Categories
ಸಿನಿ ಸುದ್ದಿ

ಅಲೆಲೆಲೆ…ಆಶಾ.. !ಮಾಡೆಲಿಂಗ್‌ ಬೆಡಗಿ, ಈಗ ನಮ್ ‌ಮನೆ ಹುಡುಗಿ

ಲಕ್ ಅನ್ನೋದು ಯಾರಿಗೆ, ಹೇಗೆ, ಯಾವಾಗ ಬರುತ್ತೆ ಅಂತ ಹೇಳೋಕ್ಕಾಗಲ್ಲ. ಅದರಲ್ಲೂ ಕಲರ್‌ಫುಲ್‌ದುನಿಯಾ ಸಿನಿಮಾದಲ್ಲಿ ಇದೊಂಥರ ಬಂಪರ್‌ಲಾಟರಿ ಹೊಡೆದಂತೆ. ಯಾಕಂದ್ರೆ ಇಲ್ಲಿ ನಿರೀಕ್ಷೆಗಿಂತ ಅಚ್ಚರಿ ಅನ್ನೋ ಹಾಗೆ ಅದೃಷ್ಟ ಒಲಿದು ಬಿಡುತ್ತೆ. ಸದ್ಯಕ್ಕೆ ಅಂತಹ ಅದೃಷ್ಟಾವಕಾಶದಲ್ಲೀಗ ಸ್ಯಾಂಡಲ್‌ವುಡನಲ್ಲಿ ಸಿಕ್ಕಾಪಟ್ಟೆ ಸೌಂಡ್‌ಮಾಡುತ್ತಿದ್ದಾರೆ ʼರಾಬರ್ಟ್‌ʼ ಚಿತ್ರದ ನಾಯಕಿ ಆಶಾ ಭಟ್.‌ಅದು ಹೆಂಗೆ? ಯಾಕೆ? ಅದರ ಕಂಪ್ಲೀಟ್ ಸ್ಟೋರಿ ಇಲ್ಲಿದೆ.

ಆಶಾ ಭಟ್‌- ಈ ಹೆಸರು ಇವತ್ತು ಕನ್ನಡಿಗರ ಮನೆ ಮಾತು. ಕಳೆದ ಒಂದು ವಾರದಿಂದ ಬೆಳ್ಳಿ ಪರದೆ ಮೇಲೆ ಅನುರುಣಿಸಿದ “ರಾಬರ್ಟ್‌ʼ ಅಬ್ಬರದಲ್ಲಿ ಅಲೆ ಅಲೆಯಾಗಿ ಕೇಳಿಸುತ್ತಿದ್ದೆ ಆಶಾ ಭಟ್‌ಹೆಸರು. ನೋಡಿದಾಕ್ಷಣ ಆಕರ್ಷಣೆ ಹುಟ್ಟಿಸುವ ಮೋಹಕ ನೋಟ, ನಟನೆಯ ಹಾವ-ಭಾವ, ಹಾಡುಗಳಲ್ಲಿನ ಭರ್ಜರಿ ಕುಣಿತದೊಂದಿಗೆ “ರಾಬರ್ಟ್‌’ ಮೂಲಕ ಪಡ್ಡೆ ಹುಡುಗರ ನಿದ್ದೆ ಗೆಡಿಸಿರುವ ಮಾಡೆಲ್‌ಆಶಾ ಭಟ್‌, ಇವತ್ತು ನಮ್ ಮನೆ ಹುಡುಗಿ.

ಸ್ಯಾಂಡಲ್‌ವುಡ್‌ಜತೆಗೆ ಟಾಲಿವುಡ್‌ನಲ್ಲೂ ಇವತ್ತು ಸಿಕ್ಕಾಪಟ್ಟೆ ಸೌಂಡು ಮಾಡ್ತಿದ್ದಾರೆ ಆಶಾ ಭಟ್.‌ “ರಾಬರ್ಟ್‌ʼ ಅಲೆಯಲ್ಲಿ ಆಶಾ ಭಟ್‌ಹೆಸರು ಕೂಡ ಅಲೆ ಅಲೆಯಾಗಿ ಅಪ್ಪಳಿಸುತ್ತಿದೆ. ನಟಿಯಾಗಿ ಬಂದ ಮೊದಲ ಸಿನಿಮಾದಲ್ಲೇ ಅವರಿಗೆ ಇಷ್ಟೊಂದು ಜನಪ್ರಿಯತೆ ಸಿಗಬಹುದೆಂದು ಯಾರು ಕೂಡ ಅಂದುಕೊಂಡಿರಲಿಲ್ಲ. ಅಷ್ಡೇ ಯಾಕೆ, ಇದನ್ನು ಆಶಾ ಭಟ್‌ ಕೂಡ ಉಹಿಸಿರಲಿಲ್ಲ. ಆದ್ರೆ ಇವತ್ತು, ಅದೃಷ್ಟವೇ ಅವರಿಗೆ ಒಲಿದು ಬಂದಿದೆ. ಎಂಟ್ರಿಯಲ್ಲೇ ದೊಡ್ಡದೊಂದು ಸ್ಟಾರ್‌ನಟಿಯ ಜನಪ್ರಿಯತೆ ಸಿಕ್ಕಿದೆ. ಟಾಲಿವುಡ್ ನಲ್ಲೂ ಕೂಡ ಆಶಾ ಭಟ್‌ ಹೆಸರು ಚಾಲ್ತಿಗೆ ಬಂದಿದೆ. ಇದೇ ಅಲ್ವಾ ಅದೃಷ್ಟ ಅನ್ನೋದು.

ಆದ್ರೆ ಅವತ್ತು ʼರಾಬರ್ಟ್‌ʼ ಗೆ ಆಶಾ ಭಟ್‌ನಾಯಕಿ ಅಂದಾಗ ಗಾಂಧಿ ನಗರದಲ್ಲಿ ಕೇಳಿ ಬಂದ ಮಾತೇ ಬೇರೆ. ಆಶಾ ಭಟ್‌ ಹೆಸರು ಕೇಳಿ ಹುಬ್ಬೇರಿಸಿದವರಿಗೇನು ಕಮ್ಮಿ ಇರಲಿಲ್ಲ. ಯಾಕಂದ್ರೆ, ಕನ್ನಡದ ಸಿನಿಮಾ ಪ್ರೇಕ್ಷಕ ಈ ಹೆಸರು ಕೇಳಿದ್ದೆ ಅದೇ ಮೊದಲು. ಮಾಡೆಲಿಂಗ್‌ನಲ್ಲಿ ಹೆಸರು ಮಾಡಿ, ಮುಂಬೈನಲ್ಲಿದ್ದ ಆಶಾ ಭಟ್‌ ಬಗ್ಗೆ ನಿರ್ದೇಶಕ ತರುಣ್‌ ಸುಧೀರ್‌ಗೆ ರಿಯಾಲಿಟಿ ಗೊತ್ತಿತ್ತೇನೋ. ಹಾಗಾಗಿಯೇ ಅವರನ್ನು ತಮ್ಮ ಚಿತ್ರಕ್ಕೆ ಸೆಲೆಕ್ಟ್‌ಮಾಡಿಕೊಂಡು ಬಂದಿದ್ರು. ಆದ್ರೆ, ಕನ್ನಡದ ಸಿನಿಮಾ ಪ್ರೇಕ್ಷಕರಿಗೆ ಆಶಾ ಭಟ್‌ ಅಪರಿಚಿತರು. ಹಾಗಾಗಿ ಅವ್ಯಾರಾರೋ, ಮುಂಬೈ ಹುಡುಗಿ ಅಂತ ಅಲಕ್ಷ್ಯ ಮಾಡಿದ್ದರು. ಆದರೆ ಆಶಾ ಭಟ್‌ ನಿಜಕ್ಕೂ ಯಾರು ಅಂತ ಗೊತ್ತಾಗಿದ್ದು ಅವರು ಬೆಂಗಳೂರಿಗೆ ಕಾಲಿಟ್ಟಾಗಲೇ.
ಕನ್ನಡದ ಮಟ್ಟಿಗೆ ಇಂತಹ ಅಚ್ಚರಿಗಳು ಹಲವು ಅಗಿವೆ. ಕನ್ನಡದವರಾದರೂ, ಹೊರ ಊರುಗಳಲ್ಲಿದ್ದವರು ಒಮ್ಮೆಲೆ ಇಲ್ಲಿ ಒಂಥರ ನಿರ್ಲಕ್ಷ್ಯ ಮಾತು ಸಹಜವೇ. ಆಶಾ ಭಟ್‌ವಿಚಾರದಲ್ಲೂ ಅದೇ ಅಗಿದ್ದು. ಆದರೆ,ಮುಂದೆ ಕಥೆ ಬೇರೆಯದೇ ಆಯಿತು. ಮೂಲತ: ಕನ್ನಡದವರೇ ಅಗಿದ್ದರೂ ಮಾಡೆಲಿಂಗ್‌ ಕಾರಣಕ್ಕೆ ಆಗ ಆಶಾ ಭಟ್‌ಮುಂಬೈನಲ್ಲಿದ್ದರು. ಆ ವಿಚಾರ ಗೊತ್ತಾದಾಗ ಮೊದಲು ಮುಂಬೈ ಹುಡುಗಿ ಅಂತ ಹುಬ್ಬೇರಿಸಿದವರೆಲ್ಲ, ಇವ್ರು ನಮ್ಮೂರು ಹುಡುಗಿ ಅಂತ ಸಮಾಧಾನ ಪಟ್ಟುಕೊಂಡ್ರು. ಅದೇ ಜನಕ್ಕೆ ಇವತ್ತು ಆಶಾ ಭಟ್‌ಮನೆ ಹುಡುಗಿ ಆಗಿದ್ದಾರೆ. ಅವರೇ ಹೇಳುವ ಹಾಗೆ ಅದಕ್ಕೆ ಕಾರಣ ʼರಾಬರ್ಟ್‌ʼ ಚಿತ್ರ.

ಹೌದು, ʼರಾಬರ್ಟ್‌ʼ ಇವತ್ತು ರಾರಾಜಿಸುತ್ತಿದೆ. ಇದು ದರ್ಶನ್‌ ಅಭಿನಯದ ಚಿತ್ರ ಎನ್ನುವುದರ ಜತೆಗೆ ಪಕ್ಕಾ ಮಾಸ್‌, ಕ್ಲಾಸ್‌ ಸಿನಿಮಾವಾಗಿಯೂ ಅಬ್ಬರಿಸುತ್ತಿದೆ. ಒಂದು ಹೊಸ ತರಹದ ಸಿನಿಮಾವಾಗಿ ಭಾರೀ ಜನ ಮೆಚ್ಚಿಗೆ ಪಡೆದಿದೆ. ಒಂದಷ್ಟು ಕಾಲ ಸ್ಟಾರ್‌ಸಿನಿಮಾ ಇಲ್ಲದೆ ಬೇಸತ್ತಿದ್ದ ಜನಕ್ಕೆ ಭರ್ಜರಿ ಬಾಡೂಟ ಸಿಕ್ಕಂತಾಗಿದೆ. ದರ್ಶನ್‌ಬಾಕ್ಸಾಫೀಸ್‌ ಸುಲ್ತಾನ್‌ ಅನ್ನೋದು ಮತ್ತೆ ಸಾಬೀತು ಆಗಿದೆ. ಚಿತ್ರದ ನಾಯಕಿ ಆಶಾ ಭಟ್‌ಅವರಿಗೂ ಭರ್ಜರಿ ಜನಪ್ರಿಯತೆ ಸಿಕ್ಕಿದೆ. ಮೊದಲ ಸಿನಿಮಾವಾದರೂ ಆಶಾ ಭಟ್‌ಆಕ್ಟಿಂಗ್‌ಹಾಗೂ ಡಾನ್ಸ್‌ಮೂಲಕ ಪ್ರೇಕ್ಷಕರಿಂದ ಬೇಷ್‌ಎನಿಸಿಕೊಂಡಿದ್ದಾರೆ. ವಿಮರ್ಶೆಕರಿಂದಲೂ ಅಪ್ರಿಸಿಯೇಷನ್‌ಸಿಕ್ಕಿದೆ. ಸಹಜವಾಗಿಯೇ ಆಶಾ ಭಟ್‌ಸಖತ್‌ಥ್ರಿಲ್‌ ಆಗಿದ್ದು ಹೌದು.

ನಿಜ, ಗ್ಲಾಮರಸ್‌ನಟಿ ಆಶಾ ಭಟ್‌ಸಖತ್‌ಖುಷಿಯಲ್ಲಿದ್ದಾರೆ. ಇದನ್ನವರು ಕನಸಲ್ಲೂ ಕಂಡಿರಲಿಕ್ಕೆ ಸಾಧ್ಯವೇ ಇಲ್ಲ. ಅವೆಲ್ಲವೂ ಅದೃಷ್ಟದ ಫಲ. ನಟಿಯಾಗಿ ಕನ್ನಡಕ್ಕೆ ಬರಬೇಕೆಂದು ಯೋಚಿಸುತ್ತಿದ್ದ ಆಶಾ ಭಟ್‌ಗೆ ಎಂಟ್ರಿಯಲ್ಲೇ ದರ್ಶನ್‌ಅವರಂತಹ ಸ್ಟಾರ್‌ಜತೆಗೆ ತೆರೆ ಹಂಚಿಕೊಳ್ಳಲು ಅವಕಾಶ ಸಿಕ್ಕಿದ್ದು ಮೊದಲ ಅದೃಷ್ಟ. ಅಲ್ಲಿಂದ ಇದೊಂದು ಬಿಗ ಬಜೆಟ್‌ಸಿನಿಮಾ ಆಗಿದ್ದು, ಮುಂದೆ ಇದು ಕನ್ನಡದ ಜತೆಗೆ ತೆಲುಗಿನಲ್ಲೂ ತೆರೆ ಕಂಡು ದೊಡ್ಡ ಮಟ್ಟದ ಸಕ್ಸಸ್‌ಕಂಡಿದ್ದು ಅದೃಷ್ಟವೋ ಅದೃಷ್ಟ. ಅವರೇ ಹೇಳುವ ಹಾಗೆ ಇದು ಅವರ ಖುಷಿಯ ಡಬಲ್‌ಧಮಾಕಾ.

ಆಶಾ ಭಟ್‌ಅವರ ಬೆಳ್ಳಿತೆರೆಯ ಎಂಟ್ರಿಯೇ ಗ್ರಾಂಡ್.‌ಕನ್ನಡದ ಜತೆಗೆ ತೆಲುಗಿಗೂ ಎಂಟ್ರಿ ಆಗಿದ್ದಾರೆ. ಕಾಕತಾಳೀಯ ಅಂದ್ರೆ, ಟಾಲಿವುಡ್‌ನಲ್ಲೀಗ ಕನ್ನಡದ ನಟಿಯರಿಗೆ ಬಾರೀ ಬೇಡಿಕೆ ಇದೆ. ಈಗಾಗಲೇ ಅಲ್ಲಿ ರಶ್ಮಿಕಾ ಮಂದಣ್ಣ, ನಭಾ ನಟೇಶ್‌ಸೇರಿ ಹಲವರಿದ್ದಾರೆ. ಆ ಸಾಲಿಗೆ ಈಗ ಆಶಾ ಭಟ್‌ಸೇರ್ಪಡೆ ಆಗುವುದರಲ್ಲಿ ನೋ ಡೌಟು. ಮೊದಲೇ ಬಾಲಿವುಡ್‌ಲಿಂಕ್‌ಇರುವ ನಟಿ ಅವರು. ರಾಬರ್ಟ್‌ಜನಪ್ರಿಯತೆ ಮೂಲಕ ಟಾಲಿವುಡ್‌ಮೂಲಕ ಬಾಲಿವುಡ್‌ಗೂ ಎಂಟ್ರಿಯಾದ್ರು ಅಚ್ಚರಿ ಪಡಬೇಕಿಲ್ಲ.

ಬಾಲಿವುಡೇ ಆಗಲಿ, ಟಾಲಿವುಡೇ ಆಗಲಿ, ಕನ್ನಡತಿ ಆಶಾ ಭಟ್‌ ನಟಿಯಾಗಿ ಎಲ್ಲಿಗೇ ಹೋದರು ಅದು ಕನ್ನಡದ ಹೆಮ್ಮೆ. ಆದರೂ, ಅವರಿಗೆ ದೊಡ್ಡ ಮಟ್ಟದ ಅವಕಾಶ ನೀಡಿದ್ದು ಸ್ಯಾಂಡಲ್‌ ವುಡ್‌ ಮಂದಿ. ಆ ಬಗ್ಗೆ ಒಂದಷ್ಟು ಎಚ್ಚರಿಕೆ ಇಟ್ಟುಕೊಂಡು, ಭಾರತೀಯ ಚಿತ್ರರಂಗದಲ್ಲಿ ಮಾಡೆಲ್‌ ಕಮ್‌ ನಟಿ ಆಶಾ ಭಟ್‌ ಸ್ಟಾರ್‌ ನಟಿಯಾಗಿ ಖ್ಯಾತಿ ಪಡೆಯಲಿ ಅನ್ನೋದು ಸಿನಿ ಲಹರಿ ಆಶಯ.

Categories
ಸಿನಿ ಸುದ್ದಿ

ಚಿತ್ರರಂಗದ ಮೇಲೆ ಕೊರೊನಾ ಆತಂಕದ ತೂಗುಕತ್ತಿ ! ಮತ್ತೆ ಲಾಕ್‌ಡೌನ್‌ ಆಗಿಬಿಟ್ಟರೆ ಚಿತ್ರರಂಗದ ಸ್ಥಿತಿಗತಿ ಏನಾಗಬಹದು?

ಈಗಷ್ಟೇ ಚಿತ್ರರಂಗ ಚೇತರಿಸಿಕೊಳ್ಳುತ್ತಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ ಕೊರೊನಾ ಒಕ್ಕರಿಸಿ ಆತಂಕ ಸೃಷ್ಟಿಸಿತ್ತಲ್ಲದೆ, ಲಾಕ್‌ಡೌನ್‌ಗೂ ಕಾರಣವಾಗಿ ಎಲ್ಲರ ಬದುಕನ್ನೇ ಬರಡಾಗಿಸಿದ್ದು ಸುಳ್ಳಲ್ಲ. ಈಗ ಮತ್ತದೇ ಆತಂಕ ಶುರುವಾಗುತ್ತಿದೆ! ಹೌದು, ಇದು ನಿಜ ಕೂಡ. ಕೊರೊನಾ ಹಾವಳಿ ನಿಯಂತ್ರಣವಾಗುತ್ತಿದ್ದಂತೆ ಎಲ್ಲವೂ ಸಹಜ ಸ್ಥಿತಿಗೆ ಬಂದಿದ್ದೇನೋ ಸತ್ಯ. ಆದರೆ, ಈಗ ದಿನ ಕಳೆದಂತೆ ಮತ್ತೆ ಕೊರೊನಾ ಪಾಸಿಟಿವ್‌ ಕೇಸುಗಳು ಹೆಚ್ಚುತ್ತಿವೆ. ಸರ್ಕಾರ ಕೂಡ ಎಚ್ಚೆತ್ತುಕೊಂಡು ಅಗತ್ಯ ಕ್ರಮ ಕೈಗೊಳ್ಳಲು ಮುಂದಾಗುತ್ತಿದೆ. ಒಂದು ವೇಳೆ ಸರ್ಕಾರ ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿ, ಪುನಃ ಲಾಕ್‌ಡೌನ್‌ಗೆ ಮುಂದಾದರೆ? ಖಂಡಿತವಾಗಿಯೂ ಚಿತ್ರರಂಗ ಮೇಲೇಳಲು ವರ್ಷಗಳೇ ಬೇಕಾದೀತು. ಕಳೆದ ಒಂದು ವರ್ಷದ ಕೊರೊನಾ ಹೊಡೆತಕ್ಕೆ ಇನ್ನೂ ಚಿತ್ರರಂಗ ಚೇತರಿಸಿಕೊಂಡಿಲ್ಲ. ಮತ್ತೆ ಕೊರೊನಾ ಹಾವಳಿ ಎದುರಾಗಿ ಏನಾದರೊಂದು ಸಮಸ್ಯೆಗೆ ಕಾರಣವಾಗಿಬಿಟ್ಟರೆ, ಚಿತ್ರರಂಗವನ್ನೇ ನಂಬಿದವರ ಪಾಡೇನು ಎಂಬ ಪ್ರಶ್ನೆ ಈಗ ಎದುರಾಗಿದೆ.

ಸದ್ಯಕ್ಕೆ ಚಿತ್ರರಂಗದವರಲ್ಲಿ ಎರಡನೇ ಅಲೆ ಎಂಬ ಮಾತು ಭಾರೀ ಆತಂಕಕ್ಕೆ ಕಾರಣವಾಗಿದೆ. ಮೆಲ್ಲನೆ ಕೇಸುಗಳು ಹೆಚ್ಚುತ್ತಿವೆ. ವ್ಯಾಕ್ಸಿನ್‌ ಬಂದಿದ್ದರೂ, ನಿಯಂತ್ರಣವಾಗುತ್ತಿಲ್ಲವಾದ್ದರಿಂದ ಸರ್ಕಾರ ಸಭೆ ನಡೆಸುತ್ತಿದೆ. ಹಾಗೇನಾದರೂ ಒಂದು ವೇಳೆ ಲಾಕ್‌ಡೌನ್‌ಗೆ ಸರ್ಕಾರ ಮುಂದಾದರೆ ಚಿತ್ರರಂಗದವರ ಸ್ಥಿತಿ ಇನ್ನಷ್ಟು ಗಂಭೀರವಾಗುವುದರಲ್ಲಿ ಅನುಮಾನವಿಲ್ಲ.

ಈಗಾಗಲೇ ಸರ್ಕಾರ ಕೂಡ ಕೆಲವು ಕ್ರಮ ಕೈಗೊಂಡಿದೆ. ಮದುವೆ, ಜಾತ್ರೆ ಇನ್ನಿತರೆ ಸಮಾರಂಭಗಳಿಗೆ ಕೊಂಚ ಬ್ರೇಕ್‌ ಹಾಕಿದೆ. ಇತಿಮಿತಿಯಲ್ಲೇ ನಡೆಸಬೇಕು ಎಂಬ ಷರತ್ತು ಹಾಕಿದೆ. ಈ ನಿಟ್ಟಿನಲ್ಲಿ ಸಿನಿಮಾರಂಗ ಕೂಡ ಪ್ರಶ್ನೆ ಮಾಡಿಕೊಳ್ಳುವಂತಾಗಿದೆ. ಈಗಾಗಲೇ ಹಲವು ಚಿತ್ರತಂಡಗಳು ಹಾಕಿಕೊಂಡಿದ್ದ ಲೆಕ್ಕಾಚಾರಗಳು ಕೂಡ ಉಲ್ಟಾ ಆಗುತ್ತಿವೆ. ಪುನೀತ್‌ ರಾಜಕುಮಾರ್‌ ಅಭಿನಯದ “ಯುವರತ್ನ” ಚಿತ್ರದ ಕಾರ್ಯಕ್ರಮ ಕೂಡ ಕ್ಯಾನ್ಸಲ್‌ ಆಗಿದೆ. ಹೌದು, ಮೈಸೂರಲ್ಲಿ “ಯುವ ಸಂಭ್ರಮ” ಹೆಸರಲ್ಲಿ ಕಾರ್ಯಕ್ರಮ ನಡೆಸಲು ಚಿತ್ರತಂಡ ಯೋಜನೆ ರೂಪಿಸಿತ್ತು. ಆದರೆ, ಕೊರೊನಾದ ಎರಡನೇ ಹಂತದ ಅಲೆ ಹೆಚ್ಚಿದ್ದರಿಂದ, ಎಚ್ಚೆತ್ತುಕೊಂಡ ಚಿತ್ರತಂಡ ತಕ್ಷಣವೇ “ಯುವ ಸಂಭ್ರಮ” ರದ್ದು ಮಾಡಿತು. ಇನ್ನು, ಸರ್ಕಾರ ಜನಸಂದಣಿ ಆಗುವ ಸ್ಥಳಗಳ ಮೇಲೆ ಏನಾದರೂ ಗಂಭೀರ ಕ್ರಮಕ್ಕೆ ಮುಂದಾದರೆ, ಚಿತ್ರಮಂದಿರಗಳಿಗೆ ಭಾರೀ ಪೆಟ್ಟು ಬೀಳಬಹುದು.

ಈಗಷ್ಟೇ ಚಿತ್ರಮಂದಿರಗಳತ್ತ ಜನರು ದಾಪುಗಾಲು ಇಡುತ್ತಿದ್ದಾರೆ. ಈ ಬೆನ್ನಲ್ಲೇ ಪುನಃ ಚಿತ್ರಮಂದಿರಗಳನ್ನು ಮುಚ್ಚಿಸುವ ಕ್ರಮ ಕೈಗೊಂಡರೆ ಚಿತ್ರರಂಗ ದಿಕ್ಕು ತೋಚದಂತಾಗುತ್ತದೆ.
ಈಗಾಗಲೇ ಒಂದು ವರ್ಷದಿಂದ ಕಾದು ಸೋತಿರುವ ಚಿತ್ರಗಳು ಈಗ ಬಿಡುಗಡೆಗೆ ಸಜ್ಜಾಗುತ್ತಿವೆ. ಚಿತ್ರಮಂದಿರಗಳು ಬಾಗಿಲು ತೆರೆಯುತ್ತಿದ್ದಂತೆಯೇ, ನಾ ಮುಂದು, ನೀ ಮುಂದು ಅಂತ ಸಾಲು ಸಾಲು ಸಿನಿಮಾಗಳು ತೆರೆಕಂಡು ಸೋತು ಸಣ್ಣಗಾಗಿದ್ದೂ ಇದೆ. ಈಗ ಬಿಡುಗಡೆಯ ಡೇಟ್‌ ಕೂಡ ಏರುಪೇರಾಗಬಹುದು.

“ಪೊಗರು” ಸಿನಿಮಾ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಿದ ಬೆನ್ನಲ್ಲೇ ಸ್ಟಾರ್‌ ಚಿತ್ರಗಳಾದ, “ರಾಬರ್ಟ್‌”, “ಕೋಟಿಗೊಬ್ಬ 3”, “ಯುವರತ್ನ”,”ಕೆಜಿಎಫ್‌2″, “ಸಲಗ” ಚಿತ್ರಗಳು ಬಿಡುಗಡೆ ದಿನವನ್ನು ಘೋಷಿಸಿಕೊಂಡಿವೆ. ಈಗ ಇದ್ದಕ್ಕಿದ್ದಂತೆ ಚಿತ್ರಮಂದಿರಗಳ ಪ್ರದರ್ಶನಕ್ಕೆ ಷರತ್ತು ಹಾಕಿದರೆ, ಒಂದು ವೇಳೆ ಮುಚ್ಚಬೇಕೆಂಬ ಆದೇಶ ಹೊರಡಿಸಿದರೆ, ಬಿಡುಗಡೆಗೆ ಸಜ್ಜಾಗಿರುವ ಸಿನಿಮಾಗಳ ಪಾಡೇನು, ನಿರ್ಮಾಪಕರ ಸ್ಥಿತಿ ಏನು? ಸ್ಟಾರ್‌ ಚಿತ್ರಗಳ ಜೊತೆಗೆ ಸಣ್ಣಪುಟ್ಟ ಚಿತ್ರಗಳ ದೊಡ್ಡ ಪಟ್ಟಿಯೇ ಇದೆ. ಕೊರೊನಾ ಹಾವಳಿ ಮತ್ತೆ ಶುರುವಾಗಿ, ಲಾಕ್‌ಡೌನ್‌ ಮಾಡಿ ಚಿತ್ರಮಂದಿರಗಳು, ಮಲ್ಟಪ್ಲೆಕ್ಸ್‌ ಬಂದ್‌ ಮಾಡಿದ್ದಲ್ಲಿ, ಚಿತ್ರರಂಗವನ್ನೇ ನಂಬಿದವರ ಬದುಕು ಅಕ್ಷರಶಃ ಬೀದಿಪಾಲಾಗುತ್ತದೆ. ಅಂದಾಜಿನ ಪ್ರಕಾರ ಮುನ್ನೂರಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ಕಳೆದ ವರ್ಷ ಬಿಡುಗಡೆ ಆಗಬೇಕಿದ್ದ ಸಿನಿಮಾಗಳು ಈಗ ಸ್ವಲ್ಪ ಸುಧಾರಿಸಿಕೊಂಡು ಬರುವ ತಯಾರಿಯಲ್ಲಿವೆ. ಈಗ ನೋಡಿದರೆ, ಪುನಃ ಕೊರೊನಾ ಭಯ ಹುಟ್ಟಿಸುತ್ತಿದೆ. ಹೀಗಾದರೆ, ಹೊಸ ನಿರ್ಮಾಪಕರ ಗತಿ ಏನು?
ಈಗಾಗಲೇ ಕೊರೊನಾದ ಎರಡನೇ ಅಲೆ ಹೆಚ್ಚಾಗುತ್ತಿದೆ ಎಂಬ ಕಾರಣಕ್ಕೆ, ಚಿತ್ರೋತ್ಸವ ಕೂಡ ತಾತ್ಕಾಲಿಕವಾಗಿ ಮುಂದಕ್ಕೆ ಹೋಗಿದೆ. ಹಲವು ಕಾರ್ಯಕ್ರಮಗಳಿಗೂ ಕಡಿವಾಣ ಬೀಳುತ್ತಿದೆ. ಇದು ಗಂಭೀರವಾಗಿಬಿಟ್ಟರೆ, ಸಿನಿಮಾವನ್ನೇ ನಂಬಿ ಹಣ ಹಾಕಿದವರ ಸ್ಥಿತಿ ಏನಾಗಬೇಡ?

ಕಳೆದ ವರ್ಷ ಕೊರೊನಾ ಎಂಟ್ರಿಯಾಗುವ ಮುನ್ನವೇ, “ದಿಯಾ” ಮತ್ತು “ಲವ್‌ ಮಾಕ್ಟೇಲ್‌” ಚಿತ್ರಗಳು ಗೆದ್ದು ಬೀಗಿದ್ದವು. ಕೊರೊನಾ ಹೊಡೆತದ ಮಧ್ಯದಲ್ಲೂ ಫೀನಿಕ್ಸ್‌ನಂತೆ ಎದ್ದು ಗೆದ್ದಿದ್ದವು. ಈ ವರ್ಷ ಮಾರ್ಚ್‌ನಲ್ಲಿ “ರಾಬರ್ಟ್‌” ಕೂಡ ಬಿಡುಗಡೆಯಾಗಿ ಚಿತ್ರರಂಗಕ್ಕೆ ಒಂದಷ್ಟು ಧೈರ್ಯ ತುಂಬಿದೆ. ಎಲ್ಲಾ ಕಡೆ ಅಬ್ಬರ ಮುಂದುವರೆಸಿದೆ. ಇದರ ಹಿಂದೆಯೇ ಒಂದಷ್ಟು ಸ್ಟಾರ್‌ ಸಿನಿಮಾಗಳು, ಹೊಸಬರ ಸಿನಿಮಾಗಳೂ ಕೂಡ ಅದೇ ಜೋಶ್‌ನಲ್ಲಿ ರಿಲೀಸ್‌ಗೆ ರೆಡಿಯಾಗಿವೆ. ಆದರೆ, ಸರ್ಕಾರ ಗಂಭೀರವಾಗಿ ಕ್ರಮ ಕೈಗೊಂಡುಬಿಟ್ಟರೆ, ಪರಿಸ್ಥಿತಿ ಘೋರವಾಗಿರುತ್ತೆ.
ಒಂದು ಸಿನಿಮಾ ಮಾಡುವ ಕಷ್ಟ, ನಿರ್ಮಾಪಕರಿಗಷ್ಟೇ ಗೊತ್ತು. ಎಲ್ಲಿಂದಲೋ ಹಣ ತಂದು, ಸಾಲ ಮಾಡಿ, ಬಡ್ಡಿ ಕಟ್ಟಿ, ಸಿನಿಮಾ ಮಾಡುತ್ತಾನೆ. ಆದರೆ, ಆ ಹಣ ಹಿಂದಿರುಗುತ್ತದೆ ಎಂಬ ಯಾವ ಗ್ಯಾರಂಟಿಯೂ ಇರೋದಿಲ್ಲ. ಒಂದು ಸಿನಿಮಾ ಶುರುವಾದರೆ, ನೂರಾರು ಕುಟುಂಬ ಬದುಕು ಕಟ್ಟಿಕೊಳ್ಳುತ್ತೆ. ಆದರೆ, ಸಿನಿಮಾ ನಿರ್ಮಾಪಕನಿಗೇ ದೊಡ್ಡ ಪೆಟ್ಟು ಬಿದ್ದರೆ, ಅಂತಹ ಕುಟುಂಬಗಳೂ ಪೆಟ್ಟು ತಿನ್ನುತ್ತವೆ. ಬಹಳಷ್ಟು ಸರ್ಕಸ್‌ ಮಾಡಿಯೇ ನಿರ್ಮಾಪಕ ಸಿನಿಮಾ ಮುಗಿಸಿರುತ್ತಾನೆ. ಇನ್ನೇನು ರಿಲೀಸ್‌ಗೆ ಸಜ್ಜಾಗುತ್ತಿರುವ ಹೊತ್ತಿಗೆ ಮತ್ತೊಂದು ಆತಂಕದ ತೂಗುಕತ್ತಿ ನೇತಾಡುತ್ತಿರುವುದು ನಿಜಕ್ಕೂ ಬೇಸರದ ವಿಷಯ. ಸದ್ಯಕ್ಕೆ ಸರ್ಕಾರ ಗಂಭೀರವಾಗಿ ಕ್ರಮ ಕೈಗೊಳ್ಳಲು ಮುಂದಾದರೆ, ಚಿತ್ರರಂಗ ಕೂಡ ಟಾರ್ಗೆಟ್‌ ಆಗಿರುತ್ತೆ ಅನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಹಾಗೆ ಆಗದಿರಲಿ ಎಂಬುದೇ “ಸಿನಿಲಹರಿ” ಆಶಯ.

Categories
ಸಿನಿ ಸುದ್ದಿ

ಪುನೀತ್‌ರಾಜ್‌ ಕುಮಾರ್‌ ಹುಟ್ಟು ಹಬ್ಬಕ್ಕೆ ಶುಭ ಕೋರಿದ ಸ್ಟಾರ್‌ ಬಳಗ

ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಆದರೆ, ಪ್ರತಿ ವರ್ಷದಂತೆ ಈ ಬಾರಿ ಅವರು ತಮ್ಮ ಹುಟ್ಟು ಹಬ್ಬವನ್ನು ಗ್ರಾಂಡ್‌ ಆಗಿ ಆಚರಿಸಿಕೊಂಡಿಲ್ಲ. ಕೊರೋನಾ ಹಿನ್ನೆಲೆಯಲ್ಲಿ ಗ್ರಾಂಡ್‌ ಬರ್ತ್‌ ಡೇ ಆಚರಣೆಗೆ ಬ್ರೇಕ್‌ ಹಾಕಿ, ಕುಟುಂಬದವರ ಜತೆಗೆ ಮಾತ್ರ ಸರಳವಾಗಿಯೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಬರ್ತ್‌ ಡೇ ಮುನ್ನ ದಿನವೇ ಅವರು ಫೇಸ್‌ ಬುಕ್‌ ಮೂಲಕ ಲೈವ್‌ ಬಂದು, ಈ ಬಾರಿ ಬರ್ತ್‌ ಡೇ ಆಚರಿಸಿಕೊಳ್ಳುತ್ತಿಲ್ಲ, ಅಭಿಮಾನಿಗಳು ಯಾರು ಕೂಡ ಮನೆ ಹತ್ತಿರ ಬರಬಾರದು ಅಂತ ಮನವಿ ಮಾಡಿಕೊಂಡಿದ್ದರು. ಅಂತೆಯೇ ಈ ಬಾರಿ ಅವರು ಯಾವುದೇ ಆಡಂಬರ ಇಲ್ಲದೆ ಸರಳವಾಗಿಯೇ ಹುಟ್ಟು ಆಚರಿಸಿಕೊಂಡರೂ, ಸೋಷಲ್‌ ಮೀಡಿಯಾ ಮೂಲಕ ಅವರ ಹುಟ್ಟು ಹಬ್ಬಕ್ಕೆ ಶುಭಾಶಯದ ಮಹಾಪೂರವೇ ಹರಿದು ಬಂದಿದೆ. ವಿಶೇಷವಾಗಿ ನಟರಾದ ದರ್ಶನ್‌, ಸುದೀಪ್‌ ಸೇರಿದಂತೆ ಕನ್ನಡದ ಹಲವು ನಟರು ಟ್ವಿಟರ್‌ ಸೇರಿದಂತೆ ಸೋಷಲ್‌ ಮೀಡಿಯಾದಲ್ಲಿ ಅಪ್ಪುಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾರೆ. ಹಾಗೆಯೇ ಅಭಿಮಾನಿಗಳು ಕೂಡ ಅಪ್ಪುಗೆ ಹುಟ್ಟು ಹಬ್ಬದ ಶುಭಾಶಯದ ಮಹಾಪೂರವೇ ಹರಿದು ಬಂದಿದ್ದು ವಿಶೇಷ.

Categories
ಸಿನಿ ಸುದ್ದಿ

ನಿಮ್ಮ ಅಪ್ಪು , ನಿಮ್ಮ ಊರಿಗೆ – ಮೈಸೂರು ʼ ಯುವ ಸಂಭ್ರಮʼ ರದ್ದಾದ ಬೆನ್ನಲೇ ಯುವರತ್ನ ಟೀಮ್‌ನ ಹೊಸ ತಂತ್ರ

ಪವರ್ ಸ್ಟಾರ್ ಪುನೀತ್‌ ರಾಜ್‌ ಕುಮಾರ್‌ ಫ್ಯಾನ್ಸ್‌ ಬೇಜಾರಾಗಬೇಕಿಲ್ಲ. ಪ್ರತಿ ವರ್ಷದಂತೆ ಈ ವರ್ಷ ತಮ್ಮ ನೆಚ್ಚಿನ ನಟನ ಗ್ರಾಂಡ್‌ ಬರ್ತಡೇ ಸಲೆಬ್ರೆಷನ್‌ ಇಲ್ಲ ಅಂತಲೋ ಅಥವಾ ಮಾರ್ಚ್‌ 20 ಕ್ಕೆ ಫಿಕ್ಸ್‌ ಆಗಿದ್ದ ಯುವರತ್ನ ಟೀಮ್‌ ನ ಯುವ ಸಂಭ್ರಮ ಕ್ಯಾನ್ಸಲ್‌ ಆಗಿದೆ ಅಂತಲೋ, ಬೇಸರಿಸಿಕೊಳ್ಳಬೇಕಿಲ್ಲ. ಅದಕ್ಕೂ ಒಂದು ಹೊಸ ಪ್ಲಾನ್‌ ಹಾಕಿಕೊಂಡಿದೆ ಚಿತ್ರ ತಂಡ. ಹಾಗಾದ್ರೆ ಅದೇನು ? ಇಲ್ಲಿದೆ ನೋಡಿ ಕಂಪ್ಲೀಟ್‌ ಸ್ಟೋರಿ.

ಕನ್ನಡದ ಮಟ್ಟಿಗೆ ” ಯುವರತ್ನʼ ಬಹು ನಿರೀಕ್ಷಿತ ಸಿನಿಮಾ. ʼರಾಜಕುಮಾರʼ ದಂತಹ ಬ್ಲಾಕ್‌ ಬಸ್ಟರ್‌ ಸಿನಿಮಾ ನಂತರ ಪುನೀತ್‌ ರಾಜ್‌ ಕುಮಾರ್‌ ಹಾಗೂ ನಿರ್ದೇಶಕ ಸಂತೋಷ್‌ ಆನಂದ್‌ ರಾಮ್‌ ಕಾಂಬಿನೇಷನ್‌ ಇಲ್ಲಿ ಮತ್ತೆ ಒಂದಾಗಿದೆ.ಹಾಗಂತ ಈ ಸಿನಿಮಾದ ಕ್ಯೂರಿಯಾಸಿಟಿಗೆ ಅದಷ್ಟೇ ಕಾರಣವಲ್ಲ, ಇದು ಹೊಂಬಾಳೆ ಫಿಲಂಸ್ ನಿರ್ಮಾಣದ ಮತ್ತೊಂದು ಅದ್ದೂರಿ ವೆಚ್ಚದ ಸಿನಿಮಾ. ಬಿಗ್‌ ಬಜೆಟ್‌ ಸಿನಿಮಾ ಎನ್ನುವುದರ ಜತೆಗೆ ಬಿಗ್‌ ಸ್ಟಾರ ಸಿನಿಮಾವೂ ಹೌದು. ಹೊಂಬಾಳೆ ಫಿಲಂಸ್ ಅಂದ್ರೆ ಇವತ್ತು ಭಾರತೀಯ ಚಿತ್ರರಂಗಕ್ಕೇ ಪರಿಚಿತ ಇರುವ ಪ್ರೊಡಕ್ಷನ್ ಹೌಸ್. ಕನ್ನಡದ ಮಟ್ಟಿಗೀಗ ದೊಡ್ಡ ಬ್ಯಾನರ್. ಬಂಡವಾಳ ಹಾಕಿದ್ದಷ್ಟೇ, ಅಧಿಕ ಲಾಭ ಪಡೆಯುವ ಚಾಣಾಕ್ಷತೆ ಇರುವಂತಹ ಸಂಸ್ಥೆ. ಅದೇ ಕಾರಣಕ್ಕೀಗ ಇಡೀ ಭಾರತೀಯ ಚಿತ್ರರಂಗವೇ “ಕೆಜಿಎಫ್‌ ೨ʼ ಗಾಗಿ ಕಾಯುತ್ತಿದೆ. ಈ ನಡುವೆ ಹೊಂಬಾಳೆ ಫಿಲಂಸ್‌ ನಿರ್ಮಾಣದಲ್ಲಿ ದೊಡ್ಡದಾಗಿ ಸದ್ದು ಮಾಡುತ್ತಿರುವ ಸಿನಿಮಾ” ಯುವರತ್ನʼ

ಸದ್ಯಕ್ಕೀಗ ʼಯುವರತ್ನ‌ʼದ ರಿಲೀಸ್‌ ಡೇಟ್ ಏಪ್ರಿಲ್‌ ಕ್ಕೆ1 ಫಿಕ್ಸ್‌ ಆಗಿದೆ. ಈಗಾಗಲೇ ಪೋಸ್ಟರ್‌ನಿಂದಲೇ ದೊಡ್ಡ ಕುತೂಹಲ ಕೆರಳಿಸಿದೆ ಈ ಸಿನಿಮಾ. ಹಾಗೆಯೇ ಹಾಡುಗಳ ಲಿರಿಕಲ್‌ ವಿಡಿಯೋ ಮೂಲಕವೂ ಸೆನ್ಸೆಷನ್‌ ಸೃಷ್ಟಿಸಿದೆ. ಈಗ ರಿಲೀಸ್‌ ಪೂರ್ವ ಪ್ರಚಾರಕ್ಕೂ ಚಿತ್ರ ತಂಡ ತನ್ನದೇ ತಂತ್ರ ಹೆಣೆದಿದೆ. ಮಾರ್ಚ್ 20ಕ್ಕೆ ಮೈಸೂರಿನಲ್ಲಿ ಯುವರತ್ನದ ” ಯುವ ಸಂಭ್ರಮʼ ಫಿಕ್ಸ್‌ ಆಗಿತ್ತು. ಕಾರಣಾಂತರಗಳಿಂದ ಅದೀಗ ರದ್ದಾಗಿದೆ. ಚಿತ್ರ ತಂಡ ಪರವಾಗಿಯೇ ಚಿತ್ರದ ನಾಯಕ ನಟ ಪುನೀತ್‌ ರಾಜ್‌ ಕುಮಾರ್‌ ಆ ವಿಷಯ ರಿವೀಲ್‌ ಮಾಡಿದ್ದಾರೆ. ಸದ್ಯಕ್ಕೆ ಅದರಕಾರಣ ನಿಗೂಢ. ಆದರೆ ಕೊರೋನಾ ಅನ್ನೋದು ಸ್ಪಷ್ಟ.

ಇನ್ನು ಅಪ್ಪು ಅಂದ್ರೆ ಹುಡುಗಾಟಿಕೆ ಅಲ್ಲ. ಕರ್ನಾಟಕದಲ್ಲಿ ಅತೀ ಹೆಚ್ಚು ಫ್ಯಾನ್ಸ್‌ ಹೊಂದಿರುವ ನಟ ಅವರು. ಅವರದೇ ಒಂದು ಪ್ರೋಗ್ರಾಮ್‌ ಫಿಕ್ಸ್‌ ಆಗಿದೆ ಅಂದ್ರೆ ಮೈಸೂರಿನಲ್ಲಿ ಮತ್ತೊಂದು ದಸರಾ ಫಿಕ್ಸ್.‌ ಅಭಿಮಾನಿಗಳ ಜಾತ್ರೆಯೇ ಸೇರುವುದೂ ಗ್ಯಾರಂಟಿ . ಆದರೆ ಈಗ ಕೊರೋನಾ ಹೆಚ್ಚಳದ ಕಾರಣಕ್ಕೆ ಸರ್ಕಾರ ಒಂದಷ್ಟು ಕಠಿಣ ನಿರ್ಧಾರ ಪ್ರಕಟಿಸಿದೆ. ಆ ಪ್ರಕಾರ 500 ಕ್ಕೂ ಹೆಚ್ಚು ಜನ ಸೇರಿಸಿ ಬಹಿರಂಹ ಸಭೆ ನಡೆಸುವಂತಿಲ್ಲ. ಅದೇ ಕಾರಣಕ್ಕೇ ʼಯುವರತ್ನʼ ಚಿತ್ರದ ಯುವ ಸಂಭ್ರಮ ಕ್ಯಾನ್ಸಲ್‌ ಅನ್ನೋದು ಗ್ಯಾರಂಟಿ. ಹಾಗಂತ ಚಿತ್ರ ತಂಡ ಸುಮ್ಮನೆ ಕುಳಿತಿಲ್ಲ. ಅದಕ್ಕೂ ತನ್ನದೇ ತಂತ್ರ ಹೆಣೆದಿದೆ. ಪುನೀತ್‌ ರಾಜ್‌ ಕುಮಾರ್‌ ಪ್ರಕಾರ ಅದು ಪ್ರತಿ ಜಿಲ್ಲೆಯ ಭೇಟಿ.

” ಇಷ್ಟು ದಿನ ನನ್ನ ಮನೆಬಾಗಿಲಿಗೆ ಬಂದು ನನ್ನ ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದ ನಿಮಗೆ, ನಾನೀಗ ಒಂದು ಸ್ಪೆಷಲ್‌ ಗಿಫ್ಟ್‌ ನೀಡುತ್ತಿದ್ದೇನೆ. ನಾನೇ ನಿಮ್ಮೂರಿಗೆ ಬರುತ್ತಿದ್ದೇನೆ. ಅಲ್ಲಿಗೆ ಬಂದು ನಿಮ್ಮೊಂದಿಗೆ ಒಂದಷ್ಟು ಸಮಯ ಕಳೆಯಬೇಕು ಅನ್ನೋದು ನನ್ನ ಆಸೆ. ಅದೇ ಕಾರಣಕ್ಕೆ ಹುಟ್ಟು ಹಬ್ಬದ ಗ್ರಾಂಡ್‌ ಸೆಲೆಬ್ರೇಷನ್‌ ಕ್ಯಾನ್ಸಲ್‌ ಆಗಿದೆ. ಜತೆಗೆ ಮೈಸೂರಿನ ಯುವ ಸಂಭ್ರಮ ಕೂಡ ರದ್ದಾಗಿದೆ. ಬೇರೆ ಬೇರೆ ಜಿಲ್ಲೆಗಳಿಂದ ಒಂದಷ್ಟು ಕರೆಗಳು ಬಂದವು. ನೀವು ಮೈಸೂರಿಗಷ್ಟೇ ಯಾಕೆ ಕಾರ್ಯಕ್ರಮ ಸೀಮಿತ ಗೊಳಿಸಿದ್ದೀರಿ, ನಮ್ಮೂರಿನಲ್ಲೂ ಮಾಡಿ ಅಂತ ಸಲಹೆ ಕೊಟ್ಟರು. ಅದೇ ಕಾರಣಕ್ಕೀಗ ನಿಮ್ಮೂರಿಗೆ ನಿಮ್ಮ ಅಪ್ಪು ಬರುತ್ತಿದ್ದಾರೆ.ಇಷ್ಟರಲ್ಲಿಯೇ ಕಾರ್ಯಕ್ರಮ ಫಿಕ್ಸ್‌ ಆಗಲಿದೆ. ಅದಕ್ಕಾಗಿ ಸಹಕರಿಸಿ ಅಂತ ಫ್ಯಾನ್ಸಿಗೆ ಮನವಿ ಮಾಡಿದ್ದಾರೆ ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್.‌

Categories
ಸಿನಿ ಸುದ್ದಿ

ನಟ ಕಿಚ್ಚ ಸುದೀಪ್‌ ಬ್ಲಾಕ್‌ ಡ್ರೆಸ್‌ ಹಾಕೋದಿಕ್ಕೆ ಇವ್ರು ಕಾರಣವಂತೆ !

ಬಾಲಿವುಡ್‌ ನಲ್ಲಿ ಒಂದು ಟ್ರೆಂಡ್‌ ಇದೆ. ಯಾವುದೇ ಸಿನಿಮಾ ಸಂಬಂಧಿತ ಸಭೆ-ಸಮಾರಂಭಗಳಲ್ಲಿ ಸ್ಟಾರ್‌ ಗಳೆಲ್ಲ ಬಹುತೇಕ ಬ್ಲಾಕ್‌ ಡ್ರೆಸ್‌ ಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಅಷ್ಟೇ ಯಾಕೆ, ಅವರ ಕಾರುಗಳು ಕೂಡ ಬುತೇಕ ಬ್ಲಾಕ್‌ ಬಣ್ಣದವೇ ಆಗಿವೆ. ಕನ್ನಡದ ಮಟ್ಟಿಗೆ ಅಂತಹದೇ ಟ್ರೆಂಡ್‌ ಫಾಲೋ ಮಾಡುತ್ತಿರುವವರ ಪೈಕಿ ನಟ ಕಿಚ್ಚ ಸುದೀಪ್‌ ಅವರು ಕೂಡ ಒಬ್ಬರು. ಹಾಗಂತ ಅವರೇನು ಬಾಲಿವುಡ್‌ ಸ್ಟಾರ್‌ ಗಳನ್ನು ಫಾಲೋ ಮಾಡುತ್ತಿದ್ದಾರೆ ಅಂತ ಭಾವಿಸಬೇಡಿ. ನಿಜಕ್ಕು ಅವರು ಫಾಲೋ ಮಾಡುತ್ತಿರುವುದು ಕನ್ನಡದ ಮತ್ತೊಬ್ಬ ಸ್ಟಾರ್‌ ಅನ್ನು. ಅವರೇ ಕ್ರೇಜಿ ಸ್ಟಾರ್‌ ರವಿಚಂದ್ರನ್.‌

ಕಿಚ್ಚ ಸುದೀಪ್‌ ಅವರು ಬ್ಲಾಕ್‌ ಡ್ರೆಸ್‌ ಹಾಕೋದಿಕ್ಕೆ ರವಿಚಂದ್ರನ್‌ ಅವರೇ ಕಾರಣವಂತೆ. ಹಾಗಂತ ನಾವ್‌ ಹೇಳ್ತೀಲ್ಲ, ಸ್ವತಹ: ಕಿಚ್ಚ ಸುದೀಪ್‌ ಅವರೇ ಇಂತಹದೊಂದು ಇಂಟೆರೆಸ್ಟಿಂಗ್‌ ಸಂಗತಿಯನ್ನು ಬಹಿರಂಗವಾಗಿ ರಿವೀಲ್‌ ಮಾಡಿದ್ದಾರೆ. ಸೋಮವಾರ ಸಂಜೆ ಬೆಂಗಳೂರಿನ ಚೌಡಯ್ಯ ಮೆಮೋರಿಯಲ್‌ ಹಾಲ್‌ ನಲ್ಲಿ ಕೋಟಿಗೊಬ್ಬ ೩ ಚಿತ್ರ ತಂಡ ಸುದೀಪ್‌ ಅವರ ಸಿನಿ ಜರ್ನಿಯ ೨೫ನೇ ವರ್ಷದ ಹಿನ್ನೆಲೆಯಲ್ಲಿ ಅದ್ದೂರಿಯಾಗಿ ಬೆಳ್ಳಿ ಹಬ್ಬ ಆಯೋಜಿಸಿತ್ತು. ಅಲ್ಲಿ ಕ್ರೇಜಿಸ್ಟಾರ್‌ ರವಿಚಂದ್ರನ್‌ ಕೂಡ ಹಾಜರಿದ್ದರು. ಕಾರ್ಯಕ್ರಮಕ್ಕೆ ಅತಿಥಿಗಳಾಗಿದ್ದ ಅವರು, ಬ್ಲಾಕ್‌ ಡ್ರೆಸ್‌ ಹಾಕ್ಕೊಂಡ್‌ ಬಂದಿದ್ರು. ಕಾಕತಾಳೀಯ ಎನ್ನುವ ಹಾಗೆ ನಟ ಕಿಚ್ಚ ಸುದೀಪ್‌ ಕೂಡ ಬ್ಲಾಕ್‌ ಡ್ರೆಸ್‌ ಧರಿಸಿಕೊಂಡಿದ್ರು. ದೊಡ್ಡ ವೇದಿಕೆ, ಸಾವಿರಾರು ಜನರ ಮುಂದೆ ಸನ್ಮಾನ ಸ್ವೀಕರಿಸಿ ಮಾತಿಗಿಳಿದಾಗ, ನಟ ಕಿಚ್ಚ ಸುದೀಪ್‌ ತಮಗೆ ಬ್ಲಾಕ್‌ ಡ್ರೆಸ್‌ ಮೇಲಿದ್ದ ಪ್ರೀತಿ , ಅಭಿಮಾನದ ರಹಸ್ಯ ಬಿಚ್ಚಿಟ್ಟರು. ” ನನಗೆ ಕಪ್ಪು ಬಣ್ಣದ ಬಟ್ಟೆಗಳೆಂದರೆ ಇಷ್ಟ. ರವಿ ಸರ್ ತರಹ ಅವಾಗವಾಗ ಕಪ್ಪು ಬಟ್ಟೆ ಧರಿಸುತ್ತಿರುತ್ತೇನೆ. ಸೋ ಬ್ಲ್ಯಾಕ್ ಡ್ರೆಸ್ ಧರಿಸೋಕೆ ಕಾರಣ ರವಿ ಸರ್. ನಾನು ಹಲವು ಬಾರಿ ಕೇಳಿದ್ದೆ ಯಾಕೆ ಕಪ್ಪು ಬಟ್ಟೆ ಧರಿಸ್ತೀರಿ ಅಂತ, ಅದಕ್ಕೆ ಅವರಂದ್ರು, ಒಂದು ನಾವು ಬೆಳ್ಳಗೆ ಕಾಣಿಸುತ್ತೀವಿ. ಇನ್ನೊಂದು, ತೆಳ್ಳಗೆ ಕಾಣಿಸುತ್ತೀವಿ ಅಂತ. ಅದನ್ನೇ ನಾನು ಕೂಡ ಫಾಲೋ ಮಾಡುತ್ತಿದ್ದೇನೆʼ ಅಂತ ಕಪ್ಪು ಬಟ್ಟೆಯ ಮೇಲಿನ ವ್ಯಾಮೋಹದ ಹಿಂದಿನ ಕಥೆ ಬಿಚ್ಚಿಟ್ಟು ಸಭಿಕರಲ್ಲಿ ನಗು ತರಿಸಿದರು ಕಿಚ್ಚ ಸುದೀಪ್.‌

Categories
ಸಿನಿ ಸುದ್ದಿ

ಫಸ್ಟ್‌ ಟೈಮ್‌ ನರ್ವಸ್‌ ಆದ್ರಂತೆ ನಟ ಕಿಚ್ಚ ಸುದೀಪ್‌ _ ಅದಕ್ಕೆ ಕಾರಣ ಏನ್‌ ಗೊತ್ತಾ ?

ಎಷ್ಟೋ ವೇದಿಕೆ ಹತ್ತಿದ್ದೇನೆ. ಅಲ್ಲಿ ಮಾತೂ ಆಡಿದ್ದೇನೆ, ಆದ್ರೆ ಫಸ್ಟ್‌ ಟೈಮ್‌ ಯಾಕೋ ನಾನಿಲ್ಲಿ ನರ್ವಸ್‌ ಆಗಿದ್ದೇನೆ…ಅಭಿನಯ ಚಕ್ರವರ್ತಿ ನಟ ಸುದೀಪ್‌ ಅಲ್ಲಿ ಹೀಗೆ ಹೇಳಿ ಒಂದು ಕ್ಷಣ ಸುಮ್ಮನಾದರು. ನಿಜಕ್ಕೂ ಅವರು ನರ್ವಸ್‌ ಆಗಿದ್ದರ ಸಂಕೇತವದು. ಸಭಿಕರಿಗೂ ಅಚ್ಚರಿ. ಹಾಗೆಯೇ ವೇದಿಕೆಯ ಮೇಲೆದ್ದವರಿಗೂ ಸೋಜಿಗ. ಯಾಕಂದ್ರೆ, ನಟ ಕಿಚ್ಚ ಸುದೀಪ್‌ ಇಂತಹ ಅದೆಷ್ಟು ವೇದಿಕೆ ನೋಡಿಲ್ಲ? ಅಷ್ಟು ಸುಲಭಕ್ಕೆ ಅವರು ನರ್ವಸ್‌ ಆಗುವುದುಂಟೆ ?

ಆದ್ರೂ, ಅಲ್ಲಿ ಅದ್ಯಾಕೆ ನರ್ವಸ್‌ ಆದ್ರೂ ಗೊತ್ತಿಲ್ಲ. ಹಾಗಂತ ಅವರೇ ಹೇಳಿಕೊಂಡಾಗ ಅದೇ ವೇದಿಕೆಯಲ್ಲಿ ಮುಖ್ಯ ಮಂತ್ರಿ ಬಿ.ಎಸ್‌. ಯುಡಿಯೂರಪ್ಪ, ನಟರಾದ ರವಿಚಂದ್ರನ್‌, ಶಿವರಾಜ್‌ ಕುಮಾರ್‌, ನಿರ್ಮಾಪಕರಾದ ರಾಕ್‌ ಲೈನ್‌ ವೆಂಕಟೇಶ್‌, ಸುವರ್ಣ ನ್ಯೂಸ್ ಸಂಪಾದಕ ರವಿ ಹೆಗಡೆ, ಪಬ್ಲಿಕ್ ಟಿವಿ ಸಂಪಾದಕ ರಂಗನಾಥ್ ಹಾಜರಿದ್ದರು. ಇಷ್ಟಕ್ಕೂ ಅದು ಸುದೀಪ್‌ ಅವರದ್ದೇ ಕಾರ್ಯಕ್ರಮ. ಅಂದ್ರೆ, ಕಿಚ್ಚ ಸುದೀಪ್ ಅವರ ಸಿನಿ ಜರ್ನಿಯ ಬೆಳ್ಳಿಹಬ್ಬ ಮಹೋತ್ಸವ.

” ಕೋಟಿಗೊಬ್ಬ 3ʼ ಚಿತ್ರ ತಂಡ ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ಬೆಳ್ಳಿ ಹಬ್ಬದ ಕಾರ್ಯಕ್ರಮ ಆಯೋಜಿಸಿತ್ತು. ವರ್ಣರಂಜಿತ ಆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ ಅವರಿಂದ ಸನ್ಮಾನ ಸ್ವೀಕರಿಸಿ ಮಾತಿಳಿಗಿಳಿದ ನಟ ಕಿಚ್ಚ ಸುದೀಪ್‌, ಈ ಜರ್ನಿಯಲ್ಲಿ ಅದೆಷ್ಟು ವೇದಿಕೆ ಏರಿದ್ದೇನೋ ಗೊತ್ತಿಲ್ಲ. ಆದ್ರೆ ಫಸ್ಟ್‌ ಟೈಮ್‌ ಈ ವೇದಿಕೆಯಲ್ಲಿ ಮಾತನಾಡೋದಿಕ್ಕೆ ನರ್ವಸ್‌ ಆಗಿದ್ದೇನೆ. ಎಲ್ಲರ ಕಣ್ಣು ನನ್ನ ಮೇಲಿದೆ ಅಂತ ಟೆನ್ಸೆನ್‌ ಆಗುತ್ತೆ. ಜತೆಗೆ ದೊಡ್ಡ ಸಾಧನೆ ಮಾಡಿದವರೆಲ್ಲ ಈ ವೇದಿಕೆ ಮೇಲಿರುವುದು ಕೂಡ ಕಾರಣವಿರಬಹುದು. ನನ್ನ25 ವರ್ಷದ ಸಾಧನೆ ಅಂದ್ರೆ ರವಿಚಂದ್ರನ್‌, ಶಿವರಾಜ್‌ ಕುಮಾರ್‌, ರಮೇಶ್‌ ಅವರ ಸಿನಿಮಾಗಳನ್ನು ನೋಡಿ ಬೆಳೆದಿದ್ದು. ಇದು ನನ್ನ ದೊಡ್ಡ ಸೌಭಾಗ್ಯ ಎಂದರು ನಟ ಕಿಚ್ಚ ಸುದೀಪ್.‌
ದೊಡ್ಡವರೆಲ್ಲ ನಮ್ಮ ತಪ್ಪುಗಳನ್ನು ತಿದ್ದುತ್ತಾರೆ ಅನ್ನೋ ಧೈರ್ಯದಿಂದಲೇ ಇಷ್ಟು ದೂರ ಬಂದಿದ್ದೇನೆ. ತಪ್ಪು ಮಾಡುವುದಕ್ಕೇನು ಭಯ ಪಡಬೇಕಿಲ್ಲ. ಇದು 25 ವರ್ಷ ಅಂತ ನನಗನ್ನಿಸಿಲ್ಲ. ಯಾಕಂದ್ರೆ, ಇಲ್ಲಿ ಯಾರು ಕೂಡ ನನ್ನ ಕೈ ಬಿಟ್ಟಿಲ್ಲ. ಅವಕಾಶಗಳ ಮೇಲೆ ಅವಕಾಶ ನೀಡುತ್ತಲೇ ಬಂದರು. ಅದು ನನ್ನನ್ನು ಇಷ್ಟು ದೂರ ಕರೆ ತಂದಿದೆ. ಆದ್ರೂ, ಒಬ್ಬ ನಟನಿಗೆ 25 ವರ್ಷದ ಸಕ್ರಿಯವಾಗಿರೋದು ಅಂದ್ರೆ ಸುಲಭದ ಮಾತಲ್ಲ. ಅದೇ ಕಾರಣಕ್ಕೆ ಹಿರಿಯರೆಲ್ಲ ಸೇರಿ ನನ್ನನ್ನು ಕರೆದು ಇಷ್ಟೊಂದು ಸಂಭ್ರಮದಿಂದ ಸಮಾರಂಭ ಆಯೋಜಿಸಿರುವುದು ಖುಷಿ ತಂದಿದೆ ಎಂದರು ನಟ ಕಿಚ್ಚ ಸುದೀಪ್.‌

Categories
ಸಿನಿ ಸುದ್ದಿ

ಅನಘ ಚಿತ್ರತಂಡಕ್ಕೆ ನಟ ಉಪೇಂದ್ರ ಸಾಥ್‌ – ರಿಲೀಸ್‌ಗೆ ರೆಡಿಯಾಗಿರುವ ಸಿನಿಮಾ ಟ್ರೇಲರ್‌ ಹೊರ ಬಂತು

ಸಾಮಾನ್ಯವಾಗಿ ಹೊಸಬರ ಸಿನಿಮಾಗಳಿಗೆ ಸ್ಟಾರ್‌ ನಟರು ಸಾಥ್‌ ಕೊಡುವುದು ಹೊಸದೇನಲ್ಲ. ಸದಾ ಹೊಸಬರ ಚಿತ್ರಗಳ ಟ್ರೇಲರ್‌, ಆಡಿಯೋ, ಟೀಸರ್‌, ಪೋಸ್ಟರ್‌ಗಳ ರಿಲೀಸ್‌ ಮಾಡುವ ಮೂಲಕ ಶುಭಹಾರೈಸುತ್ತಲೇ ಇದ್ದಾರೆ. ಈಗ “ಅನಘ” ಸಿನಿಮಾ ತಂಡಕ್ಕೂ ಉಪೇಂದ್ರ ಸಾಥ್‌ ನೀಡಿದ್ದಾರೆ. ಹೌದು, ದೀಕ್ಷಾ ಫಿಲಂಸ್ ಸಮೂಹ ಸಿನಿಮಾ ಬ್ಯಾನರ್‌ನಡಿ ತಯಾರಾಗಿರುವ ಈ ಚಿತ್ರದ ಟ್ರೇಲರ್‌ ರಿಲೀಸ್‌ ಆಗಿದ್ದು, ಉಪೇಂದ್ರ ಅವರು ಟ್ರೇಲರ್‌ ರಿಲೀಸ್‌ ಮಾಡಿ ಶುಭಹಾರೈಸಿದ್ದಾರೆ.

ಡಿ.ಪಿ.ಮಂಜುಳಾ ನಾಯಕ ನಿರ್ಮಾಪಕರು. ರಾಜು ಎನ್.ಆರ್. ಚಿತ್ರದ ನಿರ್ದೇಶಕರು. ಇವರಿಗಿದು ಮೊದಲ ನಿರ್ದೇಶನದ ಸಿನಿಮಾ. ಕಥೆ ಚಿತ್ರಕಥೆ, ಸಂಭಾಷಣೆ ಕೂಡ ಇವರದೇ. ಬಹುತೇಕ ಹೊಸ ಪ್ರತಿಭೆಗಳೇ ಈ ಚಿತ್ರದಲ್ಲಿವೆ. ಇದೊಂದು ಸಸ್ಪೆನ್ಸ್, ಹಾರರ್ ಕಾಮಿಡಿ ಕಥಾಹಂದರ ಹೊಂದಿರುವ ಚಿತ್ರ. ಈ ಮೂಲಕ ಪ್ರೇಕ್ಷಕರನ್ನು ರಂಜಿಸಲು ಚಿತ್ರತಂಡ ಸಜ್ಜಾಗಿದೆ. ಈಗಾಗಲೇ ಬಿಡುಗಡೆಗೆ ಸಜ್ಜಾಗಿರುವ ಚಿತ್ರತಂಡ, ಪ್ರಚಾರ ಕಾರ್ಯಕ್ಕೆ ರೆಡಿಯಾಗಿದೆ. ರಂಗಭೂಮಿ ಪ್ರತಿಭೆ ನಳೀನ್‌ ಕುಮಾರ್ ಮತ್ತು ಪವನ್‌ಪುತ್ರ ಚಿತ್ರದ ಆಕರ್ಷಣೆ. ಇನ್ನುಳಿದಂತೆ “ಸಿಲ್ಲಿ ಲಲ್ಲಿ” ಖ್ಯಾತಿಯ ಶ್ರೀನಿವಾಸ್‌ಗೌಡ್ರು, ಕಿರಣತೇಜ, ಕಿರಣ್‌ರಾಜ್, ಕರಣ್‌ ಆರ್ಯನ್, ದೀಪ, ರೋಹಿತ್, ಖುಷಿ, ರಶ್ಮಿ ಹಾಗೂ ವಿಶೇಷ ಪಾತ್ರದಲ್ಲಿ ನಂಜಪ್ಪ ಬೆನಕ, ಮೋಟು ರವಿ, ಅಭಿ ಮತ್ತು ವಿರೇಶ ಇತರರು ನಟಿಸಿದ್ದಾರೆ. ಇನ್ನು ಬೆಂಗಳೂರು, ದೇವರಾಯನದುರ್ಗದ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಶಂಕರ್ ಅವರ ಛಾಯಾಗ್ರಹಣವಿದೆ. ಅವಿನಾಶ್ ಸಂಗೀತ ನೀಡಿದ್ದಾರೆ, ವೆಂಕಿ ಯುಡಿವಿ ಸಂಕಲನ ಮಾಡಿದರೆ, ಕೌರವ ವೆಂಕಟೇಶ್ ಸಾಹಸವಿದೆ.

Categories
ಸಿನಿ ಸುದ್ದಿ

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಭೇಟಿ ಮಾಡಿದ ಶಿವಣ್ಣ – ಗೀತಾ ಶಿವರಾಜ್‌ ಕುಮಾರ್‌ ಕಾಂಗ್ರೆಸ್‌ ಸೇರ್ಪಡೆ ಬಹುತೇಕ ಫಿಕ್ಸ್‌ !

ಮಾಜಿ ಸಿಎಂ ಬಂಗಾರಪ್ಪ ಅವರ ಪುತ್ರ ಹಾಗೂ ಮಾಜಿ ಶಾಸಕ ಮಧು ಬಂಗಾರಪ್ಪ ಅವರ ಹೇಳಿಕೆಯ ಬೆನ್ನಲೇ ಇಂದು ನಟ ಶಿವರಾಜ್‌ ಕುಮಾರ್‌ ಧಿಡೀರನೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿ ಮಾಡಿದ್ದು, ಗೀತಾ ಶಿವರಾಜ್‌ ಕುಮಾರ್‌ ಕಾಂಗ್ರೆಸ್‌ ಸೇರಲಿದ್ದಾರೆಂಬ ಸುದ್ದಿಗೆ ಮತ್ತಷ್ಟು ಬಲ ಬಂದಿದೆ. ಸೋಮವಾರಬೆಂಗಳೂರಿನ ಸದಾಶಿವನಗರದಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರ ನಿವಾಸಕ್ಕೆ ಬಂದ ಶಿವರಾಜ್‌ ಕುಮಾರ್‌, ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಡಿ.ಕೆ. ಶಿವಕುಮಾರ್‌ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ಭೇಟಿ ವೇಳೆ ಏನೆಲ್ಲ ಚರ್ಚೆ ನಡೆಯಿತು, ಯಾಕಾಗಿ ಅವರನ್ನು ಶಿವರಾಜ್‌ ಕುಮಾರ್‌ ಭೇಟಿ ಮಾಡಿದ್ದರು ಎನ್ನುವುದು ಇನ್ನು ನಿಖರವಾಗಿ ತಿಳಿದಿಲ್ಲವಾದರೂ, ಗೀತಾ ಶಿವರಾಜ್‌ ಕುಮಾರ್‌ ಕಾಂಗ್ರೆಸ್‌ ಸೇರ್ಪಡೆ ವಿಚಾರವೇ ಅದಕ್ಕೆ ಮೂಲಕ ಕಾರಣ ಎನ್ನುವುದು ಅಷ್ಟೇ ಸತ್ಯ. ಕಳೆದ ಮೂರು ದಿನಗಳ ಹಿಂದಷ್ಟೇ ಮಾಜಿ ಶಾಸಕ ಮಧು ಬಂಗಾರಪ್ಪ ಕೂಡ ಡಿ.ಕೆ.ಶಿ ಅವರನ್ನು ಭೇಟಿ ಅವರೊಂದಿಗೆ ಮಾತುಕತೆ ನಡೆಸಿದ್ದರು. ಡಿ.ಕೆ. ಶಿವಕುಮಾರ್‌ ಅವರೊಂದಿಗಿನ ಮಾತುಕತೆ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ತಾವು ಕಾಂಗ್ರೆಸ್‌ ಸೇರುವ ಸಂಬಂಧ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿ ಮಾಡಿದ್ದಾಗಿ ಹೇಳಿದ್ದರು. ಹಾಗೆಯೇ ತಮ್ಮೊಂದಿಗೆ ಅಕ್ಕ ಗೀತಾ ಶಿವರಾಜ್‌ ಕುಮಾರ್‌ ಕೂಡ ಕಾಂಗ್ರೆಸ್‌ ಸೇರುತ್ತಿದ್ದಾರೆಂದು ಹೇಳಿದ್ದರು. ಈ ಹೇಳಿಕೆಯ ಬೆನ್ನಲೇ ಇಂದು ನಟ ಶಿವರಾಜ್‌ ಕುಮಾರ್‌ , ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

Categories
ಸಿನಿ ಸುದ್ದಿ

ಮಂಗಳೂರು ಆಟೋ! ಹೀಗೆ ಶುಭಾಪೂಂಜಾಗೆ ಕರೀತಾರಂತೆ!! ಯಾಕೆ ಅಂತ ಸುದೀಪ್‌ ಕೇಳಿದ್ದಕ್ಕೆ ಸ್ಪಷ್ಟನೆ ಕೊಟ್ರು ಶುಭಾ

“ನನ್ನನ್ನು ಎಲ್ಲರೂ ಮಂಗಳೂರು ಆಟೋ ಅಂತಾರೆ…”
ಹೀಗೆ ಹೇಳಿದ್ದು ಬೇರಾರೂ ಅಲ್ಲ, ನಟಿ ಶುಭಾಪೂಂಜಾ. ಸಂದರ್ಭ: ಬಿಗ್‌ಬಾಸ್‌ ರಿಯಾಲಿಟಿ ಶೋ. ಭಾನುವಾರ ಬಿಗ್‌ಬಾಸ್ ಸೀಸನ್ ೮ ರ ಎಲ್ಯುಮಿನೇಷನ್ ಪ್ರಕ್ರಿಯೆ ಮುಗಿದು ಹೋಯಿತು. ಆ ಮನೆಯಲ್ಲಿ ಯಾರು ಇಷ್ಟ ಆಗ್ತಾರೆ? ಯಾರು ಇಷ್ಟ ಆಗಲ್ಲ? ಅಂತ ಸುದೀಪ್‌ ಪ್ರಶ್ನಿಸಿದಾಗ, ಮನೆಯಲ್ಲಿರೋ ಎಲ್ಲರೂ ಒಂದೊಂದು ಹೆಸರನ್ನು ಬೋರ್ಡ್‌ಗೆ ಅಂಟಿಸಿದರು. ಹೆಚ್ಚಿನವರಿಗೆ ಬೈಕ್ ರೈಡರ್ ಅರವಿಂದ್ ಇಷ್ಟವಾದರೆ, ನಿರ್ಮಲಾ ಚೆನ್ನಪ್ಪ ಅವರು ಇಷ್ಟವಾಗಲ್ಲ ಅಂತ ನೇರವಾಗಿ ಹೇಳಿಕೊಂಡರು. ಈ ಪ್ರಕ್ರಿಯೆ ಮುಗಿದ ಬಳಿಕ, ನಟಿ ಶುಭಾಪೂಂಜಾ ಅವರಿಗೆ ಸುದೀಪ್‌ ಅವರಿಂದ ಚಪ್ಪಾಳೆ ಸಿಕ್ಕಿತು. ಅದೇ ಖುಷಿಯಲ್ಲಿ ಶುಭಾ ಮನೆಯ ಸದಸ್ಯರನ್ನು ನಗಿಸಿದರು.

ಈ ವೇಳೆ ಶುಭಾಪೂಂಜಾ, ಹೇಳಿದ್ದಿಷ್ಟು. “ಎಲ್ಲರೂ ನನ್ನನ್ನು ಲಗೇಜ್‌ಗೆ ಹೋಲಿಸುತ್ತಾರೆ. ಮಂಗ್ಳೂರ್ ಆಟೋ ಅಂತಾರೆ. ನಾನು ನಡೆಯೋದು ಹಾಗೇನೆ ಅಂತೆ. ಲಗೇಜ್ ತುಂಬಿಕೊಂಡ ಆಟೋ ತರಹ ನಾನು ನಡೆಯೋದು ಅಂದ್ರು‌. ಮಂಗಳೂರು ಆಟೋಗೆ ಯಾಕೆ ಹೋಲಿಸುತ್ತಾರೆ ಅಂತ ಸುದೀಪ್‌ ಪ್ರಶ್ನಿಸಿದಾಗ, ಶುಭಾ ಹೇಳಿದ್ದು ಹೀಗೆ, “ಬಾಡಿ ಮೊದಲು ಮುಂದಿರುತ್ತದೆ, ಆದ ಮೇಲೆ ನಾನು ನಡೆಯುತ್ತೇನೆ. ಯಾವತ್ತೂ ಮಂಗಳೂರಿನ ಆಟೋಗಳು ಫುಲ್ ಲಗೇಜ್ ತುಂಬಿಕೊಂಡಿರುತ್ತವೆ” ಜೋರು ನಗೆಬುಗ್ಗೆ ಎಬ್ಬಿಸಿದರು ಶುಭಾ.

ಇನ್ನು, ನನಗೆ ಅಳೋಕೆ ಬರೋದಿಲ್ಲ. ಬಿಗ್‌ಬಾಸ್ ಮನೆಯಲ್ಲಿ ಒಳ್ಳೊಳ್ಳೆ ಡ್ರೆಸ್, ಐ ಶಾಡೋ ಹಾಕುತ್ತ ಮಿಂಚಬೇಕು ಅಂತ ಅನ್ಕೊಂಡಿದ್ದೆ. ಕಲರ್ ಕಲರ್ ಬೂಟ್ಸ್ ಹಾಕಬೇಕು ಅಂದುಕೊಂಡಿದ್ದೆ.‌ ಆದರೆ, ಅದು ಯಾವುದು ಇಲ್ಲಿ ಪ್ರಯೋಜನವಿಲ್ಲ. ಕೆಲವೊಮ್ಮೆ ಅಳು ಬರಬೇಕಾದ ವಿಚಾರದಲ್ಲಿ ಅಳು ಬರೋದೆ ಇಲ್ಲ. ಡೈರೆಕ್ಟರ್ ಎಷ್ಟೋ ಬಾರಿ ಬೇಜಾರಾಗುತ್ತಿದ್ದರು‌. ನನಗೆ ಕಾಮಿಡಿ ಸೀನ್‌ಗಳು ಮ್ಯಾಚ್ ಆಗುತ್ತವೆ ಅಂತ ಶುಭಾ ಎಲ್ಲರೆದುರು ತಮ್ಮ ಬಗ್ಗೆ ಹೇಳಿಕೊಂಡರು.

Categories
ಸಿನಿ ಸುದ್ದಿ

ನಟ ಸಂಚಾರಿ ವಿಜಯ್‌ ಅವರಿಗೆ ಧನ್ಯವಾದ ಹೇಳಿದ ದರ್ಶನ್‌

ದರ್ಶನ್‌ ಅಭಿನಯದ ಬಹು ನಿರೀಕ್ಷಿತ ಚಿತ್ರ ರಾಬರ್ಟ್‌ ಅಬ್ಬರ ದಿನೇ ದಿನೆ ಹೆಚ್ಚಾಗುತ್ತಿದೆ. ಕರ್ನಾಟಕದ ಆಚೆ ಕೂಡ ರಾರಾಜಿಸುತ್ತಿದೆ. ಈ ನಡುವೆ ʼರಾಬರ್ಟ್‌ʼ ಚಿತ್ರದ ನೋಡಿ ಮೆಚ್ಚುಗೆಯ ಮಾತುಗಳನ್ನಾಡಿದ್ದ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್‌ ಅವರಿಗೆ ನಟ ದರ್ಶನ್‌ ಧನ್ಯವಾದ ಹೇಳಿದ್ದಾರೆ.

” ನಿಮ್ಮ ಈ ಪ್ರೀತಿ ವಿಶ್ವಾಸಕ್ಕೆ ಹೃದಯ ಪೂರ್ವಕ ಧನ್ಯವಾದಗಳು ಅಂತ ದರ್ಶನ್‌ ಹೇಳಿದ್ದಾರೆ. ಹಾಗಾದ್ರೆ ಬಹು ನಿರೀಕ್ಷಿತ ರಾಬರ್ಟ್‌ ಚಿತ್ರ ನೋಡಿ ನಟ ಸಂಚಾರಿ ವಿಜಯ್‌ ಹೇಳಿದ್ದೇನು?
” ಸಿಂಗಲ್‌ ಸ್ಕ್ರೀನ್ನಲ್ಲಿ ಚಪ್ಪಾಳೆ, ಕೇಕೆ, ಶಿಳ್ಳೆ ಬಿದ್ರೆ ಅದು ಮಾಸ್‌ !! ಅದರ ಜೊತೆಗೆ ಮಲ್ಟಿಪ್ಲೆಕ್ಸ್‌ ನಲ್ಲೂ ಇದೇ ಚಪ್ಪಾಳೆ, ಕೇಕೆ, ಶಿಳ್ಳೆ ಬಿದ್ರೆ ಅದು ಮಾಸ್‌ ಗೆ ಬಾಸ್‌ !! ಅದು ನಿಜವಾದ ಡಿ ಬಾಸ್‌ ಶಕ್ತಿ. ನಾನು ನಿಜಕ್ಕೂ ಎಂಜಾಯ್‌ ಮಾಡಿದೆ. ನೀವು ಕೂಡ ನಿಮ್ಮ ಕುಟುಂಬದ ಜತೆಗೆ ಹೋಗಿ ಸಿನಿಮಾ ನೋಡಿ, ಎಂಜಾಯ್‌ ಮಾಡಿ ʼ ಅಂತ ನಟ ಸಂಚಾರಿ ವಿಜಯ್‌ ʼರಾಬರ್ಟ್‌ʼ ಚಿತ್ರ ನೋಡಿದ ನಂತರ ಸೋಷಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದರು.

error: Content is protected !!