Categories
ಸಿನಿ ಸುದ್ದಿ

ಹಿರಿಯ ರಂಗಕರ್ಮಿ‌‌ ಹೆಚ್.ಜಿ. ಸೋಮಶೇಖರ್ ರಾವ್ ( ಸೋಮಣ್ಣ ) ಇನ್ನಿಲ್ಲ

ಹಿರಿಯ ರಂಗಕರ್ಮಿ  ಹಾಗೂ ನಟ  ಹೆಚ್. ಜಿ. ಸೋಮಶೇಖರ ರಾವ್ (ಸೋಮಣ್ಣ)‌ಇಂದು‌ ವಿಧಿ‌ವಶರಾದರು.‌ ಅವರಿಗೆ 86 ವರ್ಷ ವಯಸ್ಸಾಗಿತ್ತು.‌ವಯೋ ಸಹಜ ಅನಾರೋಗ್ಯದ ಹಿನ್ನೆಲೆಯಲ್ಲಿ ಇಂದು ಅವರು ನಿಧನರಾದರು.


ಹಿರಿಯ ನಟ ದತ್ತಣ್ಣ ನವರ ಸಹೋದರರಾಗಿದ್ದ ಸೋಮಶೇಖರ ರಾವ್‌, ವೃತ್ತಿಯಲ್ಲಿ  ಬ್ಯಾಂಕ್ ಅಧಿಕಾರಿಯಾಗಿದ್ದರು. ಆದರೂ ಸಹ  ಸಾಹಿತ್ಯ, ರಂಗಭೂಮಿ, ಚಲನಚಿತ್ರ ಮತ್ತು ಕಿರುತೆರೆ ಕ್ಷೇತ್ರಗಳಲ್ಲಿ ಅಪಾರ ಆಸಕ್ತಿ ಹೊಂದಿದ್ದರು. ಅನೇಕ ಪಾಶ್ಚಿಮಾತ್ಯ ಮತ್ತು ಭಾರತೀಯ ನಾಟಕಕಾರರ ಕೃತಿಗಳನ್ನು  ರಂಗ ಪ್ರಯೋಗಕ್ಕೆ ತಂದಿದ್ದರು. ಆ ಪ್ರಯೋಗಗಳ ಮೂಲಕ ಆ ನಾಟಕಕಾರರನ್ನು ಜೀವಂತಗೊಳಿಸಿದ್ದುಗಮನಾರ್ಹ.

ಸೋಮಶೇಖರ್ ರಾವ್ ಅ‌ವರು ಚಿತ್ರರಂಗವನ್ನು ಪ್ರವೇಶಿಸಿದ್ದು 1981 ರಲ್ಲಿ, ಟಿ.ಎಸ್.ರಂಗಾರವರ ನಿರ್ದೇಶನದ ‘ಸಾವಿತ್ರಿ’ಮೂಲಕ. ಖ್ಯಾತ ನಟ ಅನಿಲ್ ಠಕ್ಕರ್ ಅವರ ” ಪ್ರತಿದ್ವಂದಿʼ ಯಾಗಿ ಇವರು ನೀಡಿದ ಅಭಿನಯ ಪ್ರೇಕ್ಷಕರ ಮೆಚ್ಚುಗೆ  ಪಡೆದಿತ್ತು. ಆನಂತರ ಸೋಮಶೇಖರ್ ರಾವ್‌ ಅವರು, ಅನೇಕ ಚಿತ್ರಗಳಲ್ಲಿ ಭಾವಪ್ರಧಾನ ಮತ್ತು ಹಾಸ್ಯಪ್ರಧಾನ ಪಾತ್ರ ನಿರ್ವಹಿಸಿದರು.  ರವಿ ನಿರ್ದೇಶನದ ‘ಮಿಥಿಲೆಯ ಸೀತೆಯರು’ಇವರ ಅಭಿನಯ ಸಾಮರ್ಥ್ಯವನ್ನು ಸಮರ್ಥವಾಗಿ ಗುರುತಿಸುವಂತೆ ಮಾಡಿತು.

ರವೀಯವರೇ ನಿರ್ದೇಶಿಸಿದ ಇನ್ನೊಂದು ಚಿತ್ರ ‘ಹರಕೆಯ ಕುರಿ’ಯಲ್ಲಿ ಸೋಮಶೇಖರ ರಾವ್ ನೀಡಿದ ಸೊಗಸಾದ ಅಭಿನಯಕ್ಕಾಗಿ 1992 -93ನೇ ಅವರಿ ರಾಜ್ಯ ಸರ್ಕಾರದ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಲಭಿಸಿತು. ಕೆನರಾ ಬ್ಯಾಂಕ್  ನಲ್ಲಿ ಉನ್ನತ  ಅಧಿಕಾರಿಯಾಗಿದ್ದು ನಿವೃತ್ತಿ ಹೊಂದಿದ ನಂತರ ಸೋಮಣ್ಣ, ಕನ್ನಡ ರಂಗಭೂಮಿಗೆ ತಮ್ಮ ಸೇವೆಯನ್ನು ಸಲ್ಲಿಸುವುದೇ ನಿಜವಾದ ಕಾಯಕವಾಗಿ ಮಾಡಿಕೊಂಡರು.

ನಟ, ರಂಗ ಕರ್ಮಿ  ಸೋಮಶೇಖರ ರಾವ್‌  ಬದುಕಿನ ಅನುಭವ ಕಥನವು ಪ್ರಕಟವಾಗಿದ್ದು, ಅವರ ಕಲಾ ಸೇವೆಯನ್ನು  ಗಂಭೀರವಾಗಿ ದಾಖಲು ಮಾಡಲಾಗಿದೆ. ಕಿರುತೆರೆ, ಚಲನಚಿತ್ರಗಳಿಗಿಂತ ಮಿಗಿಲಾಗಿ ರಂಗ ಕೈಂಕರ್ಯವನ್ನು ಪ್ರೀತಿಸಿದ ರಾವ್‌ ಅವರು,   ತಮ್ಮ 86ನೇ ವಯಸ್ಸಿನಲ್ಲಿ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದು, ರಂಗಭೂಮಿ ಮತ್ತು ಕಿರುತೆರೆ ಎರಡು ಕ್ಷೇತ್ರಗಳು ಬಡವಾಗುವಂತೆ ಮಾಡಿದೆ. ಸಿನಿಮಾ ಮತ್ತು ರಂಗಭೂಮಿ ಎರಡು ಕ್ಷೇತ್ರದ ಗಣ್ಯರು ರಾವ್‌ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

( ಫೋಟೋ – ಪ್ರಗತಿ ಅಶ್ವಥ್‌ ನಾರಾಯಣ)

Categories
ಸಿನಿ ಸುದ್ದಿ

ಲಾಸ್ಟ್ ಸೀನ್ ಎಂಬ ಸೂಪರ್ ಹಿಟ್ ಪ್ಯಾನ್ ಇಂಡಿಯಾ ಆಲ್ಬಂ

ನಾಲ್ಕು ಭಾಷೆಗಳಲ್ಲಿ ಬರುತ್ತಿದೆ ನೊಂದ ಹೆಣ್ಣಿನ ಗೀತೆ

ಬಣ್ಣದ ಜಗತ್ತಿನಲ್ಲೀಗ ಎಲ್ಲವೂ ಪ್ಯಾನ್ ಇಂಡಿಯಾ. ‘ಕೆಜಿಎಫ್’ ನಂತರ ಅದು ಸ್ಯಾಂಡಲ್ ವುಡ್ ನಲ್ಲೂ ದೊಡ್ಡ ಹವಾ ಸೃಷ್ಟಿಸಿದ್ದು ನಿಮಗೂ ಗೊತ್ತಿದೆ. ಅದರ ಪ್ರಭಾವವೇ ಎನ್ನುವ ಹಾಗೆ, ಮುಂಬರುವ ಅನೇಕ ಸಿನಿಮಾಗಳು ಪ್ಯಾನ್ ಇಂಡಿಯಾ ರಿಲೀಸ್ ಗೆ ಕಾದಿವೆ. ಸಿನಿಮಾ ಕತೆ ಇದಾದರೆ, ಈಗ ಆಲ್ಭಂ ಸಾಂಗ್ ಮೇಕಿಂಗ್ ನಲ್ಲೂ ಇದೇ ಟ್ರೆಂಡ್ ಶುರುವಾಗಿದೆ. ‌’ಲಾಸ್ಟ್ ಸೀನ್’ ಹೆಸರಿನ ಒಂದು‌ ವಿಡಿಯೋ‌ ಸಾಂಗ್ ಅಲ್ಬಂ ಈಗ ಅದೇ ಕಾರಣಕ್ಕೆ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

ಮೊದಲು‌ ಕನ್ನಡದಲ್ಲಿ‌ ರಿಲೀಸ್..

ಅದ್ದೂರಿ ಸಿನಿಮಾ ಮಾದರಿಯಲ್ಲೆ ಇದು ಕನ್ನಡದ ಜತೆಗೆ ತೆಲುಗು, ತಮಿಳು ಹಾಗೂ ಹಿಂದಿಯಲ್ಲೂ‌ ನಿರ್ಮಾಣಗೊಂಡಿದೆ. ಅಷ್ಟು ಭಾಷೆಗಳಲ್ಲೂ ಹಂತ‌ಹಂತವಾಗಿ ಬಿಡುಗಡೆಯಾಗುತ್ತಿದೆ. ಇದರ ಮೊದಲ ಹಂತವಾಗಿ ಭಾನುವಾರ( ಸೆ.27) ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಇದರ ಕನ್ನಡದ ಆವತರಿಣಿಕೆ ಲಾಂಚ್ ಆಗಿದೆ. ಕನ್ನಡದ ಮಟ್ಟಿಗೆ ನಾಲ್ಕುವರೆ ನಿಮಿಷಗಳ ಒಂದು ವಿಡಿಯೋ ಸಾಂಗ್ ಆಲ್ಬಂ ಅದ್ದೂರಿ ವೆಚ್ವದಲ್ಲಿ‌ ನಿರ್ಮಾಣಗೊಂಡು, ಪ್ಯಾನ್ ಇಂಡಿಯಾ ಟ್ರೆಂಡ್ ಮೂಲಕ ಬಹು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿರುವುದು ಇದೇ ಮೊದಲು. ಒಂದು ಉತ್ಸಾಹಿ ಯುವಕರ ತಂಡ.

ಉತ್ಸಾಹಿ ಯುವಕರ ಪ್ರಯತ್ನ…

‘ಮಿ.ಬೀಜಾ’ ಹೆಸರಿನ ಕಿರುಚಿತ್ರದೊಂದಿಗೆ ಈಗಾಗಲೇ ಒಂದಷ್ಟು ಹೆಸರು ಮಾಡಿದ್ದ ಚಿತ್ರದುರ್ಗ ಮೂಲದ ಎನ್. ವಿನಾಯಕ , ರಚಿಸಿ- ನಿರ್ದೇಶಿರುವ ವಿಡಿಯೋ‌ ಸಾಂಗ್ ಆಲ್ಬಂ ಇದು.ವಿನು ಐಡಿಯಾ ಪ್ರೊಡಕ್ಷನ್ ಮೂಲಕ ನಿರ್ಮಾಣಗೊಂಡಿದೆ. ಹೊಸ ಪ್ರತಿಭೆಗಳಾದ ವಾಗೀಶ್ ಆಯುಷ್ ಹಾಗೂ ಸಂಗೀತಾ ಇದರ ಪ್ರಮುಖ ಕಲಾವಿದರು.ಪ್ರಮೋದ್ ಆಚಾರ್ಯ ಅವರ ಸಾಹಿತ್ಯಕ್ಕೆ ಜುಬೇರ್ ಮೊಹಮದ್ ಸಂಗೀತ ನೀಡಿದ್ದಾರೆ.ಮನು ಬಿ.ಕೆ‌.ಛಾಯಾಗ್ರಹಣ, ಕೃಷ್ಣ ಸುಜಾನ್ ಸಂಕಲನ ಮಾಡಿದ್ದಾರೆ.ವಾಸುಕಿ ವೈಭವ್ ಅವರ ಗಾಯನಕ್ಕೆ ಮೋಹನ್ ಜಾಕ್ಸನ್ ನೃತ್ಯ ನಿರ್ದೇಶನ ಮಾಡಿದ್ದಾರೆ.

ಅದ್ದೂರಿ ಮೇಕಿಂಗ್..

ಕನ್ನಡ ಹೊರತು ಪಡಿಸಿ ಉಳಿದ ಮೂರು ಭಾಷೆಗಳಿಗೆ ಗೌತಮ್ ಶಕ್ತಿ, ಜಯ ಚಂದ್ರ ಹಾಗೂ ರಾಜೇಶ್ ಅವರ ಸಾಹಿತ್ಯಕ್ಕೆ ಜುಬೇರ್ ಮೊಹಮದ್ ಅವರೇ ಸಂಗೀತ ಸಂಯೋಜಿಸುವ ಮೂಲಕ‌ ತಾವೇ ಹಾಡಿರುವುದು ವಿಶೇಷ. ಅತ್ಯಾಚಾರಕ್ಕೆ ಒಳಗಾದ ಒಬ್ಬ ಹುಡುಗಿಯ ನೋವು ಹಾಗೂ ಆಕೆಯ ನೋವಿನಲ್ಲಿ ಅವಳ ಪ್ರೇಮಿಯ ವೇದನೆ ಹೇಗಿರುತ್ತೆ ಎನ್ನುವ ಪರಿಕಲ್ಪನೆಯ ಮೇಲೆ ಈ ಹಾಡು ಮೂಡಿ‌ಬಂದಿದೆ. ನಾಲ್ಕುವರೆ ನಿಮಿಷಗಳ ಈ ವಿಡಿಯೋ ಸಾಂಗ್ ಆಲ್ಬಂ ಮೇಕಿಂಗ್ ನಲ್ಲಿ ತುಂಬಾ ರಿಚ್ ಆಗಿದೆ. ಒಂದು‌ ಅದ್ದೂರಿ ಸಿನಿಮಾ‌ದ ಹಾಡಿನ‌ ಹಾಗೆಯೇ ಸೆಟ್ ಹಾಕಿ ಚಿತ್ರೀಕರಣ‌ ಮಾಡಲಾಗಿದೆ. ಬೆಂಗಳೂರು ಅಲ್ಲದೆ ಡಾಬಸ್ ಪೇಟೆ ಹಾಗೂ‌ ಮಂಗಳೂರಿನಲ್ಲೂ ಚಿತ್ರೀಕರಣ ನಡೆದಿದೆ.

ಜನರಿಗೆ ರೀಚ್ ಆದ್ರೆ ಸಾಕು..

ಸದ್ಯಕ್ಕೆ‌ಹಾಡಿನ‌ ಬಿಡುಗಡೆ ಗೆ ಸಜ್ಜಾಗಿರುವ ತಂಡ ಶನಿವಾರ‌ ರೇಣುಕಾಂಬ‌‌ ಚಿತ್ರ‌ಮಂದಿರದಲ್ಲಿ‌ ಹಾಡಿನ‌ಪ್ರದರ್ಶನದ ಜತೆಗೆ ಸುದ್ದಿಗೋಷ್ಟಿ ಆಯೋಜಿಸಿತ್ತು.‌ ತಂಡದ ಸದಸ್ಯರು, ಹಿತೈಷಿಗಳು ವೇದಿಕೆಯಲ್ಲಿದ್ದು ಮಾತನಾಡಿದರು‌. ನಿರ್ದೇಶಕ ವಿನಾಯಕ್ ಮಾತನಾಡಿ, ನಮ್ಮನ್ನು ನಾವು ಪರಿಚಯಿಸಿಕೊಳ್ಳುವುದಕ್ಕೆ ಈ ವಿಡಿಯೋ ಸಾಂಗ್ ಆಲ್ಬಂ ಮಾಡಿದ್ದೇವೆ. ಇದರಿಂದ ಲಾಭ‌ಗಳಿಸಬೇಕು ಎನ್ನುವುದಕ್ಕಿಂತ ಜನರಿಗೆ‌ ತಲುಪಿದರೆ‌ ನಮ್ಮ‌ಶ್ರಮ‌ಸಾರ್ಥಕವಾಗಲಿದೆ ಎಂದರು.‌ಹಾಗೆಯೇ ಕಲಾವಿದರಾದ ವಾಗೀಶ್ ಮತ್ತು ಸಂಗೀತಾ ಇಬ್ಬರು ಅದ್ದೂರಿ ವೆಚ್ಚದ ಒಂದು‌ಆಲ್ಬಂ‌ನಲ್ಲಿ ತಾವು ಕಾಣಿಸಿಕೊಂಡಿದ್ದೇ ಅದೃಷ್ಟ ಎಂದು‌ ಸಂಭ್ರಮ‌ಪಟ್ಟರು.‌ಅತಿಥಿಗಳಾಗಿ ಬಂದಿದ್ದ‌ ನಿರ್ದೇಶಕ ನಾಗಚಂದ್ರ ಮರಡಿಹಳ್ಳಿ ಸೇರಿದಂತೆ ಗಣ್ಯರನ್ನು ತಂಡವು ನೆನಪಿನ ಕಾಣಿಕೆ‌ನೀಡಿ‌ಗೌರವಿಸಿತು.ಇದೀಗ ಆಲ್ಬಂ ವೀಕ್ಷಕರ ಸಂಖ್ಯೆ ಲಕ್ಚದಷ್ಟಾಗಿದೆ. ತಂಡ ಖುಷಿಯಾಗಿದೆ.

Categories
ಸಿನಿ ಸುದ್ದಿ

ಮುಖವಾಡಿಗಳ ನಡುವೆ ಮುಖವಾಡ ಇಲ್ಲದವನೊಬ್ಬ!!

ಬೇಕಿರುವುದಿಲ್ಲಿ ಜ್ಞಾನದ ಭಂಗಿಯೋ, ತೊಗಲು ಮುಚ್ಚುವ ಅಂಗಿಯೋ…?

ಚರ್ಮವೇ ಭಗವಂತ ಕೊಟ್ಟ ಊಡುಗೆಯಾಗಿರುವಾಗ, ಇನ್ಯಾಕೆ ದುಬಾರಿ ಬಟ್ಟೆ. ಹೋಗುವಾಗ ಬೆತ್ತಲೆ, ಬರುವಾಗ ಬೆತ್ತಲೆ ಎನ್ನುವಾಗ ಇನ್ಯಾಕೆ ಆಸ್ತಿ- ಅಂತಸ್ತು? ಇದು ಮುಖವಾಡ ಇಲ್ಲದವ ಹೇಳುವ ಮಾತು. ಅಂದ  ಹಾಗೆ ಇದೊಂದು ಸಿನಿಮಾ ಕಥೆ.  ಇಂತಹ ಕಥೆ ಹೊತ್ತು ಬರುತ್ತಿರುವ ಚಿತ್ರದ ಹೆಸರು  ʼ ಮುಖವಾಡ ಇಲ್ಲದವನು ೮೪ʼ .

ಓಂ ನಮ: ಶಿವಾಯ ಬ್ಯಾನರ್‌ ವಲ್ಲಿ ಗಣಪತಿ ಬೆಳಗಾವಿ ನಿರ್ಮಾಣ ಮಾಡಿದ ಚಿತ್ರವಿದು. ಶಿವಕುಮಾರ್‌ ಕಡೂರ್‌ ಇದರ ನಿರ್ದೇಶಕ. ಹಾಗೆಯೇ ಇಬ್ಬರೂ ಕೂಡ ಚಿತ್ರದ ಪ್ರಮುಖ ಪಾತ್ರಧಾರಿಗಳು. ನಿರ್ದೇಶಕ ಶಿವಕುಮಾರ್‌ ನಾಯಕರಾಗಿ ಕಾಣಿಸಿಕೊಂಡರೆ, ನಿರ್ಮಾಪಕ ಗಣಪತಿ ಕೂಡ ಮತ್ತೊಂದು ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರಂತೆ.  ಚಿತ್ರ ತಂಡ ಚಿತ್ರೀಕರಣ ಹಾಗೂ ಪೋಸ್ಟ್‌ ಪ್ರೊಡಕ್ಷನ್‌ ವರ್ಕ್‌  ಜತೆಗೆ ಸೆನ್ಸಾರ್‌ ಮುಗಿಸಿಕೊಂಡು  ಈ ಚಿತ್ರ ರಿಲೀಸ್‌ ಗೆ ರೆಡಿಯಾಗಿದೆ.  ಸದ್ಯಕ್ಕೆ ರಿಲೀಸ್‌ ದಿನಾಂಕ ಫಿಕ್ಸ್‌ ಆಗಿಲ್ಲ. ಆದರೆ ಆ ನಿಟ್ಟಿನಲ್ಲಿ ಚಿತ್ರ ತಂಡ ಸಿದ್ದತೆ ನಡೆಸಿಕೊಂಡಿದ್ದು, ಈಗ ಟ್ರೇಲರ್‌ ಲಾಂಚ್‌ ಮೂಲಕ ಸದ್ದು ಮಾಡಿದೆ.

ನಿರ್ಮಾಪಕ ಗಣಪತಿ ಬೆಳಗಾವಿ, ನಿರ್ದೇಶಕ ಶಿವಕುಮಾರ್

ರೇಣುಕಾಂಬ ಚಿತ್ರ ಮಂದಿರದಲ್ಲಿ ಇತ್ತೀಚೆಗೆ ಚಿತ್ರ ತಂಡ ಟ್ರೇಲರ್‌ ಲಾಂಚ್‌ ಮಾಡುವ ಮೂಲಕ ಮಾಧ್ಯಮದ ಮುಂದೆ ಬಂತು. ನಿರ್ದೇಶಕ ರವಿ ಶ್ರೀವತ್ಸ ಹಾಗೂ  ವೇಣು ಗೋಪಾಲ್‌ ಅತಿಥಿಗಳಾಗಿ ಬಂದು ಟ್ರೇಲರ್‌ಲಾಂಚ್‌ ಮಾಡುವ ಮೂಲಕ ಚಿತ್ರ ತಂಡಕ್ಕೆ ಶುಭ ಹಾರೈಸಿದರು.  ಆನಂತರ ಚಿತ್ರ ತಂಡ ಚಿತ್ರದ ವಿಶೇಷತೆ ಕುರಿತುಮಾತನಾಡಿತು.

‌ʼಇದೊಂದು ಪುಸ್ತಕದ ಮೂಲಕ ಶುರುವಾಗುವ ಕಥೆ ಇದು. ಒಬ್ಬ ಭಿಕ್ಷುಕ ಇಲ್ಲಿ ಒಬ್ಬ ಆಧ್ಯಾತ್ಮದ ಗುರು. ಆತನ ವೇಷ, ಭೂಷಣ ವಿಚಿತ್ರವಾಗಿರುತ್ತದೆ. ಅದಕ್ಕೆ ಕಾರಣ ಭೌತಿಕ ಜೀವನದ ಮೇಲಿನ ತಿರಸ್ಕಾರ. ಅವರ ದೃಷ್ಟಿಯಲ್ಲಿ ಜ್ಣಾನವೇ ನಿಜವಾದ ಆಸ್ತಿ ಎಂಬುದು ಚಿತ್ರದ ತಿರುಳು ” ಎನ್ನುತ್ತಾರೆ ಶಿವಕುಮಾರ್. ನಿರ್ದೇಶನದ  ಜತೆಗೆ  ಅವರು ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ  ಬರೆದಿದ್ದಾರೆ.  ಇದು ಅವರಿಗೆ ಎರಡನೇ ಚಿತ್ರ.‌

ಯುವ ನಿರ್ದೇಶಕ ಶಿವಕುಮಾರ್‌  ಈ ಹಿಂದೆ ʼಡ್ರೆಸ್‌ ಕೋಡ್‌ ʼಹೆಸರಿನ ಚಿತ್ರ ನಿರ್ದೇಶಿಸಿದ್ದರು. ಜತೆಗೆ ʼ ಕಠಾರಿ ʼ ಹೆಸರಿನ ಚಿತ್ರಕ್ಕೆ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದರು. ‌ ಇದೀಗ ” ಮುಖವಾಡ ಇಲ್ಲದವನು ೮೪”  ಹೆಸರಿನ ಚಿತ್ರದೊಂದಿಗೆ ಮತ್ತೆ ನಿರ್ದೇಶನದ ಅದೃಷ್ಟ ಪರೀಕ್ಷಿಸಿಕೊಳ್ಳಲು ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

ಚಿತ್ರಕ್ಕೆ ಬಂಡವಾಳ ಹಾಕುವ ಮೂಲಕ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದವರು ಗಣಪತಿ ಪಾಟೀಲ್‌  ಬೆಳಗಾವಿ. ವೃತ್ತಿಯಲ್ಲಿ ಮೆಡಿಕಲ್​ ಕ್ಷೇತ್ರದಲ್ಲಿದ್ದಾರೆ. ದೂರದ ನ್ಯೂಜಿಲೆಂಡ್​ನಲ್ಲಿ ನೆಲೆಸಿದ್ದಾರೆ. ಪರಿಚಿತರೊಬ್ಬರ ಮೂಲಕ ನಿರ್ದೇಶಕ ಶಿವಕುಮಾರ್‌  ಹೇಳಿದ ಕಥೆ ಕೇಳಿದ ತಕ್ಷಣವೇ ಚಿತ್ರ ನಿರ್ಮಾಣ ಮಾಡಲು ಮುಂದಾದರಂತೆ.

” ಒಂದು ಸಿನಿಮಾ ಮಾಡ್ಬೇಕು ಎನ್ನುವುದು ನನ್ನ ಕನಸಾಗಿತ್ತು. ಅದೀಗ ನನಸಾಗಿದೆ. ತುಂಬಾ ಕಡಿಮೆ ಸಮಯದಲ್ಲಿ ಈ ಸಿನಿಮಾ ಸಿದ್ದತೆ ನಡೆಯಿತು. ಸುಮಾರು ೪೫ ದಿನಗಳ ಕಾಲ ಚಿತ್ರೀಕರಣ ವಡೆಯಿತು. ಅಂದು ಕೊಂಡಂತೆ ಚಿತ್ರ ಚೆನ್ನಾಗಿ ಬಂದಿದೆ. ಸಂಭಾಷಣೆಯೇ ಚಿತ್ರದ ಜೀವಾಳ ಆಗಿದೆ. ಮಾಸ್‌ , ಕಮರ್ಷಿಯಲ್‌ ಎನ್ನುವುದಕ್ಕಿಂತ ಈ ಚಿತ್ರದ ಒಂದು ಡಿಫೆರೆಂಟ್‌ ಚಿತ್ರದ ಆಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.

ಚಿತ್ರಕ್ಕೆ ಬೆಂಗಳೂರು, ಬನ್ನೇರಘಟ್ಟ, ಚಿಕ್ಕಮಗಳೂರು, ಉತ್ತರ ಕರ್ನಾಟಕ , ಬೆಳಗಾವಿ ಹಾಗೂ  ಅಂಬಾಲಿ ಸೇರಿದಂತೆ ವಿವಿಧೆಡೆಗಳಲ್ಲಿನ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆದಿದೆ. ಚಿತ್ರದಲ್ಲಿ ರಚನಾ ಅಂಬಲೆ, ಅನುಶ್ರೀ, ಕಾವ್ಯಗೌಡ ನಾಯಕಿಯರಾಗಿ ಅಭಿನಯಿಸಿದ್ದಾರೆ.  ಭಂಗಿ ಹಾಡಿನಲ್ಲಿ ಮರಾಠಿ ನಟಿ ಸೋನಾಲಿ ರಾಯ್‌ ಕಾಣಿಸಿಕೊಂಡಿದ್ದು, ಅವರ ಅಭಿನಯಕ್ಕೆ ಚಿತ್ರ ತಂಡ ಕೂಡ ಫುಲ್‌ ಫಿದಾ ಆಗಿದೆ. ದುರ್ಗಾ ಪ್ರಸಾದ್​ ಸಂಗೀತ, ಡಾ. ಮಹಾರಾಜಾ ಹಿನ್ನೆಲೆ ಸಂಗೀತ, ಮಧು ಆರ್ಯ ಕ್ಯಾಮರಾ ಜವಾಬ್ದಾರಿ ನಿಭಾಯಿಸಿದರೆ, ಕಥೆ, ಚಿತ್ರಕತೆ ಸಂಭಾಷಣೆ ಮತ್ತು ನಿರ್ದೇಶನವನ್ನು ಶಿವಕುಮಾರ್ ಮಾಡಿದ್ದಾರೆ. ಸೆನ್ಸಾರ್ ಮಂಡಳಿಯಿಂದ ಯುಎ ಪ್ರಮಾಣ ಪತ್ರ  ಸಿಕ್ಕಿದೆ. ಚಿತ್ರ ತಂಡ ರಿಲೀಸ್‌ ಸಿದ್ದತೆಯಲ್ಲಿದೆ. ಚಿತ್ರ ಮಂದಿರಗಳ ಪರಿಸ್ಥಿತಿ ನೋಡಿಕೊಂಡು ಚಿತ್ರಮಂದಿರಕ್ಕೆ ಬರಲಿದೆಯಂತೆ.

Categories
ಎಡಿಟೋರಿಯಲ್ ಸಿನಿ ಸುದ್ದಿ

ಸಿನಿ‌ಲಹರಿ ಎಂಬ ಭಾವನೆಗಳ ಲಹರಿ !

ಲೈಕ್ ಒತ್ತಿ,  ಸಿನಿ ‌ಲಹರಿ ಹಿರಿಮೆ  ಗಗನಕ್ಕೇರಿಸಿ

ನೀವೂ ಡಿಜಿಟಲ್ ಆದ್ರಾ? ಹಲವು‌ ದಿನಗಳಿಂದ ನಮಗೆ ಎದುರಾದ ಪ್ರಶ್ನೆ ಇದು. ಅದಕ್ಕೆ‌ ಉತ್ತರಿಸಲು‌ ನಮ್ಮಿಂದ‌ ಈವರೆಗೂ ಆಗಿಲ್ಲ. ಹೌದು ಅಂತ ಹೇಳಿಬಿಡಬ ಹುದಾಗಿತ್ತೇನೋ, ಆದರೆ ಉತ್ತರ ಅಷ್ಟು ಸುಲಭ ಇಲ್ಲ‌. ಯಾಕಂದ್ರೆ, ಆ ಪ್ರಶ್ನೆಗಳೇ ವಿಚಿತ್ರವಾಗಿದ್ದವು.‌ ಹೌದು ಎನ್ನಬೇಕೆ, ಬೇಡವೇ ಗೊಂದಲಕ್ಕೆ ಸಿಲುಕಿ‌ ಮೌನಕ್ಕೆ‌ ಜಾರಿದ್ದೆವು.ಬದಲಿಗೆ ಅಂದುಕೊಂಡಿದ್ದನ್ನ‌ ಮಾಡಿ ತೋರಿಸೋಣ ಅಂತಷ್ಟೇ ಯೋಚಿಸಿದ್ದೇವು. ಈಗ ಅದು ಒಂದು ಹಂತಕ್ಕೆ ಬಂದಿದೆ. ಸರಳವಾಗಿಯೇ ಇರಲಿ‌ ಅತಂದುಕೊಂಡಿದ್ದರೂ, ಎಲ್ಲವೂ ಗ್ರಾಂಡ್ ರೂಪ ಪಡೆದಿವೆ.‌ ಇದೆಲ್ಲ ಹಿತೈಷಿಗಳ ಸಹಕಾರ. ಬೆಂಬಲ. ಅದರ ರೂಪವೇ ಈಗ ಸಿನಿ‌ಲಹರಿ.

ನಾವೇನು ಬ್ರಹ್ಮ ವಿಧ್ಯೆ ಕಲಿತವರಾ?

ಹೌದು, ಈಗ ನಮ್ಮದೇ ಒಂದು ಹಾದಿ. ಡಿಜಿಟಲ್ ಮಾಧ್ಯಮದ ದಾರಿ. ಅನೇಕ ಪ್ರಯೋಗಗಳ ಜತೆಗೆ ಇದೊಂದು ಹೊಸ ಪಯಣ‌. ಯಾಕೆ ಹೀಗೆ ಅಂತ ಅನೇಕರಿಗೆ ಅಚ್ಚರಿ. ಅದಕ್ಕೆ ಕಾರಣ ಕೋರೋನಾ. ಅದರಿಂದೇನಾಯ್ತ? ಅದಿಲ್ಲಿ‌ ಬೇಕಿಲ್ಲ.‌ ಆದರೆ ಏನಾದ್ರೂ ಕೆಲಸ ಮಾಡಲೇಬೇಕಿದೆ. ಹಾಗಂತ ಏನು‌ ಮಾಡಲು ಸಾಧ್ಯ? ಗೊತ್ತಿರೋದು ಬರವಣಿಗೆ ಮಾತ್ರ.‌ ಹಾಗಂತ ನಾವೇನು ಬ್ರಹ್ಮ ವಿದ್ಯೆ ಕಲಿತವರಾ? ಇಲ್ಲ, ಗೊತ್ತಿರೊದು ಅಷ್ಟೋ ಇಷ್ಟೋ ಸಿನಿಮಾ‌ ವರದಿಗಾರಿಕೆ.ಅದು ಹತ್ತಾರು ವರ್ಷ ಚಿತ್ರೋದ್ಯಮದ ಜತೆಗಿನ ನಂಟಿನಿಂದ ಕಲಿತಿದ್ದು. ಅದನ್ನೇ ನಂಬಿಕೊಂಡು ಕಾಲಕ್ಕೆ ತಕ್ಕಂತೆ ಏನಾದರೂ ಮಾಡಬೇಕು ಅಂದಾಗ ನಮಗೆ ಹೊಳೆದಿದ್ದು ಡಿಜಿಟಲ್ ಮಾಧ್ಯಮ.

ನಮ್ಮದೂ ಒಂದು‌ ಪ್ರಯತ್ನ!

ಆಧುನಿಕ ಜಗತ್ತೀಗ ಅಚ್ಚರಿಗೊಳ್ಳುವಷ್ಟು ಬದಲಾಗಿದೆ. ಪ್ರತಿ‌ದಿನವೂ ಹೊಸತು‌ಕಾಣುತ್ತಿದೆ. ಸಿನಿಮಾ ಮತ್ತು ಮಾಧ್ಯಮ ಜಗತ್ತು ಕೂಡ ಅದರಿಂದ ಹೊರತಾ ಗಿಲ್ಲ.‌ಮಾಧ್ಯಮ ಎನ್ನುವಂತಹದು ಹತ್ತಾರು ರೂಪುಗಳನ್ನು ದಾಟುತ್ತಾ ಬಂದಿದೆ. ಅಚ್ವುಮೊಳೆಯಿಂದ ಕಂಪ್ಯೂಟರ್ ತಂತ್ರಜ್ಞಾನ ಕ್ಕೆ, ಅಲ್ಲಿಂದೀಗ ಡಿಜಿಟಲ್ ತಂತ್ರಜ್ಞಾನ ದ  ಕಾಲಕ್ಕೆ  ಬಂದಿದೆ‌. ಹೇಳಿ – ಕೇಳಿ ಇದು ಮೊಬೈಲ್ ಯುಗ. ಬೆರಳಿನ ತುದಿಯಲ್ಲೇ ಜಗತ್ತು.ಅದನ್ನೇ ನಂಬಿಕೊಂಡು ಮಾಧ್ಯಮ ಕೂಡ ಹೊಸ ಅವತಾರ ತಾಳಿದೆ.‌‌ನಮ್ಮದೂ ಕೂಡ ಈಗ ಅದರ‌ ಒಂದು‌ ಪ್ರಯತ್ನ.‌ಅದೇ ಸಿನಿ‌ಲಹರಿ.

ಇದು ಬಣ್ಣದ ಭಾವನೆಗಳ ಲಹರಿ !

ಹೆಸರಲ್ಲೇನಿದೆ ಬಿಡಿ ಅಂದರೂ‌‌ ಹೆಸರು ಮುಖ್ಯವೇ. ಒಂದಷ್ಟು ಯೋಚಿಸಿ, ಚರ್ಚಿಸಿ ಈ ಹೆಸರು ಫೈನಲ್  ಆಗಿದೆ‌. ಈಗಾಗಲೇ ಅದಕ್ಕೆ ಒಳ್ಳೆಯ ಕಾಮೆಂಟ್ ಕೂಡ ಸಿಕ್ಕಿದೆ. ಅದು ನಮ್ಮ‌ ಪ್ರಯತ್ನದ ಪಾಸಿಟಿವ್ ವೈಬ್ರೇಷನ್. ಇನ್ನು ಮನೆಗೊಂದು ವೆಬ್ ಸೈಟ್ ಹಾಗೂ ಯುಟ್ಯೂಬ್ ಚಾನೆಲ್ ಇರುವ ಕಾಲ ಇದು.‌ ಅದರ ಅರಿವು ನಮಗಿದೆ. ಏನಾದ್ರೂ ಹೊಸತನ ಇರಬೇಕು ಅನ್ನೋದು ನಮ್ಮ ಬಯಕೆ. ದ್ವೇಷ, ಮತ್ಸರಕ್ಕೆ ಜಾಗ ಕೊಡದೇ ಸಕರಾತ್ಮಕ ಚಿಂತನೆಯ‌ ಮೂಲಕ‌ ಕನ್ನಡ ಚಿತ್ರ ರಂಗದ ಸಮಗ್ರ ಸುದ್ದಿ ಕೊಡುವ ವೆಬ್ ಸೈಟ್ ಮಾಡಬೇಕೆಂಬುದು ನಮ್ಮ ಉದ್ದೇಶ. ನಮಗ್ಯಾರು ಇಲ್ಲಿ‌ ಸ್ಪರ್ಧಿಗಳಿಲ್ಲ.‌ನಮಗೆ ನಾವೇ ಸ್ಪರ್ಧಿಗಳು ಮಾತ್ರ.

ಗೆಲ್ಲೋದೇ ನಮ್ಮ‌ ಟಾರ್ಗೆಟ್ ಅಲ್ಲ

ಕ್ಯೂರಿಯಾಸಿಟಿ‌ ಹುಟ್ಟಿಸಲು ಮಸಾಲೆ ಟೈಟಲ್ ನೀಡುವುದು, ಕತೆ ಕಟ್ಟುವುದು, ಯಾರದೋ ಮನಸ್ಸು ನೋಯಿಸುವಂತಹ ಬರಹ ಬರೆದು ನಮ್ಮ ವೆಬ್ ಸೈಟ್ ಮತ್ತು ಯುಟ್ಯೂಬ್ ವೀಕ್ಚಕರ ಸಂಖ್ಯೆಯನ್ನು ರಾತ್ರೋರಾತ್ರಿ ಹೆಚ್ಚಿಸಿಕೊಳ್ಳುವುದು ನಮ್ಮ ಉದ್ದೇಶ ಅಲ್ಲ. ತಾಜಾ‌,‌ವಸ್ತು ನಿಷ್ಟ, ಸಕರಾತ್ಮಕ, ನಂಬಿಕೆಗೆ ಅರ್ಹವಾದ ಸುದ್ದಿ ನೀಡುವುದಷ್ಟೇ ನಮ್ಮ‌ಕೆಲಸ. ಹಾಗಂತ ಇಲ್ಲಿ ಏನಾದ್ರೂ ‌ಮಾಡಿ ಗೆಲ್ಲೋದೇ ನಮ್ಮ ಟಾರ್ಗೆಟ್ ಅಲ್ಲ . ಅಂದುಕೊಂಡಿದ್ದನ್ನು ಅಚ್ಚುಕಟ್ಟಾಗಿ ಮಾಡೋಣ, ಒಂದೊತ್ತಿನ ಹೊಟ್ಟೆ ತುಂಬಿಸಿಕೊಳ್ಳೋಣ ಎನ್ನುವುದಷ್ಟೇ ನಮ್ಮ ಟಾರ್ಗೆಟ್.‌ ಆ ಮೂಲಕ ಸಿನಿಮಾ‌ಪ್ರೇಮಿಗಳಿಗೂ ಒಂದು ಚೆಂದದ ಸುದ್ದಿ ಜಾಲ ತಾಣ ಸಿಗಲಿದೆ. ಅದೆಲ್ಲದಕ್ಕೂ ನಿಮ್ಮಿಂದ ಆಗಬೇಕಿರುವುದು ಬೆಂಬಲ. ಆ ಬೆಂಬಲಕ್ಕೆ ಸಿನಿ ಲಹರಿ ಪೇಜ್ ಮತ್ತು ಯುಟ್ಯೂಬ್ ಚಾನೆಲ್ ಗೆ ಒಂದು ಲೈಕ್ ಒತ್ತಿ, ನಮ್ಮನ್ನು ಕೈ ಹಿಡಿದು ಮೇಲಕ್ಕೆತ್ತಿ. ಉಳಿದಂತೆ ‘ಸಿನಿ‌ಲಹರಿ ‘ನಿಮ್ಮದೇ ಸಿನಿಮಾ‌ ಸುದ್ದಿ ವೆಬ್ ಸೈಟ್.

Categories
ಸಿನಿ ಸುದ್ದಿ

ಲಹರಿ‌ ವೇಲು ಎಂಬ ಪ್ರೇರಕ ಶಕ್ತಿ…!


ಬನ್ನಿ ಸಾಹೇಬ್ರೆ, ಮಾಡೋಣ ಅಂದಿದ್ದೇ ಸಿನಿ‌ಲಹರಿ ಹುಟ್ಟಿಗೆ ಕಾರಣ ಅಂದ್ರೆ….

ಹೊಸತೆನ್ನುವುದರ ಆರಂಭ ಹೇಗೆ, ಎಲ್ಲಿ, ಯಾವಾಗ ಎನ್ನುವುದು ಗೊತ್ತೇ ಆಗುವುದಿಲ್ಲ‌. ಎಲ್ಲವೂ ಆಕಸ್ಮಿಕ ಎನ್ನುವ ಹಾಗೆ‌. ಸಣ್ಣದೋ, ದೊಡ್ಡದೋ ಒಂದು ಹೊಸ ಸಾಹಸ, ಒಂದು ಪ್ರಯತ್ನ ಅಥವಾ ಒಂದು ಹೊಸ ಕನಸು ನನಸಾಗುವುದಕ್ಕೆ ಒಂದು ನೆಪ ಬೇಕು ಅಷ್ಟೇ. ಒಬ್ಬರ ಪ್ರೇರಣೆಯೋ, ಇಲ್ಲವೇ ಒಬ್ಬರು ಮಾದರಿಯಾಗಿಯೋ, ಇಲ್ಲವೇ ಇನ್ನೋಬ್ಬರ ಮನೋಸ್ಥೈರ್ಯ ದ ಮಾತುಗಳೋ ನಮ್ಮ‌ ಸಾಹಸಗಳಿಗೆ ನೀರೆರೆದು , ಪುಷ್ಟಿ‌ನೀಡಿ ಬಿಡುತ್ತವೆ. ಒಟ್ಟಿನಲ್ಲಿ ಒಂದು ಸಂದಿಗ್ದ ಪರಿಸ್ಥಿತಿಯಲ್ಲಿ ನಾವೇನೋ‌ ಮಾಡುತ್ತೇವೆ ಅಂತ ಹೊರಟಾಗ ಪಾಸಿಟಿವ್ ಮಾತುಗಳೇ ದೊಡ್ಡ ಶಕ್ತಿ. ಅವತ್ತು ಅಂತಹ ಮಾತುಗಳನ್ನಾಡುವ ಮೂಲಕ‌ ‘ಸಿನಿ‌ಲಹರಿ’ ಶುರುವಿಗೆ ಪ್ರೇರಕರಾದವರು ಲಹರಿ ಸಂಸ್ಥೆಯ ಮಾಲೀಕರಾದ‌ ಲಹರಿ‌ ವೇಲು .

‘ಸಿನಿ‌ಲಹರಿ ‘ ಹೆಸರಿನ‌ ಒಂದು ವೆಬ್ ಸೈಟ್ ಮತ್ತು ಯುಟ್ಯೂಬ್ ಚಾನೆಲ್‌ ಇವತ್ತು ಶುರುವಾಗಿ ನಿಮ್ಮ‌ಮುಂದೆ ಅನಾವರಣಗೊಂಡಿದ್ದರೆ ಅದಕ್ಕೆ ಪ್ರೇರಕರಾದವರು ಅನೇಕರು. ಅದರಲ್ಲಿ‌ ಮೊದಲಿಗರು ಲಹರಿ ವೇಲು.‌ ಒಂದು ಸಂಕಷ್ಟದ ಕಾಲದಲ್ಲಿ‌ ಅವರು ‘ ಬನ್ನಿ‌ ಸಾಹೇಬ್ರೆ, ಮಾಡೋಣ …ಅಂತೆನ್ನದೇ ಇದ್ದಿದ್ದರೆ ಇದು ಶುರುವಾಗುತ್ತೋ, ಇಲ್ಲವೋ ಗೊತ್ತಿಲ್ಲ. ಆದರೆ ಆ ಒಂದು‌ ಮಾತಿನಿಂದ ‘ಸಿನಿ ಲಹರಿ’ ಶುರುವಾಯ್ತು.‌ ಅದರ ಅಲೋಚನೆ ಹುಟ್ಟಿಕೊಂಡಿದ್ದ ಸಂದರ್ಭವೇ ವಿಚಿತ್ರ ವಾಗಿತ್ತು.ಆ ದಿನಗಳಲ್ಲೇ ಲಹರಿ‌ ವೇಲು ಅವರು ತಮ್ಮ ಕಚೇರಿಯಲ್ಲಿ ಸರಿ‌ಸುಮಾರು 3 ಗಂಟೆಯಷ್ಟು ಕಾಲ ಕೂರಿಸಿಕೊಂಡು, ಸುದೀರ್ಘವಾಗಿ‌ ಮಾತನಾಡಿ, ಸಾಹೇಬ್ರೆ, ನೀವು ಮಾಡ್ತೀರಾ ಮಾಡಿ’ ಅಂತ ಬೆನ್ನು ತಟ್ಟಿದ್ದು ‘ಸಿನಿ‌ಲಹರಿ ‘ಹುಟ್ಟಿಗೆ ಕಾರಣ. ಈ ನೆನಪು ಯಾಕಂದ್ರೆ , ಅವತ್ತಿನ ಸಂದರ್ಭವೇ ಭಿನ್ನವಾಗಿತ್ತು.‌ಆ ದಿನಗಳಲ್ಲಿ ನಮಗೆ ಅವರು ಸಿಕ್ಕರು ಎನ್ನುವ ಕಾರಣಕ್ಕೆ.

ಅದ್ಹೆಂಗೆ ಅಂತೀರಾ? ಲಾಕ್ ಡೌನ್ ಆಗಷ್ಟೇ ತೆರವಾಗಿದ್ದ ಸಂದರ್ಭ. ಜನರ ಓಡಾಟಕ್ಕೆ ಒಂದಷ್ಟು ನಿರ್ಬಂಧಗಳು ಸಡಿಲಗೊಂಡಿದ್ದವು ಎನ್ನುವುದನ್ನು ಬಿಟ್ಟರೆ, ಕೊರೋನಾ‌ ಹರಡುವಿಕೆಯ ಅಬ್ಬರ ಮಾತ್ರ ಕಿಂಚಿತ್ತು ಕಮ್ಮಿ ಆಗಿರಲಿಲ್ಲ. ಜನ ರಸ್ತೆಯಲ್ಲಿ ಓಡಾಡುವುದಕ್ಕೂ ಭಯ ಪಡುತ್ತಿದ್ದರು. ನಂಗಂತೂ ಎದುರಿಗೆ ಬಂದವರೆಲ್ಲ ಕೊರೋನಾ ದಂತೆಯೇ ಕಾಣುತ್ತಿದ್ದರು. ಆ ದಿನಗಳಲ್ಲೇ ನಾನು ಊರಿನಿಂದ ವಾಪಾಸ್ ಬೆಂಗಳೂರಿಗೆ ಬಂದಿದ್ದೆ.ಆ ಹೊತ್ತಿಗಾಗಲೇ ನಾನು ನಿರುದ್ಯೋಗಿ. ಮಾನಸಿಕ‌‌ ಕಿರಿ‌ಕಿರಿ‌ ಆಗಿ, ಕೆಲಸ ಬೇಡ ಅಂತ ಬಿಟ್ಟು ಬಿಟ್ಟಿದ್ದೆ.’ ಅನ್ನ ಹಳಸಿತ್ತು, ನಾಯಿ ಹಸಿದಿತ್ತು ‘ ಅನ್ನೋ ಪರಿಸ್ಥಿತಿ ನಾನು ಕೆಲಸ ಬಿಟ್ಟ ಸಂಸ್ಥೆಗೂ ಇತ್ತು. ಅಲ್ಲಿದ್ದ ಕೆಲವರು ಸಂಭ್ರಮಾಚರಣೆ ಮಾಡಿದ್ದರು. ಆ ಬಗ್ಗೆ ತಲೆ‌ ಕಡೆಸಿಕೊಳ್ಳದೆ, ಎರಡ್ಮೂರು ತಿಂಗಳು ಊರಲ್ಲೇ ಇದ್ದೆ. ವಾಪಾಸ್ ಬೆಂಗಳೂರಿಗೆ ಬರಲೇಬೇಕು.ಬಂದ್ಮೇಲೆ ಏನು ಅಂತ ಗೆಳೆಯ ವಿಜಯ್ ಭರಮ ಸಾಗರ ಜತೆ ಚರ್ಚೆ ಮಾಡುತ್ತಿದ್ದಾಗ, ಆತನೆ, ವೆಬ್ಸೈಟ್ ಪ್ರಪೋಜಲ್ ಇಟ್ಟಿದ್ದ.‌ ಆದರೆ ಅದಕ್ಕೆಲ್ಲ ಯಾರು ಬೆಂಬಲ‌ ನೀಡ್ತಾರೆ, ಹಣಕಾಸು ಹೇಗೆ ಅಂತೆಲ್ಲ ಯೋಚಿಸುತ್ತಲೇ ಬೆಂಗಳೂರಿಗೆ ಬಂದೆ

ಏನಾದರೂ ಮಾಡಲೇ ಬೇಕು ಎನ್ನುವ ಚರ್ಚೆಯಲ್ಲೆ ವಾರ ಕಳೆಯಿತು. ಅಲ್ಲಿ ಇಲ್ಲಿ ಒಂದಷ್ಟು ಗೆಳೆಯರ ಜತೆ ಮಾತುಕತೆ ನಡೆಯಿತು. ಅಲ್ಲಿಂದ ಒಂದಿನ ಲಹರಿವೇಲು ಅವರನ್ನ ಭೇಟಿ ಮಾಡುವ ಆಲೋಚನೆಬಂತು.ತಕ್ಷಣವೇ ಕಾಲ್ ಮಾಡಿಮಾತನಾಡಿದೆ. ನಾಳೆಯೇ ಆಫೀಸ್ ಗೆ ಬನ್ನಿ,ಅಂದ್ರು. ಅದೇ ಮಾತಿನಂತೆ ಮಧ್ಯಾಹ್ನ 2 ಗಂಟೆಗೆ ಅವರದೇ ಆಫೀಸ್ ನಲ್ಲಿ ಭೇಟಿಯಾದೆವು. ‘ ನಾಲ್ಕು ತಿಂಗಳಾದವು ಸಾಹೇಬ್ರೆ, ಅಫೀಸ್ ಮುಖ ನೋಡದೆ. ನಿಮಗಾಗಿಯೇ ಇವತ್ತು ಇಲ್ಲಿಗೆ ಬಂದೆ. ಬೇರೆ ಯಾರೇ ಆಗಿದ್ದರೂ, ಆಫೀಸ್ ಗೆ ಬರುತ್ತಿರಲಿಲ್ಲ’ ಅಂತ ಕೊರೋನಾ ಆತಂಕದ ಬದುಕನ್ನು ವಿವರಿಸುತ್ತಾ ಮಾತಿಗೆ ಕುಳಿತರು.


ಮೂರು ತಾಸು ಮಾತುಕತೆ ನಡೆಯಿತು. ನಮ್ಮಪರಿಸ್ಥಿತಿ ಕೇಳಿ ನೊಂದುಕೊಂಡರು. ಕೊನೆಗೆ ಅವರು ಹೇಳಿದ್ದು ಒಂದೇ ಮಾತು, ‘ ಸಾಹೇಬ್ರೆ , ನೀವೆನು ಯೋಚನೆ ಮಾಡ್ಬೇಡಿ. ನೀವೇನು, ನಿಮ್ಮಸಾಮಾರ್ಥ್ಯವೇನು ಅಂತ ನಂಗೊತ್ತು. ನಾನಿದ್ದೇನೆ, ವೆಬ್ ಸೈಟ್ ಮಾಡಿ, ಒಳ್ಳೆಯದಾಗುತ್ತೆ ‘ ಅಂದ್ರು.ಆ ಒಂದು ಮಾತು ನಮಗೆ ಅನೆ ಬಲ ನೀಡಿತು. ಅಲ್ಲಿಂದಶುರುವಾದ ವೆಬ್ ಸೈಟ್ ಕೆಲಸಕ್ಕೆ ಅನೇಕರು ಸಾಥ್ ಕೊಟ್ಟರು.ಅನೇಕರುಪ್ರೊತ್ಸಾಹ ದಾಯಕಮಾತುಗಳನ್ನು ಆಡಿದರು.ಹಲವರು ನಾವಿದ್ದೇವೆ ಮಾಡಿ ಅಂತ ಬೆನ್ನಿಗೆ ನಿಂತಿರು. ಅದೆಲ್ಲದರ ಪ್ರತಿಫಲವೇ’ ಸಿನಿಲಹರಿ’. ಎಲ್ಲದರಿಗೂ ಧನ್ಯವಾದ.

Categories
ಸಿನಿ ಸುದ್ದಿ

‘ಸಿನಿ‌ಲಹರಿ ‘ ಆರಂಭಕ್ಕೆ ರಾಜ್ಯೋತ್ಸವದ‌ ಮೆರಗು

ಆರಂಭ ಮತ್ತು ಉದ್ಘಾಟನೆಯ ಸಂದರ್ಭಗಳೇ ಕಾಕತಾಳೀಯ

ಭಾಷೆ ಮತ್ತು ಸಿನಿಮಾ ನಡುವೆ ಕರುಳು ಬಳ್ಳಿ ಸಂಬಂಧ. ಭಾಷೆಯೇ ಮೊದಲಾದರೂ, ಭಾಷೆಯ  ಉಳಿವಿಗೆ ಸಿನಿಮಾದ್ದು ಅಳಿಲು ಸೇವೆ ಎಂದರೆ ತಪ್ಪಲ್ಲ. ಭಾಷೆ ಮೂಲಕ ಸಿನಿಮಾ ಬೆಳೆದರೂ, ಸಿನಿಮಾ ಮೂಲಕವೂ ಭಾಷೆ ಬೆಳೆಯುತ್ತೆ ಎನ್ನುವುದು ಅಷ್ಟೇ ಸತ್ಯ. ಅವರೆಡರ ಮಧ್ಯೆ ಕೊಂಡಿಯಾದ ಸಿನಿಮಾ ಪತ್ರಿಕೋದ್ಯಮ ಇವತ್ತು ಡಿಜಿಟಲ್ ಆದ ಹೊತ್ತಲ್ಲಿ ಸಿನಿಲಹರಿ ವೆಬ್ ಸೈಟ್ ಹಾಗೂ ಯುಟ್ಯೂಬ್ ಚಾನೆಲ್  ಕನ್ನಡ ರಾಜ್ಯೋತ್ಸವ ದಿನವೇ ಲೋಕಾರ್ಪಣೆ ಆಗುತ್ತಿರುವುದು ಹೆಮ್ಮೆ.

‘ ಸಿನಿ ಲಹರಿ’  ವೆಬ್ ಸೈಟ್ ಆರಂಭ, ಅದರ ಉದ್ಘಾಟನೆಯ ಸಂದರ್ಭ ಎರಡೂ ಕಾಕತಾಳೀಯ. ಇದೆಲ್ಲ ಯಾವುದೂ ಪೂರ್ವ ಯೋಜಿತ ಅಲ್ಲ.  ಕೆಲಸ ಇಲ್ಲ ಅಂತ ಆತಂಕದಲ್ಲಿದ್ದಾಗ ಒಂದು ಸಿನಿಮಾ ನ್ಯೂಸ್ ವೆಬ್ ಸೈಟ್ ಮಾಡೋಣ, ಅದರ ಹೆಚ್ಚಿನ ಪಾಲು  ಕನ್ನಡ ಸಿನಿಮಾಕ್ಕಾಗಿಯೇ ಮೀಸಲಿಡೋಣ ಅಂತಂದುಕೊಂಡಿದಷ್ಟೆ. ‌ಮುಂದೆ, ಖಾಲಿ ಜೇಬು ಇಟ್ಕೊ‌ಂಡು ಅದೇನ್ ಮಾಡ್ತೇವೋ.. ಅಂತ ನಮ್ಗೆ ನಾವೇ ಕಾಲೆಳೆದುಕೊಂಡು ಒಂದಷ್ಟು ದಿನ ತಿರುಗಾಡಿದೆವು.‌ ಕೊನೆಗೊಂದು‌ ದಿನ ಅದಕ್ಕೆ ಅಂತಿಮ‌ ರೂಪವೂ ಸಿಕ್ಕಿತು.‌ಅನೇಕ ಜನ ಸಹಕಾರ‌ ನೀಡಿದರು.‌ ಅದೆಲ್ಲದರ ಪ್ರಯತ್ನವಾಗಿ’  ಸಿನಿ ಲಹರಿ ‘ ಒಂದು ರೂಪ ಪಡೆಯಿತು.‌

ಕೊನೆಗೆ ಅದಕ್ಕೆ ಚಾಲನೆ ಎಂದು? ಅದರ ಉದ್ಘಾಟನಾ ಕಾರ್ಯಕ್ರಮ ಹೇಗಿರಬೇಕು ? ಯಾರನ್ನು ಕರೀಬೇಕು ? ಅಂತಂದುಕೊಂಡಾಗಲೂ, ಹೀಗೆಲ್ಲ ಆಗಬಹುದು‌ ಅಂತ ನಿರೀಕ್ಷೆ ಮಾಡಿರಲಿಲ್ಲ‌. ಮೊದಲು ಅಕ್ಟೋಬರ್  ಫಸ್ಟ್ ವೀಕ್ ಅಂತ‌ ಆಲೋಚಿಸಿದ್ದೇವು. ಕೊನೆಗೆ ಅಕ್ಟೋಬರ್‌ 29 ಫೈನಲ್ ಅಂತಲೂ ನಿರ್ಧಾರ ಮಾಡಿಕೊಂಡೆವು. ನಾವೇನೋ ರೆಡಿ ಇದ್ದರೂ, ಅದಕ್ಕೆ ಬೇಕಾದ ಹಾಲ್, ಗೆಸ್ಟ್, ಇತ್ಯಾದಿ ಹೊಂದಾಣಿಕೆ ಆಗಲಿಲ್ಲ. ಕೊನೆಗೆ ಅದು ಸರಿಯಾಗಿದ್ದು ನವೆಂಬರ್  1ಕ್ಕೆ.


ಇದೆಲ್ಲ ಹೇಗಾಯಿತೋ ಗೊತ್ತಿಲ್ಲ. ಒಂಥರ ಕಾಕತಾಳೀಯ. ನಾವು ಶುರು ಮಾಡುವ ವೆಬ್ ಸೈಟ್ ಬಹುತೇಕ ಕನ್ನಡಕ್ಕೆ ಮೀಸಲಾಗಿರಬೇಕು ಎಂದುಕೊಂಡಿದ್ದರ ಶುಭ ಸೂಚಕವೋ ಏನೋ, ಇದು’  ಕನ್ನಡ ರಾಜ್ಯೋತ್ಸವ’ ದಂದೇ ಲೋಕಾರ್ಪಣೆ ಆಗುವ ಭಾಗ್ಯ. ಅದು ಸಿನಿ‌ಮಾ ಮತ್ತು ಭಾಷೆಯ ನಡುವಿರುವ ಅವಿನಾಭಾವ ಸಂಬಂಧದ ಪ್ರತೀಕವೂ ಹೌದು.
ಸಿನಿಮಾ‌ ಮತ್ತು ಭಾಷೆ ಒಂದಕ್ಕೊಂದು ಅಂಟಿಕೊಂಡಿವೆ. ಮೂಕಿ‌ ಚಿತ್ರದ ಯುಗ ಮುಗಿದ ನಂತರ ಟಾಕಿ ಸಿನಿಮಾದ ಯುಗ ಶುರುವಾಯಿತು. ಅಲ್ಲಿಂದ ಇಲ್ಲಿ ತನಕ ಸಿನಿಮಾ‌ ಮತ್ತು ಭಾಷೆ ಅಂದ್ರೆ ಅದೊಂದು ಕರುಳುಬಳ್ಳಿ ಸಂಬಂಧ. ಭಾಷೆಯ ಮೂಲಕ ಸಿನಿಮಾ ಬೆಳೆಯುತ್ತೋ, ಅಥವಾ  ಸಿನಿಮಾ ಮೂಲಕ ಭಾಷೆ ಬೆಳೆಯುತ್ತೋ ಅದೀಗ ತರ್ಕಕ್ಕೆ ನಿಲುಕದ ಮಾತು.

ಭಾಷೆಯೇ ಮೊದಲಾದರೂ,ಈಗ ಅದೆಷ್ಟೋ‌ ದೇಶಗಳಲ್ಲಿ ಕನ್ನಡ ಸಿನಿಮಾಗಳಿಗೆ ಬೇಡಿಕೆಯಿದೆ ಎಂದಾದರೆ ಅದು ಕನ್ನಡ ಭಾಷೆಯ ಕಾರಣಕ್ಕಾಗಿ ಅಲ್ಲವೇ? ಹಾಗೊಂದು ನಂಟು ಭಾಷೆ ಮತ್ತು ಸಿನಿಮಾ ನಡುವಿದೆ. ಅಂತಹ ಅಂಟು, ನಂಟಿನ‌ ನಡುವೆ ಕನ್ನಡ ಸಿನಿಮಾಕ್ಕಾಗಿಯೇ ಒಂದು‌ ಕನ್ನಡ ಭಾಷೆಯ ಹೊಚ್ಚ ಹೊಸ ವೆಬ್ ಸೈಟ್ , ಕನ್ನಡ ರಾಜ್ಯೋತ್ಸವದ ದಿನವೇ ಉದ್ಘಾಟನೆ ಗೊಳ್ಳುತ್ತಿರುವುದು ನಮ್ಮ‌ಹೆಮ್ಮೆ. ‘ಸಿನಿ‌ಲಹರಿ’ ಯ ಸೌಭಾಗ್ಯ.

Categories
ಸಿನಿ ಸುದ್ದಿ

ಟ್ವೆಂಟಿ- ಟ್ವೆಂಟಿನಲ್ಲಿ‌ ಶುಭ ಮಿಲನಾ!

ಲವ್ ಬರ್ಡ್ ಗೆ  ಸಿಕ್ಕಿತು ಲವ್ ಮಾಕ್ಟೆಲ್ ಎಂಬ ಸ್ವೀಟ್ ಕಾಕ್ಟೆಲ್

ಇಡೀ ಜಗತ್ತಿನ ಪಾಲಿಗೆ 2020  ಮರೆಯಲಾಗದ ವರ್ಷ.ಕೊರೋನಾ ಬಂದು‌ ಇಡೀ ವಿಶ್ವವೇ ಅಲ್ಲೋಲ ಕಲ್ಲೋಲ‌ ಆಯ್ತು‌. ಆದರೂ‌ ಕೆಲವರಿಗೆ ಇದು ವರವೂ ಆಯ್ತು.‌ ಮುಖೇಶ್ ಅಂಬಾನಿ‌ ಮನೆಯಲ್ಲೇ ಕುಳಿತು ದಿನಕ್ಕೆ 80 ಕೋಟಿ ದುಡಿದರೂ‌ ಅಂತ  ಸುದ್ದಿ ಬಂತು. ಇದೊಂಥರ ಲಕ್. ಈ ವರ್ಷದಲ್ಲಿ ಇಂತಹ ಅದೃಷ್ಟ ಕಂಡವರು ನಟಿ ಮಿಲನಾ ನಾಗಾರಾಜ್ ಕೂಡ ಒಬ್ಬರು.

ಅವಕಾಶಕ್ಕಾಗಿ ಕಾಯುತ್ತಿದ್ದರು !

‘ನಮ್  ದುನಿಯಾ ನಮ್ ಸ್ಟೈಲ್ ‘ ಮೂಲಕ ಚೆಂದನವನಕ್ಕೆ ಬಂದ ನಟಿ ಮಿಲನಾ ನಾಗರಾಜ್. ನಟಿಯಾಗುವ ಮೊದಲು ಅಥ್ಲಿಟ್ ಆಗಿ ಹೆಸರು ಮಾಡಿದವರು. ಕ್ರೀಡೆಯಿಂದ ಸಿನಿಮಾ‌ ಕಡೆ ಮುಖ‌ ಮಾಡಿದರು. ಆದರೆ ಸಿನಿಮಾ ಬದುಕು ಅವರಂದು ಕೊಂಡಷ್ಟು ಸುಲಭ ಇರಲಿಲ್ಲ. ಬದಲಿಗೆ ಅವಕಾಶಗಳಿಗೇ ಇಲ್ಲಿ ಚಾತಕ ಪಕ್ಷಿಯಂತೆ ಕಾಯುವ ಪರಿಸ್ಥಿತಿ ಎದುರಿಸಿದರು. ಅವಕಾಶ ಸಿಕ್ಕರೂ ಗಟ್ಟಿ ನೆಲೆ ಕಾಣಲು ಒಂದು ಸಕ್ಸಸ್‌ ಅನ್ನೋದು  ಸಿಗಲಿಲ್ಲ. ಗೆಲುವಿಗಾಗಿ ಐದಾರು ವರ್ಷ ಸೈಕಲ್ ಹೊಡೆದರು‌. ಆ್ಯಡ್ ಶೂಟ್ ಗಳಲ್ಲಿ ಕಾಣಿಸಿಕೊಂಡರು.ಸಾಲದೆಂಬಂತೆ ಪರಭಾಷೆಗಳಿಗೂ ಹೋಗಿ ಅದೃಷ್ಟ ಪರೀಕ್ಷೆ ಮಾಡಿಕೊಂಡರು. ಫಲ‌ ಸಿಗಲಿಲ್ಲ.

ಇನ್ನೇನು ಮನೆಯಲ್ಲೇ ಕೂರಬೇಕೆನೋ ಎನ್ನುವ ಹೊತ್ತಿಗೆ ಪವಾಡವೇ ನಡೆದು ಹೋಯಿತು‌.  2020 ಕ್ಕೆ ದೊಡ್ಡ ಗೆಲುವು ಕಾಣುವ ಯೋಗವಿತ್ತೇನೋ‌ . ಈ ವರ್ಷ ದೊಡ್ಡ ಗೆಲುವು ಸಿಕ್ಕಿತು. ಅದು ಅವರ ಇದುವರೆಗಿನ ಪಯಣದ ನೋವು ಮರೆಸಿ, ನಟಿಯಾಗಿ ಮೆರೆಸಿದೆ.

ಲವ್ ಮಾಕ್ಟೆಲ್ ಬರಬೇಕಾಯಿತು !

2020  ಕನ್ನಡ ಚಿತ್ರರಂಗವನ್ನು ಬಹುವಾಗಿ ಕಾಡಿಸಿದ ವರ್ಷ. ಚಿತ್ರರಂಗ ಎಂದೂ ಕಂಡರಿಯದ ಹಾಗೆ, ಚಿತ್ರೋದ್ಯಮ ಬಂದ್ ಆಯ್ತು. ಸಿನಿಮಾ ಟಾಕೀಸ್ ಗಳು ಬಾಗಿಲು ಮುಚ್ಚಿದವು. ಇಷ್ಟಾಗಿಯೂ ಚಿತ್ರರಂಗದ ಇತಿಹಾಸಕ್ಕೆ ದಾಖಲಾಗುವ ಹಾಗೆ ಎರಡು‌ ಚಿತ್ರಗಳು ಸಕ್ಸಸ್ ಕಂಡವು. ಆ ಎರಡರ ಪೈಕಿ ಲವ್ ಮಾಕ್ಟೆಲ್ ಚಿತ್ರವೂ ಒಂದು‌. ಈ ಮೂಲಕ ಸ್ಟಾರ್ ನಟಿ ಅಂತ ಗುರುತಿಸಿಕೊಂಡಿದ್ದು ನಟಿ‌ ಮಿಲನಾ ನಾಗರಾಜ್.

ಈ ಚಿತ್ರವುಚಿತ್ ಮಂದಿರಗಳಲ್ಲೇ ದೊಡ್ಡ ಹವಾ ಸೃಷ್ಟಿಸಿದ್ದು ಮಾತ್ರವಲ್ಲ, ಟಿವಿ ರೈಟ್ಸ್ ಜತೆಗೆ ಡಿಜಿಟಲ್ ಹಕ್ಕುಗಳು ಕೂಡ ಅತ್ಯಧಿಕ ಬೆಲೆ ಮಾರಾಟವಾದವು.‌ ನಿರ್ಮಾಣದ ಜತೆಗೆ ಚಿತ್ರದ ಕಲಾವಿದರಾದ ಮದರಂಗಿ ಕೃಷ್ಣ ಹಾಗೂ ಮಿಲನಾ ನಾಗರಾಜ್ ಜೇಬು ತುಂಬ ಕಾಂಚಣ ಕಂಡರು. ಸಕ್ಸಸ್ ಕಾಣದೆ ನೊಂದಿದ್ದ ಮಿಲನಾ ನಾಗರಾಜ್, ಭರ್ಜರಿ ಗೆಲವು ಕಂಡು ಸಂಭ್ರಮ‌ಪಟ್ಟರು. ಮತ್ತೊಂದೆಡೆ ನಿರ್ಮಾಪಕಿ ಆಗಿಯೂ ಭರ್ಜರಿ ಹಣ ಸಂಪಾದಿಸಿದ್ದು ತಮಾಷೆ ಅಲ್ಲ. ಡಬಲ್ ಧಮಾಕಾ ಅಂತಾರಲ್ಲ, ಹಾಗೆ.

ಮತ್ತೊಂದು ಲವ್ ಮಾಕ್ಟೆಲ್ ರೆಡಿ ಆಯ್ತು!

ಒಂದು ಚಿತ್ರದ ಸಕ್ಸಸ್  ಬಹಳಷ್ಟು ಜನರ ಹಣೆ ಬರಹ ಬರೆಯುತ್ತೆ. ಅದು ಚಿತ್ರರಂಗದ ಇತಿಹಾಸ. ಲವ್ ಮಾಕ್ಟೆಲ್ ಕೂಡ ಅಷ್ಟೇನೆ. ಮದರಂಗಿ‌ಕೃಷ್ಣ ಹಾಗೂ ಮಿಲನಾ ನಾಗರಾಜ್ ಇಬ್ಬರೂ ಬಹು ದಿನಗಳಿಂದ ಗೆಲುವಿಗಾಗಿ ಕಾದಿದ್ದವರು. ಈಗ  ಲವ್ ಮಾಕ್ಟೆಲ್ ಚಿತ್ರದ ಗೆಲುವು ಇವರಿಬ್ಬರನ್ನು ಬಹು ಎತ್ತರಕ್ಕೇರಿಸಿದೆ. ಗೆದ್ದ ಖುಷಿಯಲ್ಲೇ ಈ ಜೋಡಿ ಲವ್ ಮಾಕ್ಟೆಲ್ ೨ ಶುರು ಮಾಡಿತು. ಅದರ ಜತೆಗೆ ಖಾಸಗಿ ಬದುಕಲ್ಲೂ ಜೋಡಿ ಆಗುತ್ತಿರುವ ಖುಷಿ ರಿವೀಲ್ ಮಾಡಿತು. ಅದರ ಜತೆಗೆಯೇ ಮದರಂಗಿ‌ಕೃಷ್ಣ ಬೇಡಿಕೆಯ ನಟರಾದರು. ಇದೆಲ್ಲ ಲವ್ ಮಾಕ್ಟೆಲ್ ಪ್ರಭಾವ. ಒಂದು ದೊಡ್ಡ ಗೆಲುವಿನೊಂದಿಗೆ ಭಾಗ 2 ಮೂಲಕ ತೆರೆ‌ಮೇಲೆ ಬರುವ ತವಕ ಮಿಲನಾ ನಾಗರಾಜ್ ಹಾಗೂ ಮದರಂಗಿ‌ಕೃಷ್ಣ ಅವರದು. ಇನ್ನು ಪ್ರೇಕ್ಷಕರಿಗೆ ಆ ಚಿತ್ರ ಹೇಗೆ ಬರುತ್ತೆ ಎನ್ನುವ ಕುತೂಹಲ. ಆಲ್ ದಿ ಬೆಸ್ಟ್ ಮಿಲನಾ ನಾಗಾರಾಜ್.

Categories
ಸಿನಿ ಸುದ್ದಿ

ಸ್ಯಾಂಡಲ್ ವುಡ್ ಕ್ವೀನ್ ಪಟ್ಟದ‌ ಮೇಲೆ‌ ಡಿಂಪಲ್ ಕ್ವೀನ್!

ಬುಲ್‌ ಬುಲ್ ಬೆಡಗಿಗೆ ಕೈ‌ತುಂಬಾ ಅವಕಾಶ, ರಚಿತಾ ಸಕ್ಸಸ್ ಗೆ ಕಾರಣ ಆದೊಂದು ವ್ಯಾನಿಟಿ ಬ್ಯಾಗ್ !?

ಸ್ಯಾಂಡಲ್ ವುಡ್ ನಲ್ಲೀಗ ಬಹುಬೇಡಿಕೆಯ  ನಟಿ ಯಾರು ?  ಕನ್ನಡ ಸಿನಿಮಾ ಪ್ರೇಮಿಗಳಿಗೆ ಹೀಗೊಂದು ಪ್ರಶ್ನೆ ಎದುರಾದರೆ ಥಟ್ಟಂತೆ ಬರುವ ಉತ್ತರ ಡ್ವಿಂಪಲ್ ಕ್ವೀನ್ ರಚಿತಾ ರಾಮ್. ಅದು ಉತ್ಪ್ರೇಕ್ಷೆಯೂ ಅಲ್ಲ.ರಚಿತಾ ರಾಮ್ ಅವರ ಕೈಯಲ್ಲಿರುವ ಸಿನಿಮಾಗಳು, ಜತೆಗೆ ಅವರಿಗೀಗ ಬರುತ್ತಿರುವ ಅವಕಾಶ ನೋಡಿದರೆ ಅದು ನೂರಕ್ಕೆ ನೂರರಷ್ಟು ಸತ್ಯವಾದ ಮಾತು.

ಸದ್ಯಕ್ಕೆ‌ ರಚಿತಾ ರಾಮ್ ನಾಯಕಿಯಾಗಿರುವ ಸಿನಿಮಾಗಳನ್ನೇ ನೋಡಿ, ಏಕ್ ಲವ್ ಯಾ , ಏಪ್ರಿಲ್, ವೀರಂ, ಡಾಲಿ, ಲಿಲ್ಲಿ , ಮಾನಸೂನ್ ರಾಗಾ ಸೇರಿದಂತೆ ಇನ್ನು ಹೆಸರಿಡದ ಮೂರ್ನಾಲ್ಕು ಸಿನಿಮಾಗಳಿಗೂ ಅವರು ನಾಯಕಿ. ಹಾಗೆಯೇ ತೆಲುಗಿನ’ ಸೂಪರ್ ಮಿರ್ಚಿ’ ಹೆಸರಿನ ಚಿತ್ರಕ್ಕೂ ಅವರು ನಾಯಕಿ.‌ ಮೂಲಗಳ ಪ್ರಕಾರ ಇದು ತೆಲುಗು ಹಾಗೂ ಕನ್ನಡ ಎರಡು ಭಾಷೆಯಲ್ಲೂ ಬರಲಿದೆ. ಅದೃಷ್ಟ ಅಂದ್ರೆ ಇದೇ ಅಲ್ವಾ? 2021 ರ ಜತೆಗೆ 2022 ಕ್ಕೂ ಅವರು ಫುಲ್ ಬ್ಯುಸಿ. ಆ ಮಟ್ಟಿಗೀಗ ರಚಿತಾ ರಾಮ್ ಸ್ಯಾಂಡಲ್ ವುಡ್ ನ ಬಹು ಬೇಡಿಕೆಯ ನಟಿ.

ಅಷ್ಟೇ ಯಾಕೆ,  ರಚಿತಾ ನಾಯಕಿಯಾಗಿರುವ ಮತ್ತೊಂದು ಹೊಸ ಸಿನಿಮಾ ಅನೌನ್ಸ್ ಆಗಿದೆ. ‘ಇನ್ಸ್ ಸ್ಪೆಕ್ಟರ್ ವಿಕ್ರಂ’ ಚಿತ್ರದ ನಿರ್ಮಾಪಕ ವಿಖ್ಯಾತ್ ನಿರ್ಮಾಣದ ಮತ್ತೊಂದು ಹೊಸ ಚಿತ್ರಕ್ಕೆ ರಚಿತಾ ನಾಯಕಿ ಆಗಿರುವ ಸುದ್ದಿ ಈಗ ಹೊರ ಬಿದ್ದಿದೆ. ಇತ್ತೀಚೆಗೆ ಅವರ ಹುಟ್ಟು ಹಬ್ಬಕ್ಕೆ ಚಿತ್ರ ತಂಡ ಪೋಸ್ಟರ್ ಲಾಂಚ್ ಮಾಡುವ ಮೂಲಕ ಈ ಸುದ್ದಿ ಬಹಿರಂಗ ಪಡಿಸಿದೆ.ಈಗಾಗಲೇ ಅದರ ಶೂಟಿಂಗ್ ಕೂಡ ಮುಗಿದಿದೆ. ಇಷ್ಟರಲ್ಲಿಯೇ ಅದರ ಟೈಟಲ್ ಲಾಂಚ್ ಆಗಲಿದೆಯಂತೆ.

ಹಾಗೆಯೇ ‘ಅಯೋಗ್ಯ’ ಚಿತ್ರದ ಜೋಡಿ ಮತ್ತೊಮ್ಮೆ ಒಂದಾಗುತ್ತಿದೆ. ಸತೀಶ್ ನೀನಾಸಂ ಹಾಗೂ‌ ರಚಿತಾ ಜೋಡಿಯ ಚಿತ್ರ ‘ಮ್ಯಾಟ್ನಿ’ ಗೆ ಮುಹೂರ್ತ ಮುಗಿದಿದೆ.ಹೊಸ ಪ್ರತಿಭೆ ಮನೋಹರ್ ಈ ಚಿತ್ರದ ಸಾರಥ್ಯ ವಹಿಸಿಕೊಂಡಿದ್ದಾರೆ. ಅಲ್ಲಿಗೆ ಸಾಲು‌ಸಾಲು ಸಿನಿಮಾಗಳಿಗೆ ನಾಯಕಿಯಾಗಿರುವ ರಚಿತಾ ರಾಮ್, ಕಿರುತೆರೆಯಲ್ಲೂ ಅಷ್ಟೇ ಬ್ಯುಸಿ ಎನ್ನುವುದು ನಿಮಗೂ‌ ಗೊತ್ತು. ಹಾಗಂತ ಕಿರುತೆರೆ ಅವರಿಗೇನು ಹೊಸದಲ್ಲ. ಬಿಂದಿಯಾ ರಾಮ್ ಎನ್ನುವ ಗುಳಿಕೆನ್ನೆ ಚೆಲುವೆ ಕಿರುತೆರೆ ಲೋಕದಿಂದಲೇ ಸಿನಿಮಾ‌ ಪ್ರಪಂಚಕ್ಕೆ ಬಂದು‌ ರಚಿತಾ ರಾಮ್ ಆಗಿದ್ದು. ಕಿರುತೆರೆ ಲೋಕದ ಜನಪ್ರಿಯತೆಯಿಂದಲೇ ಸಿನಿ ದುನಿಯಾಕ್ಕೆ ಬಂದು ಬುಲ್ ಬುಲ್ ಬೆಡಗಿ ಅಂತಲೇ ಮನೆ‌ಮಾತಾಗಿದ್ದು ರಚಿತಾ ಅವರ ಹೆಗ್ಗಳಿಕೆ. ಹಾಗೆಯೇ ರಚಿತಾ ಪಾಲಿಗೆ ಇದ್ದ ಅದೃಷ್ಟ ಸ್ಟಾರ್ ನಟರ ಸಿನಿಮಾಗಳಿಗೇ ಒಂದಷ್ಟು ಸಮಯ ನಾಯಕಿಯಾಗಿ ಮೆರೆದಿದ್ದು. ಇಂತಹ ಅದೃಷ್ಟ ಯಾರಿಗುಂಟು ಯಾರಿಗಿಲ್ಲ! ಹಾಗಿದ್ದು ರಚಿತಾ ರಾಮ್ ಒಂದಷ್ಟು ಸಮಯ‌ ಅವಕಾಶಕ್ಕೆ ಎದುರು ನೋಡುವಂತಾಗಿದ್ದರ ಕಾರಣ ಇನ್ನು ನಿಗೂಢ. ಅದು ಕೂಡ ಹೆಚ್ಚೇನು ದಿನ ಅಲ್ಲ. ಮತ್ತೆ ಫಿನಿಕ್ಸ್ ನಂತೆ ಮತ್ತೆ ಎದ್ದು ಕುಳಿತರು. ಸಣ್ಣ ಗ್ಯಾಪ್ ಅವರ ಅನುಪಸ್ಥಿತಿಯನ್ನೇ ಮರೆಸಿ‌ಬಿಟ್ಟಿತು. ಅಯೋಗ್ಯ ಸೂಪರ್ ಹಿಟ್ ಆಯಿತು. ಕೈ ತುಂಬಾ ಅವಕಾಶ ಸಿಕ್ಕವು. ಅತ್ತ ಕಿರುತೆರೆ ಯಲ್ಲೂ‌ಬ್ಯುಸಿಯಾದರು. ಈಗ ಏನಿಲ್ಲ ಅಂದ್ರು ಹತ್ತು ಸಿನಿಮಾಗಳಿಗೆ ಅವರು ನಾಯಕಿ.‌ ಎರಡು ವರ್ಷ ಫುಲ್ ಬ್ಯುಸಿ.

ಇಷ್ಟು ಬ್ಯುಸಿ ಇರುವ ಕನ್ನಡದ ನಟಿ‌ಮತ್ತೊಬ್ಬರಿಲ್ಲ. ಹಾಗಾದ್ರೆ ರಚಿತಾ ಅವರ ಸಕ್ಸಸ್ ಫುಲ್ ಜರ್ನಿಯ ರಹಸ್ಯವೇನು? ಸಿನಿಮಾಗಳ ಆಯ್ಕೆ. ಅನಗತ್ಯ ವಿವಾದಗಳಿಗೆ ಸಿಲುಕದಿರುವುದು. ಹಾಗೆ ನೋಡಿದರೆ ರಚಿತಾ ರಾಮ್ ತುಂಬಾ ಟ್ಯಾಲೆಂಟೆಡ್ ನಟಿ. ಯಾವುದು ಹೇಗೆ ವರ್ಕ್ ಆಗುತ್ತೆ, ಯಾವ ಪಾತ್ರ ಜನ‌ಮೆಚ್ಚುಗೆ ಪಡೆಯುತ್ತೆ, ಯಾವ ಸ್ಟಾರ್ ಜತೆಗೆ ನಟಿಸಿದರೆ ಇಮೇಜ್ ಹೆಚ್ಚಾಗುತ್ತೆ ಎನ್ನುವ ಲೆಕ್ಕಾಚಾರ ಹಾಕಿಕೊಂಡೆ ಸಿನಿಮಾ ಒಪ್ಪಿಕೊಳ್ಳುತ್ತಾರೆ. ಜತೆಗೆ ಯಾವ ವಿಷಯಕ್ಕೆ ಎಷ್ಟು ತಲೆ‌ಕಡಿಸಿಕೊಳ್ಳಬೇಕು ಎನ್ನುವ ಬುದ್ದಿಮತ್ತೆ ಕೂಡ ಅವರಿಗಿದೆ. ಹಾಗಾಗಿಯೇ ರಚಿತಾ ರಾಮ್ ಎಂಬ ಗುಳಿಕೆನ್ನೆ ಚೆಲುವೆ ಈಗ ನಟನೆ ಎಂಬ ಕಲಾ‌ ಕ್ರೀಡಾಂಗಣದಲ್ಲಿ ನಾಗಲೋಟದಲ್ಲಿದ್ದಾರೆ. ಅದಿರಲಿ, ಕನ್ನಡದ ನಂಬರ್ ಪಟ್ಟದ ಮೇಲೆ ಡಿಂಪಲ್ ಕ್ವೀನ್  ಪವಡಿಸಿರುವುದರ ಹಿಂದಿನ ಇನ್ನೊಂದು ಸತ್ಯ ಈಗ ಅವರಿಂದಲೇ ರಿವೀಲ್ ಆಗಿದೆ.

 “ನನ್ನ ಬಳಿಯೊಂದು ವೈಟ್ ವ್ಯಾನಿಟಿ ಬ್ಯಾಗ್‌ಇದೆ. ಅದನ್ನು ನನ್ನ ಬಳಿ ಬಂದ‌ ಮೇಲೆ ನಿಜಕ್ಕೂ ಒಳ್ಳೆಯದೆ ಆಗಿದೆ. ಸಾಕಷ್ಟು ಅವಕಾಶಗಳು ಬಂದಿವೆ. ಒಂದಷ್ಟು ಸಂಪಾದನೆಯೂ ಆಗಿದೆ. ಲಕ್ ಅಂತಾರಲ್ಲ ಹಾಗೆ ನನ್ನ ಪಾಲಿಗೆ ಆ ವ್ಯಾನಿಟಿ ಬ್ಯಾಗ್”

ಎನ್ನುವ ಮೂಲಕ‌‌ ತಮ್ಮ ಸಕ್ಸಸ್ ಫುಲ್ ಜರ್ನಿಯ ಹಿಂದಿನ ರಹಸ್ಯ ವನ್ನು ಕಲರ್ಸ್ ಕನ್ನಡದ ಮಜಾ‌ಭಾರತ ವೇದಿಕೆಯಲ್ಲಿ ಬಿಚ್ಚಿಟ್ಟಿದ್ದಾರೆ ರಚಿತಾ ರಾಮ್. ಅವರಿಗೆ ಮತ್ತಷ್ಟು ಅವಕಾಶ ಸಿಗಲಿ. ಡಿಂಪಲ್ ಕ್ವೀನ್ ಎಂಬ ಖ್ಯಾತಿಯ ಜತೆಗೆ ಸ್ಯಾಂಡಲ್ ವುಡ್ ಕ್ವೀನ್ ಎನ್ನುವ ಪಟ್ಟವೂ ಸಿಗಲಿ ಎನ್ನುವುದು  ‘ಸಿನಿ‌ಲಹರಿ‌’  ಹಾರೈಕೆ.

Categories
ಸಿನಿ ಸುದ್ದಿ

ರಾಜಕೀಯದ ಜತೆಗೆ ಚಿತ್ರರಂಗಕ್ಕೂ ಕಾಲಿಟ್ಟ ಕರ್ನಾಟಕದ ಸಿಂಗಂ!

( exclusive cinilahari)

ಅರಬ್ಬಿ ಚಿತ್ರಕ್ಕಾಗಿ ಬಣ್ಣ ಹಚ್ಚಿದ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ

ಕರ್ನಾಟಕದ ಸಿಂಗಂ ಎಂದೇ ಖ್ಯಾತಿ ಪಡೆದಿದ್ದ ಮಾಜಿ‌ ಐಪಿಎಸ್ ಅಧಿಕಾರಿ ಅಣ್ಣಾಮಲೈ , ಮೊನ್ನೆ ಮೊನ್ನೆಯಷ್ಠೇ ರಾಜಕೀಯ ಅಖಾಡಕ್ಕೆ ಪ್ರವೇಶಿಸಿದರು‌. ಪ್ರಧಾನಿ‌ ಮೋದಿ ಅವರ ಕಾರ್ಯವೈಖರಿಗೆ ಪ್ರಭಾವಿತರಾಗಿದ್ದ ಅವರು, ಬಿಜೆಪಿಗೆ ಅಧಿಕೃತ ವಾಗಿ ಸೇರ್ಪಡೆಗೊಂಡಿದ್ದು ನಿಮಗೂ ಗೊತ್ತು. ಇದೀಗ ಅವರ ಮತ್ತೊಂದು ಸಂಗತಿ ರಿವೀಲ್ ಆಗಿದೆ. ರಾಜಕೀಯ ರಂಗ ಪ್ರವೇಶಿಸಿದ ಬೆನ್ನಲೇ ನಟರಾಗಿ ಈಗ ಸಿನಿಮಾ ರಂಗಕ್ಕೂ ಎಂಟ್ರಿಯಾಗುತ್ತಿದ್ದಾರೆ. ರಾಜಕೀಯಕ್ಕೆ ತಮ್ನ ಸ್ವಂತ ಊರು ತಮಿಳುನಾಡನ್ನೇ ಕರ್ಮಭೂಮಿಯನ್ನಾಗಿ ಸ್ವೀಕರಿಸಿರುವ ಅವರು, ಬಣ್ಣದ ಬದುಕನ್ನು ಕರ್ನಾಟಕದಿಂದ ಆರಂಭಿಸುತ್ತಿದ್ದಾರೆ‌. ರಾಜು ಪಾವಗಡ ನಿರ್ದೇಶನದ’ ಅರಬ್ಬಿ’ ಹೆಸರಿನ ಚಿತ್ರಕ್ಕಾಗಿ ಅವರು ಇದೇ ಮೊದಲು ನಟರಾಗಿ ಬಣ್ಣ ಹಚ್ಚಿದ್ದಾರೆ‌.

ಅಷ್ಟೇ ಅಲ್ಲ, ಎರಡು ದಿನಗಳ ಕಾಲ ಬೆಂಗಳೂರು ಹಾಗೂ ರಾಮನಗರ ಸಮೀಪದ ಜಾನಪದ ಲೋಕದಲ್ಲಿ ನಡೆದ ಚಿತ್ರೀಕರಣದಲ್ಲೂ ಭಾಗವಹಿಸಿದ್ದಾರೆ. ಇದನ್ನು ಚಿತ್ರ ತಂಡವೇ ಅಧಿಕೃತವಾಗಿ ಹೇಳಿಕೊಂಡಿದೆ‌. ಸದ್ಯಕ್ಕೆ ಭಾರೀ ಸುದ್ದಿಯಲ್ಲಿರುವ ಅಣ್ಣಾಮಲೈ ಅವರನ್ನು ‘ಅರಬ್ಬಿ ಚಿತ್ರ ತಂಡ’ ಇದೇ ಮೊದಲು, ಸಿನಿಮಾಕ್ಕೆ ಕರೆ ತಂದಿರು ವುದೇ ಕುತೂಹಲ ಕಾರಿಯಾದ ಸಂಗತಿ. ಅ ಬಗ್ಗೆ ಅತೀವ ಸಂತಸದಲ್ಲಿರುವ ನಿರ್ದೇಶಕ ರಾಜು ಪಾವಗಡ, ಕರ್ನಾಟಕದ ಸಿಂಗಂ ಅಣ್ಣಾಮಲೈ ಅವರನ್ನು ಚಿತ್ರಕ್ಕೆ ಕರೆತಂದಿದ್ದು ಹೇಗೆ, ಯಾವ ರೀತಿಯ ಪಾತ್ರಕ್ಕೆ ಅಣ್ಣಾಮಲೈ ಅವರು ಬಣ್ಣ ಹಚ್ಚಿದ್ದಾರೆ, ಅವರನ್ನೇ ಯಾಕೆ ಚಿತ್ರ ತಂಡ ಆಯ್ಕೆ ಮಾಡಿಕೊಂಡಿತು ಎನ್ನುವ ಬಗ್ಗೆ ಚಿತ್ರದ ನಿರ್ದೇಶಕ ರಾಜು ಪಾವಗಡ ಉತ್ತರಿಸಿದ್ದಾರೆ.

‘ ನಮ್ಮ ಪಾಲಿಗೆ ಇದೊಂದು ಹೆಮ್ಮೆಯ ಸಂಗತಿ. ಅವರು ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಎಂಟ್ರಿಯಾದ ನಂತರ ಸಿನಿಮಾ‌, ಗಿನಿಮಾ ಅಂತ ಬರುತ್ತಾರೋ ಇಲ್ಲವೋ ಅಂತ ಅನುಮಾನ ಇತ್ತು‌. ಆದರೆ ಅವರನ್ನು ಸಂಪರ್ಕಿಸಿ, ನಮ್ಮ ಚಿತ್ರದಲ್ಲಿನ ವಿಶೇಷ ಪಾತ್ರದಲ್ಲಿ ಅಭಿನಯಿಸಬೇಕು ಅಂತ ಕೇಳಿಕೊಂಡಾಗ ಆಯ್ತು ನೋಡೋಣ ಅಂದಿದ್ದರು. ಆದರೂ ಅನುಮಾನ ಇತ್ತು. ಕೊನೆಗೂ ಅವರು ನಮ್ಮ ಮನವಿಗೆ ಮನ್ನಣೆ ನೀಡಿ,
ಚಿತ್ರೀಕರಣಕ್ಕೆ ಬಂದರು‌. ಎರಡು ದಿವಸ ಚಿತ್ರೀಕರಣದಲ್ಲಿ ಭಾಗವಹಿಸಿದರು. ಬೆಂಗಳೂರು ಹಾಗೂ ರಾಮನಗರದ ಜಾನಪದ ಲೋಕದಲ್ಲಿ‌ಚಿತ್ರೀಕರಣ ನಡೆಯಿತು‌.‌ ಚಿತ್ರೀಕರಣಕ್ಕೆ ಅವರು‌ ತುಂಬಾ ಸಪೋರ್ಟ್ ಮಾಡಿದರು’ ಎನ್ನುತ್ತಾರೆ ನಿರ್ದೇಶಕ ರಾಜು ಪಾವಗಡ. ಇನ್ನು‌ ಕುತೂಹಲ ಇರೋದು ಅಣ್ಣಾಮಲೈ ಅವರ ಪಾತ್ರ.


ಅಂತಾರಾಷ್ಟ್ರೀಯ ಈಜು ಪಟು ವಿಶ್ವಾಸ್ ಅವರ ಜೀವನ ಕುರಿತ ಚಿತ್ರವೇ ‘ಅರಬ್ಬಿ’.ಈ‌ ಚಿತ್ರದಲ್ಲಿ ವಿಶ್ವಾಸ್ ಕೋಚ್ ಆಗಿ ಅಣ್ಣಾಮಲೈ ಕಾಣಿಸಿಕೊಳ್ಳುತ್ತಿದ್ದಾರೆ‌. ಚಿತ್ರೀಕರಣದ ಸಮಯದಲ್ಲಿ ಅವರೊಂದಿಗೆ ತಮಿಳು ಚಿತ್ರ ನಿರ್ದೇಶಕ ಡೆಸಿಂಗ್ ಪೆರಿಯ ಸ್ವಾಮಿ ಭಾಗವಹಿಸಿದ್ದರು.

Categories
ಸಿನಿ ಸುದ್ದಿ

ಸೋತು ಗೆದ್ದ ಸುಂದರಿ ಹರಿಪ್ರಿಯಾ!

ಆ ಒಂದು ಗೆಲುವು, ಕುಮುದಾ ಮುಖದಲ್ಲಿ ನಗುವು! 

 

ಹರಿಪ್ರಿಯಾ ಎಂಬ ಸೋತು ಗೆದ್ದ ಸುಂದರಿಯ ರೋಚಕ ಕತೆ ಹೀಗಿದೆ ಇಲ್ಲಿದೆ.

ನಟ-ನಟಿಯರ ಪಾಲಿಗೆ ಅವರ ನಟನೆಯ ಭವಿಷ್ಯ ನಿರ್ಧಾರ ಆಗೋದು ‘ ಸಕ್ಸಸ್’ ಎಂಬ ಮೂರಕ್ಷರದ ಮೇಲೆ. ಸಕ್ಸಸ್ ಎನ್ನುವುದಕ್ಕೆ ಇಲ್ಲಿ ಅಷ್ಟೊಂದು ಮಹತ್ವ ಇದೆ. ಇಲ್ಲಿ ಗೆದ್ದವರು ಎದ್ದರು, ಸೋತವರು ಬಿದ್ದರು ಅಂತಲೇ. ಹಾಗಿದ್ದಾಗ್ಯೂ , ಇಲ್ಲಿ ಸೋತು ಗೆದ್ದವರದ್ದೂ ದೊಡ್ಡ ಸಂಖ್ಯೆ. ಆ ಸಾಲಿನಲ್ಲಿ ಹೇಳಬಹುದಾದ ಹೆಸರು ಬಹುಭಾಷೆ ನಟಿ ಹರಿಪ್ರಿಯಾ ಅವರದು.

ಫಿನಿಕ್ಸ್ ನಂತೆ ಮೇಲೆದ್ದ ನಟಿ

ಮೋಹಕ‌ನಟಿ ಹರಿಪ್ರಿಯಾ ಈಗಲೂ ಬಹುಬೇಡಿಕೆಯ ನಟಿ. ಈಗಲೂ ಅವರ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಅವರ ಜತೆಗೆಯೇ ನಟಿಯರಾಗಿ ಸಿನಿಮಾ ಇಂಡಸ್ಟ್ರಿಗೆ ಬಂದ ಅನೇಕರು ಇಲ್ಲಿಲ್ಲ‌. ಬಹಳಷ್ಟು ನಟಿಯರು ಉದ್ಯಮ ಬಿಟ್ಟು ಮನೆ ಸೇರಿಕೊಂಡಿದ್ದಾರೆ. ಕೆಲವರು ಪೋಷಕ ಪಾತ್ರಗಳಿಗೆ ಬಣ್ಣ ಹಚ್ಚುತ್ತಿದ್ದಾರೆ. ಮತ್ತೆ ಕೆಲವರು ಮದುವೆಯಾಗಿ ಸಂಸಾರಿಕ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಹರಿಪ್ರಿಯಾ ಮಾತ್ರ, ಸೋಲು- ಗೆಲುವಿನ ಎರಿಳಿತಗಳ ನಡುವೆ ಫೀನಿಕ್ಸ್ ನಂತೆ ಮೇಲೆದ್ದು , ಈಗಲೂ ಬೇಡಿಕೆ ಉಳಿಸಿಕೊಂಡಿರುವುದು ಅವರ ಸಿನಿ ಜರ್ನಿಯ ಹೆಗ್ಗಳಿಕೆ‌.

ಸೋತು ಗೆದ್ದ ಸುಂದರಿ

ಬರೀ ಗೆದ್ದು ಬೀಗುವುದಕ್ಕಿಂತ ಸೋತು ಗೆಲ್ಲುವುದರಲ್ಲೂ ಥ್ರಿಲ್ ಇದೆ. ಅಂತಹ ಥ್ರಿಲ್ ಕಂಡವರು ಹರಿಪ್ರಿಯಾ‌‌ . ಒಂದಷ್ಟು ಸಿನಿಮಾಗಳ ಸೋಲು, ಆನಂತರ ಪರಭಾಷೆಗಳ ಸುತ್ತಾಟ ಅಂತ ಅಲೆದು ಬೇಸತ್ತಿದ್ದ ಹರಿಪ್ರಿಯಾ ಅವರಿಗೆ ‘ಉಗ್ರಂ’ ಚಿತ್ರದ ಗೆಲುವು ,ಒಯಸಿಸ್ ನಲ್ಲಿ ಸರೋವರವೇ ಕಂಡಂಷ್ಟು ಖುಷಿ ಕೊಟ್ಟಿತು. ಸ್ಯಾಂಡಲ್ ವುಡ್ ನಲ್ಲಿ ಸೆಕೆಂಡ್ ಇನ್ನಿಂಗ್ಸ್ ಭರ್ಜರಿಯಾಗಿ ಶುರು ಮಾಡಲು ಕಾರಣವಾಯಿತು. ಅದು ಸೋತ ಗೆದ್ದ ಥ್ರಿಲ್. ಆ ಗೆಲುವು ಕಂಡ ಮರು ದಿನ ಹರಿಪ್ರಿಯಾ ಮುಖ, ದುಂಡು ಮಲ್ಲಿಗೆಯಂತೆ ಅರಳಿತ್ತು. ಅದು ಸಕ್ಸಸ್ ನ ನಗು.

 

ಎಲ್ಲಾ ಪಾತ್ರಕ್ಕೂ ಸೈ ಅಂದ ನಟಿ

ಕನ್ನಡದ ಮಟ್ಟಿಗೆ ಹರಿಪ್ರಿಯಾ ಎಲ್ಲ ನಟಿಯರ ಹಾಗಲ್ಲ.‌ ನಿಜಕ್ಕೂ ಡೆಫೆರೆಂಟ್. ಯಾಕಂದ್ರೆ ಬೋಲ್ಡ್, ಗ್ಲಾಮರ್, ಡಿ ಗ್ಲಾಮರ್ ..ಹೀಗೆ ಯಾವುದೇ ತರಹದ ಪಾತ್ರ ಸಿಕ್ಕರೂ ಅದರಲ್ಲಿ‌ ಬಿಂದಾಸ್ ಆಗಿ ಅಭಿನಯಿಸುವ ಅಭಿನಯ ಶಾರದೆ‌. ‘ಅಭಿನಯ ಶಾರದೆ’ ಎನ್ನುವ ಮಾತು‌ ಕೊಂಚ ಬಾರವಾದರೂ, ಈಗಿನ ನಟಿಯರ ಮಟ್ಟಿಗೆ ಅದಕ್ಕೆ ಹೊಂದಿಕೆ ಆಗಬಲ್ಲ ನಟಿಯಂತೂ ಹೌದು. ನಟನೆ ಎಂಬ ಎನ್ನುವ ಕಲಾ ಸರಸ್ವತಿಯನ್ನು ವಿವಾದಗಳಿಲ್ಲದೆ ಶ್ರದ್ದೆ, ಭಕ್ತಿ ಮತ್ತು ತಾಳ್ಮೆಯಲ್ಲಿ‌ ಸಮರ್ಥವಾಗಿ ದುಡಿಸಿಕೊಂಡ ನಟಿ. ಹರಿಪ್ರಿಯಾ ಅವರ ಸಿನಿಜರ್ನಿಯನ್ನು ಆರಂಭದಿಂದ ಇಲ್ಲಿವರೆಗೂ ಸೂಕ್ಷ್ಮವಾಗಿ ನೋಡಿದರೆ ಇದು ಅರ್ಥವಾಗಲು ಸಾಧ್ಯ.

ಮೂರು ಘಟ್ಟದ ಆ‌ ಹದಿನಾಲ್ಕು ವರ್ಷ

ಹರಿಪ್ರಿಯಾ ನಟಿಯಾಗಿ ಚಿತ್ರರಂಗಕ್ಕೆ ಬಂದು ಇಲ್ಲಿಗೆ ಸರಿ ಸುಮಾರು 14 ವರ್ಷ. ಇಷ್ಟು ವರ್ಷಗಳಲ್ಲಿ ಅವರ ಸಿನಿ ಜರ್ನಿ ಮೂರು ಘಟ್ಟಗಳಲ್ಲಿ ರೂಪಾಂತರಗೊಂಡಿದೆ. ಅಂದ್ರೆ ಅವರು ನಟಿಯಾಗಿ ಪಕ್ವಗೊಂಡ‌ ಪರಿ ಅದು‌. 2007 ರಿಂದ 2014ರವರೆಗೆ ಒಂದು‌ ಜರ್ನಿ. ಆದಾದ ನಂತರ 2014 ರಿಂದ 2016 ರ ವರೆಗೆ ಮತ್ತೊಂದು ಪಯಣ. ಅದು ದಾಟಿ 2017 ರಿಂದ ಶುರುವಾದ ಇನ್ನೊಂದು ರೂಪಾಂತರ. ‌ಇಷ್ಟು ವರ್ಷಗಳ ಪಯಣದಲ್ಲಿ ಗೆದ್ದು ಬೀಗಿದ್ದಕ್ಕಿಂತ ಸೋತು ಗೆದ್ದಿದ್ದೇ ಹೆಚ್ಚು.

ಎಲ್ಲಿಯಾ ತುಳು ಭಾಷೆ, ಇನ್ನೆಲ್ಲಿಯಾ ಹರಿಪ್ರಿಯಾ

ಎಲ್ಲಿಯಾ ತುಳು ಭಾಷೆ, ಇನ್ನೆಲ್ಲಿಯಾ ಹರಿಪ್ರಿಯಾ? ತುಳು ಭಾಷೆಯೇ ಗೊತ್ತಿಲ್ಲದ ಗಡಿ ಜಿಲ್ಲೆಯ ಹರಿಪ್ರಿಯಾ ನಟಿಯಾಗಿ ಮೊದಲು ಬಣ್ಣ ಹಚ್ಚಿದ್ದು’ ಬದಿ’ ಹೆಸರಿನ ಒಂದು ತುಳು ಚಿತ್ರಕ್ಕೆ. ಅಲ್ಲಿಂದ ಗಾಂಧಿನಗರಕ್ಕೆ ಬಂದಿದ್ದು
‘ಮನಸುಗಳ ಮಾತು‌ ಮಧುರ’ ಚಿತ್ರದೊಂದಿಗೆ. ಆ ಹೊತ್ತಿಗೆ ಹರಿಪ್ರಿಯಾ ಯಾವುದರಲ್ಲೂ ಕಮ್ಮಿ ಇರಲಿಲ್ಲ‌. ಆದರೂ‌ ಮುಂದೆ ಸಕ್ಸಸ್ ಕಾಣದೆ ಕಂಗಾಲಾದರು. ಅವಕಾಶಗಳ ಬೆನ್ನು ಬಿದ್ದು ಕನ್ನಡದ ಗಡಿ ದಾಟಿದರು. ಪರಭಾಷೆಗೆ ಹೋದರೆನ್ನುವುದೇನೋ‌ ಸರಿ, ಅಲ್ಲೂನೆಲೆ‌ ಸಿಗದೆ ಪರದಾಡಿದರು‌. ಕೊನೆಗೆ ಅವರಿಗೆ ವರವಾಗಿ‌‌ ಸಿಕ್ಕಿದ್ದು ‘ ಉಗ್ರಂ’ ಚಿತ್ರ.ಆವೊಂದು ಚಿತ್ರದ ಗೆಲುವು ಅವರನ್ನು‌ಹತ್ತಾರು ಪ್ರಯೋಗಳಿಗೆ ಒಡ್ಡಿಕೊಳ್ಳಲು ಪ್ರೇರೆಪಿಸಿತು‌.

ಹಾಗಾಗಿಯೇ ರನ್ನ, ರಿಚ್ಚಿ, ನೀರ್ ದೋಸೆ, ಡಾಟರ್ ಆಫ್ ಪಾರ್ವತಮ್ಮ, ಭರ್ಜರಿ, ಬೆಲ್ ಬಾಟಮ್, ಕುರುಕ್ಷೇತ್ರ,
ಕನ್ನಡ್ ಗೊತ್ತಿಲ್ಲ, ಬಿಚ್ಚುಗತ್ತಿ ದಂತಹ ಚಿತ್ರಗಳಲ್ಲಿನ ವಿಭಿನ್ನ ಪಾತ್ರಗಳಲ್ಲಿ ತಮ್ಮನ್ನು ತಾವು ನಟಿಯಾಗಿ ಗುರುತಿಸಿಕೊಳ್ಳಲು ಸಾಧ್ಯವಾಯಿತು ಎನ್ನುವ ಮಾತನ್ನು ಹರಿಪ್ರಿಯಾ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.ಸದ್ಯಕ್ಕೀಗ‌ ವಿಜಯ್ ಪ್ರಸಾದ್ ‌ನಿರ್ದೇಶನದ ಪೆಟ್ರೋಮ್ಯಾಕ್ಸ್, ಎವರು ರಿಮೇಕ್ ಚಿತ್ರಗಳ ಜತೆಗೆ‌ ಮೂರ್ನಾಲ್ಕು‌ ಚಿತ್ರಗಳಲ್ಲಿ ಬ್ಯುಸಿ ಇದ್ದಾರೆ.‌ನಟನೆಯ‌ ನಡುವೆಯೇ ಬ್ಲಾಗ್ ಬರವಣಿಗೆಯಲ್ಲಿ ಸಕ್ರಿಯವಾಗಿರುವುದು ವಿಶೇಷ.

error: Content is protected !!