Categories
ಸಿನಿ ಸುದ್ದಿ

ಬ್ಯಾಡ್ ಹುಡುಗನ ಜೊತೆ ಅಪೂರ್ವ ನಟಿ! ಪಿ.ಸಿ. ಶೇಖರ್ ಸಿನಿಮಾದ ಪ್ರೀತಿಯ ಪ್ರತಿನಿಧಿ

ಸಾಕಷ್ಟು ಜನಪ್ರಿಯ ಧಾರಾವಾಹಿಗಳು ಹಾಗೂ ಇತ್ತೀಚೆಗೆ ತೆರೆಕಂಡ “ನಾನು, ಅದು ಮತ್ತು ಸರೋಜ” ಚಿತ್ರದಲ್ಲಿ ಅಭಿನಯಿಸಿರುವ ನಟಿ ಅಪೂರ್ವ ಭಾರದ್ವಾಜ್, ಪಿ.ಸಿ.ಶೇಖರ್ ನಿರ್ದೇಶನದ “BAD” ಚಿತ್ರದಲ್ಲಿ ನಟಿಸಿದ್ದಾರೆ.

“BAD” ಚಿತ್ರದಲ್ಲಿ ಕಾಮ, ಕ್ರೋಧ ಮೊದಲಾದ ಅರಿಷಡ್ವರ್ಗಗಳನ್ನು ಪ್ರತಿನಿಧಿಸುವ ಆರುಪಾತ್ರಗಳಿದೆ ಎಂದು ಮೊದಲೆ ತಿಳಿಸಲಾಗಿತ್ತು. ಆ ಪೈಕಿ ಕಾಮ ಎಂಬ‌ ವರ್ಗವನ್ನು ಅನು ಎಂಬ ಪಾತ್ರದ ಮೂಲಕ ತೋರಿಸಲಾಗುತ್ತಿದೆ. ಈ ಪಾತ್ರದಲ್ಲಿ ಅಪೂರ್ವ ಭಾರದ್ವಾಜ್ ಕಾಣಿಸಿಕೊಳ್ಳುತ್ತಿದ್ದಾರೆ. ನಮ್ಮ ಚಿತ್ರದಲ್ಲಿ ಕಾಮವನ್ನು ಪ್ರೀತಿಗೆ ಬದಲಾಯಿಸಿ ತೋರಿಸಲಾಗುತ್ತಿದೆ.


ಚಿಕ್ಕವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡು, ತಂದೆಯ ಆಸರೆಯಲ್ಲಿ ಬೆಳೆದ ಹುಡುಗಿ ಅನು. ತಾಯಿ ಪ್ರೀತಿ ಕಾಣದ ಈ ಹುಡುಗಿಗೆ ಯಾರ ಬಳಿ ಹೇಗೆ ಪ್ರೀತಿ ವ್ಯಕ್ತಪಡಿಸಬೇಕೆಂದು ತಿಳಿದಿರುವುದಿಲ್ಲ. ಈ ಪಾತ್ರಕ್ಕೆ ಮಾತು ಕಡಿಮೆ. ಕಣ್ಣಿನಲ್ಲೇ ಭಾವನೆಗಳನ್ನು ಹೇಳುವ ಹಾಗೂ ಗುಂಗುರು ಕೂದಲುಳ್ಳ ಸಹಜ ಸುಂದರಿಯಂತೆ ಕಾಣುವ ಪಾತ್ರವಿದು.‌ ಹಾಗಾಗಿ ಅಪೂರ್ವ ಅವರ ಹಿಂದಿನ ಧಾರಾವಾಹಿ ಹಾಗೂ ಚಿತ್ರಗಳನ್ನು ನೋಡಿ, ಈ ಪಾತ್ರಕ್ಕೆ ಇವರೆ ಸರಿ ಹೊಂದುತ್ತಾರೆ ಎಂದು ಅಪೂರ್ವ ಅವರನ್ನು ಆಯ್ಕೆ ಮಾಡಿಕೊಂಡಿರುವುದಾಗಿ ನಿರ್ದೇಶಕ ಪಿ.ಸಿ.ಶೇಖರ್ ತಿಳಿಸಿದ್ದಾರೆ.

ಅಪೂರ್ವ ಅವರು ಬಹಳ ಅದ್ಭುತವಾಗಿ ಅಭಿನಯಿಸಿದ್ದಾರೆ ಹಾಗೂ ಚಿತ್ರದಲ್ಲಿ ಅವರ ಪಾತ್ರ ಬರುವ ಕಡೆಯೆಲ್ಲಾ ಪಿಂಕ್(ಗುಲಾಬಿ ಬಣ್ಣ) ಶೇಡ್ ನಲ್ಲಿ ಚಿತ್ರಿಸಲಾಗಿದೆ ಎನ್ನುತ್ತಾರೆ ನಿರ್ದೇಶಕರು.

ಎಸ್ ಆರ್ ವೆಂಕಟೇಶ್ ಗೌಡ ನಿರ್ಮಾಣದ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಪಿ.ಸಿ.ಶೇಖರ್ ಸಂಕಲನ ಹಾಗೂ ಶಕ್ತಿ ಶೇಖರ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಸಚಿನ್ ಬಿ ಹೊಳಗುಂಡಿ ಸಂಭಾಷಣೆ ಬರೆದಿದ್ದಾರೆ. ಜಿ.ರಾಜಶೇಖರ್ ಅವರ ಕಲಾ ನಿರ್ದೇಶನ “BAD” ಚಿತ್ರಕ್ಕಿದೆ.

“ಪ್ರೀತಿಯ ರಾಯಭಾರಿ” ಚಿತ್ರದ ಮೂಲಕ ಜನರ ಮನಗೆದ್ದಿರುವ ನಕುಲ್ ಗೌಡ “BAD” ಚಿತ್ರದಲ್ಲಿ “ಕ್ರೋಧ” ವನ್ನು ಪ್ರತಿನಿಧಿಸುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಮಾನ್ವಿತ ಹರೀಶ್, ಸಾಯಿ ಕೃಷ್ಣ, ಅಪೂರ್ವ ಭಾರದ್ವಾಜ್, ಮಂಜುನಾಥ್ , ಅಶ್ವಿನಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Categories
ಸಿನಿ ಸುದ್ದಿ

ಹಾಸ್ಯ ನಟ ನರಸಿಂಹರಾಜು ಜನ್ಮ ಶತಮಾನೋತ್ಸವ : ವರ್ಷವಿಡೀ ಶತಮಾನಕ್ಕೊಬ್ಬ ಹಾಸ್ಯ ಚಕ್ರವರ್ತಿಯ ಶತಮಾನೋತ್ಸವ ಆಚರಣೆ

ಜುಲೈ 24, ಕರುನಾಡ ಕಂಡ ಹೆಮ್ಮೆಯ ಹಾಸ್ಯನಟ ದಿ.ಟಿ.ಆರ್ ನರಸಿಂಹರಾಜು ಅವರ ಹುಟ್ಟುಹಬ್ಬ. ಈ ಬಾರಿ ವಿಶೇಷವೆಂದರೆ, ಇದು ನರಸಿಂಹರಾಜು ಅವರ ನೂರನೇ ಹುಟ್ಟುಹಬ್ಬ. ಈ ಸಂಭ್ರಮವನ್ನು “ಶತಮಾನಕೊಬ್ಬ ಹಾಸ್ಯಚಕ್ರವರ್ತಿಯ ಶತಮಾನೋತ್ಸವ” ಎಂಬ ಹೆಸರಿನಿಂದ ವಿವಿಧ ಕಾರ್ಯಕ್ರಮಗಳ ಜೊತೆಗೆ ವರ್ಷಪೂರ್ತಿ ಆಚರಿಸಲು ನರಸಿಂಹರಾಜು ಅವರ ಕುಟುಂಬದವರು ಹಾಗೂ ಅಭಿಮಾನಿಗಳು ನಿಶ್ಚಯಿಸಿದ್ದಾರೆ.
ನರಸಿಂಹರಾಜು ಅವರ ಹುಟ್ಟುಹಬ್ಬದಂದೇ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್, ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷರಾದ ಎನ್ ಆರ್ ಕೆ ವಿಶ್ವನಾಥ್ ಹಾಗೂ ಹಿರಿಯನಟ ಬೆಂಗಳೂರು ನಾಗೇಶ್ ಸೇರಿದಂತೆ ವಿವಿಧ ಗಣ್ಯರು ಜನ್ಮ ಶತಮಾನೋತ್ಸವ ಸಮಾರಂಭಕ್ಕೆ ಚಾಲನೆ ನೀಡಿ, ನರಸಿಂಹರಾಜು ಅವರೊಂದಿಗಿನ ಒಡನಾಟವನ್ನು ಹಂಚಿಕೊಂಡರು.


ನರಸಿಂಹರಾಜು ಅವರ ಶತಮಾನೋತ್ಸವ ಸಮಾರಂಭ ಬರೀ ಕುಟುಂಬದವರಲ್ಲ. ಎಲ್ಲರೂ ಸೇರಿ ಮಾಡಬೇಕಾದ ಕಾರ್ಯಕ್ರಮ ಎಂದು ಆಗಮಿಸಿದ್ದ ಎಲ್ಲಾ ಗಣ್ಯರು ತಿಳಿಸಿದರು. ನರಸಿಂಹರಾಜು ಅವರ ಮೊಮ್ಮಕ್ಕಳಾದ ಅರವಿಂದ್ ಹಾಗೂ ಅವಿನಾಶ್ ಸಹ ಉಪಸ್ಥಿತರಿದ್ದರು.

ನರಸಿಂಹರಾಜು ಅವರ ನೂರನೇ ಹುಟ್ಟುಹಬ್ಬವನ್ನು “ಶತಮಾನಕ್ಕೊಬ್ಬ ಹಾಸ್ಯಚಕ್ರವರ್ತಿಯ ಶತಮಾನೋತ್ಸವ” ಎಂಬ ಹೆಸರಿನಿಂದ ವರ್ಷಪೂರ್ತಿ ಆಚರಿಸಲಾಗುವುದು. ನರಸಿಂಹರಾಜು ಅವರ ಹೆಸರಿನಲ್ಲಿ ಮೂರು ಪ್ರಶಸ್ತಿಗಳನ್ನು ನೀಡಲು ನಿರ್ಧರಿಸಲಾಗಿದೆ. ದೊಡಮಟ್ಟದ ಸಮಾರಂಭ ಆಯೋಜಿಸಿ ಈ ಪ್ರಶಸ್ತಿಗಳನ್ನು ನೀಡಲಾಗುವುದು.

ಮೊದಲು ನರಸಿಂಹರಾಜು ಅವರನ್ನು ಯುವಜನತೆಗೆ ತಲುಪಿಸುವ ಪ್ರಯತ್ನ. ಹಾಗಾಗಿ ಹನ್ನೆರಡು ಜನರ ತಂಡ ಎರಡು ಟ್ರಕ್ ಗಳ ಮೂಲಕ ಕರ್ನಾಟಕದ ಮೂವತ್ತೆರಡು ಜಿಲ್ಲೆಗಳ ಆಯ್ದ ಕಾಲೇಜುಗಳಿಗೆ ಭೇಟಿ ನೀಡುತ್ತಾರೆ. ಆ ಟ್ರಕ್ ನಲ್ಲಿ ಎಲ್ ಇ ಡಿ ಅಳವಡಿಸಿ, ಆ ಮೂಲಕ ವಿದ್ಯಾರ್ಥಿಗಳಿಗೆ ನರಸಿಂಹರಾಜು ಅವರ ಬಗೆಗಿನ ತುಣುಕುಗಳನ್ನು ತೋರಿಸಲಾಗುತ್ತದೆ. ಆನಂತರ ನರಸಿಂಹರಾಜು ಅವರ ಕುರಿತು ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸಹ ಕೇಳಲಾಗುತ್ತದೆ.

ಆನಂತರ ಪ್ಯಾನ್ ಇಂಡಿಯಾ ಕಿರುಚಿತ್ರೋತ್ಸವ(ಹಾಸ್ಯದ ಕುರಿತು) ಆಯೋಜಿಸಲಾಗುವುದು.

. ಕರ್ನಾಟಕದಾದ್ಯಂತ ವಿವಿಧ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಹಾಸ್ಯನಾಟಕಗಳನ್ನು (ನರಸಿಂಹರಾಜು ಅವರ ಅಭಿನಯದ ನಾಟಕಗಳು ಮಾತ್ರ). ಆಯೋಜಿಸಲಾಗುವುದು.

ಕರ್ನಾಟಕದ ಸುಮಾರು ಎಂಟು ಜಲ್ಲೆಗಳಲ್ಲಿ ಸಕ್ರಿಯವಾಗಿರುವ ನಾಟಕ ಕಂಪನಿಗಳಿದೆ. ಆ ಪ್ರಸಿದ್ದ ನಾಟಕ ಕಂಪನಿಗಳ ಮೂಲಕ ನರಸಿಂಹರಾಜು ಅವರ ಜನಪ್ರಿಯ ನಾಟಕಗಳನ್ನು ಅಹೋರಾತ್ರಿ ಆಯೋಜಿಸುವ ಯೋಜನೆ ಇದೆ. ಆಗಸ್ಟ್ ನಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಬೃಹತ್ ಸಮಾರಂಭ ನಡೆಸುವ ಸಿದ್ದತೆ ಕೂಡ ನಡೆಯುತ್ತಿದೆ.
ಈ ಎಲ್ಲಾ ಕಾರ್ಯಕ್ರಮಗಳು ಮುಂದಿನ ಆರು ತಿಂಗಳಲ್ಲಿ ಮೊದಲನೇ ಭಾಗಿ ನಡೆಯಲಿದೆ. ಮುಂದಿನ ಆರು ತಿಂಗಳ ಕಾರ್ಯಕ್ರಮಗಳನ್ನು ಮುಂಬರುವ ದಿನಗಳಲ್ಲಿ ತಿಳಿಸುವುದಾಗಿ ನರಸಿಂಹರಾಜು ಅವರ ಮೊಮ್ಮಗ ಅವಿನಾಶ್ ತಿಳಿಸಿದರು.

Categories
ಸಿನಿ ಸುದ್ದಿ

ನಿರ್ದೇಶಕ ಆರ್.ಚಂದ್ರು ಸಿನಿ ಜರ್ನಿಗೆ ಒಂದುವರೆ ದಶಕ: ತಾಜ್ ಮಹಲ್ ಸಿನಿಮಾದಿಂದ ಕಬ್ಜವರೆಗೆ ಯಶಸ್ವಿ ಚಂದ್ರಯಾನ…

ಮೊದಲ ಬಾಲ್ ನಲ್ಲಿ ಸಿಕ್ಸರ್ ಬಾರಿಸೋದು ಅಂದರೆ ಅದೊಂಥರಾ ಪರ್ಫೆಕ್ಟ್ ಬ್ಯಾಟಿಂಗ್ ನಿಂದ ಮಾತ್ರ ಸಾಧ್ಯ. ಅದರಲ್ಲೂ ಎಲ್ಲವೂ ಸರಿಯಾಗಿ ಕನೆಕ್ಟ್ ಆಗಬೇಕು. ಬೌಲರ್ ಎಸೆಯೋ ಬಾಲನ್ನು ಸರಿಯಾಗಿ ತನ್ನ ಬ್ಯಾಟ್ ಗೆ ಕನೆಕ್ಟ್ ಮಾಡಿಕೊಂಡಾಗ ಮಾತ್ರ ಆ ಬಾಲನ್ನು ಮುಲಾಜಿಲ್ಲದೆ ಬೌಂಡರಿ ದಾಟಿಸಬಹುದು. ಈಗ ಕ್ರಿಕೆಟ್ ಉದಾಹರಣೆ ಹೇಳೋಕೂ ಕಾರಣವಿದೆ.

‘ತಾಜ್ ಮಹಲ್’ ಎಂಬ ಮೊದಲ ಸಿನಿಮಾ ನಿರ್ದೇಶನದಲ್ಲೇ ಭರ್ಜರಿ ಸಕ್ಸಸ್ ಕಂಡ ಆರ್. ಚಂದ್ರು ಅವರ ಸಿನಿ ಪಯಣಕ್ಕೆ ಭರ್ತಿ ಹದಿನೈದು ವಸಂತಗಳು ಮುಗಿದು, ಹದಿನಾರನೇ ವಸಂತಕ್ಕೆ ಕಾಲಿಡುತ್ತಿದ್ದಾರೆ.

ಹೌದು, ಆರ್.‌ಚಂದ್ರು ಅವರ ಚೊಚ್ಚಲ ಸಿನಿಮಾ ತಾಜ್ ಮಹಲ್ ಸಿನಿಮಾ ಬಿಡುಗಡೆಯಾಗಿ ಹದಿನೈದು ವರ್ಷಗಳಾಗಿವೆ. ಆ ಸಿನಿಮಾ ರಿಲೀಸ್ ಆಗಿ ಭರ್ಜರಿ ಯಶಸ್ಸು ಕಂಡಿತ್ತು. ನಾಯಕ ಅಜೇಯ್ ರಾವ್ ಅವರಿಗೂ ದೊಡ್ಡ ಗೆಲುವು ಕೊಟ್ಟ ಈ ಸಿನಿಮಾ, ಸಂಗೀತ ನಿರ್ದೇಶಕ ಭಿಮನ್ ರಾಯ್ ಅವರಿಗೂ ಖುಷಿಯ ಅಲೆಯಲ್ಲಿ ತೇಲಿಸಿತ್ತು. ಈ ಮೂಲಕ ನಿರ್ದೇಶಕ ಆರ್. ಚಂದ್ರು ಅವರನ್ನು ಭರವಸೆ ನಿರ್ದೇಶಕರನ್ನಾಗಿಸಿದ್ದು ಸುಳ್ಳಲ್ಲ.

ಆ ಸಿನಿಮಾ ಕೊಟ್ಟ ಗೆಲುವು ಇಂದು ಆರ್. ಚಂದ್ರು ಅವರನ್ನು ಬಹು ಬೇಡಿಕೆ ನಿರ್ದೇಶಕರನ್ನಾಗಿಸಿದೆ. ಕೇವಲ ನಿರ್ದೇಶಕ ಮಾತ್ರವಲ್ಲ, ನಿರ್ಮಾಪಕರಾಗಿಯೂ ಸಕ್ಸಸ್ ಕಂಡವರು. ಕನ್ನಡದ‌ಬಹುತೇಕ ಸ್ಟಾರ್ ನಟರನ್ನು ನಿರ್ದೇಶಿಸಿದ ಹೆಗ್ಗಳಿಕೆ ಅವರದು. ದೇಶಾದ್ಯಂತ ಸದ್ದು ಮಾಡಿದ ‘ಕಬ್ಜ’ ಕೂಡ ಆರ್. ಚಂದ್ರು ಅವರನ್ನು ಒಂದೊಳ್ಳೆಯ ನಿರ್ದೇಶಕ ಮತ್ತು ನಿರ್ಮಾಪಕ ಅಂತ ಹೇಳಿತು. ಸಿನಿಮಾನೇ ಉಸಿರಾಗಿಸಿಕೊಂಡಿರುವ ನಿರ್ದೇಶಕ ಆರ್.ಚಂದ್ರು ಕನ್ನಡಕ್ಕೆ ಸದಭಿರುಚಿಯ ಸಿನಿಮಾ ಕೊಡುತ್ತಲೇ ಬಂದಿದ್ದಾರೆ. ತಮ್ಮ ಮೊದಲ ಸಿನಿಮಾದ ಸಕ್ಸಸ್ ಹಾಗು ಹದಿನೈದು ವರ್ಷಗಳನ್ನು ಪೂರೈಸಿರುವ ಕುರಿತು ಹೇಳುವುದಿಷ್ಟು…

‘ತೃಪ್ತಿ ಎನ್ನುವುದು ಪ್ರಯತ್ನದಲ್ಲಿರುತ್ತದೆಯೇ ಹೊರತು ಪ್ರಾಪ್ತಿಯಲ್ಲಿಲ್ಲ. ಪೂರ್ಣ ಪ್ರಯತ್ನವೇ ಪರಿಪೂರ್ಣ ಗೆಲುವು. ಆ ಗೆಲುವಿಗೆ ಇಂದು ಸಾರ್ಥಕ ಹದಿನೈದು ವರ್ಷಗಳು. ಕನ್ನಡ ಚಿತ್ರರಂಗಕ್ಕೆ ಅಂಬೆಗಾಲಿಟ್ಟು ಇಂದು ನಾನು ಹದಿನೈದು ವಸಂತಗಳನ್ನು ಪೂರೈಸಿ 16 ರ ಹರೆಯಕ್ಕೆ ಕಾಲಿಡುತ್ತಿದ್ದೇನೆ. ನನ್ನನ್ನು ಈ ದಾರಿಯಲ್ಲಿ ಕೈ ಹಿಡಿದು ನಡೆಸಿದ ಪ್ರತಿಯೊಬ್ಬರಿಗೂ ನಾನು ಆಭಾರಿಯಾಗಿದ್ದೇನೆ’

ಅದೇನೆ ಇರಲಿ, ಆರ್.ಚಂದ್ರು ದೊಡ್ಡ ಕನಸುಗಾರ. ಎಷ್ಟೇ ಕಷ್ಟವಾದರೂ ತಾನು ಅಂದುಕೊಂಡಂತೆ ಸಿನಿಮಾ ಮಾಡುವ ಅದ್ಭುತ ಫಿಲ್ಮ್ ಮೇಕರ್. ಕನ್ನಡಕ್ಕೆ ಇನ್ನಷ್ಟು ಅದ್ಭುತ ಹಾಗು ಯಶಸ್ಸಿನ ಸಿನಿಮಾಗಳನ್ನು ಕೊಡಲಿ ಎಂಬುದು ಸಿನಿ ಲಹರಿ ಆಶಯ.

Categories
ಸಿನಿ ಸುದ್ದಿ

ಸೆಪ್ಟೆಂಬರ್ 15ಕ್ಕೆ ಬುದ್ಧಿವಂತನ ಆಗಮನ: ಇದು ಉಪೇಂದ್ರ ಸಿನಿಮಾ

ತಮ್ಮ ಅಮೋಘ ಅಭಿನಯದ ಮೂಲಕ‌ ಅಭಿಮಾನಿಗಳ ಮನ ಗೆದ್ದಿರುವ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ “ಬುದ್ದಿವಂತ 2” ಚಿತ್ರ ಯಾವಾಗ ಬಿಡುಗಡೆಯಾಗಬಹುದು? ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿತ್ತು.‌ ಈಗ ಆ ಕುತೂಹಲಕ್ಕೆ ತೆರೆ ಬಿದ್ದಿದೆ. ಬಹು ನಿರೀಕ್ಷಿತ ಈ ಚಿತ್ರ ಸೆಪ್ಟೆಂಬರ್ 15 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.‌ ವಿಡಿಯೋ ತುಣುಕೊಂದರ(ಗ್ಲಿಂಪ್ಸ್) ಮೂಲಕ ಚಿತ್ರತಂಡ “ಬುದ್ದಿವಂತ 2” ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಮಾಡಿದೆ.

“ಬುದ್ದಿವಂತ” ಎಂದೇ ಜನಪ್ರಿಯರಾಗಿರುವ ಉಪೇಂದ್ರ ಅವರ ಹುಟ್ಟುಹಬ್ಬ ಸೆಪ್ಟೆಂಬರ್ 18 ರಂದು. ಅವರ ಹುಟ್ಟುಹಬ್ಬದ ಸಮಯದಲ್ಲಿ ಈ ಚಿತ್ರ ಬಿಡುಗಡೆಯಾಗುತ್ತಿದ್ದು, ಅಭಿಮಾನಿಗಳ ಸಂತಸ ಇಮ್ಮಡಿಯಾಗಲಿದೆ.

ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಯಶಸ್ವಿ ಚಿತ್ರಗಳನ್ನು ನಿರ್ಮಾಣ ಮಾಡಿರುವ ಡಾ.ಟಿ.ಆರ್ ಚಂದ್ರಶೇಖರ್, ತಮ್ಮ ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಲಾಂಛನದಲ್ಲಿ ನಿರ್ಮಾಣ ಮಾಡಿರುವ ಮತ್ತೊಂದು ಅದ್ದೂರಿ ಚಿತ್ರ “ಬುದ್ದಿವಂತ 2”.

ಜೈದೇವ್ ನಿರ್ದೇಶನದ ಈ ಚಿತ್ರಕ್ಕೆ ಗುರುಕಿರಣ್ ಸಂಗೀತ ನೀಡಿದ್ದಾರೆ. ಎಸ್ ನವೀನ್ ಕುಮಾರ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ ಜಾಗೂ ರವಿವರ್ಮ, ವಿಕ್ರಮ್ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ಉಪೇಂದ್ರ ಅವರಿಗೆ ನಾಯಕಿಯರಾಗಿ
ಸೋನಾಲ್ ಮೊಂಟೆರೊ ಹಾಗೂ ಮೇಘನರಾಜ್ ನಟಿಸಿದ್ದಾರೆ. ಶ್ರೀನಗರ ಕಿಟ್ಟಿ ಅವರು ವಿಶೇಷಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Categories
ಸಿನಿ ಸುದ್ದಿ

ಮೋಹನ್ ಲಾಲ್ ಈಗ ವೃಷಭ! ಇದು ಪ್ಯಾನ್ ಇಂಡಿಯಾ ಚಿತ್ರ: ರಾಗಿಣಿ ಪ್ರಮುಖ ಆಕರ್ಷಣೆ

ನಂದಕಿಶೋರ್ ನಿರ್ದೇಶನದ ವೃಷಭ ಚಿತ್ರದಲ್ಲಿ ಮಲಯಾಳಂ ಚಿತ್ರ ರಂಗದ ಖ್ಯಾತ ನಟ ಮೋಹನ್ ಲಾಲ್ ಹೀರೋ. ಇದು 2024ರಲ್ಲಿ ನಾಲ್ಕು ಭಾಷೆಗಳಲ್ಲಿ ಜಗತ್ತಿನಾದ್ಯಂತ 4500 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ಸಿನಿಮಾದಲ್ಲಿ ರಾಗಿಣಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಭಾರತದ ಬೃಹತ್ ಆಕ್ಷನ್ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಖ್ಯಾತ ನಟ ಮೋಹನ್ ಲಾಲ್ ಅಭಿನಯದ ‘ವೃಷಭ’ ಎಂಬ ಪ್ಯಾನ್ ಇಂಡಿಯಾ ಚಿತ್ರದ ಚಿತ್ರೀಕರಣ ಈಗಾಗಲೇ ಶುರುವಾಗಿದೆ.


‘ವೃಷಭ’ ಚಿತ್ರದಲ್ಲಿ ಮೈ ಜುಂ ಎನಿಸುವಂತಹ ಆಕ್ಷನ್ ಮತ್ತು ರೋಚಕ ದೃಶ್ಯಗಳು ಇರಲಿದ್ದು, ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರ ಜೊತೆಗೆ ರೋಶನ್ ಮೇಕಾ, ಶನಾಯ ಕಪೂರ್, ಝಾರಾ ಖಾನ್, ಶ್ರೀಕಾಂತ್ ಮೇಕಾ ಮುಂತಾದವರು ನಟಿಸುತ್ತಿದ್ದಾರೆ. ಕನ್ನಡದ ರಾಗಿಣಿ ದ್ವಿವೇದಿ ಸಹ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.

‘ಕಾಂದಹಾರ್’ ನಂತರ ಇದೇ ಎರಡನೆಯ ಬಾರಿಗೆ ಮೋಹನ್ ಲಾಲ್ ಜೊತೆಗೆ ರಾಗಿಣಿ ನಟಿಸುತ್ತಿದ್ದಾರೆ. ಕನ್ನಡದಲ್ಲಿ ಸಾಕಷ್ಟು ಯಶಸ್ವಿ ಚಿತ್ರಗಳನ್ನು ನೀಡಿರುವ ನಿರ್ದೇಶಕ ನಂದಕಿಶೋರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.


ಚಿತ್ರ ವಿಷಯವನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡ ನಟ ಮೋಹನ್ ಲಾಲ್, ‘’ವೃಷಭ’ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದ್ದು, ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದದ ನಿರೀಕ್ಷೆಯಲ್ಲಿದ್ದೇವೆ’ ಎಂದು ಹೇಳಿದ್ದಾರೆ.


‘ವೃಷಭ’ ಚಿತ್ರವನ್ನು ಬಾಲಿವುಡ್‌ ನ ಜನಪ್ರಿಯ ನಿರ್ಮಾಣ ಸಂಸ್ಥೆಯಾದ ಬಾಲಾಜಿ ಟೆಲಿಫಿಲಂಸ್ ಮತ್ತು ಕನೆಕ್ಟ್ ಮೀಡಿಯಾ, ಎವಿಸ್ ಸ್ಟುಡಿಯೋದ ಸಹಯೋಗದೊಂದಿಗೆ ನಿರ್ಮಿಸುತ್ತಿದೆ.

ಏಕ್ತಾ ಕಪೂರ್, ಶೋಭಾ ಕಪೂರ್, ಅಭಿಷೇಕ್ ವ್ಯಾಸ್, ವಿಶಾಲ್ ಗುರ್ನಾನಿ, ಜೂಹಿ ಪಾರೇಖ್ ಮೆಹ್ತಾ, ಶ್ಯಾಮಸುಂದರ್, ವರುಣ್ ಮಾಥುರ್ ಮತ್ತು ಸೌರಭ್ ಮಿಶ್ರಾ ಜೊತೆಯಾಗಿ ನಿರ್ಮಿಸುತ್ತಿದ್ದಾರೆ.


ಬಹು ನಿರೀಕ್ಷಿತ ಈ ಚಿತ್ರವು ಮುಂದಿನ ವರ್ಷ ಜಗತ್ತಿನಾದ್ಯಂತ 4500ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.

Categories
ಸಿನಿ ಸುದ್ದಿ

ತಬಲಾ ನಾಣಿಗೆ ಹೆಂಡ್ತಿ ಬೇಕಂತೆ! ಅಪಾರ್ಥ ಬೇಡ ಇದು ಸಿನಿಮಾ ವಿಚಾರ

ನಟ ತಬಲಾ ನಾಣಿಗೆ ಹೆಂಡ್ತಿ ಬೇಕಂತೆ! ಅರೇ ಇದೇನಪ್ಪಾ ಅಂತ ಪ್ರಶ್ನೆ ಮಾಡ್ಕೋಬೇಡಿ. ಇದು ಸಿನಿಮಾ ವಿಷಯ. ಹೌದು, ‘ನನಗೂ ಹೆಂಡ್ತಿ ಬೇಕು’ ಎಂಬ ಸಿನಿಮಾದಲ್ಲಿ ಅವರೇ ಮುಖ್ಯ ಅಕರ್ಷಣೆ. ಇದೊಂದು ಹಾಸ್ಯಮಯ ಸಿನಿಮಾ ಅನ್ನೋದು ಶೀರ್ಷಿಕೆಯಲ್ಲೇ ಗೊತ್ತಾಗುತ್ತೆ. ಅಂದಹಾಗೆ, ಈ ಸಿನಿಮಾಗೆ ಕೆ.ಶಂಕರ್ ನಿರ್ದೇಶಕರು.

ಹಿಂದೆ ದೇಶಪ್ರೇಮ ಸಾರುವ ಆ್ಯಕ್ಟ್ 370 ಎಂಬ ಚಿತ್ರ ನಿರ್ದೇಶಿಸಿದ್ದರು. ಆದರೆ, ಅದು ಹೇಳಿಕೊಳ್ಳುವಂತಹ ದೇಶಪ್ರೇಮದ ಕಥೆ ಎನಿಸಲಿಲ್ಲ. ನಿರೀಕ್ಷೆಯೂ ಕಾಣಲಿಲ್ಲ. ಅವರೀಗ ಕಾಮಿಡಿ ಜಾನರ್ ಚಿತ್ರವೊಂದಕ್ಕೆ ಕೈ ಹಾಕಿದ್ದಾರೆ. ಲೈರಾ ಎಂಟರ್ ಟೈನ್ಮೆಂಟ್ ಅಂಡ್ ಮೀಡಿಯಾ ಮೂಲಕ ಭರತ್ ಗೌಡ ಮತ್ತು ಸಿ.ರಮೇಶ್ ಜೊತೆಯಾಗಿ ಈ ಸಿನಿಮಾ ನಿರ್ಮಿಸುತ್ತಿದ್ದಾರೆ.

ಕಥೆ ಇದು… ಅಂಧನೊಬ್ಬ ಮದುವೆಯಾಗಲು ಹೊರಟಾಗ ನಡೆಯುವ ಪ್ರಸಂಗಗಗಳನ್ನು ಹಾಸ್ಯಮಯವಾಗಿ ಹೇಳುವ ಕಥಾಹಂದರ ಹೊಂದಿರುವ ಈ ಚಿತ್ರದ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ ನಡೆಯುತ್ತಿದೆ. ಕೆ. ಶಂಕರ್ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರ ಸಂಪೂರ್ಣ ಕಾಮಿಡಿ ಜಾನರ್ ಚಿತ್ರವಾಗಿದೆ.

ಮದುವೆಯಾಗಲು ಹೊರಟು ಒಂದು ಹೆಣ್ಣು ಕೂಡ ಸಿಗದೇ ಪರಿತಪಿಸುವ ಕುರುಡನ ಪಾತ್ರದಲ್ಲಿ ಹಾಸ್ಯನಟ ತಬಲ ನಾಣಿ ಅವರು ಕಾಣಿಸಿಕೊಂಡಿದ್ದಾರೆ. ತಬಲ ನಾಣಿ ಜೊತೆ ಬ್ಯಾಂಕ್ ಜನಾರ್ಧನ್ ಮತ್ತು ಬಾಲು ನಕರಾತ್ಮಕ ಪಾತ್ರದಲ್ಲಿ ರಂಜಿಸಲಿದ್ದಾರೆ. ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೋಟೂರ್ ಒಬ್ಬ ಮೂಕಿಯಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಎರಡು ಫೈಟ್ ಮತ್ತು ಎರಡು ಹಾಡುಗಳಿದ್ದು, ಕೆ.ಎಮ್. ಇಂದ್ರ ಅವರ ಸಂಗೀತ ಸಂಯೋಜನೆಯಿದೆ.

ಇಡೀ ಚಿತ್ರದ ಚಿತ್ರೀಕರಣ ಚಿತ್ರದುರ್ಗದಲ್ಲಿ ನಡೆಯುತ್ತಿದೆ. ಈ ಚಿತ್ರದಲ್ಲಿ ತಬಲಾ ನಾಣಿ, ರಾಜ್ ಬಾಲ, ಬ್ಯಾಂಕ್ ಜನಾರ್ಧನ್, ಶೃತಿ, ಚೈತ್ರಾ ಕೋಟೂರ್, ರಮೇಶ್ ಭಟ್, ಕಿಲ್ಲರ್ ವೆಂಕಟೇಶ್ ಗಣೇಶ್ ರಾವ್, ದೊಡ್ಡ ರಂಗೇಗೌಡ, ಧರ್ಮ, ಕೆಜಿಎಫ್ ಕೃಷ್ಣಪ್ಪ, ಪ್ರಿಯಾಂಕ, ಗಾನವಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

Categories
ಸಿನಿ ಸುದ್ದಿ

ವಿಜಯ್ ಸೇತುಪತಿ ಈಗ ಸಾವಿನ ವ್ಯಾಪಾರಿ! ಶಾರುಖ್ ಖಾನ್ ನಟನೆಯ ಜವಾನ್ ಸಿನಿಮಾದಲ್ಲಿ ರಗಡ್ ರೋಲ್

ಶಾರುಖ್ ಖಾನ್ ಅಭಿನಯದ ಹೊಸ ಚಿತ್ರ ‘ಜವಾನ್’ ಬಗ್ಗೆ ದಿನದಿಂದ ದಿನಕ್ಕೆ ನಿರೀಕ್ಷೆ ಹೆಚ್ಚಾಗುತ್ತಿದೆ. ಅದಕ್ಕೆ ಸರಿಯಾಗಿ ಇಂದು ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ವಿಜಯ್ ಸೇತುಪತಿ ಅವರ ಫಸ್ಟ್ ಲುಕ್ ಅನ್ನು ಶಾರುಖ್ ಖಾನ್ ಬಿಡುಗಡೆ ಮಾಡಿದ್ದಾರೆ.


ವಿಜಯ್ ಸೇತುಪತಿ ಅವರನ್ನು ಚಿತ್ರದಲ್ಲಿ ‘ಸಾವಿನ ವ್ಯಾಪಾರಿ’ ಎಂದು ಶಾರುಖ್ ಬಣ್ಣಿಸಿದ್ದು, ಈ ಚಿತ್ರದಲ್ಲಿ ಅವರೊಂದಿಗೆ ಮೊದಲ ಬಾರಿಗೆ ಮುಖಾಮುಖಿಯಾಗಲಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾದ ‘ಜವಾನ್’ ಚಿತ್ರದ ಪ್ರಿವ್ಯೂನಲ್ಲಿ ವಿಜಯ್ ಸೇತುಪತಿ ಅವರ ಝಲಕ್ ನೋಡುವುದಕ್ಕೆ ಸಿಕ್ಕಿತ್ತು. ಈಗ ಅವರ ಪಾತ್ರವನ್ನು ಹೊಸ ಪೋಸ್ಟರ್ ಮೂಲಕ ಪರಿಚಯಿಸಿದ್ದಾರೆ ಶಾರುಖ್ ಖಾನ್.

ಇದುವರೆಗೂ ದಕ್ಷಿಣ ಭಾರತದ ಚಿತ್ರಗಳಲ್ಲಿ ತಮ್ಮ ಅದ್ಭುತ ಅಭಿನಯ ಮತ್ತು ವೈವಿಧ್ಯಮಯ ಪಾತ್ರಗಳಿಂದ ಎಲ್ಲರ ಮನಸ್ಸನ್ನು ಸೂರೆಗೊಂಡಿದ್ದ ವಿಜಯ್ ಸೇತುಪತಿ, ಈಗ ಮೊದಲ ಬಾರಿಗೆ ಶಾರುಖ್ ಖಾನ್ ಎದುರು ಖಳನಟನಾಗಿ ಅಬ್ಬರಿಸಲಿದ್ದಾರೆ. ಪ್ರತಿ ಹೊಸ ಪೋಸ್ಟರ್ ಮೂಲಕವೂ ‘ಜವಾನ್’ ಚಿತ್ರದ ಮೇಲಿನ ಪ್ರೇಕ್ಷಕರ ನಿರೀಕ್ಷೆಗಳು ಹೆಚ್ಚಾಗುತ್ತಲೇ ಇದೆ.

ಮೊದಲು ಶಾರುಖ್ ಖಾನ್ ಅವರ ಬಾಲ್ಡ್ ಲುಕ್, ನಂತರ ನಯನತಾರಾ ಅವರ ಸಾಹಸಮಯ ಅವತಾರ, ಈಗ ವಿಜಯ್ ಸೇತುಪತಿ ಅವರ ಪಾತ್ರದ ಪರಿಚಯ … ಇದೆಲ್ಲದರಿಂದ ಜವಾನ್ ಈ ವರ್ಷದ ಅತೀ ನಿರೀಕ್ಷಿತ ಚಿತ್ರವಾಗಿದೆ.
‘ಜವಾನ್’ ಚಿತ್ರವನ್ನು ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಗೌರಿ ಖಾನ್ ನಿರ್ಮಿಸಿದರೆ, ಗೌರವ ವರ್ಮ ಸಹನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಈ ಚಿತ್ರವು ಸೆಪ್ಟೆಂಬರ್ 07ರಂದು ಜಗತ್ತಿನಾದ್ಯಂತ ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.

Categories
ಸಿನಿ ಸುದ್ದಿ

ನಿತಿನ್ ಈಗ ಎಕ್ಸ್ಟ್ರಾ ಆರ್ಡಿನರಿ ಮ್ಯಾನ್! ಶ್ರೀಲೀಲಾ ನಾಯಕಿ: ಡಿ 23ಕ್ಕೆ ಸಿನಿಮಾ ರಿಲೀಸ್

ತೆಲುಗು ಚಿತ್ರರಂಗದ ಪ್ರಾಮಿಸಿಂಗ್ ಹೀರೋ‌ ನಿತಿನ್ ಅವರ 32ನೇ ಸಿನಿಮಾಗೆ ಟೈಟಲ್ ಫಿಕ್ಸ್ ಮಾಡಲಾಗಿದೆ. ವಕ್ಕಂತಂ ವಂಶಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ಎಕ್ಸ್ಟ್ರಾ ಆರ್ಡಿನರಿ ಮ್ಯಾನ್ ಎಂಬ ಕ್ಯಾಚಿ ಟೈಟಲ್ ಇಡಲಾಗಿದೆ. ಫಸ್ಟ್ ಲುಕ್ ಪೋಸ್ಟರ್ ನ ಒಂದು‌ ಫೋಟೋದಲ್ಲಿ ನಿತಿನ್ ಗಡ್ಡ, ಕೂದಲು ಬಿಟ್ಟು ರಗಡ್ ಆಗಿ ಕಾಣಿಸಿಕೊಂಡಿದ್ರೆ, ಮತ್ತೊಂದು ಫೋಟೋದಲ್ಲಿ ಸ್ಟೈಲೀಶ್ ಆಗಿ ಮಿಂಚಿದ್ದಾರೆ. ಎರಡು ಶೇಡ್‌ನಲ್ಲಿ ನಾಯಕನನ್ನು ಪರಿಚಯ ಮಾಡಿಕೊಡಲಾಗಿದೆ. ಹಿಂದೆಂದೂ ಕಾಣದ ವಿಭಿನ್ನ ಪಾತ್ರದಲ್ಲಿ ನಿತಿನ್ ನಟಿಸಿದ್ದಾರೆ.

ಎಕ್ಸ್ಟ್ರಾ ಆರ್ಡಿನರಿ ಮ್ಯಾನ್ ಔಟ್ ಅಂಡ್ ಔಟ್ ಎಂಟರ್ ಟೈನ್ಮೆಂಟ್ ಸಿನಿಮಾವಾಗಿದ್ದು, ಈಗಾಗಲೇ 60% ಶೂಟಿಂಗ್ ಕಂಪ್ಲೀಟ್ ಮಾಡಲಾಗಿದೆ. ಇನ್ನು, ನಿತಿನ್ ಗೆ ಜೋಡಿಯಾಗಿ ಮೋಸ್ಟ್ ಹ್ಯಾಪನಿಂಗ್ ನಟಿ ಶ್ರೀಲೀಲಾ ನಟಿಸುತ್ತಿದ್ದಾರೆ. ಈ ಮೊದಲು ಈ ಚಿತ್ರದಲ್ಲಿ ರಶ್ಮಿಕಾ ನಾಯಕಿಯಾಗಿ ನಟಿಸುತ್ತಾರೆ ಅಂತ ಚಿತ್ರತಂಡ ಘೋಷಿಸಿತ್ತು.

ನಿತಿನ್- ರಶ್ಮಿಕಾ ನಟನೆಯ ‘ಭೀಷ್ಮ’ ಸಿನಿಮಾ ಹಿಟ್ ಆಗಿತ್ತು. ಹಾಗಾಗಿ ಅದೇ ಕಾಂಬಿನೇಷನ್‌ನಲ್ಲಿ ಮತ್ತೊಂದು ಸಿನಿಮಾ ಘೋಷಣೆ ಆಗಿತ್ತು. ಚಿತ್ರದಲ್ಲಿ ರಶ್ಮಿಕಾ ನಟಿಸೋದು ಕನ್ಫರ್ಮ್ ಆಗಿತ್ತು. ಸಿನಿಮಾ ಮುಹೂರ್ತ ಸಮಾರಂಭದಲ್ಲೂ ರಶ್ಮಿಕಾ ಭಾಗಿ ಆಗಿದ್ದರು. ಡೇಟ್ಸ್ ಕಾರಣದಿಂದ ರಶ್ಮಿಕಾ ಚಿತ್ರದಿಂದ ಹೊರ ನಡೆದಿದ್ದು, ಆ ಜಾಗಕ್ಕೆ ಶ್ರೀಲೀಲಾ ಎಂಟ್ರಿಯಾಗಿದೆ.

ಸುಧಾಕರ್ ರೆಡ್ಡಿ ಹಾಗೂ ನಿಖಿತಾ ರೆಡ್ಡಿ ಚಿತ್ರಕ್ಕೆ ಬಂಡವಾಳ ಹೂಡಿರುವ ಎಕ್ಸ್ಟ್ರಾಡಿನರಿ ಮ್ಯಾನ್ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ತಯಾರಾಗುತ್ತಿದೆ. ತೆಲುಗು, ಕನ್ನಡ, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಮೂಡಿ ಬರುತ್ತಿದೆ. ಟೈಟಲ್ ಹಾಗೂ ಫಸ್ಟ್ ಲುಕ್ ಅನೌನ್ಸ್ ಮಾಡಿರುವ ಚಿತ್ರತಂಡ ಬಿಡುಗಡೆ ದಿನಾಂಕವನ್ನೂ ಸಹ ತಿಳಿಸಿದೆ. ಇದೇ ವರ್ಷಾಂತ್ಯಕ್ಕೆ ಅಂದರೆ ಡಿಸೆಂಬರ್ 23ಕ್ಕೆ ಎಕ್ಸ್ಟ್ರಾಡಿನರಿ ಮ್ಯಾನ್ ಸಿನಿಮಾ ತೆರೆಗೆ ಬರಲಿದೆ.

Categories
ಸಿನಿ ಸುದ್ದಿ

ಈ ಪಟ್ಟಣಕ್ಕೆ ಐದು ಗ್ಯಾರಂಟಿ ಕೊಟ್ಟ ಚಿತ್ರತಂಡ! ಟೀಸರ್ ರಿಲೀಸ್ ಆಯ್ತು

ಈಗ ಜನರಿಗೆ ಗ್ಯಾರೆಂಟಿ ಹಾಗೂ ಭಾಗ್ಯಗಳ ಬಗ್ಗೆ ಹೆಚ್ಚು ಆಸಕ್ತಿ.
ಪ್ರಸ್ತುತ ತಮ್ಮ ಸಿನಿಮಾ ಟೀಸರ್ ಮೂಲಕ ಐದು ಗ್ಯಾರೆಂಟಿಗಳನ್ನು ನೀಡಲಿದೆ “ಈ ಪಟ್ಟಣಕ್ಕೆ ಏನಾಗಿದೆ ?” ಚಿತ್ರತಂಡ

ನೀವು ಯಾವುದೇ ಚಿತ್ರಮಂದಿರಕ್ಕೆ ಹೋದರೂ, ಚಿತ್ರ ಪ್ರಾರಂಭಕ್ಕೆ ಮೊದಲು ಬರುವ ಜಾಹಿರಾತಿನಲ್ಲಿ ಕೇಳುವ ಪದವೇ “ಈ ಪಟ್ಟಣಕ್ಕೆ ಏನಾಗಿದೆ?”. ಈಗ ಇದೇ ಪದ ಚಿತ್ರದ ಶೀರ್ಷಿಕೆ. ಶೀರ್ಷಿಕೆಯ ಮೂಲಕವೇ ಸಾಕಷ್ಟು ಕತೂಹಲ ಮೂಡಿಸಿರುವ ಈ ಚಿತ್ರ ರವಿತೇಜೊ ಸ್ಟುಡಿಯೋಸ್ ಮೂಲಕ ನಿರ್ಮಾಣವಾಗಿದೆ. ಬಿಡುಗಡೆಗೂ ಸಿದ್ದವಾಗಿದೆ. ಸದ್ಯದಲ್ಲೇ ಚಿತ್ರದ ಟೀಸರ್ ಬಿಡುಗಡೆಯಾಗಲಿದ್ದು, ಟೀಸರ್ ಮೂಲಕ ಚಿತ್ರದ ಕುರಿತು ಐದು ಗ್ಯಾರೆಂಟಿಗಳನ್ನು ಪ್ರೇಕ್ಷಕರಿಗೆ ನೀಡುವುದಾಗಿ ನಿರ್ದೇಶಕ ರವಿ ಸುಬ್ಬರಾವ್ ತಿಳಿಸಿದ್ದಾರೆ.

ಜೂಜು ಮತ್ತು ಬೆಟ್ಟಿಂಗ್ ಮಾಫಿಯಾದ ಸುತ್ತ ಹೆಣೆಯಲಾಗಿರುವ ಈ ಚಿತ್ರದಲ್ಲಿ ನಾಯಕ ತನ್ನ ವಿಲಾಸ ಜೀವನಕ್ಕಾಗಿ ಹೇಗೆ ಅನೇಕರನ್ನು ತನ್ನ ಮೋಸದ ಜಾಲಕ್ಕೆ ಬೀಳಿಸಿಕೊಂಡು ಉನ್ನತ ಸ್ಥಾನಕ್ಕೆ ಏರುತ್ತಾನೆ ಎನ್ನುವದರೊಂದಿಗೆ ಕ್ರಿಕೆಟ್ ಬೆಟ್ಟಿಂಗ್ ಜಾಲವನ್ನು ಕೂಡ ಕುತೂಹಲ ಭರಿತವಾಗಿ ತೋರಿಸಲಾಗಿದೆ.

ಪ್ಯಾನ್ ಇಂಡಿಯಾ ಚಿತ್ರವಾಗುವ ಎಲ್ಲ ಸಾಧ್ಯತೆಗಳನ್ನೊಳಗೊಂಡ ಯೂನಿವರ್ಸಲ್ ಅಂಶಗಳಿರುವ ಈ ಚಿತ್ರಕ್ಕೆ ರವಿ ಸುಬ್ಬ ರಾವ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ಮಾಣ ಹಾಗೂ ನಿರ್ದೇಶನ ಮಾಡಿರುವುದಲ್ಲದೆ, ನಾಯಕನಾಗೂ ಅಭಿನಯಿಸಿದ್ದಾರೆ. ರಾಧಿಕಾರಾಮ್ ಈ ಚಿತ್ರದ ನಾಯಕಿ. ರಿತೇಶ್ ಜೋಶಿ, ಶ್ರೀನಿಧಿ, ಸತೀಶ್ ಶೆಟ್ಟಿ , ಸೋನಾ , ದಿಶಾ , ಸಂಧ್ಯಾ ವೇಣು , ಶ್ರೀ ಕ್ರೇಜಿಮೈನ್ಡ್ಜ್ , ಬಲರಾಮ್ , ಸುಕನ್ಯಾ, ಗೋಪಾಲ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.

ರಿತೇಶ್ ಜೋಶಿ ಮತ್ತು ರವಿ ಸುಬ್ಬ ರಾವ್ ನಿರ್ಮಿಸಿರುವ ಈ ಚಿತ್ರಕ್ಕೆ ಅನಿಲ್ ಸಿ ಜೆ ಸಂಗೀತ ನೀಡಿದ್ದಾರೆ.
ನೆಲ್ಸನ್ ಮೆಂಡಿಸ್ ಸಂಕಲನ ಹಾಗೂ ವಿನೋದ್ , ಶ್ರೀ ಕ್ರೇಜಿಮೈಂಡ್ಸ್ ಛಾಯಾಗ್ರಹಣವಿದೆ.

“ಈ ಪಟ್ಟಣಕ್ಕೆ ಏನಾಗಿದೆ?” ಚಿತ್ರ ಎರಡು ಭಾಗಗಳಲ್ಲಿ ಬರುತ್ತಿದ್ದು, ಮೊದಲನೇ ಭಾಗ ತೆರೆಗೆ ಬರಲು ಸಿದ್ದವಾಗಿದೆ. ಎರಡನೇ ಭಾಗದ ಚಿತ್ರೀಕರಣ ಸದ್ಯದಲ್ಲೇ ಶುರುವಾಗಲಿದೆ.

Categories
ಸಿನಿ ಸುದ್ದಿ

ಜುಲೈ 24 ಹಾಸ್ಯ ಚಕ್ರವರ್ತಿ ಹುಟ್ದಬ್ಬ: ವರ್ಷವಿಡೀ ನರಸಿಂಹರಾಜು ಜನ್ಮ ಶತಮಾನೋತ್ಸವ

ಜುಲೈ 24, ನರಸಿಂಹರಾಜು ಅವರ ನೂರನೇ ಹುಟ್ಟುಹಬ್ಬ. ಈ ಸಂಭ್ರಮವನ್ನು ನರಸಿಂಹರಾಜು ಜನ್ಮ‌ ಶತಮಾನೋತ್ಸವ ಎಂಬ ಹೆಸರಿನಿಂದ ವರ್ಷವಿಡೀ ಹಲವು ಕಾರ್ಯಕ್ರಮಗಳೊಂದಿಗೆ ಆಚರಿಸಲು ನರಸಿಂಹರಾಜು ಅವರ ಕುಟುಂಬದವರು ಹಾಗೂ ಅಭಿಮಾನಿಗಳು ನಿರ್ಧರಿಸಿದ್ದಾರೆ.

ಈ ಕಾರ್ಯಕ್ರಮಗಳ ಪೈಕಿ ಮೊದಲನೆಯದಾಗಿ ನರಸಿಂಹರಾಜು ಅವರನ್ನು ಈಗಿನ ಯುವಜನತೆಗೆ ತಲುಪಿಸುವ ಪ್ರಯತ್ನ. ಹಾಗಾಗಿ ಹನ್ನೆರಡು ಜನರ ತಂಡ ಎರಡು ಟ್ರಕ್ ಗಳ ಮೂಲಕ ಕರ್ನಾಟಕದ ಮೂವತ್ತೆರಡು ಜಿಲ್ಲೆಗಳ ಆಯ್ದ ಕಾಲೇಜುಗಳಿಗೆ ಭೇಟಿ ನೀಡುತ್ತಾರೆ. ಆ ಟ್ರಕ್ ನಲ್ಲಿ ಎಲ್ ಇ ಡಿ ಅಳವಡಿಸಿ, ಆ ಮೂಲಕ ವಿದ್ಯಾರ್ಥಿಗಳಿಗೆ ನರಸಿಂಹರಾಜು ಅವರ ಬಗೆಗಿನ ತುಣುಕುಗಳನ್ನು ತೋರಿಸಲಾಗುತ್ತದೆ. ಆನಂತರ ನರಸಿಂಹರಾಜು ಅವರ ಕುರಿತು ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸಹ ಕೇಳಲಾಗುತ್ತದೆ.

ಆನಂತರ ಪ್ಯಾನ್ ಇಂಡಿಯಾ ಕಿರುಚಿತ್ರೋತ್ಸವ(ಹಾಸ್ಯದ ಕುರಿತು) ಆಯೋಜಿಸಲಾಗುವುದು. ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ದೊಡ್ಡಮಟ್ಟದ ಸಮಾರಂಭ ಆಯೋಜಿಸಿ, ಆ ಕಾರ್ಯಕ್ರಮದಲ್ಲಿ ಪ್ಯಾನ್ ಇಂಡಿಯಾ ಕಿರುಚಿತ್ರೋತ್ಸವದ ವಿಜೇತರಿಗೆ ಬಹುಮಾನ ನೀಡಲಾಗುತ್ತದೆ.


. ಕರ್ನಾಟಕದಾದ್ಯಂತ ವಿವಿಧ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಹಾಸ್ಯನಾಟಕಗಳನ್ನು (ನರಸಿಂಹರಾಜು ಅವರ ಅಭಿನಯದ ನಾಟಕಗಳು ಮಾತ್ರ). ಆಯೋಜಿಸಲಾಗುವುದು.

ಕರ್ನಾಟಕದ ಸುಮಾರು ಎಂಟು ಜಲ್ಲೆಗಳಲ್ಲಿ ಈಗಲೂ ನಾಟಕ ಕಂಪನಿಗಳಿದೆ. ಆ ಪ್ರಸಿದ್ದ ನಾಟಕ ಕಂಪನಿಗಳ ಮೂಲಕ ಜನಪ್ರಿಯ ನಾಟಕಗಳನ್ನು ಸೂರ್ಯಾಸ್ತದಿಂದ ಸೂರ್ಯೋದಯದವರೆಗೂ ಆಯೋಜಿಸುವ ಯೋಜನೆಯಿದೆ. ಹೀಗೆ ಇನ್ನೂ ಹಲವಾರು ಕಾರ್ಯಕ್ರಮಗಳ ಮೂಲಕ ನರಸಿಂಹರಾಜು ಅವರ ಜನ್ಮ ಶತಮಾನೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ತಯಾರಿ ನಡೆಯುತ್ತಿದೆ.

ಈ ಎಲ್ಲಾ ಕಾರ್ಯಕ್ರಮಗಳಿಗೆ ಜುಲೈ 24 ರಂದು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ ಎಂದು ನರಸಿಂಹರಾಜು ಅವರ ಪುತ್ರಿ ಸುಧಾ ನರಸಿಂಹರಾಜು, ನರಸಿಂಹರಾಜು ಅವರ ಮೊಮ್ಮಕ್ಕಳಾದ ಅರವಿಂದ್ ಹಾಗೂ ಅವಿನಾಶ್ ತಿಳಿಸುತ್ತಿದ್ದಾರೆ

error: Content is protected !!