Categories
ಸಿನಿ ಸುದ್ದಿ

‘ಮುಂಬಯಿ ಸಾಗಾ’ ಟ್ರೇಲರ್ ಔಟ್; ಭೂಗತ ಪಾತಕಿ ಜಾನ್, ಪೊಲೀಸ್ ಅಧಿಕಾರಿ ಹಶ್ಮಿ

ಸಂಜಯ್ ಗುಪ್ತಾ ನಿರ್ದೇಶನದ ‘ಮುಂಬಯಿ ಸಾಗಾ’ ಕ್ರೈಂ-ಥ್ರಿಲ್ಲರ್ ಹಿಂದಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. 80, 90ರ ದಶಕದ ಸಂದರ್ಭವನ್ನು ಸೃಷ್ಟಿಸಿ ಕತೆ ಹೇಳಿದ್ದಾರೆ. ಜಾನ್ ಅಬ್ರಹಾಂ ಭೂಗತ ಪಾತಕಿ ‘ಅಮರ್ತ್ಯ ರಾವ್‌’ ಪಾತ್ರದಲ್ಲಿದ್ದು, ಮುಂಬಯಿ ಆಳುವುದು ಆತನ ಉದ್ದೇಶ. ಇದಕ್ಕೆ ತಡೆಗೋಡೆಯಾಗಿ ನಿಂತ ಖಡಕ್ ಪೊಲೀಸ್ ಅಧಿಕಾರಿಯಾಗಿ ಇಮ್ರಾನ್ ಹಶ್ಮಿ ನಟಿಸಿದ್ದಾರೆ. ಜಾಕಿ ಶ್ರಾಫ್‌, ಸುನೀಲ್ ಶೆಟ್ಟಿ, ಅಮೋಲ್ ಗುಪ್ತೆ, ಪ್ರತೀಕ್ ಬಬ್ಬರ್, ಗುಲ್ಶನ್ ಗ್ರೋವರ್‌, ರೋಹಿತ್ ರಾಯ್ ಇತರೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಭರಪೂರ ಆಕ್ಷನ್ ಇದ್ದು ಇದೊಂದು ಸಾಹಸಪ್ರಧಾನ ಕ್ರೈಂ-ಥ್ರಿಲ್ಲರ್ ಎನ್ನುವುದನ್ನು ಟ್ರೈಲರ್ ಹೇಳುತ್ತದೆ. ಈ ಮೊದಲು ಬಿಡುಗಡೆಯಾಗಿದ್ದ ಟೀಸರ್‌ನಲ್ಲಿ ಜಾನ್ ಅಬ್ರಹಾಂ ಪಾತ್ರವನ್ನು, ‘ಬಾಂಬೆ ರಸ್ತೆಗಳಲ್ಲಿ ಬೆಳೆದವನು ಮುಂಬಯಿ ಆಳಲು ಹೊರಟಿದ್ದಾನೆ’ ಎನ್ನುವ ಒಕ್ಕಣಿ ಇತ್ತು. ಈ ಚಿತ್ರದ ನಿರ್ದೇಶಕ ಸಂಜಯ್ ಗುಪ್ತಾ ‘ಶೂಟ್‌ಔಟ್ ಅಟ್‌ ಲೋಖಂಡ್‌ವಾಲಾ’, ಜಝ್ಬಾ, ಕಾಬಿಲ್‌, ಮುಸಾಫಿರ್‌, ಜಿಂದಾ… ಹಿಂದಿ ಚಿತ್ರಗಳ ಮೂಲಕ ಜನರಿಗೆ ಪರಿಚಿತರು. ಹಾಗೆ ನೋಡಿದರೆ ಕಳೆದ ವರ್ಷ ಜೂನ್‌ನಲ್ಲೇ ಈ ಸಿನಿಮಾ ತೆರೆಕಾಣಬೇಕಿತ್ತು. ಕೋವಿಡ್ ಕಾರಣದಿಂದ ಬಿಡುಗಡೆ ಮುಂದಕ್ಕೆ ಹೋಯ್ತು. ಕೊನೆನೆ ಓಟಿಟಿಯಲ್ಲಿ ಬಿಡುಗಡೆ ಮಾಡಲು ಯೋಚಿಸಿದ್ದ ನಿರ್ಮಾಪಕರು ಈಗ ಥಿಯೇಟರ್‌ನಲ್ಲೇ ಮಾರ್ಚ್‌ 19ರಂದು ರಿಲೀಸ್ ಮಾಡಲಿದ್ದಾರೆ.

Categories
ಸಿನಿ ಸುದ್ದಿ

ಸಿನಿಮಾ ಸಾಹಿತ್ಯದತ್ತ ಶಿವಕುಮಾರ ಮಾವಲಿ, ವೈರಲ್‌ ಆಗುತ್ತಿದೆ ಮುತ್ತುರಾಜನ ಹಾಡು !

ಯುವ ಬರಹಗಾರ ಶಿವಕುಮಾರ ಮಾವಲಿ ಸಿನಿಮಾ ಸಾಹಿತ್ಯದತ್ತ ಹೆಚ್ಚು ಒಲವು ತೋರಿದ್ದಾರೆ. “ಅವ್ಯಕ್ತʼ ಚಿತ್ರಕ್ಕೆ ಕಥೆ, ಸಂಭಾಷಣೆ ಜತೆಗೆ ಸಾಹಿತ್ಯ ಬರೆದ ನಂತರವೀಗ ʼಮುತ್ತುರಾಜʼ ಹೆಸರಿನ ಕಿರುಚಿತ್ರವೊಂದಕ್ಕೆ ಸೊಗಸಾದ ಸಾಹಿತ್ಯ ಬರೆದಿದ್ದು, ಅದೀಗ ಯುಟ್ಯೂಬ್‌ ನಲ್ಲಿ ರಿಲೀಸ್‌ ಆಗಿ ಸಕತ್‌ ಸುದ್ದಿ ಮಾಡುತ್ತಿದೆ. ಸುಮಾರು ೨೦ ನಿಮಿಷಗಳ ಅವದಿಯ ಈ ಕಿರುಚಿತ್ರ ʼಮುತ್ತುರಾಜʼ ಹೆಸರಿನ ಒಬ್ಬ ವ್ಯಕ್ತಿಯ ಸುತ್ತ ನಡೆಯುವ ಕಥೆ ಹೊಂದಿದೆ. ” ಯಾವ ದೂರವೂ ದೂರವಲ್ಲ, ಸನಿಹ ಇರದ ಸಲುಗೆ ಬಲು ದೂರ ʼ ಎನ್ನುವ ತಿರುಳ ಮೇಲೆ ಸಾಗುವ ಕಥಾ ಹಂದರ ಹೊಂದಿದ್ದು, ಮನುಷ್ಯ ಸಂಬಂಧಗಳ ಮೇಲೆ ಬೆಳಕು ಚೆಲ್ಲುತ್ತದೆ.

ಕತೆಯ ಇದೇ ಸಾರಕ್ಕೆ ತಕ್ಕಂತೆ ಬರಹಗಾರ ಶಿವಕುಮಾರ ಮಾವಲಿ ಬರೆದ ” ಕಳೆದ ಹೋದ ನಿನ್ನೆಯನು..ʼ. ಎನ್ನುವ ಗೀತೆ ರೆಟ್ರೋ ಶೈಲಿಯಲ್ಲಿ ಮೂಡಿ ಬಂದರೂ, ಎಲ್ಲರೊಳಗೂ ಮನುಷ್ಯ ಸಂಬಂಧಗಳ ಭಾವಗಳನ್ನು ಮೀಟುತ್ತಾ ಹೋಗುವುದೇ ವಿಶೇಷ. ಸದ್ಯ ಬೆಂಗೂರಿನ ಕಾಲೇಜ್‌ವೊಂದರಲ್ಲಿ ಸಿನಿಮಾ ಮೇಕಿಂಗ್‌ ಕೋರ್ಸ್‌ ಅಭ್ಯಾಸ ಮಾಡುತ್ತಿರುವ ಶಕ್ತಿ ಪ್ರಸಾದ್‌ ಎಂಬ ಯುವ ಪ್ರತಿಭೆ ” ಮುತ್ತುರಾಜʼ ಕಿರುಚಿತ್ರದ ನಿರ್ದೇಶಕ. ಹಾಗೆಯೇ ಅವರಂತೆಯೇ ಸಿನಿಮಾ ಮೇಕಿಂಗ್‌ ಮೇಲೆ ಅಸಕ್ತಿ ಹೊಂದಿದ ಒಂದಷ್ಟು ಯುವಕರೂ ಕೂಡ ಈ ಕಿರುಚಿತ್ರ ನಿರ್ಮಾಣದಲ್ಲಿ ಸಾಥ್‌ ನೀಡಿದ್ದಾರೆ. ಪಾಪರ್‌ ಫಿಲಂಸ್‌ ಮೂಲಕ ಈ ಕಿರುಚಿತ್ರ ನಿರ್ಮಾಣಗೊಂಡಿದೆ. ಈ ಕಿರುಚಿತ್ರದ ತಾರಾಗಣದಲ್ಲೂ ಹೊಸ ಪ್ರತಿಭೆಗಳೆ ವಿವಿಧ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಚಾಮರಾಜ ನಗರ ಸುತ್ತ ಮುತ್ತ ಕಿರುಚಿತ್ರ ಚಿತ್ರೀಕರಣಗೊಂಡಿದೆ.

ಸಾಹಿತ್ಯ ರಚನೆಯ ಮೂಲಕ ಈ ಹೊಸ ಪ್ರತಿಭೆಗಳಿಗೆ ಬೆಂಬಲವಾಗಿ ನಿಂತಿರುವ ಯುವ ಬರಹಗಾರ ಶಿವಕುಮಾರ ಮಾವಲಿ, ಆ ಮೂಲಕ ಸಿನಿಮಾ ಸಾಹಿತ್ಯಕ್ಕೆ ಒಲವು ತೋರಿರುವುದು ಇನ್ನೊಂದು ವಿಶೇಷ. ಕನ್ನಡದ ಹೊಸ ತಲೆಮಾರಿನ ಯುವ ಬರಹಗಾರರಲ್ಲಿ ಶಿವಕುಮಾರ್‌ ಮಾವಲಿ ಅವರದ್ದು ಮುಂಚೂಣಿಯ ಹೆಸರು. ವೃತ್ತಿಯಲ್ಲಿ ಇಂಗ್ಲಿಷ್‌ ಉಪನ್ಯಾಸಕರಾದರೂ, ಕನ್ನಡ ಸಾಹಿತ್ಯದಲ್ಲಿ ಹೆಚ್ಚು ಆಸಕ್ತಿ ಇಟ್ಟುಕೊಂಡವರು ಶಿವಕುಮಾರ ಮಾವಲಿ. ಹಾಗೆಯೇ ರಂಗಭೂಮಿಯಲ್ಲೂ ಅಪಾರ ಆಸಕ್ತಿ ಹೊಂದಿದ್ದು, ಈಗಾಗಲೇ “ದೇವರು ಅರೆಸ್ಟ್ ಆದʼ, “ಟೈಪಿಸ್ಟ್ ತಿರಸ್ಕರಿಸಿದ ಕಥೆʼ, “ಸುಪಾರಿ ಕಿಲ್ಲರ್” ಎಂಬ ಪುಸ್ತಕಗಳಿಂದ ಕಥೆಗಾರರಾಗಿಯೂ ವಿಶೇಷವಾಗಿ ಗುರುತಿಸಿಕೊಂಡಿದ್ದಾರೆ.

ಯಟ್ಯೂಬ್ ನಲ್ಲಿ ಭಾನುವಾರವಷ್ಟೇ ರಿಲೀಸ್ ಆಗಿರುವ ” ಕಳೆದು ಹೋದ ನಿನ್ನೆಯನು ..ಈ ವೀಡಿಯೋ ಸಾಂಗ್ ಅರ್ಥಗರ್ಭೀತ ಸಾಹಿತ್ಯದ ಜತೆಗೆ ಅದರ ಚಿತ್ರೀಕರಣವೂ ವಿಶೇಷವಾಗಿದ್ದು ,ಮೂರು ನಿಮಿಷದ ಈ ಹಾಡಿನಲ್ಲಿ‌ ಪ್ರತಿಯೊಂದು ಸಾಲುಗಳೂ ಮಾರ್ಮಿಕವಾಗಿವೆ. ‘ನೀರ ಮೇಲಿನ ಮರಳ ಮನೆಯಂತೆ ಒಲವು ಕಟ್ಟಿದ ನೆನಪು … ಕಟ್ಟುತ್ತಲೇ ಕೆಡಗುವುದು ಎಲ್ಲಾ ಒಲವ ರೂಪು… ವಿರಹವನು ಗೆದ್ದವನ ಸಾವು ಉಂಟೇನು?  ಸಲುಗೆ ಇರದ ಸನಿಹ ಬಲು ದೂರ ‘ ಎಂಬ ಸಾಲುಗಳಲ್ಲಿ ಏನೋ ಹೊಸತನ್ನು ಹೇಳುವ ಹಾಗೆ ಕಾಣುತ್ತಿದ್ದಾರೆ. ನಾರಾಯಣ ಶರ್ಮ ಕಂಪೋಸ್ ಮಾಡಿ ಹಾಡಿದ್ದಾರೆ. ಮೂರು ನಿಮಿಷಗಳ ಹಾಡಾದರೂ ಫ್ರೆಷ್ ಅನ್ನಿಸುವ ಭಾವ ಮೂಡಿಸುತ್ತದೆ. ಈ ಹಿಂದೆ ಸಂಚಾರಿ ವಿಜಯ್ ಅವರ ನಟನೆಯಲ್ಲಿ ಮೂಡಿಬಂದ ʼಅವ್ಯಕ್ತʼ ಕಿರುಚಿತ್ರದಲ್ಲಿಯೂ ಶಿವಕುಮಾರ್‌ ಮಾವಲಿ ಬರೆದಿದ್ದ, ‘ ಹೆಣ್ಣಿನೊಲವ ಹಾದಿ ಹಿಡಿದು ‘ ಎಂಬ ಹಾಡು ವಿಶೇಷವಾಗಿದ್ದು ಮಾತ್ರವಲ್ಲ, ಸಂಗೀತಾಸಕ್ತರ ಆಕರ್ಷಣೆಗೂ ಕಾರಣವಾಗಿತ್ತು.

Categories
ಟಾಲಿವುಡ್

ಚಿತ್ರರಂಗದಲ್ಲಿ ಹನ್ನೊಂದು ವರ್ಷ ಪೂರೈಸಿದ ಸಮಂತಾ; ಈಗಲೂ ಅವರು ಬೇಡಿಕೆಯ ನಟಿ

ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಸಮಂತಾ ಅಕ್ಕಿನೇನಿ ಜನಪ್ರಿಯ ನಟಿ. ಗ್ಲಾಮರಸ್ ನಟಿಯಾಗಿ ಬೆಳ್ಳಿತೆರೆ ಪ್ರವೇಶಿಸಿದ ಅವರು ಇದೀಗ ಅಪರೂಪದ, ವಿಶಿಷ್ಟ ಕತೆಗಳಲ್ಲಿ ನಟಿಸತೊಡಗಿದ್ದಾರೆ. ಸ್ವತಃ ತಮ್ಮ ಹೆಸರಿನಿಂದಲೇ ಥಿಯೇಟರ್‌ಗೆ ಪ್ರೇಕ್ಷಕರನ್ನು ಕರೆತರುವಷ್ಟು ಖ್ಯಾತಿ ಅವರದಾಗಿದೆ. ಇಂದಿಗೆ ಅವರು ಸಿನಿಮಾ ಪ್ರವೇಶಿಸಿ ಹನ್ನೊಂದು ವರ್ಷ. ತೆಲುಗು ಜನಪ್ರಿಯ ನಟ ನಾಗ ಚೈತನ್ಯ ಪತ್ನಿಯಾಗಿ, ಪ್ರತಿಷ್ಠಿತ ಅಕ್ಕಿನೇನಿ ಕುಟುಂಬದ ಸೊಸೆಯಾಗಿ ವೈಯಕ್ತಿಕ ಬದುಕಿನಲ್ಲೂ ಆಕೆ ಸಂತೃಪ್ತರು.

ಗೌತಮ್ ಮೆನನ್ ನಿರ್ದೇಶನದ ‘ಯೇ ಮಾಯ ಚೇಸಾವೆ’ (2010) ತೆಲುಗು ಚಿತ್ರದೊಂದಿಗೆ ಅವರು ಸಿನಿಮಾಗೆ ಪರಿಚಯವಾಗಿದ್ದು. ನಾಗ ಚೈತನ್ಯ ಹೀರೋ ಆಗಿ ನಟಿಸಿದ್ದ ಸಿನಿಮಾ ದೊಡ್ಡ ಯಶಸ್ಸು ಕಂಡಿತು. ಈ ಗೆಲುವು ಅವರ ವೃತ್ತಿ ಬದುಕಿಗೆ ಚಿಮ್ಮು ಹಲಗೆಯಾಯ್ತು. ಮುಂದೆ ಅವರು ನಟಿಸಿದ ಸಾಕಷ್ಟು ಸಿನಿಮಾಗಳು ದೊಡ್ಡ ಯಶಸ್ಸು ಕಂಡವು. ದೂಕುಡು, ಬೃಂದಾವನಂ, ಅತ್ತಾರಿಂಟಿಕಿ ದಾರೇದಿ, ಈಗಾ, ಸೀತಮ್ಮ ವಾಕಿಟ್ಲೋ ಸಿರಿಮಲ್ಲೆ ಚೆಟ್ಟು, ಮನಂ, ಸನ್‌ಆಫ್‌ ಸತ್ಯಮೂರ್ತಿ, ಜನತಾ ಗ್ಯಾರೇಜ್‌, ರಂಗಸ್ಥಳಂ, ಮಹಾನಟಿ ಚಿತ್ರಗಳಲ್ಲಿ ಪ್ರೇಕ್ಷಕರು ಅವರನ್ನು ಮೆಚ್ಚಿಕೊಂಡರು.

ತಮಿಳಿನಲ್ಲೂ ಅವರು ಸಾಕಷ್ಟು ಯಶಸ್ಸು ಕಂಡ ತಾರೆ. ಕತ್ತಿ, ಥೆರಿ, 24, ಮೆರ್ಸಲ್‌, ಸೂಪರ್ ಡಿಲಕ್ಸ್‌ ಕೆಲವು ಉದಾಹರಣೆ. ಅವರ ನಾಯಕಿಪ್ರಧಾನ ಸಿನಿಮಾ ‘ಓಹ್ ಬೇಬಿ’ ಬ್ಲಾಕ್‌ಬಸ್ಟರ್ ಎನಿಸಿಕೊಂಡಿತು. ಈ ಮೂಲಕ ಹೀರೋ ಇಲ್ಲದೆಯೇ ಸ್ವತಃ ತಮ್ಮ ನಾಮಬಲದಿಂದ ಸಿನಿಮಾ ಗೆಲ್ಲಿಸಬಲ್ಲೆ ಎನ್ನುವುದನ್ನು ಅವರು ಸಾಬೀತು ಮಾಡಿದರು. ಕಳೆದ ವರ್ಷ ಅವರ ‘ಜಾನು’ ಸಿನಿಮಾ ತೆರೆಕಂಡಿತ್ತು. ಈ ವರ್ಷ ‘ದಿ ಫ್ಯಾಮಿಲಿ ಮ್ಯಾನ್‌’ ವೆಬ್‌ ಸರಣಿಯೊಂದಿಗೆ ಅವರು ಓಟಿಟಿಗೂ ಪದಾರ್ಪಣೆ ಮಾಡಿದ್ದಾರೆ. ಸದ್ಯ ತೆಲುಗು ಸಿನಿಮಾ ‘ಶಾಕುಂತಲಂ’ ಮತ್ತು ತಮಿಳು ‘ಕಥುವಾಕುಲ ರೆಂಡು ಕಾಧಲ್‌’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರರಂಗದಲ್ಲಿ ಹನ್ನೊಂದು ವರ್ಷ ಪೂರೈಸಿದರುವ ಸಮಂತಾಗೆ ಅವರ ತಾರಾ ನಟಿ ಕೀರ್ತಿ ಸುರೇಶ್ ಶುಭ ಹಾರೈಸಿದ್ದಾರೆ.

ಸಮಂತಾಗೆ ನಟಿ ಕೀರ್ತಿ ಸುರೇಶ್ ಅವರಿಂದ ಅಭಿನಂದನೆ
Categories
ಸಿನಿ ಸುದ್ದಿ

ಸೆಟ್ಟೇರಿದ ‘ಶ್ಯಾಮ್ ಸಿಂಘ ರಾಯ್’ ತೆಲುಗು ಸಿನಿಮಾ; ನಟ ನಾನಿ ಇಲ್ಲಿ ಬೆಂಗಾಲಿ ಬಾಬು

ತೆಲುಗು ನಟ ನಾನಿ ಅಭಿನಯದ ಹೊಸ ಸಿನಿಮಾ ‘ಶ್ಯಾಮ್‌ ಸಿಂಘ ರಾಯ್‌’ ಸೆಟ್ಟೇರಿದ್ದು, ಫಸ್ಟ್ ಲುಕ್ ಕೂಡ ಬಿಡುಗಡೆಯಾಗಿದೆ. ವಿಜಯ್ ದೇವರಕೊಂಡ ಅವರಿಗೆ ‘ಟ್ಯಾಕ್ಸಿವಾಲಾ’ ನಿರ್ದೇಶಿಸಿದ್ದ ರಾಹುಲ್ ಸಂಕೃತ್ಯಾನ್‌ ಈ ಚಿತ್ರ ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ನಾನಿ ಅವರು ಬೆಂಗಾಲಿ ಮೂಲದ ಯುವಕನ ಪಾತ್ರದಲ್ಲಿರುತ್ತಾರೆ ಎನ್ನವುದು ವಿಶೇ‍ಷ. ದಕ್ಷಿಣದ ಖ್ಯಾತ ನಟಿ ಸಾಯಿ ಪಲ್ಲವಿ ಮತ್ತು ಕನ್ನಡ ಮೂಲದ ‘ಉಪ್ಪೆನ’ ತೆಲುಗು ಸಿನಿಮಾ ಖ್ಯಾತಿಯ ನವನಟಿ ಕೃತಿ ಶೆಟ್ಟಿ ಚಿತ್ರದ ಇಬ್ಬರು ನಾಯಕಿಯರು. ಚಿತ್ರದ ಫಸ್ಟ್‌ ಲುಕ್‌ ಗಮನಿಸಿದರೆ, ಇದು ಸ್ವಾತಂತ್ರ್ಯ ಪೂರ್ವದ ಕಥಾನಕ ಎನ್ನುವುದು ತಿಳಿದುಬರುತ್ತದೆ.

ಚಿತ್ರದಲ್ಲಿ ನಾನಿ ಬೆಂಗಾಲಿ ಮೂಲದ ಯುವಕನಾಗಿ ಕಾಣಿಸಿಕೊಳ್ಳುತ್ತಿರುವುದು ಅವರ ಅಭಿಮಾನಿಗಳಿಗೂ ಅಚ್ಚರಿ ತಂದಿದೆ. ದೂರದ ಕೊಲ್ಕೊತ್ತಾದ ಕತೆಯನ್ನು ತೆಲುಗು ನಾಡಿಗೆ ಹೇಗೆ ಕನೆಕ್ಟ್ ಮಾಡುತ್ತಿದ್ದಾರೆ ಎನ್ನುವುದು ಅವರ ಗೊಂದಲ! ಫಸ್ಟ್‌ ಲುಕ್‌ನಲ್ಲಿ ಯುವತಿಯೊಬ್ಬಳು ನಾನಿಯನ್ನು ತಬ್ಬಿ ನಿಂತಿದ್ದು, ಆಕೆಯ ಮುಖ ಮರೆಮಾಚಲಾಗಿದೆ. ಒಟ್ಟಾರೆ ಫಸ್ಟ್‌ಲುಕ್‌ ಪೋಸ್ಟರ್ ಗಮನ ಸೆಳೆಯುವುದರ ಜೊತೆಗೆ ಕುತೂಹಲಕ್ಕೂ ಎಡೆಮಾಡಿಕೊಟ್ಟಿದೆ. ಈ ಮಧ್ಯೆ ನಾನಿ ಅವರ ‘ಟಕ್ ಜಗದೀಶ್‌’ ಸಿನಿಮಾ ಸಿದ್ಧವಾಗಿದ್ದು, ಏಪ್ರಿಲ್‌ 23ಕ್ಕೆ ತೆರೆಕಾಣುತ್ತಿದೆ.

Categories
ಟಾಲಿವುಡ್

ಯಾರಾಗಲಿದ್ದಾರೆ ‘ಸೀತಾ’? ಅನುಷ್ಕಾ ಅಥವಾ ಕೀರ್ತಿಗೆ ಒಲಿಯಲಿದೆಯೇ ಅದೃಷ್ಟ?

ರಾಜಮೌಳಿ ನಿರ್ದೇಶನದ ‘ಬಾಹುಬಲಿ’ ಚಿತ್ರದ ದೊಡ್ಡ ಯಶಸ್ಸು ಫ್ಯಾಂಟಸಿ ಐತಿಹಾಸಿಕ ಚಿತ್ರಗಳಿಗೆ ಪ್ರೇರಣೆ ನೀಡಿದೆ. ಮೊನ್ನೆಯಷ್ಟೇ ಬಹುಕೋಟಿ ವೆಚ್ಚದ ‘ಮಹಾವೀರ್ ಕರ್ಣ’ ಸೆಟ್ಟೇರಿತು. ಈಗ ಬಹುಭಾಷಾ ಸಿನಿಮಾ ‘ಸೀತಾ’ಗೆ ಚಾಲನೆ ಸಿಕ್ಕಿದೆ. ಅಲೌಕಿಕ್ ದೇಸಾಯಿ ನಿರ್ದೇಶನದ ಚಿತ್ರಕ್ಕೆ ಬಾಹುಬಲಿ, ಮಗಧೀರ, ಭಜರಂಗಿ ಭಾಯಿಜಾನ್‌, ಮಣಿಕರ್ಣಿಕಾ ಚಿತ್ರಗಳಿಗೆ ಚಿತ್ರಕಥೆ ಹೆಣೆದ ಕೆ.ವಿ.ವಿಜಯೇಂದ್ರ ಪ್ರಸಾದ್ ಚಿತ್ರಕಥೆ ಹೆಣೆದಿದ್ದಾರೆ. ಮನೋಜ್ ಮುನ್ಸ್‌ಟಾಶಿರ್‌ ಸಂಭಾಷಣೆ ಬರೆಯುತ್ತಿದ್ದಾರೆ. ಈಗ ಚಿತ್ರದ ಶೀರ್ಷಿಕೆ ಬಿಡುಗಡೆಯಾಗಿದ್ದು, ಮುಂದಿನ ಕೆಲವೇ ದಿನಗಳಲ್ಲಿ ತಾರಾಬಳಗದ ಆಯ್ಕೆ ನಡೆಯಲಿದೆ.

ಕೆ.ವಿ.ವಿಜಯೇಂದ್ರ ಪ್ರಸಾದ್

ಹ್ಯೂಮನ್ ಬೀಯಿಂಗ್ ಸ್ಟುಡಿಯೋ ನಿರ್ಮಿಸಲಿರುವ ಸಿನಿಮಾ ಹಿಂದಿ, ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈಗ ಚಿತ್ರದ ಶೀರ್ಷಿಕೆ ಪಾತ್ರದಲ್ಲಿ ಯಾರು ನಟಿಸುತ್ತಾರೆ ಎನ್ನುವ ಗುಲ್ಲು ಎದ್ದಿದೆ. ದಕ್ಷಿಣದಲ್ಲಿ ಈಗಾಗಲೇ ಹೆಸರು ಮಾಡಿರುವ ಅನುಷ್ಕಾ ಶೆಟ್ಟಿ ಮತ್ತು ಕೀರ್ತಿ ಸುರೇಶ್‌ ಇಬ್ಬರಲ್ಲಿ ಒಬ್ಬರು ಆಯ್ಕೆಯಾಗಲಿದ್ದಾರೆ ಎಂದು ಮೂಲಗಳು ಹೇಳುತ್ತವೆ. ‘ಬಾಹುಬಲಿ’ ಚಿತ್ರದೊಂದಿಗೆ ಅನುಷ್ಕಾ ಮತ್ತು ‘ಮಹಾನಟಿ’ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಪಡೆದ ಕೀರ್ತಿ ಸುರೇಶ್‌ ಪ್ಯಾನ್‌ ಇಂಡಿಯಾ ಹಿರೋಯಿನ್‌ಗಳಾಗಿ ಹೆಸರು ಮಾಡಿದ್ದಾರೆ. ಹಾಗಾಗಿ ಇವರಲ್ಲೊಬ್ಬರು ‘ಸೀತೆ’ಯಾಗುವುದು ಖಚಿತ ಎನ್ನಲಾಗಿದೆ.

Categories
ಸಿನಿ ಸುದ್ದಿ

ವೈರಲ್ ಆಯ್ತು ‘ಊರಿಗೊಬ್ಬ ರಾಜ’ ಸಾಂಗ್; ಪುನೀತ್ ಡ್ಯಾನ್ಸ್‌ಗೆ ಭಾರಿ ಮೆಚ್ಚುಗೆ

ಪುನೀತ್ ರಾಜಕುಮಾರ್ ನಟನೆಯ ‘ಯುವರತ್ನ’ ಸಿನಿಮಾದ ‘ಊರಿಗೊಬ್ಬ ರಾಜ’ ಹಾಡು ಕ್ಲಿಕ್ಕಾಗಿದೆ. ನಿನ್ನೆ ಬಿಡುಗಡೆಯಾದ ಹಾಡಿನಲ್ಲಿನ ಪುನೀತ್‌ – ಸಾಯೇಶಾ ಡ್ಯಾನ್ಸ್ ಸ್ಟೆಪ್‌ಗಳು ಮಕ್ಕಳಿಗೂ ಇಷ್ಟವಾಗಿವೆ. ಈ ಹಿಂದಿನ ‘ನಟಸಾರ್ವಭೌಮ’ ಚಿತ್ರದಲ್ಲಿನ ಅಪ್ಪು ಡ್ಯಾನ್ಸ್‌ ಸ್ಟೆಪ್‌ಗಳನ್ನು ಮಕ್ಕಳು ಅನುಕರಿಸಿದ್ದರು. ಈಗ ‘ಯುವರತ್ನ’ ಹಾಡಿನ ಪುನೀತ್ ಡ್ಯಾನ್ಸ್ ಕೂಡ ಅದೇ ರೀತಿ ವೈರಲ್ ಆಗುವ ಸೂಚನೆಗಳಿವೆ. ಚಿತ್ರದ ನಿರ್ದೇಶಕ ಸಂತೋಷ್ ಆನಂದ್‌ರಾಮ್ ಗೀತೆ ರಚಿಸಿದ್ದು, ಜಾನಿ ಮಾಸ್ಟರ್‌ ನೃತ್ಯ ಸಂಯೋಜಿಸಿದ್ದಾರೆ. ಸಂಗೀತ ಸಂಯೋಜನೆ ತಮನ್ ಅವರದು.

ಉತ್ತಮ ಗಾಯಕರೂ ಆದ ಪುನೀತ್‌ ‘ಊರಿಗೊಬ್ಬ ರಾಜ’ ಹಾಡಿದ್ದು, ಗಾಯಕಿ ರಮ್ಯಾ ಬೆಹರಾ ಅವರಿಗೆ ಜೊತೆಯಾಗಿದ್ದಾರೆ. ವಿಶೇ‍ವೆಂದರೆ ‘ಯುವರತ್ನ’ನ ಈ ಹೊಸ ಹಾಡು ತೆಲುಗಿನಲ್ಲೂ ತೆರೆಕಂಡಿದೆ. ತೆಲುಗಿನಲ್ಲಿ ದಿನಕರ್ ಮತ್ತು ರಮ್ಯಾ ಬೆಹರಾ ಹಾಡಿದ್ದಾರೆ. ನೃತ್ಯವನ್ನು ಬಹುವಾಗಿ ಇಷ್ಟಪಡುವ ತೆಲುಗು ಸಿನಿಪ್ರೇಮಿಗಳಿಗೂ ಪುನೀತ್‌ ರಾಜಕುಮಾರ್ ಅವರ ವಿಶಿಷ್ಟ ಡ್ಯಾನ್ಸ್ ಸ್ಟೆಪ್‌ಗಳು ಇಷ್ಟವಾಗಲಿವೆ. ಈ ಮೂಲಕ ತೆಲುಗು ಚಿತ್ರರಂಗದಲ್ಲೂ ‘ಯುವರತ್ನ’ನ ಹವಾ ಸೃಷ್ಟಿಸುವುದು ಚಿತ್ರತಂಡದ ಯೋಜನೆ. ‘ರಾಜಕುಮಾರ’ ಸೂಪರ್‌ಹಿಟ್ ಚಿತ್ರದ ನಂತರ ಪುನೀತ್‌ ಮತ್ತು ನಿರ್ದೇಶಕ ಸಂತೋಷ್ ಆನಂದ್‌ರಾಮ್ ‘ಯುವರತ್ನ’ ಚಿತ್ರದಲ್ಲಿ ಮತ್ತೊಮ್ಮೆ ಜೊತೆಯಾಗಿದ್ದಾರೆ.

Categories
ಟಾಲಿವುಡ್

‘ಮೋಸಗಲ್ಲು’ ತೆಲುಗು ಸಿನಿಮಾ ಟ್ರೈಲರ್ ಔಟ್; ಇದು ನೈಜ ಘಟನೆ ಆಧರಿಸಿದ ಥ್ರಿಲ್ಲರ್

ಮಂಚು ವಿಷ್ಣು ಮತ್ತು ಕಾಜಲ್ ಅಗರ್‌ವಾಲ್‌ ನಟನೆಯ ‘ಮೋಸಗಲ್ಲು’ ತೆಲುಗು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಮೆಗಾಸ್ಟಾರ್ ಚಿರಂಜೀವಿ ಇಂದು ಟ್ರೈಲರ್‌ ರಿಲೀಸ್ ಮಾಡಿ ಶುಭ ಹಾರೈಸಿದ್ದಾರೆ. ಅಮೆರಿಕಾದಲ್ಲಿ ನಡೆದ ಬಹುದೊಡ್ಡ ಮೊತ್ತದ ಸೈಬರ್ ಕ್ರೈಂ ದರೋಡೆ ಪ್ರಕರಣ ಆಧರಿಸಿ ಹೆಣೆದ ಕತೆಯಿದು. ಬಾಲಿವುಡ್ ನಟ ಸುನೀಲ್ ಶೆಟ್ಟಿ ಪೊಲೀಸ್ ಅಧಿಕಾರಿಯಾಗಿ ಈ ಚಿತ್ರದೊಂದಿಗೆ ಟಾಲಿವುಡ್‌ಗೆ ಪದಾರ್ಪಣೆ ಮಾಡಿದ್ದಾರೆ.

ಟ್ರೈಲರ್ ನೋಡಿದಾಗ ಮುಖ್ಯಪಾತ್ರಧಾರಿಗಳಾದ ಮಂಚು ವಿಷ್ಣು ಮತ್ತು ಕಾಜಲ್ ಅಗರ್‌ವಾಲ್‌ ಹಣಕ್ಕಾಗಿ ಏನು ಬೇಕಾದರೂ ಮಾಡುವವರಂತೆ ಕಾಣುತ್ತಾರೆ! ನೋಡುಗರಲ್ಲಿ ಸಾಕಷ್ಟು ಕುತೂಹಲ ಉಂಟುಮಾಡುವ ಸನ್ನಿವೇಶಗಳಿದ್ದು, ಸಂಭಾಷಣೆಗಳಿಲ್ಲದೆ ಹಿನ್ನೆಲೆ ಸಂಗೀತವಷ್ಟೇ ಇರುವುದು ವಿಶೇ‍ಷ. ಕೆಲವು ಸ್ಟಂಟ್‌ಗಳಿದ್ದು, ಭರಪೂರ ಆಕ್ಷನ್‌ ದೃಶ್ಯಗಳೂ ಇರುತ್ತವೆ ಎನ್ನುವುದಕ್ಕೆ ಸಾಕ್ಷ್ಯ ನುಡಿಯುತ್ತವೆ. ಜೆಫ್ರೀ ಗೀ ಚಿನ್‌ ನಿರ್ದೇಶನದ ಈ ಸ್ಟೈಲಿಶ್‌ ಸಿನಿಮಾ ಮುಂದಿನ ತಿಂಗಳಲ್ಲಿ ತೆರೆಕಾಣಲಿದೆ.

Categories
ಸಿನಿ ಸುದ್ದಿ

ಕ್ರಿಕೆಟ್‌ ಫೀಲ್ಡ್‌ ನಲ್ಲಿ ಮತ್ತೆ ತುಪ್ಪದ ಬೆಡಗಿ ಹೆಸರು – ಟಿ 10 ಗೆ ಬ್ರಾಂಡ್‌ ಅಂಬಾಸಡರ್‌ ಆದ ರಾಗಿಣಿ ದ್ವಿವೇದಿ

ನಟಿ ರಾಗಿಣಿ ಅವರ ಸೆಕೆಂಡ್‌ ಇನ್ನಿಂಗ್ಸ್‌ ಜೋರಾಗಿದೆ. ಡ್ರಗ್ಸ್‌ ಕೇಸ್‌ ಪ್ರಕರಣದಲ್ಲಿ ಅವರು ಜೈಲು ಪಾಲಾದ ನಂತರ ಅವರ ಕತೆ ಮುಗಿಯಿತು ಅಂತೆಲ್ಲ ಗುನುಗಿಕೊಂಡವರು ಶಾಕ್‌ ಆಗುವ ಹಾಗೆ ಕಲರ್‌ ಫುಲ್‌ ಜಗತ್ತಿನಲ್ಲಿ ಮತ್ತಷ್ಟು ಕಲರ್‌ ಫುಲ್‌ ಆಗಿಯೇ ಸೆಕೆಂಡ್‌ ಇನ್ನಿಂಗ್ಸ್‌ ಶುರು ಮಾಡಿದ್ದಾರೆ. ಒಂದೆಡೆ ಸಿನಿಮಾ ಜರ್ನಿ ಶುರುವಾಗಿದೆ. ಸ್ವರ್ಣಲತಾ ಪ್ರೊಡಕ್ಷನ್‌ ನಲ್ಲಿ ವಿಶಾಲ್‌ ಶೇಖರ್‌ ನಿರ್ದೇಶನದ “ಕರ್ವ 3ʼ ನಲ್ಲಿ ರಾಗಿಣಿ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಅದೀಗ ಅಧಿಕೃತವಾಗಿ ಅನೌನ್ಸ್‌ ಆಗಿದೆ.

ಹಾಗೆಯೇ ರಾಗಿಣಿ ಪೂರ್ಣ ಪ್ರಮಾಣದಲ್ಲಿ ನಾಯಕಿ ಆಗಿ ಅಭಿನಯಿಸುತ್ತಿರುವ ಮತ್ತೆರೆಡು ಚಿತ್ರಗಳು ಇಷ್ಟರಲ್ಲಿಯೇ ಅನೌನ್ಸ್‌ ಆಗುವುದು ಕೂಡ ಗ್ಯಾರಂಟಿ ಆಗಿದೆ, ಈ ನಡುವೆಯೇ “ಕರ್ನಾಟಕ ಸ್ಟೇಟ್‌ ಫಿಜಿಕಲಿ ಚಾಲೆಂಜ್ಡ್‌ ಕ್ರಿಕೆಟ್‌ ಅಸೋಷಿಯೇಷನ್‌ʼ ಆಯೋಜಿಸಿರುವ ʼಟಿ 10ʼ ಪಂದ್ಯಾವಳಿಗೆ ನಟಿ ರಾಗಿಣಿ ದ್ವಿವೇದಿ ಬ್ರಾಂಡ್‌ ಅಂಬಾಸಡರ್‌ ಆಗಿದ್ದಾರೆ.ಸಿನಿಮಾ ಅಚೆ ಸ್ಪೋರ್ಟ್‌ ನಲ್ಲೂ ರಾಗಿಣಿ ಅವರದ್ದು ಮುಂಚೂಣಿಯ ಹೆಸರು. ಈ ಹಿಂದೆ ಸಿಸಿಎಲ್‌ ಗೆ ಬ್ರಾಂಡ್‌ ಅಂಬಾಸಡರ್‌ ಆಗಿದ್ದರು.ಆನಂತರ ಬಳ್ಳಾಗಿ ಟಸ್ಕರ್‌ ಕುಸ್ತಿ ಟೀಮ್‌ ಗೆ ತಾವೇ ಮಾಲೀಕರು ಆಗಿದ್ದರು. 10 ಈಗ ಮತ್ತೆ ಕ್ರಿಡಾಂಗಣಕ್ಕೆ ರಾಗಿಣಿ ಎಂಟ್ರಿ ಆಗಿದ್ದಾರೆ.

“ಕರ್ನಾಟಕ ಸ್ಟೇಟ್‌ ಫಿಜಿಕಲಿ ಚಾಲೆಂಜ್ಡ್‌ ಕ್ರಿಕೆಟ್‌ ಅಸೋಷಿಯೇಷನ್‌ʼ ಆಯೋಜಿಸಿರುವ ʼಟಿ 10ʼ ಪಂದ್ಯಾವಳಿಗೆ ನಟಿ ರಾಗಿಣಿ ದ್ವಿವೇದಿ ಬ್ರಾಂಡ್‌ ಅಂಬಾಸಡರ್‌ ಆಗಿರುವುದು ಕುತೂಹಲಕಾರಿ ಆಗಿದೆ. ಟಿ  ಕ್ರಿಕೆಟ್‌ ಪಂದ್ಯಾವಳಿ ಮಾರ್ಚ್ 11 ರಿಂದ ಮಾರ್ಚ್‌ 18 ರವರೆಗೆ ನೋಯ್ಡಾದ ಇಂಟರ್‌ ನ್ಯಾಷನಲ್‌ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆಯಲಿದೆ. 28 ತಂಡಗಳು ಇದರಲ್ಲಿವೆ. ನಾಳೆ( ಫೆ.26) ಕ್ಕೆ ಟೀಮ್‌ ನ ಎಲ್ಲಾ ವಿವರ ಹೊರ ಬೀಳುತ್ತಿದೆ. ಹಾಗೆಯೇ ಪಂದ್ಯಾವಳಿ ಇನ್ನಷ್ಟು ವಿವರಗಳು ಗೊತ್ತಾಗಲಿವೆ. ಅದಕ್ಕಾಗಿಯೇ ಕೆಎಸ್‌ಪಿಸಿಸಿ ಪತ್ರಿಕಾಗೋಷ್ಟಿ ಕರೆದಿದೆ.

Categories
ಸೌತ್‌ ಸೆನ್ಸೇಷನ್

‘ನಲ್ಲ’ನ ನಾಯಕಿ ಸಂಗೀತಾಗೆ ‘ಕಲೈಮಮಣಿ’ ಗೌರವ; ಪತಿ, ಪುತ್ರಿಯೊಂದಿಗೆ ಸಂತಸ ಹಂಚಿಕೊಂಡ ನಟಿ

ದಕ್ಷಿಣ ಭಾರತದ ನಟಿ ಸಂಗೀತಾ ‘ಕಲೈಮಮಣಿ’ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.  ತಮಿಳುನಾಡು ಸರ್ಕಾರ ಕೊಡಮಾಡುವ ಪ್ರತಿಷ್ಠಿತ ಗೌರವವಿದು. ತಮಗೆ ಸಿಕ್ಕ ಪದಕವನ್ನು ಮಗಳ ಕೊರಳಿಗೆ ಹಾಕಿ ಪತಿ – ಪುತ್ರಿಯೊಂದಿಗೆ ಸಂಭ್ರಮಿಸಿದ್ದಾರೆ. ಕಾಲಿವುಡ್‌ನ ಪ್ರಮುಖ ಚಿತ್ರನಿರ್ಮಾಪಕ ಕೆ.ಆರ್.ಬಾಲನ್‌ ಅವರ ಪುತ್ರಿ ಸಂಗೀತಾ. ‘ಪೂಂಜಲೈ’ ತಮಿಳು ಚಿತ್ರದೊಂದಿಗೆ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ ನಟಿ ತಮಿಳು ಮತ್ತು ಮಲಯಾಳಂ ಚಿತ್ರರಂಗಗಳಲ್ಲಿ ಬಹುಬೇಗ ಹೆಸರು ಮಾಡಿದರು.

ಸುದೀಪ್‌ ಹೀರೋ ಆಗಿದ್ದ ‘ನಲ್ಲ’ ಚಿತ್ರದೊಂದಿಗೆ ಕನ್ನಡಕ್ಕೂ ಬಂದರೂ ಅವರು ಹೆಚ್ಚಾಗಿ ತಮಿಳು, ಮಲಯಾಳಂನಲ್ಲೇ ಸಕ್ರಿಯರಾಗಿದ್ದುದು. 2010ರಲ್ಲಿ ತೆರೆಕಂಡ ‘ಬೊಂಬಾಟ್ ಕಾರ್‌’ ಚಿತ್ರಕ್ಕೆಂದು ಮತ್ತೆ ಕನ್ನಡಕ್ಕೆ ಬಂದ ಅವರು ತೆಲುಗು ಸಿನಿಪ್ರೇಮಿಗಳಿಗೂ ಚಿರಪರಿಚಿರತರು. ಖಡ್ಗಂ, ಪಿತಾಮಗನ್‌, ಉಯಿರ್‌, ಧನಂ.. ಚಿತ್ರಗಳಲ್ಲಿ ಅಪರೂಪದ ಪಾತ್ರಗಳಲ್ಲಿ ಕಾಣಿಸಿಕೊಂಡ ನಟಿ ಗಾಯಕಿಯೂ ಹೌದು. ಗಾಯಕ ಕ್ರಿಷ್‌ ಅವರನ್ನು ಪ್ರೀತಿಸಿ ಮದುವೆಯಾಗಿದ್ದ (2009) ಅವರಿಗೆ ಒಂಬತ್ತು ವರ್ಷದ ಪುತ್ರಿ ಇದ್ದಾಳೆ. ಮದುವೆ ನಂತರವೂ ವಯಸ್ಸಿಗೆ ಒಪ್ಪುವ ಪಾತ್ರಗಳ ಮೂಲಕ ಸಂಗೀತಾ ನಟನೆಯಲ್ಲಿ ಸಕ್ರಿಯರಾಗಿದ್ದಾರೆ. ಎರಡು ದಶಕಗಳ ಸಿನಿಮಾ ಪಯಣ ಅವರಿಗೆ ‘ಕಲೈಮಮಣಿ’ ಗೌರವ ತಂದುಕೊಟ್ಟಿದೆ.

Categories
ಸಿನಿ ಸುದ್ದಿ

ʼಭೂಮಿಗೀತʼ ಖ್ಯಾತಿಯ ಕೇಸರಿ ಹರವೂ ಮತ್ತೆ ಆಕ್ಷನ್‌ ಕಟ್‌ ಹೇಳ್ತಿದ್ದಾರೆ… !

ಕನ್ನಡಕ್ಕೆ ʼಭೂಮಿ ಗೀತʼ ದಂತಹ ಸದಭಿರುಚಿಯ ಚಿತ್ರ ಕೊಟ್ಟ ಸೃಜನಾಶೀಲ ನಿರ್ದೇಶಕ ಕೇಸರಿ ಹರವೂ ಮತ್ತೆ ನಿರ್ದೇಶನದತ್ತ ಮನಸು ಮಾಡಿದ್ದಾರೆ. ಒಂದು ಸುದೀರ್ಘ ಗ್ಯಾಪ್‌ ಬಳಿಕ ಈಗವರು ದೇಶದ ರೈತರು ಎದುರಿಸುತ್ತಿರುವ ಪ್ರಸ್ತುತ ಸಮಸ್ಯೆಗಳು ಹಾಗೂ ಕೃಷಿ ಕಾಯ್ದೆಗಳ ಪರಿಣಾಮಗಳನ್ನು ತೆರೆ ಮೇಲೆ ತರಲು ಹೊರಟಿದ್ದಾರೆ. ಅದಕ್ಕಂತಲೇ ಈಗವರು ಸುಮಾರು ಹತ್ತಿಪ್ಪತ್ತು ದಿನಗಳ ಕಾಲ ದೆಹಲಿಗೆ ತೆರಳಿ ಅಲ್ಲಿ ನಡೆಯುತ್ತಿರುವ ರೈತರ ಹೋರಾಟದಲ್ಲಿ ಪಾಲ್ಗೊಂಡು ಬಂದಿದ್ದಾರೆ.

ಸದ್ಯಕ್ಕೀಗ ರೈತರ ಪ್ರತಿಭಟನೆಯ ಕೇಂದ್ರಗಳಾಗಿರುವ ತಿಕ್ರಿ, ಸಿಂಘು, ಗಾಜಿಪುರ ಗಳಲ್ಲಿನ ರೈತ ಪ್ರತಿಭಟನೆಗಳಲ್ಲಿ ನೇರವಾಗಿ ಪಾಲ್ಗೊಂಡು, ಅಲ್ಲಿನ ದೃಶ್ಯಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದುಕೊಂಡು ಬಂದಿದ್ದಾರೆ. ದಿನ ದಿನಗಳಲ್ಲಿ ಪಂಜಾಬ್‌, ಹರಿಯಾಣ ಹಾಗೂ ಬಿಹಾರ ಪ್ರವಾಸ ಕೈಗೊಳ್ಳಲು ನಿರ್ಧರಿಸಿದ್ದಾರೆ. ಹಾಗಂತ ಅವರೇನು ರೈತರ ಸಮಸ್ಯೆಗಳ ಕುರಿತು “ಭೂಮಿ ಗೀತʼ ದಂತಹ ಮತ್ತೊಂದು ಸಿನಿಮಾ ಮಾಡಲು ಹೊರಟ್ರಾ ? ಇಲ್ಲಿ ಹೀಗೊಂದು ಕುತೂಹಲ ಶುರುವಾಗುವುದು ಅಷ್ಟೇ ಸಹಜ.

ಆದರೆ, ಅದು ಖಂಡಿತಾ ಹಾಗಲ್ಲ. ಅವರು ಸಿನಿಮಾ ಮಾಡುತ್ತಿಲ್ಲ. ಸದ್ಯಕ್ಕೆ ಅವರು ಅಂತಹ ಆಲೋಚನೆಯಲ್ಲೂ ಇಲ್ಲ. ಹಾಗಾದ್ರೆ ಏನು ಇದು ? ” ಇದೊಂದು ಡಾಕ್ಯುಮೆಂಟರಿ. ಎರಡು ಗಂಟೆಯಲ್ಲಿ ತರಲು ಹೊರಟಿರುವ ಈ ಡಾಕ್ಯುಮೆಂಟರಿಯನ್ನು ಈ ಮೊದಲು ಹಿಂದಿ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ತರೋಣ ಅಂದುಕೊಂಡಿದ್ದೆ. ಈಗ ಕನ್ನಡದಲ್ಲೂ ತರುವ ಆಲೋಚನೆ ಇದೆ. ಉಳಿದ ಯಾವುದೇ ಭಾಷೆಯಲ್ಲೂ ತಂದರೂ ಇದು ಅನುಕೂಲವೇ. ಯಾಕಂದ್ರೆ ನಾನಿಲ್ಲಿ ಹೇಳಹೊರಟಿದ್ದು ದೇಶದ ರೈತರು ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆಗಳ ಕುರಿತು.

ದೇಶದ ರೈತರ ಮುಂದೆ ಈಗ ಅನೇಕ ಸಮಸ್ಯೆಗಳಿವೆ. ಬೆಳೆ ಬೆಳೆಯುವುದಕ್ಕೆ ಇವತ್ತು ದೊಡ್ಡ ಸವಾಲು ಇದೆ. ಇನ್ನು ಬೆಳೆದ ಬೆಳೆಗೆ ಬೆಂಬಲ ಬೆಲೆ ಕೂಡ ಬೇಕು. ಅದು ಕೂಡ ಈಗ ಗೊಂದಲದಲ್ಲಿದೆ. ಭಾರತದ ಕೃಷಿ ವ್ಯವಸ್ಥೆ ಈಗ ಇಂತಹ ಅನೇಕ ಬಿಕ್ಕಟ್ಟುಗಳಲ್ಲಿದೆ. ಅವೆಲ್ಲವನ್ನು ತೆರೆ ಮೇಲೆ ತರುವ ಆಲೋಚನೆ ಇದೆʼ ಎನ್ನುತ್ತಾರೆ ನಿರ್ದೇಶಕ ಕೇಸರಿ ಹರವೂ.ಕನ್ನಡ ಚಿತ್ರರಂಗದ ಮಟ್ಟಿಗೆ ಕೇಸರಿ ಹರವೂ ಅಂದ್ರೆ ತಕ್ಷಣ ನೆನಪಾಗೋದು ʼಭೂಮಿ ಗೀತʼ ಚಿತ್ರ. ಅದು ಅವರ ಚೊಚ್ಚಲ ಚಿತ್ರ.

ʼಭೂಮಿಗೀತʼ ಎನ್ನುವ ಹೆಸರಿಗೆ ತಕ್ಕಂತೆ ಈ ಚಿತ್ರ ಈ ನಾಡಿನ ರೈತರ ಬದುಕನ್ನ ತೆರೆ ಮೇಲೆ ಅನಾವರಣಗೊಳಿಸಿತ್ತು. 1998  ರಲ್ಲಿ ಈ ಚಿತ್ರವು ರಾಷ್ಟ್ರ ಪ್ರಶಸ್ತಿ, ರಾಜ್ಯ ಪ್ರಶಸ್ತಿ ಸೇರಿದಂತೆ ಫಿಲ್ಮ್‌ ಫೇರ್‌ ಪ್ರಶಸ್ತಿಗೂ ಪಾತ್ರವಾಗಿ, ದೊಡ್ಡ ಸುದ್ದಿ ಆಗಿದ್ದು ಇತಿಹಾಸ. ಕೇಸರಿ ಹರವೂ ತಮ್ಮ ಚೊಚ್ಚಲ ಚಿತ್ರದಲ್ಲೇ ಒಬ್ಬ ಯಶಸ್ವಿ ನಿರ್ದೇಶಕರಾಗಿ ಹೊರಹೊಮ್ಮಿದ್ದು ಹಳೇ ಸುದ್ದಿ. ಮುಂದೆ ಅದೇನಾಯಿತೋ ಗೊತ್ತಿಲ್ಲ. ನಿರ್ದೇಶಕ ಕೇಸರಿ ಹರವೂ ನಿರ್ದೇಶನದಿಂದಲೇ ದೂರ ಉಳಿದಿದ್ದರು. ಸಿನಿಮಾ ಬದಲಿಗೆ ರೈತ ಹೋರಾಟ, ಪರಿಸರ ಹೋರಾಟ ಅಂತ ತಮ್ಮನ್ನು ತಾವು ತೊಡಗಿಸಿಕೊಂಡರು.ಇಷ್ಟಾಗಿಯೂ ಸಿನಿಮಾ ನಿರ್ದೇಶನಕ್ಕೆ ಮನಸು ಮಾಡಿದರು. 2016ರಲ್ಲಿ ಪರಿಸರ ಜಾಗೃತಿ ಮೇಲೆಯೇ ʼಒಳ್ಳೆಯವನುʼ ಎನ್ನುವ ಸಿನಿಮಾವೊಂದನ್ನು ನಿರ್ದೇಶಿಸಿದ್ದರು. ಅಲ್ಲಿಂದೀಗ ರೈತರ ಸಮಸ್ಯೆ ಕುರಿತು ಡಾಕ್ಯುಮೆಂಟರಿ ಮಾಡುತ್ತಿರುವುದು ವಿಶೇಷ.

ಕನ್ನಡದ ಬಹುತೇಕ ನಿರ್ದೇಶಕರೀಗ ವ್ಯಾಪಾರ ವಹಿವಾಟಿನ ಕಡೆಗೆ ಗಮನ ಕೊಟ್ಟಿದ್ದಾರೆ. ರಿಮೇಕೋ, ಸ್ವಮೇಕೋ ಹಣ ಮಾಡುವುದಕ್ಕೆ ಸರಕು ಬೇಕು ಎನ್ನುವುದೇ ಅವರ ಸೂತ್ರ. ಆದರೆ, ಕೇಸರಿ ಹರವೂ ಅವರ ಚಿಂತನೆಯೇ ಬೇರೆ. ರೈತ ಹೋರಾಟ, ಪರಿಸರ ಹೋರಾಟದ ಪ್ರಭಾವದಲ್ಲಿರುವ ಅವರಿಗೆ ಸಿನಿಮಾ ಅನ್ನೋದು ಹಣಕ್ಕಿಂತ ಜನರ ಜಾಗೃತಿಯ ಪ್ರಬಲ ಮಾಧ್ಯಮ ಅನ್ನೋದು ಅವರ ನಂಬಿಕೆ. ಈಗವರು ಕೃಷಿ ಸಮಸ್ಯೆ, ರೈತ ಹೋರಾಟ ಕುರಿತು ಡಾಕ್ಯುಮೆಂಟರಿ ಮಾಡುತ್ತಿರುವುದು ಕೂಡ ಅದೇ ಹಿನ್ನೆಲೆಯಲ್ಲಿ ಅನ್ನೋದು ಅಷ್ಟೇ ಸತ್ಯ. ಅಂದ ಹಾಗೆ, ಈ ಡಾಕ್ಯುಮೆಂಟರಿಯನ್ನು ನಿರ್ದೇಶಕ ಕೇಸರಿ ಹರವೂ ಕ್ರೌಂಡ್‌ ಫಂಡಿಂಗ್‌ ಮೂಲಕ ನಿರ್ಮಾಣ ಮಾಡುತ್ತಿದ್ದು,  ಇದರಲ್ಲಿ ಪಾಲ್ಗೊಳ್ಳಲು ಇಚ್ಚಿಸುವರು [email protected] ಮೂಲಕ ಸಂಪರ್ಕಿಸಬಹುದು. ಇಲ್ಲವೇ UPI id, kesari.haravoo@oksbi ಗೆ ನೇರವಾಗಿ ಕಾಂಟ್ರಿಬ್ಯೂಟ್‌ ಮಾಡಬಹುದು.

error: Content is protected !!