ಕನ್ನಡಚಿತ್ರರಂಗದಲ್ಲಿ ವಿನೂತನ ಪ್ರಯೋಗಾತ್ಮಕ ಸಿನಿಮಾ ಸುಧೀರ್ ಅತ್ತಾವರ್ ನಿರ್ದೇಶನದ “ಮೃತ್ಯೋರ್ಮ ” ಮಾರ್ಚ್ 25ರಿಂದ 30ರವರೆಗೆ ಜೈಪುರ ಮತ್ತು ಜೋಧ್ ಪುರಗಳಲ್ಲಿ ನಡೆಯಲಿರುವ ಪ್ರತಿಷ್ಠತ ಎಂಟನೇ ರಾಜಸ್ಥಾನ ಅಂತಾರಾಷ್ಟ್ರೀಯ ಚಿತ್ರೋತ್ಸವದ (ರಿಫ್) ಸ್ಪರ್ಧಾ ವಿಭಾಗಕ್ಕೆ ಆಯ್ಕೆಯಾಗಿದೆ. “ಬಿಡಿಟಿ ಅಭಿಯಂತರ ಚಿತ್ರ” ಅರ್ಪಿಸಿ, ತ್ರಿವಿಕ್ರಮ ಬೆಳ್ತಂಗಡಿ ಅವರು ನಿರ್ಮಾಣ ಮಾಡಿರುವ ಚಿತ್ರವು “ಸಕ್ಸಸ್ ಫಿಲಂಸ್” ಮತ್ತು “ಧೃತಿ ಕ್ರಿಯೇಷನ್” ಬ್ಯಾನರ್ ಅಡಿ ನಿರ್ಮಾಣ ಗೊಂಡಿದೆ .
ಕಳೆದ ಬಾರಿಯೂ ನಿರ್ದೇಶಕರ “ಮಡಿ” ಎಂಬ ಚಿತ್ರಕ್ಕೆ ರಿಫ್ ನಲ್ಲಿ “ಗ್ಲೋಬಲ್ ಬೆಸ್ಟ್ ಸೋಷಿಯಲ್ ಅವೇರ್ನೆಸ್ಸ್ ಫಿಲ್ಮ್” ಮತ್ತು ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಗಳು ಲಭಿಸಿತ್ತು. ಅಲ್ಲದೆ “ಮಡಿ” ಚಿತ್ರವನ್ನು ಬಾಲಿವುಡ್ ನ ಹಲವು ನಿರ್ದೇಶಕ, ನಿರ್ಮಾಪಕ ಹಾಗು ಕಲಾವಿದರು ಮೆಚ್ಚಿಕೊಂಡಿದ್ದರು.
ಹೆಚ್ಚು ಗುಣಾತ್ಮಕ ಮನರಂಜನೀಯ ಸಿನೆಮಾಗಳನ್ನು ಗುರುತಿಸುತ್ತಿರುವ “ರಿಫ್” ಚಿತ್ರೋತ್ಸವವು ಅಂತಾರಾಷ್ಟೀಯ ಮಟ್ಟದಲ್ಲಿ ಪ್ರತಿಷ್ಟಿತ ಚಿತ್ರೋತ್ಸವ ಎಂಬ ಹೆಗ್ಗಳಿಕೆಯನ್ನು ಪಡೆದುಕೊಳ್ಳುತ್ತಿದೆ.ಅಲ್ಲದೆ ಈ ಚಿತ್ರೋತ್ಸವವು ರಾಷ್ಟ್ರೀಯ ಮಟ್ಟದ ವಾಹಿನಿಗಳ ಗಮನವನ್ನೂ ಹೆಚ್ಚು ಸೆಳೆದುಕೊಳ್ಳುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಸಿನಿಮಾಗಳಲ್ಲಿ ಮಾರುಕಟ್ಟೆ ವಿಸ್ತರಿಸುವ ನಿಟ್ಟಿನಲ್ಲಿ ಈಗಾಗಲೇ ದುಬೈ ನಲ್ಲಿ ಪ್ರೊಡಕ್ಷನ್ ಕಂಪೆನಿ ಆರಂಭಿಸಿರುವ ಸಕ್ಸಸ್ ಫಿಲಂಸ್; ಧೃತಿ ಕ್ರಿಯೇಷನ್ ಜೊತೆ “ಮೃತ್ಯೋರ್ಮ” ಸಿನಿಮದ ಅಂತಾರಾಷ್ಟ್ರೀಯ ಪ್ರೀಮಿಯರ್ ನ ಪ್ಲಾನ್ ಕೂಡಾ ಮಾಡಿಕೊಳ್ಳುತ್ತಿದೆ. ನಿರ್ಮಾಪಕರಾಗಿ ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಳ್ಳುತ್ತಿರುವ ತ್ರಿವಿಕ್ರಮ್ ಬೆಳ್ತಂಗಡಿ ಮತ್ತು ಮುಂಬೈ -ದುಬೈ ಗಳಲ್ಲಿ ಸಿನಿಮಾ ರಂಗದಲ್ಲಿ ತೊಡಗಿಸಿಕೊಂಡಿರುವ ಸುಧೀರ್ ಅತ್ತಾವರ್ ಅವರ ಜೋಡಿ ಸಿನಿಮಾ ನಿರ್ಮಾಣದ ಹೊಸ ಅವಿಷ್ಕಾರ ಮತ್ತು ಕಲ್ಪನೆಯೊಂದಿಗೆ ಹೊಸ ಹೆಜ್ಜೆ ಇಡುತ್ತಿದ್ದಾರೆ.
ರಾಕೇಶ್ ಅಡಿಗ, ಹರ್ಷಿಕ ಪೂಣಚ್ಚ, ಸ್ಮಿತ, ಉಷಾ ಉತುಪ್ ಮೊದಲಾದವರು ನಟಿಸಿರುವ “ಮೃತ್ಯೋರ್ಮ” ಚಿತ್ರಕ್ಕೆ ಅಮೃತಂಗಮಯ…. ಎಂಬ ಅಡಿ ಬರಹವಿದೆ. ಚಿತ್ರದ ತಾಂತ್ರಿಕ ವರ್ಗದಲ್ಲಿ ವೀರ್ ಸಮರ್ಥ್ ಮತ್ತು ರವಿ ಬಸ್ರೂರ್ ಸಂಗೀತ, ವಿದ್ಯಾಧರ್ ಶೆಟ್ಟಿ ಸಂಕಲನ ಮತ್ತು ಎಂ ಎಸ್ ಸತ್ಯು ರವರ ಕಲೆ ಚಿತ್ರಕ್ಕಿದೆ.
‘ಬಜಾರ್’ ಹುಡುಗ ಧನ್ವೀರ್ ಮತ್ತು ‘ಕಿಸ್’ ಬ್ಯೂಟಿ ಶ್ರೀಲೀಲಾ ನಟನೆಯ ‘ಬೈ ಟು ಲವ್’ ಸಿನಿಮಾ ಬಿಡುಗಡೆಗೆ ದಿನಾಂಕ ಫಿಕ್ಸ್ ಆಗಿದೆ. ಹರಿ ಸಂತೋಷ್ ನಿರ್ದೇಶನದ ಈ ಸಿನಿಮಾ ಸಾಕಷ್ಟು ಕುತೂಹಲ ಹುಟ್ಟು ಹಾಕಿತ್ತು. ಪೋಸ್ಟರ್, ಟೀಸರ್ ಹಾಗೂ ಸಾಂಗ್ಸ್ ಹೀಗೆ ಪ್ರತಿ ಹಂತದಲ್ಲೂ ನಿರೀಕ್ಷೆಯ ಚಿಟ್ಟೆಯಂತಿದ್ದ ಬೈ ಟು ಲವ್ ಕಹಾನಿ ಕಣ್ತುಂಬಿಕೊಳ್ಳೋದಿಕ್ಕೆ ದಿನಗಣನೆ ಶುರುವಾಗಿದೆ.
ಫೆಬ್ರವರಿ 25ಕ್ಕೆ ಬೈ ಟು ಲವ್ ತೆರೆಗೆ! ಬೈ ಟು ಲವ್ ಸಿನಿಮಾ ಬೆಳ್ಳಿಪರದಗೆ ಎಂಟ್ರಿ ಕೊಡಲು ಸಜ್ಜಾಗಿದೆ. ಇದೇ ತಿಂಗಳ 25ರಂದು ಅದ್ಧೂರಿಯಾಗಿ ತೆರೆಗೆ ಬರಲಿದೆ. ಧನ್ವೀರ್ ಹಾಗೂ ಶ್ರೀಲೀಲಾ ಜೋಡಿ ಅದ್ಭುತವಾಗಿ ಮೂಡಿ ಬಂದಿದೆ. ‘ಬಜಾರ್’ನಲ್ಲಿ ಮಾಸ್ ಲುಕ್ನಲ್ಲಿ ಮಿಂಚಿದ್ದ ಧನ್ವೀರ್, ಈ ‘ಬೈ ಟು ಲವ್’ನಲ್ಲಿ ಲವರ್ ಬಾಯ್ ಪಾತ್ರ ಮಾಡಿದ್ದಾರೆ. ಶ್ರೀಲೀಲಾ ಮುದ್ದು ಮುದ್ದಾಗಿ ಮಲೆನಾಡ ಹುಡ್ಗಿಯಾಗಿ ಕಾಣಿಸಿಕೊಂಡಿದ್ದಾರೆ. ಗಣೇಶ್ ನಟನೆಯ ಸಖತ್, ನಿಖಿಲ್ ಕುಮಾರ್ಸ್ವಾಮಿ ನಟನೆಯ ಯದುವೀರ ಸಿನಿಮಾ ಹಾಗೂ ಜೋಗಿ ಪ್ರೇಮ್-ಧ್ರುವ ಸರ್ಜಾ ಕಾಂಬಿನೇಷನ್ನ ಸಿನಿಮಾಗಳನ್ನು ನಿರ್ಮಿಸುತ್ತಿರುವ ಕೆವಿಎನ್ ಪ್ರೊಡಕ್ಷನ್ಸ್ ನಡಿ ನಿಶಾ ವೆಂಕಟ್ ಕೋಣಂಕಿ ‘ಬೈ ಟು ಲವ್’ಗೆ ನಿರ್ಮಾಣ ಮಾಡಿದ್ದಾರೆ. ಮಹೇನ್ ಸಿಂಹ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ಹಾಗೂ ಯೋಗಾನಂದ್ ಸಂಭಾಷಣೆ ಈ ಚಿತ್ರಕ್ಕಿದೆ.
ಲೀಲು-ಬಾಲು ಟ್ರ್ಯಾಕ್ ಹಿಟ್!
ಬೈ ಟು ಲವ್ ಸಿನಿಮಾದ ಯಾರು ಏನಾದ್ರೂ ಅಂದ್ಕೊಂಡ್ಲಿ ಏನಂತೆ.. ಹಾಡು ಯೂಟ್ಯೂಬ್ ನಲ್ಲಿ ಧೂಳ್ ಎಬ್ಬಿಸ್ತಿದೆ. ಧನ್ವೀರ್ ಮತ್ತು ಶ್ರೀಲೀಲಾ ಅವರ ಮುದ್ದು ಮುದ್ದು ತುಂಟಾಟಗಳನ್ನೇ ಕೊರಿಯೋಗ್ರಫಿ ಮಾಡಲಾಗಿದೆ. ನಿರ್ದೇಶಕ ಹರಿ ಸಂತೋಷ್ ಸಾಹಿತ್ಯ ಬರೆದಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಮಾನೋ ಕಂಠಸಿರಿಯಲ್ಲಿ ಮೂಡಿ ಬಂದಿರುವ ಹಾಡಿಗೆ ಸಖತ್ ರೆಸ್ಪಾನ್ಸ್ ಸಿಕ್ತಿದೆ.
ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ನೀಡಿರುವ ಹೆಸರಾಂತ ಸಂದೇಶ್ ಪ್ರೊಡಕ್ಷನ್ಸ್ ಸಂಸ್ಥೆ ಮೂಲಕ ನೂತನ ಚಿತ್ರವೊಂದು ನಿರ್ಮಾಣವಾಗಲಿದೆ. ರಾಷ್ಟ್ರಪ್ರಶಸ್ತಿ ವಿಜೇತ ಸಂದೇಶ್ ನಾಗರಾಜ್ ಅರ್ಪಿಸುವ ಈ ಚಿತ್ರವನ್ನು ಸಂದೇಶ್ ಎನ್. ನಿರ್ಮಿಸುತ್ತಿದ್ದಾರೆ.
ಈಗಾಗಲೇ ಅನೇಕ ಚಿತ್ರಗಳನ್ನು ನಿರ್ದೇಶನ ಮಾಡಿರುವ ಚಿ.ಗುರುದತ್ ನಿರ್ದೇಶನದ ಈ ಚಿತ್ರದ ನಾಯಕರಾಗಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ನಟಿಸುತ್ತಿದ್ದಾರೆ ಎಂಬುದು ವಿಶೇಷ.
ಗುರುದತ್ ಹಾಗೂ ಶಿವರಾಜಕುಮಾರ್ ಅವರು ಆತ್ಮೀಯ ಸ್ನೇಹಿತರು. ಇದು ಎಲ್ಲರಿಗೂ ಗೊತ್ತು. ಗೆಳೆಯನಿಗೆ ಹೊಸ ಬಗೆಯ ಸಿನಿಮಾ ನಿರ್ದೇಶಿಸಲು ಹೊರಟಿದ್ದಾರೆ ಗುರುದತ್.
ತಾರಾಬಳಗ ಹಾಗೂ ತಾಂತ್ರಿಕವರ್ಗದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸದ್ಯದಲ್ಲೇ ನೀಡಲಾಗುವುದು ಎಂದು ನಿರ್ಮಾಪಕ ಸಂದೇಶ್ ನಾಗರಾಜ್ ತಿಳಿಸಿದ್ದಾರೆ.
ಸದ್ಯಕ್ಕಿಷ್ಟು ಮಾಹಿತಿ. ಚಿತ್ರದ ಕಥೆ, ಯಾರೆಲ್ಲಾ ಇರುತ್ತಾರೆ ಎಂಬಿತ್ಯಾದಿ ಸುದ್ದಿ ಇಷ್ಟರಲ್ಲೇ ಗೊತ್ತಾಗಲಿದೆ.
ಕನ್ನಡ ಚಿತ್ರರಂಗದ ಹಿರಿಯ ನಟ ಅಶೋಕ್ ರಾವ್ (75) ಇಂದು (ಬುಧವಾರ) ನಿಧನರಾಗಿದ್ದಾರೆ. ಸುಮಾರು ಮೂರುವರೆ ದಶಕಕ್ಕೂ ಹೆಚ್ಚು ಕಾಲ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಅಶೋಕ್ ರಾವ್, ಖಳನಟರಾಗಿ ಗುರುತಿಸಿಕೊಂಡಿದ್ದೇ ಹೆಚ್ಚು. ಡಾ.ರಾಜ ಕುಮಾರ್, ಅಂಬರೀಶ್, ವಿಷ್ಣುವರ್ಧನ್, ಸೇರಿದಂತೆ ಹಲವು ನಟರ ಜೊತೆ ನಟಿಸಿದ್ದರು. ಇಲ್ಲಿಯವರೆಗೆ ಸುಮಾರು 250 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಅಶೋಕ್ ರಾವ್ ಅವರು ಕೆಲವು ದಿನಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಬುಧವಾರ ಬೆಳಗ್ಗೆ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಮೃತರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಅಶೋಕ್ ರಾವ್ ಅವರು ತಮ್ಮ ನಟನೆ ಮೂಲಕ ಸಾಕಷ್ಟು ಗಮನಸೆಳೆದಿದ್ದರು. ಅದರಲ್ಲೂ ಖಳನಟರಾಗು ಹೀರೋ ಲೆವೆಲ್ ಪಾತ್ರಗಳಷ್ಟೇ ಗಮನ ಸೆಳೆದಿದ್ದರು.
ಮೃತರ ಅಂತ್ಯಕ್ರಿಯೆ ಹೆಬ್ಬಾಳ ಸಮೀಪದ ಚಿತಾಗಾರದಲ್ಲಿ ಮಧ್ಯಾಹ್ನ ಎರಡು ಗಂಟಗೆ ನೆರವೇರಲಿದೆ. ಮೃತರ ಕುಟುಂಬಕ್ಕೆ ಚಿತ್ರರಂಗ ಸಂತಾಪ ಸೂಚಿಸಿದೆ.
ಅಘೋರ ಹೊಸ ಬಗೆಯ ಸಿನಿಮಾ. ಹೊಸತನ ಸಾರುವ ಈ ಚಿತ್ರ ಫೆಬ್ರವರಿ 25ರಂದು ರಿಲೀಸ್ ಆಗುತ್ತಿದೆ. ಕೆ ಆರ್ ಜಿ ಸ್ಟುಡಿಯೋಸ್ ಈ ಚಿತ್ರವನ್ನು ಬಿಡುಗಡೆ ಮಾಡುತ್ತಿದೆ…
ಕನ್ನಡದಲ್ಲಿ ಈಗಾಗಲೇ ಹೊಸಬರ ಸಿನಿಮಾಗಳು ಸದ್ದು ಮಾಡುತ್ತಿವೆ. ಅವರ ಸಿನಿಮಾಗಳೂ ಸಹ ಹಲವು ಬಗೆಯ ಶೀರ್ಷಿಕೆ ಹೊತ್ತು ಬಂದಿವೆ. ಅದರೊಂದಿಗೆ ವಿಭಿನ್ನ ಕಥೆಯುಳ್ಳ ಸಿನಿಮಾಗಳೂ ಬಂದಿವೆ. ಅಂತಹ ಚಿತ್ರಗಳ ಸಾಲಿಗೆ ಈಗ “ಅಘೋರ” ಸಿನಿಮಾವೂ ಸೇರಿದೆ. ಹೌದು, ಅಘೋರ ಹೊಸಬಗೆಯ ಚಿತ್ರ. ಕೆಲ ಸಿನಿಮಾಗಳು ರಿಲೀಸ್ ಗೂ ಮೊದಲೇ ಜೋರು ಸೌಂಡು ಮಾಡುತ್ತವೆ. ಅಂಥದ್ದೊಂದು ಸೌಂಡಿಗೆ ಅಘೋರ ಸಿನಿಮಾ ಸೇರಿದೆ. ಅಂದಹಾಗೆ, ಈ ಚಿತ್ರವನ್ನು ಪ್ರಮೋದ್ ರಾಜ್ ಎನ್. ಎಸ್. ನಿರ್ದೇಶಿದ್ದಾರೆ. ಇವರು ಹಲವು ಸಿನಿಮಾಗಳಿಗೆ ನೃತ್ಯ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಈಗ ಅಘೋರ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಮೋಕ್ಷ ಸಿನಿಮಾಸ್ ಬ್ಯಾನರ್ ನಲ್ಲಿ ಪುನಿತ್ ಎಂ.ಎನ್. ಚಿತ್ರವನ್ನು ನಿರ್ಮಿಸಿದ್ದಾರೆ.
ಇಷ್ಟಕ್ಕೂ ಅಘೋರ ಕಥೆ ಏನು?
ಅಘೋರ ಬಗ್ಗೆ ಹೇಳುವುದಾದರೆ, ಇದೊಂದು ಹಾರರ್ ಫ್ಯಾಂಟಸಿ ಸಿನಿಮಾ. ಅದರಲ್ಲೂ ಒಂದು ನಂಬಿಕೆ ಹಿಂದಿರುವ ಕಥಾಹಂದರ ಇಲ್ಲಿದೆ. ಜಗತ್ತಿನಲ್ಲಿ ಭೂಮಿ, ಗಾಳಿ, ಬೆಂಕಿ, ನೀರು, ಆಕಾಶ ಇದೆಲ್ಲದರಲ್ಲೂ ಕಾಲಮಾನಕ್ಕೆ ತಕ್ಕಂತೆ ಬದಲಾವಣೆ ಸಹಜ. ಇಷ್ಟೆಲ್ಲಾ ಇದ್ದರೂ ಈ ಪ್ರಕೃತಿಯ ಸೃಷ್ಟಿಕರ್ತ ಯಾರು? ರಕ್ಷಕ ಯಾರು? ಇಂತಹ ಆಲೋಚನೆಯನ್ನು ಆಳವಾಗಿ ನೋಡಿದಾಗ ದೇವರೆಂದು ಕರೆಯುವ ಅದೃಶ್ಯ ಶಕ್ತಿಯನ್ನು ಅರ್ಥಮಾಡಿಕೊಳ್ಳಬಹುದು. ಇಂತಹ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕಥೆ ಹೆಣೆಯಲಾಗಿದೆ. ಅದಕ್ಕೆ ತಕ್ಕಂತೆ ಚಿತ್ರಕಥೆಯೂ ಇಲ್ಲಿದೆ.
ಇನ್ನು, ಈ ಚಿತ್ರದಲ್ಲಿ ಆಕಾಶ, ಭೂಮಿ, ಪ್ರಕೃತಿ, ಅಗ್ನಿ ಕೂಡ ಪಾತ್ರಗಳಾಗಿವೆ. ಪ್ರಕೃತಿಯೊಂದಿ ಗೆ ಏಕೆ ಬದುಕ ಬೇಕು ಮತ್ತು ಸಾವು ಏಕೆ ಅನಿವಾರ್ಯ ಇದು ಯಾರಿಂದ, ಯಾವಾಗ , ಹೇಗೆ ಎಂಬುದು ಯಾರಿಗೂ ತಿಳಿದಿಲ್ಲ, ಆದರೆ ಎಷ್ಟೇ ಪ್ರಯತ್ನಿಸಿದರೂ ಕರ್ಮದ ರೀತಿಯಲ್ಲಿ ಅದು ಸಂಭವಿಸುತ್ತದೆ. ಒಟ್ಟಾರೆ ಈ ಚಿತ್ರದ ಸಾರಾಂಶ ಬಗ್ಗೆ ಹೇಳುವುದಾದರೆ, ಕರ್ಮ ಅನ್ನೋದು ಯಾರಿಗೂ ಬಿಡಲ್ಲ ಎಂಬ ಅಂಶಗಳು ಇಲ್ಲಿವೆ.
ಅವಿನಾಶ್ ಚಿತ್ರದಲ್ಲಿ ಅಘೋರಿಯಾಗಿ ನಟಿಸಿದ್ದಾರೆ. ಉಳಿದಂತೆ, ಅಶೋಕ್ ಶರ್ಮಾ, ಪುನಿತ್ ಗೌಡ, ರಚನಾ ದಶರತ್ ದ್ರವ್ಯಶೆಟ್ಟಿ ಇತರರು ಕಾಣಿಸಿಕೊಂಡಿದ್ದಾರೆ. ಶರತ್ ಜಿ ಕುಮಾರ್ ಛಾಯಾಗ್ರಹಣವಿದೆ. ವಿ. ನಾಗೇಂದ್ರ ಪ್ರಸಾದ್ ಸಂಗೀತ, ಸಾಹಿತ್ಯವಿದೆ. ಎಲ್. ಆರ್ . ಜೀವನ್ ಸಂಭಾಷಣೆ ಇದೆ. ಎ.ಆರ್ .ರೆಹಮಾನ್ ಬಳಿ ಕೆಲಸ ಮಾಡಿರುವ ಎ. ಬಿ. ಮುರಳೀಧರನ್ ಮತ್ತು ರಾಮ್ ಗೋಪಾಲ್ ವರ್ಮಾ ಅವರ ಬಳಿ ಕೆಲಸ ಮಾಡಿರುವ ಪ್ರವೀಣ್ ಬಿಜಿಎಂ ಮಾಡಿದ್ದಾರೆ. ತ್ಯಾಗರಾಜ್ ಅವರು ಚಿತ್ರದ ಶೀರ್ಷಿಕೆ ಸಂಗೀತ ನೀಡಿದ್ದಾರೆ. ಇನ್ನು ಸಂಜಿತ್ ಹೆಗ್ಡೆ, ಸರಿಗಪ ಖ್ಯಾತಿಯ ಹನುಮಂತ, ಸಚಿನ್ ಹಾಡಿದ್ದಾರೆ. ಯುಡಿವಿ ವೆಂಕಟೇಶ್ ಸಂಕಲನವಿದೆ. ಮಾಸ್ ಮಾದ ಅವರ ಸಾಹಸವಿದೆ. ಅದೇನೆ ಇರಲಿ, ಚಿತ್ರದ ಟ್ರೇಲರ್ ಎಲ್ಲೆಡೆ ಸದ್ದು ಮಾಡಿದ್ದು, ಚಿತ್ರ ಫೆಬ್ರವರಿ 25ಕ್ಕೆ ಬಿಡುಗಡೆಯಾಗಲಿದೆ. ವಿಶೇಷ ಅಂದರೆ, ಕೆ ಆರ್ ಜಿ ಸ್ಟುಡಿಯೋ ಸ್ ರಿಲೀಸ್ ಜವಾಬ್ದಾರಿ ಹೊತ್ತುಕೊಂಡಿದೆ.
ರಿಲೀಸ್ ಮೊದಲೇ ಪ್ರಶಸ್ತಿಯ ಗರಿ…
ಅಘೋರಿ ಸಿನಿಮಾ ಬಗ್ಗೆ ಹೇಳುವುದಾದರೆ ಸುಮಾರು 16 ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿದ್ದು, ವಿವಿಧ ವಿಭಾಗಗಳಲ್ಲಿ 32 ಪ್ರಶಸ್ತಿಗಳನ್ನು ಪಡೆದಿದೆ. ಅತ್ಯುತ್ತಮ ಚೊಚ್ಚಲ ನಿರ್ದೇಶನ, ಅತ್ಯುತ್ತಮ ಚಿತ್ರಕಥೆ, ಅತ್ಯುತ್ತಮ ಛಾಯಾಗ್ರಹಣ, ಅತ್ಯುತ್ತಮ ದೃಶ್ಯ ಪರಿಣಾಮ, ಅತ್ಯುತ್ತಮ ನಟ, ಅತ್ಯುತ್ತಮ ಖಳ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ಮೇಕಪ್ ಇತ್ಯಾದಿ ವಿಭಾಗದಲ್ಲಿ ಪ್ರಶಸ್ತಿ ಬಾಚಿದೆ.
ಹೊಸಬರ ಚಿತ್ರ “ವೆಡ್ಡಿಂಗ್ ಗಿಫ್ಟ್” ಸಿನಿಮಾ ಚಿತ್ರೀಕರಣ ಮುಗಿದಿರೋದು ಎಲ್ಲರಿಗೂ ಗೊತ್ತಿದೆ. ಈಗ ಚಿತ್ರದ ಡಬ್ಬಿಂಗ್ ಕೆಲಸವೂ ಪೂರ್ಣಗೊಂಡಿದೆ. ಹೌದು, ವಿಕ್ರಂಪ್ರಭು ನಿರ್ಮಿಸಿ, ನಿರ್ದೇಶಿಸುತ್ತಿರುವ “ವೆಡ್ಡಿಂಗ್ ಗಿಫ್ಟ್” ಚಿತ್ರದ ಡಬ್ಬಿಂಗ್ ಮುಗಿದಿದೆ. ಖ್ಯಾತ ನಟಿ ಪ್ರೇಮ ಚಿತ್ರದ ಮುಖ್ಯ ಆಕರ್ಷಣೆ. ಇತ್ತೀಚೆಗೆ ಸಾಧುಕೋಕಿಲ ಅವರ ಸ್ಟೂಡಿಯೋದಲ್ಲಿ ಪ್ರೇಮ್ ಅವರು ಡಬ್ಬಿಂಗ್ ಮಾಡಿದ್ದಾರೆ. ಸಿನಿಮಾ ಬಗ್ಗೆ ಮಾತಾಡುವ ಪ್ರೇಮ, “ನಾನು ಇದೇ ಮೊದಲ ಬಾರಿಗೆ ಲಾಯರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೀನಿ.
ನಿರ್ದೇಶಕ ವಿಕ್ರಂಪ್ರಭು ಅವರು ಉತ್ತಮ ಕಥೆ ಮಾಡಿದ್ದಾರೆ. ನಾನು ಕೋರ್ಟಿನಲ್ಲಿ ಕೆಲವು ಕಲಾಪಗಳನ್ನು ನೋಡಿದ್ದೀನಿ. ಅಲ್ಲಿ ವಕೀಲರು ಮಾತನಾಡುವ ಹತ್ತಿರದಿಂದ ಕಂಡ ನನಗೆ ಈ ಪಾತ್ರ ಮಾಡಲು ಅನುಕೂಲವಾಯಿತು ಎಂದು ಪ್ರೇಮ ತಮ್ಮ ಪಾತ್ರದ ಕುರಿತು ಹೇಳಿದ್ದಾರೆ. ಈಗಿನ ಕಾಲದ ಕೆಲವು ಕಾನೂನುಗಳನ್ನು ಕೆಲವರು ಹೇಗೆ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ? ಎಂಬ ವಿಷಯಯಿಟ್ಟುಕೊಂಡು ಈ ಚಿತ್ರ ನಿರ್ದೇಶನ ಮಾಡಿದ್ದೇನೆ. ಎಲ್ಲಾ ಕಲಾವಿದರ ಅಭಿನಯ ಹಾಗೂ ತಂತ್ರಜ್ಞರ ಕಾರ್ಯವೈಖರಿ ಚೆನ್ನಾಗಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂಬುದು ನಿರ್ದೇಶಕ ವಿಕ್ರಂಪ್ರಭು ಅವರ ಮಾತು.
ಚಿತ್ರದಲ್ಲಿ ನಿಶಾನ್ ನಾಣಯ್ಯ, ಸೋನುಗೌಡ ನಾಯಕ, ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಅಚ್ಯುತ್ ಕುಮಾರ್, ಪವಿತ್ರಾ ಲೋಕೇಶ್ ಸೇರಿದಂತೆ ಇತರರು ಸಿನಿಮಾದಲ್ಲಿ ನಟಿಸಿದ್ದಾರೆ. ಅಂದಹಾಗೆ, ಚಿತ್ರ ಏಪ್ರಿಲ್ ವೇಳೆಗೆ ಬಿಡುಗಡೆಯಾಗಲಿದೆ. ಬಾಲಚಂದ್ರ ಪ್ರಭು ಸಂಗೀತ ನಿರ್ದೇಶನವಿದೆ. ಉದಯಲೀಲ ಛಾಯಾಗ್ರಹಣವಿದೆ. ವಿಜೇತ್ ಚಂದ್ರ ಅವರ ಸಂಕಲನ ಚಿತ್ರಕ್ಕಿದೆ.
ಭಾರತೀಯ ಚಿತ್ರರಂಗದಲ್ಲಿ ಕೆಜಿಎಫ್ ಬಹು ನಿರೀಕ್ಷೆ ಹುಟ್ಟಿಸಿದ್ದ ಸಿನಿಮಾ. ಅಂತೆಯೇ ಆ ಸಿನಿಮಾ ರಿಲೀಸ್ ಆದ ನಂತರ ಆ ನಿರೀಕ್ಷೆ ಸುಳ್ಳಾಗಲೇ ಇಲ್ಲ. ಕೆಜಿಎಫ್2 ಸಿನಿಮಾ ಕೂಡ ಈಗ ರಿಲೀಸ್ಗೆ ರೆಡಿಯಾಗಿದೆ. ಕೊರೊನಾ ಅಬ್ಬರ ಇರದೇ ಹೋಗಿದ್ದರೆ ಇಷ್ಟೊತ್ತಿಗಾಗಲೇ ಸಿನಿಮಾ ರಿಲೀಸ್ ಆಗಬೇಕಿತ್ತು. ಬಹುದೊಡ್ಡ ನಿರೀಕ್ಷೆ ಹುಟ್ಟಿಸಿರುವ ಕೆಜಿಎಫ್ 2 ಇನ್ನೇನು ಏಪ್ರಿಲ್ 14ರಂದು ರಿಲೀಸ್ ಆಗೋಕೆ ತಯಾರಿ ನಡೆಸಿದೆ. ಇದರ ಬೆನ್ನಲ್ಲೇ ಕೆಜಿಎಫ್ 2 ಚಿತ್ರತಂಡ ಶ್ರೀ ಕೊಲ್ಲೂರು ಮೂಕಾಂಬಿಕಾ ಮತ್ತು ಆನೆಗುಡ್ಡೆ ಶ್ರೀ ವಿನಾಯಕ ದೇವಾಲಯಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡಿದೆ.
ಹೌದು, ನಿರ್ದೇಶಕ ಪ್ರಶಾಂತ್ ನೀಲ್, ನಿರ್ಮಾಪಕರಾದ ವಿಜಯ್ ಕಿರಗಂದೂರು, ನಟ ಯಶ್ ಹಾಗು ಸಂಗೀತ ನಿರ್ದೇಶಕ ರವಿಬಸ್ರೂರು ಹಾಗು ತಂಡ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದೆ. ಸದ್ಯ ಆ ಫೋಟೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಸದ್ಯ ಈ ಬೆಳವಣಿಗೆಗಳನ್ನು ಗಮನಿಸಿದರೆ, ಕೆಜಿಎಫ್ 2 ಸಿನಿಮಾ ಏಪ್ರಿಲ್ 14ರಂದು ತೆರೆಗೆ ಬರುತ್ತಿದೆ. ದೇವಾಲಯಕ್ಕೆ ಪೂಜೆ ಸಲ್ಲಿಸಿದ್ದೇ ತಡ, ಎಲ್ಲೆಡೆ ಕೆಜಿಎಫ್ 2 ಸಿನಿಮಾ ಪ್ರೇಕ್ಷಕರ ಮುಂದೆ ಯಾವಾಗ ಬರುತ್ತೋ ಎಂಬ ಉತ್ಸಾಹದಲ್ಲಿ ಯಶ್ ಫ್ಯಾನ್ಸ್ ತುದಿಗಾಲ ಮೇಲೆ ನಿಂತಿದ್ದಾರೆ.
ಅಲ್ಲಿಗೆ ಇಡೀ ಜಗತ್ತು ಕೆಜಿಎಫ್ 2 ಚಿತ್ರಕ್ಕಾಗಿ ಎದುರು ನೋಡುತ್ತಿತ್ತು. ಈಗ ಚಿತ್ರತಂಡ ದೇವಾಲಯಕ್ಕೆ ಭೇಟಿ ನೀಡಿರುವುದು ತೆರೆಗೆ ಅಪ್ಪಳಿಸಲು ಸಾಕಷ್ಟು ತಯಾರಿ ನಡೆಸುತ್ತಿರುವುದನ್ನು ಹೇಳುತ್ತಿದೆ. ನಿರ್ದೇಶಕ ಪ್ರಶಾಂತ್ ನೀಲ್ ಅವರು ಕೆಜಿಎಫ್ ಮೂಲಕ ದೊಡ್ಡ ಭರವಸೆ ಮೂಡಿಸಿದ್ದು ಸುಳ್ಳಲ್ಲ. ಕೆಜಿಎಫ್ ಸಿನಿಮಾ ಬಂದಿದ್ದೇ ತಡ, ಕನ್ನಡ ಚಿತ್ರರಂಗ ಮತ್ತಷ್ಟು ಶೈನ್ ಆಗಿದ್ದು ಸುಳ್ಳಲ್ಲ. ಕೆಜಿಎಫ್ ಭಾರತೀಯ ಚಿತ್ರರಂಗದಲ್ಲೇ ದೊಡ್ಡ ಯಶಸ್ಸು ಪಡೆದುಕೊಂಡಿತು.
ಆ ಯಶಸ್ಸಿನ ಬೆನ್ನಲ್ಲೇ ಕೆಜಿಎಫ್ 2 ಕೂಡ ಶುರುವಾಗಿ, ಏಪ್ರಿಲ್ 14ರಂದು ಪ್ರೇಕ್ಷಕರ ಮುಂದೆ ಬರಲು ಅನೌನ್ಸ್ ಕೂಡ ಮಾಡಿತ್ತು. ಕೊರೊನಾ ಹಾವಳಿ ಹೆಚ್ಚಾಗಿದ್ದರಿಂದ ಸಿನಿಮಾ ಮುಂದಕ್ಕೆ ಹೋಯಿತು. ಈಗ ಸದ್ಯ, ಇಡೀ ಚಿತ್ರತಂಡ ಒಂದೊಳ್ಳೆಯ ಕಾರ್ಯಕ್ಕೆ ಮುಂದಾಗಿದೆ. ದೇವಾಲಯಗಳಿಗೆ ಭೇಟಿ ನೀಡುತ್ತಿದೆ. ಆ ಮೂಲಕ ಪ್ರಚಾರ ಕಾರ್ಯವೂ ಶುರುವಾಗುತ್ತಿದೆ.
ಕನ್ನಡ ಚಿತ್ರರಂಗಕ್ಕೆ ದಿನ ಕಳೆದಂತೆ ಹೊಸಬರ ಆಗಮನವಾಗುತ್ತಲೇ ಇದೆ. ಆ ಸಾಲಿಗೆ ಈಗ ರಂಗಭೂಮಿಯ ಅಪ್ಪಟ ಪ್ರತಿಭೆಗಳ ಆಗಮನವಾಗಿದೆ. ಹೌದು, ಇಲ್ಲಿ ಇಬ್ಬರನ್ನು ಹೊರತುಪಡಿಸಿ ಬಹುತೇಕ ರಂಗಭೂಮಿ ಪ್ರತಿಭೆಗಳೇ ಎಂಟ್ರಿಯಾಗಿದ್ದಾರೆ. ಅಂದಹಾಗೆ, ಅವರು ಪ್ರೀತಿಯಿಂದಲೇ ಮಾಡಿರುವ ಚಿತ್ರಕ್ಕೆ “ಪ್ರೀತಿಗಿಬ್ಬರು” ಎಂದು ಹೆಸರಿಟ್ಟಿದ್ದಾರೆ.
ಹೌದು, ಪಾಂಡಿಲ್ಯ ಬಿ.ಟಿ. ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಇದು ಇವರಿಗೆ ಚೊಚ್ಚಲ ಪ್ರಯತ್ನ. ವಿಶೇಷ ಅಂದರೆ, ಇವರು ಕೆ.ವಿ.ರಾಜು ಮತ್ತು ಎಂ.ಎಸ್.ರಮೇಶ್ ಅವರಂತಹ ಯಶಸ್ವಿ ನಿರ್ದೇಶಕರೊಂದಿಗೆ ಕೆಲಸ ಮಾಡಿ ಮೊದಲ ಸಲ ನಿರ್ದೇಶನ ಪಟ್ಟ ಅಲಂಕರಿಸುತ್ತಿದ್ದಾರೆ. ಹೆಸರೇ ಹೇಳುವಂತೆ ಇದೊಂದು ಪಕ್ಕಾ ಲವಸ್ಟೋರಿ ಸಿನಿಮಾ ಅಂತ ಪ್ರತ್ಯೇಕವಾಗಿ ಹೇಳುವಂತಿಲ್ಲ ಬಿಡಿ.
ಅಂದಹಾಗೆ ಇದೊಂದು ಪಕ್ಕಾ ಪ್ರೇಮಕಥೆ ಇರುವ ಸಿನಿಮಾ. ರಾಜಕೀಯ ಇರಲಿ, ಕ್ರಿಕೆಟ್ ಇರಲಿ, ಅಲ್ಲಿ ಒಂದಷ್ಟು ಮಂದಿ ಹೇಗೆ ನೆನಪಾಗುತ್ತಾರೋ ಹಾಗೆಯೇ ಪ್ರೀತಿಯ ಸಿನಿಮಾ ಅಂದಾಕ್ಷಣ, ಅಲ್ಲಿ ನಾಯಕ, ನಾಯಕಿಯೂ ನೆನಪಾಗುತ್ತಾರೆ. ಒಂದು ಹಳ್ಳಿಯಲ್ಲಿ ನಡೆಯುವಂತಹ ಪ್ರೇಮಕಥೆ ಇಲ್ಲಿದೆ. ಕಷ್ಟದ ಸನ್ನಿವೇಶದಲ್ಲಿ ಆ ಊರಿನ ಪ್ರೇಮಿಗಳು ಒಂದಾಗುತ್ತಾರೋ ಇಲ್ಲವೋ ಅನ್ನುವುದು ಕಥೆ. ಇಲ್ಲಿ ಜಾತಿ ವ್ಯವಸ್ಥೆಯೂ ಹೈಲೈಟ್. ಆದರೆ, ಅದೇ ಮುಖ್ಯವಲ್ಲ. ಇನ್ನು, ಈ ಚಿತ್ರದಲ್ಲಿ ನಾಯಕಿ ಹೊರತುಪಡಿಸಿ ಉಳಿದ ಕಲಾವಿದರು ರಂಗಭೂಮಿ ಹಿನ್ನಲೆಯಿಂದ ಬಂದವರು. ಇಬ್ಬರು ನಟಿಯರು ಇಲ್ಲಿ ಖಳನಾಯಕಿಯರಾಗಿ ಅಬ್ಬರಿಸಿದ್ದಾರೆ. ನಾಯಕನಾಗಿ ಗೋವಿಂದ ಕಾಣಿಸಿಕೊಂಡಿದ್ದಾರೆ. ನಿರೋಷಶೆಟ್ಟಿ ನಾಯಕಿ.
ಇನ್ನು, ಖಳನಟಿಯರಾಗಿ ಮಂಜುಳಾ ಮತ್ತು ಕಾವ್ಯಪ್ರಕಾಶ್ ನಟಿಸಿದ್ದಾರೆ. ಅಣ್ಣನಾಗಿ ಚಿರಾಗ್, ಇವರೊಂದಿಗೆ ಶೈಲೇಶ್, ಸಂದೀಪ್ ಇತರರು ನಟಿಸಿದ್ದಾರೆ. ಅನುರಾಗ್ರೆಡ್ಡಿ ಸಂಗೀತ ನೀಡಿದರೆ, ಎ.ಟಿ.ರವೀಶ ಅವರು ಹಿನ್ನೆಲೆ ಸಂಗೀತ ನೀಡಿದ್ದಾರೆ. ರಮೇಶ್ಗೌಡ ಚಿತ್ರದ ಛಾಯಾಗ್ರಹಣ ಮಾಡಿದರೆ, ಅರ್ಜುನ್ ಕಿಟ್ಟು ಸಂಕಲನ ಮಾಡಿದ್ದಾರೆ. ಡಾ.ದೊಡ್ಡರಂಗೇಗೌಡ ಅವರ ಗೀತ ಸಾಹಿತ್ಯವಿದೆ. ಆರ್ಯನ್ ಶ್ರೀನಿವಾಸನ್ ಮತ್ತು ಅಶೋಕ್ ಸಾಹಸವಿದೆ. ಪ್ರವೀಣ್ ನೃತ್ಯ ನಿರ್ದೇಶನ ಮಾಡಿದ್ದಾರೆ.
ಚಾಮರಾಜನಗರ, ಉಡುಪಿ, ಬಳ್ಳಾರಿ, ಬೀದರ್, ನಾಗಮಂಗಲ, ಕೊಳ್ಳೆಗಾಲ, ಮರವಂತೆ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಈಗಾಗಲೇ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಗಿದೆ ಚಿತ್ರಕ್ಕೆ ಯುಎ ಪ್ರಮಾಣ ಪತ್ರ ಕೂಡ ಸಿಕ್ಕಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ವಿತರಕ ರಮೇಶ್ ಮೂಲಕ ಚಿತ್ರವನ್ನು ಫೆಬ್ರವರಿಯಲ್ಲಿ ರಿಲೀಸ್ ಮಾಡಲು ಚಿತ್ರತಂಡ ಸಜ್ಜಾಗಿದೆ.
ಕನ್ನಡ ಚಿತ್ರರಂಗದಲ್ಲಿ ಸ್ಪುರದ್ರೂಪಿ ನಟ ಅಂದಾಕ್ಷಣ ಥಟ್ಟನೆ ನೆನಪಾಗೋದೇ ನೆನಪಿರಲಿ ಪ್ರೇಮ್. ಹೌದು, ಹುಡುಗರಿಗಿಂತ ಹುಡುಗಿಯರೇ ತುಸು ಹೆಚ್ಚಾಗಿ ಇಷ್ಟಪಡುತ್ತಾರೆ. ಕನ್ನಡ ಚಿತ್ರರಂಗದಲ್ಲಿ ಪ್ರೇಮಕಾವ್ಯ ಬರೆಯುವ ಮೂಲಕ ಫ್ಯಾಮಿಲಿ ಆಡಿಯನ್ಸ್ಗೆ ಹತ್ತಿರವಾದವರು. ಫ್ಯಾನ್ಸ್ಗೆ ಪ್ರಾಣ ಆಗುವ ಮೂಲಕ ನೆನಪಿರಲಿ ಈ ಪ್ರೇಮ್ ಅನ್ನುತ್ತಲೇ ಎಲ್ಲರೊಂದಿಗೂ ಜೊತೆ ಜೊತೆಯಲ್ಲೇ ಅಭಿಮಾನಿಗಳ ಪ್ರೀತಿಯ ಅಭಿಮಾನದ ಪಲ್ಲಕ್ಕಿ ಹೊತ್ತು ಬಂದ ಗುಣವಂತ ಸದಾ ಸದಭಿರುಚಿಯ ಸಿನಮಾ ಕೊಡಬೇಕೆಂಬ ಹೊಂಗನಸು ಕಂಡವರು. ಚಿತ್ರರಂಗದಲ್ಲಿ ಸಾಕಷ್ಟು ಸವಿ ಸವಿ ನೆನಪುಗಳನ್ನು ಉಣಬಡಿಸುತ್ತಲೇ ಬಂದಿರುವ ಪ್ರೇಮ್, ಬೆಳ್ಳಿಪರದೆಗೆ ಎಂಟ್ರಿಯಾಗಿ ಬರೋಬ್ಬರಿ ಎರಡು ದಶಕಗಳೇ ಕಳೆದಿವೆ
ಹೌದು, ಪ್ರೇಮ್ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಇಪ್ಪತ್ತು ವರ್ಷಗಳು ಪೂರೈಸಿವೆ. ಈ ಚಂದದ ಹೀರೋ ಚಂದನವನದಲ್ಲಿ ಇಷ್ಟು ವರ್ಷ ಕಳೆಯುವುದೆಂದರೆ ಸುಲಭದ ಮಾತಲ್ಲ. ಎಲ್ಲಾ ನಟರಂತೆ ಪ್ರೇಮ್ ಕೂಡ ಆರಂಭದಲ್ಲಿ ಸಾಕಷ್ಟು ಕಷ್ಟ ಕಂಡವರು. ಆರಂಭದಲ್ಲಿ ಅವಕಾಶಕ್ಕಾಗಿ ಅಲೆದಾಡಿದ್ದೂ ಉಂಟು. ಮೊದಲ ಎಸೆತದಲ್ಲೇ ಬಾಲನ್ನು ಬೌಂಡರಿ ದಾಟಿಸಿದಂತೆ ಪ್ರೇಮ್, ಮೊದಲ ಸಿನಿಮಾ ಮೂಲಕವೇ ಎಲ್ಲರಿಗೂ ಇಷ್ಟವಾದರು. ಆಮೇಲೆ ನೆನಪಿರಲಿ ಮೂಲಕ ಅಚ್ಚಳಿಯದೇ ಉಳಿದ ಹೀರೋ ಎನಿಸಿಕೊಂಡರು. ಅಲ್ಲಿಂದ ದೊಡ್ಡ ಯಶಸ್ಸು ಪಡೆದ ಪ್ರೇಮ್ ಸಾಕಷ್ಟು ಯಶಸ್ಸು ಸಿನಿಮಾಗಳನ್ನು ಕೊಡುತ್ತಲೇ ಬಂದರು. ಪ್ರೇಮ್ ಸುಲಭವಾಗಿ ಸಕ್ಸಸ್ ಕಂಡವರಲ್ಲ. ಸಾಕಷ್ಟು ಶ್ರಮದಿಂದಲೇ, ಒಳ್ಳೆಯ ನಟನೆ ಮತ್ತು ಸ್ಕ್ರಿಪ್ಟ್ ಆಯ್ಕೆಯಿಂದಲೇ ಪ್ರೇಮ್ ತಮ್ಮ ಸಕ್ಸಸ್ ಕಂಡುಕೊಂಡವರು. ಹಾಗಂತ, ಯಶಸ್ಸಿನ ಮೆಟ್ಟಿಲ ಮೇಲೆಯೇ ಪ್ರೇಮ್ ನಡೆದು ಬಂದವರಲ್ಲ. ಅವರಿಗೂ ಅಡೆತಡೆಗಳಾಗಿದ್ದುಂಟು. ಒಂದಷ್ಟು ಸಿನಿಮಾಗಳು ಕೈ ಹಿಡಿಯಲಿಲ್ಲ. ಗೆಲುವು ಪಕ್ಕಕ್ಕೆ ಸರಿಯಿತು. ಸೋಲು ಕಣ್ಮುಂದೆಯೇ ಬರತೊಡಗಿತು. ಅಷ್ಟಾದರೂ ಪ್ರೇಮ್ ದೃತಿಗೆಡಲಿಲ್ಲ. ಒಂದಷ್ಟು ಸಾಲು ಸಾಲು ಸೋಲು ಕಂಡ ಪ್ರೇಮ್ಗೆ ಕಣ್ಣ ಮುಂದೆ ಬಂದಿದ್ದು ಚಾರ್ಮಿನಾರ್.
ಈ ಚಾರ್ಮಿನಾರ್ ಸಿನಿಮಾ ಪ್ರೇಮ್ ಅವರಿಗೆ ಮತ್ತೊಂದು ಹೊಸ ಬದುಕು ರೂಪಿಸಿತು ಅಂದರೆ ಸುಳ್ಳಲ್ಲ. ಪ್ರೇಮ್ ಅಲ್ಲಿಂದ ಮತ್ತೆ ಹಿಂದಿರುಗಿ ನೋಡಿದವರಲ್ಲ. ಚಾರ್ಮಿನಾರ್ ಪ್ರೇಮ್ ಮಟ್ಟಿಗೆ ದೊಡ್ಡ ಸಕ್ಸಸ್ ಕೊಟ್ಟ ಸಿನಿಮಾ. ಒಂದೊಳ್ಳೆಯ ಬ್ಯೂಟಿಫುಲ್ ಲವ್ಸ್ಟೋರಿ ಮೂಲಕ ಪ್ರೇಮ ಪುನಃ ತನ್ನ ಫ್ಯಾನ್ಸ್ ಮೊಗದಲ್ಲಿ ಮಂದಹಾಸ ಬೀರುವಂತೆ ಮಾಡಿದರು. ಈ ಚಿತ್ರದ ನಟನೆಗೆ ಅವರಿಗೆ ಫಿಲ್ಮ್ ಫೇರ್ ಅವಾರ್ಡ್ ಕೂಡ ಬಂತು. ಅದಾದ ಮೇಲೆ ಒಂದಷ್ಟು ಸಾಲು ಸಾಲು ಸಿನಿಮಾಗಳು ಹುಡುಕಿ ಬಂದರೂ, ಪ್ರೇಮ್ಗೆ ಹೇಳಿಕೊಳ್ಳುವಂತಹ ಗೆಲುವು ಸಿಗಲಿಲ್ಲ. ಈ ನಡುವೆ ಪ್ರೇಮ್ ಒಂದೇ ಪಾತ್ರ, ಕಥೆಗಳಿಗೆ ಸೀಮಿತವಾಗಬಾರದು ಅಂತ ತನ್ನ ಸುಂದರ ಮೈಕಟ್ಟನ್ನು ಹುರಿಗೊಳಿಸಿದರು. ಶತ್ರು ಎಂಬ ಸಿನಿಮಾಗೆ ಅವರು ಬಾಡಿ ಬಿಲ್ಡ್ ಮಾಡಿ ಸಿಕ್ಸ್ ಪ್ಯಾಕ್ ಮಾಡಿಕೊಂಡರು. ತಾನೊಬ್ಬ ಕ್ಲಾಸ್ ಹೀರೋ ಅಷ್ಟೇ ಅಲ್ಲ, ಮಾಸ್ ಹೀರೋ ಆಗೋಕು ಸೈ ಅಂತ ಆ ಸಿನಿಮಾದಲ್ಲಿ ತೋರಿಸಿಕೊಟ್ಟರು.
ಅಲ್ಲಿ ಪ್ರೇಮ್ ಅವರ ಶ್ರಮ ಎದ್ದು ಕಂಡರೂ, ಗೆಲುವು ಮಾತ್ರ ಏಳಲಿಲ್ಲ. ಹಾಗಂತ ಪ್ರೇಮ್ ಸುಮ್ಮನೆ ಕೂರಲೇ ಇಲ್ಲ. ಮತ್ತೆ ಒಂದಷ್ಟು ಹೊಸ ಬಗೆಯ ಕಥೆಗಳತ್ತ ಮುಖ ಮಾಡಿದರು. ಮೆಲ್ಲನೆ ಬಿಝಿಯಾಗತೊಡಗಿದರು. ನಂತರ ಚೌಕ ಚಿತ್ರ ಅವರಿಗೊಂದು ಹೊಸ ಚೌಕಟ್ಟು ಹಾಕಿ ಕೊಟ್ಟಿದ್ದು ಸುಳ್ಳಲ್ಲ. ಅಲ್ಲಿಂದ ಪ್ರೇಮ್ ಮೈಲೇಜ್ ಮತ್ತೆ ಜೋರಾಯಿತು. ಪ್ರೇಮ್ ಕೂಡ ಅದೇ ಮುಗುಳ್ನಗೆಯಲ್ಲಿ ಸಿನಿಮಾಗಳನ್ನು ಕೊಡುತ್ತಲೇ ಬಂದರು. ಅಷ್ಟೊತ್ತಿಗಾಗಲೇ ಪ್ರೇಮ್ ಇಪ್ಪತ್ತಕ್ಕೂ ಹೆಚ್ಚು ಸಿನಿಮಾಗಳನ್ನು ಕೊಟ್ಟಿದ್ದರು. ತಮ್ಮ ವೃತ್ತಿ ಜೀವನದಲ್ಲಿ ಇಪ್ಪತ್ತೈದನೇ ಸಿನಿಮಾ ಮಾಡುವ ಹಂತಕ್ಕೆ ಬಂದ ಪ್ರೇಮ್ಗೆ ಅದೊಂದು ಮೈಲಿಗಲ್ಲು ಸಿನಿಮಾ ಆಗಬೇಕು ಅಂದುಕೊಂಡರು. ಹಾಗಾಗಿಯೇ ನೂರಾರು ಕಥೆಗಳನ್ನು ಕೇಳಿದ್ದುಂಟು. ಕೊನೆಗೆ ಅವರ ತೆಕ್ಕೆಗೆ ಬಿದ್ದಿದ್ದು, ಪ್ರೇಮಂ ಪೂಜ್ಯಂ. ಈ ಚಿತ್ರ ಆರಂಭದಿಂದಲೇ ನಿರೀಕ್ಷೆ ಹುಟ್ಟಿಸಿದ್ದು ಸುಳ್ಳಲ್ಲ. ಪ್ರೇಮ್ ಆಯ್ಕೆ ಮಾಡಿಕೊಂಡ ಕಥೆ ಮತ್ತು ಪಾತ್ರ ನಿಜಕ್ಕೂ ವಿಶೇಷವಾಗಿತ್ತು. ಈ ಚಿತ್ರದ ಒಂದೊಂದು ಗೀತೆ, ಪೋಸ್ಟರ್ ಎಲ್ಲವೂ ಕುತೂಹಲ ಮೂಡಿಸುತ್ತಲೇ ಬಂದಿತ್ತು. ಅದಕ್ಕೆ ಕಾರಣ, ಪ್ರೇಮ್ ಅವರ ಇಪ್ಪತ್ತೈದನೇ ಸಿನಿಮಾ ಅನ್ನೋದು.
ಪ್ರೇಮ್ ಎಂದಿಗಿಂತಲೂ ಈ ಚಿತ್ರದ ಮೇಲೆ ತುಂಬಾನೇ ಆಸಕ್ತಿ ವಹಿಸಿದರು. ತನ್ನ ವೃತ್ತಿ ಜೀವನದ ಇಪ್ಪತ್ತೈದನೇ ಸಿನಿಮಾ ಆಗಿರುವುದರಿಂದ ಇದೊಂದು ಗೆಲುವಿನ ಸಿನಿಮಾ ಆಗಿ ಉಳಿಯಬೇಕು ಅನ್ನೋದು ಅವರ ಆಸೆ ಆಗಿತ್ತು. ಅವರ ಫ್ಯಾನ್ಸ್ ಆಶಯ ಕೂಡ ಹಾಗೆಯೇ ಇತ್ತು. ಅದರಂತೆಯೇ ಪ್ರೇಮಂ ಪೂಜ್ಯಂ ಸಿನಿಮಾ ರಿಲೀಸ್ ಆಯ್ತು. ಜನ ಕೈ ಹಿಡಿದರು. ಅವರಿಗೆ ಅದೇ ಪ್ರೀತಿಯಿಂದ ಪ್ರೇಮ್ ಕೈ ಜೋಡಿಸಿದರು. ತಮ್ಮ ಇಪ್ಪತ್ತು ವರ್ಷಗಳ ಈ ಸಿನಿಮಾ ಪಯಣದಲ್ಲಿ ಪ್ರೇಮ್ ಸೋಲು-ಗೆಲುವು ಎರಡನ್ನೂ ಸಮಾನವಾಗಿಯೇ ಕಂಡುಕೊಂಡಿದ್ದಾರೆ.
ಗೆದ್ದಾಗ ಬೀಗಲಿಲ್ಲ. ಸೋತಾಗ ಬೀಳಲಿಲ್ಲ. ಎರಡನ್ನೂ ಬ್ಯಾಲೆನ್ಸ್ ಮಾಡಿಕೊಂಡು ಬಂದ ಪ್ರೇಮ್ ಅಪ್ಪಟ ಸಿನಿಮಾ ಪ್ರೇಮಿ. ಸದಾ ಸಿನಿಮಾ ಧ್ಯಾನಿಸುವ ಪ್ರೇಮ್ಗೆ ಸುಂದರ ಫ್ಯಾಮಿಲಿ ಇದೆ. ಪತ್ನಿ, ಮಗಳು ಮತ್ತು ಮಗ ಅವರ ಪ್ರಪಂಚ. ಆ ಪ್ರಪಂಚದ ಸುತ್ತವೇ ಸುತ್ತುವ ಪ್ರೇಮ್, ತನ್ನ ಅಭಿಮಾನಿಗಳಿಗೂ ಅಷ್ಟೇ ಪ್ರೀತಿ ಕೊಟ್ಟವರು. ಇಷ್ಟು ವರ್ಷಗಳ ಸಿನಿಪಯಣದಲ್ಲಿ ನೋವು-ನಲಿವು ಕಂಡ ಪ್ರೇಮ್, ಇನ್ನೂ ಸಾಧಿಸುವ ಹಂಬಲದಲ್ಲಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಸದಭಿರುಚಿಯ ಸಿನಿಮಾಗಳನ್ನು ನೀಡುವ ಉತ್ಸಾಹದಲ್ಲಿದ್ದಾರೆ. ಆ ಉತ್ಸಾಹದಲ್ಲೇ ಅವರು ಸದಾ ಸಿನಿಚಟುವಟಿಕೆಯಲ್ಲಿ ತೊಡಗುತ್ತಾರೆ.
ಇನ್ನು ಪ್ರೇಮ್ ಸಿನಿಮಾ ಪ್ರೀತಿಸುವಷ್ಟೇ ಕುಟುಂಬ ಹಾಗು ಗೆಳೆತನವನ್ನೂ ಪ್ರೀತಿಸುತ್ತಾರೆ. ಅವರಿಗೆ ಒಂದೊಳ್ಳೆಯ ಗೆಳೆಯರ ಬಳಗವೂ ಇದೆ. ಸಿನಿಮಾರಂಗದ ಗೆಳೆಯರೂ ಇದ್ದಾರೆ. ಅದರಾಚೆಯೂ ಒಂದಷ್ಟು ಗೆಳೆಯರ ಬಳಗವಿದೆ. ಮೊದಲಿನಿಂದಲೂ ಸ್ನೇಹ ಸಂಪಾದಿಸಿಕೊಂಡು ಬಂದಿರುವ ಪ್ರೇಮ್ಗೆ ಗೆಳೆಯರ ಆಸ್ತಿ ದೊಡ್ಡದೇ ಇದೆ. ಅದೇ ನನ್ನ ಮೌಲ್ಯ ಹೆಚ್ಚಿಸಿದೆ ಎನ್ನುವ ಪ್ರೇಮ್, ಈ ಇಪ್ಪತ್ತು ವರ್ಷಗಳ ಸಿನಿಮಾ ಜರ್ನಿ ಸುಲಭವಾದುದಲ್ಲ. ಈ ಜರ್ನಿಗೆ ಹಲವು ಗೆಳೆಯರ ಸಹಕಾರ, ಪ್ರೋತ್ಸಾಹವೂ ಇದೆ.
ಎಲ್ಲಕ್ಕಿಂತಲೂ ಹೆಚ್ಚಾಗಿ ಸಿನಿಮಾರಂಗದ ಬಳಗವಿದೆ. ಈ ಇಪ್ಪತ್ತು ವರ್ಷದ ನನ್ನ ಸಿನಿಮಾ ವೃತ್ತಿ ಜೀವನದಲ್ಲಿ ಜೊತೆಯಾಗಿ ನಿಂತು ನನ್ನನ್ನು ಸಲುಹಿ ಬೆಳೆಸಿದ ಚಿತ್ರರಂಗದ ಕುಟುಂಬಕ್ಕೆ, ಅಭಿಮಾನಿಗಳಿಗೆ, ,ಮಾಧ್ಯಮಕ್ಕೆ, ಸ್ನೇಹಿತರಿಗೆ ಹಾಗು ನನ್ನ ಕುಟುಂಬಕ್ಕೆ ಮತ್ತು ಕನ್ನಡ ಕಲಾಭಿಮಾನಿಗಳಿಗೆ ನನ್ನ ಹೃತ್ಪೂರ್ವಕ ವಂದನೆಗಳು… ನಿಮ್ಮ ಪ್ರೀತಿ, ಅಭಿಮಾನ, ಆಶೀರ್ವಾದ ಸದಾ ಹೀಗೆ ಇರಲಿ.. ಎಂಬುದು ನೆನಪಿರಲಿ ಮಾತು….
ಯಾವುದೇ ನಟ ಇರಲಿ, ತನ್ನ ಸಿನಿಮಾ ಅರ್ಧ ಸೆಂಚುರಿ ದಾಟುವುದೇ ವಿಶೇಷ. ಅದರಲ್ಲೂ ಅದೊಂದು ಸಂಭ್ರಮವೇ ಸರಿ. ಈಗ ವಿಜಯರಾಘವೇಂದ್ರ ಅವರು ಅರ್ಧ ಸೆಂಚುರಿ ದಾಟಿ, ತಮ್ಮ ಅಭಿನಯದ ಐವತ್ತೊಂದನೇ ಚಿತ್ರ ಮಾಡಿದ್ದಾರೆ. ಅದೇ ಈ ಹೊತ್ತಿನ ವಿಶೇಷ. ಅಂದಹಾಗೆ, “ಸಾವಿತ್ರಿ” ಅವರ 51ನೇ ಸಿನಿಮಾ….
“ಸಾವಿತ್ರಿ” ಇದು ವಿಜಯರಾಘವೇಂದ್ರ ಅಭಿನಯದ ಚಿತ್ರ. ಈ ಚಿತ್ರವನ್ನು ಪ್ರಶಾಂತ್ ಕುಮಾರ್ ಹೀಲಲಿಗೆ ನಿರ್ಮಿಸಿದ್ದಾರೆ. ಇತ್ತೀಚೆಗೆ ಚಿತ್ರದ ಹಾಡುಗಳು ಬಿಡುಗಡೆಯಾಗಿವೆ. ಜೊತೆಗೆ ಟ್ರೇಲರ್ ಕೂಡ ಪ್ರದರ್ಶನ ಕಂಡಿದೆ. ಅಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್ ಹಾಡು ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ವಿಜಯರಾಘವೇಂದ್ರ ಅವರಿಗೆ ಈ ಸಿನಿಮಾ ವಿಶೇಷತೆಗಳಲ್ಲೊಂದು. ಆ ಕುರಿತು ಹೇಳುವ ಅವರು, “ನಾನು ಮಾಡುವ ಎಲ್ಲಾ ಕಾರ್ಯದಲ್ಲೂ ಅಪ್ಪು ಅವರಿರುತ್ತಾರೆ. ಒಳ್ಳೆಯ ತಂಡದೊಂದಿಗೆ ಒಳ್ಳೆಯ ಚಿತ್ರ ಮಾಡಿದ ಸಂತೋಷವಿದೆ. ಸದ್ಯದಲ್ಲೇ ಚಿತ್ರ ಬಿಡುಗಡೆ ಆಗಲಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂಬುದು ಅವರ ಮಾತು.
ನಿರ್ದೇಶಕ ಎಸ್ ದಿನೇಶ್ ಮಾತನಾಡಿ, “ಸಾವಿತ್ರಿ” ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ. ಇದು ವಿಜಯರಾಘವೇಂದ್ರ ಅವರ ಐವತ್ತೊಂದನೇ ಚಿತ್ರ. ಆದರೆ ಕೆಲಸದಲ್ಲಿ ಅವರಿಗಿರುವ ಶ್ರದ್ಧೆ ಈಗಲೂ ಹೊಸತು. ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ಪಡೆದಿರುವ ವಿಜಯ ರಾಘವೇಂದ್ರ ಹಾಗೂ ತಾರಾ ಅವರು ನಮ್ಮ ಚಿತ್ರದಲ್ಲಿ ಅಭಿನಯಿಸಿರುವುದು ನಮ್ಮ ಹೆಮ್ಮೆ. ಪ್ರಕಾಶ್ ಬೆಳವಾಡಿ, ಊರ್ವಶಿ ರಾಯ್, ಮಿಮಿಕ್ರಿ ಗೋಪಿ, ನೈಲಾ ಪ್ರಮೋದ್, ಸಂಜು ಬಸಯ್ಯ, ಸ್ವಾತಿ ಮುಂತಾದವರು ಚಿತ್ರದಲ್ಲಿದ್ದಾರೆ. ಹೃದಯ ಶಿವ ಬರೆದು, ಮೊದಲ ಬಾರಿಗೆ ಸಂಗೀತ ನೀಡಿರುವ ಹಾಡುಗಳು ಸುಮಧುರವಾಗಿದೆ. ಛಾಯಾಗ್ರಾಹಕ ನಾಗಾರ್ಜುನ ಸೇರಿದಂತೆ ಎಲ್ಲಾ ತಂತ್ರಜ್ಞರ ಕೆಲಸ ಅದ್ಭುತವಾಗಿದೆ ಎಂದರು.
ಗೀತ ಸಾಹಿತಿ ಹೃದಯಶಿವ, “ನಾನು ದಿನೇಶ್ ಅವರ ಮೊದಲ ಚಿತ್ರ “ಉಯ್ಯಾಲೆ”ಗೆ ಸಂಭಾಷಣೆ ಬರೆದಿದೆ. ಹಾಡು ಬರೆಯುತ್ತಿದ್ದ ನನಗೆ ಸಂಭಾಷಣೆ ಬರೆಯಲು ಮೊದಲು ಅವಾಕಾಶ ನೀಡಿದ್ದೆ ಇವರು. ಈಗ ” ಸಾವಿತ್ರಿ” ಚಿತ್ರದ ಮೂಲಕ ಸಂಗೀತ ನಿರ್ದೇಶಕನಾಗಿ ಹೊಸ ಪಯಣ ಆರಂಭಿಸಿದ್ದೀನಿ. ಈವರೆಗೂ ಎಂಟನೂರಕ್ಕೂ ಅಧಿಕ ಹಾಡುಗಳನ್ನು ಬರೆದಿದ್ದೇನೆ. ಆದರೆ ಸಂಗೀತ ನೀಡಿರುವುದು ಇದೇ ಮೊದಲು. ನಾಲ್ಕು ಹಾಡುಗಳು ಚೆನ್ನಾಗಿದೆ ಎಂದರು ಹೃದಯಶಿವ.
ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಉತ್ತಮವಾಗೂ ಮೂಡಿಬಂದಿದೆ. ಸರ್ಕಾರ ನೂರರಷ್ಟು ಅನುಮತಿ ನೀಡಿದರೆ, ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತೇನೆ. ಇಲ್ಲವಾದಲ್ಲಿ ಓಟಿಟಿ ಮೂಲಕ ಪ್ರದರ್ಶಿಸುತ್ತೇವೆ ಎಂದರು ನಿರ್ಮಾಪಕ ಪ್ರಶಾಂತ್ ಕುಮಾರ್.
ಚಿತ್ರದ ನಟಿಸಿರುವ ಊರ್ವಶಿ ರಾಯ್, ನೈಲಾ ಪ್ರಮೋದ್ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಹಲವಾರು ಗಣ್ಯರು ಚಿತ್ರತಂಡಕ್ಕೆ ಶುಭ ಕೋರಿದರು