Categories
ಸಿನಿ ಸುದ್ದಿ

ಶುಗರ್ ಲೆಸ್ ಶುರು… ಆ್ಯಕ್ಷನ್ ಕಟ್ ಹೇಳಿದ ಶಶಿಧರ್

‘ಡಾಟರ್‌ ಆಫ್ ಪಾರ್ವತಮ್ಮ’ ಮೂಲಕ ನಿರ್ಮಾಪಕರಾದ ಶಶಿಧರ್‌ ಕೆ.ಎಂ.ಅವರು ಹೊಸದೊಂದು ಕಥೆ ಬರೆದು, ನಿರ್ದೇಶನ ಮಾಡಲು ಹೊರಟ ಸುದ್ದಿ ಎಲ್ಲರಿಗೂ ಗೊತ್ತು. ಇತ್ತೀಚೆಗೆ ಅವರು ‘ಶುಗರ್‌ಲೆಸ್‌ ‘ ಚಿತ್ರದ ಮುಹೂರ್ತ ನೆರವೇರಿಸಿದ್ದರು. ಸೋಮವಾರ ಅವರ ಚೊಚ್ಚಲ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವ ಮೂಲಕ ನಿರ್ದೇಶನದ ಜರ್ನಿ ಶುರು ಮಾಡಿದ್ದಾರೆ.ಪುಷ್ಕರ್ ಫಿಲ್ಮ್ಸ್ ಸಹಯೋಗದಲ್ಲಿ ‘ಶುಗರ್ ಲೆಸ್’ ಚಿತ್ರವನ್ನು ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿ ಹೊತ್ತಿರುವ ಶಶಿಧರ್,ಚಿತ್ರದ ಕಥೆಗೆ ತಕ್ಕಂತೆ ಶೀರ್ಷಿಕೆ ಇಟ್ಟಿದ್ದು, ಡಯಾಬಿಟಿಸ್‌ ಕುರಿತ ಕಥೆ ಹೇಳಲು ಹೊರಟಿದ್ದಾರೆ. ಈ ಕಥೆ ಜೊತೆ ಒಂದು ಬ್ಲಾಕ್‌ ಕಾಮಿಡಿಯಲ್ಲೇ ಗಂಭೀರ ವಿಷಯ ಹೇಳಲು ಹೊರಟಿದ್ದಾರೆ ಅವರು.ಶಶಿಧರ್ ಹೇಳುವಂತೆ, ಇಂದು ಡಯಾಬಿಟಿಕ್‌ ಅನ್ನೋದು, ಮಕ್ಕಳಿಂದ ಹಿಡಿದು ದೊಡ್ಡವರಿಗೂ ಇದೆ. ಆದರೆ, ಅದೇ ಸುಮಾರು 30 ವರ್ಷದ ಯುವಕನಿಗೆ ಡಯಾ ಬಿಟಿಸ್‌ ಬಂದಾಗ, ಅವರ ಬದುಕು ಹೇಗೆ ಇರುತ್ತೆ. ನಿತ್ಯ ಅವನ ಬದುಕಲ್ಲಿ ಏನೆಲ್ಲಾ ಸಮಸ್ಯೆ ಎದುರಾಗುತ್ತವೆ. ಸಮಾಜದಲ್ಲಿ ಆ ವಿಷಯವನ್ನು ಹೇಳಿಕೊಳ್ಳಲೂ ಆಗದ ವ್ಯಕ್ತಿಗಳು ಎಷ್ಟೆಲ್ಲಾ ಯಾತನೆ ಅನುಭವಿಸುತ್ತಾರೆ ಎಂಬುದನ್ನು ಹೇಳುವ ಪ್ರಯತ್ನ ಮಾಡುತ್ತಿದ್ದಾರೆ ಅವರು. ಯಾವ ಭಾಷೆಯಲ್ಲೂ ಈ ಕಂಟೆಂಟ್‌ ಇರದ ಕಾರಣ, ಅವರು ಇದನ್ನೇ ಇಟ್ಟು ಕೊಂಡು ಹೊಸ ವ್ಯಾಖ್ಯಾನದೊಂದಿಗೆ ಸಿನಿಮಾ ಮಾಡಲು ಹೊರಟಿದ್ದಾರೆ.ತಮ್ಮ ದಿಶಾ ಎಂಟರ್‌ಟೈನರ್ಸ್‌ ಬ್ಯಾನರ್‌ನಲ್ಲಿ ಈ ಚಿತ್ರ ನಿರ್ಮಿಸುತ್ತಿದ್ದು, ಶಶಿಧರ್‌ ಗೆ ನಿರ್ಮಾಪಕ ಪುಷ್ಕರ್‌ ಕೈ ಜೋಡಿಸಿದ್ದಾರೆ.

Categories
ಸಿನಿ ಸುದ್ದಿ

ರೋರಿಂಗ್ ಸ್ಟಾರ್ ನ್ಯೂ ಲುಕ್…. ಸಿಕ್ಸ್ ಪ್ಯಾಕ್ ಮದಗಜ!

ನಟ ಶ್ರೀಮುರಳಿ ಅಭಿನಯದ “ಮದಗಜ” ಇದೀಗ ಶೂಟಿಂಗ್ ಹೊರಡಲು ತಯಾರಿ‌ ನಡೆಸಿದೆ. ಸೆಪ್ಟೆಂಬರ್ 19 ರಿಂದ ಮದಗಜನ ಆರ್ಭಟ ಶುರುವಾಗಲಿದೆ.

ಈ ಹಂತದ ಚಿತ್ರೀಕರಣ ಸುಮಾರು 35 ದಿನಗಳ ಕಾಲ ನಡೆಯಲಿದ್ದು, ದೊಡ್ಡ ಹಂತದ‌ ಚಿತ್ರೀಕರವಿದು ಎಂಬುದು ತಂಡದ ಹೇಳಿಕೆ.
ಇನ್ನು, “ಮದಗಜ” ಚಿತ್ರಕ್ಕಾಗಿಯೇ ಶ್ರೀಮುರಳಿ ಅವರು, ತಮ್ಮ‌ ದೇಹವನ್ನು ದಂಡಿಸಿದ್ದಾರೆ. ಸಿಕ್ಸ್ ಪ್ಯಾಕ್ ಲುಕ್ ನಲ್ಲಿ ಮಿಂಚಲಿದ್ದಾರೆ ಎಂಬುದು ವಿಶೇಷ.‌ಪ್ರತಿ ದಿನ ನಾಲ್ಕು ಗಂಟೆಗಳ ಕಾಲ ವರ್ಕೌಟ್ ಮಾಡುತ್ತಿರುವ ಶ್ರೀ ಮುರಳಿ, ಈ‌ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಶ್ರೀಮುರಳಿ ಅವರಿಗೆ ಜೋಡಿಯಾಗಿ ಆಶಿಕಾ ರಂಗನಾಥ್ ಇದ್ದಾರೆ. ಇನ್ನು “ಅಯೋಗ್ಯ” ಬಳಿಕ ಮಹೇಶ್ ಕುಮಾರ್ ಅವರ ನಿರ್ದೇಶನಕ್ಕೆ ಇಳಿದಿದ್ದಾರೆ. ಈಗಿನ ಟ್ರೆಂಡ್ ಗೆ ತಕ್ಕ ಕಥೆ ಹೆಣೆದು ಪ್ಯಾನ್ ಇಂಡಿಯಾ ಸಿನಿಮಾ ಕಟ್ಟಿಕೊಡುವ ನಿಟ್ಟಿನಲ್ಲಿ ತಯಾರಿ ನಡೆಸಿದ್ದಾರೆ.
ಉಮಾಪತಿ ಅವರು ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

Categories
ಆಡಿಯೋ ಕಾರ್ನರ್ ಸಿನಿ ಸುದ್ದಿ

ಊರ ಬಿಟ್ಟು ಊರೀಗೆ ಬಂದೀವಿ ಹಾಡಿಗೆ ಮೆಚ್ಚುಗೆ… ಯು ಟರ್ನ್‌ಗೆ ನವೀನ್‌ಸಜ್ಜು ಗಾನ


ಕನ್ನಡದಲ್ಲಿ “ಯು ಟರ್ನ್‌ ” ಸಿನಿಮಾ ಬಗ್ಗೆ ಎಲ್ಲರಿಗೂ ಗೊತ್ತು. ಜೋರು ಸುದ್ದಿ ಮಾಡಿದ ಚಿತ್ರವದು. ಈಗ ಮತ್ತೆ “ಯು ಟರ್ನ್‌ ” ಸುದ್ದಿ ಮಾಡುತ್ತಿದೆ. ಆದರೆ, ಇದು ಆ “ಯು ಟರ್ನ್‌ ” ಅಲ್ಲ ಅನ್ನೋದು ವಿಶೇಷ. ಹೌದು, ಇದು “ಯು ಟರ್ನ್‌ 2” ಹಾಗಂತ, ಆ “ಯು ಟರ್ನ್‌ ” ಚಿತ್ರಕ್ಕೂ ಈ “ಯು ಟರ್ನ್‌ 2” ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಅದೇ ಬೇರೆ, ಇದೇ ಬೇರೆ. ಹೊಸ ಬಗೆಯ ಕಥೆ, ಚಿತ್ರಕಥೆ, ನಿರೂಪಣೆಯೊಂದಿಗೆ ತಯಾರಾಗಿರುವ ಸಿನಿಮಾ ಇದು. ಈ ಚಿತ್ರದ ಮೂಲಕ ಚಂದ್ರು ಓಬಯ್ಯ ನಿರ್ದೇಶಕರಾಗುತ್ತಿದ್ದಾರೆ. ಹಾಗಂತ ಚಂದ್ರು ಓಬಯ್ಯ ಅವರಿಗೆ ಸಿನಿಮಾರಂಗ ಹೊಸದೇನಲ್ಲ. ಚಂದ್ರು ಓಬಯ್ಯ ಅವರು ನಿರ್ದೇಶಕರಾಗುವುದಕ್ಕೂ ಮುನ್ನ ಸಂಗೀತ ನಿರ್ದೇಶಕರಾದವರು. “ಟ್ರಿಗರ್‌”, “ಮನೋರಥ”, ” ರಾಜಪಥ” ಚಿತ್ರಗಳಿಗೆ ಸಂಗೀತ ಸಂಯೋಜಿಸಿದವರು. ಈಗ “ಯು ಟರ್ನ್‌ 2” ನಿರ್ದೇಶನದ ಜೊತೆಗೆ ಸಂಗೀತವನ್ನೂ ಸಂಯೋಜಿಸಿದ್ದಾರೆ. ರಂಗಿನ ಲೋಕಕ್ಕೆ ಕಲರ್‌ ಫುಲ್‌ ಕನಸಿನೊಂದಿಗೆ ಎಂಟ್ರಿಯಾದ ಚಂದ್ರ ಓಬಯ್ಯ ಇದೀಗ ತಮ್ಮ ಕನಸಿನ ನಿರ್ದೇಶನದ ಚಿತ್ರದ ಮೂಲಕ ಹೊಸ ಯಶಸ್ಸು ಕಾಣುವ ಉತ್ಸಾಹದಲ್ಲಿದ್ದಾರೆ. ಆ ಉತ್ಸಾಹದ ಮೊದಲ ಮೆಟ್ಟಿಲೆಂಬಂತೆ ಚಿತ್ರದ ಲಿರಿಕಲ್‌ ಸಾಂಗ್ ಕೂಡ ರಿಲೀಸ್‌ ಆಗಿದ್ದು, ಎಲ್ಲೆಡೆಯಿಂದ ಸಾಕಷ್ಟು ಮೆಚ್ಚುಗೆ ಪಡೆಯುತ್ತಿದೆ.
“ಯು ಟರ್ನ್‌ 2” ಚಿತ್ರದ ಚಿತ್ರೀಕರಣ ಮುಗಿದಿದೆ. ಇನ್ನು ಐದು ದಿನಗಳ ಪ್ಯಾಚ್‌ ವರ್ಕ್‌ ಮುಗಿದರೆ ಸಿನಿಮಾ ಕಂಪ್ಲೀಟ್‌ ಆಗಲಿದೆ. ಸೆ. 11 ರಂದು ಚಿತ್ರದ ಲಿರಿಕಲ್‌ ವಿಡಿಯೊ ರಿಲೀಸ್‌ ಆಗಿದ್ದು, “ಊರ ಬಿಟ್ಟು ಊರೀಗೆ ಬಂದೀವಿ…” ಎಂಬ ಅರ್ಥಪೂರ್ಣ ಸಾಹಿತ್ಯವಿರುವ ಈ ಹಾಡಿಗೆ ಈಗಾಗಲೇ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ನವೀನ್‌ ಸಜ್ಜು ಧ್ವನಿಯಲ್ಲಿ ಮೂಡಿಬಂದಿರುವ ಈ ಹಾಡು ಆನಂದ್‌ ಆಡಿಯೋ ಚಾನೆಲ್‌ನಲ್ಲಿ ಬಿಡುಗಡೆಗೊಂಡಿದ್ದು, ರಿಲೀಸ್‌ ಆದ ಕೆಲ ಗಂಟೆಗಳಲ್ಲೇ ಸಾವಿರಾರು ಲೈಕ್ಸ್‌ ಪಡೆದುಕೊಂಡಿದೆ. ಹಾಡಲ್ಲಿ ಸಾಹಿತ್ಯದ ಜೊತೆಗೆ ಸಂಗೀತದ ಮಾಧುರ್ಯ ಕೂಡ ಸೊಗಸಾಗಿದೆ. ಲೈವ್‌ ಜರ್ಮನ್‌ ಫ್ಲ್ಯೂಟ್‌ ಬಳಸಲಾಗಿದೆ. ಗುಣಮಟ್ಟದಿಂದ ಕೂಡಿರುವ ಹಾಡು ಕೊಡುವ ಉದ್ದೇಶದಿಂದ ಎಲ್ಲೂ ಹೊಂದಾಣಿಕೆ ಮಾಡಿಕೊಳ್ಳದೆ ಹಾಡನ್ನು ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ ಎಂಬುದು ನಿರ್ದೇಶಕ ಚಂದ್ರು ಓಬಯ್ಯ ಅವರ ಮಾತು.
ಮೂವೀಸ್‌ ಫೋರ್ಟ್‌ ಬ್ಯಾನರ್‌ ನಲ್ಲಿ ಸಿನಿಮಾ ತಯಾರಾಗಿದ್ದು, ಆನಂದ್‌ ಸಂಪಂಗಿ ನಿರ್ಮಾಣವಿದೆ. ಇನ್ನು, ಈ ಸಿನಿಮಾದಲ್ಲಿ “ತಿಥಿʼ ಖ್ಯಾತಿಯ ಪೂಜಾ ನಾಯಕಿಯಾದರೆ, ಪ್ರಮುಖವಾಗಿ ನಿರ್ದೇಶಕ ಚಂದ್ರು ಓಬಯ್ಯ, ಕರಿಸುಬ್ಬು, “ಕಿರಿಕ್‌ ಪಾರ್ಟಿ” ರಾಘು, ಉಗ್ರಂ ರವಿ ಇತರರು ನಟಿಸಿದ್ದಾರೆ. ಇದೊಂದು ಹಾರರ್‌ ಜಾನರ್‌ ಸಿನಿಮಾ ಆಗಿದ್ದು, ಮೊದಲು ಬಂದ ಯು ಟರ್ನ್‌ ಸಿನಿಮಾಗೂ ಈ ಚಿತ್ರಕ್ಕೂ ಯಾವ ಸಂಬಂಧವಿಲ್ಲ ಎಂದು ನಿರ್ದೇಶಕರು ಸ್ಪಷ್ಟಪಡಿಸುತ್ತಾರೆ. ಸುಮಾರು 50 ದಿನಗಳ ಕಾಲ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು, ಒಂದು ಸಾಂಗ್‌ ಶೂಟ್‌ ಮಾಡಿದರೆ ಚಿತ್ರೀಕರಣ ಮುಗಿಯಲಿದೆ. ಚಿತ್ರಕ್ಕೆ ನವೀನ್‌ ತುರುವೇಕೆರೆ ಅವರು ಛಾಯಾಗ್ರಹಣ ಮಾಡಿದ್ದಾರೆ. ಉಳಿದಂತೆ ಚೆಲುವ ಮೂರ್ತಿ, ಪ್ರಮೋದ್‌ ಗೌಡ, ಸ್ವರಾಜ್‌, ಅಶೋಕ್‌ ಇತರರು ” ಯು ಟರ್ನ್‌ 2 ” ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಸದ್ಯಕ್ಕೆ ಸಿನಿಮಾ ರೆಡಿಯಾಗಿದ್ದು, ಇಷ್ಟರಲ್ಲೇ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.

 

 

Categories
ಸಿನಿ ಸುದ್ದಿ

ಮಂಗಳ ಹಿಂದೆ ನಿಂತ ಕುಣಿಗಲ್‌ ಹುಡುಗ- ಕನ್ನಡ ವೆಬ್‌ ಸೀರೀಸ್‌ನಲ್ಲಿ ಥ್ರಿಲ್ಲರ್‌ ಸ್ಟೋರಿ

ಈಗಂತೂ ಡಿಜಿಟಲ್‌ನದ್ದೇ ಸುದ್ದಿ. ಅದರಲ್ಲೂ ಈಗಿನ ಯೂಥ್‌ ಡಿಜಿಟಲ್‌ ವೇದಿಕೆಯನ್ನು ಸರಿಯಾಗಿಯೇ ಬಳಸಿಕೊಳ್ಳುತ್ತಿದ್ದಾರೆ. ಕನ್ನಡದಲ್ಲಂತೂ ಈಗಾಗಲೇ ವೆಬ್‌ಸೀರೀಸ್‌ ಹವಾ ಜೋರಾಗಿಯೇ ಇದೆ. ಅಷ್ಟಕ್ಕೂ ಈ ವೆಬ್‌ ಸೀರೀಸ್‌ ನಲ್ಲಿ ಹೊಸಬರೇ ಇದ್ದಾರೆ ಅನ್ನೋದು ವಿಶೇಷ. ಆ ಮೂಲಕ ಕೆಲವರು ಸುದ್ದಿಯಾಗಿದ್ದಾರೆ ಕೂಡ. ಆ ಸಾಲಿಗೆ “ಮಂಗಳʼ ಹೆಸರಿನ ವೆಬ್‌ಸೀರೀಸ್‌ ಕೂಡ ಸೇರಿದೆ. ಹೌದು, ಈಗಾಗಲೇ “ಮಂಗಳʼ ಎಂಬ ವೆಬ್‌ ಸೀರೀಸ್‌ ಹಿಂದೆ ಹೊಸಬರ ತಂಡ ಅಣಿಯಾಗಿದೆ. ಈಗಾಗಲೇ “ಮಂಗಳ” ವೆಬ್‌ ಸೀರೀಸ್‌ ನ ಮೊದಲ ಪೋಸ್ಟರ್‌ ಬಿಡುಗಡೆಯಾಗಿದ್ದೆದು, ಆ ಪೋಸ್ಟರ್‌ಗೆ ಸಾಕಷ್ಟು ಮೆಚ್ಚುಗೆಯೂ ಸಿಕ್ಕಿದೆ.
ಅಂದಹಾಗೆ, ಈ “ಮಂಗಳʼ ವೆಬ್‌ಸೀರೀಸ್‌ಗೆ ಪೃಥ್ವಿ ಕುಣಿಗಲ್ ನಿರ್ದೇಶಕರು. ಕಥೆ, ಚಿತ್ರಕಥೆ ಇವರೇ ಬರೆದಿದ್ದಾರೆ. ಜೆ.ಜಿ.ಪ್ರೊಡಕ್ಷನ್ಸ್‌ ನಡಿ ಈ ವೆಬ್‌ ಸೀರೀಸ್‌ ನಿರ್ಮಾಣ ಮಾಡಲಾಗಿದೆ. “ಮಂಗಳ” ಕುರಿತು ನಿರ್ದೇಶಕ ಪೃಥ್ವಿ ಕುಣಿಗಲ್‌ ಹೇಳುವುದೇನು ಗೊತ್ತಾ? ಈ ವೆಬ್‌ ಸೀರೀಸ್ ನಲ್ಲಿ ಏಳು ಎಪಿಸೋಡ್‌ಗಳು ಇರಲಿವೆ. ಇದೊಂದು ಮಂಗಳಮುಖಿಯರ ಕುರಿತು ಸಾಗುವ ಕಥೆ. ಮಂಗಳ ಮುಖಿ ಅವರ ಬಗ್ಗೆ ಮಾಡುತ್ತಿರುವುದರಿಂದ ಸಾಕಷ್ಟು ಸಂಶೋಧನೆ ನಡೆಸಿ, ಚಿತ್ರಕ್ಕೆ ಕೈ ಹಾಕಿದ್ದು, ಮಂಗಳ ಮುಖಿಯರು ವಾಸ ಮಾಡುವಂತಹ ಸ್ಥಳಗಳಿಗೆ ಹೋಗಿ, ಅವರ ಹಾವ-ಭಾವ, ನೋವು-ನಲಿವು ಸೇರಿದಂತೆ ಅವರ ಕಷ್ಟ-ಸುಖ ಎಲ್ಲವನ್ನೂ ಆಲಿಸಿ, ಒಂದು ವರ್ಷಗಳ ಕಾಲ ಗಮನಿಸಿ, ಸಂಶೋಧನೆಯನ್ನೂ ನಡೆಸಿ, ಈಗ ವೆಬ್‌ ಸೀರೀಸ್‌ ಮಾಡಲಾಗುತ್ತಿದೆ. ಈ “ಮಂಗಳʼ ವೆಬ್‌ ಸೀರೀಸ್‌ ಒಂದು ಥ್ರಿಲ್ಲರ್‌ ಸ್ಟೋರಿ. ಒಂದು ಕೊಲೆಯ ಸುತ್ತ ನಡೆಯೋ ಕಥೆ ಇದಾಗಿದ್ದು, ಅದಕ್ಕೆ ಸಂಬಂಧಿಸಿದಂತೆ, ಮಂಗಳ ಮುಖಿಯೊಬ್ಬರು ಸಿಲುಕುತ್ತಾರೆ. ಅದರಿಂದ ಅವರು ಹೇಗೆಲ್ಲಾ ಪರಿತಪಿಸುತ್ತಾರೆ. ಆಮೇಲೆ ಅದರಿಂದ ಅವರು ಹೊರ ಬರುತ್ತಾರೋ ಇಲ್ಲವೋ ಎಂಬುದು ಸಸ್ಪೆನ್ಸ್.
ವಿಶೇಷವೆಂದರೆ, “ಮಂಗಳ” ಈಗಾಗಲೇ ಮಾರತಹಳ್ಳಿ ಸುತ್ತಮುತ್ತ ಹಂತದ ಚಿತ್ರೀಕರಣ ಮುಗಿಸಿದೆ. ಇಷ್ಟರಲ್ಲೇ ದೂರದ ಕೊಲ್ಕೊತ್ತಾದಲ್ಲೂ ಹೋಗಿ ಚಿತ್ರೀಕರಣ ಮಾಡುವ ಯೋಚನೆ ನಿರ್ದೇಶಕ ಪೃಥ್ವಿ ಕುಣಿಗಲ್‌ ಅವರದು. ಅಂದಹಾಗೆ, ಈ ವೆಬ್‌ ಸೀರೀಸ್‌ ನಲ್ಲಿ ಅಜಯ್‌ ರಾಜ್‌, ವಿನಯ್‌ ಕೃಷ್ಣಸ್ವಾಮಿ, ಕಾವ್ಯಾಶಾಸ್ತ್ರಿ ಪ್ರಮುಖವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ರಾಘವೇಂದ್ರ, ಬೇಬಿ ಅಂಕಿತ, ಮಂಜು ಪಾವಗಡ, ಅಮರ್ ನಾಥ್‌, ಕಿರಣ್ ಬಗಾಡೆ ಸೇರಿದಂತೆ ಇತರರು ನಟಿಸುತ್ತಿದ್ದಾರೆ. ಚಿತ್ರಕ್ಕೆ ಆನಂದ್‌ ಸುಂದರೇಶ ಕ್ಯಾಮೆರಾ ಹಿಡಿದರೆ, ಮಯೂರೇಶ್‌ ಸಂಗೀತವಿದೆ. ಇನ್ನು ಪ್ರಮೋದ್‌ ಮರವಂತೆ ಸಂಭಾಷಣೆ ಬರೆದಿದ್ದಾರೆ.  ಮಹೇಶ್ ತೊಗಟ ಸಂಕಲನವಿದೆ. ಒಟ್ಟಾರೆ, ಥ್ರಿಲ್‌ ಎನಿಸುವ ವೆಬ್‌ ಸೀರೀಸ್‌ ಕಟ್ಟಿಕೊಡುವ ಉತ್ಸಾಹದಲ್ಲಿರುವ ಪೃಥ್ವಿ ಮತ್ತು ತಂಡ ಈಗ ಎರಡನೇ ಹಂತದ ಚಿತ್ರೀಕರಣಕ್ಕೆ ಹೊರಡಲು ಸಜ್ಜಾಗಿದೆ.

Categories
ಗ್ಲಾಮರ್‌ ಕಾರ್ನರ್

ಶೆಟ್ಟರ ಭರತನಾಟ್ಯ ಅಭ್ಯಾಸ-ಕರಾವಳಿ ಬೆಡಗಿ ಐಶಾನಿ ಚಿತ್ತ ನಿರ್ದೇಶನದತ್ತ…

ಕೊರೊನಾ ಎಲ್ಲರಿಗೂ ತಕ್ಕಪಾಠವನ್ನಂತೂ ಕಲಿಸಿದೆ. ಸತತ ಏಳು ತಿಂಗಳ ಕಾಲ ಕೊರೊನಾ ಎಂಬ ಗುಮ್ಮ ಎಲ್ಲರನ್ನೂ ಬೆಚ್ಚಿಬೀಳಿಸುತ್ತಲೇ ಇದೆ. ಆದರೆ, ಈಗ ಭಯಬೀಳೀಸಿದ್ದ ಕೊರೊನಾವೇ ಕೊಂಚ ಗೊಂದಲದಲ್ಲಿರುವುದಂತೂ ನಿಜ. ಇಷ್ಟಕ್ಕೂ ಈ ಕೊರೊನಾ ಬಂದು ಒಂದಷ್ಟು ತಯಾರಿ ಮಾಡಿಕೊಳ್ಳುವುದನ್ನು ಕಲಿಸಿದೆ. ಕೊರೊನಾ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಆಗಿದ್ದು ಗೊತ್ತೇ ಇದೆ. ಅದರಲ್ಲೂ ಸಿನಿಮಾ ಮಂದಿ ಈ ಲಾಕ್ ಡೌನ್‌ ವೇಳೆ ಸಾಕಷ್ಟು ಕಥೆ ಗೀಚಿದ್ದಾರೆ. ಕಥೆ ಕೇಳಿದ್ದಾರೆ. ಆ ಸಾಲಿಗೆ ನಟಿ ಐಶಾನಿ ಶೆಟ್ಟಿ ಕೂಡ ಹೊರತಲ್ಲ. ಅವರು ಈ ಲಾಕ್‌ಡೌನ್‌ ವೇಳೆ ಏನು ಮಾಡಿದ್ದಾರೆ ಗೊತ್ತಾ?
ಅವರು ತಮ್ಮ ಮನೆ ಕೆಲಸದ ನಡುವೆಯೇ ಭರತನಾಟ್ಯಂ ಅಭ್ಯಾಸ ಮಾಡಿದ್ದಾರೆ. ಅವರು ಕಳೆದ ಒಂದುವರೆ ವರ್ಷದಿಂದಲೂ ಭರತನಾಟ್ಯ ಕ್ಲಾಸ್‌ಗೆ ಹೋಗುತ್ತಿದ್ದರು. ಆದರೆ, ಕೊರೊನಾ ಬಂದಿದ್ದರಿಂದ ಮನೆಯಲ್ಲೇ ಇರುವಂತಾಯಿತು. ಅವರು ಆ ಸಮಯವನ್ನು ವ್ಯರ್ಥ ಮಾಡಿಕೊಳ್ಳದೆ, ಭರತನಾಟ್ಯ ಅಭ್ಯಾಸ ಮಾಡಿದ್ದಾರೆ. ಇನ್ನು, ಐಶಾನಿ ಶೆಟ್ಟಿ, ನಟನೆ ಜೊತೆಯಲ್ಲಿ ನಿರ್ದೇಶನದ ಮೇಲೂ ಅತೀವ ಆಸಕ್ತಿ ಇಟ್ಟುಕೊಂಡವರು. ಈಗಾಗಲೇ ಅವರು ಕಿರುಚಿತ್ರ ನಿರ್ದೇಶಿಸುವ ಮೂಲಕ ನಿರ್ದೇಶಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಸಿನಿಮಾ ನಿರ್ದೇಶನದ ಮೇಲೂ ಆಸಕ್ತಿ ಇಟ್ಟುಕೊಂಡಿರುವ ಐಶಾನಿ, ಮುಂದಿನ ದಿನಗಳಲ್ಲಿ ಸಿನಿಮಾ ನಿರ್ದೇಶಿಸುವ ಆಶಯವಿದೆ. ಅವರು ಹಿಂದೆ ಬರೆದಿಟ್ಟುಕೊಂಡಿದ್ದ ಕಥೆಗಳನ್ನು ಈ ಲಾಕ್‌ ಡೌನ್‌ ಸಮಯದಲ್ಲಿ ಓದಿದ್ದಾರೆ. ಮುಂದಿನ ದಿನಗಳಲ್ಲಿ ಸಿನಿಮಾ ಮಾಡುವ ಯೋಚನೆಯನ್ನೂ ಮಾಡಿದ್ದಾರೆ. ಅವರು ಮಾಡಿಕೊಂಡಿರುವ ಕಥೆಯಲ್ಲಿ ಸಾಕಷ್ಟು ವಿಚಾರಗಳಿದ್ದು, ಅದನ್ನಿಟ್ಟುಕೊಂಡೇ ಸಿನಿಮಾ ಮಾಡುವ ತಯಾರಿಯಲ್ಲೂ ಇದ್ದಾರಂತೆ. ಅಂದಹಾಗೆ, ಅವರು ಕಳೆದ ಎರಡ್ಮೂರು ವರ್ಷಗಳ ಹಿಂದೆ ಮಾಡಿಕೊಂಡಿದ್ದ ಕಥೆಗಳು ಈಗಿನ ಟ್ರೆಂಡ್‌ಗೆ ಸರಿಹೊಂದಲ್ಲ ಎಂಬ ಕಾರಣಕ್ಕೆ, ಅವರು ಹೊಸದಾಗಿ ಕಥೆ ಹೆಣೆದು ಸಿನಿಮಾ ನಿರ್ದೇಶಿಸುವ ಬಯಕೆಯೂ ಅವರಿಗಿದೆ.
ಸದ್ಯ ಐಶಾನಿ ಶೆಟ್ಟಿ ಬಳಿ ಒಂದಷ್ಟು ಚಿತ್ರಗಳಿವೆ. “ಧರಣಿ ಮಂಡಲ” ಹಾಗೂ “ಹೊಂದಿಸಿ ಬರೆಯಿರಿ” ಚಿತ್ರಗಳಿವೆ. ಕೊರೊನಾ ಇದ್ದುದ್ದರಿಂದ ಚಿತ್ರೀಕರಣ ಸ್ಥಗಿತಗೊಳಿಸಲಾಗಿತ್ತು. ಈಗಷ್ಟೇ ಇಂಡಸ್ಟ್ರಿ ಮೆಲ್ಲನೆ ಶುರುವಾಗುತ್ತಿದೆ. ಇನ್ನು ಮುಂದಿನ ದಿನಗಳಲ್ಲಿ ಚಿತ್ರೀಕರಣ ಶುರುವಾಗಿ, ಮುಗಿಸಿ, ಪ್ರೇಕ್ಷಕರ ಮುಂದೆ ಬರಬೇಕಷ್ಟೆ.

Categories
ಸಿನಿ ಸುದ್ದಿ

ಕಬಿನಿಯಲ್ಲಿ ಪ್ರದೀಪ್ ವರ್ಮಾ ಸಂಗೀತ ನಿರ್ದೇಶಕನ ಹೊಸ ಚಿತ್ರ

 

ಪ್ರದೀಪ್ ವರ್ಮ ಅವರೀಗ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. (ಸೆ. 8) ಕನ್ನಡ,ತಮಿಳು ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿರುವ ಪ್ರದೀಪ್ ವರ್ಮ, ನಾಯಕ ಕಮ್ ನಿರ್ದೇಶಕರೂ ಹೌದು. ಕನ್ನಡದ ಅನೇಕ ಆಲ್ಬ ಸಾಂಗ್ ಗಳಿಗೆ ಸಂಗೀತ ಸಂಯೋಜನೆ ಮಾಡಿರುವ ಪ್ರದೀಪ್ ವರ್ಮ ಸದ್ಯಕ್ಕೆ ವಿನೋದ್ ಪ್ರಭಾಕರ್ ಸಿನಿಮಾವೊಂದಕ್ಕೆ ಸಂಗೀತ ನೀಡುತ್ತಿದ್ದಾರೆ.ಅವರ ಹುಟ್ಟುಹಬ್ಬದ ದಿನದಂದು ಹೊಸದೊಂದು ಚಿತ್ರ ಅನೌನ್ಸ್ ಮಾಡಿದ್ದಾರೆ.ಹೌದು, ಪ್ರದೀಪ್ ವರ್ಮ ಸದಾ ಉತ್ಸಾಹದಲ್ಲೇ ಏನಾದರೊಂದು ಸಿನಿಮಾ ಚಟುವಟಿಕೆಯಲ್ಲಿರುತ್ತಾರೆ. ಈಗ ‘ಕಬಿನಿ’ ಹೆಸರಿನ ಸಿನಿಮಾ ಮಾಡುತ್ತಿದ್ದಾರೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಈ ಚಿತ್ರ ತಯಾರಾಗುತ್ತಿರುವುದು ವಿಶೇಷ.ಈ ಚಿತ್ರವನ್ನು ಕಿರಣ್ ನಿರ್ದೇಶನ ಮಾಡುತ್ತಿದ್ದಾರೆ.ಡೇಸಿಸ್ ಇಂಟರ್ನ್ಯಾಷನಲ್ ಪಿಕ್ಚರ್ಸ್ ಮೂಲಕ ಅಕ್ಬರ್ ಖಾನ್ ಮತ್ತು ಸಂಜಯ್ ವಿಜಯ್ ಕುಮಾರ್ ಅವರ ನಿರ್ಮಾಣವಿದೆ. ಭೂಮಿಕಾ ಪ್ರೊಡಕ್ಷನ್ಸ್ ಅರ್ಪಿಸುತ್ತಿದೆ.ಪ್ರದೀಪ್ ವರ್ಮ ಸಂಗೀತವಿದೆ. ಸಾಯಿ ಕಿರಣ್ ಛಾಯಾಗ್ರಹಣವಿದೆ. ಗೌಸ್ ಪೀರ್, ಸಂತೋಷ್ ವೆಂಕಿ ಸಾಹಿತ್ಯವಿದೆ.

Categories
ಗ್ಲಾಮರ್‌ ಕಾರ್ನರ್

ಐಂದ್ರಿತಾ ರೇ…ಗ್ಲಾಮರ್ ಲುಕ್

 

ಕಲರ್ ಫುಲ್‌ ಬೆಡಗಿಯ ಪವರ್‌ ಫುಲ್‌ ಫೋಟೋ

ಗುಳಿಕೆನ್ನೆ ಹುಡುಗನ ಬ್ಯೂಟಿ ಐಂದ್ರಿತಾ ರೇ ಇದೀಗ ಬಾಲಿವುಡ್‌ ಅಂಗಳದಲ್ಲಿದ್ದಾರೆ. ಕಾರಣ, ಅಲ್ಲೊಂದು ವೆಬ್‌ಸೀರಿಸ್‌ ನಲ್ಲಿ ನಟಿಸಿದ್ದಾರೆ.

ಹೌದು, ಐಂದ್ರಿತಾ ದಿಗಂತ್‌ಗೆ ಜೋಡಿಯಾದ ಬಳಿಕ ಹಲವು ಅವಕಾಶಗಳೂ ಬಂದರೂ ಅವರು ಚ್ಯೂಸಿಯಾದರು. ಸದ್ಯ ಅವರು “ದಿ ಕೆಸಿನೊʼ ಎಂಬ ವೆಬ್‌ ಸೀರಿಸ್‌ ಮಾಡಿದ್ದಾರೆ. ಈ ನಡುವೆ ಅವರು “ಗರುಡʼ ಸಿನಿಮಾದಲ್ಲೂ ನಟಿಸಿದ್ದಾರೆ. ಆ ಚಿತ್ರ ರಿಲೀಸ್‌ ಗೆ ರೆಡಿಯಾಗಿದೆ. ಅತ್ತ, ನೆನಪಿರಲಿ ಪ್ರೇಮ್‌ ಜೊತೆಗೆ “ಪ್ರೇಮಂ ಪೂಜ್ಯಂ” ಸಿನಿಮಾದಲ್ಲೂ ನಟಿಸುತ್ತಿದ್ದಾರೆ.

 

“ಮೆರವಣಿಗೆ” ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾದ ಐಂದ್ರಿತಾ, ಹಿಂದಿ, ತೆಲುಗು, ಬಂಗಾಳಿ ಭಾಷೆಯಲ್ಲೂ ನಟಿಸಿದ್ದಾರೆ.ಎಲ್ಲೂ ಸುದ್ದಿಯಾಗದ ಅವರೀಗ ತಮ್ಮ‌ ಫೋಟೋಸ್‌ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ಇಷ್ಟರಲ್ಲೇ ತಮ್ಮ ಫ್ಯಾನ್ಸ್‌ಗಳಿಗೆ ಖುಷಿಪಡಿಸಲು ಸಜ್ಜಾಗುತ್ತಿದ್ದಾರೆ.

 

 

 

 

 

 

 

 

ಕಲರ್ ಫುಲ್‌ ಬೆಡಗಿಯ ಪವರ್‌ ಫುಲ್‌ ಫೋಟೋ

ಗುಳಿಕೆನ್ನೆ ಹುಡುಗನ ಬ್ಯೂಟಿ ಐಂದ್ರಿತಾ ರೇ ಇದೀಗ ಬಾಲಿವುಡ್‌ ಅಂಗಳದಲ್ಲಿದ್ದಾರೆ. ಕಾರಣ, ಅಲ್ಲೊಂದು ವೆಬ್‌ಸೀರಿಸ್‌ ನಲ್ಲಿ ನಟಿಸಿದ್ದಾರೆ. ಹೌದು, ಐಂದ್ರಿತಾ ದಿಗಂತ್‌ಗೆ ಜೋಡಿಯಾದ ಬಳಿಕ ಹಲವು ಅವಕಾಶಗಳೂ ಬಂದರೂ ಅವರು ಚ್ಯೂಸಿಯಾದರು. ಸದ್ಯ ಅವರು “ದಿ ಕೆಸಿನೊʼ ಎಂಬ ವೆಬ್‌ ಸೀರಿಸ್‌ ಮಾಡಿದ್ದಾರೆ. ಈ ನಡುವೆ ಅವರು “ಗರುಡʼ ಸಿನಿಮಾದಲ್ಲೂ ನಟಿಸಿದ್ದಾರೆ.

 

ಆ ಚಿತ್ರ ರಿಲೀಸ್‌ ಗೆ ರೆಡಿಯಾಗಿದೆ. ಅತ್ತ, ನೆನಪಿರಲಿ ಪ್ರೇಮ್‌ ಜೊತೆಗೆ “ಪ್ರೇಮಂ ಪೂಜ್ಯಂ” ಸಿನಿಮಾದಲ್ಲೂ ನಟಿಸುತ್ತಿದ್ದಾರೆ. “ಮೆರವಣಿಗೆ” ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾದ ಐಂದ್ರಿತಾ, ಹಿಂದಿ, ತೆಲುಗು, ಬಂಗಾಳಿ ಭಾಷೆಯಲ್ಲೂ ನಟಿಸಿದ್ದಾರೆ. ಎಲ್ಲೂ ಸುದ್ದಿಯಾಗದ ಅವರೀಗ ತಮ್ಮ‌ ಫೋಟೋಸ್‌ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ಇಷ್ಟರಲ್ಲೇ ತಮ್ಮ ಫ್ಯಾನ್ಸ್‌ಗಳಿಗೆ ಖುಷಿಪಡಿಸಲು ಸಜ್ಜಾಗುತ್ತಿದ್ದಾರೆ.

Categories
ಸಿನಿ ಸುದ್ದಿ

ರಾಜೇಂದ್ರ ಸಿಂಗ್‌ ಬಾಬು ಕಂಡಂತೆ ವಿಷ್ಣು… ಕಾದಂಬರಿ ಚಿತ್ರಕ್ಕೆ ವಿಷ್ಣು ಸರಿ ಆಯ್ಕೆ

ಇದು ಸಿನಿಲಹರಿ ವಿಶೇಷ..

 

ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು ಮತ್ತು ಡಾ.ವಿಷ್ಣುವರ್ಧನ್‌ ಅವರ ನಡುವಿನ ಗೆಳೆತನಕ್ಕೆ ನಾಲ್ಕು ದಶಕಗಳು ಕಳೆದಿವೆ. ಇವರಿಬ್ಬರ ಗೆಳೆತನಕ್ಕೆ ಒಂದು ಕಲರ್ ಫುಲ್‌ ಇತಿಹಾಸವೇ ಇದೆ. ಇಬ್ಬರೂ ಬಾಲನಟರಾಗಿ ಒಂದೇ ಚಿತ್ರದಲ್ಲಿ ಕಾಣಿಸಿಕೊಂಡವರು. ಅದಕ್ಕಿಂತ ಹೆಚ್ಚಾಗಿ ಇಬ್ಬರ ನಡುವೆ ಅತಿಯಾದ ಸ್ನೇಹವಿತ್ತು. ಆಗಾಗ ಮುನಿಸು ಬರುತ್ತಿತ್ತು. ಆದರೆ, ಅದು ಕೇವಲ ಆ ಕ್ಷಣಕ್ಕೆ ಮಾತ್ರ. ಅಷ್ಟೇ ಸಲುಗೆಯಿಂದಿದ್ದ ಈ ಇಬ್ಬರೂ ಕನ್ನಡ ಚಿತ್ರರಂಗದಲ್ಲಿ ಯಶಸ್ವಿ ಜೋಡಿ ಎನಿಸಿಕೊಂಡವರು. ಅಷ್ಟೇ ಅಲ್ಲ, ಹಲವಾರು ಸಕ್ಸಸ್‌ ಸಿನಿಮಾಗಳನ್ನು ಕೊಟ್ಟವರು. ವಿಷ್ಣುವರ್ಧನ್‌ ವ್ಯಕ್ತಿತ್ವ. ಅವರೊಂದಿಗಿನ ಒಡನಾಟ ಮತ್ತು ಅವರೊಳಗಿನ ಕಲಾವಿದನ ಕುರಿತು ರಾಜೇಂದ್ರ ಸಿಂಗ್‌ ಬಾಬು ಆಪ್ತ ಮಾತು.

 

ನಾನೂ ವಿಷ್ಣು ಬಾಲನಟರಾಗಿ ನಟಿಸಿದ್ದೆವು…

*ನಮ್ಮ ಫ್ಯಾಮಿಲಿಗೂ ಡಾ.ವಿಷ್ಣುವರ್ಧನ್‌ ಫ್ಯಾಮಿಲಿಗೂ ಅವಿನಾಭಾವ ಸಂಬಂಧವಿದೆ. ಕಾರಣ, ವಿಷ್ಣುವರ್ಧನ್‌ ಅವರ ತಂದೆ ಮತ್ತು ನಮ್ಮ ತಂದೆ ಇಬ್ಬರ ನಡುವೆ ಸ್ನೇಹವಿತ್ತು. ಸ್ನೇಹ ಅಷ್ಟೇ ಅಲ್ಲ, ನಮ್ಮ ಕಂಪೆನಿಗಳಲ್ಲಿ ವಿಷ್ಣುವರ್ಧನ್‌ ಅವರ ತಂದೆ ಕೆಲಸ ಮಾಡಿದ್ದರು. ಅವರ ತಂದೆ ಒಬ್ಬ ಒಳ್ಳೆಯ ಬರಹಗಾರರು ಮತ್ತು ಕಲಾವಿದರಾಗಿದ್ದರು. ಅವರಷ್ಟೇ ಅಲ್ಲ, ವಿಷ್ಣು ಸಹೋದರಿ ರಮಾ ಕೂಡ ನಮ್ಮ ಬ್ಯಾನರ್‌ನಲ್ಲಿ ತಯಾರಾದ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. “ಶಿವಶರಣೆ ನಂಬೆಕಾʼ ಚಿತ್ರದಲ್ಲಿ ಅವರು ಅನಂತಸ್ವಾಮಿ ಹಾಡಿದ ಹಾಡೊಂದಕ್ಕೆ ಡ್ಯಾನ್ಸ್‌ ಮಾಡಿದ್ದರು. ವಿಷ್ಣುವರ್ಧನ್‌ ಮತ್ತು ನಾನು ಚಿತ್ರವೊಂದರಲ್ಲಿ ಬಾಲನಟರಾಗಿಯೂ ನಟಿಸಿದ್ದೆವು. ಅಲ್ಲಿಂದ ನಮ್ಮ ಗೆಳೆತನ ಶುರುವಾಯ್ತು. ನಮ್ಮಿಬ್ಬರ ಫ್ಯಾಮಿಲಿಯ ಸಂಬಂಧ ಕೂಡ ಗಟ್ಟಿಯಾಗುತ್ತಾ ಹೋಯ್ತು. ವಿಷ್ಣುವರ್ಧನ್‌ ಬೆಂಗಳೂರಲ್ಲಿ ಇರುತ್ತಿದ್ದರು. ನಾನು ಮೈಸೂರಲ್ಲಿ ಇರುತ್ತಿದ್ದೆ. ಅವರ ತಂದೆ ಆಗಾಗ ವಿಷ್ಣುನಾ ಕರೆದುಕೊಂಡು ಬರೋರು. ಇಬ್ಬರು ಜತೆಗೂಡಿ ಒಂದಷ್ಟು ಹರಟುತ್ತಿದ್ದೆವು. “ನಾಗರಹಾವು” ಚಿತ್ರ ಶುರುವಾಗುವ ಹೊತ್ತಿಗೆ ವಿಷ್ಣು ನನ್ನ ಆತ್ಮೀಯ ಗೆಳೆಯನಲ್ಲೊಬ್ಬನಾಗಿದ್ದ. ಕಾರಣ, ಆ ಚಿತ್ರಕ್ಕೆ ವೀರಸ್ವಾಮಿ ನಿರ್ಮಾಪಕರಾಗಿದ್ದರು. ನನಗೇ ಅವರು ಪ್ರೊಡಕ್ಷನ್‌ ನೋಡಿಕೊಳ್ಳುವಂತೆ ಹೇಳಿದ್ದರು. ಹಾಗಾಗಿ ನಾನು “ನಾಗರಹಾವುʼ ಚಿತ್ರದ ಪ್ರೊಡಕ್ಷನ್‌ ನೋಡಿಕೊಳ್ಳುತ್ತಿದ್ದೆ. ಆ ಸಿನಿಮಾದಿಂದಲೂ ನಮ್ಮ ಗೆಳೆತನ ಮತ್ತಷ್ಟು ಗಟ್ಟಿಯಾಯ್ತು. ನಾನು ನಿರ್ದೇಶಿಸಿದ ಮೊದಲ ಚಿತ್ರ “ನಾಗಕನ್ಯೆʼ. ಆ ಚಿತ್ರದಲ್ಲಿ ವಿಷ್ಣುವರ್ಧನ್‌ ಅಭಿನಯಿಸಿದ್ದ. ನನ್ನ ಮೊದಲ ನಿರ್ದೇಶನದಲ್ಲಿ ವಿಷ್ಣು ಇರಬೇಕು ಎಂದು ಬಯಸಿದ್ದೆ. ಅವನು ಕೂಡ ನಟಿಸಲು ಬಯಸಿದ್ದ. ಆ ಬಳಿಕ ಒಂದಷ್ಟು ಚಿತ್ರಗಳನ್ನು ಜತೆಯಾಗಿ ಮಾಡಿದೆವು. ಇಬ್ಬರ ನಡುವೆ ಕೇವಲ ಸ್ನೇಹ ಮಾತ್ರ ಇರಲಿಲ್ಲ. ಕಷ್ಟ–ಸುಖ ಬಗ್ಗೆಯೂ ಮಾತಾಡುತ್ತಿದ್ದೆವು. ಅವರ ಫ್ಯಾಮಿಲಿ ನಮ್ಮ ಮನೆಗೆ ಬರೋದು, ನಾವು ಅವರ ಮನೆಗೆ ಹೋಗೋದು, ಹೀಗೆ ಒಳ್ಳೆಯ ವಾತಾವರಣ ನಮ್ಮ ನಡುವೆ ಬೆಳೆದಿತ್ತು.

 

ವಿಷ್ಣು ಸದಾ ಪಾಸಿಟಿವ್‌ ಥಿಂಕ್‌ ಮ್ಯಾನ್

*ವಿಷ್ಣುವಿನ ವ್ಯಕ್ತಿತ್ವ ಬಗ್ಗೆ ಹೇಳುವುದಾದರೆ, ಅವನೊಬ್ಬ ತುಂಬಾ ಒಳ್ಳೆಯ ಮನುಷ್ಯ. ಅಷ್ಟೇ ಅದ್ಭುತ ನಟ. ಎಲ್ಲರ ಕಷ್ಟವನ್ನು ಆಲಿಸುತ್ತಿದ್ದ. ಕೈಲಾದ ಸಹಾಯವನ್ನೂ ಮಾಡುತ್ತಿದ್ದ. ಆದರೆ, ಯಾವುದನ್ನೂ ಹೇಳಿಕೊಳ್ಳುತ್ತಿರಲಿಲ್ಲ. ಅವನೊಂದಿಗೆ ನಾನು ದಶಕಗಳ ಕಾಲ ಸ್ನೇಹ ಇಟ್ಟುಕೊಂಡಿದ್ದೆ ಅನ್ನೋದೇ ದೊಡ್ಡ ಖುಷಿಯ ಅನುಭವ. ತುಂಬಾ ಬುದ್ಧಿವಂತ ಮನುಷ್ಯನಾಗಿದ್ದ. ವಿಷ್ಣು ಎಲ್ಲರ ಜೊತೆಯಲ್ಲೂ ಒಳ್ಳೆಯ ಗೆಳೆತನ ಇಟ್ಟುಕೊಂಡಿದ್ದ. ಅದರಲ್ಲೂ ನನ್ನ ಜತೆಯಲ್ಲಂತೂ ಸದಾ ಮಾತಾಡುತ್ತಿರಬೇಕು, ಮಿಸ್‌ ಮಾಡದೆ ದಿನಾಲೂ ಮೀಟ್‌ ಮಾಡುತ್ತಿರಬೇಕು.  ಹರಟುತ್ತಿರಬೇಕು. ಅಷ್ಟರಮಟ್ಟಿಗೆ ನಾವಿದ್ದೆವು. ಅವನಲ್ಲಿ ನಾನು ಮೈನಸ್‌ ಅಂಶಗಳನ್ನು ನೋಡಿಯೇ ಇಲ್ಲ. ಯಾವಾಗಲೂ ಪಾಸಿಟಿವ್‌ ಆಗಿಯೇ ಥಿಂಕ್‌ ಮಾಡೋನು. ನಮಗೂ ಅದನ್ನೇ ಹೇಳೋನು. ಎಲ್ಲರ ಹೃದಯಕ್ಕೆ ಹತ್ತಿರವಾಗಿರುತ್ತಿದ್ದ ಹೃದಯವಂತ ನಟ ಅವನು.

 

ಟರ್ನಿಂಗ್‌ ಪಾಯಿಂಟ್‌ ಕೊಟ್ಟ ಬಂಧನ

* ವಿಷ್ಣುವರ್ಧನ್‌ಗೆ ನನ್ನ ನಿರ್ದೇಶನದ “ಬಂಧನ” ಚಿತ್ರ ಟರ್ನಿಂಗ್‌ ಪಾಯಿಂಟ್‌ ಆಯ್ತು. ಆ ಸಿನಿಮಾದಿಂದ ವಿಷ್ಣುವರ್ಧನ್‌ಗೆ ಬೇರೆಯದ್ದೇ ಇಮೇಜ್ ಸಿಕ್ತು. ಆ ಸಿನಿಮಾ ನೋಡಿದವರೆಲ್ಲರೂ ವಿಷ್ಣು ಅವರನ್ನು ಕಂಡಾಗ “ಬಂಧನʼದ ನಟನೆ ಬಗ್ಗೆಯೇ ಮಾತಾಡುತ್ತಿದ್ದರು. ಆ ಚಿತ್ರ ನನಗೂ ಮತ್ತು ವಿಷ್ಣು ಇಬ್ಬರಿಗೂ ಅತ್ಯಂತ ಜನಪ್ರಿಯತೆ ತಂದುಕೊಟ್ಟಿತು. ಇನ್ನೊಂದು ವಿಷಯ ಹೇಳಲೇಬೇಕು. “ಬಂಧನʼ ಬಳಿಕ ವಿಷ್ಣುವರ್ಧನ್‌ಗೆ ಲೇಡಿಸ್‌ ಆಡಿಯನ್ಸ್‌ ಹೆಚ್ಚಾದರು. ಆ ಸಿನಿಮಾ ಬಳಿಕ “ಕರ್ಣʼ, “ಹಿಮಪಾತʼ, ʼಮುತ್ತಿನಹಾರʼ, ʼಮಹಾಕ್ಷತ್ರಿಯʼ ಚಿತ್ರಗಳಿಗೆ ಹೆಚ್ಚಾಗಿ ಲೇಡಿಸ್‌ ಆಡಿಯನ್ಸ್‌ ನಿಂದಲೇ ಒಳ್ಳೆಯ ಪ್ರತಿಕ್ರಿಯೆ ಬಂದಿತ್ತು.

 

ಇಂದಿಗೂ ಆ ಕಥೆ ಹಾಗೇ ಇದೆ…

*ವಿಷ್ಣು ಕಾದಂಬರಿ ಬೇಸ್ಡ್‌ ಸಿನಿಮಾಗಳಿಗೆ ಸರಿ ಹೊಂದುತ್ತಿದ್ದ. ಡಾ.ರಾಜಕುಮಾರ್‌ ಅವರನ್ನು ಬಿಟ್ಟರೆ, ಕಾದಂಬರಿ ಕುರಿತ ಚಿತ್ರಗಳಿಗೆ ವಿಷ್ಣು ಸೂಕ್ತ ನಟ ಎಂಬ ಮಾತು ಆಗ ಕೇಳಿಬರುತ್ತಿತ್ತು. “ಭಾಗ್ಯ ಜ್ಯೋತಿʼ, “ಹೊಂಬಿಸಲುʼ ಸೇರಿದಂತೆ ಹಲವು ಚಿತ್ರಗಳಲ್ಲಿ ವಿಷ್ಣು ಅಭಿನಯ ಜನ ಮೆಚ್ಚುಗೆ ಪಡೆದಿತ್ತು. “ಬಂಗಾರದ ಜಿಂಕೆʼ ಸೇರಿದಂತೆ ಒಂದಷ್ಟು ಚಿತ್ರಗಳಲ್ಲಿ ವಿಷ್ಣು ಅವರನ್ನು ಇಂದಿಗೂ ಮರೆಯುವಂತಿಲ್ಲ. ಅಷ್ಟರಮಟ್ಟಿಗೆ ಅಭಿನಯಿಸಿದ್ದಾನೆ. ನಾನು ವಿಷ್ಣುಗೆ ನಿರ್ದೇಶಿಸಿದ ಕೊನೆಯ ಚಿತ್ರ “ಮಹಾಕ್ಷತ್ರಿಯʼ ವಿಷ್ಣುಗೆ ಇನ್ನು, ಒಂದಷ್ಟು ಚಿತ್ರಗಳನ್ನು ಮಾಡುವ ಬಗ್ಗೆ ಸಾಕಷ್ಟು ಸ್ಕ್ರಿಪ್ಟ್‌ಗಳನ್ನು ಮಾಡಿಕೊಂಡಿದ್ದೆ. ಆ ಸಮಯದಲ್ಲಿ ವಿಷ್ಣುವರ್ಧನ್‌, ಒಂದು ದಿನವೂ ಬಿಡುವಿರದಂತೆ ಚಿತ್ರಗಳಲ್ಲಿ ನಟಿಸುತ್ತಿದ್ದರು. ಅತ್ತ, ನಾನು ಬೇರೆ ಚಿತ್ರಗಳನ್ನು ನಿರ್ದೇಶಿಸುತ್ತಿದ್ದೆ. ವಿಷ್ಣುಗಾಗಿಯೇ ನಾನು ಒಂದೊಳ್ಳೆಯ ಕಥೆ ರೆಡಿಮಾಡಿಕೊಂಡಿದ್ದೆ. ಅದನ್ನು ನೀನೇ ಮಾಡಬೇಕು ಕಥೆ ಹೇಳ್ತೀನಿ, ಕೇಳು ಅಂದಿದ್ದೆ. ಆಗ ವಿಷ್ಣು ಮೈಸೂರಲ್ಲಿದ್ದರು. ಹೊಸ ವರ್ಷ ಶುರುವಾಗುತ್ತೆ. ಒಂದನೇ ತಾರೀಖಿಗೆ ಬಂದು ಬಿಡು. ಕಥೆ ಹೇಳು ಕೇಳ್ತೀನಿ ಅಂದಿದ್ದ. ಆದರೆ, ಅದು ಸಾಧ್ಯವಾಗಲೇ ಇಲ್ಲ. ಇವತ್ತಿಗೂ ಆ ಕಥೆ ಹಾಗೆಯೇ ಇದೆ. ಆ ಕಥೆಗೆ ವಿಷ್ಣುವರ್ಧನ್‌ ಹೊರತಾಗಿ ಬೇರೆ ಯಾರೂ ಸೂಟ್‌ ಆಗೋದಿಲ್ಲ.

Categories
ಸಿನಿ ಸುದ್ದಿ

ನಾರಾಯಣ್‌ ಕಂಡಂತೆ ವಿಷ್ಣು.. ಇಂಡಿಯಾ ಟೀಂ ಬೌಲರ್‌ ಜಹೀರ್‌ ಖಾನ್‌ ವೀರಪ್ಪನಾಯ್ಕನನ್ನು ಮೆಚ್ಚಿದ್ದರು

ಇದು ಲಹರಿ ವಿಶೇಷ…

ನಿರ್ದೇಶಕ ಎಸ್.ನಾರಾಯಣ್‌, ಡಾ.ವಿಷ್ಣುವರ್ಧನ್‌ ಮೇಲೆ ಸಿಕ್ಕಾಪಟ್ಟೆ ಗೌರವ ಇಟ್ಟುಕೊಂಡವರು. ವಿಷ್ಣುವರ್ಧನ್‌ ಅವರಿಗೂ ನಾರಾಯಣ್‌ ಮೇಲೆ ಅಷ್ಟೇ ಪ್ರೀತಿ ಇತ್ತು. ಇವರಿಬ್ಬರ ಕಾಂಬಿನೇಷನ್‌ನಲ್ಲಿ ಕನ್ನಡದ ಆರು ವಿಭಿನ್ನ ಚಿತ್ರಗಳು ಮೂಡಿಬಂದಿವೆ. ವಿಷ್ಣುವರ್ಧನ್‌ ಅವರನ್ನು ಹೊಸತರಹದ ಗೆಟಪಲ್ಲಿ ತೋರಿಸಿಕೊಟ್ಟ ನಿರ್ದೇಶಕ ಎಂಬ ಮಾತಿಗೆ ನಾರಾಯಣ್‌ ಸೇರ್ಪಡೆಯಾದವರು. ನಾರಾಯಣ್‌ ವಿಷ್ಣು ಬಗ್ಗೆ ಹೇಳಿದ ಮಾತುಗಳೇನು ಗೊತ್ತಾ?

 

ಮೂರು ಮುಖದ ಮುದ್ದಿನ ಸಿಂಹ

* ನಾನು ವಿಷ್ಣುವರ್ಧನ್‌ ಅವರ ಮೂರು ಮುಖಗಳನ್ನು ನೋಡಿದ್ದೇನೆ. ಮೊದಲನೆಯದು, ಅವರಲ್ಲಿ ತುಂಬಾ ಹುಡುಗಾಟದ ಸ್ವಭಾವವಿತ್ತು. ಸದಾ ತಮಾಷೆ ಮಾಡುತ್ತಿದ್ದರು. ಪ್ರೀತಿಯಿಂದಲೇ ಕೆಲವರನ್ನು ರೇಗಿಸುತ್ತಿದ್ದರು, ಕೆಲವೊಮ್ಮೆ ಅವರಿಗೆ ತುಂಬಾ ಇಷ್ಟವಾಗಿಬಿಟ್ಟರೆ, ಅಂತಹವರ ಹೆಗಲ ಮೇಲೆ ಕೈ ಹಾಕಿಕೊಂಡು ಮಾತಾಡೋರು. ಹಿಂದೆ ಮುಂದೆ ನೋಡದೆ, ಅವರೊಳಗಿನ ಮನಸ್ಸಿನ ಭಾವನೆ ಹೊರ ಹಾಕೋರು. ಎರಡನೆಯದು, ಆಗಾಗ ಗಂಭೀರವಾಗುತ್ತಿದ್ದರು. ಒಂಥರಾ ಮೂಡಿಯಾಗಿಬಿಡುತ್ತಿದ್ದರು. ಬಹುಶಃ ನಾನು ಅವರಷ್ಟು ಮೂಡಿ ಅಗಿರೋದನ್ನು ಬೇರೆ ನಟರಲ್ಲಿ ನೋಡಿಲ್ಲ. ಅವರಿಗೆ ಇಷ್ಟ ಅಗದೇ ಇರುವಂತಹ ಯಾವುದೇ ಚಟುವಟಿಕೆ ನಡೆದರೂ ಅವರು ಸೈಲೆಂಟ್‌ ಆಗಿಬಿಡುತ್ತಿದ್ದರು. ವಾತಾವರಣವಿರಲಿ, ಲೋಕೇಷನ್‌ ಇರಲಿ, ಅಥವಾ ಅವರ ಕಾಸ್ಟ್ಯೂಮ್ಸ್‌ ಆಗಲಿ, ಇಷ್ಟ ಆಗದಿದ್ದರೆ, ಹೇಳುತ್ತಿರಲಿಲ್ಲ. ನಾವೇ ಅವರ ಮುಖ ಭಾವ ನೋಡಿ ಅರ್ಥ ಮಾಡಿಕೊಳ್ಳುತ್ತಿದ್ದೆವು. ಇನ್ನು ಮೂರನೆಯದು, ಅವರಿಗೆ ಅಧ್ಯಾತ್ಮದ ಮೇಲೆ ಹೆಚ್ಚು ಒಲವಿತ್ತು. ಇದನ್ನು ನಿಜವಾಗಲೂ ನಂಬೋಕೆ ಸಾಧ್ಯವಿರಲಿಲ್ಲ. ಅವರಿಗೆ ಆಧ್ಯಾತ್ಮ ವಿಷಯದ ಬಗ್ಗೆ ಅಪಾರ ತಿಳಿವಳಿಕೆ ಇತ್ತು. ಒಬ್ಬ ನಟನಿಗೂ ಆಧ್ಯಾತ್ಮಕ್ಕೂ ಎಂಥಾ ಸಂಬಂಧ? ಆದರೂ ಅವರಿಗೆ ಆಧ್ಯಾತ್ಮವೆಂದರೆ ಬಲು ಇಷ್ಟ. ಅವರ ಜೊತೆ ಮಾತಿಗೆ ನಿಂತರೆ, ಸಾಧು, ಸಂತರ ಜತೆ ಮಾತಾಡಿದ ಭಾವನೆ ಬರುತ್ತಿತ್ತು. ಮನಸ್ಸಿಗೆ ಒಂಥರಾ ನೆಮ್ಮದಿ ತರುತ್ತಿತ್ತು. ಅವರ ಮೂರು ಮುಖಗಳನ್ನು ನಾನು ನೋಡಿದ್ದೇನೆ. ಅವರ ಈ ಮೂರು ಮುಖಗಳ ಜತೆಯಲ್ಲಿ ಮೂರು ಮುಖಗಳ ಸುಖಗಳನ್ನೂ ಅನುಭವಿಸಿದ್ದೇನೆ.

 

ಅಹಂ ಇರದ ನಟ

*ಅವರೊಬ್ಬ ಸೂಪರ್‌ ಸ್ಟಾರ್‌, ಕೋಟ್ಯಾಂತರ ಅಭಿಮಾನಿಗಳಿದ್ದಾರೆ ಅನ್ನುವ ಯಾವುದೇ ಅಹಂ ಇರಲಿಲ್ಲ ಯಾವಾಗಲೂ ಸಿಂಪಲ್‌ ಆಗಿಯೇ ಇರುತ್ತಿದ್ದರು. ಒಂದು ರೀತಿ ಮುಗ್ಧ ಮಕ್ಕಳ ಹಾಗೆ. ಅವರಿಗೆ ಹೆಣ್ಣುಮಕ್ಕಳ ಮೇಲೆ ಬಹಳ ಗೌರವ ಇತ್ತು. ಸೆಟ್‌ನಲ್ಲಾದರೂ ಸಹ ನಾಯಕಿಯಿರಲಿ, ಸಹಾಯಕರಿರಲಿ ತುಂಬಾ ಗೌರವದಿಂದಲೇ ಮಾತಾಡುತ್ತಿದ್ದರು. ಆಧ್ಯಾತ್ಮದಲ್ಲಿ ಪರಕಾಯ ಪ್ರವೇಶ ಮಾಡಿದ್ದರಿಂದಲೇ ಅವರಿಗೆ ಅಂತಹ ಸಹನೆ, ತಾಳ್ಮೆ ಇತ್ತು ಅನಿಸುತ್ತೆ. ಇನ್ನು, ಅವರ ಪಾತ್ರಗಳ ಬಗ್ಗೆ ಹೇಳೋದಾದರೆ, ಯಾವುದೇ ಪಾತ್ರವಿರಲಿ, ತುಂಬಾ ಸೂಕ್ಷ್ಮವಾಗಿ ಗಮನಿಸೋರು, ಬೇರೆ ಭಾಷೆಯಲ್ಲಿ ಯಾರಾದರೂ ಇಂತಹ ಪಾತ್ರ ಮಾಡಿದ್ದಾರಾ ಅಂತ ಒಮ್ಮೆ ಚರ್ಚಿಸೋರು, ಅವರೇ ಮಾಡಿದ ಅಷ್ಟೂ ಚಿತ್ರಗಳ ಪಾತ್ರಗಳನ್ನೊಮ್ಮೆ ಮೆಲುಕು ಹಾಕೋರು, ಈ ಚಿತ್ರದ ಪಾತ್ರದಲ್ಲಿ ನಾನೇನು ಹೊಸದಾಗಿ ಮಾಡಬಹುದು ಅಂತ ಕೇಳೋರು. ಅಷ್ಟೆಲ್ಲಾ ಆದರೂ, ಸೆಟ್‌ಗೆ ಬಂದಾಗ, ನಾರಾಯಣ್‌, ನೀವೊಮ್ಮೆ ನಟಿಸಿ ತೋರಿಸಿ, ಆಮೇಲೆ ನಾನು ಮಾಡ್ತೀನಿ ಅನ್ನೋರು. ಅದೇನೆ ಇದ್ದರೂ, ಆ ಪಾತ್ರಕ್ಕೆ ಒಳ್ಳೆಯ ರೂಪ ಕೊಡುತ್ತಿದ್ದರು. ತುಂಬಾ ಟೈಮ್‌ ತೆಗೆದುಕೊಂಡೇ ಅವರು ರೆಡಿಯಾಗಿ ಕ್ಯಾಮೆರಾ ಮುಂದೆ ನಿಲ್ಲುತ್ತಿದ್ದರು. ಅವರು ಕ್ಯಾಮೆರಾಮೆನ್‌ ಬಳಿ ಬಂದು ನೀನು ಮೊದಲ ಪ್ರೇಕ್ಷಕ. ಮೊದಲು ನಿನ್ನ ಅಭಿಪ್ರಾಯ ಹೇಳು ಅನ್ನೋರು.

 

ಮೊದಲ ಭೇಟಿ ಅಶೋಕ ಹೋಟೇಲ್‌ನಲ್ಲಿ…

* ನನ್ನ ಅವರ ಆವರ ಮೊಮೊದಲ ಭೇಟಿಯಾಗಿದ್ದು 1986 ರಲ್ಲಿ. ನಾನು ಆಗಷ್ಟೇ ಚಿತ್ರರಂಗದ ಪ್ರವೇಶ ಮಾಡಿದ್ದೆ. “ಕೃಷ್ಣ ನೀ ಬೇಗನೆ ಬಾರೋ” ಚಿತ್ರದಲ್ಲಿ ಕೆಲಸ ಮಾಡುತ್ತಿದ್ದೆ. ಆಗ ಅಶೋಕ ಹೋಟೆಲ್‌ ನಲ್ಲಿ ಚಿತ್ರದ ಮುಹೂರ್ತ ನಡೆದಿತ್ತು. ಆ ಚಿತ್ರಕ್ಕೆ ಅವರು ಹೀರೋ. ಆಗಲೇ ಅವರನ್ನು ನೋಡಿದ್ದು ಮತ್ತು ಭೇಟಿ ಮಾಡಿ ಮಾತಾಡಿದ್ದು. ಅದಾದ ಬಳಿಕ ಅವರೊಂದಿಗೆ ಆರು ಸಿನಿಮಾಗಳನ್ನು ಮಾಡಿದೆ. “ವೀರಪ್ಪ ನಾಯ್ಕ” ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಬಂತು. ಒಳ್ಳೆಯ ಹೆಸರೂ ಸಿಕ್ತು. ಹಣವೂ ಬಂತು ಇವತ್ತಿಗೂ “ವೀರಪ್ಪ ನಾಯ್ಕ” ಚಿತ್ರದ ಬಗ್ಗೆ ಎಲ್ಲರೂ ಮಾತಾಡುತ್ತಾರೆ. ಗೊತ್ತಿರದ ಒಂದು ಮುಖ್ಯವಾದ ವಿಷಯ ಹೇಳಲೇಬೇಕು. ಇದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಅವರ ಕೆಲ ಆಪ್ತರಿಗೆ ಹೊರತುಪಡಿಸಿ, ಯಾರಿಗೂ ಈ ವಿಷಯ ಗೊತ್ತಿಲ್ಲ. ಭಾರತ ತಂಡದ ಬೌಲರ್‌ ಜಹೀರ್‌ ಖಾನ್‌ ಅವರು ವಿಷ್ಣುವರ್ಧನ್‌ ಅವರಿಗೆ ಒಳ್ಳೆಯ ಸ್ನೇಹಿತರು. ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ, ಇಂಡಿಯಾ ಮತ್ತು ಪಾಕಿಸ್ತಾನ ತಂಡಗಳ ನಡುವೆ ಕ್ರಿಕೆಟ್‌ ಪಂದ್ಯ ಏರ್ಪಡುತ್ತೆ. ಆ ಪಂದ್ಯಕ್ಕೂ ಮುನ್ನ ಭಾರತೀಯ ಕ್ರಿಕೆಟಿಗರಿಗೆ ಒಂದು ಕ್ಯಾಂಪ್‌ ಹಾಕಲಾಗುತ್ತೆ. ಆ ಕ್ಯಾಂಪ್‌ನಲ್ಲಿ “ವೀರಪ್ಪನಾಯ್ಕ” ಚಿತ್ರ ಸ್ಕ್ರೀನಿಂಗ್‌ ನಡೆಯುತ್ತೆ. ಆ ಚಿತ್ರ ನೋಡಿದ ಕೂಡಲೇ ಜಹೀರ್‌ ಖಾನ್‌ ಅವರು ವಿಷ್ಣವರ್ಧನ್‌ ಸರ್‌ ಗೆ ಕಾಲ್‌ ಮಾಡಿ ಪ್ರೀತಿಯಿಂದ ಮಾತಾಡುತ್ತಾರೆ. ದೇಶಾಭಿಮಾನ ಬಗ್ಗೆ ಹುರಿದುಂಬಿಸಿರುವ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಆಗ ಆ ಸರಣಿಯನ್ನು ಭಾರತ ಗೆಲ್ಲುತ್ತದೆ. ನಮ್ಮ ಸಂಸ್ಥೆಯಡಿ, ನಾನು ನಿರ್ದೇಶಿಸಿದ, ವಿಷ್ಣು ಸರ್‌ ಅಭಿನಯಿಸಿದ ಚಿತ್ರದ ಬಗ್ಗೆ ಇಂಡಿಯಾ ಟೀಮ್‌ ಹೊಗಳಿದ್ದು, ಹೆಗ್ಗಳಿಕೆ. “ವೀರಪ್ಪನಾಯ್ಕ” 25 ವಾರಗಳು ಪ್ರದರ್ಶನ ಕಾಣುತ್ತೆ. “ಸೂರ್ಯವಂಶ” ಕೂಡ 25 ವಾರಗಳು ಪ್ರದರ್ಶನವಾಗುತ್ತೆ. “ಜಮೀನ್ದಾರ”, “ಸಿಂಹಾದ್ರಿ ಸಿಂಹ”, “ಸಿರಿವಂತ” ಚಿತ್ರಗಳು ಶತದಿನ ಪೂರೈಸುತ್ತವೆ. “ವರ್ಷ” ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತೆ. ಅವರ ಜತೆ ಮಾಡಿದ ಆರು ಚಿತ್ರಗಳೂ ಯಶಸ್ಸು ಕೊಟ್ಟಿವೆ.

 

ರಾಮ್‌ ದಾಸ್‌ ಆಸೆ ಈಡೇರಲಿಲ್ಲ…

* ಅವರಿಗೆ ಎರಡು ಆಸೆಗಳಿದ್ದವು. ಒಂದು “ಶ್ರೀ ಕೃಷ್ಣ ಮಕರಂದ” ಕಥೆ ಅವರಿಗೆ ತುಂಬಾ ಇಷ್ಟವಾಗಿತ್ತು. ಮತ್ತೊಂದು “ಸಾಯಿಬಾಬಾ” ಸಿನಿಮಾದಲ್ಲಿ ಸಾಯಿಬಾಬಾ ಪಾತ್ರ ಮಾಡುವ ಆಸೆ ಇತ್ತು. ಆ ಎರಡೂ ಚಿತ್ರಗಳನ್ನೂ ನೀವೇ ನಿರ್ದೇಶಿಸಬೇಕು ಎಂದು ಹೇಳಿದ್ದರು. ಆದರೆ, ಅದು ಮಿಸ್‌ ಆಯ್ತು. ಅವರಿಗೆ ಆ ಎರಡು ಆಸೆಗಳಿದ್ದರೆ, ನನಗೆ ಅವರಿಗಾಗಿ “ರಾಮ್‌ ದಾಸ್‌ʼ” ಚಿತ್ರ ಮಾಡುವ ಆಸೆ ಇತ್ತು. ಸಂಪೂರ್ಣ ಆಧ್ಯಾತ್ಮ ಕುರಿತಾದ ಚಿತ್ರ ಮಾಡುವ ಆಸೆ ನನ್ನದ್ದಾಗಿತ್ತು. ಅದಾಗಲಿಲ್ಲ. ಇನ್ನೊಂದು ವಿಷಯವೆಂದರೆ, ಚಿತ್ರರಂಗದ ಇತಿಹಾಸದಲ್ಲಿ ದಾಖಲಾಗುವಂತಹ ಚಿತ್ರ ಮಾಡಲು ರೆಡಿಯಾಗಿದ್ದೆ. ಅದು ವಿಷ್ಣುವರ್ಧನ್‌ ಮತ್ತು ಶಿವರಾಜ್ ಕುಮಾರ್‌ ಕಾಂಬಿನೇಷನ್‌ ಚಿತ್ರ. ಇಬ್ಬರೂ ನಟರೂ ಒಪ್ಪಿಗೆ ಕೊಟ್ಟಿದ್ದರು. “ಆಪ್ತರಕ್ಷಕ” ನಂತರ ಮಾಡೋಣ ಅಂದಿದ್ದರು. ಆದರೆ, ಅದು ಹಾಗೇ ಉಳಿದು ಹೋಯ್ತು.

 

ಅಣ್ಣಾವ್ರು ಮತ್ತು ವಿಷ್ಣು ಗಿರಿಜಾ ಮೀಸೆ…

* ಇನ್ನೊಂದು ವಿಶೇಷ ವಿಷಯ ಹೇಳಲೇಬೇಕು. ಬಹುಶಃ ಇದು ಬಹಳಷ್ಟು ಮಂದಿಗೆ ಗೊತ್ತಿಲ್ಲ. ನನ್ನಲ್ಲಿಯೇ ಗುಟ್ಟಾಗಿದ್ದ ವಿಷಯ. ಒಮ್ಮೆ ನಾನು ಅಣ್ಣಾವ್ರ ಕಡೆಯಿಂದ ಫೋನ್‌ ಮಾಡಿಸಿ, ವಿಷ್ಣುವರ್ಧನ್‌ ಅವರನ್ನು ಮಾತಾಡಿಸಿದ್ದೆ. “ಸೂರ್ಯವಂಶ” ಚಿತ್ರದ ಗೆಟಪ್‌ ನೋಡಿ ಅಣ್ಣಾವ್ರಿಗೆ ಇಷ್ಟ ಆಗಿತ್ತು. ಎಷ್ಟು ಚೆನ್ನಾಗಿದೆ ಆ ಗಿರಿಜಾ ಮೀಸೆ ಅನ್ನೋರು. “ಶಬ್ದವೇದಿ” ಚಿತ್ರೀಕರಣ ಸಮಯದಲ್ಲಿ ಅಣ್ಣಾವ್ರು ಆಗಾಗ ವಿಷ್ಣುವರ್ಧನ್‌ ಗೆಟಪ್‌ ಬಗ್ಗೆ ಹೇಳುತ್ತಿದ್ದರು. ಆ ಸಂದರ್ಭದಲ್ಲೇ ನಾನೂ ಒಂದು ಸಲ ಅವರ ಜೊತೆ ಮಾತಾಡಿ ಅಂತ ಫೋನ್‌ ಮಾಡಿ ಕೊಟ್ಟಿದ್ದೆ. ಇಬ್ಬರು ನಟರು ಹರಟಿದ್ದರು. ಅದು ನಿಜಕ್ಕೂ ರಸಘಳಿಗೆ. ಡಾ.ರಾಜಕುಮಾರ್‌, ಡಾ.ವಿಷ್ಣುವರ್ಧನ್‌ ಮತ್ತು ಡಾ. ಅಂಬರೀಷ್‌ ಈ ಮೂವರು ಕನ್ನಡ ಚಿತ್ರರಂಗದ ಮುತ್ತುಗಳು. ಇವರ್ಯಾರೂ ನನ್ನನ್ನು ನಿರ್ದೇಶಕನನ್ನಾಗಿ ನೋಡಲಿಲ್ಲ. ಒಬ್ಬ ಗೆಳೆಯನಾಗಿ, ಕುಟುಂಬದ ಸದಸ್ಯನಾಗಿ ನೋಡಿದರು. ಹಾಗಾಗಿಯೇ ನಾನು ಅವರ ಅಂತರಂಗದೊಳಗೆ ಪ್ರವೇಶಿಸಲು ಸಾಧ್ಯವಾಯ್ತು.

Categories
ಸಿನಿ ಸುದ್ದಿ

ಸಲಗನ ಮಳೆ ಪ್ರೀತಿ -ಲಿರಿಕಲ್ ವಿಡಿಯೊ‌ ಹಾಡಿಗೆ‌ ಭರಪೂರ‌ ಮೆಚ್ಚುಗೆ

ದುನಿಯಾ ವಿಜಯ್ ಇದೇ ಮೊದಲ ಸಲ ನಿರ್ದೇಶನ ಮಾಡಿರುವ ‘ಸಲಗ’ ಚಿತ್ರ ಇನ್ನೇನು ಬಿಡುಗಡೆಗೆ ರೆಡಿಯಾಗಿದೆ. ಈಗಾಗಲೇ ‘ನಾಲ್ಕು ಕ್ವಾರ್ಟರ್ ಕುಡಿದ್ರು ಸ್ಟಡಿಯಾಗಿ ನಿಲ್ತಿದ್ದೆ ಸೂರಿಯಣ್ಣ’ ಹಾಡು ಸಿಕ್ಕಾಪಟ್ಟೆ ವೈರಲ್ ಆಗಿದೆ. ಈಗ ಮತ್ತೊಂದು ಮಳೆಯ ಹಾಡು ಬಿಡುಗಡೆಯಾಗಿದ್ದು, ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ‘ಮಳೆಯೇ ಮಳೆಯೇ’ ಲಿರಿಕಲ್ ವಿಡಿಯೊ ಸಾಂಗ್ ಸೆಪ್ಟೆಂಬರ್ 4 ರಂದು ಬಿಡುಗಡೆಯಾಗಿದೆ. ದುನಿಯಾ ವಿಜಯ್ ಜೊತೆಗೆ ಸಂಜನಾ ಆನಂದ್ ನಾಯಕಿಯಾಗಿ ನಟಿಸಿದ್ದಾರೆ. ಧನಂಜಯ್ ಕೂಡ ಚಿತ್ರದ ಹೈಲೈಟ್.
ಸಂಚಿತ್ ಹೆಗ್ಡೆ , ಐಶ್ವರ್ಯ ಹಾಡಿರುವ ಈ ಗೀತೆಗೆ ನಾಗಾರ್ಜುನ್ ಶರ್ಮ ಸಾಹಿತ್ಯವಿದೆ. ಚರಣ್ ರಾಜ್ ಸಂಗೀತ ನೀಡಿದ್ದಾರೆ. ಕೆ.ಪಿ ಶ್ರೀಕಾಂತ್ ನಿರ್ಮಾಣವಿದೆ. A2 ಆಡಿಯೊ ಸಂಸ್ಥೆ ಮೂಲಕ ಹಾಡು ಬಿಡುಗಡೆಯಾಗಿದೆ.ಚಿತ್ರಕ್ಕೆ ವಿನೋದ್ ಸ್ಟಂಟ್ ಮಾಡಿಸಿದರೆ, ಮೋಹನ್ ನೃತ್ಯ ವಿದೆ. ಮಾಸ್ತಿ ಸಂಭಾಷಣೆ ಬರೆದಿದ್ದಾರೆ.

error: Content is protected !!