Categories
ಸಿನಿ ಸುದ್ದಿ

ಟೈಂ ಟು ಡ್ಯಾನ್ಸ್‌ ಫಸ್ಟ್ ಲುಕ್‌ ರಿಲೀಸ್; ನಟಿ ಕತ್ರಿನಾ ಕೈಫ್‌ ಸಹೋದರಿ ಇಸಬೆಲ್ಲಾ‌ ಹೊಸ ಚಿತ್ರ


ಬಾಲಿವುಡ್ ನಟಿ ಕತ್ರಿನಾ ಕೈಫ್‌ ಕಿರಿಯ ಸಹೋದರಿ ಇಸಬೆಲ್ಲಾ ಕೈಫ್‌ ಬೆಳ್ಳಿತೆರೆಗೆ ಪದಾರ್ಪಣೆಗೆ ವೇದಿಕೆ ಸಜ್ಜಾಗಿದೆ. ರೂಪದರ್ಶಿಯಾಗಿದ್ದ ಅವರು ಸೂಕ್ತ ತರಬೇತಿಯೊಂದಿಗೆ ನಟಿಯಾಗುತ್ತಿದ್ದಾರೆ. ಅವರ ಚೊಚ್ಚಲ ಹಿಂದಿ ಸಿನಿಮಾ ‘ಟೈಂ ಟು ಡ್ಯಾನ್ಸ್‌’ ಫಸ್ಟ್ ಲುಕ್‌ ಬಿಡುಗಡೆಯಾಗಿದೆ. ಸೂರಜ್ ಪಾಂಚೋಲಿ ಚಿತ್ರದ ಹೀರೋ. ಸಿನಿಮಾ ಮಾರ್ಚ್‌ 12ರಂದು ತೆರೆಕಾಣಲಿದೆ ಎಂದು ಚಿತ್ರತಂಡ ಬಿಡುಗಡೆ ದಿನಾಂಕವನ್ನೂ ಘೋಷಿಸಿದೆ. ರಿಲೀಸ್ ಡೇಟ್ ಜೊತೆ ಪೋಸ್ಟರ್‌ಗಳೂ ಹೊರಬಿದ್ದಿದ್ದು, ಇದೊಂದು ಡ್ಯಾನ್ಸ್ ಸಿನಿಮಾ ಎನ್ನುವುದು ತಿಳಿದುಬರುತ್ತದೆ.

ಪೋಸ್ಟರ್‌ಗಳು ಹೇಳುವಂತೆ ಇಲ್ಲಿ ಇಸಬೆಲ್ಲಾ ಮತ್ತು ಸೂರಜ್‌ ಇಬ್ಬರೂ ಡ್ಯಾನ್ಸ್ ಸ್ಪರ್ಧಿಗಳಂತೆ ತೋರುತ್ತಾರೆ. ಹಿನ್ನೆಲೆಯಲ್ಲಿ ಪ್ರಶಸ್ತಿ ಫಲಕಗಳಿದ್ದು, ನಟ-ನಟಿ ನೃತ್ಯದ ಪೋಸು ಕೊಟ್ಟಿದ್ದಾರೆ. “ಬದುಕು ಪರೀಕ್ಷೆಗೊಳಪಟ್ಟಾಗ ನೃತ್ಯವೇ ಉತ್ತರ’ ಎನ್ನುವ ಒಕ್ಕಣಿಯೂ ಇದೆ.

ನಟಿ ಕತ್ರಿಕಾ ಕೈಫ್ ಕಳೆದ ವರ್ಷ ತಮ್ಮ ಸಹೋದರಿ ಇಸಬೆಲ್ಲಾರ ಸಿನಿಮಾ ‘ಕ್ವಾಥಾ’ ಕುರಿತು ಸೋಷಿಯಲ್ ಮಿಡಿಯಾದಲ್ಲಿ ಬರೆದಿದ್ದರು. ಆದರೆ ಈ ಸಿನಿಮಾ ಸ್ಥಗಿತಗೊಂಡಿತು. ಇದೀಗ ಅವರು ‘ಟೈಂ ಟು ಡ್ಯಾನ್ಸ್‌’ ಚಿತ್ರದೊಂದಿಗೆ ಬಾಲಿವುಡ್‌ ಪ್ರವೇಶಿಸುತ್ತಿದ್ದಾರೆ.

Categories
ಟಾಲಿವುಡ್

ಸೀಟಿಮಾರ್‌ ಟೀಸರ್ ರಿಲೀಸ್‌ – ಮೊದಲ ಬಾರಿ ತೆರೆಮೇಲೆ ಗೋಪಿಚಂದ್‌-ತಮನ್ನಾ


ಸಂಪತ್‌ನಂದಿ ನಿರ್ದೇಶನದ ‘ಸೀಟಿಮಾರ್’ ತೆಲುಗು ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಗೋಪಿಚಂದ್‌ ಮತ್ತು ತಮನ್ನಾ ಮೊದಲ ಬಾರಿ ಜೊತೆಯಾಗಿ ನಟಿಸಿರುವ ಚಿತ್ರವಿದು. ಏಪ್ರಿಲ್‌ 2ಕ್ಕೆ ಸಿನಿಮಾ ಬಿಡುಗಡೆಯಾಗಲಿದ್ದು, ಕಬಡ್ಡಿ ಹಿನ್ನೆಲೆಯಲ್ಲಿ ಸಖತ್ ಆಕ್ಷನ್‌-ಡ್ರಾಮಾ ಇರುವುದನ್ನು ‘ಸೀಟಿಮಾರ್‌’ ಟೀಸರ್ ಸಾರಿ ಹೇಳುತ್ತಿದೆ. ಚಿತ್ರದಲ್ಲಿ ಗೋಪಿಚಂದ್‌ ಮತ್ತು ತಮನ್ನಾ ಕಬಡ್ಡಿ ಕೋಚ್‌ಗಳು!

ಗೋಪಿಚಂದ್‌ ಆಂಧ್ರ ಕಬಡ್ಡಿ ತಂಡದ ಕೋಚ್ ಆದರೆ ತಮನ್ನಾ ತೆಲಂಗಾಣ ತಂಡದ ಕೋಚ್‌. ಟೀಸರ್‌ನಲ್ಲಿ ತಮನ್ನಾಗೆ ಹೆಚ್ಚು ಸ್ಪೇಸ್‌ ಇದ್ದಂತಿಲ್ಲ. ಡೈಲಾಗ್ ಕೂಡ ಇಲ್ಲವಾದ್ದರಿಂದ ತೆರೆ ಮೇಲಿನ ಗೋಪಿಚಂದ್‌-ತಮನ್ನಾ ಕೆಮಿಸ್ಟ್ರಿ ಹೇಗಿರಬಹುದು ಎನ್ನುವ ಕುತೂಹಲ ಅಭಿಮಾನಿಗಳದ್ದು. ಚಿತ್ರತಂಡದ ಮೂಲಗಳು ಹೇಳುವಂತೆ ಚಿತ್ರದಲ್ಲಿ ತಮನ್ನಾ ತೆಲಂಗಾಣ ಶೈಲಿ ತೆಲುಗು ಮಾತನಾಡುತ್ತಾರಂತೆ. ಪ್ರೇಕ್ಷಕರಿಗೆ ಚಿತ್ರಮಂದಿರದಲ್ಲೇ ಈ ಸಸ್ಪ್ರೈಸ್‌ ಸಿಗಲಿ ಎನ್ನುವುದು ನಿರ್ದೇಶಕರ ನಿಲುವು ಎನ್ನಲಾಗಿದೆ.

ನಿರ್ದೇಶಕ ಸಂಪತ್ ನಂದಿ ಅವರ ಜೊತೆ ಗೋಪಿಚಂದ್‌ ಅವರಿಗೆ ಇದು ಎರಡನೇ ಸಿನಿಮಾ. ‘ಸೀಟಿಮಾರ್‌’ ಟೀಸರ್‌ನಲ್ಲಿ ಗೋಪಿಚಂದ್‌ ಪಾತ್ರವನ್ನು ಮ್ಯಾಕೋ ಕಬಡ್ಡಿ ಕೋಚ್‌ ಎನ್ನುವಂತೆ ತೋರಿಸಲಾಗಿದೆ. ರಾವ್ ರಮೇಶ್ ಮತ್ತು ತರುಣ್ ಅರೋರಾ ಮುಖ್ಯಪಾತ್ರಗಳಲ್ಲಿ ಕಾಣಿಸುತ್ತಾರೆ. ದಿಗಂಗನ ಸೂರ್ಯವಂಶಿ ಮತ್ತು ನಟಿ ಭೂಮಿಕಾ ಚಾವ್ಲಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮಣಿಶರ್ಮ ಸಂಗೀತ ಸಂಯೋಜನೆ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ಕನ್ನಡ ಕಿರುತೆರೆಯಲ್ಲಿ ರಮ್ಯಕೃಷ್ಣ ‘ನಾಗಭೈರವಿ’ ಫ್ಯಾಂಟಸಿ ಸರಣಿಯಲ್ಲಿ ಶಿವಗಾಮಿ!

 ರಮ್ಯಕೃಷ್ಣ ದಕ್ಷಿಣ ಭಾರತದ ಜನಪ್ರಿಯ ನಟಿ. ತೊಂಬತ್ತರ ದಶಕದಲ್ಲಿ ನಾಯಕಿಯಾಗಿ ಮಿಂಚಿದ ಅವರು ಇದೀಗ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಬಾಹುಬಲಿ’ ಚಿತ್ರದ ಶಿವಗಾಮಿ ಪಾತ್ರ ಅವರಿಗೆ ದೊಡ್ಡ ಮನ್ನಣೆ ತಂದುಕೊಟ್ಟಿತ್ತು. ಸಿನಿಮಾ ಜೊತೆಜೊತೆಗೆ ಕಿರುತೆರೆಯಲ್ಲೂ ಸಕ್ರಿಯರಾಗಿರುವ ನಟಿ ಇದೀಗ ಕನ್ನಡ ಕಿರುತೆರೆ ಪ್ರವೇಶಿಸುತ್ತಿದ್ದಾರೆ. ‘ನಾಗಭೈರವಿ’ ತೆಲುಗು ಸರಣಿಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಈ ಧಾರಾವಾಹಿಯ ಕನ್ನಡ ಅವತರಣಿಕೆ ಜೀ ಕನ್ನಡ ವಾಹಿನಿಯಲ್ಲಿ ಮೂಡಿಬರಲಿದೆ.

ಕಳೆದ ವರ್ಷಾಂತ್ಯದಲ್ಲಿ ತೆಲುಗಿನಲ್ಲಿ ಪ್ರಸಾರವಾದ ‘ನಾಗಭೈರವಿ’ ಇದೀಗ ಕನ್ನಡಕ್ಕೆ ಬರುತ್ತಿದೆ. ವರನಾಂಜನೇಯುಲು ನಿರ್ದೇಶನದ ಈ ಸರಣಿ ತೆಲುಗು ನಾಡಿನಲ್ಲಿ ಜನಪ್ರಿಯವಾಗಿದೆ. ಇದೀಗ ಮಾರ್ಚ್‌ 1ರಿಂದ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಇದು ಫ್ಯಾಂಟಸಿ, ಸಸ್ಪೆನ್ಸ್‌ ಸರಣಿ. ಅದ್ಧೂರಿ ಮೇಕಿಂಗ್‌, ಆಕರ್ಷಕ ವಿಶ್ಯುಯಲ್‌ ಎಫೆಕ್ಟ್‌ ಇಲ್ಲಿನ ಹೈಲೈಟ್‌. ದೇಶದಲ್ಲಿ ನಾಗದೇವತೆ ಕುರಿತ ನಂಬಿಕೆ ಸುತ್ತಮುತ್ತ ಕತೆ ಹೆಣೆಯಲಾಗಿದೆ. ಪ್ರಾಚೀನ ಆರೋಗ್ಯ ಗ್ರಂಥ ಚರಕ ಸಂಹಿತಾ ಕುರಿತೂ ಇಲ್ಲಿ ಪ್ರಸ್ತಾಪವಾಗಲಿದೆ.

ನಟಿ ರಮ್ಯಾ ಕೃಷ್ಣ ಅವರು ಕನ್ನಡಿಗರಿಗೆ ಚಿರಪರಿಚಿತ ನಟಿ. ಎಂಬತ್ತರ ದಶಕದ ಕೊನೆಯಲ್ಲಿ ತೆರೆಕಂಡ ‘ಕೃಷ್ಣರುಕ್ಮಿಣಿ’ ಚಿತ್ರದೊಂದಿಗೆ ಕನ್ನಡ ಬೆಳ್ಳಿತೆರೆ ಪ್ರವೇಶಿಸಿದ ಅವರು ಗಡಿಬಿಡಿ ಗಂಡ, ಮಾಂಗಲ್ಯಂ ತಂತು ನಾನೇನಾ, ಸ್ನೇಹ, ಏಕಾಂಗಿ, ಬಾ ಬಾರೋ ರಸಿಕ, ರಕ್ತಕಣ್ಣೀರು, ರಾಜಾ ನರಸಿಂಹ, ಮಾಣಿಕ್ಯ, ಅಂಜನೀಪುತ್ರ ಸೇರಿದಂತೆ ಹಲವಾರು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಶಿವಗಾಮಿ’ ಸಿನಿಮಾ ತೆರೆಗೆ ಸಿದ್ಧವಾಗುತ್ತಿದೆ.

Categories
ಸಿನಿ ಸುದ್ದಿ

ದಿನಕರ್ ನಿರ್ದೇಶನದಲ್ಲಿ ಪುನೀತ್‌!? ಅಪ್ಪು ಜೊತೆ ಒಂದ್ ಸೆಲ್ಫಿಗೆ ರೆಡಿನಾ ದಚ್ಚು ಬ್ರದರ್?

ದಿನಕರ್ ತೂಗುದೀಪ ನಿರ್ದೇಶನದಲ್ಲಿ ಪುನೀತ್‌ ರಾಜಕುಮಾರ್ ನಟಿಸುತ್ತಾರೆ ಎನ್ನುವುದು ಹಳೆಯ ವದಂತಿಗೆ ರೆಕ್ಕೆ-ಪುಕ್ಕ ಮೂಡಿದೆ. ಗಾಂಧಿನಗರದ ಮೂಲಗಳ ಪ್ರಕಾರ ಪುನೀತ್‌ಗೆ ದಿನಕರ್ ಚಿತ್ರಕಥೆ ಹೆಣೆಯುತ್ತಿರುವುದು ಹೌದು! ‘ಲೈಫ್ ಜೊತೆ ಒಂದ್ ಸೆಲ್ಫಿ’ ಸಿನಿಮಾ ನಂತರ ದಿನಕರ್ ಅವರು ಪುನೀತ್‌ಗಾಗಿ ಸ್ಕ್ರಿಪ್ಟ್ ಮಾಡುತ್ತಿದ್ದರು ಎನ್ನಲಾಗಿದೆ. ‘ಜೊತೆ ಜೊತೆಯಲಿ’ ಹಿಟ್ ಚಿತ್ರದೊಂದಿಗೆ ನಿರ್ದೇಶಕನಾಗಿ ಗುರುತಿಸಿಕೊಂಡ ದಿನಕರ್‌ ತಮ್ಮ ಸಹೋದರ ದರ್ಶನ್‌ಗೆ ಮಾಡಿದ ‘ಸಾರಥಿ’ ಸೂಪರ್‌ಹಿಟ್ ಆಗಿತ್ತು. ‘ನವಗ್ರಹ’ ಅವರ ಮತ್ತೊಂದು ಯಶಸ್ವೀ ಸಿನಿಮಾ.

ಮುಂದೆ ದಿನಕರ್‌ ಸಾಕಷ್ಟು ಸಮಯದ ನಂತರ ‘ಲೈಫ್ ಜೊತೆ ಒಂದ್ ಸೆಲ್ಫಿ’ ನಿರ್ದೇಶಿಸಿದ್ದರು. ಪ್ರಜ್ವಲ್‌, ಪ್ರೇಮ್‌ ನಟಿಸಿದ್ದ ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ವಿಫಲವಾಯ್ತು. ಇದೀಗ ದಿನಕರ್‌ ಗೆಲುವಿನ ನಿರೀಕ್ಷೆಯಲ್ಲಿದ್ದು, ಪುನೀತ್‌ ಜೊತೆಗಿನ ಪ್ರಾಜೆಕ್ಟ್‌ ಬಗ್ಗೆ ಕೆಲಸ ಮಾಡುತ್ತಿದ್ದಾರೆ.

ಸದ್ಯ ಪುನೀತ್‌ ‘ಜೇಮ್ಸ್‌’ ಚಿತ್ರೀಕರಣದಲ್ಲಿದ್ದಾರೆ. ಸಂತೋಷ್ ಆನಂದ್‌ರಾಮ್‌ ನಿರ್ದೇಶನದಲ್ಲಿ ಅವರು ನಟಿಸಿರುವ ‘ಯುವರತ್ನ’ ತೆರೆಕಾಣಬೇಕಿದೆ. ಇದಾದ ನಂತರವೂ ಹೊಂಬಾಳೆ ಬ್ಯಾನರ್‌ಗೆ ಅವರು ಮತ್ತೊಂದು ಸಿನಿಮಾ ಮಾಡಲಿದ್ದಾರೆ ಎನ್ನಲಾಗಿದ್ದು, ಆನಂತರ ದಿನಕರ್ ಸಿನಿಮಾ ಸೆಟ್ಟೇರಬಹುದು.

Categories
ಸಿನಿ ಸುದ್ದಿ

ಒನ್‌ ಶಾಟ್‌ ಮೂವಿ ರಕ್ತಗುಲಾಬಿ ಟೀಸರ್ ಬಂತು – ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ ಸೇರಿದ ಚಿತ್ರ

ಕನ್ನಡಕ್ಕೆ ದಿನ ಕಳೆದಂತೆ ಹೊಸಬರು ಎಂಟ್ರಿಯಾಗುತ್ತಿದ್ದಾರೆ. ಆ ಸಾಲಿಗೆ “ರಕ್ತ ಗುಲಾಬಿ” ಸಿನಿಮಾವೂ ಸೇರಿದೆ. ಹೊಸಬರ ಸಿನಿಮಾ ಇದಾಗಿದ್ದರೂ, ಈ ಚಿತ್ರದಲ್ಲಿ ಅನೇಕ ವಿಶೇಷತೆಗಳಿವೆ. ಹೌದು, ಇದು ಒನ್‌ ಟೇಕ್‌ ಸಿನಿಮಾ. ಅಷ್ಟೇ ಅಲ್ಲ, ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ಗೂ ಸೇರಿದೆ. ಅಷ್ಟೇ ಅಲ್ಲ, ಗಿನ್ನಿಸ್‌ ದಾಖಲೆಗೂ ತಯಾರಾಗಿದೆ. ಅಂದಹಾಗೆ, ಈಗಾಗಲೇ ಬಿಡುಗಡೆಗೆ ಸಜ್ಜಾಗಿದ್ದು, ಮಾರ್ಚ್‌ ೩ರಂದು ಸಿನಿಮಾ ಬಿಡುಗಡೆಯಾಗುತ್ತಿದೆ.

ಈ ಚಿತ್ರದ ಸ್ಪೆಷಲ್‌ ಅಂದರೆ, ಎಲ್ಲರೂ ಇಲ್ಲಿ ಹೊಸಬರೇ. ನಿರ್ದೇಶಕ, ನಿರ್ಮಾಪಕ, ಕಲಾವಿದರು, ತಾಂತ್ರಿಕ ವರ್ಗ ಹೀಗೆ ಪ್ರತಿಯೊಬ್ಬರಿಗೂ ಇದು ಹೊಸತು. ಈ ಚಿತ್ರದ ಮೂಲಕ ರಾಬಿ ನಿರ್ದೇಶಕರಾಗಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಜವಾಬ್ದಾರಿಯೂ ಇವರದೇ. ಮಿಷನ್‌ ಕಾಡ್‌ ಫಿಲಂಸ್‌ ಮೂಲಕ ಈ ಚಿತ್ರ ತಯಾರಾಗಿದ್ದು, ಸದ್ಯ ಬಿಡುಗಡೆಯನ್ನು ಎದುರು ನೋಡುತ್ತಿದೆ.


ತಮ್ಮ ಸಿನಿಮಾ ಕುರಿತು ಹೇಳಿಕೊಂಡು ನಿರ್ದೇಶಕ ರಾಬಿ, “ಈ ಸಿನಿಮಾ ಶುರುವಾಗಿದ್ದೇ ಒಂದು ರೋಚಕ. ಒನ್‌ ಟೇಕ್‌ ಸಿನಿಮಾ ಅಂದರೆ ಸುಲಭವಲ್ಲ. ಇದಕ್ಕೆ ಸಾಕಷ್ಟು ತಯಾರಿ ಮಾಡಿಕೊಂಡೇ ಕೆಲಸಕ್ಕಿಳಿದೆವು. ಸಿನಿಮಾಗೂ ಮುನ್ನ, ಮೂರ್ನಾಲ್ಕು ದಿನಗಳ ಕಾಲ ಅಭ್ಯಾಸ ನಡೆಸಿದ ನಂತರವೇ ಅಂತಿಮವಾಗಿ ಚಿತ್ರೀಕರಣ ಮಾಡಿದ್ದೇವೆ. ಇಲ್ಲಿ ಕಮರ್ಷಿಯಲ್‌ ಅಂಶಗಳೂ ಇವೆ. ಸಿನಿಮಾ ಕಥೆ ಬಗ್ಗೆ ಹೇಳುವುದಾದರೆ, “ಸಾಮಾಜಿಕ ವ್ಯವಸ್ಥೆಯಿಂದ ಮನ ನೊಂದ ಯುವಕನೊಬ್ಬ ತನಗಾದ ಅನ್ಯಾಯದ ವಿರುದ್ಧ ಸೇಡು ತೀರಿಸಿಕೊಳ್ಳಲು ಮತ್ತೊಂದು ವ್ಯವಸ್ಥೆಯತ್ತ ಮುಖ ಮಾಡುತ್ತಾನೆ. ಇದರ ನಡುವೆ ಸಣ್ಣ ಪ್ರೀತಿಯೊಂದು ಅರಳುತ್ತದೆ. ತನ್ನ ಪ್ರiತಿ ಉಳಿಸಿಕೊಳ್ಳೋಕೆ, ಅವನು ಬೇರೆ ಕಡೆ ಪಯಣ ಬೆಳೆಸಲು ಹೊಡುತ್ತಾನೆ. ಈ ವೇಳೆ ಅವನಿಗೆ ಎದುರಾಗುವ ಸಮಸ್ಯೆಗಳು ಏನು? ಎಂಬುದು ಒನ್‌ಲೈನ್.‌ ಇದು ಸಂಪೂರ್ಣ ಸಕಲೇಶಪುರ ಸಮೀಪದ ಕಾಡಿನ ಸುತ್ತಮುತ್ತ ನಡೆದಿದೆ.

ಸುಮಾರು ಹತ್ತು ಕಿಲೋ ಮೀಟರ್‌ ಸುತ್ತಮುತ್ತ ಒನ್‌ ಟೇಕ್‌ನಲ್ಲೇ ಸಿನಿಮಾ ಮಾಡಲಾಗಿದೆ. ಇಲ್ಲಿ ಕಮರ್ಷಿಯಲ್ ಅಂಶಗಳೂ ಇವೆ. ಇನ್ನು, ಚಿತ್ರಕ್ಕೆ ವಿಕ್ರಮಾದಿತ್ಯ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಇದೊಂದು ಕ್ರೈಂ ಥ್ರಿಲ್ಲರ್ ಜಾನರ್‌ ಸಿನಿಮಾ. ಚಿತ್ರದ ಅಂತ್ಯದಲ್ಲಿ ನಾಯಕಿಯ ಪಾತ್ರದಲ್ಲಿ ಸಾಕಷ್ಟು ಬದಲಾವಣೆಗಳಿವೆ. ಅದನ್ನು ಸಿನಿಮಾದಲ್ಲೇ ನೋಡಬೇಕುʼ ಎಂಬುದು ನಿರ್ದೇಶಕರ ಮಾತು.


ಒನ್‌ ಟೇಕ್‌ ಸಿನಿಮಾ ಆಗಿದ್ದರಿಂದ ಇಲ್ಲಿ ಮೊದಲೇ ಪ್ಲಾನ್‌ ಮಾಡಿಕೊಂಡಿದ್ದೆವು. ಇಲ್ಲಿ ಸುಮಾರು ೪೫ ಜನರ ತಂಡ ಕೆಲಸ ಮಾಡಿದೆ. ತೆರೆಯ ಮೇಲೆ ಹದಿನೈದು ಕಲಾವಿದರು ನಟಿಸಿದ್ದಾರೆ. ಅವರೆಲ್ಲರೂ ಬಲು ತೂಕದ ಗನ್, ಬ್ಯಾಗ್‌ಗಳನ್ನು ಹೊತ್ತುಕೊಂಡು ಓಡೋಡಿ ಹೋಗೋವುದು ಕಷ್ಟಕರವಾಗಿತ್ತು. ಎಲ್ಲರಿಗೂ ಕೂಡ ಈ ಚಿತ್ರ ಚಾಲೆಂಜಿಂಗ್‌ ಆಗಿತ್ತು ಎನ್ನುತ್ತಾರೆ ರಾಬಿ.

ಇಂಡಿಯಾ ಬುಕ್‌ ಆಫ್ ರೆಕಾರ್ಡ್‌
ಈ ಸಿನಿಮಾ ಹಲವು ದಾಖಲೆಗೆ ಕಾರಣವಾಗುತ್ತಿದೆ. ಈಗಾಗಲೇ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ಗೆ ದಾಖಲಾಗಿದೆ. ಇನ್ನುಳಿದಂತೆ ಏಷ್ಯಾ ಬುಕ್‌ ಆಫ್‌ ರೆಕಾರ್ಡ್ಸ್‌ ಹಾಗೂ ಗಿನ್ನಿಸ್‌ ದಾಖಲೆಗೂ ನೋಂದಣಿಯಾಗಿದೆ ಎಂಬುದು ವಿಶೇಷ. ಒನ್‌ ಟೇಕ್‌ ಸಿನಿಮಾ ಮಾಡಿದ ಬಳಿಕ ಯಾಕೆ ಈ ಚಿತ್ರವನ್ನು ದಾಖಲು ಮಾಡಬಾರದು ಎಂಬ ಪ್ರಶ್ನೆ ಎದುರಾದ ಬಳಿಕ ನಿರ್ದೇಶಕರು ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ಗೆ ಕಳುಹಿಸಿದ್ದಾರೆ.

ಎಲ್ಲಾ ದಾಖಲೆ ಪರಿಶೀಲಿಸಿದ ಬಳಿಕ ಅಲ್ಲಿಂದ ಗ್ರೀನ್‌ ಸಿಗ್ನಲ್‌ ಸಿಕ್ಕೆ ಎನ್ನುವ ತಂಡ ಇದೊಂದು, ಕ್ರೌರ್ಯದ ಜೊತೆ ಪ್ರೀತಿಯ ಅಂಶಗಳನ್ನು ಹೊಂದಿದೆ. ನಾಯಕ ವಿಕ್ರಮಾದಿತ್ಯ ಅವರಿಗೆ ಇದೊಂದು ಒಳ್ಳೆಯ ಅವಕಾಶ. ನಮ್ಮಂತಹ ಕಿರಿಯರಿಗೆ, ರಂಗಭೂಮಿ ಕಲಾವಿದರನ್ನ ಗುರುತಿಸಿ ಆಯ್ಕೆ ಮಾಡಿರುವುದು ಖುಷಿ ತಂದಿದೆ ಎಂಬುದು ಅವರ ಮಾತು. ಇನ್ನು, ನಾಯಕಿ ಶಿವಾನಿ ಕೂಡ ತಮ್ಮ ಪಾತ್ರದ ಕುರಿತು ಹೇಳಿಕೊಂಡು ಖುಷಿಗೊಳ್ಳುತ್ತಾರೆ. ನಿರ್ಮಾಪಕ ಲೋಹಿತ್ ತಮ್ಮ ಸಿನಿಮಾ ಅನುಭವ ಹಂಚಿಕೊಂಡರು. ಪ್ರಜೋತ್‌ ಡೇಸಾ ಅವರ ಸಂಗೀತವಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಚಿತ್ರದಲ್ಲಿ ಮಾಣಿಕ್ಯ.ಜಿ.ಎನ್, ವಿನೋಧ್‌ಕುಮಾರ್ ಇತರರು ಇದ್ದಾರೆ.

Categories
ಟಾಲಿವುಡ್

ನಟಿ ಚಾರ್ಮಿ – ವಿಜಯ್‌ ದೇವರಕೊಂಡ ಜಾಲಿ ರೈಡ್‌! ಲೈಗರ್‌ ಶೂಟಿಂಗ್‌ನಲ್ಲಿ ಮಸ್ತ್‌ ಮಜಾ!!


ವಿಜಯ್ ದೇವರಕೊಂಡ ನಟಿಸುತ್ತಿರುವ ಹಿಂದಿ ಮತ್ತು ತೆಲುಗು ದ್ವಿಭಾಷಾ ‘ಲೈಗರ್‌’ ಚಿತ್ರಕ್ಕೆ ಸದ್ಯ ಮುಂಬಯಿಯಲ್ಲಿ ಚಿತ್ರೀಕರಣ ನಡೆಯುತ್ತಿದೆ. ಪುರಿ ಜಗನ್ನಾಥ್ ನಿರ್ದೇಶನದ ಈ ಚಿತ್ರದ ನಾಯಕಿ ಅನನ್ಯಾ ಪಾಂಡೆ. ದಕ್ಷಿಣ ಭಾರತದ ಖ್ಯಾತ ನಟಿ ಚಾರ್ಮಿ ಅವರು ಈ ಚಿತ್ರದ ನಿರ್ಮಾಪಕರಲ್ಲೊಬ್ಬರು ಎನ್ನುವುದು ವಿಶೇಷ. ಕರಣ್‌ಜೋಹರ್‌ ಮತ್ತು ಪುರಿ ಜಗನ್ನಾಥ್ ಕೂಡ ಚಿತ್ರದ ಸಹನಿರ್ಮಾಪಕರು. ನಟಿ ಚಾರ್ಮಿ ಚಿತ್ರೀಕರಣದುದ್ದಕ್ಕೂ ಸಿನಿಮಾ ತಂಡದೊಂದಿಗೆ ಇದ್ದಾರೆ. ಆಗಿಂದಾಗ್ಗೆ ಅಲ್ಲಿನ ಫೋಟೋಗಳನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಾಕುತ್ತಾ ಸಿನಿಮಾ ಕುರಿತಂತೆ ಸುದ್ದಿಗಳನ್ನು ಅಪ್‌ಡೇಟ್ ಮಾಡುತ್ತಾ ಇರುತ್ತಾರೆ.

ನಟಿ ಚಾರ್ಮಿ ತಮ್ಮ ಟ್ವಿಟರ್‌ನಲ್ಲಿ ಹಾಕಿರುವ ಎರಡು ಫೋಟೋಗಳು ಈಗ ಅಭಿಮಾನಿಗಳ ಗಮನ ಸೆಳೆಯುತ್ತಿವೆ. ‘ಲೈಗರ್‌’ ಚಿತ್ರೀಕರಣದ ಬಿಡುವಿನ ಸಂದರ್ಭದಲ್ಲಿ ಚಾರ್ಮಿ ಸ್ಕೂಟರ್ ರೈಡ್ ಮಾಡಿದ್ದಾರೆ. ಹಿಂದೆ ನಟ ವಿಜಯ್ ದೇವರಕೊಂಡ ಅವರು ಕುಳಿತಿರುವುದು ವಿಶೇ‍‍ಷ! “ನಾನು ಸ್ಕೂಟರ್ ಓಡುಸುತ್ತಿದ್ದರೆ, ನನ್ನ ಮೇಲೆ ವಿಶ್ವಾಸವಿಟ್ಟು ವಿಜಯ್ ಕುಳಿತಿದ್ದಾರೆ. ಹೀಗೆ, ಮುಂಬಯಿಯಲ್ಲಿ ನಮ್ಮದೊಂದು ಜಾಲಿ ರೈಡ್‌” ಎಂದಿದ್ದಾರೆ ಚಾರ್ಮಿ. ‘ಲೈಗರ್‌’ ದೊಡ್ಡ ಬಜೆಟ್‌ನಲ್ಲಿ ತಯಾರಾಗುತ್ತಿದ್ದು, ವಿಜಯ್‌ ಚಿತ್ರದಲ್ಲಿ ಬಾಕ್ಸರ್ ಆಗಿ ಕಾಣಿಸಿಕೊಂಡಿದ್ದಾರೆ. ತೆಲುಗು ಮತ್ತು ಹಿಂದಿ ಅಲ್ಲದೆ ದಕ್ಷಿಣದ ವಿವಿಧ ಭಾಷೆಗಳಿಗೂ ಡಬ್ ಆಗಿ ಇದೇ ಸೆಪ್ಟೆಂಬರ್‌ 9ರಂದು ಸಿನಿಮಾ ಬಿಡುಗಡೆಯಾಗಲಿದೆ.

Categories
ಸೌತ್‌ ಸೆನ್ಸೇಷನ್

ಜಗಮೇ ತಂಧಿರಂ ಸಿನಿಮಾ ಟೀಸರ್ ಬಿಡುಗಡೆ – ಓಟಿಟಿ ರಿಲೀಸ್‌ಗೆ ಧನುಷ್‌ ಅಸಮಾಧಾನ!

ಧನುಷ್ ನಟನೆಯ ಬಹುನಿರೀಕ್ಷಿತ ತಮಿಳು ಸಿನಿಮಾ ‘ಜಗಮೇ ತಂಧಿರಂ’ ಟೀಸರ್ ಬಿಡುಗಡೆಯಾಗಿದೆ. ಕಾರ್ತಿಕ್ ಸುಬ್ಬರಾಜ್ ನಿರ್ದೇಶನದ ಇದು ಡಾರ್ಕ್ ಕಾಮಿಡಿ ಪ್ರಯೋಗ. ಅಮೆರಿಕ ಭೂಗತ ಜಗತ್ತಿನಲ್ಲಿ ಸದ್ದು ಮಾಡುವ ಭಾರತೀಯ ಗ್ಯಾಂಗ್‌ಸ್ಟರ್‌ ಕತೆಯ ತೆಳುಹಾಸ್ಯದ ಚಿತ್ರವಿದು.

“ಹೂ ಈಸ್ ದಿಸ್‌ ಗಾಯ್ ಸುರಳಿ?” ಎನ್ನುವ ಪ್ರಶ್ನೆಯೊಂದಿಗೆ ಟೀಸರ್ ಶುರುವಾಗುತ್ತದೆ. ಹಳ್ಳಿಯ ಎಲ್ಲರ ಮುಚ್ಚಟೆಯ ವ್ಯಕ್ತಿ ಸುರಳಿ ಕಂಟ್ರಿ ಬಾಂಬ್‌ ತಯಾರಿಸುವುದರಲ್ಲಿ ಎಕ್ಸ್‌ಪರ್ಟ್‌. ಹೊಡಿ, ಬಡಿ, ಕಡಿ ಜಾಯಮಾನದ ವ್ಯಕ್ತಿ. ಇಂತಹ ಸುರಳಿ ಅಮೆರಿಕದ ಗ್ಯಾಂಗ್‌ಸ್ಟರ್‌ಗಳಿಗೆ ಹೇಗೆ ನಿದ್ದೆ ಕೆಡಿಸುತ್ತಾನೆ? ಇದಕ್ಕೆ ಸಿನಿಮಾ ರಿಲೀಸ್‌ಗೆ ಕಾಯಬೇಕು.

ನಿರ್ಮಾಪಕ ಎಸ್‌.ಶಶಿಕಾಂತ್ ಈ ಚಿತ್ರವನ್ನು ಓಟಿಟಿ ಫ್ಲಾಟ್‌ಫಾರ್ಮ್‌ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸಿದ್ದಾರೆ. ಅವರ ಈ ನಿರ್ಧಾರಕ್ಕೆ ಹೀರೋ ಧನುಷ್‌ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗಿದೆ. ಈಗ ಚಿತ್ರಮಂದಿರದಲ್ಲಿ ಶೇಕಡಾ ನೂರರಷ್ಟು ಪ್ರೇಕ್ಷಕರಿಗೆ ಅವಕಾಶ ಒದಗಿಸಿದ್ದೂ ನಿರ್ಮಾಪಕರೇಕೆ ಓಟಿಟಿಗೆ ಹೋಗಬೇಕು ಎನ್ನುವುದು ಹಲವರ ಪ್ರಶ್ನೆ.

ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ ಈ ಚಿತ್ರ ಕಳೆದ ವರ್ಷ ಮೇ ತಿಂಗಳಲ್ಲೇ ತೆರೆಕಾಣಬೇಕಿತ್ತು. ಕೊರೋನಾ ಕಾರಣದಿಂದಾಗಿ ಎಲ್ಲವೂ ಮುಂದಕ್ಕೆ ಹೋಯಿತು. ಸದ್ಯದಲ್ಲೇ ಓಟಿಟಿ ರಿಲೀಸ್ ಡೇಟ್ ಹೊರಬೀಳಲಿದೆ. ಐಶ್ವರ್ಯಾ ಲಕ್ಷ್ಮಿ, ಜೇಮ್ಸ್ ಕಾಸ್ಮೋ, ಜೋಜು ಜಾರ್ಜ್‌, ಕಲೈ ಅರಸನ್ ಚಿತ್ರದ ಇತರೆ ತಾರಾಬಳಗದಲ್ಲಿದ್ದಾರೆ.

Categories
ಸಿನಿ ಸುದ್ದಿ

ಮಾಡುವ ಮನಸ್ಸಿದ್ದರೆ ಏನ್‌ ಬೇಕಾದರೂ ಮಾಡಬಹುದು – ಚಂದನವನ ಪ್ರಶಸ್ತಿ ಪ್ರದಾನ ಸಮಾರಂಭವೇ ಇದಕ್ಕೆ ಸಾಕ್ಷಿ

ಪ್ರಶಸ್ತಿ ಅಂದರೆ, ಅದೊಂದು ಹೆಮ್ಮೆ. ಶ್ರಮಕ್ಕೆ ಸಿಗುವ ಪ್ರತಿಫಲ. ಜವಾಬ್ದಾರಿ ಹೆಚ್ಚಿಸುವ ಕೆಲಸ. ಇನ್ನಷ್ಟು ಹುಮ್ಮಸ್ಸು ತುಂಬುವ ಪದ. ಒಬ್ಬ ಸಾಧಕನನ್ನು ಗುರುತಿಸಿ, ಪ್ರಶಸ್ತಿ ಕೊಟ್ಟರೆ ಅದಕ್ಕೊಂದು ಅರ್ಥ. ಅಂತಹ ಅರ್ಥಪೂರ್ಣ ಕೆಲಸವನ್ನು “ಚಂದನವನ ಫಿಲ್ಮ್‌ ಕ್ರಿಟಿಕ್ಸ್‌ ಅಕಾಡೆಮಿ” ಮಾಡಿದೆ. ಹೌದು, ಎರಡನೇ ಕ್ರಿಟಿಕ್ಸ್‌ ಅವಾರ್ಡ್‌ ಕಾರ್ಯಕ್ರಮ ಅದ್ಧೂರಿಯಾಗಿಯೇ ನಡೆದಿದೆ. ಸಿನಿಮಾ ಪತ್ರಕರ್ತ ಮಿತ್ರರೆಲ್ಲರೂ ಸೇರಿ ಕೊಡುವ ಈ ಕ್ರಿಟಿಕ್ಸ್‌ ಅವಾರ್ಡ್‌ ಎರಡನೇ ವರ್ಷವೂ ಅದ್ಭುತ ಯಶಸ್ಸು ಗಳಿಸಲು ಕಾರಣ, ಚಂದದ ಆಯೋಜನೆ.

ಒಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹೇಗೆಲ್ಲಾ ರೂಪುಗೊಳ್ಳಬೇಕು ಎಂಬ ಅರಿವು ಇದ್ದುದರಿಂದಲೇ ಕನ್ನಡ ಚಿತ್ರರಂಗದ ಕೆಲ ನಟ,ನಟಿಯರು, ತಾಂತ್ರಿಕ ವರ್ಗದವರು, ಸಿನಿಮಾರಂಗದ ಗಣ್ಯರು ಸಿನಿಮಾ ಪತ್ರಕರ್ತರ ಕೆಲಸವನ್ನು ಗುಣಗಾನ ಮಾಡಿದರು. ಪ್ರಶಸ್ತಿಗೆ ಭಾಜನರಾಗಿ ಪ್ರಶಸ್ತಿಯನ್ನು ಖುಷಿಯಿಂದಲೇ ಸ್ವೀಕರಿಸಿದವರಿಂದಲೂ ಸಿನಿಮಾ ಪತ್ರಕರ್ತರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದರು.


ಪ್ರಶಸ್ತಿ ಪ್ರದಾನ ಮಾಡುವುದು ದೊಡ್ಡ ಕೆಲಸವೇನಲ್ಲ ಅಂದುಕೊಂಡವರು ಬಹಳಷ್ಟು ಜನ ಇದ್ದಾರೆ. ಆದರೆ, ಅದನ್ನು ಆಯೋಜನೆ ಮಾಡಿದವರಿಗಷ್ಟೇ ಅದರ ಆಳ, ಅಳತೆ ಗೊತ್ತು. ಯಾವುದೇ ಪ್ರಶಸ್ತಿ ಪ್ರದಾನ ಕಾರ್ಯಕ್ರಮವಿದ್ದರೂ, ಒಂದಷ್ಟು ಗೊಂದಲಗಳು ಸಹಜ, ವಿರೋಧಗಳೂ ಸಾಮಾನ್ಯ. “ಚಂದನವನ ಫಿಲ್ಮ್‌ ಕ್ರಿಟಿಕ್ಸ್‌ ಅಕಾಡೆಮಿʼ ಕೊಡುವ ಅವಾರ್ಡ್‌ ಕೂಡ ಇದಕ್ಕೆ ಹೊರತಲ್ಲ. ಇಷ್ಟೆಲ್ಲಾ ವಿವಾದಗಳಿದ್ದರೂ, ಎರಡನೇ ವರ್ಷದ ಕ್ರಿಟಿಕ್ಸ್‌ ಅವಾರ್ಡ್‌ ಯಶಸ್ವಿಯಾಗಿದೆ.

ರಾಜ್ಯ ಸರ್ಕಾರ ಕೊಡುವ ಸಿನಿಮಾ ಅವಾರ್ಡ್‌ ಕೂಡ ನಾಲ್ಕು ವರ್ಷಗಳಿಂದ ನಡೆಯದೇ ನಿಂತಿದೆ. ಇಂತಹ ಸಂದರ್ಭದಲ್ಲೂ ಸಿನಿಮಾ ಪತ್ರಕರ್ತರು ಸೇರಿ ಕೊಡುವ ಕ್ರಿಟಿಕ್ಸ್‌ ಅವಾರ್ಡ್‌ ಎರಡನೇ ವರ್ಷ ಪೂರೈಸಿದ್ದು ಹೆಗ್ಗಳಿಕೆ. ಮಾಡುವ ಮನಸ್ಸಿದ್ದರೆ ಏನ್‌ ಬೇಕಾದರೂ ಮಾಡಬಹುದು. ಹಣಕಾಸು ಮುಖ್ಯವಲ್ಲ. ಮಾಡಬೇಕು ಅಂತ ಡಿಸೈಡ್‌ ಮಾಡಿದರೆ, ಅದು ಹೇಗೋ ನಡೆದು ಬಿಡುತ್ತೆ. ಮೊದಲು ಮಾಡುವ ಮನಸ್ಸು ಬೇಕಷ್ಟೇ. ಇಲ್ಲೀಗ ಚಂದನವನ ಫಿಲ್ಮ್‌ ಅಕಾಡೆಮಿ ಮಾಡಿದ್ದೂ ಕೂಡ ಅದನ್ನೇ. ರಾಜ್ಯ ಸರ್ಕಾರ ಘೋಷಣೆ ಮಾಡುವ ಪ್ರಶಸ್ತಿ ವಿರುದ್ಧ ಒಂದಷ್ಟು ಮಂದಿ ಕೋರ್ಟ್‌ ಮೆಟ್ಟಿಲೇರುತ್ತಾರೆ. ಪ್ರಶಸ್ತಿ ಸಿಗದ ಕೆಲವರು ಸಹಿಸಿಕೊಳ್ಳದೆ ವಿವಾದ ಎಬ್ಬಿಸುತ್ತಾರೆ.

ಸರ್ಕಾರಕ್ಕೆ ಇಚ್ಛಾಶಕ್ತಿ ಇದ್ದರೆ, ಕೋರ್ಟ್‌ಗೊಂದು ಸ್ಪಷ್ಟನೆ ಕೊಟ್ಟು, ಕೆಲಸವನ್ನು ಮಾಡಿ ಮುಗಿಸಬೇಕು. ವರ್ಷಗಟ್ಟಲೆ ಪ್ರಶಸ್ತಿ ವಿತರಿಸದೆ ಸುಮ್ಮನಾದರೆ, ಅಂತಹ ಪ್ರಶಸ್ತಿಗಳಿಗೂ ಅರ್ಥ ಬರೋದಿಲ್ಲ. ಕೆಲವರ ಧೋರಣೆಯಿಂದಾಗಿ‌ ಪ್ರಶಸ್ತಿ ವಿಷಯ ಕೋರ್ಟ್ ಮೆಟ್ಟಿಲೇರುತ್ತೆ. ಇದು ಸಿನಿಮಾ ಪ್ರಶಸ್ತಿಗೆ ಸಂಬಂಧಿಸಿದ್ದಷ್ಟೇ ಅಲ್ಲ, ನೊಬೆಲ್‌ ಶಾಂತಿ ಪ್ರಶಸ್ತಿ ಇರಲಿ, ಜಾನಪೀಠ ಪ್ರಶಸ್ತಿ ಇರಲಿ, ಇನ್ಯಾವುದೇ ಪ್ರತಿಷ್ಠಿತ ಪ್ರಶಸ್ತಿಗಳೇ ಇರಲಿ, ವಿವಾದ ಇದ್ದೇ ಇರುತ್ತೆ. ಸಿನಿಮಾ ಪತ್ರಕರ್ತರು ಕೊಡುವ ಪ್ರಶಸ್ತಿಗಳಿಗೂ ಇಂತಹ ವಿವಾದ ಸಹಜವೇ. ಸಿನಿಮಾ ಪತ್ರಕರ್ತರು ಒಗ್ಗೂಡಿದ್ದರೂ, ಸಣ್ಣಪುಟ್ಟ ಸಮಸ್ಯೆಗಳಿವೆ. ಇದೆಲ್ಲದರ ಹೊರತಾಗಿಯೂ ಕ್ರಿಟಿಕ್ಸ್‌ ಅವಾರ್ಡ್‌ ಪಡೆದವರೆಲ್ಲರೂ ಒಂದಷ್ಟು ಭಾವುಕತೆಗೆ ಒಳಗಾದರು. ಅದಕ್ಕೆ ಕಾರಣವೂ ಇತ್ತು.

ರಘುಗೆ ಮೊದಲ ಅವಾರ್ಡ್

ಸಂಗೀತ ನಿರ್ದೇಶಕ, ಗಾಯಕ ರಘುದೀಕ್ಷಿತ್‌ ಅವರು ಈ ಬಾರಿ “ಲವ್‌ ಮಾಕ್ಟೇಲ್‌” ಚಿತ್ರದ ಸಂಗೀತಕ್ಕಾಗಿ ಅತ್ಯುತ್ತಮ ಸಂಗೀತ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಕ್ರಿಟಿಕ್ಸ್‌ ಅವಾರ್ಡ್‌ ಪಡೆದ ರಘುದೀಕ್ಷಿತ್‌, “ತನ್ನ ಜೀವಮಾನದ ಮೊದಲ ಪ್ರಶಸ್ತಿ ಇದು” ಎಂದು ಪ್ರೀತಿಯಿಂದಲೇ ಹೇಳಿಕೊಂಡರು. ರಘುದೀಕ್ಷಿತ್‌ ಒಳ್ಳೆಯ ಹಾಡುಗಾರ, ಸಂಗೀತ ನಿರ್ದೇಶಕ, ಆದರೆ, ಅವರಿಗೆ ಬೆಸ್ಟ್‌ ಮ್ಯೂಸಿಕ್‌ ಡೈರೆಕ್ಟರ್‌ ಅವಾರ್ಡ್‌ ಸಿಕ್ಕಿರಲಿಲ್ಲ. ಪತ್ರಕರ್ತರ ಕ್ರಿಟಿಕ್ಸ್‌ ಅವಾರ್ಡ್‌ ಸಿಕ್ಕ ಖುಷಿಯನ್ನು ಹಂಚಿಕೊಂಡರು. ಅವರಷ್ಟೇ ಅಲ್ಲ, ಅಂತಾರಾಷ್ಟ್ರೀಯ ಬಾಡಿಬಿಲ್ಡರ್ ಜಿಮ್‌ ರವಿ‌ ಕೂಡ ತಮ್ಮ ಸಂತಸ ಹಂಚಿಕೊಂಡರು. ” ಅವರು ಬಾಡಿಬಿಲ್ಡರ್‌ ಆಗಿ ದೇಶ ವಿದೇಶಗಳಲ್ಲಿ ಗೆಲುವು ಪಡೆದವರು. ಹಲವು ಚಿನ್ನದ ಪದಕ ತಂದವರು.

ಜಿಮ್‌ ರವಿಗೆ ಮೊದಲ ವೇದಿಕೆ

ಅಷ್ಟೇ ಅಲ್ಲ, ನೂರಾರು ಚಿತ್ರಗಳಲ್ಲಿ ಖಳನಟರಾಗಿ, ಪೋಷಕ ಕಲಾವಿದರಾಗಿ ನಟಿಸಿದವರು. ಕನ್ನಡ ಸೇರಿದಂತೆ ತೆಲುಗು, ತಮಿಳು ಚಿತ್ರಗಳಲ್ಲೂ ನಟಿಸಿದವರು. ಜಿಮ್‌ ರವಿ, ಅವರಿಗೆ ಕ್ರಿಟಿಕ್ಸ್‌ ಅವಾರ್ಡ್‌ ವೇದಿಕೆ ಸಿಕ್ಕಿದ್ದು ಅದೇ ಮೊದಲಂತೆ. ಯಾವ ವೇದಿಕೆಯೂ ಸಿಕ್ಕಿರಲಿಲ್ಲ. ಇದು ನನ್ನ ಮೊದಲ ವೇದಿಕೆ. ಈ ಮೂಲಕ ನಾನು ಒಂದು ಅವಾರ್ಡ್‌ ನೀಡುತ್ತಿದ್ದೇನೆ ಅಂದರೆ, ಅದು ಕ್ರಿಟಿಕ್ಸ್‌ ಅವಾರ್ಡ್‌ ಕಲ್ಪಿಸಿಕೊಟ್ಟ ಅವಕಾಶದಿಂದ ಮಾತ್ರ” ಎಂದು ಭಾವುಕರಾದರು.

ಜಾಲಿ ಬಾಸ್ಟಿನ್‌ಗೇ ಮೊದಲ ಪ್ರಶಸ್ತಿ

ಇನ್ನು, ಸ್ಟಂಟ್‌ ಮಾಸ್ಟರ್‌ ಜಾಲಿಬಾಸ್ಟಿನ್‌ ಅವರಿಗೂ “ಪಾಪ್‌ ಕಾರ್ನ್‌ ಮಂಕಿ ಟೈಗರ್‌” ಚಿತ್ರದ ಸಾಹಸ ಸಂಯೋಜನೆಗಾಗಿ ಅತ್ಯುತ್ತಮ ಸಾಹಸ ನಿರ್ದೇಶಕ ಪ್ರಶಸ್ತಿ ಲಭಿಸಿತು. ಪ್ರಶಸ್ತಿ ಸ್ವೀಕರಿಸಿದ ಅವರು, “ಸುಮಾರು ೯೦೦ ಚಿತ್ರಗಳಿಗೆ ಕೆಲಸ ಮಾಡಿದ್ದೇನೆ. ಈವರೆಗೂ ಬೆಸ್ಟ್‌ ಸ್ಟಂಟ್‌ ಮಾಸ್ಟರ್‌ ಅವಾರ್ಡ್‌ ಸಿಕ್ಕಿರಲಿಲ್ಲ. ಈಗ ಸಿನಿಮಾ ಪತ್ರಕರ್ತರು ಗುರುತಿಸಿ ಈ ಕ್ರಿಟಿಕ್ಸ್‌ ಅವಾರ್ಡ್‌ ನೀಡುತ್ತಿದ್ದಾರೆ. ಇದೊಂದು ಮರೆಯದ ಸಂಗತಿ ಅಂತ ಅವರೂ ಕೂಡ ಪ್ರಶಸ್ತಿ ಬಗ್ಗೆ ಕೊಂಡಾಡಿದರು.‌

ಸಿಂಬನಿಗೂ ಸ್ಪೆಷಲ್‌ ಅವಾರ್ಡ್

ಈ ವೇಳೆ ಪತ್ರಕರ್ತರು ಸೇರಿ ವಿಶೇಷ ಪ್ರಶಸ್ತಿಯೊಂದನ್ನು ಗುರುತಿಸಿ ಕೊಟ್ಟಿದ್ದು ವಿಶೇಷವೇ. ಸಾಮಾನ್ಯವಾಗಿ ಎಲ್ಲರೂ ನಟ,ನಟಿ, ಪೋಷಕ ಕಲಾವಿದರು, ತಾಂತ್ರಿಕ ವರ್ಗದವರಿಗೆ ಪ್ರಶಸ್ತಿ ಕೊಡುತ್ತಾರೆ. ಆದರೆ, ಪತ್ರಕರ್ತರು ಸೇರಿ ವಿಶೇಷ ಪ್ರಶಸ್ತಿ ನೀಡಿದ್ದು ಈ ಬಾರಿ ಗಮನಸೆಳೆಯಿತು. “ನಾನು ಮತ್ತು ಗುಂಡ” ಚಿತ್ರದಲ್ಲಿ ನಟಿಸಿದ್ದ ಸಿಂಬ ಎಂಬ ನಾಯಿಗೂ ಒಂದು ಪ್ರಶಸ್ತಿ ಕೊಟ್ಟು ಪ್ರೀತಿಗೆ ಪಾತ್ರವಾಯಿತು. ನಿಜಕ್ಕೂ ಇದೊಂದು ದಾಖಲೆಯೇ ಸರಿ. ಒಂದು ಪ್ರಾಣಿಯ ನಟನೆ ಗುರುತಿಸಿ, ಅದಕ್ಕೆ ತರಬೇತಿ ಕೊಟ್ಟವರನ್ನೂ ವೇದಿಕೆ ಕರೆದು ಪ್ರಶಸ್ತಿ ಕೊಟ್ಟಿದ್ದು ವಿಶೇಷವಾಗಿತ್ತು.

ಕ್ರಿಟಿಕ್ಸ್‌ ಅವಾರ್ಡ್‌ ಮುಂದಿನ ವರ್ಷ ಇನ್ನಷ್ಟು ವಿಶೇಷತೆಗಳೊಂದಿಗೆ ನಡೆಯಲಿದೆ. ಇದಕ್ಕೆ ಮುಂದಿನ ದಿನಗಳಲ್ಲಿ ಕನ್ನಡದ ಎಲ್ಲಾ ಸೆಲೆಬ್ರಿಟಿಗಳೂ, ಸಿನಿಮಾ ಮಂದಿ ಕೈ ಜೋಡಿಸಬೇಕು. ಇನ್ನು, ತಮ್ಮ ಪ್ರತಿಷ್ಠೆಗಳನ್ನು ಬದಿಗೊತ್ತಿ ಒಟ್ಟಿಗೆ ಕೆಲಸ ಮಾಡಿದರೆ, ಕ್ರಿಟಿಕ್ಸ್‌ ಅವಾರ್ಡ್‌ ಇನ್ನಷ್ಟು ಎತ್ತರಕ್ಕೆ ಹೋಗುವುದರಲ್ಲಿ ಅನುಮಾನವಿಲ್ಲ.

ಅಂದಹಾಗೆ, ಶ್ಯಾಮ್‌ ಪ್ರಸಾದ್‌, ಶರಣು ಹುಲ್ಲೂರು, ಶಶಿ ಪ್ರಸಾದ್‌, ಚಿತ್ರತಾರಾ ಮನು, ವಿಸಿಎನ್‌ ಮಂಜು, ಜಗದೀಶ್‌, ಮತ್ತು ಪತ್ರಕರ್ತ ಮಿತ್ರರು ಸೇರಿದಂತೆ ಪ್ರಚಾರಕರ್ತರಾದ ನಾಗೇಂದ್ರ, ಸುಧೀಂದ್ರ ವೆಂಕಟೇಶ್‌, ವಿಜಯಕುಮಾರ್‌, ವಾಸು ಕೂಡ ಕ್ರಿಟಿಕ್ಸ್‌ ಅಕಾಡೆಮಿಗೆ ಸಾಥ್‌ ನೀಡಿದ್ದರಿಂದ ಕಾರ್ಯಕ್ರಮ ಮತ್ತಷ್ಟು ರಂಗೇರಿತ್ತು.

Categories
ಸಿನಿ ಸುದ್ದಿ

ಮತ್ತೊಂದು ಗಂಡು ಮಗುವಿಗೆ ತಾಯಿಯಾದ ಕರೀನಾ! ಸಂಭ್ರಮದಲ್ಲಿ ಸೈಫ್‌ ಅಲಿ ಖಾನ್ ದಂಪತಿ

ಬಾಲಿವುಡ್ ತಾರಾ ದಂಪತಿ ಸೈಫ್‌ ಅಲಿ ಖಾನ್ ಮತ್ತು ಕರೀನಾ ಕಪೂರ್‌ ಎರಡನೇ ಮಗುವಿನ ಪೋಷಕರಾದ ಸಂಭ್ರಮದಲ್ಲಿದ್ದಾರೆ. ಕರೀನಾ ಇಂದು ಬೆಳಗ್ಗೆ ಗಂಡು ಮಗುವಿಗೆ ಜನ್ಮ ನೀಡಿದ್ದು, ಬಾಲಿವುಡ್‌ನ ಹಲವಾರು ತಾರೆಯರಿಂದ ನಟಿಗೆ ಶುಭಾಶಯಗಳು ಸಂದಿವೆ. 2016ರಲ್ಲಿ ದಂಪತಿಗೆ ತೈಮೂರ್ ಜನಿಸಿದ್ದ. ಕಳೆದೆರೆಡು, ಮೂರು ವರ್ಷಗಳಿಂದ ಕರೀನಾ ಜೊತೆಗಿನ ತೈಮೂರ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಹರಿದಾಡಿದ್ದವು. ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದ ಸೈಫ್ – ಕರೀನಾ ಹೊಸ ಮನೆಗೆ ತೆರಳಿದ್ದರು. ಇದೀಗ ದಂಪತಿ ಸಡಗರ ಹೆಚ್ಚಾಗಿದೆ.


ಎರಡನೇ ಮಗುವಿಗೆ ಗರ್ಭವತಿಯಾಗಿದ್ದಾಗಲೇ ನಟಿ ಕರೀನಾ ತಮ್ಮ ಸಿನಿಮಾಗಳ ಬಿಡುವಿಲ್ಲದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಅಮೀರ್‌ ಖಾನ್‌ ನಟನೆಯ ಹಿಂದಿ ಸಿನಿಮಾ ‘ಲಾಲ್ ಸಿಂಗ್ ಛಡ್ಡಾ’ ಚಿತ್ರೀಕರಣಕ್ಕಾಗಿ ಅವರು ದಿಲ್ಲಿಯಲ್ಲಿದ್ದರು.

ಕೆಲವು ಜಾಹೀರಾತುಗಳಲ್ಲಿ ಕಾಣಿಸಿಕೊಂಡ ನಟಿ ‘ಧರ್ಮಶಾಲಾ’, ‘ತಕ್ತ್‌’ ಸಿನಿಮಾಗಳ ಶೂಟಿಂಗ್‌ ಕೂಡ ಪೂರ್ಣಗೊಳಿಸಿದ್ದಾರೆ. ಇನ್ನು ಸೈಫ್ ಅಲಿ ಖಾನ್ ಅವರು ಆದಿಪುರುಷ್‌, ಭೂತ್ ಪೊಲೀಸ್‌ ಮತ್ತು ಬಂಟಿ ಔರ್ ಬಬ್ಲಿ -2 ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ.

Categories
ಟಾಲಿವುಡ್ ಸಿನಿ ಸುದ್ದಿ

ದೃಶ್ಯಂ ಸರಣಿಗೆ ರೆಡಿಯಾದ ವೆಂಕಿ! ಜೀತು ಜೋಸೆಫ್ ನಿರ್ದೇಶನದಲ್ಲೇ ಬರಲಿರುವ ಚಿತ್ರ

ಜೀತು ಜೋಸೆಫ್ ನಿರ್ದೇಶನದಲ್ಲಿ ಮೋಹನ್‌ಲಾಲ್ – ಮೀನಾ ನಟಿಸಿರುವ ‘ದೃಶ್ಯಂ2’ ಮೊನ್ನೆಯಷ್ಟೇ ಅಮೇಜಾನ್ ಪ್ರೈಂನಲ್ಲಿ ಪ್ರೀಮಿಯರ್ ಆಗಿದೆ. ವೀಕ್ಷಕರು ಮತ್ತು ವಿಶ್ಲೇಷಕರು ಚಿತ್ರದ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈ ಯಶಸ್ಸಿನ ಹಿನ್ನೆಲೆಯಲ್ಲಿ ‘ದೃಶ್ಯಂ2’ ತೆಲುಗು ರೀಮೇಕ್ ಸೆಟ್ಟೇರುತ್ತಿದೆ. ಜೀತು ಜೋಸೆಫ್ ಅವರೇ ನಿರ್ದೇಶಿಸುತ್ತಿರುವ ಚಿತ್ರದಲ್ಲಿ ವೆಂಕಟೇಶ್ ನಟಿಸುತ್ತಿದ್ದಾರೆ. ಮುಂದಿನ ತಿಂಗಳಿನಿಂದ ಚಿತ್ರೀಕರಣ ಆರಂಭವಾಗಲಿದ್ದು, ಉಳಿದ ತಾರಾಬಳಗದ ಆಯ್ಕೆ ಜಾರಿಯಲ್ಲಿದೆ.

ನಿರ್ದೇಶಕ ಜೀತು ಜೋಸೆಫ್ ಇಂದು ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ‘ದೃಶ್ಯಂ2’ ತೆಲುಗು ಅವತರಣಿಕೆಯನ್ನು ಘೋಷಿಸಿದ್ದಾರೆ. ನಟ ವೆಂಕಟೇಶ್ ಮತ್ತಿತರರೊಂದಿಗಿನ ಅವರ ಫೋಟೋ ಜೊತೆಗೆ ಈ ಸುದ್ದಿ ಹೊರ ಬಿದ್ದಿದೆ. ‘ದೃಶ್ಯಂ’ ಮೊದಲ ಸರಣಿಯ ತೆಲುಗು ಅವತರಣಿಕೆ 2014ರಲ್ಲಿ ತೆರೆಕಂಡಿತ್ತು. ಆ ಚಿತ್ರವನ್ನು ಸುಪ್ರಿಯಾ ನಿರ್ದೇಶಿಸಿದ್ದರು. ಅಲ್ಲಿ ವೆಂಕಟೇಶ್ ಜೊತೆ ಮೀನಾ, ನಾದಿಯಾ ನಟಿಸಿದ್ದರು.

ಅಮೇಜಾನ್‌ ಪ್ರೈಮ್‌ನಲ್ಲಿ ಪ್ರೀಮಿಯರ್ ಆಗಿರುವ ‘ದೃಶ್ಯಂ2’ ಮಲಯಾಳಂ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಟ ಮೋಹನ್ ಲಾಲ್ ಅವರು ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಯಶಸ್ಸಿಗೆ ಕಾರಣರಾದ ತಂತ್ರಜ್ಞರು ಹಾಗೂ ವೀಕ್ಷಕರಿಗೆ ಧನ್ಯವಾದ ಅರ್ಪಿಸಿದ್ದಾರೆ. ಸದ್ಯ ‘ದೃಶ್ಯಂ2’ ತೆಲುಗು ಅವತರಣಿಕೆ ಸೆಟ್ಟೇರುತ್ತಿದ್ದು, ಮುಂದಿನ ದಿನಗಳಲ್ಲಿ ಕನ್ನಡ, ತಮಿಳು ಮತ್ತು ಹಿಂದಿಯಲ್ಲೂ ತಯಾರಾಗುವ ಸಾಧ್ಯತೆಗಳಿವೆ. ಕನ್ನಡ ‘ದೃಶ್ಯ’ದಲ್ಲಿ ರವಿಚಂದ್ರನ್ ನಟಿಸಿದ್ದರು. ಸರಣಿಯಲ್ಲೂ ಅವರೇ ಇರುತ್ತಾರೆಯೇ ಎಂದು ಕಾದುನೋಡಬೇಕು.

error: Content is protected !!