Categories
ಸಿನಿ ಸುದ್ದಿ

ಹೊನ್ನಾವರದಲ್ಲಿ‌ ತಾರಾ ದಂಡಿ ಸತ್ಯಾಗ್ರಹ: ವಿಶಾಲ್‌ರಾಜ್‌ ಕಾಂಬಿನೇಷನ್‌ನಲ್ಲಿ ಮತ್ತೆ ಶುರುವಾಯ್ತ ಹೊಸ ಸಿನಿಮಾ

ತಾರಾ ಈಗ ದಂಡಿ ಸತ್ಯಾಗ್ರಹ ಶುರುಮಾಡಿದ್ದಾರೆ! ಅರೇ, ಹೀಗಂದಾಕ್ಷಣ, ಇನ್ನೇನೋ ಅರ್ಥ ಮಾಡಿಕೊಳ್ಳಬೇಕಿಲ್ಲ. ಇದು ಸಿನಿಮಾ ವಿಷಯ. ಅವರೀಗ “ದಂಡಿ” ಎಂಬ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಆ ಚಿತ್ರಕ್ಕೆ ಈಗಾಗಲೇ ಚಾಲನೆಯೂ ಸಿಕ್ಕಿದೆ. ಅವರೊಂದಿಗೆ ಪ್ರಮುಖವಾಗಿ ನಟ ಸುಚೀಂದ್ರ ಪ್ರಸಾದ್‌ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನು, ವಿಶಾಲ್‌ ರಾಜ್‌ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಇವರು “ಸಾವಿತ್ರಿ ಬಾಯಿಪುಲೆ” ಸಿನಿಮಾ ನಿರ್ದೇಶಿಸಿದ್ದರು. ಈ ಸಿನಿಮಾದಲ್ಲೂ ತಾರಾ ಹೈಲೈಟ್‌ ಆಗಿದ್ದರು. ಈಗ ಅದೇ ಕಾಂಬಿನೇಷನ್‌ನಲ್ಲಿ “ದಂಡಿ” ಶುರುವಾಗಿದೆ. ಇದು ಸ್ವತಂತ್ರ ಪೂರ್ವದಲ್ಲಿ ನಡೆದ‌ ದಂಡಿ (ಉಪ್ಪಿನ) ಸತ್ಯಾಗ್ರಹದ ಬಗ್ಗೆ ಶುರುವಾಗುತ್ತಿರುವ ಚಿತ್ರ. ಡಾ.ರಾಜಶೇಖರ್ ಮಠಪತಿ‌ ಅವರ ಕಾದಂಬರಿ ಆಧರಿಸಿ ನಿರ್ಮಾಣವಾಗುತ್ತಿರುವ ಚಿತ್ರದ ಮುಹೂರ್ತ ಇತ್ತೀಚೆಗೆ ಹೊನ್ನಾವರದ ಮೂಡಗಣಪತಿ ದೇವಸ್ಥಾನದಲ್ಲಿ ನೆರವೇರಿದೆ.

ಪದ್ಮಶ್ರೀ ಸುಕ್ರಿಗೌಡ ಅವರು ಚಿತ್ರೀಕರಣಕ್ಕೆ ಚಾಲನೆ ನೀಡಿದ್ದಾರೆ. ಹೊನ್ನಾವರ, ಸಿದ್ದಾಪುರ, ಅಂಕೋಲ ಸುತ್ತಮುತ್ತ ಮೂವತ್ತು ದಿನಗಳ‌‌ ಕಾಲ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ.‌ ಕಲ್ಯಾಣಿ ‌ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಉಷಾರಾಣಿ ಅವರು ನಿರ್ಮಾಣ ಮಾಡುತ್ತಿದ್ದಾರೆ. ನಿರ್ದೇಶಕ ವಿಶಾಲ್ ರಾಜ್ ಅವರೆ ಚಿತ್ರಕಥೆ ಬರೆದಿದ್ದಾರೆ.

ಚಿತ್ರಕ್ಕೆ ವೆಂಕಟೇಶ್ ಅವರ ಛಾಯಾಗ್ರಹಣವಿದೆ. ಸಾಹಿತ್ಯ ಹಾಗೂ ಸಂಭಾಷಣೆಯನ್ನು ರಾಗಂ ಅವರು ಬರೆದಿದ್ದು, ರಾಮ್ ಕ್ರಿಶ್ ಸಂಗೀತ ನೀಡುತ್ತಿದ್ದಾರೆ. ತಾರಾ ಹಾಗೂ ಸುಚೀಂದ್ರ ಪ್ರಸಾದ್‌ ಅವರೊಂದಿಗೆ ಯುವಾನ್ ದೇವ್, ಶಾಲಿನಿ ಭಟ್ ಈ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ದಾಮೋದರ್ ನಾಯ್ಡು ಕೂ‌ಡ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಉತ್ತರ ಕನ್ನಡ‌ದ ಸ್ವಾತಂತ್ರ್ಯ ಹೋರಾಟಗಾರರಿಗೆ ಈ ಚಿತ್ರ ಸಮರ್ಪಣೆಯಾಗಲಿದೆ ಎಂಬುದು ಚಿತ್ರತಂಡದ ಮಾತು.‌ ಸ್ವತಂತ್ರ ಬಂದು 75 ವರ್ಷ‌ಗಳಾಗುತ್ತಿರುವ ಈ ಶುಭ ಸಂದರ್ಭದಲ್ಲಿ ಈ‌ ಚಿತ್ರವನ್ನು ತೆರೆಗೆ ತರಲು‌ ನಿರ್ದೇಶಕರು ಸಜ್ಜಾಗಿದ್ದಾರೆ.

Categories
ಸಿನಿ ಸುದ್ದಿ

ತ್ರಿಕೋನ ಇದು ಮೂರು ತಲೆಮಾರಿನ ಕಥೆ ! ಕನ್ನಡ ತೆಲುಗು, ತಮಿಳಲ್ಲಿಯೂ ಬಿಡುಗಡೆಗೆ ರೆಡಿ

65ರ ಇಳಿವಯಸ್ಸಿನ ಅನುಭವ, 45ರ ಹರೆಯದ ಅಹಂ, 25ರ ವಯಸ್ಸಿನ ಶಕ್ತಿ ಈ ಮೂರು ವಯಸ್ಸಿನ ಹಿನ್ನೆಲೆಯಲ್ಲಿ ಸಾಗುವ ಚಿತ್ರವೇ ತ್ರಿಕೋನ. ಈ ಹಿಂದೆ 2014ರಲ್ಲಿ “143” ಸಿನಿಮಾ ಮಾಡಿದ್ದ ಚಂದ್ರಕಾಂತ್ ಇದೀಗ “ತ್ರಿಕೋನ” ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವ ಮೂಲಕ ಮತ್ತೆ ಬಂದಿದ್ದಾರೆ. ಈ ಚಿತ್ರಕ್ಕೆ ರಾಜಶೇಖರ್ ಬಂಡವಾಳ ಹಾಕಿ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಇದೇ ಶುಕ್ರವಾರ ಈ ಸಿನಿಮಾ ಬಿಡುಗಡೆ ಆಗುತ್ತಿದೆ.

ಮನುಷ್ಯ ಜೀವನದಲ್ಲಿ ತಾಳ್ಮೆ ಇದ್ರೆ ಏನೆಲ್ಲ ಸಂಪಾದನೆ ಮಾಡ್ತಾನೆ.. ತಾಳ್ಮೆ ಇಲ್ಲದಿದ್ದರೆ ಏನೆಲ್ಲ ಕಳೆದುಕೊಳ್ಳುತ್ತಾನೆ ಎಂಬುದೇ ಈ ಸಿನಿಮಾದಲ್ಲಿ ನಿರ್ದೇಶಕರು ಹೇಳಹೊರಟಿದ್ದಾರೆ. ಈಗಿನ ಪೀಳಿಗೆ ತಾಳ್ಮೆ ಇಲ್ಲದೆ ಸಾಕಷ್ಟು ಅನಾಹುತ ಮಾಡಿಕೊಳ್ಳುತ್ತಾರೆ. ಅದನ್ನು ಮನೆಯ ಇತರ ಸದಸ್ಯರಿಗೆ ನೀಡುತ್ತಾರೆ. ಇದಕ್ಕೆ ಸರಿಹೊಂದುವ ಮೂರು ತಲೆಮಾರುಗಳ ಮೂಲಕ ಅದನ್ನು ತೋರಿಸಲಿದ್ದೇವೆ ಎಂಬುದು ನಿರ್ದೇಶಕ ಚಂದ್ರಕಾಂತ್ ಮಾತು.
ಬೆಂಗಳೂರು, ತುಮಕೂರು, ಹಾಸನ, ಸಕಲೇಶಪುರ, ಗುಂಡ್ಯ, ಸುಬ್ರಮಣ್ಯ, ಮಂಗಳೂರು, ಚಾರ್ಮಾಡಿ ಘಾಟ್, ಶಿರಾಡಿಘಾಟ್​ನಲ್ಲಿ ಸಿನಿಮಾ ಚಿತ್ರೀಕರಣವಾಗಿದೆ.

ವಿಶೇಷವೆಂದರೆ ಹೆಬ್ರಿ ಮತ್ತು ಆಗುಂಬೆ ಮಧ್ಯೆ ಕೂಡ್ಲು ತೀರ್ಥ ಫಾಲ್ಸ್​ನಲ್ಲಿ ಶೂಟಿಂಗ್ ಮಾಡಿಕೊಂಡ ಮೊದಲ ಸಿನಿಮಾ ಇದು. ಇದೂ ಸಹ ಈ ಚಿತ್ರದ ವಿಶೇಷತೆಗಳಲ್ಲೊಂದು ಎನ್ನುತ್ತಾರೆ ಚಂದ್ರಕಾಂತ್.
ಸುರೇಶ್ ಹೆಬ್ಳಿಕರ್, ಅಚ್ಯುತ್ ಕುಮಾರ್, ಸಾಧು ಕೋಕಿಲ, ಸುಧಾರಾಣಿ, ಹೀಗೆ ಸಾಕಷ್ಟು ಕಲಾವಿದರು ಈ ಸಿನಿಮಾದಲ್ಲಿದ್ದಾರೆ. ರಾಜವೀರ್​ ಮತ್ತು ಮಾರುತೇಶ್ ಅನ್ನೋ ಹೊಸ ಪ್ರತಿಭೆಗಳು ಈ ಸಿನಿಮಾ ಮೂಲಕ ಆಗಮಿಸುತ್ತಿದ್ದಾರೆ.
ಶ್ರೀನಿವಾಸ್ ವಿನ್ನಕೋಟ್ ಛಾಯಾಗ್ರಹಣವಿದೆ. ಸುರೇಂದ್ರನಾಥ್ ಪಿ ಆರ್ ಸಂಗೀತ, ಹಿನ್ನಲೆ ಸಂಗೀತವಿದೆ.

ಜೀವನ್ ಪ್ರಕಾಶ್​ ಎನ್ ಸಂಕಲನ. ಹೈಟ್ ಮಂಜು ಕೋರಿಯೋಗ್ರಾಫಿ, ಚೇತನ್ ಡಿಸೋಜ್ ಮತ್ತು ಜಾನಿ ಮಾಸ್ಟರ್​ ಸಾಹಸ ನಿರ್ದೇಶನ ಮಾಡಿದ್ದಾರೆ.
ಕನ್ನಡದಲ್ಲಿ ತ್ರಿಕೋನ, ತೆಲುಗಿನಲ್ಲಿ ತ್ರಿಕೋನಂ ಮತ್ತು ತಮಿಳಿನಲ್ಲಿ ಗೋಸುಲೋ ಶೀರ್ಷಿಕೆಯಲ್ಲಿ ಸಿನಿಮಾ ಏಕಕಾಲದಲ್ಲಿ ಬಿಡುಗಡೆ ಆಗಲಿದೆ. ಸೆನ್ಸಾರ್ ಮಂಡಳಿಯಿಂದಲೂ ಯಾವುದೇ ಕಟ್ ಇಲ್ಲದೆ ಯೂ/ಎ ಪ್ರಮಾಣಪತ್ರವನ್ನು ಪಡೆದುಕೊಂಡಿದೆ. ಚಿತ್ರದ ಆಡಿಯೋ ಹಕ್ಕುಗಳನ್ನು ಪೀಪಲ್ಸ್ ಸಂಸ್ಥೆ ಪಡೆದುಕೊಂಡಿದೆ.

Categories
ಸಿನಿ ಸುದ್ದಿ

ಬಿಗ್‌ಬಾಸ್‌ ಮನೆಯಿಂದ ಆಚೆ ಬಂದ ಬ್ರಹ್ಮಗಂಟು ಖ್ಯಾತಿಯ ನಟಿ ಗುಂಡಮ್ಮ

ಬಿಗ್​ಬಾಸ್​ ಸೀಸನ್​ 8ರ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದ ಗೀತಾ ಭಾರತಿಭಟ್ ಮೂರನೇ ವಾರಕ್ಕೆ ಮನೆಯಿಂದ ಹೊರ ಬಂದಿದ್ದಾರೆ. ದಢೂತಿ ದೇಹದ ಗೀತಾ ಭಾರತಿಭಟ್‌ “ಬ್ರಹ್ಮಗಂಟು” ಧಾರಾವಾಹಿಯ ಮೂಲಕ ಕಿರುತೆರೆಗೆ ಎಂಟ್ರಿಯಾಗಿ‌, ನಂತರದ ದಿನಗಳಲ್ಲಿ ಗುಂಡಮ್ಮ ಅಂತಾನೇ ಜನಪ್ರಿಯಗೊಂಡಿದ್ದರು.

ಮೂಲತಃ ಕಾರ್ಕಳದವರಾದ ಗೀತಾ ಭಾರತಿಭಟ್‌,‌ ನಟನೆ ಬಗ್ಗೆ ಅಪಾರ ಪ್ರೀತಿ ಬೆಳೆಸಿಕೊಂಡಿದ್ದರು. ಆ ಕಾರಣಕ್ಕೆ ಅವರು, ಬೆಂಗಳೂರಿನತ್ತ ಮುಖ ಮಾಡಿದ್ದರು. ಸಿಕ್ಕಾಪಟ್ಟೆ ಶ್ರಮಪಟ್ಟಿದ್ದ ಗೀತಾ ಭಾರತಿಭಟ್‌, ತನಗೆ ಸಿಕ್ಕ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಂಡರು. ಮನೆಮಾತಾದ ಈ ಗುಂಡಮ್ಮ, ಬಿಗ್‌ಬಾಸ್‌ ಮನೆಗೆ ಹೋಗುವ ಅವಕಾಶ ಪಡೆದಾಗ, ಎಲ್ಲರಿಗೂ ಅಚ್ಚರಿಯಾಗಿದ್ದು ನಿಜ. ಬಿಗ್‌ಬಾಸ್‌ ಮನೆ ಒಳ ನಡೆದ ಇವರು, ಬಹುತೇಕ ಅಳುಮೊಗದಲ್ಲಿ ಕಂಡಿದ್ದೇ ಹೆಚ್ಚು. ಬಿಗ್‌ಬಾಸ್‌ ಕೊಟ್ಟ ಟಾಸ್ಕ್ ಗಳನ್ನೆಲ್ಲಾ ಚೆನ್ನಾಗಿ ನಿಭಾಯಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಆದರೆ, ತೀರಾ ಮೃದು ಸ್ವಭಾವದ ಇವರಿಗೆ ಬಿಗ್‌ಬಾಸ್ ಮನೆಯಲ್ಲಿ ಬಹಳಷ್ಟು ದಿನಗಳ ಕಾಲ ಇರಲು ಸಾಧ್ಯವಾಗಲಿಲ್ಲ.

ಕಣ್ಣೀರೇ ಮುಳುವಾಯ್ತ?
ಬಿಗ್‌ಬಾಸ್‌ ಮನೆಯಲ್ಲಿ ಸದಾ ಕಣ್ಣೀರು ಹಾಕುತ್ತಲೇ ಇದ್ದ ಇವರು ಎಲ್ಲರಿಗೂ ಹತ್ತಿರವಾಗಿದ್ದರು. ಒಬ್ಬರ ಬಗ್ಗೆ ಕೇವಲವಾಗಿ ಮಾತನಾಡಿದ ಬಳಿಕ ಸ್ವತಃ ಅವರೇ ನಾ‌ನು ಯಾಕೆ ಹೀಗೆ ಅಂದೆ ಅಂತ ಪಶ್ಚಾತ್ತಾಪಪಡುತ್ತಿದ್ದರು. ಬಿಗ್‌ಬಾಸ್ ಮನೆಮಂದಿ ಇವರನ್ನು ಸಮಾಧಾನ ಮಾಡುವುದರಲ್ಲಿಯೇ ಸುಸ್ತಾಗಿ‌ ಹೋಗುತ್ತಿದ್ದರು. ಹೀಗೆ ಗೀತಾ ಭಾರತಿ‌ ಭಟ್ ದಿನದಿಂದ ದಿನಕ್ಕೆ ಆ ಮನೆಯಲ್ಲಿ ಮಂಕಾಗಿದ್ದರು. ಮೂರನೇ ವಾರಕ್ಕೆ ಅವರು ಬಿಗ್‌ಬಾಸ್ ಮನೆಯಿಂದಲೇ ಹೊರಬಂದಿದ್ದಾರೆ.

Categories
ಸಿನಿ ಸುದ್ದಿ

ನೂತನ್‌ ಉಮೇಶ್‌ ಅವರ ವಿನೂತನ ಪ್ರಯತ್ನ! ನಾಲ್ವರು ನಿರ್ದೇಶಕರು, ನಾಲ್ಕು ಕಥೆ, ನಾಲ್ಕು ಭಾಷೆ, ಒಂದೇ ಸಿನಿಮಾ!! ಇದು ಫಸ್ಟ್‌ ನಿರ್ಮಾಣದ ಚಿತ್ರ

ನಿರ್ದೇಶಕ ನೂತನ್‌ ಉಮೇಶ್‌ ಇದೀಗ ವಿನೂತನ ಪ್ರಯತ್ನಕ್ಕೆ ಕೈ ಹಾಕಿದ್ದಾರೆ! ಹೌದು,‍ “ಕೃಷ್ಣನ್‌ ಮ್ಯಾರೇಜ್‌ ಸ್ಟೋರಿ” ಸಿನಿಮಾ ಮೂಲಕ ಸೌಂಡು ಮಾಡಿದ ನೂತನ್‌ ಉಮೇಶ್‌, ಆ ನಂತರದ ದಿನಗಳಲ್ಲಿ “ಅಸ್ತಿತ್ವ” ಮೂಲಕ ಸುದ್ದಿಯಾದರು. ಆ ಚಿತ್ರ ಹೊರಬಂದ ಬಳಿಕ ವಿನೋದ್‌ ಪ್ರಭಾಕರ್‌ ಅಭಿನಯದ “ಫೈಟರ್‌”ಗೆ ಆಕ್ಷನ್-ಕಟ್‌ ಹೇಳಿದ್ದಾರೆ. ಆ ಸಿನಿಮಾ ಇನ್ನೇನು ಬಿಡುಗಡೆಯಾಗಬೇಕಷ್ಟೇ. ಈ ಬೆನ್ನಲ್ಲೇ ನೂತನ್‌ ಉಮೇಶ್‌ ಹೊಸದೊಂದು ಪ್ರಯೋಗಕ್ಕಿಳಿದಿರುವುದು ವಿಶೇಷ. ಹಾಗಾದರೆ, ನೂತನ್‌ ಉಮೇಶ್‌ ಅವರ ನೂತನ ಪ್ರಯೋಗವೇನು? ವಿಷಯವಿಷ್ಟೇ. ಇಲ್ಲಿಯವರೆಗೆ ನಿರ್ದೇಶಕರಾಗಿದ್ದ ಅವರು, ಈಗ ನಿರ್ಮಾಪಕರೂ ಆಗಿದ್ದಾರೆ ಅನ್ನೋದೂ ವಿಶೇಷ.‌

“ಮೋಹಕ್‌ ಸಿನಿಮಾಸ್”‌ ಎಂಬ ಬ್ಯಾನರ್‌ ಶುರುಮಾಡಿ, ಆ ಮೂಲಕ ಸಿನಿಮಾ ನಿರ್ಮಾಣಕ್ಕೂ ಇಳಿದಿದ್ದಾರೆ. ಇದಷ್ಟೇ ಆಗಿದ್ದರೆ ಸುದ್ದಿಯಾಗುತ್ತಿರಲಿಲ್ಲ. ಅವರು ತಮ್ಮ ಹೊಸ ಬ್ಯಾನರ್‌ ಮೂಲಕ ವಿಶೇಷ, ವಿಭಿನ್ನ ಎನ್ನುವ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ನಾಲ್ಕು ಜನ ನಿರ್ದೇಶಕರು, ನಾಲ್ಕು ಭಾಷೆ ಸಿನಿಮಾ, ನಾಲ್ಕು ಕಥೆಗಳು ಆದರೆ ಸಿನಿಮಾ ಮಾತ್ರ ಒಂದೇ. ಈಗಾಗಲೇ ಅವರು ಸದ್ದಿಲ್ಲದೆಯೇ, ತಮಿಳು, ಮಲಯಾಳಂ ಭಾಷೆಯಲ್ಲಿ ಸಿನಿಮಾ ಚಿತ್ರೀಕರಣ ಮಾಡಿದ್ದಾರೆ. ತೆಲುಗು ಮತ್ತು ಕನ್ನಡದಲ್ಲಿ ತಯಾರಾಗಬೇಕಿದೆ. ಸದ್ಯಕ್ಕೆ ಶೀರ್ಷಿಕೆ ಅನೌನ್ಸ್‌ ಮಾಡದ ನೂತನ್‌ ಉಮೇಶ್‌, ಇಷ್ಟರಲ್ಲೇ ಕನ್ನಡ ಸಿನಿಮಾ ಮುಹೂರ್ತ ನೆರವೇರಿಸಿ, ವಿಭಿನ್ನವಾಗಿಯೇ ಘೋಷಣೆ ಮಾಡುವ ಉದ್ದೇಶ ಇಟ್ಟುಕೊಂಡಿದ್ದಾರೆ.
ತಮ್ಮ ಡ್ರೀಮ್‌ ಪ್ರಾಜೆಕ್ಟ್‌ ಬಗ್ಗೆ “ಸಿನಿಲಹರಿ” ಜೊತೆ ಹಂಚಿಕೊಂಡ ನೂತನ್ ಉಮೇಶ್‌, “ಇದು ನನ್ನ ಮೊದಲ ಪ್ರಯತ್ನ. ನಿರ್ಮಾಣ ಸಂಸ್ಥೆ ಹುಟ್ಟು ಹಾಕೋದು ಸುಲಭವಲ್ಲ. ತುಂಬಾನೇ ಕಷ್ಟ. ಆ ಕಷ್ಟದಲ್ಲೇ ನಾನೊಂದು ಕನಸು ಕಟ್ಟಿಕೊಂಡು “ಮೋಹಕ್‌ ಸಿನಿಮಾಸ್‌” ಹೆಸರಿನ ಬ್ಯಾನರ್‌ ಮಾಡಿದ್ದೇನೆ. ಈ ಮೂಲಕ ಹೊಸ ಬಗೆಯ ಚಿತ್ರ ಮಾಡಿದ್ದು, ಅದು ನಾಲ್ವರು ನಿರ್ದೇಶಕರು ಸೇರಿ ಮಾಡುತ್ತಿರುವ ಚಿತ್ರ. ಚಿತ್ರ ಕೂಡ ನಾಲ್ಕು ಭಾಷೆಯಲ್ಲಿ ತಯಾರಾಗುತ್ತಿದೆ. ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಯಲ್ಲಿ ತಯಾರಾಗುತ್ತಿದೆ. ತಮಿಳು ಭಾಷೆಯಲ್ಲಿ ಸೂರ್ಯ ನಿರ್ದೇಶಿಸಿದರೆ, ಮಲಯಾಲಂ ಭಾಷೆಯ ಸಿನಿಮಾಗೆ ಶಿಬು ಗಂಗಾಧರ್‌ ನಿರ್ದೇಶಕರು. ತೆಲುಗಿನ ಚಿತ್ರಕ್ಕಿನ್ನೂ ನಿರ್ದೇಶಕರ ಹುಡುಕಾಟ ನಡೆಯುತ್ತಿದೆ.

ಕನ್ನಡದಲ್ಲಿ ತಯಾರಾಗುವ ಚಿತ್ರಕ್ಕೆ ನಾನೇ ನಿರ್ದೇಶನ ಮಾಡಲಿದ್ದೇನೆ. ನಾಲ್ಕು ಭಾಷೆಯ ಈ ಚಿತ್ರದಲ್ಲಿ ನಾಲ್ಕು ಕಥೆಗಳಿವೆ. ಇದು ಒಂದೇ ಸಿನಿಮಾ ಅನ್ನೋದು ವಿಶೇಷ. ಒಂದೇ ಸಿನಿಮಾದಲ್ಲಿ ನಾಲ್ಕು ಕಥೆಗಳಿದ್ದರೂ, ಇಂಟರ್‌ ಲಿಂಕ್‌ ಇರಲಿದೆ. ಓಪನಿಂಗ್‌ನಲ್ಲೇ ಇಂಟರ್ಲಿಂಕ್‌ ಕಥೆ ಇರಲಿದೆ. ಇದೊಂದು ಪ್ರಯೋಗಾತ್ಮಕ ಸಿನಿಮಾ. ಸಿನಿಮಾದಲ್ಲಿ ನಾಲ್ಕು ಭಾಷೆಗಳನ್ನೂ ಕೇಳಬಹುದು. ಅವು ಆಗಾಗ ಪ್ಲೇ ಆಗುತ್ತಿರುತ್ತವೆ. ಅದು ಹೇಗೆ ಅನ್ನೋದೇ ವಿಶೇಷ. ಇನ್ನು, ಲಾಕ್‌ಡೌನ್‌ ಸಮಯದಲ್ಲಿ ನಡೆದ ರಿಯಲ್‌ ಇನ್ಸಿಡೆಂಟ್‌ ಇಟ್ಟುಕೊಂಡು ಕಥೆ ಮಾಡಲಾಗಿದೆ.

ಮೊದಲ ಸಲ ಪ್ರೊಡಕ್ಷನ್ಸ್‌ ಶುರುಮಾಡುತ್ತಿರುವುದರಿಂದ ಹೊಸದನ್ನು ಮಾಡಬೇಕು ಎಂಬ ಉದ್ದೇಶದಿಂದ ಈ ಕಥೆ ಆಯ್ಕೆ ಮಾಡಿಕೊಂಡಿದ್ದೇನೆ. ಈ ತಿಂಗಳಲ್ಲಿ ಕನ್ನಡ ಭಾಷೆಯ ಚಿತ್ರದ ಚಿತ್ರೀಕರಣ ಶುರುವಾಗಲಿದೆ. ಕನ್ನಡದಲ್ಲಿ ತಯಾರಾಗುವ ಸಿನಿಮಾಗಿನ್ನೂ ನಾಯಕ,ನಾಯಕಿಯ ಆಯ್ಕೆಯಾಗಬೇಕಿದೆ. ಸದ್ಯ ಹುಡುಕಾಟ ನಡೆದಿದೆ” ಎನ್ನುತ್ತಾರೆ ಉಮೇಶ್.
ಈಗಾಗಲೇ ಆಯಾ ಭಾಷೆಯ ಸಿನಿಮಾಗಳಲ್ಲಿ ನಾಲ್ಕೈದು ನಿರ್ದೇಶಕರು ಸೇರಿ ಒಂದು ಸಿನಿಮಾ ಮಾಡಿರುವ ಉದಾಹರಣೆ ಸಾಕಷ್ಟಿದೆ. ಆದರೆ, ಒಂದು ಸಿನಿಮಾವನ್ನು ನಾಲ್ಕು ಭಾಷೆಯ ನಿರ್ದೇಶಕರು ಮಾಡುತ್ತಿರುವುದು ಹೊಸ ಪ್ರಯತ್ನ. ಇದೊಂದು ಪ್ರಯೋಗವೂ ಹೌದು. ಇದು ಯುನಿವರ್ಸಲ್‌ ಸ್ಟೋರಿ ಆಗಿರುವುದರಿಂದ ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ ಉಮೇಶ್.‌

Categories
ಸಿನಿ ಸುದ್ದಿ

ಚಿತ್ರರಂಗಕ್ಕೆ ಅರ್ಧ ಭರ್ತಿ ಶಾಕ್‌! ಸರ್ಕಾರ ವಿರುದ್ಧ ಸ್ಯಾಂಡಲ್‌ವುಡ್‌ ಸ್ಟಾರ್ಸ್‌ ಗರಂ

ಚಿತ್ರರಂಗದಿಂದ ಬಿಎಸ್‌ವೈ ಭೇಟಿ ಮಾಡಲು ನಿರ್ಧಾರ:ಈ ಕುರಿತಂತೆ ನಾಳೆ (ಶನಿವಾರ) ಬೆಳಗ್ಗೆ ಸಿನಿಮಾರಂಗದ ಕಲಾವಿದರು ಸೇರಿ ಸಿಎಂ ಜೊತೆ ಚರ್ಚೆ ಮಾಡುವುದಾಗಿ ಹೇಳಿದ್ದಾರೆ. ಶೇ.50ರಷ್ಟು ಚಿತ್ರಮಂದಿರ ಭರ್ತಿಗೆ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಸ್ಟಾರ್‌ ನಟರು ಸೇರಿ ಸರ್ಕಾರದ ಜೊತೆ ಮಾತುಕತೆ ನಡೆಸಲು ತೀರ್ಮಾನಿಸಿದ್ದಾರೆ. ಕೂಡಲೇ ಪ್ರಸ್ತಾವನೆ ಕೈ ಬಿಡಬೇಕು ಎಂದು ಮನವಿ ಮಾಡುವುದಾಗಿ ಹೇಳಿದ್ದಾರೆ

ಈಗಷ್ಟೇ ಚಿತ್ರರಂಗ ಚೇತರಿಸಿಕೊಳ್ಳುತ್ತಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ ಕೊರೊನಾ ಒಕ್ಕರಿಸಿ ಆತಂಕ ಸೃಷ್ಟಿಸಿತ್ತಲ್ಲದೆ, ಲಾಕ್‌ಡೌನ್‌ಗೂ ಕಾರಣವಾಗಿ ಎಲ್ಲರ ಬದುಕನ್ನೇ ಬರಡಾಗಿಸಿದ್ದು ಸುಳ್ಳಲ್ಲ. ಈಗ ಮತ್ತದೇ ಆತಂಕ ಶುರುವಾಗುತ್ತಿದೆ! ಹೌದು, ಇದು ನಿಜ ಕೂಡ. ಕೊರೊನಾ ಹಾವಳಿ ನಿಯಂತ್ರಣವಾಗುತ್ತಿದ್ದಂತೆ ಎಲ್ಲವೂ ಸಹಜ ಸ್ಥಿತಿಗೆ ಬಂದಿದ್ದೇನೋ ಸತ್ಯ. ಆದರೆ, ಈಗ ದಿನ ಕಳೆದಂತೆ ಮತ್ತೆ ಕೊರೊನಾ ಪಾಸಿಟಿವ್‌ ಕೇಸುಗಳು ಹೆಚ್ಚುತ್ತಿವೆ. ಸರ್ಕಾರ ಕೂಡ ಎಚ್ಚೆತ್ತುಕೊಂಡು ಅಗತ್ಯ ಕ್ರಮ ಕೈಗೊಳ್ಳಲು ಮುಂದಾಗುತ್ತಿದೆ. ಬೆಳವಣಿಗೆಯೊಂದರಲ್ಲಿ ಬಿಬಿಎಂಪಿ ಕಣ್ಣು ಈಗ ಸ್ಯಾಂಡಲ್‌ವುಡ್‌ ಮೇಲೆ ಬಿದ್ದಿದೆ.

ಹೌದು, ಬಿಬಿಎಂಪಿ ಶೇ.50ರಷ್ಟು ಥಿಯೇಟರ್‌ ಭರ್ತಿಗೆ ಸಂಬಂಧಿಸಿದಂತೆ ಸರ್ಕಾರದ ಮುಂದೆ ಪ್ರಸ್ತಾವನೆ ಇಟ್ಟಿದೆ. ಒಂದು ವೇಳೆ ರಾಜ್ಯ ಸರ್ಕಾರ ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿ, ಶೇ.50ರಷ್ಟು ಚಿತ್ರಮಂದಿರ ಭರ್ತಿಗೆ ಅವಕಾಶ ಕೊಟ್ಟರೆ, ಖಂಡಿತವಾಗಿಯೂ ಚಿತ್ರರಂಗ ಮೇಲೇಳಲು ವರ್ಷಗಳೇ ಬೇಕಾದೀತು. ಕಳೆದ ಒಂದು ವರ್ಷದ ಕೊರೊನಾ ಹೊಡೆತಕ್ಕೆ ಇನ್ನೂ ಚಿತ್ರರಂಗ ಚೇತರಿಸಿಕೊಂಡಿಲ್ಲ. ಮತ್ತೆ ಕೊರೊನಾ ಹಾವಳಿ ಎದುರಾಗಿ ಏನಾದರೊಂದು ಸಮಸ್ಯೆಗೆ ಕಾರಣವಾಗಿಬಿಟ್ಟರೆ, ಚಿತ್ರರಂಗವನ್ನೇ ನಂಬಿದವರ ಪಾಡೇನು ಎಂಬ ಪ್ರಶ್ನೆ ಈಗ ಎದುರಾಗಿದೆ.

ಸದ್ಯಕ್ಕೆ ಬಿಬಿಎಂಪಿ ಆಯುಕ್ತರು ಈ ಪ್ರಸ್ತಾವನೆ ಇಟ್ಟಿದ್ದಾರೆ. ಇದರ ವಿರುದ್ಧ ಚಿತ್ರರಂಗದ ಸ್ಟಾರ್‌ ನಟರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾವಿರಾರು ಜನರಿಗೆ ಪ್ರತಿಭಟನೆ ಮಾಡಲು ರ್ಯಾಲಿ ನಡೆಸಲು ಅವಕಾಶ ಕೊಡಲಾಗುತ್ತಿದೆ. ಆದರೆ, ನಮಗೆ ಯಾಕೆ ಈ ರೀತಿಯ ಹೊಣೆ ಹೊರಿಸಲಾಗುತ್ತಿದೆ ಎಂದು ಗರಂ ಆಗಿದ್ದಾರೆ. ಈ ನಿಟ್ಟಿನಲ್ಲಿ ಪುನೀತ್‌ ರಾಜಕುಮಾರ್‌ ಕೂಡ ಬೇಸರ ವ್ಯಕ್ತಪಡಿಸಿದ್ದು, ಆ ಕುರಿತು ಸಿಎಂ ಭೇಟಿ ಮಾಡಲು ನಿರ್ಧರಿಸಿದ್ದಾರೆ. “ಶೇ. 100 ಇದ್ದರೆ ಒಳ್ಳೆಯದು. ಎಲ್ಲರ ಆರೋಗ್ಯ ಮುಖ್ಯ. ಮಾಸ್ಕ್‌ ಧರಿಸಿ, ಚಿತ್ರಮಂದಿರ ಮೇಂಟೈನ್‌ ಮಾಡುತ್ತಿದ್ದಾರೆ. ಶೇ.100 ಬೇಕು. ಶೇ.50 ಆಗಿಬಿಟ್ಟರೆ, ಸಿಕ್ಕಾಪಟ್ಟೆ ಎಫೆಕ್ಟ್‌ ಆಗುತ್ತೆ. ಈವೆಂಟ್‌ಗೆ ಬ್ರೇಕ್‌ ಇರಲಿ, ಆದರೆ, ಚಿತ್ರಮಂದಿರಗಳಿಗೆ ಈ ರೀತಿಯ ರೂಲ್ಸ್‌ ಬೇಡ. ಸಿನಿಮಾ ನೋಡಲು ಬರುವ ಜನರು ಭಯ ಬೇಡ. ತೊಂದರೆ ಆಗಲ್ಲ. ಎಲ್ಲರೂ ಮಾಸ್ಕ್‌ ಧರಿಸಿ” ಎಂದಿದ್ದಾರೆ.‌

ಧನಂಜಯ್‌, ಹಸಿವು ದೊಡ್ಡ ಡೇಂಜರ್‌, ಸಿನಿಮಾ ಅಲ್ಲ, ಎಲ್ಲಾ ಕ್ಷೇತ್ರ. ನಾರ್ಮಲ್‌ ಆಗಿ ಬದುಕು ಶುರುವಾಗುತ್ತಿದೆ. ವೈರಸ್‌ ಇದ್ದರೂ, ನಾವು ಬದುಕುತ್ತಿದ್ದೇವೆ. ವ್ಯಾಕ್ಸಿನ್‌ ಬಂದಿದೆ. ಆದರೂ ಚಿತ್ರಮಂದಿರಗಳಿಗೆ ಶೇ.೫೦ರಷ್ಟು ಅವಕಾಶ ಕೊಟ್ಟರೆ, ಸಮಸ್ಯೆ ಆಗುತ್ತೆ. ಎಷ್ಟೋ ಚಿತ್ರಗಳು ಈಗ ಶುರವಾಗಿವೆ. ಕುಟುಂಬಗಳು ಅವಲಂಬಿತಗೊಂಡಿವೆ. ನಿರ್ಮಾಪಕರು ಸಮಸ್ಯೆಗೆ ಸಿಲುಕುತ್ತಾರೆ. ಎಲ್ಲರೂ ಸೇರಿ ಮನವಿ ಮಾಡ್ತೀವಿ. ಜನರು ಈಗ ಬಂದು ಸಿನಿಮಾ ನೋಡುತ್ತಿದ್ದಾರೆ. ಮುಂಜಾಗ್ರತೆ ವಹಿಸಿದ್ದಾರೆ. ಸರ್ಕಾರ ಈ ಬಗ್ಗೆ ಗಮನಿಸಬೇಕು” ಎಂದಿದ್ದಾರೆ. ಇವರ ಮಾತಿಗೆ “ದುನಿಯಾ” ವಿಜಯ್‌, ಪ್ರೇಮ್‌, ಡಾಲಿ ಧನಂಜಯ್ ಕೂಡ ಧ್ವನಿಯಾಗಿದ್ದಾರೆ.

ಚಿತ್ರರಂಗದಿಂದ ಬಿಎಸ್‌ವೈ ಭೇಟಿ ಮಾಡಲು ನಿರ್ಧಾರ:ಈ ಕುರಿತಂತೆ ನಾವು ನಾಳೆ ಬೆಳಗ್ಗೆ ಸಿನಿಮಾರಂಗದ ಕಲಾವಿದರು ಸೇರಿ ಸಿಎಂ ಜೊತೆ ಚರ್ಚೆ ಮಾಡುವುದಾಗಿ ಹೇಳಿದ್ದಾರೆ. ಶೇ.50ರಷ್ಟು ಚಿತ್ರಮಂದಿರ ಭರ್ತಿಗೆ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಸ್ಟಾರ್‌ ನಟರು ಸೇರಿ ಸರ್ಕಾರದ ಜೊತೆ ಮಾತುಕತೆ ನಡೆಸಲು ತೀರ್ಮಾನಿಸಿದ್ದಾರೆ. ಕೂಡಲೇ ಪ್ರಸ್ತಾವನೆ ಕೈ ಬಿಡಬೇಕು ಎಂದು ಮನವಿ ಮಾಡುತ್ತಿದ್ದೇವೆ ಎಂದಿದ್ದಾರೆ ಪುನೀತ್.

‌ಸದ್ಯಕ್ಕೆ ಈ ನಿರ್ಧಾರದಿಂದ ಸ್ಯಾಂಡಲ್‌ವುಡ್‌ ಅಸಮಾಧಾನಗೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಆಯ್ತಕ್ತರು ಸರ್ಕಾರದ ಮುಂದೆ ಪ್ರಸ್ತಾವನೆ ಇಡಲಾಗಿದೆ. ಸರ್ಕಾರ ಆ ಬಗ್ಗೆ ಕ್ರಮ ಕೈಗೊಳ್ಳಲಿದ್ದಾರೆ ಎಂದಿದ್ದಾರೆ. ಅದೇನೆ ಇರಲಿ, ಇಲ್ಲಿ ಕಾರ್ಮಿಕ ವರ್ಗ ದೊಡ್ಡದಿದೆ. ಸಿನಿಮಾರಂಗವನ್ನೇ ನಂಬಿ ಬದುಕು ಕಟ್ಟಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಿದೆ. ಪುನಃ‌ ಶೇ.೫೦ರಷ್ಟು ಚಿತ್ರಮಂದಿರ ಭರ್ತಿಗೆ ಅವಕಾಶ ಕೊಟ್ಟರೆ, ಖಂಡಿತವಾಗಿಯೂ ಇದು ದೊಡ್ಡ ಸಮಸ್ಯೆಗೆ ಕಾರಣವಾಗುವುದಂತೂ ನಿಜ.‌

ಈಗಾಗಲೇ ಹಲವು ಚಿತ್ರತಂಡಗಳು ಬಿಡುಗಡೆಯ ಲೆಕ್ಕಾಚಾರ ಹಾಕಿಕೊಂಡಿವೆ. ಪುನೀತ್‌ ರಾಜಕುಮಾರ್‌ ಅಭಿನಯದ “ಯುವರತ್ನ” ಚಿತ್ರ ಬಿಡುಗಡೆ ಅನೌನ್ಸ್‌ ಮಾಡಿದೆ. “ಕೋಟಿಗೊಬ್ಬ 3”, “ಕೆಜಿಎಫ್‌2”, “ಸಲಗ” ಚಿತ್ರಗಳ ಜೊತೆ ಸಾಕಷ್ಟು ಸಿನಿಮಾಗಳು ರೆಡಿಯಾಗಿವೆ. ಬಿಡುಗಡೆ ದಿನವನ್ನು ಘೋಷಿಸಿಕೊಂಡಿವೆ. ಈಗ ಇದ್ದಕ್ಕಿದ್ದಂತೆ ಶೇ.೫೦ರಷ್ಟು ಚಿತ್ರಮಂದಿರಗಳ ಭರ್ತಿಗೆ ಪ್ರಸ್ತಾವನೆ ಇಟ್ಟರೆ, ಸಿನಿಮಾರಂಗ ಮತ್ತಷ್ಟು ಗಂಭೀರ ಸ್ಥಿತಿ ಎದುರಿಸಬೇಕಾಗುತ್ತದೆ. ಚಿತ್ರರಂಗವನ್ನೇ ನಂಬಿದವರ ಬದುಕು ಅಕ್ಷರಶಃ ಬೀದಿಪಾಲಾಗುತ್ತದೆ. ಅಂದಾಜಿನ ಪ್ರಕಾರ ಮುನ್ನೂರಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ಕಳೆದ ವರ್ಷ ಬಿಡುಗಡೆ ಆಗಬೇಕಿದ್ದ ಸಿನಿಮಾಗಳು ಈಗ ಸ್ವಲ್ಪ ಸುಧಾರಿಸಿಕೊಂಡು ಬರುವ ತಯಾರಿಯಲ್ಲಿವೆ. ಈಗ ನೋಡಿದರೆ, ಪುನಃ ಕೊರೊನಾ ಭಯ ಹುಟ್ಟಿಸುತ್ತಿದೆ. ಹೀಗಾದರೆ, ಹೊಸ ನಿರ್ಮಾಪಕರ ಗತಿ ಏನು? ಸಿನಿಮಾವನ್ನೇ ನಂಬಿ ಹಣ ಹಾಕಿದವರ ಸ್ಥಿತಿ ಏನಾಗಬೇಡ?
ಒಂದು ಸಿನಿಮಾ ಮಾಡುವ ಕಷ್ಟ, ನಿರ್ಮಾಪಕರಿಗಷ್ಟೇ ಗೊತ್ತು. ಎಲ್ಲಿಂದಲೋ ಹಣ ತಂದು, ಸಾಲ ಮಾಡಿ, ಬಡ್ಡಿ ಕಟ್ಟಿ, ಸಿನಿಮಾ ಮಾಡುತ್ತಾನೆ. ಆದರೆ, ಆ ಹಣ ಹಿಂದಿರುಗುತ್ತದೆ ಎಂಬ ಯಾವ ಗ್ಯಾರಂಟಿಯೂ ಇರೋದಿಲ್ಲ. ಒಂದು ಸಿನಿಮಾ ಶುರುವಾದರೆ, ನೂರಾರು ಕುಟುಂಬ ಬದುಕು ಕಟ್ಟಿಕೊಳ್ಳುತ್ತೆ. ಆದರೆ, ಸಿನಿಮಾ ನಿರ್ಮಾಪಕನಿಗೇ ದೊಡ್ಡ ಪೆಟ್ಟು ಬಿದ್ದರೆ, ಅಂತಹ ಕುಟುಂಬಗಳೂ ಪೆಟ್ಟು ತಿನ್ನುತ್ತವೆ. ಬಹಳಷ್ಟು ಸರ್ಕಸ್‌ಮಾಡಿಯೇ ನಿರ್ಮಾಪಕ ಸಿನಿಮಾ ಮುಗಿಸಿರುತ್ತಾನೆ. ಇನ್ನೇನು ರಿಲೀಸ್‌ಗೆ ಸಜ್ಜಾಗುತ್ತಿರುವ ಹೊತ್ತಿಗೆ ಮತ್ತೊಂದು ಆತಂಕದ ತೂಗುಕತ್ತಿ ನೇತಾಡುತ್ತಿರುವುದು ನಿಜಕ್ಕೂ ಬೇಸರದ ವಿಷಯ. ಸದ್ಯಕ್ಕೆ ಸರ್ಕಾರದ ಮುಂದೆ ಪ್ರಸ್ತಾವನೆ ಇದೆ. ಸರ್ಕಾರ ಈ ಬಗ್ಗೆ ಗಮನಿಸಿ, ಈಗ ಇರುವ ಆದೇಶ ಮುಂದುವರೆಸಿದರೆ, ಸಿನಿಮಾರಂಗಕ್ಕೆ ಕೊಡುವ ದೊಡ್ಡ ಕೊಡುಗೆ.

Categories
ಸಿನಿ ಸುದ್ದಿ

ರಾಬರ್ಟ್‌ನಲ್ಲಿ ವಿನೋದಾವಳಿ! ಫುಲ್‌ ಮಾರ್ಕ್ಸ್‌ ಪಡೆದು ಮತ್ತೊಮ್ಮೆ ಗೆದ್ದು ಬೀಗಿದ ವಿನೋದ್‌ ಪ್ರಭಾಕರ್

ವಿನೋದ್‌ ಪ್ರಭಾಕರ್‌ ಕನ್ನಡ ಸಿನಿರಂಗದಲ್ಲಿ ಲೀಡಿಂಗ್‌ ಸ್ಟಾರ್‌ ಅಂತಾನೇ ಕರೆಸಿಕೊಳ್ಳುವ ನಟ. ಸ್ಯಾಂಡಲ್‌ವುಡ್‌ನಲ್ಲಿ ಗಟ್ಟಿನೆಲೆ ಕಂಡುಕೊಳ್ಳಲು ಸಾಕಷ್ಟು ಸಾಹಸ ಪಟ್ಟ ಮರಿಟೈಗರ್‌, ಇಲ್ಲಿ ಗೆಲುವಿಗಿಂತ ಸೋಲಿನ ರುಚಿ ಕಂಡಿದ್ದೇ ಹೆಚ್ಚು. ಒಂದೊಳ್ಳೆಯ ಗೆಲುವಿಗಾಗಿ ಸದಾ ಹಂಬಲಿಸುತ್ತಿದ್ದ ವಿನೋದ್‌, ಕೊನೆಗೂ ಗೆದ್ದರು. ಆಮೇಲೆ ಎಡವಿದರು. ಮೇಲೆ ಬರಬೇಕು ಅಂದುಕೊಂಡಾಗೆಲ್ಲ ಮತ್ತೆ ಮತ್ತೆ ಮುಗ್ಗರಿಸಿದರು. ಈಗ ಪುನಃ ಫೀನಿಕ್ಸ್‌ ಥರಾ ಎದ್ದಿದ್ದಾರೆ. ಹೌದು, ವಿನೋದ್‌ ಪ್ರಭಾಕರ್‌ “ರಾಬರ್ಟ್‌” ಮೂಲಕ ಮತ್ತೆ ಜೋರು ಸದ್ದು ಮಾಡಿದ್ದಾರೆ.‌ ದೊಡ್ಡದ್ದೊಂದು ಬ್ರೇಕ್‌ಗಾಗಿ ಕಾದಿದ್ದ ವಿನೋದ್‌ ಪ್ರಭಾಕರ್ “ರಾಬರ್ಟ್” ಬರುವವರೆಗೂ ಕಾಯಬೇಕಾಯಿತು. ರಾಬರ್ಟ್‌ ಚಿತ್ರದಲ್ಲಿ ದರ್ಶನ್‌ ಅವರ ಗೆಳೆಯನಾಗಿ ಕಾಣಿಸಿಕೊಂಡಿರುವ ವಿನೋದ್‌ ಅವರ ನಟನೆ ಎಲ್ಲರಿಗೂ ಹಿಡಿಸಿದೆ. ಪಕ್ಕಾ ಮಾಸ್‌ ಲುಕ್‌ನಲ್ಲಿ ಮಿಂಚಿರುವ ವಿನೋದ್‌ ಯಶಸ್ಸಿನ ಸಂಭ್ರಮದಲ್ಲಿದ್ದಾರೆ. ವಿನೋದ್‌ ಬಿದ್ದು ಎದ್ದದ್ದು, ಎದ್ದು ಬಿದ್ದು ಬಗ್ಗೆ ಒಂದು ರಿಪೋರ್ಟ್.

ವಿನೋದ್‌ ಪ್ರಭಾಕರ್‌ ತನ್ನ ಸ್ವಂತ ಶ್ರಮದಿಂದಲೇ ಸ್ಯಾಂಡಲ್‌ವುಡ್‌ನಲ್ಲಿ ಬೆಳೆದು ನಿಲ್ಲಬೇಕು ಅಂತ ಹಂಬಲಿಸಿದವರು. ಅದಕ್ಕಾಗಿ, ದಶಕಗಳ ಕಾಲ ಕಷ್ಟಪಟ್ಟಿದ್ದೂ ಉಂಟು. ಅದಕ್ಕೆ ಅದ್ಯಾವಗಲೋ ಫಲ ಸಿಕ್ಕಿದೆ ಕೂಡ. ಆರಂಭದ ದಿನಗಳಲ್ಲಿ ತನ್ನ ಬಳಿಗೆ ಬಂದ ಒಂದಷ್ಟು ಸಿನಿಮಾಗಳನ್ನು ಒಪ್ಪಿಕೊಂಡರೂ, ಅವರಿಗೆ ಹೇಳಿಕೊಳ್ಳುವಂತಹ ಹೆಸರು ಬರಲಿಲ್ಲ. ಬೆರಳೆಣಿಕೆ ಸಿನಿಮಾಗಳನ್ನು ಕೊಟ್ಟು ದೊಡ್ಡ ಅಭಿಮಾನಿ ಬಳಗವನ್ನು ಸಂಪಾದಿಸಿದ್ದ ವಿನೋದ್‌ ಪ್ರಭಾಕರ್‌, ದೊಡ್ಡ ಯಶಸ್ಸು ಎದುರು ನೋಡುತ್ತಿದ್ದರು. ತಾನು ಕೂಡ ಇಂಡಸ್ಟ್ರಿಯಲ್ಲಿ ಸಕ್ಸಸ್‌ ಹೀರೋ ಎನಿಸಿಕೊಳ್ಳಬೇಕು, ಗುರುತಿಸಿಕೊಳ್ಳಬೇಕು ಅಂದುಕೊಂಡಿದ್ದ ವಿನೋದ್‌ ಪ್ರಭಾಕರ್‌ ಅವರ ಗ್ರಹಗತಿ ಚೆನ್ನಾಗಿತ್ತು. ಆಗ “ನವಗ್ರಹ” ಚಿತ್ರ ಅವರನ್ನು ಕೈ ಹಿಡಿಯಿತು ಎಂಬುದು ಸುಳ್ಳಲ್ಲ.

“ನವಗ್ರಹ” ಸಿನಿಮಾ ದರ್ಶನ್‌ ಪ್ರೊಡಕ್ಷನ್ಸ್‌ನಲ್ಲಿ ಬಂದಿದ್ದು, ವಿಶೇಷವೆಂದರೆ, ಖಳನಟರ ಮಕ್ಕಳೇ ಈ ಚಿತ್ರದ ಹೈಲೈಟ್‌ ಆಗಿದ್ದರು. ಅದೊಂದು ಥ್ರಿಲ್‌ ಎನಿಸುವ ಸಿನಿಮಾ ಆಗಿದ್ದರಿಂದ ವಿನೋದ್‌ ಪ್ರಭಾಕರ್‌ ಕೂಡ ಈ ಚಿತ್ರದಲ್ಲಿ ತಕ್ಕಮಟ್ಟಿಗೆ ಗುರುತಿಸಿಕೊಂಡರು. ಅಲ್ಲಿಂದ ವಿನೋದ್‌ ಪ್ರಭಾಕರ್‌ ಒಂದಷ್ಟು ಸ್ಟಡಿಯಾಗಿ ನಿಂತರು. ಬಂದ ಕೆಲ ಚಿತ್ರಗಳ ಮೂಲಕ ಸುದ್ದಿಯಾಗಿದ್ದೂ ಹೌದು. ಏರುಪೇರಿನಲ್ಲೇ ಸಿನಿಜರ್ನಿ ಮಾಡುತ್ತಿದ್ದ ವಿನೋದ್‌ ಪ್ರಭಾಕರ್‌ ಅವರಿಗೆ ಮತ್ತೊಂದು ಸಕ್ಸಸ್‌ ಬೇಕಾಗಿತ್ತು.

ಅದಕ್ಕಾಗಿ ಅದೆಷ್ಟೋ ಕಥೆಗಳನ್ನು ಕೇಳಿ ಸುಮ್ಮನಾಗಿದ್ದರು. ಆ ಸಮಯಕ್ಕೆ ಬಂದದ್ದೇ “ಟೈಸನ್‌”. ಕೆ.ರಾಮ್‌ ನಾರಾಯಣ್‌ ನಿರ್ದೇಶನದ “ಟೈಸನ್‌” ಚಿತ್ರ ರಿಲೀಸ್‌ ಆಗಿದ್ದೇ ತಡ, ವಿನೋದ್‌ ಪ್ರಭಾಕರ್‌ ಅವರಿಗೆ ಅದೃಷ್ಟದ ಬಾಗಿಲು ಓಪನ್‌ ಆಯ್ತು. ಅಲ್ಲಿಂದ ಹಿಂದಿರುಗಿ ನೋಡದ ವಿನೋದ್‌, ಅದರ ನಡುವೆಯೂ ಒಂದಷ್ಟು ಸಿನಿಮಾಗಳನ್ನು ಮಾಡಿದರು. ಗೆಳೆತನಕ್ಕೆ ಮಾಡಿದ ಸಿನಿಮಾಗಳಾಗಿದ್ದರಿಂದ ಯಾವ ಸಿನಿಮಾ ಕೂಡ ಅವರ ನಿರೀಕ್ಷೆಗೆ ತಕ್ಕಂತೆ ಹೋಗಲಿಲ್ಲ. ಮತ್ತೆ ವಿನೋದ್‌ ಫ್ಯಾನ್ಸ್‌ ಮೊಗದಲ್ಲೂ ಆತಂಕದ ಗೆರೆಗಳು ಮೂಡಿದ್ದು ಸುಳ್ಳಲ್ಲ.

ತನ್ನ ಸಿನಿಮಾ ಪಯಣದಲ್ಲಿ ಜೊತೆಗಿದ್ದವರಿಗೆ ಸಹಕಾರ ನೀಡಬೇಕು ಎಂಬ ಉದ್ದೇಶದಿಂದ ವಿನೋದ್‌ ಗೆಳೆತನಕ್ಕೆ ಕಟ್ಟುಬಿದ್ದು ಮಾಡಿದ ಚಿತ್ರಗಳು ಸೋಲು ಕಂಡವು. ಸಿನಿಮಾಗಾಗಿಯೇ ಅವರು ಸರಿಯಾಗಿ ಊಟ ಮಾಡದೆ, ಡಯೆಟ್‌ ಮಾಡಿ ಬಾಡಿ ಬಿಲ್ಡ್‌ ಮಾಡಿ, ಏಯ್ಟ್‌ ಪ್ಯಾಕ್‌ ಮಾಡಿಕೊಂಡು ಅಲ್ಲೂ ಸುದ್ದಿಯಾದರು. ವರ್ಷಗಟ್ಟಲೇ ದೇಹವನ್ನು ಹುರಿಗೊಳಿಸಿ ರೆಡಿಯಾದರು. ಆದರ ಮೂಲಕ ಮತ್ತೊಂದು ಅದೃಷ್ಟ ಖುಲಾಯಿಸುತ್ತೆ ಅಂದುಕೊಂಡರೆ, ಅಲ್ಲೂ ನಿರಾಸೆ. ನಿರೀಕ್ಷೆ ಇಟ್ಟುಕೊಂಡ ಮತ್ತೊಂದು ಸಿನಿಮಾ ಕೂಡ ಮೇಲೇಳಲಿಲ್ಲ. ಆದರೆ, ವಿನೋದ್‌ ಅವರಿಗೆ “ರಾಬರ್ಟ್‌” ಚಿತ್ರದ ಮೇಲೆ ಬಲವಾದ ನಂಬಿಕೆ ಇತ್ತು. ಆ ಸಿನಿಮಾ ಮತ್ತೊಂದು ದೊಡ್ಡ ಸಕ್ಸಸ್‌ ಕೊಡುತ್ತೆ ಎಂಬ ಭರವಸೆಯಲ್ಲಿದ್ದರು. ಅದೀಗ ನಿಜವಾಗಿದೆ.

ರಾಬರ್ಟ್‌ ವಿನೋದ್‌ ಪ್ರಭಾಕರ್‌ ಅವರಿಗೆ ಕೈ ಹಿಡಿದಿದೆ. ನವಗ್ರಹ ಸಿನಿಮಾದಲ್ಲಿ ದರ್ಶನ್‌ ಜೊತೆ ಕಾಣಿಸಿಕೊಂಡಿದ್ದ ವಿನೋದ್‌, ಈಗ ರಾಬರ್ಟ್‌ನಲ್ಲಿ ದಚ್ಚುಗೆ ಗೆಳೆಯನಾಗಿದ್ದಾರೆ. ಒಬ್ಬ ಪ್ರಾಣಸ್ನೇಹಿತನಿಗೆ ಹೇಗೆ ಜೊತೆಯಾಗಿರಬೇಕು ಅನ್ನುವುದನ್ನು ತೆರೆಮೇಲೆ ಭರ್ಜರಿಯಾಗಿಯೇ ವಿನೋದ್‌ ತೋರಿಸಿದ್ದಾರೆ. ದರ್ಶನ್‌ ಅವರಷ್ಟೇ ವಿನೋದ್‌ ಅವರಿಗೂ ಇಲ್ಲಿ ಜಾಗ ಕಲ್ಪಿಸಲಾಗಿದೆ. ಅವರ ಹೊಸ ಲುಕ್‌, ಅಕ್ಟಿಂಗ್‌,ಡ್ಯಾನ್ಸ್‌ ಎಲ್ಲವೂ ಅವರ ಫ್ಯಾನ್ಸ್‌ಗೆ ಮಾತ್ರವಲ್ಲ ಸಿನಿಮಾ ಮಂದಿಗೆ ಖುಷಿ ನೀಡಿದೆ. ಒಟ್ಟಲ್ಲಿ, ರಾಬರ್ಟ್‌ ಮೂಲಕ ವಿನೋದ್‌ ಈಗ ಮತ್ತೆ ಲೀಡಿಂಗ್‌ ಸ್ಟಾರ್‌ ಅನ್ನೋದನ್ನು ಖಾತರಿ ಪಡಿಸಿದ್ದಾರೆ.

ಅದೇನೆ ಇರಲಿ, ವಿನೋದ್‌ ಪ್ರಭಾಕರ್‌ ಮತ್ತು ದರ್ಶನ್‌ ಅವರಿಬ್ಬರ ಗೆಳೆತನ ಬಹಳಷ್ಟು ಮಂದಿಗೆ ಗೊತ್ತಿರಲಿಕ್ಕಿಲ. ಸದಾ ಒಬ್ಬರಿಗೊಬ್ಬರು ಪ್ರೀತಿಯಿಂದ ಮಾತಾಡುತ್ತಲೇ ಇರುವ ಅಣ್ತಮ್ಮಾಸ್‌ ಜೋಡಿ ಅದು. ವಿನೋದ್‌ ಪ್ರಭಾಕರ್‌ ಅವರ ಪ್ರತಿಯೊಂದು ಸಿನಿಮಾ ಪೂಜೆಗೂ ದರ್ಶನ್‌ ಹಾಜರಿ ಇರಲೇಬೇಕು. ಅಷ್ಟರಮಟ್ಟಿಗೆ ಇವರಿಬ್ಬರ ಕಾಂಬಿನೇಷನ್‌ ತೆರೆ ಹಿಂದೆ ಮತ್ತು ಮುಂದೆ ವರ್ಕೌಟ್‌ ಆಗುತ್ತಿರುವುದಂತೂ ನಿಜ. ಮುಂದಿನ ದಿನಗಳಲ್ಲಿ ವಿನೋದ್‌ ಇನ್ನಷ್ಟು ಒಳ್ಳೆಯ ಸಿನಿಮಾಗಳನ್ನು ಕೊಡುವ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಗಟ್ಟಿಯಾಗಿ ಬೇರೂರಲಿ ಎಂಬುದೇ ಸಿನಿಲಹರಿ ಆಶಯ.

Categories
ಸಿನಿ ಸುದ್ದಿ

ರಾಬರ್ಟ್‌ ವಾರದ ಗಳಿಕೆ ದಾಖಲೆ: ಭರ್ಜರಿ 78.36 ಕೋಟಿ ಕಲೆಕ್ಷನ್‌ ಅಂತ ಘೋಷಿಸಿದ ಚಿತ್ರತಂಡ – ತೆಲುಗಲ್ಲೂ7.61 ಕೋಟಿ !

ದರ್ಶನ್‌ ಅಭಿನಯದ “ರಾಬರ್ಟ್‌” ಸದ್ದು ಜೋರಾಗಿಯೇ ಇದೆ. ಬಿಡುಗಡೆಯಾಗಿ ಒಂದು ವಾರಕ್ಕೆ ದಾಖಲೆ ಗಳಿಕೆ ಕಂಡಿದೆ. ಹೌದು, ತರುಣ್‌ ಸುಧೀರ್‌ ನಿರ್ದೇಶನದ “ರಾಬರ್ಟ್”‌ ಚಿತ್ರ 78.36 ಕೋಟಿ ರೂ.ಗಳಿಕೆ ಕಾಣುವ ಮೂಲಕ ದಾಖಲೆ ಬರೆದಿದೆ. ಈ ಕಲೆಕ್ಷನ್‌ ಕುರಿತು ಸ್ವತಃ ಚಿತ್ರತಂಡವೇ ಅನೌನ್ಸ್‌ ಮಾಡಿದೆ.

‌ಒಂದು ಚಿತ್ರ ಇಷ್ಟವಾಗೋದು ಬೇರೆ, ಇಷ್ಟವಾಗಿ, ನೂಕುನುಗ್ಗಲು ಕಂಡು ದಾಖಲೆ ಗಳಿಕೆ ಕಾಣೋದು ವಿಶೇಷ. “ರಾಬರ್ಟ್‌” ಬಗ್ಗೆ ಮೊದಲೇ ನಿರೀಕ್ಷೆ ಇತ್ತು. ಆ ನಿರೀಕ್ಷೆ ಸುಳ್ಳಾಗಿಲ್ಲ. ಬಾಕ್ಸಾಫೀಸ್‌ ಸುಲ್ತಾನ್‌ ಎಂಬ ಹೆಸರಿಗೆ ತಕ್ಕಂತೆಯೇ, ದರ್ಶನ್‌ ಚಿತ್ರ ಭರ್ಜರಿ ಗಳಿಕೆ ಕಾಣುವ ಮೂಲಕ ಎರಡನೇ ವಾರವೂ ಮುನ್ನುಗ್ಗುತ್ತಿದೆ. ಒಂದು ವಾರ ಪೂರೈಸಿರುವ “ರಾಬರ್ಟ್‌” ತನ್ನ ಗಳಿಕೆ ಬಗ್ಗೆ ಅಧಿಕೃತವಾಗಿ ಘೋಷಿಸಿದೆ.

ಸದ್ಯ ಎರಡನೇ ವಾರವೂ ತನ್ನ ಅಬ್ಬರ ಮುಂದುವರೆಸಿರುವ ರಾಬರ್ಟ್‌ ರಾಜ್ಯಾದ್ಯಂತ 563 ಚಿತ್ರಮಂದಿರಗಳು ಮತ್ತು 100ಕ್ಕೂ ಹೆಚ್ಚು ಮಲ್ಟಿಪ್ಲೆಕ್ಸ್‌ಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ವೇಗವನ್ನು ಹೀಗೆ ನೋಡುತ್ತಿದ್ದರೆ, ದರ್ಶನ್‌ ಅವರ “ರಾಬರ್ಟ್‌” 100 ಕೋಟಿ ಕ್ಲಬ್‌ ಮಾಡಿದರೂ ಅಚ್ಚರಿಯೇನಿಲ್ಲ.

ದರ್ಶನ್‌ ಅಭಿನಯದ ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ, “ರಾಬರ್ಟ್” ಚಿತ್ರದ ಗಳಿಕೆಯ ವೇಗ ತುಸು ಹೆಚ್ಚಾಗಿಯೇ ಇದೆ. ಇಂಥ್ದದೊಂದು ಮ್ಯಾಜಿಕ್‌ಗೆ ಕಾರಣ, ದರ್ಶನ್‌ ಅಭಿನಯದ ಸಿನಿಮಾ ರಿಲೀಸ್‌ ಆಗಿ ಒಂದುವರೆ ವರ್ಷ ಆಗಿದ್ದು, ಕೊರೊನಾ ಹಾವಳಿಯಿಂದ ಕಂಗೆಟ್ಟಿದ್ದ ಅವರ ಫ್ಯಾನ್ಸ್‌, ಮತ್ತು ಸಿನಿಮಾ ಪ್ರೇಮಿಗಳಿಗೆ ಒಂದೊಳ್ಳೆಯ ಮನರಂಜನೆಯ ಚಿತ್ರ ಬೇಕಿತ್ತು. ದೊಡ್ಡ ಮಟ್ಟದ ನಿರೀಕ್ಷೆ ಹೊತ್ತಿದ್ದ “ರಾಬರ್ಟ್” ಕೊನೆಗೂ ಆ ನಿರೀಕ್ಷೆಯನ್ನು ಸುಳ್ಳು ಮಾಡಲೇ ಇಲ್ಲ.

ಇಡೀ ಸಿನಿಮಾ ತಂಡ ಖುಷಿಯ ಅಲೆಯಲ್ಲಿ ತೇಲುತ್ತಿರುವುದು ನಿಜ. ಇನ್ನು, ಆಂಧ್ರದಲ್ಲೂ “ರಾಬರ್ಟ್” 7.61 ಕೋಟಿ ಗಳಿಕೆ ಕಂಡಿರುವುದು ವಿಶೇಷ. ಇದೇ ಮೊದಲ ಸಲ ಏಕಕಾಲದಲ್ಲಿ ದರ್ಶನ್‌ ಸಿನಿಮಾ ರಿಲೀಸ್‌ ಆಗಿದ್ದು, ಅಲ್ಲಿನ ಅಭಿಮಾನಿಗಳು ಮತ್ತು ಸಿನಿಮಾ ಮಂದಿ ಕೂಡ ಮೆಚ್ಚಿಕೊಂಡಿದ್ದಾರೆ. “ರಾಬರ್ಟ್”‌ ಭರ್ಜರಿ ದರ್ಶನ ಮುಂದುವರೆದಿದ್ದು, ಸದ್ಯದ ಮಟ್ಟಿಗೆ ಗಳಿಕೆಯ ರಾಜ ಎಂಬ ಮೆಚ್ಚುಗೆಗೆ ಪಾತ್ರವಾಗಿದೆ ರಾಬರ್ಟ್.

Categories
ಸಿನಿ ಸುದ್ದಿ

ಮೈಸೂರಿನಲ್ಲಿ ಚಿತ್ರನಗರಿ: ರಾಜೇಂದ್ರ ಸಿಂಗ್ ಬಾಬು ಸಂತಸ – ಕಾರಣರಾದವರಿಗೆ ಧನ್ಯವಾದ ಅರ್ಪಿಸಿದ ನಿರ್ದೇಶಕರು

ಕನ್ನಡ ಚಿತ್ರರಂಗಕ್ಕೆ ಚಿತ್ರನಗರಿಯ ಕೂಗು ಹೊಸದಲ್ಲ. ಹಲವು ವರ್ಷಗಳಿಂದಲೇ ಅದು ಕೇಳಿಬರುತ್ತಲೇ ಇತ್ತು. ಇದೀಗ ಚಿತ್ರನಗರಿಗೊಂದು ನೆಲೆ ಸಿಗುವ ಸಮಯ ಬಂದಿದೆ. ಹೌದು, ಮೈಸೂರಲ್ಲಿ ಚಿತ್ರನಗರಿ ನಿರ್ಮಾಣಕ್ಕೆ ಸರ್ಕಾರ ಅನುಮತಿ ನೀಡಿರುವುದು ಸಂತಸದ ವಿಷಯವೇ. ಕಳೆದ ನಾಲ್ಕು ದಶಕಗಳಿಂದಲೂ ಹೆಸರಘಟ್ಟ, ರಾಮನಗರ ಸೇರಿದಂತೆ, ಆ ಊರು, ಈ ಊರಲ್ಲಿ ಚಿತ್ರನಗರಿ ತಲೆಯತ್ತಲಿದೆ ಎಂಬ ಸುದ್ದಿಗಳೇ ಹರಿದಾಡಿದ್ದವು. ಇದೀಗ ಅಂತಿಮವಾಗಿ ಮೈಸೂರು ನಗರವನ್ನು ಸೂಚಿಸಿರುವುದು ಸಹಜವಾಗಿಯೇ ಸಿನಿಮಂದಿಗೆ ಖುಷಿಯಾಗಿದೆ. ಈ ಖುಷಿಗೆ ಕಾರಣರಾದ ಮುಖ್ಯಮಂತ್ರಿ ಯಡಿಯೂರಪ್ಪ, ವಿಜಯೇಂದ್ರ, ಶಿವರಾತ್ರಿ ಸ್ವಾಮೀಜಿ ಅವರಿಗೆ ವೈಯಕ್ತಿಕವಾಗಿ ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್‌ ಬಾಬು ಅವರು ಧನ್ಯವಾದ ಅರ್ಪಿಸಿದ್ದಾರೆ.

ಇನ್ನುಳಿದಂತೆ, ಈ ವಿಚಾರವಾಗಿ ಸಹಕರಿಸಿದ ಸಚಿವರಾದ ಎಸ್.ಟಿ ಸೋಮಶೇಖರ್, ಸಿ.ಸಿ ಪಾಟೀಲ್, ಸಿ.ಪಿ.ಯೋಗಿಶ್ವರ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಧನ್ಯವಾದ ಹೇಳಿರುವ ರಾಜೇಂದ್ರ ಸಿಂಗ್‌ ಬಾಬು, “ಮೈಸೂರಿಗೆ 85 ವರ್ಷಗಳ ಸಿನಿಮಾ ಇತಿಹಾಸವಿದೆ. ಇಂತಹ ಇತಿಹಾಸ ಇರುವ ನಗರಕ್ಕೆ ಚಿತ್ರನಗರಿ ಅನ್ನೋ ಮತ್ತೊಂದು ಕಿರೀಟ ಮುಡಿಗೇರಿದ್ದು, ಚಿತ್ರೋದ್ಯಮದ ಪ್ರಗತಿಗೆ ದಾರಿಯಾಗಿದೆ. ಮೈಸೂರು ಪ್ರವಾಸೋದ್ಯಮಕ್ಕೂ ಇದರಿಂದ ಪುಷ್ ಸಿಕ್ಕಂತಾಗಿದೆ. ಎಂಜಿಆರ್, ರಾಜ್ ಕಪೂರ್, ಶಾಂತಾ ರಾಮ್ ಎಲ್ಲರೂ ಮೈಸೂರಿನಲ್ಲಿಯೇ ಬಿಡಾರ ಹೂಡುತ್ತಿದ್ದರು. ಕೇವಲ 20 ಕಿಲೋ ಮೀಟರ್ ವ್ಯಾಪ್ತಿಯಲ್ಲಿ 257 ಲೋಕೇಷನ್‌ಗಳು ಮೈಸೂರಿನಲ್ಲಿವೆ. 16 ಪ್ಯಾಲೇಸ್‌ಗಳಿವೆ. 5 ನದಿಗಳಿವೆ. ಹೀಗಾಗಿಯೇ ವಿಷ್ಣುವರ್ಧನ್ ಮತ್ತು ರಜನಿಕಾಂತ್ ಅವರಿಗೂ ಮೈಸೂರು ಅಂದ್ರೆ ಪಂಚಪ್ರಾಣ. ಇದೀಗ ಸರ್ಕಾರ ಇಷ್ಟೇಲ್ಲ ಐತಿಹ್ಯ ಇರುವ ನಗರಕ್ಕೆ ಚಿತ್ರನಗರಿ ನೀಡುತ್ತಿದೆ. ಸರ್ಕಾರಕ್ಕೆ, ಚಿತ್ರನಗರಿ ಸ್ಥಾಪನೆಗೆ ಕಾರಣರಾದ ಎಲ್ಲರಿಗೂ ಧನ್ಯವಾದ” ಎಂದಿದ್ದಾರೆ.

Categories
ಸಿನಿ ಸುದ್ದಿ

ಸಲಗ ಪ್ರಮೋಷನಲ್‌ ಸಾಂಗ್‌ಗೆ ಸಿದ್ದಿ ಮಂದಿ ಸ್ಟೆಪ್! ರೆಡಿಯಾಗುತ್ತಿದೆ ದುಬಾರಿ ಹಾಡು

“ದುನಿಯಾ” ವಿಜಯ್‌ ಇದೇ ಮೊದಲ ಬಾರಿಗೆ ನಿರ್ದೇಶಿಸಿ, ನಟಿಸುತ್ತಿರುವ “ಸಲಗ” ಚಿತ್ರ ಈಗಾಗಾಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಒಂದಷ್ಟು ಕುತೂಹಲಕ್ಕೂ ಕಾರಣವಾಗಿದೆ. ಆ ಬಗ್ಗೆ ಹೇಳುವುದಾದರರೆ, ಮೊದಲ ಸಲ ವಿಜಯ್‌ ಆಕ್ಷನ್‌ ಕಟ್‌ ಹೇಳಿದ್ದಾರೆಂಬುದು ಒಂದೆಡೆಯಾದರೆ, “ಸಲಗ” ಒಂದೊಳ್ಳೆಯ ಮಾಸ್‌ ಫೀಲ್‌ ಕಥಾಹಂದರ ಇರುವ ಚಿತ್ರ ಅನ್ನೋದು ಇನ್ನೊಂದೆಡೆ, ಮತ್ತೊಂದೆಡೆ ಸಖತ್‌ ಹಿಟ್‌ ಆಗಿ, ವೈರಲ್‌ ಆಗಿರುವ ಹಾಡುಗಳು ಬೇರೆ. ಪೋಸ್ಟರ್‌ನಲ್ಲೇ ಸಿಕ್ಕಾಪಟ್ಟೆ ಹವಾ ಎಬ್ಬಿಸಿರುವ “ಸಲಗ” ಈಗ ಮತ್ತೊಂದು ಸುದ್ದಿಗೂ ಕಾರಣವಾಗಿದೆ. ‌

ಅದೇನೆಂದರೆ, ಮತ್ತೊಂದು ದುಬಾರಿ ವೆಚ್ಚದಲ್ಲಿ ಹಾಡು ತಯಾರಾಗುತ್ತಿದೆ. ಹೌದು, ಈ ಬಾರಿ “ದುನಿಯಾ” ದೊಡ್ಡ ಯಶಸ್ಸನ್ನು ಬೆನ್ನತ್ತಿ ಹೊರಟಿದ್ದಾರೆ. ಆ ಗುರಿ ಕೂಡ ಹತ್ತಿರವಿದೆ. ಆ ನಿಟ್ಟಿನಲ್ಲಿ ಅವರು “ಸಲಗ” ಮೇಲೆ ಸಾಕಷ್ಟು ಭರವಸೆ ಇಟ್ಟುಕೊಂಡಿದ್ದಾರೆ. ಅದಕ್ಕಾಗಿ, ಎಲ್ಲವನ್ನೂ ಮಾಡುತ್ತಿದ್ದಾರೆ.

ಚಿತ್ರದ ಪ್ರಮೋಷನಲ್‌ ಸಾಂಗ್‌ಗಾಗಿ ದುಬಾರಿ ವೆಚ್ಚ ಮಾಡುತ್ತಿದ್ದಾರೆ ಅನ್ನೋದು ವಿಶೇಷ. ಈ ಹಾಡಲ್ಲಿ ಸಾಕಷ್ಟು ವಿಶೇಷತೆಗಳಿವೆ ಅನ್ನೋದು ಕೂಡ ವಿಶೇಷವೇ.
ಈ ಪ್ರಚಾರದ ಹಾಡಲ್ಲಿ ಸಿದ್ಧಿ ಜನರೊಂದಿಗೆ “ದುನಿಯಾ” ವಿಜಯ್‌ ಬೆರೆತು, ಮಾಸ್‌ ಲುಕ್‌ನಲ್ಲಿ ಸ್ಟೆಪ್‌ ಹಾಕಲಿದ್ದಾರೆ. ಸುಮಾರಿ 70 ಜನರ ನೃತ್ಯ ಕಲಾವಿದರು ವಿಜಯ್‌ ಜೊತೆ ಸ್ಟೆಪ್‌ ಹಾಕುತ್ತಿದ್ದಾರೆ.

ವರ್ಲ್ಡ್‌ ಟ್ರೇಡ್‌ ಸೆಂಟರ್‌ ಮತ್ತು ಶೆರ್ಟಾನ್‌ ಹೋಟೆಲ್‌ನಲ್ಲಿ ಈ ಪ್ರಮೋಷನಲ್‌ ಸಾಂಗ್‌ ಚಿತ್ರೀಕರಣಗೊಳ್ಳುತ್ತಿದೆ. ಸುಮಾರು ೭೫ ಜನ ಸಿದ್ಧಿ ಕಲಾವಿದರೊಂದಿಗೆ ವಿಜಯ್‌ ವಿಶಿಷ್ಠ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕೆ.ಪಿ.ಶ್ರೀಕಾಂತ್‌ ನಿರ್ಮಾಣದ ಈ ಸಿನಿಮಾಗೆ ಚರಣ್ ರಾಜ್ ಸಂಗೀತ ಸಂಯೋಜನೆ ಇದೆ.ಈ ಹಾಡಿಗೆ, ಮುರಳಿ‌ ಮಾಸ್ಟರ್ ಸ್ಟೆಪ್‌ ಹೇಳಿಕೊಡಲಿದ್ದಾರೆ. ಏಪ್ರಿಲ್‌ನಲ್ಲಿ ಪ್ರೇಕ್ಷಕರ ಎದುರು ಬರಲು ಸಜ್ಜಾಗುತ್ತಿರುವ “ಸಲಗ” ಈಗ ಪ್ರಚಾರಕ್ಕೂ ತಯಾರಾಗಿದೆ.

Categories
ಸಿನಿ ಸುದ್ದಿ

ಎಲ್ಲವೂ ಹೊಸಬರ ಮಯಂ- ಮೊದಲ ಹಂತ ಪೂರೈಸಿದ ಸರ್ವಂ, ಎರಡನೇ ಹಂತಕ್ಕೆ ಸಜ್ಜು

ಕೊರೊನಾ ಹಾವಳಿ ಕಡಿಮೆಯಾಗುವುದನ್ನೇ ಕಾಯುತ್ತಿದ್ದ ಸಿನಿಮಾ ಮಂದಿ ಈಗ ಮೆಲ್ಲನೆ ಒಂದಷ್ಟು ಸಿನಿಮಾ ನಿರ್ಮಾಣದತ್ತ ಮುಖ ಮಾಡಿದ್ದಾರೆ. ಕೆಲವರು ಸದ್ದಿಲ್ಲದೆಯೇ ಸಿನಿಮಾ ಮುಗಿಸಿ, ರಿಲೀಸ್‌ಗೆ ಸಜ್ಜಾಗುತ್ತಿದ್ದಾರೆ. ಆ ನಿಟ್ಟಿನಲ್ಲಿ ಹೊಸಬರ “ಸರ್ವಂ” ಎಂಬ ಚಿತ್ರವೂ ಕೂಡ ಸದ್ದಿಲ್ಲದೆಯೇ ಮೊದಲ ಹಂತದ ಚಿತ್ರೀಕರಣ ಮುಗಿಸಿದೆ. ಕೃಷ್ಣ ಕಂಬೈನ್ಸ್ ಹಾಗೂ ಉದಯ ಆರ್ಟ್ಸ್ ಬ್ಯಾನರ್‌ನಲ್ಲಿ ಸುರೇಶ್ ಕಣ್ಣ ಹಾಗೂ ಕೆ.ಎಂ.ಕೃಷ್ಣ ದೊಡ್ಡಿ ಜೊತೆಗೂಡಿ ನಿರ್ಮಿಸುತ್ತಿರುವ “ಸರ್ವಂ” ಚಿತ್ರ ಮೊದಲ ಹಂತವನ್ನು ಪೂರೈಸಿದೆ. ಒಂದು ಹಾಡು, ಒಂದು ಸಾಹಸ ‌ಸನ್ನಿವೇಶ ಹಾಗೂ ಮಾತಿನ‌ ಭಾಗದ ಚಿತ್ರೀಕರಣವನ್ನು ಈ ಮೊದಲ ಹಂತದಲ್ಲಿ ನಡೆಸಲಾಗಿದೆ.‌ ಈ ಚಿತ್ರದಲ್ಲಿ ಅಫ್ಜಲ್ (ನಮ್ಮ ಸೂಪರ್ ಸ್ಟಾರ್) ಸಹ ನಿರ್ಮಾಪಕರಾಗಿದ್ದಾರೆ.

ಚಿತ್ರೀಕರಣಕ್ಕಾಗಿ‌ ಬೆಂಗಳೂರಿನ‌ ಜಿಗಣಿ ಬಳಿ ಅದ್ದೂರಿ ಸೆಟ್ ಹಾಕಿದ್ದು ವಿಶೇಷ. ಎರಡನೇ ಹಂತದ ಚಿತ್ರೀಕರಣವನ್ನು ಪಾಂಡಿಚೇರಿ, ಮಂಗಳೂರು ಹಾಗೂ ಗೋವಾದಲ್ಲಿ ನಡೆಯಲಿದ್ದು, ಇಷ್ಟರಲ್ಲೇ ಚಿತ್ರೀಕರಣ ಶುರುವಾಗಲಿದೆ. ಒಟ್ಟು ನಾಲ್ಕು ಹಂತದಲ್ಲಿ ಚಿತ್ರದ ಚಿತ್ರೀಕರಣ ನೆರವೇರಲಿದೆ.
ಈ ಹಿಂದೆ “ಅನಕ್ಷ”, “ಮೊಂಬತ್ತಿ”, “ತಮಸ್” ಹಾಗೂ “ಛಾಯ” ಚಿತ್ರಗಳಲ್ಲಿ ಅಭಿನಯಿಸಿರುವ ರಾಜ್ ಪ್ರಭು‌ ಈ ಚಿತ್ರದ ನಾಯಕರು. ಜೊತೆಗೆ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. ಸಾಕಷ್ಟು ಜಾಹೀರಾತುಗಳನ್ನು ನಿರ್ದೇಶಿಸಿರುವ ರಾಜ್ ಪ್ರಭು ಅವರಿಗೆ ಈ ಸಿನಿಮಾ ಮೊದಲ ಪ್ರಯತ್ನ.

ನಿರ್ದೇಶಕರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ನಾಲ್ಕು ಹಾಡುಗಳಿರುವ ಚಿತ್ರಕ್ಕೆ ಕೌಶಿಕ್ ಹರ್ಷ ಸಂಗೀತ ನೀಡುತ್ತಿದ್ದಾರೆ. ಶ್ಯಾಂ ಸಿಂಧನೂರು ಛಾಯಾಗ್ರಹಣವಿದೆ. ಕೆ.ಬಿ.ಕೆ ಫಯಾಜ್ ಖಾನ್ ಸಾಹಸ ನಿರ್ದೇಶನ ಹಾಗೂ ಜಗ್ಗು ಅವರ ನೃತ್ಯ ನಿರ್ದೇಶನವಿದೆ. ರಾಜ್ ಪ್ರಭು ಅವರಿಗೆ ನಾಯಕಿಯಾಗಿ‌ ಅಕ್ಷಿತ ನಾಗರಾಜ್ ನಟಿಸಿದ್ದಾರೆ. ಧಾರಾ ಪರೇಕ್, ಅಫ್ಜಲ್, ರವಿ, ಕನ್ನಡ ರಾಜು, ಸ್ಮೈಲ್ ಶಿವು ಮುಂತಾದವರು ನಟಿಸಿದ್ದಾರೆ.

error: Content is protected !!