Categories
ಸಿನಿ ಸುದ್ದಿ

ಮೈಸೂರಲ್ಲಿ ರತ್ನನ್‌ ಸಂಭ್ರಮ! ಪುನೀತ್‌ ರಾಜ್‌ಕುಮಾರ್ ಬರ್ತ್‌ಡೇಗೆ ಫೀಲ್‌ ದಿ ಪವರ್‌ ಸಾಂಗು‌ ರಿಲೀಸ್ – ಏಪ್ರಿಲ್‌ 1ಕ್ಕೆ ‌ ಯುವರತ್ನ

ಕನ್ನಡದಲ್ಲೀಗ ಸಿನಿಮಾಗಳ ಬಿಡುಗಡೆ ಪರ್ವ. ಸ್ಟಾರ್‌ ಸಿನಿಮಾಗಳು ಬಿಡುಗಡೆಗೆ ಸಾಲುಗಟ್ಟಿವೆ. ಆ ಸಾಲಲ್ಲಿ ಈಗ ಪುನೀತ್‌ ರಾಜಕುಮಾರ್‌ ಅಭಿನಯದ “ಯುವರತ್ನ” ಕೂಡ ಇದೆ. ಏಪ್ರಿಲ್‌ 1ರಂದು ಅದ್ಧೂರಿಯಾಗಿ ರಿಲೀಸ್‌ ಆಗುತ್ತಿದೆ. ಹೊಂಬಾಳೆ ಫಿಲಂಸ್‌ ಬ್ಯಾನರ್‌ನಲ್ಲಿ ವಿಜಯ್‌ ಕಿರಗಂದೂರು ನಿರ್ಮಾಣದ ಈ ಚಿತ್ರವನ್ನು ಸಂತೋಷ್‌ ಆನಂದರಾಮ್‌ ನಿರ್ದೇಶಿಸಿದ್ದಾರೆ.

ಬಿಡುಗಡೆ ಮುನ್ನ ಸಾಕಷ್ಟು ಕಾರ್ಯಕ್ರಮ ಹಮ್ಮಿಕೊಂಡಿರುವ ಚಿತ್ರತಂಡ, ಆ ನಿಟ್ಟಿನಲ್ಲಿ ಜೋರು ತಯಾರಿ ನಡೆಸಿದೆ. ಮಾರ್ಚ್‌ 20ರಂದು ಮೈಸೂರಿನಲ್ಲಿ “ಯುವರತ್ನ” ಈವೆಂಟ್‌ ನಡೆಸಲಿದೆ “ಯುವ ಸಂಭ್ರಮ” ಹೆಸರಲ್ಲಿ ನಡೆಯುವ ಈವೆಂಟ್‌ಗೆ ಈಗಾಗಲೇ ಸಾಕಷ್ಟು ರೂಪುರೇಷೆಗಳು ಸಿದ್ಧಗೊಳ್ಳುತ್ತಿವೆ. ಇತ್ತೀಚೆಗೆ “ಯುವ ಸಂಭ್ರಮ” ಕಾರ್ಯಕ್ರಮದ ಲೋಗೋ ಕೂಡ ಲಾಂಚ್‌ ಮಾಡಲಾಗಿದೆ.

ಮೈಸೂರಲ್ಲಿ ಈವೆಂಟ್‌ ನಡೆಸುವುದಕ್ಕೂ ಮುನ್ನ, ಮಾರ್ಚ್‌ 17ರಂದು ಪುನೀತ್‌ ರಾಜ್‌ಕುಮಾರ್‌ ಅವರ ಬರ್ತ್‌ಡೇ ಹಿನ್ನೆಲೆಯಲ್ಲಿ ಫೀಲ್‌ ದಿ ಪವರ್‌ ಹಾಡನ್ನು ಬಿಡುಗಡೆ ಮಾಡಲಾಗುತ್ತಿದೆ. ನಿರ್ದೇಶಕ ಸಂತೋಷ್‌ ಆನಂದ್‌ರಾಮ್‌ ಅವರು ಹಲವು ಯೋಜನೆ ಹಾಕಿಕೊಂಡ ಬಗ್ಗೆ ಹೇಳುವುದಿಷ್ಟು. “ಮೈಸೂರಲ್ಲಿ ಪ್ರೀ ರಿಲೀಸ್‌ ದೊಡ್ಡ ಮಟ್ಟದಲ್ಲಿ ಆಗುತ್ತಿದೆ. ಅಂದು ಸಂಗೀತ ನಿರ್ದೇಶಕ ತಮನ್‌, ಗಾಯಕರಾದ ವಿಜಯಪ್ರಕಾಶ್‌, ಅರ್ಮಾನ್‌ ಮಲ್ಲಿಕ್‌ ಸೇರಿದಂತೆ ಸಿನಿಮಾ ತಾರೆಯರು ಭಾಗವಹಿಸುತ್ತಿದ್ದಾರೆ.

ಮೈಸೂರಲ್ಲಿ ಕಳೆದ ವರ್ಷ ದಸರಾ ಆಚರಣೆಯಾಗಲಿಲ್ಲ. ಅದನ್ನು ಮರುಕಳಿಸಲು “ಯುವ ಸಂಭ್ರಮ” ಹೆಸರಲ್ಲಿ ಈವೆಂಟ್‌ ಮಾಡಲು ಮುಂದಾಗಿದ್ದೇವೆ. ಮೈಸೂರಿನ ಮಹಾರಾಜಾ ಮೈದಾನದಲ್ಲಿ ಈ ಈವೆಂಟ್‌ ನಡೆಯಲಿದೆ. ಇನನು, ಮಾ.17ರಂದು ಪುನೀತ್‌ ಅವರ ಹುಟ್ಟುಹಬ್ಬ. ಅದಕ್ಕಾಗಿ ಅಂದು “ಫೀಲ್‌ ದ ಪವರ್” ಹಾಡು ಬಿಡುಗಡೆಯಾಗುತ್ತಿದೆ. ಇದೇ ಮೊದಲ ಸಲ ಪುನೀತ್‌ ಅವರ ಈ ಚಿತ್ರ ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಮಾರ್ಚ್‌ 27ರಂದು ಹೈದರಾಬಾದ್‌ನಲ್ಲಿ ದೊಡ್ಡ ಈವೆಂಟ್‌ ನಡೆಯಲಿದೆ. ಏಪ್ರಿಲ್‌ ೧ರಂದು ಚಿತ್ರ ಬಿಡುಗಡೆಯಾಗಲಿದೆ” ಎಂಬುದು ನಿರ್ದೇಶಕರ ಮಾತು.

ತೆಲುಗಿನಲ್ಲಿ “ಯುವರತ್ನ” ಚಿತ್ರವನ್ನು ದಿಲ್‌ ರಾಜು ಹಾಗೂ ಸಾಯಿಕೋರ ರಿಲೀಸ್‌ ಮಾಡುತ್ತಿದ್ದಾರೆ. ಉಳಿದಂತೆ ಚಿತ್ರ ದುಬೈ ಅಮೆರಿಕಾ, ಆಸ್ಟೃೇಲಿಯಾದಲ್ಲೂ ರಿಲೀಸ್‌ ಆಗುತ್ತಿದೆ. ಯುಕೆಯಲ್ಲಿ ಥಿಯೇಟರ್‌ ಓಪನ್‌ ಆಗದ ಕಾರಣ, ಅಲ್ಲಿ ರಿಲೀಸ್‌ ಮಾಡುತ್ತಿಲ್ಲ. ವಿಶ್ವದಲ್ಲಿ ಕನ್ನಡಿಗರು ಎಲ್ಲೆಲ್ಲಿ ಇದ್ದಾರೋ, ಅಲ್ಲೆಲ್ಲಾ ಈ ಚಿತ್ರ ರಿಲೀಸ್‌ ಆಗಲಿದೆ ಎಂಬುದು ಚಿತ್ರತಂಡದ ಮಾತು.

ನಟ ಪುನೀತ್ ರಾಜಕುಮಾರ್‌ ಅವರಿಗೆ “ಯುವರತ್ನ” ಚಿತ್ರದ ಮೇಲೆ ಸಾಕಷ್ಟು ಭರವಸೆ ಇದೆಯಂತೆ. ಅದಕ್ಕೆ ಕಾರಣ, ಚಿತ್ರದ ಕಥೆಯಂತೆ. ಆ ಕುರಿತು ಪುನೀತ್‌ ಹೇಳುವುದು ಹೀಗೆ. “ಮೈಸೂರಲ್ಲಿ ಒಳ್ಳೆಯ ಈವೆಂಟ್‌ ಆಗುತ್ತಿದೆ. ಎರಡು ತಿಂಗಳಿನಿಂದ ಕನ್ನಡದಲ್ಲಿ ಒಳ್ಳೆಯ ಚಿತ್ರಗಳು ಬರುತ್ತಿವೆ. ಜನರು ಕೂಡ ಚಿತ್ರಮಂದಿರಕ್ಕೆ ಹೋಗಿ ನೋಡುತ್ತಿದ್ದಾರೆ. ಮುಂದೆಯೂ ಒಳ್ಳೆಯ ಚಿತ್ರಗಳು ಬರುತ್ತವೆ. ನನಗೆ ಹೊಂಬಾಳೆ ಫಿಲಂಸ್‌ ಜೊತೆ ಮೂರನೇ ಸಿನಿಮಾ. ನಿರ್ದೇಶಕ ಜೊತೆ ಎರಡನೇ ಚಿತ್ರ. ಇದು ಅಭಿಮಾನಿಗಳಿಗೆ ಮಾಡಿದ ಸಿನಿಮಾವಲ್ಲ. ಎಲ್ಲಾ ವರ್ಗಕ್ಕೂ ಇಷ್ಟವಾಗುವ ಚಿತ್ರ. ಒಳ್ಳೆಯ ಸಂದೇಶವನ್ನು ಇಲ್ಲಿ ಕಾಣಬಹುದು” ಎನ್ನುತ್ತಾರೆ ಪುನೀತ್.

ಈ ಚಿತ್ರದಲಿ “ಡಾಲಿ” ಧನಂಜಯ್‌ ಕೂಡ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಆ ಬಗ್ಗೆ ಹೇಳುವ ಅವರು, “ನನಗೆ ಇಲ್ಲಿ ಒಳ್ಳೆಯ ರೋಲ್‌ ಸಿಕ್ಕಿದೆ. ಒಂದೊಳ್ಳೆಯ ಸಿನಿಮಾದ ಭಾಗವಾಗಿದ್ದೇನೆ ಅಂತ ಹೇಳಲು ಖುಷಿಯಾಗುತ್ತಿದೆ. ಸಾಕಷ್ಟು ವ್ಯಾಲ್ಯು ಇರುವಂತಹ ಚಿತ್ರವಿದು. ಈ ಚಿತ್ರ ನೋಡುಗರಿಗೆ ಸಖತ್‌ ಮನರಂಜನೆಯಂತೂ ಸಿಗಲಿದೆ. ಹಾಗೆಯೇ ಒಂದಷ್ಟು ಹೊಸ ವಿಷಯಗಳನ್ನೂ ತಿಳಿದುಕೊಳ್ಳಬಹುದು” ಎನ್ನುತ್ತಾರೆ ಧನಂಜಯ್.‌
ಸೋನುಗೌಡ ಕೂಡ ಇಲ್ಲಿ ವಿಶೇಷವಾಗಿ ಕಾಣಿಸಿಕೊಂಡಿದ್ದಾರೆ. ಆ ಕುರಿತು ಹೇಳುವ ಸೋನುಗೌಡ, “ನಾನು ಅಪ್ಪು ಸರ್‌ ಜೊತೆ “ರಾಮ್‌” ಸಿನಿಮಾದಲ್ಲಿ ಸಣ್ಣ ಪಾತ್ರ ಮಾಡಿದ್ದೆ. ಈಗ ಇಲ್ಲಿ ಒಳ್ಳೆಯ ಪಾತ್ರ ಸಿಕ್ಕಿದೆ. ನಿರ್ದೇಶಕರು ಹೇಳಿದಂತೆಯೇ ಸಿನಿಮಾ ಶೂಟ್‌ ಮಾಡಿದ್ದಾರೆ. ನಾನು ಕೂಡ ಅಪ್ಪು ಅಭಿಮಾನಿ. ಬಿಗ್‌ ಬ್ಯಾನರ್‌ನಲ್ಲಿ, ಬಿಗ್‌ ಸ್ಟಾರ್‌ ಜೊತೆ ಕೆಲಸ ಮಾಡಿದ್ದು ಖುಷಿಯಾಗಿದೆ. ಇಲ್ಲಿ ಪ್ರತಿ ಪಾತ್ರಕ್ಕೂ ಆದ್ಯತೆ ಇದೆ ಎಂಬುದು ಸೋನು ಮಾತು.

‌ಚಿತ್ರದಲ್ಲಿ ದಿಗಂತ್ ಸೇರಿದಂತೆ ಹಲವರು ನಟಿಸಿದ್ದಾರೆ. ಇನ್ನು, ಈ ಚಿತ್ರದ ಈವೆಂಟ್‌ ಜವಾಬ್ದಾರಿಯನ್ನು ಶ್ರೇಯಸ್‌ ಮೀಡಿಯಾ ವಹಿಸಿಕೊಂಡಿದೆ. ನವರಸನ್‌ ಈ ಈವೆಂಟ್‌ನ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಈಗಾಗಲೇ ಶ್ರೇಯಸ್‌ ಮೀಡಿಯಾ “ಪೊಗರು”,”ರಾಬರ್ಟ್”‌ ಚಿತ್ರಗಳ ಈವೆಂಟ್‌ ನಡೆಸಿದೆ. ಇದು ಮೂರನೇ ಈವೆಂಟ್‌ ಎಂಬುದು ವಿಶೇಷ.

Categories
ಸಿನಿ ಸುದ್ದಿ

ಕಲ್ಟ್‌ ಕ್ರಿಟಿಕ್‌ ಮೂವಿ ಅವಾರ್ಡ್‌ನಲ್ಲಿ “ದಾರಿ ಯಾವುದಯ್ಯ ವೈಕುಂಠಕೆ” ಸಿನಿಮಾಗೆ ಮೂರು ಪ್ರಶಸ್ತಿಗಳ ಗರಿ

ಕನ್ನಡ ಸಿನಿಮಾಗಳು ಈಗ ಎಲ್ಲೆಡೆ ಸದ್ದು ಮಾಡುತ್ತಿರುವುದು ಗೊತ್ತೇ ಇದೆ. ಆ ಸಾಲಿಗೆ ಈಗ “ದಾರಿ ಯಾವುದಯ್ಯ ವೈಕುಂಠಕೆ” ಸಿನಿಮಾವೂ ಸೇರಿದೆ. ಹೌದು, ಕೊಲ್ಕತ್ತಾದಲ್ಲಿ ನಡೆಯುವ ಕಲ್ಟ್‌ ಕ್ರಿಟಿಕ್‌ ಮೂವಿ ಅವಾರ್ಡ್‌ನಲ್ಲಿ ಒಂದಲ್ಲ, ಎರಡಲ್ಲ ಮೂರು ಪ್ರಶಸ್ತಿಗಳು ಲಭಿಸಿವೆ. ಚಿತ್ರವನ್ನು ಶರಣಪ್ಪ ಎಂ ಕೊಟಗಿ ನಿರ್ಮಾಣ ಮಾಡಿದ್ದಾರೆ.

ಪೂರ್ಣ ಚಂದ್ರ ಅವರಿಗೆ ಉತ್ತಮ‌ ನಿರ್ದೇಶಕ ಪ್ರಶಸ್ತಿ ದಕ್ಕಿದೆ. ನಟ ಬಲ ರಾಜವಾಡಿ ಅವರಿಗೆ ಉತ್ತಮ ಪೋಷಕ ನಟ ಪ್ರಶಸ್ತಿ ಹಾಗೂ ಚಿತ್ರಕ್ಕೆ ಬೆಸ್ಟ್ ಔಟ್ ಸ್ಟಾಂಡಿಂಗ್ ಅಚೀವ್ ಮೆಂಟ್ ಅವಾರ್ಡ್ ಬಂದಿದೆ.‌ ಸಹಜವಾಗಿಯೇ ಈ ಪ್ರಶಸ್ತಿ ಲಭಿಸಿದ್ದು, ಚಿತ್ರತಂಡಕ್ಕೆ ಖುಷಿ ನೀಡಿದೆ. ಚಿತ್ರ ಈಗಾಗಲೇ ಬಿಡುಗಡೆಗೂ ಸಜ್ಜಾಗಿದೆ. ಚಿತ್ರಕ್ಕೆ ಮೂರು ವಿಭಾಗಗಳಲ್ಲಿ ಪ್ರಶಸ್ತಿ ಬಂದಿರುವುದಕ್ಕೆ ಚಿತ್ರತಂಡ ಸಂಭ್ರಮಪಟ್ಟಿದೆ.

ಈಗಾಗಲೇ ಒಂದಷ್ಟು ಚಿತ್ರೋತ್ಸವಗಳಲ್ಲಿ ಈ ಚಿತ್ರ ಆಯ್ಕೆಯಾಗಿದ್ದು, ಪ್ರದರ್ಶನ ಕಾಣಲಿದೆ. ಚಿತ್ರದಲ್ಲಿ ವರ್ಧನ್ ನಾಯಕರಾಗಿ ಅಭಿನಯಿಸಿದ್ದಾರೆ. ಪೂಜ (ತಿಥಿ ಖ್ಯಾತಿ), ಬಲ ರಾಜವಾಡಿ, ಶೀಬಾ, ಪ್ರಶಾಂತ್ ರಾವ್ ವರ್ಕು, ಅನುಷಾ, ಸ್ಪಂದನ ಪ್ರಸಾದ್, ಅರುಣ್ ಮೂರ್ತಿ ಮುಂತಾದವರು ಚಿತ್ರದಲ್ಲಿದ್ದಾರೆ.

Categories
ಸಿನಿ ಸುದ್ದಿ

ಚಿರು ಅಭಿನಯದ ಕೊನೆಯ ಸಿನಿಮಾ ಮಾರ್ಚ್‌ 26ಕ್ಕೆ ರಿಲೀಸ್‌- ರಣಂ ಚಿತ್ರದಲ್ಲಿ ಸರ್ಜಾ ಪೊಲೀಸ್‌ ಅಧಿಕಾರಿ

ನಟ ಚಿರಂಜೀವಿ ಸರ್ಜಾ ಅಭಿನಯದ “ರಣಂ” ಸಿನಿಮಾವೊಂದು ಇದೀಗ ಬಿಡುಗಡೆಗೆ ಸಜ್ಜಾಗಿದೆ. ಹೌದು, “ರಣಂ” ಸಿನಿಮಾದಲ್ಲಿ ಚಿರಂಜೀವಿ ಸರ್ಜಾ ಅವರು ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದು, ಈ ಚಿತ್ರದಲ್ಲಿ‌ ಚೇತನ್‌ (ಆ ದಿನಗಳು) ಹೀರೋ. ಇದರಲ್ಲಿ ವಿಶೇಷ ಪಾತ್ರದ ಮೂಲಕ ಚಿರಂಜೀವಿ ಸರ್ಜಾ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಚಿತ್ರ ಮಾರ್ಚ್‌ ೨೬ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಸುಮಾರು 250ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ “ರಣಂ” ತೆರೆ ಕಾಣಲಿದೆ ಎಂಬುದು ವಿಶೇಷ. ಈಗಾಗಲೇ ಕನ್ನಡದಲ್ಲಿ ಹಿಟ್ ಚಿತ್ರಗಳನ್ನು ಕೊಟ್ಟಿರುವ ಆರ್. ಎಸ್. ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಆರ್. ಶ್ರೀನಿವಾಸ್ (ಕನಕಪುರ) ಅವರು ನಿರ್ಮಾಣ ಮಾಡಿದ್ದಾರೆ. ಇದು ಅವರ 21ನೇ ಚಿತ್ರ. ಇವರೊಂದಿಗೆ ಕಿರಣ್ ಗೌಡ ಈ ಚಿತ್ರದ ಸಹ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ.‌

“ರಣಂ” ಚಿರಂಜೀವಿ ಸರ್ಜಾ‌ ಅವರು ನಟಿಸಿ, ಡಬ್ಬಿಂಗ್ ಮಾಡಿರುವ ಕೊನೆಯ ಚಿತ್ರ. ವಿ.ಸಮುದ್ರ ನಿರ್ದೇಶನದ ಈ ಚಿತ್ರಕ್ಕೆ ರವಿಶಂಕರ್ ಹಾಗೂ ಎಸ್ ಚಿನ್ನ ಸಂಗೀತ ನೀಡಿದ್ದಾರೆ. ನಿರಂಜನ್ ಬಾಬು ಛಾಯಾಗ್ರಹಣ, ದೀಪು ಎಸ್ ಕುಮಾರ್ ಸಂಕಲನ, ಥ್ರಿಲ್ಲರ್ ಮಂಜು, ರವಿವರ್ಮ ಹಾಗೂ ವಿಜಯ್ ಅವರ ಸಾಹಸ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಚೇತನ್ ಕುಮಾರ್ ಹಾಗೂ ಎ.ಪಿ.ಅರ್ಜುನ್ ರಚಿಸಿದ್ದಾರೆ. ಸಂಭಾಷಣೆಯನ್ನು ಪಾರ್ವತಿ ಚಂದು ಮತ್ತು ಮೋಹನ್ ಬರೆದಿದ್ದಾರೆ. ಚಿತ್ರದಲ್ಲಿ ವರಲಕ್ಷ್ಮೀ ಶರತ್ ಕುಮಾರ್, ಸಾಧುಕೋಕಿಲ, ಬುಲೆಟ್ ಪ್ರಕಾಶ್, ಮಧುಸೂದನ್, ಕಾರ್ತಿಕ್, ಅಭಿಲಾಶ್, ಹರೀಶ್, ಪ್ರವೀಣ್, ಬೆಸೆಂಟ್ ರವಿ ಮುಂತಾದವರು ಚಿತ್ರದಲ್ಲಿದ್ದಾರೆ.

Categories
ಸಿನಿ ಸುದ್ದಿ

ಇಷ್ಟರಲ್ಲೇ ಸಿಗಲಿದೆ ಮೋಕ್ಷ! ಮಾರ್ಚ್ 27ಕ್ಕೆ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದ ಟ್ರೇಲರ್ ರಿಲೀಸ್

ಕನ್ನಡದಲ್ಲಿ ಸಾಕಷ್ಟು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳು ಬಂದಿವೆ. ಬರಲು ಸಜ್ಜಾಗಿವೆ ಈಗಲೂ ಒಂದಷ್ಟು ಹೊಸಬರ ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾಗಳು ಸೆಟ್ಟೇರುತ್ತಲೇ ಇವೆ. ಆದರೆ, ಎಲ್ಲಾ ಚಿತ್ರಗಳು ಒಂದಕ್ಕಿಂತ ಒಂದು ವಿಭಿನ್ನ ಕಥಾಹಂದರ ಒಳಗೊಳ್ಳುವ ಮೂಲಕ ಹೊಸತನ ಸೃಷ್ಟಿಸಲು ಬರುತ್ತಿವೆ. ಆ ಸಾಲಿಗೆ ಈಗ ಮತ್ತೊಂದು ಹೊಸಬರ ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾ ಕೂಡ ಸೇರಿದೆ. ಆ ಚಿತ್ರಕ್ಕೆ “ಮೋಕ್ಷ” ಎಂದು ಹೆಸರಿಡಲಾಗಿದೆ.

ಇದೊಂದು ವಿಭಿನ್ನ ಶೀರ್ಷಿಕೆ ಇರುವ ಸಿನಿಮಾ. ಅಂತೆಯೇ ಚಿತ್ರದ ಕಥೆ ಕೂಡ ಅಷ್ಟೇ ವಿಭಿನ್ನವಾಗಿದೆ. ಅಂದಹಾಗೆ, ಇದೀಗ ಬಿಡುಗಡೆಗೆ ಸಜ್ಜಾಗಿದೆ. ಮಾರ್ಚ್‌ 27ರಂದು ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ.‌ ಈ ಚಿತ್ರಕ್ಕೆ ಸಮರ್ಥ್‌ ನಾಯಕ್‌ ನಿರ್ದೇಶಕರು. ಚಿತ್ರದ ಕಥೆ, ಚಿತ್ರಕಥೆ ಜವಾಬ್ದಾರಿಯೂ ಇವರದೇ. ಇದು ಇವರಿಗೆ ಮೊದಲ ನಿರ್ದೇಶನದ ಸಿನಿಮಾ ಆಗಿದ್ದರೂ, ನಿರ್ದೇಶನದ ಅನುಭವ ಇವರಿಗಿದೆ. ಈಗಾಗಲೇ ಸಾಕಷ್ಟು ಜಾಹೀರಾತು ನಿರ್ಮಿಸಿ ಅನುಭವವಿರುವ ಸಮರ್ಥ್ ನಾಯಕ್, ಚಿತ್ರದ ನಿರ್ಮಾಣದ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದಾರೆ.

ಇದೊಂದು ಗೊಂದಲಗೊಳಿಸುವ, ರೋಚಕತೆ ಎನಿಸುವ, ಭಯಾನಕ, ನಿಗೂಢ ಕಥೆ ಇರುವಂತಹ ಸಸ್ಪೆನ್ಸ್‌ ಇದರಲ್ಲಿದೆ ಎಂದು ವಿವರ ಕೊಡುತ್ತಾರೆ ನಿರ್ದೇಶಕ ಸಮರ್ಥ್‌ ನಾಯಕ್.‌ ಚಿತ್ರದ ಎಲ್ಲಾ ಪಾತ್ರಗಳಲ್ಲೂ ವಿಶೇಷತೆ ಇದೆ. ವಿಶೇಷವಾಗಿ ಮಾಸ್ಕ್ ಮ್ಯಾನ್ ಎಂಬ ಪಾತ್ರ ಚಿತ್ರದ ಮುಖ್ಯ ಆಕರ್ಷಣೆ ಎಂಬುದು ನಿರ್ದೇಶಕರ ಮಾತು.

ಜಯಂತ್ ಕಾಯ್ಕಿಣಿ, ಕುಮಾರ್ ದತ್ ಅವರು ಬರೆದಿರುವ ಎರಡು ಹಾಡುಗಳಿಗೆ ಕಿಶನ್ ಮೋಹನ್ ಹಾಗೂ ಸಚಿನ್ ಬಾಲು ಸಂಗೀತ ನೀಡಿದ್ದಾರೆ. ಹಿನ್ನೆಲೆ ಸಂಗೀತ ಕಿಶನ್ ಮೋಹನ್ ನೀಡಿದ್ದಾರೆ. ಗುರುಪ್ರಶಾಂತ್ ರೈ, ಜೋಮ್ ಜೋಸಫ್, ಕಿರಣ್ ಹಂಪಾಪುರ ಛಾಯಾಗ್ರಹಣ ಮಾಡಿದರೆ, ವರುಣ್ ಕುಮಾರ್ ಅವರ ಸಂಕಲನ ಚಿತ್ರಕ್ಕಿದೆ. ಮೋಹನ್ ಧನರಾಜ್ ಮತ್ತು ಆರಾಧ್ಯ ಲಕ್ಷ್ಮಣ್ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ತಾರಕ್ ಪೊನ್ನಪ್ಪ, ಭೂಮಿ ಅಜ್ಞಾನಿ, ಪ್ರಶಾಂತ್ ನಟನ ಮುಂತಾದ ವರು ಚಿತ್ರದಲ್ಲಿದ್ದಾರೆ.

Categories
ಸಿನಿ ಸುದ್ದಿ

ಕಲಾಪೋಷಕರ ಮಠಕ್ಕೊಂದು ಭಕ್ತಿಗೀತೆ! ಸಿದ್ಧವಾಗಲಿದೆ ಸಿದ್ಧನಕೊಳ್ಳ ಮಠದ ಭಕ್ತರ ಅರ್ಥ ಪೂರ್ಣ ಹಾಡು !

ಸಿನಿಮಾ ಮಂದಿಗೂ ಮಠಗಳಿಗೂ ಅವಿನಾಭಾವ ಸಂಬಂಧವಿದೆ. ಕೆಲವು ರಾಜಕಾರಣಿಗಳಿಗೂ ಕೂಡ ಮಠಗಳೆಂದರೆ ಅಚ್ಚುಮೆಚ್ಚು ಅನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಇದಕ್ಕೆ ಕಾರಣ, ಆಯಾ ಮಠಗಳ ಶ್ರೀಗಳ ಆಶೀರ್ವಾದದಿಂದಲೇ ಇಂದು ಉನ್ನತ ಹುದ್ದೆ ಅಲಂಕರಿಸಿರುವ ಅದೆಷ್ಟೋ ರಾಜಕಾರಣಿಗಳಿದ್ದಾರೆ. ಅಂತೆಯೇ, ಕಲಾವಿದರು ಕೂಡ ಗುರುತಿಸಿಕೊಂಡು ಬೆಳೆದಿದ್ದೂ ಇದೆ. ಇಷ್ಟಕ್ಕೂ ಈಗ ಇಲ್ಲೇಕೆ ಮಠಗಳ ವಿಷಯ ಎಂಬ ಪ್ರಶ್ನೆ ಎದುರಾಗಬಹುದು. ಈ ಸುದ್ದಿಗೆ ಕಾರಣ, ಸಿದ್ಧನಕೊಳ್ಳ ಮಠದ ಗುರು ಶ್ರೀ ಡಾ.ಶಿವಕುಮಾರ ಶ್ರೀಗಳು. ಹೌದು, ಸಿದ್ಧನಕೊಳ್ಳ ಮಠ ಅಂದರೆ, ಅದೊಂದು ಭಕ್ತಿತಾಣ. ನೆಮ್ಮದಿ ವಾತಾವರಣ ಸೃಷ್ಠಿಸುವ ಜಾಗ. ಸಿದ್ಧನಕೊಳ್ಳ ಮಠ ಈಗ ಸುದ್ದಿಯಲ್ಲಿದೆ. ಇದರ ಇತಿಹಾಸ ದೊಡ್ಡದೇ ಇದೆ. ಈ ಮಠಕ್ಕೂ ಸಿನಿಮಾ ಕಲಾವಿದರಿಗೂ ಸಾಕಷ್ಟು ನಂಟಿದೆ ಅಂದರೆ ನಂಬಲೇಬೇಕು.

ಹೌದು, 1974ರಲ್ಲಿ ಬಂದ “ಸಂಪತ್ತಿಗೆ ಸವಾಲ್‌” ಚಿತ್ರದ ಚಿತ್ರೀಕರಣ ಕೂಡ ಇದೇ ಸಿದ್ಧನಕೊಳ್ಳದಲ್ಲಿ ನಡೆದಿದೆ. ಆ ಸಂದರ್ಭದಲ್ಲಿ ಮಠದ ಶ್ರೀಗಳು ಡಾ.ರಾಜಕುಮಾರ್‌ ಅವರಿಗೆ ಪ್ರೀತಿಯಿಂದಲೇ ಆಶೀರ್ವದಿಸಿ, ನಾಡಿನಲ್ಲಿ ಒಳ್ಳೆಯ ಗಾಯಕರಾಗುತ್ತೀರಿ ಅಂತಾನೂ ಹೇಳಿ ಆಶೀರ್ವದಿಸಿದ್ದರಂತೆ. ಆಮೇಲೆ ಡಾ.ರಾಜಕುಮಾರ್‌ ಯಾವ ಮಟ್ಟದ ಗಾಯಕರಾದರು ಅನ್ನೋದು ಎಲ್ಲರಿಗೂ ಗೊತ್ತು. ಸಿದ್ಧನಕೊಳ್ಳದ ಮಠ ಅಂದರೆ, ಅದು ಕಲಾಪೋಷಕರ ಮಠ ಅಂತ ಕರೆಸಿಕೊಳ್ಳುತ್ತದೆ.

ಅದಕ್ಕೆ ಕಾರಣ, ಪ್ರತಿ ವರ್ಷವೂ ಈ ಮಠ ಸಿದ್ಧಶ್ರೀ ಪ್ರಶಶಸ್ತಿ ಪ್ರದಾನ ಮಾಡಿ ಕಲಾವಿದರನ್ನು ಪ್ರೋತ್ಸಾಹಿಸುತ್ತಿದೆ. ಈಗ ಕೊರೊನಾ ಹಾವಳಿ ನಂತರವೂ ಮಠ ಸಿದ್ಧಶ್ರೀ ಪ್ರಶಸ್ತಿ ಪ್ರದಾನ ಮಾಡಲು ತಯಾರು ನಡೆಸುತ್ತಿದೆ. ಹಾಗೆ, ನೋಡಿದರೆ, ಉತ್ತರ ಕರ್ನಾಟಕದಲ್ಲಿ ಸಿದ್ಧಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ದೊಡ್ಡ ಮಟ್ಟದಲ್ಲೇ ನಡೆಯುತ್ತಿದೆ.
ಇಷ್ಟಕ್ಕೂ ಈ ಸಿದ್ಧನಕೊಳ್ಳ ಮಠದ ಬಗ್ಗೆ ಹೇಳೋಕೆ ಕಾರಣ, “ಸಿದ್ಧನಕೊಳ್ಳ ಭಕ್ತರ ಗೀತೆ” ಎಂಬ ಹೆಸರಿನ ಆಲ್ಬಂ ಸಾಂಗ್‌ ಮಾಡಲು ತಯಾರಿ ನಡೆದಿದೆ.

ಈ ಆಲ್ಬಂ ಸಾಂಗ್‌ಗೆ ನಿರ್ದೇಶಕ ಗೋಪಿ ಕೆರೂರ್‌ ನೇತೃತ್ವ ವಹಿಸುತ್ತಿದ್ದಾರೆ. ಅವರೇ ನಾಲ್ಕು ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಬಾಲಸುಬ್ರಹ್ಮಣ್ಯಂ ಅವರ ಶಿಷ್ಯರಾಗಿರುವ ಉದಯ್‌ ಅಂಕೋಲ ಅವರ ಸಂಗೀತವಿದೆ. ಜೊತೆಗೆ ಹಾಡುಗಳಿಗೆ ಅವರೇ ಧ್ವನಿಯಾಗಿದ್ದಾರೆ. ಈ ಆಲ್ಬಂ ವಿಶೇಷವೆಂದರೆ, ಸಿದ್ಧನಕೊಳ್ಳ ಮಠದ ಜೊತೆಗೆ ಮಹಾಕೂಟೇಶ್ವರ ಮತ್ತು ಬಾದಾಮಿ ಬನಶಂಕರಿ ದೇವಿ ಮೇಲೆಯೂ ಹಾಡುಗಳು ರಚಿತವಾಗಿವೆ. ಸಿದ್ಧನಕೊಳ್ಳ ಮಠದ ಗುರುಗಳಾದ ಡಾ. ಶ್ರೀ ಶಿವಕುಮಾರ್ ಸ್ವಾಮೀಜಿಗಳು ಈ ಆಲ್ಬಂನ ಮುಖ್ಯ ಆಕರ್ಷಣೆ. ಹೌದು, ಈ ಆಲ್ಬಂನಲ್ಲಿ ಶ್ರೀಗಳು ಕೂಡ ನಟಿಸುತ್ತಿದ್ದಾರೆ ಎಂಬುದು ವಿಶೇಷ. ಸಹಜವಾಗಿಯೇ ಸಿದ್ಧನಕೊಳ್ಳ ಮಠದ ಭಕ್ತರಿಗೆ ಶ್ರೀಗಳ ನೇತೃತ್ವದಲ್ಲಿ ಸಿದ್ಧಗೊಳ್ಳುತ್ತಿರುವ ಆಲ್ಬಂನಲ್ಲಿ ಶ್ರೀಗಳು ನಟಿಸುತ್ತಿರುವುದು ಕೂಡ ಸಂತೋಷ ತಂದಿದೆ.


ಆಲ್ಬಂನಲ್ಲಿರುವ ನಾಲ್ಕು ಭಕ್ತಿಗೀತೆಗಳು ಸಿನಿಮಾ ಶೈಲಿಯಲ್ಲೇ ಮೂಡಿಬರಲಿದೆ ಎಂಬುದನ್ನು ವಿವರಿಸುತ್ತಾರೆ ನಿರ್ದೇಶಕ ಗೋಪಿ ಕೆರೂರ್. “ಸಿದ್ಧನಕೊಳ್ಳ ಭಕ್ತರ ಗೀತೆʼ ಆಲ್ಬಂ ನಿರ್ದೇಶನದ ಬಗ್ಗೆ ಹೇಳುವ ಗೋಪಿ ಕೆರೂರ್‌, “ಈ ಆಲ್ಬಂಗೆ ಗೀತೆ ಬರೆಯಲು ಅವಕಾಶ ಸಿಕ್ಕಿದ್ದೇ ನನ್ನ ಅದೃಷ್ಟ. ದೇವರ ಬಗ್ಗೆ ನಾಲ್ಕು ಪದ ಬರೆಯುವುದು ಖುಷಿ ಕೊಟ್ಟಿದೆ. ಸಿದ್ಧನಕೊಳ್ಳ ಮಠದ ಶ್ರೀಗಳ ಪ್ರೋತ್ಸಾಹವೇ ಇದಕ್ಕೆ ಕಾರಣ. ಮಾರ್ಚ್‌ ಅಂತ್ಯದಲ್ಲಿ ಈ ಆಲ್ಬಂಗೆ ಚಾಲನೆ ಸಿಗಲಿದೆ.
ಅದ್ಧೂರಿಯಾಗಿಯೇ ಆಲ್ಬಂ ಚಿತ್ರೀಕರಿಸುವ ಯೋಜನೆ ಇದೆ. ಎಪಿಕ್‌ ಕ್ಯಾಮೆರಾ ಬಳಸಿ, ಸುಮಾರು ಹದಿನೈದು ದಿನಗಳ ಕಾಲ ಚಿತ್ರೀಕರಿಸಲು ಉದ್ದೇಶಿಸಲಾಗಿದೆ. ಒಟ್ಟು, ಈ ಆಲ್ಬಂಗೆ ಹತ್ತು ಲಕ್ಷಕ್ಕೂ ಹೆಚ್ಚು ವೆಚ್ಚವಾಗಲಿದೆ. ಬನಶಂಕರಿ, ಮಹಾಕೂಟ, ಸಿದ್ಧನಕೊಳ್ಳ, ಹುಲಿಗೆಮ್ಮನ ಕೊಳ್ಳ ಸೇರಿದಂತೆ ಇತರೆ ತಾಣಗಳಲ್ಲಿ ಆಲ್ಬಂ ಚಿತ್ರೀಕರಣ ನಡೆಯಲಿದೆ.

ಇನ್ನು, ಇಲ್ಲಿ ಪ್ರತಿ ದಿನ ಸುಮಾರು 150 ರಿಂದ 200 ಜನ ಜೂನಿಯರ್‌ ಕಲಾವಿದರನ್ನು ಇಟ್ಟುಕೊಂಡು ಹಾಡುಗಳನ್ನು ಚಿತ್ರೀಕರಿಸಲಾಗುವುದು. ಇವರೊಂದಿಗೆ ಇಬ್ಬರು ಜನಪ್ರಿಯ ತಾರೆಯರೂ ಇಲ್ಲಿ ಕಾಣಿಸಿಕೊಳ್ಳಲಿದ್ದಾರೆ” ಎಂದು ವಿವರಿಸುತ್ತಾರೆ ಗೋಪಿ ಕೆರೂರ್. ಉತ್ತರ ಕರ್ನಾಟಕದ ಇಳಕಲ್‌ ತಾಲೂಕಿನಲ್ಲಿರುವ ಸಿದ್ಧನಕೊಳ್ಳ ಮಠ, ಐಹೊಳೆ-ಪಟ್ಟದಕಲ್ಲು ಸ್ಥಳದಿಂದ ಹತ್ತು ಕಿ.ಮೀ.ದೂರದಲ್ಲಿದೆ. ಈಗಾಗಲೇ ಈ ಮಠಕ್ಕೆ ಹಲವು ರಾಜಕಾರಣಿಗಳು, ಸಿನಿಮಾ ತಾರೆಯುರು ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ. ಕಲಾಪೋಷಕರ ಮಠ ಎಂದೇ ಗುರುತಿಸಿಕೊಂಡಿರುವ ಈ ಮಠದ ಬಗ್ಗೆ ಇದೇ ಮೊದಲ ಸಲ ಆಲ್ಬಂ ಸಾಂಗ್‌ ಚಿತ್ರೀಕರಿಸಲಾಗುತ್ತಿದೆ.

Categories
ಸಿನಿ ಸುದ್ದಿ

ಬಾಕ್ಸಾಫೀಸ್‌ ಸುಲ್ತಾನ್‌ ಮತ್ತೆ ಸೌಂಡು- ಗಳಿಕೆಯಲ್ಲಿ ಹೊಸ ದಾಖಲೆ ಬರೆದ ರಾಬರ್ಟ್!

ಕನ್ನಡದ ಬಹುನಿರೀಕ್ಷಿತ ಚಿತ್ರ “ರಾಬರ್ಟ್‌” ಅಬ್ಬರ ಎಲ್ಲೆಡೆ ಜೋರಾಗಿದೆ. ಬಿಡುಗಡೆಯಾದ ಮೊದಲ ದಿನವೇ ಬಾಕ್ಸಾಫೀಸ್‌ ಚಿಂದಿ ಉಡಾಯಿಸಿದೆ. ಬಾಕ್ಸ್‌ ಆಫೀಸ್‌ ಸುಲ್ತಾನ್‌ ಎಂದೇ ಕರೆಸಿಕೊಳ್ಳುವ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರ “ರಾಬರ್ಟ್‌” ಗಳಿಕೆಯಲ್ಲಿ ದೊಡ್ಡ ಮೊಟ್ಟದ ದಾಖಲೆ ಬರೆದಿದೆ. ಚಿತ್ರತಂಡ ಅಧಿಕೃತವಾಗಿಯೇ ಮೊದಲ ದಿನದ ಕಲೆಕ್ಷನ್‌ ರಿಪೋರ್ಟ್‌ ಹೊರ ಹಾಕಿದೆ. ಅವರ ಕಲೆಕ್ಷನ್‌ ರಿಪೋರ್ಟ್‌ ಪ್ರಕಾರ, “ರಾಬರ್ಟ್‌” ಚಿತ್ರ ಕರ್ನಾಟಕದಲ್ಲಿ 17.24ಕೋಟಿ ರೂ. ಗಳಿಕೆ ಕಂಡಿದೆ. ಈ ಮೂಲಕ ಅಚ್ಚರಿಯನ್ನೂ ಮೂಡಿಸಿದೆ.

ಹೌದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ “ರಾಬರ್ಟ್” ಮಾರ್ಚ್11ರ ಶಿವರಾತ್ರಿ ಹಬ್ಬದಂದು ಅದ್ದೂರಿಯಾಗಿ ತೆರೆಗೆ ಬಂದಿದ್ದು ಎಲ್ಲರಿಗೂ ಗೊತ್ತಿದೆ. ಕರ್ನಾಟಕ ಸೇರಿದಂತೆ ಇತರೆ ರಾಜ್ಯದಲ್ಲೂ ತೆರೆಕಂಡಿರುವ “ರಾಬರ್ಟ್” ಚಿತ್ರಕ್ಕೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸದ್ಯಕ್ಕೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ “ರಾಬರ್ಟ್” ತನ್ನ ಮೊದಲ ದಿನದ ಕಲೆಕ್ಷನ್ನಲ್ಲಿ ದಾಖಲೆ ಬರೆದು ಬೀಗುತ್ತಿದೆ.
ಕನ್ನಡ ಚಿತ್ರವೊಂದು ಮೊದಲ ದಿನವೇ ದೊಡ್ಡ ಮೊತ್ತದ ಗಳಿಕೆ ಕಂಡಿರವುದು ಕನ್ನಡ ಚಿತ್ರರಂಗದ ವಿಚಾರದಲ್ಲಿ ಖುಷಿಯ ಸಂಗತಿ. ಇನ್ನು ಹೈದರಾಬಾದ್‌ನಲ್ಲೂ “ರಾಬರ್ಟ್” ಉತ್ತಮ ಗಳಿಕೆ ಕಂಡಿದೆ. ಮೊದಲ ದಿನ ಆಂಧ್ರ ಹಾಗು ತೆಲಂಗಾಣದಲ್ಲಿ 3.12 ಕೋಟಿ ರೂ. ಬಾಚಿದ್ದು, ದರ್ಶನ್ ಅವರ ಚಿತ್ರ ಮೊದಲ ಸಲ ತೆಲುಗಿನಲ್ಲಿ ಅದ್ದೂರಿ ಬಿಡುಗಡೆ ಕಂಡಿದೆ.

ಇನ್ನು, ಚಿತ್ರಮಂದಿರಗಳ ವಿಚಾರದಲ್ಲೂ ದಾಖಲೆ ನಿರ್ಮಿಸಿದ್ದ “ರಾಬರ್ಟ್”, ಕನ್ನಡ ಮತ್ತು ತೆಲುಗಿನಲ್ಲಿ ಅತೀ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.
ಕರ್ನಾಟಕದಲ್ಲಿ ಏರಿಯಾ ಗಳಿಕೆ ಕುರಿತು ಹೇಳುವುದಾದರೆ, ಬಿಕೆಟಿ ಮತ್ತು ಸೌತ್‌ ಕೆನರಾ 2 ಕೋಟಿ, ಎಂಎಂಸಿಎಚ್‌ 2 ಕೋಟಿ, ಚಿತ್ರದುರ್ಗ ಮತ್ತು ದಾವಣಗೆರೆ 2.24 ಕೋಟಿ, ಶಿವಮೊಬ್ಬ 1 ಕೋಟಿ, ಹೈದರಾಬಾದ್‌ ಕರ್ನಾಟಕ 3 ಕೋಟಿ, ಬಾಂಬೆ ಕರ್ನಾಟಕ 2 ಕೋಟಿ ರೂ.ಗಳಿಕೆ ಕಂಡಿದೆ.

ಇದು ನಿಜಕ್ಕೂ ಹೆಮ್ಮೆಯ ವಿಷಯವೇ. ಉತ್ತರ ಕರ್ನಾಟಕದಲ್ಲಿ ಅತೀ ಹೆಚ್ಚು ಗಳಿಕೆ ಕಂಡಿದೆ ಎಂಬುದನ್ನಿಲ್ಲಿ ಗಮನಿಸಬಹುದು. ಮೊದಲ ಬಾರಿಗೆ ಕನ್ನಡದ ಸಿನಿಮಾವೊಂದು ಇಷ್ಟು ದೊಡ್ಡ ಮಟ್ಟದಲ್ಲಿ ಅತೀ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಮಾರ್ಚ್11ರ ಬೆಳಗ್ಗೆ 6 ಗಂಟೆಯಿಂದಲೇ ಅಭಿಮಾನಿಗಳು ಚಿತ್ರಮಂದಿರದ ಮುಂದೆ ಸಾಲುಗಟ್ಟಿ ನಿಂತು ಚಿತ್ರ ವೀಕ್ಷಿಸಿದ್ದು ವಿಶೇಷ. ಎರಡನೇ ದಿನದಲ್ಲೂ “ರಾಬರ್ಟ್‌” ಹೌಸ್‌ಫುಲ್‌ ಪ್ರದರ್ಶನ ಕಾಣುತ್ತಿರುವುದು ಸಹಜವಾಗಿಯೇ ಚಿತ್ರತಂಡಕ್ಕೆ ಖುಷಿ ಕೊಟ್ಟಿದೆ.

Categories
ರಿ ವಿವ್ಯೂ

ರಾಬರ್ಟ್‌ ಅದ್ಧೂರಿ ದರ್ಶನ! ಈ ಬಾಸು ಕೊಂಚ ರೌಡಿ, ಮಿಸ್‌ ಮಾಡದೇ ನೀವ್‌ ನೋಡಿ!!

ಚಿತ್ರ ವಿಮರ್ಶೆ

ಮಚ್‌ ಹಾಕೋರಿಗೇ ಹೆದರಲಿಲ್ಲ… ಇನ್ನು ಸ್ಕೆಚ್‌ ಹಾಕೋರಿಗೆ ಹೆದರ್ತೀನಾ..”

– ಈ ಡೈಲಾಗ್‌ ಬರುವ ಹೊತ್ತಿಗೆ, ಒಂದು ಹಂತದಲ್ಲಿ ಸಿನಿಮಾದ ಮೊದಲರ್ಧ ಮುಗಿದು, ತನ್ನ ವೇಗವನ್ನು ಹೆಚ್ಚಿಸಿಕೊಂಡಿರುತ್ತೆ. ಮುಂದೇನಾಗುತ್ತೆ ಎಂಬ ಕುತೂಹಲವೂ ಕೂಡ ಕ್ಷಣ ಕ್ಷಣಕ್ಕೂ ಹೆಚ್ಚುತ್ತಾ ಹೋಗುತ್ತೆ. ಆ ಕುತೂಹಲವನ್ನು ವರ್ಣಿಸುವುದು ತುಸು ಕಷ್ಟ. ಅಂಥದ್ದೊಂದು ಕುತೂಹಲ ಕೆರಳಿಸಿರುವ “ರಾಬರ್ಟ್‌” ನಿಜಕ್ಕೂ ಅದ್ಧೂರಿ “ದರ್ಶನ” ನೀಡಿದೆ ಎನ್ನಬಹುದು.
ಇಷ್ಟು ದಿನ “ರಾಬರ್ಟ್‌” ಎದುರು ನೋಡುತ್ತಿದ್ದವರಿಗೆ ಖಂಡಿತ ಇಲ್ಲಿ ನಿರಾಸೆ ಆಗುವುದಿಲ್ಲ. ದರ್ಶನ್‌ ಅಭಿಮಾನಿಗಳಿಗಂತೂ ಪಕ್ಕಾ ಮಾಸ್‌ ಎಂಟರ್‌ಟೈನ್‌ಮೆಂಟ್‌ ಚಿತ್ರವಿದು. ಕಾಸು ಕೊಟ್ಟು ಬಾಸು ನೋಡಿದವರಿಗೆ ಪಾನ್‌ ಮಸಾಲ ತಿಂದಷ್ಟೇ ಖುಷಿ. “ರಾಬರ್ಟ್”‌ ಒಂದು ರಿವೇಂಜ್‌ ಕಥೆ ಹಿನ್ನೆಲೆಯಲ್ಲಿ ಸಾಗುವ ಚಿತ್ರ. ರಿವೇಂಜ್‌ ಸ್ಟೋರಿ ಕನ್ನಡಕ್ಕೆ ಹೊಸದಲ್ಲ. ಆದರೆ, ನಿರ್ದೇಶಕ ತರುಣ್‌ ಸುಧೀರ್‌ ಅವರ ಈ “ರಿವೇಂಜ್” ವಿಭಿನ್ನ ಎನ್ನಬಹುದು. ಇಲ್ಲಿ ಕಥೆ ಇದೆ, ಚಿತ್ರಕಥೆಗೊಂದು ವೇಗವಿದೆ. ಸಿನಿಮಾದ ಅವಧಿ ಹೆಚ್ಚಾಯಿತು ಎನಿಸಿದರೂ, ಅಲ್ಲಲ್ಲಿ ಕಾಣುವ ಹಾಡುಗಳು ನೋಡುಗರ ಮನಮುಟ್ಟಿ, ಸುಮ್ಮನೆ ನೋಡಿಸಿಕೊಂಡು ಹೋಗುವ ತಾಕತ್ತು “ರಾಬರ್ಟ್‌”ಗಿದೆ.
ಸಾಮಾನ್ಯವಾಗಿ ದರ್ಶನ್‌ ಸಿನಿಮಾಗಳಲ್ಲಿ ಹೊಡಿ, ಬಡಿ, ಕಡಿ ಅಂಶಗಳು ಇದ್ದೇ ಇರುತ್ತೆ. ಇಲ್ಲೂ ಆ ಎಲ್ಲಾ ಅಂಶಗಳಿದ್ದರೂ, ಅವುಗಳ ಜೊತೆ ಒಂದಷ್ಟು ಮನಸ್ಸಿಗೆ ನಾಟುವ ಅಂಶಗಳು ಇವೆ. ದ್ವೇಷ, ಆಕ್ರೋಶ, ಗೆಳೆತನ, ಪ್ರೀತಿ, ಧರ್ಮ, ಅಧರ್ಮ ಅಂಶಗಳು ಇಲ್ಲಿ ಮೇಳೈಸಿವೆ. ಅವೆಲ್ಲವನ್ನೂ ರುಚಿಸುವಂತೆ ಕಟ್ಟಿಕೊಟ್ಟಿರುವ ನಿರ್ದೇಶಕರ ಶ್ರಮ ಇಲ್ಲಿ ಎದ್ದು ಕಾಣುತ್ತದೆ.

ಒಂದು ಸಿನಿಮಾ ಸುಮ್ಮನೆ ನೋಡಿಸಿಕೊಂಡು ಹೋಗುತ್ತೆ ಅಂದರೆ, ಅದರಲ್ಲಿರುವ ಗಟ್ಟಿ ಕಥೆ ಮತ್ತು ಅದನ್ನು ಅಷ್ಟೇ ಅಂದವಾದ ನಿರೂಪಣೆ. ಇಲ್ಲಿ ದೊಡ್ಡ ತಾರಾಬಳಗವನ್ನೇ ಕಟ್ಟಿಕೊಂಡು ಎಲ್ಲರಿಗೂ ಆದ್ಯತೆ ಕೊಡುವುದು ತಲೆನೋವಿನ ಕೆಲಸವೇ. ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ಸುಂದರ “ದರ್ಶನ” ಮಾಡಿಸುವಲ್ಲಿ ತರುಣ್‌ ಸುಧೀರ್‌ ಯಶಸ್ವಿಯಾಗಿದ್ದಾರೆ.
ಸಿನಿಮಾದ ವೇಗ ಹೆಚ್ಚಿಸಿರೋದು ಚಿತ್ರಕಥೆ ಮತ್ತು ಹಿನ್ನೆಲೆ ಸಂಗೀತ. ಇವುಗಳಿಗೆ ಸಾಥ್‌ ನೀಡಿರೋದು ಸಂಕಲನ ಹಾಗು ಆಗಾಗ ಕಾಣುವ ಸುಂದರ ಹಾಡುಗಳು. ಎಲ್ಲವನ್ನೂ ತೆರೆಯ ಮೇಲೆ ಚೆಂದ ಕಾಣಿಸಿರುವ ಛಾಯಾಗ್ರಹಣ ಕೂಡ ಇಲ್ಲಿ ಕಮ್ಮಿ ಏನಿಲ್ಲ. ಪ್ರತಿಯೊಂದು ಪಾತ್ರದ ಮಾತುಗಳೂ ಕೂಡ ಚಿತ್ರದ ಬಿಗಿಹಿಡಿತಕ್ಕೆ ಕಾರಣವಾಗಿವೆ.

“ರಾಬರ್ಟ್‌” ಬಗ್ಗೆ ಇನ್ನೂ ಆಳವಾಗಿ ಹೇಳುವುದಾದರೆ, ತೆರೆಯ ಮೇಲೆ ಎಲ್ಲವೂ ಅದ್ಧೂರಿಯಾಗಿಯೇ ದರ್ಶನವಾಗಿದೆ. ಪ್ರತಿಯೊಂದು ದೃಶ್ಯ ಕೂಡ ಅದ್ಭುತ ಎನಿಸುವಷ್ಟರ ಮಟ್ಟಿಗೆ ಕಟ್ಟಿಕೊಡಲಾಗಿದೆ. ಅದು ಮಾತಿನ ಭಾಗವಿರಲಿ, ಹಾಡಿರಲಿ, ಫೈಟ್‌ ಇರಲಿ ಎಲ್ಲವೂ ಭರಪೂರವಾಗಿರಬೇಕು ಅಂದುಕೊಂಡೇ ನಿರ್ಮಾಪಕರು ಹಣ ಸುರಿದಿರುವುದು “ರಾಬರ್ಟ್‌” ನೋಡಿದವರಿಗೆ ಗೊತ್ತಾಗದೇ ಇರದು. ಒಂದು ಸಿನಿಮಾ ಅಚ್ಚುಕಟ್ಟಾಗಿ ಮೂಡಬೇಕಾದರೆ, ಕಥೆ ಇದ್ದರೆ ಸಾಲದು, ತೆರೆ ಮೇಲೆ ಕಾಣಿಸುವ ನಟ,ನಟಿ, ಕಲಾವಿದರಿದ್ದರೆ ಸಾಲದು, ತೆರೆ ಹಿಂದೆ ಇರುವವರ ಪಾತ್ರವೂ ಇರಲೇಬೇಕು. ಅದನ್ನಿಲ್ಲಿ ಕಾಣಬಹುದು. “ರಾಬರ್ಟ್‌” ಆರ್ಭಟಕ್ಕೆ, ಅಂದಕ್ಕೆ ಒಗ್ಗಟ್ಟಿನ ಮಂತ್ರ ಕಾರಣ ಎನ್ನಬಹುದು. ಟೀಮ್‌ ಕೆಲಸ ಒಂದೊಳ್ಳೆಯ ಸಿನಿಮಾ ಆಗಲು ಕಾರಣವಾಗಿದೆ ಅಂತ ಮುಲಾಜಿಲ್ಲದೆ ಹೇಳಬಹುದು.

ಸಿನಿಮಾದಲ್ಲಿ ತುಂಬಾ ಹೈಲೈಟ್‌ ಅಂದರೆ, ಪಂಚಿಂಗ್‌ ಡೈಲಾಗ್‌ಗಳು. ಇಲ್ಲಿ ಹೀರೋ ಬರೀ ಎದುರಾಳಿಗಳಿಗೆ ಪಂಚಿಂಗ್‌ ಡೈಲಾಗ್‌ ಕೊಡ್ತಾರೆ ಅಂದುಕೊಂಡರೆ ಆ ಊಹೆ ತಪ್ಪು. ಹೀರೋ ಇಲ್ಲಿ ಮನಮುಟ್ಟುವ ಮಾತುಗಳನ್ನೂ ಹೇಳುತ್ತಾನೆ, ಕಣ್ಣಂಚು ಒದ್ದೆಯಾಗಿಸುವಂತಹ ಮಾತನ್ನೂ ಹೊರಹಾಕುತ್ತಾನೆ. “ಮಡಿ ಮೈಲಿಗೆಗಿಂತ ಮನುಷ್ಯತ್ವ ಮುಖ್ಯ, ಒಳ್ಳೇತನಕ್ಕೆ ಪಾಪ ಅಂಟಲ್ಲ, ಕೆಟ್ಟತನಕ್ಕೆ ಪುಣ್ಯ ಬರಲ್ಲ, ಒಬ್ಬರ‌ ಲೈಫಲ್ಲಿ ಹೀರೋ ಆಗಬೇಕಾದರೆ, ಮತ್ತೊಬ್ಬರ ಲೈಫಲ್ಲಿ ವಿಲನ್‌ ಆಗಬೇಕು..”ಈ ರೀತಿಯ ಹಲವು ಡೈಲಾಗ್‌ಗಳು ಇಡೀ ಚಿತ್ರದುದ್ದಕ್ಕೂ ಬಂದು ಇನ್ನಷ್ಟು ರೋಚಕತೆ ಎನಿಸುತ್ತವೆ. ಕೆಲವು ಡೈಲಾಗ್‌ಗಳು ಭಾವುಕತೆಗೂ ದೂಡುತ್ತವೆ. ಇಲ್ಲಿ ರಾಬರ್ಟ್‌ ಬಗ್ಗೆ ಎಷ್ಟು ಹೇಳಿದರೂ, ತೆರೆ ಮೇಲಿನ ಅಬ್ಬರದ ಬಗ್ಗೆ ವರ್ಣಿಸಲು ಆಗಲ್ಲ. ಅಂತಹ ಅಬ್ಬರದ ದರ್ಶನ ಮಾಡಲೇಬೇಕೆನಿಸಿದರೆ ಮಿಸ್‌ ಮಾಡದೆ ರಾಬರ್ಟ್‌ ನೋಡಿ.

ಇದು ರಾಬರ್ಟ್‌ ಕಥೆ…
ರಾಬರ್ಟ್‌ ಮತ್ತು ರಾಘವ್‌ ಇಲ್ಲಿ ಇಬ್ಬರಿದ್ದಾರೆ. ಈ ಎರಡು ಪಾತ್ರಗಳಲ್ಲೂ ದರ್ಶನ್‌ ಅವರೇ ಇದ್ದಾರೆ. ಹಾಗಾದರೆ, ದರ್ಶನ್‌ ಅವರಿಲ್ಲಿ ಡಬ್ಬಲ್‌ ಪಾತ್ರ ಮಾಡಿದ್ದಾರಾ? ಈ ಪ್ರಶ್ನೆ ಕಾಡಿದರೂ ಅಚ್ಚರಿ ಇಲ್ಲ. ರಾಬರ್ಟ್‌ ಮತ್ತು ರಾಘವ್‌ ಎರಡೂ ಪಾತ್ರದಲ್ಲೂ ದರ್ಶನ್‌ ಇದ್ದಾರೆ. ಯಾಕೆ ಅನ್ನುವ ಕುತೂಹಲವಿದ್ದರೆ ಚಿತ್ರ ನೋಡಿ.
ಕಥೆ ಶುರುವಾಗೋದೇ ಉತ್ತರ ಪ್ರದೇಶದ ಕುಸ್ತಿ ಅಖಾಡದಲ್ಲಿ. ರಾಬರ್ಟ್‌ ಕಥೆ ಲಕ್ನೋದಲ್ಲಿ ನಡೆಯುತ್ತೆ ಎಂಬುದು ವಿಶೇಷ. ಅಲ್ಲಿ ದರ್ಶನ್‌ ಆಂಜನೇಯನಾಗಿಯೂ ಮಿಂಚುತ್ತಾರೆ! ಅರೇ, ಹೌದಾ ಯಾಕೆ ಅನ್ನುವುದಕ್ಕೆ ಚಿತ್ರ ನೋಡಬೇಕು. ರಾಬರ್ಟ್‌ ‌ಇಲ್ಲಿ ರಾಘವ್‌ ಆಗಿ ಬದಲಾಗ್ತಾನೆ ಎಂಬ ಸಣ್ಣ ಸುಳಿವು ಸಿಕ್ಕರೂ ಯಾಕೆ ಅನ್ನೋದೇ ರೋಚಕ. ಮೊದಲರ್ಧ ಇಲ್ಲಿ ರಾಘವನ ಅವತಾರ ತಾಳಿರುವ ದರ್ಶನ್‌, ದ್ವಿತಿಯಾರ್ಧದಲ್ಲಿ ರಾಬರ್ಟ್‌ ಆಗಿ ಅಬ್ಬರಿಸುತ್ತಾರೆ. ಅದಕ್ಕೆ ಹತ್ತಾರು ಟ್ವಿಸ್ಟ್‌ಗಳಿವೆ. ಅವುಗಳೇ ಚಿತ್ರದ ಜೀವಾಳ.

ಒಬ್ಬ ನಾನಾ. ಅವನೊಬ್ಬ ಅಂಡರ್‌ವರ್ಲ್ಡ್‌ ಡಾನ್.‌ ಇನ್ನೊಬ್ಬ ಸರ್ಕಾರ್‌ ಅನು ಆ ಡಾನ್‌ ಸಹೋದರ. ಒಂದು ಹಂತದಲ್ಲಿ ಇಬ್ಬರೂ ಮಂಗಳೂರಿನ ಹಿಡಿತಕ್ಕಾಗಿ ಬೇರೆ ಬೇರೆ ಆಗ್ತಾರೆ. ನಾನಾ ಬಳಿ ರಾಬರ್ಟ್-ರಾಘವ ಕೆಲಸ ಮಾಡ್ತಾರೆ. ಸರ್ಕಾರ್‌ ದಂಧೆಗಳಿಗೆ ಇವರಿಬ್ಬರೂ ಅಡ್ಡವಾಗ್ತಾರೆ. ಒಂದು ಘಟನೆಯಲ್ಲಿ ನಾನಾ ಪುತ್ರನ ಕೆಟ್ಟ ಕೆಲಸಕ್ಕೆ ಬೇಸತ್ತ ರಾಬರ್ಟ್-ರಾಘವ ಅವನನ್ನು ಕೊಲೆ ಮಾಡ್ತಾರೆ. ಅತ್ತ, ಒಂದು ಪ್ರೀತಿ ಕಥೆ ಕೂಡ ಚಿಗುರೊಡೆಯುತ್ತೆ. ಮುಂದೆ ರಾಘವ ಕೊಲೆಯಾಗ್ತಾನೆ. ರಾಬರ್ಟ್‌ ಕೊಲೆಗಾರ ಅನ್ನೋ ಪಟ್ಟ ಬರುತ್ತೆ. ಮಂಗಳೂರಿಂದ ರಾಬರ್ಟ್‌ ಲಕ್ನೋಗೆ ಶಿಫ್ಟ್‌ ಆಗ್ತಾನೆ. ಮುಂದೇನಾಗುತ್ತೆ ಅನ್ನೋದನ್ನು ತೆರೆ ಮೇಲೆ ನೋಡಬೇಕು.

ಚಿತ್ರದಲ್ಲಿ ಜಗಪತಿ ಬಾಬು ನಾನಾ ಪಾತ್ರದಲ್ಲಿ ಮಿಂಚಿದ್ದಾರೆ. ಒಂದೊಳ್ಳೆಯ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ರವಿಶಂಕರ್‌ ಕೂಡ ಎಂದಿನಂತೆ ಘರ್ಜಿಸಿದ್ದಾರೆ, ಅಲ್ಲಲ್ಲಿ ನಗಿಸೋ ಪ್ರಯತ್ನವನ್ನೂ ಮಾಡಿದ್ದಾರೆ. ದರ್ಶನ್‌ ಅವರ ಪಾತ್ರದ ಬಗ್ಗೆ ಹೇಳಲೇಬೇಕು. ಬಾಸು ಕೊಂಚ ರೌಡಿನೇ. ಆ ಪಾತ್ರವನ್ನು ಅಷ್ಟೇ ಅಂದವಾಗಿಸಿದ್ದಾರೆ. ದರ್ಶನ್‌ ಅವರ ಸಿನಿಮಾ ಕೆರಿಯರ್‌ನಲ್ಲಿ ಇರುವ ಚಿತ್ರಗಳ ಪಾತ್ರಗಳ ಬಗ್ಗೆ ಹೆಸರಿಸುವುದಾದರೆ “ರಾಬರ್ಟ್‌” ಚಿತ್ರವನ್ನು ಪ್ರಧಾನವಾಗಿ ತೆಗೆದುಕೊಳ್ಳಲ್ಲಡ್ಡಿಯಿಲ್ಲ. ಅವರ ಅಭಿನಯ ಇಲ್ಲಿ ಬೇರೆ ರೀತಿಯದ್ದೇ ಖುಷಿ ಕೊಡುತ್ತದೆ. ಎರಡು ಶೇಡ್‌ ಇದ್ದರೂ, ಎರಡರಲ್ಲೂ ಔಟ್‌ ಸ್ಟ್ಯಾಂಡಿಂಗ್!‌ ವಿಶೇಷವಾಗಿ ತೊತ್ಲ ಪಾತ್ರದಲ್ಲಿ ಗಮನಸೆಳೆಯುತ್ತಾರೆ. ಎಂದಿಗಿಂತಲೂ ಜಾಸ್ತಿ ಪಂಚಿಂಗ್‌ ಡೈಲಾಗ್‌, ಫೈಟ್‌ನಲ್ಲಿ ಇಷ್ಟವಾದರೆ, ಡ್ಯಾನ್ಸ್‌ನಲ್ಲಂತೂ ನೋಡಗರನ್ನೂ ಸ್ಟೆಪ್‌ ಹಾಕುವ ರೀತಿ ಹೆಜ್ಜೆ ಹಾಕಿ ಶಿಳ್ಳೆ,ಚಪ್ಪಾಳೆಗೆ ಕಾರಣರಾಗುತ್ತಾರೆ. ಇನ್ನು, ವಿನೋದ್‌ ಪ್ರಭಾಕರ್‌ ಕೂಡ ಇಲ್ಲಿ ಗೆಳೆಯನ ಪಾತ್ರದಲ್ಲಿ ಮಿಂಚಿದ್ದಾರೆ. ಅವರಿಗೂ ಇಲ್ಲಿ ತೂಕವಾದ ಪಾತ್ರ ಸಿಕ್ಕಿದ್ದು, ಅಷ್ಟೇ ಅದ್ಭುತವಾಗಿಯೇ ನಿರ್ವಹಿಸಿದ್ದಾರೆ. ಇವರಿಬ್ಬರ ನಡುವೆ ಒಂದು ಗೆಳೆತನ, ಕಾದಾಟವಿದೆ. ಅದನ್ನು ನೋಡಿದವರಿಗೆ “ನವಗ್ರಹ” ಸಿನಿಮಾ ನೆನಪಾಗದೇ ಇರದು. ನಾಯಕಿ ಆಶಾಭಟ್ ಮೊದಲ ಚಿತ್ರವಾದರೂ, ಇಷ್ಟವಾಗುತ್ತಾರೆ. ಹಾಡು-ಕುಣಿತ, ಮಾತುಕತೆ ಎಲ್ಲದರಲ್ಲೂ ಬೋಲ್ಡ್.‌ ದೇವರಾಜ್‌, ಅವಿನಾಶ್‌, ಅಶೋಕ್‌, ಜಾನ್ಸನ್‌ ಡಿಸೋಜ, ಸೋನಾಲ್‌ ಮಾಂತೆರೊ, ಶಿವರಾಜ್‌ ಕೆ.ಆರ್.ಪೇಟೆ, ಚಿಕ್ಕಣ್ಣ ರವಿಚೇತನ್‌, ರವಿಕಿಶನ್‌, ಕರಿಸುಬ್ಬು, ಅಭಿ ದ್ವಾರಕೀಶ್‌, ಎಲ್ಲರೂ ಸಿಕ್ಕ ಪಾತ್ರವನ್ನು ಚೊಕ್ಕವಾಗಿಯೇ ಮಾಡುವ ಮೂಲಕ ಗಮನಸೆಳೆಯುತ್ತಾರೆ.
ಅರ್ಜುನ್‌ ಜನ್ಯ ಸಂಗೀತದ ಎಲ್ಲಾ ಹಾಡುಗಳು ಗುನುಗುವಂತಿವೆ. ಸುಧಾಕರ್‌ ಎಸ್.ರಾಜ್‌ ಅವರ ಕ್ಯಾಮೆರಾ ಕೈಚಳಕದಲ್ಲಿ “ರಾಬರ್ಟ್‌” ಅತೀ ಸುಂದರ. ಇನ್ನು, ಇಡೀ ಚಿತ್ರದಲ್ಲಿ ರಾಜಶೇಖರ್‌ ಚಂದ್ರಮೌಳಿ ಮಾತುಗಳು ಹಿಡಿದಿಡುತ್ತವೆ. ರಾಮ್‌ ಲಕ್ಷ್ಮಣ್‌, ಅನ್ಬು ಅರಿವು, ವಿನೋದ್‌ ಅವರ ಸ್ಟಂಟ್ಸ್‌ ಚಿತ್ರದ
ಮತ್ತೊಂದು ಹೈಲೈಟ್.‌ ಕೆ.ಎಂ.ಪ್ರಕಾಶ್‌ ಅವರ ಚುರುಕಾದ ಸಂಕಲನ, ವಿ.ಹರಿಕೃಷ್ಣ ಅವರ ಹಿನ್ನೆಲೆ ಸಂಗೀತ ಚಿತ್ರದ ಜೀವಂತಿಕೆಗೆ ಸಾಕ್ಷಿ.

ನಿರ್ದೇಶನ: ತರುಣ್ ಸುಧೀರ್
ನಿರ್ಮಾಣ: ಉಮಾಪತಿ ಶ್ರೀನಿವಾಸ್
ಸಂಗೀತ: ಅರ್ಜುನ್ ಜನ್ಯ-ಹರಿಕೃಷ್ಣ
ತಾರಾಗಣ: ದರ್ಶನ್, ಜಗಪತಿಬಾಬು, ಜಾನ್ಸನ್‌ ಡಿಸೋಜ, ಆಶಾಭಟ್, ಸೋನಾಲ್‌ ಮಾಂತೆರೊ, ವಿನೋದ್ ಪ್ರಭಾಕರ್, ದೇವರಾಜ್, ಅವಿನಾಶ್, ಚಿಕ್ಕಣ್ಣ, ಅಶೋಕ್ ಇತರರು.

  • ವಿಜಯ್‌ ಭರಮಸಾಗರ

Categories
ಸಿನಿ ಸುದ್ದಿ

ದುಡ್ಡು ಮಾಡೋದಾದ್ರೆ ಬೆಂಗಳೂರಲ್ಲೇ ಮಾಡಬಹುದು! ನಾವೂ ಅಪ್ಪ ಅಮ್ಮಂಗೆ ಹುಟ್ಟಿದ ಮಕ್ಕಳೇ- ಯಶ್‌ ಸಿಟ್ಟಾಗಿದ್ದೇಕೆ?

ಕನ್ನಡ ಚಿತ್ರರಂಗದ ಸ್ಟಾರ್‌ ನಟ ಯಶ್‌ ಅವರ ತಂದೆ-ತಾಯಿಯೊಂದಿಗೆ ಗ್ರಾಮಸ್ಥರು ಜಮೀನು ಕಾಂಪೌಂಡ್‌ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ಎಬ್ಬಿಸಿದ್ದು, ಈ ಸಂಬಂಧ ಯಶ್‌ ಅವರು ಮಂಗಳವಾರ ಹಾಸನ ಜಿಲ್ಲೆಯ ದುದ್ದ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ತಾವು ಖರೀದಿಸಿದ್ದ ಜಮೀನಿಗೆ ರಸ್ತೆ ನಿರ್ಮಿಸುವ ವಿಷಯಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರು ಮತ್ತು ಯಶ್ ಕುಟುಂಬದ ನಡುವೆ ಗದ್ದಲ ಎದ್ದಿತ್ತು. ಈ ವಿಚಾರವಾಗಿ ಯಶ್ ಬೆಂಬಲಿಗರು ಮತ್ತು ಗ್ರಾಮಸ್ಥರ ನಡುವೆ ಜಗಳ ದೊಡ್ಡದ್ದಾಗಿತ್ತು. ಈ ಬಗ್ಗೆ ಅಸಮಾಧಾನಗೊಂಡ ಯಶ್‌ ಅವರು, ಹಾಸನ ಪೊಲೀಸ್ ಠಾಣೆಗೆ ಭೇಟಿ ಕೊಟ್ಟಿದ್ದರು. ಪೊಲೀಸರೊಂದಿಗೆ ಚರ್ಚೆ ಮಾಡಿದ ನಂತರ ಮಾಧ್ಯಮ ಎದುರು ಮಾತನಾಡಿದ ಯಶ್‌, “ನಾವು ಕಷ್ಟಪಟ್ಟು ಜಮೀನು ಖರೀದಿಸಿದ್ದೇವೆ. ಈಗ ಕಾಂಪೌಂಡ್ ಹಾಕಿಸುತ್ತಿದ್ದೇವೆ. ಕೆಲಸ ಮಾಡುತ್ತಿದ್ದ ಹುಡುಗರ ಮೇಲೆ ಕೈ ಮಾಡಲಾಗುತ್ತಿದೆ ಇದು ಸರಿಯಲ್ಲ. ರಸ್ತೆ ವಿಚಾರವಾಗಿ ಮಾತುಕತೆ ನಡೆದಿದೆ. ಮಾತುಕತೆಯಲ್ಲೇ ಬಗಹರಿಸಿಕೊಳ್ಳಬೇಕು. ಕೆಲಸ ಮಾಡುವ ಹುಡುಗರ ಮೇಲೆ ಕೈ ಮಾಡಿದ್ರೆ ಸುಮ್ಮನೆ ಇರಲಿಕ್ಕೆ ಆಗಲ್ಲ. ನಮ್ಮ‌ ಜೊತೆ ಕೆಲಸ ಮಾಡೋರು ಅಂದರೆ ನಮ್ಮ ಮನೆಯವರ ರೀತಿ. ತಂದೆ-ತಾಯಿ ಬಗ್ಗೆಯೂ ಬಾಯಿಗೆ ಬಂದಂತೆ ಮಾತನಾಡಿದ್ದಾರೆ ಹಾಗಾಗಿ ಬಂದಿದ್ದೇನೆ.

ದುಡ್ಡು ಮಾಡಬೇಕು ಅಂದರೆ ಬೆಂಗಳೂರಲ್ಲೇ ಮಾಡಬಹುದು ‘ರಸ್ತೆಯನ್ನು ದೇವಸ್ಥಾನಕ್ಕೆ ಹೋಗಲು ಮಾಡಿದ್ದಾರೆ. ಅದು ನಮಗೆ ಬೇಕು ಎಂದು ಮಾಡಿಲ್ಲ. ಹಾಸನಕ್ಕೆ ಬಂದು ನಾನ್ಯಾಕೆ ಜಮೀನು ಮಾಡಬೇಕು. ದುಡ್ಡು ಮಾಡಬೇಕು ಎಂದರೆ ಬೆಂಗಳೂರಲ್ಲೇ ಆಸ್ತಿ ಮಾಡಬಹುದಲ್ವಾ. ನಾವು ಕೃಷಿ ಮಾಡಬೇಕು. ಅದು ನನ್ನ ಆಸೆ. ಅವರು ಹಳ್ಳಿ ಜನ, ನಮ್ಮ ತಂದೆ ತಾಯಿಯೂ ಹಳ್ಳಿ ಜನ. ಮಾತುಕತೆ ನಡೆದಿದೆ. ಹೇಗೆ ಮಾತಾಡಬೇಕು ಅನ್ನೋದೇ ಗೊತ್ತಿಲ್ಲ. ‘ಮೀಡಿಯಾ ಇದೆ ಅಂತಾರೆ, ಎಲ್ಲರದೂ ಅದೇ ಆಗಿದೆ. ಮೀಡಿಯಾ ಇದ್ದರೆ ಇರಲಿ ಬಿಡಿ. ನಾವೂ ಅಪ್ಪ ಅಮ್ಮನಿಗೆ ಹುಟ್ಟಿರುವ ಮಕ್ಕಳೆ. ತಂದೆ ತಾಯಿ ಬಗ್ಗೆ ಮಾತನಾಡಿದಾಗ ನಮ್ಮ‌ ಇಮೇಜ್ ನೋಡಿಕೊಂಡು ಕೂರಲು ಆಗಲ್ಲ. ಎಲ್ಲಿಂದಲೋ ಬಂದವರು, ಇಲ್ಲಿಗೆ ಬಂದಿದ್ದಾರೆ ಅಂತ ಕೇಳ್ತಾರಂತೆ ಎಂದಿದ್ದಾರೆ ಯಶ್. ಏನಿದು ಘಟನೆ ? ಯಶ್ ಅವರ ತಂದೆ ಅರುಣ್ ಕುಮಾರ್ ಮತ್ತು ತಾಯಿ ಪುಷ್ಪ ಇಬ್ಬರು ತಮ್ಮ ಜಮೀನಿನಲ್ಲಿ ಕೆಲಸ ಮಾಡಿಸುತ್ತಿರುವಾಗ ಗ್ರಾಮಸ್ಥರ ನಡುವೆ ಮಾತಿಗೆ ಮಾತು ಬೆಳೆದಿದೆ. ಜಮೀನಿಗೆ ರಸ್ತೆ ನಿರ್ಮಾಣ ಮಾಡಲು ಜೆಸಿಬಿಯಲ್ಲಿ ಕೆಲಸ ಮಾಡಿಸುತ್ತಿದ್ದ ವೇಳೆ ಗ್ರಾಮಸ್ಥರು ಅಡ್ಡಿ ಪಡಿಸಿದ್ದರು. ಈ ವೇಳೆ ಶುರುವಾದ ಗಲಾಟೆ ಮಾತಿಗೆ ಮಾತು ಬೆಳೆದು ಯಶ್ ಬೆಂಬಲಿಗರು ಮತ್ತು ಗ್ರಾಮಸ್ಥರ ನಡುವೆ ದೊಡ್ಡ ಜಗಳವಾಗಿದೆ. ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಧಾವಿಸಿ ಗ್ರಾಮಸ್ಥರನ್ನು ಸಮಾಧಾನ ಪಡಿಸಿದ್ದಾರೆ.

Categories
ಸಿನಿ ಸುದ್ದಿ

ವೀಣೆ ಪ್ರಣೀತಾ – ಹೊಸ ಲುಕ್‌ನಲ್ಲಿ ಬೆಡಗಿ

ನಟಿ ಪ್ರಣಿತಾ ಸುಭಾಷ್‌, ವೀಣಾವಾದನ ಮಾಡುತ್ತಿದ್ದಾರೆ! ಅರೇ, ಹಾಗಂತ ಅವರೇನು ವೀಣೆ ನುಡಿಸೋಕೆ ಮುಂದಾಗಿದ್ದಾರಾ ಅಂದುಕೊಳ್ಳುವಂತಿಲ್ಲ. ಸದ್ಯಕ್ಕೆ ಪ್ರಣೀತಾ ಸಿನಿಮಾಗಳ ಬಗ್ಗೆ ತಲೆಕೆಡಿಸಿಕೊಳ್ಳದೆ, ತಮ್ಮ ಸಾಮಾಜಿಕ ಕಾರ್ಯಕ್ರಮಗಳ ಕಡೆ ಗಮನಹರಿಸುತ್ತಿದ್ದಾರೆ. ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಪ್ರಣೀತಾ, ಆಗಾಗ ತಮ್ಮ ಚಂದದ ಫೋಟೋಗಳನ್ನು ಹಾಕಿಕೊಳ್ಳುವ ಮೂಲಕ ಅಭಿಮಾನಿಗಳ ಜೊತೆಯೂ ಮಾತಾಡುತ್ತಿರುತ್ತಾರೆ. ಪ್ರಣೀತಾ ಮಾಡರ್ನ್ ಹುಡುಗಿಯಾದರೂ ,ಸಂಪ್ರದಾಯಸ್ಥಳಾಗಿಯೂ ಅವಾಗವಾಗ ಕಾಣಿಸಿಕೊಳ್ಳುತ್ತಿರುತ್ತಾರೆ. ಸಾಮಾಜಿಕವಾಗಿ ತನ್ನದೇ ಆದ ರೀತಿಯಲ್ಲಿ ಸಮಾಜಕಾರ್ಯಗಳ ಜೊತೆಯಲ್ಲಿ ಜನರ ಅಪಾರ ಪ್ರೀತಿಯನ್ನೂ ಗಳಿಸಿದ್ದಾರೆ. ಕಳೆದ ಮಹಿಳಾ ದಿನಾಚರಣೆ ಇವರಿಗೆ ವಿಶೇಷವಾಗಿತ್ತು‌. ಯಾಕೆ ಅಂದರೆ, ಸೀರೆ ಅಂದರಂತೂ ಯಾರಿಗೆ ಇಷ್ಟವಿಲ್ಲ ಹೇಳಿ? ಹೆಣ್ಣು ಮಕ್ಕಳಿಗಂತೂ ಸೀರೆ ಧರಿಸಿ ಮಿಂಚುವುದು ಒಂಥರಾ ಎಲ್ಲಿಲ್ಲದ ಆನಂದ. ಇದಕ್ಕೆ ನಟಿ ಪ್ರಣೀತಾ ಸುಭಾಷ್ ಕೂಡ ಹೊರತಲ್ಲ. ಇತ್ತೀಚೆಗೆ ಕಸೂತಿ ಕಲೆಯಂತೂ ನ್ಯೂ ಟ್ರೆಂಡ್ ಆಗಿದೆ‌. ಎಂಬ್ರಾಯಿಡರಿ ಡಿಸೈನ್ ಹೊಂದಿರುವ ಸಾರಿಗಳನ್ನು ತಯಾರಿಸುವ ವರ್ಗಗಳೇ ಇವೆ. ಮಹಿಳೆಯರಿಗೆ ಬೇಕಾಗುವ ವಸ್ತುಗಳನ್ನು ಕೂಡ ಹ್ಯಾಂಡ್ ಮೇಡ್ ಆಗಿ ತಯಾರಿಸಲಾಗುತ್ತಿದೆ.

ನಟಿ ಪ್ರಣೀತಾ ಸುಭಾಷ್ ಅವರು ಒಂದು ಎಂಬ್ರಾಯಿಡರಿ ಸಾರಿ ತಯಾರಿಸುವ ಕಂಪನಿಗೆ ಬ್ರಾಂಡ್‌ ಅಂಬಾಸಡರ್ ಆಗಿದ್ದಾರೆ. ಪ್ರಣೀತಾ ಹಳದಿ ಮಿಶ್ರಿತ ಕೆಂಪು ಬಣ್ಣದ ಸಾರಿಯುಟ್ಟು ಸಿಂಪಲ್ ಆಗಿ ವೀಣೆ ಹಿಡಿದು ಕುಳಿತಿರುವ ಫೋಟೊ ಟ್ವೀಟರ್ ನಲ್ಲಿ ಅಪ್‌ಲೋಡ್‌ ಮಾಡಲಾಗಿದೆ. ಅದೀಗ ಎಲ್ಲೆಡೆ ವೈರಲ್‌ ಕೂಡ ಆಗಿದೆ.

Categories
ಸಿನಿ ಸುದ್ದಿ

ಗ್ಯಾಂಗ್‌ ಕಟ್ಟಿಕೊಂಡ ಅಭಿಗೆ ಸಿಕ್ತು ಭರ್ಜರಿ ಬಿರುದು – ನ್ಯಾಚುರಲ್‌ ಸ್ಟಾರ್‌ ಬಿರುದು ಪಡೆದರು ಬಿಕಾಂ ಶೆಟ್ರು!

ಒಂದು ಸಿನಿಮಾ ನಿರ್ಮಾಣ ಮಾಡುವುದು ಸುಲಭದ ಮಾತಲ್ಲ. ಅದರಲ್ಲೂ ಹೊಸಬರನ್ನು ನಂಬಿ ಹಣ ಹಾಕುವುದಂತೂ ತೀರಾ ಸವಾಲಿನ ಕೆಲಸವೇ ಸರಿ. ಅಂಥದ್ದೊಂದು ಸವಾಲು ಸ್ವೀಕರಿಸಿ, ಸಂಪೂರ್ಣ ಹೊಸಬರನ್ನು ನಂಬಿ ಹಣ ಹಾಕುವ ಮೂಲಕ ಸುದ್ದಿಯಾಗಿದ್ದು, “ನಮ್‌ ಗಣಿ ಬಿಕಾಂ ಪಾಸ್‌” ಚಿತ್ರ ನಿರ್ಮಾಪಕ ನಾಗೇಶ್‌ ಕುಮಾರ್.‌

ನಟನೆ ಹಾಗೂ ನಿರ್ದೇಶನ‌ ಈ ಎರಡರಲ್ಲೂ ಅದ್ಭುತ ಕೆಲಸಗಾರ ಎಂಬ ನಂಬಿಕೆಯ ಜೊತೆ ಭವ್ಯ ನಿರೀಕ್ಷೆ ಹುಟ್ಟಿಸಿದ ನಿರ್ದೇಶಕ ಅಭಿಷೇಕ್ ಶೆಟ್ಟಿ ಅವರಿಗಿರುವ ಸಿನಿಮಾ ಅಭಿಮಾನ, ಪ್ರೀತಿ ಕಂಡು ನಿರ್ಮಾಪಕರು “ಗಜಾನನ ಗ್ಯಾಂಗ್‌” ಎಂಬ ಭರವಸೆಯ ಸಿನಿಮಾ ಮಾಡಿದ್ದಾರೆ

ಹೌದು, “ನಮ್‌ ಗಣಿ ಬಿಕಾಂ ಪಾಸ್” ಸಿನಿಮಾ ಗಳಿಕೆಯಲ್ಲಿ ದೊಡ್ಡ ಮಟ್ಟದ ಸದ್ದು ಮಾಡದಿದ್ದರೂ, ಒಂದೊಳ್ಳೆಯ ಸಂದೇಶದ ಸಿನಿಮಾ ಅನ್ನುವ ಮಾತು ಜೋರಾಗಿಯೇ ಕೇಳಿಬಂತು. ಸಿನಿಮಾ ಹಣ ಮಾಡದಿದ್ದರೂ, ಹೆಸರು ತಂದು ಕೊಟ್ಟಿದೆ. ಆ ಖುಷಿಯಲ್ಲೇ ಇದ್ದ ನಿರ್ಮಾಪಕ ಪುನಃ, ಅದೇ ತಂಡದೊಂದಿಗೆ ಮತ್ತೊಂದು ಸಿನಿಮಾ ನಿರ್ಮಾಣಕ್ಕೂ ಮುಂದಾದರು.‌ ಅದಕ್ಕೆ ಕಾರಣ, ಒಳ್ಳೆಯ ಕಥೆ. ನಂಬಿಕೆ ಉಳಿಸಿಕೊಂಡಿದ್ದ ಚಿತ್ರತಂಡ. ಹಾಗಾಗಿ “ಗಜಾನನ ಅಂಡ್‌ ಗ್ಯಾಂಗ್‌” ಹೆಸರಿನ ಸಿನಿಮಾ ನಿರ್ಮಾಣ ಕೈಗೆತ್ತಿಕೊಂಡ ನಾಗೇಶ್‌ ಕುಮಾರ್‌, ಅದನ್ನು ಯಶಸ್ವಿಯಾಗಿ ಮುಗಿಸಿದ್ದಾರೆ ಕೂಡ.

ಅಭಿಷೇಕ್‌ ಶೆಟ್ಟಿ ನಿರ್ದೇಶನದ “ನಮ್‌ ಗಣಿ ಬಿಕಾಂ ಪಾಸ್‌” ಒಳ್ಳೆಯ ಸಿನಿಮಾ ಎಂಬ ಮಾತುಗಳು ಕೇಳಿಬಂದ ಹಿನ್ನೆಲೆಯಲ್ಲಿ, ನಿರ್ಮಾಪಕರು ಮತ್ತದೇ ತಂಡದೊಂದಿಗೆ “ಗಜಾನನ ಅಂಡ್‌ ಗ್ಯಾಂಗ್‌” ನಿರ್ಮಿಸಿ, ಮುಗಿಸಿದ್ದು, ಸಹಜವಾಗಿಯೇ ಅವರಿಗೂ ಖುಷಿಕೊಟ್ಟಿದೆ. ಇನ್ನು, ಮೊದಲ ನಿರ್ಮಾಣದ “ನಮ್‌ ಗಣಿ ಬಿಕಾಂ ಪಾಸ್‌” ಸಿನಿಮಾ ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಸಿಕ್ಕಾಪಟ್ಟೆ ವೀಕ್ಷಣೆ ಪಡೆದಿದ್ದು ವಿಶೇಷ.

ನಟನೆ ಹಾಗೂ ನಿರ್ದೇಶನ‌ ಈ ಎರಡರಲ್ಲೂ ಅದ್ಭುತ ಕೆಲಸಗಾರ ಎಂಬ ನಂಬಿಕೆಯ ಜೊತೆ ಭವ್ಯ ನಿರೀಕ್ಷೆ ಹುಟ್ಟಿಸಿದ ನಿರ್ದೇಶಕ ಅಭಿಷೇಕ್ ಶೆಟ್ಟಿ ಅವರಿಗಿರುವ ಸಿನಿಮಾ ಅಭಿಮಾನ, ಪ್ರೀತಿ ಕಂಡು ನಿರ್ಮಾಪಕರು “ಗಜಾನನ ಗ್ಯಾಂಗ್‌” ಎಂಬ ಭರವಸೆಯ ಸಿನಿಮಾ ಮಾಡಿದ್ದಾರೆ.”ಗಜಾನನ ಅಂಡ್‌ ಗ್ಯಾಂಗ್‌” ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಹೊರ ಬಂದಾಗಲೇ ಒಂದೊಳ್ಳೆಯ ನಿರೀಕ್ಷೆ ಹುಟ್ಟಿಸಿತ್ತು. ಅಷ್ಟೇ ಒಳ್ಳೆಯ ತಂಡ ಕಟ್ಟಿಕೊಂಡ ನಿರ್ದೇಶಕ ಅಭಿಷೇಕ್‌ ಶೆಟ್ಟಿ, ಚಿತ್ರದ ಮೊದಲ ಲುಕ್‌ನಲ್ಲೇ ಮಜಾ ಎನಿಸುವ ಸಿನಿಮಾ ಇದು ಎಂಬ ನಿರೀಕ್ಷೆ ಹೆಚ್ಚಿಸಿದ್ದೂ ಉಂಟು.

ಅವರ “ಗ್ಯಾಂಗ್‌” ಈಗ ಕಂಪ್ಲೀಟ್‌ ಮುಗಿದಿದ್ದು, ಬಿಡುಗಡೆಗೆ ಸಜ್ಜಾಗುತ್ತಿದೆ. ಈಗಿನ ಟ್ರೆಂಡ್‌ಗೆ ತಕ್ಕಂತಹ ಸಿನಿಮಾ ಮಾಡಿರುವ ನಿರ್ದೇಶಕರು, ಯೂಥ್‌ ಟಾರ್ಗೆಟ್‌ ಮಾಡಿಯೇ ಸಿನಿಮಾ ಮಾಡಿದ್ದಾರೆ. ಎಲ್ಲಾ ವರ್ಗಕ್ಕೂ ಈ ಚಿತ್ರ ಇಷ್ಟವಾಗುತ್ತೆ ಎಂಬ ನಂಬಿಕೆಯೂ ಚಿತ್ರತಂಡಕ್ಕಿದೆ.

ಅಭಿಷೇಕ್‌ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರದಲ್ಲಿ ಶ್ರೀ ಮತ್ತು ಅದಿತಿ ಪ್ರಭುದೇವ ಪ್ರಮುಖ ಆಕರ್ಷಣೆ. ನಿರ್ಮಾಪಕ ನಾಗೇಶ್ ಕುಮಾರ್ ಯುಎಸ್ ಅವರೊಂದಿಗೆ ಪ್ರಶಾಂತ್ ಕುಮಾರ್ ಶೆಟ್ಟಿ ಕೂಡ ನಿರ್ಮಾಣದಲ್ಲಿ ಸಾಥ್‌ ನೀಡಿದ್ದಾರೆ. ಈಗಾಗಲೇ ಚಿತ್ರದ ಆಡಿಯೋ ಹಕ್ಕು ಆನಂದ್ ಆಡಿಯೋ ಖರೀದಿಸಿದ್ದು, ಪ್ರೇಮಿಗಳ ದಿನದಂದು ಬಿಡುಗಡೆಯಾದ “ಲವ್ ಡೇ ” ಸಾಂಗ್ ವೈರಲ್ ಆಗಿದ್ದು, ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿದೆ.

ಸಹಜವಾಗಿಯೇ ಈ ಬೆಳವಣಿಗೆ ಚಿತ್ರತಂಡದ ಖುಷಿ ಹೆಚ್ಚಿಸಿದೆ. ಇತ್ತೀಚೆಗೆ ನಟ ಕಮ್‌ ನಿರ್ದೇಶಕ ಅಭಿಷೇಕ್ ಶೆಟ್ಟಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು.ಈ ವೇಳೆ ಅರಸ್ ಸಿನಿಮಾಸ್ ಮೂಲಕ ನಾಗೇಂದ್ರ ಅರಸ್‌ ಅವರು “ನ್ಯಾಚುರಲ್ ಸ್ಟಾರ್”‌ ಎಂಬ ಬಿರುದು ನೀಡಿ, ಅಭಿಷೇಕ್ ಶೆಟ್ಟಿ ಅವರನ್ನು ಗೌರವಿಸಿದ್ದಾರೆ. ಸಿನಿಮಾ ತಂಡ ಈ ವೇಳೆ ಸಂಭ್ರಮಿಸುವುದರ ಜೊತೆಯಲ್ಲಿ, “ಗ್ಯಾಂಗ್” ಫಲಿತಾಂಶ ನೋಡಲು ಕಾತರರಾಗಿದ್ದಾರೆ. ಈಗಾಗಲೇ ಯಶಸ್ವಿಯಾಗಿ “ಬಿಕಾಂ ಪಾಸ್‌” ಮಾಡಿದ ಅಭಿಷೇಕ್‌ ಶೆಟ್ಟಿ ಮತ್ತು ತಂಡ, ಈಗ “ಗ್ಯಾಂಗ್‌” ಮೂಲಕ ಡಿಸ್ಟಿಂಕ್ಷನ್ ಪಡೆಯುವಂತಾಗಲಿ.

error: Content is protected !!