Categories
ಸಿನಿ‌ ಆ್ಯಡ್ ಸಿನಿ ಸುದ್ದಿ

ಹಿಮದ ನಾಡಲ್ಲಿ ‘ಜೇಮ್ಸ್’ ಚಿತ್ರತಂಡ ; ಕಾಶ್ಮೀರಿ ಮಗು ಜೊತೆ ಪುನೀತ್ ಸೆಲ್ಫಿ!

ಪುನೀತ್ ರಾಜಕುಮಾರ್ ನಟನೆಯ ‘ಜೇಮ್ಸ್‌’ ಸಿನಿಮಾ ಸದ್ಯ ಕಾಶ್ಮೀರದಲ್ಲಿದೆ. ನಿರ್ದೇಶಕ ಚೇತನ್‌ಕುಮಾರ್‌ ಹಿಮದ ನಾಡಿನಲ್ಲಿ ಭರದ ಚಿತ್ರೀಕರಣ ನಡೆಸಿದ್ದಾರೆ. ಬಿಡುವಿನ ವೇಳೆಯಲ್ಲಿ ಅಲ್ಲಿನ ನಿವಾಸಿಗಳೊಂದಿಗೆ ಬೆರೆಯುತ್ತಿದ್ದಾರೆ ಅಪ್ಪು. ಕಾಶ್ಮೀರಿ ಕುಟುಂಬವೊಂದರ ಜೊತೆಗಿನ ಅವರ ಮಾತುಕತೆ, ಮಗು ಜೊತೆಗಿನ ಅವರ ಸೆಲ್ಫಿ ಗಮನಸೆಳೆಯುತ್ತಿವೆ. ಚಿತ್ರದ ತಂತ್ರಜ್ಞರ ಫೋಟೋಗಳೂ ಹೊರಬಿದ್ದಿದ್ದು, ಕೊರೆಯುವ ಚಳಿಯಲ್ಲಿ ನಡೆದಿರುವ ಚಿತ್ರೀಕರಣಕ್ಕೆ ಸಾಕ್ಷ್ಯ ನುಡಿಯುತ್ತಿವೆ.

ಇತ್ತೀಚಿನವರೆಗೂ ‘ಜೇಮ್ಸ್’ ಚಿತ್ರಕ್ಕೆ ಉತ್ತರ ಕರ್ನಾಟಕದಲ್ಲಿ ಚಿತ್ರೀಕರಣ ನಡೆದಿತ್ತು. ಅಲ್ಲಿನ ಶೆಡ್ಯೂಲ್‌ ಮುಗಿದ ನಂತರ ಚಿತ್ರತಂಡ ಕಾಶ್ಮೀರಕ್ಕೆ ಹಾರಿದೆ. ಅಲ್ಲಿ ಹಾಡು, ಆಕ್ಷನ್ ಸೇರಿದಂತೆ ಕೆಲವು ಪ್ರಮುಖ ಸನ್ನಿವೇಶಗಳು ಚಿತ್ರಣಗೊಳ್ಳಲಿವೆ. ಸಾಂಗ್‌ ಶೂಟಿಂಗ್ ಸಂದರ್ಭವೊಂದರಲ್ಲಿ ನೃತ್ಯನಿರ್ದೇಶಕ ಎ.ಹರ್ಷ ಕ್ಯಾಮರಾಗೆ ಪೋಸು ಕೊಟ್ಟಿದ್ದಾರೆ. ಇನ್ನು ವಿಜಯ್ ಅವರ ಸಂಯೋಜನೆಯಲ್ಲಿ ಸಾಹಸ ದೃಶ್ಯಗಳು ಚಿತ್ರೀಕರಣಗೊಳ್ಳಲಿವೆ.

ಈ ಹಿಂದಿನ ಸೂಪರ್‌ಹಿಟ್‌ ‘ರಾಜಕುಮಾರ’ ಚಿತ್ರದಲ್ಲಿ ಪುನೀತ್‌ರಿಗೆ ಜೋಡಿಯಾಗಿದ್ದ ಪ್ರಿಯಾ ಆನಂದ್‌ ‘ಜೇಮ್ಸ್‌’ನಲ್ಲಿ ಮತ್ತೆ ಪವರ್‌ಸ್ಟಾರ್‌ಗೆ ಜೊತೆಯಾಗಿದ್ದಾರೆ. ಅನುಪ್ರಭಾಕರ್‌, ರಂಗಾಯಣ ರಘು, ಸಾಧು ಕೋಕಿಲ, ಮೇಕಾ ಶ್ರೀಕಾಂತ್‌, ಮುಖೇಶ್ ರಿಷಿ, ಆದಿತ್ಯ ಮೆನನ್‌ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಸಂಗೀತ ಸಂಯೋಜನೆ ಚರಣ್ ರಾಜ್‌ ಅವರದು.

Categories
ಸಿನಿ ಸುದ್ದಿ

ಭಾರತದ ಮೊದಲ ಮಡ್-ರೇಸ್ ಚಿತ್ರ – ‘ಮಡ್ಡಿ’; ಕನ್ನಡಿಗ ರವಿ ಬಸ್ರೂರು ಸಂಗೀತ ಸಂಯೋಜನೆ

ಭಾರತದ ಮೊದಲ ಮಡ್‌-ರೇಸ್ ಸಿನಿಮಾ ‘ಮಡ್ಡಿ’ ತೆರೆಗೆ ಸಿದ್ಧವಾಗಿದೆ. ಡಾ.ಪ್ರಗಭಾಲ್‌ ನಿರ್ದೇಶನದಲ್ಲಿ ತಯಾರಾಗಿರುವ ಇದು ಆಕ್ಷನ್‌-ಸ್ಪೋರ್ಟ್ಸ್‌-ಡ್ರಾಮಾ. ಹಿಂದಿ, ತಮಿಳು, ಕನ್ನಡ, ಮಲಯಾಳಂ ಮತ್ತು ತೆಲುಗು ಭಾಷೆಗಳಲ್ಲಿ ತೆರೆಕಾಣಲಿರುವ ಈ ಚಿತ್ರದಲ್ಲಿ ಸಿನಿಮಾಟೋಗ್ರಫಿ ಮತ್ತು ಹಿನ್ನೆಲೆ ಸಂಗೀತ ಹೈಲೈಟ್‌.

‘ಕೆಜಿಎಫ್‌’ ಖ್ಯಾತಿಯ ರವಿ ಬಸ್ರೂರು ಚಿತ್ರದ ಹಿನ್ನೆಲೆ ಸಂಗೀತ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ ಎನ್ನವುದು ವಿಶೇ‍ಷ. ಖ್ಯಾತ ನಟ ವಿಜಯ್ ಸೇತುಪತಿ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ.

“ಇದು ಭಾರತದ, ಬಹುಶಃ ವಿಶ್ವದಲ್ಲೇ ಮೊದಲ ಮಡ್‌-ರೇಸ್ ಸಿನಿಮಾ. ಚಿತ್ರೀಕರಣಕ್ಕೆ ಮುನ್ನ ನಟರಿಗೆ ಸೂಕ್ತ ತರಬೇತಿ ನೀಡಿದ್ದೇವೆ. ಡ್ಯೂಪ್ ಬಳಕೆ ಮಾಡಿಲ್ಲ. ಸಾಹಸಪ್ರವೃತ್ತಿಯ ಯುವಕರನ್ನು ಆಯ್ಕೆ ಮಾಡಿದ್ದು, ಅವರು ಚಿತ್ರಕ್ಕಾಗಿ ಸಾಕಷ್ಟು ಸಮಯ ವ್ಯಯಿಸಿದ್ದಾರೆ.

ಚಿತ್ರದ ಮೂಲಕ ಪ್ರೇಕ್ಷಕರಿಗೆ ರೋಚಕ ಮಡ್‌-ರೇಸ್‌ ಪರಿಚಯಿಸಲಿದ್ದೇವೆ. ಸಾಕಷ್ಟು ಡ್ರಾಮಾ, ಥ್ರಿಲ್‌, ಪಂಚ್‌ ಜೊತೆ ಯಾವ ಹಂತದಲ್ಲಿಯೂ ಬೇಸರವಾಗದಂತೆ ನಿರೂಪಿಸಲು ಶ್ರಮಿಸಿದ್ದೇವೆ” ಎನ್ನುತ್ತಾರೆ ನಿರ್ದೇಶಕ ಪ್ರಗಭಾಲ್‌. ಯುವನ್‌, ರಿಧಾನ್ ಕೃಷ್ಣ, ಅನುಷಾ ಸುರೇಶ್‌, ಅಮಿತ್ ಶಿವದಾಸ್‌ ನಾಯರ್‌, ಹರೀಶ್ ಪೆರಾಡಿ, ವಿಜಯನ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Categories
ಸಿನಿ ಸುದ್ದಿ

ಬೆಣ್ಣೆ ನಗರಿ ಹುಡುಗಿ ಕೈಯಲ್ಲಿ ಶ್ಯಾನೆ ಸಿನಿಮಾಗಳು! ಆನ ಚಿತ್ರದ ಮೋಷನ್‌ ಪೋಸ್ಟರ್‌ಗೆ ಭರ್ಜರಿ ರೆಸ್ಪಾನ್ಸ್

ಕನ್ನಡ ಚಿತ್ರರಂಗಕ್ಕೆ ಬಂದ ಬೆರಳೆಣಿಕೆ ವರ್ಷಗಳಲ್ಲೇ ನಟಿ ಅದಿತಿ ಪ್ರಭುದೇವ ಸಾಕಷ್ಟು ಸುದ್ದಿ ಮಾಡಿದ್ದಾರೆ. ಹಾಗಂತ ಬೇರೇನೋ ವಿಷಯದಲ್ಲಿ ಸುದ್ದಿ ಮಾಡಿದ್ದಾರೆ ಅಂತಲ್ಲ. ಅವರೀಗ ಸಾಲು ಸಾಲು ಸಿನಿಮಾಗಳಲ್ಲಿ ಬಿಝಿಯಾಗಿದ್ದಾರೆ. ಸದ್ಯ ಅವರ ಅಭಿನಯದ “ಆನ” ಸಿನಿಮಾದ ಮೋಷನ್‌ ಪೋಸ್ಟರ್‌ ಆನಂದ್‌ ಆಡಿಯೋ ಯುಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಿದ್ದು, ಸಾಕಷ್ಟು ವೈರಲ್‌ ಆಗುತ್ತಿದೆ. ಎಲ್ಲೆಡೆಯಿಂದಲೂ ಆ ಮೋಷನ್‌ ಪೋಸ್ಟರ್‌ಗೆ ಮೆಚ್ಚುಗೆ ಸಿಗುತ್ತಿದೆ.

ಸಾಲು ಸಾಲು ಸಿನಿಮಾಗಳಲ್ಲಿ ಅದಿತಿ ಪ್ರಭುದೇವ ಕಾಣಿಸಿಕೊಳ್ಳುತ್ತಿರುವುದಕ್ಕೆ ಕಾರಣ, ಅವರ ಅಭಿನಯ ಮತ್ತು ಸ್ಪಷ್ಟ ಭಾಷೆ. ಹೌದು, ಅದಿತಿ ಪ್ರಭುದೇವ ಹಾಗೆ ನೋಡಿದರೆ, ನಿರೂಪಕಿಯಾಗಿದ್ದವರು. ಚಂದದ ಮಾತುಗಳನ್ನು ಆಡುವ ಮೂಲಕವೇ ಅವರು ಕಿರುತೆರೆಯ ಗಮನಸೆಳೆದವರು. ಅಲ್ಲಿಂದ ಅವರು “ಗುಂಡ್ಯಾನ ಹೆಂಡತಿ” ಧಾರಾವಾಹಿಯಲ್ಲಿ ನಟಿಸುವ ಅವಕಾಶ ಪಡೆದರು. ಆ ಬಳಿಕ “ನಾಗ ಕನ್ನಿಕೆ” ಧಾರಾವಾಹಿಯಲ್ಲೂ ಮಿಂಚಿದರು. ನಂತರದ ದಿನಗಳಲ್ಲಿ ಅವರು ಬೆಳ್ಳಿತೆರೆಗೆ ಬಡ್ತಿ ಪಡೆದು, ಅಜೇಯ್‌ರಾವ್‌ ಜೊತೆಗೆ “ಧೈರ್ಯಂ” ಸಿನಿಮಾಗೆ ನಾಯಕಿಯಾಗಿ ಕಾಣಿಸಿಕೊಂಡರು.

 

ಆ ಚಿತ್ರದ ಬಳಿಕ ಅದಿತಿ ಪ್ರಭುದೇವ ಹಿಂದಿರುಗಿ ನೋಡಿಲ್ಲ. ಅಷ್ಟರಮಟ್ಟಿಗೆ ಒಂದಾದ ಮೇಲೊಂದರಂತೆ ಸಿನಿಮಾಗಳಲ್ಲಿ ನಟಿಸುತ್ತಲೇ ಬಂದರು. ಸಿನಿಮಾ ಮಂದಿಗಷ್ಟೇ ಅಲ್ಲ, ಪಡ್ಡೆ ಹುಡುಗರಿಗೂ ಅದಿತಿ ಪ್ರಭುದೇವ ಫೇವರೇಟ್‌ ನಾಯಕಿ ಎನಿಸಿಕೊಂಡರು. ಸದ್ಯಕ್ಕೆ ಎಸ್.ನಾರಾಯಣ್‌ ನಿರ್ದೇಶನದ “೫ಡಿ” ಸಿನಿಮಾದಲ್ಲಿ ಆದಿತ್ಯ ಜೊತೆಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಆ ಚಿತ್ರದ ಚಿತ್ರೀಕರಣ ಜೋರಾಗಿಯೇ ನಡೆಯುತ್ತಿದೆ.


ಸದಾ ನಗುಮೊಗದ ಈ ಅದಿತಿಗೆ ಒಂದಷ್ಟು ಸಿನಿಮಾಗಳು ಹುಡುಕಿ ಬಂದಿವೆ. ನೋಡ ನೋಡುತ್ತಿದ್ದಂತೆಯೇ ಕೆಲವು ನಟರ ಜೊತೆಗೆ ನಟಿಸುವ ಮೂಲಕ ಶ್ಯಾನೆ ಬಿಝಿಯಾಗಿಬಿಟ್ಟರು. ಈಗಾಗಲೇ “ಬ್ರಹ್ಮಚಾರಿ”, “ಬಜಾರ್”, “ಸಿಂಗ” ಸೇರಿದಂತೆ ಹಲವು ಹೊಸಬರ ಸಿನಿಮಾಗಳಲ್ಲೂ ಅದಿತಿ ಕಾಣಿಸಿಕೊಂಡಿದ್ದಾರೆ. ಸದ್ಯಕ್ಕೆ ಕೈಯಲ್ಲಿರುವ ಸಿನಿಮಾಗಳ ಬಿಡುಗಡೆ ಎದುರು ನೋಡುತ್ತಿದ್ದಾರೆ ಅದಿತಿ.

Categories
ಸಿನಿ ಸುದ್ದಿ

ವಿಕ್ರಮ್ ‘ಮಹಾವೀರ್ ಕರ್ಣ್’ ಟೀಸರ್ ಔಟ್; 300 ಕೋಟಿ ಬಜೆಟ್‌ನ ಅದ್ಧೂರಿ ಸಿನಿಮಾ!

ಐತಿಹಾಸಿಕ ಕಥಾನಕ ‘ಮಹಾಭಾರತ’ ಆಧರಿಸಿ ಹತ್ತಾರು ಸಿನಿಮಾಗಳು ತಯಾರಾಗಿವೆ. ಈ ಕೃತಿಯಲ್ಲಿನ ಮಹತ್ವದ ವ್ಯಕ್ತಿ – ವ್ಯಕ್ತಿತ್ವ ಕರ್ಣ. ಈ ಪಾತ್ರದ ದೃಷ್ಟಿಕೋನದಿಂದ ತೆರೆ ಮೇಲೆ ಕತೆ ಹೇಳಿರುವುದು ಕಡಿಮೆ. ಆ ಕೊರತೆಯನ್ನು ನೀಗಿಸಲಿದೆ ‘ಸೂರ್ಯಪುತ್ರ ಮಹಾವೀರ್ ಕರ್ಣ್‌’ ಚಿತ್ರ. ಆರ್‌.ಎಸ್‌.ವಿಮಲ್ ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಬಹುದೊಡ್ಡ ಯೋಜನೆಯಿದು. ವಿಶು ಭಗ್ನಾನಿ, ಜಾಕಿ ಭಗ್ನಾನಿ ಮತ್ತು ದೀಪ್ಶಿಕಾ ದೇಶ್‌ಮುಖ್‌ ನಿರ್ಮಿಸುತ್ತಿರುವ ಚಿತ್ರದ ಶೀರ್ಷಿಕೆ ಪಾತ್ರದಲ್ಲಿ ಜನಪ್ರಿಯ ತಮಿಳು ನಟ ವಿಕ್ರಂ ನಟಿಸುತ್ತಿದ್ದಾರೆ.

ಹಾಗೆ ನೋಡಿದರೆ ಈ ಸಿನಿಮಾಗೆ 2018ರಲ್ಲೇ ಚಾಲನೆ ಸಿಗಬೇಕಿತ್ತು. ಕಾರಣಾಂತರಗಳಿಂದ ಯೋಜನೆ ಮುಂದಕ್ಕೆ ಹೋಯ್ತು. ಕೋವಿಡ್‌ನಿಂದಾಗಿ ಕಳೆದ ವರ್ಷವಿಡೀ ಚಿತ್ರ ಸುದ್ದಿಯಲ್ಲಿರಲಿಲ್ಲ. ಇದೀಗ ಆಕರ್ಷಕ ಟೀಸರ್‌ನೊಂದಿಗೆ ಬಂದಿದೆ ಚಿತ್ರತಂಡ. ನಿರ್ಮಾಪಕರು ಸುಮಾರು 300 ಕೋಟಿ ದುಬಾರಿ ಬಜೆಟ್‌ನಲ್ಲಿ ಸಿನಿಮಾ ತಯಾರಿಸಲಿದ್ದಾರೆ. ಹಿಂದಿ, ತಮಿಳು, ಕನ್ನಡ, ತೆಲುಗು, ಮಲಯಾಳಂ ಭಾಷೆಗಳಲ್ಲಿ ಚಿತ್ರ ತೆರೆಕಾಣಲಿದ್ದು, ಮ್ಯೂಸಿಕಲ್ ಸೆನ್ಷೇಷನ್‌ ಎ.ಆರ್.ರೆಹಮಾನ್‌ ಸಂಗೀತ ಸಂಯೋಜಿಸುತ್ತಿರುವುದು ವಿಶೇ‍ಷ.

ಮಲಯಾಳಂ ನಟ ಸುರೇಶ್ ಗೋಪಿ ಅವರು ಧುರ್ಯೋಧನನ ಪಾತ್ರದಲ್ಲಿ ನಟಿಸುವುದು ಖಾತ್ರಿಯಾಗಿದೆ. ಇನ್ನುಳಿದ ತಾರಾಬಳಗದ ಆಯ್ಕೆ ಪ್ರಕ್ರಿಯೆ ಜಾರಿಯಲ್ಲಿದೆ. ‘ಗೇಮ್‌ ಆಫ್‌ ಥ್ರೋನ್ಸ್’ ಹಾಲಿವುಡ್‌ ಚಿತ್ರಕ್ಕೆ ಕೆಲಸ ಮಾಡಿದ ತಂತ್ರಜ್ಞರು ‘ಮಹಾವೀರ್‌ ಕರ್ಣ’ನಿಗೆ ಕೆಲಸ ಮಾಡಲಿದ್ದಾರೆ. ಅಕ್ಟೋಬರ್‌ನಲ್ಲಿ ಚಿತ್ರೀಕರಣ ಆರಂಭವಾಗಲಿದ್ದು, ಮುಂದಿನ ವರ್ಷ ಸಿನಿಮಾ ಥಿಯೇಟರ್‌ಗೆ ಬರಲಿದೆ. ಖ್ಯಾತ ಕವಿ ಡಾ.ಕುಮಾರ್ ವಿಶ್ವಾಸ್ ಅವರ ಚಿತ್ರಕಥೆ ವಿಭಾಗದಲ್ಲಿ ತೊಡಗಿಸಿಕೊಂಡಿದ್ದು, ಸಂಭಾಷಣೆ ರಚನೆಯ ಜವಾಬ್ದಾರಿ ಹೊತ್ತಿದ್ದಾರೆ.

Categories
ಎಡಿಟೋರಿಯಲ್ ಸಿನಿ ಸುದ್ದಿ

ಸಿನಿಮಾವನ್ನು ಸಿನಿಮಾವನ್ನಾಗಿ ಮಾತ್ರ ನೋಡಿ ಅಂತ ಹೇಳುವ ಧೈರ್ಯ ಯಾವ ಸ್ಟಾರ್ ಗೂ ಇಲ್ವಾ?

ಚಿತ್ರರಂಗ ಹಾಳಾಗುತ್ತಿದೆ ಅಂತ ಹಿರಿಯ ನಟ ಜಗ್ಗೇಶ್ ಇನ್ನಾವುದೋ ಘಟನೆಯಲ್ಲಿ ಮಂಗಳವಾರ ಆಕ್ರೋಶ ಹೊರ ಹಾಕಿದ ಬೆನ್ನಲೇ ಒಂದು ಸಮುದಾಯದ ಆಕ್ರೋಶಕ್ಕೆ ‘ ಪೊಗರು’ ಸಿನಿಮಾ ತಂಡ ಮಂಡೆ ಉರಿ ಬಿದ್ದಿದೆ. ವಿಚಿತ್ರ ಅಂದ್ರೆ ತೆರೆ ಮೇಲೆ ‘ ಪೊಗರು ‘ ತೋರಿಸಿದವರೇ ನಿಜ ಜೀವನದಲ್ಲಿ ಒಂದು ಸಮುದಾಯದ ಕೂಗಿಗೆ ವಿಲ ವಿಲ ಒದ್ದಾಡಿದ್ದಾರೆ. ಇವರದ್ದೆಲ್ಲ ಅರಚಾಟ ತೆರೆ ಮೇಲೆ ಮಾತ್ರವೇ ಅಂತ ಜನ ಮಾತನಾಡುತ್ತಿದ್ದಾರೆ. ಒಂಥರ ವಿಚಿತ್ರವಾಗಿದೆ ಈ ವಿದ್ಯಮಾನ.

ಆ ಕತೆ ಇರಲಿ, ಈಗ ಪೊಗರು ವಿವಾದದಲ್ಲಿ ರಾಜಿ ಪಂಚಾಯಿತಿಗಳು ನಡೆದರೂ, ವಿರೋಧದ ಕೂಗು ಜಾಸ್ತಿ ಆಗಿದೆ. ಪರಿಣಾಮ ವಿವಾದಕ್ಕೆ ಕಾರಣವಾದ ದೃಶ್ಯಕ್ಕೆ ಕತ್ತರಿ ಬೀಳುವುದು ಗ್ಯಾರಂಟಿ ಆಗಿದೆ. ಹಾಗಂತ ಚಿತ್ರ ತಂಡ ಒಪ್ಪಿಕೊಂಡಿದೆ ಎನ್ನುವ ಮಾಹಿತಿ ಇದೆ.ಅಲ್ಲಿಗೆ ನಿರ್ದೇಶಕನೊಬ್ಬನ ಅಭಿವ್ಯಕ್ತಿ ಸ್ವಾತಂತ್ರ್ಯ ನೆಗೆದು ಬಿದ್ದಿದೆ. ಸಂಭಾವನೆ ವಿಚಾರದಲ್ಲಿ ನಿರ್ದೇಶಕರನ್ನೇ ಮಣ್ಣು‌ ಮುಕ್ಕಿಸುವ ಸ್ಟಾರ್ ಗಳು ಕೂಡ ತಮಗೂ ಅದಕ್ಕೂ ಸಂಬಂಧವೇ ಇಲ್ಲ ಎಂಬಂತೆ ಸುಮ್ಮನಿದ್ದಾರೆ. ಮುಂದೆ ಇನ್ನಾವ ಸಿನಿಮಾವೂ ಇಂತಹದೇ ವಿವಾದಕ್ಕೆ ಸಿಲುಕಿ ಕತ್ತರಿ ಪ್ರಯೋಗಕ್ಕೆ ಸಿಲುಕುತ್ತೋ ಗೊತ್ತಿಲ್ಲ.

ಯಾಕಂದ್ರೆ ಸಿನಿಮಾ ನಿರ್ದೇಶಕನೊಬ್ಬನ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ದಕ್ಕೆ ಆಗುತ್ತಿರುವುದು ಇದೇ ಮೊದಲಲ್ಲ. ಸಾಹಿತಿಗಳು, ಪತ್ರಕರ್ತರ ಅಭಿವ್ಯಕ್ತಿ ಸ್ವಾತಂತ್ರ್ಯ ವನ್ನೇ ದಮನ ಮಾಡಿದ ಹಾಗೆ ಸಿನಿಮಾ ನಿರ್ದೇಶಕನ ಅಭಿವ್ಯಕ್ತಿ ಸ್ವತಂತ್ರ ಆಗಾಗ ಹರಣ ಆಗುತ್ತಲೇ ಬಂದಿದೆ. ಇಷ್ಟಾಗಿಯೂ ಚಿತ್ರರಂಗವಾಗಲಿ, ಸ್ಟಾರ್ ಗಳಾಗಲಿ ಒಂದಾಗಿ ಧ್ವನಿ ಎತ್ತಿದ್ದು ತೀರಾ ಅಪರೂಪ. ಅದರ ಪರಿಣಾಮವೀಗ ‘ಪೊಗರು’ ಮೇಲೂ ಬಿದ್ದಿದೆ.

ಹೋಮ ನೆಡೆಸಲು ಕುಳಿತ ವ್ಯಕ್ತಿಯ ಹೆಗಲ ಮೇಲೆ ಚಿತ್ರದ ನಾಯಕ ಕಾಲಿಟ್ಟಿದ್ದ ಎನ್ನುವುದೇ ‘ ಪೊಗರು’ ಸುತ್ತ ವಿವಾದ ಹುಟ್ಟಲು ಕಾರಣ. ಅಲ್ಲಿ ಹೋಮಕ್ಕೆ ಕುಳಿತವನು ಇಂತಹದೇ ಸಮುದಾಯಕ್ಕೆ ಸೇರಿದವನು ಅಂತ ಎಲ್ಲೂ ಹೇಳಿಲ್ಲ. ಹಾಗೆಯೇ ಒಂದು ಜಾತಿ ಸೂಚಕವಾಗಿಯೂ ಅದನ್ನು ತೋರಿಸಿಲ್ಲ. ಅಷ್ಟಾಗಿಯೂ ಆತ ತಮ್ಮವನೇ, ಹಾಗಾಗಿ ತಮ್ಮೀಡಿ ಸಮುದಾಯಕ್ಕೆ ಅವಮಾನ ಆಗಿದೆ ಅಂತ ಒಂದು ಸಮುದಾಯ ಧ್ವನಿ ಎತ್ತಿದೆ.ಮಂಗಳವಾರ ದಿನವೀಡಿ ರಾಜಿ ಸರ್ಕಸ್ ನಡೆದರೂ, ಅವರದೇ ಕೂಗು ಹೆಚ್ಚಾಗಿ, ಅನಿವಾರ್ಯ ವಾಗಿ ಚಿತ್ರದೊಳಗಿನ ದೃಶ್ಯಕ್ಕೆ ಕತ್ತರಿ ಬೀಳುತ್ತಿದೆ.

ಪ್ರಶ್ನೆ ಇರುವುದು ಸಿನಿಮಾವನ್ನು ಸಿನಿಮಾವನ್ನಾಗಿ ಮಾತ್ರ ನೋಡಿ ಅಂತ ಚಿತ್ರೋದ್ಯಮ ಯಾಕೆ ಅವರಿಗೆ ಹೇಳಿಲ್ಲ ಅಂತ. ಸದ್ಯಕ್ಕೀಗ ‘ಪೊಗರು’ . ಮುಂದ್ಯಾವುದು ಚಿತ್ರವೋ ಗೊತ್ತಿಲ್ಲ. ಅದರಲಿ, ಸಮಾಜ ಒಂದು ಸಿನಿಮಾದ ದೃಶ್ಯವನ್ನು ಅಷ್ಟು ಗಂಭೀರವಾಗಿ ತೆಗೆದುಕೊಳ್ಳುತ್ತಾ ಅಂತ. ಹಾಗೊಂದು ವೇಳೆ ಅದು ಹೌದು ಎನ್ನುವುದಾ ಗಿದ್ದರೆ ಒಂದು ಸಮುದಾಯ ತಲೆಮಾರು ಗಳಿಂದ ಶೋಷಿಸುತ್ತಲೇ ಬಂದ ದಲಿತರ ಮೇಲಿನ ದೌರ್ಜನ್ಯಗಳ ಬಗ್ಗೆ ಎಷ್ಟೇಲ್ಲ ಚಿತ್ರ ಬಂದರೂ, ಅದನ್ಯಾಕೆ ಅವರು ಅಷ್ಟು ಗಂಭೀರವಾಗಿ ತೆಗೆದುಕೊಂಡಿಲ್ಲ? ಅಸ್ಫಶ್ಯತೆ ಆಚರಣೆ ತಪ್ಪು ಅಂತ ತೋರಿಸಿದರು, ಅದನ್ನಾಕೆ ನಿಲ್ಲಿಸಿಲ್ಲ? ತಾವು ಬಲಿಷ್ಟರು, ತಾವು ಮಾಡಿದ್ದೇ ಸರಿ ಎನ್ನುವ ಅಹಂ ನಿಂದಲೇ ತಾನೇ ಒಂದು ಸಮುದಾಯ ಪೊಗರು ಮೇಲೆ ಎಗರಿ ಬಿದ್ದಿದ್ದು? ಮುಂದೆ ಇದೇ ಸಮುದಾಯ ತಾವು ಹೇಳುವುದನ್ನೆ ಸಿನಿಮಾ ಮಾಡಿ ಅಂತ ಚಿತ್ರರಂಗಕ್ಕೆ ಸೂಚನೆ ಕೊಟ್ಟರು ಅಚ್ಚರಿ ಇಲ್ಲ. ಹಾಗೆಯೇ ಅದು ಜಾರಿಗೆ ಬಂದರೂ ಅಚ್ವರಿ ಪಡಬೇಕಿಲ್ಲ. ಕಾರಣ, ಅವರೇ ಅಲ್ಲವೇ ಚಿತ್ರೋದ್ಯಮವನ್ನು ನಿಯಂತ್ರಿಸುವವರು?

Categories
ಸಿನಿ ಸುದ್ದಿ

ಚಿ.ತು.ಹುಡುಗರ ಜೋಶ್‌ ಲೈಫ್‌- ಸಂಘ ಕಟ್ಟಿಕೊಂಡ ಯುವಕರ ಕಲರ್‌ಫುಲ್‌ ಸ್ಟೋರಿ

ಹಳ್ಳಿ ಅಂದಮೇಲೆ ಪಡ್ಡೆ ಹುಡುಗ್ರು ಇದ್ದೇ ಇರ್ತಾರೆ. ಪಡ್ಡೆಗಳು ಅಂದ್ರೆ ಒಂದಷ್ಟು ತಲೆಹರಟೆ ಕೂಡ ಸಹಜ. ಊರಲ್ಲಿ ಜಾತ್ರೆ, ಹರಿದಿನ ಸೇರಿದಂತೆ ಇನ್ನಿತರೆ ಕಾರ್ಯಕ್ರಮಗಳು ಜರುಗಿದರೆ, ತಮ್ಮದೇ ಒಂದು ಸಂಘ ಕಟ್ಟಿಕೊಂಡ ಯುವಕರು ಆ ಮೂಲಕ ಮುಂದೆ ನಿಂತು ಸಂಭ್ರಮದಿಂದಲೇ ಅದನ್ನೆಲ್ಲ ಆಚರಿಸೋದು ಕಾಮನ್.‌ ಈಗ ಇಲ್ಲೇಕೆ ಯುವಕರ ಸಂಘದ ಬಗ್ಗೆ ಹೇಳ್ತಾ ಇದೀವಿ ಎಂಬ ಪ್ರಶ್ನೆಗೆ ಉತ್ತರ “ಚಿ.ತು.ಯುವಕರ ಸಂಘ” ಎಂಬ ಸಿನಿಮಾ.

ಹೌದು, “ಚಿ.ತು.ಯುವಕರ ಸಂಘ” ಇದು ಹೊಸ ಬಗೆಯ ಸಿನಿಮಾ. ಹೆಸರೇ ಹೇಳುವಂತೆ ಇದೊಂದು ಪಕ್ಕಾ ಹಳ್ಳಿಗಾಡಲ್ಲಿ ನಡೆಯುವ ಚಿತ್ರ. ಅದರಲ್ಲೂ ಹಳ್ಳಿ ಹುಡುಗರ ಸುತ್ತಮುತ್ತ ನಡೆಯೋ ಕಥೆ ಇದು. ಸದ್ಯಕ್ಕೆ ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ಎರಡನೇ ಹಂತದ ಚಿತ್ರೀಕರಣಕ್ಕೆ ಚಿತ್ರತಂಡ ಸಜ್ಜಾಗಿದೆ. ಇನ್ನು, ಚಿತ್ರತಂಡ ಮೋಷನ್‌ ಪೋಸ್ಟರ್‌ ರಿಲೀಸ್‌ ಆಗಿದ್ದು, ನಾರಾಯಣಗೌಡ ಅವರು ಮೋಷನ್‌ ಪೋಸ್ಟರ್‌ ರಿಲೀಸ್‌ ಮಾಡಿ ಶುಭಕೋರಿದ್ದಾರೆ.


ಈ ಚಿತ್ರಕ್ಕೆ ಶಿವರಾಜ್‌ ರಾಮನಗರ ನಿರ್ದೇಶಕರು. ಇದು ಮೊದಲ ನಿರ್ದೇಶನದ ಚಿತ್ರ. ಇದಕ್ಕೂ ಮುನ್ನ ಅವರು “ಭುಜಂಗ”,”ಉಡುಂಬ”,”ದಾರಿ ಯಾವುದಯ್ಯ ವೈಕುಂಠಕೆ” ಚಿತ್ರಗಳಲ್ಲಿ ಅಸೋಸಿಯೇಟ್‌ ಆಗಿ ಕೆಲಸ ಮಾಡಿದ್ದಾರೆ. ತಮ್ಮ ಸಿನಿಮಾ ಬಗ್ಗೆ ಹೇಳುವ ಶಿವರಾಜ್‌ ರಾಮನಗರ, ” ಇದು ನಮ್ಮ ಮೊದಲ ಸಿನಿಮಾ. ಕಥೆ ಬಗ್ಗೆ ಹೇಳುವುದಾದರೆ, ಊರಲ್ಲಿ ಕೆಲಸ ಕಾರ್ಯ ಇಲ್ಲದೆ ಅರಾಮಾಗಿ ಶೋಕಿ ಮಾಡಿಕೊಂಡಿರುವ ನಾಲ್ವರು ಹುಡುಗರೊಂದಿಗೆ ಚಿತ್ರದ ನಾಯಕನೂ ಊರೂರು ಅಲೆದಾಡುತ್ತಿರುತ್ತಾನೆ. ಅಂತಹವರ ಲೈಫಲ್ಲಿ ಕೆಲವು ಘಟನೆಗಳು ನಡೆದು ಹೋಗುತ್ತದೆ.

ಕೆಲಸ ಕಾರ್ಯ ಇಲ್ಲದೆ ಇರೋದು ವೇಸ್ಟ್.‌ ಕೆಲಸ ಮಾಡುವಾಗ ಸಿಗುವ ಗೌರವವೇ ಬೇರೆ ಎಂಬುದನ್ನು ಅರಿತ ಆ ಯುವಕರು, ತಮ್ಮ ಕಾಲ ಮೇಲೆ ತಾವು ನಿಲ್ಲಬೇಕು ಅಂತ ನಿರ್ಧರಿಸುತ್ತಾರೆ. ಆಮೇಲೆ ಏನೆಲ್ಲಾ ಆಗುತ್ತೆ ಅನ್ನೋದೇ ಚಿತ್ರ. ಇನ್ನು, ಇದೊಂದು ಹಾಸ್ಯ ಪ್ರಧಾನ ಸಿನಿಮಾ. ಹಾಸ್ಯ ಮೂಲಕವೇ, ಚಿತ್ರ ಸಾಗುತ್ತದೆ. ರಾಮನಗರ, ಚನ್ನಪಟ್ಟಣ, ಮಂಡ್ಯ ಸುತ್ತಮುತ್ತ ಚಿತ್ರೀಕರಣ ನಡೆದಿದೆ.  ಚೇತನ್‌ ರಾಜ್‌ ಫಿಲ್ಮ್ಸ್ಸ್‌ ಮೂಲಕ ಚೇತನ್‌ ರಾಜ್ ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಕಿರಣ್‌ ತೋಟಂಬೈಲು ಸಂಗೀತ ನೀಡಿದ್ದಾರೆ. ರಾಜು ಹೆಮ್ಮಿಗೆಪುರ ಛಾಯಾಗ್ರಹಣವಿದೆ.

ಇವರಿಗೆ ಇದು ಮೊದಲ ಸಿನಿಮಾ. ಚಿತ್ರದಲ್ಲಿ ಸನತ್‌ ಹೀರೋ ಆಗಿದ್ದಾರೆ. ಈ ಹಿಂದೆ “ಕಮರೊಟ್ಟು ಚೆಕ್‌ಪೋಸ್ಟ್‌ ” ಚಿತ್ರದಲ್ಲಿ ಹೀರೋ ಆಗಿ ನಟಿಸಿದ್ದಾರೆ. ನಿರ್ಮಾಪಕ ಚೇತನ್‌ ರಾಜ್‌ ಈ ಚಿತ್ರ ನಿರ್ಮಿಸಿದ್ದರು. ಮತ್ತೆ ಈ ಇವರಿಬ್ಬರ ಕಾಂಬಿನೇಷನ್‌ನಲ್ಲಿ ಚಿತ್ರ ಮೂಡಿಬಂದಿದೆ. ಇನ್ನು ಚಿತ್ರದಲ್ಲಿ ವಿರಾನಿಕ ಶೆಟ್ಟಿ ನಾಯಕಿಯಾಗಿದ್ದಾರೆ. ಉಳಿದಂತೆ ಹೀರೋ ಸನತ್‌ ಜೊತೆಗೆ “ಫ್ರೆಂಚ್‌ ಬಿರಿಯಾನಿ” ಖ್ಯಾತಿಯ ಮಹಂತೇಶ್‌, “ಕಾಮಿಡಿ ಕಿಲಾಡಿಗಳು” ಸಂತು, “ಕಿರಿಕ್‌ ಪಾರ್ಟಿ” ಸಲ್ಮಾನ್‌, ಪವನ್‌, ಬಲರಾಜವಾಡಿ, ಚಂದ್ರಕಲಾ ಮೋಹನ್‌, ರಾಜೇಂದ್ರ ಕಾರಂತ್‌, ಬಿರಾದಾರ್‌, ಚಂದ್ರ ಪ್ರಭ, ಕುರಿ[ಪ್ರತಾಪ್‌ ಇತರರು ಇದ್ದಾರೆ.

Categories
ಸಿನಿ ಸುದ್ದಿ

ಚಂದನವನದಲ್ಲಿ ಲೆಹಂಗಾ ತೊಟ್ಟು ಮಿಂಚಿದ ತಾರಾ ಅನುರಾಧ!

ಜನಪ್ರಿಯ ನಟಿ ತಾರಾ ಅನುರಾಧ ತಮ್ಮ ಇದುವರೆಗಿನ ತಮ್ಮ ಸಿನಿಜರ್ನಿಯಲ್ಲಿ ಪಡೆದ ಪ್ರಶಸ್ತಿಗಳೆಷ್ಟು ? ರಾಷ್ಟ್ರ ಪ್ರಶಸ್ತಿ, ರಾಜ್ಯ ಪ್ರಶಸ್ತಿಗಳು ಸೇರಿದಂತೆ ಅವಕ್ಕೇನು ಲೆಕ್ಕವೇ ಇಲ್ಲ. ಅಷ್ಟೊಂದು ಅನುಭವಿ ಮತ್ತು ಜನಪ್ರಿಯ ನಟಿ ತಾರಾ. ಇಷ್ಟಾಗಿಯೂ ಅವರಿಗೆ ಇದೊಂದು ತುಂಬಾ ತುಂಬಾ ಸ್ಪೆಷಲ್‌ ಅವಾರ್ಡ್.‌ ಅದುವೇ ಚಂದನವನ ಫಿಲ್ಮ್‌ ಕ್ರಿಟಿಕ್ಸ್‌ ಅವಾರ್ಡ್.‌ ಯಾಕಂದ್ರೆ, ಚಿತ್ರರಂಗ ಮತ್ತು ಸಿನಿಮಾ ಪತ್ರಿಕೋದ್ಯಮ ಅನ್ನೋದೇ ಒಂದು ಮನೆಯಿದ್ದಂತೆ. ಆ ಮನೆಯವರೇ ಕೊಟ್ಟ ಈ ಪ್ರಶಸ್ತಿ ಮಿಕ್ಕೆಲ್ಲ ಪ್ರಶಸ್ತಿಗಿಂತ ತುಂಬಾ ಸ್ಪೆಷಲ್‌ ಅನ್ನೋದು ತಾರಾ ಅಭಿಪ್ರಾಯ.

ʼಶಿವಾರ್ಜುನʼ ಚಿತ್ರದಲ್ಲಿನ ತಮ್ಮ ಅಭಿನಯಕ್ಕೆ ಅವರು ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಗೆ ಪಾತ್ರವಾದರು. ಉಳಿದಂತೆ ಪ್ರಶಸ್ತಿ ಸಮಾರಂಭ, ಪ್ರಶಸ್ತಿ ಸ್ವೀಕಾರ ಅನ್ನೋದು ತಾರಾ ಅವರಿಗೇನು ಹೊಸದಲ್ಲ. ಅಂತಹ ಅದೆಷ್ಟು ಸಮಾರಂಭಕ್ಕೆ ಹೋಗಿ ಬಂದಿದ್ದಾರೋ ಅವರಿಗೇ ಗೊತ್ತು. ಅದಾಗ್ಯೂ, ಚಂದನವನ ಫಿಲ್ಮ್‌ ಕ್ರಿಟಿಕ್ಸ್‌ ಅವಾರ್ಡ್‌ ಸ್ವೀಕಾರಕ್ಕೆ ಅವರು ಬಂದಿದ್ದೇ ತುಂಬಾ ಸ್ಪೆಷಲ್.‌ ಸಭೆ-ಸಮಾರಂಭಗಳೇ ಇರಲಿ, ಸಿನಿಮಾ ಕಾರ್ಯಕ್ರಮಗಳೇ ಇರಲಿ, ಅಲ್ಲೆಲ್ಲ ನಟಿ ತಾರಾ ಅವರು ಪಕ್ಕಾ ಸಂಪ್ರಾದಾಯಸ್ಥ ನಾರಿಯಂತೆ ಮೈ ತುಂಬಾ ಸೀರೆ ಉಟ್ಟುಕೊಂಡೇ ಕಾಣಿಸಿಕೊಳ್ಳುವುದು ನಿಮಗೂ ಗೊತ್ತು. ಫಾರ್‌ ಎ ಚೇಂಜ್‌, ಚಂದನವನ ಫಿಲ್ಮ್‌ ಕ್ರಿಟಿಕ್ಸ್‌ ಅವಾರ್ಡ್‌ ಸ್ವೀಕಾರಕ್ಕೆ ತಾರಾ ಬಂದಿದ್ದೇ ಡಿಫೆರೆಂಟ್.


ಕನಕಾಂಬರ ಬಣ್ಣದ ಲೆಹಂಗಾ ಧರಿಸಿ ವೇದಿಕೆಯಲ್ಲಿ ಕಾಣಸಿಕೊಂಡರು ನಟಿ ತಾರಾ. ಅದೇನೋ ಗೊತ್ತಿಲ್ಲ, ಎಲ್ಲರೂ ಅವರ ಡ್ರಸ್‌ ಬಗ್ಗೆಯೇ ಗುಸು ಗುಸು ಶುರು ಮಾಡಿದರು. ಅದೇಗೋ ಅವರಿಗೆ ಗೊತ್ತಾಯಿತು. ಮೈಕ್‌ ಹಿಡಿದು ಮಾತಿಗೆ ನಿಂತರು ತಾರಾ. ” ಈ ತರಹದ ಬಟ್ಟೆ ಹಾಕಿಕೊಂಡ್‌ ಬಾಳಾ ದಿನ ಆಯ್ತು. ನಂಗೆ ಪರಿಚಯ ಇರೋ ಒಬ್ರು ಡ್ರೆಸ್‌ ಡಿಸೈನರ್‌ ಇದ್ದಾರೆ. ನಾನೊಂದ್‌ ಅವಾರ್ಡ್‌ ಪಂಕ್ಷನ್‌ ಹೋಗ್ತಿದ್ದೀನಿ ಅಂದಾಗ ಅವ್ರು ಹೇಳಿದ್ದು ಈ ಡ್ರೆಸ್‌ ಬಗ್ಗೆ. ಮೇಡಂ, ತುಂಬಾ ದಿನಗಳಿಂದ ಈ ಬಟ್ಟೆ ಹೊಲಿಸಿಕೊಂಡ್‌ ಹಾಗೆ ಇಟ್ಟಿದ್ದೀರಿ, ಇದ್ನೆ ಹಾಕ್ಕೊಂಡ್‌ ಹೋಗಿ. ಚೆನ್ನಾಗಿರುತ್ತೆ ಅಂತಂದ್ರು. ಅವ್ರಿಗೆ ಬೇಡ ಅನ್ನಲಾಗ್ದೆ ಇದ್ನೆ ಹಾಕ್ಕೊಂಡ್‌ ಬಂದೆ ʼʼ ಅಂತ ಲೆಹಂಗಾ ತೊಟ್ಟು ಬಂದಿದ್ದರ ಸ್ಪೆಷಲ್‌ ವಿವರಿಸಿದ್ರು ನಟಿ ತಾರಾ.


ಆನಂತರ ಚಂದನವನ ಪ್ರಶಸ್ತಿಗೆ ಪ್ರತಿಕ್ರಿಯಿಸಿದರು. ” ಪ್ರಶಸ್ತಿ ಉತ್ಸಾಹ, ಖುಷಿ ಎಲ್ಲವೂ ನಿಜ. ಪ್ರತಿಸಲ ಬಂದಾಗಲೂ ನನಗೆ ಭಯವಾಗುತ್ತದೆ, ವಿನಃ ಸಂತೋಷಕ್ಕಿಂತ ಹೆಚ್ಚು ಭಯವೇ ಆಗುತ್ತದೆ. ಶ್ಯಾಮ್‌ ಪ್ರಸಾದ್‌ ಹಾಗೂ ಶರಣು ಹುಲ್ಲೂರು ನನ್ನ ಕರೆದಾಗ ಯಾರಿಗಾದರೂ ಪ್ರಶಸ್ತಿ ಕೊಡಲು ಕರೆದಿರುತ್ತಾರೆ ಅಂತ ಅಂದುಕೊಂಡಿದ್ದೆ. ಅವಾರ್ಡ್‌ ಕೊಟ್ಟೇ ರೂಢಿಯಾದ ನನಗೆ ಅವಾರ್ಡ್‌ ಸ್ವೀಕರಿಸೋ ಸಮಯ ಬಂದಿರಲೇ ಇಲ್ಲ. ನನ್ನ ಜೊತೆ ಕಾಂಪೀಟ್‌ ಮಾಡಿದ ಎಲ್ಲರಿಗೂ ಈ ಅವಾರ್ಡ್‌ ಸಲ್ಲುತ್ತದೆ. ಶಿವಾರ್ಜುನ ಸಿನಿಮಾದಲ್ಲಿ ಅವಕಾಶ ನೀಡಿದ ನಿರ್ಮಾಪಕ, ನಿರ್ದೇಶಕರಿಗೆ ಕೂಡ ಅವಾರ್ಡ್‌ ಸಲ್ಲುತ್ತದೆ. ಮಾತೃಸಂಸ್ಥೆ ಅಂತ ಕರೆಯಲ್ಪಡುವ ಫಿಲಂ ಚೇಂಬರ್‌ ಅಧ್ಯಕ್ಷರಿಂದ ಪ್ರಶಸ್ತಿ ಪಡೆದುಕೊಳ್ಳುವುದು ಖುಷಿ ತಂದಿದೆ ಎಂದರು ನಟಿ ತಾರಾ.

Categories
ಸಿನಿ ಸುದ್ದಿ

ಆನ್‌ ಸ್ಕ್ರೀನ್‌ ಮೇಲೆ ರಾಗಿಣಿ ಬಯೋಪಿಕ್ !

ತುಪ್ಪದ ಬೆಡಗಿ ರಾಗಿಣಿ ಈಗ ಒಂದಷ್ಟು ನಿರಾಳತೆಯಲ್ಲಿದ್ದಾರೆ. ಜಾಮೀನು ಮೇಲೆ ಜೈಲಿನಿಂದ ಹೊರ ನಂತರ ಫ್ಯಾಮಿಲಿ ಜತೆಗೆ ಟೆಂಪಲ್‌ ರನ್‌ ನಡೆಸಿದ್ರು. ಅದರ ಜತೆಗೀಗ ಸಿನಿಮಾ ಚಟುವಟಿಕೆಗಳಲ್ಲಿ ಬ್ಯುಸಿ ಅಗಿದ್ದಾರೆ. ಸದ್ಯಕ್ಕೆ ಅವರ ಹೊಸ ಸಿನಿಮಾ ಯಾವುದು ಎನ್ನುವುದು ಇನ್ನು ಖಚಿತ ಆಗಿಲ್ಲ. ಈ ನಡುವೆಯೇ ಆನ್‌ ಸ್ಕ್ರೀನ್‌ ಮೇಲೆ ರಾಗಿಣಿ ಬಯೋಪಿಕ್‌ ಬರಲಿದೆ ಎನ್ನುವ ಸುದ್ದಿ ಇದೆ.

ಇದು ಎಷ್ಟರ ಮಟ್ಟಿಗೆ ಗ್ಯಾರಂಟಿಯೋ ಗೊತ್ತಿಲ್ಲ. ಹಾಗೊಂದು ಸುದ್ದಿ ಮಾತ್ರ ಅವರ ಆಪ್ತ ವಲಯದಿಂದ ಕೇಳಿ ಬಂದಿದ್ದು ಹೌದು. ಹಾಗಾದ್ರೆ , ಸಿನಿಮಾ ಮಾಡುವಷ್ಟು ರಾಗಿಣಿ ಸಾಧನೆ ಮಾಡಿದ್ದೇನು ? ಗೊತ್ತಿಲ್ಲ. ಆದರೆ ಇತ್ತೀಚೆಗೆ ಅವರು ಡ್ರಗ್ಸ್‌ ಪ್ರಕರಣದಲ್ಲಿ ಭಾರೀ ಸುದ್ದಿ ಆಗಿದ್ದು ನಿಮಗೆಲ್ಲ ಗೊತ್ತೇ ಇದೆ. ಇದರಲ್ಲಿ ರಾಗಿಣಿ ಅವರ ಪಾತ್ರ ಏನು? ಅವರ ಸುತ್ತ ಏನೆಲ್ಲ ಆಯಿತು? ಇತ್ಯಾದಿ ಕುರಿತೇ ಸಿನಿಮಾ ಮಾಡಲು ಹೊರಟಿದೆಯಂತೆ ಒಂದು ಚಿತ್ರ ತಂಡ.

Categories
ಸಿನಿ ಸುದ್ದಿ

ಬರ್ತ್‌ ಡೇ ಸಂಭ್ರಮದಲ್ಲಿ ನಟರಾಜ್‌, ನಿರ್ದೇಶನದ ಹೊಸ ಹುರುಪಿನಲ್ಲಿ ಸತ್ಯ ಪ್ರಕಾಶ್‌

ʼರಾಮಾ ರಾಮಾ ರೇʼ ಚಿತ್ರದ ಖ್ಯಾತಿಯ ನಟ ನಟರಾಜ್‌ ಇಂದು (ಫೆ.21) ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ʼಕಳ್ಳಬೆಟ್ಟದ ದರೋಡೆಕೋರರುʼ ಚಿತ್ರ ಬಂದು ನಂತರದ ಒಂದಷ್ಟು ಗ್ಯಾಪ್‌ ಬಳಿಕ ಈಗವರು ಸುದೀರ್‌ ಶಾನ್‌ ಬೋಗ್‌ ನಿರ್ದೇಶನದʼ ಮಾರೀಚʼ ಚಿತ್ರದಲ್ಲಿ ಸಿಸಿಬಿ ಪೊಲೀಸ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಒಂದರೆಡು ಚಿತ್ರಗಳ ಮಾತುಕತೆಯಲ್ಲಿ ಬ್ಯುಸಿಯಾಗಿರುವ ನಟರಾಜ್‌, ಈ ನಡುವೆಯೇ ಮಂಗಳವಾರ ತುಂಬಾ ಸರಳವಾಗಿಯೇ ಹುಟ್ಟು ಆಚರಿಸಿಕೊಂಡರು.

ಮತ್ತೊಂದೆಡೆ ನಟನೆಯ ಆಚೆ ʼರಾಮಾ ರಾಮಾ ರೇʼ ಚಿತ್ರದ ಖ್ಯಾತಿಯ ನಿರ್ದೇಶಕ ಸತ್ಯ ಪ್ರಕಾಶ್‌ ಜತೆಗೂಡಿ “ಸತ್ಯ ಪಿಕ್ಚರ್ಸ್‌ʼ ಸಂಸ್ಥೆ ಹುಟ್ಟು ಹಾಕಿರುವ ನಟರಾಜ್‌, ಮುಂದಿನ ದಿನಗಳಲ್ಲಿ ಸಿನಿಮಾ ನಿರ್ಮಾಣಕ್ಕೂ ಮುಂದಾಗಲು ರೆಡಿಯಾಗಿದ್ದಾರೆ. ಬೆಂಗಳೂರಿನ ಜಯನಗರದಲ್ಲಿರುವ ʼಸತ್ಯ ಪಿಕ್ಚರ್ಸ್‌ʼ ಕಚೇರಿಯಲ್ಲಿ ಮೊನ್ನೆಯಷ್ಟೇ ವಿಶೇಷ ಪೂಜೆ ಹಮ್ಮಿಕೊಂಡಿದ್ದರು. ಚಿತ್ರರಂಗ ಸಾಕಷ್ಟು ಗಣ್ಯರು ಆದಿನ ಅಲ್ಲಿಗೆ ಬಂದು ಸತ್ಯ ಪ್ರಕಾಶ್‌ ಅಂಡ್‌ ಟೀಮ್‌ ಗೆ ಶುಭಾಶಯ ಕೋರಿದರು. ಕಚೇರಿ ನವೀಕರಣದ ಹಿನ್ನೆಲೆಯಲ್ಲಿ ಸತ್ಯ ಪ್ರಕಾಶ್‌ ತಮ್ಮ ಕಚೇರಿಯಲ್ಲಿ ವಿಶೇಷ ಪೂಜೆ ಹಮ್ಮಿಕೊಂಡಿದ್ದರೂ, ಮುಂದಿನ ದಿನಗಳಲ್ಲಿ ಸಿನಿಮಾ ನಿರ್ಮಾಣ ಹಾಗೂ ನಿರ್ದೇಶನಕ್ಕಿಳಿಯುವುದರ ಭಾಗವಾಗಿಯೇ ಈ ಪೂಜೆ ನೆರವೇರಿದ್ದು ಸುಳ್ಳಲ್ಲ.

ಕಚೇರಿ ಪೂಜೆ ವೇಳೆ ಔಪಾಚಾರಿಕವಾಗಿ ಮಾತಿಗಿಳಿದ ನಿರ್ದೇಶಕ ಸತ್ಯ ಪ್ರಕಾಶ್‌, ಎಲ್ಲವೂ ಅಂದುಕೊಂಡಂತಾಗಿದ್ದರೆ ಈಗ ಹೊಸ ಪ್ರಾಜೆಕ್ಟ್‌ ಶುರುವಾಗಬೇಕಿತ್ತು. ಕೊರೋನಾ ಹಿನ್ನೆಲೆಯಲ್ಲಿ ಎಲ್ಲವೂ ಏರುಪೇರಾಯಿತು. ಈಗ ಒಂದಷ್ಟು ಸಿದ್ಧತೆ ನಡೆದಿದೆ. ಅವಕ್ಕೀಗ ಚಾಲನೆ ನೀಡಬೇಕಿದೆ. ಈ ನಿಟ್ಟಿನಲ್ಲಿಯೇ ಕಚೇರಿ ನವೀಕರಣ ಕೆಲಸ ನಡೆದಿದೆ. ಅದರ ಭಾಗವಾಗಿಯೇ ಪೂಜೆ ನಡೆದಿದೆ. ಇನ್ನೇನು ಹದಿನೈದಿಪ್ಪತ್ತು ದಿನಗಳಲ್ಲಿ ಹೊಸ ಪ್ರಾಜೆಕ್ಟ್‌ ಅನೌನ್ಸ್‌ ಆಗಲಿದೆ. ಸದ್ಯಕ್ಕೆ ನಾವೆಲ್ಲ ಅದೇ ಕೆಲಸದಲ್ಲೇ ಬ್ಯುಸಿ ಆಗಿದ್ದೇವೆ ಎಂದರು.

ರಾಮಾ ರಾಮಾ ರೇ ಚಿತ್ರದ ಮೂಲಕವೇ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಹಾಸ್ಯ ನಟ ಧರ್ಮಣ್ಣ ಕೂಡ ಸತ್ಯ ಟೀಮ್‌ ನಲ್ಲಿದ್ದಾರೆ. ಇದೀಗ ಯುವ ನಿರ್ದೇಶಕ ದೀಪಕ್‌ ಮಧುವನಹಳ್ಳಿ ಕೂಡ ಸಾಥ್‌ ನೀಡಿದ್ದಾರೆ. ಒಟ್ಟಾರೆ ಸಿನಿಮಾಸಕ್ತ ಯುವ ಉತ್ಸಾಹಿಗಳ ಒಂದು ತಂಡವೇ ಈಗ ನಿರ್ಮಾಣ ಮತ್ತು ನಿರ್ದೇಶನದತ್ತ ಸಕಲ ಸಿದ್ಧತೆಯೊಂದಿಗೆ ರೆಡಿಯಾಗುತ್ತಿರುವುದು ಒಳ್ಳೆಯ ವಿಚಾರವೆ ಹೌದು. ಆಲ್‌ ದಿ ಬೆಸ್ಟ್‌ ಸತ್ಯ ಅಂಡ್‌ ಟೀಮ್.

Categories
ಸಿನಿ ಸುದ್ದಿ

ಶಾರುಖ್‌ ಜೋಡಿಯಾಗಿ ತಾಪ್ಸಿ! ಇದು ‘ಮುನ್ನಾಭಾಯ್‌’ ಖ್ಯಾತಿಯ ಹಿರಾನಿ ಸಿನಿಮಾ!!


2018ರಲ್ಲಿ ‘ಜೀರೋ’ ಚಿತ್ರದ ನಂತರ ಶಾರುಖ್‌ ಖಾನ್‌ ಅವರ ಸಿನಿಮಾ ಬಿಡುಗಡೆಯಾಗಿಲ್ಲ. ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ವಿಫಲವಾಯ್ತು. ಖಾನ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಹೊಸ ಚಿತ್ರಕ್ಕಾಗಿ ಎದುರು ನೋಡುತ್ತಿದ್ದಾರೆ. ಸದ್ಯ ಶಾರುಖ್‌ರ ‘ಪಠಾಣ್‌’ ಸಿನಿಮಾ ಚಿತ್ರೀಕರಣದಲ್ಲಿದೆ. ಈ ಮಧ್ಯೆ ‘ಮುನ್ನಾಭಾಯ್ ಎಂಬಿಬಿಎಸ್‌’ ಸಿನಿಮಾ ಖ್ಯಾತಿಯ ರಾಜಕುಮಾರ್ ಹಿರಾನಿ ಅವರು ಶಾರುಖ್‌ಗೆ ಚಿತ್ರಕಥೆ ಹೆಣೆಯುತ್ತಿದ್ದಾರೆ. ಈ ಚಿತ್ರದಲ್ಲಿ ಖಾನ್‌ಗೆ ನಾಯಕಿಯಾಗಿ ತಾಪ್ಸಿ ನಟಿಸುವುದು ಖಾತ್ರಿಯಾಗಿದೆ.

ಹಿರಾನಿ ನಿರ್ದೇಶನದ ಈ ಚಿತ್ರ ಶಾರುಖ್‌ ಖಾನ್‌ ಜೊತೆ ತಾಪ್ಸಿಗೆ ಮೊದಲ ಪ್ರಯೋಗ. ಆದರೆ ಈ ಹಿಂದೆ ಖಾನ್ ನಿರ್ಮಾಣದ ‘ಬದ್ಲಾ’ ಚಿತ್ರದಲ್ಲಿ ತಾಪ್ಸಿ ನಟಿಸಿದ್ದರು. ಅಮಿತಾಭ್ ಬಚ್ಚನ್‌ ಮುಖ್ಯಭೂಮಿಕೆಯಲ್ಲಿದ್ದ ಈ ಕ್ರೈಂ-ಥ್ರಿಲ್ಲರ್ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಈಗ ತಾಪ್ಸಿ ಅವರು ಶಾರುಖ್‌ಗೆ ಜೋಡಿಯಾಗುವ ಅವಕಾಶ ಪಡೆದಿದ್ದಾರೆ. ಹಿರಾನಿ ಹೊಸ ಸಿನಿಮಾ ಒಂದು ಸೋಷಿಯಲ್‌ – ಡ್ರಾಮಾ ಎನ್ನಲಾಗಿದೆ. ಪಂಜಾಬ್‌ನಿಂದ ಕೆನಡಾಗೆ ವಲಸೆ ಹೋಗುವ ವ್ಯಕ್ತಿಯಾಗಿ ಶಾರುಖ್‌ ಇಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನು ಶಾರುಖ್‌ ನಟನೆಯ ‘ಪಠಾಣ್‌’ ಚಿತ್ರದ ಬಗ್ಗೆ ಅವರ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಹೊಂದಿದ್ದಾರೆ. ಚಿತ್ರದಲ್ಲಿನ ಶಾರುಖ್ ಗೆಟ್‌ಅಪ್ ಹೊರಬಿದ್ದಿದ್ದು, ಅಭಿಮಾನಿಗಳು ಅವರ ಹೇರ್‌ಸ್ಟೈಲ್ ಕಾಪಿ ಮಾಡತೊಡಗಿದ್ದಾರೆ. ಮತ್ತೊಂದೆಡೆ ನಟಿ ತಾಪ್ಸಿ ಮೊನ್ನೆ ‘ಲೂಪ್‌ ಲಪೇಟಾ’ ಸಿನಿಮಾ ಪೂರ್ಣಗೊಳಿಸಿದ್ದು, ಸದ್ಯ ‘ದೊ ಬಾರಾ’ ಚಿತ್ರೀಕರಣದಲ್ಲಿದ್ದಾರೆ. ಇದಾದ ನಂತರ ‘ರಶ್ಮಿ ರಾಕೆಟ್‌’ನಲ್ಲಿ ನಟಿಸಲಿದ್ದು, ಅದು ಪೂರ್ಣಗೊಂಡ ನಂತರ ಶಾರುಖ್‌ ಸಿನಿಮಾಗೆ ಬರುತ್ತಾರೆ. ವಿಶಿಷ್ಠ ಸಿನಿಮಾಗಳ ಮೂಲಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿರುವ ತಾಪ್ಸಿ, ಶಾರುಖ್ ಜೋಡಿಯಾಗಿ ಹೇಗೆ ಕಾಣಿಸಿಕೊಳ್ಳಬಹುದು ಎಂದು ಅಭಿಮಾನಿಗಳು ಕುತೂಹಲದಿಂದ ಎದುರು ನೋಡುತ್ತಿದ್ದಾರೆ.

error: Content is protected !!