Categories
ಸಿನಿ ಸುದ್ದಿ

ಚಿತ್ರ ವಿಮರ್ಶೆ: ಜಾಲಿಯಾಗಿ ನೋಡಲು ಅಪಾಯವಿಲ್ಲ!

ರೇಟಿಂಗ್: 3.5/5

ಚಿತ್ರ: ಅಪಾಯವಿದೆ ಎಚ್ಚರಿಕೆ
ನಿರ್ದೇಶಕ: ಅಭಿಜಿತ್ ತೀರ್ಥಹಳ್ಳಿ
ನಿರ್ಮಾಣ: ವಿ.ಜಿ.ಮಂಜುನಾಥ್, ಪೂರ್ಣಿಮಾ ಎಂ.ಗೌಡ
ತಾರಾಗಣ: ವಿಕಾಸ್ ಉತ್ತಯ್ಯ, ಅಶ್ವಿನ್ ಹಾಸನ್, ರಾಧಾ ಭಗವತಿ, ರಾಘವ್ ಕೊಡಚಾದ್ರಿ, ಮಿಥುನ್ ತೀರ್ಥಹಳ್ಳಿ, ಹರಿಣಿ, ಲಂಕೇಶ್ ರಾವಣ, ಕುಮಾರ್ ಶಿವಮೊಗ್ಗ ಇತರರು.

ಜೀವನದಲ್ಲಿ ಹಣವೇ ಮುಖ್ಯ. ಹಣ ಇಲ್ಲದಿದ್ದರೆ ಬದುಕೇ ಬರಡು. ಉದ್ಯೋಗ ಇರದ ಮೂವರು ಹುಡುಗರು ಹಣ ಮಾಡಬೇಕು ಅಂತ ನಿರ್ಧರಿಸಿ ಕಗತ್ತಲ ಕಾನನದಲ್ಲಿರೋ ಗಂಧದ ಮರ ಕಡಿಯೋಕೆ ಹೊರಡುವ ಕಥೆಯೇ ಒಂದು ರೋಚಕ. ಲೈಫಲ್ಲಿ ಹಣ ಮಾಡಬೇಕು ಅಂತ ಡಿಸೈಡ್ ಮಾಡುವ ಮೂವರು ಯುವಕರು ಕತ್ತಲ ಕಾಡೊಳಗೆ ಹೋಗಿ ಗಂಧದ ಮರ ಕಡಿದು ತರುತ್ತಾರಾ ಅಥವಾ ಇಲ್ಲವಾ ಅನ್ನುವ ಕುತೂಹಲವಿದ್ದರೆ ಮಿಸ್ ಮಾಡದೆ ಒಂದೊಮ್ಮೆ ಈ ಸಿನಿಮಾ ನೋಡಬಹುದು.

ಇತ್ತೀಚೆಗೆ ಬರುವ ಕಥೆಗಳಲ್ಲಿ ಅದಿಲ್ಲ, ಇದು ಮಿಸ್ ಆಗಿದೆ, ಅದೊಂದಷ್ಟು ಬೇಕಿತ್ತು, ಇದು ಬೇಡವಾಗಿತ್ತು ಅನ್ನುವ ಮಾತುಗಳೇ ಹೆಚ್ಚಾಗಿ ಕೇಳಿಬರುತ್ತಿದ್ದವು. ಆದರೆ, ಈ ಸಿನಿಮಾದೊಳಗಿನ ಕಥೆಯಲ್ಲಾಗಲಿ, ನಿರೂಪಣೆಯಲ್ಲಾಗಲಿ ಅಥವಾ ಚಿತ್ರಕಥೆಯಲ್ಲಾಗಲಿ ಯಾವುದೂ ಹೆಚ್ಚೆನಿಸಿಲ್ಲ. ಯಾವುದೂ ಕಮ್ಮಿ ಅನಿಸಿಲ್ಲ. ಎಷ್ಟು ಬೇಕೋ, ಏನು ಬೇಕೋ ಅದನ್ನು ಹೇಳುವ ಮೂಲಕ ನೋಡುಗರನ್ನು ಹಿಡಿದಿಟ್ಟುಕೊಂಡು ಸುಮ್ಮನೆ ಸಿನಿಮಾ ನೋಡುವಂತೆ ಮಾಡುವ ಗುಣ ಈ ಚಿತ್ರದಲ್ಲಿದೆ. ಸ್ವಲ್ಪ ಗಂಭೀರತೆಗೆ ದೂಡುವ ಈ ಕಥೆಯಲ್ಲಿ ಮಜವೆನಿಸುವ ಹಲವು ರೂಪಕಗಳಿವೆ. ಒಂದಷ್ಟು ರೋಚಕ ಎನಿಸುವ ಸಂಗತಿಗಳಿವೆ. ಬೆಚ್ಚಿಬೀಳಿಸುವ ದೃಶ್ಯಗಳೂ ಇವೆ. ಅವೆಲ್ಲವನ್ನು ಅನುಭವಿಸುವ ಆಸೆ ಇದ್ದರೆ, ಚಿತ್ರ ನೋಡಿ ಹೊರಬರಬಹುದು.

ತೀರಾ ಸರಳ ಕಥೆ ಇದು. ಹಾಗಂತ ಒಂದೇ ಸಮನೆ ನೋಡಿಸಿಕೊಂಡು ಹೋಗುತ್ತೆ ಅಂತ ಹೇಳುವುದಿಲ್ಲ. ಮೊದಲರ್ಧ ಅತ್ತಿತ್ತ ಓಡಾಡಿಸಿಕೊಂಡೇ ಸಾಗುವ ಈ ಸಿನಿಮಾ, ದ್ವಿತಿಯಾರ್ಧದಲ್ಲಿ ಸಾಕಷ್ಟು ಗಂಭೀರತೆ ಪಡೆದುಕೊಳ್ಳುತ್ತೆ. ಎಷ್ಟರಮಟ್ಟಿಗೆ ಅಂದರೆ, ನೋಡುಗರ ಕಣ್ಣು ತದೇಕಚಿತ್ತದಿಂದ ಇರುವಷ್ಟು, ಮನಸ್ಸು ಮೌನವಾಗಿರುವಷ್ಟು, ಕಿವಿ ಅದೇನನ್ನೋ ಆಲಿಸುವಷ್ಟು. ನೋಡುವ ಮನಸ್ಸುಗಳಿಗೆ ಅಲ್ಲಲ್ಲಿ ಕಚಗುಳಿಯ ದೃಶ್ಯಗಳಿವೆ, ಮಾತುಗಳಿವೆ. ಹಾಗೆಯೇ, ಒಮ್ಮೊಮ್ಮೆ ಬೆಚ್ಚಿಬೀಳಿಸುವಂತಹ ದೃಶ್ಯಗಳು ಎರಗುತ್ತವೆ. ಅದೆಲ್ಲೋ ಕೇಳಿದ ದೃಶ್ಯಗಳು ಎದುರಾಗುತ್ತವೆ. ಏನೇನೋ ಅಂದುಕೊಂಡು ನೋಡುವ ಮನಸ್ಸುಗಳನ್ನು ಆಗಾಗ ಭಯ ಹುಟ್ಟಿಸುವ ಸನ್ನಿವೇಶಗಳು ರಾಚುತ್ತವೆ. ಹಾಗಾಗಿ ಈ ಚಿತ್ರ ಒಂದಷ್ಟು ಖುಷಿ ಕೊಡುತ್ತೆ, ಮತ್ತಷ್ಟು ಭಯ ಹುಟ್ಟಿಸುತ್ತೆ. ಎಚ್ಚರಿಕೆಯಿಂದ ನೋಡಿದವರಿಗೂ ಒಮ್ಮೊಮ್ಮೆ ಢವ ಢವ ಎನಿಸದಿರದು.

ನಿರ್ದೇಶಕರ ಕಥೆ ವಿಶೇಷವಾಗಿದೆ. ನಿರೂಪಣೆ ಶೈಲಿ ಇಷ್ಟವಾಗುತ್ತೆ. ಚಿತ್ರಕಥೆಯಲ್ಲಿ ಒಂದಷ್ಟು ಬಿಗಿ ಹಿಡಿತ ಇದ್ದಿದ್ದರೆ, ಇನ್ನಷ್ಟು ಭಯಾನಕವಾಗಿ ಸಿನಿಮಾವನ್ನು ಕಟ್ಟಿಕೊಡಬಹುದಿತ್ತು. ಇದನ್ನು ಥ್ರಿಲ್ಲರ್ ಎನ್ನಬೇಕೋ, ಹಾರರ್ ಎನ್ನಬೇಕೋ, ಕಾಮಿಡಿ ಎನ್ನಬೇಕೋ ಎಂಬ ಕನ್ ಫ್ಯೂಸ್ ನೋಡುಗರಿಗಿದ್ದರೂ, ಒಂದೊಳ್ಳೆಯ ಮನರಂಜನೆ ಸಿನಿಮಾ ಅಂತ ಸಾಬೀತುಪಡಿಸುತ್ತದೆ. ಮೊದಲರ್ಧ ಇನ್ನಷ್ಟು ಬಿಗಿ ಬೇಕಿತ್ತು. ಸಿನಿಮಾದಲ್ಲಿ ಮಜ ಇರೋದೇ ದ್ವಿತಿಯಾರ್ಧದಲ್ಲಿ. ಅದನ್ನು ಹೇಳುವುದಕ್ಕಿಂತ ನೋಡುವುದೇ ಒಳಿತು.

ನಿರ್ದೇಶಕರಿಗೆ ನೋಡುಗರ ನಾಡಿಮಿಡಿತದ ಅರಿವಿದೆ. ಆ ಕಾರಣಕ್ಕೆ ಅವರಿಲ್ಲಿ ಸರಳ ಕಥೆಗೆ ಹಾರರ್ ಟಚ್ ಮಾಡಿದ್ದಾರೆ. ಅದು ಸುಮ್ಮನೆ ನೋಡಿಸಿಕೊಂಡು ಹೋಗುತ್ತೆ. ಅವರ ಜಾಣತನದ ಕೆಲಸಕ್ಕೆ ಆ ದೊಡ್ಡ ಕಾಡು, ಕತ್ತಲು, ಪಾತ್ರಗಳು, ಸಂಗೀತ, ಕ್ಯಾಮೆರಾ ಎಲ್ಲವೂ ಸಾಥ್ ಕೊಟ್ಟಿವೆ. ಹಾಗಾಗಿ ಸಿನಿಮಾ ರುಚಿಸುತ್ತಾ ಹೋಗುತ್ತೆ. ಇಂತಹ ಸಿನಿಮಾಗಳಿಗೆ ಕಥೆಗಿಂತ ದೃಶ್ಯಗಳು ಪ್ರಮುಖವಾಗಿ ಆಕರ್ಷಿಸಬೇಕು. ಜೊತೆಗೆ ಸಂಗೀತವೂ ಕೂಡ. ಅವೆರೆಡು ಇಲ್ಲಿ ಮೇಳೈಸಿವೆ. ಒಂದು ಹಾರರ್ ಫೀಲ್ ಕಟ್ಟಿಕೊಡುವ ಕೆಸಲ ಸುಲಭವಲ್ಲ. ಅದನ್ನು ನಿರ್ದೇಶಕರು ಪರಿಪೂರ್ಣವಾಗಿ ಕಟ್ಟಿಕೊಡುವ ಮೂಲಕ ನೋಡುಗರಲ್ಲಿ ಒಂದಷ್ಟು ಥ್ರಿಲ್ ಕೊಡುತ್ತಾ ಹೋಗುತ್ತಾರೆ. ಹಾಗಾಗಿ ಸಿನಿಮಾ ನೋಡುವ ಮನಸ್ಸುಗಳಿಗೆ ಎಲ್ಲೂ ಬೋರ್ ಎನಿಸೋದಿಲ್ಲ.

ಕಥೆ ತುಂಬಾನೇ ಸಿಂಪಲ್. ಉದ್ಯೋಗ ಇರದ ಮೂವರು ಗೆಳೆಯರು, ಸದಾ ಕುಡಿಬೇಕು, ಲೈಫ್ ಎಂಜಾಯ್ ಮಾಡಬೇಕು ಅದಷ್ಟೇ ಬದುಕು ಅಂದುಕೊಂಡವರು. ಆದರೆ, ಬದುಕಲು ಹಣ ಬೇಕು ಅದಕ್ಕೆ ಕಂಡುಕೊಳ್ಳುವ ದಾರಿ ಹಲವು. ಒಂದು ವಿಚಿತ್ರ ಸನ್ನಿವೇಶದಲ್ಲಿ ಅವರು ಕಾಡಿಗೆ ಹೋಗುವ ಮನಸ್ಸು ಮಾಡ್ತಾರೆ. ಅಲ್ಲಿ ಅಚ್ಚರಿಯ ಬೆಳವಣಿಗೆ ಕಾಣುತ್ತಾರೆ. ಕಂಡರಿಯದ ದೃಶ್ಯಗಳು ಎದುರಾಗುತ್ತವೆ. ಅವರು ಕಾಡಿಗೆ ಹೋಗಿದ್ದು ಯಾಕೆ, ಅಲ್ಲಿ ಅವರನ್ನು ಆವರಿಸಿದ್ದು ಏನು? ಮುಂದೆ ಅವರು ಅಂದುಕೊಂಡಿದ್ದನ್ನು ಸಾಧಿಸುತ್ತಾರಾ? ಇದು ಕಥೆ. ಈ ಕಥೆಯ ಜಾಡು ಹಿಡಿದು ಹೋಗುವ ಮನಸ್ಸಿದ್ದರೆ ಮುಲಾಜಿಲ್ಲದೆ ಬಂದು ಸಿನಿಮಾ ನೋಡಬಹುದು. ನೋಡುವ ಅಷ್ಟೂ ಗಂಟೆಗಳು ಕೂಡ ಮೋಸ ಆಗುವುದಿಲ್ಲ ಎಂಬ ಗ್ಯಾರಂಟಿಯನ್ನು ಸಿನಿಮಾ ಕೊಡುತ್ತದೆ.

ಸಿನಿಮಾದಲ್ಲಿ ಒಬ್ಬೊಬ್ಬರದ್ದು ಒಂದೊಂದು ರೀತಿಯ ಪಾತ್ರ. ಎಲ್ಲಾ ಪಾತ್ರಗಳೂ ಇಲ್ಲಿ ಗಮನಸೆಳೆಯುತ್ತವೆ. ಮುಖ್ಯವಾಗಿ ವಿಕಾಸ್ ಉತ್ತಯ್ಯ ತಮ್ಮ ಪಾತ್ರದ ಮೂಲಕ ಮೆಚ್ಚುಗೆಯಾಗುತ್ತಾರೆ. ಮಿಥುನ್ ತೀರ್ಥಹಳ್ಳಿ ನೋಡುಗರನ್ನೂ ಗಾಬರಿಪಡಿಸುತ್ತಾರೆ. ರಾಘವ್ ಕೊಡಚಾದ್ರಿ ಪಾತ್ರಕ್ಕೆ ಮೋಸ ಮಾಡಿಲ್ಲ. ಇಲ್ಲಿ ಮೂವರಿಗೂ ಒಂದೊಂದು ವಿಭಿನ್ನ ಪಾತ್ರಗಳಿವೆ. ಅದನ್ನು ಅವರು ಸರಿಯಾಗಿಯೇ ನಿರ್ವಹಿಸಿದ್ದಾರೆ. ಇನ್ನು, ಪ್ರಮುಖವಾಗಿ ಸಿನಿಮಾದ ಆಕರ್ಷಣೆ ಅಂದರೆ ಅದು ಅಶ್ವಿನ್ ಹಾಸನ್. ಅವರಿಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಅವರೇ ಸಿನಿಮಾದ ತಿರುವು ಅನ್ನಬಹುದು. ಅವರ ಪಾತ್ರದಲ್ಲಿ ಧಮ್ ಇದೆ. ಖಡಕ್ ಅಭಿನಯವೂ ತುಂಬಿದೆ. ಇನ್ನು, ರಾಧಾ ಪಾತ್ರ ಕೂಡ ಇರುವಷ್ಟು ಕಾಲ ಇಷ್ಟವಾಗುತ್ತದೆ. ಹರಿಣಿ ಪಾತ್ರ ಕೂಡ ಗಮನಸೆಳೆಯುತ್ತೆ. ಇನ್ನು, ಆಗಾಗ ಕಾಣಿಸಿಕೊಳ್ಳುವ ಕೆಲ ಪಾತ್ರಗಳು ಕಥೆಗೆ ಪೂರಕವಾಗಿವೆ.

ಇಂತಹ ಸಿನಿಮಾಗಳಿಗೆ ತಾಂತ್ರಿಕತೆ ಮುಖ್ಯವಾಗಿ ಬೇಕು. ಅದಿಲ್ಲಿ ಮಾತಾಡುವಂತಿದೆ. ಸುನಾದ್ ಗೌತಮ್ ಅವರ ಸಂಗೀತ ಇಲ್ಲಿ ಚೆನ್ನಾಗಿಯೇ ಮಾತಾಡಿದೆ. ಅದು ನೋಡುಗರನ್ನು ಬೆಚ್ಚಿಬೀಳುವಷ್ಟರ ಮಟ್ಟಿಗೆ. ಸುನಾದ್ ಅವರ ಕ್ಯಾಮೆರಾ ಕೈಚಳಕ ಕೂಡ ಸೊಗಸಾಗಿದೆ. ಒಟ್ಟಾರೆ, ಈ ಸಿನಿಮಾವನ್ನು ಜಾಲಿಯಾಗಿ ನೋಡೋಕೆ ಯಾವುದೇ ಅಪಾಯವಂತೂ ಇಲ್ಲ.

Categories
ಸಿನಿ ಸುದ್ದಿ

ಚಿತ್ರ ವಿಮರ್ಶೆ: ಒಂದು ಭಾವುಕತೆಯ ಪ್ರೀತಿ ಕಥೆ!

ರೇಟಿಂಗ್ : 3.5/5

ಚಿತ್ರ: 1990s
ನಿರ್ದೇಶಕ : ನಂದಕುಮಾರ್
ನಿರ್ಮಾಣ: ಮನಸ್ಸು ಮಲ್ಲಿಗೆ ಸಂಸ್ಥೆ
ತಾರಾಗಣ: ಅರುಣ್, ರಾಣಿ ವರದ್, ಶಿವಾನಂದ, ಸ್ವಪ್ನ ಶೆಟ್ಟಿಗಾರ್, ದೇವ್ ಇತರರು.

ಏ ಜುಟ್ಟು ನಮ್ ತಂಟೆಗೆ ಬಂದ್ರೆ ಅಷ್ಟೇ, ಈ ಸಲ ನಿನ್ ಮಗಳ ಕೈ ಕಚ್ಚಿದ್ದಿನಿ. ಮುಂದೆ ನಿನ್ ಮಗಳ ಕೆನ್ನೆ ಕಚ್ಚೀತೀನಿ…
ಬಾಲ್ಯದಲ್ಲೇ ಆ ಹುಡುಗ ಈ ಖಡಕ್ ಡೈಲಾಗ್ ಹೇಳಿದ ಮೇಲೆ ಮುಂದೆಯೂ ಆ ಹುಡುಗ ಪಕ್ಕಾ ಲೋಕಲ್ ಹುಡುಗನಾಗಿ ಮೆರಿತಾನೆ ಅಂತ ಪ್ರತ್ಯೇಕವಾಗಿ ಹೇಳುವಂತಿಲ್ಲ ಬಿಡಿ. ಚಿಕ್ಕಂದಿನಲ್ಲೇ ಅವನೊಬ್ಬ ಪೋಲಿ. ಅಪ್ಪ, ಅಮ್ಮ ಅಷ್ಟೇ ಅಲ್ಲ, ಆ ಊರಿನ ಯಾರೊಬ್ಬರಿಗೂ ಬಗ್ಗದ ಹುಡುಗ. ಅವನೊಬ್ಬ ಮಹಾ ಕೋಪಿಷ್ಠ. ಇವಿಷ್ಟು ಹೇಳಿದ ಮೇಲೆ ಇದೊಂದು ಪಕ್ಕಾ ರಿವೇಂಜ್ ಸ್ಟೋರಿನೇ ಇರಬೇಕು ಅಂತ ಅಂದುಕೊಂಡರೆ ಆ ಊಹೆ ತಪ್ಪು.

ಹೌದು, ಇದೊಂದು ತೊಂಬತ್ತರ ಕಾಲಘಟ್ಟದ ಲವ್ ಸ್ಟೋರಿ. ಹಾಗಂತ ಬರೀ ಲವ್ವು ತುಂಬಿಕೊಂಡಿದೆ ಅಂದರೆ ಆ ಕಲ್ಪನೆಯೇ ಇಲ್ಲಿಲ್ಲ. ಇಲ್ಲಿ ನಿಷ್ಕಲ್ಮಷ ಪ್ರೀತಿ ಇದೆ. ಮುಗ್ಧ ಮನಸ್ಸಿಗೆ. ಗೆಳೆತನವಿದೆ. ಸಂಬಂಧಗಳ ಮೌಲ್ಯವಿದೆ. ಕೋಪ ತಾಪಗಳ ಮುಖವಾಡವಿದೆ. ಭಾವನಾತ್ಮಕ ಅಂಶಗಳೂ ಇವೆ. ಹಾಗಾಗಿ ಇದೊಂದು ಮನ ಮುಟ್ಟುವ ಮತ್ತು ಮಿಡಿಯುವ ಪ್ರೀತಿ ಕಥೆ ಅಂದರೆ ತಪ್ಪಿಲ್ಲ. ಸಿನಿಮಾ ಮೊದಲರ್ಧ ಸುಮ್ಮನೆ ನೋಡಿಸಿಕೊಂಡು ಹೋಗುತ್ತೆ. ದ್ವಿತಿಯಾರ್ಧ ಒಂದಷ್ಟು ಕಾಡುವ ಹಂತಕ್ಕೂ ಕರೆದುಕೊಂಡು ಹೋಗುತ್ತೆ. ಸಿನಿಮಾದ ಕ್ಲೈಮ್ಯಾಕ್ಸ್ ಜೀವಾಳ. ಇಲ್ಲಿ ಪ್ರೀತಿಯ ಉನ್ಮಾದತೆ ಜೊತೆಗೆ ಕಣ್ಣಾಲಿಗಳು ತುಂಬುವಂತಹ ದೃಶ್ಯಗಳು ನೋಡುಗರನ್ನು ಹಿಡಿದಿಟ್ಟುಕೊಳ್ಳುತ್ತವೆ. ಅದೇ ಚಿತ್ರದ ಪ್ಲಸ್ ಎನ್ನಬಹುದು.

ತೊಂಬತ್ತರ ಕಾಲಘಟ್ಟದ ಸಿನಿಮಾಗಳಲ್ಲಿ ಸೂಕ್ಷ್ಮತೆಗೆ ಹೆಚ್ಚು ಒತ್ತು ಕೊಡುವುದು ಕಾಮನ್. ಇಲ್ಲೂ ಅದು ಮುಂದುವರೆದಿದೆ. ಆಗಿನ ಪ್ರೀತಿ, ಕಾಸ್ಟ್ಯೂಮ್, ಮಾತು, ನಡೆ ನುಡಿ ಎಲ್ಲವನ್ನೂ ಅಷ್ಟೇ ಸೂಕ್ಷ್ಮವಾಗಿ ಕಟ್ಟಿ ಕೊಡುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ. ಇಲ್ಲಿ ಮಳೆ ಇದೆ, ಬೆಂಕಿ ಇದೆ, ತಣ್ಣನೆಯ ಗಾಳಿ ಇದೆ, ಬಿರುಗಾಳಿಯೂ ಇದೆ. ಹಾಗಾಗಿ ಇದೊಂದು ಆ್ಯಕ್ಷನ್ ಕಮ್ ಲವ್ ಸ್ಟೋರಿ ಎನ್ನಬಹುದು. ಕೆಲವು ಕಡೆ ಅನಗತ್ಯ ದೃಶ್ಯಗಳಿವೆ. ಆಗಾಗ ಬೇಡವೆನಿಸುವ ಮಾತುಗಳೂ ಇವೆ. ಅಂತಹ ಸಮಯದಲ್ಲಿ ಮನಸ್ಸಿಗೆ ನಾಟುವ ಮುದವೆನಿಸುವ ಹಾಡು ಕಾಣಿಸಿಕೊಂಡು ಆ ಮಿಸ್​ಟೇಕ್ ಗಳನ್ನು ದೂರ ತಳ್ಳುತ್ತವೆ. ಆದ್ದರಿಂದ ಈ 90ರ ಕಾಲಘಟ್ಟದ ಕಥೆ ನೋಡುಗರಿಗೆ ಆಪ್ತವೆನಿಸುತ್ತಾ ಹೋಗುತ್ತದೆ.

ಸಿನಿಮಾದಲ್ಲಿ ಆಗಿನ ಕಥೆ ಹೇಳಿರುವುದು ತುಸು ಕಷ್ಟದ ಕೆಲಸವೇ. ಕೆಲವು ಕಡೆ ಅದು ಹರಸಾಹಸವಾಗಿಯೂ ಕಾಣುತ್ತದೆ. ಆದರೆ, ನಿರ್ದೇಶಕರ ಜಾಣತನ ಇಲ್ಲಿ ವರ್ಕೌಟ್ ಆಗಿರುವುದರಿಂದಲೇ ಸಿನಿಮಾ ಎಲ್ಲೂ ಬೋರ್ ಎನಿಸದೆ, ನೋಡಿಸಿಕೊಂಡು ಹೋಗುತ್ತದೆ. ಸಿನಿಮಾದ ಅವಧಿ ಕೊಂಚ ಜಾಸ್ತಿ ಆಯ್ತು ಅನ್ನುವ ಮಾತುಗಳನ್ನು ಬಿಟ್ಟರೆ, ಸಿನಿಮಾದಲ್ಲಿ ಬೇರೆ ಯಾವ ಮೈನಸ್ ಅಂಶಗಳು ಸಿಗುವುದಿಲ್ಲ. ಅವಧಿಯನ್ನು ಕೊಂಚ ಕಡಿಮೆ ಮಾಡಿದರೆ, ಮನಸ್ಸಿಗೆ ಇನ್ನಷ್ಟು ಆಪ್ತವಾಗುವ ಎಲ್ಲಾ ಸಾಧ್ಯತೆಗಳೂ ಇವೆ.

ಸಿನಿಮಾದ ಮೊದಲರ್ಧ ಜಾಲಿಯಾಗಿ ಕರೆದುಕೊಂಡು ಹೋಗುವ ಈ ಚಿತ್ರದ ಕಥೆ, ದ್ವಿತಿಯಾರ್ಧದಲ್ಲಿ ಒಂದಷ್ಟು ತಿರುವುಗಳನ್ನು ಕೊಡುತ್ತಾ ಹೋಗುತ್ತದೆ. ಚಿತ್ರದ ಕ್ಲ್ಯೆಮ್ಯಾಕ್ಸ್ ನಿಜಕ್ಕೂ ಊಹೆ ಮಾಡಿಕೊಳ್ಳಲಾಗುವುದಿಲ್ಲ. ಸಿನಿಮಾ ನೋಡಿ ಹೊರಬಂದವರಿಗೆ ಒಂದಷ್ಟು ಎದೆಭಾರ ಎನಿಸುವುದು ದಿಟ. ಆಗಿನ ಕಾಲಘಟ್ಟದ ಕಥೆಯಾದರೂ, ಈಗಿನ ಟ್ರೆಂಡ್ ಗೂ ಒಪ್ಪುವ ಮತ್ತು ಅಪ್ಪುವಂತಹ ಮೇಕಿಂಗ್ ಇಲ್ಲಿದೆ. ಎಲ್ಲಾ ವರ್ಗಕ್ಕೂ ನಾಟುವ ಎಳೆ ಇಲ್ಲಿರುವುದರಿಂದ ನೋಡುಗರನ್ನು ಒಂದಷ್ಟು ಭಾವುಕತೆಗೆ ದೂಡುತ್ತದೆ. ಸಿನಿಮಾದಲ್ಲಿ ಸಂಭಾಷಣೆಗೆ ಇನ್ನಷ್ಟು ಧಮ್ ಕಟ್ಟಿಕೊಡಬಹುದಿತ್ತು. ಸಂಕಲನ ಚಿತ್ರದ ವೇಗವನ್ನು ಎತ್ತಿ ಹಿಡಿದಿದೆ. ಸಿನಿಮಾದಲ್ಲಿ ಮಾತನಾಡುವ ಮತ್ತೊಂದು ಅಂಶವೆಂದರೆ ಅದು ಕಲಾತ್ಮಕತೆ. ಕಲಾನಿರ್ದೇಶಕರ ಕೈ ಚಳಕ ಆಗಿನ ಕಾಲಘಟ್ಟಕ್ಕೆ ಕರೆದೊಯ್ಯುತ್ತದೆ. ಇದು ಸಿನಿಮಾದ ಮತ್ತೊಂದು ಪ್ಲಸ್.

ಕಥೆ ಏನು?

ಚಿಕ್ಕಂದಿನಲ್ಲೇ ನಾಯಕ (ಅರುಣ್) ಕೋಪಿಷ್ಠ. ಅದು ದೊಡ್ಡವನಾದ ಮೇಲೂ ಮುಂದುವರೆಯುತ್ತೆ. ಊರಿನ ಬ್ರಾಹ್ಮಣ ಪೂಜಾರಿ ಮೇಲೆ ಅವನಿಗೆ ಎಲ್ಲಿಲ್ಲದ ಕೋಪ. ಕಾರಣ ಚಿಕ್ಕಂದಿನಲ್ಲಿ ಆದಂತಹ ಅವಮಾನ. ಅದು ಎಷ್ಟರಮಟ್ಟಿಗೆ ಅಂದರೆ, ಬ್ರಾಹ್ಮಣ ಮಗಳನ್ನು ಕಿಚಾಯಿಸುವಷ್ಟು. ಆದರೆ, ಮುಂಗೋಪಿ ನಾಯಕನೆಂದರೆ, ಆ ಬ್ರಾಹ್ಮಣ ಮಗಳಿಗೆ ಪ್ರೀತಿ. ಕಲ್ಲು ಮನಸ್ಸಿನ ನಾಯಕನನ್ನು ಹೇಗೆ ಮೃದುಗೊಳಿಸಿ, ಪ್ರೀತಿಯತ್ತ ಕರೆದೊಯ್ಯುತ್ತಾಳೆ ಅನ್ನೋದೇ ಕಥೆಯ ಒನ್ ಲೈನ್. ಇಬ್ಬರ ಪ್ರೀತಿ ಶುರುವಾಗೋಕೆ ಮೊದಲರ್ಧ ಮುಗಿಯುತ್ತೆ. ದ್ವಿತಿಯಾರ್ಧದಲ್ಲಿ ನಿರೀಕ್ಷಿಸದ ಸಂಗತಿಗಳು ನಡೆದುಹೋಗುತ್ತವೆ. ಸಿನಿಮಾದ ಕೊನೆಯಲ್ಲೆ ಎಲ್ಲವೂ ನಿಶಬ್ಧ. ಅಲ್ಲೊಂದಷ್ಟು ಘಟನೆಗಳು ನಡೆದುಹೋಗುತ್ತವೆ. ಈ ನಡುವೆ, ಜಾತಿ, ಧರ್ಮ, ಅಧರ್ಮ, ಪ್ರೀತಿ, ದ್ವೇಷ ಎಲ್ಲವೂ ಇಣುಕಿ ನೋಡುತ್ತವೆ. ತಣ್ಣಗೆ ಶುರುವಾದ ಪ್ರೀತಿ ಕೊನೆಗೆ ಕೆಂಡವಾಗುತ್ತೆ. ಅಂತ್ಯದಲ್ಲೇ ಏನಾಗುತ್ತೆ ಅನ್ನೋದೇ ಸಸ್ಪೆನ್ಸ್. ಆ ಕುತೂಹಲವಿದ್ದರೆ ಒಮ್ಮೆ 1990s ಸಿನಿಮಾ ನೋಡಲ್ಲಡ್ಡಿಯಿಲ್ಲ.

ನಾಯಕ ಅರುಣ್ ಫೈಟ್ ಮತ್ತು ಡ್ಯಾನ್ಸ್ ನಲ್ಲಿ ಇಷ್ಟವಾಗುತ್ತಾರೆ. ನಟನೆಯಲ್ಲೂ ಸೈ ಎನಿಸಿಕೊಂಡಿದ್ದಾರೆ. ಬಾಡಿಲಾಂಗ್ವೇಜ್, ಡೈಲಾಗ್ ಡಿಲವರಿಯಲ್ಲಿ ಹಿಂದೆ ಬಿದ್ದಿಲ್ಲ. ಫಸ್ಟ್ ಸಿನಿಮಾ ಆಗಿದ್ದರೂ, ಅನುಭವಿ ನಟರಂತೆ ಕಾಣುತ್ತಾರೆ. ಸಣ್ಣಪುಟ್ಟ ಮಿಸ್ಟೇಕ್ ಸರಿಪಡಿಸಿಕೊಂಡರೆ, ಕನ್ನಡಕ್ಕೊಬ್ಬ ಒಳ್ಳೆಯ ಹೀರೋ ಆಗುವ ಎಲ್ಲಾ ಲಕ್ಷಣಗಳಿವೆ. ನಾಯಕಿ ರಾಣಿವರದ್ ಅಂದದಷ್ಟೇ ಪಾತ್ರವನ್ನೂ ಕಟ್ಟಿಕೊಟ್ಟಿದ್ದಾರೆ. ಕ್ಲ್ಯೆಮ್ಯಾಕ್ಸ್ ನಲ್ಲಿ ಎಲ್ಲರನ್ನೂ ಮೌನವಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದಂತೆ ಅರುಣ್ ಕುಮಾರ್, ಶಾಸ್ತ್ರಿ ಪಾತ್ರದಲ್ಲಿ ಮೆಚ್ಚುಗೆ ಆಗುತ್ತಾರೆ. ಉಳಿದಂಂತೆ ಸ್ವಪ್ನ ಶೆಟ್ಟಿಗಾರ್ ಪಾತ್ರ ಗಮನಸೆಳೆಯುತ್ತೆ. ದೇವ್, ಶಿವಾನಂದ ಇತರರು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ಮಹಾರಾಜ ಅವರ ಸಂಗೀತ ಇಲ್ಲಿ ಮಾತಾಡಿದೆ. ಅಪ್ಪ ನಿನ್ನ ಕಣ್ಣ ನೀರು, ಕಂಡೊಡನೆ ಮೌನಿ ನಾನು ಹಾತು ಮತ್ತು ಮಳೆ ಕುರಿತ ಸಾಂಗ್ ಇಷ್ಟವಾಗುತ್ತವೆ. ಹಾಲೇಶ್ ಅವರ ಕ್ಯಾಮೆರಾ ಕೈಚಳಕ ಸಿನಿಮಾದ ಅಂದವನ್ನು ಹೆಚ್ಚಿಸಿದೆ.

Categories
ಸಿನಿ ಸುದ್ದಿ

ಟಾಕ್ಸಿಕ್ ಪ್ಯಾನ್ ವರ್ಲ್ಡ್ ಸಿನಿಮಾ ಗುರು! ರಿಲೀಸ್ ಮೊದಲೇ ಭರಪೂರ ದಾಖಲೆ

ಗಡಿದಾಟಿ ದಾಖಲೆ ಬರೆದ ‘ಟಾಕ್ಸಿಕ್’…ಜಾಗತಿಮಟ್ಟದಲ್ಲಿ ಕೆವಿಎನ್-ಯಶ್ ಹೊಸ ಕ್ರಾಂತಿ

ರಾಕಿಂಗ್ ಸ್ಟಾರ್ ಯಶ್ ಹಾಗೂ ಕೆವಿಎನ್ ನಿಮಾರ್ತೃ ವೆಂಕಟ್ ಕೊನಂಕಿ ಯೋಜನೆ ಹಾಗೂ ಯೋಚನೆ ಎರಡು ದೊಡ್ಡದಾಗಿದೆ ಅನ್ನೋದಕ್ಕೆ ಟಾಕ್ಸಿಕ್ ಸಿನಿಮಾ ಅಂಗಳದಿಂದ ಸಿಕ್ಕಿರುವ ಲೇಟೆಸ್ಟ್ ಮಾಹಿತಿಯೇ ಸಾಕ್ಷಿ. ರಾಕಿಂಗ್ ಸ್ಟಾರ್ ಆಗಿದ್ದ ಯಶ್ ಕೆಜಿಎಫ್ ಸಿನಿಮಾ ಮೂಲಕ ನ್ಯಾಷನಲ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಟಾಕ್ಸಿಕ್ ಮೂಲಕ ಮತ್ತೊಂದು ದೊಡ್ಡ ಹೆಜ್ಜೆ ಇಟ್ಟಿರುವ ಯಶ್ ಪ್ಯಾನ್ ಇಂಡಿಯಾ ಬಿಟ್ಟು ಈಗ ಪ್ಯಾನ್ ವರ್ಲ್ಡ್ ಗುರಿ ಇಟ್ಟಿದ್ದಾರೆ. ಯಶ್ ವಿಷನ್ ಗೆ ಕೆವಿಎನ್ ಸಂಪೂರ್ಣವಾಗಿ ಬೆಂಬಲ ಕೊಟ್ಟಿದೆ.

ಟಾಕ್ಸಿಕ್ ಕೇವಲ ಪ್ಯಾನ್ ಇಂಡಿಯನ್ ಸಿನಿಮಾವಲ್ಲ. ಜಾಗತಿಕ ಮಟ್ಟದಲ್ಲಿ ಈ ಚಿತ್ರವನ್ನು ಕೊಂಡೊಯ್ಯುವ ನಿಟ್ಟಿನಲ್ಲಿ ನಿರ್ಮಾಪಕ ವೆಂಕಟ್ ಹಾಗೂ ಚಿತ್ರದ ನಾಯಕ ಯಶ್ ಶ್ರಮಿಸುತ್ತಿದ್ದಾರೆ. ಭಾರತೀಯ ಚಿತ್ರರಂಗದ ಅದ್ಧೂರಿ ಹಾಗೂ ದುಬಾರಿ ಸಿನಿಮಾವಾಗಿರುವ ಈ ಚಿತ್ರವನ್ನು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಚಿತ್ರೀಕರಿಸಲಾಗುತ್ತಿದೆ. ಬಳಿಕ ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿ ಇನ್ನೂ ಹಲವು ಅಂತಾರಾಷ್ಟ್ರೀಯ ಭಾಷೆಗಳಲ್ಲಿ ಡಬ್ ಮಾಡಲಾಗುತ್ತದೆ.

ಸಾಮಾನ್ಯವಾಗಿ ಸಿನಿಮಾವನ್ನು ಮೊದಲು ಮೂಲ ಭಾಷೆಯಲ್ಲಿ ಶೂಟ್ ಮಾಡಿ ಉಳಿದ ಭಾಷೆಗೆ ಡಬ್ ಮಾಡಿ ರಿಲೀಸ್ ಮಾಡಲಾಗುತ್ತದೆ. ಕೆಲವೊಮ್ಮೆ ಎರಡು ಭಾಷೆಗಳಲ್ಲಿ ಸಿನಿಮಾಗಳು ಒಟ್ಟಿಗೆ ಶೂಟ್ ಆದ ಉದಾಹರಣೆ ಇದೆ. ಆದರೆ, ಕನ್ನಡ ಹಾಗೂ ಇಂಗ್ಲಿಷ್ನಲ್ಲಿ ಒಟ್ಟಿಗೆ ಸಿನಿಮಾ ಶೂಟ್ ಈವರೆಗೆ ಆಗಿಲ್ಲ. ಟಾಕ್ಸಿಕ್ ತಂಡ ಈಗ ಕನ್ನಡ ಹಾಗೂ ಇಂಗ್ಲಿಷ್ನಲ್ಲಿ ಒಟ್ಟಿಗೆ ಸಿನಿಮಾ ಶೂಟ್ ಮಾಡಿ ಹೊಸ ದಾಖಲೆ ಬರೆದಿದೆ. ಈ ಮೂಲಕ ಅಪರೂಪದ ದಾಖಲೆಯನ್ನು ತನ್ನದಾಗಿಸಿಕೊಂಡಿದೆ. ಭಾಷೆ, ಗಡಿ, ಸಂಸ್ಕೃತಿ, ಈ ಎಲ್ಲ ಮೀತಿಗಳನ್ನು ಮೀರಿ ಹೊರಹೊಮ್ಮುವ ಚಿತ್ರವಾಗಬೇಕು ಎಂಬ ಚಿತ್ರತಂಡ ಶ್ರಮಿಸುತ್ತಿದೆ.

ಟಾಕ್ಸಿಕ್ ಸಿನಿಮಾವನ್ನು ವೆಂಕಟ್ ಕೆ. ನಾರಾಯಣ ಸಾರಥ್ಯದ ಕೆವಿಎನ್ ಪ್ರೊಡಕ್ಷನ್ ಹಾಗೂ ಯಶ್ ಮೊನಸ್ಟಾರ್ ಮೈಂಡ್ ಕ್ರಿಯೇಷನ್ ಜೊತೆಯಾಗಿ ಸೇರಿ ನಿರ್ಮಾಣ ಮಾಡುತ್ತಿದೆ. ಈಗಾಗಲೇ ಹಲವು ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದ ಗೀತು ಮೋಹನದಾಸ್ ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದು. ಈ ಸಿನಿಮಾವನ್ನು ಪ್ಯಾನ್‌ ವರ್ಲ್ಡ್‌ ಹಂತಕ್ಕೆ ತೆಗೆದುಕೊಂಡು ಹೋಗಲು ಇಡೀ ಸಿನಿಮಾ ತಂಡ ಸಜ್ಜಾಗಿದೆ.

Categories
ಸಿನಿ ಸುದ್ದಿ

ಹೀಗೊಂದು 90ರ ದಶಕದ ಲವ್ ಸ್ಟೋರಿ: ಫೆ.28 ರಿಲೀಸ್

ಮನಸ್ಸು ಮಲ್ಲಿಗೆ ಕಂಬೈನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ, ನಂದಕುಮಾರ್ C M ನಿರ್ದೇಶಿಸಿರುವ ಹಾಗೂ ಅರುಣ್ – ರಾಣಿ ವರದ್ ಅಭಿನಯದ “1990s” ಚಿತ್ರ ಫೆಬ್ರವರಿ 28ಕ್ಕೆ ರಾಜ್ಯಾದ್ಯಂತ ಬಿಡುಗಡೆ ಕಾಣುತ್ತಿದೆ.

ಹಲವು ವರ್ಷಗಳಿಂದ ಚಿತ್ರರಂಗದೊಂದಿಗೆ ಒಡನಾಟವಿರುವ ನಂದ ಅವರಿಗೆ ಇದು ನಿರ್ದೇಶಕರಾಗಿ ಚೊಚ್ಚಲ ಚಿತ್ರ. ಇದು 1990 ರಲ್ಲಿ ನಡೆಯುವ ಪ್ರೇಮಕಥೆ. ಚಿತ್ರದ ಕಥೆ ನಡೆಯುವುದು ಈ ಕಾಲಘಟ್ಟದಲ್ಲಾದರೂ ನಾಯಕನ ಕಲ್ಪನೆ 35ವರ್ಷಗಳ ಹಿಂದಿನಾದಗಿರುತ್ತದೆ. ಈವರೆಗೂ ಸಾಕಷ್ಟು ಪ್ರೇಮಕಥೆಗಳು ಬಂದಿವೆಯಾದರೂ ನಮ್ಮ ಚಿತ್ರದ ಕಥೆ ವಿಭಿನ್ನ. ಚಿತ್ರದಲ್ಲಿ 1990s ಭಾಗ 90% ಇರುತ್ತದೆ. ಮಿಕ್ಕ 10% ಮಾತ್ರ ಈ ಕಾಲಘಟ್ಟದ್ದು.

ಇದು ಎಲ್ಲಾ ಭಾಷೆಗಳಿಗೂ ಸಲ್ಲುವ ಕಥೆ ಎಂದು ಸಾಕಷ್ಟು ಜನರು ಅಭಿಪ್ರಾಯ ಪಟ್ಟರು. ಈಗ “1990” s ಚಿತ್ರ ಐದು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಚಿತ್ರವಾಗಿ ನಿರ್ಮಾಣವಾಗಿದೆ. ಎಂಬುದು ನಿರ್ದೇಶಕ ನಂದಕುಮಾರ್ ಮಾತು.

ನಾಲ್ಕು ಜನ ಸ್ನೇಹಿತರು ಸೇರಿ ಮನಸ್ಸು ಮಲ್ಲಿಗೆ ಕ್ರಿಯೇಷನ್ಸ್ ಸಂಸ್ಥೆಯ ಮೂಲಕ ನಿರ್ಮಾಣ ಮಾಡಿರುವ ನವಿರಾದ ಪ್ರೇಮಕಥೆ “1990”s ಚಿತ್ರಕ್ಕೆ ನಿಮ್ಮೆಲ್ಲರ ಬೆಂಬಲವಿರಲಿ ಎಂಬುದು ನಿರ್ಮಾಪಕ ಅರುಣ್ ಕುಮಾರ್ ಮಾತು.

ನಾಯಕ ಅರುಣ್ ರಂಗ ಭೂಮಿ ಕಲಾವಿದರು. ಇದು ಅವರ ಮೊದಲ ಚಿತ್ರ. ಚಿತ್ರದಲ್ಲಿ ನನ್ನದು ಮುಗ್ದ ಪ್ರೇಮಿಯ ಪಾತ್ರ. ಎಲ್ಲರಿಗೂ ಇದು ಇಷ್ಟವಾಗುತ್ತೆ ಎಂದರು ನಾಯಕ ಅರುಣ್.

ರಾಣಿ ವರದ್ ಅವರಿಗೆ ಇದು ವಿಶೇಷ ಸಿನಿಮಾ ಆಗಲಿದೆ ಎಂಬ ನಂಬಿಕೆ ಇದೆಯಂತೆ.

ಹಾಲೇಶ್ ಕ್ಯಾಮರಾ ಇದೆ. , ಅಶೋಕ್, ಸ್ಟಂಟ್ ಮಾಡಿಸಿದ್ದಾರೆ. ಸಾಧಿಕ್ ಸರ್ದಾರ್ ನೃತ್ಯ ನಿರ್ದೇಶಿಸಿದ್ದಾರೆ.ಕೃಷ್ಣ ಸಂಕಲನವಿದೆ.

Categories
ಸಿನಿ ಸುದ್ದಿ

ಬದುಕಿಗಾಗಿ ರಾಜುವಿನ ಹೋರಾಟ ಹಾರಾಟ!

ಚಿತ್ರ ವಿಮರ್ಶೆ

ವಿಜಯ್ ಭರಮಸಾಗರ

ಚಿತ್ರ : ರಾಜು ಜೇಮ್ಸ್ ಬಾಂಡ್
ನಿರ್ದೇಶನ: ದೀಪಕ್ ಮಧುವನಹಳ್ಳಿ
ನಿರ್ಮಾಣ: ಮಂಜುನಾಥ್ ವಿಶ್ವಕರ್ಮ, ಕಿರಣ್ ಭರ್ತೂರ್
ತಾರಾಗಣ: ಗುರುನಂದನ್, ಅಚ್ಯುತ್ ರಾವ್, ಚಿಕ್ಕಣ್ಣ, ರವಿಶಂಕರ್, ಮೃದುಲಾ, ಜೈ ಜಗದೀಶ್ ಇತರರು.

ಕನ್ನಡದಲ್ಲಿ ಈಗಾಗಲೇ ಅನೇಕ ಬಾಂಡ್ ಸಿನಿಮಾಗಳು ಬಂದಿವೆ. ಅವೆಲ್ಲಾ ಪಕ್ಕಾ ಬಾಂಡ್ ಛಾಯೆಯ ಸಿನಿಮಾಗಳು. ಆ ಸಾಲಿಗೆ ಈ ರಾಜು ಜೇಮ್ಸ್ ಬಾಂಡ್ ಕೂಡ ಸೇರಿಸಲು ಅಡ್ಡಿಯಿಲ್ಲ. ಆದರೆ, ಈ ಬಾಂಡ್ ಪಕ್ಕಾ ಲೋಕಲ್! ಹಾಗಂತ ತುಂಬಾ ಸೀರಿಯಸ್ ಜೇಮ್ಸ್ ಬಾಂಡ್ ಅಂತೂ ಅಲ್ಲ. ನೋಡುಗರನ್ನು ಮನರಂಜಿಸಿ, ಕಳಿಸುವ ಬಾಂಡ್ ಇವನು.

ಇಲ್ಲಿರುವ ಹೀರೋಗೆ ಬ್ಯಾಂಕ್ ವೊಂದರಲ್ಲಿ ಕೆಲಸ ಹಿಡಿದು ತಾನು ಪ್ರೀತಿಸೋ ಹುಡುಗಿನ‌ ಮದ್ವೆ ಆಗಿ ಸೆಟ್ಲ್ ಆಗುವ ಅಸೆ. ಆದರೆ ಅವನ ಲೈಫಲ್ಲಿ ನಡೆಯೋದೇ ಬೇರೆ. ಅದೇ ಸಿನಿಮಾದ ಹೈಲೆಟ್.

ಆರಂಭದಿಂದ ಅಂತ್ಯದವರೆಗೆ ನಗಿಸುವ ಸಿನಿಮಾ ಇದು. ಹಾಗಂತ ಬರೀ‌ನಗು ತುಂಬಿಲ್ಲ. ಅಲ್ಲಲ್ಲಿ ಬೋಧನೆಯೂ ಇದೆ. ಬದುಕಿನ ಪಾಠವಿದೆ. ಗೆಳೆತನ, ಪ್ರೀತಿ, ತಾಯಿ ಸೆಂಟಿಮೆಂಟ್ ಇತ್ಯಾದಿ ಅಂಶಗಳು ಸಿನಿಮಾದ ಆಕರ್ಷಣೆ.

ಕಥೆ ಸರಳವಾಗಿದೆ. ಚಿತ್ರಕಥೆ ಇನ್ನಷ್ಟು ಬಿಗಿಯಾಗಿರಬೇಕಿತ್ತು. ಚಿತ್ರದ ವೇಗಕ್ಕೆ ಸಿನಿಮಾದ ಡೈಲಾಗ್ಸ್ ಸಾಥ್ ಕೊಟ್ಟಿವೆ. ಎಲ್ಲೋ ಒಂದು ಕಡೆ ಸಣ್ಣ ಪುಟ್ಟ ಕೊರತೆಗಳು ಕಾಣುತ್ತವೆ. ಹಾಗಂತ ಸಿನಿಮಾ ನೋಡುಗರಿಗೆ ಬೋರ್ ಎನಿಸಲ್ಲ. ಮಕ್ಕಳಿಂದ ಹಿಡಿದು ವಯಸ್ಸಾದವರೂ ಈ ಬಾಂಡ್ ಅವಾಂತರಗಳನ್ನು ಒಮ್ಮೆ ನೋಡಬಹುದು.

ಕಥೆ ಒಂದೇ ಊರಲ್ಲಿ ನಡೆಯುತ್ತೆ. ಇಲ್ಲಿ ಬಾಂಡ್ ಛಾಯೆ ಬದಲು ಆ ಹೀರೋನ ಆಸೆ ಆಕಾಂಕ್ಷೆಗಳು ಕಾಣಸಿಗುತ್ತವೆ. ಮೊದಲರ್ಧ ಕಾಮನ್ ಆಗಿ ಸಾಗುವ ಸಿನಿಮಾ ದ್ವಿತಿಯಾರ್ಧ ಮಜವೆನಿಸುತ್ತೆ. ಅಲ್ಲಲ್ಲಿ ಕುತೂಹಲದ ಜೊತೆ ಸ್ವಲ್ಪ ಟ್ವಿಸ್ಟ್ ಕೊಟ್ಟು ನೋಡುಗರನ್ನು ಟೆಸ್ಟ್ ಮಾಡುತ್ತೆ.

ಸಿನಿಮಾದಲ್ಲಿ ಮನರಂಜನೆ ಗ್ಯಾರಂಟಿ. ಸಿನಿಮಾ ಟೈಟಲ್ ನೋಡಿ ಒಳಬಂದರೆ ಜೇಮ್ಸ್ ಶೈಲಿಯ ಕಂಟೆಂಟ್ ಮರೆಯಬೇಕು. ಇದು ಹಿರೋ ತನಗೆ ತಾನು ಇಟ್ಟುಕೊಂಡಿರೋ ಹೆಸರಷ್ಟೇ. ಹಾಗಂತ ನೋಡೋಕೆ ಯಾವ ಮೋಸನು ಇಲ್ಲ.

ರಾಜುಗೆ ತನ್ನ ತಾಯಿ ಮನೆ ಪ್ರಾಣ. ಅತ್ತ ಪ್ರೀತಿಸೋ ಹುಡುಗಿ ಕೈ ಹಿಡಿಯುವ ಛಲ. ಇವೆರೆಡರ ಮಧ್ಯೆ ಹಣ ಆಸ್ತಿ ಅಡ್ಡಿಯಾಗುತ್ತೆ. ಆಗ ಬದುಕಲ್ಲಿ ತಾಯಿ ಕಟ್ಟಿದ ಮನೆ ಉಳಿಸಿಕೊಳ್ಳಬೇಕು. ಲವ್ವು ಮಾಡಿದ ಹುಡುಗಿ ಮದ್ವೆ ಆಗಬೇಕು. ಆಗ ಅವನ‌ ಮುಂದೆ ಒಂದು ಐಡಿಯಾ ಬರುತ್ತೆ. ಅದೇ ಸಿನಿಮಾದ ಟ್ವಿಸ್ಟು. ಇಡೀ ಸಿನಿಮಾ ಅದರ ಮೇಲೆನೆ ಸಾಗುತ್ತೆ. ಕೊನೆಗೆ ಅವನು ಅಂದುಕೊಂಡಿದ್ದು ಆಗುತ್ತಾ ಅನ್ನೋದೇ ಕಥೆ. ಆ ಕುತೂಹಲ ಇದ್ದರೆ ಸಿನಿಮಾ ನೋಡಿ.

ಗುರುನಂದನ್ ಇಲ್ಲಿ ಎಂದಿಗಿಂತ ಇಷ್ಟವಾಗುತ್ತಾರೆ. ಅವರ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಡ್ಯಾನ್ಸ್, ಫೈಟಲ್ಲೂ ಹಿಂದೆ ಬಿದ್ದಿಲ್ಲ. ಮೃದುಲಾ ಪಾತ್ರ ಮೃದುವಾಗಿದೆ. ಸಿಕ್ಕ ಪಾತ್ರಕ್ಕೆ ಮೋಸ ಮಾಡಿಲ್ಲ. ಉಳಿದಂತೆ ಅಚ್ಯುತ, ಚಿಕ್ಕಣ್ಣ, ಸಾಧುಕೋಕಿಲ ಎಲ್ಲರೂ ನಗಿಸುವಲ್ಲಿ ಹಿಂದೆ ಬಿದ್ದಿಲ್ಲ. ರವಿಶಂಕರ್ ವಿಶೇಷ ಪಾತ್ರದ ಮೂಲಕ ಗಮನ ಸೆಳೆದಿದ್ದಾರೆ. ಸಂಗೀತದ ಎರಡು ಹಾಡು ಚೆನ್ನಾಗಿವೆ. ಛಾಯಾಗ್ರಹಣ ಇಡೀ ಚಿತ್ರದ ಅಂದವನ್ನು ಹೆಚ್ಚಿಸಿದೆ.

Categories
ಸಿನಿ ಸುದ್ದಿ

ಸಿದ್ಲಿಂಗು ಕಾರುಬಾರು ಸಖತ್ ಗುರೂ!

ಚಿತ್ರ: ಸಿದ್ಲಿಂಗು 2
ನಿರ್ದೇಶನ: ವಿಜಯಪ್ರಸಾದ್
ನಿರ್ಮಾಣ: ಶ್ರೀ ಹರಿ, ರಾಜು ಶೇರಿಗಾರ್
ತಾರಾಗಣ: ಲೂಸ್ ಮಾದ ಯೋಗಿ, ಸೋನು ಗೌಡ, ಬಿ ಸುರೇಶ, ಸುಮನ್ ರಂಗನಾಥ್‌, ಪದ್ಮಜಾ ರಾವ್, ಸೀತಾ ಕೋಟೆ, ಮಂಜುನಾಥ್ ಹೆಗಡೆ ಇತರರು.

ಮಂಗಳ ಅಂದರೆ ಜೀವ. ಜೀವನೇ ಇರದ ಮುಖ ಹೇಗೆ ನೋಡಲಿ…
ಸಿದ್ಲಿಂಗು ಈ ರೀತಿ ಹೇಳುವ ಮೂಲಕ ಕಥೆ ಶುರುವಾಗುತ್ತೆ. ನೋಡುಗರು ಈ ಸಿದ್ಲಿಂಗು ಮೇಲೆ ನಿರೀಕ್ಷೆ ಇಟ್ಟುಕೊಂಡು ಬಂದರೆ ಮೋಸ ಆಗಲ್ಲ. ಈ ಬಾರಿ ನಿರ್ದೇಶಕರ ಮೂಲ ಆಶಯ ತಲುಪಿದೆ. ಸಿದ್ಲಿಂಗು ಚಿತ್ರದಲ್ಲಿ ನಿರ್ದೇಶಕರು ಇಷ್ಟವಾಗಿದ್ದರು. ಆದರೆ, ಒಂದಷ್ಟು ಡಬ್ಬಲ್ ಮೀನಿಂಗ್ ಮಾತುಗಳಿಂದ ಅದು ಬೇಕಿತ್ತಾ ಎಂಬ ಪ್ರಶ್ನೆಗೂ ಕಾರಣರಾಗಿದ್ದರು. ಆದರೆ, ಸಿದ್ಲಿಂಗು 2 ಸಿನಿಮಾದಲ್ಲಿ ವಿಜಯ ಪ್ರಸಾದ್ ಅವರು ಸಂಪೂರ್ಣ ಬದಲಾಗಿದ್ದಾರೆ ಅಂತಾನೇ ಹೇಳಬಹುದು. ಅದಕ್ಕೆ ಕಾರಣ, ಅವರು ಮುಂದುವರೆಸಿರುವ ಗಟ್ಟಿ ಕಥೆ. ಕಟ್ಟಿಕೊಟ್ಟಿರುವ ಚಿತ್ರಣ. ಮಾತುಗಳಲ್ಲಿರುವ ಹಿಡಿತ. ಹಾಗಾಗಿ ಒಂದೊಳ್ಳೆಯ ಸಿನಿಮಾ ಕೊಡಬೇಕೆಂಬ ಅವರ ಆಶಯ ಇಲ್ಲಿ ಈಡೇರಿದಂತಿದೆ.

ಮುಖ್ಯವಾಗಿ ಇಲ್ಲಿ ಗಮನಿಸಬೇಕಾದ್ದು ಅವರ ಚಿತ್ರಕಥೆ. ಅದು ಸುಮ್ಮನೆ ನೋಡಿಸಿಕೊಂಡು ಹೋಗುತ್ತೆ. ಇಲ್ಲೂ ತಮಾಷೆ ಇದೆ, ಹೇರಳ ಮಾತುಗಳೂ ಇವೆ. ಆದರೆ, ಅವ್ಯಾವು ಅಪಾರ್ಥ ತರುವುದಿಲ್ಲ. ಅಶ್ಲೀಲ ಎನಿಸುವುದಿಲ್ಲ. ಡಬ್ಬಲ್ ಮೀನಿಂಗ್ ಅಲ್ಲೇ ಅಲ್ಲ. ಆದರೂ, ಪಾತ್ರಗಳ ಮೂಲಕ ಹೊರಬರುವ ಮಾತುಗಳಲ್ಲಿ ನಗುವಿದೆ. ಅಲ್ಲಲ್ಲಿ ಅಪಹಾಸ್ಯವೂ ಇದೆ. ಹಾಗಾಗಿ ಈ ಚಿತ್ರ ನೋಡುಗರಿಗೆ ಸಂಪೂರ್ಣ ರುಚಿಸುತ್ತೆ. ಇಲ್ಲೂ ವಿಶಾಲು, ಮಿಣಿ ಮಿಣಿ, ಮುಕುಂದರಾಯ, ಅಮವಾಸ್ಯೆ ಆನಂದ ಹೀಗೆ ಒಂದಷ್ಟು ವಿಶೇಷ ಎನಿಸುವ ಪಾತ್ರಗಳು ಗಮನಸೆಳೆಯುತ್ತವೆ. ಅಲ್ಲಿ ಮಂಗಳಾ ಟೀಚರ್ ಇದ್ದರು. ಇಲ್ಲಿ ನಿವೇದಿತಾ ಎಂಬ ಹೊಸ ಟೀಚರ್ ಬಂದಿದ್ದಾರೆ. ಇಲ್ಲೂ ಅವರ ಕನಸಿನ ಕಾರು ಇದೆ. ಆದರೆ, ಈ ಸಲ ಆ ಕಾರು ತಮ್ಮದಾಗಿಸಿಕೊಳ್ತಾರ ಸಿದ್ಲಿಂಗು ಅನ್ನುವ ಕುತೂಹಲವಿದ್ದರೆ ಒಮ್ಮೆ ಸಿನಿಮಾ ನೋಡಬಹುದು.

ಮೊದಲರ್ಧ ಸುಮ್ಮನೆ ನೋಡಿಸಿಕೊಂಡು ಹೋಗುವ ಸಿನಿಮಾದಲ್ಲಿ ಮಜವೆನಿಸುವ ದೃಶ್ಯಗಳಿವೆ. ಡೈಲಾಗ್ ಇವೆ. ತರಹೇವಾರಿ ಪಾತ್ರಗಳೂ ಇವೆ. ಇಲ್ಲಿ ಮೈಸೂರನ್ನು ಸೊಗಸಾಗಿ ತೋರಿಸಿರುವ ಪ್ರಯತ್ನ ಸಫಲವಾಗಿದೆ. ಎಲ್ಲೂ ಬೋರ್ ಎನಿಸದೆ, ಡೈಲಾಗ್ ಮೂಲಕವೇ ಹೂರಣ ತಿಂದಷ್ಟೇ ಖುಷಿಪಡಿಸಿದ್ದಾರೆ ನಿರ್ದೇಶಕರು. ಆದರೆ, ಸಿನಿಮಾದಲ್ಲಿ ಹಾಡುಗಳು ಗುನುಗುವಂತಿಲ್ಲ. ಇಲ್ಲಿ ಅನೂಪ್ ಸೀಳಿನ್ ಅವರು ಹೆಚ್ಚು ಗಮನಸೆಳೆದಿಲ್ಲ. ಹಿನ್ನೆಲೆ ಸಂಗೀತಕ್ಕೆ ಇನ್ನಷ್ಟು ಹೆಚ್ಚು ಒತ್ತು ಕೊಡಬಹುದಿತ್ತು. ನಿರ್ದೇಶಕರು ಇಲ್ಲಿ ಒಂದು ಜಾಣತನ ಮೆರೆದಿದ್ದಾರೆ. ಅದೇನೆಂದರೆ, ಪ್ರತಿ ಪಾತ್ರಗಳಲ್ಲೂ ಆಗಾಗ ಒಂದಷ್ಟು ರಾಜಕಾರಣಿಗಳು, ಸಿನಿಮಾ ನಟರು, ಕ್ರಿಕೆಟಿಗರು ಬಂದು ಹೋಗುತ್ತಾರೆ. ಇಲ್ಲಿ ಸಿದ್ಧರಾಮಯ್ಯ, ಡಿ.ಕೆ.ಶಿವಕುಮಾರ್, ಶಿವಣ್ಣ, ಪೂಜಾಗಾಂಧಿ, ರಮ್ಯಾ, ಟೈಗರ್ ಪ್ರಭಾಕರ್, ಮುನಿರತ್ನ, ಪಬ್ಲಿಕ್ ಟಿವಿ ರಂಗಣ್ಣ ಹೀಗೆ ಒಂದಷ್ಟು ಖ್ಯಾತನಾಮರ ಹೆಸರುಗಳು ಬಂದು ಹೋಗುತ್ತವೆ. ಸಂದರ್ಭಕ್ಕೆ ನಗುವನ್ನೂ ತರಿಸುತ್ತವೆ. ಯಾಕೆ ಅನ್ನುವುದನ್ನು ಸಿನಿಮಾದಲ್ಲೇ ನೋಡಬೇಕು. ಇನ್ನು ಕೆಲವು ಕಡೆ ಎಮೋಷನಲ್ ಕೂಡ ಇದೆ. ಪ್ರೀತಿಯ ಜೊತೆ, ಭಾವುಕತೆ ಎನಿಸುವ ದೃಶ್ಯಗಳಿವೆ. ಅದು ಸಿನಿಮಾದ ಮತ್ತೊಂದು ಪ್ಲಸ್ ಎನ್ನಬಹುದು.

ಸಿನಿಮಾ ಕಥೆ ಸರಳವಾಗಿದೆ. ಎಲ್ಲೂ ಅದ್ಧೂರಿತನ ಎಂಬುದಿಲ್ಲ. ನೀಟ್ ಆಗಿ ನೋಡಿಸಿಕೊಂಡು ಹೋಗುವ ಸಿನಿಮಾ ಇದು. ವಿನಾಕಾರಣ ದೃಶ್ಯಗಳಿಲ್ಲ. ಅನಗತ್ಯ ಕಿರಿ ಕಿರಿ ಎನಿಸುವ ಮಾತುಗಳಿಲ್ಲ. ಆದರೆ, ಭಾವುಕತೆಯನ್ನು ಮತ್ತಷ್ಟು ಗಟ್ಟಿಯಾಗಿ ಕಟ್ಟಿಕೊಡಬಹುದಿತ್ತು. ಅದಿ್ಲ್ಲಿ ಅಷ್ಟಾಗಿ ವರ್ಕೌಟ್ ಆಗಿಲ್ಲ. ಸಿನಿಮಾದಲ್ಲಿ ಹುಡುಕಿದರೆ ಸಣ್ಣಪುಟ್ಟ ಮೈನಸ್ ಅಂಶಗಳಿವೆಯಾದರೂ, ಪ್ರತೀ ದೃಶ್ಯಗಳಲ್ಲಿ ಹಾಸ್ಯ ಹಿಡಿದಿಟ್ಟುಕೊಂಡಿರುವುದರಿಂದ ಅವೆಲ್ಲವೂ ಮಾಯವಾಗುತ್ತವೆ. ಒಟ್ಟಾರೆ, ಒಂದು ನೀಟ್ ಸಿನಿಮಾ ಇದಾಗಿದ್ದು, ಕೊಟ್ಟ ಕಾಸಿಗೆ ಮೋಸ ಆಗಲ್ಲ.

ಯೋಗಿ ಇಲ್ಲಿ ನಿಜಕ್ಕೂ ಹೈಲೆಟ್ ಆಗಿದ್ದಾರೆ. ಮೊದಲ ಸಿದ್ಲಿಂಗು ಸಿನಿಮಾದಲ್ಲಿ ಅವರ ತುಂಟತನ ಜಾಸ್ತಿ ಇತ್ತು. ಪೋಲಿ ಎನಿಸುವ ಮಾತುಗಳಿದ್ದವು. ಆದರೆ, ಇಲ್ಲಿ ಅದು ಕಮ್ಮಿ. ಒಂದಷ್ಟು ಪ್ರಬುದ್ಧರಾಗಿದ್ದಾರೆ. ಆ ಮೂಲಕ ಎಲ್ಲರಿಗೂ ಇಷ್ಟವಾಗುತ್ತಾರೆ. ಸೋನು ಗೌಡ ಅವರಿಲ್ಲಿ ನಿವೇದಿತಾ ಟೀಚರ್ ಆಗಿ ಇಷ್ಟವಾಗುತ್ತಾರೆ. ಸಿದ್ಲಿಂಗು ಕನಸಿಗೆ ಬಣ್ಣ ತುಂಬುವ ಹುಡುಗಿಯಾಗಿ ಸೈ ಎನಿಸಿಕೊಂಡಿದ್ದಾರೆ. ಬಿ.ಸುರೇಶ ಅವರ ಎಂದಿನ ಗತ್ತಿನ ನಟನೆ ಇಲ್ಲೂ ಮುಂದುವರೆದಿದೆ. ಮುಖ್ಯವಾಗಿ ಇಲ್ಲಿ ಪದ್ಮಜಾರಾವ್ ಗಮನಸೆಳೆದಿದ್ದಾರೆ. ಸುಮನ್ ರಂಗನಾಥ್ ಇಲ್ಲೂ ಇದ್ದಾರೆ. ಇರುವಷ್ಟು ಕಾಲ ಇಷ್ಟವಾಗುತ್ತಾರೆ. ಮಂಜುನಾಥ್ ಹೆಗಡೆ ನಟನೆ ಇಲ್ಲಿ ಆಕರ್ಷಣೆ ಎನಿಸುತ್ತೆ. ಮಹಾಂತೇಶ್ ಹಿರೇಮಠ ಇತರರು ಸಿಕ್ಕ ಪಾತ್ರಕ್ಕೆ ಮೋಸ ಮಾಡಿಲ್ಲ. ಇಲ್ಲಿ ನಿರ್ದೇಶಕರೂ ಇದ್ದಾರೆ. ಅದನ್ನು ಸಿನಿಮಾದಲ್ಲೇ ನೋಡಿ ಜೈ ಎನ್ನಬೇಕು.

Categories
ಸಿನಿ ಸುದ್ದಿ

ಚಿತ್ರ ವಿಮರ್ಶೆ: ಕಾಡುವ ನೋಡುವ ಪ್ರೇಮಕಥೆ

ಚಿತ್ರ: ಭುವನಂ ಗಗನಂ
ನಿರ್ಮಾಣ:ಎಂ.ಮುನೇಗೌಡ
ನಿರ್ದೇಶನ:ಗಿರೀಶ್ ಮೂಲಿಮನಿ
ತಾರಾಗಣ:ಪ್ರಮೋದ್, ಪೃಥ್ವಿ ಅಂಬರ್, ರೇಚಲ್ ಡೇವಿಡ್, ಶರತ್ ಲೋಹಿತಾಶ್ವ, ಅಚ್ಯುತ್​ ಕುಮಾರ್, ಪೊನ್ನು ಅಶ್ವತಿ ಇತರರು.

ನೀವು ಎಲ್ಲಿಗೆ ಹೋಗೋದು?
ನಾನು ಕನ್ಯಾಕುಮಾರಿಗೆ ಹೋಗ್ತಾ ಇದೀನಿ…
ನಾನು ಅಲ್ಲಿಗೇ ಬರ್ತೀನಿ…

ಸಿನಿಮಾ ಶುರುವಾದ ಸ್ವಲ್ಪ ಹೊತ್ತಿಗೆ ಬರುವ ಆ ಇಬ್ಬರ ನಡುವಿನ ಸಂಭಾಷಣೆ ಇದು. ಅವರಿಬ್ಬರೂ ಕನ್ಯಾಕುಮಾರಿಯತ್ತ ಪಯಣ ಬೆಳೆಸುತ್ತಾರೆ. ಆ ಜರ್ನಿ ನಡುವೆ ಅವರಿಬ್ಬರ ಮಾತು, ತುಂಟತನ, ಎಮೋಷನ್, ನಗು, ಅಳು ಎಲ್ಲವೂ ಮೇಳೈಸುತ್ತಲೇ ನೋಡುಗರನ್ನು ಭಾವುಕತೆಗೆ ದೂಡುತ್ತಾ ಹೋಗುತ್ತೆ. ಸಿನಿಮಾದ ಕಥೆ ತುಂಬಾ ಸಿಂಪಲ್. ಆದರ, ಅದರ ಆಶಯ ಹೊಸದಾಗಿದೆ. ಪ್ರೀತಿ ಮಾಡುವುದು ದೊಡ್ಡದ್ದಲ್ಲ. ಅದನ್ನು ಕೊನೆಯವರೆಗೆ ಉಳಿಸಿಕೊಳ್ಳೋದು ದೊಡ್ಡದು ಅನ್ನುವ ಸಾರಾಂಶ ಇಲ್ಲಿದೆ. ಇದೊಂದು ಮನಸ್ಸಿಗೆ ನಾಟುವ ಲವ್ ಸ್ಟೋರಿ. ಇಲ್ಲಿ ಇಬ್ಬರು ಹೀರೋಗಳಿದ್ದಾರೆ. ಅವರಿಬ್ಬರಿಗೂ ಒಬ್ಬೊಬ್ಬ ನಾಯಕಿಯರಿದ್ದಾರೆ. ಇಬ್ಬರದೂ ಲವ್ ಸ್ಟೋರಿ ಇದೆ. ಆ ಎರಡು ಲವ್ ಸ್ಟೋರಿ ಟ್ರಾಕ್ ಮಾತ್ರ ಬೇರೆ ಬೇರೆ. ಕೊನೆಯವರೆಗೂ ಅವರಿಬ್ಬರ ಪ್ರೇಮಕಥೆ ಕಾಡುತ್ತೆ, ಅಲ್ಲಲ್ಲಿ ಅಳಿಸುತ್ತೆ, ಕೊಂಚ ಭಾವನಾಲೋಕಕ್ಕೆ ದೂಡುತ್ತೆ. ಅಷ್ಟಕ್ಕೂ ಅವರಿಬ್ಬರ ಲವ್ ಎಂಥದ್ದು ಅನ್ನುವುದಕ್ಕೆ ಒಮ್ಮೆ ಸಿನಿಮಾ ನೋಡಲ್ಲಡ್ಡಿಯಿಲ್ಲ.

ಇಲ್ಲಿ ಆಳವಾದ ಪ್ರೀತಿ ಇದೆ. ಒರಟುತನದೊಳಗಿನ ಮೃದುಧೋರಣೆಯ ಮನಸ್ಸಿದೆ. ಮುಗ್ಧತೆ ಇದೆ. ದಡ್ಡತನವಿದೆ. ಜಾಣತನವೂ ಇದೆ. ಒಟ್ಟಾರೆ. ಇಡೀ ಸಿನಿಮಾ ಮುದ ಕೊಡುವಂತಹ ವಾತಾವರಣ ಸೃಷ್ಟಿಸುತ್ತೆ ಅನ್ನುವುದರಲ್ಲಿ ಎರಡು ಮಾತಿಲ್ಲ. ಪ್ರೀತಿಯ ಕಥೆಗಳಿಗೆ ಅದರದ್ದೇ ಆದ ಶಕ್ತಿ ಇರುತ್ತೆ. ಅಂಥದ್ದೊಂದು ಶಕ್ತಿ, ಸೆಳೆತ ಈ ಕಥೆಯಲ್ಲಿದೆ. ನಿರ್ದೇಶಕರ ನಿರೂಪಣೆಯಲ್ಲಿ ಇನ್ನಷ್ಟು ಬಿಗಿ ಹಿಡಿತ ಬೇಕಿತ್ತು. ಅದನ್ನು ಹೊರತು ಪಡಿಸಿದರೆ ಚಿತ್ರಕಥೆಯ ವೇಗ ಸಿನಿಮಾವನ್ನು ನೋಡುವಂತೆ ಮಾಡಿದೆ. ಉಳಿದಂತೆ ಚಿತ್ರದುದ್ದಕ್ಕೂ ಬರುವ ಕೆಲ ಟ್ವಿಸ್ಟುಗಳು ಸಿನಿಮಾದ ಹೈಲೆಟ್ ಅನ್ನಬಹುದು. ಇಲ್ಲೂ ಕೆಲವು ಅನಗತ್ಯ ದೃಶ್ಯಗಳಿವೆ. ಅದನ್ನು ಬದಿಗೊತ್ತಿ ನೋಡಿದರೆ, ಸಿನಿಮಾ ಆಪ್ತವಾಗುತ್ತ ಹೋಗುತ್ತದೆ.

ಕಥೆ ಏನು?

ನಾಯಕ ಅಭಿ (ಪ್ರಮೋದ್) ಓದುವ ಕಾಲೇಜಿನಲ್ಲೇ ನಾಯಕಿ ರಚೇಲ್ ಡೇವಿಡ್ ಇರ್ತಾಳೆ. ಆಕೆಯನ್ನು ನೋಡಿದ ಕೂಡಲೇ ಅವನು ನೇರವಾಗಿ ಮದ್ವೆ ಆಗ್ತೀಯಾ ಅಂತ ಕೇಳ್ತಾನೆ. ಇಬ್ಬರ ನಡುವೆ ಪ್ರೀತಿ ಹುಟ್ಟುತ್ತೆ. ಅದು ಮದ್ವೆಗೂ ತಿರುಗುತ್ತೆ. ಎಲ್ಲಾ ಪ್ರೇಮಿಗಳ ಕಥೆಯಲ್ಲಿ ಅಪ್ಪಂದಿರೇ ವಿಲನ್. ಇಲ್ಲೂ ನಾಯಕಿಯ ಅಪ್ಪನೇ ವಿಲನ್. ಅವರ ವಿರೋಧದ ನಡುವೆಯೂ ಮದ್ವೆ ಆಗುತ್ತೆ. ಆ ಮದ್ವೆ ಕೊನೆಯವರೆಗೆ ಉಳಿಯುತ್ತಾ ಇಲ್ಲವಾ ಅನ್ನೋದೇ ಒಂದು ಕಥೆ. ಇದು ಒಂದು ಜೋಡಿಯ ಕಥೆಯಾದರೆ, ಇನ್ನೊಂದು ಜೋಡಿಯ ಕಥೆ ಇದಕ್ಕಿಂತಲೂ ಭಿನ್ನ. ಅವನ ಹೆಸರು ರಾಮ್. ತುಂಬ ಮುಗ್ಧ, ಒಂದು ರೀತಿ ಜಾಣದಡ್ಡ! ಬಾಲ್ಯದಲ್ಲಿ ಸಿಗುವ ಗೆಳತಿ ಜೊತೆ ಹೆಚ್ಚು ಒಡನಾಟ. ಯೌವ್ವನಕ್ಕೆ ಬರುವ ಹೊತ್ತಿಗೆ ಇಬ್ಬರ ನಡುವೆ ಚಿಗುರಿದ ಪ್ರೀತಿ. ಆ ಪ್ರೀತಿ ಮೇಲೆ ಒಬ್ಬನ ಕಣ್ಣು. ಈ ಮಧ್ಯೆ ಅವರಿಬ್ಬರ ಪ್ರೀತಿ ಉಳಿಯುತ್ತಾ ಇಲ್ಲವಾ ಅನ್ನೋದು ಕಥೆ. ಇಲ್ಲಿ ಎಮೋಷನಲ್ ಅಂಶಗಳು ತುಂಬಿರುವುದರಿಂದ ನೋಡುಗರ ಕಣ್ಣು ಒದ್ದೆ ಮಾಡುತ್ತದೆ. ಎಲ್ಲೋ ಒಂದು ಕಡೆ ಸಿನಿಮಾದ ವೇಗ ಕಮ್ಮಿ ಆಯ್ತು ಅನ್ನುವ ಹೊತ್ತಿಗೆ ಹಾಡು, ಫೈಟು ಎದುರಾಗಿ ವೇಗಮಿತಿ ಹೆಚ್ಚುತ್ತದೆ. ಒಂದು ನವಿರಾದ ಲವ್ ಸ್ಟೋರಿಯನ್ನು ತುಂಬಾ ಭಾವನಾತ್ಮಕವಾಗಿ ಕಟ್ಟಿಕೊಡುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ. ಎರಡು ಲವ್ ಸ್ಟೋರಿ ಇಲ್ಲಿದ್ದರೂ, ಎರಡಕ್ಕೂ ತನ್ನದೇ ಆದ ಗಟ್ಟಿತನವಿದೆ. ನೋಡುಗರನ್ನು ಅತ್ತಿತ್ತ ಅಲ್ಲಾಡಿಸದಂತೆ ನೋಡಿಸಿಕೊಂಡು ಹೋಗುವ ತಾಕತ್ತು ಈ ಸ್ಟೋರಿಗಿದೆ.

ಸಿನಿಮಾದಲ್ಲಿ ಪ್ರಮೋದ್ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಒರಟು ಪಾತ್ರವಾದರೂ, ಅಲ್ಲಲ್ಲಿ ಪಾಪ ಎನಿಸುವಷ್ಟರ ಮಟ್ಟಿಗೆ ಇಷ್ಟವಾಗುತ್ತಾರೆ. ಅವರ ಡೈಲಾಗ್ ಡಿಲವರಿ, ಬಾಡಿಲಾಂಗ್ವೇಜ್ ಎರಡರಲ್ಲೂ ಸೈ ಎನಿಸಿಕೊಂಡಿದ್ದಾರೆ. ಫೈಟ್ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಇನ್ನು ಪೃಥ್ವಿ ಅಂಬರ್ ಅವರ ಪಾತ್ರ ವಿಶೇಷ ಎನಿಸುತ್ತೆ. ಪೃಥ್ವಿ ಆ ಪಾತ್ರವನ್ನು ಜೀವಿಸಿದ್ದಾರೆ. ನೋಡುಗರಿಗೂ ಇಷ್ಟವಾಗುತ್ತಾರೆ. ಉಳಿದಂತೆ ರಚೇಲ್ ಡೇವಿಡ್ ಅಂದವಾಗಿರುವಷ್ಟೇ ಪಾತ್ರವನ್ನು ಕಟ್ಟಿಕೊಟ್ಟಿದ್ದಾರೆ. ಅಶ್ವತಿ ಪಾತ್ರದ ಮೂಲಕ ಗಮನಸೆಳೆಯುತ್ತಾರೆ. ಉಳಿದಂತೆ ಇಲ್ಲಿ ಶರತ್ ಲೋಹಿತಾಶ್ವ ಮತ್ತು ಅಚ್ಯುತ್ ಕುಮಾರ್ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.
ಸಿನಿಮಾದಲ್ಲಿ ಎರಡು ಹಾಡು ಗುನುಗುವಂತಿದೆ. ಹಿನ್ನೆಲೆ ಸಂಗೀತಕ್ಕಿನ್ನೂ ಧಮ್ ಇರಬೇಕಿತ್ತು. ಛಾಯಾಗ್ರಹಣದಲ್ಲಿ ಸೊಬಗಿದೆ.

Categories
ಸಿನಿ ಸುದ್ದಿ

ಪ್ರೀತಿಸಿದರೆ ರಾಮ! ಕೆಣಕಿದರೆ ರಾವಣ!!

ವಿಜಯ್ ಭರಮಸಾಗರ

ಚಿತ್ರ:ಗಜರಾಮ
ನಿರ್ದೇಶನ: ಸುನೀಲ್ ಕುಮಾರ್
ನಿರ್ಮಾಣ: ನರಸಿಂಹಮೂರ್ತಿ
ತಾರಾಗಣ: ರಾಜ್ ವರ್ಧನ್, ತಪಸ್ವಿನಿ ಪೊಣಚ್ಚ, ಸ್ವಾತಿ, ಶರತ್ ಲೋಹಿತಾಶ್ವ, ದೀಪಕ್, ಕಬೀರ್, ಬಲರಾಜವಾಡಿ ಇತರರು.

ನಾನು ಸವಾಲು ಹಾಕಲ್ಲ. ಸವಾಲು ಹಾಕಿದವರನ್ನ ಸೋಲಿಸೋವರೆಗೂ ಬಿಡೋದಿಲ್ಲ… ಈ ಸಿನಿಮಾ ನಾಯಕ ರಾಮ ಈ ಡೈಲಾಗ್ ಹೇಳುವ ಹೊತ್ತಿಗೆ ಅಲ್ಲೊಂದು ಅಖಾಡ ಸಿದ್ಧವಾಗಿರುತ್ತೆ. ಈ ಡೈಲಾಗ್ ಅರ್ಥ ಮಾಡಿಕೊಂಡವರಿಗೆ ಇದೊಂದು ಪಕ್ಕಾ ಕಮರ್ಷಿಯಲ್ ಸಿನಿಮಾ ಅನ್ನೋದು ಅರ್ಥವಾಗುತ್ತೆ. ಇದು ತೀರ ಸರಳ ಕಥೆ. ಹಾಗಂತ ಹಿಂದೆಂದೂ ಈ ರೀತಿಯ ಕಥೆಗಳು ಬಂದಿಲ್ಲ ಅಂದುಕೊಳ್ಳುವಂತಿಲ್ಲ. ಎಲ್ಲೋ ಒಂದಷ್ಟು ಬೇರೆ ಬೇರೆಯ ಛಾಯೆ ಅಲ್ಲಲ್ಲಿ ಕಾಣಸಿಗುತ್ತಾದರೂ, ಸಿನಿಮಾದ ನಿರೂಪಣೆ ಇಷ್ಟವಾಗುತ್ತೆ. ಕಥೆಯನ್ನು ಕಟ್ಟಿಕೊಟ್ಟಿರುವ ನಿರ್ದೇಶಕರ ಜಾಣತನ ಗಮನಸೆಳೆಯುತ್ತೆ. ಎರಡು ತಾಸು ಎಲ್ಲೂ ಬೋರ್ ಎನಿಸದೆ, ನೋಡುಗರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಚಿತ್ರ ಯಶಸ್ವಿ ಅನ್ನಬಹುದು. ಕೆಲವು ದೃಶ್ಯಗಳು ಅನಗತ್ಯ ಎನಿಸುತ್ತವೆ. ಅದಕ್ಕೆ ಕತ್ತರಿ ಬಿದ್ದರೆ ಸಿನಿಮಾ ಇನ್ನಷ್ಟು ಸಲೀಸಾಗಿ ನೋಡಿಸಿಕೊಂಡು ಹೋಗುತ್ತೆ.

ನಿರ್ದೇಶಕರ ಮೊದಲ ಪ್ರಯತ್ನ ಇದಾಗಿರುವುದರಿಂದ ಸಣ್ಣ ಪುಟ್ಟ ದೋಷಗಳು ಸಹಜ. ಅವೆಲ್ಲವನ್ನು ಪಕ್ಕಕ್ಕಿಟ್ಟು ನೋಡುವುದಾದರೆ, ಒಂದೊಮ್ಮೆ ಸಿನಿಮಾ ನೋಡಲು ಅಡ್ಡಿಯಿಲ್ಲ. ಇಲ್ಲಿ ಪ್ರೀತಿ ಇದೆ. ತಾಯಿ ಸಂಬಂಧವಿದೆ. ಸಣ್ಣ ಅಪಾರ್ಥವಿದೆ. ಚೂರು ಗೆಳೆತನವಿದೆ. ಆಸೆ, ಕನಸು, ಗುರಿ ಇವೆಲ್ಲವೂ ಮೇಳೈಸಿ ಗಜರಾಮನಿಗೆ ಇನ್ನಷ್ಟು ಬಲ ಕೊ್ಟ್ಟಿವೆ ಎನ್ನಬಹುದು. ಮೊದಲರ್ಧ ಸಾಧನೆಯ ಬೆನ್ನೇರಿ ಹೊರಡುವ ನಾಯಕ, ದ್ವಿತಿಯಾರ್ಧ ಆ ಸಾಧನೆಯ ಹಿಂದೆ ಹೋಗೋದು ಬಿಟ್ಟು ಬೇರೆಡೆ ಮುಖ ಮಾಡುತ್ತಾನೆ. ಹಾಗಂತ ಅವನ ಬದುಕಿನ ಸಾಧನೆಗಿಂತಲೂ ಬೇರೆ ವಿಷಯ ದೊಡ್ಡದಾ ಅನ್ನುವ ಪ್ರಶ್ನೆ ಎದುರಾಗುತ್ತೆ. ಹಾಗಾದರೆ, ತನ್ನ ಗುರಿ ಬಿಟ್ಟು ಬೇರೆಲ್ಲೋ ಹೋಗುವ ಹೀರೋ, ತನ್ನ ಗುರಿ ತಲುಪುತ್ತಾನೋ ಇಲ್ಲವೋ ಅನ್ನೋದೇ ಕಥೆ. ಆ ಕುತೂಹಲವಿದ್ದರೆ ಸಿನಿಮಾ ನೋಡಬಹುದು.

ಆರಂಭದಲ್ಲಿ ಸಿನಿಮಾ ಟೇಕಾಫ್ ಆಗೋಕೆ ಕೊಂಚ ಸಮಯ ಪಡೆದುಕೊಳ್ಳುತ್ತೆ. ಎಲ್ಲೋ ಒಂದು ಕಡೆ ಸಿನಿಮಾ ವೇಗಮಿತಿ ಕಡಿಮೆ ಆಯ್ತು ಅಂದುಕೊಳ್ಳುತ್ತಿದ್ದಂತೆಯೇ ಒಂದಷ್ಟು ಫೈಟ್ ಮತ್ತು ಹಾಡು ಎದುರಾಗಿ ಸಿನಿಮ ಕಥೆಯ ಓಟ ತಹಬದಿಗೆ ಬಂದು ನಿಲ್ಲುತ್ತೆ. ಇಲ್ಲಿ ಪ್ರೀತಿಯ ಜೊತೆ ಫೈಟ್ ಸನ್ನಿವೇಶಗಳೇ ಹೆಚ್ಚಾಗಿ ಗಮನಸೆಳೆಯುತ್ತವೆ. ಎಷ್ಟು ಬೇಕೋ ಅಷ್ಟು ಹಾಸ್ಯವಿದೆ. ರುಚಿಗೆ ತಕ್ಕಷ್ಟು ಉಪ್ಪು ಹೇಗಿರಬೇಕೋ ಅಷ್ಟೇ ತಾಯಿ ಸೆಂಟಿಮೆಂಟ್ ಕೂಡ ಇದೆ. ಅದನ್ನು ಇನ್ನಷ್ಟು ಗಟ್ಟಿಗೊಳಿಸಲು ಸಾಧ್ಯವಿತ್ತು. ಉಳಿದಂತೆ ಇದೊಂದು ಕುಸ್ತಿಪಟುವಿನ ಕಥೆ. ಹಾಗಾಗಿ ಕುಸ್ತಿಯ ಅಖಾಡ, ಪೈಲ್ವಾನ್ ಗಳ ಅಬ್ಬರ, ಕುಸ್ತಿಯ ಚಾಂಪಿಯನ್ ಶಿಪ್ ಎಲ್ಲವೂ ಸಿನಿಮಾದ ತೂಕವನ್ನು ಹೆಚ್ಚಿಸಿದೆ. ಕಾಸು ಕೊಟ್ಟು ಒಳಬರುವ ಪ್ರೇಕ್ಷಕನಿಗೆ ಮೋಸವಂತೂ ಇಲ್ಲ. ಒಂದು ಮನರಂಜನೆಗೆ ಏನೆಲ್ಲಾ ಇರಬೇಕೋ ಅವೆಲ್ಲವೂ ಇಲ್ಲಿವೆ.

ಕಥೆ ಏನು?
ಅದೊಂದು ಗ್ರಾಮ. ಆ ಊರಲ್ಲೊಬ್ಬ ಗಟ್ಟಿಮುಟ್ಟಾದ ಯುವಕ. ಹೆಸರು ರಾಮ. ಅಮ್ಮ ಮಗನ ಬಾಂಧವ್ಯ ಜೊತೆ ಜೊತೆಗೆ ಅಲ್ಲಿ ಕುಸ್ತಿಯ ಛಾಯೆಯೂ ಇದೆ. ಆ ಊರಲ್ಲೊಬ್ಬ ಉಸ್ತಾದ್. ಗಟ್ಟಿಮುಟ್ಟಾದ ಯುವಕರ ತಂಡ ಕಟ್ಟಿಕೊಂಡು ಗರಡಿ ಮನೆಯಲ್ಲಿ ಕುಸ್ತಿ ಕಲಿಸಿಕೊಡುವಾತ. ಅಂತಹ ಗರಡಿ ನಡೆಸುವ ಉಸ್ತಾದ್ ಕಣ್ಣಿಗೆ ರಾಮ ಬೀಳುತ್ತಾನೆ. ರಾಮನ ಕುಸ್ತಿ ಹೇಗೆಂದರೆ, ಅವನು ಸುಮ್ನೆ ಅಖಾಡಕ್ಕೆ ಇಳಿಯೋದಿಲ್ಲ. ಅಖಾಡಕ್ಕಿಳಿದರೆ ಅವನೇ ಗೆಲುವಿನ ಪೈಲ್ವಾನ. ರಾಮ ಹೇಗೆಂದರೆ, ಬಾಲ್ಯದ ಗೆಳತಿಯನ್ನು ಯಾರು ನೋಡಬಾರದು, ಕೆಣಕಬಾರದು. ಹಾಗೇನಾದರೂ ಮಾಡಿದರೆ ಅಂತಹವರ ಪಾಲಿಗೆ ಅವನು ರಾಮನ ಬದಲು ರಾವಣ ಆಗುತ್ತಾನೆ. ಅತ್ತ ತನ್ನನ್ನು ಗೆಳತಿ ಪ್ರೀತಿಸುತ್ತಾಳೆ ಅಂದುಕೊಳ್ಳುವ ರಾಮನಿಗೆ ಬಿಗ್ ಶಾಕ್ ಆಗುತ್ತೆ. ಅದೇನೆಂಬುದನ್ನು ಸಿನಿಮಾದಲ್ಲಿ ನೋಡಬೇಕು. ಇನ್ನು, ಆ ಉಸ್ತಾದ್ ಗೆ ಒಂದು ಆಸೆ. ಒಮ್ಮೆ ನ್ಯಾಷನಲ್ ಚಾಂಪಿಯನ್ ಶಿಪ್ ನಲ್ಲಿ ತನ್ನ ಶಿಷ್ಯ ಗೆಲ್ಲಬೇಕು ಅನ್ನೋದು. ಅವನ ಆಸೆಯನ್ನು ಆ ಗಜರಾಮ ಈಡೇರಿಸುತ್ತಾನಾ ಇಲ್ಲವಾ ಅನ್ನೋದೇ ಸಸ್ಪೆನ್ಸ್.

ರಾಜವರ್ಧನ್ ಅವರ ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ ಈ ಸಿನಿಮಾದ ಪಾತ್ರದಲ್ಲಿ ಫೋರ್ಸ್ ಇದೆ. ಪಾತ್ರವನ್ನು ನಿರ್ವಹಿಸಿದ್ದರ ಹಿಂದಿನ ಶ್ರಮ ಎದ್ದು ಕಾಣುತ್ತೆ. ಗಜರಾಮನಾಗಿ ಅವರು ಇಷ್ಟವಾಗುತ್ತಾರೆ. ಥೇಟ್ ಕುಸ್ತಿಪಟುವಾಗಿಯೇ ಕಾಣುವ ರಾಜವರ್ಧನ್, ಡ್ಯಾನ್ಸ್ ಮತ್ತು ಫೈಟ್ ನಲ್ಲೂ ಗಮನಸೆಳೆದಿದ್ದಾರೆ. ತಪಸ್ವಿನಿ ಸಿಕ್ಕ ಪಾತ್ರಕ್ಕೆ ತೃಪ್ತಿ ಪಟ್ಟಿದ್ದಾರೆ. ಪಾತ್ರವನ್ನು ಇನ್ನಷ್ಟು ಚೆನ್ನಾಗಿ ಕಟ್ಟಿಕೊಡಬಹುದಿತ್ತು. ಶರತ್ ಅಶ್ವತ್ಥ್ ಉಸ್ತಾದ್ ಆಗಿ ಇಷ್ಟವಾಗುತ್ತಾರೆ. ಕಬೀರ್ ವಿಲನ್ ಆಗಿ ಅಬ್ಬರಿಸಿದರೆ, ದೀಪಕ್ ಖಡಕ್ ಪೊಲೀಸ್ ಅಧಿಕಾರಿಯಾಗಿ ಸೈ ಎನಿಸಿಕೊಂಡಿದ್ದಾರೆ. ಉಳಿದಂತೆ ಬರುವ ಪಾತ್ರಗಳು ನ್ಯಾಯ ಒದಗಿಸಿವೆ.
ಮನೋಮೂರ್ತಿ ಅವರ ಸಂಗೀತದಲ್ಲಿ ಎಲ್ಲಾ ಹೇಳಬೇಕಿದೆ ಹಾಡು ಮತ್ತೆ ಸಾರಾಯಿ ಶಾಂತಮ್ಮ ಈ ಎರಡು ಹಾಡುಗಳು ಗುನುಗುವಂತಿವೆ. ಕೆ.ಎಸ್. ಚಂದ್ರಶೇಖರ್ ಅವರ ಕ್ಯಾಮೆರಾ ಕೈಚಳಕದಲ್ಲಿ ಗಜರಾಮನ ಅಂದವಿದೆ.

Categories
ಸಿನಿ ಸುದ್ದಿ

ದಮನಿತರ ಹೋರಾಟದ ನೈಜ ಚಿತ್ರಣ

ಚಿತ್ರ: ಬೇಗೂರು ಕಾಲೋನಿ
ನಿರ್ದೇಶಕ: ಫ್ಲೈಯಿಂಗ್ ಕಿಂಗ್ ಮಂಜು.
ನಿರ್ಮಾಣ: ಶ್ರೀನಿವಾಸ ಬಾಬು
ತಾರಾಗಣ: ರಾಜೀವ್ ಹನು, ಫ್ಲೈಯಿಂಗ್ ಕಿಂಗ್ ಮಂಜು, ಪಲ್ಲವಿ ಪರ್ವ, ಕೀರ್ತಿ ಭಂಡಾರಿ, ಪೋಸಾನಿ ಕೃಷ್ಣ ಇತರರು.

ಆ ಕಾಲೋನಿಗೆ ಯಾರೇ ಸಹಾಯಕ್ಕೆ ಬಂದ್ರೂ ಅಲ್ಲಿನ ಜನರಿಗೆ ಆ ರಾಘವ ದೇವರಿದ್ದಂತೆ. ಆತ ಯಾರಿಗೂ ಮೋಸ ಆಗೋಕೆ ಬಿಡಲ್ಲ. ಆದರೆ, ಅವನೇ ರಾಜಕೀಯ ಬಣ್ಣದ ಮಾತುಗಳಿಗೆ ಮೋಸ ಹೋಗ್ತಾನೆ. ವಾಸ್ತವ ಬದುಕಲ್ಲಿ ನಿಯತ್ತಿಗೆ ಬೆಲೆ ಸಿಗದೆ ಅಸಹಾಯಕನಾಗುವ ರಾಘವ ಲೈಫಲ್ಲಿ ನೂರೆಂಟು ವಿಘ್ನ ಎದುರಾಗುತ್ತವೆ. ಅವೆಲ್ಲವನ್ನೂ ಮೆಟ್ಟಿ ನಿಲ್ತಾನ? ಈ ಪ್ರಶ್ನೆಗೆ ಉತ್ತರ ಬೇಕಾದರೆ ಒಮ್ಮೆ ಸಿನಿಮಾ ನೋಡಬಹುದು.

ಇದೊಂದು ಕಾಲೋನಿ ಕಥೆ. ಅದರಲ್ಲೂ ಒಂದು ಹೋರಾಟದ ಕಥೆ. ಕಾಲೋನಿಯಲ್ಲಿರುವ ಮಧ್ಯಮ ವರ್ಗದ ಜನರ ಕಥೆಯೂ ಹೌದು. ಇಲ್ಲಿ ಹೋರಾಟ ನಡೆಯೋದು ಆಟದ ಮೈದಾನಕ್ಕಾಗಿ. ಅವರೆಲ್ಲರ ಹೋರಾಟಕ್ಕೆ ಜಯ ಸಿಗುತ್ತಾ ಅಥವಾ ಆ ಹೋರಾಟ ವ್ಯರ್ಥ ಆಗುತ್ತಾ ಅನ್ನೋದೇ ಕಥೆ.

ಉಳ್ಳವರ ಮಧ್ಯೆ ಕೊರಗುವವರ ವ್ಯಥೆ ಇಲ್ಲಿ ಹೈಲೆಟ್. ಬಡವರ ಮೇಲಿನ ದಬ್ಬಾಳಿಕೆ ದೌರ್ಜನ್ಯ ಸಿನಿಮಾದ ಪ್ರಮುಖ ಅಂಶ. ಜಾತಿ ಧರ್ಮ ದಾಟಿದ ರಾಘವ ಒಂದು ಕಡೆಯಾದರೆ, ಕಾಲೋನಿ ಜನರೇ ನನ್ನ ಆಸ್ತಿ ಅಂಬೇಡ್ಕರ್ ವಾದವೇ ನನ್ನ ಶಕ್ತಿ ಅಂತ ನಂಬಿರುವ ಶಿವ ಅಲಿಯಾಸ್ ಗಲ್ಲಿ ಶಿವ ಇನ್ನೊಂದು ಕಡೆ. ಇಬ್ಬರದೂ ಒಂದೇ ಯೋಚನೆ. ಇಬ್ಬರೂ ಆಪ್ತ ಗೆಳೆಯರು. ಆದರೆ ಗೆಳೆಯರ ಮಧ್ಯೆ ಸಣ್ಣ ವಿಷಯಕ್ಕೆ ಬಿರುಕು, ಇಬ್ಬರೂ ದೂರ ದೂರ. ಆಮೇಲೆ ಅವರ ಕನಸು ಈಡೇರುತ್ತಾ ಎಂಬ ಕುತೂಹಲ, ಪ್ರಶ್ನೆ ಇದ್ದರೆ ಕಾಲೋನಿಗೆ ಭೇಟಿ ಕೊಡಬಹುದು.

ಕಾಲೋನಿ ಮಂದಿಯ ಅಸಹಾಯಕತೆಗೆ ಪಾರವೇ ಇಲ್ಲ. ಅಲ್ಲಿರುವ ಶಿವನದು ಒಂದೇ ವಾಕ್ಯ, ಆಟದ ಮೈದಾನಕ್ಕೆ ರಕ್ತ ಸುರಿಸಬೇಕು ಇಲ್ಲ, ರಕ್ತ ಹರಿಸಬೇಕು. ಇದು ಅವನ ವಾದ.

ಮೊದಲರ್ಧ ನೋಡಿಸಿಕೊಂಡು ಹೋಗುತ್ತೆ. ದ್ವಿತಿಯಾರ್ಧ ಸ್ವಲ್ಪ ತಿರುವುಗಳೊಂದಿಗೆ ಹಲವು ಪ್ರಶ್ನೆಗಳಿಗೂ ಕಾರಣವಾಗುತ್ತೆ. ಸಿನಿಮಾದ ಸಂಕಲನ ವೇಗಕ್ಕೆ ಕಾರಣವಾಗಿದೆ. ಇನ್ನಷ್ಟು ಬಿಗಿ ನಿರೂಪಣೆ ಬೇಕಿತ್ತು. ಎಲ್ಲೋ ಒಂದು ಕಡೆ ತಮಿಳು ಸಿನಿಮಾಗಳ ಮೇಕಿಂಗ್ ನೆನಪಿಸುತ್ತೆ. ಕನ್ನಡದಲ್ಲಿ ಇಂತಹ ಪ್ರಯತ್ನಕ್ಕೆ ಬೆಂಬಲ ಸಿಗಬೇಕಷ್ಟೇ.

ದನಿ ಕಳೆದುಕೊಂಡವರ ಬದುಕು ಬವಣೆಯನ್ನು ಅಷ್ಟೇ ಸೂಕ್ಷ್ಮವಾಗಿ ನಿರೂಪಿಸಿರುವ ನಿರ್ದೇಶಕರ ಜಾಣತನ ಮೆಚ್ಚಬೇಕು. ಅಮಾಯಕ ಜನರನ್ನು ಅದರಲ್ಲೂ ಕಾಲೋನಿಯ ಮುಗ್ಧರನ್ನು ಹೋರಾಡೋಕೆ ಧರಣಿ ಮಾಡೋಕೆ ಬೆಂಕಿ ಹಚ್ಚೋಕೆ ಮಾತ್ರ ಇಂತಹವರ ಬಳಕೆ ಆಗುತ್ತೆ ಅನ್ನೋ ನಿರ್ದೇಶಕರ ಥಾಟ್ ಚೆನ್ನಾಗಿದೆ. ಅದು ವಾಸ್ತವ ಕೂಡ.

ಇಬ್ಬರು ಗೆಳೆಯರು ಒಂದೊಂದು ದಿಕ್ಕಿನತ್ತ ಹೋರಾಟಕ್ಕಿಳಿಯುತ್ತಾರೆ. ಒಬ್ಬನದು ಶಾಂತಿಯ ಹೋರಾಟ ಮತ್ತೊಬ್ಬರದು ಕ್ರಾಂತಿ ಹೋರಾಟ. ಈ‌ ನಡುವೆ ಯಾರು ಗೆಲ್ಲುತ್ತಾರೆ ಅನ್ನೋದು ಸಸ್ಪೆನ್ಸ್.

ಇಲ್ಲಿ ರಾಜೀವ್ ಹನು ಪಾತ್ರ ಗಮನ ಸೆಳೆದರೆ, ಫ್ಲೈಯಿಂಗ್ ಕಿಂಗ್ ಮಂಜು ದ್ವಿಪಾತ್ರ ಮೂಲಕ ಇಷ್ಟ ಆಗುತ್ತಾರೆ. ಉಳಿದಂತೆ ಬರುವ ಪ್ರತಿ ಪಾತ್ರಕ್ಕೂ ಧಮ್ ಇದೆ.

ಚಿತ್ರದಲ್ಲಿ ಕೇಳೋಂಗಿಲ್ಲ ಯಾರು ಕೇಳೋಂಗಿಲ್ಲ ಹಾಡು ಚೆನ್ನಾಗಿದೆ. ಜೈ ಭೀಮ್ ಸಾಂಗ್ ಜೋಶ್ ಕೊಡುತ್ತೆ.
ಅಭಿನಂದನ್ ಕಶ್ಯಪ್ ಸಂಗೀತ ಮತ್ತು ಹಿನ್ನೆಲೆ ಸಂಗೀತದಲ್ಲಿ ಧಮ್ ಇದೆ. ಕಾರ್ತಿಕ್ ಕ್ಯಾಮೆರಾ ಕೈ ಚಳಕದಲ್ಲಿ ಕಾಲೋನಿಯ ಸೊಗಸಿದೆ.

Categories
ಸಿನಿ ಸುದ್ದಿ

ಅದಮ್ಯ ಉತ್ಸಾಹಿಗಳ ಭಾವುಕ ಪಯಣ!

ಚಿತ್ರ ವಿಮರ್ಶೆ: ರೇಟಿಂಗ್ 3.5/5

ಚಿತ್ರ: #ಪಾರು ಪಾರ್ವತಿ
ನಿರ್ಮಾಣ : ಪಿ.ಬಿ.ಪ್ರೇಮ್ ನಾಥ್
ನಿರ್ದೇಶನ : ರೋಹಿತ್ ಕೀರ್ತಿ
ತಾರಾಗಣ: ದೀಪಿಕಾ ದಾಸ್, ಪೂನಂ, ಫವಾಜ್ ಅಶ್ರಫ್ ಇತರರು.

ಎಲ್ಲಿ ಬೇಕೋ ಅಲ್ಲಿ ನುಗ್ಗೋ ಕಾರು. ಅದರ ಮೇಲೊಂದು ಸ್ಟೈಲಿಶ್ ಬುಲೆಟ್. ಆ ಕಾರಲ್ಲಿ ಉತ್ಸಾಹ ತುಂಬಿದ 60ರ ಯುವತಿ! ಜೊತೆಗೊಬ್ಬ ಜೊತೆಗಾತಿ. ಅವರಿಬ್ಬರ ಸುಂದರ ಪಯಣ. ಖುಷಿ, ದುಃಖ, ನೋವು, ನಲಿವು, ಅದಮ್ಯ ಉತ್ಸಾಹದ ಬದುಕು ಇದಿಷ್ಟೂ ಈ ಸಿನಿಮಾದ ಹೈಲೆಟ್.

ಒಂದೇ ಮಾತಲ್ಲಿ ಹೇಳುವುದಾದರೆ ಬದುಕು ಮುಗಿದೇ ಹೋಯ್ತು. ನಾಲ್ಕು ಗೋಡೆ ನಡುವಿನ ಜೀವನ ಅಷ್ಟೇ ಅಂದುಕೊಂಡ ಮನಸುಗಳೊಮ್ಮೆ ಈ ಚಿತ್ರದೊಳಗಿನ ಆಶಯ ನೋಡಬೇಕು. ಇಲ್ಲಿ ಬದುಕಿನ ಪ್ರೀತಿ ಇದೆ, ನಂಬಿಕೆ ಇದೆ, ಕನಸಿನ ಸಾಕಾರವಿದೆ, ಆತ್ಮ ವಿಶ್ವಾಸವೂ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ಇರುವುದೊಂದು ಬದುಕು ಪರಿಪೂರ್ಣವಾಗಿಸಿಕೊಳ್ಳಬೇಕು ಅನ್ನೋ ಅರ್ಥವಿದೆ.

ನಿತ್ಯ ಜಂಜಾಟದ ಬದುಕಿಗೆ ರೋಸಿ ಹೋದ ಜೀವಕ್ಕೆ ತನ್ನದೇ ಆದ ಕನಸಿದೆ. ಮನಸ್ಸಿಗೆ ಬಂದಂತೆ ಪುಟಿದೇಳಬೇಕೆಂಬ ಆಸೆ ಇದೆ. ಮನೆಯೊಳಗಿನ ಯಾತನಮಯ ಬದುಕಿಂದಾಚೆಗೆ ಬರಬೇಕೆಂಬ ತುಡಿತವಿದೆ. ಈ ಕಥಾ ನಾಯಕಿ ಪಾರ್ವತಿ ಕೂಡ ತನ್ನಿಚ್ಛೆಯಂತೆ ಹೊರ ಜಗತ್ತಿಗೆ ಮೈವೊಡ್ಡಿ ನಿಲ್ಲುತ್ತಾಳೆ. ಆಕೆಯ ಕನಸುಗಳು ಗರಿಗೆದರುತ್ತವೆ. ಮನೆಯ ನರಕದಿಂದ ಹೊರ ಬರುವ ಪಾರ್ವತಿಗೆ ಇಷ್ಟದಂತೆ ಬದುಕಿ ಬಿಡುವ ಆಸೆ. ಅವಳಿಗೆ ಜೊತೆ ಆಗುವ ಪಾಯಲ್ ಅಲಿಯಾಸ್ ಪಾರು ಅನ್ನೋ ಸಾಹಸಿ ಹುಡುಗಿಯದ್ದೂ ಅದೇ ಹಾದಿ. ಇಬ್ಬರ ಪಯಣ ಕೂಡ ಹೊಸ ದಿಕ್ಕಿನತ್ತ ಸಾಗುತ್ತೆ.

ವಯಸ್ಸು ಅರ್ಧ ದಾಟಿದರೂ ಪಾರ್ವತಿಗೆ ಅದೇನೋ ಕೊರತೆ. ಆಕೆಗೆ ಬೇಕಿದ್ದು ಹಿಡಿಯಷ್ಟು ಪ್ರೀತಿ. ಆ ಪ್ರೀತಿಯ ವಂಚಿತೆಯಾದ ಆಕೆಗೆ ಬದುಕೇ ಬೇಡ ಅನ್ನುವಷ್ಟು ಜಿಗುಪ್ಸೆ.

ಅಂತಹ ಸಂದರ್ಭದಲ್ಲೇ ಹೊಸ ಪಯಣದ ಹಾದಿ ಸಿಗುತ್ತೆ. ಪಾರು ಮತ್ತು ಪಾರ್ವತಿ ಇವರಿಬ್ಬರ ಗುಡ್ ಬ್ಯಾಡ್ ಜರ್ನಿಯಲ್ಲಿ ಹೊಸ ಜಗತ್ತು ತೆರೆಯುತ್ತಾ ಹೋಗುತ್ತೆ. ಇಲ್ಲಿ ಅವರಿಬ್ಬರ ಮಾತಿನ ಜುಗಲ್ ಬಂದಿ ಜೊತೆ ಬದುಕಿನ ಅರ್ಥ ಹುಡುಕುವ ಪ್ರಯತ್ನ ಸಣ್ಣ ಕೋಪ, ಮುನಿಸು, ತಮಾಷೆ, ಎಲ್ಲವೂ ನೋಡುಗರಲ್ಲಿ ಖುಷಿ ಕೊಡುತ್ತೆ.

ಅದೊಂದು ಭಾವುಕ ಪಯಣ ಅನ್ನಬಹುದು. ನೋಡುಗರಲ್ಲೂ ಕಣ್ಣು ಒದ್ದೆ ಆಗುವ ಅಂಶಗಳಿವೆ. ವಯಸ್ಸಾದರೂ ಚಿಮ್ಮುವ ಪಾರ್ವತಿಯ ಅದಮ್ಯ ಉತ್ಸಾಹ. ನೋವಿದ್ದರೂ ಹೇಳಲಾಗದೆ ನಗು ಹೊರಹಾಕುವ ಪಾಯಲ್ ಮನಸ್ಸು.

ನಾಲ್ಕು ಗೋಡೆಯ ಮಧ್ಯ ಸಿಗುವ ಕೃತಕ ಪ್ರೀತಿಗೆ ಬೆನ್ನು ಹಾಕಿ ಹೊರ ಜಗತ್ತಿಗೆ ಅಡಿ ಇಡುವ ಪಾರ್ವತಿಯ ಸಂಪ್ರೀತಿ,ಸಂಕಷ್ಟಗಳನ್ನು ಸೂಕ್ಷ್ಮವಾಗಿ ತೆರೆ ಮೇಲೆ ಇರಿಸುವಲ್ಲಿ ನಿರ್ದೇಶಕರು ಯಶಸ್ವಿ.

ಸಿನಿಮಾದಲ್ಲಿ ದೀಪಿಕಾ ದಾಸ್, ಪೂನಂ ಸರ್ ನಾಯಕ್ ಗಮನ ಸೆಳೆದರೆ, ಫವಾಜ್ ಅಶ್ರಫ್ ಇರುವಷ್ಟು ಸಮಯ ಇಷ್ಟ ಆಗುತ್ತಾರೆ. ಇನ್ನು ಕಾರು ಕೂಡ ಇಲ್ಲಿ ವಿಶೇಷ ಎನಿಸುತ್ತೆ.

ಅಬಿನ್ ರಾಜೇಶ್ ಅವರ ಕ್ಯಾಮರಾ ಕೈಚಳಕದಲ್ಲಿ ಇಂಡಿಯಾದ ಅದ್ಭುತ ತಾಣಗಳನ್ನು ಅಂದಗಾಣಿಸಿದೆ. ಹರಿ ಸಂಗೀತವೂ ಕಥೆಗೆ ಪೂರಕ. ಸಿ.ಕೆ.ಕುಮಾರ ಅವರ ಕತ್ತರಿ ಪ್ರಯೋಗ ಚಿತ್ರದ ವೇಗಕ್ಕೆ ಹೆಗಲು ನೀಡಿದೆ.

error: Content is protected !!