Categories
ಸಿನಿ ಸುದ್ದಿ

ಲಾಂಚ್‌ ಆಗಿದೆ “ಬಾಡಿ ಗಾಡ್” ಚಿತ್ರದ ಪವರ್ ಫುಲ್ ಸಾಂಗ್ಸ್‌ – ಕೇಳುಗರ ಮನಕಲುಕುತ್ತಿದೆ ಪವರ್‌ ಸ್ಟಾರ್ ವಾಯ್ಸ್‌ !

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನಗಲಿ ಒಂದು ತಿಂಗಳೇ ಕಳೆದಿದೆ. ಆದರೂ ದುಃಖ ಮಾಸಿಲ್ಲ. ಅಪ್ಪು ಅವರು “ಬಾಡಿಗಾಡ್” ಚಿತ್ರಕ್ಕಾಗಿ ಹಾಡಿರುವ “ಆರೇಸ ಡನ್ಕನಕ” ಎಂಬ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ. ತುಂಬಾ ಅರ್ಥಗರ್ಭಿತವಾದ ಈ ಹಾಡನ್ನು ಎಸ್ ಕೆ ಎಸ್ ಬರೆದಿದ್ದಾರೆ. ಇತ್ತೀಚೆಗೆ ಈ ಹಾಡನ್ನು ರಾಘವೇಂದ್ರ ರಾಜಕುಮಾರ್ ಬಿಡುಗಡೆ ಮಾಡಿದ್ದಾರೆ.ಇಷ್ಟು ದಿನ ನನ್ನ ತಮ್ಮನಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದೆ. ಇಂದು ಗೀತಾಂಜಲಿ ಸಲ್ಲಿಸಿದ್ದೇನೆ. ಅವನು ಇಲ್ಲ ಎಂದು ಕೊರಗುವುದು ಬೇಡ. ಅವನು ಹಾಡಿರುವ ಹಾಡಿನಲ್ಲಿ, ಮಾಡಿರುವ ಕೆಲಸದಲ್ಲಿ ಅವನಿದ್ದಾನೆ. ನಿರ್ದೇಶಕ ಪ್ರಭು ಶ್ರೀನಿವಾಸ್ ನನಗೆ ಮೊದಲಿನಿಂದಲೂ ಪರಿಚಯ. ಅವರ ಈ ಪ್ರಯತ್ನಕ್ಕೆ ಶುಭವಾಗಲಿ ಎಂದು ರಾಘಣ್ಣ ಹಾರೈಸಿದರು.

ಅಪ್ಪು ಸರ್ ಅವರನ್ನು ಭೇಟಿಯಾಗಿ ಈ ಹಾಡನ್ನು ಹಾಡಲು ಕೇಳಿದಾಗ, ಇದು ತುಂಬಾ ಹೈಪಿಚ್ ನಲ್ಲಿ ಹಾಡಬೇಕು. ನೋಡಿ ನನ್ನ ಧ್ವನಿ ಸರಿ ಹೊಂದುತ್ತದೆಯಾ? ಎಂದು ಕೇಳಿದರು. ಸರಿ ಹೊಂದದಿದ್ದಲ್ಲಿ ಬೇರೆ ಅವರ ಬಳಿ ಹಾಡಿಸಿ ಎಂದರು. ಇಲ್ಲ ಈ ಹಾಡನ್ನು ನೀವೇ ಹಾಡಬೇಕು ಎಂದು ಕೇಳಿದಾಗ, ಅವರ ಸ್ಟುಡಿಯೋದಲ್ಲೇ ಈ ಹಾಡು ಹಾಡಿದರು. ನನಗೆ ತಿಳಿದ ಹಾಗೆ ಇದೇ ಅವರು ಹಾಡಿರುವ ಕೊನೆಯ ಗೀತೆ ಅನಿಸುತ್ತದೆ.‌ ಈ ಹಾಡಿನಲ್ಲಿ‌ ಬರುವ ಕೆಲವು ಸಾಲುಗಳು ಪುನೀತ್ ಅವರಿಗೆ ಹತ್ತಿರವಾಗಿದೆ ಎಂದು ಅವರ ಮರಣದ ನಂತರ ತಿಳಿಯುತ್ತಿದೆ.

“ಬಾಡಿ ಗಾಡ್” ತೆರೆಗೆ ಬರಲು ಸಿದ್ದವಾಗಿದ್ದು, ಜನವರಿಯಲ್ಲಿ ತೆರೆಗೆ ತರುತ್ತೇವೆ ಎಂದರು ನಿರ್ದೇಶಕ ಹಾಗೂ ನಿರ್ಮಾಪಕ ಪ್ರಭು ಶ್ರೀನಿವಾಸ್.ನನಗೆ ಅಪ್ಪು ಅವರು ಹಾಡುವ ಹಾಡಿಗೆ ಡ್ಯಾನ್ಸ್ ಮಾಡಬೇಕೆಂದು ಆಸೆಯಿತ್ತು. ಈ ಹಾಡಿನ ಬಗ್ಗೆ ಮಾತನಾಡಲು ನಿರ್ದೇಶಕರೊಂದಿಗೆ ಅಪ್ಪು ಸರ್ ಮನೆಗೆ ಹೋದಾಗ, ಅವರ ಸ್ವಾಗತ ನೋಡಿ ನನಗೆ ಆಶ್ಚರ್ಯವಾಯಿತು.‌ “ಬನ್ನಿ ಮನೋಜ್. ಹೇಗಿದ್ದೀರಿ.‌ ಆರು, ಏಳು ಸರಿ ಶಾಸಕರಾಗಿದ್ದ ಮತ್ತೆ ಉನ್ನತ ಹುದ್ದೆ ಅಲಂಕರಿಸಿದ ಪ್ರಸಿದ್ಧ ವ್ಯಕ್ತಿಯ ಮಗನಾಗಿದ್ದರು‌, ನಿಮ್ಮಲ್ಲಿ ಒಂದು ಚೂರು ಅಹಂ ಇಲ್ಲ” ಎಂದು ಅವರು ಹೇಳಿದ ಮಾತು ಇನ್ನೂ ಕಿವಿಯಲ್ಲೇ ಇದೆ. ಎಂದು ಭಾವುಕರಾದರು ನಾಯಕ ಮನೋಜ್.

ನಾನು ಮೊದಲ ಬಾರಿಗೆ ನಾಯಕಿಯಾಗಿ ಚಿತ್ರರಂಗ ಪ್ರವೇಶಿಸಿದ್ದೇನೆ. ಉತ್ತಮ ಪಾತ್ರ ನೀಡಿದ ನಿರ್ದೇಶಕರಿಗೆ ವಂದನೆಗಳು ಎಂದರು ನಾಯಕಿ‌ ದೀಪಿಕಾ. ಗೀತರಚನೆಕಾರ ಗೌಸ್ ಫಿರ್ ಅವರ ಬಳಿ ಸಹಾಯಕರಾಗಿದ್ದ ಎಸ್ ಕೆ ಎಸ್, ವೆಂಕಟೇಶ್ ಕುಲಕರ್ಣಿ, ಸಂಕಲನಕಾರ ಉಜ್ವಲ್ ಚಂದ್ರ ಹಾಗೂ ನೃತ್ಯ ನಿರ್ದೇಶಕ ರಾಜು ಪತ್ರಿಕಾಗೋಷ್ಠಿಯಲ್ಲಿ ತಮ್ಮ ಕಾರ್ಯದ ಬಗ್ಗೆ ಮಾಹಿತಿ ನೀಡಿದರು. ಪ್ರಭು ಶ್ರೀನಿವಾಸ್ ನಿರ್ದೇಶಿಸಿರುವ ಈ ಚಿತ್ರದ ನಾಯಕನಾಗಿ ಮೊಗ್ಗಿನ‌ ಮನಸ್ಸಿನ ಮನೋಜ್ ನಟಿಸಿದ್ದಾರೆ. ದೀಪಿಕಾ ನಾಯಕಿ.‌ ಮಠ ಗುರುಪ್ರಸಾದ್ ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ. ಪದ್ಮಜಾರಾವ್, ನಿರಂಜನ್, ಅಶ್ವಿನ್ ಹಾಸನ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಕರಣ್ ಬಿ ಕೃಪ ಈ ಚಿತ್ರಕ್ಕೆ ಸಂಗೀತ ನೀಡಿರುವ ಈ ಚಿತ್ರಕ್ಕೆ ವೇಲ್ ಮುರುಗನ್ ಅವರ ಛಾಯಾಗ್ರಹಣವಿದೆ.

  • ಎಂಟರ್‌ ಟೈನ್‌ ಮೆಂಟ್‌ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಯೋಗರಾಜ್‌ ಭಟ್ಟರ ʼಪದವಿ ಪೂರ್ವʼ ಕ್ಕೆ ಸೇರಿದ ನಟಿ ದಿವ್ಯ ಉರುಡುಗ !

ಬಿಗ್‌ ಬಾಸ್‌ ಖ್ಯಾತಿಯ ನಟಿ ದಿವ್ಯ ಉರುಡುಗ ಮತ್ತೆ ನಟನೆಯಲ್ಲಿ ಬ್ಯುಸಿ ಆಗುತ್ತಿದ್ದಾರೆ. ಇದೀಗ ಯೋಗರಾಜ್ ಸಿನಿಮಾಸ್ ಹಾಗು ರವಿ ಶಾಮನೂರ್ ಫಿಲಂಸ್‌ರವರ ಜಂಟಿ ನಿರ್ಮಾಣದಲ್ಲಿ ಹರಿಪ್ರಸಾದ್ ಜಯಣ್ಣ ನಿರ್ದೇಶಿಸುತ್ತಿರುವ ಚಿತ್ರ “ಪದವಿಪೂರ್ವ”ಕ್ಕೆ ಈಗ ದಿವ್ಯ ಉರುಡುಗ ಎಂಟ್ರಿ ಆಗಿರುವ ಹೊಸ ಸುದ್ದಿ ರಿವೀಲ್‌ ಆಗಿದೆ. ಅಂದ ಹಾಗೆ, ಈಗಾಗಲೇ ಪದವಿ ಪೂರ್ವ ಚಿತ್ರ ಬಹುತೇಕ ಚಿತ್ರೀಕರಣ ಮುಗಿಸಿರುವುದು ನಿಮಗೂ ಗೊತ್ತಿದೆ. ಅಂದ್ಮೇಲೆ ಈ ಚಿತ್ರದಲ್ಲಿ ಅವರೇನು ಪಾತ್ರ ಅಂತ ನಿಮಗೂ ಕುತೂಹಲ ಇರಬಹುದು. ಅದು ವಾಸ್ತವವೂ ಹೌದು. ದಿವ್ಯ ಉರುಡುಗ ಪದವಿ ಪೂರ್ವಕ್ಕೆ ಬಂದರೂ ನಾಯಕಿ ಆಗಿ ಅಲ್ಲ ಎನ್ನುವುದು ನಿಮಗೂ ಗೊತ್ತಿರುವ ಹಾಗೆಯೇ ಅವರಲ್ಲಿ ಅತಿಥಿ ಪಾತ್ರವೊಂದನ್ನು ನಿರ್ವಹಿಸಿದ್ದಾರಂತೆ. ಭಟ್ಟರ ತಂಡ ಸೇರಿದ್ದಕ್ಕೆ ಅವರಿಗೂ ಸಿಕ್ಕಾಪಟ್ಟೆ ಖುಷಿ ಆಗಿದೆಯಂತೆ.

ʼ ಭಟ್ಟರ ಸಿನಿಮಾ ಅಂದ್ರೆ ಹೆಚ್ಚೇನು ಹೇಳಬೇಕಿಲ್ಲ, ಅಲ್ಲಿ ವಿಶೇಷತೆ ಇದ್ದೇ ಇರುತ್ತದೆ. ಇಲ್ಲಿ ಅವರು ನಿರ್ದೇಶನ ಮಾಡುತ್ತಿಲ್ಲ ಅಂದ್ರು ನಿರ್ಮಾಣ ಅವರದ್ದೇ ಆಗಿದೆ. ಹಾಗಾಗಿ ಅವರ ಸಿನಿಮಾಗಳ ಮೇಲೆ ಪ್ರೇಕ್ಷಕರಿಗೂ ಸಾಕಷ್ಟು ನಿರೀಕ್ಷೆ ಇದ್ದೇ ಇರುತ್ತದೆ. ನಂಗೆ ಅಂತಹ ಕುತೂಹಲ ಇತ್ತು. ಈಗ ಅವರದ್ದೇ ನಿರ್ಮಾಣದ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಹುಡುಕಿಕೊಂಡು ಬಂದಿದೆ. ಖುಷಿ ಆಗಿದೆ ಅಂತ ನಟಿ ದಿವ್ಯ ಉರುಡುಗ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಇನ್ನು ದಿವ್ಯ ನಟಿಸಲಿರುವ ಭಾಗದ ಚಿತ್ರೀಕರಣವು ಬೆಂಗಳೂರು ಹಾಗು ಮಂಗಳೂರಿನ ಸುತ್ತಮುತ್ತ ಶೀಘ್ರದಲ್ಲೇ ಶುರು ಆಗಲಿದ್ದು, ಚಿತ್ರದ ಐದನೇ ಹಂತದ ಚಿತ್ರೀಕರಣಕ್ಕೆ ಚಿತ್ರತಂಡ ಸಕಲ ಸಿದ್ಧತೆ ನಡೆಸಿದೆ. ಇದು ಹರಿಪ್ರಸಾದ್‌ ಜಯಣ್ಣ ನಿರ್ದೇಶನದ ಚಿತ್ರ. ಚಿತ್ರದ ನಾಲ್ಕನೇ ಹಂತದ ಚಿತ್ರೀಕರಣವು ಕಳೆದ ತಿಂಗಳಷ್ಷೇ ಪೂರ್ಣಗೊಂಡಿದ್ದು, ಬೆಂಗಳೂರಿನ ವಿವಿಧ ಭಾಗಗಳಲ್ಲಿ ನಡೆಸಿದ ಚಿತ್ರೀಕರಣದ ದೃಶ್ಯಗಳು ಅತ್ಯಂತ ಸೊಗಸಾಗಿ ಮೂಡಿಬಂದಿದೆಯಂತೆ.

ಹೊಸಬರ ದಂಡೇ ಇರುವ ಈ ಚಿತ್ರಕ್ಕೆ ಯುವ ಪ್ರತಿಭೆ ಪೃಥ್ವಿ ಶಾಮನೂರು ನಾಯಕನಾದರೆ, ಅಂಜಲಿ ಅನೀಶ್ ಮತ್ತು ಯಶ ಶಿವಕುಮಾರ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಅರ್ಜುನ್ ಜನ್ಯ ಸಂಯೋಜಿಸಿರುವ ರಾಗಗಳಿಗೆ ಕನ್ನಡ ಶೋತೃಗಳ ವಿಕಟಕವಿ ಯೋಗರಾಜ್ ಭಟ್ ಸಾಹಿತ್ಯ ರಚಿಸಿದರೆ, ಖ್ಯಾತ ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಹಾಗೂ ಮಧು ತುಂಬಕೆರೆಯ ಸಂಕಲನದ ಕೈಚಳಕ ಚಿತ್ರವನ್ನು ಮತ್ತಷ್ಟು ಶ್ರೀಮಂತಗೊಳಿಸಿದೆ ಎನ್ನುವುದು ಚಿತ್ರ ತಂಡದ ಮಾತು

  • ಎಂಟರ್‌ ಟೈನ್‌ ಮೆಂಟ್‌ ಸಿನಿಲಹರಿ
Categories
ಸಿನಿ ಸುದ್ದಿ

`ಡಿಬಾಸ್’ ಅಂಗಳಕ್ಕೆ ಮತ್ತೊಂದು ಐಷರಾಮಿ ಕಾರು-`ಕಾಸ್ಟ್ಲೀ ಕಾರು’ ಗಳ `ಒಡೆಯ’ ದಾಸ ದರ್ಶನ್ !

ಸ್ಯಾಂಡಲ್‌ವುಡ್‌ನ ಯಜಮಾನ, ಬಾಕ್ಸ್ಆಫೀಸ್‌ನ ಸುಲ್ತಾನ ದರ್ಶನ್, ಐಷರಾಮಿ ಕಾರುಗಳಿಗೆ ಒಡೆಯನಾಗಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರೋ ಸಂಗತಿ. ಚಾಲೆಂಜಿಂಗ್ ಸ್ಟಾರ್ ಬಳಿ ಕೋಟಿ ಕೋಟಿ ಬೆಲೆ ಬಾಳುವ ಕಾರುಗಳಿವೆ. ಹತ್ತಾರು ಕಾರುಗಳಿಗೆ ಯಜಮಾನರಾಗಿರೋ ದರ್ಶನ್ ಇದೀಗ 90 ಲಕ್ಷ ಮೌಲ್ಯದ ದುಬಾರಿ ಕಾರನ್ನು ಖರೀದಿಸಿದ್ದಾರೆ. ನೆಚ್ಚಿನ ನಟನ ಹೊಸ ಕಾರನ್ನು ನೋಡಿ ಸಂತಸ ವ್ಯಕ್ತಪಡಿಸ್ತಿರೋ ಡಿಬಾಸ್ ಅಭಿಮಾನಿಗಳು, ಸೋಷಿಯಲ್ ಜಗತ್ತಿನಲ್ಲಿ ದಚ್ಚು ಕಾರಿನ ಪೋಟೋಗಳನ್ನು ಹಾಗೂ ವಿಡಿಯೋಗಳನ್ನು ವೈರಲ್ ಮಾಡ್ತಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಕಾರುಗಳಂದ್ರೆ ಬಲು ಪ್ರೀತಿ. ಹೌದು, ಕಾರ್ ಕ್ರೇಜ್ ಹೊಂದಿರುವ ದಚ್ಚು, ವರ್ಷಕ್ಕೊಂದು ಕಾರು ಖರೀದಿ ಮಾಡಿಯೇ ತೀರುತ್ತಾರೆ. ಮಾರುಕಟ್ಟೆಗೆ ಹೊಸ ಮಾಡೆಲ್ ಕಾರು ಬಂದ್ರೆ ಸಾಕು, ಆ ಕಾರಿನ ಮೇಲೆ ಕಣ್ಣು ಬಿದ್ದರೆ ಸಾಕು ಡಿಬಾಸ್ ಅಂಗಳಕ್ಕೆ ಆ ಕಾರು ಬಂದು ನಿಂತಿರುತ್ತೆ. ಅದೇ ರೀತಿ, ಯಜಮಾನರ ಅಖಾಡಕ್ಕೆ ಹೊಸದಾಗಿ ಸೇರ್ಪಡೆಯಾಗಿರುವ ಹೊಸ ಕಾರಿನ ಹೆಸರು ಟೊಯೋಟೋ ವೆಲ್‌ಫೈರ್. ಟೊಯೋಟೋ ಕಂಪೆನಿಯ ಈ ಕಾರು ಬರೋಬ್ಬರಿ 90 ಲಕ್ಷ ಬೆಲೆ ಬಾಳುತ್ತೆ.

ಅಚ್ಚರಿ ಅಂದರೆ ಇದಕ್ಕಿಂತ ದುಬಾರಿ ಬೆಲೆಯ ಕಾರುಗಳು ಚಕ್ರವರ್ತಿಯ ಅಂಗಳದಲ್ಲಿವೆ. ಹೌದು, ಸುಮಾರು ಐದು ಕೋಟಿ ಬೆಲೆಬಾಳುವ ಲ್ಯಾಂಬೋರ್ಗಿನಿ ಉರುಸ್ ಗಾಡಿ ಸ್ಯಾಂಡಲ್‌ವುಡ್ ಸಾರಥಿಯನ್ನು ಸವಾರಿ ಮಾಡಿಸುತ್ತಿದೆ. ಹಳದಿ ಹಾಗೂ ಬಿಳಿ ಬಣ್ಣದ ಎರಡು ಲ್ಯಾಂಬೋರ್ಗಿನಿ, ರೇಂಜ್ ರೋವರ್, ಫೋರ್ಡ್ ಮುಸ್ಟಾಂಗ್, ಬಿ ಎಂ ಡಬ್ಲ್ಯೂ, ಹಮ್ಮರ್, ಆಡಿ ಕ್ಯೂ 7, ಜಾಗ್ವಾರ್, ಫಾರ್ಚುನರ್, ಮಿನಿಕೂಪರ್, ಬೆಂಜ್, ಐ 20 ಸೇರಿದಂತೆ ಹಲವು ಐಷರಾಮಿ ಕಾರುಗಳು ಒಡೆಯನ ಬಳಿಯಿವೆ. ಕೋಟ್ಯಾಂತರ ಮಂದಿ ಅಭಿಮಾನಿಗಳು ಆರಾಧಿಸುವ-ಅಭಿಮಾನಿಸುವ ಆರಾಧ್ಯದೈವ ದಾಸನನ್ನು ಕ್ಷೇಮವಾಗಿ-ಸುರಕ್ಷಿತವಾಗಿ ನೋಡಿಕೊಳ್ಳುತ್ತಿವೆ.

ಹೊಸ ಕಾರುಗಳನ್ನು ಪರ್ಚೈಸ್ ಮಾಡಿದಾಗ ತಾಯಿ ಚಾಮುಂಡೇಶ್ವರಿ ಸನ್ನಿಧಿಗೆ ಹೋಗಿ ಪೂಜೆ ಮಾಡಿಸಿಕೊಂಡು ಬರೋದು ವಾಡಿಕೆ. ಅದರಂತೇ, ಗೆಳೆಯರ ಜೊತೆ ಚಾಮುಂಡಿ ತಾಯಿಯ ದರ್ಶನ ಪಡೆದಿದ್ದಾರೆ. ಸ್ನೇಹಿತರ ಜೊತೆ ರೈಡ್ ಹೋಗಿರುವ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಸದ್ಯ, ‘ಕ್ರಾಂತಿ'ಸಿನಿಮಾದಲ್ಲಿ ಡಿಬಾಸ್ ಬ್ಯುಸಿಯಾಗಿದ್ದಾರೆ.ಬೆಂಗಳೂರಿನಲ್ಲಿ ಚಿತ್ರೀಕರಣ ಭರದಿಂದ ಸಾಗಿದೆ.ವಿ ಹರಿಕೃಷ್ಣ ನಿರ್ದೇಶನ ಚಿತ್ರಕ್ಕಿದ್ದು,ಶೈಲಜಾ ನಾಗ್ ನಿರ್ಮಾಣದಲ್ಲಿ ‘ಕ್ರಾಂತಿ’ ಮೂಡಿಬರ‍್ತಿದೆ.

ವಿಶಾಲಾಕ್ಷಿ,ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

‘ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ’ ಫೋಟೋಶೂಟ್ -ದಬೂ ರತ್ನಾನಿ ಕ್ಯಾಮೆರಾ ಕಣ್ಣಲ್ಲಿ ‘ರಾಕಿಂಗ್’ ಜೋಡಿ !

ರಾಕಿಂಗ್ ದಂಪತಿ ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಬಾಲಿವುಡ್‌ನ ಖ್ಯಾತ ಫೋಟೋಗ್ರಾಫರ್ ದಬೂ ರತ್ನಾನಿ ಕ್ಯಾಮೆರಾಗೆ ರಾಕಿಭಾಯ್ ಮತ್ತು ರಾಧಿಕಾ ಪಂಡಿತ್ ಪೋಸ್ ಕೊಟ್ಟಿದ್ದಾರೆ. ಇತ್ತೀಚೆಗಷ್ಟೇ ದಬೂ ರತ್ನಾನಿ ಜೊತೆಗಿದ್ದ ಯಶ್ ಪೋಟೋ ಸೋಷಿಯಲ್ ಲೋಕದಲ್ಲಿ ವೈರಲ್ ಆಗಿತ್ತು. ಇದೀಗ, ಯಶ್ ಮತ್ತು ರಾಧಿಕಾ ಇಬ್ಬರು ದಬೂ ರತ್ನಾಗಿ ಜೊತೆಗೆ ನಿಂತು ಕ್ಯಾಮೆರಾಗೆ ಲುಕ್ ಕೊಟ್ಟಿರುವ ಫೋಟೋ ರಿವೀಲ್ ಆಗಿದೆ. ಬಾಲಿವುಡ್‌ನ ಹೆಸರಾಂತ ಫೋಟೋಗ್ರಾಫರ್ ಬಳಿ ಫೋಟೋಶೂಟ್ ಮಾಡಿಸಿರುವುದರಿಂದ ಕೂತೂಹಲ ಇಮ್ಮಡಿಯಾಗಿದೆ.

ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿಯ ಈ ಫೋಟೋಶೂಟ್ ಪರ್ಸನಲ್ ಫೋಟೋಗ್ರಫಿಯಾ? ಈ ಪ್ರಶ್ನೆಗೆ ಒಂದೇ ಮಾತಿನಲ್ಲಿ ಹೂಃ ಹೌದು ಎಂದು ಹೇಳೋದಕ್ಕೆ ಸಾಧ್ಯವಿಲ್ಲ. ಹಾಗಂತ ಅಲ್ಲ ಗಳೆಯೋದಕ್ಕೂ ಸಾಧ್ಯವಿಲ್ಲ. ಯಾಕಂದ್ರೆ, ದಬೂ ರತ್ನಾನಿ ಕ್ಯಾಮೆರಾ ಕಣ್ಣಲ್ಲಿ ತಾವು ಸೆರೆಯಾಗ್ಬೇಕು ಎನ್ನುವುದು ಅದೆಷ್ಟೋ ಮಂದಿಯ ಕನಸು. ಮಾಯಲೋಕದಲ್ಲಿ ಮಿಂಚ್ಬೇಕು ಎಂದುಕೊಂಡವರು ಮಾತ್ರವಲ್ಲ ಈಗಾಗಲೇ ಮಾಯಲೋಕದಲ್ಲಿ ಮೆರೆಯುತ್ತಿರುವವರು ಕೂಡ ದಬೂ ಕ್ಯಾಮೆರಾ ಕೈಚಳಕಕ್ಕೆ ಮನಸ್ಸು ಕೊಟ್ಟು ಕೂತುಬಿಡ್ತಾರೆ. ಪ್ರತಿವರ್ಷ ಜಗತ್ತಿನ ಮುಂದೆ ಅನಾವರಣಗೊಳ್ಳುವ ದಬೂ ಕ್ಯಾಲೆಂಡರ್‌ನಲ್ಲಿ ಲಕಲಕ ಹೊಳೆಯೋ ಲಕ್ ನಮಗೆ ಯಾವಾಗ ಕೂಡಿಬರುತ್ತೆ ದೇವಾ ಅಂತ ಎಷ್ಟೋ ಮಂದಿ ಆಕಾಶ ನೋಡ್ತಿದ್ದಾರೆ.

ದಬೂ ರತ್ನಾನಿ ಕ್ಯಾಲೆಂಡರ್ ಸಿಕ್ಕಾಪಟ್ಟೆ ಬೋಲ್ಡ್ ಅಂಡ್ ಬ್ಯೂಟಿಫುಲ್ ಪಿಕ್ಚರ್‌ಗಳಿಂದ ಕೂಡಿರುತ್ತೆ. ನಾನಾ-ನೀನಾ ನೋಡೆಬಿಡೋಣ ಎನ್ನುವ ರೇಂಜ್ಗೆ ನಟರು ಲುಕ್ ಕೊಟ್ಟರೆ,
ಕ್ಯಾಮೆರಾ ಹೀಟಾಗುವಂತೆ ನಟಿಮಣಿಯರು ತಮ್ಮ ಸುಂದರ ದೇಹಸಿರಿಯನ್ನು ಎಕ್ಸ್ ಪೋಸ್ ಮಾಡ್ತಾರೆ. ದಬೂ ಕಲರ್‌ಫುಲ್ ಕಲ್ಪನೆಗೆ- ಯೂನಿಕ್ ಕಾನ್ಸೆಪ್ಟ್ನ ಫೋಟೋಗ್ರಫಿಗೆ ಬಾಲಿವುಡ್ ತಾರೆಯರು ಸಾಥ್ ಕೊಡ್ತಾರೆ. ಹೀಗಾಗಿಯೇ, ಔಟ್‌ಫುಟ್ ಚೆನ್ನಾಗಿ ಬರುತ್ತೆ ಹಾಲಿವುಡ್ ತಾರೆಯರು ಕೂಡ ಕಣ್ಣರಳಿಸಿ ನೋಡುವಂತಾಗುತ್ತದೆ.

ಇಂಟ್ರೆಸ್ಟಿಂಗ್ ಅಂದರೆ ದಬೂ ರತ್ನಾನಿಯವರ ಕ್ಯಾಲೆಂಡರ್ ಪೋಟೋಶೂಟ್, ಬಾಲಿವುಡ್ ಸಿನಿಮಾ ಫೋಟೋಶೂಟ್‌ನ ಕೂಡ ಮೀರಿಸುತ್ತೆ. ಇಂತಹ ಹೆಸರಾಂತ ಫೋಟೋಗ್ರಾಫರ್ ಬಳಿ ನಮ್ಮ ರಾಕಿಂಗ್ ಜೋಡಿ ಫೋಟೋಶೂಟ್ ಮಾಡಿಸಿಕೊಂಡಿದೆ ಅಂದರೆ, ಅದರ ಅರ್ಥ ದಬೂ `೨೦೨೨’ರ ಕ್ಯಾಲೆಂಡರ್‌ನಲ್ಲಿ ಯಶ್-ರಾಧಿಕಾ ಇರುತ್ತಾರೆ ಅಂತಾನಾ? ಅಥವಾ ಇಬ್ಬರು ಸೈಲೆಂಟಾಗಿ ಹೊಸ ಸಿನಿಮಾ ಏನಾದರೂ ಮಾಡ್ತಿದ್ದಾರೆ ಅಂತಾನಾ? ಇದ್ಯಾವ ಪ್ರಶ್ನೆಗೂ ಸದ್ಯಕ್ಕೆ ಉತ್ತರವಿಲ್ಲ.

ಅಂದ್ಹಾಗೇ, ರೀಲ್‌ನಲ್ಲಿ ಸಕ್ಸಸ್‌ಫುಲ್ ಜೋಡಿಯಾಗಿ ಮಿಂಚಿ ಮೆರೆದು, ರಿಯಲ್ ಲೈಫ್‌ನಲ್ಲಿ ಆದರ್ಶ ದಂಪತಿಗಳಾಗಿ ಬದುಕುತ್ತಿರುವ ರಾಕಿಂಗ್ ಜೋಡಿಯನ್ನು, ಸ್ಕ್ರೀನ್ ಮೇಲೆ ಒಟ್ಟಿಗೆ ನೋಡ್ಬೇಕು ಎನ್ನುವುದು ಸಾಕಷ್ಟು ಅಭಿಮಾನಿಗಳ ಕನಸು. ಫ್ಯಾನ್ಸ್ ಆಸೆ-ಕನಸಿಗೆ ಯಶ್-ರಾಧಿಕಾ ಜೀವತುಂಬಲಿಕ್ಕೆ ರೆಡಿ ಇದ್ದಾರೆ. ಒಳ್ಳೆ ಸ್ಕ್ರಿಪ್ಟ್ ಬಂದರೆ, ಆ ಸ್ಕ್ರಿಪ್ಟ್ ನಮ್ಮಿಬ್ಬರನ್ನು ಚೂಸ್ ಮಾಡಿದರೆ ಒಟ್ಟಿಗೆ ತೆರೆಮೇಲೆ ಬರುತ್ತೀವಿ ಎಂದು ಇಬ್ಬರು ಹೇಳಿಕೊಂಡಿದ್ದಾರೆ. ಬಹುಷಃ ಅಂತಹದ್ದೊಂದು ಸ್ಕ್ರಿಪ್ಟ್ ಅರಸಿ ಬಂದಿರಬಹುದು? ಬಂದಿಲ್ಲದೆಯೂ ಇರ‍್ಬೋದು? ಈ ಹಿಂದೆ ಫ್ರೀಡಂ ಅಡುಗೆ ಎಣ್ಣೆಗೆ ರಾಯಭಾರಿಗಳಾಗಿದಂತೆ ಮತ್ಯಾವುದೋ ಖಾಸಗಿ ಜಾಹೀರಾತಿಗೆ ಬ್ರ್ಯಾಂಡ್ ಅಂಬಾಸೀಡರ್ಸ್ ಆಗಿರಬಹುದು. ಒಟ್ನಲ್ಲಿ ಸೈಲೆಂಟಾಗಿ ದಬೂ ರತ್ನಾನಿ ಅವರ ಕ್ಯಾಮೆರಾಗೆ `ರಾಕಿಂಗ್ ಜೋಡಿ’ ಜೊತೆಯಾಗಿ ಪೋಸ್ ಕೊಟ್ಟಿರುವುದು ಹಲವು ಕೂತೂಹಲಕ್ಕೆ ಕಾರಣವಾಗಿದೆ. ಈ ಕೂತೂಹಲದ ಕೋಟೆಯ ರಹಸ್ಯಕ್ಕೆ ರಾಕಿಭಾಯ್ ಏನ್ ಹೇಳ್ತಾರೆ ಕಾದು ನೋಡೋಣ ಅಲ್ಲವೇ.

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಗೋಲ್ಡನ್ ಕ್ವೀನ್ ತಾಯಿಯಾಗ್ತಿದ್ದಾರೆ; ಮೊದಲ ಮಗುವಿನ ನಿರೀಕ್ಷೆಯಲ್ಲಿ ಅಮೂಲ್ಯ- ಜಗದೀಶ್ !

ಗೋಲ್ಡನ್ ಕ್ವೀನ್ ಅಮೂಲ್ಯ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ತಾಯಿಯಾಗ್ತಿರೋ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಈಗ ನಾವಿಬ್ಬರಲ್ಲ ಮೂವರಾಗುತ್ತಿದ್ದೇವೆ ಅನ್ನೋದನ್ನು ಸೋಷಿಯಲ್ ಮೀಡಿಯಾದ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ. 2022ರಲ್ಲಿ ಕಂದಮ್ಮನ ಆಗಮನವಾಗಲಿದ್ದು, ಚೊಚ್ಚಲ ಕಂದಮ್ಮನ ಬರುವಿಕೆಗಾಗಿ ಕುಟುಂಬ ಎದುರು ನೋಡ್ತಿದೆ.

ನಟಿ ಅಮೂಲ್ಯ 2017 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಫಾರಿನ್ ರಿಟರ್ನ್ ಜಗದೀಶ್ ರನ್ನು ವರಿಸಿದ್ದರು. ಸ್ಯಾಂಡಲ್ ವುಡ್ ಗೋಲ್ಡನ್ ಕ್ವೀನ್ ಕೈ ಹಿಡಿದ ಜಗದೀಶ್ ಅಮೂಲ್ಯರನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ತಿದ್ದಾದೆ. ಜಗದೀಶ್ ಜೊತೆ ಸುಖ ಸಂಸಾರ ಸಾಗಿಸ್ತಿರೋ ಅಮ್ಮು ಮದುವೆ ಆದ್ಮೇಲೆ ಬಣ್ಣದ ಲೋಕದಿಂದ ದೂರ ಉಳಿದರು. ಇದೀಗ ಫ್ಯಾಮಿಲಿ ಪ್ಲ್ಯಾನಿಂಗ್ ಮಾಡಿಕೊಂಡಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

Categories
ಸಿನಿ ಸುದ್ದಿ

‘ಆರ್‌ಆರ್‌ಆರ್’ ಟ್ರೈಲರ್ ಬಿಡುಗಡೆ ಮುಂದೂಡಿಕೆ – `ದೋಸ್ತಿ’ ಚಿತ್ರ ಸಾಹಿತಿ ಅಗಲಿಕೆಯ ನೋವಲ್ಲಿ ಚಿತ್ರತಂಡ !

ಆರ್‌ಆರ್‌ಆರ್ ಟ್ರೈಲರ್ ಬಿಡುಗಡೆಗೆ ಚಿತ್ರತಂಡ ಮುಹೂರ್ತ ಫಿಕ್ಸ್ ಮಾಡಿತ್ತು. ಡಿಸೆಂಬರ್ ೦೩ರಂದು ಕನ್ನಡ-ತೆಲುಗು-ತಮಿಳು-ಮಲೆಯಾಳಂ ಹಾಗೂ ಹಿಂದಿಯಲ್ಲಿ ಒಟ್ಟಿಗೆ ಟ್ರೈಲರ್ ರಿಲೀಸ್ ಮಾಡೋದಾಗಿ ಫಿಲ್ಮ್ ಟೀಮ್ ಮಾಹಿತಿ ಹಂಚಿಕೊಂಡಿತ್ತು. ನಿರ್ದೇಶಕ ರಾಜಮೌಳಿ ಸೇರಿದಂತೆ ಇಡೀ ಸಿನಿಮಾ ತಂಡ ಟ್ರೈಲರ್ ಬಿಡುಗಡೆಯ ಸುದ್ದಿಯನ್ನು ತಿಳಿಸಿದ್ದೇ ತಡ ಚಿತ್ರಪ್ರೇಮಿಗಳು ಕೂತೂಹಲ ಹೊರಗಾಕಿದ್ದರು. ಥ್ರಿಬಲ್ ಆರ್ ಟ್ರೈಲರ್ ವೀಕ್ಷಣೆಗೆ ಕೌಂಟ್‌ಡೌನ್ ಶುರುಹಚ್ಚಿಕೊಂಡಿದ್ದರು. ಈ ಮಧ್ಯೆ ಆರ್‌ಆರ್‌ಆರ್ ತಂಡ ಟ್ರೈಲರ್ ಲಾಂಚ್ ಕಾರ್ಯಕ್ರಮವನ್ನು ಕ್ಯಾನ್ಸಲ್ ಮಾಡಿದೆ. ಬಿಡುಗಡೆಯ ದಿನಾಂಕವನ್ನು ಮುಂದೂಡಿದೆ. ಇದಕ್ಕೆ ಕಾರಣ ಅನಿರೀಕ್ಷಿತ ಬೆಳವಣಿಗೆಗಳು ಎನ್ನಲಾಗ್ತಿದೆ.

ಥ್ರಿಬಲ್ ಆರ್ ಇಡೀ ಜಗತ್ತು ಜಾತಕ ಪಕ್ಷಿಯಂತೆ ಕಾದು ಕುಳಿತಿರೋ ಸಿನಿಮಾ. ಜಕ್ಕಣ್ಣ ಕಲ್ಪನೆಯಲ್ಲಿ ಅರಳಿ ಬೆಳ್ಳಿತೆರೆಗೆ ಕಿಚ್ಚು ಹಚ್ಚಲು ಬರುತ್ತಿರುವ ‘ಆರ್‌ಆರ್‌ಆರ್'ಚಿತ್ರವನ್ನು ಕಣ್ತುಂಬಿಕೊಳ್ಳೋದಕ್ಕೆ ಕೂತೂಹಲಭರಿತರಾಗಿದ್ದಾರೆ.ಇತ್ತ ಚಿತ್ರತಂಡ ಸೂಪ್ ರೂಪದಲ್ಲಿ ಟೀಸರ್ ಬಿಟ್ಟು,ಸಲಾಡ್ ರೂಪದಲ್ಲಿ ಸಾಂಗ್ಸ್ ತೋರಿಸಿದ್ದರಿಂದ ಟ್ರೈಲರ್,ವೆಜ್ ರೂಪದಲ್ಲಿ ಬರುತ್ತಾ ಅಥವಾ ನಾನ್‌ವೆಜ್ ರೂಪದಲ್ಲಿ ನಿರೀಕ್ಷೆಯ ಬಾಳೆದೆಲೆಗೆ ಬೀಳುತ್ತಾ ಅಂತ ಕ್ಯಾಲುಕೇಷನ್ ಮಾಡ್ತಿದ್ದರು.ಇದೇ ಹೊತ್ತಿಗೆ ಚಿತ್ರತಂಡ ಟ್ರೈಲರ್ ರಿಲೀಸ್ ಡೇಟ್‌ನ ಅನೌನ್ಸ್ ಮಾಡಿತ್ತು.ಡಿಸೆಂಬರ್ ೦೩ರಂದು ಐದು ಭಾಷೆಗಳಲ್ಲೂ ‘ಆರ್‌ಆರ್‌ಆರ್’ ಟ್ರೈಲರ್ ಬಿಡುಗಡೆ ಮಾಡೋದಾಗಿ ತಿಳಿಸಿದ್ದರು. ಇದಾಗಿ ೨೪ ಗಂಟೆ ಕಳೆಯೋದ್ರೊಳಗೆ ಟ್ರೈಲರ್ ರಿಲೀಸ್ ದಿನಾಂಕ ಮುಂದಕ್ಕೆ ಹೋಗಿದೆ. ಇದಕ್ಕೆ ಕಾರಣ ತೆಲುಗು ಚಿತ್ರರಂಗದ ಖ್ಯಾತ ಗೀತ ರಚನೆಕಾರರಾದ ಪದ್ಮಶ್ರೀ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿಯವರ ಅಗಲಿಕೆ ರ‍್ಬೋದು. ಅಂದ್ಹಾಗೇ, ಇವರು ‘ಆರ್‌ಆರ್‌ಆರ್' ಚಿತ್ರದ ‘ದೋಸ್ತಿ’ ಹಾಡಿಗೆ ಸಾಹಿತ್ಯ ಬರೆದು ಕೊಟ್ಟಿದ್ದರು.

ಹೌದು, ತೆಲುಗು ಚಿತ್ರರಂಗದ ಖ್ಯಾತ ರಚನೆಕಾರರಾದ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿಯವರು ವಿಧಿವಶರಾಗಿದ್ದಾರೆ. ೬೬ ವರ್ಷ ವಯಸ್ಸಾಗಿತ್ತು, ಕಾನ್ಸರ್‌ನಿಂದ ಬಳಲುತ್ತಿದ್ದು ಹೈದ್ರಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನವೆಂಬರ್ ೩೦ರಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಸೀತಾರಾಮ ಶಾಸ್ತ್ರಿಯವರ ಅಗಲಿಕೆಗೆ ಇಡೀ ಟಾಲಿವುಡ್ ಕಂಬನಿ ಮಿಡಿದಿದೆ. ತೆಲುಗು ಸಿನಿಮಾ ರಂಗಕ್ಕೆ ಇವರ ಕೊಡುಗೆ ಅಪಾರ. ೮೦೦ಕ್ಕೂ ಹೆಚ್ಚು ಸಿನಿಮಾಗಳು, ೩೦೦೦ಕ್ಕೂ ಹೆಚ್ಚು ಹಾಡುಗಳನ್ನು ಕಟ್ಟಿಕೊಟ್ಟಿದ್ದ ಸೀತಾರಾಮ ಶಾಸ್ತ್ರಿಯವರು ತೆಲುಗು ಸಿನಿಮಾ ಸಾಹಿತ್ಯಕ್ಕೆ ರಥಚಕ್ರವೇ ಆಗಿದ್ದರು ಅಂತ ಟಾಲಿವುಡ್‌ನ ಸೂಪರ್‌ಸ್ಟಾರ್‌ಗಳು-ನಿರ್ದೇಶಕರು-ನಿರ್ಮಾಪಕರು ಕಣ್ಣೀರಾಗುತ್ತಿದ್ದಾರೆ. ಖ್ಯಾತ ಕೊರಿಯೋಗ್ರಾಫರ್, ಹಿರಿಯ ನಟ ಶಿವಶಂಕರ್ ಮಾಸ್ಟರ್ ನಿಧನದ ಬೆನ್ನಲ್ಲೇ ಸೀತಾರಾಮ ಶಾಸ್ತ್ರಿಯವರ ಅಗಲಿಕೆ ಟಾಲಿವುಡ್‌ಗೆ ಆಘಾತ ತಂದೊಡ್ಡಿದೆ.

ಮೇಲೆ ಹೇಳಿದ ಹಾಗೇ ‘ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿ'ಯವರು ‘ಥ್ರಿಬಲ್ ಆರ್’ ಚಿತ್ರದ ‘ದೋಸ್ತಿ'ಹಾಡಿಗೆ ಮುತ್ತಿನಂತೆ ಪದಗಳನ್ನು ಪೋಣಿಸಿಕೊಟ್ಟಿದ್ದರು. ಈಗಾಗಲೇ ಬಿಡುಗಡೆಯಾಗಿರುವ ದೋಸ್ತಿ ಹಾಡು ‘ಆರ್‌ಆರ್‌ಆರ್’ ಮೇಲಿನ ನಿರೀಕ್ಷೆಯನ್ನು ಒಂದು ತೂಕ ಜಾಸ್ತಿ ಮಾಡಿದೆ. ಎಂ.ಎಂ. ಕೀರವಾಣಿ ಸಂಗೀತದಲ್ಲಿ-ಸೆಂಥಿಲ್ ಕ್ಯಾಮೆರಾ ಕಣ್ಣಲ್ಲಿ ಧಗಧಗಿಸ್ತಿರೋ ಹಾಡು ಪ್ರೇಕ್ಷಕರನ್ನು ಹುಚ್ಚೆಬ್ಬಿಸಿದೆ. ಚಿತ್ರದ ಮೇಲೆ ಕ್ರೇಜ್ ಹೆಚ್ಚಾಗಲಿಕ್ಕೆ ಸೀತಾರಾಮ ಶಾಸ್ತ್ರಿಯವರು ಬರೆದುಕೊಟ್ಟಿರುವ ಸಾಲುಗಳು ಕೂಡ ಕಾರಣವಾಗಿರುವಾಗಿವೆ. ಈಗ ಅವರನ್ನು ಕಳೆದುಕೊಂಡು ದುಃಖದಲ್ಲಿರುವಾಗ ಟ್ರೈಲರ್ ಬಿಡುಗಡೆ ಮಾಡಿ ಸಂಭ್ರಮಿಸೋದು ಹೇಗೆ ಎನ್ನುವ ಕಾರಣಕ್ಕೆ ಚಿತ್ರತಂಡ ಟ್ರೈಲರ್ ಬಿಡುಗಡೆಯನ್ನು ಕ್ಯಾನ್ಸಲ್ ಮಾಡಿದೆ. ಅತೀ ಶೀಘ್ರದಲ್ಲೇ ಹೊಸ ಡೇಟ್‌ನ ಅನೌನ್ಸ್ ಕೂಡ ಮಾಡೋದಾಗಿ ಮಾಹಿತಿ ಹಂಚಿಕೊಂಡಿದೆ.

ಆರ್‌ಆರ್‌ಆರ್'ಇಬ್ಬರು ಸ್ವಾತಂತ್ರ್ಯ ಹೋರಾಟಗಾರರ ಕಥೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಇತಿಹಾಸದ ಪುಟಗಳನ್ನು ತಿರುಚಿ ನೋಡಿ ಅಲ್ಲೂರಿ ಸೀತರಾಮರಾಜು ಹಾಗೂ ಕೊಮರಾಮ್ ಭೀಮ್ ಕಥೆಯನ್ನು ತಿಳಿದುಕೊಂಡಿರಬಹುದು.ಆದರೆ,ಜಕ್ಕಣ್ಣ ಕೆತ್ತಿರುವ ಕಥೆ ಹೇಗಿರಬಹುದು ಎನ್ನುವುದೇ ಇಡೀ ಸಿನಿಮಾ ಜಗತ್ತಿಗಿರುವ ಕೂತೂಹಲ.ಇಲ್ಲಿವರೆಗೂ ರಿಲೀಸ್ ಆಗಿರುವ ಚಿತ್ರದ ಒಂದೊಂದು ಪೋಸ್ಟರ್ ಕೂಡ ಒಂದೊಂದು ತೂಕವನ್ನು ಹೊತ್ತಿದೆ.ಟೀಸರ್-ಮೇಕಿಂಗ್-ಸಾಂಗ್ಸ್ ಗಳು ಪ್ರೇಕ್ಷಕಮಹಾಷಯರಿಗೆ ಹೈದ್ರಬಾದ್ ಬಿರಿಯಾನಿ ಫಿಕ್ಸು ಎನ್ನುತ್ತಿವೆ.

ಇನ್ನೇನಿದ್ರು ಟ್ರೈಲರ್ ರಿಲೀಸ್ ಆಗ್ಬೇಕು 'ಸೌತ್ ಟು ನಾರ್ತ್' ಸ್ಟಾರ್‌ಗಳನ್ನು ಹೊತ್ಕೊಂಡು ಬರುತ್ತಿರುವ ‘ಆರ್‌ಆರ್‌ಆರ್’ ಸ್ವಾಗತಿಸೋಕೆ ಪ್ರೇಕ್ಷಕ ಮಹಾಷಯರು ಸಜ್ಜಾಗಬೇಕು. ಅಂದ್ಹಾಗೇ, ಜನವರಿ ೦೭ರಂದು ಸಿನಿಮಾ ತೆರೆಗೆ ತರಲು ಚಿತ್ರತಂಡ ಮುಹೂರ್ತ ಫಿಕ್ಸ್ ಮಾಡಿದೆ. ಜೂನಿಯರ್ ಎನ್.ಟಿ.ಆರ್, ರಾಮ್ ಚರಣ್ ತೇಜಾ, ಅಜಯ್ ದೇವ್‌ಗಾನ್, ಆಲಿಯಾ ಭಟ್ ಸೇರಿದಂತೆ ಹಾಲಿವುಡ್ ಸ್ಟಾರ್‌ಗಳು ಚಿತ್ರದಲ್ಲಿದ್ದಾರೆ. ಡಿ.ವಿ.ವಿ ದಾನಯ್ಯ ನಿರ್ಮಾಣದಲ್ಲಿ ಅದ್ದೂರಿಯಾಗಿ ನಿರ್ಮಾಣಗೊಂಡಿರುವ ಈ ಸಿನಿಮಾವನ್ನು ಕನ್ನಡದಲ್ಲಿ ಕೆ.ವಿ.ಎನ್ ಪ್ರೊಡಕ್ಷನ್ ವಿತರಣೆ ಮಾಡ್ತಿದೆ. ಏಕಕಾಲಕ್ಕೆ ಐದು ಭಾಷೆಗಳಲ್ಲೂ ಸಿನಿಮಾ ಚಿತ್ರಮಂದಿರಕ್ಕೆ ಲಗ್ಗೆ ಇಡಲಿದೆ.

ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಕಾಶೀನಾಥ್‌ ಪುತ್ರನ ಚಿತ್ರಕ್ಕೆ ಹಾಡು ಹಾಡಿ ಸಾಥ್‌ ನೀಡಿದ ಅಭಿನಯ ಚಕ್ರವರ್ತಿ -ಶೂಟಿಂಗ್‌ ಮುಗಿಸಿ ನಿಂತ ʼಎಲ್ಲಿಗೆ ಪಯಣ ಯಾವುದೋ ದಾರಿ”

ಅಭಿಮನ್ಯು ಕಾಶೀನಾಥ್‌ ಅಭಿನಯದ ಚಿತ್ರʼಎಲ್ಲಿಗೆ ಪಯಣ ಯಾವುದೋ ದಾರಿʼ ಶೂಟಿಂಗ್‌ ಮುಗಿಸಿದೆ. ಥ್ರಿಲ್ಲರ್‌ ಜಾನರ್‌ ನ ಈ ಸಿನಿಮಾ ವಿಭಿನ್ನ ಕಾರಣಕ್ಕೆ ಸದ್ದು ಮಾಡುತ್ತಿದೆ. ಅದರಲ್ಲೂ ಈ ಚಿತ್ರದ ಒಂದು ಹಾಡಿಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಹಾಡಿದ್ದಾರೆಂದರೆ ಅಲ್ಲೇನೋ ವಿಶೇಷತೆ ಇದೆ ಎಂದೇ ಅರ್ಥ.

………………………………………………

ಕನ್ನಡದ ಹೆಸರಾಂತ ನಟ, ನಿರ್ದೇಶಕ ಕಾಶೀನಾಥ್‌ ಪುತ್ರ ಅಭಿಮನ್ಯು ಕಾಶೀನಾಥ್‌ ಅಭಿನಯದ ʼಎಲ್ಲಿಗೆ ಪಯಣ ಯಾವುದೋ ದಾರಿʼ ಚಿತ್ರಕ್ಕೆ ಶೂಟಿಂಗ್‌ ಮುಗಿದಿದೆ. ಬೆಂಗಳೂರು, ಮಡಿಕೇರಿ, ಚಿಕ್ಕಮಗಳೂರು, ದೊಡ್ಡಬಳ್ಳಾಪುರ ಸೇರಿದಂತೆ ರಾಜ್ಯ ವಿವಿಧೆಡೆಗಳಲ್ಲಿ ಸುಂದರ ತಾಣಗಳಲ್ಲಿ ಚಿತ್ರ ತಂಡ ಒಟ್ಟು 108 ದಿನಗಳ ಕಾಲ ಚಿತ್ರೀಕರಣ ನಡೆಸಿ, ಬೆಂಗಳೂರಿಗೆ ವಾಪಾಸ್‌ ಆಗಿದೆ. ಕಿರಣ್‌ ಸೂರ್ಯ ನಿರ್ದೇಶನ ಈ ಚಿತ್ರವು ವಿಭಿನ್ನ ಕಥಾ ಹಂದರ ಹೊಂದಿದೆ. ಥ್ರಿಲ್ಲರ್‌ ಜಾನರ್‌ ನ ಈ ಕಥೆಗೆ ನಿರ್ದೇಶಕ ಕಿರಣ್‌ ಸೂರ್ಯ ಅವರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.

ಸುದರ್ಶನ ಆರ್ಟ್ಸ್ ಲಾಂಛನದಲ್ಲಿ ಜತಿನ್ ಜಿ ಪಟೇಲ್ ಹಾಗೂ ಚೇತನ್ ಕೃಷ್ಣ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಕಾಶೀನಾಥ್‌ ಪುತ್ರ ಅಭಿಮನ್ಯ ಕಾಶೀನಾಥ್‌ ಅವರಿಗೆ ಇಲ್ಲಿ ಸ್ಪೂರ್ತಿ ಉಡಿಮನೆ ನಾಯಕಿ ಆಗಿ ಕಾಣಿಸಿಕೊಂಡಿದ್ದಾರೆ. ಅವರೊಂದಿಗೆ ವಿಜಯಶ್ರಿ ಕಲಬುರ್ಗಿ ಕೂಡ ನಾಯಕಿ ಆಗಿ ಅಭಿನಯಿಸಿದ್ದಾರೆ. ಹೆಸರಾಂತ ನಟ ಬಲ ರಾಜವಾಡಿ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಚಿತ್ರದಲ್ಲಿ ಎರಡು ಹಾಡುಗಳಿದ್ದು, ಅನಂತ್‌ ಕಾಮತ್‌ ಸಂಗೀತ ನೀಡಿದ್ದಾರೆ. ವಿಶೇಷ ಅಂದ್ರೆ ಎರಡು ಹಾಡುಗಳ ಪೈಕಿ ಒಂದು ಹಾಡಿಗೆ ಅಭಿನಯ ಚಕ್ರವರ್ತಿ ಕಿಚ್‌ ಸುದೀಪ್‌ ಧ್ವನಿ ನೀಡಿದ್ದಾರೆ. ಹೊಸಬರ ತಂಡಕ್ಕೆ ನಟ ಸುದೀಪ್‌ ತಮ್ಮದೇ ರೀತಿಯಲ್ಲಿ ಸಾಥ್‌ ನೀಡಿ, ಶುಭ ಹಾರೈಸಿದ್ದಾರೆ. ಚಿತ್ರದ ತಂಡ ಇಷ್ಟರಲ್ಲಿಯೇ ಈ ಸಾಂಗ್‌ ಲಾಂಚ್‌ ಮೂಲಕ ಸದ್ದು ಮಾಡಲು ಸಜ್ಜಾಗುತ್ತಿದೆ. ಚಿತ್ರಕ್ಕೆ ಸತ್ಯ ಛಾಯಾಗ್ರಹಣ, ಗಣೇಶ್ ನಿರ್ಚಲ್ ಸಂಕಲನ ಹಾಗೂ ವಿಶ್ವ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

  • ಎಂಟರ್‌ ಟೈನ್‌ ಮೆಂಟ್‌ ಬ್ಯೂರೋ ಸಿನಿಲಹರಿ
Categories
ಸಿನಿ ಸುದ್ದಿ

ಮಗನಿಗೆ ಕೇಶಮುಂಡನ ಮಾಡಿಸಿದರು ಮೇಘನಾ ರಾಜ್-ಬಾಲ್ಡೆಡ್ ಲುಕ್‌ನಲ್ಲಿ ರಾಯನ್ ರಾಜ್ ಸರ್ಜಾ ಪೋಸ್ !

ಸ್ಯಾಂಡಲ್‌ವುಡ್ ನಟಿ ಮೇಘನಾ ರಾಜ್ ತಮ್ಮ ಮುದ್ದು ಮಗನ ತಲೆ ಕೂದಲು ತೆಗೆಸಿದ್ದಾರೆ. ಇತ್ತಿಚೆಗಷ್ಟೇ ಅದ್ದೂರಿಯಾಗಿ ನಾಮಕರಣ ಮಾಡಿ ತನ್ನ ಕಂದನಿಗೆ ರಾಯನ್ ರಾಜ್ ಸರ್ಜಾ ಎಂದು ಹೆಸರಿಟ್ಟಿದ್ದ ಮೇಘನಾ ರಾಜ್ ಇದೀಗ ಶಾಸ್ತ್ರದ ಪ್ರಕಾರ ಮಗನಿಗೆ ಕೇಶಮುಂಡನ ಮಾಡಿಸಿದ್ದಾರೆ. ಎಲ್ಲಿ? ಯಾವಾಗ? ಮಗನ ತಲೆ ಕೂದಲು ತೆಗೆಸುವ ಶಾಸ್ತ್ರವನ್ನು ಮಾಡಿದರು ಅನ್ನೋದನ್ನು ಡಿಸ್‌ಕ್ಲೋಸ್ ಮಾಡಿಲ್ಲ. ಆದರೆ, ಚಿರು ಫೋಟೋ ಮುಂದೆ ನಿಂತು ಕ್ಲಿಕ್ಕಿಸಿಕೊಂಡಿರುವ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. `ನಮ್ಮ ಮನೆಯ ಮೊಟ್ಟೆ ಬಾಸ್’ ಎಂದು ಟ್ಯಾಗ್‌ಲೈನ್ ಕೊಟ್ಟು, ಕೇಶ ಮುಂಡನದ ನಂತರ ರಾಯನ್ ರಾಜ್ ಸರ್ಜಾ ಕೊಟ್ಟಿರುವ ಎಕ್ಸ್ ಪ್ರೆಷನ್ಸ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಬಾಲ್ಡೆಡ್ ಲುಕ್ ನಲ್ಲಿ ಜೂನಿಯರ್ ಸಿಂಬನ ನೋಡಿದ ಅಭಿಮಾನಿಗಳು ದೃಷ್ಟಿ ತೆಗೆಯುತ್ತಿದ್ದಾರೆ.

ರಾಯನ್ ರಾಜ್ ಸರ್ಜಾನ ರಾಯಲ್ಲಾಗಿ ಬೆಳೆಸ್ಬೇಕು ಎನ್ನುವುದು ನಟಿ ಮೇಘನಾ ಕನಸು.ಮಗ ಬೆಳೆದು ದೊಡ್ಡವನಾದ್ಮೇಲೆ ನನ್ನ ಬಗ್ಗೆ ಹೆಮ್ಮೆ ಪಡಬೇಕು ಎನ್ನುವ ಆಸೆ ಮೇಘನಾಗಿದೆ.ಹೀಗಾಗಿಯೇ ಅಪ್ಪ ಮತ್ತು ಅಮ್ಮನ ಪ್ರೀತಿಯನ್ನು ಮೇಘನಾ ಒಬ್ಬರೇ ತುಂಬುತ್ತಿದ್ದಾರೆ.ತಂದೆಯಿಲ್ಲ ಎನ್ನುವ ಕೊರಗು ಕಾಡದಂತೆ ತಂದೆ-ತಾಯಿ ಇಬ್ಬರ ಪ್ರೀತಿಯನ್ನು ಕೊಡುವುದಕ್ಕೆ ಪ್ರಯತ್ನ ಪಡುತ್ತಿದ್ದಾರೆ. ‘ಚಿರು ನನ್ನ ಪಾಲಿನ ರಾಜನಾದರೆ, ನನ್ನ ಮಗ ರಾಯನ್ ನನ್ನ ಪಾಲಿಗೆ ಯುವರಾಜ’. ಯುವಸಾಮ್ರಾಟ ಚಿರಂಜೀವಿಯ ಅಗಲಿಕೆಯಿಂದ ಕತ್ತಲೆ ತುಂಬಿದ್ದ ಎರಡು ಕುಟುಂಬದಲ್ಲೂ ಬೆಳಕು ಮೂಡಿದ್ದೇ ರಾಯನ್ ಬಂದ್ಮೇಲೆ. ಹೀಗಾಗಿ, ರಾಯನ್ ರಾಜ್ ಸರ್ಜಾ ಮೇಲೆ ಎರಡು ಕುಟುಂಬಕ್ಕೂ ಅಘಾದವಾದ ಪ್ರೀತಿಯಿದೆ ಮತ್ತು ಹೆಮ್ಮೆಯಿದೆ. ದೀಪದಂತೆ ಕಾಪಾಡಿಕೊಳ್ಳಬೇಕು ಮತ್ತು ಮುಗಿಲೆತ್ತರಕ್ಕೆ ಬೆಳೆಸಬೇಕು ಎನ್ನುವ ಕನಸು ಹೆಮ್ಮರವಾಗಿ ಬೆಳೆದಿದೆ.

ದಿನೇ ದಿನೇ ರಾಯನ್ ಬೆಳೆದು ದೊಡ್ಡವನಾಗ್ತಿದ್ದಾನೆ. ಇಷ್ಟು ದಿನ ರಾಯನ್ ಆರೈಕೆಯಲ್ಲಿ ತೊಡಗಿಸಿಕೊಂಡಿದ್ದ ಮೇಘನಾ ಈಗ ಬದುಕು ಕಟ್ಟಿಕೊಟ್ಟ ಸಿನಿಮಾ ಕಾಯಕದೆಡೆಗೆ ತಮ್ಮನ್ನು ತಾವು ತೊಡಗಿಸಿಕೊಳ್ತಿದ್ದಾರೆ. ಚಿರು ಗೆಳೆಯ ಪನ್ನಗಾಭರಣ ನಿರ್ಮಾಣ ಮಾಡ್ತಿರುವ ಚಿತ್ರದಲ್ಲಿ ನಟಿ ಮೇಘನಾ ಪ್ರಮುಖ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ಯುವಸಾಮ್ರಾಟ್ ಚಿರುಗೆ ಡೈರೆಕ್ಟ್ ಮಾಡ್ಬೇಕು ಎನ್ನುವುದು ಪನ್ನಗಾಭರಣ ಕನಸಾಗಿತ್ತು. ಚಿರು ಹಾಗೂ ಪ್ರಜ್ವಲ್ ದೇವರಾಜ್ ಕಾಂಬಿನೇಷನ್‌ನಲ್ಲಿ ಅದ್ದೂರಿಯಾಗಿ ಸಿನಿಮಾ ನಿರ್ಮಾಣ ಮಾಡ್ಬೇಕು ಎಂದುಕೊಂಡಿದ್ದರು.

ದುರದೃಷ್ಟವಶಾತ್ ಚಿರಂಜೀವಿಯನ್ನು ಆ ವಿಧಿ ಹೊತ್ತೊಯ್ದರಿಂದ ಸಿನಿಮಾ ಹಾಳಾಗಿ ಹೋಗಲಿ ಗೆಳೆಯನನ್ನು ಕಳೆದುಕೊಂಡು ಬದುಕೇ ಕತ್ತಲು ಎನ್ನುವಂತಾಯ್ತು. ಅಲ್ಲಿಂದ ಬಹುದೂರ ಸಾಗಿ ಬಂದು ವಾಯುಪುತ್ರನ ಆಶೀರ್ವಾದದೊಂದಿಗೆ ನಟಿ ಮೇಘನಾಗೆ ಸಿನಿಮಾ ಮಾಡುತ್ತಿದ್ದಾರೆ. ಯುವಪ್ರತಿಭೆ ವಿಶಾಲ್ ಆಕ್ಷನ್ ಕಟ್ ಹೇಳ್ತಿದ್ದಾರೆ, ವಾಸುಕಿ ವೈಭವ್ ಸಂಗೀತ ಸಂಯೋಜನೆ ಮಾಡ್ತಿದ್ದಾರೆ. ಪಿ,ಬಿ ಸ್ಟುಡಿಯೋಸ್ ಲಾಂಛನದಲ್ಲಿ ತಯ್ಯಾರಾಗ್ತಿರೋ ಈ ಸಿನಿಮಾದ ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಕನ್ನಡತಿ ಪೂಜಾ ಹೆಗ್ಡೆ ಕಾಲಿಡಿದರೇಕೆ ಡಾರ್ಲಿಂಗ್ ಪ್ರಭಾಸ್ ?`ಸ್ವೀಟಿ’ ಡೋಂಟ್ ವರೀ ಎಂದ್ರು ಫ್ಯಾನ್ಸ್ !

ನ್ಯಾಷನಲ್ ಸ್ಟಾರ್ ಆಗಿ ಮೆರೆಯುತ್ತಿರುವ ಡಾರ್ಲಿಂಗ್ ಪ್ರಭಾಸ್ ಕನ್ನಡತಿ ಪೂಜಾಹೆಗ್ಡೆ ಕಾಲಿಡಿದರು ಅಂತೇಳಿದರೆ ಯಾರಾದ್ರೂ ನಂಬೋ ಮಾತ? ನೋ ವೇ ಚಾನ್ಸ್ ಇಲ್ಲ ಎನ್ನುವ ರೆಬೆಲ್ ಡೈಲಾಗ್ ಪ್ರಭಾಸ್ ಫ್ಯಾನ್ಸ್ ಬಾಯಿಂದ ಬಂದೇಬಿಡುತ್ತೆ. ಇತ್ತ ಅನುಷ್ಕಾ ಫ್ಯಾನ್ಸ್ ಬಾಯಲ್ಲೂ ಇದೇ ಮಾತು ಕುಣಿದು ಕುಪ್ಪಳಿಸುತ್ತೆ. ಹಾಗಾದ್ರೆ, ಮತ್ಯಾಕ್ ತಡ ಮಿರ್ಚಿ ಹುಡುಗ ಕನ್ನಡತಿಯ ಕಾಲಿಡಿದಿದ್ದು ನಿಜನಾ ಅಥವಾ ಸುಳ್ಳಾ ನೋಡಿಕೊಂಡು ಬರೋಣ ಬನ್ನಿ

ಟಾಲಿವುಡ್ ರೆಬೆಲ್‌ಸ್ಟಾರ್ ಡಾರ್ಲಿಂಗ್ ಪ್ರಭಾಸ್ ನಿಜ ಜೀವನದಲ್ಲಿ ಅದ್ಯಾರನ್ನ ಕೈಹಿಡಿಯುತ್ತಾರೋ, ಅದ್ಯಾರ ಕೊರಳಿಗೆ ಮೂರು ಗಂಟು ಬೆಸೆಯುತ್ತಾರೋ, ಕಾಲುಂಗರ ತೊಡಿಸೋಕೆ ಅದ್ಯಾರ ಕಾಲ್ಬೆರಳನ್ನು ಹಿಡಿಯುತ್ತಾರೋ, ಅದ್ಯಾರ ಜೊತೆಗೆ ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿಯುತ್ತಾರೋ, ಅದ್ಯಾರನ್ನು ಹೆಂಡ್ತಿಯನ್ನಾಗಿ ಸ್ವೀಕರಿಸಿ ದಿಬ್ಬಣ ಹೊರಡುತ್ತಾರೋ ಗೊತ್ತಿಲ್ಲ. ಸದ್ಯಕ್ಕೆ, ‘ರಾಧೆ ಶ್ಯಾಮ್'ಚಿತ್ರದ ಕ್ಲ್ಯಾಸಿಕಲ್ ರೊಮ್ಯಾಂಟಿಕ್ ಟ್ರ್ಯಾಕ್ ವೊಂದರಲ್ಲಿ ಕನ್ನಡತಿ ಪೂಜೆ ಹೆಗ್ಡೆ ಕಾಲಿನ ಮೇಲೆ ಚಿತ್ತಾರ ಬಿಡಿಸಿ ‘ಆಶಿಕಿ ಆ ಗಯಿ’ ಎಂದು ಹಾಡುತ್ತಾ ಮೆರವಣಿಗೆ ಹೊರಟಿದ್ದಾರೆ. ಇದನ್ನು ನೋಡಿದ ಅನುಷ್ಕಾ ಅಭಿಮಾನಿಗಳು ಡೋಂಟ್ ವರೀ ಅಕ್ಕ, `ನಿನ್ನ ಕಾಲ್ಬೆರಳಿಗೆ ಪ್ರಭಾಸ್ ಅಣ್ಣ ನೈಲ್ ಪಾಲಿಶ್ ಹಚ್ಚಿದ್ದರು. ಆದರೆ, ಆ ಪೂಜಾ ಹೆಗ್ಡೆ ಕಾಲನ್ನು ಕೈಬೆರಳುಗಳಿಂದ ಜಸ್ಟ್ ಟಚ್ ಮಾಡಿದ್ದಾರೆ ಅಷ್ಟೇ ಎನ್ನುತ್ತಿದ್ದಾರಂತೆ.

ಮಿರ್ಚಿ'ಸಿನಿಮಾದಲ್ಲಿ ಪ್ರಭಾಸ್, ಅನುಷ್ಕಾ ಪಾದಗಳನ್ನು ತನ್ನ ಅಂಗೈ ಮೇಲೆ ಇರಿಸಿಕೊಂಡು ಸ್ವೀಟಿ ಕಾಲ್ಬೆರಳಿಗೆ ನೈಲ್ ಪಾಲಿಶ್ ಹಚ್ಚಿದ್ದರು.ಇದೊಂದು ಸೀನ್ ಹೆಣೈಕ್ಳ ಹೃದಯವನ್ನು ಚೆಲ್ಲಾಪಿಲ್ಲಿ ಮಾಡಿತ್ತು.ಸಿಕ್ಕರೆ ಡಾರ್ಲಿಂಗ್ ಥರ ಹುಡುಗ ಸಿಗ್ಬೇಕು ಅಂತ ಹೆಣೈಕ್ಳು ಬಯಸಿದರೆ,ದಕ್ಕಿದರೆ ಸ್ವೀಟಿಯಂತಹ ಸುಂದರಿ ದಕ್ಕಬೇಕು ಎಂದು ಹುಡುಗರು ಬಯಸಿದ್ದರು.‘ಇದೇದೋ ಬಾಗುಂದೆ ಸರೀ’ ಹಾಡಂತೂ ಹುಡುಗ-ಹುಡುಗಿಯರ ತಲೆ ಕೆಡಿಸಿತ್ತು.

ಬೆಳ್ಳಿಪರದೆ ಇವರಿಬ್ಬರಿಗೆ ದೃಷ್ಟಿ ತೆಗೆದಿತ್ತು. ಅಷ್ಟರ ಮಟ್ಟಿಗೆ ಇವರಿಬ್ಬರ ಕೆಮಿಸ್ಟ್ರಿ ವರ್ಕೌಟ್ ಆಗಿತ್ತು. ರೊಮ್ಯಾಂಟಿಕ್ ಜೋಡಿಯಾಗಿ ಬಿಗ್‌ಸ್ಕ್ರೀನ್‌ಗೆ ಕಿಚ್ಚು ಹಚ್ಚಿದ್ದ ಈ ಜೋಡಿ ರೀಲ್‌ನಲ್ಲಿ ಮಾತ್ರವಲ್ಲ ರಿಯಲ್‌ನಲ್ಲೂ ಒಂದಾಗ್ಬೇಕು ಅಂತ ಇವರಿಬ್ಬರ ಫ್ಯಾನ್ಸ್ ಅಂದೇ ಷರಾ ಬರೆದಿದ್ದರು. ಆದ್ರೆ ಏನ್ಮಾಡೋದು ಶುಭಮುಹೂರ್ತ ಇನ್ನೂ ಕೂಡಿಬಂದಿಲ್ಲ. ನಮ್ಮಿಬ್ಬರ ನಡುವೆ ಪ್ರೀತಿ ಚಿಗುರಿದೆ ಮದುವೆಯಾಗುವ ಮನಸ್ಸಾಗಿದೆ ಅಂತ ಅವರಿಬ್ಬರು ಹೇಳಿಕೊಂಡಿಲ್ಲ.

ಅಂದ್ಹಾಗೇ, ಡಾರ್ಲಿಂಗ್ ಪ್ರಭಾಸ್ ಬೇರೆ ಹೀರೋಯಿನ್ಸ್ ಜೊತೆ ರೊಮ್ಯಾನ್ಸ್ ಮಾಡಿದ್ದನ್ನು ನೋಡಿದಾಗ ಬೊಮ್ಮಾಲಿಗೆ ಬೇಜಾರಾಗುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ, ಸ್ವೀಟಿ ಫ್ಯಾನ್ಸ್ಗೆ ಮಾತ್ರ ಕರುಳು ಕಿತ್ತುಬಂದ್ಹಾಗೇ ಆಗುತ್ತಂತೆ. ಹೀಗಾಗಿಯೇ ಅನುಷ್ಕಾ ಫ್ಯಾನ್ಸ್ ಸೋಷಿಯಲ್ ಸಮುದ್ರದಲ್ಲಿ ಆಗಾಗ ಯುದ್ದ ಮಾಡ್ತಾರೆ. ಅಕ್ಕನ ಪರವಾಗಿ ಬ್ಯಾಟಿಂಗ್ ಮಾಡುತ್ತಾ, ಪ್ರಭಾಸ್ ಅಣ್ಣ ಯಾವತ್ತಿದ್ರೂ ಅನುಷ್ಕಾ ಅಕ್ಕನ ಡಾರ್ಲಿಂಗ್ ಅಂತೇಳ್ತಿರುತ್ತಾರೆ. ಇದೀಗ, ‘ರಾಧೆಶ್ಯಾಮ'ಚಿತ್ರದ ಹಾಡಿನಲ್ಲಿ ಪ್ರಭಾಸ್ ಹಾಗೂ ಪೂಜಾ ಕೆಮಿಸ್ಟ್ರಿಯ ಝಲಕ್ ನೋಡಿರುವ ಅನುಷ್ಕಾ ಅಭಿಮಾನಿಗಳು,ಅಕ್ಕಾ ಡೋಂಟ್ ವರೀ ನಿನ್ನ-ಅಣ್ಣನ ಕೆಮಿಸ್ಟ್ರಿನಾ ಯಾರು ಮ್ಯಾಚ್ ಮಾಡೋದಕ್ಕೆ ಆಗಲ್ಲ.ಅಷ್ಟೇ ಯಾಕೇ ಕ್ರಾಸ್ ಮಾಡೋದಕ್ಕೂ ಆಗಲ್ಲ ಎನ್ನುತ್ತಿದ್ದಾರಂತೆ. ಅಪ್‌ಕೋರ್ಸ್ ರೊಮ್ಯಾಂಟಿಕ್ ಜೋಡಿಗೆ ಬ್ರಾಂಡ್ ಅಂಬಾಸೀಡರ್ ಥರ ಇರುವ ‘ಮಿರ್ಚಿ’ ಜೋಡಿನಾ ಯಾರೂ ಮ್ಯಾಚ್ ಮಾಡೋದಕ್ಕೆ ಆಗಲ್ಲ.

ಹಾಗಂತ, ಡಾರ್ಲಿಂಗ್ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಕಾಂಬೋ ಕಿಕ್ ಕೊಡಲ್ಲ ಅಂತೇನಿಲ್ಲ. ಸದ್ಯ ರಿಲೀಸ್ ಆಗಿರುವ ‘ಆಶಿಕಿ ಆ ಗಯಿ'ಸಾಂಗ್ ಟೀರ‍್ರೇ ಸೌತ್‌ನಿಂದ-ನಾರ್ತ್ ವರೆಗೂ ಸದ್ದು ಮಾಡುತ್ತಿದೆ.ಮಿಥುನ್ ಲಿರಿಕ್ಸ್ ಬರೆದು ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ,ಅರ್ಜಿತ್ ಸಿಂಗ್ ಕಂಠ ಕುಣಿಸಿದ್ದಾರೆ.ಇದೊಂದು ಲವ್ ಆ್ಯಂಥಮ್ ಸಾಂಗ್ ಆಗಿದ್ದು ಡಿಸೆಂಬರ್ ೦೧ರಂದು ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗ್ತಿದೆ.

ಒನ್ ಹಾರ್ಟ್...ಟು ಹಾರ್ಟ್ ಬೀಟ್ಸ್ ಪ್ರೇಮಕಥೆ ಹಾಡಿನ ಮೂಲಕ ನಾಳೆ ಅರಳಲಿದೆ.ಈಗಾಗಲೇ ಬಿಡುಗಡೆಯಾಗಿರುವ `ಯಾರೋ ಇರ‍್ಯಾರೋ ಕನವರಿಸೋ ಪ್ರೇಮಿಗಳಾ’ ಹಾಡಿಗೆ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಜಸ್ಟಿನ್ ಪ್ರಭಾಕರನ್ ಸಂಗೀತ, ಶುರುವಲ್ಲೇ ಮೋಡಿ ಮಾಡ್ತಿದೆ. ರೊಮ್ಯಾಂಟಿಕ್ ಕಥಾಹಂದರವುಳ್ಳ ಈ ಚಿತ್ರಕ್ಕೆ ರಾಧಾಕೃಷ್ಣಕುಮಾರ್ ನಿರ್ದೇಶನವಿದೆ. ೧೯೭೦ ಯುರೋಪ್ ಬ್ಯಾಕ್‌ಡ್ರಾಪ್‌ನಲ್ಲಿ ಚಿತ್ರಿತಗೊಂಡಿದ್ದು, ಭೂಷಣ್‌ಕುಮಾರ್- ವಂಶಿ- ಪ್ರಮೋದ್ ಮೂವರು ಸೇರಿ ಬಂಡವಾಳ ಹೂಡಿದ್ದಾರೆ. ಮನೋಜ್ ಪರಮಹಂಸ ಛಾಯಾಗ್ರಹಣ, ಕೋಟಗಿರಿ ವೆಂಕಟೇಶ್ವರ ರಾವ್ ಸಂಕಲನವಿರುವ ಈ ಚಿತ್ರ ಜನವರಿ ೧೪ರಂದು ವರ್ಲ್ಡ್ ವೈಡ್ ರಿಲೀಸ್ ಆಗ್ತಿದೆ.

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ʼಮಾಫಿಯಾʼಕ್ಕೆ ಹೋಗುವ ಮುನ್ನ ಹೇರ್‌ ಕಟ್‌ ಮಾಡಿಸಿದ ಡೈನಾಮಿಕ್‌ ಪ್ರಿನ್ಸ್‌ – ತಲೆ ಕೂದಲು ದಾನದಲ್ಲೂ ಮಾನವೀಯತೆ ಮೆರೆದ ನಟ !

ಡೈನಾಮಿಕ್‌ ಪ್ರಿನ್ಸ್‌ ಪ್ರಜ್ವಲ್‌ ದೇವರಾಜ್‌ ಹೇರ್‌ ಕಟ್‌ ಮಾಡಿಸಿದ್ದಾರೆ. ಅರೆ, ಹೇರ್‌ ಕಟ್‌ ಮಾಡಿಸಿದ್ರಲ್ಲೇನು ಅಂತ ವಿಶೇಷ ಅಂತ ಗುರ್‌ ಅನ್ಬೇಡಿ, ಅವರು ಎರಡು ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದ ಉದ್ದನೆಯ ತಲೆ ಕೂದಲನ್ನು ಈಗ ಎರಡು ಕಾರಣಕ್ಕಾಗಿ ಕಟ್‌ ಮಾಡಿಸಿಕೊಡಿದ್ದಾರೆ. ಒಂದು ಅವರು ಮುಂದೆ ಅಭಿನಯಸಲಿರುವ ಬಹುನಿರೀಕ್ಷಿತ ಮಾಫಿಯಾ ಚಿತ್ರಕ್ಕಾಗಿ. ಇನ್ನೊಂದು ಕಾರಣ ಒಂದು ಸಾಮಾಜಿಕ ಉದ್ದೇಶಕ್ಕಾಗಿ. ಅವರೆಡು ಕಾರಣಕ್ಕೆ ಈಗ ಹೇರ್ ಕಟ್‌ ಮಾಡಿಸಿಕೊಂಡಿರುವ ನಟ ಪ್ರಜ್ವಲ್‌ ದೇವರಾಜ್‌ ಮಾಫಿಯಾ ಜಗತ್ತಿಗೆ ಇಳಿಯಲು ಸಜ್ಜಾಗಿದ್ದಾರೆ. ಅದಕ್ಕಾಗಿಯೇ ಈಗ ಹೊಸ ಲುಕ್‌ ನೊಂದಿಗೆ ಸಖತ್‌ ಪೋಸು ನೀಡಿರುವುದು ಕೂಡ ಇಲ್ಲಿ ವಿಶೇಷವೇ ಹೌದು. ಅವರ ಈ ನಯಾ ಅವತಾರದ ಬಗ್ಗೆ ಆಮೇಲೆ ಹೇಳ್ತೀವಿ, ಈಗ ಅವರು ಹೇರ್‌ ಕಟ್‌ ಮಾಡಿಸಿ, ದಾನ ಮಾಡಿದ ಕಥೆ ಕೇಳಿ.

ಈಗ ಕೂದಲು ದಾನದ ಬಗ್ಗೆ ನೀವೇ ಕೇಳಿಯೇ ಇರುತ್ತೀರಿ, ಕ್ಯಾನ್ಸರ್‌ ರೋಗದಿಂದ ಕೂದಲು ಕಳೆದುಕೊಂಡ ರೋಗಿಗಳಿಗೆ ಸೆಲಿಬ್ರಿಟಿಗಳು ಕೂದಲು ದಾನ ಮಾಡುವುದೀಗ ಒಂಥರ ಟ್ರೆಂಡ್‌ ಆಗಿದೆ. ಕಳೆದ ಕೆಲವು ದಿನಗಳ ಹಿಂದೆ ನಟ ಧ್ರುವ ಸರ್ಜಾ ಕೂಡ ತಾವು ʼಪೊಗರುʼ ಚಿತ್ರದ ರಗಡ್‌ ಲುಕ್‌ ಗೆ ಅಂತ ದಟ್ವಾಗಿ ಬೆಳೆಸಿದ್ದ ತಲೆ ಕೂದಲು ಕತ್ತರಿಸಿ, ಅದನ್ನು ಕ್ಯಾನ್ಸರ್‌ ರೋಗಿಗಳಿಗೆ ದಾನವಾಗಿ ಕೊಟ್ಟಿದ್ದರು. ಅದೇ ರೀತಿ ಸಾಕಷ್ಟು ನಟರು ಕೂಡ ಈ ಕೆಲಸ ಮಾಡುತ್ತಾ ಬಂದಿದ್ದಾರೆ. ಈಗ ತಮ್ಮ ಬಹುನಿರೀಕ್ಷಿತ ʼಮಾಫಿಯಾʼ ಚಿತ್ರದ ಅವತಾರಕ್ಕೆ ಅಂತ ನಟ ಪ್ರಜ್ವಲ್‌ ದೇವರಾಜ್‌ ಕಳೆದ ಎರಡು ವರ್ಷಗಳಿಂದ ದಟ್ಟವಾಗಿ ಬೆಳೆಸಿದ್ದ ಉದ್ದನೆಯ ತಲೆ ಕೂದಲಿಗೆ ಕತ್ತರಿ ಹಾಕಿಸಿಕೊಂಡಿದ್ದಾರೆ. ಹಾಗೆಯೇ ಆ ಕೂದಲನ್ನು ಕ್ಯಾನ್ಸರ್ ರೋಗದಿಂದ ಕೂದಲು ಕಳೆದುಕೊಂಡ ರೋಗಿಗಳಿಗೆ ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಇನ್ನು ʼಮಾಫಿಯಾʼ ಪ್ರಜ್ವಲ್‌ ದೇವರಾಜ್‌ ಅಭಿನಯದ35 ಚಿತ್ರ. “ಮಮ್ಮಿ”ಹಾಗೂ “ದೇವಕಿ”ಚಿತ್ರಗಳ ಖ್ಯಾತಿಯ ಲೋಹಿತ್ ಇದರ ನಿರ್ದೇಶಕ. ಹಾಗೆಯೇ ಪ್ರಜ್ವಲ್ ದೇವರಾಜ್ ಅವರಿಗೆ ಇಲ್ಲಿ ನಟಿ ಅದಿತಿ ಪ್ರಭುದೇವ್‌ ಜೋಡಿ. ಈ ಚಿತ್ರದ ಮುಹೂರ್ತ ಸಮಾರಂಭ ಡಿಸೆಂಬರ್ 2ರಂದು ನಡೆಯಲಿದೆ. ಚಿತ್ರೀಕರಣ ಡಿಸೆಂಬರ್ 6 ರಿಂದ ಆರಂಭವಾಗಲಿದೆ. ಬೆಂಗಳೂರು ಕುಮಾರ್ ಫಿಲಂಸ್ ಲಾಂಛನದಲ್ಲಿ ಕುಮಾರ್.ಬಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದು, ಅನೂಪ್ ಸೀಳಿನ್ ಸಂಗೀತ, ಮಾಸ್ತಿ ಸಂಭಾಷಣೆ ಹಾಗೂ ತರುಣ್‌ ಛಾಯಾಗ್ರಹಣ ವಿದೆ.

  • ಎಂಟರ್‌ ಟೈನ್ಮೆಂಟ್‌ ಬ್ಯೂರೋ ಸಿನಿಲಹರಿ

error: Content is protected !!