Categories
ಸಿನಿ ಸುದ್ದಿ

ಎರಡು ದಶಕದ ರೈತರ ಕಥೆಗೆ ದೃಶ್ಯರೂಪ – ಕೊಳಗ ಎಂಬ ಹೋರಾಟದ ಚಿತ್ರಣ

ಇದು ನಾ.ಡಿಸೋಜಾ ಕಥೆಯ ಸಿನಿಮಾ

ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಹಲವು ಹೋರಾಟದ ಕಥೆಗಳು ತೆರೆಯ ಮೇಲೆ ರಾರಾಜಿಸಿವೆ. ಆ ಸಾಲಿಗೆ ರೈತ ಹೋರಾಟದ ಕಥೆಗಳೂ ಹೊಸದೇನಲ್ಲ. ಈಗ ಮತ್ತೊಂದು ರೈತರ ಹೋರಾಟದ ಕಥೆಯೊಂದು ಚಿತ್ರವಾಗಲು ಸಜ್ಜಾಗಿದೆ. ಹೌದು, ಇತ್ತೀಚೆಗೆ ಆ ಚಿತ್ರಕ್ಕೆ ಮುಹೂರ್ತವೂ ನೆರವೇರಿದೆ. ಅಂದಹಾಗೆ, ಆ ಚಿತ್ರದ ಹೆಸರು “ಕೊಳಗ”. ಇದು ನಾ.ಡಿಸೋಜಾ ಅವರ ಕಾದಂಬರಿ ಆಧಾರಿತ ಚಿತ್ರ. ಈ ಚಿತ್ರವನ್ನು ಪ್ರಸನ್ನ ಗೊರಲಕೆರೆ ನಿರ್ದೇಶಿಸುತ್ತಿದ್ದಾರೆ. ಸಂಭಾಷಣೆಯನ್ನೂ ಇವರೇ ಬರೆದಿದ್ದಾರೆ. ಇನ್ನು, ನಿಶಿತಾಗೌಡ ಅವರು ಚಿತ್ರಕಥೆ ಬರೆದು, ನಾಯಕಿಯಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ.

ಪ್ರಸನ್ನ ಗೊರಲಕೆರೆ, ನಿರ್ದೇಶಕ

ರೈತ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್‌, ಡಾ.ಅಶೋಕ್‌, ನಿರ್ದೇಶಕ ಎಸ್.‌ ನಾರಾಯಣ್‌, ಕೂಡ್ಲು ರಾಮಕೃಷ್ಣ, ಅವಿನಾಶ್‌ ಯು ಶಟ್ಟಿ ಸೇರಿದಂತೆ ಹಲವು ಗಣ್ಯರು ಚಿತ್ರತಂಡಕ್ಕೆ ಶುಭಕೋರಿದ್ದಾರೆ.
ಚಿತ್ರದಲ್ಲಿ ಆರೇಳು ಪ್ರಮುಖ ಪಾತ್ರಗಳು ಬರಲಿವೆ. ಇಡೀ ಕಥೆಯಲ್ಲಿ ಮೂರು ಪಾತ್ರಗಳು ಮಾತ್ರ ಹೈಲೈಟ್‌ ಆಗಿರಲಿವೆ. ಈ ಚಿತ್ರದಲ್ಲಿ ಆದಿಲೋಕೇಶ್‌ ಅವರು ಸ್ವಾಮೀಜಿ ಪಾತ್ರ ನಿಭಾಯಿಸುತ್ತಿದ್ದಾರೆ. ಇನ್ನುಳಿದಂತೆ ನಿಶಿತಾಗೌಡ ಹಾಗೂ ಕಿಶೋರ್‌ ಪ್ರಮುಖವಾಗಿ ಕಾಣಿಸಿಕೊಳ್ಳಲಿದ್ದಾರೆ.


ಈ ವೇಳೆ ಮಾತನಾಡಿದ ರೈತ ಮುಖಂಡ, ಕೋಡಿಹಳ್ಳಿ ಚಂದ್ರಶೇಕರ್‌, “ಕೊಳಗ” ಅನ್ನೋದು ಹಿಂದಿನ ಕಾಲದಲ್ಲಿ ರೈತರು ತಮ್ಮ ಧಾನ್ಯಗಳನ್ನು ಅಳೆಯಲು ಉಪಯೋಗಿಸುತ್ತಿದ್ದ ಒಂದು ಅಳತೆಗೋಲು. ರೈತಾಪಿ ವರ್ಗ ಹಾಗೂ ಭೂ ಮಾಲೀಕರ ನಡುವೆ ನಡೆಯುವಂತಹ ಘರ್ಷಣೆಯೇ ಈ ಕಥೆ. ಒಂದು ಮಹತ್ತರ ಬದಲಾವಣೆಗೆ ಕೊಳಗ ಹೇಗೆ ಕಾರಣವಾಯಿತು ಎಂಬುದನ್ನು ಈ ಚಿತ್ರದಲ್ಲಿ ಹೇಳಲಾಗುತ್ತಿದೆ. ಚಿತ್ರ ಎಲ್ಲರಿಗೂ ಗೆಲುವು ತರಲಿ ಎಂದು ಆಶಿಸಿದರು ಕೋಡಿಹಳ್ಳಿ.


ನಿರ್ದೇಶಕ ಕೂಡ್ಲು ರಾಮಕೃಷಷ್ಣ ಅವರು ಈವರೆಗೆ ಸುಮಾರು ೩೦ ಸಿನಿಮಾಗಳನ್ನು ನಿರ್ದೇಶಿಸಿದ್ದು, ಆ ಪೈಕಿ ೧೫ ಕಾದಂಬರಿ ಆಧಾರಿತ ಚಿತ್ರಗಳನ್ನೇ ಮಾಡಿದ್ದಾರೆ. ಆದರೆ, ಅವರಿಗೆ ನಾ.ಡಿಸೋಜ ಅವರ ಕಥೆ ಮಾಡಲಾಗಲಿಲ್ಲ ಎಂಬ ಬೇಸರವಿದೆಯಂತೆ. ಈ ಹಿಂದೆ ಕಾಗೋಡು ಸತ್ಯಾಗ್ರಹದ ಬಗ್ಗೆ ಗಿರೀಶ್‌ ಕಾಸರವಳ್ಳಿ ಅವರು ಸಾಕ್ಷ್ಯ ಚಿತ್ರ ನಿರ್ದೇಶಿಸಿದ್ದರು. ಈಗ ಪ್ರಸನ್ನ ಸಿನಿಮಾ ಮಾಡುತ್ತಿದ್ದಾರೆ. ಇದೊಂದು ದೊಡ್ಡ ಪರಿಣಾಮ ಬೀರುವ ಸಿನಿಮಾ ಆಗಲಿ ಎಂಬುದು ಕೂಡ್ಲು ರಾಮಕೃಷ್ಣ ಅವರ ಮಾತು.


ನಿರ್ದೇಶಕ ಪ್ರಸನ್ನ ಅವರು ಇದೊಂದು ೨೦ ವರ್ಷಗಳ ಕಾಲ ನಡೆದ ರೈತರ ದೊಡ್ಡ ಹೋರಾಟದ ಕಥೆ ಇದು ಎಂದರು. ನನ್ನ ತಾತ ಕಾಗೋಡು ಹೋರಾಟದಲ್ಲಿ ಭಾಗಿಯಾಗಿದ್ದರು. ಆಗಿನಿಂದಲೂ ಆ ವಿಚಾರಗಳು ನನ್ನೊಳಗಿದ್ದವು. ಆಗಿನ ಕಾಲದಲ್ಲಿ ರೈತ ಭೂಮಿ ಮೇಲೆ ಭಾವನಾತ್ಮಕ ಸಂಬಂಧ ಇಟ್ಟುಕೊಂಡಿದ್ದ. ಇತ್ತೀಚೆಗೆ ಅದು ಕಡಿಮೆಯಾಗುತ್ತಿದೆ. ಅದನ್ನು ಬೆಳೆಸುವ ಪ್ರಯತ್ನವಾಗಿ ಈ ಸಿನಿಮಾ ಮಾಡುತ್ತಿದ್ದೇನೆ. ಈ ಚಿತ್ರಕ್ಕೆ ಸಾಕಷ್ಟು ತಯಾರಿ ಮಾಡಿಕೊಂಡಿದ್ದೇನೆ. ಈ ಚಿತ್ರಕ್ಕೆ ನೀನಾಸಂ ಮಂಜು, ಅವಿನಾಶ್‌ ಸೇರಿದಂತೆ ಹಲವರ ಸಹಕಾರವಿದೆ. ಚಿತ್ರಕ್ಕೆ ರಾಜಗುರು ಸಂಗೀತವಿದೆ. ಸುಜಿತ್‌ ನಾಯಕ್‌ ಸಂಕಲನವಿದೆ ಎಂದರು.

Categories
ಸಿನಿ ಸುದ್ದಿ

ರಾಘಣ್ಣನಿಗೆ ಪುನೀತ್‌ ಸಾಥ್-‌ ರಾಜತಂತ್ರ ಟೀಸರ್‌ ಬಂತು, ಜನವರಿಗೆ ಸಿನಿಮಾ ಬರುತ್ತೆ

ನಿವೃತ್ತ ಮಿಲಿಟರಿ ಅಧಿಕಾರಿಯಾಗಿ ರಾಘಣ್ಣ

ರಾಘವೇಂದ್ರ ರಾಜಕುಮಾರ್‌ “ರಾಜತಂತ್ರ” ಸಿನಿಮಾ ಮಾಡುತ್ತಿದ್ದಾರೆ ಎಂಬ ವಿಷಯ ಎಲ್ಲರಿಗೂ ಗೊತ್ತಿತ್ತು. ಲಾಕ್‌ಡೌನ್‌ ಕೊಂಚ ಸಡಿಲಗೊಂಡ ಬಳಿಕ “ರಾಜತಂತ್ರ” ಸಿನಿಮಾ ಶುರುವಾಗಿತ್ತು. ಅದಾಗಲೇ ಸದ್ದಿಲ್ಲದೆಯೇ ಕೊರೊನಾ ನಡುವೆಯೂ ಮುಂಜಾಗ್ರತೆ ವಹಿಸಿಕೊಂಡು ಯಶಸ್ವಿಯಾಗಿ ಸಿನಿಮಾ ಚಿತ್ರೀಕರಣ ಮುಗಿಸಿ, ಇದೀಗ ರಿಲೀಸ್‌ಗೆ ರೆಡಿಯಾಗಿದೆ.


ಅದಕ್ಕೂ ಮುನ್ನ, ಚಿತ್ರದ ಟೀಸರ್‌ ಹೊರತರಲಾಗಿದೆ. ನಟ ಪುನೀತ್‌ರಾಜಕುಮಾರ್‌ ಅವರು ಟೀಸರ್‌ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ಈ ಚಿತ್ರಕ್ಕೆ ಜೆ.ಎಂ.ಪ್ರಹ್ಲಾದ್‌ ಅವರು ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ತಮ್ಮ ಸಿನಿಮಾ ಕುರಿತು ಮಾತನಾಡಿದ ಪ್ರಹ್ಲಾದ್‌, ” ಕಾಲೇಜ್‌ ದಿನಗಳಿಂದಲೂ ಬರಹಗಾರನಾಗಿ ಬದುಕಬೇಕೆಂಬುದು ನನ್ನಾಸೆ ಆಗಿತ್ತು. ಪತ್ರಕರ್ತನಾದರೆ, ಬರಹಗಾರನಾಗಬಹುದು ಅಂತ ಅಂದುಕೊಂಡು, ಪತ್ರಿಕೋದ್ಯಮಕ್ಕೆ ಬಂದೆ. ಅಲ್ಲಿ ಹತ್ತು ವರ್ಷ ಕೆಲಸ ಮಾಡಿದೆ. ಹಾಗೆಯೇ ಹಲವು ನಾಟಕಗಳಲ್ಲಿ ಕೆಲಸ ಮಾಡಿದೆ. ಹಂಸಲೇಖ ಅವರು ನನ್ನನ್ನು ಸಿನಿಮಾರಂಗಕ್ಕೆ ಪರಿಚಯಿಸಿದರು.”ಸಿಪಾಯಿ” ಮೂಲಕ ಚಿತ್ರರಂಗ ಪ್ರವೇಶಿಸಿದೆ.

ನಂತರದ ದಿನಗಳಲ್ಲಿ ಶಿವರಾಜಕುಮಾರ್‌ ಅವರ ಸಿನಿಮಾಗೂ ಕೆಲಸ ಮಾಡಿದೆ. ಈವರೆಗೆ ಸುಮಾರು ೪೦ ಸಿನಿಮಾಗಳಿಗೆ ಕೆಲಸ ಮಾಡಿದ್ದೇನೆ. ಕಿರುತೆರೆಯ “ಮಾಯಾಮೃಗ” ಧಾರಾವಾಹಿಗೂ ಕೆಲಸ ಮಾಡಿದೆ. ಒಟ್ಟು ೯ ಸಾವಿರ ಎಪಿಸೋಡ್‌ ಬರೆದಿದ್ದೇನೆ ಎಂಬ ಸಂತಸವಿದೆ. ರಾಷ್ಟ್ರ, ರಾಜ್ಯ ಪ್ರಶಸ್ತಿ ವಿಜೇತ ಚಿತ್ರಗಳಿಗೆ ಕೆಲಸ ಮಾಡಿದ ಹೆಮ್ಮೆಯೂ ಇದೆ. ಆಪ್ತರು ಸೇರಿ ಒಂದು ಕಂಪೆನಿ ಮಾಡೋಣ ಅಂತಂದುಕೊಂಡು ವಿಶ್ವಂ ಡಿಜಿಟಲ್‌ ಮೀಡಿಯಾ ನಿರ್ಮಾಣ ಸಂಸ್ಥೆ ಶುರುಮಾಡಿದೆವು. ನಮ್ಮ ಬಳಿ ಕಂಟೆಂಟ್‌ ಇತ್ತು ಆದರೆ, ನಿರ್ಮಾಣ ಮಾಡುವುದು ಕಷ್ಟ ಎನಿಸಿತು. ಆದರೂ, ಮೊದಲಿಗೆ ” ಅಭಯಾರಣ್ಯ” ಚಿತ್ರ ಮಾಡಿದೆವು. ನಂತರ “ರಾಜತಂತ್ರ” ಕಥೆ ಮಾಡಿ ಸಿನಿಮಾ ಮಾಡಿದ್ದೇವೆ. ನಿರ್ದೇಶಕರ ಬಳಿ ಹೇಳಿದಾಗ, ಈ ಕಥೆ ರಾಘಣ್ಣವರಿಗೆ ಹೇಳಿ ಸೂಕ್ತವಾಗುತ್ತೆ ಅಂದರು. ಅಲ್ಲಿಂದ ಇಲ್ಲಿಯವರೆಗೆ ನಡೆದುಬಂದಿದೆ ಎಂದರು ಪ್ರಹ್ಲಾದ್.‌

ನಿರ್ಮಾಪಕ ವಿಜಯ ಭಾಸ್ಕರ್ ಮಾತನಾಡಿ, ಒಳ್ಳೆಯ ಕಥೆ ಜತೆಗೆ ಆಗಮಿಸುತ್ತಿದ್ದೇವೆ. ನೋಡಿ ಹರಸಿ ಎಂದು ಮನವಿ ಮಾಡಿದರು.
ರಾಘವೇಂದ್ರ ರಾಜಕುಮಾರ್‌ ಕೂಡ ಖುಷಿಯಲ್ಲಿದ್ದರು. “ನನ್ನ ಲೈಫ್ ನಲ್ಲಿ ಈ ಥರದ ಪಾತ್ರ ಮಾಡಿರಲಿಲ್ಲ. ಮಾಜಿ ಮಿಲಿಟಿರಿ ಅಧಿಕಾರಿ ಪಾತ್ರ ನನಗೆ ಹೊಸ ಅನುಭವ ಕೊಟ್ಟಿದೆ. ಇಲ್ಲಿ ನಾನು ಹೆಚ್ಚು ಕಲಿತಿದ್ದೇನೆ. ನಾನು ಮಾಡಿದ್ದೇನೆ ಎನ್ನುವುದಕ್ಕಿಂತ ಎಲ್ಲರೂ ನನ್ನಿಂದ ಕೆಲಸ ಮಾಡಿಸಿದ್ದಾರೆ. ಅಭಿಮಾನಿಗಳ ಪ್ರೋತ್ಸಾಹವೇ ನಮ್ಮಕೆಲಸಕ್ಕೆ ಕಾರಣ ಎಂದರು.

ಟೀಸರ್‌ ಬಿಡುಗಡೆ ಮಾಡಿ ಮಾತನಾಡಿದ ಪುನೀತ್‌, ” ಈ ವರ್ಷ ನಾವು , ನೀವೆಲ್ಲರೂ ಕೊರೊನಾ ಪರಿಸ್ಥಿತಿಗೆ ಸಿಕ್ಕವರು. ಇಂತಹ ಸಮಯದಲ್ಲೂ ಈ ಚಿತ್ರತಂಡ ಚಿತ್ರ ಮಾಡಿದೆ. ಈ ಸಿನಿಮಾದಲ್ಲಿ ರಾಘಣ್ಣ ತುಂಬಾ ಚೆನ್ನಾಗಿ ನಟಿಸಿದ್ದಾರೆ. ಸಿನಿಮಾ ಮೇಲೆ ಸಿನಿಮಾ ಮಾಡ್ತಾ ಇದ್ದಾರೆ. ಈ ಸಿನಿಮಾಗೆ ಗೆಲುವು ಸಿಗಲಿ. ರಾಘಣ್ಣ ಇಲ್ಲಿ ಫೈಟ್‌ ಮಾಡಿದ್ದಾರೆ. ಒಬ್ಬ ನಟನಿಗೆ ವಯಸ್ಸು ಇರಬಹುದು. ಯಾವುದೇ ಪರಿಸ್ಥಿತಿ ಇರಬಹುದು. ಸಿನಿಮಾ ಅಂತ ಬಂದಾಗ ಉತ್ಸಾಹ ತುಂಬುತ್ತೆ. ಜನರ ಪ್ರೀತಿ, ಅಭಿಮಾನಿಗಳ ಪ್ರೋತ್ಸಾಹವೇ ಇದಕ್ಕೆ ಕಾರಣ. ಜನವರಿ ೧ರಂದು ರಿಲೀಸ್ ಆಗಲಿದೆ ಎಲ್ಲರೂ ಪ್ರೋತ್ಸಾಹಿಸಿ ಎಂದರು.


ನಿರ್ದೇಶಕ ಪಿವಿಆರ್ ಸ್ವಾಮಿ, ” “ಅಮ್ಮನ ಮನೆ” ಸಿನಿಮಾದಲ್ಲಿ ರಾಘಣ್ಣ ಜತೆ‌ ಕೆಲಸ ಮಾಡಿದ್ದೆ. ಆಗಲೇ ಈ ಕಥೆ ಹೇಳಿದ್ದೆ. ಈ ಚಿತ್ರದಲ್ಲಿ ನಿವೃತ್ತ ಆರ್ಮಿ ಆಧಿಕಾರಿಯಾಗಿ ಕ್ಯಾಪ್ಟನ್ ರಾಜಾರಾಮ್ ಆಗಿ ಅವರು ಕಾಣಿಸಿಕೊಂಡಿದ್ದಾರೆ. ಸಮಾಜದೊಳಗಿನ ಲೋಪಗಳನ್ನು ತಮ್ಮದೆ ಶೈಲಿಯಲ್ಲಿ ಸರಿಪಡಿಸುತ್ತಾರೆ. ಅದೇಗೆ ಎಂಬುದನ್ನು ಸಿನಿಮಾದಲ್ಲಿಯೇ ನೋಡಿ. ಅಷ್ಟೇ ಅಲ್ಲ ಈ ಸಿನಿಮಾದಲ್ಲಿ ರಾಘಣ್ಣ ಅವರ ಕಡೆಯಿಂದ ಫೈಟ್ ಸಹ ಮಾಡಿಸಿದ್ದೇವೆ ಎಂದರು.


ವಿಶ್ವಂ ಡಿಜಿಟಲ್ ಮೀಡಿಯಾ ಪ್ರೈ ಲಿ ಲಾಂಛನದಲ್ಲಿ ಜೆ.ಎಂ.ಪ್ರಹ್ಲಾದ್, ವಿಜಯ್ ಭಾಸ್ಕರ್ ಹರಪನಹಳ್ಳಿ ಹಾಗೂ ಪಿ.ಆರ್.ಶ್ರೀಧರ್ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರಕ್ಕೆ ಯು/ಎ ಸರ್ಟಿಫಿಕೆಟ್‌ ಸಿಕ್ಕಿದೆ. ಶ್ರೀಸುರೇಶ್ ಸಂಗೀತವಿದೆ. ಪಿ.ವಿ.ಆರ್ ಸ್ವಾಮಿ ಛಾಯಾಗ್ರಹಣ, ನಾಗೇಶ್ ಸಂಕಲನ, ಚಂದನ್ ಕಲಾ ನಿರ್ದೇಶನ ಹಾಗೂ ವೈಲೆಂಟ್ ವೇಲು, ರಾಮ್ ದೇವ್, ಅಲ್ಟಿಮೆಟ್ ಶಿವು ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಚಿತ್ರದಲ್ಲಿ ದೊಡ್ಡಣ್ಣ, ಶ್ರೀನಿವಾಸ ಮೂರ್ತಿ, ಭವ್ಯ, ಶಂಕರ್ ಅಶ್ವಥ್, ನೀನಾಸಂ ಅಶ್ವಥ್ ಇತರರು ನಟಿಸಿದ್ದಾರೆ.

Categories
ಸಿನಿ ಸುದ್ದಿ

ಮುತ್ತಪ್ಪ ರೈ ಚಿತ್ರ ನಾನೇ ಮಾಡ್ತೀನಿ – ರೈ ಬಳಗದ ಆಪ್ತ ಪದ್ಮನಾಭ್ ಹೇಳಿಕೆ

ಎಂಆರ್ ಸಿನಿಮಾ ಅನೌನ್ಸ್ ಮಾಡಿದ ರವಿ ಶ್ರೀವತ್ಸ ಈಗ ಏನ್ ಮಾಡ್ತಾರೆ?

ಒಂದು ಕಾಲದ ಡಾನ್ ಎಂದೇ‌ ಹೆಸರಾಗಿದ್ದ ಮುತ್ತಪ್ಪ ರೈ ಅವರ ಕುರಿತ ಚಿತ್ರವೊಂದು ಇತ್ತೀಚೆಗೆ ಮುಹೂರ್ತ ಕಂಡಿತ್ತು.
ಮಾಸ್ ನಿರ್ದೇಶಕ ಎಂದೇ ಹೆಸರಾಗಿರುವ ರವಿ ಶ್ರೀವತ್ಸ ಅವರು ನಿರ್ಮಾಪಕ ಶೋಭ ರಾಜಣ್ಣ ಅವರ ಪುತ್ರನಿಗೆ ‘ಎಂ ಆರ್’ ಹೆಸರಿನ ಸಿನಿಮಾ ಅನೌನ್ಸ್ ಮಾಡಿದ್ದರು. ತಮ್ಮ ಚಿತ್ರತಂಡದ ಪರಿಚಯ ಮಾಡಿಕೊಡುವುದರ ಜೊತೆಗೆ ‘ಎಂ ಆರ್’ ಸಿನಿಮಾ ಕುರಿತು ವಿವರ ನೀಡಿದ್ದರು.
ಆದರೆ, ಈಗ ಎಲ್ಲವೂ ಉಲ್ಟಾ ಹೊಡೆದಿದೆ. ಮುತ್ತಪ್ಪ ರೈ ಕುರಿತ ಸಿನಿಮಾವನ್ನು ನಾನೇ ಮಾಡ್ತೀನಿ ಎಂದು ಮುತ್ತಪ್ಪ ರೈ ಬಳಗದ ಆಪ್ತ ನಿರ್ಮಾಪಕ ಪದ್ಮನಾಭ್ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ.
ಅವರು ಬಿಡುಗಡೆ ಮಾಡಿರುವ ಹೇಳಿಕೆಯನ್ನೊಮ್ಮೆ ಓದಿ…


‘ನಾನು, ನಿರ್ಮಾಪಕ ಎಲ್ ಪದ್ಮನಾಭ್, ಈಗಾಗಲೇ ನನ್ನ ಗಮನಕ್ಕೆ ಬಾರದೆ, ನಾನು ವಿದೇಶದಲ್ಲಿ ಇದ್ದ ಕಾರಣ, ‘ಎಂ ಆರ್’ ಸಿನಿಮಾ ಮುಹೂರ್ತ ಆಗಿರುವುದು ಗೊತ್ತಾಗಿಲ್ಲ. ಹೀಗಾಗಿ, ಮುತ್ತಪ್ಪ ರೈ ಕುರಿತ ಚಿತ್ರವನ್ನು ನಾನೇ ನಿರ್ಮಿಸಬೇಕಿದೆ. ಈಗಾಗಲೇ ಈ ಹಿಂದೆ ಈ ಬಗ್ಗೆ ಒಂದು ಪತ್ರಿಕಾಗೋಷ್ಟಿಯನ್ನೂ ನಾನು ಮಾಡಿದ್ದೆ. ಅವರಿದ್ದಾಗಲೇ ಬಹುಭಾಷೆಯಲ್ಲಿ ಈ ಚಿತ್ರ ಮಾಡುವ ಬಗ್ಗೆ ಚರ್ಚೆಯಾಗಿತ್ತು. ರಾಮ್ ಗೋಪಾಲ್ ವರ್ಮಾ ಹಿಂದೆ ಸರಿದ ಬಳಿಕ ನಾನೇ ನಮ್ಮ ಎಂಆರ್ ಬ್ಯಾನರ್ ನಲ್ಲಿ ಈ ಚಿತ್ರವನ್ನು ಬಹುಭಾಷೆಯಲ್ಲಿ ನಿರ್ಮಾಣ ಮಾಡುವ ಬಗ್ಗೆ ಪ್ರಕ್ರಿಯೆ ಈ ಮೊದಲೇ ಶುರುವಾಗಿತ್ತು. ನನ್ನ ಎಂಆರ್ ಪಿಕ್ಚರ್ಸ್ ಸಂಸ್ಥೆ ಹುಟ್ಟು ಹಾಕಿದ್ದೆ ಅದರ ಸಲುವಾಗಿ. ಅಷ್ಟೇ ಅಲ್ಲ, ರೈ ಅಣ್ಣನ ಬಗ್ಗೆ ಸಿನಿಮಾ‌ ಪ್ರಾಜೆಕ್ಟ್ ಕೈಗೆತ್ತಿಕೊಂಡರೆ ಅದಕ್ಕೆ ಅನುಮತಿ ಪಡೆಯಲೇಬೇಕಿದೆ. ಇದೀಗ ನಿರ್ದೇಶಕ ರವಿ ಶ್ರೀವತ್ಸ ಅವರು ಸಿನಿಮಾ ಘೋಷಣೆ ಮಾಡಿಕೊಂಡು ಮುಹೂರ್ತವನ್ನೂ ಮಾಡಿಕೊಂಡಿದ್ದಾರೆ. ಆ ಚಿತ್ರದ ನಿರ್ಮಾಪಕರು ಮತ್ತು ನಿರ್ದೇಶಕರೊಂದಿಗೆ ಸಿನಿಮಾ ಕೈ ಬಿಡುವಂತೆ ಚರ್ಚೆ ಮಾಡಿದ್ದೇನೆ. ಅವರಿಂದಲೂ ಸಮ್ಮತಿ ಸಿಕ್ಕಿದೆ. ಕೊಂಚ ಕಾಲಾವಕಾಶವನ್ನೂ ಕೇಳಿದ್ದಾರೆ. ಅವರು ಕೈಬಿಟ್ಟ ಬಳಿಕ ಅವರ ಸಿನಿಮಾ ಕಥೆ ಕೇಳುತ್ತೇನೆ. ಒಬ್ಬ ನಿರ್ಮಾಪಕನಾಗಿ ಮತ್ತೊಬ್ಬ ನಿರ್ಮಾಪಕನ ಸಮಸ್ಯೆ ನನಗೆ ಗೊತ್ತು. ಹಾಗಾಗಿ, ಶೂಟಿಂಗ್ ಶುರುವಾಗುವುದಕ್ಕೂ ಮುನ್ನ ಅವರ ಗಮನಕ್ಕೆ ತರುವುದು ಒಳಿತು ಎನ್ನುವ ಕಾರಣಕ್ಕೆ ಅವರೊಂದಿಗೆ ಚರ್ಚಿಸಿದ್ದೇನೆ. ಸದ್ಯ ಸಾಕಷ್ಟು ಸಿನಿಮಾಗಳು ಸೆನ್ಸಾರ್ ಆಗಿವೆ. ಅವುಗಳ ಬಿಡುಗಡೆ ಪ್ರಕ್ರಿಯೆ ಶುರುವಾಗಲಿ. ಇನ್ನು ಕೆಲ ದಿನಗಳ ಬಳಿಕ ಆ ಚಿತ್ರವನ್ನು ನಾನೇ ಘೋಷಣೆ ಮಾಡಲಿದ್ದೇನೆ. ಎಂಆರ್ ಪಿಕ್ಚರ್ಸ್ ಬ್ಯಾನರ್ ನಲ್ಲಿ ನಾನೇ ನಿರ್ಮಾಣ ಮಾಡಲಿದ್ದೇನೆ’ ಎಂದು ಪದ್ಮನಾಭ್ ಹೇಳಿದ್ದಾರೆ.
ಅದೇನೋ ಸರಿ ಆದರೆ, ರವಿ ಶ್ರೀವತ್ಸ ಅವರು ಈಗ ‘ಎಂ.ಆರ್’ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಶೂಟಿಂಗ್ ಹೋಗುವ ತಯಾರಿಯನ್ನೂ ಮಾಡಿಕೊಂಡಿದ್ದಾರೆ. ಈಗ ಪದ್ಮನಾಭ್ ನಾನೇ ಆ ಚಿತ್ರ ಮಾಡ್ತೀನಿ ಎನ್ನುತ್ತಿದ್ದಾರೆ. ಹಾಗಾದರೆ, ರವಿ ಶ್ರೀವತ್ಸ ಅವರೇ ಪದ್ಮನಾಭ್ ನಿರ್ಮಾಣದಲ್ಲಿ ಚಿತ್ರ ನಿರ್ದೇಶನ ಮಾಡುತ್ತಾರೋ ಅಥವಾ ಬೇರೆ ನಿರ್ದೇಶಕರ ಜೊತೆ ಪದ್ಮನಾಭ್ ಸಿನಿಮಾ ನಿರ್ಮಾಣ ಮಾಡುತ್ತಾರೋ ಕಾದು ನೋಡಬೇಕಿದೆ.
ಒಟ್ಟಲ್ಲಿ ಮುತ್ತಪ್ಪ ರೈ ಅವರು ಇದ್ದಾಗಲೂ ಈ ಚಿತ್ರ ಸೆಟ್ಟೇರಲಿಲ್ಲ. ಅವರು ಇಲ್ಲವಾದಾಗ ಇನ್ನೇನು ಶುರುವಾಯಿತು ಅನ್ನುವುದರೊಳಗೆ ಈಗ ಸಿನಿಮಾಗೆ ಸಣ್ಣ ಅಡಚಣೆಯಾಗಿದೆ. ಇದು ಎಷ್ಟರಮಟ್ಟಿಗೆ ಬಗೆಹರಿದು ಸಿನಿಮಾ ಆಗುತ್ತೋ ಕಾದು ನೋಡಬೇಕಿದೆ.

Categories
ಸಿನಿ ಸುದ್ದಿ

ಶಂಭೋ ಶಿವ ಶಂಕರನ ಶೂಟಿಂಗ್‌ ಜೋರು -ನಾಯಕಿ ಸೋನಾಲ್‌ ಎಂಟ್ರಿ ಭರ್ಜರಿ

ಪೊಲೀಸ್‌ ಅಧಿಕಾರಿಯಾಗಿ ಸುಪ್ರೀಂ ಹೀರೋ ಶಶಿಕುಮಾರ್‌ ‌

ನಿಮಗೆ “ಶಂಭೋ ಶಿವ ಶಂಕರ” ಸಿನಿಮಾ ಬಗ್ಗೆ ಗೊತ್ತಿರಬಹುದು. ಇತ್ತೀಚೆಗಷ್ಟೇ ಶುರುವಾದ ಸಿನಿಮಾವಿದು. ಇತ್ತೀಚೆಗಷ್ಟೇ ಈ ಚಿತ್ರದಲ್ಲಿ ಶಶಿಕುಮಾರ್‌ ಅವರು ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಸುದ್ದಿಯಾಗಿತ್ತು. ಈಗ ಈ ಚಿತ್ರದಿಂದ ಮತ್ತೊಂದು ಹೊಸ ಸುದ್ದಿ ಹೊರಬಿದ್ದಿದೆ. ಈ ಚಿತ್ರದ ಚಿತ್ರೀಕರಣ ಬಿರುಸಾಗಿಯೇ ಸಾಗಿದೆ. ಈ ಚಿತ್ರದಲ್ಲಿ ಸೋನಾಲ್‌ ಮಾಂತೆರೋ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಅವರ ಎಂಟ್ರಿಯ ದೃಶ್ಯವನ್ನು ಅದ್ಧುರಿಯಾಗಿಯೇ ಚಿತ್ರೀಕರಿಸಲಾಗಿದೆ.

ಇತ್ತೀಚೆಗೆ ಅವರ ಪರಿಚಯಿಸುವ ದೃಶ್ಯವನ್ನು ಉತ್ತರಹಳ್ಳಿಯಲ್ಲಿರುವ ಸುಬ್ರಹ್ಮಣ್ಯಪುರ ಪೊಲೀಸ್‌ ಠಾಣೆ ಬಳಿ ಅದ್ಧೂರಿಯಾಗಿಯೇ ಚಿತ್ರೀಕರಿಸಲಾಗಿದೆ. ಈ ದೃಶ್ಯದಲ್ಲಿ ಸೋನಾಲ್‌ ಮಾಂತೆರೊ ಜೊತೆಯಲ್ಲಿ ನಾಯಕರಾದ ಅಭಯ್‌ ಪುನೀತ್‌, ರೋಹಿತ್‌ ಹಾಗೂ ರಕ್ಷಕ್‌ ಸೇರಿದಂತೆ ಇತರರು ಕಾಣಿಸಿಕೊಂಡಿದ್ದಾರೆ. ಅಘನ್ಯ ಪಿಕ್ಚರ್ಸ್ ಬ್ಯಾನರ್‌ನಲ್ಲಿ ವರ್ತೂರ್ ಮಂಜು ಅವರು ನಿರ್ಮಿಸುತ್ತಿರುವ ಚಿತ್ರ ಈಗಾಗಲೇ ಶೇ,೫೦ ರಷ್ಟಯ ಚಿತ್ರೀಕರಣಗೊಂಡಿದೆ. ಇದುವರೆಗೆ ಬಹುತೇಕ ಬೆಂಗಳೂರಲ್ಲೇ ಚಿತ್ರೀಕರಣ ನಡೆಸಲಾಗಿದೆ. ಈ ಚಿತ್ರವನ್ನು ಶಂಕರ್ ಕೋನಮಾನಹಳ್ಳಿ ನಿರ್ದೇಶಿಸುತ್ತಿದ್ದಾರೆ. ಇವರು ಕಿರುತೆರೆಯಲ್ಲಿ ಜನಪ್ರಿಯ ಧಾರಾವಾಹಿಗಳನ್ನು ನಿರ್ದೇಶಿಸಿದ್ದು, “ಶಂಭೋ ಶಿವ ಶಂಕರ” ಇವರ ಮೊದಲ ಚಿತ್ರ. ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಕೂಡ ಅವರೇ ಬರೆದಿದ್ದಾರೆ.

ಗೌಸ್‌ ಪೀರ್ ಹಾಗೂ ಹಿತನ್ ಹಾಸನ್ ಹಾಡುಗಳನ್ನು ಬರೆದಿದ್ದು, ಹಿತನ್ ಹಾಸನ್ ಸಂಗೀತವಿದೆ. ನಟರಾಜ್ ಮುದ್ದಾಲ ಛಾಯಾಗ್ರಹಣ ಮಾಡಿದರೆ, ಕಲೈ ನೃತ್ಯ ನಿರ್ದೇಶನವಿದೆ. ವೆಂಕಟೇಶ್ ಯುಡಿವಿ ಸಂಕಲನ ಹಾಗೂ ಅಲ್ಟಿಮೆಟ್ ಶಿವು ಅವರ ಸಾಹಸವಿದೆ. ಅಂದಹಾಗೆ, ‘ಶಂಭೋ ಶಿವ ಶಂಕರ’ ಇದು ಮೂವರು ನಾಯಕರ ಹೆಸರಿರುವ ಸಿನಿಮಾ. ಈ ಮೂರು ಹೆಸರಿನ ಪಾತ್ರದಲ್ಲಿ ಅಭಯ್ ಪುನೀತ್, ರೋಹಿತ್ ಹಾಗೂ ರಕ್ಷಕ್ ನಟಿಸುತ್ತಿದ್ದಾರೆ.

Categories
ಸಿನಿ ಸುದ್ದಿ

ಸೂಪರ್‌ ಹೀರೋ ಕಾನ್ಸೆಪ್ಟ್‌ ಚಿತ್ರ ಮುಕ್ತಾಯ – ಆನ ಇದು ಭಾರತದ ಮೊದಲ ಮಹಿಳಾ ಪ್ರಧಾನ ಸೂಪರ್ ಹೀರೋ ಕಾನ್ಸೆಪ್ಟ್ ಚಿತ್ರ

ವಿಶೇಷ ಪಾತ್ರದಲ್ಲಿ ಅದಿತಿ ಪ್ರಭುದೇವ

ಈಗಾಗಲೇ ಸಾಕಷ್ಟು ಸೂಪರ್ ಹೀರೋ ಕಾನ್ಸೆಪ್ಟ್‌ ಸಿನಿಮಾಗಳು ಬಂದಿವೆ. ಆದರೆ, ಮಹಿಳಾ ಪ್ರಧಾನದ ಸೂಪರ್ ಹೀರೋ ಕಾನ್ಸೆಪ್ಟ್‌ ಚಿತ್ರ ಭಾರತದಲ್ಲಿ ಈವರೆಗೂ ಬಂದಿಲ್ಲ.‌ “ಆನ” ಮೂಲಕ ನಟಿ ಅದಿತಿ ಪ್ರಭುದೇವ ಅವರು ಇಲ್ಲಿ ಮಹಿಳಾ ಸೂಪರ್‌ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಅಂದಹಾಗೆ, ಈ ಹಿಂದೆ ಅದಿತಿ ಪ್ರಭುದೇವ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದರೂ, ಈ ರೀತಿಯ ಪಾತ್ರ ನಿರ್ವಹಿಸಿಲ್ಲ. “ಆನ” ಅವರಿಗೊಂದು ವಿಶೇಷ ಸಿನಿಮಾ ಎನ್ನುವುದಂತೂ ಹೌದು. ಸದ್ಯಕ್ಕೆ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಹೆಸರುಫಟ್ಟ ಬಳಿ‌ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ ನಡೆಸಲಾಗಿದ್ದು, ಅಲ್ಲೇ‌ ಚಿತ್ರೀಕರಣ ಪೂರ್ಣಗೊಳಿಸಲಾಗಿದೆ. ಈಗಷ್ಟೇ ಡಬ್ಬಿಂಗ್‌ ಕೆಲಸ ಕೂಡ ಮುಕ್ತಾಯ ಹಂತದಲ್ಲಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ, ಮಾರ್ಚ್‌ ವೇಳೆ ಚಿತ್ರವನ್ನು ಪ್ರೇಕ್ಷಕರ ಎದುರು ತರಲು ತಯಾರಿ ನಡೆಸಲಾಗುತ್ತಿದೆ.


ಈ ಚಿತ್ರಕ್ಕೆ ಮನೋಜ್‌ ಪಿ.ನಡುಲಮನೆ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಈ ಹಿಂದೆ ಹಲವು ಕಿರುಚಿತ್ರಗಳು ಹಾಗೂ ಟೆಲಿ ಸಿನಿಮಾ ನಿರ್ದೇಶಿಸಿ ಅನುಭವ ಇರುವ ಮನೋಜ್‌ ಅವರಿಗೆ ಇದು ಮೊದಲ ಸಿನಿಮಾ. ಯು.ಕೆ.ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಪೂಜಾ ವಸಂತಕುಮಾರ್ ಈ
ಚಿತ್ರ ನಿರ್ಮಾಣ ಮಾಡಿದ್ದಾರೆ. ಉದಯ್ ಲೀಲಾ ಛಾಯಾಗ್ರಹಣವಿದೆ. ರಿತ್ವಿಕ್ ಮುರಳೀಧರನ್ ಅವರ ಸಂಗೀತ ನಿರ್ದೇಶನವಿದೆ. ವಿಜೇತ್‌ ಚಂದ್ರ ಸಂಕಲನ ಮಾಡುತ್ತಿದ್ದಾರೆ. ಚಿತ್ರದಲ್ಲಿ. ಸುನೀಲ್ ಪುರಾಣಿಕ್, ಚೇತನ್ ಗಂಧರ್ವ, ಸುನೀಲ್ ಕುಮಾರ್ ಡಿ.ಕೆ, ವಿಕಾಶ್ ಉತ್ತಯ್ಯ, ಪ್ರೇರಣ ಕಂಬಂ, ವರುಣ್ ಅಮರವಾತಿ, ಸಮರ್ಥ್ ನರಸಿಂಹರಾಜು, ಕಾರ್ತಿಕ್ ನಾಗಾರಾಜನ್, ಶಿವಮಂಜು ಸೇರಿದಂತೆ ಇತರರು ಇದ್ದಾರೆ.

Categories
ಸಿನಿ ಸುದ್ದಿ

ಶರಣ್ ನಟನೆಯ ಹೊಸ ಚಿತ್ರಕ್ಕೆ ಡಿ.21ರಂದು ನಾಮಕರಣ

ಮತ್ತೊಂದು ಸಖತ್ ಸಿನ್ಮಾ ನಿರೀಕ್ಷೆ…

ಈ ಹಿಂದೆ ನಟ ಶರಣ್ ಅವರ ವಿಡಿಯೋ ಒಂದು ವೈರಲ್ ಆಗಿತ್ತು. ಶರಣ್ ಅಮ್ಮಂದಿರ ಮಾತಿಗೆ ಶರಣ್ ಉತ್ತರಿಸದೆ, ಬರೀ ವಿಷಲ್ ಹಾಕುವ ಮೂಲಕ ಹೊಸದೊಂದು ಕುತೂಹಲ ಮೂಡಿಸಿದ್ದರು.
ಆಮೇಲೆ ಅದೊಂದು ಹೊಸ ಚಿತ್ರ ಅನ್ನೋದು ಗೊತ್ತಾಗಿತ್ತು.

ಅಂದಹಾಗೆ, ಜಡೇಶ್ ಹಂಪಿ ನಿರ್ದೇಶನದ ಆ ಚಿತ್ರಕ್ಕೆ ಶೀರ್ಷಿಕೆ ಇಟ್ಟಿರಲಿಲ್ಲ. ಈಗ ನಾಮಕರಣ ಮಾಡುವ ಸಂದರ್ಭ ಒದಗಿ ಬಂದಿದೆ.
ಹೌದು, ಲಡ್ಡು ಸಿನಿಮಾ ಹೌಸ್ ಹಾಗೂ ತರುಣ್ ಸುಧೀರ್ ಕ್ರಿಯೇಟಿವ್ಸ್ ಸೇರಿ ನಿರ್ಮಾಣ ಮಾಡುತ್ತಿರುವ ಆ ಹೊಸ ಚಿತ್ರದ ಟೈಟಲ್ ಡಿಸೆಂಬರ್ 21ರಂದು ಅನಾವರಣಗೊಳ್ಳಲಿದೆ.

ಸದ್ಯಕ್ಕೆ ಶೀರ್ಷಿಕೆ ಅನಾವರಣ ಮಾಡಲಿರುವ ಚಿತ್ರತಂಡ ಹಂತ ಹಂತವಾಗಿ ಆ ಸಿನ್ಮಾದ ತಂತ್ರಜ್ಞರು, ಕಲಾವಿದರಾಹಿತಿ ಹೊರ ಹಾಕಲಿದೆ.

Categories
ಸಿನಿ ಸುದ್ದಿ

ಸಲಾರ್‌ ; ನಟ ಪ್ರಭಾಸ್‌ಗೆ ಕೊಟ್ಟ ಸಂಭಾವನೆ ಎಷ್ಟು ಗೊತ್ತಾ? ೧೦೦ ಕೋಟಿ ಎನ್ನುತ್ತಿವೆ ಗಾಂಧಿನಗರದ ಮೂಲಗಳು

ಸಲಾರ್‌ಗಾಗಿ ಇಟ್ಟ ಬಜೆಟ್‌ ೫೦೦ ಕೋಟಿ?

ಕನ್ನಡ ಚಿತ್ರರಂಗದಲ್ಲಿ “ಕೆಜಿಎಫ್‌” ಬಹುದೊಡ್ಡ ಬಜೆಟ್‌ನ ಸಿನಿಮಾ ಎಂಬುದು ಎಲ್ಲರಿಗೂ ಗೊತ್ತು. ಆ ಸಿನಿಮಾ ದೇಶ, ವಿದೇಶಗಳಲ್ಲೂ ಭಾರೀ ಸದ್ದು ಮಾಡಿತು ಅನ್ನೋದು ಗೊತ್ತು. ಈಗ “ಕೆಜಿಎಫ್‌ ಚಾಪ್ಟರ್‌ ೨” ಕೂಡ ದೊಡ್ಡ ಬಜೆಟ್‌ ಸಿನಿಮಾ ಎನ್ನುವುದನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಈ ಬೆನ್ನಲ್ಲೇ ಹೊಂಬಾಳೆ ಫಿಲ್ಮ್ಸ್‌ ಮತ್ತೊಂದು ದೊಡ್ಡ ಬಜೆಟ್‌ ಸಿನಿಮಾ ಅನೌನ್ಸ್‌ ಮಾಡಿದ್ದೂ ಸಹ ದೊಡ್ಡ ಸುದ್ದಿಯಾಗಿದೆ. ಹೌದು, ತೆಲುಗು ಸ್ಟಾರ್‌ ನಟ ಪ್ರಭಾಸ್‌ ಅವರಿಗೆ “ಸಲಾರ್‌” ಸಿನಿಮಾ ಮಾಡುವುದಾಗಿ ಘೋಷಣೆ ಮಾಡಿತ್ತು. ಆ ಚಿತ್ರಕ್ಕೆ “ಕೆಜಿಎಫ್‌” ಖ್ಯಾತಿಯ ಪ್ರಶಾಂತ್‌ ನೀಲ್‌ ನಿರ್ದೇಶಕ ಎನ್ನುವುದನ್ನೂ ಹೇಳಿತ್ತು. ಈಗ ಜೋರಾಗಿ ಹರಿದಾಡುತ್ತಿರುವ ಸುದ್ದಿ ಅಂದರೆ, “ಸಲಾರ್‌” ಚಿತ್ರದ ನಟನೆಗಾಗಿ ಪ್ರಭಾಸ್‌ ಅವರಿಗೆ ಹೊಂಬಾಳೆ ಫಿಲ್ಮ್ಸ್‌ ಕೊಟ್ಟಿರುವ ಸಂಭಾವನೆ ಕುರಿತು. ಗಾಂಧಿನಗರದ ಮೂಲಗಳ ಪ್ರಕಾರ, ಪ್ರಭಾಸ್‌ ಅವರಿಗೆ ೧೦೦ ಕೋಟಿ ಸಂಭಾವನೆ ಕೊಡಲಾಗುತ್ತಿದೆ ಎಂಬುದು ದೊಡ್ಡ ಸುದ್ದಿ.

ಇನ್ನು, ಈ ಚಿತ್ರವನ್ನು ಸುಮಾರು ೫೦೦ ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಅದೇನೆ ಇರಲಿ, “ಕೆಜಿಎಫ್‌” ಬಳಿಕ ಹೊಂಬಾಳೆ ಫಿಲ್ಮ್ಸ್‌ ಕೈಗೆತ್ತಿಕೊಂಡ ಅದ್ಧೂರಿ ಸಿನಿಮಾ “ಸಲಾರ್‌”. “ಬಾಹುಬಲಿ” ಖ್ಯಾತಿಯ ಪ್ರಭಾಸ್‌ ಈ ಹಿಂದೆ ಹಿಂದಿಯಲ್ಲಿ “ಸಾಹೋ” ಚಿತ್ರ ಮಾಡಿದ್ದರು. ಆ ಚಿತ್ರಕ್ಕೂ ಅವರಿಗೆ ೧೦೦ ಕೋಟಿ ಸಂಭಾವನೆ ಕೊಡಲಾಗಿತ್ತು ಎಂಬ ಸುದ್ದಿ ಇತ್ತು. ಅದು ಎಷ್ಟರಮಟ್ಟಿಗೆ ಸತ್ಯವೋ ಗೊತ್ತಿಲ್ಲ. ಆದರೆ, ಈಗ ಹೀಗೊಂದು ಸುದ್ದಿ ಗಾಂಧಿನಗರದಲ್ಲೂ ಜೋರಾಗಿ ಹರಿದಾಡುತ್ತಿದೆ. ಸದ್ಯಕ್ಕೆ ಹೊಂಬಾಳೆ ಫಿಲ್ಮ್ಸ್‌ ಶ್ರೀಮುರಳಿ ಅವರಿಗೆ “ಬಘೀರ” ಸಿನಿಮಾವನ್ನು ಅನೌನ್ಸ್‌ ಮಾಡಿದೆ. ಈ ಚಿತ್ರ ಏಪ್ರಿಲ್‌ ವೇಳೆಗೆ ಶುರುವಾಗಬಹುದು.
ಈ ಎಲ್ಲಾ ಬೆಳವಣಿಗೆಗಳ ಸುದ್ದಿ ಕೇಳುತ್ತಿದ್ದರೆ, ಕನ್ನಡ ಚಿತ್ರರಂಗ ಇನ್ನಷ್ಟು ಮಟ್ಟಕ್ಕೆ ಬೆಳವಣಿಗೆಯಲ್ಲಿದೆ ಎಂಬುದು ಗೊತ್ತಾಗುತ್ತದೆ. ಒಂದಂತೂ ಸತ್ಯ, ಹೊಂಬಾಳೆ ಫಿಲ್ಮ್ಸ್‌ ಮಾಡುವ ಚಿತ್ರಗಳಲ್ಲಿ ಅದ್ಧೂರಿತನಕ್ಕೇನೂ ಕೊರತೆ ಇರೋದಿಲ್ಲ.

Categories
ಆಡಿಯೋ ಕಾರ್ನರ್

ದಾವಣಗೆರೆ ಹುಡುಗರಂದ್ರೆ ಸುಮ್‌ ಸುಮ್ನೆ ಅಲ್ಲ! ಡಿ-ವೈರಸ್‌ ಸ್ಟನ್ನರ್ಸ್‌ ಹುಡುಗರ ಸಖತ್ ಹಿಪ್ಪಪ್‌‌ ಸ್ಟೆಪ್‌

ವೈರಲ್‌ ಆಯ್ತು ಬೆಣ್ಣೆದೋಸೆ ನಗರಿ ಡ್ಯಾನ್ಸರ್ಸ್‌ 

ರ್ಯಾಪ್‌ ಸಾಂಗ್‌

ದಿ – ವೈರಸ್‌ ಸ್ಟನ್ನರ್ಸ್‌ ಡ್ಯಾನ್ಸ್‌ ಗ್ರೂಪ್

ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಹೊಸಬರ ಆಲ್ಬಂ ಸಾಂಗ್‌ ಹೊರಬಂದಿವೆ. ಇದಷ್ಟೇ ಅಲ್ಲ, ಬಹಳಷ್ಟು ಯುವಕರು ಹಿಪ್ಪಪ್‌ ಸಾಂಗ್‌, ರ್ಯಾಪ್‌ ಸಾಂಗ್‌ಗಳನ್ನೂ ಬಿಡುಗಡೆ ಮಾಡುತ್ತಿದ್ದಾರೆ. ತಮ್ಮದೇ ಶೈಲಿಯಲ್ಲಿ ಸಾಂಗ್‌ ಕಂಪೋಸ್‌ ಮಾಡಿ, ಅದಕ್ಕೊಂದು ಚಂದದ ನೃತ್ಯ ನಿರ್ದೇಶನ ಮಾಡಿ ಮೆಚ್ಚುಗೆ ಪಡೆದುಕೊಳ್ಳುತ್ತಿದ್ದಾರೆ. ಅಂತಹ ಪ್ಯಾಷನ್‌ ಇರೋ ಡ್ಯಾನ್ಸರ್ಸ್‌ ಸಾಲಿಗೆ ದಾವಣಗೆರೆ ಹುಡುಗರೂ ಸೇರಿದ್ದಾರೆ ಅನ್ನೋದೇ ವಿಶೇಷ.
ಹೇಳಿ ಕೇಳಿ ದಾವಣಗೆರೆ ಅಂದಾಕ್ಷಣ ನೆನಪಾಗೋದೇ ವಿದ್ಯಾನಗರಿ ಅನ್ನೋದು. ಅಲ್ಲಿ ವಿದ್ಯೆಯ ಜೊತೆಗೆ ಕಲೆಗೂ ಸಾಕಷ್ಟು ನಂಟು ಇದೆ. ರಂಗಭೂಮಿಯ ಅನೇಕ ಕಲಾವಿದರು ಬೀಡುಬಿಟ್ಟಿರುವ ನಗರವದು. ವಾಣಿಜ್ಯ ನಗರಿ ಎಂದೇ ಕರೆಸಿಕೊಳ್ಳುವ ದಾವಣಗೆರೆ ಮೊದಲಿನಿಂದಲೂ ಎಲ್ಲಾ ಪ್ರಾಕಾರಗಳಲ್ಲೂ ಸೈ ಎನಿಸಿಕೊಂಡಿದೆ. ಅಲ್ಲಿ, ಲಲಿತಕಲೆ, ನಾಟಕ, ಸಾಹಿತ್ಯ, ಕಲೆ, ಕ್ರೀಡೆ, ಹೀಗೆ ಒಂದಲ್ಲ ಎರಡಲ್ಲ ಹತ್ತಾರು ಕಲೆಯನ್ನು ಹೊಂದಿರುವ ನೆಲವದು. ಈಗಾಗಲೇ ದಾವಣಗೆರೆ ಮಂದಿ ಈ ಕಲಾಕ್ಷೇತ್ರದಲ್ಲಿ ಸಾಕಷ್ಟು ಸುದ್ದಿ ಮಾಡಿದ್ದುಂಟು. ಈಗ ಅಲ್ಲೊಂದು ಯುವಕರ ಗುಂಪು ರ್ಯಾಪ್‌ ಸಾಂಗ್‌ವೊಂದಕ್ಕೆ ಹಿಪ್ಪಪ್‌ ಸ್ಟೆಪ್‌ ಹಾಕುವ ಮೂಲಕ ಜೋರು ಸುದ್ದಿ ಮಾಡುತ್ತಿದೆ. ಅದೇ ಈ ಹೊತ್ತಿನ ವಿಶೇಷ.

ದಾವಣಗೆರೆಯಲ್ಲಿ ಕಳೆದ ಏಳೆಂಟು ವರ್ಷಗಳಿಂದಲೂ ನಡೆಯುತ್ತಿರುವ ಡಿ-ವೈರಸ್‌ ಸ್ಟನ್ನರ್ಸ್‌ ಎಂಬ ಹೆಸರಿನ ಡ್ಯಾನ್ಸ್‌ ಶಾಲೆಯ ಹುಡುಗರು ಸೇರಿಕೊಂಡು “ಸುಮ್‌ ಸುಮ್ನೆ..” ಎಂಬ ಅಫಿಶಿಯಲ್‌ ಕನ್ನಡ ರ್ಯಾಪ್‌ ಡ್ಯಾನ್ಸ್‌ ಕವರ್” ಸಾಂಗ್‌ಗೆ ಕುಣಿದು ಕುಪ್ಪಳಿಸಿದ್ದಾರೆ. ಸುಮಾರು ೩.೨೦ ನಿಮಿಷ ಅವಧಿಯ ಈ ಹಾಡು “ಡಿ-ವೈರಸ್‌ ಸ್ಟನ್ನರ್ಸ್‌ ಡ್ಯಾನ್ಸ್‌ ಅಕಾಡೆಮಿ” ಹೆಸರಿನ ಯುಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ. ಬಿಡುಗಡೆಯಾದ ಗಂಟೆಗಳಲ್ಲೇ ಒಳ್ಳೆಯ ಮೆಚ್ಚುಗೆಗೂ ಪಾತ್ರವಾಗಿದೆ.

ಆನಂದ್‌  ಡಿವಿಎಸ್‌, ನೃತ್ಯ ನಿರ್ದೇಶಕ

 

ಅಂದಹಾಗೆ, ಮಾರ್ಟಿನ್‌ ಯೊ, ಲೇಜಿ, ಬಿ ಅವರು ಬರೆದಿರುವ “ರ್ಯಾಪ್‌ ಅಂದ್ರೆ ಹೇಳೋದಲ್ಲ ಸುಮ್‌ಸುಮ್ನೆ… ಎಲ್ಲ ಗೊತ್ತು ಅನ್ನಬೇಡಿ ಸುಮ್‌ ಸುಮ್ನೆ.. ಹಾಡಲ್ಲಿ ಒಂದೊಳ್ಳೆಯ ತಾತ್ಪರ್ಯವಿದೆ. ಈಗಿನ ಯೂಥ್‌ಗೆ ಹೇಳುವಂತಹ ಸಂದೇಶವೂ ಇದೆ. ವಾಸ್ತವತೆಯ ಚಿತ್ರಣವೂ ಇದೆ. ಈ ಹಾಡಿಗೆ ಆನಂದ್‌ ಡಿವಿಎಸ್‌ ನೃತ್ಯ ನಿರ್ದೇಶನ ಮಾಡಿದ್ದಾರೆ. ತಮ್ಮ ಡ್ಯಾನ್ಸ್‌ ಶಾಲೆಯ ಸ್ಟುಡೆಂಟ್‌ ಇಟ್ಟುಕೊಂಡೇ ಈ ಹಾಡನ್ನು ಚಿತ್ರೀಕರಿಸಿದ್ದಾರೆ. ಈ ಹುಡುಗರ ರ್ಯಾಪ್‌ ಸಾಂಗ್‌ ಸ್ಟೆಪ್‌ಗೆ ವಿಜಯಕುಮಾರ್‌ ಜೆ.ಎಸ್.‌ ಅವರು ಕ್ಯಾಮೆರಾ ಹಿಡಿದಿದ್ದಾರೆ. ಓಂಕಾರ್‌ ಅವರ ಸಂಕಲನವಿದೆ.

ವಿಜಯಕುಮಾರ್‌ ಜೆ.ಎಸ್.‌ ಛಾಯಾಗ್ರಾಹಕ

ಗೆಳೆಯರ ಪ್ರೀತಿ ಗೀತಿ ಇತ್ಯಾದಿ…
ಇಷ್ಟಕ್ಕೂ ಇಂಥದ್ದೊಂದು ರ್ಯಾಪ್‌ ಸಾಂಗ್‌ ಮಾಡೋಕೆ ಕಾರಣ, ಗೆಳೆತನ. ಆನಂದ್‌ ಡಿವಿಎಸ್‌, ವಿಜಯಕುಮಾರ್‌ ಗೆಳೆಯರು. ಆ ಗೆಳೆತನ ಇಲ್ಲಿಯವರೆಗೂ ಕರೆದುಕೊಂಡು ಬಂದಿದೆ. ಇನ್ನು, ಕೋರಿಯೋಗ್ರಾಫರ್‌ ಆನಂದ್‌ ಡಿವಿಎಸ್‌ ಕುರಿತು ಹೇಳುವುದಾದರೆ, ಆನಂದ್‌ ಒಬ್ಬ ಪ್ರೊಫೆಷನಲ್‌ ಡ್ಯಾನ್ಸರ್.‌ ಅಷ್ಟೇ ಅಲ್ಲ, ಡ್ಯಾನ್ಸನ್ನೇ ಬದುಕನ್ನಾಗಿಸಿಕೊಂಡಿದ್ದಾರೆ. ಇವರ ತಂದೆ ಆಟೋ ಓಡಿಸುತ್ತಿದ್ದಾರೆ. ಮಗನಿಗೆ ಡ್ಯಾನ್ಸ್‌ ಮೇಲಿರುವ ಪ್ರೀತಿ ಕಂಡು ಅವನಿಷ್ಟಕ್ಕೆ ಬಿಟ್ಟು ಬಿಟ್ಟಿದ್ದಾರೆ. ಸದಾ ಡ್ಯಾನ್ಸ್‌ ಮೇಲೆ ಪ್ರೀತಿ ಇಟ್ಟುಕೊಂಡಿರುವ ಆನಂದ್‌, ಈಗಾಗಲೇ ದಾವಣಗೆರೆ ಮಟ್ಟಿಗೆ ಸಾಕಷ್ಟು ಗುರುತಿಸಿಕೊಂಡಿದ್ದಾರೆ.

ಅಪ್ಪಟ ಕನ್ನಡಿಗನಾದರೂ ತೆಲುಗಿನ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿರುವ ಡಿ ಜೋಡಿ ರಿಯಾಲಿಟಿ ಶೋನಲ್ಲಿ ಅಸಿಸ್ಟೆಂಟ್‌ ಕೋರಿಯಾಗ್ರಫರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ಕನ್ನಡ ವಾಹಿನಿಯಲ್ಲಿ ಕೆಲಸ ಮಾಡುವ ಮಹಾದಾಸೆ ಹೊಂದಿದ್ದಾರೆ. ಇತ್ತೀಚೆಗೆ ವಾಹಿನಿಯೊಂದರ ಡ್ಯಾನ್ಸ್‌ ಆಡಿಷನ್‌ನಲ್ಲೂ ಭಾಗವಹಿಸಿ ಗಮನಸೆಳೆದಿದ್ದಾರೆ. ಇನ್ನಷ್ಟೇ ವಾಹಿನಿಯಿಂದ ಕರೆ ಬರುವುದನ್ನು ನಿರೀಕ್ಷೆಯಲ್ಲಿದ್ದಾರೆ.

ದಯಾನಂದ್‌, ಮಾಸ್ಟರ್  

ಡ್ಯಾನ್ಸ್‌ ಪ್ರಿಯರಿಗೆ ಉಚಿತ ತರಬೇತಿ

ಈ ನಡುವೆ ದಾವಣಗೆರೆಯಲ್ಲಿ ಕಳೆದ ಏಳು ವರ್ಷಗಳ ಹಿಂದೆ ಶುರುವಾದ “ಡಿ-ವೈರಸ್‌ ಸ್ಟನ್ನರ್ಸ್‌ ಡ್ಯಾನ್ಸ್‌ ಅಕಾಡೆಮಿ”ಯಲ್ಲಿ ಕೋರಿಯೋಗ್ರಾಫರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಈ ಡ್ಯಾನ್ಸ್‌ ಶಾಲೆ ಹುಟ್ಟು ಹಾಕಿದ್ದು, ದಯಾನಂದ್‌ ಎಸ್.ನಾಯಕ ಇವರು ಈ ಡ್ಯಾನ್ಸ್‌ ಶಾಲೆಯ ಮಾಸ್ಟರ್.‌ ಸದ್ಯ ಬೆಂಗಳೂರಲ್ಲಿ ನೆಲೆಸಿರುವ ದಯಾನಂದ್‌ ಅವರು, ಆನಂದ್‌ ಡಿವಿಎಸ್‌ ಅವರಿಗೆ ಆ ಡ್ಯಾನ್ಸ್‌ ಶಾಲೆ ಒಪ್ಪಿಸಿದ್ದಾರೆ.

ಓಂಕಾರ್‌, ಸಂಕಲನಕಾರ

ಆನಂದ್‌ ಕೂಡ ಮಧ್ಯಮ ವರ್ಗದ ಹುಡುಗನಾಗಿದ್ದರಿಂದ ಡ್ಯಾನ್ಸ್‌ ಮೇಲೆ ಪ್ರೀತಿ ಇರುವ, ಶಾಲೆಗೆ ಶುಲ್ಕ ಕಟ್ಟಲು ಸಾಧ್ಯವಾಗದ ಹುಡುಗರಿಗೆ ಉಚಿತವಾಗಿಯೇ ಡ್ಯಾನ್ಸ್‌ ಕಲಿಕೆಯ ತರಬೇತಿ ಕೊಡುತ್ತಿದ್ದಾರೆ. ಅವರನ್ನೇ ಇಟ್ಟುಕೊಂಡು ಈಗ “ಸುಮ್‌ ಸುಮ್ನೆ” ಎಂಬ ರ್ಯಾಪ್‌ ಸಾಂಗ್‌ ಮಾಡಿದ್ದಾರೆ. ‌

ಈ ಸಾಂಗ್‌ ಸ್ಪೆಷಾಲಿಟಿ ಅಂದರೆ,‌ ಸಾಮಾನ್ಯವಾಗಿ ಈ ರ್ಯಾಪ್ ಸಾಂಗ್‌ನಲ್ಲಿ ಡ್ಯಾನ್ಸ್‌ ಕಮ್ಮಿ. ಬರೀ ಕೈ ಮೂವ್‌ಮೆಂಟ್‌ ಇರುತ್ತೆ. ಈ ಹಾಡಿಗೆ ಆನಂದ್‌ ತಮ್ಮ ತಂಡ ಕಟ್ಟಿಕೊಂಡು ಹಿಪ್ಪಪ್‌ ಸ್ಟೆಪ್‌ ಹಾಕಿದ್ದಾರೆ. ಈ ಹಾಡಲ್ಲಿ ರಜತ್‌ ತೆರದಾಳ್‌, ಪ್ರೀತಮ್‌, ಭರತ್‌, ಗುಣಶ್ರೀ, ಸೌಮ್ಯ ಕಾಣಿಸಿಕೊಂಡಿದ್ದು, ಹಾಡಿಗೆ ತಕ್ಕಂತೆ ಕಲರ್‌ಫುಲ್‌ ಸ್ಟೆಪ್‌ ಹಾಕಿದ್ದಾರೆ. ಅದೇನೆ ಇರಲಿ, ದಾವಣಗೆರೆ ಹುಡುಗರ ಈ ರ್ಯಾಪ್‌ ಸಾಂಗ್‌ ನೋಡುವುದರ ಜೊತೆಗೆ ಒಂದು ಮೆಚ್ಚುಗೆ ಇರಲಿ.

 

Categories
ಸಿನಿ ಸುದ್ದಿ

ಮದಗಜ ಘರ್ಜನೆಗೆ ಭರಪೂರ ಮೆಚ್ಚುಗೆ – ಒಂದೇ ದಿನದಲ್ಲಿ 30 ಲಕ್ಷ ಜನರ ವೀಕ್ಷಣೆ

 

ಇದು ದಾಖಲೆಗಳ ದರ್ಬಾರ್‌

– ಈಗ ಎಲ್ಲೆಡೆ ಶ್ರೀಮುರಳಿ ಅಭಿನಯದ “ಮದಗಜ” ಚಿತ್ರದ್ದೇ ಸುದ್ದಿ. ಅದಕ್ಕೆ ಕಾರಣ, ಅವರ ಹುಟ್ಟು ಹಬ್ಬಕ್ಕೆ ಬಿಡುಗಡೆಯಾದ ಸಖತ್ ಟೀಸರ್‌ಗೆ ಸಿಕ್ಕಾಪಟ್ಟೆ ಮೆಚ್ಚುಗೆ ಸಿಕ್ಕಿದೆ. ಇನ್ನು, ಕೇವಲ 24 ಗಂಟೆಯಲ್ಲಿ 30 ಲಕ್ಷ (ಮೂರು ಮಿಲಿಯನ್) ಜನರಿಂದ ರಿಯಲ್‌ ಟೈಮ್‌ನಲ್ಲಿ ವೀಕ್ಷಣೆ ಪಡೆದು, ಕನ್ನಡ ಚಿತ್ರರಂಗದಲ್ಲೇ ಹೊಸ ದಾಖಲೆ ಸೃಷ್ಟಿಸಿದೆ. ಸಹಜವಾಗಿಯೇ ಈ ಬೆಳವಣಿಗೆ ಚಿತ್ರತಂಡಕ್ಕೆ ಖುಷಿ ತಂದಿದೆ. ೨೪ ಗಂಟೆಯಲ್ಲೆ ವೇಗವಾಗಿ ಅತೀ ಹೆಚ್ಚು ವೀಕ್ಷಣೆ ಕಂಡಿರುವ ಕನ್ನಡದ ಮೊದಲ ಫಸ್ಟ್‌ ಲುಕ್‌ ಟೀಸರ್‌ ಎಂಬ ಹೆಗ್ಗಳಿಕೆಗೂ ಈ ಚಿತ್ರದ ಟೀಸರ್‌ ಪಾತ್ರವಾಗಿದೆ.

ನ್ನು, “ಉಗ್ರಂ” , “ಕೆಜಿಎಫ್‌” ಖ್ಯಾತಿಯ ಪ್ರಶಾಂತ್‌ ನೀಲ್‌ ಅವರು ಚಿತ್ರದ ಟೀಸರ್‌ ಬಿಡುಗಡೆ ಮಾಡಿ, ಶುಭಹಾರೈಸಿದ್ದರು. ಶ್ರೀಮುರಳಿ ಅಭಿನಯದ “ಮದಗಜ” ಚಿತ್ರಕ್ಕೆ ಮಹೇಶ್‌ ಕುಮಾರ್‌ ನಿರ್ದೇಶಕರು. ಉಮಾಪತಿ ನಿರ್ಮಾಣವಿದೆ. ಚಿತ್ರಕ್ಕೆ ನವೀನ್‌ ಕುಮಾರ್‌ ಕ್ಯಾಮೆರಾ ಹಿಡಿದರೆ, ರವಿ ಬಸ್ರೂರು ಸಂಗೀತವಿದೆ.


ಶ್ರೀಮುರಳಿ ಅವರ ಹುಟ್ಟುಹಬ್ಬದ ದಿನ ಈ ಟೀಸರ್‌ ಬಿಡುಗಡೆಯಾದ ಬೆನ್ನಲ್ಲೇ ಹೊಂಬಾಳೆ ಫಿಲ್ಮ್ಸ್‌ ಕೂಡ ಶ್ರೀಮುರಳಿ ಅವರಿಗೆ ಹೊಸ ಚಿತ್ರವನ್ನು ಅನೌನ್ಸ್‌ ಮಾಡಿದೆ. “ಬಘೀರ” ಸಿನಿಮಾ ಅನೌನ್ಸ್‌ ಮಾಡುವ ಮೂಲಕ ಹುಟ್ಟುಹಬ್ಬಕ್ಕೆ ಕಾಣಿಕೆ ನೀಡಿದೆ. ಈ ಚಿತ್ರಕ್ಕೆ ಡಾ.ಸೂರಿ ನಿರ್ದೇಶಕರು. ವಿಜಯ್‌ ಕಿರಗಂದೂರು ನಿರ್ಮಾಣ ಮಾಡುತ್ತಿದ್ದಾರೆ. ಇದೊಂದು ದೊಡ್ಡ ಬಜೆಟ್‌ನ ಸಿನಿಮಾ ಆಗಿದ್ದು, ಈಗಾಗಲೇ ಬಿಡುಗಡೆ ಮಾಡಿರುವ “ಬಘೀರ” ಪೋಸ್ಟರ್‌ ಕೂಡ ಸಾಕಷ್ಟು ಮೆಚ್ಚುಗೆ ಪಡೆಯುತ್ತಿದೆ. ಒಂದಷ್ಟ ಕುತೂಹಲವೂ ಇದೆ.

 

 

Categories
ಸಿನಿ ಸುದ್ದಿ

ಪ್ರಜ್ವಲ್‌ ದೇವರಾಜ್‌ ಜೊತೆ ಗುರುದತ್‌ ಗಾಣಿಗ ಹೊಸ ಚಿತ್ರ – ಥ್ರಿಲ್ಲಿಂಗ್‌ ಸಿನಿಮಾ ಉತ್ಸಾಹದಲ್ಲಿ ಯಂಗೆಸ್ಟ್‌ ಡೈರೆಕ್ಟರ್

ಸಂಕ್ರಾಂತಿಗೆ ಟೈಟಲ್‌ ‌ಲಾಂಚ್‌

ಕನ್ನಡದ ಯಂಗೆಸ್ಟ್ ನಿರ್ದೇಶಕ ಅಂತಲೇ ಚಿತ್ರರಂಗಕ್ಕೆ ಪರಿಚಯವಾದ ಗುರುದತ್ ಗಾಣಿಗ, “ಅಂಬಿ ನಿಂಗ್‌ ವಯಸ್ಸಾಯ್ತೋ” ಚಿತ್ರದ ಮೂಲಕ ನಿರ್ದೇಶಕರಾದವರು. ಆ ಸಿನಿಮಾ ಬಳಿಕ ಅವರು ಮುಂದೆ ಯಾರ ಸಿನಿಮಾ ನಿರ್ದೇಶನ ಮಾಡುತ್ತಾರೆ ಎಂಬ ಗೊಂದಲವಿತ್ತು. ಆ ಗೊಂದಲಕ್ಕೀಗ ತೆರೆಬಿದ್ದಿದೆ. ಹೌದು, ಗುರುದತ್‌ ಗಾಣಿಗ ತಮ್ಮ ಎರಡನೇ ಸಿನಿಮಾವನ್ನು ಅಭಿಷೇಕ್‌ ಅಂಬರೀಶ್‌ ಜೊತೆ ಮಾಡಲಿದ್ದಾರೆ ಎಂದು ಜೋರು ಸುದ್ದಿಯಾಗಿತ್ತು. ಆದರೆ, ಆ ಚಿತ್ರದ ಬಗ್ಗೆ ಎಲ್ಲೂ ಅ‍ಪ್‌ಡೇಟ್‌ ಸಿಗಲಿಲ್ಲ. ಈಗ ಗುರುದತ್‌ ಗಾಣಿಗ ತಮ್ಮ ಎರಡನೇ ಸಿನಿಮಾವನ್ನು ಅನೌನ್ಸ್‌ ಮಾಡಿದ್ದಾರೆ.

ಹೌದು, ಈಗ ಎರಡನೇ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಲು ಮುಂದಾಗಿರುವ ಅವರು, ಸದ್ದಿಲ್ಲದೆಯೇ ಹೊಸ ಚಿತ್ರಕ್ಕೆ ಪ್ರೀ ಪ್ರೊಡಕ್ಷನ್ ಕೆಲಸವನ್ನು ಮುಗಿಸಿದ್ದಾರೆ. ವಿಶೇಷ ಅಂದರೆ, ಗುರುದತ್‌ ಗಾಣಿಗ ತಮ್ಮ ಎರಡನೇ ನಿರ್ದೇಶನದ ಸಿನಿಮಾಗೆ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರನ್ನು ಹೀರೋ ಆಗಿ ಆಯ್ಕೆ ಮಾಡಿದ್ದಾರೆ. ಸದ್ಯಕ್ಕೆ ಚಿತ್ರಕ್ಕೆ ಸ್ಕ್ರಿಪ್ಟ್‌ ವರ್ಕ್ ಮುಗಿದಿದೆ. ಆದರೆ ಇನ್ನೂ, ಆ ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿಲ್ಲ. ಜನವರಿ ಸಂಕ್ರಾಂತಿ ವೇಳೆಗೆ ಚಿತ್ರತಂಡ ಫಸ್ಟ್ ಲುಕ್ ಲಾಂಚ್ ಮಾಡುವುದರ ಜೊತೆಯಲ್ಲಿ ಚಿತ್ರದ ಶೀರ್ಷಿಕೆ ಬಿಡುಗಡೆ ಮಾಡಲು ಸಜ್ಜಾಗಿದೆ. ಇನ್ನು, ಈ ಚಿತ್ರವನ್ನು ಬೆಂಗಳೂರು ‌ಕುಮಾರ್‌ ಫಿಲ್ಮ್ಸ್‌ ಬ್ಯಾನರ್‌ನಲ್ಲಿ ಕುಮಾರ್‌ ನಿರ್ಮಾಣ ಮಾಡುತ್ತಿದ್ದಾರೆ. ಇದೊಂದು ಮಾನವ ಕಳ್ಳಸಾಗಣೆ ಕುರಿತಾದ ಕಥೆಯಾಗಿದ್ದು, ಸಾಕಷ್ಟು ಥ್ರಿಲ್ಲರ್‌ ಅಂಶಗಳು ಇಲ್ಲಿರಲಿವೆ. “ಸಿನಿಲಹರಿ” ಜೊತೆ ಮಾತನಾಡಿದ ನಿರ್ದೇಶಕ ಗುರುದತ್‌ ಗಾಣಿಗ, “ಪ್ರಜ್ವಲ್‌ ದೇವರಾಜ್‌ ಅವರಿಗೆ ಈ ಚಿತ್ರ ಬೇರೆಯದ್ದೇ ಇಮೇಜ್‌ ತಂದುಕೊಡುವ ವಿಶ್ವಾಸವಿದೆ. ಅವರ ಕೆರಿಯರ್‌ನಲ್ಲೇ ಇದೊಂದು ನೆಕ್ಸ್ಟ್‌ ಲೆವೆಲ್‌ಗೆ ಕರೆದುಕೊಂಡು ಹೋಗುವ ಸಿನಿಮಾ ಎಂಬ ಗ್ಯಾರಂಟಿ ಕೊಡುತ್ತೇನೆ.

ಪ್ರಜ್ವಲ್‌ ದೇವರಾಜ್‌ ಅವರು ಕೂಡ ಕಥೆ ಹಾಗೂ ಪಾತ್ರದ ಬಗ್ಗೆ ಕೇಳಿ ತುಂಬಾನೇ ಥ್ರಿಲ್‌ ಆಗಿದ್ದಾರೆ. ನಿರ್ಮಾಪಕ ಕುಮಾರ್‌ ಅವರು, ಕಥೆಗೆ ತಕ್ಕಂತೆ ಅದ್ಧೂರಿಯಾಗಿಯೇ ಸಿನಿಮಾ ನಿರ್ಮಾಣ ಮಾಡಲು ತಯಾರಿ ಮಾಡಿಕೊಂಡಿದ್ದಾರೆ. ಇಲ್ಲಿ ಎಲ್ಲೂ ಹೊಂದಾಣಿಕೆ ಮಾಡಿಕೊಳ್ಳದೆ ಗುಣಮಟ್ಟದ ಸಿನಿಮಾ ಕೊಡುವ ಉದ್ದೇಶವಿದೆ. ಚಿತ್ರಕ್ಕೆ “ಮುಂದಿನ ನಿಲ್ದಾಣ” ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದ ಅಭಿ ಇಲ್ಲಿ ಕ್ಯಾಮೆರಾ ಹಿಡಿಯಲಿದ್ದಾರೆ. ಸಂಗೀತ ನಿರ್ದೇಶಕರ ಜೊತೆ ಮಾತುಕತೆ ನಡೆಯುತ್ತಿದೆ. ಉಳಿದಂತೆ ಚಿತ್ರದಲ್ಲಿ ದೇವರಾಜ್‌ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಷ್ಟೇ ಅಲ್ಲ, ಚಿತ್ರದಲ್ಲಿ ಹೀರೋ ಒಬ್ಬರು, ಖಳನಟರಾಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಅವರು ಕಥೆ ಕೇಳಿ ಈಗಾಗಲೇ ಸಿನಿಮಾದಲ್ಲಿ ನಟಿಸಲು ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ. ಅದೊಂದು ಮೇಜರ್‌ ಪಾತ್ರ. ಉಳಿದಂತೆ ಚಿತ್ರದಲ್ಲಿ ಇಬ್ಬರು ನಾಯಕಿಯರು ಇರಲಿದ್ದಾರೆ. ಅವರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಅದೂ ಸ್ಟಾರ್‌ ನಟಿಯರ ಜೊತೆಯೇ ಚರ್ಚೆ ಆಗುತ್ತಿದೆʼ ಎಂದಷ್ಟೇ ಹೇಳುವ ಗುರುದತ್‌ ಗಾಣಿಗ, ಉಳಿದ ವಿಷಯವನ್ನು ಸಂಕ್ರಾಂತಿ ಸಮಯದಲ್ಲಿ ಹಂಚಿಕೊಳ್ಳುವುದಾಗಿ ಹೇಳುತ್ತಾರೆ.

error: Content is protected !!