Categories
ಸಿನಿ ಸುದ್ದಿ

ತಾಪ್ಸಿ ‘ಲೂಪ್‌ ಲಪೇಟಾ’ ರಿಲೀಸ್‌ಗೆ ರೆಡಿ!

 ವಿಶ್ಲೇಷಕರು ಹಾಗೂ ಪ್ರೇಕ್ಷಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿದ್ದ ಜರ್ಮನ್ ಸಿನಿಮಾ ‘ರನ್‌ ಲೋಲಾ ರನ್‌’ ರೀಮೇಕ್‌ ‘ಲೂಪ್ ಲಪೇಟಾ’. ತಾಪ್ಸಿ ಪನ್ನು ಮತ್ತು ತಾಹಿರ್ ರಾಜ್ ನಟನೆಯ ಈ ಹಿಂದಿ ಸಿನಿಮಾ ಈಗ ತೆರೆಗೆ ಸಿದ್ಧವಾಗಿದೆ. ಬಾಲಿವುಡ್‌ನಲ್ಲಿ ಈ ಜರ್ಮನ್ ರೀಮೇಕ್‌ ಬಗ್ಗೆ ದೊಡ್ಡ ನಿರೀಕ್ಷೆ ಇರುವುದಂತೂ ಹೌದು. ಆಕಾಶ್ ಭಾಟಿಯಾ ನಿರ್ದೇಶನದಲ್ಲಿ ತಯಾರಾಗಿರುವ ಚಿತ್ರದ ಬಗ್ಗೆ ನಟಿ ತಾಪ್ಸಿ ಅಪಾರ ಭರವಸೆ ಹೊಂದಿದ್ದಾರೆ.


ಈ ಚಿತ್ರದ ಸ್ಕ್ರಿಪ್ಟ್ ಕೇಳಿದಾಗ ಮೊದಲು ತಾಪ್ಸಿ ಒಲ್ಲೆ ಎಂದಿದ್ದರಂತೆ. ಅದರೆ ಅದನ್ನು ನಿರ್ದೇಶಕರು ಸಾವಧಾನವಾಗಿ ನಿರೂಪಿಸಿದಾಗ ಕೂಡಲೇ ಒಪ್ಪಿಗೆ ಕೊಟ್ಟಿದ್ದಾರೆ. “ಕೆಲವು ಬಾರಿ ನಾನಾಗಿಯೇ ಸಿನಿಮಾಗಳ ಹಿಂದೆ ಹೋಗುತ್ತೇನೆ. ಇನ್ನು ಕೆಲವು ತಾನಾಗಿಯೇ ನನ್ನ ಪಾಲಿಗೆ ಒದಗಿಬರುತ್ತವೆ. ಈ ಲೂಪ್‌ ಲಪೇಟಾ ಅಂಥ ಚಿತ್ರಗಳಲ್ಲೊಂದು. ಇಂಥದ್ದೊಂದು ಅವಕಾಶಕ್ಕೆ ನಿರ್ದೇಶಕರಿಗೆ ಧನ್ಯವಾದ ಹೇಳುತ್ತೇನೆ” ಎಂದಿದ್ದಾರೆ ತಾಪ್ಸಿ.


‘ರನ್ ಲೋಲಾ ರನ್‌’ ಜರ್ಮನ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಫ್ರಾಂಕಾ ಪೊಟೆಂಟ್‌ ಮತ್ತು ಮಾರಿಟ್ಝ್‌ ಬ್ಲೀಬ್‌ಟ್ರೂ ನಟಿಸಿದ್ದಾರೆ. ಫ್ರಾಂಕಾ ಪಾತ್ರದಲ್ಲಿ ತಾಪ್ಸಿ ಕಾಣಿಸಿಕೊಂಡಿದ್ದು, ಹಿಂದಿ ಅವತರಣಿಕೆಯಲ್ಲಿ ಅವರ ಹೆಸರು ‘ಸವಿ’. ಚಿತ್ರದ ಬಿಡುಗಡೆ ದಿನಾಂಕ ಸದ್ಯದಲ್ಲೇ ಘೋಷಣೆಯಾಗಲಿದೆ.

Categories
ಸೌತ್‌ ಸೆನ್ಸೇಷನ್

ಫ್ಯಾಮಿಲಿ ಫೋಟೋ ಶೇರ್ ಮಾಡಿ ಖುಷಿಗೊಂಡ ರಮ್ಯಕೃಷ್ಣ

ವೈವಿಧ್ಯಮಯ ಪಾತ್ರಗಳಲ್ಲಿ ನಟಿಸಿರುವ ರಮ್ಯಕೃಷ್ಣ ದಕ್ಷಿಣ ಭಾರತದ ಜನಪ್ರಿಯ ನಟಿ. “ಅಮ್ಮನ್‌”, “ಪಡಯಪ್ಪ”, “ಪಂಚತಂತ್ರಂ”, “ಬಾಹುಬಲಿ” ಸೇರಿದಂತೆ ಹಲವಾರು ಚಿತ್ರಗಳಲ್ಲಿ ರಮ್ಯಕೃಷ್ಣ ತಮ್ಮ ಪಾತ್ರಗಳ ಮೂಲಕ ಛಾಪು ಮೂಡಿಸಿರುವ ಕಲಾವಿದೆ. ದಕ್ಷಿಣದ ಜನಪ್ರಿಯ ನಾಯಕನಟರಿಗೆ ಜೋಡಿಯಾಗಿ ನಟಿಸಿರುವ ಅವರಿಗೆ ಈಗಲೂ ಬಹು ಬೇಡಿಕೆಯಿದೆ.

ರಮ್ಯಕೃಷ್ಣ ಅವರು ತೆಲುಗು ಜನಪ್ರಿಯ ಚಿತ್ರ ನಿರ್ದೇಶಕ ವಂಶಿಕೃಷ್ಣ ಅವರನ್ನು ವರಿಸಿದ್ದಾರೆ. ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ನಟಿ ತಮ್ಮ ಫ್ಯಾಮಿಲಿ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಪುತ್ರ ಋತ್ವಿಕ್ ಕೃಷ್ಣನ ಹದಿನಾರನೇ ಹುಟ್ಟು ಹಬ್ಬದ ಸಂಭ್ರಮದ ಅವರ ಈ ಫೋಟೋಗಳಿಗೆ ಅಭಿಮಾನಿಗಳಿಂದ ಭರಪೂರ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಪತಿ, ಪುತ್ರ ಮತ್ತು ಸಹೋದರಿ ವಿನಯಾ ಅವರೊಂದಿಗಿನ ನಟಿಯ ಫೋಟೋಗಳು ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿವೆ. ಸದ್ಯ ಎರಡು ಚಿತ್ರಗಳ ಚಿತ್ರೀಕರಣದಲ್ಲಿ ರಮ್ಯಾಕೃಷ್ಣ ಬಿಝಿ. ವಿಜಯ್ ದೇವರಕೊಂಡ ಹೀರೋ ಆಗಿರುವ ‘ಲಿಗರ್‌’ ತೆಲುಗು – ಹಿಂದಿ ದ್ವಿಭಾಷಾ ಚಿತ್ರದಲ್ಲಿ ಅವರಿಗೆ ಪ್ರಮುಖ ಪಾತ್ರವಿದೆಯಂತೆ. ಈ ಸಿನಿಮಾ ಸದ್ಯದಲ್ಲೇ ತೆರೆಕಾಣಲಿದೆ.

Categories
ಆಡಿಯೋ ಕಾರ್ನರ್

ಸುಶಾಂತ್ ಸಿಂಗ್ ರಜಪೂತ್ ನೆನಪು – ನಟನಿಗೆ ‌ಸಂಗೀತ ನಿರ್ದೇಶಕ ವಿನಯ್‌ ಚಂದ್ರ ಅಲ್ವಿದಾ ಆಲ್ಬಂ ಗೌರವ

ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ಇಂದು ನಮ್ಮೊಂದಿಗಿಲ್ಲ. ಆದರೆ, ಅವರ ಸಿನಿಮಾಗಳು, ಅವರ ಹಾಡುಗಳು ಇಂದಿಗೂ ಅಚ್ಚಳಿಯದೆ ಎಲ್ಲರ ಮನದಲ್ಲಿ ಉಳಿದಿವೆ. ಕಡಿಮೆ ಅವಧಿಯಲ್ಲೇ ಜೋರು ಸುದ್ದಿಯಾದ ಸುಶಾಂತ್‌ ಸಿಂಗ್‌ ಅವರ ನೆನಪಿಗೋಸ್ಕರ “ಅಲ್ವಿದಾ” ಆಲ್ಬಂವೊಂದನ್ನು ಹೊರತರಲಾಗಿದೆ. ಹೌದು, ಬಾಲಿವುಡ್‌ನಲ್ಲಿ ಒಂದಷ್ಟು ಸಾಧನೆ ಮಾಡಿದ ಸುಶಾಂತ್‌ ಸಿಂಗ್‌ ಕುರಿತ “ಅಲ್ವಿದಾ” ಆಲ್ಬಂ ಹಾಡು ಸಿದ್ಧಗೊಂಡಿದ್ದು, ಅದನ್ನು ಇತ್ತೀಚೆಗೆ ಪ್ಲೇ ಟು ಮೀ ಅರ್ಪಿಸಿದೆ.

ಸಂಗೀತ ನಿರ್ದೇಶಕ ಕಮ್‌ ಗಾಯಕ ವಿನಯ್‌ ಚಂದ್ರ ಅವರು ವಿಶೇಷವಾಗಿಯೇ “ಅಲ್ವಿದಾ” ಹಾಡನ್ನು ರೆಡಿಮಾಡಿದ್ದಾರೆ. ಇತ್ತೀಚೆಗೆ ವಿನಯ್‌ಚಂದ್ರ ಅವರ ತಂಡ ಆ ಹಾಡಿನ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡಿತು. ಹಾಡು ಹಿಂದಿಯಲ್ಲಿಯೇ ತಯಾರಾಗಿದ್ದು, ಹಾಡಿಗೆ ದನಿಯಾಗುವುದರ ಜತೆಗೆ ಸಂಗೀತವನ್ನೂ ನೀಡಿದ್ದಾರೆ ವಿನಯ್ ಚಂದ್ರ. ಅಷ್ಟೇ ಅಲ್ಲ ಈ ಹಾಡಲ್ಲೂ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಅದರ ಟೀಸರ್ ಕೂಡ ಬಿಡುಗಡೆಯಾಗಿದ್ದು, ಎಲ್ಲೆಡೆಯಿಂದಲೂ ಒಳ್ಳೆಯ ಮೆಚ್ಚುಗೆ ಸಿಕ್ಕಿದೆ.


ಈ ವೇಳೆ ಮಾತಿಗಿಳಿದ ಸಂಗೀತ ನಿರ್ದೇಶಕ ವಿನಯ್‌ ಚಂದ್ರ, “ಬಾಲಿವುಡ್ ನಲ್ಲಿ‌ ನೆಲೆ ನಿಲ್ಲಲು ಸುಶಾಂತ್ ಅವರ ಶ್ರಮ ಹೇಗಿತ್ತು ಎಂಬುದನ್ನು ಈ‌ ಹಾಡಿನಲ್ಲಿ ತೋರಿಸಿದ್ದೇವೆ. ಅವರ ಬಾಲ್ಯದ ಫೋಟೋಗಳಿಂದ ಹಿಡಿದ ಇತ್ತೀಚಿನ ಫೋಟೋಗಳನ್ನು ಮೂರು ನಿಮಿಷದ ವಿಡಿಯೋದಲ್ಲಿ ಸೆರೆ ಹಿಡಿಯಲಾಗಿದೆ. ಕೊನೆಗೆ ತಮ್ಮ ಈ ಸಿನಿಮಾ ಪಯಣದಲ್ಲಿ ಕೈ ಹಿಡಿದವರಿಗೆ, ಆಸರೆಯಾದವರಿಗೂ ಥ್ಯಾಂಕ್ಸ್ ಹೇಳಿ ಹೊರಡುವ ಪರಿಕಲ್ಪನೆಯ ಹಾಡು ಅಂದು ಎಂಬುದು ಅವರ ಮಾತು.


ಎರಡೂವರೆ‌ ದಿನಗಳ ಕಾಲ ಬೆಂಗಳೂರಿನಲ್ಲಿಯೇ ಸಂಪೂರ್ಣವಾಗಿ ಸೆಟ್ ಹಾಕಿ ಅಲ್ವಿದಾ ಹಾಡಿನ ಶೂಟಿಂಗ್ ನಡೆಸಿರುವುದು ವಿಶೇಷ. ಎಲ್ಲೂ ಹೊಂದಾಣಿಕೆ ಮಾಡಿಕೊಳ್ಳದೆ, ಅದ್ಧೂರಿಯಾಗಿಯೇ ಚಿತ್ರೀಕರಿಸಲಾಗಿದೆ. ಸದ್ಯ ಟೀಸರ್ ಬಿಡುಗಡೆಯಾಗಿದ್ದು, ಇನ್ನೊಂದು ವಾರದಲ್ಲಿ ಯೂಟ್ಯೂಬ್ ನಲ್ಲಿ ಹಾಡು ಬಿಡುಗಡೆಯಾಗಲಿದೆ.
ಪ್ಲೇ ಟು ಮಿ ಇಂಡಿಯಾದ ಬಿಗೆಸ್ಟ್ ಫರ್ಫಾಮಿಂಗ್ ನಮಗೊಂದು ಒಳ್ಳೆಯ ವೇದಿಕೆ ಕಲ್ಪಿಸಿದೆ.

ಇದೀಗ ಪ್ಲೇ ಟು ಮಿ ಒರಿಜಿನಲ್ಸ್ ಶುರುಮಾಡಿದ್ದು, ಆ ಮೂಲಕ ನನ್ನ ಮೊದಲ ಹಾಡಾಗಿ ಅಲ್ವಿದಾ ಮೂಡಿಬಂದಿದೆ. ಕೀರ್ತಿ ವಾಸನ್ ಸುಬ್ರಮಣ್ಯಂ ಪ್ಲೇ ಟು ಮಿಯ ಸಿಇಒ ಆಗಿದ್ದಾರೆ. 104 ಎಫ್ಎಂನ ಸಿಇಒ ಮತ್ತು ವಲ್ಫೂಲ್ ಬ್ರಾಂಡ್ ನ ಬಿಸಿನೆಸ್ ಹೆಡ್ ಕೂಡ ಅವರು. ಇನ್ನು, ಶ್ರೀಧರ್ ಮತ್ತು ಶೀತಲ್ ಈ ಹಾಡಿಗೆ ಹಣ ಹಾಕಿದ್ದಾರೆ. ಹಾಡಿನ ನಿರ್ದೇಶನವನ್ನೂ ಶ್ರೀಧರ್ ಮಾಡಿದ್ದಾರೆ.

ಹಾಡಿನ ಟೀಸರ್ ಲಾಂಚ್ ಕಾರ್ಯಕ್ರಮಕ್ಕೆ ಅಂದು ಅತಿಥಿಗಳ ದಂಡೇ ಹಾಜರಿತ್ತು. ಹಿರಿಯ ಸಂಗೀತ ನಿರ್ದೇಶಕ ವಿ. ಮನೋಹರ್, ಸಾಹಸ‌ ನಿರ್ದೇಶಕ ಥ್ರಿಲ್ಲರ್ ಮಂಜು, ವಿನಯ್ ಚಂದ್ರ ಅವರ ತಂದೆ ಮತ್ತು ಹಿರಿಯ ಪತ್ರಕರ್ತರು, ಕಲಾವಿದರಾಗಿರುವ ಸುರೇಶ್ ಚಂದ್ರ, ರವಿಚೇತನ್, ನಟಿ ರೂಪಿಕಾ, ಅಭಯ್ ಚಂದ್ರ, ಕೀರ್ತಿ ವಾಸನ್ ಸೇರಿದಂತೆ ಹಲವು ಗೆಳೆಯರು ಆಗಮಿಸಿ ವಿನಯ್‌ ಚಂದ್ರ ಅವರ ಪ್ರಯತ್ನಕ್ಕೆ ಶುಭಕೋರಿದರು.

ಈಗಾಗಲೇ ಸಿನಿಮಾಗಳಿಗೆ ಛಾಯಾಗ್ರಾಹಕರಾಗಿ ಕೆಲಸ‌ಮಾಡುತ್ತಿರುವ ಅನಿಲ್ ಕುಮಾರ್ , ಆಲ್ವಿದಾ ಹಾಡಿಗೆ ಕ್ಯಾಮರಾ ಹಿಡಿದಿದ್ದಾರೆ. ಜತೆಗೆ ಸಂಕಲನವನ್ನೂ ಮಾಡಿದ್ದಾರೆ. ವಿನಯ್‌ ಚಂದ್ರ ಸ್ವತಃ ಸಂಗೀತದ ಜೊತೆಗೆ ಹಾಡಿಗೆ ಧ್ವನಿಯಾಗಿದ್ದಾರೆ. ಇನ್ನು, ಅಭಿಲಾಷ್ ಗುಪ್ತಾ ಸಾಹಿತ್ಯವಿದೆ.

Categories
ಸಿನಿ ಸುದ್ದಿ

ಹೀರೋ ಆಗಿ ಜಿಮ್ ರವಿ – ಅವರೀಗ ಪುರುಷೋತ್ತಮ

ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಎ.ವಿ.ರವಿ ಸಿನಿಮಾ ಮಾಡುತ್ತಿರುವುದು ಎಲ್ಲರಿಗೂ ಗೊತ್ತು. ಹಲವು ಸಿನಿಮಾಗಳಲ್ಲಿ ಪೋಷಕ ನಟರಾಗಿ‌ ಗುರುತಿಸಿಕೊಂಡಿದ್ದ ರವಿ ಅವರನ್ನು ಅಭಿಮಾನದಿಂದ ಜಿಮ್‌ರವಿ ಎಂದೇ ಕರೆಯುವುದುಂಟು. ರವಿ ಕನ್ನಡ ಸೇರಿದಂತೆ ದಕ್ಷಿಣ ಭಾರತದ ‌ಹಲವು ಸಿನಿಮಾಗಳಲ್ಲೂ ನಟಿಸಿದ್ದಾರೆ. ಈವರೆಗೆ 140ಕ್ಕೂ ಹೆಚ್ಚು ಚಿತ್ರಗಳಲ್ಲಿ ಪೋಷಕ ಪಾತ್ರದಲ್ಲಿ ನಟಿಸಿರುವ ಅವರು, ’ರವಿ ಜಿಮ್’ ತರಬೇತಿ ಶಾಲೆ ಶುರು ಮಾಡಿ ಕಳೆದ ಮೂರು ದಶಕಗಳಿಂದ ಸಾವಿರಾರು ವಿದ್ಯಾರ್ಥಿಗಳು ತರಬೇತಿ ಪಡೆದಿದ್ದಾರೆ.

ಈವರೆಗೆ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದ ರವಿ ಈಗ ಪೂರ್ಣ ಪ್ರಮಾಣದ ಹೀರೋ ಆಗಿದ್ದಾರೆ. ಹೌದು ರವಿ ಈಗ, ’ಪುರುಷೋತ್ತಮ’ ಚಿತ್ರಕ್ಕೆ ಮೊದಲ ಬಾರಿ ನಾಯಕನಾಗಿ ಅಭಿನಯಿಸಿದ್ದು, ರವಿಸ್ ಜಿಮ್ ಪ್ರೊಡಕ್ಷನ್ಸ್ ಮೂಲಕ ನಿರ್ಮಾಪಕರಾಗಿ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಪ್ರೇಮಿಗಳ ದಿನದಂದು ಅದ್ದೂರಿಯಾಗಿ ಚಿತ್ರದ ಮಹೂರ್ತ ನಡೆಯಿತು. ಕಲಾಸಾಮ್ರಾಟ್ ಎಸ್.ನಾರಾಯಣ್ ಕ್ಲಾಪ್ ಮಾಡಿ ಶುಭ ಹಾರೈಸಿದರು. ಜೈಜಗದೀಶ್, ವಿಜಯಲಕ್ಷೀಸಿಂಗ್, ತುರುವೆಕೆರೆ ಶಾಸಕ ಮಸಾಲೆಜಯರಾಂ ಮುಂತಾದವರು ಶುಭ ಹಾರೈಸಿದ್ದಾರೆ.
ಚಿತ್ರಕ್ಕೆ ಎಸ್.ವಿ.ಅಮರನಾಥ್ ನಿರ್ದೇಶಕರು. ಸಿನಿಮಾಗೆ ಚಿತ್ರಕಥೆ, ಸಂಭಾಷಣೆ ಜವಬ್ದಾರಿ ಕೂಡ ಅವರದೇ.

ತಮ್ಮ ಸಿನಿಮಾ ಕುರಿತು ಹೇಳಿಕೊಂಡ ನಿರ್ದೇಶ ಎಸ್.ವಿ.ಅಮರನಾಥ್‌, ರವಿ ಅವರನ್ನು ಈವರೆಗೆ ಕ್ರೀಡಾಪಟು, ಕಲಾವಿದರನ್ನಾಗಿ ನೋಡಿದ್ದೀರಾ. ಈಗ ಅವರಲ್ಲಿರುವ ಹೊಸ ಪ್ರತಿಭೆಯನ್ನು ಬೇರೆ ರೀತಿ ಪರದೆ ಮೇಲೆ ತೋರಿಸವ ಪ್ರಯತ್ನ ಇಲ್ಲಿ ಮಾಡಲಾಗುತ್ತಿದೆ. ಹಾಗಂತ ಇಲ್ಲಿ ಕ್ರೀಡೆ, ಆಕ್ಷನ್ ದೃಶ್ಯಗಳು ಇರುವುದಿಲ್ಲ. ಪೂರ್ಣ ಪ್ರಮಾಣದ ಹಾಸ್ಯದ ಎಳೆಯಲ್ಲೇ ಕಥೆ ಸಾಗುತ್ತದೆ. ಮಧ್ಯಮ ವರ್ಗದ ಕುಟುಂಬದವರು ಪ್ರತಿ ನಿತ್ಯ ಏನಾದರೂ ಸಮಸ್ಯೆ ಎದುರಿಸುತ್ತಲೇ ಇರುತ್ತಾರೆ. ಆ ರೀತಿಯ ದೊಡ್ಡ ಚಾಲೆಂಜ್ ಇವರ ಬದುಕಲ್ಲಿ ಬಂದಾಗ, ಅದನ್ನು ಹೇಗೆ ನಿಭಾಯಿಸುತ್ತಾರೆ. ಇಲ್ಲಿ ನಾಯಕ ದೇಹ ಶಕ್ತಿಯನ್ನು ಪ್ರದರ್ಶಿಸದೆ, ಕೇವಲ ಬುದ್ದಿ ಶಕ್ತಿಯಿಂದ ಹೇಗೆಲ್ಲಾ ಅವಘಡಗಳನ್ನು ಸರಿಪಡಿಸಿಕೊಳ್ಳುತ್ತಾನೆ ಎಂಬುದು ಚಿತ್ರದ ಸಾರಾಂಶ.

ಬೆಂಗಳೂರು, ಮೈಸೂರು ಸುತ್ತಮುತ್ತಲ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಯಲಿದೆ. ನಿರ್ಮಾಪಕರು ಕಥೆಗೆ ಏನೆಲ್ಲಾ ಬೇಕೋ ಅದೆಲ್ಲವನ್ನೂ ಇಲ್ಲಿ ವ್ಯವಸ್ಥೆಗೊಳಿಸಿದ್ದಾರೆ. ನಾಯಕಿ ಸೇರಿದಂತೆ ಇತರೆ ಆಯ್ಕೆ ಪ್ರಕ್ರಿಯೆ ಇಷ್ಟರಲ್ಲೇ ಆಗಬೇಕಿದೆ ಎನ್ನುತ್ತಾರೆ ಅವರು.
ಮೊದಲ ಸಲ ತೆರೆ ಮೇಲೆ ಹೀರೋ ಆಗಿ ಕಾಣಿಸಿಕೊಳ್ಳುತ್ತಿರುವ ರವಿ, ಡಾ.ರಾಜ್‌ಕುಮಾರ್ ಅಭಿಮಾನಿಯಾಗಿ, ಅಣ್ಣಾವ್ರು ಹೇಳಿದ ಒಂದು ಮಾತನ್ನು ಇಂದಿಗೂ ಉಳಿಸಿಕೊಂಡಿದ್ದೇನೆ. ನಾಯಕನಿಂದ ಒದೆ ತಿನ್ನಿಸಿಕೊಳ್ಳುತ್ತಿರುವ ದೃಶ್ಯಗಳನ್ನು ನೋಡಿತ್ತಿದ್ದ ಹಿತೈಷಿಗಳು, ನೀವು ಯಾವಾಗ ಹೀರೋ ಆಗೋದು ಅಂತ ಕೇಳುತ್ತಲೇ ಇದ್ದರು.

ಅದಕ್ಕೆ ಈಗ ಕಾಲ ಕೂಡಿಬಂದಿದೆ. ನಿರ್ದೇಶಕರು ಯಾವುದೇ ಪಾತ್ರ ಕೊಟ್ಟರೂ ಶ್ರದ್ಧೆಯಿಂದ ಮಾಡುತ್ತಿದ್ದೆ. ನಾನು ಹಣದ ಹಿಂದೆ ಯಾವತ್ತು ಹೋಗಿರಲಿಲ್ಲ. ಈ ಚಿತ್ರದ ಪಾತ್ರಕ್ಕಾಗಿ ಹದಿನೆಂಟು ಕೆ.ಜಿ ತೂಕ ಇಳಿಸಿಕೊಂಡಿದ್ದೇನೆ” ಎಂದು ಮನವಿ ಮಾಡಿಕೊಂಡರು. ಆನಂದ್‌ ಪ್ರಿಯಾ, ಪ್ರಮೋದ್‌ ಮರವಂತೆ ಸಾಹಿತ್ಯವಿದೆ. ಶ್ರೀಧರ್.ವಿ.ಸಂಭ್ರಮ್ ಸಂಗೀತವಿದೆ. ಅರ್ಜುನ್ ಕಿಟ್ಟು ಸಂಕಲನವಿದೆ. ಬೇಬಿ ಅಂಕಿತಮೂರ್ತಿ ಇತರರು ಇದ್ದರು.

Categories
ಸಿನಿ ಸುದ್ದಿ

ರಿತೇಷ್‌-ಜೆನಿಲಿಯಾ ದಂಪತಿಗೆ ಸುದೀಪ್‌ ಪಾರ್ಟಿ! ಮುಂಬೈಯಲ್ಲಿ ಕಿಚ್ಚ!

ಸಿನಿಮಾ ಬದುಕಿನ ಇಪ್ಪತ್ತೈದು ವರ್ಷ ಪೂರೈಸಿದ ಸಂಭ್ರಮದಲ್ಲಿರುವ ನಟ ಕಿಚ್ಚ ಸುದೀಪ್ ಇದೀಗ ಮುಂಬಯಿಯಲ್ಲಿದ್ದಾರೆ. ಹಿಂದಿ ಚಿತ್ರಗಳಲ್ಲಿ ಅಭಿನಯಿಸಿರುವ ಅವರಿಗೆ ಬಾಲಿವುಡ್‌ನಲ್ಲಿ ಹಲವು ಆಪ್ತ ಗೆಳೆಯರಿದ್ದಾರೆ. ಆಗಿಂದಾಗ್ಗೆ ಕಾಣಿಸುವ ಬಾಲಿವುಡ್ ನಟ-ನಟಿಯರೊಂದಿಗಿನ ಸುದೀಪ್ ಫೋಟೋಗಳು ಇದನ್ನು ಸಾರಿ ಹೇಳುತ್ತವೆ. ರಿತೇಷ್ ದೇಶ್‌ಮುಖ್ ಮತ್ತು ಜೆನಿಲಿಯಾ ತಾರಾದಂಪತಿಗೆ ನಿನ್ನೆ ಸುದೀಪ್‌ ಔತಣಕೂಟ ಏರ್ಪಡಿಸಿದ್ದಾರೆ. ನಟಿ ಜೆನಿಲಿಯಾ ಟ್ವಿಟರ್‌ನಲ್ಲಿ ಪಾರ್ಟಿ ಫೋಟೋಗಳನ್ನು ಹಂಚಿಕೊಂಡು ಸಂಭ್ರಮಿಸಿದ್ದಾರೆ.

“ನಾವು ಕಂಡ ಅಪರೂಪದ ವ್ಯಕ್ತಿತ್ವದ ಸುದೀಪ್‌ ಜೊತೆಗಿನ ಔತಣಕೂಟ ಸೂಪರ್ ಆಗಿತ್ತು. ನಾವು ಸಾಕಷ್ಟು ನೆನಪುಗಳನ್ನು ಮೆಲುಕು ಹಾಕಿದೆವು. ನಿಜಕ್ಕೂ ಸುದೀಪ್ ಪತ್ನಿ ಪ್ರಿಯಾ ಮತ್ತು ಪುತ್ರಿ ಸಾನ್ವಿಯನ್ನು ಮಿಸ್ ಮಾಡಿಕೊಂಡೆವು” ಎಂದು ಜೆನಿಲಿಯಾ ಫೊಟೋ ಹಾಕಿ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಸುದೀಪ್‌, “ನೀವಿಬ್ಬರೂ ಇದ್ದೆಡೆ ಸಾಕಷ್ಟು ಎನರ್ಜಿ ಇರುತ್ತದೆ. ಲವ್ ಯೂ!” ಎಂದು ಟ್ವೀಟಿಸಿದ್ದಾರೆ. ಸದ್ಯ ಸುದೀಪ್ ತಮ್ಮ ಮಹತ್ವಾಕಾಂಕ್ಷೆಯ ‘ವಿಕ್ರಾಂತ್ ರೋಣಾ’ ಚಿತ್ರದ ಪ್ರೊಮೋಷನ್ ಮೂಡ್‌ನಲ್ಲಿದ್ದಾರೆ. ಅನೂಪ್ ಭಂಡಾರಿ ನಿರ್ದೇಶನದ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಿರೂಪ್ ಭಂಡಾರಿ ಮತ್ತು ನೀತಾ ಅಶೋಕ್ ನಟಿಸಿದ್ದಾರೆ.

Categories
ಸಿನಿ ಸುದ್ದಿ ಸೌತ್‌ ಸೆನ್ಸೇಷನ್

ರಾಧೆ ಶ್ಯಾಮ್ ಟೀಸರ್ ಔಟ್ – ಅಭಿಮಾನಿಗಳಿಗೆ ಇದು ವ್ಯಾಲೆಂಟೇನ್ ಗಿಫ್ಟ್


ಪ್ರಭಾಸ್ ಮತ್ತು ಪೂಜಾ ಹೆಗ್ಡೆ ನಟನೆಯ ‘ರಾಧೆ ಶ್ಯಾಮ್’ ಟೀಸರ್ ಪ್ರೇಮಿಗಳ ದಿನವಾದ ಇಂದು ಬಿಡುಗಡೆಯಾಗಿದೆ. ರಾಧಾಕೃಷ್ಣ ಕುಮಾರ್ ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ರೊಮ್ಯಾಂಟಿಕ್ ಸಿನಿಮಾ ತೆಲುಗು ಮತ್ತು ಹಿಂದಿ ಎರಡೂ ಭಾಷೆಗಳಲ್ಲಿ ತಯಾರಾಗುತ್ತಿದೆ. ಕನ್ನಡ, ತಮಿಳು ಮತ್ತು ಮಲಯಾಳಂ ಡಬ್ಬಿಂಗ್ ಅವತರಣಿಕೆಗಳು ತೆರೆಕಾಣಲಿವೆ. ಸದ್ಯ ಈಗ ತೆಲುಗು ಟೀಸರ್ ಬಿಡುಗಡೆಯಾಗಿದ್ದು, ‘ಬಾಹುಬಲಿ’ಯ ಆಕ್ಷನ್ ಹೀರೋ ಪ್ರಭಾಸ್ ಇಲ್ಲಿ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದಾರೆ.

ತಾಜಾ ಅನುಭೂತಿ ನೀಡುವ ಹಿನ್ನೆಲೆ, ವಿದೇಶದ ಆಕರ್ಷಕ ರೈಲ್ವೆ ನಿಲ್ದಾಣವೊಂದರ ಸನ್ನಿವೇಶ ಟೀಸರ್ ನಲ್ಲಿದೆ. ನಾಯಕ ತುಂಟುತನದಿಂದ ಕೂಗುತ್ತಾ ನಾಯಕಿಯನ್ನು ಒಲೈಸುವ ಈ ಪುಟ್ಟ ಸೀನ್ ಇದೊಂದು ರೊಮ್ಯಾಂಟಿಕ್ ಸಿನಿಮಾ ಎನ್ನುವುದಕ್ಕೆ ಸಾಕ್ಷ್ಯ ನುಡಿಯುತ್ತದೆ. “ನೀನು ರೋಮಿಯೋ ಎಂದುಕೊಂಡಿದ್ದೀಯಾ?” ಎನ್ನುವ ನಾಯಕಿಯ ಪ್ರಶ್ನೆಗೆ ನಾಯಕ,

“ನಾನು ಅವನಂತೆ ಅಲ್ಲ. ಅವನು ಪ್ರೀತಿಗಾಗಿ ಸಾಯುತ್ತಾನೆ. ಆದರೆ ನಾನು ಹಾಗಲ್ಲ!” ಎನ್ನುತ್ತಾನೆ.
‘ರಾಧೆ ಶ್ಯಾಮ್’ ಚಿತ್ರದ ಶೂಟಿಂಗ್ ಕೋವಿಡ್‌ನಿಂದಾಗಿ ಕಳೆದ ಮಾರ್ಚ್‌ನಲ್ಲಿ ಸ್ಥಗಿತಗೊಂಡಿತ್ತು. ಡಿಸೆಂಬರ್‌ನಲ್ಲಿ ಮತ್ತೆ ಚಿತ್ರೀಕರಣ ಆರಂಭವಾಗಿ ಇನ್ನೇನು ಮುಗಿಯುವ ಹಂತದಲ್ಲಿದೆ.

ಚಿತ್ರದ ಇತರೆ ತಾರಾಬಳಗದಲ್ಲಿ ಸತ್ಯರಾಜ್, ಭಾಗ್ಯಶ್ರೀ, ಕುನಾಲ್ ರಾಯ್ ಕಪೂರ್, ಜಗಪತಿ ಬಾಬು, ಜಯರಾಂ ನಟಿಸುತ್ತಿದ್ದಾರೆ. ಸಿನಿಮಾ ಇದೇ ವರ್ಷ ತೆರೆಗೆ ಬರಲಿದೆ. ತೆಲುಗು ಅವತರಣಿಕೆಗೆ ಜಸ್ಟಿನ್ ಪ್ರಭಾಕರ್ ಸಂಗೀತ ಸಂಯೋಜಿಸಿದ್ದರೆ ಹಿಂದಿಗೆ ಮಿಥುನ್ ಮತ್ತು ಮನನ್ ಭಾರದ್ವಾಜ್ ಸಂಗೀತ ನೀಡಿದ್ದಾರೆ.

Categories
ಸೌತ್‌ ಸೆನ್ಸೇಷನ್

ಕೀರ್ತಿ ಸುರೇಶ್ – ಅನಿರುದ್ಧ್ ಮದುವೆ?

ತಮಿಳು, ತೆಲುಗು ಚಿತ್ರರಂಗದ ಖ್ಯಾತ ನಟಿ ಕೀರ್ತಿ ಸುರೇಶ್ ಅವರು ಸಂಗೀತ ಸಂಯೋಜಕ ಅನಿರುದ್ಧ್‌ ರವಿಚಂದ್ರನ್‌ ಅವರನ್ನು ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಇದೆ. ಇತ್ತೀಚೆಗೆ ಅವರು ಜೊತೆಯಾಗಿ ಹಲವೆಡೆ ಕಾಣಿಸಿಕೊಳ್ಳುತ್ತಿರುವುದು ವದಂತಿಗೆ ಪುಷ್ಠಿ ನೀಡಿದೆ. ಈ ಬಗ್ಗೆ ಸತ್ಯ ಹೇಳಿ ಎಂದು ಅವರ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಆಗ್ರಹಿಸಿದ್ದಾರೆ. ಆದರೆ ಇಲ್ಲಿಯವರೆಗೆ ಇಬ್ಬರಿಂದಲೂ ಸೂಕ್ತ ಪ್ರತಿಕ್ರಿಯೆ ಸಿಕ್ಕಿಲ್ಲ. ಅಲ್ಲದೇ ಅವರು ವದಂತಿಯನ್ನು ಅಲ್ಲಗಳೆಯುತ್ತಲೂ ಇಲ್ಲ.

ಸಂಗೀತ ಸಂಯೋಜಕ ಅನಿರುದ್ಧ್‌ ಮೊನ್ನೆಯವರೆಗೂ ಗಾಯಕಿ ಜೋನಿತಾ ಗಾಂಧಿ ಅವರೊಂದಿಗೆ ಓಡಾಡುತ್ತಿದ್ದರು. ಇದೀಗ ಜೋನಿತಾ ವಿವಾಹ ಫಿಕ್ಸ್ ಆಗಿದೆ ಎನ್ನಲಾಗಿದೆ. ಆನಂತರ ಅನಿರುದ್ಧ್ ಹೆಸರು ಕೀರ್ತಿ ಅವರ ಜೊತೆ ಥಳುಕುಹಾಕಿಕೊಂಡಿದ್ದು, ಇಬ್ಬರೂ ಜೊತೆಯಲ್ಲಿ ಓಡಾಡತೊಡಗಿದ್ದಾರೆ. ಇದೇ ವರ್ಷ ಕೊನೆಯಲ್ಲಿ ಮದುವೆ ಬಂಧನಕ್ಕೆ ಒಳಗಾಗಲಿದ್ದಾರೆ ಎನ್ನುವ ವದಂತಿ ಬಗ್ಗೆ ಅವರಿಂದಲೇ ಸ್ಪಷ್ಟನೆ ಸಿಗಬೇಕಿದೆ.

ಇನ್ನು ನಟಿ ಕೀರ್ತಿ ಸುರೇಶ್ ಅವರಿಗೆ ಸದ್ಯ ಕೈತುಂಬಾ ಸಿನಿಮಾಗಳಿವೆ. ಅಣ್ಣಾಥೆ, ಸಾನಿ ಕಾಯಿಧಮ್‌ ತಮಿಳು ಚಿತ್ರಗಳು ಹಾಗೂ ಗುಡ್‌ಲಕ್‌ ಸಖಿ, ರಂಗ್‌ ದೇ, ಸರ್ಕಾರು ವಾರಿ ಪಾಟ, ಐನ ಇಷ್ಟಂ ನೂವು ತೆಲುಗು ಚಿತ್ರಗಳನ್ನು ಅವರು ಒಪ್ಪಿಕೊಂಡಿದ್ದಾರೆ. ಎರಡು ಮಲಯಾಳಂ ಚಿತ್ರಗಳಿಗೂ ಸಹಿ ಹಾಕಿದ್ದಾರೆ. ಮತ್ತೊಂದೆಡೆ ‘ಮಾಸ್ಟರ್‌’ ತಮಿಳು ಚಿತ್ರದ ಭರ್ಜರಿ ಯಶಸ್ಸಿನ ನಂತರ ಅನಿರುದ್ಧ್‌ ನಾಲ್ಕು ದೊಡ್ಡ ತಮಿಳು ಚಿತ್ರಗಳ ಸಂಗೀತ ಸಂಯೋಜನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

Categories
ಟಾಲಿವುಡ್ ಸಿನಿ ಸುದ್ದಿ

ಎರಡನೇ ಮದ್ವೆಗೆ ಸಜ್ಜಾದ ದಿಯಾ!

ಬಾಲಿವುಡ್‌ ನಟಿ ದಿಯಾ ಮಿರ್ಝಾ ಎರಡು ವರ್ಷದ ಹಿಂದೆ ಸಾಹಿಲ್‌ ಸಾಂಘ ಅವರಿಂದ ವಿಚ್ಛೇದನ ಪಡೆದಿದ್ದರು. ಐದು ವರ್ಷಗಳ ಅವರ ದಾಂಪತ್ಯ ಬದುಕು ಕೊನೆಗೊಂಡಿತ್ತು. ಆನಂತರ ಅವರು ಉದ್ಯಮಿ ವೈಭವ್ ರೇಖಿ ಅವರೊಡನೆ ಕಾಣಿಸಿಕೊಂಡಿದ್ದರು. ಸುಮಾರು ಎರಡು ವರ್ಷಗಳ ಡೇಟಿಂಗ್‌ ನಂತರ ಇದೀಗ ಇಬ್ಬರೂ ವಿವಾಹವಾಗುತ್ತಿದ್ದಾರೆ. ದಿಯಾ ಮದುವೆ ವಿಷಯವನ್ನು ಬಹಿರಂಗಪಡಿಸಿಲ್ಲ.

ಫೆಬ್ರವರಿ 15ರಂದು ಅವರ ವಿವಾಹ ಎಂದು ನಿಗಧಿಯಾಗಿದ್ದು, ಕುಟುಂಬದವರು ಹಾಗೂ ಸ್ನೇಹಿತರಷ್ಟೇ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. “ಸಮಾರಂಭ ತೀರಾ ಸರಳವಾಗಿ ನಡೆಯಲಿದ್ದು, ಕುಟುಂಬದ ಆಪ್ತರಷ್ಟೇ ಇರುತ್ತಾರೆ” ಎಂದು ದಿಯಾ ಆಪ್ತರು ಹೇಳುತ್ತಿದ್ದಾರೆ.

ಕಳೆದ ವರ್ಷ ‘ಥಪ್ಪಡ್‌’ ಹಿಂದಿ ಚಿತ್ರದಲ್ಲಿ ನಟಿಸಿದ್ದ ದಿಯಾ ಸದ್ಯ ‘ವೈಲ್ಡ್ ಡಾಗ್‌’ ತೆಲುಗು ಥ್ರಿಲ್ಲರ್‌ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ನಾಗಾರ್ಜುನ, ಸಯ್ಯಾಮಿ ಖೇರ್ ಮತ್ತು ಅತುಲ್ ಕುಲಕರ್ಣಿ ಚಿತ್ರದ ಇತರೆ ಪ್ರಮುಖ ತಾರೆಯರು.

Categories
ಸಿನಿ ಸುದ್ದಿ

ಮಮತಾ ರಾವ್‌, ಗೌರಿಶಂಕರ್ ಲವ್‌ಸ್ಟೋರಿ! ಇದು ಪ್ರೇಮಿಗಳ ದಿನದ ವಿಶೇಷ

ಡಾ.ರಾಜ್ ಕುಮಾರ್‌, ಮಮತಾರಾವ್‌
  • ಭಗವಾನ್‌ (ದೊರೈ-ಭಗವಾನ್‌), ಹಿರಿಯ ಚಿತ್ರನಿರ್ದೇಶಕ

ಡಾ.ರಾಜಕುಮಾರ್‌, ಸರಿತಾ, ಮಮತಾ ರಾವ್ ಅಭಿನಯದ `ಹೊಸಬೆಳಕು’ (1982) ಶೂಟಿಂಗ್ ಸಂದರ್ಭ. ಈ ಚಿತ್ರಕ್ಕೆ ಬಿ.ಸಿ.ಗೌರಿಶಂಕರ್ ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿದ್ದರು. ದಿಲ್ಲಿಯ ಇಂಡಿಯಾ ಗೇಟ್ ಹಾಗೂ ಇತರೆಡೆ ಚಿತ್ರಿಸಬೇಕೆನ್ನುವುದು ನನ್ನ ಹಾಗೂ ದೊರೈ ಆಸೆಯಾಗಿತ್ತು. ಅದರಂತೆ ಕೆಲವು ದಿನ ದಿಲ್ಲಿಯಲ್ಲಿ ಬೀಡು ಬಿಟ್ಟಿದ್ದೆವು. ಕರೋಲ್‍ಭಾಗ್‍ನ ಕೈಲಾಶ್ ಹೋಟೆಲ್‍ನ ಲಾಡ್ಜ್‌ ನಲ್ಲಿ ನಮ್ಮೆಲ್ಲರ ವಾಸ.

ಮಮತಾರಾವ್‌, ಗೌರಿಶಂಕರ್‌, ರಕ್ಷಿತಾ

ಅದೊಂದು ದಿನ ಚಿತ್ರೀಕರಣ ಮುಗಿದ ನಂತರ ನಾವೆಲ್ಲರೂ ಲಾಡ್ಜ್‌ನಲ್ಲಿವಿಶ್ರಾಂತಿ ತೆಗೆದುಕೊಳ್ಳುತ್ತಿದ್ದೆವು. ಮರುದಿನದ ಚಿತ್ರೀಕರಣಕ್ಕಾಗಿ ಕಾಸ್ಟ್ಯೂಮ್ ಬಗ್ಗೆ ನಟಿ ಮಮತಾ ರಾವ್‍ಗೆ ಮಾಹಿತಿ ನೀಡಬೇಕಿತ್ತು. ಆಕೆಗೆ ತಿಳಿಸುವಂತೆ ಪ್ರೊಡಕ್ಷನ್ ಮ್ಯಾನೇಜರ್‍ಗೆ ಹೇಳಿ ಕಳುಹಿಸಿದೆ. ಆತ ಹೋಗಿ ನೋಡಿದರೆ ಮಮತಾ ರಾವ್ ರೂಂಗೆ ಬೀಗ ಹಾಕಿತ್ತು. ಚಿತ್ರದ ಬಗ್ಗೆ ಚರ್ಚಿಸಲು ನಾನು ಛಾಯಾಗ್ರಾಹಕ ಗೌರಿಶಂಕರ್‍ರನ್ನು ಹುಡುಕಿಕೊಂಡು ಹೋಗಿದ್ದೆ. ಅವರ ರೂಂಗೂ ಬೀಗ ಹಾಕಿತ್ತು. ರಾತ್ರಿಯಾದರೂ ಇಬ್ಬರೂ ಪತ್ತೆಯಿಲ್ಲ! ನಮಗೆ ಅನುಮಾನದ ಜತೆ ಆತಂಕವೂ ಆಗಿತ್ತು. ಕೊನೆಗೂ ಪ್ರತ್ಯಕ್ಷವಾದ ಇಬ್ಬರೂ ಅದೇನೋ ಸಬೂಬು ಹೇಳಿದರು.

ಭಗವಾನ್‌, ನಿರ್ದೇಶಕ

ಮರುದಿನವೂ ಇದು ಪುನರಾವರ್ತನೆಯಾಯ್ತು. ಅಂದು ರಾತ್ರಿ ಅವರು ಲಾ ಡ್ಜ್ ಗೆ ಬಂದಾಗ ತಡರಾತ್ರಿ. “ಕನ್ನಾಟ್ ಪ್ಲೇಸ್‍ನ ಪ್ರವಾಸಿ ತಾಣದ ವೀಕ್ಷಣೆಗೆಂದು ಹೋಗಿದ್ದೆವು. ಕರೋಲ್‍ಭಾಗ್‍ಗೆ ಬರಲು ಯಾವುದೇ ಗಾಡಿ ಸಿಗಲಿಲ್ಲ. ಇಬ್ಬರೂ ನಡೆದುಕೊಂಡೇ ಬರಬೇಕಾಯ್ತು. ಅದಕ್ಕೇ ಇಷ್ಟು ತಡವಾಗಿದೆ!” ಎನ್ನುವ ಕಾರಣ ಕೊಟ್ಟಿದ್ದರು ಗೌರಿಶಂಕರ್. ಕನ್ನಾಟ್ ಪ್ಲೇಸ್‍ನಿಂದ ಕರೋಲ್‍ಭಾಗ್‍ಗೆ ನಡೆದು ಬರುವುದೆಂದರೆ ತಮಾಷೆಯೇ? ಅಲ್ಲಿಗೆ ನಮಗೆಲ್ಲವೂ ಅರ್ಥವಾಗಿತ್ತು! ಮುಂದೆ ದಿಲ್ಲಿ ಶೂಟಿಂಗ್ ಮುಗಿಯುವವರೆಗೂ ಇವರಿಬ್ಬರ ಲವ್‍ಸ್ಟೋರಿ, ಓಪನ್ ಸೀಕ್ರೇಟ್ ಆಗೋಯ್ತು. “ಎಕ್ಸ್‍ಟ್ರಾ ಲೈಟ್‍ನಲ್ಲಿ ಮಮತಾ ರಾವ್ ಕ್ಲೋಸ್‍ಅಪ್ ಚೆನ್ನಾಗಿ ತೆಗಿಯಯ್ಯಾ” ಎಂದು ಗೌರಿಶಂಕರ್‌ ಅವರನ್ನು ಚುಡಾಯಿಸುತ್ತಿದ್ದೆವು.

ರಕ್ಷಿತಾ, ಪ್ರೇಮ್

ಬೆಂಗಳೂರಿಗೆ ಮರಳಿದ ನಂತರ ಗೌರಿಶಂಕರ್ – ಮಮತಾರಾವ್ ಮದುವೆಯಾದರು. ಇವರ ದಾಂಪತ್ಯಕ್ಕೆ ಜನಿಸಿದ ರಕ್ಷಿತಾ, ಕನ್ನಡ ಚಿತ್ರರಂಗದ ಜನಪ್ರಿಯ ನಟಿಯಾಗಿ ಮಿಂಚಿದ್ದು ಎಲ್ಲರಿಗೂ ಗೊತ್ತಿದೆ. ಅಮ್ಮ ಮಮತಾ ರಾವ್ ಛಾಯಾಗ್ರಾಹಕರನ್ನು ವರಿಸಿದರೆ, ರಕ್ಷಿತಾ ಮತ್ತೊಂದು ಹೆಜ್ಜೆ ಮುಂದೆ ಹೋಗಿ ನಿರ್ದೇಶಕನನ್ನೇ (ಪ್ರೇಮ್) ಪ್ರೀತಿಸಿ ಮದುವೆಯಾದರು!

(ನಿರೂಪಣೆ: ಶಚಿ)
ಫೋಟೋ ಕೃಪೆ: ಡಿ.ಸಿ.ನಾಗೇಶ್‌

Categories
ಸಿನಿ ಸುದ್ದಿ

ಚಿರು ಪಾತ್ರಕ್ಕೆ ಧ್ವನಿ ಕೊಟ್ಟ ಧ್ರುವ – ರಾಜಮಾರ್ತಾಂಡ ಚಿತ್ರಕ್ಕೆ ಡಬ್‌ ಮಾಡಿದ ಬಹದ್ದೂರ್‌

ಚಿರಂಜೀವಿ ಸರ್ಜಾ ಅಭಿನಯದ “ರಾಜ ಮಾರ್ತಾಂಡ” ಚಿತ್ರದ ಚಿತ್ರೀಕರಣ ಮುಗಿದಿದ್ದು ಎಲ್ಲರಿಗೂ ಗೊತ್ತೇ ಇದೆ. ಇನ್ನೇನು ಆ ಚಿತ್ರಕ್ಕೆ ಡಬ್ಬಿಂಗ್‌ ಮಾತ್ರ ಬಾಕಿ ಉಳಿದಿತ್ತು. ಅಷ್ಟರೊಳಗಾಗಿ ಚಿರು ಇಲ್ಲವಾದರು. ಒಂದಷ್ಟು ಕೆಲಸ ಉಳಿದಿದ್ದ “ರಾಜಮಾರ್ತಾಂಡ ” ಚಿತ್ರತಂಡಕ್ಕೆ ಆಗಲೇ ಧ್ರುವ ಸರ್ಜಾ ಅವರು, ನಾನು ಅಣ್ಣನ ಪಾತ್ರಕ್ಕೆ ಡಬ್ಬಿಂಗ್‌ ಮಾಡುವುದಾಗಿ ಹೇಳಿದ್ದರು.

ಅದರಂತೆ, ಧ್ರುವ ಸರ್ಜಾ ಅವರೀಗ “ರಾಜಮಾರ್ತಾಂಡ” ಚಿತ್ರದ ಚಿರಂಜೀವಿ ಸರ್ಜಾ ಅವರ ಪಾತ್ರಕ್ಕೆ ಫೆ.13ರಂದು ಚಿತ್ರದ ಟ್ರೇಲರ್‌ಗೆ ವಾಯ್ಸ್‌ ನೀಡಿದ್ದಾರೆ. ಟ್ರೇಲರ್‌ಗೆ ಮಾತು ಕೊಡುವಾಗಲೇ ಅವರು, ಎಮೋಷನಲ್‌ ಆಗಿ, ಒಂದು ಗಂಟೆ ಕಾಲ ಸಣ್ಣ ಟ್ರೇಲರ್‌ ಆಗಿದ್ದರೂ ಅವರು ಮಾತುಗಳನ್ನು ಹೊರಹಾಕದೆ, ಭಾವುಕರಾಗಿದ್ದರು. ಹಾಗಾಗಿ ಸ್ವಲ್ಪ ಸಮಯ ತೆಗೆದುಕೊಂಡಿದ್ದಾರೆ. ಈ ವೇಳೆ “ನಮ್ಮಣ್ಣ ನಮ್‌ ಜೊತೆ ಇರಬೇಕು. ಹಾಗಾಗಿ, ನನ್‌  ಸಿನಿಮಾ ಜೊತೆ ಟ್ರೇಲರ್‌ ಬರಬೇಕು ಎಂಬ ಆಸೆ ನನ್ನದು” ಎಂದಿದ್ದಾರೆ ಧ್ರುವ ಸರ್ಜಾ.  ಇನ್ನು, “ರಾಜ ಮಾರ್ತಾಂಡ” ಚಿತ್ರದ ಟ್ರೇಲರ್‌ ಕೂಡ ರೆಡಿಯಾಗುತ್ತಿದ್ದು,  ಅದು “ಪೊಗರು” ಚಿತ್ರದ ಜೊತೆಯಲ್ಲೇ ಬಿಡುಗಡೆಯಾಗುತ್ತಿದೆ ಎಂಬುದ ವಿಶೇಷ. ಸದ್ಯಕ್ಕೆ ಚಿರಂಜೀವಿ ಸರ್ಜಾ ಅವರ ಅಭಿಮಾನಿಗಳು ಫುಲ್‌ ಖುಷಿಯಲ್ಲಿದ್ದು, “ರಾಜ ಮಾರ್ತಾಂಡ” ಚಿತ್ರವನ್ನು ಎದುರು ನೋಡುತ್ತಿದ್ದಾರೆ. ಈ ಚಿತ್ರವನ್ನು ಕೆ.ರಾಮ್‌ನಾರಾಯಣ್‌ ನಿರ್ದೇಶನ ಮಾಡಿದ್ದಾರೆ.

error: Content is protected !!