ನಿರ್ದೇಶಕ ಮಂಸೋರೆ ಅವರ “ಆಕ್ಟ್ -1978” ಚಿತ್ರದ ಪೂರ್ವಭಾವಿ ಪ್ರದರ್ಶನಕ್ಕೆ ಕನ್ನಡ ಚಿತ್ರರಂಗದ ನಟ,ನಟಿಯರು, ನಿರ್ದೇಶಕ, ನಿರ್ಮಾಪಕರು ಆಗಮಿಸಿ, ಚಿತ್ರ ನೋಡಿದ ಖುಷಿಯಲ್ಲಿ ತೇಲಿದರು. ಅಷ್ಟೇ ಅಲ್ಲ, “ಆಕ್ಟ್ – 1978” ಚಿತ್ರದ ಬಗ್ಗೆ ಪ್ರತಿಯೊಬ್ಬರೂ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುವ ಮೂಲಕ ಚಿತ್ರವನ್ನು ನೋಡಿ ಎಂಬ ಮನವಿಯನ್ನೂ ಮಾಡಿಕೊಂಡಿದ್ದಾರೆ. ಪ್ರೀಮಿಯರ್ ಶೋಗೆ ಬಂದ ಕೆಲ ನಟ,ನಟಿಯರ ಫೋಟೋ ಗ್ಯಾಲರಿ ಇಲ್ಲಿದೆ…
ಆಕ್ಟ್-1978 ನೋಡಲು ಬಂದ ಸಿನಿ ಪ್ರೇಮಿಗೆ ಗುಲಾಬಿ ಹೂವಿನ ಗೌರವ
ಅಂತೂ ಇಂತೂ “ಆಕ್ಟ್ -1978” ಚಿತ್ರ ನೋಡುಗರಲ್ಲಿ ಖುಷಿ ಹೆಚ್ಚಿಸಿದೆ. ಅಷ್ಟೇ ಅಲ್ಲ, ಶುಭ ಶುಕ್ರವಾರ ರಾಜ್ಯಾದ್ಯಂತ ಒಳ್ಳೆಯ ಓಪನಿಂಗ್ ಕೂಡ ಪಡೆದುಕೊಂಡಿದೆ. ಎಲ್ಲೆಡೆ “ಆಕ್ಟ್ – 1978” ಚಿತ್ರದ್ದೇ ಮಾತು. ನಿರ್ದೇಶಕ ಮಂಸೋರೆ ಅವರ ಹೊಸ ಆಲೋಚನೆಯ ಕಥೆಯನ್ನು ಜನರು ಮೆಚ್ಚಿಕೊಂಡಿದ್ದಾರೆ.
ಚಿತ್ರಮಂದಿರಕ್ಕೆ ಜನರು ಬರುತ್ತಾರೋ, ಇಲ್ಲವೋ ಎಂಬ ಆತಂಕ ಎಲ್ಲರಲ್ಲೂ ಮನೆಮಾಡಿತ್ತು. ಒಂದು ಸಿನಿಮಾದ ಕಥೆ ಚೆನ್ನಾಗಿದ್ದರೆ, ಅದರ ನಿರೂಪಣೆ ಸೊಗಸಾಗಿದ್ದರೆ, ಹೇಳುವ ಶೈಲಿ ಅದ್ಭುತವಾಗಿದ್ದರೆ, ತೋರಿಸುವ ರೀತಿ ಸರಿಯಾಗಿದ್ದರೆ, ಜನರು ಖಂಡಿತವಾಗಿಯೂ ಯಾವತ್ತೂ ಕನ್ನಡ ಸಿನಿಮಾವನ್ನು ಕೈ ಬಿಟ್ಟಿಲ್ಲ. ಈಗ “ಆಕ್ಟ್ 1978” ಚಿತ್ರವನ್ನೂ ಪ್ರೇಕ್ಷಕ ಮನಸಾರೆ ಒಪ್ಪಿಕೊಂಡಿದ್ದಾನೆ.
ಚಿತ್ರಮಂದಿರಗಳಿಂದ ಹೊರಬರುವ ಪ್ರೇಕ್ಷಕನಲ್ಲಿ ಅದೇನೋ ಪುಳಕ. ಏನೋ ಸಾಧಿಸಿದ ಖುಷಿ. ತಾನು ಅನುಭವಿಸಿದ ನೋವನ್ನುತೆರೆಯ ಮೇಲೆ ಕಂಡಷ್ಟೇ ಆನಂದಭಾಷ್ಪ. ಅದೆಲ್ಲವನ್ನೂ ಅಷ್ಟೇ ಸೊಗಸಾಗಿ, ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿರುವ ನಿರ್ದೇಶಕ ಮಂಸೋರೆ ಅವರ ಕೆಲಸವನ್ನು ನೋಡಿದ ಪ್ರತಿಯೊಬ್ಬ ಪ್ರೇಕ್ಷಕನೂ ಮೆಚ್ಚುತ್ತಿದ್ದಾನೆ. ಚಿತ್ರತಂಡ ಕೂಡ ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕನನ್ನು ಅಷ್ಟೇ ಪ್ರೀತಿಯಿಂದ ಬರಮಾಡಿಕೊಳ್ಳುತ್ತಿದೆ. ಭವ್ಯ ಸ್ವಾಗತದೊಂದಿಗೆ ಬರಮಾಡಿಕೊಳ್ಳುವ ಮೂಲಕ, ಅಭಿಮಾನಿಗಳೇ ನಮ್ಮ ದೇವರು ಅಂತ ಬಂದ ಪ್ರತಿಯೊಬ್ಬ ಸಿನಿಪ್ರೇಮಿಗೂ ಗುಲಾಬಿ ಹೂವು ಕೊಡುವ ಮೂಲಕ ಕೈಮುಗಿದು ಚಿತ್ರಮಂದಿರಕ್ಕೆ ಬರಮಾಡಿಕೊಳ್ಳುತ್ತಿದೆ.
ಬೆಂಗಳೂರಿನ ಶ್ರೀನಿವಾಸ ಚಿತ್ರಮಂದಿರದಲ್ಲೂ ಕೂಡ “ಆಕ್ಟ್ 1978” ಸಿನಿಮಾ ನೋಡಲು ಬಂದ ಪ್ರತಿ ಪ್ರೇಕ್ಷಕನಿಗೂ ಚಿತ್ರತಂಡದ ಸದಸ್ಯರು ಬಾಗಿಲು ಬಳಿ ನಿಂತು, ಅಭಿಮಾನಿಗಳೇ ನಮ್ಮ ದೇವರು ಎಂದು ಕೈಮುಗಿದು ಬರಮಾಡಿಕೊಳ್ಳುವ ರೀತಿಗೆ ಪ್ರೇಕ್ಷಕ ಕೂಡ ಫಿದಾ ಆಗಿದ್ದಾನೆ.
ಇನ್ನು, ಚಿತ್ರಮಂದಿರ ಒಳಹೊಕ್ಕ ಪ್ರೇಕ್ಷಕ ಸಿನಿಮಾ ನೋಡಿದ ಮೇಲೆ, ಕಣ್ಣಾಲಿಗಳನ್ನು ಒದ್ದೆ ಮಾಡಿಕೊಂಡು ಬಂದು ಭಾರದ ನಿಟ್ಟುಸಿರು ಬಿಟ್ಟು, ಸಿನಿಮಾಗೆ ಜಯವಾಗಲಿ ಎನ್ನುತ್ತಿದ್ದಾನೆ. ಅಂತೂ ಒಂದೊಳ್ಳೆಯ ಕಥೆ ಹೆಣೆದು, ವಾಸ್ತವ ಅಂಶಗಳನ್ನು ಜನರ ಮುಂದಿಟ್ಟ ಮಂಸೋರೆ ಅಂಡ್ ತಂಡಕ್ಕೆ ಭರಪೂರ ಮೆಚ್ಚುಗೆಯ ಸುರಿಮಳೆಯಾಗುತ್ತಿದೆ.
ಶಿವರಾಜಕುಮಾರ್ ಅಭಿನಯದ “ಶಿವಪ್ಪ” ಸಿನಿಮಾಗೆ ಇತ್ತೀಚೆಗಷ್ಟೇ ಮುಹೂರ್ತ ನೆರವೇರಿದ್ದು ಗೊತ್ತೇ ಇದೆ. ಆ ಚಿತ್ರದಲ್ಲಿ “ಡಾಲಿ” ಧನಂಜಯ್ ಕೂಡ ಅಭಿನಯಿಸುತ್ತಿದ್ದಾರೆ. ಜೊತೆಯಲ್ಲಿ ಪೃಥ್ವಿ ಅಂಬರ್ ಕೂಡ ಇದ್ದಾರೆ ಎಂಬ ಸುದ್ದಿ ಕೂಡ ಗೊತ್ತಿದೆ. ಈಗ “ಶಿವಪ್ಪ” ಚಿತ್ರದ ಹೊಸ ಸುದ್ದಿಯೆಂದರೆ, “ಶಿವಪ್ಪ”ನಿಗೆ ನಾಯಕಿ ಸಿಕ್ಕಾಗಿದೆ. ಹೌದು, “ಶಿವಪ್ಪ” ಅದೊಂದು ಪವರ್ಫುಲ್ ಶೀರ್ಷಿಕೆ. ಅಂತಹ ಚಿತ್ರಕ್ಕೆ ನಾಯಕಿ ಕೂಡ ಹಾಗಯೇ ಇರಬೇಕಲ್ಲವೇ? ಶಿವರಾಜಕುಮಾರ್ ಅವರಿಗೆ ಜೋಡಿಯ ಹುಡುಕಾಟ ನಡೆದಿತ್ತಾದರೂ, ಯಾರೂ ಅನ್ನೋದು ಪಕ್ಕಾ ಆಗಿರಲಿಲ್ಲ. ಈಗ “ಶಿವಪ್ಪ”ನಿಗೆ ನಾಯಕಿಯ ಆಯ್ಕೆಯಾಗಿದೆ. ಹೌದು, ತಮಿಳು ಚಿತ್ರರಂಗದ ವಿಜಯ್ ಮಿಲ್ಟನ್ ನಿರ್ದೇಶನದ “ಶಿವಪ್ಪ” ಚಿತ್ರಕ್ಕೆ ಅಂಜಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಅಂಜಲಿ ಅವರಿಗೆ ಕನ್ನಡ ಚಿತ್ರರಂಗ ಹೊಸದೇನಲ್ಲ. ಈ ಹಿಂದೆ ಪುನೀತ್ ರಾಜಕುಮಾರ್ ಅಭಿನಯದ “ರಣ ವಿಕ್ರಮ” ಚಿತ್ರದಲ್ಲಿ ಅಂಜಲಿ ನಟಿಸಿದ್ದರು. ಏಳು ವರ್ಷಗಳ ಬಳಿಕ ಈಗ ಅಂಜಲಿ ಕನ್ನಡಕ್ಕೆ ಕಾಲಿಟ್ಟಿದ್ದಾರೆ. ಅಂಜಲಿ ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಾಗೆ ನೋಡಿದರೆ, ಅಂಜಲಿ ಅವರು, “ಹೊಂಗನಸುʼ ಎಂಬ ಸಿನಿಮಾದಲ್ಲೂ ನಟಿಸಿದ್ದು, ಈಗ “ಶಿವಪಪ್” ಅಂಜಲಿ ಅಭಿನಯದ ಮೂರನೇ ಸಿನಿಮಾ ಆಗಿದೆ.
ಅದೇನೆ ಇರಲಿ, ತಮಿಳು ನಿರ್ದೇಶಕ ವಿಜಯ್ ಮಿಲ್ಟನ್ ಅವರೀಗ “ಶಿವಪ್ಪ”ನ ಜಪ ಮಾಡುತ್ತಿದ್ದಾರೆ. ಮೂಲಗಳ ಪ್ರಕಾರ, ತಮಿಳಿನಲ್ಲಿ ವಿಜಯ್ ಮಿಲ್ಟನ್ ಅವರೇ ನಿರ್ದೇಶಿಸಿದ್ದ “ಕಗುಡುʼ ಚಿತ್ರದ ಅವರಣಿಕೆ ಇದಾಗಿರಬಹುದಾ ಎಂಬ ಪ್ರಶ್ನೆ ಇದೆಯಾದರೂ, ಎಲ್ಲೂ ಈ ಕುರಿತು ಮಾಹಿತಿ ಇಲ್ಲ. ಸದ್ಯಕ್ಕೆ ಚಿತ್ರೀಕರಣ ಜೋರಾಗಿದೆ.
ಸಿನಿಮಾ ಸೆಲಿಬ್ರಿಟಿಗಳೆಂದರೆ ಸಾಕು, ಅವರು ಏನೇ ಹೇಳಿದರೂ ಜನರಿಗೆ ಅದೊಂದು ವೇದವಾಕ್ಯ. ಹಾಗಂತ, ಇಲ್ಲಿ ಸೆಲಿಬ್ರಿಟಿಗಳ ಕುರಿತು ಬೇರೇ ಏನನ್ನೋ ಹೇಳಲಾಗುತ್ತಿದೆ ಎಂಬರ್ಥವಲ್ಲ. ಹಲವು ಬ್ರಾಂಡ್ಗಳ ಹಿಂದೆ ಹೋಗಿ ಜಾಹಿರಾತು ನೀಡುವ ಸೆಲಿಬ್ರಿಟಿಗಳೂ ಇದ್ದಾರೆ. ಹಾಗೆಯೇ, ಒಂದಷ್ಟು ಸಾರ್ವಜನಿಕವಾಗಿಯೂ ಒಳ್ಳೆಯ ವಿಷಯಗಳ ಮೂಲಕ ಜಾಗೃತಿ ಮೂಡಿಸುವ ಸೆಲಿಬ್ರಿಟಿಗಳೂ ಇದ್ದಾರೆ. ಆದರೆ, ಅದೆಷ್ಟೋ ಸೆಲಿಬ್ರಿಟಿಗಳಲ್ಲಿ ವಿಟಿಲಿಗೋ (ವೈಟ್ ಪ್ಯಾಚಸ್, ತೊನ್ನು, ಬಿಳಿ ಮಚ್ಚೆ) ಸಮಸ್ಯೆ ಇದ್ದರೂ ಮುಜುಗರ ಆಗುತ್ತೆ ಎಂಬ ಕಾರಣಕ್ಕೆ ಅವರೆಲ್ಲೂ ಅದನ್ನು ತೋರ್ಪಡಿಸಿಕೊಳ್ಳಲ್ಲ. ಅಂತಹ ಧೈರ್ಯಕ್ಕೂ ಮುಂದಾಗಲ್ಲ. ಸೆಲಿಬ್ರಿಟಿಗಳು ಮಾತ್ರವಲ್ಲ, ಅದೆಷ್ಟೋ ಜನರು ಈ ವಿಟಿಲಿಗೋ ಅಂದರೆ, ಬಿಳಿ ಮಚ್ಚೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅದರಿಂದ ಹಲವರು ರೋಸಿ ಹೋಗಿದ್ದೂ ಇದೆ. ಅಂತಹವರಿಗೆ ಒಂದಷ್ಟು ಧೈರ್ಯ ಹೇಳಲು, ಯಾವುದೇ ಕಾರಣಕ್ಕೂ ಡಿಪ್ರೆಷನ್ಗೆ ಹೋಗದಿರಲು ಒಂದಷ್ಟು ಜಾಗೃತಿ ಮೂಡಿಸುವುದಕ್ಕಾಗಿಯೇ ಕನ್ನಡ ಚಿತ್ರ ನಿರ್ದೇಶಕರೊಬ್ಬರು ಮಂದಾಗಿದ್ದಾರೆ.
ಮಹೇಶ್ ಗೌಡ, ನಿರ್ದೇಶಕ
ಹೌದು, “ಮಹಿರ” ಸಿನಿಮಾ ಮೂಲಕ ಸುದ್ದಿಯಾದ ನಿರ್ದೇಶಕ ಮಹೇಶ್ಗೌಡ ಅವರೀಗ ವಿಟಿಲಿಗೋ ಸಮಸ್ಯೆಯಲ್ಲಿ ಸಿಲುಕಿದವರ ಪರ ನಿಲ್ಲುವ ಮನಸ್ಸು ಮಾಡಿದ್ದಾರೆ. ಇಷ್ಟಕ್ಕೂ ಮಹೇಶ್ಗೌಡ ಯಾಕೆ, ವೈಟ್ ಪ್ಯಾಚಸ್ ಇರೋ ಜನರ ಜೊತೆ ಇರಬೇಕು ಅಂದುಕೊಂಡಿದ್ದಾರೆಂದರೆ, ಅವರೂ ಕೂಡ ಈ ಸಮಸ್ಯೆ ಎದುರಿಸುತ್ತಿದ್ದಾರೆ. ಹೌದು, ಸ್ವತಃ ನಿರ್ದೇಶಕ ಮಹೇಶ್ಗೌಡ ಅವರೇ ತಮಗೂ ವಿಟಿಲಿಗೋ ಸಮಸ್ಯೆ ಇದೆ ಎಂದು ಯಾವುದೇ ಮುಜುಗರವಿಲ್ಲದೆ ಹೇಳಿಕೊಂಡಿದ್ದಾರೆ. ಇಷ್ಟಕ್ಕೂ ಅವರೀಗ ಈ ಕುರಿತಂತೆ ಜಾಗೃತಿ ಮೂಡಿಸುವ ಯೋಚನೆ ಬಂದಿದ್ದು ಕೊರೊನಾದ ಲಾಕ್ಡೌನ್ ಸಮಯದಲ್ಲಿ. ಆ ಕುರಿತಂತೆ ನಿರ್ದೇಶಕ ಮಹೇಶ್ಗೌಡ ಅವರು “ಸಿನಿ ಲಹರಿ” ಜೊತೆ ಒಂದಷ್ಟು ಮಾತಾಡಿದ್ದಾರೆ.
ಇದೊಂದು ಗಂಭೀರ ಹೆಜ್ಜೆ
“ನಾನು ಕನ್ನಡ ಚಿತ್ರರಂಗದಲ್ಲಿದ್ದೇನೆ. “ಮಹಿರ” ಸಿನಿಮಾ ಮೂಲಕ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದೇನೆ. ನಾನೀಗ ವಿಟಿಲಿಗೋ ಕುರಿತು ತುಂಬಾ ಗಂಭೀರವಾಗಿಯೇ ಹೆಜ್ಜೆ ಇಡುತ್ತಿದ್ದೇನೆ. ಎಲ್ಲೋ ಒಂದು ಕಡೆ ಚಿಕ್ಕದ್ದಾಗಿ ವೈಟ್ ಪ್ಯಾಚಸ್ ಕಾಣಿಸಿಕೊಂಡಾಗ, ಅದೊಂದು ರೀತಿ ಕಾಡುತ್ತದಲ್ಲದೆ, ಅದನ್ನು ನಾವು ಹೆಚ್ಚು ತಲೆಕೆಡಿಸಿಕೊಳ್ಳದೆ ಬಿಟ್ಟು ಬಿಡ್ತೀವಿ. ಕೆಲವೊಮ್ಮೆ ಬೇಜಾರ್ ಆಗುತ್ತೆ. ಕೆಲವರಿಗೆ ಕಣ್ಣು, ಕಿವಿ ಮೂಗು, ಮುಖ ಹೀಗೆ ಹಲವು ಕಡೆ ಕಾಣಿಸಿಕೊಳ್ಳತ್ತೆ. ಹಾಗಂತ ಇದು ಖಂಡಿತವಾಗಿಯೂ ಖಾಯಿಲೆ ಅಲ್ಲ. ಅದೂ ಒಂದು ರೀತಿಯ ಟೈಪ್ ಆಫ್ ಸ್ಕಿನ್ ಅಷ್ಟೇ. ಅದು ಒಬ್ಬರಿಂದ ಒಬ್ಬರಿಗೆ ಹರಡುವುದಿಲ್ಲ. ವೈಟ್ ಪ್ಯಾಚಸ್ ಇದ್ದರೆ, ಸ್ಕಿನ್ ಕ್ಯಾನ್ಸರ್ ಕೂಡ ಬರಲ್ಲ. ಇಷ್ಟಕ್ಕೂ ನಾನು ವೈಟ್ ಪ್ಯಾಚಸ್ ಬಗ್ಗೆ ಮಾತಾಡುತ್ತಿರುವುದಕ್ಕೆ ಕಾರಣವೂ ಇದೆ.
ಸರ್ಕಾರದಿಂದಾಗಲಿ, ಎನ್ಜಿಓಗಳಿಂದಾಗಲಿ, ಬ್ರಾಂಡ್ ಕಂಪೆನಿಗಳ ಜಾಹಿರಾತಾಗಲಿ ಈ ಕುರಿತಂತೆ ಪ್ರಚಾರವಿಲ್ಲ. ಜಾಗೃತಿಯೂ ಮೂಡಿಸಿಲ್ಲ. ಇದಕ್ಕೆ ಚಿಕಿತ್ಸೆ ಹೆಚ್ಚು ಕೊಡಿಸಬೇಕು. ಮೆಡಿಸನ್ ಇದ್ದರೂ ವಾಸಿ ಆಗೋದು ಕಷ್ಟ. ಮಕ್ಕಳಿಗೆ ಮಾತ್ರ ಕೆಲವೊಮ್ಮೆ ಕ್ಯೂರ್ ಆಗುವ ಅವಕಾಶ ಇರುತ್ತೆ. ಮನುಷ್ಯ ಹೆಚ್ಚು ಒತ್ತಡದಲ್ಲಿದ್ದಾಗ, ಡಿಪ್ರೆಷನ್ಗೆ ಹೋದಾಗ, ಲವ್ ಫೇಲ್ಯೂರ್ ಆಗಿ ಯೋಚನೆಯಲ್ಲಿದ್ದಾಗ, ಮದುವೆ, ಮನೆ ಮಕ್ಕಳು ಹೀಗೆ ನಾನಾ ರೀತಿಯಲ್ಲಿ ತನ್ನದೇ ಆದ ಗಂಭೀರ ಯೋಚನೆಗೆ ಸಿಲುಕಿಕೊಂಡಾಗ ವೈಟ್ ಪ್ಯಾಚಸ್ ಹೆಚ್ಚಾಗುತ್ತೆ. ಇದು ಬಹಳಷ್ಟು ಜನರಿಗೆ ಗೊತ್ತಿರೋದಿಲ್ಲ. ಆದೇ ಡಿಪ್ರೆಶನ್ಗೆ ಹೋದವರನ್ನು ಹುಡುಕಿ ಕೆಲವರು ಬನ್ನಿ ಕೌನ್ಸಿಲ್ ಮಾಡೋಣ ಅಂತಾರೆ. ಆದರೆ, ವೈಟ್ ಪ್ಯಾಚಸ್ ಕುರಿತಂತೆ ಕೌನ್ಸಿಲ್ ಮಾಡೋರ್ಯಾರು?
ನನಗೂ ಈ ಸಮಸ್ಯೆ ಇದೆ
ಎಲ್ಲದರ ಬಗ್ಗೆಯೂ ಜಾಗೃತಿ ಇದೆ. ಆದರೆ, ಇದರ ಬಗ್ಗೆ ಇಲ್ಲ ಎನ್ನುವ ಮಹೇಶ್ಗೌಡ, ನಾನೊಬ್ಬ ನಿರ್ದೇಶಕ. ನನಗೂ ಈ ಸಮಸ್ಯೆ ಇದೆ. ಆ ಕಷ್ಟ, ನೋವು, ಮುಜುಗರ ನಾನೂ ಅನುಭವಿಸಿದ್ದೇನೆ. ಮನರಂಜನೆ ಕ್ಷೇತ್ರದಲ್ಲಿರೋ ಯಾರೂ ತನಗೆ ವೈಟ್ ಪ್ಯಾಚಸ್ ಇದೆ ಅಂತ ಹೇಳಿಕೊಂಡಿಲ್ಲ. ಅಥವಾ ವೈಟ್ ಪ್ಯಾಚಸ್ ಇರುವವರ ಪರ ನಿಂತಿಲ್ಲ. ನಾನೀಗ ಆ ಕೆಲಸಕ್ಕೆ ಮುಂದಾಗಿದ್ದೇನೆ. ಇಡೀ ದೇಶದಲ್ಲೇ ಮನರಂಜನೆ ಫೀಲ್ಡ್ನಲ್ಲಿರೋ ಯಾರೊಬ್ಬರು ಮುಂದಾಗಿಲ್ಲ. ನಾನು ಮುಂದಾಗುತ್ತಿದ್ದೇನೆ ಎಂಬ ಖುಷಿ ಇದೆ. ಇದರಲ್ಲಿ ಯಾವುದೇ ಮುಜುಗರ ಇಲ್ಲ. ಕೊರೊನಾ ಸಮಯದಲ್ಲಿ ನಾನು ಈ ನಿರ್ಧಾರ ಮಾಡಿದೆ.
ಡಿಪ್ರೆಷನ್ ಬದಿಗೊತ್ತಿ, ವಾವ್ ಅಂತ ಮಾಡಬೇಕು ಅಂದುಕೊಂಡೆ. ಮೊದಲು ಬಾಡಿ ಪಾಸಿಟಿವ್ ಮಾಡಿಕೊಂಡೆ. ಫಿಟ್ನೆಸ್ ಮೂಲಕ ನಾನು ಈ ವೈಟ್ ಪ್ಯಾಚಸ್ ಕುರಿತು ಜಾಗೃತಿ ಮೂಡಿಸಬೇಕು ಅಂದುಕೊಂಡೆ, ನನಗೆ ೧೧ ವರ್ಷ ಇದ್ದಾಗಲೇ ವೈಟ್ ಪ್ಯಾಚಸ್ ಕಾಣಿಸಿಕೊಂಡಿತ್ತು. ನಾನು ಎಲ್ಲೇ ಹೋದರೂ, ಹಾಫ್ಯ ಹ್ಯಾಂಡ್ ಷರ್ಟ್, ಟೀ ಷರ್ಟ್ ಹಾಕಿಲ್ಲ. ನಾನೊಬ್ಬ ಲಂಡನ್ ರಿಟರ್ನ್. ಇಲ್ಲಿಗೆ ಬಂದಾಗಲೂ ಸಮಾಜ ಏನಂದುಕೊಳ್ಳುತ್ತೋ, ಜನರು ಏನು ತಿಳಿದುಕೊಳ್ಳುತ್ತಾರೋ ಎಂಬ ಬೇಸರ, ಸಣ್ಣ ಅಳಕು ಇತ್ತು. ಆದರೆ, ಈಗ ಅದೆಲ್ಲ ಬಿಟ್ಟು ಬಂದಿದ್ದೇನೆ. ಕೆಲಸ ಕ್ಷೇತ್ರದಲ್ಲಿರೋರು ಇದ್ದಾರೆ. ಯಾರೂ ಈ ಬಗ್ಗೆ ಯೋಚಿಸಿಲ್ಲ. ಸಿನಿಮಾ ಇಂಡಸ್ಟ್ರಿಯಲ್ಲೂ ನನ್ನಂತೆಯೇ ಇತರರು ಇರಬಹುದು. ಅವರಿಗೆ ಮುಜುಗರ ಆಗಬಹುದೇನೋ, ಆದರೆ, ನನಗೆ ಯಾವ ಬೇಸರವಿಲ್ಲ. ಈ ಬಗ್ಗೆ ನಾನು ಒಂದಷ್ಟು ಜಾಗೃತಿ ಮೂಡಿಸುವ ಪ್ರಯತ್ನಕ್ಕೆ ಹೊರಟಿದ್ದೇನೆ.
ಭಾರತದಲ್ಲೇ ಮೊದಲಿಗ
ಇಂಡಿಯಾದಲ್ಲೇ ಮೊದಲ ಸಲ ಸಿನಿಮಾ ಇಂಡಸ್ಟ್ರಿಯಿಂದ ವಿಟಿಲಿಗೋ ಇರುವ ವ್ಯಕ್ತಿಯಾಗಿ ನಾನು ಮುಂದೆ ಬಂದಿದ್ದೇನೆ. ಇಲ್ಲಿ ಫಿಲಾಸಫಿ ಹೇಳೋಕೆ ಹೊರಟಿಲ್ಲ. ಈ ಮೂಲಕ ನಾನು ಎಜುಕೇಷನ್ ಕೊಡಲ್ಲ. ಸರ್ಕಾರದಿಂದಲೋ ಅಥವಾ ಎನ್ಜಿಓದಿಂದಲೋ ಫಂಡ್ ರೈಸ್ ಮಾಡಿಸಿಕೊಳ್ಳುವ ಯೋಚನೆಯೂ ಇಲ್ಲ. ನನ್ನ ಶ್ರಮದ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನಕ್ಕೆ ಕೈ ಹಾಕಿದ್ದೇನೆ. ಹಳ್ಳಿಗಳಲ್ಲಿ, ಶಾಲೆ, ಕಾಲೇಜ್, ಕಾರ್ಪೋರೆಟ್ ಕಂಪೆನಿ ಹೀಗೆ ಇತರೆಡೆ ಮಾತಾಡುವ ಮೂಲಕ ಜಾಗೃತಿ ಆಗಬೇಕು ಎಂದು ಬಯಸಿದ್ದೇನೆ. ಅವರಲ್ಲಿ ಸ್ಫೂರ್ತಿ ತುಂಬುವ ಕೆಲಸ ಮಾಡಬೇಕಿದೆ. ನನಗೆ ಕೈ, ಕಾಲಲ್ಲೂ ವೈಟ್ ಪ್ಯಾಚಸ್ ಇದೆ. ಕಳೆದ ಒಂದಷ್ಟು ತಿಂಗಳ ಕಾಲ ನಾನು ಸ್ವೀಟ್ ತಿಂದಿಲ್ಲ, ಸಾಲ್ಟ್, ಎಣ್ಣೆ ಪದಾರ್ಥ ಮುಟ್ಟಿಲ್ಲ. ಇದರಿಂದ ಪರದಾಡಿದ್ದೂ ಇದೆ.
ಜಾಗೃತಿ ಮೂಡಿಸುವ ಕೆಲಸಕ್ಕೆ ಯಾರಾದರೂ ಕೈ ಚಾಚಿದರೆ, ಸ್ಟಾರ್ ನಟರೂ ಜೊತೆಗೂಡಿದರೆ ಇನ್ನಷ್ಟು ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಲು ಸಾಧ್ಯವಿದೆ. ಮುಂದಿನ ದಿನಗಳಲ್ಲಿ ಯಾವುದಾದರೂ ಕಂಪೆನಿಗಳು ಜಾಹಿರಾತಿಗೆ ಆಹ್ವಾನಿಸಿದರೆ, ಅದರಿಂದ ಬಂದ ಹಣದಲ್ಲಿ ಒಂದಷ್ಟು ಬಡ ಮಕ್ಕಳನ್ನು ಗುರುತಿಸಿ, ಅವರಿಗೆ ಚಿಕಿತ್ಸೆ ಕೊಡಿಸುವ ಉದ್ದೇಶವಿದೆ” ಎನ್ನುತ್ತಾರೆ ಮಹೇಶ್ ಗೌಡ. ಅದೇನೆ ಇರಲಿ, ಇಂಥದ್ದೊಂದು ಕೆಲಸಕ್ಕೆ ಮುಂದಾಗಿರುವ ನಿರ್ದೇಶಕ ಮಹೇಶ್ಗೌಡ ಅವರಿಗೆ “ಸಿನಿ ಲಹರಿ” ಹಾರೈಸಲಿದೆ.
ಇಡೀ ಪ್ರಪಂಚದಲ್ಲಿ ಕೊರೊನಾ ತಂದಿಟ್ಟ ಅವಾಂತರ ಅಷ್ಟಿಷ್ಟಲ್ಲ. ಸಿನಿಮಾರಂಗ ಕೂಡ ಇದಕ್ಕೆ ಹೊರತಲ್ಲ. ದೊಡ್ಡ ಹೊಡೆತ ತಿಂದಿರುವ ಸಿನಿಮಾರಂಗ ಈಗಷ್ಟೇ ಚೇತರಿಸಿಕೊಳ್ಳುತ್ತಿದೆ. ಒಂದಷ್ಟು ಸಿನಿಮಾಗಳು ಬಿಡುಗಡೆ ಕಂಡರೆ, ಹೊಸ ಚಿತ್ರಗಳು ಸೆಟ್ಟೇರುತ್ತಿವೆ. ಇದರ ನಡುವೆಯೇ ಸಾಕಷ್ಟು ಚಿತ್ರಗಳು ಪ್ರಚಾರಕ್ಕೂ ಇಳಿದಿವೆ. ತಮ್ಮ ಚಿತ್ರದ ಟ್ರೇಲರ್, ಟೀಸರ್, ಫಸ್ಟ್ ಲುಕ್ ಹೀಗೆ ಬಿಡುಗಡೆ ಮಾಡುವ ಮೂಲಕ ಪ್ರಚಾರಕ್ಕೆ ಮುಂದಾಗಿವೆ. ಇನ್ನು, ಕೊರೊನಾ ಸಮಸ್ಯೆ ಕುರಿತಂತೆಯೂ ಒಂದಷ್ಟು ಕಿರುಚಿತ್ರಗಳು, ಆಲ್ಬಂ ಸಾಂಗ್ಗಳೂ ಹೊರಬಂದಿವೆ. ಆ ಸಾಲಿಗೆ ಈಗ “ಆತ್ಮ ನಿರ್ಭರತ ಭಾರತ” ವಿಶ್ವಕ್ಕೆ ಗುರುವಾಗಲಿ.. ಎಂಬ ವಿಡಿಯೋ ಆಲ್ಬಂ ಸಾಂಗ್ ನಿರ್ಮಾಣಗೊಂಡಿದೆ.
ಕಳೆದ ಒಂಬತ್ತು ತಿಂಗಳಿನಿಂದಲೂ ಕೊರೊನಾ ಹಾವಳಿ ಅಷ್ಟಿಷ್ಟಲ್ಲ. ಇದರಿಂದಾಗಿ ಪ್ರತಿಯೊಬ್ಬರ ಆರ್ಥಿಕ ಸ್ಥಿತಿಯಂತೂ ಹೇಳತೀರದು. ಪ್ರತಿಯೊಂದು ಕುಟುಂಬದ ಮೇಲೂ ಸಾಕಷ್ಟು ಗಂಭೀರ ಪರಿಣಾಮ ಬೀರಿ, ಸಾರ್ವಜನಿಕರ ಜನಜೀವನ ಬದುಕಿನ ಶೈಲಿಯೇ ಬದಲಾಗಿದ್ದು ಎಲ್ಲರಿಗೂ ಗೊತ್ತಿದೆ. ಇಂತಹ ಸ್ಥಿತಿಯಲ್ಲಿ ಕೊರೊನಾ ವಿರುದ್ಧ ಹೋರಾಟ ಮಾಡಲು, ಆತ್ಮಸ್ಥೈರ್ಯ ತುಂಬುವ ಸಲುವಾಗಿ “ಆತ್ಮ ನಿರ್ಭರತ ಭಾರತ” ಎಂಬ ವಿಡಿಯೋ ಸಾಂಗ್ ನಿರ್ಮಿಸಲಾಗಿದೆ.
ಮಹೇಂದ್ರ ಮುನೋತ್
ಈ ವಿಡಿಯೊ ಆಲ್ಬಂ ಸಾಂಗ್ನಲ್ಲಿ ನಮ್ಮ ಪರಂಪರೆ, ನಮ್ಮ ಶಕ್ತಿ, ನಮ್ಮ ಸಾಧನೆ ಏನು ಎಂಬ ಅಂಶಗಳೊಂದಿಗೆ ಧೈರ್ಯ ತುಂಬುವುದರ ಜೊತೆಯಲ್ಲಿ ಎಷ್ಟೋ ಕಷ್ಟಗಳನ್ನು ಎದುರಿಸಿರುವ ನಾವು ಕೊರೋನ ವಿರುದ್ಧ ಹೋರಡಲಾರೆವಾ? ಎಂದು ಎಲ್ಲರಿಗೂ ಧೈರ್ಯ ತುಂಬುವ ಗೀತೆಯಾಗಿ ಈ ಹಾಡನ್ನು ಹೊರತರಲಾಗಿದೆ. ಅಂದಹಾಗೆ, ಮಾರುತಿ ಮೆಡಿಕಲ್ಸ್ ಮಹೇಂದ್ರ ಮುನೋತ್ ಅವರು ಆನಂದ್ ಸಿನಿಮಾಸ್ ಮೂಲಕ ಈ ವಿಡಿಯೋ ಸಾಂಗ್ ನಿರ್ಮಿಸಿದ್ದಾರೆ. ಈ ಹಿಂದೆ “ನಮಗಾಗಿ ಜೀವ ಕೊಟ್ಟವರು” ಎಂಬ ವಿಡಿಯೋ ಸಾಂಗ್ ಕೂಡ ಬಿಡುಗಡೆ ಮಾಡಿದ್ದರು. ಈಗ “ಆತ್ಮ ನಿರ್ಭರತ ಭಾರತ” ಮಾಡಿದ್ದಾರೆ. ಎಂ.ಗಜೇಂದ್ರ ನಿರ್ದೇಶನ ಮಾಡಿದ್ದಾರೆ. ಇನ್ನು, ಈ ಹಾಡಿಗೆ ಮೂರುರಾಯರಗಂಡ ಅವರ ಸಾಹಿತ್ಯವಿದೆ. ವಿಜಯ್ ಕೃಷ್ಣ ಅವರ ಸಂಗೀತವಿದೆ. ರಾಜ್ಯ ಪ್ರಶಸ್ತಿ ವಿಜೇತ ಗಾಯಕ ತೇಜಸ್ವಿ ಹರಿದಾಸ್ ಧ್ವನಿಯಲ್ಲಿ ಹಾಡು ಮೂಡಿಬಂದಿದೆ. ಲಕ್ಷ್ಮೀಕಾಂತ್ ಮತ್ತು ವೀರೇಶ್ ಅವರ ಛಾಯಾಗ್ರಹಣವಿದೆ. ಜವಳಿ ಅವರ ಸಂಕಲನವಿದೆ.
ಚಿತ್ರ : ಆಕ್ಟ್ 1978 ನಿರ್ಮಾಣ : ಆರ್. ದೇವರಾಜ್ ನಿರ್ದೇಶನ : ಮಂಸೋರೆ ತಾರಾಗಣ : ಯಜ್ಞ ಶೆಟ್ಟಿ, ಪ್ರಮೋದ್ ಶೆಟ್ಟಿ, ಬಿ.ಸರೇಶ್, ಸಂಚಾರಿ ವಿಜಯ್, ಶೃತಿ, ದತ್ತಣ್ಣ, ಅಚ್ಯುತ ಕುಮಾರ್, ಅವಿನಾಶ್, ಸುಧಾ ಬೆಳವಾಡಿ, ಶೋಭ್ ರಾಜ್, ಶರಣ್ಯ, ನಂದಗೋಪಾಲ್, ರಾಘು ಶಿವಮೊಗ್ಗ ಇತರರು.
“ಅದ್ಧೂರಿ ಮದುವೆ ಮಾಡೋರು, ಲಕ್ಷಾಂತರ ರುಪಾಯಿ ಬ್ಯಾಂಕ್ ಸಾಲ ಕಟ್ಟೋರು, ಕೋಟಿ ಬೆಲೆ ಬಾಳುವ ಮನೆ ಕಟ್ಟೋರು ನಿಮಗೇ ಕಷ್ಟ ಬಂದಾಗ ಮನೆ, ಮಕ್ಕಳು ನೆನಪಾಗುತ್ತಾರೆ. ಆದರೆ, ಸಹಾಯ ಕೇಳಿ ನಿಮ್ಮ ಬಳಿ ಬರುವ ಜನರ ಕಷ್ಟ ಅರ್ಥವಾಗಲ್ಲ. ನಿಮಗೆ ಲಂಚ ಕೋಡೋಕೆ ನಾವು ಸಾಲ ಮಾಡಬೇಕು. ಚಿನ್ನದ ಓಲೆ, ಸರ ಅಡವಿಟ್ಟು ನಿಮ್ಮ ಕಮಿಟ್ಮೆಂಟ್ಗಳಿಗೆ ನಮ್ ಹಣ ಬೇಕು. ದುಡಿದ್ ತಿನ್ನೋರ ಜೊತೆ ಬಡಿದ್ ತಿಂತಿದ್ದೀರಲ್ಲ…”
– ಹೀಗೆ ನೋವು ತುಂಬಿದ ಮಾತುಗಳಲ್ಲಿ ಆ ಅಸಹಾಯಕ ತುಂಬು ಗರ್ಭಿಣಿ ಹೇಳುತ್ತಾ ಹೋದರೆ, ಅವಳ ಮುಂದೆ ತಪ್ಪು ಮಾಡಿ ಕೂತವರ ಮುಖ ಜೋತುಬಿದ್ದಿರುತ್ತೆ. ಅಂದಹಾಗೆ, ಇದು ಕೊರೊನಾ ಹಾವಳಿ ನಡುವೆಯೂ ಚಿತ್ರಮಂದಿರಕ್ಕೆ ಧೈರ್ಯವಾಗಿಯೇ ಲಗ್ಗೆ ಇಟ್ಟ “ಆಕ್ಟ್ 1978” ಚಿತ್ರದೊಳಗಿನ ಸೂಕ್ಷ್ಮತೆಯ ವಿಷಯ. ಈ ವಾರ ತೆರೆಗೆ ಅಪ್ಪಳಿಸಿರುವ “ಆಕ್ಟ್ 1978” ನೋಡುಗರಲ್ಲಿ ಒಂದಷ್ಟು ಕಿಚ್ಚೆಬ್ಬಿಸುವುದಷ್ಟೇ ಅಲ್ಲ, ಅತೀ ಅಸಹಾಯಕ ಜನರ ಗೋಳು, ನೋವು, ಕಷ್ಟ-ನಷ್ಟಗಳಿಗೆ ಮಿಡಿಯುವ ತುಡಿತ ಹೆಚ್ಚಾಗದೇ ಇರದು.
ಬಿ.ಸುರೇಶ, ನಟ
ಹೌದು, ಸೂಕ್ಷ್ಮ ಸಂವೇದನೆಯ ನಿರ್ದೇಶಕ ಮಂಸೋರೆ ಅವರ ಮೇಲಿಟ್ಟ ನಂಬಿಕೆ ಸುಳ್ಳಾಗಿಲ್ಲ. ಭರವಸೆಯೂ ಹುಸಿಯಾಗಿಲ್ಲ. ನಿರೀಕ್ಷೆ ಉಳಿಸಿಕೊಂಡಿದ್ದಾರೆ ಅನ್ನುವುದಕ್ಕೆ “ಆಕ್ಟ್ 1978” ಕೊಡುವ ಭಾವುಕತೆಯ ಹೂರಣವೇ ಸಾಕ್ಷಿ. ಅವರು ಈ ಬಾರಿ ಜನರ ಮುಂದಿಟ್ಟಿರುವ ವಿಷಯ ಹೊಸದಲ್ಲದಿದ್ದರೂ, ಹೇಳುವ ಮತ್ತು ಅದನ್ನು ಅಷ್ಟೇ ಜಾಣತನದಿಂದ ಕಟ್ಟಿಕೊಡಲು ಮಾಡಿರುವ ಪ್ರಾಮಾಣಿಕ ಪ್ರಯತ್ನ ಮೆಚ್ಚಲೇಬೇಕು. ವಾಸ್ತವ ಅಂಶಗಳು ಜನರಿಗೆ ಗೊತ್ತಿದ್ದರೂ, ಅದನ್ನು ಹೇಗೆಲ್ಲಾ ತೋರಿಸಿ, ಜನರನ್ನು ಹತ್ತಿರ ಬರಮಾಡಿಕೊಳ್ಳಬೇಕು ಎಂಬ ಕಲೆ ಮಂಸೋರೆ ಅವರಿಗೆ ಗೊತ್ತಿದೆ. ಆ ಕಾರಣದಿಂದಲೇ ಅವರ ಈ “ಆಕ್ಟ್ 1978” ವಿಶೇಷತೆ ಎನಿಸುತ್ತೆ.
ನಿರ್ದೆಶಕ ಮಂಸೋರೆ ಕಟ್ಟಿಕೊಟ್ಟಿರುವ ಕಥೆಯಲ್ಲಿ ಗಟ್ಟಿತನವಷ್ಟೇ ಅಲ್ಲ, ಅಲ್ಲೊಂದು ಸೂಕ್ಮತೆಯೂ ಇದೆ. ಅವರು ಪೋಣಿಸಿರುವ ಪಾತ್ರಗಳಿರಲಿ, ಮಾತುಗಳಿರಲಿ, ಸನ್ನಿವೇಶಗಳಿರಲಿ ಎಲ್ಲವೂ ಸಂದರ್ಭಕ್ಕನುಗುಣವಾಗಿಯೇ ಜನರನ್ನು ಹತ್ತಿರವಾಗಿಸಿಕೊಳ್ಳುತ್ತಲೇ, ನೋಡುವ ಕುತೂಹಲ ಹೆಚ್ಚಿಸುತ್ತ ಹೋಗುತ್ತದೆ. ಸರ್ಕಾರಿ ಕಚೇರಿಯಲ್ಲಿ ನಡೆಯುವ ಒಂದೇ ಒಂದು ಪರಿಹಾರದ ಹಣದ ವಿಷಯ ಇಟ್ಟುಕೊಂಡು ಹೆಣೆದಿರುವ ಕಥೆಯಲ್ಲಿ ಭಾವನಾತ್ಮಕ ಸಂಬಂಧಗಳ ಸುಳಿ ಇದೆ. ಅಲ್ಲೊಂದಷ್ಟು ನೋವಿನ ಛಾಯೆ ಇದ್ದರೂ, ಹೋರಾಟದ ಕಿಚ್ಚು ಎದ್ದು ಕಾಣುತ್ತದೆ. ಸಮಾಜದೊಳಗಿರುವ ಕೆಟ್ಟ ವ್ಯವಸ್ಥೆಯ ಅನಾವರಣಗೊಳ್ಳುತ್ತದೆ. ಆ ವ್ಯವಸ್ಥೆ ಸುತ್ತ ತಿರುಬೋಕಿಗಳಂತೆ ತಿರುಗುವ ಪಾತ್ರಗಳ ಕಪಟ, ಲಂಚಗುಳಿತನ, ಅಲಸ್ಯೆ ಮನೋಭಾವ, ನಿರ್ಲಕ್ಷ್ಯತನ, ಬೇಕಾಬಿಟ್ಟಿ ಮಾತಿನ ವರ್ತನೆ, ದುರಾಸೆ, ದುರಾಲೋಚನೆ ಹೀಗೆ ನಾನಾ ರೀತಿಯ ಕೆಟ್ಟ ಯೋಚನೆಯ ಮನಸ್ಸುಗಳ ಸುತ್ತಾಟ ಗಿರಕಿಹೊಡೆಯುತ್ತದೆ.
ಇದಿಷ್ಟೂ ಈ ಸಮಾಜದೊಳಗಿರುವ ವ್ಯವಸ್ಥೆ. ಅದನ್ನು ಅಷ್ಟೇ ಪರಿಣಾಮಕಾರಿಯಾಗಿ ತೋರಿಸುವ ಪ್ರಯತ್ನದಲ್ಲಿ ನಿರ್ದೇಶಕರು ಗೆದ್ದಿದ್ದಾರೆ ಎಂಬುದರಲ್ಲಿ ಅನುಮಾನವಿಲ್ಲ.
ಒಂದು ಅಚ್ಚುಕಟ್ಟಾದ ಕಥೆಗೆ, ರೋಚಕ ಎನಿಸುವ ಚಿತ್ರಕಥೆಯೇ ಇಲ್ಲಿ ಜೀವಾಳ. ಇನ್ನುಳಿದಂತೆ ಚಿತ್ರದ ಪ್ರತಿ ಮೂಲೆ ಮೂಲೆಗೂ ಹೆಗಲು ಕೊಟ್ಟಿರೋದು ಕಾಣಸಿಗುವ ಪಾತ್ರಗಳು. ಇಲ್ಲಿ ಯಾರು ಹೆಚ್ಚಲ್ಲ, ಯಾರೂ ಕಮ್ಮಿ ಅಲ್ಲ. ಅಷ್ಟರಮಟ್ಟಿಗೆ ಅಷ್ಟೂ ಪಾತ್ರಗಳಿಗೆ ನ್ಯಾಯ ಸಲ್ಲಿಸುವ ಪ್ರಯತ್ನವನ್ನೂ ಇಲ್ಲಿ ಮಾಡಿರುವುದು “ಆಕ್ಟ್ʼನ ವಿಶೇಷತೆ ಎನ್ನಬಹುದು.
ಸಂಚಾರಿ ವಿಜಯ್, ನಟ
ಗೀತಾಳ ಅಸಹಾಯಕ ಬದುಕು…
ಇಡೀ ಚಿತ್ರದ ಕೇಂದ್ರಬಿಂದು ಗೀತಾ ( ಯಜ್ಞ ಶೆಟ್ಟಿ) ತನ್ನ ಕುಟುಂಬ ಕಳೆದುಕೊಂಡ ಆಕೆ, ತನ್ನ ಒಡಲಲ್ಲಿರುವ ಕಂದಮ್ಮನಿಗಾಗಿ ಬದುಕು ಸವೆಸಬೇಕು ಎಂಬ ಒಂದೇ ಒಂದು ಹಠದಿಂದಾಗಿ, ಬದುಕನ್ನು ಪ್ರೀತಿಸುತ್ತಲೇ ವ್ಯವಸ್ಥೆಯೊಳಗೆ ನೋವುಂಡುಕೊಂಡೇ ಬದುಕು ದೂಡುತ್ತಾಳೆ. ಒಬ್ಬ ಸಾಧಾರಣ ರೈತನ ಮಗಳು ಗೀತಾ. ಬೆಳೆದ ಬೆಳೆಗೆ ಬೆಲೆ ಸಿಗದೆ, ಕಷ್ಟ ಅನುಭವಿಸುವ ಗೀತಾಳ ತಂದೆ, ತಾನು ತೆಂಗಿನ ಮರದಿಂದ ಬಿದ್ದು ಸತ್ತರೆ, ಸರ್ಕಾರದಿಂದ ಒಂದಷ್ಟು ಪರಿಹಾರವಾದರೂ ಸಿಗುತ್ತೆ. ಅದು ನನ್ನ ಕುಟುಂಬಕ್ಕಾದರೂ ಆಸರೆಯಾಗುತ್ತೆ ಅಂತ, ತೆಂಗಿನ ಮರದಿಂದ ಕೆಳಗೆ ಬಿದ್ದು ತನ್ನ ಜೀವವನ್ನೇ ಬಲಿಕೊಡುತ್ತಾನೆ. ಅತ್ತ ಗೀತಾಳ ಗಂಡ ಬೈಕ್ನಲ್ಲಿ ಬರುವಾಗ, ರಸ್ತೆಯ ಮೇಲಿದ್ದ ದೊಡ್ಡ ಹಂಪ್ ಕಾಣದೆ ಮುಗ್ಗರಿಸಿ ಬಿದ್ದು ಪ್ರಾಣ ಕಳಕೊಳ್ಳುವ ಸ್ಥಿತಿಗೆ ಬರುತ್ತಾನೆ. ದಿಕ್ಕೇ ತೋಚದ ಗೀತಾ, ರೈತ ಅಭಿವೃದ್ಧಿ ಇಲಾಖೆಗೆ ತನ್ನ ತಂದೆ ಸಾವಿನ ಪರಿಹಾರ ಕೇಳಿ ಅರ್ಜಿ ಹಾಕುತ್ತಾಳೆ. ಆ ಇಲಾಖೆಯೊಳಗಿರುವ ಅಷ್ಟೂ ಅಧಿಕಾರಿಗಳು, ನೌಕರರು ಭ್ರಷ್ಟರೇ. ಹೀಗಾದರೆ, ಇನ್ನೆಲ್ಲಿಯ ಪರಿಹಾರ? ಬಿಡಿಗಾಸಿಗಾಗಿ ಅಲೆದಲೆದು ವರ್ಷಗಳನ್ನೇ ಸವೆಸುವ ಗೀತಾ ಅತ್ತ ಗರ್ಭಿಣಿ. ನ್ಯಾಯಕ್ಕೆ ಬೆಲೆ ಸಿಗಲ್ಲ ಎಂಬುದನ್ನುಅರಿತ ಗೀತಾ, ತನ್ನ ದೇಹಕ್ಕೆ ಬಾಂಬ್ ಕಟ್ಟಿಕೊಂಡು, ತಂದೆಯಂತೆ ಇರುವ ವ್ಯಕ್ತಿಯ ಜೊತೆ ಆ ಇಲಾಖೆಯೊಳಗೆ ಕಾಲಿಡುತ್ತಾಳೆ. ಆಮೇಲೆ ಅಲ್ಲಿ ನಡೆಯೋದೆ ರೋಚಕ ಸನ್ನಿವೇಶ. ಅದನ್ನು ಕೇಳುವುದಕ್ಕಿಂತ ನೋಡುವುದರಲ್ಲೇ ಮಜಾ ಇದೆ.
ಮಂಸೋರೆ, ನಿರ್ದೇಶಕ
ಭಾವನೆಗಳನ್ನು ಕೆದಕುವಂತಹ ವಿಷಯ ಇಟ್ಟುಕೊಂಡು ನೋಡುಗರಲ್ಲಿ ಅಷ್ಟೇ ಕುತೂಹಲ ಕೆರಳಿಸುತ್ತ ಹೋಗುವ ಮಂಸೋರೆ, ಸಮಾಜದ ವಸ್ತುಸ್ಥತಿಯನ್ನು ಬಯಲಿಗೆಳೆಯುವ ಸಾಹಸ ಮಾಡಿ ಸೈ ಎನಿಸಿಕೊಂಡಿದ್ದಾರೆ. ಇಲ್ಲಿ ಅವ್ಯವಹಾರ, ಭ್ರಷ್ಟತೆಯಲ್ಲಿ ಮುಳುಗಿರುವ ಅಧಿಕಾರಿಗಳಿಗೆ ತಕ್ಕ ಪಾಠ ಕಲಿಸಬೇಕೆಂದೇ ಗೀತಾ, ಇಲಾಖೆಯ ಅಷ್ಟೂ ಅಧಿಕಾರಿ, ನೌಕರರನ್ನು ಲಾಕ್ ಮಾಡಿಕೊಂಡು, ತನ್ನ ಫೇಸ್ಬುಕ್ ಖಾತೆ ಮೂಲಕ ಲೈವ್ ಮಾಡುತ್ತಾಳೆ. ಕ್ಷಣಾರ್ಧದಲ್ಲೇ ಸುದ್ದಿ ರಾಜ್ಯ, ರಾಷ್ಟ್ರಮಟ್ಟದವರೆಗೂ ಹೋಗುತ್ತೆ. ಇಡೀ ರಾಜಕೀಯ ವ್ಯವಸ್ಥೆಯಲ್ಲೆ ನಡುಕ ಶುರುವಾಗುತ್ತೆ. ಒಂದಷ್ಟು ಓದಿಕೊಂಡಿರುವ ಗೀತಾ, ಆ ಕಚೇರಿಯೊಳಗಿದ್ದುಕೊಂಡೇ ಕೆಲವು ಡಿಮ್ಯಾಂಡ್ ಇಡುತ್ತಾಳೆ. ತನ್ನ ಡಿಮ್ಯಾಂಡ್ ಈಡೇರದಿದ್ದರೆ, ಬ್ಲಾಸ್ಟ್ ಮಾಡುವ ಬೆದರಿಕೆಯನ್ನೂ ಹಾಕುತ್ತಾಳೆ. ಸರ್ಕಾರಿ ಕಚೇರಿಯೊಳಗೆ ನಡೆಯುವ ಆ ಅದ್ಭುತ ಡ್ರಾಮ ಅತ್ಯಂತ ಅರ್ಥಪೂರ್ಣ ಎನಿಸದೇ ಇರದು.
ಅವಿನಾಶ್, ನಟ
ಒಳಗೆ ಲಾಕ್ ಆಗಿರುವ ಸರ್ಕಾರಿ ನೌಕರರನ್ನು ಕ್ಷೇಮವಾಗಿ ಹೊರತರುವ ತಯಾರಿ ಸರ್ಕಾರ ಮಾಡುತ್ತಿದ್ದರೆ, ಅತ್ತ, ಸರ್ಕಾರಿ ಬಿಲ್ಡಿಂಗ್ ಹೈಜಾಕ್ ಆಗಿರುವುದರಿಂದ ನಮ್ಮ ಫೈಲ್ಗಳ ಕಥೆ ಏನ್ರೀ ಎಂಬ ಲೆಕ್ಕಾಚಾರ ಹೊರಗಿರುವ ಭ್ರಷ್ಟರದ್ದು. ಆ ಕಚೇರಿಯೊಳಗೆ ಕಸಗೂಡಿಸೋನಿಂದ ಹಿಡಿದು, ಕ್ಲರ್ಕ್, ಮ್ಯಾನೇಜರ್ , ಡಯಾಬಿಟೀಸ್ ಪೇಶೆಂಟ್, ಗಿಡಮೂಲಿಕೆ ಮಾರಲು ಬಂದವ ಹೀಗೆ ಇತರೆ ನೌಕರರೂ ಲಾಕ್. ಹೊರಗಡೆ ಗೀತಾಳ ಬಗ್ಗೆ ಅಪಪ್ರಚಾರ. ಆಕೆ ಟೆರರಿಸ್ಟ್, ನಕ್ಸಲ್ ಗುಂಪಿನವಳು, ಒಂದು ಸಂಘಟನೆಯಲ್ಲಿದ್ದಾಳೆ ಅಂತೆ-ಕಂತೆಗಳ ಸುದ್ದಿಯ ಹರಿದಾಟ. ಹೊರಗೆ ಪೊಲೀಸ್ ಅಧಿಕಾರಿಗಳಿಂದ ಆಕೆಯನ್ನು ಮಟ್ಟ ಹಾಕುವ ಯೋಚನೆ. ಆಕೆ ತನ್ನ ಉದ್ದೇಶ ಈಡೇರುವವರೆಗೂ ಯಾರನ್ನೂ ಹೊರ ಕಳಿಸಲ್ಲ ಎಂದು ಪಟ್ಟು ಹಿಡಿಯುತ್ತಾಳೆ. ಸರ್ಕಾರಕ್ಕೆ ಒಂದು ಡಿಮ್ಯಾಂಡ್ ಇಡುತ್ತಾಳೆ. ಅಷ್ಟಕ್ಕೂ ಅವಳ ಉದ್ದೇಶ ಏನು, ಆಕೆಯ ಡಿಮ್ಯಾಂಡ್ ಈಡೇರುತ್ತಾ, ಅಧಿಕಾರಿಗಳ ಕೊಡುವ ಗ್ಯಾರಂಟಿ ಮೇಲೆ ನಂಬಿಕೆ ಇಡುತ್ತಾಳಾ? ಇದೆಲ್ಲದ್ದಕ್ಕೂ ಉತ್ತರ ಬೇಕಿದ್ದರೆ, “ಆಕ್ಟ್ 1978” ನೋಡಲೇಬೇಕು.
ಮಂಸೋರೆ ಇಲ್ಲಿ, ಭ್ರಷ್ಟ ಅಧಿಕಾರಿಗಳು, ಸಮಾಜದ ವ್ಯವಸ್ಥೆಯನ್ನಷೇ ಅಲ್ಲ, ಸುಳ್ಳು ಸುದ್ದಿ ಹರಡುವ ವಾಹಿನಿಗಳ ಪೇಚಾಟವನ್ನೂ ತೋರಿಸಿದ್ದಾರೆ. ಇದರೊಂದಿಗೆ ಗರ್ಭಿಣಿಯ ಸಂಕಟ, ಅಳು, ಅಸಹಾಯಕತೆಯನ್ನು ಸೂಕ್ಷ್ಮವಾಗಿಯೇ ಹೇಳುತ್ತಾ ಹೋಗಿದ್ದಾರೆ. ಇವೆಲ್ಲದರ ಜೊತೆ ಜೊತೆಗೆ “ಇದು ನನ್ನ ಹಕ್ಕು, ಇದು ನನ್ನ ಸ್ವತ್ತು” ಎಂಬುದನ್ನೂ ಸಾರುತ್ತಾ ಹೋಗಿದ್ದಾರೆ. ಹಾಗಾಗಿ ಇದೊಂದು ಮಂಸೋರೆಯ “ಮನಸಾರೆ” ಸಿನಿಮಾ ಎನ್ನಲಡ್ಡಿಯಿಲ್ಲ. ಇಂತಹ ಕಥೆಗಳಿಗೆ ಕಮರ್ಷಿಯಲ್ ಲೇಪದ ಬಗ್ಗೆ ಮಾತಾಡಬಾರದು. ಆದರೆ, ಇಲ್ಲಿ ಭರಪೂರ ಖರ್ಚು ಮಾಡಿರುವುದೂ ಗೊತ್ತಾಗುತ್ತೆ. ಚಿತ್ರಕ್ಕೆ ರಾಹುಲ್ ಶಿವಕುಮಾರ್ ಸಂಗೀತ ನೀಡಿದ್ದು, ಚಿತ್ರವನ್ನು ಇನ್ನೊಂದು ಹಂತಕ್ಕೆ ತಲುಪಲು ಶ್ರಮಿಸಿರುವುದು ಗೊತ್ತಾಗುತ್ತದೆ. ಚಿತ್ರದಲ್ಲಿರುವ ಒಂದೇ ಒಂದು ಹಾಡಿಗೆ ಜಯಂತ್ ಕಾಯ್ಕಿಣಿ ಅವರ ಬರಹದ ಸ್ಪರ್ಶವಿದೆ. ಅವರ ” ತೇಲಾಡೋ ಮುಗಿಲೆ ನೀನೆಂದು ಬರುವೆ ಭೂಮಿಯ ಮುದ್ದಿಸಲು..” ಎಂಬ ಆರಂಭದ ಗೀತೆ ಕಥೆಯ ಚಿತ್ರಣಕ್ಕೆ ಪೂರಕವಾಗಿದೆ. ಸತ್ಯ ಹೆಗಡೆ ಅವರ ಛಾಯಾಗ್ರಹಣ ಇಡೀ ಚಿತ್ರದ ವೇಗವನ್ನು ಹೆಚ್ಚಿಸಿದೆ. ನಾಗೇಂದ್ರ ಕೆ.ಉಜ್ಜನಿ ಅವರ ಕತ್ತರಿ ಪ್ರಯೋಗದಲ್ಲೂ ಹೊಸತನವಿದೆ.
ಶ್ರುತಿ, ನಟಿ
ಇನ್ನು ಚಿತ್ರದ ಪ್ರತಿಯೊಂದು ಮಾತುಗಳಲ್ಲೂ ತೂಕವಿದೆ. ಆ ತೂಕದ ಮಾತುಗಳಿಗೆ ನಿರ್ದೇಶಕ ಮಂಸೋರೆ, ವೀರೇಶ್ ಮಲ್ಲಣ್ಣ ಹಾಗೂ ದಯಾನಂದ್ ಟಿ. ಕೆ . ಅವರು ಕಾರಣವಾಗುತ್ತಾರೆ. ಯಜ್ಞ ಶೆಟ್ಟಿ ನಟನೆ ಮೂಲಕ ನೋಡುಗರನ್ನು ತನ್ನತ್ತ ಸೆಳೆದುಕೊಳ್ಳುತ್ತಾರೆ. ಬಿ.ಸುರೇಶ ಅವರಿಗೆ ಇಲ್ಲಿ ಒಂದೇ ಒಂದು ಡೈಲಾಗ್ ಇಲ್ಲ. ಆದರೂ, ಬರೀ ಮೌನದಲ್ಲೇ ಎಲ್ಲರನ್ನೂ ಆಕರ್ಷಿಸುತ್ತಾರೆ. ಉಳಿದಂತೆ ಪ್ರಮೋದ್ ಶೆಟ್ಟಿ, ಸಂಚಾರಿ ವಿಜಯ್, ಶೃತಿ, ದತ್ತಣ್ಣ, ಅಚ್ಯುತ ಕುಮಾರ್, ಅವಿನಾಶ್, ಸುಧಾ ಬೆಳವಾಡಿ, ಶೋಭ ರಾಜ್, ಶರಣ್ಯ, ನಂದಗೋಪಾಲ್, ರಾಘು ಶಿವಮೊಗ್ಗ, ಕಿರಣ್ ನಾಯಕ್ ಹೀಗೆ ಇಲ್ಲಿ ಬರುವ ಪ್ರತಿಯೊಂದು ಪಾತ್ರಧಾರಿಗಳು ಚಿತ್ರವನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗುವಲ್ಲಿ ಯಶಸ್ವಿಯಾಗಿದ್ದಾರೆ.
ದತ್ತಣ್ಣ, ನಟ
ಕೊನೇ ಮಾತರು- ಇದು ಮಂಸೋರೆ ಅವರ ಮನಸಾರೆ ಒಪ್ಪುವ ಅಪ್ಪುವ ಚಿತ್ರವಂತೂ ಹೌದು. ಕನ್ನಡ ಸಿನಿಮಾ ಇತರೆ ಭಾಷೆಯ ಸಿನಿಮಾಗಳಿಗೆ ಹೋಲಿಸಿದರೆ ಯಾಕೆ ಒಂದು ಹೆಜ್ಜೆ ಮುಂದೆ ಅಂದರೆ, ಅದು ಮನಸ್ಸುಗಳಿಗೆ ನಾಟುವ, ಹತ್ತಿರ ಎನಿಸುವ ಭಾವುಕತೆ ಹೆಚ್ಚಿಸುವ ಇಂತಹ ಕಥೆಗಳಿಂದ.
ಈ ಹಿಂದೆ ಶಿವರಾಜಕುಮಾರ್ ಹಾಗೂ ಡಾಲಿ ಇಬ್ಬರೂ ಹೊಸದೊಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಎಲ್ಲರಿಗೂ ಗೊತ್ತೇ ಇದೆ. “ಟಗರು” ಮೂಲಕ ಜೋರು ಸುದ್ದಿಯಾಗಿದ್ದ “ಡಾಲಿ” ಧನಂಜಯ್ ಅವರು ಶಿವರಾಜಕುಮಾರ್ ಅವರೊಂದಿಗೆ ನಟಿಸುವ ಸಿನಿಮಾಗೆ ಆಗ ಶೀರ್ಷಿಕೆ ಪಕ್ಕಾ ಆಗಿರಲಿಲ್ಲ. ಇದೀಗ ಶಿವರಾಜಕುಮಾರ್ ಅಭಿನಯದ ಹೊಸ ಚಿತ್ರಕ್ಕೆ “ಶಿವಪ್ಪ” ಎಂಬ ಹೆಸರನ್ನಿಡಲಾಗಿದೆ. ಅಂದಹಾಗೆ, “ಶಿವಪ್ಪ” ಶಿವರಾಜಕುಮಾರ್ ಅಭಿನಯದ ೧೨೩ನೇ ಸಿನಿಮಾ ಎಂಬದು ವಿಶೇಷ. “ಶಿವಪ್ಪ” ಹೆಸರಲ್ಲೇ ಮಾಸ್ ಫೀಲ್ ಇದೆ. ಶಿವರಾಜಕುಮಾರ್ ಸಿನಿಮಾಗೆ “ಶಿವಪ್ಪʼ ಹೆಸರು ಒಂದು ರೀತಿ ಪಾಸಿಟಿವ್ ಆಗಿದ್ದು, ಇಡೀ ಸಿನಿಮಾದಲ್ಲಿ ಶಿವಣ್ಣ ಹೈಲೈಟ್ ಎನ್ನಲಾಗಿದೆ.
ಇನ್ನು, ಈ ಚಿತ್ರದಲ್ಲಿ ಶಿವರಾಜಕುಮಾರ್ ಹಾಗೂ ಡಾಲಿ ಧನಂಜಯ್ ಅವರೊಂದಿಗೆ ಯುವ ನಟ ಪೃಥ್ವಿ ಅಂಬರ್ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಚಿತ್ರದ ತಾರಾಬಳಗದ ಆಯ್ಕೆ ನಡೆದಿದ್ದು, ನವೆಂಬರ್ ೨೩ರಿಂದಲೇ ಚಿತ್ರದ ಚಿತ್ರೀಕರಣ ಶುರುವಾಗಲಿದೆ. ಆರಂಭದ ಎರಡು ದಿನಗಳ ಕಾಲ ಶಿವರಾಜ್ ಕುಮಾರ್, ಪೃಥ್ವಿ ಅಂಬರ್ ಕಾಂಬಿನೇಷನ್ನಲ್ಲಿ ಚಿತ್ರೀಕರಣ ನಡೆಯಲಿದೆ. ನವೆಂಬರ್ ೨೫ರ ಬಳಿಕ ಡಾಲಿ ಧನಂಜಯ್ ಚಿತ್ರತಂಡ ಸೇರಿಕೊಳ್ಳಲಿದ್ದಾರೆ ಎಂಬುದು ಚಿತ್ರ ನಿರ್ದೇಶಕರ ಹೇಳಿಕೆ.
“ಶಿವಪ್ಪ” ಇದೊಂದು ಪಕ್ಕಾ ಮಾಸ್ ಫೀಲ್ ಇರುವ ಸಿನಿಮಾ. “ಶಿವಪ್ಪ” ಚಿತ್ರದಲ್ಲಿ ಶಿವರಾಜಕುಮಾರ್ ಅವರು ಮೂರು ವಿಭಿನ್ನ ಗೆಟಪ್ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆಂಬುದು ವಿಶೇಷ. ಸದ್ಯ ಉಳಿದ ಪಾತ್ರಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಚಿತ್ರದ ನಾಯಕಿ ಯಾರು ಅನ್ನುವುದಕ್ಕಿನ್ನೂ ಸಮಯವಿದೆ ಎನ್ನುವ ಚಿತ್ರತಂಡ, ಸದ್ಯ ನಟರ ಭಾಗದ ಚಿತ್ರೀಕರಣದತ್ತ ಗಮನಹರಿಸಿದ್ದಾರೆ.
ಈಗಾಗಲೇ ತಮಿಳಿನಲ್ಲಿ ನಾಲ್ಕು ಚಿತ್ರಗಳನ್ನು ನಿರ್ದೇಶಿಸಿ, ಛಾಯಾಗ್ರಾಹಕರಾಗಿ ಸಾಕಷ್ಟು ಹೆಸರು ಮಾಡಿರುವ ವಿಜಯ್ ಮಿಲ್ಟನ್, ಕನ್ನಡದಲ್ಲಿ ಈಗಾಗಲೇ ಬಂದಿರುವ “ಅಟ್ಟಹಾಸ” ಹಾಗೂ ಬಿಡುಗಡೆಯಾಗಬೇಕಿರುವ ಧ್ರುವ ಸರ್ಜಾ ಅಭಿನಯದ “ಪೊಗರು” ಚಿತ್ರಕ್ಕೂ ಇವರೇ ಛಾಯಾಗ್ರಾಹಕರು. ಇನ್ನು, “ಶಿವಪ್ಪ” ವಿಜಯ್ ಮಿಲ್ಟನ್ ಅವರ ಕನ್ನಡದ ಮೊದಲ ನಿರ್ದೇಶನದ ಚಿತ್ರ ಎಂಬುದು ವಿಶೇಷ. ಸದ್ಯ ಶಿವರಾಜಕುಮಾರ್ ಸಾಕಷ್ಟು ಸಿನಿಮಾಗಳಲ್ಲಿ ಬಿಝಿಯಾಗಿದ್ದಾರೆ. ಯೋಗರಾಜ್ ಭಟ್ ನಿರ್ದೇಶನದ ಚಿತ್ರದಲ್ಲೂ ಶಿವಣ್ಣ ನಟಿಸುತ್ತಿದ್ದು, ಆ ಚಿತ್ರದಲ್ಲಿ ಪ್ರಭುದೇವ ಅವರೊಂದಿಗೆ ಶಿವಣ್ಣ ನಟಿಸುತ್ತಿದ್ದಾರೆ. “ಭಜರಂಗಿ 2” ಚಿತ್ರ ರೆಡಿಯಾಗಿದೆ.
ಇದರೊಂದಿಗೆ ತೆಲುಗಿನ ನಿರ್ದೇಶಕರೊಬ್ಬ ಸಿನಿಮಾದಲ್ಲೂ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅದೇನೆ ಇರಲಿ, ಈಗ “ಶಿವಪ್ಪ” ಒಂದು ಕತೂಹಲವನ್ನಂತೂ ಕೆರಳಿಸಿದೆ. ಆ ಕುತೂಹಲಕ್ಕೆ ಕಾರಣ, ಶಿವರಾಜಕುಮಾರ್ ಹೈಲೈಟ್ ಆಗಿರೋದು, ಡಾಲಿ ಧನಂಜಯ್ ಜೊತೆಗಿರೋದು. ವಿಜಯ್ ಮಿಲ್ಟನ್ ನಿರ್ದೇಶನ ಮಾಡುತ್ತಿರೋದು. ಎಲ್ಲದ್ದಕ್ಕೂ ಹೆಚ್ಚಾಗಿ, ಕೃಷ್ಣ ಸಾರ್ಥಕ್ ನಿರ್ಮಾಣ ಮಾಡುತ್ತಿರೋದು. ಸದ್ಯಕ್ಕೆ ಚಿತ್ರ ಒಂದು ಹೆಸರಿನ ಮೂಲಕವೇ ಸದ್ದು ಮಾಡಿದೆ. ಮುಂದಿನ ದಿನಗಳಲ್ಲಿ ಚಿತ್ರದ ಒಂದೊಂದೇ ಮಾಹಿತಿ ಹೊರಬೀಳಲಿದೆ.
ಕನ್ನಡ ಚಿತ್ರರಂಗದ ಹಿರಿಯ ಸಿನಿಮಾ ಸ್ಥಿರಚಿತ್ರ ಛಾಯಾಗ್ರಾಹಕ ಮಲ್ಲಾರಾಧ್ಯ (73 ವರ್ಷ) ನಿಧನರಾಗಿದ್ದಾರೆ. ಅವರು ಕೋವಿಡ್ ಸೋಂಕಿನಿಂದಾಗಿ ಕಳೆದ ನಾಲ್ಕು ವಾರಗಳ ಹಿಂದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ನವೆಂಬರ್ ೧೯ರಂದು ಮೃತಪಟ್ಟಿದ್ದಾರೆ. ಮಲ್ಲಾರಾಧ್ಯ ಅವರು ಚಿತ್ರರಂಗದಲ್ಲಿ ಕಳೆದ ಐದು ದಶಕಗಳ ನಂಟು ಹೊಂದಿದ್ದರು. ಆರಂಭದ ದಿನಗಳಲ್ಲಿ ಮೈಸೂರಿನ ಪ್ರೀಮಿಯರ್ ಸ್ಟುಡಿಯೋ ಮತ್ತು ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ಸೌಂಡ್ ಇಂಜಿನಿಯರ್ ಆಗಿ ಅವರು ತಮ್ಮ ಕಾರ್ಯನಿರ್ವಹಿಸಿದ್ದರು. ನಟ ಬಾಲಕೃಷ್ಣ ಅವರ ನಿಕಟವರ್ತಿಯಾಗಿದ್ದು, ನಂತರ ಸ್ಥಿರಚಿತ್ರ ಛಾಯಾಗ್ರಾಹಕರಾಗಿ ತಮ್ಮ ನೆಲೆಯನ್ನು ಕಂಡುಕೊಂಡಿದ್ದರು. ಸುಮಾರು ಇನ್ನೂರಕ್ಕೂ ಹೆಚ್ಚು ಸಿನಿಮಾಗಳಿಗೆ ಸ್ಥಿರಚಿತ್ರ ಛಾಯಾಗ್ರಾಹಕರಾಗಿ ಅವರು ಕೆಲಸ ಮಾಡಿದ್ದಾರೆ ಎಂಬುದು ವಿಶೇಷ. ಪ್ರಸ್ತುತ ಮಲ್ಲಾರಾಧ್ಯ ಅವರು ಸ್ಥಿರಚಿತ್ರ ಛಾಯಾಗ್ರಾಹಕ ಸಂಘದ ಅಧ್ಯಕ್ಷರಾಗಿದ್ದರು. ಹಿರಿಯ ಸಿನಿಮಾ ತಂತ್ರಜ್ಞ ಮಲ್ಲಾರಾಧ್ಯ ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು, ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘ, ನಿರ್ದೇಶಕರ ಸಂಘ, ಕಲಾವಿದರು ಹಾಗು ಇತರೆ ತಾಂತ್ರಿಕ ವರ್ಗದವರು ಸಂತಾಪ ಸೂಚಿಸಿದ್ದಾರೆ.
ಈಗ ಸಿನಿಮಾಗಳದ್ದೇ ಸುದ್ದಿ. ಅದರಲ್ಲೂ ಹಾಡುಗಳ ಬಿಡುಗಡೆ ಪರ್ವ. ಆ ಸಾಲಿಗೆ ಈಗ “ರಿಚ್ಚಿ” ಸಿನಿಮಾ ಸೇರಿದೆ. ಇತ್ತೀಚೆಗೆ ಚಿತ್ರದ ಹಾಡೊಂದು ಹೊರಬಂದಿದೆ. ನಾಯಕ ರಿಚ್ಚಿ ಹಾಗೂ ನಿಷ್ಕಲ ಜೋಡಿಯಾಗಿ ಕಾಣಿಸಿಕೊಂಡಿರುವ “ರಿಚ್ಚಿ” ಚಿತ್ರಕ್ಕೆ ರಿಚ್ಚಿ ನಟನೆ ಜೊತೆಗೆ ನಿರ್ದೇಶನ ಮಾಡಿದ್ದಾರೆ. ಮೊದಲ ಬಾರಿಗೆ ನಿರ್ದೇಶನ ಮಾಡಿರವ ರಿಚ್ಚಿ, ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆಯ ಜೊತೆಗೆ ನಿರ್ಮಾಣವನ್ನೂ ಮಾಡಿದ್ದಾರೆ. ಇನ್ನು, ಈ ಚಿತ್ರಕ್ಕೆ ಅಗಸ್ತ್ಯ ಸಂತೋಷ್ ಸಂಗೀತ ನೀಡಿದ್ದಾರೆ.
ಸೋನು ನಿಗಂ ಈ ಹಾಡಿಗೆ ಧ್ವನಿಯಾಗಿದ್ದಾರೆ. ಚಿನ್ನಿ ಪ್ರಕಾಶ್ ಈ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. “ಸನಿಹ ನೀ ಇರುವಾಗ ಸಲುಗೆಯ ಅನುರಾಗ…” ಹಾಡಲ್ಲಿ ನಾಯಕ ರಿಚ್ಚಿ ಮತ್ತು ನಿಷ್ಕಲ ಹೆಜ್ಜೆ ಹಾಕಿದ್ದಾರೆ. ಈ ಹಾಡಿಗೆ ವಿನೋದ್ ಅವರ ಸಾಹಿತ್ಯವಿದೆ. ಬಹುತೇಕ ಕೊಡಗು ಸುತ್ತಮುತ್ತ ಈ ಹಾಡನ್ನು ಚಿತ್ರೀಕರಿಸಲಾಗಿದೆ. ವೀರೇಶ್ ಛಾಯಾಗ್ರಹಣವಿರು ಈ ಚಿತ್ರದಲ್ಲಿ ಸಸ್ಪೆನ್ಸ್ ಅಂಶಗಳೇ ಹೆಚ್ಚಾಗಿವೆ.
ಹೀರೋ ರಿಚ್ಚಿ ಚಿತ್ರದಲ್ಲಿ ಪತ್ರಕರ್ತನ ಪಾತ್ರ ನಿರ್ವಹಿಸಿದ್ದಾರೆ. ಇದೊಂದು ರೊಮ್ಯಾಂಟಿಕ್ ಕಥಾಹಂದರವಿದ್ದು, ನಾಯಕ ಇಲ್ಲಿ ಒಂದು ರಿಸ್ಕ್ನಲ್ಲಿ ಸಿಲುಕಿಕೊಂಡು ಆ ಬಳಿಕ ಹೇಗೆ ಹೊರಬರುತ್ತಾನೆ ಅನ್ನೋದೇ ಕಥೆ. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಈ ಹಾಡಿಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಶೇ.೭೦ ರಷ್ಟು ಬೆಂಗಳೂರು ಹಾಗೂ ಕೊಡಗಿನಲ್ಲಿ ಚಿತ್ರೀಕರಿಸಲಾಗಿದೆ.
ಚಿತ್ರಕ್ಕೆ ಮಂಜು ಸಹ ನಿರ್ದೇಶನವಿದೆ. ಅರ್ಜುನ್ ಕಿಟ್ಟು ಅವರ ಸಂಕಲನವಿದೆ. ಪುರುಷೋತ್ತಮ್ ಕಲಾ ನಿರ್ದೇಶನವಿದೆ. ವಿಕ್ರಮ್ ಅವರ ಸಾಹಸಿವೆ. ಪ್ರಕಾಶ್ರಾವ್ ಸಹ ನಿರ್ಮಾಣವಿದೆ. ಚಿತ್ರದಲ್ಲಿ ಮನೋಜ್ ಮಿಶ್ರ, ರಮೇಶ್ ಪಂಡಿತ್, ಮಿಮಿಕ್ರಿ ಗೋಪಿ ಇತರರು ನಟಿಸಿದ್ದಾರೆ.
ಅರೇ, ಹೀಗಂದಾಕ್ಷಣ ಕೊಂಚ ಅಚ್ಚರಿಯಾಗ ಬಹುದೇನೋ? ಸಾಮಾನ್ಯವಾಗಿ ಸಿನಿಮಾ ರಂಗದಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಗಳಿಗೆ ಪೇಮೆಂಟ್ ಸಿಗೋದು ಸುಲಭವೇನಲ್ಲ. ಆದರೂ ಪೇಮೆಂಟ್ ಸಿಕ್ಕಿದೆ ಅಂದರೆ?ಹೌದು, ಪೇಮೆಂಟ್ ಸಿಕ್ಕಿರೋದು ನಿಜ. ಹಾಗಂತ ಕನ್ನಡ ಚಿತ್ರರಂಗದಲ್ಲಿರುವ ಅಸಿಸ್ಟೆಂಟ್ ಡೈರೆಕ್ಟರ್ ಗಳಿಗಲ್ಲ. ಕನ್ನಡದಲ್ಲಿ ‘ಅಸಿಸ್ಟೆಂಟ್ ಡೈರೆಕ್ಟರ್’ ಹೆಸರಿನ ಸಿನಿಮಾವೊಂದು ಶುರುವಾಗುತ್ತಿರೊದು ಗೊತ್ತೇ ಇದೆ. ಇದು ಕನ್ನಡ ಮಾತ್ರವಲ್ಲದೆ ಮಲಯಾಳಂ, ತೆಲುಗು ಮತ್ತು ತಮಿಳು ಭಾಷೆಯಲ್ಲೂ ತಯಾರಾಗುತ್ತಿದೆ. ಚಿತ್ರದ ಶೀರ್ಷಿಕೆ ಹೇಳುವಂತೆ ಕನ್ನಡ ಸಿನಿಮಾರಂಗದಲ್ಲಿರುವ ಸಹ ನಿರ್ದೇಶಕರ ಕಥಾಹಂದರ ಇರುವ ಸಿನಿಮಾನಾ? ಗೊತ್ತಿಲ್ಲ. ಆದರೆ, ಇದೊಂದು ಹೊಸಬರ ತಂಡ ಹುಟ್ಟು ಹಾಕುತ್ತಿರುವ ಸಿನಿಮಾ.
ದಿವಾಕರ ಡಿಂಡಿಮ, ನಿರ್ದೇಶಕ
ಈ ಚಿತ್ರದ ಮೂಲಕ ದಿವಾಕರ್ ಡಿಂಡಿಮ ನಿರ್ದೇಶಕರಾಗುತ್ತಿದ್ದಾರೆ. ಇದೇ ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆಯ ಜವಾಬ್ದಾರಿ ಹೊತ್ತಿದ್ದಾರೆ. ಇವರ ಜೊತೆ ಒಂದೊಳ್ಳೆಯ ತಂಡವೂ ಜೊತೆ ಸೇರಿದೆ. ಸಿನಿಮಾ ಹಸಿವು ಇರುವ ಸಮಾನ ಮನಸ್ಸಿನ ಗೆಳೆಯರು ಕೈ ಜೋಡಿಸಿದ್ದಾರೆ.
ಸಂತೋಷ್ ಆಶ್ರಯ್ ಚಿತ್ರದ ಹೀರೋ. ಈ ಹಿಂದೆ ಹಲವು ಕಿರುಚಿತ್ರಗಳ ಮಾಡಿದ ಅನುಭವವಿದೆ. ಸಂತೋಷ್ ಆಶ್ರಯ್ ಅವರಿಗೆ ನಿಸರ್ಗ ಅಪ್ಪಣ್ಣ ನಾಯಕಿ. ವಿಹಾನ್ ಸಂಗೀತ ನೀಡಿದ್ದಾರೆ. ಪ್ರಸಾದ್ ಎಚ್.ಎಂ.ಛಾಯಾಗ್ರಹಣವಿದೆ.
ಸಿನಿಮಾ ನಿರ್ಮಾಪಕ, ನಟನ ಉದ್ಯಮವೇ?
ತಮ್ಮ ಚೊಚ್ಚಲ ಸಿನಿಮಾ ಕುರಿತು ನಿರ್ದೇಶಕ ದಿವಾಕರ್ ಡಿಂಡಿಮ ‘ಸಿನಿಲಹರಿ’ ಗೆಹೇಳುವುದಿಷ್ಟು.
‘ಸಮಾಜಕ್ಕೆ ಸಿನಿಮಾದವರ ಮೇಲಿನ ಒಂದಿಷ್ಟು ಅಭಿಪ್ರಾಯಗಳನ್ನೆಲ್ಲ ಕಲೆ ಹಾಕಿ ಅದನ್ನ ಒಂದು ಪ್ರಶ್ನೆಯಾಗಿಟ್ಟು ಅದಕ್ಕೆ ಉತ್ತರ ಕೊಡೋ ಸಣ್ಣದ್ದೊಂದು ಪ್ರಯತ್ನಕ್ಕೆ ಕೈ ಹಾಕಿದ್ದೇನೆ.
ಸಿನಿಮಾ ಅನ್ನೋದು ಕೇವಲ ನಿರ್ಮಾಪಕ ಮತ್ತು ನಟನಿಗೆ ಮಾತ್ರ ಒಂದು ಉದ್ಯಮವಾಗಿ ಬಳಕೆಯಾಗುತ್ತಿದೆ. ಒಬ್ಬ ಮೇರು ನಟನ ಚಿತ್ರ ಶುರುವಾಗುತ್ತಿದೆ. ಅಂದರೆ, ಉಳಿದ ಎಲ್ಲಾ ವಿಭಾಗಗಳಲ್ಲೂ ಉದ್ಯಮದ ವಾತಾವರಣ
ಬೆಳೆಯಬೇಕು. ಚಿತ್ರರಂಗಕ್ಕಾಗಿ ದುಡಿಯುವ ಪ್ರತಿಯೊಬ್ಬರಿಗೂ ಸರಿಯಾದ ಸ್ಥಾನಮಾನ, ಧನ ಸಿಗುವಂತಾಗಬೇಕು.
ಸಿನಿಮಾ ಮೇಲಿನ ಪ್ರೀತಿಯಿಂದ ಬಂದವರನ್ನು ಸುಖಾಸುಮ್ಮನೆ ದುರುಪಯೋಗಪಡಿಸಿಕೊಳ್ಳುವುದು ಮೊದಲು ನಿಲ್ಲಬೇಕು, ತನ್ನ ಕೆಲಸದ ಜೊತೆ ಜೊತೆಗೆ ಬೇರೆಲ್ಲಾ ವಿಭಾಗಗಳ ಕೆಲಸ ಮಾಡುವ ಏಕೈಕ ವ್ಯಕ್ತಿ ಅಂದರೆ ಅದು ಸಹಾಯಕ ನಿರ್ದೇಶಕ, ಆದರೆ ಚಿತ್ರರಂಗದ ಎಲ್ಲಾ ವಿಭಾಗಗಳಿಗಿಂತ ಅತೀ ಕಡಿಮೆ ಅಂದ್ರೆ ಸಂಭಾವನೆಯೇ ಇಲ್ಲದೇ ಬರೀ ತನ್ನ ಖರ್ಚಿಗಷ್ಟೇ ಹಣ ಪಡೆದು ಕೆಲಸ ಮಾಡುವಂತಾಗಿದೆ.
ಸಹಾಯಕ ನಿರ್ದೇಶಕರು ಏನೆಲ್ಲಾ ಮಾಡಬಲ್ಲರು ಎಂದು ತೋರಿಸುವುದೇ ನಮ್ಮ ಈ ‘ಅಸಿಸ್ಟೆಂಟ್ ಡೈರೆಕ್ಟರ್’ ಸಿನಿಮಾದ ಉದ್ದೇಶ. ಹಾಗಂತ ಇಲ್ಲಿ ಯಾರನ್ನೂ ತೆಗಳುವ ಉದ್ದೇಶವಿಲ್ಲ. ಸಿನಿಮಾ ಮೂಲಕ ಒಂದಷ್ಟು ಸತ್ಯವನ್ನು, ವಾಸ್ತವತೆಯನ್ನು ತೋರಿಸುವ ಪ್ರಯತ್ನಕ್ಕೆ ಹೊರಟಿದ್ದೇನೆ’ ಎನ್ನುತ್ತಾರೆ ನಿರ್ದೇಶಕ ದಿವಾಕರ್ ಡಿಂಡಿಮ.
ಅದೇನೆ ಇರಲಿ, ಚಿತ್ರರಂಗದಲ್ಲಿರುವ ವ್ಯವಸ್ಥೆ ಅಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಗಳನ್ನು ನಡೆಸಿಕೊಳ್ಳುವ ರೀತಿ ಕುರಿತು ಒಂದಷ್ಟು ವಿಶೇಷತೆಗಳಿವೆ.
ನಿರ್ದೇಶಕನಾಗಬೇಕೆಂಬ
ಕನಸನ್ನ ಕಟ್ಟಿಕೊಂಡು ತಯಾರಿ ನಡೆಸುತ್ತಿರುವ ಸಹ ಹಾಗೂ ಸಹಾಯಕ ನಿರ್ದೇಶಕರ ನೋವು, ನಲಿವು ಬಗೆಗಿನ ಚಿತ್ರಣವನ್ನು ಭಾವನಾತ್ಮಕವಾಗಿ ಕಟ್ಟಿಕೊಡುವ ಪ್ರಯತ್ನ ಈ ಹೊಸಬರದು.