Categories
ಸಿನಿ ಸುದ್ದಿ

ನಾವು ಭಾಷಾಭಿಮಾನಿಗಳಲ್ಲ, ಯಾವುದೇ ಭಾಷಿಗರು ಸಿಕ್ಕರೂ ಅವರ ಭಾಷೆ ಮಾತನಾಡುವ ಜನ ನಾವು – ನಟ ದರ್ಶನ್‌ ಹೀಗೆಲ್ಲ ಸಿಟ್ಟಾಗಿದ್ದು ಯಾಕೆ ?

ʼರಾಬರ್ಟ್ʼ‌  ಚಿತ್ರದ ರಿಲೀಸ್‌ ವಿಚಾರದಲ್ಲಿ ಗರಂ ಆದ ದರ್ಶನ್‌
 

ನಟ ದರ್ಶನ್‌ ಸಿಟ್ಟಾಗಿದ್ದಾರೆ. ಅದರಲ್ಲೂ ಕನ್ನಡಿಗರ ಭಾಷಾಭಿಮಾನದ ಕುರಿತು ಖಾರವಾಗಿ ಮಾತನಾಡಿದ್ದಾರೆ. ” ನಾವು ಭಾಷಾಭಿಮಾನಿಗಳಲ್ಲ, ಯಾವುದೇ ಭಾಷಿಗರು ಸಿಕ್ಕರೂ, ಅವರ ಭಾಷೆಯಲ್ಲಿ ಮಾತನಾಡುವ ಜನ ನಾವುʼ ಅಂತ ಕಿಡಿಕಾರಿದ್ದಾರೆ. ಅವರ ಈ ಸಿಟ್ಟಿಗೆ ಕಾರಣ” ರಾಬರ್ಟ್‌ʼ ಚಿತ್ರದ ಬಿಡುಗಡೆಗೆ ತೆಲುಗು ಚಿತ್ರರಂಗ ಅಡ್ಡಿಯಾಗಿದ್ದು. ಈ ಸಂಬಂಧ ಶುಕ್ರವಾರ ಬೆಳಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕನ್ನಡಿಗರು ನಿಜ ಭಾಷಾಭಿಮಾನ ಹೊಂದಿದ್ದರೆ ಇದೆಲ್ಲ ಆಗುತ್ತಿರಲಿಲ್ಲ. ಅದರಿಂದಲೇ ಇದೆಲ್ಲ ಸಮಸ್ಯೆ ಆಗುತ್ತಿದೆ ಅನ್ನೋದು ಅವರ ವಾದ.
ಹಾಗಂತ ಇದು ಅವರ “ರಾಬರ್ಟ್‌ʼ ಚಿತ್ರಕ್ಕೆ ಮಾತ್ರ ಸಂಬಂಧಿಸಿದ್ದೇ ? ” ಖಂಡಿತಾ ಹಾಗಲ್ಲ, ನಾನು ಕೇವಲ ನನ್ನ ಸಿನಿಮಾದ ವಿಚಾರಕ್ಕೆ ಮಾತ್ರ ಮಾತನಾಡುತ್ತಿಲ್ಲ. ಇಲ್ಲಿ ಸಾಕಷ್ಟು ಮಂದಿ ಹೊಸಬರು ಬಂದು ಸಿನಿಮಾ ಮಾಡುತ್ತಿದ್ದಾರೆ. ಅವರು ಒಂದು ಸಿನಿಮಾ ಮಾಡುವಾಗ ಸಾಕಷ್ಟು ಕಷ್ಟಗಳಿವೆ. ಅದನ್ನೆಲ್ಲ ಕಷ್ಟಪಟ್ಟು ಎದುರಿಸಿ, ಅವರು ಒಂದು ಸಿನಿಮಾ ಮಾಡಿ ಹೊರ ತರುವಾಗ ಇಂತಹ ಸಮಸ್ಯೆಗಳಾದರೆ ಅವರ ಗತಿಯೇನು ಎನ್ನುವುದೇ ನನ್ನ ಪ್ರಶ್ನೆ ಎನ್ನುವ ಉತ್ತರ ದರ್ಶನ್‌ ಅವರದ್ದು.

ಇನ್ನು ದರ್ಶನ್‌ ಅವರೇ ಈ ಸ್ವ ಇಚ್ಚೆಯಿಂದ ಈ ವಿಚಾರ ಪ್ರಸ್ತಾಪಿಸಿದರಾ ಅಥವಾ ಚಿತ್ರತಂಡದ ಪರವಾಗಿ ಮತನಾಡಿದರಾ ಎನ್ನುವ ಮಾಧ್ಯಮದ ಪ್ರಶ್ನೆಗೂ ಅವರು ನೀಡಿದ್ದು ಖಡಕ್‌ ಉತ್ತರವೇ. ರಾಬರ್ಟ್‌ ಕುರಿತು ನಾನಿಲ್ಲಿ ಮಾತನಾಡುತ್ತೇನೆಂದರೆ, ಚಿತ್ರ ತಂಡದಲಿದ್ದೇ ಅಲ್ವಾ? ನಿರ್ಮಾಪಕರು ಅನ್ನದಾತರು. ಅವರ ಪರವಾಗಿ ನಾನು ಕೊನೆವರೆಗೂ ನಿಲ್ಲಬೇಕು. ಅದೇ ಕಾರಣಕ್ಕೆ ನಾನಿಲ್ಲಿ ಮಾತನಾಡುತ್ತಿದ್ದೇನೆ ಅಂತ ಉತ್ತರಿಸಿದರು ದರ್ಶನ್.‌

 

Categories
ಸಿನಿ ಸುದ್ದಿ

ಟಾಲಿವುಡ್ ನಲ್ಲಿ ರಾಬರ್ಟ್‌ ರಿಲೀಸ್‌ ಗೆ ವಿರೋಧ , ದರ್ಶನ್‌ ಆಕ್ರೋಶಕ್ಕೆ ಫಿಲ್ಮ್‌ ಚೇಂಬರ್‌ ತತ್ತರ

ಭಾನುವಾರವೇ ಸೌತ್‌ ಸಿನಿಮಾ ಇಂಡಸ್ಟ್ರಿ ವಾಣಿಜ್ಯ ಮಂಡಳಿ ಸಭೆ – ಅಧ್ಯಕ್ಷ ಜೈರಾಜ್‌ ಭರವಸೆ


ಬಹುನಿರೀಕ್ಷಿತ ” ರಾಬರ್ಟ್‌ʼ ಚಿತ್ರದ ಬಿಡುಗಡೆಗೆ ತೆಲಗು ಚಿತ್ರರಂಗ ಅಡ್ಡಿಯಾಗಿರುವ ವಿಚಾರ ಈಗ ದೊಡ್ಡ ಮಟ್ಟಕ್ಕೆ ಸದ್ದು ಮಾಡುತ್ತಿದೆ. ತೆಲುಗು ಚಿತ್ರರಂಗದ ಹೊಸ ನೀತಿ ವಿರುದ್ಧ ದರ್ಶನ್‌ ಗುಟುರು ಹಾಕಿದ್ದು, ಸೌತ್‌ ಸಿನಿಮಾ ಇಂಡಸ್ಟ್ರಿಯಲ್ಲೇ ತಲ್ಲಣ ಹುಟ್ಟಿದೆ. ಇದೀಗ ಕರ್ನಾಟಕ ವಾಣಿಜ್ಯ ಮಂಡಳಿ ಕೂಡ ಎಚ್ಚೆತ್ತುಕೊಂಡಿದೆ. ಭಾನುವಾರ ಈ ಸಂಬಂಧ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಸಭೆ ಸೇರುವುದು ಗ್ಯಾರಂಟಿ ಆಗಿದೆ. ಅಲ್ಲಿಯೇ “ರಾಬರ್ಟ್‌‌ʼ ಚಿತ್ರದ ಬಿಡುಗಡೆ ಬಿಕ್ಕಟ್ಟು ಬಗೆಹರಿಸುವುದಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆಧ್ಯಕ್ಷ ಜೈ ರಾಜ್‌ ಭರವಸೆ ಕೊಟ್ಟಿದ್ದಾರೆ.

ʼರಾಬರ್ಟ್‌ʼ ಚಿತ್ರದ ಬಿಡುಗಡೆಗೆ ತೆಲುಗು ಚಿತ್ರರಂಗ ಅಡ್ಡಿಯಾಗಿದ್ದರ ವಿರುದ್ಧ ಶುಕ್ರವಾರ ಬೆಳಗ್ಗೆ ನಟ ದರ್ಶನ್‌ , ಕರ್ನಾಟಕ ವಾಣಿಜ್ಯ ಮಂಡಳಿ ಭೇಟಿ ನೀಡಿ ದೂರು ಸಲ್ಲಿಸಿದರು. ಆ ನಂತರ ವಾಣಿಜ್ಯ ಮಂಡಳಿ ಆಧ್ಯಕ್ಷ ಜೈರಾಜ್‌ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು. ರಾಬರ್ಟ್‌ ಚಿತ್ರದ ಬಿಡುಗಡೆ ತೆಲುಗಿನಲ್ಲಿ ವಿರೋಧ ಅಗಿಲ್ಲ. ಆದರೆ ಮಾರ್ಚ್‌ 11 ರಂದೇ ತೆಲುಗಿನಲ್ಲೂ ಒಂದುಅದ್ದೂರಿ ವೆಚ್ಚದ ಚಿತ್ರ ತೆರೆ ಕಾಣುತ್ತಿದೆ. ಹಾಗಾಗಿ ಒಂದಷ್ಟು ಗೊಂದಲ ನಿರ್ಮಾಣವಾಗಿದೆ. ಭಾನುವಾರವೇ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಸಭೆ ಕರೆಯುವಂತೆ ಕೋರಲಾಗುವುದು. ಅಲ್ಲಿಯೇ ಈ ಸಮಸ್ಯೆ ಬಗೆಹರಿಸುವುದಾಗಿ ‘ರಾಬರ್ಟ್’‌ ಚಿತ್ರ ತಂಡಕ್ಕೆ ಭರವಸೆ ಕೊಟ್ಟರು.

ತೆಲುಗು ಚಿತ್ರರಂಗದವರ ಸ್ವಪಕ್ಷಪಾತ ನೀತಿ ಬಗ್ಗೆ ಗರಂ ಆಗಿದ್ದ ನಟ, ಇದೆಲ್ಲ ನಡೆಯೋದಿಲ್ಲ. ಅವರ ಸಿನಿಮಾಗಳಿಗೆ ಮುಂದೆ ಕನ್ನಡದಲ್ಲಿ ಸಮಸ್ಯೆಯಾಲಿದೆ ಅಂತ ಗುಟುರು ಹಾಕಿದ್ದರು. ಅಷ್ಟೇ ಅಲ್ಲ, ಶುಕ್ರವಾರ ಬೆಳಗ್ಗೆ ತೆಲುಗು ಚಿತ್ರರಂಗದ ಈ ಇಬ್ಬಗೆ ನೀತಿ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಸಲ್ಲಿಸಿದರು. ಕರ್ನಾಟಕದಲ್ಲಿ ತೆಲುಗು ಸೇರಿದಂತೆ ಬೇರೆ ಭಾಷೆಯ ಸಿನಿಮಾಗಳು ಬಿಡುಗಡೆ ಆಗಲು ಯಾವುದೇ ನಿಯಮಗಳು, ತಕರಾರುಗಳು ಇಲ್ಲ. ಆದರೆ ಕನ್ನಡ ಸಿನಿಮಾಗಳು ತೆಲುಗು ರಾಜ್ಯಗಳಲ್ಲಿ ಬಿಡುಗಡೆ ಮಾಡಲು ಕೆಲವು ಅಲಿಖಿತ ನಿಯಮಗಳನ್ನು ವಿಧಿಸಿರುವುದು ಎಷ್ಟು ಸರಿ ಎಂಬುದು ದರ್ಶನ್ ಅಸಮಾಧಾನ ಹೊರ ಹಾಕಿದ್ದರು.

Categories
ಸಿನಿ ಸುದ್ದಿ

ಶುಗರ್ ಫ್ಯಾಕ್ಟರಿ ಶುರು ಮಾಡಿದ ಡಾರ್ಲಿಂಗ್‌ ಕೃಷ್ಣ

ಕೃಷ್ಣನಿಗೆ ಮೂವರು ನಾಯಕಿಯರು!

“ಲವ್‌ ಮಾಕ್ಟೇಲ್‌” ಖ್ಯಾತಿಯ ಕೃಷ್ಣ ಈಗ “ಶುಗರ್‌ ಫ್ಯಾಕ್ಟರಿ” ಶುರುಮಾಡಿದ್ದಾರೆ..!

ಅರೇ, ಹೀಗಂದಾಕ್ಷಣ, ಅವರು ಯಾಕೆ ಶುಗರ್‌ ಫ್ಯಾಕ್ಟರಿಗೆ ಕೈ ಹಾಕಿದರು ಎಂಬ ಪ್ರಶ್ನೆ ಸಹಜ. ಆದರೆ, ಇದು ಬಿಝಿನೆಸ್‌ ಮಾಡುವ ಫ್ಯಾಕ್ಟರಿ ಅಲ್ಲ, ಬದಲಾಗಿ ಸಿನಿಮಾದ ಹೆಸರು. ಈ ಹಿಂದೆ ಕೃಷ್ಣ ಅವರು “ಶುಗರ್‌ ಫ್ಯಾಕ್ಟರಿ” ಚಿತ್ರ ಮಾಡಲಿದ್ದಾರೆ ಅಂತ ಸುದ್ದಿಯಾಗಿತ್ತು. ನಟಿ ಅಮೂಲ್ಯ ಅವರ ಸಹೋದರ ನಿರ್ದೇಶಕ ದೀಪಕ್‌ ಅರಸ್‌ ಅವರ ನಿರ್ದೇಶನದ ಈ ಚಿತ್ರಕ್ಕೆ ಗುರುವಾರ ಮಹಾಲಕ್ಷ್ಮೀ ಲೇಔಟ್‌ನಲ್ಲಿರುವ ಪಂಚಮುಖಿ ಗಣಪತಿ ದೇವಾಲಯದಲ್ಲಿ ಮುಹೂರ್ತ ನೆರವೇರಿದೆ.

ನಿರ್ದೇಶಕ ತರುಣ್ ಸುಧೀರ್ ಕಿಶೋರ್ ಅವರ ಕ್ಲಾಪ್‌ ಮಾಡಿದರೆ, ‌ಜಿ.ಹೆಚ್.ರಾಮಚಂದ್ರ ಅವರು‌ ಕ್ಯಾಮೆರಾ ಚಾಲನೆ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭಕೋರಿದ್ದಾರೆ.
ನಟಿ ಅಮೂಲ್ಯ, ಜಗದೀಶ್, “ಲಾಸ್ಟ್ ಬಸ್” ಖ್ಯಾತಿಯ ಅರವಿಂದ್, ಮಯೂರ್ ಪಟೇಲ್ ಸೇರಿದಂತೆ ಹಲವರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದ್ದಾರೆ.
ಶುಕ್ರವಾರದಿಂದಲೇ ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ಶುರುವಾಗಿದೆ.

ಚಿತ್ರದಲ್ಲಿ ಸೊನಾಲ್‌ ಮಾಂತೆರೊ, ಅದ್ವಿತಿ ಶೆಟ್ಟಿ, ಗ್ಲಾಮರ್ ಗೊಂಬೆ ಶಿಲ್ಪಾ ಶೆಟ್ಟಿ ‌ನಾಯಕಿಯರಾಗಿ ನಟಿಸುತ್ತಿದ್ದಾರೆ. ಉಳಿದಂತೆ ಚಿತ್ರದಲ್ಲಿ ರಂಗಾಯಣ ರಘು, ಗೋವಿಂದೇಗೌಡ, ಸೂರಜ್ ಕುಮಾರ್, ಮಹಾಂತೇಶ್ (ಹೊಸ ಪರಿಚಯ), ಪವನ್ ಎಸ್.ನಾರಾಯಣ್, ಬ್ರೋ ಗೌಡ, ರಾಯಲ್ ರವಿ, ಅವೀಕ್ಷ, ನೀತೂರಾಯ್, ಡಿ.ಜಿ.ವಿಂಪಲ್ ಇತರರು ನಟಿಸುತ್ತಿದ್ದಾರೆ. ಇನ್ನು, ಈ ಚಿತ್ರ ಬಾಲಮಣಿ ಪ್ರೊಡಕ್ಷನ್ಸ್ ಬ್ಯಾನರ್‌ ನಲ್ಲಿ ತಯಾರಾಗುತ್ತಿದ್ದು, ಗಿರೀಶ್.ಆರ್ ನಿರ್ಮಾಣ ಮಾಡುತ್ತಿದ್ದಾರೆ.

ಚಿತ್ರದ ಏಳು ಹಾಡುಗಳಿಗೆ ಚೇತನ್ ಕುಮಾರ್, ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ, ಅರಸು ಅಂತಾರೆ, ಚಂದನ್ ಶೆಟ್ಟಿ, ರಾಘವೇಂದ್ರ ಕಾಮತ್ ಸಾಹಿತ್ಯ ಬರೆಯುತ್ತಿದ್ದಾರೆ. ಕಬೀರ್ ರಫಿ ಸಂಗೀತ ನಿರ್ದೇಶನವಿದೆ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣವಿದೆ. ಕೆ.ಎಂ.ಪ್ರಕಾಶ್ ಸಂಕಲನ ಮಾಡಿದರೆ, ಅರ್ಜುನ್ ಸಾಹಸ ನಿರ್ದೇಶನ ಹಾಗೂ ‌ಧನಂಜಯ್ ಅವರ ನೃತ್ಯ ನಿರ್ದೇಶನವಿದೆ. ಇನ್ನು, ಚೇತನ್ ಕುಮಾರ್ ಹಾಗೂ ಯೋಗಾನಂದ್ ಮುದ್ದಾನ್ ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿದ್ದಾರೆ.

Categories
ಸಿನಿ ಸುದ್ದಿ

ಬರಗೂರು ರಾಮಚಂದ್ರಪ್ಪ ಅವರ ಅಮೃತಮತಿಗೆ ಅತ್ಯುತ್ತಮ ವಿದೇಶಿ ಭಾಷಾ ಚಿತ್ರ ಪ್ರಶಸ್ತಿ

ಇದು ಕಿಶೋರ್-ಹರಿಪ್ರಿಯಾ ಜೋಡಿ ಸಿನಿಮಾ

ನಿರ್ದೇಶಕ ಬರಗೂರು ರಾಮಚಂದ್ರಪ್ಪ ಅವರು ಈ ಹಿಂದೆ “ಅಮೃತಮತಿ” ಸಿನಿಮಾ ಮಾಡಿದ್ದು ಎಲ್ಲರಿಗೂ ಗೊತ್ತಿದೆ. ಆ ಸಿನಿಮಾಗೆ ಒಂದಷ್ಟು ಪ್ರಶಸ್ತಿಗಳು ಲಭಿಸುತ್ತವೆ ಎಂಬ ಮಾತುಗಳೂ ಕೂಡ ಕೇಳಿಬಂದಿದ್ದವು. ಈಗ ಆ ಮಾತು ನಿಜವಾಗಿದೆ.

ಹೌದು, “ಅಮೃತಮತಿ” ಚಿತ್ರಕ್ಕೆ ಅಮೆರಿಕದ ಅಟ್ಲಾಂಟದಲ್ಲಿ ನಡೆದ ‘ಅಟ್ಲಾಂಟ ಪ್ರಶಸ್ತಿ ಅರ್ಹತಾ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ’ದಲ್ಲಿ ಅತ್ಯುತ್ತಮ ವಿದೇಶಿ ಭಾಷಾ ಚಿತ್ರ ಪ್ರಶಸ್ತಿ ಪಡೆದಿದೆ. “ಅಮೃತಮತಿ” ಈಗಾಗಲೇ 5 ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿದೆ.

ನೋಯ್ಡಾದ 4ನೇ ಭಾರತೀಯ ವಿಶ್ವ ಚಲನಚಿತ್ರೋತ್ಸವದ ಸ್ಪರ್ಧಾ ವಿಭಾಗದ ಪ್ರದರ್ಶನಕ್ಕೆ ಆಯ್ಕೆಯಾಗಿತ್ತು. ಈ ಚಲನ ಚಿತ್ರೋತ್ಸವದಲ್ಲಿ “ಅಮೃತಮತಿ” ಪಾತ್ರ ನಿರ್ವಹಿಸಿದ್ದ ಹರಿಪ್ರಿಯ ಅವರು ಶ್ರೇಷ್ಠನಟಿ ಪ್ರಶಸ್ತಿಗೆ ಭಾಜನರಾಗಿದ್ದರು. “ಅಮೃತಮತಿ” ಸಿನಿಮಾ 13ನೇ ಶತಮಾನದ ಜನ್ನ ಕವಿಯ ಯಶೋಧರ ಚರಿತ್ರೆಯನ್ನು ಆಧರಿಸಿ ಮಾಡಲಾಗಿದೆ. ಇನ್ನು ಚಿತ್ರದ ಯಶೋಧರನ ಪಾತ್ರದಲ್ಲಿ ಬಹುಭಾಷಾ ನಟ ಕಿಶೋರ್ ಕಾಣಿಸಿಕೊಂಡಿದ್ದಾರೆ.

ಇವರೊಂದಿಗೆ ಹಿರಿಯ ನಟರಾದ ಸುಂದರ್ ರಾಜ್, ಪ್ರಮೀಳಾ ಜೋಷಾಯ್, ತಿಲಕ್, ಸುಪ್ರಿಯಾ ರಾವ್, ಸೇರಿದಂತೆ ಅನೇಕರು ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಶಮಿತಾ ಮಲ್ನಾಡ್ ಸಂಗೀತ ನೀಡಿದ್ದಾರೆ. ಮಾರ್ಚ್ ಮೊದಲ ವಾರದಲ್ಲಿ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಈ ಚಿತ್ರ ಪ್ರದರ್ಶನಗೊಳ್ಳುವ ಸಾಧ್ಯತೆ ಇದೆ. ಮುಂಬೈ ಮೂಲದ ಸಿಎಆರ್ ಯು ಎಂಟರ್ ಪ್ರೈಸಸ್ ಸಂಸ್ಥೆ ಈಚಿತ್ರದ ಪ್ರದರ್ಶನದ ಹಕ್ಕು ಪಡೆದಿದೆ. ಚಿತ್ರಮಂದಿರ ಮಾತ್ರವಲ್ಲದೆ ಈ ಸಿನಿಮಾ ಓಟಿಟಿಯಲ್ಲೂ ರಿಲೀಸ್ ಆಗಲಿದೆ ಎನ್ನಲಾಗಿದೆ.

 

Categories
ಸಿನಿ ಸುದ್ದಿ

ತೆಲುಗು ಇಂಡಸ್ಟ್ರಿ ವಿರುದ್ಧ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗರಂ

ರಾಬರ್ಟ್ ಬಿಡುಗಡೆಗೆ ಟಾಲಿವುಡ್ ಅಡ್ಡಿ

ಫಿಲ್ಮ್ ಚೇಂಬರ್ ಗೆ ದೂರಲು ದಚ್ಚು ಸಜ್ಜು

ಎಲ್ಲರಿಗೂ ಗೊತ್ತಿರುವಂತೆ ದರ್ಶನ್ ಅಭಿನಯದ “ರಾಬರ್ಟ್” ಮಾರ್ಚ್ 11ಕ್ಕೆ ಬಿಡುಗಡೆ ದಿನಾಂಕವನ್ನು ಘೋಷಿಸಿದೆ.
ಈ ಹಿಂದೆ ಚಿತ್ರತಂಡ ಹೇಳಿದಂತೆ “ರಾಬರ್ಟ್” ಕನ್ನಡ ಹಾಗೂ ತೆಲುಗಿನಲ್ಲಿ ರಿಲೀಸ್ ಮಾಡುವ ಕುರಿತು ಘೋಷಣೆ‌ ಮಾಡಿತ್ತು. ಆದರೆ, ಇದೀಗ ತೆಲುಗಿನ ಮಂದಿ “ರಾಬರ್ಟ್” ಬಿಡುಗಡೆಗೆ ಅಡ್ಡಿಯಾಗಿದ್ದಾರೆ.

ಹೌದು, ಟಾಲಿವುಡ್ ನಲ್ಲಿ ರಿಲೀಸ್ ಮಾಡುವುದಕ್ಕೆ ಅಲ್ಲಿನ ಸಿನಿಮಾ ಮಂದಿ ಬಿಡುತ್ತಿಲ್ಲ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ದರ್ಶನ್ ತೆಲುಗು ಸಿನಿಮಾರಂಗದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಡಬ್ಬಿಂಗ್ ಸಿನಿಮಾಗೆ ಕರ್ನಾಟಕದಲ್ಲಿ ಅನುಮತಿ ಸಿಕ್ಕಿದೆ. ತೆಲುಗು ಸಿನಿಮಾಗಳು ಸಹ ಒಂದರ‌ ಮೇಲೊಂದರಂತೆ ಬಿಡುಗಡೆಯಾಗುತ್ತಿವೆ. ಹಾಗೆ ನೋಡಿದರೆ ಇಲ್ಲಿ ಕನ್ನಡ ಸಿನಿಮಾಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲೇ ತೆಲುಗು ಚಿತ್ರಗಳೇ ಹೆಚ್ಚಾಗಿ ರಿಲೀಸ್ ಆಗುತ್ತಿವೆ. ಈ ಮೂಲಕ ಕನ್ನಡ ಚಿತ್ರಮಂದಿರಗಳನ್ನೂ ಆವರಿಸುತ್ತಿವೆ. ಆದರೆ ಕನ್ನಡದಿಂದ ತೆಲುಗಿಗೆ ಡಬ್ ಆಗಿರುವಂತಹ, “ರಾಬರ್ಟ್” ಚಿತ್ರದ ಬಿಡುಗಡೆಗೆ ತೆಲುಗಿನ ಸಿನಿಮಾ‌ ಮಂದಿ ಹಾಗೊಂದು ಕ್ಯಾತೆ ತೆಗೆಯುತ್ತಿದ್ದಾರೆ.


ತೆಲುಗು ಸಿನಿಮಾರಂಗದ ಜನರ ಈ‌ ನಡವಳಿಕೆಗೆ ದರ್ಶನ್ ಬೇಸರಗೊಂಡಿದ್ದಾರೆ. ಅಷ್ಟೇ ಅಲ್ಲ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಲು ನಿರ್ಧರಿಸಿದ್ದಾರೆ.
“ನಮ್ಮ ಸಿನಿಮಾ ಅಲ್ಲಿ ರಿಲೀಸ್ ಮಾಡೋಕೆ ಅವಕಾಶ ಇಲ್ಲ ಅಂದಮೇಲೆ, ಅವರ ಸಿನಿಮಾನೂ ಇಲ್ಲಿ ರಿಲೀಸ್ ಆಗಬಾರದು” ಎಂಬ ವಿಷಯ ಇಟ್ಟುಕೊಂಡು ದೂರು ನೀಡಲು ರೆಡಿಯಾಗಿದ್ದಾರೆ.

 

Categories
ಸಿನಿ ಸುದ್ದಿ

ಆರ್ಮುಗಂ ರವಿಶಂಕರ್‌ ಪುತ್ರನ ರಂಗಪ್ರವೇಶ,ಆಡ್‌ ಶೂಟ್‌ ಮೂಲಕ ಈಗ ಕಲರ್ ಫುಲ್‌ ಜಗತ್ತಿಗೆ ಎಂಟ್ರಿ

ಆರ್ಮುಗಂ ಖ್ಯಾತಿಯ ಖಳ ನಟ ರವಿಶಂಕರ್‌ ಪುತ್ರ ಅದ್ವೈತ್‌ ಇಷ್ಟರಲ್ಲಿಯೇ ಹೀರೋ ಬೆಳ್ಳಿತೆರೆಗೆ ಎಂಟ್ರಿ ಆಗುವುದು ಗ್ಯಾರಂಟಿ ಆಗಿದೆ. ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ 2020 ರಲ್ಲೆ ಅದ್ವೈತ್ಹೀರೋ ಆಗಿ ಸ್ಯಾಂಡಲ್ ವುಡ್‌ಗೆ ಕಾಲಿಡಬೇಕಿತ್ತು. ಆದರೆ ಕೊರೋನಾ ಎನ್ನುವ ಮಹಾ ಮಾರಿ ಅದ್ವೈತ್‌ ಅವರ ಬೆಳ್ಳಿತೆರೆ ಪ್ರವೇಶಕ್ಕೂ ಅಡ್ಡಿ ಉಂಟು ಮಾಡಿತು. ಕೊರೋನಾ ಆತಂಕ ಒಂದಷ್ಟು ಕಮ್ಮಿ ಆಗಿ ಚಿತ್ರೋದ್ಯಮದ ಚಟುವಟಿಕೆಗಳು ಗರಿಗೆದರಿಕೊಂಡ ಬೆನ್ನಲೇ ಅದ್ವೈತ್‌ ಬೆಳ್ಳಿತೆರೆ ಪ್ರವೇಶದ ಸಿದ್ಧತೆಗೆ ಚಾಲನೆ ಸಿಕ್ಕಿದೆ.

ಮಾತೃ ಭಾಷೆ ತೆಲುಗು ಆಗಿದ್ದರೂ, ಬದುಕು ಕೊಟ್ಟ ಕನ್ನಡದ ಮೂಲಕವೇ ಪುತ್ರ ನಟನಾಗಿ ಪರಿಚಯವಾಗಬೇಕೆನ್ನುವುದು ನಟ ರವಿಶಂಕರ್‌ ಅವರ ಆಸೆ. ಅದಕ್ಕೆ ಪೂರಕ ಎಂಬಂತೆ ಅದ್ವೈತ್‌ ರಂಗ ಪ್ರವೇಶ ಆರಂಭವಾಗಿದೆ. ಅವರ ದೊಡ್ಡಪ್ಪ ಹಾಗೂ ಹೆಸರಾಂತ ನಟ ಸಾಯಿಕುಮಾರ್‌ ಅವರ ಪುತ್ರಿ ಡಾ.ಜ್ಯೋತಿರ್ಮಯಿ ಹಾಗೂ ಕೃಷ್ಣ ಪಲ್ಗುಣ ದಂಪತಿ ಒಡೆತನದ ಕ್ಸೋಬು ಫುಡ್ಸ್‌ ಮತ್ತು ಬೆವರೇಜಸ್‌ ಸಂಸ್ಥೆ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಫುಡ್‌ ಸ್ಟೆಪ್ಸ್‌ ಮಕ್ಕಳ ರುಚಿಕರ ಆಹಾರ ಪದಾರ್ಥದ ಪ್ರಚಾರಕ್ಕೆ ಆಡ್‌ ಶೂಟ್‌ ಮಾಡಿದ್ದೇ ಅದ್ವೈತ್.‌ ಇದು ಅವರ ಮೊದಲ ಕೊಡುಗೆ. ಇದು ತುಂಬಾ ಗುಣಮಟ್ಟ ಹಾಗೂ ಆಕರ್ಷಣೀಯವಾಗಿ ಮೂಡಿ ಬಂದಿದೆ.

ಪುತ್ರನ ಈ ಕೆಲಸದ ಬಗ್ಗೆ ಮಾತನಾಡುವ ನಟ ಆರ್ಮುಗಂ ಖ್ಯಾತಿಯ ರವಿಶಂಕರ್‌, ಇದು ಆತನ ರಂಗ ಪ್ರವೇಶ. ನಮ್ಮ ಫ್ಯಾಮೀಲಿಯೇ ಬಣ್ಣದ ಜಗತ್ತಿನಲ್ಲಿರುವುದರಿಂದ ಆತನಿಗೆ ನಟ ಆಗ್ಬೇಕು ಅನ್ನೋದಿದೆ. ಅದಕ್ಕಂತಲೇ ಅಮೆರಿಕದ ನ್ಯೂಯಾರ್ಕ್‌ ನ ಪ್ರತಿಷ್ಟಿತ ಆಕ್ಟಿಂಗ್‌ ಸ್ಕೂಲ್‌ ನಲ್ಲಿ ಮೂರು ವರ್ಷ ಆಕ್ಟಿಂಗ್‌ ಟ್ರೈನಿಂಗ್‌ ಮುಗಿಸಿಕೊಂಡು ಬಂದಿದ್ದಾನೆ. ಇದು ಆತನ ಆಸಕ್ತಿಯ ಕ್ಷೇತ್ರ. ನಮ್ಮ ಒತ್ತಾಯವೇನಿಲ್ಲ. ಆಸಕ್ತಿ ಇದ್ದ ಕ್ಷೇತ್ರದಲ್ಲೇ ಆತನೂ ಇರಲಿ ಅನ್ನೋದು ನಮ್ಮಾಸೆ. ಸದ್ಯಕ್ಕೆ ಅದಕ್ಕೆ ನಮ್ಮಣ್ಣ , ಮತ್ತು ಮಗಳು ಹಾಗೂ ಅಳಿಯ ಅದಕ್ಕೊಂದು ಅವಕಾಶ ಕೊಟ್ಟಿದ್ದಾರೆ. ಮುಂದಿನದು ಬೆಳ್ಳಿ ತೆರೆ ಪ್ರವೇಶʼ ಎನ್ನುತ್ತಾರೆ.

ರವಿಶಂಕರ್‌ ಅವರ ಹಾಗೆಯೇ ಅವರ ಪುತ್ರ ಅದ್ವೈತ್‌ ಕೂಡ ಹ್ಯಾಂಡ್‌ ಸಮ್‌ ಆಗಿದ್ದಾರೆ. ಹೆಚ್ಚು ಕಡಿಮೆ 6 ಅಡಿ ಕಟೌಟ್.‌ ನಟನೆ, ಡಾನ್ಸ್‌ ಸೇರಿದಂತೆ ಸಿನಿಮಾಕ್ಕೆ ಬೇಕಾದ ಎಲ್ಲಾ ಕಲೆಗಳನ್ನು ಕಲಿತುಕೊಂಡೆ ಬಂದಿದ್ದಾರೆ. ಇನ್ನೇನು ಕ್ಯಾಮೆರಾ ಎದುರಿಸುವುದೊಂದೇ ಬಾಕಿಯಿದೆ. ಅಂದುಕೊಂಡಂತಾದರೆ ಇಷ್ಟರಲ್ಲಿಯೇ ಕನ್ನಡಕ್ಕೆ ಮತ್ತೊಬ್ಬ ಆರಡಿ ಹೀರೋ ಬರುವುದು ಖಚಿತ.

Categories
ಸಿನಿ ಸುದ್ದಿ

ಸಲಾರ್‌ ಗೆ ಬಂದಳು ಸೌತ್‌ ಇಂಡಸ್ಟ್ರಿಯ ಫೇಮಸ್‌ ನಟಿ, ಬರ್ತ್‌ಡೇ ದಿನದಂದೇ ಶ್ರುತಿ ಹಾಸನ್‌ ಗೆ ಸಿಕ್ತು ಭರ್ಜರಿ ಗಿಫ್ಟ್‌!

ಭಾರತೀಯ ಚಿತ್ರರಂಗದಲ್ಲಿ ಸಂಚಲನ ಮೂಡಿಸಲು ಒಂದಾಯ್ತು ಫೇಮಸ್‌ ಜೋಡಿ

ಸೌತ್‌ ಸಿನಿಮಾ ಇಂಡಸ್ಟ್ರಿಯ ಫೇಮಸ್‌ ನಟಿ ಶ್ರುತಿ ಹಾಸನ್‌ ಅವರಿಗೆ ಇಂದು ಬರ್ತಡೇ ಸಂಭ್ರಮ. ಅವರ ಹುಟ್ಟು ಹಬ್ಬಕ್ಕೆ “ಕೆಜಿಎಫ್‌ʼ ಖ್ಯಾತಿಯ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್‌ ಭರ್ಜರಿ ಗಿಫ್ಟ್‌ ನೀಡಿದೆ. ಪ್ರಭಾಸ್‌ ಅಭಿನಯದ ಅದ್ದೂರಿ ವೆಚ್ಚದ ಸಿನಿಮಾ ” ಸಲಾರ್‌ʼ ಗೆ ಶ್ರುತಿ ಹಾಸನ್‌ ನಾಯಕಿ ಆಗಿದ್ದಾರೆ. ಶ್ರುತಿ ಹಾಸನ್‌ ಬರ್ತ್‌ಡೇ ದಿನದಂದೇ ಹೊಂಬಾಳೆ ಫಿಲಂಸ್‌ ಅಧಿಕೃತವಾಗಿ ಅನೌನ್ಸ್‌ ಮಾಡಿದೆ.

‘ಕೆಜಿಎಫ್‌ 2’ ಚಿತ್ರದ ಜತೆಗೆಯೇ ಹೊಂಬಾಳೆ ಫಿಲಂಸ್‌ ಬಹುಭಾಷೆಯಲ್ಲಿ ನಿರ್ಮಾಣ ಮಾಡುತ್ತಿರುವ ಅದ್ದೂರಿ ವೆಚ್ಚದ ಸಿನಿಮಾ ‘ಸಲಾರ್‌’ . ಇನ್ನು ವಿಶೇಷ ಅಂದ್ರೆ ಇದು ಪ್ರಶಾಂತ್‌ ನೀಲ್‌ ಆಕ್ಷನ್‌ ಕಟ್‌ ಹೇಳುತ್ತಿರುವ ಸಿನಿಮಾ. ಹೈದರಾಬಾದ್‌ನಲ್ಲಿ ಮೊನ್ನೆಯಷ್ಟೇ ಚಿತ್ರದ ಮುಹೂರ್ತ ವಿಶೇಷವಾಗಿ ನಡೆದಿತ್ತು. ಉಪ ಮುಖ್ಯಮಂತ್ರಿ ಅಶ್ವತ್ಥ್‌ ನಾರಾಯಣ್‌, ನಿರ್ಮಾಪಕ ವಿಜಯ್‌ ಕಿರಗಂದೂರು, ನಟ ರಾಕಿಂಗ್‌ ಸ್ಟಾರ್‌ ಯಶ್‌ ಸೇರಿದಂತೆ ತೆಲಗು ಚಿತ್ರರಂಗದ ದೊಡ್ಡ ತಂಡವೇ ಅಲ್ಲಿ ಹಾಜರಿತ್ತು. ಈ ನಡುವೆ ಈಗ ಚಿತ್ರದ ನಾಯಕ ಪ್ರಭಾಸ್‌ ಅವರಿಗೆ ನಾಯಕಿ ಹುಡುಕಿದೆ ಚಿತ್ರ ತಂಡ.

ಹೊಂಬಾಳೆ ಫಿಲ್ಮ್ಸ್‌ ಅಧಿಕೃತ ಫೇಸ್‌ಬುಕ್‌ ಪೇಜ್‌ನಲ್ಲಿ ನಟಿ ಶ್ರುತಿಹಾಸನ್‌ ಅವರಿಗೆ ಬರ್ತ್‌ ಡೇ ಶುಭಾಶಯ ಕೋರುವ ಮೂಲಕ ಚಿತ್ರಕ್ಕೆ ಸ್ವಾಗತ ಕೋರಿದೆ ಚಿತ್ರ ತಂಡ. ಹಾಗೆಯೇ ನಾಯಕ ಪ್ರಭಾಸ್‌ ಕೂಡ ನಟಿ ಶ್ರುತಿ ಹಾಸನ್‌ ಅವರಿಗೆ ಸ್ವಾಗತ ಕೋರಿದ್ದಾರೆ. “ಹುಟ್ಟುಹಬ್ಬದ ಶುಭಾಶಯಗಳು ಶ್ರುತಿ ಹಾಸನ್‌! ಸಲಾರ್ ಚಿತ್ರದಲ್ಲಿ ನಿಮ್ಮೊಂದಿಗೆ ಅಭಿನಯಿಸಲು ಉತ್ಸುಕನಾಗಿದ್ದೇನೆ” ಎಂದು ತಮ್ಮ ಫೇಸ್‌ ಬುಕ್‌ ಪೇಜ್‌ ನಲ್ಲಿ ಬರೆದುಕೊಂಡಿದ್ದಾರೆ.ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣದಲ್ಲಿ ಪ್ರಶಾಂತ್ ನೀಲ್‌ ನಿರ್ದೇಶಿಸಿದ್ದ ‘ಕೆಜಿಎಫ್‌’ ಭಾರತ ಮಾತ್ರವಲ್ಲದೆ ಸಾಗರದಾಚೆಯೂ ಸದ್ದು ಮಾಡಿತ್ತು. ಇದೀಗ ‘ಕೆಜಿಎಫ್‌’ ಸರಣಿ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ನಂತರ ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್‌’ ಆರಂಭವಾಗಲಿದೆ. ಇದೀಗ ಚಿತ್ರದ ನಾಯಕಿಯ ಆಯ್ಕೆ ನಡೆದಿದ್ದು, ಚಿತ್ರದ ಇತರೆ ಪ್ರಮುಖ ಕಲಾವಿದರ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ಸಿಗಲಿದೆ. ಇನ್ನು ಪ್ರಭಾಸ್ ಸದ್ಯ ರಾಧಾಕೃಷ್ಣಕುಮಾರ್ ನಿರ್ದೇಶನದ ‘ರಾಧೆ ಶ್ಯಾಮ್‌’ ರೊಮ್ಯಾಂಟಿಕ್ ಡ್ರಾಮಾ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ನಂತರ ‘ಸಲಾರ್‌’ ಶುರುವಾಗಲಿದೆ.

ನಟಿ ಶ್ರುತಿ ಹಾಸನ್ ಇತ್ತೀಚೆಗೆ ಸಂಕ್ರಾಂತಿಗೆ ತೆರೆಕಂಡ ‘ಕ್ರ್ಯಾಕ್‌’ ಚಿತ್ರದಲ್ಲಿ ರವಿತೇಜಾ ಜೋಡಿಯಾಗಿ ನಟಿಸಿದ್ದರು. ಕೋವಿಡ್‌ನ ಆತಂಕದ ಮಧ್ಯೆಯೂ ಈ ಚಿತ್ರ ದೊಡ್ಡ ಯಶಸ್ಸು ಕಂಡು ಟಾಲಿವುಡ್ ಉದ್ಯಮಕ್ಕೆ ಭರವಸೆ ತುಂಬಿತ್ತು. ಈ ಯಶಸ್ಸಿನ ಹಿಂದೆಯೇ ಶ್ರುತಿ ದೊಡ್ಡ ಸಿನಿಮಾ ‘ಸಲಾರ್‌’ ಅವಕಾಶ ಪಡೆದಿದ್ದಾರೆ. ತೆರೆಯ ಮೇಲೆ ಮೊದಲ ಬಾರಿ ಅವರು ಪ್ರಭಾಸ್‌ಗೆ ಜೊತೆಯಾಗುತ್ತಿರುವುದು ವಿಶೇ‍ಷ. ನಿಸ್ಸಂಶಯವಾಗಿ ಇದು ಅವರ ವೃತ್ತಿಬದುಕಿನ ಮಹತ್ವದ ಚಿತ್ರವಾಗಲಿದೆ ಎನ್ನುವುದು ಅವರ ಅಭಿಮಾನಿಗಳ ಅಂಬೋಣ.

Categories
ಸಿನಿ ಸುದ್ದಿ

ವರ್ಷಕ್ಕೆ ಇನ್ಮೇಲೆ ಮೂರು ಸಿನಿಮಾ ಖಾಯಂ, ಅಭಿಮಾನಿಗೆಳಿಗೆ ನಟ ಪುನೀತ್‌ ರಾಜ್‌ ಕುಮಾರ್‌ ಕೊಟ್ಟರು ಭರ್ಜರಿ ಸಿಹಿ ಸುದ್ದಿ !

“ನೂರರಷ್ಟು ಭರ್ತಿಗೆ ಅವಕಾಶ ಸಿಕ್ಕಿದೆಯಂತೆ ಮಾಸ್ಕ್‌, ಸ್ಯಾನಿಟೈಸ್ಡ್‌ ಮರಿಯಬೇಡಿ” ಅಪ್ಪು ಮನವಿ

ನಟ ಪುನೀತ್‌ ರಾಜ್‌ ಕುಮಾರ್‌  ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಇಲ್ಲಿವರೆಗಿನ ಕತೆ ಮುಗಿಯಿತು, ಆದರೆ ಇನ್ಮುಂದೆ ವರ್ಷಕ್ಕೆ ಮೂರು ಸಿನಿಮಾದಲ್ಲಾದರೂ ಅಭಿನಯಿಸಬೇಕು, ಅವರು ಆ ವರ್ಷದಲ್ಲೇ ಹಂತ ಹಂತವಾಗಿ ತೆರೆ ಕಾಣಬೇಕು. ಆ ರೀತಿ ಡಿಸೈಡ್‌ ಮಾಡಿಕೊಂಡೇ ಸಿನಿಮಾಗಳಿಗೆ ಕಾಲ್‌ ಶೀಟ್‌ ನೀಡ್ಬೇಕು ಅನ್ನೋದು ಅವರ  ನಿರ್ಧಾ ರ .

ಇದು ಅಂತೆ, ಕಂತೆ ಯಲ್ಲ. ಖುದ್ದು ಅವರೇ ” ಸಿನಿ ಲಹರಿʼ  ಜತೆ ಹಂಚಿಕೊಂಡ ಮಾಹಿತಿ. ಶುಕ್ರವಾರ ಬೆಂಗಳೂರಿನ ಖಾಸಗಿ ಹೋಟೆಲ್‌ ವೊಂದರಲ್ಲಿ ಜರುಗಿದ” ಫುಡ್‌ ಸ್ಟೆಪ್ಸ್ ʼ ಹೆಸರಿನ ಫುಡ್‌ ಪ್ರಾಡೆಕ್ಟ್‌ ಲಾಂಚ್‌ ಗೆ ಅತಿಥಿಯಾಗಿ ಬಂದಿದ್ದ ಅವರು, ಆನಂತರ “ ಸಿನಿ ಲಹರಿ ʼ ಜತೆ ಮಾತನಾಡಿದರು.“ ಚಿತ್ರ ಮಂದಿರಗಳಲ್ಲಿ ಈಗ ನೂರರಷ್ಟು ಆಸನಗಳ ಭರ್ತಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿರುವುದು ಸಂತಸ ತಂದಿದೆ. ಇದರಿಂದ ಚಿತ್ರೋದ್ಯಮಕ್ಕೆ ಮತ್ತೆ ಚಾಲನೆ ಸಿಗಲಿದೆ. ಎಲ್ಲರಿಗೂ ಕೆಲಸ ಸಿಗಲಿದೆ. ಆದರೂ ಪ್ರೇಕ್ಷಕರು ಎಚ್ಚರಿಕೆಯಿಂದಲೇ ಇರಬೇಕಿದೆ. ಮಾಸ್ಕ್‌ ಹಾಗೂ ಸ್ಯಾನಿಟೈಸ್ಡ್‌ ಬಳಸುವುದನ್ನು ಮರೆಯಬಾರದು. ಮನರಂಜನೆ ಜತೆಗೆ ಅವರ ಆರೋಗ್ಯವೂ ಮುಖ್ಯ ಎಂದು ಮನವಿ ಮಾಡಿಕೊಂಡರು.

ಕೊರೋನಾ ಕಾರಣ ಸಂಕಷ್ಟದಲ್ಲಿರುವ ಚಿತ್ರೋದ್ಯಮಕ್ಕೆ ಇನ್ನಷ್ಟು ವೇಗ ಸಿಗಬೇಕಾದರೆ ಸ್ಟಾರ್‌ ಗಳು ವರ್ಷಕ್ಕೆ ಒಂದಕ್ಕಿಂತ ಹೆಚ್ಚು ಸಿನಿಮಾ ಮಾಡುವುದು ಒಳ್ಳೆಯಲ್ಲವೇ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಟ ಪುನೀತ್‌, ಇನ್ಮೇಲೆ ವರ್ಷಕ್ಕೆ ಕನಿಷ್ಟ ಮೂರು ಸಿನಿಮಾಗಳಲ್ಲಾದರೂ ಅಭಿನಯಿಸಲು ನಿರ್ಧರಿಸಿದ್ದೇನೆʼ ಅಂತ ತಮ್ಮ ನಿರ್ಧಾರ ರಿವೀಲ್‌ ಮಾಡಿದರು. ಈ ಡಿಸೈಡ್‌ ಈ ವರ್ಷದಲ್ಲೇ ಇಂಪ್ಲಿಮೆಂಟ್‌ ಆಗುತ್ತಾ ಎನ್ನುವ ಕುತೂಹಲದ ಪ್ರಶ್ನೆಗೆ, ನೋಡೋಣ, ಮುಂದೆ ಹೇಳ್ತೀನಿ ಅಂತ ಹಾಗೆಯೇ ಕುತೂಹಲ ಉಳಿಸಿದರು.

“  ಈ ವರ್ಷದ ಮಟ್ಟಿಗೆ ಈಗ ಯುವ ರತ್ನ ಬರಲಿದೆ. ಅದರ ರಿಲೀಸ್‌ ಡೇಟ್‌ ಕೂಡ ಅನೌನ್ಸ್‌ ಆಗಿದೆ. ಅದಾದ ಮೇಲೆ ಜೇಮ್ಸ್‌ ಸರದಿ. ಈಗಾಗಲೇ ಅದಕ್ಕೆ ಬಹುತೇಕ ಶೂಟಿಂಗ್‌ ಮುಗಿದಿದೆ. ಅದು ರಿಲೀಸ್‌ ಯಾವಾಗೋ ಗೊತ್ತಿಲ್ಲ, ಈ ವರ್ಷದಲ್ಲೇ ಬಂದ್ರು ಬರಬಹುದು ಅಂತ ಹೇಳಿದರು. ಹಾಗಾದ್ರೆ ಮುಂದಿನ ಸಿನಿಮಾ? ಎನ್ನುವ ಪ್ರಶ್ನೆಗೆ ಗೊತ್ತಿಲ್ಲ ಅಂತ ನಕ್ಕರು. ಅದೇನೆ ಇರಲಿ, ವರ್ಷಕ್ಕೆ ಒಂದೋ ಎರಡೋ ಸಿನಿಮಾ ಸಾಕು ಅಂದುಕೊಂಡಿದ್ದ  ಪುನೀತ್‌, ಈಗ ವರ್ಷಕ್ಕೆ ಮೂರು ಸಿನಿಮಾ ಗ್ಯಾರಂಟಿ ಅಂತ ಹೇಳಿಕೊಂಡಿರುವುದು ಅವರ ಅಭಿಮಾನಿಗಳಿಗೆ ಭರ್ಜರಿ ಸಿಹಿ ಸುದ್ದಿಯಂತೂ ಹೌದು.

Categories
ಸಿನಿ ಸುದ್ದಿ

ಚಿತ್ರಮಂದಿರಕ್ಕೆ ಸಿಕ್ತು ಪೂರ್ಣ ಅನುಮತಿ

ಸಿನಿ ಪ್ರೇಕ್ಷಕರಿಗೆ ಇನ್ಮುಂದೆ ಹಬ್ಬ

ಕೊರೊನಾ ಹಾವಳಿಗೆ ತತ್ತರಿಸಿದ್ದ ಸಿನಿಮಾ ರಂಗಕ್ಕೆ ಈಗ ಪೂರ್ಣ ರಿಲೀಫ್ ದೊರೆತಿದೆ. ಹೌದು, ಕೊರೊನಾ ಸಮಸ್ಯೆಯಿಂದಾಗಿ ಸರ್ಕಾರ ಚಿತ್ರಮಂದಿರಕ್ಕೆ ಶೇ.50ರಷ್ಟು ಮಾತ್ರ ಅನುಮತಿ ನೀಡಿತ್ತು. ಕಳಡದ ಅಕ್ಟೋಬರ್ 15ರಿಂದ ಈ ಜಾರಿ ಇತ್ತು. ಅಲ್ಲಿಂದ ಇಲ್ಲಿಯವರೆಗೆ ಒಂದಷ್ಟು ಕನ್ನಡ ಚಿತ್ರಗಳು ಬಿಡುಗಡೆ ಕಂಡಿದ್ದವು. ಶೇ.100ರಷ್ಟು ಅನುಮತಿಗಾಗಿ ಚಿತ್ರೋದ್ಯಮ ಕಾಯುತ್ತಿತ್ತು. ಈಗ ಸರ್ಕಾರ ಶೇ.100ರಷ್ಟು ಅನುಮತಿ ನೀಡಿದೆ. ಪೂರ್ಣ ಪ್ರಮಾಣದ ಈ ಅನುಮತಿಯಿಂದಾಗಿ ಚಿತ್ರೋದ್ಯಮ ಸಂತಸದಲ್ಲಿದೆ.

 

ಈಗಾಗಲೇ ಸ್ಟಾರ್ ಸಿನಿಮಾಗಳು ಬಿಡುಗಡೆ ದಿನವನ್ನು ಘೋಷಣೆ ಮಾಡಿವೆ. ಚಿತ್ರಮಂದಿರಗಳಿಗೆ ಶೇ.100ರಷ್ಟು ಅನುಮತಿ ಸಿಕ್ಕ ಹಿನ್ನಲೆಯಲ್ಲಿ ಇದೀಗ ಸಿನಿಮಾ ರಂಗದಲ್ಲಿ ಮತ್ತಷ್ಟು ಚಟುವಟಿಕೆಗಳು ಜೋರಾಗಿವೆ.
ಅಂತೂ ಸಿಹಿ ಸುದ್ದಿ ಸಿಕ್ಕ ಬೆನ್ನಲ್ಲೇ ಸಿನಿಮಾ ಕಾರ್ಮಿಕ ವಲಯದಲ್ಲಿ ಮಂದಹಾಸ ಮೂಡಿದೆ.

Categories
ಸಿನಿ ಸುದ್ದಿ

ಜೈ ಕರ್ನಾಟಕ ಪದ ಬೇಡ ಅನ್ನುವುದಾದರೆ, ಆ ಪ್ರೋಗ್ರಾಮ್‌ ಕ್ಯಾನ್ಸಲ್‌ ಮಾಡಿ!

ಆರ್ಮುಗಂ ರವಿಶಂಕರ್‌ ಹೀಗೆಂದು ಖಡಕ್‌ ಎಚ್ಚರಿಕೆ ಕೊಟ್ಟಿದ್ದು ಯಾರಿಗೆ?

“ನಾನು ಕನ್ನಡಿಗರಿಗೆ ಚಿರಋಣಿ. ಇಲ್ಲಿನ ನೆಲ, ಜಲ, ಭಾಷೆ ನನ್ನ ಬದುಕನ್ನು ಹಸನಾಗಿಸಿದೆ. ನನಗೆ ಜೀವನ ಕೊಟ್ಟ ಕರ್ನಾಟಕವನ್ನು ಎಂದಿಗೂ ಮರೆಯೋದಿಲ್ಲ…”
_ ಇದು “ಆರ್ಮುಗಂ” ಖ್ಯಾತಿಯ ರವಿಶಂಕರ್‌ ಸದಾ ಪ್ರೀತಿಯಿಂದಲೇ ಹೇಳುವ ಮಾತು.

ಇಷ್ಟಕ್ಕೂ ಖಳನಟ ರವಿಶಂಕರ್‌ ಅವರ ಬಗ್ಗೆ ಇಲ್ಲೇಕೆ ಪ್ರಸ್ತಾಪ ಎಂಬ ಪ್ರಶ್ನೆಗೆ, ರವಿಶಂಕರ್‌ ಬುಧವಾರ “ಸಿನಿಲಹರಿ” ಕಚೇರಿಗೆ ಆಗಮಿಸಿದ್ದರು. ಈ ವೇಳೆ ತಮ್ಮ ಸಿನಿ ಜರ್ನಿ ಕುರಿತು ಹೇಳಿಕೊಳ್ಳುತ್ತಿರುವಾಗ, ಒಂದು ಮರೆಯದ ಘಟನೆಯನ್ನೂ ನೆನಪಿಸಿಕೊಂಡರು. ಆ ಘಟನೆ ಕುರಿತಂತೆ ಸ್ವತಃ ರವಿಶಂಕರ್‌ ವಿವರಿಸಿದ್ದು ಹೀಗೆ.‌

ಓವರ್‌ ಟು ರವಿಶಂಕರ್…
ತೆಲುಗಿನ ಜನಪ್ರಿಯ ವಾಹಿನಿಯೊಂದರಲ್ಲಿ “ಆಲಿ ತೊ ಸರದಾಗ” ಎಂಬ ಸಕ್ಸಸ್‌ಫುಲ್‌ ಕಾರ್ಯಕ್ರಮವಿದೆ. ಆ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಲಾಗಿತ್ತು. ಅಲ್ಲಿ ತೆಲುಗಿನ ಖ್ಯಾತ ನಟ ಆಲಿ ಅವರು ಆ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಕಾರ್ಯಕ್ರಮ ಚೆನ್ನಾಗಿಯೇ ನಡೆಯಿತು. ಮಧ್ಯೆ ಮಾತನಾಡುವಾಗ, ಒಂದು ಚಿತ್ರದ ಡೈಲಾಗ್‌ ಹೇಳಬೇಕು ಎಂಬ ಬೇಡಿಕೆ ಬಂತು.

ಆ ಬೇಡಿಕೆಯನ್ನು ಸ್ವೀಕರಿಸಿದ ನಾನು, ಡೈಲಾಗ್‌ ಹೇಳೋಕೆ ಅಣಿಯಾದೆ. ಆದರೆ, ಎಲ್ಲರಿಗೂ ನಾನು ತೆಲುಗಿನ “ಅರುಧಂತಿ” ಸಿನಿಮಾದ “ವದಲಾ ಬೊಮ್ಮಾಲಿ..” ಡೈಲಾಗ್‌ ಹೇಳಬಹುದು ಎಂದೇ ನಿರೀಕ್ಷಿಸಿದ್ದರು. ಆದರೆ, ನಾನು ಮಾತ್ರ ಹೇಳಿದ್ದು, “ಕೆಂಪೇಗೌಡ” ಚಿತ್ರದ “ಶಾಕ್‌ ಆಯ್ತಾ… ಶಾಕ್‌ ಆಗಲೇಬೇಕು ಅಂತ ತಾನೇ ನಾನಿಲ್ಲಿ ಮಾಗಡಿ ರೋಡ್‌ಗೆ ಪೋಸ್ಟಿಂಗ್‌ ಹಾಕಿಸಿದ್ದು…” ಎಂಬ ಡೈಲಾಗ್‌ ಹರಿಬಿಟ್ಟೆ. ಅಲ್ಲಿ ಕುಳಿತ ಆಡಿಯನ್ಸ್‌ ಎಲ್ಲರೂ ಚಪ್ಪಾಳೆ, ಶಿಳ್ಳೆಗಳ ಸುರಿಮಳೆಗೈದರು. ಕೊನೆಯಲ್ಲಿ ಎಲ್ಲರಿಗೂ ನಮಸ್ಕರಿಸುತ್ತಲೇ, ಜೈ ಕರ್ನಾಟಕ ಮಾತೆ, ಜೈ ಕನ್ನಡಾಂಬೆ ಎಂದು ಹೇಳಿದೆ.

ಆ ಕಾರ್ಯಕ್ರಮ ಮುಗಿದ ಬಳಿಕ, ಆ ಜನಪ್ರಿಯ ವಾಹಿನಿಯ ಸಂಪಾದಕರು ನನಗೆ ಫೋನ್‌ ಮಾಡಿ, ಎಲ್ಲಾ ಓಕೆ, ಆದರೆ, ಜೈ ಕರ್ನಾಟಕ ಮಾತೆ, ಜೈ ಕನ್ನಡಾಂಬೆ ಎನ್ನುವುದನ್ನು ಕಟ್‌ ಮಾಡ್ತೀನಿ. ಯಾಕೆಂದರೆ, ಇದು ತೆಲುಗು ವಾಹಿನಿ ಅಂದರು. ಆಗ ನಾನು, ಹಾಗೇನಾದರೂ ಜೈ ಕರ್ನಾಟಕ ಮಾತೆ, ಜೈ ಕನ್ನಡಾಂಬೆ ಪದವನ್ನು ಕಟ್‌ ಮಾಡುವುದಾದರೆ, ಆ ಪ್ರೋಗ್ರಾಮ್‌ ಕ್ಯಾನ್ಸಲ್‌ ಮಾಡಿ. ನನಗೆ ಪಬ್ಲಿಸಿಟಿಯ ಅಗತ್ಯವೇ ಇಲ್ಲ ಅಂದುಬಿಟ್ಟೆ. ಹಾಗಾಗಿ, ಇವತ್ತಿಗೂ ಆ ಕಾರ್ಯಕ್ರಮದಲ್ಲಿ ನಾನು ಜೈ ಕರ್ನಾಟಕ ಮಾತೆ, ಜೈ ಕನ್ನಡಾಂಬೆ ಎಂದು ಹೇಳಿರುವುದಿದೆ‌ʼ ಎನ್ನುತ್ತಾರೆ ರವಿಶಂಕರ್.

ಅದೇನೆ ಇರಲಿ, ರವಿಶಂಕರ್‌ ಅವರು ಕನ್ನಡ ಚಿತ್ರರಂಗವನ್ನು ತುಂಬಾ ಗೌರವದಿಂದ ನೋಡುತ್ತಾರೆ. ಇಲ್ಲಿನ ಜನರನ್ನು ಅಷ್ಟೇ ಪ್ರೀತಿಯಿಂದ ಕಾಣುತ್ತಾರೆ. ಕನ್ನಡ ಭಾಷೆ ಮೇಲೆ ಸದಾ ಪ್ರೀತಿ ತೋರುವ ಅವರು, ನನ್ನ ಅಣ್ಣ ಸಾಯಿಕುಮಾರ್‌ ಅವರಿಗೆ “ಪೊಲೀಸ್‌ ಸ್ಟೋರಿ” ದೊಡ್ಡ ಹೆಸರು ತಂದುಕೊಟ್ಟಿತು. ಕನ್ನಡದಲ್ಲೇ ಅಣ್ಣ ಕೂಡ ಸುದ್ದಿಯಾದವರು. ನನ್ನ ತಮ್ಮ ಅಯ್ಯಪ್ಪ ಶರ್ಮ ಕೂಡ ಇಲ್ಲಿ ಸದ್ದು ಮಾಡಿದವರೇ. ಇನ್ನು, ನನಗೆ, ತೆಲುಗು ಚಿತ್ರರಂಗದಲ್ಲಿ ಮೂರು ದಶಕ ಕೆಲಸ ಮಾಡಿದರೂ, ಹೇಳಿಕೊಳ್ಳುವ ಹೆಸರು ಸಿಗಲಿಲ್ಲ. ಆದರೆ, ಕನ್ನಡ ಚಿತ್ರರಂಗ ನನಗೆ ಹೆಸರು, ಗೌರವ ಎಲ್ಲವನ್ನೂ ಕೊಟ್ಟಿದೆ.

ಹೀಗಾಗಿ ನನಗೆ ಕನ್ನಡವೇ ನನ್ನ ಬದುಕಿನ ಭಾಷೆ, ಮಾತೃಭಾಷೆ ಎಲ್ಲವೂ ಇಲ್ಲೇ. ಇಂದು ನಾನು ಏನೆಲ್ಲಾ ಆಗಿದ್ದೇನೋ ಅದಕ್ಕೆಲ್ಲಾ ಕನ್ನಡಿಗರೇ ಕಾರಣ” ಮುಂದಿನ ದಿನಗಳಲ್ಲಿ ನನ್ನ ಮಗನನ್ನೂ ಕನ್ನಡ ಚಿತ್ರರಂಗದ ಮೂಲಕವೇ ಪರಿಚಯಿಸುತ್ತೇನೆ. ಅದಕ್ಕೆ ಈಗಾಗಲೇ ತಯಾರಿ ನಡೆದಿದೆ. ಈ ಹಿಂದೆಯೇ ಪರಿಚಯಿಸಬೇಕಿತ್ತು. ಆದರೆ, ಕೊರೊನಾ ಹಾವಳಿಯಿಂದ ಸ್ವಲ್ಪ ತಡವಾಗಿದೆ. ಬರುವ ಮೇ ತಿಂಗಳಲ್ಲಿ ಮಗನನ್ನು ಕನ್ನಡ ಸಿನಿಮಾ ಮೂಲಕ ಇಂಡಸ್ಟ್ರಿಗೆ ಪರಿಚಯಿಸುತ್ತಿದ್ದೇನೆ ಎನ್ನುತ್ತಾರೆ ಅವರು.

 

ಆಲ್‌ ದಿ ಬೆಸ್ಟ್‌ ಸಿನಿಲಹರಿ
ಕಚೇರಿಯಲ್ಲಿ ಕುಳಿತು ಇಷ್ಟೆಲ್ಲಾ ಮಾತನಾಡಿದ ಖಳನಟ ರವಿಶಂಕರ್‌ ಅವರು, ಕೊನೆಗೆ “ಸಿನಿಲಹರಿ” ಯಶಸ್ವಿಯಾಗಲಿ. ನಿಮ್ಮ ಬರವಣಿಗೆಯೇ ನಿಮಗೆ ಶಕ್ತಿ. ಕನ್ನಡ ಚಿತ್ರರಂಗದಲ್ಲಿ “ಸಿನಿಲಹರಿ” ಹೊಸ ಹೆಜ್ಜೆ ಮೂಡಿಸಲಿ. ಹೊಸ ಸುದ್ದಿಗಳ ಜೊತೆಗೆ ಕನ್ನಡ ಚಿತ್ರರಂಗದ ಪರ ಈ ಸಿನಿಲಹರಿ ಕೆಲಸ ಮಾಡಲಿ” ಎಂದು ಶುಭಹಾರೈಸಿದರು.

 

error: Content is protected !!