Categories
ಸಿನಿ ಸುದ್ದಿ

ಮೊದಲರ್ಧ ಜಾಲಿ! ಆಮೇಲೆ ಖಾಲಿ!! ಇದು ‘ಮದ್ವೆ ಭಾಗ್ಯ’ ಕಾಣದ ಬ್ಯಾಚ್ಯುಲರ್ ಹುಡುಗನ ನಗು ತುಂಬಿದ ಬೇಸರ…

ಚಿತ್ರ ವಿಮರ್ಶೆ- ವಿಜಯ್ ಭರಮಸಾಗರ

ರೇಟಿಂಗ್: 2.5 / 5

ಚಿತ್ರ : ಮಿಸ್ಟರ್ ಬ್ಯಾಚ್ಯುಲರ್
ನಿರ್ದೇಶನ : ನಾಯ್ಡು
ನಿರ್ಮಾಣ : ಶ್ರೀನಿವಾಸ್, ಹನುಮಂತ ರಾವ್, ಸ್ವರ್ಣಲತ
ತಾರಾಗಣ: ಡಾರ್ಲಿಂಗ್ ಕೃಷ್ಣ, ಮಿಲನ ನಾಗರಾಜ್, ನಿಮಿಕಾ ರತ್ನಾಕರ್, ಚಿಕ್ಕಣ್ಣ, ಗಿರಿ, ಅಯ್ಯಪ್ಪ, ಯಶ್ ಶೆಟ್ಟಿ, ವಜ್ರಾಂಗ್ ಶೆಟ್ಟಿ ಇತರರು.

ಇದೊಂದು ಮದುವೆ ಆಗಬೇಕು ಅಂತ ಚಿಕ್ಕಂದಿನಿಂದಲೂ ಮೂರು ಹೊತ್ತು ಹಪಹಪಿಸುವ ಹುಡುಗನ ಕಥೆ ಮತ್ತು ವ್ಯಥೆ. ಮದುವೆ ಅಂದರೆ ಬದುಕಿನ ದೊಡ್ಡ ಹಬ್ಬ ಅಂದುಕೊಂಡ ಅವನು ವಯಸ್ಸಿಗೆ ಬಂದಮೇಲೆ, ಹುಡುಗಿ ನೋಡಿ ಮದ್ವೆ ಆಗೋ ಕನಸು ಕಾಣ್ತಾನೆ , ಒಂದಲ್ಲ, ಎರಡಲ್ಲ, ಬರೋಬ್ಬರಿ ಮುವತ್ತು ಹುಡುಗಿಯರೂ ಅವನನ್ನು ರಿಜೆಕ್ಟ್ ಮಾಡ್ತಾರೆ! ಮುವತ್ತೊಂದನೇ ಹುಡುಗಿ ಕೈ ಹಿಡಿಯದೇ ಹೋದರೆ, ಲೈಫಲ್ಲಿ ‘ಮದುವೆ ಭಾಗ್ಯ’ವೇ ಇಲ್ಲ. ಅಂಥಾ ಹೊತ್ತಲ್ಲಿ ಏನೆಲ್ಲಾ ಪ್ರಯಾಸ ಪಡುತ್ತಾನೆ ಅನ್ನೋದು ಕಥೆ ಮತ್ತು ವ್ಯಥೆ.

ಒಂದೇ ಮಾತಲ್ಲಿ ಹೇಳೋದಾದರೆ, ಮೊದಲರ್ಧ ಜಾಲಿ ಜಾಲಿ. ದ್ವಿತಿಯಾರ್ಧ ಖಾಲಿ ಖಾಲಿ! ಕಥೆಯ ಎಳೆ ಚೆನ್ನಾಗಿದೆ. ನಿರ್ದೇಶಕರ ಯೋಚನಾಲಹರಿಯೂ ಸಖತ್. ಜಾಲಿಯಾಗಿಯೇ ಸಾಗುವ ಬ್ಯಾಚ್ಯುಲರ್ ಸ್ಟೋರಿ ದ್ವಿತಿಯಾರ್ಧ ಬಳಿಕ ಕೊಂಚ ವೇಗ ಕಳೆದುಕೊಳ್ಳುತ್ತದೆ. ಆರಂಭದಿಂದ ಮಧ್ಯಂತರವರೆಗೆ ಬ್ಯಾಚ್ಯುಲರ್ ಪಡುವ ಪರಿಪಾಟಿಲು ನೋಡುಗನಿಗೆ ನಗು ಎಬ್ಬಿಸುತ್ತಾದರೂ, ದ್ವಿತಿಯಾರ್ಧ ತಕ್ಕಮಟ್ಟಿಗೆ ಸೀಟಿಗೆ ಒರಗುವಂತೆ ಮಾಡುತ್ತೆ. ಮೊದಲರ್ಧದ ಬಿಗಿ ಹಿಡಿತ ಕೊನೆಯವರೆಗೂ ಇದ್ದಿದ್ದರೆ, ಬ್ಯಾಚ್ಯುಲರ್ ಗೆ ಜೈ ಎನ್ನಬಹುದಿತ್ತು. ಜಾಲಿಯಾಗಿ ಸಾಗುವ ಮಿಸ್ಟರ್ ಬ್ಯಾಚ್ಯುಲರ್ ಗೆ ನಿರ್ದೇಶಕರು ‘ರಾ’ ಫೀಲ್ ಕೊಡುವ ನೆಪದಲ್ಲಿ ಸ್ವಾದ ಹದಗೆಡಿಸಿದ್ದಾರೆ. ಕಥೆ ತೀರಾ ಹೊಸದೇನಲ್ಲ. ಈಗಾಗಲೇ ಬಾಲಿವುಡ್ ನಲ್ಲಿ ಈ ಬಗೆಯ ಸಿನಿಮಾಗಳು ಬಂದಿವೆ. ಆದರೂ ಕನ್ನಡಕ್ಕೆ ಫ್ರೆಶ್ ಥಾಟ್ ಎನಿಸುವಂತೆ ನಿರ್ದೇಶಕರ ಪ್ರಯತ್ನ ಅಷ್ಟಾಗಿ ರುಚಿಸಿಲ್ಲ.

ಮೊದಲರ್ಧದ ಸಿನಿಮಾದಲ್ಲಿ ಯಾವುದೇ ತಪ್ಪು ಕಾಣಸಿಗಲ್ಲ. ಕಥೆ ಸಾಗುವ ಪರಿ, ಘಟಿಸುವ ಹಾಸ್ಯ ಸನ್ನಿವೇಶ, ಮಾತು, ಹಾಡು, ಕುಣಿತ ಬರುವ ಪಾತ್ರಗಳ ತೊಳಲಾಟ, ಪೀಕಲಾಟವನ್ನು ತುಂಬಾ ಚೆನ್ನಾಗಿಯೇ ಕಟ್ಟಿಕೊಡಲಾಗಿದೆ. ಅದರೆ, ಅದೇ ವೇಗ ಕೊನೆಯವರೆಗೂ ಇದ್ದಿದ್ದರೆ ಬ್ಯಾಚ್ಯುಲರ್ ಕಷ್ಟವಾಗುವ ಬದಲು ಇಷ್ಟವಾಗುತ್ತಿದ್ದ. ಸರಾಗವಾಗಿ ಸಾಗುವ ಕಥೆ, ದ್ವಿತಿಯಾರ್ಧ ಟ್ರ್ಯಾಕ್ ಚೇಂಜ್ ಆಗಿ ಎಲ್ಲೆಲ್ಲೋ ಹೋಗಿರುವುದರಿಂದ ನಗಾಡಿಕೊಂಡಿದ್ದ ನೋಡುಗ ಆ ನಗುವ ಗುಂಗಿಂದ ಹೊರಬಂದು ಕೊಂಚ ಗೊಂದಲಕ್ಕೀಡಾಗುತ್ತಾನೆ. ಯಾಕೆ, ಏನು ಅಂತ ಸಿನಿಮಾದಲ್ಲೇ ನೋಡಬೇಕು.

ಕಥೆ ಇಷ್ಟು…

ಆ ಹುಡುಗ ಚಿಕ್ಕ ವಯಸ್ಸಲ್ಲಿ ಮದುವೆ ಅಂದ್ರೆ ಏನು ಅಂತ ತನ್ನ ತಾಯಿ ಬಳಿ ಕೇಳ್ತಾನೆ. ಅದೊಂದು ಹಬ್ಬ ಅಂತಾಳೆ ಅಮ್ಮ. ಯುಗಾದಿ, ದೀಪಾವಳಿ ರೀತಿಯ ಹಬ್ಬವೇ ಅಂತಾನೆ ಮಗ. ಅವು ವರ್ಷಕ್ಕೊಮ್ಮೆ ಬರುವ ಹಬ್ಬ.‌ಮದ್ವೆ ಬದುಕಿನದ್ದಕ್ಕೂ ಇರುವ ಹಬ್ಬ ಅಂತಾಳೆ ಅಮ್ಮ. ಇಷ್ಟು ಹೇಳಿದ್ದೇ ತಡ, ಅವನು ಮನೆಯಲ್ಲಿ ಮದ್ವೆ ಮಾಡಿಸಿ ಅಂತ ಸದಾ ಗಂಟು ಬೀಳ್ತಾನೆ. ಮದ್ವೆ ಅಗಬೇಕು ಅನ್ನೋದೇ ಅವನ ಕನಸು. ದೊಡ್ಡವನಾದ ಮೇಲೂ ಮದ್ವೆ ಕನಸು ಹೆಚ್ಚಾಗುತ್ತೆ. ಮನೇಲೂ ಹುಡುಗಿ ನೋಡಲು ಶುರು ಮಾಡ್ತಾರೆ. ಅವನನ್ನು ನೋಡಿದವರೆಲ್ಲ ರಿಜೆಕ್ಟ್ ಮಾಡ್ತಾರೆ. ಈ ನಡುವೆ ಒಬ್ಬ ಹುಡುಗಿ ಮದ್ವೆಗೂ ಮುನ್ನ ‘ಅನುಭವ’ ಪಡೆದು ಬಂದರೆ ಮದ್ವೆ ಆಗ್ತೀನಿ. ನಿನ್ನ ವರ್ಜಿನಿಟಿ ಕಳ್ಕೊಂಡ್ ಬಾ ಅಂತ ಸವಾಲು ಹಾಕ್ತಾಳೆ. ಅವಳು ಹಾಗೆ ಹೇಳೋದೇಕೆ, ಮುಂದೆ ಅವನು ವರ್ಜಿನಿಟಿ ಕಳ್ಕೋತ್ತಾನಾ, ಮದ್ವೆ ಆಗುತ್ತೋ ಇಲ್ವೋ ಅನ್ನೋದೇ ಸಸ್ಪೆನ್ಸ್.

ಯಾರು ಹೇಗೆ?

ಡಾರ್ಲಿಂಗ್ ಕೃಷ್ಣ, ಇಲ್ಲಿ ಎಂದಿಗಿಂತಲೂ ಇಷ್ಟವಾಗುತ್ತಾರೆ. ಮದ್ವೆ ಗೂ ಮುನ್ನ ತಾನು ವರ್ಜಿನಿಟಿ ಕಳ್ಕೊಳ್ಳಲು ಪರದಾಡುವ ಹುಡುಗನಾಗಿ ಗಮನಸೆಳೆಯುತ್ತಾರೆ. ನಗಿಸುವಲ್ಲಿ ಸಫಲ. ಡ್ಯಾನ್ಸ್, ಫೈಟ್ ನಲ್ಲೂ ಓಕೆ.
ಮಿಲನ ನಾಗರಾಜ್ ಇರುವಷ್ಟು ಸಮಯ ಇಷ್ಟವಾಗುತ್ತಾರೆ. ನಿಮಿಕಾ ರತ್ನಾಕರ್ ಅವರ ಅಂದವಷ್ಟೇ ಇಲ್ಲಿ ಹೈಲೆಟ್. ಚಿಕ್ಕಣ್ಣ, ಗಿರಿ ಇರುವ ಸಮಯದಲ್ಲಿ ಒಳ್ಳೇ ಸ್ಕೋರ್ ಮಾಡಿದ್ದಾರೆ. ಅಯ್ಯಪ್ಪ ರಗಡ್ ಲುಕ್ ಮೂಲಕ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಯಶ್ ಶೆಟ್ಟಿ, ವಜ್ರಾಂಗ್ ಶೆಟ್ಟಿ ಅಲ್ಪ ಸಮಯದಲ್ಲೂ ಅಬ್ಬರಿಸಿದ್ದಾರೆ. ಪವಿತ್ರಾ ಲೋಕೇಶ್ ಕೊಟ್ಟ ಪಾತ್ರಕ್ಕೆ ಮೋಸ ಮಾಡಿಲ್ಲ. ಉಳಿದಂತೆ ಬರುವ ಪಾತ್ರಗಳೂ ಸೈ ಎನಿಸಿವೆ.

ಮಣಿಕಾಂತ್ ಕದ್ರಿ ಅವರ ಸಂಗೀತದಲ್ಲಿ ಒಂದು ಹಾಡು ಗಮನ ಸೆಳೆಯುತ್ತೆ. ಹಿನ್ನೆಲೆ ಸಂಗೀತಕ್ಕಿನ್ನೂ ಧಮ್ ಬೇಕಿತ್ತು. ಕ್ರೇಜಿಮೈಂಡ್ಸ್ ಕತ್ತರಿ ಕೆಲಸ ಚಿತ್ರದ ವೇಗ ಹೆಚ್ಚಿಸಿದೆ. ಅವರ ಕ್ಯಾಮೆರಾ ಕೈಚಳಕ ಬ್ಯಾಚ್ಯಲರ್ ಲೈಫ್ ಗೆ ಸಾಥ್ ಕೊಟ್ಟಿದೆ.

Categories
ಸಿನಿ ಸುದ್ದಿ

ಹಾಸ್ಟೆಲ್ ಹುಡುಗರ ಹಾಡಿಗೆ ಸ್ಟಾರ್ಸ್ ಸಾಥ್!

ವರುಣ್ ಸ್ಟುಡಿಯೋಸ್ ಹಾಗೂ ಗುಲ್ ಮೋಹರ್ ಫಿಲಂಸ್ ಬ್ಯಾನರ್ ನಡಿ ನಿರ್ಮಾಣವಾಗಿರುವ ಮೊದಲ ಸಿನಿಮಾ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’. ಸೆಟ್ಟೇರಿದ ದಿನದಿಂದಲೂ ಸಖತ್ ಸುದ್ದಿಯಲ್ಲಿರುವ, ಕ್ರಿಯೇಟಿವ್ ಕಂಟೆಂಟ್ ಮೂಲಕ ಎಲ್ಲರ ಗಮನ ಸೆಳೆದಿರುವ ಈ ಚಿತ್ರದ ಮೊದಲ ಸಾಂಗ್ ರಿಲೀಸ್ ಆಗಿದೆ. ಸ್ಯಾಂಡಲ್ ವುಡ್ ಸ್ಟಾರ್ ನಟರಾದ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ಧನಂಜಯ, ಧ್ರುವ ಸರ್ಜಾ ಚಿತ್ರದ ಮೊದಲ ಸಾಂಗ್ ಸೋಶಿಯಲ್ ಮೀಡಿಯಾದಲ್ಲಿ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

ಹಾಸ್ಟೆಲ್ ಹುಡುಗರು ಸಿನಿಮಾ ಸ್ಯಾಂಡಲ್ ವುಡ್ ಸಿನಿ ಪ್ರೇಕ್ಷಕರಲ್ಲಿ ಅಪಾರ ನಿರೀಕ್ಷೆ ಹುಟ್ಟು ಹಾಕಿದೆ. ಬಿಡುಗಡೆಗೆ ರೆಡಿಯಾಗಿರುವ ಈ ಚಿತ್ರ ಹಾಡುಗಳ ಮೂಲಕ ಪ್ರೇಕ್ಷಕರ ಮನಗೆಲ್ಲೋಕೆ ಹೊರಟಿದೆ. ಇಂದು ಚಿತ್ರದ ‘ಪ್ರೊಟೆಸ್ಟ್ ಸಾಂಗ್’ ಚಿತ್ರತಂಡ ಬಿಡುಗಡೆ ಮಾಡಿದೆ. ಹಾಸ್ಟೆಲ್ ನಲ್ಲಿರುವ ಹುಡುಗರ ಕಥೆ, ವ್ಯಥೆ ಇರುವ ಈ ಹಾಡನ್ನು ಸಖತ್ ಮಜವಾಗಿ ಕಟ್ಟಿಕೊಡಲಾಗಿದ್ದು, ಅದಕ್ಕೆ ತಕ್ಕಂತೆ ಯೋಗರಾಜ್ ಭಟ್ ಸಾಹಿತ್ಯ, ಅಜನೀಶ್ ಲೋಕನಾಥ್ ಮ್ಯೂಸಿಕ್ ಹಾಗೂ ಹಾಡು ಕಿಕ್ ನೀಡುತ್ತಿದೆ.

ಯೂತ್ ಸಬ್ಜೆಕ್ಟ್ ಒಳಗೊಂಡ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರವನ್ನು ನಿತಿನ್ ಕೃಷ್ಣಮೂರ್ತಿ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಹಲವು ರಂಗಭೂಮಿ ಪ್ರತಿಭೆಗಳು ತಾರಾಗಣದಲ್ಲಿರುವ ಈ ಚಿತ್ರದಲ್ಲಿ ಸ್ಯಾಂಡಲ್ ವುಡ್ ಸ್ಟಾರ್ ನಟರ ಗೆಸ್ಟ್ ಅಪಿಯರೆನ್ಸ್ ಕೂಡ ಇರಲಿದೆ. ಪುನೀತ್ ರಾಜ್ ಕುಮಾರ್, ಸುದೀಪ್, ರಮ್ಯಾ, ರಕ್ಷಿತ್ ಶೆಟ್ಟಿ ಹೀಗೆ ಸ್ಟಾರ್ ನಟ ನಟಿಯರು ಈ ಸಿನಿಮಾಗೆ ಸಾಥ್ ನೀಡಿದ್ದಾರೆ.

ಪ್ರತಿ ಬಾರಿ ಯೂನೀಕ್ ಕಾನ್ಸೆಪ್ಟ್ ಮೂಲಕ ಚಿತ್ರದ ಪ್ರಚಾರ ಕಾರ್ಯ ಮಾಡಿ ಅಪಾರ ನಿರೀಕ್ಷೆ ಹುಟ್ಟು ಹಾಕಿರುವ ಈ ಚಿತ್ರವನ್ನು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮೆಚ್ಚಿಕೊಂಡು ಪರಂವಃ ಪಿಕ್ಚರ್ಸ್ ಮೂಲಕ ಈ ಚಿತ್ರವನ್ನು ಪ್ರಸ್ತುತ ಪಡಿಸುತ್ತಿದ್ದಾರೆ.

ಫೆಬ್ರವರಿಯಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಅರವಿಂದ್ ಕಶ್ಯಪ್ ಛಾಯಾಗ್ರಹಣ, ಸುರೇಶ್ ಸಂಕಲನ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ಬಾನ ದಾರಿಯಲ್ಲಿ ಗಣೇಶ್ ನೋಡಿದ‌ ನಂತರ! ರಿಲೀಸ್ ಆಯ್ತು ಇಂಪಾದ ಗೀತೆ…

ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನಿರ್ದೇಶಕ ಪ್ರೀತಂ ಗುಬ್ಬಿ ಜೋಡಿ “ಬಾನದಾರಿಯಲ್ಲಿ” ಚಿತ್ರದ ಮೂಲಕ ಮತ್ತೊಮ್ಮೆ ಮೋಡಿ ಮಾಡಲಿದೆ. ಇತ್ತೀಚೆಗೆ ಈ ಚಿತ್ರಕ್ಕಾಗಿ ಕವಿರಾಜ್ ಅವರು ಬರೆದಿರುವ “ನಿನ್ನನ್ನು ನೋಡಿದ ನಂತರ” ಎಂಬ ಗೀತೆ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಹಿರಿಯ ಪತ್ರಕರ್ತ ಬಿ.ಎನ್ ಸುಬ್ರಹ್ಮಣ್ಯ ಈ ಹಾಡನ್ನು ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದರು.

ಇದು ಕೊರೋನ ಸಮಯದಲ್ಲಿ ಅಂದರೆ ಸುಮಾರು ಎರಡುವರೆ ವರ್ಷಗಳ ಹಿಂದೆ ನಾನು ಹಾಗೂ ಪ್ರೀತಾ ಜಯರಾಂ ಸೇರಿ ಮಾಡಿದ ಕಥೆ. ಈಗ ಚಿತ್ರೀಕರಣ ಮುಕ್ತಾಯವಾಗಿದೆ. ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡುತ್ತಿದ್ದೇವೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ಪ್ರೀತಂ ಗುಬ್ಬಿ.

ನಾನು ಮೊದಲು ಆನಂದ್ ಆಡಿಯೋ ಅವರಿಗೆ ಧನ್ಯವಾದ ಹೇಳುತ್ತೇನೆ. ಏಕೆಂದರೆ ನನ್ನ ಸಿನಿಜರ್ನಿಯಲ್ಲೇ ಅತೀ ಹೆಚ್ಚು ಮೊತ್ತ ಕೊಟ್ಟು ಈ ಚಿತ್ರದ ಆಡಿಯೋ ರೈಟ್ಸ್ ಪಡೆದುಕೊಂಡಿದ್ದಾರೆ. ಇನ್ನು ಈ ಹಾಡನ್ನು ಕವಿರಾಜ್ ಬರೆದಿದ್ದಾರೆ. “ಹುಡುಗಾಟ” ಚಿತ್ರದ “ಮಂದಾಕಿನಿ ಯೇ” ಹಾಡಿನಿಂದ ಶುರುವಾದ ನಮ್ಮ ಜರ್ನಿ ಈ ಹಾಡಿನ ತನಕ ಮುಂದುವರೆದಿದೆ. ನನ್ನ ಅನೇಕ ಹಿಟ್ ಹಾಡುಗಳನ್ನು ಕವಿರಾಜ್ ಅವರೆ ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತ ಚಿತ್ರದ ಮತ್ತೊಂದು ಹೈಲೆಟ್ . ನಿರ್ದೇಶಕ ಪ್ರೀತಂ ಗುಬ್ಬಿ ಈ ಚಿತ್ರವನ್ನು ಉತ್ತಮವಾಗಿ ನಿರ್ದೇಶಿಸಿದ್ದಾರೆ. ಸಾಮಾನ್ಯವಾಗಿ ನಾನು ಡಬ್ಬಿಂಗ್ ಸಮಯದಲ್ಲಿ ಚಿತ್ರದ ಬಗ್ಗೆ ಹೇಳಿ ಬಿಡುತ್ತೇನೆ. ಈ ಚಿತ್ರದ ಡಬ್ಬಿಂಗ್ ಮಾಡಬೇಕಾದರೆ ಕೆಲವೊಮ್ಮೆ ತುಂಬಾ ಭಾವುಕನಾದೆ.

ನಾಯಕಿಯರಾದ ರುಕ್ಮಿಣಿ ವಸಂತ್ ಹಾಗೂ ರೀಷ್ಮಾ ನಾಣಯ್ಯ ಸೇರಿದಂತೆ ಚಿತ್ರದಲ್ಲಿ ಅಭಿನಯಿಸಿರುವ ಎಲ್ಲಾ ಕಲಾವಿದರ ಅಭಿನಯ ಚೆನ್ನಾಗಿದೆ. ಪ್ರೀತಾ ಜಯರಾಮ್ – ಪ್ರೀತಂ ಗುಬ್ಬಿ ಸೇರಿ ಒಳ್ಳೆಯ ಕಥೆ ಬರೆದಿದ್ದಾರೆ. ತಂತ್ರಜ್ಞರ ಕಾರ್ಯವೈಖರಿ ಕೂಡ ಅದ್ಭುತವಾಗಿದೆ. ಕೀನ್ಯಾ ಭಾಗದ ಚಿತ್ರೀಕರಣವನ್ನು ಮರೆಯಲು ಸಾಧ್ಯವಾಗುತ್ತಿಲ್ಲ. ನಾನು ಈ ಚಿತ್ರದಲ್ಲಿ ಕ್ರಿಕೆಟ್ ಆಟಗಾರನಾಗಿ ಕಾಣಿಸಿಕೊಂಡಿದ್ದೇನೆ. ಹಾಗಾಗಿ ನಮ್ಮ ಚಿತ್ರ ತಂಡ ಹಾಗೂ ಸ್ಟಾರ್ ರಿಪೋರ್ಟರ್ಸ್ ತಂಡದ ನಡುವೆ ಕ್ರಿಕೆಟ್ ಪಂದ್ಯ ಏರ್ಪಡಿಸಲಾಗಿತ್ತು. ಆನಂತರ ಹಾಡು ಬಿಡುಗಡೆ ಮಾಡಿದ್ದೇವೆ ಎಂದು ನಾಯಕ ಗೋಲ್ಡನ್ ಸ್ಟಾರ್ ಗಣೇಶ್ ಹಾಡು ಹಾಗೂ ಚಿತ್ರದ ಕುರಿತು ಮಾತನಾಡಿದರು.

ಚಿತ್ರ ತುಂಬಾ ಚೆನ್ನಾಗಿದೆ. ಇಂದು ಬಿಡುಗಡೆಯಾಗಿರುವ ಹಾಡು ಅಷ್ಟೇ ಇಂಪಾಗಿದೆ. ನಾನು ಈ ಹಾಡಿಗಾಗಿ ಸರ್ಫಿಂಗ್ ಅಭ್ಯಾಸ ಮಾಡಿದ್ದೇನೆ ಎಂದರು ನಾಯಕಿ ರುಕ್ಮಿಣಿ ವಸಂತ್.

ಹಾಡು ಅದ್ಭುತವಾಗಿದೆ. ಗಣೇಶ್ ಹಾಗೂ ರಂಗಾಯಣ ರಘು ಅವರು ನನಗೆ ಸಾಕಷ್ಟು ಹೇಳಿಕೊಟ್ಟಿದ್ದಾರೆ. ಕಳೆದವರ್ಷ ಅನೇಕ ಕನ್ನಡ ಚಿತ್ರಗಳು ಗೆದ್ದು ದಾಖಲೆ ನಿರ್ಮಿಸಿದೆ. ಈ ವರ್ಷವೂ ಎಲ್ಲಾ ಕನ್ನಡ ಚಿತ್ರಗಳು ದೊಡ್ಡಮಟ್ಟದ ಯಶಸ್ಸು ಕಾಣಲಿ. ಅದರಲ್ಲಿ “ಬಾನದಾರಿಯಲ್ಲಿ” ಚಿತ್ರವೂ ಇರಲಿ ಎನ್ನುತ್ತಾರೆ ಚಿತ್ರದ ಮತ್ತೊಬ್ಬ ನಾಯಕಿ ರೀಷ್ಮಾ ನಾಣಯ್ಯ.

“ಬಾನದಾರಿಯಲ್ಲಿ” ಹಾಡು ಹುಟ್ಟಿದ ಸಮಯವನ್ನು ವರ್ಣಿಸಿದ ಗೀತರಚನೆಕಾರ ಕವಿರಾಜ್, ಮುಂಬೈನ ಖ್ಯಾತ ಯಶ್ ರಾಜ್ ಸ್ಟುಡಿಯೋದಲ್ಲಿ ಈ ಹಾಡಿನ ರೆಕಾರ್ಡಿಂಗ್ ನಡೆದಿದೆ. ಖ್ಯಾತ ಗಾಯಕ ಸೋನು ನಿಗಮ್ ಸುಮಧುರವಾಗಿ ಹಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ ಎಂದು ತಿಳಿಸಿದರು. ಛಾಯಾಗ್ರಾಹಕ ಅಭಿಲಾಷ್ ಕಲ್ಲತ್ತಿ ಸೇರಿದಂತೆ ಅನೇಕ ತಂತ್ರಜ್ಞರು ತಮ್ಮ ಅನುಭವ ಹಂಚಿಕೊಂಡರು. ಶ್ರೀವಾರಿ ಟಾಕೀಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಸಂತೋಷ್ ಹಾಗೂ ವೇಣು ಬಂಡವಾಳ ಹಾಕಿದ್ದಾರೆ.

Categories
ಸಿನಿ ಸುದ್ದಿ

ಆರ್ಕೇಸ್ಟ್ರಾ ಮೈಸೂರು! ಇದು ಡಾಲಿ ಗೆಳೆಯರ ಬಳಗದ ಮನರಂಜನೆ: ಸಂಕ್ರಾಂತಿಗೆ ಹಾಡುವ ಸಂಭ್ರಮ…

ಗಣೇಶನ ಹಬ್ಬ, ರಾಜ್ಯೋತ್ಸವ ಮುಂತಾದ ಸಂದರ್ಭಗಳಲ್ಲಿ ಎಲ್ಲಾ ಕಡೆ “ಆರ್ಕೇಸ್ಟ್ರಾ” ಕಾರುಬಾರು. ಇಂತಹ “ಆರ್ಕೇಸ್ಟ್ರಾ” ಆರಂಭವಾಗಿದ್ದು ಮೈಸೂರಿನಲ್ಲೇ ಎನ್ನುತ್ತಾರೆ. “ಆರ್ಕೇಸ್ಟ್ರಾ” ಕಥೆ ಆಧರಿಸಿರುವ “ಆರ್ಕೇಸ್ಟ್ರಾ ಮೈಸೂರು” ಎಂಬ ಚಿತ್ರ ಜನವರಿ 12 ರಂದು ತೆರೆಗೆ ಬರುತ್ತಿದೆ‌. ಇತ್ತೀಚೆಗೆ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಿದೆ.

ಮೂಲತಃ ಮೈಸೂರಿನವರಾದ ಡಾಲಿ ಧನಂಜಯ್ ಸ್ನೇಹಿತರೆಲ್ಲಾ ಸೇರಿ ಮಾಡಿರುವ ಸಿನಿಮಾವಿದು. ಅದರಲ್ಲೂ ಡಾಲಿ ಅವರೆ ಈ ಚಿತ್ರದ ಎಲ್ಲಾ ಹಾಡುಗಳನ್ನು ಬರೆದಿರುವುದು ವಿಶೇಷ.

ಟ್ರೇಲರ್ ಬಿಡುಗಡೆ ಮಾಡಿದ ಡಾಲಿ ಧನಂಜಯ್ ಈ ಚಿತ್ರದ ಕುರಿತು ಭಾವನಾತ್ಮಕವಾಗಿ ಮಾತನಾಡಿದರು. ನಮ್ಮ ಮೈಸೂರಿನ ಅನೇಕ ಸ್ನೇಹಿತರು ಸೇರಿ ಮಾಡಿರುವ ಚಿತ್ರವಿದು. ಸುನೀಲ್ ಮೈಸೂರು ಈ ಚಿತ್ರ ನಿರ್ದೇಶನ ಮಾಡಿದ್ದಾರೆ. ಪೂರ್ಣಚಂದ್ರ ನಾಯಕನಾಗಿ ನಟಿಸಿದ್ದಾರೆ‌. ನಾನು ಈ ಚಿತ್ರದ ಎಲ್ಲಾ ಹಾಡುಗಳನ್ನು ಬರೆದಿದ್ದೇನೆ.‌ ನಾನು ಡಾಲಿ ಆಗುವುದಕ್ಕೆ ಮುಂಚಿತವಾಗಿ ಈ ಚಿತ್ರದ ಹಾಡುಗಳನ್ನು ಬರೆದಿದ್ದೇನೆ.‌
ಈ ಚಿತ್ರದಲ್ಲಿ ನಾಯಕ ಗೆಲುವನ್ನು ಸಂಭ್ರಮಿಸುವ ಹಾಡೊಂದನ್ನು ಬರೆಯಬೇಕಿತ್ತು. ನನಗೆ ಆಗ ಆ ಗೆಲುವನ್ನು ಸಂಭ್ರಮಿಸಿ ಗೊತ್ತಿರಲಿಲ್ಲ.‌ ಆನಂತರ “ಟಗರು” ಚಿತ್ರದ ಯಶಸ್ಸಿನ ನಂತರ ಈ ಹಾಡನ್ನು ಪೂರ್ಣ ಮಾಡಿದ್ದೆ.

ಸಂಕ್ರಾಂತಿ ಸಮಯದಲ್ಲಿ ಸಾಮಾನ್ಯವಾಗಿ ಕನ್ನಡ ಸಿನಿಮಾಗಳು ಬಿಡುಗಡೆಯಾಗುವುದಿಲ್ಲ. ಆದರೆ ನಮ್ಮ ಚಿತ್ರ ಇದೇ ಸಂದರ್ಭದಲ್ಲಿ (ಜನವರಿ 12) ಬಿಡುಗಡೆಯಾಗುತ್ತಿದೆ. ಡಾಲಿ ಪಿಕ್ಚರ್ಸ್ ಹಾಗೂ ಕೆ.ಆರ್.ಜಿ ಸ್ಟುಡಿಯೋಸ್ ಈ ಚಿತ್ರವನ್ನು ಅರ್ಪಿಸುತ್ತಿದೆ. ಅಶ್ವಿನ್ ವಿಜಯ್ ಕುಮಾರ್ ಹಾಗೂ ರಘು ದೀಕ್ಷಿತ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಕನ್ನಡ ಕಲಾರಸಿಕರು ನೋಡಿ ಹಾರೈಸಿ ಎಂದರು ಡಾಲಿ ಧನಂಜಯ.

2015 ರಲ್ಲಿ “ಬಾರಿಸು ಕನ್ನಡ ಡಿಂಡಿಮವ” ಎಂಬ ಹಾಡನ್ನು ನಾವೆಲ್ಲಾ ಗೆಳೆಯರು ಸೇರಿ ಮಾಡಿದ್ದೆವು. ಮೈಸೂರಿನಲ್ಲೇ ಈ ಹಾಡಿನ ಚಿತ್ರೀಕರಣ ನಡೆದಿತ್ತು. ಈ ಹಾಡಿಗೆ ಸಿಕ್ಕ ಜನ ಬೆಂಬಲ ನಾವು ಚಿತ್ರ ನಿರ್ಮಾಣ ಮಾಡಲು ಸ್ಪೂರ್ತಿಯಾಯಿತು. ಆನಂತರ ನಮ್ಮ “ಆರ್ಕೇಸ್ಟ್ರಾ ಮೈಸೂರು” ಚಿತ್ರ ಆರಂಭವಾಯಿತು. “ಆರ್ಕೇಸ್ಟ್ರಾ”ದಲ್ಲಿ ಹಾಡಬೇಕೆಂದು ಆಸೆ ಹೊತ್ತ ಹುಡುಗನ ಕನಸು ನನಸಾಗುವುದಾ? ಎಂಬುದೆ ಚಿತ್ರದ ಮೂಲ ಕಥೆ. ಬೆಂಗಳೂರಿನ ಹಾಗೆ ಮೈಸೂರಿನಲ್ಲೂ ಒಂದು ಗಾಂಧಿನಗರವಿದೆ. ಅಲ್ಲಿ ಸಾಕಷ್ಟು ಆರ್ಕೇಸ್ಟ್ರಾ ಕಂಪನಿಗಳೂ ಇದೆ. ಈ ರೀತಿ “ಆರ್ಕೇಸ್ಟ್ರಾ” ದೊಂದಿಗೆ ನಮ್ಮ ಚಿತ್ರದ ಕಥೆ ಸಾಗುತ್ತದೆ.

ರಘುದೀಕ್ಷಿತ್ ಸಂಗೀತ ನೀಡಿರುವ ಎಂಟು ಹಾಡುಗಳು ನಮ್ಮ ಚಿತ್ರದಲ್ಲಿದೆ. ಅಷ್ಟು ಹಾಡುಗಳನ್ನು ಡಾಲಿ ಅವರೆ ಬರೆದಿದ್ದಾರೆ. ಒಂದು ಹಾಡಿನಲ್ಲಿ ಇಡೀ ಮೈಸೂರೇ ಭಾಗಿಯಾಗಿದೆ ಎನ್ನಬಹುದು.
ಏಕೆಂದರೆ ಹದಿನೈದು ಸಾವಿರಕ್ಕೂ ಹೆಚ್ಚಿನ ಜನರು ಈ ಹಾಡಿನ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಮಹದೇವ್ ನನ್ನ ಜೊತೆ ಸಹ ನಿರ್ದೇಶನ ಮಾಡಿದ್ದಾರೆ. ಒಟ್ಟಿನಲ್ಲಿ ನನ್ನ ತಂಡದ ಸಹಕಾರದಿಂದ ಉತ್ತಮ ಚಿತ್ರವೊಂದು ಇದೇ ಜನವರಿ 12 ಬಿಡುಗಡೆಯಾಗುತ್ತಿದೆ. ನೋಡಿ ಹರಸಿ ಎಂದರು ನಿರ್ದೇಶಕ ಸುನೀಲ್ ಮೈಸೂರು.

ನಮ್ಮ ಸಿನಿಮಾ ಕನಸಿನ ಜರ್ನಿ ಶುರುವಾಗಿದ್ದು ಹದಿನೈದು ವರ್ಷದ ಹಿಂದೆ. ನಾಟಕ ಮಾಡಬೇಕಾದರೆ, ನಾವೆಲ್ಲಾ ಬೆಂಗಳೂರಿಗೆ ಹೋಗಿ ಸಿನಿಮಾ ಮಾಡಲು ಆಗುವುದಾ? ಎಂದು ಯೋಚಿಸುತ್ತಿದ್ದೆವು. ಆ ಪೈಕಿ ನಮ್ಮ ಚಿತ್ರದಲ್ಲಿ ನಟಿಸಲು ಮೊದಲು ಬೆಂಗಳೂರಿಗೆ ಬಂದಿದ್ದು ಸ್ನೇಹಿತ ಧನಂಜಯ್ ‌. ಆನಂತರ “ಆರ್ಕೇಸ್ಟ್ರಾ ಮೈಸೂರು” ಚಿತ್ರ ಆರಂಭವಾಯಿತು. ಇಡೀ ಮೈಸೂರಿನಲ್ಲಿ ನಮ್ಮ ಚಿತ್ರದ ಚಿತ್ರೀಕರಣ ನಡೆದಿದೆ. ಕಥೆ ಕೇಳಿದ ರಘು ದೀಕ್ಷಿತ್ ನಮ್ಮ ಬೆಂಬಲಕ್ಕೆ ನಿಂತರು. ಡಾಲಿ ಪಿಕ್ಚರ್ಸ್ ಹಾಗೂ ಕೆ.ಆರ್.ಜಿ ಸ್ಟುಡಿಯೋಸ್ ಚಿತ್ರವನ್ನು ಪ್ರೆಸೆಂಟ್ ಮಾಡುತ್ತಿರುವುದು ನಿಜಕ್ಕೂ ಹೆಮ್ಮೆ ಎಂದರು ನಾಯಕ ಪೂರ್ಣಚಂದ್ರ ಮೈಸೂರು.

ಚಿತ್ರದ ನಿರ್ಮಾಪಕ ಹಾಗೂ ಸಂಗೀತ ನಿರ್ದೇಶಕ ರಘು ದೀಕ್ಷಿತ್, ಮತ್ತೊಬ್ಬ ನಿರ್ಮಾಪಕ ಅಶ್ವಿನ್ ವಿಜಯ್ ಕುಮಾರ್, ನಾಯಕಿ ರಾಜಲಕ್ಷ್ಮೀ, ಸಹ ನಿರ್ದೇಶಕ ಮಹದೇವ್, ಛಾಯಾಗ್ರಾಹಕ ಹಾಗೂ ಸಂಕಲನಕಾರ ಜೋಸೆಫ್ ಕೆ ರಾಜ, ನಟ ನಾಗಭೂಷಣ ಹಾಗೂ ಕೆ.ಆರ್.ಜಿ ಸ್ಟುಡಿಯೋಸ್ ನ ಯೋಗಿ ಚಿತ್ರದ ಕುರಿತು ಮಾತನಾಡಿದರು.

Categories
ಸಿನಿ ಸುದ್ದಿ

ಸಿಂಪಲ್ ಸುನಿ ಸಿನಿಮಾಗೆ ವಿನಯ್ ರಾಜಕುಮಾರ್ ಹೀರೋ: ಸುನಿಯ ಸರಳ ಪ್ರೇಮಕಥೆಯಲ್ಲಿ ದೊಡ್ಮನೆ ಹುಡುಗ…

ನಿರ್ದೇಶಕ ಸುನಿ ಸಿನಿಮಾ ಮಾಡ್ತಾರೆ ಅಂದರೆ, ಅಲ್ಲೊಂದು ವಿಶೇಷತೆ ಇರುತ್ತೆ. ಸದಾ ಹೊಸ ವಿಷಯವನ್ನೇ ಆಯ್ಕೆ ಮಾಡಿಕೊಂಡು ತಮ್ಮದೇ ಶೈಲಿಯ ಸಿನಿಮಾ ಮಾಡುತ್ತ ಬಂದಿರುವ ಸುನಿ, ಈಗಾಗಲೇ ಸಕ್ಸಸ್ ಫುಲ್ ನಿರ್ದೇಶಕ. ಸ್ಟಾರ್ ನಟರಿಗೂ ಸೈ ಹೊಸಬರಿಗೂ ಸೈ ಸಿನಿಮಾ ಮೂಲಕ ಹೊಸತನ ಕಟ್ಟಿಕೊಡಲು ಸದಾ ಹಪಹಪಿಸುವ ನಿರ್ದೇಶಕ. ಈ ಬಾರಿಯೂ ಅವರು ಮತ್ತೊಂದು ಸರಳ ಪ್ರೇಮಕಥೆ ಜೊತೆ ಬರುತ್ತಿದ್ದಾರೆ. ಅವರ ಸಿನಿಮಾ ನಾಯಕರಾಗಿ ವಿನಯ್ ರಾಜಕುಮಾರ್ ಕಾಣಿಸಿಕೊಳ್ಳುತ್ತಿದ್ದಾರೆ. ಆ ಕುರಿತು ಒಂದು ವರದಿ

‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ಮೂಲಕ ಪ್ರೇಕ್ಷಕರ ಮನ ಗೆದ್ದಿರುವ ನಿರ್ದೇಶಕ ಸಿಂಪಲ್ ಸುನಿ ಹೊಸದೊಂದು ಚಿತ್ರಕ್ಕೆ ಆಕ್ಷನ್ ಕಟ್ ಹೇಳಲು ತಯಾರಿ ನಡೆಸುತ್ತಿದ್ದಾರೆ. ವಿಶೇಷ ಅಂದ್ರೆ ಈ ಚಿತ್ರದ ಮೂಲಕ ಇದೇ ಮೊದಲ ಬಾರಿಗೆ ದೊಡ್ಮನೆ ಹುಡುಗ ವಿನಯ್ ರಾಜ್ ಕುಮಾರ್ ಗೆ ಸಿಂಪಲ್ ಸುನಿ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಸಿಂಪಲ್ ಸುನಿ ಮುಂದಿನ ಚಿತ್ರ ರೋಮ್ಯಾಂಟಿಕ್ ಸಬ್ಜೆಕ್ಟ್ ಒಳಗೊಂಡಿದ್ದು, ಈ ಚಿತ್ರದಲ್ಲಿ ನಾಯಕ ನಟನಾಗಿ ವಿನಯ್ ರಾಜ್ ಕುಮಾರ್ ನಟಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಸಿಂಪಲ್ ಸುನಿ ಹಾಗೂ ವಿನಯ್ ರಾಜ್ ಕುಮಾರ್ ಒಟ್ಟಿಗೆ ಕೆಲಸ ಮಾಡುತ್ತಿದ್ದು, ಇಬ್ಬರ ಕಾಂಬಿನೇಶನ್ ನಿರೀಕ್ಷೆ ಮೂಡಿಸಿದೆ. ಚಿತ್ರಕ್ಕೆ ಪ್ರಸನ್ನ ಕಥೆ ಬರೆದಿದ್ದು, ಚಿತ್ರಕಥೆ, ಸಂಭಾಷಣೆ ಬರೆದು ಸಿಂಪಲ್ ಸುನಿ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಚಿತ್ರದ ಪ್ರಿ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿರುವ ಸಿಂಪಲ್ ಸುನಿ ಸದ್ಯದಲ್ಲೇ ಚಿತ್ರದ ಟೈಟಲ್, ತಾರಾಬಳಗ ಎಲ್ಲದರ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಳ್ಳೋದಾಗಿ ತಿಳಿಸಿದ್ದಾರೆ. ವಿನಯ್ ರಾಜ್ ಕುಮಾರ್ ಅಭಿನಯದ ‘ಪೆಪೆ’, ‘ಗ್ರಾಮಾಯಣ’, ‘ಅದೊಂದಿತ್ತು ಕಾಲ’ ಸಿನಿಮಾಗಳು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಈ ಬಾರಿ ದೊಡ್ಮನೆ ಅಭಿಮಾನಿಗಳಿಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಉಡುಗೊರೆ ನೀಡೋಕೆ ವಿನಯ್ ರಾಜ್ ಕುಮಾರ್ ಕೂಡ ರೆಡಿಯಾಗಿದ್ದಾರೆ.

ಅಂದ್ಹಾಗೆ ಸಿಂಪಲ್ ಸುನಿ, ವಿನಯ್ ರಾಜ್ ಕುಮಾರ್ ಕಾಂಬಿನೇಶನ್ ಮೊದಲ ಚಿತ್ರಕ್ಕೆ ಮೈಸೂರು ರಮೇಶ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ಎಂದಿನಂತೆ ಸುನಿ ಈ ಸಿನಿಮಾದಲ್ಲೂ ನುರಿತ ತಂತ್ರಜ್ಞರ ಜೊತೆ ಕೆಲಸ ಮಾಡುತ್ತಿದ್ದಾರೆ. ವೀರ್ ಸಮರ್ಥ್ ಅವರ ಸಂಗೀತ ನಿರ್ದೇಶನವಿದೆ. ಇಲ್ಲಿ ವಿಶೇಷ ಹಾಡುಗಳು ಸಿನಿಮಾದ ಭಾಗ. ಇನ್ನು ಸಭಾ ಛಾಯಾಗ್ರಾಹಣವಿರಲಿದೆ.

Categories
ಸಿನಿ ಸುದ್ದಿ

ಗೆಳೆಯರ ಮಧುಪಾನದ ಹೊಸಪಾಠ! ಹೊಸ ವರ್ಷಕ್ಕೊಂದು ಪಾರ್ಟಿ ಸಾಂಗ್…

ಅವರೆಲ್ಲಾ ಸುಮಾರು ಇಪ್ಪತ್ತಕ್ಕೂ ಅಧಿಕ ವರ್ಷಗಳ ಸ್ನೇಹಿತರು. ಅಂತಹ ಸ್ನೇಹವೃಂದದಿಂದ “ಮಧುಪಾನದ ಹೊಸಪಾಠ” ಎಂಬ ಪಾರ್ಟಿ ಸಾಂಗ್ ಹೊಸವರ್ಷದ ಹೊಸ್ತಿಲಿನಲ್ಲಿ ಬಿಡುಗಡೆಯಾಗಿದೆ.

ನನಗೆ ಕೆಲವು ವರ್ಷಗಳಿಂದ rap singer ಆಗಬೇಕೆಂದು ಕನಸು. ಎಷ್ಟೋ ಜನ ಖ್ಯಾತ rap singers ನನಗೆ ಸ್ಪೂರ್ತಿ. ಇಪ್ಪತ್ತು ವರ್ಷಗಳಾದರೂ ನಾನು ಒಂದು ಆಲ್ಬಂ ಸಾಂಗ್ ಬಿಡುಗಡೆ ಮಾಡಲು ಆಗಿರಲಿಲ್ಲ. ಆನಂತರ ನನ್ನ ಗೆಳೆಯ ದಕ್ಷಿಣಮೂರ್ತಿ ಸಿಗುತ್ತಾರೆ. ಈ ಆಲ್ಬಂ ಸಾಂಗ್ ಮಾಡುವ ವಿಚಾರ ತಿಳಿಸುತ್ತಾರೆ. ಆಗ ” ಮಧುಪಾನದ ಹೊಸಪಾಠ” ಆಲ್ಬಂ ಸಾಂಗ್ ನಿರ್ಮಾಣವಾಗುತ್ತದೆ ಎಂದರು ಹಾಡನ್ನು ಬರೆದು‌ ಹಾಡಿರುವ, ಜೊತೆಗೆ ಅಭಿನಯವನ್ನೂ ಮಾಡಿರುವ ಕಂಗ್ಲೀಷ್ ಡ್ಯಾಡಿ ಚಿಕ್ಕು.(ಚಿಕ್ಕ ವೆಂಕಟ ರಾಮು).

ನನಗೆ ಮೊದಲಿನಿಂದಲೂ ಕಲಾವಿದನಾಗಬೇಕೆಂಬ ಕನಸು. ಅದು ಆಗಿರಲಿಲ್ಲ.‌ ಚಿಕ್ಕು ಅವರು ಈ ಹಾಡಿನ ಬಗ್ಗೆ ಹೇಳಿದಾಗ, ಹಾಡು ಇಷ್ಟವಾಯಿತು ನಿರ್ಮಾಣ ಮಾಡಿದ್ದೆ. ನಾನು ಈ ಹಾಡಿನಲ್ಲಿ ಅಭಿನಯಿಸಿದ್ದೇನೆ. ಆರವ್ ರಿಶಿಕ್ ಸಂಗೀತ ನೀಡಿದ್ದಾರೆ.

ಈ ಆಲ್ಬಂ ಹಾಡಿಗೆ ಆರ್ಟಿಸ್ಟಿಕ್ ಡೈರೆಕ್ಟರ್ ಆಗಿ ಶಕ್ತಿ ಆರ್, ನೃತ್ಯ ನಿರ್ದೇಶಕ ಹಾಗೂ ಸಂಕಲನಕಾರರಾಗಿ ಶಿವಾಸ್ ಕೆ ಫಣಿ ಹಾಗೂ ಛಾಯಾಗ್ರಾಹಕರಾಗಿ ನಿರಂಜನ್ ಬೋಪ್ಪಣ್ಣ ಕಾರ್ಯ ನಿರ್ವಹಿಸಿದ್ದಾರೆ. ಸ್ನೇಹಿತರೆ ಸೇರಿ ಮಾಡಿರುವ ಈ ಹಾಡಿಗೆ ನಿಮ್ಮ ಬೆಂಬಲವಿರಲಿ ಎಂದರು ನಿರ್ಮಾಪಕ ಹಾಗೂ ನಟ ದಕ್ಷಿಣಮೂರ್ತಿ.

ಖ್ಯಾತ ಗಾಯಕ ಅವಿನಾಶ್ ಚೆಬ್ಬಿ ಮುಖ್ಯ ಅತಿಥಿಯಾಗಿ ಆಗಮಿಸಿ ಶುಭ ಕೋರಿದರು.

ಸಂಗೀತ ನಿರ್ದೇಶಕ ಆರವ್ ರಿಶಿಕ್, ಆರ್ಟಿಸ್ಟಿಕ್ ಡೈರೆಕ್ಟರ್ ಶಕ್ತಿ ಹಾಗೂ ಸಂಕಲನಕಾರ – ನೃತ್ಯ ನಿರ್ದೇಶಕ ಶಿವಾಸ್ ಕೆ ಫಣಿ “ಮಧುಪಾನದ ಹೊಸಪಾಠ” ಬಗ್ಗೆ ಮಾತನಾಡಿದರು.

Categories
ಸಿನಿ ಸುದ್ದಿ

ಛೂ ಮಂತರ್! ಇದು ಶರಣ ಚಿತ್ರ!! ಮೋಷನ್ ಪೋಸ್ಟರ್ ರಿಲೀಸ್…

ತಮ್ಮ ಸಹಜ ನಟನೆಯ ಮೂಲಕ ಮನೆ ಮಾತಾಗಿರುವ ಶರಣ್ ನಾಯಕರಾಗಿ ನಟಿಸಿರುವ ” ಛೂ ಮಂತರ್” ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಕುತೂಹಲ ಮೂಡಿಸಿರುವ ಈ ಚಿತ್ರದ ಮೋಷನ್ ಪೋಸ್ಟರ್ ಎಲ್ಲರ ಗಮನ ಸೆಳೆಯುತ್ತಿದೆ.

ಇದು ನಮ್ಮ ಸಂಸ್ಥೆಯಿಂದ ನಿರ್ಮಾಣವಾಗಿರುವ ಐದನೇ ಸಿನಿಮಾ. ನಾನು ಹಾಗೂ ಮಾನಸ ತರುಣ್ ಈ ಚಿತ್ರದ ನಿರ್ಮಾಪಕರು. ನಿರ್ದೇಶಕ ನವನೀತ್ ಹಾಗೂ ನಾನು, ಉಪೇಂದ್ರ ಅವರ ಸಿನಿಮಾ ಮಾಡಬೇಕಿತ್ತು. ಕಾರಣಾಂತರದಿಂದ ಆ ಚಿತ್ರ ಸ್ವಲ್ಪ ಮುಂದೆ ಹೋಯಿತು. ಅಷ್ಟರಲ್ಲಿ ನವನೀತ್ ಹಾರರ್ ಜಾನರ್ ನ ಈ ಚಿತ್ರದ ಕಥೆ ಸಿದ್ದಮಾಡಿಕೊಂಡಿದ್ದರು. ಶರಣ್ ಹಾಗೂ ತರುಣ್ ಸುಧೀರ್ ಅವರ ಬಳಿ ಕಥೆ ಹೇಳಿದ್ದರು. ಇಬ್ಬರಿಗೂ ಕಥೆ ಹಿಡಿಸಿತು. ಚಿತ್ರ ಆರಂಭವಾಯಿತು. ಬೆಂಗಳೂರು, ಮೈಸೂರು, ಉತ್ತರಕಾಂಡದಲ್ಲಿ ಚಿತ್ರೀಕರಣ ಮಾಡಿದ್ದೇವೆ. ಶರಣ್ ಅವರೊಟ್ಟಿಗೆ ಚಿಕ್ಕಣ್ಣ, ಅದಿತಿ, ಪ್ರಭುದೇವ, ಪ್ರಭು ಮುಂಡ್ಕರ್, ಮೇಘನಾ ಗಾಂವ್ಕರ್, ಧರ್ಮ, ರಜನಿ ಭಾರದ್ವಾಜ್ ಮುಂತಾದವರು ಅಭಿನಯಿಸಿದ್ದಾರೆ. ಅವಿನಾಶ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಎರಡು ಹಾಡುಗಳಿದ್ದು, ಚಂದನ್ ಶೆಟ್ಟಿ ಸಂಗೀತ ನೀಡಿದ್ದಾರೆ ಎಂದು ನಿರ್ಮಾಪಕ ತರುಣ್ ಶಿವಪ್ಪ ತಿಳಿಸಿದರು‌.

ಶರಣ್ ಸರ್ ಜೊತೆ ಕೆಲಸ ಮಾಡಿದ್ದು ಖುಷಿಯಿದೆ‌. “ಛೂ ಮಂತರ್” ಎಂದರೆ ಫ್ಯಾನ್ಸಿ ವರ್ಡ್. ಈ ಪದ ತುಂಬಾ ಕಡೆ ಬಳಸುತ್ತಾರೆ. ಚಿತ್ರದಲ್ಲಿ ಮೂರು ಕಥೆಗಳಿರುತ್ತದೆ. ಎಲ್ಲಾ ಕಥೆಗಳಿಗೂ ಮೂಲ ನಾಯಕ ಆಗಿರುತ್ತಾರೆ. ನನ್ನ ಕಥೆ ಕೇಳಿ ಶರಣ್ ಹಾಗೂ ತರುಣ್ ಸುಧೀರ್ ಇಷ್ಟಪಟ್ಟರು. ಕಂಪ್ಲೀಟ್ ಹಾರರ್ ಸಿನಿಮಾದಲ್ಲಿ ಶರಣ್ ಅವರು ಅಭಿನಯಿಸಿರಲಿಲ್ಲ. ಇದೇ ಮೊದಲು ಎನ್ನಬಹುದು. ‌ನಮ್ಮ ಚಿತ್ರದಲ್ಲಿ ಹಾರಾರ್ ಜೊತೆ ಕಾಮಿಡಿ ಹಾಗೂ ಥ್ರಿಲ್ಲರ್ ಕೂಡ ಇದೆ ಎಂದರು “ಕರ್ವ” ಖ್ಯಾತಿಯ ನಿರ್ದೇಶಕ ನವನೀತ್.

ನಾನು ಚಿಕ್ಕವಯಸ್ಸಿನಿಂದಲೂ ಹಾರಾರ್ ಚಿತ್ರಗಳ ಅಭಿಮಾನಿ. ಸಾಕಷ್ಟು ಹಾರಾರ್ ಚಿತ್ರ ನೋಡಿದ್ದೇನೆ. ಈ ಚಿತ್ರದ ಕಥೆಯನ್ನು ನವನೀತ್ ಅದ್ಭುತವಾಗಿ ಮಾಡಿಕೊಂಡಿದ್ದಾರೆ. ಅವರ ಜೊತೆ ಕೆಲಸ ಮಾಡಿರುವುದು ಸಂತೋಷವಾಗಿದೆ. ನನ್ನ ಮಿತ್ರ ತರುಣ್ ಸುಧೀರ್ ಈ ಚಿತ್ರದ ಕಥೆ ಕೇಳಿ ಮೆಚ್ಚುಗೆ ಸೂಚಿಸಿದ್ದಾರೆ. ನನ್ನ ಹಾಗೂ ಚಿಕ್ಕಣ್ಣ ಅವರ ಕಾಂಬಿನೇಶನ್ ಎಂದರೆ‌ ಪ್ರೇಕ್ಷಕರಿಗೆ ಸಾಕಷ್ಟು ನಿರೀಕ್ಷೆ ಇರುತ್ತದೆ‌. ಈ ಚಿತ್ರದಲ್ಲೂ ನಮ್ಮ ಜೋಡಿ ಮೋಡಿ ಮಾಡಲಿದೆ. ಈ ಚಿತ್ರದ ಮತ್ತೊಂದು ಹೈಲೆಟ್ ಎಂದರೆ ಅನೂಪ್ ಅವರ ಛಾಯಾಗ್ರಹಣ ಎನ್ನುತ್ತಾರೆ ಶರಣ್.

ತರುಣ್ ಶಿವಪ್ಪ ನಿರ್ಮಾಣದ ಹಿಂದಿನ ಚಿತ್ರದಲ್ಲೇ ಅಭಿನಯಿಸಬೇಕಿತ್ತು ಆಗಿರಲಿಲ್ಲ. ಈ ಚಿತ್ರದಲ್ಲಿ ಅಭಿನಯಿಸಿದ್ದೇನೆ. ನನ್ನ ಪಾತ್ರ ಚೆನ್ನಾಗಿದೆ ಎಂದರು ಮೇಘನಾ ಗಾಂವ್ಕರ್.

ನನಗೂ ಹಾರಾರ್ ಚಿತ್ರಗಳೆಂದರೆ ಪ್ರಾಣ. ನವನೀತ್ ಅವರ “ಕರ್ವ” ಚಿತ್ರವನ್ನು ಸಾಕಷ್ಟು ಸಲ ನೋಡಿದ್ದೇನೆ. ಶರಣ್ ಸರ್ ಜೊತೆ ನಟಿಸಿರುವ ಸಂತಸವಿದೆ‌. ಒಳ್ಳೆಯ ಪಾತ್ರ ನೀಡಿರುವ ನಿರ್ದೇಶಕ ಹಾಗೂ ನಿರ್ಮಾಪಕರಿಗೆ ಧನ್ಯವಾದ ಎಂದರು ಅದಿತಿ ಪ್ರಭುದೇವ.

ಫಾರಿನ್ ರಿಟರ್ನ್ ಪಾತ್ರದಲ್ಲಿ ಅಭಿನಯಿಸಿರುವುದಾಗಿ ಪ್ರಭು ಮುಂಡ್ಕರ್, ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿರುವುದಾಗಿ ಧರ್ಮ ಹೇಳಿದರು. ರಜನಿ ಭಾರದ್ವಾಜ್ ಸಹ “ಛೂ ಮಂತರ್” ಬಗ್ಗೆ ಮಾತನಾಡಿದರು.

Categories
ಸಿನಿ ಸುದ್ದಿ

ಷಡಕ್ಷರಿ ಸನ್ ಆಫ್ ಪಂಚಾಕ್ಷರಿ ಟೈಟಲ್ ಅನಾವರಣ: ಶಿವರಾಜ್ ಸಕ್ರೆ ಸಿನಿಮಾಗೆ ಡಾರ್ಲಿಂಗ್ ಸಾಥ್…

‘ಉಡುಂಬಾ’ ಸಿನಿಮಾ ಮೂಲಕ ಚಂದನವನದಲ್ಲಿ ಭರವಸೆ ಮೂಡಿಸಿರುವ ನಿರ್ದೇಶಕ ಶಿವರಾಜ್ ಸಕ್ರೆ ಹೊಸದೊಂದು ಸಬ್ಜೆಕ್ಟ್ ಹೊತ್ತು ನಿರ್ದೇಶನಕ್ಕೆ ರೆಡಿಯಾಗಿದ್ದಾರೆ. ಥ್ರಿಲ್ಲರ್ ಜಾನರ್ ಒಳಗೊಂಡ ಈ ಚಿತ್ರದ ಟೈಟಲ್ ಹೊಸ ವರ್ಷದಂದು ರಿವೀಲ್ ಆಗಿದೆ. ನಟ ಡಾರ್ಲಿಂಗ್ ಕೃಷ್ಣ ಟೈಟಲ್ ರಿವೀಲ್ ಮಾಡುವ ಮೂಲಕ ಶಿವರಾಜ್ ಸಕ್ರೆ ಸೆಕೆಂಡ್ ವೆಂಚರ್ ಗೆ ಶುಭ ಹಾರೈಸಿದ್ದಾರೆ. ‘ಷಡಕ್ಷರಿ ಸನ್ ಆಫ್ ಪಂಚಾಕ್ಷರಿ’ ಎಂದು ಚಿತ್ರಕ್ಕೆ ಟೈಟಲ್ ಇಡಲಾಗಿದೆ.

‘ಷಡಕ್ಷರಿ ಸನ್ ಆಫ್ ಪಂಚಾಕ್ಷರಿ’ ಚಿತ್ರ ಥ್ರಿಲ್ಲರ್ ಜಾನರ್ ಒಳಗೊಂಡಿದ್ದು, ಪಕ್ಕಾ ಕಮರ್ಶಿಯಲ್ ಹಾದಿಯಲ್ಲಿ ಚಿತ್ರವನ್ನು ಕಟ್ಟಿಕೊಡಲಾಗುತ್ತಿದೆ. ಉಡುಂಬಾ ಸಿನಿಮಾ ನಂತರ ಥ್ರಿಲ್ಲರ್ ಜಾನರ್ ಕಥೆ ಹೆಣೆದು ಒಂದಿಷ್ಟು ಹೊಸತನದೊಂದಿಗೆ ನಿರ್ದೇಶಕ ಶಿವರಾಜ್ ಸಕ್ರೆ ಕಂ ಬ್ಯಾಕ್ ಮಾಡ್ತಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಜವಾಬ್ದಾರಿಯನ್ನು ನಿಭಾಯಿಸಿ ನಿರ್ದೇಶನ ಮಾಡಲು ಸಜ್ಜಾಗಿದ್ದಾರೆ. ಚಿತ್ರದ ಪ್ರಿ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು ಜನವರಿ 28ಕ್ಕೆ ಸಿನಿಮಾ ಸೆಟ್ಟೇರಲಿದೆ.

ಚಿತ್ರದಲ್ಲಿ ಕಿಶೋರ್ ನಾಯಕ ನಟನಾಗಿ ನಟಿಸುತ್ತಿದ್ದಾರೆ. ‘ಐ1’ ಸಿನಿಮಾದ ಮೂಲಕ ನಾಯಕನಾಗಿ ಎಂಟ್ರಿ ಕೊಟ್ಟ ಕಿಶೋರ್ ಗಿದು ಎರಡನೇ ಸಿನಿಮಾ. ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ಸದ್ಯದಲ್ಲೇ ಚಿತ್ರತಂಡ ಆ ಬಗ್ಗೆ ಮಾಹಿತಿ ಹಂಚಿಕೊಳ್ಳಲಿದೆ. ರಂಗಾಯಣ ರಘು, ಸುಜಯ್ ಶಾಸ್ತ್ರಿ, ತೆಲುಗು ಹಾಗೂ ತಮಿಳು ಸಿನಿಮಾ ಖ್ಯಾತಿಯ ಮಧುಸೂದನ್ ಚಿತ್ರದ ತಾರಾಬಳಗದಲ್ಲಿದ್ದಾರೆ.

ಝೀ ವಾಹಿನಿಯ ಸರಿಗಮಪ ಮೆಂಟರ್ ಸುಚೇತನ್ ರಂಗಸ್ವಾಮಿ ಸಂಗೀತ ನಿರ್ದೇಶನ, ಕಬ್ಜ, ಮಾರ್ಟಿನ್, ನಟ ಸಾರ್ವಭೌಮ ಖ್ಯಾತಿಯ ಮಹೇಶ್ ರೆಡ್ಡಿ ಸಂಕಲನ ಚಿತ್ರಕ್ಕಿದೆ. ಭರ್ಜರಿ ಚೇತನ್, ಜೋಗಿ ಪ್ರೇಮ್, ಅಲೆಮಾರಿ ಸಂತು ಹಾಗೂ ಹೊಸ ಪ್ರತಿಭೆ ಸಂತೋಷ್ ಸಾಹಿತ್ಯದಲ್ಲಿ ಚಿತ್ರದ ಹಾಡುಗಳು ಮೂಡಿ ಬರಲಿದ್ದು, ಬೆಂಗಳೂರು, ಮಂಗಳೂರು, ಮೈಸೂರು, ಉಡುಪಿಯಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ.

ಎಸ್. ಪಿ ಪಿಕ್ಚರ್ಸ್ ಬ್ಯಾನರ್ ನಡಿ ಶೈಲಜಾ ಪ್ರಕಾಶ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ‘ಐ 1’, ‘ಮೃತ್ಯುಂಜಯ’ ಸಿನಿಮಾ ನಂತರ ಎಸ್ ಪಿ ಪಿಕ್ಚರ್ಸ್ ನಿರ್ಮಿಸುತ್ತಿರುವ ಐದನೇ ಸಿನಿಮಾ ಇದಾಗಿದೆ.

Categories
ಸಿನಿ ಸುದ್ದಿ

ಹೊಂಬಾಳೆ ಫಿಲಂಸ್ ಬಿಗ್ ಅನೌನ್ಸ್! ಐದು ವರ್ಷದಲ್ಲಿ 3 ಸಾವಿರ ಕೋಟಿ ಹೂಡಿಕೆ: ವಿಜಯ್ ಕಿರಗಂದೂರು ಮಹತ್ವದ ಘೋಷಣೆ…

ಮುಂದಿನ 5 ವರ್ಷಗಳಲ್ಲಿ ಮನರಂಜನಾ ಕ್ಷೇತ್ರದಲ್ಲಿ ಸುಮಾರು ಮೂರು ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡಲು ಉದ್ದೇಶಿಸಿದ್ದೇವೆ ಎಂದು ಹೊಂಬಾಳೆ ಫಿಲಮ್ಸ್ ನ ವಿಜಯ್ ಕಿರಗಂದೂರು ಘೋಷಿಸಿದ್ದಾರೆ..
ಈ ಬಗ್ಗೆ ಅವರು ತಮ್ಮ ಟ್ವೀಟರ್ ನಲ್ಲಿ ಅಧಿಕೃತವಾಗಿ ಘೋಷಿಸಿದ್ದಾರೆ.


ನಾಡಿನ ಜನತೆಗೆ ಹೊಸ ವರ್ಷದ ಶುಭಾಶಯ ಕೋರಿರುವ ವಿಜಯ್ ಕಿರಗಂದೂರು, ಕಳೆದ ವರ್ಷ ನಮ್ಮನ್ನು ಬೆಂಬಲಿಸಿ ಬೆನ್ನು ತಟ್ಟಿ ಪ್ರೋತ್ಸಾಹಿಸಿದ ನಾಡಿನ ಸಮಸ್ತ ಜನತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ. ನೂತನ ವರ್ಷದಲ್ಲಿ ನವ ಸಂಕಲ್ಪದೊಂದಿಗೆ ಬೃಹತ್ ಯೋಜನೆಗಳನ್ನು ಘೋಷಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.


ಚಿತ್ರ ಪ್ರೇಮಿಗಳ ಪ್ರೀತಿ ಮತ್ತು ಪ್ರೋತ್ಸಾಹದ ಫಲವಾಗಿ ಹೊಂಬಾಳೆ ಫಿಲಮ್ಸ್ ಅತ್ಯಂತ ಯಶಸ್ವಿ ಚಲನಚಿತ್ರಗಳನ್ನು ಕೊಡುಗೆಯಾಗಿ ನೀಡಿದ್ದು, ಈ ಯಶಸ್ವೀ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಲು ತೀರ್ಮಾನಿಸಿದ್ದೇವೆ ಎಂದು ವಿಜಯ್ ಕಿರಗಂದೂರು ಹೇಳಿದ್ದಾರೆ.

ಅದರ ಭಾಗವಾಗಿ ಮುಂದಿನ 5 ವರ್ಷದಲ್ಲಿ ಮನರಂಜನಾ ಕ್ಷೇತ್ರದಲ್ಲಿ 3 ಸಾವಿರ ಕೋಟಿ ಹೂಡಲು ಯೋಜನೆ ಸಿದ್ದವಾಗಿದೆ ಎಂದು ಘೋಷಿಸಿದ್ದಾರೆ.


ಹೊಂಬಾಳೆ ಫಿಲಮ್ಸ್ ಸಂಸ್ಥೆ ಇಂದು ದೇಶದ ಪ್ರತಿಷ್ಠಿತ ಚಿತ್ರ ನಿರ್ಮಾಣ ಎಂಬ ಹೆಗ್ಗಳಿಕೆ ಪಡೆದಿರುವುದು ಚಿತ್ರ ಪ್ರೇಮಿಗಳ ಬೆಂಬಲದಿಂದ ಎಂದು ವಿಜಯ್ ಸ್ಮರಿಸಿದ್ದಾರೆ.
ನಾಡಿನ ಇತಿಹಾಸ, ಪರಂಪರೆ, ಕಲೆ- ಸಂಸ್ಕೃತಿ , ಮತ್ತು ಸಂಪ್ರದಾಯಗಳನ್ನು ವಿಶ್ವಕ್ಕೆ ಪರಿಚಯಿಸುವ ಇನ್ನಷ್ಟು ಉತ್ತಮ ಗುಣಮಟ್ಟದ ಚಲನಚಿತ್ರಗಳನ್ನು ನಿರ್ಮಿಸಿ ನಾಡಿಗೆ ಸಮರ್ಪಿಸುವ ಸಂಕಲ್ಪ ಮಾಡಿದ್ದೇವೆ ಎಂದು ವಿಜಯ್ ಕಿರಗಂದೂರು ತಿಳಿಸಿದ್ದಾರೆ.
ಇಂದು ಮನರಂಜನಾ ಕ್ಷೇತ್ರ ಬೃಹದಾಕಾರವಾಗಿ ಬೆಳೆದಿದ್ದು ನಮ್ಮ ದೇಶದಲ್ಲಿ ವೈವಿದ್ಯಮಯ ಗುಣಮಟ್ಟದ ಚಿತ್ರ ನಿರ್ಮಾಣಕ್ಕೆ ವಿಫುಲ ಅವಕಾಶವಿದೆ. ದೇಶದ ಯುವ ಪೀಳಿಗೆಯನ್ನು ಜಾಗೃತಗೊಳಿಸುವ ಮತ್ತು ಹೆಚ್ಚು ಪ್ರೋತ್ಸಾಹಿಸುವ ಸಲುವಾಗಿ ಮನರಂಜನಾ ಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ಸೇವೆ ಮಾಡಲು ನಾವು ಉದ್ದೇಶಿಸಿದ್ದೇವೆ ಎಂದು ಹೇಳಿದ್ದಾರೆ.


ನಾಡಿನ ಜನತೆ ಹೊಂಬಾಳೆ ಫಿಲಮ್ಸ್ ಮೇಲೆ ಇಟ್ಟಿರುವ ನಂಬಿಕೆ, ಭರವಸೆಗಳನ್ನು ಹುಸಿಯಾಗದಂತೆ ನೋಡಿಕೊಳ್ಳಲು ನಾವು ಬದ್ಧರಾಗಿದ್ದು , ಇನ್ನಷ್ಟು ಹೊಸತನದ ವಿಭಿನ್ನ ಚಿತ್ರಗಳನ್ನು ನಿರ್ಮಿಸುವ ಮೂಲಕ ಮನರಂಜನಾ ಕ್ಷೇತ್ರಕ್ಕೆ ಇನ್ನಷ್ಟು ಕೊಡುಗೆ ನೀಡುವ ಸಂಕಲ್ಪ ಮಾಡಿದ್ದೇವೆ ಎಂದು ವಿಜಯ್ ಹೇಳಿದ್ದಾರೆ.


ಹೊಸವರ್ಷ ಸರ್ವರಿಗೂ ಒಳಿತನ್ನು ಮಾಡಲಿ ಎಂದು ಹಾರೈಸುತ್ತಾ , ನಾಡಿನ ಜನತೆಯ ಪ್ರೀತಿ-ವಿಶ್ವಾಸ, ಬೆಂಬಲ ಪ್ರೋತ್ಸಾಹ ಹೀಗೆ ಇರಲಿ ಎಂದು ವಿಜಯ್ ಕಿರಗಂದೂರು ಹಾರೈಸಿದ್ದಾರೆ..

Categories
ಸಿನಿ ಸುದ್ದಿ

ಶ್ರೇಯಸ್ ಚಿಂಗ ಈಗ ಕಿಂಗ್! ಕಿಂಗ್ ಅಂಡ್ ಕ್ವೀನ್ ಸಿನಿಮಾಗೆ ಇತಿ ಆಚಾರ್ಯ ನಾಯಕಿ…

ಕನ್ನಡ ಚಿತ್ರರಂಗಕ್ಕೀಗ ಸುವರ್ಣ ಯುಗ ಎಂದರೆ ತಪ್ಪಾಗಲಾರದು. ಕಂಟೆಂಟ್ ಓರಿಯಂಟೆಡ್ ಸಿನಿಮಾಗಳನ್ನು ಪ್ರೇಕ್ಷಕರು ಮೆಚ್ಚಿಕೊಳ್ಳುತ್ತಿದ್ದಾರೆ.

ಈ ಹಿಂದೆ ಡೇವಿಡ್ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿರುವ ಶ್ರೇಯಸ್ ಚಿಂಗ ನಾಯಕನಾಗಿ ಹಾಗೂ ಇತಿ ಆಚಾರ್ಯ ನಾಯಕಿಯಾಗಿ ಅಭಿನಯಿಸುತ್ತಿರುವ “ಕಿಂಗ್ & ಕ್ವೀನ್” ಚಿತ್ರದ ಪೋಸ್ಟರ್ದೆ‌‌ ಬಿಡುಗಡೆಯಾಗಿದೆ. ನವರಸ ನಾಯಕ ಜಗ್ಗೇಶ್ ಪುತ್ರ ಯತಿರಾಜ್ ಸಹ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕನ್ನಡ ಚಿತ್ರರಂಗದ ಹಿರಿಯ ಪಿ.ಆರ್.ಓ ಸುಧೀಂದ್ರ ವೆಂಕಟೇಶ್ ಹೊಸ ವರ್ಷದ ಆರಂಭದ ದಿನ ಈ ಹೊಸ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

ನಿರ್ದೇಶನ ವಿಭಾಗದಲ್ಲಿ ಕಾರ್ಯ ನಿರ್ವಹಿಸಿರುವ ಅರ್ಜುನ್ ಸುಬ್ರಹ್ಮಣ್ಯ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ನಿರ್ದೇಶಕರೆ ಬರೆದಿದ್ದಾರೆ.

ಶ್ರೇಯಸ್ ಚಿಂಗ ಅಭಿನಯದ “ಡೇವಿಡ್” ಚಿತ್ರವನ್ನು ನಿರ್ಮಿಸಿರುವ ಪ್ರಸಾದ್ ರುದ್ರಮುನಿ ನಿರಗಂಟಿ, ಪ್ರದೀಪ್ ಅಬ್ಬಯ್ಯ ಹಾಗೂ ವರುಣ್ ರಾಘವೇಂದ್ರ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಚಿತ್ರದಲ್ಲಿ ನಾಲ್ಕು ಸುಮಧುರ ಹಾಡುಗಳಿದೆ. ಅದ್ಭುತ ಗಾಯನದ ಮೂಲಕ ಜನಮನಸೂರೆಗೊಂಡಿರುವ ALL OK ಸಂಗೀತ ನೀಡಲಿದ್ದಾರೆ.

ಚಿತ್ರದಲ್ಲಿ ಮೈನವಿರೇಳಿಸುವ ಆರು ಸಾಹಸ ಸನ್ನಿವೇಶಗಳಿದೆ‌. ಚೇತನ್ ಡಿಸೋಜ, ಚಾಮರಾಜ್, ರವಿ ಜಮಖಂಡಿ, ರೋಹಿತ್ ಅರುಣ್ ಸಾಹಸ ಸಂಯೋಜಿಸಲಿದ್ದಾರೆ.

ಶ್ರೇಯಸ್ ಚಿಂಗ, ಇತಿ ಆಚಾರ್ಯ, ಶೋಭ್ ರಾಜ್, ಯತಿರಾಜ್ ಜಗ್ಗೇಶ್, ಲಲಿತ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಫೆಬ್ರವರಿ ಮೊದಲವಾರದಿಂದ ಬೆಂಗಳೂರಿನಲ್ಲಿ ಚಿತ್ರೀಕರಣ ಆರಂಭವಾಗಲಿದೆ.

error: Content is protected !!