Categories
ಸಿನಿ ಸುದ್ದಿ

ಅಮೆರಿಕದಲ್ಲಿ ಗೇಮ್ ಚೇಂಜರ್! ಡಲ್ಲಾಸ್ ನಲ್ಲಿ ಪ್ರೀ ರಿಲೀಸ್ಇವೆಮಟ್ ನಲ್ಲಿ ರಾಮ್ ಚರಣ್ ಬಿಂದಾಸ್

ಗ್ಲೋಬಲ್ ಸ್ಟಾರ್ ರಾಮ್ ಚರಣ್ ನಾಯಕನಾಗಿ ನಟಿಸಿರುವ ಬಹುನಿರೀಕ್ಷಿತ ಸಿನಿಮಾ ‘ಗೇಮ್ ಚೇಂಜರ್’ ಪ್ರೀ-ರಿಲೀಸ್ ಈವೆಂಟ್ ಅಮೆರಿಕಾದ ಡಲ್ಲಾಸ್ ನಲ್ಲಿ ಅದ್ಧೂರಿಯಾಗಿ ನಡೆದಿದೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಇದುವರೆಗೆ ಯುಎಸ್‌ನಲ್ಲಿ ತೆಲುಗು ಚಿತ್ರವೊಂದರ ಪ್ರೀ ರಿಲೀಸ್ ಕಾರ್ಯಕ್ರಮ ನಡೆದಿರಲಿಲ್ಲ. ಆದರೆ ಈ ಸಿನಿಮಾ ಆ ದಾಖಲೆ ಮಾಡಿದೆ. ಡಿಸೆಂಬರ್ 21ರಂದು ಅಮೆರಿಕದಲ್ಲಿ ‘ಗೇಮ್ ಚೇಂಜರ್’ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮ ನಡೆದಿದೆ. ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ರಾಮ್ ಚರಣ್, ನಿರ್ದೇಶಕ ಶಂಕರ್, ನಿರ್ಮಾಪಕರಾದ ದಿಲ್ ರಾಜು ಮತ್ತು ಸಿರೀಶ್, ಸಂಗೀತ ನಿರ್ದೇಶಕ ಥಮನ್ ಮತ್ತು ನಟಿ ಅಂಜಲಿ ಸೇರಿದಂತೆ ಚಿತ್ರದ ಇಡೀ ಚಿತ್ರತಂಡ ಈ ಸಮಾರಂಭದಲ್ಲಿ ಭಾಗವಹಿಸಿದ್ದರು. ರಾಮ್ ಚರಣ್ ಅವರೊಂದಿಗೆ ಮುಂದಿನ ಚಿತ್ರಗಳನ್ನು ನಿರ್ದೇಶಿಸಲಿರುವ ಸುಕುಮಾರ್ ಮತ್ತು ಬುಚ್ಚಿ ಬಾಬು ಸನಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಸಮಾರಂಭದಲ್ಲಿ ಮಾತನಾಡಿದ ಗ್ಲೋಬಲ್ ಸ್ಟಾರ್ ರಾಮ್ ಚರಣ್, ನಾನು ಶಂಕರ್ ಸರ್ ಸಿನಿಮಾದಲ್ಲಿ ನಟಿಸಿದ್ದೇನೆ ಎಂದು ನಂಬಲು ಆಗುತ್ತಿಲ್ಲ. ನಾನು ಅವರಿಗೆ ತೆಲುಗು ಚಿತ್ರ ನಿರ್ದೇಶಿಸಲು ಕೇಳುತ್ತಿದ್ದೆ. ಆದರೀಗ ಅವರ ಜೊತೆಯಲ್ಲಿಯೇ ಕೆಲಸ ಮಾಡಿದ್ದೇನೆ. 3 ವರ್ಷದ ಈ ಸುಂದರ ಪಯಣದಲ್ಲಿ ಅವರೊಂದಿಗೆ ಸಾಕಷ್ಟು ಕಲಿತ್ತಿದ್ದೇನೆ. ಕ್ರಿಕೆಟ್ ರಂಗಕ್ಕೆ ಸಚಿನ್ ಅವರು ಹೇಗೋ, ಅದೇ ರೀತಿ ಭಾರತೀಯ ಚಿತ್ರರಂಗಕ್ಕೆ ಶಂಕರ್. ಅವರು ನಂಬರ್ 1 ಕಮರ್ಷಿಯಲ್ ಸಿನಿಮಾ ಮೇಕರ್. ನಿರ್ಮಾಪಕ ದಿಲ್ ರಾಜು ಅವರೊಂದಿಗೆ ಕೆಲಸ ಮಾಡಿರುವುದು ಖುಷಿ ಕೊಟ್ಟಿದೆ ಎಂದು ತಿಳಿಸಿದರು.

ನಿರ್ದೇಶಕ ಸುಕುಮಾರ್ ಮಾತನಾಡಿ, ‘ಹೊಸ ನಿರ್ದೇಶಕರಿಗೆ ಅವಕಾಶ ನೀಡಲು ನಿರ್ಮಾಪಕರು ಹಿಂದೇಟು ಹಾಕುತ್ತಿದ್ದ ಕಾಲದಲ್ಲಿ ದಿಲ್ ರಾಜು ಅವರು ನನಗೆ ಆರ್ಯ ಚಿತ್ರ ನಿರ್ದೇಶಿಸಲು ಅವಕಾಶ ಕೊಟ್ಟಿದ್ದರು. ನಾನು ನನ್ನ ಮೊದಲ ಫಿಲಂಫೇರ್ ಪ್ರಶಸ್ತಿಯನ್ನು ಶಂಕರ್ ಸರ್ ಅವರಿಂದ ಸ್ವೀಕರಿಸಿದ್ದೇನೆ. ನಾನು ಚಿರಂಜೀವಿ ಅಭಿಮಾನಿ. ಹೀಗಾಗಿ ಶಂಕರ್ ಸರ್ ಚಿರು ಸರ್ ಜೊತೆ ಏಕೆ ಕೆಲಸ ಮಾಡಿಲ್ಲ ಎಂದು ಯಾವಾಗಲೂ ಆಶ್ಚರ್ಯಪಡುತಿದ್ದೆ. ಆದರೆ ಅವರು ಚರಣ್ ಜೊತೆ ಕೈ ಜೋಡಿಸಿದಾಗ ನನಗೆ ಅಪಾರ ಸಂತೋಷವಾಯಿತು. ಚರಣ್ ನನ್ನ ಸಹೋದರನಂತೆ, ಮತ್ತು ಅವರೊಂದಿಗೆ ಕೆಲಸ ಮಾಡುವುದು ಯಾವಾಗಲೂ ಸಂತೋಷವಾಗುತ್ತದೆ ಎಂದರು.
‘ಆರ್‌ಆರ್‌ಆರ್’ ಬಳಿಕ ರಾಮ್‌ಚರಣ್ ನಟಿಸಿದ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ. ಹೀಗಾಗಿ ಮೆಗಾ ಫ್ಯಾನ್ಸ್ ‘ಗೇಮ್‌ ಚೇಂಜರ್’ ದರ್ಶನಕ್ಕೆ ಕಾಯುತ್ತಿದ್ದಾರೆ. ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ಗೇಮ್ ಚೇಂಜರ್ ಗೆ ಆಕ್ಷನ್ ಕಟ್ ಹೇಳಿದ್ದಾರೆ. ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಮತ್ತು ಜೀ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ದಿಲ್ ರಾಜು ಮತ್ತು ಸಿರಿಶ್ ನಿರ್ಮಿಸುತ್ತಿರುವ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಗೇಮ್ ಚೇಂಜರ್ ನಲ್ಲಿ ರಾಮ್ ಚರಣ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಕಿಯಾರಾ ಅಡ್ವಾಣಿ, ಅಂಜಲಿ, ಎಸ್ ಜೆ ಸೂರ್ಯ, ಶ್ರೀಕಾಂತ್, ಸುನಿಲ್, ಸಮುದ್ರಕನಿ ಮತ್ತು ಜಯರಾಮ್ ಮತ್ತಿತರರು ತಾರಾಬಳಗದಲ್ಲಿದ್ದಾರೆ.

ಕಾರ್ತಿಕ್ ಸುಬ್ಬರಾಜ್ ಕಥೆ ಬರೆದಿದ್ದಾರೆ. ಎಸ್.ಯು.ವೆಂಕಟೇಶನ್ ಮತ್ತು ವಿವೇಕ್ ಬರಹಗಾರರಾಗಿ ಕೆಲಸ ಮಾಡಿದ್ದಾರೆ. ಹರ್ಷಿತ್ ಚಿತ್ರದ ಸಹ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ. ಸಾಯಿ ಮಾಧವ್ ಬುರ್ರಾ ಸಂಭಾಷಣೆ ಬರೆದಿದ್ದಾರೆ. ಎಸ್ ಥಮನ್ ಸಂಗೀತ ಸಂಯೋಜಿಸಿದ್ದಾರೆ ಮತ್ತು ಎಸ್ ತಿರುನಾವುಕ್ಕರಸು ಛಾಯಾಗ್ರಹಣವನ್ನು ನಿಭಾಯಿಸಿದ್ದಾರೆ. ಅವಿನಾಶ್ ಕೊಲ್ಲಾ ಆಕ್ಷನ್ ಕೊರಿಯೋಗ್ರಾಫರ್ ಆಗಿ ಕಾರ್ಯನಿರ್ವಹಿಸಿದ್ದು, ಅನ್ಬೀರವ್ ಆಕ್ಷನ್ ದೃಶ್ಯಗಳನ್ನು ಸಂಯೋಜಿಸಿದ್ದು, ಪ್ರಭುದೇವ, ಗಣೇಶ್ ಆಚಾರ್ಯ, ಪ್ರೇಮ್ ರಕ್ಷಿತ್, ಬಾಸ್ಕೊ ಮಾರ್ಟಿನ್, ಜಾನಿ ಮತ್ತು ಸ್ಯಾಂಡಿ ನೃತ್ಯ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಈ ಚಿತ್ರವು ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಜನವರಿ 10, 2025 ರಂದು ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.

Categories
ಸಿನಿ ಸುದ್ದಿ

ಚೌಕಿದಾರನಿಗೆ ಕುಂಬಳಕಾಯಿ

ದಿಯಾ’ ಖ್ಯಾತಿಯ ಪೃಥ್ವಿ ಅಂಬಾರ್ ಹಾಗೂ ಧನ್ಯಾ ರಾಮ್‌ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಚೌಕಿದಾರ್ ಸಿನಿಮಾದ ಚಿತ್ರೀಕರಣ ಮುಕ್ತಾಯಗೊಂಡಿದೆ. ಬೆಂಗಳೂರಿನ ಬಂಡೆ ಮಹಾಕಾಳಿ ದೇಗುಲದಲ್ಲಿ ನಿನ್ನೆ ಚಿತ್ರಕ್ಕೆ ಕುಂಬಳಕಾಯಿ ಬಿದ್ದಿದೆ.

ನಾಯಕ ಪೃಥ್ವಿ ಅಂಬಾರ್ ಮಾತನಾಡಿ, ಈ ಚಿತ್ರದಿಂದ ಬಹಳಷ್ಟು ಕಲಿಯಲು ಸಿಕ್ಕಿದೆ. ನುರಿತ ನಿರ್ದೇಶಕರು ಇದ್ದಾಗ ಹೇಗೆ ಬೇಕು ಯಾವ ರೀತಿ ಬೇಕು ಅನ್ನೋದನ್ನು ಅವರು ಹೇಳಿಕೊಟ್ಟಿದ್ದಾರೆ. ಮನುಷ್ಯನ ಭಾವನೆಗಳನ್ನು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಫ್ಯಾಮಿಲಿ ಎಮೋಷನ್ ತುಂಬಾ ಚೆನ್ನಾಗಿ ಅಳವಡಿಸಿದ್ದಾರೆ. ಸಾಯಿ ಸರ್ ಸೆಟ್ ನಲ್ಲಿ ಇದ್ದ ರೀತಿ. ನಮ್ಮಂತಹ ಕಲಾವಿದರಿಗೆ ಪುಸ್ತಕ ಇದ್ದಂತೆ. ನಿರ್ಮಾಪಕ ಜರ್ನಿ ನನಗೆ ಸ್ಫೂರ್ತಿ ಎಂದು ತಿಳಿಸಿದರು.

ನಿರ್ದೇಶಕ‌ ಚಂದ್ರಶೇಖರ್ ಬಂಡಿಯಪ್ಪ ಮಾತನಾಡಿ, ನಾವು ನಿರ್ದೇಶಕರಾಗಿ ನಿರ್ಮಾಪಕರ ನಂಬಿಕೆ ಉಳಿಸಿಕೊಳ್ಳಬೇಕು. ನಿರ್ಮಾಪಕರಿಗೆ ಪ್ರೊಫೆಷನಲಿಸಂ ಇದೆ. ಇಡೀ ಕಲಾವಿದರು ಅತ್ಯದ್ಭುತವಾಗಿ ಅಭಿನಯಿಸಿದ್ದಾರೆ. ಮೇ ತಿಂಗಳ ಹಿಂದೆ ಮುಂದೆ ಸಿನಿಮಾ ರಿಲೀಸ್ ಮಾಡಲು ಪ್ಲ್ಯಾನ್ ಮಾಡುತ್ತಿದ್ದೇವೆ. ಸಂಕ್ರಾಂತಿಗೆ ಟೀಸರ್ ರಿಲೀಸ್ ಮಾಡುತ್ತೇವೆ. ನಾಲ್ಕು ಹಾಡುಗಳಿವೆ. ಪ್ರತಿಯೊಬ್ಬ ಮನೆಯಲ್ಲಿಯೂ ಚೌಕಿದಾರ್ ಇರುತ್ತಾರೆ ಅವರ ಕಥೆಯನ್ನು ನಾವು ಹೇಳಿದ್ದೇವೆ. ಗ್ರಾಮಾಂತರ ಪ್ರದೇಶದಿಂದಲೇ ಚಿತ್ರ ಶುರುವಾಗುತ್ತದೆ. ಸಾಯಿ ಕುಮಾರ್ ಸರ್ ಹಾಗೂ ಪೃಥ್ವಿ ತಂದೆ ಮಗನಾಗಿ ನಟಿಸಿದ್ದಾರೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಚಿತ್ರ ಏಕಕಾಲದಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.

ನಾಯಕಿ ಧನ್ಯ ರಾಮ್ ಕುಮಾರ್ ಮಾತನಾಡಿ, ಚೌಕಿದಾರ್ ಶೂಟಿಂಗ್ ಮುಗಿದಿದೆ. ಈ ಚಿತ್ರದಲ್ಲಿ ಪಾತ್ರ ಸಿಕ್ಕಿರುವುದು ಖುಷಿ ಜೊತೆಗೆ ಹೆಮ್ಮೆ ಇದೆ. ಈ ಸಿನಿಮಾದಿಂದ ನನಗೆ ಕಲಿಯುವುದು ತುಂಬಾನೇ ಸಿಕ್ತು. ಜರ್ನಿ ಚಾಲೆಂಜಿಂಗ್ ಆಗಿತ್ತು. ಈ ಚಿತ್ರದ ಮೂಲಕ ಒಳ್ಳೆ ನಟಿಯಾಗಿ ಬಂದಿದ್ದೇನೆ ಎನಿಸಿತು. ಸಾಯಿಕುಮಾರ್ ಸರ್, ಧರ್ಮ ಸರ್, ಸುಧಾ ರಾಣಿ ಮೇಡಂ, ಶ್ವೇತಾ ಮೇಡಂ, ಪೃಥ್ವಿ ಇವರ ಜೊತೆ ಕೆಲಸ ಮಾಡಿರುವುದು ಖುಷಿಯಾಗಿದೆ. ನಿರ್ಮಾಪಕರು ನಮ್ಮನ್ನು ತುಂಬಾ ಚೆನ್ನಾಗಿ ನೋಡಿಕೊಂಡಿದ್ದಾರೆ ಎಂದರು.

ಹಿರಿಯ ನಟ ಸಾಯಿಕುಮಾರ್ ಮಾತನಾಡಿ, ನನ್ನ ಜೀವನದಲ್ಲಿ ಇದೇ ಮೊದಲ ಬಾರಿಗೆ ಇದೇ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನಡೆದಿದ್ದು , ಕುಂಬಳಕಾಯಿ ಕೂಡ ಇಲ್ಲೇ ಹೊಡೆಯಲಾಗಿದೆ. ಯಾವ ಸಿನಿಮಾಗೂ ಇದು ಆಗಿಲ್ಲ. ಮಹಾನ್ ಕಾಳಿ ಆಶೀರ್ವಾದ ನಮ್ಮ‌ ಚಿತ್ರಕ್ಕಿದೆ ಅನ್ನುವುದು ಗೊತ್ತಾಗುತ್ತಿದೆ. ಚೌಕಿದಾರ್ ಸಿನಿಮಾದಲ್ಲಿ ಒಂದೊಳ್ಳೆ ಕಲಾವಿದರು ಹಾಗೂ ತಂತ್ರಜ್ಞಾನರ ಜೊತೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ. ಎಲ್ಲಾ ಕಲಾವಿದರು ಅದ್ಭುತವಾಗಿ ನಟಿಸಿದ್ದಾರೆ. ಇದೊಂದು ಫ್ಯಾಮಿಲಿ ಡ್ರಾಮಾ, ಎಮೋಷನಲ್ ಡ್ರಾಮಾ. ತೆಲುಗಿನಲ್ಲಿ ಹ್ಯಾಟ್ರಿಕ್ ಕೊಟ್ಟೆ. ಸರಿಪೋದ ಶನಿವಾರ, ಲಕ್ಕಿ ಭಾಸ್ಕರ್ ನೂರು ಕೋಟಿ ಕೊಟ್ಟಿವೆ. ಮುಂದಿನ ವರ್ಷ ಕನ್ನಡದಲ್ಲಿ ಹ್ಯಾಟ್ರಿಕ್ ಆಗಲಿ ಎಂದು ತಿಳಿಸಿದರು.

ರಥಾವರ ಸಿನಿಮಾ ನಿರ್ದೇಶಿಸಿದ್ದ ಚಂದ್ರಶೇಖರ್ ಬಂಡಿಯಪ್ಪ ‘ಚೌಕಿದಾರ್’ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ‘ಡೈಲಾಗ್ ಕಿಂಗ್’ ಸಾಯಿಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪೃಥ್ವಿ ಅಂಬಾರ್, ಧನ್ಯಾ ರಾಮ್‌ಕುಮಾರ್ ಹಾಗೂ ಸಾಯಿಕುಮಾರ್ ಕಾಂಬಿನೇಷನ್ ಸಿನಿಪ್ರಿಯರಿಗೆ ಗಮನವನ್ನಂತೂ ಸೆಳೆದಿದೆ. ಶ್ವೇತಾ, ಸುಧಾರಾಣಿ, ಧರ್ಮ ಸೇರಿದಂತೆ ಮತ್ತಿತರ ತಾರಾಬಳಗ ಚಿತ್ರದಲ್ಲಿದೆ.

‘ಚೌಕಿದಾರ್’ ಸಿನಿಮಾವನ್ನು ಕಲ್ಲಹಳ್ಳಿ ಚಂದ್ರಶೇಖರ್ ನಿರ್ಮಾಣ ಮಾಡುತ್ತಿದ್ದಾರೆ. ವಿದ್ಯಾದೇವಿ ನಿರ್ಮಾಣದಲ್ಲಿ ಸಾಥ್ ಕೊಡುತ್ತಿದ್ದಾರೆ. ಸಚಿನ್‌ ಬಸ್ರೂರು ಸಂಗೀತವಿದ್ರೆ, ವಿ. ನಾಗೇಂದ್ರ ಪ್ರಸಾದ್‌, ಪ್ರಮೋದ್‌ ಮರವಂತೆ, ಸಂತೋಷ್ ನಾಯಕ್ ಸಾಹಿತ್ಯ ಬರೆದಿದ್ದಾರೆ. ಸಿದ್ದು ಕಂಚನಹಳ್ಳಿ ಛಾಯಾಗ್ರಹಣ, ರವಿ ವರ್ಮಾ ಸಾಹಸ ನಿರ್ದೇಶನ ಸಿನಿಮಾಗಿದೆ. ‘ಚೌಕಿದಾರ್’ ಬಹುಭಾಷೆಯಲ್ಲಿ ಮೂಡಿ ಬರುತ್ತಿದ್ದು, ಲವರ್‌ ಬಾಯ್‌ ಆಗಿದ್ದ ಪೃಥ್ವಿ ಅಂಬಾರ್ ಮಾಸ್ ಲುಕ್ ಕೊಡಲಿದ್ದಾರೆ. ಪೃಥ್ವಿರಾಜ್ ಧಘಾರಿ ಸಹ ನಿರ್ದೇಶನದಲ್ಲಿ ಚೌಕಿದಾರ್ ಚಿತ್ರ ಮೂಡಿ ಬಂದಿದೆ.

Categories
ಸಿನಿ ಸುದ್ದಿ

ಹೊಸ ವರ್ಷಕ್ಕೆ ರಾಜು ಜೇಮ್ಸ್ ಬಾಂಡ್ ಎಂಟ್ರಿ

ಕರ್ಮ ಬ್ರೋಸ್ ಪ್ರೊಡಕ್ಷನ್ ನ ನಿರೀಕ್ಷಿತ “ರಾಜು ಜೇಮ್ಸ್ ಬಾಂಡ್ ” ಚಿತ್ರದ ಹಾಡು ಹೊಸ ವರ್ಷದ ಆರಂಭದಲ್ಲಿ ಬಿಡುಗಡೆಯಾಗಲಿದೆ.

ರಾಜು ಜೇಮ್ಸ್ ಬಾಂಡ್ ಡಿಸೆಂಬರ್ 27 ರಂದು ತೆರೆಗೆ ಬರಬೇಕಿತ್ತು. ಆದರೆ “UI” ಮತ್ತು “ಮ್ಯಾಕ್ಸ್” ಚಿತ್ರಗಳು ಅಂತ್ಯದಲ್ಲಿ ಬಿಡುಗಡೆಯಾದ ಕಾರಣ ಚಿತ್ರದ ಬಿಡುಗಡೆ ಮುಂದೆ ಹಾಕಲು ನಿರ್ಮಾಪಕರಾದ ಮಂಜುನಾಥ್ ವಿಶ್ವಕರ್ಮ (ಲಂಡನ್) ಹಾಗೂ ಕಿರಣ್ ಭರ್ತೂರು(ಕೆನಡಾ) ಪ್ರಕಟಿಸಿದ್ದಾರೆ.

ಚಿತ್ರವನ್ನು ಬಿಡುಗಡೆ ಮಾಡುವ ಸಿದ್ದತೆ ನಡೆಯುತ್ತಿದೆ ಎಂದು ತಿಳಿಸಿರುವ ನಿರ್ದೇಶಕ ದೀಪಕ್ ಮದುವನಹಳ್ಳಿ, ಈ ಚಿತ್ರ ತನ್ನ ಮನಮೋಹಕ ಕಥೆ, ಹಾಸ್ಯ, ಲಂಡನ್‌ನ ಅದ್ಭುತ ದೃಶ್ಯಗಳು ಮತ್ತು ಮಧುರವಾದ ಸಂಗೀತದೊಂದಿಗೆ ಚಿತ್ರವನ್ನು ಆಕರ್ಷಿಸುವ ಭರವಸೆಯನ್ನು ನೀಡುತ್ತಿದೆ. “ರಾಜು ಜೇಮ್ಸ್ ಬಾಂಡ್ ” ಹಾಸ್ಯ ಮತ್ತು ಹೈಸ್ಟ್ ಡ್ರಾಮಾದ ಸಂಯೋಜನೆಯನ್ನು ತೋರಿಸಲಾಗಿದೆ. ಟೀಸರ್ ಮತ್ತು ಹಾಡುಗಳು ಬಿಡುಗಡೆಯಾದ ನಂತರ ಈ ಚಿತ್ರವು ಗಮನಾರ್ಹ ಚರ್ಚೆಯನ್ನು ಚಿತ್ರದ ಹುಟ್ಟುಹಾಕಿದೆ ಮತ್ತು ಅತ್ಯಂತ ಗಮನಾರ್ಹವಾದ ಚಿತ್ರವಾಗಿ ತೋರಿಸುವ ನಿರೀಕ್ಷೆಯಿದೆ ಎನ್ನುತ್ತಾರೆ.

“ಫಸ್ಟ್ ರ‍್ಯಾಂಕ್ ರಾಜು” ಖ್ಯಾತಿಯ ಗುರುನಂದನ್ ಈ ಚಿತ್ರದ ನಾಯಕರಾಗಿ ನಟಿಸಿದ್ದಾರೆ. ಮೃದುಲಾ, ಸಾಧು ಕೋಕಿಲ, ಅಚ್ಯುತ್ ಕುಮಾರ್, ಚಿಕ್ಕಣ್ಣ, ರವಿಶಂಕರ್, ಜೈ ಜಗದೀಶ್ ಮುಂತಾದವರು ತಾರಾಬಳಗದಲ್ಲಿದ್ದಾರೆ.

Categories
ಸಿನಿ ಸುದ್ದಿ

ಯೂನಿರ್ವಸಲ್ ಇಂಟೆಲಿಜೆನ್ಸ್! ಫೋಕಸ್ ಮಾಡಿ ಅರ್ಥವಾಗುತ್ತೆ!

ಚಿತ್ರ ವಿಮರ್ಶೆ: ವಿಜಯ್ ಭರಮಸಾಗರ

ರೇಟಿಂಗ್: 3/5

ಚಿತ್ರ: ಯುಐ
ನಿರ್ದೇಶನ: ಉಪೇಂದ್ರ
ನಿರ್ಮಾಣ: ಮನೋಹರ್ ನಾಯ್ಡು ಮತ್ತು ಕೆ.ಪಿ. ಶ್ರೀಕಾಂತ್‍
ತಾರಾಗಣ: ಉಪೇಂದ್ರ, ರೀಷ್ಮಾ ನಾಣಯ್ಯ, ಸಾಧುಕೋಕಿಲ, ಅಚ್ಯುತ್ ಕುಮಾರ್, ರವಿಶಂಕರ್ ಇತರರು.

ಉಪೇಂದ್ರ ಅವರ ನಿರ್ದೇಶನದ ಸಿನಿಮಾಗಳಲ್ಲಿ ಸೂಕ್ಷ್ಮತೆ ಇರುತ್ತೆ. ಅತೀ ಸೂಕ್ಷ್ಮ ವಿಚಾರಗಳ ಮೂಲಕವೇ ಸಿನಿಮಾ ಕಟ್ಟಿಕೊಡುವ ಪ್ರಯತ್ನ ಮಾಡುತ್ತಾರೆ. ಅವರ ಹಿಂದಿನ ಯಾವುದೇ ಸಿನಿಮಾಗಳನ್ನು ಗಮನಿಸಿದರೆ, ಅಲ್ಲಿ ವಾಸ್ತವ ಅಂಶಗಳನ್ನಿಟ್ಟಿರುತ್ತಾರೆ. ಅಂದರೆ, ವ್ಯವಸ್ಥೆಯೊಳಗಿನ ಕೊಳಕು, ಬದಲಾವಣೆ ಇತ್ಯಾದಿ ವಿಚಾರಗಳೇ ಅಲ್ಲಿ ಸುಳಿದಾಡಿರುತ್ತವೆ. ಹೊಸತನದ ಕಥೆಯ ಜೊತೆ ಸಮಾಜ ಸುಧಾರಣೆ ಮತ್ತು ಬದಲಾವಣೆ ಎಂಬ ಧ್ಯೇಯ ಅವರದ್ದು. ಅವರ ಯುಐ ಸಿನಿಮಾದಲ್ಲೂ ಅಂಥದ್ದೇ ವಿಷಯವಿದ್ದರೂ, ಅದನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅರ್ಥ ಮಾಡಿಕೊಂಡವರಿಗೆ ಮಾತ್ರ ಯುಐ ಕಥೆಯೊಳಗಿನ ಸಾರ ಗೊತ್ತಾಗುತ್ತೆ.

ಉಪೇಂದ್ರ ಅವರಿಲ್ಲಿ ಸಮಾಜದಲ್ಲಿರುವ ವಾಸ್ತವತೆಯನ್ನು ವಿವರಿಸಿದ್ದಾರೆ. ಅಂಕು-ಡೊಂಕು ಎಲ್ಲವನ್ನೂ ಹೊರಗೆಡವಿದ್ದಾರೆ. ಅವರ ಕಥೆಯೊಳಗಿನ ಗಟ್ಟಿತನ, ನಿರೂಪಣೆಯ ಶೈಲಿ ಇಲ್ಲಿ ವಿಶೇಷ ಎನ್ನಬಹುದು. ಅವರ ವಿಚಾರ ಒಂದೇ, ಸಮಾಜ ಬದಲಾವಣೆ ಅಸಾಧ್ಯ ಅನ್ನೊದು. ಆದರೆ, ಬದಲಾವಣೆಗೆ ಬೇಕಾಗಿರೋದು ಏನೆಂಬುದನ್ನೂ ಇಲ್ಲಿ ಹೇಳಹೊರಟಿದ್ದಾರೆ. ಅವರನ್ನು ಅರ್ಥ ಮಾಡಿಕೊಂಡವರಿಗೆ ಈ ಚಿತ್ರದ ಕಥೆ ಅರ್ಥವಾದೀತು. ಆದರೆ, ಇಲ್ಲಿ ಎಲ್ಲವನ್ನೂ ಹೇಳುವ ಪ್ರಯತ್ನ ಮಾಡಿದ್ದಾರೆ ಅನ್ನೋದು ಸಮಾಧಾನ.

ಅವರ ನಿರ್ದೇಶನದ ಸಿನಿಮಾದಲ್ಲಿ ಹೆಚ್ಚು ಮನರಂಜನೆಗೆ ಜಾಗ ಇರುತ್ತಿತ್ತು. ಡೈಲಾಗ್ ಗಳಿಗೆ ಅವಕಾಶವಿರುತ್ತಿತ್ತು. ಆದರೆ, ಯುಐ ಸಿನಿಮಾದಲ್ಲಿ ಅದನ್ನು ನಿರೀಕ್ಷೆ ಮಾಡದಿದ್ದರೂ, ಒಂದೊಳ್ಳೆಯ ಸಂದೇಶವಂತೂ ಇದೆ. ಇಲ್ಲೂ ಮನರಂಜನೆ ಎಷ್ಟು ಕೊಡಬೇಕೋ ಅಷ್ಟನ್ನು ಕೊಟ್ಟಿದ್ದಾರೆ. ಮಾತುಗಳನ್ನೂ ಎಷ್ಟು ಹರಿಬಿಡಬೇಕೋ ಅಷ್ಟನ್ನು ಹರಿಬಿಟ್ಟಿದ್ದಾರೆ. ಅವರ ಮನಸ್ಸಿನೊಳಗಿನ ಕಥೆ ಇಲ್ಲಿ ಅನಾವರಣಗೊಂಡಿರುವುದು ವಿಶೇಷ. ಮನಸ್ಸಿನೊಳಗಿನ ಕಥೆಯೇ ಇಲ್ಲಿ ಹೈಲೆಟ್. ತಾಳ್ಮೆಯಿಂದ ತದೇಕಚಿತ್ತದಿಂದ ಸಿನಿಮಾ ಅರ್ಥಮಾಡಿಕೊಂಡರೆ ಮಾತ್ರ ಅವರೊಳಗಿನ ಆಶಯ ಅರ್ಥ ಆಗುತ್ತೆ. ಹಾಗಂತ, ಇದು ಒಂದೇ ಗುಕ್ಕಿಗೆ ಅರ್ಥವಾಗುವ ಕಥೆಯೇ? ಈ ಪ್ರಶ್ನೆಗೆ ಉತ್ತರ ಕಷ್ಟ. ಯಾಕೆಂದರೆ, ಅವರು ಈ ಬಾರಿ ಹೊಸತನದ ಕಥೆ ಹೆಣೆದಿದ್ದಾರೆ. ಅವರಿಲ್ಲಿ ಆ ತಾಯಿಯನ್ನು ಪ್ರಕೃತಿಗೆ ಹೋಲಿಸಿದ್ದಾರೆ. ಪ್ರಕೃತಿ ಮೇಲೆ ಏನೆಲ್ಲಾ ದೌರ್ಜನ್ಯ ಆಗುತ್ತೆ ಅನ್ನುವುದನ್ನು ಸೂಕ್ಷ್ಮವಾಗಿ ತೋರಿಸಿದ್ದಾರೆ. ನಿತ್ಯವೂ ಆಗುತ್ತಿರುವ ಅನ್ಯಾಯವನ್ನು ಎತ್ತಿ ತೋರಿಸುವ ಪ್ರಯತ್ನ ಮಾಡಿದ್ದಾರೆ. ಕೆಟ್ಟ ವ್ಯವಸ್ಥೆ, ಆಳುವ ವ್ಯಕ್ತಿ, ತುಳಿತಕ್ಕೊಳಗಾಗುವ ಪ್ರಜೆಗಳು, ಜಾತಿ, ಧರ್ಮ, ಸುಳ್ಳು, ಕಪಟ, ಮೋಸ ಎಲ್ಲವನ್ನೂ ಒಂದೇ ಫ್ರೇಮ್ ನಲ್ಲಿ ತೋರಿಸುವ ಮೂಲಕ ಸಮಾಜದ ವ್ಯವಸ್ಥೆಯೊಳಗಿನ ಹುಳುಕನ್ನು ಎತ್ತಿತೋರಿಸುವ ಪ್ರಯತ್ನ ಮಾಡಿದ್ದಾರೆ.

ವ್ಯವಸ್ಥೆ ಸರಿಪಡಿಸೋಕೆ ಯಾರಿಂದಲೂ ಸಾಧ್ಯವಿಲ್ಲ. ಕೆಟ್ಟ ವ್ಯವಸ್ಥೆಗೆ ಕೆಡುಕಿನಿಂದಲೇ ಉತ್ತರ ಕೊಡಬೇಕು ಎಂಬ ವೇದಾಂತ ಉಪೇಂದ್ರ ಅವರದು. ಹಾಗಾಗಿ ಕಥೆ ಬಗ್ಗೆ ಇಲ್ಲಿ ಹೇಳುವುದಕ್ಕಿಂತ ಒಂದೊಮ್ಮೆ ತಾಳ್ಮೆ ಮತ್ತು ಫೋಕಸ್ ಮಾಡಿ ನೋಡಿದರೆ ಮಾತ್ರ ಯುಐ ಒಳಗಿನ ಹೂರಣದ ರುಚಿ ಗೊತ್ತಾಗುತ್ತೆ. ದೇಶದೊಳಗೆ ಧಿಕ್ಕಾರಕ್ಕಿಂತ ಅಧಿಕಾರಕ್ಕೆ ಬೆಲೆ ಜಾಸ್ತಿ ಅನ್ನುವ ಸತ್ಯವನ್ನು ಹೇಳುತ್ತಲೇ ಪ್ರಜಾಭುತ್ವದಲ್ಲಾಗುತ್ತಿರುವ ಅನ್ಯಾಯ, ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ, ಮೊಬೈಲ್ ಗೆ ದಾಸರಾಗುವ ಪ್ರಜಾಪ್ರಭುತ್ವ, ಮನುಷ್ಯತ್ವಕ್ಕಿಂತ ಇಲ್ಲಿ ಜಾತಿಗೆ ಹೆಚ್ಚು ಬೆಲೆ ಎಂಬ ಅಂಶ, ಸೋಶಿಯಲ್ ಮೀಡಿಯಾ ಹಾವಳಿಯ ರಾದ್ಧಾಂತ… ಹೀಗೆ ಪ್ರಸ್ತುತ ವಿಷಯಗಳನ್ನು ಹೇಳುವ ಮೂಲಕ ದೇಶದ ಅವ್ಯವಸ್ಥೆ ಹೇಗೆಲ್ಲಾ ಇದೆ, ಹೇಗೆಲ್ಲ ಆಗುತ್ತೆ ಅನ್ನೋದನ್ನು ಹೇಳಿದ್ದಾರೆ.

ಅದೇ ಉಪೇಂದ್ರ ಇಲ್ಲಿ ಕಂಡರೂ ಹೊಸ ವಿಷಯಗಳನ್ನು ನಿಮ್ಮನ್ನು ಆವರಿಸಿಕೊಳ್ಳುತ್ತವೆ. ಹಾಗಾಗಿ ಸಿನಿಮಾ ನೋಡುಗರಿಗೆ ಹೊಸತನ್ನೇ ಕೊಡುವ ಮೂಲಕ ಸುಮ್ಮನೆ ನೋಡುವಂತೆ ಕೂರಿಸಿಕೊಳ್ಳುತ್ತೆ. ಅಂಥದ್ದೊಂದು ಮ್ಯಾಜಿಕ್ ಅನ್ನು ಉಪೇಂದ್ರ ಮಾಡಿದ್ದಾರೆ. ಹಾಗಾಗಿ ಯುಐ ಒಂದೊಮ್ಮೆ ನೋಡಲು ಅಡ್ಡಿಯಿಲ್ಲ. ಇಲ್ಲೂ ಮನರಂಜನೆಗೊಂದು ಒಳ್ಳೆಯ ಹಾಡು ಇದೆ. ತರಹೇವಾರಿ ಡೈಲಾಗ್ ಗಳೂ ಇವೆ. ಎಲ್ಲಕ್ಕಿಂತ ಹೆಚ್ಚಾಗಿ, ಕ್ಲೈಮ್ಯಾಕ್ಸ್ ಬರುವವರೆಗೂ ಉಪೇಂದ್ರ ಅವರ ಯೋಚನಾ ಲಹರಿ ಹೀಗಾ ಅನ್ನೊದು ಗೊತ್ತಾಗಲ್ಲ. ಆರಂಭದಲ್ಲಿ ಸಿನಿಮಾದ ವೇಗ ಜೋರಾಗಿಯೇ ಇದೆ. ದ್ವಿತಿಯಾರ್ಧ ಮತ್ತಷ್ಟು ಚಾಲೆಂಜ್ ಎನಿಸುವಷ್ಟು ದೃಶ್ಯಗಳು ಆವರಿಸಿಕೊಳ್ಳುತ್ತವೆ. ಕೆಲವೆಡೆ ಶಿಳ್ಳೆ, ಚಪ್ಪಾಳೆಗಳೂ ಬೀಳುತ್ತವೆ. ಅದಕ್ಕೆ ಕಾರಣ, ವಾಸ್ತವತೆಯನ್ನು ಬಿಂಬಿಸುವ ದೃಶ್ಯಗಳು.

ಉಪೇಂದ್ರ ಅವರಿಲ್ಲಿ ಕಿವಿಮಾತು ಹೇಳಿದ್ದಾರೆ. ಅದನ್ನು ಅರ್ಥಮಾಡಿಕೊಂಡರೆ, ಪ್ರಜಾಪ್ರಭುತ್ವದಲ್ಲಿರುವ ವ್ಯವಸ್ಥೆ ಬದಲಿಸಲು ಸಾಧ್ಯವಾಗಬಹುದೇನೋ? ಇಂತಹ ವಿಷಯವನ್ನೂ ಇಲ್ಲಿ ಹೇಳಿದ್ದಾರೆ. ಬಹಳಷ್ಟು ಮಂದಿ ಸಿನಿಮಾ ಅರ್ಥ ಆಗಲ್ಲ. ಉಪೇಂದ್ರ ಅವರು ಸುಮ್ಮನೆ ಒಂದಷ್ಟು ಸೌಂಡು ಮಾಡಿದ್ದಾರೆ ಅಂತೆಲ್ಲಾ ಮಾತುಗಳು ಬಂದವು. ಆದರೆ, ಇಲ್ಲಿ ನಿಜವಾಗಿಯೂ ಉಪೇಂದ್ರ ಅವರು ತಮ್ಮೊಳಗಿನ ಮಾತಿನ ಮೂಲಕ ಯಾರಿಗೆ ಹೇಗೆ ಏನು ಹೇಳಬೇಕೋ ಅದನ್ನು ಹೇಳಿದ್ದಾರೆ. ಅವರ ಮಾತನ್ನು ಹೇಗೆ ಅರ್ಥೈಸಿಕೊಳ್ಳಬೇಕೆಂಬುದು ಅದು ಅವರವರಿಗೆ ಬಿಟ್ಟಿದ್ದು.

ಸಿನಿಮಾದ ಬಜೆಟ್ ಫ್ರೇಮ್ ನಲ್ಲಿ ಕಾಣಿಸುತ್ತೆ. ಇಲ್ಲಿ ವಿಎಫ್ ಎಕ್ಸ್ ಹೈಲೆಟ್ ಆಗಿದೆ. ಮುಖ್ಯವಾಗಿ ಸಂಗೀತ ಮತ್ತು ಹಿನ್ನೆಲೆ ಸಂಗೀತ ಜೋರು ಸದ್ದು ಮಾಡಿದೆ. ಉಪೇಂದ್ರ ಅವರ ಅಭಿನಯ, ನಿರ್ದೇಶನ ಮಾತ್ರವಲ್ಲ, ಅವರ ಬರವಣಿಗೆ ಕೂಡ ಇಲ್ಲಿ ಇಷ್ಟವಾಗುತ್ತೆ. ಚಿತ್ರದ ವೇಗಕ್ಕೆ ವಿಜಯ್ ಸಂಕಲನವೂ ಹೆಗಲಾಗಿದೆ. ವೇಣು ಕ್ಯಾಮೆರಾ ಕೈಚಳಕ ಯುಐ ಸಿನಿಮಾದ ಮುಖ್ಯ ಭಾಗ. ಇನ್ನುಳಿದಂತೆ ನಾಯಕಿ ರೀಷ್ಮಾ ಸಿಕ್ಕಷ್ಟು ಜಾಗವನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ. ತೆರೆ ಮೇಲೆ ರವಿಶಂಕರ್‍ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಉಳಿದಂತೆ ಸಾಧುಕೋಕಿಲ ಅಚ್ಯುತ ಕುಮಅರ್ ಇತರರು ಇರುವಷ್ಟು ಕಾಲ ಗಮನ ಸೆಳೆಯುತ್ತಾರೆ.

Categories
ಸಿನಿ ಸುದ್ದಿ

ಅಪ್ಪು ಕನಸಿನ ಜೂನಿಯರ್ ಟೋಸ್: ಪತಿ ಆಸೆ ಈಡೇರಿಸಿದ ಅಶ್ವಿನಿ: ಶಿಕ್ಷಣ ಕ್ಷೇತ್ರಕ್ಕೆ ಪಿಆರ್ ಕೆ ಸಂಸ್ಥೆ

ಅಪ್ಪು ಇಂದು ನಮ್ಮೊಂದಿಗಿಲ್ಲ. ಆದರೆ, ಅವರು ಮಾಡಿದ ಅದೆಷ್ಟೋ ಅಪರೂಪದ ಕೆಲಸಗಳು ನಮ್ಮ ಕಣ್ಮುಂದೆ ಇವೆ. ಅಷ್ಟೇ ಅಲ್ಲ, ಸಾಮಾಜಿಕವಾಗಿ ಪರಿಣಾಮ ಬೀರುವಂತಹ ಸಾಲು ಸಅಲು ಸಿನಿಮಾಗಳೂ ಇವೆ. ಅಪ್ಪುಗೆ ಒಂದು ಆಸೆ ಇತ್ತು. ಅದು ಇಂಟರ್ ನ್ಯಾಷನಲ್ ಪ್ರಿಸ್ಕೂಲ್ ಒಂದನ್ನು ಶುರು ಮಾಡಬೇಕು ಅನ್ನೋದು. ಆದರೆ, ಅಪ್ಪು ವಿಧಿಯ ಕರೆಗೆ ಹೋದರು. ಹಾಗಂತ ಅಪ್ಪು ಪತ್ನಿ ಸುಮ್ಮನೆ ಕೂರಲಿಲ್ಲ. ಪತಿಯ ಎರಡು ದಶಕದ ಆ ಆಸೆಯನ್ನು ಈಡೇರಿಸಿದ್ದಾರೆ ಅಶ್ವಿನಿ ಪುನೀತ್ ರಾಜಕುಮಾರ್.

ಹೌದು, ಅಪ್ಪು ಅಗಲಿಕೆಯ ನಂತರ ಅವರ ಪಿಆರ್‌ಕೆ ಸಂಸ್ಥೆಯನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಯಶಸ್ವಿಯಾಗಿ ಮುನ್ನೆಡೆಸಿಕೊಂಡು ಹೋಗುತ್ತಿದ್ದಾರೆ. ಈ ಬ್ಯಾನರ್ ಅಡಿಯಲ್ಲಿ ಹೊಸ ಬಗೆಯ ಸಿನಿಮಾಗಳನ್ನು ನಿರ್ಮಾಣ ಮಾಡುವ ಮೂಲಕ ಹೊಸಬರನ್ನು ಪ್ರೋತ್ಸಾಹಿಸುತ್ತಿದ್ದಾರೆ. ಅದೆಷ್ಟೋ ಪ್ರತಿಭೆಗಳಿಗೆ ಸಹಕಾರಿಯಾಗಿದ್ದಾರೆ. ಈಗ ಅದರ ಬೆನ್ನಲ್ಲೇ ಶಿಕ್ಷಣ ಕ್ಷೇತ್ರಕ್ಕೂ ಎಂಟ್ರಿ ಕೊಟ್ಟಿದ್ದಾರೆ. ಅನ್ನೋದೇ ಈ ಹೊತ್ತಿನ ವಿಶೇಷ. ಅದೇನೆ ಇದ್ದರೂ, ಪುನೀತ್ ಹಾಗೂ ಅಶ್ವಿನಿ ಪುನೀತ್ ರಾಜ್‌ಕುಮಾರ್ ಇವರಿಬ್ಬರೂ ಕಂಡಿದ್ದ ಬರೋಬ್ಬರಿ 20 ವರ್ಷಗಳ ಕನಸು ಈಗ ನನಸಾಗಿದೆ.

ಸಿನಿಮಾರಂಗದ ನಿರ್ಮಾಣ ವಿಭಾಗದಲ್ಲಿ ಇದೀಗ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಅಶ್ವಿನಿ ಪುನೀತ್ ರಾಜ್‌ಕುಮಾರ್, ಈಗ ಮತ್ತೊಂದು ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ಅದರಲ್ಲೂ ಅವರೀಗ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಮಾಡೋಕೆ ಮುಂದಾಗಿದ್ದಾರೆ. ಅಂದಹಾಗೆ, ಅವರು ಶಿಕ್ಷಣ ಕ್ಷೇತ್ರಕ್ಕೆ ಎಂಟ್ರಿಕೊಡುವ ಎರಡು ದಶಕಗಳ ಕನಸು ಅವರ ಜೂನಿಯರ್ ಟೋಸ್ ಇಂಟರ್ನ್ಯಾಷನಲ್ ಪ್ರಿಸ್ಕೂಲ್ ಮೂಲಕ ಈಡೇರಿದೆ. ಇತ್ತೀಚೆಗೆ ಜೂನಿಯರ್ ಟೋಸ್ ಇಂಟರ್ನ್ಯಾಷನಲ್ ಪ್ರೀಸ್ಕೂಲ್ ಶುರುಮಾಡಿದ್ದಾರೆ. ಈ ಮೂಲಕ ಪುನೀತ್ ರಾಜ್‌ಕುಮಾರ್ 20 ವರ್ಷಗಳ ಹಿಂದೆಯೇ ಕಂಡಿದ್ದ ಆ ಕನಸನ್ನು ಅಶ್ವಿನಿ ಪುನೀತ್ ರಾಜಕುಮಾರ್ ಅವರು ನನಸು ಮಾಡಿದ್ದಾರೆ. ಇತ್ತೀಚೆಗೆ ಆ ಜೂನಿಯರ್ ಟೋಸ್ ಪ್ರೀಸ್ಕೂಲ್ ನ ಅನಾವರಣವಾಗಿದೆ.

ಜೂನಿಯರ್ ಟೋಸ್ ಇಂಟರ್ನ್ಯಾಷನಲ್ ಪ್ರಿಸ್ಕೂಲ್‌ ನಿರ್ಮಾಣಕ್ಕೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರೊಂದಿಗೆ ಸುನಿತಾ ಗೌಡ, ಸ್ಪೂರ್ತಿ ವಿಶ್ವಾಸ್, ಶ್ರುತಿ ಕಿರಣ್ ಮತ್ತು ಡಾ. ಬಿಂದು ರಾಣಾ ಅವರು ಕೈ ಜೋಡಿಸಿದ್ದಾರೆ. ಮಕ್ಕಳ ಶಿಕ್ಷಣವನ್ನು ಉನ್ನತ ಮಟ್ಟಕ್ಕೆ ಏರಿಸುವ ಈ ಪ್ರಯತ್ನಕ್ಕೆ ಇವರೆಲ್ಲರೂ ಒಮ್ಮತದಿಂದ ಕೈ ಹಾಕಿದ್ದಾರೆ. ಜೂನಿಯರ್ ಟೋಸ್ ಇಂಟರ್ನ್ಯಾಷನಲ್ ಪ್ರಿಸ್ಕೂಲ್‌ ವಿಶಿಷ್ಟವಾದ ಪ್ರಾಥಮಿಕ ಶಿಕ್ಷಣ ಯೋಜನೆಯನ್ನು ಇಟ್ಟುಕೊಂಡಿದೆ ಅನ್ನೋದು ವಿಶೇಷ.

ಖ್ಯಾತ ಶಿಕ್ಷಣ ತಜ್ಞೆ ಸುನೀತಾ ಗೌಡ, ಡಾ. ಬಿಂದು ರಾಣಾ ಅವರ ಅತ್ಯಾಧುನಿಕ ಪಠ್ಯಕ್ರಮ ಈ ಜೂನಿಯರ್ ಟೋಸ್ ಪ್ರಿಸ್ಕೂಲ್‌ನಲ್ಲಿ ಇರಲಿದೆ. ಮಕ್ಕಳಲ್ಲಿ ಬಾಲ್ಯದಿಂದಲೇ ನಾಯಕತ್ವ, ಸೃಜನಶೀಲತೆ ಹಾಗೂ ಉದ್ಯಮಶೀಲತೆಯ ಚಿಂತನೆಯನ್ನು ಬೆಳೆಸುವುದು ಅಶ್ವಿನಿ ಪುನೀತ್ ರಾಜ್‌ಕುಮಾರ್ ಹಾಗೂ ಅವರ ಜೊತೆಗಾರರ ಕನಸು. ಈ ಸ್ಕೂಲ್‌ ಅನ್ನು ಇಂಡಿಯನ್ ವುಮನ್ ಅಚೀವರ್ಸ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಮತ್ತು ಶಿಕ್ಷಣ ತಜ್ಞೆ ಐಶ್ವರ್ಯ ಡಿ.ಕೆ.ಎಸ್ ಹೆಗ್ಡೆಯವರ ಸಮ್ಮುಖದಲ್ಲಿ ಉದ್ಘಾಟನೆ ಆಗಿದ್ದು ಮತ್ತೊಂದು ವಿಶೇಷ.

ಇದೇ ಸಂದರ್ಭದಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ತಮ್ಮ ಹಾಗು ಅಪ್ಪು ಅವರ ಕನಸು ಹಾಗೂ ಸ್ಕೂಲ್‌ ಬಗ್ಗೆ ರಿವೀಲ್ ಮಾಡಿದ್ದಾರೆ. “ನಾನು ಮತ್ತು ಪುನೀತ್ 20 ವರ್ಷಗಳಿಂದ ಶಿಕ್ಷಣ ಕ್ಷೇತ್ರಕ್ಕೆ ಬರಬೇಕು ಎಂಬ ಕನಸು ಇಟ್ಟುಕೊಂಡಿದ್ದೆವು. ಆ ಕನಸು ಈಗ ಈಡೇರುತ್ತಿದೆ. ಪ್ರತಿ ಮಗುವಿನ ಸಾಮರ್ಥ್ಯವನ್ನು ಹೆಚ್ಚಿಸುವಂತಹ ಶಾಲೆಗಳನ್ನು ಸ್ಥಾಪಿಸೋದೇ ಈ ಶಾಲೆಯ ಮುಖ್ಯ ಧ್ಯೇಯ” ಎಂದಿದ್ದಾರೆ. ಈ ಪ್ರೀಸ್ಕೂಲ್ ಬೆಂಗಳೂರಿನಲ್ಲಿ ಮೊದಲು ಆರಂಭಗೊಳ್ಳಲಿದ್ದು, ಶುರುವಿಗೆ ಐದು ಕೇಂದ್ರಗಳನ್ನು ಆರಂಭಿಸುವ ಆಲೋಚನೆಯಿದೆ. ಇದರಲ್ಲಿ ಆಧುನಿಕ ಸೌಲಭ್ಯಗಳು, ಅನುಭವಿ ಶಿಕ್ಷಕರು ಹಾಗೂ ಶಿಕ್ಷಣ ಕ್ಷೇತ್ರದ ತಜ್ಞರು ಸೇರಿ ಸಿದ್ಧಪಡಿಸಿದ ವಿನೂತನ ಪಠ್ಯಕ್ರಮ ಅಳವಡಿಸಲಾಗಿದೆ.

ಎರಡು ವರ್ಷದಿಂದ ಆರು ವರ್ಷದ ಮಕ್ಕಳಿಗೆ ಮಾತ್ರ ಇಲ್ಲಿ ಶಿಕ್ಷಣ ನೀಡಲಾಗುತ್ತೆ. ಸದ್ಯ ಬೆಂಗಳೂರಿನಲ್ಲಿ ಆರಂಭವಾದ ಈ ಶಿಕ್ಷಣ ಸಂಸ್ಥೆಯನ್ನು ಮುಂದಿನ ದಿನಗಳಲ್ಲಿ ದೇಶಾದ್ಯಂತ ವಿಸ್ತರಿಸುವ ಆಲೋಚನೆ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗಿದೆ. ಈ ಮೂಲಕ ಇಂತಹ ವಿನೂತನ ಶಿಕ್ಷಣ ಭಾರತದಾದ್ಯಂತ ಇರುವ ಎಲ್ಲಾ ಮಕ್ಕಳಿಗೂ ಸಿಗುವಂತೆ ಆಗಬೇಕು ಎಂಬುದೇ ಅವರ ಆಶಯ. ಸಿನಿಮಾ ನಿರ್ಮಾಣದ ಜೊತೆ ಜೊತೆಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಈಗ ಶಿಕ್ಷಣ ಕ್ಷೇತ್ರಕ್ಕೂ ಕಾಲಿಟ್ಟಿದ್ದು ಅಪ್ಪು ಅಭಿಮಾನಿಗಳಿಗೆ ಖುಷಿಯಂತೂ ಆಗಿದೆ.

ಅದೇನೆ ಇರಲಿ, ಸಿನಿಮಾ ನಿರ್ಮಾಣ ಮಾಡುವ ಮೂಲಕ ಹೊಸ ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುತ್ತಿರುವ ಪಿಆರ್ ಕೆ ಸಂಸ್ಥೆ ಕನ್ನಡ ಚಿತ್ರರಂಗಕ್ಕೆ ತನ್ನದೇ ಆದ ಕೊಡುಗೆ ನೀಡುತ್ತ ಬಂದಿದೆ. ಈಗ ಅಶ್ವಿನಿ ಪುನೀತ್ ರಾಜಕುಮಾರ್, ಶಿಕ್ಷಣ ಕ್ಷೇತ್ರಕ್ಕೂ ಕಾಲಿಟ್ಟು ಹೊಸ ಕ್ರಾಂತಿಗೆ ಅಣಿಯಾಗಿದ್ದಾರೆ.

Categories
ಸಿನಿ ಸುದ್ದಿ

ಯು ಐ ರೆಕಾರ್ಡ್: ವಿಶ್ವಾದ್ಯಂತ 2ಸಾವಿರ ಪರದೆಯಲ್ಲಿ ಪ್ರದರ್ಶನ

ಒಂಬತ್ತು ವರ್ಷಗಳ ನಂತರ ರಿಯಲ್ ಸ್ಟಾರ್ ಉಪೇಂದ್ರ ಅವರು ನಿರ್ದೇಶಿಸಿ, ನಟಿಸಿರುವ ಬಹು ನಿರೀಕ್ಷಿತ “UI” ಚಿತ್ರ ಡಿಸೆಂಬರ್ 20 ರಂದು ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ವಿಶ್ವದಾದ್ಯಂತ 2000ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ.

ಪೋಸ್ಟರ್, ಹಾಡು, ಟೀಸರ್ ಹಾಗೂ ವಾರ್ನರ್ ಮೂಲಕ ಈಗಾಗಲೇ ಕುತೂಹಲ ಮೂಡಿಸಿರುವ ಈ ಚಿತ್ರವನ್ನು ನೋಡಲು ಉಪೇಂದ್ರ ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಲಹರಿ ಫಿಲಂಸ್ ಹಾಗೂ ವೀನಸ್ ಎಂಟರ್‌ ಪ್ರೈಸಸ್ ಲಾಂಛನದಲ್ಲಿ ಜಿ.ಮನೋಹರನ್ ಹಾಗೂ ಕೆ.ಪಿ.ಶ್ರೀಕಾಂತ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ನವೀನ್ ಮನೋಹರ್ ಅವರ ಸಹ ನಿರ್ಮಾಣ ಹಾಗೂ ತುಳಸಿರಾಮ ನಾಯ್ಡು(ಲಹರಿ ವೇಲು), ಜಿ.ರಮೇಶ್, ಜಿ.ಆನಂದ್, ಚಂದ್ರು ಮನೋಹರನ್ ಹಾಗೂ ನಾಗೇಂದ್ರ ಅವರು ಕಾರ್ಯಕಾರಿ ನಿರ್ಮಾಪಕರಾಗಿರುವ ಈ ಚಿತ್ರದಲ್ಲಿ ಉಪೇಂದ್ರ ಅವರಿಗೆ ಜೋಡಿಯಾಗಿ ರೀಷ್ಮಾ ನಾಣಯ್ಯ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಹೆಸರಾಂತ ಕೆ.ವಿ.ಎನ್ ಪ್ರೊಡಕ್ಷನ್ಸ್ ಸಂಸ್ಥೆ ಈ ಚಿತ್ರವನ್ನು ವಿತರಣೆ ಮಾಡುತ್ತಿದೆ‌.

Categories
ಸಿನಿ ಸುದ್ದಿ

ಅನ್ ಲಾಕ್ ರಾಘವ ಎಂಬ ಫನ್ ಸಿನಿಮಾ: ಫೆಬ್ರವರಿ 7ಕ್ಕೆ ಗ್ರ್ಯಾಂಡ್ ರಿಲೀಸ್

ಚಿತ್ರ ಆರಂಭವಾದಗಿನಿಂದಲೂ ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿರುವ “ಅನ್ ಲಾಕ್ ರಾಘವ” ಚಿತ್ರದ ಬಿಡುಗಡೆಯ ದಿನಾಂಕ ಘೋಷಣೆಯಾಗಿದೆ. ಫೆಬ್ರವರಿ 7 ರಂದು ಈ ಚಿತ್ರ ಬಿಡುಗಡೆಯಾಗಲಿದೆ. ಯುವ ಪ್ರತಿಭೆಗಳಾದ ಮಿಲಿಂದ್ ಹಾಗೂ ರೆಚೆಲ್ ಡೇವಿಡ್(ಲವ್ ಮಾಕ್ಟೇಲ್) ನಾಯಕ-ನಾಯಕಿಯಾಗಿ ನಟಿಸಿರುವ ಈ ಚಿತ್ರವನ್ನು ಮಂಜುನಾಥ್ ದಾಸೇಗೌಡ ಹಾಗೂ ಗಿರೀಶ್ ಕುಮಾರ್ ನಿರ್ಮಿಸಿದ್ದು, ದೀಪಕ್ ಮಧುವನಹಳ್ಳಿ ನಿರ್ದೇಶಿಸಿದ್ದಾರೆ.

ನನ್ನ ಹಿಂದಿನ ಚಿತ್ರಗಳನ್ನು ನೋಡಿದ್ದ ನನ್ನ ಗೆಳೆಯರು, ನಿನ್ನ ಚಿತ್ರಗಳಲ್ಲಿ ಗ್ಲಾಮರ್ ನಾಯಕಿಯರು ಇರುವುದಿಲ್ಲ ಎಂದು ಹೇಳುತ್ತಿದ್ದರು. ಆದರೆ “ಅನ್ ಲಾಕ್ ರಾಘವ” ಚಿತ್ರದ ಫಸ್ಟ್ ಲುಕ್ ನಲ್ಲಿ ರೆಚೆಲ್ ಅವರನ್ನು ನೋಡಿದ ಗೆಳೆಯರು ಈಗ ನೀನೊಬ್ಬ ಕಮರ್ಷಿಯಲ್ ಚಿತ್ರದ ನಿರ್ದೇಶಕ ಎಂದು ಹೇಳಿದರು‌. ಇನ್ನು, ನಾಯಕ ಮಿಲಿಂದ್ ಸುರದ್ರೂಪಿ ನಟ ಅಷ್ಟೇ ಅಲ್ಲ. ಭರವಸೆಯ ನಟ ಕೂಡ ಹೌದು. ಇದೊಂದು ಪಕ್ಕಾ‌ ಮನೋರಂಜನೆಯ ರಸದೌತಣ ನೀಡುವ , ಪ್ರೇಕ್ಷಕ ಕೊಟ್ಟ ದುಡ್ಡಿಗೆ ಮೋಸ ಮಾಡದ ಸಿನಿಮಾ.

“ರಾಮ ರಾಮ ರೆ” ಖ್ಯಾತಿಯ ಸತ್ಯಪ್ರಕಾಶ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಹೆಚ್ಚಿನ ಭಾಗದ ಚಿತ್ರೀಕರಣ ಚಿತ್ರದುರ್ಗದಲ್ಲಾಗಿದೆ. ಲವಿತ್ ಅವರ ಛಾಯಾಗ್ರಹಣದಲ್ಲಿ ಚಿತ್ರದುರ್ಗದ ಸೊಬಗನ್ನು ನೋಡುವುದೆ ಚೆಂದ. ಅನೂಪ್ ಸೀಳಿನ್ ಅವರು ಸಂಗೀತ ನೀಡಿರುವ ಈ ಚಿತ್ರದ ಹಾಡುಗಳು ಈಗಾಗಲೇ ಪ್ರೇಕ್ಷಕರ ಮನ ಗೆದ್ದಿದೆ. ಚಿತ್ರ ಕೂಡ ಎಲ್ಲರ ಮನಸ್ಸಿಗೆ ಹತ್ತಿರವಾಗಲಿದೆ ಎಂದರು ನಿರ್ದೇಶಕ ದೀಪಕ್ ಮಧುವನಹಳ್ಳಿ.

ಸತ್ಯಪ್ರಕಾಶ್ ಅವರು ಹೇಳಿದ ಕಥೆ ಬಹಳ ಇಷ್ಟವಾಯಿತು. ಹೊಸ ನಾಯಕನ ಎಂಟ್ರಿಗೆ ಬೇಕಾದ ಎಲ್ಲಾ ಅಂಶಗಳನ್ನು ಸೇರಿಸಿ ಒಂದು ಚೆಂದವಾದ ಕಥೆಯನ್ನು ಸತ್ಯಪ್ರಕಾಶ್ ಅವರು ಕಟ್ಟಿ ಕೊಟ್ಟಿದ್ದಾರೆ. ಅಷ್ಟೇ ಸುಂದರವಾಗಿ ದೀಪಕ್ ನಿರ್ದೇಶನ ಮಾಡಿದ್ದಾರೆ‌. ರೆಚೆಲ್ ಅವರ ಅಭಿನಯ ಅದ್ಭುತವಾಗಿದೆ‌.

ನೀವು ಈ ಹಿಂದೆ ಯಾವ ಚಿತ್ರಗಳಲ್ಲೂ ನೋಡಿರದ ಸಾಧುಕೋಕಿಲ ಹಾಗೂ ಶೋಭ್ ರಾಜ್ ಅವರನ್ನು ನಮ್ಮ ಚಿತ್ರದಲ್ಲಿ. ನೋಡಬಹುದು. ಅವಿನಾಶ್, ಭೂಮಿ ಶೆಟ್ಟಿ ಮುಂತಾದವರು ಈ ಚಿತ್ರದಲ್ಲಿದ್ದಾರೆ. ತಂತ್ರಜ್ಞರ ಕಾರ್ಯವೈಖರಿ ಕೂಡ ಚೆನ್ನಾಗಿದೆ. ಇತ್ತೀಚಿಗೆ ಟೆಕ್ನಿಕಲ್ ಶೋ ನಲ್ಲಿ ಚಿತ್ರ ನೋಡಿದಾಗ ಎಲ್ಲರ ಮುಖದಲ್ಲಿ ಭರವಸೆಯ ನಗು ಮೂಡಿತ್ತು. ಆ ನಗು ಪ್ರೇಕ್ಷಕನ ಮುಖದಲ್ಲೂ ಮೂಡಲಿದೆ ಎಂಬ ಭರವಸೆ ಇದೆ ಎಂದರು ನಾಯಕ ಮಿಲಿಂದ್.

ದೀಪಕ್ ಅವರು ಈ ಚಿತ್ರದ ಕಥೆ ಹೇಳಿದಾಗಲೇ ಈ ಚಿತ್ರದಲ್ಲಿ ನಿರ್ಧರಿಸಿದ್ದೆ. ಅಷ್ಟು ಸುಂದರ ಕಥಾನಕವಿದು. ನಡೆಸಬೇಕೆಂದು ಚಿತ್ರದಲ್ಲಿ ನಾನು ಪ್ರಾಚ ಶಾಸ್ತ್ರಗ್ನೆ. ಜಾನಕಿ ನನ್ನ ಪಾತ್ರದ ಹೆಸರು ಎಂದರು ನಾಯಕಿ ರೆಚೆಲ್ ಡೇವಿಡ್.

ಇದು ನನ್ನ ನಿರ್ಮಾಣದ ನಾಲ್ಕನೇ ಚಿತ್ರ ಎಂದು ಮಾತನಾಡಿದ ನಿರ್ಮಾಪಕ ಮಂಜುನಾಥ್, ಸಾಕಷ್ಟು ಸವಾಲುಗಳನ್ನು ಎದುರಿಸಿ ನಮ್ಮ ಚಿತ್ರ ಈಗ ತೆರೆಗೆ ಬರಲು ಸಿದ್ದವಾಗಿದೆ. ಇತ್ತೀಚಿಗೆ ತಂತ್ರಜ್ಞರಿಗಾಗಿ ಆಯೋಜಿಸಲಾಗಿದ್ದ ಪ್ರದರ್ಶನದಲ್ಲಿ ಚಿತ್ರವನ್ನು ನೋಡಿದಾಗ ಮನಸ್ಸಿಗೆ ಬಹಳ ಖುಷಿಯಾಯಿತು.

ಇದೊಂದು ನಮ್ಮ ಸೊಗಡಿನ ಚಿತ್ರ. “ಅನ್ ಲಾಕ್ ರಾಘವ” ಚೆನ್ನಾಗಿ ಮೂಡಿಬರಲು ಚಿತ್ರತಂಡದ ಸಹಕಾರವೇ ಕಾರಣ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಮಂಜುನಾಥ್ ದಾಸೇಗೌಡ.

Categories
ಸಿನಿ ಸುದ್ದಿ

ಶ್ರೀಮುರಳಿ ಜತೆ ಕೈ ಜೋಡಿಸಿದ ತೆಲುಗಿನ ಪೀಪಲ್ ಮೀಡಿಯಾ

ಬಘೀರ ಸಿನಿಮಾ ಮೂಲಕ, ಹಿಟ್ ಪಡೆದ ನಟ, ರೋರಿಂಗ್ ಸ್ಟಾರ್ ಶ್ರೀಮುರಳಿ ಅವರ ಮುಂದಿನ ಸಿನಿಮಾ ಯಾವುದು? ಸದ್ಯಕ್ಕೆ ಈ ಪ್ರಶ್ನೆಗೆ ಇಲ್ಲಿಯವರೆಗೂ ಉತ್ತರ ಸಿಕ್ಕಿರಲಿಲ್ಲ. ಇದೀಗ ಇಂದು ಶ್ರೀಮುರಳಿ ಬರ್ತಡೇ ಪ್ರಯುಕ್ತ ಮುಂದಿನ ಸಿನಿಮಾ ಬಗ್ಗೆ ಅಪ್ಡೇಟ್ ಸಿಕ್ಕಿದೆ.

ತೆಲುಗಿನ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆ‌ ಪೀಪಲ್ ಮೀಡಿಯಾ ಫ್ಯಾಕ್ಟರಿ ಜತೆಗೆ ಕೈ ಜೋಡಿಸಿದ್ದಾರೆ. ಅಂದರೆ ಈ ಸಂಸ್ಥೆ ನಿರ್ಮಾಣ ಮಾಡಲಿರುವ ಸಿನಿಮಾದಲ್ಲಿ ನಾಯಕನಾಗಿ ಶ್ರೀಮುರಳಿ ನಟಿಸಲಿದ್ದಾರೆ.

ಪೀಪಲ್ ಮೀಡಿಯಾ ಫ್ಯಾಕ್ಟರಿ ಈ ಸಿನಿಮಾ ನಿರ್ಮಾಣದ ಮೂಲಕ ಕನ್ನಡ ಚಿತ್ರೋದ್ಯಮ ಪ್ರವೇಶಿಸುತ್ತಿದೆ. ಈಗಾಗಲೇ ಕನ್ನಡದ ನಿರ್ಮಾಣ ಸಂಸ್ಥೆಗಳು ಪರಭಾಷೆ ಸಿನಿಮಾ ನಿರ್ಮಾಣದಲ್ಲಿ‌ ತೊಡಗಿವೆ. ಈಗ ಬೇರೆ ಭಾಷೆ ಸಂಸ್ಥೆ ಕನ್ನಡಕ್ಕೆ ಆಗಮಿಸಿದೆ. ಹೀಗೆ ಆಗಮಿಸಿದ್ದು ಖುಷಿಯ ವಿಚಾರವೂ ಹೌದು.

ಬಘೀರ ಸಿನಿಮಾದ ಯಶಸ್ಸಿನ ಬಳಿಕ ಈಗ ಇನ್ನೊಂದು‌ ಮಹೋನ್ನತ ಸಿನಿಮಾದ ಭಾಗವಾಗುತ್ತಿದ್ದಾರೆ ಶ್ರೀಮುರಳಿ. ಅಭಿಮಾನಿಗಳು ಮತ್ತು ಸಿನಿಮಾ ಪ್ರೇಮಿಗಳಲ್ಲೂ ಇದು ಕುತೂಹಲ ಮೂಡಿಸಿದೆ.

ಸದ್ಯ‌ ಶ್ರೀಮುರಳಿ ಬರ್ತಡೇಗೆ ಕೈ ಜೋಡಿಸುತ್ತಿರುವ ಬಗ್ಗೆ ಅಧಿಕೃತ ಪೋಸ್ಟರ್ ಬಿಡುಗಡೆ ಆಗಿದೆ. ಈ ಪೋಸ್ಟರ್ ಸಹ ಅಷ್ಟೇ ಎಪಿಕ್ ಆಗಿದೆ. ಶ್ರೀಮುರಳಿ ಕೆರಿಯರ್ ಗೂ ಈ ಸಿನಿಮಾ ಹೊಸ ಮೈಲಿಗಲ್ಲಾಗುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿದೆ.

ಪೀಪಲ್ ಮೀಡಿಯಾ ಫ್ಯಾಕ್ಟರಿ, ಮುಂದಿನ ದಿನಗಳಲ್ಲಿ ನಿರ್ದೇಶಕರು, ಚಿತ್ರದ ಶೀರ್ಷಿಕೆ, ತಾರಾಗಣ ಮತ್ತು ತಾಂತ್ರಿಕ ವರ್ಗದ ಬಗ್ಗೆ ಮಾಹಿತಿ ನೀಡಲಿದೆ.

Categories
ಸಿನಿ ಸುದ್ದಿ

ಮ್ಯಾಕ್ಸ್ ಸಾಂಗ್ ಬಂತು: ಲಯನ್ಸ್ ರೋರ್ ಗೆ ಭರ್ಜರಿ ಮೆಚ್ಚುಗೆ

ಕಲೈಪುಲಿ ಎಸ್ ತನು ವಿ ಕ್ರಿಯೇಷನ್ಸ್ ಹಾಗೂ ಕಿಚ್ಚ ಕ್ರಿಯೇಷನ್ಸ್ ನಿರ್ಮಾಣದ, ವಿಜಯ್ ಕಾರ್ತಿಕೇಯ ನಿರ್ದೇಶನದ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ “ಮ್ಯಾಕ್ಸ್” ಚಿತ್ರಕ್ಕಾಗಿ ಅನೂಪ್ ಭಂಡಾರಿ ಅವರು ಬರೆದಿರುವ, ವಿಜಯ್ ಪ್ರಕಾಶ್ ಹಾಡಿರುವ ಹಾಗೂ ಅಜನೀಶ್ ಲೋಕನಾಥ್ ಸಂಗೀತ ನೀಡಿರುವ “Lions roar” ಹಾಡಿನ ಲಿರಿಕಲ್ ವಿಡಿಯೋ ಇತ್ತೀಚಿಗೆ ಅದ್ದೂರಿಯಾಗಿ ಬಿಡುಗಡೆಯಾಯಿತು.

ಓರಾಯನ್ ಮಾಲ್ ನ ಆವರಣದಲ್ಲಿರುವ ಕೆರೆಯಂಗಳದಲ್ಲಿ‌ ನಡೆದ ವರ್ಣರಂಜಿತ ಸಮಾರಂಭಕ್ಕೆ ಸಹಸ್ರಾರು ಅಭಿಮಾನಿಗಳು ಸಾಕ್ಷಿಯಾದರು. “ಮ್ಯಾಕ್ಸ್” ಚಿತ್ರದ ಹಾಡಿಗೆ ಹಾಗೂ ಟ್ರೇಲರ್ ಗೆ ಅಭಿಮಾನಿಗಳು ಫಿದಾ ಆದರು. ಕಿಚ್ಚ ಸುದೀಪ್, ನಿರ್ಮಾಪಕ ಕಲೈಪುಲಿ ಎಸ್ ತನು, ನಿರ್ದೇಶಕ ವಿಜಯ್ ಕಾರ್ತಿಕೇಯ, ಸಂಯುಕ್ತ ಹೊರನಾಡು, ಸುಕೃತ ವಾಗ್ಲೆ ಇದ್ದರು.

ನಿಮ್ಮೆನೆಲ್ಲಾ ನೋಡಿ ಬಹಳ ಖುಷಿಯಾಗುತ್ತಿದೆ. ಎರಡುವರೆ ವರ್ಷಗಳ ನಂತರ ಡಿಸೆಂಬರ್ 25 ರಂದು ನನ್ನ ಅಭಿನಯದ “ಮ್ಯಾಕ್ಸ್” ಚಿತ್ರ ಬಿಡುಗಡೆಯಾಗುತ್ತಿದೆ. ತಡವಾಗಿರುವುದಕ್ಕೆ ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ. ಆದರೆ ನಾವು ಲೇಟಾಗಿ ಬಂದರೂ ಲೇಟೆಸ್ಟಾಗಿ ಬರುತ್ತೇವೆ‌. ನಿಮ್ಮೆಲ್ಲರ ಪ್ರೋತ್ಸಾಹ ಸದಾ ಇರಲಿ ಎಂದರು ನಾಯಕ ಸುದೀಪ್.

ಇಷ್ಟು ಜನ ಸುದೀಪ್ ಅವರ ಅಭಿಮಾನಿಗಳನ್ನು ಕಂಡು ಆನಂದವಾಗುತ್ತಿದೆ ಎಂದು ಮಾತು ಆರಂಭಿಸಿದ ನಿರ್ಮಾಪಕ ಕಲೈಪುಲಿ‌ ಎಸ್ ತನು, ಡಿಸೆಂಬರ್ 25 ನಮ್ಮ ಚಿತ್ರ ವಿಶ್ವದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ನಮ್ಮ ಚಿತ್ರಕ್ಕೆ ನಮ್ಮೆಲ್ಲರ ಬೆಂಬಲವಿರಲಿ ಎಂದರು. ನಿರ್ದೇಶಕ ವಿಜಯ್ ಕಾರ್ತಿಕೇಯ,
ಸಂಯುಕ್ತ ಹೊರನಾಡು, ಸುಕೃತ ವಾಗ್ಲೆ ಮುಂತಾದವರು ಚಿತ್ರದ ಕುರಿತು ಮಾತನಾಡಿದರು.

Categories
ಸಿನಿ ಸುದ್ದಿ

ಫಾದರ್ ಮೋಷನ್ ಪೋಸ್ಟರ್ ಬಂತು: ಆರ್.ಚಂದ್ರುಗೆ ಸುದೀಪ್ ಸಾಥ್

ಕೆಲವುದಿನಗಳ ಹಿಂದೂ ಆರ್ ಸಿ ಸ್ಟುಡಿಯೋಸ್ ಎಂಬ ಬೃಹತ್ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿದ ಆರ್ ಚಂದ್ರು, ಮೊದಲ ಬಾರಿಗೆ ಐದು ಸಿನಿಮಾಗಳ ನಿರ್ಮಾಣಕ್ಕೆ ಚಾಲನೆ ನೀಡಿದ್ದರು. ಆ ಪೈಕಿ ಆರ್ ಸಿ ಸ್ಟುಡಿಯೋಸ್ ನ ಮೊದಲ ಚಿತ್ರವಾಗಿ ” ಫಾದರ್” ನಿರ್ಮಾಣವಾಗುತ್ತಿದೆ. ಇತ್ತೀಚಿಗೆ ಈ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ “ಫಾದರ್” ಚಿತ್ರದ ಮೋಷನ್ ಪೋಸ್ಟರ್ ಅನಾವರಣ ಮಾಡಿದರು. ರಾಜಕೀಯ ಮುಖಂಡರಾದ ಹೆಚ್ ಎಂ ರೇವಣ್ಣ, ನಟ ಅನೂಪ್ ರೇವಣ್ಣ, ಆನಂದ್ ಆಡಿಯೋ ಶ್ಯಾಮ್ ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಅಪ್ಪ – ಮಗನ ಕುರಿತಾದ ಈ ಚಿತ್ರದ ಪ್ರಮುಖಪಾತ್ರದಲ್ಲಿ ಪ್ರಕಾಶ್ ರೈ ಹಾಗೂ ಡಾರ್ಲಿಂಗ್ ಕೃಷ್ಣ ಅಭಿನಯಿಸಿದ್ದಾರೆ. ರಾಜ್ ಮೋಹನ್ ನಿರ್ದೇಶನ ಮಾಡಿದ್ದಾರೆ.

“ಫಾದರ್” ಚಿತ್ರದ ಮೋಷನ್ ಪೋಸ್ಟರ್ ಚೆನ್ನಾಗಿದೆ. ಆರ್ ಚಂದ್ರು ನನ್ನ ಸ್ನೇಹಿತ. ಅವರೊಟ್ಟಿಗೆ ಸದಾ ನಾನಿರುತ್ತೇನೆ‌. ಚಿತ್ರದಲ್ಲಿ ನಟಿಸಿರುವ ಕೃಷ್ಣ, ಅಮೃತ ಎಲ್ಲಾ ಕಲಾವಿದರಿಗೆ ಹಾಗೂ ತಂತ್ರಜ್ಞರಿಗೆ ಒಳ್ಳೆಯದಾಗಲಿ ಎಂದು ಸುದೀಪ್ ಹಾರೈಸಿದರು.

ಮೋಷನ್ ಪೋಸ್ಟರ್ ಬಿಡುಗಡೆ ಮಾಡಿಕೊಟ್ಟ ಸುದೀಪ್ ಅವರಿಗೆ ಧನ್ಯವಾದ ತಿಳಿಸುತ್ತಾ ಮಾತು ಆರಂಭಿಸಿದ ನಿರ್ಮಾಪಕ ಆರ್ ಚಂದ್ರು, 22 ವರ್ಷಗಳ ಹಿಂದೆ 100 ರೂಪಾಯಿ ಇಟ್ಟುಕೊಂಡು ಬೆಂಗಳೂರಿಗೆ ಬಂದ ನಾನು, ಈಗ “ಕಬ್ಜ” ದಂತಹ 100 ಕೋಟಿ ಸಿನಿಮಾ ಮಾಡಿದ್ದೇನೆ. ಇದಕ್ಕೆ ಕಾರಣರಾದ ಪ್ರತಿಯೊಬ್ಬರಿಗೂ ನಾನು ಆಬಾರಿ. ಈ ಹಿಂದೆ ಸಿದ್ದೇಶ್ವರ ಎಂಟರ್ ಪ್ರೈಸಸ್ ಬ್ಯಾನರ್ ನಲ್ಲಿ 12 ಚಿತ್ರಗಳನ್ನು ನಿರ್ಮಿಸಿದ್ದ ನಾನು, ಈಗ ಆರ್ ಸಿ ಸ್ಟುಡಿಯೋಸ್ ಎಂಬ ಬೃಹತ್ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿದ್ದೇನೆ. ಈ ಸಂಸ್ಥೆಯ ಮೊದಲ ಚಿತ್ರ “ಫಾದರ್”. ಅಪ್ಪ – ಮಗನ ಬಂಧವ್ಯದ ಕುರಿತಾದ ಸಿನುಮಾವಿದು.

ನಿರ್ದೇಶಕ ರಾಜ್ ಮೋಹನ್ ಅವರು ಈ ಚಿತ್ರದ ಕಥೆ ಹೇಳಿದಾಗ ಬಹಳ ಇಷ್ಟವಾಯಿತು. ಅಪ್ಪನ ಪಾತ್ರದಲ್ಲಿ ಖ್ಯಾತ ನಟ ಪ್ರಕಾಶ್ ರೈ ಹಾಗೂ ಮಗನಾಗಿ ಡಾರ್ಲಿಂಗ್ ಕೃಷ್ಣ ಅಭಿನಯಿಸಿದ್ದಾರೆ. ಎರಡು ಹಾಡುಗಳ ಚಿತ್ರೀಕರಣ ಮುಗಿದರೆ, ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗುತ್ತದೆ. ಕನ್ನಡ ಚಿತ್ರ ವಿಶ್ವಮಟ್ಟದಲ್ಲಿ ವಿಜೃಂಭಿಸಬೇಕು‌ ಎಂಬ ಆಸೆ ಇರುವವನು ನಾನು. ಹಾಗಾಗಿ ನಾನು ಆರ್ ಸಿ ಸ್ಟುಡಿಯೋಸ್ ಆರಂಭಿಸಿರುವುದು. ನಮ್ಮ ಸಂಸ್ಥೆಯ ಜೊತೆಗೆ ಬೇರೆಬೇರೆ ಭಾಷೆಗಳ ಹೆಸರಾಂತ ಸಂಸ್ಥೆಗಳ ಸಹಯೋಗವಿದೆ. ಎಲ್ಲಾ ಭಾಷೆಗೂ ಸಲ್ಲುವ ಕಥಾಹಂದರ ಹೊಂದಿರುವ “ಫಾದರ್” ಚಿತ್ರ ಕೂಡ ಪ್ಯಾನ್ ಇಂಡಿಯಾ ಸಿನಿಮಾವಾಗಿ ಬಿಡುಗಡೆಯಾಗಲಿದೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು‌.

‘ಡಾರ್ಲಿಂಗ್’ ಕೃಷ್ಣ ಮಾತನಾಡಿ, ‘ಈ ಕಥೆ ಕೇಳಿದಾಗ ನನಗಿಂತ ಮೊದಲು ಇಷ್ಟವಾಗಿದ್ದು ಮಿಲನಾ ಅವರಿಗೆ. ಈ ಚಿತ್ರವನ್ನು ನೀವು ಮಾಡಲೇಬೇಕೆಂದು ಅವರು ಹುರಿದುಂಬಿಸಿದರು. ಪ್ರಕಾಶ್ ರೈ ಅವರ ಜೊತೆ ನಟಿಸಿದ್ದು ಖುಷಿಯಾಗಿದೆ. ‘ಫಾದರ್’ ತುಂಬಾ ದಿನಗಳವರೆಗೆ ಜನರ ಮನಸಿನಲ್ಲಿ ಉಳಿಯುವಂತ ಚಿತ್ರವಾಗುತ್ತದೆ’. ಸುದೀಪ್ ಅವರು ಬಂದು ಹಾರೈಸಿರುವ ನನ್ನ ಎಲ್ಲಾ ಸಿನಿಮಾಗಳು ಗೆದ್ದಿದೆ. ಈ ಚಿತ್ರ ಕೂಡ ಗೆಲ್ಲುತ್ತದೆ ಎಂಬ ನಂಬಿಕೆಯಿದೆ‌. ಸುದೀಪ್ ಅವರಿಗೆ ಧನ್ಯವಾದ ಎಂದರು.

ಅಪ್ಪ – ಮಗನ ಬಾಂಧವ್ಯದ ಚಿತ್ರಗಳು ಸಾಕಷ್ಟು ಬಂದಿದೆಯಾದರೂ, ಇದು ವಿಭಿನ್ನ. ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕನಿಗೆ ನಿರಾಸೆ ಮಾಡದ ಚಿತ್ರವಿದು ಎಂದು ನಿರ್ದೇಶಕ ರಾಜ್ ಮೋಹನ್ ತಿಳಿಸಿದರು.

“ಫಾದರ್” ಚಿತ್ರದಲ್ಲಿ ನನ್ನದು ಒಂದೊಳ್ಳೆಯ ಪಾತ್ರ. ಚಿತ್ರದಲ್ಲಿ ನಟಿಸಲು ಅವಕಾಶ ನೀಡಿದ ನಿರ್ಮಾಪಕರಿಗೆ ಧನ್ಯವಾದ ಹೇಳಿದರು ನಾಯಕಿ ಅಮೃತ ಅಯ್ಯಂಗಾರ್.

ಆರ್ ಚಂದ್ರು ಅವರು ಸಿ‌ನಿಮಾವನ್ನು ಪ್ರೀತಿಸುವ ರೀತಿ ನನಗೆ ಇಷ್ಟ. ಈ ಚಿತ್ರದಲ್ಲಿ ನನ್ನ ಪಾತ್ರವೂ ಚೆನ್ನಾಗಿದೆ ಎಂದರು ನಟ ನಾಗಭೂಷಣ್.

ಸಂಭಾಷಣೆ ಬರೆದಿರುವ ಮಂಜು ಮಾಂಡವ್ಯ, ಛಾಯಾಗ್ರಾಹಕ ಸುಜ್ಞಾನ್, ಸಾಹಿತಿ ಮಂಜುನಾಥ್ ಮಾಗೋದಿ ಮುಂತಾದವರು “ಫಾದರ್” ಚಿತ್ರದ ಕುರಿತು ಮಾತನಾಡಿದರು. ಪ್ರೊಡಕ್ಷನ್ ಹೆಡ್ ಯಮುನಾ ಚಂದ್ರಶೇಖರ್, ಕಾರ್ಯಕಾರಿ ನಿರ್ಮಾಪಕ ಮೌರ್ಯ ಮಂಜು ಮುಂತಾದವರು ಪತ್ರಿಕಾಗೋಷ್ಠಿಯಲ್ಲಿದ್ದರು.

error: Content is protected !!