ಕನ್ನಡ ಚಿತ್ರರಂಗದ ಸ್ಟಾರ್ ನಟ ಯಶ್ ಅವರ ತಂದೆ-ತಾಯಿಯೊಂದಿಗೆ ಗ್ರಾಮಸ್ಥರು ಜಮೀನು ಕಾಂಪೌಂಡ್ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ಎಬ್ಬಿಸಿದ್ದು, ಈ ಸಂಬಂಧ ಯಶ್ ಅವರು ಮಂಗಳವಾರ ಹಾಸನ ಜಿಲ್ಲೆಯ ದುದ್ದ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ತಾವು ಖರೀದಿಸಿದ್ದ ಜಮೀನಿಗೆ ರಸ್ತೆ ನಿರ್ಮಿಸುವ ವಿಷಯಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರು ಮತ್ತು ಯಶ್ ಕುಟುಂಬದ ನಡುವೆ ಗದ್ದಲ ಎದ್ದಿತ್ತು. ಈ ವಿಚಾರವಾಗಿ ಯಶ್ ಬೆಂಬಲಿಗರು ಮತ್ತು ಗ್ರಾಮಸ್ಥರ ನಡುವೆ ಜಗಳ ದೊಡ್ಡದ್ದಾಗಿತ್ತು. ಈ ಬಗ್ಗೆ ಅಸಮಾಧಾನಗೊಂಡ ಯಶ್ ಅವರು, ಹಾಸನ ಪೊಲೀಸ್ ಠಾಣೆಗೆ ಭೇಟಿ ಕೊಟ್ಟಿದ್ದರು. ಪೊಲೀಸರೊಂದಿಗೆ ಚರ್ಚೆ ಮಾಡಿದ ನಂತರ ಮಾಧ್ಯಮ ಎದುರು ಮಾತನಾಡಿದ ಯಶ್, “ನಾವು ಕಷ್ಟಪಟ್ಟು ಜಮೀನು ಖರೀದಿಸಿದ್ದೇವೆ. ಈಗ ಕಾಂಪೌಂಡ್ ಹಾಕಿಸುತ್ತಿದ್ದೇವೆ. ಕೆಲಸ ಮಾಡುತ್ತಿದ್ದ ಹುಡುಗರ ಮೇಲೆ ಕೈ ಮಾಡಲಾಗುತ್ತಿದೆ ಇದು ಸರಿಯಲ್ಲ. ರಸ್ತೆ ವಿಚಾರವಾಗಿ ಮಾತುಕತೆ ನಡೆದಿದೆ. ಮಾತುಕತೆಯಲ್ಲೇ ಬಗಹರಿಸಿಕೊಳ್ಳಬೇಕು. ಕೆಲಸ ಮಾಡುವ ಹುಡುಗರ ಮೇಲೆ ಕೈ ಮಾಡಿದ್ರೆ ಸುಮ್ಮನೆ ಇರಲಿಕ್ಕೆ ಆಗಲ್ಲ. ನಮ್ಮ ಜೊತೆ ಕೆಲಸ ಮಾಡೋರು ಅಂದರೆ ನಮ್ಮ ಮನೆಯವರ ರೀತಿ. ತಂದೆ-ತಾಯಿ ಬಗ್ಗೆಯೂ ಬಾಯಿಗೆ ಬಂದಂತೆ ಮಾತನಾಡಿದ್ದಾರೆ ಹಾಗಾಗಿ ಬಂದಿದ್ದೇನೆ.
ದುಡ್ಡು ಮಾಡಬೇಕು ಅಂದರೆ ಬೆಂಗಳೂರಲ್ಲೇ ಮಾಡಬಹುದು ‘ರಸ್ತೆಯನ್ನು ದೇವಸ್ಥಾನಕ್ಕೆ ಹೋಗಲು ಮಾಡಿದ್ದಾರೆ. ಅದು ನಮಗೆ ಬೇಕು ಎಂದು ಮಾಡಿಲ್ಲ. ಹಾಸನಕ್ಕೆ ಬಂದು ನಾನ್ಯಾಕೆ ಜಮೀನು ಮಾಡಬೇಕು. ದುಡ್ಡು ಮಾಡಬೇಕು ಎಂದರೆ ಬೆಂಗಳೂರಲ್ಲೇ ಆಸ್ತಿ ಮಾಡಬಹುದಲ್ವಾ. ನಾವು ಕೃಷಿ ಮಾಡಬೇಕು. ಅದು ನನ್ನ ಆಸೆ. ಅವರು ಹಳ್ಳಿ ಜನ, ನಮ್ಮ ತಂದೆ ತಾಯಿಯೂ ಹಳ್ಳಿ ಜನ. ಮಾತುಕತೆ ನಡೆದಿದೆ. ಹೇಗೆ ಮಾತಾಡಬೇಕು ಅನ್ನೋದೇ ಗೊತ್ತಿಲ್ಲ. ‘ಮೀಡಿಯಾ ಇದೆ ಅಂತಾರೆ, ಎಲ್ಲರದೂ ಅದೇ ಆಗಿದೆ. ಮೀಡಿಯಾ ಇದ್ದರೆ ಇರಲಿ ಬಿಡಿ. ನಾವೂ ಅಪ್ಪ ಅಮ್ಮನಿಗೆ ಹುಟ್ಟಿರುವ ಮಕ್ಕಳೆ. ತಂದೆ ತಾಯಿ ಬಗ್ಗೆ ಮಾತನಾಡಿದಾಗ ನಮ್ಮ ಇಮೇಜ್ ನೋಡಿಕೊಂಡು ಕೂರಲು ಆಗಲ್ಲ. ಎಲ್ಲಿಂದಲೋ ಬಂದವರು, ಇಲ್ಲಿಗೆ ಬಂದಿದ್ದಾರೆ ಅಂತ ಕೇಳ್ತಾರಂತೆ ಎಂದಿದ್ದಾರೆ ಯಶ್. ಏನಿದು ಘಟನೆ ? ಯಶ್ ಅವರ ತಂದೆ ಅರುಣ್ ಕುಮಾರ್ ಮತ್ತು ತಾಯಿ ಪುಷ್ಪ ಇಬ್ಬರು ತಮ್ಮ ಜಮೀನಿನಲ್ಲಿ ಕೆಲಸ ಮಾಡಿಸುತ್ತಿರುವಾಗ ಗ್ರಾಮಸ್ಥರ ನಡುವೆ ಮಾತಿಗೆ ಮಾತು ಬೆಳೆದಿದೆ. ಜಮೀನಿಗೆ ರಸ್ತೆ ನಿರ್ಮಾಣ ಮಾಡಲು ಜೆಸಿಬಿಯಲ್ಲಿ ಕೆಲಸ ಮಾಡಿಸುತ್ತಿದ್ದ ವೇಳೆ ಗ್ರಾಮಸ್ಥರು ಅಡ್ಡಿ ಪಡಿಸಿದ್ದರು. ಈ ವೇಳೆ ಶುರುವಾದ ಗಲಾಟೆ ಮಾತಿಗೆ ಮಾತು ಬೆಳೆದು ಯಶ್ ಬೆಂಬಲಿಗರು ಮತ್ತು ಗ್ರಾಮಸ್ಥರ ನಡುವೆ ದೊಡ್ಡ ಜಗಳವಾಗಿದೆ. ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಧಾವಿಸಿ ಗ್ರಾಮಸ್ಥರನ್ನು ಸಮಾಧಾನ ಪಡಿಸಿದ್ದಾರೆ.
ನಟಿ ಪ್ರಣಿತಾ ಸುಭಾಷ್, ವೀಣಾವಾದನ ಮಾಡುತ್ತಿದ್ದಾರೆ! ಅರೇ, ಹಾಗಂತ ಅವರೇನು ವೀಣೆ ನುಡಿಸೋಕೆ ಮುಂದಾಗಿದ್ದಾರಾ ಅಂದುಕೊಳ್ಳುವಂತಿಲ್ಲ. ಸದ್ಯಕ್ಕೆ ಪ್ರಣೀತಾ ಸಿನಿಮಾಗಳ ಬಗ್ಗೆ ತಲೆಕೆಡಿಸಿಕೊಳ್ಳದೆ, ತಮ್ಮ ಸಾಮಾಜಿಕ ಕಾರ್ಯಕ್ರಮಗಳ ಕಡೆ ಗಮನಹರಿಸುತ್ತಿದ್ದಾರೆ. ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಪ್ರಣೀತಾ, ಆಗಾಗ ತಮ್ಮ ಚಂದದ ಫೋಟೋಗಳನ್ನು ಹಾಕಿಕೊಳ್ಳುವ ಮೂಲಕ ಅಭಿಮಾನಿಗಳ ಜೊತೆಯೂ ಮಾತಾಡುತ್ತಿರುತ್ತಾರೆ. ಪ್ರಣೀತಾ ಮಾಡರ್ನ್ ಹುಡುಗಿಯಾದರೂ ,ಸಂಪ್ರದಾಯಸ್ಥಳಾಗಿಯೂ ಅವಾಗವಾಗ ಕಾಣಿಸಿಕೊಳ್ಳುತ್ತಿರುತ್ತಾರೆ. ಸಾಮಾಜಿಕವಾಗಿ ತನ್ನದೇ ಆದ ರೀತಿಯಲ್ಲಿ ಸಮಾಜಕಾರ್ಯಗಳ ಜೊತೆಯಲ್ಲಿ ಜನರ ಅಪಾರ ಪ್ರೀತಿಯನ್ನೂ ಗಳಿಸಿದ್ದಾರೆ. ಕಳೆದ ಮಹಿಳಾ ದಿನಾಚರಣೆ ಇವರಿಗೆ ವಿಶೇಷವಾಗಿತ್ತು. ಯಾಕೆ ಅಂದರೆ, ಸೀರೆ ಅಂದರಂತೂ ಯಾರಿಗೆ ಇಷ್ಟವಿಲ್ಲ ಹೇಳಿ? ಹೆಣ್ಣು ಮಕ್ಕಳಿಗಂತೂ ಸೀರೆ ಧರಿಸಿ ಮಿಂಚುವುದು ಒಂಥರಾ ಎಲ್ಲಿಲ್ಲದ ಆನಂದ. ಇದಕ್ಕೆ ನಟಿ ಪ್ರಣೀತಾ ಸುಭಾಷ್ ಕೂಡ ಹೊರತಲ್ಲ. ಇತ್ತೀಚೆಗೆ ಕಸೂತಿ ಕಲೆಯಂತೂ ನ್ಯೂ ಟ್ರೆಂಡ್ ಆಗಿದೆ. ಎಂಬ್ರಾಯಿಡರಿ ಡಿಸೈನ್ ಹೊಂದಿರುವ ಸಾರಿಗಳನ್ನು ತಯಾರಿಸುವ ವರ್ಗಗಳೇ ಇವೆ. ಮಹಿಳೆಯರಿಗೆ ಬೇಕಾಗುವ ವಸ್ತುಗಳನ್ನು ಕೂಡ ಹ್ಯಾಂಡ್ ಮೇಡ್ ಆಗಿ ತಯಾರಿಸಲಾಗುತ್ತಿದೆ.
ನಟಿ ಪ್ರಣೀತಾ ಸುಭಾಷ್ ಅವರು ಒಂದು ಎಂಬ್ರಾಯಿಡರಿ ಸಾರಿ ತಯಾರಿಸುವ ಕಂಪನಿಗೆ ಬ್ರಾಂಡ್ ಅಂಬಾಸಡರ್ ಆಗಿದ್ದಾರೆ. ಪ್ರಣೀತಾ ಹಳದಿ ಮಿಶ್ರಿತ ಕೆಂಪು ಬಣ್ಣದ ಸಾರಿಯುಟ್ಟು ಸಿಂಪಲ್ ಆಗಿ ವೀಣೆ ಹಿಡಿದು ಕುಳಿತಿರುವ ಫೋಟೊ ಟ್ವೀಟರ್ ನಲ್ಲಿ ಅಪ್ಲೋಡ್ ಮಾಡಲಾಗಿದೆ. ಅದೀಗ ಎಲ್ಲೆಡೆ ವೈರಲ್ ಕೂಡ ಆಗಿದೆ.
ಒಂದು ಸಿನಿಮಾ ನಿರ್ಮಾಣ ಮಾಡುವುದು ಸುಲಭದ ಮಾತಲ್ಲ. ಅದರಲ್ಲೂ ಹೊಸಬರನ್ನು ನಂಬಿ ಹಣ ಹಾಕುವುದಂತೂ ತೀರಾ ಸವಾಲಿನ ಕೆಲಸವೇ ಸರಿ. ಅಂಥದ್ದೊಂದು ಸವಾಲು ಸ್ವೀಕರಿಸಿ, ಸಂಪೂರ್ಣ ಹೊಸಬರನ್ನು ನಂಬಿ ಹಣ ಹಾಕುವ ಮೂಲಕ ಸುದ್ದಿಯಾಗಿದ್ದು, “ನಮ್ ಗಣಿ ಬಿಕಾಂ ಪಾಸ್” ಚಿತ್ರ ನಿರ್ಮಾಪಕ ನಾಗೇಶ್ ಕುಮಾರ್.
ನಿರ್ದೇಶಕ ಅಭಿಷೇಕ್ ಶೆಟ್ಟಿ, ನಿರ್ಮಾಪಕ ನಾಗೇಶ್ ಕುಮಾರ್
ನಟನೆ ಹಾಗೂ ನಿರ್ದೇಶನ ಈ ಎರಡರಲ್ಲೂ ಅದ್ಭುತ ಕೆಲಸಗಾರ ಎಂಬ ನಂಬಿಕೆಯ ಜೊತೆ ಭವ್ಯ ನಿರೀಕ್ಷೆ ಹುಟ್ಟಿಸಿದ ನಿರ್ದೇಶಕ ಅಭಿಷೇಕ್ ಶೆಟ್ಟಿ ಅವರಿಗಿರುವ ಸಿನಿಮಾ ಅಭಿಮಾನ, ಪ್ರೀತಿ ಕಂಡು ನಿರ್ಮಾಪಕರು “ಗಜಾನನ ಗ್ಯಾಂಗ್” ಎಂಬ ಭರವಸೆಯ ಸಿನಿಮಾ ಮಾಡಿದ್ದಾರೆ
ಹೌದು, “ನಮ್ ಗಣಿ ಬಿಕಾಂ ಪಾಸ್” ಸಿನಿಮಾ ಗಳಿಕೆಯಲ್ಲಿ ದೊಡ್ಡ ಮಟ್ಟದ ಸದ್ದು ಮಾಡದಿದ್ದರೂ, ಒಂದೊಳ್ಳೆಯ ಸಂದೇಶದ ಸಿನಿಮಾ ಅನ್ನುವ ಮಾತು ಜೋರಾಗಿಯೇ ಕೇಳಿಬಂತು. ಸಿನಿಮಾ ಹಣ ಮಾಡದಿದ್ದರೂ, ಹೆಸರು ತಂದು ಕೊಟ್ಟಿದೆ. ಆ ಖುಷಿಯಲ್ಲೇ ಇದ್ದ ನಿರ್ಮಾಪಕ ಪುನಃ, ಅದೇ ತಂಡದೊಂದಿಗೆ ಮತ್ತೊಂದು ಸಿನಿಮಾ ನಿರ್ಮಾಣಕ್ಕೂ ಮುಂದಾದರು. ಅದಕ್ಕೆ ಕಾರಣ, ಒಳ್ಳೆಯ ಕಥೆ. ನಂಬಿಕೆ ಉಳಿಸಿಕೊಂಡಿದ್ದ ಚಿತ್ರತಂಡ. ಹಾಗಾಗಿ “ಗಜಾನನ ಅಂಡ್ ಗ್ಯಾಂಗ್” ಹೆಸರಿನ ಸಿನಿಮಾ ನಿರ್ಮಾಣ ಕೈಗೆತ್ತಿಕೊಂಡ ನಾಗೇಶ್ ಕುಮಾರ್, ಅದನ್ನು ಯಶಸ್ವಿಯಾಗಿ ಮುಗಿಸಿದ್ದಾರೆ ಕೂಡ.
ಅಭಿಷೇಕ್ ಶೆಟ್ಟಿ ನಿರ್ದೇಶನದ “ನಮ್ ಗಣಿ ಬಿಕಾಂ ಪಾಸ್” ಒಳ್ಳೆಯ ಸಿನಿಮಾ ಎಂಬ ಮಾತುಗಳು ಕೇಳಿಬಂದ ಹಿನ್ನೆಲೆಯಲ್ಲಿ, ನಿರ್ಮಾಪಕರು ಮತ್ತದೇ ತಂಡದೊಂದಿಗೆ “ಗಜಾನನ ಅಂಡ್ ಗ್ಯಾಂಗ್” ನಿರ್ಮಿಸಿ, ಮುಗಿಸಿದ್ದು, ಸಹಜವಾಗಿಯೇ ಅವರಿಗೂ ಖುಷಿಕೊಟ್ಟಿದೆ. ಇನ್ನು, ಮೊದಲ ನಿರ್ಮಾಣದ “ನಮ್ ಗಣಿ ಬಿಕಾಂ ಪಾಸ್” ಸಿನಿಮಾ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸಿಕ್ಕಾಪಟ್ಟೆ ವೀಕ್ಷಣೆ ಪಡೆದಿದ್ದು ವಿಶೇಷ.
ನಟನೆ ಹಾಗೂ ನಿರ್ದೇಶನ ಈ ಎರಡರಲ್ಲೂ ಅದ್ಭುತ ಕೆಲಸಗಾರ ಎಂಬ ನಂಬಿಕೆಯ ಜೊತೆ ಭವ್ಯ ನಿರೀಕ್ಷೆ ಹುಟ್ಟಿಸಿದ ನಿರ್ದೇಶಕ ಅಭಿಷೇಕ್ ಶೆಟ್ಟಿ ಅವರಿಗಿರುವ ಸಿನಿಮಾ ಅಭಿಮಾನ, ಪ್ರೀತಿ ಕಂಡು ನಿರ್ಮಾಪಕರು “ಗಜಾನನ ಗ್ಯಾಂಗ್” ಎಂಬ ಭರವಸೆಯ ಸಿನಿಮಾ ಮಾಡಿದ್ದಾರೆ.”ಗಜಾನನ ಅಂಡ್ ಗ್ಯಾಂಗ್” ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಹೊರ ಬಂದಾಗಲೇ ಒಂದೊಳ್ಳೆಯ ನಿರೀಕ್ಷೆ ಹುಟ್ಟಿಸಿತ್ತು. ಅಷ್ಟೇ ಒಳ್ಳೆಯ ತಂಡ ಕಟ್ಟಿಕೊಂಡ ನಿರ್ದೇಶಕ ಅಭಿಷೇಕ್ ಶೆಟ್ಟಿ, ಚಿತ್ರದ ಮೊದಲ ಲುಕ್ನಲ್ಲೇ ಮಜಾ ಎನಿಸುವ ಸಿನಿಮಾ ಇದು ಎಂಬ ನಿರೀಕ್ಷೆ ಹೆಚ್ಚಿಸಿದ್ದೂ ಉಂಟು.
ಅವರ “ಗ್ಯಾಂಗ್” ಈಗ ಕಂಪ್ಲೀಟ್ ಮುಗಿದಿದ್ದು, ಬಿಡುಗಡೆಗೆ ಸಜ್ಜಾಗುತ್ತಿದೆ. ಈಗಿನ ಟ್ರೆಂಡ್ಗೆ ತಕ್ಕಂತಹ ಸಿನಿಮಾ ಮಾಡಿರುವ ನಿರ್ದೇಶಕರು, ಯೂಥ್ ಟಾರ್ಗೆಟ್ ಮಾಡಿಯೇ ಸಿನಿಮಾ ಮಾಡಿದ್ದಾರೆ. ಎಲ್ಲಾ ವರ್ಗಕ್ಕೂ ಈ ಚಿತ್ರ ಇಷ್ಟವಾಗುತ್ತೆ ಎಂಬ ನಂಬಿಕೆಯೂ ಚಿತ್ರತಂಡಕ್ಕಿದೆ.
ಅಭಿಷೇಕ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರದಲ್ಲಿ ಶ್ರೀ ಮತ್ತು ಅದಿತಿ ಪ್ರಭುದೇವ ಪ್ರಮುಖ ಆಕರ್ಷಣೆ. ನಿರ್ಮಾಪಕ ನಾಗೇಶ್ ಕುಮಾರ್ ಯುಎಸ್ ಅವರೊಂದಿಗೆ ಪ್ರಶಾಂತ್ ಕುಮಾರ್ ಶೆಟ್ಟಿ ಕೂಡ ನಿರ್ಮಾಣದಲ್ಲಿ ಸಾಥ್ ನೀಡಿದ್ದಾರೆ. ಈಗಾಗಲೇ ಚಿತ್ರದ ಆಡಿಯೋ ಹಕ್ಕು ಆನಂದ್ ಆಡಿಯೋ ಖರೀದಿಸಿದ್ದು, ಪ್ರೇಮಿಗಳ ದಿನದಂದು ಬಿಡುಗಡೆಯಾದ “ಲವ್ ಡೇ ” ಸಾಂಗ್ ವೈರಲ್ ಆಗಿದ್ದು, ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿದೆ.
ಸಹಜವಾಗಿಯೇ ಈ ಬೆಳವಣಿಗೆ ಚಿತ್ರತಂಡದ ಖುಷಿ ಹೆಚ್ಚಿಸಿದೆ. ಇತ್ತೀಚೆಗೆ ನಟ ಕಮ್ ನಿರ್ದೇಶಕ ಅಭಿಷೇಕ್ ಶೆಟ್ಟಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು.ಈ ವೇಳೆ ಅರಸ್ ಸಿನಿಮಾಸ್ ಮೂಲಕ ನಾಗೇಂದ್ರ ಅರಸ್ ಅವರು “ನ್ಯಾಚುರಲ್ ಸ್ಟಾರ್” ಎಂಬ ಬಿರುದು ನೀಡಿ, ಅಭಿಷೇಕ್ ಶೆಟ್ಟಿ ಅವರನ್ನು ಗೌರವಿಸಿದ್ದಾರೆ. ಸಿನಿಮಾ ತಂಡ ಈ ವೇಳೆ ಸಂಭ್ರಮಿಸುವುದರ ಜೊತೆಯಲ್ಲಿ, “ಗ್ಯಾಂಗ್” ಫಲಿತಾಂಶ ನೋಡಲು ಕಾತರರಾಗಿದ್ದಾರೆ. ಈಗಾಗಲೇ ಯಶಸ್ವಿಯಾಗಿ “ಬಿಕಾಂ ಪಾಸ್” ಮಾಡಿದ ಅಭಿಷೇಕ್ ಶೆಟ್ಟಿ ಮತ್ತು ತಂಡ, ಈಗ “ಗ್ಯಾಂಗ್” ಮೂಲಕ ಡಿಸ್ಟಿಂಕ್ಷನ್ ಪಡೆಯುವಂತಾಗಲಿ.
– ಇದು ಅಪರೂಪದಲ್ಲಿ ಅಪರೂಪ ಎನ್ನುವ ಸಿನಿಮಾ ಆರ್ಕೈವ್ ಪೋರ್ಟಲ್. ಇದರ ಹಿಂದೆ ನಿಂತಿರೋದು ಶಶಿಧರ ಚಿತ್ರದುರ್ಗ. ದಶಕಗಳ ಕಾಲ ಪತ್ರಕರ್ತರಾಗಿ, ಸಿನಿಮಾ ಪತ್ರಕರ್ತರಾಗಿ ಕಾರ್ಯನಿರ್ವಹಿಸಿದ್ದ ಶಶಿ ಚಿತ್ರದುರ್ಗ, ಇದೀಗ ಹೊಸದೇನನ್ನೋ ಮಾಡಬೇಕೆಂದು ಹೊರಟಿದ್ದಾರೆ. “ಚಿತ್ರಪಥ” ಅವರ ಕನಸು. ಇದರಲ್ಲಿ ಸಿನಿಮಾ ಇತಿಹಾಸ, ಮಾಹಿತಿ, ಫೋಟೋಗಳನ್ನು ದಾಖಲಿಸುವುದರ ಜೊತೆಗೆ ಇಂದಿನ ಪೀಳಿಗೆಗೆ ಸಿನಿಮಾರಂಗದ ದಶಕಗಳ ಹಿಂದಿನ ಅಪೂರ್ವ ಮಾಹಿತಿ ಫೋಟೋಗಳನ್ನು ತಲುಪಿಸುವುದು, ಸಿನಿಮಾ ಕುರಿತಾಗಿ ಉತ್ತಮ ಅಭಿರುಚಿ ರೂಪಿಸುವುದು ‘ಚಿತ್ರಪಥ’ ಪೋರ್ಟಲ್ನ ಆಶಯ.
ಗಿರೀಶ್ ಕಾಸರವಳ್ಳಿ
ಹಿರಿಯ ಸಿನಿಮಾ ಕಲಾವಿದರು ಹಾಗೂ ತಂತ್ರಜ್ಞರನ್ನು ಸ್ಮರಿಸುವುದರ ಜೊತೆಗೆ ಅಪರೂಪದ ಫೋಟೋ, ಪತ್ರ, ಮಾಹಿತಿಗಳನ್ನು ದಾಖಲಿಸುವುದು, ಉತ್ತಮ ಬರಹ, ಲೇಖನ ವಿಶ್ಲೇಷಣೆಗಳ ಮೂಲಕ ಸಿನಿಮಾ ಕುರಿತಾಗಿ ಒಳನೋಟಗಳನ್ನು ನೀಡುವ ನಿಟ್ಟಿನಲ್ಲಿ ‘ಚಿತ್ರಪಥ’ ಕೆಲಸ ಮಾಡಲಿದೆ.
ಬೆಂಗಳೂರು ಕಂಠೀರವ ಸ್ಟುಡಿಯೋದಲ್ಲಿ ‘ಗುರುಶಿಷ್ಯರು’ (1981) ಚಿತ್ರೀಕರಣ ಸೆಟ್ಗೆ ವರನಟ ಡಾ.ರಾಜಕುಮಾರ್ ಭೇಟಿ ನೀಡಿದ್ದ ಸಂದರ್ಭ. ನಟರಾದ ತೂಗುದೀಪ ಶ್ರೀನಿವಾಸ್, ವಿಷ್ಣುವರ್ಧನ್, ದ್ವಾರಕೀಶ್ ಮತ್ತಿತರರು ಇದ್ದಾರೆ. (ಫೋಟೋಗಳು: ಪ್ರಗತಿ ಅಶ್ವತ್ಥ ನಾರಾಯಣ)
ಇಲ್ಲಿ ಪ್ರಮುಖವಾಗಿ ಕನ್ನಡ ಸಿನಿಮಾ ಹಾಗೂ ಭಾರತದ ಇತರೆ ಪ್ರಾದೇಷಿಕ ಭಾಷಾ ಸಿನಿಮಾ ಸೇರಿದಂತೆ ಜಾಗತಿಕ ಸಿನಿಮಾ ಕುರಿತಾಗಿಯೂ ಫೋಟೋ ಮಾಹಿತಿ ಇರಲಿದೆ. ಜಾಗತಿಕ ಸಿನಿಮಾದ ವಸ್ತು, ವಿಷಯವನ್ನು ಕನ್ನಡಿಗರಿಗೆ ತಲುಪಿಸುವ ಪುಟ್ಟ ವಾಹಕವಾಗಿಯೂ ‘ಚಿತ್ರಪಥ’ ಆರ್ಕೈವ್ ಪೋರ್ಟಲ್ ಕಾರ್ಯನಿರ್ವಹಿಸಲಿದೆ ಎಂಬುದು ವಿಶೇಷ.
ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ಋಣಮುಕ್ತಳು’ (1984) ಚಿತ್ರದ ಮುಹೂರ್ತ ಸಂದರ್ಭ. ಲೇಖಕಿ ಅನುಪಮಾ ನಿರಂಜನ ಅವರೊಂದಿಗೆ ನಟಿಯರಾದ ಪದ್ಮಾ ವಾಸಂತಿ, ಭಾರತಿ, ಜಯಮಾಲಾ
ಚಿತ್ರರಂಗ ನಡೆದುಬಂದ ಹಾದಿಯನ್ನು ದಾಖಲಿಸುವ, ಅಲ್ಲಿನ ಶ್ರೀಮಂತಿಕೆ, ಬೆರಗು, ಪನ್ನು ಹೇಳುವ, ಚಿತ್ರರಂಗದ ಅಂದಿನ ಕಾರ್ಯವೈಖರಿ, ಶೂಟಿಂಗ್ ಸ್ಟುಡಿಯೋಗಳು ಹಾಗೂ ಪರಿಕರಗಳ ವಿವರಗಳನ್ನು ನೀಡುವುದು, ಶ್ರೇಷ್ಠ ತಂತ್ರಜ್ಞರು ಹಾಗೂ ಕಲಾವಿದರ ಕುರಿತ ಮಾಹಿತಿ ನೀಡುವ ನಿಟ್ಟಿನಲ್ಲಿ ಹೆಜ್ಜೆ ಇಡುವ ಒಂದು ಪ್ರಯತ್ನ. ಚಿತ್ರರಂಗದ ದಂತಕಥೆಗಳು ಎನಿಸಿದ ತಂತ್ರಜ್ಞರು ಮತ್ತು ಕಲಾವಿದರು ಅಪರೂಪದ ಫೋಟೋಗಳೊಂದಿಗಿನ ಮಾಹಿತಿ, ಪ್ರತಿಭಾವಂತರ ಕುರಿತ ಟಿಪ್ಪಣಿಗಳು ಕೂಡ ಇದರಲ್ಲಿರಲಿದೆ. ‘ನಾಸ್ಟಾಲ್ಜಿಯಾ”, “‘ಚಿತ್ರ-ಕಥೆ”, “ಶೂಟಿಂಗ್ ಸೋಜಿಗ”, “ಮಾಹಿತಿ– ವಿಶೇಷ”, “‘ನೆನಪು”, “ಪೋಸ್ಟರ್ ಮಾಹಿತಿ”, ” ಅತಿಥಿ ಅಕ್ಷರ” ವಿಭಾಗಗಳ ಮೂಲಕ ತೀರಾ ಅಕಾಡೆಮಿಕ್ ಧಾಟಿಯಲ್ಲಿ ಸಾಗದೆ, ಓದುಗರೊಂದಿಗೆ ಇಂಟರಾಕ್ಟೀವ್ ಆಗಿ ಮಾಹಿತಿ ನೀಡುವ ಪ್ರಯತ್ನ ಇಲ್ಲಾಗಲಿದೆ.
ಗಿರೀಶ್ ಕಾರ್ನಾಡ್ ನಿರ್ದೇಶನದ ‘ಒಂದಾನೊಂದು ಕಾಲದಲ್ಲಿ’ (1978) ಚಿತ್ರದಲ್ಲಿ ಶಂಕರ್ನಾಗ್
ಇನ್ನು, ಫೋಟೋಗಳ ಹಿಂದಿನ ಕತೆ, ಸಂದರ್ಭಗಳನ್ನು ಸ್ವತಃ ಫೋಟೋಗಳನ್ನು ಸೆರೆಹಿಡಿದ ಸ್ಥಿರಚಿತ್ರ ಛಾಯಾಗ್ರಾಹಕರು ನಿರೂಪಿಸಿದ್ದು, ಈ ವೀಡಿಯೋಗಳನ್ನು ’ಚಿತ್ರಪಥ’ ಯೂಟ್ಯೂಬ್ ಚಾನೆಲ್ನಲ್ಲಿ ನೋಡಬಹುದು. ‘ಚಿತ್ರಪಥ’ದಲ್ಲಿ ಪ್ರಮುಖವಾಗಿ ಕನ್ನಡ ಚಿತ್ರರಂಗದ ಬಗ್ಗೆ ಹೆಚ್ಚಿನ ಮಾಹಿತಿ ಇರಲಿದೆ. ಕನ್ನಡ ಚಿತ್ರರಂಗದ ಹಿರಿಯ ಸಿನಿಮಾ ಸ್ಥಿರಚಿತ್ರ ಛಾಯಾಗ್ರಾಹಕರಾದ ಭವಾನಿ ಲಕ್ಷ್ಮೀನಾರಾಯಣ ಮತ್ತು ಪ್ರಗತಿ ಅಶ್ವತ್ಥ ನಾರಾಯಣ ಅವರು ಸೆರೆಹಿಡಿದ ಫೋಟೋಗಳು ಪ್ರಮುಖವಾಗಿ ಪೋರ್ಟಲ್ನಲ್ಲಿ ಬಳಕೆಯಾಗಲಿವೆ.
ಬೆಂಗಳೂರಿನಲ್ಲಿ ನಡೆದ ನಾಸ್ಟಾಲ್ಜಿಯಾ ಕಾರ್ಯಕ್ರಮದಲ್ಲಿ (1977) ಹಿಂದಿ ತಾರೆಯರಾದ ನರ್ಗಿಸ್, ಕಾಮಿನಿ ಕೌಶಲ್, ತಮಿಳು ನಟ ಜೆಮಿನಿ ಗಣೇಶನ್, ಕನ್ನಡ ನಟ ಗಂಗಾಧರ್ ಮತ್ತಿತರರು.
ಭವಾನಿ ಲಕ್ಷ್ಮೀನಾರಾಯಣ ಕನ್ನಡ ಸಿನಿಮಾಗಳು ಮದರಾಸಿನ ಸ್ಟುಡಿಯೋಗಳಲ್ಲಿ ಚಿತ್ರೀಕರಣಗೊಳ್ಳುತ್ತಿದ್ದ ಕಾಲ ಅದು. ಅಲ್ಲಿನ ಸಿನಿಮಾ ಸುದ್ದಿಗಳನ್ನು ತಮ್ಮ ಫೋಟೋಗಳೊಂದಿಗೆ ಕನ್ನಡನಾಡಿಗೆ ಮುಟ್ಟಿಸುತ್ತಿದ್ದವರು ಭವಾನಿ ಲಕ್ಷ್ಮೀನಾರಾಯಣ. ಆಗ ನಟ, ನಟಿಯರು, ತಂತ್ರಜ್ಞರಿಗೆ ಅವರು ಸ್ಟಾರ್ ಫೋಟೋಗ್ರಾಫರ್! ಕನ್ನಡ ಬೆಳ್ಳಿಪರದೆ ಪ್ರವೇಶಿಸಿದ ಬಹುತೇಕ ಕಲಾವಿದರ ಭಾವಚಿತ್ರಗಳನ್ನು ಕ್ಲಿಕ್ಕಿಸಿದ ಹೆಗ್ಗಳಿಕೆ ಅವರದು.
ಭವಾನಿ ಲಕ್ಷ್ಮೀನಾರಾಯಣ
ಫೋಟೋ ಜರ್ನಲಿಸ್ಟ್ ಆಗಿ ಸುಮಾರು ಎರಡೂವರೆ ದಶಕಗಳ ಕಾಲ (1955ರಿಂದ 1980) ಅವರು ಕನ್ನಡ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ್ದಾರೆ. ಐವತ್ತರ ದಶಕದಲ್ಲಿ ಹೆಚ್ಚಿನ ಸಂಖ್ಯೆಯ ಸಿನಿಮಾ ಸ್ಟಿಲ್ ಛಾಯಾಗ್ರಾಹಕರು ಇರಲಿಲ್ಲ. ಹಾಗಾಗಿ ಭವಾನಿಯವರ ಸಿನಿಮಾ ಸ್ಟಿಲ್ಗಳಿಗೆ ಬಹುಬೇಡಿಕೆ ಇತ್ತು. ಚಲನಚಿತ್ರ ಇತಿಹಾಸ ಗ್ರಂಥ ಸೇರಿದಂತೆ ಹತ್ತಾರು ಸಿನಿಮಾ ಪುಸ್ತಕಗಳು, ಪತ್ರಿಕೆಗಳಲ್ಲಿ ಭವಾನಿಯವರು ಸೆರೆಹಿಡಿದ ಅಸಂಖ್ಯ ಛಾಯಾಚಿತ್ರಗಳು ಬಳಕೆಯಾಗಿವೆ. ರಾಜ್ಯೋತ್ಸವ ಪುರಸ್ಕಾರ, ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ, ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಸೇರಿದಂತೆ ಅವರಿಗೆ ಹತ್ತುಹಲವು ಗೌರವ ಸಂದಿವೆ.
ಪ್ರಗತಿ ಅಶ್ವತ್ಥನಾರಾಯಣ ಕನ್ನಡ ಚಿತ್ರರಂಗದ ಬೆಳವಣಿಗೆಯ ಹಾದಿಯಲ್ಲಿ ಪ್ರಗತಿ ಸ್ಟುಡಿಯೋ ಹೆಸರು ಕಡ್ಡಾಯವಾಗಿ ಪ್ರಸ್ತಾಪವಾಗುತ್ತದೆ. ಸ್ಥಿರಚಿತ್ರ ಛಾಯಾಗ್ರಹಣದ ಮೂಲಕ ನಾಲ್ಕು ದಶಕಗಳ ಕಾಲ ಕನ್ನಡ ಚಿತ್ರಜಗತ್ತಿನ ಭಾಗವಾಗಿದ್ದು ಹೆಮ್ಮೆ. ಸಿನಿಮಾ ಸ್ಥಿರಚಿತ್ರ ಛಾಯಾಗ್ರಹಣದಲ್ಲಿ ಅಶ್ವತ್ಥ ಅವರದ್ದು ನಾಲ್ಕು ದಶಕಗಳ ಅನುಭವ. ಅಧಿಕೃತವಾಗಿ ಅಶ್ವತ್ಥರ ಸ್ಥಿರಚಿತ್ರ ಛಾಯಾಗ್ರಹಣ ವೃತ್ತಿ ಆರಂಭವಾಗಿದ್ದು ಮದರಾಸಿನಲ್ಲಿ ಬೆಳ್ಳಿಮೋಡ" ಚಿತ್ರದೊಂದಿಗೆ. ಅವರು ಸ್ಥಿರಚಿತ್ರ ಛಾಯಾಗ್ರಹಣ ಮಾಡಿದ ಕೊನೆಯ ಚಿತ್ರಪ್ರೇಮ ಪ್ರೇಮ ಪ್ರೇಮ”.`”ಪ್ರಗತಿ” ಸ್ಟುಡಿಯೋ ಆರಂಭಿಸಿದ ನಂತರ ಸುಮಾರು 275 ಸಿನಿಮಾಗಳಿಗೆ ಅಶ್ವತ್ಥರು ಸ್ಟಿಲ್ ಫೋಟೋಗ್ರಫಿ ಮಾಡಿದ್ದಾರೆ.
ಪ್ರಗತಿ ಅಶ್ವತ್ಥನಾರಾಯಣ
ಮದರಾಸಿನಲ್ಲಿದ್ದಾಗ ಮಲಯಾಳಂ ಚಿತ್ರಗಳೂ ಸೇರಿದಂತೆ 25ಕ್ಕೂ ಹೆಚ್ಚು ಚಿತ್ರಗಳಿಗೆ ದುಡಿದಿದ್ದರು. ಒಟ್ಟಾರೆ ಸ್ಟಿಲ್ ಫೋಟೋಗ್ರಾಫರ್ ಆಗಿ ಅವರು ಕೆಲಸ ಮಾಡಿದ ಚಿತ್ರಗಳ ಸಂಖ್ಯೆ 300 ದಾಟುತ್ತದೆ. ಪುಟ್ಟಣ್ಣ ಕಣಗಾಲ್ ನಿರ್ದೇಶನದ ಹನ್ನೊಂದು, ಸಿದ್ದಲಿಂಗಯ್ಯನವರ ಹದಿನಾಲ್ಕು ಸಿನಿಮಾಗಳಿಗೆ ಅಶ್ವತ್ಥರು ಸ್ಥಿರಚಿತ್ರ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದ್ದಾರೆ. ಮೈಲುಗಲ್ಲು ಎನಿಸಿದ ಹಲವಾರು ಕನ್ನಡ ಚಿತ್ರಗಳಿಗೆ ಕಾರ್ಯನಿರ್ವಹಿಸಿರುವ ಅಶ್ವತ್ಥರ ಸಂಗ್ರಹದಲ್ಲಿ ಸಹಸ್ರಾರು ಫೋಟೋ ನೆಗೆಟಿವ್ ಇವೆ. ಸಿನಿಮಾ ಸ್ಥಿರಚಿತ್ರ, ಸಿನಿಮಾಗೆ ಸಂಬಂಧಿಸಿದ ಇತರೆ ಫೋಟೋ, ಚಿತ್ರೀಕರಣದ ಸಂದರ್ಭದ ಕ್ಲಿಪಿಂಗ್, ಚಿತ್ರೋದ್ಯಮದ ಕಾರ್ಯಕ್ರಮ, ನಟ- ನಟಿಯರ ಭಾವಚಿತ್ರ, ಕಲಾವಿದರ ಕುಟುಂಬಗಳ ವೈಯಕ್ತಿಕ ಸಮಾರಂಭಗಳು… ಹೀಗೆ ಅವರ ಸಂಗ್ರಹದಲ್ಲಿನ ಅಸಂಖ್ಯಾತ ಫೋಟೋಗಳು ಕನ್ನಡ ಚಿತ್ರರಂಗದ ಇತಿಹಾಸ ದಾಖಲಿಸುತ್ತವೆ.
ಚಿತ್ರಪಥ ಸಂಪಾದಕ – ಶಶಿಧರ ಚಿತ್ರದುರ್ಗ ಹದಿಮೂರು ವರ್ಷಗಳ ಕಾಲ ಕನ್ನಡಪ್ರಭ, ವಿಜಯ ಕರ್ನಾಟಕ, ದಿ ಸ್ಟೇಟ್ ವೆಬ್ ಪೋರ್ಟಲ್ನಲ್ಲಿ ಸಿನಿಮಾ ಪತ್ರಕರ್ತನಾಗಿ ಕೆಲಸ ಮಾಡಿದ್ದಾರೆ. ಸಿನಿಮಾಗೆ ಸಂಬಂಧಿಸಿದಂತೆ ಏಳು ಪುಸ್ತಕಗಳನ್ನು ಪ್ರಕಟಿಸಿದ್ದು, 2015ನೇ ಸಾಲಿನ ರಾಜ್ಯಸರ್ಕಾರದ ಸಿನಿಮಾ ಸಬ್ಸಿಡಿ ಕಮಿಟಿ ಸದಸ್ಯರಾಗೊ ಕಾರ್ಯನಿರ್ವಹಿಸಿದ್ದಾರೆ.
ಶಶಿಧರ ಚಿತ್ರದುರ್ಗ
ಸದ್ಯ ಸಿನಿಮಾ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಅಂದಹಾಗೆ, ‘ಚಿತ್ರಪಥ’ ಪೋರ್ಟಲ್ ವಿನ್ಯಾಸವನ್ನು ಕೃಷ್ಣೇಗೌಡ ಎನ್.ಎಲ್ ಮಾಡಿದರೆ, ಶೀರ್ಷಿಕೆ, ಲೋಗೋ ವಿನ್ಯಾಸವನ್ನು ರಂಜಿತ್ ರಾಮಚಂದ್ರನ್ ಮಾಡಿದ್ದಾರೆ.
‘ಚಿತ್ರಪಥ’ ಲಾಂಚ್ (www.chithrapatha.com) ಮಾರ್ಚ್ 6ರಂದು ಶನಿವಾರ ರೇಣುಕಾಂಬ ಸ್ಟುಡಿಯೋದಲ್ಲಿ ಕನ್ನಡದ ಹೆಮ್ಮೆಯ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರು ‘ಚಿತ್ರಪಥ’ ಅನಾವರಣಗೊಳಿಸಲಿದ್ದಾರೆ.
ಸಂಚಾರಿ ವಿಜಯ್
ಕವಿರಾಜ್
ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್, ಚಿತ್ರಸಾಹಿತಿ ಕವಿರಾಜ್ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಹಿರಿಯ ಸ್ಥಿರಚಿತ್ರ ಛಾಯಾಗ್ರಾಹಕರಾದ ಭವಾನಿ ಲಕ್ಷ್ಮೀನಾರಾಯಣ ಮತ್ತು ಪ್ರಗತಿ ಅಶ್ವತ್ಥ ನಾರಾಯಣ ಅವರನ್ನು ಸನ್ಮಾನಿಸಲಾಗುವುದು.
ಸದ್ಯಕ್ಕೆ ಕನ್ನಡ ಚಿತ್ರರಂಗ ಸೇರಿದಂತೆ ತೆಲುಗು ಇಂಡಸ್ಟ್ರಿಯಲ್ಲೂ ಭಾರೀ ಕುತೂಹಲ ಕೆರಳಿಸಿರುವ ದರ್ಶನ್ ಅಭಿನಯದ “ರಾಬರ್ಟ್” ಚಿತ್ರಕ್ಕೆ ಸೆನ್ಸಾರ್ ಮಂಡಳಿ ಅಸ್ತು ಎಂದಿದೆ. ಹೌದು, ಚಿತ್ರಕ್ಕೆ “ಯು/ಎ” ಪ್ರಮಾಣ ಪತ್ರ ನೀಡಿದೆ. ಮಾರ್ಚ್ ೧೧ ರಂದು ಚಿತ್ರ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ಈಗಾಗಲೇ ಚಿತ್ರದ ಟ್ರೇಲರ್ ಮತ್ತು ಹಾಡುಗಳು ಭರ್ಜರಿ ಸದ್ದು ಮಾಡಿದ್ದಲ್ಲದೆ, ನಿರೀಕ್ಷೆ ಹೆಚ್ಚಿಸಿದೆ. ಸದ್ಯ ಚಿತ್ರತಂಡ ಸಿನಿಮಾ ಪ್ರಚಾರದಲ್ಲಿ ನಿರತವಾಗಿದೆ.
ಇತ್ತೀಚಿಗಷ್ಟೆ ಹೈದರಾಬಾದ್ ಮತ್ತು ಹುಬ್ಬಳ್ಳಿಯಲ್ಲಿ “ರಾಬರ್ಟ್” ಚಿತ್ರತಂಡ ಅದ್ಧೂರಿಯಾಗಿ ಪ್ರೀರಿಲೀಸ್ ಈವೆಂಟ್ ನಡೆದಿದೆ. ಸದ್ಯ ಚಿತ್ರಕ್ಕೆ ಯುಎ ಪ್ರಮಾಣ ಪತ್ರ ಸಿಕ್ಕಿದೆ. ಇದೇ ಸಂಭ್ರಮದಲ್ಲಿರುವ ಚಿತ್ರತಂಡ ಚಿತ್ರದ 3 ನಿಮಿಷದ ಪ್ರೋಮೋವನ್ನು ರಿಲೀಸ್ ಮಾಡಿದೆ. “ರಾಬರ್ಟ್” ಚಿತ್ರದ ಹಾಡು ಹಾಗೂ ಟ್ರೇಲರ್ಗೆ ಕನ್ನಡ ಮತ್ತು ತೆಲುಗಿನಲ್ಲಿ ದೊಡ್ಡ ಮಟ್ಟದ ಮೆಚ್ಚುಗೆಯೇ ಸಿಕ್ಕಿದೆ.
ಚಿತ್ರದಲ್ಲಿ ದರ್ಶನ್ ಅವರಿಗೆ ನಾಯಕಿಯಾಗಿ ಆಶಾ ಭಟ್ ಕಾಣಿಸಿಕೊಂಡಿದ್ದಾರೆ. ಆಶಾ ಭಟ್ ಅವರಿಗೆ ಇದು ಮೊದಲ ಕನ್ನಡ ಸಿನಿಮಾ. ಚಿತ್ರದ ಮತ್ತೊಂದು ವಿಶೇಷವೆಂದರೆ, ವಿನೋದ್ ಪ್ರಭಾಕರ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಲನ್ ಆಗಿ ಖ್ಯಾತ ನಟ ಜಗಪತಿ ಬಾಬು ಅಬ್ಬರಿಸಿದ್ದಾರೆ. ದೇವರಾಜ್, ರವಿಶಂಕರ್ ಸೇರಿದಂತೆ ದೊಡ್ಡ ಕಲಾವಿದರು ಇಲ್ಲಿದ್ದಾರೆ.
ಈ ಮಾತನ್ನು ಹೇಳಿದ್ದು ಸ್ವತಃ ಶುಭಾಪೂಂಜಾ. ಅವರು ಹೇಳಿಕೊಂಡಿದ್ದು ಬಿಗ್ಬಾಸ್-೮ರಲ್ಲಿ. ಹೌದು, ಶುಭಾಪೂಂಜಾ ತಮ್ಮ ಹಳೆಯ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ. ಹುಷಾರಿಲ್ಲದೆ, ಆಸ್ಪತ್ರೆ ಸೇರಿ, ಐಸಿಯುನಲ್ಲಿದ್ದು, ಸಾಯುವ ಪರಿಸ್ಥಿತಿಯಲ್ಲಿದ್ದ ಬಗ್ಗೆ ಹೇಳಿಕೊಂಡಿದ್ದಾರೆ. ಇಷ್ಟಕ್ಕೂ ಶುಭಾಪೂಂಜಾ, ಹೇಳಿಕೊಂಡಿದ್ದು, ಮತ್ತೊಬ್ಬ ಸ್ಪರ್ಧಿ “ಬ್ರಹ್ಮಗಂಟು” ಖ್ಯಾತಿಯ ನಟಿ ಗೀತಾ ಜೊತೆ. ಅವರೊಂದಿಗೆ ಮಾತನಾಡುವಾಗ, ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ್ದಾರೆ ಶುಭಾ.
ಈ ವೇಳೆ, ಅವರು ಹೇಳಿದ್ದಿಷ್ಟು. “ನಾನು ಚಿಕ್ಕವಳಿದ್ದಾಗಲೇ ತುಂಬಾ ಚೂಟಿಯಾಗಿದ್ದೆ. ನನ್ನ ಅಮ್ಮ ಆಗಾಗ ಬಡಿಯುತ್ತಿದ್ದರು. ನಾನು ನನ್ನ ಫ್ರೆಂಡ್ಸ್ ಜೊತೆ ಸದಾ ಗಲಾಟೆ ಮಾಡುತ್ತಿದ್ದೆ. ಆಗ ನನ್ನ ಅಮ್ಮ ಬಯ್ಯುತ್ತಿದ್ದರು. ಅದು ನನಗೆ ಸಿಕ್ಕಾಪಟ್ಟೆ ಕೋಪ ತರಿಸುತ್ತಿತ್ತು. ಒಮ್ಮೆ ನನಗೆ ಹುಷಾರಿಲ್ಲದೆ ಐಸಿಯುನಲ್ಲಿ ಅಡ್ಮಿಟ್ ಮಾಡಲಾಗಿತ್ತು. ಆಗ, ನನ್ನ ಸ್ಥಿತಿ ನೋಡಿದವರು ಇನ್ನೇನು ನಾನು ಸತ್ತೇ ಹೋಗುತ್ತೇನೆ ಅಂತಾನೇ ಅಂದುಕೊಂಡಿದ್ದರು. ಆ ವೇಳೆ ನನಗೆ ಪ್ರಜ್ಞೆಯೇ ಇರಲಿಲ್ಲವಂತೆ. ನನ್ನನ್ನು ನೋಡಿದ ಅಮ್ಮನ ಸ್ಥಿತಿಯೂ ಸಹ ಅಷ್ಟೇ ಚಿಂತಾಜನಕವಾಗಿತ್ತು. ನನ್ನ ಪರಿಸ್ಥಿತಿ ನೋಡಿದ ಅಮ್ಮ ದೇವರ ಮೊರೆ ಹೋದರು. ನಾವು ನಂಬುವ ದೇವರಿಗೆ ಮುಡಿ ಕೊಡುತ್ತೇವೆ ಅಂತ ಅಮ್ಮ ಹರಕೆ ಹೇಳಿದ್ದರು. ಇದರಿಂದ ನಾನು ದಿನೇ ದಿನೇ ಚೇತರಿಸಿಕೊಂಡು ಬಂದೆ. ಆ ದೇವರ ದಯೆಯಿಂದ ನಾನು ಬದುಕುಳಿದೆ! ಇದಾದ ಬಳಿಕ ನನ್ನ ತಲೆಗೂದಲನ್ನು ದೇವರಿಗೆ ಅರ್ಪಿಸಲು ಹೋದೆವು. ನಂತರದ ದಿನಗಳಲ್ಲಿ ತಲೆಗೂದಲಿಲ್ಲದೆ ಸ್ಕೂಲ್ಗೆ ಹೋಗಲು ಮುಜುಗರವಾಗುತ್ತಿತ್ತು. ಮನೆಯಲ್ಲಿ ಅಮ್ಮನ ಬಟ್ಟೆಗಳನ್ನು ತಲೆಗೆ ಕವರ್ ಮಾಡಿಕೊಳ್ಳುತ್ತಿದ್ದೆ. ಸ್ಕೂಲ್ನಲ್ಲಂತೂ ಎಲ್ಲರೂ ನನ್ನ ನೋಡಿ ನಗೋರು..” ಅಂತ ಶುಭಾ ತನ್ನ ಬಾಲ್ಯದ ಜೀವನವನ್ನು ನೆನಪಿಸಿಕೊಂಡಿದ್ದಲ್ಲದೆ, ತನ್ನ ಜೊತೆ ಇದ್ದ ಸ್ಪರ್ಧಿಗಳನ್ನು ನಗೆಗಡಲಲ್ಲಿ ತೇಲಿಸಿದರು.
ಅದೇನೆ ಇರಲಿ, ಈ ಬಾರಿ ಬಿಗ್ಬಾಸ್ ಮನೆಯಲ್ಲಿ ಎಲ್ಲವೂ ಜೋರಾಗಿಯೇ ನಡೆಯುತ್ತಿದೆ. ಅದರಲ್ಲೂ, ಕರಾವಳಿ ಬೆಡಗಿ ಶುಭಾಪೂಂಜಾ, ಎಲ್ಲರ ಜೊತೆ ಓಪನ್ ಆಗಿ ಮಾತನಾಡುತ್ತ, ಎಲ್ಲರ ಕೆಂಗಣ್ಣಿಗೆ ಗುರಿಯಾಗುತ್ತಿರುವುದಂತೂ ನಿಜ. ಶುಭಾ ಅವರ ಮನೆಯೊಳಗಿನ ನಡವಳಿಕೆಗಳು, ಮಾತುಗಳು ಆ ಮನೆಯಲ್ಲಿರುವ ಕೆಲವರಿಗೆ ಇಷ್ಟ ಆಗುತ್ತಿಲ್ಲ. ಪಟ ಪಟ ಅಂತ ಮಾತನಾಡಿ, ಹೇಳೋದನ್ನು ನೇರವಾಗಿ ಹೇಳಿ ಮೊದಲ ವಾರದಲ್ಲೇ ಎಲ್ಲರ ಅಸಮಾಧಾನಕ್ಕೆ ಕಾರಣರಾಗಿದ್ದಾರೆ.
ರಾಜ್ಯ ಸರ್ಕಾರದಿಂದ ಕೊಡಮಾಡುವ ಸಿನಿಮಾ ಪ್ರಶಸ್ತಿಯನ್ನು ವಿತರಿಸದಂತೆ ಇದೀಗ ನ್ಯಾಯಾಲಯ ಆದೇಶಿಸಿದೆ. ಆಯ್ಕೆ ಸಮಿತಿ ನಿಯಮಗಳನ್ನು ಪಾಲಿಸಿಲ್ಲ ಎಂಬ ಕಾರಣಕ್ಕೆ 2018ರ ರಾಜ್ಯ ಪ್ರಶಸ್ತಿ ವಿತರಣೆ ಮಾಡದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶ ನೀಡಿದೆ. ಸದ್ಯಕ್ಕೆ ರಾಜ್ಯ ಚಲನಚಿತ್ರ ಪ್ರಶಸ್ತಿ ಪಟ್ಟಿ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿರುವ ರಾಜ್ಯ ಹೈಕೋರ್ಟ್, ಮುಂದಿನ ಆದೇಶದವರೆಗೆ ಪ್ರಶಸ್ತಿ ವಿತರಣೆ ಮಾಡುವಂತಿಲ್ಲ ಎಂದು ಸರ್ಕಾರಕ್ಕೆ ಸೂಚಿಸಿದೆ. 2018 ರಲ್ಲಿ “ರಾಮನ ಸವಾರಿ”ಗೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ ನೀಡಲಾಗಿತ್ತು. ಆದರೆ, ಈ ಸಿನಿಮಾ ಪ್ರಶಸ್ತಿಗೆ ಸ್ಪರ್ಧೆಯನ್ನೇ ಮಾಡಿರಲಿಲ್ಲ. ಇದನ್ನು ಪ್ರಶ್ನಿಸಿ “ದೇವಕಿ” ಸಿನಿಮಾದ ಕುಮಾರ್ ಎಂಬುವರು ನ್ಯಾಯಾಲಯದ ಮೊರೆ ಹೋಗಿದ್ದರು.
“ರಾಮನ ಸವಾರಿ” ಸಿನಿಮಾವನ್ನು ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರು ನೋಡಿಯೇ ಇಲ್ಲ, ಆದರೂ ಅದಕ್ಕೆ ಪ್ರಶಸ್ತಿ ಘೋಷಣೆ ಮಾಡಿದ್ದಾರೆ. ದಯಾಳ್ ಪದ್ಮನಾಭ್ ನಿರ್ದೇಶನದ ‘ಆ ಕರಾಳ ರಾತ್ರಿ’ ಸಿನಿಮಾ ರೀಮೇಕ್ ಆಗಿತ್ತು. ಆದರೂ, ಅದಕ್ಕೆ ಪ್ರಶಸ್ತಿ ನೀಡಲಾಗಿದೆ. ಆಯ್ಕೆ ಸಮಿತಿಯು ಎಲ್ಲ ನಿಯಮಗಳನ್ನು ಗಾಳಿಗೆ ತೂರಿದೆ’ ಎಂದು ಕುಮಾರ್ ಆರೋಪಿಸಿದ್ದರು. ಪ್ರಶಸ್ತಿಗಾಗಿ “ಪ್ರೊಡಕ್ಷನ್ ಮ್ಯಾನೇಜರ್” ಹೆಸರಿನ ಹೊಸ ವಿಭಾಗವನ್ನೇ ಆಯ್ಕೆ ಸಮಿತಿ ಸೃಷ್ಟಿಸಿತ್ತು. ಸಮಿತಿಯ ಮುಖ್ಯಸ್ಥರ ಸ್ವಜನಪಕ್ಷಪಾತ ಪ್ರಶಸ್ತಿ ಆಯ್ಕೆಯಲ್ಲಿ ಸಾಕಷ್ಟು ಗೊಂದಲ ಇದೆ ಎಂದು ಆರೋಪಿಸಿದ್ದರು. 2018 ರಲ್ಲಿ ಜೋಸೈಮನ್ ಅವರ ನೇತೃತ್ವದ ಸಮಿತಿ ಸಿನಿಮಾಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಿತ್ತು.
ಪ್ರೊಡಕ್ಷನ್ ಮ್ಯಾನೇಜರ್ ಅವರ ಕೆಲಸವೇ ಬೇರೆ ರೀತಿ ಇರುತ್ತದೆ. ಅವರ ಕೆಲಸ ಸಿನಿಮಾದ “ಕಲೆ”ಗೆ ಸಂಬಂಧಿಸಿರುವುದಿಲ್ಲ. ನಟ, ತಂತ್ರಜ್ಞರ ಕೆಲಸಕ್ಕಿಂತಲೂ ಬಹಳ ಭಿನ್ನವಾದ ಕೆಲಸವದು. ಸಿನಿಮಾ ಕೃತಿಗೆ ಅವರ ಕೊಡುಗೆ ಇಲ್ಲದಿದ್ದರೂ ಅಂತಹ ವಿಭಾಗವನ್ನು ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಆಶ್ಚರ್ಯ ಉಂಟು ಮಾಡಿದೆ ಎಂದು ನಿರ್ಮಾಪಕ ಕೃಷ್ಣೇಗೌಡ ಕೂಡ ಹೇಳಿಕೆ ಕೊಟ್ಟಿದ್ದಾರೆ. 2018ರಲ್ಲಿ ದಯಾಳ್ ಪದ್ಮನಾಭ್ ನಿರ್ದೇಶಿಸಿದ್ದ “ಆ ಕರಾಳ ರಾತ್ರಿ” ಸಿನಿಮಾಗೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ ನೀಡಲಾಗಿದೆ. ಎರಡನೇ ಸ್ಥಾನ “ರಾಮನ ಸವಾರಿ”, ಮೂರನೇ ಸ್ಥಾನ “ಒಂದಲ್ಲ ಎರಡಲ್ಲ” ಸಿನಿಮಾಗೆ ನೀಡಲಾಗಿತ್ತು. ಅದೇ ವರ್ಷ ಅತ್ಯುತ್ತಮ ನಟ ಪ್ರಶಸ್ತಿಗೆ ‘ಅಮ್ಮನ ಮನೆ’ ಸಿನಿಮಾದಲ್ಲಿ ನಟಿಸಿದ್ದ ರಾಘವೇಂದ್ರ ರಾಜ್ಕುಮಾರ್ ಅವರನ್ನು ಆಯ್ಕೆ ಮಾಡಲಾಗಿತ್ತು. ಅತ್ಯುತ್ತಮ ನಟಿ ಪ್ರಶಸ್ತಿಗೆ ‘ಇರುವುದೆಲ್ಲವು ಬಿಟ್ಟು’ ಸಿನಿಮಾದ ನಟನೆಗೆ ಮೇಘನಾ ರಾಜ್ ಅವರನ್ನು ಆಯ್ಕೆ ಮಾಡಲಾಗಿತ್ತು. ನಟ ಶ್ರೀನಿವಾಸ ಮೂರ್ತಿ ಅವರಿಗೆ ರಾಜ್ಕುಮಾರ್ ಪ್ರಶಸ್ತಿ ಹಾಗು ಪಿ.ಶೇಷಾದ್ರಿ ಅವರಿಗೆ ಪುಟ್ಟಣ ಕಣಗಾಲ್ ಪ್ರಶಸ್ತಿ ಘೊಷಿಸಲಾಗಿತ್ತು.
ಆಗಾಗ ಸುದ್ದಿಯಲ್ಲಿರೋ ನಟಿಮಣಿಗಳ ಪೈಕಿ ಶ್ರದ್ಧಾದಾಸ್ ಕೂಡ ಒಬ್ಬರು. ಹೌದು, ಶ್ರದ್ಧಾ ದಾಸ್, ಸದಾ ತಮ್ಮ ವಿಭಿನ್ನ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಅದರಲ್ಲೂ ಅವರ ಕಲರ್ಫುಲ್ ಡ್ರೆಸ್ ಹಾಕಿಕೊಂಡು ಫೋಸ್ ಕೊಡೋದು ಅಂದರೆ ಎಲ್ಲಿಲ್ಲದ ಪ್ರೀತಿ.
ಶ್ರದ್ಧಾ ದಾಸ್ ಸದಾ ಬೋಲ್ಡ್ ನಟಿ. ಅವರ ಹೆಸರು ಕೇಳಿದರೆ ಸಾಕು, ಪಡ್ಡೆ ಹುಡುಗರಂತೂ ಕೊಂಚ ಥ್ರಿಲ್ ಆಗೋದು ದಿಟ. ಅಂದಹಾಗೆ, ಶ್ರದ್ಧಾದಾಸ್ ಬಗ್ಗೆ ಇಷ್ಟೊಂದು ಪೀಠಿಕೆ ಯಾಕೆ ಗೊತ್ತಾ? ಅವರು ಹಿಂದಿ, ತೆಲುಗು, ಕನ್ನಡ, ಮಲಯಾಳಂ ಸೇರಿದಂತೆ ಇಂಗ್ಲೀಷ್ ಭಾಷೆಯ ಶಾರ್ಟ್ ಸಿನಿಮಾದಲ್ಲೂ ನಟಿಸಿದ್ದಾರೆ. ಸದ್ಯ ಸುದೀಪ್ ಜೊತೆ “ಕೋಟಿಗೊಬ್ಬ ೩” ಚಿತ್ರದಲ್ಲಿ ನಟಿಸಿದ್ದು, ಅದೀಗ ಬಿಡುಗಡೆಗೆ ರೆಡಿಯಾಗಿದೆ.
ಸದಾ ಸಾಮಾಜಿಕ ಜಾಲ ತಾಣಗಳಲ್ಲಿ ಸದಾ ಬಿಝಿಯಾಗಿರುವ ಶ್ರದ್ಧಾ ದಾಸ್, ಆಗಾಗ ತಮ್ಮ ಬೋಲ್ಡ್ ಫೋಟೊಗಳನ್ನು ಹಂಚಿಕೊಳ್ಳುವ ಮೂಲಕ ಸುದ್ದಿಯಲ್ಲೇ ಇರುತ್ತಾರೆ. ಅದರಲ್ಲೂ ಪಡ್ಡೆಗಳು ಅವರ ಫೋಟೋಗಳಿಗೆ ಸಾಕಷ್ಟು ಕಾಮೆಂಟ್ ಕೂಡ ಮಾಡದೇ ಇರರು.
ಮುಂಬೈನಲ್ಲಿ ಹುಟ್ಟಿ ಬೆಳೆದ ಶ್ರದ್ಧಾ ದಾಸ್, ಸದ್ಯಕ್ಕೆ ಒಳ್ಳೆಯ ಸಿನಿಮಾಗಳನ್ನು ಎದುರು ನೋಡುತ್ತಿದ್ದಾರೆ. ಶ್ರದ್ಧಾಗೆ ಫ್ಯಾಷನ್ ಶೋ ಅಂದ್ರೆ ಎಲ್ಲಿಲ್ಲದ ಇಷ್ಟ. ಹಾಗಾಗಿ ಅವರು ಬಿಡುವು ಸಿಕ್ಕಾಗೆಲ್ಲ, ಬಣ್ಣ ಬಣ್ಣದ ಡ್ರೆಸ್ ಹಾಕ್ಕೊಂಡ್, ಹಾಗೊಂದು ಫೋಸ್ ಕೊಟ್ಟು ಪಡ್ಡೆಗಳ ನಿದ್ದೆಗೆಡಿಸುವಲ್ಲಿ ನಿರತರಾಗಿದ್ದಾರೆ!
ಅಂದಹಾಗೆ, ಶ್ರದ್ಧಾ ದಾಸ್ ಕೂಡ ಈ ಹಿಂದೆ ತೆಲುಗಿನ ಬಿಗ್ಬಾಸ್ ೪ ರಲ್ಲಿ ಸ್ಪರ್ಧಿಯಾಗಿದ್ದರು. ಸದ್ಯ ಹೊಸ ಬಗೆಯ ಪಾತ್ರ, ಕಥೆ ಎದುರು ನೋಡುತ್ತಿರುವ ಶ್ರದ್ಧಾ, ಕನ್ನಡದ “ಕೋಟಿಗೊಬ್ಬ ೩” ಸಿನಿಮಾ ಎದುರು ನೋಡುತ್ತಿದ್ದಾರೆ.
ಹೌದು, ಸದ್ಯಕ್ಕೆ ಸಿನಿಮಾಗಳ ಬಿಡುಗಡೆಯ ಪರ್ವ ಶುರುವಾಗಿದೆ. ಇದಕ್ಕೂ ಮೊದಲೇ ಬಿಡುಗಡೆಗೆ ಸಜ್ಜಾಗಿರುವ ಚಿತ್ರಗಳು ಜೋರು ಸುದ್ದಿ ಮಾಡುತ್ತಿವೆ. ಇನ್ನು, ಕ್ರಿಕೆಟ್ ವಿಚಾರಕ್ಕೆ ಬಂದರೆ, ಸಿನಿಮಾರಂಗಕ್ಕೂ ಕ್ರಿಕೆಟ್ ಪಂದ್ಯಕ್ಕೂ ಅವಿನಾಭಾವ ಸಂಬಂಧವಿದೆ. ಇಲ್ಲಿ ಸಿನಿಮಾ ನಟರು ಕೂಡ ಕ್ರಿಕೆಟ್ ಮೇಲೆ ಹೆಚ್ಚು ಪ್ರೀತಿ ತೋರುವ ಹಿನ್ನೆಲೆಯಲ್ಲಿ, ಅಭಿಮಾನಿಗಳು ಕೂಡ ಕ್ರಿಕೆಟ್ ಆಡೋಕೆ ಬ್ಯಾಟು-ಬಾಲು ಹಿಡಿಯುತ್ತಿರುವುದು ಹೊಸ ಬೆಳವಣಿಗೆಯೇನಲ್ಲ.
ಇತ್ತೀಚೆಗಷ್ಟೇ, ಶಿವರಾಜಕುಮಾರ್ ಅವರು ತಮ್ಮ ಸಿನಿಮಾ ಜರ್ನಿಯಲ್ಲಿ 35 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ, ಫ್ಯಾನ್ಸ್ ಸೇರಿ ಕ್ರಿಕೆಟ್ ಲೀಗ್ ಆಯೋಜಿಸಿದ್ದರು. ಈಗ “ದುನಿಯಾ” ವಿಜಯ್ ಅಭಿಮಾನಿಗಳ ಸರದಿ. ಹೌದು, ಸದ್ಯಕ್ಕೆ “ಸಲಗ” ಚಿತ್ರದ ಬಗ್ಗೆ ಎಲ್ಲೆಡೆ ಹವಾ ಇದೆ. ಹೀಗಾಗಿ ರಾಜ್ಯದಾದ್ಯಂತ ವಿಜಯ್ ಅಭಿಮಾನಿಗಳಿಂದ ಕ್ರಿಕೆಟ್ ಅಭಿಯಾನ ಶುರುವಾಗಿದೆ. “ಸಲಗ” ಚಿತ್ರತಂಡ ಕ್ರಿಕೆಟ್ ಮೂಲಕ ವಿಶಿಷ್ಟವಾಗಿ ಸಿನಿಮಾ ಪ್ರಚಾರ ಮಾಡಲು ಹೊರಟಿದೆ. “ದುನಿಯಾ” ವಿಜಯ್ ಅಭಿಮಾನಿಗಳು ರಾಜ್ಯದಾದ್ಯಂತ “ಸಲಗ” ಕ್ರಿಕೆಟ್ ಕಪ್ ಸರಣಿಯನನು ಆಯೋಜಿಸಿದ್ದಾರೆ.
ಆ ಸರಣಿಗಳಲ್ಲಿ “ಸಲಗ” ಚಿತ್ರತಂಡವೂ ಒಂದು ತಂಡವಾಗಿ ಮೈದಾನಕ್ಕಿಳಿಯಲಿದೆ. ಇದರಿಂದಾಗಿ ಮಾರ್ಚ 7ರಂದು ಕೋಲಾರದ ಮಾಲೂರಿನಲ್ಲಿ “ಸಲಗ” ಕ್ರಿಕೆಟ್ ಕಪ್ ಸರಣಿ ನಡೆಯಲಿದೆ. ಇದೇ ಮಾದರಿಯಲ್ಲಿ ಚಿತ್ರದುರ್ಗ, ಹೊಸಪೇಟೆ ಹಾಗೂ ಮೈಸೂರು ಸೇರಿದಂತೆ ರಾಜ್ಯದ ನಾನಾ ಊರುಗಳಲ್ಲಿ “ಸಲಗ” ಕಪ್ ನಡೆಯಲಿದೆ. ಇತ್ತೀಚೆಗೆ ನಡೆದ ಶಿವರಾಜಕುಮಾರ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಸರಣಿಯಲ್ಲಿ “ಸಲಗ” ಚಿತ್ರತಂಡ ಭಾಗವಹಿಸಿತ್ತು. ಪ್ರದರ್ಶನ ಪಂದ್ಯ ಆಡಿದ “ಸಲಗ” ಟೀಮ್ ಭರ್ಜರಿಯಾಗಿ ಗೆಲುವು ದಾಖಲಿಸಿತ್ತು. ಈಗ ಅದರ ವಿಡಿಯೋ ಕೂಡ ರಿಲೀಸ್ ಆಗಿದೆ.
ಬಿಡುಗಡೆಗೂ ಮುನ್ನ ಹಲವು ದಾಖಲೆ ಮಾಡಿದೆ. ತುಳು ಭಾಷೆಯ ಚಿತ್ರದಲ್ಲಿ ಮೊದಲ ಬಾರಿಗೆ ಅನಂತ್ನಾಗ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. 8K ಕ್ಯಾಮರಾ ಬಳಸಿದ ಮೊದಲ ಸಿನೆಮಾ ಎಂಬ ಹೆಗ್ಗಳಿಕೆ ಇದಕ್ಕಿದೆ. ದುಬೈನಲ್ಲಿ ಮಾರ್ಚ್ 13 ರಂದು ‘ವರ್ಲ್ಡ್ ಪ್ರೀಮಿಯರ್ ಶೋ’ ಕೂಡ ನಡೆದಿದೆ.
ಅನಂತ್ನಾಗ್ ಕನ್ನಡ ಚಿತ್ರರಂಗ ಕಂಡ ಅದ್ಭುತ ನಟ. ಈಗಾಗಲೇ ಸಾಕಷ್ಟು ಸಿನಿಮಾಗಳ ಮೂಲಕ ತಮ್ಮದೇ ಛಾಪು ಮೂಡಿಸಿರುವ ಅನಂತ್ನಾಗ್, ಇದೇ ಮೊದಲ ಬಾರಿಗೆ ತುಳು ಚಿತ್ರರಂಗಕ್ಕೆ ಎಂಟ್ರಿಯಾಗಿದ್ದಾರೆ. ಹೌದು, ತುಳು ಭಾಷೆಯಲ್ಲಿ ತಯಾರಾಗಿರುವ “ಇಂಗ್ಲಿಷ್-ಎಂಕ್ಲೆಗ್ ಬರ್ಪುಜಿ ಬ್ರೋ” ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಅವರದು ವಿಶೇಷ ಪಾತ್ರ. ಈ ಚಿತ್ರದಲ್ಲಿ ಹಲವು ವಿಶೇಷತೆಗಳಿವೆ. ಈಗಾಗಲೇ ಚಿತ್ರೀಕರಣ ಪೂರೈಸಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿರುವ ಈ ಚಿತ್ರ, ಮಾರ್ಚ್ 26ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ ಎಂಬುದು ವಿಶೇಷತೆಗಳಲ್ಲೊಂದು.
ಹೌದು, ತುಳು ಚಿತ್ರರಂಗದಲ್ಲಿ ಬಹುನಿರೀಕ್ಷೆ ಇರುವ ಈ ಚಿತ್ರ ಮಂಗಳೂರು, ಉಡುಪಿ ಸೇರಿದಂತೆ ಗಲ್ಫ್ ಹಾಗು ವಿಶ್ವದ ನಾನಾ ಕಡೆ ಏಕಕಾಲದಲ್ಲಿ ರಿಲೀಸ್ ಆಗುತ್ತಿದೆ. ಅಕ್ಮೆ ಮೂವೀಸ್ ಇಂಟರ್ನ್ಯಾಷನಲ್ ಬ್ಯಾನರ್ನಲ್ಲಿ ದುಬೈನ ಖ್ಯಾತ ಉದ್ಯಮಿ ಹರೀಶ್ ಶೇರಿಗಾರ್ ಮತ್ತು ಶರ್ಮಿಳಾ ಶೇರಿಗಾರ್ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಹಿಂದೆ ಇವರು “ಮಾರ್ಚ್ 22”, “ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ”, “ಯಾನ” ಚಿತ್ರ ನಿರ್ಮಿಸಿದ್ದಾರೆ. ಕೆ.ಸೂರಜ್ ಶೆಟ್ಟಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಇನ್ನು ಈ ಚಿತ್ರದಲ್ಲಿ ತುಳು ಚಿತ್ರರಂಗದ ಹಾಸ್ಯ ದಿಗ್ಗಜರ ದಂಡೇ ಇದೆ. ಚಿತ್ರದ ಬಗ್ಗೆ ಹೇಳುವುದಾದರೆ, ಬಿಡುಗಡೆಗೂ ಮುನ್ನ ಹಲವು ದಾಖಲೆ ಮಾಡಿದೆ. ತುಳು ಭಾಷೆಯ ಚಿತ್ರದಲ್ಲಿ ಮೊದಲ ಬಾರಿಗೆ ಅನಂತ್ನಾಗ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.
ಅಷ್ಟೇ ಅಲ್ಲ, 8K ಕ್ಯಾಮರಾ ಬಳಸಿದ ಮೊದಲ ಸಿನೆಮಾ ಎಂಬ ಹೆಗ್ಗಳಿಕೆ ಇದಕ್ಕಿದೆ. ಬೆಂಗಳೂರಿನ ಪ್ಯಾಲೇಸಿನಲ್ಲಿ ಚಿತ್ರೀಕರಿಸಿದ ಹೆಮ್ಮೆಯೂ ಇದೆ. ದುಬೈನಲ್ಲಿ ಮಾರ್ಚ್ 13 ರಂದು ‘ವರ್ಲ್ಡ್ ಪ್ರೀಮಿಯರ್ ಶೋ’ ಕೂಡ ನಡೆದಿದೆ. ಸಿನಿಮಾ ವೀಕ್ಷಿಸಿದ ಪ್ರತಿಯೊಬ್ಬರೂ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಿನಿಮಾ ದುಬೈನಲ್ಲಿ ‘ವರ್ಲ್ಡ್ ಪ್ರೀಮಿಯರ್ ಶೋ’ ನಡೆದಿದ್ದು, ತುಳು ಚಿತ್ರರಂಗದ ಇತಿಹಾಸದಲ್ಲೇ ಮೊದಲು ಎಂಬುದು ವಿಶೇಷ.
ಇನ್ನು ಚಿತ್ರದಲ್ಲಿ ಹಾಸ್ಯವೇ ಹೈಲೈಟ್ ಆಗಿದೆ. ಪಂಚಿಗ್ ಡೈಲಾಗ್ಗಳಿಗೆ ಹೆಚ್ಚು ಆದ್ಯತೆ ಇದೆ. ಚಿತ್ರದಲ್ಲಿ ತುಳು ರಂಗಭೂಮಿ ಹಾಸ್ಯ ನಟರಾದ ಅರವಿಂದ್ ಬೋಳಾರ್, ನವೀನ ಡಿ’ಪಡೀಲ್, ಭೋಜರಾಜ್ ವಾಮಂಜೂರ್, ವಿಸ್ಮಯ್ ವಿನಾಯಕ್, ದೀಪಕ್ ರೈ ಇದ್ದಾರೆ. ಹೀರೋ ಆಗಿ “ದಿಯಾ” ಖ್ಯಾತಿಯ ಪೃಥ್ವಿ ಅಂಬರ್ ಮತ್ತು ಅವರಿಗೆ ನಾಯಕಿಯಾಗಿ ನವ್ಯಾ ಪೂಜಾರಿ ನಟಿಸಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆಯ ಜವಾಬ್ದಾರಿಯನ್ನು ನಿರ್ದೇಶಕ ಸೂರಜ್ ಶೆಟ್ಟಿ ವಹಿಸಿಕೊಂಡರೆ, ಕದ್ರಿ ಮಣಿಕಾಂತ್ ಸಂಗೀತ ನೀಡಿದ್ದಾರೆ. ಕೃಷ್ಣ ಸಾರಥಿ ಹಾಗೂ ಅಭಿಲಾಷ್ ಕಲಾತಿ ಛಾಯಾಗ್ರಹಣವಿದೆ. ಮನು ಶೆಡ್ಗರ್ ಸಂಕಲನ ಮಾಡಿದ್ದಾರೆ. ಮಹೇಶ್ ಎನ್ಮೂರಿ ಅವರ ಕಲಾ ನಿರ್ದೇಶನವಿದೆ. ಅರ್ಜುನ್ ಲೆವಿಸ್, ಲೋಕು ಕುಡ್ಲ ಸಾಹಿತ್ಯವಿದೆ. “ಭಜರಂಗಿ” ಮೋಹನ್ ಅವರ ನೃತ್ಯ ನಿರ್ದೇಶನವಿದೆ.