Categories
ಸಿನಿ ಸುದ್ದಿ

ಕನ್ನಡದ ನಟರಂದ್ರೆ ಬರೀ ‌ಲೋಕಲ್ ಸ್ಟಾರಾ?

ಯಶ್ ಅವರನ್ನೇ ಹಾಕಿ ಕೊಂಡು ಪ್ಯಾನ್ ಇಂಡಿಯಾ ಸಿನಿಮಾ‌ ಮಾಡಿ‌ಗೆದ್ದವರು ಈಗ ತೆಲುಗು ನಟ ಪ್ರಭಾಸ್ ಮೊರೆ ಹೋಗಿದ್ದೇಕೆ? ಅದರ ಅಸಲಿ ಕತೆ ಏನು?

ನಿರ್ಮಾಪಕ ವಿಜಯ್ ಕಿರಗಂದೂರು ಹೀಗೇಕೆ ಮಾಡಿದ್ರು? ‘ಕೆಜಿಎಫ್’ ನೋಡಿ ಖುಷಿ ಪಟ್ಟ ಕನ್ನಡದ ಸಿನಿ ಪ್ರೇಕ್ಷಕನಿಗೆ ಹಿಗೊಂದು ಪ್ರಶ್ನೆ ಶುರುವಾಗದೆ ಉಳಿದಿಲ್ಲ. ಅದಕ್ಕೆ ಕಾರಣ ಅವರೀಗ ಅನೌನ್ಸ್ ಮಾಡಿರುವ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ., ಮತ್ತದಕ್ಕೆ ಅವರು ಆಯ್ಕೆ ಮಾಡಿಕೊಂಡಿರುವ ನಾಯಕ ನಟ.

ಡಿಸೆಂಬರ್ 2 ಕ್ಕೆ ಹೊಂಬಾಳೆ ಫಿಲಂಸ್ ಕನ್ನಡದ ಸಿನಿ ಪ್ರೇಕ್ಷಕ ರಿಗೆ ದೊಡ್ಡದೊಂದು ಸಿಹಿ ಸುದ್ದಿ ಕೊಡಲಿದೆ ಎನ್ನುವ ಮಾಹಿತಿ ರಿವೀಲ್ ಆದಾಗ, ನಿರ್ಮಾಪಕ ವಿಜಯ್ ಕಿರಗಂದೂರು ಈ ಬಾರಿ ಕನ್ನಡದ ಯಾವ ಸ್ಟಾರ್ ನಟನ ಜತೆಗೆ ಸಿನಿಮಾ ಮಾಡಲಿದ್ದಾರೆನ್ನುವ ಕುತೂಹಲ ಬೆಟ್ಟದಷ್ಟಿತ್ತು. ಕನ್ನಡದ ಸಿನಿ ಪ್ರೇಕ್ಷಕರ ಮನಸ್ಸಲ್ಲಿ ಅರೆ ಘಳಿಗೆ ಶಿವರಾಜ್ ಕುಮಾರ್, ಸುದೀಪ್, ದರ್ಶನ್, ಪುನೀತ್ ಸೇರಿದಂತೆ ಒಂದಷ್ಟು ಬಹು ಬೇಡಿಕೆ ನಟರ ಹೆಸರು ಹಾದು ಹೋಗಿದ್ದು ಸುಳ್ಳಲ್ಲ.

ಬಹಳಷ್ಟು ಜನರಿಗೆ ದರ್ಶನ್ ಹಾಗೂ ಸುದೀಪ್ ಟಾರ್ಗೆಟ್ ಆಗಿದ್ದರು.ಆದರೆ ಡಿಸೆಂಬರ್ 2 ಕ್ಕೆ ಹೊಂಬಾಳೆ ಹೊರಗೆಡವಿದ ಸುದ್ದಿಯೇ ಬೇರೆ. ಕನ್ನಡದ ಸಿನಿ ಪ್ರೇಕ್ಷಕರು ಖುಷಿ ಪಡುವ ಬದಲಿಗೆ ಶಾಕ್ ಆಗುವಂತಹ ಸುದ್ದಿಯೇ ಹೊರ ಬಿತ್ತು. ಹೊಂಬಾಳೆ ಫಿಲಂಸ್ ನಿರ್ಮಾಣದ ಮತ್ತೊಂದು ಅದ್ದೂರಿ ವೆಚ್ಚದ ಪ್ಯಾನ್ ಇಂಡಿಯಾ ಸಿನಿಮಾಕ್ಕೆ ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳುತ್ತಿದ್ದರೂ, ಈ ಬಾರಿ ಅವರು ಸೆಲೆಕ್ಟ್ ಮಾಡಿಕೊಂಡ ನಟ ಬಾಹುಬಲಿ ಖ್ಯಾತಿಯ ಪ್ರಭಾಸ್. ಪ್ಯಾನ್ ಇಂಡಿಯಾ ಮಾತ್ರವಲ್ಲ, ಅಂತಾರಾಷ್ಟ್ರೀಯ ಮಾರುಕಟ್ಟೆ ದೃಷ್ಟಿಯಿಂದ ಹೊಂಬಾಳೆ ಫಿಲಂಸ್ ನ ಆಯ್ಕೆ ಸರಿ ಇತ್ತೇನೋ ಆದರೆ, ಕನ್ನಡದ ಸಿನಿ ಪ್ರೇಕ್ಷಕರಿಗೆ ಅದೇ ಆಕ್ರೋಶಕ್ಕೆ ಕಾರಣವಾಯ್ತು.‌ ಸುದ್ದಿ ಹೊರ ಬೀಳುತ್ತಿದ್ದಂತೆ ಸೋಷಲ್ ಮೀಡಿಯಾದಲ್ಲಿ ಪ್ರಶಾಂತ್ ನೀಲ್ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ್ರು.


ಪ್ಯಾನ್ ಇಂಡಿಯಾ ಕ್ಕೆ ನಟನಾಗಬಲ್ಲ ನಟ ಕನ್ನಡದಲ್ಲಿ ಇಲ್ಲವೇ? ಪ್ರಶಾಂತ್ ನೀಲ್ ಯಾವ ಭಾಷೆ ಸಿನಿಮಾ ಮಾಡಲು ಹೊರಟಿದ್ದಾರೆ? ಇತ್ಯಾದಿ ರೀತಿಯಲ್ಲಿ ನೆಟ್ಟಿಗರು ಕಿಡಿಕಾರಿದರು. ಅಂತಹ ಸಿಟ್ಟು ಸ್ಪೋಟವಾಗುವುದಕ್ಕೆ ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಜೋಡಿಯ ಸಿನಿಮಾದ ಟೈಟಲ್ ಕೂಡ ಕಾರಣವಾಯಿತು. ಸಾಲಾರ್ ಅನ್ನೋದು ಆ ಚಿತ್ರದ ಹೆಸರು. ಸಾಲಾರ್ ಅಂದ್ರೆ ಕನ್ನಡದ ಪದವೇ? ಇದು ನೆಟ್ಟಿಗರ ಪ್ರಶ್ನೆ . ಅಸಲಿಗೆ ಸಾಲಾರ್ ಅನ್ನುವ ಪದವೇ ಕನ್ನಡದಲ್ಲಿ ಇಲ್ಲ. ಇದೊಂದು ಅರೇಬಿಯಾ ಪದ. ಇದು ಕೂಡ ಪ್ಯಾನ್ ಇಂಡಿಯಾ ಜತೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆ ಯ ತಂತ್ರ. ಜಾಗತಿಕವಾಗಿ ಸಿನಿಮಾ ಮಾಡಲು ಹೊರಟ ಪ್ರಶಾಂತ್ ನೀಲ್ ಗೆ ಒಂದು ಯುನಿವರ್ಷಲ್ ಟೈಟಲ್ ಬೇಕಿತ್ತು. ಅದಕ್ಕಾಗಿ ಅವರು ಆ ಪದ ಆಯ್ಕೆ ಮಾಡಿಕೊಂಡ್ರು.ಆದರೆ ಅದನ್ನು ಕನ್ನಡಿಗರು ಒಪ್ಪಿಕೊಳ್ಳುತ್ತಾರಾ?


ಪ್ರಶಾಂತ್ ನೀಲ್ ಹಾಗೂ ಪ್ರಭಾಸ್ ಜೋಡಿಯ ಸಿನಿಮಾ ಚಿತ್ರದ ಕತೆ ಏನು ಅನ್ನೊದು ಇನ್ನು ಗೊತ್ತಾಗಿಲ್ಲ. ಟೈಟಲ್ ಮಾತ್ರ ಈ ರಿವೀಲ್ ಆಗಿದೆ. ಅದೇ ಸಾಲಾರ್. ಸಾಲಾರ್ ಅಂದ್ರೆ ಅರೇಬಿಯಾದಲ್ಲಿ ಲೀಡರ್. ಅರೇಬಿಯಾಕ್ಕೂ ಕತೆಗೂ ಒಂದು ನಂಟಿರುವ ಹಾಗೆ ಕಾಣಿಸುತ್ತೆ. ಅದು ಟೆರರಿಸ್ಟ್ ಲಿಂಕೇ ಆಗಿರುತ್ತೆ. ಅದೀಗ ಯುನಿವರ್ಷಲ್ ವಿಷಯವೂ ಹೌದು. ಅದರ ವಿರುದ್ಧ ಒಬ್ಬ ನಾಯಕನನ್ನು ಸೃಷ್ಟಿಸಿರುವ ಪ್ರಶಾಂತ್ ನೀಲ್ ಅದಕ್ಕೆ ಪ್ರಭಾಸ್ ಅವರನ್ನು ಸೆಲೆಕ್ಟ್ ಮಾಡಿಕೊಂಡು ಸಾಲಾರ್ ಅಂತ ಹೆಸರಿಟ್ಟಿದ್ದಾರೆ. ಆದರೆ ಅದು ಕನ್ನಡಕ್ಕೆ ಒಗ್ಗಿತಾ? ಸದ್ಯದ ವಿರೋಧ ನೋಡಿದರೆ ಪ್ರಶಾಂತ್‌ನೀಲ್ ಈಗ ಎಡವಿದ್ರಾ ಎನ್ನುವ ಅನುಮಾನ ಶುರುವಾಗಿದೆ. ಅದರ ವಾಸ್ತವ ಮುಂದೆ ಗೊತ್ತಾಗಲಿದೆ. ಸದ್ಯಕ್ಕೆ ಫಿಚ್ಚರ್ ಬಾಕಿ ಇದೆ.

Categories
ಸಿನಿ ಸುದ್ದಿ

ಮರಿ ಟೈಗರ್ ಗೆ ಸಿಗ್ತು ಭರ್ಜರಿ ಗಿಫ್ಟ್!

ನಟ  ವಿನೋದ್ ಪ್ರಭಾಕರ್ ಗೆ ಇಂದು ಹುಟ್ಟು ಹಬ್ಬ

ಮರಿ ಟೈಗರ್ ವಿನೋದ್ ಪ್ರಭಾಕರ್ ಅವರಿಗೆ ಇಂದು ಹುಟ್ಟು ಹಬ್ಬ. ಸದ್ಯ ಅವರೀಗ ಕನ್ನಡದ ಬಹು ಬೇಡಿಕೆಯ ನಟ. ಅವರು ನಾಯಕರಾಗಿ ಅಭಿನಯಿಸಿರುವ ‘ಫೈಟರ್’ ಮತ್ತು ‘ಶ್ಯಾಡೋ’ ಸಿನಿಮಾಗಳು ರಿಲೀಸ್ ಗೆ ರೆಡಿಯಾಗಿದೆ. ಎರಡು ಚಿತ್ರಗಳು ಚಿತ್ರೀಕರಣ ಮುಗಿಸಿ ತೆರೆಗೆ ಬರಲು ಕಾಯುತ್ತಿದೆ. ಇನ್ನು ಹೆಸರಿಡದ ಚಿತ್ರವೊಂದು ಕೂಡ ಚಿತ್ರೀಕರಣ ಮುಗಿಸಿದೆ.ಈ ಮಧ್ಯೆ ಹೊಸ ಸಿನಿಮಾವೊಂದಕ್ಕೂ ಕಾಲ್ ಶೀಟ್ ನೀಡಿದ್ದು , ಇತ್ತೀಚೆಗಷ್ಟೆ ರಿವೀಲ್ ಆಗಿದೆ. ಹಾಗೆಯೇ ದರ್ಶನ್ ಅಭಿನಯದ ಬಹು ನಿರೀಕ್ಷಿತ ಚಿತ್ರ ರಾಬರ್ಟ್ ನಲ್ಲೂ ವಿನೋದ್ ಪ್ರಭಾಕರ್ ಕಾಣಿಸಿಕೊಂಡಿದ್ದು, ಈಗ ಅವರ ಹುಟ್ಟು ಹಬ್ಬಕ್ಕೆ ರಾಬರ್ಟ್ ಚಿತ್ರ ತಂಡ ವಿನೋದ್ ಪ್ರಭಾಕರ್ ಅವರ ಪಾತ್ರದ ಫಸ್ಟ್ ಲುಕ್ ಲಾಂಚ್ ಮಾಡಿದೆ.


ನಟ ದರ್ಶನ್ ಬಳಗದಲ್ಲಿ ವಿನೋದ್ ಪ್ರಭಾಕರ್ ತುಂಬಾನೆ‌ ಆಪ್ತರು. ವಿನೋದ್ ಪ್ರಭಾಕರ್ ಅಭಿನಯದ ಸಿನಿಮಾಗಳಿಗೆ ದರ್ಶನ್ ಆರಂಭದಿಂದಲೂ ಸಾಥ್ ನೀಡುತ್ತಾ ಬಂದಿದ್ದು, ಈಗ ರಾಬರ್ಟ್ ನಲ್ಲೂ ಒಟ್ಟಾಗಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಭರ್ಜರಿ ಮನರಂಜನೆ‌ ನೀಡಲು ಮುಂದಾಗಿದ್ದಾರೆ.

ಈ ನಡುವೆಯೇ ಹುಟ್ಟು ಆಚರಿಸಿಕೊಳ್ಳುತ್ತಿರುವ ವಿನೋದ್ ಪ್ರಭಾಕರ್ ಅವರಿಗೆ ದರ್ಶನ್ ಆ್ಯಂಡ್ ಟೀಮ್ ಫಸ್ಟ್ ಲುಕ್ ಕೊಡುಗೆ ನೀಡಿರುವುದು ವಿಶೇಷ. ಇದೇ ರೀತಿ ಶ್ಯಾಡೋ ಹಾಗೂ ಪೈಟರ್ ಚಿತ್ರ ತಂಡಗಳು ಕೂಡ ನಟ ವಿನೋದ್ ಪ್ರಭಾಕರ್ ಅವರಿಗೆ ತಮ್ಮ ಚಿತ್ರಗಳ ಸ್ಪೆಷಲ್ ಪೋಸ್ಟರ್ ಕೊಡುಗೆನೀಡಿವೆ.

Categories
ಸಿನಿ ಸುದ್ದಿ

ಕಾಮಿನಿ ರಾವ್‌ ಅವರ ಮಾಸ್ಟರ್‌ ಕ್ಲಾಸ್‌ – ಸಿನ್ಮಾ ಕ್ಷೇತ್ರಕ್ಕೂ ಎಂಟ್ರಿ ಕೊಡಲಿರುವ ಖ್ಯಾತ ವೈದ್ಯೆ

ಇತರರಿಗೂ ಸ್ಫೂರ್ತಿ ತುಂಬುವ ಉದ್ದೇಶವೇ ನಮ್ಮ ಗುರಿ

ಈಗಾಗಲೇ ತಮ್ಮದೇ ಆದ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಹಲವು ಸಾಧಕರು ಮನರಂಜನೆ ಕ್ಷೇತ್ರಕ್ಕೂ ಎಂಟ್ರಿಯಾಗಿದ್ದು ಗೊತ್ತೇ ಇದೆ. ಬಹಳಷ್ಟು ಮಂದಿ ಸಾಧಕರು ಮನರಂಜನಾ ಕ್ಷೇತ್ರದಲ್ಲೀ ಯಶಸ್ಸು ಕಂಡಿದ್ದಾರೆ ಕೂಡ. ಈಗ ಡಾ.ಕಾಮಿನಿ ರಾವ್‌ ಕೂಡ ಮನರಂಜನಾ ಕ್ಷೇತ್ರಕ್ಕೆ ಎಂಟ್ರಿಯಾಗುತ್ತಿದ್ದಾರೆ ಅನ್ನೋದೇ ಈ ಹೊತ್ತಿನ ವಿಶೇಷ. ಹೌದು, ಪ್ರಸೂತಿ ಮತ್ತು ಸ್ತ್ರಿರೋಗ ತಜ್ಞೆಯಾಗಿ, ಅಸಿಸಡ್ ರಿಪ್ರೊಡಕ್ಷನ್ ಕ್ಷೇತ್ರ ಸೇರಿದಂತೆ ವೈದ್ಯಕೀಯ ರಂಗದಲ್ಲಿ ದೊಡ್ಡ ಹೆಸರು ಮಾಡಿರುವ ಪದ್ಮಶ್ರೀ ಪ್ರಶಸ್ತಿ ವಿಜೇತೆ ಡಾ.ಕಾಮಿನಿ ಎ.ರಾವ್‌ ಇದೀಗ ತಮ್ಮ ಕಾರ್ಯವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಿಕೊಂಡಿದ್ದಾರೆ ಎಂಬುದು ಹೆಮ್ಮೆಯ ವಿಷಯ. ಈಗಾಗಲೇ ರಾಷ್ಟ್ರ. ಅಂತಾರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನವಾಗಿರುವ ಅಪ್ಪಟ ಕನ್ನಡದ ಮಹಿಳೆ ಡಾ. ಕಾಮಿನಿ ಎ. ರಾವ್.‌ ವೈದ್ಯಲೋಕದಲ್ಲಿ ಸಾಕಷ್ಟು ಸಾಧನೆ ಮಾಡುವುದರ ಜೊತೆಯಲ್ಲಿ ಸಾಮಾಜಿಕ ಕಾರ್ಯಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅವರೀಗ ಮನರಂಜನೆ ಕ್ಷೇತ್ರಕ್ಕೂ ಕಾಲಿಡುತ್ತಿದ್ದಾರೆ ಎಂಬುದು ಅಚ್ಚರಿಯಾದರೂ ಸತ್ಯ.
ಈ ಕುರಿತಂತೆ ಅವರು ಒಂದಷ್ಟು ವಿಷಯ ಹಂಚಿಕೊಂಡಿದ್ದಾರೆ. ಪೂರ್ವಿ ಪ್ರೊಡಕ್ಷನ್ಸ್ ಹೆಸರಿನಲ್ಲಿ ತಮ್ಮದೇ ಆದ ಸ್ವಂತ ನಿರ್ಮಾಣ ಸಂಸ್ಥೆಯನ್ನು ಆರಂಭಿಸುತ್ತಿರುವುದಾಗಿ ಹೇಳಿರುವ ಅವರು, ಅಧಿಕೃತವಾಗಿ ಈ ಸಂಸ್ಥೆ ತನ್ನ ಕಾರ್ಯಚಟುವಟಿಕೆ ಶುರುಮಾಡಲಿದೆ. ಮನರಂಜನಾ ಕ್ಷೇತ್ರದ ಮೂಲಕ ಸಾಮಾಜಿಕ ಬದಲಾವಣೆ ತರುವ ನಿಟ್ಟಿನಲ್ಲಿ ತಮ್ಮ ಸೊಸೆ ಪೂಜಾ ಸಿದ್ಧಾರ್ಥ್ ರಾವ್ ಕೂಡ ಹೊಸ ಯೋಜನೆ ಹಾಕಿಕೊಂಡಿದ್ದರಿಂದಲೇ ನಾನು ಈ ಹೊಸ ಸಾಹಸಕ್ಕೆ ಸಿದ್ಧಳಾಗಿದ್ದೇನೆ. ಈ ಕೆಲಸಕ್ಕೆ ನನ್ನ ಪತಿ ಡಾ. ಎ.ಎಸ್. ಅರವಿಂದ್ ಅವರ ಸಹಕಾರವೂ ಇದೆ. ಸಿನಿಮಾ ಮೂಲಕ ಸಾಮಾನ್ಯರಿಗೂ ಉಪಯೋಗವಾಗುವ ಉದ್ದೇಶದಿಂದ ಹೊಸ ಪ್ರಯೋಗಗಳನ್ನು ಈ ಸಂಸ್ಥೆ ಮೂಲಕ ಮಾಡುವ ಛಲದಲ್ಲಿರುವುದಾಗಿ ಹೇಳುತ್ತಾರೆ ಅವರು.

ಡಾ.‌ ಕಾಮಿನಿ ರಾವ್

ಮಾಸ್ಟರ್ ಕ್ಲಾಸ್
ಡಾ. ಕಾಮಿನಿ ರಾವ್ಸ್ ಮಾಸ್ಟರ್ ಕ್ಲಾಸ್ ಕೇವಲ ಸಾಮಾನ್ಯ ಸಂಗತಿಗಳಿಂದ ಕೂಡಿರದೇ, ಸ್ಪೂರ್ತಿದಾಯಕ ಅಂಶಗಳ ಜತೆಗೆ, ಯಶಸ್ಸಿನ ಏಣಿ ಏರುವುದಕ್ಕೂ ಇದು ರಹದಾರಿಯಾಗಿದೆ. ಸಾಮಾನ್ಯನಿಂದ ಅಸಾಮಾನ್ಯನೆಡೆಗೆ ಡಾ. ಕಾಮಿನಿ ರಾವ್ಸ್ ಮಾಸ್ಟರ್ ಕ್ಲಾಸ್‌ನಲ್ಲಿ ಮಾಹಿತಿ ನೀಡಲಾಗುತ್ತದೆ. ಇದರ ಜತೆಗೆ “ಪೂರ್ವಿರಾಗ”, “ಹರಟೆ” ಎಂಬ ಸ್ಫೂರ್ತಿದಾಯಕ ಕಾರ್ಯಕ್ರಮವನ್ನೂ ಆಯೋಜಿಸುತ್ತಿದ್ದು, ಒಂದಷ್ಟು ಗಾಯಕರು ಮತ್ತು ಸಂಗೀತಗಾರರನ್ನ ಆಯ್ಕೆ ಮಾಡಿ ಕಾರ್ಯಕ್ರಮವನ್ನೂ ನಡೆಸಲಿದ್ದಾರೆ. ಇಲ್ಲಿ ಹಾಸ್ಯದೊಂದಿಗೆ ಹಾಡು ಹರಟೆ ಹೈಲೈಟ್‌ ಆಗಿರಲಿದೆ. ಇನ್ನು, ನಾನು ವೈದ್ಯಕೀಯ ಕ್ಷೇತ್ರದಲ್ಲಿರುವುದರಿಂದ ಇತರರಿಗೂ ಅನುಕೂಲ ಆಗಲಿ ಎಂಬ ಕಾರಣಕ್ಕೆ, ಆನ್ಲೈನ್ ತರಗತಿಗಳನ್ನೂ ಆಯೋಜಿಸುತ್ತಿದ್ದೇನೆ. ರಿಪ್ರೊಡಕ್ಟಿವ್ ಮೆಡಿಸಿನ್, ಆಬ್ಸ್ಟೆಟ್ರಿಕ್ಸ್ ಮತ್ತು ಗೆನೊಕೊಲಜಿ ಕುರಿತ ತರಗತಿಗಳನ್ನು ನಡೆಸಲಾಗುವುದು. ಇಲ್ಲಿ ಸಾಕಷ್ಟು ನುರಿತ ವೈದ್ಯರು ಈ ಬಗ್ಗೆ ಆನ್ಲೈನ್ನಲ್ಲಿಯೇ ತರಗತಿಗಳನ್ನು ತೆಗೆದುಕೊಳ್ಳಲಿದ್ದಾರೆ. ಅಷ್ಟೇ ಅಲ್ಲ ಹಾಗೇ ಕಲಿತ ಕೋರ್ಸ್‌ ಗೆ ಸರ್ಟಿಫೀಕೆಟ್ ಸಹ ನೀಡಲಾಗುವುದು. ಗ್ರಾಮೀಣ ಮತ್ತು ನಗರ ಪ್ರದೇಶದವರ ಜತೆಗೆ ವಿಶ್ವದಾದ್ಯಂತ ಎಲ್ಲೇ ಇದ್ದರೂ ಈ ಕೋರ್ಸ್ ಮಾಡಬಹುದು ಎಂಬುದು ಅವರ ಮಾತು.

ಪೂಜಾ ಸಿದ್ಧಾರ್ಥ್‌ ರಾವ್

ಪೂರ್ವಿ ಪ್ರೊಡಕ್ಷನ್ಸ್
ಇನ್ನು ಪೂರ್ವಿ ಪ್ರೊಡಕ್ಷನ್ಸ್‌ ಕುರಿತು ಮಾತನಾಡಿದ ಕಾಮಿನಿ ರಾವ್‌ ಅವರ ಸೊಸೆ, ಪೂಜಾ ಸಿದ್ಧಾರ್ಥ್‌ ರಾವ್‌, “ಸಾಮಾಜಿಕ ಕಳಕಳಿಯುಳ್ಳ ಮತ್ತು ಜನಸಾಮಾನ್ಯರಿಗೂ ಹತ್ತಿರವೆನಿಸುವ ಸಿನಿಮಾಗಳನ್ನು ನಿರ್ಮಾಣ ಮಾಡಿ ಸಮಾಜಕ್ಕೆ ನೀಡುವುದು ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ. ಧನಾತ್ಮಕ ಅಂಶಗಳಿರುವ ಮತ್ತು ಎಲ್ಲರಿಗೂ ಅನ್ವಯವಾಗುವಂತಹ ಸಿನಿಮಾಗಳನ್ನು ನಿರ್ಮಿಸುವುದು ಸಂಸ್ಥೆಯ ಗುರಿ. ಈ ಪೂರ್ವಿ ಪ್ರೊಡಕ್ಷನ್ಸ್ ಸಂಸ್ಥೆಯನ್ನು ತೆರೆಯುತ್ತಿರುವ ಮುಖ್ಯ ಉದ್ದೇಶ, ಸಿನಿಮಾ ನಿರ್ಮಾಣ, ಡಾಕ್ಯುಮೆಂಟರಿಗಳು, ಹರಟೆ ರೀತಿಯ ಕಾರ್ಯಕ್ರಮಗಳನ್ನು ಮತ್ತು ಎಜುಕೇಷನಲ್ ಸಿನಿಮಾಗಳನ್ನು ನಿರ್ಮಾಣ ಮಾಡುವುದು. ಇಷ್ಟಕ್ಕೂ ಈ ಸಂಸ್ಥೆ ಶುರು ಮಾಡೋಕೆ ಕಾರಣ, ಕೊರೊನಾದಿಂದ ಆದಂತಹ ಅನುಭವ. ನಾನು ಮದುವೆಯಾಗಿ ಹತ್ತು ವರ್ಷಗಳಾದವು. ಇಷ್ಟು ದಿನದಲ್ಲಿ ನನ್ನ ಅತ್ತೆ ಸುಮ್ಮನೇ ಕುಳಿತಿದ್ದು ಯಾವತ್ತೂ ನೋಡಿಲ್ಲ. ಹೀಗಿರುವಾಗ ಕೊರೋನಾ ಕಾರಣಕ್ಕಾಗಿ ನಿರ್ಮಾಣಗೊಂಡ ಪರಿಸ್ಥಿತಿ ಎಂಥವರನ್ನೂ ಮನೆಯಲ್ಲಿ ಬಂಧಿಸಿತ್ತು. ಆನ್‌ ಲೈನ್‌, ಓಟಿಟಿಗಳನ್ನು ನೋಡಿ ಸಾಕಾಗಿತ್ತು. ಅದೊಂದು ದಿನ ʻಅಮ್ಮಾ ಸುಮ್ಮನೇ ಕೂತು ಬೇಸರವಾಗುತ್ತಿದೆʼ ಎಂದೆ. ಆ ದಿನ ಹತ್ತಾರು ನಿಮಿಷಗಳ ಕಾಲ ಅತ್ತೆ ಬದುಕಿನ ಬಗ್ಗೆ ಮಾತಾಡಿದರು. ಅವರ ಮಾತುಗಳು ತುಂಬಾ ಅಮೂಲ್ಯವೆನಿಸಿತು. ಅವರ ಈ ಹಿತ ನುಡಿಗಳು, ಮಾರ್ಗದರ್ಶನದ ಮಾತುಗಳು ನಮಗಷ್ಟೇ ದಕ್ಕಿದರೆ ಹೇಗೆ? ಜಗತ್ತಿಗೆ ಯಾಕೆ ಪರಿಚಯಿಸಬಾರದು? ಎಂಬ ಐಡಿಯಾ ಬಂದು. ಈ ಕಾರಣಕ್ಕೆ ಶುರುವಾದ ಹೊಸ ಕಲ್ಪನೆ ಪೂರ್ವಿ ಪ್ರೊಡಕ್ಷನ್ಸ್. ಈ ಮೂಲಕ ಹಲವು ಕಾರ್ಯಕ್ರಮ ಹಮ್ಮಿಕೊಳ್ಳುತ್ತೇನೆ. ಈಗಾಗಲೇ ಕನ್ನಡ ರಾಜ್ಯೋತ್ಸವ ಕುರಿತು ಅಪರ್ಣ ಹಾಗೂ ಜೋಗಿ ಸುನಿತ ಜೊತೆ ಒಳ್ಳೆಯ ಕಾರ್ಯಕ್ರಮ ನಡೆದಿದೆ.‌ ನಮ್ಮ ಡಾ.ಕಾಮಿನಿ ರಾವ್ ಡಾಟ್‌ ಕಾಮ್‌ ಯುಟ್ಯೂಬ್ ಚ್ಯಾನೆಲ್‌ನಲ್ಲಿ ವೀಕ್ಷಿಸಬಹುದು. ಮುಂದಿನ ದಿನಗಳಲ್ಲಿ ಸಿನಿಮಾ ನಿರ್ಮಾಣ ಮಾಡುವ ಉದ್ದೇಶವೂ ಇದೆ. ಸಾಮಾಜಿಕ ಕಳ ಕಳಿ ಇರುವ ವಿಷಯ ಆಯ್ಕೆ ಮಾಡಿಕೊಂಡು ಚಿತ್ರ ಮಾಡುವ ಯೋಚನೆ ಇದೆ ಎಂಬುದು ಪೂಜಾ ಸಿದ್ಧಾರ್ಥ್‌ ರಾವ್‌ ಅವರ ಮಾತು.‌

ಡಾ.ಅರವಿಂದ್

ಡಾ.ಕಾಮಿನಿ ರಾವ್‌ ಅವರ ಪತಿ ಡಾ.ಎ.ಎಸ್.‌ ಅರವಿಂದ್‌ ಅವರಿಗೆ, ವೈದ್ಯರಾಗಿದ್ದರೂ, ಸಿನಿಮಾರಂಗ ಹತ್ತಿರವಂತೆ. ಅವರು ಬಸವನಗುಡಿಯ ನ್ಯಾಷನಲ್‌ ಹೈಸ್ಕೂಲ್‌, ಕಾಲೇಜಿನಲ್ಲಿ ಓದಿದವರು. ಹಾಗಾಗಿ, ಡಾ. ವಿಷ್ಣುವರ್ಧನ್‌ ಆಪ್ತರು. ಅಂಬರೀಶ್‌, ಡಾ. ರಾಜ್‌ ಕುಮಾರ್‌ ಕುಟುಂಬ ಸೇರಿದಂತೆ ಸಾಕಷ್ಟು ಕಲಾವಿದರ ಒಡನಾಟವೂ ಇವರಿಗೆ ಇದೆ. ಇಷ್ಟು ವರ್ಷ ಸಿನಿಮಾದವರ ಸಂಗಡ ಇದ್ದರೂ, ಸಿನಿಮಾರಂಗ ಪ್ರವೇಶಿಸಿರಲಿಲ್ಲ. ಈಗ ನೇರವಾಗಿ ಸ್ಪರ್ಶಿಸುವ ಕಾಲ ಬಂದಿದೆ ಎಂದರು ಡಾ. ಎ.ಎಸ್. ಅರವಿಂದ್.

Categories
ಸಿನಿ ಸುದ್ದಿ

13 ನೇ ಚಿತ್ರೋತ್ಸವ ಅನುಮತಿಗೆ ಮನವಿ ಅಕಾಡೆಮಿ ಸದಸ್ಯರ ನಿಯೋಗದಿಂದ ಸಿಎಂ ಭೇಟಿ

2021 ರ ಫೆಬ್ರವರಿಯಲ್ಲಿ ಚಿತ್ರೋತ್ಸವ ಸಾಧ್ಯತೆ- ಮುಖ್ಯಮಂತ್ರಿ ಸಕಾರಾತ್ಮಕ ಸ್ಪಂದನೆ

ಈ ಬಾರಿ 13 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ಆಯೋಜನೆಗೆ ಅನುಮತಿ ಕೋರಿ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್‌ ಪುರಾಣಿಕ್‌ ತಮ್ಮ ಅಕಾಡೆಮಿಯ ಸದಸ್ಯರೊಂದಿಗೆ ಮಂಗಳವಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರನನು ಭೇಟಿ ಮಾಡಿ ಮನವಿ ಮಾಡಿದ್ದಾರೆ. ಕೊರೊನಾ ಹಾವಳಿಯಿಂದ ಚಿತ್ರರಂಗ ಸಂಪೂರ್ಣ ಸೊರಗಿದೆ. ಈಗಷ್ಟೇ ಚಿತ್ರಮಂದಿರಗಳು ಬಾಗಿಲು ತೆರೆದಿವೆ. ಚಿತ್ರರಂಗ ಇನ್ನಷ್ಟು ವೇಗವಾಗಲು, ಪ್ರೇಕ್ಷಕರನ್ನು ಪುನಃ ಚಿತ್ರಮಂದಿರಗಳತ್ತ ಸೆಳೆಯಲು 13 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಅನುಮತಿ ಕೊಟ್ಟು, ಅದಕ್ಕೆ ಬೇಕಾದ ಪೂರಕ ವಾತಾವರಣ ಕಲ್ಪಿಸಲು ಮುಂದಾಗಬೇಕು ಎಂದು ಮನವಿ ನೀಡಲಾಗಿದೆ. ೨೦೨೧ರ ಫೆಬ್ರವರಿ ಮೂರು ಅಥವಾ ನಾಲ್ಕನೇ ವಾರದಲ್ಲಿ ಚಿತ್ರೋತ್ಸವ ಆಯೋಜನೆಗೆ ಅನುಮತಿ ನೀಡುವಂತೆ ಅಕಾಡಮಿ ಅಧ್ಯಕ್ಷ ಸುನೀಲ್‌ ಪುರಾಣಿಕ್‌ ಅವರ ನೇತೃತ್ವದ ನಿಯೋಗ ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿದೆ. ಈ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಸಕಾರಾತ್ಮಕವಾಗಿಯೂ ಸ್ಪಂದಿಸಿದ್ದಾರೆ ಎನ್ನಲಾಗಿದೆ.


ಕಳೆದ 12  ವರ್ಷಗಳಿಂದಲೂ ನಡೆದು ಬಂದಿರುವ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ ಯಶಸ್ವಿ ಕಂಡಿದೆ. ಜಗತ್ತಿನಾದ್ಯಂತ ಸುಮಾರು 5000 ಸ್ಥಳಗಳಲ್ಲಿ ಚಲನಚಿತ್ರೋತ್ಸವಗಳು ನಡೆಯುತ್ತವೆ. ಆ ಪೈಕಿ ಕೇವಲ 45 ಚಿತ್ರೋತ್ಸವಗಳಿಗೆ ಮಾತ್ರ ಅಂತಾರಾಷ್ಟ್ರೀಯ ಮನ್ನಣೆ ಸಿಕಿದೆ. ನಮಗೂ ಈ ಮನ್ನಣೆ ಸಿಗಬೇಕಾದರೆ, ಚಿತ್ರೋತ್ಸವ ಆಯೋಜಿಸಬೇಕಿದೆ. ಈಗ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಆ ಮಾನ್ಯತೆ ದೊರೆಯುವ ಸಾಧ್ಯತೆಯೂ ಇದೆ. ಹಾಗೊಂದು ವೇಳೆ ಈ ಮಾನ್ಯತೆ ಏನಾದರೂ ಸಿಕ್ಕರೆ, ವಿಶ್ವದಲ್ಲಿ 46ನೇ ಮಾನ್ಯತೆ ಪಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಎಂಬ ಹೆಗ್ಗಳಿಕೆ ನಮ್ಮದಾಗುತ್ತದೆ. ಹಾಗಾಗಿ 13 ನೇಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ಆಯೋಜನೆಗೆ ಅನುಮತಿ ನೀಡುವುದರ ಜೊತೆಯಲ್ಲಿ ಆ ಚಿತ್ರೋತ್ಸವಕ್ಕೆ ಬೇಕಾಗುವ ಅಗತ್ಯ ಅನುದಾನ ಕಲ್ಪಿಸಿಕೊಡಬೇಕು ಎಂದು ನಿಯೋಗ ಮನವಿ ಮಾಡಿದೆ.


ಭಾರತದಲ್ಲಿ ಕೇವಲ ನಾಲ್ಕು ಸ್ಥಳಗಳಲ್ಲಿ ಮಾತ್ರ ಚಿತ್ರೋತ್ಸವ ನಡೆಯಲಿದೆ. ಗೋವಾದಲ್ಲಿ ಭಾರತ ಸರ್ಕಾರ ಚಲನಚಿತ್ರೋತ್ಸವವನ್ನು ಆಯೋಜಿಸಿದರೆ, ಪಶ್ಚಿಮ ಬಂಗಾಳ, ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ಆಯಾ ಸರ್ಕಾರಗಳು ಚಿತ್ರೋತ್ಸವಗಳನ್ನು ಆಯೋಜಿಸುತ್ತಿವೆ ಎಂಬ ವಿಷಯವನ್ನು ಈ ವೇಳೆ ಸಿಎಂ ಬಳಿ ಚರ್ಚಿಸಲಾಗಿದೆ.
ಅಂದಹಾಗೆ, ಈ ನಿಯೋಗದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಜ್, ಎನ್. ವಿದ್ಯಾಶಂಕರ್, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷೆ, ನಟಿ ಶ್ರುತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಡಾ.ಪಿ.ಎಸ್.ಹರ್ಷ, ಅಕಾಡೆಮಿ ರಿಜಿಸ್ಟ್ರಾರ್ ಜಿ.ಹಿಮಂತರಾಜು ಇದ್ದರು. ಅವರು ಈ ನಿಯೋಗದಲ್ಲಿದ್ದರು.

Categories
ಸಿನಿ ಸುದ್ದಿ

ಕನ್ನಡಕ್ಕೆ ಮತ್ತೊಂದು ಓಟಿಟಿ – ಹೊಸ ವೇದಿಕೆಗೆ ಶಿವರಾಜಕುಮಾರ್‌ ಚಾಲನೆ

ಸಿನಿಮಾ ನೋಡಿ ಎಂಜಾಯ್‌ ಮಾಡಿ

ಈಗಂತೂ ಎಲ್ಲವೂ ಡಿಜಿಟಲ್‌ಮಯ. ಇದು ಚಿತ್ರರಂಗಕ್ಕೂ ಅನ್ವಯ. ಹಾಗಂತ, ಈ ಡಿಜಿಟಲ್‌ ಸ್ಪರ್ಶ ಕನ್ನಡ ಚಿತ್ರರಂಗಕ್ಕೆ ಹೊಸದಲ್ಲ. ಕಾಲ ಬದಲಾದಂತೆ ನೋಡುಗನ ನೋಟವೂ ಬದಲಾಗುತ್ತಾ ಹೋಗುತ್ತಿದೆ. ವಿಶೇಷವೆಂದರೆ, ಈಗಾಗಲೇ ಅಮೆಜಾನ್‌, ನೆಟ್‌ಫ್ಲಿಕ್ಸ್‌ ಸೇರಿದಂತೆ ಅನೇಕ ಓಟಿಟಿ ಫ್ಲಾಟ್‌ಫಾರಂ ಇದೆ. ಆ ಮೂಲಕ ಒಂದಷ್ಟು ಚಿತ್ರಗಳನ್ನು ಬಿಡುಗಡೆ ಮಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸಲು ಮುಂದಾಗಿದ್ದಾರೆ. ಈಗ ಕನ್ನಡದವರೇ ಅಂಥದ್ದೊಂದು ಹೊಸ ವೇದಿಕೆ ಕಲ್ಪಿಸುವ ಮೂಲಕ ಕನ್ನಡ ನಿರ್ಮಾಪಕರ ನೋವು ಆಲಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ಹೌದು, ಕೊರೊನಾ ಹಾವಳಿಯಿಂದ ಚಿತ್ರರಂಗವಂತೂ ಸಂಪೂರ್ಣ ಸೊರಗಿದ್ದು ಎಲ್ಲರಿಗೂ ಗೊತ್ತೇ ಇದೆ. ಚಿತ್ರರಂಗ ಮೆಲ್ಲನೆ ಚೇತರಿಸಿಕೊಳ್ಳುತ್ತಿದೆ. ಚಿತ್ರಮಂದಿರಗಳು ಬಾಗಿಲು ತೆರೆದರೂ, ಜನರು ಮಾತ್ರ ಚಿತ್ರಮಂದಿರದತ್ತೆ ಮುಖ ಮಾಡೋಕೆ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ, ನಿರ್ಮಾಪಕರು ಒಂದಷ್ಟು ಗೊಂದಲದಲ್ಲಿರುವುದಂತೂ ನಿಜ. ಹಾಗಂತ, ಸಿನಿಮಾ ಮಾಡುವ ಉತ್ಸಾಹ ಕುಂದಿಲ್ಲ. ಜನರೂ ಕೂಡ ಹೊಸತನದ ಸಿನಿಮಾ ಬಂದರೆ, ಖಂಡಿತ ನೋಡುತ್ತಾರೆ ಎಂಬ ಭರವಸೆ ನಿರ್ಮಾಪಕರಿಗಿದೆ. ಅದು ಚಿತ್ರಮಂದಿರವೇ ಇರಲಿ, ಓಟಿಟಿ ಫ್ಲಾಟ್‌ಫಾರಂ ಇರಲಿ, ಅಲ್ಲಿ ಜನ ತಮ್ಮ ಇಷ್ಟದ ಸಿನಿಮಾವನ್ನು ಹುಡುಕಿ ನೋಡುತ್ತಾರೆ.

ಅದೇ ನಂಬಿಕೆಯಲ್ಲೇ ಈಗ ಕನ್ನಡಿಗರೇ ಸೇರಿಕೊಂಡು “ಸಿನಿಮಾ ನೋಡಿ ಡಾಟ್ ಇನ್” ಹೆಸರಿನೊಂದಿಗೆ ಒಂದೊಳ್ಳೆಯ ಉತ್ಸಾಹಿ ಯುವಕರ ತಂಡವನ್ನು ಕಟ್ಟಿಕೊಂಡಿದ್ದಾರೆ. ಈ ತಂಡದಲ್ಲಿ ಡೆವಲಪರ್ ಮತ್ತು ಸಿನಿಪ್ರಿಯರು ಸೇರಿಕೊಂಡಿರುವುದ ವಿಶೇಷ. ಅವರ ಈ “ಸಿನಿಮಾ ನೋಡಿ ಡಾಟ್‌ ಇನ್”‌ ಫ್ಲಾಟ್‌ ಫಾರಂ ಇತರೆ ಓಟಿಟಿ ಫ್ಲಾಟ್‌ಫಾರಂಗಿಂತಲೂ ಭಿನ್ನ ಎಂಬುದು ಅವರ ಹೇಳಿಕೆ.
ಅವರ ಈ ಹೊಸ ವೇದಿಕೆಯಲ್ಲಿ ಆಧುನಿಕ ತಾಂತ್ರಿಕತೆಯ ಸ್ಪರ್ಶವಿದೆ. ಇಲ್ಲಿ ವೀಕ್ಷಕರು ಚಂದಾದಾರರಾಗಬೇಕಿಲ್ಲ. ಜಾಹಿರಾತು ಕೂಡ ಮುಕ್ತವಾಗಿದೆ. ವೀಕ್ಷಕರು ಇಷ್ಟದ ಸಿನಿಮಾ ನೋಡುವ ವೇದಿಕೆ ಇದಾಗಿರಲಿದೆ. ಆಧುನಿಕ ತಂತ್ರಜ್ಞಾನದ ಸವಲತ್ತುಗಳೊಂದಿಗೆ ವೇದಿಕೆ ರೂಪುಗೊಂಡಿದೆ. ವೆಬ್, ಪ್ಲೇ ಸ್ಟೋರ್, ಆಪ್‌ಸ್ಟೋರ್, ಫೈರ್‌ಟಿವಿ ಮತ್ತು ರೋಕು ಈ ಐದು ವೇದಿಕೆಗಳಲ್ಲಿ ಚಿತ್ರವನ್ನು ವೀಕ್ಷಿಸಬಹುದಾಗಿದೆ. ಸದ್ಯಕ್ಕೆ “cinemanod.in” ಲಭ್ಯವಿದ್ದು ಮುಂದಿನ ಒಂದು ವಾರದಲ್ಲಿ ಆಪ್ ಪ್ಲೇಸ್ಟೋರ್ ಆಪ್ ಸ್ಟೋರ್ ಫೈರ್ ಟಿವಿ ಮತ್ತು ರೋಕುನಲ್ಲೂ ಲಭ್ಯವಾಗಲಿದೆ.


ಕೇಂದ್ರ ಸೆನ್ಸಾರ್ ಬೋರ್ಡ್‌ನ ನಿವೃತ್ತ ಅಧಿಕಾರಿ ನಾಗೇಂದ್ರ ಸ್ವಾಮಿ, ಶಾಂತಾಕುಮಾರಿ ಹಾಗೂ ಇತರರ ಸಾರಥ್ಯದಲ್ಲಿ ಈ ಫ್ಲಾಟ್‌ ಫಾರಂ ಸಿದ್ಧಗೊಂಡಿದೆ. ಈಗಾಗಲೇ ಹಳೆಯ ಮತ್ತು ಹೊಸ ನೂರು ಚಿತ್ರಗಳು, ೨೦೦ ಹಾಡುಗಳು ಸ್ಟೋರ್ ವೇದಿಕೆಯಲ್ಲಿದೆ. ನಿರ್ಮಾಪಕರು ಹಾಗೂ ಕಂಟೆಂಟ್ ಮಾಲೀಕರು ತಮ್ಮ ಚಿತ್ರಗಳ ಕುರಿತಂತೆ ಸಂಪರ್ಕಿಸಿದಲ್ಲಿ, ಅವರಿಗೆ ಆರ್ಥಿಕವಾಗಿ ನೆರವಾಗುವುದರ ಜೊತೆಗೆ ವೀಕ್ಷಕರಿಗೆ ಹೊರೆಯಾಗದ ದರದಲ್ಲಿ ಸಿನಿಮಾ ನೋಡುವ ಅವಕಾಶ ಕಲ್ಪಿಸುವ ಭರವಸೆಯನ್ನು ತಂಡ ನೀಡುತ್ತಿದೆ. ದರವು ಕನಿಷ್ಟ ರೂ.30 ರಿಂದ 100ರವರೆಗೆ ಇರಲಿದೆ.
ಅಂದಹಾಗೆ, ಈ ಹೊಸ ಡಿಜಿಟಲ್‌ ಫ್ಲಾಟ್‌ಫಾರಂಗೆ ನಟ ಶಿವರಾಜ್‌ಕುಮಾರ್ ಚಾಲನೆ ನೀಡಿದ್ದಾರೆ. ಕಲರ್‌ ನಲ್ಲಿ ಮೂಡಿ ಬಂದಿರುವ “ಕಸ್ತೂರಿ ನಿವಾಸ” ಚಿತ್ರವನ್ನು ಬಿಡುಗಡೆ ಮಾಡುವುದರ ಮೂಲಕ ಹೊಸ ವೇದಿಕೆಗೆ ಚಾಲನೆ ನೀಡಿದ್ದಾರೆ. “ಕನ್ನಡದವರೇ ಸೇರಿಕೊಂಡು ಮಾಡಿರುವ ಈ ಡಿಜಿಟಲ್‌ ಹೊಸ ಪ್ಲಾಟ್‌ಫಾರ್ಮ್, ಇತರೆ ವೇದಿಕೆಗಳಿಗಿಂತಲೂ ಭಿನ್ನ ಎನಿಸಿದೆ ಎಂಬುದು ಗೊತ್ತಾಗಿದೆ. ಈ ಮೂಲಕವಾದರೂ ಕನ್ನಡ ಚಿತ್ರರಂಗ ಇನ್ನಷ್ಟು ಬೆಳೆಯಲಿ. ನಮ್ಮ ಕನ್ನಡ ನಿರ್ಮಾಪಕರುಗಳಿಗೆ ಹೆಚ್ಚು ಅನುಕೂಲವಾಗಲಿ ಎಂದು ಶುಭ ಹಾರೈಸಿದ್ದಾರೆ.

Categories
ಸಿನಿ ಸುದ್ದಿ

ಶಂಭೋ ಶಿವ ಶಂಕರ ಜೊತೆ ಶಶಿಕುಮಾರ್‌ – ಖಡಕ್‌ ಪೊಲೀಸ್‌ ಲುಕ್‌ನಲ್ಲಿ ಸುಪ್ರೀಂ ಹೀರೋ

ಹೊಸಬರ ಜೊತೆ ಎವರ್‌ಗ್ರೀನ್‌ ಸ್ಟಾರ್‌

ಸುಪ್ರೀಂ ಹೀರೋ ಶಶಿಕುಮಾರ್‌, ಕನ್ನಡ ಚಿತ್ರರಂಗ ಕಂಡ ಸ್ಪುರದ್ರೂಪಿ ನಟ. ತೊಂಬತ್ತರ ದಶಕದಲ್ಲಿ ಶಶಿಕುಮಾರ್‌ ಅವರ ಡೇಟ್‌ ಸುಲಭವಾಗಿ ಸಿಗುತ್ತಿರಲಿಲ್ಲ. ಸಾಕಷ್ಟು ಸಿನಿಮಾಗಳಲ್ಲಿ ನಟಿಸುವ ಮೂಲಕ ಕನ್ನಡಿಗರ ಮನ ಗೆದ್ದಿರುವ ಶಶಿಕುಮಾರ್‌, ಹಲವು ಹೊಸಬರ ಚಿತ್ರಗಳಲ್ಲಿ ಅತಿಥಿ ನಟರಾಗಿ ಕಾಣಿಸಿಕೊಂಡಿರುವುದುಂಟು. ಕೆಲವೊಮ್ಮೆ ಕಥೆ, ಪಾತ್ರ ಕೇಳಿ ಪ್ರೀತಿಯಿಂದಲೇ ನಟಿಸುವ ಉತ್ಸಾಹ ತೋರಿಸುವ ಅಪರೂಪದ ನಟ ಶಶಿಕುಮಾರ್.‌ ಅಷ್ಟೇ ಅಲ್ಲ, ಗೆಳೆತನಕ್ಕಾಗಿಯೂ ಅವರು ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವುದುಂಟು. ಚಿತ್ರದಲ್ಲಿ ಒಂದೊಳ್ಳೆಯ ವಿಶೇಷ ಪಾತ್ರವಿದೆ ಅಂದಾಕ್ಷಣ, ಬಹುತೇಕ ನಿರ್ದೇಶಕರಿಗೆ ಈ ಶಶಿಕುಮಾರ್‌ ಅವರು ನೆನಪಾಗುತ್ತಾರೆ. ಈಗ ಶಶಿಕುಮಾರ್‌, “ಶಂಭೋ ಶಿವ ಶಂಕರ” ಎಂಬ ಹೊಸಬರ ಚಿತ್ರದಲ್ಲಿ ನಟಿಸಲು ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ.


ಹೌದು, ತುಂಬಾ ದಿನಗಳ ಬಳಿಕ ಶಶಿಕುಮಾರ್‌ ಅವರು “ಶಂಭೋ ಶಿವ ಶಂಕರ” ಚಿತ್ರದಲ್ಲಿ ನಟಿಸಲು ಒಪ್ಪಿದ್ದಾರೆ. ಅಂದಹಾಗೆ, ಶಶಿಕುಮಾರ್‌ ಅವರ ಪಾಲಿಗೆ ಈ ಬಾರಿ ಒಲಿದು ಬಂದಿರುವ ಪಾತ್ರ, ಖಡಕ್‌ ಪೊಲೀಸ್‌ ಅಧಿಕಾರಿ. ಈಗಾಗಲೇ ಹಲವು ಚಿತ್ರಗಳಲ್ಲಿ ಶಶಿಕುಮಾರ್‌, ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿರುವುದುಂಟು. ಈಗ ಮತ್ತೊಮ್ಮೆ ಪೊಲೀಸ್‌ ಅಧಿಕಾರಿಯಾಗಿ ರಾರಾಜಿಸಲಿದ್ದಾರೆ. ಅಂದಹಾಗೆ, ಈ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು, ಡಿಸೆಂಬರ್ 9 ರಿಂದ ಎರಡನೇ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದೆ. ಈ ಹಂತದ ಚಿತ್ರೀಕರಣದಲ್ಲಿ ಶಶಿಕುಮಾರ್ ಸೇರಿದಂತೆ ಇತರೆ ಕಲಾವಿದರು ಕಾಣಿಸಿಕೊಳ್ಳಲಿದ್ದಾರೆ.

ಅಂದಹಾಗೆ, ಅಘನ್ಯ ಪಿಕ್ಚರ್ಸ್ ಬ್ಯಾನರ್ ಮೂಲಕ ವರ್ತೂರ್ ಮಂಜು ಅವರು ಚಿತ್ರವನ್ನು ನಿರ್ಮಿಸುತ್ತಿದ್ದು, ಶಂಕರ್ ಕೋನಮಾನಹಳ್ಳಿ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಕಿರುತೆರೆಯಲ್ಲಿ ಧಾರಾವಾಹಿಗಳನ್ನು ನಿರ್ದೇಶಿಸಿರುವ ಶಂಕರ್ ಕೋನಮಾನಹಳ್ಳಿ ಅವರಿಗೆ ಇದು ಮೊದಲ ಚಿತ್ರ. ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆಯ ಜವಾಬ್ದಾರಿಯನ್ನೂ ಅವರೇ ಒಪ್ಪಿಕೊಂಡಿದ್ದಾರೆ. ಇನ್ನು, ಗೌಸ್ ಪೀರ್‌, ಹಿತನ್ ಹಾಸನ್ ಹಾಡುಗಳನ್ನು ಬರೆದಿದ್ದು, ಹಿತನ್ ಹಾಸನ್ ಸಂಗೀತವಿದೆ. ನಟರಾಜ್ ಮುದ್ದಾಲ ಛಾಯಾಗ್ರಹಣ ಮಾಡಿದರೆ, ಕಲೈ ನೃತ್ಯ ನಿರ್ದೇಶನವಿದೆ. ವೆಂಕಟೇಶ್ ಯುಡಿವಿ ಸಂಕಲನವಿದೆ. ಅಲ್ಟಿಮೆಟ್ ಶಿವು ಅವರ ಸಾಹಸ ನಿರ್ದೇಶನ ಮಾಡಿದ್ದಾರೆ.
ಇನ್ನು, “ಶಂಭೋ ಶಿವ ಶಂಕರ” ಅನ್ನೋದು ಮೂವರು ಹೀರೋಗಳ ಹೆಸರು. ಆ ಒಂದೊಂದು ಹೆಸರಲ್ಲಿ ಅಭಯ್ ಪುನೀತ್, ರೋಹಿತ್ ಮತ್ತು ರಕ್ಷಕ್ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಕನ್ನಡದ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಸೋನಾಲ್ ಮಾಂತೆರೊ ಈ ಚಿತ್ರದ ನಾಯಕಿ.

Categories
ಸಿನಿ ಸುದ್ದಿ

ರವಿಶಂಕರ್ ಈಗ ಡುಬಾಕ್ ಸೈಂಟಿಸ್ಟ್! ಮತ್ತೆ ಕಿರುತೆರೆಗೆ ರಂಜಿಸಲು ಬಂದ ಡಾ. ವಿಠಲ್ ರಾವ್

ಮಜಾ ಟಾಕೀಸ್ ನಲ್ಲಿ ಸೃಜನ್ ಜೊತೆ ಮಸ್ತ್ ಮಜ…

ಕನ್ನಡ ಕಿರುತೆರೆಯಲ್ಲಿ ‘ಸಿಲ್ಲಿ ಲಲ್ಲಿ’ ಧಾರಾವಾಹಿ ಅತ್ಯಂತ ‌ಜನಪ್ರಿಯ. ಇದು ಬಹುತೇಕ ಎಲ್ಲಾ ಕನ್ನಡಿಗರಿಗೂ ಗೊತ್ತು. ಈ ಧಾರಾವಾಹಿ ಮೂಲಕ ರವಿಶಂಕರ್ ಗೌಡ ಪರಿಚಯವಾಗಿದ್ದು ಇತಿಹಾಸ. ಹೌದು, ಡಾ.ವಿಠಲ್ ರಾವ್ ಪಾತ್ರದ ಮೂಲಕ ಕನ್ನಡಿಗರ ಪ್ರೀತಿ ಪಾತ್ರರಾದ ರವಿಶಂಕರ್ ಹದಿಮೂರು ವರ್ಷಗಳ ನಂತರ ಪುನಃ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ.

ಇಷ್ಟು ವರ್ಷಗಳ ಕಾಲ ಸಿನಿಮಾಗಳಲ್ಲಿ ಬಿಝಿಯಾಗಿದ್ದ ರವಿಶಂಕರ್ ಗೌಡ, ತಮ್ಮ ಸಿನಿಮಾಗಳ ಜೊತೆ ಜೊತೆಯಲ್ಲೇ ಅವರು, ಮತ್ತೆ ಕಿರುತೆರೆಗೆ ಕಾಲಿಡುತ್ತಿರುವುದು ಕಿರುತೆರೆ ಪ್ರೇಕ್ಷಕರಿಗೆ ಸಖತ್ ‘ಮಜ’ ಅನ್ನೋದು ಗ್ಯಾರಂಟಿ.

ಹಾಗಂತ ಅವರು ಹೊಸ ಧಾರಾವಾಹಿ ಒಪ್ಪಿಕೊಂಡರಾ ಎಂಬ ಪ್ರಶ್ನೆ ಸಹಜ. ಆದರೆ, ರವಿಶಂಕರ್ ಗೌಡ ಕಾಣಿಸಿಕೊಳ್ಳುತ್ತಿರೋದು, ಜನಪ್ರಿಯ ಶೋ ‘ಮಜಾ ಟಾಕೀಸ್’ ನಲ್ಲಿ. ನಟಿಸುತ್ತಿದ್ದಾರೆ.


ಡಾ.ವಿಠಲ್ ರಾವ್ ಪಾತ್ರದ ಮೂಲಕ ಗಮನ ಸೆಳೆದಿದ್ದ ರವಿಶಂಕರ್ ಗೌಡ, ಸಿಕ್ಕಾಪಟ್ಟೆ ಬಿಝಿ ಆಗಿದ್ದರು. 1020 ಎಪಿಸೋಡ್ ಪ್ರಸಾರಗೊಂಡ ‘ಸಿಲ್ಲಿ ಲಲ್ಲಿ’, ಯಶಸ್ವಿಯಾಗಿದ್ದೇ ತಡ, ರವಿಶಂಕರ್ ಅವರ ಬೇಡಿಕೆ ಹೆಚ್ಚಾಯ್ತು. ಸತತ ನಾಲ್ಕು ವರ್ಷಗಳ ಕಾಲ ಪ್ರಸಾರವಾದ ಬಳಿಕ ರವಿಶಂಕರ್ ಸಿನಿಮಾ ಕಡೆ ಮುಖ ಮಾಡಿದರು.

ಸಾಕಷ್ಟು ಚಿತ್ರಗಳಲ್ಲಿ ನಟಿಸಿದ ರವಿಶಂಕರ್ ಅಲ್ಲೂ ಒಂದಷ್ಟು ಅಭಿಮಾನಿ ವರ್ಗವನ್ನು ಕಟ್ಟಿಕೊಂಡರು.‌ ಸಿನಿಮಾ ರಂಗದಲ್ಲಿ ದೊಡ್ಡ ಗೆಳೆಯರ ಬಳಗವನ್ನೇ ಸಂಪಾದಿಸಿದ ರವಿಶಂಕರ್ ಅವರನ್ನು ಸೃಜನ್ ಲೋಕೇಶ್ ಅವರು ತಮ್ಮ ‘ ಮಜಾ‌ ಟಾಕೀಸ್’ ನಲ್ಲಿ ಪಾಲ್ಗೊಳ್ಳುವಂತೆ ಹೇಳುತ್ತಿದ್ದರಾದರೂ, ರವಿಶಂಕರ್ ಬಿಡುವಿಲ್ಲದಂತೆ ಸಿನಿಮಾಗಳಲ್ಲಿ ನಟಿಸುವ‌ ಮೂಲಕ ಬಿಝಿಯಾಗಿದ್ದರು.

ಆದರೆ, ಈಗ ಸೃಜನ್ ಲೋಕೇಶ್, ಈ ಬಾರಿಯ ‘ ಮಜಾ ಟಾಕೀಸ್’ನಲ್ಲಿ ಭಾಗವಹಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಅಂದಹಾಗೆ, ರವಿಶಂಕರ್ ಮಜಾ ಟಾಕೀಸ್ ನಲ್ಲಿ ಡುಬಾಕ್ ಸೈಂಟಿಸ್ಟ್ ಆಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಈ ಪಾತ್ರ ಕೆಲಸಕ್ಕೆ ಬಾರದ್ದನ್ನು ಕಂಡು ಹಿಡಿದು, ಅಲ್ಲಿ ಬರುವ ಅತಿಥಿಗಳನ್ನು ರಂಜಿಸುವ ಕೆಲಸಕ್ಕಿಳಿಯಲ್ಲಿದ್ದಾರೆ.

ಸದಾ ಮರೆಯುವ ಪಾತ್ರ ಅದಾಗಿರುವುದರಿಂದ ಪ್ರತಿ ವಾರ ಪ್ರೇಕ್ಷಕರಿಗೂ ಅದೊಂದು ನಗೆಯ ಹೂರಣ ಎಂಬುದು ರವಿಶಂಕರ್ ಮಾತು.
ಸದ್ಯ ಸಿನಿಮಾಗಳಲ್ಲೂ ಬಿಝಿ ಇರುವ ರವಿಶಂಕರ್ ಗೌಡ ಗಣೇಶ್ ಅಭಿನಯದ ‘ತ್ರಿಬಲ್ ರೈಡಿಂಗ್’ ಸಿನಿಮಾ ಸೇರಿದಂತೆ ನಾಲ್ಕೈದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಲಾಕ್ ಡೌನ್ ವೇಳೆ ತಮ್ಮ ಫೇಸ್ ಬುಕ್ ಮೂಲಕ ಸಾಕಷ್ಟು ಕನ್ನಡ ಗೀತೆಗಳನ್ನು ಹಾಡುವ ಮೂಲಕ ರಂಜನೆ ಕೊಟ್ಟು ಕನ್ನಡಿಗರ ಮನ ಗೆದ್ದೆದ್ದ ರವಿಶಂಕರ್ ಈಗ ಮತ್ತೆ ಕನ್ನಡಿಗರನ್ನು ನಗಿಸಲು ಬಂದಿದ್ದಾರೆ. ಇವರ ಎಂಟ್ರಿಯಿಂದ ಮಜಾ ಟಾಕೀಸ್ ಮತ್ತಷ್ಟು ರಂಗೇರಲಿದೆ ಎಂಬುದಂತೂ ದಿಟ.

Categories
ಸಿನಿ ಸುದ್ದಿ

ಪಲ್ಲಕ್ಕಿಯ ಮದಕರಿಪುರ ರೆಡಿ – ಡಿಸೆಂಬರ್‌ಗೆ ಕಿಚ್ಚ ಮಾತಾಡುವ ಸಿನಿಮಾ

ಕಾದಂಬರಿ ನಾಟಕ ಆಧಾರಿತ ಚಿತ್ರ

 

ಪಲ್ಲಕ್ಕಿ ರಾಧಾಕೃಷ್ಣ ನಿರ್ದೇಶಿಸಿ, ನಿರ್ಮಿಸಿರುವ “ಮದಕರಿಪುರ” ಸಿನಿಮಾ ಬಗ್ಗೆ ಎಲ್ಲರಿಗೂ ಗೊತ್ತಿದೆ. ಈಗ ಈ ಸಿನಿಮಾಗೆ ಸೆನ್ಸಾರ್‌ ಮಂಡಳಿ ವೀಕ್ಷಿಸಿ, “ಯು/ಎ” ಪ್ರಮಾಣ ಪತ್ರ ನೀಡಿದೆ. ತಾತಾ ಪ್ರೊಡಕ್ಷನ್ಸ್‌ನಲ್ಲಿ ಪಲ್ಲಕ್ಕಿ ನಿರ್ಮಿಸಿರುವ ನಾಲ್ಕನೇ ಸಿನಿಮಾ ಇದು. ಅಂದಹಾಗೆ, ಈ ಸಿನಿಮಾದ ಶೀರ್ಷಿಕೆಗೆ “ಕಿಚ್ಚ ಮಾತಾಡ್ತಾನೆ” ಎಂಬ ಅಡಿಬರಹವಿದೆ.

ಸದ್ಯ ಚಿತ್ರ ತೆರೆಗೆ ಅಪ್ಪಳಿಸಲು ಸಜ್ಜಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಡಿಸೆಂಬರ್‌ನಲ್ಲಿ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಜೊತೆಗೆ ಹಾಡುಗಳನ್ನೂ ಬರೆದು ನಿರ್ದೇಶಿಸಿರುವ ಪಲ್ಲಕ್ಕಿ, “ಗಿಡ್ಡೋಬಾ ಮಾತಾಡ್ತಾನೆ” ಕಾದಂಬರಿ ನಾಟಕ ಆಧರಿಸಿ ಚಿತ್ರ ಮಾಡಿದ್ದಾರೆ. ಇದು ವಾಲ್ಮೀಕಿ ರಾಮಾಯಣದ ಎಳೆಯೊಂದನ್ನು ಆಧರಿಸಿ, ಕಾಮಿಡಿ, ಮರ್ಡರ್‌ ಮಿಸ್ಟ್ರಿ ಜೊತೆ ಒಂದಷ್ಟು ನೈಜ ಘಟನೆಗಳನ್ನು ಆಧರಿಸಿದ ʼಗಿಡ್ಡೋಬಾ ಮಾತಾಡ್ತಾನೆ” ಕಾದಂಬರಿ ನಾಟಕ ಚಿತ್ರಕ್ಕೆ ರಾಜಾಶಿವಶಂಕರ್‌ ಅವರು ಛಾಯಾಗ್ರಹಣ ಮಾಡಿದರೆ, ಸ್ಯಾಮ್‌ ಸಂಗೀತವಿದೆ. ಗೌತಮ್‌ ಪಲ್ಲಕ್ಕಿ ಸಂಕಲನ ಮಾಡಿದ್ದಾರೆ.

ಡಿಫರೆಂಟ್‌ ಡ್ಯಾನಿ ಸಾಹಸವಿದೆ. ತ್ರಿಭುವನ್‌ ಅವರ ನೃತ್ಯ ನಿರ್ದೇಶನವಿದೆ. ಬಹುತೇಕ ಬೆಂಗಳೂರು, ಹಿರಿಯೂರು, ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ನಂದಿಗ್ರಾಮ, ಕೈವಾರ ಸ್ಟುಡಿಯೋದಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರದಲ್ಲಿ ಡಾ.ರಾಧಾಕೃಷ್ಣ ಪಲ್ಲಕ್ಕಿ, ಪ್ರಕಾಶ್‌ ಅರಸ್‌, ಎಂ.ಕೆ.ಮಠ, ಶ್ರೀನಿವಾಸ ಗುರೂಜಿ, ನೈರುತ್ಯ, ಸೀನೂ ಮಾರ್ಕಾಳಿ, ವಿನಯ್‌ ಬಲರಾಮ್‌, ಅರ್ಗವಿ ರಾಯ್‌, ರೆಡ್ಡಿ ಹಿರಿಯೂರ್‌, ಸವಿತಾ ಚಿನ್ಮಯಿ, ವೆಂಕಟಾಚಲ ಸೇರಿದಂತೆ ಪಲ್ಲಕ್ಕಿ ಫಿಲಂ ಇನ್ಸ್‌ಟಿಟ್ಯೂಟ್‌ ವಿದ್ಯಾರ್ಥಿಗಳು ನಟಿಸಿದ್ದಾರೆ.

 

Categories
ಸಿನಿ ಸುದ್ದಿ

ಮತ್ತೊಂದು ಮೂಕಿ ಚಿತ್ರ ಪುಷ್ಕಕ್‌ ತೆರೆಗೆ ಬರಲು ಸಜ್ಜು

ಡಿಸೆಂಬರ್‌ 4 ರಂದು ಓಟಿಟಿಯಲ್ಲಿ ಬಿಡುಗಡೆ

ಹಲವು ದಶಕಗಳ ಹಿಂದೆ “ಪುಷ್ಪಕ ವಿಮಾನ” ಎಂಬ ಮೂಕಿ ಚಿತ್ರ ಬಂದಿದ್ದು ಬಹುತೇಕರಿಗೆ ಗೊತ್ತೇ ಇದೆ. ಆ ನಂತರವೂ ಕನ್ನಡದಲ್ಲಿ ಮೂಕಿ ಚಿತ್ರಗಳು ಬಂದಿವೆ. ಈಗ ಆ ಸಾಲಿಗೆ “ಪುಷ್ಪಕ್”‌ ಎಂಬ ಮತ್ತೊಂದು ಮೂಕಿ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಹೌದು, “ಪುಷ್ಪಕ್” ಸಿನಿಮಾವನ್ನು ಓಂ ಪ್ರಕಾಶ್‌ ನಾಯಕ್‌ ನಿರ್ದೇಶಿಸಿದ್ದಾರೆ. ಇಲ್ಲಿ ಬರೀ ಹಾವ-ಭಾವಗಳಲ್ಲೇ ಅರ್ಥವಾಗುವಂತಹ ದೃಶ್ಯಗಳನ್ನ ಸೆರೆಹಿಡಿದಿದ್ದಾರೆ ನಿರ್ದೇಶಕರು. ಕಥೆಯ ಬಗ್ಗೆ ಹೇಳುವುದಾದರೆ, ಚಿತ್ರದ ಹೀರೋ ಒಬ್ಬ ಫೋಟೋಗ್ರಾಫರ್, ಬೇರೆ ಊರಿನಿಂದ ಬಂದ ಒಬ್ಬ ಶ್ರೀಮಂತ ಯುವತಿಯನ್ನು ನೋಡಿದ ಮರುಕ್ಷಣ ತನ್ನ ಮನದಲ್ಲೇ ಪ್ರೀತಿಸಲು ತೊಡಗುತ್ತಾನೆ. ಆದರೆ ತನ್ನ ಪ್ರೀತಿಯನ್ನು ಅವಳಿಗೆ ಹೇಳಿಕೊಳ್ಳಲು ಹಿಂಜರಿದು, ತನಗೆ ಚಹಾ ಕೊಡಲು ಬರುವ ಹೋಟೆಲ್ ಹುಡುಗನ ಕೈಲಿ ಲವ್‍ಲೆಟರ್ ಬರೆದು ಕೊಟ್ಟು ಕಳುಹಿಸುತ್ತಾನೆ. ಹೋಟೆಲ್ ಹುಡುಗ ಅವರ ಪ್ರೀತಿಗೆ ರಾಯಭಾರಿಯಾಗುತ್ತಾನೆ. ಹಾಗೆಯೇ ಅವನೂ ಸಹ ನಾಯಕಿಯನ್ನು ಪ್ರೀತಿಸಲು ಮುಂದಾಗುತ್ತಾನೆ. ನಂತರ ದಿನಗಳಲ್ಲಿ ದಾರಿಗೆ ನಾಯಕ ಅಡ್ಡಿಯಾದಂತೆ ಭಾವಿಸಿ ನಾಯಕನನ್ನೇ ಕೊಲ್ಲಲು ಆತ ಸಂಚು ಹೂಡುತ್ತಾನೆ. ಮುಂದೇನಾಗುತ್ತೆ ಎಂಬುದನ್ನು ಸಿನಿಮಾದಲ್ಲೇ ನೋಡಬೇಕು ಎಂಬುದು ಚಿತ್ರತಂಡದ ಹೇಳಿಕೆ.


ಇನ್ನು, ಈ ಚಿತ್ರ ಮಹದೇಶ್ವರ ಎಂಟರ್‌ಪ್ರೈಸಸ್‌ ಬ್ಯಾನರಡಿಯಲ್ಲಿ ನಿರ್ಮಾಣವಾಗಿದೆ. ಓಂಪ್ರಕಾಶ್‌ನಾಯಕ್ ಕಥೆ, ಚಿತ್ರಕಥೆ‌ ಬರೆದು, ನಿರ್ಮಿಸಿದ್ದಾರೆ. ಅಷ್ಟೇ ಅಲ್ಲ, ನಾಯಕನಾಗಿಯೂ ನಟಿಸಿದ್ದಾರೆ. ವಿಶ್ವನಾಥ್ ಅವರ ಛಾಯಾಗ್ರಹಣವಿದೆ. ಶಂಕರ್ ಹಾಗೂ ರಾವಣ ಅವರ ಸಹ ನಿರ್ದೇಶನವಿದೆ. ಕುಮಾರ್ ಸಂಕಲನ ಮಾಡಿದ್ದಾರೆ. ಚಿತ್ರದಲ್ಲಿ ಕೃತಿಕಾ, ಚಂದ್ರು, ಅವಿನಾಶ್ ಭಾರಧ್ವಜ್‌, ನಾಗೇಂದ್ರರಾವ್ ಆರ್.ಎಂ, ಸವಿತಾ ಇತರರು ನಟಿಸಿದ್ದಾರೆ. ಡಿಸೆಂಬರ್‌ 4 ರಂದು ಓಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ.

Categories
ಸಿನಿ ಸುದ್ದಿ

ಹೊಂಬಾಳೆ ಫಿಲಂಸ್‌ ಮತ್ತೊಂದು ದೊಡ್ಡ ಹೆಜ್ಜೆ- ಏಕಕಾಲದಲ್ಲಿ ಹಲವು ಭಾಷೆಯ ಸಿನಿಮಾ ಮಾಡಲು ರೆಡಿ

ಡಿ. 2 ರಂದು ಹೊರಬೀಳಲಿದೆ ಬಹುದೊಡ್ಡ ಘೋಷಣೆ

ಏಳು ವರ್ಷ… ಏಳು ಸಿನಿಮಾ.. ಸೋಲಿಗಿಂತ ದೊಡ್ಡ ಗೆಲುವಿನ ಪಾಲೇ ಹೆಚ್ಚು..!
-ಇದು ಹೊಂಬಾಳೆ ಫಿಲಂಸ್‌ ನಿರ್ಮಾಣದ ಚಿತ್ರಗಳ ಸುದ್ದಿ. ಹೌದು, ಹೊಂಬಾಳೇ ಫಿಲಂಸ್‌ ಕಳೆದ ಏಳು ವರ್ಷಗಳಲ್ಲಿ ಏಳು ಚಿತ್ರಗಳನ್ನು ನಿರ್ಮಾಣ ಮಾಡಿದೆ. ಈ ಪೈಕಿ ಮೂರು ಚಿತ್ರಗಳು ಪ್ಯಾನ್‌ ಇಂಡಿಯಾ ಸಿನಿಮಾಗಳು ಅನ್ನುವುದು ಖುಷಿ. ನಿರ್ಮಾಪಕ ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲಂಸ್​ ಇದೀಗ ಹೊಸ ಸಾಹಸಕ್ಕೆ ಹೆಜ್ಜೆ ಇಡುತ್ತಿದೆ. ಆ ಸಾಹಸವೂ ಸಿನಿಮಾ ನಿರ್ಮಾಣದ್ದೇ ಅನ್ನುವುದು ವಿಶೇಷ. ಹೌದು, ಈ ವರ್ಷಗಳ ಅವಧಿಯಲ್ಲಿ ಭಾರತ ಮಾತ್ರವಲ್ಲ, ವಿದೇಶಗಳೂ ಇತ್ತ ಒಮ್ಮೆ ತಿರುಗಿ ನೋಡುವಂತಹ ಸಿನಿಮಾಗಳನ್ನು ಕಟ್ಟುಕೊಟ್ಟಿರುವುದು ಈ ಸಂಸ್ಥೆಯ ಹೆಮ್ಮೆ. ಈಗ ಏಕಕಾಲದಲ್ಲಿ ಹಲವಾರು ಭಾಷೆಗಳಲ್ಲಿ ಸಿನಿಮಾವೊಂದನ್ನು ನಿರ್ಮಾಣ ಮಾಡಲು ಸಂಸ್ಥೆ ಮುಂದಾಗಿದೆ. ಡಿಸೆಂಬರ್​ 2ರ ಮಧ್ಯಾಹ್ನ ಹೊಸ ಚಿತ್ರದ ಬಗ್ಗೆ ಹೊಂಬಾಳೆ ಸಂಸ್ಥೆ ಮಾಹಿತಿ ಹಂಚಿಕೊಳ್ಳಲಿದೆ.

ವಿಜಯ್‌ ಕಿರಗಂದೂರು, ನಿರ್ಮಾಪಕ

ಕಳೆದ 2014ರಲ್ಲಿ “ನಿನ್ನಿಂದಲೇ” ಚಿತ್ರದ ಮೂಲಕ ಸಿನಿಮಾರಂಗ ಪ್ರವೇಶಿಸಿದ ವಿಜಯ್‌ ಕಿರಗಂದೂರು ಅವರ ಹೊಂಬಾಳೆ ಫಿಲಂಸ್​ನ ನಿರ್ಮಾಣದ ಪಯಣ ಇಲ್ಲಿಯವರೆಗೆ ಯಶಸ್ಸಿನ ಮೆಟ್ಟಿಲ್ಲನ್ನು ಹತ್ತಿಕೊಂಡೇ ಬಂದಿದೆ. “ಮಾಸ್ಟರ್ ಪೀಸ್”​,” ರಾಜಕುಮಾರ”, “ಕೆಜಿಎಫ್”, “ಕೆಜಿಎಫ್​ 2”, “ಯುವರತ್ನ” ಚಿತ್ರದವರೆಗೂ ಹೊಂಬಾಳೆ ತನ್ನ ಅದ್ಧೂರಿ ನಿರ್ಮಾಣ ಚಿತ್ರಗಳನ್ನು ನೀಡುತ್ತ ಬಂದಿದೆ. ಏಳು ವರ್ಷಗಳಲ್ಲಿ ಏಳು ಸಿನಿಮಾ ನೀಡುವ ಮೂಲಕ ಕನ್ನಡಿಗರ ಪ್ರೀತಿಗೆ ಪಾತ್ರವಾಗಿದೆ. ಈ ಏಳು ಸಿನಿಮಾಗಳ ಪೈಕಿ ಮೂರು ಪ್ಯಾನ್​ ಇಂಡಿಯಾ ಚಿತ್ರಗಳು. ಈಗ ಈ ಎಲ್ಲಾ ಸಿನಿಮಾಗಳಿಗಿಂತಲೂ ಮತ್ತೊಂದು ದೊಡ್ಡ ಸಿನಿಮಾ ಘೋಷಣೆ ಮಾಡಲು ಹೊಂಬಾಳೆ ಸಂಸ್ಥೆ ರೆಡಿಯಾಗಿದೆ.

ಏಕಕಾಲದಲ್ಲಿ ಹಲವಾರು ಭಾಷೆಗಳಲ್ಲಿ ಇಂಡಿಯನ್ ಚಿತ್ರ ನಿರ್ಮಿಸುವ ಗುರಿ ಹೊಂದಿರುವ ಸಂಸ್ಥೆ, ಡಿ.೨ರಂದು ಆ ಕುರಿತಂತೆ ಅಧಿಕೃತ ಮಾಹಿತಿ ಹೊರಹಾಕಲಿದೆ. ಆ ಚಿತ್ರ ಯಾವುದು, ನಿರ್ದೇಶಕರು ಯಾರು, ಯಾರೆಲ್ಲಾ ಆ ಚಿತ್ರದಲ್ಲಿರುತ್ತಾರೆ ಎಂಬಿತ್ಯಾದಿ ಕುರಿತು ವಿಷಯ ಹೊರಬೀಳಲಿದೆ.
ಈಗಾಗಲೇ ಪ್ಯಾನ್​ ಇಂಡಿಯಾ ಕಾನ್ಸೆಪ್ಟ್ ಬಗ್ಗೆ ಎಲ್ಲೆಡೆ ಮಾತುಗಳು ಕೇಳಿಬರುತ್ತಿದ್ದು, ಅದೊಂದು ಉತ್ತಮ ಬೆಳೆವಣಿಗೆ ಎನ್ನಲಾಗುತ್ತಿದೆ. ಕನ್ನಡದ “ಕೆಜಿಎಫ್”​ ಸಿನಿಮಾ ಈಗಾಗಲೇ ದೊಡ್ಡ ಮೈಲಿಗಲ್ಲನ್ನು ಸೃಷ್ಟಿಸಿರುವುದು ಗೊತ್ತೇ ಇದೆ. ಅದರ ಹತ್ತು ಪಟ್ಟು ನಿರೀಕ್ಷೆ “ಕೆಜಿಎಫ್​ ಚಾಪ್ಟರ್ 2” ಮೇಲೂ ಇದೆ. ಹಾಗೆಯೇ ಪುನೀತ್ ರಾಜ್​ಕುಮಾರ್ ಅವರ “ಯುವರತ್ನ” ಚಿತ್ರವೂ ಕನ್ನಡದ ಜತೆಗೆ ತೆಲುಗಿನಲ್ಲೂ ಬಿಡುಗಡೆ ಆಗುತ್ತಿದೆ. ಹೀಗೆ ಈ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಹೊಂಬಾಳೆ ಸಂಸ್ಥೆಯೇ ಇದೀಗ ಇಡೀ ಭಾರತದಲ್ಲೇ ಮೊದಲ ಸಲ ಯಾರೂ ಮಾಡದಂತಹ ಹೊಸ ಸಾಹಸಕ್ಕೆ ಕೈ ಹಾಕಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿಗೆ ಡಿಸೆಂಬರ್‌ 2 ರವರೆಗೆ ಕಾಯಬೇಕು.

error: Content is protected !!