Categories
ಸಿನಿ ಸುದ್ದಿ

46 ವರ್ಷಕ್ಕೆ 75 ವರ್ಷಕ್ಕೆ ಮಾಡಬೇಕಾದಷ್ಟು ಸಾಧನೆ ನಮ್ಮ ಅಪ್ಪುದು-ರಾಘಣ್ಣ ಮಾತು


ಪುನೀತ್‌ ರಾಜಕುಮಾರ್ ಅವರ ಸಾಧನೆ ಬಗ್ಗೆ‌ ಎಷ್ಟು ಹೇಳಿದರೂ ಸಾಲದು. ಚಿಕ್ಕಂದಿನಲ್ಲೇ ಬಣ್ಣದ ಲೋಕವನ್ನು ಸ್ಪರ್ಶಿಸಿದ ಅಪ್ಪು, ಬಾಲನಟರಾಗಿರುವಾಗಲೇ ರಾಷ್ಟ್ರಪ್ರಶಸ್ತಿ ಪಡೆದವರು. ನಟನೆಯಷ್ಟೇ ಅಲ್ಲ, ಗಾಯನದ ಮೂಲಕವೂ ಪುನೀತ್‌ ರಾಜಕುಮಾರ್‌ ಅವರು, ದೊಡ್ಡ ಸಾಧನೆ ಮಾಡಿದ್ದು ನಿಜ. ಅವೆಲ್ಲವೂ ನಮ್ಮ ಕಣ್ಣ ಮುಂದಿದೆ. ಅಪ್ಪು ಸಾಧನೆ ಬಗ್ಗೆ ಕೇಳಿದವರಿಗೆ ನಿಜಕ್ಕೂ ಹೆಮ್ಮೆ ಎನಿಸುವುದು ದಿಟ‌. ಅವರ ಸಹೋದರ ರಾಘವೇಂದ್ರ ರಾಜಕುಮಾರ್ ಅವರು ಸಹ, ಪುನೀತ್‌ ರಾಜಕುಮಾರ್‌ ಅವರ ಸಾಧನೆ ಬಗ್ಗೆ ಸದಾ ಹೇಳುತ್ತಲೇ ಬಂದವರು. ಪುನೀತ್‌ ಅವರ ಅಗಲಿಕೆ ಬಳಿಕವೂ ರಾಘವೇಂದ್ರ ರಾಜಕುಮಾರ್‌ ಅವರು, ಪುನೀತ್‌ ಬಗ್ಗೆ ಮತ್ತು ಅವರು ಚಿಕ್ಕವಯಸ್ಸಲ್ಲೇ ಮಾಡಿದ ಸಾಧನೆ ಕುರಿತು ಹೇಳಿಕೊಂಡಿದ್ದಾರೆ.


ಪುನೀತ್‌ ಅವರು 46 ವರ್ಷಕ್ಕೆ 75 ವರ್ಷಕ್ಕೆ ಮಾಡಬೇಕಾಗಿರುವಷ್ಟು ಸಾಧನೆ ಮಾಡಿದ್ದಾರೆ. ದೇವರು, ನಮ್ಮ ಅಪ್ಪಾಜಿಗೆ ಅಷ್ಟು ವರ್ಷಗಳ ಕಾಲ ಬಿಟ್ಟು, ಎಲ್ಲಾ ಸಾಧನೆ ಮಾಡಿಕೊಂಡು ಬನ್ನಿ ಅಂದಿದ್ದರು. ಅಪ್ಪಾಜಿ ನಮ್ಮನ್ನೆಲ್ಲ ಬಿಟ್ಟು ಹೋದರು. ಈಗ ಅಪ್ಪು ಅವರನ್ನೂ ಸಹ ೪೬ ವರ್ಷಕ್ಕೆ ಎಲ್ಲವನ್ನೂ ಮುಗಿಸಿಕೊಂಡು ಬಾ ಅಂತ ಹೇಳಿದ್ದರೇನೋ? ಭಗವಂತ, ಕೊಟ್ಟ ಸಮಯ ಅಷ್ಟೇ ಅನಿಸುತ್ತೆ. ನಿಜಕ್ಕೂ ಚಿಕ್ಕ ವಯಸ್ಸಲ್ಲೇ ಅಪ್ಪು ಸಾಕಷ್ಟು ಸಾಧನೆ ಮಾಡಿದ್ದಾರೆ. ಗೊತ್ತಿಲ್ಲದೆಯೇ ಅದೆಷ್ಟೋ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ.

ಈಗ ಇದ್ದಕ್ಕಿದ್ದಂತೆ ನಮ್ಮನ್ನೆಲ್ಲಾ ಬಿಟ್ಟು ಹೋಗಿದ್ದಾರೆ. ಇದು ದುಃಖದ ಸಂಗತಿ. ಅಭಿಮಾನಿಗಳು ಅಪ್ಪು ಅವರನ್ನು ಶಾಂತಿಯಿಂದಲೇ ಕಳಿಸಿಕೊಟ್ಟಿದ್ದಾರೆ. ಕೆಲವರಿಗೆ ಅಪ್ಪು ದರ್ಶನ ಸಿಕ್ಕಿಲ್ಲ. ಹಾಗಂತ ಯಾರೂ ಬೇಸರ ಮಾಡಿಕೊಳ್ಳಬೇಡಿ. ಎಲ್ಲರಿಗೂ ನೋಡಲು ಅವಕಾಶ ಕಲ್ಪಿಸಲಾಗುವುದು. ಸದ್ಯ ಫ್ಯಾಮಿಲಿಯ ಕಾರ್ಯಗಳು ನಡೆಯಬೇಕಿದೆ. ನಂತರ ಅಭಿಮಾನಿಗಳಿಗೆ ಅವಕಾಶ ಇದ್ದೇ ಇರಲಿದೆ. ಇವತ್ತು ಅಪ್ಪು ಏನೇ ಆಗಿದ್ದರೂ, ಅದು ಅಭಿಮಾನಿಗಳಿಂದ. ಹುಟ್ಟಿದಾಗಲೇ ನಾವೆಲ್ಲರೂ ನಿಮ್ಮವರು. ನಿಮಗೇ ಮೊದಲ ಆದ್ಯತೆ ಎಂದಿದ್ದಾರೆ ರಾಘವೇಂದ್ರ ರಾಜಕುಮಾರ್.

Categories
ಸಿನಿ ಸುದ್ದಿ

ಹಾಲು-ತುಪ್ಪ ನೆರವೇರಿಸಿದ ಅಪ್ಪು ಕುಟುಂಬ; ಕಂಠೀರವ ಸ್ಟುಡಿಯೋದಲ್ಲಿ ಕಿಕ್ಕಿರಿದಿದ್ದ ಫ್ಯಾನ್ಸ್‌

ಕನ್ನಡದ ಖ್ಯಾತ ನಟ ಪುನೀತ್‌ ರಾಜಕುಮಾರ್‌ ಅವರು ನಿಧನರಾಗಿ ಇಂದಿಗೆ (ಮಂಗಳವಾರ) ಐದನೇ ದಿನ. ಈ ಹಿನ್ನೆಲೆಯಲ್ಲಿ ಪುನೀತ್‌ ಅವರ ಕುಟುಂಬ ವರ್ಗ ಐದನೇ ದಿನದ ಅಂಗವಾಗಿ ಹಾಲು-ತುಪ್ಪ ಬಿಡುವ ಕಾರ್ಯಕ್ರಮ ನಡೆಸಿತು. ಪುನೀತ್‌ ರಾಜಕುಮಾರ್‌ ಅವರ ಪತ್ನಿ ಅಶ್ವಿನಿ, ಪುತ್ರಿಯರಾದ ಧ್ರುತಿ, ವಂದಿತಾ ತನ್ನ ತಂದೆಯ ಸಮಾಧಿ ಬಳಿ ಬಂದು ಹಾಲು-ತುಪ್ಪ ಬಿಡುವ ಮೂಲಕ ಪೂಜೆ ಸಲ್ಲಿಸಿದರು. ತಂದೆಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಭಾವುಕರಾದರು. ಅಲ್ಲಿದ್ದವರೆಲ್ಲರೂ ಕ್ಷಣ ಕಾಲ ಮೌನವಾಗಿ, ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡರು. ಪುನೀತ್‌ ಅವರ ಸಮಾಧಿಯನ್ನು ಬಿಳಿ ಮತ್ತು ಹಳದಿ ಬಣ್ಣದ ಹೂಗಳಿಂದ ಮಂಟಪದ ರೀತಿ ಅಲಂಕಾರ ಮಾಡಲಾಗಿತ್ತು. ಹಾಲು-ತುಪ್ಪ ಕಾರ್ಯಕ್ರಮ ಇದ್ದುದರಿಂದ ಪುನೀತ್‌ ಅವರಿಗೆ ಪ್ರಿಯವಾದ ಊಟ, ತಿಂಡಿ, ತಿನಿಸುಗಳನ್ನು ಅವರ ಸಂಬಂಧಿಕರು ಎಡೆ ಇಟ್ಟು ನಮಸ್ಕರಿಸಿದ್ದಾರೆ.


ಈ ವೇಳೆ ಪುನೀತ್‌ ಅವರ ಪತ್ನಿ ಅಶ್ವಿನಿ ಅವರು ಪುನೀತ್‌ ಅವರ ಸಮಾಧಿ ಮೇಲಿದ್ದ ತುಳಸಿ ಸಸಿಗೆ ಪೂಜೆ ನೆರವೇರಿಸಿದರು. ಪುತ್ರಿಯರಾದ ಧ್ರುತಿ ಮತ್ತು ವಂದಿತಾ ಅವರು ಸಹ ಪೂಜೆ ನೆರವೇರಿಸಿದರು. ಸಮಾಧಿಗೆ ಅರಿಶಿನ ಕುಂಕುಮ ಹಚ್ಚಿ ಪೂಜೆ ನೆರವೇರಿಸಿ, ಎಲ್ಲರೂ ಕ್ಷಣಕಾಲ ಭಾವುಕರಾದರು. ಕುಟುಂಬದವರು ಮತ್ತು ಆಪ್ತರು ಇಂದು ಹಾಲು-ತುಪ್ಪ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಗಾಜನೂರಿನಿಂದ ಆಗಮಿಸಿರುವ ದೊಡ್ಮನೆ ಕುಟುಂಬಸ್ಥರು, ಲಕ್ಷ್ಮೀ , ಪೂರ್ಣಿಮಾ, ಧನ್ಯ , ಧೀರನ್, ಶ್ರೀಮುರುಳಿ, ಸಾರಾ ಗೋವಿಂದು ಸೇರಿದಂತೆ ಹಲವರು ಭಾಗಿಯಾಗಿದ್ದರು.


ಈ ಬಳಿಕ ರಾಘವೇಂದ್ರ ರಾಜಕುಮಾರ್‌ ಮಾತನಾಡಿ, ಐದು ದಿನ ಆಗಿದೆ, ಹನ್ನೊಂದನೇ ದಿನ ಬರುತ್ತೆ. ವರ್ಷವೂ ಬರುತ್ತೆ. ನೋವು ಜೊತೆ ಬದುಕೋಕೆ ಶಕ್ತಿ ಕೊಡು ಭಗವಂತ ಅಂತ ಕೇಳಿಕೊಳ್ತಿನಿ. ಈ ದುರ್ಗತಿ ಹೇಗೆ ತಗೋಬೇಕು ಗೊತ್ತಿಲ್ಲ. ತಂದೆಯವರು ಇಷ್ಟು ವರ್ಷ ಇದ್ದು ಹೋದರು. ನಿಮ್ಮ ಪುನೀತ್‌ ಅಂದರೆ, ತಮ್ಮ ಪುನೀತ್‌ ೪೬ ವರ್ಷಕ್ಕೆ ಮುಗಿಸಿಕೊಂಡು ಬಾ ಅಂತ ಹೇಳಿದ್ದರ. ಭಗವಂತ ಅಷ್ಟೇ ಟೈಮ್‌ ಕೊಟ್ಟಿದ್ದು. ಅದೇನೆ ಇರಲಿ, ಅಪ್ಪು ಕಣ್ಣುಗಳು ನಾಲ್ವರಿಗೆ ದೃಷ್ಟಿಯಾಗಿದೆ. ನಮ್ಮ ಕುಟುಂಬಕ್ಕೆ ಖುಷಿಯ ವಿಚಾರ.
ಅಪ್ಪು ಇನ್ನೂ ಇಡೀ ಪ್ರಪಂಚವನ್ನು ನೋಡ್ತಾ ಇದಾರೆ. ತಂದೆ ಎರಡು ಕಣ್ಣು ಇಬ್ಬರಿಗೆ ಆಯ್ತು.

ಪುನೀತ್‌ ಎರಡು ಕಣ್ಣು ನಾಲ್ಕು ಜನರಿಗೆ ಆಗಿದೆ. ನಾಲ್ಕು ಮಂದಿ ಬದುಕಲ್ಲಿ ಬೆಳಕಾಗಿದ್ದಾರೆ. ಇಷ್ಟು ದಿನ ಸಂಯಮದಿಂದಲೇ ಅಭಿಮಾನಿಗಳು ನಮ್ಮೊಂದಿಗಿದ್ದಾರೆ. ಸಹಕರಿಸಿದ್ದಾರೆ. ಸರ್ಕಾರ ಕೂಡ ಶಾಂತಿ ರೀತಿ ಎಲ್ಲವನ್ನೂ ನೋಡಿಕೊಂಡಿದೆ ಎಲ್ಲರಿಗೂ ಧನ್ಯವಾದ ಎಂದಿದ್ದಾರೆ.
ಅಭಿಮಾನಿಗಳು ಈಗಾಗಲೇ ಸಾಗರ ಬಳಿ ಪುನೀತ್‌ ಹೆಸರಲ್ಲೇ ಒಂದು ವೃತ್ತ ಮಾಡಿದ್ದು, ವೃತ್ತವೊಂದಕ್ಕೆ ಅಪ್ಪು ಹೆಸರಿಟ್ಟಿದ್ದಾರೆ. ಇನ್ನು, ಶಿವಮೊಗ್ಗದಲ್ಲೂ ಅಭಿಮಾನಿಗಳು ರಸ್ತೆಗೆ ಪುನೀತ್‌ ಹೆಸರಿಟ್ಟಿದ್ದಾರೆ. ಇದು ಫ್ಯಾನ್ಸ್‌ ಪ್ರೀತಿ ಅಂದರು ರಾಘವೇಂದ್ರ ರಾಜಕುಮಾರ್.‌

Categories
ಸಿನಿ ಸುದ್ದಿ

ಅಪ್ಪನಂತೆ ಅಪ್ಪು `ನೇತ್ರದಾನ’; ಪುನೀತ್ ಕಣ್ಣುಗಳಿಂದ ನಾಲ್ವರ ಬದುಕಿಗೆ ಬೆಳಕು !

ಬದುಕಿದ್ದ ಅಷ್ಟು ದಿನ ನಿಸ್ವಾರ್ಥ ಜೀವನ ನಡೆಸಿ, ಸಾವಲ್ಲೂ ಸಾರ್ಥಕತೆ ಮೆರೆದ ಜೀವ ಅಪ್ಪು ಅವರು. ಪವರ್‌ಸ್ಟಾರ್ ಆದರೂ ಕೂಡ ಸಿಂಪಲ್‌ಸ್ಟಾರ್‌ನಂತೆ ಬದುಕಿ ತೋರಿಸಿದ ಅಪ್ಪು, ಅಪ್ಪನಂತೆ ಹಾದಿಯಲ್ಲಿ ಸಾಗಿ ಸಾಧನೆ ಮಾಡಿ ಸಾವಲ್ಲೂ ಅಪ್ಪನಂತೆ ಸಾರ್ಥಕತೆಯನ್ನು ಮೆರೆದರು. ಹೌದು, ಅಪ್ಪಾಜಿಯ ಅಣತಿಯಂತೆ ಅಪ್ಪು ನಿಧನದ ನಂತರ ಕುಟುಂಬಸ್ಥರು ಪುನೀತ್ ಕಣ್ಣುಗಳನ್ನು ನಾರಾಯಣ್ ನೇತ್ರಾಲಯಕ್ಕೆ ದಾನ ಮಾಡಿದರು. ಶುಕ್ರವಾರ ಕಲೆಕ್ಟ್ ಮಾಡಿದ ಅಪ್ಪು ಕಣ್ಣುಗಳನ್ನು ಶನಿವಾರ ಸಂಜೆಯಷ್ಟರಲ್ಲಿ ನಾಲ್ಕು ಮಂದಿಗೆ ಜೋಡಣೆ ಮಾಡುವಲ್ಲಿ ನಾರಾಯಣ್ ನೇತ್ರಾಯಲದ ವೈದ್ಯರ ತಂಡ ಯಶಸ್ವಿಯಾಗಿದೆ. ಮಾತ್ರವಲ್ಲ ಒಬ್ಬ ವ್ಯಕ್ತಿಯ ಕಣ್ಣುಗಳನ್ನು ನಾಲ್ಕು ವ್ಯಕ್ತಿಗಳಿಗೆ ಜೋಡಿಸಿ ಹೊಸ ಕ್ರಾಂತಿಯನ್ನೇ ಮಾಡಿದ್ದಾರೆ.

ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಕಣ್ಣು ದಾನ ಮಾಡಿದರೆ ಇಬ್ಬರು ಅಂಧರಿಗೆ ಕಣ್ಣು ಜೋಡಣೆ ಮಾಡಬಹುದು. ಆದರೆ, ಇದೇ ಮೊದಲ ಭಾರಿಗೆ ಹೊಸ ಪ್ರಯತ್ನ ಮಾಡಿದ್ದಾರೆ. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ದೊಡ್ಮನೆ ಹುಡುಗನ ಕಣ್ಣುಗಳನ್ನು ನಾಲ್ವರು ಅಂಧರಿಗೆ ಅಳವಡಿಸಿದ್ದಾರೆ. ನಾರಾಯಣ್ ನೇತ್ರಾಲಯದ ಡಾಕ್ಟರ್ ರಿತೀಶ್, ಡಾಕ್ಟರ್ ಶರಣ್ ಡಾಕ್ಟರ್ ಪ್ರಾರ್ಥನಾ, ಡಾಕ್ಟರ್ ಯತೀಶ್ ಸೇರಿದಂತೆ ಒಟ್ಟು ಆರು ಜನ ವೈದ್ಯರ ತಂಡದ ಪರಿಶ್ರಮಕ್ಕೆ ಪ್ರತಿಫಲ ಸಿಕ್ಕಿದೆ. ಆಪರೇಷನ್ ಸಕ್ಸಸ್ ಆಗಿದ್ದು, ನಾಲ್ಕು ಮಂದಿಯೂ ಆರೋಗ್ಯವಾಗಿದ್ದಾರೆ.

ಜೊತೆಗೆ ನಾಲ್ವರು ಅಂಧರಿಗೆ ಒಳ್ಳೆಯ ದೃಷ್ಟಿ ಬಂದಿದೆ. ಈ ಕುರಿತು ಇಂದು ಸುದ್ದಿಗೋಷ್ಟಿ ನಡೆಸಿದ ನಾರಾಯಣ ನೇತ್ರಾಲಯದ ನಿರ್ದೇಶಕ ಡಾ. ಭುಜಂಗ ಶೆಟ್ಟಿ ಅವರು ಪುನೀತ್ ಕಣ್ಣುಗಳಿಂದ ನಾಲ್ವರ ಬದುಕು ಬಂಗಾರವಾಗಿದೆ. ಇನ್ನಿಬ್ಬರ ಬಾಳಿಗೆ ಅಪ್ಪು ಕಣ್ಣುಗಳ ಬೆಳಕಾಗಲಿವೆ ಎಂಬ ಮಾಹಿತಿಯನ್ನ ಹೊರಹಾಕಿದ್ದಾರೆ.

ಈಗಾಗಲೇ ನಾಲ್ವರಿಗೆ ಕಣ್ಣು ಜೋಡಣೆ ಮಾಡಿದ್ದಾರೆ ಅಂತಾದ್ರಲ್ಲಿ ಮತ್ತಿಬ್ಬರಿಗೆ ಅದ್ಹೇಗೆ ಅಪ್ಪು ಕಣ್ಣುಗಳನ್ನು ಅಳವಡಿಕೆ ಮಾಡ್ತಾರೆ ಇಂತಹದ್ದೊಂದು ಪ್ರಶ್ನೆ ನಿಮ್ಮಲ್ಲಿ ಮೂಡುತ್ತೆ. ಈ ಕೂತೂಹಲದ ಪ್ರಶ್ನೆಗೆ ಉತ್ತರ ಡಾ. ಭುಜಂಗ ಶೆಟ್ಟಿಯವರು ಹೇಳಿದಂತೆ ನಿಮ್ಮ ಮುಂದೆ ಇಡಲಿದ್ದೇವೆ. ಕಣ್ಣಿನ ಸಮಸ್ಯೆ ಎಲ್ಲರಿಗೂ ಒಂದೇ ತೆರನಾಗಿ ಇರೋದಿಲ್ಲ. ಕಾರ್ನಿಯ ಸಮಸ್ಯೆ ಇರುವವರ ಪೈಕಿ ಕೆಲವರಿಗೆ ಕಣ್ಣಿನ ಫ್ರಂಟ್ ಪೋರ್ಷನ್ ಸಮಸ್ಯೆ ಇರುತ್ತೆ. ಕೆಲವರಿಗೆ ಕಣ್ಣಿನ ಬ್ಯಾಕ್ ಪೋರ್ಷನ್ ಪ್ರಾಬ್ಲಮ್ ಇರುತ್ತೆ. ಈ ರೀತಿಯ ಸಮಸ್ಯೆ ಇರುವ ನಾಲ್ವರಿಗೆ ಇದೀಗ ಅಪ್ಪು ಎರಡು ಕಣ್ಣುಗಳ ಫ್ರಂಟ್ ಅಂಡ್ ಬ್ಯಾಕ್ ಪೋರ್ಷನ್ ಜೋಡಣೆ ಮಾಡಿದ್ದಾರೆ.

ಉಳಿದಂತೆ ಪಾರದರ್ಶಕ ಪಟಲ ಅಂತ ಕರೆಸಿಕೊಳ್ಳುವ
ಕರಿಗುಡ್ಡೆ ಹಾಗೂ ಬಿಳಿಗುಡ್ಡೆ ಭಾಗವನ್ನು ಸಂಗ್ರಹಿಸಿ ಲ್ಯಾಬ್ರೇಟರಿಗೆ ಕಳುಹಿಸಿಕೊಟ್ಟಿದ್ದಾರಂತೆ. ಈ ಬಿಳಿಗುಡ್ಡೆ ಹಾಗೂ ಕರಿಗುಡ್ಡೆ ಜಂಕ್ಷನ್‌ನಲ್ಲಿ ಸ್ಟೆಮ್‌ಸೆಲ್ಸ್ ಅಂತ ಇರುತ್ತಂತೆ. ಈ ಸ್ಟೆಮ್‌ಸೆಲ್ಸ್ನ ಪಟಾಕಿ ಸಿಡಿಸಿಕೊಂಡು ಕಣ್ಣು ಸುಟ್ಟುಕೊಂಡವರಿಗೆ ಮತ್ತು ಕೆಮಿಕಲ್ ವಸ್ತುಗಳಿಂದ ಕಣ್ಣಿಗೇನಾದರೂ ಸಮಸ್ಯೆ ಮಾಡಿಕೊಂಡವರಿಗೆ ಅಳವಡಿಸಬಹುದಂತೆ.
ಅಪ್ಪು ಬಹುಮುಖ ಪ್ರತಿಭೆಯಾಗಿದ್ದರು ಅದಕ್ಕೆ ಅನುಗುಣವಾಗಿಯೇ ಆಪರೇಷನ್ ಮಾಡಿ ನಾಲ್ವರ ಬಾಳಲ್ಲಿ ಬೆಳಕು ಮೂಡಿಸಿದ್ದೇವೆ ಎನ್ನುತ್ತಾರೆ ನಾರಾಯಣ್ ನೇತ್ರಾಲಯದ ವೈದ್ಯರು.

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಪುನೀತ್‌ಗೆ ಮರಣೋತ್ತರ ಪದ್ಮಶ್ರೀ ನೀಡಬೇಕು; ಸಿದ್ಧರಾಮಯ್ಯ ಆಗ್ರಹ

ಪುನೀತ್ ರಾಜ್‍ಕುಮಾರ್ ಅವರಿಗೆ ಮರಣೋತ್ತರ ಪದ್ಮಶ್ರೀ ಪ್ರಶಸ್ತಿ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಸೋಮವಾರ ಗುಬ್ಬಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಖಾಸಗಿ ಹೈಟೆಕ್ ಆಸ್ಪತ್ರೆಯನ್ನು ಉದ್ಘಾಟಿಸಿದ ಅವರು, ಪುನೀತ್ ಅವರಲ್ಲಿ ಅಪಾರವಾದ ಪ್ರತಿಭೆ ಇತ್ತು, ಹೀಗಾಗಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಸಿಗಬೇಕು ಎಂದು ಅಭಿಪ್ರಾಯ ಪಟ್ಟರು.

ಪುನೀತ್ ರಾಜ್‍ಕುಮಾರ್ ಅವರಿಗೆ ದೇಶದ ಅತ್ಯುನ್ನತ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿ ನೀಡಬೇಕು. ರಾಜ್ಯ ಸರ್ಕಾರ ಕೂಡ ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕುಎಂದು ಅವರು ತಿಳಿಸಿದರು.ಇದೇ ವೇಳೆ ತಾವು ಕೂಡ ಕೇಂದ್ರ, ರಾಜ್ಯ ಸರ್ಕಾರಕ್ಕೆ ಪತ್ರ ಬರೆದು, ಪ್ರಶಸ್ತಿ ನೀಡುವಂತೆ ಒತ್ತಾಯಿಸುವುದಾಗಿ ಹೇಳಿದರು.

ಪುನೀತ್ ಅವರು ಇನ್ನೂ ಎತ್ತರೆತ್ತರಕ್ಕೆ ಬೆಳೆಯುತ್ತಿದ್ದ ವಯಸ್ಸಿನಲ್ಲಿಯೇ ಅಕಾಲಿಕ ಮರಣಕ್ಕೆ ತುತ್ತಾಗಿರುವುದು ನೋವಿನ ಸಂಗತಿ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬ ವರ್ಗದವರಿಗೆ, ಅಪಾರ ಸಂಖ್ಯೆಯ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ದೊರೆಯಲಿ ಎಂದು ಪ್ರಾರ್ಥಿಸಿದರು.

Categories
ಸಿನಿ ಸುದ್ದಿ

ಚಲನಚಿತ್ರ ಅಕಾಡೆಮಿಯಿಂದ ಪುನೀತ್ ಸ್ಮರಣಾಂಜಲಿ; ಡಾ.ರಾಜ್ ಅವರಂತೆ ಪುನೀತ್ ನೆನಪು ಸದಾ – ಎನ್.ಮಂಜುನಾಥ್ ಪ್ರಸಾದ್

ಬೆಂಗಳೂರು, ನವೆಂಬರ್ 1 (ಕರ್ನಾಟಕ ವಾರ್ತೆ)- ಕನ್ನಡದ ಮೇರುನಟ ಡಾ.ರಾಜಕುಮಾರ್ ಅವರಂತೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ನೆನಪೂ ಜನಮಾನಸದಲ್ಲಿ ಚಿರಸ್ಥಾಯಿಯಾಗಿರಲಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್ ಹೇಳಿದರು.
ಕನ್ನಡ ರಾಜ್ಯೋತ್ಸವ ಅಂಗವಾಗಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಆಯೋಜಿಸುವ ಚಿತ್ರ ಸಂಗಮ ಆನ್ಲೈನ್ ಚಿತ್ರೋತ್ಸವದಲ್ಲಿ ಇತ್ತೀಚಿಗೆ ನಿಧನರಾದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಗೌರವಾರ್ಥ ಪುನೀತ್ ಸ್ಮರಣಾಂಜಲಿ ಆನ್ಲೈನ್ ಚಿತ್ರೋತ್ಸವಕ್ಕೆ ಬೆಂಗಳೂರಿನಲ್ಲಿ ಇಂದು ಚಾಲನೆ ನೀಡಿ ಅವರು ಮಾತನಾಡಿದರು.


ಎಷ್ಟೇ ವರ್ಷಗಳು ಕಳೆದರೂ ಡಾ.ರಾಜಕುಮಾರ್ ಅವರು ಜನರ ಮನಸ್ಸಿನಲ್ಲಿ ಹೇಗೆ ಬೇರೂರಿದ್ದಾರೆಯೋ ಅದೇ ಮಾದರಿಯಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರೂ ಕೂಡ ಕನ್ನಡ ಚಿತ್ರರಂಗದಲ್ಲಿ ಅವಿಸ್ಮರಣೀಯ ಸಾಧನೆ ಮಾಡಿದ್ದು, ಜನರ ಮನಸ್ಸನ್ನು ಗೆದ್ದಿದ್ದಾರೆ. ಪುನೀತ್ ಅವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಅವರ ನೆನಪು ಸದಾ ಇರಲಿದೆ. ಚಲನಚಿತ್ರ ಅಕಾಡೆಮಿ ಮೂಲಕ ಪುನೀತ್ ಸ್ಮರಣಾಂಜಲಿ ಹಮ್ಮಿಕೊಂಡು ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿದೆ ಎಂದರು.
ಕನ್ನಡ ನಾಡು, ನುಡಿ, ನೆಲ, ಜಲ, ಸಂಸ್ಕೃತಿ ಹಾಗೂ ಪರಂಪರೆಯನ್ನು ಬಿಂಬಿಸುವ ಚಿತ್ರಗಳನ್ನು ಆನ್ಲೈನ್ ಮೂಲಕ ಕನ್ನಡ ಚಿತ್ರರಸಿಕರಿಗೆ ಪ್ರದರ್ಶಿಸುವ ಚಿತ್ರ ಸಂಗಮ ವಿನೂತನ ಕಾರ್ಯಕ್ರಮ ಕಳೆದ ವರ್ಷ ಯಶಸ್ವಿಯಾಗಿತ್ತು. ಅಂತೆಯೇ ಈ ಬಾರಿಯೂ ಎರಡನೇ ಆವೃತ್ತಿ ನವೆಂಬರ್ 1ರಿಂದ ನಡೆಯುತ್ತಿದ್ದು, ಪುನೀತ್ ರಾಜಕುಮಾರ್ ಅಭಿನಯದ 10 ಶ್ರೇಷ್ಠ ಚಿತ್ರಗಳು ಚಲನಚಿತ್ರ ಅಕಾಡೆಮಿಯ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರದರ್ಶನಗೊಳ್ಳುತ್ತಿದ್ದು ಚಿತ್ರಾಸಕ್ತರು ಅಕಾಡೆಮಿಯ ವೆಬ್ ಸೈಟ್ ನಲ್ಲಿ ನೋಂದಣಿ ಮಾಡಿಕೊಳ್ಳುವ ಮೂಲಕ ಈ ಚಿತ್ರಗಳನ್ನು ನೋಡಬಹುದು ಹಾಗೂ ಈ ಮೂಲಕ ಪುನೀತ್ ಅವರಿಗೆ ಗೌರವ ಸಲ್ಲಿಸಬೇಕು ಎಂದರು.


ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಮಾತನಾಡಿ, ಚಲನಚಿತ್ರವನ್ನು ಜನ ಮಾಧ್ಯಮವಾಗಿಸಿ, ಚಿತ್ರ ವೀಕ್ಷಣೆಯ ಸಂಸ್ಕೃತಿಯನ್ನು ಪಸರಿಸುವ ಹೊಣೆ ಹೊತ್ತಿರುವ ಕರ್ನಾಟಕ ಚಲನಚಿತ್ರ ಅಕಾಡೆಮಿ, ಚಿತ್ರೋತ್ಸವಗಳು, ಅಧ್ಯಯನ ಶಿಬಿರಗಳು, ಚರ್ಚಾಗೋಷ್ಠಿ, ಪ್ರಕಾಶನಗಳ ಮೂಲಕ ಚಲನಚಿತ್ರವನ್ನು ಒಂದು ಬಹುಶಾಸ್ಟ್ತ್ರೀಯ ಅಧ್ಯಯನವಾಗಿಸುವ ಕಾರ್ಯದಲ್ಲಿ ನಿರತವಾಗಿದ್ದು, ಇದರ ಮುಂದುವರಿದ ಪ್ರಯತ್ನವೇ ಚಿತ್ರ ಸಂಗಮ ಆನ್ಲೈನ್ ಕಾರ್ಯಕ್ರಮ ಎಂದರು.
ಪ್ರಯೋಗಾತ್ಮಕ ಕಥೆಗಳು, ರಾಷ್ಟ್ರ-ರಾಜ್ಯ ಪ್ರಶಸ್ತಿ ಪಡೆದ ಚಿತ್ರಗಳು, ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪಾಲ್ಗೊಂಡು ವಿಮರ್ಶೆಗೆ ಒಳಪಟ್ಟ ಚಿತ್ರಗಳು, ವಿಶಿಷ್ಟ ಬಗೆಯ ಪ್ರಾದೇಶಿಕ ಭಾಷಾ ಚಿತ್ರಗಳು, ಕನ್ನಡದ ಕುರಿತು, ಕನ್ನಡಿಗರು ನಿರ್ಮಿಸಿದ ಸುಂದರ ಸಾಕ್ಷ್ಮಚಿತ್ರಗಳು, ಸಿನಿಮಾಗಳು, ಯುವ ತಲೆಮಾರಿನ ನವ ಪ್ರಯತ್ನಗಳನ್ನು ಸಿನಿಮಾಸಕ್ತರಿಗೆ ಹಾಗೂ ಸಿನಿಮಾ ವಿದ್ಯಾರ್ಥಿಗಳಿಗೆ ಅಧ್ಯಯನ ದೃಷ್ಟಿಯಿಂದ ತಲುಪಿಸುವ ಪ್ರಯತ್ನವನ್ನು ಅಕಾಡೆಮಿ ಮಾಡುತ್ತಿದ್ದು, ಈ ಬಾರಿ ಯುವನಟರಿಗೆ ಸ್ಫೂರ್ತಿಯಾಗಿದ್ದ ಪುನೀತ್ ರಾಜ್ ಕುಮಾರ್ ನಮ್ಮನ್ನು ಅಗಲಿದ್ದಾರೆ. ಅವರ ಗೌರವಾರ್ಥ ಪುನೀತ್ ಸ್ಮರಣಾಂಜಲಿ ಹಮ್ಮಿಕೊಳ್ಳಲಾಗಿದೆ ಎಂದರು.
ನವೆಂಬರ್ 1ರಿಂದ ಆರಂಭವಾಗುವ ಈ ಕಾರ್ಯಕ್ರಮದಲ್ಲಿ ಪುನೀತ್ ರಾಜ್ ಕುಮಾರ್ ಅಭಿನಯದ ಬೆಟ್ಟದ ಹೂವು (ನ.1-2), ಭಕ್ತ ಪ್ರಹ್ಲಾದ (ನ.3-4), ಮೌರ್ಯ (ನ.5-6), ಪೃಥ್ವಿ (ನ.7-8), ಅಭಿ (ನ.9-10), ಅಜಯ್ (ನ.11-12), ಅರಸು (ನ.13-14), ಮಿಲನ (ನ.15-16), ಪವರ್ (ನ.17-18) ಹಾಗೂ ಅಪ್ಪು (ನ.19-20) ಚಿತ್ರಗಳನ್ನು 20 ದಿನಗಳ ಕಾಲ ಪ್ರದರ್ಶಿಸಲಾಗುತ್ತಿದೆ. ಚಿತ್ರಾಸಕ್ತರು ವಿಶೇಷವಾಗಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಕರ್ನಾಟಕ ಚಲನಚಿತ್ರ ಅಕಾಡೆಮಿಯ ವೆಬ್ ಸೈಟ್ www.kcainfo.org ಇಲ್ಲಿ ನೋಂದಾಯಿಸಿಕೊಂಡು ಈ ಚಿತ್ರಗಳನ್ನು ನೋಡುವ ಮೂಲಕ ಯಶಸ್ವಿಗೊಳಿಸಬೇಕೆಂದು ಅವರು ಕೋರಿದರು.


ಇದೇ ಸಂದರ್ಭದಲ್ಲಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್ ಅವರು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧಿಕೃತ ವೆಬ್ ಸೈಟ್ ಗೆ ಚಾಲನೆ ನೀಡಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಜಿ. ಜಗದೀಶ್ ಹಾಗೂ ಅಕಾಡೆಮಿಯ ಎಲ್ಲ ಸದಸ್ಯರು ಆನ್ಲೈನ್ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Categories
ಸಿನಿ ಸುದ್ದಿ

ಮಲೆ ಮಹದೇಶ್ವರನಿಗೆ ಅಪ್ಪು ಕೊಡ್ಬೇಕಿದ್ದ ಉಡುಗೊರೆ; ನವೀನ್ ಸಜ್ಜು ಬಿಚ್ಚಿಟ್ಟಿರು ಅಚ್ಚರಿಯ ಕಥನ !

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ನಟಸಾರ್ವಭೌಮ ಹಾಗೂ ಅಪ್ಪಟ ದೈವಭಕ್ತ. ಅಭಿಮಾನಿ ದೇವರುಗಳಲ್ಲಿ ದೇವರನ್ನು ಕಾಣುವ ದೊಡ್ಮನೆಯ ರಾಜಕುಮಾರ, ರಾಯರ ಪರಮಭಕ್ತನಾಗಿದ್ದರು ಕೂಡ ದೇವಾನುದೇವತೆಗಳನ್ನು ಆರಾಧಿಸುತ್ತಿದ್ದರು ಮತ್ತು ದೈವಿಶಕ್ತಿಗಳನ್ನು ನಂಬುತ್ತಿದ್ದರು. ಅಷ್ಟಕ್ಕೂ, ದೈವಿಕತೆ ಬಗ್ಗೆ ಈಗ ಮಾತನಾಡೋದಕ್ಕೆ ಕಾರಣ ಮಲೆಮಾದಪ್ಪನ ಮೇಲಿದ್ದ ಶ್ರದ್ಧೆ ಹಾಗೂ ಭಕ್ತಿಗೋಸ್ಕರ
ಹೊಸ ಸಾಹಸಕ್ಕೆ ಅಪ್ಪು ಒಂದು ಹೆಜ್ಜೆ ಮುಂದೆ ಇಟ್ಟಿದ್ದರು. ಸಿಂಗರ್ ಕಮ್ ಮ್ಯೂಸಿಕ್ ಕಂಪೋಸರ್ ನವೀನ್ ಸಜ್ಜು ನಯಾ ಕನಸಿಗೆ ಜೀವ ತುಂಬುವುದಕ್ಕೆ ಮುಂದಾಗಿದ್ದರು. ಈ ಕುರಿತಾಗಿ ಒಂದು ಸುತ್ತಿನ ಮಾತುಕಥೆ ಕೂಡ ನಡೆದಿದ್ದು, ನವೆಂಬರ್ 1 ಕನ್ನಡ ರಾಜ್ಯೋತ್ಸವದ ದಿನದಂದು ಮನೆಗೆ ಬರುವಂತೆ ನವೀನ್ ಸಜ್ಜುಗೆ ಹೇಳಿದ್ದರಂತೆ. ಆದರೆ, ಸೋಮವಾರ ಬರುವ ಹೊತ್ತಿಗೆ ದೊಡ್ಮನೆಯ ರಾಜಕುಮಾರ ವಿಧಿಯಾಟಕ್ಕೆ ಬಲಿಯಾಗಿಬಿಟ್ಟರು. ತನ್ನ ಕನಸು ಕಮರಿಹೋಯ್ತು ಎನ್ನುವುದಕ್ಕಿಂತ ಕನ್ನಡ ಚಿತ್ರರಂಗದ ಮಾಣಿಕ್ಯನನ್ನು ಕಳೆದುಕೊಂಡ ದುಃಖದಲ್ಲಿ ನವೀನ್ ಸಜ್ಜು ಕೂಡ ಕಣ್ಣೀರಾಗುತ್ತಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರನ್ನು ಭೇಟಿಯಾದ ಸಂದರ್ಭ, ಅವರೊಂದಿಗಿನ ಮಾತುಕತೆ, ಮಾದಪ್ಪನ ಆಲ್ಬಂ ಕಥೆ, ಹೀಗೆ ಎಲ್ಲವನ್ನೂ ಸುಧೀರ್ಘವಾಗಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಅಪ್ಪು ಸರ್ ಕೊನೆಯ ಭೇಟಿ :ಮಲೆ ಮಹದೇಶ್ವರ ಕುರಿತು ಒಂದು ಆಲ್ಬಮ್ ಸಾಂಗ್ ಪಿಆರ್‌ಕೆ ಬ್ಯಾನರ್‌ನಲ್ಲಿ ಮಾಡಲು ಅಪ್ಪು ಸರ್ ಕೆಲ ತಿಂಗಳ ಹಿಂದೆ ಒಪ್ಪಿಕೊಂಡಿದ್ದರು. ಅದೇ ವಿಷಯವಾಗಿ ಮಾತನಾಡಲು ಕಳೆದ ಬುಧವಾರ ಸಂಜೆ ಅವರ ಮನೆಗೆ ಹೋಗಿದ್ದೆ. ಸುಮಾರು ಒಂದೂವರೆ ತಾಸು ಅವರೊಂದಿಗೆ ಮಾತನಾಡಿದ್ದೆ. ಅವರ ಸರಳತೆ, ಬೇರೆಯವರಿಗೆ ಕೊಡುತ್ತಿದ್ದ ಬೆಲೆ, ಹೇಳುತ್ತಿದ್ದ ಆತ್ಮವಿಶ್ವಾಸದ ಮಾತುಗಳ ಬಗ್ಗೆ ನಾನು ವಿಶೇಷವಾಗಿ ಹೇಳಬೇಕಾದ್ದಿಲ್ಲ.. ಅದು ಎಲ್ಲರಿಗೂ ಗೊತ್ತಿರುವಂತಹದ್ದೆ. ಸಂಪೂರ್ಣವಾಗಿ ಕಂಪೋಸಿಷನ್ ಮುಗಿದ ಹಾಡನ್ನು ಹೇಗೆ ಶೂಟಿಂಗ್ ಮಾಡಬೇಕು, ಯಾವೆಲ್ಲಕ್ಯಾಮೆರಾ ಬಳಸಬೇಕು ಎಂಬುದನ್ನು ಪಿನ್ ಟು ಪಿನ್ ಹೇಳಿದರು. ಅದರ ಜೊತೆಗೆ ಐದಾರು ರೆಫ್ರರೆನ್ಸ್ ವಿಡಿಯೋಗಳನ್ನು ತೋರಿಸಿದರು. ಮಹದೇಶ್ವರ ಬೆಟ್ಟವನ್ನು ತೋರಿಸುವ ಅವರ ಕಲ್ಪನೆಯನ್ನು ನೋಡಿ ಬೆರಗಾಗಿದ್ದೆ. ಅಪ್ಪು ಸರ್ ಕಂಟೆAಟ್‌ನಿAದ ಹಿಡಿದು ಟೆಕ್ನಿಕಲಿಯಾಗಿಯೂ ಅವರು ಎಷ್ಟೊಂದು ತಿಳಿದುಕೊಂಡಿದ್ದರು ಎಂಬುದನ್ನು ನೋಡಿ ಆಶ್ಚರ್ಯವಾಯ್ತು. ಏಕೆಂದರೆ ಅವರು ಐದಾರು ಕ್ಯಾಮೆರಾಗಳ ಹೆಸರನ್ನು ಹೇಳಿ ಇಂತಹ ಶಾಟ್‌ಗೆ ಇಂತಹ ಕ್ಯಾಮರಾ ಬಳಸಬೇಕು ಎಂದು ವಿವರವಾಗಿ ಹೇಳಿದ್ದರು. ಇದೇ ವಿಷಯವಾಗಿ ಮಾತನಾಡಲು ನಾಳೆ (ಸೋಮವಾರ) ಬರಲು ಹೇಳಿದ್ದರು. ಬಹುಷಃ ಮುಂದಿನ ವಾರ ಮಲೆ ಮಹದೇಶ್ವರ ಹಾಡಿಗೆ ನಾವಿಬ್ಬರು ರಾಗವಾಗಬೇಕಿತ್ತು. ನೃತ್ಯಕ್ಕೆ ಹೆಜ್ಜೆ ಹಾಕಬೇಕಿತ್ತು. ಆದರೆ ಅವರು ಇನ್ನು ಯಾರಿಗೂ ಸಿಗದ ಹಾಗೇ ಬಹುದೂರ ಹೋಗಿಬಿಟ್ಟರು. ಅವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಅವರು ಎಂದೆಂದಿಗೂ ಜನಮಾನಸದಲ್ಲಿ ಅಜರಾಮರ.. ಅವರೊಂದಿಗೆ ಕೆಲವು ಸಮಯ ಕಳೆದಿದ್ದೆ ಎಂಬುದೇ ನನ್ನ ಸಾರ್ಥಕ ಗಳಿಕೆ.. ಹೋಗಿ ಬನ್ನಿ ಸಾರ್.. ಕ್ರೂರ ವಿಧಿಯೆ ನಿನಗೆ ಧಿಕ್ಕಾರ

ಹೊಸಪ್ರತಿಭೆಗಳನ್ನು ಪ್ರೋತ್ಸಾಹಿಸ್ಬೇಕು ಹಾಗೂ ಬೆಳೆಸಬೇಕು ಎನ್ನುವ ನಿಟ್ಟಿನಲ್ಲಿ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ಪಿ.ಆರ್.ಕೆ ಪ್ರೊಡಕ್ಷನ್ ಹೌಸ್‌ನ ಪ್ರಾರಂಭ ಮಾಡಿದರು. ಹೊಸತನಕ್ಕಾಗಿ ತುಡಿಯುವ, ಅಪಾರ ಪಾಂಡಿತ್ಯವುಳ್ಳ, ಸಿನಿಮಾನ ಪ್ರೀತ್ಸೋ ಹಾಗೂ ಆರಾಧಿಸೋ ಮಂದಿಗೆ ಕಾಲ್‌ಶೀಟ್ ಕೊಟ್ಟರು ಹಾಗೂ ಕೋಟಿಗಟ್ಟಲ್ಲೇ ಹಣವನ್ನು ಹೂಡಿಕೆ ಮಾಡಿದರು. ಅದರಂತೇ, ತಮ್ಮ ವಿಶಿಷ್ಟ ಕಂಠಸಿರಿಯಿAದಲೇ ಗಂಧದಗುಡಿಯಲ್ಲಿ ಗುರ್ತಿಸಿಕೊಂಡು, ಲಕ್ಷಾಂತರ ಅಭಿಮಾನಿಗಳನ್ನು ಸಂಪಾದನೆ ಮಾಡಿರುವ ನವೀನ್ ಸಜ್ಜು ನ್ಯೂ ಆಲ್ಬಂಗ್‌ನ ನಿರ್ಮಾಣಕ್ಕೆ ಹಣಹೂಡಿಕೆ ಮಾಡೋದಾಗಿ ಮಾತುಕೊಟ್ಟಿದ್ದರು. ಮಾತ್ರವಲ್ಲ ಮಲೆಮಹಾದೇಶ್ವರ ಸಾಮಿಯ ಪವಾಡದ ಹಾಡಿಗೆ ಕಂಠಕುಣಿಸಿ-ಅಭಿನಯಿಸುವುದಕ್ಕೂ ಒಪ್ಪಿಕೊಂಡಿದ್ದರAತೆ. ಮಾದಪ್ಪನಿಗೆ ನಮ್ಮ ಪ್ರೊಡಕ್ಷನ್ ಹೌಸ್‌ನಿಂದ ಚಿಕ್ಕ ಕಾಣಿಕೆ ಕೊಟ್ಟಂತಾಗುತ್ತೆ ಎಂದು ಖೂಷಿಯಾಗಿ ಗ್ರೀನ್ ಸಿಗ್ನಲ್ ಕೊಟ್ಟಿದ್ದರಂತೆ. ಆದ್ರೀಗ ಅಪ್ಪುನೇ ಇಲ್ಲ. ಮುಂದಿನ ದಿನಗಳಲ್ಲಿ ಈ ಹಾಡನ್ನ ನವೀನ್ ಸಜ್ಜು ಟೇಕಾಫ್ ಮಾಡ್ಬೋದು ಅಥವಾ ಬಿಡ್ಬೋದು. ಆದರೆ, ನಟಸಾರ್ವಭೌಮ ಹೆಜ್ಜೆಹಾಕಿದ್ಹಂತೆ ಆಗೋದಿಲ್ಲ, ಯುವರತ್ನ ಕಂಠಕುಣಿಸಿದ ಹಾಗೇ ಆಗಲ್ಲವಲ್ಲ ಎನ್ನುವ ಕೊರಗು ಸ್ವತಃ ನವೀನ್ ಸಜ್ಜುಗೂ ಇದೆ. ಹೀಗಾಗಿಯೇ, ಅಪ್ಪು ಕಳೆದುಕೊಂಡ ದುಃಖವನ್ನ ಸೋಷಿಯಲ್ ಮೀಡಿಯಾದಲ್ಲಿ ತೋಡಿಕೊಂಡಿದ್ದಾರೆ. ಕ್ರೂರಿ ಜವರಾಯನಿಗೆ ಹಿಡಿಶಾಪ ಹಾಕಿದ್ದಾರೆ.

  • ಎಂಟರ್‌ಟೈನ್‌ ಮೆಂಟ್‌ ಬ್ಯೂರೋ ಸಿನಿಲಹರಿ
Categories
ಸಿನಿ ಸುದ್ದಿ

ಅಪ್ಪುಗೆ ರಾಜರತ್ನ – ಚರ್ಚಿಸಿ ನಿರ್ಧಾರ ಅಂದ್ರು ಸಿಎಂ ಬಸವರಾಜ ಬೊಮ್ಮಾಯಿ

ಕನ್ನಡದ ಪ್ರತಿಭಾವಂತ ನಟ ಪುನೀತ್‌ ರಾಜಕುಮಾರ್‌ ಈಗ ನೆನಪು ಮಾತ್ರ. ಆದರೆ ಅವರಿಗೆ ಮರಣೋತ್ತರವಾಗಿ ʼರಾಜರತ್ನʼ ಪ್ರಶಸ್ತಿ ನೀಡಬೇಕೆನ್ನುವ ಕೂಗು ಅವರ ಅಭಿಮಾನಿಗಳಿಂದ ಕೇಳಿ ಬರುತ್ತಿದೆ. ಕಳೆದ ಎರಡು ದಿನಗಳಿಂದ ಸೋಷಲ್‌ ಮೀಡಿಯಾದಲ್ಲಿ ಅಪ್ಪು ಅಭಿಮಾನಿಗಳು ಹಾಗೊಂದು ಒತ್ತಾಯದ ಕೂಗು ಆರಂಭಿಸಿದ್ದಾರೆ. ಈ ಮಧ್ಯೆ ಸೋಮವಾರ ಕನ್ನಡ ರಾಜ್ಯೋತ್ಸವದಲ್ಲಿ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಈ ವಿಚಾರಕ್ಕೆ ಪ್ರತಿ ಕ್ರಿಯೆ ನೀಡಿದ್ದಾರೆ.

ರಾಜ್ಯೋತ್ಸವ ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ, ಅಪ್ಪು ಅವರಿಗೆ ರಾಜರತ್ನ ಪ್ರಶಸ್ತಿ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಪ್ರಮುಖರ ಜತೆಗೆ ಈ ಸಂಬಂಧ ಚರ್ಚೆ ನಡೆಸಿ, ಅಭಿಪ್ರಾಯ ಪಡೆಯಬೇಕಿದೆ. ಸರ್ಕಾರಕ್ಕೂ ಈ ಬಗ್ಗೆ ಮನಸಿದೆ. ಮುಂದಿನ ದಿನಗಳಲ್ಲಿ ಒಂದು ನಿರ್ಧಾರ ತೆಗೆದುಕೊಳ್ಳಲಿದ್ದೇವೆ ಎಂದರು. ನಟ ಪುನೀತ್‌ ರಾಜಕುಮಾರ್‌ ಅವರು ಬಾಲ್ಯದಲ್ಲಿಯೇ ರಾಷ್ಟ್ರ ಪ್ರಶಸ್ತಿಗೆ ಪಾತ್ರರಾದವರು. ಹಾಗೆಯೇ ಬೇಕಾದಷ್ಟು ರಾಜ್ಯ ಪ್ರಶಸ್ತಿಗಳಿಗೂ ಪಾತ್ರರಾದವರು. ಉಳಿದಂತೆ ಮಾನ-ಸನ್ಮಾನಗಳಿಗೆ ಲೆಕ್ಕವೇ ಇಲ್ಲ. ಆದರೂ, ಅವರಿಗೆ ಮರಣೋತ್ತರವಾಗಿ ರಾಜರತ್ನ ನೀಡಬೇಕೆನ್ನುವುದು ಅಭಿಮಾನಿಗಳ ಕೂಗು. ಸರ್ಕಾರ ಇದಕ್ಕೆ ಸ್ಪಂದಿಸುತ್ತಾ ಎನ್ನುವುದು ಕುತೂಹಲಕರ.

  • ಎಂಟರ್‌ ಟೈನ್‌ ಮೆಂಟ್‌ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ದೊಡ್ಮನೆ ದೊರೆ, ನಿಮ್ಮ ವ್ಯಕ್ತಿತ್ವ ಬಣ್ಣಿಸಲು ಅಕ್ಷರ ಸಾಲುತ್ತಿಲ್ಲ…ನಿರ್ದೇಶಕ ಬಹದ್ದೂರ್‌ ಚೇತನ್‌ ಸಲ್ಲಿಸಿದ ಭಾವುಕ ನುಡಿ ನಮನ !

ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ಅವರ ಅಗಲಿಕೆಯನ್ನು ಯಾರಿಗೂ ಕೂಡ ಅರಗಿಸಿಕೊಳ್ಳಲಾಗುತ್ತಿಲ್ಲ. ಅವರ ನಿಧನ ಚಿತ್ರರಂಗದಲ್ಲಿ ಆಗಾದವಾದ ಶೂನ್ಯ ಆವರಿಸಿಕೊಳ್ಳುವಂತೆ ಮಾಡಿದೆ. ಇಡೀ ಕರುನಾಡೇ ಕಣ್ಣೀರಾಗಿದೆ. ಅದರಲ್ಲೂ ಅವರೊಂದಿಗೆ ನಿರ್ದೇಶಕರಾಗಿ, ನಟರಾಗಿ, ಹೀಗೆ ಸಿನಿಮಾ ಇನ್ನಾವುದೋ ವಿಭಾಗದಲ್ಲಿ ಕೆಲಸ ಮಾಡಿದವರಂತೂ ಅಕ್ಷರಶ: ಅವರ ಅಗಲಿಕೆಯಿಂದ ನೊಂದು ಹೋಗಿದ್ದಾರೆ. ಅಂತಹದೇ ದು:ಖ ತುಂಬಿಕೊಂಡು ಕುಳಿತಿರುವ ಜೇಮ್ಸ್‌ ಚಿತ್ರದ ನಿರ್ದೇಶಕ ಬಹದ್ದೂರ್‌ ಚೇತನ್‌ ಸೋಮವಾರ ಪುನೀತ್‌ ರಾಜ ಕುಮಾರ್‌ ಅವರ ವ್ಯಕ್ತಿತ್ವದ ಕುರಿತು ಭಾವುಕವಾದ ನುಡಿನಮನವೊಂದನ್ನು ಹಂಚಿಕೊಂಡಿದ್ದಾರೆ. ಆ ಪತ್ರದ ಸಾಲುಗಳು ಇಂತಿವೆ.

ದೊಡ್ಮನೆಯ ದೊರೆ,
ನಿಮ್ಮಿಂದ ಕಲಿತದ್ದು ಒಂದೆರಡಲ್ಲ… ನಿಮ್ಮ ವ್ಯಕ್ತಿತ್ವ ಬಣ್ಣಿಸಲು ಅಕ್ಷರ ಸಾಲುತ್ತಿಲ್ಲ…
ಸದಾ ಹಸನ್ಮುಖಿತನ ,
ತಾಳ್ಮೆಯ ಪ್ರತಿರೂಪ ,
ಎಲ್ಲರೂ ನಮ್ಮವರೆಂದು ಭಾವಿಸುವ ವಿಶೇಷಗುಣ…ಎಲ್ಲರನ್ನು ಸಮಾನರಾಗಿ ಕಾಣುವ ಮಗು ಮನಸ್ಸು… ಚಿತ್ರರಂಗವೇ ಕುಟುಂಬವೆಂದು ಭಾವಿಸುವ ಸಂಸ್ಕಾರ…
ಮಹಾಸಂತನ ಸೌಮ್ಯತೆ …
ಭೂಮಿ ತೂಕದ ಘನತೆ…
ಕಷ್ಟಕ್ಕೆ ಮಿಡಿಯುವ ಹೃದಯ, ಕೈಲಾದಷ್ಟು ಸಹಾಯ ಮಾಡುವ ಉದಾರತೆ, ಬಲಗೈಲಿ ಕೊಟ್ಟಿದ್ದು ಎಡಗೈಗೆ ತಿಳಿಯಬಾರದೆಂಬ ನೀತಿ….
ತಂದೆಯ ಹಿರಿಮೆ,ಮನೆತನದ ಗೌರವ ಎರಡಕ್ಕೂ ಗರಿಮೆಯಾಗಿ ಬದುಕಿದ ರೀತಿ ಅಮೋಘ …

ದೊಡ್ಮನೆಯ ದೊರೆ
ನಿಮ್ಮಿಂದ ಕಲಿತದ್ದು ಒಂದೆರಡಲ್ಲ… ನಿಮ್ಮ ವ್ಯಕ್ತಿತ್ವ ಬಣ್ಣಿಸಲು ಅಕ್ಷರ ಸಾಲುತ್ತಿಲ್ಲ…
ಕನ್ನಡ ಪ್ರೇಮ ನೆಲ ಜಲದ ಮೇಲೆ ಇದ್ದ ಅಪಾರ ಗೌರವ …
ಯುವಪೀಳಿಗೆಗೆ ಸದಾ ಮಾದರಿಯಾಗಿದ್ದ ಹುರುಪು…
ಅಭಿಮಾನಿಗಳನ್ನ ಅಭಿಮಾನದಿಂದ ಅಭಿಮಾನಿಯಂತೆಯೇ ಪ್ರೀತಿಸಿದ
ಅಜಾತಶತ್ರು…
ದಿನನಿತ್ಯ ಶಿಸ್ತಿನ ವ್ಯಾಯಾಮ, ಆರೋಗ್ಯದ ಮೇಲೆ ಕಾಳಜಿ,
ಆಹಾರವನ್ನು ಪ್ರೀತಿಸುವ ಗುಣ,
ಸದಾ ಹೊಸತನವನ್ನು ಹಿಂಬಾಲಿಸುವ,ಅನ್ವೇಷಿಸುವ, ವಿಶ್ಲೇಷಿಸುವ ಮನೋಭಾವ..
ಸಮಯಪ್ರಜ್ಞೆ ಹಾಗೂ ಸಮಯದ ಮೇಲಿಟ್ಟಿದ್ದ ಗೌರವ… ಸದಾ ಒಂದಲ್ಲ ಒ೦ದು ಕೆಲಸದಲ್ಲಿ ಮಗ್ನರಾಗುತ್ತಿದ್ದ ರೀತಿ…
ಎಲ್ಲ ಕ್ಷೇತ್ರಗಳ ಬಗ್ಗೆಯೂ ಮಾಹಿತಿ ತಿಳಿಯುವ ಹಂಬಲ ಹಾಗೂ ಕುತೂಹಲ..
ಅಪಾರವಾದ ವ್ಯವಹಾರಜ್ಞಾನದ ಪಾಂಡಿತ್ಯ…
ಕುಟುಂಬಕ್ಕೆ ಮೊದಲ ಆದ್ಯತೆ, ಸ್ನೇಹಕ್ಕೆ ನೀಡುತ್ತಿದ್ದ ಮನ್ನಣೆ… ಸಂಬಂಧಗಳಿಗೆ ತೋರುತ್ತಿದ್ದ ಪ್ರೀತಿ…
ಕಲೆಯನ್ನು ಪ್ರೋತ್ಸಾಹಿಸಿ, ಕಲಾವಿದರನ್ನು ಗೌರವಿಸುತ್ತಿದ್ದ ಸದ್ಗುಣ, ಬರಹಗಾರರನ್ನು ಶಾರದೆ ಮಕ್ಕಳೆಂದು ಭಾವಿಸುತ್ತಿದ್ದ ಶ್ರೇಷ್ಠತೆ …
ನಿರ್ದೇಶಕರ ಕನಸಿಗೆ ತಮ್ಮನ್ನು ತಾವು ಸಂಪೂರ್ಣವಾಗಿ ಸಮರ್ಪಿಸಿ ಕೊಳ್ಳುವ ಕರ್ತವ್ಯನಿಷ್ಠೆ..
ವಿನಯ,ವಿಧೇಯತೆ ಸಹಕಾರಮೂರ್ತಿ…

ಸದಾ ಹಾಡು ಗುನುಗುವ ಸಂಗೀತ ಪ್ರೇಮಿ.. ಸಿನಿಮಾ ತಂತ್ರಜ್ಞಾನದ ವಿಚಾರದಲ್ಲಿ ಸದಾ 1ಹೆಜ್ಜೆ ಮುಂದೆ…
ಎಲ್ಲವನ್ನೂ ದಕ್ಕಿಸಿಕೊಳ್ಳುವ ಧೈರ್ಯ ಹಾಗೂ ಛಲ…
ಎಲ್ಲರಲ್ಲಿಯೂ ಒಂದೊಂದು ವಿಶೇಷತೆಯನ್ನು ಗುರುತಿಸಿ ಶ್ಲಾಘಿಸುವ ಜಾಣ್ಮೆ,
ಸರಳತೆಯ ಸಾಹುಕಾರ
ನಿಮಗೆ ಸದಾ ಚಿರರುಣಿ ನಿಮ್ಮವನಾಗಿ ಸ್ವೀಕರಿಸಿದ್ದಕ್ಕೆ …
ನಿಮ್ಮ ಒಡನಾಟ ನೀಡಿದ್ದಕ್ಕೆ …
ಸದಾ ಪ್ರೋತ್ಸಾಹಿಸಿ ಬೆನ್ನು ತಟ್ಟಿದ್ದಕ್ಕೆ…
ನಿಮ್ಮ ಜೀವನದ ಪುಟಗಳಲ್ಲಿ ಒಂದೆರಡು ಸಾಲುಗಳನ್ನು ನೀಡಿದಕ್ಕೆ…
ನಿಮ್ಮೊಡನೆ ಕಳೆದ ಪ್ರತಿ ಕ್ಷಣವೂ ದೇವರು ಕೊಟ್ಟ ವರವೆಂದೇ ಭಾವಿಸುತ್ತೇನೆ …
ನಿಮ್ಮಂತಹ ಮಹಾನ್ ಚೇತನಗಳಿಗೆ ಆ ದೇವರು ಎಂದೆಂದೊ ದೀರ್ಘ ಆಯುಷ್ಯ ನೀಡುವಂತಾಗಲಿ ..
ನಿಮ್ಮ ಅಭಿಮಾನಿಗಳಿಗೆ , ಇಡೀ ಚಿತ್ರರಂಗಕ್ಕೆ ಹಾಗೂ ನಿಮ್ಮ ಕುಟುಂಬಕ್ಕೆ ನಿಮ್ಮ ಅಗಲಿಕೆಯ ನೋವನ್ನು ಭರಿಸುವ೦ತಹ ಶಕ್ತಿ ನೀಡಲಿ …
ಮತ್ತೆ ಹುಟ್ಟಿ ಬನ್ನಿ ಅಪ್ಪು ಸರ್
ನಿಮಗೆ ನನ್ನ “ನುಡಿ ನಮನ”

  • ಚೇತನ್ ಕುಮಾರ್
Categories
ಸಿನಿ ಸುದ್ದಿ

ಅಪ್ಪು ಬೀಳ್ಕೊಟ್ಟ ಸಿಎಂ ಕಾರ್ಯ ವೈಖರಿಗೆ ಭಾರೀ ಮೆಚ್ಚುಗೆ – ಅದೊಂದು ಮನಕಲುಕುವ ದೃಶ್ಯದಿಂದ ಜನಮನ ಗೆದ್ದ ಬಸವರಾಜ್ ಬೊಮ್ಮಾಯಿ‌ !

ಸಿಎಂ ಜನ‌ಮನ‌ಗೆದ್ದರು. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಭಾನುವಾರ ಭಾವುಕವಾಗಿ ಬಿಳ್ಕೊಟ್ಟ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ದೊಡ್ಮನೆಯ ಪುತ್ರ, ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ, ಅಭಿಮಾನಿಗಳ ಪ್ರೀತಿಯ ಅಪ್ಪು ಅವರ ನಿಧನ ಸುದ್ದಿ ಗೊತ್ತಾಗುತ್ತಿದ್ದಂತೆ ಶುಕ್ರವಾರ ವಿಕ್ರಂ ಆಸ್ಪತ್ರೆಗೆ ಸಿಎಂ‌ ಬಸವರಾಜ ಬೊಮ್ಮಾಯಿ ದೌಡಾಯಿಸಿದ ಕ್ಷಣದಿಂದ ಭಾನುವಾರ ಕಂಠೀರವ ಸ್ಟುಡಿಯೋದಲ್ಲಿ‌‌‌ನಡೆದ ಪುನೀತ್ ರಾಜಕುಮಾರ್ ಅವರ ಅಂತ್ಯ ಸಂಸ್ಕಾರದ ವಿಧಿ ವಿಧಾನಗಳೆಲ್ಲವೂ ಯಾವುದೇ ಗೊಂದಲಕ್ಕೆ ಸಿಲುಕದಂತೆ‌ ಯಶಸ್ವಿಯಾಗಿ ನಡೆದವು. ಇದಕ್ಕ ಕಾರಣ ಸಿಎಂ ಬಸವರಾಜ್ ಬೊಮ್ಮಾಯಿ.

ರಾಜ್ ಕುಟುಂಬದ‌ ಮೇಲೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಅತೀವ ಗೌರವ.‌ಹಾಗೆಯೇ ನಟ ಪುನೀತ್ ರಾಜಕುಮಾರ್ ಅಂದ್ರೆ ಅತೀವ ಪ್ರೀತಿ. ಕಳೆದ‌ ಕೆಲವು ದಿನಗಳ ಹಿಂದಷ್ಟೇ ಇಬ್ಬರು ಒಟ್ಟಿಗೆ ವೇದಿಕೆ‌ಹಂಚಿಕೊಂಡಿದ್ದಾಗ ಸಿಎಂ‌ ಬಸವರಾಜ ಬೊಮ್ಮಾಯಿ, ನಟ ಪುನೀತ್ ಅವರ ಮೇಲಿನ ಪ್ರೀತಿ‌ ಹಾಗೂ‌ರಾಜ್ ಕುಟುಂಬದ ಮೇಲಿರುವ ಗೌರವ ಭಾವನೆಗಳನ್ನು ಬಹಿರಂಗ ಪಡಿಸಿದ್ದರು.‌ ಅಷ್ಟು‌ಮಾತ್ರವಲ್ಲ‌ಪುನೀತ್ ಅಂದ್ರೆ ಯೂತ್ ಐಕಾನ್ ಅಂತ ಮುಕ್ತ ಕಂಠದಿಂದ‌ ಬಣ್ಣಿಸಿದ್ದರು. ದುರಂತ ಅಂದ್ರೆ ಇದಾದ ಕೆಲವೇ ದಿನಗಳು ಕಳೆಯುತ್ತಿದ್ದಂತೆಯೇ ನಟ ಪುನೀತ್ ರಾಜಕುಮಾರ್, ಹೃದಯಘಾತದಿಂದ‌ ನಿಧನರಾಗಿದ್ದು ಸಿಎಂ ಬಸವರಾಜ ಬೊಮ್ಮಾಯಿ ಅವರಲ್ಲೂ ಅತೀವ ದುಃಖ‌ ತರಿಸಿತ್ತು.

ಶುಕ್ರವಾರ ಮಧ್ಯಾಹ್ನ ಪುನೀತ್ ರಾಜ್‍ಕುಮಾರ್ ಹೃದಯಾಘಾತದಿಂದ ನಿಧನರಾದ ಸುದ್ದಿ ಅಧಿಕೃತವಾಗುತ್ತಿದ್ದಂತೆ ತಕ್ಷಣವೇ ತಮ್ಮ ಸಂಪುಟದ ಸಹೋದ್ಯೋಗಿಗಳ ಜತೆ ಆಸ್ಪತ್ರೆಗೆ ದೌಡಾಯಿಸಿದವರು, ಉಪ‌ಚುನಾವಣೆ ಸೇರಿದಂತೆ ತಮ್ಮೆಲ್ಲ‌ ಕೆಲಸಗಳನ್ನು‌ ಬದಿಗೊತ್ತಿ ಪುನೀತ್ ರಾಜಕುಮಾರ್ ಅವರ ಕುಟುಂಬದವರ ದುಃಖದಲ್ಲಿ ಭಾಗಿಯಾದರು.ಹಾಗೆಯೇ ಪಾರ್ಥೀವ ಶರೀರದ ಸಾರ್ವಜನಿಕ‌ ದರ್ಶನ ಹಾಗೂ ಅಂತ್ಯ ಸಂಸ್ಕಾರದ ವಿಧಿ‌‌ ವಿಧಾನ ಗಳ‌ಕಡೆ‌ ಗಮನ‌ ಹ‌ರಿಸಿದರು.

ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಕಡೆ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಲು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್‍ಸೂದ್ ಮತ್ತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್‍ಪಂತ್ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಲ್ಲ ಮುಖ್ಯಸ್ಥರಿಗೂ ಸೂಚನೆ ಕೊಟ್ಟರು. ಅಭಿಮಾನಿಗಳ ದರ್ಶನಕ್ಕಾಗಿ ಪಾರ್ಥಿವ ಶರೀರವನ್ನು ಕಂಠೀರವ ಕ್ರೀಡಾಂಗಣಕ್ಕೆ ಕರೆದೊಯ್ಯುವ ಮೊದಲೇ ಅಲ್ಲಿಯೂ ಕೂಡ ಭದ್ರತೆಯನ್ನು ಹೆಚ್ಚಿಸಲಾಯಿತು.

ಪ್ರತಿಕ್ಷಣವೂ ಯಾವುದೇ ಪ್ರಮುಖ ತೀರ್ಮಾನ ತೆಗೆದುಕೊಳ್ಳುವ ಮುನ್ನ ಡಾ.ರಾಜ್‍ಕುಮಾರ್ ಕುಟುಂಬದವರ ಜತೆ ಚರ್ಚಿಸಿಯೇ ಮುಂದಡಿ ಇಡುತ್ತಾ ಬಂದರು.. ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಚಿವರಾದ ಆರ್.ಅಶೋಕ್, ಅಶ್ವತ್ಥ್ ನಾರಾಯಣ್, ಮುನಿರತ್ನ, ಚಿತ್ರ ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಸೇರಿದಂತೆ ಮತ್ತಿತರರ ಸಲಹೆಗಳನ್ನು ಪಡೆದರು. ವರನಟ ರಾಜಕುಮಾರ್ ಅವರ ಅಂತ್ಯ ಸಂಸ್ಕಾರದ ವೇಳೆ ಅದಂತಹ ಯಾವುದೇ ಗೊಂದಲ‌ ಹಾಗೂ ಅಹಿತಕರ ಘಟನೆಗಳು‌ ನಡೆಯಬಾ ರದು ಎನ್ನುವುದು ಸಿಎಂ‌ ಕಾಳಜಿ ಆಗಿತ್ತು. ಯಾಕಂದ್ರೆ ರಾಜ್ ಕುಟುಂಬ ಅಂದ್ರೆ ಅಭಿಮಾನಿಗಳ‌ ಸಂಖ್ಯೆ‌ದೊಡ್ಡದು. ಸ್ವಲ್ಪ ಹೆಚ್ಚು ಕಡಿಮೆಯಾದರೆ ಅಭಿಮಾನಿಗಳು‌ ಸಿಟ್ಟಾಗುವುದು
ಗ್ಯಾರಂಟಿ‌ಎನ್ನುವುದು ಸಿಎಂ ಆತಂಕ.

ಹಾಗಾಗಿಯೇ ಅಂತ್ಯ ಸಂಸ್ಕಾರದ ವಿಧಿ-ವಿಧಾನಗಳು ಯಾವ ರೀತಿ ನಡೆಯಬೇಕು, ಹೇಗೆ, ಎಲ್ಲಿ, ಯಾವಾಗ ಇತ್ಯಾದಿ ವಿಷಯಗಳ ಬಗ್ಗೆ ಚರ್ಚಿಸಲು ರಾಕ್‍ಲೈನ್ ವೆಂಕಟೇಶ್ ಆಪ್ತ ಹಾಗೂ ಸಚಿವ ಮುನಿರತ್ನ ಅವರನ್ನು ಮುಂದೆ ಬಿಟ್ಟರು. ಖುದ್ದು ಬೊಮ್ಮಾಯಿ ಅವರೇ ರಾಜ್‍ಕುಮಾರ್ ಪುತ್ರರಾದ ಶಿವರಾಜ್‍ಕುಮಾರ್, ರಾಘವೇಂದ್ರ ರಾಜ್‍ಕುಮಾರ್, ಪುನೀತ್ ರಾಜ್‍ಕುಮಾರ್ ಪತ್ನಿ ಅಶ್ವಿನಿ ಹಾಗೂ ಅವರ ಕುಟುಂಬದ ಸದಸ್ಯರ ಜತೆ ಅಂತ್ಯ ಸಂಸ್ಕಾರ ನಡೆಸುವ ಕುರಿತಾಗಿ ಪ್ರತಿಯೊಬ್ಬರ ಅಭಿಪ್ರಾಯ ಪಡೆಯುತ್ತಿದ್ದರು.

ಅಮೆರಿಕದಲ್ಲಿದ್ದ ಪುನೀತ್ ರಾಜ್‍ಕುಮಾರ್ ಪುತ್ರಿ ಧೃತಿಯನ್ನು ಬೆಂಗಳೂರಿಗೆ ಕರೆತರಲು ಬೇಕಾದ ಪಾಸ್‍ ಪೋರ್ಟ್, ವೀಸಾ ಸೇರಿದಂತೆ ಭಾರತದ ವಿದೇಶಾಂಗ ಕಚೇರಿ ವಿಭಾಗದ ಅಕಾರಿಗಳನ್ನು ಸಂಪರ್ಕಿಸಿ ಕೂಡಲೇ ಹಿಂದಿರುಗಲು ಬೇಕಾದ ಸೌಲಭ್ಯಗಳನ್ನು ಕಲ್ಪಿಸಿಕೊಡಲು ವ್ಯವಸ್ಥೆ ಮಾಡಿದರು. ದೆಹಲಿಗೆ ಧೃತಿ ಆಗಮಿಸುತ್ತಿದ್ದಂತೆ ಅವರನ್ನು ಬೆಂಗಳೂರಿಗೆ ಕರೆತರಲು ವಿಶೇಷವಾದ ವಿಮಾನವನ್ನು ಸಿಎಂ ಕಲ್ಪಿಸಿಕೊಟ್ಟರು. ವಲಸೆ ವಿಭಾಗದ ಅಕಾರಿಗಳು ವಿಳಂಬ ಮಾಡಬಹುದೆಂಬ ಕಾರಣಕ್ಕಾಗಿ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ಅವರನ್ನು ಸಂಪರ್ಕಿಸಿದರು.

ಅಲ್ಲದೆ, ಕರ್ನಾಟಕ ಭವನದಲ್ಲಿರುವ ಅಧಿಕಾರಿಗಳನ್ನು ವಿಮಾನ ನಿಲ್ದಾಣಕ್ಕೆ ತೆರಳುವಂತೆ ಸೂಚಿಸಿ ವಲಸೆ ವಿಭಾಗದ ಅಕಾರಿಗಳ ಜತೆ ಸಂಪರ್ಕ ಸಾಸಲು ಸೂಚಿಸಿದರು.  ಶನಿವಾರವೇ ಪುನೀತ್ ರಾಜ್‍ಕುಮಾರ್ ಅವರ ಅಂತ್ಯಕ್ರಿಯೆ ನೆರವೇರಬೇಕಾಗಿತ್ತು. ಆದರೆ, ಪುತ್ರಿಯೂ ಬಂದು ಅಂತಿಮ ದರ್ಶನ ಪಡೆಯಬೇಕೆಂದು ಕುಟುಂಬದವರು ಕೋರಿಕೊಂಡಿದ್ದರಿಂದ ಭಾನುವಾರಕ್ಕೆ ಮುಂದೂಡಲಾಯಿತು. ಹೀಗೆ ಪ್ರತೀ ಹಂತದಲ್ಲೂ ಪುನೀತ್ ರಾಜ್‍ಕುಮಾರ್ ಅವರ ಅಂತ್ಯ ಸಂಸ್ಕಾರವನ್ನು ಸಣ್ಣದೊಂದು ಅಹಿತಕರ ಘಟನೆ ನಡೆಯದೆ ಅಚ್ಚುಕಟ್ಟಾಗಿ ನೆರವೇರಿಸಲು ಬಸವರಾಜ ಬೊಮ್ಮಾಯಿ ಅವರು ತೆಗೆದುಕೊಂಡ ಕ್ರಮ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಕಾರಣವಾಗಿದೆ.

ಅದೆಲ್ಲಕ್ಕಿಂತ ಮುಖ್ಯವಾಗಿ ಶುಕ್ರವಾರದಿಂದ‌ ಭಾನುವಾರದ ತನಕ‌ ಸಿಎಂ‌ತಮ್ಮೆಲ್ಲ‌ ಕೆಲಸವನ್ನು ಬದಿಗೊತ್ತಿ, ರಾಜ್ ಕುಟುಂಬದ‌ ನೋವಿನಲ್ಲಿ‌ ಭಾಗಿಯಾದರು. ಇದು ಸರ್ಕಾರದ ಕರ್ತವ್ಯವೇ ಆದರೂ,ಸಿಎಂ‌ಬಸವರಾಜ ಬೊಮ್ಮಾಯಿ ಅವರು‌ ಪುನೀತ್ ಅವರ ಮೇಲಿಟ್ಟ ಪ್ರೀತಿಗೆ ಹಿಡಿದ‌‌ ಕನ್ನಡಿ ಎನ್ನುವುದು ಅಷ್ಟೇ ‌ಸತ್ಯ.ಅದರಲ್ಲೂ ಅಂತ್ಯ‌ಸಂಸ್ಕಾರದ ವೇಳೆ ಪುನೀತ್ ಹಣೆಗೆ ಮುತ್ತಿಟ್ಟು ಸಿಎಂ ನೋವು ತೋಡಿಕೊಂಡ‌ ದೃಶ್ಯ ಎಲ್ಲರ ಮನಕಲುಕುವಂತೆ‌ಮಾಡಿತು.‌ ಈ‌ ಫೋಟೋ‌ವೈರಲ್ ಆಗುತ್ತಿದ್ದಂತೆ ಸಿಎಂ ಅವರ ಕಾರ್ಯಕ್ಕೆ‌ ಸೋಷಲ್‌ ಮೀಡಿಯಾದಲ್ಲಿ‌ಮೆಚ್ಚುಗೆಯ ಮಹಾಪೂರವೇ ಹರಿದು ಬಂತು.

Categories
ಸಿನಿ ಸುದ್ದಿ

ಅಪ್ಪು- ಚಿರು- ವಿಜಯ್ ಹುಟ್ಟು- ಸಾವು- ’17’ ನೋವು; ವಿಧಿ ಲಿಖಿತವೋ- ಕಾಕತಾಳೀಯವೋ ?

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ – ಯುವಸಾಮ್ರಾಟ್ ಚಿರಂಜೀವಿ ಸರ್ಜಾ- ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ನಮ್ಮ ಸ್ಯಾಂಡಲ್ ವುಡ್ ಗೆ ದಕ್ಕಿದ ಅಪ್ರತಿಮ ಪ್ರತಿಭೆಗಳು. ಸಿನಿಮಾನೇ ಉಸಿರಾಗಿಸಿಕೊಂಡು ಬದುಕಿದ ಈ‌ ಮೂವರು ಧ್ರುವತಾರೆಗಳು ವಿಧಿಯ ಆಟಕ್ಕೆ ‌ಬಲಿಯಾಗಿಬಿಟ್ಟರು.
ಬಹುಬೇಗ ಎಲ್ಲರನ್ನೂ ತೊರೆದು ಬಾರದ ಲೋಕಕ್ಕೆ ‌ಮರಳಿದರು.ಅಲ್ಪಾವಧಿಯಲ್ಲಿ ಮೂವರು ಅಪ್ರತಿಮ ಕಲಾವಿದರನ್ನು ಕಳೆದುಕೊಂಡು ಗಂಧದಗುಡಿ ಬಡವಾಗಿದೆ. ಕರುನಾಡು ಮಮ್ಮಲ ಮರುಗುತ್ತಿದೆ. ಇದೇ ಹೊತ್ತಲ್ಲಿ‌ ಹದಿನೇಳನೇ ನಂಬರ್ ಬಹಳಷ್ಟು ಚರ್ಚೆಗೆ ಗ್ರಾಸವಾಗ್ತಿದೆ.

ಹೌದು, 17 ಅಪ್ಪು- ಚಿರು- ವಿಜಯ್ ಹುಟ್ಟಿದ ದಿನ. ಭೂಮಿಗೆ ಬಂದ ವರ್ಷ- ತಿಂಗಳು ಬೇರೆಯಾಗಿರಬಹುದು, ಆದರೆ ಹುಟ್ಟಿದ ದಿನಾಂಕ ಒಂದೇ. ಮಾತ್ರವಲ್ಲ ಉಸಿರು ಚೆಲ್ಲಿದ ವರ್ಷ- ತಿಂಗಳು- ದಿನಾಂಕವನ್ನು ಕೂಡಿದರೆ ಮತ್ತದೇ ಹದಿನೇಳನೇ ನಂಬರ್ ಬರುತ್ತೆ. ಈ ನಂಬರ್,
ಈ ಮೂವರು ಸ್ಟಾರ್ ನಟರಿಗೆ ಕಂಟಕವಾ ಗೊತ್ತಿಲ್ಲ ? ಇವರುಗಳ ಅಕಾಲಿಕ ಸಾವು ವಿಧಿಲಿಖಿತವಾ ? ಅಥವಾ ಕಾಕತಾಳಿಯವಾ? ಇದೂ ಕೂಡ ಗೊತ್ತಿಲ್ಲ. ಆದರೆ, ಕಳೆದ ಒಂದೂವರೆ ವರ್ಷಗಳಲ್ಲಿ ಈ ಮೂವರು ನಟರನ್ನು ಕಳೆದುಕೊಂಡಿದ್ದೇವೆ.

ಒಬ್ಬರ ಅಗಲಿಕೆಯನ್ನು ಅರಗಿಸಿಕೊಳ್ಳುವ ಹೊತ್ತಿಗೆ ಮತ್ತೊಬ್ಬರ ಅಕಾಲಿಕವಾಗಿ ಮರಣ ಹೊಂದುತ್ತಿದ್ದಾರೆ. ಯುವಸಾಮ್ರಾಟ್ ಹಠಾತ್ತನೇ ಅಗಲಿದರು. ಇವರ ನಂತರ ಅಪಘಾತದಲ್ಲಿ ಸಂಚಾರಿ ವಿಜಯ್ ಹೋದರು. ಇದೀಗ, ಅಪ್ಪು ಹೃದಯಾಘಾತಗೊಂಡು ಉಸಿರು ಚೆಲ್ಲಿದ್ದಾರೆ. ಈ ಮೂವರು ಒಂದೇ ದಿನಾಂಕದಂದು ಹುಟ್ಟಿದವರು. ಇಷ್ಟವಿಲ್ಲದಿದ್ದರೂ ವಿಧಿಯಾಟಕ್ಕೆ‌ ಬಲಿಯಾದವರು.

ಹೌದು, ಅಕ್ಟೋಬರ್ 17, 1984ರಲ್ಲಿ ಚಿರಂಜೀವಿ ಸರ್ಜಾ ಜನಿಸಿದ್ದರು. ಸಿನಿಮಾ ಹಿನ್ನಲೆ ಕುಟುಂಬದಿಂದ ಬಂದ ಚಿರು ಯುವಸಾಮ್ರಾಟ್ ಎನಿಸಿಕೊಂಡರು. ಗಂಧದಗುಡಿಗೆ ಕೊಡುಗೆ ನೀಡಲು ಹೊತೊರೆಯತ್ತಿದ್ದರು. ಆದರೆ, 2020 ಜೂನ್ 7 ರಂದು ಹಠಾತ್ ಹೃದಯಘಾತ ಸಂಭವಿಸಿ ಪ್ರಾಣಬಿಟ್ಟರು. ಇನ್ನೂ ಸಂಚಾರಿ ವಿಜಯ್ ಕೂಡ ಕಲೆಗಾಗಿ ಜೀವಕೊಡುತ್ತಿದ್ದವರು.


ಜುಲೈ 17, 1983 ರಲ್ಲಿ ಜನಿಸಿದ್ದ ಇವರು, 2021, ಜೂನ್ 15 ರಂದು ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡರು. ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದರೂ ಕೂಡ ಉಳಿಯಲಿಲ್ಲ. ಈಗ ಅಪ್ಪು ಕೂಡ ಆಸ್ಪತ್ರೆಗೆ ಹೋಗಿ ವಾಪಾಸ್ ಬರಲಿಲ್ಲ. ಸುಸ್ತು ಎನ್ನುತ್ತಲೇ ಆಸ್ಪತ್ರೆಗೆ ಹೋದ ಅಪ್ಪು ಕಾರ್ಡಿಯಕ್ ಅರೆಸ್ಟ್ ಆಗಿ ಹೋಗೆಬಿಟ್ಟರು. ಮಾರ್ಚ್​​ 17, 1975ರಲ್ಲಿ ಜನಿಸಿದ ಪುನೀತ್ ಅವರು ಅಕ್ಟೋಬರ್ 29 ರಂದು ಇಹಲೋಕ ತ್ಯಜಿಸಿದರು. ಅರ್ಧವಯಸ್ಸಿಗೆ ಬದುಕು ಮುಗಿಸಿ ಮರಳಿ ಬಾರದೂರಿಗೆ ಹೋಗಿರುವ ಈ ಮೂವರು ತಾರೆಯರಿಗೆ ಹದಿನೇಳನೇ ನಂಬರ್ ಕಂಟಕವಾಯ್ತಾ ? ಭಗವಂತನೇ ಬಲ್ಲ ಗುರು

ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

error: Content is protected !!