Categories
ಸಿನಿ ಸುದ್ದಿ

ಸ್ಯಾಂಡಲ್ ವುಡ್ ಕ್ವೀನ್ ಪಟ್ಟದ‌ ಮೇಲೆ‌ ಡಿಂಪಲ್ ಕ್ವೀನ್!

ಬುಲ್‌ ಬುಲ್ ಬೆಡಗಿಗೆ ಕೈ‌ತುಂಬಾ ಅವಕಾಶ, ರಚಿತಾ ಸಕ್ಸಸ್ ಗೆ ಕಾರಣ ಆದೊಂದು ವ್ಯಾನಿಟಿ ಬ್ಯಾಗ್ !?

ಸ್ಯಾಂಡಲ್ ವುಡ್ ನಲ್ಲೀಗ ಬಹುಬೇಡಿಕೆಯ  ನಟಿ ಯಾರು ?  ಕನ್ನಡ ಸಿನಿಮಾ ಪ್ರೇಮಿಗಳಿಗೆ ಹೀಗೊಂದು ಪ್ರಶ್ನೆ ಎದುರಾದರೆ ಥಟ್ಟಂತೆ ಬರುವ ಉತ್ತರ ಡ್ವಿಂಪಲ್ ಕ್ವೀನ್ ರಚಿತಾ ರಾಮ್. ಅದು ಉತ್ಪ್ರೇಕ್ಷೆಯೂ ಅಲ್ಲ.ರಚಿತಾ ರಾಮ್ ಅವರ ಕೈಯಲ್ಲಿರುವ ಸಿನಿಮಾಗಳು, ಜತೆಗೆ ಅವರಿಗೀಗ ಬರುತ್ತಿರುವ ಅವಕಾಶ ನೋಡಿದರೆ ಅದು ನೂರಕ್ಕೆ ನೂರರಷ್ಟು ಸತ್ಯವಾದ ಮಾತು.

ಸದ್ಯಕ್ಕೆ‌ ರಚಿತಾ ರಾಮ್ ನಾಯಕಿಯಾಗಿರುವ ಸಿನಿಮಾಗಳನ್ನೇ ನೋಡಿ, ಏಕ್ ಲವ್ ಯಾ , ಏಪ್ರಿಲ್, ವೀರಂ, ಡಾಲಿ, ಲಿಲ್ಲಿ , ಮಾನಸೂನ್ ರಾಗಾ ಸೇರಿದಂತೆ ಇನ್ನು ಹೆಸರಿಡದ ಮೂರ್ನಾಲ್ಕು ಸಿನಿಮಾಗಳಿಗೂ ಅವರು ನಾಯಕಿ. ಹಾಗೆಯೇ ತೆಲುಗಿನ’ ಸೂಪರ್ ಮಿರ್ಚಿ’ ಹೆಸರಿನ ಚಿತ್ರಕ್ಕೂ ಅವರು ನಾಯಕಿ.‌ ಮೂಲಗಳ ಪ್ರಕಾರ ಇದು ತೆಲುಗು ಹಾಗೂ ಕನ್ನಡ ಎರಡು ಭಾಷೆಯಲ್ಲೂ ಬರಲಿದೆ. ಅದೃಷ್ಟ ಅಂದ್ರೆ ಇದೇ ಅಲ್ವಾ? 2021 ರ ಜತೆಗೆ 2022 ಕ್ಕೂ ಅವರು ಫುಲ್ ಬ್ಯುಸಿ. ಆ ಮಟ್ಟಿಗೀಗ ರಚಿತಾ ರಾಮ್ ಸ್ಯಾಂಡಲ್ ವುಡ್ ನ ಬಹು ಬೇಡಿಕೆಯ ನಟಿ.

ಅಷ್ಟೇ ಯಾಕೆ,  ರಚಿತಾ ನಾಯಕಿಯಾಗಿರುವ ಮತ್ತೊಂದು ಹೊಸ ಸಿನಿಮಾ ಅನೌನ್ಸ್ ಆಗಿದೆ. ‘ಇನ್ಸ್ ಸ್ಪೆಕ್ಟರ್ ವಿಕ್ರಂ’ ಚಿತ್ರದ ನಿರ್ಮಾಪಕ ವಿಖ್ಯಾತ್ ನಿರ್ಮಾಣದ ಮತ್ತೊಂದು ಹೊಸ ಚಿತ್ರಕ್ಕೆ ರಚಿತಾ ನಾಯಕಿ ಆಗಿರುವ ಸುದ್ದಿ ಈಗ ಹೊರ ಬಿದ್ದಿದೆ. ಇತ್ತೀಚೆಗೆ ಅವರ ಹುಟ್ಟು ಹಬ್ಬಕ್ಕೆ ಚಿತ್ರ ತಂಡ ಪೋಸ್ಟರ್ ಲಾಂಚ್ ಮಾಡುವ ಮೂಲಕ ಈ ಸುದ್ದಿ ಬಹಿರಂಗ ಪಡಿಸಿದೆ.ಈಗಾಗಲೇ ಅದರ ಶೂಟಿಂಗ್ ಕೂಡ ಮುಗಿದಿದೆ. ಇಷ್ಟರಲ್ಲಿಯೇ ಅದರ ಟೈಟಲ್ ಲಾಂಚ್ ಆಗಲಿದೆಯಂತೆ.

ಹಾಗೆಯೇ ‘ಅಯೋಗ್ಯ’ ಚಿತ್ರದ ಜೋಡಿ ಮತ್ತೊಮ್ಮೆ ಒಂದಾಗುತ್ತಿದೆ. ಸತೀಶ್ ನೀನಾಸಂ ಹಾಗೂ‌ ರಚಿತಾ ಜೋಡಿಯ ಚಿತ್ರ ‘ಮ್ಯಾಟ್ನಿ’ ಗೆ ಮುಹೂರ್ತ ಮುಗಿದಿದೆ.ಹೊಸ ಪ್ರತಿಭೆ ಮನೋಹರ್ ಈ ಚಿತ್ರದ ಸಾರಥ್ಯ ವಹಿಸಿಕೊಂಡಿದ್ದಾರೆ. ಅಲ್ಲಿಗೆ ಸಾಲು‌ಸಾಲು ಸಿನಿಮಾಗಳಿಗೆ ನಾಯಕಿಯಾಗಿರುವ ರಚಿತಾ ರಾಮ್, ಕಿರುತೆರೆಯಲ್ಲೂ ಅಷ್ಟೇ ಬ್ಯುಸಿ ಎನ್ನುವುದು ನಿಮಗೂ‌ ಗೊತ್ತು. ಹಾಗಂತ ಕಿರುತೆರೆ ಅವರಿಗೇನು ಹೊಸದಲ್ಲ. ಬಿಂದಿಯಾ ರಾಮ್ ಎನ್ನುವ ಗುಳಿಕೆನ್ನೆ ಚೆಲುವೆ ಕಿರುತೆರೆ ಲೋಕದಿಂದಲೇ ಸಿನಿಮಾ‌ ಪ್ರಪಂಚಕ್ಕೆ ಬಂದು‌ ರಚಿತಾ ರಾಮ್ ಆಗಿದ್ದು. ಕಿರುತೆರೆ ಲೋಕದ ಜನಪ್ರಿಯತೆಯಿಂದಲೇ ಸಿನಿ ದುನಿಯಾಕ್ಕೆ ಬಂದು ಬುಲ್ ಬುಲ್ ಬೆಡಗಿ ಅಂತಲೇ ಮನೆ‌ಮಾತಾಗಿದ್ದು ರಚಿತಾ ಅವರ ಹೆಗ್ಗಳಿಕೆ. ಹಾಗೆಯೇ ರಚಿತಾ ಪಾಲಿಗೆ ಇದ್ದ ಅದೃಷ್ಟ ಸ್ಟಾರ್ ನಟರ ಸಿನಿಮಾಗಳಿಗೇ ಒಂದಷ್ಟು ಸಮಯ ನಾಯಕಿಯಾಗಿ ಮೆರೆದಿದ್ದು. ಇಂತಹ ಅದೃಷ್ಟ ಯಾರಿಗುಂಟು ಯಾರಿಗಿಲ್ಲ! ಹಾಗಿದ್ದು ರಚಿತಾ ರಾಮ್ ಒಂದಷ್ಟು ಸಮಯ‌ ಅವಕಾಶಕ್ಕೆ ಎದುರು ನೋಡುವಂತಾಗಿದ್ದರ ಕಾರಣ ಇನ್ನು ನಿಗೂಢ. ಅದು ಕೂಡ ಹೆಚ್ಚೇನು ದಿನ ಅಲ್ಲ. ಮತ್ತೆ ಫಿನಿಕ್ಸ್ ನಂತೆ ಮತ್ತೆ ಎದ್ದು ಕುಳಿತರು. ಸಣ್ಣ ಗ್ಯಾಪ್ ಅವರ ಅನುಪಸ್ಥಿತಿಯನ್ನೇ ಮರೆಸಿ‌ಬಿಟ್ಟಿತು. ಅಯೋಗ್ಯ ಸೂಪರ್ ಹಿಟ್ ಆಯಿತು. ಕೈ ತುಂಬಾ ಅವಕಾಶ ಸಿಕ್ಕವು. ಅತ್ತ ಕಿರುತೆರೆ ಯಲ್ಲೂ‌ಬ್ಯುಸಿಯಾದರು. ಈಗ ಏನಿಲ್ಲ ಅಂದ್ರು ಹತ್ತು ಸಿನಿಮಾಗಳಿಗೆ ಅವರು ನಾಯಕಿ.‌ ಎರಡು ವರ್ಷ ಫುಲ್ ಬ್ಯುಸಿ.

ಇಷ್ಟು ಬ್ಯುಸಿ ಇರುವ ಕನ್ನಡದ ನಟಿ‌ಮತ್ತೊಬ್ಬರಿಲ್ಲ. ಹಾಗಾದ್ರೆ ರಚಿತಾ ಅವರ ಸಕ್ಸಸ್ ಫುಲ್ ಜರ್ನಿಯ ರಹಸ್ಯವೇನು? ಸಿನಿಮಾಗಳ ಆಯ್ಕೆ. ಅನಗತ್ಯ ವಿವಾದಗಳಿಗೆ ಸಿಲುಕದಿರುವುದು. ಹಾಗೆ ನೋಡಿದರೆ ರಚಿತಾ ರಾಮ್ ತುಂಬಾ ಟ್ಯಾಲೆಂಟೆಡ್ ನಟಿ. ಯಾವುದು ಹೇಗೆ ವರ್ಕ್ ಆಗುತ್ತೆ, ಯಾವ ಪಾತ್ರ ಜನ‌ಮೆಚ್ಚುಗೆ ಪಡೆಯುತ್ತೆ, ಯಾವ ಸ್ಟಾರ್ ಜತೆಗೆ ನಟಿಸಿದರೆ ಇಮೇಜ್ ಹೆಚ್ಚಾಗುತ್ತೆ ಎನ್ನುವ ಲೆಕ್ಕಾಚಾರ ಹಾಕಿಕೊಂಡೆ ಸಿನಿಮಾ ಒಪ್ಪಿಕೊಳ್ಳುತ್ತಾರೆ. ಜತೆಗೆ ಯಾವ ವಿಷಯಕ್ಕೆ ಎಷ್ಟು ತಲೆ‌ಕಡಿಸಿಕೊಳ್ಳಬೇಕು ಎನ್ನುವ ಬುದ್ದಿಮತ್ತೆ ಕೂಡ ಅವರಿಗಿದೆ. ಹಾಗಾಗಿಯೇ ರಚಿತಾ ರಾಮ್ ಎಂಬ ಗುಳಿಕೆನ್ನೆ ಚೆಲುವೆ ಈಗ ನಟನೆ ಎಂಬ ಕಲಾ‌ ಕ್ರೀಡಾಂಗಣದಲ್ಲಿ ನಾಗಲೋಟದಲ್ಲಿದ್ದಾರೆ. ಅದಿರಲಿ, ಕನ್ನಡದ ನಂಬರ್ ಪಟ್ಟದ ಮೇಲೆ ಡಿಂಪಲ್ ಕ್ವೀನ್  ಪವಡಿಸಿರುವುದರ ಹಿಂದಿನ ಇನ್ನೊಂದು ಸತ್ಯ ಈಗ ಅವರಿಂದಲೇ ರಿವೀಲ್ ಆಗಿದೆ.

 “ನನ್ನ ಬಳಿಯೊಂದು ವೈಟ್ ವ್ಯಾನಿಟಿ ಬ್ಯಾಗ್‌ಇದೆ. ಅದನ್ನು ನನ್ನ ಬಳಿ ಬಂದ‌ ಮೇಲೆ ನಿಜಕ್ಕೂ ಒಳ್ಳೆಯದೆ ಆಗಿದೆ. ಸಾಕಷ್ಟು ಅವಕಾಶಗಳು ಬಂದಿವೆ. ಒಂದಷ್ಟು ಸಂಪಾದನೆಯೂ ಆಗಿದೆ. ಲಕ್ ಅಂತಾರಲ್ಲ ಹಾಗೆ ನನ್ನ ಪಾಲಿಗೆ ಆ ವ್ಯಾನಿಟಿ ಬ್ಯಾಗ್”

ಎನ್ನುವ ಮೂಲಕ‌‌ ತಮ್ಮ ಸಕ್ಸಸ್ ಫುಲ್ ಜರ್ನಿಯ ಹಿಂದಿನ ರಹಸ್ಯ ವನ್ನು ಕಲರ್ಸ್ ಕನ್ನಡದ ಮಜಾ‌ಭಾರತ ವೇದಿಕೆಯಲ್ಲಿ ಬಿಚ್ಚಿಟ್ಟಿದ್ದಾರೆ ರಚಿತಾ ರಾಮ್. ಅವರಿಗೆ ಮತ್ತಷ್ಟು ಅವಕಾಶ ಸಿಗಲಿ. ಡಿಂಪಲ್ ಕ್ವೀನ್ ಎಂಬ ಖ್ಯಾತಿಯ ಜತೆಗೆ ಸ್ಯಾಂಡಲ್ ವುಡ್ ಕ್ವೀನ್ ಎನ್ನುವ ಪಟ್ಟವೂ ಸಿಗಲಿ ಎನ್ನುವುದು  ‘ಸಿನಿ‌ಲಹರಿ‌’  ಹಾರೈಕೆ.

Categories
ಸಿನಿ ಸುದ್ದಿ

ಲವ್‌ ಹಾಸ್ಟೆಲ್‌ನಲ್ಲಿ ನಿಂತ ಶಾರುಖ್!

ಹೊಸ ಸಿನ್ಮಾ ನಿರ್ಮಾಣಕ್ಕೆ ಕೈ ಹಾಕಿದ ಬಾಲಿವುಡ್‌ ಬಾದ್‌ಶಾ

ಶಾರುಖ್‌ಖಾನ್‌ ಸದ್ಯಕ್ಕೆ ಐಪಿಎಲ್‌ ಪಂದ್ಯಾವಳಿಯಲ್ಲೇ ಬಿಝಿಯಾಗಿದ್ದಾರೆ. ಅಷ್ಟಕ್ಕೂ ಅವರ ಮುಂದಿನ ಸಿನಿಮಾ ಯಾವುದು ಅನ್ನುವುದಕ್ಕೆ ಇದುವರೆಗೆ ಉತ್ತರವಿರಲಿಲ್ಲ. ಇದೀಗ ಅವರೇ ಸ್ವತಃ ಹೊಸ ಚಿತ್ರ ಮಾಡುತ್ತಿರುವ ಬಗ್ಗೆ ಘೋಷಣೆ ಮಾಡಿದ್ದಾರೆ. ಹೌದು, ಬಾಲಿವುಡ್‌ ನಟ ಶಾರುಖ್‌ ಖಾನ್‌ ಕಳೆದ ಎರಡು ವರ್ಷಗಳಿಂದಲೂ ಯಾವುದೇ ಸಿನಿಮಾ ಘೋಷಣೆ ಮಾಡಿರಲಿಲ್ಲ. ತಮ್ಮ ಬಹು ಕನಸಿನ “ಜೀರೋ” ಸಿನಿಮಾ ನಂತರ ಹೊಸದೊಂದು ಮ್ಯಾಜಿಕ್‌ ಆಗುತ್ತೆ ಅಂದುಕೊಂಡಿದ್ದರು. ಆದರೆ, ಅವರು ಅಂದುಕೊಂಡಂತಹ ದೊಡ್ಡ ಮ್ಯಾಜಿಕ್‌ ನಡೆಯಲೇ ಇಲ್ಲ. “ಜೀರೋ” ಕೂಡ ಪ್ರೇಕ್ಷಕ ಪ್ರಭುವಿನ ಮನಸ್ಸನ್ನು ತಟ್ಟಲಿಲ್ಲ. ಹಾಗಾಗಿ ಅವರು ಈಗ ಹೊಸ ಸಿನಿಮಾ ಅನೌನ್ಸ್‌ ಮಾಡಿದ್ದಾರೆ. ಹಾಗಂತ ಶಾರುಖ್‌ ಖಾನ್‌ ಅವರು ನಟಿಸುತ್ತಿದ್ದಾರಾ? ಈ ಪ್ರಶ್ನೆಗೆ ಉತ್ತರ, ಖಂಡಿತ ಇಲ್ಲ. ಅವರು ತಮ್ಮ ರೆಡ್‌ ಚಿಲ್ಲಿಸ್‌ ಎಂಟರ್‌ಟೈನ್‌ಮೆಂಟ್‌ ಬ್ಯಾನರ್‌ನಡಿ ಹೊಸದೊಂದು ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ ಎಂಬುದು ಸುದ್ದಿ.

 

ಆ ಸಿನಿಮಾಗೆ “ಲವ್‌ ಹಾಸ್ಟೆಲ್‌” ಎಂಬ ಹೆಸರನ್ನಿಡಲಾಗಿದೆ. ಅಂದಹಾಗೆ, “ಲವ್‌ ಹಾಸ್ಟೆಲ್‌” ಕ್ರೈಂ ಥ್ರಿಲ್ಲರ್‌ ಕಥೆ ಹೊಂದಿದೆ. ಈ ಚಿತ್ರಕ್ಕೆ ಶಂಕರ್‌ ರಾಮನ್‌ ನಿರ್ದೇಶನವಿದೆ. ಗೌರಿ ಖಾನ್‌ ಮತ್ತು ಮನೀಶ್‌ ಮುಂದ್ರ, ಗೌರವ್‌ ವರ್ಮಾ ಅವರು ಜೊತೆಗೂಡಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಈ ಹೊಸ ಚಿತ್ರದಲ್ಲಿ ಸನ್ಯ ಮಲ್ಹೋತ್ರ, ವಿಕ್ರಾಂತ್ ಮಸ್ಸಿ, ಮತ್ತು ಬಾಬಿ ಸೇರಿದಂತೆ ಇತರರು ನಟಿಸುತ್ತಿದ್ದಾರೆ. ಮುಂದಿನ ವರ್ಷ ಶುರುವಾಗಲಿದ್ದು, ವರ್ಷದ ಅಂತ್ಯದಲ್ಲಿ ಬಿಡುಗಡೆ ಕಾಣುವ ಸಾಧ್ಯತೆ ಇದೆ.
ಹಾಗಾದರೆ, ಶಾರುಖ್‌ಖಾನ್‌ ನಟಿಸೋದು ಯಾವಾಗ? ಅವರ ಮುಂದಿನ ಚಿತ್ರ ಯಾವುದು? ಇದಕ್ಕಿನ್ನೂ ಉತ್ತರವಿಲ್ಲ. ಆದರೆ, ತಮಿಳು ನಿರ್ದೇಶಕ ಅಟ್ಲಿ ಹಾಗೂ ರಾಜ್‌ಕುಮಾರ್‌ ಹಿರಾನಿ ಮತ್ತು ಸಿದ್ಧಾರ್ಥ್‌ ಆನಂದ ನಿರ್ದೇಶಕರ ಚಿತ್ರದಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅದಕ್ಕಿನ್ನೂ ಸ್ಪಷ್ಟತೆ ಇಲ್ಲ.

Categories
ಸಿನಿ ಸುದ್ದಿ

ಎಲ್ಲರೂ ಪ್ರೀತಿಸುತ್ತ ಬಾಳೋಣ ಜಗ್ಗೇಶ್‌ ನುಡಿಮುತ್ತು

ಇರೋ ತನಕ ಸಂಬ‍ಂಧ, ಹೋದ ಮೇಲೆ ನೆನಪು ಮಾತ್ರ!

ಜಗ್ಗೇಶ್‌ ಸದಾ ಸೋಶಿಯಲ್‌ ಮೀಡಿಯಾದಲ್ಲಿ ಸುದ್ದಿಯಲ್ಲಿರುತ್ತಾರೆ. ಅವರು ಹಾಕುವ ಒಂದೊಂದು ಸ್ಟೇಟಸ್‌ನಲ್ಲೂ ಸಾಕಷ್ಟು ಸಂದೇಶ ಅಡಗಿರುತ್ತೆ. ಅವರು ಆಗಾಗ ತಮ್ಮ ಟ್ವಿಟರ್‌ ಖಾತೆಯಲ್ಲಿ, ಫೇಸ್‌ಬುಕ್‌ ಖಾತೆಯಲ್ಲಿ ಒಂದಷ್ಟು ಫೋಟೋ ಜೊತೆ ಬರೆದುಕೊಂಡಿದ್ದಾರೆ.
ಅಷ್ಟಕ್ಕೂ ಜಗ್ಗೇಶ್‌ ಬರೆದುಕೊಂಡಿದ್ದೇನು ಗೊತ್ತಾ?

ಅವರೇ ಬರೆದುಕೊಂಡ ಬರಹವಿದು…
“ಇರುವವರೆಗೂ ಸಂಬಂಧಗಳು, ಹೋದ ಮೇಲೆ ನೆನಪು ಮಾತ್ರ…” ಹೀಗೆ ಬರೆದುಕೊಂಡು ಅದರೊಂದಿಗೆ ತಮ್ಮ ಪತ್ನಿ ಪರಿಮಳ, ಮಕ್ಕಳಾದ ಗುರುರಾಜ್‌, ಯತಿ ಜಗ್ಗೇಶ್‌ ಹಾಗು ಸೊಸೆ, ಮೊಮ್ಮಗನೊಂದಿಗಿನ ಫೋಟೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಾಕಿದ್ದಾರೆ. ಅಷ್ಟಕ್ಕೂ ಈ ಫೋಟೋ ಹಾಕಿಕೊಂಡು ಬರೆದಿಕೊಂಡಿರುವ ಜಗ್ಗೇಶ್‌, ಪರಿಮಳ ಜಗ್ಗೇಶ್‌ ಅವರ ಹುಟ್ಟುಹಬ್ಬದ ವೇಳೆ. ಇತ್ತೀಚೆಗೆ ಪರಿಮಳ ಜಗ್ಗೇಶ್‌ ಅವರ ಹುಟ್ಟುಹಬ್ಬವನ್ನು ಕುಟುಂಬದವರೆ ಸೇರಿ ಆಚರಿಸಿಕೊಂಡಿದ್ದಾರೆ. “ಮಡದಿ ಪರಿಮಳನಿಗೆ ಸಣ್ಣ ಸಂತೋಷ ನೀಡಿದ ಪುಟ್ಟ ಸಂಸಾರದ ಸದಸ್ಯರು. ಭೂಮಿಯಲ್ಲಿ ಇರುವಷ್ಟು ದಿನ ಮಾತ್ರ ಸಂತೋಷ ಸಂಬಂಧ, ನಂತರ ನೆನಪು ಮಾತ್ರದ ನಶ್ವರ ಜಗತ್ತು. ಸಾಧ್ಯವಾದಷ್ಟು ಸಂತೋಷ ಪಡೆದು ಹಂಚಿ ಬಾಳಿಬಿಡಬೇಕು. ಇರುವವರೆಗು ಸಂಬಂಧಗಳು ಹೋದಮೇಲೆ ನೆನಪು ಮಾತ್ರ. ಬದುಕಿನ ಚಿತ್ರಕಥೆ ದೇವರಿಂದ ಬರೆಯಲ್ಪಟ್ಟ ಕಥಾಸಂಗಮ. ನಾವೆಲ್ಲಾ ಪಾತ್ರದಾರಿಗಳು ಮಾತ್ರ. ನಮ್ಮ ಬದುಕಿನ ಅದ್ಭುತ ಚಿತ್ರಕಥೆ ಬರೆದು ಅದರಲ್ಲಿ ಕೋಟ್ಯಂತರ ಪ್ರೀತಿಸುವ ನಿಮ್ಮ ಆತ್ಮಗಳನ್ನು ನಮ್ಮ ಬದುಕಿಗೆ ಸೇರಿಸಿದ ದೇವರಿಗೆ ಧನ್ಯವಾದ. ಪ್ರೀತಿಸುತ್ತ ಬಾಳುವ. ಪ್ರೀತಿ ದೇವರ ಇನ್ನೊಂದು ರೂಪ” ಎಂದು ಅರ್ಥಪೂರ್ಣವಾಗಿ ಬರೆದುಕೊಂಡಿದ್ದಾರೆ.

Categories
ಸಿನಿ ಸುದ್ದಿ

ರಾಜಕೀಯದ ಜತೆಗೆ ಚಿತ್ರರಂಗಕ್ಕೂ ಕಾಲಿಟ್ಟ ಕರ್ನಾಟಕದ ಸಿಂಗಂ!

( exclusive cinilahari)

ಅರಬ್ಬಿ ಚಿತ್ರಕ್ಕಾಗಿ ಬಣ್ಣ ಹಚ್ಚಿದ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ

ಕರ್ನಾಟಕದ ಸಿಂಗಂ ಎಂದೇ ಖ್ಯಾತಿ ಪಡೆದಿದ್ದ ಮಾಜಿ‌ ಐಪಿಎಸ್ ಅಧಿಕಾರಿ ಅಣ್ಣಾಮಲೈ , ಮೊನ್ನೆ ಮೊನ್ನೆಯಷ್ಠೇ ರಾಜಕೀಯ ಅಖಾಡಕ್ಕೆ ಪ್ರವೇಶಿಸಿದರು‌. ಪ್ರಧಾನಿ‌ ಮೋದಿ ಅವರ ಕಾರ್ಯವೈಖರಿಗೆ ಪ್ರಭಾವಿತರಾಗಿದ್ದ ಅವರು, ಬಿಜೆಪಿಗೆ ಅಧಿಕೃತ ವಾಗಿ ಸೇರ್ಪಡೆಗೊಂಡಿದ್ದು ನಿಮಗೂ ಗೊತ್ತು. ಇದೀಗ ಅವರ ಮತ್ತೊಂದು ಸಂಗತಿ ರಿವೀಲ್ ಆಗಿದೆ. ರಾಜಕೀಯ ರಂಗ ಪ್ರವೇಶಿಸಿದ ಬೆನ್ನಲೇ ನಟರಾಗಿ ಈಗ ಸಿನಿಮಾ ರಂಗಕ್ಕೂ ಎಂಟ್ರಿಯಾಗುತ್ತಿದ್ದಾರೆ. ರಾಜಕೀಯಕ್ಕೆ ತಮ್ನ ಸ್ವಂತ ಊರು ತಮಿಳುನಾಡನ್ನೇ ಕರ್ಮಭೂಮಿಯನ್ನಾಗಿ ಸ್ವೀಕರಿಸಿರುವ ಅವರು, ಬಣ್ಣದ ಬದುಕನ್ನು ಕರ್ನಾಟಕದಿಂದ ಆರಂಭಿಸುತ್ತಿದ್ದಾರೆ‌. ರಾಜು ಪಾವಗಡ ನಿರ್ದೇಶನದ’ ಅರಬ್ಬಿ’ ಹೆಸರಿನ ಚಿತ್ರಕ್ಕಾಗಿ ಅವರು ಇದೇ ಮೊದಲು ನಟರಾಗಿ ಬಣ್ಣ ಹಚ್ಚಿದ್ದಾರೆ‌.

ಅಷ್ಟೇ ಅಲ್ಲ, ಎರಡು ದಿನಗಳ ಕಾಲ ಬೆಂಗಳೂರು ಹಾಗೂ ರಾಮನಗರ ಸಮೀಪದ ಜಾನಪದ ಲೋಕದಲ್ಲಿ ನಡೆದ ಚಿತ್ರೀಕರಣದಲ್ಲೂ ಭಾಗವಹಿಸಿದ್ದಾರೆ. ಇದನ್ನು ಚಿತ್ರ ತಂಡವೇ ಅಧಿಕೃತವಾಗಿ ಹೇಳಿಕೊಂಡಿದೆ‌. ಸದ್ಯಕ್ಕೆ ಭಾರೀ ಸುದ್ದಿಯಲ್ಲಿರುವ ಅಣ್ಣಾಮಲೈ ಅವರನ್ನು ‘ಅರಬ್ಬಿ ಚಿತ್ರ ತಂಡ’ ಇದೇ ಮೊದಲು, ಸಿನಿಮಾಕ್ಕೆ ಕರೆ ತಂದಿರು ವುದೇ ಕುತೂಹಲ ಕಾರಿಯಾದ ಸಂಗತಿ. ಅ ಬಗ್ಗೆ ಅತೀವ ಸಂತಸದಲ್ಲಿರುವ ನಿರ್ದೇಶಕ ರಾಜು ಪಾವಗಡ, ಕರ್ನಾಟಕದ ಸಿಂಗಂ ಅಣ್ಣಾಮಲೈ ಅವರನ್ನು ಚಿತ್ರಕ್ಕೆ ಕರೆತಂದಿದ್ದು ಹೇಗೆ, ಯಾವ ರೀತಿಯ ಪಾತ್ರಕ್ಕೆ ಅಣ್ಣಾಮಲೈ ಅವರು ಬಣ್ಣ ಹಚ್ಚಿದ್ದಾರೆ, ಅವರನ್ನೇ ಯಾಕೆ ಚಿತ್ರ ತಂಡ ಆಯ್ಕೆ ಮಾಡಿಕೊಂಡಿತು ಎನ್ನುವ ಬಗ್ಗೆ ಚಿತ್ರದ ನಿರ್ದೇಶಕ ರಾಜು ಪಾವಗಡ ಉತ್ತರಿಸಿದ್ದಾರೆ.

‘ ನಮ್ಮ ಪಾಲಿಗೆ ಇದೊಂದು ಹೆಮ್ಮೆಯ ಸಂಗತಿ. ಅವರು ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಎಂಟ್ರಿಯಾದ ನಂತರ ಸಿನಿಮಾ‌, ಗಿನಿಮಾ ಅಂತ ಬರುತ್ತಾರೋ ಇಲ್ಲವೋ ಅಂತ ಅನುಮಾನ ಇತ್ತು‌. ಆದರೆ ಅವರನ್ನು ಸಂಪರ್ಕಿಸಿ, ನಮ್ಮ ಚಿತ್ರದಲ್ಲಿನ ವಿಶೇಷ ಪಾತ್ರದಲ್ಲಿ ಅಭಿನಯಿಸಬೇಕು ಅಂತ ಕೇಳಿಕೊಂಡಾಗ ಆಯ್ತು ನೋಡೋಣ ಅಂದಿದ್ದರು. ಆದರೂ ಅನುಮಾನ ಇತ್ತು. ಕೊನೆಗೂ ಅವರು ನಮ್ಮ ಮನವಿಗೆ ಮನ್ನಣೆ ನೀಡಿ,
ಚಿತ್ರೀಕರಣಕ್ಕೆ ಬಂದರು‌. ಎರಡು ದಿವಸ ಚಿತ್ರೀಕರಣದಲ್ಲಿ ಭಾಗವಹಿಸಿದರು. ಬೆಂಗಳೂರು ಹಾಗೂ ರಾಮನಗರದ ಜಾನಪದ ಲೋಕದಲ್ಲಿ‌ಚಿತ್ರೀಕರಣ ನಡೆಯಿತು‌.‌ ಚಿತ್ರೀಕರಣಕ್ಕೆ ಅವರು‌ ತುಂಬಾ ಸಪೋರ್ಟ್ ಮಾಡಿದರು’ ಎನ್ನುತ್ತಾರೆ ನಿರ್ದೇಶಕ ರಾಜು ಪಾವಗಡ. ಇನ್ನು‌ ಕುತೂಹಲ ಇರೋದು ಅಣ್ಣಾಮಲೈ ಅವರ ಪಾತ್ರ.


ಅಂತಾರಾಷ್ಟ್ರೀಯ ಈಜು ಪಟು ವಿಶ್ವಾಸ್ ಅವರ ಜೀವನ ಕುರಿತ ಚಿತ್ರವೇ ‘ಅರಬ್ಬಿ’.ಈ‌ ಚಿತ್ರದಲ್ಲಿ ವಿಶ್ವಾಸ್ ಕೋಚ್ ಆಗಿ ಅಣ್ಣಾಮಲೈ ಕಾಣಿಸಿಕೊಳ್ಳುತ್ತಿದ್ದಾರೆ‌. ಚಿತ್ರೀಕರಣದ ಸಮಯದಲ್ಲಿ ಅವರೊಂದಿಗೆ ತಮಿಳು ಚಿತ್ರ ನಿರ್ದೇಶಕ ಡೆಸಿಂಗ್ ಪೆರಿಯ ಸ್ವಾಮಿ ಭಾಗವಹಿಸಿದ್ದರು.

Categories
ಸಿನಿ ಸುದ್ದಿ

ಗುಡ್‌ ಗುಡ್ಡರ್‌ ಗುಡ್ಡೆಸ್ಟ್…!‌ ವಿನೂತನ ಚಿತ್ರ

ಹೊಸಬರ ಹೊಸ ಪ್ರಯತ್ನ, ಪ್ರಯೋಗ

ನಿರ್ದೇಶಕ ಸಂದೀಪ್‌ ಬಿ.ಹೆಚ್

ಕನ್ನಡ ಚಿತ್ರರಂಗ ಇದೀಗ ಗರಿಗೆದರಿದೆ. ಕಳೆದ ಏಳೆಂಟು ತಿಂಗಳಿನಿಂದಲೂ ಕೊರೊನಾ ಹೊಡೆತಕ್ಕೆ ಮೆತ್ತಗಾಗಿದ್ದ ಚಿತ್ರರಂಗ ಇದಿಗ ಪುನಃ ಪುಟಿದೇಳುತ್ತಿದೆ. ಹೌದು, ಕೊರೊನಾ ಸಮಸ್ಯೆಯಿಂದಾಗಿ ಸ್ಥಗಿತಗೊಂಡಿದ್ದ ಚಿತ್ರರಂಗ ಮೆಲ್ಲನೆ ಚೇತರಿಸಿಕೊಳ್ಳುತ್ತಿದೆ. ಕಳೆದ ಅಕ್ಟೋಬರ್ ಎರಡನೇ ವಾರದಿಂದ‌ ಕೆಲವು ಚಿತ್ರಗಳು ಮರುಬಿಡುಗಡೆಯಾಗುವ ಮೂಲಕ ಚಿತ್ರಮಂದಿರಕ್ಕೆ ಬರಲು ನಾವ್‌ ರೆಡಿ ಎಂಬುದನ್ನು ಸಾಬೀತುಪಡಿಸಿವೆ. ಅದಕ್ಕೆ ತಕ್ಕಂತೆ ಸಿನಿಮಾ ಪ್ರೇಕ್ಷಕರು ಕೂಡ ಸಿನಿಮಾರಂಗದ ಬೆನ್ನುತಟ್ಟುವ ಕೆಲಸ ಮಾಡಿದ್ದಾರೆ. ಹಾಗೆ ನೋಡಿದರೆ, ಸ್ಟಾರ್‌ ನಟರ ಜೊತೆ ಸಾಕಷ್ಟು ಹೊಸಬರ ಚಿತ್ರಗಳು ಸೆಟ್ಟೇರಿವೆ ಎಂಬುದು ವಿಶೇಷ. ಇನ್ನೂ ಒಂದಷ್ಟು ಹೊಸಬರ ಚಿತ್ರಗಳು ಈ ವರ್ಷವೇ ಸೆಟ್ಟೇರಲು ಸಜ್ಜಾಗಿವೆ. ಕೆಲ ಚಿತ್ರಗಳು ಶೀರ್ಷಿಕೆ ಅನಾವರಣ ಮಾಡಲು ತಯಾರು ನಡೆಸಿವೆ. ಆ ಸಾಲಿಗೆ ಸಂದೀಪ್‌ ಬಿ.ಹೆಚ್.‌ ನಿರ್ದೇಶನದ ಹೊಸ ಸಿನಿಮಾವೂ ಒಂದು. ಅವರು ತಮ್ಮ ಚಿತ್ರಕ್ಕೆ ಹೊಸ ಬಗೆಯ ಶೀರ್ಷಿಕೆ ಇಟ್ಟಿದ್ದಾರೆ ಅನ್ನೋದೇ ವಿಶೇಷತೆಗಳಲ್ಲೊಂದು. ಇನ್ನೊಂದು ವಿಶೇಷವೆಂದರೆ, ನವೆಂಬರ್‌ನಲ್ಲಿ ಸಂಸದ ತೇಜಸ್ವಿ ಸೂರ್ಯ ಅವರು ಚಿತ್ರದ ಶೀರ್ಷಿಕೆ ಅನಾವರಣಗೊಳಿಸಿ, ಶುಭ ಹಾರೈಸಲಿದ್ದಾರೆ.

 

ನಿರ್ಮಾಪಕ ಸುರೇಶ್‌ ಬಿ.

ಗ್ರಾಮರ್‌ ಮತ್ತು ಗ್ಲಾಮರ್
ಅಷ್ಟಕ್ಕೂ ಸಂದೀಪ್‌ ತಮ್ಮ ನಿರ್ದೇಶನದ ಚಿತ್ರಕ್ಕೆ ಇಟ್ಟುಕೊಂಡಿರುವ ಹೆಸರೇನು ಗೊತ್ತಾ? “ಗುಡ್‌ ಗುಡ್ಡರ್‌ ಗುಡ್ಡೆಸ್ಟ್”.‌ ಈ ಶೀರ್ಷಿಕೆ ನೋಡಿದಾಕ್ಷಣ, ವಿಭಿನ್ನ ಎನಿಸದೇ ಇರದು. ಕಥೆಗೆ ಪೂರಕವಾಗಿಯೇ ಈ ಶೀರ್ಷಿಕೆ ಇಟ್ಟಿದ್ದಾರಂತೆ ಸಂದೀಪ್.‌ ತಮ್ಮ ಶೀರ್ಷಿಕೆ ಕುರಿತು ನಿರ್ದೇಶಕ ಸಂದೀಪ್‌ ಹೇಳುವುದಿಷ್ಟು. “ಗ್ರಾಮೀಣ ಭಾಗದಲ್ಲಿ ಗ್ರಾಮರ್‌ ಬರದಂತಹ ಹುಡುಗರು ಮಾಡುವ ಜೋಕ್‌ ಇಟ್ಟುಕೊಂಡೇ ಈ ಶೀರ್ಷಿಕೆ ಇಡಲಾಗಿದೆ. ಗುಡ್‌ ಅಂದರೆ ಉತ್ತಮ, ಗುಡ್ಡರ್‌ಗೆ ಅತ್ಯುತ್ತಮ, ಗುಡ್ಡೆಸ್ಟ್‌ಗೆ ಸರ್ವೋತ್ತಮ ಎಂಬ ಅರ್ಥ ಗ್ರಾಮೀಣ ಹುಡುಗರದು. ಕಥೆಯಲ್ಲಿ ಬರುವ ಹಂತಗಳಲ್ಲಿ ಈ ಗ್ರಾಮೀಣ ಗ್ರಾಮರ್‌ ಬಳಕೆಯಾಗಲಿದೆ. ಇಲ್ಲಿ ಬ್ಯಾಡ್‌ ಗ್ರಾಮರ್‌ ಇದ್ದರೂ, ಗ್ರಾಮೀಣದ ಕೆಲ ಹುಡುಗರಿಗೆ ಅದು ಒಂದು ರೀತಿ ಕರೆಕ್ಟ್‌ ಗ್ರಾಮರ್. ಅದನ್ನಿಟ್ಟುಕೊಂಡು ಶೀರ್ಷಿಕೆ ಇಡಲಾಗಿದೆ. ಸಿನಿಮಾ ನೋಡಿದವರಿಗೆ ಶೀರ್ಷಿಕೆ ಕೂಡ ಪೂರಕ ಅನ್ನೋದು ಗೊತ್ತಾಗುತ್ತೆ.‌ ಇನ್ನು, ಗ್ರಾಮರ್‌ ಕುರಿತ ವಿಷಯವಿದ್ದರೂ, ಗ್ಲಾಮರ್‌ಗೂ ಇಲ್ಲಿ ಕಮ್ಮಿ ಇಲ್ಲ. ಗ್ರಾಮರ್‌ ಜೊತೆಯಲ್ಲಿ ಗ್ಲಾಮರ್‌ಗೂ ಇಲ್ಲಿ ಜಾಗವಿದೆ. ಹಾಗಾಗಿ ಗ್ಲಾಮರ್‌ ಎಷ್ಟಿದೆ, ಗ್ರಾಮರ್‌ ಎಷ್ಟಿದೆ ಅನ್ನುವುದನ್ನೂ ಚಿತ್ರದಲ್ಲೇ ನೋಡಬೇಕು. ಅದೇನೆ ಇದ್ದರೂ, ಸಿನಿಮಾ ಗ್ರಾಮರ್‌ ಇಟ್ಟುಕೊಂಡೇ ಸಿನಿಮಾ ಮಾಡುತ್ತಿದ್ದರೂ, ಹೇಳುವ ವಿಷಯದಲ್ಲಿ ಮಾತ್ರ ಸ್ಪಷ್ಟತೆ ಇರಲಿದೆ. ಹೊಸ ಪ್ರಯತ್ನದ ಜೊತೆಯಲ್ಲಿ ಪ್ರಯೋಗವೂ ಇಲ್ಲಿರಲಿದೆ” ಎನ್ನುತ್ತಾರೆ ಸಂದೀಪ್.

 

ಕನಸಿನ ಸಿನಿಮಾ
ಇನ್ನು, ಈ ಚಿತ್ರದ ಮೂಲಕ ನಿರ್ದೇಶಕನ ಪಟ್ಟ ಅಲಂಕರಿಸುತ್ತಿರುವ ಸಂದೀಪ್‌ ಬಗ್ಗೆ ಹೇಳುವುದಾದರೆ, ಇದು ಇವೆ ಚೊಚ್ಚಲ ನಿರ್ದೇಶನದ ಸಿನಿಮಾ. ಪಕ್ಕಾ ಅನುಭವ ಪಡೆದುಕೊಂಡೇ ಅವರು ನಿರ್ದೇಶನಕ್ಕೆ ಅಣಿಯಾಗಿದ್ದಾರೆ. ಸರಿ ಸುಮಾರ 17 ವರ್ಷಗಳಿಂದಲೂ ಕನ್ನಡ ಚಿತ್ರರಂಗವನ್ನು ಬಲ್ಲವರು. ಇಷ್ಟು ವರ್ಷಗಳ ಕಾಲ ಪಕ್ವಗೊಂಡು ಈಗ ನಿರ್ದೇಶನಕ್ಕೆ ಸಜ್ಜಾಗಿದ್ದಾರೆ.
ತಮ್ಮ ಚೊಚ್ಚಲ ಪ್ರಯತ್ನದ ಕುರಿತು “ಸಿನಿ ಲಹರಿʼ ಜೊತೆ ಮಾತನಾಡುವ ನಿರ್ದೇಶಕ ಸಂದೀಪ್‌, “ಇದು ನನ್ನ ಕನಸಿನ ಚಿತ್ರ. ಇಷ್ಟು ವರ್ಷಗಳ ಅನುಭವಗಳನ್ನು ಈ ಸಿನಿಮಾಗೆ ಸುರಿಯುತ್ತಿದ್ದೇನೆ. ನನ್ನ ಈ ಪ್ರಯತ್ನಕ್ಕೆ ಬೆನ್ನೆಲುಬಾಗಿ ನಿಂತಿರೋದು ನಿರ್ಮಾಪಕರಾದ ಸುರೇಶ ಬಿ. ಅವರಿಗೂ ಇದು ಮೊದಲ ಪ್ರಯತ್ನ. ಅವರಿಗೆ ಪ್ಯಾಷನ್‌ ಇರುವುದರಿಂದಲೇ ಹೊಸ ಬಗೆಯ ಕಥೆಗೆ ಗ್ರೀನ್‌ ಸಿಗ್ನಲ್‌ ಕೊಟ್ಟು, ನಮ್ಮಂತಹ ಹೊಸಬರಿಗೆ ಬೆನ್ನು ತಟ್ಟುತ್ತಿದ್ದಾರೆ. ಈ ಸಿನಿಮಾ ಬಗ್ಗೆ ಹೇಳುವುದಾದರೆ, ಇದೊಂದು ಡಾರ್ಕ್‌ ಹ್ಯೂಮರ್‌ ಸೆಟೈರ್‌ ಕಾಮಿಡಿ ಚಿತ್ರ. ಇದರೊಂದಿಗೆ ರೊಮ್ಯಾನ್ಸ್‌, ಥ್ರಿಲ್ಲರ್‌, ಡ್ರಾಮಾ, ಕ್ರೈಮ್‌, ಸ್ಟಂಟ್ಸ್‌ ಸೇರಿದಂತೆ ಇತ್ಯಾದಿ ಅಂಶಗಳೂ ಸೇರಿವೆ. ಇದು ಒಂದೇ ಜಾನರ್‌ಗೆ ಸೇರುವ ಸಿನಿಮಾವಲ್ಲ. ಹಲವು ಜಾನರ್‌ಗಳ ಸಮ್ಮಿಶ್ರಣವಿದೆ. ಹಾಗಾಗಿ ನನ್ನ ಪ್ರಕಾರ ಇದು ಕನ್ನಡಕ್ಕೆ ಹೊಸ ಪ್ರಯತ್ನ.

 

ಇಲ್ಲಿ ಎಲ್ಲವೂ ವಿಶೇಷ
ಇನ್ನು, ಚಿತ್ರಕಥೆಯೇ ಚಿತ್ರದ ಜೀವಾಳ. ಅದರಲ್ಲೂ ಅದು ವಿಭಿನ್ನವಾಗಿ ಮೂಡಿಬರಲಿದೆ. ಸಾಮಾನ್ಯವಾಗಿ ಎಲ್ಲಾ ಚಿತ್ರಗಳಲ್ಲೂ ಮೂರು ಆ್ಯಕ್ಟ್‌ ಸ್ಟ್ರಕ್ಚರ್ಸ್‌ ಇದ್ದರೆ, ಇಲ್ಲಿ ಆರು ಆ್ಯಕ್ಟ್‌ ಸ್ಟ್ರಕ್ಚರ್ಸ್‌ ಇರಲಿದೆ. ಹೇಗೆ ಎಂಬುದನ್ನು ಸಿನಿಮಾದಲ್ಲೇ ನೋಡಬೇಕು. ಪ್ರಮಖ ಪಾತ್ರಗಳೊಂದಿಗೆ 80 ಕ್ಕೂ ಹೆಚ್ಚು ಪಾತ್ರಗಳು ಕಾಣಿಸಿಕೊಳ್ಳುತ್ತವೆ. ಆ ಎಲ್ಲಾ ಪಾತ್ರಗಳಿಗೂ ತನ್ನದೇ ಆದಂತಹ ವಿಶೇಷತೆಗಳಿವೆ. ಇನ್ನುಳಿದಂತೆ ರಂಗಶಂಕರ, ನೀನಾಸಂ, ಮಾಲ್ಗುಡಿ ಡೇಸ್‌ನಲ್ಲಿ ಕೆಲಸ ಮಾಡಿದ ಹಿರಿಯ ರಂಗಕಲಾವಿದರು ಇಲ್ಲಿರಲಿದ್ದಾರೆ. ಸುಮಾರು 45 ದಿನಗಳ ಕಾಲ ಬೆಂಗಳೂರಲ್ಲೇ ಚಿತ್ರೀಕರಣ ನಡೆಸುವ ಯೋಚನೆ ಇದೆ” ಎಂದು ವಿವರ ಕೊಡುತ್ತಾರೆ ಸಂದೀಪ್‌ ಬಿ.ಹೆಚ್.‌

ಚಿತ್ರಕ್ಕೆ ನಾಯಕ ಮತ್ತು ನಾಯಕಿಯ ಅಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ತಂತ್ರಜ್ವರ ಆಯ್ಕೆ ಇನ್ನಷ್ಟೇ ಅಂತಿಮಗೊಳ್ಳಬೇಕಿದೆ. ಎಲ್ಲವೂ ಪೂರ್ಣಗೊಂಡ ಬಳಿಕ ಸಿನಿಮಾಗೆ ಚಾಲನೆ ಸಿಗಲಿದೆ.

Categories
ಸಿನಿ ಸುದ್ದಿ

ಸೋತು ಗೆದ್ದ ಸುಂದರಿ ಹರಿಪ್ರಿಯಾ!

ಆ ಒಂದು ಗೆಲುವು, ಕುಮುದಾ ಮುಖದಲ್ಲಿ ನಗುವು! 

 

ಹರಿಪ್ರಿಯಾ ಎಂಬ ಸೋತು ಗೆದ್ದ ಸುಂದರಿಯ ರೋಚಕ ಕತೆ ಹೀಗಿದೆ ಇಲ್ಲಿದೆ.

ನಟ-ನಟಿಯರ ಪಾಲಿಗೆ ಅವರ ನಟನೆಯ ಭವಿಷ್ಯ ನಿರ್ಧಾರ ಆಗೋದು ‘ ಸಕ್ಸಸ್’ ಎಂಬ ಮೂರಕ್ಷರದ ಮೇಲೆ. ಸಕ್ಸಸ್ ಎನ್ನುವುದಕ್ಕೆ ಇಲ್ಲಿ ಅಷ್ಟೊಂದು ಮಹತ್ವ ಇದೆ. ಇಲ್ಲಿ ಗೆದ್ದವರು ಎದ್ದರು, ಸೋತವರು ಬಿದ್ದರು ಅಂತಲೇ. ಹಾಗಿದ್ದಾಗ್ಯೂ , ಇಲ್ಲಿ ಸೋತು ಗೆದ್ದವರದ್ದೂ ದೊಡ್ಡ ಸಂಖ್ಯೆ. ಆ ಸಾಲಿನಲ್ಲಿ ಹೇಳಬಹುದಾದ ಹೆಸರು ಬಹುಭಾಷೆ ನಟಿ ಹರಿಪ್ರಿಯಾ ಅವರದು.

ಫಿನಿಕ್ಸ್ ನಂತೆ ಮೇಲೆದ್ದ ನಟಿ

ಮೋಹಕ‌ನಟಿ ಹರಿಪ್ರಿಯಾ ಈಗಲೂ ಬಹುಬೇಡಿಕೆಯ ನಟಿ. ಈಗಲೂ ಅವರ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಅವರ ಜತೆಗೆಯೇ ನಟಿಯರಾಗಿ ಸಿನಿಮಾ ಇಂಡಸ್ಟ್ರಿಗೆ ಬಂದ ಅನೇಕರು ಇಲ್ಲಿಲ್ಲ‌. ಬಹಳಷ್ಟು ನಟಿಯರು ಉದ್ಯಮ ಬಿಟ್ಟು ಮನೆ ಸೇರಿಕೊಂಡಿದ್ದಾರೆ. ಕೆಲವರು ಪೋಷಕ ಪಾತ್ರಗಳಿಗೆ ಬಣ್ಣ ಹಚ್ಚುತ್ತಿದ್ದಾರೆ. ಮತ್ತೆ ಕೆಲವರು ಮದುವೆಯಾಗಿ ಸಂಸಾರಿಕ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಹರಿಪ್ರಿಯಾ ಮಾತ್ರ, ಸೋಲು- ಗೆಲುವಿನ ಎರಿಳಿತಗಳ ನಡುವೆ ಫೀನಿಕ್ಸ್ ನಂತೆ ಮೇಲೆದ್ದು , ಈಗಲೂ ಬೇಡಿಕೆ ಉಳಿಸಿಕೊಂಡಿರುವುದು ಅವರ ಸಿನಿ ಜರ್ನಿಯ ಹೆಗ್ಗಳಿಕೆ‌.

ಸೋತು ಗೆದ್ದ ಸುಂದರಿ

ಬರೀ ಗೆದ್ದು ಬೀಗುವುದಕ್ಕಿಂತ ಸೋತು ಗೆಲ್ಲುವುದರಲ್ಲೂ ಥ್ರಿಲ್ ಇದೆ. ಅಂತಹ ಥ್ರಿಲ್ ಕಂಡವರು ಹರಿಪ್ರಿಯಾ‌‌ . ಒಂದಷ್ಟು ಸಿನಿಮಾಗಳ ಸೋಲು, ಆನಂತರ ಪರಭಾಷೆಗಳ ಸುತ್ತಾಟ ಅಂತ ಅಲೆದು ಬೇಸತ್ತಿದ್ದ ಹರಿಪ್ರಿಯಾ ಅವರಿಗೆ ‘ಉಗ್ರಂ’ ಚಿತ್ರದ ಗೆಲುವು ,ಒಯಸಿಸ್ ನಲ್ಲಿ ಸರೋವರವೇ ಕಂಡಂಷ್ಟು ಖುಷಿ ಕೊಟ್ಟಿತು. ಸ್ಯಾಂಡಲ್ ವುಡ್ ನಲ್ಲಿ ಸೆಕೆಂಡ್ ಇನ್ನಿಂಗ್ಸ್ ಭರ್ಜರಿಯಾಗಿ ಶುರು ಮಾಡಲು ಕಾರಣವಾಯಿತು. ಅದು ಸೋತ ಗೆದ್ದ ಥ್ರಿಲ್. ಆ ಗೆಲುವು ಕಂಡ ಮರು ದಿನ ಹರಿಪ್ರಿಯಾ ಮುಖ, ದುಂಡು ಮಲ್ಲಿಗೆಯಂತೆ ಅರಳಿತ್ತು. ಅದು ಸಕ್ಸಸ್ ನ ನಗು.

 

ಎಲ್ಲಾ ಪಾತ್ರಕ್ಕೂ ಸೈ ಅಂದ ನಟಿ

ಕನ್ನಡದ ಮಟ್ಟಿಗೆ ಹರಿಪ್ರಿಯಾ ಎಲ್ಲ ನಟಿಯರ ಹಾಗಲ್ಲ.‌ ನಿಜಕ್ಕೂ ಡೆಫೆರೆಂಟ್. ಯಾಕಂದ್ರೆ ಬೋಲ್ಡ್, ಗ್ಲಾಮರ್, ಡಿ ಗ್ಲಾಮರ್ ..ಹೀಗೆ ಯಾವುದೇ ತರಹದ ಪಾತ್ರ ಸಿಕ್ಕರೂ ಅದರಲ್ಲಿ‌ ಬಿಂದಾಸ್ ಆಗಿ ಅಭಿನಯಿಸುವ ಅಭಿನಯ ಶಾರದೆ‌. ‘ಅಭಿನಯ ಶಾರದೆ’ ಎನ್ನುವ ಮಾತು‌ ಕೊಂಚ ಬಾರವಾದರೂ, ಈಗಿನ ನಟಿಯರ ಮಟ್ಟಿಗೆ ಅದಕ್ಕೆ ಹೊಂದಿಕೆ ಆಗಬಲ್ಲ ನಟಿಯಂತೂ ಹೌದು. ನಟನೆ ಎಂಬ ಎನ್ನುವ ಕಲಾ ಸರಸ್ವತಿಯನ್ನು ವಿವಾದಗಳಿಲ್ಲದೆ ಶ್ರದ್ದೆ, ಭಕ್ತಿ ಮತ್ತು ತಾಳ್ಮೆಯಲ್ಲಿ‌ ಸಮರ್ಥವಾಗಿ ದುಡಿಸಿಕೊಂಡ ನಟಿ. ಹರಿಪ್ರಿಯಾ ಅವರ ಸಿನಿಜರ್ನಿಯನ್ನು ಆರಂಭದಿಂದ ಇಲ್ಲಿವರೆಗೂ ಸೂಕ್ಷ್ಮವಾಗಿ ನೋಡಿದರೆ ಇದು ಅರ್ಥವಾಗಲು ಸಾಧ್ಯ.

ಮೂರು ಘಟ್ಟದ ಆ‌ ಹದಿನಾಲ್ಕು ವರ್ಷ

ಹರಿಪ್ರಿಯಾ ನಟಿಯಾಗಿ ಚಿತ್ರರಂಗಕ್ಕೆ ಬಂದು ಇಲ್ಲಿಗೆ ಸರಿ ಸುಮಾರು 14 ವರ್ಷ. ಇಷ್ಟು ವರ್ಷಗಳಲ್ಲಿ ಅವರ ಸಿನಿ ಜರ್ನಿ ಮೂರು ಘಟ್ಟಗಳಲ್ಲಿ ರೂಪಾಂತರಗೊಂಡಿದೆ. ಅಂದ್ರೆ ಅವರು ನಟಿಯಾಗಿ ಪಕ್ವಗೊಂಡ‌ ಪರಿ ಅದು‌. 2007 ರಿಂದ 2014ರವರೆಗೆ ಒಂದು‌ ಜರ್ನಿ. ಆದಾದ ನಂತರ 2014 ರಿಂದ 2016 ರ ವರೆಗೆ ಮತ್ತೊಂದು ಪಯಣ. ಅದು ದಾಟಿ 2017 ರಿಂದ ಶುರುವಾದ ಇನ್ನೊಂದು ರೂಪಾಂತರ. ‌ಇಷ್ಟು ವರ್ಷಗಳ ಪಯಣದಲ್ಲಿ ಗೆದ್ದು ಬೀಗಿದ್ದಕ್ಕಿಂತ ಸೋತು ಗೆದ್ದಿದ್ದೇ ಹೆಚ್ಚು.

ಎಲ್ಲಿಯಾ ತುಳು ಭಾಷೆ, ಇನ್ನೆಲ್ಲಿಯಾ ಹರಿಪ್ರಿಯಾ

ಎಲ್ಲಿಯಾ ತುಳು ಭಾಷೆ, ಇನ್ನೆಲ್ಲಿಯಾ ಹರಿಪ್ರಿಯಾ? ತುಳು ಭಾಷೆಯೇ ಗೊತ್ತಿಲ್ಲದ ಗಡಿ ಜಿಲ್ಲೆಯ ಹರಿಪ್ರಿಯಾ ನಟಿಯಾಗಿ ಮೊದಲು ಬಣ್ಣ ಹಚ್ಚಿದ್ದು’ ಬದಿ’ ಹೆಸರಿನ ಒಂದು ತುಳು ಚಿತ್ರಕ್ಕೆ. ಅಲ್ಲಿಂದ ಗಾಂಧಿನಗರಕ್ಕೆ ಬಂದಿದ್ದು
‘ಮನಸುಗಳ ಮಾತು‌ ಮಧುರ’ ಚಿತ್ರದೊಂದಿಗೆ. ಆ ಹೊತ್ತಿಗೆ ಹರಿಪ್ರಿಯಾ ಯಾವುದರಲ್ಲೂ ಕಮ್ಮಿ ಇರಲಿಲ್ಲ‌. ಆದರೂ‌ ಮುಂದೆ ಸಕ್ಸಸ್ ಕಾಣದೆ ಕಂಗಾಲಾದರು. ಅವಕಾಶಗಳ ಬೆನ್ನು ಬಿದ್ದು ಕನ್ನಡದ ಗಡಿ ದಾಟಿದರು. ಪರಭಾಷೆಗೆ ಹೋದರೆನ್ನುವುದೇನೋ‌ ಸರಿ, ಅಲ್ಲೂನೆಲೆ‌ ಸಿಗದೆ ಪರದಾಡಿದರು‌. ಕೊನೆಗೆ ಅವರಿಗೆ ವರವಾಗಿ‌‌ ಸಿಕ್ಕಿದ್ದು ‘ ಉಗ್ರಂ’ ಚಿತ್ರ.ಆವೊಂದು ಚಿತ್ರದ ಗೆಲುವು ಅವರನ್ನು‌ಹತ್ತಾರು ಪ್ರಯೋಗಳಿಗೆ ಒಡ್ಡಿಕೊಳ್ಳಲು ಪ್ರೇರೆಪಿಸಿತು‌.

ಹಾಗಾಗಿಯೇ ರನ್ನ, ರಿಚ್ಚಿ, ನೀರ್ ದೋಸೆ, ಡಾಟರ್ ಆಫ್ ಪಾರ್ವತಮ್ಮ, ಭರ್ಜರಿ, ಬೆಲ್ ಬಾಟಮ್, ಕುರುಕ್ಷೇತ್ರ,
ಕನ್ನಡ್ ಗೊತ್ತಿಲ್ಲ, ಬಿಚ್ಚುಗತ್ತಿ ದಂತಹ ಚಿತ್ರಗಳಲ್ಲಿನ ವಿಭಿನ್ನ ಪಾತ್ರಗಳಲ್ಲಿ ತಮ್ಮನ್ನು ತಾವು ನಟಿಯಾಗಿ ಗುರುತಿಸಿಕೊಳ್ಳಲು ಸಾಧ್ಯವಾಯಿತು ಎನ್ನುವ ಮಾತನ್ನು ಹರಿಪ್ರಿಯಾ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.ಸದ್ಯಕ್ಕೀಗ‌ ವಿಜಯ್ ಪ್ರಸಾದ್ ‌ನಿರ್ದೇಶನದ ಪೆಟ್ರೋಮ್ಯಾಕ್ಸ್, ಎವರು ರಿಮೇಕ್ ಚಿತ್ರಗಳ ಜತೆಗೆ‌ ಮೂರ್ನಾಲ್ಕು‌ ಚಿತ್ರಗಳಲ್ಲಿ ಬ್ಯುಸಿ ಇದ್ದಾರೆ.‌ನಟನೆಯ‌ ನಡುವೆಯೇ ಬ್ಲಾಗ್ ಬರವಣಿಗೆಯಲ್ಲಿ ಸಕ್ರಿಯವಾಗಿರುವುದು ವಿಶೇಷ.

Categories
ಸಿನಿ ಸುದ್ದಿ

ಚಿನಕುರುಳಿ ಶಾನ್ವಿಗೆ ಕೋತಿ ಕಚ್ಚಿದ ಪ್ರಸಂಗ !

ವಾರಣಾಸಿಯ ಈ ನಟಿ ಶಾನ್ವಿ‌ಶ್ರಿ ವಾಸ್ತವ್ ‘ಕಸ್ತೂರಿ ಮಹಲ್ ‘ ಗೆ ಕಾಲಿಡುವ ಮುನ್ನ ನಿಜಕ್ಕೂ‌ ಆಗಿದ್ದೇನು?
……,………………………………..

ನಟಿ ಶಾನ್ವಿ ಶ್ರೀವಾಸ್ತವ್ ಗೊತ್ತಲ್ವಾ, ಅದೇ’ ಅವನೇ ಶ್ರೀಮನ್ನಾರಾಯಣ’ ಖ್ಯಾತಿಯ ನಟಿ. ಅವರೀಗ’ ಕಸ್ತೂರಿ ಮಹಲ್ ‘ ನಲ್ಲಿ ಬ್ಯುಸಿಯಾಗಿದ್ದಾರೆ. ಅದೃಷ್ಟ ಅಂತಾರಲ್ಲ ಹಾಗೆ ಬದಾವಣೆಯ ಗಾಳಿಯಲ್ಲಿ’ ಕಸ್ತೂರಿ ಮಹಲ್’ ಪ್ರವೇಶಿಸಿದ್ದಾರೆ. ಅದ್ದೆಂಗೆ ಅನ್ನೋದು ನಿಮಗೆಲ್ಲ ಗೊತ್ತಿರುವ ವಿಚಾರ. ರಚಿತಾ ರಾಮ್ ಅಭಿನಯಿಸಬೇಕಿದ್ದ ಜಾಗಕ್ಕೆ ಶಾನ್ವಿ ಬಂದರು. ಹಾಗಂತ ಈ ಅವಕಾಶಕ್ಕಾಗಿ ವಾರಾಣಾಸಿ ಆ ಚೆಲುವೆ ಶಾನ್ವಿ ಕಾದು ಕುಳಿತಿದ್ರಾ? ಅವಕಾಶಗಳೇ ಇಲ್ಲ ಅಂತ ಇದನ್ನ ಒಂದೇ ಗುಕ್ಕಿನಲ್ಲಿ ಒಪ್ಪಿಕೊಂಡ್ರಾ?

ವಿಷಯ ಅದಲ್ಲ, ಬೇರೆನೆ ಇದೆ‌‌‌…

ಅವರ ಪ್ರಕಾರ ಹಾಗೇನು ಅಲ್ಲ. ವಾಸ್ತವ ಬೇರೆನೆ ಇದೆ. ಅದೇನು ಎನ್ನುವುದಕ್ಕಿಂತ ಮುಂಚೆ‌. ಕಸ್ತೂರಿ ಮಹಲ್ ಗೆ ರಚಿತಾ ಯಾಕೆ ಕೈ ಎತ್ತಿದ್ರು ಗೊತ್ತಾ? ವಿಷಯ ಸ್ವಲ್ಪ ಸೀರಿಯಸ್. ಆ ಕತೆ ಹೀಗಿದೆ ಕೇಳಿ; ಈ ಚಿತ್ರಕ್ಕೆ ಮುಂಚೆ ‘ಕಸ್ತೂರಿ ನಿವಾಸ ‘ ಅಂತ ಟೈಟಲ್ ಇತ್ತು‌ . ಆಗ ಈ ಚಿತ್ರಕ್ಕೆ ರಚಿತಾ ರಾಮ್ ನಾಯಕಿ ಆಗಿದ್ದರು. ಇದು ದಿನೇಶ್ ಬಾಬು ನಿರ್ದೇಶನದ ಚಿತ್ರ ಎನ್ನುವುದರ ಜತೆಗೆ ಚಿತ್ರದ ಟೈಟಲ್ ನೋಡಿಯೇ ಅವರು ಥ್ರಿಲ್ ಆಗಿದ್ರಂತೆ‌‌ . ಜತೆಗೆ ಅದು ನಾಯಕಿ ಪ್ರಧಾನ ಚಿತ್ರ ಬೇರೆ, ಅದೇ ಗುಂಗ್ ನಲ್ಲಿ ಕತೆ ಕೇಳಿದವರೇ ಓಕೆ ನಾನೇ ನಾಯಕಿ ಅಂತಲೂ ಕಾಲ್ ಶೀಟ್ ಕೊಟ್ಟಿದ್ದರು‌‌. ಮುಂದೆ ಮುಹೂರ್ತ ಕೂಡ ಮುಗೀತು.ಆದ್ರೆ ಆಗ ಶುರುವಾಗಿದ್ದು ಟೈಟಲ್ ವಿವಾದ. ಅದೇನೋ ಯಡವಟ್ಟಾಯ್ತು ಅಂತ ಗೊತ್ತಾಗಿದ್ದೇ ತಡ, ನಂಗೆ ಡೇಟ್ಸ್ ಹೊಂದಾಣಿಕೆ ಆಗ್ತಿಲ್ಲ. ಮುಂಚೇನೆ ಕಾಲ್ ಶೀಟ್ ಕೊಟ್ಟ ಸಿನ್ಮಾದವರೂ ಬಿಡ್ತಿಲ್ಲ, ಸಾರಿ ಸರ್ ನೀವು ಯಾರನ್ನಾದ್ರೂ ಬೇರೆ ಅವ್ರನ್ನ ಹಾಕ್ಕೊಳ್ಳಿ ಅಂತ ದಿನೇಶ್ ಬಾಬು ಅವರಿಗೆ ರಾತ್ರೋರಾತ್ರಿ ಮೆಸೇಜ್ ಹಾಕಿ‌ಬಿಟ್ರು ಬುಲ್ ಬುಲ್ ಬೆಡಗಿ ರಚಿತಾ ರಾಮ್.

ರಾತ್ರೋರಾತ್ರಿ‌ ಮೆಸೇಜ್ ಹಾಕಿದ್ರು ರಚಿತಾ…

ಚೇಂಜ್ ಒವರ್ ಕತೆ ನಡೆದಿದ್ದು ಹೀಗೆ. ಮುಂದೆ ಶಾನ್ವಿ ಹೇಗೆ ಬಂದ್ರು?’ ಅವನೇ ಶ್ರೀ ಮನ್ನಾರಾಯಣ’ ಚಿತ್ರದ ನಂತರ ಹೊಸ ಅವಕಾಶಗಳನ್ನು ಎದುರು ನೋಡುತ್ತಿದ್ದ ಅವರಿಗೆ ‘ತ್ರಿಶೂಲಂ’ ಮೂಲಕ‌ ಉಪೇಂದ್ರ ಅವರ ಜತೆಗೆ ಅಭಿನಯಿಸುವ ಅವಕಾಶ ಸಿಕ್ಕಿತು. ಅಲ್ಲಿಂದೀಗ ದಿನೇಶ್ ಬಾಬು ನಿರ್ದೇಶನದ ಕಸ್ತೂರಿ ಮಹಲ್ ಚಿತ್ರಕ್ಕೆ ನಾಯಕಿಯಾದರು. ಅವರ ಪ್ರಕಾರ ಈ ಸಿನಿಮಾ ಒಪ್ಪಿಕೊಳ್ಳುವುದಕ್ಕಿದ್ದ ಮೊದಕ ಕಾರಣ ಕತೆ ಮತ್ತು ಪಾತ್ರ.‌ಒಬ್ಬ ನಟಿಗೂ ಬೇಕಾಗಿದ್ದೂ ಕೂಡ ಅದೇನೆ. ಹಾಗಾಗಿ ತಾನು ಈ ಸಿನಿಮಾ‌ಒಪ್ಪಿಕೊಂಡೇ ಎನ್ನುವ ಶಾನ್ವಿ, ಈಗ ಅದೇ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಹೀಗಿರುವಾಗಲೇ ಅವರು ತಮಗೆ ಕೋತಿ ಕಚ್ಚಿದ ಪ್ರಸಂಗವೊಂದನ್ನು’ ಕಲರ್ಸ್ ಕನ್ನಡ’ದ ಮಜಾ ಟಾಕೀಸ್ ಶೋ ನಲ್ಲಿ ಹೇಳಿಕೊಂಡಿದ್ದಾರೆ.

ಕೋತಿ ಕಂಡ್ರೆ ನಂಗೆ ಈಗಲೂ ಭಯ..

‘ ನಾನಗಾಗ 15 ವರ್ಷ.‌ಮನೆಯ ಟೇರಾಸ್ ಮೇಲೆ ಆಟ ಆಡ್ತಾ ಇದ್ವಿ.‌ ಎಲ್ಲಿಂದಲೋ‌ ಬಂದ ಕೋತಿ ನನ್ನ ಕೈ ಕಚ್ಚಿತು. ಅದೃಷ್ಟವಶಾತ್ ನಂಗೇನು‌ಗಾಯ ಆಗ್ಲಿಲ್ಲ.‌ ಆದ್ರೆ ಕೋತಿ ಕಂಡ ಭಯ ಪಟ್ಟು ಓಡಿದೆ. ಅವತ್ತಿನಿಂದ ನಂಗೆ ಮನೆಯವ್ರು ಕೋತಿ ಅಂತಲೇ ಕರೀತಿದ್ರು ಅಂತ 15 ವರ್ಷದಲ್ಲಿ ನಡೆದ ಘಟನೆಯೊಂದನ್ನು ಹೇಳಿಕೊಂಡು‌ ನಕ್ಕರು ಚಿನಕುರುಳಿ ಶಾನ್ವಿ ಶ್ರೀವಾಸ್ತವ್.

ಇದು ಬಿಡಿ, ಮುಗ್ದ ಮುಖದ ಶಾನ್ವಿ ಬಗ್ಗೆ ಹೇಳಲೇಬೇಕಾದ ಒಂದು‌ಮಾತು ಅವರಿಗಿರುವ ಕನ್ನಡದ‌ ಮೇಲಿನ‌ ಪ್ರೀತಿಯ ಬಗ್ಗೆ. ನಿಮಿಗೆಲ್ಲ ಗೊತ್ತೇ ಇದೆ. ಶಾನ್ವಿ ಕನ್ನಡಕ್ಕೆ ಬಂದ ಆಮದು ನಟಿ. ಅಂದ್ರೆ ಬೇರೆ ಭಾಷೆಯಿಂದ ಕನ್ನಡಕ್ಕೆ ಬಂದವರು. ಹಾಗೆ ಬಂದವರನೇಕ ನಟಿಯರು ಅವಕಾಶ ಇದ್ದಷ್ಟು ದಿನ ಇಲ್ಲಿದ್ದು , ಹಣ ಮಾಡಿಕೊಂಡು‌ಮರಳಿ ತಮ್ಮೂರು ಸೇರಿಕೊಂಡಿ ದ್ದಾರೆಸ್ವಲ್ಪ ಕಮಲ ಈ ನಟಿ ಬೆಂಗಳೂರಿನಲ್ಲೆ ಉಳಿದು ಕೊಂಡಿದ್ದಾರೆ. ಕನ್ನಡ ಭಾಷೆ ಕಲಿತಿದ್ದಾರೆ. ಓದು,ಬರಹ‌ ಎರಡೂ ಕನ್ನಡದಲ್ಲೇ ಮಾಡುತ್ತಾರೆ. ಬೆಂಗಳೂರು ನನ್ನೂರು ಅಂತ ಹೆಮ್ಮೆಯಿಂದ ಹೇಳುತ್ತಾರೆ. ಅಷ್ಟು ಮಾತ್ರವಲ್ಲ, ಇಲ್ಲಿಯೇ ಸೆಟ್ಲ್ ಆಗುವುದಾಗಿಯೂ ಹೇಳುತ್ತಾರೆ. ಹಾಗೆಯೇ ಕನ್ನಡದ ಸ್ಟಾರ್ ಒಬ್ಬರನ್ನು ಲವ್ ಮಾಡುತ್ತಿರುವ ಬಗ್ಗೆ‌ಗಾಸಿಪ್ ಕೂಡ ಇದೆ. ಸದ್ಯಕ್ಕೆ ಅದು ಕನ್ ಫರ್ಮ್‌ಅಲ್ಲ.‌ಗಾಸಿಪ್ ಮಾತ್ರ.‌ ಏನೇ ಆಗಲಿ ಶಾನ್ವಿ ಅವರಿಗೆ ಸಿನಿ‌ಲಹರಿ ಕಡೆಯಿಂದ ಆಲ್ ದಿ‌ಬೆಸ್ಟ್.

Categories
ಸಿನಿ ಸುದ್ದಿ

ಹೊಸ ಸಿನ್ಮಾ ಖಾತರಿಪಡಿಸಿದ ದುನಿಯಾ ವಿಜಯ್

ಲಕ್ಕಿ ಎಂಬ ಹೊಸ ಪ್ರತಿಭಾವಂತ ಹುಡುಗನಿಗೆ ನಿರ್ದೇಶನ

ಇತ್ತೀಚೆಗಷ್ಟೇ “ಹೊಸ ಲವ್ ನಲ್ಲಿ ದುನಿಯಾ ವಿಜಯ್” ಶೀರ್ಷಿಕೆಯಡಿ ವಿಜಯ್ ಹೊಸದೊಂದು ಕ್ಯೂಟ್ ಲವ್ ಸ್ಟೋರಿ ಸಿನಿಮಾ‌ ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿ ಮಾಡಲಾಗಿತ್ತು. ಆ ಕುರಿತು ಸ್ವತಃ “ದುನಿಯಾ”ವಿಜಯ್ ಅವರೇ ” ಸಿನಿ ಲಹರಿ” ಗೆ ಸ್ಪಷ್ಟಪಡಿಸಿದ್ದರು. ಈಗ ಅದಕ್ಕೆ ಪೂರಕವಾಗಿ ವಿಜಯ್ ತಮ್ಮಫೇಸ್ ಬುಕ್ ಖಾತೆಯಲ್ಲಿ ಆ ಬಗ್ಗೆ ಬರೆದುಕೊಂಡಿದ್ದಾರೆ. ಅವರ ಪೂರ್ಣ ಬರಹ ಇಲ್ಲಿದೆ ಓದಿ.

‘ನಟನಾಗಬೇಕು ಎಂಬ ಹಂಬಲದಿಂದ ಅಭಿನಯ ಕಲಿತಿದ್ದ ನನಗೆ ಚಿತ್ರರಂಗ ಪ್ರವೇಶಿಸುವುದು ಕೊಂಚ ಕಷ್ಟದ ಕೆಲಸವಾಗಿತ್ತು. ಆ ಕಷ್ಟವನ್ನು ಮತ್ತೊಂದು ಕಷ್ಟದ ಮೂಲಕವೇ ಜಯಿಸಬೇಕು ಎಂದು ತೀರ್ಮಾನಿಸಿ ಸ್ಟಂಟ್ ಕಲಿತು ಸಾಹಸ ಕಲಾವಿದನಾಗಿ ಚಿತ್ರರಂಗಕ್ಕೆ ಬಂದೆ ನಂತರದ ದಿನಗಳಲ್ಲಿ ಸಾಹಸದ ಜತೆಯಲ್ಲಿ ಒಳ್ಳೊಳ್ಳೆ ಪಾತ್ರಗಳಲ್ಲಿಯೂ ನಟಿಸಲು ಆರಂಭಿಸಿದೆ. ಒಂದಷ್ಟು ದಿನಗಳ ನಂತರ ‘ದುನಿಯಾ’ ಸಿನಿಮಾದ ಮೂಲಕ ನಾಯಕನಾದೆ. ಕನ್ನಡಿಗರು ಅಭಿಮಾನದಿಂದ ತಮ್ಮೆರೆಡು ಕೈಗಳಿಂದ ನನ್ನನ್ನು ಬಾಚಿ ತಬ್ಬಿಕೊಂಡು ಸಿನಿಮಾ ಗೆಲ್ಲಿಸಿದರು. ಜತೆಗೆ ಈ ಹುಡುಗನಲ್ಲಿ ಪ್ರತಿಭೆ ಇದೆ ಎಂದು ಅವರ ಮನಸ್ಸಿನಲ್ಲಿ ನನಗೊಂದು ಸ್ಥಾನವನ್ನು ನೀಡಿದರು.

ಇದೆಲ್ಲವೂ ಒಂದು ಹಂತವಾದರೆ ಕೆಲ ದಿನಗಳ ಹಿಂದೆ ಅಭಿಮಾನಿಗಳ ಆಶೀರ್ವಾದಿಂದಾಗಿ ಸಲಗ ಸಿನಿಮಾವನ್ನು ನಿರ್ದೇಶನ ಮಾಡಲು ನಿರ್ಧಾರ ಮಾಡಿದೆ. ಕೆ ಪಿ ಶ್ರೀಕಾಂತ್, ನಾಗಿ ಮತ್ತು ನನ್ನ ತಂಡ ನೀಡಿದ ಸಾಥ್ ನಿಂದಾಗಿ ಸಲಗ ಬಿಡುಗಡೆಗೆ ಸಿದ್ಧವಾಗಿದೆ. ಈ ನಡುವೆ ಹೊಸ ಆಲೋಚನೆಗಳೊಂದಿಗೆ ಹೊಸ ಜವಾಬ್ದಾರಿಯನ್ನು ಕೈಗೆತ್ತಿಕೊಳ್ಳಲು ತೀರ್ಮಾನಿಸಿದ್ದೇನೆ. ನಾಯಕನಾಗಿದ್ದವನು ನಿರ್ದೇಶಕನಾದೆ, ಈಗ ಹೊಸಬರೊಂದಿಗೆ ಹೊಸ ಪ್ರಯೋಗಕ್ಕೆ ಇಳಿಯುತ್ತಿದ್ದೇನೆ. ನನ್ನ ‌ಹೊಸ ಕಥೆಗೆ ಲಕ್ಕಿ ಎಂಬ ಹೊಸ ನಾಯಕನನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಸದ್ಯದಲ್ಲೇ ನಾಯಕಿ ಮತ್ತು ನಿರ್ಮಾಪಕರ್ಯಾರು ಎಂಬುದನ್ನು ಹೇಳುತ್ತೇವೆ.

ನನ್ನ ಈ ಪ್ರಯತ್ನಕ್ಕೆ ಹಿರಿಯರು ನನ್ನ ಸೋದರ ಸಮಾನರಾದ ಶಿವಣ್ಣ, ಗೀತಾಕ್ಕ ಮನಃ ಪೂರ್ವಕವಾಗಿ ಹಾರೈಸಿದ್ದಾರೆ. ನನಗೆ ಬೆನ್ನೆಲುಬಾಗಿ ಸಲಗ ಸಿನಿಮಾದ ನಿರ್ಮಾಪಕರಾದ ಶ್ರೀಕಾಂತ್ ಮತ್ತು ನಾಗಿ ಇದ್ದಾರೆ. ಇವರೆಲ್ಲರ ಜತೆ ನಿಮ್ಮ ಹಾರೈಕೆ , ಆಶೀರ್ವಾದ ನನ್ನ ಪ್ರಯತ್ನಕ್ಕೆ ಬೇಕೇ ಬೇಕು.

ವಿಜಯ ದಶಮಿಯಂದು ನಾಯಕನಾರು ಎಂಬುದನ್ನು ಅನೌನ್ಸ್ ಮಾಡುತ್ತಿದ್ದೇನೆ. ನಮ್ಮ ಇಡೀ ತಂಡಕ್ಕೆ ವಿಜಯ ಸಿಗಲಿ ಎಂದು ನೀವು ಹಾರೈಸಬೇಕು’

-ನಿಮ್ಮವ
ದುನಿಯಾ ವಿಜಯ್.

Categories
ಸಿನಿ ಸುದ್ದಿ

ಓ…ಶೋ…!

ಓಶೋ ಎಂಬ ಹೊಸಬರ ಅಚ್ಚರಿಯ ಸುತ್ತ ಹೊಸ ಚಿತ್ರ

ಓಶೋ…
ಬಹುಶಃ ಇವರ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಹಾಗಾಗಿ ಆ ಕುರಿತು ಹೆಚ್ಚೇನೂ ಹೇಳುವ ಅಗತ್ಯವಿಲ್ಲ.
ಆದರೂ ಈ ಹೊಸ “ಓಶೋ” ಬಗ್ಗೆ ಹೇಳಲೇಬೇಕು. ಅಷ್ಟಕ್ಕೂ ಯಾರಪ್ಪ ಹೊಸ ಓಶೋ ಎಂಬ ಸಣ್ಣ ಕುತೂಹಲ ಸಹಜ. ಆ ಕುತೂಹಲ ಇದ್ದವರು ಈ ಸುದ್ದಿ ಓದಿ.

“ಓಶೋ” ಇದು ಕನ್ನಡ ಸಿನಿಮಾ‌ ಹೆಸರು. ಹಾಗಂತ ಓಶೋ ಅವರ ಬಯೋಗ್ರಫಿ ಏನಾದರೂ ಸಿನಿಮಾ‌ ಆಗುತ್ತಿದೆಯಾ? ಅದಕ್ಕೆ ಸದ್ಯ ಉತ್ತರವಿಲ್ಲ. ಇಂಥದ್ದೊಂದು ಶೀರ್ಷಿಕೆ ಇಟ್ಟು ಸಿನಿಮಾ ಮಾಡಲು ಹೊರಟಿರೋದು ಕೂಡ ಹೊಸಬರೆ.
ಕನ್ನಡದಲ್ಲೀಗ ಹೊಸ ಪ್ರತಿಭೆಗಳದ್ದೇ ಕಲರವ. ಹೊಸ ನಿರ್ದೇಶಕರು ತಮ್ಮೊಳಗಿನ ಹೊಸ ಆಲೋಚನೆಗಳ ಮೂಲಕ ಕಥೆ ಹೆಣೆದು, ತಮ್ಮದೇ ಶೈಲಿಯಲ್ಲಿ ಸಿನಿಮಾ ಮಾಡಲು ಹೊರಟಿದ್ದಾರೆ. ಈಗಾಗಲೇ ಅಂತಹ ಪ್ರಯತ್ನದಲ್ಲಿ ಗೆದ್ದಿದ್ದಾರೆ ಕೂಡ. ಈಗ ಆ ಸಾಲಿಗೆ ಈ “ಓಶೋ” ಕೂಡ ಇದೆ.

ಬಹುತೇಕ ಹೊಸಬರೇ ಈಗ ಚಿತ್ರರಂಗದಲ್ಲಿ ಸದ್ದು ಮಾಡುತ್ತಿರೋದು. ಅಂತವರನ್ನು ಪ್ರೇಕ್ಷಕ‌ ಕೂಡ ಪ್ರೀತಿಯಿಂದಲೇ ಒಪ್ಪಿ ಅಪ್ಪಿದ್ದಾನೆ. ಹೊಸಬರಲ್ಲಿ ಹೊಸತನ ತುಂಬಿದೆ. ಅದನ್ನು ಸಾಕಾರಗೊಳಿಸಲು ಒಳ್ಳೆಯ ವೇದಿಕೆ ಕೊರತೆ ಇದ್ದೇ ಇದೆ. ಸಿನಿಮಾರಂಗ ಮೂಲಕ ತಮ್ಮ ಆಶಯವನ್ನು ಈಡೇರಿಸಿಕೊಳ್ಳಲು ಹೊರಟ ಈ ಚಿತ್ರತಂಡಕ್ಕೂ “ಸಿನಿ ಲಹರಿ” ಕಡೆಯಿಂದ ಆಲ್ ದಿ ಬೆಸ್ಟ್.

ಅಂದಹಾಗೆ, ಇಂಥದ್ದೊಂದು ಕುತೂಹಲ ಎನಿಸುವ ಶೀರ್ಷಿಕೆ ಇಟ್ಟು ಸಿನಿಮಾ ಮಾಡಲು ಹೊರಟಿರೋದು ಕ್ರಿಯಾಶೀಲ ಬರಹಗಾರ ಜಿಯಾ (ಜಿಯಾಉಲ್ಲಾ ಖಾನ್ ). ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯದ ಜೊತೆ ನಿರ್ದೇಶನದ ಜವಬ್ದಾರಿ ಹೊತ್ತಿದ್ದಾರೆ. ಇನ್ನು ಇವರ ಹೊಸ ಪ್ರಯತ್ನ ಬೆಂಬಲಿಸಿ ಗ್ಯಾನಗೌಡ್ರು ಹಾಗೂ ಅನಂತ್ ಇಟಗಿ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದಲ್ಲಿ ಅನಂದ್ ಇಟಗಿ, ದೀಪಶ್ರೀ ಗೌಡ, ಕರಿಸುಬ್ಬು, ಗಿರಿರಾಜ್ ಇತರರು ಇದ್ದಾರೆ.

ದೀಪಾ, ಆನಂದ್‌, ಜಿಯಾ

ಕೀರ್ತನ್ ಸಂಗೀತ ನೀಡಿದರೆ, ಪ್ರದೀಪ್ ಛಾಯಾಗ್ರಹಣವಿದೆ. ಗುರುಸ್ವಾಮಿ ಸಂಕಲನವಿದೆ. ಸದ್ಯ ಶೀರ್ಷಿಕೆ ಜೊತೆ ಚಂದದ ಪೋಸ್ಟರ್ ಲಾಂಚ್ ಆಗಿದ್ದು, ಈಗಾಗಾಲೇ ಚಿತ್ರೀಕರಣ ಮುಗಿಸಿ ಫಸ್ಟ್ ಕಾಪಿ ಕೂಡ ಬಂದಿದೆ. ಇಷ್ಟರಲ್ಲೇ ಸೆನ್ಸಾರ್ ಮುಗಿಸಿ ಪ್ರೇಕ್ಷಕರ ಮುಂದೆ ಬರಲಿದೆ.

Categories
ಸಿನಿ ಸುದ್ದಿ

ಲೋಕೇಂದ್ರನ ಸಿನ್ಮಾ ಲೋಕ !

ಬಿಲ್ಡಿಂಗ್‌ ಕಟ್ಟೋ ಪ್ರೇಮಿಯ ಸಿನ್ಮಾ ಕಟ್ಟೋ ಕಾಯಕ

“ಅಟ್ಟಯ್ಯ ವರ್ಸಸ್‌ ಹಂದಿ ಕಾಯೋಳು”

– ಬಹುಶಃ ಬಹುತೇಕ ಕನ್ನಡಿಗರಿಗೆ ಈ ಚಿತ್ರದ ಬಗ್ಗೆ ಗೊತ್ತಿರಲಿಕ್ಕಿಲ್ಲ. ಆದರೆ, ಕನ್ನಡ ಚಿತ್ರರಂಗದ ಒಂದಷ್ಟು ಮಂದಿಗಂತೂ ಈ ಸಿನಿಮಾ ಬಗ್ಗೆ ಗೊತ್ತು. ಅದರಲ್ಲೂ ಸಿನಿಪ್ರೇಮಿಗಳಿಗೆ ಈ ಚಿತ್ರ ಅಚ್ಚುಮೆಚ್ಚು ಅನ್ನೋದು ವಿಶೇಷ. ಅಂದಹಾಗೆ, ಈ ಚಿತ್ರ 2019ರಲ್ಲಿ ಬಿಡುಗಡೆಯಾಗಿತ್ತು. ಬಿಡುಗಡೆಯಾದ ಮೊದಲ ಪ್ರದರ್ಶನದಲ್ಲಿ ಬೆರಳೆಣಿಕೆ ಜನ ಮಾತ್ರ ಚಿತ್ರಮಂದಿರದಲ್ಲಿದ್ದರು. ಸಿನಿಮಾ ವೀಕ್ಷಿಸಿದ ಪತ್ರಕರ್ತರು ಚಂದದ ವಿಮರ್ಶೆ ಬರೆದ ನಂತರ ಈ ಚಿತ್ರದ ಚಿತ್ರಣವೇ ಬದಲಾಯಿತು. ಜನರು ಹುಡುಕಿ ಬಂದು ಸಿನಿಮಾ ನೋಡಿದರು. ಭರಪೂರ ಮೆಚ್ಚುಗೆಯೂ ಸಿಕ್ಕಿತು. ನಂತರದ ದಿನಗಳಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲೂ ಈ ಚಿತ್ರ ಪ್ರದರ್ಶನ ಕಂಡು ಅಲ್ಲಿನ ಜ್ಯೂರಿಗಳಿಂದ ಮೆಚ್ಚುಗೆ ಪಡೆದದ್ದು ವಿಶೇಷತೆಗಳಲ್ಲೊಂದು.
ಇಷ್ಟಕ್ಕೂ ಈ ಸಿನಿಮಾ ಕುರಿತು ಹೇಳ ಹೊರಟ ವಿಷಯವಿಷ್ಟೇ. ಇಂಥದ್ದೊಂದು ಸೂಕ್ಷ್ಮತೆಯ ಚಿತ್ರ ಕಟ್ಟಿಕೊಟ್ಟ ನಿರ್ದೇಶಕ ಕಮ್‌ ನಟ ಲೋಕೇಂದ್ರ ಸೂರ್ಯ ಈಗ ಮತ್ತೊಂದು ನಿರ್ದೇಶನಕ್ಕೆ ಅಣಿಯಾಗಿದ್ದಾರೆ. ಅಷ್ಟೇ ಅಲ್ಲ, ಆ ಚಿತ್ರದಲ್ಲಿ ನಾಯಕರಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಅವರು ತಮ್ಮ ಎರಡನೇ ನಿರ್ದೇಶನದ ಚಿತ್ರಕ್ಕೆ ಇಟ್ಟುಕೊಂಡಿರುವ ಹೆಸರು “ಹಾಫ್”.‌ ಹೌದು, ಲೋಕೇಂದ್ರ ಅವರು “ಅಟ್ಟಯ್ಯ ವರ್ಸಸ್‌ ಹಂದಿ ಕಾಯೋಳುʼ ಸಿನಿಮಾ ಬಳಿಕ ನಿರ್ದೇಶಕ “ಆಸ್ಕರ್”‌ ಕೃಷ್ಣ ಅವರ ಜೊತೆಗೂಡಿ “ಚಡ್ಡಿದೋಸ್ತ್‌ ಕಡ್ಡಿ ಅಲ್ಲಾಡ್‌ಸ್ಬುಟ್ಟ” ಚಿತ್ರದಲ್ಲಿ ನಟಿಸಿದ್ದಾರೆ. ಆ ಬಳಿಕ ಅವರೀಗ “ಹಾಫ್”‌ ಕೈಗೆತ್ತಿಕೊಳ್ಳಲು ಹೊರಟಿದ್ದಾರೆ.
ತಮ್ಮ ಸಿನಿಜರ್ನಿ ಹಾಗೂ ಈಗ ಮಾಡಹೊರಟಿರುವ ಹೊಸ ಸಿನಿಮಾ ಕುರಿತು “ಸಿನಿ ಲಹರಿ” ಜೊತೆ ಮಾತಿಗಿಳಿದ ಲೋಕೇಂದ್ರ ಹೇಳಿದ್ದಿಷ್ಟು. “

ಸಿನ್ಮಾ ಆಸಕ್ತಿ ಹೆಚ್ಚಿಸಿದ ದಾದಾ ..

“ಬೇಸಿಕಲಿ ನಾನೊಬ್ಬ ಸಿಂಗರ್.‌ ಸಿನಿಮಾಗೆ ಬರಬೇಕು ಅನ್ನೋದು ನನ್ನ ಎರಡು ದಶಕದ ಕನಸು. ಅದು ಈಡೇರಿದ್ದು ಕಳೆದ ವರ್ಷ ಬಂದ “ಅಟ್ಟಯ್ಯ ವರ್ಸ್‌ಸ್‌ ಹಂದಿ ಕಾಯೋಳು” ಚಿತ್ರದ ಮೂಲಕ. ಚಿಕ್ಕಂದಿನಿಂದಲೂ ಸಿನಿಮಾ ಮೇಲಿ ಪ್ರೀತಿ ಇತ್ತು. ರಾಜಕುಮಾರ್‌, ವಿಷ್ಣುವರ್ಧನ್‌ ಅವರ ಸಿನಿಮಾಗಳನ್ನು ನೋಡಿ ಬೆಳೆದವನು. ವಿಷ್ಣುವರ್ಧನ್‌ ಅವರ “ದಾದಾ” ಚಿತ್ರ ನೋಡಿದ ಮೇಲೆ ಇನ್ನಷ್ಟು ಸಿನಿಮಾ ಮೇಲೆ ಪ್ರೀತಿ ಬಂತು. ಆಸಕ್ತಿಯೂ ಹೆಚ್ಚಾಯ್ತು. ಆ ನಂತರ “ಓಂ” ಸಿನಿಮಾ ಬಂದಮೇಲೆ ಸಿನಿಮಾದಲ್ಲೂ ನಾನು ಕೆಲಸ ಮಾಡಲೇಬೇಕು ಎಂಬ ಆಸೆ ದುಪ್ಪಟ್ಟಾಯ್ತು. ಆದರೆ, ಪ್ರಯತ್ನಕ್ಕೆ ಫಲ ಸಿಗಲಿಲ್ಲ. ಹಾಗಂತ ಪ್ರಯತ್ನ ಬಿಡಲಿಲ್ಲ. ಒಂದುವರೆ ದಶಕ ಕಾಲ ನಾನು ಆರ್ಕೇಸ್ಟ್ರಾ ನಡೆಸಿದೆ. ಅದು ತಿಂಡಿಗಷ್ಟೇ ಸಾಲುತ್ತಿತ್ತು. ಊಟಕ್ಕಾಗುತ್ತಿರಲಿಲ್ಲ. ಆ ಬಳಿಕ ಕನ್ಸ್‌ಸ್ಟ್ರಕ್ಷನ್‌ ಫೀಲ್ಡ್‌ಗೆ ಎಂಟ್ರಿಯಾದೆ. ಅಲ್ಲಿ ಹಗಲಿರುಳು ಒಂದಷ್ಟು ದುಡಿದೆ. ಯಾರನ್ನೂ ಕಾಸು ಹಾಕಿ ಸಿನಿಮಾ ಮಾಡ್ತೀನಿ ಅಂತ ಹೋಗದೆ, ನಾನೇ ಹೊಸ ಪ್ರಯತ್ನಕ್ಕೆ ಮುಂದಾದೆ, ಸಿನಿಮಾರಂಗದಿಂದ ಹೊರಗೆ ಇರುವವರನ್ನು ಕಲೆಹಾಕಿ ನಾನು ಸಿನಿಮಾ ಮಾಡಿದೆ. ಆಗ ಆಗದ್ದೇ “ಅಟ್ಟಯ್ಯ ವರ್ಸಸ್‌ ಹಂದಿ ಕಾಯೋಳು”. ಆ ಸಿನಿಮಾಗೆ ಎಲ್ಲೆಡೆಯಿಂದ ಮೆಚ್ಚುಗೆ ಸಿಕ್ಕಿತು. ಸಿನಿಮಾರಂಗದಲ್ಲೇ ಇದ್ದು ಕೆಲಸ ಮಾಡಲು ಸ್ಫೂರ್ತಿಯೂ ತುಂಬಿತು. ಈಗ ನಾನು “ಹಾಫ್‌” ಸಿನಿಮಾ ಕೈಗೆತ್ತಿಕೊಂಡಿದ್ದೇನೆʼ ಎಂದು ವಿವರಿಸುತ್ತಾರೆ ಲೋಕೇಂದ್ರ ಸೂರ್ಯ.

 

” ಒಂದುವರೆ ದಶಕ ಕಾಲ ನಾನು ಆರ್ಕೇಸ್ಟ್ರಾ ನಡೆಸಿದೆ. ಅದು ತಿಂಡಿಗಷ್ಟೇ ಸಾಲುತ್ತಿತ್ತು. ಊಟಕ್ಕಾಗುತ್ತಿರಲಿಲ್ಲ. ಆ ಬಳಿಕ ಕನ್ಸ್‌ಸ್ಟ್ರಕ್ಷನ್‌ ಫೀಲ್ಡ್‌ಗೆ ಎಂಟ್ರಿಯಾದೆ. ಅಲ್ಲಿ ಹಗಲಿರುಳು ಒಂದಷ್ಟು ದುಡಿದೆ. ಯಾರನ್ನೂ ಕಾಸು ಹಾಕಿ ಸಿನಿಮಾ ಮಾಡ್ತೀನಿ ಅಂತ ಹೋಗದೆ, ನಾನೇ ಹೊಸ ಪ್ರಯತ್ನಕ್ಕೆ ಮುಂದಾದೆ, ಸಿನಿಮಾರಂಗದಿಂದ ಹೊರಗೆ ಇರುವವರನ್ನು ಕಲೆಹಾಕಿ ನಾನು ಸಿನಿಮಾ ಮಾಡಿದೆ” 

 

ಕಲಾತ್ಮಕದಿಂದ ಕಮರ್ಷಿಯಲ್‌ ಕಡೆಗೆ…

ಈ ಚಿತ್ರದ ಬಗ್ಗೆ ಹೇಳುವುದಾದರೆ, ಇದೊಂದು ರೌಡಿಸಂ ಹಿನ್ನೆಲೆಯಲ್ಲಿ ಸಾಗುವ ಕಥೆ. ಒಂದು ಕಲಾತ್ಮಕ ಎಳೆಯನ್ನು ಇಟ್ಟುಕೊಂಡು ಪಕ್ಕಾ ಕಮರ್ಷಿಯಲ್‌ ಸಿನಿಮಾ ಆಗಿ ಮಾಡುವ ಯೋಚನೆ ನನಗಿದೆ.
ರೌಡಿಸಂ ಹಿನ್ನೆಲೆ ಇದ್ದರೂ ಎರಡು ಗ್ಯಾಂಗ್‌ ನಡುವೆ ಒಳಗೊಳಗೇ ಹೇಗೆ ಫೈಟ್‌ ಮಾಡ್ತಾರೆ ಎನ್ನುವುದೇ ಕಥೆ. ಬಹುಶಃ ಭಾರತೀಯ ಚಿತ್ರರಂಗದಲ್ಲಿ ನಾನು ಕಂಡಂತೆ ಇಲ್ಲಿಯವರೆಗೆ ಆಯ್ಕೆ ಮಾಡದಂತಹ ಕಲಾತ್ಮಕ ಎಳೆ ಇಟ್ಟುಕೊಂಡು ಸಿನಿಮಾ ಮಾಡಲು ಹೊರಟಿದ್ದೇನೆ. “ಹಾಫ್‌ʼ ಎಂಬ ಶೀರ್ಷಿಕೆ ಬೇರೆ ಭಾಷೆಗೂ ಹೋಗಬೇಕು ಎಂಬ ಉದ್ದೇಶದಿಂದ ಇಡಲಾಗಿದ್ದು, ಕಥೆ ಕೂಡ ಯುನಿರ್ವಸಲ್‌ ಆಗಿದೆ. ಚಿತ್ರಕ್ಕೆ ರಾಕಿಸೋನು ಸಂಗೀತವಿದೆ. ಚಿತ್ರದಲ್ಲಿ ಒಂದೇ ಒಂದು ಹಾಡು ಬರಲಿದ್ದು, ಆ ಹಾಡಿಗೆ ನಾಗೇಂದ್ರ ಪ್ರಸಾದ್‌ ಬಳಿ ಸಾಹಿತ್ಯ ಬರೆಸುವ ಯೋಚನೆಯೂ ಇದೆ. ಇನ್ನು, ಸಿನಿ ಮಲ್ಲಿಕ್‌ ಛಾಯಾಗ್ರಹಣವಿದೆ. ಇದು ಆರ್.ಡಿ.ಪ್ರೊಡಕ್ಷನ್‌ ಮೂಲಕ ನಿರ್ಮಾಣವಾಗುತ್ತಿದೆ. ನಾಲ್ಕೈದು ಮಂದಿ ಗೆಳೆಯರು ನಿರ್ಮಾಣಕ್ಕೆ ಸಾಥ್‌ ಕೊಡುತ್ತಿದ್ದಾರೆ. ಚಿತ್ರದಲ್ಲಿ ಸುಮಾರು ೬೦ಕ್ಕೂ ಹೆಚ್ಚು ಪಾತ್ರಗಳಿವೆ ಎಂದು ವಿವರ ಕೊಡುವ ಲೋಕೇಂದ್ರ, ತಮ್ಮ ಅಭಿನಯದ “ಚಡ್ಡಿದೋಸ್ತ್‌ ಕಡ್ಡಿ ಅಲ್ಲಾಡ್‌ಸ್ಬುಟ್ಟ” ಸಿನಿಮಾ ಮುಗಿಸಿದ್ದಾರೆ. “ಹಾಫ್”‌ ಅವರ ಎರಡನೇ ನಿರ್ದೇಶನದ ಚಿತ್ರವಾಗಿದ್ದು, ನವೆಂಬರ್‌ನಲ್ಲಿ ಚಿತ್ರಕ್ಕೆ ಮುಹೂರ್ತ ನೆರವೇರಲಿದೆ ಎನ್ನುತ್ತಾರೆ ಲೋಕೇಂದ್ರ.

error: Content is protected !!