ಕರ್ನಾಟಕ ಮಾತ್ರವಲ್ಲದೆ, ಇಡೀ ಭಾರತಾದ್ಯಂತ ಬಿಡುಗಡೆಗೂ ಪೂರ್ವದಲ್ಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಕನ್ನಡಿಗರ ಹೆಮ್ಮೆಯ ಪ್ಯಾನ್ ಇಂಡಿಯಾ ಸಿನಿಮಾ “ಕಬ್ಜ”, 2023 ರ ಮಾರ್ಚ್ 17 ಅಂದರೆ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬದ ದಿನ ವಿಶ್ವದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಇದೇ ಸಂದರ್ಭದಲ್ಲಿ ನಾಡಿನ ದೊಡ್ಡ ಹಬ್ಬವಾದ ಯುಗಾದಿ ಕೂಡ ಸಮೀಪದಲ್ಲಿರುವುದು ವಿಶೇಷ.
ಇಂಡಿಯನ್ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಪ್ರಮುಖ ಪಾತ್ರದಲ್ಲಿ ಕಿಚ್ಚ ಸುದೀಪ್ ಅಭಿನಯಿಸಿರುವ ಹಾಗೂ ಆರ್ ಚಂದ್ರು ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ “ಕಬ್ಜ” ಚಿತ್ರಕ್ಕೆ ಪುನೀತ್ ರಾಜಕುಮಾರ್ ಅವರು ನೀಡುತ್ತಿದ್ದ ಪ್ರೋತ್ಸಾಹ ಅಪಾರ. ಚಿತ್ರದ ಕೆಲವು ತುಣುಕುಗಳನ್ನು ಅವರಿಗೆ ತೋರಿಸಿದ್ದಾಗ ಹಾಲಿವುಡ್ ಚಿತ್ರ ಇದ್ದ ಹಾಗೆ ಇದೆ ಎಂದು ಹೇಳಿ ಮೆಚ್ಚುಗೆ ಸೂಚಿಸಿದ್ದರು. ಸಹೃದಯಿ, ಅಭಿಮಾನಿಗಳ ಪಾಲಿಗಂತೂ ದೇವರೆ ಆಗಿರುವ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬದ ದಿನ ನಮ್ಮ “ಕಬ್ಬ” ಚಿತ್ರವನ್ನು ಪ್ರೇಕ್ಷಕರ ಮಡಿಲಿಗೆ ಹಾಕುತ್ತಿದ್ದೇವೆ.
ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬ ಹಾಗೂ ಹೊಸವರ್ಷದ ಮೊದಲ ದಿನವಾದ ಯುಗಾದಿ ಹಬ್ಬದ ಸಮೀಪದಲ್ಲೇ ನಮ್ಮ ಚಿತ್ರ ವಿಶ್ವದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ ಎಂದು ಶ್ರೀಸಿದ್ದೇಶ್ವರ ಎಂಟರ್ ಪ್ರೈಸಸ್ ಸಂಸ್ಥೆ ತಿಳಿಸಿದೆ.
ಕಳೆದವರ್ಷ ಕನ್ನಡದ ಸಾಕಷ್ಟು ಚಿತ್ರಗಳು ಭರ್ಜರಿ ಯಶಸ್ವಿಯಾಗಿ ಇಡೀ ವಿಶ್ವವೇ ಕನ್ನಡ ಚಿತ್ರರಂಗದ ಕಡೆ ನೋಡುವಂತಾಗಿತ್ತು. ಈಗ ಎಲ್ಲೆಡೆ ಅಷ್ಟೇ ಕುತೂಹಲದಿಂದ ಕಾಯತ್ತಿರುವ ಹಾಗೂ ಐಎಂಡಿಬಿ 2023ರ ಬಹು ನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಪಡಿದಿರುವ ಕನ್ನಡದ ಹೆಮ್ಮೆಯ ಪ್ಯಾನ್ ಇಂಡಿಯಾ ಚಿತ್ರ “ಕಬ್ಜ”ದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಆಭಿಮಾನಿಗಳ ಕಾತುರಕ್ಕೆ ಚಿತ್ರತಂಡದಿಂದ ಉತ್ತರ ಸಿಕ್ಕಿದೆ.
ಈಗಾಗಲೇ ಫಸ್ಟ್ ಲುಕ್, ಟೀಸರ್ ಮೂಲಕ ಅಭಿಮಾನಿಗಳ ಮನ ಗೆದ್ದಿರುವ “ಕಬ್ಜ” ಚಿತ್ರ ಅತೀ ದೊಡ್ಡ ಯಶಸ್ಸು ಕಾಣಲಿ ಎಂಬುದೇ ಪ್ರತಿಯೊಬ್ಬ ಕನ್ನಡಾಭಿಮಾನಿಯ ಹಾರೈಕೆ.
ಸಹೋದರರಿಬ್ಬರ ನಡುವಿನ ಬಾಂಧವ್ಯದ ಕಥೆಯನ್ನು ಹಾಸ್ಯಮಯ ಸನ್ನಿವೇಶಗಳೊಂದಿಗೆ ಮೂಡಿ ಬಂದಿರುವ ಆರ್ಸಿ ಬ್ರದರ್ಸ್ ಸಿನಿಮಾ ಜನವರಿ 26ಕ್ಕೆ ರಿಲೀಸ್ ಆಗಲಿದೆ. ಸಿನಿಮಾದ ಹೈಲೆಟ್ ತಬಲಾನಾಣಿ ಹಾಗು ಕುರಿಪ್ರತಾಪ್. ಅವರಿಲ್ಲಿ ಬ್ರದರ್ಸ್ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಪ್ರಕಾಶ್ ಕುಮಾರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ.
ಸಂಭ್ರಮಶ್ರೀ, ನಯನ (ಕಾಮಿಡಿ ಕಿಲಾಡಿಗಳು) ಹಾಗೂ ನೀತುರಾಯ್ ಚಿತ್ರದ ನಾಯಕಿಯರು. ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಎಲ್ಲೆಡೆ ಒಳ್ಳೆಯ ಮಾತುಗಳು ಕೇಳಿಬರುತ್ತಿವೆ. ಮಣಿ ಶಶಾಂಕ್ ಈ ಚಿತ್ರದ ನಿರ್ಮಾಪಕರಾಗಿದ್ದು, ಸಹನಾ ಗಿರೀಶ್ ಸಹ ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ.
ನಿರ್ದೇಶಕ ಪ್ರಕಾಶ್ಕುಮಾರ್ ಮಾತನಾಡಿ, ಜನವರಿ 26ರಂದು ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ, ಟ್ರೇಲರ್ ಗಿಂತ ಹೆಚ್ಚು ಕ್ವಾಲಿಟಿ ಚಿತ್ರದಲ್ಲಿದೆ. ಇಬ್ಬರು ಸಹೋದರರ ನಡುವೆ ನಡೆಯುವ ಹಾಸ್ಯಮಯ ಕಥೆಯಿದು. ತಬಲಾನಾಣಿ ಅವರು ಅದ್ಭುತ ಡೈಲಾಗ್ ಬರೆದಿದ್ದಾರೆ. ಸೋದರರ ನಡುವಿನ ಬಾಂಧವ್ಯ, ಕೆಲ ವಿಚಾರಕ್ಕೆ ಆಗುವ ಜಗಳ, ಮತ್ತೆ ಅದನ್ನು ನಿಭಾಯಿಸಿಕೊಂಡು ಅವರು ಹೇಗೆ ಜೊತೆಗಿರುತ್ತಾರೆ ಎಂಬುದನ್ನು ಹೇಳಿದ್ದೇವೆ. ಅಣ್ಣನಿಗೆ ಮದುವೆ ಆಗಿರಲ್ಲ, ತಮ್ಮನಿಗೆ ಮದುವೆ ಮಾಡಿಸುತ್ತಾರೆ. ನಂತರ ಅಣ್ಣ ಮದುವೆಯಾಗಬೇಕೆಂದು ಹೋದಾಗ ಏನೆಲ್ಲ ಪಶ್ಚಾತ್ತಾಪ ಪಡಬೇಕಾಗುತ್ತದೆ, ತನ್ನ ಫೀಲ್ ಹೇಳಿಕೊಳ್ಳಲು ಆತನಿಗೆ ಯಾರೂ ಇರಲ್ಲ. ಬೆಂಗಳೂರು ಸುತ್ತ ಮುತ್ತ 35 ದಿನಗಳ ಕಾಲ ಚಿತ್ರೀಕರಿಸಿದ್ದೇವೆ ಎಂದರು.
ನಿರ್ಮಾಪಕ ಮಣಿ ಶಶಾಂಕ್ ಮಾತನಾಡಿ, ನಾನೊಬ್ಬ ಅಡ್ವೋಕೇಟ್. ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ. ಇಡೀ ಸಿನಿಮಾ ನಗಿಸುತ್ತಲೇ ಮೆಸೇಜ್ ಹೇಳುತ್ತದೆ. 50ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಿದರು. ಮತ್ತೊಬ್ಬ ನಿರ್ಮಾಪಕ ಗಿರೀಶ್ ಮಾತನಾಡಿ, ನನ್ನದು ಕ್ರೀಡಾಕ್ಷೇತ್ರ. ನಾನು ಒಲಿಂಪಿಕ್ ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ತಂದುಕೊಟ್ಟಿದ್ದೇನೆ. ಮಣಿ ಶಶಾಂಕ್ ನನ್ನ ಗೆಳೆಯ. ಹಾಗಾಗಿ ಅವರು ನಾನು ಸೇರಿ ಈ ಚಿತ್ರವನ್ನು ನನ್ನ ಪತ್ನಿ ಸಹನಾ ಹೆಸರಿನಲ್ಲಿ ನಿರ್ಮಿಸಿದ್ದೇನೆ. ಇದು ಕಂಪ್ಲೀಟ್ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಚಿತ್ರ. ತಬಲಾನಾಣಿ, ಕುರಿಪ್ರತಾಪ್ ಕಾಂಬಿನೇಶನ್ ಅದ್ಭುತವಾಗಿ ಬಂದಿದೆ ಎಂದರು.
ನಾಯಕ ತಬಲಾನಾಣಿ ಮಾತನಾಡಿ, ಅಣ್ಣ ತಮ್ಮಂದಿರ ಕಥೆ. ನನ್ನ ತಮ್ಮ ಪೋಲೀಸ್ ಆಗಿದ್ದರೆ, ನಾನು ಕೆಲಸವಿಲ್ಲದವನು, ಹೆಣ್ಣು ಕೊಡೋಕೆ ಬಂದವರು ಮಗಳ ಸೇಫ್ಟಿ ನೋಡುತ್ತಾರೆ. ನನಗೆ ಹೆಣ್ಣು ಕೊಡಲು ಬಂದವರು ತಮ್ಮನನ್ನು ಕೇಳುತ್ತಾರೆ. ಆತನಿಗೆ ಮದುವೆಯಾದರೂ ಅಣ್ಣನ ಮದುವೆಯಾಗೋವರೆಗೆ ಪ್ರಸ್ತ ಮಾಡಿಕೊಳ್ಳಲ್ಲ ಎಂದಾಗ ಆತನ ಹೆಂಡತಿ ನನ್ನಮೇಲೆ ಕೋಪಿಸಿಕೊಳ್ಳುವುದು, ಜಗಳ ವಿರಸಗಳು ನಡೆಯುತ್ತದೆ. ಕೊನೆಯಲ್ಲಿ ಒಬ್ಬ ಮಹಿಳಾ ಪೋಲೀಸ್ ನನ್ನನ್ನು ಮದುವೆಯಾಗಲು ಒಪ್ಪಿ ಜೀವನ ಕೊಡುತ್ತಾಳೆ. ಆಮೇಲೆ ಏನಾಗುತ್ತೆ ಎಂಬುದನ್ನು ಸಿನಿಮಾದಲ್ಲಿ ನೋಡಿ ಎಂದ ಅವರು, ಈ ಸಿನಿಮಾ ನನ್ನ 125ನೇ ಚಿತ್ರ ಎಂದರು.
ನಾಯಕಿ ಸಂಭ್ರಮಶ್ರೀ ಮಾತನಾಡಿ, ಮೊದಲ ಸಲ ಪೋಲೀಸ್ ಪಾತ್ರ ಮಾಡಿದ್ದೇನೆ. ಕಂಪ್ಲೀಟ್ ಕಾಮಿಡಿ ಜೊತೆಗೆ ಎಮೋಷನ್ ಇರುವ ಚಿತ್ರವಿದು ಎಂದರು. ಸಂಗೀತ ನಿರ್ದೇಶಕ ಪ್ರದೀಪ್ವರ್ಮ ಮಾತನಾಡಿ ಸಿನಿಮಾದಲ್ಲಿ ಎಲ್ಲಾ ರೀತಿಯ ಎಲಿಮೆಂಟ್ಸ್ ಇದೆ. ಒಂದು ಮೆಲೋಡಿ ಹಾಗೂ ಪ್ರೊಮೋಷನಲ್ ಸಾಂಗ್ ಇದೆ ಎಂದರು.
ಸಾಮಾಜಿಕ ಹೋರಾಟಗಾರ್ತಿ ರೇವತಿ ರಾಜ್ ಅವರು ಚಿತ್ರತಂಡಕ್ಕೆ ಶುಭ ಹಾರೈಸಿದರು. ಕಿರಣ್ಕುಮಾರ್ ಈ ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದಾರೆ.
ದಿ ಬ್ಲಾಕ್ ಪೆಬಲ್ ಎಂಟರ್ ಟೈನ್ ಮೆಂಟ್ ಬ್ಯಾನರ್ ನಲ್ಲಿ ಪಾರುಲ್ ಅಗರವಾಲ್ ಹಾಗೂ ಹೇಮಚಂದ್ರ ರೆಡ್ಡಿ ನಿರ್ಮಿಸಿರುವ “ಖೆಯೊಸ್” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಫೆಬ್ರವರಿ 17ಕ್ಕೆ ರಿಲೀಸ್ ಆಗಲಿದೆ.
ಸುಪ್ರೀಂ ಹೀರೋ ಶಶಿಕುಮಾರ್ ಪುತ್ರ ಅಕ್ಷಿತ್ ಶಶಿಕುಮಾರ್ ಹಾಗು ಅದಿತಿ ಪ್ರಭುದೇವ ಈ ಚಿತ್ರದ ನಾಯಕ – ನಾಯಕಿಯಾಗಿ ಅಭಿನಯಿಸಿದ್ದಾರೆ. ಶಶಿಕುಮಾರ್ ಅವರು ಈ ಚಿತ್ರದ ವಿಶೇಷ ಪಾತ್ರದಲ್ಲಿ ನಟಿಸಿದ್ದು, ತಂದೆ – ಮಗ ಇಬ್ಬರೂ ಒಟ್ಟಿಗೆ ಅಭಿನಯಿಸಿರುವ ಮೊದಲ ಚಿತ್ರವಿದು. ಆರ್ ಕೆ. ಚಂದನ್, ಸಿದ್ದು ಮೂಲಿಮನಿ ಇತರರು ನಟಿಸಿದ್ದಾರೆ.
ಡಾ.ಜಿ.ವಿ.ಪ್ರಸಾದ್ “ಖೆಯೊಸ್” ಚಿತ್ರದ ನಿರ್ದೇಶಕರು. ಅವರೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ.
ಇದೊಂದು ಮೆಡಿಕಲ್ ಕಾಲೇಜಿನಲ್ಲಿ ನಡೆಯುವ ಕಥೆ. ಆಕ್ಷನ್ ಸಸ್ಪೆನ್ಸ್ ಥ್ರಿಲ್ಲರ್ ಜೊತೆಗೆ ಮರ್ಡರ್ ಮಿಸ್ಟರಿ ಜಾನರ್ ಎನ್ನಬಹುದು. ಮನಸ್ಸಿನಲ್ಲಾಗುವ ಗೊಂದಲ, ಅಸ್ತವ್ಯಸ್ತ ಇವುಗಳಿಗೆ “ಖೆಯೊಸ್” ಎನ್ನುತ್ತಾರೆ.
ಫೆಬ್ರವರಿ 17 ಚಿತ್ರ ತೆರೆಗೆ ಬರಲಿದೆ. ಜನವರಿ 26 ರಂದು “ಖೆಯೊಸ್” ಚಿತ್ರದ ತುಣುಕು ಬಿಡುಗಡೆಯಾಗಲಿದೆ. ಇಡೀ ತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ ಎಂಬುದು ನಿರ್ದೇಶಕ ಜಿ.ವಿ.ಪ್ರಸಾದ್ ಮಾತು.
ವಿ.ನಾಗೇಂದ್ರ ಪ್ರಸಾದ್ ಹಾಗೂ ಜಿ.ವಿ.ಪ್ರಸಾದ್ ಬರೆದಿರುವ ಮೂರು ಹಾಡುಗಳು ಚಿತ್ರದಲ್ಲಿದ್ದು, ವಿಜಯ್ ಹರಿತ್ಸ ಸಂಗೀತ ನೀಡಿದ್ದಾರೆ. ದಿಲೀಪ್ ಕುಮಾರ್, ಸಂದೀಪ್ ವಳ್ಳೂರಿ ಛಾಯಾಗ್ರಹಣ ಹಾಗೂ ಮಧು ತುಂಬಿಕೆರೆ, ವೆಂಕಿ ಯುಡಿವಿ ಸಂಕಲನವಿರುವ “ಖೆಯೊಸ್” ಚಿತ್ರಕ್ಕೆ ಚೇತನ್ ಡಿಸೋಜ , ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನವಿದೆ.
ಆರ್.ಕೆ ಸ್ಟುಡಿಯೋಸ್ ಮತ್ತು ಮುತರಾ ವೆಂಚರ್ಸ್ ಬ್ಯಾನರ್ ನಲ್ಲಿ ಲಲಿತಾಸ್ವಾಮಿ ಮತ್ತು ಆರ್ ಪರಾಂಕುಶ ನಿರ್ಮಿಸುತ್ತಿರುವ, ಶಂಕರ್ ಕೋನಮಾನಹಳ್ಳಿ ನಿರ್ದೇಶನದ “ಬಿಂಗೋ” ಚಿತ್ರದ ದ್ವಿತೀಯ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ.
ಬೆಂಗಳೂರಿನಲ್ಲಿ ಇಪ್ಪತ್ತಕ್ಕೂ ಹೆಚ್ಚು ದಿನಗಳ ಕಾಲ ಚಿತ್ರೀಕರಣ ನಡೆದಿದೆ. ಅರ್ ಕೆ ಚಂದನ್, ರಕ್ಷಾ ನಿಂಬರ್ಗಿ, ರಾಜೇಶ್ ನಟರಂಗ, ಪವನ್, ಮುರಳಿ ಪೂರ್ವಿಕ್, ಅಪೂರ್ವ, ಆಶಾ ಸುಜಯ್, ಶ್ರವಣ್ ಮುಂತಾದವರು ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.
ಈ ಚಿತ್ರದಲ್ಲಿ ರಾಗಿಣಿ ದ್ವಿವೇದಿ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಎರಡು ಶೇಡ್ ಗಳಲ್ಲಿ ಅವರ ಪಾತ್ರವಿರುತ್ತದೆ. ಫೆಬ್ರವರಿಯಲ್ಲಿ ಮೂರನೇ ಹಂತದ ಚಿತ್ರೀಕರಣ ಆರಂಭವಾಗಲಿದ್ದು, ರಾಗಿಣಿ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ.
ಕಿರುತೆರೆ ಹಿನ್ನೆಲೆಯಿಂದ ಬಂದಿರುವ ಆರ್. ಕೆ. ಚಂದನ್ ಈ ಚಿತ್ರದ ಮೂಲಕ ನಾಯಕನಾಗಿ ಹಿರಿತೆರೆ ಪ್ರವೇಶಿಸುತ್ತಿದ್ದಾರೆ. ರಕ್ಷ ನಿಂಬರ್ಗಿ ನಾಯಕಿ. ರಾಜೇಶ್ ನಟರಂಗ, ಮಜಾಟಾಕೀಸ್ ಪವನ್ ಅವರಂತಹ ಅನುಭವಿ ಕಲಾವಿದರು “ಬಿಂಗೋ” ಚಿತ್ರದಲ್ಲಿದ್ದಾರೆ ಎಂದು ನಿರ್ದೇಶಕ ಶಂಕರ್ ಕೋನಮಾನಹಳ್ಳಿ ತಿಳಿಸಿದ್ದಾರೆ.
ಹಿತನ್ ಹಾಸನ್ ಈ ಚಿತ್ರದ ಹಾಡುಗಳಿಗೆ ಸಂಗೀತ ನೀಡಿದ್ದಾರೆ ನಟರಾಜ್ ಮುದ್ದಾಲ್ “ಬಿಂಗೋ” ಚಿತ್ರದ ಛಾಯಾಗ್ರಹಕರಾಗಿದ್ದಾರೆ.
ಕನ್ನಡ ಹೀರೋಗಳು ಡೇಟ್ ಕೊಡದೆ ಆಟ ಆಡಿದ್ರು, ಕೊನೆಗೆ ಇವರೇ ಹೀರೋ ಆದ್ರು: ಇದು ಎಂಟೆಕ್ ಹುಡುಗನ ಸಿನಿಮಾ ಪ್ರೀತಿ ಕಣ್ರೀ…
ಸಿನಿಮಾ ಆಂದರೇನೆ ಹಾಗೆ. ಅದೊಂದು ಕ್ರೇಜ್. ನಿತ್ಯವೂ ನೂರಾರು ಪ್ರತಿಭೆಗಳು ಗಾಂಧಿ ನಗರದ ಅಂಗಳವನ್ನು ಸ್ಪರ್ಶಿಸುತ್ತಿವೆ. ಕಲರ್ ಫುಲ್ ಕಣ್ಣಲ್ಲಿ ಬೆಟ್ಟದ್ದಷ್ಟು ಕನಸು ಹೊತ್ತು ಬಂದವರಿಗೆ ಇಲ್ಲಿ ಲೆಕ್ಕವಿಲ್ಲ. ಹಾಗೆ ಬಂದು ಗಟ್ಟಿನೆಲೆ ಕಾಣಬೇಕು ಅಂದುಕೊಂಡವರಲ್ಲಿ ಅಶೋಕ್ ಸಾಮ್ರಾಟ್ ಕೂಡ ಒಬ್ಬರು. ಅಶೋಕ್ ಸಾಮ್ರಾಟ್ ‘ಅಂಬಾಸಡರ್’ ಸಿನಿಮಾ ನಿರ್ದೇಶಕರು. ಅಷ್ಟೇ ಅಲ್ಲ, ಹೀರೋ ಕೂಡ ಹೌದು, ಇದಷ್ಟೇ ಅಲ್ಲ, ನಿರ್ಮಾಪಕರೂ ಅವರೇ. ಅಷ್ಟಕ್ಕೂ ಅಶೋಕ್ ಸಾಮ್ರಾಟ್ ಹೀರೋ ಆಗಿದ್ದೇಕೆ? ಆ ಕುರಿತು ಸ್ವತಃ ಅವರೇಸಿನಿಲಹರಿ ಜೊತೆ ಮಾತಾಡಿದ್ದಾರೆ…
ಓವರ್ ಟು ಅಶೋಕ್ ಸಾಮ್ರಾಟ್
‘ನನಗೆ ಮೊದಲಿಂದಲೂ ಸಿನಿಮಾ ಮೇಲೆ ಪ್ರೀತಿ ಇತ್ತು. ಹಾಗಂತ ಏಕಾಏಕಿ ಬರೋದು ಕಷ್ಟ ಅಂತಾನೂ ಗೊತ್ತಿತ್ತು. ಮೊದಲು ಬದುಕು ಗಟ್ಟಿಯಾಗಿರಬೇಕು ಅಂತ ಸ್ಟಡಿ ಬಗ್ಗೆ ಗಮನಹರಿಸಿದೆ. ಎಂಟೆಕ್ ಕೂಡ ಮುಗಿಸಿದೆ. ನಂತರ ಸಿನಿಮಾ ಫೀಲ್ಡ್ ಗೆ ಕಡೆ ಎಂಟ್ರಿ ಕೊಟ್ಟೆ. ನಿರ್ದೇಶಕನ ಕನಸು ಹೊತ್ತು ಬಂದ ನಾನು ಮೊದಲು ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದೆ. ಕೊನೆಗೆ ನಿರ್ದೇಶನಕ್ಕೂ ಅಣಿಯಾದೆ.
ಹೀರೋ ಬೇಡ ಅಂತ ಡಿಸೈಡ್ ಆದೆ
ಶ್ರೀ ಮುರಳಿ ಅಭಿನಯದ ‘ಹರೇ ರಾಮ ಹರೇ ಕೃಷ್ಣ’ ಸಿನಿಮಾ ನಿರ್ದೇಶಿಸಿದೆ. ಆ ಸಿನಿಮಾಗೆ ಇಳೆಯರಾಜ ಸಂಗೀತ, ಹಂಸಲೇಖ ಸಾಹಿತ್ಯವಿತ್ತು. ಅದಾದ ನಂತರ ಮತ್ತೊಂದು ಒಳ್ಳೆಯ ಕಥೆ ರೆಡಿ ಮಾಡಿ ಹೀರೋ ಒಬ್ಬರಿಗೆ ಕಥೆ ಹೇಳಲು ಹೋದೆ. ನಾಳೆ, ನಾಡಿದ್ದು, ವಾರ, ತಿಂಗಳು ಹೀಗೆ ಹೇಳಿ ಹೇಳಿ ಆರೇಳು ತಿಂಗಳು ಅಲೆದಾಡಿದರೂ ಕಥೆ ಕೇಳಲೇ ಇಲ್ಲ. ಒಳ್ಳೆಯ ಕಥೆ ಒಳ್ಳೆಯ ಬಜೆಟ್ ಇದ್ದರೂ ಯಾರೊಬ್ಬರೂ ಕಥೆ ಕೇಳೋಕು ಮುಂದಾಗಲಿಲ್ಲ.
ಕೊನೆಗೆ, ನನ್ನ ಜೊತೆ ಇದ್ದ ಟೀಮ್, ಈ ಕಥೆಗೆ ನೀವೇ ಹೀರೋ ಆಗಿ, ಕಥೆ ಹೊಂದುತ್ತೆ ಅಂದಾಗ, ನನಗೂ ಹಾಗೆ ಅನಿಸ್ತು. ಹೀರೋಗಳಿಗೆ ಕಥೆ ಹಿಡಿದು ಅಲೆದಾಡೋದು ಸಾಕು, ಈ ಅವಕಾಶನ ನಾನೇ ಉಪಯೋಗಿಸಿಕೊಳ್ಳಲು ರೆಡಿಯಾದೆ.
ಆಗ ಶುರುವಾಗಿದ್ದೇ ‘ಅಂಬಾಸಡರ್’. ಅಂಬಾಸಡರ್ ಅಂದರೆ ರಾಯಭಾರಿ. ಇಲ್ಲಿ ಕೃಷ್ಣನ ಆದರ್ಶಗಳಿವೆ. ಕುರುಕ್ಷೇತ್ರದಲ್ಲಿನ ಕೆಲ ಅಂಶಗಳ ಕಥೆ ಇಲ್ಲಿದೆ. ಈಗಿನ ವ್ಯವಸ್ಥೆ, ವಿರುದ್ಧ ಹೋರಾಡುವ ಯುವಕನೊಬ್ಬನ ಕಥೆ ಇದೆ. ಅಲ್ಲಲ್ಲಿ ವೈಲೆನ್ಸ್ ಕೂಡ ಇದೆ. ವಿನಾಕಾರಣ ವೈಲೆನ್ಸ್ ಇಲ್ಲ. ಅದಕ್ಕೂ ರೀಸನ್ ಇದೆ.
ಕಾಂಪ್ರಮೈಸ್ ಇಲ್ಲವೇ ಇಲ್ಲ
ಇನ್ನು ಇದೊಂದು ಕಮರ್ಷಿಯಲ್ ಕಥೆ. ಮೊದಲೇ ಹೇಳಿದಂತೆ ನಾನು ಹೀರೋ ಆಗಲೇಬೇಕು ಅಂದುಕೊಂಡವನಲ್ಲ. ಅನಿರೀಕ್ಷಿತವಾಗಿ ಹೀರೋ ಆದೆ. ಅದ್ಧೂರಿಯಾಗಿ ಚಿತ್ರ ತಯಾರಾಗಿದೆ. ಇಲ್ಲಿ ನಿರ್ದೇಶಕ ಕಮ್ ಹೀರೋ ನಾನೇ ಆಗಿದ್ದರಿಂದ ಎಲ್ಲೂ ಕಾಂಪ್ರಮೈಸ್ ಇಲ್ಲ. ಕಥೆಗೆ ಏನು ಬೇಕೋ ಎಲ್ಲವನ್ನೂ ಒದಗಿಸಿದ್ದೇನೆ. ಅಶೋಕ್ ಸಾಮ್ರಾಟ್ ಎಂಟರ್ಪ್ರೈಸಸ್ ಬ್ಯಾನರ್ ನಡಿ ನಿರ್ಮಾಣವಾಗಿದೆ.
ಇಷ್ಟ ಪಟ್ಟರೆ ಯಾವುದೂ ಕಷ್ಟ ಅಲ್ಲ
ಇಲ್ಲಿ ನಿರ್ದೇಶನದ ಜೊತೆ ನಾಯಕನಾಗಿದ್ದರೂ, ನನಗೆ ಈ ಎರಡು ಕೆಲಸ ಕಷ್ಟ ಎನಿಸಲಿಲ್ಲ. ಯಾಕೆಂದರೆ, ಸಿನಿಮಾ ಅನ್ನೋದೇ ಎಂಜಾಯ್ ಮಾಡಿಕೊಂಡು ಮಾಡುವ ಕೆಲಸ. ಯಾವತ್ತೂ ಕಷ್ಟ ಆಗಲಿಲ್ಲ.
ಫೆಬ್ರವರಿ 10 ಅದ್ಧೂರಿ ಬಿಡುಗಡೆ
ಇನ್ನು ಚಿತ್ರದಲ್ಲಿ ದೀಪ್ತಿ, ಸಂಗೀತ, ಅಕ್ಷತಾ ನಾಯಕಿಯರು. ಇವರೊಂದಿಗೆ ದೊಡ್ಡ ತಾರಾಬಳಗವಿದೆ. ಪ್ರಕಾಶ್ ರೈ, ಸೋನುಸೂದ್, ಚಿತ್ರಾ ಶೆಣೈ ಇತರರು ಇದ್ದಾರೆ. ಗುರುಕಿರಣ್ ಅವರ ಸಂಗೀತವಿದೆ. ಇಳೆಯರಾಜ ಅವರ ಹಿನ್ನೆಲೆ ಸಂಗೀತವಿದೆ.
ಪಿಕೆಎಚ್ ದಾಸ್ ಕ್ಯಾಮೆರಾ ಹಿಡಿದಿದ್ದಾರೆ. 95 ದಿನಗಳ ಕಾಲ ಬೆಂಗಳೂರು, ಹೈದರಾಬಾದ್, ಮುಂಬೈನಲ್ಲಿ ಚಿತ್ರೀಕರಣವಾಗಿದೆ. ನಾಲ್ಕು ಹಾಡುಗಳಿರುವ ಈ ಚಿತ್ರ ಫೆಬ್ರವರಿ 10ರಂದು ಬಿಡುಗಡೆಯಾಗಲಿದೆ.
ಕನ್ನಡದಲ್ಲಿ ಮತ್ತೊಂದು ದೈವದ ಸಿನಿಮಾ ಕರಿ ಹೈದ ಕರಿ ಅಜ್ಜ ಶುರುವಾಗಿದ್ದು ಗೊತ್ತೇ ಇದೆ. ಸುಧೀರ್ ಅತ್ತಾವರ ನಿರ್ದೇಶನದ ಈ ಸಿನಿಮಾಗೆ ತ್ರಿವಿಕ್ರಮ ಸಪಲ್ಯ ನಿರ್ಮಾಪಕರು. ಅಂದಹಾಗೆ, ಈ ಸಿನಿಮಾ ಹೈಲೆಟ್ ಅಂದರೆ, ಬಾಲಿವುಡ್, ಹಾಲಿವುಡ್ ನಟ ಕಬೀರ್ ಬೇಡಿ. ಅಷ್ಟೇ ಅಲ್ಲ, ಚಿತ್ರದಲ್ಲಿ ಹಾಲಿವುಡ್ ತಂತ್ರಜ್ಞರ ಸ್ಪರ್ಶವಿದೆ. ಭವ್ಯ ತಾರಾಗಣವೂ ಇಲ್ಲಿದೆ. ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿರುವ ಚಿತ್ರತಂಡ ಒಂದಷ್ಟು ಅನುಭವ ಹಂಚಿಕೊಂಡಿದೆ
ಪವಾಡ ಪುರುಷ ಕೊರಗಜ್ಜ ಜೀವನಾಧಾರಿತ ಸಿನಿಮಾ ಕರಿ ಹೈದ ಕರಿ ಅಜ್ಜ. ಈ ಚಿತ್ರಕ್ಕೆ ಸುಧೀರ್ ಅತ್ತಾವರ್ ನಿರ್ದೇಶನವಿದೆ. ತ್ರಿವಿಕ್ರಮ ಸಪಲ್ಯ ನಿರ್ಮಾಪಕರು. ಚಿತ್ರದಲ್ಲಿ ಬರುವ ಮುಖ್ಯ ಪಾತ್ರವೊಂದರಲ್ಲಿ ಹಾಲಿವುಡ್, ಬಾಲಿವುಡ್ ಹಾಗೂ ಫ್ರೆಂಚ್ ಸಿನಿಮಾಗಳ ನೃತ್ಯ ನಿರ್ದೇಶಕ, ಡ್ಯಾನ್ಸರ್, ನಟ ಸಂದೀಪ್ ಸೋಪರ್ಕರ್ ನಟಿಸಿದ್ದಾರೆ. ಈ ಚಿತ್ರದಲ್ಲಿ ಇವರು ಕೊರಗಜ್ಜನ ಜೊತೆ ಬರುವ ಗುಳಿಗನ್ ಪಾತ್ರ ನಿರ್ವಹಿಸಿರುವುದು ವಿಶೇಷ. ಅಂತರರಾಷ್ಟ್ರೀಯ ಈ ಕಲಾವಿದ ಇದೇ ಮೊದಲಬಾರಿಗೆ ಕನ್ನಡ ಸಿನಿಮಾವೊಂದರಲ್ಲಿ ನಟಿಸಿರುವುದು ವಿಶೇಷತೆಗಳಲ್ಲೊಂದು.
ನಿರ್ದೇಶಕ ಸುಧೀರ್ ಅತ್ತಾವರ್ ಮಾತನಾಡಿ, ಚಿತ್ರೀಕರಣ ಮುಕ್ತಾಯವಾದ ಮಾರನೆಯ ದಿನ ಕೊರಗಜ್ಜ ದೈವಕ್ಕೆ ಕೃತಜ್ಞತೆ ಹೇಳುವ ದ್ರಷ್ಟಿಯಲ್ಲಿ ಇತ್ತೀಚೆಗೆ “ಕೊರಗಜ್ಜ ದೈವದ ಕೋಲ ಸೇವೆ ನೀಡಲಾಯಿತು. ಚಿತ್ರೀಕರಣ ಸಂದರ್ಭದಲ್ಲಿ ಸಾಕಷ್ಟು ಪವಾಡಗಳು ನಡೆದಿದ್ದು, ಎಲ್ಲರ ಅನುಭವಕ್ಕೆ ಬಂದಿದೆ. ಇದು ಕೊರಗಜ್ಜ ಎಂದು ಕರೆಯುವ 22, 23 ವರ್ಷ ಬದುಕಿದ್ದ ತನಿಯ ಅಥವ ಕಾಂತಾರೆ ಎನ್ನುವ ಕರಾವಳಿ ಭಾಗದ ಆದಿವಾಸಿಗಳು ಎನ್ನಬಹುದಾದ ಕೊರಗ ಜನಾಂಗದ ಹುಡುಗ ದೈವತ್ವ ಪಡೆದುಕೊಂಡ ರೋಚಕ ಕಥೆವುಳ್ಳ ಚಿತ್ರ. ಇದರಲ್ಲಿ ಹಾಲಿವುಡ್ -ಬಾಲಿವುಡ್ ಕೋರಿಯೋಗ್ರಾಫರ್ ಹಾಗೂ ನಟ ಸಂದೀಪ್ ಸೋಪರ್ಕರ್ “ಗುಳಿಗ” ದೈವದ ಪಾತ್ರ ನಿಭಾಯಿಸಿದ್ದಾರೆ.
ಇದು ಕೊರಗಜ್ಜನ ಜೊತೆಗೆ ಇರುವ ಗುಳಿಗ . ಮಂಗಳೂರಿನ ಬಳಿ ಇರುವ ನೇತ್ರಾವತಿ ನದಿ ತಟದಲ್ಲಿರುವ “ಕಲ್ಲಾಪು ಬೂರ್ದಗೋಳಿ” ಬಳಿ ಕೊರಗಜ್ಜನ ಜೊತೆ ಗುಳಿಗ ದೈವವೂ ಇದೆ. ಈ ಸನ್ನಿವೇಷಕ್ಕಾಗಿ ಗುಳಿಗನ ಪಾತ್ರವನ್ನು ಗುಳಿಗ ನರ್ತನದ ರೀತಿ ತೋರಿಸಲಾಗಿದ್ದು; ಆ ಪಾತ್ರಕ್ಕೆ ಅಂತರಾಷ್ಟ್ರೀಯ ಮಟ್ಟದ ನ್ರತ್ಯ ಕಲಾವಿದ ಸಂದೀಪ್ ಸೋಪರ್ಕರ್ ಅವರು ಸೂಕ್ತ ಎನಿಸಿತ್ತು. ಅಂದುಕೊಂಡಂತೆ ಅವರ ಅದ್ಭುತ ನರ್ತನ ಚಿತ್ರಕ್ಕೆ ಇನ್ನಿಲ್ಲದ ಕಳೆ ತಂದಿದೆ.
ಈ ಮೊದಲು ಕೊರಗಜ್ಜನ ಬಗ್ಗೆ ಸುಮಾರು 20 ಕ್ಕೂ ಹೆಚ್ಚು ನಿರ್ಮಾಪಕರು ಸಿನಿಮಾ ಮಾಡಲು ಕಳೆದ 7-8 ವರ್ಷಗಳಿಂದ ಪ್ರಯತ್ನಿಸುತ್ತಿದ್ದರು. ಆದರೆ ನಾವು ಸಿನಿಮಾ ಕೆಲಸ ಶುರು ಮಾಡುವ ಮೊದಲು ಕೊರಗಜ್ಜ ದೈವದ ಕೋಲ ನಡೆಸಿ ದೈವದ ಅಪ್ಪಣೆ ಕೇಳಿದೆವು. ನಮಗೆ ದೇವರ ಅಪ್ಪಣೆ ಸಿಕ್ಕಮೇಲೆ ಈ ಸಿನಿಮಾ ಮಾಡಲು ಮುಂದಾದೆವು. 12ನೇ ಶತಮಾನದ ಕಥೆ ಇದಾಗಿದ್ದು, ಚಿತ್ರದಲ್ಲಿ ಬುರ್ದಗೋಳಿ ಉತ್ಪತ್ತಿ ಕಲ್ಲು ಎಂಬ ಪ್ರದೇಶದಲ್ಲಿ ಉದ್ಯಾವರ ಅರಸುಗಳ ಕೈಯಿಂದ ಪಂಜಂದಾಯಿಗೆ ಕೊರಗಜ್ಜನು ಅವಳ ರಾಜ್ಯವನ್ನು ಮರಳಿ ದೊರಕಿಸಿಕೊಡಲು ಇತ್ಯರ್ಥ ಮಾಡುತ್ತಾನೆ. ಅಂತಹ ಕಲ್ಲಾಪು ಬೂರ್ದಗೋಳಿ ಯಲ್ಲಿ ಕೊರಗಜ್ಜ ಮತ್ತು ಗುಳಿಗ ದೈವದ ವಾರ್ಷಿಕ ಕೋಲ ಸೇವೆಯ ದಿನದಂದೇ ಗುಳಿಗ- ಕೊರಗಜ್ಜನ ಪ್ರಥಮ ಭೇಟಿಯ ದ್ರಶ್ಯವನ್ನು ಮೂಲ ಕಥೆಯಲ್ಲಿ ದಾಖಲಾಗಿರುವಂತೆ ಸೋಮೇಶ್ವರದಲ್ಲಿ ಶೂಟ್ ಮಾಡಿದ್ದು ಕಾಕತಾಳಿಯವೋ ಪವಾಡವೋ ತಿಳಿದಿಲ್ಲ..! ಎಂದರು.
ನಮಗೆಲ್ಲ ಶೂಟಿಂಗ್ ಸಂದರ್ಭದಲ್ಲಿ ಒಂದಿಷ್ಟು ಅನುಭವ ಆಗಿವೆ. ಈ ಸಿನಿಮಾವನ್ನು ನಾನು ಮಾಡಲಿಲ್ಲ. ಆ ದೈವ ನನ್ನ ಕೈಲಿ ಮಾಡಿಸಿದ್ದಾರೆ. ನಮ್ಮ ಚಿತ್ರದಲ್ಲಿ ಕಳ್ಳು ಮಾರುವ ಮೈರಕ್ಕೆ ಬೈದ್ಯೆದಿ ಪಾತ್ರ ಮುಖ್ಯವಾಗಿದ್ದು, ಈಕೆ ಕೊರಗಜ್ಜನ ಸಾಕು ತಾಯಿ. ಈ ಪಾತ್ರವನ್ನು ನಟಿ ಶ್ರುತಿ ನಿರ್ವಹಿಸಿದ್ದಾರೆ. ಇಂದು ಮಂಗಳೂರು ಕಡೆ ಮನೆ ಮನೆಯಲ್ಲಿ ಕೊರಗಜ್ಜನನ್ನು ಜನ ಆರಾಧಿಸುತ್ತಾರೆ ಎಂದರು.
ಹಾಲಿವುಡ್ ನಟ ಸಂದೀಪ್ ಸೋಪರ್ಕರ್ ಮಾತನಾಡಿ, ‘ಈ ಚಿತ್ರ ನಂಗೆ ಒಳ್ಳೆ ಅನುಭವ ನೀಡಿದೆ. ಈ ತಂಡ ಹಾಗೂ ಸಿನಿಮಾದಲ್ಲಿ ಕೆಲಸ ಮಾಡಿದ್ದು ತುಂಬಾ ಖುಷಿ ಕೊಟ್ಟಿದೆ. ಒಳ್ಳೆಯ ತಂಡ ಇದಾಗಿದ್ದು ಅದ್ಭುತ ಕೆಲಸ ಮಾಡಿದೆ. ನಾನು ಮಾಡಿರುವ ಪಾತ್ರ ಅದ್ಭುತವಾಗಿದ್ದು ಹೊಸ ರೀತಿಯಲ್ಲಿ ಅನುಭವ ನೀಡಿತು. ಈ ಪಾತ್ರ ಮಾಡಿದ್ದು ಖುಷಿ ಇದ್ಲ್ಲೆ. ನಾನು ಡ್ಯಾನ್ಸ್ ಜೊತೆ ನಟನೆ ಕೂಡ ಮಾಡಿದ್ದೇನೆ ಎಂದರು.
ನಟಿ ಶ್ರುತಿ ಮಾತನಾಡಿ, ‘ಈ ಸಿನಿಮಾ ನನ್ನ ಮನಸ್ಸಿನಲ್ಲಿ ವಿಷೇಶವಾದ ಸ್ಥಾನ ಪಡೆಯುತ್ತದೆ. ನಾನಿಲ್ಲಿ ಮೈರಕ್ಕೆ ಬೈದ್ಯೆದಿ ಪಾತ್ರ ಮಾಡಿದ್ದೇನೆ. ದೈವದ ಕಥೆ ಅದ್ಭುತವಾಗಿ ಇದ್ದು ಈ ಕಥೆಯನ್ನು ಹೆಕ್ಕಿ ತೆಗೆದ ನಿರ್ದೇಶಕರ ಧೈರ್ಯ ಮೆಚ್ಚಬೇಕು. ಚಿತ್ರಕ್ಕಾಗಿ ನಿರ್ಮಾಪಕರು ಕೋಟಿ ಕೋಟಿ ಹಣ ಖರ್ಚು ಮಾಡಿದ್ದಾರೆ. ಯಾರಿಗೂ ಸಿಗದೆ ಇರುವ ಅವಕಾಶ ಈ ತಂಡಕ್ಕೆ ಸಿಕ್ಕಿದೆ. ಇದರಲ್ಲಿ ಬರುವ ಪ್ರತಿಯೊಬ್ಬರ ಪಾತ್ರ ಸೊಗಸಾಗಿದೆ ನಿರ್ದೇಶಕರು ಅಷ್ಟು ತಯಾರಿ ಮಾಡಿಕೊಂಡು ಸಿನಿಮಾ ಮಾಡಿದ್ದಾರೆ.
ಮೈರಕ್ಕೆ ಬೈದ್ಯೆದಿ ಪಾತ್ರ ಕೊರಗಜ್ಜ ಸಾಕು ತಾಯಿ. ಇದರಲ್ಲಿ ಕೊರಗಜ್ಜಗೆ ತನಿಯಾ/ ಕಾಂತಾರೆ ಎಂಬ ಹೆಸರಿದೆ. ನಾನು ಕಳ್ಳು ಮಾರುವವಳ ಪಾತ್ರ ಮಾಡುತ್ತಿರುತ್ತೇನೆ. ಇದರಲ್ಲಿ ತಾಯಿ ಮಗನ ಬಾಂಧವ್ಯವನ್ನು ಅದ್ಭುತವಾಗಿ ತೋರಿಸಲಾಗಿದೆ. ನಮ್ಮ ಜೊತೆ ಸಾಕಷ್ಟು ರಂಗಭೂಮಿ ಕಲಾವಿದರು ಇದರಲ್ಲಿ ನಟನೆ ಮಾಡಿದ್ದಾರೆ ಎಂದರು.
ನಟಿ ಭವ್ಯ ‘ಈ ಚಿತ್ರದಲ್ಲಿ ನಾನು ವಿಷೇಶವಾದ ಪಾತ್ರ ಮಾಡಿದ್ದು, ಶೂಟಿಂಗ್ ಮಾಡುವಾಗ ಹಲವಾರು ಮಿರಾಕಲ್ ನಡೆಯುತ್ತಿತ್ತು. ನದಿ ಹತ್ತಿರ ಶೂಟಿಂಗ್ ನಡೆಯುವಾಗ, ನಿರ್ದೇಶರು ಅಂದುಕೊಂಡಿದ್ದು ನೆರವೇರಿತು. ಅದು ದೈವದ ಆಶೀರ್ವಾದ ಎಂದರು ಭವ್ಯ.
ನಿರ್ಮಾಪಕ ತ್ರಿವಿಕ್ರಮ ಸಪಲ್ಯ ಮಾತನಾಡಿ, ‘ತುಳು ನಾಡ ಜನರ ಸಂಸ್ಕೃತಿ ತೋರಿಸುವ ಆಸೆ ಇತ್ತು. ಅದು ಈ ಚಿತ್ರದ ಮೂಲಕ ಈಡೇರಿದೆ. ಸೋಮೇಶ್ವರ, ಉಲ್ಲಾಳ, ಮಡಂತ್ಯಾರ್, ಪೇರೂರು, ಅಡ್ಯಾರ್, ಎರ್ಮಾಯ್ ,ಸಾರಪಲ್ಲ, ಅರ್ಕುಳ, ಮಂಗಳೂರು ಮುಂತಾದ ಸ್ಥಳದಲ್ಲಿ ಶೂಟಿಂಗ್ ಮಾಡಲಾಗಿದೆ. ಚಿತ್ರವನ್ನು ಮೇ ನಲ್ಲಿ ರಿಲೀಸ್ ಮಾಡುವ ಯೋಚನೆ ಇದೆ’ ಭರತ್ ಸೂರ್ಯ ನಾಯಕರಾಗಿ ನಟಿಸಿದ್ದಾರೆ. ಸಿನಿಮಾ ಶೂಟಿಂಗ್ ಮುಗಿಯುವರೆಗೂ ಅವರು ಕಾಲಿಗೆ ಚಪ್ಪಲಿ ಹಾಕಿರಲಿಲ್ಲ. ಇನ್ನು ನಾಯಕಿಯಾಗಿ ವೃತಿಕಾ ಅಭಿನಯಿಸಿದ್ದಾರೆ. ಚಿತ್ರವನ್ನು ಏಕಕಾಲದಲ್ಲಿ ಕನ್ನಡ, ತುಳು ಹಾಗೂ ಮಲಯಾಳಂ ಭಾಷೆಯಲ್ಲಿ ತಯಾರಿಸಲಾಗುತ್ತಿದೆ. ಧ್ರತಿ ಕ್ರಿಯೇಷನ್ಸ್ ಹಾಗೂ ಸಕ್ಸಸ್ ಫಿಲಂಸ್ ಬ್ಯಾನರ್ ನಲ್ಲಿ ಚಿತ್ರ ತಯಾರಾಗಿದೆ.
ಇಂಡಿಯನ್ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಪ್ರಮುಖ ಪಾತ್ರದಲ್ಲಿ ಕಿಚ್ಚ ಸುದೀಪ್ ಅಭಿನಯಿಸಿರುವ, ಖ್ಯಾತ ನಿರ್ದೇಶಕ ಆರ್.ಚಂದ್ರು ನಿರ್ಮಿಸಿ, ನಿರ್ದೇಶಿಸಿರುವ ಪ್ಯಾನ್ ಇಂಡಿಯಾ ಸಿನಿಮಾ ಪ್ರಪಂಚದಾದ್ಯಂತ ನಿರೀಕ್ಷೆ ಹುಟ್ಟು ಹಾಕಿದೆ. ಇದು ಕನ್ನಡ ಚಿತ್ರರಂಗದ ಹೆಮ್ಮೆ, ಶ್ರೀ ಸಿದ್ದೇಶ್ವರ ಎಂಟರ್ಪ್ರೈಸಸ್ ಸಂಸ್ಥೆ ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸಿದೆ.
ಭಾರತ ಮಾತ್ರವಲ್ಲದೆ ವಿವಿಧ ದೇಶಗಳಲ್ಲಿಯೂ ಕಬ್ಜ ಚಿತ್ರದ ಬಿಡುಗಡೆಗಾಗಿ ಕುತೂಹಲದಿಂದ ಕಾಯುತ್ತಿದ್ದಾರೆ. ಅಲ್ಲದೇ ಮೊನ್ನೆ ನಡೆದ ಐಎಂಡಿಬಿ 2023ರ ನಿರೀಕ್ಷಿತ ಸಿನಿಮಾಗಳ ಸರ್ವೆ ಪಟ್ಟಿಯಲ್ಲಿ ಕನ್ನಡಿಗರ ಕಬ್ಜ ಸಿನಿಮಾ ಸ್ಥಾನ ಪಡೆದಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯ. ಕಳೆದ ಮೂರ್ನಾಲ್ಕು ವರ್ಷಗಳಿಂದ ಸಾಲು ಸಾಲು ಯಶಸ್ವಿ ಸಿನಿಮಾಗಳ ಮೂಲಕ ಸ್ಯಾಂಡಲ್ ವುಡ್ ಮತ್ತಷ್ಟು ಎತ್ತರಕ್ಕೆ ಹೋಗಿದೆ. ಕೆಜಿಎಫ್, ವಿಕ್ರಾಂತ್ ರೋಣ, 777 ಚಾರ್ಲಿ ಹಾಗೂ ಕಾಂತಾರ ಯಶಸ್ಸಿನ ಬಳಿಕ ಕನ್ನಡದ ಕೀರ್ತಿ ಪತಾಕೆಯನ್ನು ಹಾರಿಸಲು ಈ ವರ್ಷ ಕಬ್ಜ ಸಜ್ಜಾಗಿದೆ.
ಕಬ್ಜ ಚಿತ್ರ ಬಿಡುಗಡೆಯಾವಾಗ ಎಂಬುದು ಪ್ರತಿಯೊಬ್ಬರ ಮಾತಾಗಿತ್ತು. ಈ ನಿಟ್ಟಿನಲ್ಲಿ ಇದೇ ಜನವರಿ 24ರಂದು ದೊಡ್ದದೊಂದು ವಿಷಯವನ್ನು ಹಂಚಿಕೊಳ್ಳಲಿದೆ ಕಬ್ಜ ಟೀಮ್. ಇದೇ ಮೊಟ್ಟ ಮೊದಲ ಬಾರಿಗೆ ಐದಕ್ಕೂ ಹೆಚ್ಚು ಭಾಷೆಗಳಲ್ಲಿ ಕಬ್ಜ ಸಿನಿಮಾ ತೆರೆಕಾಣುತ್ತಿದೆ.
ಇಂಥದ್ದೊಂದು ಕನ್ನಡ ಸಿನಿಮಾ ಬೃಹತ್ ಮಟ್ಟದಲ್ಲಿ ಮೂಡಿ ಬರುತ್ತಿರೋದು ಸ್ಯಾಂಡಲ್ ವುಡ್ ಗೆ ಗೌರವ. ಇಂಥ ಪ್ರಯತ್ನಗಳಿಗೆ ಕನ್ನಡಿಗರು ಯಾವಾಗಲು ಪ್ರಶಂಶಿಸುತ್ತಾರೆ.
ಈಗ ಕಬ್ಜ ರಿಲೀಸ್ ಡೇಟ್ ಅನೌನ್ಸ್ ಮಾಡಿದರೆ ಕನ್ನಡಿಗರು ಮಾತ್ರವಲ್ಲದೆ. ಭಾರತೀಯ ಚಿತ್ರರಂಗವೇ ಸಂತೋಷ ಪಡುತ್ತದೆ ಎಂಬುದರಲ್ಲಿ ಸಂಶಯವಿಲ್ಲ.
ಕಾತುರತೆಗೆ ಬೇಗ ಚಂದ್ರು ಮತ್ತು ಟೀಂ ಡೇಟ್ ತಿಳಿಸಲಿ ಹಾಗೂ ಕಬ್ಜ ಚಿತ್ರವು ಮತ್ತೊಮ್ಮೆ ಗೆದ್ದು ಕನ್ನಡ ಕೀರ್ತಿ ಪತಾಕೆಯನ್ನು ವಿಶ್ವದಾದ್ಯಂತ ಹಾರಿಸಲಿ ಎಂಬುದು ಪ್ರತಿಯೊಬ್ಬ ಕನ್ನಡಿಗರ ಆಶಯ.
ತಾರಾ ಜೋಡಿ ಡಾರ್ಲಿಂಗ್ ಕೃಷ್ಣ – ಮಿಲನ ನಾಗರಾಜ್ ನಾಯಕ-ನಾಯಕಿಯಾಗಿ ನಟಿಸಿರುವ “ಲವ್ ಬರ್ಡ್ಸ್” ಚಿತ್ರದಲ್ಲಿ ನಟಿ ಸಂಯುಕ್ತ ಹೊರನಾಡು ಲಾಯರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಯಾರಿಗೂ ಅಂಜದ ದಿಟ್ಟ ಹುಡುಗಿಯಾಗಿ, ತೆಗೆದುಕೊಂಡ ಎಲ್ಲಾ ಕೇಸ್ ಗಳಲ್ಲೂ ಯಶಸ್ಸು ಗಳಿಸುವ ಯಶಸ್ವಿ ಲಾಯರ್ ಆಗಿ ಅಭಿನಯಿಸಿರುವ ಸಂಯುಕ್ತ ಹೊರನಾಡು ಪಾತ್ರದ ಹೆಸರು ಮಾಯಾ. ಈಕೆ ನಾಯಕ ಹಾಗೂ ನಾಯಕಿ ದೀಪಕ್ – ಪೂಜಾ ಇಬ್ಬರಿಗೂ ಗೆಳತಿ ಕೂಡ.
ಯಂಗ್ ಲಾಯರ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸಂಯುಕ್ತ ಹೊರನಾಡು ಅವರ ಪಾತ್ರಕ್ಕೆ ಸರಿಹೊಂದುವ ಕಾಸ್ಟ್ಯೂಮ್ಸ್ ಗಳನ್ನು ಬಳಸಿಕೊಳ್ಳಲಾಗಿದೆ ಹಾಗೂ ಮೊದಲ ಬಾರಿಗೆ ಸಂಯುಕ್ತ ಹೊರನಾಡು ಅವರ ಪಾತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ ಎಂದು ನಿರ್ದೇಶಕ ಪಿ.ಸಿ.ಶೇಖರ್ ತಿಳಿಸಿದ್ದಾರೆ.
ಶ್ರೀಬನಶಂಕರಿ ಚಿತ್ರಾಲಯ ಲಾಂಛನದಲ್ಲಿ ಕಡ್ಡಿಪುಡಿ ಚಂದ್ರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಚಿತ್ರದ ಮೊದಲ ಹಾಡು ಜನವರಿ 22 ರಂದು ಬಿಡುಗಡೆಯಾಗಲಿದೆ.
ನಾಲ್ಕು ವರ್ಷಗಳ ಹಿಂದೆ ‘ಅಮ್ಮಚ್ಚಿಯೆಂಬ ನೆನಪು’ ಸಿನಿಮಾ ರಾಷ್ಟೀಯ, ಅಂತರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಹಲವಾರು ಪ್ರಶಸ್ತಿಗಳನ್ನು ಪಡೆದಿತ್ತು. ಅಲ್ಲದೆ ಥಿಯೇಟರ್ನಲ್ಲಿ ರಿಲೀಸ್ ಕೂಡ ಆಗಿ ಯಶಸ್ವಿ 31 ದಿನಗಳ ಕಾಲ ಪ್ರದರ್ಶನವಾಗಿತ್ತು. ಇದೀಗ ಅದೇ ತಂಡದಿಂದ ‘ಕೋಳಿ ಎಸ್ರು’ ಎಂಬ ವಿಭಿನ್ನ ಸಿನಿಮಾ ಸಿದ್ಧವಾಗಿದೆ. ಈಗಾಗಲೇ ರಾಷ್ಟ್ರೀಯ, ಅಂತರಾಷ್ಟ್ರೀಯ ಫಿಲ್ಮ್ ಪೆಸ್ಟಿವೆಲ್ಗಳಲ್ಲಿ ಪ್ರದರ್ಶನಗೊಂಡ ‘ಕೋಳಿ ಎಸ್ರು’ ಪ್ರಶಂಸೆಯ ಜೋತೆಗೆ ಪ್ರಶಸ್ತಿಗಳನ್ನು ಬಾಚಿಕೊಂಡಿದೆ.
ನಿರ್ದೇಶಕಿ ಚಂಪಾ ಶೆಟ್ಟಿ ‘ನಮ್ಮ ಮೊದಲ ಪ್ರಯತ್ನದ ‘ಅಮ್ಮಚ್ಚಿಯಂಬ ನೆನಪು’ ಚಿತ್ರಕ್ಕೂ ಒಳ್ಳೆ ಪ್ರತಿಕ್ರಿಯೆ ಸಿಕ್ಕಿತ್ತು. ನಂತರ ಮತ್ತೊಂದು ಸಿನಿಮಾ ಮಾಡಲು ಯೋಚನೆ ಮಾಡಿ ಸಾಕಷ್ಟು ಕಥೆಗಳನ್ನು ಹುಡುಕುತಿದ್ದೆ. ಆಗ ನಾನು ನಟಿಸಿದ್ದ ನಾಟಕದ ಕಥೆಯೊಂದನ್ನು ಆಯ್ಕೆ ಮಾಡಿಕೊಂಡು ಈ ಸಿನಿಮಾ ಮಾಡಲು ಮುಂದಾದೆ. ಈ ಚಿತ್ರವನ್ನು ಕಾ.ತಾ ಚಿಕ್ಕಣ್ಣ ಅವರು ಬರೆದ ‘ಹುಚ್ಚೇರಿಯ ಎಸರಿನ ಪ್ರಸಂಗ’ ಕಥೆಯನ್ನು ಆಧರಿಸಿ ಮಾಡಲಾಗಿದೆ. ಇದು ನಾಟಕವಾಗಿಯೋ ಪ್ರದರ್ಶನ ಕಂಡು ಯಶಸ್ವಿಯಾಗಿತ್ತು. 80ರ ದಶಕದ ಈ ಕಥೆ ತೆಗೆದುಕೊಂಡು ಇಂದಿನ ಸಮಾಜಕ್ಕೆ ಒಗ್ಗುವಂತೆ ಮೂಲ ಕತೆಗೆ ದಕ್ಕೆ ಆಗದಂತೆ ಸಿನಿಮಾ ಮಾಡಲಾಗಿದೆ.
ಇದರಲ್ಲಿ ಒಂದು ಹೆಣ್ಣು ಎನೆಲ್ಲಾ ಕಷ್ಟ ಅನುಭವಿಸಿ ಗೆಲ್ಲುತ್ತಾಳೆ ಎಂಬುದನ್ನು ತೋರಿಸಲಾಗಿದೆ. ಹಳ್ಳಿ ಬ್ಯಾಗರೌಂಡ್ನಲ್ಲಿ ಚಿತ್ರವಿದ್ದು, ಕಲಾತ್ಮಕವಾಗಿ ಮಾಡಲಾಗಿದೆ. ಇದೀಗ ಈ ಸಿನಿಮಾ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿರುವುದು ಖುಷಿ ಇದೆ. ಈ ಚಿತ್ರ ನಿರ್ಮಾಣಕ್ಕೆ ಮುನಿವೆಕಟಪ್ಪನವರು ಸೇರಿದಂತೆ ಸಾಕಷ್ಟು ಜನ ಕೈ ಜೋಡಿಸಿದ್ದಾರೆ’ ಎಂದು ಹೇಳಿದರು.
ವೇದಿಕೆಯಲ್ಲಿ ಕಥೆಗಾರ ಕಾ.ತಾ ಚಿಕ್ಕಣ್ಣ ‘ಕಥೆಯಲ್ಲಿ ಹಳ್ಳಿಯ ಹೆಣ್ಣು ಮಗಳೋಬ್ಬಳು ಬಡತನದಿಂದ ಊರಲ್ಲಿ ಯಾರ ಮನೆಯಲ್ಲಿ ಕೋಳಿ ಸಾರ್ ಮಾಡಿದರೂ, ಎಸರಿಗಾಗಿ ಕಾಯ್ದು ತೆಗೆದುಕೊಂಡು ಬರುತಿರುತ್ತಾಳೆ. ತನ್ನ ಧಾರಿಯಲ್ಲಿಯೇ ಮಗಳು ಕೂಡ ಸಾಗುತ್ತಿರುವುದನ್ನು ಕಂಡು ಹೇಗೆ ಬದಲಾದಳು ಎಂಬ ಕತೆ ಇದೆ. ಮೂಲ ಕತೆಗೆ ದಕ್ಕೆ ಆಗದಂತೆ ಚಂಪಾ ಸುಂದರವಾಗಿ ಸಿನಿಮಾ ಮಾಡಿದ್ದು, ಇಂದು ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿದೆ. ಅದರಲ್ಲೂ ಈ ಕತೆ ನಾಟಕವಾಗಿ ಪ್ರದರ್ಶನ ಕಂಡಾಗ ಹುಚ್ಚೇರಿ ಪಾತ್ರಕ್ಕೆ ಪ್ರಶಸ್ತಿ ಬಂದಿತ್ತು. ಈಗ ಚಿತ್ರದಲ್ಲೂ ಆ ಪಾತ್ರಕ್ಕೆ ಪ್ರಶಸ್ತಿ ಬಂದಿರುವುದು ತುಂಬಾ ಖುಷಿ ಕೊಟ್ಟಿದೆ’ ಎಂದರು. ಅಂದಂಗೆ ‘ಕೋಳಿ ಎಸ್ರು’ ಸಿನಿಮಾ ಈಗಾಗಲೇ ‘ನ್ಯೂಯಾರ್ಕ್ ಇಂಡಿಯನ್ ಫಿಲ್ಮ ಫೆಸ್ಟಿವಲ್’ಗೆ ಆಯ್ಕೆಯಾಗಿ ಯಶಸ್ವಿ ಪ್ರದರ್ಶನ ಕಂಡಿದೆ. ಇತ್ತೀಚೆಗೆ ಔರಂಗಾಬಾದ್ನಲ್ಲಿ ನಡೆದ ಪ್ರತಿಷ್ಠಿತ ‘ಅಜಂತಾ ಎಲ್ಲೋರ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’ದಲ್ಲಿ ಆಯ್ಕೆಯಾಗಿ ಪ್ರದರ್ಶನಗೊಂಡು ಪ್ರೇಕ್ಷಕರ ಮೆಚ್ಚುಗೆ ಪಡೆದಿದೆ. ಅಲ್ಲದೆ ಇಂಡಿಯನ್ ಕಾಂಪಿಟೆಷನ್ ಸ್ಪರ್ದೆಯಲ್ಲಿ ಇನ್ನೋಳಿದ ಎಂಟು ಚಿತ್ರಗಳೊಂದಿಗೆ ಸ್ಪರ್ದಿಸಿ ಎರಡು ಪ್ರಶಸ್ತಿಗಳನ್ನು ‘ಕೋಳಿ ಎಸ್ರು’ ಬಾಚಿಕೊಂಡಿದೆ.
ಹೌದು ಔರಂಗಾಬಾದ್ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಚಿತ್ರದ ನಾಯಕಿ ಅಕ್ಷತಾ ಪಾಂಡವಪುರ ಮತ್ತು ತೀರ್ಪುಗಾರರ ವಿಶೇಷ ಪ್ರಶಸ್ತಿಯನ್ನು ಬಾಲ ನಟಿ ಅಪೇಕ್ಷಾ ಚೋರನಹಳ್ಳಿ ಪಡೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ಸೇರಿದಂತೆ ಸಾಕಷ್ಟು ಚಿತ್ರೋತ್ಸಗಳಿಗೆ ಸಿನಿಮಾವನ್ನು ಕಳಿಸುವ ಜೊತೆಗೆ ಥಿಯೇಟರ್ನಲ್ಲಿ ಸಿನಿಮಾ ಬಿಡುಗಡೆ ಮಾಡುವುದಕ್ಕೆ ತಂಡ ತಯಾರಿ ನಡೆಸಿದೆ. ಪತ್ರಿಕಾಗೋಷ್ಠಿಯಲ್ಲಿ ನಟಿ ಅಕ್ಷತಾ ಪಾಂಡವಪುರ ಹಾಗೂ ಚಿತ್ರದ ಸಂಕಲನಕಾರ ಹರೀಶ್ ತಮ್ಮ ಅನುಭವ ಹಂಚಿಕೊಂಡರು.
ಈ ಬಾರಿ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆ ಈ ಬಾರಿ ಹೊಂಬಾಳೆ ಫಿಲಂಸ್ನ ವಿಜಯ್ ಕಿರಗಂದೂರು, ಅಶ್ವಿನಿ ಪುನೀತ್ ರಾಜಕುಮಾರ್ ಮತ್ತು ತಾರಾ ಅನುರಾಧಾ ಅವರಿಗೆ ವಿಶೇಷ ಪ್ರಶಸ್ತಿ ನೀಡಿ ಗೌರವಿಸುತ್ತಿದೆ…
ಕನ್ನಡ ಚಿತ್ರರಂಗದ ಪ್ರಥಮ ಪ್ರಚಾರಕರ್ತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ದಿ. ಡಿ.ವಿ.ಸುಧೀಂದ್ರ ಅವರಿಂದ ಸ್ಥಾಪಿಸಲ್ಪಟ್ಟ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯು ಕಳೆದ 47 ವರ್ಷಗಳಿಂದ ಕನ್ನಡ ಚಿತ್ರರಂಗ ಮತ್ತು ಮಾಧ್ಯಮದ ನಡುವೆ ಸೇತುವೆಯಂತೆ ಕಾರ್ಯನಿರ್ವಹಿಸುತ್ತಾ ಬಂದಿದೆ. ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ ಮೂಲಕ ಕಳೆದ 20 ವರ್ಷಗಳಿಂದ ಚಲನಚಿತ್ರ ಪತ್ರಕರ್ತರಿಗೆ ಮತ್ತು ಚಿತ್ರರಂಗದ ಗಣ್ಯರಿಗೆ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.
ಡಿ.ವಿ.ಸುಧೀಂದ್ರ
ಸುಧೀಂದ್ರ ಅವರ ನಂತರ ಸುಧೀಂದ್ರ ವೆಂಕಟೇಶ್ ಈ ಸಂಪ್ರದಾಯವನ್ನು ಮುಂದುವರೆಸಿದ್ದು, 2022ನೇ ಸಾಲಿನ ವಾರ್ಷಿಕ 11 ಪ್ರಶಸ್ತಿಗಳನ್ನು ನೀಡುವುದರ ಜೊತೆಗೆ ಈ ಬಾರಿ ಇನ್ನೂ ಮೂರು ವಿಶೇಷ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತಿದ್ದಾರೆ. 2022ರಲ್ಲಿ ಇಡೀ ಜಗತ್ತೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ ಚಿತ್ರಗಳೆಂದರೆ ಅದು ‘ಕೆಜಿಎಫ್ 2’ ಮತ್ತು ‘ಕಾಂತಾರ’. ಈ ಎರಡೂ ಚಿತ್ರಗಳನ್ನು ನಿರ್ಮಿಸಿ, ಕನ್ನಡ ಚಿತ್ರರಂಗದ ಕೀರ್ತಿಪತಾಕೆಯನ್ನು ಹಾರಿಸಿದ ಹೊಂಬಾಳೆ ಫಿಲಂಸ್ನ ಶ್ರೀ ವಿಜಯ್ ಕಿರಗಂದೂರು ಅವರಿಗೆ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯಿಂದ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಕಳೆದ ವರ್ಷ ಬಿಡುಗಡೆಯಾದ ‘ಗಂಧದ ಗುಡಿ’ಯನ್ನು ಒಂದು ಚಿತ್ರ ಎನ್ನುವುದಕ್ಕಿಂತ ಅದ್ಭುತವಾದ ಅನುಭವ ಎಂದರೆ ತಪ್ಪಿಲ್ಲ. ಕನ್ನಡ ನಾಡಿನ ಪ್ರಾಕೃತಿಕ ಸಂಪತ್ತನ್ನು ತಮ್ಮ ಕಣ್ಣುಗಳ ಮೂಲಕ ಕನ್ನಡಿಗರಿಗೆ ತೋರಿಸಿದವರು ದಿವಂಗತ ಪುನೀತ್ ರಾಜಕುಮಾರ್. ಇಂಥದ್ದೊಂದು ಅಪೂರ್ವವಾದ ಅನುಭವವನ್ನು ಕಟ್ಟಿಕೊಟ್ಟ ಪುನೀತ್ ಮತ್ತು ಇಂಥದ್ದೊಂದು ಸಾಹಸಕ್ಕೆ ಕೈ ಹಾಕಿದ ನಿರ್ಮಾಪಕಿ ಶ್ರೀಮತಿ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಈ ಪ್ರಶಸ್ತಿ ಸಂದಾಯವಾಗಲಿದೆ.
ಇನ್ನು, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟಿ ತಾರಾ ಅನೂರಾಧ ಅವರ ಅಭಿನಯ, ಪಾತ್ರಗಳು ಮತ್ತು ಕನ್ನಡ ಚಿತ್ರರಂಗಕ್ಕೆ ಅವರ ಕೊಡುಗೆಯನ್ನು ಸ್ಮರಿಸಿ, ಅವರಿಗೂ ಈ ಬಾರಿ ವಿಶೇಷ ಪ್ರಶಸ್ತಿ ನೀಡಲಾಗುತ್ತಿದೆ.
ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ 47ನೇ ವಾರ್ಷಿಕೋತ್ಸವ ಹಾಗೂ 21 ಮತ್ತು 22ನೇ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸಂಸ್ಥೆಯ ಸ್ಥಾಪಕರಾದ ಡಿ.ವಿ. ಸುಧೀಂದ್ರ ಅವರ ಜನ್ಮದಿನದಂದು (ಜನವರಿ 25) ಚಾಮರಾಜಪೇಟೆಯ ಕನ್ನಡ ಚಲನಚಿತ್ರ ಕಲಾವಿದರ ಸಂಘದಲ್ಲಿ ಸಂಜೆ 5ಕ್ಕೆ ಆಯೋಜಿಸಲಾಗಿದೆ.