Categories
ಸಿನಿ ಸುದ್ದಿ

ಸಾರಿ ಅಂತಿದಾರೆ ರಾಗಿಣಿ! ಕಹಿ ಘಟನೆಗೆ ಸಾರಿ ಅಲ್ಲರೀ ; ಇದು ಅವರ ಹೊಸ ಚಿತ್ರದ ಹೆಸರು!!

ರಾಗಿಣಿ ಡ್ರಗ್ಸ್‌ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿದ್ದು ಎಲ್ಲರಿಗೂ ಗೊತ್ತಿದೆ. ಅಲ್ಲಿಂದ ಹೊರಬಂದ ರಾಗಿಣಿ, ಆ ಸಿನಿಮಾ ಮಾಡ್ತಾರೆ, ಈ ಚಿತ್ರದಲ್ಲಿ ನಟಿಸಲಿದ್ದಾರೆ ಅಂತೆಲ್ಲಾ ಸುದ್ದಿ ಆಯ್ತು. ಆದರೆ, ಅಸಲಿಗೆ ಅವರು ಯಾವ ಸಿನಿಮಾವನ್ನು ಒಪ್ಪಿಕೊಂಡಿರಲಿಲ್ಲ. ಈಗ ಹೊಸ ಸುದ್ದಿ ಅಂದರೆ, ರಾಗಿಣಿ, ಜೈಲಿನಿಂದ ಬಿಡುಗಡೆಯಾದ ಬಳಿಕ ಒಂದು ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಆ ಸಿನಿಮಾಗೆ ಮುಹೂರ್ತವೂ ನಡೆದಿದೆ. ರಾಗಿಣಿ ಹೌದು, ರಾಗಿಣಿ ಈಗ ಸಾರಿ ಕೇಳುತ್ತಿದ್ದಾರೆ. ಅರೇ, ಕಹಿ ಘಟನೆಗಳಿಗಾಗಿಯೇ ಅವರು ಸಾರಿ ಕೇಳುತ್ತಿದ್ದಾರಾ ಹಾಗಾದರೆ ಅವರು ಕೇಳುತ್ತಿರುವ ಸಾರಿ ಯಾರಿಗೆ? ಈ ಪ್ರಶ್ನೆ ಎದುರಾದರೆ ಅಚ್ಚರಿ ಇಲ್ಲ. ಆದರೆ, ರಾಗಿಣಿ ಸಾರಿ ಕೇಳುತ್ತಿಲ್ಲ ಅನ್ನೋದು ನಿಜ. ಸಾರಿ ಅನ್ನೋದು ಅವರ ಹೊಸ ಚಿತ್ರದ ಹೆಸರು.

ಈಗ ರಾಗಿಣಿ ಒಂದು ಆ್ಯಕ್ಷನ್, ಕ್ರೈಂ, ಥ್ರಿಲ್ಲರ್ ಕಥಾಹಂದರ ಇರುವ ಸಿನಿಮಾ ಒಪ್ಪಿಕೊಂಡಿದ್ದಾರೆ. ಅದೇ ಸಾರಿ (ಕರ್ಮ ರಿಟರ್ನ್ಸ್) ಎಂಬ ನಾಯಕಿ ಪ್ರಧಾನ ಚಿತ್ರದ ಮೂಲಕ ನಟಿ ರಾಗಿಣಿ ದ್ವಿವೇದಿ ಅವರು ಬಹಳ ದಿನಗಳ ನಂತರ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಅನ್ನೋದು ವಿಶೇಷ. ಈ ಹಿಂದೆ ಮಾಡಿರದ ವಿಶೇಷ ಪಾತ್ರದಲ್ಲಿ ರಾಗಿಣಿ ಕಾಣಿಸಿಕೊಳ್ಳಲಿದ್ದಾರೆ. ಕಿಸ್ ಇಂಟರ್ನ್ಯಾಷನಲ್ ಪ್ರೊಡಕ್ಷನ್ (ಕೆನಡ) ಅಡಿಯಲ್ಲಿ ನವೀನ್ ಕುಮಾರ್ (ಕೆನಡಾ ) ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಬ್ರಹ್ಮ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಮುಹೂರ್ತ ಸಮಾರಂಭ ಮಾಗಡಿ ರಸ್ತೆಯ,ಮಾಚೋಹಳ್ಳಿ ಸಮೀಪದ ಲಕ್ಕೇನಹಳ್ಳಿ ಗ್ರಾಮದೇವತೆ ದೇವಸ್ಥಾನದಲ್ಲಿ ಮಂಗಳವಾರ ನೆರವೇರಿದೆ. ಕಳೆದ ವಾರವೇ ನಡೆಯಬೇಕಿದ್ದ ಈ ಕಾರ್ಯಕ್ರಮವನ್ನು ಪುನೀತ್ ರಾಜ್‍ಕುಮಾರ್ ಅವರ ಅಗಲಿಕೆಯ ದುಃಖದಲ್ಲಿ ಮುಂದೂಡಲಾಗಿತ್ತು.

ಈ ಹಿಂದೆ ಇದೇ ನಿರ್ಮಾಪಕ, ನಿರ್ದೇಶಕರ ನಿರ್ಮಾಣದ ಸಿದ್ದಿಸೀರೆ ಎಂಬ ಚಿತ್ರವು ನ್ಯೂಯಾರ್ಕ್, ಟೋಕಿಯೋ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿ ಪ್ರಶಸ್ತಿ ಗಳಿಸಿತ್ತು. ಸಕಲೇಶಪುರ, ಬೆಂಗಳೂರು ಹಾಗೂ ಕಗ್ಗಲೀಪುರದ ಸುತ್ತಮುತ್ತ ಸಾರಿ ಚಿತ್ರದ ಶೂಟಿಂಗ್ ನಡೆಯಲಿದ್ದು, ಅಫ್ಜಲ್(ಸೂಪರ್‌ಸ್ಟಾರ್) ಈ ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕರಾಗಿದ್ದು, ಜಾನ್ ಜಾರ್ಜ್ ಹಾಗೂ ಜೈ ಕೃಪಲಾನಿ ಅವರ ಸಹನಿರ್ಮಾಪಕರಾಗಿದ್ದಾರೆ.

ಅದ್ದೂರಿ ವೆಚ್ಚದ ಈ ಚಿತ್ರಕ್ಕೆ ರಾಜು ಎಮ್ಮಿಗನೂರು ಅವರ ಸಂಗೀತ, ರಾಜೀವ್ ಗಣೇಸನ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಅಲ್ಟಿಮೇಟ್ ಶಿವು ಸಾಹಸ ನಿರ್ದೇಶನ, ಭೂಪತಿರಾಜ್ ಸಂಕಲನ, ಇಮ್ರಾನ್, ಮನು ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರದಲ್ಲಿ ಇತರೆ ಪಾತ್ರಗಳಲ್ಲಿ ರಾಗಿಣಿ ಅವರ ಜೊತೆಗೆ ಅಫ್ಜಲ್ (ಸೂಪರ್‌ಸ್ಟಾರ್ಸ್) ವಿ.ಜೆ.ಮನೋಜ್, ರಣವೀರ್, ಯುಕ್ತ ಪೆರ್ವಿ, ಪೂಜಾ ಪಾಟೀಲ್ ನಟಿಸುತ್ತಿದ್ದಾರೆ.

Categories
ಸಿನಿ ಸುದ್ದಿ

ನೈಜ ಘಟನೆಯ ಲಕ್ಷ್ಯ ಟ್ರೇಲರ್‌ ರಿಲೀಸ್; ನವೆಂಬರ್‌ 18 ರಂದು ಚಿತ್ರ ಬಿಡುಗಡೆ

ಬಹುತೇಕ ಉತ್ತರ ಕರ್ನಾಟಕದವರೇ ಸೇರಿ ನಿರ್ಮಿಸಿರುವ ಲಕ್ಷ್ಯ ಚಿತ್ರ ಮುಂದಿನವಾರ ತೆರೆ ಕಾಣಲಿದೆ. ರವಿ ಸಾಸನೂರ್ ಅವರು ಕಥೆ ಬರೆದು ನಿರ್ದೇಶನ ಮಾಡಿರುವ ಲಕ್ಷ್ಯ ಚಿತ್ರದ ಟ್ರೈಲರನ್ನು ಗೂಗ್ಲಿ ಖ್ಯಾತಿಯ ನಿರ್ದೇಶಕ ಪವನ್ ಒಡೆಯರ್ ಕುಮಾರ್ ಅವರು ಬಿಡುಗಡೆಗೊಳಿಸಿದರು. ನೈಜ ಘಟನೆಗಳನ್ನು ಆಧರಿಸಿ ‌ಒಂದು ಸೋಷಿಯಲ್ ಕಂಟೆಂಟ್ ಇಟ್ಟುಕೊಂಡು ನಿರ್ಮಾಣವಾದ ಈ ಚಿತ್ರ ಇದೇ 18ರಂದು ರಾಜ್ಯಾದ್ಯಂತ ತೆರೆಕಾಣಲಿದೆ. 2018 ಮೀಡಿಯಾದಲ್ಲಿ ಕೆಲಸ ಮಾಡುತ್ತಿದ್ದ ರವಿ 2 ಪುಸ್ತಕಗಳನ್ನು ಸಹ ಬರೆದಿದ್ದಾರೆ. ಅವರು ಹೇಳುವುದಿಷ್ಟು.

18 ವರ್ಷದ ನಂತರ ಪ್ರತಿಯೊಬ್ಬರ ಜೀವನದಲ್ಲೂ ನಡೆಯುವಂಥ ಘಟನೆಗಳೇ ಈ ಚಿತ್ರದಲ್ಲಿದ್ದು ಎಲ್ಲರಿಗೂ ಚಿತ್ರ ಕನೆಕ್ಟ್ ಆಗುತ್ತದೆ. ಚಿತ್ರದಲ್ಲಿ ಗೋಕಾಕ್ ಫಾಲ್ಸ್ ನ್ನು ವಿಭಿನ್ನವಾಗಿ ತೋರಿಸಿದ್ದೇವೆ. ಬೆಳಗಾವಿ, ಸಾಂಗ್ಲಿ, ಗೋಕಾಕ್ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ, ಕರೆಪ್ಷನ್ ಇಶ್ಯೂ ಇಟ್ಟುಕೊಂಡು ಮಾಡಿದಂಥ ಕಮರ್ಷಿಯಲ್ ಚಿತ್ರವಿದು ಎಂದು ಹೇಳಿದರು.

ಮೂಡಲಮನೆ ಖ್ಯಾತಿಯ ಸಂತೋಷ್ ರಾಜ್ ಜಾವರೆ ಈ ಚಿತ್ರದ ನಾಯಕ ಹಾಗೂ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. 4 ವರ್ಷದ ಹಿಂದೆ ಶುರುವಾಗಿದ್ದ ಚಿತ್ರ. ಮೂಡಲಮನೆ ಸೇರಿದಂತೆ 25 ಮೆಗಾಸೀರಿಯಲ್ ಗಳಲ್ಲೂ ಆ್ಯಕ್ಟ್ ಮಾಡಿದ್ದೇನೆ. ದುಡ್ಡಿನ ಹಿಂದೆ ಬಿದ್ದಿರುವ ವ್ಯಕ್ತಿಯಿಂದ ಇತರರಿಗೆ ಯಾವರೀತಿ ಪರಿಣಾಮ ಬೀರುತ್ತೆ. ಅದು ಆತನಿಗೆ ಹೇಗೆ ಎಫೆಕ್ಟ್ ಆಗುತ್ತೆ ಎಂಬುದನ್ನು ತುಂಬಾ ಪರಿಣಾಮಕಾರಿಯಾಗಿ ಈ ಚಿತ್ರದಲ್ಲಿ ಹೇಳಲಾಗಿದೆ ಎಂದು ಸಂತೋಷರಾಜ್ ಜಾವರೆ ಹೇಳಿಕೊಂಡರು.

ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿರುವ ನಿತಿ ನಾದ್ವಿ ಮತ್ತೊಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನನ್ನದು ಪಿಕೆ ಎನ್ನುವ ಪಾತ್ರ, ಸಮಾಜದಲ್ಲಿ ಜವಾಬ್ದಾರಿ ಇರುವಂಥ ವ್ಯಕ್ತಿಗಳು ಅದನ್ನು ಮರೆತಾಗ ಅವರಿಗೆ ಬುದ್ದಿ ಕಲಿಸುವಂಥ ಪಾತ್ರ ಎಂದು ಪರಿಚಯಿಸಿಕೊಂಡರು. ಹಿರಿಯನಟಿ ಮಾಲತಿಶ್ರೀ ಮೈಸೂರು ಮಾತನಾಡಿ ನಾನೂ ಸಹ ಉತ್ತರ ಕರ್ನಾಟಕದವಳು, ಅದೇ ನೆಲದ ಮಹಿಳೆಯಾಗಿ ಚಿಕ್ಕ ಪಾತ್ರ ಮಾಡಿದ್ದೇನೆ ಎಂದರು.

ಬೆಳಗಾವಿಯ ಪ್ರಕಾಶ ಚಿತ್ರ ಮಂದಿರದಲ್ಲಿ 14ನೇ ನವಂಬರ್ ರಂದು,ಬೆಳಿಗ್ಗೆ 9 ಗಂಟೆಗೆ ಈ ಚಿತ್ರದ ಪ್ರೀಮಿಯರ್ ಷೋ ನಡೆಯಲಿದ್ದು ಬಹಳಷ್ಟು ಸೆಲೆಬ್ರಿಟಿಗಳು ಹಾಜರಾಗಲಿದ್ದಾರೆ. ಜುವಿನ್ ಸಿಂಗ್ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಬನಹಟ್ಟಿಯ ಆನಂದ್ ಶಿವಯೋಗಪ್ಪ ಕೊಳಕಿ, ಸುಧೀರ್ ದೇವೇಂದ್ರ ಹುಲ್ಲೋಳಿ, ಶಿವಕುಮಾರ್ ಎ, ರವಿ ಸಾಸನೂರ್ ಈ ಚಿತ್ರದ ಸಹ ನಿರ್ಮಾಣ ಮಾಡಿದ್ದಾರೆ.

Categories
ಸಿನಿ ಸುದ್ದಿ

ದೊಡ್ಮನೆ ಹುಡುಗನ ನೆನೆದ ಸ್ಯಾಂಡಲ್‌ವುಡ್ ಸಿಂಡ್ರೆಲಾ; ಹೃದಯ ಒಪ್ಪಿಕೊಳ್ತಿಲ್ಲ ಅಪ್ಪು ಸಾರ್- ರಾಧಿಕಾ ಭಾವುಕ !

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿಕೆ ದೊಡ್ಮನೆಗೆ ಮಾತ್ರವಲ್ಲ ಕರುನಾಡಿಗೆ ಮತ್ತು ಕನ್ನಡ ಇಂಡಸ್ಟ್ರಿಗೆ ತುಂಬಲಾರದ ನಷ್ಟ. ಮನೆ ಮಗನನ್ನು ಕಳೆದುಕೊಂಡು ದೊಡ್ಮನೆ ಅದೆಷ್ಟು ನೋವು-ಸಂಕಟ-ದುಃಖ ಪಡುತ್ತಿದೆಯೋ, ಅಷ್ಟೇ ದುಃಖ-ನೋವು-ಸಂಕಟವನ್ನು ಇಡೀ ಕರುನಾಡು ಅನುಭವಿಸುತ್ತಿದೆ. ಇದಕ್ಕೆ ಗಂಧದಗುಡಿ ಕೂಡ ಹೊರತಾಗಿಲ್ಲ. ಚೆಂದದ ಚಂದನವನದಲ್ಲಿ ಒಂದೇ ಕುಟುಂಬದಂತಿದ್ದ ಕಲಾವಿದರೆಲ್ಲರೂ ಕೂಡ ತಮ್ಮ ಮನೆಯ ಸದಸ್ಯನನ್ನು ಕಳೆದುಕೊಂಡು ಕಣ್ಣೀರಾಗುತ್ತಿದ್ದಾರೆ. ಅಪ್ಪು ಇಲ್ಲ ಎನ್ನುವ ಸತ್ಯವನ್ನು ಅರಗಿಸಿಕೊಳ್ಳಲಾಗದೇ ಒದ್ದಾಡುತ್ತಿದ್ದಾರೆ. ಅಂಜನಿಪುತ್ರನೊಟ್ಟಿಗೆ ಕಳೆದ ಸುಮಧುರ ಕ್ಷಣಗಳನ್ನು ಕಣ್ಮುಂದೆ ತಂದುಕೊಂಡು ದುಃಖಿತರಾಗುತ್ತಿದ್ದಾರೆ. ಸ್ಯಾಂಡಲ್‌ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಪವರ್‌ಸ್ಟಾರ್ ನೆನೆದು ಭಾವುಕರಾಗಿದ್ದಾರೆ.

ರಾಧಿಕಾ ಪಂಡಿತ್ ಮನಸ್ಸಿನ ಮಾತು

ನಮ್ಮ ಮಧ್ಯೆ ನೀವಿಲ್ಲ, ಇನ್ಮುಂದೆ ದೈಹಿಕವಾಗಿ ನಮ್ಮೊಡನೆ ಇರುವುದಿಲ್ಲ ಎನ್ನುವುದನ್ನು ಒಪ್ಪಿಕೊಳ್ಳೋದಕ್ಕೆ ನಮ್ಮ ಹೃದಯಾನೇ ತಯ್ಯಾರಿಲ್ಲ ಅಪ್ಪು ಸಾರ್. ಅಂದ್ಹಾಗೇ, ಈ ಕಟು ಸತ್ಯವನ್ನು ನಂಬೋದಕ್ಕೂ- ಅರಗಿಸಿಕೊಳ್ಳೋದಕ್ಕೆ ಧೈರ್ಯ ಸಾಲುತ್ತಿಲ್ಲ. ನೀವಿಲ್ಲದ ಇಂಡಸ್ಟ್ರಿಯನ್ನು ನೆನಪಿಸಿಕೊಳ್ಳೋದಕ್ಕೆ ಅಸಾಧ್ಯ. ಎಲ್ಲವೂ ಮೊದಲಿನಂತೆ ಇರೋದಕ್ಕೆ ಸಾಧ್ಯವೇ ಇಲ್ಲ ಬಿಡಿ. ನಿಮ್ಮೊಟ್ಟಿಗೆ ಅಭಿನಯಿಸೋದಕ್ಕೆ ಅವಕಾಶ ಸಿಕ್ಕಿದ್ದಕ್ಕೆ ಮತ್ತು ಕೊಟ್ಟಿದ್ದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ನಿಮ್ಮನ್ನು ನಾವು ಎಷ್ಟು ಮಿಸ್‌ಮಾಡಿಕೊಳ್ಳುತ್ತಿದ್ದೇವೋ ನೀವು ನಮ್ಮೆಲ್ಲರನ್ನು ಅಷ್ಟೇ ಮಿಸ್ ಮಾಡಿಕೊಳ್ತೀರಿ ಎನ್ನುವ ಭಾವನೆ ನನ್ನದು. ನೆನಪುಗಳ ಮೂಲ ಎಂದಿಗಿಂತಕೂ ನೀವೀಗ ಸನಿಹವಾಗಿದ್ದೀರಿ ಅಪ್ಪು ಸಾರ್.

ತಮ್ಮ ಮನಸ್ಸಿನ ಭಾವನೆಯನ್ನು ಈ ರೀತಿಯಾಗಿ ಬರಹದ ಮೂಲಕ ಹೊರಹಾಕಿರುವ ರಾಧಿಕಾ, ದೊಡ್ಮನೆ ಹುಡುಗ ಪ್ರೆಸ್ಮೀಟ್ ಹಾಗೂ ಸೀಮಂತದ ಪಟಗಳನ್ನು ಹಂಚಿಕೊಂಡಿದ್ದಾರೆ. ಪವರ್‌ಸ್ಟಾರ್‌ಗೆ ರಾಧಿಕಾ ಕೋ ಸ್ಟಾರ್ ಮಾತ್ರವಲ್ಲ ದೊಡ್ಮನೆ ಕುಟುಂಬದ ಜೊತೆಗೆ ರಾಕಿಂಗ್ ದಂಪತಿಗೆ ಅವಿನಾಭಾವ ಸಂಬಂಧವಿದೆ ಹಾಗೂ ಆತ್ಮೀಯವಾದ ನಂಟಿದೆ. ಅಂದ್ಹಾಗೇ, ರಾಧಿಕಾ ಹಾಗೂ ಪವರ್ ಜೋಡಿ `ದೊಡ್ಮನೆ ಹುಡುಗ’ ಸಿನಿಮಾದ ಮೂಲಕ ಮಾಡಿದ ಮೋಡಿ ಎಂತಹದ್ದು ಎನ್ನುವುದು ನಿಮಗೆಲ್ಲ ಗೊತ್ತೆಯಿದೆ. ಇವರಿಬ್ಬರ ಜೋಡಿನಾ ಅಭಿಮಾನಿಗಳಿಗಿಂತ ಮೊದಲೇ ರಾಕಿಂಗ್‌ಸ್ಟಾರ್ ಮೆಚ್ಚಿಕೊಂಡಿದ್ದರು. ಯುವರತ್ನನ ಜೊತೆಗೆ ಹೆಜ್ಜೆಹಾಕಿ ಬೆಳ್ಳಿತೆರೆಗೆ ಕಿಚ್ಚು ಹಚ್ಚಿದ್ದನ್ನು ಕಂಡು ರಾಕಿಂಗ್‌ಸ್ಟಾರ್ ಬೆಕ್ಕಸ ಬೆರಗಾಗಿದ್ದರು.

ಸುದ್ದಿಗೋಷ್ಟಿಯಲ್ಲಿ ಯಶ್ ಒಮ್ಮೆ ಮಾತನಾಡುತ್ತಾ ರಾಧಿಕಾ ಹಿಂದೆಂದಿಗಿಂತಲೂ ಚೆನ್ನಾಗಿ ಕಾಣಿಸಿಕೊಂಡಿದ್ದಾಳೆ ಮಾತ್ರವಲ್ಲ ನಟಸಾರ್ವಭೌಮನ ಎನರ್ಜಿಗೆ ಮ್ಯಾಚ್ ಆಗುವಂತೆ ಡ್ಯಾನ್ಸ್ ಕೂಡ ಮಾಡಿದ್ದಾಳೆ ಎಂದು ಕೊಂಡಾಡಿದ್ದರು. ಪತಿದೇವರ ಕಾಂಪ್ಲಿಮೆಂಟ್ ಕೇಳಿ ರಾಧಿಕಾ ದಿಲ್ ಖುಷ್ ಆಗಿದ್ದರು. ಫ್ಯಾನ್ಸ್ ಬಾಯಲ್ಲಿತ್ರಾಸ್ ಅಕ್ಕತಿ’ ಹಾಡು ನಲಿದಾಡಿದ್ಮೇಲಂತೂ ಇನ್ನೂ ಸಂಭ್ರಮಪಟ್ಟರು. ಇದಾಗಿ ಮೂರು ತಿಂಗಳು ಅಷ್ಟೇ ರಾಕಿಭಾಯ್ ಜೊತೆ ರಾಧಿಕಾ ಹಸೆಮಣೆ ಏರಿದರು. ರಾಮಾಚಾರಿನಾ ಕೈ ಹಿಡಿದ್ಮೇಲೆ `ಆದಿಲಕ್ಷ್ಮಿ ಪುರಾಣ’ ಚಿತ್ರವೊಂದಕ್ಕೆ ಬಣ್ಣ ಹಚ್ಚಿದರು. ಸದ್ಯ, ಬಣ್ಣದ ಲೋಕದಿಂದ ಕೊಂಚ ದೂರ ಉಳಿದಿದ್ದಾರೆ. ಮನೆ-ಮಕ್ಕಳು-ಸಂಸಾರ ಅಂತ ಫ್ಯಾಮಿಲಿ ಟೈಮ್ ಸ್ಪೆಂಡ್ ಮಾಡ್ತಿದ್ದಾರೆ. ನಟಿ ರಮ್ಯಾರಂತೆ ರಾಧಿಕಾಗೂ ಪವರ್‌ಸ್ಟಾರ್ ಜೊತೆ ಮತ್ತೊಂದು ಚಿತ್ರ ಮಾಡುವ ಆಸೆ ಇತ್ತೋ ಇಲ್ಲವೋ ಗೊತ್ತಿಲ್ಲ? ಆದರೆ, ದೊಡ್ಮನೆ ಹುಡುಗ ಚಿತ್ರದಲ್ಲಿ ನಟಿಸಿದ ಅನುಭವ ಹಾಗೂ ಕರುನಾಡಿನ ರಾಜರತ್ನ ಅಪ್ಪು ಜೊತೆಗೆ ಕಳೆದು ನೆನಪುಗಳಿವೆ ಅಲ್ಲವಾ ಅವುಗಳೆಲ್ಲವೂ ಅಷ್ಟು ಸುಲಭವಾಗಿ ಮರೆಯೋದಕ್ಕೆ ಆಗೋದಿಲ್ಲ. ಹೀಗಾಗಿ, ಅಪ್ಪು ಮರೆಯಾದರೂ ಪವರ್ ಬಿಟ್ಟೋದ ನೆನಪುಗಳು ಸದಾ ಜೀವಂತ

ಎಂಟರ್‌ಟೈನ್ಮೆಂಟ್ ಬ್ಯೂರೋ

Categories
ಸಿನಿ ಸುದ್ದಿ

ಕೋರ್ಟ್ ಕಟಕಟೆಯಲ್ಲಿ ನಿಂತ ನಿರ್ದೇಶಕ ಸಿಂಪಲ್ ಸುನಿ..!

ಸಿಂಪಲ್ ಆಗಿ‌ ಒಂದು ಲವ್ ಸ್ಟೋರಿ ಕಥೆ ಹೇಳಿ ಸ್ಯಾಂಡಲ್ ವುಡ್ ಗೆ ಬಹುಪರಾಕ್ ಹಾಕಿ ಸಿಂಪಲ್ ಆಗಿ ಇನ್ನೊಂದು‌ ಲವ್ ಸ್ಟೋರಿ ಅಂತಾ ಚಮಕ್ ಕೊಟ್ಟ ಬಜಾರ್ ನಲ್ಲಿ ಸಖತ್ ಸುದ್ದಿಯಲ್ಲಿರುವ ವಿಭಿನ್ನ ಸಿನಿಮಾಗಳ ನಿರ್ದೇಶಕ ಸಿಂಪಲ್ ಸುನಿ. ಸುನಿ ಸಿನಿಮಾಗಳು ಅಂದ್ರೆ ಚಿತ್ರಪ್ರೇಮಿಗಳು ಸಖತ್ ಕ್ಯೂರಿಯಾಸಿಟಿಯಿಂದ ನೋಡ್ತಾರೆ. ಅದಕ್ಕೆ ಕಾರಣ ಸದಾ ಹೊಸತನ, ಹೊಸಬಗೆ ಹಾಗೂ ವಿಶೇಷತೆಗಳಿಂದ ಕೂಡಿರುತ್ತವೆ. ಸ್ಟಾರ್ ಹೀರೋಗಳಿಗೆ ಆಕ್ಷನ್ ಕಟ್ ಹೇಳಿ ಸಕ್ಸಸ್ ಕಂಡಿರುವ ಸಿಂಪಲ್ ಸುನಿ, ಈಗ ಕೋರ್ಟ್ ಕಟಕಟೆಯಲ್ಲಿ ನಿಂತಿದ್ದಾರೆ!

ಅರೇ…ಸಿಂಪಲ್ ಸುನಿ ಕೋರ್ಟ್ ಕಟಕಟೆಯಲ್ಲಿ ನಿಂತಿರೋದಿಕ್ಕೆ ಕಾರಣವೇನು? ಅನ್ನೋ ಪ್ರಶ್ನೆ ಎಲ್ಲರ ಮನಸ್ಸಿನಲ್ಲಿ ಕಾಡೋದಿಕ್ಕೆ ಶುರುವಾಗುತ್ತೆ. ಅದಕ್ಕೆ ಉತ್ತರ ಸಖತ್ ಪ್ರಮೋಷನ್ಸ್. ಹೌದು.. ಸಿಂಪಲ್ ಸುನಿ.. ಗೋಲ್ಡನ್ ಸ್ಟಾರ್ ಗಣೇಶ್ ಕಾಂಬಿನೇಷನ್. ಈ ಜೋಡಿ ಜೊತೆಯಾಗಿ ಪ್ರೇಕ್ಷಕರಿಗೆ ಸಖತ್ ಕಾಮಿಡಿ ಹೂರಣ ಬಡಿಸಲು ಸಜ್ಜಾಗಿದ್ದಾರೆ. ಸಖತ್ ಸಿನಿಮಾ ಮೂಲಕ ಸಿನಿಪ್ರೇಕ್ಷಕ ಕುಲವನ್ನು‌ ನಗುವಿನ ಅಲೆಯಲ್ಲಿ ತೇಲಿಸಲಿದ್ದಾರೆ.

ಈಗಾಗ್ಲೇ ರಿಲೀಸ್ ಆಗಿರುವ‌ ಸಖತ್ ಸಿನಿಮಾದ ಮೋಷನ್ ಪೋಸ್ಟರ್, ಟೀಸರ್ ಹಾಗೂ ಸಾಂಗ್ ಕುತೂಹಲದ ಚಿಟ್ಟಿಯಾಗಿವೆ. ಈ ನಡುವೆ ಸಖತ್ ಸಿನಿಮಾ ಬಳಗ ಪ್ರಮೋಷನ್ ಗೆ ಸಖತ್ ಆಗಿರುವ
ಐಡಿಯಾವೊಂದನ್ನು ಮಾಡಿದೆ. ಪ್ರತಿ ಮಾಲ್ ಗಳಲ್ಲಿ ಕೋರ್ಟ್ ಕಟಕಟೆ ನಿರ್ಮಿಸಿದ್ದಾರೆ. ಅಷ್ಟಕ್ಕೂ ಸಖತ್ ಸಿನಿಮಾಕ್ಕೂ ಕೋರ್ಟ್ ಕಟಕಟೆಗೂ ಏನು ಸಂಬಂಧ ಅಂದ್ರೆ ಸಖತ್ ಸಿನಿಮಾದ ಟೀಸರ್ ನಲ್ಲಿ ಕೋರ್ಟ್ ಸೀನ್ ಇದೆ. ಗಣೇಶ್ ಕೋರ್ಟ್ ಕಟಕಟೆಯಲ್ಲಿ ನಿಂತು ನಟಿಸಿರುವ ಒಂದು ದೃಶ್ಯವಿದೆ. ಅಲ್ಲದೇ ಸಖತ್ ಸಿನಿಮಾ ಕೋರ್ಟ್ ಸುತ್ತ ನಡೆಯುವ ಕಥೆ. ಹೀಗಾಗಿ ಚಿತ್ರತಂಡ ಪ್ರಮೋಷನ್ ಗೆ ಈ ವಿಧಾನ‌ ಬಳಸಿದೆ. ಮಾಲ್ ಅಂಗಳದಲ್ಲಿ‌‌ ಕೋರ್ಟ್ ಕಟಕಟೆಯಲ್ಲಿ ನಿರ್ಮಿಸಿದೆ ಸಖತ್ ಸಿನಿಮಾ ತಂಡ. ಈ ಕಟಕಟೆಯಲ್ಲಿ ನಿಂತು ಮಕ್ಕಳು, ಪ್ರತಿಯೊಬ್ಬರು ಫೋಟೋಗೆ ಫೋಸ್ ಕೊಡ್ತಿದ್ದಾರೆ. ಬರೋ 14 ರಂದು ಸಖತ್ ಸಿನಿಮಾದ ಟ್ರೇಲರ್ ರಿಲೀಸ್ ಆಗ್ತಿದೆ.

ಕಾಮಿಡಿ ಜೊತೆ ರಿಯಾಲಿಟಿ ಸುತ್ತ ಹೆಣೆಯಲಾಗಿರುವ ಸಖತ್ ಸಿನಿಮಾದಲ್ಲಿ ಗಣೇಶ್ ಗೆ ಜೋಡಿಯಾಗಿ ನಿಶ್ವಿಕಾ ನಾಯ್ಡು ಹಾಗೂ ಸುರಭಿ ನಟಿಸಿದ್ದಾರೆ. ಉಳಿದಂತೆ ರಂಗಾಯಣ ರಘು, ಸಾಧುಕೋಕಿಲ, ಧರ್ಮಣ್ಣ ಕಡೂರು ಸೇರಿದಂತೆ ಮುಂತಾದವರು ನಟಿಸಿದ್ದಾರೆ.

ಕೆವಿಎನ್ ಪ್ರೊಡಕ್ಷನ್ ನಡಿ ಅದ್ಧೂರಿಯಾಗಿ ತಯಾರಾಗಿರುವ ಸಖತ್ ಸಿನಿಮಾಗೆ ನಿಶಾ ವೆಂಕಟ್ ಕೋನಾಂಕಿ ಹಾಗೂ ಸುಪ್ರಿತ್ ಬಂಡವಾಳ ಹೂಡಿದ್ದಾರೆ. ಸದ್ಯ ಸ್ಯಾಂಪಲ್ಸ್ ನಲ್ಲಿ ಕ್ಯೂರಿಯಾಸಿಟಿ ಹುಟ್ಟಿಸಿರುವ ಸಖತ್ ಸಿನಿಮಾ ನವೆಂಬರ್ 26 ರಂದು ಬಿಗ್ ಸ್ಕ್ರೀನ್ ಗೆ ಎಂಟ್ರಿ ಕೊಡಲಿದೆ.

Categories
ಸಿನಿ ಸುದ್ದಿ

‘ನನ್ನ ಅಭಿಮಾನಿಗಳಿಗೆ ಊಟ ಹಾಕಿಸ್ಬೇಕು’- ಇದಾಗಿತ್ತು ಅಪ್ಪು ಕನಸು ! ಇಂದು ಅರಮನೆ ಅಂಗಳದಲ್ಲಿ ‘ಪುನೀತ್ ಪುಣ್ಯಸ್ಮರಣೆ’-ಫ್ಯಾನ್ಸ್ ಗೆ `ಅನ್ನ ಸಂತರ್ಪಣೆ’ !

ಏನನ್ನು ಅಪೇಕ್ಷೆ ಪಡದೇ ನನ್ನನ್ನು ನಿಷ್ಕಲ್ಮಶವಾಗಿ ಪ್ರೀತಿಸುವ-ಆರಾಧಿಸುವ-ಪೂಜಿಸುವ-ಗೌರವಿಸುವ-ತಲೆ ಮೇಲೆ ಹೊತ್ತು ಮೆರೆಸುವ ನನ್ನೆಲ್ಲಾ ಅಭಿಮಾನಿ ದೇವರುಗಳನ್ನೆಲ್ಲಾ ಒಂದು ದಿನ ಒಟ್ಟಿಗೆ ಸೇರಿಸ್ಬೇಕು. ನಾನು ಅಪ್ಪು ಅಭಿಮಾನಿ ಅಂತ ಹೆಮ್ಮೆಯಿಂದ ಹೇಳಿಕೊಳ್ಳುವ ಪ್ರತಿಯೊಬ್ಬರಿಗೂ ಹೊಟ್ಟೆತುಂಬಾ ಊಟ ಹಾಕಬೇಕು, ಭಕ್ಷ್ಯಭೋಜನವನ್ನು ಸವಿದು ನನ್ನ ಫ್ಯಾನ್ಸ್ ಸಂತೃಪ್ತಿಗೊಳ್ಳಬೇಕು ನಾನು ಅದನ್ನು ನನ್ನ ಕಣ್ಣಾರೆ ನೋಡ್ಬೇಕು ಎನ್ನುವುದು ದೊಡ್ಮನೆಯ ರಾಜಕುಮಾರ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಮಹಾಬಯಕೆ ಆಗಿತ್ತಂತೆ. ಈ ಮಹಾದಾಸೆಯ ಬಗ್ಗೆ ಪತ್ನಿ ಅಶ್ವಿನಿಯವರ ಜೊತೆ ಹಲವು ಭಾರಿ ಹೇಳಿಕೊಂಡಿದ್ದರಂತೆ. ಪಕ್ಕಾ ಪ್ಲ್ಯಾನ್ ಮಾಡಿ ಅಭಿಮಾನಿಗಳಿಗೆ ಭೋಜನ ಕೂಟ ಏರ್ಪಾಟು ಮಾಡೋಣವೆಂದೆಲ್ಲ ಚರ್ಚಿಸಿದ್ದರಂತೆ. ಅಷ್ಟರಲ್ಲಿ ಭಗವಂತ ಅಪ್ಪುನಾ ಕರೆಸಿಕೊಂಡುಬಿಟ್ಟ. ದೊಡ್ಮನೆಯಿಂದ-ಕರುನಾಡಿನಿಂದ ಪುನೀತ್‌ರನ್ನು ಕಿತ್ಕೊಂಡು ಬಹುದೂರ ಕೊಂಡೊಯ್ದುಬಿಟ್ಟ.

ಅರಮನೆ ಮೈದಾನದಲ್ಲಿ `ದೊಡ್ಮನೆ’ ಅನ್ನ ದಾಸೋಹ !

ಅಪ್ಪು ಮರೆಯಾಗಿ ಹನ್ನೆರೆಡು ದಿನಗಳು ಕಳೆದಿವೆ. ಆದರೆ, ಅಂಜನಿಪುತ್ರನನ್ನು ಕಳೆದುಕೊಂಡ ದುಃಖ-ಸಂಕಟ-ನೋವು ಕಿಂಚಿತ್ತೂ ಕಮ್ಮಿಯಾಗುತ್ತಿಲ್ಲ ಕಣ್ಣೀರು ನಿಲ್ಲುತ್ತಿಲ್ಲ. ಈ ಮಧ್ಯೆಯೇ ಹೃದಯ ಭಾರವಾಗಿಸಿಕೊಂಡು ಪುನೀತ್ ಪುಣ್ಯಸ್ಮರಣೆಯ ಕಾರ್ಯವನ್ನು ಮಾಡಬೇಕಾಗಿ ಬಂತು. ಕಂಠೀರವ ಸ್ಟುಡಿಯೋದಲ್ಲಿ ಅಪ್ಪು ಸಮಾಧಿ ಬಳಿ ಹನ್ನೊಂದನೇ ದಿನದ ಕಾರ್ಯ ನೆರವೇರಿಸಲಾಗಿತ್ತು ಅನಂತರ ಪುನೀತ್ ಮನೆಯಲ್ಲಿ ಗಣ್ಯರಿಗೆ ಅನ್ನದಾಸೋಹವನ್ನಿಟ್ಟುಕೊಂಡಿದ್ದರು. ಇಲ್ಲಿ ಫ್ಯಾನ್ಸ್ ಗೆ ಅವಕಾಶವಿಲ್ಲದ ಕಾರಣಕ್ಕೆ ಹನ್ನೆರಡನೇ ದಿನದಂದು ಅಭಿಮಾನಿ ದೇವರುಗಳಿಗೋಸ್ಕರವೇ `ಪುನೀತ್ ಪುಣ್ಯಾರಾಧನೆ’ ಹಮ್ಮಿಕೊಂಡಿದ್ದರು. ಅಪ್ಪು ಮಹಾಬಯಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ದೊಡ್ಮನೆಯಿಂದ ಅನ್ನಸಂತರ್ಪಣೆ ನಡೀತು.

ದೊಡ್ಮನೆ ದಾಸೋಹ !
ಚಿಕನ್ ಕಬಾಬ್- ಮಟನ್ ಚಾಪ್ಸ್- ಮೊಟ್ಟೆ- ಘೀ ರೈಸ್
ಮಸಾಲಾ ರೈಸ್ ಮಸಾಲಾ ವಡೆ-ಆಲೂ ಕಬಾಬ್-ಅಕ್ಕಿಪಾಯಸ-ಅನ್ನರಸಂ

ಮೇಲೆ ಹೇಳಿದಂತೆ ಅಪ್ಪುಗೆ ತನ್ನೆಲ್ಲಾ ಅಭಿಮಾನಿ ದೇವರುಗಳನ್ನು ಒಮ್ಮೆ ಕರೆಸಿ ಊಟ ಹಾಕಿಸ್ಬೇಕು ಎನ್ನುವ ಕನಸಿತ್ತು. ಆ ಕನಸು ಬದುಕಿದ್ದಾಗ ಈಡೇರಿಲ್ಲ. ಈ ವಿಷ್ಯವನ್ನು ಪುನೀತ್ ಅವರ ಪತ್ನಿ ಅಶ್ವಿನಿಯವರು ಶಿವಣ್ಣ-ರಾಘಣ್ಣ ಜೊತೆ ಹಂಚಿಕೊಂಡಿದ್ದಾರೆ. ತಮ್ಮನ ಬಹುದಿನದ ಕನಸನ್ನು ಈಡೇರಿಸುವ ಸಲುವಾಗಿಯೇ ನಗರದ ಪ್ಯಾಲೇಸ್ ಗ್ರೌಂಡ್‌ನಲ್ಲಿ `ಪುನೀತ್ ಪುಣ್ಯಸ್ಮರಣೆ’ಯ ಜೊತೆಗೆ ಅನ್ನದಾಸೋಹವನ್ನು ಏರ್ಪಡಿಸಿದ್ದರು. ಅಚ್ಚರಿ ಅಂದರೆ ಅಪ್ಪು ಮದುವೆಗೆ ಅಡುಗೆ ಮಾಡಿದ್ದ ಕ್ಯಾಟರಿಂಗ್ ನವರೇ ಇವತ್ತು ಪವರ್‌ಸ್ಟಾರ್ ಶ್ರದ್ಧಾಂಜಲಿ ಕೂಟಕ್ಕೆ ಅಡುಗೆಯನ್ನು ಸಿದ್ದಪಡಿಸಿದ್ದರು. ವೆಜ್ ಹಾಗೂ ನಾನ್ ವೆಜ್ ಊಟದ ವ್ಯವಸ್ಥೆ ಮಾಡಲಾಗಿದ್ದು, ಚಿಕನ್ ಕಬಾಬ್- ಮಟನ್ ಚಾಪ್ಸ್- ಮೊಟ್ಟೆ- ಘೀ ರೈಸ್- ಮಸಾಲಾ ರೈಸ್- ಮಸಾಲಾ ವಡೆ-ಆಲೂ ಕಬಾಬ್-ಅಕ್ಕಿಪಾಯಸ-ಅನ್ನರಸಂ ಸೇರಿದಂತೆ ವಿವಿಧ ರೀತಿಯ ಖಾದ್ಯಗಳನ್ನು ತಯ್ಯಾರಿಸಿದ್ದರು. ಸುಮಾರು ೩೦೦೦೦ಕ್ಕೂ ಹೆಚ್ಚು ಜನರಿಗೆ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

ದೊಡ್ಮನೆ ಅನ್ನ ತಿನ್ನೋಕೆ ಪುಣ್ಯ ಮಾಡಿರಬೇಕು !
ನಾವು ತಿನ್ನುತ್ತಿರುವುದು ದೊಡ್ಮನೆಯ ಪ್ರಸಾದ ಕಣ್ರೀ !

ದೊಡ್ಮನೆ ರಾಜರತ್ನನ ಸ್ಮರಣಾರ್ಥವಾಗಿ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ರಾಜ್ಯದ ಮೂಲೆಮೂಲೆಗಳಿಂದ ಜನರು ಆಗಮಿಸಿದ್ದರು. ಸಾರ್ವಜನಿಕರನ್ನು ನಿಯಂತ್ರಿಸಲು ಬಿಗಿ ಪೊಲೀಸ್ ಬಂಧೋಬಸ್ತ್ ಮಾಡಲಾಗಿತ್ತು. 1000 ಕ್ಕೂ ಹೆಚ್ಚು ಖಾಕಿ ಪಡೆಯನ್ನು ನಿಯೋಜನೆ ಮಾಡಿದ್ದರು. ದೊಡ್ಮನೆ ಭಕ್ತರು ಹಾಗೂ ಪವರ್‌ಸ್ಟಾರ್ ಅಭಿಮಾನಿ ದೇವರುಗಳು ಸೇರಿದಂತೆ ಯುವಕರು-ಯುವತಿಯರು-ಮಹಿಳೆಯರು-ಮಕ್ಕಳು-ವೃದ್ದರು-ಕಾರ್ಮಿಕರು-ಅಂಧರು-ವಿಶೇಷ ಚೇತನರು ಹೀಗೆ ಸಕಲರೂ ಕೂಡ ಪರಮಾತ್ಮ'ನ ಪುಣ್ಯಾರಾಧನೆಯಲ್ಲಿ ಪಾಲ್ಗೊಂಡರು.ನಟಸಾರ್ವಭೌಮನ ಸ್ಮರಣೆ ಮಾಡುತ್ತಾ ಸರದಿ ಸಾಲಿನಲ್ಲಿ ಶಿಸ್ತಿನಿಂದ ಸಾಗಿಬಂದು ಪಂಕ್ತಿಯಲ್ಲಿ ಕುಳಿತುಕೊಂಡರು.ಮೊದಲ ಪಂಕ್ತಿಯಲ್ಲಿ ಕುಳಿತವರಿಗೆ ಶಿವರಾಜ್‌ಕುಮಾರ್-ರಾಘವೇಂದ್ರ ರಾಜ್‌ಕುಮಾರ್ ಮತ್ತು ಅಶ್ವಿನಿ ಪುನೀತ್‌ರಾಜ್‌ಕುಮಾರ್ ಊಟ ಬಡಿಸಿದರು.ಭೋಜನ ಸವಿದವರು ಹೇಳಿದ್ದು ಒಂದೇ ಮಾತು ದೊಡ್ಮನೆ ಅನ್ನ ತಿನ್ನೋಕೆ ಪುಣ್ಯ ಮಾಡಿರಬೇಕು’. ಅಷ್ಟಕ್ಕೂ ಇದು ಬರೀ ಊಟವಲ್ಲ `ದೊಡ್ಮನೆಯ ಪ್ರಸಾದವೇ’ ಸರೀ ಎಂದರು.

ತಮ್ಮನ ಅಗಲಿಕೆಯ ನಡುವೆಯೂ ಶಿವಣ್ಣ ರಕ್ತದಾನ !

ಅಣ್ಣಾ ಕಾರು ತಗೊಂಡೆ ಅಂತ ಹೇಳ್ತಿದ್ದ
ಸಮಾಜಸೇವೆ ಬಗ್ಗೆ ಯಾವತ್ತೂ ಹೇಳಿಕೊಂಡಿರಲಿಲ್ಲ !

ಪವರ್‌ಸ್ಟಾರ್ ಪುಣ್ಯಸ್ಮರಣೆಗೆ ಬಂದು ಭೋಜನ ಸ್ವೀಕರಿಸಿದವರ ಪೈಕಿ ಸಾಕಷ್ಟು ಮಂದಿ ರಕ್ತದಾನ ಮಾಡಿದರು. ಮೊದಲಿಗೆ ಶಿವಣ್ಣ ಬ್ಲಡ್ ಡೊನೇಟ್ ಮಾಡಿ ಅಭಿಮಾನಿ ದೇವರುಗಳಿಗೆ ಮಾಧರಿಯಾದರು. ತಮ್ಮನ ಅಗಲಿಕೆಯ ನೋವು-ಸಂಕಟದ ನಡುವೆಯೂ ಕೂಡ ಶಿವಣ್ಣ ರಕ್ತದಾನ ಮಾಡಿದ್ದನ್ನು ಕಂಡು ಪುಣ್ಯಸ್ಮರಣೆಗೆ ಬಂದ ಹಲವರು ನಾ ಮುಂದು- ತಾ ಮುಂದು ಅಂತ ರಕ್ತದಾನ ಮಾಡುವಲ್ಲಿ ನಿರತರಾದರು. ಈ ವೇಳೆ ಮಾತನಾಡಿದ ಶಿವಣ್ಣ ಅಭಿಮಾನಿಗಳ ಪ್ರೀತಿಗೆ ಏನು ಹೇಳಬೇಕು ಅಂತಾನೇ ಗೊತ್ತಾಗ್ತಿಲ್ಲ. ಇಂತಹ ಫ್ಯಾನ್ಸ್ ಗಳನ್ನು ಪಡೆದಿರುವುದು ಅಪ್ಪು ಪುಣ್ಯ ಆದರೆ ಅಪ್ಪುನಂಥಹ ತಮ್ಮನನ್ನು ಪಡೆಯುವುದಕ್ಕೆ ನಾನು ಪುಣ್ಯ ಮಾಡಿದ್ದೇನೆ. ಹೊಸ ಸಿನಿಮಾ- ಹೊಸ ಕಾರು- ಊಟ- ತಿಂಡಿ ಬಗ್ಗೆ ಬಿಟ್ಟರೆ ಸಮಾಜಮುಖಿ ಕೆಲಸಗಳ ಬಗ್ಗೆ-ದಾನ-ಧರ್ಮದ ಬಗ್ಗೆ ಅಪ್ಪು ನನ್ನ ಹತ್ತಿರ ಯಾವತ್ತೂ ಹೇಳಿಕೊಳ್ಳದೇ ಹೋಗಿಬಿಟ್ಟ. ನನ್ನ ತಮ್ಮನಾಗಿ ಇಷ್ಟೊಂದು ಸಮಾಜ ಸೇವೆ ಮಾಡ್ತಿದ್ದ ಎನ್ನುವುದನ್ನು ಈಗ ಕೇಳ್ತಿದ್ದರೆ ಹೆಮ್ಮೆಯಾಗುತ್ತೆ ನನಗೆ. ಬಲಗೈನಲ್ಲಿ ಕೊಟ್ಟಿದ್ದು ಎಡಗೈಗೂ ಗೊತ್ತಾಗಬಾರ್ದು ಅಂತ ಅಪ್ಪಾಜಿ ಯಾವಾಗ್ಲೂ ಹೇಳ್ತಿದ್ದರು ಅದನ್ನೇ ಪುನೀತ್ ಪಾಲಿಸಿದ್ದಾನೆ. ದುಃಖಕರ ಸಂಗತಿ ಅಂದರೆ ಅಭಿಮಾನಿಗಳಿಗೆ ಊಟ ಹಾಕ್ಬೇಕು ಎನ್ನುವ ಅಪ್ಪು ಕನಸು ಶ್ರದ್ಧಾಂಜಲಿ ಮೂಲಕ ಈಡೇರುತ್ತಿರುವುದನ್ನು ನೋಡಿ ನನಗೆ ಸಹಿಸಿಕೊಳ್ಳೋದಕ್ಕೆ ಆಗುತ್ತಿಲ್ಲ ಎಂದು ಶಿವಣ್ಣ ನೋವು ತೋಡಿಕೊಂಡರು.

ಸಹೋದರ ಪುನೀತ್ ಸಾವಿನಿಂದ ಮನಸ್ಸು- ಹೃದಯ ಸಂಕಟ ಪಡುತ್ತಿದ್ದರೂ ಕೂಡ ನಟ ರಾಘವೇಂದ್ರ ರಾಜ್‌ಕುಮಾರ್ ಮಾಧ್ಯಮದ ಮುಂದೆ ಹಾಗೂ ಅಭಿಮಾನಿಗಳ ಮುಂದೆ ತೋರಿಸಿಕೊಳ್ಳುತ್ತಿಲ್ಲ. ತಮ್ಮ ಬಿಟ್ಟೋದ ನೆನಪುಗಳ ಜೊತೆ ಪ್ರತಿಕ್ಷಣ ಬದುಕುತ್ತಿರುವ ರಾಘಣ್ಣ, ‘ನಿಮ್ಮಷ್ಟೇ ನೋವು ನಮಗೂ ಆಗಿದೆ,ನಮ್ಮಷ್ಟೇ ದುಃಖ ನೀವು ಅನುಭವಿಸುತ್ತಿದ್ದೀರಿ'ದಯವಿಟ್ಟು ಯಾರು ಕೂಡ ದುಡುಕಬಾರ್ದು.ಆತ್ಮಹತ್ಯೆಯಂತಹ ನಿರ್ಣಯಗಳನ್ನು ಕೈಗೊಂಡು ಕುಟುಂಬವನ್ನು ಅನಾಥರನ್ನಾಗಿ ಮಾಡ್ಬಾರ್ದು ಎಂದು ಮನವಿ ಮಾಡಿಕೊಳ್ಳುತ್ತಲೇ ಬರ್ತಿದ್ದಾರೆ.

ಇವತ್ತು ಕೂಡ ಅಭಿಮಾನಿಗಳಿಗೆ ಅದನ್ನೇ ಕೈಮುಗಿದು ಹೇಳಿದರು ನನ್ನ ತಮ್ಮ ಅರಸು ಒಳ್ಳೊಳ್ಳೆ ಕೆಲಸಗಳನ್ನು ಮಾಡಿದ್ದಾನೆ-ಒಳ್ಳೆಯ ಗುಣ ಮೈಗೂಡಿಸಿಕೊಂಡು ಆದರ್ಶವಾಗಿ ಬದುಕಿ ತೋರಿಸಿದ್ದಾನೆ.ದಯವಿಟ್ಟು ನಾವೆಲ್ಲರೂ ಕೂಡ ಅವನಂತೆ ಬಾಳಿ-ಬದುಕಿ ಸ್ಪೂರ್ತಿಯಾಗೋಣ ಎಂದರು.ಆರೋಗ್ಯದ ಸಮಸ್ಯೆ ಇದ್ದರೂ ಕೂಡಪುನೀತ್ ಪುಣ್ಯಾರಾಧನೆ’ಯಲ್ಲಿ ಪಾಲ್ಗೊಂಡು ಅಭಿಮಾನಿ ದೇವರುಗಳು ಭೋಜನ ಸ್ವೀಕರಿಸುತ್ತಿದ್ದ ಪಂಕ್ತಿಯಲ್ಲಿ ಸಾಗಿ ಎಲ್ಲರನ್ನೂ ಮಾತನಾಡಿಸಿದರು. ಹೊಟ್ಟೆತುಂಬಾ ಊಟ ಮಾಡಿ ಸಂತೃಪ್ತಿಯಿಂದ ಹೊರಡಿ ಎಂದು ಕೇಳಿಕೊಂಡರು. ಅದಕ್ಕೆ ಹೇಳೋದು ದೊಡ್ಡಮನೆಯವರದ್ದು ದೊಡ್ಡಮನಸ್ಸು-ದೊಡ್ಡಗುಣ-ದೊಡ್ಡತನ ಅಂತ.

ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಹಾಡುಗಳ ಒಪ್ಪಂದ; ಅರ್ಜುನ್ ಸರ್ಜಾ – ರಾಧಿಕಾ ಅಭಿನಯದ ಚಿತ್ರ ಇದೇ ತಿಂಗಳಲ್ಲಿ ರಿಲೀಸ್

ಬಹುಭಾಷಾ ನಟ ಅರ್ಜುನ್ ಸರ್ಜಾ – ರಾಧಿಕಾ ಕುಮಾರಸ್ವಾಮಿ ಹಾಗೂ ಖ್ಯಾತ ನಟ ಜೆ ಡಿ ಚಕ್ರವರ್ತಿ ಪ್ರಮುಖಪಾತ್ರದಲ್ಲಿ ನಟಿಸಿರುವ “ಒಪ್ಪಂದ” ಚಿತ್ರದ ಹಾಡುಗಳು ಇತ್ತೀಚೆಗೆ ಬಿಡುಗಡೆಯಾಗಿವೆ. ಇದೇ ವೇಳೆ ಚಿತ್ರದ ಟ್ರೇಲರ್ ಕೂಡ ಹೊರಬಂದಿದೆ.

ನಿರ್ಮಾಪಕರಾದ ರೆಹಮಾನ್(ಯಜಮಾನ), ಕೆ.ಮಂಜು, ಸೆವೆನ್ ರಾಜ್, ಫ್ಯಾಷನ್ ಡಿಸೈನರ್ ರಾಜೇಶ್ ಶೆಟ್ಟಿ, ಭವ್ಯಗೌಡ, ಮೋಹಿನಿ ಚೌಧರಿ ಮುಂತಾದವರು ಸಾಂಗ್ಸ್ ರಿಲೀಸ್ ಮಾಡಿ ಶುಭ ಕೋರಿದರು.

ಈ ಚಿತ್ರ ಉತ್ತಮವಾಗಿ ಮೂಡಿಬರಲು ಅರ್ಜುನ್ ಸರ್ಜಾ, ಜೆ ಡಿ ಚಕ್ರವರ್ತಿ ಹಾಗೂ ರಾಧಿಕಾ ಕುಮಾರಸ್ವಾಮಿ ಅವರ ಸಹಕಾರ ಬಹಳ ಮುಖ್ಯ. ಅವರೆಲ್ಲರೂ ಚಿತ್ರದಲ್ಲಿ ಅಮೋಘವಾಗಿ ನಟಿಸಿದ್ದಾರೆ. ನಾಲ್ಕು ಭಾಷೆಗಳಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ. ಇದೇ ತಿಂಗಳಲ್ಲಿ ಚಿತ್ರ ತೆರೆಗೆ ಬರಲಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕ ಸಮೀರ್‌‌.

ಚಿತ್ರದಲ್ಲಿ ಆರು ಹಾಡುಗಳಿವೆ. ಉತ್ತಮವಾಗಿ ಮೂಡಿ ಬರಲು ಸಹಕಾರಿಯಾದ ಗೀತರಚನೆಕಾರರಿಗೆ, ಗಾಯಕ, ಗಾಯಕಿಯರಿಗೆ ಹಾಗೂ ಚಿತ್ರದ ನಿರ್ದೇಶಕರಿಗೆ ಧನ್ಯವಾದ ತಿಳಿಸಿದರು ಸಂಗೀತ ನಿರ್ದೇಶಕ ಸುಭಾಷ್ ಆನಂದ್.

ನನ್ನ ಪಾತ್ರ ತುಂಬಾ ಚೆನ್ನಾಗಿದೆ. ಅರ್ಜುನ್ ಸರ್ಜಾ, ಜೆ ಡಿ ಚಕ್ರವರ್ತಿ ಹಾಗೂ ರಾಧಿಕಾ ಕುಮಾರಸ್ವಾಮಿ ಅವರಂತಹ ನಟರೊಂದಿಗೆ ನಟಿಸಲು ಅವಕಾಶ ನೀಡಿದ ನಿರ್ದೇಶಕರಿಗೆ ನನ್ನ ಧನ್ಯವಾದ ಎಂದರು ನಟಿ ಸೋನಿ ಚರಿಶ್ಟಾ.

ಚಿತ್ರದ ಸಹ ನಿರ್ಮಾಪಕ ಶಶಿಧರ್ ಹಾಗೂ ಕಲಾವಿದ ದುಬೈ ರಫಿಕ್ ತಮ್ಮ ಅನುಭವ ಹಂಚಿಕೊಂಡರು. ಅರ್ಜುನ್ ಸರ್ಜಾ ಅವರು ವಿಡಿಯೋ ಮೂಲಕ ಚಿತ್ರತಂಡಕ್ಕೆ ಶುಭಕೋರಿದರು.

ಸಮೀರ್ ಅವರೆ ನಿರ್ಮಿಸಿ, ನಿರ್ದೇಶಿಸಿರುವ ಈ ಚಿತ್ರಕ್ಕೆ ಅಮೀರ್ ಲಾಲ್ ಛಾಯಾಗ್ರಹಣ, ಸುಭಾಷ್ ಆನಂದ್ ಸಂಗೀತ ನಿರ್ದೇಶನ, ರಾಘು ಕುಲಕರ್ಣಿ ಕಲಾ ನಿರ್ದೇಶನ, ಅಮ್ಮ ರಾಜಶೇಖರ್ ನೃತ್ಯ ನಿರ್ದೇಶನ, ಖಾಲಿ ಕಿಕಾಸ್ ಸಾಹಸ ನಿರ್ದೇಶನ ಹಾಗೂ ಪ್ರಭು ಅವರ ಸಂಕಲನವಿದೆ.

ಅರ್ಜುನ್ ಸರ್ಜಾ, ರಾಧಿಕಾ ಕುಮಾರಸ್ವಾಮಿ, ಜೆ.ಡಿ.ಚಕ್ರವರ್ತಿ, ಅಮೀರ್ ಖಾನ್ ಸಹೋದರ ಫೈಸಲ್ ಖಾನ್ , ಸೋ‌ನಿ ಚರಿಶ್ಟಾ, ವಿಶ್ವನಾಥ್ ಮುಂತಾದವರು ಈ ಚಿತ್ರದಲ್ಲಿದ್ದಾರೆ.

Categories
ಸಿನಿ ಸುದ್ದಿ

ಭಾವಚಿತ್ರ ಮೂಲಕ ಭಾವನೆಗಳ ಅನಾವರಣ; ಯಾನ ಹುಡುಗ ಚಕ್ರವರ್ತಿ ಹೀರೋ ಮಗಳು ಜಾನಕಿ ಖ್ಯಾತಿಯ ಗಾನವಿ ಲಕ್ಷ್ಮಣ್ ನಾಯಕಿ

ಗಿರೀಶ್ ಕುಮಾರ್ ಬಿ ಕಥೆ ಬರೆದು ನಿರ್ದೇಶಿಸಿರುವ ಚಿತ್ರ “ಭಾವಚಿತ್ರ”. ಸದ್ಯ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು, ಹಾವೇರಿ, ಚಿಕ್ಕಮಗಳೂರು, ಶಿವಮೊಗ್ಗ, ತುಮಕೂರು ಮುಂತಾದ ಕಡೆ 55ದಿನಗಳ ಚಿತ್ರೀಕರಣವಾಗಿದೆ.

ಈ ಹಿಂದೆ ” ಆವಾಹಯಾಮಿ” ಚಿತ್ರ ನಿರ್ದೇಶಿಸಿದ್ದ, ಗಿರೀಶ್ ಕುಮಾರ್ ನಿರ್ದೇಶಿಸುತ್ತಿರುವ ಎರಡನೇ ಚಿತ್ರವಿದು‌. ನಿರ್ದೇಶಕರೆ ಕಥೆ ಬರೆದಿದ್ದಾರೆ. ಗಿರೀಶ್ ಕುಮಾರ್ – ಗಿರೀಶ್ ಬಿಜ್ಜಳ ಸೇರಿ ಚಿತ್ರಕಥೆ ರಚಿಸಿದ್ದಾರೆ.

ಮೊಬೈಲ್ ಬಂದಾಗಿನಿಂದ ಎಲ್ಲರಿಗೂ “ಭಾವಚಿತ್ರ” ದ ಮೇಲೆ ಹೆಚ್ಚಿನ ಒಲವು. ಕ್ಯಾಮೆರಾ ಹಾಗೂ ಭಾವಚಿತ್ರದ ಮೇಲೆ ನಮ್ಮ ಚಿತ್ರದ ಕಥೆ ಸಾಗುತ್ತದೆ. ಇದನ್ನು ಟೆಕ್ನೋ ಥ್ರಿಲ್ಲರ್ ಅಂತಲೂ ಕರೆಯಬಹುದು. ಇದಷ್ಟೇ ಅಲ್ಲ. ಪ್ರೀತಿ ಹಾಗೂ ಸೆಂಟಿಮೆಂಟ್ ಸನ್ನಿವೇಶಗಳು ನಮ್ಮ ಚಿತ್ರದಲ್ಲಿದೆ ಎನ್ನುತ್ತಾರೆ ನಿರ್ದೇಶಕ ಗಿರೀಶ್ ಕುಮಾರ್.

Wood creepers ಸಂಸ್ಥೆ ನಿರ್ಮಾಣದ ಈ ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಶಿವು ಬೇರಗಿ ಹಾಗೂ ವಿಶ್ವಜಿತ್ ರಾವ್ ಬರೆದಿರುವ ಹಾಡುಗಳಿಗೆ ಗೌತಮ್ ಶ್ರೀವತ್ಸ ಸಂಗೀತ ನೀಡಿದ್ದಾರೆ. ಅಜೇಯ್ ಕುಮಾರ್ ಛಾಯಾಗ್ರಹಣ ಹಾಗೂ ರತೀಶ್ ಕುಮಾರ್ ಸಂಕಲನ ಈ ಚಿತ್ರಕ್ಕಿದೆ.

ಚಕ್ರವರ್ತಿ, ಗಾನವಿ ಲಕ್ಷ್ಮಣ್, ಅವಿನಾಶ್, ಕಾರ್ತಿಕ್ ಸುಂದರಂ, ಗಿರೀಶ್ ಬಿಜ್ಜಳ ಮುಂತಾದವರು ಈ ಚಿತ್ರದಲ್ಲಿದ್ದಾರೆ.

Categories
ಸಿನಿ ಸುದ್ದಿ

ರಾತ್ರಿ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಿದರು -ಬೆಳಗ್ಗೆ ಕಣ್ಮುಚ್ಚಿ ಈ ಲೋಕಾನೇ ಬಿಟ್ಟೋದರು; ಅಪ್ಪು ನೆನೆದು ನಟ ರಮೇಶ್ ಅರವಿಂದ್ ಭಾವುಕ !

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಕಾಲಿಕ ನಿಧನ ಎಲ್ಲರನ್ನೂ ದಂಗುಬಡಿಸಿದೆ. ಪುನೀತ್ ಸಾವು ದುಸ್ವಪ್ನವಾಗಬಾರದ ದೇವಾ ಅಂತ ಸಕಲರೂ ಮರುಗುತ್ತಿದ್ದಾರೆ. ಅಪ್ಪು ಬಿಟ್ಟೋದ ನೆನಪುಗಳನ್ನು ಕಣ್ಮುಂದೆ ತಂದುಕೊಂಡು ಹೃದಯವನ್ನು ಮತ್ತೆ ಮತ್ತೆ ಭಾರ ಮಾಡಿಕೊಳ್ಳುತ್ತಿದ್ದಾರೆ. ನಟ ರಮೇಶ್ ಅರವಿಂದ್ ಕೂಡ ಅಂಜನಿಪುತ್ರನ ಅಗಲಿಕೆಯಿಂದ ತೀರಾ ನೊಂದಿದ್ದಾರೆ. ರಾತ್ರಿ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಿದ ಅಪ್ಪು ಬೆಳಗ್ಗೆ ಎದ್ಮೇಲೆ ಈ ಲೋಕಾನೇ ಬಿಟ್ಟುಹೋಗಿದ್ದನ್ನು ಕಂಡು ಶಾಕ್‌ಗೆ ಒಳಗಾಗಿದ್ದಾರೆ. `ಬೆಳಕು ಹೋದ್ಮೇಲೆ ಕತ್ತಲು ಬರಲೇಬೇಕಲ್ವಾ ಸಾರ್’ ಹೀಗಂತ ರಾತ್ರಿಯಷ್ಟೇ ಮಾತನಾಡಿದ್ದ ಅಪ್ಪು, ಬೆಳಗಾಗಿ ಸೂರ್ಯ ನೆತ್ತಿ ಮೇಲೆ ಬರುವಷ್ಟರಲ್ಲಿ ಈ ಜಗತ್ತೇ ಬಿಟ್ಟುಹೋಗಿಬಿಟ್ಟರು.

ಅಲ್ಲಾ ರೀ, ಅಪ್ಪುದು ಸಾಯೋ ವಯಸ್ಸಾ ನೀವೇ ಹೇಳಿ. ಜಸ್ಟ್ 46 ಅಷ್ಟೇ ರೀ. ಅಷ್ಟೊಂದು ಫಿಟ್ ಆಗಿದ್ದರೂ ಕೂಡ ಹಾರ್ಟ್ಗೆ ಹೊಡೆತ ಕೊಟ್ಟು ಕರ‍್ಕೊಂಡು ಹೊಂಟುಬಿಟ್ಟ. ಅಲ್ಲಾ, ಆ ಭಗವಂತನಿಗೆ ದೊಡ್ಮನೆ ಹುಡುಗನ ಮೇಲೆ ಅಷ್ಟೊಂದು ಅಸೂಹೆ, ಅಷ್ಟೊಂದು ಕೋಪ ಯಾಕಾದರೂ ಇತ್ತೋ ಏನೋ ಗೊತ್ತಿಲ್ಲ. ಎಷ್ಟೋ ಜನರಿಗೆ ಸಾವಿನ ಮುನ್ಸೂಚನೆ ಕೊಡುವ, ಸಾವಿನ ಮನೆಯ ಕದತಟ್ಟಿದ ಎಷ್ಟೋ ಜನರನ್ನ ವಾಪಾಸ್ ರ‍್ಕೊಂಡು ಬರುವ ಭಗವಂತ, ಕೋಟ್ಯಾಂತರ ಮಂದಿ ಪ್ರೀತ್ಸಿ-ಆರಾಧಿಸುವ ಪವರ್‌ಸ್ಟಾರ್‌ಗೆ ಒಂದೇ ಒಂದು ಅವಕಾಶವನ್ನು ಕೊಡಲಿಲ್ಲ. ಕೇವಲ ಒಂದೇ ಒಂದು ಚಾನ್ಸ್ ಕೊಟ್ಟಿದ್ದರೆ ಅಂಜನಿಪುತ್ರ ಉಸಿರು ಚೆಲ್ಲುತ್ತಿರಲಿಲ್ಲ. ದೊಡ್ಮನೆ ಅನಾಥವಾಗುತ್ತಿರಲಿಲ್ಲ. ಕರುನಾಡಿಗೆ ಕತ್ತಲೆ ಆವರಿಸುತ್ತಿರಲಿಲ್ಲ. ಅಭಿಮಾನಿಗಳು ಎದೆ ಹೊಡೆದುಕೊಂಡು ಸಾಯುತ್ತಿರಲಿಲ್ಲ. ಅರಸು ಆಸರೆಯಾಗಿದ್ದ ಲಕ್ಷಾಂತರ ಮಂದಿ ಆಕಾಶ ನೋಡುತ್ತಿರಲಿಲ್ಲ. ಇವತ್ತು ಇಷ್ಟೆಲ್ಲಾ ಆಗ್ತಿದೆ ಅಂದರೆ ಅದಕ್ಕೆ ಕಾರಣ ಭಗವಂತನ ಕಲ್ಲು ಮನಸ್ಸು

ಮೇಲೆ ಹೇಳಿದಂತೆ ಅಪ್ಪುದು ಉಸಿರು ಚೆಲ್ಲುವ ವಯಸ್ಸಲ್ಲ. ಅಪ್ಪುಗೆ ಸಾವು ಸಮೀಪಿಸುತ್ತಿದೆ ಎನ್ನುವ ಅರಿವು ಇರಲಿಲ್ಲ. ಹೀಗಾಗಿಯೇ, ಸ್ನೇಹಕ್ಕೆ-ಪ್ರೀತಿಗೆ ಬೆಲೆ ಕೊಡುವ ಪವರ್‌ಸ್ಟಾರ್ ಸಾಯುವ ಹಿಂದಿನ ದಿನ ರಾತ್ರಿ ಸಂಗೀತ ನಿರ್ದೇಶಕ ಗುರುಕಿರಣ್ ಬರ್ತ್ಡೇ ಪಾರ್ಟಿಗೆ ಹೋಗಿದ್ದರು. ಗುರು ಹುಟ್ಟಿದ ದಿನವನ್ನು ಸಂಭ್ರಮಿಸುತ್ತಾ, ಸ್ನೇಹಿತರ ಜೊತೆ ಕಾಲಕಳೆದರು. ಈ ವೇಳೆ ನಟ ರಮೇಶ್ ಅರವಿಂದ್ ಜೊತೆ ಸುಮಾರು ಎರಡು ಗಂಟೆಗಳ ಟೈಮ್ ಸ್ಪೆಂಡ್ ಮಾಡಿದ್ದಾರೆ. ಯಾವತ್ತೂ ಚರ್ಚೆ ಮಾಡದ ವಿಷ್ಯಗಳನ್ನೆಲ್ಲಾ ಪ್ರಸ್ತಾಪ ಮಾಡುತ್ತಾ, ಬಾಲ್ಯ-ಯೌವ್ವನ-ಬದುಕು-ವೈರಾಗ್ಯ-ಸಾವಿನ ಕುರಿತು ಮಾತನಾಡಿದ್ದಾರೆ. ರಮೇಶ್ ಅರವಿಂದ್ ಬುದ್ದನ ಕಥೆಯೊಂದನ್ನು ಎಕ್ಸ್ ಪ್ಲೇನ್ ಮಾಡಿದ್ಮೇಲೆ, ರಾತ್ರಿ ಸರಿದ ಮೇಲೆ ಹಗಲು ಬರಲೇಬೇಕು',ಬೆಳಕು ಹೋದ್ಮೇಲೆ ಕತ್ತಲು ಬರಲೇಬೇಕಲ್ವಾ ಸಾರ್’ ಎಂದರಂತೆ ಅಪ್ಪು. ಇಂತಹ ಮಾತನಾಡಿದ ಅಪ್ಪು ಬೆಳಗ್ಗೆ ಎಂದಿನಂತೆ ಎದ್ದು ವ್ಯಾಯಾಮ ಮುಗಿಸಿ, ಅಣ್ಣನ `ಭಜರಂಗಿ-೨’ ಚಿತ್ರಕ್ಕೆ ಶುಭಕೋರಿದ ಕೆಲವೇ ಕ್ಷಣಗಳಲ್ಲಿ ಹೃದಯ ಸ್ತಂಬನಗೊಳ್ಳುತ್ತೆ. ಯಾಕೀಗ್ ಆಗ್ತಿದೆ ಎಂದು ಹಾಸ್ಪಿಟಲ್‌ಗೆ ಹೋಗಿ ಅಡ್ಮಿಟ್ ಆಗುವ ಹೊತ್ತಿಗೆ ಜವರಾಯ ದೊಡ್ಮನೆ ಹುಡುಗನ ಪ್ರಾಣವನ್ನೇ ಕಿತ್ಕೊಂಡುಬಿಟ್ಟ.

ಇಷ್ಟೆಲ್ಲಾ ಆಗಿಹೋಗಿರುವುದನ್ನು ಅರಗಿಸಿಕೊಳ್ಳೋದಕ್ಕೆ ಆಗದ ನಟ ರಮೇಶ್ ಅರವಿಂದ್ ಅವರು ತಮ್ಮ `100'ನೇ ಚಿತ್ರದ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಾ ಒಂದು ಮಾತು ಹೇಳಿದರು.ಇಂಡಸ್ಟ್ರಿಗೆ ನಾಳೆ ಇನ್ನೊಬ್ಬ ಡ್ಯಾನ್ಸರ್ ಬರ್ಬೋದು, ಫೈಟರ್ ಬರ್ಬೋದು,ಸ್ಟಾರ್ ಬರ್ಬೋದು.ಆದರೆ,ಇಷ್ಟು ತುಂಬಿಕೊಂಡಿದ್ದ ಪವರ್‌ಸ್ಟಾರ್ ಥರ ಮತ್ತೊಬ್ಬ ಸ್ಟಾರ್ ಚಿತ್ರರಂಗದಲ್ಲಿ ಹುಟ್ಟಲಿಕ್ಕೆ ಸಾಧ್ಯವೇ ಇಲ್ಲ.ಅಂದ್ಹಾಗೇ,ಅಪ್ಪು ಅದ್ಬುತ ವ್ಯಕ್ತಿಯಾಗಿದ್ದರು.ಮನೆತನಕ್ಕೆ ತಕ್ಕಂತೆ ವಿನಯದಿಂದ-ಸರಳತೆಯಿಂದ ಕೂಡಿದ್ದ ಪವರ್‌ಸ್ಟಾರ್,ಡ್ಯಾನ್ಸ್,ಫೈಟ್,ಫ್ಯಾಮಿಲಿ ಸೆಂಟಿಮೆಂಟ್ ಸೇರಿಕೊಂಡು ಎಲ್ಲರ ಅಪ್ಪುಗೆಯ ಅಪ್ಪು ಆಗಿದ್ದರು.

ಹೀಗಾಗಿ,ಅಪ್ಪು ಬಿಟ್ಟೋದ ಜಾಗವನ್ನು ಯಾರೂ ತುಂಬಲಿಕ್ಕೆ ಸಾಧ್ಯವಿಲ್ಲ. ಪುನೀತ್ ಜೊತೆಗೆ ಸಾವಿರಾರು ಮೆಮೋರಿಸ್‌ಗಳು ಇವೆ.ಕಳೆದ ಇಪ್ಪತ್ತು ವರ್ಷದಿಂದ ಅವರೊಟ್ಟಿಗೆ ಸಂಪರ್ಕದಲ್ಲಿದ್ದೇನೆ.‘ಅಪ್ಪು’ ಸಿನಿಮಾದಿಂದ ಹಿಡಿದು ಇಲ್ಲಿಯವರೆಗೆ ಅವರ ಜರ್ನಿಯನ್ನು ನೋಡಿದ್ದೇನೆ.`ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮದಲ್ಲಿ ಕೆಂಪು ಖುರ್ಚಿ ಮೇಲೆ ಕೂರಿಸಿ ಇಡೀ ಕರ್ನಾಟಕಕ್ಕೆ ಯುವರತ್ನನ ಸಾಧನೆಯನ್ನು ವಿವರಿಸಿದ್ದೇನೆ. ಆದರೆ, ಇವತ್ತು ಒಂದು ಕುರ್ಚಿ ಮೇಲೆ ಅವರ ಫೋಟೋ ಇಟ್ಟು ನಮಿಸುವಂತಹ ಸಂದರ್ಭ ಸೃಷ್ಟಿಸಿಯಾಗಿದೆ. ಈ ಸನ್ನಿವೇಶ ಸೃಷ್ಟಿಸಿದ ಆ ಭಗವಂತನಿಗೆ ಧಿಕ್ಕಾರವಿರಲಿ.

ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಶುರುವಾಯ್ತು ಅಮೃತದಂಥ ಒಲವು! ಅಮೃತ್ ಅಪಾರ್ಟ್ಮೆಂಟ್ಸ್ ಸಿನಿಮಾ ಹಾಡು ರಿಲೀಸ್

“ಅಮೃತ್ ಅಪಾರ್ಟ್ಮಮೆಂಟ್ಸ್” ಚಿತ್ರದ “ಶುರುವಾಗಬೇಕು ಮತ್ತೊಮ್ಮೆ ನಮ್ಮ ಒಲವು” ಎಂಬ ಪ್ರೇಮಗೀತೆಯೊಂದು ರಿಲೀಸ್ ಆಗಿದೆ. ಯೂಟ್ಯೂಬ್ ಚಾನಲ್ ಮೂಲಕ ಈ ಗೀತೆ ಬಿಡುಗಡೆಯಾಗಿದ್ದು, ಎಲ್ಲೆಡೆ ಮೆಚ್ಚುಗೆ ಸಿಕ್ಕಿದೆ.


ಗಂಡ-ಹೆಂಡತಿ ಮಧ್ಯೆ ಮುನಿಸು ಕರಗುವ ಸನ್ನಿವೇಶಕ್ಕೆ ತಕ್ಕಂತೆ, ಇಡೀ ಸಿನೆಮಾದ ಕಥೆಯ ಸಾರಾಂಶವನ್ನು ಹೇಳುವಂತಹ, ಪ್ರೇಕ್ಷನ ಮನ ತಟ್ಟುವಂತಹ ಒಂದು ವಿಶೇಷ ಹಾಡಿನ ಅವಶ್ಯಕತೆ ಇತ್ತು. ಈ ಥರದ ಒಂದು ವಿನೂತನ ಪ್ರೇಮಗೀತೆಗೆ, ಹೂ-ಹೃದಯದ ಪ್ರೇಮಕವಿ ಕೆ.ಕಲ್ಯಾಣರವರೇ ಸೂಕ್ತ ಎಂದು ನಾನು ಅವರ ಬಳಿ ಹೋದೆ ಎಂದು ಚಿತ್ರದ ನಿರ್ದೇಶಕ ಗುರುರಾಜ ಕುಲಕರ್ಣಿ(ನಾಡಗೌಡ) ಚಿತ್ರಗೀತೆಯ ಹಿಂದಿನ ಪ್ರಸಂಗ ಬಿಚ್ಚಿಟ್ಟರು.
ಯುವಪ್ರೇಮಿಗಳ ಪ್ರೀತಿ-ಪ್ರೇಮ-ಮುನಿಸು-ತಲ್ಲಣಗಳ ಭಾವಕ್ಕೆ ತಕ್ಕಂತೆ ಗೀತೆಯ ಸಾಲುಗಳನ್ನು ಕೆ.ಕಲ್ಯಾಣ ಬರೆದಿದ್ದಾರೆ. ಅದಕ್ಕೆ ಪೂರಕವಾಗಿ ಸಂಗೀತ ನಿರ್ದೇಶಕ ಎಸ್.ಡಿ.ಅರವಿಂದ ಕೇಳುಗರನ್ನು ಮೋಡಿ ಮಾಡುವಂತಹ ಸಂಗೀತ ನೀಡಿದ್ದಾರೆ.


ಈ ಯುಗಳ ಹಾಡಿಗೆ ವಾಣಿ ಹರಿಕೃಷ್ಣ ಮತ್ತು ಅಜಯ ವಾರಿಯರ್ ಧ್ವನಿ ನೀಡಿದ್ದಾರೆ. ಬಹಳ ದಿನಗಳ ನಂತರ ಈ ಥರದ ಶುಧ್ಧ ಸಾಹಿತ್ಯಕ್ಕೆ ಧ್ವನಿಯಾಗಿರುವದಕ್ಕೆ ಇಬ್ಬರೂ ಸಂತೋಷ ವ್ಯಕ್ತಪಡಿಸಿದ್ದಾರೆ.


ನವೆಂಬರ ತಿಂಗಳ ಕೊನೆಯ ವಾರದಲ್ಲಿ “ಅಮೃತ ಅಪಾರ್ಟ್ಮೆಂಟ್ಸ್ ಸಿನೆಮಾ ಬಿಡುಗಡೆಯಾಗಲಿದ್ದು, ಚಿತ್ರ ತಂಡ ಪ್ರೇಕ್ಷಕರ ಮನಸ್ಸು ಗೆಲ್ಲುವ ಉತ್ಸಾಹದಲಿದ್ದಾರೆ.
ಗುರುರಾಜ ಕುಲಕರ್ಣಿ (ನಾಡಗೌಡ) ನಿರ್ಮಾಣದ ಜೊತೆ ನಿರ್ದೇಶನವನ್ನೂ ಮಾಡಿದ್ದಾರೆ.

Categories
ಸಿನಿ ಸುದ್ದಿ

ಅಪ್ಪು ಆತ್ಮಕ್ಕೆ ಶಾಂತಿ ಕೋರಲು ಬಿಗ್ ಸ್ಕ್ರೀನ್‌ಗೂ ಅವಕಾಶ ! ರಾಜ್ಯಾದ್ಯಂತ ಎಲ್ಲಾ ಚಿತ್ರಮಂದಿರಗಳಲ್ಲಿ ಪುನೀತ್ ನಮನ ಕಾರ್ಯಕ್ರಮಕ್ಕೆ ಸಿದ್ದತೆ !

ದೊಡ್ಡಮನೆಯ ಮಗ, ಕರುನಾಡಿನ ರಾಜರತ್ನ, ಗಂಧದಗುಡಿಯ ಅರಸು, ಅಭಿಮಾನಿಗಳ ಪಾಲಿನ ಆರಾಧ್ಯ ದೈವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನ ಕಳೆದುಕೊಂಡು ಕುಟುಂಬಸ್ಥರು- ಅಭಿಮಾನಿ ದೇವರುಗಳು- ಕರುನಾಡಿನ ಜನರು- ಹೊರರಾಜ್ಯದ ಮಂದಿಯಷ್ಟೇ ಕಣ್ಣೀರಾಕಿಲ್ಲ. ಇವರಷ್ಟೇ ದು:ಖ, ಇವರಷ್ಟೇ ನೋವು, ಇವರಷ್ಟೇ ಸಂಕಟವನ್ನ ಬೆಳ್ಳಿತೆರೆಯೂ‌ ಅನುಭವಿಸ್ತಿದೆ. ಆದರೆ, ಬಾಯ್ಬಿಟ್ಟು ಹೇಳಿಕೊಳ್ಳೋದಕ್ಕೆ ಉಸಿರಿಲ್ಲ,ಕಣ್ಣೀರು ಸುರಿಸೋದಕ್ಕೆ ಜೀವ ಇಲ್ಲ.


ಹೀಗಾಗಿ, ನೋವನ್ನು ಹೇಳಿಕೊಳ್ಳೋದಕ್ಕೆ ಆಗದೇ ಒಳಗೊಳಗೆ ಸೊರಗುತ್ತಾ, ಸಂಕಟ ಪಡುತ್ತಿದೆ. ಕೊನೆಭಾರಿ ಅಪ್ಪು ಮುಖ ನೋಡೋದಕ್ಕೆ ಅವಕಾಶ ಸಿಗಲಿಲ್ಲ, ಕಡೇ ಪಕ್ಷ ನಮನ ಸಲ್ಲಿಸೋಣ ಅಂದರೆ ಇವರ್ಯಾರು ಅರೇಂಜ್ ಮಾಡ್ತಿಲ್ಲವಲ್ಲ ಅಂತ ಬಿಗ್ ಸ್ಕ್ರೀನ್ ಕೊರಗುತ್ತಾ ಇತ್ತು. ಬೆಳ್ಳಿತೆರೆಯ ಈ ಕೂಗು ಬಹುಷಃ ಕರ್ನಾಟಕ ಚಿತ್ರ ಪ್ರದರ್ಶಕರಿಗೆ ಕೇಳಿಸ್ತು ಎನಿಸುತ್ತೆ. ಹೀಗಾಗಿಯೇ, ಅಪ್ಪು ಆತ್ಮಕ್ಕೆ ಶಾಂತಿಕೋರುವುದಕ್ಕೆ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ಹೌದು, ಇದೇ ಭಾನುವಾರ ಸಂಜೆ ‌ 6 ಗಂಟೆಗೆ ಸರಿಯಾಗಿ ಕರ್ನಾಟಕ ರಾಜ್ಯಾದ್ಯಂತ ಎಲ್ಲಾ ಚಿತ್ರಮಂದಿರಗಳ ಆವರಣದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಪುಷ್ಪಾಂಜಲಿ, ದೀಪಾಂಜಲಿ, ಗೀತಾಂಜಲಿ ಮತ್ತು ಭಾಷ್ಪಾಂಜಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಅಭಿಮಾನಿ ದೇವರುಗಳು, ಸಿನಿಮಾ ಪ್ರೇಕ್ಷಕರು ಪಾಲ್ಗೊಳ್ಳಬಹುದು. ಬೆಂಗಳೂರಿನ ಮುಖ್ಯ ಚಿತ್ರಮಂದಿರಗಳಲ್ಲಿ ಚಿತ್ರೋದ್ಯಮದ ಇತರೆ ವಲಯದ ಗಣ್ಯರು ಭಾಗಿಯಾಗುತ್ತಿದ್ದಾರೆ. ಅಪ್ಪುಗೆ ನಮನ ಸಲ್ಲಿಸುವುದರ ಮೂಲಕ ದಿವಂಗತ ನಟ ಪುನೀತ್ ರಾಜ್ ಕುಮಾರ್ ಆತ್ಮಕ್ಕೆ ಶಾಂತಿಕೋರುತ್ತಿದ್ದಾರೆ. ಈ‌ ಮೂಲಕ ನಾದರೂ ದೊಡ್ಮನೆಯ ರಾಜಕುಮಾರನಿಗೆ ನಮನ ಸಲ್ಲಿಸುವ ಅವಕಾಶ ಸಿಗ್ತಲ್ಲ ಅಂತ ಬೆಳ್ಳಿತೆರೆ ನಿಟ್ಟುಸಿರು ಬಿಟ್ಟಿದೆ. ಇದರ ಮಧ್ಯೆಯೂ ಅಪ್ಪು ನನ್ನ ನೋಡಲಿಕ್ಕೆ ಬರಲ್ವಲ್ಲ‌ ಎಂದು‌ ನೊಂದುಕೊಳ್ಳುತ್ತಿದೆ.

ಹೌದು, ದೊಡ್ಮನೆ ರಾಜಕುಮಾರನ ಸಿನಿಮಾ ಬರ್ತಿದೆ ಎಂದರೆ ಸಾಕು ಬೆಳ್ಳಿಪರದೆ ಕ್ಯಾಕಿ ಹಾಕುತ್ತಿತ್ತು. ಬಾಕ್ಸ್ ಆಫೀಸ್ ಬೆಟ್ಟದ ಹೂ ಮುಡಿದುಕೊಂಡು ಕುಣಿಯುತ್ತಿತ್ತು. ಇದನ್ನೆಲ್ಲಾ ನೋಡೋದಕ್ಕೆ ಅಣ್ಣಾಬಾಂಡ್ ಥಿಯೇಟರ್ ಗೆ ಎಂಟ್ರಿಕೊಡ್ತಿದ್ದರು. ಅಭಿಮಾನಿ ದೇವರುಗಳು ಜೊತೆ ಕುಳಿತು ಸಿನಿಮಾ ನೋಡ್ತಿದ್ದರು. ಇನ್ಮೇಲೆ ಯುವರತ್ನನಿಗಾಗಿ ಕಾದು ಕುಳಿತರು ಬರಲ್ಲ. ಈ‌ಕಟು ಸತ್ಯ ಅರಿತಿರುವ
ಸಿಲ್ವರ್ ಸ್ಕ್ರೀನ್ ನಂತೆ ಫ್ಯಾನ್ಸ್ ಕೂಡ ಎದೆಭಾಗ ಹಿಡಿದು ನೋವುಣ್ಣುತ್ತಿದ್ದಾರೆ. ನಮ್ಮ ಜೊತೆ‌ ಇನ್ಯಾವತ್ತೂ ಕುಳಿತುಕೊಂಡು ಸಿನಿಮಾ ನೋಡೋದಕ್ಕೆ ಅಪ್ಪು ಸಾರ್ ಬರಲ್ಲವಲ್ಲ‌ ಎಂದು ಕಣ್ಣೀರಾಗುತ್ತಿದ್ದಾರೆ. ಮಿಡ್ ನೈಟ್ ಶೋ, ಅರ್ಲಿ ಮಾರ್ನಿಂಗ್ ಶೋ, ಫಸ್ಟ್ ಡೇ ಫಸ್ಟ್ ಶೋ ಅಂತ ರಾತ್ರೋರಾತ್ರಿ ಅಪ್ಪುನಾ ನೋಡಲಿಕ್ಕೆ ಆಗಲ್ಲವಲ್ಲ ದೇವಾ ಎಂದು ಹೃದಯ ಹಿಡಿದು ನೊಂದುಕೊಳ್ಳುತ್ತಿದ್ದಾರೆ.

ಇಷ್ಟೆಲ್ಲದರ ಜೊತೆಗೆ
ಪವರ್ ಸ್ಟಾರ್ ಜೀವನದಲ್ಲಿ ಬೆಳ್ಳಿತೆರೆಯ ಪಾತ್ರವೆಷ್ಟು ಎನ್ನುವುದರ ಬಗ್ಗೆ ಕೊಂಚ ಮಾತನಾಡ್ಲೆಬೇಕು. ದೊಡ್ಮನೆ ಹುಡುಗನನ್ನು ಬೆಳ್ಳಿತೆರೆ ಬರೋಬ್ಬರಿ 45 ವರ್ಷಗಳ ಕಾಲ ತಲೆ ಮೇಲೆ ಹೊತ್ತು ಮೆರೆಸಿದೆ. ಕರ್ನಾಟಕದ ಮೂಲೆಮೂಲೆ ಮಾತ್ರವಲ್ಲ ಭರತಖಂಡ ಸುತ್ತೆಲ್ಲ ಮುತ್ತಿನ ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ಮೆರವಣಿಗೆ ಮಾಡಿದೆ.‌ ನಟಸಾರ್ವಭೌಮ ಎನ್ನುವ ಪಟ್ಟ ಕಟ್ಟಿ ಗಡಿದಾಟಿಸಿದೆ. ಖಜಾನೆಗೆ ಕೋಟಿ ಕೋಟಿ ಹರಿದುಬರುವಂತೆ ಮಾಡಿದೆ ಮಾತ್ರವಲ್ಲ ಬೆಲೆಯೇ ಕಟ್ಟಲಾಗದ ಕೋಟ್ಯಾಂತರ ಅಭಿಮಾನಿಗಳನ್ನು ಸೃಷ್ಟಿಮಾಡಿಕೊಟ್ಟಿದೆ. ಇಷ್ಟೆಲ್ಲಾ, ಸಾಧ್ಯವಾಗಿದ್ದು ಬೆಳ್ಳಿತೆರೆಯಿಂದ ಮತ್ತು ಅಪ್ಪು ನಟನಾಚಾತುರ್ಯದಿಂದ.

ಬಾಲನಟನಾಗಿ ಬೆಳ್ಳಿತೆರೆಗೆ ಲಗ್ಗೆ ಇಟ್ಟು ಬಾಲ್ಯದಲ್ಲೇ ನ್ಯಾಷನಲ್ ಅವಾರ್ಡ್ ಮುಡಿಗೇರಿಸಿಕೊಂಡ ಮಾಸ್ಟರ್ ಲೋಹಿತ್, ನಟಸಾರ್ವಭೌಮನಾಗಿ‌‌ ಬೆಳೆದು ಗಂಧದಗುಡಿಯ ಅರಸನಾದರು. 45 ವರ್ಷದ ತಮ್ಮ ಸಿನಿಜರ್ನಿಯಲ್ಲಿ 46 ಸಿನಿಮಾ ಮಾಡಿದರು. ನಟನಾಕೌಶಲ್ಯದಿಂದ, ನಯ-ವಿನಯದಿಂದ, ಸರಳ ಮನೋಭಾವದಿಂದ, ದಾನ-ಧರ್ಮದಿಂದ- ಶ್ರದ್ಧಾ- ಭಕ್ತಿಯಿಂದ- ಪ್ರೀತಿ- ವಾತ್ಸಲ್ಯದಿಂದ ಕೇವಲ ಒಂದೇ ಒಂದು ಜನ್ಮದಲ್ಲಿ ಏಳು ಜನ್ಮಕ್ಕಾಗುವಷ್ಟು ಪ್ರೀತಿ- ಕೀರ್ತಿ ಹಾಗೂ ಹೆಸರನ್ನು ಸಂಪಾದನೆ ಮಾಡಿ ಬಿಟ್ಟೋದರು. ಹೀಗಾಗಿ, ಎಷ್ಟೇ ವರ್ಷಗಳು ಉರುಳಿದರೂ ಕೂಡ ಕರುನಾಡಿನಲ್ಲಿ, ಕನ್ನಡಿಗರಲ್ಲಿ, ಸ್ಯಾಂಡಲ್ ವುಡ್ ಇತಿಹಾಸದಲ್ಲಿ ದೊಡ್ಮನೆ ಮಗನ‌ ಹೆಸರು ಅಜರಾಮರ. ‌

ವಿಶಾಲಾಕ್ಷಿ ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

error: Content is protected !!