ಫಸ್ಟ್ ಲುಕ್ ಲಾಂಚ್ ದಿನವೇ ಸೋಷಲ್ ಮೀಡಿಯಾ ಟ್ರೆಂಡಿಂಗ್ನಲ್ಲಿ ಸದ್ದು ಮಾಡಿತು ವಿಕ್ಕಿ ವರುಣ್ ಸಿನಿಮಾದ ಫಸ್ಟ್ ಲುಕ್
ಯುವ ನಟ ವಿಕ್ಕಿ ವರುಣ್ ಅಭಿನಯದ ʼಕಲಾಪತ್ಥರ್ʼ ಟೈಟಲ್ ಕಾಂಟ್ರೋವರ್ಸಿ ಆಗಿದೆ. ಟೈಟಲ್ ಪೋಸ್ಟರ್ ಲಾಂಚ್ ಅದ ದಿನವೇ ಅದರ ಟೈಟಲ್ ಗೆ ಬೆಂಗಳೂರಿನ ಮಾಜಿ ರೌಡಿಯೊಬ್ಬರು ಆಕ್ಷೇಪಣೆ ಎತ್ತಿದ್ದಾರೆನ್ನುವ ಸುದ್ದಿ ಇದೆ. ಸದ್ಯಕ್ಕೆ ಇದಿನ್ನು ಕನ್ಫರ್ಮ್ ಆಗಿಲ್ಲ. ಆದರೆ ಹಾಗೊಂದು ಸುದ್ದಿ ಗಾಂಧಿನಗರದಲ್ಲಿ ಹರಿದಾಡಿದೆ. ಟೈಟಲ್ಗೆ ಆಕ್ಷೇಪ ಎತ್ತಿ ಮಾಜಿ ರೌಡಿಯೊಬ್ಬರು ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರಂತೆ. ತಮ್ಮದೇ ಬಯೋಗ್ರಪಿ ಎತ್ತಿಕೊಂಡು ಕೆಲವರು ಸಿನಿಮಾ ಮಾಡುತ್ತಿದ್ದಾರೆ. ಇದಕ್ಕೆ ಅವಕಾಶ ಕೊಡಬಾರದು ಎಂಬುದಾಗಿ ಆತ ದೂರು ಸಲ್ಲಿಸಿದ್ದಾನಂತೆ ಎಂಬುದಾಗಿ ಸುದ್ದಿ ಇತ್ತು. ಆದರೆ ಇದು ಎಷ್ಟು ಸತ್ಯ ಅಂತ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯನ್ನು ಸಂಪರ್ಕಿಸಿದಾಗ ಅಂತಹ ಯಾವುದೇ ದೂರು ತಮಗೆ ಬಂದಿಲ್ಲ ಎಂಬುದು ಸ್ಪಷ್ಟನೆ ಬಂತು.
ಕೊನೆಗೆ ಆತ ಸೋಷಲ್ ಮೀಡಿಯಾದಲ್ಲಾದರೂ ಅಂತಹ ಆಕ್ಷೇಪಣೆ ಎತ್ತಿದ್ನ ಅಂತಲೂ ಹುಡುಕಾಡಿದರೆ, ಅಲ್ಲೂ ಆತನ ಆಕ್ಷೇಪಣೆಯ ಸುಳಿವು ಕಾಣಲಿಲ್ಲ. ಅಂತಿಮವಾಗಿ ಕಾಡಿದ್ದು, ಈ ವಿವಾದದ ಶುರುವಾಗಿದ್ದು ಎಲ್ಲಿಂದ ಅಂತ ? ಅದು ಚಿತ್ರ ತಂಡಕ್ಕೂ ಗೊತ್ತಿರಲಿಲ್ಲ. ಅದೇನೆ ಇರಲಿ, ವಿಕ್ಕಿ ವರುಣ್ ಅಭಿನಯದ “ಕಾಲಾ ಪತ್ಥರ್ʼ ಚಿತ್ರಆರಂಭದಲ್ಲೇ ಸುದ್ದಿ ಮಾಡಿದೆ. ಆನ್ ಲೈನ್ ಟ್ರೆಂಡಿಂಗ್ ನಲ್ಲಿ ಫಸ್ಟ್ ಡೇ ಸಖತ್ ಟ್ರೆಂಡಿಂಗ್ ನಲ್ಲಿತ್ತು. ಒಂದಷ್ಟು ಗ್ಯಾಪ್ ನಂತರ ಮತ್ತೆ ಎಂಟ್ರಿ ಆಗುತ್ತಿರುವ ವಿಕ್ಕಿಯ ಕಮರ್ಷಿಯಲ್ ಲುಕ್ ವರ್ಕ್ ಆಗುತ್ತೆ ಎನ್ನುವುದರ ಸೂಚನೆಯಂತೂ ಆರಂಭದಲ್ಲೇ ಸಿಕ್ಕಿದೆ.
ಕೆಜಿಎಫ್ 2 ಟೀಸರ್ ವಿಮರ್ಶೆ ವಿಡಿಯೋ ಡೀಲಿಟ್ ಮಾಡಿದ ಧ್ರುವ್ ರಾಠಿ ಕೊನೆಗೆ ಹೇಳಿದ್ದೇನು ಗೊತ್ತಾ?
ಕನ್ನಡದ ಸ್ಟಾರ್ ನಟರ ಅಭಿಮಾನಿಗಳಂದ್ರೇ ಹೀಗೇನಾ? ಈ ಪ್ರಶ್ನೆ ನಮ್ದಲ್ಲ. ಖ್ಯಾತ ಯುಟ್ಯೂಬರ್ ಧ್ರುವ್ ರಾಠಿ ಅವರದು. ಹಾಗೆಯೇ ” ಕೆಜಿಎಫ್ 2ʼ ಚಿತ್ರದ ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿರುವ ವಿದೇಶಿ ಪ್ರೇಕ್ಷಕರದ್ದು ಕೂಡ. ಇಷ್ಟಕ್ಕೂ ಇದಕ್ಕೆ ಕಾರಣವಾಗಿದ್ದು ಯುಟ್ಯೂಬ್ ನಲ್ಲಿ ಧ್ರುವ್ ರಾಠಿ ಎಂಬಾತ ʼಕೆಜಿಎಫ್ 2″ ಟೀಸರ್ ಕುರಿತು ಹಂಚಿಕೊಂಡ ಅಭಿಪ್ರಾಯ.
ಅದೇನು ಎನ್ನುವುದಕ್ಕಿಂತ ಈ ಯುಟ್ಯೂಬರ್ ಧ್ರುವ್ ರಾಠಿ ಬಗ್ಗೆ ಹೇಳಲೇಬೇಕು. ಈತ ತನ್ನ ಗಂಭೀರ ವಿಡಿಯೋಗಳ ಮೂಲಕ ಎಲ್ಲೆಡೆ ಪ್ರಸಿದ್ಧಿ ಪಡೆದವ. ಯುಟ್ಯೂಬ್ನಲ್ಲಿ ರಾಠಿಗೆ ಸರಿ ಸುಮಾರು 50 ಲಕ್ಷ ಸಬ್ಸ್ಕೈಬರ್ಸ್ ಇದ್ದಾರೆ. ಹಾಗೆಯೇ ಆತ ವಿಡಿಯೋ ಗಳಿಗೆ 25 ಕೋಟಿ ವಿವ್ಯೂಸ್ ಇವೆ. ಈತ ಮೊನ್ನೆಯಷ್ಟೇ ತನ್ನ ಯುಟ್ಯೂಬ್ನಲ್ಲಿ “ಕೆಜಿಎಫ್ 2ʼ ಚಿತ್ರದ ಟೀಸರ್ ಕುರಿತು ತನ್ನ ಅಭಿಪ್ರಾಯ ಹಂಚಿಕೊಂಡಿದ್ದ. ಆ ಹೊತ್ತಿಗೆ ‘ಕೆಜಿಎಫ್ 2’ ಚಿತ್ರದ ಟೀಸರ್ ದೇಶದೆಲ್ಲೆಡೆ ಸುದ್ದಿ ಆಗಿತ್ತು. ವಿದೇಶದಲ್ಲೂ ಅದು ಹವಾ ಎಬ್ಬಿಸಿತ್ತು. ಅದೇ ಗುಂಗಿನಲ್ಲಿ ಆತ “ಕೆಜಿಎಫ್ 2ʼ ಚಿತ್ರದ ಟೀಸರ್ ಅನ್ನು ಮೆಚ್ಚಿಕೊಳ್ಳುವುದರ ಜತೆಗೆ ಅಲ್ಲಿನ ಒಂದು ದೃಶ್ಯವನ್ನು ಕೊಂಚ ತಮಾಷೆ ಮಾಡಿ, ವಿಶ್ಲೇಷಿಸಿದ್ದ. ಇದು ಸೋಷಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ, ಯಶ್ ಅಭಿಮಾನಿಗಳು ಕೆಂಡ ಮಂಡಲವಾಗಿದ್ದಾರೆ.
ಕೆಲವರು ಧ್ರುವ್ ರಾಠಿಯ ಯುಟ್ಯೂಬ್ ವಿಡಿಯೋಕ್ಕೆ ಕಾಮೆಂಟ್ ಹಾಕುತ್ತಾ, ತಮ್ಮ ಸಿಟ್ಟು ಹೊರ ಹಾಕಿದ್ದಾರೆ. ಕೆಲವರು ಅವನ ತಂದೆ-ತಾಯಿ ಹಾಗೂ ಗೆಳತಿಗೂ ಅವಾಚ್ಯವಾಗಿ ನಿಂದಿಸಿ ಕಾಮೆಂಟ್ ಹಾಕಿದ್ದು ಈಗ ದೊಡ್ಡ ಸುದ್ಧಿಮಾಡಿದೆ. ಮತ್ತೊಂದೆಡೆ ಆತನ ಗೆಳತಿಗೆ ಪೋಸ್ಟ್ ಮಾಡಿರುವ ಪ್ರೈವೇಟ್ ಮೆಸೇಜ್ ಗಳಲ್ಲಿ ಅತ್ಯಾಚಾರದ ಬೆದರಿಕೆಗಳೂ ಬಂದಿವೆಯಂತೆ. ಇದೆಲ್ಲದರಿಂದ ಮನನೊಂದ ಧ್ರುವ ರಾಠಿ ಕೊನೆಗೆ ತನ್ನ ವಿಡಿಯೋವನ್ನು ಸೋಷಲ್ ಮೀಡಿಯಾದಿಂದ ಡೀಲಿಟ್ ಮಾಡಿದ್ದಾರೆ. ಹಾಗೆಯೇ ಆತ ತನ್ನ ಯುಟ್ಯೂಬ್ ನಲ್ಲಿ ಮಾತನಾಡುತ್ತಾ, ” ಈ ರೀತಿಯ ಅವಾಚ್ಯ ಭಾಷೆಯ ಮೂಲಕ ವಿಮರ್ಶೆಕರು ಹಾಗೂ ವಿಶ್ಲೇಷಕರನ್ನು ಅವಹೇನ ಮಾಡುವುದಾದರೆ, ವಿದೇಶದಲ್ಲಿ ಕನ್ನಡಿಗರು ಹಾಗು ಕರ್ನಾಟಕದ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುವ ಸಾಧ್ಯತೆ ಇದೆ ಎಂದೂ ಆತ ಆತಂಕ ವ್ಯಕ್ತಪಡಿಸಿದ್ದಾನೆ.
ಇದು ನಿಜವೂ ಕೂಡ. ಯಾಕಂದ್ರೆ, ಈಗಾಗಲೇ” ಕೆಜಿಎಫ್ 2′ ವಿದೇಶದಲ್ಲೂ ದೊಡ್ಡ ಸುದ್ದಿ ಮಾಡಿದೆ. ಅಲ್ಲಿನ ಕನ್ನಡೇತರ ಹಾಗೂ ವಿದೇಶಿ ಪ್ರೇಕ್ಷಕರನ್ನೂ ತನ್ನತ್ತ ಸೆಳೆದಿದೆ. ಅದೇ ಕಾರಣಕ್ಕೆ ಅಮೇರಿಕಾದ ರಿಯಾಕ್ಷನ್ ವೀಡಿಯೋ ಚಾನಲ್ ವೊಂದು ಈಗಾಗಲೇ ಯಶ್ ಅವರ ಸಂದರ್ಶನ ಮಾಡಿದೆ. ಯಾಕಂದ್ರೆ,” ಕೆಜಿಎಫ್ʼ ಯೂರೋಪ್ ಹಾಗೂ ಅಮೇರಿಕಾದ ತಂತ್ರಜ್ಞರಿಗೆ ಸಡ್ಡು ಹೊಡೆಯುವಂತೆ ನಿರ್ಮಾಣವಾಗುವ ಮೂಲಕ ಭಾಷೆ, ದೇಶದ ಗಡಿಗಳನ್ನು ದಾಟಿ, ಸದ್ದು ಮಾಡಿದೆ. ‘ಕೆಜಿಎಫ್ 2’ಬಗ್ಗೆ ಅಂತಹದೇ ಕುತೂಹಲ ಇದೆ. ಇದು ಕನ್ನಡದ ಹೆಮ್ಮೆ. ವಿದೇಶಿ ಪ್ರೇಕ್ಷಕರಲ್ಲಿ ಕನ್ನಡ ಮತ್ತು ಕರ್ನಾಟಕದ ಬಗೆಗಿರುವ ಆಸಕ್ತಿ ಹಾಗೂ ಕುತೂಹಲ ಅದು. ಇಂತಹ ಸಂದರ್ಭದಲ್ಲಿ ಯಾವುದೋ ಸಣ್ಣ, ಟೀಕೆ ಅಥವಾ ಟಿಪ್ಪಣಿಗಳಿಗೆ ಅಭಿಮಾನಿಗಳು ಅವ್ಯಾಚ ಶಬ್ದಗಳಿಂದ ಪ್ರತಿಕ್ರಿಯಿಸುವುದಾದರೆ, ಅದು ಕನ್ನಡದ ಬಗೆಗಿವ ಗೌರವ ಕಮ್ಮಿಯಾಗಿಸುತ್ತದೆ ಎನ್ನುವ ಅರಿವು ಸ್ಟಾರ್ಗಳಿಗೂ ಇರಬೇಕು ಎನ್ನುತ್ತಿದ್ದಾರೆ ಚಿತ್ರೋದ್ಯಮದ ಗಣ್ಯರು.
ಕನ್ನಡದಲ್ಲೀಗ ಸಿನಿಮಾ ಸುದ್ದಿಗಳ ಸುರಿಮಳೆ. ಹೌದು, ಕೊರೊನಾ ಹಾವಳಿ ಕಡಿಮೆಯಾಗುತ್ತಿದ್ದಂತೆಯೇ, ಅತ್ತ ಸಿನಿಮಾರಂಗದ ಚಟುವಟಿಕೆಗಳೂ ಜೋರಾಗಿವೆ. ಈಗ ಹೊಸ ಸುದ್ದಿಯೆಂದರೆ, ಕಿಚ್ಚ ಸುದೀಪ್ ಅಭಿನಯದ ‘ಫ್ಯಾಂಟಮ್’ ಸಿನಿಮಾ ತಂಡದಿಂದ ಒಂದು ಸುದ್ದಿ ಹೊರಬಿದ್ದಿದೆ. ಈಗಾಗಲೇ ಚಿತ್ರೀಕರಣ ಬಹುತೇಕ ಮುಕ್ತಾಯಗೊಂಡಿದೆ. ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಜೋರು ಸುದ್ದಿ ಮಾಡಿತ್ತು. ಚಿತ್ರದ ಟೀಸರ್, ಟ್ರೇಲರ್ ಬಗ್ಗೆಯೂ ಸಿನಿಮಾ ಮಂದಿಗೆ ಕುತೂಹಲವಿದೆ. ಸದ್ಯಕ್ಕೆ “ಫ್ಯಾಂಟಮ್” ಚಿತ್ರತಂಡದಿಂದ ಜನವರಿ 21ರಂದು ಹೊಸ ಪ್ರಕಟಣೆಯೊಂದು ಹೊರಬೀಳಲಿದೆ ಎಂಬ ಸುದ್ದಿ ಬಂದಿದೆ. ಈ ಕುರಿತಂತೆ, ಸ್ವತಃ ನಿರ್ದೇಶಕ ಅನೂಪ್ ಭಂಡಾರಿ ತಮ್ಮ ಟ್ವೀಟ್ ಮೂಲಕ ಮಾಹಿತಿ ಕೊಟ್ಟಿದ್ದಾರೆ. ಜನವರಿ ೨೧ ಸಂಜೆ4.03ಕ್ಕೆ “ಫ್ಯಾಂಟಮ್” ಚಿತ್ರದ ಮುಖ್ಯವಾದ ಪ್ರಕಟಣೆ ಇದೆ ಎಂದು ಹೊಸದೊಂದು ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ವಿಷಯ ಹಂಚಿಕೊಂಡಿದ್ದಾರೆ.
ಅಂದಹಾಗೆ, ಆ ಮುಖ್ಯವಾದ ವಿಷಯ ಏನಿರಬಹುದು? ಈ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ. ಸಿನಿಮಾದ ಬಿಡುಗಡೆಯ ದಿನವನ್ನು ಘೋಷಣೆ ಮಾಡಬಹುದಾ? ಈ ಪ್ರಶ್ನೆ ಕೂಡ ಹರಿದಾಡುತ್ತಿದೆಯಾದರೂ, ಏನಿರಬಹುದು ಎಂಬ ನಿರೀಕ್ಷೆ ಹೆಚ್ಚಿಸಿದೆ. ಈ ಚಿತ್ರ ಸಾಕಷ್ಟು ಕುತೂಹಲ ಮೂಡಿಸಿದೆ. ಕಾರಣ, ಮೊದಲ ಪೋಸ್ಟರ್ ನೋಡಿದವರಿಗೆ ಸಾಕಷ್ಟು ಭರವಸೆ ಮೂಡಿಸಿತ್ತು. ಇನ್ನು, ಪ್ಯಾನ್ ಇಂಡಿಯಾ ಸಿನಿಮಾ ಅನ್ನುವುದರಲ್ಲಿ ಎರಡು ಮಾತಿಲ್ಲ. ಅದೇನೆ ಮಾಹಿತಿ ಇದ್ದರೂ, ಜನವರಿ 21ರಂದು ಹೊರಬರಲಿದೆ.
ಚಿತ್ರದ ಶೀರ್ಷಿಕೆ ಬದಲಾಗಬಹುದಾ?
ಎಲ್ಲವೂ ಅಂದುಕೊಂಡಂತೆ ನಡೆದರೆ ಚಿತ್ರದ ಶೀರ್ಷಿಕೆ ಬದಲಾಗಬಹುದು ಎಂಬ ಸುದ್ದಿಯೂ ಇದೆ. ಈಗಾಗಲೇ “ಫ್ಯಾಂಟಮ್” ಶೀರ್ಷಿಕೆ ಬೇರೆ ಬ್ಯಾನರ್ನಲ್ಲಿದೆ ಎನ್ನಲಾಗಿದ್ದು, ಹಾಗಾಗಿ ಚಿತ್ರಕ್ಕೆ ಬೇರೆ ಟೈಟಲ್ ಇಡುವ ಬಗ್ಗೆಯೂ ಚಿತ್ರತಂಡ ಯೋಚಿಸಿದೆ ಎನ್ನಲಾಗಿದೆ. ಅಂದಹಾಗೆ, ಈ “ಫ್ಯಾಂಟಮ್” ಚಿತ್ರದಲ್ಲಿ ಸುದೀಪ್ ಅವರು ವಿಕ್ರಾಂತ್ ರೋಣ ಎಂಬ ಪಾತ್ರದಲ್ಲಿ ನಟಿಸುತ್ತಿದ್ದು, ಹಾಗೊಂದು ವೇಳೆ ಶೀರ್ಷಿಕೆ ಬದಲಾದರೆ, “ವಿಕ್ರಾಂತ್ ರೋಣ” ಎಂಬ ಶೀರ್ಷಿಕೆ ಪಕ್ಕಾ ಆದರೂ ಆಗಬಹುದು.
ಈ ಹಿಂದೆಯೇ “ಸಿನಿಲಹರಿ” “ಫ್ಯಾಂಟಮ್” ಚಿತ್ರದ ಶೀರ್ಷಿಕೆ ಬದಲಾಗಬಹುದು ಎಂಬ ಕುರಿತಂತೆ ಸುದ್ದಿ ಪ್ರಕಟಿಸಿತ್ತು. ಅದರಲ್ಲಿ “ಫ್ಯಾಂಟಮ್” ಬದಲಾಗಿ “ವಿಕ್ರಾಂತ್ ರೋಣ” ಟೈಟಲ್ ಫಿಕ್ಸ್ ಆಗಬಹುದು ಎಂದು ಹೇಳಲಾಗಿತ್ತು. ಈ ಚಿತ್ರಕ್ಕೆ ಜಾಕ್ಮಂಜು ನಿರ್ಮಾಪಕರು.
ನಟ ಶಶಿ ಕುಮಾರ್ ಪುತ್ರ ಅಕ್ಷಿತ್ ಗೆ ಸ್ಮೈಲ್ ಶೀನು ಆ್ಯಕ್ಷನ್ ಕಟ್
ಸದಾ ಕ್ರಿಯಾಶೀಲವಾಗಿ ಯೋಚಿಸುವ ನಿರ್ದೇಶಕ ಸ್ಮೈಲ್ ಶೀನು ಅವರೀಗ ಮತ್ತೊಂದು ಬಿಗ್ ಬಜೆಟ್ ಯೋಜನೆ ಯೊಂದಿಗೆ ಸುದ್ದಿಯಲ್ಲಿದ್ದಾರೆ. ʼತೂಫಾನ್ʼ, ʼಬಳ್ಳಾರಿ ದರ್ಬಾರ್ʼ ಹಾಗೂʼ 18 ಟು 25ʼ ಚಿತ್ರಗಳ ನಂತರವೀಗ ʼಓ ಮೈ ಲವ್ʼ ಹೆಸರಿನಲ್ಲೊಂದು ಸಿನಿಮಾ ಶುರು ಮಾಡಿದ್ದಾರೆ. ಮೊನ್ನೆಯಷ್ಟೇ ಈ ಚಿತ್ರಕ್ಕೆ ಮುಹೂರ್ತವೂ ಮುಗಿದಿದೆ. ವಿಶೇಷ ಅಂದ್ರೆ, ಹಿರಿಯ ನಟ ಶಶಿ ಕುಮಾರ್ ಪುತ್ರ ಅಕ್ಷಿತ್ ಶಶಿ ಕುಮಾರ್ ಈ ಚಿತ್ರದ ಹೀರೋ. ಹಾಗೆಯೇ ಹೊಸ ಪ್ರತಿಭೆಗಳಾದ ಹುಬ್ಬಳ್ಳಿ ಹುಡುಗಿ ಕೀರ್ತಿ ಕಲ್ಕೇರಿ ಹಾಗೂ ದೀಪಿಕಾ ಆರಾಧ್ಯ ಈ ಚಿತ್ರದ ನಾಯಕಿಯರು. ಇನ್ನು ಬಳ್ಳಾರಿ ಮೂಲದ ಜಿ. ರಾಮಾಂಜನಿ ಈ ಚಿತ್ರದ ನಿರ್ಮಾಪಕರು.
ಮೊನ್ನೆಯಷ್ಟೇ ಚಿತ್ರಕ್ಕೆ ಬೆಂಗಳೂರಿನ ರಾಜರಾಜೇಶ್ವರಿ ನಗರದ ಷಣ್ಮುಖ ಸ್ವಾಮಿ ದೇವಾಲಯದಲ್ಲಿ ಮುಹೂರ್ತ ನಡೆಯಿತು. ಸಚಿವ ಶ್ರೀರಾಮು ಚಿತ್ರದ ಫ್ರಥಮ ದೃಶ್ಯಕ್ಕೆ ಕ್ಲಾಪ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು. ಹಾಗೆಯೇ ಚಿತ್ರ ತಂಡಕ್ಕೆ ಶುಭ ಕೋರಿದರು.
ಚಿತ್ರದ ನಿರ್ಮಾಪಕ ರಾಮಾಂಜಿನಿ ಅವರೇ ಚಿತ್ರಕ್ಕೆ ಕತೆ ಬರೆದಿದ್ದಾರಂತೆ. ಜೆಸಿಬಿ ಪ್ರೊಡಕ್ಷನ್ಸ್ ಮೂಲಕ ಈ ಚಿತ್ರವು ಅದ್ದೂರಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಉದ್ಯಮಿಯಾಗಿದ್ದ ರಾಮಾಂಜಿನಿ ಅವರು, ತಾವು ಚಿತ್ರ ನಿರ್ಮಾಣಕ್ಕೆ ಬಂದ ಬಗೆಯನ್ನು ಹೇಳಿಕೊಂಡರು.” ಸಿನಿಮಾ ನನ್ನ ಆಸಕ್ತಿಯ ಕ್ಷೇತ್ರ. ಚಿಕ್ಕಂದಿನಿಂದಲೂ ಸಿನಿಮಾ ರಂಗದಲ್ಲಿ ತೊಡಗಿಸಿಕೊಳ್ಳಬೇಕೆನ್ನುವ ಆಸೆ ಇತ್ತು. ಹಾಗೆಯೇ ತೆರೆ ಮೇಲೆ ಬರಬೇಕೆನ್ನುವ ತುಡಿತ ಇತ್ತು. ಅದೇ ನಾನಿಲ್ಲಿಗೆ ಬರಲು ಕಾರಣ. ಜತೆಗೆ ಕತೆ ಬರೆಯೂ ಹುಚ್ಚು ಕೂಡ ನನ್ನನ್ನು ಇಲ್ಲಿಗೆ ಸೆಳೆಯಿತು. ಚಿತ್ರದ ಶೀರ್ಷಿಕೆ ನೋಡಿದಾಗ ಇದೊಂದು ಬರೀ ಪ್ರೇಮಕತೆಯ ಚಿತ್ರ ಅತಂದುಕೊಂಡರೂ, ಇದು ಎಲ್ಲಾ ಅಂಶಗಳು ಇರುವಂತಹ ಪಕ್ಕಾ ಕಮರ್ಷಿಯಲ್ ಸಿನಿಮಾ. ಫ್ಯಾಮಿಲಿ ಸೆಂಟಿಮೆಂಟ್, ಆ್ಯಕ್ಷನ್, ರೋಮಾನ್ಸ್ ಜತೆಗೆ ಕಾಮಿಡಿ ಕೂಡ ಚಿತ್ರದಲ್ಲಿದೆʼ ಎನ್ನುತ್ತಾ ತಾವು ಇಲ್ಲಿಗೆ ಬಂದಿರುವುದರ ಕತೆ ಬಿಚ್ಚಿಟ್ಟರು.
ಚಿತ್ರಕತೆ ಜತೆಗೆ ಸಂಭಾಷಣೆ ಬರೆದಿರುವ ನಿರ್ದೇಶಕ ಸ್ಮೈನ್ ಶೀನು, ಚಿತ್ರದ ವಿಶೇಷತೆ ಕುರಿತು ಮಾತನಾಡಿದರು. ” ಇದೊಂದು ಲವ್ ಸಬ್ಜೆಕ್ಟ್ ಸಿನಿಮಾ ಮಾತ್ರವಲ್ಲ, ಕತೆಯಲ್ಲೊಂದು ಒಳ್ಳೆಯ ಮೆಸೇಜ್ ಕೂಡ ಇದೆ. ಈ ಕಾಲದ ಹುಡುಗ-ಹುಡುಗಿಯರೆಲ್ಲ ವೈಫೈ ಪ್ರೀತಿಯ ಹಿಂದೆ ಬಿದ್ದಿದ್ದಾರೆ. ಮೊಬೈಲ್, ಇಂಟರ್ನೆಟ್ ಅಂತ ಮಾನವೀಯ ಸಂಬಂಧ ಮರೆಯುತ್ತಿದ್ದಾರೆ. ಅದೆಲ್ಲಕ್ಕಿಂತ ನಮ್ಮ ನಡುವಿವ ಸಂಬಂಧ , ಪ್ರೀತಿಯೇ ಮುಖ್ಯ ಎನ್ನುವುದನ್ನು ಕತೆ ಹೇಳುತ್ತದೆʼ ಎಂದರು ಸ್ಮೈಲ್ ಶೀನು.
ಚಿತ್ರಕ್ಕೆ ಮೂರು ಹಂತಗಳಲ್ಲಿ ಚಿತ್ರೀಕರಣ ನಡೆಯಲಿದೆಯಂತೆ. ಸದ್ಯಕ್ಕೆ ರಾಜ್ಯದ ವಿವಿಧ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲು ಚಿತ್ರ ತಂಡ ಪ್ಲಾನ್ ಹಾಕಿಕೊಂಡಿದೆ. ಹಾಡುಗಳಿಗೆ ವಿದೇಶಕ್ಕೂ ಹೋಗುವ ಆಲೋಚನೆ ಚಿತ್ರ ತಂಡದಲ್ಲಿದೆ. ಟಾಲಿವುಡ್ ನ ಹೆಸರಾಂತ ನಟ ದೇವ್ ಗಿಲ್ ಈ ಚಿತ್ರದ ಮತ್ತೊಂದು ಪ್ರಮುಖ ಆಕರ್ಷಣೆಯಂತೆ. ಚಿತ್ರದ ಆರು ಹಾಡುಗಳಿಗೆ ಡಾ. ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದು, ಚರಣ್ ಅರ್ಜುನ್ ಸಂಗೀತ ನೀಡಿದ್ದಾರೆ. ಇಸ್ಮಾರ್ಟ್ ಶಂಕರ್, ಅಲಾ ವೈಕುಂಠಪುರಂಲೂ ಖ್ಯಾತಿಯ ರಿಯಲ್ ಸತೀಶ್ ಅ್ಯಕ್ಷನ್ ಡೈರೆಕ್ಷನ್ ಮಾಡುತ್ತಿರುವುದಾಗಿ ಚಿತ್ರ ತಂಡ ಹೇಳಿದೆ.
ನಮ್ಮ ಸಂಸ್ಕೃತಿ ಬಿಂಬಿಸುವ ಪಾತ್ರಕ್ಕೆ ಬಿಂದುಶ್ರೀ ಹುಡುಕಾಟ
ಈ ಬಣ್ಣದ ಲೋಕದ ಸೆಳೆತವೇ ಹಾಗೆ. ಇಲ್ಲಿ ಒಮ್ಮೆ ಎಂಟ್ರಿಯಾದರೆ ಮುಗೀತು. ಮತ್ತೆ ಮತ್ತೆ ಬಣ್ಣ ಹಚ್ಚಲೇಬೇಕೆನಿಸುವುದು ಸಹಜ. ಈಗಾಗಲೇ ಅಂತಹ ಅನೇಕ ಪ್ರತಿಭೆಗಳು ಕನ್ನಡದಲ್ಲಿ ಬಂದು ಮಿಂದೆದ್ದಿದ್ದಾರೆ. ಆ ಸಾಲಿಗೆ ಬಿಂದುಶ್ರೀ ಎಂಬ ನವನಟಿ ಕೂಡ ಈಗ ಹೊಸ ರೀತಿಯ ಪಾತ್ರಗಳನ್ನು ಎದುರು ನೋಡುತ್ತಿದ್ದಾರೆ. ಅಷ್ಟೇ ಅಲ್ಲ, ಒಳ್ಳೆಯ ಪಾತ್ರ, ನಿರ್ಮಾಣ ಸಂಸ್ಥೆಯಲ್ಲಿ ಅವಕಾಶ ಸಿಕ್ಕರೆ ಕೆಲಸ ಮಾಡಲು ತುದಿಗಾಲ ಮೇಲೆ ನಿಂತಿದ್ದಾರೆ. ಹೌದು, ಬಿಂದುಶ್ರೀ ಚನ್ನಗಿರಿ ಮೂಲದ ಹುಡುಗಿ. ಈ ಹುಡುಗಿಗೆ ಸಿನಿಮಾರಂಗ ಹೊಸದೇನಲ್ಲ. ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದವರು. “ಶ್ರೀರಸ್ತು ಶುಭಮಸ್ತು”,”ಶಿವಪ್ಪ ನಾಯಕ”,”ಪ್ರೀತ್ಸೋದ್ ತಪ್ಪಾ” ಸೇರಿದಂತೆ ಈವರೆಗೆ ಮೂವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಬೆಳ್ಳಿತೆರೆಯ ಜೊತೆಗೆ ಕಿರುತೆರೆಯಲ್ಲೂ ಇವರ ಪ್ರಯಣ ಸಾಗಿದೆ. “ಕಾವ್ಯಾಂಜಲಿ”, “ಗೌತಮಿ” ಮೆಗಾ ಧಾರಾವಾಹಿಗಳಲ್ಲೂ ನಟಿಸಿದ್ದಾರೆ. ನಟನೆ ಜೊತೆಗೆ ಓದು ಕೂಡ ಮುಖ್ಯ ಎಂಬ ಕಾರಣಕ್ಕೆ ನಟನೆಯನ್ನು ಮೊಟಕುಗೊಳಿಸಿ, ಓದಿನತ್ತ ಗಮನಹರಿಸಿದ್ದರು ಬಿಂದುಶ್ರೀ. ಇನ್ನು, ಇವರ ತಂದೆ ಸಿವಿಲ್ ಎಂಜಿನಿಯರ್. ಅವರ ತಂದೆ ಮಾತಿನ ಪ್ರಕಾರ, ಪದವಿ ಪಡೆದರು. ಅದರಲ್ಲೂ ಅವರದು ಪದವಿಯಲ್ಲಿ ಹದಿನಾರನೇ ರ್ಯಾಂಕ್.
ಪ್ರತಿಷ್ಠಿತ ಕಂಪೆನಿಯಲ್ಲಿ ಬಿಂದುಶ್ರೀ ಟೆಕ್ಕಿಯಾಗಿ ಮೂರು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ತಾಯಿ ಶಾಸ್ತ್ರೀಯ ಸಂಗೀತ ಕಲಿತವರ. ವೃತ್ತಿಪರ ಗಾಯಕಿಯೇನಲ್ಲ. ಆದರೆ, ಅವರ ಆಸೆಯಂತೆ ತಂದೆಯ ಮನವೊಲಿಸಿ, ಪುನಃ ನಟನೆಗೆ ಮರಳಲು ರೆಡಿಯಾಗಿದ್ದಾರೆ. ಕುರಿತು ಸ್ವತಃ ಬಿಂದುಶ್ರೀ ಹೇಳುವುದಿಷ್ಟು, “ನನಗೆ ನಟನೆ ಮೇಲೆ ಆಸಕ್ತಿ ಇದೆ. ಹಾಗಂತ ಸಿಕ್ಕ ಸಿಕ್ಕ ಪಾತ್ರಗಳನ್ನೆಲ್ಲಾ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅಪರೂಪ ಎಂಬಂತಹ, ಚಾಲೆಂಜಿಂಗ್ ಇರುವ, ನಮ್ಮ ಸಂಸ್ಕ್ರತಿ ಬಿಂಬಿಸುವಂತಹ ಪಾತ್ರಗಳು ಬಂದರೆ ನಾನು ಕೆಲಸ ಮಾಡಲು ಇಷ್ಟಪಡ್ತೀನಿ. ಯಾವುದೇ ದೊಡ್ಡ ಬ್ಯಾನರ್ ಇದ್ದರೂ, ಸರಿ, ನನಗೆ ಒಪ್ಪುವ ಮಾತ್ರ ಮಾತ್ರ ಮಾಡುತ್ತೇನೆ. ವಿನಾಕಾರಣ ಬೇರೆ ರೀತಿಯ ಪಾತ್ರ ಮಾಡಲಾರೆ” ಎಂಬುದು ಬಿಂಬಶ್ರೀ ಮಾತು.
ಇತ್ತೀಚೆಗೆ ಬಿಂದುಶ್ರೀ ಅಭಿನಯದ “ಮಹಿಷಾಸುರ” ಚಿತ್ರ ರಿಲೀಸ್ ಆಗಿತ್ತು. ಈ ಚಿತ್ರದಲ್ಲಿ ಬಿಂದುಶ್ರೀ ನಟಿಸಿದ್ದಾರೆ. ಇವರ ಎರಡನೇ ಚಿತ್ರ “ಲಡ್ಡು” ಸಿನಿಮಾ ಕೂಡ ಇಷ್ಟರಲ್ಲೇ ಬಿಡುಗಡೆಯಾಗಲಿದೆ. “ಮಿ. ಅಂಡ್ ಮಿಸಸ್ ಜಾನು” ಚಿತ್ರದಲ್ಲೂ ಬಿಂದುಶ್ರೀ ನಟಿಸುತ್ತಿದ್ದಾರೆ. ಸದ್ಯಕ್ಕೆ ಬಿಂದುಶ್ರೀ ಮೂರು ಕಥೆ ಗಳನ್ನು ಕೇಳಿದ್ದಾರೆ.
ಎಲ್ಲವೂ ಅಂದುಕೊಂಡಂತೆ ನಡೆದರೆ ಹೊಸ ಸಿನಿಮಾ ಬಗ್ಗೆ ಮಾಹಿತಿ ಕೊಡುವುದಾಗಿ ಹೇಳುತ್ತಾರೆ ಬಿಂದಶ್ರೀ. ಅದೇನೆ ಇರಲಿ, ಕೈತುಂಬ ಸಂಬಳ ಸಿಗುವ ಕೆಲಸಕ್ಕೆ ಗುಡ್ಬೈ ಹೇಳಿ, ಚಿತ್ರರಂಗಕ್ಕೆ ಕಾಲಿಟ್ಟ ಬಗ್ಗೆ ಬಿಂದುಶ್ರೀ ಅವರಿಗೆ ಹೆಮ್ಮೆ ಇದೆ. ಟ್ರೆಡಿಷನಲ್ ಪಾತ್ರ ನನಗಿಷ್ಟ. ಅಪ್ಪನಿಗೂ ಅಂಥದ್ದೇ ಪಾತ್ರ ಮಾಡಬೇಕು ಎಂಬ ಬಯಕೆ. ಆ ಕುರಿತು ಸಲಹೆ, ಸೂಚನೆಯನ್ನೂ ನೀಡಿದ್ದಾರೆ. ಸದ್ಯ ನಾನು ನಾಯಕಿ ಆಗಿರವುದನ್ನು ನೋಡಲು ಅಮ್ಮ ಇಲ್ಲ ಎಂಬ ಬೇಸರವಿದೆ. ಸದ್ಯ ಇಬ್ಬರು ತಂಗಿಯರಿಗೆ ಅಭಿನಯದಲ್ಲಿ ಆಸಕ್ತಿ ಇಲ್ಲ. ಅಂದು ರವಿಚಂದ್ರನ್, ಸೌಂದರ್ಯ ಅವರಿಗೆ ಅಭಿಮಾನಿಯಾಗಿದ್ದ ಬಿಂದುಶ್ರೀ, ಇಂದು ರಾಧಿಕಾಪಂಡಿತ್, ದರ್ಶನ್ ಅವರ ಅಪ್ಪಟ ಅಭಿಮಾನಿ. ಅದೇನೆ ಇರಲಿ, ಪಕ್ಕಾ ಕನ್ನಡದ ಹುಡುಗಿಯಾಗಿರುವ ಬಿಂದುಶ್ರೀ ಇದೀಗ ಹೊಸ ಬಗೆಯ ಪಾತ್ರಗಳನ್ನು ಎದುರು ನೋಡುತ್ತಿದ್ದಾರೆ.
ಹಠವಾದಿ ಕ್ರಿಯೇಷನ್ಸ್ ಮೂಲಕ ರಾಜಶೇಖರ್ ಚಂದ್ರಶೇಖರ್ ನಿರ್ಮಿಸಿದ ಸಿನಿಮಾ
ಇದು ನಿಮ್ಮೂರು ಅಂದ್ರೆ, ನಮ್ಮೂರು ಕೂಡ. ನಿಮ್ಮೂರು ಆಗಲಿ, ನಮ್ಮೂರು ಆಗಲಿ ಎರಡು ಹಳ್ಳಿ. ಆ ಹಳ್ಳಿಯೊಳಗೆ ಏನೀರಲ್ಲ ಹೇಳಿ? ಹಾಸ್ಯ, ರಾಜಕೀಯ, ವಿಡಂಬನೆ, ಗಲಾಟೆ, ಗೂಂಡಾಗಿರಿ, ತಮಾಷೆ ಎಲ್ಲವೂದರ ಮಿಕ್ಸರ್ ಹಳ್ಳಿ. ಆ ಹಳ್ಳಿಯೊಳಗಿನ ಹಾಸ್ಯ ಹೇಗಿರುತ್ತೆ ಅನ್ನೋದನ್ನೇ ಪ್ರಧಾನವಾಗಿಟ್ಟುಕೊಂಡು “ನಿಮ್ಮೂರು ʼ ಹೆಸರಲ್ಲೊಂದು ಸಿನಿಮಾ ರೆಡಿ ಆಗಿದೆ. ದಾವಣಗೆರೆ ಮೂಲದ ರಾಜಶೇಖರ್ ಚಂದ್ರಶೇಖರ್ ಇದರ ನಿರ್ಮಾಪಕರು. ಹಠವಾದಿ ಕ್ರಿಯೇಷನ್ಸ್ ಮೂಲಕ ಈ ಚಿತ್ರ ನಿರ್ಮಾಣವಾಗಿದೆ.
ವಿಜಯ್.ಎಸ್ ಈ ಚಿತ್ರದ ನಿರ್ದೇಶಕ. ಕತೆ, ಚಿತ್ರಕತೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಚಾಮರಾಜನಗರ, ಯಳಂದೂರು, ಕೊಳ್ಳೇಗಾಲ, ತಲಕಾಡು, ಹಾಸನ, ಸಕಲೇಶಪುರ ಹಾಗೂ ರಾಣಿಬೆನ್ನೂರು ಸುತ್ತಮುತ್ತ ಚಿತ್ರಕ್ಕೆ ಚಿತ್ರೀಕರಣ ನಡೆದಿದೆ. ನಿರ್ದೇಶಕ ವಿಜಯ್ ಎಸ್. ಅವರ ಪ್ರಕಾರ ಇದೊಂದು ಹಳ್ಳಿ ಸೊಗಡಿನ ಕತೆ. ಗ್ರಾಮೀಣ ಭಾಗದ ಪ್ರೀತಿ, ಪ್ರೇಮದ ಎಳೆ ಕತೆಯ ಹೈಲೈಟ್ಸ್ ಅಂತೆ.
” ಹಳ್ಳಿಗಳಲ್ಲಿ ವಾಸಿಸುವ ಜನರಲ್ಲಿ ಹಾಸ್ಯ ಪ್ರಜ್ನೆ ಹೇಗಿರುತ್ತೆ ಎನ್ನುವುದು ಚಿತ್ರದ ಪ್ರಮುಖ ಅಂಶ. ಜತೆಗೆ ಒಂದು ಉತ್ತಮ ಸಂದೇಶ ಚಿತ್ರದಲ್ಲಿದೆ. ಅಲ್ಲದೇ ಗ್ರಾಮೀಣ ಭಾಗದ ಜನರಿಗೆ ಇದು ತಿಳಿದುಕೊಳ್ಳಲೇಬೇಕಾದ ಸಂದೇಶʼ ಎನ್ನುತ್ತಾರೆ ನಿರ್ದೇಶಕ ವಿಜಯ್. ಸದ್ಯಕ್ಕೀಗ ಚಿತ್ರಕ್ಕೆ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿದಿದೆ. ಹಾಗೆಯೇ ಚಿತ್ರದ ಫಸ್ಟ್ ಕಾಪಿ ಹೊರ ಬಂದಿದೆ. ಹಾಗೆಯೇ ಚಿತ್ರವನ್ನು ಶೀಘ್ರವೇ ತೆರೆಗೆ ತರುವ ಯೋಚನೆ ಚಿತ್ರ ತಂಡಕ್ಕಿದೆ.
ಚಿತ್ರದ ತಾರಾಗಣದಲ್ಲಿ ಬಹುತೇಕ ಹೊಸ ಪ್ರತಿಭೆಗಳೇ ಇದ್ಧಾರೆ. ಲಕ್ಕಿರಾಮ್, ವೀಣಾ ಗಂಗಾರಾಮ್, ತ್ರಿವಿಕ್ರಮ್, ಸಿದ್ದು ಮಂಡ್ಯ, ಮಂಜುನಾಥ್, ಅಂಜಿನಪ್ಪ, ಸುಧಾ, ಶ್ರೀಕಾಂತ್ ಹೊನ್ನವಳ್ಳಿ ಮತ್ತಿತರರು ಚಿತ್ರದಲ್ಲಿದ್ದಾರೆ. ಹಾಗೆಯೇ ಚಿತ್ರಕ್ಕೆ ಪಳನಿವೇಲು ಛಾಯಾಗ್ರಹಣ, ಅಭಿನಂದನ್ ಕಶ್ಯಪ್ ಮಧು ಸುದಂಡಿ ಸಂಗೀತ ಸಂಯೋಜನೆ, ಹನುರಾಜ್ ಮಧುಗಿರಿ ಸಾಹಿತ್ಯ, ಚಂದ್ರು ಬಂಡೆ ಅವರ ಸಾಹಸವಿದೆ.
ಸದ್ಯಕ್ಕೆ ಫಸ್ಟ್ ಲುಕ್ ಮೂಲಕ ಸುದ್ದಿ ಮಾಡಿ ವಿಕ್ಕಿ ವರುಣ್ ಹೊಸ ಸಿನಿಮಾ
ಕೆಂಡ ಸಂಪಿಗೆಯ ಹುಡುಗ ವಿಕ್ಕಿ ವರುಣ್ ಮತ್ತೆ ಬಂದಿದ್ದಾರೆ. ‘ ಕಾಲೇಜ್ ಕುಮಾರ್ ‘ ಚಿತ್ರದ ಒಂದಷ್ಟು ಗ್ಯಾಪ್ ನಂತರವೀಗ ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾದೊಂದಿಗೆ ಹೊಸ ಅವತಾರ ತಾಳಿದ್ದಾರೆ . ಅಂದ ಹಾಗೆ ಆ ಹೊಸ ಅವತಾರದ ಚಿತ್ರ ಕಾಲಾ ಪತ್ಥರ್. ಇಂದು ಅದರ ಫಸ್ಟ್ ಲುಕ್ ಹೊರ ಬಂದಿದೆ. ವಿಕ್ಕಿಯ ಹೊಸ ಅವತಾರದ ದರ್ಶನವಾಗಿರುವುದು ವಿಶೇಷ.
ಇನ್ನು ‘ಕಾಲ ಪತ್ಥರ್’ ಅಂದಾಕ್ಷಣ ಎಲ್ಲೋ ಕೇಳಿದ ನೆನಪು ಅಂತ ನಿಮಗನಿಸಿದರೂ ಅಚ್ಚರಿ ಇಲ್ಲ. ಯಾಕಂದ್ರೆ ಹಿಂದಿಯಲ್ಲಿ ಇದೇ ಹೆಸರಲ್ಲೊಂದು ಸಿನಿಮಾ ಬಂದಿತ್ತು. ಅದು ಯಶ್ ಚೋಪ್ರಾ ನಿರ್ದೇಶನದ ಚಿತ್ರ. ಶಶಿ ಕಪೂರ್, ಅಮಿತಾಬ್ ಬಚ್ಚನ್, ರಾಖೀ ಗುಲ್ಜಾರ್, ಶತ್ರುಘ್ನ ಸಿನ್ಹಾ ಸೇರಿದಂತೆ ದೊಡ್ಡ ತಾರಾಗಣ ಅಲ್ಲಿತ್ತು. ಸಹಜವಾಗಿ ಇದು ಬಾಲಿವುಡ್ ಬಾಕ್ಸಾಫೀಸ್ ನಲ್ಲಿ ಭರ್ಜರಿ ಗೆಲುವು ಕಂಡಿತು. ಅದೇ ಚಿತ್ರದ ಶೀರ್ಷಿಕೆ ಈಗ ಕನ್ನಡಕ್ಕೂಬಂದಿದೆ. ಹಾಗಂತ ಇದು ಆ ಚಿತ್ರದ ಮುಂದುವರೆದ ಕತೆಯಲ್ಲ.ಅದಕ್ಕೂ ಇದಕ್ಕೂ ಸಂಬಂಧ ಇಲ್ಲ. ಅದು ಹಿಂದಿ ಕಾಲಾ ಪತ್ತರ್, ಇದು ಕನ್ನಡದ ಕಾಲಾಪತ್ಥರ್!
ವಿಕ್ಕಿಯ ಕಮರ್ಷಿಯಲ್ ಎಂಟ್ರಿಗೆ ಈ ಟೈಟಲ್ ಸಿಕ್ಕಿದ್ದೇ ವಿಶೇಷಾಗಿದೆ. ಯಾಕಂದ್ರೆ ‘ಕಾಲಾ ಪತ್ಥರ್’ ಎನ್ನುವ ಟೈಟಲ್ ನಲ್ಲೇ ಒಂದು ಪೋರ್ಸ್ ಇದೆ, ಗತ್ತು ಇದೆ.ಅದಕ್ಕೆ ತಕ್ಕಂತೆಯೇ ಅದರ ಫಸ್ಟ್ ಲುಕ್ ಕೂಡ ಹೊರ ಬಂದಿದೆ. ಲವರ್ ಬಾಯ್, ಕಾಲೇಜು ಹುಡುಗ ಎನ್ನುವ ಇದುವರೆಗಿನ ಅವರ ಕ್ಯಾರೆಕ್ಟರ್, ಔಟ್ ಲುಕ್ ಹಾಗೂ ಆ ಮ್ಯಾನರಿಸಂ ಆಚೆ, ಪಕ್ಕ ಮಾಸ್ ಹೀರೋ ಆಗಿ ಅಬ್ಬರಿಸುವುದು ಗ್ಯಾರಂಟಿ ಆಗಿದೆ. ಆ ದೃಷ್ಟಿಯಲ್ಲಿ ಯುವ ಕಲಾವಿದ ವಿಕ್ಕಿ ವರುಣ್ ಅವರಿಗೆ ಇದು ಬಹುದೊಡ್ಡ ನಿರೀಕ್ಷೆ ಯ ಚಿತ್ರ. ಉಳಿದಂತೆ ಎಸ್ ಅಂಡ್ ಎಸ್ ಎಂಟರ್ ಪ್ರೈಸ್ ಸ್ ಮೂಲಕ ನವೀನ್ ಎನ್ನುವವರು ಈ ಚಿತ್ರದ ನಿರ್ಮಾಣಕ್ಕೆ ಬಂಡವಾಳ ಹಾಕುತ್ತಿದ್ದು, ಚೇತನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಹಾಗೆಯೇ ಚಿತ್ರದ ಸಾಹಿತ್ಯ ಕ್ಕೆ ಯೋಗರಾಜ್ ಭಟ್, ಹರಿ ಸಂತೋಷ್, ಜಯಂತ್ ಕಾಯ್ಕಿಣಿ ಸಾಥ್ ನೀಡಿದ್ದಾರೆ. ಕೆ.ಎಂ. ಪ್ರಕಾಶ್ ಸಂಕಲನ ಮಾಡುತ್ತಿದ್ದಾರೆ.ಸದ್ಯಕ್ಕೆ ಇಷ್ಟು ಮಾಹಿತಿ ರಿವೀಲ್ ಆಗಿದೆ.
ಕನ್ನಡ ಚಿತ್ರರಂಗ ಈಗ ಗರಿಗೆದರಿದೆ. ಕೊರೊನೊ ಭಯ ದೂರವಾಗುತ್ತಿದ್ದಂತೆಯೇ ಅತ್ತ ಸಿನಿಮಾ ಮಂದಿಯ ಮೊಗದಲ್ಲಿ ಮಂದಹಾಸ ಮೂಡಿದೆ. ದಿನ ಕಳೆದಂತೆ ಹೊಸಬರ ಚಿತ್ರಗಳು ಸೆಟ್ಟೇರುತ್ತಿವೆ. ಒಂದಷ್ಟು ಚಿತ್ರಗಳು ಬಿಡುಗಡೆಯಾಗುತ್ತಿವೆ. ಅದೇ ಉತ್ಸಾಹದಲ್ಲೇ ಸಿನಿ ಮಂದಿ ಅಖಾಡಕ್ಕಿಳಿದಿದ್ದಾರೆ.
ಈಗ ಅಂಥದ್ದೇ ಹೊಸ ಹುಮ್ಮಸ್ಸು, ಹುರುಪಿನೊಂದಿಗೆ ಚಿತ್ರತಂಡವೊಂದು ಸ್ಕ್ರಿಪ್ಟ್ ಪೂಜೆ ನೆರವೇರಿಸಿದೆ.
ಹೌದು, ಈ ಹಿಂದೆ “ಕಮರೊಟ್ಟು ಚೆಕ್ ಪೋಸ್ಟ್” ಎಂಬ ಯಶಸ್ಸಿನ ಸಿನಿಮಾ ಕೊಟ್ಟಿದ್ದ ನಿರ್ದೇಶಕ ಪರಮೇಶ್ ಈಗ ಹೊಸ ಚಿತ್ರ ನಿರ್ದೇಶನಕ್ಕೆ ಅಣಿಯಾಗಿದ್ದಾರೆ.
ವಿಶೇಷವೆಂದರೆ, “ಕಮರೊಟ್ಟು ಚೆಕ್ ಪೋಸ್ಟ್” ಯಶಸ್ಸಿನ ಚಿತ್ರದಲ್ಲಿ ಹೀರೋ ಆಗಿ ಕಾಣಿಸಿಕೊಂಡಿದ್ದ ಉತ್ಪಲ್ ಈ ಚಿತ್ರದಲ್ಲಿ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮತ್ತದೇ ಯಶಸ್ಸಿನ ಜೋಡಿ ಹೊಸ ಮೋಡಿ ಮಾಡಲು ಹೊರಟಿದೆ.
ಅಂದಹಾಗೆ, ಅವರ ಕನಸಿನ ಚಿತ್ರಕ್ಕಿನ್ನೂ ನಾಮಕರಣ ಮಾಡಿಲ್ಲ. “ಕಮರೊಟ್ಟು ಚೆಕ್ ಪೋಸ್ಟ್” ಕೊಟ್ಟ ಗೆಲುವು ಪುನಃ ಈ ಚಿತ್ರ ಮಾಡೋಕೆ ಕಾರಣವಾಗಿದೆ.
ಈ ಬಾರಿ ನಿರ್ದೇಶಕ ಪರಮೇಶ್, ಒಂದೊಳ್ಳೆಯ ಕಥೆ ಹೆಣೆದು ಚಿತ್ರಕ್ಕೆ ಅಣಿಯಾಗಿದ್ದಾರೆ. ಸದ್ಯಕ್ಕೆ ತೀರ್ಥಹಳ್ಳಿಯಲ್ಲಿ ಚಿತ್ರದ ಸ್ಕ್ರಿಪ್ಟ್ ಪೂಜೆ ನೆರವೇರಿದೆ.
ಈ ಚಿತ್ರದ ತೆರೆಯ ಮೇಲೆ ಯಾರೆಲ್ಲ ಇದ್ದಾರೆ, ತೆರೆಯ ಹಿಂದೆ ಯಾರೆಲ್ಲ ಇರಲಿದ್ದಾರೆ ಎಂಬುದಕ್ಕೆ ಇನ್ನೂ ಮಾಹಿತಿ ಇಲ್ಲ. ಒಳ್ಳೆಯ ದಿನ ಸ್ಕ್ರಿಪ್ಟ್ ಪೂಜೆ ಮಾಡಿರುವ ಪರಮೇಶ್ ಮತ್ತು ಉತ್ಪಲ್ ಕನ್ನಡಕ್ಕೆ ಮತ್ತೊಂದು ಹೊಸ ಬಗೆಯ ಸಿನಿಮಾ ಕಟ್ಟಿಕೊಡಲು ಉತ್ಸುಕರಾಗಿದ್ದಾರೆ.
ಅದೇನೆ ಇರಲಿ, ಒಂದು ಚಿತ್ರ ಆಗುತ್ತಿದ್ದಂತೆಯೇ, ನಿರ್ದೇಶಕ ಮತ್ತು ಹೀರೋ ಮಧ್ಯೆ ಮಾತುಕತೆಯೆ ನಿಂತು ಹೋಗುವ ಈ ಕಾಲದಲ್ಲಿ, ಪುನಃ ಒಟ್ಟಾಗಿ ಒಂದು ಹೊಸ ಸಿನಿಮಾ ಮಾಡಲು ಅಣಿಯಾಗುವುದು ನಿಜಕ್ಕೂ ಅವರಿಬ್ಬರ ನಡುವಿನ ಬಾಂಡಿಂಗ್ ಮುಖ್ಯ. ಇಲ್ಲಿ ಇಬ್ಬರು ಪರಸ್ಪರ ಇಟ್ಟುಕೊಂಡಿರುವ ನಂಬಿಕೆ ಇದಕ್ಕೆ ಬಲವಾದ ಕಾರಣ.
ಇದು ಕೂಡ ಮತ್ತೊಂದು ದೊಡ್ಡ ಗೆಲುವು ಕೊಡುವ ಸಿನಿಮಾ ಆಗಿ ಹೊರಬರಲಿ ಅನ್ನೋದೇ “ಸಿನಿಲಹರಿ” ಹಾರೈಕೆ.
ಗೋವಾದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಕನ್ನಡದ ಖ್ಯಾತ ನಟ ಸುದೀಪ್ ಉದ್ಘಾಟನೆ ಮಾಡುವ ಮೂಲಕ ಚಾಲನೆ ನೀಡಿದ್ದಾರೆ.
ಈ ಅಪರೂಪದ ಅವಕಾಶಕ್ಕೆ ಸಾಕ್ಷಿಯಾದ ಸುದೀಪ್, ಆ ಸಮಾರಂಭದ ವೇದಿಕೆಯಲ್ಲಿ ಕನ್ಮಡದಲ್ಲೇ ಮಾತು ಆರಂಭಿಸಿದ್ದು ಎಲ್ಲರಿಗೂ ಖುಷಿ ಕೊಟ್ಟಿದೆ.
ಪಣಜಿಯಲ್ಲಿ ನಡೆಯುತ್ತಿರುವ ಈ ಚಿತ್ರೋತ್ಸವ
ಜ.16ರಿಂದ ಜ.24ರವರೆಗೆ ನಡೆಯುತ್ತಿದೆ.
ಪ್ರತಿಷ್ಠಿತ ‘ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವ’ (IFFI) 51ನೇ ಆವೃತ್ತಿಯು ಜ.16ರಿಂದ ಆರಂಭವಾಗಿದ್ದು, ಉದ್ಘಾಟನೆಗೆ ಸುದೀಪ್ ಮುಖ್ಯ ಅತಿಥಿಯಾಗಿ ಭಾಗವಹಿಸಿರುವುದು ವಿಶೇಷ.
ಈ ಚಿತ್ರೋತ್ಸವದಲ್ಲಿ ಹಲವಾರು ವಿದೇಶಗಳಿಂದ ಸಿನಿಮಾ ಗಣ್ಯರು, ಸಿನಿ ಪ್ರೇಮಿಗಳು ಆಗಮಿಸಿದ್ದರು.
ಆ ಕಾರ್ಯಕ್ರಮದಲ್ಲಿ ಸುದೀಪ್ ಕನ್ನಡ ಮಾತನಾಡುವ ಅಲ್ಲಿ ನೆರೆದಿದ್ದವರ ಮನ ಗೆದ್ದಿದ್ದಾರೆ ಸುದೀಪ್.
‘ಪ್ರತಿಯೊಬ್ಬರಿಗೂ ಕನ್ನಡ ಚಿತ್ರರಂಗದ ಪರವಾಗಿ ಹಾಗೂ ಕರ್ನಾಟಕದ ಪರವಾಗಿ ಈ ಕಿಚ್ಚನಿಂದ ನಮಸ್ತೆ’ ಎಂದು ಕನ್ನಡದಲ್ಲಿಯೇ ಹೇಳುವ ಮೂಲಕ ಸುದೀಪ್ ಮಾತು ಶುರು ಮಾಡಿ ಭಾಷೆ ಪ್ರೀತಿ ತೋರಿದ್ದಾರೆ.
‘ಸಿನಿಮಾ ಮತ್ತು ಕ್ರೀಡೆ ಎಂಬುದು ನಮ್ಮೆಲ್ಲರನ್ನೂ ಬೆಸೆದಿದೆ. ಆ ಕಾರಣಕ್ಕಾಗಿಯೇ ನಾವೆಲ್ಲರೂ ಇಲ್ಲಿ ಸೇರಿದ್ದೇವೆ. ಸಿನಿಮಾ ಎಂಬುದು ಈ ಬಾರಿ ಎಲ್ಲೆಲ್ಲೂ ಹಬ್ಬಲಿ. ದೇಶ ಸುತ್ತು, ಕೋಶ ಓದು ಎಂಬ ಮಾತನ್ನು ನಾನು ಕೇಳಿದ್ದೇನೆ. ಈ ಎರಡನ್ನೂ ಸಿನಿಮಾ ಒದಗಿಸುತ್ತದೆ. ನನಗೆ ಈ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದಗಳು’ ಎಂದಿದ್ದಾರೆ ಸುದೀಪ್.
ಕನ್ನಡ ಚಿತ್ರರಂಗದಲ್ಲಿ ಸದ್ಯಕ್ಕೆ ಹೊಸಬರ “ರಮೇಶ್ ಸುರೇಶ್” ಸುದ್ದಿಯಲ್ಲಿದೆ. ಈ ಸುದ್ದಿಗೆ ಕಾರಣ, ಈ ಚಿತ್ರದ ಮೂಲಕ ಬಹುತೇಕ ಹೊಸಬರೇ ಗಾಂಧಿನಗರಕ್ಕೆ ಕಾಲಿಟ್ಟಿರುವುದು ಒಂದಾದರೆ, ರಂಗಭೂಮಿಯ ಗುಬ್ಬಿವೀರಣ್ಣ ಅವರ ಮರಿಮೊಮ್ಮಗ ಈ ಮೂಲಕ ಬೆಳ್ಳಿತೆರೆಗೆ ಕಾಲಿಡುತ್ತಿರುವುದು.
“ರಮೇಶ್ ಸುರೇಶ್” ಚಿತ್ರ ಯಶಸ್ವಿಯಾಗಿ ಪೂರ್ಣಗೊಂಡಿದೆ. ಹೆಸರಘಟ್ಟ ಸುತ್ತಮುತ್ತಲಿರುವ ಕಾಡಿನಲ್ಲಿ ಭರ್ಜರಿ ಸಾಹಸ ದೃಶ್ಯಗಳನ್ನು ಚಿತ್ರೀಕರಿಸುವುದರೊಂದಿಗೆ ಚಿತ್ರತಂಡ ಚಿತ್ರಕ್ಕೆ ಕುಂಬಳಕಾಯಿ ಒಡೆಯುವ ಮೂಲಕ ಚಿತ್ರೀಕರಣ ಪೂರೈಸಿದೆ.
ಬಹುತೇಕ ಹೊಸ ಪ್ರತಿಭೆಗಳೇ ತುಬಿರುವ ಈ ಸಿನಿಮಾದಲ್ಲಿ ಹಲವು ವಿಶೇಷತೆಗಳಿವೆ. ಇಲ್ಲಿ ಇಬ್ಬರು ಹೀರೋಗಳಿದ್ದಾರೆ. ಇಬ್ಬರು ನಿರ್ದೇಶಕರಿದ್ದಾರೆ. ಇಬ್ಬರು ನಿರ್ಮಾಪಕರಿದ್ದಾರೆ. ಹೀರೋಗಳಿಗೆ ಒಬ್ಬರೇ ನಾಯಕಿ ಅನ್ನೋದಷ್ಟೇ ವಿಶೇಷ.
ಅಂದಹಾಗೆ, ಈ ಚಿತ್ರಕ್ಕೆ ಬೆನಕ ಗುಬ್ಬಿ ವೀರಣ್ಣ ಹಾಗೂ ಯಶ್ ರಾಜ್ ನಾಯಕರು. ಇವರಿಗೆ ಚಂದನಾ ಸೇಗು ನಾಯಕಿ. ನಾಗರಾಜ್ ಮಲ್ಲಿಗೇನಹಳ್ಳಿ ಮತ್ತು ರಘುರಾಜ್ ಗೌಡ ನಿರ್ದೇಶಕರು.
ಯಶ್ ರಾಜ್, ಚಂದನಾ, ಬೆನಕ
ಆರ್. ಕೆ. ಟಾಕೀಸ್ ಬ್ಯಾನರ್ ಮೂಲಕ ಕೃಷ್ಣ ಪಿ. ಹಾಗೂ ಶಂಕರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಇವರೆಲ್ಲರಿಗೂ ಇದು ಮೊದಲ ಅನುಭವ. ಸದ್ಯಕ್ಕೆ ಚಿತ್ರೀಕರಣ ಪೂರೈಸಿರುವ ಚಿತ್ರತಂಡ, ಮಾತಿನ ಭಾಗವನ್ನೂ ಬಹುತೇಕ ಮುಗಿಸಿದೆ. ಈ ಚಿತ್ರದ ಹೈಲೈಟ್ ಅಂದರೆ ಸಾಧುಕೋಕಿಲ ಮತ್ತು ತೆಲುಗಿನ ಖ್ಯಾತ ನಟ ಸತ್ಯ ಪ್ರಕಾಶ್ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಮೋಹನ್ ಜುನೇಜಾ ಮತ್ತು ಅನೇಕ ರಂಗಪ್ರತಿಭೆಗಳು ನಟಿಸಿದ್ದಾರೆ.
ಕೃಷ್ಣ, ಪಿ. ನಿರ್ಮಾಪಕರು
“ರಮೇಶ್ ಸುರೇಶ್” ಚಿತ್ರದ ಬಗ್ಗೆ ಹೇಳುವುದಾದರೆ, ಚಿತ್ರದ ಶೀರ್ಷಿಕೆ ನೋಡಿದಾಕ್ಷಣ ಇದೊಂದು ಹಾಸ್ಯಮಯ ಚಿತ್ರ ಎಂಬುದನ್ನು ಸಾರುತ್ತದೆ. ಕಥೆ ಕೂಡ ಹಾಸ್ಯವಾಗಿಯೇ ಸಾಗಲಿದೆ ಎಂಬುದು ನಿರ್ದೇಶಕದ್ವಯರ ಮಾತು. ಚಿತ್ರದಲ್ಲಿ ಬೆನಕ ಹಾಗೂ ಯಶುರಾಜ್ ಸೋಮಾರಿ ಹುಡುಗರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲಸವಿಲ್ಲದ ಆಲೆಮಾರಿ ಹುಡುಗರಾಗಿ ಕಾಣಿಸಿಕೊಂಡಿರುವ ಅವರು, ‘ಇಲ್ಲಿ ಕಥೆಯೇ ಹೀರೋ’ ಎನ್ನುತ್ತಾರೆ.
ಮಾಸ್ಟರ್ ರಕ್ಷಿತ್ ಕೃಷ್ಣ
ಹಾಸ್ಯದ ಜೊತೆಗೆ ಎಮೋಶನ್ಸ್ ಕೂಡ ಚಿತ್ರದಲ್ಲಿದೆ. ಸಿನಿಮಾ ಅಪ್ಟಟ ಮನರಂಜನೆಯ ಜೊತೆಗೆ ಸಂದೇಶವನ್ನು ಕೊಡಲಿದೆ ಎಂಬುದು ಚಿತ್ರ ತಂಡದ ಮಾತು. ಇನ್ನು ನಾಯಕರಿಬ್ಬರಿಗೂ ಇದು ಚೊಚ್ಚಲ ಚಿತ್ರ. ಹೊಸಬರನ್ನು ನಂಬಿ ಅವರಿಗೆ ಉತ್ಸಾಹ ತುಂಬಿ ನಿರ್ಮಾಪಕದ್ವಯರಾದ ಕೃಷ್ಣ ಹಾಗೂ ಶಂಕರ್ ಅವರು ಅವಕಾಶ ಕೊಟ್ಟಿದ್ದಾರೆ. ಹೊಸ ಪ್ರತಿಭೆಗಳ ಮೇಲೆ ಭರವಸೆ ಇಟ್ಟು ನಿರ್ದೇಶಕರಾದ ನಾಗರಾಜ್ ಮತ್ತು ರಘರಾಜ್ ಗೌಡ ಕೂಡ ತಮ್ಮ ಕೆಲಸ ಮಾಡಿ ಮುಗಿಸಿದ್ದಾರೆ.
ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಪ್ರಮೋದ್ ಮರವಂತೆ ಇತರರು ಹಾಡು ಬರೆದಿದ್ದಾರೆ. ವಿಶ್ವಜಿತ್ ಛಾಯಾಗ್ರಹಣವಿದೆ. ಕೆ.ಎಂ.ಪ್ರಕಾಶ್ ಅವರ ಸಂಕಲನವಿದೆ.
ಈ ಚಿತ್ರದ ಮೂಲಕ ಗುಬ್ಬಿ ವೀರಣ್ಣ ಅವರ ಮರಿ ಮೊಮ್ಮಗ ಬೆನಕ ಚಿತ್ರರಂಗ ಪ್ರವೇಶಿಸಿದ್ದಾರೆ. ಇವರು ಗುಬ್ಬಿ ವೀರಣ್ಣ ಅವರ ಮೊಮ್ಮಗ ಸದಾಶಿವ ಅವರ ಪುತ್ರ. ರಂಗಭೂಮಿ ಕುಟುಂಬದ ಹಿನ್ನೆಲೆ ಇರುವ ಬೆನಕ ಗುಬ್ಬಿ ವೀರಣ್ಣ, ಹಲವು ನಾಟಕಗಳಲ್ಲಿ ಕಾಣಿಸಿಕೊಂಡಿದ್ದಾರೆ. “ಮನ್ಮಥ ವಿಜಯ’,”ರೂಪಾಂತರ’ ನಾಟಕಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. “ಮಾವನ ಮನೆ ರೊಟ್ಟಿ’ ಸೇರಿದಂತೆ ಹಲವು ನಾಟಕಗಳಲ್ಲಿ ತಮ್ಮ ಪ್ರತಿಭೆ ತೋರ್ಪಡಿಸಿದ ಬೆನಕ ಗುಬ್ಬಿ ವೀರಣ್ಣ, ಈಗ “ರಮೇಶ್ ಸುರೇಶ್” ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಯಾಗಿದ್ದಾರೆ.
ಮತ್ತೊಬ್ಬ ಹೀರೋ ಯಶ್ ರಾಜ್ ಕೂಡ ರಂಗಭೂಮಿ ಹಿನ್ನೆಲೆಯಿಂದ ಬಂದವರು. ಸದ್ಯ ತುಮಕೂರಿನಲ್ಲಿ ವಿಜೆಯಾಗಿರುವ ಯಶ್ ರಾಜ್, ಕಾರ್ಯಕ್ರಮಗಳ ಮೂಲಕ ಸಾಕಷ್ಟು ಮಾನವೀಯ ಕೆಲಸಗಳಿಗೂ ಕಾರಣರಾಗಿದ್ದಾರೆ. ಕಲೆಯನ್ನೇ ನಂಬಿರುವ ಯಶ್ ರಾಜ್ ಗಾಂಧಿನಗರದಲ್ಲಿ ಗಟ್ಟಿನೆಲೆ ಕಂಡುಕೊಳ್ಳುವ ವಿಶ್ವಾಸವಿದೆ. ಆ ನಿಟ್ಟಿನಲ್ಲಿ ಒಬ್ಬ ನಟನಿಗೆ ಏನೆಲ್ಲಾ ಅರ್ಹತೆ ಇರಬೇಕೋ ಎಲ್ಲವನ್ನೂ ಕರಗತ ಮಾಡಿಕೊಂಡು ಸಿನಿಮಾ ರಂಗಕ್ಕೆ ಎಂಟ್ರಿಯಾಗಿದ್ದಾರೆ ಯಶ್ರಾಜ್.
ಸಾಮಾನ್ಯವಾಗಿ ಹೊಸಬರಿಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಅವಕಾಶ ಸಿಗೋದು ತುಬಾನೇ ಕಷ್ಟ. “ರಮೇಶ್ ಸುರೇಶ್” ಚಿತ್ರದ ನಿರ್ದೇಶಕರಾದ ನಾಗರಾಜ್ ಹಾಗೂ ರಘುರಾಜ್ ಗೌಡ ಮತ್ತು ಹೀರೋಗಳಾದ ಬೆನಕ ಮತ್ತು ಯಶ್ ರಾಜ್ ಅವರಲ್ಲಿರುವ ಪ್ರತಿಭೆ ಹಾಗೂ ಶ್ರದ್ಧೆ ನೋಡಿ ಎಲ್ಲಕ್ಕಿಂತಲೂ ಹೆಚ್ಚಾಗಿ ಕಥಾಹಂದರದಲ್ಲಿರುವ ಗಟ್ಟಿತನ ನೋಡಿ ನಿರ್ಮಾಪಕರಾದ ಕೃಷ್ಣ ಮತ್ತು ಶಂಕರ್ ಅವಕಾಶ ನೀಡಿದ್ದಾರೆ.
ಈಗಾಗಲೇ ಚಿತ್ರದ ಕೆಲ ದೃಶ್ಯ ನೋಡಿ ಹಾಡು ಕೇಳಿರುವ ನಿರ್ಮಾಪಕರಿಗೆ ಕನ್ನಡದಲ್ಲಿ ಹೊಸ ಬಗೆಯ ಕಥೆ ಇರುವ ಚಿತ್ರ ಮಾಡಿರುವ ಖುಷಿ ಇದೆ. ಈಗಾಗಲೇ ಗಾಂಧಿನಗರದಲ್ಲಿ ಕೊಂಚ ಸುದ್ದಿಯಾಗಿರುವ “ರಮೇಶ್ ಸುರೇಶ್” ಚಿತ್ರ ಆದಷ್ಟು ಬೇಗ ರಿಲೀಸ್ಗೆ ರೆಡಿಯಾಗುತ್ತಿದೆ. ಇಷ್ಟರಲ್ಲೇ ಚಿತ್ರದ ಟ್ರೇಲರ್ ಬಿಡುಗಡೆಗೆ ಚಿತ್ರತಂಡ ತಯಾರಿ ನಡೆಸಿದೆ.