ದುನಿಯಾ ವಿಜಯ್ ನಿರ್ದೇಶಿಸಿ, ನಾಯಕರಾಗಿ ಅಭಿನಯಿಸಿರುವ ʼಸಲಗʼ ಚಿತ್ರ ಹೊಸ ವರ್ಷದಲ್ಲಿ ಭರ್ಜರಿಯಾಗಿಯೇ ಅಬ್ಬರಿಸಲು ಸಕಲ ರೀತಿಯಲ್ಲೂ ಸಜ್ಜಾಗುತ್ತಿದೆ. ಸದ್ಯಕ್ಕೆ ಅದರ ರಿಲೀಸ್ ದಿನಾಂಕ ಫಿಕ್ಸ್ ಆಗಿಲ್ಲ. ಆದರೆ ಫೆಬ್ರವರಿ ಅಥವಾ ಮಾರ್ಚ್ ನಲ್ಲಿ ಚಿತ್ರಮಂದಿರಕ್ಕೆ ʼಸಲಗʼಎಂಟ್ರಿ ಆಗುವುದು ಖಚಿತ ಅನ್ನುವ ಮಾತುಗಳು ಚಿತ್ರ ತಂಡದಿಂದ ಕೇಳಿಬರುತ್ತಿವೆ. ಒಟ್ಟಿನಲ್ಲಿ ಹೊಸ ವರ್ಷದ ಆರಂಭದಲ್ಲೇ ಚಿತ್ರವನ್ನು ತೆರೆಗೆ ತರಲು ಮುಂದಾಗಿರುವ ಚಿತ್ರತಂಡ ಅದಕ್ಕೆ ಪೂರಕವಾಗಿ ಹೊಸ ವರ್ಷದ ದಿನ ಚಿತ್ರದ ಸ್ಪೆಷಲ್ ಪೋಸ್ಟರ್ ಲಾಂಚ್ ಮಾಡುತ್ತಿದೆ.
ಆ ಮೂಲಕ ಮೂಲಕ ಚಿತ್ರದ ಪ್ರಚಾರಕ್ಕೆ ಭರ್ಜರಿ ಚಾಲನೆ ನೀಡುತ್ತಿದೆ. ಈಗಾಗಲೇ ಸಲಗ ಚಿತ್ರದ ಸಾಕಷ್ಟು ಲುಕ್, ಸ್ಟಿಲ್ ರಿವೀಲ್ ಆಗಿವೆ. ಆದರೆ ಈಗ ಚಿತ್ರ ತಂಡ ಅನಾವರಣ ಮಾಡುತ್ತಿರುವ ಪೋಸ್ಟರ್ ಸ್ಪೆಷಲ್ ಏನು ಎನ್ನುವುದು ನಿಗೂಢವಾಗಿದೆ. ನಿರ್ಮಾಪಕ ಶ್ರೀಕಾಂತ್, ಇದೊಂದು ವಿಶೇಷ, ವಿಭಿನ್ನ ಲುಕ್. ಆ ಕಾರಣಕ್ಕಾಗಿಯೇ ಚಿತ್ರ ತಂಡವು ಸ್ಪೆಷಲ್ ಪೋಸ್ಟರ್ ಅಂತಲೇ ಲಾಂಚ್ ಮಾಡುತ್ತಿದೆ. ಅದು ಹೊರ ಬಂದಾಗ ಗೊತ್ತಾಗಲಿದೆ ಅದರ ವಿಶೇಷತೆ ಏನು ಅಂತ ಎನ್ನುವ ಮೂಲಕ ಪೋಸ್ಟರ್ ಬಗ್ಗೆ ಸಿನಿಮಾ ಪ್ರೇಕ್ಷಕರಲ್ಲಿ ಕುತೂಹಲ ಸೃಷ್ಟಿಸುತ್ತಾರೆ. ಇದುವರೆಗೂ ನಾಯಕ ನಟರಾಗಿ, ನಿರ್ಮಾಪಕರಾಗಿ ಸದ್ದು ಮಾಡಿರುವ ದುನಿಯಾ ವಿಜಯ್ ಇದೇ ಮೊದಲು ನಿರ್ದೇಶಿಸಿದ ಸಿನಿಮಾ ಇದು. ಹಾಗೆಯೇ ಚಿತ್ರಕ್ಕೆ ಕತೆ, ಚಿತ್ರಕತೆ ಕೂಡ ಅವರದೇ. ಇದರ ಜತೆಗೆ ಚಿತ್ರದ ನಾಯಕ ನಟ ಕೂಡ ಅವರೆ.
ಉಳಿದಂತೆ ಅವರೊಂದಿಗೆ ಸಂಜನಾ ಆನಂದ್ ನಾಯಕಿಯಾಗಿ ಕಾಣಿಸಿಕೊಂಡರೆ, ಡಾಲಿ ಧನಂಜಯ್, ಕಾಕ್ರೋಚ್ ಸುಧಿ, ಯಶ್ ಶೆಟ್ಟಿ ಮತ್ತಿತರರು ಪ್ರಮುಖ ಪಾತ್ರಗಳಲ್ಲಿದ್ದಾರೆ. ಇನ್ನು ಇದೊಂದು ಫುಲ್ ಮಾಸ್ ಮೂವೀ. ಲವ್, ಸೆಂಟಿಮೆಂಟ್, ಆಕ್ಷನ್ ಜತೆಗೆ ಭರ್ಜರಿ ಮನರಂಜನೆ ಇಲ್ಲಿ ಗ್ಯಾರಂಟಿ. ಅದೇ ಕಾರಣಕ್ಕೆ ಸಲಗ ಸ್ಯಾ ಂಡಲ್ ವುಡ್ ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ದುನಿಯಾ ವಿಜಯ್ ಅಭಿಮಾನಿಗಳ ಜತೆಗೆ ಸಿನಿಮಾ ಪ್ರೇಕ್ಷಕರು ಬಹು ಕಾತರದಿಂದ ಕಾಯುತ್ತಿದ್ದಾರೆ.
ಕನ್ನಡದಲ್ಲಿ ಹೊಸಬರ ಕಲರವ ಕೊಂಚ ಹೆಚ್ಚೇ ಆಗುತ್ತಿದೆ. ಸದ್ಯಕ್ಕೆ ಹೊಸಬರ ಸಾಲು ಸಾಲು ಸಿನಿಮಾಗಳು ರಿಲೀಸ್ ಆಗಲು ತಯಾರಾಗಿವೆ. ಅವುಗಳ ಸಾಲಿಗೆ “ಖೇಲ್” ಎಂಬ ಸಿನಿಮಾವೂ ಇದೆ.
ಹೌದು, ಖೇಲ್ ಇದು ಹೊಸಬರ ಸಿನಿಮಾ. ಈ ಚಿತ್ರದಲ್ಲಿ ಬಹುತೇಕ ಹೊಸ ಪ್ರತಿಭೆಗಳೇ ತುಂಬಿವೆ.
ಚಿತ್ರವನ್ನು ರಾಜೀವ್ ನಾಯಕ್ ನಿರ್ದೇಶಿಸಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಜವಾಬ್ದಾರಿಯೂ ಇವರದೇ. ಸತೀಶ್ ಎಚ್. ನಿರ್ಮಾಣ ಮಾಡಿದ್ದಾರೆ.
ದಿಲೀಪ್ ಪಿರಿಲಿಯಾ ಕ್ಯಾಮೆರಾ ಹಿಡಿದರೆ, ಬ್ಲೂ ಸ್ಟಾರ್ ಸಂತೋಷ್ ಅವರ ಸಾಹಸವಿದೆ. ಗಣೇಶ್ ಭಗವತ್ ಅವರು ಸಂಗೀತ ನೀಡಿದ್ದಾರೆ.
ಇದೊಂದು ಮೈಂಡ್ ಗೇಮ್ ಕುರಿತ ಸಿನಿಮಾ. ಇಲ್ಲಿ ನಾಯಕ, ನಾಯಕಿ ಮತ್ತು ವಿಲನ್ ನಡುವಿನ ಮೈಂಡ್ ಗೇಮ್ ಕಥೆ ಇದೆ.
ಇಲ್ಲಿ ಹೀರೋಗಿರುವಷ್ಟೇ ಜಾಗ ವಿಲನ್ ಗೂ ಇದೆ. ಚಿತ್ರದಲ್ಲಿ ಖಳನಾಯಕರಾಗಿ ಪೃಥ್ವಿ ನಟಿಸಿದ್ದಾರೆ.
ತಮ್ಮ ಚಿತ್ರದ ಬಗ್ಗೆ ಹೇಳುವ ಪೃಥ್ವಿ, “ಇದೊಂದು ಮೈಂಡ್ ಗೇಮ್ ಸಿನಿಮಾ. ಒಂದು ವಸ್ತು ಮೂಲಕ ಕಥೆ ಶುರುವಾಗುತ್ತೆ. ಇಡೀ ಸಿನಿಮಾದಲ್ಲೇ ಆ ವಸ್ತು ಹೈಲೈಟ್. ಅದನ್ನು ಈಗಲೇ ರಿವೀಲ್ ಮಾಡಿದರೆ ಕಥೆ ಓಪನ್ ಆಗುತ್ತೆ. ಒಟ್ಟಾರೆ, ಇದೊಂದು ಯೂಥ್ ಕಾನ್ಸೆಪ್ಟ್ ಸಿನಿಮಾ.
ಇಲ್ಲಿ “ಖೇಲ್” ಅನ್ನೋದು ಮೂರು ಪಾತ್ರಗಳ ಕಥೆಯಲ್ಲಿ ಬರುವ ಪ್ರಮುಖ ಆಟ. ಕನ್ನಡದಲ್ಲಿ “ಆಟ” ಅಂತ ಹೆಸರಿಡಬಹುದಾಗಿತ್ತು. ಆದರೆ, ಆ ಶೀರ್ಷಿಕೆ ಇದ್ದುದರಿಂದ ಕಥೆಗೆ ಪೂರಕವಾಗಿ ಇರುತ್ತೆ ಎಂಬ ಕಾರಣಕ್ಕೆ “ಖೇಲ್” ಶೀರ್ಷಿಕೆ ಇಡಲಾಗಿದೆ. ಸಿನಿಮಾ ನೋಡಿದವರಿಗೆ ಶೀರ್ಷಿಕೆ ಪಕ್ಕಾ ಎನಿಸುತ್ತದೆ ಎನ್ನುತ್ತಾರೆ ಪೃಥ್ವಿ.
ಚಿತ್ರದಲ್ಲಿ ಅರವಿಂದ್, ಹಿಮಾ ಮೋಹನ್ ನಾಯಕ, ನಾಯಕಿಯಾದರೆ, ಪೃಥ್ವಿ ವಿಲನ್. ಪೃಥ್ವಿ ಈಗಾಗಲೇ ಕನ್ನಡದಲ್ಲಿ ಸುಮಾರು 60ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದು, ಈ ” ಖೇಲ್” ಚಿತ್ರದಲ್ಲಿ ಪ್ರಮುಖ ಖಳನಾಯಕರಾಗಿದ್ದಾರೆ.
ಉಳಿದಂತೆ ಗೌತಮ್ ರೈ, ಶಿವರಾಜ್, ಸಂತೋಷ್, ರಾಜೇಶ್ ಇತರರು ಇದ್ದಾರೆ.
ಈಗಾಗಲೇ ಚಿತ್ರದ ಹಾಡುಗಳು ಹೊರಬಂದಿವೆ. ಇತ್ತೀಚೆಗೆ ಪುನೀತ್ ಅವರು ಫಸ್ಟ್ ಲುಕ್ ಬಿಡುಗಡೆ ಮಾಡಿ ಶುಭಕೋರಿದ್ದಾರೆ. ಎರಡನೇ ಲುಕ್ ಗೆ ನಿರ್ದೇಶಕ ಶಿವಗಣೇಶ್ ಮಾಡಿ ಶುಭ ಹಾರೈಸಿದ್ದಾರೆ.
ಚಿಂತಾಮಣಿ ಸುತ್ತಮುತ್ತಲಿನ ತಾಣಗಳಲ್ಲಿ ಶೂಟಿಂಗ್ ಮಾಡಲಾಗಿದೆ.
ಸದ್ಯಕ್ಕೆ ರಿಲೀಸ್ ಆಗಲು ತಯಾರಾಗಿದೆ. ಜನವರಿಯಲ್ಲಿ ಪ್ರೇಕ್ಷಕರ ಮುದೆ ತರುವ ಯೋಚನೆ ನಿರ್ದೇಶಕರದ್ದು.
ಇತ್ತೀಚೆಗಷ್ಟೇ ವಿಷ್ಣುವರ್ಧನ್ ಅವರ ಪ್ರತಿಮೆ ಭಗ್ನಗೊಳಿಸಿದ್ದ ಸುದ್ದಿ ಕೇಳಿ ಅಪಾರ ಅಭಿಮಾನಿಗಳು ಬೇಸರಗೊಂಡಿದ್ದರು. ಇಡೀ ಚಿತ್ರರಂಗವೇ ಕಿಡಿಗೇಡಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತ್ತು. ಡಿಸೆಂಬರ್ ೩೦ರಂದು ವಿಷ್ಣುವರ್ಧನ್ ಅವರ ಹನ್ನೊಂದನೇ ಪುಣ್ಯಸ್ಮರಣೆ ಅಂಗವಾಗಿ ಡಾ.ವಿಷ್ಣುವರ್ಧನ ಕನ್ನಡ ಸೇನಾ ಸಮಿತಿ ವತಿಯಿಂದ ವಿಜಯನಗರದಲ್ಲಿ ಇಂದು ಡಾ.ವಿಷ್ಣುವರ್ಧನ್ ಅವರ ಪುತ್ಥಳಿ ಅನಾವರಣ ಮಾಡುವ
ಮೂಲಕ ಅಪಾರ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಯಿತು. ಈ ಸಂದರ್ಭದಲ್ಲಿ ವಿಜಯನಗರ ಶಾಸಕರಾದ ಕೃಷ್ಣಪ್ಪ, ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ, ಅಧ್ಯಕ್ಷರಾದ ಮೂರ್ತಿ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.
ಎಂಆರ್…
ಕನ್ನಡ ಚಿತ್ರರಂಗದಲ್ಲಿ ಒಂದು ಮಟ್ಟಿಗೆ ಸಂಚಲನ ಮೂಡಿಸಿದ ಹೆಸರಿದು. ವಿಷಯವಿಷ್ಟೇ, ಇತ್ತೀಚೆಗಷ್ಟೇ ನಿರ್ದೇಶಕ ರವಿಶ್ರೀವತ್ಸ ಅವರು, ಮುತ್ತಪ್ಪ ರೈ ಅವರ ಕುರಿತ “ಎಂಆರ್” ಸಿನಿಮಾ ಮಾಡುವುದಾಗಿ ಅನೌನ್ಸ್ ಮಾಡಿದ್ದರು. ಅಷ್ಟೇ ಅಲ್ಲ, ಮುಹೂರ್ತ ಕೂಡ ನಡೆಸಿದ್ದರು. ನಿರ್ಮಾಪಕ ಶೋಭರಾಜಣ್ಣ ಅವರ ಪುತ್ರನನ್ನು ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಹೀರೋ ಆಗಿ ಪರಿಚಯಿಸಿದ್ದರು. ಆದರೆ, ದಿಢೀರನೆ, ನಿರ್ಮಾಪಕ ಪದ್ಮನಾಭ್ ಅವರು, “ಎಂಆರ್” ಸಿನಿಮಾವನ್ನು ನಾನು ಮಾಡುತ್ತಿದ್ದೇನೆ. ಬೇರೆ ಯಾರೂ ಮಾಡುವಂತಿಲ್ಲ. ಆ ರೈಟ್ಸ್ ನನ್ನ ಬಳಿ ಇದೆ. ಈ ಹಿಂದೆಯೇ, ರೈಟ್ಸ್ ಪಡೆದಿದ್ದಾಗಿ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೊಂಡಿದ್ದರು.
ಅದೊಂದು ರೀತಿ ಗೊಂದಲವೂ ಮೂಡಿಸಿತ್ತು. ಅದಕ್ಕೆ ಉತ್ತರವಾಗಿ, ರವಿಶ್ರೀವತ್ಸ ಅವರು ಸಹ ಒಂದು ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಅಷ್ಟೇ ಅಲ್ಲ, ತಮ್ಮ ಚಿತ್ರ “ಎಂಆರ್” ಅಲ್ಲ, “ಡಿಆರ್” ಎಂದು ಹೇಳಿಕೊಂಡಿದ್ದಾರೆ. ಹಿಂದೆ “ಎಂಆರ್” ಸಿನಿಮಾಗೆ ಆಯ್ಕೆ ಮಾಡಿಕೊಂಡಿದ್ದ ಟೀಮ್ ಮತ್ತು ಕಲಾವಿದರೇ ಇಲ್ಲೂ ಕೆಲಸ ಮಾಡಲಿದ್ದಾರೆ. ಆದರೆ, ಇದು ಬ್ಯಾಂಕಾಕ್, ಮಂಗಳೂರು ಸುತ್ತಮುತ್ತಲ ಕಥೆಯಲ್ಲ. ಹಳೆಯ ತಂಡದ ಜೊತೆಗೆ ಈಗ “ಡಿಆರ್” ಸಿನಿಮಾ ಮಾಡುತ್ತಿರುವುದಾಗಿ ಹೇಳಿದ್ದಲ್ಲದೆ, ಪೋಸ್ಟರ್ವೊಂದನ್ನು ರಿಲೀಸ್ ಮಾಡಿದ್ದಾರೆ. ಆದರೆ, ಇದು ಮುತ್ತಪ್ಪ ರೈ ಅವರದೇ ಕಥೆನಾ? ಇದಕ್ಕೆ ಉತ್ತರವಿಲ್ಲ. ಆದರೂ ಇದು ಮುತ್ತಪ್ಪ ರೈ ಅವರ ಕುರಿತಾದ ಕಥೆಯೇ ಎಂದು ಹೇಳಲಾಗುತ್ತಿದೆ. ನಿರ್ದೇಶಕರು ಮಾತ್ರ, ಅದನ್ನು ರಿವೀಲ್ ಮಾಡದೆ, ಇದು ಎಂಆರ್ ಅಲ್ಲ, ಡಿಆರ್ ಎಂದಷ್ಟೇ ಹೇಳಿದ್ದಾರೆ.
ರವಿ ಶ್ರೀವತ್ಸ ಅವರ “ಎಂಆರ್” ಸಿನಿಮಾ ಸ್ಟಾಪ್ ಆಗಿದೆ. ಈಗವರು ಹೊಸ ಸಿನಿಮಾ ಶುರು ಮಾಡಿದ್ದು, ಹೊಸ ಟೈಟಲ್ ಪೋಸ್ಟರ್ ಲಾಂಚ್ ಮಾಡಿದ್ದಾರೆ. ಚಿತ್ರಕ್ಕೆ ದೀಕ್ಷಿತ್ ಹೀರೋ. ತಮ್ಮ ಸಿನಿಮಾ ಕುರಿತು ಅವರು ಹೇಳಿದ್ದಿಷ್ಟು. “ನೋವಾಗುತ್ತೆ, ತುಂಬಾ ಒಳ್ಳೆಯ ವೆಲ್ ಕಮ್ ಸಿಗುತ್ತೆ. ಅಂತ ಅಂದುಕೊಂಡಿದ್ದೆ. ನಂಗೆ ಗೊತ್ತಾಗಿದೆ. ಖಂಡಿತವಾಗ್ಲೂ ದೊಡ್ಡ ಮಟ್ಟಕ್ಕೆ ಹೆಸರುಮಾಡ್ತೀವಿ” ಎಂದಿದ್ದಾರೆ.
ನಿರ್ಮಾಪಕ ಶೋಭಾ ರಾಜಣ್ಣ ಅವರು ಮಾತನಾಡಿ, “ಸಕ್ಸಸ್ ಆಗುತ್ತೆ ಅಂತಾಲೇ ಈ ಚಿತ್ರ ಮಾಡಬೇಕು ಅಂತ ಹೊರಟಿದ್ದೇವೆ. ಇಷ್ಟು ವರ್ಷ ಇಂಡಸ್ಟ್ರಿಯಲ್ಲಿದ್ದೇನೆ. ಯಾರೂ ನಿರ್ಮಾಪಕರಿಗೆ ಟಾರ್ಚರ್ ಕೊಡ್ಬೇಡಿ. ನಿಮ್ಮ ಮಕ್ಕಳ ಚಿತ್ರವಾಗಿದ್ದರೆ ಏನು ಮಾಡ್ತಾ ಇದ್ರಿ. ಅವರು ಮಾಡಲಿ, ಅವರು ಮಾಡಿದ ಬಳಿಕ ನಾವು ಮಾಡ್ತೀವಿ.
ಚಿತ್ರದಲ್ಲಿ ನಟಿಸುತ್ತಿರುವ ಪ್ರಶಾಂತ್ ಸಂಬರಗಿ ಮಾತನಾಡಿ,”ಇವತ್ತಿಗೂ ನಾವು ಲೀಗಲ್ ಆ್ಯಬಿಟ್ನಲ್ಲಿಯೇ ಇದ್ದೇವೆ . ಮುತ್ತಪ್ಲ ರೈ ಪಾಪಿಗಳ ಲೋಕ ಆರು ತಿಂಗಳು ಓಡಾಡಿದ್ದೇನೆ ಎನ್ನುವ ಕಾರಣಕ್ಕೆ ಇದನ್ನ ಮಾಡಬಹುದು. ನಾವು ಅವರ ಬಗ್ಗೆ ರಿಸರ್ಚ್ ಮಾಡಿದ್ದೇವೆ. ಅವರನ್ನು ದೂರ ಇಟ್ಟಿದ್ದರು. ನಾವು ಅವರ ಬಗ್ಗೆ ಡೀಟೈಲ್ ಸ್ಟಡಿ ಮಾಡಿದ್ದೇವೆ ಎಂದರು.
ಚಂದ್ರ ಚೂಡ್ ಮಾತನಾಡಿ,” ಯಾವುದೇ ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಯ, ಸಿನಿಮಾ ಮಾಡಲು ಅಪ್ಪಣ ಬೇಕಿಲ್ಲ. ಶಾಂತವೇರಿ ಗೋಪಾಲ ಗೌಡ ಅವರ ಪ್ರಕರಣದಲ್ಲಿ ಹಿಂದೆ ಇದ್ದ ಇಂಜೆಕ್ಷನ್ ಆರ್ಡರ್ ಕ್ಯಾನ್ಸಲ್ ಆಗಿದೆ. ಕಾನೂನಾತ್ಮಕವಾಗಿ ಪರಿವರ್ತಿಸಲು ವ್ಯಕ್ತಿಗಳ ಅಪ್ಪಣೆ ಬೇಕಿಲ್ಲ. ದೊಣ್ಣೆ ನಾಯಕನ ಅನುಮತಿಯೂ ಬೇಕಿಲ್ಲ ಎಂದರು.
ನಿರ್ದೇಶಕ ರವಿ ಶ್ರೀವತ್ಸ ಮಾತನಾಡಿ, “ನಾಲ್ಕು ಸಿನಿಮಾಗಳು ಬ್ಯಾನ್ ಆದ ಜಾಗ ಇದು. ಕಟ್ಸ್ ಕೊಟ್ಟಿದ್ದು ಇಲ್ಲಿಯೇ. ನಾನು ಎಂಆರ್ ಬಗ್ಗೆ ಸ್ಟಡಿ ಮಾಡಿದ್ದೇನೆ. ಸಿಡ್ನಿಗೂ ಹೋಗಿ ಮಾಹಿತಿ ಕಲೆ ಹಾಕಿದ್ದೆ. ಆದರೆ ಆಗ ಸಿನಿಮಾ ಮಾಡಲು ಸಾಧ್ಯವಾಗಲಿಲ್ಲ. ಆರ್ಜಿವಿ ಕಥೆಯಾದರೆ, ಸರ್ಕಾರಕ್ಕೆ ಡಾಕ್ಯುಂಎಂಟ್ ಆಗುತ್ತೆ ಎಂಬ ಭಯದಿಂದ ಮಾಡಲಾಗಲಿಲ್ಲ. ನಾನು ಸಿನಿಮಾ ಬಿಟ್ಟುಕೊಡ್ತೀನಿ. ಅವರು ಮಾಡಿ ರಿಲೀಸ್ ಮಾಡಿದ ಬಳಿಕ ನಾನು ಈ ಸಿನಿಮಾ ಮಾಡ್ತೀನಿ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕ ಶೋಭರಾಜಣ್ಣ, ಪ್ರಶಾಂತ್ ಸಂಬರಗಿ, ಉಮೇಶ್ ಬಣಕಾರ್ ಇತರರು ಇದ್ದರು. ಅದೇನೆ ಇರಲಿ, ಪೋಸ್ಟರ್ ಅನ್ನು ಸೂಕ್ಷ್ಮವಾಗಿ ಗಮನಿಸಿದರೆ, “ಎಂಆರ್” ಶೀರ್ಷಿಕೆ ಬದಲಾಗಿ “ಡಿಆರ್” ಎಂದು ಇಡಲಾಗಿದೆ ಎಂಬುದಂತೂ ಸ್ಪಷ್ಟವಾಗುತ್ತದೆ. ಎಲ್ಲದ್ದಕ್ಕೂ ಸಿನಿಮಾ ಮುಗಿದು ಹೊರಬಂದ ಮೇಲಷ್ಟೇ ಗೊತ್ತಾಗಲಿದೆ. ಹಾಗಾದರೆ, ಮುಂದಾ..? ಕಾದು ನೋಡಬೇಕು.
“ಮಹಿಷಾಸುರ…” ಇದು ಸಿನಿಮಾದ ಹೆಸರು. ಈಗಾಗಲೇ ಚಿತ್ರದ ಚಿತ್ರೀಕರಣ ಮುಗಿದು ಬಿಡುಗಡೆಗೂ ಸಜ್ಜಾಗಿದೆ. ಸಾಮಾನ್ಯವಾಗಿ ಯಾರೂನು ಹುಟ್ಟುವಾಗಲೇ ವಿಲನ್ ಆಗೋದಿಲ್ಲ. ಆದರೆ, ಕೆಲವರು ಮಹಿಷಾಸುರನಂತೆ ಮಾಡಿಬಿಡುತ್ತಾರೆ. ಪ್ರಸ್ತುತ ರಾಜಕಾರಣಿಗಳು ತಮ್ಮ ವೋಟ್ಬ್ಯಾಂಕ್ಗೋಸ್ಕರ ಯುವ ಜನರನ್ನು ಹೇಗೆಲ್ಲಾ ಬಳಸಿಕೊಳ್ಳುತ್ತಾರೆ ಎಂಬುದರ ಸುತ್ತ ಈಗಾಗಲೇ ಸಾಕಷ್ಟು ಸಿನಿಮಾಗಳು ಬಂದಿವೆ. ಆ ಸಾಲಿಗೆ ಈಗ “ಮಹಿಷಾಸುರ” ಸಿನಿಮಾ ಸೇರಿದೆ. ನಿರ್ದೇಶಕ ಉದಯ ಪ್ರಸನ್ನ ಅವರು ತಮ್ಮ ಈ ಚಿತ್ರದ ಮೂಲಕ ಒಂದಷ್ಟು ವಾಸ್ತವ ಅಂಶಗಳನ್ನಿಟ್ಟುಕೊಂಡು ಸಿನಿಮಾ ಮಾಡಿದ್ದಾರೆ.
ಸಂಜಯ್ ಕುಲಕರ್ಣಿ, ವಿಜಯಕುಮಾರ್ ಸೇರಿದಂತೆ ಹಲವಾರು ನಿರ್ದೇಶಕರ ಬಳಿ ಕೆಲಸ ಮಾಡಿರುವ ಉದಯ ಪ್ರಸನ್ನ ಅವರಿಗೆ ಇದು ಮೊದಲ ಪ್ರಯತ್ನ. ಇದೊಂದು ತ್ರಿಕೋನ ಪ್ರೇಮಾಕಥಾ ಹಂದರ ಇರುವ ಚಿತ್ರ. ಈಗಾಗಲೇ ಚಿತ್ರದ ಟ್ರೇಲರ್ ಡಿ-ಬೀಟ್ಸ್ ಆಡಿಯೋ ಮೂಲಕ ಬಿಡುಗಡೆಯಾಗಿದ್ದು, ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ. ಇತ್ತೀಚೆಗೆ ಈ ಚಿತ್ರದ ಆಡಿಯೋಗೆ ಸಾಹಿತಿ ನಿರ್ದೇಶಕ ಕವಿರಾಜ್ ಬಿಡುಗಡೆ ಮಾಡಿದ್ದರು. ಜನವರಿಯಲ್ಲಿ ಪ್ರೇಕ್ಷಕರ ಎದುರು ಬಿಡುಗಡೆ ಮಾಡಲು ಚಿತ್ರತಂಡ ಯೋಚಿಸಿದೆ. ಮೇಲುಕೋಟೆ ಟೂರಿಂಗ್ ಟಾಕೀಸ್ ಮೂಲಕ ಪಾರ್ವತಿ ಚಂದ್ರಶೇಖರ್, ಲೀಲಾವತಿ ಸುರೇಶ್ಕುಮಾರ್ ಹಾಗೂ ಪ್ರೇಮಾ ಚಂದ್ರಯ್ಯ ಅವರು ಈ ಚಿತ್ರದ ನಿರ್ಮಾಣಕರು.
ಚಿತ್ರಕ್ಕೆ ರಾಜ್ ಮಂಜು, ಸುದರ್ಶನ್ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಬಿಂದುಶ್ರೀ ನಾಯಕಿಯಾಗಿದ್ದಾರೆ. ತಮ್ಮ ಚಿತ್ರದ ಬಗ್ಗೆ ಹೇಳುವ ನಿರ್ದೇಶಕ ಉದಯ ಪ್ರಸನ್ನ, “ಸಿನಿಮಾ ನಿರ್ದೇಶನ ಮಾಡಬೇಕೆಂಬ ನನ್ನ ಬಹುದಿನಗಳ ಕನಸು ಈ ಚಿತ್ರದ ಮೂಲಕ ನನಸಾಗಿದೆ, “ಮಹಿಷಾಸುರ ” ನನ್ನ ಮೊದಲ ಹೆಜ್ಜೆ. ಸಮಾಜಕ್ಕೆ ಒಂದು ಉತ್ತಮ ಸಂದೇಶ ಹೇಳುವ ಪ್ರಯತ್ನವಾಗಿ ಈ ಚಿತ್ರ ಮಾಡಿದ್ದೇನೆ. ಮನುಷ್ಯ ಒಳ್ಳೆಯವನೇ ಆಗಿದ್ದರೂ, ಆತ ತನ್ನ ತಾಳ್ಮೆ, ಸಹನೆ ಕಳೆದುಕೊಂಡಾಗ ಅಂತರಂಗದಲ್ಲಿರುವ ಅಸುರ ಮಹಿಷಾಸುರನ ರೂಪತಾಳುತ್ತಾನೆ. ಹಳ್ಳಿಯೊಂದರಲ್ಲಿ ನಡೆಯುವ ಕಥೆ ಇದಾಗಿದ್ದು, ಚಿಕ್ಕಂದಿನಿಂದ ಒಟ್ಟಿಗೆ ಬೆಳೆದ ಯುವಕರಿಬ್ಬರು ಒಂದು ಹೆಣ್ಣಿಗೋಸ್ಕರ ಯಾವ ರೀತಿ ಅಸುರ ರೂಪ ತಾಳುತ್ತಾರೆ ಎಂಬುದನ್ನು ಈ ಚಿತ್ರದಲ್ಲಿ ಹೇಳಿದ್ದೇವೆ.
ನನ್ನ ತಾಯಿಯ ಊರಿನ ಹತ್ತಿರ ನಡೆದ ನೈಜ ಘಟನೆಯನ್ನು ಪ್ರೇರಣೆಯಾಗಿಟ್ಟುಕೊಂಡ ಈ ಚಿತ್ರದ ಕಥಾಹಂದರ ಹೆಣೆದಿದ್ದೇನೆ. ದೊಡ್ಡ ಬಳ್ಳಾಪುರದ ಬಳಿಯ ಮೇಲುಕೋಟೆ, ಮಂಡ್ಯ, ಮೈಸೂರು ರಾಮನಗರ ಸೇರಿದಂತೆ ಒಟ್ಟು 60 ದಿನಗಳ ಕಾಲ ಈ ಚಿತ್ರದ ಚಿತ್ರೀಕರಣ ಮಾಡಿದ್ದೇವೆ ಎಂಬುದು ಅವರ ಮಾತು.
ನಾಯಕಿ ಬಿಂದುಶ್ರೀ ಈ ಚಿತ್ರದಲ್ಲಿ ಶ್ರೀಮಂತ ಕುಟುಂಬದ ಹುಡುಗಿಯಾಗಿ ನಟಿಸಿದ್ದು, ಮುಗ್ದೆ, ಇಬ್ಬರು ಯವಕರ ಪ್ರೀತಿಯ ಸುಳಿಯಲ್ಲಿ ಸಿಕ್ಕು, ಸ್ನೇಹಿತರಾಗಿದ್ದ ಅವರು ವಿರೋಧಿಗಳಾಗಲು ಕಾರಣಳಾಗುತ್ತಾಳೆ. ಕೊನೆಗೆ ನಾಯಕಿ ಯಾರಿಗೆ ದಕ್ಕುತ್ತಾಳೆ ಎನ್ನುವುದೇ ಚಿತ್ರದ ಕ್ಲೈಮ್ಯಾಕ್ಸ್. ಈ ಚಿತ್ರದಲ್ಲಿ ಒಟ್ಟು ಮೂರು ಹಾಡುಗಳಿದ್ದು ಸುನಿಲ್ ಕೌಶಿ ಸಂಗೀತ ನಿರ್ದೇಶನ ಮಾಡಿದ್ದಾರೆ. ವೇಣು ಅವರ ಸಾಹಿತ್ಯವಿದ್ದು, ಕೃಷ್ಣ ಚಿತ್ರಕ್ಕೆ ಕ್ಯಾಮರಾ ಹಿಡಿದಿದ್ದಾರೆ.
ಮಿಲನಾ ನಾಗರಾಜ್ , ನಿಮಿಕಾ ರತ್ನಾಕರ್ ಜತೆಗೆ ಡಾರ್ಲಿಂಗ್ ಡ್ಯುಯೆಟ್
ಡಾರ್ಲಿಂಗ್ ಕೃಷ್ಣ , ಮಿಲನ ನಾಗರಾಜ್ ಹಾಗೂ ನಿಮಿಕಾ ರತ್ನಾಕರ್ ಅಭಿನಯದ ” ವರ್ಜಿನ್ʼ ಚಿತ್ರದ ಟೈಟಲ್ ವಿವಾದಕ್ಕೆ ಕೊನೆಗೂ ತೆರೆ ಬಿದ್ದಿದೆ. ಚಿತ್ರತಂಡ ಟೈಟಲ್ ಬದಲಾವಣಿಗೆ ಮುಂದಾಗಿದೆ. ಹೊಸ ವರ್ಷದ ದಿನವೇ ಈ ಚಿತ್ರದ ಹೊಸ ಟೈಟಲ್ ಅನಾವರಣಗೊಳ್ಳುತ್ತಿದೆ.
ಆ ಮೂಲಕ ಚಿತ್ರವನ್ನು ಅದ್ದೂರಿಯಾಗಿ ತೆರೆಗೆ ತರಲು ಹೊರಟಿದೆ ಚಿತ್ರ ತಂಡ. ಲಾಕ್ ಡೌನ್ ಸಮಯದಲ್ಲೇ ಶುರುವಾದ ಈ ಚಿತ್ರಕ್ಕೆ ಈಗಾಗಲೇ ಚಿತ್ರೀಕರಣವೂ ಮುಗಿದಿದೆ. ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆಯಂತೆ. ಈ ಹಂತದಲ್ಲೇ ಚಿತ್ರ ತಂಡ ಟೈಟಲ್ ಲಾಂಚ್ ಮಾಡಲು ಹೊರಟಿದೆ.
ಸದ್ಯಕ್ಕೆ ಈ ಚಿತ್ರದ ವಿಶೇಷತೆಗಳೇನು ಅನ್ನೋದು ರಿವೀಲ್ ಆಗಿಲ್ಲ. ಆದರೆ ಈ ಚಿತ್ರ ಟೈಟಲ್ ಮೂಲಕವೇ ದೊಡ್ಡ ವಿವಾದ ಸೃಷ್ಟಿಸಿತ್ತು. ʼವರ್ಜಿನ್ʼ ಎನ್ನುವ ಚಿತ್ರದ ಶೀರ್ಷಿಕೆಗೆ ಪ್ರೇಕ್ಷಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಕೊನೆಗೆ ಚಿತ್ರ ತಂಡವು “ಶೀಘ್ರಮೇವ ಕಲ್ಯಾಣ ಮಸ್ತುʼ ಎನ್ನುವ ಟೈಟಲ್ ಸೆಲೆಕ್ಟ್ ಮಾಡಿಕೊಂಡಿತು. ಆ ಹೆಸರಲ್ಲೇ ಚಿತ್ರೀಕರಣ ಮುಗಿಸಿಕೊಂಡು ಬಂತು. ಅದು ಕೂಡ ಚಿತ್ರದ ಕತೆಗೆ ಸೂಕ್ತ ಎನಿಸದ ಕಾರಣ, ಈಗ ಬೇರೆ ಟೈಟಲ್ ಸೆಲೆಕ್ಟ್ ಮಾಡಿಕೊಂಡಿದ್ದು, ಅದನ್ನು ಹೊಸ ವರ್ಷದ ದಿನದಂದೇ ಲಾಂಚ್ ಮಾಡುತ್ತಿದೆ. ಅಂದ ಹಾಗೆ ಇದು ಆಂಧ್ರ ಮೂಲದ ಹೊಸ ಪ್ರತಿಭೆ ನಾಯ್ಡು ಬಂಡಾರ ನಿರ್ದೇಶನದ ಚಿತ್ರ. ಇವರು ಪೂರಿ ಜಗನ್ನಾಥ್ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದವರಂತೆ.
ಕನ್ನಡಕ್ಕೆ ಇದೇ ಮೊದಲು ನಿರ್ದೇಶಕರಾಗಿ ಎಂಟ್ರಿ ಆಗುತ್ತಿದ್ದಾರೆ. ನಿರ್ದೇಶಕರ ಹಾಗೆ ನಿರ್ಮಾಕರದ್ದು ಕೂಡ ಆಂಧ್ರ ಮೂಲ. ಶ್ರೀನಿವಾಸ್ ಹಾಗೂ ಡಿ. ಸ್ವರ್ಣಲತಾ ಚಿತ್ರದ ನಿರ್ಮಾಣಕ್ಕೆ ಬಂಡವಾಳ ಹಾಕಿದ್ದಾರೆ. ಸಹ ನಿರ್ಮಾಪಕರಾಗಿ ಚಲಪತಿ, ಕಿರಣ್ ಕುಮಾರ್ ಇದ್ದಾರೆ.
ಕದ್ರಿ ಮಣಿಕಾಂತ್ ನಿರ್ದೇಶನ ಹಾಗೂ ಕ್ರೇಜಿ ಮೈಂಡ್ಸ್ ಛಾಯಾಗ್ರಹಣ ಚಿತ್ರಕ್ಕಿದೆ. ಚಿತ್ರ ತಂಡದ ಮೂಲಗಳ ಪ್ರಕಾರ ಕಾಮಿಡಿ ಡ್ರಾಮಾ, ಹಾಗೆಯೇ ಕ್ಯೂಟ್ ಲವ್ ಸ್ಟೋರಿ ಸಿನಿಮಾ. ಚಿತ್ರ ತಂಡ ಈಗ ಟೈಟಲ್ ಲಾಂಚ್ ಮೂಲಕ ಸದ್ದು ಮಾಡಲು ಹೊರಟಿದೆ. ಸಿನಿಮಾ ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲೂ ಬರುವ ಸಾಧ್ಯತೆಯಿದೆ. ಸದ್ಯಕ್ಕೆ ಕನ್ನಡದಲ್ಲಿ ಮಾತ್ರ ತೆರೆಗೆ ಬರಲಿದೆಯಂತೆ.
ಡಾ.ವಿಷ್ಣುವರ್ಧನ್ ಇಂದು ನಮ್ಮೊಂದಿಗಿಲ್ಲವಾದರೂ, ಅವರು ಬಿಟ್ಟು ಹೋದ ಆದರ್ಶಗಳಿವೆ. ನೂರಾರು ಅದ್ಭುತ ಚಿತ್ರಗಳಿವೆ. ಆ ಮೂಲಕ ಅವರಿನ್ನೂ ಜೀವಂತವಾಗಿದ್ದಾರೆ. ಅವರ ಅಪಾರ ಅಭಿಮಾನಿಗಳು ಹಾಗೂ ಕುಟುಂಬ ವರ್ಗ ಡಿಸೆಂಬರ್ 30 ರಂದು ಅವರ 11 ನೇ ಪುಣ್ಯತಿಥಿಯನ್ನು ಆಚರಿಸಿದೆ. ಅವರಿಲ್ಲದ ಈ ಹನ್ನೊಂದು ವರ್ಷಗಳನ್ನು ಊಹಿಸಲೂ ಸಾಧ್ಯವಿಲ್ಲ. 2009ರ ಡಿಸೆಂಬರ್ 30ರಂದು ವಿಷ್ಣುವರ್ಧನ್ ಅಗಲಿದರು. ಅಂದು ಚಿತ್ರರಂಗದ ಪಾಲಿಗೆ ಕರಾಳ ದಿನವೇ ಸರಿ. ಪ್ರತಿ ವರ್ಷವೂ ಅವರ ಅಭಿಮಾನಿಗಳು ಮತ್ತು ಕುಟಂಬ ವರ್ಗ ಅವರ ಪುಣ್ಯಸ್ಮರಣೆ ಮಾಡಿಕೊಂಡು ಬರುತ್ತಿದೆ.
ವಿಷ್ಣುವರ್ಧನ್ ಅವರ ಸಮಾಧಿ ಇರುವ ಅಭಿಮಾನ್ ಸ್ಟುಡಿಯೋಗೆ ತೆರಳಿ ಪ್ರೀತಿಯ ನಟನಿಗೆ ನಮನ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲ, ಸಮಾಧಿಗೆ ಹೂವಿನ ಅಲಂಕಾರ ಮಾಡಿ, ಪೂಜೆ ಸಲ್ಲಿಸಿ, ಸ್ಮರಿಸಿದ್ದಾರೆ. ಡಾ.ವಿಷ್ಣು ಸೇನಾ ಸಮಿತಿ ಕೂಡ ವಿಶೇಷವಾಗಿ ಪೂಜೆ ಸಲ್ಲಿಸಿ, ವಿಷ್ಣುವರ್ಧನ್ ಅವರನ್ನು ಸ್ಮರಿಸಿದೆ.
ಅತ್ತ ಭಾರತಿ ವಿಷ್ಣುವರ್ಧನ್ ಕುಟುಂಬ ಕೂಡ ಮೈಸೂರಿಗೆ ತೆರಳಿ, ಅಲ್ಲಿ ನಡೆಯುತ್ತಿರುವ ಸ್ಮಾರಕಕ್ಕೂ ಪೂಜೆ ಸಲ್ಲಿಸಲಿದ್ದಾರೆ. ಒಂದಷ್ಟು ಅಭಿಮಾನಿಗಳು ಸಹ ಭಾಗಿಯಾಗಿ ಸ್ಮರಿಸಿದ್ದಾರೆ. ಪುಣ್ಯಸ್ಮರಣೆಯ ಹಿನ್ನೆಲೆಯಲ್ಲಿ ಅಭಿಮಾನಿಗಗಳೇ ಅನ್ನದಾನ ಸೇರಿದಂತೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.
ಅಂತೂ ಇಂತೂ ಈ 2020 ಅನ್ನೋದು ಎಲ್ಲರ ಲೈಫಲ್ಲಿ ಸಖತ್ ಮ್ಯಾಚ್ ಆಡಿದ್ದಂತೂ ನಿಜ. ಈಗ 2021 ರ ಮೇಲೆ ಎಲ್ಲರೂ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅಷ್ಟೇ ಅಲ್ಲ, ಹೊಸ ಕನಸುಗಳು ಸಾಕಾರಗೊಳ್ಳುತ್ತವೆ ಎಂಬ ಲೆಕ್ಕಾಚಾರವೂ ಬಲವಾಗಿದೆ. ಹೊಸ ವರ್ಷ ಶುರುವಾಗುತ್ತಿದೆ. ಹೊಸ ವರ್ಷಕ್ಕೆ ಸಿನಿಮಾರಂಗವೂ ಸಜ್ಜಾಗಿದೆ. ಹೊಸ ವರ್ಷದ ಮೊದಲ ಸಿನಿಮಾವಾಗಿ ರಾಘವೇಂದ್ರ ರಾಜಕುಮಾರ್ ಅಭಿನಯದ “ರಾಜತಂತ್ರ” ಚಿತ್ರ ಬಿಡುಗಡೆಯಾಗುತ್ತಿದೆ.
ವಿಶ್ವಂ ಡಿಜಿಟಲ್ ಮೀಡಿಯಾ ಪ್ರೈ, ಲಿ ಬ್ಯಾನರ್ನಲ್ಲಿ ಜೆ.ಎಂ.ಪ್ರಹ್ಲಾದ್, ವಿಜಯ್ ಭಾಸ್ಕರ್ ಹರಪನಹಳ್ಳಿ ಹಾಗೂ ಪಿ.ಆರ್. ಶ್ರೀಧರ್ ಅವರ ನಿರ್ಮಾಣದ ಈ ಚಿತ್ರದ ಹೈಲೈಟ್ ರಾಘವೇಂದ್ರ ರಾಜಕುಮಾರ್, ಅವರಿಲ್ಲಿ ನಿವೃತ್ತ ಮಿಲಿಟರಿ ಅಧಿಕಾರಿಯಾಗಿ ಅವರು ನಟಿಸಿದ್ದಾರೆ. ಚಿತ್ರಕ್ಕೆ ಜೆ.ಎಂ.ಪ್ರಹ್ಲಾದ್ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಸಾಹಿತ್ಯ ಬರೆದಿದ್ದಾರೆ. ಪಿ.ವಿ.ಆರ್ ಸ್ವಾಮಿ ಗೂಗರದೊಡ್ಡಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಶ್ರೀಸುರೇಶ್ ಸಂಗೀತವಿದೆ. ಪಿ.ವಿ.ಆರ್ ಸ್ವಾಮಿ ಛಾಯಾಗ್ರಹಣ ಮಾಡಿದ್ದಾರೆ.
ನಾಗೇಶ್ ಸಂಕಲನ ಮಾಡಿದರೆ, ಚಂದನ್ ಕಲಾ ನಿರ್ದೇಶನ ಹಾಗೂ ವೈಲೆಂಟ್ ವೇಲು, ರಾಮ್ ದೇವ್, ಅಲ್ಟಿಮೆಟ್ ಶಿವು ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಚಿತ್ರದಲ್ಲಿ ದೊಡ್ಡಣ್ಣ, ಶ್ರೀನಿವಾಸ ಮೂರ್ತಿ, ಭವ್ಯ, ರಂಜನ್ ಹಾಸನ್, ಶಂಕರ್ ಅಶ್ವಥ್, ನೀನಾಸಂ ಅಶ್ವಥ್, ಮುನಿರಾಜು, ವಿಜಯಭಾಸ್ಕರ್, ಪ್ರತಾಪ್ ಸಿಂಹ ಅಗರ, ಶಿವಾನಂದ, ಪ್ರಕಾಶ್ ಕಾರಿಯಪ್ಪ, ವೆಂಕಟೇಶ್ ಪ್ರಸಾದ್, ಹೋಳಿ ವೆಂಕಟೇಶ್, ಸ್ವಾತಿ ಅಂಬರೀಶ್, ವಲ್ಲಭ್, ಪ್ರವೀಣ್, ಉಮೇಶ್, ಕುಮಾರ್, ಕನ್ನಡ ಪ್ರೇಮ್, ಲಕ್ಷ್ಮಣ್, ಭೀಮ, ಆನಂದ್ ಪನ್ನೇದೊಡ್ಡಿ, ಹೇರಂಭ, ಸತೀಶ್ ಗೌಡ, ಮೀರಾ ಶ್ರೀ ಗೌಡ ಮುಂತಾದವರಿದ್ದಾರೆ.
ಸೆಂಚುರಿ ಸ್ಟಾರ್ ಶಿವರಾಜ್ ಅಭಿನಯದ ಮೈಲಾರಿ ಚಿತ್ರ ತೆರೆಕಂಡು ಇಲ್ಲಿಗೆ ಹತ್ತು ವರ್ಷ .ಅಂದ್ರೆ ಬರೋಬ್ಬರಿ ಒಂದು ದಶಕ.ಆರ್. ಚಂದ್ರು ನಿರ್ದೇಶನ , ಕೆ.ಪಿ.ಶ್ರೀಕಾಂತ್ ನಿರ್ಮಾಣದಲ್ಲಿ ಬಂದ ಚಿತ್ರ ಇದು. ಕನ್ನಡದ ಬ್ಲಾಕ್ ಬಸ್ಟರ್ ಚಿತ್ರಗಳಲ್ಲಿ ಇದು ಕೂಡ ಒಂದು. ಈ ಚಿತ್ರದ ಮೂಲಕವೇ ನಿರ್ದೇಶಕ ಆರ್. ಚಂದ್ರು , ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಸೆಂಚುರಿ ಸ್ಟಾರ್ ಅಂತ ಬಿರುದು ಕೊಟ್ಟರು. ಅದು ಅಭಿಮಾನಿಗಳ ಮೂಲಕ.
ಇಂತಹ ದಾಖಲೆಯ ಚಿತ್ರ ತೆರೆ ಕಂಡು ಹತ್ತು ವರ್ಷ ಆದ ಹಿನ್ನೆಲೆಯಲ್ಲಿ ಅದರ ಸುಮಧುರ ನೆನಪಿಗೆ ಅಖಿಲ ಕರ್ನಾಟಕ ಗಂಡುಗಲಿ ಶಿವರಾಜಕುಮಾರ್ ಅಭಿಮಾನಿಗಳ ಸಂಘ ಹಾಗೂ ಶಿವರಾಜ್ ಕುಮಾರ್ ಸೇನಾಸಮಿತಿ ವತಿಯಿಂದ ಭಾನುವಾರ( ಡಿಸೆಂಬರ್ 20) ಬೆಂಗಳೂರಿನ ನಾಗವಾರ ಮಾನ್ಯತಾ ಟೆಕ್ ಪಾರ್ಕ್ ಬಳಿ ಇರುವ ನಟ ಶಿವರಾಜ್ ಕುಮಾರ್ ನಿವಾಸದಲ್ಲಿ ಮೈಲಾರಿ ಹತ್ತು ವರ್ಷದ ಸಂಭ್ರಮಾಚರಣೆ ಆಯೋಜಿಸಿದ್ದರು.ಅಭಿಮಾನಿಗಳು ಪ್ರೀತಿಯಿಂದ ಆಯೋಜಿಸಿದ್ದ ಈ ಸರಳ ಸುಂದರ ಕಾರ್ಯ ಕ್ರಮದಲ್ಲಿ ನಿರ್ಮಾಪಕ ಶ್ರೀಕಾಂತ್ ಸೇರಿದಂತೆ ಹಲವರು ಹಾಜರಿದ್ದರು.
ಮೈಲಾರಿ ಹತ್ತು ವರ್ಷದ ನೆನಪಿಗೆ ಅಭಿಮಾನಿಗಳು ತಂದಿದ್ದ ಬೃಹತ್ ಗಾತ್ರದ ಕೇಕ್ ಕತ್ತರಿಸಿದ ನಟ ಶಿವಣ್ಣ, ಅವರೊಂದಿಗೆ ಕ್ಯಾಮೆರಾಕ್ಕೆ ಪೋಸು ಕೊಟ್ಟರು. ಅವರ ಪತ್ನಿ ಗೀತಾ ಶಿವರಾಜ್ ಕುಮಾರ್, ಪುತ್ರಿ ನಿವೇದಿತಾ ಶಿವರಾಜ್ ಕುಮಾರ್ ಭಾಗಿಯಾದರು. ಆನಂತರ ಅಭಿಮಾನಿಗಳು ಮೈಲಾರಿ ಹತ್ತು ವರ್ಷದ ವಿಶೇಷ ಕೊಡುಗೆಯನ್ನು ಶಿವರಾಜ್ ಕುಮಾರ್ ದಂಪತಿಗೆ ನೀಡಿ ಗೌರವಿಸಿದರು.
“ಆಕ್ಟ್ 1978″… ಇದು ಕನ್ನಡದಲ್ಲಿ ಭಾರೀ ಸದ್ದು ಮಾಡಿದ ಸಿನಿಮಾ. ಈಗ “ವಿಧಿ ಆರ್ಟಿಕಲ್ 370” ಚಿತ್ರದ ಸರದಿ. ಹೌದು, ಕನ್ನಡ ಚಿತ್ರರಂಗದಲ್ಲೀಗ ಅತೀ ಸೂಕ್ಷ್ಮ ಸಂವೇದನೆಯ ಸಿನಿಮಾಗಳ ಪರ್ವ. ಇತ್ತೀಚೆಗೆ “ಆಕ್ಟ್ 1978” ಚಿತ್ರ ಜೋರು ಸದ್ದು ಮಾಡಿದ್ದು ಎಲ್ಲರಿಗೂ ಗೊತ್ತಿದೆ. ಅದರ ಬೆನ್ನಲ್ಲೇ ಈಗ “ಆರ್ಟಿಕಲ್ 370” ಸಿನಿಮಾ ಒಂದಷ್ಟು ಸುದ್ದಿ ಮಾಡುವ ಸೂಚನೆ ನೀಡಿದೆ. ಇದು ಶಶಿಕುಮಾರ್ ಹಾಗೂ ಶೃತಿ ಅಭಿನಯದ ಚಿತ್ರ. ಚಿತ್ರದ ಶೀರ್ಷಿಕೆ ಹೇಳುವಂತೆಯೇ, ಇದೂ ಕೂಡ ಒಂದು ಕಾಯ್ದೆಯಡಿ ಒಂದಷ್ಟು ಅಂಶಗಳ ಮೂಲಕ ಪ್ರೇಕ್ಷಕರನ್ನು ಸೆಳೆಯುವ ಸಿನಿಮಾ ಅಂತ ಮುಲಾಜಿಲ್ಲದೆ ಹೇಳಬಹುದು. ಈಗಾಗಲೇ ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಕಾಶ್ಮೀರ ಭಾಗದ ಚಿತ್ರೀಕರಣ ಮುಗಿಸಿದರೆ, ಚಿತ್ರ ಕಂಪ್ಲೀಟ್ ಆಗಲಿದೆ.
ಶೃತಿ, ಶಶಿಕುಮಾರ್
ಈ ಚಿತ್ರಕ್ಕೆ ಕೆ.ಶಂಕರ್ ನಿರ್ದೇಶಕರು. ಕಥೆ, ಚಿತ್ರಕಥೆ, ಸಂಭಾಷಣೆ ಕೂಡ ಇವರದೇ. ಇದು ಅವರ ಮೂರನೇ ನಿರ್ದೇಶನದ ಚಿತ್ರ. ಇನ್ನು, ಲೈರಾ ಎಂಟರ್ಪ್ರೈಸಸ್ ಅಂಡ್ ಮೀಡಿಯಾ ಬ್ಯಾನರ್ನಲ್ಲಿ ಭರತ್ ಗೌಡ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ತಮ್ಮ ಸಿನಿಮಾ ಕುರಿತು ನಿರ್ದೇಶಕ ಕೆ.ಶಂಕರ್, “ಸಿನಿಲಹರಿ” ಜೊತೆ ಹೇಳಿಕೊಂಡಿದ್ದಿಷ್ಟು.
ಬಹಳ ದಿನಗಳ ನಂತರ ಶೃತಿ-ಶಶಿಕುಮಾರ್ ಜೋಡಿ
“ಚಿತ್ರಕ್ಕೆ “ಆರ್ಟಿಕಲ್ 370” ಎಂಬ ಹೆಸರಿಡಲಾಗಿದೆ. ಕನ್ನಡ ಸಿನಿಮಾ ಆಗಿದ್ದರಿಂದ ಚಿತ್ರದ ಶೀರ್ಷಿಕೆ ಮುಂದೆ “ವಿಧಿ” ಎಂದು ಸೇರಿಸಲಾಗಿದೆ. ಹಾಗಾಗಿ ಚಿತ್ರವನ್ನು “ವಿಧಿ ಆರ್ಟಿಕಲ್ 370” ಎಂದು ಕರೆಯಲಾಗುತ್ತಿದೆ. ಇದೊಂದು ಭಾರತೀಯ ಸೇನೆ ಹಾಗೂ ಉಗ್ರವಾದ ನಡುವಿನ ಸಮರದ ಕಥೆ. ಈ ವಿಷಯದ ಮೇಲೆ ಮಾಡಿರುವ ಸಿನಿಮಾ. ಯುದ್ಧ ಮತ್ತು ಉಗ್ರವಾದ ಕಥೆಯ ಜೊತೆ ಜೊತೆಯಲ್ಲಿ ದೇಶಾಭಿಮಾನದ ಅಂಶಗಳೂ ಇಲ್ಲಿ ಹೇರಳವಾಗಿವೆ. ಶಶಿಕುಮಾರ್ ಅವರು ಇಲ್ಲಿ ಮೇಜರ್ ಆಗಿ ಕಾಣಿಸಿಕೊಂಡಿದ್ದಾರೆ.
ಈವರೆಗೆ ಅವರು ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಆರ್ಮಿ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಅವರಿಗೆ ಜೋಡಿಯಾಗಿ ಶೃತಿ ಅವರು ನಟಿಸಿದ್ದಾರೆ. ಈ ಹಿಂದೆ ಇವರಿಬ್ಬರ ಜೋಡಿಯ ಸಿನಿಮಾಗಳು ಯಶಸ್ವಿಯಾಗಿವೆ. ಬಹಳ ವರ್ಷಗಳ ಬಳಿಕ ಅವರು “ವಿಧಿ ಆರ್ಟಿಕಲ್ 370” ಚಿತ್ರದಲ್ಲಿ ನಟಿಸಿದ್ದಾರೆ.
ವಿರೋಧಿ ದೇಶದ ಹೀನಕೃತ್ಯದ ವಿಷಯ ಹೈಲೈಟ್
“ಆರ್ಟಿಕಲ್ 370″ ಬಗ್ಗೆ ವಿವರವಾಗಿ ಹೇಳುವುದಾದರೆ, ಜಮ್ಮು-ಕಾಶ್ಮೀರದಲ್ಲಿ 1949, ಅಕ್ಟೋಬರ್ 17ರಂದು ವಿಶೇಷ ವಿಧಿ 370 ಜಾರಿ ಮಾಡಲಾಯಿತು. ಆ ನಂತರದ ದಿನಗಳಲ್ಲಿ ವಿರೋಧಿ ದೇಶ ನಮ್ಮ ದೇಶದ ಅಮಾಯಕರನ್ನು ಬಳಸಿಕೊಂಡು ನಮ್ಮ ಮೇಲೆಯೇ ಯುದ್ಧ ಮಾಡುವ ಹೀನ ಕೃತ್ಯಕ್ಕೆ ಮುಂದಾದರು. ಆಗ ನಡೆದಂತಹ ಅನೇಕ ಸೂಕ್ಷ್ಮ ವಿಚಾರಗಳೊಂದಿಗೆ ಕಥೆ ಹೆಣೆಯಲಾಗಿದೆ. ಇಲ್ಲಿ ದೇಶಭಕ್ತಿಯ ಜೊತೆ ಭಾವೈಕ್ಯತೆ ಸಾರುವ ಅಂಶಗಳೂ ಇಲ್ಲಿವೆ. ಎಲ್ಲೂ ಓದದ, ಕೇಳದ ಅನೇಕ ವಿಷಯಗಳು ಚಿತ್ರರೂಪದಲ್ಲಿ ಬರಲಿವೆ” ಎಂದು ವಿವರಿಸುತ್ತಾರೆ ನಿರ್ದೇಶಕ ಕೆ.ಶಂಕರ್.
ಶಿವರಾಮ್, ದೊಡ್ಡರಂಗೇಗೌಡರ ಜೊತೆ ನಿರ್ದೇಶಕ ಶಂಕರ್
ಜಮ್ಮು-ಕಾಶ್ಮೀರದಲ್ಲಿ ಶೂಟಿಂಗ್
ಚಿತ್ರದಲ್ಲಿ ಶಶಿಕುಮಾರ್ ಅವರ ತಂದೆ ಪಾತ್ರದಲ್ಲಿ ಹಿರಿಯ ನಟರಾದ ಶಿವರಾಮಣ್ಣ ಕಾಣಿಸಿಕೊಂಡಿದ್ದಾರೆ. ಸಾಹಿತಿ ದೊಡ್ಡ ರಂಗೇಗೌಡರು ಇಲ್ಲಿ ಮುಸ್ಲಿಂ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ, ಯತಿರಾಜ್ ಸೇರಿದಂತೆ ಅನೇಕ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ.
ಬೆಂಗಳೂರು, ಮಡಿಕೇರಿ, ಚಿಕ್ಕಮಗಳೂರು, ರಾಮನಗರ, ಶ್ರವಣಬೆಳಗೊಳ ಸೇರಿದಂತೆ ಇತರೆಡೆ ಚಿತ್ರೀಕರಣ ಮಾಡಲಾಗಿದೆ. ಜಮ್ಮು-ಕಾಶ್ಮಿರದಲ್ಲಿ ಕೆಲ ದಿನಗಳ ಕಾಲ ಚಿತ್ರೀಕರಣ ನಡೆಸಿದರೆ, ಚಿತ್ರೀಕರಣ ಮುಗಿಯಲಿದೆ. ಜನವರಿ ಮೊದಲ ವಾರ ಜಮ್ಮು-ಕಾಶ್ಮೀರ ಸುತ್ತಮುತ್ತ ಚಿತ್ರೀಕರಿಸುವ ಯೋಜನೆ ಇದೆ ಎಂದು ಹೇಳುವ ಶಂಕರ್, ತಮ್ಮ ನಿರ್ಮಾಪಕರ ಔದಾರ್ಯವನ್ನುಕೊಂಡಾಡುತ್ತಾರೆ.
ಗೆಳೆತನದ ಸಿನಿಮಾವಿದು
ಹಾಗೆ ನೋಡಿದರೆ, ನಿರ್ಮಾಪಕರು ನನಗೆ ಎರಡು ದಶಕದ ಗೆಳೆಯರು. ನಾನು ಒಮ್ಮೆಯೂ ಅವರ ಬಳಿ ಸಿನಿಮಾ ಕಥೆ ಕೇಳಿ, ಒಂದು ಸಿನಿಮಾ ಮಾಡೋಣ ಎಂದು ಹೇಳಿದವನಲ್ಲ. ಗೆಳೆತನ ಮಾತ್ರ ನಮ್ಮಿಬ್ಬರ ನಡುವೆ ಇತ್ತು. ಒಮ್ಮೆ ನಾನು ಸಿನಿಮಾ ಮಾಡುತ್ತಿರುವುದನ್ನು ಗಮನಿಸಿದ ಅವರು, ನಾವೂ ಜೊತೆ ಸೇರಿ ಒಂದು ಚಿತ್ರ ಮಾಡೋಣ ಅಂದರು.
ಅದಕ್ಕೆ ನಾನೂ ಕೂಡ ಒಂದೊಳ್ಳೆಯ ವಿಷಯ ಇಟ್ಟುಕೊಂಡು ಬರುತ್ತೇನೆ ಆಗ ಮಾಡೋಣ ಅಂದಿದ್ದೆ. ಆಗ ಶುರುವಾಗಿದ್ದೆ “ಆರ್ಟಿಕಲ್ 370” ಚಿತ್ರ. ಒನ್ಲೈನ್ ಸ್ಟೋರಿ ಹೇಳಿದೆಯಷ್ಟೆ, ಆಮೇಲೆ ಮುಂದೇನೂ ಹೇಳದೆ, ಸಿನಿಮಾ ಮಾಡಿ ಅಂದರು. ಕಥೆ ಕೂಡ ಪೂರ್ಣ ಪ್ರಮಾಣದಲ್ಲಿ ಕೇಳದೆ ನಂಬಿಕೆ ಇಟ್ಟು ನಿರ್ಮಾಣ ಮಾಡಿದ್ದಾರೆ. ಅವರ ನಂಬಿಕೆಯನ್ನು ನಾನು ಉಳಿಸಿಕೊಂಡಿದ್ದೇನೆ ಎಂಬ ವಿಶ್ವಾಸವೂ ಇದೆ”ಎನ್ನುತ್ತಾರೆ ಶಂಕರ್.
ಕಲಾವಿದರ ದಂಡೇ ತುಂಬಿದೆ
ಅಂದಹಾಗೆ, ಈ “ಆರ್ಟಿಕಲ್ 370” ಕೊರೊನೊ ಹರಡುವ ಮುನ್ನ ಶುರುವಾದ ಚಿತ್ರ. ಆ ನಂತರ ಲಾಕ್ಡೌನ್ ಆಯ್ತು. ಸಡಿಲಗೊಂಡ ಬಳಿಕ ಚಿತ್ರೀಕರಣ ಮಾಡಿ ಮುಗಿಸಲಾಗಿದೆ. ಜಮ್ಮು-ಕಾಶ್ಮೀರ ಭಾಗದ ಚಿತ್ರೀಕರಣ ಮಾಡಿದರೆ, ಚಿತ್ರ ಕಂಪ್ಲೀಟ್ ಆಗಲಿದೆ. ಇದುವರಗೆ 45 ದಿನಗಳ ಕಾಲ ಶೂಟಿಂಗ್ ಮಾಡಲಾಗಿದೆ. ಚಿತ್ರಕ್ಕೆ ರವಿ ಕ್ಯಾಮೆರಾ ಹಿಡಿದರೆ, ಸಂಜೀವ ರೆಡ್ಡಿ ಸಂಕಲನವಿದೆ.
ಅವಿನಾಶ್ಜಿ.ಗುರುಸ್ವಾಮಿ, ಪುರುಷೋತ್ತಮ್, ವೆಂಕಟೇಶ್ ಅವರ ಕಾರ್ಯಕಾರಿ ನಿರ್ವಹಣೆ ಚಿತ್ರಕ್ಕಿದೆ. ಚಿತ್ರದಲ್ಲಿ ಗಣೇಶ್, ಲಕ್ಷ್ಮಣ್ ರಾವ್, ಕಿಲ್ಲರ್ ವೆಂಕಟೇಶ್, ರಮಾನಂದ್ ಸೇರಿದಂತೆ ಇತರರು ನಟಿಸಿದ್ದಾರೆ. ಸ್ಟಂಟ್ ವೇಲು ಸಾಹಸ ಮಾಡಿದರೆ, ಬಾಬುಖಾನ್ ಕಲಾ ನಿರ್ದೇಶನವಿದೆ.