Categories
ಸಿನಿ ಸುದ್ದಿ

ಹೊಂಬಾಳೆಗೆ ಘಟ್ಟ ಇಳಿದು ಪಟ್ಟ ಏರುವ ಆಸೆ- ದಂತಕಥೆ ಸೃಷ್ಟಿಸಲಿದ್ದಾರಾ ಈ ಇಬ್ಬರು ಶೆಟ್ರು ?

ಚಿನ್ನದ ಸಾಮ್ರಾಜ್ಯಕ್ಕೆ ಒಡೆಯರಾದವರಿಗೆ ಸಮುದ್ರಕ್ಕೆ ಅಧಿಪತಿಯಾಗುವಾಸೆ !

ಅದೃಷ್ಟ ಅಂದ್ರೆ ಇದೆ ಅಲ್ವಾ ? ಹೌದು, ಅದೊಂದು ಬೆಳವಣಿಗೆ ಮಾತ್ರ ಕನ್ನಡ ಚಿತ್ರ ರಂಗದಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿದೆ. ಕೊರೋನಾ ಅಂತ ಇಡೀ ಚಿತ್ರೋದ್ಯಮವೇ ಸೈಲೆಂಟ್‌ ಆಗಿ ಸೈಡಿಗೆ ಕುಳಿತಿರುವಾಗ ಕನ್ನಡದ ಆ ಸ್ಟಾರ್‌ ಜೋಡಿಗೆ ಬಿಗ್‌ ಆಫರ್‌ ಒಲಿದು ಬಂದಿದೆ. ಅವರಿಬ್ಬರು ಆಕ್ಟರ್‌ ಅಷ್ಟೇ ಅಲ್ಲ, ಡೈರೆಕ್ಟರ್‌ ಕೂಡ ಹೌದು. ಅವರು ಇದುವರೆಗೂ ಆವೆರೆಡು ಅವತಾರ ತೋರಿಸಿದ್ದು ಅವರದೇ ಬ್ಯಾನರ್‌ ಸಿನಿಮಾಗಳ ಮೂಲಕ.

ಫಾರ್‌ ಏ ಚೇಂಜ್‌ ಈಗವರು ಕನ್ನಡದ ಪ್ರತಿಷ್ಠಿತ ಪ್ರೊಡಕ್ಷನ್‌ ಹೌಸ್‌ ಎಂದೇ ಖ್ಯಾತಿ ಪಡೆದಿರುವ ಹೊಂಬಾಳೆ ಫಿಲಂಸ್‌ ನಲ್ಲಿ ನಟನೆಯ ಜತೆಗೆ ನಿರ್ದೇಶನಕ್ಕೂ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಇದು ಅಷ್ಟು ಸುಲಭದ ಮಾತಲ್ಲ. ಸ್ಟಾರ್‌ ಡೈರೆಕ್ಟರ್‌ ಗಳೇ ಇವತ್ತು ಅವಕಾಶ ಎದುರು ನೋಡು ತ್ತಾ ಕುಳಿತಿರುವಾಗ, ಈ ಸ್ಟಾರ್‌ ಜೋಡಿಗೆ ಮಾತ್ರ ಎರಡು ಅವತಾರಕ್ಕೆ ಅವಕಾಶ ಸಿಕ್ಕಿದೆ. ಇದು ಸಾಧ್ಯವಾಗಿದ್ದುದಾದ್ರೂ ಹೇಗೆ ? ಅಷ್ಟು ದೊಡ್ಡ ಪ್ರೊಡಕ್ಷನ್‌ ಹೌಸ್‌ಗೆ ಆ ಸ್ಟಾರ್‌ ಜೋಡಿ ಮಾಡಿದ ಮೋಡಿಯಾದ್ರು ಎಂಥಹದು ?

ಅಂದ ಹಾಗೆ, ನಾವಿಲ್ಲಿ ಹೇಳಹೊರಟಿದ್ದು ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ ಹಾಗೂ ಡಿಟೆಕ್ಟಿವ್‌ ದಿವಾಕರ್‌ ಖ್ಯಾತಿಯ ರಿಷಬ್‌ ಶೆಟ್ಟಿ ಅವರ ಬಗ್ಗೆ. ಇವರಿಬ್ಬರು ಕರವಾಳಿ ಮೂಲದವರು ಅನ್ನೋದು ಮಾತ್ರವಲ್ಲ ಅತ್ಯಾಪ್ತ ಸ್ನೇಹಿತರು ಹೌದು. ‘ಕಿರಿಕ್‌ ಪಾರ್ಟಿ’ ಮೂಲಕ ಕನ್ನಡದಲ್ಲಿ ದೊಡ್ಡ ಹವಾ ಸೃಷ್ಟಿಸಿದ ಜೋಡಿ. ಸ್ಪೆಷಲ್‌ ಅಂದ್ರೆ, ಅಲ್ಲಿಂದಲೇ ಇವರಿಬ್ಬರಿಗೂ ದೊಡ್ಡ ಮಟ್ಟದ ನೇಮ್ ಅಂಡ್ ಫೇಮ್‌ ಎರಡು ಸಿಕ್ಕವು ಅನ್ನೋದೆಲ್ಲ ಹಳೇ ಮಾತೇ. ʼರಿಕ್ಕಿʼ ಮೂಲಕ ರಿಷಬ್ ಶೆಟ್ಟಿ ಡೈರೆಕ್ಟರ್ ಹ್ಯಾಟ್ ತೊಟ್ಟರೆ, ವೃತ್ತಿಯಲ್ಲಿ ಟೆಕ್ಕಿಯಾಗಿದ್ದ ರಕ್ಷಿತ್ ಶೆಟ್ಟಿ ‘ ಉಳಿದವರು ಕಂಡಂತೆ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು ಮಾತ್ರವಲ್ಲ, ಅಲ್ಲಿ ಅವರೇ ನಾಯಕರು ಆಗಿದ್ದರು. ಇನ್ನು ರಿಷಬ್ ಶೆಟ್ಟಿ ಡೈರೆಕ್ಟರ್ ಆಗುವ ಮುನ್ನ ʼಅಟ್ಟಹಾಸʼ ಹಾಗೂ ʼಲೂಸಿಯಾʼ ಚಿತ್ರಗಳಿಗೆ ಬಣ್ಣ ಹಚ್ಚಿ ನಟರಾದವರು. ಅಲ್ಲಿಂದ ಶುರುವಾದ ಅವರಿಬ್ಬರ ಜರ್ನಿಯಲ್ಲೀಗ ಬಿಗ್ ಟರ್ನಿಂಗ್ ಪಾಯಿಂಟ್.

ಯಾಕಂದ್ರೆ, ಅವರೀಗ ಆ್ಯಕ್ಟರ್ ಜತೆಗೆ ಡೈರೆಕ್ಟರ್ ಅವತಾರೊಂದಿಗೆ ತೆರೆ ಮೇಲೆ ಬರುತ್ರಿರುವುದು ‘ಕೆಜಿಎಫ್ ‘ಖ್ಯಾತಿಯ ಹೊಂಬಾಳೆ ಫಿಲಂಸ್ ನಿರ್ಮಾಣದ ಚಿತ್ರಗಳ ಮೂಲಕ. ಹೊಂಬಾಳೆ ಫಿಲಂಸ್ ಅಂದ್ರೆ ಇವತ್ತು ಭಾರತೀಯ ಚಿತ್ರರಂಗದಲ್ಲಿ ಮನೆ ಮಾತಾದ ಪ್ರೊಡಕ್ಷನ್‌ ಹೌಸ್‌. ಹಾಗೊಂದು ಹವಾ ಕ್ರಿಯೇಟ್ ಮಾಡಿದ್ದು ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ಚಿತ್ರ ‘ಕೆಜಿಎಫ‍್’. ಅದೇ ಕಾರಣಕ್ಕೆ ಇವತ್ತು ಫ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಫ್ಯಾನ್ಸ್ ‘ಕೆಜಿಎಫ್ 2’ ಗೆ ಕಾಯುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತಾಗಿದ್ದರೆ ಈ ಚಿತ್ರ ಇಷ್ಟರಲ್ಲಿಯೇ ಬಂದು, ಮತ್ತೊಂದು ಚರಿತ್ರೆ ಸೃಷ್ಟಿಸುತ್ತೋ ಏನೋ. ಆದರೆ ಕೊರೋನಾ, ಲಾಕ್ ಡೌನ್ ಅಂತ ಎಲ್ಲವೂ ಏರುಪೇರು ಆಗಿದೆ. ಈ ವರ್ಷದ ಅಂತ್ಯಕ್ಕೆ ಕೆಜಿಎಫ್‌ ಬಂದರೂ ಬರಬಹುದು. ಅದರಾಚೆ ಹೊಂಬಾಳೆ ಬಗ್ಗೆ ಕುತೂಹಲ ಇರೋದು, ಕೊರೋನಾ ಕಾಲದಲ್ಲೂ ಅದು ಬ್ಯಾಕ್‌ ಟು ಬ್ಯಾಕ್‌ ಸಿನಿಮಾ ಅನೌನ್ಸ್‌ ಮಾಡ್ತಿರೋ ಸಾಹಸಕ್ಕೆ.

ಕೊರೋನಾ ಮೊದಲ ಅಲೆ ಕಡಿಮೆ ಆಗಿ ಲಾಕ್‌ ಡೌನ್‌ ತೆರವಾದ ನಂತರ ಪ್ರಭಾಸ್‌ ಹಾಗೂ ಪ್ರಶಾಂತ್‌ ನೀಲ್‌ ಕಾಂಬಿನೇಷನ್‌ ಮೂಲಕ ʼಸಲಾರ್‌ʼ ಅನೌನ್ಸ್‌ ಅಯಿತು. ಸಲಾರ್‌ ಅದ್ದೂರಿ ವೆಚ್ಚದ ಸಿನಿಮಾ. ಆ ಚಿತ್ರಕ್ಕೆ ಹೊಂಬಾಳೆ ಫಿಲಂಸ್‌ ಖರ್ಚು ಮಾಡ್ತಿರೋದು ಹತ್ತಿಪ್ಪತ್ತು ಕೋಟಿ ಅಲ್ಲ, ಕನಿಷ್ಟ ಮೂನ್ನೂರು ಕೋಟಿ ಅಂತೆ. ಆದಾದ ನಂತರ ಮತ್ತೆ ಪವರ್‌ ಸ್ಟಾರ್‌ ಕಾಂಬಿನೇಷನ್‌ ನಲ್ಲಿ ʼದ್ವಿತ್ವʼ ಲಾಂಚ್‌ ಆಗಿದೆ. ಆದಾದ ಮೇಲೆ ರಕ್ಷಿತ್‌ ಶೆಟ್ಟಿ ನಟನೆ ಹಾಗೂ ನಿರ್ದೇಶನದ ʼರಿಚರ್ಡ್‌ ಆಂಟನಿʼ ಚಿತ್ರ. ಅದರ ಬೆನ್ನಲೇ ಈಗ ರಿಷಬ್‌ ಶೆಟ್ಟಿ ನಟನೆ ಹಾಗೂ ನಿರ್ದೇಶನದ ʼಕಾಂತಾರ ʼಚಿತ್ರ. ಡಿಫೆರೆಂಟ್ ಕಾನ್ಸೆಪ್ಟ್ ‌ಮೂಲಕ ಬಂದಿರುವ ಇದರ ಪೋಸ್ಟರ್‌ ಈಗ ಸಿಕ್ಕಾಪಟ್ಟೆ ಸುದ್ದಿಯಲ್ಲಿದೆ. ಅದಕ್ಕೆ ಕಾರಣವೂ ಇದೆ. ಶಿವರಾಜ್‌ ಕುಮಾರ್‌ ಅಭಿನಯ ಹಾಗೂ ಚಂದ್ರಶೇಖರ್‌ ಬಂಡಿಯಪ್ಪ ನಿರ್ದೇಶನ ಒಂದು ಸಿನಿಮಾದ ಪೋಸ್ಟರ್‌ ಇದೆ ರೀತಿಯಲ್ಲಿತ್ತು. ಹಾಗಾಗಿ ಅದೇ ಸಿನಿಮಾ ಕಥೆ, ರಿಷಬ್‌ ಶೆಟ್ಟಿ ಅವರ ಕಾಂತಾರ ಚಿತ್ರದಲ್ಲೂ ಇದೆಯಾ ಅನ್ನೋದು ಫ್ಯಾನ್ಸ್‌ ಗೆ ಇರುವ ಡೌಟು.

ಅದೇನೆ ಇರಲಿ, ಬಿಡಿ, ರಿಯಾಲಿಟಿ ಮುಂದೆ ಗೊತ್ತಾಗುತ್ತೆ. ಅದು ಬಿಟ್ಟರೆ ನಾವಿಲ್ಲಿ ಪಾಯಿಂಟ್‌ ಔಟ್‌ ಮಾಡ್ತಿರೋದು, ಹೊಂಬಾಳೆಯಂತಹ ದೊಡ್ಡ ಬ್ಯಾನರ್‌ನಲ್ಲಿ ಇಬ್ಬರು ಶೆಟ್ರು ನಾಯಕರಾಗುವ ಜತೆಗೆ ಡೈರೆಕ್ಟರ್‌ ಅವಕಾಶವನ್ನು ಹೇಗೆ ಗಿಟ್ಟಿಸಿಕೊಂಡ್ರು ಅಂತ. ಇದು ನಮದ್ದಲ್ಲ, ಇಡೀ ಇಂಡಸ್ಟ್ರಿನಲ್ಲಿರೋ ದೊಡ್ಡ ಕುತೂಹಲವೂ ಹೌದು. ಯಾಕಂದ್ರೆ ಹೊಂಬಾಳೆ ಫಿಲಂಸ್‌ನಲ್ಲಿ ಬಂದ ಅಷ್ಟು ಸಿನಿಮಾಗಳಲ್ಲಿ ಇದುವರೆಗೂ ನಾಯಕರೇ ಬೇರೆ, ನಿರ್ದೇಶಕರೇ ಬೇರೆ. ಮೊದಲ‌ ಸಿನಿಮಾದಿಂದಲೂ ಬರೀ ಸ್ಟಾರ್ ನಟರನ್ನೇ ಪೋಕಸ್ ಮಾಡಿದೆ. ಬಜಾರ್ ನಲ್ಲಿ ಓಡುವ ಕುದುರೆಗಷ್ಟೇ ದುಡ್ಡು ಕಟ್ಟಿದೆ. ಫಾರ್‌ ಏ ಚೇಂಜ್‌ ಈಗ ರಕ್ಷಿತ್‌ ಶೆಟ್ಟಿ ಹಾಗೂ ರಿಷಬ್‌ ಶೆಟ್ಟಿ ಅವರಿಗೆ ನಟನೆಯ ಜತೆಗೆ ನಿರ್ದೇಶನಕ್ಕೂ ಅವಕಾಶ ಕೊಟ್ಟಿದೆ. ಆ ಮೂಲಕ ಹೊಂಬಾಳೆ ತೇರು ಈಗ ಕರಾವಳಿ ಕಡೆ ಮುಖ ಮಾಡಿದೆ. ಘಟ್ಟ ಇಳಿದು, ಪಟ್ಟ ಏರುವ ಆಸೆ ಹೊತ್ತಿದೆ. ಮುಗ್ಗರಿಸಿದರೆ ಮುಂದಿರೋದು ಸಮುದ್ರ ಎನ್ನುವ ಎಚ್ಚರವೂ ಅದಕ್ಕಿಲ್ಲ ಎನ್ನುವಂತೆಯೂ ಇಲ್ಲ. ಹೇಗೋ ಏನೋ ಎನ್ನವುದಕ್ಕಿಂತ ಇಬ್ಬರು ಶೆಟ್ರು ಮೇಲೂ ಆಗಾಧವಾದ ವಿಶ್ವಾಸ ಹೊತ್ತಿದೆ. ಚಿನ್ನದ ಸಾಮ್ರಾಜ್ಯಕ್ಕೆ ಒಡೆಯರಾದವರಿಗೆ ಸಮುದ್ರಕ್ಕೆ ಅಧಿಪತಿಯಾಗುವಾಸೆ ಇಟ್ಟುಕೊಂಡಿದೆ. ಅದಕ್ಕೆ ಕಾರಣ ಅವರಿಬ್ಬರ ಹಿನ್ನೆಲೆ.

ಕರಾವಳಿಯ ಮೂಲದ ಆ ಇಬ್ಬರು ಶೆಟ್ರು ಬುದ್ದಿವಂತರು. ಪ್ರತಿಭಾವಂ ತರು ಕೂಡ. ಸಿನಿ ದುನಿಯಾದಲ್ಲಿ ಆಕ್ಟರ್‌ ಆಗಿ ಗೆದ್ದ ಹಾಗಿಯೇ ಡೈರೆಕ್ಟ ರ್‌ ಆಗಿಯೂ ಸಕ್ಸಸ್‌ ಕಂಡಿದ್ದಾರೆ. ಇವರಿಬ್ಬರು ತುಂಬಾ ಡಿಫೆರೆಂಟ್‌ ಅಂತ ಅನ್ನೋದಿಕ್ಕೆ ಇಷ್ಟು ಸಾಕು. ಹೊಂಬಾಳೆ ಫಿಲಂಸ್‌ ಲೆಕ್ಕಚಾರದ ಹಿಂದೆಯೂ ಇದಿದ್ದು ಕೂಡ ಅದೇ ನಿರೀಕ್ಷೆ. ಯಾಕಂದ್ರೆ, ದೊಡ್ಡ ಸಂಸ್ಥೆ ಯಾವುತ್ತೂ ರಿಸ್ಕ್ ತೆಗೆದುಕೊಳ್ಳೋದಕ್ಕೆ ರೆಡಿ ಇರೋದಿಲ್ಲ.‌ ನಿರ್ದೇಶಕ ಹಾಗೂ ನಟ ಇಬ್ಬರು ಪವರ್ ಫುಲ್ ಅಂದರೆ ಮಾತ್ರ ಕಾಸು ಬಿಚ್ಚುತ್ತದೆ. ಅದರಲ್ಲಿ ಒಬ್ಬರು ಕೊಂಚ ಡಲ್‌ ಎನಿಸಿದರೂ ಖಜಾನೆ ಬಾಗಿಲು ಓಪನ್ ಮಾಡಲ್ಲ. ಇಷ್ಟಾಗಿಯೂ ರಕ್ಷಿತ್‌ ಶೆಟ್ಟಿ ಅವರಿಗೊಂದು ಸಿನಿಮಾ, ಅವರ ಸ್ನೇಹಿತ ರಿಷಬ್‌ ಶೆಟ್ಟಿ ಅವರಿಗೊಂದು ಸಿನಿಮಾ ವನ್ನು ಈ ಕೊರೋನಾ ನಡುವೆಯೂ ಹೊಂಬಾಳೆ ಫಿಲಂಸ್‌ ಅನೌನ್ಸ್‌ ಮಾಡುತ್ತದೆ ಅಂದ್ರೆ, ನಿರ್ದೇಶನದ ಜೊತೆಗೆ ಅವರಲ್ಲೊಬ್ಬ ಅಭಿನಯ ಕಲಾವಿದ ಇದ್ದಾನೆ ಅವನಿಗಾಗಲೇ ಜನರಿಂದ ವಿಜಯದ ಹಾರ ಹಾಕಿಸಿಕೊಂಡಿದ್ದಾನೆ‌ ಎನ್ನುವ ಕಾರಣಕ್ಕೆ. ಸದ್ಯಕ್ಕೆ ಇಬ್ಬರೂ ಈಗ ಕರಾವಳಿಯ ಕಥೆಗಳನ್ನೇ ಮುಂದಿಟ್ಟುಕೊಂಡೇ ಸಿನಿಮಾ ಮಾಡುವ ಸಿದ್ದತೆ ನಡೆಸಿದ್ದಾರೆ. ಎರಡು ಸಿನಿಮಾಗಳ ಮೊದಲ ಪೋಸ್ಟರ್‌ ಗಳು ಈಗಾಗಲೇ ದೊಡ್ಡ ಹವಾ ಎಬ್ಬಿಸಿವೆ. ಆ ಮೂಲಕ ಹೊಂಬಾಳೆ ಬ್ಯಾನರ್‌ ಮೂಲಕ ಮುಂದೆ ಪ್ಯಾನ್‌ ಇಂಡಿಯಾ ಲೆವೆನ್‌ ನಲ್ಲಿ ದಂತ ಕಥೆ ಸೃಷ್ಟಿಸುತ್ತಾರೆ ಎನ್ನುವುದು ದೊಡ್ಡ ಕುತೂಹಲ ಹುಟ್ಟಿಸಿದೆ. ಆ ಇಬ್ಬರು ಶೆಟ್ರಿಗೆ ಸಿನಿಲಹರಿ ಕಡೆಯಿಂದ ಆಲ್‌ ದಿ ಬೆಸ್ಟ್.

Categories
ಸಿನಿ ಸುದ್ದಿ

ಗೋಲ್ಡ್‌ ಹಿಡಿದ ದಿಗಂತ್‌ !‌ ಹಿನ್ನೆಲೆ ಸಂಗೀತದಲ್ಲಿ ಮಾರಿಗೋಲ್ಡ್ ನಿರತ; ಇಷ್ಟರಲ್ಲೇ ತೆರೆಗೆ


 ಆರಂಭದಿಂದಲೂ  ತನ್ನ ಶೀರ್ಷಿಕೆಯ  ಮೂಲಕವೇ ನಿರೀಕ್ಷೆ ಹುಟ್ಟಿಸಿರುವ‍, ತೀರ್ಥಳ್ಳಿ ಹುಡುಗ  ದಿಗಂತ್‌ ಅಭಿನಯದ  ಚಿತ್ರ ಮಾರಿಗೋಲ್ಡ್. ಈಗಾಗಲೇ ಚಿತ್ರದ ಪೋಸ್ಟ್‌ ‌ಪ್ರೊಡಕ್ಷನ್ ಕೆಲಸಗಳು  ಪ್ರಗತಿಯಲ್ಲಿದ್ದು, ಚಿತ್ರದ ಡಬ್ಬಿಂಗ್ ಕಾರ್ಯ ಮುಗಿದು, ಹಿನ್ನೆಲೆ ಸಂಗೀತದ ಕೆಲಸ ಕೊನೇ ಹಂತದಲ್ಲಿದೆ.  ಇಷ್ಟರಲ್ಲೇ   ಸೆನ್ಸಾರ್ ಅಂಗಳಕ್ಕೆ  ಹೋಗಲು ಸಿದ್ದವಾಗಿರುವ ‘ಮಾರಿಗೋಲ್ಡ್’ ಚಿತ್ರ. ಸದ್ಯದಲ್ಲೇ  ಪ್ರೇಕ್ಷಕರ ಮುಂದೆ ಬರಲಿದೆ.  ಪಕ್ಕಾ ಕ್ರೈಮ್‌ ಥ್ರಿಲ್ಲರ್‌ ಕಥಾನಕ‌ ಹೊಂದಿರುವ  ಈ ಚಿತ್ರವನ್ನು ರಾಘವೇಂದ್ರ ಎಂ.ನಾಯಕ್‌  ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.  ಇದು ರಾಘವೇಂದ್ರ ನಾಯಕ್  ಅವರಿಗೆ  ಮೊದಲ ನಿರ್ದೇಶನದ ಚಿತ್ರ.  


ಈಗಾಗಲೇ ವಿಭಿನ್ನ ಗೆಟಪ್ನ  ದಿಗಂತ್ ಅವರ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು,  ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಅಲ್ಲದೆ ಇದೇ ಮೊದಲ ಬಾರಿಗೆ ದಿಗಂತ್ ಹೊಸ ರೀತಿಯ  ಪಾತ್ರದ ಮೂಲಕ  ಪ್ರೇಕ್ಷಕರಿಗೆ  ಮೋಡಿ ಮಾಡಲಿದ್ದಾರೆ.
“ಮಾರಿಗೋಲ್ಡ್‌” ಅಂದಾಕ್ಷಣ, ಅದೊಂದು ಅಂಡರ್‌ವರ್ಲ್ಡ್‌ ಸಿನಿಮಾ ಇರಬಹುದಾ ಎಂಬ ಪ್ರಶ್ನೆ ಎದುರಾಗುತ್ತದೆ. ಆದರೆ, ಅದು ಅಂಡರ್‌ವರ್ಲ್ಡ್‌ ಸಿನಿಮಾನಾ ಅಥವಾ ರೌಡಿಸಂ ಕುರಿತಾದ ಕಥೆಯೇ ಎಂಬುದಕ್ಕೆ ಚಿತ್ರ  ರಿಲೀಸಾಗೋವರೆಗೆ  ಕಾಯಬೇಕು.


  ಆರ್.ವಿ.ಕ್ರಿಯೇಷನ್ಸ್ ಮೂಲಕ ರಘುವರ್ಧನ್ ಫಿಲ್ಮ್ಸ್ ಬ್ಯಾನರ್ ನಲ್ಲಿ  ರಘುವರ್ಧನ್‌ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ರಘುವರ್ಧನ್‌ ಅವರು ಮೂಲತಃ ನಿರ್ದೇಶಕರಾಗಿದ್ದರೂ,  ಯುವ ನಿರ್ದೇಶಕ ರಾಘವೇಂದ್ರ ಅವರಿಗೆ  ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಅದಕ್ಕೆ ಕಾರಣ, ರಾಘವೇಂದ್ರ ಎಂ.ನಾಯಕ್‌ ಅವರು ಮಾಡಿಕೊಂಡಿದ್ದ ಕಥೆ. ಚೆನ್ನಾಗಿದ್ದರಿಂದ,  ಚಿತ್ರವನ್ನು ಸಹ ಅವರೇ ನಿರ್ದೇಶಿಸಲಿ ಎಂದು ರಘುವರ್ಧನ್‌ ಅವಕಾಶ ನೀಡಿದ್ದಾರೆ. ಅಲ್ಲದೆ  ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸಿದ್ದಾರೆ.  ಈ ಹಿಂದೆ ತಿಮ್ಮರಾಯ, ಬದ್ರಿ, ಗುಣವಂತ, ಮಿಸ್ಟರ್ ಎಲ್.ಎಲ್.ಬಿ.  ಮೊದಲಾದ ಚಿತ್ರಗಳನ್ನು  ರಘುವರ್ಧನ್ ನಿರ್ದೇಶಿಸಿದ್ದರು


ಈ ಚಿತ್ರಕ್ಕೆ ವೀರ್ ಸಮರ್ಥ್ ಅವರ  ಸಂಗೀತವಿದ್ದು, ಯೋಗರಾಜ್ ಭಟ್, ಕವಿರಾಜ್ ಮತ್ತು ವಿಜಯ್ ಭರಮಸಾಗರ ಅವರು ಸಾಹಿತ್ಯ ಬರೆದಿದ್ದಾರೆ. ಕೆ.ಎಸ್.ಚಂದ್ರಶೇಖರ್ ಕ್ಯಾಮೆರಾ ಹಿಡಿದರೆ, ಕೆ.ಎಂ.ಪ್ರಕಾಶ್ ಸಂಕಲನವಿದೆ. ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ಅರ್ಜುನ್ ರಾಜ್ ಸಾಹಸ, ಕಲೈ ಅವರ ನೃತ್ಯ. ನಿರ್ದೇಶನವಿದೆ.

ದಿಗಂತ್‌ ಅವರಿಗೆ ಇದೊಂದು ಹೊಸಬಗೆಯ ಚಿತ್ರವಂತೆ. ಅದರಲ್ಲೂ ದಿಗಂತ್‌ ಮೊದಲ ಬಾರಿಗೆ ಈ ರೀತಿಯ ಪಾತ್ರ ನಿರ್ವಹಿಸಿದ್ದಾರೆ, ಬೆಂಗಳೂರು, ಸಕಲೇಶಪುರದ  ಸುತ್ತಮುತ್ತಲ ತಾಣಗಳಲ್ಲಿ ಚಿತ್ರೀಕರಣಗೊಂಡಿರುವ  ಈ ಚಿತ್ರದಲ್ಲಿ ಸಂಗೀತಾ ಶೃಂಗೇರಿ  ನಾಯಕಿಯಾಗಿದ್ದಾರೆ.  ಉಳಿದಂತೆ ಸಂಪತ್‌ಕುಮಾರ್‌, ಕಾಕ್ರೋಚ್‌ ಸುಧಿ, ಯಶ್‌ಶೆಟ್ಟಿ, ವಜ್ರಾಂಗ್ ಶೆಟ್ಟಿ,  ಬಾಲ ರಾಜ್ವಾಡಿ, ಗಣೇಶ್‌ರಾವ್, ಭಾಸ್ಕರ್ ಪಾಂಡವಪುರ,  ಮನಮೋಹನ್  ರೈ, ಮಹಾಂತೇಶ್ ಹೀರೆಮಠ, ಮಿಮಿಕ್ರಿ ಗೋಪಿ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.

Categories
ಸಿನಿ ಸುದ್ದಿ

ಹೊಸ ಸಿನಿಮಾಗೆ ಚಿತ್ರಕಥೆ ಮುಗಿಸಿದ ಖುಷಿಯಲ್ಲಿ ಜೋಗಿ ಪ್ರೇಮ್‌ ; ಈ ಬಾರಿ ಪಕ್ಕಾ ಆಕ್ಷನ್‌ ಸಿನಿಮಾಗೆ ಕೈ ಹಾಕ್ತಾರಾ ಬಾಸು!

ನಿರ್ದೇಶಕ ಪ್ರೇಮ್‌ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಅರೇ, ಮತ್ಯಾವ ಸ್ಟಾರ್‌ ನಟ ಅವರ ವಿರುದ್ಧ ಮಾತಾಡಿದ್ರು ಅನ್ನೋ ಪ್ರಶ್ನೆ ಈಗ ಸಹಜ. ಅದಕ್ಕೆ ಕಾರಣ, ಇತ್ತೀಚೆಗಷ್ಟೇ ಪ್ರೇಮ್‌ ಅವರನ್ನು ಕುರಿತಂತೆ ನಟ ದರ್ಶನ್‌ ಅವರು ಅವರೇನು ದೊಡ್ಡ ಪುಡಂಗಾನ ಅಂದಿದ್ದರು. ಆ ಮಾತು ಜೋರು ಸುದ್ದಿ ಮಾಡಿತ್ತು. ಅಷ್ಟೇ ಅಲ್ಲ, ಅತ್ತ ಪ್ರೇಮ್‌ ಅವರನ್ನೂ ಕೆರಳಿಸುವಂತೆ ಮಾಡಿದ್ದು ಸುಳ್ಳಲ್ಲ. ಪ್ರೇಮ್‌ ಕೂಡ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ದರ್ಶನ್‌ ವಿರುದ್ಧ ಮಾತಾಡಿದ್ದರು. ಆ ಮಧ್ಯೆ ರಕ್ಷಿತಾ ಪ್ರೇಮ್‌ ಎಂಟ್ರಿಯಾಗಿ, ದರ್ಶನ್‌ ಜೊತೆಗಿದ್ದ ಒಂದು ಫೋಟೋ ಹಾಕಿಕೊಂಡು ಒಂದು ಸ್ಟೇಟಸ್‌ ಹಾಕಿಕೊಂಡಿದ್ದರು. ಅಲ್ಲಿಗೆ ಎಲ್ಲವೂ ಸುಖಾಂತ್ಯಗೊಂಡಿತ್ತು. ಈಗ ಪ್ರೇಮ್‌ ಅವರ ಹೊಸ ಸುದ್ದಿ ಅಂದರೆ, ಅವರೊಂದು ಹೊಸ ಸಿನಿಮಾ ಕಥೆಯನ್ನು ಮುಗಿಸಿದ್ದಾರೆ.

ಹೌದು, ಹೀಗಂತ ಸ್ವತಃ ಪ್ರೇಮ್‌ ಅವರೇ ಸೋಶಿಯಲ್‌ ಮೀಡಿಯಾದಲ್ಲೊಂದು ವಿಡಿಯೋ ಹಂಚಿಕೊಂಡು ಹೇಳಿಕೊಂಡಿದ್ದಾರೆ. ಸದ್ಯ ಪ್ರೇಮ್‌ ರಕ್ಷಿತಾ ಅವರ ಸಹೋದರ ರಾಣ ಅವರಿಗೆ “ಏಕ್‌ ಲವ್‌ ಯಾ” ಸಿನಿಮಾ ಮಾಡಿದ್ದಾರೆ. ಅದು ಇಷ್ಟರಲ್ಲೇ ಪ್ರೇಕ್ಷಕರ ಮುಂದೆ ಬರಲು ತಯಾರಾಗುತ್ತಿದೆ. ಇದರ ಮಧ್ಯೆ ಪ್ರೇಮ್‌ ಕೂಡ ಸದ್ದಿಲ್ಲದೆಯೇ ಒಂದು ಸಿನಿಮಾದ ಚಿತ್ರಕಥೆ ಮುಗಿಸಿದ ಬಗ್ಗೆ ಹೇಳಿಕೊಂಡಿದ್ದು, ಆ ಚಿತ್ರಕಥೆಗೆ ವಿಶೇಷ ಪೂಜೆ ಮಾಡಿ, ಕುಂಬಳಕಾಯಿ ಒಡೆದು ಖುಷಿಗೊಂಡಿದ್ದಾರೆ. ಹಾಗಾದರೆ, ಪ್ರೇಮ್‌ ಈ ಬಾರಿ ಯಾವ ಜಾನರ್‌ ಸಿನಿಮಾ ಮಾಡ್ತಾರೆ? ಸಹಜವಾಗಿಯೇ ಎಲ್ಲರಲ್ಲೂ ಕಾಡುವ ಪ್ರಶ್ನೆ ಇದು. ಪ್ರೇಮ್‌ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿಷಯವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅವರ ಮುಂದಿನ ಸಿನಿಮಾ ಪಕ್ಕಾ ಆಕ್ಷನ್‌ ಸಿನಿಮಾ ಆಗಿರುತ್ತೆ ಅನ್ನುವುದು ದಟ್ಟವಾಗಿದೆ.

ಅಷ್ಟಕ್ಕೂ ಪ್ರೇಮ್‌ ಹಂಚಿಕೊಂಡಿರುವ ಆ ವಿಡಿಯೋದಲ್ಲೇನಿದೆ ಗೊತ್ತಾ? “ಯಾರಾದರೂ ಯುದ್ಧದಲ್ಲಿ ಹುತಾತ್ಮರಾದರೆ ಅವರ ಸ್ವಾಗತಕ್ಕಾಗಿ ಸ್ವರ್ಗ ಕಾಯುತ್ತಿರುತ್ತದೆ. ಒಂದೊಮ್ಮೆ ಯುದ್ಧದಲ್ಲಿ ಗೆದ್ದರೆ, ಅವರಿಗಾಗಿ ಅಧಿಕಾರದ ಕಿರೀಟ ಕಾಯುತ್ತಿರುತ್ತದೆ. ಒಟ್ಟಾರೆ ಯುದ್ಧ ಒಳ್ಳೆಯದೇ. ಯುದ್ಧ ಈಗ ಶುರುವಾಗುತ್ತಿದೆ…ʼ ಎಂದಿದ್ದಾರೆ ಪ್ರೇಮ್.‌ ಚಿತ್ರಕತೆ ಕೆಲಸವನ್ನು ಮುಗಿಸಿದ್ದೇನೆ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಆಗಸ್ಟ್ 2021ರಲ್ಲಿಯೇ ಹಂಚಿಕೊಳ್ಳಲಿದ್ದೇನೆ’ ಎಂದಿರುವ ಪ್ರೇಮ್ ಅವರಿಗೆ ಇದು 9ನೇ ಚಿತ್ರ. 2003ರಲ್ಲಿ ‘ಕರಿಯಾ’ ಚಿತ್ರದ ಮೂಲಕ ನಿರ್ದೇಶಕರಾಗಿ ಚಿತ್ರರಂಗ ಪ್ರವೇಶಿಸಿದ ಪ್ರೇಮ್, ಆ ಬಳಿಕ ಒಂದೊಂದೇ ಹಿಟ್‌ ಸಿನಿಮಾ ಕೊಟ್ಟರು. ಆ ಮೂಲಕ ಅವರು ಗಾಂಧಿನಗರದಲ್ಲಿ ಗಟ್ಟಿ ಬೇರೂರಿದರು.

ತಮ್ಮದೇ ಶೈಲಿಯಲ್ಲಿ ಸಿನಿಮಾ ಮಾಡುವ ಪ್ರೇಮ್‌ಗೆ ಪ್ರೇಕ್ಷಕರ ನಾಡಿಮಿಡಿತ ಗೊತ್ತಿದೆ. ಅವರಿಗೆ ತಕ್ಕಂತೆಯೇ ಸಿನಿಮಾ ಕೊಡುವ ಜಾಣತನ ಪ್ರೇಮ್‌ಗಿದೆ. ಸ್ಟಾರ್‌ ಮಾತ್ರವಲ್ಲ, ಹೊಸಬರನ್ನೂ ಇಟ್ಟುಕೊಂಡು ಸಾಬೀತು ಮಾಡಿರುವ ಪ್ರೇಮ್‌, ಒಂದು ಸಿನಿಮಾ ಮಾಡ್ತಾರೆ ಅಂದರೆ, ಅದೊಂದು ರೀತಿ ಕುತೂಹಲವಂತೂ ಹೌದು. ಪ್ರೇಮ್‌ ಸೋಲು ಕಂಡಿದ್ದೂ ಇದೆ, ಗೆಲುವಿನ ಮೆಟ್ಟಿಲನ್ನೂ ಏರಿದ್ದೂ ಇದೆ. ನಿರೀಕ್ಷೆ ಇಟ್ಟುಕೊಂಡ ಸಿನಿಮಾಗಳು ಸಹ ಕೈ ಕೊಟ್ಟಿದ್ದ ಉದಾಹರಣೆ ಇದ್ದರೂ, ಪ್ರೇಮ್‌ ಮಾತ್ರ, ತಮ್ಮ ಪಾಡಿಗೆ ತಾವು ಸಿನಿಮಾ ಮಾಡುತ್ತಿದ್ದಾರೆ. “ವಿಲನ್‌” ಮೂಲಕ ಶಿವರಾಜಕುಮಾರ್‌ ಮತ್ತು ಸುದೀಪ್‌ ಅವರನ್ನು ಇಟ್ಟುಕೊಂಡು ದೊಡ್ಡ ಮಟ್ಟದ ಚಿತ್ರ ಕೊಟ್ಟರು. ಭಾರೀ ಕುತೂಹಲ ಕೆರಳಿಸಿದ್ದ ಆ ಚಿತ್ರ, ತಕ್ಕಮಟ್ಟಿಗೆ ಮೆಚ್ಚುಗೆ ಪಡೆದುಕೊಂಡಿತು. ಆ ಬಳಿಕ ಅವರು, “ಏಕ್‌ ಲವ್‌ ಯಾ” ಸಿನಿಮಾಗೆ ಅಣಿಯಾದರು.

ಈಗ ಆ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಇಷ್ಟರಲ್ಲೇ ಪ್ರೇಕ್ಷಕರ ಮುಂದೆ ಬರಲಿದೆ. ಅಂದಹಾಗೆ, ರಕ್ಷಿತಾ ಅವರ ಸಹೋದರನಿಗಾಗಿಯೇ, ಒಂದೊಳ್ಳೆಯ ಲವ್‌ ಸ್ಟೋರಿ ಹೆಣೆದಿರುವ ಪ್ರೇಮ್‌, ಈಗಾಗಲೇ ಚಿತ್ರದ ಒಂದು ಸಾಂಗ್‌ ಬಿಟ್‌ ಬಿಡುಗಡೆ ಮಾಡಿ, ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ್ದಾರೆ. ಅದೇನೆ ಇರಲಿ, ಪ್ರೇಮ್‌ ಈಗ ಹೊಸ ಸಿನಿಮಾದ ಚಿತ್ರಕಥೆ ಸಿದ್ಧಪಡಿಸಿದ್ದಾರೆ. ಈ ಬಾರಿ ಸ್ಟಾರ್‌ ಹಿಂದೆ ಹೋಗ್ತಾರೋ ಅಥವಾ ಹೊಸಬರನ್ನು ಕರೆತರುತ್ತಾರೋ ಅನ್ನುವುದನ್ನು ಕಾದು ನೋಡಬೇಕಿದೆ.

Categories
ಸಿನಿ ಸುದ್ದಿ

ತಾಕತ್ತಿದ್ದರೆ ಒಪನ್‌ ಡಿಬೇಟ್‌ ಗೆ ಬರ್ತೀಯಾ? – ಪ್ರಶಾಂತ್‌ ಸಂಬರಗಿಗೆ ಚಂದ್ರಚೂಡ್‌ ಸವಾಲು

ಅಂದುಕೊಂಡಂತೆ ಬಿಗ್‌ ಬಾಸ್‌ ಮುಗಿಯುತ್ತಿದ್ದಂತೆ ಪ್ರಶಾಂತ್‌ ಸಂಬರಗಿ ಹಾಗೂ ಚಕ್ರವರ್ತಿ ಚಂದ್ರಚೂಡ್‌ ನಡುವೆ ಗುದುಮುರಗಿ ಶುರುವಾಗಿದೆ. ದೊಡ್ಮನೆಯಿಂದ ಹೊರ ಬರುತ್ತಿದ್ದಂತೆ ಪ್ರಶಾಂತ್‌ ಸಂಬರಗಿ, ಟಿವಿ ಸಂದರ್ಶನಗಳಲ್ಲಿ ಬ್ಯುಸಿ ಆಗಿದ್ದಾರೆ. ಸೋಮವಾರ ಒಂದು ಖಾಸಗಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಚಕ್ರವರ್ತಿ ಚಂದ್ರಚೂಡ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಇದರಿಂದ ಪತ್ರಕರ್ತ ಹಾಗೂ ಬರಹಗಾರ ಚಕ್ರವರ್ತಿ ಚಂದ್ರಚೂಡ್‌ ಕೆಂಡಾಮಂಡಲವಾಗಿದ್ದು, ಪ್ರಶಾಂತ್‌ ಸಂಬರಗಿ ಅವರು, ಚಾನೆಲ್‌ ಗಳಲ್ಲಿ ಸ್ವಕುಚ ಮರ್ಧನ ಮಾಡಿಕೊಳ್ಳೋದನ್ನು ಬಿಡಲಿ. ತಾಕತ್ತಿದ್ದರೆ ಮುಖಾಮುಖಿ ಮಾತುಕತೆಗೆ ಬರಲಿ ಎಂದು ಸವಾಲ್‌ ಹಾಕಿದ್ದಾರೆ. ಈ ಕುರಿತು ಸೋಷಲ್‌ ಮೀಡಿಯಾದಲ್ಲಿ ಚಕ್ರವರ್ತಿ ಚಂದ್ರಚೂಡ್‌ ಹಾಕಿರುವ ಸ್ಟೇಟಸ್‌ ಹೀಗಿದೆ…

ಪ್ರಶಾಂತ್ ಸಂಬರ್ಗಿ – ನೀವು ಬರಹಗಾರನ ಮುಖವಾಡ ಹೋರಾಟದ ಮುಖವಾಡ ಇತ್ಯಾದಿ ಇತ್ಯಾದಿ ವಾಂತಿ ಮಾಡಿಕೊಳ್ಳುತ್ತಿದ್ದೀರಿ.ನಾನು ನೀವು ಹೊರಬರುವ ತನಕ ಮಾತನಾಡಬಾರದೆಂದು ನೈತಿಕ ಪ್ರಜ್ಝೆಯಿಂದ ಮೌನವಿದ್ದೆ.ನಿಮ್ಮ ಹೋರಾಟ ನನ್ನ ಜನಪರ ಹೋರಾಟಗಳು ನನ್ನ ಬರಹ ನಿಮ್ಮದು ಸಮಾಜದ ಕೆಲಸ ನಿಮ್ಮ ಸಮಾಜ ಕೆಲಸ ಎರಡನ್ನೂ ಚರ್ಚೆ ಮಾಡೋಣವೇ ಒಂದೇ ವೇದಿಕೆಯಲ್ಲಿ ಯಾರಿಗೆ ಕಪ್ಪು ಮಸಿ ಬಳಿದಿದ್ದಾರೆಂದು ನೋಡೋಣವೇ ? ನೀವೊಂದು ಚಾನಲ್ ನಾನೊಂದು ಚಾನಲ್ ಹೀಗೆ ಕಾಲ ಹರಣ ಬೇಡ .ನನ್ನ ಕೆಲಸಗಳನ್ನ ದಾಖಲಾತಿ ಸಹಿತ ತರುವೆ. open debate ಬರ್ತೀರಾ ? ಯಾವ ಮಾಧ್ಯಮ ? ಎಲ್ಲಿ ಯಾವತ್ತು ಯಾವಾಗ ತಾಖತ್ತಿದ್ದರೆ … ಕಿತ್ತೂರು ರಾಣಿ ಚನ್ನಮ್ಮನ ಮೊಮ್ಮಗವೆಂಬುದು ಹುಸಿ ಪ್ರಚಾರವಾಗದೇ ಅಸಲಿಯಾಗಿದ್ದರೆ…. ನೋಡೋಣವೇ …ನಿಮ್ಮ ಇಂಚಿಂಚೂ ದಾಖಲಾತಿಯೊಂದಿಗೆ ಬರುವೆ ನನ್ನ 20 ವರುಷದ ಪತ್ರಿಕೋದ್ಯಮದ ಮೇಲಾಣೆ(ನಿಮ್ಮ ರೀತಿಯಲ್ಲಿ ಆಣೆ) , ಹೇಡಿ ಥರ ಚಾನಲ್ ಗಳಲ್ಲಿ ಸ್ವಕುಚ ಮರ್ಧನ ಮಾಡಿಕೊಳ್ಳೋದಲ್ಲ… ತಾಕತ್ತಿದೆಯಾ ಸಂಬರ್ಗಿ?…

ಪ್ರಶಾಂತ್‌ ಸಂಬರಗಿ ಹಾಗೂ ಚಕ್ರವರ್ತಿ ಚಂದ್ರಚೂಡ್‌ ನಡುವೆ ಏನ್‌ ಆಗಿದೆಯೋ ಗೊತ್ತಿಲ್ಲ, ಆದರೆ ಬಿಗ್‌ಬಾಸ್‌ ಮನೆಯೊಳಗಡೆ ಪ್ರಶಾಂತ್‌ ಸಂಬರಗಿ ಮತ್ತು ಚಕ್ರವರ್ತಿ ಚಂದ್ರಚೂಡ್‌ ಸ್ನೇಹಿತರಂತೆಯೇ ಇದ್ದರು. ಇದಾಗಿ ಅಲ್ಲಿಂದ ಚಕ್ರವರ್ತಿ ಚಂದ್ರಚೂಡ್‌ ಹೊರ ಬಂದ ನಂತರ, ಚಂದ್ರಚೂಡ್‌ ಸಿನಲಹರಿ ಜತೆಗೆ ಮಾತನಾಡುತ್ತಾ, ಬಿಗ್‌ ಬಾಸ್‌ ಮುಗಿಲಿ, ಪ್ರಶಾಂತ್‌ ಸಂಬರಗಿ ಅವರನ್ನು ಸುಮ್ಮನೆ ಬಿಡೋದಿಲ್ಲ ಎಂದಿದ್ದರು. ಅದು ಯಾವ ಕಾರಣಕ್ಕೋ ಗೊತ್ತಿಲ್ಲ. ಈಗ ಮಾತ್ರ ಇಬ್ಬರ ನಡುವೆ ಯುದ್ದ ಶುರುವಾಗಿದೆ. ಸದ್ಯಕ್ಕೆ ಇದು ಮಾತಿನ ಸಮರಕ್ಕೆ ಸಿಮೀತವಾಗಿದೆ. ಮುಂದಿನ ದಿನಗಳಲ್ಲಿ ಏನಾಗುತ್ತೋ ಗೊತ್ತಿಲ್ಲ.

Categories
ಸಿನಿ ಸುದ್ದಿ

ಮನಮೆಚ್ಚಿದ ಹುಡುಗಿ ಸುಧಾರಾಣಿ ಕಣ್ಣಲ್ಲಿ ಹಿರಿಯ ನಟಿ ಲೀಲಾವತಿ ಕಂಡಿದ್ಹೀಗೆ !

ಲೀಲಾವತಿ ಅಮ್ಮ, ಕನ್ನಡ ಚಿತ್ರರಂಗ ಕಂಡ ಅತ್ಯದ್ಭುತ ಕಲಾವಿದೆ ಇವರು. ನೂರಾರು ಸಿನಿಮಾಗಳಲ್ಲಿ ಬೇರೆ ಬೇರೆ ರೀತಿಯ ಪಾತ್ರಗಳ ಮೂಲಕ ನಮ್ಮೆಲ್ಲರನ್ನು ರಂಜಿಸಿದ್ದಾರೆ. ಲೀಲಾವತಿ ಎನ್ನುವುದು ದುರ್ಗಾದೇವಿಯ ಮತ್ತೊಂದು ಹೆಸರು, ಕನ್ನಡದಲ್ಲಿ ಲೀಲಾ ಎನ್ನುವ ಪದಕ್ಕೆ ಮತ್ತೊಂದು ಅರ್ಥ ವಿನೋದ. ಲೀಲಾವತಿ ಅಮ್ಮ ದುರ್ಗೆಯ ಅವತಾರವಾದರು, ಜೀವನದ ಎಲ್ಲಾ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಇಂದು ಎಲ್ಲಾ ಹೆಣ್ಣುಮಕ್ಕಳಿಗೆ ಮಾದರಿಯಾಗಿ ನಿಂತಿದ್ದಾರೆ.

ಅವರು ವಾಸವಿರುವ ಊರಿನಲ್ಲಿ ಬಡಜನರಿಗಾಗಿ ಆಸ್ಪತ್ರೆ ಕಟ್ಟಿಸಿದ್ದಾರೆ, ಹಸು ಕರುಗಳಿಗೆ ನೀರಿನ ಟ್ಯಾಂಕ್ ಕಟ್ಟಿಸಿ ಅವುಗಳಿಗೆ ಮೇವು ನೀಡಿದ್ದಾರೆ, ಎಷ್ಟೋ ಜನರಿಗೆ ಊಟ ನೀಡಿ ಸಹಾಯ ಮಾಡುತ್ತಾ ಇರುವ ಇವರನ್ನು ಅನ್ನಪೂರ್ಣೇಶ್ವರಿಯ ಸ್ವರೂಪ ಎಂದು ಕರೆಯುವುದೋ ಅಥವಾ ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಅದೆಲ್ಲವನ್ನು ಭೂಮಿ ತಾಯಿಯ ಹಾಗೆ ತನ್ನಲ್ಲಿಯೇ ಹೊತ್ತು, ತಾಳ್ಮೆಯಿಂದ ಎಲ್ಲವನ್ನು ಸಹಿಸಿ, ಲೀಲಾಜಾಲವಾಗಿ ನಿಭಾಯಿಸಿರುವ ಇವರನ್ನು ಭೂಮಿ ತಾಯಿಯ ಸ್ವರೂಪ ಎಂದು ಕರೆಯುವುದೋ..

ಇಂತಹ ವ್ಯಕ್ತಿತ್ವ ಹೊಂದಿರುವ ಲೀಲಾವತಿ ಅಮ್ಮನವರ ಜೊತೆ ಬಾಲನಟಿಯಾಗಿ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸುವ ಅವಕಾಶ ನನಗೆ ಸಿಕ್ಕಿತ್ತು, ನಾಯಕಿಯಾದ ಮೇಲು ಲೀಲಾವತಿ ಅಮ್ಮನವರ ಜೊತೆ ಸುಮಾರು ಸಿನಿಮಾಗಳಲ್ಲಿ ಕೆಲಸ ಮಾಡುವ ಸೌಭಾಗ್ಯ ಸಿಕ್ಕಿದ್ದು ನನ್ನ ಅದೃಷ್ಟ.ಇಲ್ಲಿರುವ ಎರಡು ಫೋಟೋಗಳಲ್ಲಿ ಮೊದಲನೆಯದು ನಾನು ಬಾಲನಟಿಯಾಗಿ ನಟಿಸಿದ ಮೊದಲ ಸಿನಿಮಾ “ಕಿಲಾಡಿ ಕಿಟ್ಟು” ಚಿತ್ರೀಕರಣದ ಸಮಯದ ಫೋಟೋ ಮತ್ತೊಂದು ಇಂದು ಲೀಲಾವತಿ ಅಮ್ಮನವರನ್ನು ಭೇಟಿ ಮಾಡಿದ ಸಂದರ್ಭದ ಫೋಟೋ..

ವರ್ಷಗಳು ಉರುಳಿವೆ ಹೊರತು ನಮ್ಮ ನಡುವೆ ಇರುವ ಬಾಂಧವ್ಯವಲ್ಲ..ಲೀಲಾವತಿ ಅಮ್ಮನವರ ಆರೋಗ್ಯ ವಿಚಾರಿಸಿಕೊಂಡು ಬಂದ ನಟಿ ಸುಧಾರಾಣಿಯವರು, ಹಿರಿಯ ನಟಿ ಲೀಲಾವತಿ ಮೇಲಿರುವ ಪ್ರೀತಿ- ಭಕ್ತಿ- ಕಾಳಜಿ- ಅಭಿಮಾನ ಹಾಗೂ ತಮ್ಮ ಭಾವನೆಯನ್ನ ಪದಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಇದಲ್ಲವೇ ಹಿರಿಯ ನಟಿಗೆ ಮಗದೊಬ್ಬ ನಟಿ ಕೊಡುವ ಗೌರವ ಅಂದರೆ…

-ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಮಾಳವಿಕ- ಶ್ರುತಿ- ಸುಧಾರಾಣಿಯ ಈ ಕಾರ್ಯಕ್ಕೆ ಚಪ್ಪಾಳೆ ಹೊಡಿಯಲೆಬೇಕು !

ನಟಿಯರಾದ ಸುಧಾರಾಣಿ, ಶ್ರುತಿ ಹಾಗೂ ಮಾಳವಿಕ ಅವಿನಾಶ್ ಅವರ ಅಂತಃಕರಣದ ಹೃದಯಕ್ಕೆ ಹಾಗೂ ಈ ಕಾರ್ಯಕ್ಕೆ ಚಪ್ಪಾಳೆ ಹೊಡೆ ಯುವ ಮೂಲಕ ಈ‌ ಮೂವರು ನಟಿಯರನ್ನು ಗೌರವಿಸಬೇಕು. ಸುಖ- ಸಂತೋಷ- ಸಂಭ್ರಮ ಅಂದಾಗ ಕರೆಯದೇ ಬರುವವರು ಹೆಚ್ಚು. ‌ಅದೇ, ಕಷ್ಟದಲ್ಲಿದ್ದಾಗ ಕರೆದರೂ ಕೂಡ ಹತ್ತಿರಕ್ಕೂ ಯಾರೂ ಸುಳಿಯಲ್ಲ.‌ ಆದರೆ, ಈ ಮೂವರು ನಟಿಯರು ಅದಕ್ಕೆ ತದ್ವಿರುದ್ಧ.‌ ಕಷ್ಟಕ್ಕೆ- ನೋವಿಗೆ ಎಷ್ಟು ಸ್ಪಂಧಿಸಿದ್ದಾರೋ ಇಲ್ಲವೋ ಗೊತ್ತಿಲ್ಲ‌ ಆದರೆ ಅನಾರೋಗ್ಯಕ್ಕೆ ಒಳಗಾದ ಲೀಲಾವತಿ ಅಮ್ಮನವರ ಕ್ಷೇಮ ಸಮಾಚಾರ ವಿಚಾರಿಸಿದ್ದಾರೆ.

ಲೀಲಾವತಿ ಕನ್ನಡ ಚಿತ್ರರಂಗದ ಮೇರುನಟಿ. ದಶಕಗಳ ಕಾಲ ಬೆಳ್ಳಿಪರ ದೆಯನ್ನಾಳಿದ ಲೀಲಾವತಿಯವರು, ಕೋಟ್ಯಾಂತರ ಅಭಿಮಾನಿಗಳ ಮನಸ್ಸಲ್ಲಿ‌ ಅಚ್ಚಳಿಯದೇ ಕುಳಿತಿದ್ದಾರೆ.ಇತ್ತೀಚೆಗೆ ತಮ್ಮ ತೋಟದ ಮನೆಯಲ್ಲಿ ಸ್ನಾನಕ್ಕೆಂದು ಹೋದಾಗ ಕಾಲು‌ ಜಾರಿ ಬಿದ್ದು ಬೆನ್ನು ಮೂಳೆಗೆ ಪೆಟ್ಟು ಮಾಡಿಕೊಂಡಿದ್ದರು. ಪುತ್ರ ವಿನೋದ್ ರಾಜ್ ತಕ್ಷಣಕ್ಕೆ ತಾಯಿನಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು. ಒಂದು ತಿಂಗಳು‌ ಕಾಲ ಬೆಡ್ ರೆಸ್ಟ್ ನಲ್ಲಿರುವಂತೆ ವೈದ್ಯರು ಸೂಚಿಸಿದ್ದರು. ಈ‌ ಸುದ್ದಿ ತಿಳಿದ ಕೂಡಲೇ ದೂರವಾಣಿ ಮೂಲಕ ಮಾತನಾಡಿದ್ದ ನಟಿಯರಾದ ಸುಧಾರಾಣಿ, ಶ್ರುತಿ, ಮಾಳವಿಕಾ ಅವರು, ಎರಡು ದಿನ ಬಿಟ್ಟು ನೇರವಾಗಿ ಲೀಲಾವತಿಯವರ ಸೋಲೆದೇವನಹಳ್ಳಿ ಮನೆಗೆ ಭೇಟಿಕೊಟ್ಟರು.‌

ಅಮ್ಮನ ಆರೋಗ್ಯ ವಿಚಾರಿಸಿ, ಕೆನ್ನೆಗೆ ಸಿಹಿಮುತ್ತು ಕೊಟ್ಟ ನಟಿಯರು, ಕೆಲಕಾಲ ಅಮ್ಮನೊಟ್ಟಿಗೆ ಕಾಲಕಳೆದರು. ಎವರ್ ಗ್ರೀನ್ ‌ಗೀತೆಯೊಂ ದನ್ನು‌ ಹಾಡಿ ಮಕ್ಕಳಂತಿರುವ ಮೂವರು ನಟಿಯರಿಗೂ ಲೀಲಾವತಿ ಅಮ್ಮ ಶುಭಹಾರೈಸಿದರು. ಈ‌ ಸುವರ್ಣ ಕ್ಷಣವನ್ನು ಕ್ಯಾಮರಾದಲ್ಲಿ ಸೆರೆಯಾಗಿಸಿಕೊಂಡ ನಟಿ ಸುಧಾರಾಣಿ ತಮ್ಮ ಸೋಷಿಯಲ್ ಮೀಡಿ ಯಾದಲ್ಲಿ ಹಂಚಿಕೊಂಡಿದ್ದಾರೆ. ಹಿರಿಯ ನಟಿಯ ಕಷ್ಟಕ್ಕೆ- ನೋವಿಗೆ ಮಿಡಿದ ಮೂವರು ನಟಿಯರಿಗೆ ಫ್ಯಾನ್ಸ್ ಉಘೇ ಉಘೇ ಎನ್ನುತ್ತಿದ್ದಾರೆ. ಲೀಲಾವತಿ ಅಮ್ಮನ ಆರೋಗ್ಯ ಬೇಗ ಸುಧಾರಣೆ ಕಾಣಲೆಂದು ಹರಸು ತ್ತಿದ್ದಾರೆ.
ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಪಾವಗಡ ಮಂಜುನಾ ಕೈ ಬಿಡಲಿಲ್ಲ ಧರ್ಮಸ್ಥಳ ಮಂಜುನಾಥಸ್ವಾಮಿ; ಬಿಗ್ಬಾಸ್ ಪಟ್ಟಕ್ಕೇರಿಸಿ ಕೇಕೆ ಹೊಡೆದಿದ್ದು 6 ಕೋಟಿ ಜನ ಸ್ವಾಮಿ !

ಉಸಿರುಗಟ್ಟಿ‌ ಕೋಮಾಗೆ ಹೋದಾಗ, ಸಾವು ಬದುಕಿನ ನಡುವೆ ಹೋರಾಟ ಮಾಡುವಾಗ, ಜೀವಕ್ಕೆ ಉಸಿರು ತುಂಬಿ ಬದುಕಿಸಿಕೊಂಡ ಧರ್ಮಸ್ಥಳ‌ ಮಂಜುನಾಥ ಸ್ವಾಮಿ, ಅರಮನೆಯಂತಹ ಸೆರೆಮನೆಯಲ್ಲಿರುವ ನನ್ನನ್ನ ಕೈಬಿಡುವುದುಂಟೇ ? ಹೀಗೊಂದು ಪ್ರಶ್ನೆ ಮಂಜು ಪಾವಗಡ ಮನಸ್ಸಲ್ಲೂ ಕೂಡ ಕಥಕ್ಕಳಿ ಆಡಿತ್ತು.
ಕಲಾವಿದ ಆಗಬೇಕು ಎಂದು ಬೇಡಿಕೊಂಡಾಗ, ನಾಲ್ಕು ಮಂದಿ ನನ್ನನ್ನು ಗುರುತಿಸುವಂತೆ ಮಾಡು ಸ್ವಾಮಿ ಎಂದು ಅಡ್ಡಬಿದ್ದು ಬೇಡಿದಾಗ ಎಲ್ಲವನ್ನೂ ಈಡೇರಿಸಿರುವ ಧರ್ಮಸ್ಥಳ ಮಂಜುನಾಥ ಸ್ವಾಮಿ, ಬಿಗ್ ಬಾಸ್ ಗೆಲ್ಲುವ ಕನಸನ್ನು ಈಡೇರಿಸದೇ ಬಿಡುವನೇ ? ಯಾವುದೇ ಕಾರಣಕ್ಕೂ ಮಂಜುನಾಥ ಸ್ವಾಮಿ ನನ್ನ ಕೈ ಬಿಡಲ್ಲ.. ಗೆದ್ದೇ ಗೆಲ್ತೀನಿ.. ಬಿಗ್ಬಾಸ್ ಗದ್ದುಗೆ ಏರೇ ಏರ್ತೀನಿ, ಹೀಗೊಂದು ಆತ್ಮ ವಿಶ್ವಾಸ ಮಂಜು ಪಾವಗಡ ಮನಸ್ಸಲ್ಲಿತ್ತು. ಆ ಅಚಲವಾದ ಆತ್ಮವಿಶ್ವಾಸಕ್ಕೆ ಬಿಗ್ಬಾಸ್ ವಿಜಯದ ಹಾರ ಹಾಕಿದೆ. ಮಂಜುನಾಥ ಸ್ವಾಮಿಯ ಅಭಯ ಹಸ್ತ ಮಂಜಣ್ಣನ ಮೇಲಿರುವುದು ನಿಜವಾಗಿದೆ.

ಬಿಗ್ಬಾಸ್ ಸೀಸನ್ 8 ರ ವಿನ್ನರ್ ಯಾರಾಗ್ತಾರೆ ಎನ್ನುವ ಆರು ತಿಂಗಳ‌ ಕೂತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ದೊಡ್ಮನೆ ಗ್ರ್ಯಾಂಡ್ ಫಿನಾಲೆ ಅದ್ದೂರಿಯಾಗಿ ಅಂತ್ಯಗೊಂಡಿದೆ.
ಮಜಾಭಾರತ ಖ್ಯಾತಿಯ ಮಂಜು ಪಾವಗಡ ಬಿಗ್ ಬಾಸ್ ವಿನ್ನರ್ ಪಟ್ಟಕ್ಕೇರಿ ಗೆಲುವಿನ ಮುತ್ತಿನ ಹಾರ ಹಾಕಿಸಿಕೊಂಡು ಕರುನಾಡ ಅಂಗಳದಲ್ಲಿ‌ ಮೆರವಣಿಗೆ ಹೊರಟಿದ್ದಾರೆ. ಮಂಜು ಗೆಲುವನ್ನು ಕರ್ನಾಟಕದ ಲಕ್ಷಾಂತರ ಮಂದಿ ಸಂಭ್ರಮಿಸುತ್ತಿದ್ದಾರೆ.

ಮಂಜು ಪಾವಗಡ ಗೆಲ್ಲಬೇಕು‌ ಎನ್ನುವುದು ಕೇವಲ ಅವರ ಕುಟುಂಬಸ್ಥರು ಹಾಗೂ ಆಪ್ತರ ಕನಸಾಗಿರಲಿಲ್ಲ. ಕರುನಾಡಿನ ಬಹುತೇಕ ಮಂದಿ ಮಂಜು‌ ಗೆಲುವಿನ‌ ಗದ್ದುಗೆ ಏರಬೇಕೆಂದು ಬಯಸಿದ್ದರು. ಪಾವಗಡ ಮಂಜು‌ ಬಿಗ್ಬಾಸ್ ನಲ್ಲಿ ದಿಗ್ವಿಜಯ ಸಾಧಿಸಿದರೆ ಹಳ್ಳಿ ಜಯಭೇರಿ ಬಾರಿಸಿದಂತೆ ಎಂದು ಮಾತನಾಡಿಕೊಂಡಿದ್ದರು.‌ ಅದರಂತೆ ಕರುನಾಡಿನ 45,03,495 ಲಕ್ಷ ಮಂದಿ
ವೋಟ್ ಹಾಕಿದ್ದಾರೆ. ಫಿನಾಲೆಗೆ ಲಗ್ಗೆ ಇಟ್ಟ ಟಾಪ್ ಫೈವ್ ಸ್ಪರ್ಧಿಗಳ‌ ಪೈಕಿ ಅತೀ ಹೆಚ್ಚು ವೋಟ್ ಪಡೆಯುವ ಮೂಲಕ ಬಿಗ್ಬಾಸ್ ಟ್ರೋಪಿಗೆ ಮಂಜಣ್ಣ ಮುತ್ತಿಕ್ಕಿದ್ದಾರೆ. 53 ಲಕ್ಷ ಕಂತೆ ನೋಟಿಗೆ ಮಂಜಣ್ಣ ಒಡೆಯರಾಗಿದ್ದಾರೆ.‌

ಹಳ್ಳಿಹಕ್ಕಿ.. ಗ್ರಾಮೀಣ ಪ್ರತಿಭೆ ಮಂಜಣ್ಣನ ಯಶಸ್ಸಿಗೆ ಸ್ವಂತ ಪರಿಶ್ರಮ ಹಾಗೂ ಕರ್ನಾಟಕದ ಮಂದಿಯ ಪ್ರೋತ್ಸಾಹ ಹಾಗೂ ಸಹಕಾರದ ಜೊತೆಗೆ ಧರ್ಮಸ್ಥಳದ‌ ಶ್ರೀಮಂಜುನಾಥ ಸ್ವಾಮಿಯ ಅಭಯಹಸ್ತವೂ ಇದೆ ಎನ್ನುವುದು ಪ್ರೂ ಆಗಿದೆ. ಮಂಜಣ್ಣ ಇಲ್ಲಿವರೆಗೂ ಏನೇ ಕೇಳಿಕೊಂಡರೂ ಅದೆಲ್ಲವೂ ಈಡೇರಿದೆಯಂತೆ. ಈಗ ದೊಡ್ಮನೆಯಲ್ಲಿ ಜಯಭೇರಿ ಬಾರಿಸುವ ಕನಸು ಕೂಡ ಸಾಕಾರಗೊಂಡಿದೆ. ಉಸಿರುಗಟ್ಟಿ ಕೋಮದಲ್ಲಿದ್ದ ಮಂಜುನಾ ತೀರ್ಥ ಹಾಗೂ ಪ್ರಸಾದ ಸೇವನೆಯಿಂದ ಬದುಕಿಸಿಕೊಂಡ ಶ್ರೀ ಮಂಜುನಾಥ ಸ್ವಾಮಿ,
ತನ್ನ ನಾಮಧೇಯ ಇಟ್ಟುಕೊಂಡು ಶ್ರದ್ಧಾ ಭಕ್ತಿಯಿಂದ ಸ್ಮರಿಸುವ ಹಾಗೂ ಕಲೆಯನ್ನು ಆರಾಧಿಸುವ ಕಲಾವಿದನ ದೊಡ್ಮನೆ‌ ಕನಸು ನನಸಾಗಿರುವುದರಲ್ಲಿ ಯಾವುದೇ ಡೌಟಿಲ್ಲ‌‌ ಬಿಡಿ.

ಬಿಗ್ಬಾಸ್ ಸೀಸನ್ 8ರ ಗೆಲುವು ಮಂಜಣ್ಣನಿಗೆ ಅಷ್ಟು ಸುಲಭವಾಗಿ ದಕ್ಕಿರುವುದಲ್ಲ. ಹಳ್ಳಿ ಹೈದ ಮಂಜಣ್ಣನಿಗೆ ತುಂಬಾ ಜನ ಕಾಂಪಿಟೇಟರ್ ಗಳು ಇದ್ದರು. ಫೈನಲ್ಸ್ ವರೆಗೆ ನೆಕ್ ಟು ನೆಕ್ ಪೈಪೋಟಿ ಕೊಡುತ್ತಲೇ ಬಂದರು.‌ ಇದ್ಯಾವುದಕ್ಕೂ ಜಗ್ಗದ ಹಳ್ಳಿ ಹಕ್ಕಿ ಮಂಜಣ್ಣ ಪ್ರತಿಸ್ಪರ್ಧಿಗಳ ಜೊತೆ ಫೈಟ್ ಮಾಡುತ್ತಾ, ಟಾಸ್ಕ್ ಕಂಪ್ಲೀಟ್ ಮಾಡುತ್ತಾ, ಬಿಗ್ಬಾಸ್ ವೀಕ್ಷಕರಿಗೆ ಭರ್ ಪೂರ್ ಹಾಸ್ಯದ ಮೂಲಕ ಮನರಂಜನೆ ಕೊಡುತ್ತಾ, ದೊಡ್ಮನೆ ನಾಯಕನಾಗಿಯೂ ಸೈ‌ ಎನಿಸಿಕೊಳ್ಳುತ್ತಾ ಅರಮನೆಯಲ್ಲಿ ಭರ್ತಿ
120 ದಿನ ಪೂರೈಸಿದರು. ಕಿಚ್ಚನ ಪಕ್ಕದಲ್ಲಿ ಬಂದು ನಿಂತರು.‌ ಮಾಣಿಕ್ಯನಿಂದ ಕೈ‌ ಮೇಲೆತ್ತಿಸಿಕೊಂಡು ವಿಜಯದ ಕೀರ್ತಿ ಪತಾಕೆಯನ್ನು ಹಾರಿಸಿದರು. ಅರೆಕ್ಷಣ ಭಾವುಕರಾದರು.

ಸಪೋರ್ಟ್ ಮಾಡಿದವರೆಲ್ಲರಿಗೂ ವೇದಿಕೆಯಿಂದಲೇ ಧನ್ಯವಾದ ಹೇಳಿದರು.
ಕರುನಾಡಿನ‌ ಈ ಋಣವನ್ನು ಕಲಾವಿದನಾಗಿ ತೀರಿಸಬೇಕು ಎನ್ನುವ ಹಠ ತೊಟ್ಟು ಮುಂದೆ ಸಾಗಿದ್ದಾರೆ. ಮಂಜಣ್ಣನ ವಿಜಯದ ಸವಾರಿ ಹೀಗೆ ಸಾಗಲಿ, ಕರುನಾಡನ್ನು ಸದಾ ರಂಜಿಸುತ್ತಿರಲಿ.

ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಕನ್ನಡಿಗ ಸುಧೀರ್ ಅತ್ತಾವರ್ ಪರಿಕಲ್ಪನೆಯಲ್ಲಿ ಹೋರಾಟಗಾರರ ಪರಿಚಯಿಸೋ ಬಾನುಲಿ ಸರಣಿ; ಶುರುವಾಗಿರೋ ಹಮಾರೇ ಸ್ವತಂತ್ರ್ಯ ತಾ ಸೇನಾನಿ ಸರಣಿಗೆ ಮೆಚ್ಚುಗೆ…

ಕನ್ನಡ ನಿರ್ದೇಶಕ ಸುಧೀರ್ ಅತ್ತಾವರ್ ದೂರದ ಮುಂಬೈನಲ್ಲಿದ್ದುಕೊಂಡೇ ಒಂದಷ್ಟು ಸುದ್ದಿ ಮಾಡುತ್ತಿದ್ದಾರೆ. ಈಗಾಗಲೇ ಬಾಲಿವುಡ್ ಅಂಗಳದಲ್ಲಿ ತಮ್ಮದೇ ಆದ ಸಕ್ಸಸ್ ಫಿಲ್ಮ್ಸ್ ಹೆಸರಿನ ಸ್ಟುಡಿಯೊ ಶುರು ಮಾಡಿ ಬಾಲಿವುಡ್ ಮಂದಿಯ ಫೇವರ್ ಎನಿಸಿರುವ ಸುಧೀರ್ ಅತ್ತಾವರ್, ಈಗ ಹೊಸದೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಹಾಗಂತ ಅವರು ಹೊಸ ಹಿಂದಿ ಸಿನಿಮಾ ಶುರು ಮಾಡಿದ್ದಾರಾ? ಈ ಪ್ರಶ್ನೆ ಸಹಜ. ಅವರು ಈಗಾಗಲೇ ಮರಾಠಿ ಹಾಗು ಹಿಂದಿ ಭಾಷೆಯ ಸಿನಿಮಾ ಮಾಡಿದ್ದಾಗಿದೆ. ಹೊಸದೊಂದು ಪ್ಯಾನ್ ಇಂಡಿಯಾ ಚಿತ್ರಕ್ಕೂ ಪ್ಲಾನ್ ಮಾಡಿದ್ದಾರೆ. ಇದರ ಜೊತೆ ಹೊಸ ಕಾರ್ಯಕ್ಕೆ ಮುಂದಾಗಿದ್ದಾರೆ ಅನ್ನೋದೇ ಈ ಹೊತ್ತಿನ ವಿಶೇಷ.

ಹೌದು, ನಿರ್ದೇಶಕ ಸುಧೀರ್ ಅತ್ತಾವರ್ ಅವರು ಈಗ ಕೈ ಹಾಕಿರೋದು ದೇಶದ ಮಹಾನ್ ಸ್ವಾತಂತ್ರ್ಯ ಹೋರಾಟಗಾರರನ್ನು ಪರಿಚಯಿಸುವಂತಹ ಕೆಲಸಕ್ಕೆ. ಈಗಾಗಲೇ ಅದು ಬಾನುಲಿ ಸರಣಿ ಮೂಲಕ ಪ್ರಸಾರವಾಗುತ್ತಿದೆ. ಅಂದಹಾಗೆ, ‘ಹಮಾರೇ ಸ್ವತಂತ್ರ್ಯ ತಾ ಸೇನಾನಿ’ ಶೀರ್ಷಿಕೆಯಡಿ ಹೊಸ ಸರಣಿ ಶುರು ಮಾಡಿದ್ದು, ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.

ಸುಧೀರ್ ಅತ್ತಾವರ್ ಅವರು ಮುಂಬೈನಲ್ಲಿರೋ ತಮ್ಮಸಕ್ಸಸ್ ಫಿಲ್ಮ್ಸ್ ಮೂಲಕ ಈ ಬಾನುಲಿ ಸರಣಿಯನ್ನು ನಿರ್ಮಾಣ ಮಾಡಿದ್ದಾರೆ. ಡಿ.ಕೆ ಫ್ಲ್ಯಾಗ್ ಫೌಂಡೇಷನ್ ಈ ಕಾರ್ಯಕ್ರಮವನ್ನು ಅರ್ಪಿಸಿದ್ದು, ಡಿ.ಕೆ. ಫ್ಲ್ಯಾಗ್ ಫೌಂಡೇಷನ್ ನ ಡಾ. ರಾಕೇಶ್ ಬಕ್ಷಿ ಈ ಸರಣಿಯನ್ನು ನಡೆಸಿಕೊಡಲಿದ್ದಾರೆ. ಖ್ಯಾತ ಹಿನ್ನೆಲೆ ಗಾಯಕರಾದ ಶಾನ್, ಶರೋನ್ ಪ್ರಭಾಕರ್, ಆರತಿ ಮುಖರ್ಜಿ, ಡಾ.ಸಂದೇಶ್ ಮಾಯೆಕರ್, ಹಾಕಿ ಪ್ಲೇಯರ್ ಧನರಾಜ್ ಪಿಳೈ, ಹಜ್ ಹೌಸ್ ಅಧ್ಯಕ್ಷ ಮಕ್ಸೂದ್ ಅಹ್ಮದ್ ಖಾನ್, ಬೀನಾ ಸಂತೋಷ್ ಸೇರಿದಂತೆ ಇತರರು ಇಲ್ಲಿ ಭಾಗವಹಿಸುತ್ತಿದ್ದಾರೆ ಅನ್ನೋದು ವಿಶೇಷ.

ಅಂದಹಾಗೆ, ಈ ಕಾರ್ಯಕ್ರಮ ದೆಹಲಿ, ಮುಂಬೈ, ಕೋಲ್ಕತಾ, ಚೆನೈ,ಹೈದರಾಬಾದ್, ಫೋರ್ಟ್ ಬ್ಲೇರ್, ಚಂಡೀಘರ್,ಲಕ್ನೋ, ಅಹಮದಾಬಾದ್,ಪೂನಾ, ನಾಗ್ಪುರ, ಬೆಂಗಳೂರು, ಮಂಗಳೂರು ಸೇರಿ ದೇಶದ ಪ್ರಮುಖ ಬಾನುಲಿ ಕೇಂದ್ರಗಳಲ್ಲಿ ಈಗಾಗಲೇ ಶರುವಾಗಿದೆ. ಆಗಸ್ಟ್ 15ರವರೆಗೆ ಪ್ರತಿ ದಿನ ಸಂಜೆ4.30ರಿಂದ ಪ್ರಸಾರವಾಗುತ್ತಿದೆ. ವಿಶೇಷವೆಂದರೆ, ಈ ಬಾನುಲಿ ಸರಣಿ ಕಾರ್ಯಕ್ರಮ 75ನೇ ಸ್ವಾತಂತ್ರ್ಯ ಹೋರಾಟಗಾರರ ಕುರಿತಾಗಿದ್ದು, 15 ಕಂತುಗಳಲ್ಲಿ ಪ್ರಸಾರವಾಗಲಿದೆ.

ಅದೇನೆ ಇರಲಿ, ಕನ್ನಡಿಗ ಸುಧೀರ್ ಅತ್ತಾವರ್, ದೂರದ ಮುಂಬೈನಲ್ಲಿದ್ದುಕೊಂಡೇ ತಮ್ಮ ಪ್ರತಿಭಾವಂತರ ತಂಡ ಕಟ್ಟಿಕೊಂಡು, ಹೊಸ ಪ್ರಯತ್ನ ಮಾಡುತ್ತಲೇ ಇದ್ದಾರೆ. ಆ ಸಾಲಿಗೆ ಈ ಬಾನುಲಿ ಸರಣಿ ಕೂಡ ವಿನೂತನ ಪ್ರಯತ್ನ. ಇದು ಆ ತಂಡದ ದೇಶಾಭಿಮಾನಕ್ಕೊಂದು ಸಾಕ್ಷಿ ಅಲ್ಲದೆ ಮತ್ತೇನು? ಇನ್ನು ಇಂತಹ ಹಲವು ವಿಶೇಷ ಕಾರ್ಯಕ್ರಮಗಳು ಅವರ ಸಕ್ಸಸ್ ಫಿಲ್ಮ್ಸ್ ಮೂಲಕ ಬರಲಿ. ಹಾಗೆಯೇ ಅವೆಲ್ಲವೂ ಸಕ್ಸಸ್ ಆಗಲಿ ಅನ್ನೋದು ‘ಸಿನಿಲಹರಿ’ ಆಶಯ.

Categories
ಸಿನಿ ಸುದ್ದಿ

ಡಾಲಿ ಜೊತೆ ಹೆಡ್- ಬುಷ್ ಆಡಲು ಬಂದಳಲ್ಲ ತೆಲುಗು ಪಿಲ್ಲಾ !

ಡಾಲಿ ಧನಂಜಯ್ ಗಂಧದಗುಡಿಯ ಹೆಮ್ಮೆಯ ಕಲಾವಿದ. ತಮ್ಮ ಅಘಾದವಾದ ಪ್ರತಿಭೆಯಿಂದ ಗಡಿದಾಟಿ ಗುರ್ತಿಸಿಕೊಂಡಿದ್ದಾರೆ. ಸ್ಯಾಂಡಲ್ ವುಡ್ ಗಷ್ಟೇ ಸೀಮಿತವಾಗಿದ್ದ ಧನಂಜಯ್ ಈಗ ಸೌತ್ ಸಿನಿಮಾ ಇಂಡಸ್ಟ್ರಿ ತುಂಬೆಲ್ಲಾ ಹೆಸರು ಮಾಡೋದಕ್ಕೆ ಅವಕಾಶ ಸಿಕ್ಕಿದೆ. ಪರಭಾಷಾ ಅಂಗಳದಲ್ಲಿ ಬ್ರ್ಯಾಂಡ್ ಆಗುವತ್ತ ಲಗ್ಗೆ ಇಡುತ್ತಿರುವ ಡಾಲಿ ಹೆಡ್ ಬುಷ್ ಮೂಲಕ ಪ್ಯಾನ್ ಇಂಡಿಯಾ ತಲುಪಲಿದ್ದಾರೆ. ಆಲ್ ಓವರ್ ಇಂಡ್ಯಾ ಡಾಲಿ ಸ್ಟಾರ್ ಆಗುವಂತಹ ಹೆಡ್ ಬುಷ್ ಚಿತ್ರಕ್ಕೆ ತೆಲುಗು ಪಿಲ್ಲಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಆ ನಟಿಯ ಹೆಸರು ಪಾಯಲ್ ರಜಪೂತ್.

ಪಾಯಲ್ ರಜಪೂತ್ ಹೆಸರು ಕೇಳಿದರೆ ಥಟ್ ಅಂತ ಆಕೆ ನೆನಪಾಗದೇ ಇರಬಹುದು. ಆದರೆ, ‘ಆರ್ ಎಕ್ಸ್ 100’ ಅಂದಾಕ್ಷಣ ಆಕೆ ನಿಮ್ಮ ಕಣ್ಮುಂದೆ ಬಂದು ನಿಲ್ಲೋದು ಪಕ್ಕಾ. ಆ ಸೆಕ್ಸಿ ಸುಂದರಿಯನ್ನೇ ಹೆಡ್ ಬುಷ್ ಚಿತ್ರತಂಡ ಕನ್ನಡಕ್ಕೆ ಕರೆತರುತ್ತಿದ್ದಾರೆ. ಸೆನ್ಸೇಷನಲ್ ಡಾಲಿ ಪಕ್ಕದಲ್ಲಿ ನಿಂತು ಹಲ್ ಚಲ್ ಎಬ್ಬಿಸೋಕೆ ಪಾಯಲ್ ಒಪ್ಪಿಕೊಂಡಿದ್ದಾರೆ. ವಿಕ್ಟರಿ ವೆಂಕಟೇಶ್, ನಾಗಚೈತನ್ಯ, ಮಾಸ್ ಮಹರಾಜ ರವಿತೇಜ ಸೇರಿದಂತೆ ಹಲವು ಸ್ಟಾರ್ ಗಳ ಚಿತ್ರಗಳಲ್ಲಿ ಪಾಯಲ್ ನಟಿಸಿದ್ದಾರೆ.

ಹೆಡ್- ಬುಷ್ ಬೆಂಗಳೂರಿನ ಭೂಗತ ದೊರೆ ಎಂ.ಪಿ. ಜಯರಾಜ್ ಅವರ ಜೀವನಾಧರಿತ ಚಿತ್ರ.‌
ಮಾಜಿ ಡಾನ್ ಪಾತ್ರದಲ್ಲಿ ಡಾಲಿ ಧನಂಜಯ್ ಅಟ್ಟಹಾಸ ಮೆರೆಯಲಿದ್ದಾರೆ. ಅಗ್ನಿ ಶ್ರೀಧರ್ ಅವರು ಕಥೆ ಚಿತ್ರಕಥೆ ಎಣೆದಿದ್ದು, ಶೂನ್ಯ ಎನ್ನುವ ಹೊಸ ಪ್ರತಿಭೆ ಆಕ್ಷನ್ ಕಟ್ ಹೇಳ್ತಿದ್ದಾರೆ. ನಾಳೆಯಿಂದ ಅಂದರೆ ಆಗಸ್ಟ್ 09 ರಿಂದ ಚಿತ್ರೀಕರಣ ಶುರುವಾಗಲಿದೆ. ಮೈ ಕೊಡವಿಕೊಂಡು ಹೆಡ್ ಬುಷ್ ಚಿತ್ರತಂಡ ಅಖಾಡಕ್ಕೆ ಇಳಿಯಲಿದೆ.

ಡಾಲಿಯ ಹೆಡ್ ಬುಷ್ ಚಿತ್ರಕ್ಕೆ ಪವರ್ ಸ್ಟಾರ್ ಪುನೀತ್ ಚಾಲನೆ ಕೊಟ್ಟಿದ್ದರು. ಟೈಟಲ್ ಅನೌನ್ಸ್ ಮಾಡಿ ಶುಭಕೋರಿದ್ದರು. ಅಶು ಬೆದ್ರ ಚಿತ್ರದ ನಿರ್ಮಾಣದ ಹೊಣೆ ಹೊತ್ತಿದ್ದರು. ಆದ್ರೀಗ ಹೆಡ್ ಬುಷ್ ಚಿತ್ರವನ್ನು ಕೈಬಿಟ್ಟಿದ್ದಾರೆ. ಆದ್ದರಿಂದ ಡಾಲಿ ಧನಂಜಯ್ ಹೆಡ್ ಬುಷ್ ನ ಟೇಕಾಫ್ ಮಾಡ್ತಿದ್ದಾರೆ. ಡಾಲಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣ ಗೊಳ್ಳುತ್ತಿದ್ದು ಡಾಲಿ ಜೊತೆಗೆ ತ್ರಿವಿಕ್ರಮ ಚಿತ್ರದ ನಿರ್ಮಾಪಕ ಸೋಮಣ್ಣ ಕೈಜೋಡಿಸ್ತಿದ್ದಾರೆ. ಈ ಹಿಂದೆ ಹೇಳಿದಂತೆ ಹೆಡ್ ಬುಷ್ ಆರು ಭಾಷೆಯಲ್ಲಿ ನಿರ್ಮಾಣಗೊಳ್ತಿದೆ. ಎರಡು ಚಾಪ್ಟರ್ ಗಳಾಗಿ ತಯ್ಯಾರಾಗುತ್ತಿದ್ದು, ಆಗಸ್ಟ್ 23 ರಂದು ಡಾಲಿ ಬರ್ತ್ ಡೇ ದಿನ ಹೆಡ್ ಬುಷ್ ಫಸ್ಟ್ ಲುಕ್ ರಿಲೀಸ್ ಆಗಲಿದೆ. ಶೀಘ್ರದಲ್ಲೇ ಚಿತ್ರದ ಅತೀ ದೊಡ್ಡ ತಾರಾ ಬಳಗದ ಲಿಸ್ಟ್ ಹೊರಬೀಳಲಿದೆ.

ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಚಿತ್ರರಂಗದ ಮೇಲೆ ಮತ್ತೆ ಕೊರೊನಾ ಕರಿ ನೆರಳು! ಚಿತ್ರಮಂದಿರ ಮಾಲೀಕರಲ್ಲಿ ಆತಂಕ- ನಿರ್ಮಾಪಕರಲ್ಲಿ ಗೊಂದಲ!!

ಎಲ್ಲಾ ಕ್ಷೇತ್ರಕ್ಕೂ ಹೀಗೇನಾ ಅಥವಾ ಸಿನಿಮಾ ರಂಗಕ್ಕೆ ಮಾತ್ರ ಹೀಗೇನಾ…?
– ಹೀಗಂತ ಗಾಂಧಿನಗರದ ಮಂದಿ ಮಾತಾಡಿಕೊಳ್ಳುವಂತಾಗಿದೆ. ಹೌದು, ಇದಕ್ಕೆ ಕಾರಣ, ಕೊರೊನಾ ಭಯ. ಕೊರೊನಾ ಹಾವಳಿಯಿಂದ ಚಿತ್ರರಂಗಕ್ಕೇ ದೊಡ್ಡ ಹೊಡೆತ ಬಿದ್ದಿರುವುದಂತೂ ನಿಜ. ಕೊರೊನಾ ಹೊಡೆತಕ್ಕೆ ತತ್ತರಿಸಿದ್ದ ಚಿತ್ರರಂಗ ಮೆಲ್ಲನೆ ಚೇತರಿಸಿಕೊಂಡಿದೆ. ಇನ್ನೇನು ಚಿತ್ರಮಂದಿರಗಳಲ್ಲಿ ಮತ್ತೆ ಅಬ್ಬರಿಸಬೇಕು ಎಂಬ ಉತ್ಸಾಹದಲ್ಲಿರುವಾಗಲೇ, ಕೊರೊನಾ ಹಿನ್ನೆಲೆಯಲ್ಲಿ ಚಿತ್ರಮಂದಿರಗಳು ಸಂಪೂರ್ಣ ಬಂದ್‌ ಆಗಿದ್ದೂ ಗೊತ್ತೇ ಇತ್ತು. ಲಾಕ್‌ಡೌನ್‌ ಬಳಿಕ ಸರ್ಕಾರ ಅನುಮತಿ ಕೊಟ್ಟಿದ್ದೇನೋ ನಿಜ. ಆದರೆ, ಚಿತ್ರಮಂದಿರಗಳು ಬಾಗಿಲು ತೆರೆದರೂ, ಅದೇಕೋ ಏನೋ, ಸ್ಟಾರ್‌ ಸಿನಿಮಾಗಳು ಬಿಡುಗಡೆ ಮಾಡುವ ಆಸಕ್ತಿ ತೋರಲೇ ಇಲ್ಲ. ಬಿಡುಗಡೆಯಾದ ಸಿನಿಮಾಗಳೇ ಮರು ಬಿಡುಗಡೆಯಾಗುತ್ತಿವೆಯಾದರೂ, ಜನರು ಚಿತ್ರಮಂದಿರ ಒಳ ಬರುತ್ತಿಲ್ಲ. ಇದಕ್ಕೆ ಕಾರಣ ಮತ್ತದೇ ಕೊರೊನಾ ಭಯ!

ಹೌದು, ಕೊರೊನಾ ಭಯ ಒಂದು ಕಡೆಯಾದರೆ, ಸರ್ಕಾರ ಈಗ ಶೇ.೫೦ರಷ್ಟು ಮಾತ್ರ ಆಸನ ಭರ್ತಿಗೆ ಅವಕಾಶ ನೀಡಿದೆ. ಈ ಹಿನ್ನೆಲೆಯಲ್ಲಿ ಪ್ರೇಕ್ಷಕ ಪ್ರಭುಗಳು ಕೂಡ ಚಿತ್ರಮಂದಿರದತ್ತ ಮುಖ ಮಾಡುತ್ತಿಲ್ಲ. ಸಿನಿಮಾಗಳು ಕೂಡ ತೆರೆಗೆ ಅಪ್ಪಳಿಸಲು ಮನಸ್ಸು ಮಾಡುತ್ತಿಲ್ಲ. ಸರ್ಕಾರ ಒಂದು ವೇಳೆ ಶೇ.100 ಆಸನ ಭರ್ತಿಗೆ ಅವಕಾಶ ಕೊಟ್ಟರೆ, ಸ್ಟಾರ್‌ ನಟರ ಒಂದೊಂದೇ ಸಿನಿಮಾಗಳು ತೆರೆಮೇಲೆ ಮೂಡುತ್ತವೆ. ಆಗ ಜನ ಕೂಡ ಉತ್ಸಾಹದಲ್ಲೇ ಚಿತ್ರಮಂದಿರದತ್ತ ಮುಖ ಮಾಡುತ್ತಾರೆ ಎಂಬ ದೊಡ್ಡ ಆಸೆ ಚಿತ್ರರಂಗಕ್ಕಿದೆ. ಆದಾಗ್ಯೂ ಸರ್ಕಾರ ಈಗ ಶೇ.೧೦೦ರಷ್ಟು ಭರ್ತಿಗೆ ಅವಕಾಶ ಕೊಟ್ಟಿಲ್ಲ. ಕೊಡುತ್ತದೆ ಎಂಬ ಆಶಾಭಾವದಲ್ಲೇ ಸಿನಿಮಾ ಮಂದಿ ಇದ್ದಾರೆ. ಹಾಗೇನಾದರೂ, ಶೇ.೧೦೦ ರಷ್ಟು ಅನುಮತಿ ಸಿಕ್ಕರೆ, ನಿರ್ಮಾಪಕರು ತಮ್ಮ ಸಿನಿಮಾ ಬಿಡುಗಡೆಯ ದಿನಾಂಕವನ್ನು ಘೋಷಣೆ ಮಾಡಲಿದ್ದಾರೆ. ಅದಕ್ಕಾಗಿಯೇ ಈಗ ಎದುರು ನೋಡುತ್ತಿದ್ದಾರೆ.

ಬಿಡುಗಡೆ ಮಾತು ದೂರ…
ಈಗ ಪರಿಸ್ಥಿತಿ ಮೊದಲಿನಂತಿಲ್ಲ. ಶೇ.50ರಷ್ಟು ಕೊಟ್ಟರೂ, ಚಿತ್ರಮಂದಿರದತ್ತ ಯಾವೊಬ್ಬ ಸ್ಟಾರ್‌ ಸಿನಿಮಾನೂ ತಿರುಗಿ ನೋಡಿಲ್ಲ. ಹಾಗೊಂದು ವೇಳೆ ಶೇ.100ರಷ್ಟು ಅನುಮತಿ ಕೊಟ್ಟರೂ. ಬಿಡುಗಡೆಗೆ ಸಾಧ್ಯವಾ? ಈ ಪ್ರಶ್ನೆ ಈಗ ಎದ್ದಿದೆ. ಕಾರಣ, ಸರ್ಕಾರ ಈಗ ಹೊಸದೊಂದು ನಿಯಮ ಜಾರಿ ಮಾಡಿದೆ. ಗಡಿ ರಾಜ್ಯಗಳಲ್ಲಿ ಕೊರೊನಾ ಸೋಂಕು ತೀವ್ರಗೊಂಡಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕರ್ನಾಟಕದಲ್ಲೂ ಎಚ್ಚರಿಕೆ ಕ್ರಮ ಜರುಗಿಸಿದೆ. ಗಡಿ ಜಿಲ್ಲೆಗಳಲ್ಲಿ ವೀಕೆಂಡ್‌ ಲಾಕ್‌ಡೌನ್‌ ಮತ್ತು ನೈಟ್‌ ಕರ್ಫ್ಯೂ ಜಾರಿ ಮಾಡಿ ಆದೇಶಿಸಿದೆ. ಇದರಿಂದಾಗಿ ರಾಜ್ಯದ ಗಡಿ ಜಿಲ್ಲೆಗಳಲ್ಲಿ ರಾತ್ರಿ ಪ್ರದರ್ಶನಗಳು ರದ್ದಾಗಿವೆ. ಇದರೊಂದಿಗೆ ವೀಕೆಂಡ್‌ ಪ್ರದರ್ಶನಗಳೂ ರದ್ದಾಗಿವೆ. ಹೀಗಾಗಿ ಚಿತ್ರರಂಗ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿರುವುದಂತೂ ದಿಟ.

ಹೇಗೋ ಶೇ.50ರಷ್ಟು ಭರ್ತಿಗೆ ಆದೇಶ ಕೊಟ್ಟಿತ್ತು. ಇರುವ ಆಸನಗಳು ತುಂಬುವುದೇ ಕಷ್ಟ ಇದ್ದ ಸಂದರ್ಭದಲ್ಲಿ ಈಗ ರಾತ್ರಿ ಕರ್ಫ್ಯೂ ಜಾರಿ ಮಾಡಿರುವುದರಿಂದ ಇದ್ದ ಸಣ್ಣ ಆಸೆಗೂ ಕಲ್ಲು ಬಿದ್ದಂತಾಗಿದೆ. ನಿರ್ಮಾಪಕರು ಹೇಗೋ ಬಂದಷ್ಟು ಬರಲಿ ಅಂತ ತಮ್ಮ ಸಿನಿಮಾ ರಿಲೀಸ್‌ಗೆ ರೆಡಿಯಾಗುತ್ತಿದ್ದರು. ಪೂರ್ಣ ಪ್ರದರ್ಶನಕ್ಕೆ ಅವಕಾಶ ಸಿಗುತ್ತೆ ಅನ್ನುವಾಗಲೇ ಈಗ ಸಮಸ್ಯೆ ಎದುರಾಗಿದೆ. ಮತ್ತೆ ಕೊರೊನಾ ತೀವ್ರತೆಯಾಗಿ, ಲಾಕ್‌ಡೌನ್‌ ಆಗಿಬಿಟ್ಟರೆ, ಸಿನಿಮಾರಂಗದ ಕಥೆ ಏನು? ಎಂಬ ಆತಂಕ ಕೂಡ ಸಿನಿಮಾ ಮಂದಿಯಲ್ಲಿ ಶುರುವಾಗಿದೆ. ಇಡೀ ಚಿತ್ರರಂಗ ಈಗ ಶೇ.100ರಷ್ಟು ಅವಕಾಶವನ್ನೇ ಎದುರು ನೋಡುತ್ತಿದೆ. ಇಂತಹ ಸಂದರ್ಭದಲ್ಲೇ ಕೊರೊನಾ ಮತ್ತೆ ಆವರಿಸಿಕೊಳ್ಳುವ ಸೂಚನೆ ನೀಡುತ್ತಿದೆ. ಹೀಗೇ ಮುಂದುವರೆದರೆ, ಚಿತ್ರರಂಗದ ಮೇಲೆ ಕರಿನೆರಳು ಗ್ಯಾರಂಟಿ.

ಸರ್ಕಾರ ಶೇ.100ರಷ್ಟು ಅನುಮತಿ ಕೊಟ್ಟ ಬಳಿಕ ಸ್ಟಾರ್‌ ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿದ್ದವು. ಆದರೆ, ಈಗ ಎಲ್ಲಾ ಸಿನಿಮಾಗಳೂ ಗೊಂದಲದಲ್ಲಿವೆ. ದುನಿಯಾ ವಿಜಯ್‌ ಅಭಿನಯದ ಸಲಗ ವರಮಹಾಲಕ್ಷ್ಮಿ ಹಬ್ಬಕ್ಕೆ ಬರುವುದಾಗಿ ಹೇಳಿತ್ತು. ಅಂದೇ ನಿನ್ನ ಸನಿಹಕೆ ಸಿನಿಮಾ ಕೂಡ ಬರುವುದಾಗಿ ಹೇಳಿಕೊಂಡಿತ್ತು. ಆದರೆ, ಈಗ ರಾತ್ರಿ ಕರ್ಫ್ಯೂ ಜಾರಿ ಮಾಡಿ, ಗಡಿ ಭಾಗದಲ್ಲಿ ವೀಕೆಂಡ್‌ ಲಾಕ್‌ಡೌನ್‌ ಮಾಡಿರುವುದರಿಂದ ಅದಕ್ಕೂ ಕಲ್ಲು ಬಿದ್ದಂತಾಗಿದೆ. ಅಲ್ಲಿಗೆ ಸಿನಿಮಾ ಬಿಡುಗಡೆ ಮಾಡುವ ನಿರ್ಧಾರ ಕೂಡ ಹಿಂದಕ್ಕೆ ಹೋಗಿದೆ. ಅದೇನೆ ಇರಲಿ, ಚಿತ್ರರಂಗಕ್ಕೆ ಮಾತ್ರ ಕಳೆದ ಎರಡು ವರ್ಷಗಳಿಂದ ದೊಡ್ಡ ನಷ್ಟವೇ ಆಗಿದೆ. ಈ ವರ್ಷ ಕೂಡ ಅದೇ ಆತಂಕದಲ್ಲಿದೆ. ಮುಂದಿನ ದಿನಗಳಲ್ಲಿ ಮತ್ತದೇ ಗತವೈಭವ ನೋಡಲು ಸಿನಿಮಾ ಮಂದಿ ಉತ್ಸುಕರಾಗಿದ್ದಾರೆ. ಅಂತಹ ದಿನಗಳು ಬರಲಿ ಎಂಬುದೇ ಸಿನಿಲಹರಿ ಆಶಯ.

error: Content is protected !!