ಇದು ಸುಧೀರ್ ಅತ್ತಾವರ ಪೂಜ್ಯ ದೈವ! ಕರಿ ಹೈದ ಕರಿ ಅಜ್ಜ ಎಂಬ ದೈವದ ಸಿನಿಮಾಗೆ ಶೂಟಿಂಗ್ ಮುಕ್ತಾಯ…

ಕನ್ನಡದಲ್ಲಿ ಮತ್ತೊಂದು ದೈವದ ಸಿನಿಮಾ ಕರಿ ಹೈದ ಕರಿ ಅಜ್ಜ ಶುರುವಾಗಿದ್ದು ಗೊತ್ತೇ ಇದೆ. ಸುಧೀರ್ ಅತ್ತಾವರ ನಿರ್ದೇಶನದ ಈ ಸಿನಿಮಾಗೆ ತ್ರಿವಿಕ್ರಮ ಸಪಲ್ಯ ನಿರ್ಮಾಪಕರು. ಅಂದಹಾಗೆ, ಈ ಸಿನಿಮಾ ಹೈಲೆಟ್ ಅಂದರೆ, ಬಾಲಿವುಡ್, ಹಾಲಿವುಡ್ ನಟ ಕಬೀರ್ ಬೇಡಿ. ಅಷ್ಟೇ ಅಲ್ಲ, ಚಿತ್ರದಲ್ಲಿ ಹಾಲಿವುಡ್ ತಂತ್ರಜ್ಞರ ಸ್ಪರ್ಶವಿದೆ. ಭವ್ಯ ತಾರಾಗಣವೂ ಇಲ್ಲಿದೆ. ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿರುವ ಚಿತ್ರತಂಡ ಒಂದಷ್ಟು ಅನುಭವ ಹಂಚಿಕೊಂಡಿದೆ

ಪವಾಡ ಪುರುಷ ಕೊರಗಜ್ಜ ಜೀವನಾಧಾರಿತ ಸಿನಿಮಾ ಕರಿ ಹೈದ ಕರಿ ಅಜ್ಜ. ಈ ಚಿತ್ರಕ್ಕೆ ಸುಧೀರ್ ಅತ್ತಾವರ್ ನಿರ್ದೇಶನವಿದೆ. ತ್ರಿವಿಕ್ರಮ ಸಪಲ್ಯ ನಿರ್ಮಾಪಕರು. ಚಿತ್ರದಲ್ಲಿ ಬರುವ ಮುಖ್ಯ ಪಾತ್ರವೊಂದರಲ್ಲಿ ಹಾಲಿವುಡ್, ಬಾಲಿವುಡ್ ಹಾಗೂ ಫ್ರೆಂಚ್ ಸಿನಿಮಾಗಳ ನೃತ್ಯ ನಿರ್ದೇಶಕ, ಡ್ಯಾನ್ಸರ್, ನಟ ಸಂದೀಪ್ ಸೋಪರ್ಕರ್ ನಟಿಸಿದ್ದಾರೆ. ಈ ಚಿತ್ರದಲ್ಲಿ ಇವರು ಕೊರಗಜ್ಜನ ಜೊತೆ ಬರುವ ಗುಳಿಗನ್ ಪಾತ್ರ ನಿರ್ವಹಿಸಿರುವುದು ವಿಶೇಷ. ಅಂತರರಾಷ್ಟ್ರೀಯ ಈ ಕಲಾವಿದ ಇದೇ ಮೊದಲಬಾರಿಗೆ ಕನ್ನಡ ಸಿನಿಮಾವೊಂದರಲ್ಲಿ ನಟಿಸಿರುವುದು ವಿಶೇಷತೆಗಳಲ್ಲೊಂದು.

ನಿರ್ದೇಶಕ ಸುಧೀರ್ ಅತ್ತಾವರ್ ಮಾತನಾಡಿ, ಚಿತ್ರೀಕರಣ ಮುಕ್ತಾಯವಾದ ಮಾರನೆಯ ದಿನ ಕೊರಗಜ್ಜ ದೈವಕ್ಕೆ ಕೃತಜ್ಞತೆ ಹೇಳುವ ದ್ರಷ್ಟಿಯಲ್ಲಿ ಇತ್ತೀಚೆಗೆ “ಕೊರಗಜ್ಜ ದೈವದ ಕೋಲ ಸೇವೆ ನೀಡಲಾಯಿತು. ಚಿತ್ರೀಕರಣ ಸಂದರ್ಭದಲ್ಲಿ ಸಾಕಷ್ಟು ಪವಾಡಗಳು ನಡೆದಿದ್ದು, ಎಲ್ಲರ ಅನುಭವಕ್ಕೆ ಬಂದಿದೆ. ಇದು ಕೊರಗಜ್ಜ ಎಂದು ಕರೆಯುವ 22, 23 ವರ್ಷ ಬದುಕಿದ್ದ ತನಿಯ ಅಥವ ಕಾಂತಾರೆ ಎನ್ನುವ ಕರಾವಳಿ ಭಾಗದ ಆದಿವಾಸಿಗಳು ಎನ್ನಬಹುದಾದ ಕೊರಗ ಜನಾಂಗದ ಹುಡುಗ ದೈವತ್ವ ಪಡೆದುಕೊಂಡ ರೋಚಕ ಕಥೆವುಳ್ಳ ಚಿತ್ರ. ಇದರಲ್ಲಿ ಹಾಲಿವುಡ್ -ಬಾಲಿವುಡ್ ಕೋರಿಯೋಗ್ರಾಫರ್ ಹಾಗೂ ನಟ ಸಂದೀಪ್ ಸೋಪರ್ಕರ್ “ಗುಳಿಗ” ದೈವದ ಪಾತ್ರ ನಿಭಾಯಿಸಿದ್ದಾರೆ.

ಇದು ಕೊರಗಜ್ಜನ ಜೊತೆಗೆ ಇರುವ ಗುಳಿಗ . ಮಂಗಳೂರಿನ ಬಳಿ ಇರುವ ನೇತ್ರಾವತಿ ನದಿ ತಟದಲ್ಲಿರುವ “ಕಲ್ಲಾಪು ಬೂರ್ದಗೋಳಿ” ಬಳಿ ಕೊರಗಜ್ಜನ ಜೊತೆ ಗುಳಿಗ ದೈವವೂ ಇದೆ. ಈ ಸನ್ನಿವೇಷಕ್ಕಾಗಿ ಗುಳಿಗನ ಪಾತ್ರವನ್ನು ಗುಳಿಗ ನರ್ತನದ ರೀತಿ ತೋರಿಸಲಾಗಿದ್ದು; ಆ ಪಾತ್ರಕ್ಕೆ ಅಂತರಾಷ್ಟ್ರೀಯ ಮಟ್ಟದ ನ್ರತ್ಯ ಕಲಾವಿದ ಸಂದೀಪ್ ಸೋಪರ್ಕರ್ ಅವರು ಸೂಕ್ತ ಎನಿಸಿತ್ತು. ಅಂದುಕೊಂಡಂತೆ ಅವರ ಅದ್ಭುತ ನರ್ತನ ಚಿತ್ರಕ್ಕೆ ಇನ್ನಿಲ್ಲದ ಕಳೆ ತಂದಿದೆ.


ಈ ಮೊದಲು ಕೊರಗಜ್ಜನ ಬಗ್ಗೆ ಸುಮಾರು 20 ಕ್ಕೂ ಹೆಚ್ಚು ನಿರ್ಮಾಪಕರು ಸಿನಿಮಾ ಮಾಡಲು ಕಳೆದ 7-8 ವರ್ಷಗಳಿಂದ ಪ್ರಯತ್ನಿಸುತ್ತಿದ್ದರು. ಆದರೆ ನಾವು ಸಿನಿಮಾ ಕೆಲಸ ಶುರು ಮಾಡುವ ಮೊದಲು ಕೊರಗಜ್ಜ ದೈವದ ಕೋಲ ನಡೆಸಿ ದೈವದ ಅಪ್ಪಣೆ ಕೇಳಿದೆವು. ನಮಗೆ ದೇವರ ಅಪ್ಪಣೆ ಸಿಕ್ಕಮೇಲೆ ಈ ಸಿನಿಮಾ ಮಾಡಲು ಮುಂದಾದೆವು. 12ನೇ ಶತಮಾನದ ಕಥೆ ಇದಾಗಿದ್ದು, ಚಿತ್ರದಲ್ಲಿ ಬುರ್ದಗೋಳಿ ಉತ್ಪತ್ತಿ ಕಲ್ಲು ಎಂಬ ಪ್ರದೇಶದಲ್ಲಿ ಉದ್ಯಾವರ ಅರಸುಗಳ ಕೈಯಿಂದ ಪಂಜಂದಾಯಿಗೆ ಕೊರಗಜ್ಜನು ಅವಳ ರಾಜ್ಯವನ್ನು ಮರಳಿ ದೊರಕಿಸಿಕೊಡಲು ಇತ್ಯರ್ಥ ಮಾಡುತ್ತಾನೆ. ಅಂತಹ ಕಲ್ಲಾಪು ಬೂರ್ದಗೋಳಿ ಯಲ್ಲಿ ಕೊರಗಜ್ಜ ಮತ್ತು ಗುಳಿಗ ದೈವದ ವಾರ್ಷಿಕ ಕೋಲ ಸೇವೆಯ ದಿನದಂದೇ ಗುಳಿಗ- ಕೊರಗಜ್ಜನ ಪ್ರಥಮ ಭೇಟಿಯ ದ್ರಶ್ಯವನ್ನು ಮೂಲ ಕಥೆಯಲ್ಲಿ ದಾಖಲಾಗಿರುವಂತೆ ಸೋಮೇಶ್ವರದಲ್ಲಿ ಶೂಟ್ ಮಾಡಿದ್ದು ಕಾಕತಾಳಿಯವೋ ಪವಾಡವೋ ತಿಳಿದಿಲ್ಲ..! ಎಂದರು.

ನಮಗೆಲ್ಲ ಶೂಟಿಂಗ್ ಸಂದರ್ಭದಲ್ಲಿ ಒಂದಿಷ್ಟು ಅನುಭವ ಆಗಿವೆ. ಈ ಸಿನಿಮಾವನ್ನು ನಾನು ಮಾಡಲಿಲ್ಲ. ಆ ದೈವ ನನ್ನ ಕೈಲಿ ಮಾಡಿಸಿದ್ದಾರೆ. ನಮ್ಮ ಚಿತ್ರದಲ್ಲಿ ಕಳ್ಳು ಮಾರುವ ಮೈರಕ್ಕೆ ಬೈದ್ಯೆದಿ ಪಾತ್ರ ಮುಖ್ಯವಾಗಿದ್ದು, ಈಕೆ ಕೊರಗಜ್ಜನ ಸಾಕು ತಾಯಿ. ಈ ಪಾತ್ರವನ್ನು ನಟಿ ಶ್ರುತಿ ನಿರ್ವಹಿಸಿದ್ದಾರೆ. ಇಂದು ಮಂಗಳೂರು ಕಡೆ ಮನೆ ಮನೆಯಲ್ಲಿ ಕೊರಗಜ್ಜನನ್ನು ಜನ ಆರಾಧಿಸುತ್ತಾರೆ ಎಂದರು.

ಹಾಲಿವುಡ್ ನಟ ಸಂದೀಪ್ ಸೋಪರ್ಕರ್ ಮಾತನಾಡಿ, ‘ಈ ಚಿತ್ರ ನಂಗೆ ಒಳ್ಳೆ ಅನುಭವ ನೀಡಿದೆ. ಈ ತಂಡ ಹಾಗೂ ಸಿನಿಮಾದಲ್ಲಿ ಕೆಲಸ ಮಾಡಿದ್ದು ತುಂಬಾ ಖುಷಿ ಕೊಟ್ಟಿದೆ. ಒಳ್ಳೆಯ ತಂಡ ಇದಾಗಿದ್ದು ಅದ್ಭುತ ಕೆಲಸ ಮಾಡಿದೆ. ನಾನು ಮಾಡಿರುವ ಪಾತ್ರ ಅದ್ಭುತವಾಗಿದ್ದು ಹೊಸ ರೀತಿಯಲ್ಲಿ ಅನುಭವ ನೀಡಿತು. ಈ ಪಾತ್ರ ಮಾಡಿದ್ದು ಖುಷಿ ಇದ್ಲ್ಲೆ. ನಾನು ಡ್ಯಾನ್ಸ್ ಜೊತೆ ನಟನೆ ಕೂಡ ಮಾಡಿದ್ದೇನೆ ಎಂದರು.

ನಟಿ ಶ್ರುತಿ ಮಾತನಾಡಿ, ‘ಈ ಸಿನಿಮಾ ನನ್ನ ಮನಸ್ಸಿನಲ್ಲಿ ವಿಷೇಶವಾದ ಸ್ಥಾನ ಪಡೆಯುತ್ತದೆ. ನಾನಿಲ್ಲಿ ಮೈರಕ್ಕೆ ಬೈದ್ಯೆದಿ ಪಾತ್ರ ಮಾಡಿದ್ದೇನೆ. ದೈವದ ಕಥೆ ಅದ್ಭುತವಾಗಿ ಇದ್ದು ಈ ಕಥೆಯನ್ನು ಹೆಕ್ಕಿ ತೆಗೆದ ನಿರ್ದೇಶಕರ ಧೈರ್ಯ ಮೆಚ್ಚಬೇಕು. ಚಿತ್ರಕ್ಕಾಗಿ ನಿರ್ಮಾಪಕರು ಕೋಟಿ ಕೋಟಿ ಹಣ ಖರ್ಚು ಮಾಡಿದ್ದಾರೆ. ಯಾರಿಗೂ ಸಿಗದೆ ಇರುವ ಅವಕಾಶ ಈ ತಂಡಕ್ಕೆ ಸಿಕ್ಕಿದೆ. ಇದರಲ್ಲಿ ಬರುವ ಪ್ರತಿಯೊಬ್ಬರ ಪಾತ್ರ ಸೊಗಸಾಗಿದೆ ನಿರ್ದೇಶಕರು ಅಷ್ಟು ತಯಾರಿ ಮಾಡಿಕೊಂಡು ಸಿನಿಮಾ ಮಾಡಿದ್ದಾರೆ.

ಮೈರಕ್ಕೆ ಬೈದ್ಯೆದಿ ಪಾತ್ರ ಕೊರಗಜ್ಜ ಸಾಕು ತಾಯಿ. ಇದರಲ್ಲಿ ಕೊರಗಜ್ಜಗೆ ತನಿಯಾ/ ಕಾಂತಾರೆ ಎಂಬ ಹೆಸರಿದೆ. ನಾನು ಕಳ್ಳು ಮಾರುವವಳ ಪಾತ್ರ ಮಾಡುತ್ತಿರುತ್ತೇನೆ. ಇದರಲ್ಲಿ ತಾಯಿ ಮಗನ ಬಾಂಧವ್ಯವನ್ನು ಅದ್ಭುತವಾಗಿ ತೋರಿಸಲಾಗಿದೆ. ನಮ್ಮ ಜೊತೆ ಸಾಕಷ್ಟು ರಂಗಭೂಮಿ ಕಲಾವಿದರು ಇದರಲ್ಲಿ ನಟನೆ ಮಾಡಿದ್ದಾರೆ ಎಂದರು.

ನಟಿ ಭವ್ಯ ‘ಈ ಚಿತ್ರದಲ್ಲಿ ನಾನು ವಿಷೇಶವಾದ ಪಾತ್ರ ಮಾಡಿದ್ದು, ಶೂಟಿಂಗ್ ಮಾಡುವಾಗ ಹಲವಾರು ಮಿರಾಕಲ್ ನಡೆಯುತ್ತಿತ್ತು. ನದಿ ಹತ್ತಿರ ಶೂಟಿಂಗ್ ನಡೆಯುವಾಗ, ನಿರ್ದೇಶರು ಅಂದುಕೊಂಡಿದ್ದು ನೆರವೇರಿತು. ಅದು ದೈವದ ಆಶೀರ್ವಾದ ಎಂದರು ಭವ್ಯ.

ನಿರ್ಮಾಪಕ ತ್ರಿವಿಕ್ರಮ ಸಪಲ್ಯ ಮಾತನಾಡಿ, ‘ತುಳು ನಾಡ ಜನರ ಸಂಸ್ಕೃತಿ ತೋರಿಸುವ ಆಸೆ ಇತ್ತು. ಅದು ಈ ಚಿತ್ರದ ಮೂಲಕ ಈಡೇರಿದೆ. ಸೋಮೇಶ್ವರ, ಉಲ್ಲಾಳ, ಮಡಂತ್ಯಾರ್, ಪೇರೂರು, ಅಡ್ಯಾರ್, ಎರ್ಮಾಯ್ ,ಸಾರಪಲ್ಲ, ಅರ್ಕುಳ, ಮಂಗಳೂರು ಮುಂತಾದ ಸ್ಥಳದಲ್ಲಿ ಶೂಟಿಂಗ್ ಮಾಡಲಾಗಿದೆ. ಚಿತ್ರವನ್ನು ಮೇ ನಲ್ಲಿ ರಿಲೀಸ್ ಮಾಡುವ ಯೋಚನೆ ಇದೆ’ ಭರತ್ ಸೂರ್ಯ ನಾಯಕರಾಗಿ ನಟಿಸಿದ್ದಾರೆ. ಸಿನಿಮಾ ಶೂಟಿಂಗ್ ಮುಗಿಯುವರೆಗೂ ಅವರು ಕಾಲಿಗೆ ಚಪ್ಪಲಿ ಹಾಕಿರಲಿಲ್ಲ. ಇನ್ನು ನಾಯಕಿಯಾಗಿ ವೃತಿಕಾ ಅಭಿನಯಿಸಿದ್ದಾರೆ. ಚಿತ್ರವನ್ನು ಏಕಕಾಲದಲ್ಲಿ ಕನ್ನಡ, ತುಳು ಹಾಗೂ ಮಲಯಾಳಂ ಭಾಷೆಯಲ್ಲಿ ತಯಾರಿಸಲಾಗುತ್ತಿದೆ. ಧ್ರತಿ ಕ್ರಿಯೇಷನ್ಸ್ ಹಾಗೂ ಸಕ್ಸಸ್ ಫಿಲಂಸ್ ಬ್ಯಾನರ್ ನಲ್ಲಿ ಚಿತ್ರ ತಯಾರಾಗಿದೆ.

Related Posts

error: Content is protected !!