪ್ರೇಮಕಥೆಯನ್ನು ತೆರೆಮೇಲೆ ತರಲು ಸಜ್ಜಾಗಿದ್ದಾರೆ.

ಇದೊಂದು ರೊಮ್ಯಾಂಟಿಕ್ ಕಥಾಹಂದರದ ಸಿನಿಮಾ. ಹದಿಹರೆಯದ ವಯಸಿನಲ್ಲಿ ಯುವ ಹೃದಯಗಳ ಮನದಲ್ಲಿ ಉಂಟಾಗುವ ತಳಮಳ, ಪ್ರೀತಿ, ಪ್ರೇಮದ ಕುರಿತ ಅಂಶಗಳು ಇಲ್ಲಿರಲಿವೆ.

ಇನ್ನು ನಿರ್ದೇಶಕ ಸ್ಮೈಲ್‍ ಶ್ರೀನು  ಈ ಬಾರಿ ರೆಗ್ಯುಲರ್ ಪ್ಯಾಟ್ರನ್ ಬಿಟ್ಟು ಬೇರೆ ಥರದ ನಿರೂಪಣೆಯೊಂದಿಗೆ ಸಿನಿಮಾ ಮಾಡಲು ಹೊರಟಿದ್ದಾರೆ. ಚಿತ್ರಕ್ಕೆ ಜಿಸಿಬಿ ರಾಮಾಂಜಿನಿ ಅವರು ಕಥೆ ಬರೆದು ಜಿಸಿಬಿ ಪ್ರೊಡಕ್ಷನ್ಸ್ ಮೂಲಕ ನಿರ್ಮಾಣಕ್ಕೆ ಕೈ ಹಾಕಿದ್ದಾರೆ.

ನಿರ್ದೇಶಕ ಶ್ರೀನು, ಚಿತ್ರಕಥೆ, ಸಂಭಾಷಣೆಯ ಜವಾಬ್ದಾರಿ ಹೊತ್ತಿದ್ದಾರೆ. ರೊಮ್ಯಾಂಟಿಕ್ ಲವ್‍ಸ್ಟೋರಿ ಜೊತೆಗೆ ಫ್ಯಾಮಿಲಿ ಎಲಿಮೆಂಟ್ಸ್ ಮತ್ತು ಹಾಸ್ಯ ಮಿಶ್ರಣಗೊಂಡಿದೆ.

ಒಂದೊಳ್ಳೆಯ ಲವ್ ಸ್ಟೋರಿ ಇದಾಗಿದ್ದು, ಈ ಚಿತ್ರದ ಮೂಲಕ ಹೊಸ ಪ್ರೇಮ ಭಾಷ್ಯ ಬರೆಯುವ ಉತ್ಸಾಹದಲ್ಲಿದ್ದಾರೆ. ಇದೊಂದು ಬಿಗ್‍ ಬಜೆಟ್ ಸಿನಿಮಾ. ಎಲ್ಲಾ ವಿಷಯದಲ್ಲೂ ಅದ್ಧೂರಿತನ ಇರಲಿದೆ ಎಂಬುದು ನಿರ್ದೇಶಕರ ಮಾತು. ಇನ್ನು ಈ ಚಿತ್ರದಲ್ಲಿ ಅಕ್ಷಿತ್ ಶಶಿಕುಮಾರ್ ಜೊತೆ ನಾಯಕಿಯಾಗಿ ಕೀರ್ತಿ ಕಲಕೇರಿ ಅಭಿನಯಿಸುತ್ತಿದ್ದಾರೆ.

ಉಳಿದಂತೆ ಚಿತ್ರದಲ್ಲಿ ಸಾಧು ಕೋಕಿಲಾ, ದೀಪಿಕಾ ಆರಾಧ್ಯ ಸೇರಿದಂತೆ ಇತರರೂ  ನಟಿಸಲಿದ್ದಾರೆ. ವಿ.ನಾಗೇಂದ್ರಪ್ರಸಾದ್ ಅವರ ಸಾಹಿತ್ಯ, ಚರಣ್ ಅರ್ಜುನ್ ಅವರ ಸಂಗೀತವಿದೆ.

ರಿಯಲ್ ಸತೀಶ್ ಅವರ ಸಾಹಸ ನಿರ್ದೇಶನ, ಆಕಾಶ್‍ಕುಮಾರ್ ಚವನ್ ಅವರ ಸಹನಿರ್ದೇಶನ  ಚಿತ್ರಕ್ಕಿದೆ. ಬೆಂಗಳೂರು, ಮಂಗಳೂರು, ಮಡಿಕೇರಿ, ಹೈದರಾಬಾದ್ ಸೇರಿದಂತೆ ಕರ್ನಾಟಕದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಯಲಿದೆ.

Categories
ಸಿನಿ ಸುದ್ದಿ

ತಾರಾ ಕ್ಯಾಲೆಂಡರ್ 2021 – ಇದು ಪ್ರಗತಿ ಅಶ್ವತ್ಥನಾರಾಯಣ ಅವರ ವಿಶೇಷ

ಸಂಗ್ರಹಕ್ಕೆ ಯೋಗ್ಯವಿದು -ಕಮರ್ಷಿಯಲ್‌ ಅಲ್ಲವೇ ಅಲ್ಲ!

ಪ್ರಗತಿ ಅಶ್ವತ್ಥನಾರಾಯಣ 

ಪ್ರಗತಿ ಅಶ್ವತ್ಥನಾರಾಯಣ್‌ ಕನ್ನಡ ಚಿತ್ರರಂಗದಲ್ಲಿ ಬಹು ಜನಪ್ರಿಯ ಹೆಸರಿದು. ಹೌದು, ಕಪ್ಪು- ಬಿಳುಪು ಕಾಲದಿಂದಲೂ ಚಿತ್ರರಂಗದ ನಂಟು ಬೆಳೆಸಿಕೊಂಡು ಬಂದವರು. ಸರಿ ಸುಮಾರು ಐದು ದಶಕಗಳ ಕಾಲ ಚಿತ್ರರಂಗವನ್ನು ಅಳವಾಗಿ ಬಲ್ಲವರು. ಹಿರಿಯ ಸಿನಿಮಾ ಸ್ಥಿರಚಿತ್ರ ಛಾಯಾಗ್ರಾಹಕರಾಗಿರುವ ನೂರಾರು ಸಿನಿಮಾಗಳಿಗೆ ಸ್ಥಿರಚಿತ್ರ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. ಡಾ.ರಾಜಕುಮಾರ್‌, ಕಲ್ಯಾಣ್‌ ಕುಮಾರ್‌, ಉದಯಕುಮಾರ್‌, ರಾಜೇಶ್‌, ಗಂಗಾಧರ್‌, ಲೋಕೇಶ್‌, ವಿಷ್ಣುವರ್ಧನ್‌, ಅಂಬರೀಶ್‌, ಶಂಕರ್‌ನಾಗ್‌, ವಜ್ರಮುನಿ, ಬಾಲಕೃಷ್ಣ, ನರಸಿಂಹರಾಜು, ಕಲ್ಪನಾ, ಮಂಜುಳಾ ಹೀಗೆ ಇನ್ನೂ ಅನೇಕ ಹಿರಿಯ ನಟ, ನಟಿಯರ ಚಿತ್ರಗಳಲ್ಲಿ ಸ್ಥಿರಚಿತ್ರ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. ಅವರೆಲ್ಲರ ಅದ್ಭುತ ಮತ್ತು ಅಪರೂಪದ ಫೋಟೋಗಳನ್ನೂ ತೆಗೆದಿದ್ದಾರೆ. ಅಪರೂಪದಲ್ಲಿ ಅಪರೂಪ ಎಂಬಂತಹ ಫೋಟೋಗಳು ಇಂದಿಗೂ ಅವರ ಬಳಿ ಇವೆ ಎಂಬುದೇ ವಿಶೇಷ.


ಪ್ರಗತಿ ಅಶ್ವತ್ಥನಾರಾಯಣ ಅವರು, 1965ರಿಂದಲೂ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿ ಸ್ಥಿರಚಿತ್ರ ಛಾಯಾಗ್ರಾಹಕರಾಗಿ ಕೆಲಸ ಮಾಡಿದವರು. ಕಪ್ಪು-ಬಿಳುಪು ಸಿನಿಮಾಗಳಿಂದ ಹಿಡಿದು, ಕಲರ್‌ ಸಿನಿಮಾಗಳವರೆಗೂ ಇವರ ಕ್ಯಾಮೆರಾ ಹಲವಾರು ನಟ,ನಟಿಯರು, ಪೋಷಕ ನಟ,ನಟಿಯರು,ಹಾಸ್ಯ ನಟರು, ನಿರ್ದೇಶಕ, ನಿರ್ಮಾಪಕರು, ಗೀತರಚನೆಕಾರರು, ತಾಂತ್ರಿಕ ವರ್ಗದವರು ಸೇರಿದಂತೆ ಸಿನಿಮಾ ವಿಭಾಗದಲ್ಲಿ ದುಡಿಯುವ ಅನೇಕರ ಫೋಟೋ ಕ್ಲಿಕ್ಕಿಸಿದೆ ಎಂಬುದೇ ಅಚ್ಚರಿ. ಈವರೆಗೆ ಸುಮಾರು ೩೦೦ಕ್ಕೂ ಹೆಚ್ಚು ಯಶಸ್ವಿ ಹಾಗೂ ಅಪರೂಪದ ಚಿತ್ರಗಳಿಗೆ ಸ್ಥಿರಚಿತ್ರ ಛಾಯಾಗ್ರಾಹಕರಾಗಿ ಕೆಲಸ ಮಾಡಿದ ಹೆಗ್ಗಳಿಕೆ ಇವರದು.


೨೦೦೫ರ ನಂತರ ಗಾಂಧಿನಗರದಲ್ಲಿದ್ದ ಇವರ ಪ್ರಗತಿ ಸ್ಟುಡಿಯೋ ಕ್ಲೋಸ್‌ ಆಗಿದ್ದರೂ, ಅಶ್ವತ್ಥನಾರಾಯಣ ಅವರು ಮಾತ್ರ ಸುಮ್ಮನೆ ಕೂರದೆ, ಅಪರೂಪದ ಫೋಟೋಗಳೊಂದಿಗೆ ಆಗಾಗ ಸುದ್ದಿಯಾಗುತ್ತಲೇ ಇದ್ದಾರೆ. ಈಗ ಹೊಸದೊಂದು ಸುದ್ದಿಗೂ ಕಾರಣರಾಗಿದ್ದಾರೆ. ಅದೇ ಈ ಹೊತ್ತಿನ ವಿಶೇಷ. ಅಷ್ಟಕ್ಕೂ ಪ್ರಗತಿ ಅಶ್ವತ್ಥನಾರಾಯಣ ಅವರ ಕುರಿತಾದ ಹೊಸ ಸುದ್ದಿ ಏನು ಎಂಬ ಪ್ರಶ್ನೆಗೆ “ತಾರಾ ಕ್ಯಾಲೆಂಡರ್‌-೨೦೨೧” ಉತ್ತರ.


ಪ್ರಗತಿ ಅಶ್ವತ್ಥನಾರಾಯಣ ಅವರು, ಬರುವ ಹೊಸ ವರ್ಷಕ್ಕೆ “ತಾರಾ ಕ್ಯಾಲೆಂಡರ್‌ -೨೦೨೧” ಸಿದ್ಧಗೊಳಿಸಿದ್ದಾರೆ. ಹಾಗಂತ, ಇದು ಕಮರ್ಷಿಯಲ್‌ ಅಂದುಕೊಂಡರೆ ಆ ಊಹೆ ತಪ್ಪು. ಸದಾ ಸಿನಿಮಾ ಪ್ರೀತಿಸುವ, ಧ್ಯಾನಿಸುವ ಪ್ರಗತಿ ಅಶ್ವತ್ಥನಾರಾಯಣ ಅವರು, ತಮ್ಮದೇ ಶೈಲಿಯಲ್ಲೊಂದು ತಾರಾ ಕ್ಯಾಲೆಂಡರ್‌ ವಿನ್ಯಾಸಗೊಳಿಸಿದ್ದಾರೆ.

ಅದನ್ನು ಫೇಸ್‌ಬುಕ್‌ ಅಕೌಂಟ್‌ನಲ್ಲೂ ಹಾಕಿಕೊಂಡಿದ್ದಾರೆ. ಮೊದಲೇ ಹೇಳಿದಂತೆ, ಇದನ್ನು ಕಮರ್ಷಿಯಲ್‌ ಆಗಿ ಮಾಡಿಲ್ಲ. ಸಿನಿಮಾದ ಮೇಲಿರುವ ಪ್ರೀತಿಗೆ ಮಾಡಿದ್ದಾರೆ. ಇದನ್ನು ಸಿನಿಪ್ರಿಯರು ತಮ್ಮ ಲ್ಯಾಪ್‌ಟಾಪ್‌ನಲ್ಲಿ ಸ್ಟೋರ್‌ ಮಾಡಿಕೊಳ್ಳಬಹುದು.

 

ಅಷ್ಟೇ ಅಲ್ಲ, ಬೇಕಾದವರು ಡಿಜಿಟಲ್‌ ಪ್ರಿಂಟ್‌,‌ ಜೆರಾಕ್ಸ್‌ ಕೂಡ ಮಾಡಿಟ್ಟುಕೊಳ್ಳಬಹುದು. ಕೇವಲ ತಾರೆಯರಷ್ಟೇ ಅಲ್ಲ, ಅಶ್ವತ್ಥನಾರಾಯಣ ಅವರು, ಟೆಂಪಲ್ಸ್‌ ಫೋಟೋಗಳನ್ನೂ ಬಳಸಿಕೊಂಡು ಕ್ಯಾಲೆಂಡರ್‌ ಮಾಡಿದ್ದಾರೆ. ಅದನ್ನು ಇನ್ನಷ್ಟೇ ಸೋಶಿಯಲ್‌ ಮೀಡಿಯಾದಲ್ಲಿ ಬಿಡಬೇಕಿದೆ.


ಈ ಕುರಿತು “ಸಿನಿಲಹರಿ” ಜೊತೆ ಮಾತನಾಡುವ ಪ್ರಗತಿ ಅಶ್ವತ್ಥನಾರಾಯಣ, “ನಾನು ಈ ತಾರಾ ಕ್ಯಾಲೆಂಡರ್‌ ಅನ್ನು ಕಮರ್ಷಿಯಲ್‌ ದೃಷ್ಟಿಯಲ್ಲಿ ಮಾಡಿಲ್ಲ. ಸುಮ್ಮನೆ ಒಂದಷ್ಟು ಫೋಟೋ ಆಯ್ಕೆ ಮಾಡಿಕೊಂಡು ಮಾಡಿದ್ದೇನೆ. ಈ ತಾರಾ ಕ್ಯಾಲೆಂಡರ್‌ನ ವಿಶೇಷತೆ ಅಂದರೆ, ಕನ್ನಡ ಚಿತ್ರರಂಗದ ಮಹನೀಯರನ್ನು ಒಟ್ಟಿಗೆ ನೋಡಬಹುದಷ್ಟೇ.

ಒಂದೇ ವೇದಿಕೆಯಲ್ಲಿ ಸಿನಿಮಾ ಮಂದಿ ಸಿಕ್ಕಂತೆ ಈ ತಾರಾ ಕ್ಯಾಲೆಂಡರ್‌ನಲ್ಲೂ ಕಾಣಬಹುದು. ಇಲ್ಲಿ ಡಾ.ರಾಜಕುಮಾರ್‌, ಡಾ.ವಿಷ್ಣುವರ್ಧನ್‌, ಅಂಬರೀಶ್‌, ಶಂಕರ್‌ನಾಗ್‌, ಉದಯ್‌ ಕುಮಾರ್‌, ಕಲ್ಯಾಣ್‌ ಕುಮಾರ್‌, ಬಾಲಕೃಷ್ಣ, ಲೋಕೇಶ್‌, ವಜ್ರಮುನಿ, ನರಸಿಂಹರಾಜು, ಕಲ್ಪನಾ, ಮಂಜುಳಾ ಅವರ ಫೋಟೋಗಳಿವೆ. ಇದನ್ನು ನಾನೇ ಆಯ್ಕೆ ಮಾಡಿ ಮಾಡಿದ್ದು,

ಇಲ್ಲಿರುವರಾರೂ ಈಗ ಇಲ್ಲ. ಹಾಗಾಗಿ ಇದೊಂದು ವಿಶೇಷ ತಾರಾ ಕ್ಯಾಲೆಂಡರ್‌ ಅಷ್ಟೇ. ಕೆಲವರು ಆ ಫೋಟೋ ಹಾಕಿಲ್ಲ, ಇವರನ್ನೇಕೆ ಕೈ ಬಿಟ್ಟಿದ್ದೀರಿ ಅಂತೆಲ್ಲಾ ಕೇಳುತ್ತಿದ್ದಾರೆ. ಆದರೆ, ಇರುವ ಹನ್ನೆರೆಡು ತಿಂಗಳಲ್ಲಿ ಒಂದೊಂದು ತಿಂಗಳಿಗೆ ಒಬ್ಬೊಬ್ಬರಂತೆ ಆಯ್ಕೆ ಮಾಡಿಕೊಳ್ಳಲಾಗಿದೆ.

ಮುಂದಿನ ಸಲದ ತಾರಾ ಕ್ಯಾಲೆಂಡರ್‌ನಲ್ಲಿ ಉಳಿದವರ ಫೋಟೋ ಬಳಸಿಕೊಂಡು ಕ್ಯಾಲೆಂಡರ್‌ ಮಾಡತ್ತೇನೆ ಎನ್ನುವ ಅವರು, ತಾವೇ ಸೆರೆಹಿಡಿದ ಅಪರೂಪದ ಫೋಟೋಗಳನ್ನು ನೋಡುಗರಿಗೆ ಕ್ಯಾಲೆಂಡರ್‌ ರೂಪದಲ್ಲಿ ಕೊಟ್ಟಿರುವುದು ವಿಶೇಷವೇ ಸರಿ.

Categories
ಸಿನಿ ಸುದ್ದಿ

ಜನವರಿ 8 ರಂದು ಕೆಜಿಎಫ್-2 ಟೀಸರ್‌ ರಿಲೀಸ್‌ ಯಶ್‌ ಹುಟ್ಟುಹಬ್ಬಕ್ಕೆ ಸ್ಪೆಷಲ್‌ ಗಿಫ್ಟ್‌

ಫ್ಯಾನ್ಸ್‌ಗೆ ನಿರೀಕ್ಷೆ ಹೆಚ್ಚಿಸಿದ ಟೀಸರ್‌ ಸುದ್ದಿ

“ಕೆಜಿಎಫ್”‌ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಸುದ್ದಿ ಮಾಡಿದ ಚಿತ್ರ. ಕನ್ನಡ ಮಾತ್ರವಲ್ಲ, ಇಡೀ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡಿದ ಚಿತ್ರ ಅಂದರೆ ತಪ್ಪಿಲ್ಲ. “ಕೆಜಿಎಫ್‌-೨” ಚಿತ್ರ ಕೂಡ ತುಂಬಾ ನಿರೀಕ್ಷೆ ಹುಟ್ಟಿಸಿದೆ. ಇದುವರೆಗೆ ಬರೀ ಫಸ್ಟ್‌ ಲುಕ್‌ ನೋಡಿದ್ದ ಫ್ಯಾನ್ಸ್‌ಗೆ ಈಗ ಹೊಂಬಾಳೆ ಫಿಲ್ಮ್ಸ್‌ ಹೊಸ ಸುದ್ದಿ ಹೊರಹಾಕಿದೆ. ಹೌದು, ಜನವರಿ 8ರಂದು “ಕೆಜಿಎಫ್-‌2” ಚಿತ್ರದ ಟೀಸರ್‌ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ. ಜನವರಿ 8ರಂದು 10.08ಕ್ಕೆ ಟೀಸರ್‌ ಬಿಡುಗಡೆಯಾಗಲಿದೆ. ಅಂದು ಹೊಂಬಾಳೆ ಫಿಲ್ಮ್ಸ್‌ ಯುಟ್ಯೂಬ್‌ ಚಾನೆಲ್‌ನಲ್ಲಿ ಈ ಟೀಸರ್‌ ಹೊರಬರುತ್ತಿದೆ.

ಪ್ರಶಾಂತ್‌ ನೀಲ್‌ ನಿರ್ದೇಶನದ ಈ ಚಿತ್ರವನ್ನು ವಿಜಯ್‌ ಕಿರಗಂದೂರು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಯಶ್‌ಗೆ ಜೋಡಿಯಾಗಿ ಶ್ರೀನಿಧಿ ಶೆಟ್ಟಿ ಇದ್ದಾರೆ. ಈ ಬಾರಿ ಬಾಲಿವುಡ್‌ ನಟ ಸಂಜಯ್‌ ದತ್‌ ಪ್ರಮುಖ ಆಕರ್ಷಣೆ. ಅಷ್ಟೇ ಅಲ್ಲ, ರವೀನಾ ಟಂಡನ್‌ ಕೂಡ ಇದ್ದಾರೆ. ಪ್ರಕಾಶ್‌ರಾಜ್‌ ಸೇರಿದಂತೆ ಹಲವರು ಇಲ್ಲಿ ನಟಿಸಿದ್ದಾರೆ.  ಚಿತ್ರಕ್ಕೆ ಭುವನ್ ಗೌಡ ಕ್ಯಾಮೆರಾ ಹಿಡಿದರೆ, ರವಿಬಸ್ರೂರು ಸಂಗೀತ ನೀಡಿದ್ದಾರೆ.

ಅಂದಹಾಗೆ, ಯಶ್‌ ಅವರು ತಮ್ಮ ಫೇಸ್‌ಬುಕ್‌ ಖಾತೆ, ಟ್ವಿಟ್ಟರ್‌ನಲ್ಲೂ ಜನವರಿ ೮ರಂದು ಟೀಸರ್‌ ಬಿಡುಗಡೆಯಾಗುವ ವಿಷಯ‌ ಹಂಚಿಕೊಂಡಿದ್ದಾರೆ. ಅದೇನೆ ಇರಲಿ, ತುಂಬಾ ದಿನಗಳಿಂದ ಫ್ಯಾನ್ಸ್‌ ಕಾತುರದಿಂದಲೇ ಕಾಯುತ್ತಿದ್ದ ಟೀಸರ್‌ ಅಂತೂ ಬಿಡುಗಡೆಯಾಗುವ ಸೂಚನೆ ನೀಡಿದ್ದು, ದಿನವನ್ನೂ ನಿಗದಿಪಡಿಸಿದೆ. ಇನ್ನೇನಿದ್ದರೂ, ಜನವರಿ ೮ರ ತನಕ ಫ್ಯಾನ್ಸ್‌ ಕೆಜಿಎಫ್-‌೨ ಚಿತ್ರದ ಜಪ ಮಾಡುವುದು ಖಚಿತ.

Categories
ಸಿನಿ ಸುದ್ದಿ

ಬಾಲಿವುಡ್‌ಗೆ ಸಮರ್ಥ – ಶಕೀಲಾ ಜೊತೆ ಮುಂಬೈ ಫ್ಲೈಟ್‌ ಏರಿದ ಕನ್ನಡದ ವೀರ!

ಇಂದ್ರಜಿತ್‌ ಚಿತ್ರಕ್ಕೆ ಸಮರ್ಥ ಸಂಗೀತ

ವೀರ್‌ ಸಮರ್ಥ್

ಚಿತ್ರರಂಗಕ್ಕೆ ಸಂಬಂಧಿಸಿದ ಯಾವುದೇ ಕಲಾವಿದನಿರಲಿ, ತಾಂತ್ರಿಕ ವರ್ಗದವರಿರಲಿ ನಾನು ಗುರುತಿಸಿಕೊಳ್ಳಬೇಕು, ಸಾಧಿಸಬೇಕು ಎಂಬ ಅಸೆ ಇದ್ದೇ ಇರುತ್ತೆ. ಕೆಲವರು ಆ ಆಸೆಯ ಬೆನ್ನತ್ತಿ ಹೋಗಿದ್ದಾರೆ, ಇನ್ನೂ ಕೆಲವರು ಹೋಗಲು ಪ್ರಯತ್ನಿಸುತ್ತಲೇ ಇದ್ದಾರೆ. ಕೆಲವರು ಗೆದ್ದಿದ್ದಾರೆ, ಕೆಲವರೂ ಗೆಲ್ಲಲಾಗದೆ ಸುಮ್ಮನಾಗಿದ್ದಾರೆ. ಈಗ ಇಲ್ಲಿ ಹೇಳಹೊರಟಿರುವ ವಿಷಯ, ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡು ತಮ್ಮದೇ ಆದ ಒಂದು ಜಾಗ ಮಾಡಿಕೊಂಡಿರುವ ಸಂಗೀತ ನಿರ್ದೇಶಕ ವೀರ್‌ ಸಮರ್ಥ್.‌ ಹೌದು, ವೀರ್‌ಸಮರ್ಥ್‌ ಈಗಾಗಲೇ ಕನ್ನಡದ ಅನೇಕ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ಸೂಪರ್‌ ಹಿಟ್‌ ಸಾಂಗ್‌ ಕೊಟ್ಟಿದ್ದಾರೆ. ಅನೇಕ ನಿರ್ದೇಶಕ, ನಿರ್ಮಾಪಕರ ಮೆಚ್ಚಿನ ಸಂಗೀತ ನಿರ್ದೇಶಕರಾಗಿಯೂ ಸೈ ಎನಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಅವರೀಗ ಬಾಲಿವುಡ್‌ಗೆ ಕಾಲಿಟ್ಟಿದ್ದಾರೆ ಎಂಬುದೇ ಈ ಹೊತ್ತಿನ ಸುದ್ದಿ.

‌1998 ರಲ್ಲಿ ವೀರ್‌ ಗಾಯಕ ಸುರೇಶ್‌ ವಾಡ್ಕರ್‌ ಬಳಿ ಸಂಗೀತ ಕಲಿತರು. ಅದಕ್ಕೂ ಮೊದಲು ಬೀದರ್‌ನಲ್ಲಿ 8 ವರ್ಷ ಶಾಸ್ತ್ರೀಯ ಸಂಗೀತ ಕರಗತ ಮಾಡಿಕೊಂಡಿದ್ದರು. ಸುರೇಶ್‌ ವಾಡ್ಕರ್‌ ‌ ಬಳಿ ಆಡಿಷನ್‌ ಮೂಲಕ ಆಯ್ಕೆಯಾದರು. ಅವರ ಹಾಡು ಕೇಳಿದ ಅವರು, ಹಾಡು ಕಲಿಸಿದರು. ನಂತರ ಅಲ್ಲೇ ಕೆಲಸ ಶುರುಮಾಡಿದರು. 1998 ರಲ್ಲಿ ವೀರ್‌ ಅವರಿಗೆ ವಿಜಯಪ್ರಕಾಶ್‌ ಪರಿಚಯ ಆಗಿದ್ದು ಅಲ್ಲೇ. ನಂತರ ಭಾರತೀಯ ಚಿತ್ರರಂಗದ ಯಶಸ್ವಿ ಸಂಗೀತ ನಿರ್ದೇಶಕ, ಗಾಯಕ, ಗೀತ ಸಾಹಿತಿ ರವೀಂದ್ರ ಜೈನ್‌ ಬಳಿ ಐದು ವರ್ಷ ಜೊತೆಗಿದ್ದರು. ಆ ಬಳಿಕ ಹಿಂದಿಯಲ್ಲಿ ಹಿಟ್‌ ಎನಿಸಿಕೊಂಡ “ಕಭೀ ಖುಷ್‌ ಕಭೀ ಗಮ್‌” ಚಿತ್ರದ ಸಂಗೀತ ನಿರ್ದೇಶಕ ಸಂದೇಶ್‌ ಶಾಂಡಿಲ್ಯ ಅವರ  ಹಾಡೊಂದರಲ್ಲಿ ಕೋರಸ್‌ ಹಾಡುವ ಅವಕಾಶ ಗಿಟ್ಟಿಸಿಕೊಂಡು, ಜೊತೆಗೆ ಮೂರನೇ ಬಿಜಿಎಂನಲ್ಲಿ ವಿಷಲ್‌ ಹಾಕುವ ಅವಕಾಶವೂ ಅವರದಾಗಿತ್ತು

 

ವೀರ್‌ ಸಮರ್ಥ್‌ ಹಿಂದಿ ಸಿನಿಮಾಗೆ ಸಂಗೀತ ನೀಡಿದ್ದಾರೆಂಬುದೇ ವಿಶೇಷ. ಅದು “ಶಕೀಲಾ” ಸಿನಿಮಾಗೆ. ಶಕೀಲಾ ಅಂದಾಕ್ಷಣ, ಪಡ್ಡೆಗಳಿಗೆ ಬಿಡಿಸಿ ಹೇಳಬೇಕಿಲ್ಲ. ಯುವಕರೂ ಸೇರಿದಂತೆ ವಯಸ್ಕರನ್ನೂ ನಿದ್ದೆಗೆಡಿಸಿದ ಶಕೀಲಾ ಅವರ ಬಯೋಗ್ರಫಿ ಚಿತ್ರವೇ “ಶಕೀಲಾ”. ಈ ಚಿತ್ರಕ್ಕೆ ಇಂದ್ರಜಿತ್‌ ಲಂಕೇಶ್‌ ನಿರ್ದೇಶಕರು. ಈ ಚಿತ್ರವೀಗ ಡಿಸೆಂಬರ್‌ ೨೫ರ ಕ್ರಿಸ್ಮಸ್‌ಗೆ ದೇಶಾದ್ಯಂತ ಬಿಡುಗಡೆಯಾಗುತ್ತಿದೆ. ಇದೇ ಮೊದಲ ಸಲ‌ ಬಾಲಿವುಡ್‌ ಚಿತ್ರವೊಂದಕ್ಕೆ ಸಂಗೀತ ನೀಡಿರುವ ವೀರ್‌ಸಮರ್ಥ್, ತಮ್ಮ ಬಾಲಿವುಡ್‌ ಪಯಣ ಕುರಿತು “ಸಿನಿಲಹರಿ” ಜೊತೆ ಮಾತನಾಡಿದ್ದಾರೆ.

 

‌ಓವರ್‌ ಟು ವೀರ್…
“ನನಗೆ ಬಾಲಿವುಡ್‌ ಹೊಸದೇನಲ್ಲ. ಹಾಗೆ ಹೇಳುವುದಾದರೆ, ‌1998 ರಲ್ಲಿ ನಾನು ಹೆಸರಾಂತ ಗಾಯಕ ಸುರೇಶ್‌ ವಾಡ್ಕರ್‌ ಬಳಿ ಸಂಗೀತ ಕಲಿಯೋಕೆ ಸೇರಿಕೊಂಡೆ. ಅದಕ್ಕೂ ಮೊದಲು ಬೀದರ್‌ನಲ್ಲಿ 8 ವರ್ಷ ಶಾಸ್ತ್ರೀಯ ಸಂಗೀತ ಕರಗತ ಮಾಡಿಕೊಂಡಿದ್ದೆ. ಸುರೇಶ್‌ ವಾಡೇಕರ್‌ ಬಳಿ ಆಡಿಷನ್‌ ಮೂಲಕ ಆಯ್ಕೆಯಾದೆ. ನನ್ನ ಹಾಡು ಕೇಳಿದ ಅವರು, ಕಲಿಸ್ತೀನಿ ಅಂದ್ರು. ಅಲ್ಲೇ ಕೆಲಸ ಶುರುಮಾಡಿದೆ. 1998 ರಲ್ಲಿ ವಿಜಯಪ್ರಕಾಶ್‌ ಪರಿಚಯ ಆಗಿದ್ದು ಅಲ್ಲೇ. ನಂತರ ಭಾರತೀಯ ಚಿತ್ರರಂಗದ ಯಶಸ್ವಿ ಸಂಗೀತ ನಿರ್ದೇಶಕ, ಗಾಯಕ, ಗೀತ ಸಾಹಿತಿ ರವೀಂದ್ರ ಜೈನ್‌ ಬಳಿ ಐದು ವರ್ಷ ಜೊತೆಗಿದ್ದು ಕೆಲಸವನ್ನೂ ಕಲಿತೆ. ಆ ಬಳಿಕ ಹಿಂದಿಯಲ್ಲಿ ಹಿಟ್‌ ಎನಿಸಿಕೊಂಡ “ಕಭೀ ಖುಷ್‌ ಕಭೀ ಗಮ್‌” ಚಿತ್ರದ ಸಂಗೀತ ನಿರ್ದೇಶಕ ಸಂದೇಶ್‌ ಶಾಂಡಿಲ್ಯ ಅವರು, ಹಾಡೊಂದರಲ್ಲಿ ಕೋರಸ್‌ ಹಾಡುವ ಅವಕಾಶ ಕೊಟ್ಟರು. ಜೊತೆಗೆ ಮೂರನೇ ಬಿಜಿಎಂನಲ್ಲಿ ವಿಷಲ್‌ ಹಾಕುವ ಅವಕಾಶವೂ ನನ್ನದಾಗಿತ್ತು.

ಗುರು ರವೀಂದ್ರ ಜೈನ್‌ ಜೊತೆ ವೀರ್

ಆ ಸಿನಿಮಾದಲ್ಲಿ ನನ್ನದೂ ಒಂದು ವಾಯ್ಸ್‌ ಇದೆ ಅನ್ನೋದೇ ಖುಷಿ. ಅದಾದ ಮೇಲೆ, ಹಿಂದಿಯ ಸುಮಾರು ಸಿನಿಮಾಗಳಲ್ಲಿ ಕೋರಸ್‌ ಹಾಡಿದ್ದೂ ಉಂಟು.‌ ಅನೇಕ ಹಿಂದಿ ಆಲ್ಬಂಗಳಲ್ಲೂ ಕೆಲಸ ಮಾಡಿದ್ದೇನೆ. ನನ್ನ ಗುರುಗಳಾದ ರವೀಂದ್ರ ಜೈನ್‌ ಜೊತೆ ಸಾಕಷ್ಟು ಸ್ಟೇಜ್‌ ಶೋ ಕೊಟ್ಟಿದ್ದೂ ಇದೆ. ಇವೆಲ್ಲದರ ಜೊತೆಯಲ್ಲಿ ನಾನು ಭೀಮ್‌ಸೇನ್‌ ಜೋಶಿ ಅವರ ಬಳಿ ಕೆಲಸ ಮಾಡುವ ಅವಕಾಶವೂ ಪಡೆದುಕೊಂಡೆ. ದೊಡ್ಡ ಲೆಜೆಂಡರಿ ಜೊತೆ ಇದ್ದೆ ಅನ್ನೋದು ಹೆಮ್ಮೆಯ ವಿಷಯ. ಕ್ಲಾಸಿಕಲ್‌ ಮತ್ತು ಸಿನಿಮಾ ಈ ಎರಡೂ ಕಡೆ ಕೆಲಸ ಮಾಡಿದ ಅನುಭವ ಅನನ್ಯ. ಬಾಲಿವುಡ್‌ನಲ್ಲೇ ಕೆಲಸ ಮಾಡಬೇಕು ಎಂಬ ಆಸೆ ಕಳೆದ ಐದಾರು ವರ್ಷಗಳಿಂದಲೂ ಇತ್ತು. ಅದಕ್ಕಾಗಿಯೇ ನಾನು ಮಹೇಶ್‌ ಭಟ್‌, ವಿಕ್ರಮ್‌ ಭಟ್‌, “ಹಮ್‌ ಆಪ್‌ಕೆ ಹೈ ಕೌನ್”‌ ನಿರ್ದೇಶಕ ಸೂರಜ್‌ ಬರ್ಜಾತ್ಯ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದೂ ಆಗಿತ್ತು. ಆದರೆ, ಮಾತುಕತೆ ನಡೆದಿತ್ತಾದರೂ ಕೆಲ ಕಾರಣಗಳಿಂದ ಸಾಧ್ಯವಾಗಿರಲಿಲ್ಲ. ಆ ಪ್ರಯತ್ನದಲ್ಲಿದ್ದ ನನಗೆ “ಶಕೀಲಾ” ಅಂಥದ್ದೊಂದು ಅವಕಾಶ ಮಾಡಿಕೊಟ್ಟಿದೆ” ಎಂದು ವಿವರ ಕೊಡುತ್ತಾರೆ ವೀರ್‌ ಸಮರ್ಥ್.‌‌

ನಿರ್ದೇಶಕ ಲಂಕೇಶ್‌ ಜೊತೆ ವೀರ್

ಮಜಾ ಕೊಟ್ಟ ಅವಕಾಶ..
ಈ ಪ್ರಯತ್ನದ ನಡುವೆಯೇ ಶಿವರಾಜಕುಮಾರ್‌ ಅಭಿನಯದ “ಮಾಸ್‌ ಲೀಡರ್‌” ಚಿತ್ರಕ್ಕೆ ಸಂಗೀತ ನೀಡಿದ್ದೆ. ಅದರಲ್ಲೊಂದು ಅರೇಬಿಕ್‌ ಶೈಲಿಯ ಸಂಗೀತ ಸ್ಪರ್ಶಿಸಿ ಹಾಡೊಂದನ್ನು ಮಾಡಿದ್ದೆ. ಆ ಹಾಡು ಹಿಟ್‌ ಆಗಿತ್ತು. ಜೊತೆಗೆ “ಮಜಾ ಟಾಕೀಸ್‌” ವೇದಿಕೆಯಲ್ಲಿ ಪ್ರಚಾರಕ್ಕಾಗಿ ಹೋಗಿದ್ದಾಗ, ಆ ಶೋನಲ್ಲಿದ್ದ ನಿರ್ದೇಶಕ ಇಂದ್ರಜಿತ್‌ ಲಂಕೇಶ್ ಅವರು, ವೇದಿಕೆ ಮೇಲೇರಿ ಗ್ರೂಪ್‌ ಫೋಟೋ ತೆಗೆಸಿಕೊಳ್ಳುವಾಗ, ಸಾಂಗ್‌ ಕುರಿತು ಮಾತಾಡಿದ್ದರು. ಚೆನ್ನಾಗಿ ಕಂಪೋಸ್‌ ಮಾಡಿದ್ದೀರಿ ಎಂಬ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆಗ ನನ್ನ‌ ಫೋನ್‌ ನಂಬರ್‌ ಪಡೆದಿದ್ದರು. ಕೆಲ ತಿಂಗಳ ಬಳಿಕ ನಿರ್ದೇಶಕ ಮೋಹನ್‌ಗೆ ಕಾಲ್‌ ಮಾಡಿದ ಇಂದ್ರಜಿತ್‌ ಲಂಕೇಶ್‌ ಅವರು, ವೀರ್‌ಸಮರ್ಥ್‌ ಅವರಿಗೆ ಕಾಲ್‌ ಮಾಡಲು ಹೇಳು ಎಂದಿದ್ದರು. ಆಗ ಮೋಹನ್‌ ಅವರ “ಡಬಲ್‌ ಎಂಜಿನ್‌” ಚಿತ್ರಕ್ಕೆ ನಾನು ಸಂಗೀತ ನೀಡುತ್ತಿದ್ದೆ. ಅಲ್ಲೇ ಜೊತೆಗಿದ್ದ ಮೋಹನ್‌, ವಿಷಯ ತಿಳಿಸಿದರು.‌

ಹೀರೋ ರಾಜು ಪಿಳೈ ಜೊತೆ

ಇಂದ್ರಜಿತ್‌ ಸ್ಟೈಲಿಶ್‌ ಸಿನ್ಮಾ ಮೇಕರ್

ನಾನು ಸಂಜೆ ಇಂದ್ರಜಿತ್‌ ಅವರಿಗೆ ಕಾಲ್‌ ಮಾಡಿ ಮಾತಾಡಿದೆ. ಇವತ್ತು ಸಿಕ್ಕು ಮಾತಾಡೋಣ ಅಂತ ಕೋರಮಂಗಲ ಬಳಿಯ ಹೋಟೇಲ್‌ವೊಂದಕ್ಕೆ ಆಹ್ವಾನಿಸಿದ್ದರು. ಹೊಸ ಕನ್ನಡ ಸಿನಿಮಾ ಮಾಡುತ್ತಿರಬಹುದೆಂದು ಭಾವಿಸಿ ಹೋದೆ. ಹೋದವನಿಗೆ ಒಂದು ಸರ್‌ಪ್ರೈಸ್‌ ಕಾದಿತ್ತು. ಹಿಂದಿ ಸಿನಿಮಾ ಮಾಡುತ್ತಿದ್ದೇನೆ. ಅದು “ಶಕೀಲಾ” ಬಯೋಗ್ರಫಿ. ನೀವೇ ಸಂಗೀತ ಕೊಡಬೇಕು ಅಂದರು. ನನ್ನೊಳಗಿದ್ದ ಆಸೆಗೂ ಜೀವ ಬಂತು. ಇಂದ್ರಜಿತ್‌ ಅವರ ಜೊತೆ ಕೆಲಸ ಮಾಡಿದೆ. ಅವರೊಬ್ಬ ಸ್ಟೈಲಿಶ್‌ ಸಿನಿಮಾ ಮೇಕರ್ ಅಷ್ಟೇ ಅಲ್ಲ, ಅವರೊಳಗೊಬ್ಬ ಸಂಗೀತ ಪ್ರೇಮಿಯೂ ಇದ್ದಾರೆ. ಸಂಗೀತದ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದ ಅವರು, ನನ್ನಿಂದ ಕೆಲಸ ತೆಗೆಸಿದರು. ಒಂದು ಅರೇಬಿಕ್‌ ಸಾಂಗ್‌ ಬಂತು. ಮೆಲೋಡಿ ಹಾಡು ಕೊಟ್ಟೆ. ಮತ್ತೊಂದು ಆಪ್ಷನ್‌ ಇಲ್ಲದೆ ಓಕೆ ಮಾಡಿದರು. ಅವರ ಟೇಸ್ಟ್‌ಗೆ, ಸಿನಿಮಾ ಕಥೆಯ ಕಲ್ಪನೆಗೆ ಸಂಗೀತ ಮಾಡಿದೆ. ಒಳ್ಳೆಯ ಹಾಡುಗಳು ಮೂಡಿಬಂದವು. ಹಿನ್ನೆಲೆ ಸಂಗೀತ ಕೂಡ ಅಷ್ಟೇ ಅದ್ಭುತವಾಗಿ ಮೂಡಲು ಕಾರಣ, ಮತ್ತದೇ ಇಂದ್ರಜಿತ್‌ ಲಂಕೇಶ್. ಚಿತ್ರದಲ್ಲಿ ಮೀಟ್‌ ಬ್ರದರ್ಸ್‌ ಕೂಡ ಒಂದು ಪ್ರಮೋಷನಲ್‌ ಸಾಂಗ್‌ ಮಾಡಿದ್ದಾರೆ.

ಗಾಯಕಿ ಪ್ರಕೃತಿ ಕಕ್ಕರ್‌ ಜೊತೆ

ಬಾಲಿವುಡ್‌ ಮಂದಿಯ ಮೆಚ್ಚುಗೆ ಸುಲಭವಲ್ಲ‌

ಸದ್ಯ ಈಗ ಸಿನಿಮಾದ ಹಾಡುಗಳ ತುಣುಕು ರಿಲೀಸ್‌ ಆಗಿದೆ. ಎಲ್ಲೆಡೆಯಿಂದ ಒಳ್ಳೆಯ ಮೆಚ್ಚುಗೆಯೂ ಸಿಕ್ಕಿದೆ. ಒಬ್ಬ ಸಂಗೀತ ನಿರ್ದೇಶಕನಿಗೆ ತಾನು ಮಾಡಿದ ಕೆಲಸಕ್ಕೆ ಮೆಚ್ಚುಗೆ ಸಿಕ್ಕರೆ ಅದು ದೊಡ್ಡ ಪ್ರಶಸ್ತಿ ಸಿಕ್ಕಂತೆ. ಅಲ್ಲದೆ, ಬಾಲಿವುಡ್‌ ಮಂದಿಯನ್ನು ಮೆಚ್ಚಿಸುವುದು ಸುಲಭದ ಮಾತಲ್ಲ. ಹಿಂದಿಯಲ್ಲಿ ವಿಶಾಲ್‌ ಮಿಶ್ರ ನನ್ನ ಸಾಂಗ್‌ ಹಾಡಿದ್ದು ವಿಶೇಷತೆಗಳಲ್ಲೊಂದು. ವಿಶಾಲ್‌ ಮಿಶ್ರ ಸಲ್ಮಾನ್‌ ಖಾನ್‌ ಅವರ ಅನೇಕ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ, ಹಾಡಿದ್ದಾರೆ. ನನ್ನ ಹಾಡನ್ನು ಯಾರಿಂದ ಹಾಡಿಸಬೇಕು ಎಂಬ ಯೋಚನೆ ಬಂತು. ಅದರಲ್ಲೂ ಕುಮಾರ್‌ ಅವರ ಎಲ್ಲಾ ಹಾಡಿಗೂ ಸಾಹಿತ್ಯವಿತ್ತು. ಕುಮಾರ್‌ ಅವರು ಬಾಲಿವುಡ್‌ನ ಲೀಡಿಂಗ್‌ ಗೀತ ಸಾಹಿತಿಯರ ಪೈಕಿ ಟಾಪ್‌ ಫೈವ್‌ನಲ್ಲಿದ್ದಾರೆ.

ವಿಶಾಲ್ ಮಿಶ್ರ ಜೊತೆ ರೆಕಾರ್ಡಿಂಗ್‌ ಟೈಮ್

ಅವರ ಒಳ್ಳೆಯ ಸಾಹಿತ್ಯಕ್ಕೆ ವಿಶಾಲ್‌ ಮಿಶ್ರ ಅವರ ವಾಯ್ಸ್‌ ಇದ್ದರೆ ಚೆನ್ನಾಗಿರುತ್ತೆ ಅಂತ ಯೋಚಿಸಿ ಅವರನ್ನು ಫೋನ್‌ನಲ್ಲಿ ಮಾತಾಡಿಸಿದೆ. ಸಾಂಗ್‌ ಹಾಡಬೇಕು ಅಂದಾಗ, ಟ್ಯೂನ್‌ ಕಳಿಸಿ ಅಂದ್ರು. ಕೇಳಿದ ಕೂಡಲೇ ಫೋನ್‌ ಮಾಡಿ, ಸಾಂಗ್‌ ಕಂಪೋಸ್‌ ಚೆನ್ನಾಗಿದೆ ಹಾಡ್ತೀನಿ ಅಂದ್ರು. ಆದರೆ, ತುಂಬಾ ದುಬಾರಿನಾ ಎಂಬ ಕಾರಣಕ್ಕೆ ಪೇಮೆಂಟ್‌ ಹೇಳಿ ಸರ್‌ ಅಂದೆ, ನೀವು ಎಷ್ಟಾದರೂ ಕೊಡಿ ತಕರಾರು ಇಲ್ಲ. ಸಾಂಗ್‌ ಚೆನ್ನಾಗಿದೆ ಹಾಡಬೇಕಷ್ಟೇ ಅಂದ್ರು. ಆಗ ಮುಂಬೈಗೆ ಹೋಗಿ “ಓ ಲಮ್ಹಾ..” ಸಾಂಗ್‌ ಹಾಡಿಸಿದೆ. ಹಾಡು ಹಾಡಿದ ಅವರು ಹಾಡಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸ್ವತಃ ಇಂದ್ರಜಿತ್‌ ಲಂಕೇಶ್‌ ಅವರೂ ನನ್ನ ಕೆಲಸ ಕೊಂಡಾಡಿ ತಬ್ಬಿಕೊಂಡರು.

ಗಾಯಕ ಕೇಶವ್‌ ಕುಮಾರ್

ಬಾಲಿವುಡ್‌ ಸಿನಿಮಾ ಕೆಲಸ ತೃಪ್ತಿ ಕೊಡ್ತು ಎಂಬ ಖುಷಿ ನನ್ನದಾಯ್ತು. ಇನ್ನು, ಕನ್ನಡದಲ್ಲಿ “ಹವಾಮಾನಕೆ ಏನಾಗಿದೆ…” ಎಂಬ ಅದೇ ರಾಗಕ್ಕೆ ಜಯಂತ್‌ ಕಾಯ್ಕಿಣಿ ಅವರು ಹಾಡು ಬರೆದಿದ್ದಾರೆ. ಆ ಹಾಡನ್ನು ಕೇಶವ ಕುಮಾರ್‌ ಹಾಡಿದ್ದಾರೆ. ಕನ್ನಡದ ಈ ಹುಡುಗ ಮುಂಬೈನಲ್ಲಿದ್ದಾರೆ. ಈ ಹಾಡು ಈಗಾಗಲೇ ಬಿಡುಗಡೆಯಾಗಿದ್ದು, ಒಳ್ಳೆಯ ಮೆಚ್ಚುಗೆ ಪಡೆದುಕೊಳ್ಳುತ್ತಿದೆ ಎಂದು ಹೇಳುವ ವೀರ್‌ ಸಮರ್ಥ್‌, “ಶಕೀಲಾʼ ಬಗ್ಗೆ ದೊಡ್ಡ ನಿರೀಕ್ಷೆ ಇದೆ. ಸಾಕಷ್ಟು ಕುತೂಹಲ ಕೆರಳಿಸಿರುವ ಸಿನಿಮಾ ಅದು ಅನ್ನೋದು ಅವರ ಮಾತು.

 

error: Content is protected !!