Categories
ಸಿನಿ ಸುದ್ದಿ

ತನ್ನ ಸದಸ್ಯರಿಗೆ ಉಚಿತ ಲಸಿಕೆ ವ್ಯವಸ್ಥೆಗೊಳಿಸಿದ ಟೆಲಿವಿಷನ್ ಅಸೋಸಿಯೇಷನ್; ಮೂರು ದಿನಗಳ ಲಸಿಕೆ ಅಭಿಯಾನಕ್ಕೆ ಚಾಲನೆ

ಈಗ ಎಲ್ಲೆಡೆ ಕೊರೊನಾ ಹಾವಳಿ. ಈ ಹಿನ್ನೆಲೆಯಲ್ಲಿ ಈಗಾಗಲೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆರೋಗ್ಯ ಸಚಿವರನ್ನು ಭೇಟಿ ಮಾಡಿ ಚಿತ್ರರಂಗದವರಿಗೆ ವ್ಯಾಕ್ಸಿನೇಷನ್‌ ಹಾಕಿಸಲು ಮನವಿ ಮಾಡಿದ್ದಾಗಿದೆ. ಸರ್ಕಾರ ಕೂಡ ಸ್ಪಂದಿಸಿದೆ. ಇದರ ಬೆನ್ನಲ್ಲೇ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಮುತುವರ್ಜಿ ವಹಿಸಿ, ತಮ್ಮ ಸಂಘದ ಸದಸ್ಯರು ಹಾಗು ಕುಟುಂಬದವರಿಗೆ ಕೋವಿಡ್ ಲಸಿಕೆ ಹಾಕಿಸುವ ಅಭಿಯಾನಕ್ಕೆ ಮಂಗಳವಾರ ಚಾಲನೆ ನೀಡಿದೆ.


ಅಸೋಸಿಯೇಷನ್ ಅಧ್ಯಕ್ಷ ಶಿವಕುಮಾರ್, ಕಂದಾಯ ಸಚಿವ ಅಶೋಕ್ ಮತ್ತು ಬಿಬಿಎಂಪಿ ಸದಸ್ಯ ಲಕ್ಷ್ಮಿಕಾಂತ್ ಜೊತೆಯಲ್ಲಿ ಚರ್ಚಿಸಿ, ಅಸೋಸಿಯೇಷನ್ ನ ಕಲಾವಿದರು, ತಾಂತ್ರಿಕ ವರ್ಗ ಹಾಗು ಅವರ ಕುಟುಂಬ ವರ್ಗದವರಿಗೆ ಉಚಿತ ಲಸಿಕೆ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದರು.


ಅವರ ಮನವಿ ಹಿನ್ನೆಲೆಯಲ್ಲಿ ಸಚಿವರು ಸರ್ಕಾರದ ವತಿಯಿಂದ ಲಸಿಕೆ ವ್ಯವಸ್ಥೆಗೊಳಿಸಿ ಚಾಲನೆ ನೀಡಿದೆ
ಮೇ18ರಿಂದ 20ರವರೆಗೆ ಮೂರು ದಿನಗಳ ಕಾಲ ಈ ಲಸಿಕೆ ವ್ಯವಸ್ಥೆ ಮಾಡಿದ್ದು, ಅಗತ್ಯ ಬಿದ್ದರೆ ಇನ್ನೂ ಮೂರು ದಿನಗಳ ಕಾಲ ಲಸಿಕೆ ಹಾಕಲು ವ್ಯವಸ್ಥೆ ಮಾಡುವುದಾಗಿ ಅಧ್ಯಕ್ಷ ಶಿವಕುಮಾರ್ ತಿಳಿಸಿದ್ದಾರೆ.
45 ವರ್ಷ ಮೇಲ್ಪಟ್ಟವರು ಇದರ ಸದುಪಯೋಗ ಪಡೆಯಲು ಕೋರಿದ್ದಾರೆ.

Categories
ಸಿನಿ ಸುದ್ದಿ

ನಾಗಾವರ ಜನತೆಗೆ ಆಸರೆಯಾದ ದೊಡ್ಮನೆ ದೊರೆ! ಶಿವಣ್ಣ ದಂಪತಿಯಿಂದ ಹಸಿದ ಹೊಟ್ಟೆಗೆ ‌ಕೈ ತುತ್ತು..

ಈ ಕೋವಿಡ್ ಸಂಕಷ್ಟದಲ್ಲಿ ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ ಹಾಗಯ ಗೀತಾ ಶಿವರಾಜ್ ಕುಮಾರ್ ಹಾಗೂ ಶಿವಣ್ಣ ಬಾಯ್ಸ್ ಸೇರಿಕೊಂಡು, ತಾವು ನೆಲೆಸಿರೋ ನಾಗಾವರ ಏರಿಯಾದಲ್ಲಿ ಪ್ರತಿ‌ನಿತ್ಯ 500 ಜನರಿಗೆ ಊಟ, ತಿಂಡಿ ,ಹಾಗೂ ಟೀ ವ್ಯವಸ್ಥೆಯನ್ನ ಮಾಡುತ್ತಿದ್ದಾರೆ‌. ಈ ಸೇವೆಗೆಂದೇ ಶಿವಣ್ಣ ಬೊಲೇರೋ ಕ್ಯಾಂಟ್ರೋನ ಅರೇಂಜ್ ಮಾಡಿದ್ದು, ಈ ವಾಹನದಲ್ಲೇ ನಿತ್ಯ ಊಟ ತಿಂಡಿ‌ ಸರಬರಾಜಾಗುತ್ತಿದೆ.

“ಆಸರೆ” ಹಸಿದ ಹೊಟ್ಟೆಗೆ ಕೈ ತುತ್ತು… ಅನ್ನೋ ಶೀರ್ಷಿಕೆಯಡಿಯಲ್ಲಿ ನಡೆಯುತ್ತಿರೋ ಈ ಕಾರ್ಯಕ್ರಮ, ಸದ್ಯ 10ದಿನದವರೆಗೂ ಮುಂದುವರೆಯಲಿದೆ.

ಲಾಕ್ ಡೌನ್ ಹೀಗೆ ಮುಂದುವರೆದಲ್ಲಿ‌ ಸುಮಾರು 1000 ಜನಕ್ಕೆ ಪ್ರತಿ ದಿನ ಅನ್ನ ದಾಸೋಹ ಮಾಡೋದಕ್ಕೆ ಯೋಜನೆಯನ್ನೂ ಶಿವಣ್ಣ, ಗೀತಕ್ಕ ಹಾಗೂ ಶಿವಣ್ಣ ಬಾಯ್ಸ್ ರೂಪಿಸಿಕೊಂಡಿದ್ದಾರೆ.

Categories
ಸಿನಿ ಸುದ್ದಿ

ಸ್ಮಶಾನ ಹಾಗೂ ಶವಗಾರ ಕಾರ್ಮಿಕರ ನೆರವಿಗೆ ಬನ್ನಿ – ಸರ್ಕಾರಕ್ಕೆ ನಟ ಚೇತನ್ ಪತ್ರ

ʼಆ ದಿನಗಳುʼ ಖ್ಯಾತಿಯ ನಟ ಚೇತನ್‌ ಕೋವಿಡ್‌ ಯೋಧರಾದ ಸ್ಮಶಾನ ಕಾರ್ಮಿಕರ ನೆರವಿಗೆ ಧಾವಿಸಿದ್ದಾರೆ. ರಾಜ್ಯದಲ್ಲಿರುವ ಸ್ಮಶಾನ ಹಾಗೂ ಶವಗಾರಗಳಲ್ಲಿನ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಅವರು ಆರ್ಥಿಕವಾಗಿ ಹಿಂದುಳಿದಿರುವುದು ಮಾತ್ರವಲ್ಲ, ಕೋವಿಡ್‌ ಸಾಂಕ್ರಾಮಿಕ ರೋಗ ತೀವ್ರಗತಿಯಲ್ಲಿ ಹರಡುತ್ತಿರುವ ಈ ಸಂದರ್ಭದಲ್ಲಿ ಅವರಿಗೆ ಈಗ ತುರ್ತಾಗಿ ವೈದ್ಯಕೀಯ ನೆರವು ಬೇಕಿದೆ. ಈ ಹಿನ್ನೆಲೆಯಲ್ಲಿ, ಸರ್ಕಾರ ಅವರ ನೆರವಿಗೆ ಬರಬೇಕೆಂದು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಅವರು ಬರೆದಿರುವ ಪತ್ರದ ಡಿಟೈಲ್ಸ್‌ ಇಲ್ಲಿದೆ.

ಕರ್ನಾಟಕದಾದ್ಯಂತ ಸ್ಮಶಾನ ಕಾರ್ಮಿಕರು ಈ ಘೋರ ಬಿಕ್ಕಟ್ಟಿನ ಸಂದರ್ಭದಲ್ಲಿ ನಮ್ಮ ರಾಜ್ಯದ ಜನರಿಗೆ ಮುಂಚೂಣಿಯ ಕೋವಿಡ್ ಯೋಧರಾಗಿ ದಣಿವರಿಯದೆ ಮತ್ತು ನಿಸ್ವಾರ್ಥವಾಗಿ ಕೆಲಸ ಮಾಡುತ್ತಿದ್ದಾರೆ. ಈ ಸ್ಮಶಾನ ಕಾರ್ಮಿಕರು ತಲೆಮಾರುಗಳಿಂದ ನಮ್ಮ ಸಮಾಜದ ಸಾಮಾಜಿಕ ಮತ್ತು ಆರ್ಥಿಕವಾಗಿ ಅಳಿವಿನಂಚಿನಲ್ಲಿರುವ ಸದಸ್ಯರು. ಈ ಸಾಂಕ್ರಾಮಿಕ ರೋಗ ಹರಡುತ್ತಿರುವ ಸಮಯದಲ್ಲಿ ಅಸಾಧಾರಣ ವೈದ್ಯಕೀಯ ಅಪಾಯಗಳನ್ನು ಎದುರಿಸುತ್ತಿದ್ದಾರೆ. ದುರಾದೃಷ್ಟವಶಾತ್, ಅವರ ತಕ್ಷಣದ ಮತ್ತು ದೀರ್ಘಕಾಲದ ಅಗತ್ಯಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸರ್ಕಾರಗಳು ಸತತವಾಗಿ ನಿರ್ಲಕ್ಷ್ಯಿಸಿದೆ. ನಮ್ಮ ಸ್ಮಶಾನ ಕಾರ್ಮಿಕರಿಗೆ ಹೆಚ್ಚು ಅಗತ್ಯವಿರುವ ಈ ಬೇಡಿಕೆಗಳನ್ನು ನೀವು ವಾಸ್ತವಿಕಗೊಳಿಸಬೇಕೆಂದು ನಾವು ಕೇಳುತ್ತೇವೆ.

1 ಎಲ್ಲಾ ಸ್ಮಶಾನ/ಶವಗಾರ ಕಾರ್ಮಿಕರಿಗೆ ತಕ್ಷಣದ ಅಗತ್ಯಗಳು..

  • ವೈದ್ಯಕೀಯ ವಿಮೆ
  • ಕೋವಿಡ್ ಸಂತ್ರಸ್ಥರಿಗೆ ಆದ್ಯತೆಯ ಆಸ್ಪತ್ರೆಯ ಹಾಸಿಗೆ ಹಂಚಿಕೆ
  • ಆದ್ಯತೆಯ ವ್ಯಾಕ್ಸಿನೇಷನ್
  • ಈಗಾಗಲೇ ಒದಗಿಸಿರುವ ಪಿಪಿಇ ಕಿಟ್‌ಗಳ ಜೊತೆಗೆ ಕೈಗವಸುಗಳು ಮತ್ತು ಮುಖವಾಡಗಳು
  • ತಮ್ಮ ಕೆಲಸದ ಅವಧಿಗಿಂತ ಹೆಚ್ಚು ಸಮಯ ಕೆಲಸ ಮಾಡಿದರೆ ಅದಕ್ಕೆ ಅವರ ಪಾವತಿಯನ್ನು ಹೆಚ್ಚಿಸಬೇಕು
  • ಕೆಲಸದ ಹೊರೆ ಹೆಚ್ಚಿಗೆಯಾದ ಕಾರಣ ಅವರನ್ನು ಸಹಾಯ ಮಾಡಲು ಉದ್ಯೋಗಿಗಳ ಸಂಖ್ಯೆಯನ್ನು ಹೆಚ್ಚಿಸಬೇಕು.

2 ಎಲ್ಲಾ ಸ್ಮಶಾನ ಕಾರ್ಮಿಕರಿಗೆ ಶಾಶ್ವತ ಪರಿಹಾರಗಳು

  • 4 ನೇ ದರ್ಜೆಯ, ಡಿ-ಗ್ರೂಪ್ ಸರ್ಕಾರಿ ನೌಕರರಾಗಿ ಶಾಶ್ವತ ಉದ್ಯೋಗ ಕಲ್ಪಿಸಬೇಕು.
  • ಇಎಸ್‌ಐ ಮತ್ತು ಪಿಎಸ್‌ಗೆ ಅವಕಾಶ ಕಲ್ಪಿಸಿಕೊಡಬೇಕು.
  • ಸ್ಮಶಾನ/ಶವಾಗರದ ಆವರಣದ ಹೊರಗೆ ವಸತಿ ಕಲ್ಪಿಸಬೇಕು.
  • ಕೆಲಸದ ಸಮಯವನ್ನು 8 ಗಂಟೆಗಳ ಅವಧಿಗೆ ಶಿಫ್ಟ್‌ ಮಾದರಿಗೆ ಸೀಮಿತಗೊಳಿಸಬೇಕು.
  • ಸ್ಮಶಾನ ಕಾರ್ಮಿಕರ ಮಕ್ಕಳಿಗೆ ಗುಣಮಟ್ಟದ ಶಾಲೆಗಳಲ್ಲಿ ಉಚಿತ ಶಿಕ್ಷಣ ನೀಡಬೇಕು.
  • ಎಲ್ಲಾ ಧಾರ್ಮಿಕ ಸಮುದಾಯಗಳ (ಹಿಂದೂ, ಮುಸ್ಲಿಂ ಕ್ರಿಶ್ಚಿಯನ್, ಇತರೆ) ಸ್ಮಶಾನ ಕಾರ್ಮಿಕರಿಗೆ ಸರ್ಕಾರದ ಸೌಲಭ್ಯಗಳು ದೊರೆಯಬೇಕು.
  • ಸ್ಮಶಾನ ಕಾರ್ಮಿಕರಿಗೆ ನಿರ್ದಿಷ್ಟವಾದ ಸಾಮಾಜಿಕ ಮತ್ತು ಶೈಕ್ಷಣಿಕೆ ಉನ್ನತಿಗಾಗಿ ಹೊಸ ನೀತಿಗಳನ್ನು ಅನುಷ್ಠಾನಗೊಳಿಸಬೇಕು.
    ಸ್ಮಶಾನ ಕಾರ್ಮಿಕರ ಮತ್ತು ಸಾರ್ವಿಜನಿಕರ ಹಿತದೃಷ್ಟಿಯಿಂದ ನಮ್ಮ ಕರ್ನಾಟಕ ಸರ್ಕಾರ ಈ ನೀತಿಗಳನ್ನು ತಕ್ಷಣವೇ ಜಾರಿಗೆ ತರುತ್ತದೆ ಎಂದು ನಾವು ಭಾವಿಸುತ್ತೇವೆ’ ಎಂದು ಚೇತನ್ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಮತ್ತು ಸಿಎಂ ಯಡಿಯೂರಪ್ಪ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.
Categories
ಸಿನಿ ಸುದ್ದಿ

ಮಹಾನಾಯಕನ ತಂಟೆಗೆ ಹೋದ ಉಪೇಂದ್ರ : ನೆಟ್ಟಿಗರ ಆಕ್ರೋಶಕ್ಕೆ ಕ್ಷಮೆ ಕೇಳಿ ಸುಮ್ಮನಾದ ರಿಯಲ್ ಸ್ಟಾರ್ !

ಇದೆಲ್ಲ ಬೇಕಿತ್ತಾ? ಸೋಷಲ್ ಮೀಡಿಯಾದಲ್ಲಿ ನಟ ಉಪೇಂದ್ರ ಅವರಿಗೆ ಜನ ಕೇಳಿದ ಪ್ರಶ್ನೆ ಇದು. ಅಂಬೇಡ್ಕರ್ ವಿಚಾರದಲ್ಲಿ ನಟ ಉಪೇಂದ್ರ ನೀಡಿದ್ದ ಹೇಳಿಕೆ ತೀವ್ರ ವಿವಾದ ಸೃಷ್ಟಿಸಿದ ಬೆನ್ನಲ್ಲೇ ಅವರು ಕ್ಷಮೆ ಕೇಳಿದ್ದಾರೆ.


“ಇತಿಹಾಸ ಅರಿಯವದವರು ಇತಿಹಾಸ ಸೃಷ್ಟಿಸಲಾರ ʼ ಎಂಬುದು ಡಾಕ್ಟರ್ ಅಂಬೇಡ್ಕರ್ ಅವರ ಹೇಳಿಕೆ ಎಂಬುದನ್ನು ತಿಳಿದಿರಲಿಲ್ಲ. ಯಾರೋ ಇಂಗ್ಲಿಷ್ ಅವರ ಬರಹ ಎಂದು ತಿಳಿದು ತಪ್ಪು ಮಾತನಾಡಿದೆ. ದಯವಿಟ್ಟು ಕ್ಷಮಿಸಿ ʼ ಅಂತ ಸೋಷಲ್ ಮೀಡಿಯಾ ಅಕೌಂಟ್ ನಲ್ಲಿ ಬರೆದುಕೊಂಡಿದ್ದಾರೆ. ಇಷ್ಟಕ್ಕೂ ಆಗಿದ್ದೇನು ಗೊತ್ತಾ?


ನಟ ಉಪೇಂದ್ರ ಮೂರ್ನಾಲ್ಕು ದಿನಗಳ ಹಿಂದೆ ಸೋಷಲ್ ಮೀಡಿಯಾ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಇತಿಹಾಸ ಅರಿಯದವನು ಇತಿಹಾಸ ಸೃಷ್ಟಿಸಲಾರ ಅಂತ ಯಾರೋ ತಪ್ಪಾಗಿ ಹೇಳಿದ್ದಾರೆ. ಇತಿಹಾಸ ಸೃಷ್ಟಿಸೋದಿಕ್ಕೆ ಇತಿಹಾಸ ಗೊತ್ತಿರಬೇಕು ಅಂತೇನಿಲ್ಲ. ಇತಿಹಾಸ ತಾನಾಗಿಯೇ ಸೃಷ್ಟಿಯಾಗುತ್ತೆ ಅಂತ ಅಂದಿದ್ದರು. ಅವರ ಹೇಳಿಕೆ ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು.

ಉಪೇಂದ್ರ ಹೇಳಿಕೆಗೆ ಕೆಲವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಉಪೇಂದ್ರ ಅವರಿಗೆ ಇತಿಹಾಸ ಗೊತ್ತಿಲ್ಲ. ಸುಮ್ನೆ ಮಾತನಾಡುತ್ತಾರೆ. ಅವರಿಗೆ ಅಂಬೇಡ್ಕರ್ ಯಾರು ಅನ್ನೋದು ಗೊತ್ತಿಲ್ಲ. ಮೇಲ್ಜಾತಿಯ ಅಮಲು ಹೀಗೆಲ್ಲ ಮಾತನಾಡಿಸುತ್ತೆ ಅಂತೆಲ್ಲ ಕಟುವಾಗಿ ಟೀಕಿಸಿದ್ದರು. ಇದಾದ ಬೆನ್ನಲೇ ಉಪೇಂದ್ರ ಕ್ಷಮೆ ಕೇಳಿ ಬಚವಾಗಿದ್ದಾರೆ.

Categories
ಸಿನಿ ಸುದ್ದಿ

ಐರಾವನ್ ಚಿತ್ರ ತಂಡದಿಂದ ಆಕ್ಸಿಜನ್ ಆಂಬುಲೆನ್ಸ್ ಸೇವೆ; ಕೋವಿಡ್ ಕಿಟ್ ವಿತರಣೆ

ಆರೋಗ್ಯ ಭಾರತಿ ಮತ್ತು ಸೇವಾ ಭಾರತಿ ಸಹಯೋಗದಲ್ಲಿ ‘ಐರಾವನ್’ ಚಿತ್ರತಂಡ ಇದೀಗ ಸೇವೆಗೆ ಇಳಿದಿದೆ. ಚಿತ್ರದ ನಿರ್ಮಾಪಕ ಡಾ. ನಿರಂತರ್ ಗಣೇಶ್ ಮತ್ತು ಚಿತ್ರ ನಾಯಕ ಜಯರಾಮ್ ಕಾರ್ತಿಕ್ (ಜೆಕೆ) ಮತ್ತು ನಟ ವಿವೇಕ್ ಆಕ್ಸಿಜನ್​ ವಾಹನವನ್ನು ಇತ್ತೀಚೆಗೆ ಬ್ಯಾಟರಾಯನಪುರ ವ್ಯಾಪ್ತಿಗೆ ನೀಡಿದ್ದಾರೆ. ಅದರ ಜತೆಗೆ 10 ಸಾವಿರ ಕೋವಿಡ್ ಮೆಡಿಕಲ್ ಕಿಟ್ ಹಾಗು ಔಷಧಗಳನ್ನೂ ವಿತರಣೆ ಮಾಡಿದ್ದಾರೆ. ಈ ಕಾರ್ಯಕ್ಕೆ ಆರೆಸ್ಸೆಸ್​ನ ಪ್ರಾದೇಶಿಕ ಜನರಲ್ ಸೆಕ್ರೆಟರಿ ಎನ್ ತಿಪ್ಪೇಸ್ವಾಮಿ, ಕರ್ನಾಟಕ ರಾಜ್ಯದ ಆರೋಗ್ಯ ಭಾರತಿಯ ಜಂಟಿ ಕಾರ್ಯದರ್ಶಿ ಗಂಗಾಧರನ್ ಚಾಲನೆ ನೀಡಿದ್ದಾರೆ.


ಈ ವೇಳೆ ಮಾತನಾಡಿದ ನಿರ್ಮಾಪಕ ನಿರಂತರ್, “ಇಂಥ ವಿಷಮ ಕಾಲಘಟ್ಟದಲ್ಲಿ ಸಮಾಜಕ್ಕೆ ನಾವು ಮಾಡಬೇಕಾದ ಜವಾಬ್ದಾರಿ ಇದು. ಎಲ್ಲೆಡೆ ಆ್ಯಂಬುಲೆನ್ಸ್ ಕೊರತೆ ಕಾಡುತ್ತಿದೆ. ಅದನ್ನೇ ಗಮನದಲ್ಲಿಟ್ಟುಕೊಂಡು ಬ್ಯಾಟರಾಯನಪುರ ವ್ಯಾಪ್ತಿಗೆ ಆಕ್ಸಿಜನ್ ಸಹಿತ ಆ್ಯಂಬುಲೆನ್ಸ್ ನೀಡಿದ್ದೇವೆ. ಇದರ ಜತೆಗೆ ಕೋವಿಡ್ ಮೆಡಿಕಲ್ ಕಿಟ್ ಅನ್ನೂ ವಿತರಣೆ ಮಾಡಿದ್ದೇವೆ. ಸೋಂಕಿನ ಲಕ್ಷಣ ಕಾಣುತ್ತಿದ್ದಂತೆ ಕಿಟ್​ನಲ್ಲಿ ನೀಡಿದ ಔಷಧಗಳನ್ನು ತೆಗೆದುಕೊಳ್ಳಬಹುದು. ಯಾವ್ಯಾವುದನ್ನು ಹೇಗೆ ತೆಗೆದುಕೊಳ್ಳಬೇಕು ಎಂಬ ಮಾಹಿತಿಯನ್ನೂ ನೀಡಿದ್ದೇವೆ ಎಂದಿದ್ದಾರೆ.

Categories
ಸಿನಿ ಸುದ್ದಿ

ಜೆಕೆಶ್ರೀ ಬೆಳ್ಳಿತೆರೆಯ ಬದುಕು.. ಹಿರಿಯ ನಟ ಶ್ರೀನಿವಾಸ್ ಮೂರ್ತಿ ಅವರ ಹುಟ್ಟುಹಬ್ಬಕ್ಕೆ ಪಲ್ಲಕ್ಕಿಯ ಪ್ರೀತಿಯ ಬರಹ

ನಟ, ನಿರ್ಮಾಪಕ ಕಮ್ ನಿರ್ದೇಶಕ ಪಲ್ಲಕ್ಕಿ ಅವರು ಹಿರಿಯ ನಟ ಶ್ರೀನಿವಾಸ್ ಅವರ ಹುಟ್ಟುಹಬ್ಬದ ಅಂಗವಾಗಿ ಬರೆದ ಒಂದು ಆಪ್ತ ಬರಹವಿದು

‘ಸಿದ್ದಲಿಂಗಯ್ಯನವರ ಕಣ್ಣು ಇವರ ಮೇಲೆ ಬಿತ್ತು, ಒಂದೊಂದು ಸಿನಿಮಾದಲ್ಲೂ ವಿಭಿನ್ನವಾಗಿ ಕಾಣಿಸತೊಡಗಿದ ಇವರು, ಅಷ್ಟೇ ಶ್ರದ್ದೆಯಿಂದ ಪಾಲಿಸತೊಡಗಿದರು. ಅಲ್ಲಿಯವರೆವಿಗೂ ನಾಯಕ ನಟರಾಗಿ ವಿಜೃಂಭಿಸುತ್ತಿದ್ದ ಕೆಲವರಿಗೆ ಈ ನಟನ ನಡೆ ನುಡಿಯಿಂದ ಸ್ವಲ್ಪ ಮಟ್ಟಿಗೆ ಆತಂಕವಾಗಿದ್ದು ನಿಜ, ಭಾವ ಭಾಷೆಯ ಶುದ್ಧತೆ , ನೋಡಬೇಕು ಎನ್ನಿಸುವ ಮುಖ ಕನ್ನಡ ಪ್ರೇಕ್ಷಕರಿಗೆ ಹಿಡಿಸಿತ್ತು. ಏರು ಮುಖವಾಗಿ ಮೇಲೆ ಏರುತ್ತಲೇ ಬಂದ ಈ ನಾಯಕ ನಟ , ಹಿರಿಯ ನಾಯಕಿ ನಟಿಯರ ಜೊತೆ ಡ್ಯುಯೆಟ್ ಹಾಡಿನಲ್ಲಿ ತಣ್ಣಗೆ ಸಣ್ಣಗೆ ಕುಣಿಯಲಾರಂಭಿಸಿದರು.

ಬಹು ಸವಾಲಿನ ಪಾತ್ರಗಳಲ್ಲಿ ಲೀಲಾಜಾಲವಾಗಿ ಅಭಿನಯಿಸತೊಡಗಿದರು. ಪತ್ರಿಕೆಗಳಲ್ಲಿ ಸುದ್ದಿಗಳು ಬರಲಾರಂಭಿಸಿದವು, ಹೊಸ ನಿರ್ದೇಶಕರ ಹೊಸ ಆಲೋಚನೆಗಳಿಗೆ ಈ ಕಲಾವಿದರು ಬೇಕೆನ್ನಿಸಿದರು. ತಮ್ಮದೇ ನಿರ್ಮಾಣದಲ್ಲಿ ತೊಡಗಿಸಿಕೊ0ಡು ಅನ್ನದಾತ ರಾದರು. ಭೋಜರಾಜನ ಆಸ್ಥಾನದಲ್ಲಿ ಭೋಜನಾಗಿ ಪಾತ್ರಕ್ಕೆ ಜೀವ ತುಂಬಿ ಯಶಸ್ಸಿನ ತುದಿ ಮುಟ್ಟಿದರು. ಹಲವಾರು ಚಲನಚಿತ್ರಗಳು ನಿರ್ಮಾಣವಾಗಿ ಸೋಲು- ಗೆಲುವು ಎರಡರ ರುಚಿ ತೋರಿಸಿಕೊಟ್ಟವು. ಆದರೂ ಎದೆಗುಂದದೆ ಸುಪುತ್ರನನ್ನು ಬೆಳ್ಳಿತೆರೆಗೆ ಬೊಂಬಾಟ್ ಆಗಿ ಪರಿಚಯಿಸಿದರು. ಅಪ್ಪನಂತೆ ಎಲ್ಲಾ ವಿಭಾಗಗಳಲ್ಲೂ ಹೆಸರು ಮಾಡಿಕೊಂಡ ಈ ನಾಯಕ ಕನ್ನಡದ ಕೆಲವು ನಿರ್ಮಾಪಕ/ನಿರ್ದೇಶಕರಿಗೆ ‘ಧಿಮಾಕು’ ಪ್ರದರ್ಶನ ಮಾಡ್ತಾರೆ ಅಂತ ಗಾಂಧಿನಗರದಲ್ಲಿ ಗುಲ್ಲು ಎಬ್ಬಿಸಿದರು.

ಆದರೆ, ಈ ಇಬ್ಬರೂ ಕಲಾವಿದರು ಶಾಂತಿ, ಸಹನೆಯಿಂದ ವರ್ತಿಸಿ ದೊಡ್ಡವರಾದರು. ಚಾಮಯ್ಯ ಮೇಷ್ಟ್ರು ರಷ್ಟೇ ಸಮಾನಾದ ಪಾತ್ರಗಳನ್ನು ತೂಗಿಸಿದ ಈ ಕಲಾವಿದ ಕನ್ನಡನಾಡಿನ ಆಗಿನ ಕೋಲಾರ ಜಿಲ್ಲೆಯವರು. ಇವರು ಮನಸ್ಸು ಮಾಡಿದ್ದರೆ, ತೆಲುಗು ಸಿನಿಮಾ ರಂಗದಲ್ಲಿ ಮಿಂಚಬಹುದಿತ್ತು ಆದರೆ, ಈ ನೆಲದ ಅಭಿಮಾನ ಇಲ್ಲಿಯೇ ಉಳಿಸಿತು, ಪೌರಾಣಿಕ, ಐತಿಹಾಸಿಕ, ಸಾಮಾಜಿಕ, ಪಕ್ಕಾ ಕಮರ್ಷಿಯಲ್ ಎಲಿಮೆಂಟ್ ಸಿನಿಮಾಗಳಲ್ಲಿ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡರು.

ನಮ್ಮ ಚಿತ್ರರಂಗ ಇವರನ್ನು ಇನ್ನೂ ಚೆನ್ನಾಗಿ ಬಳಸಿಕೊಳ್ಳಬಹುದಿತ್ತು ,ಬಳಸಿಕೊಳ್ಳುವ ಪ್ರತಿಭಾವಂತ ನಿರ್ದೇಶಕರುಗಳು ಗಟ್ಟಿ ಪಾತ್ರಗಳನ್ನು ಹುಟ್ಟು ಹಾಕಿ ಇವರ ಕೈಗೆ ಕೊಟ್ಟರೆ ಇನ್ನು ಗಟ್ಟಿ ಮಾಡಿಕೊಡುವುದರಲ್ಲಿ ಸಂಶಯವೇ ಇಲ್ಲ. ಸಹಜ ನಟನಿಗೆ ಇರಬೇಕಾದ ಎಲ್ಲಾ ಗುಣಗಳು ಇವರಲ್ಲಿವೆ. ಚಲನಚಿತ್ರ ಕ್ಷೇತ್ರಕ್ಕೆ ಬರುವ ಮುನ್ನ ಸರ್ಕಾರಿ ಹುದ್ದೆಯಲ್ಲಿ ಇದ್ದರು ಎಂದು ಕೇಳಿದ್ದೆ ಈ ರಂಗ ಸೇವೆಗಾಗಿ ತೊರೆದು ಬಂದ ಅದ್ಬುತ ನಟ, ನಿರ್ಮಾಪಕ, ನಿರ್ದೇಶಕ ಹೀಗೆ ಹಲವಾರು ವಿಭಾಗಗಳಲ್ಲಿ ಕಾಣಿಸಿಕೊಂಡ ಈ ನಾಯಕ ನಟ, ಈಗಿನ ನಟರಿಗೆ ಮಾದರಿ ಆಗಿದ್ದಾರೆ. ಸರ್ಕಾರ ಸಮಾಜ ಇಂತಹ ನಟನಿಗೆ ಗೌರವ/ಪ್ರಶಸ್ತಿ ಅರ್ಪಿಸಿದ್ದೇ ಆದಲ್ಲಿ ಕೊಟ್ಟ ಪ್ರಶಸ್ತಿಗೆ ಗೌರವ ಲಭಿಸುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ…

ಬೆಳ್ಳಿತೆರೆಗೆ ಇವರು ಬಂದರೆ ತೂಕ, ಪಾತ್ರಗಳಿಗೆ ಪಾಕ, ಪ್ರೇಕ್ಷಕರು ಮೂಕ. ಅಷ್ಟೊಂದು ಮೌನವಹಿಸಿ ಇವರ ಪಾತ್ರಗಳನ್ನು ನೋಡುತ್ತಾ ಅನುಭವಿಸಿದ್ದಾರೆ, ರಂಗ ರೊಳಗಿನ ಎಲ್ಲಾ ರಂಗು ರಂಗಿನ ಜನರನ್ನು ಕಂಡವರು,ಇವರ ಹಾರಾಟ, ಚೀರಾಟ, ಕೂಗಾಟ ನೋಡಿದವರು ಈ ನಟ, ಅಹಂ ಇಲ್ಲದ ನಟ. ಆದರೆ ಯಾವುದೇ ಪಾತ್ರ ಕೊಟ್ಟರು ಮಾಡಬಲ್ಲೆನೆಂಬ ಅಹಂ ಇರುವವರು. ಕನ್ನಡಿಗರ ಮನೆಮಾತಾಗಿರುವ ನಮ್ಮೆಲ್ಲರ ಪ್ರೀತಿಯ ಕಲಾವಿದ ಜೆ.ಕೆ.ಶ್ರೀನಿವಾಸಮೂರ್ತಿ ಅವರು ಇನ್ನೂ ಹಲವು ಪಾತ್ರಗಳ ಮೂಲಕ ರಂಜಿಸಲಿ’ ಎಂದು ಬರಹ ರೂಪದಲ್ಲಿ ಪಲ್ಲಕ್ಕಿ ಹಾರೈಸಿದ್ದಾರೆ.

Categories
ಸಿನಿ ಸುದ್ದಿ

ಶ್ವಾಸ ಹೆಸರಿನ ಆಕ್ಸಿಜನ್ ಎಕ್ಸ್‌ಪ್ರೆಸ್‌ ಗೆ ಸಚಿವ ಸುಧಾಕರ್ ಚಾಲನೆ; ಕೊರೊನಾ ಸೋಂಕಿತರ ನೆರವಿಗೆ ನಿಂತ ಹರ್ಷಿಕಾ, ಭುವನ್

ಕಷ್ಟ ಅಂತ ಬಂದರೆ ಒಂದಷ್ಟು ಮಂದಿ ಅಂತಹವರ ನೆರವಿಗೆ ಬರೋದು ಗೊತ್ತೇ ಇದೆ. ಅಂತಹವರ ಸಾಲಿಗೆ ಈಗಾಗಲೇ ಗುರುತಿಸಿಕೊಂಡಿರುವ ನಟಿ ಹರ್ಷಿಕಾ‌ ಪೂಣಚ್ಚ ಹಾಗೂ ನಟ ಭುವನ್ ಪೊನ್ನಪ್ಪ ಈ ಕೊರೊನಾ ಸಂಕಷ್ಟದಲ್ಲಿ ಸಿಲುಕಿದ ಅದೆಷ್ಟೋ ಜನರಿಗೆ ನೆರವಾಗಿದ್ದಾರೆ.
ಹೌದು, ಕಳೆದ ವರ್ಷ ಕೊರೊನಾ ಹೊಡೆತಕ್ಕೆ ತತ್ತರಿಸಿದ್ದ ಜನರಿಗೆ ಹರ್ಷಿಕಾ ಮತ್ತು ಭುವನ್ ಅವರು ತಮ್ಮ ಸಮಾನ ಮನಸ್ಕರ ಜೊತೆಗೂಡಿ ಒಂದಷ್ಟು ಸಹಾಯ ಹಸ್ತ ಚಾಚಿದ್ದರು. ಕೊರೊನಾ ಮಾತ್ರವಲ್ಲ, ಹಿಂದೆ ಕೊಡಗು ಮಳೆಯಿಂದ ಸಂಪೂರ್ಣ ಜಲಾವೃತಗೊಂಡಾಗಲೂ ಇವರು ಕಾರ್ಯ ನಿರ್ವಹಿಸಿದ್ದರು.

ಈಗ ಕೊರೊನಾದ ಎರಡನೇ ಅಲೆ ಜೋರಾಗಿರುವುದರಿಂದ ಮತ್ತಷ್ಟು ಜಾಗೃತಗೊಂಡ ಹರ್ಷಿಕಾ ಮತ್ತು ಭುವನ್,
ಯಶಸ್ವಿ “ಫೀಡ್ ಕರ್ನಾಟಕ” ಯೋಜನೆ ನಂತರ ಭುವನಂ ಫೌಂಡೇಶನ್‌ ಮೂಲಕ ಹೊಸ ಯೋಜನೆಗಳ ಮೂಲಕ ಅಗತ್ಯ ಸೇವೆ ಕಲ್ಪಿಸುತ್ತಿದ್ದಾರೆ.

ಈ ನಿಟ್ಟಿನಲ್ಲಿ ಅವರು”ಶ್ವಾಸ” ಆಕ್ಸಿಜನ್ ಎಕ್ಸ್‌ಪ್ರೆಸ್ ಬಸ್‌ಗಳಲ್ಲಿ ಆಮ್ಲಜನಕ ಸಾಂದ್ರಕಗಳನ್ನು ಅಳವಡಿಸಿ ಆ ಮೂಲಕ ಕೊರೊನಾ ಸೋಂಕಿತರ ನೆರವಿಗೆ ಧಾವಿಸುತ್ತಿದ್ದಾರೆ. ಅದಕ್ಕೆ ಈಗಾಗಲೇ ಚಾಲನೆಯೂ ದ
ಉಚಿತ ಸೇವೆ ಇದಾಗಿದ್ದು, ಮನೆಯ ಬಾಗಿಲಿಗೇ, ಆಟೋ ಸೇವೆಯನ್ನೂ ಮಾಡುತ್ತಿದೆ.

ಕೋವಿಡ್ ರೋಗಿಗಳು ಮತ್ತು ಪ್ರತ್ಯೇಕವಾಗಿ ರೋಗಿಗಳಿಗೆ ಉಚಿತ ಪಡಿತರ, ಆಹಾರ, ಆಮ್ಲಜನಕ ವಿತರಣೆ ಕಾರ್ಯಕ್ರಮಕ್ಕೆ ಆರೋಗ್ಯ ಸಚಿವ ಡಾ.ಸುಧಾಕರ್ ಅವರು ಮೇ.14ರಂದು ಫ್ರೀಡಂ ಪಾರ್ಕ್ ನಲ್ಲಿ ಚಾಲನೆ ನೀಡಿದ್ದಾರೆ.

ಈ ಸೇವೆ ಉಚಿತವಾಗಿದ್ದು, ಅಗತ್ತ ಇರುವರು ಪಡೆಯಬಹುದಾಗಿದೆ ಎಂಬುದು ಹರ್ಷಿಕಾ ಹಾಗೂ ಭುವನ್ ಮಾತು.

Categories
ಸಿನಿ ಸುದ್ದಿ

ಸಚ್ಚಿದಾನಂದ ಆಶ್ರಮಕ್ಕೆ ನಟ ದರ್ಶನ್ ಭೇಟಿ; ಸಂಕಷ್ಟದಲ್ಲಿರೋ ಜನರಿಗೆ ನೆರವು ಬಗ್ಗೆ ಚರ್ಚೆ

ನಟ ದರ್ಶನ್‌ ತಮ್ಮ ತವರೂರು ಮೈಸೂರಿನಲ್ಲಿದ್ದಾರೆ. ಸದ್ಯಕ್ಕೆ ಲಾಕ್‌ ಡೌನ್‌ ದಿನಗಳನ್ನು ಅಲ್ಲಿನ ತಮ್ಮ ಫಾರ್ಮ್‌ ಹೌಸ್‌ ನಲ್ಲಿ ಕಳೆಯುತ್ತಿರುವ ಅವರು, ಮಂಗಳವಾರ ಅಲ್ಲಿನ ಸಚ್ಚಿದಾನಂದ ಆಶ್ರಮಕ್ಕೆ ಭೇಟಿ ನೀಡಿ ಅಲ್ಲಿ ಶ್ರೀಗಳ ಜತೆಗೆ ಮಾತುಕತೆ ನಡೆಸಿದ್ದಾರೆ.

ಸದ್ಯಕ್ಕೆ ಈ ಭೇಟಿಯ ಉದ್ದೇಶ ಗೊತ್ತಾಗಿಲ್ಲ. ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ವಾಸ್ತವ್ಯ ಹೂಡಿರುವ ದರ್ಶನ್‌, ಸಂಕಷ್ಟದಲ್ಲಿರುವ ಜನರಿಗೆ ನೆರವು ನೀಡುವುದರ ಕುರಿತೇ ಸಚ್ಚಿದಾನಂದ ಆಶ್ರಮಕ್ಕೆ ಭೇಟಿ ನೀಡಿರುವ ಸಾಧ್ಯತೆಗಳಿವೆ ಎನ್ನುತ್ತಿವೆ ಮೂಲಗಳು.

ಈ ಸಂದರ್ಭದಲ್ಲಿ ಶ್ರೀ ಗಳಿಂದ ದರ್ಶನ್‌ ಮುದ್ದಿನ ಹಸಿರು ಗಿಳಿಯನ್ನು ಪಡೆದು, ತಮ್ಮ ಫಾರ್ಮ್‌ ಹೌಸ್‌ ಗೆ ತಂದಿದ್ದಾರೆ.

Categories
ಸಿನಿ ಸುದ್ದಿ

ಆರೋಪ ಏನೇ ಇದ್ದರೂ ಇವರ ಸಾರ್ವಜನಿಕ ಸೇವೆಯನ್ನು ಮೆಚ್ಚಲಾಗದೇ ಇದ್ದೀತಾ?

ಓಕೆ, ಇದನ್ನು ಕಳಂಕ ತೊಳೆದುಕೊಳ್ಳುವ ಪ್ರಯತ್ನವೇ ಅನ್ನೋಣ, ಅದಕ್ಕೆಲ್ಲ ಜೀವದ ಹಂಗು ತೊರೆದು ಈ ರೀತಿ ಫೀಲ್ಡಿಗಿಳಿದು ಕೆಲಸ ಮಾಡುವ ಧೈರ್ಯ ಮೆಚ್ಚಲೇಬೇಕು. ಆದರೂ ಈ ನಟಿ ಫೀಲ್ಡಿಗಿಳಿದಿದ್ದಾರೆ. ಕೊರೊನಾ ಕಾರಣಕ್ಕೆ ಸಂಕಷ್ಟಕ್ಕೆ ಸಿಲುಕಿರುವ ಜನರ ನೆರವಿಗೆ ನಿಂತಿದ್ದಾರೆ. ದಿನವಿಡೀ ರಸ್ತೆ ಮೇಲೆ ನಿಂತು ಕರ್ತವ್ಯ ನಿರ್ವಹಿಸುವ ಪೊಲೀಸರಿಗೆ ಆಹಾರ ಸೌಲಭ್ಯ, ಸ್ಮಶಾನಗಳ ಸಿಬ್ಬಂದಿಗೆ ದಿನಸಿ ಕಿಟ್‌ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಅಷ್ಟು ಮಾತ್ರವಲ್ಲ ಅವರ ಅಡುಗೆ ಮನೆಯೇ ಈಗ ಸಹಾಯಕರ ಹೊಟ್ಟೆ ತುಂಬಿಸುವ ಅಕ್ಷಯ ಪಾತ್ರೆ ಆಗಿದೆ.

ಕೆಲಸವಿಲ್ಲದೆ ಒಂದೂತ್ತಿನ ಊಟಕ್ಕೂ ಪರದಾಡುತ್ತಿರುವ ಕೊಳೆಗೇರಿ ಪ್ರದೇಶಗಳಲ್ಲಿನ ಜನರಿಗೆ ಅಲ್ಲಿಂದ ಆಹಾರ ರೆಡಿಯಾಗಿ ಸರಬರಾಜು ಆಗುತ್ತಿದೆ. ಯಾವುದೋ ಆರೋಪದಲ್ಲಿ ಕೆಲವರು ತನ್ನನ್ನು ಏನೇನೋ ಅಂತ ಜರಿದರೂ, ಆ ನಟಿ ಮಾತ್ರ ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಅಸಹಾಯಕ ಜನರ ನೆರವಿಗೆ ಮಿಡಿದಿದ್ದಾರೆಂದರೆ ಇದನ್ನು ಮೆಚ್ಚಲು ಇರಲಾದೀತೆ? ಅಂದಹಾಗೆ, ಆ ನಟಿಯ ಹೆಸರು ರಾಗಿಣಿ ಅಲಿಯಾಸ್‌ ರಾಗಿಣಿ ದ್ವಿವೇದಿ.

ಕಳೆದ ವರ್ಷ ಕೊರೊನಾ ಕಾರಣಕ್ಕೆ ಲಾಕ್‌ ಡೌನ್‌ ಆದಾಗಲೂ ನಟಿ ರಾಗಿಣಿ ಹೀಗೆಯೇ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಕನ್ನಡದ ಬಹುತೇಕ ನಟರು, ನಟಿಯರು ಲಾಕ್‌ ಡೌನ್‌ ದಿನಗಳನ್ನು ರುಚಿ ರುಚಿಯಾದ ಅಡುಗೆ ಮಾಡುವುದಕ್ಕೂ, ಮನೆಯವರ ಜತೆಗೆ ಹಾಯ್‌ ಆಗಿ ಕಾಲ ಕಳೆಯುವುದಕ್ಕೂ ಮೀಸಲಿಟ್ಟಿದ್ದ ದಿನಗಳಲ್ಲಿ ನಟಿ ರಾಗಿಣಿ ಕಾಲಿಗೆ ಚಕ್ರ ಕಟ್ಟಕೊಂಡು ನಗರದ ಗಲ್ಲಿ ಗಲ್ಲಿಗಳಿಗೆ ಹೋಗಿ, ಅಸಹಾಯಕರ ನೆರವಿಗೆ ನಿಂತಿದ್ದರು.

ಇದಾಗಿ ಒಂದಷ್ಟು ದಿನಕ್ಕೆ ಡ್ರಗ್ಸ್‌ ಕೇಸ್‌ ಪ್ರಕರಣದಲ್ಲಿ ರಾಗಿಣಿ ಹೆಸರು ಕೂಡ ಕೇಳಿ ಬಂತು. ಆ ಹೊತ್ತಿಗೆ ರಾಗಿಣಿ ಹೆಸರು ದೊಡ್ಡದಾಗಿಯೇ ಸೌಂಡ್‌ ಮಾಡಿತು. ಒಂದು ಹಂತದಲ್ಲಿ ಅವರು ಜೈಲಿಗೂ ಹೋಗಬೇಕಾಗಿತು ಬಂತು. ಹಾಗಂತ ಅವರೇನು ಜೈಲಿಗೆ ಹಾಗೆ ಹೋಗಿ ಹೀಗೆ ಬರಲಿಲ್ಲ, ಬರೋಬ್ಬರಿ ಎರಡೂವರೆ ತಿಂಗಳೆ ಆಗಿ ಹೋದವು.

ಸೆಲಿಬ್ರಿಟಿಯಾಗಿ ಜಾಲಿ ಲೈಫ್‌ ಕಳೆದಿದ್ದ ರಾಗಿಣಿ, ಜೈಲಿಗೆ ಹೋಗಿ ಕಡು ಕಷ್ಟದ ದಿನಗಳನ್ನೇ ಕಳೆದು ಬಂದರು. ಹಾಗೆ ಬಂದವರು ಇನ್ನಾವುದೋ ಉಸಾಬರಿಗೆ ಹೋಗದೆ ತಾವಾಯಿತು ತಮ್ಮ ಪಾಡಾಯಿತು ಅಂತಲೇ ಇರಬಹುದು ಅಂತಲೇ ಅಂದುಕೊಂಡಿದ್ದರು. ಆದರೆ ರಾಗಿಣಿ ಅದೊಂದು ಕೆಟ್ಟ ಕನಸು ಅಂತ ಅದೆಲ್ಲ ಮರೆತು ಬಿಟ್ಟು, ಮತ್ತೆ ಸಾಮಾಜಿಕ ಕಾರ್ಯಕ್ಕೆ ನಿಂತಿರುವುದನ್ನು ಶ್ಲಾಘಿಸದೆ ಬಿಟ್ಟರೆ ಅದೊಂದು ಅಪರಾಧವೇ ಆದೀತು.

ಅದಕ್ಕೂ ಕಾರಣ ಇದೆ. ತಾವೆಲ್ಲ ತುಂಬಾ ಸಾಚಾಗಳು, ಅಂತಹ ಯಾವುದೇ ಅಪರಾಧದ ಆರೋಪ ಹೊತ್ತಿಲ್ಲ ಅಂತೆಲ್ಲ ಫೋಸು ಕೊಡುವ ಕನ್ನಡದ ಅದೆಷ್ಟೋ ನಟರು, ನಟಿಯರು ಈ ಸಂಕಷ್ಟದ ಸಂದರ್ಭದಲ್ಲಿ ಜನರ ನೆರವಿಗೆ ನಿಂತಿದ್ದಾರೆ ? ಅದು ಬಿಡಿ, ತಾವೆಲ್ಲ ಕನ್ನಡದ ವೀರರು, ಕನ್ನಡಕ್ಕಾಗಿಯೇ ಹುಟ್ಟಿ ಬಂದವರು, ಕನ್ನಡದ ಜನಕ್ಕೆ ತೊಂದರೆಯಾದರೇ ಸುಮ್ಮನೆ ಕೂರಲಾರೆವೂ ಅಂದವರೆಲ್ಲ ಎಷ್ಟು ಜನ ಈ ಸಂಕಷ್ಟದ ಸಂದರ್ಭದಲ್ಲಿ ಜನರ ನೆರವಿಗೆ ಬಂದಿದ್ದಾರೆನ್ನುವುದು ನಿಮಗೂ ಗೊತ್ತಿದೆ. ಹೋಗ, ಅಭಿಮಾನಿಗಳೇ ನಮ್ಮ ಆಸ್ತಿ ಅಂದವರಾದರೂ ಎಷ್ಟು ನಟರು ಅಭಿಮಾನಿಗಳ ನೆರವಿಗೆ ನಿಂತಿದ್ದಾರೆ ? ಇವರ ವೀರಾವೇಷಗಳೆಲ್ಲವೂ ರೀಲ್‌ ಮೇಲೆಯೇ ಅನ್ನೋದು ಈಗ ಮತ್ತೊಮ್ಮೆ ಜಗ್ಗಜಾಹ್ಹೀರು.

ಇಂತಹ ಸಂದರ್ಭದಲ್ಲಿ ಒಬ್ಬ ನಟಿ ತನ್ನ ಜೀವವನ್ನೇ ಪಣಕ್ಕಿಟ್ಟು ಅಸಹಾಯಕ ಜನರಿಗೆ ಆಹಾರ ಧಾನ್ಯ ವಿತರಿಸುತ್ತಾ ನಿಜವಾದ ಮಾನವೀಯತೆ ಮೆರೆಯುತ್ತಿದ್ದಾರೆಂದರೆ, ನಿಜಕ್ಕೂ ಅದು ಮೆಚ್ಚಲೇಬೇಕಾದ ಕೆಲಸ.
ನಟಿ ರಾಗಿಣಿ ನಿಜಕ್ಕೂ ಕೊರೊನಾ ವಾರಿಯರ್ಸ್‌ ಆಗಿದ್ದಾರೆ. ಜಿನೆಕ್ಸ್ಟ್‌ ಚಾರಿಟೆಬಲ್‌ ಟ್ರಸ್ಟ್‌ ನೇತೃತ್ವದಲ್ಲಿ ಮೊನ್ನೆ ಕಾಕ್ಸ್‌ಟೌನ್‌ ಹತ್ತಿರ ಕಲ್ಪಹಳ್ಳಿ ಹಾಗೂ ಭಾರತಿ ನಗರ ಸ್ಮಶಾನ ಸಿಬ್ಬಂದಿಗೆ ಆಹಾರ ಸಾಮಾಗ್ರಿ ವಿತರಣೆ ಮಾಡಿದರು. ಅದಕ್ಕೂ ಮುಂಚೆ, ಯಲಹಂಕ

ಸಮೀಪದ ಅಳ್ಳಾಲ್ ಸಂದ್ರ ಕೊಳಗೇರಿ ಪ್ರದೇಶದಲ್ಲಿನ ಜನರಿಗೆ ಫುಡ್ ಕಿಡ್ ನೀಡಿದ್ದರು. ರೈಲ್ವೆ ಕಾರ್ಮಿಕರಿಗೂ ರೇಷನ್ ವಿತರಣೆ ಮಾಡಿದ್ದರು. ಬಾಬು ಸಾಬ್ ಪಾಳ್ಯ ದಲ್ಲೂ ಸಾಕಷ್ಟು ಕುಟುಂಬಗಳಿಗೆ ಇಂತಹದೇ ನೆರವು ನೀಡಿದ್ದರು. ಅಷ್ಟು ಮಾತ್ರವಲ್ಲ, ಹೆಬ್ಬಾಳ, ಗೋವಿಂದಪುರ ಜತೆಗೆ ನಗರದ ವಿವಿಧ ಆಸ್ಪತ್ರೆಗಳಲ್ಲಿನ ಜನರಿಗೂ ತಮ್ಮ ಕೈಲಾದ ಸೇವೆ ಮಾಡಿದ್ದಾರೆ. ಇಷ್ಟಕ್ಕೂ ಇದೆಲ್ಲವನ್ನು ಅವರು ಯಾಕೆ ಮಾಡುತ್ತಿದ್ದಾರೆ ಗೊತ್ತಾ? ”

ಕೊರೊನಾ ಅಸಾಹಯಕ ಜನರನ್ನು ಬೀದಿಗೆ ತಳ್ಳಿದೆ. ಎಷ್ಟೋ ಜನರಿಗೆ ಈಗ ಕೂಲಿ ಇಲ್ಲ. ಕೂಲಿ ಇಲ್ಲ ಅಂದ್ರೆ ಅವರಿಗೆ ಒಂದೂತ್ತಿನ ಊಟ ಕೂಡ ಸಿಗುವುದಿಲ್ಲ. ಈ ಸಮಯದಲ್ಲಿ ನಾವು ಕಷ್ಟದಲ್ಲಿರುವವರಿಗೆ ನೆರವಿಗೆ ನಿಲ್ಲಬೇಕಿದೆ. ಅದೇ ಕಾರಣಕ್ಕೆ ನಾವೀಗ ಈ ಕೆಲಸ ಶುರು ಮಾಡಿದ್ದೇವೆ. ಇದನ್ನು ನಾನು ಯಾವುದೇ ಉದ್ದೇಶಕ್ಕೂ ಮಾಡುತ್ತಿಲ್ಲ. ಕಷ್ಟವೋ ಸುಖವೋ ಹಂಚಿ ತಿನ್ನೋಣ ಅನ್ನೋದು ನನ್ನ ಪಾಲಿಸಿʼ ಎಂದು ರಾಗಿಣಿ ಹೇಳುವಾಗ ಅವರ ಮುಖದಲ್ಲಿ ಕಂಡಿದ್ದು ಮುಗ್ದತೆ ಮಾತ್ರ.

Categories
ಸಿನಿ ಸುದ್ದಿ

ಸಿನಿಮಾ ಕಾರ್ಮಿಕರಿಗೆ ಕೋವಿಡ್‌ ಕೇಂದ್ರ ಆರಂಭಿಸಿ- ಸರ್ಕಾರಕ್ಕೆ ನಿರ್ಮಾಪಕ ಭಾ.ಮ. ಹರೀಶ್‌ ಮನವಿ


ಕೊೊರೊನಾ ಎರಡನೇ ಅಲೆಯ ಭೀಕರತೆ ಚಿತ್ರೋದ್ಯವನ್ನು ಕಂಗಾಲಾಗಿಸಿದೆ. ಸಿನಿಮಾ ಚಟುವಟಿಕೆಗಳ ಕತೆ ಇರಲಿ, ಉದ್ಯಮದ ಜನ ಜೀವ ಉಳಿಸಿಕೊಳಸಳುವುದಕ್ಕಾಗಿಯೇ ಈಗ ಹೋರಾಡಬೇಕಿದೆ. ಅಪಾರ ಸಾವು-ನೋವುಗಳು ಸಿನಿಮಾ ಮಂದಿಯನ್ನು ತೀವ್ರ ಆತಂಕಕ್ಕೆ ದೂಡಿದೆ. ಆಸ್ಪತ್ರೆಗಳಲ್ಲಿ ಸಕಾಲಕ್ಕೆ ವೈದ್ಯಕೀಯ ಸೌಲಭ್ಯ ಸಿಗದ ಹಿನ್ನೆಲೆಯಲ್ಲಿ , ಈಗ ಸಿನಿಮಾ ಮಂದಿ ಸಿನಿಮಾ ಕಾರ್ಮಿಕರಿಗಾಗಿಯೇ ಸರ್ಕಾರ ಪ್ರತ್ಯೇಕ ಕೋವಿಡ್‌ ಕೇರ್‌ ಸೆಂಟರ್‌ ಗಳನ್ನು ಆರಂಭಿಸುವಂತೆ ಸರ್ಕಾರದ ಮುಂದೆ ಬೇಡಿಕೆ ಇಡುತ್ತಿದ್ದಾರೆ.


ಈ ನಿಟ್ಟಿನಲ್ಲೀಗ ನಿರ್ಮಾಪಕ ಭಾ.ಮ. ಹರೀಶ್‌ ಕೂಡ ಸರ್ಕಾರಕ್ಕೆ ಮನವಿ ಪತ್ರ ಬರೆದಿದ್ದು, ಕನ್ನಡ ಚಲನಚಿತ್ರ ಕಲಾವಿದರ ಸಂಘದ ಕಟ್ಟಡ, ಬಿಗ್‌ಬಾಸ್‌ ಮನೆ ಹಾಗೂ ಕಂಠೀರವ ಸ್ಟುಡಿಯೋ ಗಳಲ್ಲಿ ಕೋವಿಡ್‌ ಕೇರ್‌ ಸೆಂಟರ್‌ ತೆರೆಯಬೇಕೆಂದು ಒತ್ತಾಯಿಸಿದ್ದಾರೆ. ಸಿನಿಮಾ ರಂಗದಲ್ಲಿ ಸಾವಿರಾರು ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸಕಾಲಕ್ಕೆ ವೈದ್ಯಕೀಯ ಸೌಲಭ್ಯಗಳು ಬೇಕಿದೆ.

ಈ ನಿಟ್ಟಿನಲ್ಲಿ ಸರ್ಕಾರ ಮುಂಜಾಗ್ರತಾ ಕ್ರಮವಾಗಿ ಮೂರು ಕಡೆಗಳಲ್ಲಿ ಕೋವಿಡ್‌ ಕೇರ್‌ ಸೆಂಟರ್‌ ಆರಂಭಿಸಿದರೆ, ಚಿತ್ರರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ಸದಸ್ಯರು ಹಾಗೂ ಅವರ ಕುಟುಂಬದವರಿಗೆ ಅನುಕೂಲವಾಗಲಿದೆ ಎಂದು ಮನವಿ ಮಾಡಿದ್ದಾರೆ. ಈ ಸಂಬಂಧ ಅವರು ಸರ್ಕಾರಕ್ಕೆ ಮನವಿ ಪತ್ರ ಬರೆದಿದ್ದಾರೆ.

error: Content is protected !!