ಕನ್ನಡದಲ್ಲಿ ಈಗ ಹೊಸಬರದ್ದೇ ಹವಾ. ಹೌದು, ದಿನ ಕಳೆದಂತೆ ಗಾಂಧಿನಗರದಲ್ಲಿ ಹೊಸಬರ ಆಗಮನವಾಗುತ್ತಲೇ ಇದೆ. ಆ ಸಾಲಿಗೆ ಈಗ ಹೊಸಬರೆಲ್ಲರೂ ಸೇರಿ “ಜಾರ್ಜ್ ಶೀಟ್” ಹಾಕೋಕೆ ರೆಡಿಯಾಗಿದ್ದಾರೆ! ಅರೇ ಹೀಗೆಂದಾಕ್ಷಣ, ಏನೇನೋ ಪ್ರಶ್ನೆಗಳು ಸಹಜ. ವಿಷಯವಿಷ್ಟೆ. ಇದು ಕನ್ನಡದ ಹೊಸ ಚಿತ್ರದ ಹೆಸರು. ಹೌದು, “ಚಾರ್ಜ್ಶೀಟ್” ಮೂಲಕ ಗುರುರಾಜ ಕುಲಕರ್ಣಿ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಅದಕ್ಕೂ ಮುನ್ನ, ಇತ್ತೀಚೆಗೆ ಚಿತ್ರದ ಮುಹೂರ್ತ ನೆರವೇರಿತು. ಗೀತ ಸಾಹಿತಿ ನಾಗೇಂದ್ರ ಪ್ರಸಾದ್ ಅವರು ಕ್ಲಾಪ್ ಮಾಡಿ ಶುಭ ಹಾರೈಸಿದರೆ, ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಅವರು ಕ್ಯಾಮೆರಾ ಚಾಲನೆ ಮಾಡಿ ಶುಭ ಕೋರಿದರು.
ಅಂದಾಹಗೆ, ಚಾರ್ಚ್ಶೀಟ್ ಅಂದಾಕ್ಷಣ ನೆನಪಾಗೋದೇ ಪೋಲಿಸರು. ಹೌದು, ಪೋಲೀಸ್ ಭಾಷೆಯಲ್ಲಿ ಅದು ತನಿಖಾ ವರದಿ ಅಂತರ್ಥ. ಒಂದು ಮರ್ಡರ್ ಮಿಸ್ಟ್ರಿ ಸುತ್ತ ನಡೆಯುವ ಸಸ್ಪೆನ್ಸ್, ಕ್ರೈಮ್ ಥ್ರಿಲ್ಲರ್ ಕಥಾಹಂದರ ಇಟ್ಟುಕೊಂಡು ಯುವ ಪ್ರತಿಭೆಗಳ ತಂಡ ಕಟ್ಟಿಕೊಂಡು ನಿರ್ದೇಶಕ ಗುರುರಾಜ ಕುಲಕರ್ಣಿ ಕೆಲಸ ಮಾಡೋಕೆ ಹೊರಟಿದ್ದಾರೆ. ಈ ಚಿತ್ರಕ್ಕೆ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಮಿಂಚಿದ್ದ ಬಾಲಾಜಿ ಶರ್ಮ, ಸಾಗರ್ ಹಾಗೂ ಚೈತ್ರಾ ಕೋಟೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. ಇನ್ನು ಈ ಚಿತ್ರವನ್ನು ಡಾ.ಸುನೀಲ್ ಕುಂಬಾರ್ ನಿರ್ಮಿಸುತ್ತಿದ್ದಾರೆ. ಇದರೊಂದಿಗೆ ಅವರೇ ಕಥೆ ಬರೆದಿದ್ದಾರೆ. ಜೊತೆಗೆ ಪಾತ್ರವೊಂದರಲ್ಲೂ ಅವರು ಕಾಣಿಸಿಕೊಳ್ಳುತಿದ್ದಾರೆ.
ತಮ್ಮ ಸಿನಿಮಾ ಕುರಿತು ನಿರ್ಮಾಪಕ ಸುನೀಲ್ ಕುಂಬಾರ್ ಹೇಳಿದ್ದಿಷ್ಟು. “ಹತ್ತು ವರ್ಷಗಳ ಹಿಂದೆ ನಾನೂ ಸಹ ಮೀಡಿಯಾದಲ್ಲಿ ಕೆಲಸ ಮಾಡುತ್ತಿದ್ದೆ. ಲಾಕ್ಡೌನ್ ಸಂದರ್ಭದಲ್ಲಿ ಹುಟ್ಟಿದ ಕಥೆಯಿದು, ಒಂದರ್ಥದಲ್ಲಿ ಲಾಕ್ಡೌನ್ ಸೈಡ್ ಎಫೆಕ್ಟ್ ಅಂತಲೂ ಹೇಳಬಹುದು, ವಿಶೇಷ ನಿರೂಪಣೆಯಿರುವ ಚಿತ್ರ ಇದಾಗಿದ್ದು. ಸಿನಿಮಾ ನೋಡುವವರಿಗೆ ಕಥೆ ಏನೆಂದು ಅರ್ಥವಾಗುತ್ತದೆ. ಆದರೆ ಅಲ್ಲಿರುವವರಿಗೆ ಏನು ನಡೆಯುತ್ತೆಂದು ಗೊತ್ತಾಗಲ್ಲ. ವೆಸ್ಟ್ ಬೆಂಗಾಲ್ನ ಉಮಾ ಚಕ್ರಬೋರ್ತಿ ಹಾಗೂ ಚನೈನ ಎಸ್.ಆರ್.ರಾಜನ್ ನನ್ನ ಜೊತೆ ನಿರ್ಮಾಣದಲ್ಲೂ ಕೈ ಜೋಡಿಸಿದ್ದಾರೆ. ಇವರಿಬ್ಬರಿಗೆ ಕನ್ನಡ ಭಾಷೆ ಬರದಿದ್ದರೂ ಅಭಿಮಾನದಿಂದ ಕನ್ನಡ ಸಿನಿಮಾ ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ, ಆದರೆ ಸಂಪೂರ್ಣ ಕನ್ನಡದ ಕಲಾವಿದರೇ ಸೇರಿ ಮಾಡುತ್ತಿರುವ ಚಿತ್ರ ಎಂದು ವಿವರಿಸಿದರು ನಿರ್ಮಾಪಕ ಸುನೀಲ್ ಕುಂಬಾರ್.
ನಿರ್ದೇಶಕ ಗುರುರಾಜ್ ಕುಲಕರ್ಣಿ ಅವರಿಗೆ ಈ ಚಿತ್ರದ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಇದೆಯಂತೆ. ” ಚಿತ್ರದ ಕಥೆ, ಟೈಟಲ್ ನಿರ್ಮಾಪಕರು ಕೊಟ್ಟಿದ್ದು. ನಾನು ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದೇನೆ, ಶಾಲೆಯೊಂದರ ವಿದ್ಯಾರ್ಥಿನಿಯ ಕೊಲೆಯಾಗಿರುತ್ತದೆ. ಆ ಕೊಲೆ ತನಿಖೆಯ ಸುತ್ತ ನಡೆಯುವ ಕಥೆಯೇ ಚಾರ್ಜ್ಶೀಟ್. ಬಹಳ ದಿನಗಳಿಂದ ನನಗೆ ನಾಗೇಂದ್ರ ಅರಸ್ ಅವರ ಜೊತೆ ಕೆಲಸ ಮಾಡಬೇಕೆಂದು ಆಸೆಯಿತ್ತು. ಈ ಚಿತ್ರದಲ್ಲಿ ಅವರು ಕ್ರೈಂ ಕಥೆಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ನಟಿ ಸಂಜನಾ ನಾಯ್ಡು ಅವರು ಸ್ಪೆಷಲ್ ಸಿಬಿಐ ಆಫೀಸರ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಉತ್ತರ ಕರ್ನಾಟಕದಲ್ಲಿ ಒಳ್ಳೊಳ್ಳೆಯ ಕಲಾವಿದರಿದ್ದು, ಬಹುತೇಕರನ್ನು ಚಿತ್ರದಲ್ಲಿ ಬಳಸಿಕೊಳ್ಳುತ್ತಿದ್ದೇವೆ ಎಂದರು.
ನಾಯಕನಟ ಬಾಲಾಜಿಶರ್ಮ ಅವರು ತಮ್ಮ ಪಾತ್ರ ಕುರಿತು ಹೇಳಿದ್ದು ಹೀಗೆ. ” ನಾನು ಮೂಲತ: ಫೋಟೋಗ್ರಾಫರ್ ಆಗಿದ್ದವನು. ಅದರ ಜೊತೆ ಜೊತೆಗೆ ಬಣ್ಣದ ನಂಟು ಹೆಚ್ಚಿಸಿಕೊಂಡು ಹಲವಾರು ಸೀರಿಯಲ್ಗಳಲ್ಲಿ ಅಭಿನಯಿಸಿದೆ. ಅಲ್ಲಿಂದ ಒಂದಷ್ಟು ಸಿನಿಮಾ ಕೂಡ ಮಾಡಿದ್ದೇನೆ. ಈ ಚಿತ್ರ ನನಗೆ ವಿಶೇಷವಾಗಿದೆ. ಕಾರಣ, ಒಂದೊಳ್ಳೆಯ ಸಸ್ಪೆನ್ಸ್ ಕ್ರೈಂ ಥ್ರಿಲ್ಲರ್ ಕಥೆ ಇಲ್ಲಿದೆ. ನಾನಿಲ್ಲಿ ಪೋಲೀಸ್ ಪಾತ್ರ ಮಾಡುತ್ತಿದ್ದೇನೆ. ಈ ಹಿಂದೆ ಸಾಮರ್ಥ್ಯ ಚಿತ್ರದಲ್ಲಿ ಸುನೀಲ್ ಅವರ ಜೊತೆ ಅಭಿನಯಿಸಿದ್ದೆ ಎಂದು ವಿವರ ಕೊಟ್ಟರು ಅವರು.
ನಾಯಕಿ ಚೈತ್ರಾ ಕೋಟೂರ್ ಅವರು ಮೊದಲ ಸಲ ಪೋಲೀಸ್ ಇನ್ಸ್ಪೆಕ್ಟರ್ ಪಾತ್ರ ಮಾಡುತ್ತಿದ್ದಾರಂತೆ. ಒಂದು ತನಿಖಾ ವರದಿಯನ್ನು ಹೇಗೆ ತಯಾರಿಸುತ್ತಾರೆ. ಕೊಲೆಗಾರನನ್ನು ಹೇಗೆ ಸೆರೆ ಹಿಡಿಯುತ್ತಾರೆ ಎಂಬುದನ್ನು ಇಲ್ಲಿ ಹೇಳಹೊರಟಿದ್ದೇವೆ. ಗುರುರಾಜ್ ಕುಲಕರ್ಣಿ ಒಬ್ಬ ಸೆನ್ಸಿಬಲ್ ಡೈರೆಕ್ಟರ್ ಎಂದು ಗುಣಗಾನ ಮಾಡಿದರು ಚೈತ್ರಾ ಕೋಟೂರ್. ಮತ್ತೊಬ್ಬ ನಟ ಸಾಗರ್ ಅವರಿಗೂ ಪೋಲೀಸ್ ಪಾತ್ರ ಸಿಕ್ಕಿದೆಯಂತೆ. ಥ್ರಿಲ್ಲರ್ ಮಂಜು ಅವರ ಜೊತೆ ಕೆಲಸ ಮಾಡುತ್ತಿರುವುದಕ್ಕೆ ಖುಷಿಯಾಗುತ್ತಿದೆ ಅಂದರು ಅವರು. ಈಗಾಗಲೇ ೨೫೦೦ಕ್ಕೂ ಹೆಚ್ಚು ಸಾಸಹ ನಿರ್ದೇಶನ ಮಾಡಿರುವ ಥ್ರಿಲ್ಲರ್ ಮಂಜು, ಸಾಧಿಸಬೇಕು ಎನ್ನುವ ಫೈರ್ ಇರುವ ತಂಡವಿದು. ಇಲ್ಲಿ ಭರ್ಜರಿ ಎರಡು ಫೈಟ್ಸ್ ಮಾಡುತ್ತಿದ್ದೇನೆ ಎಂದರು. ರಂಗಸ್ವಾಮಿ ಅವರ ಛಾಯಾಗ್ರಹಣವಿದೆ. ಎಂ.ತಿರ್ಥೋ ಸಂಗೀತ ನೀಡಿದ್ದಾರೆ. ಬಲ ರಾಜವಾಡಿ, ಮಹೇಶ್, ಶೈಲೇಶ್,ಸುನಂದಾ, ಗಿರೀಶ್ ಜತ್ತಿ, ಆಪ್ಜಲ್, ಗುರುರಾಜ್ ಹೊಸಕೋಟೆ ಮುಂತಾದವರಿದ್ದಾರೆ.