ಗನ್ ಹಿಡಿದ ಕೈಗೆ ವಚನ ಬರೆಯುವ ಶಕ್ತಿ ಇದೀಯಾ? ಈ ಪ್ರಶ್ನೆ ಮೂಡಿದ್ದು ‘ಅಲ್ಲಮಪ್ರಭು ‘ಹೆಸರಿನ ಚಿತ್ರಕ್ಕೆ ಎನ್ ಕೌಂಟರ್ ದಯಾನಾಯಕ್ ಚಿತ್ರದ ಖ್ಯಾತಿಯ ನಟ ಸಚಿನ್ ಸುವರ್ಣ ನಾಯಕರಾಗಿರುವ ಕಾರಣ. ಹೌದು, ನಟ ಸಚಿನ್ ಸುವರ್ಣ ಮತ್ತೆ ಸ್ಯಾಂಡಲ್ ವುಡ್ ನತ್ತ ಮರಳಿದ್ದಾರೆ. ಹಾಗೆ ಬಂದವರು ಅವರೀಗ
ಅಲ್ಲಮನಾಗಿ ಕಾಣಿಸಿಕೊಂಡಿದ್ದಾರೆ.ವ್ಯೂಮಕಾಯ ಸಿದ್ದ ‘ಅಲ್ಲಮ ಪ್ರಭು ‘ ಎನ್ನುವುದು ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಮೂರನೇ ಚಿತ್ರದ ಹೆಸರು.
‘ ಎನ್ ಕೌಂಟರ್ ದಯಾನಾಯಕ್ ‘ ಹಾಗೂ’ ಶ್ರೀ ಮೋಕ್ಷ ‘ಚಿತ್ರದ ನಂತರ ‘ ವ್ಯೂಮಕಾಯ ಸಿದ್ದ ಶ್ರೀ ಅಲ್ಲಮಪ್ರಭು’ ಚಿತ್ರದಲ್ಲಿ ಅವರು ಅಲ್ಲಮನಾಗಿ ಅಭಿನಯಿಸುತ್ತಿದ್ದಾರೆ. ಇದು ಡಿ.ಕೆ.ಶಿವರಾಜ್ ನಿರ್ದೇಶನದ ಚಿತ್ರ. ಮಹಾವೀರ ಪ್ರಭು ಹಾಗೂ ಮಾಧವಾನಂದ ಈ ಚಿತ್ರದ ನಿರ್ಮಾಪಕರು. ಇವರಿಗಿದು ಮೊದಲ ಸಿನಿಮಾ.ಮ ಹನ್ನೇರಡನೇ ಶತಮಾನದ ಶರಣ ಅಲ್ಲಮಪ್ರಭು ಮೇಲಿನ ಅಭಿಮಾನ ಹಾಗೂ ಭಕ್ತಿಯ ಕಾರಣಕ್ಕೆ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.ಈ ಚಿತ್ರದಕ್ಕೆ ಸಚಿನ್ ಸುವರ್ಣ ನಾಯಕರಾಗಿರುವುದು ವಿಶೇಷ.
‘ಸುಮಾರು ಏಳೆಂಟು ತಿಂಗಳಹಿಂದೆಯೇ ಫಿಕ್ಸ್ ಆದ ಪಾತ್ರ.ಕೊರೋನಾ ಮುಂಚೆಯೇ ನಿರ್ಮಾಪಕ ಮಹಾವೀರ ಪ್ರಭು ಅವರು ಭೇಟಿ ಮಾಡಿಚಿತ್ರದ ಬಗ್ಗೆ ಹೇಳಿದರು. ಪಾತ್ರದ ಬಗ್ಗೆಯೂ ವಿವರಿಸಿದರು. ಪಾತ್ರ ಒಪ್ಪಿಕೊಂಡೆ. ಆ ಪಾತ್ರಕ್ಕೆ ಹೇಗೆಲ್ಲ ಸಿದ್ದಯೆ ಮಾಡಿಕೊಂಡೆ, ಹೇಗೆಲ್ಲ ಅಭಿನಯಿಸಲಿದ್ದೇನೆ ಅನ್ನೋದು ಸಿನಿಮಾಕಂಪ್ಲೀಟ್ ಆದ್ಮೇಲೆ ಹೇಳುತ್ತೇನೆ’ಎಂದರು ಸಚಿನ್ ಸುವರ್ಣ. ಶುಕ್ರವಾರ ಸಂಜೆ ಈ ಚಿತ್ರಕ್ಕೆ ಮುಹೂರ್ತ ನಡೆಯಿತು. ಮುಹೂರ್ತ ಸಂದರ್ಭಕ್ಕೆ ಅನೇಕ ಮಠಾಧೀಶರು ಸಾಕ್ಷಿ ಯಾದರು.
ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ “ಮದಗಜ” ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಹೌದು, “ಮದಗಜ” ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿರುವ ಸಿನಿಮಾ. ಚಿತ್ರದ ಶೀರ್ಷಿಕೆಯಲ್ಲೇ ಒಂದು ಫೋರ್ಸ್ ಇದೆ. ಮೊದಲ ಪೋಸ್ಟರ್ ಕೂಡ ಅಷ್ಟೇ ಮಜವಾಗಿತ್ತು. ಒಂದು ಪಕ್ಕಾ ಕಮರ್ಷಿಯಲ್ ಸಿನಿಮಾ ಆಗಿರುವ ಈ ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆಗೆ ಕೆಲ ದಿನಗಳಷ್ಟೇ ಬಾಕಿ ಉಳಿದಿದೆ. ಡಿಸೆಂಬರ್ 17 ರಂದು ಶ್ರೀಮುರಳಿ ಅವರ ಹುಟ್ಟುಹಬ್ಬ. ಅವರ ಹುಟ್ಟುಹಬ್ಬಕ್ಕೆ ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆಯಾಗಲಿದೆ.
ಈಗಾಗಲೇ ಫಸ್ಟ್ ಲುಕ್ ಟೀಸರ್ ಅನೌನ್ಸ್ಮೆಂಟ್ ವಿಡಿಯೋ ಆನಂದ್ ಯುಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಯಾಗಿದ್ದು, ಬಿಡುಗಡೆಯಾದ ಒಂದೇ ದಿನಕ್ಕೆ ಒಂದು ಲಕ್ಷ ವೀಕ್ಷಣೆ ಪಡೆದಿದೆ. ಹೌದು, ಕೇವಲ ೨೧ ಸೆಕೆಂಡ್ನಷ್ಟಿರುವ ಆ ವಿಡಿಯೋ ನೋಡಿದರೆ, ಸಾಕಷ್ಟು ಕುತೂಹಲ ಮೂಡಿಸುವಂತಿದೆ. ಯಾವುದೇ ದೃಶ್ಯಗಳಿಲ್ಲದೆ, ಕೇವಲ ಹಿನ್ನೆಲೆ ಸಂಗೀತ ಇಟ್ಟುಕೊಂಡು ಹರಿದಾಡುವ ಸ್ಮೋಕ್ನಲ್ಲೇ ಹೊಸದ್ದೊಂದು ಕುತೂಹಲ ಮೂಡಿಸಿದ್ದಾರೆ ನಿರ್ದೇಶಕರು.
ಉಮಾಪತಿ, ನಿರ್ಮಾಪಕ
ಅದನ್ನು ನೋಡಿದವರಿಗೆ ಇನ್ನಷ್ಟು ಹೊತ್ತು ಇರಬೇಕಿತ್ತು ಎನಿಸದೇ ಇರದು. ಆದರೆ, ಅದು ಕೇವಲ ಅನೌನ್ಸ್ಮೆಂಟ್ ವಿಡಿಯೋ ಆಗಿರುವುದರಿಂದ ಡಿಸೆಂಬರ್ ೧೭ಕ್ಕೆ ಪೂರ್ಣಪ್ರಮಾಣದ ಟೀಸರ್ ಹೊರಬರಲಿದೆ. ಅಂದು ರೋರಿಂಗ್ ಸ್ಟಾರ್ ಬರ್ತ್ಡೇ. ಹಾಗಾಗಿ ಶ್ರೀಮುರಳಿ ಅವರ ಅಭಿಮಾನಿಗಳಿಗೊಂದು ಸ್ಪೆಷಲ್ ಗಿಫ್ಟ್ ಕೊಡಲು ವಿಶೇಷ ತಯಾರಿ ಮಾಡಿಕೊಂಡಿದೆ ಚಿತ್ರತಂಡ.
ಅಂದಹಾಗೆ, ಈ ಚಿತ್ರಕ್ಕೆ ಉಮಾಪತಿ ಶ್ರೀನಿವಾಸ್ ಗೌಡ ನಿರ್ಮಾಪಕರು. ಎಸ್. ಮಹೇಶ್ ಕುಮಾರ್ ನಿರ್ದೇಶನವಿದ್ದು, ಭರ್ಜರಿಯಾಗಿಯೇ ಸಿನಿಮಾವನ್ನು ನಿರ್ದೇಶಿಸುವಲ್ಲಿ ನಿರತರಾಗಿದ್ದಾರೆ. ಈಗಾಗಲೇ ಎರಡು ಹಂತದ ಚಿತ್ರೀಕರಣ ಮುಗಿದಿದ್ದು, ಮೂರನೇ ಹಂತದ ಚಿತ್ರೀಕರಣ ಬಿನ್ನಿಮಿಲ್ನಲ್ಲಿ ಸಖತ್ ಸೆಟ್ನಲ್ಲಿ ನಡೆಯುತ್ತಿದೆ. ಡಿಸೆಂಬರ್ ೧೭ರಂದು ಬೆಳಗ್ಗೆ ೯. ೯ ಕ್ಕೆ ಬಿಡುಗಡೆಯಾಗಲಿದೆ.
ಕನ್ನಡಿಗರ ಹೆಮ್ಮೆಯ ವಾಹಿನಿ ಎಂದು ಹೆಗ್ಗಳಿಕೆಗೆ ಪಾತ್ರವಾಗಿರುವ “ಸಿರಿ ಕನ್ನಡ” ವಾಹಿನಿಯು ಇದೀಗ ಮೂರನೇ ವರ್ಷಕ್ಕೆ ಹೆಜ್ಜೆ ಇಡುತ್ತಿದೆ. ಸಿನಿಮಾ ಮತ್ತು ಮನರಂಜನೆ ವಾಹಿನಿಯಾಗಿ ಇಲ್ಲಿನ ನೆಲದಲ್ಲಿ ಚಿಗುರೊಡೆದು ಹಂತ ಹಂತವಾಗಿ ವೀಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಹೊಸದಾಗಿ ಆರಂಭವಾದರೂ ಎವರ್ಗ್ರೀನ್ ಕ್ಲಾಸಿಕ್ ಸಿನಿಮಾಗಳು ಮತ್ತು ಸಿನಿಮಾ ಆಧಾರಿತ ಸ್ಪೆಷಲ್ ಕಾರ್ಯಕ್ರಮಗಳೊಂದಿಗೆ ಜನರ ಮನಸ್ಸಲ್ಲಿ ಅಚ್ಚಳಿಯದೆ ಉಳಿದಿದೆ. ಹಾಗಾಗಿ ಪ್ರಸ್ತುತ ಸಂಪೂರ್ಣ ಮನರಂಜನಾ ವಾಹಿನಿಯಾಗಿ ತಲೆ ಎತ್ತಿ ನಿಂತಿದೆ.
ಕೋವಿಡ್ ಸಂದರ್ಭದಲ್ಲೂ ನೂತನ ಧಾರವಾಹಿಗಳು, ವಿಭಿನ್ನ ರಿಯಾಲಿಟಿ ಶೋಗಳು, ಹಬ್ಬದ ವಿಶೇಷ ಕಾರ್ಯಕ್ರಮಗಳು, ಹೊಸ ರೂಪದ ಭಕ್ತಿ ಪ್ರಧಾನ ಶೋಗಳನ್ನು ಕೊಡುತ್ತಾ ಮನ ಮನೆಗಳಿಗೆ ತಲುಪಿದೆ. ಈ ಹಂತದಲ್ಲಿ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತಿರಿಸಿಕೊಳ್ಳುತ್ತಾ ಇದೆ. ವೀಕ್ಷಕರು ಇಷ್ಟಪಟ್ಟಿರುವ ಮೆಗಾ ಧಾರವಾಹಿಗಳೊಂದಿಗೆ ಜನಪ್ರಿಯ ಶೋಗಳು ಹೊಸ ರೂಪದಲ್ಲಿ ನಿಮ್ಮನ್ನು ರಂಜಿಸಲಿವೆ. ಅಪಾರ ಜನಪ್ರಿಯತೆ ಪಡೆದ “ಕ್ಯಾಶ್ ಬಾಕ್ಸ್” ’ಸ್ಟಾರ್ ಆಫ್ ದಿ ವೀಕ್’ ದಲ್ಲಿ ವಿಜೇತರಿಗೆ ಇಪ್ಪತ್ತೈದು ಸಾವಿರ ಬಹುಮಾನ, ’ನಾರಿಗೊಂದು ಸೀರೆ’ ಕಾರ್ಯಕ್ರಮವು 120 ಕ್ಕೂ ಹೆಚ್ಚು ಸಂಚಿಕೆಗನ್ನು ಪೂರೈಸಿ, 500 ಕ್ಕೂ ಹೆಚ್ಚು ಸೀರೆಗಳನ್ನು ಮಹಿಳಾಮಣಿಗಳ ಬಳಿ ತರುತ್ತಿದೆ. ನಟಿ ಸುಜಾತ ನಿರೂಪಣೆಯ “ಸಿನಿ ಪಾಕ”ದಲ್ಲಿ ವೀಕ್ಷಕರಿಗೂ ಭಾಗವಹಿಸುವ ಅವಕಾಶ ಸಿಗಲಿದೆ. ರೀಲ್ ಹಿಂದಿನ ರಿಯಲ್ ಕಥೆ “ಟೂರಿಂಗ್ ಟಾಕೀಸ್” ಮತ್ತಷ್ಟು ವಿಭಿನ್ನವಾಗಿ ಮೂಡಿಬರುತ್ತದೆ ಎಂbuದು ವಾಹಿನಿಯ ಮುಖ್ಯಸ್ಥ ಸಂಜಯ್ ಶಿಂಧೆಯವರು ಸಂತಸ ಹಂಚಿಕೊಂಡಿದ್ದಾರೆ.
ಕನ್ನಡಿಗರಿಗಾಗಿಯೇ ರೂಪುಗೊಂಡ “ಸಿರಿ ಕನ್ನಡ” ನಾಡು ನುಡಿ ಸಂಸ್ಕೃತಿ ಬಿಂಬಿಸೋ, ಸ್ವಂತಿಕೆಯ ಸಂಭ್ರಮದ ಹೆಜ್ಜೆ ಇಡುತ್ತಿದೆ. ಮುಂದೆಯೂ ಕರುನಾಡಲ್ಲಿ “ನುಡಿ ಕನ್ನಡ, ನಡೆ ಕನ್ನಡ, ನೋಡ್ತಾ ಇರಿ ಸಿರಿ ಕನ್ನಡ” ಎನ್ನುವಂತಾಗಬೇಕು ಎಂಬುದೇ ವಾಹಿನಿಯ ಆಶಯವಾಗಿದೆ.
ವಿವಾದಾತ್ಮಕ ಹೇಳಿಕೆಗಳ ಮೂಲಕ ಸಾಕಷ್ಡು ಸುದ್ದಿಯಲ್ಲಿರುವ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಕೊನೆಗೂ ನಟನೆಯತ್ತ ಮುಖ ಮಾಡಿದ್ದಾರೆ.ರವಿ ಶ್ರೀವತ್ಸ್ ನಿರ್ದೇಶನದ ‘ಎಂ ಆರ್’ ಚಿತ್ರದಲ್ಲಿ ರೌಡಿ ಆಯಿಲ್ ಕುಮಾರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾದಲ್ಲಿ ನಟನಾಗುವುದಕ್ಕಾಗಿಯೇ ಉತ್ತರ ಕರ್ನಾಟಕದಿಂದ ಬೆಂಗಳೂರಿಗೆ ಬಂದಿದ್ದು ಅಂತ ಹೇಳಿದ್ದ ಪ್ರಶಾಂತ್ ಸಂಬರಗಿ, ಈಗ ರೌಡಿ ಆಗಿ ಬೆಳ್ಳಿ ತೆರೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಕುತೂಹಲ ಮೂಡಿಸಿದೆ. ಶುಕ್ರವಾರ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಮುಹೂರ್ತ ಮುಗಿಸಿರುವ ಚಿತ್ರ ತಂಡ ಅನೇಕ ಕುತೂಹಲಕಾರಿ ಮಾಹಿತಿ ಹೊರ ಹಾಕಿದೆ.
ಎಂ ಆರ್ ಅಂದ್ರೆ ಮುತ್ತಪ್ಪ ರೈ ಚಿತ್ರವೇ ಎನ್ನುವುದನ್ನು ರಹಸ್ಯವಾಗಿಟ್ಟುಕೊಂಡಿರುವ ಚಿತ್ರದ ನಿರ್ದೇಶಕ ರವಿ ಶ್ರೀವತ್ಸ,ಈಗ ಪ್ರಶಾಂತ್ ಸಂಬರಗಿ ಈಗ ರೌಡಿ ಆಗಿರುವುದನ್ನು ರಿವೀಲ್ ಮಾಡಿದ್ದಾರೆ.’ ರವಿ ಶ್ರೀ ವತ್ಸ ಅವರೊಂದಿಗೆ ನನ್ನದು ೨೫ ವರ್ಷಗಳ ಒಡನಾಟ. ಅವರೀಗ ಭೂಗತ ಲೋಕದ ಒಂದು ಕತೆ ಇಟ್ಟುಕೊಂಡು ಸಿನಿಮಾಮಾಡಲು ಹೊರಟಿರುವುದುನನಗೂ ಕುತೂಹಲ ಹುಟ್ಟಿಸಿದೆ. ಈ ಚಿತ್ರದಲ್ಲಿ ಒಂದು ಪಾತ್ರ ಇದೆ ಮಾಡ್ಬೇಕು ಅಂದಾಗ ನಂಗೂ ಅಚ್ಚರಿ. ಯಾವ ಪಾತ್ರ ಅಂತ ನಾನೇನು ಕೇಳಲಿಲ್ಲ. ಕೊನೆಗೆ ಮಿಟ್ ಮಾಡಿ, ಪಾತ್ರದ ಬಗ್ಗೆ ಕೇಳಿದಾಗ ನೀವೇ ಆಯಿಲ್ ಕುಮಾರ್ ಅಂದ್ರು. ಏನ್ ಸರ್ , ನಾನೀಗ ರೌಡಿನಾ ಅಂತ ತಮಾಷೆ ಮಾಡಿದೆ. ಕೊನೆಗೆ ಒಪ್ಪಿಕೊಂಡು ಅಭಿನಯಿಸುತ್ತಿದ್ದೇನೆ ಎನ್ನುತ್ತಾರೆ ಪ್ರಶಾಂತ್ ಸಂಬರಗಿ.
ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನು ರವಿಚಂದ್ರನ್ ಅಭಿನಯದ ” ಪ್ರಾರಂಭ ” ಚಿತ್ರ ರಿಲೀಸ್ ಗೆ ರೆಡಿ ಆಗಿದೆ. ಸದ್ಯಕ್ಕೆ ರಿಲೀಸ್ ದಿನಾಂಕ ಇನ್ನು ಫಿಕ್ಸ್ ಆಗಿಲ್ಲ. ಆದರೆ ರಿಲೀಸ್ ಗೆ ಬರದ ಸಿದ್ಧತೆ ನಡೆಸಿರುವ ಚಿತ್ರ ತಂಡ ನಾಳೆ( ಡಿಸೆಂಬರ್ 11) ಚಿತ್ರದ ಅಧಿಕೃತ ಟ್ರೇಲರ್ ಲಾಂಚ್ ಮಾಡುತ್ತಿದೆ.
ಬುಧವಾರಬೆಳಗ್ಗೆ 12 ಗಂಟೆಗೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ಮೂಲಕ ಟ್ರೇಲರ್ ಲಾಂಚ್ ಆಗುತ್ತಿದೆ. ʼಪ್ರಾರಂಭʼ ಹಲವು ಕಾರಣಕ್ಕೆ ಸಾಕಷ್ಟು ನಿರೀಕ್ಷೆ ಮೂಡಿಸಿದ ಸಿನಿಮಾ. ನಟ ರವಿಚಂದ್ರನ್ ಹಿರಿಯ ಪುತ್ರ ಮನು ರವಿಚಂದ್ರನ್ ಅಭಿನಯದ ಸಿನಿಮಾ ಎನ್ನುವುದರ ಜತೆಗೆ ಮನು ಕಲ್ಯಾಡಿ ನಿರ್ದೇಶನದ ಸಿನಿಮಾ ಎನ್ನುವುದು ಕೂಡ ಇದರ ಕುತೂಹಲದ ಅಂಶಗಳಲ್ಲಿ ಒಂದು.
ಈಗಾಗಲೇ ವಿಭಿನ್ನ ಕಾರಣಕ್ಕೆ ಸುದ್ದಿ ಮಾಡಿದ ಚಿತ್ರ ಇದು. ಈಗ ಟ್ರೇಲರ್ ಕೂಡ ಕುತೂಹಲ ಮೂಡಿಸಿದೆ. ಚಾಲೆಜಿಂಗ್ ಸ್ಟಾರ್ ದರ್ಶನ್ ಚಿತ್ರದ ಟ್ರೇಲರ್ ಗೆ ಧ್ವನಿ ನೀಡಿದ್ದು, ಇನ್ನೇನು ಲಾಂಚ್ಗೆ ಕಾತರ ಹೆಚ್ಚಿದೆ.
ಈಗಂತೂ ಬಯೋಪಿಕ್ ಸಿನಿಮಾಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆ ಸಾಲಿಗೆ ದಕ್ಷಿಣ ಭಾರತ ಚಿತ್ರರಂಗದ ಮಾದಕ ನಟಿ ಎಂದೇ ಖ್ಯಾತಿ ಪಡೆದಿರುವ ‘ಶಕೀಲಾ’ಅವರ ಜೀವನಗಾಥೆ ಈಗ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಇದೇ ಕ್ರಿಸ್ಮಸ್ ದಿನ ಚಿತ್ರ ಬಿಡುಗಡೆಯಾಗುತ್ತಿದೆ.
ಅಂದಹಾಗೆ, ದಕ್ಷಿಣ ಭಾರತ ಚಿತ್ರರಂಗದ ನಟಿಯೊಬ್ಬರ ಬಯೋಪಿಕ್ ಚಿತ್ರವೊಂದು ಹಿಂದಿ, ಕನ್ನಡ ತಮಿಳು ಸೇರಿದಂತೆ 5 ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವುದು ಇದೇ ಮೊದಲು ಎಂಬುದು ವಿಶೇಷ.
‘ಶಕೀಲಾ’ ಅವರ ಬಯೋಪಿಕ್ ಆಗಿರುವುದರಿಂದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಸಿನಿಮಾಗೂ ‘ಶಕೀಲಾ’ ಎಂದೇ ನಾಮಕರಣ ಮಾಡಿದ್ದಾರೆ.
ಈಗಾಗಲೇ ಚಿತ್ರದ ಫಸ್ಟ್ ಲುಕ್ ಹಾಗೂ ಟ್ರೇಲರ್ ಬಿಡುಗಡೆಯಾಗಿದ್ದು, ಸಿಕ್ಕಾಪಟ್ಟೆ ಮೆಚ್ಚುಗೆ ಪಡೆಯುವುದರ ಜೊತೆಗೆ ಸಾಕಷ್ಟು ಕುತೂಹಲ ಕೆರಳಿಸಿದೆ.
ಆರಂಭದಲ್ಲಿ ಬಾಲಿವುಡ್ ಗೆ ಮಾತ್ರ ಸೀಮೀತವಾಗಿರಲಿ ಅಂದುಕೊಂಡು ಶುರುವಾದ ಈ ಚಿತ್ರ, ಈಗ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ರಿಲೀಸಾಗುತ್ತಿರುವುದು ವಿಶೇಷ. ಬಹಳಷ್ಟು ಗ್ಲಾಮರಸ್ ಪಾತ್ರಗಳಲ್ಲೇ ಕಾಣಿಸಿಕೊಡು, ಯುವಕರ ಹಾಟ್ ಫೇವರೇಟ್ ಎನಿಸಿಕೊಂಡಿರುವ ಮಲಯಾಳಂನ ಮಾದಕ ನಟಿ ಶಕೀಲಾ ಅವರ ಬಯೋಪಿಕ್ ಇದು.
1990 ಹಾಗೂ 2000ರ ದಶಕದಲ್ಲಿ ಸಕ್ಸಸ್ ಫುಲ್ ಆಗಿದ್ದ ಅವರು, ಒಂದೇ ವರ್ಷದಲ್ಲಿ ಅವರ ನಟನೆಯ ಹತ್ತಾರು ಸಿನಿಮಾಗಳು ಬಿಡುಗಡೆಯಾಗುತ್ತಿದ್ದವು ಎಂಬುದು ವಿಶೇಷ.
ಆರಂಭದಲ್ಲಿ ಶಕೀಲಾ ಅವರ ಬದುಕು ಅಂದುಕೊಂಡಂತೆ ಸುಲಭವಾಗಿರಲಿಲ್ಲ. ತಮ್ಮ ಜೀವನದಲ್ಲಿ ಅನೇಕ ಏಳು-ಬೀಳುಗಳನ್ನು ಕಂಡಿದ್ದಾರೆ. ಅವರ ಆಗಿನ ಗೆಲುವು-ಸೋಲು, ನೋವು-ನಲಿವು ಅವರಿಗಷ್ಟೇ ಗೊತ್ತು. ಈಗ ಶಕೀಲಾ ಅವರ ಸಿನಿಪಯಣದಲ್ಲಾದ ಅಪರೂಪದ ಸಂಗತಿಗಳನ್ನು ಸಿನಿಮಾ ಮೂಲಕ ಹೇಳುವ ಪ್ರಯತ್ನ ಮಾಡಿದ್ದಾರೆ ಇಂದ್ರಜಿತ್ ಲಂಕೇಶ್.
ಇನ್ನು, ಶಕೀಲಾ ಅವರ ಪಾತ್ರವನ್ನು ಬಾಲಿವುಡ್ ನಟಿ ರಿಚಾ ಛಡ್ಡಾ ನಿರ್ವಹಿಸಿದ್ದಾರೆ.
ತಮ್ಮ ಬಯೋಪಿಕ್ ಚಿತ್ರದ ಬಗ್ಗೆ ಮಾತಾಡುವ ಶಕೀಲಾ, ‘ನಾನು ಬದುಕಿನಲ್ಲಿ ಎದುರಿಸಿದ ಕಷ್ಟ, ಸುಖದ ಕಥೆಯನ್ನು ಈ ಸಿನಿಮಾದಲ್ಲಿ ತೋರಿಸುತ್ತಿದ್ದಾರೆ. ಆರಂಭದಲ್ಲಿ ನಿರ್ದೇಶಕರು ನನ್ನ ಬಳಿ ಚರ್ಚಿಸಿ ಒಂದಷ್ಟು ಬದಲಾವಣೆ ಕೂಡ ಮಾಡಿಕೊಂಡಿದ್ದಾರೆ. ಸಿನಿಮಾದಲ್ಲಿ ಎಷ್ಟು ಕಾಲ್ಪನಿಕ, ಎಷ್ಟು ವಾಸ್ತವ ಇದೆ ಎಂಬುದನ್ನು ಸಿನಿಮಾದಲ್ಲಿ ನೋಡಬೇಕು.
ಇಂತಹ ಸಂದರ್ಭದಲ್ಲಿ ನನ್ನ ಫ್ಯಾಮಿಲಿಯೇ ನನ್ನ ಜೊತೆಗಿಲ್ಲ. ನಾನು ಎಲ್ಲಿದ್ದೇನೆ, ಏನು ಮಾಡುತ್ತಿದ್ದೇನೆ ಎಂಬುದೆಲ್ಲವೂ ಅವರಿಗೆ ಗೊತ್ತಿದೆ. ಆದರೆ ನನ್ನ ಬಗ್ಗೆ ಯಾರಿಗೂ ಕಾಳಜಿ ಇಲ್ಲ. ನಾನು ನನ್ನ ಫ್ಯಾಮಿಲಿಗಾಗಿಯೇ ಇಷ್ಟೆಲ್ಲ ಮಾಡಿದೆ. ಆದರೆ ನನ್ನವರೇ ನನಗೆ ದ್ರೋಹ ಮಾಡಿದರು. ನೀಲಿ ಚಿತ್ರಗಳನ್ನು ಮಾಡಿದ ಬಗ್ಗೆ ನನಗೆ ವಿಷಾದವಿಲ್ಲ. ಅದರ ಬಗ್ಗೆ ನನಗೆ ಖುಷಿ ಇದೆ. ನಾನು ದೇವರ ಮಗಳು. ಇಂದು ನನ್ನ ಬಗ್ಗೆ ಸಿನಿಮಾ ಆಗುತ್ತಿದೆ ಎಂದರೆ ಅದಕ್ಕೆ ಆ ಚಿತ್ರಗಳೇ ಕಾರಣ. ನಾನೊಬ್ಬ ಪೋಷಕ ನಟಿ ಮಾತ್ರ ಆಗಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ. ಆದರೆ ಇಂಥ ಕುಟುಂಬಕ್ಕಾಗಿ ಮಾಡಿದೆನಲ್ಲ ಎಂಬ ಬೇಸರವಿದೆ ಎಂದು ಶಕೀಲಾ ತನ್ನ ಕುಟುಂಬದ ಬಗ್ಗೆ ಬೇಸರ ಹೊರ ಹಾಕುತ್ತಾರೆ.
ಇಂದ್ರಜಿತ್ ಅವರ ಜೊತೆ ನಾನು ‘ಲವ್ ಯೂ ಆಲಿಯಾ’ ಸಿನಿಮಾ ಮಾಡುವಾಗ ನಿರ್ದೇಶಕಿಯೊಬ್ಬರು ನನ್ನನ್ನು ಭೇಟಿಮಾಡಿ ನನ್ನ ಆತ್ಮಚರಿತ್ರೆಯನ್ನು ಸಿನಿಮಾ ಮಾಡಬೇಕೆಂದಿದ್ದೇನೆ ಎಂದರು. ಆ ವಿಷಯ ಇಂದ್ರಜಿತ್ರಿಗೂ ತಿಳಿಯಿತು. ಎರಡು ದಿನ ಸಮಯ ತೆಗೆದುಕೊಂಡು ಇಂದ್ರಜಿತ್ ಕೂಡ ನನ್ನ ಆತ್ಮಚರಿತ್ರೆಯನ್ನು ಓದಿದರು. ತಾವೇ ಈ ಚಿತ್ರ ಮಾಡುವುದಾಗಿ ತಿಳಿಸಿದರು. ನನಗೂ ಖುಷಿ ಆಯಿತು. ನನ್ನ ಕಥೆಯನ್ನು ಅವರು ಚೆನ್ನಾಗಿ ತೆರೆಮೇಲೆ ತರುತ್ತಾರೆ ಎಂಬ ನಂಬಿಕೆಯಿತ್ತು. ನಾನು ಈ ಬಯೋಪಿಕ್ ಪುಸ್ತಕ ಬರೆದು 10 ವರ್ಷಗಳಾಗಿವೆ. ಆನಂತರ ಏನೆಲ್ಲ ನಡೆಯಿತು ಎಂಬುದನ್ನು ಈ ಸಿನಿಮಾದಲ್ಲಿ ವಿವರಿಸಿದ್ದಾರೆ. ನನ್ನ ಹುಟ್ಟಿನಿಂದ ಹಿಡಿದು 42ನೇ ವಯಸ್ಸಿನವರೆಗೆ ಅನೇಕ ವಿಷಯಗಳ ಬಗ್ಗೆ ಈ ಚಿತ್ರ ಮಾತನಾಡುತ್ತದೆ ಎಂಬುದು ಶಕೀಲಾ ಮಾತು.
ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರಿಗೆ ಈ ಚಿತ್ರ ಮಾಡಿದ್ದು ಖುಷಿ ಕೊಟ್ಟಿದೆಯಂತೆ. ‘ಒಂದರ್ಥದಲ್ಲಿ ನಿಜವಾದ ಪ್ಯಾನ್ ಇಂಡಿಯಾ ಸಿನಿಮಾವಿದು, ಕನ್ನಡದ ಸುಚೇಂದ್ರ ಪ್ರಸಾದ್, ಸಂಗೀತ ನಿರ್ದೇಶಕ ವೀರಸಮರ್ಥ್ ಸೇರಿದಂತೆ ಎಲ್ಲಾ ಭಾಷೆಯ ತಂತ್ರಜ್ಞರು ಈ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಐದೂ ಭಾಷೆ ಸೇರಿ ಎರಡರಿಂದ ಎರಡೂವರೆ ಸಾವಿರ ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ ಎಂದು ವಿವರ ಕೊಟ್ಟರು ಇಂದ್ರಜಿತ್.
ಈ ಚಿತ್ರವನ್ನು ಸಾಮಿ ನಾನ್ವಾನಿ ಹಾಗೂ ಶರವಣ ಪ್ರಸಾದ್ ನಿರ್ಮಿಸಿದ್ದಾರೆ.
ನಿರ್ದೇಶಕ ಸಂದೀಪ್ ಮಲಾನಿ ಸಹ ನಿರ್ಮಾಪಕರು. ಸಂತೋಷ್ ರೈ ಪಾತಾಜೆ ಕ್ಯಾಮೆರಾ ಹಿಡಿದಿದ್ದಾರೆ. ರೀಚಾ ಛಡ್ಡಾ ಜೊತೆಗೆ ಪಂಕಜ್ ತ್ರಿಪಾಠಿ, ರಾಜೀವ್ ಪಿಳ್ಳೈ, ಸಮರ್ಜಿತ್ ಲಂಕೇಶ್, ಸಂದೀಪ್ ಮಲಾನಿ ಹಾಗೂ ಎಸ್ಟರ್ ನರೋನಾ ಕಾಣಿಸಿಕೊಂಡಿದ್ದಾರೆ.
ಕುತೂಹಲ ಹುಟ್ಟಿಸುತ್ತೆ ಆರ್ ಎಚ್ 100 ಚಿತ್ರದ ಥ್ರಿಲ್ಲರ್ ಟ್ರೇಲರ್
ಹರ್ಷ್ ಮತ್ತು ಸೋಮಶೇಖರ್ ಇಬ್ಬರು ಯುವ ವಕೀಲ ಮಿತ್ರರು. ಅವರೀಗ ತಮ್ಮ ವಕೀಲಿ ವೃತ್ತಿಯ ಜತೆಗೆ ಸಿನಿಮಾ ಜಗತ್ತಿಗೂ ಎಂಟ್ರಿ ಆಗಿದ್ದಾರೆ. ಇಂಟೆರೆಸ್ಟಿಂಗ್ ಅಂದ್ರೆ ಸಿನಿಮಾನಿರ್ಮಾಣ ಅಂತ ಬಂದವರು, ನಟರಾಗಿಯೂ ಪರಿಚಯವಾಗುತ್ತಿದ್ದಾರೆ. ಹಾಗೊಂದು ರೂಪಾಂತರದ ಮೂಲಕ ಅವರನ್ನು ಕನ್ನಡ ಸಿನಿಮಾ ಜಗತ್ತಿಗೆ ಅವರನ್ನು ಪರಿಚಯಿಸುತ್ತಿರುವ ಚಿತ್ರ’ ಆರ್ ಎಚ್ 100′.
ಈ ಚಿತ್ರವೀಗ ರಿಲೀಸ್ ಗೆ ರೆಡಿಯಾಗಿದೆ. ಅಚ್ಚರಿ ಅಂದ್ರೆ ಸದ್ದಿಲ್ಲದೆ, ಸುದ್ದಿಯೂ ಮಾಡದೆ ಚಿತ್ರತಂಡವು ಡಿಸೆಂಬರ್ 18 ಕ್ಕೆ ಚಿತ್ರವನ್ನು ತೆರೆಗೆ ತರಲು ಸಜ್ಜಾಗಿದೆ. ಸದ್ಯಕ್ಕೀಗ ಟ್ರೇಲರ್ ಲಾಂಚ್ ಮೂಲಕ ಸೌಂಡ್ ಮಾಡಿದೆ. ಟ್ರೇಲರ್ ಸಖತ್ತಾಗಿದೆ. ಹಾರರ್, ಥ್ರಿಲ್ಲರ್ ಎಳೆಯ ಟ್ರೇಲರ್ ನೋಡುಗನನ್ನು ತುದಿಗಾಲ ಮೇಲೆ ನಿಲ್ಲಿಸುತ್ತಿದೆ. ಹಾಗಾದ್ರೆ ಸಿನಿಮಾ ಹೇಗಿರಬಹುದು? ಅದು ಡಿಸೆಂಬರ್ 18 ಕ್ಕೆ ಗೊತ್ತಾಗಲಿದೆ.
ಚಿತ್ರ ತಂಡ ಸದ್ದಿಲ್ಲದೆ ರಿಲೀಸ್ ಪ್ಲಾನ್ ಮಾಡಿಕೊಂಡರೂ ರಿಲೀಸ್ ಆನ್ನೋದು ಈಗ ಅಷ್ಟು ಸುಲಭ ಇಲ್ಲ. ಕೊರೋನಾ ಹೊಡೆತಕ್ಕೆ ಸಿಕ್ಕು ತತ್ತರಿಸಿರುವ ಚಿತ್ರರಂಗ ಇನ್ನು ಚೇತರಿಕೆ ಕಂಡಿಲ್ಲ. ಚಿತ್ರಮಂದಿರ ಒಪನ್ ಆಗಿದ್ದರೂ, ಜನರು ಚಿತ್ರಮಂದಿರಕ್ಕೆ ಅಷ್ಟಾಗಿ ಬರುತ್ತಿಲ್ಲ ಎನ್ನುವ ನೋವು ಇನ್ನು ಹೇಗೋ ಏನೋ ಎನ್ನುವ ಆತಂಕದಲ್ಲಿರಿಸಿದೆ.ಆದರೂ ಹೊಸಬರ ಚಿತ್ರ ʼR H 100ʼ ಮುಂದಿನ ವಾರವೇ ಚಿತ್ರ ಮಂದಿರಕ್ಕೆ ಬರುತ್ತಿದೆ ಅಂದ್ರೆ, ಚಿತ್ರತಂಡಕ್ಕೆ ಚಿತ್ರದ ಕಂಟೆಂಟ್ ಮೇಲಿರುವ ನಂಬಿಕೆ ಮತ್ತು ವಿಶ್ವಾಸ.
ಡಿಫೆರೆಂಟ್ ಟೈಟಲ್ ಮೂಲಕ ಬರುತ್ತಿರುವ ಈ ಚಿತ್ರವು ಕತೆ, ಚಿತ್ರಕತೆ ಹಾಗೂ ಟೆಕ್ನಿಕಲ್ ಕೆಲಸದಲ್ಲೂ ಅಷ್ಟೇ ಡಿಫೆರೆಂಟ್ ಆಗಿದೆ. ಬಹುಮುಖ್ಯವಾಗಿ ಹಾರರ್ ಹಾಗೂ ಥ್ರಿಲ್ಲರ್ ಅಂಶಗಳನ್ನೇ ಮೈನ್ ಆಗಿಟ್ಟುಕೊಂಡು ಪ್ರೇಕ್ಷಕರನ್ನು ರಂಜಿಸಲು ಬರುತ್ತಿದೆ. ಕೊರೋನಾ ಅಂತ ಚಿತ್ರಮಂದಿರದಿಂದ ದೂರ ಇರುವ ಪ್ರೇಕ್ಷಕರನ್ನು ಹಾರರ್ ಹಾಗೂ ಥ್ರಿಲ್ಲರ್ ಸಿನಿಮಾದ ಮೂಲಕವಾದರೂ ಚಿತ್ರಮಂದಿರಕ್ಕೆ ತರೋಣ ಎನ್ನುವ ವಿಶ್ವಾಸದೊಂದಿಗೆ ಚಿತ್ರ ತಂಡ ಈ ಚಿತ್ರವನ್ನು ಡಿಸೆಂಬರ್ ೧೮ ಕ್ಕೆ ತರಲು ಮುಂದಾಗಿದೆಯಂತೆ. ಹಾಗಂತ ಚಿತ್ರದ ನಿರ್ಮಾಪಕ ಹಾಗೂ ನಾಯಕ ನಟ ಹರ್ಷ್ ಅವರು ಮಾತು.
ರಿಲೀಸ್ಗೆ ರೆಡಿಯಾಗಿರುವ ಚಿತ್ರ ತಂಡವು ಸೋಮವಾರ ಚಿತ್ರದ ಟ್ರೇಲರ್ ಲಾಂಚ್ ಮೂಲಕ ಚಿತ್ರದ ವಿಶೇಷತೆ ಕುರಿತು ಮಾಧ್ಯಮದ ಮುಂದೆ ಮಾತನಾಡಿತು. ಅದು ಚಿತ್ರತಂಡದ ಮೊದಲ ಸುದ್ದಿ ಗೋಷ್ಟಿಯೂ ಹೌದು. ಟ್ರೇಲರ್ ಲಾಂಚ್ ಆಕ್ಟ್ ೧೯೭೮ ಚಿತ್ರದ ಖ್ಯಾತಿಯ ನಿರ್ಮಾಪಕ ದೇವರಾಜ್ , ಸಮಾಜ ಸೇವಕ ಕೃಷ್ಣ ಮೂರ್ತಿ, ಮತ್ತೊರ್ವ ನಿರ್ಮಾಪಕ ಶ್ರೀಧರ್,ಯುವ ನಟ ಲೋಕೇಶ್ ಗೌಡ ಅತಿಥಿಗಳಾಗಿ ಬಂದಿದ್ದರು. ಹೊಸಬರು ಒಂದೊಳ್ಳೆಯ ಸಿನಿಮಾ ಮಾಡಿರುವ ವಿಶ್ವಾಸದಲ್ಲಿ ಅತಿಥಿಗಳು ಮೆಚ್ಚುಗೆಯ ಮಾತುಗಳನ್ನಾಡಿ, ಚಿತ್ರಕ್ಕೆ ಶುಭ ಹಾರೈಸಿದರು. ಚಿತ್ರ ತಂಡ ಕೂಡ ಚಿತ್ರದ ವಿಶೇಷತೆ ಹೇಳಿಕೊಂಡಿತು.
ವಕೀಲಿ ವೃತ್ತಿಯ ನಡುವೆಯೇ ನಾವು ಆಕಸ್ಮಿಕವಾಗಿ ಇಲ್ಲಿಗೆ ಬಂದಿದ್ದೇವೆ. ಆದಕ್ಕೆ ಸಿನಿಮಾದ ಮೇಲಿದ್ದ ಆಸಕ್ತಿ. ಮೊದಲು ಒಂದೊಳ್ಳೆಯ ಸಿನಿಮಾ ನಿರ್ಮಾಣ ಮಾಡೋಣ ಆನ್ನೋದಷ್ಟೆ ಇತ್ತು. ಆ ನಂತರ ನಿರ್ದೇಶಕ ಮಹೇಶ್ ಆಭಿಪ್ರಾಯಕ್ಕೆ ಬೇಡ ಎನ್ನದೇ ಇಬ್ಬರು ಪಾತ್ರಗಳಿಗೆ ಬಣ್ಣ ಹಚ್ಚಬೇಕಾಗಿ ಬಂತು ಎನ್ನುವ ಮೂಲಕ ನಿರ್ಮಾಣದ ಜತೆಗೆ ನಟನೆಗೆ ತೊಡಗಿಸಿಕೊಂಡಿದ್ದನ್ನು ಹರ್ಷ್ ಹೇಳಿಕೊಂಡರು. ಸೋಮಶೇಖರ್ ಕೂಡ ಇದೇ ಮಾತುಗಳನ್ನು ಹೇಳಿದರು. ನಾಯಕಿ ಚಿತ್ರಾ ಗ್ಲಾಮಸರ್ ಲುಕ್ ನಲ್ಲಿ ಮಿಂಚುತ್ತಿದ್ದರು. ಕನ್ನಡದವರೇ ಆದ ಚಿತ್ರಾಗೆ ಇದು ಎರಡನೇ ಚಿತ್ರ. ದರ್ಪಣ ನಂತರ ‘R H 100’ ಮೂಲಕ ಬೆಳ್ಳಿ ಪರದೆ ಮೇಲೆ ಕಾಣಸಿಕೊಳ್ಳುತ್ತಿದ್ದಾರಂತೆ. ನಿರ್ದೇಶಕ ಮಹೇಶ್. ಸಿನಿಮಾದ ಕತೆ, ಚಿತ್ರಕತೆ ಹಾಗೂ ತಾಂತ್ರಿಕ ವಿಶೇಷತೆ ಬಿಚ್ಚಿಟ್ಟರು.
ಸಿನಿಮಾ ಶುರುವಾಗಿ ವರ್ಷವೇ ಉರುಳಿ ಹೋಗಿದೆ. ಲಾಕ್ ಡೌನ್ ಕಾರಣಕ್ಕೆ ಚಿತ್ರ ಕೊಂಚ ತಡವಾಗಿ ತೆರೆಗೆ ಬರುತ್ತಿದೆ, ಸದ್ಯದ ಪರಿಸ್ಥಿತಿ ನೋಡಿದರೆ ಇದೇನು ತಡವಾಗಿ ಅಲ್ಲ. ಹಾಗೆ ನೋಡಿದರೆ ಸ್ಟಾರ್ ಸಿನಿಮಾಗಳೇ ರಿಲೀಸ್ ಆಗಲು ಹಿಂದು ಮುಂದು ನೋಡುತ್ತಿರುವಾಗ ಈ ಚಿತ್ರ ಈಗಲೇ ರಿಲೀಸ್ ಆಗುತ್ತಿರುವುದು ಸಾಹಸ. ಸದ್ಯ ರಿಲೀಸ್ ಗೆ ರೆಡಿಯಾಗಿರುವ ಚಿತ್ರ ತಂಡ ಥ್ರಿಲ್ ಹುಟ್ಟಿಸುವ ಟ್ರೇಲರ್ ಮೂಲಕ ಕುತೂಹಲ ಹುಟ್ಟಿಸಿದೆ. ಜೀವನಲ್ಲಿ ಭಯ ಇರಬೇಕು, ಆದ್ರೆ ಭಯವೇ ಜೀವನವಲ್ಲ ಎನ್ನುವ ಸಂಭಾಷಣೆಯೇ ಹೇಳುತ್ತೆ ಇದೊಂದು ಪಕ್ಕಾ ಹಾರರ್ ಸಿನಿಮಾ ಅಂತ. ಅದು ಹೇಗೆ ಅಂತ ಸಿನಿಮಾ ನೋಡಿದಾಗಲೇ ಗೊತ್ತಾಗಲಿದೆ.
ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ನಾಳೆ(ಡಿ.೧೦) ಶಂಕುಸ್ಥಾಪನೆ
ಸಾಂದಾರ್ಬಿಕ ಚಿತ್ರ
ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಬಹುದಿನದ ಕನಸು ನನಸಾಗುತ್ತಿದೆ. ಸಂಘವು ತನ್ನದೇ ಸುಸಜ್ಜಿತವಾದ ಕಟ್ಟಡ ಹೊಂದಬೇಕೆನ್ನುವ ಬಹುದಿನದ ಆಸೆ ಕೊನೆಗೂ ಈಡೇರುತ್ತಿದೆ. ಬೆಂಗಳೂರಿನ ಶೇಷಾದ್ರಿಪುರಂನ ಶಿವಾನಂದ ಸರ್ಕಲ್ ಬಳಿ ಇರುವ ಸಂಘದ ಅಧಿಕೃತ ನಿವೇಶನದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ ಕಾರ್ಯಕ್ಕೆ ನಾಳೆ( ಡಿಸೆಂಬರ್ ೧೦) ಬೆಳಗ್ಗೆ ಶಂಕುಸ್ಥಾಪನೆ ಕಾರ್ಯಕ್ರಮ ನೆರವೇರಲಿದೆ. ಚಿತ್ರೋದ್ಯಮಕ್ಕೆ ಸದಾ ಸಹಕಾರ ನೀಡುತ್ತಾ ಬಂದಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಕಟ್ಟಡ ನಿರ್ಮಾಣ ಕಾರ್ಯಕ್ಕೆ ಶಂಕುಸ್ಥಾಪನೆ ನೆರವೇರಸಲಿದ್ದು, ಇದಕ್ಕೆ ಚಿತ್ರೋದ್ಯಮದ ಗಣ್ಯಾತೀಗಣ್ಯರು ಸಾಕ್ಷಿಯಾಗಲಿದ್ದಾರೆ.
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದನ್ನು ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ ಖಚಿತಪಡಿಸಿದ್ದು, ಕೊನೆಗೂ ಸಂಘದ ಬಹುದಿನದ ಕನಸು ನನಸಾಗುತ್ತಿರುವುದು ಸಂತಸ ಮೂಡಿಸಿದೆ ಎನ್ನುತ್ತಾರೆ.ಸಂಘವೇ ಖರೀದಿಸಿಟ್ಟುಕೊಂಡಿದ್ದ ವಿಶಾಲವಾದ ಜಾಗದಲ್ಲಿ ವಿಶೇಷ ವಿನ್ಯಾಸದ ಸುಸಜ್ಜಿತ ಕಟ್ಟಡ ನಿರ್ಮಾಣದ ಕನಸು ಹೊತ್ತಿರುವ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘವು, ಅಲ್ಲಿ ಏನೆಲ್ಲ ಇರಬೇಕು ಎನ್ನುವುದರ ನೀಲಿ ನಕ್ಷೆಯನ್ನು ಸಿದ್ದ ಪಡಿಸಿಕೊಂಡಿದೆ. ಮಿನಿ ಚಿತ್ರಮಂದಿರ, ಕನ್ನಡ ಚಿತ್ರರಂಗ ನಡೆದು ಬಂದ ಹಾದಿಗೆ ಸಂಬಂಧಿಸಿದ ಪುಸ್ತಕ ಹಾಗೂ ಡಿವಿಡಿಗಳ ಸಂಗ್ರಹಾಲಯದ ಜತೆಗೆ ಸಿನಿಮಾ ನಿರ್ಮಾಣಕ್ಕೆ ಪೂರಕವಾಗುವ ಇತರೆ ಸೌಲಭ್ಯಗಳು ಅಲ್ಲಿ ಲಭ್ಯ ಇರುವಂತೆ ನೋಡಿಕೊಳ್ಳುವ ಬಗ್ಗೆಯೂ ಚಿಂತನೆ ನಡೆಸಿದೆಯಂತೆ. ಇನ್ನು ಕನ್ನಡ ಚಿತ್ರರಂಗದ ಇತರೆ ಸಂಘ ಸಂಸ್ಥೆಗಳಿಗೆ ಇರುವಷ್ಟೇ ಇತಿಹಾಸ ಕನ್ನಡ ಚಲನ ಚಿತ್ರ ನಿರ್ಮಾಪಕರ ಸಂಘಕ್ಕೂ ಇದೆ.
ಇದು ನನ್ನ ಸೌಭಾಗ್ಯ. ನಾನು ಅಧ್ಯಕ್ಷನಾದ ಸಂದರ್ಭದಲ್ಲಿ ಸಂಘದ ಸ್ವಂತ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರುತ್ತಿದೆ, ಹಾಗೆಯೇ ಕಟ್ಟಡ ನಿರ್ಮಾಣ ಆಗುತ್ತಿದೆ ಎನ್ನುವುದು ಖುಷಿ ತಂದಿದೆ. ಹಾಗಂತ ನಾನೊಬ್ಬನೇ ಇದಕ್ಕೆ ಕಾರಣ ಆಲ್ಲ. ಆರಂಭದಿಂಲೂ ಇದಕ್ಕೆ ಹಲವು ಗಣ್ಯರು ಶ್ರಮಿಸಿದ್ದಾರೆ. ನಿರ್ಮಾಪಕ ಮುನಿರತ್ನ ಆವರು ನಿವೇಶನಕ್ಕಾಗಿ ಶ್ರಮಿಸಿದ್ದಾರೆ. ಅವರ ಪಟ್ಟ ಪರಿಶ್ರಮದ ಫಲದಿಂದಾಗಿ ಇವತ್ತು ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಾಣ ಆಗುತ್ತಿದೆ. ಈ ಹೊತ್ತಲ್ಲಿ ಸಂಘಕ್ಕೆ ನಾನು ಅಧ್ಯಕ್ಷ ಅನ್ನೋದು ನನ್ನ ಹೆಮ್ಮೆ. – ಪ್ರವೀಣ್ ಕುಮಾರ್, ಸಂಘದ ಅಧ್ಯಕ್ಷ
ಸಾಂದಾರ್ಬಿಕ ಚಿತ್ರ
ಚಿತ್ರರಂಗದಲ್ಲಿನ ನಿರ್ಮಾಪಕರ ಹಿತ ಕಾಪಾಡುವ ಸಲುವಾಗಿ ೧೯೮೨ ರಲ್ಲಿ ಈ ಸಂಘವು ಆಸ್ತಿತ್ವಕ್ಕೆ ಬಂತು. ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ನೇತೃತ್ವದಲ್ಲಿ ಅಂದು ಅಸ್ತಿತ್ವಕ್ಕೆ ಬಂದ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘಕ್ಕೆ ಎಚ್.ಎಂ.ಕೆ. ಮೂರ್ತಿ ಮೊದಲ ಅಧ್ಯಕ್ಷರಾದರು. ಆನಂತರ ಬಿ.ಎಂ. ವೆಂಕಟೇಶ್, ಶಾಸ್ತ್ರಿ, ಬಸಂತ್ ಕುಮಾರ್ ಪಾಟೀಲ್, ಸಂದೇಶ್ ನಾಗರಾಜ್ ಅಧ್ಯಕ್ಷರಾದರು. ಆನಂತರ ಸಂಘಕ್ಕೆ ಹಾಲಿ ಶಾಸಕ ಹಾಗೂ ನಿರ್ಮಾಪಕ ಮುನಿರತ್ನ ಅವರು ಆಧ್ಯಕ್ಷರಾದಾಗ ಸಂಘಕ್ಕೆ ಒಂದು ಸ್ವಂತ ಕಟ್ಟಡ ಬೇಕು, ಅದಕ್ಕೆ ಮೊದಲು ನಿವೇಶನ ಬೇಕು ಎನ್ನುವ ಚರ್ಚೆ ನಡೆಯಿತು. ಸಂಘದ ಇತರೆ ಪದಾಧಿಕಾರಿಗಳ ಸಹಕಾರದೊಂದಿಗೆ ಮುನಿರತ್ನ ಅವರೇ ಹೆಚ್ಚು ಆಸಕ್ತಿ ವಹಿಸಿ, ಬೆಂಗಳೂರಿನ ಶಿವಾನಂದ ಸರ್ಕಲ್ ಬಳಿಯೇ ಒಂದು ನಿವೇಶನ ಒದಗಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಅಲ್ಲಿಂದೀಗ ನಿರ್ಮಾಪಕ ಪ್ರವೀಣ್ ಕುಮಾರ್ ಅಧ್ಯಕ್ಷರಾಗಿದ್ದು, ಆವರ ಸೌಭಾಗ್ಯವೇ ಎನ್ನುವಂತೆ ಅವರ ಅವದಿಯಲ್ಲಿ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಚಾಲನೆ ಸಿಗುತ್ತಿದೆ. ಇದಕ್ಕೆ ನಿರ್ಮಾಪಕ ಪ್ರವೀಣ್ ಕುಮಾರ್ ಹರ್ಷ ವ್ಯಕ್ತಪಡಿಸಿದ್ದಾರೆ. ಇದೆಲ್ಲ ಸಂಘದ ಪದಾಧಿಕಾರಿಗಳ ಸಹಕಾರವೇ ಕಾರಣ ಎನ್ನುವುದು ಅವರ ಮಾತು.
ವಕೀಲರ ನೋಟಿಸ್ ಮೀರಿ ಬರ್ತಾರಾ ಸಿಎಂ?
ಕನ್ನಡ ಚಲನ ಚಿತ್ರ ನಿರ್ಮಾಪಕರ ಸಂಘದ ಪದಾಧಿಕಾರಿಗಳು ಶುಭ ಸಂದರ್ಭದಲ್ಲಿದ್ದಾರೆ. ಸಂಘಕ್ಕೆ ಸ್ವಂತ ಕಟ್ಟಡ ಬೇಕಿತ್ತು, ಅದೀಗ ಈಡೇರುತ್ತಿದೆ ಎನ್ನುವುದು ಅದಕ್ಕೆ ಕಾರಣ. ಆದು ಸಹಜವೂ ಹೌದು. ಒಂದು ಕಟ್ಟಡ ಬೇಕು ಅಂತ ಸಂಘದ ಪದಾಧಿಕಾರಿಗಳ ಆರಂಭದಿಂದಲೂ ಕಷ್ಟಪಟ್ಟಿದ್ದಾರೆ, ಆದರೆ ಅದಕ್ಕೆ ವಿಘ್ನ ಎನ್ನುವ ಹಾಗೆ ಸಂಘದ ಕಟ್ಟಡ ನಿರ್ಮಾಣ ಶಂಕು ಸ್ಥಾಪನೆ ಕಾರ್ಯಕ್ರಮಕ್ಕೆ ಸಿಎಂ ಯಡಿಯೂರಪ್ಪ ಭಾಗವಹಿಸುತ್ತಿರುವುದಕ್ಕೆ ವಕೀಲರ ಆಕ್ಷೇಪಣೆ ಇದೆ. ಸಂಘದ ಮೇಲಿರುವ ಆರೋಪಕ್ಕೆ ಸಂಬಂಧಿಸಿದಂತೆ ಜಿಲ್ಲಾ ಸಂಘಗಳ ನೊಂದಣಾಧಿಕಾರಿಗಳ ಮೂಲಕ ಹೈಕೋರ್ಟ್ ವಕೀಲರಾದ ಅಮೃತೇಶ್ ಅವರು ಮುಖ್ಯ ಮಂತ್ರಿ ಅವರಿಗೆ ಅಕ್ಷೇಪಣೆ ಪತ್ರ ಕಳುಹಿಸಿದ್ದಾರೆ. ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಚುನಾವಣೆ ಹಾಗೂ ಲೆಕ್ಕಪತ್ರ ವ್ಯವಹಾರಗಳಲ್ಲಿ ಲೋಪದೋಷಗಳಿವೆ. ಜಿಲ್ಲಾ ಸಂಘಗಳ ನೊಂದಣಾಧಿಕಾರಿಗಳ ಮುಂದೆ ಅವೀಗ ವಿಚಾರಣೆ ಹಂತದಲ್ಲಿವೆ.
ಕನ್ನಡದಲ್ಲಿ ಈಗಾಗಲೇ ಸಾಕಷ್ಟು ವಿಡಿಯೋ ಅಲ್ಬಂ ಸಾಂಗ್ ಬಂದಿವೆ. ಈಗಲೂ ಬರುತ್ತಿವೆ. ಆ ಸಾಲಿಗೆ ಈಗ ಮತ್ತೊಂದು ಹೊಸ ವಿಡಿಯೊ ಆಲ್ಬಂ ಸಾಂಗ್ ಬರಲು ಸಜ್ಜಾಗುತ್ತಿದೆ. ಅಂದಹಾಗೆ, ಅದೊಂದು ಪಾರ್ಟಿ ಫ್ರೀಕ್ ಹಾಡು. ಈ ಹಾಡಿನ ಮೂಲಕ ಹೊಸ ವರ್ಷದಲ್ಲಿ ಪಡ್ಡೆ ಹುಡುಗರಿಗೆ ಕಿಕ್ ಏರಿಸುವ ಪ್ರಯತ್ನ ನಡೆಯುತ್ತಿದೆ. ಇಂಥದ್ದೊಂದು ಪ್ರಯತ್ನಕ್ಕೆ ಕೈ ಹಾಕಿರೋದು, ಗಾಯಕ ಕಮ್ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ.
ಚಂದನ್ ಶೆಟ್ಟಿ
ಈ ಹಿಂದೆ ಚಂದನ್ ಶೆಟ್ಟಿ “ಮೂರೇ ಮೂರು ಪೆಗ್ಗಿಗೆ…” ., “ಟಕೀಲಾ…” ಎಂಬ ಪಾರ್ಟಿ ಸಾಂಗ್ ಮಾಡುವ ಮೂಲಕ ಸುದ್ದಿಯಾಗಿದ್ದರು. ಆ ಬಳಿಕ ಅವರು ಬೇರೆ ಜಾನರ್ ಹಾಡುಗಳನ್ನು ಮಾಡಿ, ಬಿಡುಗಡೆ ಮಾಡಿದ್ದರು. ಆದರೆ, ಚಂದನ್ ಶೆಟ್ಟಿ ಅವರು, ಪಾರ್ಟಿ ಸಾಂಗ್ ಯಾವಾಗ ಮಾಡುತ್ತಾರೆ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಈ ಬಾರಿ ಅವರು ಹಲವು ವಿಶೇಷಗಳೊಂದಿಗೆ ಬರುತ್ತಿದ್ದಾರೆ. ಈ ಹಾಡಿನ ವಿಶೇಷವೆಂದರೆ, ಕನ್ನಡದ ಜೊತೆಗೆ ತೆಲುಗಿನಲ್ಲಿಯೂ ಈ ಹಾಡು ಮೂಡಿ ಬರಲಿದ್ದು, ಅದ್ಧೂರಿ ವೆಚ್ಚದಲ್ಲಿ, ಕಲಲರ್ ಫುಲ್ ಆಗಿ ಎರಡು ದಿನಗಳ ಕಾಲ ಹಾಡಿನ ಚಿತ್ರೀಕರಣ ನಡೆಸಲು ತಯಾರಿ ನಡೆದಿದೆ. ಶೂಟಿಂಗ್ ನಡೆಯಲಿದೆ. ಸ್ಟಾರ್ ಹೋಟೆಲ್ ಮತ್ತು ಪಬ್ ಗಳಲ್ಲಿ ಈ ಹಾಡಿನ ಚಿತ್ರೀಕರಣ ನಡೆಯಲಿದೆ.
ನಿವೇದಿತಾ ಗೌಡ
ಈ ಹೊಸ ವಿಡಿಯೋ ಆಲ್ಬಂ ಸಾಂಗ್ಗೆ “ಪಾರ್ಟಿ ಫ್ರೀಕ್” ಎಂಬ ಹೆಸರಿಟ್ಟಿದ್ದಾರೆ. ಇನ್ನು, ಚೈತನ್ಯ ಲಕಂಸಾನಿ ಅವರು ಈ ವಿಡಿಯೋ ಸಾಂಗ್ ನಿರ್ಮಾಣ ಮಾಡುತ್ತಿದ್ದಾರೆ. ಚಂದನ್ ಶೆಟ್ಟಿ ಸಂಗೀತ ನೀಡಿ, ಸಾಹಿತ್ಯ ಬರೆದು ಹಾಡಿದ್ದಾರೆ ಕೂಡ. ಅಷ್ಟೇ ಅಲ್ಲ, ಆ ಹಾಡಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ನಟಿ ನಿಶ್ವಿಕಾ ನಾಯ್ಡು ಈ ಹಾಡಲ್ಲಿ ಸ್ಟೆಪ್ ಹಾಕುತ್ತಿರುವುದು ಮತ್ತೊಂದು ವಿಶೇಷ. ಇನ್ನೊಂದು ವಿಶೇಷವೆಂದರೆ, ಚಂದನ್ ಶೆಟ್ಟಿ ಪತ್ನಿ ನಿವೇದಿತಾ ಗೌಡ ಅವರು ಕೂಡ ಈ ಹಾಡಲ್ಲಿ ಹೆಜ್ಜೆ ಹಾಕಲಿದ್ದಾರೆ. ವಿಶೇಷ ಪಾತ್ರದಲ್ಲಿ ನಟ ಧರ್ಮ ಅವರೂ ಇಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಹಾಡಿಗೆ ಶ್ರೀಶ ಕುದುವಳ್ಳಿ ಛಾಯಾಗ್ರಹಣ ಮಾಡಿದರೆ, ಅಜಿತ್ ಶ್ರೀರವಿ ವಸ್ತ್ರ ವಿನ್ಯಾಸ ಮಾಡಲಿದ್ದಾರೆ. ಹಾಡಿಗೆ ಮೋಹನ್ ಮಾಸ್ಟರ್ ನೃತ್ಯ ನಿರ್ದೇಶನ ಮಾಡಲಿದ್ದಾರೆ. ಈ ಹಾಡನ್ನು ಡಿಸೆಂಬರ್ 26 ರಂದು ಯುನೈಟ್ ಆಡಿಯೋದಲ್ಲಿ ಬಿಡುಗಡೆಯಾಗಲಿದೆ.
ಯಶಸ್ಸಿಗೆ ಕಾರಣರಾದವರಿಗೆ ಧನ್ಯವಾದ ಹೇಳಿದ ಕುಮಾರ್ ಗೋವಿಂದ್
ನಟ ಕುಮಾರ್ ಗೋವಿಂದ್ ಖುಷಿಯಲ್ಲಿದ್ದಾರೆ. ಅದಕ್ಕೆ ಕಾರಣ ” ಅನುರಾಗ ಸಂಗಮ” ಚಿತ್ರ. ಕುಮಾರ್ ಗೋವಿಂದ್, ರಮೇಶ್, ಸುಧಾರಾಣಿ ಹಾಗೂ ಬಿ. ಸರೋಜಾ ದೇವಿ ಅಭಿನಯದ ” ಅನುರಾಗ ಸಂಗಮ” ಚಿತ್ರ ತೆರೆ ಕಂಡು ಸೋಮವಾರಕ್ಕೆ 25 ವಸಂತ ತುಂಬಿತು. ಇದೇಕಾರಣಕ್ಕೆ ನಟ ಕುಮಾರ್ ಗೋವಿಂದ್ ಸಂತಸ ವ್ಯಕ್ತಪಡಿಸಿದ್ದು, ಆಗ ಚಿತ್ರದ ಯಶಸ್ಸಿಗೆ ಶ್ರಮಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ವಿ. ಉಮಾಕಾಂತ್ ನಿರ್ದೇಶನದಲ್ಲಿ ಮೂಡಿಬಂದಿದ್ದ ” ಅನುರಾಗ ಸಂಗಮ ” ಚಿತ್ರವು 1995ಡಿಸೆಂಬರ್ 8 ರಂದು ತೆರೆ ಕಂಡಿತ್ತು.
ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ಈ ಚಿತ್ರವು ೨೫ ವಾರಗಳ ಯಶಸ್ವಿ ಪ್ರದರ್ಶನ ಕಂಡಿತ್ತು. ವಿ. ಮನೋಹರ್ ಸಂಗೀತ ನಿರ್ದೇಶನದ ಈ ಚಿತ್ರದಲ್ಲಿ ಎಸ್ ಪಿಬಿ ಹಾಗೂ ರಮೇಶ್ ಚಂದ್ರ ಹಾಡಿದ್ದ ಹಾಡುಗಳು ಈಗಲೂ ಬಲು ಜನಪ್ರಿಯ. ಅಷ್ಟೇ ಅಲ್ಲ, ಗಾಯಕ ರಮೇಶ್ ಚಂದ್ರ ಅವರಿಗೆ ಈ ಚಿತ್ರದ ಗೀತೆಯ ಮೂಲಕ ರಾಜ್ಯ ಪ್ರಶಸ್ತಿಯೂ ಬಂತು. ಭಾರತದ ಇತರ ಭಾಷೆಗಳಿಗೂ ಈ ಚಿತ್ರದ ರಿಮೇಕ್ ಹಕ್ಕು ಮಾರಾಟವಾಗಿ ಅಲ್ಲೂ ಯಶಸ್ವಿಯಾಗಿದೆ. ಎಸ್.ಕೆ ಫಿಲಂಸ್ ಮೂಲಕ ಡಿ. ಗೋವಿಂದಪ್ಪ ಈ ಚಿತ್ರ ನಿರ್ಮಾಣ ಮಾಡಿದ್ದರು. ನಟ ಕುಮಾರ್ ಗೋವಿಂದ್ ಆವರಿಗೂ ಈ ಚಿತ್ರ ಭರ್ಜರಿ ವರ್ಚಸ್ಸು ತಂದುಕೊಟ್ಟಿದ್ದು ಗಮನಾರ್ಹ.ಈ ಹಿನ್ನೆಲೆಯಲ್ಲಿ ಅವರು ಅಂದು ʼ ಅನುರಾಗ ಸಂಗಮʼ ಚಿತ್ರದ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ ನಟ ಕುಮಾರ್ ಗೋವಿಂದ್.