ಕೆವಿಎನ್ ಪ್ರೊಡಕ್ಷನ್ ನಡಿ ನಿಶಾ ವೆಂಕಟ್ ಕೊನಂಕಿ ನಿರ್ಮಾಣ ಮಾಡಿರುವ “ಬೈ ಟು ಲವ್” ಸಿನಿಮಾದ ಹೊಸ ಟ್ರಾಕ್ ಆನಂದ್ ಆಡಿಯೋ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. “ನೀನೇ ನೀನೇ…” ಎಂಬ ಮೆಲೋಡಿ ಟ್ರಾಕ್ ನಲ್ಲಿ ಲೀಲು-ಬಾಲು ಮುದ್ದಾದ ಮಗುವಿನೊಟ್ಟಿಗೆ ಆಡುವ ತುಂಟಾಟಗಳನ್ನು ಸುಂದರವಾಗಿ ಸೆರೆ ಹಿಡಿಯಲಾಗಿದೆ. ಈ ಹಿಂದೆ ಹಸೆಮಣೆಯಲ್ಲಿ ಕುಳಿತಿರುವ ಜೋಡಿಗಳ ತೊಡೆಯ ಮೇಲೊಂದು ಮಗು ಇರುವ ವಿಶೇಷ ಪೋಸ್ಟರ್ ಬಿಟ್ಟಿದ್ದ ನಿರ್ದೇಶಕ ಹರಿ ಸಂತು, ಈಗ ಹಾಡಿನಲ್ಲಿ ಮಗುವಿನೊಟ್ಟಿಗೆ ಶ್ರೀಲೀಲಾ ಹಾಗೂ ಧನ್ವೀರ್ ಎಂಜಾಯ್ ಮಾಡ್ತಿರುವ ಕಥೆಯೊಂದನ್ನು ಹೇಳಿ ತಲೆಗೆ ಹುಳ ಬಿಟ್ಟಿದ್ದಾರೆ.
ನಾಗೇಂದ್ರ ಪ್ರಸಾದ್ ಬರೆದ “ನೀನೇ ನೀನೆ” ಎಂಬ ಹಾಡಿಗೆ ಅಜನೀಶ್ ಲೋಕನಾಥ್ ಅಷ್ಟೇ ಇಂಪಾದ ಸಂಗೀತ ನೀಡಿದ್ದು, ಕಾರ್ತಿಕ್ ಈ ಹಾಡಿಗೆ ಧನ್ವಿಯಾಗಿದ್ದಾರೆ. ಇನ್ನು ಧನ್ವೀರ್ ಹಾಗೂ ಶ್ರೀಲೀಲಾ ಜೋಡಿ ಸಖತ್ ಮುದ್ದುಮುದ್ದಾಗಿ ಕಾಣಿಸಿಕೊಂಡಿದ್ದಾರೆ.
ಫೆಬ್ರವರಿ 18ಕ್ಕೆ ಸಿನಿಮಾ ತೆರೆಗೆ!
ಧನ್ವೀರ್ ಹಾಗೂ ಶ್ರೀಲೀಲಾ ಜೋಡಿಯ ಬೈ ಟು ಲವ್ ಪ್ರೇಮ್ ಕಹಾನಿ ಬಿಡುಗಡೆಗೆ ಕೌಂಟ್ ಡೌನ್ ಶುರುವಾಗಿದೆ. ಇದೇ 18ರಂದು ರಾಜ್ಯಾದ್ಯಂತ ಬೈ ಟು ಲವ್ ತೆರೆಗಪ್ಪಳಿಸಲಿದೆ. ಈಗಾಗಲೇ ಚಿತ್ರತಂಡ ಅದ್ಧೂರಿ ಪ್ರಮೋಷನ್ ಶುರು ಮಾಡಿದೆ. ಈ ಹಿಂದೆ ಮಾಸ್ ಲುಕ್ನಲ್ಲಿ ಮಿಂಚಿದ್ದ ಧನ್ವೀರ್, ಈಗ “ಬೈ ಟು ಲವ್’ನಲ್ಲಿ ಲವರ್ ಬಾಯ್ ಪಾತ್ರದಲ್ಲಿ ನಟಿಸಿದ್ದಾರೆ. ಶ್ರೀಲೀಲಾ ಮಲೆನಾಡ ಹುಡ್ಗಿಯಾಗಿ ಕಾಣಿಸಿಕೊಂಡಿದ್ದಾರೆ.
ಅಲೆಮಾರಿ, ಡವ್, ಕಾಲೇಜ್ ಕುಮಾರ್ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿ ಸಕ್ಸಸ್ ಕಂಡಿರುವ ಹರಿ ಸಂತೋಷ್ ಬೈ ಟು ಲವ್ ಸಿನಿಮಾಗೆ ನಿರ್ದೇಶನ ಮಾಡಿದ್ದು, ಮಹೇನ್ ಸಿಂಹ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ಹಾಗೂ ಯೋಗಾನಂದ್ ಸಂಭಾಷಣೆ ಚಿತ್ರಕ್ಕಿದೆ.
ಫೆಬ್ರವರಿ 8, 2002 … ಬಹುಶಃ ಕನ್ನಡ ಚಿತ್ರರಂಗದಲ್ಲಿ ಈ ದಿನವನ್ನು ನೆನಪಿಡಲೆಬೇಕು. ಕಾರಣ, ಈ ದಿನದಂದೇ ಕನ್ನಡಕ್ಕೊಬ್ಬ ಸೂಪರ್ ಸ್ಟಾರ್ ಹುಟ್ಟುಕೊಂಡಿದ್ದು. ಹೌದು, ಫೆ. 8, 2002 ರಲ್ಲಿ ದರ್ಶನ್ ಅಭಿನಯದ ಮೆಜೆಸ್ಟಿಕ್ ಸಿನಿಮಾ ರಿಲೀಸ್ ಆಗಿತ್ತು. ಈ ಸಿನಿಮಾ ಬಿಡುಗಡೆಯಾಗಿದ್ದೇ ತಡ, ಕನ್ನಡಕ್ಕೊಬ್ಬ ಮಾಸ್ ಹೀರೋ ಸಿಕ್ಕಿಬಿಟ್ಟರು ಅನ್ನೋ ಉದ್ಘಾರ ಎಲ್ಲರಿಂದಲೂ ಬಂದಿದ್ದು ಸುಳ್ಳಲ್ಲ. ಪಿ.ಎನ್. ಸತ್ಯ ನಿರ್ದೇಶನದಲ್ಲಿ ದರ್ಶನ್ ಮೊದಲ ಸಲ ಹೀರೋ ಆಗಿ ಮಿಂಚಿದ ಸಿನಿಮಾ ಇದು. ಮೊದಲ ಬಾಲ್ನಲ್ಲೇ ಸಿಕ್ಸರ್ ಬಾರಿಸಿದಂತೆ, ಮೊದಲ ಸಿನಿಮಾವೇ ಸೂಪರ್ ಡೂಪರ್ ಹಿಟ್ ಆಯ್ತು. ದರ್ಶನ್ ಅವರ ಈ ಮೆಜೆಸ್ಟಿಕ್ ಸಿನಿಮಾ ಇಂದಿಗೆ ಬಿಡುಗಡೆಯಾಗಿ ಬರೋಬ್ಬರಿ ಎರಡು ದಶಕಗಳು ಕಳೆದಿವೆ.
ನಿಜ, ಫೆಬ್ರವರಿ 8, 2002 ರಲ್ಲಿ ಈ ಚಿತ್ರ ಬಿಡುಗಡೆಯಾಗಿ ಇಲ್ಲಿಗೆ ಇಪ್ಪತ್ತು ವರ್ಷಗಳನ್ನು ಪೂರೈಸಿದೆ. ಆ ನೆನಪಿಗೆ ಇದೀಗ ನಿರ್ಮಾಪಕರಾದ ಎಂ.ಜಿ.ರಾಮಮೂರ್ತಿ ಅವರು ಮೆಜೆಸ್ಟಿಕ್ ಅನ್ನು ಮತ್ತಷ್ಟು ಕಲರ್ಫುಲ್ ಆಗಿಡುವ ಪ್ರಯತ್ನ ಮಾಡಿದ್ದಾರೆ. ಫೆ.16ರಂದು ದರ್ಶನ್ ಅವರ ಹುಟ್ಟುಹಬ್ಬ. ಆ ನೆನಪಿಗೆ ಮತ್ತು ಮೆಜೆಸ್ಟಿಕ್ ಸಿನಿಮಾ ರಿಲೀಸ್ ಆಗಿ ಇಪ್ಪತ್ತು ವರ್ಷಗಳನ್ನು ಪೂರೈಸಿರುವ ಸಂಭ್ರಮಕ್ಕೆ ಈ ಚಿತ್ರವನ್ನು ಮರು ಬಿಡುಗಡೆ ಮಾಡಲು ತಯಾರಿ ನಡೆಸಿದ್ದಾರೆ.
ದರ್ಶನ್ ಅವರ ಬರ್ತ್ಡೇ ನೆನಪಿಗಾಗಿಯೇ ಮೆಜೆಸ್ಟಿಕ್ ಸಿನಿಮಾವನ್ನು ಮತ್ತಷ್ಟು ರಂಗಾಗಿಸಲು ಹೊರಟಿದ್ದಾರೆ. ಅಂದರೆ ಇಪ್ಪತ್ತು ವರ್ಷಗಳ ಹಿಂದೆ ಇದ್ದಂತಹ ಮೆಜೆಸ್ಟಿಕ್ ಚಿತ್ರಕ್ಕೆ ಈಗಿನ ಜನರೇಷನ್ಗೆ ತಕ್ಕಂತೆ ಏನೆಲ್ಲಾ ಮಾಡಬೇಕೋ ಅದನ್ನು ಮಾಡಲು ಹೊರಟಿದ್ದಾರೆ. ಅಂದಹಾಗೆ, ಚಿತ್ರಕ್ಕೆ ಡಿಐ ಗ್ರಾಫಿಕ್ಸ್, ಮ್ಯೂಸಿಕ್ ಎಫೆಕ್ಟ್, ಸೌಂಡ್ ಎಫೆಕ್ಟ್ಸ್ ಸಿ.ಜಿ ವರ್ಕ್ ಸೇರಿದಂತೆ ಇನ್ನಿತರೆ ತಾಂತ್ರಿಕತೆಯನ್ನು ಬಳಸಿ ಮೆಜೆಸ್ಟಿಕ್ ಅಂದವನ್ನು ಹೆಚ್ಚಿಸಲಾಗಿದೆ. ಸಾಧುಕೋಕಿಲ ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದರು. ಈಗ ಸಾಧುಕೋಕಿಲ ಅವರ ಸ್ಟುಡಿಯೋದಲ್ಲೇ ಮೆಜೆಸ್ಟಿಕ್ ಚಿತ್ರವನ್ನು ಮತ್ತಷ್ಟು ಅಂದಗೊಳಿಸಲಾಗಿದೆ.
ಫೆ.8 ರಂದು ನಿರ್ಮಾಪಕರು ಸಣ್ಣದ್ದೊಂದು ಸೆಲೆಬ್ರೇಷನ್ ಕೂಡ ಇಟ್ಟುಕೊಂಡಿದ್ದಾರೆ. ದರ್ಶನ್ ಅವರ ನೇತೃತ್ವದಲ್ಲಿ ಆ ಸಂಭ್ರಮ ನಡೆಯಲಿದೆ. ಅದೇನೆ ಇರಲಿ, ಡಿ ಬಾಸ್ ಹುಟ್ಟು ಹಬ್ಬಕ್ಕೆ ದಚ್ಚು ಫ್ಯಾನ್ಸ್ಗೆ ಮೆಜೆಸ್ಟಿಕ್ ಚಿತ್ರವನ್ನು ಕೊಡುಗೆಯಾಗಿ ಕೊಡಲು ನಿರ್ಮಾಪಕರು ಸಜ್ಜಾಗಿದ್ದಾರೆ. ಮೆಜೆಸ್ಟಿಕ್ ಈಗ ಎಂದಿಗಿಂತಲೂ ಕಂಗೊಳಿಸಲಿದೆ ಅನ್ನೋದೇ ಈ ಹೊತ್ತಿನ ವಿಶೇಷ.
ಈ ಚಿತ್ರ ಬಿಡುಗಡೆಯಾಗಿ ಇಪ್ಪತ್ತು ವರ್ಷ ಕಳೆದಿದೆ. ಇದೇ ಫೆ. 16 ರಂದು ದರ್ಶನ್ ಅವರ ಹುಟ್ಟುಹಬ್ಬವಿದೆ. ಈ ಸಂದರ್ಭದಲ್ಲಿ ಹೊಸ ತಂತ್ರಜ್ಞಾನದೊಂದಿಗೆ “ಮೆಜೆಸ್ಟಿಕ್” ಚಿತ್ರ ಮರು ಬಿಡುಗಡೆಯಾಗಲಿದೆ ಎಂದು ನಿರ್ಮಾಪಕ ಎಂ.ಜಿ.ರಾಮಮೂರ್ತಿ ತಿಳಿಸಿದ್ದಾರೆ.
ಕನ್ನಡದಲ್ಲಿ ಈಗಾಗಲೇ ತರಹೇವಾರಿ ಶೀರ್ಷಿಕೆ ಇರುವ ಸಿನಿಮಾಗಳು ಬಂದಿವೆ. ಆ ಸಾಲಿಗೆ ಈಗ “ಇದೇ ಅಂತರಂಗ ಶುದ್ಧಿ” ಸಿನಿಮಾ ಕೂಡ ಸೇರಿದೆ. ಹೌದು, ಈಗಾಗಲೇ ಈ ಚಿತ್ರ ಸದ್ದಿಲ್ಲದೆಯೇ ಚಿತ್ರೀಕರಣ ಮುಗಿಸಿ, ಇದೀಗ ರಿಲೀಸ್ಗೂ ರೆಡಿಯಾಗಿದೆ. ಫೆಬ್ರವರಿ 11ರಂದು ರಾಜ್ಯಾದ್ಯಂತ ಈ ಚಿತ್ರ ರಿಲೀಸ್ ಆಗುತ್ತಿದೆ. ಶೀರ್ಷಿಕೆಯೇ ಹೇಳುವಂತೆ ಇದೊಂದು ವಿಭಿನ್ನ ಕಥೆ ಹೊಂದಿರುವ ಸಿನಿಮಾ. ಅಭಿನವ್ ಸ್ಟುಡಿಯೋಸ್ ಬ್ಯಾನರ್ನಲ್ಲಿ ಅಭಿಲಾಷ್ ಚಕ್ಲಾ ಹಾಗೂ ನವಾಜಿತ್ ಬಲ್ಲರ್ ನಿರ್ಮಾಣ ಮಾಡಿರುವ “ಇದೇ ಅಂತರಂಗ ಶುದ್ಧಿ” ಚಿತ್ರ ಹೊಸ ಪ್ರಯೋಗಾತ್ಮಕ ಸಿನಿಮಾ ಅನ್ನಬಹುದು. ಇಡೀ ಕಥೆಯಲ್ಲಿ ವಿಶೇಷವಾದಂತಹ ಸಾರಾಂಶವಿದೆ. ಇಂತಹ ಚಿತ್ರಕ್ಕೆ ಕುಮಾರ್ ದತ್ ನಿರ್ದೇಶನ ಮಾಡಿದ್ದಾರೆ. ಇದು ಇವರ ಎರಡನೇ ನಿರ್ದೇಶನದ ಚಿತ್ರ.
ಈ ಚಿತ್ರದ ಶೀರ್ಷಿಕೆಯೇ ಹೇಳುವಂತೆ ಇದೊಂದು ಅಂತರಂಗ ಶುದ್ಧಿ ಮಾಡಲು ಹೊರಟ ಸಿನಿಮಾ ಅನ್ನಬಹುದು. ಮನುಷ್ಯನ ಮನಸ್ಸು ಶುದ್ದಿ ಮಾಡುವಂತ ಕೆಲಸ ಅಂತಿಟ್ಟುಕೊಳ್ಳಿ. ಈ ದಿನದ ಜೀವನ ಶೈಲಿ ಹಾಗೂ ಅವಸರದ ಬದುಕಿನ ನಡುವೆ ಪ್ರೀತಿ ಪ್ರೇಮ, ಭಾವನೆಗಳು ಮತ್ತು ಪರಿಸ್ಥಿತಿಗೆ ಕನ್ನಡಿ ಹಿಡಿದಂತೆ ಮಾಡಿರುವ ಸಿನಿಮಾ ಅನ್ನೋದು ನಿರ್ದೇಶಕರ ಮಾತು.
ಎಲ್ಲೋ ಒಂದು ಕಡೆ ಮನುಷ್ಯ ತನ್ನನ್ನು ತಾನು ಕಳೆದುಕೊಂಡು ಸಾಗುತ್ತಿರುವಾಗ, ತಾನೇ ತನ್ನ ಕಣ್ಣೆದುರು ಹಲವು ಸನ್ನಿವೇಶಗಳ ಮೂಲಕ ಅಥವಾ ಕೆಲವು ಬದುಕಿನಲ್ಲಿ ಕಲಿತ ಪಾಠದಂತೆ ಬಂದು ಹೋಗೋ ಘಟನೆಗಳ ಮೂಲಕ ಕಲಿಯುವಂತಹ ಪಾಠ ಈ ಚಿತ್ರದಲ್ಲಿದೆ ಎನ್ನುತ್ತಾರೆ.
ಜೀವನ ಅನ್ನೋದೇ ಒಂದು ಪಯಣ. ಒಬ್ಬೊಬ್ಬರು ಒಂದೊಂದು ರೀತಿ ಕನಸು, ಅನುಭವ, ಆಸೆ, ಗುರಿ, ಕಾಯಕ ಹೊತ್ತು ಸಾಗುತ್ತಾರೆ. ಆ ಜರ್ನಿ ಮಧ್ಯೆ ಅವರು ಯಾರು ಯಾರನ್ನು ಭೇಟಿ ಆಗುತ್ತಾರೆ. ಏನೇನು ಆಗತ್ತೆ. ಏನೆಲ್ಲಾ ನಡೆಯತ್ತೆ ಎಂಬುದು ಕಥಾ ಹಂದರ. ಲವ್ ಪ್ರಾಣ್ ಮೆಹ್ತಾ ಸಂಗೀತ ನೀಡಿದ್ದಾರೆ. ಈಗಾಗಲೇ ಟ್ರೇಲರ್ ಮತ್ತು ಸಾಂಗ್ ಭರ್ಜರಿ ಸದ್ದು ಮಾಡಿದೆ ಕೂಡ. ವಿನಯ್ ಹೊಸ ಗೌಡರ್ ಛಾಯಾಗ್ರಹಣ ಮಾಡಿದರೆ, ಸುಪ್ರೀತ್ ಅವರ ಸಂಕಲನವಿದೆ. ಚಿತ್ರದಲ್ಲಿ ಆರ್ಯ ವರ್ಧನ್ ನಾಯಕರಾಗಿ ನಟಿಸಿದ್ದಾರೆ. ಉಳಿದಂತೆ ಚಿತ್ರದಲ್ಲಿ ಪ್ರತಿಭಾ, ಶ್ವೇತ, ರೂಪೇಶ್, ಶ್ರೀಧರ್, ಸೂರಜ್, ರಘು, ಪುನೀತ್, ಮಂಜುಳಾ ರೆಡ್ಡಿ ಸೇರಿದಂತೆ ಇತರರು ಇದ್ದಾರೆ.
ಐರಾ… ಇದು ಕನ್ನಡದ ಮತ್ತೊಂದು ಹೊಸ ಚಿತ್ರ. ಐರಾ ಅನ್ನೋದು ಸಂಸ್ಕೃತ ಪದ, ಪ್ರಕೃತಿಯಲ್ಲಿ ಏನಾದರೂ ಒಂದು ಕ್ರಿಯೆ ನಡೆಯುವ ಮುನ್ನ ವಿಚಿತ್ರ ಶಬ್ದವೊಂದು ಕೇಳಿ ಬರುತ್ತದೆ. ಆ ಶಬ್ದವನ್ನೇ ಐರಾ ಅಂತಾರೆ. ಇದು ನಿರ್ದೇಶಕ ರಾಜ್ಉದಯ್ ಟೈಟಲ್ ಕುರಿತು ನೀಡುವ ಮಾಹಿತಿ. ಇತ್ತೀಚೆಗೆ ಐರಾ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ನಿರ್ಮಾಪಕ ಜಾಕ್ ಮಂಜು, ನಟ ಮೋಹನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು, ಸುರೇಶ್ ಸುಬ್ರಮಣ್ಯ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಶಿವು ಹಾಗೂ ಮೀನಾಕ್ಷಿ ಈ ಚಿತ್ರದಲ್ಲಿ ತಾಯಿ, ಮಗನಾಗಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಕೌಶಿಕ್ ಹರ್ಷ ಸಂಗೀತ ಸಂಯೋಜನೆ ಮಾಡಿದ್ದಾರೆ. ವಿಘ್ನೇಶ್ ನಾಗೇಂದ್ರ ಕ್ಯಾಮೆರಾ ಕೆಲಸ ಮಾಡಿದ್ದಾರೆ.
ಮಾಸ್ತಿಗುಡಿ ದುರಂತದಲ್ಲಿ ಮಡಿದ ಉದಯ್ ನನ್ನ ಸ್ವಂತ ಭಾಮೈದ, ಉದಯ್ಗಾಗೇ ಈ ಕಥೆ ರೆಡಿ ಮಾಡಿಕೊಂಡಿದ್ದೆ. ಐರಾ ನನ್ನ ಕನಸು, ಈ ಕಥೆಯನ್ನು ನೂರಾರು ನಿರ್ಮಾಪಕರ ಬಳಿ ತೆಗೆದುಕೊಂಡು ಹೋಗಿದ್ದೆ. ಕಥೆಯನ್ನು ಇಷ್ಟಪಟ್ಟರೂ, ಹೀರೋ ಹೆಸರು ಕೇಳಿದ ಕೂಡಲೇ ನೋಡೋಣ ಎನ್ನುತ್ತಿದ್ದರು. ಆದರೆ ಸುರೇಶ್ ಸುಬ್ರಮಣ್ಯ ಚಿತ್ರ ಅರ್ಧದಲ್ಲೇ ನಿಲ್ಲುವ ಸ್ಥಿತಿಯಲ್ಲಿದ್ದಾಗ ಮುಂದೆ ಬಂದರು, ಅನಾಥ ಹುಡುಗನೊಬ್ಬನ ಸುತ್ತ ನಡೆವ ಕಥೆಯಿದು, ಆತ ಏಕೆ ಹುಚ್ಚನಾದ, ಅದರ ಹಿನ್ನೆಲೆಯೇನು ಅನ್ನೋದೇ ಈ ಚಿತ್ರದ ಕಥೆ. ವಿಶೇಷವಾಗಿ ಮದರ್ ಸಂಟಿಮೆಟ್ ಸಾಂಗನ್ನು ಜೋಗಿ ಪ್ರೇಮ್ ಅವರು ಹಾಡುತ್ತಿದ್ದಾರೆ.15 ದಿನಗಳ ಕಾಲ ಬನಶಂಕರಿಯ ಸ್ಮಶಾನದಲ್ಲಿ ನಂತರ ಆಂದ್ರಹಳ್ಳಿ ದೇವಸ್ಥಾನವೊಂದರಲ್ಲಿ ಚಿತ್ರೀಕರಣ ನಡೆಸಿದ್ದು, ಸದ್ಯದಲ್ಲೇ 2ನೇ ಹಂತದ ಶೂಟಿಂಗ್ ಆರಂಭಿಸುತ್ತಿದ್ದೇವೆ. ಪ್ರಕೃತಿಯಲ್ಲಿ ಏನಾದರೂ ಕ್ರಿಯೆ ಆಗಬೇಕಾದರೆ ಅದರ ಮುನ್ಸೂಚನೆ ಎಂಬಂತೆ ಒಂದು ಸೌಂಡ್ ಕೇಳಿಬರುತ್ತದೆ, ಅದೇ ಐರಾ ಎಂದು ವಿವರಿಸಿದರು.
ಚಿತ್ರದ ನಾಯಕ ಶಿವು ಮಾತನಾಡಿ, ನಾನು ರಾಜ್ ಉದಯ್ ಸೇರಿ ಐದು ವರ್ಷಗಳ ಕಾಲ ತಾಯಿ ಸೆಂಟಿಮೆಂಟ್ ಇರುವ ಈ ಕಥೆಯನ್ನು ರೆಡಿ ಮಾಡಿದೆವು. ಒಬ್ಬ ನಿರ್ಮಾಪಕರೂ ಸಿಗಲಿಲ್ಲ ಅಂತ ಇಬ್ಬರೂ ಬಹಳ ಸಲ ಅತ್ತಿದ್ದೇವೆ. ಕೊನೆಗೆ ಸುರೇಶ್ ಸುಬ್ರಮಣ್ಯ ಅವರು ಸಿಕ್ಕರು. ಇದರಲ್ಲಿ ನನ್ನ ಪಾತ್ರಕ್ಕೆ ಹುಚ್ಚನ ಕ್ಯಾರೆಕ್ಟರ್ ಅಲ್ಲದೆ ಹಲವಾರು ಗೆಟಪ್ಗಳಿವೆ ಎಂದು ಹೇಳಿದರು.
ಜಾಕ್ ಮಂಜು ಮಾತನಾಡಿ, ಕನಸುಗಳನ್ನು ಹೊತ್ತ ತಂಡ ಇಲ್ಲಿದೆ, ಇವರೆಲ್ಲರ ಕನಸು ಈಡೇರಲಿ, ಎಲ್ಲರಿಗೂ ಒಳ್ಳೇ ಹೆಸರು ಬರಲಿ, ಟೀಸರ್ ಬಹಳ ಅದ್ಭುತವಾಗಿ ಬಂದಿದೆ, ಟೀಸರ್ನಲ್ಲಿ ಹಾಡಿನ ತುಣುಕನ್ನೂ ಸೇರಿಸಿರುವುದು ಒಳ್ಳೇ ಪ್ರಯತ್ನ, ಇವರೆಲ್ಲ ಮಾತಾಡುವಾಗ ನನ್ನ ಮೊದಲಚಿತ್ರ ಡೆಡ್ಲಿಸೋಮ ನೆನಪಾಯ್ತು ಎಂದರು, ನಟ ಮೋಹನ್ ಮಾತನಾಡಿ ಮೊದಲಹೆಜ್ಜೆ ಇಡೋದೇ ಕಷ್ಟ, ಈ ಹುಡುಗರು ಆಗಲೇ ಯಶಸ್ಸು ಗಳಿಸಿದ್ದಾರೆ.. ನಾನೊಬ್ಬ ನಿರ್ದೇಶಕನಾಗಿ ಗುರುತಿಸಿಕೊಳ್ಳಲು 8 ವರ್ಷಗಳ ಕಾಲ ಕಾದಿದ್ದೆ ಎಂದು ತನ್ನ ಅನುಭವ ಹಂಚಿಕೊಂಡರು. ನಾಯಕನ ತಾಯಿ ಪಾತ್ರ ಮಾಡಿರುವ ಮೀನಾಕ್ಷಿ, ಮತ್ತೊಬ್ಬ ಪ್ರಮುಖ ಪಾತ್ರಧಾರಿ ಕಾರ್ತೀಕ್ ವರ್ಣೇಕರ್ ಚಿತ್ರದ ಕುರಿತಂತೆ ತಮ್ಮ ಅನುಭವ ಹಂಚಿಕೊಂಡರು.
ಛಾಯಾಗ್ರಾಹಕ ವಿಘ್ನೇಶ್ ನಾಗೇಂದ್ರ ಮಾತನಾಡಿ ಸ್ಮಶಾನದಲ್ಲಿ ಶೂಟ್ ಮಾಡಿದ್ದೇವೆ, ರಿಯಲ್ ಹೆಣದ ಜತೆಗೇ ನಾಯಕ ಶಿವು ಆಕ್ಟ್ ಮಾಡಿದ್ದಾರೆ ಎಂದು ಹೇಳಿದರು. ಸಂಗೀತ ನಿರ್ದೇಶಕ ಕೌಶಿಕ್ ಹರ್ಷ ಮಾತನಾಡಿ ಚಿತ್ರದಲ್ಲಿ ೪ ಹಾಡುಗಳಿವೆ, ನನ್ನ ಸಹೋದರ ಚೇತನ್ ಸಾಹಿತ್ಯ ಬರೆದಿದ್ದಾರೆ ಎಂದರು.
ಕಮರ್ ಫ್ಯಾಕ್ಟರಿ ಅರ್ಪಿಸುವ, ಕಮರ್ ಡಿ ಹಾಗೂ ವಿಜಯಲಕ್ಷ್ಮಿ ವೀರ ಮಾಚನನ್ ನಿರ್ಮಿಸುತ್ತಿರುವ ನೂತನ ಚಿತ್ರದ ಮುಹೂರ್ತ ಸಮಾರಂಭ ಮಲ್ಲೇಶ್ವರದ ಶ್ರೀಗಣಪತಿ ದೇವಸ್ಥಾನದಲ್ಲಿ ನೆರವೇರಿತು. ದಿಗಂತ್ ಹಾಗೂ ತರುಣ್ ಚಂದ್ರ ಈ ಚಿತ್ರದ ನಾಯಕರಾಗಿ ನಟಿಸುತ್ತಿದ್ದಾರೆ. ಕಾವ್ಯ ಶೆಟ್ಟಿ ಮತ್ತು ಕೊಮಿಕಾ ಆಂಚಲ್ ಈ ಚಿತ್ರದ ನಾಯಕಿಯರು.
ದೇವರ ಮೇಲೆ ಸೆರೆ ಹಿಡಿಯಲಾದ ಮೊದಲ ಸನ್ನಿವೇಶಕ್ಕೆ ನಿರ್ಮಾಪಕರಾದ ಕಮರ್ ಹಾಗೂ ಕಿರಣ್ ವೆಂಕಟ್ ವೀರಮಾಚನೆನಿ ಆರಂಭ ಫಲಕ ತೋರಿದರು. ವಾಸಿಂ ಕ್ಯಾಮೆರಾ ಚಾಲನೆ ಮಾಡಿದರು. ಶಾಸಕ ರೇಣಕಾಚಾರ್ಯ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.
ಮುಂಬೈ ಮೂಲದ ಆನಂದ್ ಪ್ರಕಾಶ್ ಮಿಶ್ರ ಈ ಚಿತ್ರದ ನಿರ್ದೇಶಕರು. ಇದು ಅವರಿಗೆ ಚೊಚ್ಚಲ ಸಿನಿಮಾ. ಥ್ರಿಲ್ಲರ್ ಸಿನಿಮಾಗಿರುವುದರಿಂದ ಕಥೆ ಬಗ್ಗೆ ಹೆಚ್ಚು ಹೇಳುವಂತಿಲ್ಲ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ದೇಶಕ ಆನಂದ್ ಪ್ರಕಾಶ್ ಮಿಶ್ರ.
ಬಹಳ ದಿನಗಳ ನಂತರ ನಾನು ಈ ಚಿತ್ರದ ಮೂಲಕ ನಟನೆಗೆ ಮರಳಿ ಬಂದಿದ್ದೀನಿ. ದಿಗಂತ್ , ಕಮರ್ ಅವರ ಜೊತಗೆ ಕ್ರಿಕೇಟ್ ಆಡಿದ್ದೀನಿ. ಆದರೆ ಸಿನಿಮಾ ಮಾಡಿಲ್ಲ. ಇದೇ ಮೊದಲ ಬಾರಿಗೆ ಅವರ ಜೊತೆಗೆ ಸಿನಿಮಾ ಮಾಡುತ್ತಿದ್ದೇನೆ. ಎಲ್ಲರ ಬೆಂಬಲವಿರಲಿ ಎಂದರು ತರುಣ್ ಚಂದ್ರ.
ನನ್ನದು ಈ ಚಿತ್ರದಲ್ಲಿ ಬರಹಗಾರನ ಪಾತ್ರ. ಕಮರ್ ಹಾಗೂ ತರುಣ್ ನನ್ನ ಬಹಳ ದಿನಗಳ ಸ್ನೇಹಿತರು. ಕಮರ್ ಯಾವಾಗಲೂ ಒಂದು ಸಿನಿಮಾ ಮಾಡೋಣ ಎನ್ನುತ್ತಿದ್ದರು. ಈಗ ಸಮಯ ಕೂಡಿ ಬಂದಿದೆ ಎಂದರು ದಿಗಂತ್.
ನನಗೆ ಇವರೆಲ್ಲರೂ ಮೊದಲಿಂದಲೂ ಪರಿಚಯ. ಈ ಚಿತ್ರದಲ್ಲಿ ನಟಿಸುತ್ತಿರುವುದು ಸಂತಸ ತಂದಿದೆ. ನಿರ್ದೇಶಕರು ಕಥೆ ಬಗ್ಗೆ ಹೆಚ್ಚು ಹೇಳಿಲ್ಲ ಎನ್ನುತ್ತಾರೆ ಕಾವ್ಯ ಶೆಟ್ಟಿ.
ಮತ್ತೊಬ್ಬ ನಾಯಕಿ ಕೊಮಿಕ ಆಂಚಲ್ ಸಹ ಸಿನಿಮಾ ಕುರಿತು ಮಾತನಾಡಿದರು.
ನಿರ್ದೇಶಕ ಆನಂದ್ ಪ್ರಕಾಶ್ ಮಿಶ್ರ ಅವರನ್ನು ಮುಂಬೈನಲ್ಲಿ ಭೇಟಿ ಯಾದಾಗ ಈ ಕಥೆ ಹೇಳಿದರು. ಇಷ್ಟವಾಯಿತು. ನಾಲ್ಕು ಹಾಡುಗಳಿದೆ. ಆನಂದ್ ರಾಜ್ ವಿಕ್ರಮ್ ಸಂಗೀತ ನೀಡುತ್ತಿದ್ದಾರೆ. ಹಿರಿಯ ಛಾಯಾಗ್ರಾಹಕ ಪಿ.ಕೆ.ಎಚ್ ದಾಸ್ ಛಾಯಾಗ್ರಹಣ ಈ ಚಿತ್ರಕ್ಕಿದೆ. ಇದೇ ಏಳರಿಂದ ಬೆಂಗಳೂರು, ಕೊಡಗು ಮುಂತಾದ ಕಡೆ ನಲವತ್ತು ದಿನಗಳ ಚಿತ್ರೀಕರಣ ನಡೆಯಲಿದೆ ಎಂದು ನಿರ್ಮಾಪಕ ಕಮರ್ ತಿಳಿಸಿದರು. ಮತ್ತೊಬ್ಬ ನಿರ್ಮಾಪಕ ಕಿರಣ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಈ ಹಿಂದೆ ಗೌಡ್ರುಸೈಕಲ್ ಎಂಬ ಪಕ್ಕಾ ಗ್ರಾಮೀಣ ಸೊಗಡಿನ ಚಿತ್ರ ಮಾಡಿದ್ದ ತಂಡದ ಬಹುತೇಕರು ಸೇರಿ ಮತ್ತೊಂದು ಸಿನಿಮಾ ಮಾಡಿದ್ದಾರೆ. ಅದಕ್ಕೆ ಬಹುಕೃತ ವೇಷಂ ಎಂದು ಹೆಸರಿಡಲಾಗಿದೆ. ಅಂದಹಾಗೆ, ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಕಥಾಹಂದರ ಹೊಂದಿದೆ. ಇಲ್ಲಿ ಬಿಗ್ ಬಾಸ್ ಖ್ಯಾತಿಯ ವೈಷ್ಣವಿಗೌಡ ಹಾಗೂ ಗೌಡ್ರು ಸೈಕಲ್ ನಾಯಕ ಶಶಿಕಾಂತ್ ಚಿತ್ರದ ಆಕರ್ಷಣೆ. ಈ ಚಿತ್ರವನ್ನು ಪ್ರಶಾಂತ್ ಕೆ. ಎಳ್ಳಂಪಳ್ಳಿ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಇವರು ಗೌಡ್ರುಸೈಕಲ್ ಚಿತ್ರಕ್ಕೂ ನಿರ್ದೇಶಕರಾಗಿದ್ದರು.
ಇತ್ತೀಚೆಗೆ ಬಹುಕೃತ ವೇಷಂ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ನೆರವೇರಿತು. ಈ ವೇಳೆ ನಾಯಕ ಶಶಿಕಾಂತ್ ಮಾತನಾಡಿ, “ನನ್ನದು 2 ಶೇಡ್ ಇರೊ ಪಾತ್ರ, ಡಿಲೇರಿಯಂ ಫೋಬಿಯಾ ಎನ್ನುವ ಖಾಯಿಲೆಯ ಮೇಲೆ ಮಾಡಿರುವ ಚಿತ್ರವಿದು, ನಾವು ಈ ಕಥೆ ಮಾಡಿಕೊಂಡು ನಿರ್ಮಾಪಕರ ಬಳಿ ಹೋದಾಗ ಮೊದಲು ಒಪ್ಪಲಿಲ್ಲ, ನಂತರ ನಮ್ಮ ಹಿಂದಿನ ಚಿತ್ರಕ್ಕೆ ಪತ್ರಿಕೆಗಳಲ್ಲಿ ಪ್ರಕಟವಾದ ವಿಮರ್ಶೆಗಳನ್ನು ತಂದು ತೋರಿಸಿದಾಗ ಒಪ್ಪಿದರು. ಮಾದ್ಯಮಗಳ ಕಾರಣದಿಂದ ದೊಡ್ಡ ಚಿತ್ರವೊಂದು ಆರಂಭವಾಯಿತು ಎಂಬುದು ಅವರ ಮಾತು.
ನಿರ್ಮಾಪಕರು ಒಂದೊಳ್ಳೇ ಸಿನಿಮಾ ಮಾಡಿಕೊಡಿ ಎಂದು ಹೇಳಿ ಎಲ್ಲಾ ಜವಾಬ್ದಾಾರಿ ನಮಗೇ ವಹಿಸಿದ್ದರು. ಕಥೆ ಬರೆಯುವಾಗ ಈ ಪಾತ್ರಕ್ಕೆ ವೈಷ್ಣವಿಗೌಡ ಅವರೇ ಸೂಕ್ತ ಅಂದುಕೊಂಡಿದ್ದೆವು, ಅವರ ಬಳಿ ಹೋಗಿ ಕಥೆ ಹೇಳಿದಾಗ ಅವರೂ ಸಹ ಒಪ್ಪಿದರು. ಚಿತ್ರಕ್ಕೆ 70 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ, ವೈಷ್ಣವಿಗೌಡ ಅವರು ಸಿಂಗಲ್ ಶಾಟ್ನಲ್ಲಿ ಅದ್ಭುತವಾಗಿ ನಟಿಸಿದ್ದಾರೆ ಎಂದರು.
ಚಿತ್ರದ ಕಥೆ, ಚಿತ್ರಕಥೆ ಬರೆದಿರುವ ಅಧ್ಯಾಯ ತೇಜ್, “ನನ್ನ ಸ್ನೇಹಿತನೊಬ್ಬನಿಗೆ ಈ ಥರದ ಖಾಯಿಲೆ ಇತ್ತು. ಪ್ರತಿದಿನ ಅವನ ಮೇಲೆ ಅವನೇ ಫೈಟ್ ಮಾಡುತ್ತಿರುತ್ತಾನೆ. ಇದನ್ನು ಸ್ನೇಹಿತ ಶಶಿಕಾಂತ್ ಬಳಿ ಹೇಳಿದೆ. ಆತನೂ ಸಿನಿಮಾ ಮಾಡಲು ಒಪ್ಪಿದ. ಕಂಟೆಂಟ್ ಸಿನಿಮಾವನ್ನು ಕಮರ್ಷಿಯಲ್ ಆಗಿ ಮಾಡಿದ್ದೇವೆ ಎಂದರು. ಚಿತ್ರದ ಪ್ರೀ ಕ್ಲೈಮ್ಯಾಕ್ಸನಲ್ಲಿ ನಾಲ್ಕುವರೆ ನಿಮಿಷದ ಒಂದೇ ಶಾಟ್ ಇದೆ. ಅದರಲ್ಲಿ ವೈಷ್ಣವಿಗೌಡ ಅವರು ನಗು, ಅಳು ಸೇರಿಸಿ ಪೈಪೋಟಿಗೆ ಬಿದ್ದವರಂತೆ ಅಭಿನಯಿಸಿದ್ದಾರೆ ಎಂಬುದು ಅವರ ಮಾತು.
ಹೆಚ್. ನಂದ ಹಾಗೂ ಡಿ. ಕೆ. ರವಿ ಚಿತ್ರ ನಿರ್ಮಾಣ ಮಾಡಿದ್ದಾರೆ. ವೈಶಾಖ್ ವಿ.ಭಾರ್ಗವ್ ಈ ಚಿತ್ರದ ನಾಲ್ಕು ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದರೆ, ಕಿರಣ್ ಕೃಷ್ಣಮೂರ್ತಿ ಅವರು ಚಿತ್ರಕ್ಕೆ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ. ಹರ್ಷಕುಮಾರ್ಗೌಡ ಕ್ಯಾಮೆರಾ ಹಿಡಿದಿದ್ದಾರೆ. ಜ್ಞಾನೇಶ್ ಅವರ ಸಂಕಲನವಿದೆ.
ವಿನೋದ್ ಪ್ರಭಾಕರ್ ನಾಯಕರ ಗಾಗಿ ನಟಿಸಿರುವ “ವರದ” ಚಿತ್ರಕ್ಕಾಗಿ ನಂದೀಶ್ ಬರೆದಿರುವ “ತುಟಿಯು ಹಾಡುತಿದೆ” ಎಂಬ ಹಾಡನ್ನು ನಟ ನೆನಪಿರಲಿ ಪ್ರೇಮ್ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. ಆರ್ ಜೆ ರಾಪಿಡ್ ರಶ್ಮಿ ಈ ಹಾಡನ್ನು ಹಾಡಿದ್ದಾರೆ. ಪ್ರದೀಪ್ ವರ್ಮ ಸಂಗೀತ ನೀಡಿದ್ದಾರೆ. ಫೆಬ್ರವರಿ 18ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ ಅನ್ನೋದು ವಿಶೇಷ.
ಕೆ.ಕಲ್ಯಾಣ್ , ನಂದೀಶ್ ಹಾಗೂ ಚೇತನ್ ಕುಮಾರ್ ಈ ಚಿತ್ರದ ಹಾಡುಗಳನ್ನು ಬರೆದಿದ್ದು, ಪ್ರದೀಪ್ ವರ್ಮ ಸಂಗೀತ ನೀಡಿದ್ದಾರೆ. ವಿನಾಯಕರಾಮ್ ಸಂಭಾಷಣೆ ಬರೆದಿದ್ದಾರೆ. ಭಜರಂಗಿ ಆನಂದ್ ಛಾಯಾಗ್ರಹಣ, ವೆಂಕಿ ಯು ಡಿ ವಿ ಸಂಕಲನ, ಕಂಬಿ ರಾಜು ನೃತ್ಯ ನಿರ್ದೇಶನವಿದೆ. ಡಿಫರೆಂಟ್ ಡ್ಯಾನಿ, ವಿಕ್ರಂ ಮೋರ್(ಕೆ ಜಿ ಎಫ್), ಅಶ್ರಫ್ ಗುರ್ಕಲ್ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
ವಿನೋದ್ ಪ್ರಭಾಕರ್ ಅವರ ತಂದೆ ಪಾತ್ರದಲ್ಲಿ ಹಿರಿಯ ನಟ ಚರಣ್ ರಾಜ್ ನಟಿಸಿದ್ದಾರೆ. ಅಮಿತ ಈ ಚಿತ್ರದ ನಾಯಕಿ. ಅನಿಲ್ ಸಿದ್ದು, ಎಂ.ಕೆ.ಮಠ, ಅಶ್ವಿನಿ ಗೌಡ, ಗಿರೀಶ್ ಜತ್ತಿ, ಪ್ರಶಾಂತ್ ಸಿದ್ದಿ, ರಾಧ ರಂಗನಾಥ್, ರಾಜೇಶ್ವರಿ, ದುರ್ಗ, ಮಾನಸ, ಅರವಿಂದ್, ರೋಬೊ ಗಣೇಶ್, ಲೋಕೇಶ್, ನಮನ, ರಾಮಸ್ವಾಮಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಕನ್ನಡದಲ್ಲಿ ಈಗ ಹೊಸಬರದ್ದೇ ಹವಾ. ಹೌದು, ದಿನ ಕಳೆದಂತೆ ಗಾಂಧಿನಗರದಲ್ಲಿ ಹೊಸಬರ ಆಗಮನವಾಗುತ್ತಲೇ ಇದೆ. ಆ ಸಾಲಿಗೆ ಈಗ ಹೊಸಬರೆಲ್ಲರೂ ಸೇರಿ “ಜಾರ್ಜ್ ಶೀಟ್” ಹಾಕೋಕೆ ರೆಡಿಯಾಗಿದ್ದಾರೆ! ಅರೇ ಹೀಗೆಂದಾಕ್ಷಣ, ಏನೇನೋ ಪ್ರಶ್ನೆಗಳು ಸಹಜ. ವಿಷಯವಿಷ್ಟೆ. ಇದು ಕನ್ನಡದ ಹೊಸ ಚಿತ್ರದ ಹೆಸರು. ಹೌದು, “ಚಾರ್ಜ್ಶೀಟ್” ಮೂಲಕ ಗುರುರಾಜ ಕುಲಕರ್ಣಿ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಅದಕ್ಕೂ ಮುನ್ನ, ಇತ್ತೀಚೆಗೆ ಚಿತ್ರದ ಮುಹೂರ್ತ ನೆರವೇರಿತು. ಗೀತ ಸಾಹಿತಿ ನಾಗೇಂದ್ರ ಪ್ರಸಾದ್ ಅವರು ಕ್ಲಾಪ್ ಮಾಡಿ ಶುಭ ಹಾರೈಸಿದರೆ, ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಅವರು ಕ್ಯಾಮೆರಾ ಚಾಲನೆ ಮಾಡಿ ಶುಭ ಕೋರಿದರು.
ಅಂದಾಹಗೆ, ಚಾರ್ಚ್ಶೀಟ್ ಅಂದಾಕ್ಷಣ ನೆನಪಾಗೋದೇ ಪೋಲಿಸರು. ಹೌದು, ಪೋಲೀಸ್ ಭಾಷೆಯಲ್ಲಿ ಅದು ತನಿಖಾ ವರದಿ ಅಂತರ್ಥ. ಒಂದು ಮರ್ಡರ್ ಮಿಸ್ಟ್ರಿ ಸುತ್ತ ನಡೆಯುವ ಸಸ್ಪೆನ್ಸ್, ಕ್ರೈಮ್ ಥ್ರಿಲ್ಲರ್ ಕಥಾಹಂದರ ಇಟ್ಟುಕೊಂಡು ಯುವ ಪ್ರತಿಭೆಗಳ ತಂಡ ಕಟ್ಟಿಕೊಂಡು ನಿರ್ದೇಶಕ ಗುರುರಾಜ ಕುಲಕರ್ಣಿ ಕೆಲಸ ಮಾಡೋಕೆ ಹೊರಟಿದ್ದಾರೆ. ಈ ಚಿತ್ರಕ್ಕೆ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಮಿಂಚಿದ್ದ ಬಾಲಾಜಿ ಶರ್ಮ, ಸಾಗರ್ ಹಾಗೂ ಚೈತ್ರಾ ಕೋಟೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. ಇನ್ನು ಈ ಚಿತ್ರವನ್ನು ಡಾ.ಸುನೀಲ್ ಕುಂಬಾರ್ ನಿರ್ಮಿಸುತ್ತಿದ್ದಾರೆ. ಇದರೊಂದಿಗೆ ಅವರೇ ಕಥೆ ಬರೆದಿದ್ದಾರೆ. ಜೊತೆಗೆ ಪಾತ್ರವೊಂದರಲ್ಲೂ ಅವರು ಕಾಣಿಸಿಕೊಳ್ಳುತಿದ್ದಾರೆ.
ತಮ್ಮ ಸಿನಿಮಾ ಕುರಿತು ನಿರ್ಮಾಪಕ ಸುನೀಲ್ ಕುಂಬಾರ್ ಹೇಳಿದ್ದಿಷ್ಟು. “ಹತ್ತು ವರ್ಷಗಳ ಹಿಂದೆ ನಾನೂ ಸಹ ಮೀಡಿಯಾದಲ್ಲಿ ಕೆಲಸ ಮಾಡುತ್ತಿದ್ದೆ. ಲಾಕ್ಡೌನ್ ಸಂದರ್ಭದಲ್ಲಿ ಹುಟ್ಟಿದ ಕಥೆಯಿದು, ಒಂದರ್ಥದಲ್ಲಿ ಲಾಕ್ಡೌನ್ ಸೈಡ್ ಎಫೆಕ್ಟ್ ಅಂತಲೂ ಹೇಳಬಹುದು, ವಿಶೇಷ ನಿರೂಪಣೆಯಿರುವ ಚಿತ್ರ ಇದಾಗಿದ್ದು. ಸಿನಿಮಾ ನೋಡುವವರಿಗೆ ಕಥೆ ಏನೆಂದು ಅರ್ಥವಾಗುತ್ತದೆ. ಆದರೆ ಅಲ್ಲಿರುವವರಿಗೆ ಏನು ನಡೆಯುತ್ತೆಂದು ಗೊತ್ತಾಗಲ್ಲ. ವೆಸ್ಟ್ ಬೆಂಗಾಲ್ನ ಉಮಾ ಚಕ್ರಬೋರ್ತಿ ಹಾಗೂ ಚನೈನ ಎಸ್.ಆರ್.ರಾಜನ್ ನನ್ನ ಜೊತೆ ನಿರ್ಮಾಣದಲ್ಲೂ ಕೈ ಜೋಡಿಸಿದ್ದಾರೆ. ಇವರಿಬ್ಬರಿಗೆ ಕನ್ನಡ ಭಾಷೆ ಬರದಿದ್ದರೂ ಅಭಿಮಾನದಿಂದ ಕನ್ನಡ ಸಿನಿಮಾ ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ, ಆದರೆ ಸಂಪೂರ್ಣ ಕನ್ನಡದ ಕಲಾವಿದರೇ ಸೇರಿ ಮಾಡುತ್ತಿರುವ ಚಿತ್ರ ಎಂದು ವಿವರಿಸಿದರು ನಿರ್ಮಾಪಕ ಸುನೀಲ್ ಕುಂಬಾರ್.
ನಿರ್ದೇಶಕ ಗುರುರಾಜ್ ಕುಲಕರ್ಣಿ ಅವರಿಗೆ ಈ ಚಿತ್ರದ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಇದೆಯಂತೆ. ” ಚಿತ್ರದ ಕಥೆ, ಟೈಟಲ್ ನಿರ್ಮಾಪಕರು ಕೊಟ್ಟಿದ್ದು. ನಾನು ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದೇನೆ, ಶಾಲೆಯೊಂದರ ವಿದ್ಯಾರ್ಥಿನಿಯ ಕೊಲೆಯಾಗಿರುತ್ತದೆ. ಆ ಕೊಲೆ ತನಿಖೆಯ ಸುತ್ತ ನಡೆಯುವ ಕಥೆಯೇ ಚಾರ್ಜ್ಶೀಟ್. ಬಹಳ ದಿನಗಳಿಂದ ನನಗೆ ನಾಗೇಂದ್ರ ಅರಸ್ ಅವರ ಜೊತೆ ಕೆಲಸ ಮಾಡಬೇಕೆಂದು ಆಸೆಯಿತ್ತು. ಈ ಚಿತ್ರದಲ್ಲಿ ಅವರು ಕ್ರೈಂ ಕಥೆಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ನಟಿ ಸಂಜನಾ ನಾಯ್ಡು ಅವರು ಸ್ಪೆಷಲ್ ಸಿಬಿಐ ಆಫೀಸರ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಉತ್ತರ ಕರ್ನಾಟಕದಲ್ಲಿ ಒಳ್ಳೊಳ್ಳೆಯ ಕಲಾವಿದರಿದ್ದು, ಬಹುತೇಕರನ್ನು ಚಿತ್ರದಲ್ಲಿ ಬಳಸಿಕೊಳ್ಳುತ್ತಿದ್ದೇವೆ ಎಂದರು.
ನಾಯಕನಟ ಬಾಲಾಜಿಶರ್ಮ ಅವರು ತಮ್ಮ ಪಾತ್ರ ಕುರಿತು ಹೇಳಿದ್ದು ಹೀಗೆ. ” ನಾನು ಮೂಲತ: ಫೋಟೋಗ್ರಾಫರ್ ಆಗಿದ್ದವನು. ಅದರ ಜೊತೆ ಜೊತೆಗೆ ಬಣ್ಣದ ನಂಟು ಹೆಚ್ಚಿಸಿಕೊಂಡು ಹಲವಾರು ಸೀರಿಯಲ್ಗಳಲ್ಲಿ ಅಭಿನಯಿಸಿದೆ. ಅಲ್ಲಿಂದ ಒಂದಷ್ಟು ಸಿನಿಮಾ ಕೂಡ ಮಾಡಿದ್ದೇನೆ. ಈ ಚಿತ್ರ ನನಗೆ ವಿಶೇಷವಾಗಿದೆ. ಕಾರಣ, ಒಂದೊಳ್ಳೆಯ ಸಸ್ಪೆನ್ಸ್ ಕ್ರೈಂ ಥ್ರಿಲ್ಲರ್ ಕಥೆ ಇಲ್ಲಿದೆ. ನಾನಿಲ್ಲಿ ಪೋಲೀಸ್ ಪಾತ್ರ ಮಾಡುತ್ತಿದ್ದೇನೆ. ಈ ಹಿಂದೆ ಸಾಮರ್ಥ್ಯ ಚಿತ್ರದಲ್ಲಿ ಸುನೀಲ್ ಅವರ ಜೊತೆ ಅಭಿನಯಿಸಿದ್ದೆ ಎಂದು ವಿವರ ಕೊಟ್ಟರು ಅವರು.
ನಾಯಕಿ ಚೈತ್ರಾ ಕೋಟೂರ್ ಅವರು ಮೊದಲ ಸಲ ಪೋಲೀಸ್ ಇನ್ಸ್ಪೆಕ್ಟರ್ ಪಾತ್ರ ಮಾಡುತ್ತಿದ್ದಾರಂತೆ. ಒಂದು ತನಿಖಾ ವರದಿಯನ್ನು ಹೇಗೆ ತಯಾರಿಸುತ್ತಾರೆ. ಕೊಲೆಗಾರನನ್ನು ಹೇಗೆ ಸೆರೆ ಹಿಡಿಯುತ್ತಾರೆ ಎಂಬುದನ್ನು ಇಲ್ಲಿ ಹೇಳಹೊರಟಿದ್ದೇವೆ. ಗುರುರಾಜ್ ಕುಲಕರ್ಣಿ ಒಬ್ಬ ಸೆನ್ಸಿಬಲ್ ಡೈರೆಕ್ಟರ್ ಎಂದು ಗುಣಗಾನ ಮಾಡಿದರು ಚೈತ್ರಾ ಕೋಟೂರ್. ಮತ್ತೊಬ್ಬ ನಟ ಸಾಗರ್ ಅವರಿಗೂ ಪೋಲೀಸ್ ಪಾತ್ರ ಸಿಕ್ಕಿದೆಯಂತೆ. ಥ್ರಿಲ್ಲರ್ ಮಂಜು ಅವರ ಜೊತೆ ಕೆಲಸ ಮಾಡುತ್ತಿರುವುದಕ್ಕೆ ಖುಷಿಯಾಗುತ್ತಿದೆ ಅಂದರು ಅವರು. ಈಗಾಗಲೇ ೨೫೦೦ಕ್ಕೂ ಹೆಚ್ಚು ಸಾಸಹ ನಿರ್ದೇಶನ ಮಾಡಿರುವ ಥ್ರಿಲ್ಲರ್ ಮಂಜು, ಸಾಧಿಸಬೇಕು ಎನ್ನುವ ಫೈರ್ ಇರುವ ತಂಡವಿದು. ಇಲ್ಲಿ ಭರ್ಜರಿ ಎರಡು ಫೈಟ್ಸ್ ಮಾಡುತ್ತಿದ್ದೇನೆ ಎಂದರು. ರಂಗಸ್ವಾಮಿ ಅವರ ಛಾಯಾಗ್ರಹಣವಿದೆ. ಎಂ.ತಿರ್ಥೋ ಸಂಗೀತ ನೀಡಿದ್ದಾರೆ. ಬಲ ರಾಜವಾಡಿ, ಮಹೇಶ್, ಶೈಲೇಶ್,ಸುನಂದಾ, ಗಿರೀಶ್ ಜತ್ತಿ, ಆಪ್ಜಲ್, ಗುರುರಾಜ್ ಹೊಸಕೋಟೆ ಮುಂತಾದವರಿದ್ದಾರೆ.
ಭಾರತೀಯ ಚಿತ್ರರಂಗ ಕಂಡ ಅಪರೂಪದ ಗಾಯಕಿ ಲತಾಜೀ. ಇವರ ಹಾಡುಗಳಿಗೆ ಮನಸೋತವರೇ ಇಲ್ಲ. ಬಹುತೇಕ ಭಾಷೆಗಳಲ್ಲಿ ಯಶಸ್ವಿ ಹಾಡುಗಳನ್ನು ಹಾಡಿರುವ ಸಕ್ಸಸ್ಫುಲ್ ಗಾಯಕಿ ಅವರು. ಅವರು ಈಗಿಲ್ಲ. ಆದರೆ, ಅವರ ನೂರಾರು ಹಿಟ್ ಸಾಂಗ್ಗಳು ಇಂದಿಗೂ ಜೀವಂತವಾಗಿವೆ. ಲತಾಜಿ ಅವರನ್ನು ದೀದಿ ಅಂತಾನೆ ಎಲ್ಲರು ಕರೆಯುತ್ತಿದ್ದರು. ದೀದಿ ಬಾಲಿವುಡ್ ಮಾತ್ರವಲ್ಲ, ಎಲ್ಲಾ ಚಿತ್ರರಂಗದಲ್ಲೂ ಹಾಡಿ ಸೈ ಎನಿಸಿಕೊಂಡವರು. ಕನ್ನಡದಲ್ಲೂ ಲತಾಜಿ ಹಾಡಿದ್ದಾರೆ. ಹಳೆಯ “ಸಂಗೊಳ್ಳಿ ರಾಯಣ್ಣ” ಸಿನಿಮಾದಲ್ಲಿ ಇವರ ಹಾಡಿದೆ. “ಬೆಳ್ಳನೆ ಬೆಳಗಾಯಿತು…” ಎಂಬ ಹಾಡು ಕೇಳಿದ್ದರೆ, ಅಲ್ಲಿರುವ ಧ್ವನಿ ಅದೇ ಲತಾಜಿ ಅವರದು. ಅವರು ಒಂದೇ ಭಾಷೆಗೆ ಸೀಮಿತವಾಗಲಿಲ್ಲ. ತಮಿಳು, ತೆಲುಗು, ಮಲಯಾಳಂ, ಮರಾಠಿ, ಗುಜರಾತಿ, ಬೆಂಗಾಲಿ, ಪಂಜಾಬ್ ಹೀಗೆ ಇನ್ನಿತೆ ಭಾಷೆಯ ಚಿತ್ರಗಳಲ್ಲೂ ತಮ್ಮ ಮಧುರ ಕಂಠ ನೀಡಿದ್ದಾರೆ. ಈಗ ಅವರ ಹಾಡುಗಳು ಜೀವಂತವಾಗಿವೆ. ಅವರು ಬಿಟ್ಟು ಹೋದಂತಹ ಆದರ್ಶಗಳಿವೆ. ಅವರ ಬಳಿ ಕಲಿತ ಅನೇಕ ಗಾಯಕರಿದ್ದಾರೆ. ಸಂಗೀತ ನೀರ್ದೇಶಕರಿದ್ದಾರೆ. ಅಂತಹ ನಿರ್ದೇಶಕರ ಪೈಕಿ ಕನ್ನಡದ ನಿರ್ದೇಶಕ ಸುಧೀರ್ ಅತ್ತಾವರ್ ಅವರೂ ಸಹ ದೀದಿ ಅವರನ್ನು ಬಲು ಹತ್ತಿರದಿಂದ ಬಲ್ಲವರು. ಅಂತಹ ಲತಾಜಿ ಕುರಿತು ತಮ್ಮ ಹಳೆಯ ನೆನಪುಗಳನ್ನು “ಸಿನಿಲಹರಿ” ಜೊತೆ ಹಂಚಿಕೊಂಡಿದ್ದಾರೆ.
ಓವರ್ ಟು ಸುಧೀರ್ ಅತ್ತಾವರ್… “ಒಮ್ಮೆ ಆಶಾಬೋಸ್ಲೆ ಅವರೊಂದಿಗೆ ಅವರ ಮನೆಯಲ್ಲೇ ಹಾಡಿನ ಬಗ್ಗೆ ಮಾತಾಡುತ್ತಿದ್ದ ಸಮಯವದು. ಲತಾ ದೀದಿ ತಂಗಿಗೆ ಫೋನ್ ಮಾಡಿ ನನ್ನ ಬಗ್ಗೆ ಒಂದಷ್ಟು ಹೇಳಿದ್ದರು. “ಹಾಂ ದೀದಿ… ಉಷಾ (ಸಣ್ಣ ತಂಗಿ)ದು ರೆಕಾರ್ಡಿಂಗ್ ಆಯ್ತು. ನಾನು ನಾಳೆ ಮಾಡುತ್ತೇನೆ. ನಿಮ್ಮ ಧ್ವನಿ ಕೂಡಾ ಸುಧೀರ್ ಬೇಕು ಅಂತ ಹೇಳುತ್ತಿದ್ದಾರೆ. ಬಹಳ ವರ್ಷಗಳ ನಂತರ ನಾವೆಲ್ಲ ಸೇರಿ ಒಂದು ಹಾಡು ಹಾಡಿದಂತಾಗುತ್ತದೆ ಅಂತ ಆಶಾ ದೀದಿ ಲತಾಜಿಗೆ ಹೇಳಿದರು. ನಾನು ಸುಧೀರ್ ಹತ್ರ ಮಾತನಾಡುತ್ತೇನೆ ಅಂದ್ರು ಲತಾಜಿ. ಐದು ದಿನಗಳ ನಂತರ ನಾನು ಬೆಂಗಳೂರಿನಲ್ಲಿದ್ದಾಗ ಲತಾ ದೀದಿಯ ಫೋನ್ ಬಂತು.
ಆಗ ನನ್ನ ಖುಷಿಗೆ ಪಾರವೇ ಇರಲಿಲ್ಲ. ದೀದಿ ಅವರು ಮುಂಬಯಿಯಲ್ಲಿ ಫೆಡರ್ ರೋಡ್ನಲ್ಲಿರುವ ಪ್ರಭು ಕುಂಜ್ ನಿವಾಸಕ್ಕೆ ಬರಲು ಹೇಳಿದ್ದರು. ಆಶಾಜಿ, ಉಷಾಜಿ ಮತ್ತು ಝನೈ (ಆಶಾಜಿ ಮೊಮ್ಮಗಳು) ಅವರ ಎಲ್ಲರ ಸ್ವರಗಳನ್ನು ನಾನು ರೆಕಾರ್ಡ್ ಮಾಡಿದ್ದೆ. ನಿಜಕ್ಕೂ ಅದೊಂದು ಸಂತಸದ ಸಂದರ್ಭ. ಲತಾಜಿ ಅವರ ಧ್ವನಿ ಸೇರಿಸುವುದು ಮಾತ್ರ ಬಾಕಿ ಇತ್ತು. ಆದರೆ. ಮನೆಗೆ ಹೋದಾಗಲೂ ಅಷ್ಟೊಂದು ಲವ ಲವಿಕೆಯಿಂದ ಇರಲಿಲ್ಲ ದೀದಿ. ಆದರೆ, ಅವರು ನೀಲಿ ಸೀರೆ ಧರಿಸಿ ತುಂಬಾನೇ ಖುಷಿಯಿಂದ ನನ್ನನ್ನು ಮತ್ತು ತಂಡವನ್ನು ಅವರು ಬರ ಮಾಡಿಕೊಂಡರು. ಅವರ ಈವರೆಗಿನ ಸಿನಿಮಾ ಮತ್ತು ಗಾಯನ ಕುರಿತಂತೆ ಮಾತನಾಡಲು ಶುರು ಮಾಡಿದರು.
ನಿಜ ಹೇಳ್ತೀನಿ. ಅವರೊಬ್ಬ ಖ್ಯಾತ ಗಾಯಕಿ. ಹೇಗೆಲ್ಲಾ ಇರಬಹುದಿತ್ತು. ಆದರೆ, ಒಂಚೂರು ಗತ್ತು ಇಲ್ಲ… ಹಮ್ಮು ಬಿಮ್ಮುಗಳಿಲ್ಲ…! ನಮ್ಮ ಮನೆಯ ತಾಯಿಯಂತೆಯೇ ನಮ್ಮನ್ನು ಪ್ರೀತಿಯಿಂದ ಸತ್ಕರಿಸಿದರು, ಖುಷಿಯಿಂದಲೇ ಮಾತನಾಡಿದರು ಮತ್ತೆ ಹಾಡಿದರು ಕೂಡ! ಈಗ ರೆಕಾರ್ಡಿಂಗ್ ಮಾಡುವ ಸ್ಥಿತಿಯಲ್ಲಿ ಇಲ್ಲ. ಇನ್ನೊಂದು ಸ್ವಲ್ಪ ದಿನದಲ್ಲಿ ಹುಷಾರಾಗುತ್ತೇನೆ. ಬಪ್ಪಿ ಲಹಿರಿ ಕೂಡಾ ಕಾಯ್ತಾ ಇದ್ದಾರೆ. ಒಟ್ಟಿಗೆ ಮುಗಿಸುತ್ತೇನೆ ಎಂದು ಆ ವೇಳೆ ಮಾತು ಕೊಟ್ಟರು. ಹುಷಾರಾದ ಮೇಲೆ ಹಾಡುತ್ತೇನೆ ಅಂದಿದ್ದರು ಅವರು.
ದೀದಿಗಾಗಿಯೇ ಕೊಡಲು ಗೆಳೆಯ ಸಂಕಲನಕಾರ ವಿದ್ಯಾಧರ್ ತಂದಿದ್ದ ಮೈಸೂರ್ ಪಾಕ್ ನೋಡಿ ಅವರ ಸಂತಸಪಟ್ಟರು. ನೀವು ಕನ್ನಡದಲ್ಲಿ “ಬೆಳ್ಳನೆ ಬೆಳಗಾಯ್ತು…” ಅಂತ ಒಂದು ಹಾಡು ಹಾಡಿದ್ದೀರಲ್ಲವೇ ದೀದಿ ಅಂತ ಮೆಲ್ಲನೆ ನಾನು ಕೇಳಿದೆ. ಆಗ ಅವರು ತಕ್ಷಣವೇ, ಒಂದಲ್ಲ ನಾಲ್ಕು ಹಾಡು ಹೇಳಿದ್ದೇನೆ ಅಂತ ಹೇಳಿ, ನಾಲ್ಕೂ ಹಾಡಿನ ಒಂದೊಂದು ತುಣುಕು ಹಾಡಿದರು. ಸುಮಾರು 55 ಸಾವಿರಕ್ಕೂ ಹೆಚ್ಚು, ಜಗತ್ತಿನ ನಾನಾ ಭಾಷೆಗಳಲ್ಲಿ ಹಾಡಿದ್ದ ಈ ಮಾತೆಯ ಕನ್ಬಡಾಭಿಮಾನ ಕಂಡು ನಿಜಕ್ಕೂ ನಾನು ದಂಗಾದೆ.
ನಾನು ಕನ್ನಡ ಮತ್ತು ಕನ್ನಡಿಗರನ್ಬು ಹೇಗೆ ಮರೆಯಲಿ…? ನನ್ನನ್ಬು ಈ ಕ್ಷೇತ್ರಕ್ಕೆ ಪರಿಚಯಿಸಿದ ಮಾಸ್ಟರ್ ವಿನಾಯಕ್ ರವರು ಕನ್ನಡಿಗರೇ ಅಂತ ಅಂದಾಗ ನಾನು ತೀವ್ರ ಭಾವುಕನಾದೆ. ದೀದಿ ನಿಮ್ಮ ಮತ್ತು ಹಿರಿಯ ನಿರ್ದೇಶಕರಾದ ಎಂ.ಎಸ್. ಸತ್ಯು ಅವರ ಜೊತೆಗಿನ ಒಡನಾಟದ ಬಗ್ಗೆ ಹೇಳಿ ಅಂದಾಗ, ನಾನು ಎರಡು ಸಲ ಭೇಟಿ ಆಗಿದ್ದೆ. ನನಗಿಂತ ಒಂದು ವರ್ಷ ಚಿಕ್ಕವರು ಸತ್ಯು. ಆದರೆ, ದೊಡ್ಡ ಹೆಸರು ಮಾಡಿದ್ದಾರೆ.” ಅಂತ ಹೇಳುತ್ತಲೇ ಒಂದಷ್ಟು ಮಾತುಕತೆ ಮುಂದುವರೆದಿತ್ತು.
ಅವರು ಹಾಗೆ ಮಾತಾಡುವಾಗ, ನಾನು ಒಮ್ಮೆ ಮಂಗಳೂರಿಗೆ ಬರಬೇಕು ಅಂತಾನೂ ಹೇಳಿದ್ದರು. ಅದರೆ ಉಷಾಜಿ ಅವರನ್ನು ಮಂಗಳೂರಿಗೆ ಕರೆಸಿಕೊಂಡಾಗಲೂ ದೀದಿ ಅವರಿಗೆ ಆರೋಗ್ಯ ಸರಿ ಇರಲಿಲ್ಲ. ನನ್ನ ಹಾಡಿಗೆ ಅವರು ಕೊಡಬೇಕಾಗಿದ್ದ ಧ್ವನಿ ಹಾಗೆಯೇ ಬಾಕಿ ಉಳಿದುಕೊಂಡಿತು ಎನ್ನುವ ಸುಧೀರ್ ಅತ್ತಾವರ್ , ದೀದಿ ಅವರ ಬಗೆಗಿನ ನೆನಪುಗಳನ್ನು ಈ ರೀತಿ ಹಂಚಿಕೊಳ್ಳುವ ಮೂಲಕ ಹಾಡು ಹಾಡಿಸಲು ಸಾಧ್ಯವಾಗದಿದ್ದಕ್ಕೆ ಈಗಲೂ ನನಗೆ ನೋವಿದೆ ಅನ್ನುತ್ತಾರೆ ಅವರು.
ಬಜಾರ್ ಹೀರೋ ಧನ್ವೀರ್ ಹಾಗೂ ಹರಿ ಸಂತು…ಸುಪ್ರಿತ್ ಈ ಮೂರು ಕಾಂಬೋದ ಬಹು ನಿರೀಕ್ಷಿತ ಸಿನಿಮಾ ಬೈ ಟು ಲವ್.. ಈಗಾಗಲೇ ಫೆಬ್ರವರಿ 25ರಂದು ಬರೋದಾಗಿ ಅನೌನ್ಸ್ ಮಾಡಿದ್ದ ಬೈ ಟು ಲವ್ ಒಂದು ವಾರ ಮುಂಚೆನೇ ತೆರೆಗೆ ಬರಲಿದೆ. ಅಂದ್ರೆ ಫೆಬ್ರವರಿ 25ರ ಬದಲಿಗೆ ಫೆಬ್ರವರಿ 18ಕ್ಕೆ ಬೈ ಟು ಲವ್ ಪ್ರೇಮ್ ಕಹಾನಿ ತೆರೆಗಪ್ಪಳಿಸಲಿದೆ.
ಬೈ ಟು ಲವ್ ಸಿನಿಮಾ ಆರಂಭದಿಂದ ಸಾಕಷ್ಟು ಕುತೂಹಲ ಹುಟ್ಟು ಹಾಕಿದೆ. ಪೋಸ್ಟರ್, ಟೀಸರ್ ಹಾಗೂ ಸಾಂಗ್ಸ್ ಹೀಗೆ ಪ್ರತಿ ಹಂತದಲ್ಲೂ ನಿರೀಕ್ಷೆ ಹುಟ್ಟಿಸಿರುವ ಬೈ ಟು ಲವ್ ಸಿನಿಮಾದಲ್ಲಿ ಧನ್ವೀರ್ ಹಾಗೂ ಶ್ರೀಲೀಲಾ ಜೋಡಿ ಮ್ಯಾಜಿಕ್ ಮಾಡಲಿದೆ. ಈ ಹಿಂದೆ ಮಾಸ್ ಲುಕ್ನಲ್ಲಿ ಮಿಂಚಿದ್ದ ಧನ್ವೀರ್, ಈ ‘ಬೈ ಟು ಲವ್’ನಲ್ಲಿ ಲವರ್ ಬಾಯ್ ಪಾತ್ರ ಮಾಡಿದ್ದಾರೆ. ಶ್ರೀಲೀಲಾ ಮುದ್ದು ಮುದ್ದಾಗಿ ಮಲೆನಾಡ ಹುಡ್ಗಿಯಾಗಿ ಕಾಣಿಸಿಕೊಂಡಿದ್ದಾರೆ.
ಗಣೇಶ್ ನಟನೆಯ ಸಖತ್, ನಿಖಿಲ್ ಕುಮಾರ್ಸ್ವಾಮಿ ನಟನೆಯ ಯದುವೀರ ಸಿನಿಮಾ ಹಾಗೂ ಜೋಗಿ ಪ್ರೇಮ್-ಧ್ರುವ ಸರ್ಜಾ ಕಾಂಬಿನೇಷನ್ನ ಸಿನಿಮಾಗಳನ್ನು ನಿರ್ಮಿಸುತ್ತಿರುವ ಕೆವಿಎನ್ ಪ್ರೊಡಕ್ಷನ್ಸ್ ನಡಿ ನಿಶಾ ವೆಂಕಟ್ ಕೋಣಂಕಿ ‘ಬೈ ಟು ಲವ್’ಗೆ ನಿರ್ಮಾಣ ಮಾಡಿದ್ದಾರೆ. ಮಹೇನ್ ಸಿಂಹ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ಹಾಗೂ ಯೋಗಾನಂದ್ ಸಂಭಾಷಣೆ ಈ ಚಿತ್ರಕ್ಕಿದೆ.