Categories
ಸಿನಿ ಸುದ್ದಿ

ಬುಧವಾರದಿಂದ ಮತ್ತೆ ಬಿಗ್‌ ಬಾಸ್‌ ಅಸಲಿ ಆಟ ಶುರು; ಈಗ ಯಾರೆಲ್ಲ ಹೋಗಲ್ಲ ಗೊತ್ತಾ ?

ಕನ್ನಡದ “ಬಿಗ್‌ ಬಾಸ್‌” ರಿಯಾಲಿಟಿ ಶೋ ಮಟ್ಟಿಗೆ ಇದೊಂದು ಅಪರೂಪದ ಸನ್ನಿವೇಶ. ದಾಖಲೆಯೂ ಹೌದು. ಜತೆಗೆ ಚರಿತ್ರೆಯೂ ಕೂಡ. ಯಾಕಂದ್ರೆ ಮುಂದೆ ಇಂತಹ ಸನ್ನಿವೇಶ ಎದುರಾಗುತ್ತೋ, ಇಲ್ಲವೋ ಗೊತ್ತಿಲ್ಲ. ಹೌದು, ಕೊರೊನಾ ಕಾರಣಕ್ಕೆ ಅರ್ಧಕ್ಕೆ ನಿಂತಿದ್ದ ಕಲರ್ಸ್‌ ಕನ್ನಡದ ಬಹು ಜನಪ್ರಿಯ ರಿಯಾಲಿಟಿ ಶೋ “ಬಿಗ್‌ ಬಾಸ್‌ ಸೀಸನ್‌ ೮” ಮತ್ತೆ ಶುರುವಾಗುತ್ತಿದೆ. ಹಾಗಂತ, ಮತ್ತೆ ಮೊದಲಿನಿಂದ ಶುರುವಾಗುತ್ತಿಲ್ಲ. ಬದಲಿಗೆ ಅರ್ಧದಲ್ಲಿ ಅದು ನಿಂತು ಹೋದಾಗ ಬಿಗ್‌ ಬಾಸ್‌ ಮನೆಯಲ್ಲಿದ್ದ ಸ್ಪರ್ಧಿಗಳ ಮೂಲಕ ಆಟ ಶುರುವಾಗುತ್ತಿದೆ.

ಸದ್ಯಕ್ಕೀಗ “ಬಿಗ್‌ ಬಾಸ್‌” ಮನೆಯಲ್ಲಿ 12 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಚಕ್ರವರ್ತಿ ಚಂದ್ರಚೂಡ್‌, ಪಾವಗಡ ಮಂಜು, ವೈಷ್ಣವಿ, ದಿವ್ಯಾ ಉರಡುಗ, ಶುಭಪೂಂಜಾ, ನಿಧಿ ಸುಬ್ಬಯ್ಯ, ದಿವ್ಯಾ ಸುರೇಶ್‌, ರಘು ಗೌಡ, ಕೆ.ಪಿ. ಅರವಿಂದ್‌, ಪ್ರಿಯಾಂಕಾ ತಿಮ್ಮೇಶ್‌, ಶಮಂತ್‌ ಗೌಡ ಹಾಗೂ ಪ್ರಶಾಂತ್‌ ಸಂಬರಗಿ ಉಳಿದುಕೊಂಡಿದ್ದರು. ಈಗ ಎರಡನೇ ಇನ್ನಿಂಗ್ಸ್‌ ಜೂನ್‌ 23, ಬುಧವಾರದಿಂದ ಶುರುವಾಗುತ್ತಿದೆ. ಅಷ್ಟು ಸ್ಪರ್ಧಿಗಳಲ್ಲಿ ಯಾರೆಲ್ಲ ಮತ್ತೆ ಬಿಗ್‌ ಬಾಸ್‌ ಮನೆಗೆ ಎಂಟ್ರಿ ಆಗುತ್ತಾರೆನ್ನುವುದು ತೀವ್ರ ಕುತೂಹಲ ಮೂಡಿಸಿದೆ.

ಬಿಗ್‌ ಬಾಸ್‌ ಯಾಕೆ ನಿಂತಿದ್ದು ಅಂತ ನಿಮಗೆಲ್ಲ ಗೊತ್ತೇ ಇದೆ. ಮಹಾ ಮಾರಿ ಕೊರೊನಾ ಹೆಚ್ಚಳಗೊಂಡು ರಾಜ್ಯದಲ್ಲಿ ಅಪಾರ ಸಾವು-ನೋವಿನೊಂದಿಗೆ ತೀವ್ರ ಆತಂಕ ಸೃಷ್ಟಿಸಿದ್ದ ಸಂದರ್ಭದಲ್ಲೇ “ಬಿಗ್‌ ಬಾಸ್‌”ನಲ್ಲೂ ತಳಮಳ ಶುರುವಾಯಿತು. ಶೋ ನಿರೂಪಕರಾದ ನಟ ಸುದೀಪ್‌ ಅವರಲ್ಲೇ ಅನಾರೋಗ್ಯ ಕಾಣಿಸಿಕೊಂಡಿತು. ಕೊರೊನಾ ಪಾಸಿಟಿವ್‌ ಬಂದು ಕ್ವಾರಂಟೈನ್‌ಗೆ ಒಳಗಾದರು. ಅತ್ತ “ಬಿಗ್‌ಬಾಸ್‌” ಮನೆಯಲ್ಲೂ ಒಂದಿಬ್ಬರು ಅನಾರೋಗ್ಯಕ್ಕೆ ಒಳಗಾಗಿದ್ದರು. ಹಾಗಂತ, ಅವರಿಗೂ ಕೊರೊನಾ ಸೋಂಕು ತಗಲಿತ್ತು ಅಂತಲ್ಲ, ಸಹಜವಾಗಿಯೇ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರು. ಆ ಪೈಕಿ ನಟಿ ದಿವ್ಯಾ ಉರುಡುಗ ಚಿಕಿತ್ಸೆಗಾಗಿ ಅಲ್ಲಿಂದ ಹೊರ ಬಂದರು.

ಆನಂತರ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾದವು. ಕೊರೊನಾ ತೀವ್ರವಾಗಿ ಜನರನ್ನು ಕಾಡುತ್ತಿರುವಾಗ ಈ ಹುಚ್ಚಾಟಗಳನ್ನು ಜನ ನೋಡಬೇಕಾ? ಇವರಿಗೇನು ಬೇರೆ ಕೆಲಸ ಇಲ್ಲವೇ? ಅಂತೆಲ್ಲ ನೆಟ್ಟಿಗರು ಸಿಟ್ಟು ಹೊರ ಹಾಕಿದರು. ಅದೇ ಹೊತ್ತಿಗೆ “ಬಿಗ್‌ಬಾಸ್‌” ರಿಯಾಲಿಟಿ ಶೋ ಟಿಆರ್‌ಪಿ ಕೂಡ ನೆಲ ಕಚ್ಚಿತ್ತು. ಹಾಗಾಗಿ ಚಾನಲ್‌ನವರಿಗೂ ಅದನ್ನು ಅರ್ಧಕ್ಕೆ ನಿಲ್ಲಿಸುವುದನ್ನು ಬಿಟ್ಟರೆ ಬೇರೆ ದಾರಿ ಇರಲಿಲ್ಲ. ಇನ್ನೇನು ಆಗ ನಿಲ್ಲುತ್ತೆ, ಈಗ ನಿಲ್ಲುತ್ತೆ ಅನ್ನುವ ಕ್ಷಣಗಳಲ್ಲಿ ಕಲರ್ಸ್‌ ಕನ್ನಡ ಅನೌನ್ಸ್‌ ಮಾಡಿತು.

ಪರಿಣಾಮ ಸ್ಪರ್ಧಿಗಳು ಅಲ್ಲಿಂದ ಹೊರ ಬಂದರು. ಅವರಿಗೆಲ್ಲ ಈಗ ತಾವು “ಬಿಗ್‌ ಬಾಸ್‌” ಮನೆಯಲ್ಲಿದ್ದಾಗ ಯಾರೆಲ್ಲ ಯಾರ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದರು. ಯಾರ ಪರವಾಗಿ ಜನರ ಒಲವು ಇತ್ತು, ಯಾರು ಗೆಲ್ಲಬಹುದು ಎನ್ನುವ ಲೆಕ್ಕಚಾರಗಳಿದ್ದವು. ಯಾರಿಗೆ ಎಷ್ಟೆಲ್ಲಾ ಓಟು ಬಂದಿದ್ದವು… ಇತ್ಯಾದಿಯಾಗಿ “ಬಿಗ್‌ಬಾಸ್‌” ಮನೆಗಳೊಳಗಿನ ರಹಸ್ಯ ಗೊತ್ತಾಗಿದೆ.

ವೈಲ್ಡ್‌ ಕಾರ್ಡ್‌ ಎಂಟ್ರಿ ಮೂಲಕ “ಬಿಗ್‌ ಬಾಸ್‌” ಮನೆ ಪ್ರವೇಶಿಸಿದ ಚಕ್ರವರ್ತಿ ಚಂದ್ರಚೂಡ್‌ ಯಾರನ್ನು, ಯಾರ ವಿರುದ್ಧ ಹೇಗೆಲ್ಲ ಎತ್ತಿ ಕಟ್ಟುತ್ತಿದ್ದರು, ಪ್ರಶಾಂತ್‌ ಸಂಬರಗಿ-ಚಂದ್ರಚೂಡ್‌ ನಡುವೆ ಹೇಗೆಲ್ಲ ಸ್ನೇಹ ಇತ್ತು,.. ಮುಂತಾದ ಒಳ ರಾಜಕೀಯ ಬಯಲಾಗಿದೆ. ಜತೆಗೆ ವೈಷ್ಣವಿ-ರಘು ಗೌಡ, ಅರವಿಂದ್- ದಿವ್ಯಾ ಉರುಡುಗ ಹಾಗೂ ಶಮಂತ್‌- ಪ್ರಿಯಾಂಕಾ ತಿಮ್ಮೇಶ್‌ ಜೋಡಿಗಳ ಬಗ್ಗೆ ಹೊರಗಡೆ ವರ್ಣರಂಜಿತ ಸುದ್ದಿಗಳು ಹರಿದಾಡುತ್ತಿದ್ದವು ಅನ್ನೋದು ಕೂಡ ಸ್ಪರ್ಧಿಗಳಿಗೆಲ್ಲ ತಿಳಿದಿದೆ. ಈಗ ಎಲ್ಲರೂ ಎಚ್ಚರಗೊಂಡಿದ್ದಾರೆ.

ಸರಿ-ತಪ್ಪುಗಳೇನು ಅಂತಲೂ ಪ್ರತಿಯೊಬ್ಬರಿಗೂ ಗೊತ್ತಾಗಿದೆ. ಹಾಗೆ ನೋಡಿದರೆ ಅಲ್ಲೀಗ ಹೊಸ ಆಟವೇ ಶುರುವಾಗಬೇಕಿದೆ. ಹಾಗೆಯೇ ಹೊಸ ತಂತ್ರಗಳ ಮೂಲಕವೇ ವೀಕ್ಷಕರನ್ನು ಈ ಶೋ ರಂಜಿಸಬೇಕಿದೆ ಆ ನಿಟ್ಟಿನಲ್ಲಿ ಕಲರ್ಸ್‌ ಕನ್ನಡದ “ಬಿಗ್‌ಬಾಸ್ ಸೀಸನ್‌ ೮” ರ ಎಡನೇ ಇನ್ನಿಂಗ್ಸ್‌ ತೀವ್ರ ಕುತೂಹಲ ಮೂಡಿಸಿದೆ. ಇದೆಲ್ಲ ಓಕೆ, ಈಗ ಕೊರೊನಾ ಇನ್ನು ಪೂರ್ಣ ಪ್ರಮಾಣದಲ್ಲಿ ಹೋಗಿಲ್ಲ. ಈಗಲೂ ಬೆಂಗಳೂರಿನಲ್ಲಿ ಪ್ರತಿ ದಿನ ಕೊರೊನಾ ಸೋಂಕಿನ ಹೊಸ ಪ್ರಕರಣಗಳ ಸಂಖ್ಯೆ ಸಾವಿರ ಲೆಕ್ಕದಲ್ಲಿ ದಾಖಲಾಗುತ್ತಿದೆ.

ಈ ನಡುವೆಯೇ ಈಗ ಅನ್‌ಲಾಕ್ ಆಗಿದೆ. ಜನ ಮೈ ಮರೆತು ಓಡಾಡುತ್ತಿದ್ದಾರೆ. ಮತ್ತೆ ಹೆಚ್ಚಳ ಆಗೋದಿಲ್ಲ ಎನ್ನುವ ಗ್ಯಾರಂಟಿ ಇಲ್ಲ. ಯಾಕಂದ್ರೆ ಮೈಸೂರು ಸೇರಿದಂತೆ ಈಗಲೂ ಕೆಲವು ಜಿಲ್ಲೆಗಳಲ್ಲಿ ಕೊರೊನಾ ಸೋಂಕಿನ ಪಾಸಿಟಿವಿಟಿ ದರ ಜಾಸ್ತಿಯೇ ಇದೆ. ಹಾಗಾಗಿ ಈಗಲೂ ಇದೆಲ್ಲ ಹುಚ್ಚಾಟದ ಶೋ ಬೇಕಾ ಎನ್ನುವುದು ಸಾರ್ವಜನಿಕರ ಪ್ರಶ್ನೆ. ಸದ್ಯಕ್ಕೆ ಕಲರ್ಸ್‌ ಕನ್ನಡದಿಂದ ಉತ್ತರ ಇಲ್ಲ. ಹೇಗಾದರೂ ಸರಿ, ಶೋ ಮುಗಿಸಲೇಬೇಕು ಎನ್ನುವ ಹಠಕ್ಕೆ ಬಿದ್ದಂತೆ ಕಾಣುತ್ತಿದೆ. ಹೊಸ ಪ್ರೋಮೋಗಳ ಮೂಲಕ ಈಗಾಗಲೇ ಜನರಲ್ಲಿ ಒಂದಷ್ಟು ಕುತೂಹಲ ಹುಟ್ಟು ಹಾಕಿದೆ. ಅಂತೆಯೇ ನಾಳೆಯಿಂದ ಶೋ ಶುರುವಾಗುವುದು ಖಚಿತವಾಗಿದೆ. ಗೆಲ್ಲುವರಾರು, ಬರಿ ಗೈಯಲ್ಲಿ ಮನೆಗೆ ಬರುವರಾರು ಎನ್ನುವ ಕಥೆ ಬಿಡಿ, ಎರಡನೇ ಇನ್ನಿಂಗ್ಸ್‌ ಎಷ್ಟರ ಮಟ್ಟಿಗೆ ಸಕ್ಸಸ್‌ ಆಗುತ್ತೆ ಎನ್ನುವುದು ಕುತೂಹಲ ಹುಟ್ಟಿಸಿದೆ.

ಬಿಗ್‌ ಬಾಸ್‌ ಎರಡನೇ ಇನ್ನಿಂಗ್ಸ್‌ ನಾಳೆಯಿಂದ ಶುರುವಾಗುತ್ತಿದೆ. ೧೨ ಮಂದಿ ಸ್ಪರ್ಧಿಗಳು ಎಂಟ್ರಿ ಆಗುತ್ತಿದ್ದಾರೆನ್ನುವ ಸುದ್ದಿ ಇದೆ. ಆದರೆ ಇದರಲ್ಲಿ ಕೆಲವರು ಹೊರಗುಳಿಯುವ ಸಾಧ್ಯತೆಗಳು ಹೆಚ್ಚಿವೆ ಎನ್ನುವ ಮಾಹಿತಿ ಹೊರಬಿದ್ದಿದೆ. ಅಗ್ನಿ ಸಾಕ್ಷಿ ಧಾರಾವಾಹಿಯ ಖ್ಯಾತಿಯ ನಟಿ ವೈಷ್ಣವಿ ಗೌಡ ಇಂತಹದೊಂದು ನಿರ್ಧಾರ ಮಾಡಿದ್ದಾರೆನ್ನುವ ಗಾಸಿಪ್‌ ಇದೆ. ಈ ಬಗ್ಗೆ ನಟಿ ವೈಷ್ಣವಿ ಅವರ ಕಡೆಯಿಂದ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಹಾಗೆಯೇ ದಿವ್ಯಾ ಉರುಡುಗ ಕೂಡ ಮತ್ತೆ ಬಿಗ್‌ ಬಾಸ್‌ ಮನೆಗೆ ಹೋಗುವುದು ಡೌಟು ಎನ್ನುಲಾಗಿದೆ. ಎಲ್ಲದಕ್ಕೂ ನಾಳೆಯೇ ಉತ್ತರ ಸಿಗಲಿದೆ.

Categories
ಸಿನಿ ಸುದ್ದಿ

ಮೈಂಡ್ ಇಟ್ ಅಂದ್ರು ಯತಿರಾಜ್‌: ಸಂಚಾರಿ ವಿಜಯ್ ನೆನಪಿಸುವ ಕಿರುಚಿತ್ರ ಮೂಲಕ ಸಂದೇಶ ಕೊಟ್ಟ ಕಲಾವಿದ

ಕಲಾವಿದ ಯತಿರಾಜ್‌ ಲಾಕ್‌ಡೌನ್‌ ಟೈಮ್‌ನಲ್ಲಿ ಸುಮ್ಮನೆ ಕೂರಲಿಲ್ಲ. ಸದಾ ಸಿನಿಮಾ ಧ್ಯಾನಿಸುವ ಯತಿರಾಜ್‌, ಕೊರೊನಾ ಲಾಕ್‌ಡೌನ್‌ ಸಮಯದಲ್ಲಿ ಅವರು ಒಂದಷ್ಟು ಮನಮಿಡಿಯುವಂತಹ ಕಿರುಚಿತ್ರಗಳನ್ನು ನಿರ್ದೇಶಿಸುವ ಮೂಲಕ ಗಮನ ಸೆಳೆದಿದ್ದರು. ಈಗ ಮತ್ತೊಂದು ಕಿರುಚಿತ್ರ ನಿರ್ದೇಶಿಸುವ ಮೂಲಕ ಸೈ ಎನಿಸಿಕೊಂಡಿದ್ದಾರೆ. ಹೌದು, ಅವರ ಕಿರುಚಿತ್ರದ ಹೆಸರು “ಮೈಂಡ್‌ ಇಟ್‌”. ಇತ್ತೀಚೆಗಷ್ಟೇ ನಟ ಸಂಚಾರಿ ವಿಜಯ್‌ ಅಗಲಿದ್ದಾರೆ. ಅವರು ಪ್ರಯಾಣ ಮಾಡುವ ಸಂದರ್ಭದಲ್ಲಿ ಹೆಲ್ಮಟ್‌ ಹಾಕಿಕೊಂಡಿದ್ದರೆ, ಅವರ ಜೀವ ಉಳಿಯುತ್ತಿತ್ತು ಎಂದು ಎಲ್ಲಾ ಕಡೆ ಸುದ್ದಿಯಾಗಿತ್ತು. ಈ ವಿಷಯವನ್ನೇ ಆಧರಿಸಿ, ನಟ ಯತಿರಾಜ್ ನಿರ್ದೇಶನ ಮಾಡುವುದರ ಜೊತೆಯಲ್ಲಿ ಅವರು ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. “ಮೈಂಡ್ ಇಟ್” ಹೆಸರಲ್ಲಿ ಆರು ನಿಮಿಷದ ಹದಿನೈದನೆ ಕಿರುಚಿತ್ರವನ್ನು ಅವರು ತಮ್ಮದೆ ಸಂಸ್ಥೆ ’ಕಲಾವಿದ ಫಿಲಂ ಅಕಾಡೆಮಿ’ ಮೂಲಕ ನಿರ್ಮಾಣ ಮಾಡಿದ್ದಾರೆ. ಯೂ ಟ್ಯೂಬ್‌ದಲ್ಲಿ ವೀಕ್ಷಿಸಿದ ಹಲವರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

ಅದೊಂದು ಸುಂದರ ಸಂಸಾರ. ಆತ ರಂಗಭೂಮಿ ಕಲಾವಿದ. ಅಡಿಷನ್‌ನಲ್ಲಿ ಇವರ ಅಭಿನಯ ಕಂಡು ನಿರ್ದೇಶಕ ಮತ್ತು ನಿರ್ಮಾಪಕರು ನಾಯಕನಾಗಿ ಚಿತ್ರಕ್ಕೆ ಆಯ್ಕೆ ಮಾಡುತ್ತಾರೆ. ಖುಷಿಯನ್ನು ಪತ್ನಿಯೊಂದಿಗೆ ಹಂಚಿಕೊಂಡು, ಮುಂಗಡ ಹಣ ಪಡೆಯಲು ಹೆಲ್ಮೆಟ್ ಧರಿಸದೆ ಹೋಗುತ್ತಾರೆ. ದಾರಿಯಲ್ಲಿ ಫೋನ್ ಬಂತೆಂದು ಮಾತಾಡುವಾಗ, ಹಳ್ಳದಿಂದ ಪಾರಾಗುವ ಸಲುವಾಗಿ, ಆಯ ತಪ್ಪಿ ಕೆಳೆಗೆ ಬೀಳುತ್ತಾರೆ. ಫುಟ್‌ಪಾತ್‌ಗೆ ಬಿದ್ದ ಅವರ ತಲೆಗೆ ಬಲವಾದ ಪೆಟ್ಟು ಬೀಳುತ್ತೆ. ನಂತರ ತೀವ್ರ ರಕ್ತ ಸ್ರಾವಗೊಂಡು ಅಲ್ಲಿಯೇ ಪ್ರಾಣ ಕಳೆದುಕೊಳ್ಳುವುದರೊಂದಿಗೆ ಸಿನಿಮಾ ಕೂಡ ಮುಗಿಯುತ್ತದೆ.

ಪತ್ನಿ ಪಾತ್ರದಲ್ಲಿ ನಯನ, ನಿರ್ಮಾಪಕರಾಗಿ ಬೆಂ.ಕೋ.ಶ್ರೀನಿವಾಸ್, ನಿರ್ದೇಶಕರಾಗಿ ಪರಮೇಶ್ ಹಾಗೂ ಬೇಬಿ ಸ್ಮೃತಿ ನಟಿಸಿದ್ದಾರೆ. ಸೋನುಸಾಗರ ಅವರ ಛಾಯಾಗ್ರಹಣ ಮತ್ತು ಸಂಕಲನವಿದೆ. ವಿನುಮನಸು ಮತ್ತು ಮಾರುತಿ ಮೀರಜ್ ಸಂಗೀತವಿದೆ. ನಟ ವಸಿಷ್ಠ ಸಿಂಹ ಹಿನ್ನಲೆ ಧ್ವನಿ ನೀಡಿದ್ದಾರೆ.

Categories
ಸಿನಿ ಸುದ್ದಿ

ಅದೊಂದು‌ ಕಾರಣಕ್ಕೆ‌ ನಟ ಸಂಚಾರಿ ವಿಜಯ್ ತುಂಬಾ ನೊಂದಿದ್ದರು – ನಟ ಸತೀಶ್ ನೀನಾಸಂ ಬಿಚ್ಚಿಟ್ಟ ವಿಷಯವಿದು…

ನಟ ಸಂಚಾರಿ ವಿಜಯ್ ಈಗಿಲ್ಲ. ಅವರೇನಿದ್ದರೂ ಈಗ ನೆನಪು ಮಾತ್ರ.‌ ಈಗ ಅವರ ಆಂತರಿಕ‌ ಬದುಕಿನ ರೋಚಕ‌ ಗಳು ಬಯಲಿಗೆ ಬರುತ್ತಿದ್ದು, ಅವೆಲ್ಲ ಅವರನ್ನು‌ ಬೆಚ್ಚಿ ಬೀಳಿಸುತ್ತಿವೆ. ವಿಚಿತ್ರ ಅಂದ್ರೆ, ಕನ್ನಡ ಚಿತ್ರ ರಂಗಕ್ಕೆ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ ನಟನೊಬ್ಬ ಜಾತಿಯ ಅವಮಾನದ
ತೀವ್ರವಾಗಿ ನೊಂದಿದ್ದರು‌ ಎನ್ನುವ ಸಂಗತಿಯನ್ನು ವಿಜಯ್ ಆತ್ಮೀಯರು ಆದ ನಟ ಸತೀಶ್ ನೀನಾಸಂ ಬಹಿರಂಗಪಡಿಸಿದ್ದಾರೆ. ಗೆಳೆಯ ವಿಜಯ್ ಅವರ ನಟನೆಯ ಜರ್ನಿ ಹಾಗೂ ಅನುಭವಿಸಿದ ಅವಮಾನಗಳ‌ ಕುರಿತು ‘ಕನ್ನಡ ಪಿಕ್ಚರ್” ಯೂಟ್ಯೂಬ್ ಚಾನಲ್‌ನಲ್ಲಿ ಮುಕ್ತವಾಗಿ ಹೇಳಿಕೊಂಡಿದ್ದಾರೆ.

‘ವಿಜಯ್ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟರೂ ಸಮಾಜದಲ್ಲಿ ಸಾಕಷ್ಟು ಅವಮಾನ ಎದುರಿಸಿದ್ದರು. ಕಷ್ಟಗಳು ಎನ್ನುವುದಕ್ಕಿಂತ ನೋವು ಅನುಭವಿಸಿದ್ದರು. ಈ ಸಮಾಜದ ವ್ಯವಸ್ಥೆಯಿಂದ ಜೀವನದಲ್ಲಿ ನೊಂದಿದ್ದರು. ಪ್ರಾಣಿಗಳ ಮೇಲೆ ತೋರುವ ಮನುಷ್ಯತ್ವ, ಮನುಷ್ಯರ ಮೇಲೆ ಏಕಿಲ್ಲ ಎಂದು ಹಲವು ಬಾರಿ ಸಂಕಟ ಪಟ್ಟಿದ್ದರು” ಎಂದು ನಟ ಸತೀಶ್ ನೀನಾಸಂ ಹೇಳಿಕೊಂಡಿದ್ದಾರೆ.

‘ಸಂಚಾರಿ ವಿಜಯ್ ಈಗಿಲ್ಲ ಅಂತ ಕಣ್ಣೀರು ಹಾಕುವ ಜನ, ಅವರಿದ್ದಾಗ ನೀವು ಕೊಟ್ಟ ನೋವುಗಳನ್ನು ಒಮ್ಮೆ ನೆನಪಿಸಿಕೊಳ್ಳಿ. ಕರ್ನಾಟಕದ ಹೆಮ್ಮೆ ಅಂತ ಕೊಂಡಾಡಿದ ಮಂದಿ ಎಷ್ಟು ನೋವು ಕೊಟ್ಟಿದ್ದೀರಾ ಅಂತ ನೋಡ್ಕೊಳ್ಳಿ. ಎಲ್ಲವೂ ಸರಿ ಇದೆ, ಎಲ್ಲವೂ ಚೆನ್ನಾಗಿದೆ ಅಂತ ಎಷ್ಟು ದಿನ ಮುಚ್ಚಿಟ್ಟುಕೊಂಡು ಹೋಗ್ತೀರಾ, ಜಾತಿ ಯಾವುದು, ಊರು ಯಾವುದು, ಕೆಲಸ ಯಾವುದು ಅಂತ ನೋಡದೆ ಒಬ್ಬ ಮನುಷ್ಯ ಎಂದು ನೋಡುವುದು ಯಾವಾಗ” ಎಂದು ಬೇಸರ ಹೊರಹಾಕಿದರು.

”ಕಾಜಿ’ ಅಂತ ಸಾಕ್ಷ್ಯಚಿತ್ರ ಮಾಡಿದೆ. ಆ ಸಮಯದಲ್ಲಿ ಒಬ್ಬರು ಕಾಮೆಂಟ್ ಮಾಡಿದರು. ‘ಈ ರೀತಿ ಸಿನಿಮಾದಲ್ಲಿ ತೋರಿಸಬೇಡಿ, ಅಮೆರಿಕಾದಲ್ಲಿ ನಮ್ಮ ಬಡತನ ನೋಡಿದ್ರೆ ಅವಮಾನ ಆಗುತ್ತೆ’ ಅಂದ್ರು. ಹಾಗಾದ್ರೆ, ಇಲ್ಲಿರೋ ಬಡತನ, ಸಮಸ್ಯೆ, ಜಾತಿ ಸಮಸ್ಯೆ ಮುಚ್ಚಾಕ್ತೀರಾ ನೀವು. 21ನೇ ಶತಮಾನದಲ್ಲಿ ಎಲ್ಲವೂ ಅಭಿವೃದ್ದಿ ಹೊಂದಿದೆ, ವಿಮಾನ, ವಿಜ್ಞಾನ, ಆವಿಷ್ಕಾರ ಎಷ್ಟೇ ಅಗಿದ್ದರೂ ಮನುಷ್ಯತ್ವದಲ್ಲಿ ಮನುಷ್ಯರು ಬಹಳ ಹಿಂದೆ ಇದ್ದಾರೆ. ಪ್ರಾಣಿಗಿಂತ ಹೀನಾಯವಾಗಿದ್ದಾರೆ” ಎಂದು ಸತೀಶ್ ಅಸಮಾಧಾನ ವ್ಯಕ್ತಪಡಿಸಿದರು.

”ಸಂಚಾರಿ ವಿಜಯ್‌ಗೂ ಈ ಜಾತಿ ಅವಮಾನ ಆಗಿತ್ತು. ಅನೇಕ ಬಾರಿ ನನ್ನೊಂದಿಗೆ ಈ ವಿಚಾರ ಚರ್ಚಿಸಿದ್ದರು. ಸಮಯ ಬಂದಾಗ, ಎಲ್ಲವನ್ನು ವಿವರವಾಗಿ ಹೇಳ್ತೀನೆ, ತುಂಬಾ ಜನ ಅದನ್ನು ಮುಚ್ಚಿಟ್ಟಿದ್ದಾರೆ, ನಾನು ಹೇಳ್ತೇನೆ. ಅವನಿಗೆ ಈ ಸಮಾಜ ಕೊಟ್ಟ ಅಪಮಾನ ಎಂತಹದ್ದು ಎಂದು ಎಲ್ಲರೂ ತಿಳಿಯಲಿ” ಎಂದು ಸತೀಶ್ ಆಕ್ರೋಶವಾಗಿ ಮಾತನಾಡಿದರು.

Categories
ಸಿನಿ ಸುದ್ದಿ

ಕೋಟೆ ನಾಡಿನ ಹುಡುಗರ ಸಲ್ಯೂಟ್ ವಾರಿಯರ್ಸ್‌ ಆಲ್ಬಂ ಸಾಂಗ್‌ ; ಚಿತ್ರದುರ್ಗ ಪ್ರತಿಭೆಗಳ ಹಾಡಿಗೆ ಎಸ್‌ಪಿ, ಸಿಇಓ ಚಾಲನೆ…

ಕೊರೊನಾ ವಿಷಯ ಕುರಿತಂತೆ ಈಗಾಗಲೇ, ಹಾಡು, ಜಾಹಿರಾತು, ಕಿರುಚಿತ್ರ ಅಷ್ಟೇ ಯಾಕೆ ಸಿನಿಮಾಗಳು ತಯಾರಾಗಿವೆ. ಕೆಲವು ರಿಲೀಸ್ ಕೂಡ ಆಗಿವೆ. ಆ ಸಾಲಿಗೆ ಈಗ ‘ಸಲ್ಯೂಟ್ ವಾರಿಯರ್ಸ್’ ಆಲ್ಬಂ ಸಾಂಗ್ ಕೂಡ ಒಂದು.
ಹೌದು, ಇದು ಕೋಟೆ ನಾಡು ಚಿತ್ರದುರ್ಗ ಪ್ರತಿಭೆಗಳೇ ಸೇರಿ ಚಿತ್ರೀಕರಿಸುತ್ತಿರುವ ಹಾಡು. ಸದ್ಯ ಹಾಡಿನ ಚಿತ್ರೀಕರಣಕ್ಕೆ ಚಾಲನೆ ಸಿಕ್ಕಿದೆ. ಶೂಟಿಂಗ್ ಬಳಿಕ ಯುವಕರ ತಂಡ, ಸಾಂಗ್ ಬಿಡುಗಡೆ ಮಾಡಲು ತಯಾರು ನಡೆಸುತ್ತಿದೆ.
ಇನ್ನು ಈ ಹುಡುಗರ ಪ್ರಯತ್ನ ಮೆಚ್ಚಿಕೊಂಡ ಚಿತ್ರದುರ್ಗ ಎಸ್.ಪಿ. ಮತ್ತು ಸಿಇಓ ಚಾಲನೆ ನೀಡಿ ಶುಭ ಹಾರೈಸಿದ್ದಾರೆ.

ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಕೊರೊನಾ ಕುರಿತ ಜಾಗೃತಿ ಗೀತೆ ‘ಸಲ್ಯೂಟ್ ವಾರಿಯರ್ಸ್‌’ ಕನ್ನಡ ಆಲ್ಬಂ ಸಾಂಗ್ ಮುಹೂರ್ತ ನಡೆಯಿತು. ಈ ವೇಳೆ ಆಲ್ಬಂ ಸಾಂಗ್ ಗೆ ಚಾಲನೆ ಕೊಟ್ಟ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ,
‘ಸರ್ಕಾರ ಕೊರೊನಾ ಲಾಕ್‌ಡೌನ್ ಸಡಿಲಿಕೆ ಮಾಡಿರಬಹುದು ಆದರೂ ಜನರು ಮೂರನೇ ಅಲೆಯ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್ ಇಲಾಖೆ ಚಿತ್ರದುರ್ಗವನ್ನು ಕೊರೊನಾ ಮುಕ್ತ ಮಾಡಲು ಸನ್ನದ್ಧವಾಗಿದೆ. ಇನ್ನು ಪ್ರತಿಭಾವಂತ ಹುಡುಗರು ಸೇರಿ ಮಾಡಿರುವ ‘ಸಲ್ಯೂಟ್ ವಾರಿಯರ್ಸ್‌’ ಸಾಂಗ್ ಅದ್ಬುತವಾಗಿ ಮೂಡಿಬಂದಿದೆ. ಚಿತ್ರೀಕರಣ ಯಶಸ್ವಿಯಾಗಲಿ ಎಂದಿದ್ದಾರೆ.

ಸರ್ಕಾರ ವಿವಿಧ ರೀತಿಯಲ್ಲಿ ಜನಜಾಗೃತಿ ಕಾರ್ಯ ಮಾಡುತ್ತಿದ್ದು ಅದನ್ನು ಅರಿತ ಮಾತರಂ ಲ್ಯಾಪ್ ಕ್ರಿಯೇಷನ್ ತಂಡವು ಒಂದು ಅರ್ಥಪೂರ್ಣ ಹಾಡು ರಚಿಸಿದೆ. ಇವರ ಹೊಸ ಹೆಜ್ಜೆಗೆ ಶುಭವಾಗಲಿ. ಇವರಿಂದ ಇನ್ನೂ ಹೆಚ್ಚು ಕ್ರಿಯಾಶೀಲ ಕಾರ್ಯಗಳು ಬರಲಿ ಎಂದು ಶುಭ ಹಾರೈಸಿದ್ದಾರೆ.

ಸಾಂಗ್ ಚಿತ್ರೀಕರಣಕ್ಕೆ ಚಾಲನೆ ನೀಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ನಂದಿನಿದೇವಿ, ‘ನಮ್ಮ ಜಿಲ್ಲೆಯನ್ನು ಹೋಲಿಕೆ ಮಾಡಿ ನೋಡಿದಾಗ ಕೊರೊನಾ ಸಂಖ್ಯೆ ಕಡಿಮೆ ಇದೆ. ಎಲ್ಲರೂ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳೋಣ, ಮುಂದೆ ಮೂರನೆ ಅಲೆಯನ್ನು ತಡೆಯಲೂ ಎಲ್ಲರೂ ಸಿದ್ಧರಾಗೋಣ ಮತ್ತು ಎಚ್ಚರದಿಂದ ಇರೋಣ ಎಂದರು.

‘ಸಲ್ಯೂಟ್ ವಾರಿಯರ್ಸ್‌’ ಸಾಂಗ್ ಕ್ರಿಯೇಟಿವ್ ಹೆಡ್ ಮಾಲತೇಶ್ ಅರಸ್ ಹರ್ತಿಕೋಟೆ, ‘ನಿಜವಾದ ವಾರಿಯರ್ಸ್‌ ಗಳು ಇಲ್ಲಿ ನಾಯಕರಾಗಿ ನಾಯಕಿಯರಾಗಿ ಕಾಣಿಸಿಕೊಳ್ಳಲಿದ್ದಾರೆ. ನಮ್ಮ ಈ ಹಾಡಿನಲ್ಲಿ ಎಸ್‌ಪಿ. ಡಿಸಿ, ಸಿಇಒ ಪ್ರಮುಖವಾಗಿದ್ದು ಜಿಲ್ಲೆಯ ಎಲ್ಲಾ ಪೊಲೀಸರು, ವೈದ್ಯರು, ನರ್ಸಗಳು, ಆಸ್ಪತ್ರೆ ಬ್ರದರ್ಸ್, ನಗರಸಭೆ ಪೌರ ಕಾರ್ಮಿಕರು, ಪತ್ರಕರ್ತರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಬೆಸ್ಕಾಂ ಸಿಬ್ಬಂದಿ, ಹೋಮ್ ಗಾಡ್ಸ್, ಪಿಡಿಒ, ಗ್ರಾಪಂ ಸಿಬ್ಬಂದಿ, ಡಿಸಿ ಕಚೇರಿ, ಜಿಪಂ ಕಚೇರಿಯ ಸಿಬ್ಬಂದಿಗಳನ್ನು ಚಿತ್ರಿಕರಣ ಮಾಡಲಾಗುವುದು ಎಂದರು.

ಸಲ್ಯೂಟ್ ವಾರಿಯರ್ಸ್‌
ಆಲ್ಬಂಗೆ ದೇವರತ್ನ ಮಂಜು ಸಾಹಿತ್ಯ ಬರೆದು ನಿರ್ದೇಶನ‌ ಮಾಡಲಿದ್ದಾರೆ.’ಇದು ಕೊರೊನಾ ಜಾಗೃತಿ ಗೀತೆಯಾಗಿದ್ದು ಇದರಲ್ಲಿ ವಾರಿಯರ್ಸ್‌ ಗಳನ್ನು ಸಾರ್ವಜನಿಕರು ಅಭಿನಂದಿಸುವ ಉದ್ದೇಶವೂ ಇದೆ. ಚಿತ್ರದುರ್ಗದ ವಾರಿಯರ್ಸ್‌ ಗಳೇ ಇದರಲ್ಲಿ ಇರುತ್ತಾರೆ ಚಿತ್ರದುರ್ಗದ ಪ್ರಮುಖ ಸ್ಥಳಗಳಲ್ಲಿ ಚಿತ್ರೀಕರಣ ನಡೆಯಲಿದೆ. ಐದು ದಿನಗಳ ಕಾಲ ಚಿತ್ರೀಕರಣ ಮಾಡಿ ನಂತರ ಎಲ್ಲರನ್ನು ಒಂದೆಡೆ ಸೇರಿಸಿ ಕ್ಲೈಮ್ಯಾಕ್ಸ್ ಶೂಟಿಂಗ್ ನಡೆಸಲಾಗುವುದು ಎಂದರು.

ಮುಹೂರ್ತದಲ್ಲಿ ಅಡಿಷನಲ್ ಎಸ್.ಪಿ ನಂದಗಾವಿ ಮತ್ತು ಜಿಲ್ಲೆಯ ಎಲ್ಲಾ ಡಿವೈಎಸ್‌ಪಿ, ಎಲ್ಲಾ ವೃತ್ತ ನಿರೀಕ್ಷಕರು, ಸಬ್ ಇನ್ಸ್ ಪೆಕ್ಟರ್ ಹಾಗೂ ಸಲ್ಯೂಟ್ ವಾರಿಯರ್ಸ್‌ ಸಾಂಗ್ ಸಂಗೀತ ನಿರ್ದೇಶಕರಾದ ಮುನ್ನಾ, ನಿವೃತ್ತ ಪೊಲೀಸ್ ಅಧಿಕಾರಿ ದೇವೇಂದ್ರಪ್ಪ ತಂಡದ ಅಶೋಕ್, ರಾಘವೇಂದ್ರ, ಚಂದನ್, ಶಶಿಡ್ರೋಣ್, ಕಿಶೋರ್‌ಚಿನ್ನು, ಪಾಟೀಲ್, ಚೇತನ್, ತೇಜು, ಮದನ್ ರಾಹುಲ್ ಮತ್ತು ಚಿತ್ರತಂಡ ಭಾಗವಹಿಸಿದ್ದರು.

Categories
ಸಿನಿ ಸುದ್ದಿ

ವಾಣಿಜ್ಯ ಮಂಡಳಿ ಹೀಗೇಕೆ ಮಾಡಿತು…? ಇದು ಒಬ್ಬ ಶ್ರೇಷ್ಟ ನಟನಿಗೆ‌ ಮಾಡಿದ‌ ಅವಮಾನ ! – ನಿರ್ದೇಶಕ ಲಿಂಗದೇವರು ಬೇಸರ


ಕನ್ನಡ ಚಿತ್ರರಂಗಕ್ಕೆ ಹೆಮ್ಮೆ ಆಗುವಂತೆ ರಾಷ್ದ ಪ್ರಶಸ್ತಿ ತಂದುಕೊಟ್ಟ ನಟನೆಗೆ ‌ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಷ್ಟು ಗೌರವ ನೀಡುವುದು ಬೇಡವೇ? ಹೌದು, ಕೋವಿಡ್ 19 ವೇಳೆ ನಿಧನರಾದ ಕನ್ನಡ ಚಿತ್ರೋದ್ಯಮದ ಹಲವಾರು ಮಂದಿಗೆ ಗುರುವಾರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆಯೋಜಿಸಿದ್ದ ಶ್ರದ್ದಾಂಜಲಿ ಸಭೆಯಲ್ಲಿ ಮೃತ ನಟ ಸಂಚಾರಿ ವಿಜಯ್ ಗೆ ಅಂತಹದೊಂದು ಗೌರವೇ ಸಿಗದೆ ಹೋಯಿತು. ಅದೀಗ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಹಿರಿಯ ನಿರ್ದೇಶಕ ಬಿ.ಎಸ್. ಲಿಂಗದೇವರು ಈ ಬಗ್ಗೆ ಹೇಳಿಕೆ ನೀಡಿದ್ದು, ವಾಣಿಜ್ಯ ಮಂಡಳಿ‌ನಿರ್ಲಕ್ಷ್ಯ ಖಂಡನಾರ್ಹ ಎಂದಿದ್ದಾರೆ. ಅಷ್ಟೇ ಅಲ್ಲ, ಇದು ವಿಜಯ್ ಕುಟುಂಬಕ್ಮೆ ತೋರಿದ ಅಗೌರವ ಎಂದು ಕಿಡಿಕಾರಿದ್ದಾರೆ‌.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ದಕ್ಷಿಣ ಭಾರತ ಚಲನಚಿತ್ರ ಮಂಡಳಿಯ ಮಾಜಿ ಅಧ್ಯಕ್ಷರಾಗಿದ್ದ ಕನ್ನಡ ಚಿತ್ರರಂಗದ ಆಧಾರ ಸ್ತಂಭಗಳಲ್ಲಿ ಒಬ್ಬರಾದ ಕೆ.ಸಿ.ಎನ್. ಚಂದ್ರಶೇಖರ್ ಅವರು ನಿಧನರಾದರು.ಅವರೊಂದಿಗೆ ಇತ್ತೀಚೆಗೆ
ಕೆಲವರು ಕೋವಿಡ್ ಬಲಿಯಾದರು. ಇನ್ನು ಕೆಲವರು ಕೋವಿಡೇತರ ಅನಾರೋಗ್ಯಕ್ಕೆ ಅಗಲಿದರು. ಅವರಿಗೆಲ್ಲ ಗುರುವಾರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಶ್ರದ್ಧಾಂಜಲಿ ಸಲ್ಲಿಸುವ ಸಭೆಯೊಂದನ್ನು ಇಂದು ಕರೆದಿತ್ತು.


ಪುಷ್ಪನಮನ ಸಲ್ಲಿಸುವ ಸಲುವಾಗಿ ವೇದಿಕೆಯಲ್ಲಿ ಕೆ.ಸಿ.ಎನ್.ಚಂದ್ರಶೇಖರ್, ರಾಮು ಮತ್ತು ಅಣ್ಣಯ್ಯ ಚಂದ್ರಶೇಖರ್ ಅವರ ಭಾವಚಿತ್ರಗಳನ್ನು ಇಡಲಾಗಿತ್ತು. ಅಗಲಿದ ಉಳಿದ ನಿರ್ಮಾಪಕರು, ನಿದೇಶಕರು, ತಂತ್ರಜ್ಞರು, ಕಲಾವಿದರು, ಕಾರ್ಮಿಕರು ಮುಂತಾದವರ ಭಾವಚಿತ್ರಗಳನ್ನು ಒಂದರ ಹಿಂದೊಂದು ಬರುವಂತೆ ಟಿವಿಯಲ್ಲಿ ಅಳವಡಿಸಲಾಗಿತ್ತು.

ಗತಿಸಿದ ಎಲ್ಲರ ಭಾವಚಿತ್ರಗಳನ್ನು ವೇದಿಕೆಯ ಮೇಲೆ ಜೋಡಿಸಿ ಇಡುವುದು ಅಸಾಧ್ಯ ಕೂಡ ‌.ಅದರೂ ಒಬ್ಬ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಇನ್ನಿಲ್ಲ ಅನ್ನೋದಕ್ಕೆ ಗೌರವ ಸಲ್ಲಿಸುವುದಕ್ಕಾದರೂ ಅಲ್ಲಿ ವಿಜಯ್ ಅವರ ಭಾವಚಿತ್ರವಾದರೂ ಇರಬೇಕಿತ್ತು. ಆದರೆ ವಾಣಿಜ್ಯ ಮಂಡಳಿ ಅದ್ಯಾಕೋ ಮರೆತು ಬಿಟ್ಟಿತು.ಇದು ಗೊತ್ತಿಲ್ಲದೆಯೇ ಆದ ಅಚಾತುರ್ಯವೇ ಆಗಿದ್ದರೂ, ಒಬ್ನ ಶ್ರೇಷ್ಟ ನಟನಿಗೆ ಮಾಡಿದ ಅವಮಾನ ಅನ್ನೋದು ವಿಜಯ್ ಅಭಿಮಾನಿಗಳ ದೂರು.

ರಾಷ್ಟ್ರಪ್ರಶಸ್ತಿ ಪಡೆದು ನಾಡಿಗೆ ಹೆಮ್ಮೆ ತಂದ ಸಂಚಾರಿ ವಿಜಯ್ ಅವರು ಅನೇಕ ಸಮಾಜಮುಖಿ ಕೆಲಸ ಮಾಡಿ ಕನ್ನಡಿಗರ ಮನ, ಮನೆ ಮಾತಾಗಿದ್ದಾರೆ. ವಿಜಯ್ ಮಿದುಳು ನಿಷ್ಕ್ರಿಯವಾದ ನಂತರ, ಆರು ಮಂದಿಗೆ ಹೊಸ ಬದುಕು ನೀಡುವ ಉದ್ದೇಶದಿಂದ, ಅವರ ಅಂಗಾಂಗ ದಾನ ಮಾಡುವ ಉದಾತ್ತ ನಿರ್ಧಾರ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ ವಿಜಯ್ ಕುಟುಂಬದವರು. ಈ ಎಲ್ಲಾ ಹಿನ್ನೆಲೆಯಲ್ಲಿಯೇ ವಿಜಯ್ ಅಂತಿಮ ಸಂಸ್ಕಾರದ ವೇಳೆ ಸರ್ಕಾರದ ಗೌರವ ಸಂದಿತ್ತು. ಅದು ನಾಡಿಗೆ ಗೌರವ ತಂದು ಕೊಟ್ಟವರಿಗೆ ವಿದಾಯದ ವೇಳೆ ಸಂದ ಗೌರವ. ಕನ್ನಡ ಚಿತ್ರರಂಗದ ಪ್ರಾತಿನಿಧಿಕ ಸಂಸ್ಥೆ ಎಂದು ತನ್ನನ್ನು ಕರೆದುಕೊಳ್ಳುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಇದು ಕೂಡ ಗೊತ್ತಾಗದೆ ಹೋಯಿತಾ ಎನ್ನುವುದು ನಿರ್ದೇಶಕ ಲಿಂಗದೇವರು ಅವರ ನೋವಿನ ಪ್ರಶ್ನೆ.

ಪ್ರಶಸ್ತಿ ವಿಜೇತ, ಸಮಾಜ ಮುಖಿ ಕಲಾವಿದನಿಗೆ ಶ್ರದ್ಧಾಂಜಲಿ ವೇಳೆ ಸೂಕ್ತ ಗೌರವ ನೀಡದೇ ಇರುವುದು ನಿಜಕ್ಕೂ ಖಂಡನಾರ್ಹ ಮತ್ತು ವಿಜಯ್ ಕುಟುಂಬಕ್ಕೆ ತೋರಿದ ಅಗೌರವ ಎಂದಿರುವ ನಿರ್ದೇಶಕ‌ ಲಿಂಗದೇವರು, ಒಂದು ವೇಳೆ, ವಾಣಿಜ್ಯ ಮಂಡಳಿಯು ನಿರ್ಮಾಪಕರು, ವಿತರಕರು ಮತ್ತು ಪ್ರದರ್ಶಕರು ಮಾತ್ರ ಸದಸ್ಯರಾಗಿರುವ ಸಂಸ್ಥೆ ಎಂದು ಹೇಳುವುದಿದ್ದರೆ, ಉಳಿದವರ ಭಾವಚಿತ್ರಗಳನ್ನು ಅಲ್ಲಿ ಹಾಕಬೇಕಾದ ಅಗತ್ಯ ಇರಲಿಲ್ಲ ಎಂದು‌ಕಿಡಿಕಾರಿದ್ದಾರೆ.

Categories
ಸಿನಿ ಸುದ್ದಿ

ವಿಜಿ ಸರ್… ಗುಂಡಿ ತೋಡಿ ಹೂಳುವ ಸೀಕ್ವೆನ್ಸ್ ಮಾಡ್ತೀರಾ?ʼʼ ಅಂದಿದ್ದಕ್ಕೆ…ʻʻಒಂದಲ್ಲಾ ಒಂದಿನಾ ಮಲ್ಕೋಬೇಕಾಲ್ಲಾ…ʼʼ ಅಂತ ನಗ್ತಾ ಹೇಳಿದ್ರಿ.. ಆದರೀಗ…

ಸಂಚಾರಿ ವಿಜಯ್, ದೈಹಿಕವಾಗಿ ಇಲ್ಲ. ಆದರೆ, ಅವರು ತಮ್ಮ ಸಿನಿಮಾಗಳ ಮೂಲಕ ಅದೇ ನಗು ಹೊತ್ತು ಜೊತೆಗಿದ್ದಾರೆ. ಅವರ ಅಭಿನಯದ ‘ಮೇಲೊಬ್ಬ ಮಾಯಾವಿ’ ರಿಲೀಸ್ ಗೆ ರೆಡಿಯಾಗಿದೆ. ಚಿತ್ರದ ಹಾಡೊಂದು ಸಂಚಾರಿ ವಿಜಯ್ ಅವರಿಗೆ ತುಂಬಾನೇ ಇಷ್ಟವಾಗಿತ್ತು. ಬೇಗ ರಿಲೀಸ್ ಮಾಡಿ ಅಂತ ಅದೆಷ್ಟೋ ಸಲ ಹೇಳಿದ್ದರು ವಿಜಯ್. ಆದರೆ, ಕಾರಣಾಂತರಗಳಿಂದ ಆಗಿರಲಿಲ್ಲ. ಈಗ ನಿರ್ದೇಶಕ ನವೀನ್ ಕೃಷ್ಣ ಸಾಂಗ್ ರಿಲೀಸ್ ಮಾಡಿದ್ದಾರೆ. ನಿಜಕ್ಕೂ ಹಾಡು ನೋಡಿದವರ ಕಣ್ಣು ಒದ್ದೆಯಾಗದೇ ಇರದು. ಅಂದಹಾಗೆ, ನಿರ್ದೇಶಕರು ಸಂಚಾರಿ ವಿಜಯ್ ಬಗ್ಗೆ ಮನದಾಳದ ಮಾತು ಹಂಚಿಕೊಂಡಿದ್ದಾರೆ.

ಓವರ್ ಟು ನವೀನ್ ಕೃಷ್ಣ…

ವಿಜಿ ಸರ್…
ʻಮೇಲೊಬ್ಬ ಮಾಯಾವಿʼ ನನ್ನ ನಿಮ್ಮ ಜೊತೆಯಾಗಿಸಿತು. ಒಂದೇ ಸಿನಿಮಾದ ಒಡನಾಟದಲ್ಲಿ ಒಡಹುಟ್ಟಿದವರಿಗಿಂತ ಹತ್ತಿರವಾದ್ರಿ. ಯಾರಲ್ಲೂ ಹಂಚಿಕೊಳ್ಳಲಾಗದ, ಹಂಚಿಕೊಳ್ಳಬಾರದ ಸಂಕಟಗಳನ್ನು ಮಗುವಿನಂತೆ ಹಂಚಿಕೊಂಡ್ರಿ. ನಾನೊಬ್ಬ ಡೈರೆಕ್ಟರ್, ನೀವೊಬ್ಬ ಆಕ್ಟರ್ ಅನ್ನುವ ಕೊಂಡಿಯನ್ನು ಬಹುಬೇಗ ಕಳಚಿದ್ರಿ. ಸದಾ ಹೊಸತನ್ನು ಯೋಚಿಸುವ.. ಸದಾ ಸಂತೋಷವನ್ನು ಹಂಚುವ.. ಎಲ್ಲರಿಗೂ ಒಳ್ಳೆಯದನ್ನು ಬಯಸುವ ನಿಮ್ಮ ಜೀವನ ಸೂತ್ರವನ್ನು ಇಡೀ ತಂಡಕ್ಕೆ ಉಚಿತವಾಗಿ ಹಂಚಿದಿರಿ.


ಊಟವನ್ನು ಇಷ್ಟ ಪಡುವ ನೀವು… ಸಾಕಷ್ಟು ಬಾರಿ ಕೈತುತ್ತು ಕೊಟ್ರಿ… ನಿಮ್ಮ ನಟನೆಯ ಸ್ಕಿಲ್ ಅನ್ನು ಯಾವುದೇ ಆಮಿಷವಿಲ್ಲದೇ ಹಂಚಿದಿರಿ…
ಇವತ್ತು ರಿಲೀಸ್ ಆಗಿರುವ ವಿಡಿಯೋ ಸಾಂಗ್ ಅನ್ನು ಅವಾಗವಾಗ ʻʻಡೈರೆಕ್ಟ್ರೆ ಬೇಗ ರಿಲೀಸ್ ಮಾಡಿ ಅಂದ್ರಿʼʼ…

ಈ ಸಮಯದಲ್ಲಿ ರಿಲೀಸ್ ಮಾಡುವ ಮನಸ್ಥಿತಿ ನಮ್ಮದಲ್ಲ.. ಇಡೀ ತಂಡ ದಿಗ್ಭ್ರಮೆಯಲ್ಲಿದೆ. ಆದರೂ ರಿಲೀಸ್ ಮಾಡಿರೋದು ನಮ್ಮ ತಂಡದ ಜೊತೆ ನೀವೂ ಕೂತು ನೋಡ್ತಿದ್ದೀರಿ ಅನ್ನೋ ಉದ್ದೇಶಕ್ಕೆ.


ʻʻವಿಜಿ ಸರ್.. ಗುಂಡಿ ತೋಡಿ ಹೂಳುವ ಸೀಕ್ವೆನ್ಸ್ ಮಾಡ್ತೀರಾ… ಒಪ್ಪಿಗೇನಾ?ʼʼ ಅಂದಿದ್ದಕ್ಕೆ.. ʻʻಒಂದಲ್ಲಾ ಒಂದಿನಾ ಮಲ್ಕೋಬೇಕಾಲ್ಲಾ…ʼʼ ಅಂತ ನಗ್ತಾ ಹೇಳಿದ್ರಿ.. ಆದರೀಗ!!
ಸರ್…, ಈ ಸಾಂಗ್ ಬಗ್ಗೆ ನಾನು ಚಂದ್ರಣ್ಣ ( ಚಕ್ರವರ್ ಸರ್ ) ಸಾಕಷ್ಟು ಡಿಸ್ಕಸ್ ಮಾಡಿದ್ವಿ. ಚಂದ್ರಣ್ಣ ನಾನು ಕೊಟ್ಟ ಇನ್ಪುಟ್ಸ್ ಅನ್ನು ತುಂಬಾ ಸೀರಿಯಸ್ ಆಗಿ ತಗೊಂಡು, ನಿಮ್ಮ ಒಪ್ಪಿಗೆಯನ್ನು ಪಡೆದೇ ಶೂಟ್ ಮಾಡಲಾಯ್ತು. ಬಾಲ್ಯದ ಗೆಳೆಯ.. ನಿರ್ಮಾಪಕ ಪುತ್ತೂರು ಭರತ್, ಯಾವುದಕ್ಕೂ ನೋ ಅಂದಿಲ್ಲ. ಎಲ್ಲಾ ರಿಸ್ಕ್ ಗಳನ್ನು ತನ್ನ ಹೆಗಲ ಮೇಲೆ ಹೊತ್ತು ನಡೆದ್ರು ಈ ಕ್ಷಣಕ್ಕೂ….


ಕೊನೆಯದಾಗಿ , ವಿಜಿ ಸರ್ ನಿಮ್ಮ ಫೋಟೋ ಹಾಕಿ ʻರಿಪ್ʼ ಅನ್ನೊಲ್ಲ.. ನಮ್ಮ ಇಡೀ ಮಾಯಾವಿ ತಂಡದ ಕೊನೆ ಉಸಿರಿರುವವರೆಗೂ ನಿಮ್ಮ ನಿಮ್ಮ ಮುಗ್ಧ ಮಗುವಿನಂತ ನಗುವಿನ ಜೊತೆಗಿರುತ್ತೆ. ಸರ್.. ಬನ್ನಿ ನಾನು ನೀವು ಚಂದ್ರಣ್ಣ ಬೆಸ್ಟ್ ಒಟ್ಟೊಟ್ಟಾಗಿ ಜಗಳ ಮಾಡೋಣ.. ಅಟ್ಲೀಸ್ಟ್ ಮೂವರೂ ಒಂದು ಹಗ್ ಮಾಡೋಣ… ʻಮಿಸ್ ಯೂʼ… ಅನ್ನೋಕೂ ಆಗ್ತಿಲ್ಲ…’ ಎಂದು ಹೇಳಿದ್ದಾರೆ ನಿರ್ದೇಶಕ ಬಿ.ನವೀನ್ ಕೃಷ್ಣ.

Categories
ಸಿನಿ ಸುದ್ದಿ

ಚರಿತ್ರೆ ಸೃಷ್ಟಿಸಿದ ಈ ನಟನಿಗೆ ತನ್ನ ತಾಯಿಯ ಆತ್ಮ ಚರಿತ್ರೆ ಬರೆಯವ ಕನಸು ನನಸಾಗದೇ ಉಳಿಯಿತು..!

‘ಸರ್‌, ಬರವಣಿಗೆ ಅಂತ ಬಂದಾಗ ನಂಗೆ ತುಂಬಾ ಕಾಡೋದು ನನ್ನಮ್ಮನ ಬದುಕಿನ ಕಥೆ. ಅದನ್ನ ಬರೀಬೇಕು ಅನ್ನೋದು ನನ್ನ ಕನಸು…

ನಟ ಸಂಚಾರಿ ವಿಜಯ್‌ ಅವರಿಗಿದ್ದ ಬರವಣಿಗೆಯ ಕನಸಿದು. ಅದು ನನಸಾಗದೆ ಉಳಿದು ಹೋದದ್ದು ಬಹುದೊಡ್ಡ ದುರಂತ. ʼಸಿನಿ ಲಹರಿʼ ಸಂಸ್ಥೆ ನೂರು ದಿನದ ಸಂಭ್ರಮದ ಸರಳ ಕಾರ್ಯಕ್ರಮಕ್ಕೆ ಬಂದ ವೇಳೆ, ನೆನಪಿನ ಡೈರಿಗೆ ಒಂದೆಡೆ ಅನಿಸಿಕೆ ಬರೆಯುವಾಗ ಅವರು ಈ ಮಾತು ಹೇಳಿದ್ದರು. ಈಗ ಇವೆಲ್ಲ ನೆನಪಿಸಿಕೊಳ್ಳುವಾಗ ಮನಸು ಭಾರವಾಗುತ್ತೆ. ಆದರೆ, ಅವರಿಗಿದ್ದ ಕನಸು, ಹಂಬಲ, ಆಕಾಂಕ್ಷೆಯ ಕೆಲಸಗಳನ್ನು ಸ್ಮರಿಸಿಕೊಂಡಾಗ ಅವರ ಅಗಾಧ ವ್ಯಕ್ತಿತ್ವ ನಮ್ಮ ಕಣ್ಣ ಮುಂದೆ ಬರುತ್ತದೆ.
ಸಂಚಾರಿ ವಿಜಯ್‌ ಬರೀ ನಟ ಮಾತ್ರವಲ್ಲ, ಅಪ್ಪಟ ಸಾಹಿತ್ಯ ಅಭಿಮಾನಿಯೂ ಹೌದು. ನಾಡಿನ ಅನೇಕ ಸಾಹಿತಿಗಳ ಅಮೂಲ್ಯ ಪುಸ್ತಕಗಳನ್ನ ಓದಿ ತಿಳಿದುಕೊಂಡಿದ್ದ ಮಾತ್ರವಲ್ಲ ಆ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಸಿನಿಮಾ ರಂಗಕ್ಕೆ ಬಂದ ಹೊಸಬರಿಗೂ ಓದಿ ಎಂದು ಹೇಳುತ್ತಿದ್ದರು.

ಇತ್ತೀಚೆಗೆ ಹೆಸರಾಂತ ರಂಗಕರ್ಮಿ ಹಾಗೂ ನಟ ಗಿರೀಶ್‌ ಕಾರ್ನಾಡ್‌ ಅವರ ‘ಆಡಾಡುತಾ ಆಯುಷ್ಯʼ ಕೃತಿಯ ಆಡಿಯೋ ಪುಸ್ತಕಕ್ಕೆ ವಿಜಯ್‌ ಧ್ವನಿ ನೀಡಿದಾಗ ಅವರು ಆ ಪುಸ್ತಕದ ಬಗ್ಗೆ ಸೋಷಲ್‌ ಮೀಡಿಯಾದಲ್ಲಿ ಅನಿಸಿಕೆ ಹಂಚಿಕೊಂಡಿದ್ದರು. ಒಂದ್ರೀತಿ ಆ ಪುಸ್ತಕವನ್ನು ತಮ್ಮದೇ ನೋಟದಲ್ಲಿ ವಿಮರ್ಶಿಸುವುದರ ಜತೆಗೆ ಆ ಕೃತಿ ತಮ್ಮ ಅನುಭಾವವನ್ನು ಹೆಚ್ಚಿಸಿದ ಬಗೆಯನ್ನು ಅಲ್ಲಿ ತೆರೆದಿಟ್ಟಿದ್ದರು. ಹಾಗೆಯೇ ಲಾಕ್‌ ಡೌನ್‌ ದಿನಗಳಲ್ಲಿ ಅವರು ನಾಡಿನ ಅನೇಕ ಸಾಹಿತಿಗಳ ಪುಸ್ತಕ ಓದಿನಲ್ಲಿ ಹೆಚ್ಚು ಸಮಯ ಕಳೆಯುತ್ತಿರುವ ಬಗ್ಗೆ ಮಾತನಾಡಿದ್ದರು. ತೀರಾ ಇತ್ತೀಚೆಗೆ ಅವರು ಸಂದರ್ಶನವೊಂದರಲ್ಲಿ ಮಾತಾಡುತ್ತಿದ್ದಾಗ ಬೆಂಗಳೂರಿಗೆ ಅರಂಭದ ದಿನಗಳು, ಆ ದಿನಗಳಲ್ಲಿ ಕಂಡ ಬೆಂಗಳೂರು, ಬೆರಗು ಮೂಡಿಸಿದ ಈ ಊರಿನ ಬಗ್ಗೆಯೂ ಬರೀಬೇಕೆನ್ನುವ ಪ್ರಯತ್ನಕ್ಕೂ ಕೈ ಹಾಕಿದ್ದರು. ಅದರ ಮೊದಲ ಪ್ರಯತ್ನವಾಗಿ ಬೆಂಗಳೂರಿನ ಮೆಜೆಸ್ಟಿಕ್‌ ಕುರಿತು ಅವರು ಬರೆದಿದ್ದ ಅನುಭವದ ಬರಹಕ್ಕೆ ಸೋಷಲ್‌ ಮೀಡಿಯಾದಲ್ಲಿ ಬಾರೀ ಮೆಚ್ಚುಗೆ ಸಿಕ್ಕಿತ್ತು. ಇದರ ಜತೆಗೆ ಅವರು ತಮ್ಮ ಬದುಕಿನಲ್ಲಿ ಇಂದಲ್ಲ ನಾಳೆ ಬರೆಯಲೇಬೇಕು ಅಂದುಕೊಂಡಿದ್ದು ಅವರ ತಾಯಿಯ ಬದುಕಿನ ಕಥೆಯನ್ನು. ಹೌದು, ಈ ವಿಚಾರವನ್ನು ಅವರು ಕೆಲವು ದಿನಗಳ ಹಿಂದೆ ‘ಸಿನಿ ಲಹರಿ’ ಜತೆಗೆ ಮಾತನಾಡುತ್ತಿದ್ದಾಗ ಔಪಚಾರಿಕವಾಗಿ ಹೇಳಿಕೊಂಡಿದ್ದರು.

ʼ ಸರ್‌, ನಾನೀಗ ಸಾಹಿತ್ಯದ ವಿದ್ಯಾರ್ಥಿ. ನಾಡಿನ ಅನೇಕ ಸಾಹಿತಿಗಳು, ಲೇಖಕರ ಪುಸ್ತಕಗಳನ್ನು ಈಗ ಕೊಂಡು ಓದುತ್ತಿದ್ದೇನೆ. ಈಗಾಗಲೇ ಕುವೆಂಪು. ಅನಂತ ಮೂರ್ತಿ, ಬೈರಪ್ಪ, ತೇಜಸ್ವಿ, ಲಂಕೇಶ್‌ ಸೇರಿದಂತೆ ಕೆಲವರ ಕೆಲವು ಪುಸ್ತಕಗಳನ್ನು ತಕ್ಕ ಮಟ್ಟಿಗೆ ಓದಿದ್ದೇನೆ. ಸದ್ಯಕ್ಕೆ ಈಗ ನಾನು ನಾಡಿನ ಹೆಸರಾಂತ ಸಾಹಿತಿ ಕುಂವೀ ಅವರ ಆತ್ಮ ಚರಿತ್ರೆ ʼಗಾಂಧಿ ಕ್ಲಾಸುʼ ಓದಿ ಮುಗಿಸಿದೆ. ಹೀಗೆ ಒಂದಷ್ಟು ಓದಿ, ಬರವಣಿಗೆಯಲ್ಲಿ ತೊಡಗಿಸಿಕೊಳ್ಳಬೇಕು ಅನ್ಕೊಂಡಿದ್ದೇವೆ. ಯಾಕಂದ್ರೆ ಎದೆ ಗೊಡಿನಲ್ಲಿ ಒಂದಷ್ಟು ಕಚ್ಚಾ ಸರಕು ಸೇರಿಕೊಂಡಿವೆ. ತುಂಬಾ ಗಾಢವಾಗಿ ಕಾಡುವ ಸರಕುಗಳು ಅವು. ಅವುಗಳನ್ನು ನಾನು ಬರವಣಿಗೆ ಮೂಲಕ ಹಡೆಯಲೇಬೇಕಿದೆ. ಹಾಗಾದರೂ ಮನಸ್ಸಿಗೆ ಒಂದು ನೆಮ್ಮದಿ ಸಿಗಬಹುದೇನೋ. ಅದರಲ್ಲೂ ನನ್ನ ತಾಯಿಯ ಬದುಕಿನ ಬಗ್ಗೆ ಬರೀಬೇಕು ಅನ್ನೋದು ನನ್ನ ಕನಸು. ಹಾಗಂತ ಅವರ ಬದುಕಿನ ಕಥೆಯನ್ನು ಸಾರ್ವಜನಿಕಗೊಳಿಸಬೇಕು ಅಂತಲ್ಲ. ನನ್ನೊಳಗೆ ಕಾಡುವ ಆ ನೋವು, ಸಂಕಟ, ವ್ಯಥೆಯನ್ನು ಅಕ್ಷರ ರೂಪಕ್ಕೆ ತರುವ ಮೂಲಕವಾದರೂ ಹೆತ್ತವಳಿಗೆ ನ್ಯಾಯ ಸಲ್ಲಿಸಬೇಕು ಅನ್ನೋದಷ್ಟೇ ಅದರ ಉದ್ದೇಶʼ

ಅಂತ ನಟ ಸಂಚಾರಿ ವಿಜಯ್‌ ತಮ್ಮ ತಾಯಿ ಆತ್ಮ ಚರಿತ್ರೆ ಬರೆಯುವ ಕನಸನ್ನು ಸಿನಿ ಲಹರಿ ಜತೆಗೆ ಹಂಚಿಕೊಂಡಿದ್ದರು. ಆದರೆ, ಈಗ ಅವರೇ ಇಲ್ಲ ಅನ್ನೋದು ಅತ್ಯಂತ ದುಃಖ ಮತ್ತು ನೋವಿನ ಸಂಗತಿ.
ಇಷ್ಟಕ್ಕೂ ನಟ ಸಂಚಾರಿ ವಿಜಯ್‌ ಎಲ್ಲವನ್ನೂ ಬಿಟ್ಟು ತನ್ನ ತಾಯಿಯ ಆತ್ಮ ಕಥೆ ಬರೆಯೋದು ತಮ್ಮ ಕನಸು ಅಂತ ಹೇಳಿದ್ದಾದರೂ ಯಾಕೆ? ಅದೊಂದು ದುರಂತ ಕಥೆ. ಜಾತಿ ಕಾರಣಕ್ಕೆ ವಿಜಯ್‌ ತಾಯಿ ತೀರಾ ಅವಮಾನ ಅನುಭವಿಸಿದ ಕಥೆ ಇದೆ. ಈಗ ಸಂಚಾರಿ ವಿಜಯ್‌ ನಮ್ಮವನು ಅಂತ ಒಪ್ಪಿಕೊಂಡ ಸಮಾಜವೇ , ವಿಜಯ್‌ ತಾಯಿ ಅವರನ್ನು ನಿಕೃಷ್ಟವಾಗಿ ನಡೆಸಿಕೊಂಡು, ಅವಮಾನಿಸಿದ ದುರಂತ ಕಥೆಯಲ್ಲಿ ಹುಟ್ಟಿ ಬೆಳೆದು ಬಂದವರು ನಟ ಸಂಚಾರಿ ವಿಜಯ್.‌ ಆ ಕಥೆ ಇನ್ನೆಷ್ಟು ಘೋರವಿತ್ತು ಅನ್ನೋದು ಅವರಿಗೇ ಗೊತ್ತು. ಅದನ್ನೇ ಅವರು ಬರೆಯಬೇಕು ಅಂತಂದುಕೊಂಡಿದ್ದು ಅನ್ನೋದನ್ನ ಅವರ ಆಪ್ತರು ಈಗ ಬಹಿರಂಗ ಪಡಿಸಿದ್ದಾರೆ.

Categories
ಸಿನಿ ಸುದ್ದಿ

ಸಂಚಾರಿ ವಿಜಯ್‌ ಹೆಸರಲ್ಲಿ ನೂರು ಗಿಣಿಗಳ ದತ್ತು ಪಡೆದ ಚಕ್ರವರ್ತಿ ಚಂದ್ರಚೂಡ್‌

ನಟ ಸಂಚಾರಿ ವಿಜಯ್‌ ಇರುವಷ್ಟು ದಿನ ಸದಾ ಒಂದಷ್ಟು ಸೇವೆ ಮೂಲಕ ದಿನ ಸವೆಸುತ್ತಿದ್ದದ್ದು ಎಲ್ಲರಿಗೂ ಗೊತ್ತಿದೆ. ಅವರಿಲ್ಲ ಎಂಬ ಬೇಸರ ಎಲ್ಲರಲ್ಲೂ ಇದೆ. ಆದರೆ, ಅವರು ಇಂದಿಗೂ ಸಿನಿಮಾಗಳ ಮೂಲಕ ಎಲ್ಲರ ಜೊತೆಯಲ್ಲಿದ್ದಾರೆ. ಬಹಳಷ್ಟು ಮಂದಿ ಸಂಚಾರಿ ವಿಜಯ್‌ ಅವರ ಗೆಳೆತನದ ಸವಿನೆನಪಿಗೆ ಹಲವು ಕಾರ್ಯಕ್ರಮ ರೂಪಿಸಲು ರೆಡಿಯಾಗಿದ್ದಾರೆ. ಅದಕ್ಕೂ ಮೊದಲೇ ಪತ್ರಕರ್ತ, ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್, ಸಂಚಾರಿ ವಿಜಯ್ ಹೆಸರಲ್ಲೇ ಒಂದೊಳ್ಳೆಯ ಕೆಲಸ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಹೌದು, ದಾವಣಗೆರೆಯ ಇಂದಿರಾ ಪ್ರಿಯದರ್ಶನಿ ಪ್ರಾಣಿ ಸಂಗ್ರಹಾಲಯದಲ್ಲಿ ನೂರು ಗಿಣಿಗಳನ್ನು ಅವರು ದತ್ತು ಪಡೆದುಕೊಂಡಿದ್ದಾರೆ. ಸಂಚಾರಿ ವಿಜಯ್ ಹೆಸರಲ್ಲಿ ಆ ಗಿಣಿಗಳನ್ನು ಒಂದು ವರ್ಷಕ್ಕೆ ದತ್ತು ಪಡೆದುಕೊಂಡಿದ್ದಾರೆ.

ಈ ವಿಷಯವನ್ನು ಸ್ವತಃ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಚಕ್ರವರ್ತಿ ಚಂದ್ರಚೂಡ್, “ಸಂಚಾರಿ ವಿಜಯ್ ನಿನಗೆ ಗಿಣಿ ಇಷ್ಟ. ಅದಕ್ಕೇ ನಿನ್ ಹೆಸರಲ್ಲೊಂದು ತಗೊಂಡಿದೀನಿ ನೋಡಿ ಸ್ವಾಮಿ..” ಎಂದು ಬರೆದುಕೊಂಡಿದ್ದಾರೆ.

ಕೋವಿಡ್ ಸಂಕಷ್ಟದಿಂದ ಮೃಗಾಲಯಗಳಲ್ಲಿರುವ ಪ್ರಾಣಿ-ಪಕ್ಷಿಗಳಿಗೆ ನೆರವು ಬೇಕಿದೆ, ದಯವಿಟ್ಟು ದತ್ತು ಪಡೆಯುವುದರ ಮೂಲಕ ಪ್ರಾಣಿಗಳನ್ನು ರಕ್ಷಿಸಬೇಕು ಎಂದು ದರ್ಶನ್‌ ಅವರು ಈ ಹಿಂದೆ ಮನವಿ ಮಾಡಿಕೊಂಡಿದ್ದರು.

ದರ್ಶನ್ ಅವರ ಮನವಿ ಬಳಿಕ ರಾಜ್ಯಾದ್ಯಂತ ಮೃಗಾಲಯಗಳಲ್ಲಿ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ದರ್ಶನ್‌ ಅವರ ಫ್ಯಾನ್ಸ್‌ ಜೊತೆಗೆ ಈಗೀಗ ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುವ ಅನೇಕ ನಟ,ನಟಿಯರು ಕೂಡ ಪ್ರಾಣಿ-ಪಕ್ಷಿಗಳನ್ನು ದತ್ತು ಪಡೆದುಕೊಳ್ಳುತ್ತಿದ್ದಾರೆ.

Categories
ಸಿನಿ ಸುದ್ದಿ

ಸಾಯಿಕುಮಾರ್ ಬ್ರದರ್ಸ್‌ ನೆರವು ; ಕನ್ನಡ ಸಿನಿಮಾ ಕಾರ್ಮಿಕರಿಗೆ ಹಣ ಸಹಾಯ

ಕೊರೊನಾ ಹಾವಳಿ ಎಲ್ಲೆಡೆ ಹೆಚ್ಚಾಗಿ, ಎಲ್ಲಾ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಜನರಿಗೆ ತೊಂದರೆಯಾಗಿದೆ. ಅಂತೆಯೆ ಸಿನಿಮಾ ಮಂದಿಗೂ ಸಂಕಷ್ಟ ಎದುರಾಗಿದೆ. ಈಗಾಗಲೇ ಹಲವು ಸ್ಟಾರ್‌ ನಟರು, ಸರ್ಕಾರ, ಸಂಘ-ಸಂಸ್ಥೆಗಳು ಸಿನಿಮಾ ಕಾರ್ಮಿಕರ ನೆರವಿಗೆ ಧಾವಿಸಿದ್ದು ಗೊತ್ತೇ ಇದೆ. ಈಗ‌ ತೆಲುಗು ನಟ ಸಾಯಿಕುಮಾರ್ ಸಹೋದರರು ಕೂಡ ಕರ್ನಾಟಕ ಚಲನಚಿತ್ರ ಕಾರ್ಮಿಕರಿಗೆ ನೆರವಾಗಿದ್ದಾರೆ.‌

ಹೌದು, ಕೊರೊನಾ ಹೊಡೆತಕ್ಕೆ ಸಿನಿಮಾ ಕಾರ್ಮಿಕರ ಕಷ್ಟ ಹೇಳತೀರದ್ದು. ಈ ಸಮಯದಲ್ಲಿ ಅವರಿಗೆ ನೆರವಾಗಬೇಕು ಎಂಬ ಉದ್ದೇಶದಿಂದಲೇ ನಟರಾದ ಸಾಯಿಕುಮಾರ್, ರವಿಶಂಕರ್ ಹಾಗು ನಿರ್ದೇಶಕ ಅಯ್ಯಪ್ಪ ಪಿ.ಶರ್ಮ ಸಹೋ ಐದು ಲಕ್ಷ ರೂಪಾಯಿಗಳನ್ನು ಕರ್ನಾಟಕ ಚಲನಚಿತ್ರ ಕಾರ್ಮಿಕರ ಒಕ್ಕೂಟಕ್ಕೆ ನೀಡಿದ್ದಾರೆ. ನಾವು ಬೇರೆ ರಾಜ್ಯದಲ್ಲಿ ಜನಿಸಿದ್ದರೂ, ನಮ್ಮ ಜನಪ್ರಿಯತೆಯ ಹೆಚ್ಚು ಪಾಲು ಕರ್ನಾಟಕದ್ದು. ಹಾಗಾಗಿ ನಾವು ನಮ್ಮ ಕೈಲಾದ ಸಹಾಯ ಮಾಡಿದ್ದೇವೆ ಎನ್ನುವುದು ಸಾಯಿಕುಮಾರ್ ಸಹೋದರರ ಮಾತು.

Categories
ಸಿನಿ ಸುದ್ದಿ

ಬಾಲಿವುಡ್‌ಗೆ ಕಾಲಿಟ್ಟ ಧರ್ಮ ಕೀರ್ತಿರಾಜ್! ಸದ್ದಿಲ್ಲದೆ ಮಾಡಿದ್ರು ಹಿಂದಿ ಆಲ್ಬಂ ಸಾಂಗ್…

’ನವಗ್ರಹ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾದ ಧರ್ಮಕೀರ್ತಿರಾಜ್, ತಕ್ಕಮಟ್ಟಿಗೆ ಗುರುತಿಸಿಕೊಂಡಿರುವ ಹೀರೋ. ಆ ಚಿತ್ರದ ’ಕಣ್ ಕಣ್ಣ ಸಲಿಗೆ’ ಹಾಡಿನ ಮೂಲಕ ಅಚ್ಚುಮೆಚ್ಚಿನ ಹೀರೋ ಎನಿಸಿಕೊಂಡರು. ನಂತರದ ದಿನಗಳಲ್ಲಿ ನಾಯಕನಾಗಿ ಹಲವು ಚಿತ್ರಗಳಲ್ಲಿ ನಟಿಸಿ ಕನ್ನಡದಲ್ಲಿ ತಮ್ಮದೆ ಛಾಪು ಮೂಡಿಸಿದ್ದು ಗೊತ್ತೇ ಇದೆ. ಈಗ ಈ ಧರ್ಮ ಕೀರ್ತಿರಾಜ್ ಅವರು ಹೊಸ ಸುದ್ದಿಗೆ ಕಾರಣರಾಗಿದ್ದಾರೆ. ಹೌದು, ಅವರೀಗ ಬಾಲಿವುಡ್‌ಗೂ ಎಂಟ್ರಿ ಕೊಟ್ಟಿದ್ದಾರೆ.

ಅರೇ, ಧರ್ಮ ಕೀರ್ತಿರಾಜ್ ಬಾಲಿವುಡ್ ಅಂಗಳಕ್ಕೆ ಜಿಗಿದಿದ್ದಾರೆ ಅಂದಾಕ್ಷಣ, ಹೊಸ ಸಿನಿಮಾ ಅಂದುಕೊಂಡರೆ ಆ ಊಹೆ ತಪ್ಪು. ಅವರು ಬಾಲಿವುಡ್ ಎಂಟ್ರಿಯಾಗಿರೋದು ಸಿನಿಮಾ ಮೂಲಕವಲ್ಲ. ಹಿಂದಿ ಆಲ್ಬಂ ಸಾಂಗ್ ಮೂಲಕ ಹೆಜ್ಜೆ ಇಟ್ಟಿದ್ದಾರೆ. ಅಂದಹಾಗೆ, ಆ ಆಲ್ಬಂ ಹೆಸರು ’ಕಿತ್ನಾ ಮಜಾ ಹೈ’. ಇದು ನಾಲ್ಕು ನಿಮಿಷದ ಹಿಂದಿ ವಿಡಿಯೋ ಆಲ್ಬಂ. ಪ್ರೀತಿಯಲ್ಲಿ ಮೋಸ ಹೋಗಿ ಆತ್ಮಹತ್ಯೆಗೆ ಶರಣಾಗುವ ಹುಡುಗಿಯನ್ನು ಕಾಪಾಡುವ, ಕಥೆ ಈ ಹಾಡಲ್ಲಿ ಸಾಗುತ್ತೆ. ರವಿಶರ್ಮ ಈ ಆಲ್ಬಂ ವಿಡಿಯೊ ಸಾಂಗ್ ನಿರ್ದೇಶನ ಮಾಡಿದ್ದಾರೆ. ಅಜಯ್‌ ದೇವಗನ್ ಮತ್ತು ರಣ್‌ಭೀರ್‌ಕಪೂರ್ ಚಿತ್ರಗಳಿಗೆ ಕೆಲಸ ಮಾಡಿರುವ ಪಪ್ಪುಮಲ ಕ್ರಿಯೇಟೀವ್ ನಿರ್ದೇಶಕರಾಗಿ ಇಲ್ಲಿ ಕೆಲಸ ಮಾಡಿದ್ದಾರೆ.

ಯುನೈಟೆಡ್ ಫಿಲಿಂಸ್ ಎಂಟರ್‌ಟೈನ್‌ಮೆಂಟ್ ಸಂಸ್ಥೆಯೊಂದಿಗೆ ಸೇರಿಕೊಂಡು ಅಶೋಕ್ ಜೈನ್ ನಿರ್ಮಾಣ ಮಾಡಿದ್ದಾರೆ.
ಹೊಸ ಪ್ರತಿಭೆ ನಗ್ಮಾಕ್ತರ್ ಇಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಇನ್ನು, ಸಾಹಿತ್ಯ ಬರೆದು ಸಂಗೀತ ನೀಡಿ ಗೀತೆಗೆ ಧ್ವನಿಯಾಗಿರುವ ಅಲ್ತಾಫ್‌ ಸಯ್ಯದ್ ಕೂಡ ಈ ಹಾಡಲ್ಲಿ ಹಾಡಲ್ಲಿ ಕಾಣಿಸಿಕೊಂಡಿದ್ದಾರೆ.

ಶ್ರೀಕಾಂತ್ ಅಸತಿ ಛಾಯಾಗ್ರಹಣವಿದೆ. ರಾಕೇಶ್‌ ಮೆಹತಾ ಸಂಕಲನವಿದೆ. ಸದ್ಯ ಯೂಟ್ಯೂಬ್‌ ನಲ್ಲಿ ರಿಲೀಸ್ ಆಗಿರುವ ಈ ಹಾಡು ಸಿಕ್ಕಾಪಟ್ಟೆ ವೈರಲ್ ಮೆಚ್ಚುಗೆ ಪಡೆದಿದೆ.

error: Content is protected !!