Categories
ಸಿನಿ ಸುದ್ದಿ

ಶಕೀಲಾ ಬರ್ತಾರೆ ದಾರಿ ಬಿಡಿ! ಫೇವರೇಟ್ ನಟಿಯ ಜೀವನಗಾಥೆ

ಕ್ರಿಸ್ಮಸ್ ಹಬ್ಬಕ್ಕೆ ಶಕೀಲಾ ಸಂಭ್ರಮ!

ಈಗಂತೂ ಬಯೋಪಿಕ್ ಸಿನಿಮಾಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆ ಸಾಲಿಗೆ ದಕ್ಷಿಣ ಭಾರತ ಚಿತ್ರರಂಗದ ಮಾದಕ ನಟಿ ಎಂದೇ ಖ್ಯಾತಿ ಪಡೆದಿರುವ ‘ಶಕೀಲಾ’ಅವರ ಜೀವನಗಾಥೆ ಈಗ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಇದೇ ಕ್ರಿಸ್ಮಸ್ ದಿನ ಚಿತ್ರ ಬಿಡುಗಡೆಯಾಗುತ್ತಿದೆ.
ಅಂದಹಾಗೆ, ದಕ್ಷಿಣ ಭಾರತ ಚಿತ್ರರಂಗದ ನಟಿಯೊಬ್ಬರ ಬಯೋಪಿಕ್ ಚಿತ್ರವೊಂದು ಹಿಂದಿ, ಕನ್ನಡ ತಮಿಳು ಸೇರಿದಂತೆ 5 ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವುದು ಇದೇ ಮೊದಲು ಎಂಬುದು ವಿಶೇಷ.


‘ಶಕೀಲಾ’ ಅವರ ಬಯೋಪಿಕ್ ಆಗಿರುವುದರಿಂದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಸಿನಿಮಾಗೂ ‘ಶಕೀಲಾ’ ಎಂದೇ ನಾಮಕರಣ ಮಾಡಿದ್ದಾರೆ.
ಈಗಾಗಲೇ ಚಿತ್ರದ ಫಸ್ಟ್ ಲುಕ್ ಹಾಗೂ ಟ್ರೇಲರ್ ಬಿಡುಗಡೆಯಾಗಿದ್ದು, ಸಿಕ್ಕಾಪಟ್ಟೆ ಮೆಚ್ಚುಗೆ ಪಡೆಯುವುದರ ಜೊತೆಗೆ ಸಾಕಷ್ಟು ಕುತೂಹಲ ಕೆರಳಿಸಿದೆ.
ಆರಂಭದಲ್ಲಿ ಬಾಲಿವುಡ್ ಗೆ ಮಾತ್ರ ಸೀಮೀತವಾಗಿರಲಿ ಅಂದುಕೊಂಡು ಶುರುವಾದ ಈ ಚಿತ್ರ, ಈಗ ಪ್ಯಾನ್ ಇಂಡಿಯಾ ಲೆವೆಲ್‍ನಲ್ಲಿ ರಿಲೀಸಾಗುತ್ತಿರುವುದು ವಿಶೇಷ. ಬಹಳಷ್ಟು ಗ್ಲಾಮರಸ್ ಪಾತ್ರಗಳಲ್ಲೇ ಕಾಣಿಸಿಕೊಡು, ಯುವಕರ ಹಾಟ್ ಫೇವರೇಟ್ ಎನಿಸಿಕೊಂಡಿರುವ ಮಲಯಾಳಂನ ಮಾದಕ ನಟಿ ಶಕೀಲಾ ಅವರ ಬಯೋಪಿಕ್ ಇದು.

1990 ಹಾಗೂ 2000ರ ದಶಕದಲ್ಲಿ ಸಕ್ಸಸ್ ಫುಲ್ ಆಗಿದ್ದ ಅವರು, ಒಂದೇ ವರ್ಷದಲ್ಲಿ ಅವರ ನಟನೆಯ ಹತ್ತಾರು ಸಿನಿಮಾಗಳು ಬಿಡುಗಡೆಯಾಗುತ್ತಿದ್ದವು ಎಂಬುದು ವಿಶೇಷ.
ಆರಂಭದಲ್ಲಿ ಶಕೀಲಾ ಅವರ ಬದುಕು ಅಂದುಕೊಂಡಂತೆ ಸುಲಭವಾಗಿರಲಿಲ್ಲ. ತಮ್ಮ ಜೀವನದಲ್ಲಿ ಅನೇಕ ಏಳು-ಬೀಳುಗಳನ್ನು ಕಂಡಿದ್ದಾರೆ. ಅವರ ಆಗಿನ ಗೆಲುವು-ಸೋಲು, ನೋವು-ನಲಿವು ಅವರಿಗಷ್ಟೇ ಗೊತ್ತು. ಈಗ ಶಕೀಲಾ ಅವರ ಸಿನಿಪಯಣದಲ್ಲಾದ ಅಪರೂಪದ ಸಂಗತಿಗಳನ್ನು ಸಿನಿಮಾ‌ ಮೂಲಕ ಹೇಳುವ ಪ್ರಯತ್ನ ಮಾಡಿದ್ದಾರೆ ಇಂದ್ರಜಿತ್ ಲಂಕೇಶ್.
ಇನ್ನು, ಶಕೀಲಾ ಅವರ ಪಾತ್ರವನ್ನು ಬಾಲಿವುಡ್ ನಟಿ ರಿಚಾ ಛಡ್ಡಾ ನಿರ್ವಹಿಸಿದ್ದಾರೆ.

ತಮ್ಮ ಬಯೋಪಿಕ್ ಚಿತ್ರದ ಬಗ್ಗೆ ಮಾತಾಡುವ ಶಕೀಲಾ, ‘ನಾನು ಬದುಕಿನಲ್ಲಿ ಎದುರಿಸಿದ ಕಷ್ಟ, ಸುಖದ ಕಥೆಯನ್ನು ಈ ಸಿನಿಮಾದಲ್ಲಿ ತೋರಿಸುತ್ತಿದ್ದಾರೆ. ಆರಂಭದಲ್ಲಿ ನಿರ್ದೇಶಕರು ನನ್ನ ಬಳಿ ಚರ್ಚಿಸಿ ಒಂದಷ್ಟು ಬದಲಾವಣೆ ಕೂಡ ಮಾಡಿಕೊಂಡಿದ್ದಾರೆ. ಸಿನಿಮಾದಲ್ಲಿ ಎಷ್ಟು ಕಾಲ್ಪನಿಕ, ಎಷ್ಟು ವಾಸ್ತವ ಇದೆ ಎಂಬುದನ್ನು ಸಿನಿಮಾದಲ್ಲಿ ನೋಡಬೇಕು.
ಇಂತಹ ಸಂದರ್ಭದಲ್ಲಿ ನನ್ನ ಫ್ಯಾಮಿಲಿಯೇ ನನ್ನ ಜೊತೆಗಿಲ್ಲ. ನಾನು ಎಲ್ಲಿದ್ದೇನೆ, ಏನು ಮಾಡುತ್ತಿದ್ದೇನೆ ಎಂಬುದೆಲ್ಲವೂ ಅವರಿಗೆ ಗೊತ್ತಿದೆ. ಆದರೆ ನನ್ನ ಬಗ್ಗೆ ಯಾರಿಗೂ ಕಾಳಜಿ ಇಲ್ಲ. ನಾನು ನನ್ನ ಫ್ಯಾಮಿಲಿಗಾಗಿಯೇ ಇಷ್ಟೆಲ್ಲ ಮಾಡಿದೆ. ಆದರೆ ನನ್ನವರೇ ನನಗೆ ದ್ರೋಹ ಮಾಡಿದರು. ನೀಲಿ ಚಿತ್ರಗಳನ್ನು ಮಾಡಿದ ಬಗ್ಗೆ ನನಗೆ ವಿಷಾದವಿಲ್ಲ. ಅದರ ಬಗ್ಗೆ ನನಗೆ ಖುಷಿ ಇದೆ. ನಾನು ದೇವರ ಮಗಳು. ಇಂದು ನನ್ನ ಬಗ್ಗೆ ಸಿನಿಮಾ ಆಗುತ್ತಿದೆ ಎಂದರೆ ಅದಕ್ಕೆ ಆ ಚಿತ್ರಗಳೇ ಕಾರಣ. ನಾನೊಬ್ಬ ಪೋಷಕ ನಟಿ ಮಾತ್ರ ಆಗಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ. ಆದರೆ ಇಂಥ ಕುಟುಂಬಕ್ಕಾಗಿ ಮಾಡಿದೆನಲ್ಲ ಎಂಬ ಬೇಸರವಿದೆ ಎಂದು ಶಕೀಲಾ ತನ್ನ ಕುಟುಂಬದ ಬಗ್ಗೆ ಬೇಸರ ಹೊರ ಹಾಕುತ್ತಾರೆ.


ಇಂದ್ರಜಿತ್ ಅವರ ಜೊತೆ ನಾನು ‘ಲವ್‍ ಯೂ ಆಲಿಯಾ’ ಸಿನಿಮಾ ಮಾಡುವಾಗ ನಿರ್ದೇಶಕಿಯೊಬ್ಬರು ನನ್ನನ್ನು ಭೇಟಿಮಾಡಿ ನನ್ನ ಆತ್ಮಚರಿತ್ರೆಯನ್ನು ಸಿನಿಮಾ ಮಾಡಬೇಕೆಂದಿದ್ದೇನೆ ಎಂದರು. ಆ ವಿಷಯ ಇಂದ್ರಜಿತ್‍ರಿಗೂ ತಿಳಿಯಿತು. ಎರಡು ದಿನ ಸಮಯ ತೆಗೆದುಕೊಂಡು ಇಂದ್ರಜಿತ್ ಕೂಡ ನನ್ನ ಆತ್ಮಚರಿತ್ರೆಯನ್ನು ಓದಿದರು. ತಾವೇ ಈ ಚಿತ್ರ ಮಾಡುವುದಾಗಿ ತಿಳಿಸಿದರು. ನನಗೂ ಖುಷಿ ಆಯಿತು. ನನ್ನ ಕಥೆಯನ್ನು ಅವರು ಚೆನ್ನಾಗಿ ತೆರೆಮೇಲೆ ತರುತ್ತಾರೆ ಎಂಬ ನಂಬಿಕೆಯಿತ್ತು. ನಾನು ಈ ಬಯೋಪಿಕ್ ಪುಸ್ತಕ ಬರೆದು 10 ವರ್ಷಗಳಾಗಿವೆ. ಆನಂತರ ಏನೆಲ್ಲ ನಡೆಯಿತು ಎಂಬುದನ್ನು ಈ ಸಿನಿಮಾದಲ್ಲಿ ವಿವರಿಸಿದ್ದಾರೆ. ನನ್ನ ಹುಟ್ಟಿನಿಂದ ಹಿಡಿದು 42ನೇ ವಯಸ್ಸಿನವರೆಗೆ ಅನೇಕ ವಿಷಯಗಳ ಬಗ್ಗೆ ಈ ಚಿತ್ರ ಮಾತನಾಡುತ್ತದೆ ಎಂಬುದು ಶಕೀಲಾ ಮಾತು.

ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರಿಗೆ ಈ ಚಿತ್ರ ಮಾಡಿದ್ದು ಖುಷಿ ಕೊಟ್ಟಿದೆಯಂತೆ. ‘ಒಂದರ್ಥದಲ್ಲಿ ನಿಜವಾದ ಪ್ಯಾನ್ ಇಂಡಿಯಾ ಸಿನಿಮಾವಿದು, ಕನ್ನಡದ ಸುಚೇಂದ್ರ ಪ್ರಸಾದ್, ಸಂಗೀತ ನಿರ್ದೇಶಕ ವೀರಸಮರ್ಥ್ ಸೇರಿದಂತೆ ಎಲ್ಲಾ ಭಾಷೆಯ ತಂತ್ರಜ್ಞರು ಈ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಐದೂ ಭಾಷೆ ಸೇರಿ ಎರಡರಿಂದ ಎರಡೂವರೆ ಸಾವಿರ ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ ಎಂದು ವಿವರ ಕೊಟ್ಟರು ಇಂದ್ರಜಿತ್.
ಈ ಚಿತ್ರವನ್ನು ಸಾಮಿ ನಾನ್ವಾನಿ ಹಾಗೂ ಶರವಣ ಪ್ರಸಾದ್ ನಿರ್ಮಿಸಿದ್ದಾರೆ.
ನಿರ್ದೇಶಕ ಸಂದೀಪ್ ಮಲಾನಿ ಸಹ ನಿರ್ಮಾಪಕರು. ಸಂತೋಷ್ ರೈ ಪಾತಾಜೆ ಕ್ಯಾಮೆರಾ ಹಿಡಿದಿದ್ದಾರೆ. ರೀಚಾ ಛಡ್ಡಾ ಜೊತೆಗೆ ಪಂಕಜ್‍ ತ್ರಿಪಾಠಿ, ರಾಜೀವ್ ಪಿಳ್ಳೈ, ಸಮರ್ಜಿತ್ ಲಂಕೇಶ್, ಸಂದೀಪ್ ಮಲಾನಿ ಹಾಗೂ ಎಸ್ಟರ್ ನರೋನಾ ಕಾಣಿಸಿಕೊಂಡಿದ್ದಾರೆ.

Categories
ಸಿನಿ ಸುದ್ದಿ

ಅಲ್ಲಿಗೆ ಹೋದವರಾರು ವಾಪಸ್‌ ಬಂದಿಲ್ವಂತೆ… ?

ಕುತೂಹಲ ಹುಟ್ಟಿಸುತ್ತೆ ಆರ್‌ ಎಚ್‌ 100 ಚಿತ್ರದ ಥ್ರಿಲ್ಲರ್ ಟ್ರೇಲರ್‌

ಹರ್ಷ್‌ ಮತ್ತು ಸೋಮಶೇಖರ್‌ ಇಬ್ಬರು ಯುವ ವಕೀಲ ಮಿತ್ರರು. ಅವರೀಗ ತಮ್ಮ ವಕೀಲಿ ವೃತ್ತಿಯ ಜತೆಗೆ ಸಿನಿಮಾ ಜಗತ್ತಿಗೂ ಎಂಟ್ರಿ ಆಗಿದ್ದಾರೆ.  ಇಂಟೆರೆಸ್ಟಿಂಗ್ ಅಂದ್ರೆ ಸಿನಿಮಾ‌ನಿರ್ಮಾಣ ಅಂತ ಬಂದವರು, ನಟರಾಗಿಯೂ ಪರಿಚಯವಾಗುತ್ತಿದ್ದಾರೆ. ಹಾಗೊಂದು ರೂಪಾಂತರದ ಮೂಲಕ ಅವರನ್ನು ಕನ್ನಡ ಸಿನಿಮಾ ಜಗತ್ತಿಗೆ ಅವರನ್ನು ಪರಿಚಯಿಸುತ್ತಿರುವ ಚಿತ್ರ’ ಆರ್ ಎಚ್ 100′.

 

ಈ ಚಿತ್ರವೀಗ ರಿಲೀಸ್ ಗೆ ರೆಡಿಯಾಗಿದೆ. ಅಚ್ಚರಿ ಅಂದ್ರೆ ಸದ್ದಿಲ್ಲದೆ, ಸುದ್ದಿಯೂ ಮಾಡದೆ  ಚಿತ್ರತಂಡವು ಡಿಸೆಂಬರ್‌ 18 ಕ್ಕೆ ಚಿತ್ರವನ್ನು ತೆರೆಗೆ ತರಲು ಸಜ್ಜಾಗಿದೆ. ‌ಸದ್ಯಕ್ಕೀಗ ಟ್ರೇಲರ್ ಲಾಂಚ್ ಮೂಲಕ ಸೌಂಡ್ ಮಾಡಿದೆ. ಟ್ರೇಲರ್ ಸಖತ್ತಾಗಿದೆ. ಹಾರರ್, ಥ್ರಿಲ್ಲರ್ ಎಳೆಯ ಟ್ರೇಲರ್ ನೋಡುಗನನ್ನು ತುದಿಗಾಲ ಮೇಲೆ ನಿಲ್ಲಿಸುತ್ತಿದೆ. ಹಾಗಾದ್ರೆ ಸಿನಿಮಾ ಹೇಗಿರಬಹುದು? ಅದು ಡಿಸೆಂಬರ್ 18  ಕ್ಕೆ ಗೊತ್ತಾಗಲಿದೆ.

ಚಿತ್ರ ತಂಡ ಸದ್ದಿಲ್ಲದೆ ರಿಲೀಸ್ ಪ್ಲಾನ್ ಮಾಡಿಕೊಂಡರೂ ರಿಲೀಸ್‌ ಆನ್ನೋದು ಈಗ ಅಷ್ಟು ಸುಲಭ ಇಲ್ಲ. ಕೊರೋನಾ ಹೊಡೆತಕ್ಕೆ ಸಿಕ್ಕು ತತ್ತರಿಸಿರುವ ಚಿತ್ರರಂಗ ಇನ್ನು ಚೇತರಿಕೆ ಕಂಡಿಲ್ಲ. ಚಿತ್ರಮಂದಿರ ಒಪನ್‌ ಆಗಿದ್ದರೂ, ಜನರು ಚಿತ್ರಮಂದಿರಕ್ಕೆ ಅಷ್ಟಾಗಿ ಬರುತ್ತಿಲ್ಲ ಎನ್ನುವ ನೋವು ಇನ್ನು ಹೇಗೋ ಏನೋ ಎನ್ನುವ ಆತಂಕದಲ್ಲಿರಿಸಿದೆ.ಆದರೂ ಹೊಸಬರ ಚಿತ್ರ ʼR H‌ 100ʼ ಮುಂದಿನ ವಾರವೇ ಚಿತ್ರ ಮಂದಿರಕ್ಕೆ ಬರುತ್ತಿದೆ ಅಂದ್ರೆ, ಚಿತ್ರತಂಡಕ್ಕೆ ಚಿತ್ರದ ಕಂಟೆಂಟ್‌ ಮೇಲಿರುವ ನಂಬಿಕೆ ಮತ್ತು ವಿಶ್ವಾಸ.

‌ ಡಿಫೆರೆಂಟ್‌ ಟೈಟಲ್‌ ಮೂಲಕ ಬರುತ್ತಿರುವ ಈ ಚಿತ್ರವು ಕತೆ, ಚಿತ್ರಕತೆ ಹಾಗೂ ಟೆಕ್ನಿಕಲ್‌ ಕೆಲಸದಲ್ಲೂ ಅಷ್ಟೇ ಡಿಫೆರೆಂಟ್‌ ಆಗಿದೆ. ಬಹುಮುಖ್ಯವಾಗಿ ಹಾರರ್‌ ಹಾಗೂ ಥ್ರಿಲ್ಲರ್‌ ಅಂಶಗಳನ್ನೇ ಮೈನ್‌ ಆಗಿಟ್ಟುಕೊಂಡು ಪ್ರೇಕ್ಷಕರನ್ನು ರಂಜಿಸಲು ಬರುತ್ತಿದೆ. ಕೊರೋನಾ ಅಂತ ಚಿತ್ರಮಂದಿರದಿಂದ ದೂರ ಇರುವ ಪ್ರೇಕ್ಷಕರನ್ನು ಹಾರರ್‌ ಹಾಗೂ ಥ್ರಿಲ್ಲರ್‌ ಸಿನಿಮಾದ ಮೂಲಕವಾದರೂ ಚಿತ್ರಮಂದಿರಕ್ಕೆ ತರೋಣ ಎನ್ನುವ ವಿಶ್ವಾಸದೊಂದಿಗೆ ಚಿತ್ರ ತಂಡ ಈ ಚಿತ್ರವನ್ನು ಡಿಸೆಂಬರ್‌ ೧೮ ಕ್ಕೆ ತರಲು ಮುಂದಾಗಿದೆಯಂತೆ. ಹಾಗಂತ ಚಿತ್ರದ ನಿರ್ಮಾಪಕ ಹಾಗೂ ನಾಯಕ ನಟ ಹರ್ಷ್‌ ಅವರು ಮಾತು.

ರಿಲೀಸ್‌ಗೆ ರೆಡಿಯಾಗಿರುವ ಚಿತ್ರ ತಂಡವು ಸೋಮವಾರ ಚಿತ್ರದ ಟ್ರೇಲರ್‌ ಲಾಂಚ್‌ ಮೂಲಕ ಚಿತ್ರದ ವಿಶೇಷತೆ ಕುರಿತು ಮಾಧ್ಯಮದ ಮುಂದೆ ಮಾತನಾಡಿತು. ಅದು ಚಿತ್ರತಂಡದ ಮೊದಲ ಸುದ್ದಿ ಗೋಷ್ಟಿಯೂ ಹೌದು. ಟ್ರೇಲರ್‌ ಲಾಂಚ್‌ ಆಕ್ಟ್‌ ೧೯೭೮ ಚಿತ್ರದ ಖ್ಯಾತಿಯ ನಿರ್ಮಾಪಕ ದೇವರಾಜ್‌ , ಸಮಾಜ ಸೇವಕ ಕೃಷ್ಣ ಮೂರ್ತಿ, ಮತ್ತೊರ್ವ ನಿರ್ಮಾಪಕ ಶ್ರೀಧರ್‌,ಯುವ ನಟ ಲೋಕೇಶ್‌ ಗೌಡ ಅತಿಥಿಗಳಾಗಿ ಬಂದಿದ್ದರು. ಹೊಸಬರು ಒಂದೊಳ್ಳೆಯ ಸಿನಿಮಾ ಮಾಡಿರುವ ವಿಶ್ವಾಸದಲ್ಲಿ ಅತಿಥಿಗಳು ಮೆಚ್ಚುಗೆಯ ಮಾತುಗಳನ್ನಾಡಿ, ಚಿತ್ರಕ್ಕೆ ಶುಭ ಹಾರೈಸಿದರು. ಚಿತ್ರ ತಂಡ ಕೂಡ ಚಿತ್ರದ ವಿಶೇಷತೆ ಹೇಳಿಕೊಂಡಿತು.

ವಕೀಲಿ ವೃತ್ತಿಯ ನಡುವೆಯೇ ನಾವು ಆಕಸ್ಮಿಕವಾಗಿ ಇಲ್ಲಿಗೆ ಬಂದಿದ್ದೇವೆ. ಆದಕ್ಕೆ ಸಿನಿಮಾದ ಮೇಲಿದ್ದ ಆಸಕ್ತಿ. ಮೊದಲು ಒಂದೊಳ್ಳೆಯ ಸಿನಿಮಾ ನಿರ್ಮಾಣ ಮಾಡೋಣ ಆನ್ನೋದಷ್ಟೆ ಇತ್ತು. ಆ ನಂತರ ನಿರ್ದೇಶಕ ಮಹೇಶ್‌ ಆಭಿಪ್ರಾಯಕ್ಕೆ ಬೇಡ ಎನ್ನದೇ ಇಬ್ಬರು ಪಾತ್ರಗಳಿಗೆ ಬಣ್ಣ ಹಚ್ಚಬೇಕಾಗಿ ಬಂತು ಎನ್ನುವ ಮೂಲಕ ನಿರ್ಮಾಣದ ಜತೆಗೆ ನಟನೆಗೆ ತೊಡಗಿಸಿಕೊಂಡಿದ್ದನ್ನು ಹರ್ಷ್‌ ಹೇಳಿಕೊಂಡರು. ಸೋಮಶೇಖರ್‌ ಕೂಡ ಇದೇ ಮಾತುಗಳನ್ನು ಹೇಳಿದರು. ನಾಯಕಿ ಚಿತ್ರಾ ಗ್ಲಾಮಸರ್‌ ಲುಕ್‌ ನಲ್ಲಿ ಮಿಂಚುತ್ತಿದ್ದರು. ಕನ್ನಡದವರೇ ಆದ ಚಿತ್ರಾಗೆ ಇದು ಎರಡನೇ ಚಿತ್ರ. ದರ್ಪಣ ನಂತರ  ‘R  H 100’ ಮೂಲಕ ಬೆಳ್ಳಿ ಪರದೆ ಮೇಲೆ ಕಾಣಸಿಕೊಳ್ಳುತ್ತಿದ್ದಾರಂತೆ. ನಿರ್ದೇಶಕ ಮಹೇಶ್‌. ಸಿನಿಮಾದ ಕತೆ, ಚಿತ್ರಕತೆ ಹಾಗೂ ತಾಂತ್ರಿಕ ವಿಶೇಷತೆ ಬಿಚ್ಚಿಟ್ಟರು.

ಸಿನಿಮಾ ಶುರುವಾಗಿ ವರ್ಷವೇ ಉರುಳಿ ಹೋಗಿದೆ. ಲಾಕ್‌ ಡೌನ್‌ ಕಾರಣಕ್ಕೆ ಚಿತ್ರ ಕೊಂಚ ತಡವಾಗಿ ತೆರೆಗೆ ಬರುತ್ತಿದೆ, ಸದ್ಯದ ಪರಿಸ್ಥಿತಿ ನೋಡಿದರೆ ಇದೇನು ತಡವಾಗಿ ಅಲ್ಲ. ಹಾಗೆ ನೋಡಿದರೆ ಸ್ಟಾರ್‌ ಸಿನಿಮಾಗಳೇ ರಿಲೀಸ್‌ ಆಗಲು ಹಿಂದು ಮುಂದು ನೋಡುತ್ತಿರುವಾಗ ಈ ಚಿತ್ರ ಈಗಲೇ ರಿಲೀಸ್‌ ಆಗುತ್ತಿರುವುದು ಸಾಹಸ. ಸದ್ಯ ರಿಲೀಸ್‌ ಗೆ ರೆಡಿಯಾಗಿರುವ ಚಿತ್ರ ತಂಡ ಥ್ರಿಲ್‌ ಹುಟ್ಟಿಸುವ ಟ್ರೇಲರ್‌ ಮೂಲಕ ಕುತೂಹಲ ಹುಟ್ಟಿಸಿದೆ. ಜೀವನಲ್ಲಿ ಭಯ ಇರಬೇಕು, ಆದ್ರೆ ಭಯವೇ ಜೀವನವಲ್ಲ ಎನ್ನುವ ಸಂಭಾಷಣೆಯೇ ಹೇಳುತ್ತೆ ಇದೊಂದು ಪಕ್ಕಾ ಹಾರರ್‌ ಸಿನಿಮಾ ಅಂತ. ಅದು ಹೇಗೆ ಅಂತ ಸಿನಿಮಾ ನೋಡಿದಾಗಲೇ ಗೊತ್ತಾಗಲಿದೆ.

Categories
ಸಿನಿ ಸುದ್ದಿ

ನಿರ್ಮಾಪಕರ ಸಂಘದ ಬಹುದಿನದ ಕನಸು ನನಸಾಗುವ ಸಮಯ

ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ನಾಳೆ(ಡಿ.೧೦) ಶಂಕುಸ್ಥಾಪನೆ

ಸಾಂದಾರ್ಬಿಕ ಚಿತ್ರ

ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಬಹುದಿನದ ಕನಸು ನನಸಾಗುತ್ತಿದೆ. ಸಂಘವು ತನ್ನದೇ ಸುಸಜ್ಜಿತವಾದ ಕಟ್ಟಡ ಹೊಂದಬೇಕೆನ್ನುವ ಬಹುದಿನದ ಆಸೆ ಕೊನೆಗೂ ಈಡೇರುತ್ತಿದೆ. ಬೆಂಗಳೂರಿನ ಶೇಷಾದ್ರಿಪುರಂನ ಶಿವಾನಂದ ಸರ್ಕಲ್‌ ಬಳಿ ಇರುವ ಸಂಘದ ಅಧಿಕೃತ ನಿವೇಶನದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ ಕಾರ್ಯಕ್ಕೆ ನಾಳೆ( ಡಿಸೆಂಬರ್‌ ೧೦) ಬೆಳಗ್ಗೆ ಶಂಕುಸ್ಥಾಪನೆ ಕಾರ್ಯಕ್ರಮ ನೆರವೇರಲಿದೆ. ಚಿತ್ರೋದ್ಯಮಕ್ಕೆ ಸದಾ ಸಹಕಾರ ನೀಡುತ್ತಾ ಬಂದಿರುವ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ ಅವರು, ಕಟ್ಟಡ ನಿರ್ಮಾಣ ಕಾರ್ಯಕ್ಕೆ ಶಂಕುಸ್ಥಾಪನೆ ನೆರವೇರಸಲಿದ್ದು, ಇದಕ್ಕೆ ಚಿತ್ರೋದ್ಯಮದ ಗಣ್ಯಾತೀಗಣ್ಯರು ಸಾಕ್ಷಿಯಾಗಲಿದ್ದಾರೆ.

ಮುಖ್ಯಮಂತ್ರಿ ಬಿ. ಎಸ್.‌ ಯಡಿಯೂರಪ್ಪ ಅವರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದನ್ನು ಸಂಘದ ಅಧ್ಯಕ್ಷ ಪ್ರವೀಣ್‌ ಕುಮಾರ್‌ ಖಚಿತಪಡಿಸಿದ್ದು, ಕೊನೆಗೂ ಸಂಘದ ಬಹುದಿನದ ಕನಸು ನನಸಾಗುತ್ತಿರುವುದು ಸಂತಸ ಮೂಡಿಸಿದೆ ಎನ್ನುತ್ತಾರೆ.ಸಂಘವೇ ಖರೀದಿಸಿಟ್ಟುಕೊಂಡಿದ್ದ ವಿಶಾಲವಾದ ಜಾಗದಲ್ಲಿ ವಿಶೇಷ ವಿನ್ಯಾಸದ ಸುಸಜ್ಜಿತ ಕಟ್ಟಡ ನಿರ್ಮಾಣದ ಕನಸು ಹೊತ್ತಿರುವ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘವು, ಅಲ್ಲಿ ಏನೆಲ್ಲ ಇರಬೇಕು ಎನ್ನುವುದರ ನೀಲಿ ನಕ್ಷೆಯನ್ನು ಸಿದ್ದ ಪಡಿಸಿಕೊಂಡಿದೆ. ಮಿನಿ ಚಿತ್ರಮಂದಿರ, ಕನ್ನಡ ಚಿತ್ರರಂಗ ನಡೆದು ಬಂದ ಹಾದಿಗೆ ಸಂಬಂಧಿಸಿದ ಪುಸ್ತಕ ಹಾಗೂ ಡಿವಿಡಿಗಳ ಸಂಗ್ರಹಾಲಯದ ಜತೆಗೆ ಸಿನಿಮಾ ನಿರ್ಮಾಣಕ್ಕೆ ಪೂರಕವಾಗುವ ಇತರೆ ಸೌಲಭ್ಯಗಳು ಅಲ್ಲಿ ಲಭ್ಯ ಇರುವಂತೆ ನೋಡಿಕೊಳ್ಳುವ ಬಗ್ಗೆಯೂ ಚಿಂತನೆ ನಡೆಸಿದೆಯಂತೆ. ಇನ್ನು ಕನ್ನಡ ಚಿತ್ರರಂಗದ ಇತರೆ ಸಂಘ ಸಂಸ್ಥೆಗಳಿಗೆ ಇರುವಷ್ಟೇ ಇತಿಹಾಸ ಕನ್ನಡ ಚಲನ ಚಿತ್ರ ನಿರ್ಮಾಪಕರ ಸಂಘಕ್ಕೂ ಇದೆ.

 

ಇದು ನನ್ನ ಸೌಭಾಗ್ಯ. ನಾನು ಅಧ್ಯಕ್ಷನಾದ ಸಂದರ್ಭದಲ್ಲಿ ಸಂಘದ ಸ್ವಂತ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರುತ್ತಿದೆ, ಹಾಗೆಯೇ ಕಟ್ಟಡ ನಿರ್ಮಾಣ ಆಗುತ್ತಿದೆ ಎನ್ನುವುದು ಖುಷಿ ತಂದಿದೆ. ಹಾಗಂತ ನಾನೊಬ್ಬನೇ ಇದಕ್ಕೆ ಕಾರಣ ಆಲ್ಲ. ಆರಂಭದಿಂಲೂ ಇದಕ್ಕೆ ಹಲವು ಗಣ್ಯರು ಶ್ರಮಿಸಿದ್ದಾರೆ. ನಿರ್ಮಾಪಕ ಮುನಿರತ್ನ ಆವರು ನಿವೇಶನಕ್ಕಾಗಿ ಶ್ರಮಿಸಿದ್ದಾರೆ. ಅವರ ಪಟ್ಟ ಪರಿಶ್ರಮದ ಫಲದಿಂದಾಗಿ ಇವತ್ತು ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಾಣ ಆಗುತ್ತಿದೆ. ಈ ಹೊತ್ತಲ್ಲಿ ಸಂಘಕ್ಕೆ ನಾನು ಅಧ್ಯಕ್ಷ ಅನ್ನೋದು ನನ್ನ ಹೆಮ್ಮೆ. – ಪ್ರವೀಣ್‌ ಕುಮಾರ್‌, ಸಂಘದ ಅಧ್ಯಕ್ಷ

ಸಾಂದಾರ್ಬಿಕ ಚಿತ್ರ

 

ಚಿತ್ರರಂಗದಲ್ಲಿನ ನಿರ್ಮಾಪಕರ ಹಿತ ಕಾಪಾಡುವ ಸಲುವಾಗಿ ೧೯೮೨ ರಲ್ಲಿ ಈ ಸಂಘವು ಆಸ್ತಿತ್ವಕ್ಕೆ ಬಂತು. ನಿರ್ಮಾಪಕಿ ಪಾರ್ವತಮ್ಮ ರಾಜ್‌ ಕುಮಾರ್‌ ನೇತೃತ್ವದಲ್ಲಿ ಅಂದು ಅಸ್ತಿತ್ವಕ್ಕೆ ಬಂದ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘಕ್ಕೆ ಎಚ್.ಎಂ.ಕೆ. ಮೂರ್ತಿ ಮೊದಲ ಅಧ್ಯಕ್ಷರಾದರು. ಆನಂತರ ಬಿ.ಎಂ. ವೆಂಕಟೇಶ್‌, ಶಾಸ್ತ್ರಿ, ಬಸಂತ್‌ ಕುಮಾರ್‌ ಪಾಟೀಲ್‌, ಸಂದೇಶ್‌ ನಾಗರಾಜ್‌ ಅಧ್ಯಕ್ಷರಾದರು. ಆನಂತರ ಸಂಘಕ್ಕೆ ಹಾಲಿ ಶಾಸಕ ಹಾಗೂ ನಿರ್ಮಾಪಕ ಮುನಿರತ್ನ ಅವರು ಆಧ್ಯಕ್ಷರಾದಾಗ ಸಂಘಕ್ಕೆ ಒಂದು ಸ್ವಂತ ಕಟ್ಟಡ ಬೇಕು, ಅದಕ್ಕೆ ಮೊದಲು ನಿವೇಶನ ಬೇಕು ಎನ್ನುವ ಚರ್ಚೆ ನಡೆಯಿತು. ಸಂಘದ ಇತರೆ ಪದಾಧಿಕಾರಿಗಳ ಸಹಕಾರದೊಂದಿಗೆ ಮುನಿರತ್ನ ಅವರೇ ಹೆಚ್ಚು ಆಸಕ್ತಿ ವಹಿಸಿ, ಬೆಂಗಳೂರಿನ ಶಿವಾನಂದ ಸರ್ಕಲ್‌ ಬಳಿಯೇ ಒಂದು ನಿವೇಶನ ಒದಗಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಅಲ್ಲಿಂದೀಗ ನಿರ್ಮಾಪಕ ಪ್ರವೀಣ್‌ ಕುಮಾರ್‌ ಅಧ್ಯಕ್ಷರಾಗಿದ್ದು, ಆವರ ಸೌಭಾಗ್ಯವೇ ಎನ್ನುವಂತೆ ಅವರ ಅವದಿಯಲ್ಲಿ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಚಾಲನೆ ಸಿಗುತ್ತಿದೆ. ಇದಕ್ಕೆ ನಿರ್ಮಾಪಕ ಪ್ರವೀಣ್‌ ಕುಮಾರ್‌ ಹರ್ಷ ವ್ಯಕ್ತಪಡಿಸಿದ್ದಾರೆ. ಇದೆಲ್ಲ ಸಂಘದ ಪದಾಧಿಕಾರಿಗಳ ಸಹಕಾರವೇ ಕಾರಣ ಎನ್ನುವುದು ಅವರ ಮಾತು.

ವಕೀಲರ ನೋಟಿಸ್‌ ಮೀರಿ ಬರ್ತಾರಾ ಸಿಎಂ?


ಕನ್ನಡ ಚಲನ ಚಿತ್ರ ನಿರ್ಮಾಪಕರ ಸಂಘದ ಪದಾಧಿಕಾರಿಗಳು ಶುಭ ಸಂದರ್ಭದಲ್ಲಿದ್ದಾರೆ. ಸಂಘಕ್ಕೆ ಸ್ವಂತ ಕಟ್ಟಡ ಬೇಕಿತ್ತು, ಅದೀಗ ಈಡೇರುತ್ತಿದೆ ಎನ್ನುವುದು ಅದಕ್ಕೆ ಕಾರಣ. ಆದು ಸಹಜವೂ ಹೌದು. ಒಂದು ಕಟ್ಟಡ ಬೇಕು ಅಂತ ಸಂಘದ ಪದಾಧಿಕಾರಿಗಳ ಆರಂಭದಿಂದಲೂ ಕಷ್ಟಪಟ್ಟಿದ್ದಾರೆ, ಆದರೆ ಅದಕ್ಕೆ ವಿಘ್ನ ಎನ್ನುವ ಹಾಗೆ ಸಂಘದ ಕಟ್ಟಡ ನಿರ್ಮಾಣ ಶಂಕು ಸ್ಥಾಪನೆ ಕಾರ್ಯಕ್ರಮಕ್ಕೆ ಸಿಎಂ ಯಡಿಯೂರಪ್ಪ ಭಾಗವಹಿಸುತ್ತಿರುವುದಕ್ಕೆ ವಕೀಲರ ಆಕ್ಷೇಪಣೆ ಇದೆ. ಸಂಘದ ಮೇಲಿರುವ ಆರೋಪಕ್ಕೆ ಸಂಬಂಧಿಸಿದಂತೆ ಜಿಲ್ಲಾ ಸಂಘಗಳ ನೊಂದಣಾಧಿಕಾರಿಗಳ ಮೂಲಕ ಹೈಕೋರ್ಟ್‌ ವಕೀಲರಾದ ಅಮೃತೇಶ್‌ ಅವರು ಮುಖ್ಯ ಮಂತ್ರಿ ಅವರಿಗೆ ಅಕ್ಷೇಪಣೆ ಪತ್ರ ಕಳುಹಿಸಿದ್ದಾರೆ. ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಚುನಾವಣೆ ಹಾಗೂ ಲೆಕ್ಕಪತ್ರ ವ್ಯವಹಾರಗಳಲ್ಲಿ ಲೋಪದೋಷಗಳಿವೆ. ಜಿಲ್ಲಾ ಸಂಘಗಳ ನೊಂದಣಾಧಿಕಾರಿಗಳ ಮುಂದೆ ಅವೀಗ ವಿಚಾರಣೆ ಹಂತದಲ್ಲಿವೆ.

Categories
ಆಡಿಯೋ ಕಾರ್ನರ್ ಸಿನಿ ಸುದ್ದಿ

ಹೊಸ ವರ್ಷಕ್ಕೆ ಚಂದನ್‌ ಶೆಟ್ಟಿ ಹೊಸ ಕಿಕ್‌ – ಪಾರ್ಟಿ ಫ್ರೀಕ್ ಹಾಡಲ್ಲಿ ನಿಶ್ವಿಕಾ ನಾಯ್ಡು ಸ್ಟೆಪ್‌

ಡಿಸೆಂಬರ್‌ 26ರಂದು ಯುನೈಟ್ ಆಡಿಯೋ ಮೂಲಕ ಬಿಡುಗಡೆ

ಕನ್ನಡದಲ್ಲಿ ಈಗಾಗಲೇ ಸಾಕಷ್ಟು ವಿಡಿಯೋ ಅಲ್ಬಂ ಸಾಂಗ್‌ ಬಂದಿವೆ. ಈಗಲೂ ಬರುತ್ತಿವೆ. ಆ ಸಾಲಿಗೆ ಈಗ ಮತ್ತೊಂದು ಹೊಸ ವಿಡಿಯೊ ಆಲ್ಬಂ ಸಾಂಗ್‌ ಬರಲು ಸಜ್ಜಾಗುತ್ತಿದೆ. ಅಂದಹಾಗೆ, ಅದೊಂದು ಪಾರ್ಟಿ ಫ್ರೀಕ್‌ ಹಾಡು. ಈ ಹಾಡಿನ ಮೂಲಕ ಹೊಸ ವರ್ಷದಲ್ಲಿ ಪಡ್ಡೆ ಹುಡುಗರಿಗೆ ಕಿಕ್‌ ಏರಿಸುವ ಪ್ರಯತ್ನ ನಡೆಯುತ್ತಿದೆ. ಇಂಥದ್ದೊಂದು ಪ್ರಯತ್ನಕ್ಕೆ ಕೈ ಹಾಕಿರೋದು, ಗಾಯಕ ಕಮ್‌ ಸಂಗೀತ ನಿರ್ದೇಶಕ ಚಂದನ್‌ ಶೆಟ್ಟಿ.

ಚಂದನ್‌ ಶೆಟ್ಟಿ

ಈ ಹಿಂದೆ ಚಂದನ್‌ ಶೆಟ್ಟಿ “ಮೂರೇ ಮೂರು ಪೆಗ್ಗಿಗೆ…” ., “ಟಕೀಲಾ…” ಎಂಬ ಪಾರ್ಟಿ ಸಾಂಗ್‌ ಮಾಡುವ ಮೂಲಕ ಸುದ್ದಿಯಾಗಿದ್ದರು. ಆ ಬಳಿಕ ಅವರು ಬೇರೆ ಜಾನರ್‌ ಹಾಡುಗಳನ್ನು ಮಾಡಿ, ಬಿಡುಗಡೆ ಮಾಡಿದ್ದರು. ಆದರೆ, ಚಂದನ್‌ ಶೆಟ್ಟಿ ಅವರು, ಪಾರ್ಟಿ ಸಾಂಗ್‌ ಯಾವಾಗ ಮಾಡುತ್ತಾರೆ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಈ ಬಾರಿ ಅವರು ಹಲವು ವಿಶೇಷಗಳೊಂದಿಗೆ ಬರುತ್ತಿದ್ದಾರೆ. ಈ ಹಾಡಿನ ವಿಶೇಷವೆಂದರೆ, ಕನ್ನಡದ ಜೊತೆಗೆ ತೆಲುಗಿನಲ್ಲಿಯೂ ಈ ಹಾಡು ಮೂಡಿ ಬರಲಿದ್ದು, ಅದ್ಧೂರಿ ವೆಚ್ಚದಲ್ಲಿ, ಕಲಲರ್‌ ಫುಲ್‌ ಆಗಿ ಎರಡು ದಿನಗಳ ಕಾಲ ಹಾಡಿನ ಚಿತ್ರೀಕರಣ ನಡೆಸಲು ತಯಾರಿ ನಡೆದಿದೆ. ಶೂಟಿಂಗ್ ನಡೆಯಲಿದೆ. ಸ್ಟಾರ್‌ ಹೋಟೆಲ್ ಮತ್ತು ಪಬ್‌ ಗಳಲ್ಲಿ ಈ ಹಾಡಿನ ಚಿತ್ರೀಕರಣ ನಡೆಯಲಿದೆ.

ನಿವೇದಿತಾ ಗೌಡ

ಈ ಹೊಸ ವಿಡಿಯೋ ಆಲ್ಬಂ ಸಾಂಗ್‌ಗೆ “ಪಾರ್ಟಿ ಫ್ರೀಕ್” ಎಂಬ ಹೆಸರಿಟ್ಟಿದ್ದಾರೆ. ಇನ್ನು, ಚೈತನ್ಯ ಲಕಂಸಾನಿ ಅವರು ಈ ವಿಡಿಯೋ ಸಾಂಗ್‌ ನಿರ್ಮಾಣ ಮಾಡುತ್ತಿದ್ದಾರೆ. ಚಂದನ್ ಶೆಟ್ಟಿ ಸಂಗೀತ ನೀಡಿ, ಸಾಹಿತ್ಯ ಬರೆದು ಹಾಡಿದ್ದಾರೆ ಕೂಡ. ಅಷ್ಟೇ ಅಲ್ಲ, ಆ ಹಾಡಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ನಟಿ ನಿಶ್ವಿಕಾ ನಾಯ್ಡು ಈ ಹಾಡಲ್ಲಿ ಸ್ಟೆಪ್‌ ಹಾಕುತ್ತಿರುವುದು ಮತ್ತೊಂದು ವಿಶೇಷ. ಇನ್ನೊಂದು ವಿಶೇಷವೆಂದರೆ, ಚಂದನ್ ಶೆಟ್ಟಿ ಪತ್ನಿ ನಿವೇದಿತಾ ಗೌಡ ಅವರು ಕೂಡ ಈ ಹಾಡಲ್ಲಿ ಹೆಜ್ಜೆ ಹಾಕಲಿದ್ದಾರೆ. ವಿಶೇಷ ಪಾತ್ರದಲ್ಲಿ ನಟ ಧರ್ಮ ಅವರೂ ಇಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಹಾಡಿಗೆ ಶ್ರೀಶ ಕುದುವಳ್ಳಿ ಛಾಯಾಗ್ರಹಣ ಮಾಡಿದರೆ, ಅಜಿತ್ ಶ್ರೀರವಿ ವಸ್ತ್ರ ವಿನ್ಯಾಸ ಮಾಡಲಿದ್ದಾರೆ. ಹಾಡಿಗೆ ಮೋಹನ್ ಮಾಸ್ಟರ್ ನೃತ್ಯ ನಿರ್ದೇಶನ ಮಾಡಲಿದ್ದಾರೆ. ಈ ಹಾಡನ್ನು ಡಿಸೆಂಬರ್‌ 26 ರಂದು ಯುನೈಟ್ ಆಡಿಯೋದಲ್ಲಿ ಬಿಡುಗಡೆಯಾಗಲಿದೆ.

ನಿಶ್ವಿಕಾ ನಾಯ್ಡು
Categories
ಸಿನಿ ಸುದ್ದಿ

ಅನುರಾಗ ಸಂಗಮಕ್ಕೆ  25ವರ್ಷದ ಸಂಭ್ರಮ

ಯಶಸ್ಸಿಗೆ ಕಾರಣರಾದವರಿಗೆ ಧನ್ಯವಾದ ಹೇಳಿದ ಕುಮಾರ್‌ ಗೋವಿಂದ್‌

 

ನಟ ಕುಮಾರ್‌ ಗೋವಿಂದ್‌  ಖುಷಿಯಲ್ಲಿದ್ದಾರೆ. ಅದಕ್ಕೆ ಕಾರಣ ” ಅನುರಾಗ ಸಂಗಮ” ಚಿತ್ರ. ಕುಮಾರ್‌ ಗೋವಿಂದ್‌, ರಮೇಶ್‌, ಸುಧಾರಾಣಿ ಹಾಗೂ ಬಿ. ಸರೋಜಾ ದೇವಿ ಅಭಿನಯದ ” ಅನುರಾಗ ಸಂಗಮ”  ಚಿತ್ರ ತೆರೆ ಕಂಡು ಸೋಮವಾರಕ್ಕೆ 25 ವಸಂತ ತುಂಬಿತು. ಇದೇಕಾರಣಕ್ಕೆ ನಟ ಕುಮಾರ್‌ ಗೋವಿಂದ್‌ ಸಂತಸ ವ್ಯಕ್ತಪಡಿಸಿದ್ದು, ಆಗ ಚಿತ್ರದ ಯಶಸ್ಸಿಗೆ ಶ್ರಮಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ವಿ. ಉಮಾಕಾಂತ್ ನಿರ್ದೇಶನದಲ್ಲಿ‌ ಮೂಡಿಬಂದಿದ್ದ ” ಅನುರಾಗ ಸಂಗಮ ” ಚಿತ್ರವು 1995ಡಿಸೆಂಬರ್ 8 ರಂದು ತೆರೆ ಕಂಡಿತ್ತು.‌

ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ಈ ಚಿತ್ರವು ೨೫ ವಾರಗಳ ಯಶಸ್ವಿ ಪ್ರದರ್ಶನ ಕಂಡಿತ್ತು. ವಿ. ಮನೋಹರ್‌ ಸಂಗೀತ ನಿರ್ದೇಶನದ ಈ ಚಿತ್ರದಲ್ಲಿ ಎಸ್ ಪಿಬಿ ಹಾಗೂ ರಮೇಶ್‌ ಚಂದ್ರ ಹಾಡಿದ್ದ ಹಾಡುಗಳು ಈಗಲೂ ಬಲು ಜನಪ್ರಿಯ. ಅಷ್ಟೇ ಅಲ್ಲ, ಗಾಯಕ ರಮೇಶ್‌ ಚಂದ್ರ ಅವರಿಗೆ ಈ ಚಿತ್ರದ ಗೀತೆಯ ಮೂಲಕ ರಾಜ್ಯ ಪ್ರಶಸ್ತಿಯೂ ಬಂತು. ಭಾರತದ ಇತರ ಭಾಷೆಗಳಿಗೂ ಈ ಚಿತ್ರದ ರಿಮೇಕ್ ಹಕ್ಕು ಮಾರಾಟವಾಗಿ ಅಲ್ಲೂ ಯಶಸ್ವಿಯಾಗಿದೆ. ಎಸ್.ಕೆ ಫಿಲಂಸ್ ಮೂಲಕ ಡಿ. ಗೋವಿಂದಪ್ಪ ಈ ಚಿತ್ರ ನಿರ್ಮಾಣ ಮಾಡಿದ್ದರು. ನಟ ಕುಮಾರ್‌ ಗೋವಿಂದ್‌ ಆವರಿಗೂ ಈ ಚಿತ್ರ ಭರ್ಜರಿ ವರ್ಚಸ್ಸು ತಂದುಕೊಟ್ಟಿದ್ದು ಗಮನಾರ್ಹ.ಈ ಹಿನ್ನೆಲೆಯಲ್ಲಿ ಅವರು ಅಂದು ʼ ಅನುರಾಗ ಸಂಗಮʼ  ಚಿತ್ರದ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ ನಟ ಕುಮಾರ್‌ ಗೋವಿಂದ್.

Categories
ಸಿನಿ‌ ಆ್ಯಡ್ ಸಿನಿ ಸುದ್ದಿ

ಲಂಕಾಸುರನ ಆರ್ಭಟ ಶುರು -ವಿನೋದ್‌ ಪ್ರಭಾಕರ್‌ ಹೊಸ ಚಿತ್ರಕ್ಕೆ ಭರಪೂರ ಮೆಚ್ಚುಗೆ

ಮಾಸ್‌ ಟೈಟಲ್‌ – ಮಾಸ್‌ ಹೀರೋ!

ವಿನೋದ್‌ ಪ್ರಭಾಕರ್‌ ಸದ್ಯಕ್ಕೆ ಸುದ್ದಿಯಲ್ಲಿರುವ ಹೀರೋ..!
-ಹೌದು, ಈ ಮಾತು ಹೇಳೋಕೆ ಕಾರಣ, ದರ್ಶನ್‌ ಅಭಿನಯದ “ರಾಬರ್ಟ್‌” ಸಿನಿಮಾದಲ್ಲಿ ವಿನೋದ್‌ ಪ್ರಭಾಕರ್‌ ಕೂಡ ಮುಖ್ಯ ಆಕರ್ಷಣೆ. ಈ ಚಿತ್ರ ಒಂದಷ್ಟು ನಿರೀಕ್ಷೆ ಕೂಡ ಮೂಡಿಸಿದೆ. “ನವಗ್ರಹ” ಸಿನಿಮಾದಲ್ಲಿ ವಿನೋದ್‌ ಪ್ರಭಾಕರ್‌ ಅವರು ದರ್ಶನ್‌ ಜೊತೆ ನಟಿಸಿದ್ದರು. ಅದಾದ ಬಳಿಕ ಈಗ ತರುಣ್‌ ಸುಧೀರ್‌ ನಿರ್ದೇಶನದ, ಉಮಾಪತಿ ನಿರ್ಮಾಣದ “ರಾಬರ್ಟ್”‌ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಆ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಅದಕ್ಕೂ ಮುನ್ನವೇ ವಿನೋದ್‌ ಪ್ರಭಾಕರ್‌ ಅವರು, “ಲಂಕಾಸುರ” ಎಂಬ ಹೊಸ ಚಿತ್ರ ಒಪ್ಪಿಕೊಂಡಿದ್ದಾರೆ. ಇತ್ತೀಚೆಗೆ ಅವರ ಹುಟ್ಟುಹಬ್ಬವಿತ್ತು. ಕೊರೊನಾ ಹಿನ್ನೆಲೆಯಲ್ಲಿ ವಿನೋದ್‌ ಪ್ರಭಾಕರ್‌ ಅವರು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದೆ, ತಮ್ಮ ಅಭಿಮಾನಿಗಳಿಗೂ ಕೇಕ್‌, ಹಾರ, ಇತ್ಯಾದಿ ಯಾವುದನ್ನೂ ತರಬಾರದು. ಸರಳವಾಗಿಯೇ ಸಂಭ್ರಮಿಸಬೇಕು ಎಂದು ಮನವಿ ಮಾಡಿದ್ದರು. ಅವರ ಮನವಿಗೆ ಓಗೊಟ್ಟ ಅಭಿಮಾನಿಗಳು ಇದ್ದಲ್ಲಿಯೇ ಸರಳವಾಗಿ ವಿನೋದ್‌ ಪ್ರಭಾಕರ್‌ ಹುಟ್ಟುಹಬ್ಬ ಆಚರಿಸಿ, ಶುಭಕೋರಿದ್ದರು.
ಇನ್ನು, ವಿನೋದ್‌ ಪ್ರಭಾಕರ್‌ ಹುಟ್ಟುಹಬ್ಬದಂದು ಹೊಸ ಸಿನಿಮಾ ಕೂಡ ಅನೌನ್ಸ್‌ ಮಾಡಿದ್ದು ವಿಶೇಷ.


“ಲಂಕಾಸುರ” ಇದು ವಿನೋದ್‌ ಪ್ರಭಾಕರ್‌ ಅವರ ಹೊಸ ಚಿತ್ರದ ಹೆಸರು. ಬರ್ತ್‌ಡೇಗೆ ಚಿತ್ರದ ಶೀರ್ಷಿಕೆ ಬಿಡುಗಡೆಯಾಗಿದೆ. ಸಂಕ್ರಾಂತಿ ಹಬ್ಬದಂದು ಚಿತ್ರೀಕರಣ ಶುರುವಾಗಲಿದೆ. ಈ ಚಿತ್ರದಲ್ಲಿ ವಿನೋದ್ ಪ್ರಭಾಕರ್ ಅವರಿಗೆ ನಾಯಕಿಯಾಗಿ ಪಾರ್ವತಿ ಅರುಣ್ ಕಾಣಿಸಿಕೊಳ್ಳುತ್ತಿದ್ದಾರೆ. ಎ.ಎಂ.ಎಸ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಹೇಮಾವತಿ ಮುನಿಸ್ವಾಮಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಹಿಂದೆ “ಮೂರ್ಕಲ್ ಎಸ್ಟೇಟ್” ಚಿತ್ರವನ್ನು ನಿರ್ದೇಶಿಸಿದ್ದ, ಪ್ರಮೋದ್ ಕುಮಾರ್ ಅವರು ಈಗ ವಿನೋದ್‌ ಪ್ರಭಾಕರ್‌ ಅವರಿಗೆ “ಲಂಕಾಸುರ” ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ‌ಇತ್ತೀಚೆಗೆ “ಎ೨” ಚಾನೆಲ್‌ ಮೂಲಕ “ಲಂಕಾಸುರ” ಚಿತ್ರದ ಶೀರ್ಷಿಕೆ ಬಿಡುಗಡೆಯಾಗಿದ್ದು, ಸಾಕಷ್ಟು ಮೆಚ್ಚುಗೆ ಪಡೆಯುತ್ತಿದೆ. ವಿಶೇಷವೆಂದರೆ, ಬಿಡುಗಡೆಗೊಂಡ ಕೇವಲ ಮೂರು ದಿನಗಳಲ್ಲಿ ೧೫೦ಕೆ ವೀಕ್ಷಣೆಗೊಂಡಿರುವುದು ಚಿತ್ರತಂಡಕ್ಕೆ ಮತ್ತಷ್ಟು ಹೆಮ್ಮೆ ಎನಿಸಿದೆ. ವಿಜೇತ್ ಕೃಷ್ಣ ಸಂಗೀತ ನೀಡಲಿರುವ ಈ ಚಿತ್ರಕ್ಕೆ ಸುಜ್ಞಾನ್ ಕ್ಯಾಮೆರಾ ಹಿಡಿಯಲಿದ್ದಾರೆ.

Categories
ಸಿನಿ ಸುದ್ದಿ

ಯಶ್‌ ನ್ಯೂ ಲುಕ್‌ ರಿವೀಲ್- ಕ್ಲೈಮ್ಯಾಕ್ಸ್‌ ಹಂತದಲ್ಲಿ ಕೆಜಿಎಫ್‌-2

ಭುವನ್‌ ಗೌಡ ಸೆರೆಹಿಡಿದ ಫೋಟೋ ಇದು…

ಸದ್ಯಕ್ಕೆ‌ಭಾರತೀಯ ಚಿತ್ರರಂಗದ‌ಮಟ್ಟಿಗೆ ಹೇಳುವುದಾದರೆ, ಬಹು‌ನಿರೀಕ್ಷಿತ ಚಿತ್ರಗಳ‌ ಸಾಲಿನಲ್ಲಿ ಹೆಚ್ಚು ಕುತೂಹಲ ‌ಮೂಡಿಸಿದ ಚಿತ್ರ ಕೆಜಿಎಫ್ ಭಾಗ 2 . ಅದಕ್ಕೆ ‌ಕಾರಣ, ಅದರ ಮೊದಲ ಭಾಗದ ಬಹು ದೊಡ್ಡ ಯಶಸ್ಸು. ಸದ್ಯಕ್ಕೆ “ಕೆಜಿಎಫ್ ಭಾಗ-2”

ಚಿತ್ರದ ಚಿತ್ರೀಕರಣ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಇಷ್ಟಾಗಿಯೂ ಈ ಚಿತ್ರದ ಒಂದೇ ಅಧಿಕೃತ ಲುಕ್ ಬಿಡುಗಡೆ ಆಗಿರಲಿಲ್ಲ.

 

ಆದರೆ‌ ಇದೇ ಮೊದಲು ಚಿತ್ರದ ನಾಯಕ ನಟ ರಾಕಿಂಗ್ ಸ್ಟಾರ್ ಯಶ್, ತಮ್ಮ ಪಾತ್ರದ ಒಂದು‌ ಹೊಸ ಲುಕ್ ರಿವೀಲ್ ಮಾಡಿದ್ದಾರೆ. ಇದನ್ನು ಖ್ಯಾತ ಛಾಯಾಗ್ರಾಹಕ ಭುವನ್ ಗೌಡ ಸೆರೆ ಹಿಡಿದಿದ್ದು, ಅದನ್ನು ತಮ್ಮ ಟ್ವಿಟ್ಟರ್‌ ನಲ್ಲಿ  ಹಂಚಿಕೊಂಡಿರುವ ನಟ ಯಶ್, ಅದಕ್ಕೊಂದು‌ ವಿವರಣೆ‌ ಕೂಡ ಕೊಟ್ಟಿದ್ದಾರೆ.

Categories
ಸಿನಿ ಸುದ್ದಿ

ಹಣ ಮಾಡೋದಿಕ್ಕೆ ನಾನ್ ಈ ಸಿನ್ಮಾ‌‌ ಮಾಡಿಲ್ಲ- ಡಾ. ಜಾಕ್ಲಿನ್ ಫ್ರಾನ್ಸಿಸ್

ಚಿತ್ರ ತಂಡದ‌ ಭವಿಷ್ಯಕ್ಕೆ‌ ಸಿನಿಮಾ‌‌ ನಿರ್ಮಾಣ ಮಾಡಿದೆ ಅಂದ‌‌‌ ನಾನೊಂಥರ ನಿರ್ಮಾಪಕಿ 

ಹಣ ಮಾಡ್ಬೇಕು‌ ಅನ್ನೋದಲ್ಲ,‌ ನನ್ನಿಂದ ಒಂದಷ್ಟು ಜನರಿಗೆ ಉಪಯೋಗ ಆಗುತ್ತೆ ಅನ್ನೋದೇ ‘ ನಾನೊಂಥರ’ ‌ಹೆಸರಿನ ಚಿತ್ರ ನಿರ್ಮಾಣ ಮಾಡಿದ್ದಕ್ಕೆ ಇರೋ ಮುಖ್ಯ ಕಾರಣ…

ವೃತ್ತಿಯಲ್ಲಿ ನೀವು ವೈದ್ಯರು.‌ ಅಲ್ಲಿಯೇ ಸಾಕಷ್ಟು ಕೆಲಸ, ಕೈ ತುಂಬಾ ಸಂಪಾದನೆ‌ಯಿದೆ.‌ ಅಷ್ಟಾಗಿಯೂ ಈ ಸಿನಿ‌ ದುನಿಯಾಕ್ಕೆ ನಿರ್ಮಾಪಕರಾಗಿ ಯಾಕೆ ಬಂದ್ರಿ ಎನ್ನುವ ಪ್ರಶ್ನೆಗೆ ಡಾ.‌ಜಾಕ್ಲಿನ್ ಫ್ರಾನ್ಸಿಸ್ ಕೊಟ್ಟ ಉತ್ತರ ಹೀಗಿತ್ತು.

ಅಂದ ಹಾಗೆ, ‘ನಾನೊಂಥರ’ ಅನ್ನೋದು ಹೊಸಬರ ಚಿತ್ರ. ನಿರ್ದೇಶಕರು, ನಿರ್ಮಾಪಕರು, ಕಲಾವಿದರು ಸೇರಿದಂತೆ ಎಲ್ಲರೂ ಹೊಸಬರು. ಸಿನಿಮಾ ಮೇಲಿನ ಆಸಕ್ತಿಯಿಂದ ಹೊಸಬರೇ ಸೇರಿಕೊಂಡು ಮಾಡಿರುವ ಚಿತ್ರ. ಡಿಸೆಂಬರ್ 18 ಕ್ಕೆ  ತೆರೆಗೆ ಬರುತ್ತಿದೆ.

ಎಲ್ಲವೂ ಅಂದುಕೊಂಡಂತಾಗಿದ್ದರೆ ಈ ಚಿತ್ರವು ಕಳೆದ ಮಾರ್ಚ್ ತಿಂಗಳಲ್ಲೆ ತೆರೆಗೆ ಬರಬೇಕಿತ್ತು. ಇನ್ನೇನು ಚಿತ್ರ ತಂಡವು ತಾವು  ರಿಲೀಸ್ ಗೆ  ರೆಡಿ ಎಂದು ಅನೌನ್ಸ್ ಮಾಡುವ ಹೊತ್ತಿಗೆ ಕೊರೋನಾ ಬಂತು. ಚಿತ್ರರಂಗ ಬಂದ್ ಆಯ್ತು. ಪರಿಣಾಮ ಈಗ ‘ನಾನೊಂಥರ ‘ ಚಿತ್ರಕ್ಕೂ ಬಿಡುಗಡೆ ಭಾಗ್ಯ ಸಿಕ್ಕಿದೆ. ಕೊರೋನಾ ಭೀತಿಯ ನಡುವೆಯೇ ‘ ಆಕ್ಟ್ 1978’ ಚಿತ್ರ ಬಿಡುಗಡೆ ಆಗಿ ದೊಡ್ಡ ಸಕ್ಸಸ್ ಕಂಡ ಬೆನ್ನಲೇ ‘ ‘ನಾನೊಂಥರ ‘ ಚಿತ್ರವು ತೆರೆಗೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ನಿರ್ಮಾಪಕಿ ಡಾ.ಜಾಕ್ಲಿನ್‌ ಫ್ರಾನ್ಸಿಸ್ ಚಿತ್ರದ ವಿಶೇಷತೆ ಜತೆಗೆ ತಮ್ಮ ಹಿನ್ನೆಲೆ ಕುರಿತು’ ಸಿನಿಲಹರಿ ‘ಜತೆಗೆ ಮಾತನಾಡಿದರು.

ಜೈ ಸನ್, ಡಾ. ಜಾಕ್ಲಿನ್ ಫ್ರಾನ್ಸಿಸ್

ಬಾಲ್ಯದಿಂದಲೂ‌ ಇತ್ತು ಸಿನಿಮಾ ನಂಟು…

ನಾನೀಗ ವೃತ್ತಿಯಲ್ಲಿ ವೈದ್ಯೆ. ಆದರೆ ಸಿನಿಮಾ‌ ಅನ್ನೊದು ನನಗೆ ಬಾಲ್ಯದಿಂದಲೂ ಇರುವ ನಂಟು. 8 ನೇ ತರಗತಿಯಲ್ಲಿ ದ್ದಾಗಲೇ ನಾನು ರಾಜ್ ಕುಮಾರ್ ಅಭಿನಯದ’ ಧ್ರುವತಾರೆ ‘ಚಿತ್ರದಲ್ಲಿ ಬಾಲ ನಟಿಯಾಗಿ ಅಭಿನಯಿಸಿದ್ದೆ. ಅದು ಅಮ್ಮನ ಕಾರಣಕ್ಕೆ. ಯಾಕಂದ್ರೆ, ನನ್ನಮ್ಮನಿಗೆ ನಾನು ನಟಿಯಾಗಬೇಕೆನ್ನುವ ಹುಚ್ಚು. ಅದಕ್ಕೆ‌ಕಾರಣ ಬಟ್ಟೆ ಮೇಲೆ ನನಗಿದ್ದ ಮೋಹ. ತುಂಬಾ ಬಟ್ಟೆ ತೊಡುತ್ತಿದೆ. ಚಂದದ ಬಟ್ಟೆ ಕಂಡ್ರೆ ಅವುಗಳನ್ನು ಕೊಂಡು ತಂದುತೊಡುವುದು, ಶಾಲೆಗಳಲ್ಲಿನ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು‌ ನೋಡಿ, ನೀನು ನಟಿ ಆಗ್ಬೇಕು ಎನ್ನುತ್ತಿದ್ದರು. ಆಗಲೇ ಧ್ರುವತಾರೆ ಸಿನಿಮಾಕ್ಕೆ‌ ಬಾಲನಟಿಯಾಗಲು ಆಡಿಷನ್ಸ್ ಗೆ ಹೋದೆ. ಅದೃಷ್ಟವಶಾತ್ ಅಲ್ಲಿ ಆಯ್ಕೆಯಾದೆ . ರಾಜಕುಮಾರ್ ಸೇರಿದಂತೆದೊಡ್ಡ ಕಲಾವಿದರ ಜತೆಗೆ ಅಭಿನಯಿಸುವ ಅವಕಾಶ ಸಿಕ್ಕಿತು.‌ಅ ಹೊತ್ತಿಗೆ ನನ್ನ ಅಮ್ಮನ‌ ಆಸೆ ಕೂಡ ಈಡೇರಿತು.ಮುಂದೆ ಓದು ನನ್ನ ಟಾರ್ಗೆಟ್ ಆಯಿತು. ಅಂದುಕೊಂಡಂತೆ ಮೆಡಿಕಲ್ ಓದಿ‌ ಡಾಕ್ಟರ್ ಆದೆ.

ಚಿತ್ರದ ನಾಯಕ ತಾರಕ್, ನಾಯಕಿ ರಕ್ಷಿಕಾ

ಕತೆಗಿಂತ ಅವರ ಭವಿಷ್ಯ‌ ಮುಖ್ಯ ಎನಿಸಿತು…

‘ನಾನೊಂಥರ ‘ ಒಂದೊಳ್ಳೆಯ ಕಥಾ ಹಂದರದ ಚಿತ್ರ.‌ಒಂದಿನ‌ ನಿರ್ದೇಶಕ ರಮೇಶ್ ಹಾಗೂ ನಾಯಕ‌ ನಟ‌ ತಾರಕ್ ಮಿಟ್ ಮಾಡಿ ಕತೆ ಹೇಳಿದ್ರು. ಕತೆ ಹಾರ್ಟ್ ಗೆ ಟಚ್ ಆಗುವ ಹಾಗಿತ್ತು. ನಿರ್ಮಾಣಕ್ಕೆ ಬಂಡವಾಳ ಹಾಕಿದರೆ ನಷ್ಟ ಇಲ್ಲ ಅಂತೆನಿಸಿತು. ಪ್ರೇಕ್ಷಕರಿಗೂ ಒಂದೊಳ್ಳೆಯ ಸಿನಿಮಾ‌‌ಕೊಟ್ಟ ತೃಪ್ತಿ ಸಿಗಬಹುದು ಅಂತೆನಿಸಿತು.‌ಅದಕ್ಕಿಂತ ಮುಖ್ಯವಾಗಿ ನನಗೆ ಏನೇನೋ ಕನಸು ಹೊತ್ತು ಬಂದ ನಿರ್ದೇಶಕ ರಮೇಶ್ ಹಾಗೂ‌ ನಾಯಕ‌ನಟ ತಾರಕ್ ಅವರ ಭವಿಷ್ಯವೂ ಮುಖ್ಯ ಎನಿಸಿತು. ಅವರ ಕನಸಿಗೆ ಬೆಂಬಲವಾಗಿ ನಿಂತರೆ ಮುಂದೆ ಅವರು ಉನ್ನತ ಹಂತಕ್ಕೆ ಹೋಗಬಹುದು ಅಂತೆನಿಸಿತು. ಹಾಗಾಗಿ ಹಿಂದು ‌ಮುಂದು‌ನೋಡದೆ ಈ‌ಸಿನಿಮಾ‌ಕ್ಕೆ‌ ಬಂಡವಾಳ ಹಾಕುತ್ತೇನೆ ಅಂತ ಮಾತು‌ಕೊಟ್ಟೆ.‌ಅಲ್ಲಿಂದ ವೈದ್ಯಕೀಯ ಕ್ಷೇತ್ರದಲ್ಲಿದ್ದ ನಾನು ಸಿನಿಮಾ‌ ನಿರ್ಮಾಪಕಿ‌ ಎನ್ನುವ ಜವಾಬ್ದಾರಿ ಹೊತ್ತಿಕೊಂಡೆ.

ತಾರಕ್

ಎಲ್ಲರಿಗೂ ಇಷ್ಟವಾಗುವ ಸಿನಿಮಾ…

‘ನಾನೊಂಥರ’  ಎಲ್ಲರಿಗೂ ಇಷ್ಟವಾಗುವ ಸಿನಿಮಾ. ನಮ್ಮ‌ಸಿನಿ‌ಮಾ‌ ಎನ್ನುವ ಪ್ರೀತಿ, ಕಾಳಜಿ ಅಥವಾ ವ್ಯಾಮೋಹಕ್ಕೆ ನಾನೀ ಮಾತು ಹೇಳುತ್ತಿಲ್ಲ, ಇದರ ಕತೆಯೇ ಹಾಗಿದೆ. ಒಬ್ಬ ಕುಡುಕ ಗಂಡ, ಜವಾಬ್ದಾರಿಯುತ ಹೆಂಡತಿ‌ ಸುತ್ತಲ ಕತೆ ಪ್ರತಿಯೊಬ್ಬ ರ ಫ್ಯಾಮಿಲಿಗೂ ಕನೆಕ್ಟ್‌ಆಗುತ್ತೆ.‌ಅಲ್ಲಿ ಅದಷ್ಟೇ ಇಲ್ಲ. ಮಗನಿಗಾಗಿ‌ ಪರಿತಪಿಸುವ ತಂದೆ, ಕಟ್ಟಿಕೊಂಡವನನ್ನು‌ ಸರಿ ದಾರಿಗೆ ತರಲು ಪರದಾಡುವ ಹುಡುಗಿ, ಅಣ್ಣನಿಗಾಗಿ ಎಲ್ಲವನ್ನು ತ್ಯಾಗ ಮಾಡಿ ನಿಲ್ಲುವ ಸಹೋದರ.. ಹೀಗೆ ಪ್ರತಿ ಪಾತ್ರಗಳು ಅಲ್ಲಿ ಹೈಲೈಟ್ಸ್. ಇಂತಹದೊಂದು ಸಿನಿಮಾ ಮಾಡಿ, ಚಿತ್ರ ಮಂದಿರಕ್ಕೆ ತರುತ್ತಿರುವ ನಮಗೆ ಇಲ್ಲಿ ಎಲ್ಲವೂ ಹೊಸದು.‌ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ? ಚಿತ್ರ ತಂಡದ ಮುಂದಿನ‌ ಭವಿಷ್ಯವೇನು? ಒಂಥರ ಆತ‌ಂಕ, ಇನ್ನೊಂದೆಡೆ‌ ಚಿತ್ರ ಚೆನ್ನಾಗಿದೆ ಎನ್ನುವ ನಂಬಿಕೆ.

ಮಗ ಜೈಸನ್ ಮುಂದೆ ಹೀರೋ...

ಅದು ರಕ್ತಗತ ನಂಟೋ ಏನೋ ಗೊತ್ತಿಲ್ಲ. ನಾನು ಬಾಲ್ಯದಲ್ಲಿದ್ದಾಗ ನಾನು‌ನಟಿ ಆಗ್ಬೇಕು ಅನ್ನೊದು‌ನನ್ನಮ್ಮನ‌ಆಸೆ‌ ಆಗಿತ್ತು. ಅದೇ ಕಾರಣಕ್ಕೆ ನಾನು ಆಡಿಷನ್ಸ್ ಗೆ ಹೋಗಿ ಬಾಲ‌ ನಟಿ‌ಆಗಿ ಅಭಿನಯಿಸಿದೆ.‌ಈಗ ನನ್ನ‌ಮಗ ಕೂಡ ನಟ‌ನಾಗಿ‌ ನಿಮ್ಮ‌ಮುಂದೆ‌ ಬರುತ್ತಿದ್ದಾನೆ. ಹಾಗಂತ ಆತ ನಟ ಆಗ್ಬೇಕು‌ ಅನ್ನೋದು ನನ್ನಾಸೆ ಅಲ್ಲ. ಒತ್ತಡವೂ ಇಲ್ಲ. ಅದು ಆತನ ಆಸೆ.‌ ಒಬ್ಬ ತಾಯಿಯಾಗಿ ನಾನೀಗ ಆತನ‌ ಆಸೆ ಈಡೇರಿಸುತ್ತಿದ್ದೇನೆ. ಈ‌ ಚಿತ್ರದಲ್ಲಿ‌ಆತ ನಾಯಕನ ಸಹೋದರ. ಆತನ‌ವಯಸ್ಸಿಗೆ ಅದೊಂದು‌ಒಳ್ಳೆಯ ಪಾತ್ರ.‌ತುಂಬಾ ಚೆನ್ನಾಗಿ ಅಭಿನಯಿಸಿದ್ದಾನೆ. ಎಲ್ಲರಿಗೂ ಇಷ್ಟವಾಗಿದೆ.‌ಒಳ್ಳೆಯ ಕಲಾವಿದ ಆಗ್ತಾನೆ‌ ಅಂತ ಚಿತ್ರ‌ತಂಡ ಬೆನ್ನು ತಟ್ಟಿದೆ. ಮುಂದೆ ಆತನನ್ನು ಹೀರೋ‌ಆಗಿ‌ಪರಿಚಯಿಸಬೇಕೆನ್ನುವ ಹಂಬಲ ನಮಗೂ‌ ಇದೆ. ಎಲ್ಲದಕ್ಕೂ ಪ್ರೇಕ್ಷಕರ ಅಶೀರ್ವಾದ ಬೇಕು.

ಬಹು ದಿನಗಳ ನಂತರ ನಾನೂ‌ ಬಣ್ಣ ಹಚ್ಚಿದೆ…

ನಾನೊಂಥರ ಸಿನಿಮಾ ನನ್ನ ಮಟ್ಟಿಗೆ ಅತೀ‌ಮುಖ್ಯ.‌ ಯಾಕಂದ್ರೆ ಬಹು ದಿನಗಳ‌ನಂತರ ನಾನಗೂ ಸಿನಿಮಾ‌ ಜಗತ್ತಿಗೂ ಇದ್ದ  ನಂಟು ನೆನಪಿಸಿತು.‌ಹಾಗೆಯೇ ಪುತ್ರ ಕೂಡ ನಟನಾಗಿ ಪರಿಚಯವಾಗುತ್ತಿದ್ದಾನೆ.‌ಅದರ ಜತೆಗೆಯೇ ಹಲವು ವರ್ಷಗಳ ನಂತರ ನಾನೂ ಕೂಡ ಇಲ್ಲಿ ಬಣ್ಣ ಹೆಚ್ಚಿದೆ. ಅದೊಂದು ‌ಚಿಕ್ಕ ಪಾತ್ರ. ಚರ್ಚ್ ನ ಮದರ್ ಆಗಿ ಕಾಣಿಸಿಕೊಂಡಿದ್ದೇನೆ. ನಿರ್ದೇಶಕರು ಒಳ್ಳೆಯ ಪಾತ್ರ ಕೊಟ್ಟಿದ್ದಾರೆ. ನನಗೆ ಖುಷಿ ನೀಡುವ ಹಾಗೆ ಅಭಿನಯಿಸಿದ್ದೇನೆ ಎನ್ನುವ ನಂಬಿಕೆ ಇದೆ. ಉಳಿದಿದ್ದು ಪ್ರೇಕ್ಷಕರಿಗೆ ಬಿಟ್ಟಿದ್ದು.

ಪ್ರೇಕ್ಷಕರ ಆಶೀರ್ವಾದ ವೇ ನಮಗೆ ಮುಖ್ಯ…

ಹಣ ಮಾಡ್ಬೇಕು ಅಂತ ನಾನು ಈ ಸಿನಿಮಾಮಾಡಿಲ್ಲ. ತಂಡ ಭವಿಷ್ಯ ಚೆನ್ನಾಗಿರಲಿ ಅಂತ ಹಣ ಹಾಕಿದ್ದೇನೆ.‌ಇದು ಕೈ ಗೂಡಬೇಕಾದರೆ ಜನರ‌ ಆಶೀರ್ವಾದ ಬೇಕು.‌ಹಾಗಂತ ಸಿನಿಮಾ‌ಕೆಟ್ಟದ್ದಾಗಿದ್ದರೂ ಬಂದು ‌‌ಸಿನಿಮಾ‌ ನೋಡಿ‌‌ ಅಂತ ಹೇಳಲಾರೆ.‌ಸಿನಿಮಾ‌ ಚೆನ್ನಾಗಿದೆ.‌ಎಲ್ಲರಿಗೂ ಇಷ್ಟವಾಗುತ್ತೆ ಎನ್ನುವ ವಿಶ್ವಾಸವೇ ಅದಕ್ಕೆ ಕಾರಣ.

Categories
ಸಿನಿ ಸುದ್ದಿ

ಕಥೆ ಶಿಕಾರಿಯತ್ತ ಶ್ರೀಪ್ರಿಯಾ – ಭರತನಾಟ್ಯ ಪ್ರವೀಣೆಯ ಸಿನಿ ಪಯಣ

ಎಂಜಿನಿಯರ್‌ ಹುಡುಗಿಯ ಕಲಾನಂಟು

ಈ ಸಿನಿಮಾ ಅಂದರೇನೆ ಹಾಗೆ. ಕಪ್ಪು ಬಿಳಿ ಕಣ್ಣಿನಲಿ ಕಲರ್ ಫುಲ್ ಕನಸು ಕಟ್ಟಿಕೊಂಡು ಬರುವವರ ಸಂಖ್ಯೆಗೇನೂ ಇಲ್ಲಿ ಕಮ್ಮಿ ಇಲ್ಲ. ಅದೆಷ್ಟೋ ಪ್ರತಿಭೆಗಳು ಅಂಥದ್ದೊಂದು ಕನಸಿನೊಂದಿಗೆ ಈ ಸಿನಿರಂಗವನ್ನು ಅಪ್ಪಿಕೊಂಡಿದ್ದಾರೆ. ಚಿತ್ರರಂಗ ಕೂಡ ಕೆಲವರನ್ನು ಒಪ್ಪಿಕೊಂಡಿದೆ.

ಅಂತಹ‌ ಬಣ್ಣದ ಕನಸು ನಂಬಿ ಬಂದವರ ಪೈಕಿ ಶ್ರೀಪ್ರಿಯಾ ಸಹ ಒಬ್ಬರು. ಇಷ್ಟಕ್ಕೂ ಯಾರು ಈ ಶ್ರೀಪ್ರಿಯಾ ಅಂದರೆ, ಈಗಷ್ಟೇ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಗೊಂಡು ಸಾಕಷ್ಟು ಮೆಚ್ಚುಗೆ ಪಡೆಯುತ್ತಿರುವ ‘ಒಂದು ಶಿಕಾರಿಯ ಕಥೆ’ ಚಿತ್ರದ ನಟಿ. ಹೌದು, ಶ್ರೀಪ್ರಿಯಾ, ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗವನ್ನು ಸ್ಪರ್ಶಿಸಿದ್ದಾರೆ. ಈ ಚಿತ್ರದೊಳಗಿನ ಅವರ ಪಾತ್ರ ಕೂಡ ಗಮನ ಸೆಳೆದಿದೆ. ಹಾಗಾಗಿ ಶ್ರೀಪ್ರಿಯಾ ಅವರಿಗೀಗ ಮೊದಲ ಇನ್ನಿಂಗ್ಸ್ ನಲ್ಲೇ ಟ್ವೆಂಟಿ ಟ್ವೆಂಟಿ ಐಪಿಎಲ್ ಸೀರೀಸ್ ಗೆದ್ದಷ್ಟೇ ಖುಷಿ ಇದೆ. ಸದ್ಯ ತಮ್ಮ ಸಿನಿಪಯಣ ಕುರಿತು, ಶ್ರೀಪ್ರಿಯಾ ‘ಸಿನಿಲಹರಿ’ಜೊತೆ ಒಂದಷ್ಟು ಮಾತನಾಡಿದ್ದಾರೆ.

 

ಓವರ್ ಟು ಶ್ರೀಪ್ರಿಯಾ
‘ನಾನು ಮೂಲತಃ ಬೆಂಗಳೂರಿನ ಅಪ್ಪಟ ಕನ್ನಡದ ಹುಡುಗಿ. ಬೇಸಿಕಲಿ ನಾನೊಬ್ಬ ಎಂಜಿನಿಯರ್. ಅಷ್ಟೇ ಅಲ್ಲ, ಭರತನಾಟ್ಯ ಕಲಾವಿದೆ ಕೂಡ. ಚಿಕ್ಕಂದಿನಿಂದಲೂ ಭರತನಾಟ್ಯ ಕಲೆ‌ ಮೇಲೆ ಅಪಾರ ಪ್ರೀತಿ ಇದೆ. ಕಲಾರಂಗದಲ್ಲೇ ಏನಾದರೊಂದು ಸಾಧಿಸಬೇಕೆಂಬ ಆಸೆ ಇತ್ತು. ಹಾಗಾಗಿ ನಾನು ಭರತನಾಟ್ಯದಲ್ಲಿ ಮಾಸ್ಟರ್ ಡಿಗ್ರಿ ಕೂಡ‌ ಮಾಡಿದ್ದೇನೆ. ಜೊತೆಗೆ ನಾನು ಭರತನಾಟ್ಯ ಕ್ಲಾಸ್ ಕೂಡ ನಡೆಸುತ್ತಿದ್ದೇನೆ. ಹಲವು ಭರತನಾಟ್ಯ ಕಾರ್ಯಕ್ರಮ ಕೂಡ ಕೊಟ್ಟಿದ್ದೇನೆ.

ಈಗಲೂ ಕೊಡುತ್ತಿದ್ದೇನೆ. ಇನ್ನು‌ ಈ ಸಿನಿಮಾರಂಗದ ಮೇಲೆ ಆಸಕ್ತಿ ಹುಟ್ಟೋಕೆ ಕಾರಣ, ನಾನು ರಂಗಶಂಕರದಲ್ಲಿ ಮಾಡಿದ‌ ನಾಟಕ ಕೆಲಸ. ಇದರ ನಡುವೆಯೇ ನಾನು‌ ಮಾಡೆಲಿಂಗ್ ಕೂಡ ಶುರು ಮಾಡಿದೆ. ಅದಾದ ಮೇಲೆ ನಟನೆ‌ ಮೇಲೂ ಆಸಕ್ತಿ ಇತ್ತು. ರಂಗಭೂಮಿಯಲ್ಲಿ ಹಲವು ನಾಟಕ‌ ಪ್ರಯೋಗ ಮಾಡುತ್ತಲೆ ನಟನೆಯ ಮೇಲೆ ಹೆಚ್ಚು ಆಸಕ್ತಿ ತೋರಿದೆ. ಅಲ್ಲಿಂದಲೇ ಸಿನಿಮಾ ‌ಮಾಡುವ ಆಸೆ ಹೆಚ್ಚಾಯ್ತು.

ಹಲವಾರು ಸಿನಿಮಾಗಳಿಗೆ ಆಡಿಷನ್ ಕೊಡ್ತಾ ಇದ್ದೆ. ಹಾಗೆ ಒಂದು ಆಡಿಷನ್ ಮೂಲಕವೇ ‘ಒಂದು ಶಿಕಾರಿಯ ಕಥೆ’ ಸಿನಿಮಾಗೆ ಆಯ್ಕೆಯಾದೆ. ಆ ಚಿತ್ರದ ನಂತರ ‘ಎಂಥಾ ಕಥೆ ಮಾರಾಯ’ ಎಂಬ ಸಿನಿಮಾದಲ್ಲೂ ನಟಿಸುವ ಅವಕಾಶ ಸಿಕ್ತು. ಈ ಚಿತ್ರದಲ್ಲಿ ಲೀಡ್ ಪಾತ್ರ ನನ್ನದು. ಈಗಾಗಲೇ ಈ ಚಿತ್ರದ ಡಬ್ಬಿಂಗ್ ಮುಗಿದಿದೆ. “ಒಂದು ಶಿಕಾರಿಯ ಕಥೆ”ಯಲ್ಲಿ ಐದು ಪ್ರಮುಖ ಪಾತ್ರಗಳಲ್ಲಿ ನಾನೂ ಒಬ್ಬಳು. ಅಲ್ಲಿ ಕಥೆಯೇ ಎಲ್ಲವೂ ಆಗಿದೆ’ ಎಂದು ವಿವರ ಕೊಡುತ್ತಾರೆ ಶ್ರೀಪ್ರಿಯಾ.

ಇನ್ನು, ನಾನು ಚಿತ್ರರಂಗ ಪ್ರವೇಶಕ್ಕೂ ಮುನ್ನ “ಲಾಟರಿ” ಎಂಬ ಕಿರುಚಿತ್ರವೊಂದರಲ್ಲಿ ನಟಿಸಿದ್ದೆ. ಆ ಚಿತ್ರ ಬೆಂಗಳೂರು ಇಂಟರ್‌ನ್ಯಾಷನಲ್‌ ಶಾರ್ಟ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಪ್ರದರ್ಶನ ಕಂಡಿತ್ತು. ಈಗ ಒಂದಷ್ಟು ಸಿನಿಮಾಗಳ ಮಾತುಕತೆ ನಡೆಯುತ್ತಿದೆ. ಕೊರೊನಾ ಹಾವಳಿಯಿಂದಾಗಿ ಒಂದಷ್ಟು ಸಿನಿಮಾಗಳ ಮಾತುಕತೆ ಕೂಡ ಹಾಗೆಯೇ ನಿಂತಿತ್ತು. ಈಗ ಒಂದಷ್ಟು ಹೊಸ ಕಥೆಗಳು ಹುಡುಕಿ ಬರುತ್ತಿವೆ ಎನ್ನುವ ಶ್ರೀಪ್ರಿಯಾ, ಒಳ್ಳೆಯ ಕಥೆ, ಪಾತ್ರಗಳತ್ತ ಗಮನಹರಿಸುತ್ತಿದ್ದೇನೆ.

ಗ್ಲಾಮರ್‌ ಪಾತ್ರವಿದ್ದರೂ ಮಾಡ್ತೀನಿ. ಹಾಗಂತ ವಿನಾಕಾರಣ, ಗ್ಲಾಮರ್‌ ಬೇಡ ಅಂತಲ್ಲ, ಅದರೊಂದಿಗೆ ನಟನೆಗೂ ಅವಕಾಶ ಇರಬೇಕು. “ಒಂದು ಶಿಕಾರಿಯ ಕಥೆ” ಸಿನಿಮಾ ನೋಡಿದವರು ಗುರುತ್ತಿಸುತ್ತಿದ್ದಾರೆ. ಹಾಗೆ ಮನಸ್ಸಲ್ಲಿ ಉಳಿಯುವ ಪಾತ್ರ ಸಿಗಬೇಕು. ಕಥೆ ಡಿಮ್ಯಾಂಡ್‌ ಮಾಡಿದರೆ, ಮಾತ್ರ ಗ್ಲಾಮರ್‌ ಪಾತ್ರಕ್ಕೆ ಒಪ್ಪುತ್ತೇನೆ ಎಂದು ಹೇಳುವ ಅವರು, ಈ ರಂಗ ಆಯ್ಕೆ ಮಾಡಿಕೊಂಡಿದ್ದು ಈಗ ಖುಷಿ ಎನಿಸಿದೆ.

ಮನೆಯಲ್ಲೂ ಸಹಕಾರವಿದೆ. ಮೊದ ಮೊದಲು ಈ ರಂಗ ಪ್ರವೇಶಿಸಿದಾಗ, ಹೇಗೋ ಏನೋ ಎಂಬ ಭಯವಿತ್ತು. ಆದರೆ, ರಂಗಭೂಮಿ ಹಿನ್ನೆಲೆಯಿಂದ ಬಂದಿದ್ದರಿಂದ ಭಯ ದೂರವಾಗಿದೆ. ಇಲ್ಲಿ ಪ್ರತಿಭೆಯಷ್ಟೇ ಅಲ್ಲ, ಜೊತೆಯಲ್ಲಿ ಅದೃಷ್ಟವೂ ಇರಬೇಕು. ಮುಂದಿನ ದಿನಗಳಲ್ಲಿ ಚಿತ್ರರಂಗದಲ್ಲೇ ಇರಬೇಕು. ಇಲ್ಲೇ ಗಟ್ಟಿನೆಲೆ ಕಾಣುವ ಆಸೆ ಇದೆ” ಎನ್ನುತ್ತಾರೆ ಶ್ರೀಪ್ರಿಯಾ.

Categories
ಸಿನಿ ಸುದ್ದಿ

ಡಾಲಿಗೆ ಯಶಾ ಜೋಡಿ – ಶಿವಪ್ಪನಿಗೆ ಸಿಕ್ಕ ಮತ್ತೊಬ್ಬ ಬೆಡಗಿ

ಶಿವರಾಜಕುಮಾರ್‌ ಧನಂಜಯ್‌ ಕಾಂಬಿನೇಷನ್‌ ಸಿನಿಮಾ

ಕನ್ನಡದಲ್ಲಿ ಹೊಸಬರ “ಪದವಿಪೂರ್ವ” ಸಿನಿಮಾ ಸೆಟ್ಟೇರಿದ್ದ ಬಗ್ಗೆ ಈ ಹಿಂದೆ ಹೇಳಲಾಗಿತ್ತು. ಆ ಚಿತ್ರಕ್ಕೆ ಯಶಾ ಶಿವಕುಮಾರ್‌ ನಾಯಕಿ ಅನ್ನೋದ್ದನ್ನೂ ಹೇಳಲಾಗಿತ್ತು. ಯಶಾ ಶಿವಕುಮಾರ್‌ ಇದೀಗ ಇನ್ನೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಮೊದಲ ಚಿತ್ರ ಮುಗಿಯುವ ಮುನ್ನವೇ ಮತ್ತೊಂದು ಹೊಸ ಚಿತ್ರಕ್ಕೆ ಸಹಿ ಮಾಡಿರುವುದು ವಿಶೇಷ.

Processed with VSCO with al3 preset

ಹೌದು, ಯಶಾ ಶಿವಕುಮಾರ್‌, ಅಭಿನಯಿಸುತ್ತಿರುವ ಚಿತ್ರ “ಶಿವಪ್ಪ”. ಈ ಸಿನಿಮಾದಲ್ಲಿ ಶಿವರಾಜಕುಮಾರ್‌ ಹೀರೋ. ಅವರೊಂದಿಗೆ “ಡಾಲಿ” ಧನಂಜಯ್‌ ಕೂಡ ನಟಿಸುತ್ತಿದ್ದಾರೆ. ಈಗಾಗಲೇ ಶಿವರಾಜಕುಮಾರ್‌ ಅವರಿಗೆ ಅಂಜಲಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. “ಡಾಲಿ” ಧನಂಜಯ್‌ ಅವರಿಗೆ ನಾಯಕಿಯಾಗಿ ಈಗ ಯಶಾ ಶಿವಕುಮಾರ್‌ ನಟಿಸುತ್ತಿದ್ದಾರೆ.


ಸದ್ಯಕ್ಕೆ “ಶಿವಪ್ಪʼ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿಸಿ, ಎರಡನೇ ಹಂತದ ಚಿತ್ರೀಕರಣಕ್ಕೆ ಚಿತ್ರತಂಡ ಸಜ್ಜಾಗಿದೆ. ಈ ಚಿತ್ರದಲ್ಲಿ ಪೃಥ್ವಿ ಅಂಬರ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ವಿಜಯ್ ಮಿಲ್ಟನ್ ನಿರ್ದೇಶನದ ಈ ಚಿತ್ರಕ್ಕೆ ಅನೂಪ್‌ ಸೀಳಿನ್‌ ಸಂಗೀತ ನೀಡುತ್ತಿದ್ದಾರೆ. ನಿರ್ದೇಶಕ ವಿಜಯ್‌ ಮಿಲ್ಟನ್‌, ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ “ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. 8 ದಿನಗಳ ಶೂಟಿಂಗ್ ನಲ್ಲಿ 23 ಸೀನ್ ಗಳನ್ನು ಚಿತ್ರೀಕರಣ ಮಾಡಿದ್ದೇವೆ.

Processed with VSCO with al3 preset

ಇಡೀ ಚಿತ್ರತಂಡಕ್ಕೆ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ. ನಿರ್ದೇಶಕ ವಿಜಯ್ ಮಿಲ್ಟನ್ ಅವರ ಮೊದಲ ಕನ್ನಡ ಸಿನಿಮಾ ಇದಾಗಿದ್ದು, ಶಿವರಾಜಕುಮಾರ್‌ ಮತ್ತು ಧನಂಜಯ್‌ ಅವರಿಬ್ಬರೂ “ಟಗರು” ಸಿನಿಮಾ ನಂತರ “ಶಿವಪ್ಪ” ಚಿತ್ರದಲ್ಲಿ ನಟಿಸುತ್ತಿದ್ದಾರೆ. ಹೀಗಾಗಿ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ಇನ್ನು, ಶಶಿಕುಮಾರ್, ಉಮಾಶ್ರೀ ಇತರರು ಕೂಡ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

error: Content is protected !!