ತಮಿಳಿನ ಖ್ಯಾತ ಹಾಸ್ಯ ನಟ ವಿವೇಕ್ (59) ಶನಿವಾರ ನಿಧನರಾಗಿದ್ದಾರೆ. ಹೃದಯಾಘಾತದಿಂದಾಗಿ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ವಿವೇಕ್ ಅವರಿಗೆ ಶುಕ್ರವಾರವಷ್ಟೇ ಹೃದಯಘಾತವಾಗಿತ್ತು. ಹೀಗಾಗಿ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ವಿವೇಕ್ ಅವರು ಗುರುವಾರ ಕೋವಿಡ್ ಲಸಿಕೆ ಪಡೆದಿದ್ದರು. ಆ ಬಳಿಕ ಅವರು ಆ ಕುರಿತು ಜಾಗೃತಿ ಮೂಡಿಸಿದ್ದರು. ಅವರು ಲಸಿಕೆ ಪಡೆದುಕೊಂಡಿದ್ದಕ್ಕೂ ಹೃದಯಸ್ತಂಭನಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಲಾಗಿದೆ.
ಪದ್ಮಶ್ರೀ ಪುರಸ್ಕೃತ ವಿವೇಕ್ ಅವರು ರಜನಿಕಾಂತ್, ವಿಜಯ್, ಅಜಿತ್ ಕುಮಾರ್ ಸೇರಿದಂತೆ ಅನೇಕ ಖ್ಯಾತ ನಾಯಕರ ಜೊತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರು.
ಹಿರಿಯ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ಅವರ ಪತ್ನಿ ಅಂಬುಜಾ ದ್ವಾರಕೀಶ್ ಅವರು ಶುಕ್ರವಾರ ನಿಧನರಾಗಿದ್ದಾರೆ. 80 ವರ್ಷ ವಯಸ್ಸಿನವರಾಗಿದ್ದ ಅಂಬುಜಾ ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದು, ಎಚ್ಎಸ್ಆರ್ ಲೇಔಟ್ನಲ್ಲಿರುವ ಮನೆಯಲ್ಲೇ ಮೃತಪಟ್ಟಿದ್ದಾರೆ.
ಅಂಬುಜಾ ದ್ವಾರಕೀಶ್
ಮೃತರು ಪತಿ ದ್ವಾರಕೀಶ್ ಸೇರಿದಂತೆ ಐವರು ಗಂಡು ಮಕ್ಕಳನ್ನು ಅಗಲಿದ್ದಾರೆ. ದ್ವಾರಕೀಶ್ ಅವರ ಸಾಧನೆಯ ಹಿಂದೆ ಅಂಬುಜಾ ಅವರ ಕೊಡುಗೆ ಅಪಾರವಾಗಿತ್ತು. ಕಪ್ಪು-ಬಿಳುಪು ಕಾಲದಿಂದಲೂ ದ್ವಾರಕೀಶ್ ಸಿನಿಮಾ ಮಾಡಿದವರು. ಆಗಿನಿಂದಲೂ ದ್ವಾರಕೀಶ್ ಅವರ ಬೆನ್ನಿಗೆ ನಿಂತು, ಸೋಲು-ಗೆಲುವು ಎರಡರಲ್ಲೂ ಅಂಬುಜಾ ಅವರು ಜೊತೆಗಿದ್ದರು. ದ್ವಾರಕೀಶ್ ಅವರ ಏಳು-ಬೀಳಿನಲ್ಲಿ ಜೊತೆಯಾಗಿಯೇ ಇದ್ದ ಅವರು, ಸದಾ ನಗುಮೊಗದಲ್ಲೇ ದ್ವಾರಕೀಶ್ ಅವರಿಗೆ ಧೈರ್ಯ ತುಂಬುತ್ತಿದ್ದರು.
ಮೃತರ ಅಂತ್ಯಕ್ರಿಯೆ, ಶನಿವಾರ ಚಾಮರಾಜಪೇಟೆಯಲ್ಲಿರುವ ಚಿತಾಗಾರದಲ್ಲಿ ನೆರವೇರಲಿದೆ ಎಂದು ಅವರ ಹಿರಿಯ ಪುತ್ರ ಯೋಗೇಶ್ ದ್ವಾರಕೀಶ್ ತಿಳಿಸಿದ್ದಾರೆ. ಸಂತಾಪ: ಮೃತರ ಆತ್ಮಕ್ಕೆ ಶಾಂತಿ ಕೋರಿ ವಾಣಿಜ್ಯ ಮಂಡಳಿ ಪದಾಧಿಕಾರಿಗಳು, ಚಿತ್ರರಂಗದ ಗಣ್ಯರು, ನಿರ್ದೇಶಕ, ನಿರ್ಮಾಪಕರು, ನಿರ್ದೇಶಕ ಸಂಘ, ನಿರ್ಮಾಪಕರ ಸಂಘ ಹಾಗೂ ಕಲಾವಿದರ ಸಂಘ ಸಂತಾಪ ಸೂಚಿಸಿದೆ.
ಕನ್ನಡದ ಬಹುನಿರೀಕ್ಷಿತ ಸುದೀಪ್ ಅಭಿನಯದ “ವಿಕ್ರಾಂತ್ ರೋಣ” ಸಿನಿಮಾ ಆರಂಭದಿಂದಲೂ ಒಂದಲ್ಲ ಒಂದು ಕುತೂಹಲ ಮೂಡಿಸುತ್ತಲೇ ಇತ್ತು. ಶೀರ್ಷಿಕೆಯಿಂದ ಹಿಡಿದು, ಪೋಸ್ಟರ್ವರೆಗೂ ಸಿನಿಮಾ ಜೋರು ಸದ್ದು ಮಾಡಿತ್ತು. ಯಾವಾಗ ಚಿತ್ರಮಂದಿರಕ್ಕೆ ಲಗ್ಗೆ ಇಡುತ್ತೋ ಎಂದು ಕಾದು ಕುಳಿತಿದ್ದವರಿಗೆ ಈಗ ಸ್ವತಃ ಸುದೀಪ್ ಅವರೇ ಉತ್ತರ ಕೊಟ್ಟಿದ್ದಾರೆ. ಹೌದು, “ವಿಕ್ರಾಂತ್ ರೋಣ” ಸಿನಿಮಾ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ ಸುದೀಪ್. ತಮ್ಮ ಟ್ವಿಟ್ಟರ್ನಲ್ಲಿ ಈ ವಿಷಯ ಹಂಚಿಕೊಂಡಿರುವ ಅವರು, “ವಿಕ್ರಾಂತ್ ರೋಣ” ಸಿನಿಮಾದ ಚಿತ್ರೀಕರಣ ಸಿದ್ದತೆ ಮತ್ತು ಪ್ರಕ್ರಿಯೆಯ ಆನಂದವನ್ನು ಅನುಭವಿಸಿದ ನಂತರ ಈಗ ರೋಮಾಂಚನಕಾರಿ ಸುದ್ದಿಯೊಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಸಮಯ! “ವಿಕ್ರಾಂತ ರೋಣ” ಸಿನಿಮಾ ಆಗಸ್ಟ್ 19 ರಂದು ಭಾರತದಾದ್ಯಂತ ಬಿಡುಗಡೆಯಾಗಲಿದೆ” ಎಂದು ತಿಳಿಸಲು ನಮ್ಮ “ವಿಕ್ರಾಂತ್ ರೋಣ” ತಂಡವು ಹರ್ಷಿಸುತ್ತದೆ” ಎಂದು ಬರೆದುಕೊಂಡಿದ್ದಾರೆ.
ಚಿತ್ರಕ್ಕೆ ಮೊದಲು “ಪ್ಯಾಂಟಮ್” ಎಂಬ ಶೀರ್ಷಿಕೆ ಇತ್ತು. ಅದನ್ನು ಬದಲಿಸಿ, “ವಿಕ್ರಾಂತ್ ರೋಣ” ಎಂದು ನಾಮಕರಣ ಮಾಡಲಾಯಿತು. ದುಬೈನ ಅತೀ ಎತ್ತರದ ಬುರ್ಜಾ ಖಲೀಫ ಮೇಲೆ ಚಿತ್ರದ ಶೀರ್ಷಿಕೆ ಅನಾವರಣಗೊಳಿಸಲಾಯಿತು. ಟೈಟಲ್ ಎಷ್ಟು ಫೋರ್ಸ್ ಆಗಿದೆಯೋ, ಕಥೆ ಮತ್ತು ಪಾತ್ರ ಕೂಡ ಅಷ್ಟೇ ಫೋರ್ಸ್ ಆಗಿದೆ ಎಂಬ ನಂಬಿಕೆ ಸುದೀಪ್ ಅವರಿಗಿದೆ.
ಇನ್ನು, ಈ ಚಿತ್ರವನ್ನು ಅನೂಪ್ ಭಂಡಾರಿ ನಿರ್ದೇಶನ ಮಾಡಿದ್ದಾರೆ. ಜಾಕ್ ಮಂಜು ಅವರ ನಿರ್ಮಾಣ ಈ ಚಿತ್ರಕ್ಕಿದೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.
ಸದ್ಯಕ್ಕೆ “ವಿಕ್ರಾಂತ್ ರೋಣ” ಚಿತ್ರದ ಬಿಡುಗಡೆ ಎದುರು ನೋಡುತ್ತಿದ್ದ ಸುದೀಪ್ ಫ್ಯಾನ್ಸ್ಗೆ ಈಗ ಆಗಸ್ಟ್ ೧೯ ಡೇಟ್ ಕಣ್ಣೆದುರಲ್ಲೇ ಬಂದಂತಾಗಿರುವುದು ಸತ್ಯ. ಅಂದಹಾಗೆ, ಆಗಸ್ಟ್. ೧೯ ಗುರುವಾರ. ಅಂದೇ ಚಿತ್ರವನ್ನು ದೇಶಾದ್ಯಂತ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ.
ಕನ್ನಡದಲ್ಲಿ ಈಗಾಗಲೇ ಸಾಕಷ್ಟು ನೈಜ ಘಟನೆ ಆಧರಿತ ಸಿನಿಮಾಗಳು ಬಂದಿವೆ. ಈಗಲೂ ಬರುತ್ತಲೇ ಇವೆ. ಆ ಸಾಲಿಗೆ ಈಗ “ಬದನವಾಳು” ಚಿತ್ರವೂ ಸೇರಿದೆ. ಹೌದು, ಹಳೇ ಮೈಸೂರು ಪ್ರಾಂತ್ಯಕ್ಕೆ ಅಂಟಿಕೊಂಡಿರುವ “ಬದನವಾಳು” ಗ್ರಾಮದ ಒಟ್ಟು ವ್ಯವಸ್ಥೆಯನ್ನು ಬಿಂಬಿಸುವ ಪ್ರಯತ್ನ ಈ ಸಿನಿಮಾದಲ್ಲಾಗುತ್ತಿದೆ. ಅಂದಹಾಗೆ ಇದು, ಮೆಳೇಕೋಟೆ ಟೂರಿಂಗ್ ಟಾಕೀಸ್ ಹಾಗು ಸಿನಿಮಾ ಮಾರ್ಕೆಟ್ ಬ್ಯಾನರ್ನಡಿಯಲ್ಲಿ ತಯಾರಾದ ಚಿತ್ರ. ಉದಯ್ ಪ್ರಸನ್ನ ಈ ಚಿತ್ರದ ನಿರ್ದೇಶಕರು. ಪಾರ್ವತಿ ಚಂದ್ರಶೇಖರ್, ಲೀಲಾವತಿ ಸುರೇಶ ಕುಮಾರ್ ಮತ್ತು ಪ್ರೇಮ ಚಂದ್ರಯ್ಯ (ನಾಗಸಂದ್ರ) ನಿರ್ಮಾಪಕರು. ಚಿತ್ರದಲ್ಲಿ ರಾಜ್ ಮಂಜು ನಾಯಕರಾಗಿ ಕಾಣಿಸಿಕೊಂಡರೆ, ಬಿಂದುಶ್ರೀ ನಾಯಕಿಯಾಗಿದ್ದಾರೆ.
ಸಾಮಾಜಿಕ ವ್ಯವಸ್ಥೆಯ ದಾರಿದ್ರ್ಯವನ್ನು ಬಿಂಬಿಸುವ ಪ್ರಯತ್ನ ಈ ಸಿನಿಮಾದಲ್ಲಾಗಿದೆ. ಜಾತಿ ವ್ಯವಸ್ಥೆಯಲ್ಲಿ ಮೇಲು-ಕೀಳು, ಅಸ್ಪೃಶ್ಯತೆಯಲ್ಲಿ ಅರಳುವ ಪ್ರೀತಿ, ಮಾನಸಿಕ ದಾರಿದ್ರ್ಯಕ್ಕೆ ಅಂಟಿಕೊಂಡಿರುವ ಪ್ರೇಮ ವೈಫಲ್ಯ, ನೀಚ ರಾಜಕಾರಣಿಗಳು ಯಾವ ರೀತಿ ಯುವ ಪಿಳಿಗೆಯನ್ನು ಅವರ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಾರೆ, ದೇವರ ಹೆಸರಲ್ಲಿ ಹೇಗೆಲ್ಲಾ ಮೋಸ ನಡೆಯುತ್ತೆ, ಹೀಗೆ ಹಲವು ಪ್ರಮುಖ ಅಂಶಗಳನ್ನು ವಾಸ್ತವವಾಗಿ ಕಟ್ಟಿಕೊಡುವ ಕೆಲಸಕ್ಕೆ ನಿರ್ದೇಶಕರು ಮುಂದಾಗಿದ್ದಾರೆ.
ಏಪ್ರಿಲ್ 15ರಂದು ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಲಿದೆ. ಈಗಿನ ವಾಸ್ತವತೆಗೆ ಹತ್ತಿರವಾದಂತಹ ಅಂಶಗಳು ಸಿನಿಮಾದಲ್ಲಿದ್ದು, ಮುಖ್ಯವಾಗಿ ಇಲ್ಲಿ ಪ್ರೀತಿ, ಜಾತಿ, ಅಂತಸ್ತು ಸೇರಿದಂತೆ ಇನ್ನಿತರೆ ಪ್ರಮುಖ ಅಂಶಗಳು ಹೈಲೈಟ್ ಎಂಬುದು ಚಿತ್ರತಂಡದ ಮಾತು.
ಕನ್ನಡದ ಸ್ಪುರದ್ರೂಪಿ ನಟ ಅಂದಾಕ್ಷಣ ನೆನಪಾಗೋದೇ “ನೆನಪಿರಲಿ” ಪ್ರೇಮ್. ಹೌದು, ಎಂದೂ ವಯಸ್ಸೇ ಬತ್ತದಂತಿರುವ ಸ್ಮೈಲ್ ಹೀರೋ ಪ್ರೇಮ್ ಈಗ ಪ್ರೇಮ ಪೂಜೆಯ ಜಪದಲ್ಲಿದ್ದಾರೆ. ಪ್ರೇಮ್ ಕನ್ನಡ ಚಿತ್ರರಂಗದ ಲವ್ಲಿಸ್ಟಾರ್ ಎಂಬ ಮಾತಿಗೆ ಹೇಳಿ ಮಾಡಿಸಿದ ಸ್ಟಾರ್ ಅನ್ನೋದು ಸತ್ಯ. ಇಷ್ಟು ವರ್ಷಗಳ ಕಾಲ ಎಲ್ಲಾ ಬಗೆಯ ಚಿತ್ರಗಳನ್ನು ನೀಡಿರುವ ಪ್ರೇಮ್, ಯುವ ಮನಸ್ಸುಗಳ ಅದರಲ್ಲೂ ಹುಡುಗಿಯರ ಫೇವರೇಟ್ ಹೀರೋ ಅನ್ನುವುದನ್ನು ತಳ್ಳಿ ಹಾಕುವಂತಿಲ್ಲ. ಪ್ರೇಮ್ ಅವರ ಸಿನಿ ಜರ್ನಿಯನ್ನೊಮ್ಮೆ ಹಿಂದಿರುಗಿ ನೋಡಿದರೆ, ಅಲ್ಲಿ ಗೆಲುವಿದೆ, ಸೋಲೂ ಇದೆ. ಖುಷಿಯ ಹೆಜ್ಜೆಯೂ ಇದೆ. ನೋವಿನ ಹಾಡೂ ಇದೆ. ಆದರೆ, ಇವೆಲ್ಲವನ್ನೂ ಅಷ್ಟೇ ಪ್ರೀತಿಯಿಂದ ಸ್ವೀಕರಿಸಿ, ಸಾಧನೆಯ ಮೆಟ್ಟಿಲೇರಿದ ಬ್ಯೂಟಿಫುಲ್ ಹೀರೋ ಎಂಬುದು ನೆನಪಿರಲಿ. ಇಷ್ಟಕ್ಕೂ ಈಗ ಈ ಪ್ರೇಮ್ ಕುರಿತು ಇಷ್ಟೋಂದು ಪೀಠಿಕೆ ಯಾಕೆ ಅನ್ನೋ ಪ್ರಶ್ನೆ ಎದುರಾಗಬಹುದು. ಅದಕ್ಕೆ ಕಾರಣ, ಅವರ ಬಹು ನಿರೀಕ್ಷೆಯ “ಪ್ರೇಮಂ ಪೂಜ್ಯಂ”.
ಹೌದು, ಇದು ಅವರ 25ನೇ ಸಿನಿಮಾ ಅನ್ನೋದು ವಿಶೇಷ. ಸದ್ಯ ಬಿಡುಗಡೆಗೆ ತಯಾರಾಗಿರುವ ಈ ಚಿತ್ರ, ಈಗಾಗಲೇ ಸಾಕಷ್ಟು ಕುತೂಹಲ ಕೆರಳಿಸಿದೆ. ಚಿತ್ರದ ಟೈಟಲ್ಲೇ ಹೇಳುತ್ತೆ ಇದೊಂದು ಪಕ್ಕಾ ಇಂಟ್ರೆಸ್ಟಿಂಗ್ ಲವ್ಸ್ಟೋರಿ ಅಂತ. ಪ್ರೇಮ್ ಅವರ ಈವರೆಗಿನ ಲವ್ಸ್ಟೋರಿ ಸಿನಿಮಾಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅಲ್ಲಿ ಗೆಲುವಿನ ಗೆರೆಗಳದ್ದೇ ಆರ್ಭಟ. ಆ ಆರ್ಭಟ ಪ್ರೇಮಂ ಪೂಜ್ಯಂವರೆಗೂ ಮುಂದುವರೆಯೋ ಸೂಚನೆ ಈಗಾಗಲೇ ಸಿಕ್ಕಿದೆ ಕೂಡ. ಆರಂಭದಿಂದಲೂ ಪೋಸ್ಟರ್ ಮೂಲಕವೇ ಸದ್ದು ಮಾಡಿದ್ದ “ಪ್ರೇಮಂ ಪೂಜ್ಯಂ”, ಈಗ ಮತ್ತೊಂದು ಸುದ್ದಿಗೂ ಕಾರಣವಾಗಿದೆ. ಯುಗಾದಿ ವಿಶೇಷ ಎಂಬಂತೆ ಚಿತ್ರದ ಟೈಟಲ್ ಸಾಂಗ್ ಲಿರಿಕಲ್ ವಿಡಿಯೊ ಬಿಡುಗಡೆಯಾಗಿದೆ. ಬಿಡುಗಡೆಯಾದ ಕ್ಷಣದಲ್ಲೇ ಲಕ್ಷಾಂತರ ವೀಕ್ಷಣೆ ಪಡೆದಿದೆ. ಅಷ್ಟೇ ಅಲ್ಲ, ಮೆಚ್ಚುಗೆಗೂ ಪಾತ್ರವಾಗಿದೆ.
ಪ್ರೇಮಂ ಪೂಜ್ಯಂ. ದೈವಂ ಚರಣಂ ನಿತ್ಯಂ ನಿಲಯಂ ಸತ್ಯಂ ವರದಂ… ಹೀಗೆ ಸಾಗುವ ಟೈಟಲ್ ಸಾಂಗ್ ಲಿರಿಕಲ್ ವಿಡಿಯೋ ನಿಜಕ್ಕೂ ಖುಷಿ ಕೊಡುತ್ತದೆ. ಪ್ರೀತಿಯ ಮಜಲುಗಳ ಬಗ್ಗೆ ಸಾರುವ ಸಾಹಿತ್ಯದಲ್ಲಿ ಒಂದ್ರೀತಿ ಲವ್ಲಿ ಸ್ಪರ್ಶವಿದೆ. ಕೆಡಂಬದಿ ಕ್ರಿಯೇಷನ್ಸ್ನಲ್ಲಿ ಮೂಡಿ ಬಂದಿರುವ ಈ ಸಿನಿಮಾದಲ್ಲಿ ಲವ್ಲಿ ಸ್ಟಾರ್ ಪ್ರೇಮ್ಗೆ ಜೋಡಿಯಾಗಿ ಬೃಂದಾ ಆಚಾರ್ಯ ಕಾಣಿಸಿಕೊಂಡಿದ್ದಾರೆ.
ಡಾ.ರಾಘವೇಂದ್ರ ಬಿ.ಎಸ್. ಅವರು ಈ ಸಿನಿಮಾದ ನಿರ್ದೇಶನ ಮಾತ್ರವಲ್ಲ, ಸಂಗೀತ ಸಂಯೋಜನೆ ಜೊತೆ ಸಾಹಿತ್ಯವನ್ನೂ ಬರೆದಿದ್ದಾರೆ. ಹರಿಹರನ್ ಧ್ವನಿಯಲ್ಲಿ ಮೂಡಿ ಬಂದಿರುವ ಈ ಟೈಟಲ್ ಸಾಂಗ್ ಪ್ರೇಮಿಗಳ ಮನದಲ್ಲಿ ಅಚ್ಚಳಿಯದೆ ಉಳಿಯುವಂತಿದೆ. ಸಾಹಿತ್ಯದ ಸಾಲುಗಳಲ್ಲಿ ಸಾರವಿದೆ.
ಕಿವಿಗಿಂಪೆನಿಸುವ ರಾಗ ಸಂಯೋಜನೆ ಜೊತೆ ಸಾಹಿತ್ಯ ಕೂಡ ಅರ್ಥಪೂರ್ಣ. ಹಾಗಾಗಿಯೇ, ಇದು ಯೂಥ್ಸ್ಗೊಂದು ಪ್ರೀತಿಯ ಹಾಡಾಗಿ ಉಳಿಯುವುದರಲ್ಲಿ ಅಚ್ಚರಿ ಇಲ್ಲ. ಇನ್ನು, ಈ ಚಿತ್ರದ ಪೋಸ್ಟರ್ ನೋಡಿದವರಿಗೆ ಪ್ರೇಮ್ ಮತ್ತಷ್ಟು ನ್ಯೂ ಲುಕ್ನಲ್ಲಿ ಆಕರ್ಷಿಸುತ್ತಾರೆ. ಫ್ರೆಶ್ ಲೊಕೇಷನ್ ಜೊತೆ ಅಷ್ಟೇ ಕ್ಯೂಟ್ ಜೋಡಿ ಕಾಣಿಸಿಕೊಂಡಿರುವುದನ್ನು ನೋಡಿದರೆ, ಸಿನಿಮಾ ನೋಡುವ ಕಾತುರ ಹೆಚ್ಚದೇ ಇರದು. ಚಿತ್ರಕ್ಕೆ ನವೀನ್ ಕುಮಾರ್ ಕ್ಯಾಮೆರಾ ಹಿಡಿದರೆ, ಹರೀಶ್ ಕೊಮ್ಮೆ ಸಂಕಲನವಿದೆ. ಇಂತಹ ನಿರೀಕ್ಷೆಯ ಸಿನಿಮಾಗೆ ಡಾ.ರಕ್ಷಿತ್ ಕೆಡಂಬದಿ, ಡಾ.ರಾಜಕುಮಾರ್ ಜಾನಕಿರಾಮನ್, ಡಾ.ರಾಘವೇಂದ್ರ ಎಸ್, ಮನೋಜ್ ಕೃಷ್ಣನ್ ನಿರ್ಮಾಪಕರು.
ಅದೇನೆ ಇರಲಿ, ಪ್ರತಿಯೊಬ್ಬ ನಟನಿಗೂ ತನ್ನ ಮೊದಲ ಚಿತ್ರ ಹೇಗೆ ವಿಶೇಷ ಆಗುತ್ತೋ, ಹಾಗೆಯೇ ಅವರ ಪ್ರತಿಯೊಂದು ಸಿನಿಮಾ ಕೂಡ ವಿಶೇಷವೇ. ಅದರಲ್ಲೂ 25 ನೇ ಸಿನಿಮಾ ಅಂದಾಕ್ಷಣ, ಅದೊಂದು ಮೈಲಿಗಲ್ಲು ಎನಿಸುವುದು ಸಹಜ. ಅಂತಹ ೨೫ನೇ ಹೊಸ್ತಿಲಲ್ಲಿ ಇರುವ ಪ್ರೇಮ್, 25ನೇ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅದಕ್ಕೆ ಕಾರಣ, ಚಿತ್ರದ ಕಥೆ ಮತ್ತು ಪಾತ್ರ. ಇಲ್ಲಿ ಪ್ರೀತಿಗೆ ಹೆಚ್ಚು ಆದ್ಯತೆ ಕೊಡಲಾಗಿದೆ. ಅದೇ ಪ್ರೇಮಂ ಪೂಜ್ಯಂ ವಿಶೇಷ. ಒಂದಂತೂ ನಿಜ.
ಚಿತ್ರರಂಗಕ್ಕೆ ಬಂದು ಇಷ್ಟು ವರ್ಷಗಳ ಕಾಲ ಸೋಲು-ಗೆಲುವನ್ನು ಕಂಡು ಇಂದಿಗೂ ರನ್ನಿಂಗ್ನಲ್ಲಿರುವುದು ಸುಲಭದ ಮಾತಲ್ಲ. ಪ್ರೇಮ್ ಆ ವಿಷಯದಲ್ಲಿ ಅದೃಷ್ಟವಂತರು. ಆರಂಭದಲ್ಲೇ ಯಶಸ್ಸು ಕಂಡ ಪ್ರೇಮ್, ಸಾಲು ಸಾಲು ಸಿನಿಮಾಗಳ ಮೂಲಕ ಗಮನಸೆಳೆದರು. ಹುಡುಗಿಯರ ಪಾಲಿಗಂತೂ ಲವ್ಲಿ ಸ್ಟಾರ್ಆಗಿಯೇ ಉಳಿದಿರುವ ಪ್ರೇಮ್ ಅವರ “ಪ್ರೇಮಂ ಪೂಜ್ಯಂ” ನೋಡಲು ತುದಿಗಾಲ ಮೇಲೆ ನಿಂತಿರೋದಂತೂ ಸತ್ಯ. ಸದ್ಯಕ್ಕೆ “ಪ್ರೇಮಂ ಪೂಜ್ಯಂ. ದೈವಂ ಚರಣಂ, ನಿತ್ಯಂ ನಿಲಯಂ, ಸತ್ಯಂ ವರದಂ… ಹಾಡು ಗುನುಗುತ್ತಿದ್ದಾರೆ ಅವರ ಫ್ಯಾನ್ಸ್.
ರವಿಚಂದ್ರನ್ ಕನ್ನಡ ಚಿತ್ರರಂಗ ಕಂಡ ಸ್ಟಾರ್ ನಟ. ಅವರು ಸ್ಟಾರ್ ನಟರಷ್ಟೇ ಅಲ್ಲ, ಯಶಸ್ವಿ ನಿರ್ದೇಶಕರು, ಸಕ್ಸಸ್ಫುಲ್ ನಿರ್ದೇಶಕರಷ್ಟೇ ಅಲ್ಲ, ಅವರೊಳಗೊಬ್ಬ ಒಳ್ಳೆಯ ಕಥೆಗಾರನಿದ್ದಾನೆ. ಒಟ್ಟಾರೆ, ಅವರೊಬ್ಬ ರೈಟರ್, ಮ್ಯೂಸಿಕ್ ಡೈರೆಕ್ಟರ್, ಲಿರಿಕ್ ರೈಟರ್ ಹೀಗೆ ಸಿನ್ಮಾ ವಿಭಾಗದಲ್ಲಿ ಎಲ್ಲವನ್ನೂ ಕರಗತ ಮಾಡಿಕೊಂಡವರು. ತಾವು ಅಂದುಕೊಂಡಿದ್ದನ್ನು ಮಾಡದೇ ಬಿಡದ ವ್ಯಕ್ತಿತ್ವ ಅವರದು. ತಮಗೆ ಇಷ್ಟವಿಲ್ಲದ್ದನ್ನು ನೇರವಾಗಿಯೇ ಹೇಳುವ ವ್ಯಕ್ತಿಯೂ ಹೌದು. ಈಗ ರವಿಚಂದ್ರನ್ ಅವರ ಕುರಿತು ಇಷ್ಟೊಂದು ಪೀಠಿಕೆ ಯಾಕೆ ಗೊತ್ತಾ? ಅವರು ಇನ್ನು ಮುಂದೆ ಸದಾ ಸುದ್ದಿಯಲ್ಲಿರುತ್ತಾರೆ! ಅರೇ, ಹೀಗಂದಾಕ್ಷಣ, ಇಷ್ಟು ದಿನ ಸುದ್ದಿಯಲ್ಲಿರಲಿಲ್ಲವೇ? ಎಂಬ ಪ್ರಶ್ನೆ ಸಹಜವಾಗಿಯೇ ಎದುರಾಗುತ್ತೆ. ಇದೆಲ್ಲವೂ ಹೌದು, ಅವರೀಗೆ ಸೋಶಿಯಲ್ ಮೀಡಿಯಾಗೆ ಎಂಟ್ರಿಯಾಗುತ್ತಿದ್ದಾರೆ.
ಅದರಲ್ಲೂ ಹೊಸ ವರ್ಷಕ್ಕೆ. ಅಂದರೆ ಯುಗಾದಿ ಹಬ್ಬಕ್ಕೆ. ಈಗಾಗಲೇ ಥೇಟ್ ಸಿನಿಮಾ ಶೈಲಿಯಲ್ಲೇ ಅವರು ಟೀಸರ್ ಬಿಡುಗಡೆ ಮಾಡುವ ಮೂಲಕ ತಾವು ಸೋಶಿಯಲ್ ಮೀಡಿಯಾಗೆ ಎಂಟ್ರಿ ಕೊಡುವ ಕುರಿತು ಹೇಳಿಕೊಂಡಿದ್ದರು. ಅದಕ್ಕೆ ಈಗ ಸಮಯ ಬಂದಾಗಿದೆ. ಹೌದು, ಕನ್ನಡದ ಬಹುತೇಕ ಸ್ಟಾರ್ ನಟರು ಈಗ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಸದಾ ಟ್ವಿಟ್ಟರ್, ಫೇಸ್ಬುಕ್, ಇನ್ಸ್ಟಾಗ್ರಾಂ ಅಂತೆಲ್ಲಾ ಸದ್ದು ಮಾಡುತ್ತಲೇ ಇದ್ದಾರೆ. ಇಷ್ಟು ದಿನ ಸುಮ್ಮನಿದ್ದರೂ ಸುದ್ದಿಯಾಗುತ್ತಿದ್ದ ರವಿಚಂದ್ರನ್ ಅವರು, ಇನ್ನು ಮುಂದೆ ಸದಾ ಸೋಶಿಯಲ್ ಮೀಡಿಯಾ ಮೂಲಕ ತಮ್ಮ ಫ್ಯಾನ್ಸ್ಗೆ ಸಿಗಲಿದ್ದಾರೆ. ಹೌದು, ಅವರೂ ಕೂಡ ಇನ್ಮುಂದೆ ಟ್ವಿಟ್ಟರ್, ಇನ್ಸ್ಟಾಗ್ರಾಂ, ಫೇಸ್ಬುಕ್ ತಾಣಗಳಲ್ಲಿ ಸಕ್ರಿಯರಾಗಲಿದ್ದಾರೆ.
ಆ ಮೂಲಕ ತಮ್ಮದೇ ಫ್ಯಾನ್ಸ್ ಜೊತೆ ಒಂದಷ್ಟು ವಿಷಯ ಹಂಚಿಕೊಳ್ಳಲಿದ್ದಾರೆ. ಇದರೊಂದಿಗೆ ಹೊಸ ಚಿತ್ರಗಳ ಅಪ್ಡೇಟ್ ಸೇರಿದಂತೆ ಇತ್ಯಾದಿ ವಿನೂತನ ವಿಷಯಗಳನ್ನು ಹಂಚಿಕೊಳ್ಳಲಿದ್ದಾರೆ. ರವಿಚಂದ್ರನ್ ಅವರಿಗೆ ಅಪಾರ ಅಭಿಮಾನಿ ಬಳಗವಿದೆ. ಈಗ ರವಿಚಂದ್ರನ್ ಅವರು ಅಧಿಕೃತವಾಗಿ ಸೋಶಿಯಲ್ ಮೀಡಿಯಾಗೆ ಎಂಟ್ರಿಯಾಗುತ್ತಿದ್ದಾರೆ ಅಂದಮೇಲೆ, ಅವರನ್ನು ಸ್ವಾಗತಿಸೋಕೆ ಈಗಾಗಲೇ ಅವರ ಫ್ಯಾನ್ಸ್ ತುದಿಗಾಲ ಮೇಲೆ ನಿಂತಿದ್ದಾರೆ. ಇಷ್ಟು ವರ್ಷಗಳ ಕಾಲ ತೆರೆಯ ಮೇಲೆ ಭರಪೂರ ಮನರಂಜನೆ ಕೊಡುತ್ತಲೇ, ಆಗಾಗ ಅಭಿಮಾನಿಗಳಿಗೆ ದರ್ಶನ ಕೊಡುತ್ತಿದ್ದ ರವಿಚಂದ್ರನ್, ಇನ್ನು ಮುಂದೆ ಸೋಶಿಯಲ್ ಮೀಡಿಯಾ ಮೂಲಕ ಸದಾ ಕಾಣಿಸಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ಕೊಡಲು ಮುಂದಾಗಿದ್ದಾರೆ.
ಸಹಜವಾಗಿಯೇ ಇದು ಅವರ ಅಭಿಮಾನಿಗಳಿಗೆ ಸಂತಸ ಕೊಟ್ಟಿದೆ. ರವಿಚಂದ್ರನ್ ಅವರು ಏನೇ ಮಾಡಿದರೂ ಅಲ್ಲೊಂದು ವಿಶೇಷತೆ ಇದ್ದೇ ಇರುತ್ತೆ. ಈಗ ಸೋಶಿಯಲ್ ಮೀಡಿಯಾದಲ್ಲಿ ಎಂಟ್ರಿಯಾಗುವ ಸುದ್ದಿ ಕೂಡ ಅಷ್ಟೇ ಸ್ಪೆಷಲ್ ಆಗಿದೆ. ಮುಂದಿನ ದಿನಗಳಲ್ಲಿ ರವಿಚಂದ್ರನ್ ತಮ್ಮ ಹೊಸ ಆಲೋಚನೆಗಳನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಫ್ಯಾನ್ಸ್ ಕೆಲ ಪ್ರಶ್ನೆಗಳಿಗೂ ಉತ್ತರವಾಗಲಿದ್ದಾರೆ ಎಂಬುದೇ ಅವರ ಅಭಿಮಾನಿ ಬಳಗಕ್ಕೆ ಖುಷಿ. ಅದೇನೆ ಇರಲಿ, ರವಿಚಂದ್ರನ್ ಅಂದರೆ, ನಿಷ್ಕಲ್ಮಷ ಪ್ರೀತಿ ಕಾಣುತ್ತೆ. ಅದು ತೆರೆ ಮುಂದೆಯೂ ಹೌದು, ತೆರೆ ಹಿಂದೆಯೂ ಹೌದು. ಅವರನ್ನು ಆಳವಾಗಿ ಬಲ್ಲವರಿಗೆ ಮಾತ್ರ ರವಿಚಂದ್ರನ್ ವ್ಯಕ್ತಿತ್ವ ಏನು, ಹೇಗೆ ಎಂಬುದು ಗೊತ್ತು. ಸದ್ಯ ಏಪ್ರಿಲ್ ೧೩ರಂದು ೯ ಗಂಟೆಗೆ ರವಿಚಂದ್ರನ್ ಸೋಶಿಯಲ್ ಮೀಡಿಯಾಗೆ ಗ್ರಾಂಡ್ ಎಂಟ್ರಿಕೊಡಲಿದ್ದಾರೆ. ಅಂದಹಾಗೆ, ರವಿಚಂದ್ರನ್ ಸದ್ಯ ಬಹುನಿರೀಕ್ಷೆಯ ಕನ್ನಡಿಗ ಸಿನಿಮಾ ಮುಗಿಸಿದ್ದಾರೆ. ಬಿ.ಎಂ ಗಿರಿರಾಜ್ ನಿರ್ದೇಶನದ ಈ ಚಿತ್ರದಲ್ಲಿ ರವಿಚಂದ್ರನ್ ಗುಣಭದ್ರ ಪಾತ್ರ ಮಾಡಿದ್ದಾರೆ. ಅವರ ಮತ್ತೊಂದು ಸಿನಿಮಾ “ರವಿ ಬೋಪಣ್ಣ” ಸಿನಿಮಾ ಕೂಡ ಬರಲು ಸಜ್ಜಾಗುತ್ತಿದೆ.
ಕನ್ನಡ ಚಿತ್ರರಂಗದ ದಂತಕಥೆ ಡಾ.ರಾಜಕುಮಾರ್ ಎವರ್ಗ್ರೀನ್ ನಟ. ಏಪ್ರಿಲ್ ೧೨ ಅವರು ಅಗಲಿದ ದಿನ. ಅವರಿಲ್ಲದೆ ಹದಿನೈದು ವರ್ಷಗಳು ಉರುಳಿವೆ. ಆದರೆ, ಇಂದಿಗೂ ಡಾ.ರಾಜಕುಮಾರ್ ಕನ್ನಡಿಗರ ಆರಾಧ್ಯ ದೈವ. ಸದಾ ಕನ್ನಡ ಜನರ ಪ್ರೀತಿಯ ರಾಜರಾಗಿರುವ ಡಾ.ರಾಜಕುಮಾರ್ ಅವರನ್ನು ಕಳಕೊಂಡ ದಿನವಾದ್ದರಿಂದ ರಾಜ್ಯಾದ್ಯಂತ ಅವರ ಅಪಾರ ಅಭಿಮಾನಿಗಳು ಅವರನ್ನು ಸ್ಮರಿಸಿದ್ದಾರೆ, ಪೂಜಿಸಿದ್ದಾರೆ. ಇನ್ನೂ ಕೆಲವರು ದೂರದ ಊರುಗಳಿಂದಲೂ ಆಗಮಿಸಿ, ಕಂಠೀರವ ಸ್ಟುಡಿಯೋದಲ್ಲಿರುವ ರಾಜ್ ಸ್ಮಾರಕಕ್ಕೆ ನಮಿಸುತ್ತಿದ್ದಾರೆ.
ಅಣ್ಣಾವ್ರ ಕುಟುಂಬ ಕೂಡ ಪ್ರತಿವರ್ಷದಂತೆ ಅಣ್ಣಾವ್ರ ಸ್ಮಾರಕ ಬಳಿ ತೆರಳಿ ಪೂಜಿಸಿದೆ. ಅವರ ಅಭಿಮಾನಿಗಳು ರಾಜಕುಮಾರ್ ಅವರ ಭಾವಚಿತ್ರ ಹಿಡಿದು “ಮತ್ತೆ ಹುಟ್ಟಿ ಬಾ ಅಣ್ಣಾ” ಎಂದು ಪ್ರೀತಿಯಿಂದಲೂ ಕೂಗಿದರೆ, ಇನ್ನೂ ಕೆಲವು ಅಭಿಮಾನಿಗಳು ಅವರ ಹಾಡುಗಳ ಮೂಲಕ ಮತ್ತೆ ಮತ್ತೆ ಸ್ಮರಿಸುತ್ತಲೇ ಇದ್ದಾರೆ. .ರಾಜಕುಮಾರ್ ಅವರು ಒಂದೇ ವರ್ಗದವರಿಗೆ ಸೀಮಿತರಾದವರಲ್ಲ. ಅವರನ್ನು, ಕ್ರೀಡೆ, ರಾಜಕೀಯ ಹೀಗೆ ಹಲವು ಕ್ಷೇತ್ರಗಳ ಗಣ್ಯರೂ ಸ್ಮರಿಸುತ್ತಾರೆ.
ಅಷ್ಟರಮಟ್ಟಿಗೆ ಎಲ್ಲರ ಮನವನ್ನು ಸೂರೆಗೊಂಡವರು. ಅಂದಹಾಗೆ, ಡಾ.ರಾಜಕುಮಾರ್ ಅವರನ್ನು ಹಲವು ರಾಜಕೀಯ ಗಣ್ಯರು ಸ್ಮರಿಸಿದ್ದಾರೆ. ಹಾಗೆಯೇ ಕನ್ನಡ ಚಿತ್ರರಂಗದ ನಟ,ನಟಿಯರು, ನಿರ್ಮಾಪಕ, ನಿರ್ದೇಶಕಿಯರೂ ಅಣ್ಣಾವ್ರು ಸ್ಮರಿಸಿದ್ದಾರೆ. ಡಾ.ರಾಜಕುಮಾರ್ ಅಂದಾಕ್ಷಣ, ಅವರ ಹಲವು ಸಾಮಾಜಿಕ ಸಂದೇಶವಿರುವ ಸಿನಿಮಾಗಳು ಕಣ್ಣೆದುರಿಗೆ ಬರುತ್ತವೆ. ಅವರ ಸಿನಿಮಾಗಳು ಅದೆಷ್ಟೋ ಮನಸ್ಸುಗಳನ್ನು ಒಂದು ಮಾಡಿವೆ. ಅದೆಷ್ಟೋ ಜನರಲ್ಲಿ ಹೊಸ ಬದಲಾವಣೆ ತಂದಿವೆ. ಇಂದಿಗೂ ಸಿನಿಮಾ ಮೂಲಕ ತಮ್ಮ ಬದುಕನ್ನು ಹಸನು ಮಾಡಿಕೊಂಡವರೂ ಇದ್ದಾರೆ. ಕನ್ನಡಕ್ಕೆ ಏನಾದರೂ ತೊಂದರೆ ಆಗುತ್ತೆ ಎಂಬ ವಿಷಯ ಗೊತ್ತಾಗುತ್ತಿದ್ದಂತೆಯೇ ಅಣ್ಣಾವ್ರು ಹಿಂದೆ ಮುಂದೆ ನೋಡದೆ ಕನ್ನಡದ ಪರ ಧ್ವನಿ ಎತ್ತುತ್ತಿದ್ದರು. ಸದಾ ಕನ್ನಡಿಗರನ್ನು ಅಭಿಮಾನಿ ದೇವರು ಎಂದು ಕರೆಯುತ್ತಿದ್ದ ಅವರ ಪುಣ್ಯತಿಥಿ ದಿನದಂದು ಅಭಿಮಾನಿ ಬಳಗ ನಮನ ಸಲ್ಲಿಸಿದೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಟ್ವೀಟ್ ಮೂಲಕ ”ಕರ್ನಾಟಕ ರತ್ನ, ಪದ್ಮಭೂಷಣ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಕರ್ನಾಟಕದ ಅತ್ಯಂತ ಜನಪ್ರಿಯ ಚಲನಚಿತ್ರ ನಟ, ಗಾಯಕ, ಅಭಿಮಾನಿಗಳಿಗೆ ದೇವರ ಸ್ಥಾನ ಕೊಟ್ಟ ನಟಸಾರ್ವಭೌಮ ಡಾ. ರಾಜಕುಮಾರ್ ಅವರ ಪುಣ್ಯತಿಥಿಗೆ ನನ್ನ ನಮನಗಳು” ಎಂದು ಹೇಳಿದ್ದಾರೆ. ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಅವರು ಸಹ ಟ್ವೀಟ್ ಮೂಲಕ ಸ್ಮರಿಸಿದ್ದಾರೆ. ಇನ್ನು, ಈ ಸಂದರ್ಭದಲ್ಲಿ ಅಭಿಮಾನಿಯೊಬ್ಬರು, ತಮ್ಮ ಟ್ವೀಟ್ ಮೂಲಕ ಸಿಎಂ ಯಡಿಯೂರಪ್ಪ ಅವರಿಗೆ ಹೆಚ್ಎಎಲ್ ಏರ್ಪೋರ್ಟ್ಗೆ ಅಣ್ಣಾವ್ರ ಹೆಸರನ್ನು ಶಿಫಾರಸ್ಸು ಮಾಡಿ. ಅಣ್ಣಾವ್ರ ಹೆಸರಿಟ್ಟ ಹೆಗ್ಗಳಿಕೆ ನಿಮ್ಮದಾಗುತ್ತದೆ” ಎಂದು ಮನವಿ ಮಾಡಿದ್ದಾರೆ.
ಓಟಿಟಿ ಬ್ರೋಕರ್ಸ್ ವಿರುದ್ಧ ಚಿತ್ರೋದ್ಯಮ ಸೊಲ್ಲೆತ್ತಿದೆ. ಕೆಲವು ನೊಂದ ನಿರ್ಮಾಪಕರು ತಮಗಾದ ಅನ್ಯಾಯದ ವಿರುದ್ಧ ಇದೀಗ ಧ್ವನಿ ಎತ್ತಿದ್ದಾರೆ. ಈ ಬ್ರೋಕರ್ಸ್ ದಂಧೆಗೆ ಕಡಿವಾಣ ಬೀಳದಿದ್ದರೆ, ಕೊರೋನಾ ಎಂಬ ಕೆನ್ನಾಲಿಗೆಯಲ್ಲಿ ಬೆಂದ ನಿರ್ಮಾಪಕರಿಗೆ ಇನ್ನಷ್ಟು ಮೋಸ, ಮತ್ತಷ್ಟು ಅನ್ಯಾಯ ಖಚಿತ ಅಂತ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಸದ್ಯಕ್ಕೆ “ಆಪರೇಷನ್ ನಕ್ಷತ್ರ”ದ ಚಿತ್ರದ ನಿರ್ಮಾಪಕ ಕಿಶೋರ್ ಕುಮಾರ್ ಅವರು ಈಗ ತಮಗಾದ ಅನ್ಯಾಯವನ್ನು ಹೊರ ಹಾಕಿದ್ದಾರೆ.
ವೆಂಕಟೇಶ್ ಆಚಾರ್ಯ ಎಂಬಾತ ತಮಗೆ ಮೋಸ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ಹಾಗಾದರೆ ಈ ಓಟಿಟಿ ಮೋಸದ ಜಾಲವಾದರೂ ಹೇಗೆ ? ಆ ಬಗ್ಗೆ ನಾವ್ ನಿಮಗೆ ಹೇಳುವ ಮುನ್ನ ಒಟಿಟಿ ಅಂದರೇನು? ಇದಕ್ಕಿಂದ್ದಂತೆ ಅದು ಹೇಗೆಲ್ಲ ಹುಟ್ಟಿಕೊಂಡಿತು, ಯಾರೆಲ್ಲ ಇದರಲ್ಲಿದ್ದಾರೆ ಎನ್ನುವುದೇ ಒಂದು ಇಂಟರೆಸ್ಟಿಂಗ್ ಸ್ಟೋರಿ. ಮೊದಲು ಆ ಕಥೆಯನ್ನೊಮ್ಮೆ ಕೇಳಿ.
ಓವರ್ ದಿ ಟಾಪ್ : ಓಟಿಟಿ ಅಂದರೆ ಇದೊಂದು ಡಿಜಿಟಲ್ ಪ್ಲಾಟ್ ಫಾರ್ಮ್. ಓವರ್ ದಿ ಟಾಪ್ ಎನ್ನುವುದು ಇದರ ಪೂರ್ಣಾರ್ಥ (ಫುಲ್ ಫಾರ್ಮ್). ಅಂದರೆ ಅಂತಾರ್ಜಾಲದಲ್ಲಿ ವೆಬ್ ಸೀರಿಸ್ ಅಥವಾ ಚಲನಚಿತ್ರಗಳನ್ನು ನಿಗದಿತ ದರಗಳ ಮೇಲೆ ಗ್ರಾಹಕರಿಗೆ ಒದಗಿಸುವ ಒಂದು ಸಾಧನ. ಸದ್ಯಕ್ಕೀಗ ಇಂಟರ್ ನೆಟ್ ಬಳಕೆದಾರರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ಈ ಪ್ಲಾಟ್ ಫಾರ್ಮ್ಗೆ ಬಹುಬೇಡಿಕೆ ಬಂದಿದೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಸಿನಿಮಾ ಅಥವಾ ವೆಬ್ ಸೀರಿಸ್ ನಿರ್ಮಾಪಕರ ಆದ್ಯತೆಗಳು ಕೂಡ ಈಗ ಓಟಿಟಿ ಕಡೆಗೆ ಹೆಚ್ಚಿವೆ. ಹಾಗೆಯೇ ಸ್ಯಾಟಲೈಟ್ ಟಿವಿ ಚಾನೆಲ್ಗಳು ಕೂಡ ಓಟಿಟಿ ಕೆಳಗಡೆಯೇ ಬರುತ್ತಿವೆ. ಒಂದಲ್ಲ ಎರಡಲ್ಲ, ಹತ್ತಾರು: ಓಟಿಟಿನಲ್ಲೀಗ ಸದ್ಯಕ್ಕೆ ಅಮೇಜಾನ್ ಪ್ರೈಮ್, ನೆಟ್ ಫ್ಲಿಕ್ಸ್, ಹಾಟ್ ಸ್ಟಾರ್ ಲೀಡಿಂಗ್ನಲ್ಲಿವೆ. ಇವು ಕನ್ನಡದ ಸ್ಟಾರ್ ಸಿನಿಮಾಗಳ ಜತೆಗೆ ಹೊಸಬರ ಸಿನಿಮಾಗಳನ್ನು ಖರೀದಿಸುತ್ತಿವೆ. ಅಂತಿಮವಾಗಿ ಅವುಗಳಿಗೂ ಲಾಭವೇ ಟಾರ್ಗೆಟ್ ಆಗಿರುವುದರಿಂದ ಕಂಟೆಟ್ ಕಡೆಗೂ ಹೆಚ್ಚು ಆದ್ಯತೆ ನೀಡಿವೆ. ಇದರ ಜತೆಗೆ ಸಾಕಷ್ಟು ಪ್ಲಾಟ್ ಫಾರ್ಮ್ಗಳು ಹುಟ್ಟಿಕೊಂಡಿವೆ. ನಮ್ದು ಕನ್ನಡದ್ದೇ ಅಂತ ಹೇಳಿಕೊಂಡ ಓಟಿಟಿಗಳು ಈಗ ಎಲ್ಲೆಡೆ ಹುಟ್ಟಿಕೊಂಡಿವೆ. ಕೂ, ಕನ್ನಡ ಫ್ಲಿಕ್ಸ್, ಫಿಲಂ ಬಜಾರ್… ಹೀಗೆ ಲೆಕ್ಕ ಹಾಕಿದರೆ ನೂರಾರು ಇವೆ. ಇವುಗಳಿಗೆ ಸಿನಿಮಾ ಬೇಕು. ವೆಬ್ಸೀರಿಸ್ಗಳು ಬೇಕು. ಅವರು ಬಯಸುತ್ತಾರೋ ಇಲ್ಲವೋ ಗೊತ್ತಿಲ್ಲ, ಅವರಿಗೆಲ್ಲ ನಿಮ್ಮ ಸಿನಿಮಾ ಮಾರಾಟ ಮಾಡಿಕೊಡ್ತೀವಿ ಅಂತ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಬ್ರೋಕರ್ಸ್ ಮಾಫಿಯಾವೇ ಈಗ ತಲೆ ಎತ್ತಿದೆ ಎಂಬುದು ವಿಶೇಷ. ಅದರಲ್ಲೂ ಇವರದು ಸುಲಿಗೆ ದಂಧೆ ಅಂದರೆ ನಂಬಲೇಬೇಕು. ಹಾಗಾದರೆ, ಅದು ಹೆಂಗೆ?
ಓಟಿಟಿ ಓನರ್ಗಳೆಲ್ಲ ಇವರ ಮಾವಂದಿರು! ನಿಜ, ಇದು ವ್ಯವಹಾರ. ನಿರ್ಮಾಪಕರಿಗೆ ತಮ್ಮ ಸಿನಿಮಾ ಮಾರಾಟವಾಗಬೇಕು, ಓಟಿಟಿನವರಿಗೆ ಸಿನಿಮಾ ಬೇಕು. ಇವರ ಮಧ್ಯೆ ವ್ಯವಹಾರಕ್ಕೆ ಅಂತ ಈಗ ಲೆಕ್ಜವಿಲ್ಲದಷ್ಟು ಮಂದಿ ಹುಟ್ಟಿಕೊಂಡಿದ್ದಾರೆ. ಇವರೆಲ್ಲ ಯಾರು, ಎಲ್ಲಿಂದ ಬಂದರೂ? ಯಾರೊಬ್ಬರಿಗೂ ಗೊತ್ತಿಲ್ಲ. ಆದರೆ ಅವರೆಲ್ಲ ಅಮೇಜಾನ್ನವರು ಭಾವಂದಿರು, ನೆಟ್ ಫ್ಲಿಕ್ಸ್ ತಮಗೆ ಅಳಿಯಂದರು, ಉಳಿದವರೆಲ್ಲ ಭಾವಂದಿರು ಅಂತೆಲ್ಲ ತಮಗೆ ತಾವೇ ಅಂದುಕೊಂಡು ಫೋಸು ಕೊಡುತ್ತಾರೆ. ಇದು ರಂಗುರಂಗಿನ ದುನಿಯಾ ಆಗಿದ್ದರಿಂದ ಕೆಲವು ನಿರ್ಮಾಪಕರು ಕೂಡ ಇದು ನಿಜವೇ ಇರಬೇಕೆಂದು ನಂಬುತ್ತಾರೆ. ಕೊನೆಗೆ ಯಾರಾದರೂ ಇರಲಿ, ತಮ್ಮ ಸಿನಿಮಾ ಒಳ್ಳೆಯ ರೇಟ್ಗೆ ಸೇಲ್ ಆಗಿಬಿಟ್ಟರೆ ಸಾಕಪ್ಪ ಅಂತಂದುಕೊಳ್ಳುತ್ತಾರೆ. ಹಾಗಾಗಿ ಅದೇ ಅವರಿಗೆ ಬಂಡವಾಳ.
ಹೇಳೋದೊಂದು, ಮಾಡೋದೇ ಇನ್ನೊಂದು: ಇದು ಪಕ್ಕಾ ಮೋಸದ ವ್ಯವಹಾರ. ಬ್ರೋಕರ್ಗಳ್ಯಾರು ನಿರ್ಮಾಪಕರನ್ನು ಅಮೇಜಾನ್, ನೆಟ್ ಫ್ಲಿಕ್ಸ್ ಅಥವಾ ಇನ್ನಾವುದೇ ಓಟಿಟಿ ಮಾಲೀಕರ ಹತ್ತಿರ ಕರೆದುಕೊಂಡು ಹೋಗೋದಿಲ್ಲ ಅದನ್ನೇ ಬಂಡವಾಳ ಮಾಡಿಕೊಳ್ಳುವ ಬ್ರೋಕರ್ಸ್ ಅಲ್ಲಿ ತನ್ನದೇ ವ್ಯವಹಾರ ಮಾಡ್ತಾನೆ. ಹೊರಗೆ ಬಂದು ನಿರ್ಮಾಪಕನಿಗೆ ಇನ್ನೊಂದು ವ್ಯವಹಾರದ ಮೊತ್ತ ಹೇಳ್ತಾನೆ. ಟಿವಿ ರೈಟ್ಸ್ ಸೇಲ್ ಮಾಡಿಕೊಡ್ತೀನಿ ಅಂದವನು ಕೂಡ ಇದನ್ನೇ ಮಾಡ್ತಾನೆ. ಚಾನೆಲ್ ಹೆಡ್ ಬಳಿ ಮಾತನಾಡೋದೇ ಒಂದು, ನಿರ್ಮಾಪಕನಿಗೆ ಹೇಳೋದೇ ಇನ್ನೋಂದು. ಇನ್ನು ಕೆಲವರು ಸಿನಿಮಾ ಟಿವಿ ರೈಟ್ಸ್, ಓಟಿಟಿ ರೈಟ್ಸ್ ಸೇಲ್ ಅಗಿದ್ದರೂ, ನಿರ್ಮಾಪಕರ ಬಳಿ ಆಗಿಲ್ಲ ಅಂತ ಸುಳ್ಳು ಹೇಳಿ ಯಾಮಾರಿಸಿದ್ದು ಇದೆ. ಸದ್ಯಕ್ಕೆ “ಆಪರೇಷನ್ ನಕ್ಷತ್ರ” ಚಿತ್ರದ ನಿರ್ಮಾಪಕ ಕಿಶೋರ್ ತಮಗಾದ ಅನ್ಯಾಯವನ್ನ ಇಲ್ಲಿ ಹೊರ ಹಾಕಿದ್ದಾರೆ. ಹಾಗೆಯೇ ಅವರ ಪರವಾಗಿ ಒಂದಷ್ಟು ನಿರ್ಮಾಪಕರು ಧ್ವನಿ ಎತ್ತಿದ್ದಾರೆ.
ಕಿಶೋರ್, ನಿರ್ಮಾಪಕರು
ಪೆನ್ಸಿಲ್ ಬಾಕ್ಸ್ಗೂ ಸಮಸ್ಯೆ! ಇವರ ಮಾತಿಗೆ ಧ್ವನಿಗೂಡಿಸಿರುವ ನಿರ್ಮಾಪಕ ನಾಗೇಶ್ ಕುಮಾರ್ ಕೂಡ ಇಂತಹ ಓಟಿಟಿ ಹೆಸರು ಹೇಳಿಕೊಂಡು ಬರುವ ಸುಳ್ಳು ಬ್ರೋಕರ್ಸ್ ಮೇಲೆ ಹರಿಹಾಯ್ದಿದ್ದಾರೆ. “ಈ ಓಟಿಟಿಗೆ ಸಿನಿಮಾಗಳನ್ನು ಮಾರಾಟ ಮಾಡಿಕೊಡ್ತೀವಿ ಅನ್ನುವವರ ಬಗ್ಗೆ ನಿರ್ಮಾಪಕರು ಎಚ್ಚೆತ್ತುಕೊಳ್ಳಬೇಕು ಎಂದಿದ್ದಾರೆ. ವೆಂಕಟೇಶ್ ಆಚಾರ್ಯ ಎಂಬಾತನೊಬ್ಬನಾದರೆ, ಕೃಷ್ಣ ಎಂಬಾತ “ಪೆನ್ಸಿಲ್ ಬಾಕ್ಸ್” ಸಿನಿಮಾ ರೀ ರಿಲೀಸ್ ಮಾಡಿಕೊಡ್ತೀನಿ ಅಂದಿದ್ದಾನೆ. ನಿರ್ಮಾಪಕರಿಗೂ ಇದು ಸಮಸ್ಯೆಯೇ. ಇಲ್ಲಿ ನ್ಯಾಯವಾಗಿರುವವರಿಗೆ ಸಂಕಷ್ಟವೇ ಜಾಸ್ತಿ. ಜಾಸ್ತಿ ತುಂಬಿಕೊಂಡಿದ್ದಾರೆ. ಡಬ್ಬಿಂಗ್ ರೈಟ್ಸ್ ಆ ರೈಟ್ಸ್ ಈ ರೈಟ್ಸ್ ಅಂತಾರೆ ತುಂಬಾನೇ ಮೋಸವಿದೆ ಇಲ್ಲಿ. ಆ ಬಗ್ಗೆ ಎಚ್ಚೆತ್ತುಕೊಳ್ಳಲೇಬೇಕು. ನೇರವಾಗಿಯೇ ಸಂಬಂಧಿಸಿದವರನ್ನು ಸಂಪರ್ಕಿಸಿ ತಮ್ಮ ಸಿನಿಮಾದ ಹಕ್ಕು ಮಾರಾಟ ಮಾಡಿ ಅಂದಿರುವ ನಾಗೇಶ್ ಕುಮಾರ್, ನನಗೂ ಇಂತಹ ಅನುಭವ ಆಗಿದೆ. ಇಲ್ಲಿ ಹೊಸ ನಿರ್ಮಾಪಕರು ಬಂದರೆ, ಅವರನ್ನು ಯಾಮಾರಿಸುವ ಮಂದಿ ಹೆಚ್ಚಿದ್ದಾರೆ. ಮೊದಲೇ ಕೊರೊನಾ ಹಾವಳಿಗೆ ತತ್ತರಿಸಿರುವ ನಿರ್ಮಾಪಕರಿಗೆ ಇಂತಹ ಮಾಫಿಯಾದವರು ಹುಟ್ಟುಕೊಂಡಿದ್ದಾರೆ. ಈ ಕುರಿತಂತೆ ನಾನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಕೊಡಬೇಕು ಅಂತ ನಿರ್ಧರಿಸಿದ್ದೇನೆ. ಈ ರೀತಿ ಮೋಸ ಹೋಗಿರುವ ನಿರ್ಮಾಪಕರೆಲ್ಲರೂ ಈ ವಿರುದ್ಧ ಧ್ವನಿ ಎತ್ತಬೇಕು ಅನ್ನೋದು ಅವರ ಮಾತು.
ನಾಗೇಶ್ ಕುಮಾರ್, ನಿರ್ಮಾಪಕರು
ಮಂಡಳಿ ಸಭೆ: ಸಂಬಂಧ ಒಂದಷ್ಟು ನಿರ್ಮಾಪಕರು ವಾಣಿಜ್ಯ ಮಂಡಳಿಯಲ್ಲಿ ದೂರು ಸಲ್ಲಿಸಿದ್ದು, ಶನಿವಾರ ಸಭೆ ಕೂಡ ನಡೆಸಲಾಗಿದೆ. ಸಭೆಯಲ್ಲಿ ನಾಗೇಶ್ ಕುಮಾರ್, ಕುಮಾರ್, ಕಿಶೋರ್ , ಶ್ರೀನಿವಾಸ್ ಅವರು ಈ ವಿರುದ್ಧ ಹರಿಹಾಯ್ದಿದ್ದಾರೆ. ಇನ್ನು, ಕುಮಾರ್ ಎಸ್, ನಾಗೇಂದ್ರ ಅರಸ್ ಮೊದಲಿನಿಂದಲೂ ಈ ವಿರುದ್ಧ ಧ್ವನಿ ಎತ್ತಿದ್ದಾರೆ. ಮಂಡಳಿಯಲ್ಲಿ ಒಂದು ಸುತ್ತಿನ ಮಾತುಕತೆ ನಡೆದಿದ್ದು, ನಿರ್ಮಾಪಕರು ಹೀಗೆ ಇದ್ದರೆ ಮೋಸ ಮಾಡುತ್ತಲೇ ಇರುತ್ತಾರೆ. ಎಲ್ಲಾ ನಿರ್ಮಾಪಕರಿಗೂ ಮಂಡಳಿ ಜೊತೆ ನಿಲ್ಲಲಿದೆ ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಯಾರು ಈ ವೆಂಕಟೇಶ್ ಆಚಾರ್ಯ : ವೆಂಕಟೇಶ್ ಆಚಾರ್ಯ ಎಂಬಾತ ಎರಡು ವರ್ಷಗಳ ಹಿಂದೆ “ಆಪರೇಷನ್ ನಕ್ಷತ್ರ” ಸಿನಿಮಾವನ್ನು ೧೮ ಲಕ್ಷಕ್ಕೆ ಓಟಿಟಿಗೆ ಅಂತ ಖರೀದಿ ಮಾಡಿದ್ದರು. ಆ ಸಂಬಂಧ ಅಗ್ರಿಮೆಂಟ್ ಕೂಡ ಆಗಿತ್ತು. ಆ ಪ್ರಕಾರ ಆತ ಅರವತ್ತು ದಿನಗಳಿಗೆ ಅಷ್ಟು ಅಮೌಂಟ್ ಕ್ಲಿಯರ್ ಮಾಡಬೇಕಿತ್ತು. ಇದಾಗಿ ಒಂದಷ್ಟು ದಿನಕ್ಕೆ ಆ ಚಿತ್ರ ಅಮೇಜಾನ್ನಲ್ಲೂ ಬಂತು. ಆದರೆ ನಮಗೆ ಬರಬೇಕಿದ್ದ ದುಡ್ಡು ಸರಿಯಾದ ಸಮಯಕ್ಕೆ ಬರಲಿಲ್ಲ. ಕೇಳಿದರೆ ನಾಳೆ, ನಾಡಿದ್ದು ಅಂತ ಹೇಳುತ್ತಲೇ ಬಂದಿದ್ದಾರೆ. ಕೊನೆಗೆ ಅವರ ವಿರುದ್ಧ ಚೇಂಬರ್ನಲ್ಲಿ ಹೇಳಿಕೊಂಡರೂ ಅಲ್ಲೂ ನ್ಯಾಯ ಸಿಕ್ಕಿಲ್ಲ. ವೆಂಕಟೇಶ್ ಆಚಾರ್ಯ ಚೇಂಬರ್ ಮೆಂಬರ್ ಅಲ್ಲ ಅಂತ ಸುಮ್ಮನಾಗಿದ್ದಾರೆ. ಸಾಲ ಮಾಡಿ ಹಣ ಹಾಕಿರುವ ನಮಗೆ ನಿಜಕ್ಕೂ ಅನ್ಯಾಯವಾಗಿದೆ ಎಂಬುದು “ಆಪರೇಷನ್ ನಕ್ಷತ್ರ” ಚಿತ್ರದ ನಿರ್ಮಾಪಕ ಕಿಶೋರ್ ಮಾತು.
ಕಲಾವಿದನಿಗೆ ಕಲೆ ಅನ್ನೋದು ನಿತ್ಯ ನಿರಂತರ. ಅದರಲ್ಲೂ ಕಲಾವಿದ ಒಮ್ಮೆ ಬಣ್ಣ ಹಚ್ಚಿದರೆ, ಅದು ಕೊನೆಯವರೆಗೂ ಹಚ್ಚುತ್ತಲೇ ಇರಬೇಕು, ಬೆಳ್ಳಿಪರದೆ ಮೇಲೆ ಸದಾ ಮಿಂಚುತ್ತಲೇ ಇರಬೇಕು ಅಂತೆನಿಸದೇ ಇರದು. ಇಲ್ಲೀಗ ಹೇಳಹೊರಟಿರುವ ವಿಷಯ, ತೆರೆಮೇಲೆ ಕಾಣಿಸಿಕೊಳ್ಳದೆ ಒಂದಷ್ಟು ಗ್ಯಾಪ್ ಕೊಟ್ಟಿದ್ದ ಒಂದು ಕಾಲದ ಸಕ್ಸಸ್ಫುಲ್ ಹೀರೋ ರಾಮ್ಕುಮಾರ್ ಅವರದ್ದು. ಹೌದು, ರಾಮ್ಕುಮಾರ್ ಈಗ ಮತ್ತೊಮ್ಮೆ ತೆರೆಮೇಲೆ ರಾರಾಜಿಸಲು ಸಜ್ಜಾಗಿದ್ದಾರೆ ಅದೇ ಈ ಹೊತ್ತಿನ ವಿಶೇಷ. ಈಗಾಗಲೇ ರಾಮ್ಕುಮಾರ್ ಅವರ ಪುತ್ರ ಧೀರನ್, ಪುತ್ರಿ ಧನ್ಯಾ ಅವರು ಬೆಳ್ಳಿತೆರೆಗೆ ಎಂಟ್ರಿಕೊಟ್ಟಿದ್ದಾರೆ. ವರ್ಷಗಳ ಗ್ಯಾಪ್ ನಂತರ ರಾಮ್ಕುಮಾರ್ ಕೂಡ ಬೆಳ್ಳಿಪರದೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.
ರಾಮ್ಕುಮಾರ್, ನಟ
ಹಾಗಂತ, ಅಪ್ಪ, ಮಗ,ಮಗಳು ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಅಂದುಕೊಂಡರೆ ಆ ಊಹೆ ನಿಜಕ್ಕೂ ತಪ್ಪು. ಇಷ್ಟಕ್ಕೂ ಈಗ ರಾಮ್ಕುಮಾರ್ ಅವರು ನಟಿಸುತ್ತಿರುವ ಸಿನಿಮಾದ ಹೆಸರು “ಶೀಘ್ರ ಮೇವ ಕಲ್ಯಾಣ ಪ್ರಾಪ್ತಿರಸ್ತು”. ಈ ಸಿನಿಮಾ ಮೂಲಕ ಹೊಸ ಇನ್ನಿಂಗ್ಸ್ ಶುರುಮಾಡಿದ್ದಾರೆ ರಾಮ್ಕುಮಾರ್. ಇನ್ನು, ಈ ಚಿತ್ರವನ್ನು ಪ್ರವೀಣ್ ಚೆನ್ನಪ್ಪ ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ ಕನ್ನಡ ಪ್ರೇಕ್ಷಕರನ್ನು ರಂಜಿಸಿದ್ದ ರಾಮ್ಕುಮಾರ್, ಒಂದೊಳ್ಳೆಯ ಸಿನಮಾ ಮೂಲಕವೇ ಹೊಸ ಇನ್ನಿಂಗ್ಸ್ಗೆ ಕಾಲಿಡುತ್ತಿದಾರೆ. ಇವರೊಂದಿಗೆ “ದಿಯಾ” ಖ್ಯಾತಿಯ ದೀಕ್ಷಿತ್ ಶೆಟ್ಟಿ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ.
ದೀಕ್ಷಿತ್ ಶೆಟ್ಟಿ, ನಟ
ಇದೊಂದು ಬಾಂಧವ್ಯದ ಸಿನಿಮಾ. ಈಗಿನ ವಾಸ್ತವತೆಗೆ ತಕ್ಕಂತಹ ಕಥಾಹಂದರ ಇಲ್ಲಿದೆ. ಸದ್ಯಕ್ಕೆ ಚಿತ್ರೀಕರಣ ಜೋರಾಗಿಯೇ ನಡೆಯುತ್ತಿದೆ. ರಾಮ್ಕುಮಾರ್ ಇಲ್ಲಿ ವಿಶೇಷವಾಗಿ ಕಾಣಿಸಿಕೊಂಡಿದ್ದರೂ, ಇಡೀ ಕಥೆ ಅವರ ಸುತ್ತವೇ ಸಾಗುತ್ತದೆ. ಅವರಿಲ್ಲಿ ಕೃಷ್ಣಮೂರ್ತಿ ಎಂಬ ಲೆಕ್ಚರರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು, ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು, ಎರಡನೇ ಹಂತದ ಚಿತ್ರೀಕರಣಕ್ಕೆ ಚಿತ್ರತಂಡ ಸಜ್ಜಾಗುತ್ತಿದೆ. ಅದೇನೆ ಇರಲಿ, ಸುಂದರ ಮೊಗದ ನಟ ರಾಮ್ಕುಮಾರ್ ಅವರು ಎಲ್ಲೋ ಮರೆಯಾಗಿಬಿಟ್ಟರು ಅನ್ನುವ ಹೊತ್ತಿಗೆ “ಶೀಘ್ರ ಮೇವ ಕಲ್ಯಾಣ ಪ್ರಾಪ್ತಿ ರಸ್ತು” ಅನ್ನುತ್ತಲೇ ಅವರು ಎಂಟ್ರಿಯಾಗುತ್ತಿದ್ದಾರೆ.
ನಾಗೇಶ್ ಕುಮಾರ್, ನಿರ್ಮಾಪಕರು
ಸದ್ಯಕ್ಕೆ ಅವರನ್ನು ಪುನಃ ತೆರೆ ಮೇಲೆ ಕಾಣಲು ಒಂದಷ್ಟು ಮಂದಿ ಕಾತುರರಾಗಿರುವುದಂತೂ ನಿಜ. ಈ ಚಿತ್ರದ ಮೂಲಕ ಮತ್ತೆ ರಾಮ್ಕುಮಾರ್ ಅವರನ್ನು ಕರೆತರುತ್ತಿರುವುದು ನಿರ್ಮಾಪಕ ನಾಗೇಶ್ ಕುಮಾರ್. ಈ ಹಿಂದೆ “ನಮ್ ಗಣಿ ಬಿಕಾಂ ಪಾಸ್” ಎಂಬ ಮೆಚ್ಚುಗೆಯ ಸಿನಿಮಾ ನಿರ್ಮಿಸಿ ಭರವಸೆ ಮೂಡಿಸಿರುವ ನಿರ್ಮಾಪಕರು, ಈಗಾಗಲೇ “ಗಜಾನನ ಗ್ಯಾಂಗ್” ಎಂಬ ಚಿತ್ರವನ್ನೂ ನಿರ್ಮಿಸಿದ್ದಾರೆ. ಆ ಚಿತ್ರ ಸದ್ಯ ಪೋಸ್ಟ್ ಪ್ರೊಡಕ್ಷನ್ನಲ್ಲಿರುವ ಬೆನ್ನಲ್ಲೇ ಅವರು, “ಶೀಘ್ರ ಮೇವ ಕಲ್ಯಾಣ ಪ್ರಾಪ್ತಿ ರಸ್ತುʼ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ.
ಪ್ರವೀಣ್ ಚೆನ್ನಪ್ಪ, ನಿರ್ದೇಶಕ
ಹೊಸಬರಿಗೆ ಸದಾ ಅವಕಾಶ ಕೊಡುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಸದಭಿರುಚಿಯ ಸಿನಿಮಾಗಳನ್ನೇ ನೀಡಬೇಕು ಅಂತ ಪಣ ತೊಟ್ಟಿರುವ ನಿರ್ಮಾಪಕ ನಾಗೇಶ್ ಕುಮಾರ್, ಇಷ್ಟರಲ್ಲೇ ಹೊಸ ತಂಡದ ವಿಭಿನ್ನ ಕಥೆ ಇರುವ ಸಿನಿಮಾ ಬಗ್ಗೆಯೂ ಮಾಹಿತಿ ಕೊಡುವುದಾಗಿ ಹೇಳುತ್ತಾರೆ.
ಕನ್ನಡದ ಹಲವು ಸಿನಿಮಾಗಳು ಬೇರೆ ಭಾಷೆಗಳಿಗೆ ರಿಮೇಕ್ ಆಗುವುದು ಹೊಸದೇನಲ್ಲ. ಈಗಾಗಲೇ ಸಾಕಷ್ಟು ಕನ್ನಡದ ಸಿನಿಮಾಗಳು ತೆಲುಗು, ತಮಿಳು, ಹಿಂದಿ ಸೇರಿದಂತೆ ಹಲವು ಭಾಷೆಗಳಿಗೆ ರಿಮೇಕ್ ಆಗಿರುವುದುಂಟು. ಈಗ ಆ ಸಾಲಿಗೆ ಮಂಸೋರೆ ನಿರ್ದೇಶನದ “ಆಕ್ಟ್ -೧೯೭೮” ಚಿತ್ರ ಕೂಡ ಹಿಂದಿಗೆ ರಿಮೇಕ್ ಆಗುತ್ತಿದೆ. ಈ ವಿಷಯವನ್ನು ಸ್ವತಃ ನಿರ್ದೇಶಕ ಮಂಸೋರೆ ಅವರು ಸ್ಪಷ್ಟಪಡಿಸಿದ್ದಾರೆ.
ಯಜ್ಞಾ ಶೆಟ್ಟಿ ಪ್ರಮುಖ ಆಕರ್ಷಣೆಯಾಗಿದ್ದ ಈ ಚಿತ್ರ ವಿಭಿನ್ನ ಕಥಾಹಂದರದ ಮೂಲಕ ಎಲ್ಲರ ಮನಗೆದ್ದಿತ್ತು. ಆ ಸಿನಿಮಾಗೆ ಎಲ್ಲೆಡೆಯಿಂದಲೂ ಪ್ರಶಂಸೆ ಬಂದಿತ್ತು. ಈ ನಿಟ್ಟಿನಲ್ಲಿ ಈಗ ಹಿಂದಿ ಭಾಷೆಗೆ ರಿಮೇಕ್ ಆಗುತ್ತಿದೆ. ಆದರೆ, ಹಿಂದಿ ಭಾಷೆಯ ಈ ಸಿನಿಮಾಗೆ ನಿರ್ದೇಶಕರು ಯಾರು ಅನ್ನೋದು ಗೊತ್ತಿಲ್ಲ. ಯಾವ ನಟಿ ನಟಿಸುತ್ತಾರೆ ಅನ್ನೋದು ತಿಳಿದಿಲ್ಲ. ಹಾಗೇನಾದರೂ ನಿರ್ದೇಶನಕ್ಕೆ ಅವಕಾಶ ಸಿಕ್ಕರೆ, ಮಂಸೋರೆ ಅವರು ನಿರ್ದೇಶನಕ್ಕೂ ಸೈ ಎನ್ನುತ್ತಾರೆ.
ಅಂದಹಾಗೆ, ಕೊರೊನಾ ಲಾಕ್ಡೌನ್ ಸ್ವಲ್ಪ ಕಡಿಮೆಯಾಗುತ್ತಿದ್ದಂತೆಯೇ, ಚಿತ್ರಮಂದಿರಕ್ಕೆ ಮೊದಲ ಬಾರಿಗೆ ಎಂಟ್ರಿಕೊಟ್ಟ ಸಿನಿಮಾ ಇದಾಗಿತ್ತು. ಭಯದ ವಾತಾವರಣದ ಸಮಯದಲ್ಲೂ ಜನರು ಚಿತ್ರಮಂದಿರಕ್ಕೆ ಬಂದಿದ್ದರು. ಬಂದವರನ್ನು ನಿರಾಸೆಗೊಳಸಿದ ಈ ಚಿತ್ರ ಯಶಸ್ವಿಯಾಗಿತ್ತು. ಮಹಿಳೆಯೊಬ್ಬಳು ಸರ್ಕಾರ ಹಾಗೂ ಭ್ರಷ್ಟ ಅಧಿಕಾರಿಗಳಿಗೆ ಬುದ್ಧಿ ಕಲಿಸಲು ಯಾವ ಅಸ್ತ್ರ ಪ್ರಯೋಗಿಸುತ್ತಾಳೆ ಎಂಬುದು ಚಿತ್ರದ ಹೈಲೈಟ್. ನ್ಯಾಯಕ್ಕಾಗಿ ಆಕೆ ಏನೆಲ್ಲಾ ಸರ್ಕಸ್ ಮಾಡ್ತಾಳೆ, ಕೊನೆಗೆ ಆಕೆ ಅದರಲ್ಲಿ ಯಶಸ್ವಿಯಾಗ್ತಾಳಾ ಇಲ್ಲವಾ ಅನ್ನೋದು ಕಥಾವಸ್ತು. ಈ ಚಿತ್ರ ಈ ಹಿಂದೆಯೇ ಅಮೇಜಾನ್ ಪ್ರೈಂನಲ್ಲಿ ಬಿಡುಗಡೆಯಾಗಿದ್ದು, ಅಲ್ಲೂ ಉತ್ತಮ ಮೆಚ್ಚುಗೆ ಪಡೆದುಕೊಂಡಿದೆ.