Categories
ಸಿನಿ ಸುದ್ದಿ

ಚಡ್ಡಿದೋಸ್ತರ ಹಾಡು ಪಾಡು – ಕಡ್ಡಿ ಅಲ್ಲಾಡಿಸೋ ಮಂದಿಯ ಆಡಿಯೋ ಕಾರ್ಯಕ್ರಮ

ಕೌಂಡಿನ್ಯರ ಕಾದಂಬರಿಗೆ ಸಿನಿಮಾ ಸ್ಪರ್ಶ

ನಿರ್ದೇಶಕ “ಆಸ್ಕರ್‌” ಕೃಷ್ಣ ಈಗ ಹೊಸದೊಂದು ಚಿತ್ರ ಮಾಡಿದ್ದು ಗೊತ್ತೇ ಇದೆ. ಅದೀಗ ರಿಲೀಸ್‌ ಹಂತಕ್ಕ ಬಂದಿದೆ. ಹೌದು, ಈ ಹಿಂದೆ “ಆಸ್ಕರ್”, “ಮಿಸ್ ಮಲ್ಲಿಗೆ”, “ಮೊನಿಕಾ ಈಸ್ ಮಿಸ್ಸಿಂಗ್” ಮತ್ತು “ಮನಸಿನ ಮರೆಯಲಿ” ಸಿನಿಮಾ ನಿರ್ದೇಶಿಸಿದ್ದ ಕೃಷ್ಣ, ಈಗ “ಚಡ್ಡಿದೋಸ್ತ್‌ ಕಡ್ಡಿ ಅಲ್ಲಾಡ್‌ಸ್ಬುಟ್ಟ” ಚಿತ್ರ ಮಾಡಿದ್ದಾರೆ. ಅದರ ಹಾಡುಗಳು ಇತ್ತೀಚೆಗೆ ಬಿಡುಗಡೆಗೊಂಡವು. ಅಂದಹಾಗೆ, ಈ ಚಿತ್ರವನ್ನು ರೆಡ್ ಅಂಡ್ ವೈಟ್ ಖ್ಯಾತಿಯ ಸೆವೆನ್‍ರಾಜ್ ನಿರ್ಮಾಣ ಮಾಡಿದ್ದಾರೆ. ನಟಿ ಪ್ರೇಮಾ ಅಂದು ಆಡಿಯೋ ಬಿಡುಗಡೆಗೆ ಸಾಕ್ಷಿಯಾದರು.

ಅವರೊಂದಿಗೆ ಎಸ್.ಎ. ಚಿನ್ನೇಗೌಡ, ಬಾಮ ಹರೀಶ್, ಬಾಮ. ಗಿರೀಶ್, ರವಿಚೇತನ್, ಶಿಲ್ಪ ಶ್ರೀನಿವಾಸ್ ಸೇರಿದಂತೆ ಚಿತ್ರರಂಗದ ಹಲವಾರು ಪ್ರಮುಖರು ಭಾಗವಹಿಸಿ ಚಿತ್ರತಂಡಕ್ಕೆ ಶುಭಕೋರಿದರು.
ತಮ್ಮ ಸಿನಿಮಾ ಕುರಿತು ಮಾತಿಗಿಳಿದ ನಿರ್ದೇಶಕ ಕೃಷ್ಣ, “ನನ್ನ ನಿರ್ದೇಶನದ ಐದನೇ ಚಿತ್ರವಿದು. “ಆಸ್ಕರ್”, “ಮಿಸ್ ಮಲ್ಲಿಗೆ”, “ಮೊನಿಕಾ ಈಸ್ ಮಿಸ್ಸಿಂಗ್” ಹಾಗೂ “ಮನಸಿನ ಮರೆಯಲಿ” ನಂತರ ಈ ಚಿತ್ರ ಮಾಡಿದ್ದೇನೆ. ಅಲ್ಲದೆ ಮೊದಲ ಸಲ ಪ್ರಮುಖ ಪಾತ್ರವೊಂದನ್ನು ಕೂಡ ಮಾಡಿದ್ದೇನೆ ಸೂಪರ್ ನ್ಯಾಚುರಲ್, ರೊಮ್ಯಾಂಟಿಕ್ ಥ್ರಿಲ್ಲರ್ ಹೀಗೆ ಎಲ್ಲಾ ಜಾನರ್ ಚಿತ್ರಗಳನ್ನು ಮಾಡಿದ ನಂತರ ಈ ಚಿತ್ರದ ಮೂಲಕ ಕ್ರೈಂ ಥ್ರಿಲ್ಲರ್ ಕಥೆಯೊಂದನ್ನು ಹೇಳ ಹೊರಟಿದ್ದೇನೆ. ಈ ಟೈಟಲ್ ಕೊಟ್ಟವರು ಚಿತ್ರದ ಮತ್ತೊಬ್ಬ ನಾಯಕ ಲೋಕೇಂದ್ರ ಸೂರ್ಯ. ಇಬ್ಬರು ಸ್ನೇಹಿತರ ಬಾಂಡಿಂಗ್, ಫ್ರೆಂಡ್‍ಷಿಪ್ ಮಧ್ಯೆ ನಡೆಯುವ ಹುಡುಗಾಟ, ತುಂಟಾಟ ಎಲ್ಲಾ ಇದೆ. ಇದರಲ್ಲಿ ಪೋಲೀಸ್, ವ್ಯಕ್ತಿಯ ಸೋಷಿಯಲ್ ಲೈಫ್ ಹೇಗೆಲ್ಲಾ ಇರುತ್ತೆ ಎಂಬುದನ್ನು ಹೇಳಲಾಗಿದೆ.

ಎಷ್ಟೋ ಸಲ ನಾವು ಕ್ರೈಂ ಮಾಡಿದ್ದರೂ ಅದರಿಂದ ಏನೂ ಆಗುವುದಿಲ್ಲ, ಕೆಲವೊಮ್ಮೆ ನಾವು ಏನೂ ಮಾಡದಿದ್ದರೂ ಅದು ನಮ್ಮನ್ನು ಸುತ್ತಿಕೊಂಡಿರುತ್ತೆ, ಇಲ್ಲೂ ಅಂಥದ್ದೇ ಕಥೆ ಇದೆ. ಲೋಕೇಂದ್ರ ಸೂರ್ಯ ಅವರ “ಅಟ್ಟಯ್ಯ ವರ್ಸಸ್‌ ಹಂದಿ ಕಾಯೋಳು” ಚಿತ್ರವನ್ನು ಚಿತ್ರೋತ್ಸವದಲ್ಲಿ ನೋಡಿ ಇಷ್ಟಪಟ್ಟೆ. ನಂತರ ಅವರನ್ನು ಭೇಟಿ ಮಾಡಿ ಮಾತಾಡಿದೆ. ಮೊದಲು ಬರೀ ಪಾತ್ರ ಮಾಡಲು ಬಂದವರು ನಂತರ ಎಲ್ಲದರಲ್ಲೂ ಇನ್‍ವಾಲ್ವ್ ಆಗಿಬಟ್ಟರು. ಅವರೇ ಚಿತ್ರಕಥೆ ಡೈಲಾಗ್ ಬರೆದರು. ಆಗಿನ್ನೂ ಪ್ರೊಡ್ಯೂಸರ್ ಇರಲಿಲ್ಲ, ಮೊದಲು ಇಬ್ಬರೇ ಸೇರಿ ಮಾಡೋಣ ಅಂದುಕೊಂಡಿದ್ದೆವು. ಆ ಸಮಯದಲ್ಲಿ ಸೆವೆನ್‍ರಾಜ್ ಸಿಕ್ಕರು, ನಾವೆಲ್ಲ ಇಲ್ಲಿ ಸೇರಿದ್ದೇವೆ ಎಂದರೆ ಅದಕ್ಕೆ ಕಾರಣ ಸೆವೆನ್‍ರಾಜ್. ನಾಯಕಿ ಪಾತ್ರಕ್ಕೆ ಹಲವರನ್ನು ಸಂಪರ್ಕಿಸಿದೆವು, ಯಾರೂ ಸರಿಯಾಗಲಿಲ್ಲ, ಸಿನಿಮಾ ಬಗ್ಗೆ ಅತೀವ ಪ್ರೀತಿ ಇಟ್ಟುಕೊಂಡಿರುವ ಬಹುಭಾಷಾ ನಟಿ ಗೌರಿ ನಾಯರ್ ನಮ್ಮ ನಾಯಕಿಯಾಗಿದ್ದು, ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಈ ಸಿನಿಮಾ ಬಳಿಕ ಅವರೀಗ ಬೇರೆ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಶ್ರದ್ದೆಯಿದ್ದರೆ ಮಾತ್ರ ಸಿನಿಮಾ ಮಾಡಬೇಕು ಎನ್ನುವದು ನನ್ನ ಪಾಲಿಸಿ, ನನ್ನ ಪಾತ್ರಕ್ಕೆ ಹೆಚ್ಚು ಮೇಕಪ್ ಬೇಕಿರಲಿಲ್ಲ, ಜೈಲಿಂದ ಹೊರಬಂದ ವ್ಯಕ್ತಿ ಹೇಗಿರ್ತಾನೋ ಆ ಥರದ ಪಾತ್ರ ನನ್ನದು ಎಂದರು ಅವರು.
ಬಹುತೇಕ ಕುಣಿಗಲ್, ತುಮಕೂರು, ಬೆಂಗಳೂರು ಸುತ್ತಮುತ್ತ ಚಿತ್ರದ ಶೂಟಿಂಗ್ ನಡೆಸಲಾಗಿದೆ. ಜನವರಿ ಅಂತ್ಯದಲ್ಲಿ ಅಥವಾ ಫೆಬ್ರವರಿಯಲ್ಲಿ ರಿಲೀಸ್ ಮಾಡುವ ಯೋಚನೆ ಅವರದು. ನಟ ಲೋಕೇಂದ್ರ ಸೂರ್ಯ, ಚಿತ್ರದಲ್ಲಿ ಗಡಾರಿ ಎನ್ನುವ ಪಾತ್ರ ಮಾಡಿದರೆ, ಆಸ್ಕರ್ ಕೃಷ್ಣ ಫ್ಯಾಷನ್ ರಾಜನಾಗಿ ಕಾಣಿಸಿಕೊಂಡಿದ್ದಾರೆ ಎಂದು ವಿವರಿಸಿದರು. ನಿರ್ಮಾಪಕ ಸೆವೆನ್ ರಾಜ್, “ಏಳು ನನ್ನ ಜೀವನದಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸಿದೆ, ನಾನು ಹುಟ್ಟಿದ್ದು ಏಳನೇ ತಾರೀಖು, ನನ್ನ ತಂದೆಗೆ ನಾನು ಏಳನೇ ಪುತ್ರ. ನನ್ನ ಹೆಸರು ಕೂಡ ಸೆವೆನ್‌ ರಾಜ್, ನಾನು ಚಿತ್ರರಂಗಕ್ಕೆ ಬರಬೇಕೆಂದು ಬಹಳ ಹಿಂದೆಯೇ ಪ್ರಯತ್ನಿಸಿದ್ದೆ, ಆಗಿರಲಿಲ್ಲ, ಈ ಚಿತ್ರದಲ್ಲಿ ಖಳನಾಯಕನಾಗಿ ಕಾಣಿಸಿಕೊಂಡಿದ್ದೇನೆ ಎಂದರು. ಕೌಂಡಿನ್ಯ ಅವರ ಕಾದಂಬರಿ ಆಧರಿಸಿ ಮಾಡಲಾಗಿರುವ ಈ ಚಿತ್ರದಲ್ಲಿ 2 ಹಾಡುಗಳಿದ್ದು, ಅನಂತ್ ಆರ್ಯನ್ ಅವರ ಸಂಗೀತವಿದೆ. ಗಗನ್ ಕುಮಾರ್ ಅವರ ಛಾಯಾಗ್ರಹಣ, ಮರಿಸ್ವಾಮಿ ಸಂಕಲನ, ಅಕುಲ್ ಅವರ ನೃತ್ಯನಿರ್ದೇಶನ ಹಾಗೂ ವೈಲೆಂಟ್‌ ಸಾಹಸ ನಿರ್ದೇಶನವಿದೆ.

Categories
ಸಿನಿ ಸುದ್ದಿ

ಬೆಳ್ಳಿತೆರೆಯ ಮೇಲೆ ಅಬ್ಬರಿಸುವ ಕಿಚ್ಚ ಸುದೀಪ್‌ ಇವರೆನಾ  ?  ಫೆಟ್ಟಲ್‌ ಕೋರ್ಟ್‌ ನಲ್ಲಿ ಸುದೀಪ್‌ ಅವರನ್ನು ಕಂಡು ನಟ ಸಂಚಾರಿ ವಿಜಯ್‌ ಹೀಗೇಕೆ ಹೇಳಿದರು?

ಸೋಮವಾರ ಸಂಜೆಯ  ಸುಂದರ  ಸವಿಗಾನ,  ಸುದೀಪ್‌ ಅವರ ಜತೆಗಿನ ಸವಿ ಮಾತು 

ನಟ ಕಿಚ್ಚ ಸುದೀಪ್‌ ಅಂದ್ರೆ ಬರೀ ನಟರು ಮಾತ್ರವಲ್ಲ, ಅತ್ಯಾದ್ಬುತ ನಿರೂಪಕ ಎನ್ನುವುದು ಎಷ್ಟು ಸತ್ಯವೋ ಹಾಗೆಯೇ ಎಕ್ಸಾಟಾರ್ಡಿನರಿ ‌ ಸ್ಪೋರ್ಟ್‌ ಪರ್ಸನ್‌ ಕೂಡ ಹೌದು. ಅದಕ್ಕೆ ಸಾಕ್ಷಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಸ್ಯಾಂಡಲ್‌ ವುಡ್‌ ನಲ್ಲಿ ಭಾರೀ ಸದ್ದು ಮಾಡಿದ ಸೆಲೆಬ್ರಿಟಿ ಕ್ರಿಕೆಟ್‌ ಲೀಗ್.‌

ಕ್ರಿಕೆಟ್‌ ಅಂದ್ರೆ ಅವರಿಗೆ ಅಷ್ಟೊಂದು ಕ್ರೇಜ್.‌ ಆ ಮೂಲಕ ಅವರು ಇಂಡಿಯಾ ಕ್ರಿಕೆಟ್‌ ಟೀಮ್‌ ನ ಹಲವು ಆಟಗಾರರ ಸ್ನೇಹ ಬೆಳೆಸಿದ್ದು, ಲಂಡನಿನ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ಕ್ರಿಕೆಟ್‌ ಆಡಿ ಬಂದಿದ್ದು ಎಲ್ಲವೂ ದಾಖಲೆ. ಬರೀ ಕ್ರಿಡಾಂಗಣದಲ್ಲಿ ಮಾತ್ರವಲ್ಲ, ಶೂಟಿಂಗ್‌ ಸಮಯದ  ಬಿಡುವಿನ ವೇಳೆಯಲ್ಲೂ ಅವರು ಬೀದಿಯಲ್ಲೇ ಗಲ್ಲಿ ಬಾಯ್ಸ್‌ ಥರ ಕೈಗೆ ಬ್ಯಾಟ್‌ ಹಿಡಿದು ಆಟಕ್ಕೆ ನಿಲ್ಲುತ್ತಾರಂತೆ. ಇತ್ತೀಚೆಗೆ “ಫ್ಯಾಂಟಮ್‌ʼ ಶೂಟಿಂಗ್‌ ಟೈಮ್ನ್‌ ನಲ್ಲೂ ಕ್ರಿಕೆಟ್‌ ಆಡಿದ್ದು ಅದಕ್ಕೆ ಮತ್ತೊಂದು ಸಾಕ್ಷಿ.

ಅದರಾಚೆ ಅಂದ್ರೆ, ಕ್ರಿಕೆಟ್‌ ಮಾತ್ರವಲ್ಲದೆ ಬ್ಯಾಡ್ಮಿಂಟನ್ ಆಟದಲ್ಲೂ ಅವರದು ಎತ್ತಿದ ಕೈ. ಬ್ಯಾಟ್‌ ಹಿಡಿದು ಕೋರ್ಟ್‌ ನಲ್ಲಿ ನಿಂತರೆ, ಎದುರಾಳಿಗೆ ನಡುಕ ಶುರುವಾಗುವುದು ಗ್ಯಾರಂಟಿ. ಬೆಂಗಳೂರಿನ ಫೆಟ್ಟಲ್‌ ಬ್ಯಾಡ್ಮಿಂಟನ್‌ ಕೋರ್ಟ್‌ ಸೋಮವಾರ ಸಂಜೆ, ಸುದೀಪ್‌ ಅವರು ಪ್ರದರ್ಶಿಸಿದ ಅಂತಹದೊಂದು ಅತ್ಯಾದ್ಭುತ ಬ್ಯಾಡ್ಮಿಂಟನ್‌ ಆಟವನ್ನು ಕಣ್ಣಾರೆ ಕಂಡು, ಒಂದು ತಾಸು ತಾವು ಅವರೊಂದಿಗೆ ಬ್ಯಾಡ್ಮಿಂಟನ್‌ ಅಡಿದ ಅನುಭವವನ್ನು ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್‌ ಇಲ್ಲಿ ಹೀಗೆ ವಿವರಿಸುತ್ತಾರೆ.

ಒವರ್‌ ಟು ಸಂಚಾರಿ ವಿಜಯ್…

ಸೋಮವಾರ ಸಂಜೆ ಎಂದಿನಂತೆ ನಾನು ನನ್ನ ಗೆಳೆಯರು ಫೆಟ್ಟಲ್ ಬ್ಯಾಡ್ಮಿಂಟನ್ ಕೋರ್ಟ್ನಲ್ಲಿ ಬ್ಯಾಡ್ಮಿಂಟನ್ ಆಡುತ್ತಿದ್ದೆವು. ಹೊರಗೆ ಇಳಿ ಸಂಜೆಯಾಗಿ ಮಂದ ಬೆಳಕು ಚೆಲ್ಲಿತ್ತು. ಇನ್ನೇನು ನಾವು ಒಂದು ಸುತ್ತಿನ ಆಟ ಮುಗಿಸಿ, ಎರಡನೇ ಸುತ್ತಿಗೆ ರೆಡಿಯಾಗಬೇಕೆನ್ನುವಾಗ ಇದ್ದಕ್ಕಿದ್ದ ಹಾಗೆ ಬ್ಯಾಡ್ಮಿಂಟನ್ ಕೋರ್ಟಿನ ಬಾಗಿಲು ತೆರೆಯಿತು. ಅಲ್ಲಿಂದ ೬ ಅಡಿಯ ಕಟೌಟ್‌ನ ಕಟ್ಟುಮಸ್ತಾದ ದೇಹಾಕೃತಿಯ ಆಕೃತಿಯೊಂದು ಅಸ್ಪಷ್ಟವಾಗಿ ಕಾಣಿಸಿತು. ನನಗೆ ಈ ಆಕೃತಿಯನ್ನು ಎಲ್ಲೋ ನೋಡಿದ ಹಾಗೆ ಕಾಣುತ್ತಿದೆಯಲ್ಲಾ ಎಂದು ದಿಟ್ಟಿಸಿದೆ. ಹತ್ತಿರ ಹೋಗಿ ನೋಡಿದೆ. ಮಂದನೆಯ ಆ ಲೈಟ್ ಬೆಳಕಿಗೆ ಪ್ರಜ್ವಲಮಾನವಾಗಿ ನಮಗೆ ಕಂಡದ್ದು ಕಿಚ್ಚ ಸುದೀಪ್ ಸರ್. ನಮಗೋ…ಆಶ್ಚರ್ಯವೋ ಆಶ್ಚರ್ಯ. ಸಾಮಾನ್ಯವಾಗಿ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಳ್ಳದ ಸುದೀಪ್‌ ಸರ್‌, ಹೀಗೆ ಧಿಡೀರನೆ ಕಾಣಿಸಿಕೊಂಡಿದ್ದನ್ನು ನೋಡಿ ಒಂದು ಕ್ಷಣ ಮೂಕವಿಸ್ಮಿತರಾದೆವು.

ನಮಗೇನೋ ಭಯ, ಆದ್ರೆ ಅವರು ಕೇಳ್ಬೇಕೆ, ಎಲ್ಲರೊಡನೆ ಒಂದಾಗಿ ಆತ್ಮೀಯವಾಗಿ ನಮ್ಮೆಲ್ಲರ ಯೋಗಕ್ಷೇಮ ವಿಚಾರಿಸಿದರು. ಹಾಗೆ ಮಾತನಾಡುತ್ತಾ ಅತ್ಯಂತ ಆತ್ಮೀಯತೆಯಲ್ಲಿ ಒಂದಾದರು. ಹಾಗೆಯೇ ಮಾತನಾಡುತ್ತಾ ಅವರು ಕೋರ್ಟ್‌ ಒಳಗಡೆ ಬರುತ್ತಿದ್ದಾಗ, ಇವರೇನಾ ತೆರೆಯ ಮೇಲೆ ಅಬ್ಬರಿಸೋ ಕಿಚ್ಚ ಸರ್ ಅನ್ನಿಸಿದ್ದು ಸುಳ್ಳಲ್ಲ.ಆನಂತರ ಸುಮಾರು ಒಂದು ಗಂಟೆಗಳ ಕಾಲ ನಮ್ಮೊಡನೆ ಆಟವಾಡಿದರು. ಒಂದಷ್ಟು ದೈಹಿಕ ಕಸರತ್ತಿನ ಬಗ್ಗೆ ಮಾತನಾಡಿದರು. ಅದೇ ಎನರ್ಜಿ, ಅಷ್ಟೇ ತೂಕದ ಮಾತುಗಳು. ಯಾವ ಹಮ್ಮು-ಬಿಮ್ಮು ಇಲ್ಲದೆ ಎಲ್ಲರ ಜೊತೆಗೂಡಿ ಅವರ ಅಮೂಲ್ಯವಾದ ಸಮಯವನ್ನು ಕಳೆದದ್ದು ಒಂದು ಸುಂದರ ಸಂಜೆಗೆ ಸಾಕ್ಷಿಯಾಯಿತು. ಮತ್ತೆ ಯಾವ ಸಿನೆಮಾ ಮಾಡ್ತಾ ಇದ್ದೀರಿ? ” ಆಕ್ಟ್ 1978ʼ ಸಿನಿಮಾವನ್ನು ಮನೆಯಲ್ಲೇ ನೋಡಿದೆ ತುಂಬಾ ಚೆನ್ನಾಗಿದೆ. ಇಂತಹ ಸಿನಿಮಾಗಳು ಬರಬೇಕು ಅಂತ ಆಕ್ಟ್‌ 1978 ಚಿತ್ರ ತಂಡದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

ಫೆಟ್ಟಲ್‌ ಬ್ಯಾಡ್ಮಿಂಟನ್‌ ಕೋರ್ಟ್‌ ನಲ್ಲಿ ಸೋಮವಾರ ನಟ ಕಿಚ್ಚ ಸುದೀಪ್‌ ಅವರೊಂದಿಗೆ ಕಳೆದ ಆ ಸುಂದರ ಸಮಯವನ್ನು ನಟ ಸಂಚಾರಿ ವಿಜಯ್‌ ಹೀಗೆ ಕಟ್ಟಿಕೊಟ್ಟರು. ಇನ್ನು ತಾವು ಒಬ್ಬ ಸ್ಟಾರ್‌ ನಟರಾದರೂ, ಕಿಂಚಿತ್ತು ಅಹಂ ಇಟ್ಟುಕೊಳ್ಳದೆ ತಾವಾಯಿತು, ತಮ್ಮ ಕೆಲಸವಾಯಿತು ಎನ್ನುವಂತಹ ಮನಸ್ಥಿತಿ ನಡುವೆಯೇ ಸಾಮಾಜಿಕ ಕೆಲಸಗಳಲ್ಲೂ ತೊಡಗಿಸಿಕೊಂಡಿರುವ ನಟ ಸಂಚಾರಿ ಅವರಿಗೂ ಕನ್ನಡದ ಸ್ಟಾರ್‌ ಮೇಲೆ ಅಪಾರ ಪ್ರೀತಿ. ಶಿವರಾಜ್‌ ಕುಮಾರ್‌, ದರ್ಶನ್‌, ಸುದೀಪ್‌, ಪುನೀತ್‌, ಯಶ್‌ ಸೇರಿದಂತೆ ಎಲ್ಲಾ ನಟರ ಪ್ರೀತಿಗೆ ಅವರು ಪಾತ್ರರಾಗಿದ್ದಾರೆ. ವಿಶೇಷವಾಗಿ ಸುದೀಪ್‌ ಅವರ ಬಹು ಮುಖ ಪ್ರತಿಭೆಗೆ ಮಾರು ಹೋಗಿರುವ ಅವರು, ಸುದೀಪ್‌ ಅವರ ಜತೆಗೆ ಸಮಯ ಕಳೆಯುವುದೇ ಸುಂದರ ಎನ್ನುತ್ತಾರೆ. ಇಷ್ಟಾಗಿಯೂ ಬೆಳ್ಳಿ ತೆರೆ ಮೇಲೆ ಕಿಚ್ಚ ಸುದೀಪ್‌ ಅವರೊಂದಿಗೆ ಸಂಚಾರಿ ವಿಜಯ್‌ ಇದುವರೆಗೂ ಕಾಣಿಸಿಕೊಂಡಿಲ್ಲ. ವಿಜಯ್‌ ಅವರಂತಹ ಪ್ರತಿಭಾವಂತಹ ನಟಿನಿಗೂ ಅದ್ಯಾಕೋ ಅಂತಹ ಅವಕಾಶ ಇದುವರೆಗೂ ಸಿಕ್ಕಿಲ್ಲ. ಈಗಲಾದರೂ ಸಿಗಲಿ.

ಮಲಯಾಳಂ ನ ಹೆಸರಾಂತ ನಟ ಮೋಹನ್‌ ಲಾಲ್‌ ಜತೆಗೆ ಸಂಚಾರಿ ವಿಜಯ್
Categories
ಸಿನಿ ಸುದ್ದಿ

ಟಾಲಿವುಡ್‌ಗೆ ಕಾಲಿಟ್ಟ ಮತ್ತೊಬ್ಬಳು ಕನ್ನಡತಿ,’ ಭರಾಟೆ’ ಬೆಡಗಿ ಶ್ರೀಲೀಲಾಗೆ ಸಿಕ್ತು ಬಂಪರ್‌ ಆಫರ್‌!

“ಪೆಳ್ಳಿ ಸಂದಡಿ’ಯಲ್ಲಿ ನಟ ಶ್ರೀಕಾಂತ್‌ ಪುತ್ರ ರೋಷನ್ ಗೆ ಜೋಡಿಯಾದ ʼಕಿಸ್‌ʼ ಖ್ಯಾತಿಯ ಸುಂದರಿ

ಟಾಲಿವುಡ್ ಅಂಗಳದಲ್ಲಿ ಕನ್ನಡದ ನಟಿಯರಿಗೆ ಭಾರೀ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ‘ಕಿರಿಕ್ ಪಾರ್ಟಿ’ ಚಿತ್ರದ ಖ್ಯಾತಿಯ ನಟಿ, ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಅಲ್ಲಿ ಮನೆ ಮಾತಾಗಿರುವ ಬೆನ್ನಲೇ ‘ವಜ್ರಕಾಯ’ ಚಿತ್ರದ ಖ್ಯಾತಿಯ ನಟಿ ನಭಾ ನಟೇಶ್ ಕೂಡ ಅಲ್ಲಿ ಕನ್ನಡದ ಬ್ಯುಸಿ ನಟಿ. ಈಗ ಆ ಸಾಲಿಗೆ ಹೊಸ ಸೇರ್ಪಡೆ ‘ಕಿಸ್’ ಖ್ಯಾತಿಯ ಚೆಲುವೆ ಶ್ರೀಲೀಲಾ. ಮೂಲತಃ ಕನ್ನಡದವರೇ ಆದ ಟಾಲಿವುಡ್ ನ ಹೆಸರಾಂತ ನಟ ಶ್ರೀಕಾಂತ್ ಪುತ್ರ ರೋಷನ್ ಅಭಿನಯದ ಹೊಸ ಚಿತ್ರಕ್ಕೆ ಶ್ರೀ ಲೀಲಾ ನಾಯಕಿ ಆಗಿ ಆಯ್ಕೆಯಾಗಿದ್ದಾರೆ. ತೆಲುಗಿನಲ್ಲಿ ಇದು ಶ್ರೀಲೀಲಾ ಆಭಿನಯದ ಚೊಚ್ಚಲ ಚಿತ್ರ. ಇದೇ ತಿಂಗಳು ಅದಕ್ಕೆ ಚಿತ್ರೀಕರಣ ಕೂಡ ಆರಂಭ.

‘ಪೆಳ್ಳಿ ಸಂದಡಿ’ ಎನ್ನುವುದು ಈ ಚಿತ್ರದ ಹೆಸರು. ರೋಷನ್ ಹಾಗೂ ಶ್ರೀಲೀಲಾ ಇಲ್ಲಿ ಜೋಡಿ. ಇದು ಶ್ರೀಕಾಂತ್ ಅಭಿನಯಿಸಿದ್ದ ಚಿತ್ರದ ಹೆಸರು ಕೂಡ. 1996 ರಲ್ಲಿ ಶ್ರೀಕಾಂತ್ ಅಭಿನಯದ ‘ಪೆಳ್ಳಿ ಸಂದಡಿ’ ಚಿತ್ರ ತೆರೆಗೆ ಬಂದಿತ್ತು. ಆ ಕಾಲಕ್ಕೆ ಇದು ಸೂಪರ್ ಡೂಪರ್ ಹಿಟ್ ಚಿತ್ರ. ತೆಲುಗು ಚಿತ್ರರಂಗದಲ್ಲಿ ಶ್ರೀಕಾಂತ್ ದೊಡ್ಡ ಸ್ಟಾರ್ ಆಗಿ ಸಕ್ಸಸ್ ಕಂಡ ಸಿನಿಮಾ. ಅಲ್ಲಿಂದ ಅವರ ತಾರಾ ವರ್ಚಸ್ಸೇ ಬದಲಾಗಿದ್ದು ಇತಿಹಾಸ. ಅದೀಗ ಬಂದು ಹೋಗಿ ಇಲ್ಲಿಗೆ 25 ವರ್ಷ. ಅದೇ ಚಿತ್ರದ ಹೆಸರಲ್ಲಿ ಶ್ರೀಕಾಂತ್ ಪುತ್ರ ಕೂಡ ಅಭಿನಯಿಸುತ್ತಿದ್ದಾರೆ. ಅವರಿಗೆ ಇಲ್ಲಿ ಶ್ರೀಲೀಲಾ ನಾಯಕಿ ಎನ್ನುವುದು ವಿಶೇಷ.

 

” ಸುಮಾರು ಏಳು ತಿಂಗಳ ಹಿಂದೆ ಬಂದ ಆಫರ್ ಇದು. ಅಲ್ಲಿಂದ ಇದು ಮಾತುಕತೆ ಹಂತದಲ್ಲಿತ್ತು. ಕೊನೆಗೊಂದು ದಿನ ಕತೆ ಕೇಳಿ ಓಕೆ ಕೂಡ ಆಯಿತು. ಆದರೆ ಸಿನಿಮಾ ಶುರುವಾಗುವುದಕ್ಕೆ ಕೊರೋನಾ ಆತಂಕ ಇತ್ತಲ್ವಾ,, ಹಾಗಾಗಿ ಒಂದಷ್ಟು ತಡವಾಯಿತು. ಆದರೂ ಚಿತ್ರ ತಂಡ ಸಿನಿಮಾ ಪ್ರೀ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಆಗಿತ್ತು. ಈಗ ಎಲ್ಲವೂ ರೆಡಿ. ಇದೇ ತಿಂಗಳಿನಿಂದ ಚಿತ್ರೀಕರಣ ಶುರು. ಫಸ್ಟ್ ಟೈಮ್ ಟಾಲಿವುಡ್ ಗೆ ಎಂಟ್ರಿ ಆಗುತ್ತಿದ್ದೇನೆ. ಖುಷಿ ಆಗುತ್ತಿದೆ. ಹಾಗೆ ಒಂದ್ರೀತಿ ಭಯವೂ ಇದೆ. ಆದರೂ ಒಳ್ಳೆಯ ತಂಡ ಸಿಕ್ಕಿರೋದು ಖುಷಿ ತರಿಸಿದೆ’ ಎನ್ನುವ ಮೂಲಕ ಇದೇ ಮೊದಲು ಕನ್ನಡದಿಂದ ಟಾಲಿವುಡ್ ಗೆ ಹೋಗುತ್ತಿರುವ ಖುಷಿ ಹಂಚಿಕೊಳ್ಳುತ್ತಾರೆ ನಟಿ ಶ್ರೀಲೀಲಾ. ಸದ್ಯಕ್ಕೆ ಶ್ರೀಲೀಲಾ ಕನ್ನಡದಲ್ಲಿ ನಂದ್ ಕಿಶೋರ್ ನಿರ್ದೇಶನ ಹಾಗೂ ಧ್ರುವ ಸರ್ಜಾ ಅಭಿನಯದ ‘ದುಬಾರಿ’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

 

ಒಂದು ಸಿನಿಮಾದ ಸೆಟ್ ನಲ್ಲಿ ನಟ ಶ್ರೀಕಾಂತ್ ಅವರನ್ನು ಭೇಟಿ ಮಾಡಿದ್ದೆ. ಟಾಲಿವುಡ್ ಆಕ್ಟರ್ ಅಲ್ವಾ ಅಂತ ನಾನು ತೆಲುಗಿನಲ್ಲಿ ಮಾತನಾಡಲು ಹೋದ್ರೆ, ಅವರೇ ಕನ್ನಡದಲ್ಲಿ ಮಾತನಾಡಿ ಅಚ್ಚರಿ ಮೂಡಿಸಿದ್ರು. ಅವತ್ತಿನಿಂದ ಅವರೊಂದಿಗೆ ಮಾತನಾಡುವುದಕ್ಕೆ ಖುಷಿ ಎನಿಸಿತು. ಕಾಕಕಾಳೀಯ ಎನ್ನುವಂತೆ ಅವರ ಪುತ್ರನ ಸಿನಿಮಾಕ್ಕೆ ನಾಯಕಿ ಆಗುವ ಆಫರ್ ಬಂದಾಗ ನಂಗೆ ಶ್ರೀಕಾಂತ್ ಸರ್ ಜೊತೆ ಮಾತನಾಡಿದ್ದೆ ನೆನಪಾಯಿತು. ಹೈದ್ರಾಬಾದ್ ನಲ್ಲಿ ಅವರನ್ನು ಭೇಟಿಯಾದಾಗ ಅದೇ ಖುಷಿ ಹಂಚಿಕೊಂಡೆ. ಅವರು ಕೂಡ ತುಂಬಾ ಸಂತೋಷ ಪಟ್ಟರು.
-ಶ್ರೀಲೀಲಾ, ನಟಿ

ಶ್ರೀಕಾಂತ್ ಅಭಿನಯದ ‘ಪೆಳ್ಳಿ ಸಂದಡಿ’ ಚಿತ್ರಕ್ಕೆ ತೆಲುಗಿನ ಹೆಸರಾಂತ ನಿರ್ದೇಶಕ ಕೆ. ರಾಘವೇಂದ್ರ ರಾವ್ ಆಕ್ಷನ್ ಕಟ್ ಹೇಳಿದ್ದರು. ಅವರೇ ಕತೆ, ಚಿತ್ರಕತೆ ಬರೆದಿದ್ದರು. ಈಗ ಅದೇ ಹೆಸರಿನಲ್ಲಿ ನಿರ್ಮಾಣ ವಾಗುತ್ತಿರುವ ಶ್ರೀಕಾಂತ್ ಪುತ್ರನ ಸಿನಿಮಾಕ್ಕೆ ಗೌರಿ ರಣಂಕಿ ಆಕ್ಷನ್ ಕಟ್ ಹೇಳುತ್ತಿದ್ದರೂ, ನಿರ್ದೇಶನದ ಉಸ್ತುವಾರಿ ಕೆ. ರಾಘವೇಂದ್ರ ರಾವ್ ಅವರೇ ವಹಿಸಿಕೊಂಡಿದ್ದಾರಂತೆ. ಪುತ್ರನಿಗೆ ದೊಡ್ಡ ಸಕ್ಸಸ್ ಕೊಡಿಸುವ ಕಾರಣಕ್ಕೆ ಶ್ರೀಕಾಂತ್ ಅವರೇ ರಾಘವೇಂದ್ರ ರಾವ್ ಅವರ ಮೊರೆ ಹೋಗಿದ್ದಾರಂತೆ. ಇನ್ನು ರೋಷನ್ ಗೆ ಇದು ಎರಡನೇ ಚಿತ್ರ. ಮೂರು ವರ್ಷಗಳ ಹಿಂದೆ ‘ನಿರ್ಮಲಾ ಕಾನ್ವೆಂಟ್’  ಹೆಸರಿನ ಚಿತ್ರದಲ್ಲಿ ಅಭಿನಯಿಸಿದ್ದರು. ಅದೇನು ಅಂತಹ ಸಕ್ಸಸ್ ಕಂಡಿರಲಿಲ್ಲ.

Categories
ಸಿನಿ ಸುದ್ದಿ

ಬಳ್ಳಾರಿಯ ಗಣಿ ಧೂಳಿನಲ್ಲಿ ಅಬ್ಬರಿಸುತ್ತಿದೆ ʼವೀರಂʼ !

ಇದು ಪ್ರಜ್ವಲ್‌ ಸಿನಿಮಾ ಅಲ್ಲ, ಹೊಸಬರ ಟೆಲಿ ಮೂವೀ…

ವೀರಂʼ ಹೆಸರಲ್ಲೊಂದು ಸಿನಿಮಾ ಬರುತ್ತಿದೆ. ಅದು ಡೈನಾಮಿಕ್‌ ಪ್ರಿನ್ಸ್‌ ಪ್ರಜ್ವಲ್‌ ದೇವರಾಜ್‌ ಅಭಿನಯದ ಸಿನಿಮಾ. ಅದಿನ್ನು ಚಿತ್ರೀಕರಣದ ಹಂತದಲ್ಲಿದೆ. ಈ ನಡುವೆಯೇ ಸ್ಯಾಂಡಲ್‌ವುಡ್‌ ನಲ್ಲೊಂದು ಅದೇ ಹೆಸರಲ್ಲೊಂದು ಮತ್ತೊಂದು ಸಿನಿಮಾ ಬರುತ್ತಿದೆ. ಈಗ ಅದರ ಟ್ರೈಲರ್‌ ಲಾಂಚ್‌ ಆಗಿದೆ.

ಅರೆ, ಒಂದೇ ಹೆಸರಿನ ಎರಡು ಸಿನಿಮಾವೇ? ಅದು ಸಿನಿಮಾ, ಇದು ಟೆಲಿ ಸಿನಿಮಾ. ಹೌದು, ಬಳ್ಳಾರಿ ಮೂಲದ ಯುವಕರ ಒಂದು ಗಂಪು “ವೀರಂʼ ಹೆಸರಲ್ಲೊಂದು ಟೆಲಿ ಸಿನಿಮಾ ಮಾಡಿದೆ. ಸುಮಾರು 1 ಗಂಟೆಯಷ್ಟು ಅವದಿಯ ಟೆಲಿ ಚಿತ್ರ ಇದು.ಯಾವುದೇ ಬಿಗ್‌ ಬಜೆಟ್‌ ಸಿನಿಮಾಕ್ಕೂ ಕಮ್ಮಿ ಇಲ್ಲದಂತೆ ಮೂಡಿ ಬಂದಿದೆ. ಸದ್ಯಕ್ಕೆ ಅದರ ಅದ್ದೂರಿ ಮೇಕಿಂಗ್‌ ಗೆ ಒಂದು ಸ್ಯಾಂಪಲ್‌ 1 ನಿಮಿಷ 46 ಸೆಕೆಂಡ್‌ ಗಳ ಟ್ರೈಲರ್.‌

ಇದು ಪಕ್ಕಾ ಮಾಸ್‌ ಸಿನಿಮಾ. ರೌಡಿಸಂನ ಶುದ್ಧ ರಾ ಲುಕ್ ಇಲ್ಲಿದೆ.‌ ಇದರ ಹಿಂದೆ ಇದ್ದವರು ಬಳ್ಳಾರಿಯವರು ಅಂದ್ರೆ ಕೇಳಬೇಕೆ, ಅಲ್ಲಿನ ಗಣಿ ಧೂಳು ಹಾರುವಂತೆ ಖಡಕ್‌ ಡೈಲಾಗ್‌ ಪೊಣಿಸಿ, ಜಬರ್ದಸ್ತ್‌ ಆಗಿಯೇ ಟ್ರೈಲರ್‌ ಕಟ್‌ ಮಾಡಿಸಿದೆ ಚಿತ್ರ ತಂಡ. ರೌಡಿಸಂ, ಗೂಡಾಯಿಸಂ, ದಾದಾಗಿರಿ… ಎನ್ನುವ ಮೂರು ಪದಗಳ ಅರ್ಥ ಒಂದೆ, ನಾನು ಎನ್ನುವ ಸ್ವಾರ್ಥ, ಅಹಂ ಎನ್ನುವ ಖಡಕ್‌ ಡೈಲಾಗ್‌ ಮೂಲಕ ಟ್ರೈಲರ್‌ ನಲ್ಲಿ ಭರ್ಜರಿ ಅಬ್ಬರಿಸಿದ್ದಾರೆ ಚಿತ್ರದ ನಾಯಕ ಸುಭಾಸ್‌ ಚಂದ್ರ.

ಅಂದ ಹಾಗೆ, “ವೀರಂʼ ಟೆಲಿ ಚಿತ್ರದ ನಾಯಕ ಸುಭಾಷ್‌ ಚಂದ್ರ ಸೇರಿದಂತೆ ಇದರ ಸೃಷ್ಟಿಕರ್ತರೆಲ್ಲರೂ ಹೊಸಬರು. ಶಿವಚಂದ್ರ ಪ್ರೊಡಕ್ಷನ್‌ ಮೂಲಕ ನಿರ್ಮಾಣವಾದ ಈ ಟೆಲಿ ಚಿತ್ರಕ್ಕೆ ಶಿವ ಚಂದ್ರ ಹಾಗೂ ಭೀಮನಾಯ್ಕ ಬಂಡಾವಾಳ ಹೂಡಿದ್ದಾರೆ. ಲಕ್ಷ್ಮಣ್‌ ಕೇಸರಿ ಆಕ್ಷನ್‌ ಕಟ್‌ ಹೇಳಿದ್ದಾರೆ. ನಿರ್ದೇಶಕರಾಗಿ ಇವರಿಗೆ ಇದು ಚೊಚ್ಚಲ ಚಿತ್ರ. ಹಾಗಂತ ಬಣ್ಣದ ಲೋಕ ಹೊಸದಲ್ಲ. ಸಾಕಷ್ಟು ವರ್ಷಗಳಿಂದ ಸಿನಿಮಾ ರಂಗದಲ್ಲಿದ್ದು ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ ಅವರದು. ಈಗ ಅಲ್ಲಿಂದ ಸ್ವತಂತ್ರ ನಿರ್ದೇಶಕರಾಗಿ ಬಡ್ತಿ ಪಡೆಯಲು ಮುಂದಾಗಿದ್ದಾರೆ. ಅದೇ ಪ್ರಯತ್ನದಲ್ಲೀಗ ʼವೀರಂʼ ಹೆಸರಿನ ಟೆಲಿ ಚಿತ್ರ ನಿರ್ದೇಶಿಸಿ, ರಿಲೀಸ್‌ ಮಾಡಲು ರೆಡಿ ಆಗಿದ್ದಾರೆ. ಹಾಗಾದ್ರೆ, ಇದರಿಂದ ಅವರಿಗೇನು ಲಾಭ?

” ಕಿರು ಚಿತ್ರ ಅಥವಾ ಟೆಲಿ ಚಿತ್ರಗಳ ನಿರ್ಮಾಣ ಅನ್ನೋದು ಕನ್ನದ ಮಟ್ಟಿಗೆ ಈಗಲೂ ಆದಾಯದ ಮೂಲ ಆಗಿಲ್ಲ. ಸೋಷಲ್‌ ಮೀಡಿಯಾ ಬಲಿಷ್ಟ ಆದ ನಂತರ ಅಲ್ಲಿ ಇವು ತೆರೆ ಕಂಡರೆ ಲೈಕ್ಸ್‌ , ಕಾಮೆಂಟ್‌ ಆಧರಿಸಿ ಒಂದಷ್ಟು ಆದಾಯ ಬರುತ್ತೆ ಎನ್ನುವುದನ್ನು ಬಿಟ್ಟರೆ, ಬಹುತೇಕ ಈ ಪ್ರಯತ್ನಗಳೆಲ್ಲ ನಮ್ಮನ್ನು ನಾವು ಪ್ರದರ್ಶಿಸಿಕೊಳ್ಳುವುದಕ್ಕಾಗಿಯೇ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದು ಕೂಡ ಅಂತಹದೇ ಒಂದು ಪ್ರಯತ್ನವೇ ಹೌದು. ಲಾಕ್‌ ಡೌನ್‌ ಸಮಯದಲ್ಲಿ ನಾವೆಲ್ಲ ಕೆಲಸ ಕಾರ್ಯಗಳಿಲ್ಲದೆ ಮನೆಯಲ್ಲಿದ್ದಾಗ, ಹೊಸತೇನಾದರೂ ಮಾಡೋಣ ಅಂತ ಯೋಚಿಸಿದೆವು. ಆಗ ಹೊಳೆದಿದ್ದು ವೀರಂ ಟೆಲಿ ಮೂವೀ. ಅವತ್ತು ನಾವು ಅಂದುಕೊಂಡಿದ್ದಕ್ಕಿಂತ ಈಗದು ತೆರೆ ಮೇಲೆ ಚೆನ್ನಾಗಿ ಬಂದಿದೆ. ಯಾವುದೇ ಬಿಗ್‌ ಬಜೆಟ್‌ ಸಿನಿಮಾಕ್ಕೂ ಕಮ್ಮಿ ಇಲ್ಲದಂತೆ ಮೂಡಿ ಬಂದಿದೆ ಅಂತ ಟ್ರೈಲರ್‌ ನೋಡಿದವರು ಹೇಳುತ್ತಿದ್ದಾರೆ. ಇದು ಖುಷಿ ತಂದಿದೆʼ ಎನ್ನುತ್ತಾರೆ ನಿರ್ದೇಶಕ ಲಕ್ಷ್ಮಣ್‌ ಕೇಸರಿ.

ಇದು ನಿಜವೂ ಹೌದು. ಟ್ರೈಲರ್ ನೋಡಿದವರಿಗೆ ಅವರ ನಿರ್ದೇಶನದ ಕೌಶಲ್ಯ ಗೊತ್ತಾಗುತ್ತದೆ. ಲಾಂಚ್‌ ಆಗಿ ಮೂರ್ನಾಲ್ಕು ದಿನಗಳಲ್ಲಿ ಸೋಷಲ್‌ ಮೀಡಿಯಾದಲ್ಲಿ ಅದು ವೈರಲ್‌ ಆಗಿದೆ. ವಿಶೇಷ ಅಂದ್ರೆ ಇಷ್ಟು ಗುಣಮಟ್ಟದ ಒಂದು ಟೆಲಿ ಮೂವೀ , ಕೇವಲ ಒಂದು ರೂ. ವೆಚ್ಚದಲ್ಲಿ ನಿರ್ಮಾಣವಾಗಿದೆ ಅಂದ್ರೆ ನಿಮಗೂ ಅಚ್ಚರಿ ಆಗಬಹುದು. ಏಳು ದಿನಗಳ ಕಾಲ ಚಿತ್ರೀಕರಣ ನಡೆದಿದೆಯಂತೆ. ತಾರಾಗಣದಲ್ಲಿ ಸುಭಾಷ್‌ ಚಂದ್ರ ಅವರೊಂದಿಗೆ ವರುಣ್‌ ವರಧಿ, ಮನೋಹರ್‌, ಶ್ರೀ ನಿಧಿ, ಟ್ಯಾಟು ಮಂಜು, ಪುರುಷೋತ್ತಮ್‌ ಸೇರಿದಂತೆ ದೊಡ್ಡ ದಂಡೇ ಇದೆ. ಹಾಗೆಯೇ ನುರಿತ ತಾಂತ್ರಿಕ ವರ್ಗವೇ ಇಲ್ಲಿ ಸಾಥ್‌ ನೀಡಿದೆ. ನವೀನ್‌ ನಾಯ್ಡು ಛಾಯಾಗ್ರಹಣ ಮಾಡಿದ್ದರೆ, ಸಾಯಿ ವಂಶಿ ಸಂಗೀತ, ವಿನೋದ್‌ ಸಂಕಲನ ಮಾಡಿದ್ದು, ರಾ ಲುಕ್‌ ಗೆ ಹೆಚ್ಚು ಆದ್ಯತೆ ನೀಡಿದೆ. ಇಷ್ಟರಲ್ಲೇ ಇದನ್ನು ಯುಟ್ಯೂಬ್‌ ಮೂಲಕ ಲಾಂಚ್‌ ಮಾಡಲು ಚಿತ್ರ ತಂಡ ಸಿದ್ದತೆ ನಡೆಸಿದೆಯಂತೆ. ಸಿನಿಮಾದತ್ತ ಮುಖ ಮಾಡಿರುವ ಹೊಸಬರ ತಂಡಕ್ಕೆ ಒಳ್ಳೆಯದಾಗಲಿ.

Categories
ಸಿನಿ ಸುದ್ದಿ

ಕಿಚ್ಚ ಸುದೀಪ್‌ ಅಭಿನಯದ ” ಫ್ಯಾಂಟಮ್‌ʼ ಚಿತ್ರದ ಟೈಟಲ್‌ ಬದಲಾಗುತ್ತಾ?

“ಫ್ಯಾಂಟಮ್ʼ ಬಿಟ್ಟು ʼವಿಕ್ರಾಂತ್‌ ರೋಣʼ ಕಡೆ ಮನಸ್ಸು ಮಾಡಿದೆಯಂತೆ ಚಿತ್ರ ತಂಡ

ಕಿಚ್ಚ ಸುದೀಪ್‌ ಅಭಿನಯದ ಬಹು ನಿರೀಕ್ಷಿತ ಚಿತ್ರ ʼಫ್ಯಾಂಟಮ್”‌  ಚಿತ್ರೀಕರಣ ಬಹುತೇಕ ಕ್ಲೈ ಮ್ಯಾಕ್ಸ್‌ ಹಂತಕ್ಕೆ ಬಂದಿದೆ. ಇನ್ನೇನು ಎರಡು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ. ಈಗಾಗಲೇ ಚಿತ್ರ ತಂಡ ಪೂಣೆ, ಹೈದ್ರಾಬಾದ್‌, ಕೇರಳ ಹಾಗೂ ಬೆಂಗಳೂರು ಸೇರಿದಂತೆ ನಾಲ್ಕು ಹಂತಗಳಲ್ಲಿ ಚಿತ್ರೀಕರಣ ನಡೆಸಿದೆ. ಸದ್ಯಕ್ಕೆ ಹಾಡಿನ ಚಿತ್ರೀಕರಣಕ್ಕೆ ಬೆಂಗಳೂರಿನಲ್ಲೆ ಸೆಟ್‌ ಹಾಕಿ, ಚಿತ್ರೀಕರಿಸಲು ನಿರ್ಧರಿಸಿದೆಯಂತೆ. ಈ ಹಂತದಲ್ಲೇ ʼ ಫ್ಯಾಂಟಮ್‌ʼ ಚಿತ್ರ ತಂಡದಿಂದ ಬ್ರೇಕಿಂಗ್‌ ಸುದ್ದಿಯೊಂದು ಹೊರ ಬಿದ್ದಿದೆ. ಇಲ್ಲಿನ ತನಕ ಇದ್ದ ಚಿತ್ರದ ಶೀರ್ಷಿಕೆಯೇ ಬದಲಾಗುತ್ತಿದೆಯಂತೆ. ಖಚಿತ ಮೂಲಗಳ ಪ್ರಕಾರʼ ಫ್ಯಾಂಟಮ್‌ʼ ಬದಲಿಗೆ ಚಿತ್ರ ತಂಡವು ಚಿತ್ರಕ್ಕೆ “ವಿಕ್ರಾಂತ್‌ ರೋಣʼ ಎಂದು ಹೆಸರಿಸಲು ಹೊರಟಿದೆಯಂತೆ.

ಇದು ಹಂಡ್ರೆಂಡ್‌ ಪರ್ಸೆಂಟ್‌ ಖರೆ ಅಂತ ಹೇಳೋದಿಲ್ಲ, ಆದರೂ ಇಂತಹದೊಂದು ಸುದ್ದಿ ಕೇಳಿ ಬಂದಿದೆ. ಈಗಾಗಲೇ ʼ ಫ್ಪ್ಯಾಂಟಮ್‌ʼ ಎನ್ನುವ ಟೈಟಲ್‌ ವಿವಾದದಲ್ಲಿರುವುದರಿಂದ ಅದನ್ನು ಅಲ್ಲಿಯೇ ಕೈ ಬಿಟ್ಟು ಚಿತ್ರಕ್ಕೆ ʼವಿಕ್ರಾಂತ್‌ ರೋಣʼ ಎನ್ನುವ ಹೆಸರನ್ನೇ ಚಿತ್ರದ ಟೈಟಲ್‌ ಆಗಿಸಿಕೊಳ್ಳುವ ಆಲೋಚನೆ ಚಿತ್ರದ ನಿರ್ದೇಶಕರು ಹಾಗೂ ನಿರ್ಮಾಪಕರಲ್ಲಿ ಚರ್ಚೆ ನಡೆದಿದೆಯಂತೆ. ಸದ್ಯಕ್ಕೆ ಇದಕ್ಕೆ ಚಿತ್ರದ ನಾಯಕ ನಟ ಸುದೀಪ್‌ ಏನ್‌ ಹೇಳಿದ್ರು ಅಂತಲೂ ಗೊತ್ತಿಲ್ಲ. ಸದ್ಯಕ್ಕೆ ಈ ಚರ್ಚೆಯೂ ಅಲ್ಲಿ ತನಕ ಹೋಗಿಲ್ಲವಂತೆ. ಆದರೆ, ನಿರ್ದೇಶಕ ಅನೂಪ್‌ ಭಂಡಾರಿ, ನಿರ್ಮಾಪಕರಾದ ಜಾಕ್‌ ಮಂಜು ನಡುವೆಯೇ ಈ ಚರ್ಚೆ ನಡೆದಿದೆಯಂತೆ ಎನ್ನುತ್ತಿವೆ ಮೂಲಗಳು.

ಚಿತ್ರ ತಂಡದ ಮಾಹಿತಿ ಇದಿಷ್ಟೇ ಅಲ್ಲ, ಬದಲಾದ ಟೈಟಲ್‌ ಅನ್ನು ಚಿತ್ರ ತಂಡ ದುಬೈನ ವಿಶ್ವ ವಿಖ್ಯಾತ ಬಹುಮಹಡಿ ಕಟ್ಟಡ ಬುರ್ಜಾ ಖಾಲೀಪ್‌ ದಲ್ಲಿ ಲಾಂಚ್‌ ಮಾಡುತ್ತಿದೆ. ತೆರೆ ಮರೆಯಲ್ಲೇ ಅದಕ್ಕೆ ಎಲ್ಲಾ ಸಿದ್ಧತೆಗಳು ಜೋರಾಗಿ ನಡೆದಿದೆಯಂತೆ. ಇನ್ನು ವಿಕ್ರಾಂತ್‌ ರೋಣ ಎನ್ನುವುದು ಈ ಚಿತ್ರದಲ್ಲಿನ ಕಥಾ ನಾಯಕನ ಹೆಸರು. ಅದಕ್ಕೆ ನಟ ಕಿಚ್ಚ ಸುದೀಪ್‌ ಬಣ್ಣ ಹಚ್ಚಿದ್ದಾರೆ. ಹಾಗೆಯೇ ನಿರ್ದೇಶಕ ಅನೂಪ್‌ ಭಂಡಾರಿ ಸಹೋದರ ನಿರೂಪ್‌ ಭಂಡಾರಿ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ. ಅವರೊಂದಿಗೆ ದೊಡ್ಡ ತಂಡವೇ ಚಿತ್ರದಲ್ಲಿದೆ. ದೊಡ್ಡ ತಾರಾಗಣದ ಜತೆಗೆ ಅದ್ದೂರಿ ವೆಚ್ಚದ ಸೆಟ್‌ ನಲ್ಲಿ ಚಿತ್ರೀಕರಣಗೊಂಡಿದೆ. ಇದೆಲ್ಲ ವಿಶೇಷತೆಯ ಜತೆಗೆ ಕುತೂಹಲ ಮೂಡಿಸಿರುವ ಈ ಚಿತ್ರ ಈಗ ಟೈಟಲ್‌ ಬದಲಾವಣೆಯ ಮೂಲಕವೂ ದೊಡ್ಡ ಸುದ್ದಿ ಮಾಡಲು ಹೊರಟಿದೆಯಂತೆ.

Categories
ಸಿನಿ ಸುದ್ದಿ

ಡಬ್ಬಿಂಗ್‌ ಬ್ಯುಜಿಯೋ ಬ್ಯುಜಿ – ಸ್ಟುಡಿಯೋ ಖಾಲಿ ಇಲ್ಲ, ಕಲಾವಿದರೂ ಖಾಲಿ ಕೂತಿಲ್ಲ

ಇದು ಡಬ್ಬಿಂಗ್‌ ಲಾಭ-ನಷ್ಟದ ಲೆಕ್ಕಾಚಾರ

ಕನ್ನಡಕ್ಕೆ ಡಬ್ಬಿಂಗ್‌ ಬಂದರೆ ಕನ್ನಡ ಚಿತ್ರರಂಗದಲ್ಲಿ ದುಡಿಯುತ್ತಿರುವ ಅನೇಕರಿಗೆ ಸಮಸ್ಯೆ ಕಟ್ಟಿಟ್ಟ ಬುತ್ತಿ..!
– ಈ ಮಾತು ಹಿಂದಿನಿಂದಲೂ ಕೇಳಿಬರುತ್ತಲೇ ಇತ್ತು. ಈ ಕಾರಣಕ್ಕಾಗಿಯೇ ಮೊದಲಿನಿಂದಲೂ ಡಬ್ಬಿಂಗ್‌ ಅನ್ನು ವಿರೋಧಿಸುತ್ತಲೇ ಬರಲಾಗುತ್ತಿತ್ತು. ಡಾ.ರಾಜಕುಮಾರ್‌ ಅವರ ನೇತೃತ್ವದಲ್ಲಿ ಡಬ್ಬಿಂಗ್‌ ವಿರೋಧ ಜೋರಾಗಿಯೇ ಇತ್ತು. ಆದರೆ, ಈಗ…?
ಕಾಲ ಬದಲಾಗಿದೆ. ಡಬ್ಬಿಂಗ್‌ ವಿರೋಧದ ಧ್ವನಿಯೂ ಕ್ಷೀಣವಾಗಿದೆ. ಅಂದುಕೊಂಡಿದ್ದು ಇಲ್ಲಿ ಯಾವುದೂ ನಡೆಯುತ್ತಿಲ್ಲ. ಮುಕ್ತವಾಗಿಯೇ ಈಗ ಡಬ್ಬಿಂಗ್‌ ತಲೆ ಎತ್ತಿರುವುದರಿಂದ ಯಾರೊಬ್ಬರೂ ಮಾತನಾಡುತ್ತಿಲ್ಲ. “ಮೌನಂ ಸಮ್ಮತಿ ಲಕ್ಷಣಂ” ಅನ್ನುವಂತಾಗಿದೆ. ಹೌದು, ಡಬ್ಬಿಂಗ್‌ ಅಲೆ ಈಗ ಜೋರಾಗಿದೆ. ಪರಭಾಷೆಯ ಸಿನಿಮಾಗಳಷ್ಟೇ ಅಲ್ಲ, ಧಾರಾವಾಹಿಗಳು ಕೂಡ ಕನ್ನಡಕ್ಕೆ ಡಬ್‌ ಆಗಿ ಪ್ರಸಾರವಾಗುತ್ತಿವೆ. ಈಗಾಗಲೇ ನೂರಾರು ಚಿತ್ರಗಳು, ಧಾರಾವಾಹಿಗಳು ಕನ್ನಡಕ್ಕೆ ಡಬ್‌ ಆಗಿದ್ದು, ಪ್ರೇಕ್ಷಕರ ಮುಂದೆ ಬಂದಿರುವುದೂ ಉಂಟು. ಹಲವು ಚಿತ್ರಗಳು ಚಿತ್ರಮಂದಿರಕ್ಕೂ ಲಗ್ಗೆ ಇಟ್ಟಿರುವುದಷ್ಟೇ ಅಲ್ಲ, ಒಟಿಟಿ ಫ್ಲಾಟ್‌ಫಾರಂನಲ್ಲೂ ಕಾಣಿಸಿಕೊಳ್ಳುತ್ತಿವೆ.

ಇದು ನೇರವಾಗಿ ಕನ್ನಡ ಚಿತ್ರರಂಗದಲ್ಲಿ ದುಡಿಯುವ ಮಂದಿ ಮೇಲೆ ಪರಿಣಾಮ ಬೀರಿದೆ. ಇಂದು ಡಬ್ಬಿಂಗ್‌ ಅಲೆ ಹೆಚ್ಚಾಗಿದ್ದರಿಂದ ಕನ್ನಡ ಚಿತ್ರರಂಗದ ಅದೆಷ್ಟೋ ಕಿರಿಯ ಕಲಾವಿದರು, ಸಹ ಕಲಾವಿದರು, ಒಕ್ಕೂಟದ ಕಾರ್ಮಿಕರು ಇಂದು ಕೆಲಸವಿಲ್ಲದೆ ಪರಿತಪಿಸುವಂತಾಗಿದೆ. ಲಾಕ್‌ಡೌನ್‌ ಸಮಯದಲ್ಲಿ ಸಾಕಷ್ಟು ಸಿನಿಮಾಗಳು ಕನ್ನಡಕ್ಕೆ ಡಬ್‌ ಆಗಿ ನೇರ ಒಟಿಟಿಯಲ್ಲಿ ಪ್ರತ್ಯಕ್ಷಗೊಂಡವು. ಇನ್ನು ಬಹುತೇಕ ಜನರು ತಿಂಗಳುಗಟ್ಟಲೆ ಮನೆಯಲ್ಲೇ ಇದ್ದುರಿಂದ ಅವರೆಲ್ಲರೂ ತಮ್ಮ ಮನೆಯಲ್ಲೇ ಕಿರುತೆರೆಯಲ್ಲಿ ಪ್ರಸಾರವಾಗುವ ಡಬ್ಬಿಂಗ್‌ ಸೀರಿಯಲ್‌ ನೋಡುವಂತಾಯಿತು. ಈಗ ಲಾಕ್‌ಡೌನ್‌ ಸಡಿಲಗೊಂಡಿದೆ. ಆದರೆ, ಡಬ್ಬಿಂಗ್‌ ಸಿನಿಮಾಗಳು, ಧಾರಾವಾಹಿಗಳು ನಿಂತಿಲ್ಲ. ಇದರಿಂದ ಸ್ಯಾಂಡಲ್‌ವುಡ್‌ನ ಬಹಳಷ್ಟು ಮಂದಿಗೆ ದೊಡ್ಡ ಪೆಟ್ಟು ಬಿದ್ದಿರುವುದಂತೂ ನಿಜ.

ಹಾಗೆ ನೋಡಿದರೆ, ಡಬ್ಬಿಂಗ್‌ನಿಂದ ಎಲ್ಲವೂ ಹಾಳಾಗಿದೆ ಅಂತ ಹೇಳುತ್ತಿಲ್ಲ. ಡಬ್ಬಿಂಗ್‌ ಬಂದು ಒಂದಷ್ಟು ಜನರ ಕೆಲಸವನ್ನು ಕಸಿದುಕೊಂಡಿದ್ದು ಬಿಟ್ಟರೆ, ಒಂದಷ್ಟು ಜನರ ಮೊಗದಲ್ಲಿ ಮಂದಹಾಸ ಮೂಡಿಸಿದಂತೂ ನಿಜ. ಇದನ್ನು ಇನ್ನಷ್ಟು ವಿಸ್ತರಿಸಿ ಹೇಳುವುದಾದರೆ, ಡಬ್ಬಿಂಗ್‌ ಎಂಟ್ರಿಯಾಗಿದ್ದರಿಂದ ಅನೇಕ ಡಬ್ಬಿಂಗ್‌ ಕಲಾವಿದರು ಬಿಝಿಯಾದರು. ಅವರನ್ನು ಬಿಡುವಿಲ್ಲದಂತೆ ಅರಸಿ ಬಂದ ಕೆಲಸದಿಂದಾಗಿ ಎಲ್ಲರೂ ಬಿಝಿಯಾದರು. ಅದೆಷ್ಟೋ ನಟ,ನಟಿಯರಿಗೆ ಧ್ವನಿ ಕೊಡುವ ಮೂಲಕ ತಕ್ಕಮಟ್ಟಿಗೆ ದುಡಿಮೆ ಮಾಡುತ್ತಿದ್ದ ಡಬ್ಬಿಂಗ್‌ ಕಲಾವಿದರು, ಕೊಟ್ಟಷ್ಟು ಕಾಸು ಪಡೆದು ದಿನ ಸವೆಸುತ್ತಿದ್ದರು. ಯಾವಾಗ ಡಬ್ಬಿಂಗ್‌ ಬಂತೋ, ಅಲ್ಲಿಗೆ ಅವರ ಅದೃಷ್ಟದ ಬಾಗಿಲೂ ತೆರೆಯಿತು. ಅಲ್ಲೊಂದು ಇಲ್ಲೊಂದು ಸಿನಿಮಾಗಳಿಗೆ ಡಬ್‌ ಮಾಡುವ ಮೂಲಕ ಗುರುತಿಸಿಕೊಳ್ಳುತ್ತಿದ್ದವರು, ಈಗ ಇಡೀ ದಿನ ವಾಯ್ಸ್‌ ಡಬ್‌ ಮಾಡುವಲ್ಲಿಯೇ ನಿರತರಾಗಿದ್ದಾರೆ.

ಹಾಗಾಗಿ ಡಬ್ಬಿಂಗ್‌ ಅಂತಹ ಅನೇಕ ಡಬ್ಬಿಂಗ್‌ ಕಲಾವಿದರಿಗೆ ಬದುಕು ಕಟ್ಟಿಕೊಟ್ಟಿದೆ ಅಂದರೆ ತಪ್ಪಿಲ್ಲ.
ಇದರೊಂದಿಗೆ ಈಗ ಸ್ಟುಡಿಯೋಗಳೂ ಕೂಡ ಬಿಝಿಯಾಗಿವೆ. ಬರೀ ಬೆಂಗಳೂರು ಮಾತ್ರವಲ್ಲ, ರಾಜ್ಯದ ಪ್ರಮುಖ ನಗರಗಳಲ್ಲೂ ಸ್ಟುಡಿಯೋಗಳಿವೆ. ಅಲ್ಲಿಯೂ ಒಂದಷ್ಟು ಪರಭಾಷೆ ಸಿನಿಮಾಗಳು ಡಬ್‌ ಆಗುತ್ತಿವೆ. ಹಾಗಾಗಿ ಎಲ್ಲಾ ಸ್ಟುಡಿಯೋಗಳಲ್ಲೂ ಕೆಲಸ ಹೆಚ್ಚಾಗಿದ್ದು, ಎಲ್ಲರೂ ಡಬ್ಬಿಂಗ್‌ ಕೆಲಸದಲ್ಲಿ ಹಿಂದೆಂದಿಗಿಂತಲೂ ಬಿಝಿಯಾಗಿದ್ದಾರೆ. ಇಲ್ಲೀಗ ಪರದಾಡುತ್ತಿರುವುದೆಂದರೆ, ಜೂನಿಯರ್‌ ಕಲಾವಿದರು ಮತ್ತು ಸಹ ಕಲಾವಿದರು. ಇದರೊಂದಿಗೆ ಕಿರುತೆರೆಯಲ್ಲಿ ಕೆಲಸ ಮಾಡುವ ಅನೇಕ ನಟ,ನಟಿಯರಿಗೂ ಇದು ಸಮಸ್ಯೆಯಾಗಿ ಪರಿಣಮಿಸಿದೆ.

ಡಬ್ಬಿಂಗ್‌ ಸಿನಿಮಾಗಳು ಇಲ್ಲಿ ಬಂದು ಹಣ ಮಾಡುತ್ತವೆಯೇ? ಇದು ಎಲ್ಲರಿಗೂ ಕಾಡುವ ಪ್ರಶ್ನೆ. ಅವುಗಳು ಚಿತ್ರಮಂದಿರಕ್ಕೆ ಲಗ್ಗೆ ಇಟ್ಟು ಹಣ ಮಾಡುತ್ತವೋ ಇಲ್ಲವೋ ಅದು ಬೇರೆ ಪ್ರಶ್ನೆ. ಆದರೆ, ಹಲವು ವಾಹಿನಿಗಳಲ್ಲೂ ಕೂಡ ಪ್ರಸಾರವಾಗುತ್ತಿವೆ ಅನ್ನೋದೇ ವಿಷಯ. ಈಗಾಗಲೇ ಪರಭಾಷೆಯ ಅನೇಕ ಚಿತ್ರಗಳು ಥಿಯೇಟರ್‌ ಜೊತೆಗೆ ಕಿರುತೆರೆಯಲ್ಲೂ ಬಿಡುಗಡೆಯಾಗಿವೆ. ಒಂದು ಡಬ್‌ ಮಾಡುವ ಸಿನಿಮಾಗೆ ಸುಮಾರು ೧೦ ಲಕ್ಷ ರುಪಾಯಿ ಖರ್ಚು ಮಾಡಿದರೆ, ರೆಡಿಯಾಗುತ್ತದೆ. ಇದು ಸುಲಭ ಮಾರ್ಗ. ಬಹಳಷ್ಟು ಜನ ಇಲ್ಲಿಗೆ ಪರಭಾಷೆಯ ಅನೇಕ ಸಿನಿಮಾಗಳನ್ನು ತಂದು ಡಬ್ಬಿಂಗ್‌ ಮಾಡಿ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ. ಈ ಹಿಂದೆ ಪರಭಾಷೆಯ ಕೆಲವು ಸೀರಿಯಲ್‌ಗಳು ರಿಮೇಕ್‌ ಆಗುತ್ತಿದ್ದವು. ಆದರೆ, ಈಗೀಗ ಕನ್ನಡಕ್ಕೆ ಡಬ್‌ ಆಗುತ್ತಿವೆ. ಅವುಗಳು ಪ್ರಸಾರ ಕೂಡ ಆಗುತ್ತಿದ್ದು, ಡಬ್ಬಿಂಗ್ ಸ್ಟುಡಿಯೋಗಳು‌ ಎರಡು ಮೂರು ವರ್ಷಕ್ಕೆ ಬುಕ್‌ ಆಗಿವೆ ಅನ್ನೋದೇ ವಿಶೇಷ.


ಪ್ರಭಾಸ್‌ ಅಭಿನಯದ “ಬಾಹುಬಲಿ” ಕೂಡ ಕನ್ನಡದಲ್ಲಿ ಬಂತು. ಅಜಿತ್‌ ಅವರ “ಜಗಮಲ್ಲ”, ವಿಜಯ್‌ ಅವರ “ಬಿಗಿಲ್”‌, ಅಲ್ಲು ಅರ್ಜುನ್‌ ಅವರ “ಬಂದ ನೋಡು ಸರ್ರೆನೊಡು”, ರಾಮ್‌ ಚರಣ್‌ ಅವರ “ರಂಗಸ್ಥಳ”, ವಿಜಯ್‌ ದೇವರಕೊಂಡ, ರಶ್ಮಿಕಾ ಮಂದಣ್ಣ ಅವರ “ಡಿಯರ್‌ ಕಾಮ್ರೆಡ್”‌, ಜೂನಿಯರ್‌ ಎನ್‌ಟಿಆರ್‌ ಅವರ “ಅಪ್ಪನ ಪ್ರೀತಿಯಲ್ಲಿ” ಸಿನಿಮಾ ಕೂಡ ಕನ್ನಡಕ್ಕೆ ಡಬ್‌ ಆಗಿ ರಿಲೀಸ್‌ ಆಗುತ್ತಿದೆ. ಅದೇನೆ ಇರಲಿ, ಡಬ್ಬಿಂಗ್‌ ಶುರುವಾಗಿದಾಗಿದೆ. ಹಲವು ಚಿತ್ರಗಳು ಡಬ್ಬಿಂಗ್‌ ಆಗಿಹೋಗಿವೆ. ಇಲ್ಲಿ ಯಾರಿಗೆ ಏನು ಲಾಭ ಆಗಿದೆಯೋ, ನಷ್ಟ ಆಗಿದೆಯೋ ಬೇರೆ ಮಾತು. ಆದರೆ ಡಬ್ಬಿಂಗ್‌ ಸ್ಟುಡಿಯೋಗಳಿಗೆ, ಡಬ್ಬಿಂಗ್‌ ಕಲಾವಿದರಿಗಂತೂ ಸಾಕಷ್ಟು ಸಹಾಯವಾಗಿದೆ. ಇಲ್ಲಿ ಕನ್ನಡಿಗರು ಭಾಷಾ ವಿರೋಧಿಗಳಲ್ಲ. ಭಾಷಾ ಪ್ರೇಮಿಗಳು. ಆದರೆ, ವ್ಯಾಪಾರ ದೃಷ್ಟಿಯಿಂದ ನೋಡುವುದಾದರೆ, ಇವೆಲ್ಲಾ ಕೆಲಸಗಳು ನಡೆಯಲೇಬೇಕು ಅನ್ನೋ ಮಾತುಗಳು ಗಾಂಧಿನಗರದಲ್ಲಿ ಗಿರಕಿಹೊಡೆಯುತ್ತಿರುವುದಂತೂ ಸತ್ಯ.

ಕನ್ನಡದಲ್ಲಿ ಡಬ್ಬಿಂಗ್‌ ಕೆಲಸಗಳು ಜೋರಾಗಿವೆ. ಪರಭಾಷೆ ನಟರು ಅದಾಗಲೇ ಎಂಟ್ರಿಯಾಗಿದ್ದಾಗಿದೆ. ಇಲ್ಲಿ ಸಣ್ಣಪುಟ್ಟ ಕಾರ್ಮಿಕರು, ಕಲಾವಿದರಿಗೆ ಸಂಕಷ್ಟ ಎದುರಾಗಿರುವುದಂತೂ ನಿಜ. ಸ್ಟಾರ್‌ಗಳೂ ಈಗ ಮತ್ತಷ್ಟು ಚುರುಕಾಗಬೇಕಿದೆ. ವರ್ಷಕ್ಕೆ ಒಂದು ಸಿನಿಮಾ ಬದಲು ಎರಡು ಸಿನಿಮಾಗಳನ್ನಾದರೂ ಮಾಡಿದರೆ, ಕೊನೇಪಕ್ಷ ಇಂಡಸ್ಟ್ರಿಯಲ್ಲಿರುವ ಚಿತ್ರಮಂದಿರಗಳಲ್ಲಿ ಕನ್ನಡ ಸಿನಿಮಾಗಳೇ ರಾರಾಜಿಸುತ್ತವೆ. ಆಗ ಪರಭಾಷೆಯ ಡಬ್ಬಿಂಗ್‌ ಸಿನಿಮಾಗಳ ಬಿಡುಗಡೆ ಕೊಂಚ ಕಡಿಮೆಯಾಗಬಹುದೇನೋ? ಇಲ್ಲಿ ಭಾಷೆಯನ್ನು ವಿರೋಧಿಸುತ್ತಿಲ್ಲ. ಕನ್ನಡಿಗರು ಎಲ್ಲಾ ಭಾಷಿಗರನ್ನೂ ಪ್ರೀತಿಸುತ್ತಾರೆ. ಅಂತೆಯೇ ಎಲ್ಲಾ ಭಾಷೆಯ ಸಿನಿಮಾಗಳನ್ನೂ ನೋಡುತ್ತಾರೆ. ಕನ್ನಡ ಸ್ಟಾರ್‌ಗಳು ಕೂಡ ವರ್ಷಕ್ಕೆ ಎರಡು ಸಿನಿಮಾಗಳನ್ನು ಮಾಡಿದರೆ, ಎಲ್ಲರಿಗೂ ಹೆಚ್ಚು ಕೆಲಸ ಸಿಗುತ್ತೆ. ಆಗ ಎಷ್ಟೇ ಡಬ್ಬಿಂಗ್‌ ಚಿತ್ರಗಳು ಬಂದರೂ ಯಾವುದೇ ಪರಿಣಾಮ ಬೀರೋದಿಲ್ಲ.

Categories
ಸಿನಿ ಸುದ್ದಿ

ಒಟಿಟಿ ಮಾಫಿಯಾ ಕುರಿತ ದರ್ಶನ್ ಹೇಳಿಕೆಗೆ ನಟ, ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ಬೆಂಬಲ

ಕನ್ನಡದ ನಕ್ಷತ್ರಗಳಿಗೆ ಈ ಸತ್ಯ ದರ್ಶನವಾಗಲಿ. ಚಂದನವನ ಬಾಯಿತೆರೆಯಲಿ- ಚಕ್ರವರ್ತಿ ಚಂದ್ರಚೂಡ್

ಒಟಿಟಿ ಮಾಫಿಯಾ ಕುರಿತು ಭಾನುವಾರ ಚಾಲೆಂಜಿಂಗ್ ಸ್ಟಾರ್ ದರ್ಶನ್ ನೀಡಿದ ಹೇಳಿಕೆ ಭಾರೀ ಸದ್ದು ಮಾಡುತ್ತಿದೆ. ನಟ, ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್, ದರ್ಶನ್ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿದ್ದು, ಮನುಷ್ಯರನ್ನ ಜಾತ್ರೆಗಳು ಹಬ್ಬಗಳು ಉತ್ಸವಗಳ ನಂತರ ದೇವರಷ್ಟೇ ಬಲವಾಗಿ ಒಗ್ಗೂಡಿಸಿ ಹೇಳಬೇಕಾದ್ದನ್ನ ಹೇಳಿದವುಗಳಲ್ಲಿ ರಂಗಭೂಮಿ ಮತ್ತು ಚಲನಚಿತ್ರಗಳು .ಅವು ಉಳಿಯಬೇಕು ಎಂದವರು ವಿನಂತಿಸಿಕೊಂಡಿದ್ದಾರೆ. ಅವರು ಹೇಳಿರುವ ಮಾತುಗಳು ಇಲ್ಲಿವೆ…

‘ ಕನ್ನಡದ ಖ್ಯಾತ ನಟರಾದ ದರ್ಶನ್ ತಮ್ಮ ಸಿನಿಮಾ ಬಿಡುಗಡೆಯ ದಿನಾಂಕ ಫಿಕ್ಸ್ ಆಗಿರುವಾಗ ಒಟಿಟಿ ಮಾಫಿಯಾದ ವಿರುದ್ಧ,ಅದರ ಹಿಂದಿನ ಕಾರ್ಪೋರೇಟ್ ತಂತ್ರಗಾರಿಕೆಯ ವಿರುದ್ಧ ಮಾತನಾಡಿದ್ದಾರೆ.ಹಿಂದೆಯೂ ಕೂಡ ಹೀಗೇ ನೇರಾನೇರ ಮಾತನಾಡಿದವರು ದರ್ಶನ್…
ಆದರೆ ಯಾರದೇ ಉತ್ತಮ ಪ್ರಯೋಗಗಳಿಗೆ – ಕನ್ನಡ ಸಿನಿಮಾಗಳಿಗೆ ಕುಂದುಂಟುಮಾಡುವ ಮಾಫಿಯಾ ಲಾಭಿಗಳ ವಿರುದ್ಧ ದನಿಯುಳ್ಳ ಸ್ಟಾರ್ ಗಳೆಲ್ಲ ಮಾತನಾಡುವಂತಹ “ಸಿನಿಮಾ ಎಲ್ಲರಿಗಿಂತ ದೊಡ್ಡದು” ಎಂಬ ಒಗ್ಗಟ್ಟಿನ ಶಕ್ತಿ ಚಂದನವನಕ್ಕೆ ದಕ್ಕಲಿ.
ಕೋವಿಡ್ ನಂತರದ ಪರಿಸ್ಥಿತಿಯಲ್ಲಿ ಮಾತ್ರ ಒಟಿಟಿ ಮಾಫಿಯಾ ಕೆಲಸ ಮಾಡುತ್ತಿಲ್ಲ.ಯಾವಾಗ ಡಿಟಿಎಚ್ ಕಲ್ಚರ್ ಶುರುವಾಯಿತೋ, ಆದನ್ನ ಜಾರಿಗೆ ತರಲು ವ್ಯವಸ್ಥೆ ಯಾಗಲಿಲ್ಲವೋ ಆಗಲೇ ಒಟಿಟಿ ಮಾಫಿಯಾ ಎದ್ದು ನಿಂತಿತು.ಈ ನೆಟ್ ವರ್ಕಿಂಗ್ – ಡಿಜಿಟಲ್ ಮಾಫಿಯಾ ಥಿಯೇಟರ್ ವಹಿವಾಟನ್ನ ಸಮಾಪ್ತಿ ಮಾಡದೇ ಸುಮ್ಮನಿರುವುದಿಲ್ಲ.ಅದು ನಿರಂತರವಾಗಿ ಕೆಲಸ ಮಾಡುತ್ತಿದೆ. ಮನುಷ್ಯರನ್ನ ಜಾತ್ರೆಗಳು ಹಬ್ಬಗಳು ಉತ್ಸವಗಳ ನಂತರ ದೇವರಷ್ಟೇ ಬಲವಾಗಿ ಒಗ್ಗೂಡಿಸಿ ಹೇಳಬೇಕಾದ್ದನ್ನ ಹೇಳಿದವುಗಳಲ್ಲಿ ರಂಗಭೂಮಿ ಮತ್ತು ಚಲನಚಿತ್ರಗಳು .ಅವು ಉಳಿಯಬೇಕು.ಅದು ಭಾರತದಂತಹ ದೇಶಗಳ ಐಕ್ಯತೆಯ ಒಂದು ಭಾಗ.ಡಿ ಟಿ ಎಚ್ ಹಿಂದೆ ನಿಂತು ಜಗತ್ತನ್ನೇ ತಲುಪುವ ಆಸೆ ತೋರಿಸಿ ಸಿನಿಮೋದ್ಯಮದ ಮೂಗಿಗೆ ತುಪ್ಪ ಸವರಿ ಜಾಗತೀಕರಣದಂತೆಯೇ ಕುಶಲ ವ್ಯವಹಾರಗಳ ಕೌಶಲ್ಯಗಳನ್ನು ನಿರ್ನಾಮ ಮಾಡುತ್ತದೆ.
ಅಂದಹಾಗೆ ದರ್ಶನ್ ಅವರಿಗೆ ಎಲ್ಲರೂ ದನಿಗೂಡಿಸಲಿ. ರಾಜಕಾರಣಿಗಳ ಜನಜಾತ್ರೆಗೆ ಧಾರ್ಮಿಕ ಸಂತೆಗಳಿಗೆ ಜನಸಾಮಾನ್ಯರ ಕಣ್ಣಿಗೇ ಬೀಳದ ಅಸಲಿ ವ್ಯವಹಾರಗಳಿಗೆ ಇಲ್ಲದ ಕೋವಿಡ್ ಭಯದ ಮಾಫಿಯಾ ಥಿಯೆಟರ್‌ ಗಳಿಗೆ ಯಾಕೆ? ಕನ್ನಡದ ನಕ್ಷತ್ರಗಳಿಗೆ ಈ ಸತ್ಯ ದರ್ಶನವಾಗಲಿ. ಚಂದನವನ ಬಾಯಿತೆರೆಯಲಿ.ಒಟಿಟಿ ಬಾವಿಯಿಂದ ತಪ್ಪಿಸಿಕೊಳ್ಳಲಿ.

 

Categories
ಸಿನಿ ಸುದ್ದಿ

ದರ್ಶನ್ ಮಾತಿಗೆ ಸಾಥ್ ಕೊಡ್ತಾರಾ ಸ್ಯಾಂಡಲ್ ವುಡ್ ಸ್ಟಾರ್ಸ್?

ಚಿತ್ರಮಂದಿರಗಳು ಉಳಿಯಬೇಕಾದ್ರೆ, ಸ್ಟಾರ್‌ಗಳು ಸೇರಿ ಚಿತ್ರೋದ್ಯಮ ಬೀದಿಗಿಳಿಯಲೇಬೇಕಿದೆ…

ಕೊನೆಗೂ ಒಟಿಟಿ (ಒವರ್‌ ದಿ ಟಾಪ್) ಲಾಭಿಯ ವಿರುದ್ಧ ಚಿತ್ರರಂಗದ ಆಕ್ರೋಶ ಸ್ಪೋಟಗೊಂಡಿದೆ. ಅದರ ವಿರುದ್ಧದ ಮೊದಲ ಧ್ವನಿಯಾಗಿ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಗುಡುಗಿದ್ದಾರೆ. ಕೆಲವರಿಗೆ ಇದು ಹೇಗೆ ಅಂತ ಅಚ್ಚರಿ. ಮತ್ತೆ ಕೆಲವರಿಗೆ ಇದೆಲ್ಲ ಇರುತ್ತಾ ಅನ್ನೋದೇ ಅನುಮಾನ.‌ ಆದರೂ ಇದು ವಾಸ್ತವ. ಹಾಗೆ ನೋಡಿದರೆ, ಇದರ ವಿರುದ್ಧ ಈ ಹೊತ್ತಿಗೆ ಭಾರತೀಯ ಚಿತ್ರರಂಗವೇ ಗಟ್ಟಿಯಾದ ಧ್ವನಿ ಎತ್ತಬೇಕಿತ್ತು. ದಾಖಲೆ ಬ್ರೇಕ್‌ ಮಾಡಿದವರು ಕೂಡ, ಅಂಬಾನಿ ಕ್ಯಾರೇ ಅಂತ ಕೇಳಬೇಕಿತ್ತು. ಅದು ಅವರಿಗೆ ಬೇಕಿಲ್ಲ. ಆದರೆ ದರ್ಶನ್‌ ಮಾತ್ರ ಗುಡುಗಿದ್ದಾರೆ. ಪ್ರತಿಯೊಬ್ಬರಿಗೂ ವಾಕ್‌ ಸ್ವಾತಂತ್ರ ಇದೆ. ಅದೇ ದೃಷ್ಟಿಯಿಂದ ನಾನು ಮಾತನಾಡಿದ್ದೇನೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ ಅಂತಲೂ ಅವರು ಸ್ಪಷ್ಟಪಡಿಸಿದ್ದಾರೆ. ವೈಯಕ್ತಿಕ ಲಾಭ ಎನ್ನುವುದಕ್ಕಿಂತ ಚಿತ್ರೋದ್ಯಮದ ಹಿತಕ್ಕಾಗಿ ಅವರು ಅಬ್ಬರಿಸಿದ್ದಾರೆ. ಇದೇ ಎದೆಗಾರಿಕೆಯನ್ನು ಕನ್ನಡದ ಅಷ್ಟೂ ಸ್ಟಾರ್ಸ್‌ ಮಾತನಾಡ್ತಾರಾ ? ಇದು ಕನ್ನಡದ ಸಿನಿಮಾ ಪ್ರೇಮಿಗಳಿಗಿರುವ ಕುತೂಹಲದ ಪ್ರಶ್ನೆ.

ನಾಡು, ನುಡಿ ವಿಚಾರ ಬಂದಾಗ, ಚಿತ್ರೋದ್ಯಮಕ್ಕೆ ಸಂಕಷ್ಟ ಎದುರಾದಾಗ, ಕನ್ನಡ ಭಾಷೆ ಮತ್ತು ಕನ್ನಡದ ಸ್ಟಾರ್‌ಗಳಿಗೆ ಅವಮಾನ ಆದಾಗ ಇಡೀ ಚಿತ್ರರಂಗ ಬೀದಿಗಿಳಿದು ಹೋರಾಡಿದ್ದು ನಿಮಗೆಲ್ಲ ಗೊತ್ತಿರುವ ವಿಚಾರ. ಹೆಚ್ಚು ಕಡಿಮೆ ಒಂದು-ಒಂದೂವರೆ ವರ್ಷಗಳ ಹಿಂದೆ ಮಹಾದಾಯಿ ನೀರಿಗಾಗಿಯೂ ಚಿತ್ರರಂಗ ಬೀದಿಗಿಳಿದು ಹೋರಾಟ ನಡೆಸಿದ್ದನ್ನು ಉತ್ತರ ಕರ್ನಾಟಕದ ಜನ ಮರೆತಿಲ್ಲ. ಅಂತಹದರಲ್ಲಿ ಚಿತ್ರರಂಗದ ಜೀವಾಳವೇ ಆದ ಚಿತ್ರ ಮಂದಿರಗಳನ್ನೇ ನುಂಗುತ್ತಿರುವ “ಒಟಿಟಿʼ ಎನ್ನುವ ಹಣ ದೋಚುವ ಮಾಫಿಯಾದ ವಿರುದ್ಧ ಕನ್ನಡದ ಚಿತ್ರರಂಗ ಬೀದಿಗಿಳಿಯದೆ ಇರುತ್ತಾ ? ಸ್ಟಾರ್‌ ಗಳು ಮಾತನಾಡದೆ ಇರುತ್ತಾರಾ? ಜನಕ್ಕೆ ಇಂತಹದೊಂದು ಕುತೂಹಲವೂ ಶುರುವಾಗಿದೆ. ಅದಕ್ಕೆ ಕಾರಣ ದರ್ಶನ್‌ ಮಾತು. ಯಾಕಂದ್ರೆ, ನಟ ದರ್ಶನ್‌ ಸುಮ್ಮನೆ ಮಾತನಾಡಲಾರರು. ಅದರಲ್ಲೂ, ದೇಶದ ಅತೀ ದೊಡ್ಡ ಶ್ರೀಮಂತ ಉದ್ಯಮಿ ಅಂಬಾನಿ ಅವರ ʼ೫ಜಿʼ ಲಾಭಿ ವಿರುದ್ಧ ಮಾತನಾಡುತ್ತಾರೆಂದರೆ,ಅದು ತಮಾಷೆಯೂ ಅಲ್ಲ.

ಅಂಬಾನಿ ಕೈ ಯಿಟ್ಟರೆ, ಕಟೌಟ್‌ ಕಟ್ಟುವರು ಇರೋದಿಲ್ಲ !

ಯಾರದೋ ವೈಯಕ್ತಿಕ ಅಭಿಪ್ರಾಯಕ್ಕೆ ನಾವೆಲ್ಲ ಧ್ವನಿ ಗೂಡಿಸಬೇಕಾ? ದರ್ಶನ್‌ ಮಾತಿಗೆ ಬೆಂಬಲಿಸುತ್ತೀರಾ ಅಂತ ಕೇಳಿದ್ರೆ ಉಳಿದವರು ಹೀಗೆಲ್ಲ ಹೇಳಿಬಿಡಬಹುದು. ಅಥವಾ ಪ್ರತಿಕ್ರಿಯಿಸದೆಯೂ ನಾಜೂಕಾಗಿ ನುಣುಚಿಕೊಳ್ಳಬಹುದು. ಆದರೆ ಅವರೆಲ್ಲ ಸ್ಟಾರ್‌ ಆಗಿದ್ದು, ಐಷಾರಾಮಿ ಬದುಕು ಕಟ್ಟಿಕೊಂಡಿದ್ದೂ ಎಲ್ಲವೂ ಚಿತ್ರ ಮಂದಿರಗಳು ಇದ್ದ ಕಾರಣಕ್ಕಾಗಿಯೇ ಎನ್ನುವುದನ್ನು ಮರೆಯಬಾರದು. ಹಾಗೊಂದು ವೇಳೆ ನಮ್ಮಗ್ಯಾಕೆ ಈ ಉಸಾಬರಿ ಅಂತಲೂ ಸುಮ್ಮನಿರಬಹುದು. ಮುಂದಿನ ಪರಿಣಾಮ ಘೋರವಾಗಿರಲಿದೆ ಎನ್ನುವುದು ಮಾತ್ರ ಸತ್ಯ. ಯಾಕಂದ್ರೆ, ಜಾಗತೀಕರಣ ಎಲ್ಲವನ್ನು ನುಂಗುತ್ತಿದೆ. ಸರ್ಕಾರಗಳು ಕೂಡ ಉದ್ಯಮಿಪತಿಗಳ ಕೈ ಕೆಳಗಿವೆ. ಮುಂದೆ ಅಂಬಾನಿಯೇ ಚಿತ್ರೋದ್ಯಮದ ನಿಯಂತ್ರಣಕ್ಕೆ ಕೈ ಹಾಕಿದರೆ, ಆಗೆಲ್ಲ ಸ್ಟಾರ್‌ ಗಳಿಗೆ ಕಟೌಟ್‌ ಕಟ್ಟುವವರು ಇರೋದಿಲ್ಲ. ಮನೆ ಬಾಗಿಲಿಗೆ ಬಂದು ಹುಟ್ಟು ಹಬ್ಬ ಆಚರಿಸವವರು ಇರೋದಿಲ್ಲ.
…………………

ಈಗ ಅಂಬಾನಿ ಅಂದ್ರೆ ಯಾರು ಅಂತಲೂ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಸರ್ಕಾರಗಳಿಗೇ ಅಂಬಾನಿ ಪರಮಾಪ್ತರು. ಅಂತಹದರಲ್ಲಿ ಅಂಬಾನಿ ಅವರ ʼ5ಜಿʼ ಲಾಭಿ ವಿರುದ್ಧ ಮಾತನಾಡುವುದೆಂದರೆ ಅದಕ್ಕೂ ಗುಂಡಿಗೆ ಬೇಕು. ಆದರೂ ದರ್ಶನ್‌ ಮಾತನಾಡಿದ್ದಾರೆಂದರೆ, ಚಿತ್ರರಂಗಕ್ಕೆ 5ಜಿ ಮಾರಕ ಎನ್ನುವುದನ್ನು ಇಡೀ ಚಿತ್ರೋದ್ಯಮ ಕೂಡ ಅರ್ಥ ಮಾಡಿಕೊಳ್ಳಬೇಕಿದೆ. ಇನ್ನಷ್ಟು ದಿನ ಚಿತ್ರಮಂದಿರಗಳು ಹೀಗೆಯೇ ಬಾಗಿಲು ಮುಚ್ಚಿಕೊಂಡರೆ ಮುಂದೆ ಶಾಶ್ವತವಾಗಿಯೇ ಡೋರ್‌ ಕ್ಲೋಸ್‌ ಮಾಡಬೇಕಾಗುತ್ತದೆ. ಆಗೆಲ್ಲ ಸ್ಟಾರ್‌ ಸಿನಿಮಾಗಳು ಕೂಡ ಒಟಿಟಿ ಲಾಭಿಗೆ ಸಿಲುಕಬೇಕಾಗುತ್ತದೆ. ಈಗ ಕಂಟೆಂಟ್‌ ಇದ್ದರೆ, ಕೋಟಿ ಎನ್ನುವ ʼಒಟಿಟಿʼ ಲಾಭಿಗೆ ಮುಂದೆ , ಕೇಳಿದಷ್ಟು ಹಣಕ್ಕೆ ಸಿನಿಮಾ ಕೊಟ್ಟು, ನಿರ್ಮಾಪಕರು ಮನೆ ಕಡೆ ಮುಖ ಮಾಡಬೇಕಾಗುತ್ತದೆ. ಅಲ್ಲಿಂದ ಮುಂದಿನದು, ವಿವರಿಸಲು ಅಸಾಧ್ಯವಾದ ಪರಿಸ್ಥಿತಿ ! ದರ್ಶನ್‌ ಈಗ ಇದರ ವಿರುದ್ಧವೇ ಧ್ವನಿ ಎತ್ತಿದ್ದಾರೆ. ಮುಂದೆ ಆಗುವ ಆನಾಹುತಕ್ಕೆ ಚಿತ್ರರಂಗ ಸಿಲುಕಿಕೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಬೇಕಾದರೆ, ಸ್ಯಾಂಡಲ್‌ವುಡ್‌ನ ಸೂಪರ್‌ ಸ್ಟಾರ್‌ ಗಳೆಲ್ಲ ಮೊದಲ ಸಾಲಿನಲ್ಲಿ ನಿಂತು ಮಾತನಾಡಬೇಕಿದೆ. ಆನಂತರ ಇಡೀ ಉದ್ಯಮ ಧ್ವನಿ ಎತ್ತಿದರೆ, ಚಿತ್ರ ಮಂದಿರಗಳು ಉಳಿದುಕೊಳ್ಳಲಿವೆ.

Categories
ಸಿನಿ ಸುದ್ದಿ

ಸ್ಯಾಂಡಲ್ ವುಡ್ ಕಳೆಗಟ್ಟುವುದು ಖಾತರಿ ಆಯ್ತು, ಚಿತ್ರೋದ್ಯಮ ಎದುರು‌ ನೋಡುತ್ತಿದ್ದ ದಿನ ಬಂದೇ ಬಿಡ್ತು !

‘ರಾಬರ್ಟ್ ‘ ತೆರೆ ಕಂಡರೆ ಎಲ್ಲವೂ ಸಹಜವಾಗುತ್ತೆ ಎನ್ನುವ ನಿರೀಕ್ಷೆಯಲ್ಲಿ ಚಿತ್ರರಂಗ

ಸ್ಟಾರ್ ಸಿನ್ಮಾ ಬರ್ಬೇಕು, ಬಂದ್ರೆ ನಮ್ಗೂ ಒಂದ್ರೀತಿ ಧೈರ್ಯ ಬರ್ತೈತಿ….. ಹೀಗಂತ  ಬಿಡುಗಡೆಗೆ ಸಿದ್ದಗೊಂಡ ಅದೆಷ್ಟೋ ಮಂದಿ ಸಣ್ಣ ಪುಟ್ಟ ಸಿನಿಮಾಗಳ ನಿರ್ಮಾಪಕರು ಹೇಳುತ್ತಿದ್ದರು‌.ಸ್ಟಾರ್ ಸಿನಿಮಾ ಬಂದ್ರೆ ಸಾಕು ಅಂತಲೂ ಕಾಯುತ್ತಿದ್ದರು. ವಿಶೇಷವಾಗಿ ದರ್ಶನ್ ಸಿನ್ಮಾ ಬಂದ್ರೆ ಚಿತ್ರ ಮಂದಿರಗಳತ್ತ ಜನ ಬರ್ತಾರೆ ಎನ್ನುವ ನಿರೀಕ್ಷೆಯಲ್ಲಿದ್ದರು. ಕೊನೆಗೂ ಆ ಘಳಿಗೆ ಬಂದೇ ಬಿಟ್ಟಿತು. ಇನ್ನೇನು ಫೆಬ್ರವರಿ ಕಳೆದರೆ ಸ್ಯಾಂಡಲ್ ವುಡ್‌ ಮತ್ತೆ ಕಳೆ ಗಟ್ಟುವುದು ಗ್ಯಾರಂಟಿ ಆಗಿದೆ. ಮಾರ್ಚ್ 11 ಕ್ಕೆ ದರ್ಶನ್ ಅಭಿನಯದ ಬಹು ನಿರೀಕ್ಷಿತ’ ರಾಬರ್ಟ್’ ಚಿತ್ರ ತೆರೆ ಕಾಣುತ್ತಿದೆ.  ಕೊನೆಗೂ ಚಿತ್ರ ತಂಡ ರಿಲೀಸ್ ದಿನಾಂಕ ಅನೌನ್ಸ್ ಮಾಡಿ, ದರ್ಶನ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದೆ. ಇದು ದರ್ಶನ್ ಅಭಿಮಾನಿಗಳಿಗೆ ಮಾತ್ರ ಸಿಹಿ ಸುದ್ದಿ ಅಲ್ಲ, ಇಡೀ ಕನ್ನಡ ಚಿತ್ರರಂಗಕ್ಕೂ ಸಿಹಿ ಸುದ್ದಿಯೇ. ಅದೇಗೆ ಗೊತ್ತಾ?

ಸಾಂದರ್ಭಿಕ ಚಿತ್ರ

ಜನ ಬರ್ತೀಲ್ಲ ಅಂತ ಕಂಗಾಲು ಆಗಿತ್ತು ಉದ್ಯಮ….

ಲಾಕ್ ಡೌನ್ ತೆರವಾದ ದಿನ ದಿಂದಲೇ ಚಿತ್ರ ಮಂದಿರಗಳು ಒಪನ್ ಆಗಿದ್ದು ನಿಮಗೂ ಗೊತ್ತು. ಅಕ್ಟೋಬರ್ 15 ಕ್ಕೆ ಅಧಿಕೃತ ಅಪ್ಪಣೆ ಕೂಡ ಸಿಕ್ಕಿತು. ಅಂದೇ ಕೆಲವು ಚಿತ್ರಗಳು ಪ್ರಾಯೋಗಿಕ ವಾಗಿ ತೆರೆಕಂಡವು. ಆದರೆ ಚಿತ್ರ ಮಂದಿರಗಳಲ್ಲಿ ಮಾತ್ರ ಜನ ಕಾಣಲಿಲ್ಲ. ಕಾರಣ ಕೊರೋನಾ ಆತಂಕ ಹಾಗೆಯೇ ಇತ್ತು. ಅಲ್ಲಿಂದ ಇಲ್ಲಿವರೆಗೂ ಹೆಚ್ಚೇನು ವ್ಯತ್ಯಾಸ ಕಂಡಿಲ್ಲ. ಕೊಂಚ ಕೊರೋನಾಂತಕ ಜ‌ನರಲ್ಲಿ ಕಮ್ಮಿ ಆಗಿದೆ ಎನ್ನುವುದನ್ನು ಬಿಟ್ಟರೆ,  ಚಿತ್ರ ಮಂದಿರಗಳಲ್ಲಿ ಜನ ಅಷ್ಟಕಷ್ಟೆ ಎನ್ನುವಂತಾಯಿತು‌. ಹಾಗೆ ನೋಡಿದರೆ ಇದುವರೆಗೂ ಒಂದಷ್ಟು ಸಕ್ಸಸ್ ಹಾಗೂ ಕಲೆಕ್ಷನ್ ಕಂಡ ಚಿತ್ರ ಆಕ್ಟ್ ೧೯೭೮ . ಇಷ್ಟಾಗಿಯೂ ಸಿನಿಮಾ‌ಮಂದಿಗೆ ಧೈರ್ಯ ಬಂದಿಲ್ಲ‌.  ಸಿನಿಮಾ ಮಾಡೋದೆನೋ ಸರಿ, ಹಾಕಿದ ದುಡ್ಡು ವಾಪಾಸ್ ಬರದಿದ್ದರೇನು‌ ಗತಿ  ಎನ್ನುವ ಭಯ ಚಿತ್ರ ರಂಗವನ್ನು ಕಾಡುತ್ತಲೇ ಇತ್ತು. ಹಾಗಾಗಿ ಅದೆಷ್ಟೋ ಸಿನಿಮಾಗಳು ರಿಲೀಸ್ ಗೆ ರೆಡಿ ಇದ್ದರೂ, ತೆರೆಗೆ ಬರುವುದಕ್ಕೆ ಮೀನಾ ಮೇಷ ಎಣಿಸುತ್ತಿದ್ದವು. ಅವುಗಳ ನಿರ್ಮಾಪಕ ರೆಲ್ಲ ಸ್ಟಾರ್ ಸಿನಿಮಾ ಬಂದ್ರೆ, ನಮಗೂ ಧೈರ್ಯ ಬರುತ್ತೆ ಅಂತಿದ್ರು. ಈಗ ಅದು ಕೂಡ ನೆರವೇರುತ್ತಿದೆ.

ದರ್ಶನ್ ಸಿನಿಮಾ ರಾಬರ್ಟ್ ಬಂದ್ರೆ ಏನಾಗುತ್ತೆ…?

ಕನ್ನಡ ದಲ್ಲಿ ದರ್ಶನ್ ಅವರಿಗೆ ಇರುವಷ್ಟು ಫ್ಯಾನ್ಸ್ ಇನ್ನಾರಿಗೂ ಇಲ್ಲ.‌ ಅವರೆಲ್ಲ ಪಕ್ಕಾ ಆಡಿಯನ್ಸ್ ಅನ್ನೋದು ಕೂಡ ಇನ್ನೊಂದು ವಿಶೇಷ. ಅವರೆಲ್ಲ ದರ್ಶನ್ ಸಿನಿಮಾ‌ ಚಿತ್ರ ಮಂದಿರಕ್ಕೆ ಬಾರದೆ ಒಂದು ವರ್ಷ ಆಗಿದೆ.ಎಲ್ಲವೂ ಅಂದುಕೊಂಡಿದ್ದರೆ ಕಳೆದ ವರ್ಷದ ಮಾರ್ಚ್ ನಲ್ಲೇ ಈ ಚಿತ್ರ ತೆರೆಗೆ ಬರಬೇಕಿತ್ತು. ಆದರೆ ಆಗಲೇ ಕೊರೋನಾ ಬಂತು. ದೇಶ ಲಾಕ್ ಡೌನ್ ಆಯಿತು. ರಾಬರ್ಟ್ ಕೂಡ ಬಾಕ್ಸ್ ನಲ್ಲಿ ಉಳಿಯಿತು. ಅವತ್ತಿನಿಂದ ಬಿಡುಗಡೆಗೆ ಕಾದಿದ್ದ ಆ ಚಿತ್ರ ಈಗ ಚಿತ್ರ ಮಂದಿರಕ್ಕೆ ಬರುವುದಕ್ಕಾಗಿ ಕೌಂಟ್ ಡೌನ್ ಶುರುವಾಗಿದೆ.  ಫ್ಯಾನ್ಸ್ ತುದಿಗಾಲ ಮೇಲೆ ನಿಂತಿದ್ದಾರೆ. ಇದೇ ಹೊತ್ತಿಗೆ ಕೊರೋನಾಂತಕ ಕೂಡ ಕಮ್ಮಿ ಆಗಿದೆ. ಮತ್ತೊಂದೆಡೆ ವ್ಯಾಕ್ಸಿನೇಷನ್ ಪ್ರಕ್ರಿಯೆ ಶುರುವಾಗುವುದಕ್ಕೂ ಸಿದ್ದತೆ ನಡೆದಿದೆ. ಇನ್ನೇನು ನುಗ್ಗೋಣ ಚಿತ್ರಮಂದಿರಕ್ಕೆ ಅಂತಿದೆ ದರ್ಶನ್ ಅಭಿಮಾನಿ ಬಳಗ.ಒಂದು ಸಲ ಚಿತ್ರ ಮಂದಿರಗಳು ಈ ರೀತಿ ತುಂಬಿಕೊಂಡರೆ, ಸಹಜವಾಗಿಯೇ ಹಳೆಯ ವೈಭವ ಮರುಕಳಿಸುತ್ತೆ ಅಂತಿದೆ ಚಿತ್ರರಂಗ.

Categories
ಸಿನಿ ಸುದ್ದಿ

ಫಸ್ಟ್ ನಿಮ್ ‌ಮನೆ‌ ನೋಡ್ಕೊಳ್ಳಿ, ಆಮೇಲೆ ನಾನು ಸೇರಿದಂತೆ ಇನ್ನೊಬ್ಬರ ಬಗ್ಗೆ ಯೋಚಿಸಿ ! 

ಲಕ್ಷಾಂತರ ಮಂದಿ ಅಭಿಮಾನಿಗಳಿಗೆ ನಟ ದರ್ಶನ್ ಹೀಗೆಂದು ಕೈ ಮುಗಿದು ವಿನಂತಿಸಿಕೊಂಡಿದ್ದು ಯಾಕೆ ಗೊತ್ತಾ? ಅದಕ್ಕೂ ಕಾರಣ ಇದೆ. ಅದೇನು ಅಂತ ನಾವ್ ಹೇಳ್ತೀವಿ ಕೇಳಿ….!
…,………………………………

ಇತಿಹಾಸಕ್ಕೆ ಸೇರಿಕೊಂಡ 2020 ಪ್ರತಿಯೊಬ್ಬರ ಜೀವನದಲ್ಲೂ ಮರೆಯಲಾಗದ ವರ್ಷ. ಅದು ಹೇಗೆ ಅಂತ ವಿವರಿಸಿ ಹೇಳಬೇಕಿಲ್ಲ. ಕೊರೋನಾ ಎನ್ನುವ ಮಹಾಮಾರಿ ಸೃಷ್ಟಿಸಿದ ಅವಾಂತರ ಎಲ್ಲರಿಗೂ ಗೊತ್ತು. ಯಾರಾರನ್ನೋ ಶಾಶ್ವತವಾಗಿ ಕಳೆದುಕೊಂಡು, ಕೆಲಸ ಇಲ್ಲದೆ, ದುಡ್ಡು ಕಾಸು ಕಾಣದೆ ಒಂದೊತ್ತಿನ‌ ಊಟಕ್ಕೂ ಪರದಾಡಿದವರಿಗೆ ಕಮ್ಮಿ ಇಲ್ಲ. ಅದೆಲ್ಲ ಬಹಳಷ್ಟು ಜನರಿಗೆ ಆದ ಸ್ವಂತ ಅನುಭವ. ಹಾಗಾಗಿ, ಅಷ್ಟು ಕೆಟ್ಟ ದಿನಗಳನ್ನು ಅನುಭವಿಸಿ ಈಗ ಅದು, ಇದು ಅಂತ ಕೈಗೊಂದು ಕೆಲಸ, ಒಂದೊತ್ತಿನ ಊಟ, ಒಂದಷ್ಟು ನೆಮ್ಮದಿ ಕಂಡುಕೊಂಡ ಸಂದರ್ಭದಲ್ಲಿ ಅಭಿಮಾನ ಅಂತೇಳಿ, ದೂರದ ಊರುಗಳಿಂದ ಬಸ್ಸು, ಕಾರು,ಬೈಕು ಹತ್ತಿಕೊಂಡು ಬೆಂಗಳೂರಿಗೆ ಬಂದು ನನ್ನ ಹುಟ್ಟು ಹಬ್ಬ ಅಚರಿಸಿ ಸಂಭ್ರಮಿಸುವ ಬದಲಿಗೆ ಇದೊಂದು ವರ್ಷ‌ ನೀವು ಮೊದಲು ನಿಮ್ಮ‌ಮನೆ- ಮಠ ನೋಡ್ಕೊಳ್ಳಿ, ಆಮೇಲೆ ಇನ್ನೊಬ್ಬರ ಬಗ್ಗೆ ಕಾಳಜಿ ವಹಿಸುವುದು ಇದದ್ದೇ…….ಅಂದ್ರು ಚಾಲೆಂಜಿಂಗ್ ಸ್ಟಾರ್ ದರ್ಶನ್.
ಅದಕ್ಕೆ ಕಾರಣ ಅವರ ಹುಟ್ಟು ಹಬ್ಬ‌.

ಫೆಬ್ರವರಿ 16 ಕ್ಕೆ ದರ್ಶನ್ ಹುಟ್ಟು ಹಬ್ಬ‌. ಈ ದಿನ ಬಂದ್ರೆ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ದರ್ಶನ್ ಅವರ ಮನೆ ಮುಂದೆ ಹೇಗೆಲ್ಲ ಅಭಿಮಾನಿಗಳು ಸೇರ್ತಾರೆ, ಅವರ ಹುಟ್ಟು ಹಬ್ಬದ ಆಚರಣೆ ಹೇಗಿರುತ್ತೆ ಅಂತ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಅದೆಲ್ಲ ಗೊತ್ತಿರುವ ವಿಚಾರ. ಕನ್ನಡದ ಮಟ್ಟಿಗೆ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟ ಅವರು. ಆ ದಿನ ಬಂದ್ರೆ ಸಾಕು ಅಪಾರ ಸಂಖ್ಯೆಯ ಅಭಿಮಾನಿಗಳು ರಾಜ್ಯದ‌ ಮೂಲೆ‌ಮೂಲೆಗಳಿಂದ ಬರುವುದು ಕಾಮನ್.‌ಆದ್ರೆ ಈ ವರ್ಷಕ್ಕೆ ಅದಕ್ಕೆಲ್ಲ ಬ್ರೇಕ್ ಹಾಕಲು‌ ನಿರ್ಧರಿಸಿರುವ ನಟ ದರ್ಶನ್, ಅಭಿಮಾನಿಗಳ ಜವಾಬ್ದಾರಿ ಏನು? ಹೇಗೆಲ್ಲ ಅವರು ತಮ್ಮ ಕುಟುಂಬದ ಕಡೆ ಗಮನ ಹರಿಸಬೇಕು ಅನ್ನೋದನ್ನು ಭಾನುವಾರ( ಜ.10) ರಂದು ಫೇಸ್ ಬುಕ್ ಲೈವ್ ಮೂಲಕ ಹೇಳಿಕೊಂಡರು.

 

‘ ಇದೊಂದು ವರ್ಷ ನೀವು ಬೆಂಗಳೂರಿಗೆ ಬಂದು ನನ್ನ ಹುಟ್ಟು ಹಬ್ಬ ಆಚರಿಸುವುದು ಬೇಡ. ಕಳೆದ ವರ್ಷ ಏನೆಲ್ಲ ಆಯಿತು. ಯಾರೆಲ್ಲ ಕೆಲಸ ಕಳೆದುಕೊಂಡು ಊರು ಸೇರಿಕೊಳ್ಳಬೇಕಾಯಿತು, ಒಂದೂತ್ತಿನ ಊಟಕ್ಕೂ ಹಲವರು ಹೇಗೆಲ್ಲ ಪರದಾಡಬೇಕಾಗಿ ಬಂತು ಅನ್ನೋದು ನಂಗೆ ಗೊತ್ತಿದೆ. ದಯಮಾಡಿ ನೀವು ಈಗ ಮೊದಲು‌ ನಿಮ್ಮ‌ನಿಮ್ಮ‌ ಮನೆ-ಮಠ ಅಂತ ನೋಡ್ಕೊಳ್ಳಿ, ಆಮೇಲೆ ಇನ್ನೊಬ್ಬರ ಬಗ್ಗೆ ಯೋಚಿಸಿ ಅಂತ ಮನವಿ ಮಾಡಿಕೊಂಡರು. ಇದೊಂದು ವಿಚಾರದ ಜತೆಗೆ ಇವತ್ತೇ ಅವರು ಫೇಸ್ ಬುಕ್ ಲೈವ್ ಬರೋದಿಕ್ಕೆ ಇನ್ನೊಂದು ಕಾರಣವೂ ಇತ್ತು. ಅದು ಬಹು ನಿರೀಕ್ಷಿತ ‘ರಾಬರ್ಟ್’ ಚಿತ್ರದ ಬಿಡುಗಡೆ ವಿಚಾರ. ಮಾರ್ಚ್ 11ರಂದು ‘ರಾಬರ್ಟ್’ ರಿಲೀಸ್‌ಆಗುತ್ತಿದೆ. ಹಾಗಂತ ನಿರ್ಮಾಪಕ ಉಮಾಪತಿ ಸೇರಿದಂತೆ ಚಿತ್ರ ತಂಡ ಡಿಸೈಡ್ ಮಾಡಿದೆ.ಅದನ್ನು ದರ್ಶನ್ ಫೇಸ್ ಬುಕ್ ಲೈವ್ ನಲ್ಲಿ ಅಧಿಕೃತ ವಾಗಿ ಹೇಳಿದರು.’ ಈ ಬಾರಿ ಯಾವುದೇ ರೀತಿಯ ಜನ್ಮದಿನ ಆಚರಣೆ ಇರುವುದಿಲ್ಲ .ಹಾಗಾಗಿ, ಯಾರೂ ಮನೆ ಬಳಿ ಬರಬೇಡಿ ಅಂತ ಮೊದಲು ಅಭಿಮಾನಿಗಳಿಗೆ ಮನವಿ ಮಾಡಿದರು.

error: Content is protected !!