Categories
ಸಿನಿ ಸುದ್ದಿ

ಹುಷಾರ್ ಸಿನಿಮಾಗೆ ಮಜವಾದ ಹಾಡು ಹೇಳಿದ ಉಪೇಂದ್ರ ; ಹೊಸಬರಿಗೆ ರಿಯಲ್ ಸ್ಟಾರ್ ಸಾಥ್

ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಅಭಿನಯದಷ್ಟೇ, ಗಾಯನದಿಂದಲೂ ಜನಪ್ರಿಯರಾದವರು.
ಪ್ರಸ್ತುತ ಉಪೇಂದ್ರ ಅವರು “ಹುಷಾರ್” ಚಿತ್ರದ ಹಾಡೊಂದಕ್ಕೆ ಧ್ವನಿಯಾಗಿದ್ದಾರೆ. ಸತೀಶ್ ರಾಜ್ ಬರೆದಿರುವ “ನೀ ನೋಡೊಕೆ ಸಿಕ್ಸ್ ಟೀನ್ ಸ್ವೀಟಿ. ಬಿಟ್ಕೊಳೆ ಒಂದ್ ನೈಂಟಿ” ಎಂಬ ಹಾಡನ್ನು ಇತ್ತೀಚಿಗೆ ಸಾಧುಕೋಕಿಲ ಅವರ ಸ್ಟುಡಿಯೋದಲ್ಲಿ ಉಪೇಂದ್ರ ಹಾಡಿದ್ದಾರೆ.

ಸತೀಶ್ ರಾಜ್ ಮೂವೀ ಮೇಕರ್ಸ್ ಲಾಂಛನದಲ್ಲಿ ಸತೀಶ್ ರಾಜ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅಶ್ವಿನ್ ಅರುಣ್ ಕೃಷ್ಣ ಈ ಚಿತ್ರದ ಸಹ ನಿರ್ಮಾಪಕರು.

ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಗೀತರಚನೆ ಮಾಡಿರುವ ಸತೀಶ್ ರಾಜ್ ನಿರ್ದೇಶನವನ್ನು ಮಾಡಿದ್ದಾರೆ. ರಂಗಭೂಮಿ ಹಿನ್ನೆಲೆಯಲ್ಲಿ ಬಂದಿರುವ ಸತೀಶ್ ರಾಜ್ ಅವರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ.

ನಮ್ಮ ಜೀವನದಲ್ಲಿ ಕೆಲವು ಅನಿರೀಕ್ಷಿತ ತಿರುವುಗಳು ಬರುತ್ತದೆ. ಅದಕ್ಕೆ ಯಾರು ಹೊಣೆಗಾರರಲ್ಲ. ನಾವು ಎಚ್ಚರಿಕೆಯಿಂದ ಇರಬೇಕು ಎನ್ನುವುದು ಕಥೆಯ ಸಾರಾಂಶ. ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಮೇಲಿನ ಹಾಡೊಂದರ ಚಿತ್ರೀಕರಣ ಮಾತ್ರ ಬಾಕಿಯಿದೆ. ಸದ್ಯದಲ್ಲೇ ಈ ಹಾಡಿನ ಚಿತ್ರೀಕರಣ ನಡೆಯಲಿದೆ. ಚಿತ್ರ ಏಪ್ರಿಲ್ ನಲ್ಲಿ ಬಿಡುಗಡೆಯಾಗಲಿದೆ.

ಎರಡು ಹಾಡುಗಳಿರುವ ಈ ಚಿತ್ರಕ್ಕೆ ಎ.ಟಿ.ರವೀಶ್ ಹಾಗೂ ನಾಗು ಸಂಗೀತ ನೀಡಿದ್ದಾರೆ. ರೆಮೋ ಹಾಗೂ ಉಪೇಂದ್ರ ಒಂದೊಂದು ಹಾಡನ್ನು ಹಾಡಿದ್ದಾರೆ. ನವೀನ್ ಮತ್ತು ನಾಗರಾಜ್ ಛಾಯಾಗ್ರಹಣ, ಜೆ.ಜೆ.ಶರ್ಮ ಸಂಕಲನ, ಚಂದ್ರು ಬಂಡೆ, ಜಾಗ್ವರ್ ಸಣ್ಣಪ್ಪ ಸಾಹಸ ನಿರ್ದೇಶನ ಹಾಗೂ ಸ್ಟಾರ್ ನಾಗಿ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

ಸಿದ್ದೇಶ್ ನಾಯಕನಾಗಿ ನಟಿಸಿರುವ ಈ ಚಿತ್ರದ ನಾಯಕಿ ಪ್ರಿಯದರ್ಶಿನಿ. ವಿನೋದ್, ರಚನಾ ಮಲ್ನಾಡ್, ಲಯ ಕೋಕಿಲ, ಡಿಂಗ್ರಿ ನಾಗರಾಜ್, ಪುಷ್ಪಸ್ವಾಮಿ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಸತೀಶ್ ರಾಜ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Categories
ಸಿನಿ ಸುದ್ದಿ

ಚಿಕ್ಕಬಳ್ಳಾಪುರದಲ್ಲಿ RRR ಅದ್ಧೂರಿ ಪ್ರಿ-ರಿಲೀಸ್ ಈವೆಂಟ್; ರಾಜಮೌಳಿಯ ರಂಗೀನ್‌ ಲೋಕದಲ್ಲಿ ಮಿಂದೆದ್ದ ಜನಸಾಗರ… ವೇದಿಕೆ ಮೇಲೆ ಸೌತ್ ಸ್ಟಾರ್ಸ್ ಸಮಾಗಮ

ಝಗಮಗಿಸುವ ಸ್ಟೇಜ್.. ಕಣ್ಣಾಯಿಸಿದ ಕಡೆಯಲ್ಲಾ ಅಭಿಮಾನಿಗಳು…ತಿಳಿ ಸಂಜೆಯಲ್ಲಿ‌ ಸಂಗೀತ-ನೃತ್ಯದ ವೈಭವ…ನೆಚ್ಚಿನ ಸ್ಟಾರ್ಸ್ ಕಣ್ತುಂಬಿಕೊಂಡು‌ ಪುಳಕಗೊಂಡ ಫ್ಯಾನ್ಸ್ … ಇದೆಲ್ಲಾ ಗಡಿನಾಡು ಚಿಕ್ಕಬಳ್ಳಾಪುರದಲ್ಲಿ ನಡೆದ RRR ಅದ್ಧೂರಿ ಪ್ರಿ-ರಿಲೀಸ್ ಇವೆಂಟ್ ಝಲಕ್..

ಮಾರ್ಚ್ 25ಕ್ಕೆ ಪಂಚ ಭಾಷೆಯಲ್ಲಿ ಅದ್ಧೂರಿಯಾಗಿ ತೆರೆಕಾಣ್ತಿರುವ ಮಲ್ಟಿಸ್ಟಾರ್ ಸಿನಿಮಾ RRR ಪ್ರಿ-ರಿಲೀಸ್ ಇವೆಂಟ್ ಧಾಮ್ ಧೂಮ್ ಅಂತಾ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಸಂಜೆಯಲ್ಲಿ ಅದ್ಧೂರಿಯಾಗಿ ನಡೆದ ಪ್ರಿ-ರಿಲೀಸ್ ಇವೆಂಟ್ ಗೆ ಜನಸಾಗರವೇ ಹರಿದು ಬಂದಿತ್ತು. ಸುಮಾರು ನೂರು ಎಕರೆ ಜಾಗದಲ್ಲಿ ನಡೆದ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಕೆ.ಸುಧಾಕರ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಇಡೀ ಆರ್ ಆರ್ ಆರ್ ಬಳಗ ಸಾಕ್ಷಿಯಾಯ್ತು.

ಯಂಗ್ ಟೈಗರ್ ಕನ್ನಡ ಪ್ರೀತಿಗೆ ಕನ್ನಡಿಗರ ಸಲಾಂ

ಕನ್ನಡ ಭಾಷೆ..ಕನ್ನಡಿಗರ ಮೇಲೆ ವಿಶೇಷ ಅಭಿಮಾನ ಹೊಂದಿರುವ ಯಂಗ್ ಟೈಗರ್ ಜೂನಿಯರ್ ಎನ್ ಟಿಆರ್ ಕನ್ನಡದಲ್ಲಿಯೇ ಮಾತು ಆರಂಭಿಸಿ ಎಲ್ಲರ ಗಮನಸೆಳೆದರು. ಅಪ್ಪು ಎಲ್ಲಿಯೂ ಹೋಗಿಲ್ಲ.. ಗಾಳಿ, ನೀರು ಎಲ್ಲೆಡೆ ಅಪ್ಪು ಇದ್ದಾರೆ ಅಂತಾ ನೆಚ್ಚಿನ ಗೆಳೆಯನನ್ನು ನೆನೆದ ತಾರಕ್, ಮಾರ್ಚ್ 25ಕ್ಕೆ ತ್ರಿಬಲ್ ಸಿನಿಮಾವನ್ನು ಫ್ಯಾಮಿಲಿ ಸಮೇತರಾಗಿ ನೋಡಿ‌ ಅಂತ ಮನವಿ‌ ಮಾಡಿಕೊಂಡರು.

ಅಪ್ಪು ನೆನೆದು ಭಾವುಕ

ತ್ರಿಬಲ್ ಸಿನಿಮಾ ಪ್ರಿ-ರಿಲೀಸ್ ಇವೆಂಟ್ ಸ್ಪೆಷಲ್ ಗೆಸ್ಟ್ ಆಗಿ ಆಗಮಿಸಿದ್ದ ನಟ ಶಿವರಾಜ್ ಕುಮಾರ್, ಒಂದು ಕಡೆ ಸಂತೋಷನೂ ಆಗ್ತಾ ಇದೆ, ಮತ್ತೊಂದು ಕಡೆ ದುಃಖ ಇದೆ. ಅಪ್ಪುನ ಕಳೆದುಕೊಂಡು ದುಃಖದಲ್ಲಿದ್ದೇವೆ. ನಮ್ಮ ದುಃಖದಲ್ಲಿ ಭಾರತೀಯ ಚಿತ್ರರಂಗ ಇದೆ, ಸರ್ಕಾರ ಇದೆ. ಬೊಮ್ಮಾಯಿ ಅವರು ಅಣ್ಣನ ಸ್ಥಾನದಲ್ಲಿ ನಿಂತಿದ್ದಾರೆ. ನಮಗಾದಷ್ಟೇ ನೋವು ಅವರಿಗೂ ಆಗಿದೆ. ರಾಮ್​ ಚರಣ್​, ಜ್ಯೂ. ಎನ್​ಟಿಆರ್​ ಬಂದು ನಾವು ನಿಮ್ಮ ತಮ್ಮ ಎಂದಾಗ ಖುಷಿ ಆಯ್ತು.

ಅಪ್ಪುನ ಇವರಲ್ಲಿ, ಅಭಿಮಾನಿಗಳಲ್ಲಿ ಕಾಣ್ತೀದ್ದೇನೆ. ನಾನು ರಾಜಮೌಳಿ ದೊಡ್ಡ ಫ್ಯಾನ್​. ಜ್ಯೂ. ಎನ್​ಟಿಆರ್​ ಅವರ ಎಲ್ಲಾ ಸಿನಿಮಾ ಫಸ್ಟ್ ಡೇ ಫಸ್ಟ್ ಶೋ ನೋಡ್ತೀನಿ. ರಾಮ್​ ಚರಣ್​, ಪವನ್​ ಕಲ್ಯಾಣ್​, ಚಿರಂಜೀವಿ, ಅಜಿತ್​, ವಿಜಯ್​ ಪ್ರತಿಯೊಬ್ಬರ ಸಿನಿಮಾನೂ ನಾನು ಥಿಯೇಟರ್​ನಲ್ಲೇ ನೋಡೋದು. ನನಗೆ ಮನೆಯಲ್ಲೇ ಶೋ ಹಾಕಿಸಿಕೊಂಡು ಸಿನಿಮಾ ನೋಡೋದು ಇಷ್ಟ ಇಲ್ಲ. ನಾನು ಅಭಿಮಾನಿ ತರಹ ಥಿಯೇಟರ್​ಗೆ ಹೋಗೆ ಸಿನಿಮಾ ನೋಡೋದು’ ಎಂದಿದ್ದಾರೆ ಶಿವರಾಜ್​ಕುಮಾರ್. ಆರ್ ಆರ್ ಆರ್ ಸಿನಿಮಾ ಯಶಸ್ಸು ಆಗಲಿ‌ ಎಂದು ಹಾರೈಸಿದರು.

ಇಡೀ RRR ಬಳಗಕ್ಕೆ ಧನ್ಯವಾದ ಹೇಳಿದ ಮೌಳಿ

ಚಿತ್ರಬ್ರಹ್ಮ ರಾಜಮೌಳಿ ಅದ್ಧೂರಿ ಪ್ರಿ-ರಿಲೀಸ್ ಇವೆಂಟ್ ನಲ್ಲಿ ಇಡೀ ಚಿತ್ರತಂಡಕ್ಕೆ‌ ಧನ್ಯವಾದ ತಿಳಿಸಿದರು. ಶಿವಣ್ಣ, ಮುಖ್ಯಮಂತ್ರಿ, ಆರೋಗ್ಯ ಸಚಿವರ ಬಗ್ಗೆ ಕನ್ನಡದಲ್ಲಿಯೇ ಮಾತನಾಡಿ ಗಮನಸೆಳೆದ‌ ಮೌಳಿ, ಇಂತಹ ಅದ್ಧೂರಿ ಇವೆಂಟ್ ಆಯೋಜಿಸಿದ KVN ಸಂಸ್ಥೆಯ ಒಡೆಯ ವೆಂಕಟ್ ಅವರಿಗೆ ಧನ್ಯವಾದ ತಿಳಿಸಿದರು.‌ ನಟ ರಾಮ್ ಚರಣ್ ಸಿನಿಮಾ ನೋಡಲು ಕಾತುರನಾಗಿದ್ದೇನೆ. ಪ್ರತಿಯೊಬ್ಬರು ಥಿಯೇಟರ್ ಗೆ ಹೋಗಿ ಸಿನಿಮಾ‌ ನೋಡಿ ಪ್ರೋತ್ಸಾಹಿಸಿ‌ ಎಂದರು.

ಕಿತ್ತೂರು ರಾಣಿ ಚೆನ್ನಮ್ಮ‌ ಬಗ್ಗೆ ತೋರಿಸಿರುವುದು‌ ಹೆಮ್ಮೆ

ಸ್ವಾತಂತ್ರ್ಯ ಹೋರಾಟದ ಸತ್ಯಗಳು ಯುವಪೀಳಿಗೆಗೆ ತಿಳಿಸುವ ಕೆಲಸ ಆಗಬೇಕಿದೆ. ಸ್ವಾತಂತ್ರ್ಯ ಸೇನಾನಿ RRR ಸಿನಿಮಾ ನೋಡಿ‌ ಇಡೀ‌ ದೇಶ ಹೆಮ್ಮೆಪಡಲಿದೆ ಎಂದ ಮುಖ್ಯಮಂತ್ರಿ, ಕಿತ್ತೂರು ರಾಣಿ ಚೆನ್ನಮ್ಮ ಬಗ್ಗೆ RRR ಸಿನಿಮಾದಲ್ಲಿ ತೋರಿಸಿರುವುದು ಹೆಮ್ಮೆ ಎಂದರು.

ಭಾರತದ ಅತಿ‌ದೊಡ್ಡ ಇವೆಂಟ್ ನ್ನು ಚಿಕ್ಕಬಳ್ಳಾಪುರದಲ್ಲಿ ಏರ್ಪಡಿಸಿದ್ದ ಪ್ರತಿಷ್ಠಿತ ಕೆವಿಎನ್ ಪ್ರೊಡಕ್ಷನ್ ಹೌಸ್ RRR ಸಿನಿಮಾ ಕರುನಾಡಿನಾದ್ಯಂತ ಆರ್ ಆರ್ ಆರ್ ಚಿತ್ರವನ್ನು ವಿತರಣೆ‌ ಮಾಡಲಿದೆ. ಸುಮಾರು 450 ಕೋಟಿ ಬಜೆಟ್ ನಲ್ಲಿ ದಾನಯ್ಯ ಸಿನಿಮಾಗೆ ಬಂಡವಾಳ ಹೂಡಿದ್ದು, ರಾಜಮೌಳಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಜೂನಿಯರ್ ಎನ್ ಟಿಆರ್, ರಾಮ್ ಚರಣ್, ಆಲಿಯಾ ಭಟ್, ಅಜಯ್ ದೇವಗನ್ ಸೇರಿದಂತೆ ದೊಡ್ಡತಾರಾಬಳಗ ಸಿನಿಮಾದಲ್ಲಿ ನಟಿಸಿದ್ದು, ಇದೇ 25ಕ್ಕೆ ವರ್ಲ್ಡ್ ವೈಡ್ ಆರ್ ಆರ್ ಆರ್ ಸಿನಿಮಾ ರಿಲೀಸ್ ಅಗ್ತಿದೆ.

Categories
ಸಿನಿ ಸುದ್ದಿ

ರಾಜಮೌಳಿ ಕನ್ನಡದ ಯಾವ ಹೀರೋಗೆ ನಿರ್ದೇಶನ ಮಾಡ್ತಾರೆ?

ಇಂಥದ್ದೊಂದು ಪ್ರಶ್ನೆ ಶನಿವಾರ ಮೀಡಿಯಾ ಮುಂದೆ ಕುಳಿತ ರಾಜಮೌಳಿ ಅವರಿಗೆ ಎದುರಾಯ್ತು. ಚಿಕ್ಕಬಳ್ಳಾಪುರದಲ್ಲಿ ಆಯೋಜನೆಗೊಂಡಿರುವ ತ್ರಿಬ್ಬಲ್‌ ಆರ್‌ ಸಿನಿಮಾದ ಪ್ರೀ ರಿಲೀಸ್‌ ಈವೆಂಟ್‌ಗೂ ಮುನ್ನ, ಬಂದ ಈ ಪ್ರಶ್ನೆಗೆ ರಾಜಮೌಳಿ ಹೇಳಿದ್ದೇನು ಗೊತ್ತಾ?

ರಾಜಮೌಳಿ ಈಗಾಗಲೇ ಸಕ್ಸಸ್‌ಫುಲ್‌ ನಿರ್ದೇಶಕರು. ಅವರು ತ್ರಿಬ್ಬಲ್‌ ಆರ್‌ ಸಿನಿಮಾ ನಿರ್ದೇಶಿಸಿದ್ದು, ಮಾರ್ಚ್‌ 25ರಂದು ತೆರೆಗೆ ಅಪ್ಪಳಿಸಲಿದೆ. ಈ ವೇಳೆ ಪ್ರೀ ರಿಲೀಸ್‌ ಈವೆಂಟ್‌ ಕುರಿತು ಮಾಹಿತಿ ಹಂಚಿಕೊಳ್ಳುತ್ತಿದ್ದ ರಾಜಮೌಳಿಗೆ ಕನ್ನಡದ ಯಾವ ಹೀರೋಗೆ ನಿರ್ದೇಶಿಸಲು ಇಷ್ಟಪಡ್ತೀರಿ ಎಂಬ ಮಾಧ್ಯಮದವರ ಪ್ರಶ್ನೆಗೆ, ರಾಜಮೌಳಿ ಉತ್ತರ ಹೀಗಿತ್ತು.

ಸರ್‌, ಈ ಪ್ರಶ್ನೆ ನನಗೆ ಅನೇಕ ಪತ್ರಿಕಾಗೋಷ್ಠಿಗಳಲ್ಲಿ ಎದುರಾಗಿದೆ. ಆಗಲೂ ನಾನು ಸಮಯ ಬಂದಾಗ ಹೇಳ್ತೀನಿ ಅಂತ ಉತ್ತರಿಸಿದ್ದೇನೆ. ಆದರೆ, ಈಗ ನಾವಿಲ್ಲಿ ಬಂದಿರೋದು ತ್ರಿಬ್ಬಲ್‌ ಆರ್‌ ಈವೆಂಟ್‌ ಕುರಿತು ಹೇಳಲು. ತ್ರಿಬ್ಬಲ್‌ ಆರ್‌ ಸಿನಿಮಾ ಕುರಿತು ಕೇಳಿ. ನಿಮ್ಮ ಪ್ರಶ್ನೆಗೆ ನಾನು ಇನ್ನೊಂದು ಪತ್ರಿಕಾಗೋಷ್ಠಿಯಲ್ಲಿ ಹೇಳ್ತೀನಿ. ಅಂತ ನಯವಾಗಿಯೇ ಪ್ರಶ್ನೆಗೆ ಉತ್ತರಿಸದೆ, ತ್ರಿಬ್ಬಲ್‌ ಆರ್‌ ಸಿನಿಮಾ ಕುರಿತು ಮಾತಾಡುತ್ತಾ ಹೋದರು ರಾಜಮೌಳಿ.

ಇದೇ ವೇಳೆ ಮಾಧ್ಯಮ ಕಡೆಯಿಂದ ತೂರಿ ಬಂದ ಇನ್ನೊಂದು ಪ್ರಶ್ನೆಗೆ ರಾಜಮೌಳಿ ಹೇಳಿದ್ದಿಷ್ಟು. ಪ್ರಶ್ನೆ ಇದು, “ಸರ್‌ ನಿಮ್ಮ ಟೀಮ್‌ನಲ್ಲಿ ಟೆಕ್ನೀಷಿಯನ್ಸ್‌ ಕೂಡ ಹೀರೋಗಳೇ. ನಿಮ್ಮ ಸ್ಕ್ರಿಪ್ಟ್‌ ಚರ್ಚೆಯಲ್ಲಿ ಟೆಕ್ನೀಷಿಯನ್ಸ್‌ ಇನ್ವಾಲ್‌ ಮಾಡ್ಕೋತೀರಾ? ಈ ಪ್ರಶ್ನೆಗೆ,‌ ಉತ್ತರಿಸಿದ ರಾಜಮೌಳಿ, ಯೆಸ್ ನಾನು ಎಲ್ಲರನ್ನೂ ಗಣನಗೆ ತೆಗೆದುಕೊಳ್ತೀನಿ. ಹೀರೋಗಳಿರುತ್ತಾರೆ, ತಾಂತ್ರಿಕ ವರ್ಗದವರೂ ಇರುತ್ತಾರೆ ಅಂದರು.

ಜೂ.ಎನ್‌ಟಿಆರ್‌ ರಾಜಮೌಳಿ ಕೆಲಸ ಬಗ್ಗೆ ಹೇಳಿದ್ದು ಹೀಗೆ

ಇದೇ ವೇಳೆ ಜೂನಿಯರ್‌ ಎನ್‌ಟಿಆರ್‌ ಅವರಿಗೊಂದು ಪ್ರಶ್ನೆಯೂ ತೂರಿ ಬಂತು. ಪ್ರಶ್ನೆ ಹೀಗಿತ್ತು. “ಸರ್‌, ಈಗಾಗಲೇ ನೀವು ರಾಜಮೌಳಿ ಅವರೊಂದಿಗೆ ಕೆಲಸ ಮಾಡಿದ್ದೀರಿ. ಆ ಹಿಂದಿನ ಸಿನಿಮಾಗಳಿಗೂ ಈಗಿನ ತ್ರಿಬ್ಬಲ್‌ ಆರ್‌ ಸಿನಿಮಾಗೂ ಏನು ಡಿಫರೆನ್ಸ್‌ ಇದೆ. ಈ ಪ್ರಶ್ನೆಗೆ ಉತ್ತರಿಸಿದ ಜೂನಿಯರ್‌ ಎನ್‌ಟಿಆರ್‌, “ನನಗೆ ಯಾವುದೇ ಚೇಂಜ್‌ ಕಾಣ್ತಾ ಇಲ್ಲ. ರಾಜಮೌಳಿ ಎಲ್ಲಾ ಸಿನಿಮಾಗೂ ಒಂದೇ ಎಫರ್ಟ್‌ ಹಾಕ್ತಾರೆ. ಅವರೊಂದಿಗೆ ಕೆಲಸ ಮಾಡೋದೇ ಖುಷಿ. ಅವರಲ್ಲಿ ಪವರ್‌ ಸ್ಟೋರಿಸ್‌ ಇರುತ್ತೆ. ಅದಕ್ಕೆ ತಕ್ಕಂತೆಯೇ ಕೆಲಸ ಮಾಡುತ್ತಾರೆ ಮತ್ತು ನಮ್ಮಿಂದಲೂ ಮಾಡಿಸುತ್ತಾರೆ ಅಂದರು ಜೂ.ಎನ್‌ಟಿಆರ್.

ರಾಮ್‌ ಚರಣ್‌ ಹೇಳಿದ್ರು ಕನ್ನಡ ನನ್ನ ಫೇವರೇಟ್…

ಅಲ್ಲೇ ಪಕ್ಕದಲ್ಲಿ ಕುಳಿತಿದ್ದ ರಾಮ್‌ಚರಣ್‌ ಅವರಿಗೆ ಗ್ಯಾಲರಿಯಿಂದ ಪ್ರಶ್ನೆ ತೂರಿಬಂತು. “ನಿಮ್ಮ ತಂದೆ ಈಗಾಗಲೇ ಸಿಪಾಯಿ ಎಂಬ ಕನ್ನಡ ಸಿನಿಮಾ ಮಾಡಿದ್ದರು. ನೀವು ಕೂಡ ಹೀರೋ ಆಗಿದ್ದೀರಿ. ನೀವು ಯಾವಾಗ ಕನ್ನಡದಲ್ಲಿ ನಟಿಸ್ತೀರಿ? ಈ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ರಾಮ್‌ಚರಣ್‌, ” ನಾನು ರೆಡಿ ಇದ್ದೇನೆ. ನಾನು ನಾಲ್ಕೈದು ಭಾಷೆಗಳಲ್ಲಿ ಡಬ್‌ ಮಾಡಿದ್ದೇನೆ. ಅದರಲ್ಲಿ ಕನ್ನಡ ಕೂಡ ನನ್ನ ನೆಚ್ಚಿನ ಭಾಷೆ. ಆದಷ್ಟು ಬೇಗ ನಾನು ಕನ್ನಡದಲ್ಲಿ ನಟಿಸ್ತೀನಿ. ನನ್ನ ಫೇವರೇಟ್‌ ಭಾಷೆಗಳಲ್ಲಿ ಇದೂ ಒಂದು ಎಂದರು ರಾಮ್‌ ಚರಣ್.‌

Categories
ಸಿನಿ ಸುದ್ದಿ

ಜೇಮ್ಸ್‌ ಎರಡನೇ ದಿನದ ಗಳಿಕೆ ಎಷ್ಟು ಗೊತ್ತಾ? ನಿರ್ಮಾಪಕ ಹೇಳಿರುವುದ್ದಿಷ್ಟು!

ಡಾ.ಪುನೀತ್ ರಾಜ್‌ಕುಮಾರ್ ಅಭಿನಯದ “ಜೇಮ್ಸ್” ಅದ್ಧೂರಿಯಾಗಿ ಬಿಡುಗಡೆಯಾಗಿರುವುದು ಗೊತ್ತೇ ಇದೆ. ಬಿಡುಗಡೆಯ ಮೊದಲ ದಿನವೇ ದಾಖಲೆ ಬರೆದಿರುವುದು ಎಲ್ಲರಿಗೂ ಗೊತ್ತಿದೆ. ದೊಡ್ಡ ಮಟ್ಟದಲ್ಲೇ ಓಪನಿಂಗ್‌ ಸಿಕ್ಕಿದ್ದು ಗೊತತು. ಇನ್ನು, ಅಪ್ಪು ಫ್ಯಾನ್ಸ್‌ ಅಂತೂ ಸಿನಿಮಾ ನೋಡೋಕೆ ಮುಗಿ ಬೀಳುತ್ತಲೇ ಇದ್ದಾರೆ. ಮೊದಲ ದಿನ ಮತ್ತು ಎರಡನೇ ದಿನ ಚಿತ್ರಮಂದಿರಗಳು ಹೌಸ್‌ಫುಲ್‌ ಪ್ರದರ್ಶನವನ್ನು ಕಂಡಿವೆ. ಮೊದಲ ದಿನವೇ ಕನ್ನಡ ಚಿತ್ರರಂಗದ ಆಲ್‌ ರೆಕಾರ್ಡ್‌ ಅನ್ನು ಜೇಮ್ಸ್‌ ಮುರಿದಿದೆ.

ಅಂದಹಾಗೆ, ಮೊದಲ ದಿನವೇ ಕರ್ನಾಟಕದಲ್ಲಿ ಸುಮಾರು 35 ಕೋಟಿಯಷ್ಟು ಗಳಿಕೆ ಮಾಡಿದ್ದು, ಎರಡನೇ ದಿನ ಕೂಡ ರಾಜ್ಯದಲ್ಲಿ ಸುಮಾರು 18 ಕೋಟಿಗೂ ಹೆಚ್ಚು ಗಳಿಕೆಯಾಗಿದೆ ಎನ್ನಲಾಗಿದೆ. ಇದು ನಿಜಕ್ಕೂ ಹೊಸ ದಾಖಲೆ. ಇನ್ನು, ಶನಿವಾರ ಮತ್ತು ಭಾನುವಾರದ ಗಳಿಕೆ ಕೂಡ ಇದೇ ವೇಗದಲ್ಲಿರಲಿದೆ ಎಂದು ಅಂದಾಜಿಸಲಾಗಿದೆ. ಇದೇ ವೇಗದಲ್ಲಿ ಗಳಿಕೆ ಕಂಡರೆ ಒಂದು ವಾರದಲ್ಲಿ ಚಿತ್ರ ನೂರು ಕೋಟಿ ಕ್ಲಬ್‌ ಸೇರಲಿದೆ ಎನ್ನಲಾಗುತ್ತಿದೆ.
ಜೇಮ್ಸ್‌ ಚಿತ್ರದ ಗಳಿಕೆ ಕುರಿತಂತೆ ಸ್ವತಃ ನಿರ್ಮಾಪಕ ಕಿಶೋರ್‌ ಪತ್ತಿಕೊಂಡ ಅವರು, “ಇಷ್ಟೆಲ್ಲಾ ಆಗಿರೋದು ಪುನೀತ್ ಅಣ್ಣನ ಪವರ್. ನನಗೆ ತಿಳಿದಿರುವಂತೆ ಈ ರೀತಿಯ ಓಪನಿಂಗ್‌ ಯಾವ ಸಿನಿಮಾಗೂ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿಯೂ ಸಿಗಲ್ಲ. ಕೇವಲ ಚಿತ್ರದ ಗಳಿಕೆ ಮಾತ್ರವಲ್ಲ ಇತರೆ ವಿಭಾಗದಲ್ಲೂ ಚಿತ್ರ ಹಳೆಯ ದಾಖಲೆಗಳನ್ನೆಲ್ಲ ಮುರಿದು ಹಾಕಿದೆ ಎಂದಿದ್ದಾರೆ.

ಸದ್ಯ ಚಿತ್ರ ಎರಡು ದಿನದಲ್ಲಿ 50 ಕೋಟಿ ಗಳಿಕೆ ದಾಟಿದ್ದು, ಒಂದು ವಾರದಲ್ಲೇ ಚಿತ್ರ ನೂರು ಕೋಟಿ ಕ್ಲಬ್ ಸೇರಲಿದೆ ಎಂದಿದ್ದಾರೆ. ಈಗಾಗಲೇ ಚಿತ್ರದ ಡಿಜಿಟಲ್, ಸ್ಯಾಟಲೈಟ್, ಓಟಿಟಿ ಹೀಗೆ ಒಟ್ಟಾರೆ ಲೆಕ್ಕ ಹಾಕಿದರೆ ಚಿತ್ರ ಈಗಲೇ ನೂರು ಕೋಟಿಗೂ ಗಳಿಕೆಯಾಗಿದೆ ಎಂಬುದು ಅವರ ಮಾತು.

Categories
ಸಿನಿ ಸುದ್ದಿ

ವಿಜಯ್ ಸೇತುಪತಿ ಮಾಡಬೇಕಾದ ಸಿನಿಮಾಗೆ ಮನೋಜ್ ಹೀರೋ…

ಡಾಲಿ ಸಿನಿಮಾ ನಂತರ ನಿರ್ದೇಶಕ ಪ್ರಭು ಶ್ರೀನಿವಾಸ ನಿರ್ದೇಶನ ಮಾಡಬೇಕಿದ್ದ ತಮಿಳು ಸಿನಿಮಾ ಈಗ ಕನ್ನಡದಲ್ಲಿ ತಯಾರಿಯಾಗಿದೆ. ವಿಜಯ್ ಸೇತುಪತಿ ನಟಿಸಬೇಕಾಗಿದ್ದ ಸಿನಿಮಾಗೆ ಮೊಗ್ಗಿನ ಮನಸು ಖ್ಯಾತಿಯ ಮನೋಜ್ ಬಣ್ಣ ಹಚ್ಚಿದ್ದಾರೆ.

ಡಾಲಿ ಸಿನಿಮಾ ಕೋವಿಡ್ ನಂತರ ಮತ್ತೆ ಆರಂಭ ಆಗಬೇಕಿದ್ದು, ಅದರ ಮಧ್ಯೆ ಪ್ರಭು ಶ್ರೀನಿವಾಸ ಅವರು ಬಾಡಿಗಾಡ್ ಚಿತ್ರವನ್ನು ನಿರ್ಮಾಣ ಕೂಡ ಮಾಡಿ ಪೂರ್ಣಗೊಳಿಸಿದ್ದಾರೆ.

ಮುಖ್ಯ ಪಾತ್ರದಲ್ಲಿ ಗುರುಪ್ರಸಾದ್, ಪದ್ಮಜಾ ರಾವ್ ಹಾಗೂ ದೀಪಿಕಾ ನಟಿಸಿದ್ದಾರೆ. ಚಿತ್ರ ಏಪ್ರಿಲ್ 1 ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

Categories
ಆಡಿಯೋ ಕಾರ್ನರ್ ಸಿನಿ ಸುದ್ದಿ

ರಾಕಿಭಾಯ್‌ ಫ್ಯಾನ್ಸ್‌ಗೆ ಗುಡ್‌ ನ್ಯೂಸ್!‌ ಮಾರ್ಚ್ 21ಕ್ಕೆ ತೂಫಾನ್‌ ಸಾಂಗ್‌ ರಿಲೀಸ್…

ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ ಅಂದಾಕ್ಷಣ ಸದ್ಯ ನೆನಪಾಗೋದೇ ಯಶ್‌ ಅಭಿನಯದ, ಪ್ರಶಾಂತ್‌ ನೀಲ್‌ ನಿರ್ದೇಶನದ ಮತ್ತು ವಿಜಯ್‌ ಕಿರಗಂದೂರು ನಿರ್ಮಾಣದ ಚಿತ್ರ ‘ಕೆಜಿಎಫ್ 2’. ಈ ಚಿತ್ರದ ಅಬ್ಬರ ಇನ್ನೇನು ಶುರುವಾಗಲಿದೆ. ಏಪ್ರಿಲ್ 14ಕ್ಕೆ ಬಹು ನಿರೀಕ್ಷಿತ “ಕೆಜಿಎಫ್‌ 2” ರಿಲೀಸ್ ಆಗಲಿದೆ. ಯಶ್‌ ಫ್ಯಾನ್ಸ್‌ ‌ ಚಿತ್ರ ಬಿಡುಗಡೆಯ ಎದುರು ನೋಡುತ್ತಿದ್ದಾರೆ. ಸಿನಿಮಾ ಬಿಡುಗಡೆ ಹತ್ತಿರವಾಗುತ್ತಿರುವಂತೆ, ಸಿನಿಮಾದ ಪ್ರಚಾರ ಕೆಲಸ ಕೂಡ ಜೋರಾಗಿಯೇ ನಡೆಯುತ್ತಿದೆ. ಈ ಚಿತ್ರದ ಬಿಡುಗಡೆ ಇನ್ನೂ ಒಂದು ತಿಂಗಳು ಬಾಕಿ ಇದೆ. ಈಗಾಗಲೇ ಚಿತ್ರತಂಡ ಪ್ರಚಾರಕ್ಕೆ ಅಣಿಯಾಗಿದೆ. ಈವರೆಗೆ ಚಿತ್ರದ ಟೀಸರ್ ನೋಡಿ ಖುಷಿಗೊಂಡಿದ್ದ ಫ್ಯಾನ್ಸ್‌, ಸಿನಿಮಾದ ಟ್ರೇಲರ್‌ ಮತ್ತು ಹಾಡುಗಳಿಗೆ ಕಾಯುತ್ತಿದ್ದರು. ಅಂತಹ ಫ್ಯಾನ್ಸ್‌ಗೆ ಒಂದು ಗುಡ್‌ ನ್ಯೂಸ್‌ ಕೊಟ್ಟಿದೆ ಹೊಂಬಾಳೆ ಫಿಲಂಸ್.‌‌

ಹೌದು, ‘ಕೆಜಿಎಫ್ 2’ನ ಒಂದೊಂದೇ ಕಂಟೆಂಟ್ ಬಿಡಲು ತಂಡ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡಲು ತಂಡ ತಯಾರಿ ನಡೆಸಿದೆ. ಈ ಕುರಿತು ಟ್ವೀಟ್‌ ಮಾಡಿರುವ ಹೊಂಬಾಳೆ ಫಿಲಂಸ್‌, ಚಿತ್ರದ ಮೊದಲ ಹಾಡು ಮಾರ್ಚ್ 21ಕ್ಕೆ ರಿಲೀಸ್‌ ಆಗಲಿದೆ ಎಂದು ಹೇಳಿಕೊಂಡಿದೆ. ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್‌ ಈ ಕುರಿತಂತೆ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿವೆ. ಈ ಬಗ್ಗೆ ಪೋಸ್ಟರ್ ಹಂಚಿಕೊಂಡು ಟ್ವೀಟ್ ಮಾಡಿರುವ ಪ್ರಶಾಂತ್ ನೀಲ್, ‘ಸಿದ್ಧರಾಗಿ ತೂಫಾನ್ ಬರ್ತಿದೆ. ಮಾರ್ಚ್‌ 21, 11.07ಕ್ಕೆ ತೂಫಾನ್ ಲಿರಿಕಲ್ ವಿಡಿಯೋ ರಿಲೀಸ್ ಆಗುತ್ತಿದೆ’ ಎಂದು ತಮ್ಮ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಕೆಜಿಎಫ್‌ 5 ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಹಾಗಾಗಿ ಚಿತ್ರದ ಮೊದಲ ಹಾಡು ಕೂಡ ಐದು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಹಾಡಿನ ಪೋಸ್ಟರ್ ಕೂಡ 5 ಭಾಷೆಯಲ್ಲಿ ರಿಲೀಸ್ ಮಾಡಲಾಗಿದ್ದು, ಎಲ್ಲೆಡೆ ಮೆಚ್ಚುಗೆ ಪಡೆದುಕೊಂಡಿದೆ. ಹಾಡಿನ ಶೀರ್ಷಿಕೆ ತೂಫಾನ್, ಅಂದರೆ ಬಿರುಗಾಳಿ ಎಂದರ್ಥ. ಈ ಹಾಡು ನಾಯಕನ ಕುರಿತಾಗಿರಬಹುದೇ ಎಂಬ ಪ್ರಶ್ನೆಗಳಿವೆ. ಅದೇನೆ ಇರಲಿ, ಒಟ್ಟಲ್ಲಿ ಮೊದಲ ಹಾಡು ರಿಲೀಸ್‌ ಮಾಡುತ್ತಿದೆ. ಈ ಹಾಡಿನ ಬಿಡುಗಡೆ ಬಳಿಕ ಚಿತ್ರತಂಡ ಟ್ರೇಲರ್ ಕೂಡ ರಿಲೀಸ್ ಮಾಡಲಿದೆ. ಈಗಾಗಲೇ ಟ್ರೇಲರ್ ರಿಲೀಸ್ ದಿನಾಂಕವನ್ನು ಚಿತ್ರತಂಡ ಪ್ರಕಟಿಸಿದ್ದು, ಮಾರ್ಚ್ 27ಕ್ಕೆ ಟ್ರೇಲರ್ ರಿಲೀಸ್ ಆಗಲಿದೆ. ಸದ್ಯ ಈ ಚಿತ್ರದ ಮೇಲೆ ಸಾಕಷ್ಟು ಕುತೂಹಲವಿದೆ.

Categories
ಸಿನಿ ಸುದ್ದಿ

ರಾಯರ ಸನ್ನಿಧಿಯಲ್ಲಿ ಅಪ್ಪುಗೆ ಪೂಜೆ ಮಾಡಿಸಿದ ಪ್ರೀತಿಯ ಅಭಿಮಾನಿ…

ಡಾ.ಪುನೀತ್‌ ರಾಜಕುಮಾರ್‌ ಅಂದರೆ ಹಾಗೆ, ಅದೊಂದು ಗೌರವ, ಪ್ರೀತಿ ಮತ್ತು ಹೆಮ್ಮೆ. ಪುನೀತ್‌ ರಾಜಕುಮಾರ್‌ ಅವರು ನಮ್ಮೊಂದಿಗಿಲ್ಲ. ಆದರೆ, ಅವರ ಆದರ್ಶಗಳು ಜೀವಂತ. ಅವರು ನಮ್ಮೊಂದಿಗಿಲ್ಲ ಎಂಬ ಭಾವನೆ ಯಾರಲ್ಲೂ ಇಲ್ಲ. ಸದಭಿರುಚಿಯ ಸಿನಿಮಾಗಳ ಮೂಲಕ ಇಂದಿಗೂ ಅವರು ಜೀವಂತವಾಗಿಯೇ ಇದ್ದಾರೆ. ಅದೇ ಖುಷಿಯಲ್ಲಿ ಅಭಿಮಾನಿಗಳು ಅಪ್ಪು ಅವರನ್ನು ಹೃದಯದಲ್ಲಿಟ್ಟು ಪೂಜಿಸುತ್ತಿದ್ದಾರೆ. ಪುನೀತ್‌ ರಾಜಕುಮಾರ್‌ ಅವರಿಗೆ ಅಭಿಮಾನಿಗಳ ಸಂಖ್ಯೆ ಲೆಕ್ಕವಿಲ್ಲ.

ಅದರ ಬಗ್ಗೆ ಹೇಳುವ ಅಗತ್ಯವೇ ಇಲ್ಲ. ಯಾಕೆಂದರೆ, ಇಡೀ ಕರುನಾಡೇ ಪುನೀತ್‌ ಅವರನ್ನು ಪ್ರೀತಿಸುತ್ತಿದೆ. ಅವರ ಅಭಿಮಾನಿಗಳಂತೂ ಜೇಮ್ಸ್‌ ಬಿಡುಗಡೆ ಮುನ್ನ ದಿನ ಮಾಡದ ಪೂಜೆಗಳಿಲ್ಲ, ಹರಕೆಗಳಿಲ್ಲ. ಅವರ ಕಟೌಟ್‌ಗಳಿಗೆ ಹೂವಿನ ಹಾರ ಹಾಕಿ, ಹಾಲಿನ ಅಭಿಷೇಕ ಮಾಡಿ ಸಂಭ್ರಮಿಸಿದ್ದು ಗೊತ್ತೇ ಇದೆ. ಹಾಗೆಯೇ ಇಲ್ಲೊಬ್ಬ ಅಪ್ಪಟ ಪುನೀತ್‌ ರಾಜಕುಮಾರ್‌ ಅವರ ಅಭಿಮಾನಿ ಮಂತ್ರಾಲಯಕ್ಕೆ ಹೋಗಿ ರಾಯರ ದರ್ಶನ ಪಡೆದು, ಪುನೀತ್‌ ರಾಜಕುಮಾರ್‌ ಅವರ ಪುಸ್ತಕವೊಂದನ್ನು ರಾಯರ ಬೃಂದಾವನದಲ್ಲಿಟ್ಟು ಪೂಜಿಸಿದ್ದಾರೆ.

ಹೌದು, ಕನ್ನಡ ಚಿತ್ರರಂಗದಲ್ಲಿ ಅನೇಕ ವರ್ಷಗಳಿಂದಲೂ ಹಲವು ಚಿತ್ರಗಳಲ್ಲಿ ನಟಿಸುವ ಮೂಲಕ ಹೀರೋ ಕೂಡ ಆಗಿರುವ ಮಧು ಮಂದಗೆರೆ ಅವರು ಪುನೀತ್‌ ಅವರ ಮೇಲಿನ ಪ್ರೀತಿ, ಗೌರವದಿಂದಲೇ ಮಂತ್ರಾಲಯಕ್ಕೆ ಹೋಗಿ ರಾಯರ ಸನ್ನಿಧಿಯಲ್ಲಿ ಪುನೀತ್‌ ಅವರ ಜೇಮ್ಸ್‌ ಚಿತ್ರಕ್ಕೆ ಯಾವ ಅಡೆತಡೆ ಆಗಬಾರದು, ಪುನೀತ್‌ ಅವರು ಸದಾ ನಗುಮೊಗದಲ್ಲೇ ಅಭಿಮಾನಿಗಳ ಜೊತೆ ಇರಬೇಕು ಅಂದುಕೊಂಡು ಪೂಜಿಸಿದ್ದಾರೆ.

ಅಂದಹಾಗೆ, ಭದ್ರಾವತಿ ರಾಮಾಚಾರಿ ಬರೆದ “ಅಪ್ಪು ಅಮರ” ಒಂದು ಅವಲೋಕನ ಪುಸ್ತಕ ಬಿಡುಗಡೆಯಾಗಿದ್ದು, ಆ ಪುಸ್ತಕವನ್ನು ಮಂತ್ರಾಲಯಕ್ಕೆ ತೆಗೆದುಕೊಂಡು ಹೋಗಿ ವಿಶೇಷ ಪೂಜೆ ಸಲ್ಲಿಸುವುದರ ಜೊತೆಗೆ ಅಪ್ಪು ಅವರ ಜೇಮ್ಸ್‌ ಸಿನಿಮಾ ಕೂಡ ಯಶಸ್ವಿಯಾಗಲಿ ಎಂದು ಪ್ರಾರ್ಥಿಸಿದ್ದಾರೆ. ಇನ್ನು, ಜೇಮ್ಸ್‌ ಬಿಡುಗಡೆ ದಿನ ಮಧು ಮಂದಗೆರೆ ಅವರು, ಯೋಧರ ಸಮವಸ್ತ್ರ ಧರಿಸಿಯೇ ಸಿನಿಮಾ ವೀಕ್ಷಿಸಿ ಪ್ರೀತಿ ಮೆರೆದಿದ್ದಾರೆ. ಎಲ್ಲರೂ ಜೇಮ್ಸ್‌ ಸಿನಿಮಾ ನೋಡಲೇಬೇಕು ಎಂದು ಹೇಳಿದ್ದಾರೆ.

Categories
ಸಿನಿ ಸುದ್ದಿ

ಜೇಮ್ಸ್‌ ದಾಖಲೆ ಗಳಿಕೆ! ಶೀಘ್ರವೇ ಸೇರಲಿದೆ ನೂರು ಕೋಟಿ ಕ್ಲಬ್…‌

ಡಾ.ಪುನೀತ್‌ ರಾಜಕುಮಾರ್‌ ಅವರ ಜೇಮ್ಸ್‌ ಚಿತ್ರಕ್ಕ ಭರ್ಜರಿ ರೆಸ್ಪಾನ್ಸ್‌ ಸಿಕ್ಕಿದೆ. ಯಾವ ಕನ್ನಡ ಸಿನಿಮಾಗಳಿಗೂ ಸಿಗದಂತಹ ಅದ್ಭುತ ಓಪನಿಂಗ ಜೇಮ್ಸ್‌ ಚಿತ್ರಕ್ಕೆ ಸಿಕ್ಕಿದೆ. ಬೆಂಗಳೂರಲ್ಲೇ ರಿಲೀಸ್‌ ಮುನ್ನ ಸುಮಾರು ಒಂದು ಕೋಟಿ ರೂ. ಮೌಲ್ಯದ ಟೆಕೆಟ್‌ ಸೇಲ್‌ ಆಗಿತ್ತು ಅನ್ನೋದು ವಿಶೇಷ. ಬೆಂಗಳೂರು ಮಾತ್ರವಲ್ಲ, ರಾಜ್ಯಾದ್ಯಂತ ಕೂಡ ಚಿತ್ರ ಅದ್ಧೂರಿಯಾಗಿಯೇ ಓಪನಿಂಗ್‌ ಕಂಡಿದೆ. ಜೇಮ್ಸ್‌ ಗಳಿಕೆಯಲ್ಲಿ ಕನ್ನಡದ ಎಲ್ಲಾ ಸಿನಿಮಾಗಳ ದಾಖಲೆ ಮುರಿಯುತ್ತದೆ ಎಂಬ ಲೆಕ್ಕಾಚಾರವನ್ನುಗಾಂಧಿನಗರ ಮಂದಿ ಹಾಕಿದ್ದರು. ಮೊದಲ ದಿನ ಶೇ.೯೦ಕ್ಕೂ ಹೆಚ್ಚ ಚಿತ್ರಮಂದಿರಗಳಲ್ಲಿ ಹೌಸ್‌ಫುಲ್‌ ಪ್ರದರ್ಶನ ಕಂಡಿದೆ. ಪರ ರಾಜ್ಯ ಮತ್ತು ವಿದೇಶಗಳಲ್ಲೂ ಜೇಮ್ಸ್‌ ಚಿತ್ರಕ್ಕೆ ಅದ್ಭುತ ಓಪನಿಂಗ್‌ ಸಿಕ್ಕಿದೆ.

ಹಾಗಾದರೆ, ಜೇಮ್ಸ್‌ ಚಿತ್ರದ ಮೊದಲ ದಿನದ ಗಳಿಕೆ ಎಷ್ಟು? ಈ ಪ್ರಶ್ನೆ ಸಹಜವಾಗಿಯೇ ಹರಿದಾಡುತ್ತಿದೆ. ಜೇಮ್ಸ್‌ ಸಿನಿಮಾ ಮೊದಲ ದಿನ ಸುಮಾರು 33 ಕೋಟಿ ರೂ.ಗೂ ಹೆಚ್ಚು ಮೊತ್ತದ ಗಳಿಕೆ ಪಡೆದಿದೆ ಎಂದು ಹೇಳಲಾಗುತ್ತಿದೆ. ಇದು ಪುನೀತ್ ರಾಜಕುಮಾರ್‌ ಅವರ ಕೊನೆಯ ಚಿತ್ರ ಅನ್ನುವ ಕಾರಣಕ್ಕೆ ಎಲ್ಲೆಡೆಯಿಂದಲೂ ಅಭಿಮಾನಿಗಳು ಚಿತ್ರ ನೋಡಿ ಕಣ್ತುಂಬಿಕೊಳ್ಳುತ್ತಿದ್ದಾರೆ. ಕರ್ನಾಟಕದಲ್ಲಿ ಸುಮಾರು 33 ಕೋಟಿ ಕೋಟಿ ಗಳಿಕೆಯಾಗಿದ್ದು, ಹೊರ ರಾಜ್ಯ ಹಾಗು ವಿದೇಶಗಳಲ್ಲೂ ಚಿತ್ರ ಹೌಸ್‌ಫುಲ್‌ ಪ್ರದರ್ಶನ ಕಂಡಿದೆ. ಅವೆಲ್ಲದರ ಗಳಿಕೆಯನ್ನು ಸೇರಿಸಿ ಅಂದಾಜಿಸಿದರೆ ಮೊದಲ ದಿನದ ಗಳಿಕೆ ಸುಮಾರು 45 ಕೋಟಿಯಷ್ಟು ಆಗಬಹುದು.

ಮೊದಲ ದಿನ ಕರ್ನಾಟಕದಲ್ಲಿ 33 ಕೋಟಿಯಷ್ಟು ಗಳಿಕೆ ಕಂಡಿರುವ ‘ಜೇಮ್ಸ್’ ಈ ವಾರ ಮತ್ತಷ್ಟು ಗಳಿಕೆ ಮಾಡಲಿದೆ. ಹಾಗೆ ನೋಡಿದರೆ ಮುಂದಿನ ಮೂರು ದಿನಗಳಲ್ಲಿ ಸುಮಾರು 70 ಕೋಟಿ ಗಳಿಕೆ ದಾಟಬಹುದು ಎಂದು ಅಂದಾಜಿಸಲಾಗುತ್ತಿದೆ. ‘ಜೇಮ್ಸ್’ ಚಿತ್ರ ಬಿಡುಗಡೆ ಆಗಿದ್ದರಿಂದ ಯಾವೊಂದು ಸಿನಿಮಾ ಕೂಡ ಸ್ಪರ್ಧೆಗೆ ಬಂದಿಲ್ಲ. ಹಾಗಾಗಿ ಗಳಿಕೆಯಲ್ಲಿ ಹೊಸ ದಾಖಲೆ ಬರೆಯಬಹುದು ಎನ್ನಲಾಗುತ್ತಿದೆ. ಆದಷ್ಟು ಬೇಗ ಜೇಮ್ಸ್ ನೂರು ಕೋಟಿ ಕ್ಲಬ್ ಸೇರಿದರೂ ಅಚ್ಚರಿಯಿಲ್ಲ. ಅದೇನೆ ಇರಲಿ, ಜೇಮ್ಸ್‌ ಕನ್ನಡದಲ್ಲಿ ಗ್ರಾಂಡ್‌ ಓಪನಿಂಗ್‌ ಪಡೆದಿದೆ. ನಿಜಕ್ಕೂ ಅದೊಂದು ದೊಡ್ಡ ದಾಖಲೆಯೇ ಸರಿ. ಇತ್ತೀಚಿನ ವರ್ಷಗಳಲ್ಲಿ ಯಾವ ಸಿನಿಮಾಗಳು ಸಹ ಈ ಮೊಟ್ಟದ ಓಪನಿಂಗ್‌ ಪಡೆದುಕೊಂಡಿರಲಿಲ್ಲ.

Categories
ರಿ ವಿವ್ಯೂ ಸಿನಿ ಸುದ್ದಿ

ಗೆಳೆತನ + ಪ್ರೀತಿ + ದೇಶಾಭಿಮಾನ = ಜೇಮ್ಸ್!

  • ವಿಜಯ್‌ ಭರಮಸಾಗರ

ಚಿತ್ರ ವಿಮರ್ಶೆ: ಜೇಮ್ಸ್‌

ನಿರ್ದೇಶನ: ಚೇತನ್‌ ಕುಮಾರ್‌
ನಿರ್ಮಾಣ: ಕಿಶೋರ್‌ ಪತ್ತಿಕೊಂಡ
ತಾರಾಗಣ : ಪುನೀತ್‌ ರಾಜಕುಮಾರ್‌, ಪ್ರಿಯಾ ಆನಂದ್‌, ಶ್ರೀಕಾಂತ್‌, ಶರತ್‌, ಅನುಪ್ರಭಾಕರ್‌,ಸಾಧುಕೋಕಿಲ, ರಂಗಾಯಣ ರಘು, ಚಿಕ್ಕಣ್ಣ, ಅವಿನಾಶ್‌ ಇತರರು.

ವಿಲನ್:‌ “ನನ್‌ ಜೊತೆ ಕಾಂಪಿಟೇಟ್‌ ಮಾಡಿರೋರು ಯಾರೂ ಗೆದ್ದಿರೋ ರೆಕಾರ್ಡ್ಸೇ ಇಲ್ಲ…
ಹೀರೋ: ನನಗೆ ಮೊದಲಿನಿಂದಲೂ ರೆಕಾರ್ಡ್ಸ್‌ ಬ್ರೇಕ್ ಮಾಡಿ‌ ಅಭ್ಯಾಸ…

ಇದು ಜೇಮ್ಸ್‌ ಚಿತ್ರದಲ್ಲಿ ಬರೋ ಖಡಕ್ ಡೈಲಾಗ್.‌ ವಿಲನ್‌ ಹೇಳೋ ಡೈಲಾಗ್‌ಗೆ,‌ ಹೀರೋ ಕೌಂಟರ್‌ ಇದು. ಹೌದು, ಒಂದೇ ಮಾತಲ್ಲಿ ಹೇಳುವುದಾದರೆ ಜೇಮ್ಸ್‌ ಅದ್ಧೂರಿಯ ಜೊತೆಗೆ ಒಂದೊಳ್ಳೆಯ ಸಂದೇಶ ಇರುವ ಸಿನಿಮಾ. ಇಡೀ ಸಿನಿಮಾದ ಜೀವಾಳ ಪುನೀತ್.‌ ಸಿನಿಮಾ ನೋಡಿದವರಿಗೆ ಪುನೀತ್‌ ಹೊರತಾಗಿ ಬೇರೇನೂ ಅಲ್ಲಿ ಕಾಣಿಸೋದೇ ಇಲ್ಲ. ಅಷ್ಟರ ಮಟ್ಟಿಗೆ ಸಿನಿಮಾವನ್ನು ಆವರಿಸಿಕೊಂಡಿದ್ದಾರೆ. ಇಲ್ಲಿ ಏನಿದೆ ಅನ್ನುವುದಕ್ಕಿಂತ ಏನಿಲ್ಲ ಅಂತ ಕೇಳಬೇಕು! ಹೌದು, ಒಂದು ಭರಪೂರ ಭೋಜನ ಎಷ್ಟೊಂದು ಅದ್ಭುತ ಎನಿಸುತ್ತೋ ಅಷ್ಟೊಂದು ಕಲರ್‌ ಫುಲ್‌ ಸಿನಿಮಾ ಇದು ಅಂದರೆ ತಪ್ಪಿಲ್ಲ. ಇಲ್ಲಿ ಗೆಳೆತನವಿದೆ. ಪ್ರೀತಿ ಇದೆ. ದ್ವೇಷ, ಅಸೂಯೆ ಹೆಚ್ಚಾಗಿಯೇ ಇದೆ. ಅದೆಲ್ಲಕ್ಕಿಂತಲೂ ಹೆಚ್ಚಾಗಿ ದೇಶಾಭಿಮಾನದ ಕಿಚ್ಚು ಇದೆ. ನೋಡುಗರಿಗೆ ದೇಶಭಕ್ತಿ ಮತ್ತಷ್ಟು ಹೆಚ್ಚಿದರೂ ಅಚ್ಚರಿ ಇಲ್ಲ. ಅಷ್ಟರಮಟ್ಟಿಗೆ ಜೇಮ್ಸ್‌ ಹತ್ತಿರವಾಗುವ ಸಿನಿಮಾ.

ಪುನೀತ್‌ ಸಿನಿಮಾಗಳೆಂದರೆ ಅಲ್ಲಿ ಮನರಂಜನೆ ಹೇರಳವಾಗಿರುತ್ತೆ. ಅಂಥದ್ದೊಂದು ಅದ್ಭುತ ಮನರಂಜನೆಗೆ ಇಲ್ಲಿ ಮೋಸವಿಲ್ಲ. ಇದೊಂದು ಪಕ್ಕಾ ಆಕ್ಷನ್‌ ಪ್ಯಾಕ್ಡ್‌ ಸಿನಿಮಾ. ಮೊದಲರ್ಧ ಸಾಗುವುದೇ ಗೊತ್ತಾಗುವುದಿಲ್ಲ. ಅಪ್ಪು ಅವರ ಖದರ್‌ ಏನೆಂಬುದನ್ನು ಹಿಂದಿನ ಸಿನಿಮಾಗಳಲ್ಲಿ ನೋಡಿರುವ ಫ್ಯಾನ್ಸ್‌ ಇಲ್ಲಿ ಅವರ ಹೊಸ ರೂಪವನ್ನು ಕಾಣಬಹುದು. ಸಿನಿಮಾದುದ್ದಕ್ಕೂ ಚಾಲೆಂಜಿಂಗ್‌ ಎನಿಸುವ ಮತ್ತು ಅಷ್ಟೇ ರಿಸ್ಕ್‌ ಎನಿಸುವ ದೃಶ್ಯಗಳಿವೆ. ಇವೆಲ್ಲವೂ ನೋಡುಗರನ್ನು ಸೀಟಿನ ತುದಿಮೇಲೆ ಕೂರಿಸಿಬಿಡುತ್ತವೆ. ಸಿನಿಮಾದ ಹೈಲೈಟ್‌ ಅಂದರೆ, ಮತ್ತದೇ ಸ್ಟಂಟ್.‌ ಜೇಮ್ಸ್‌ ನೋಡುವಾಗ, ಹೊಸ ಫೀಲ್‌ ಸಿಗೋದು ಗ್ಯಾರಂಟಿ. ಆ ಸಿನಿಮಾದ ರಿಚ್‌ನೆಸ್‌ ಆಗಬಹುದು, ಗುಣಮಟ್ಟ ಇರಬಹುದು, ನೋಡುಗರ ಕಣ್ಣಿಗೆ ಹಬ್ಬ. ಮೊದಲಿಗೆ ಇಲ್ಲಿ ಒಂದೊಳ್ಳೆಯ ಕಥೆ ಇದೆ. ಅದನ್ನು ಅಷ್ಟೇ ಚೆನ್ನಾಗಿಯೇ ನಿರ್ದೇಶಕರು ನಿರೂಪಿಸಿದ್ದಾರೆ. ಚಿತ್ರಕಥೆ ಚಿತ್ರದ ವಿಶೇಷತೆಗಳಲ್ಲೊಂದು. ಇನ್ನು, ಸಿನಿಮಾದಲ್ಲಿ ಖಡಕ್‌ ಡೈಲಾಗ್‌ಗಳೂ ಇವೆ. ಕಚಗುಳಿ ಎನಿಸುವ ಮಾತುಗಳೂ ಇವೆ. ಅದರೊಟ್ಟಿಗೆ ಆಗಾಗ ಮನ ಮಿಡಿಯೋ ದೃಶ್ಯಗಳೂ ಇವೆ. ದೇಶಾಭಿಮಾನ ಹೆಚ್ಚಿಸುವಂತಹ ಸಂದರ್ಭದ ದೃಶ್ಯಗಳೂ ಇವೆ.

ಒಂದು ನೀಟ್‌ ಸಿನಿಮಾಗೆ ಏನೆಲ್ಲಾ ಇರಬೇಕೋ ಆ ಎಲ್ಲಾ ಕ್ವಾಲಿಟೀಸ್‌ ಜೇಮ್ಸ್‌ ಚಿತ್ರದಲ್ಲಿದೆ. ಮೊದಲಿಗೆ ಇಲ್ಲಿ ಮನಸ್ಸಿಗೆ ನಾಟೋದು ಸಿನಿಮಾದ ಆಶಯ. ಹಾಗೆಯೇ ಕಣ್ಣಿಗೆ ಕಾಣೋದು ಅದ್ಧೂರಿತನ ಮತ್ತು ಗುಣಮಟ್ಟ. ಚಿತ್ರದ ಪ್ರತಿ ಪಾತ್ರಗಳನ್ನು ಪೋಣಿಸಿರುವ ರೀತಿ. ಇವೆಲ್ಲದರ ಜೊತೆಗೆ ಮುಖ್ಯವಾಗಿ ಪದೇ ಪದೇ ಇಷ್ಟವಾಗೋದು ಸಿನಿಮಾದ ಸಂಗೀತ. ಇಲ್ಲಿ ಗುನುಗುವ ಹಾಡುಗಳೂ ಇವೆ. ಕಥೆಗೆ ಪೂರಕವಾಗಿರುವಂತಹ ಹಿನ್ನೆಲೆ ಸಂಗೀತವೂ ಇದೆ. ಇವು ಸಿನಿಮಾದ ವೇಗವನ್ನು ಮತ್ತಷ್ಟು ಹೆಚ್ಚಿಸಿವೆ. ಇನ್ನು, ಇಂತಹ ಚಿತ್ರಗಳಿಗೆ ಸಂಕಲನ ಕೂಡ ಮುಖ್ಯ. ಅದಿಲ್ಲಿ ಎದ್ದು ಕಾಣುತ್ತದೆ. ಪ್ರತಿ ಫ್ರೇಮ್‌ ಕೂಡ ಬ್ಯೂಟಿಫುಲ್‌ ಫ್ಲವರ್‌ನಂತಿವೆ. ಆಕ್ಷನ್‌ ಇದ್ದರೂ, ಚೆಂದದ ಗೆಳೆತನವೇ ಇಲ್ಲಿ ಕಾಡುತ್ತದೆ. ಸಿನಿಮಾ ನೋಡುವ ಮಂದಿ ಎಲ್ಲೋ ಒಂದು ಕಡೆ ಭಾವುಕರಾಗುತ್ತಾರೆ. ಅದಕ್ಕೆ ಕಾರಣ, ದೇಶಾಭಿಮಾನದ ಡೈಲಾಗ್‌ಗಳು ಮತ್ತು ನಾಯಕನ ಹೋರಾಟದ ಶ್ರಮ. ಇಲ್ಲಿ ಯಾವ ದೃಶ್ಯವೂ ವಿನಾಕಾರಣ ಎನ್ನುವಂತಿಲ್ಲ. ಕಣ್ಣಿಗೆ ಹಬ್ಬದಷ್ಟೇ ಅಂದವಾಗಿರುವ ಸಿನಿಮಾದಲ್ಲಿ ಯಾವುದನ್ನೂ ತೆಗಳುವಂಥದ್ದಿಲ್ಲ. ಒಟ್ಟಾರೆ ಜೇಮ್ಸ್‌ ಒಂದು ವರ್ಗಕ್ಕೆ ಸೀಮಿತವಾದ ಸಿನಿಮಾವಂತೂ ಅಲ್ಲ. ಎಲ್ಲರೂ ಪ್ರೀತಿಯಿಂದ “ಅಪ್ಪುʼವಂತಹ ಸಿನಿಮಾ ಅನ್ನುವುದಕ್ಕೆ ಇಲ್ಲಿ ನಾನಾ ಕಾರಣಗಳಿವೆ. ಅದನ್ನು ತಿಳಿಯುವುದಕ್ಕಾದರೂ ಒಂದೊಮ್ಮೆ ಜೇಮ್ಸ್‌ ನೋಡಿ ಜೈ ಅಂದು ಬಿಡಿ.

ಕಥೆ ಏನು?
ಚಿತ್ರದ ನಾಯಕ ಸಂತೋಷ್‌ (ಪುನೀತ್‌ ರಾಜಕುಮಾರ್)‌ ಒಬ್ಬ ಸೋಲ್ಜರ್.‌ ದೇಶ ಅಂದರೆ ಅವರಿಗೆ ಎಲ್ಲಿಲ್ಲದ ಪ್ರೀತಿ ಮತ್ತು ಗೌರವ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡುವ ವ್ಯಕ್ತಿತ್ವ. ಚಿಕ್ಕಂದಿನಲ್ಲೇ ಘಟನೆಯೊಂದರಲ್ಲಿ ಐದು ಫ್ಯಾಮಿಲಿಗಳನ್ನು ಕಳೆದುಕೊಳ್ಳುವ ಐವರು ಹುಡುಗರು ಅನಾಥರಾಗುತ್ತಾರೆ. ಅಲ್ಲೊಬ್ಬ ಮಿಲಿಟರಿ ಅಧಿಕಾರಿ ಅನಾಥರಾಗಿ ಅಳುವ ಆ ಹುಡುಗರ ಕಣ್ಣೀರು ಒರೆಸಿ, ಅವರ ಗೆಳೆತನಕ್ಕೆ ಸಾಕ್ಷಿಯಾಗುತ್ತಾರೆ. ಅಲ್ಲಿಂದ ಸಿನಿಮಾ ಇನ್ನೊಂದು ಘಟ್ಟಕ್ಕೆ ತಲುಪುತ್ತೆ. ಆ ಐವರು ಗೆಳೆಯರು ಚೆನ್ನಾಗಿ ಓದಿಕೊಂಡು ಉನ್ನತ ಹುದ್ದೆ ಅಲಂಕರಿಸುತ್ತಾರೆ. ಆ ಪೈಕಿ ಸಂತೋಷ್‌ ಮೇಜರ್‌ ಆಗಿ ದೇಶ ಸೇವೆಗೆ ನಿಲ್ಲುತ್ತಾರೆ. ಹೀಗಿರುವಾಗ, ಆ ಮೇಜರ್‌ ಸಂತೋಷ್‌ನ ನಾಲ್ವರು ಗೆಳೆಯರು ಹಾಗು ಕುಟುಂಬ, ಮಕ್ಕಳನ್ನು ಹತ್ಯೆ ಮಾಡಲಾಗುತ್ತೆ. ಯಾಕೆ ಅನ್ನುವುದಕ್ಕೆ ಒಂದು ಕಾರಣವೂ ಇದೆ. ಆ ಕಾರಣ ಹೇಳುವುದಕ್ಕಿಂತ ಅದನ್ನು ತೆರೆ ಮೇಲೆ ನೋಡಬೇಕು. ನಂತರದಲ್ಲಿ ಆ ಮೇಜರ್‌ ಯಾಕೆ ರೆಬೆಲ್‌ ಆಗ್ತಾನೆ ಅನ್ನೋದಕ್ಕೆ ಬಲವಾದ ಕಾರಣವೂ ಇದೆ. ಇಲ್ಲಿ ಒಬ್ಬಿಬ್ಬರು ವಿಲನ್‌ಗಳಿಲ್ಲ. ರಾಶಿ ರಾಶಿ ವಿಲನ್‌ಗಳಿದ್ದಾರೆ. ಅವರೆಲ್ಲರನ್ನೂ ಒಬ್ಬ ಸೋಲ್ಜರ್‌ ಬಗ್ಗು ಬಡಿಯುತ್ತಾನೆ. ಅಂಥದ್ದೊಂದು ದೊಡ್ಡ ಕ್ರೈಮ್‌ ಹಿನ್ನೆಲೆಯ ವಿಲನ್‌ಗಳಿಗೂ ಆ ಸೋಲ್ಜರ್‌ಗು ಏನು ನಂಟು ಎಂಬುದಕ್ಕೂ ಸಿನಿಮಾ ನೋಡಲೇಬೇಕು.

ತಾಂತ್ರಿಕತೆ ಹೇಗಿದೆ?
ಒಂದು ಸಿನಮಾಗೆ ಮುಖ್ಯವಾಗಿ ಬೇಕಿರೋದು ಕಥೆ. ಅದರ ಜೊತೆಗೆ ಗುಣಮಟ್ಟ. ಇಲ್ಲಿ ಛಾಯಾಗ್ರಹಣ ಅಲ್ಟಿಮೇಟ್‌ ಆಗಿದೆ. ಸಂಗೀತ ಕೂಡ ಖುಷಿ ಕೊಡುತ್ತದೆ. ಸಿನಿಮಾ ಸ್ಪೀಡ್‌ ಆಗಿ ಹೋಗುತ್ತೆ ಅಂದರೆ ಅದಕ್ಕೆ ಕತ್ತರಿ ಪ್ರಯೋಗವೂ ಕಾರಣ. ಇನ್ನು, ದೊಡ್ಡ ದೊಡ್ಡ ಸೆಟ್‌ಗಳು ಕೂಡ ಅದ್ಧೂರಿತನಕ್ಕೆ ಸಾಕ್ಷಿಯಾಗಿವೆ. ಪರಭಾಷೆ ಸಿನಿಮಾಗಳನ್ನು ನೋಡಿ ಹಾಗೆ, ಹೀಗೆ ಅನ್ನುವ ಮಂದಿಗೆ ಜೇಮ್ಸ್‌ ತಕ್ಕ ಉತ್ತರ ನೀಡಿದೆ. ಇಲ್ಲಿ ಎಲ್ಲವೂ ಹೈಫೈ. ಪ್ರತಿ ಪಾತ್ರಗಳನ್ನೂ ಸ್ಟೈಲಿಶ್‌ ಆಗಿಯೇ ತೋರಿಸಲಾಗಿದೆ. ಎಷ್ಟು ವೆಪನ್ಸ್‌ಗಳಿವೆಯೋ ಅಷ್ಟೇ ಪಾತ್ರಗಳೂ ಇಲ್ಲಿ ಬಂದು ಹೋಗುತ್ತವೆ. ಇಲ್ಲಿ ಮುಖ್ಯವಾಗಿ ಹೇಳಬೇಕಾದ್ದೆಂದರೆ, ಅದು ಸ್ಟಂಟ್ಸ್.‌ ಜೇಮ್ಸ್‌ ಅನ್ನುವ ಶೀರ್ಷಿಕೆಗೆ ತಕ್ಕಂತೆ ಕಥೆ, ಪಾತ್ರವಿದೆ. ಅದಕ್ಕೆ ತಕ್ಕಂತೆಯೇ ಆಕ್ಷನ್‌ ಸೀಕ್ವೆನ್ಸ್‌ ಕೂಡ ಇದೆ. ಒಂದೊಂದು ಫೈಟ್‌ ಕೂಡ ಅದ್ಧೂರಿಯಾಗಿವೆ. ಜೊತೆಗೆ ರಿಸ್ಕೀ ಸ್ಟಂಟ್‌ ಎಂಥವರನ್ನೂ ಅಬ್ಬಬ್ಬಾ ಅನಿಸುವಷ್ಟರ ಮಟ್ಟಿಗೆ ಸ್ಟಂಟ್‌ ಮಾಸ್ಟರ್‌ಗಳ ಕೆಲಸ ಎದ್ದು ಕಾಣುತ್ತದೆ. ಸ್ಟಂಟ್ಸ್‌ ಇಲ್ಲಿ ಎಕ್ಸಲೆಂಟ್‌ ಅನ್ನೋದೇ ವಿಶೇಷ. ಕಾಸ್ಟ್ಯೂಮ್ಸ್‌ ಬಗ್ಗೆ ಹೇಳಲೇಬೇಕು. ಪ್ರತಿ ಪಾತ್ರಗಳೂ ಇಲ್ಲಿ ರಿಚ್! ಒಟ್ಟಾರೆ, ಜೇಮ್ಸ್‌ ತಾಂತ್ರಿಕತೆಯಲ್ಲೂ ಶ್ರೀಮಂತ ಎಂಬುದನ್ನು ಸಾಬೀತುಪಡಿಸಿದೆ.

ಯಾರು ಹೇಗೆ?
ಇಲ್ಲಿ ಪುನೀತ್‌ ರಾಜಕುಮಾರ್‌ ಅವರು ಇಡೀ ಚಿತ್ರವನ್ನು ಆವರಿಸಿಕೊಂಡಿದ್ದಾರೆ. ಒಬ್ಬ ಗೆಳೆಯನಾಗಿ, ಪ್ರೇಮಿಯಾಗಿ, ದೇಶ ಕಾಯುವ ಯೋಧನಾಗಿ ಇಷ್ಟವಾಗುತ್ತಾರೆ. ಡ್ಯಾನ್ಸ್‌ ಮತ್ತು ಫೈಟ್‌ನಲ್ಲಿ ಎಂದಿಗಿಂತಲೂ ಖುಷಿ ಕೊಡುತ್ತಾರೆ. ಇನ್ನು, ಅವರ ಖಡಕ್‌ ಮಾತುಗಳಿಗೆ ಶಿವರಾಜಕುಮಾರ್‌ ಧ್ವನಿಯಾಗಿದ್ದಾರೆ. ಎಲ್ಲೂ ಕೂಡ ಪುನೀತ್‌ ಧ್ವನಿ ಮಿಸ್ಸೇ ಇಲ್ಲ ಎಂಬಂತೆ ಆ ಧ್ವನಿ ಸೆಟ್‌ ಆಗಿರೋದು ಇನ್ನೊಂದು ವಿಶೇಷ. ಪ್ರಿಯಾ ಆನಂದ್‌ ಸಿಕ್ಕ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಉಳಿದಂತೆ ಶರತ್‌ ಕುಮಾರ್‌, ಶ್ರೀಕಾಂತ್‌,ಮುಖೇಶ್‌ ರಿಷಿ, ಆದಿತ್ಯ ಮೆನನ್‌, ರಣಗಾಯಣ ರಘು, ಸಾಧುಕೋಕಿಲ, ಅವಿನಾಶ್‌, ಯಶ್‌ ಶೆಟ್ಟಿ, ವಜ್ರಾಂಗ್‌ ಶೆಟ್ಟಿ, ಶೈನ್‌ ಶೆಟ್ಟಿ, ತಿಲಕ್‌, ಚಿಕ್ಕಣ್ಣ ತಮ್ಮ ಪಾತ್ರಗಳಲ್ಲಿ ಜೀವಿಸಿದ್ದಾರೆ. ಶಿವರಾಜಕುಮಾರ್‌ ಕೂಡ ಇಲ್ಲಿ ಇರುವಷ್ಟು ಕಾಲ ಇಷ್ಟವಾಗುತ್ತಾರೆ. ರಾಘವೇಂದ್ರ ರಾಜಕುಮಾರ್‌ ಪಾತ್ರ ಕೂಡ ಗಮನಸೆಳೆಯುತ್ತದೆ. ಯಾವ ಪಾತ್ರವೂ ಇಲ್ಲಿ ವೇಸ್ಟ್‌ ಎನಿಸದಂತೆ, ಎಲ್ಲವನ್ನೂ ಅಚ್ಚುಕಟ್ಟಾಗಿಯೇ ತೋರಿಸುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ.

ಕೊನೆ ಮಾತು: ಕಣ್ಣು, ಕಿವಿ ಮತ್ತು ಹೃದಯಕ್ಕೆ ಹತ್ತಿರವಾಗುವ ಸಿನಿಮಾ.

Categories
ಸಿನಿ ಸುದ್ದಿ

ಮ್ಯಾನ್ಷನ್‌ ಹೌಸ್‌ ಹಿಡಿದ ನವೀನ್‌ ಸಜ್ಜು! ಗಾಯಕನ ಹೀರೋಯಿಸಂ ಶುರು ಗುರು…

ಗಾಯಕ ಕಮ್‌ ಸಂಗೀತ ನಿರ್ದೇಶಕ ನವೀನ್‌ ಸಜ್ಜು ಅವರು ಹೀರೋ ಆಗಿರುವ ವಿಷಯ ಗೊತ್ತೇ ಇದೆ. ಅವರ ಹೊಸ ಚಿತ್ರಕ್ಕೆ ವಿಭಿನ್ನ ಶೀರ್ಷಿಕೆ ಇಡಲಾಗಿದೆ. ಅಷ್ಟಕ್ಕೂ ನವೀನ್‌ ಸಜ್ಜು ಅವರ ಸಿನಿಮಾ ಹೆಸರೇನು? ಅದಕ್ಕೆ ಉತ್ತರ, “ಮ್ಯಾನ್ಷನ್‌ ಹೌಸ್‌ ಮುತ್ತು” ಈ ಚಿತ್ರದ ಶೀರ್ಷಿಕೆ ಕೇಳಿದಾಕ್ಷಣ ನೆನಪಾಗೋದೇ ಎಣ್ಣೆ! ಹೌದು, ಈಗಾಗಲೇ ನವೀನ್‌ ಸಜ್ಜು ಅವರು “ಎಣ್ಣೆ ನಮ್ದು ಊಟ ನಿಮ್ದು” ಎಂದು ಹಾಡಿ ಕುಣಿದಿದ್ದಾರೆ. ಈಗ ಅವರೇ “ಮ್ಯಾನ್ಷನ್‌ ಹೌಸ್‌ ಮುತ್ತು” ಎಂಬ ಚಿತ್ರಕ್ಕೆ ಹೀರೋ ಆಗಿದ್ದಾರೆ. ಇದೊಂದು ಕಾಮಿಡಿ ಕಮ್‌ ಮೆಲೊ ಡ್ರಾಮ ಸಿನಿಮಾ. ಈ ಸಿನಿಮಾಗೆ ಕುಮಾರ್‌ ನಿರ್ದೇಶಕರು. ಈ ಹಿಂದೆ ಇವರು “ಕೆಮಿಸ್ಟ್ರಿ ಆಫ್‌ ಕರಿಯಪ್ಪ” ಮಾಡಿದ್ದರು. ಅವರ ಎರಡನೇ ಸಿನಿಮಾ “ಕ್ರಿಟಿಕಲ್‌ ಕೀರ್ತನೆಗಳು” ಸಿನಿಮಾ ರಿಲೀಸ್‌ಗೆ ರೆಡಿಯಾಗಿದ್ದು, ಏಪ್ರಿಲ್‌ ವೇಳೆಗೆ ಬರಲಿದೆ. ಈಗ ನವೀನ್‌ ಸಜ್ಜು ಅವರಿಗಾಗಿ “ಮ್ಯಾನ್ಷನ್‌ ಹೌಸ್‌ ಮುತ್ತು” ಎಂಬ ಸಿನಿಮಾ ಮಾಡುತ್ತಿದ್ದಾರೆ. ಇವರಿಗೆ ಕೇಸರಿ ಫಿಲ್ಮ್‌ ಕ್ಯಾಪ್ಚರ್‌ ನಿರ್ಮಾಣ ಸಂಸ್ಥೆ ಸಾಥ್‌ ನೀಡಿದ್ದು, ಚಿತ್ರವನ್ನು ನಿರ್ಮಿಸುತ್ತಿದೆ.

ತಮ್ಮ ಸಿನಿಮಾ ಕುರಿತು ಹೇಳುವ ನಿರ್ದೇಶಕ ಕುಮಾರ್‌, “ಮ್ಯಾನ್ಷನ್‌ ಹೌಸ್‌ ಮುತ್ತು” ಚಿತ್ರದ ಚಿತ್ರೀಕರಣ ಬಹುತೇಕ ಮಡಿಕೇರಿ ಸುತ್ತಮುತ್ತ ನಡೆದಿದೆ. ನನ್ನ ಈ ಹಿಂದಿನ ಸಿನಿಮಾ “ಕೆಮಿಸ್ಟ್ರಿ ಆಫ್‌ ಕರಿಯಪ್ಪ” ಬೇರೆ ಜಾನರ್‌ ಸಿನಿಮಾ ಆಗಿತ್ತು. ಇನ್ನು,ಮ “ಕ್ರಿಟಿಕಲ್‌ ಕೀರ್ತನೆಗಳು” ಕೂಡ ಹೊಸ ಬಗೆಯ ಕಥೆ ಇರುವ ಸಿನಿಮಾ. “ಮ್ಯಾನ್ಷನ್‌ ಹೌಸ್‌ ಮುತ್ತು” ಕೂಡ ಈಗಿನ ಟ್ರೆಂಡ್‌ಗೆ ಇರುವ ಚಿತ್ರ. ಇದೊಂದು ರೀತಿ ಪ್ರಕೃತಿ ಜೊತೆ ಸಾಗುವ ಮತ್ತು ಪ್ರಕೃತಿಯನ್ನು ಅನುಭವಿಸುವ ಚಿತ್ರ. ಹೊಸದೊಂದು ರೆವಿಲ್ಯೂಷನ್‌ ವಿಷಯ ಇಲ್ಲಿದೆ. ಇನ್ನು ಯಥಾ ಪ್ರಕಾರ ನನ್ನ ಸಿನಿಮಾದಲ್ಲಿ ಮಾತುಗಳಿಗೆ ಹೆಚ್ಚು ಆದ್ಯತೆ ಇರುತ್ತದೆ. ಇಲ್ಲೂ ಅದು ಮುಂದುವರೆದಿದೆ.

ನವೀನ್‌ ಸಜ್ಜು ಅವರು ಪಾತ್ರಕ್ಕೆ ಏನೆಲ್ಲ ಬೇಕೋ ಅದೆಲ್ಲವನ್ನೂ ನೀಡಿದ್ದಾರೆ. ಒಂದು ರೀತಿ ಇಡೀ ಸಿನಿಮಾದ ಮುಖ್ಯ ಆಕರ್ಷಣೆ ಅವರು ಎನ್ನುವ ನಿರ್ದೇಶಕ ಕುಮಾರ್‌, ಚಿತ್ರಕ್ಕೆ ನವೀನ್‌ಕುಮಾರ್‌ ಚೆಲ್ಲ ಛಾಯಾಗ್ರಹಣ ಮಾಡಿದರೆ, ನವೀನ್‌ ಸಜ್ಜುಅವರೇ ಇಲ್ಲಿ ಸಂಗೀತ ನೀಡಲಿದ್ದಾರೆ. ವೆಂಕಟೇಶ್‌ ಯುಡಿ ಸಂಕಲನವಿದೆ. ಉಳಿದಂತೆ ಚಿತ್ರದಲ್ಲಿ ಬೆಲ್‌ ಬಾಟಂ ಸತೀಶ್‌, ಗಿರೀಶ್‌, ಸಮೀಕ್ಷಾ, ವಿಜೇತ್‌ ಸೇರಿದಂತೆ ಹಲವು ಕಲಾವಿದರು ಇದ್ದಾರೆ. “ಮ್ಯಾನ್ಷನ್‌ ಹೌಸ್‌ ಮುತ್ತು” ಒಂದೊಳ್ಳೆಯ ಥ್ರಿಲ್ಲರ್‌ ಕಾಮಿಡಿ ಸಿನಿಮಾ. ಹಾಸ್ಯದ ಜೊತೆಗೆ ಒಂದಷ್ಟು ಸಂದೇಶ ಸಾರುವ ಅಂಶಗಳೂ ಇವೆ ಎನ್ನುತ್ತಾರೆ ಕುಮಾರ್.‌

error: Content is protected !!