Categories
ಸಿನಿ ಸುದ್ದಿ

ನವರಸ ನಟನ ಅಕಾಡೆಮಿಯ ಮಂದಹಾಸ-ಯಶಸ್ವಿಯತ್ತ ಮಾಲೂರು ನಟನಾ ಸಂಸ್ಥೆ

ಡಿ.6ರಿಂದ ಹೊಸ ಬ್ಯಾಚ್ ಶುರು ಗುರು

ಮಾಲೂರು ಶ್ರೀನಿವಾಸ್‌, ವ್ಯವಸ್ಥಾಪಕ ನಿರ್ದೇಶಕ

ಮಾಲೂರು ಶ್ರೀನಿವಾಸ್…‌

ಬಹುಶಃ ಕನ್ನಡ ಚಿತ್ರರಂಗದಲ್ಲಿ ಈ ಹೆಸರು ಚಿರಪರಿಚಿತ. ಹಿರಿಯ ನೃತ್ಯ ನಿರ್ದೇಶಕರಾಗಿರುವ ಮಾಲೂರು ಶ್ರೀನಿವಾಸ್‌, ಕಳೆದ ಎರಡು ದಶಕಗಳಿಂದಲೂ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ವಿಶೇಷ ಛಾಪು ಮೂಡಿಸಿಕೊಂಡವರು. ನೂರಾರು ಸಿನಿಮಾಗಳಿಗೆ ನೃತ್ಯ ನಿರ್ದೇಶಕರಾಗಿ ದುಡಿದಿರುವ, ಈಗಲೂ ದುಡಿಯುತ್ತಿರುವ ಮಾಲೂರು ಶ್ರೀನಿವಾಸ್‌, ಕಳೆದ ಮೂರ್ನಾಲ್ಕು ವರ್ಷಗಳಿಂದ ತಮ್ಮ ನೇತೃತ್ವದಲ್ಲಿ “ನವರಸ ನಟನ ಆಕಾಡೆಮಿ” ಸ್ಥಾಪಿಸಿದವರು.

ಅ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ಮಾಲೂರು ಈಗಾಗಲೇ ಈ ಅಕಾಡೆಮಿ ಮೂಲಕ ನೂರಾರು ಹೊಸ ಪ್ರತಿಭೆಗಳನ್ನು ತಯಾರು ಮಾಡಿದ ಕೀರ್ತಿಗೆ ಪಾತ್ರರಾದವರು. ಕೊರೊನಾ ಹೊಡೆತದಿಂದ ಇಡೀ ಜಗತ್ತೇ ಸ್ತಬ್ಧವಾಗಿತ್ತು. ಕನ್ನಡ ಚಿತ್ರರಂಗವೂ ಇದಕ್ಕೆ ಹೊರತಲ್ಲ. ಹಾಗೆಯೇ ಚಿತ್ರೀಕರಣದ ಚಟುವಟಿಕೆಗಳು, ಮನರಂಜನೆಯ ಕಾರ್ಯಕ್ರಮಗಳಿಗೂ ಬ್ರೇಕ್‌ ಬಿದ್ದಿತ್ತು. ಹಾಗೆಯೇ, ಮಾಲೂರು ಶ್ರೀನಿವಾಸ್‌ ಕೂಡ ತಮ್ಮ ಸಂಸ್ಥೆಯನ್ನು ಸ್ಥಗಿತಗೊಳಿಸಿದ್ದರು. ಈಗ ಪುನಃ ತಮ್ಮ ಅಕಾಡೆಮಿಯನ್ನು ಶುರುಮಾಡುತ್ತಿದ್ದಾರೆ.

ಎಸ್.ನಾರಾಯಣ್‌, ಪ್ರಾಂಶುಪಾಲರು

ಮಾಲೂರು ಶ್ರೀನಿವಾಸ್‌ ಅವರ “ನವರಸ ನಟನ ಅಕಾಡೆಮಿ”ಯಲ್ಲಿ ಹಿರಿಯ ನಿರ್ದೇಶಕ ಎಸ್.ನಾರಾಯಣ್ ಅವರು ಪ್ರಾಂಶುಪಾಲರು. ಡಿಸೆಂಬರ್ 6ರಿಂದ ಈ ವರ್ಷದ ಎರಡನೇ ಬ್ಯಾಚ್ ಶುರು ಮಾಡಲಾಗುತ್ತಿದೆ. ಈಗ ಲಾಕ್‌ ಡೌನ್‌ ಸಡಿಲಗೊಳ್ಳುತ್ತಿರುವುದರಿಂದ ಈಗಾಗಲೇ ಸುರಕ್ಷತೆಯೊಂದಿಗೆ ಈ ವರ್ಷದ ಮೊದಲ ಬ್ಯಾಚ್ ಯಶಸ್ವಿಯಾಗಿ ಮುಗಿಸಿದ್ದು, ಡಿ.6ರಿಂದ ಹೊಸ ತರಗತಿಗಳು ಆರಂಭವಾಗಲಿವೆ. ಈಗಲೂ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ಅಳವಡಿಸಿಕೊಂಡು ತರಗತಿ ಪ್ರಾರಂಭಿಸಲಾಗುತ್ತಿರುವುದು ವಿಶೇಷ. ಇನ್ನು ಸಾಮಾಜಿಕ ಅಂತರ, ಶುಚಿತ್ವ ಕಾಪಾಡಿಕೊಂಡು, ಒಂದು ಬ್ಯಾಚ್’ಗೆ ನಿಯಮಿತ ವಿದ್ಯಾರ್ಥಿಗಳನ್ನು ಮಾತ್ರ ಸೇರಿಸಿಕೊಂಡು ತರಗತಿ ಪ್ರಾರಂಭಿಸುವ ಉದ್ದೇಶ ಈ ಸಂಸ್ಥೆಯದ್ದು.

ನವರಸ ವಿದ್ಯಾರ್ಥಿಗಳ ಅಭಿನಯದ ದೃಶ್ಯ

ಮೊದಲಿನಿಂದಲೂ ನಡೆದುಕೊಂಡು ಬರುತ್ತಿರುವ 4 ಮತ್ತು 6 ತಿಂಗಳ ಹಾಗೂ ವಾರಾಂತ್ಯದ ನಟನೆ-ನಿರ್ದೇಶನ ತರಗತಿಗಳು ಬೆಳಗ್ಗೆ 10.30ರಿಂದ ಸಂಜೆ 5.30ರವರೆಗೆ ನಡೆಯಲಿವೆ. ಎಲ್ಲಾ ವಿದ್ಯಾರ್ಥಿಗಳಿಗೂ ನಟನೆ, ನಿರ್ದೇಶನ, ಡಾನ್ಸಿಂಗ್, ಫೈಟಿಂಗ್, ಮೂಖಾಭಿನಯ, ಮೇಕಪ್, ಸಂಕಲನ ಮತ್ತು ಡಬ್ಬಿಂಗ್ ಸೇರಿದಂತೆ ಚಿತ್ರೀಕರಣದ ಅನುಭವ, ಪೋಸ್ಟ್ ಪ್ರೊಡಕ್ಷನ್ ಬಗ್ಗೆ ಮಾಹಿತಿ ನೀಡುತ್ತಾ ಬಂದಿರುವ ಈ ಸಂಸ್ಥೆ, ಈ ಬಾರಿಯೂ ಅವೆಲ್ಲವನ್ನೂ ಮುಂದುವರೆಸಿಕೊಂಡು ಹೋಗುವ ಉತ್ಸಾಹದಲ್ಲಿದೆ. ಮಾಲೂರು ಶ್ರೀನಿವಾಸ್ ಸ್ವತಃ ಅಕಾಡೆಮಿ ವಿದ್ಯಾರ್ಥಿಗಳಿಗೆ ನೃತ್ಯ ಕಲಿಸಿಕೊಡುತ್ತಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿ ‘ನವರಸ ನಟನ ಅಕಾಡೆಮಿ’ ಸಂಸ್ಥೆಯಲ್ಲಿ ತರಬೇತಿ ಪಡೆದ ಅನೇಕ ವಿದ್ಯಾರ್ಥಿಗಳು ಇಂದು ಸಾಕಷ್ಟು ಸಿನಿಮಾ, ಧಾರಾವಾಹಿಗಳಲ್ಲಿ ನಟಿಸುವ ಮೂಲಕ ತಮ್ಮದ್ದೊಂದು ಹೊಸ ಬದುಕು ಕಟ್ಟಿಕೊಂಡು ಬಿಝಿಯಾಗುತ್ತಿದ್ದಾರೆ. ಕೆಲವರು ಸ್ವತಂತ್ರ ನಿರ್ದೇಶಕರಾಗಿ, ಕಲಾವಿದರಾಗಿ ಗುರುತಿಸಿಕೊಂಡಿರುವುದು ಈ ಅಕಾಡೆಮಿಯ ಹೆಮ್ಮೆ.

ಪ್ರಾಂಶುಪಾಲರಾದ ಎಸ್.ನಾರಾಯಣ್ ಸೇರಿದಂತೆ ನಿರ್ದೇಶಕರಾದ ವಿ.ಮನೋಹರ್, ಲಕ್ಕಿ ಶಂಕರ್, ಹಿರಿಯ ನಟರಾದ ಶಿವರಾಮ್, ಸುಂದರ್ ರಾಜ್ ಸೇರಿದಂತೆ ಚಿತ್ರರಂಗದ ಹಿರಿಯರು ಮತ್ತು ಎನ್.ಎಸ್.ಡಿ, ನೀನಾಸಂ ಬಳಗದವರು ನಟನೆ, ನಿರ್ದೇಶನ, ಡೈಲಾಗ್ ಡೆಲಿವರಿ ಹಾಗೂ ಕ್ಯಾಮೆರಾ ಮುಂದೆ ನಟಿಸುವ ಕುರಿತಂತೆ ಹಲವು ವಿಷಯಗಳನ್ನು ವಿದ್ಯಾರ್ಥಿಗಳಿಗೆ ಹೇಳಿಕೊಡುವ ಮೂಲಕ ಅವರಿಂದ ಕಿರುಚಿತ್ರ ತಯಾರಿಸಿ, ಅವರಲ್ಲಿ ಧೈರ್ಯ ತುಂಬುವ ಕೆಲಸ ಮಾಡುತ್ತಿದೆ. ಇವೆಲ್ಲದರ ಜೊತೆಗೆ ಅರ್ಹತಾ ಪತ್ರ ವಿತರಿಸಿ, ಬೆನ್ನುತಟ್ಟಿ ಕಳುಹಿಸಿಕೊಡುತ್ತಿದೆ.

ಜಗ್ಗೇಶ್ ಅವರ ಸಹಕಾರದೊಂದಿಗೆ ಈ ಸಂಸ್ಥೆ ಯಶಸ್ವಿಯಾಗಿ ನಡೆಯುತ್ತಿರುವ ಕುರಿತು ಸ್ವತಃ ವ್ಯವಸ್ಥಾಪಕ ನಿರ್ದೇಶಕ ಮಾಲೂರು ಶ್ರೀನಿವಾಸ್‌ ಖುಷಿ ವ್ಯಕ್ತಪಡಿಸುತ್ತಾರೆ. ಇನ್ನು, ಮಹಿಳೆಯರಿಗಾಗಿ ವಿಶೇಷ ರಿಯಾಯಿತಿ ಸೌಲಭ್ಯ ಕೂಡ ಇಲ್ಲಿದ್ದು, ಹೆಚ್ಚಿನ ಮಾಹಿತಿಗೆ ನವರಸ ನಟನ ಅಕಾಡೆಮಿ, ಮೊಬೈಲ್ ಸಂಖ್ಯೆ; 98802 19666 / 98804 19666 ಸಂಪರ್ಕಿಸಬಹುದಾಗಿದೆ. ಹೆಚ್ಚಿನ ವಿಷಯಕ್ಕೆ ಅಕಾಡಮಿಯ
ವೆಬ್ಸೈಟ್: www.navarasanatana.com ಸಂಪರ್ಕಿಸಬಹುದು.

Categories
ಸಿನಿ ಸುದ್ದಿ

ಇದು ಹಾಫ್‌ ಲೋಕ! ಅದ್ಧೂರಿ ಸಿನಿಮಾಗೆ ಲೋಕೇಂದ್ರ ತಯಾರಿ

ಕಲರ್‌ಫುಲ್‌ ಫೋಟೋ ಶೂಟ್ ಮೂಲಕ ಸದ್ದು

ಕನ್ನಡದಲ್ಲಿ ವಿಭಿನ್ನ ಸಿನಿಮಾ ಮೂಲಕ ಸುದ್ದಿಯಾಗಿದ್ದ ನಿರ್ದೇಶಕ ಕಮ್‌ ನಿರ್ಮಾಪಕ ಲೋಕೇಂದ್ರ ಸೂರ್ಯ ಇದೀಗ ಸದ್ದಿಲ್ಲದೆಯೇ ಹೊಸ ಚಿತ್ರಕ್ಕೆ ಕೈ ಹಾಕಿದ್ದಾರೆ. ಹೌದು, ಈ ಹಿಂದೆ “ಅಟ್ಟಯ್ಯ ವರ್ಸಸ್‌ ಹಂದಿ ಕಾಯೋಳು” ಸಿನಿಮಾ ಮೂಲಕ ಜೋರು ಸುದ್ದಿಯಾಗಿದ್ದ ಲೋಕೇಂದ್ರ ಅವರೀಗ “ಹಾಫ್”‌ ಎಂಬ ಹೊಸ ಚಿತ್ರ ಶುರುಮಾಡಿದ್ದಾರೆ. ಅವರ ಮೊದಲ ಚಿತ್ರ. “ಅಟ್ಟಯ್ಯ ವರ್ಸಸ್‌ ಹಂದಿ ಕಾಯೋಳು” ಸಿನಿಮಾ ಕಳೆದ 2018ರ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿ, ಜನಮನ್ನಣೆ ಗಳಿಸಿತ್ತು. ಅಷ್ಟೇ ಅಲ್ಲ, ಮಾಧ್ಯಮಗಳ ಹೊಗಳಿಕೆಗೂ ಕಾರಣವಾಗಿತ್ತು. ಅದಾದ ಬಳಿಕ ಲೋಕೇಂದ್ರ ಸೂರ್ಯ ಅವರು, ʼಚಡ್ಡಿ ದೋಸ್ತ್‌ʼ ಕಡ್ಡಿ ಅಲ್ಲಾಡ್‌ಸ್ಬುಟ್ಟ” ಚಿತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಈಗ ಅವರು “ಹಾಫ್”‌ ಚಿತ್ರದ ಮೂಲಕ ಹೊಸ ಸುದ್ದಿಗೆ ಕಾರಣವಾಗಲು ತಯಾರಿ ನಡೆಸಿದ್ದಾರೆ.


ಅಂದಹಾಗೆ, ಲೋಕೇಂದ್ರ ಸೂರ್ಯ ಅವರು ಈ ಹಿಂದೆಯೇ, “ಹಾಫ್”‌ ಚಿತ್ರ ಮಾಡುವ ಕುರಿತು “ಸಿನಿಲಹರಿ”ಯಲ್ಲಿ ಹೇಳಿಕೊಂಡಿದ್ದರು. ಅದಕ್ಕೀಗ ಚಾಲನೆ ದೊರೆತಿದ್ದು, ಒಂದೊಳ್ಳೆಯ ಫೋಟೋ ಶೂಟ್‌ ಕೂಡ ನಡೆಸಿದ್ದಾರೆ. ಇನ್ನು, ಆರ್.ಡಿ. ಎಂಟರ್ ಪ್ರೈಸಸ್, ರಾಜು ಕಲ್ಕುಣಿ ಅವರ ಬ್ಯಾನರ್ನಡಿ ಡಾ.ಆರ್. ಪವಿತ್ರ ರೆಡ್ಡಿ ನಿರ್ಮಿಸುತ್ತಿರುವ ʻಹಾಫ್ʼ ಚಿತ್ರಕ್ಕೆ ಲೋಕೇಂದ್ರ ಸೂರ್ಯ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಜೊತೆಗೆ ನಾಯಕ ನಟನಾಗಿಯೂ ಅಭಿನಯಿಸುತ್ತಿದ್ದಾರೆ.

ಮಲ್ಲಿಕಾರ್ಜುನ್ ಅವರ ಛಾಯಾಗ್ರಹಣವಿದೆ. ಯುಡಿವಿ ವೆಂಕಿ ಸಂಕಲನ, ರಾಕಿ ಸೋನು ಸಂಗೀತ ನೀಡಲಿದ್ದಾರೆ. ಡಾ. ಥ್ರಿಲ್ಲರ್ ಮಂಜು ಸಾಹಸ, ಋತು ಚೈತ್ರ ಅವರ ವಸ್ತ್ರಾಲಂಕಾರ ಚಿತ್ರಕ್ಕಿದೆ. ಆಸಿಯಾ, ಅಥಿರಾ, ರಾಜು ಕಲ್ಕುಣಿ, ಡಾ. ಆರ್. ಪವಿತ್ರಾ ರೆಡ್ಡಿ, ರಕ್ಷಾ, ರೆಡ್ ಅಂಡ್ ವೈಟ್ ಸವೆನ್ ರಾಜ್, ಸಿವಿಜಿ ಚಂದ್ರು, ರೋಹಿಣಿ ಕೆ. ರಾಜ್ ಮುಂತಾದವರು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಕೃಷ್ಣ ಸಹ ನಿರ್ದೇಶನ, ಶ್ರೀವತ್ಸ, ಭರತ್, ಧೃವಿನ್, ಶಂಕರ್, ನವೀನ್ ಚಲ, ಮನೋಜ್ ಆರ್, ಪುನೀತ್ ಎಲ್, ವಿಜಯ್ ಚಂದ್ರ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರು, ತುಮಕೂರು, ಮೈಸೂರು, ಮಂಗಳೂರು ಇತರ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಯಲಿದೆ.


ಭಾರತೀಯ ಚಿತ್ರರಂಗದಲ್ಲೇ ಒಂದು ವಿಶೇಷ ಎನಿಸುವ ಕಥೆಯನ್ನು ಈ ʻಹಾಫ್ʼ ಚಿತ್ರದ ಮೂಲಕ ಹೇಳಹೊರಟಿದ್ದಾರೆ ಲೋಕೇಂದ್ರ ಸೂರ್ಯ. ಈ ಹಿಂದೆ ನಿರ್ದೇಶಕ ಕಮ್‌ ಹೀರೋ ಲೋಕೇಂದ್ರ ಸೂರ್ಯ ಅವರು ತಮ್ಮ ಚಂದ್ರ ಮೆಲೋಡೀಸ್ ತಂಡ ಕಟ್ಟಿಕೊಂಡು ಆರ್ಕೆಸ್ಟ್ರಾ ನಡೆಸುತ್ತಿದ್ದರು. ಸಿನಿಮಾ ಪ್ರೀತಿ ಇಟ್ಟುಕೊಂಡಿರುವ ಲೋಕೇಂದ್ರ ಸೂರ್ಯ ಅವರಿಗೆ ಮೊದಲ ಚಿತ್ರವೇ ಅಂತಾರಾಷ್ಟ್ರೀಯ ಚಿತ್ತೋತ್ಸವಕ್ಕೆ ಆಯ್ಕೆ ಆಗಿದ್ದರಿಂದ ಇನ್ನೂ ಒಳ್ಳೆಯ ಸಿನಿಮಾ ಮಾಡಬೇಕು ಎಂಬ ಉದ್ದೇಶದಿಂದ ಅವರು, ಈಗ ʻಹಾಫ್ʼ ಸಿನಿಮಾವನ್ನು ಆರಂಭಿಸಿದ್ದಾಗಿ ಹೇಳುತ್ತಾರೆ.


ಅದೇನೆ ಇರಲಿ, ಅವರ ಈ “ಹಾಫ್” ಚಿತ್ರದ ಕಥಾವಸ್ತು ಏನು? ಈ ಚಿತ್ರದಲ್ಲಿ ವಿಶೇಷತೆ ಏನಿದೆ ಎಂಬ ಇತ್ಯಾದಿ ವಿಷಯಗಳನ್ನು ಸಿನಿಮಾದಲ್ಲೇ ನೋಡಬೇಕು ಎನ್ನುವ ಅವರು, ಚಿತ್ರದಲ್ಲಿ ಮೂವರು ನಾಯಕಿಯರಿದ್ದಾರೆ. ಇನ್ನು, ಈ ಚಿತ್ರ ಒಂದು ದೊಡ್ಡ ಬಜೆಟ್‌ನಲ್ಲೇ ತಯಾರಾಗಲಿದೆ. ಸಿನಿಮಾಗೆ ಏನೆಲ್ಲಾ ಬೇಕೋ ಎಲ್ಲವನ್ನೂ ಪೂರ್ಣಗೊಳಿಸುವ ಮೂಲಕ ಪಕ್ಕಾ ಕಮರ್ಷಿಯಲ್ ಅಂಶಗಳೊಂದಿಗೆ ಚಿತ್ರ ಮಾಡುವುದಾಗಿ ಹೇಳುತ್ತಾರೆ ಲೋಕೇಂದ್ರ ಸೂರ್ಯ.

Categories
ಸಿನಿ ಸುದ್ದಿ

ಯೆಲ್ಲೋ ಗ್ಯಾಂಗ್ಸ್‌ ಫಸ್ಟ್‌ ಲುಕ್‌ ಹೊರಬಂತು

ಡಾಲಿ ಧನಂಜಯ್‌ ರಿಲೀಸ್‌ ಮಾಡಿ ಶುಭ ಹಾರೈಕೆ

ಕನ್ನಡದಲ್ಲಿ ಇತ್ತೀಚೆಗೆ ಕ್ರೈಮ್‌ ಥ್ರಿಲ್ಲರ್‌ ಚಿತ್ರಗಳ ಸಂಖ್ಯೆ ಹೆಚ್ಚುತ್ತಿದೆ. ಆ ಸಾಲಿಗೆ “ಯೆಲ್ಲೋ ಗ್ಯಾಂಗ್ಸ್‌” ಚಿತ್ರವೂ ಸೇರಿದೆ. ಈಗಾಗಲೇ ಎರಡು ಹಂತಗಳಲ್ಲಿ ೨೫ ದಿನಗಳ ಕಾಲ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ, ಇತ್ತೀಚೆಗೆ ಚಿತ್ರದ ಫಸ್ಟ್‌ಲುಕ್‌ ಬಿಡುಗಡೆ ಮಾಡಿದೆ. ನಟ “ಡಾಲಿ” ಧನಂಜಯ್‌ ಅವರು ಚಿತ್ರಗಳ ಪಾತ್ರ ಪರಿಚಯಿಸುವ ಫಸ್ಟ್‌ ಲುಕ್‌ ಬಿಡುಗಡೆ ಮಾಡಿ ಶುಭಹಾರೈಸಿದ್ದಾರೆ. ಪ್ರವೀಣ್‌ ಮೇಗಳಮನಿ ಅವರ ವಿನ್ಯಾಸದ ಆ ಫಸ್ಟ್‌ ಲುಕ್‌ಗೆ ಎಲ್ಲೆಡೆಯಿಂದ ಮೆಚ್ಚುಗೆ ಸಿಗುತ್ತಿದೆ. ವಿಭಿನ್ನ ಸ್ಟುಡಿಯೊಸ್, ಕೀ ಲೈಟ್ಸ್ ಮತ್ತು ವಾಟ್ ನೆಕ್ಸ್ಟ್ ಮೂವೀಸ್ ಸಂಸ್ಥೆಗಳ ಸಹಯೋಗದಲ್ಲಿ ಈ ಸಿನಿಮಾ ನಿರ್ಮಾಣವಾಗಿದ್ದು, ರವೀಂದ್ರ ಪರಮೇಶ್ವರಪ್ಪ ರಚಿಸಿ ನಿರ್ದೇಶಿಸಿದ್ದಾರೆ. ಬಹುತೇಕ ಬೆಂಗಳೂರಲ್ಲಿ ಚಿತ್ರೀಕರಣ ನಡೆದಿದೆ. ಸುಜ್ಞಾನ್ ಚಿತ್ರಕ್ಕೆ ಕ್ಯಾಮೆರಾ ಹಿಡಿದರೆ, ರೋಹಿತ್ ಸೋವರ್ ಅವರ ಸಂಗೀತವಿದೆ. ಸುರೇಶ್ ಆರ್ಮುಗಂ ಅವರ ಸಂಕಲನವಿದೆ. ರವೀಂದ್ರ ಪರಮೇಶ್ವರಪ್ಪ ಹಾಗೂ ಪ್ರವೀಣ್ ಕುಮಾರ್ ಜಿ ಅವರ ಸಂಭಾಷಣೆ ಚಿತ್ರಕ್ಕಿದೆ. ಚಿತ್ರಕ್ಕೆ ಮನೋಜ್ ಪಿ, ಜಿ.ಎಂ.ಆರ್ ಕುಮಾರ್ (ಕೆವಿಜಿ), ಡಿ.ಎಸ್ ಪ್ರವೀಣ್ ಹಾಗೂ ಜೆ.ಎನ್.ವಿ, ಶಿವಮೊಗ್ಗ ಶಾಲೆಯ ಮಾಜಿ ವಿದ್ಯಾರ್ಥಿಗಳು ಚಿತ್ರದ ಸಹ ನಿರ್ಮಾಪಕರಾಗಿದ್ದಾರೆ.
ಲೋಕೇಶ್ ಹಿತ್ತಲಕೊಪ್ಪ ಅವರು ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿದ್ದು, ಷಣ್ಮುಖ ಹಿರೇಮಧುರೆ ಮತ್ತು ಸುಪ್ರೀತ್ ಅವರ ಕಲಾ ನಿರ್ದೇಶನವಿದೆ. ಚಿತ್ರಕ್ಕೆ ಚೇತನ್ ಡಿಸೋಜಾ ಅವರ ಸಾಹಸ ಸಂಯೋಜನೆ ಮತ್ತು ದಿಲೀಪ್ ಶಿವಾನಂದ ಅವರ ವಸ್ತ್ರವಿನ್ಯಾಸವಿದೆ. ತಾರಾಗಣದಲ್ಲಿ ಬಲರಾಜ್ವಾಡಿ, ನಾಟ್ಯ ರಂಗ, ದೇವ್ ದೇವಯ್ಯ, ಅರ್ಚನಾ ಕೊಟ್ಟಿಗೆ, ಸತ್ಯ ಉಮ್ಮತ್ತಾಲ್, ಪ್ರದೀಪ್ ಪೂಜಾರಿ, ವಿನೀತ್ ಕಟ್ಟಿ, ಮಲ್ಲಿಕಾರ್ಜುನ ದೇವರಮನೆ, ನಂದಗೋಪಾಲ್, ರವಿ ಗಜ ಜಿಗಣಿ, ನೀನಾಸಂ ದಯಾನಂದ್, ಸತ್ಯ ಬಿ.ಜಿ, ವಿಠ್ಠಲ್ ಪರೀಟ, ಅರುಣ್ ಕುಮಾರ್, ಶ್ರೀಹರ್ಷ, ಸಂಚಾರಿ ಮಧು, ಪ್ರವೀಣ್ ಕೆ.ಬಿ, ಪವನ್ ಕುಮಾರ್ ಇತರರಿದ್ದಾರೆ. ಇತ್ತೀಚೆಗಷ್ಟೇ ಯೋಗರಾಜ್ ಭಟ್ ಚಿತ್ರದ ಶೀರ್ಷಿಕೆ ಅನಾವರಣಗೊಳಿಸಿದ್ದರು. ಈಗ ಧನಂಜಯ್‌ ಫಸ್ಟ್‌ ಲುಕ್‌ ಬಿಡುಗಡೆ ಮಾಡಿದ್ದಾರೆ.

Categories
ಸಿನಿ ಸುದ್ದಿ

ಶುಗರ್ ಲೆಸ್ ಶೂಟಿಂಗ್ ಮುಗೀತು

ಚೊಚ್ಚಲ ನಿರ್ದೇಶನದ ಚಿತ್ರವನ್ನು ಯಶಸ್ವಿಯಾಗಿ ಮುಗಿಸಿದ ಶಶಿಧರ್

‘ಡಾಟರ್‌ ಆಫ್ ಪಾರ್ವತಮ್ಮ’ ಮೂಲಕ ನಿರ್ಮಾಪಕರಾದ ಶಶಿಧರ್‌ ಕೆ.ಎಂ.ಅವರು ಹೊಸದೊಂದು ಕಥೆ ಬರೆದು, ಅದಕ್ಕೆ ‘ಶುಗರ್ ಲೆಸ್’ ಎಂಬ ಹೆಸರಿಟ್ಟು ನಿರ್ದೇಶನ ಮಾಡಲು ಹೊರಟಿದ್ದು ಎಲ್ಲರಿಗೂ ಗೊತ್ತು. ಈಗ. ಆ ಚಿತ್ರದ ಹೊಸ ಸುದ್ದಿ ಅಂದರೆ, ಆ ಚಿತ್ರವನ್ನು ಶಶಿಧರ್ ತಮ್ಮ ಚಿತ್ರತಂಡದೊಂದಿಗೆ ಯಶಸ್ವಿಯಾಗಿ ಮುಗಿಸಿದ್ದಾರೆ.


ಹೌದು, ‘ಶುಗರ್ ಲೆಸ್’ ಇತ್ತೀಚೆಗಷ್ಟೆ ಸೆಟ್ಟೇರಿತ್ತು. ಈಗ ನೋಡಿದರೆ ಚಿತ್ರವನ್ನು ಪೂರ್ಣಗೊಳಿಸಿದ್ದಾರೆ.
ಅವರ ಚೊಚ್ಚಲ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವ ಮೂಲಕ ನಿರ್ದೇಶನದ ಜರ್ನಿ ಶುರು ಮಾಡಿದ ಶಶಿಧರ್, ಕನ್ನಡ ಚಿತ್ರರಂಗಕ್ಕೆ ಒಂದೊಳ್ಳೆಯ ಸಂದೇಶ ಇರುವ ಸಿನಿಮಾ‌ ಕಟ್ಟಿಕೊಡಬೇಕು ಎಂಬ ಉದ್ದೇಶದಿಂದ ‘ಶುಗರ್ ಲೆಸ್’ ಶುರು ಮಾಡಿದ್ದರು.

ಪುಷ್ಕರ್ ಮಲ್ಲಿಕಾರ್ಜುನ, ಶಶಿಧರ್

ಪುಷ್ಕರ್ ಫಿಲ್ಮ್ಸ್ ಸಹಯೋಗದಲ್ಲಿ ‘ಶುಗರ್ ಲೆಸ್’ ಚಿತ್ರದ ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿ ಹೊತ್ತಿರುವ ಶಶಿಧರ್, ಈ ಮೂಲಕ ಡಯಾಬಿಟಿಸ್‌ ಕುರಿತ ಕಥೆ ಹೇಳಿದ್ದಾರೆ. ಈ ಕಥೆ ಜೊತೆ ಒಂದು ಬ್ಲಾಕ್‌ ಕಾಮಿಡಿಯಲ್ಲೇ ಗಂಭೀರ ವಿಷಯ ಹೇಳಲು ಮುಂದಾಗಿರುವ ಅವರು,
ಇಂದು ಡಯಾಬಿಟಿಕ್‌ ಅನ್ನೋದು, ಮಕ್ಕಳಿಂದ ಹಿಡಿದು ದೊಡ್ಡವರಿಗೂ ಇದೆ. ಆದರೆ, ಅದೇ ಸುಮಾರು 30 ವರ್ಷದ ಯುವಕನಿಗೆ ಡಯಾ ಬಿಟಿಸ್‌ ಬಂದಾಗ, ಅವರ ಬದುಕು ಹೇಗೆ ಇರುತ್ತೆ. ನಿತ್ಯ ಅವನ ಬದುಕಲ್ಲಿ ಏನೆಲ್ಲಾ ಸಮಸ್ಯೆ ಎದುರಾಗುತ್ತವೆ.

ಸಮಾಜದಲ್ಲಿ ಆ ವಿಷಯವನ್ನು ಹೇಳಿಕೊಳ್ಳಲೂ ಆಗದ ವ್ಯಕ್ತಿಗಳು ಎಷ್ಟೆಲ್ಲಾ ಯಾತನೆ ಅನುಭವಿಸುತ್ತಾರೆ ಎಂಬುದನ್ನು ಹೇಳುವ ಪ್ರಯತ್ನಕ್ಕೆ ಮುಂದಾಗಿದ್ದಾರಂತೆ ನಿರ್ದೇಶಕರು.
ಇನ್ನು ಇದೇ ಮೊದಲ‌ ಸಲ ಯಾವ ಭಾಷೆಯಲ್ಲೂ ಈ ರೀತಿಯ ಕಂಟೆಂಟ್‌ ಇರದ ಕಾರಣ, ಅವರು ಇದನ್ನೇ ಇಟ್ಟು ಕೊಂಡು ಹೊಸ ವ್ಯಾಖ್ಯಾನದೊಂದಿಗೆ ಸಿನಿಮಾ ಮಾಡಲು ಹೊರಟಿದ್ದಾಗಿ ಹೇಳುತ್ತಾರೆ.


ತಮ್ಮ ದಿಶಾ ಎಂಟರ್‌ಟೈನರ್ಸ್‌ ಬ್ಯಾನರ್‌ನಲ್ಲಿ ಈ ಚಿತ್ರ ನಿರ್ಮಿಸುತ್ತಿದ್ದು, ಶಶಿಧರ್‌ ಗೆ ನಿರ್ಮಾಪಕ ಪುಷ್ಕರ್‌ ಕೈ ಜೋಡಿಸಿದ್ದು, ಈಗ ಯಶಸ್ವಿಯಾಗಿ ಸಿನಿಮಾ ಮುಗಿಸಿರುವ ಶಶಿಧರ್, ಆದಷ್ಟು ಬೇಗ ಪ್ರೇಕ್ಷಕರ ಮುಂದೆ ಸಿನಿಮಾ ತರುವ ತಯಾರಿಯಲ್ಲಿದ್ದಾರೆ.

 

Categories
ಸಿನಿ ಸುದ್ದಿ ಸೌತ್‌ ಸೆನ್ಸೇಷನ್

ವಸಿಷ್ಠ ಈಗ ವಿಶಿಷ್ಟ..! ಚೊಚ್ಚಲ ತೆಲುಗು ಚಿತ್ರದ ಫಸ್ಟ್‌ ಲುಕ್‌ ರಿಲೀಸ್

ನೋಡಿರದ, ಮಾಡಿರದ ಒಂದು ಅದ್ಭುತ ಪಾತ್ರ ಎಂದ ಸಿಂಹ

ಕಂಚಿನ ಕಂಠದ ನಟ ವಸಿಷ್ಠ ಸಿಂಹ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಹೊಸ ಛಾಪು ಮೂಡಿಸಿರುವುದು ಗೊತ್ತೇ ಇದೆ. ತಮ್ಮ ಕಂಠದಿಂದ, ಅದ್ಭುತ ನಟನೆಯಿಂದ ಅವರು ಈಗಾಗಲೇ ಒಂದಷ್ಟು ಅಭಿಮಾನಿ ಬಳಗವನ್ನು ಹೊಂದಿರುವುದೂ ಗೊತ್ತಿದೆ. ಅವರು ಕನ್ನಡಕ್ಕಷ್ಟೇ ಸೀಮಿತ ಅಂದುಕೊಂಡರೆ ಆ ಊಹೆ ಶುದ್ಧ ತಪ್ಪು. ಅವರು ಈಗಾಗಲೇ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ ಎಂಬ ಸುದ್ದಿ ದಟ್ಟವಾಗಿ ಹರಡಿದ್ದು ಗೊತ್ತಿದೆ. ಅವರು ತೆಲುಗಿನ “ಓದೆಲ ರೈಲ್ವೇ ಸ್ಟೇಷನ್” ಎಂಬ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದು ಹಳೆಯ ಸುದ್ದಿಯೇನೋ ನಿಜ. ಆದರೆ, ತಮ್ಮ ಮೊದಲ ತೆಲುಗು ಸಿನಿಮಾದಿಂದ ಹೀಗೊಂದು ಫಸ್ಟ್‌ ಲುಕ್‌ ಹೊರಬಂದಿದೆ. ಅದೇ ಈ ಹೊತ್ತಿನ ವಿಶೇಷ.


ಹೌದು, ವಸಿಷ್ಠ ಸಿಂಹ ಅವರು “ಓದೆಲ ರೈಲ್ವೇ ಸ್ಟೇಷನ್” ಚಿತ್ರದಲ್ಲಿ ಹೀರೋ. ಅದೊಂದು ವಿಶಿಷ್ಠ , ವಿಭಿನ್ನ ಕಥೆ, ಪಾತ್ರ ಹೊಂದಿರುವ ಸಿನಿಮಾ. ಈ ಚಿತ್ರದ ಫಸ್ಟ್ ಲುಕ್ ಬಿಡುಗೆಡಯಾಗಿದೆ. ಇನ್ನು, ಆ ಚಿತ್ರದಲ್ಲಿ ನಟ ವಸಿಷ್ಠ ಸಿಂಹ ಅವರು ತಿರುಪತಿ ಎನ್ನುವ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಅವರ ಫಸ್ಟ್‌ ಲುಕ್‌ ಪೋಸ್ಟರ್‌ ನೋಡಿದವರಿಗೆ ವಸಿಷ್ಠ ಸಿಂಹ ಒಬ್ಬ ಧೋಬಿ ಪಾತ್ರದಾರಿ ಎಂಬುದು ಗೊತ್ತಾಗುತ್ತದೆ. ಇನ್ನು, ವಸಿಷ್ಠ ಅವರು ತಮ್ಮ ಚೊಚ್ಚಲ ತೆಲುಗು ಚಿತ್ರವಾಗಿರುವ “ಓದೆಲ ರೈಲ್ವೇ ಸ್ಟೇಷನ್” ಚಿತ್ರದ ಫಸ್ಟ್‌ ಶೇರ್ ಮಾಡುವ ಮೂಲಕ, “ಇದುವರೆಗೂ ನೋಡಿರದ, ಮಾಡಿರದ, ಒಂದು ಅದ್ಭುತ ಪಾತ್ರ..” ಎಂದು ಹೇಳಿಕೊಂಡಿದ್ದಾರೆ.


‘ತಿರುಪತಿ ಎಂಬ ಮೃದು ಮನಸ್ಸಿನ ಸಾಧಾರಣ ಯುವಕ, ಹಳ್ಳಿ ಹೈದ, ಓರ್ವ ಧೋಬಿ. ಇದು ನನ್ನ ಚೊಚ್ಚಲ ತೆಲುಗು ಸಿನೆಮಾ “ಓದೆಲ ರೈಲ್ವೇ ಸ್ಟೇಷನ್”ನ ಪಾತ್ರದ ಪರಿಚಯ ಎಂದಿರುವ ಅವರು, ನಾನು ಈವರೆಗೂ ನೋಡಿರದ, ಮಾಡಿರದ, ಒಂದು ಅದ್ಭುತ ಪಾತ್ರ’ ಎಂದಿದ್ದಾರೆ. ಸದ್ಯಕ್ಕೆ ವಸಿಷ್ಠ ಸಿಂಹ ಅವರು ಶೇರ್‌ ಮಾಡಿರುವ ಆ ಫಸ್ಟ್‌ ಲುಕ್‌ ಪೋಸ್ಟರ್‌ಗೆ ಎಲ್ಲಡೆಯಿಂದ ಭರ್ಜರಿ ಮೆಚ್ಚುಗೆ ಸಿಗುತ್ತಿದೆ. “ಓದೆಲ ರೈಲ್ವೆ ಸ್ಟೇಷನ್” ಒಂದು ನೈಜ ಘಟನೆ ಆಧಾರಿತ ಚಿತ್ರವಂತೆ. ಖರೀಮ್ ನಗರದಲ್ಲಿ ನಡೆದ ಒಂದು ಘಟನೆ ಇಟ್ಟುಕೊಂಡು ಚಿತ್ರ ಮಾಡಲಾಗುತ್ತಿದ್ದು, ಕಥೆ, ಪಾತ್ರ ಕೇಳಿಯೇ ವಸಿಷ್ಠ ಸಿನಿಮಾ ಬಿಡಬಾರದು ಅಂತ ಒಪ್ಪಿ, ಅಪ್ಪಿಕೊಂಡು ಚಿತ್ರ ಮಾಡುತ್ತಿದ್ದಾರೆ.


ಇನ್ನು, ಈ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದಾರೆ. ಹೆಬಾ ಪಟೇಲ್ ಮತ್ತು ಪೂಜಿತಾ ಪೊನ್ನಡ ವಸಿಷ್ಠಗೆ ಜೋಡಿ. ಈಗಾಗಲೇ ಹೆಬಾ ಪಟೇಲ್ ಅವರ ಫಸ್ಟ್‌ ಲುಕ್‌ ಕೂಡ ರಿಲೀಸ್ ಮಾಡಲಾಗಿದೆ. ಹೆಬಾ ಪಟೇಲ್ ಈಗಾಗಲೇ ಕನ್ನಡದ “ಅಧ್ಯಕ್ಷ” ಚಿತ್ರದಲ್ಲಿ ಟಿಸಿದ್ದಾರೆ. ಅಶೋಕ್ ತೇಜ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಸದ್ಯ
ವಸಿಷ್ಠ ಅವರು ಫುಲ್‌ ಬಿಝಿಯಾಗಿದ್ದಾರೆ. ಅವರ ಕೈಯಲ್ಲಿ ಒಂದಷ್ಟು ಸಾಲು ಸಾಲು ಚಿತ್ರಗಳಿವೆ. “ಕಾಲಚಕ್ರ”, “ಪಂತ”, “ಯುವರತ್ನ” ಸೇರಿದಂತೆ ಸಾಕಷ್ಟು ಸಿನಿಮಾಗಳಿವೆ. ಇತ್ತೀಚೆಗೆ “ತಲ್ವಾರ್”‌ ಚಿತ್ರವೂ ಸೆಟ್ಟೇರಿದೆ. ಸಿನಿಮಾಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆಯೇ ವಸಿಷ್ಠ ಸಿಂಹ ಅವರ ಅಭಿಮಾನಿಗಳ ಸಂಖ್ಯೆಯೂ ಹೆಚ್ಚುತ್ತಿದೆ ಎಂಬುದು ವಿಶೇಷ.

 

 

Categories
ಸಿನಿ ಸುದ್ದಿ

ಧ್ರುವ ಸರ್ಜಾ ಕೂದಲಿಗೆ ಕತ್ತರಿ! ಕ್ಯಾನ್ಸರ್‌ ಪೀಡಿತರಿಗೆ ಕೂದಲು ದಾನ

ಪೊಗರು ಶೂಟಿಂಗ್‌ ಮುಗಿಸಿದ ಆಕ್ಷನ್ ಪ್ರಿನ್ಸ್‌‌

 

ನಟ ಧ್ರುವ ಸರ್ಜಾ ಹೊಸ ಗೆಟಪ್‌ನಲ್ಲಿದ್ದಾರೆ!
ಹಾಗಂತ ಅವರೇನು ಹೊಸ ಸಿನಿಮಾಗೆ ಈ ಗೆಟಪ್‌ನಲ್ಲಿದ್ದಾರಾ ಅನ್ನುವ ಪ್ರಶ್ನೆ ಸಹಜ. ವಿಷಯವಿಷ್ಟೇ, ಅವರು, “ಪೊಗರು” ಚಿತ್ರಕ್ಕಾಗಿ ವರ್ಷಗಟ್ಟಲೇ ಬೆಳೆಸಿದ್ದ ತಮ್ಮ ಕೂದಲಿಗೆ ಕತ್ತರಿ ಹಾಕಿದ್ದಾರೆ. ಅದೇ ಈ ಹೊಸ ಗೆಟಪ್‌ನ ಸುದ್ದಿ. ಹೌದು, “ಪೊಗರು” ಚಿತ್ರದ ಚಿತ್ರೀಕರಣ ಈಗ ಪೂರ್ಣಗೊಂಡಿದೆ. ಹೀಗಾಗಿ, ಅವರು ತಮ್ಮ ಕೂದಲಿಗೆ ಕತ್ತರಿ ಹಾಕಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಧ್ರುವ ಸರ್ಜಾ ಅವರು ತಮ್ಮ ಕೂದಲನ್ನು ಬೆಳೆಸಿದ್ದರು. ಈಗ ಕತ್ತರಿ ಹಾಕಿಸಿದ್ದರೂ, ಆ ಕೂದಲನ್ನು ವಿಶೇಷವಾಗಿ ದಾನ ಮಾಡುವ ಮೂಲಕ ಸುದ್ದಿಯಾಗಿದ್ದಾರೆ.

ಧ್ರುವ ಅವರು ತಮ್ಮ ಕೂದಲನ್ನು ಕ್ಯಾನ್ಸರ್ ಪೀಡಿತ ಮಕ್ಕಳಿಗೆ ದಾನ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಸದ್ಯಕ್ಕೆ ಅವರು ತಮ್ಮ ಕೂದಲಿಗೆ ಕತ್ತರಿ ಹಾಕುವ ವಿಡಿಯೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದು, “ಪೊಗರು ಶೂಟಿಂಗ್ ಮುಗಿದಿದೆ. ನನ್ನ ಸ್ನೇಹಿತರೆಲ್ಲ ಕೂದಲು ದಾನ ಮಾಡುವಂತೆ ಹೇಳಿದರು. ಹಾಗಾಗಿ ಈ ನಿರ್ಧಾರ ಮಾಡಿದ್ದೇನೆ ಎಂಬುದು ಅವರ ಹೇಳಿಕೆ. ಸಮಾರು 10 ಇಂಚು ಉದ್ದ ಇರುವ ಕೂದಲನ್ನು ದಾನ ಮಾಡಬಹುದು. ಸಾಕಷ್ಟು ಜನ ಕೂಡ ಈಗಾಗಲೇ ದಾನ ಮಾಡಿದ್ದಾರೆ. ಕ್ಯಾನ್ಸರ್ ಬಂದು ಕೂದಲು ಉದುರುವ 15 ವರ್ಷದ ಒಳಗಿನ ಮಕ್ಕಳಿಗೆ ಕೂದಲು ಉಪಯೋಗವಾಗುತ್ತೆ. ಅವರಿಗೆ ಸಹಾಯವಾಗಲಿ ಎಂದು ಹೀಗೆ ಮಾಡುತ್ತಿದ್ದೇನೆ. ಕೂದಲು ಕತ್ತರಿಸುವ ಎಲ್ಲರೂ ಹೀಗೆ ಮಾಡಿದರೆ ಸಾಕಷ್ಟು ಜನರಿಗೆ ಒಳ್ಳೆಯದಾಗುತ್ತೆ.’ ಎಂದು ಧ್ರುವ ಸರ್ಜಾ ಮನವಿ ಮಾಡಿದ್ದಾರೆ.

 

 

Categories
ಸಿನಿ ಸುದ್ದಿ

2020…! ಈ ಸಲ ಗೆಲುವು ನಮ್ದೇ ಅಂತಾರೆ ಕೋಮಲ್

 ಕಾಮಿಡಿ ಸಿನ್ಮಾ ಮೂಲಕ ಕೋಮಲ್‌ ಹೊಸ ಇನ್ನಿಂಗ್ಸ್‌ ಶುರು

ನವೆಂಬರ್‌ ಅಂತ್ಯದಿಂದ ಶೂಟಿಂಗ್‌ 

ನಟ ಕೋಮಲ್‌ ಮತ್ತೆ ಸುದ್ದಿಯಲ್ಲಿದ್ದಾರೆ…

ಹೌದು, ಈ “2020” ಜಗತ್ತಿನಾದ್ಯಂತ ಸಾಕಷ್ಟು ಸಮಸ್ಯೆ ತಂದೊಡ್ಡಿದ್ದು ಎಲ್ಲರಿಗೂ ಗೊತ್ತಿದೆ. ಆದರೆ, ಅದೇ “2020” ಮೂಲಕ ಸಮಸ್ಯೆ ಬದಿಗಿಟ್ಟು, ಒಂದೊಳ್ಳೆಯ ಯಶಸ್ಸನ್ನು ಕೊಡುವ ಹುಮ್ಮಸ್ಸಿನಲ್ಲಿದ್ದಾರೆ ಕೋಮಲ್.‌ ಹೀಗಂದಾಕ್ಷಣ, ನಟ ಕೋಮಲ್‌ ಹೊಸ ಚಿತ್ರ ಒಪ್ಪಿಕೊಂಡಿರುವುದು ನೆನಪಾಗುತ್ತದೆ. ಈಗಾಗಲೇ ಕೋಮಲ್‌ “2020” ಸಿನಿಮಾ ಒಪ್ಪಿಕೊಂಡಿರೋದು ಗೊತ್ತೇ ಇದೆ. ಆರಂಭದಲ್ಲೇ ಟೈಟಲ್‌ ಮೂಲಕ ಗಮನಸೆಳೆದಿರುವ “2020” ಈಗ ಒಂದಷ್ಟು ನಿರೀಕ್ಷೆಯನ್ನೂ ಹುಟ್ಟಿಸಿದೆ. ಅದಕ್ಕೆ ಕಾರಣ, ಕೋಮಲ್‌ ಚಿತ್ರದ ಹೈಲೈಟ್‌ ಆಗಿರುವುದು. ಅಷ್ಟೇ ಅಲ್ಲ, ಈ ಸಿನಿಮಾ ಮೂಲಕ ನಿರ್ದೇಶನ ಪಟ್ಟವನ್ನು ಅಲಂಕರಿಸುತ್ತಿರುವ ಕೆ.ಎಲ್.ರಾಜಶೇಖರ್.‌

ಹೌದು, ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಮಾತುಗಳನ್ನು ಪೋಣಿಸುವ ಮಾತುಗಾರ ಎಂದೇ ಹೆಸರಾಗಿರುವ ಕೆ.ಎಲ್.ರಾಜಶೇಖರ, ದರ್ಶನ್‌ ಅಭಿನಯದ “ರಾಬರ್ಟ್‌”, ಶರಣ್‌ ನಟನೆಯ “ವಿಕ್ಟರಿ -2”, ಚಿರಂಜೀವಿ ಅಭಿನಯಿಸಿದ “ಅಮ್ಮ ಐ ಲವ್ ಯು”, ಗಣೇಶ್‌ ಅಭಿನಯಿಸುತ್ತಿರುವ “ತ್ರಿಬಲ್ ರೈಡಿಂಗ್”, ಚಿಕ್ಕಣ್ಣ ಅವರ “ಉಪಾಧ್ಯಕ್ಷ” ಸೇರಿದಂತೆ ಇನ್ನೂ ಹಲವಾರು ಸಿನಿಮಾಗಳಿಗೆ  ಸಂಭಾಷಣೆ ಬರೆದಿದ್ದದಾರೆ ಈ  ಕೆ.ಎಲ್.ರಾಜಶೇಖರ್.

ಕೆ.ಎಲ್.‌ ರಾಜಶೇಖರ್‌,‌ ನಿರ್ದೇಶಕ

ಹಲವು ವರ್ಷಗಳಿಂದಲೂ ಕನ್ನಡ ಚಿತ್ರರಂಗದಲ್ಲಿರುವ ರಾಜಶೇಖರ್‌, ಇದೇ ಮೊದಲ ಬಾರಿಗೆ “2020” ಮ್ಯಾಚ್‌ ಆಡುವ ಧೈರ್ಯ ಮಾಡಿದ್ದಾರೆ. ಅವರ ಈ “2020” ಸಿನಿಮಾಗೆ, ಕೋಮಲ್‌ ಕೂಡ ಸಾಥ್‌ ನೀಡಿದ್ದು, ಈ ಬಾರಿ ಕಪ್‌ ನಮ್ಮದೇ ಎನ್ನುವಂತೆ ಈ ಸಲ ಸಿನಿಮಾದ ಗೆಲುವು ನಮ್ಮದೇ ಎನ್ನುವ ರೀತಿ ಕೋಮಲ್‌ ಕೂಡ ಪಕ್ಕಾ ತಯಾರಿಯಾಗಿದ್ದಾರೆ. ಇನ್ನು,  ಕಳೆದ ವಿಜಯದಶಮಿ ಹಬ್ಬದ ದಿನ ಮಹಾಲಕ್ಷ್ಮಿ ಲೇಔಟ್ ನಲ್ಲಿರುವ ಪಂಚಮುಖಿ ಗಣಪತಿ ದೇವಾಲಯದಲ್ಲಿ ಚಿತ್ರಕ್ಕೆ ಮುಹೂರ್ತ ನೆರವೇರಿತ್ತು.

ಈ ಚಿತ್ರವನ್ನು ಟಿ. ಆರ್. ಚಂದ್ರಶೇಖರ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ಕನ್ನಡ ಸಿನಿಮಾರಂಗಕ್ಕೆ ಹಲವು ಹಿಟ್‌ ಸಿನಿಮಾಗಳನ್ನು ನೀಡಿರುವ ಟಿ.ಆರ್.‌ ಚಂದ್ರಶೇಖರ್‌ ಅವರು ತಮ್ಮ ಕ್ರಿಸ್ಟಲ್‌ ಪಾರ್ಕ್‌ ಬ್ಯಾನರ್‌ನಡಿ ಈಗ “2020” ಸಿನಿಮಾ ಕೈಗೆತ್ತಿಕೊಂಡಿದ್ದಾರೆ.

ಚಂದ್ರಶೇಖರ್‌, ನಿರ್ಮಾಪಕ

ಇದೊಂದು ಒಳ್ಳೆಯ ಸಂದೇಶ ಇರುವ ಸಿನಿಮಾ ಆಗಿದ್ದು, ಹಲವು ತಿರುವುಗಳ ಜೊತೆಯಲ್ಲಿ ಸಾಗುವ ಈ ಸಿನಿಮಾದಲ್ಲಿ ಧನ್ಯಾ ಬಾಲಕೃಷ್ಣ,ಕುರಿ ಪ್ರತಾಪ್ ತಬಲಾ ನಾಣಿ, ಗಿರಿ, ಅಪೂರ್ವ ಹಾಗೂ ಇತರರೂ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ  ಟಿ.ಆರ್.ಚಂದ್ರ ಶೇಖರ್ ಪುತ್ರ ನಂದ ಕಿಶೋರ್ ಚಿತ್ರಕ್ಕೆ  ಕ್ಲಾಪ್ ಮಾಡಿದರೆ, ಟಿ.ಆರ್.ಚಂದ್ರ ಶೇಖರ್  ಕ್ಯಾಮರಾಗೆ ಚಾಲನೆ ನೀಡಿದ್ದಾರೆ. ಇನ್ನು, ಚಿತ್ರಕ್ಕೆ ಶ್ರೀಧರ್ ವಿ. ಸಂಭ್ರಮ್ ಸಂಗೀತವಿದೆ.

ಧನ್ಯಾ, ನಾಯಕಿ

ಅಂದಹಾಗೆ, ನವಂಬರ್ ಕೊನೆ ವಾರದಲ್ಲಿ ಚಿತ್ರದ ಮೊದಲ ಹಂತದ ಚಿತ್ರೀಕರಣ ಶುರುವಾಗಲಿದೆ . ಪಕ್ಕಾ ಹಾಸ್ಯ ಕುರಿತ ಕಥೆ ಹೊಂದಿರುವ  ಈ ಚಿತ್ರಕ್ಕೆ ನವೀನ್ ಕುಮಾರ್ .ಎಸ್ ಛಾಯಾಗ್ರಹಣವಿದೆ. ಕೆ.ಎಂ.ಪ್ರಕಾಶ್ ಸಂಕಲನವಿದೆ.

Categories
ಸಿನಿ ಸುದ್ದಿ

ಆಕ್ಟ್‌ನ ಜೋರು ಸುದ್ದಿಯ ಹಿಂದೆ ಬಕ್ಕೇಶ್‌ ಸಂಗೀತದ ಸದ್ದು!

ಹಿನ್ನೆಲೆ ಸಂಗೀತಕ್ಕೆ ದಾವಣಗೆರೆ ಹುಡುಗನ ಕೈಚಳಕ

ಯಶಸ್ವಿ ಸಿನಿಮಾಗೆ ಬ್ಯಾಕ್‌ ಗ್ರೌಂಡ್‌ ಸ್ಕೋರ್‌ ಮಾಡಿದ ತೃಪ್ತಿ

ಈ ಸಿನಿಮಾರಂಗವೇ ಹಾಗೆ. ಇಲ್ಲಿ ತೆರೆಮೇಲೆ ಕಾಣಿಸಿಕೊಂಡವರು ಮಾತ್ರ ಹೈಲೈಟ್‌ ಆಗೋದು ಸಹಜ. ಅದೇ ತೆರೆಯ ಹಿಂದೆ ರಾತ್ರಿ-ಹಗಲು ದುಡಿದವರು ಬೆಳಕಿಗೆ ಬರೋದು ಕೊಂಚ ಕಷ್ಟ. ಬೆಳಕಿಗೆ ಬಂದರೂ, ನಂತರದ ದಿನಗಳಲ್ಲಿ ಫೋಕಸ್‌ ಆಗೋದು ಇನ್ನೂ ಕಷ್ಟ. ಅದೆಷ್ಟೋ, ಸಕ್ಸಸ್‌ಫುಲ್‌ ಸಿನಿಮಾಗಳ ಹಿಂದೆ ಸದ್ದಿಲ್ಲದೆಯೇ ಕೆಲಸ ಮಾಡಿದ ತಾಂತ್ರಿಕವರ್ಗದವರಿದ್ದಾರೆ. ಸಿನಿಮಾ ಜೋರು ಸದ್ದು ಮಾಡಿದಾಗಲಷ್ಟೇ ಅವರ ಕೈಚಳಕದ ಬಗ್ಗೆ ಎಲ್ಲರಿಗೂ ಗೊತ್ತಾಗುತ್ತೆ. ಅಂದಹಾಗೆ, ಇಲ್ಲೀಗ ಹೇಳಹೊರಟಿರುವ ವಿಷಯ ಕೂಡ ಒಂದು ಸಕ್ಸಸ್‌ಫುಲ್‌ ಸಿನಿಮಾದ ಹಿಂದೆ ತನ್ನ ಪಾಡಿಗೆ ತಾನು ಮಾಡಿಕೊಂಡಿರುವ ಸಂಗೀತ ನಿರ್ದೇಶಕನ ಬಗ್ಗೆ. ಹೌದು, “ಆಕ್ಟ್ ೧೯೭೮” ಎಲ್ಲೆಡೆ ಜೋರು ಸೌಂಡು ಮಾಡುತ್ತಿರೋದು ಗೊತ್ತೇ ಇದೆ. ಆ ಸೌಂಡು ಮಾಡಿದ ಚಿತ್ರಕ್ಕೆ ಹಿನ್ನೆಲೆಯ ಸೌಂಡು ಮಾಡಿದ್ದು ಬೇರಾರೂ ಅಲ್ಲ, ಅದು ರೋಣದ ಬಕ್ಕೇಶ್.‌

ರೋಣದ ಬಕ್ಕೇಶ್‌, ಸಂಗೀತ ನಿರ್ದೇಶಕ

ಮಂಸೋರೆ ನಿರ್ದೇಶನದ ” ಆಕ್ಟ್‌ ೧೯೭೮” ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡಿದ್ದು ಇದೇ ರೋಣದ ಬಕ್ಕೇಶ್.‌ ಸಿನಿಮಾ ನೋಡಿದ ಬಹುತೇಕರ ಸಿನಿಪ್ರಿಯರು, ಕಥೆ, ಚಿತ್ರಕಥೆ, ಸಂಭಾಷಣೆ, ಛಾಯಾಗ್ರಹಣ ಹಾಗೂ ಸಂಗೀತ ಕುರಿತು ಮಾತನಾಡುತ್ತಿದ್ದಾರೆ. ಒಂದೊಳ್ಳೆಯ ಚಿತ್ರಕ್ಕೆ ಅಷ್ಟೇ ಪೂರಕ ಎಂಬಂತಹ ಹಿನ್ನೆಲೆ ಸಂಗೀತ ಕೊಡುವ ಮೂಲಕ ಆ ಯಶಸ್ವಿ ಸಿನಿಮಾದ ಒಂದು ಭಾಗವಾಗಿರೋದು ಈ ಯುವ ಸಂಗೀತ ನಿರ್ದೇಶಕ ರೋಣದ ಬಕ್ಕೇಶ್. ಇಷ್ಟಕ್ಕೂ ಈ ರೋಣದ ಬಕ್ಕೇಶ್‌ ಯಾರು? ಎಲ್ಲಿಯವರು, ಅವರ ಹಿನ್ನೆಲೆ ಏನು ಎಂತ ಕುರಿತು ಸ್ವತಃ ರೋಣದ ಬಕ್ಕೇಶ್‌ ಅವರೇ “ಸಿನಿ ಲಹರಿ” ಜೊತೆ ಮಾತನಾಡಿದ್ದಾರೆ.

“ಬೆಣ್ಣೆದೋಸೆ ನಗರಿ ದಾವಣಗೆರೆ ನನ್ನೂರು. ಬಿಸಿಎ ಮತ್ತು ಎಂಸಿಎ ಓದು ಮುಗಿಸಿ ಬೆಂಗಳೂರಿಗೆ ಬಂದೆ. ಕಾಲೇಜು ದಿನಗಳಿಂದಲೂ ಸಂಗೀತದ ಕಡೆ ಒಲವು ಹೆಚ್ಚಾಗಿತ್ತು. ಸಿನಿಮಾರಂಗಕ್ಕೆ ಕಾಲಿಟ್ಟು ಆರು ವರ್ಷಗಳಾಗಿವೆ. ಆರಂಭದಲ್ಲಿ ನಿರ್ದೇಶಕ ಗೌಸ್‌ಪೀರ್‌ ನಿರ್ದೇಶನದ “ಶಾರ್ಪ್‌ ಶೂಟರ್‌” ಚಿತ್ರಕ್ಕೆ ಹಿನ್ನೆಲೆ ಗಾಯಕನಾಗಿ ತನ್ನ ಕೆಲಸ ಶುರುಮಾಡಿದೆ. ಮೂಲತಃ ನಾನೊಬ್ಬ ಗಾಯಕ. ” ದಿ ಲೈಫ್‌ ಆಫ್‌ ಮ್ಯೂಸಿಕ್‌ ಅಂಡ್‌ ಆರ್ಟ್‌” ಹೆಸರಿ ಸ್ವಂತ ಸಂಗೀತ ಬ್ಯಾಂಡ್‌ ಇತ್ತು.

ಆ ಬ್ಯಾಂಡ್‌ ಮೂಲಕ ನಾನು ಫೈವ್‌ ಸ್ಟಾರ್ಸ್‌ ಹೋಟೇಲ್‌, ಪಬ್ಸ್‌ ಸೇರಿದಂತೆ ಇತರೆಡೆ ತಂಡದ ಗೆಳೆಯ ಜೊತೆಗೂಡಿ ಹಲವು ಕಾರ್ಯಕ್ರಮ ಕೊಟ್ಟಿದ್ದೇನೆ. ಶ್ರೀಶೈಲಂನಲ್ಲಿ ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ದೊಡ್ಡ ಸಂಗೀತ ಕಾರ್ಯಕ್ರಮವೊಂದನ್ನು ನಡೆಸಿಕೊಟ್ಟಿದ್ದೇನೆ. ಸಂಗೀತ ಕೆಲಸದ ಜೊತೆಗೆ ನಾನು, ಟೆಕ್‌ ಸಪೋರ್ಟರ್‌ ಆಗಿ ಕೆಲಸ ಮಾಡಿದ್ದೇನೆ. ರಘುದೀಕ್ಷಿತ್‌, ಪಿಆರ್‌ಕೆ ಸ್ಟುಡಿಯೋ, ರಾಜನ್‌ ಸ್ಟುಡಿಯೋ ಸೇರಿದಂತೆ ಬೆಂಗಳೂರಿನ ಸುಮಾರು ೨೦೦ ಸ್ಟುಡಿಯೋಗಳಿಗೆ ನಾನು ಟೆಕ್‌ ಎಂಜಿನಿಯರ್‌ ಆಗಿ ಕೆಲಸ ಮಾಡಿದ್ದುಂಟು” ಎಂದು ತಮ್ಮ ಜರ್ನಿ ನೆನಪಿಸಿಕೊಳ್ಳುತ್ತಾರೆ ರೋಣದ ಬಕ್ಕೇಶ್.‌

ಮೊದಲ ಹೆಜ್ಜೆ…
ಗಾಯಕನಾಗಿ ಹಲವು ಕಾರ್ಯಕ್ರಮ ಕೊಡುತ್ತಲೇ, ಸಿನಿಮಾದತ್ತ ವಾಲಿದೆ. “ಒಂದ್‌ ಕಥೆ ಹೇಳ್ಲಾ” ನನ್ನ ಮೊದಲ ಚಿತ್ರ. ನನ್ನ ಗೆಳೆಯ ಕೋ ಕಂಪೋಸರ್ ಕಾರ್ತಿಕ್‌ ಅವರೊಂದಿಗೆ ಸೇರಿದ ಕೆಲಸ ಮಾಡುತ್ತಾ ಬಂದೆ. ನನ್ನ ಎಲ್ಲಾ ಪ್ರಾಜೆಕ್ಟ್‌ಗಳಲ್ಲೂ ಅವರ ಸಾಥ್‌ ಇದೆ. ಅಲ್ಲಿಂದ ಇಲ್ಲಿಯವರೆಗೆ ನಾನು “ಧರಣಿ ಮಂಡಲ ಮಧ್ಯೆದೊಳಗೆ”, ಚಾರ್ಲಿ ಅಲ್ಪ ತಂಗೊ”, “ದ್ವಿಮುಖ”, “ಅವನಲ್ಲಿ ಇವಳಿಲ್ಲಿ”, “ಸಲಾಂ ಬೆಂಗಳೂರು”, “ಜಾಕ್‌ ಪಾಟ್‌” ಚಿತ್ರಗಳಿಗೆ ಸಂಗೀತ ನೀಡಿದ್ದೇನೆ. ಮುಂದೆ “ರೂಮ್‌ ಬಾಯ್”‌ ಎಂಬ ಹೊಸ ಚಿತ್ರ ಹಾಗೂ ಗೌಸ್‌ಪೀರ್‌ ನಿರ್ದೇಶನದ ಇನ್ನೂ ಹೆಸರಿಡದ ದಿಗಂತ್‌ ಅಭಿನಯದ ಚಿತ್ರಕ್ಕೂ ಸಂಗೀತ ನೀಡುತ್ತಿದ್ದೇನೆ. ಎನ್ನುವ ರೋಣದ ಬಕ್ಕೇಶ್‌, ನಾನು ಸುದೀಪ್‌ ಸರ್‌ ಅವರ ಎಲ್ಲಾ ಭಾಷೆಯ ಕನ್ನಡ ಸೆಕ್ಷನ್‌ ಚಿತ್ರಗಳಿಗೆ ಕೆಲಸ ಮಾಡಿದ್ದೇನೆ. ಅವರ “ಸೈರಾ”, “ದಬಾಂಗ್‌ ೩” ಚಿತ್ರಗಳ ಕನ್ನಡ ಡಬ್ಬಿಂಗ್‌ ವರ್ಷನ್‌ಗೆ ಎಂಜಿನಿಯರ್‌ ಆಗಿ ಕೆಲಸ ಮಾಡಿದ್ದು ನಾನೇ ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ನಮ್ಮ ಸ್ಟುಡಿಯೋದಲ್ಲೇ ಸುದೀಪ್‌ ಸರ್‌ ಬಂದು ಡಬ್‌ ಮಾಡಿದ್ದು ವಿಶೇಷತೆಗಳಲ್ಲೊಂದುʼ ಎಂಬುದು ಬಕ್ಕೇಶ್‌ ಮಾತು.

ಸಕ್ಸಸ್‌ ಕ್ರೆಡಿಟ್‌ ಮಂಸೋರೆಗೆ ಹೋಗಬೇಕು
“ಆಕ್ಟ್‌ ೧೯೭೮” ಚಿತ್ರಕ್ಕೆ ನಾನು ಹಿನ್ನೆಲೆ ಸಂಗೀತದ ಕೆಲಸ ಮಾಡಿದ್ದು ಖುಷಿಕೊಟ್ಟಿದೆ. ಒಂದೊಳ್ಳೆಯ ಸಿನಿಮಾದಲ್ಲಿ ನಾನೂ ಒಂದು ಭಾಗವಾಗಿದ್ದೇನೆ ಅನ್ನೋದೇ ದೊಡ್ಡ ಹೆಮ್ಮೆ. ಗೆಳೆಯ ರಾಹುಲ್‌ ಶಿವಕುಮಾರ್‌ ಅವರ ಮೂಲಕ ನಿರ್ದೇಶಕ ಮಂಸೋರೆ ಅವರ ಪರಿಚಯ ಆಯ್ತು. ನಾನು ಅವರ “ಅಕ್ಟ್‌ ೧೯೭೮” ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡುತ್ತೇನೆ ಎಂಬ ನಿರೀಕ್ಷೆ ಮಾಡಿರಲಿಲ್ಲ. ಅವರ ಈ ಚಿತ್ರಕ್ಕೆ ಕೆಲಸ ಮಾಡಬೇಕು ಅಂತ ಗೊತ್ತಾದಾಗ ಜವಾಬ್ದಾರಿ ಹೆಚ್ಚಾಯ್ತು. ಯಾಕೆಂದರೆ, ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕರ ಜೊತೆಗಿನ ಕೆಲಸ ಆಗಿದ್ದರಿಂದ ಸ್ವಲ್ಪ ಭಯವೂ ಇತ್ತು. ಆದರೆ, ಚಿತ್ರಕ್ಕೆ ಮಾಡಿದ ಸಂಗೀತದ ಕೆಲಸ ಅತ್ಯಂತ ತೃಪ್ತಿ ನೀಡಿದೆ. ನಿರ್ದೇಶಕ ಮಂಸೋರೆ ಅವರಿಗೆ ವಿಷನ್‌ ಇತ್ತು. ನಾನು ಅವರನ್ನು ಹಾಗೂ ಅವರ ಚಿತ್ರವನ್ನು ಅರ್ಥ ಮಾಡಿಕೊಳ್ಳೋಕೆ ತಿಂಗಳಾಯ್ತು. ಮೊದಲು ಎರಡು ರೀಲ್‌ ಕೊಟ್ಟು ಕೆಲಸ ಶುರುಮಾಡಿ ಅಂದರು.

ಅವರು ಜೋರಾಗಿ ಕೇಳಿಸುವಂತೆ ಸಂಗೀತ ಇರಬಾರದು. ಸಿನಿಮಾದಲ್ಲಿ ಸಂಗೀತ ಇದೆಯೋ, ಇಲ್ಲವೋ ಅನ್ನುವ ರೀತಿ ಇರಬೇಕು. ಒಂದು ರೀತಿ ಜೆಲ್‌ ಆಗಿರಬೇಕಷ್ಟೇ ಅಂದರು. ಸಾಮಾನ್ಯವಾಗಿ ಕೆಲ ಪಕ್ಕಾ ಕಮರ್ಷಿಯಲ್‌ ಸಿನಿಮಾಗಳಿಗೆ ಅಬ್ಬರದ ಸಂಗೀತ ಕೊಡೋದು ತುಂಬಾನೇ ಸುಲಭ. ನನಗೆ ಈ ಚಿತ್ರ ಸಿಕ್ಕಿದ್ದು, ಲಾಕ್‌ಡೌನ್‌ ಇನ್ನು ಹದಿನೈದು ದಿನ ಇದ್ದಾಗ. ಇಡೀ ಲಾಕ್‌ಡೌನ್ ಸಮಯದಲ್ಲೇ ನಾನು ಈ ಚಿತ್ರಕ್ಕೆ ಹಿನ್ನೆಲೆ ಸಂಗೀತದ ಸ್ಪರ್ಶ ನೀಡಿದೆ. ಈ ಸಿನಿಮಾ ನೋಡಿದವರು ನನ್ನ ಸಂಗೀತದ ಬಗ್ಗೆಯೂ ಮಾತಾಡುತ್ತಿದ್ದಾರೆ. ಏನೇ ಆದರೂ, ಅದು ನಿರ್ದೇಶಕ ಮಂಸೋರೆ ಅವರಿಗೆ ಆ ಸಕ್ಸಸ್‌ ಕ್ರೆಡಿಟ್‌ ಸಲ್ಲಬೇಕು. ಅವರ ಕಲ್ಪನೆಗೆ ನಾನು ತಕ್ಕಂತೆ ಕೆಲಸ ಮಾಡಿದ್ದೇನಷ್ಟೇ. ಆರಂಭದಲ್ಲಿ ನಾನು ಎರಡು ಸಲ ಕಂಪ್ಲೀಟ್‌ ಕೆಲಸ ಮಾಡಿದ್ದರೂ, ಅದನ್ನು ತೆಗೆಸಿ, ಪುನಃ ಬೇರೆ ಫಾರ್ಮೆಟ್‌ ಮೂಲಕ ನನ್ನಿಂದ ಕೆಲಸ ತೆಗೆಸಿದ್ದಾರೆ.

ಎಲ್ಲವೂ ಬೆಂಗಳೂರಲ್ಲೇ ಆಗಿದ್ದು…
ಇನ್ನೊಂದು ಖುಷಿಯ ವಿಚಾರ ಅಂದರೆ, “ಆಕ್ಟ್‌ ೧೯೭೮” ಚಿತ್ರಕ್ಕೆ ಲೈವ ಸಂಗೀತ ಚೆನ್ನೈನಲ್ಲಿ ನಡೆದಿಲ್ಲ. ಬೆಂಗಳೂರಲ್ಲೇ ಲೈವ್‌ ಕೆಲಸ ನಡೆದಿದೆ. ನಾರಾಯಣ್‌ ಶರ್ಮ ಅವರು ವಯಲಿನ್‌ ನುಡಿಸಿದ್ದಾರೆ. ಇವರು ಸಂಗೀತ ನಿರ್ದೇಶಕರಾದ ಅಜನೀಶ್‌ ಲೋಕಾನಾಥ್‌, ಚರಣ್‌ ರಾಜ್‌ ಅವರ ಜೊತೆ ಕೆಲಸ ಮಾಡುತ್ತಿರುತ್ತಾರೆ. ಇನ್ನು, ಋತ್ವಿಕ್‌ ಭಟ್ಟಾಚಾರ್ಯ ಗಿಟಾರ್‌ ನುಡಿಸಿದ್ದಾರೆ. ಒಳ್ಳೊಳ್ಳೆಯ ತಾಂತ್ರಿಕ ಕಲಾವಿದರು ಈ ಸಿನಿಮಾ ಹಿಂದೆ ಕೆಲಸ ಮಾಡಿದ್ದಾರೆ. ನನಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಚಿತ್ರಗಳಿಗೆ ಕೆಲಸ ಮಾಡುವ ಆಸೆ ಇದೆ. ನನಗಿದ್ದ ಗೀಳು ಸಂಗೀತ. ಅದೀಗ ನೆರವೇರಿದೆಯಷ್ಟೇ ಅಲ್ಲ, ಜವಾಬ್ದಾರಿಯನೂ ಹೆಚ್ಚಿಸಿದೆ. ಹೊಸಬರು, ಹಳಬರು ಎನ್ನದೆ, ನನ್ನ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡುವುದಷ್ಟೇ ನನ್ನ ಗುರಿ. ಎಲ್ಲಾ ಕ್ಷೇತ್ರದಲ್ಲೂ ಸ್ಪರ್ಧೆ ಇದೆ. ಸಿನಿಮಾ ಸಂಗೀತ ಕ್ಷೇತ್ರವೂ ಹೊರತಲ್ಲ. ಹೊಸ ಸೌಂಡಿಂಗ್‌ ಕೊಟ್ಟರೆ, ಖಂಡಿತವಾಗಿಯೂ ಜನರಿಗೆ ಇಷ್ಟವಾಗುತ್ತೆ. ನಮ್ಮ ಕೆಲಸಕ್ಕೂ ಮನ್ನಣೆ ಸಿಗುತ್ತೆ ಎಂಬುದು ಬಕ್ಕೇಶ್‌ ಮಾತು.

Categories
ಸಿನಿ ಸುದ್ದಿ

ಪ್ರೀಮಿಯರ್‌ ಶೋಗೆ ಸೆಲಿಬ್ರಿಟಿಗಳ ಕಲರವ

ಸ್ಯಾಂಡಲ್‌ವುಡ್‌ ಮೆಚ್ಚಿಕೊಂಡ ಆಕ್ಟ್-‌1978

ನಿರ್ದೇಶಕ ಮಂಸೋರೆ ಅವರ  “ಆಕ್ಟ್‌ -1978”  ಚಿತ್ರದ ಪೂರ್ವಭಾವಿ ಪ್ರದರ್ಶನಕ್ಕೆ ಕನ್ನಡ ಚಿತ್ರರಂಗದ ನಟ,ನಟಿಯರು, ನಿರ್ದೇಶಕ, ನಿರ್ಮಾಪಕರು ಆಗಮಿಸಿ, ಚಿತ್ರ ನೋಡಿದ ಖುಷಿಯಲ್ಲಿ ತೇಲಿದರು. ಅಷ್ಟೇ ಅಲ್ಲ,  “ಆಕ್ಟ್‌ – 1978” ಚಿತ್ರದ ಬಗ್ಗೆ ಪ್ರತಿಯೊಬ್ಬರೂ ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಬರೆದುಕೊಳ್ಳುವ ಮೂಲಕ ಚಿತ್ರವನ್ನು ನೋಡಿ ಎಂಬ ಮನವಿಯನ್ನೂ ಮಾಡಿಕೊಂಡಿದ್ದಾರೆ. ಪ್ರೀಮಿಯರ್‌ ಶೋಗೆ ಬಂದ ಕೆಲ ನಟ,ನಟಿಯರ ಫೋಟೋ ಗ್ಯಾಲರಿ ಇಲ್ಲಿದೆ…

Categories
ಸಿನಿ ಸುದ್ದಿ

ಅಭಿಮಾನಿ ದೇವರಿಗೆ ಭರಪೂರ ಸ್ವಾಗತ

ಆಕ್ಟ್-‌1978 ನೋಡಲು ಬಂದ ಸಿನಿ ಪ್ರೇಮಿಗೆ ಗುಲಾಬಿ ಹೂವಿನ ಗೌರವ

 

ಅಂತೂ ಇಂತೂ “ಆಕ್ಟ್‌ -1978”  ಚಿತ್ರ ನೋಡುಗರಲ್ಲಿ ಖುಷಿ ಹೆಚ್ಚಿಸಿದೆ. ಅಷ್ಟೇ ಅಲ್ಲ, ಶುಭ ಶುಕ್ರವಾರ ರಾಜ್ಯಾದ್ಯಂತ ಒಳ್ಳೆಯ ಓಪನಿಂಗ್‌ ಕೂಡ ಪಡೆದುಕೊಂಡಿದೆ. ಎಲ್ಲೆಡೆ “ಆಕ್ಟ್‌ – 1978” ಚಿತ್ರದ್ದೇ ಮಾತು. ನಿರ್ದೇಶಕ ಮಂಸೋರೆ ಅವರ ಹೊಸ ಆಲೋಚನೆಯ ಕಥೆಯನ್ನು ಜನರು ಮೆಚ್ಚಿಕೊಂಡಿದ್ದಾರೆ.

ಚಿತ್ರಮಂದಿರಕ್ಕೆ ಜನರು ಬರುತ್ತಾರೋ, ಇಲ್ಲವೋ ಎಂಬ ಆತಂಕ ಎಲ್ಲರಲ್ಲೂ ಮನೆಮಾಡಿತ್ತು. ಒಂದು ಸಿನಿಮಾದ ಕಥೆ ಚೆನ್ನಾಗಿದ್ದರೆ, ಅದರ ನಿರೂಪಣೆ ಸೊಗಸಾಗಿದ್ದರೆ, ಹೇಳುವ ಶೈಲಿ ಅದ್ಭುತವಾಗಿದ್ದರೆ, ತೋರಿಸುವ ರೀತಿ ಸರಿಯಾಗಿದ್ದರೆ, ಜನರು ಖಂಡಿತವಾಗಿಯೂ ಯಾವತ್ತೂ ಕನ್ನಡ ಸಿನಿಮಾವನ್ನು ಕೈ ಬಿಟ್ಟಿಲ್ಲ. ಈಗ “ಆಕ್ಟ್‌ 1978” ಚಿತ್ರವನ್ನೂ ಪ್ರೇಕ್ಷಕ ಮನಸಾರೆ ಒಪ್ಪಿಕೊಂಡಿದ್ದಾನೆ.

 

ಚಿತ್ರಮಂದಿರಗಳಿಂದ ಹೊರಬರುವ ಪ್ರೇಕ್ಷಕನಲ್ಲಿ ಅದೇನೋ ಪುಳಕ. ಏನೋ ಸಾಧಿಸಿದ ಖುಷಿ. ತಾನು ಅನುಭವಿಸಿದ ನೋವನ್ನುತೆರೆಯ ಮೇಲೆ ಕಂಡಷ್ಟೇ ಆನಂದಭಾಷ್ಪ. ಅದೆಲ್ಲವನ್ನೂ ಅಷ್ಟೇ ಸೊಗಸಾಗಿ, ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿರುವ ನಿರ್ದೇಶಕ ಮಂಸೋರೆ ಅವರ ಕೆಲಸವನ್ನು ನೋಡಿದ ಪ್ರತಿಯೊಬ್ಬ ಪ್ರೇಕ್ಷಕನೂ ಮೆಚ್ಚುತ್ತಿದ್ದಾನೆ. ಚಿತ್ರತಂಡ ಕೂಡ ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕನನ್ನು ಅಷ್ಟೇ ಪ್ರೀತಿಯಿಂದ ಬರಮಾಡಿಕೊಳ್ಳುತ್ತಿದೆ. ಭವ್ಯ ಸ್ವಾಗತದೊಂದಿಗೆ ಬರಮಾಡಿಕೊಳ್ಳುವ ಮೂಲಕ, ಅಭಿಮಾನಿಗಳೇ ನಮ್ಮ ದೇವರು ಅಂತ ಬಂದ ಪ್ರತಿಯೊಬ್ಬ ಸಿನಿಪ್ರೇಮಿಗೂ ಗುಲಾಬಿ ಹೂವು ಕೊಡುವ ಮೂಲಕ ಕೈಮುಗಿದು ಚಿತ್ರಮಂದಿರಕ್ಕೆ ಬರಮಾಡಿಕೊಳ್ಳುತ್ತಿದೆ.

 

ಬೆಂಗಳೂರಿನ ಶ್ರೀನಿವಾಸ ಚಿತ್ರಮಂದಿರದಲ್ಲೂ ಕೂಡ “ಆಕ್ಟ್‌ 1978”  ಸಿನಿಮಾ ನೋಡಲು ಬಂದ ಪ್ರತಿ ಪ್ರೇಕ್ಷಕನಿಗೂ ಚಿತ್ರತಂಡದ ಸದಸ್ಯರು ಬಾಗಿಲು ಬಳಿ ನಿಂತು, ಅಭಿಮಾನಿಗಳೇ ನಮ್ಮ ದೇವರು ಎಂದು ಕೈಮುಗಿದು ಬರಮಾಡಿಕೊಳ್ಳುವ ರೀತಿಗೆ ಪ್ರೇಕ್ಷಕ ಕೂಡ ಫಿದಾ ಆಗಿದ್ದಾನೆ.

ಇನ್ನು, ಚಿತ್ರಮಂದಿರ ಒಳಹೊಕ್ಕ ಪ್ರೇಕ್ಷಕ ಸಿನಿಮಾ ನೋಡಿದ ಮೇಲೆ, ಕಣ್ಣಾಲಿಗಳನ್ನು ಒದ್ದೆ ಮಾಡಿಕೊಂಡು ಬಂದು ಭಾರದ ನಿಟ್ಟುಸಿರು ಬಿಟ್ಟು, ಸಿನಿಮಾಗೆ ಜಯವಾಗಲಿ ಎನ್ನುತ್ತಿದ್ದಾನೆ. ಅಂತೂ ಒಂದೊಳ್ಳೆಯ ಕಥೆ ಹೆಣೆದು, ವಾಸ್ತವ ಅಂಶಗಳನ್ನು ಜನರ ಮುಂದಿಟ್ಟ ಮಂಸೋರೆ ಅಂಡ್‌ ತಂಡಕ್ಕೆ ಭರಪೂರ ಮೆಚ್ಚುಗೆಯ ಸುರಿಮಳೆಯಾಗುತ್ತಿದೆ.

 

 

error: Content is protected !!